Wednesday, May 31, 2006

ಎಲಿಯಟ್ ಸ್ಪಿಟ್‌ಝರ್ ಎನ್ನುವ ಅಟಾರ್ನಿ ಜನರಲ್


"We cannot afford to be cautious because you don't change the world by whispering.”

"You will not change the world by whispering. In order to make that change, you need to put your heart and soul into it, you need to talk back to authority, and you need to do it with passion and vigor and determination."

- Eliot Spitzer


ನ್ಯೂ ಯಾರ್ಕ್ ನಗರದಲ್ಲಿ ಕೆಲಸ ಮಾಡುವ ನನ್ನ ಸಹೋದ್ಯೋಗಿ ಒಬ್ಬಳು ಬ್ಯಾಂಕಿನವರು ಆಕೆಗೆ ಕೊಡಬೇಕಾದ ಬಡ್ಡಿಯನ್ನು ಸರಿಯಾಗಿ ಕೊಡುತ್ತಿಲ್ಲ, ಅವರು ಹೀಗೇ ಮಾಡಿದರೆ ನಾನು ನ್ಯೂ ಯಾರ್ಕ್ ಸ್ಟೇಟಿನ ಅಟಾರ್ನಿ ಜನರಲ್ ಆಫೀಸಿಗೆ ಕಂಪ್ಲೇಂಟು ಕೊಡುವುದಾಗಿ ಹೇಳಿದ್ದಳು. ಇದಾದ ಒಂದು ವಾರದ ಮೇಲೆ ಮಾತು ಎಲ್ಲಿಗೋ ಬಂದು ಆಕೆಗೆ ಬ್ಯಾಂಕಿನವರು ಕೊಡಬೇಕಾದ ಬಡ್ಡಿಯ ವಿಷಯವನ್ನು ಕೇಳಿದೆ, ಆಕೆಗೆ ಬ್ಯಾಂಕಿನವರು ಮತ್ತೆ ಸತಾಯಿಸಿದರೆಂದೂ ಅವರಿಗೆ ಬುದ್ಧಿ ಕಲಿಸುವುದಕ್ಕೋಸ್ಕರ ಒಂದು ಮಧ್ಯಾಹ್ನ ಈಕೆ ಬ್ಯಾಂಕಿಗೆ ಹೋಗಿ ಜಗಳವಾಡಿ ಬಂದಿದ್ದಳಂತೆ, ಅಲ್ಲದೇ ನನಗೆ ಬರಬೇಕಾದ ಹಣ ಬರದಿದ್ದರೆ ನಿಮ್ಮ ಕೆಟ್ಟ ಪ್ರಾಕ್ಟೀಸುಗಳನ್ನು ಅಟಾರ್ನಿ ಜನರಲ್ ಆಫೀಸಿಗೆ ತಿಳಿಸುವುದಾಗಿ ಹೇಳಿ ಬಂದಿದ್ದಳಂತೆ, ಆಕೆಗೆ ಆಶ್ಚರ್ಯವಾಗುವಂತೆ ಬ್ಯಾಂಕಿನ ಮೇಲಾಧಿಕಾರಿಗಳು ಆಕೆಯಲ್ಲಿ ತಪ್ಪು ಒಪ್ಪಿಕೊಂಡರೆಂದೂ ಆಕೆಗೆ ಬರಬೇಕಾದ ದುಡ್ಡನ್ನು ಕೊಡಲು ಒಪ್ಪಿಕೊಂಡರೆಂದೂ ಬಹಳ ಸಂತಸದಿಂದ ಹೇಳಿದಳು. ನಾನು 'ಈ ರೀತಿ ಅವರು ಅದೆಷ್ಟು ಜನರಿಗೆ ಕೆಟ್ಟ ಲೆಕ್ಕದಿಂದ ಮೋಸ ಮಾಡಿದ್ದಾರೋ, ಅಟಾರ್ನಿ ಜನರಲ್ ಆಫೀಸಿಗೆ ದೂರು ಕೊಟ್ಟಿದ್ದರೆ ಅವರು ವಿಚಾರಿಸಿಕೊಳ್ಳುತ್ತಿದ್ದರು' ಎಂದೆ, ಆಕೆ 'ಅಲ್ಲಿಗೆ ಒಂದು ಕಾಲ್ ಮಾಡುತ್ತೇನೆ' ಎಂದು ಹೇಳಿದ ನೆನಪು, ಮುಂದೆ ಏನಾಯಿತೋ ಗೊತ್ತಿಲ್ಲ.

ನಿನ್ನೆ ಎನ್.ಪಿ.ಆರ್.ನಲ್ಲಿ ಸಂಜೆ ಸುದ್ದಿ ಕೇಳುತ್ತಿರುವಾಗ ನ್ಯೂ ಯಾರ್ಕ್ ರಾಜ್ಯದಿಂದ ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಎಲಿಯಟ್ ಸ್ಪಿಟ್‌ಝರ್ ಅನ್ನು ನಿಲ್ಲಿಸಿದ್ದಾರೆಂದೂ ಹಾಗೂ ...you don't change the world by whispering... ಎನ್ನುವ ಅವರ ಭಾಷಣದ ತುಣುಕೂ ಕೇಳಿಸಿತು. ತಾನು ೨೦೦೬ ರ ಚುನಾವಣೆಯಲ್ಲಿ ಗವರ್ನರ್ ಆಗಿ ಸ್ವರ್ಧಿಸುತ್ತೇನೆಂದು ಈ ಮೊದಲೇ ಅನೌನ್ಸ್ ಮಾಡಿದ್ದರಿಂದ ಈ ಸುದ್ದಿಯಲ್ಲಿ ಯಾವುದೇ ವಿಶೇಷವಿರಲಿಲ್ಲ, ಆದರೆ ಈ ಸುದ್ದಿಯ ಹಿನ್ನೆಲೆಯಲ್ಲಿ ಸ್ಪಿಟ್‌ಝರ್ ಅಟಾರ್ನಿ ಜನರಲ್ ಆಗಿ ಇಲ್ಲಿಯವರೆಗೆ ನ್ಯೂ ಯಾರ್ಕ್ ರಾಜ್ಯ ಹಾಗೂ ದೇಶಕ್ಕೆ ನೀಡಿದ ಕೆಲವು ಕೊಡುಗೆಗಳನ್ನು ಮೆಲುಕು ಹಾಕುವಂತಾಯ್ತು. ೨೦೦೦-೨೦೦೧ರಲ್ಲಿ ಆದ ಕಾರ್ಪೋರೇಟ್ ಸ್ಕ್ಯಾಂಡಲ್ ಹಿನ್ನೆಲೆಯಲ್ಲಿ ಇತ್ತೀಚೆಗಂತೂ ವಾಲ್ ಸ್ಟ್ರೀಟಿನ ಎಷ್ಟೋ ಜನರಿಗೆ ಸ್ಪಿಟ್‌ಝರ್ ಹೆಸರು ಕೇಳಿದರೆ ನಡುಕ ಉಂಟಾಗುತ್ತಿದ್ದುದರಲ್ಲಿ ಅತಿಶಯವೇನಿಲ್ಲ.

ಸ್ಪಿಟ್‌ಝರ್‌ನ ಯಶೋಗಾಥೆಗಳನ್ನು ಬರೆಯುವ ಮುನ್ನ ಅಂತರ್ಜಾಲದಲ್ಲಿ ಈತ ಬೆಳೆದು ಬಂದ ಬಗೆಯನ್ನು ಓದಿದೆ - ಸ್ಪಿಟ್‌ಝರ್ ಹುಟ್ಟಿದಾಗಿನಿಂದ ಕಟ್ಟಾ ನ್ಯೂ ಯಾರ್ಕ್ ಮನುಷ್ಯ, ಬ್ರಾಂಕ್ಸ್‌ನ ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೂಡಿದ್ದ ತಂದೆಯ ಮಗನಾಗಿ ಈತ ಓದಿದ್ದು ಪ್ರೈವೇಟು ಸ್ಕೂಲುಗಳಲ್ಲಿಯೇ. ಪ್ರಿನ್ಸ್‌ಟನ್ ಯೂನಿವರ್ಸಿಟಿ ಹಾಗೂ ಹಾರ್ವರ್ಡ್ ಲಾ ಸ್ಕೂಲಿನಲ್ಲಿ ಗ್ರಾಜುಯೇಷನ್ ಮುಗಿಸಿದ ತರುವಾಯ ಕೆಲವು ವರ್ಷ ಪ್ರವೇಟ್ ಪ್ರಾಕ್ಟೀಸು ಮಾಡಿಕೊಂಡು ರಾಜಕೀಯದ ಗಂಧಗಾಳಿ ಅಷ್ಟೊಂದು ಇಲ್ಲದಿದ್ದರೂ ೧೯೯೪ರಲ್ಲಿ ಅಟಾರ್ನಿ ಜನರಲ್ ಎಲೆಕ್ಷನ್‌ನಲ್ಲಿ ಸ್ಪರ್ಧಿಸಿ ಸೋತ ನಂತರ ಮತ್ತೆ ೧೯೯೮ ರಲ್ಲಿ ಅದೇ ಎಲೆಕ್ಷನ್‌ನಲ್ಲಿ ಗೆದ್ದ ವ್ಯಕ್ತಿ ಈವರೆಗೆ ಹಿಂತಿರುಗಿ ನೋಡಿಲ್ಲ. ೧೯೯೮ ರಲ್ಲಿ ಸ್ವಲ್ಪವೇ ಮಾರ್ಜಿನ್‌ನಲ್ಲಿ ಗೆದ್ದರೂ ನಾಲ್ಕು ವರ್ಷಗಳ ಕಾಲ ಜನರನ್ನು ಗೆದ್ದು ೨೦೦೨ರಲ್ಲಿ ಮತ್ತೆ ಅಟಾರ್ನಿ ಜನರಲ್ ಆಗಿ ಪುನಃ ಆಯ್ಕೆಯಾಗುವಂತಾಗಿದ್ದು ಸ್ಪಿಟ್‌ಝರ್‌ಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿತ್ತು.

ಸ್ಪಿಟ್‌ಝರ್‌ಗೆ ತಕ್ಕ ಮಟ್ಟಿನ ಕೀರ್ತಿಯನ್ನು ತಂದು ಕೊಟ್ಟಿದ್ದು ಮೇ, ೨೦೦೪ರಲ್ಲಿ ಆತ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್‌ಚೇಂಜಿನ ಮುಖ್ಯಸ್ಥ ರಿಚರ್ಡ್ ಗ್ರಾಸ್ಸೋ ವನ್ನು ಥರಾಟೆಗೆ ತೆಗೆದುಕೊಂಡಾಗ, ವರ್ಷದಿಂದ ವರ್ಷಕ್ಕೆ 'I am blessed!' ಎಂದುಕೊಂಡು ಬಹಳ ಹೆಚ್ಚಿನ ಸಂಬಳ ಮತ್ತು ಬೋನಸ್ಸನ್ನು ಪಡೆದ ಗ್ರಾಸ್ಸೋ ಮೇಲೆ ಸ್ಪಿಟ್‌ಝರ್‌ನ ದೃಷ್ಟಿಗೆ ಬಿದ್ದಾಗ ವರ್ಷಕ್ಕೆ ಡಾಲರ್ ೧೮೭ ಮಿಲಿಯನ್ ಅನ್ನು ಪಡೆಯುತ್ತಿದ್ದ (ಸಂಬಳ, ಬೋನಸ್, ಅನುಕೂಲಗಳೆಲ್ಲ ಸೇರಿ), ಅದು ನಿಜವಾಗಿಯೂ ಬಹುದೊಡ್ಡ ಮೊತ್ತ, ಆ ಮೊತ್ತವನ್ನು ತೀರ್ಮಾನಿಸುವಲ್ಲಿ ಯಾವ ಲೆಕ್ಕವೂ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್‌ಚೇಂಜಿನ ಬೋರ್ಡಿಗೆ ಇದ್ದಂತಿರಲಿಲ್ಲ, ಇದರಲ್ಲಿ ಗ್ರಾಸ್ಸೋ ತಪ್ಪಿದೆಯೋ ಇಲ್ಲವೋ, ಆ ಮೊತ್ತವಂತೂ ಅತಿ ಹೆಚ್ಚು, ಇಲ್ಲಿಯವರೆಗೆ ಬೇರೆ ಯಾರಿಗೂ ಈ ವಿಷಯ ಅದೇಕೆ ಹೊಳೆಯಲಿಲ್ಲ ಎಂದು ಹಲವಾರು ಕಡೆಗಳಲ್ಲಿ ಚರ್ಚೆ ನಡೆಯಿತು. ಸ್ಪಿಟ್‌ಝರ್‌ನ ಈ ಪ್ರಯತ್ನದಿಂದ ಬೇರೆ ಏನಾಗದಿದ್ದರೂ ಗ್ರಾಸ್ಸೋ ರಾಜೀನಾಮೆ ನೀಡಿ ಮುಂದೆ ಸ್ಟಾಕ್ ಎಕ್ಸ್‌ಚೇಂಜಿನ ಅಧಿಕಾರಿಗಳನ್ನು ಬದಲಾಯಿಸಿ, ಅವರುಗಳಲ್ಲಿ ಯಾರೂ ವರ್ಷಕ್ಕೆ ಇನ್ನೂರು ಮಿಲಿಯನ್ ಇರಲಿ ಅದರ ಅರ್ಧದಷ್ಟನ್ನೂ ಗಳಿಸುತ್ತಿಲ್ಲ.

ಹೀಗೆ ಎಲಿಯಟ್ ಸ್ಪಿಟ್‌ಝರ್ ಹಾಕಿದ ಕೇಸುಗಳು ಒಂದೇ ಎರಡೇ - ಇಂಟರ್‌ಮಿಕ್ಸ್ ಎನ್ನುವ ಕಂಪನಿಯ ಮೇಲೆ ಸ್ಪೈ ವೇರ್ ಕುರಿತಂತೆ, ಗ್ಲಾಕ್ಸೋ ಸ್ಮಿತ್ ಕ್ಲೈನ್ ಎನ್ನುವ ಕಂಪನಿಯ ಮೇಲೆ ಪ್ಯಾಕ್ಸಿಲ್ ಡ್ರಗ್‌ಗೆ ಸಂಬಂಧಿಸಿದಂತೆ, ಗೈಡಂಟ್ ಕಂಪನಿಯವರು ಕಾರ್ಡಿಯಾಕ್ ಡಿಫಿಬ್ರಿಲೇಟರ್‌ಗಳ ಮಾರಾಟದಲ್ಲಿ ಮೋಸ ಮಾಡುತ್ತಿರುವುದನ್ನು ಕುರಿತು, ಎಂಟೆರ್‌ಕಾಮ್ ರೇಡಿಯೋ ಸ್ಟೇಷನ್ ಕಂಪನಿಯ ಮೇಲೆ, ಎಚ್ ಎಂಡ್ ಆರ್ ಬ್ಲಾಕ್‌ನವರು ಇಂಡಿವಿಜುಯಲ್ ರಿಟೈರ್‌ಮೆಂಟ್ ಅಕೌಂಟುಗಳಲ್ಲಿ ತಪ್ಪು ಮಾಡಿದ್ದಾರೆಂದು, ಎಲ್ಲಕ್ಕಿಂತ ಮುಖ್ಯವಾಗಿ ಎ.ಐ.ಜಿ. ಕಂಪನಿ ತಪ್ಪು ಮಾಡಿದೆಯೆಂದೂ ಹಾಗೂ ಅದರ ಮುಖ್ಯಸ್ಥನ ಮೇಲೆ ಹೂಡಿದ ಮೊಕದ್ದಮೆಗಳಲ್ಲಿ ಸ್ಪಿಟ್‌ಝರ್ ಸೋತಿದ್ದನ್ನು ನಾನು ಕೇಳಿಲ್ಲ. ಮೇಲೆ ತಿಳಿಸಿರುವುಗಳು ಬರೀ ಉದಾಹರಣೆಗಳಷ್ಟೇ, ಆತ ಮೊಕದ್ದಮೆ ಹೂಡಿದ ಕಂಪನಿಗಳ ಯಾದಿಯನ್ನೇ ಕೊಟ್ಟರೆ ಪಟ್ಟಿ ಬಹಳ ಉದ್ದವಾಗುತ್ತದೆ. ಹೆಚ್ಚಿನ ಕೇಸುಗಳಲ್ಲಿ ಕಂಪನಿಗಳು ಮೊಕದ್ದಮೆಗಳನ್ನು 'ಸೆಟಲ್' ಮಾಡಿಕೊಂಡು ಸರ್ಕಾರಕ್ಕೆ ಇಂತಿಷ್ಟು ಎಂದು (ಹೆಚ್ಚಿನ ಕೇಸುಗಳಲ್ಲಿ ಮಿಲಿಯನ್‌ಗಟ್ಟಲೆ) ದಂಡಕಟ್ಟಿ ಬದುಕಿಕೊಂಡರು. ಮೊದಮೊದಲು ಸ್ಪಿಟ್‌ಝರ್‌ನ್ನು 'ಇವನೇನು ಮಾಡುತ್ತಾನೆ ನೋಡೋಣ' ಎಂದು ಎದೆಯುಬ್ಬಿಸಿದ ಎಐಜಿ ಕಂಪನಿಯ ಗ್ರೀನ್‌ಬರ್ಗ್ ಅಂಥವರು ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದೂ ಅಲ್ಲದೆ ಸಾಕಷ್ಟು ಹಣವನ್ನೂ ಕಳೆದುಕೊಂಡರು. ಇನ್ನು ಕೆಲವರು ಕೇಂದ್ರದಲ್ಲಿ ಆಡಳಿತದಲ್ಲಿರೋ ರಿಪಬ್ಲಿಕನ್ ಪಕ್ಷದ ಮೊರೆ ಹೋದರು, ಮತ್ತೆ ಕೆಲವರು 'ಸ್ಪಿಟ್‌ಝರ್ ತನ್ನ ರಾಜಕೀಯ ಅನುಕೂಲಕ್ಕೆ ಈ ರೀತಿ ಕಂಪನಿಗಳನ್ನು ಸತಾಯಿಸಿ ಹೆಸರು ಮಾಡಿಕೊಳ್ಳುತ್ತಿದ್ದಾನೆ' ಎಂದು ಆರೋಪಿಸಿದರು, ಇನ್ನು ಕೆಲವರು 'ಇವನು ಹೀಗೆಲ್ಲ ಮಾಡಿದ್ದರಿಂದ ಹಲವಾರು ಕೆಲಸಗಳನ್ನು ಜನರು ಕಳೆದುಕೊಳ್ಳುವಂತಾಯ್ತು, ಕಂಪನಿಗಳು ಮುಚ್ಚುವಂತಾಯ್ತು' ಎಂದು ದೂರಿದರು, ಅವನ ಮೇಲೆ ಹಲವಾರು ಆರೋಪಗಳನ್ನು ಹೊರಿಸಿ ಕೇಸು ಹಾಕಿದರು - ಇವೆಲ್ಲಕ್ಕೂ ಸ್ಪಿಟ್‌ಝರ್ ಈವರೆಗೆ ತಲೆಕೆಡಿಸಿಕೊಂಡಂತಿಲ್ಲ, ಎಲ್ಲೂ ತನ್ನ ಬೇಟೆಯನ್ನು ನಿಲ್ಲಿಸಿದ ಹಾಗೆ ಕಂಡುಬಂದಿಲ್ಲ.

ಎಲಿಯಟ್ ಸ್ಪಿಟ್‌ಝರ್ ಹೆಸರೇನಾದರೂ ಸಮೂಹ ಮಾಧ್ಯಮದಲ್ಲಿ ಕಾಣಿಸಿಕೊಂಡರೆ ನಾನು ಆ ಸುದ್ದಿಗಳಿಗೆ ಕಿವಿಕೊಡುತ್ತೇನೆ. ಈ ವ್ಯಕ್ತಿ ಡೆಮೋಕ್ರಾಟಿಕ್ ಪಕ್ಷದಿಂದ ಗೆದ್ದು ನ್ಯೂ ಯಾರ್ಕ್ ರಾಜ್ಯದ ಗವರ್ನರ್ ಆಗಲಿ, ಜಾರ್ಜ್ ಪಟಾಕಿಯ ನಿಧಾನ ಆಡಳಿತಕ್ಕೆ ಬೇಸತ್ತ ಜನರಲ್ಲಿ ಸ್ವಲ್ಪ ಹುರುಪು ಹುಟ್ಟಿಸಲಿ ಎಂದು ಆಶಿಸುತ್ತೇನೆ. ನನಗೇನೂ ಡೆಮೋಕ್ರಾಟ್ ಅಥವಾ ರಿಪಬ್ಲಿಕನ್ ಎಂದು ಯಾವ ಪಕ್ಷದ ಮೇಲೂ ಒಲವಿಲ್ಲ - ಇನ್ನೊಮ್ಮೆ ಯಾವಾಗಲಾದರೂ ಹುಟ್ಟಾ ರಿಪಬ್ಲಿಕನ್ ನ್ಯೂ ಯಾರ್ಕ್ ನಗರದ ಮಾಜಿ ಮೇಯರ್ ರೂಡಿ ಜೂಲಿಯಾನಿಯ ಬಗ್ಗೆ ಬರೆಯುತ್ತೇನೆ.

***

ಅಮೇರಿಕದಲ್ಲಿ ಐವತ್ತು ರಾಜ್ಯಗಳಿವೆ, ಪ್ರತಿ ರಾಜ್ಯಕ್ಕೂ ಹೀಗೆ ರಾಜ್ಯದ ಅಟಾರ್ನಿ ಜನರಲ್ ಆಫೀಸರ್ ಎಂದು ಒಬ್ಬೊಬ್ಬರು ಇರುತ್ತಾರೆ, ಆದರೆ ನಾನು ಸ್ಪಿಟ್‌ಝರ್ ಬಗ್ಗೆ ಕೇಳಿದಷ್ಟು ಸುದ್ದಿಯಲ್ಲಿ ಬೇರೆ ಯಾರ ಬಗ್ಗೆಯೂ ಕೇಳಿಲ್ಲ, ಈತ ಮೊಕದ್ದಮೆಗಳನ್ನು ಹೂಡಿ ಗೆದ್ದಷ್ಟು ಮತ್ತಿನ್ಯಾರೂ ಗೆದ್ದಿಲ್ಲ. ೪೬ ವರ್ಷ ವಯಸ್ಸಾಗಿರುವ ಈತ ಗವರ್ನರ್ ಆಗಿ ಗೆದ್ದು ಇನ್ನೇನನ್ನು ಮಾಡುವುದಿದೆಯೋ, ಆರು ಅಡಿ ಎತ್ತರವಿರುವ, ನಿರರ್ಗಳವಾಗಿ ಮಾತನಾಡಿ ಗುಂಪನ್ನು ಗೆಲ್ಲಬಲ್ಲ ಹಾಗೂ ಪಾರ್ಟಿಗೆ ಬೇಕಾದ ಹಣವನ್ನು ಕೂಡಿಸಬಲ್ಲ ಚೈತನ್ಯವಿರುವ ಈ ವ್ಯಕ್ತಿ ಇದೇ ವರ್ಷ ನವೆಂಬರ್ ೭ ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲಬಲ್ಲನೇ ಎಂದು ಕಾದು ನೋಡಬೇಕಷ್ಟೇ.

Tuesday, May 30, 2006

ಎಕ್ಸಿಟ್ ಇಂಟರ್‌ವ್ಯೂವೂ, ಅದರಿಂದ ಹೊರಬಂದ ಸತ್ಯಗಳೂ...

ಕಳೆದ ವಾರ ನಮ್ಮ ಅತ್ತೆಯವರು ಇಲ್ಲಿಂದ ಭಾರತಕ್ಕೆ ಹಿಂತಿರುಗಿದರು, ಆರು ತಿಂಗಳು ಅವರು ನಮ್ಮ ಮನೆಯಲ್ಲಿ ಇದ್ದು ಹಿಂತಿರುಗುವ ತಯ್ಯಾರಿ ನಡೆಸುತ್ತಿರುವಾಗ ಮ್ಯಾನೇಜ್‌ಮೆಂಟ್ ಶೈಲಿಯಲ್ಲಿ ಒಂದು ಎಕ್ಸಿಟ್ ಇಂಟರ್‌ವ್ಯೂವ್ ಮಾಡಿದರೆ ಹೇಗೆ ಎಂದು ಅನ್ನಿಸಿದ್ದೇ ತಡ ಅವರಿಗೆ ನೋವಾಗದ ಹಾಗೆ ಏನೇನು ಪ್ರಶ್ನೆಗಳನ್ನು ಕೇಳಬಹುದು, ಅವರಿಂದ ಏನೇನು ಉತ್ತರ ಬರಬಹುದು ಎಂದೆಲ್ಲಾ ಮೊದಲೇ ಯೋಚಿಸಿಕೊಂಡಿದ್ದೆ. ನನಗೆ ಅನಿಸಿದ ಎಲ್ಲಾ ಪ್ರಶ್ನೆಗಳನ್ನೂ ಒಂದೇ ದಿನ ಕೇಳದೇ ಸುಮಾರು ಒಂದು ವಾರದಲ್ಲಿ ಬಿಡುವು ಸಿಕ್ಕಾಗ ಅಲ್ಲಲ್ಲಿ ಅವರ ಜೊತೆ ಮಾತನಾಡಲು ತೊಡಗಿದೆ. ನಮ್ಮ ಮಾವನವರು ಛಳಿಗೆ ಹೆದರಿ ಬರದೇ ಇದ್ದುದರಿಂದ ಅವರೊಬ್ಬರೇ ಬಂದಿದ್ದರು, ಬರೀ ವಾರಾಂತ್ಯದಲ್ಲಿ ಮಾತ್ರ ಪುರುಸೊತ್ತು ಸಿಗುವ ನಾವು ಅವರಿಗೆ ಅಮೇರಿಕವನ್ನು ಹೊರಗಡೆ ತೋರಿಸಿದ್ದಕ್ಕಿಂತ ಹೆಚ್ಚಾಗಿ ಟಿವಿಯಲ್ಲೇ ಕಂಡುಕೊಂಡಿದ್ದರು. ಆದರೂ ಅವರ ಕಲ್ಪನೆಯಲ್ಲಿದ್ದ ನಮ್ಮ ಅಮೇರಿಕನ್ ಬದುಕು ವಾಸ್ತವಕ್ಕಿಂತ ಬಹಳ ಭಿನ್ನವಾಗಿತ್ತು!

ನನಗೆ ಕೆಲವು ತಿಂಗಳುಗಳ ಕಾಲ ಅಮೇರಿಕೆಗೆ ಪ್ರವಾಸಿಗಳಾಗಿ ಬಂದು ಪೂರ್ತಿ ಅಮೇರಿಕನ್ ಬದುಕನ್ನೇ ಕಂಡವರ ಥರಾ ಜೆನರಲೈಸ್ ಮಾಡಿಕೊಂಡು ಮಾತನಾಡುವವರೆಂದರೆ ಬಹಳ ಸಿಟ್ಟು. ಪ್ಯಾರಿಸ್ ಏರ್‌ಪೋರ್ಟಿನಲ್ಲಿ ಏನೇನನ್ನು ಮಾಡಬಹುದು, ಲಿಬರ್ಟಿ ಅಮ್ಮನ ಪ್ರತಿಮೆ ಎಷ್ಟು ಎತ್ತಿರವಿದೆ, ವೈಟ್‌ಹೌಸ್ ಯಾವ ವರ್ಷದಲ್ಲಿ ಕಟ್ಟಿದ್ದು... ಮುಂತಾದ ವಿಷಯಗಳುಳ್ಳ ಪ್ರವಾಸಕಥನಗಳನ್ನು ಬರೆದರೆ ನನಗೆ ಯಾವ ದುಃಖವೂ ಇಲ್ಲ, ಅದರ ಬದಲಿಗೆ 'ಈ ಅನಿವಾಸಿಗಳ ಬದುಕೇ ಇಷ್ಟು!', 'ಅಮೇರಿಕನ್ನರೆಂದರೆ ಹೀಗೆ...' ಎಂದು ಜನರಲೈಸ್ ಮಾಡಿ ಏನಾದರೊಂದು ಮಾತನ್ನಾಡಿದರೆ ಮಾತ್ರ ನಾನು ಅದನ್ನು ಖಂಡಿತವಾಗಿ ವಿರೋಧಿಸುತ್ತೇನೆ. ನನ್ನ ಅತ್ತೆಯವರಿಗೆ ಮೊದಲೇ ಈ ಬಗ್ಗೆ ಹೇಳಿದ್ದೆ, 'ಏನಾದರೂ ಗೊತ್ತಾಗದಿದ್ದರೆ ಕೇಳಿ' ಎಂದೂ ಸಹ ಹೇಳಿದ್ದೆ, ಅವರು ಈ ರೀತಿಯ ಯಾವುದೇ ಜನರಲೈಸೇಶನ್‌ಗೂ ಹೋಗಲಿಲ್ಲ, ಮೇಲಾಗಿ ಅವರು ನಾವು ಇಲ್ಲಿ ಬದುಕುವ ರೀತಿಯನ್ನು ಕಂಡು ಅವರಿಗೇನನ್ನಿಸಿತು ಎಂದು ಹೇಳಲು ಯಾವ ಸಂಕೋಚವನ್ನೂ ಪಡಲಿಲ್ಲ - ನನ್ನ ದೃಷ್ಟಿಯಲ್ಲಿ ಅದು ಸರಿಯಾದ ವಿಚಾರ, ಏಕೆಂದರೆ ಅನಿವಾಸಿಯಾಗಿ ಇಲ್ಲಿ ನನ್ನ ಬದುಕು ಭಿನ್ನವಾದದ್ದು, ಅವರು ನಮ್ಮನ್ನು ಹತ್ತಿರದಿಂದ ನೋಡಿದ್ದಾರೆಯೇ ವಿನಾ, ಅನಿವಾಸಿಗಳೆಲ್ಲರೂ ಹೀಗೇ ಎನ್ನುವುದಕ್ಕೆ ಬರುವುದಿಲ್ಲ. ಇಲ್ಲಿಗೆ ಬ್ಯುಸಿನೆಸ್ ವೀಸಾದ ಮೇಲೋ, ಪ್ರವಾಸೀ ವೀಸಾದ ಮೇಲೋ ಬಂದವರು 'ಈ ಬದುಕಿನ ಬಗ್ಗೆ ನಾನೊಂದು ಪುಸ್ತಕವನ್ನು ಬರೆದು ಬಿಡುತ್ತೇನೆ' ಅಥವಾ 'ಈಗಾಗಲೇ ಕೆಲವು ಪುಟಗಳನ್ನು ಬರೆದಾಗಿದೆ' ಎಂದೋ ಹೇಳುತ್ತಾರೆ, ನಾನು ಅವರನ್ನು ಕೆಣಕಲೆಂದೇ 'ಏನು ಪ್ರವಾಸೀ ಕಥನವೋ?' ಎನ್ನುತ್ತೇನೆ, ಅವರು 'ಇಲ್ಲಾ, ಇಲ್ಲಿಗೆ ಬಂದ ಮೇಲೆ ಬಹಳ ಬೇಸರವಾಯಿತು, ಅದು ಸರಿ ಇಲ್ಲ, ಇದು ಸರಿ ಇಲ್ಲ...' ಎಂದು ದೂರುಗಳ ಯಾದಿಯನ್ನೇ ಶುರು ಮಾಡುತ್ತಾರೆ, ಅಥವಾ 'ಎಲ್ಲವೂ ಭಯಂಕರ ಚೆನ್ನಾಗಿದೆ' ಎಂದು ಹೊಗಳಲು ಮುಂದಾಗುತ್ತಾರೆ. ಅವರೇ ಮಾಡಿದ ಪ್ರತಿಯೊಂದು ಕಾಮೆಂಟಿನ ಬಗ್ಗೆ ವಿವರವನ್ನು ಕೇಳಿದರೆ, ಅವರು ಹಾಗೆ ಅಂದುಕೊಂಡಿರುವುದರ ಹಿಂದಿನ ಕಾರಣವನ್ನು ಬಿಡಿಸಲು ನೋಡಿದರೆ ಹೆಚ್ಚೇನೂ ಇರುವುದಿಲ್ಲ - ಹೆಚ್ಚಿನವುಗಳು ಪೂರ್ವಾಗ್ರಹ ಪೀಡಿತ ಅನಿಸಿಕೆಗಳಾಗಿರುತ್ತವೆ, ಇನ್ನು ಕೆಲವು ಅವರವರ ದೃಷ್ಟಿಕೋನದ ಮಿತಿಯಲ್ಲಿರುತ್ತದೆ, ಮತ್ತೆ ಕೆಲವು ಯಾವುದೋ ಒಂದು ಅಜೆಂಡಾದ ಪ್ರತಿಯಂತೆ ಕಂಡುಬರುತ್ತವೆ.

ಸರಿ, ನಾನು ಪ್ರಶೆಗಳನ್ನು ಒಂದಾದ ಮೇಲೊಂದರಂತೆ ಕೇಳಲು ತೊಡಗಿದೆ - ನಮ್ಮ ಬದುಕನ್ನು ನೋಡಿ ನಿಮಗೇನನ್ನಿಸುತ್ತದೆ, ನಾವಿಲ್ಲಿ ಸಂತೋಷವಾಗಿದ್ದೇವೆಂದು ಅನ್ನಿಸುತ್ತದೆಯೇ? ನಮ್ಮ ಊಟ-ತಿಂಡಿ-ಉಪಚಾರಗಳನ್ನು ನೋಡಿ ಏನನ್ನಿಸಿತು? ಹೇಗೋ ಹತ್ತು ವರ್ಷದ ವೀಸಾ ಕೊಟ್ಟಿದ್ದಾರೆ ಮತ್ತೆ ಇಲ್ಲಿಗೆ ಯಾವಾಗ ಬರುತ್ತೀರಿ? ಇಲ್ಲಿನ ಅನುಕೂಲಗಳೇನು, ಅನಾನುಕೂಲಗಳೇನು? ಯಾವುದು ಇಷ್ಟವಾಯಿತು, ಏಕೆ? ಯಾವುದು ಇಷ್ಟವಾಗಲಿಲ್ಲ, ಏಕೆ? ಇತ್ಯಾದಿ.

ಕೆಳಗೆ ಅವರು ಕೊಟ್ಟ ಉತ್ತರವನ್ನೆಲ್ಲ ಹೀಗೆ ಕ್ರೋಡೀಕರಿಸಿದ್ದೇನೆ: ನಾವು ಇಲ್ಲಿ ತಿಂಡಿ ತಿನ್ನುವ ರೀತಿ, ವಿಧಾನ ಅವರಿಗೆ ಇಷ್ಟವಾಗಲಿಲ್ಲವಂತೆ, ಇಲ್ಲಿನ ಬ್ರೆಡ್ಡು ಅಲ್ಲಿಗಿಂತ ಒಳ್ಳೆಯದಾದರೂ ಈ ಓಟ್‌ಮೀಲ್ ಪುಡಿ, ಕಾರ್ನ್‌ಪ್ಲೇಕ್ಸ್, ಬ್ರೆಡ್ಡುಗಳು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ, ಸಾಧ್ಯವಾದಷ್ಟೂ ನಾವು ಭಾರತೀಯ ತಿಂಡಿಗಳನ್ನೇ ಮಾಡಿಕೊಳ್ಳಬೇಕಂತೆ. ಇಲ್ಲಿ ಎಲ್ಲದಕ್ಕೂ ಮೆಷೀನುಗಳು ಇರುವುದು ತುಂಬಾ ಇಷ್ಟವಾದ ವಿಚಾರವಂತೆ, ಪಾತ್ರೆ ತೊಳೆದು ಒಣಗಿಸುವುದೂ, ಮೈಕ್ರೋವೇವ್ ಅವನ್ನಿನಲ್ಲಿ ಕೂಡಲೇ ಚಹಾ-ಕಾಫಿ ಮಾಡುವುದೂ ಇವೆಲ್ಲವೂ ಬಹು ಇಷ್ಟವಾಯ್ತುಂತೆ. ನಮ್ಮ ಇಲ್ಲಿನ ದೊಡ್ಡ ಅನಾನುಕೂಲಗಳ ಪಟ್ಟಿಯಲ್ಲಿ 'ನಮಗೇನಾದರೂ ಹೆಚ್ಚೂ ಕಡಿಮೆ ಆದರೆ ನೋಡೋರು ಯಾರೂ ಇಲ್ಲ' ಅನ್ನೋದು ಮೊದಲು ಬಂದಿತು. ಅನುಕೂಲಗಳ ಪಟ್ಟಿಯಲ್ಲಿ 'ನಮ್ಮಲ್ಲಿನ ಹಾಗೆ ನೆಂಟರೂ-ಇಷ್ಟರೂ ದಿಢೀರಂತ ನುಗ್ಗಿ ತೊಂದರೆ ಕೊಡೋದಿಲ್ಲ' ಎನ್ನುವುದನ್ನೂ ಕೇಳಿ ಆಶ್ಚರ್ಯವಾಯಿತು. ಮತ್ತೆ ಬರುತ್ತೀರಾ ಎಂದದ್ದಕ್ಕೆ 'ಬರುವುದಿಲ್ಲ, ಅಥವಾ ಕಷ್ಟವಿದೆ ನೋಡೋಣ' ಎಂದಿದ್ದೂ ಹಾಗೂ ಎಲ್ಲಕ್ಕೂ ಮುಖ್ಯವಾಗಿ 'ನೀವು ಇಲ್ಲಿ ಬಹಳ ಹೆದರಿಕೆಯಿಂದ ಬದುಕುತ್ತೀರಿ' ಎಂದದ್ದೂ ನನ್ನನ್ನು ಬಹಳ ಯೋಚಿಸುವಂತೆ ಮಾಡಿದವು. ಕೊನೆಯಲ್ಲಿ 'ನೀವು ಇಲ್ಲಿ ಖುಷಿಯಾಗಿಯೇ ಇದ್ದೀರಿ, ಇಲ್ಲಿ ಎಲ್ಲವೂ ಸಿಗುತ್ತೆ, ಏನೂ ತೊಂದರೆಯಿಲ್ಲ' ಎನ್ನುವ ಮಾತುಗಳು ನನಗೆ ಬಹಳ ಇಷ್ಟವಾದವು.

ಭಾರತದಿಂದ ಒಬ್ಬೊಬ್ಬರೇನು ಇಬ್ಬಿಬ್ಬರು ಜೊತೆ-ಜೊತೆಯಲ್ಲಿ ಬಂದರೂ ಅವರಿಗೆ ಇಲ್ಲಿ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕಾಗುತ್ತದೆ, ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿ ತಂದೆ-ತಾಯಿ, ಅತ್ತೆ-ಮಾವಂದಿರನ್ನು ಮನೆಯಲ್ಲೇ ಕೂಡಿಹಾಕಿ 'ವೀಕೆಂಡ್ ಬಂದಾಗ ನೋಡೋಣ' ಅನ್ನೋದು ನಮಗೆ ಸುಲಭವಾದರೂ ಅವರಿಗೆ ಬಹಳ ಪ್ರಯಾಸದಾಯಕವಾಗುತ್ತದೆ. ಇಲ್ಲಿನ ಟಿವಿಯಲ್ಲಿ ಅಲ್ಲಿನ ಕಾರ್ಯಕ್ರಮಗಳು ಬರೋದಿಲ್ಲ, ಅಲ್ಲಿನ ಧಾರಾವಾಹಿಗಳು ಸಿಗೋದಿಲ್ಲ, ಅಲ್ಲಿನ ನೆರೆಹೊರೆಯವರ ಜೊತೆಗೆ ಎಂತಹ ನಗರ ಜೀವನಕ್ಕೆ ಹೊಂದಿಕೊಂಡವರಿಗೂ ಒಂದು ರೀತಿಯ ಸಂಬಂಧವೇರ್ಪಟ್ಟಿರುತ್ತೆ, ಅಂಥಾದ್ದರಲ್ಲಿ ಒಂದಲ್ಲ, ಎರಡಲ್ಲ ಆರು ತಿಂಗಳುಗಳ ಕಾಲ ಮನೆಯಲ್ಲೇ ವಾರ ಪೂರ್ತಿ ಇರಬೇಕು ಎಂದರೆ ಯಾರಿಗೆ ತಾನೇ ಬೇಸರವಾಗೋದಿಲ್ಲ. ಅಲ್ಲದೇ ಹೆಚ್ಚಿನ ಹಿಂದಿನ ತಲೆಮಾರಿನವರು ನಮ್ಮ ಹಾಗೆ ಘಂಟೆಗಟ್ಟಲೆ ಅಂತರ್ಜಾಲದ ಮುಂದೆ ಕುಳಿತೋ, ಯಾವುಯಾವುದೋ ಟಿವಿ ಕಾರ್ಯಕ್ರಮಗಳನ್ನು ನೋಡಿಯೋ ಕಾಲ ಕಳೆಯುವವರಲ್ಲ, ಅದೂ-ಇದೂ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದವರಿಗಂತೂ ಇನ್ನೂ ಕಷ್ಟವಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಬಂದರೆ ಸುಖ, ಇನ್ನು ಛಳಿಗಾಲದಲ್ಲಿ ಬಂದರೆ ಕಥೆಯೇ ಮುಗಿಯಿತು. ಬೇರೇನೂ ಬೇಡ, ನಾವು ಇಲ್ಲಿ ಅದ್ಯಾವುದೇ ಪುಡಿಯಿಂದ ಹೇಗೇ ಕಾಫಿ ಮಾಡಿಕೊಟ್ಟರೂ ಅವರಿಗೆ 'ಮನೆಯ ಕಾಫಿ'ಯ ಸಮಾಧಾನ ಬರುವ ಹೊತ್ತಿಗೆ ಸಾಕುಸಾಕಾಗಿ ಹೋಗಿರುತ್ತದೆ - ದಿನ ನಿತ್ಯದ ಸಣ್ಣ-ಸಣ್ಣ ಬದಲಾವಣೆಗಳನ್ನ ನಾವೇ ಎಷ್ಟೊಂದು ಎದುರಿಸಲು ಹೋರಾಡುತ್ತಿರುವಾಗ ಯಾವುದೋ ದೇಶದ ಯಾವುದೋ ಊರಿಗೆ ಹೋಗಿ ಆರು ತಿಂಗಳು 'ಕೊಳೆಯುವುದನ್ನು' ಊಹಿಸಿಕೊಳ್ಳುವುದು ನನ್ನಂಥವರಿಗೆ ಹಿಂದೆ ಕಷ್ಟವಾಗುತ್ತಿತ್ತು, ಆದರೆ ಇತ್ತೀಚೆಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಇನ್ನು 'ನೀವು ಇಲ್ಲಿ ಬಹಳ ಹೆದರಿಕೆಯಿಂದ ಬದುಕುತ್ತೀರಿ' ಎಂಬುದರ ಬಗ್ಗೆ ಹೀಗೆ ಅನ್ನಿಸಿತು. ಇಲ್ಲಿ ತಳ ಊರಬಯಸುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿರುತ್ತಾರೆಂತಲೇ ಹೇಳಬೇಕು - ಭಾರತದಲ್ಲಿ ಇತ್ತೀಚೆಗೆ ಮನೆ ಸಾಲ, ವಾಹನ ಸಾಲವೆಂಬ ಪ್ರತೀತಿ ಚಾಲ್ತಿಗೆ ಬಂದಿದ್ದರೂ, ಉದಾಹರಣೆಗೆಂದು ಇಲ್ಲಿನ ನಮ್ಮ ಮನೆಯನ್ನು ಖರೀದಿಸಿದ ಹಣವನ್ನು ರೂಪಾಯಿಗೆ ಬದಲಾಯಿಸಿ, ಅದರಲ್ಲಿ ನಮ್ಮ ತಲೆಯ ಮೇಲಿರುವ ಸಾಲವನ್ನು ಕೋಟಿಯಲ್ಲಿ ಹೇಳಿದಾಗ ಮಧ್ಯಮ ವರ್ಗದ ನನ್ನ ಅತ್ತೆಯಂತವರಿಗೆ ದಿಗಿಲಾಗುವುದು ಸಹಜವೇ. ಅಲ್ಲದೇ ಎಷ್ಟೇ ದುಡಿದರೂ ಪೇಚೆಕ್‌ನಿಂದ ಪೇಚೆಕ್‌ಗೆ ಬಹಳ ಜನರು ಬದುಕುತ್ತಾರಾದ್ದರಿಂದ 'ಅಕಸ್ಮಾತ್ ಕೆಲಸವೇನಾದರೂ ಹೋದರೆ...ಈ ಸಾಲವನ್ನೆಲ್ಲ ಹೇಗೆ ತೀರಿಸುತ್ತೀರಿ' ಎಂದೂ ಅವರು ಭಯ ಪಡುತ್ತಾರೆ. ಎಲ್ಲಕ್ಕೂ ಮೂಲದಲ್ಲಿ 'ನಮ್ಮ ಫ್ಯಾಮಿಲಿಯಲ್ಲಿ ಸಾಲ ಅನ್ನೋದೇ ಇರಲಿಲ್ಲ...' ಎನ್ನುವ ಮಾತಿಗೆ ನಾನಾದರೂ ಏನು ಹೇಳಲಿ? ಇಲ್ಲಿ ಮನೆಕೊಳ್ಳುವಾಗ ಇಪ್ಪತ್ತು ಪ್ರತಿಶತ ಡೌನ್ ಪೇಮೆಂಟನ್ನು ಕೊಟ್ಟು ಇನ್ನುಳಿದದ್ದನ್ನು ಮಾರ್ಟ್‌ಗೇಜ್‌ ಆಗಿ ಪ್ರತೀ ತಿಂಗಳು ಅಸಲೂ-ಬಡ್ಡಿ ಕೊಟ್ಟು ಕೊನೆಯಲ್ಲಿ ಟ್ಯಾಕ್ಸ್ ಕಟ್ಟುವಾಗ ಆದಾಯವಿದೆಯೆಂದು ಹೇಳಿದರೂ 'ಏನೇ ಹೇಳಿ, ಸಾಲ ಸಾಲವೇ' ಎನ್ನುತ್ತಾರೆ. ಸಾಲದ ಹಂಗು, ಕೆಲಸ ಹೋದರೆ ಎನ್ನುವ ಗುಂಗುಗಳನ್ನು ಹೊರತು ಪಡಿಸಿದರೆ ಮುಖ್ಯವಾಗಿ ಕಾಣುವುದು 'ವಾಹನ ಅಪಘಾತ', ಹೆಚ್ಚು ವೇಗದಲ್ಲಿ ಇಲ್ಲಿ ಚಲಿಸೋದರಿಂದ ಹೆಚ್ಚು ಅಪಘಾತಗಳಾಗುತ್ತವೆ ಎನ್ನುವ ಸ್ವಯಂ ನಿರ್ಣಯಕ್ಕೆ ಬಂದು ಬಿಡುತ್ತಾರೆ ಅದರಲ್ಲಿರುವ ಸತ್ಯಾಸತ್ಯತೆಯನ್ನು ವಿವೇಚಿಸುವುದಕ್ಕೆ ಹೋಗುವುದಿಲ್ಲ. ನನ್ನನ್ನು ಕೇಳಿದರೆ ನಾನು ಭಾರತದಲ್ಲೇ ಹೆಚ್ಚು ವಾಹನ ಅಫಘಾತದ ಹೆಚ್ಚಿನ ರಿಸ್ಕ್‌ನಲ್ಲಿದ್ದೆ, ಇಲ್ಲಿ ವೇಗವಾಗಿ ಹೋಗುತ್ತೇನಾದರೂ ನನಗೆ ಇವತ್ತಿಗೂ ಅಲ್ಲಿಯ ವಾಹನಗಳ ಭಯವೇ ಹೆಚ್ಚು, ವಾಹನ ಅಫಘಾತವಾದ ನಂತರ ತ್ವರಿತವಾಗಿ ಸಿಗದ ವೈದ್ಯಕೀಯ ಸೇವೆ, ನಾನು ಕಣ್ಣಾರೆ ಕಂಡ ಹಲವಾರು ವಾಹನ ಅಫಘಾತಗಳ ಸಾವು-ನೋವು ನನ್ನನ್ನು ಹೀಗೆ ಯೋಚಿಸುವಂತೆ ಮಾಡಿರಬಹುದು ಅಥವಾ ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಾಗಿರಬಹುದು.

ಪುಣ್ಯಕ್ಕೆ ನನ್ನ ಅತ್ತೆಯವರು ನನ್ನ ಹಾಗೆ ಅಲ್ಲಿ-ಇಲ್ಲಿನದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ, ಆದರೆ ಅವರ ಮಾತಿನ ಮಧ್ಯೆ 'ಆ ದರಿದ್ರ ದೇಶದಲ್ಲಿ ಜನ ಬಾರೀ ಮೋಸ ಮಾಡ್ತಾರೆ!' ಅನ್ನೋ ವಾಕ್ಯದಲ್ಲಿ 'ದರಿದ್ರ ದೇಶ' ಬಳಕೆಯನ್ನು ಕುರಿತು ನಮ್ಮ ದೇಶಕ್ಕೆ ದಯವಿಟ್ಟು 'ದರಿದ್ರ ದೇಶ' ಅನ್ನುವ ಪದವನ್ನು ಹಿಂದಕ್ಕೆ ತೆಗೆದುಕೊಳ್ಳಿ ಹಾಗೆ ಹೇಳಬೇಡಿ, ನಮ್ಮ ದೇಶ ದರಿದ್ರವೆಂದರೆ ಅದಕ್ಕೆ ನಾವೂ-ನೀವು ಎಲ್ಲರೂ ಕಾರಣರು ಎಂದೆ - ಅವರಿಗೆ ಏನನ್ನಿಸಿತೋ ಗೊತ್ತಿಲ್ಲ, ಸುಮ್ಮನಂತೂ ಆದರು!

Monday, May 29, 2006

ಜೋಗಾದ್ ಗುಂಡಿಯಲ್ಲಿ ರೆಸ್ಟೋರಂಟೇ, ಛೇ!

ಮೇ ೧೪ರಂದು ಪ್ರಜಾವಾಣಿಯಲ್ಲಿ ಜೋಗದ ಗುಂಡಿಯಲ್ಲಿ ರೆಸ್ಟೋರಂಟ್ ಕಟ್ಟುವ ಪ್ರಸ್ತಾಪ ಹಾಗೂ ಆ ಬಗ್ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದರ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ನಾನು ಸಾಧ್ಯವಾದಾಗಲೆಲ್ಲ ಜೋಗಕ್ಕೆ ಹೋಗಿ ಬರುತ್ತೇನೆ, ಅಲ್ಲಿಗೆ ಹೋದ ಮೇಲೆ ಸುಮ್ಮನೇ ಸುರಿಯುವ ನೀರು ಎನಿಸಿದರೂ ಅಲ್ಲಿಗೆ ಹೋಗುವವರೆಗಿನ ಉತ್ಸಾಹ, ಆ ದಾರಿಯಲ್ಲಿ ತೆರಳುವಾಗ ಹಿಂತಿರುಗುವ ಹಳೆಯ ನೆನಪುಗಳು, ಹೋದ ಕೂಡಲೇ ಅದೇ ಮುಖವನ್ನಿಟ್ಟುಕೊಂಡು ಸ್ವಾಗತಿಸುವ ಜಲಧಾರೆ ಇವೆಲ್ಲವೂ ಪ್ರತೀ ಭೇಟಿಯಲ್ಲಿ ಹೊಸತೇನನ್ನೋ ಕಂಡುಕೊಳ್ಳಲು ಸಹಾಯಮಾಡುತ್ತವೆ. ನನ್ನ ಕ್ಯೂಬಿಕಲ್‌ನಲ್ಲಿ ಗೋಡೆಗೆ ನಾನು ೧೯೯೮ರಲ್ಲಿ ಹೋದಾಗ ತೆಗೆದ ಜೋಗದ ಜಲಪಾತದ ಒಂದು ಚಿತ್ರ ಜೊತೆಯಲ್ಲಿ ಗೇರುಸೊಪ್ಪಾ ಜಲಪಾತದ ಮತ್ತೊಂದು ಚಿತ್ರವನ್ನೂ ಅಂಟಿಸಿಕೊಂಡಿದ್ದೇನೆ, ನನ್ನನ್ನು ಭೇಟಿ ಮಾಡಲು ಬಂದ ಹೊಸಬರೆಲ್ಲ 'ಇದು ಎಲ್ಲಿಯದು?' ಎಂದು ಕೇಳುತ್ತಾರೆ, ನಾನು ವಿವರವಾಗಿ ಜೋಗದ ಕಥೆಯನ್ನು ಹೇಳುತ್ತೇನೆ, ಜೊತೆಯಲ್ಲಿ 'ಇದು ನ್ಯಾಚುರಲ್ಲಾಗಿ ಹುಟ್ಟಿರೋದು' ಎನ್ನುವುದಕ್ಕೆ ಒತ್ತುಕೊಡುತ್ತೇನೆ. ನಾನು ತೆಗೆದ ೪ ಬೈ ೬ ಅಂಗುಲದ ಫೋಟೋದಲ್ಲಿ ಜೋಗದ ಹತ್ತಿರಹತ್ತಿರ ಸಾವಿರದ ಅಡಿ ಜಲಧಾರೆಯನ್ನು ಊಹಿಸಿಕೊಳ್ಳುವುದು ಹೊಸಬರಿಗೆ ಕಷ್ಟ, ಪಾಪ.



ಬೇಸಿಗೆಯಲ್ಲಿ ನಮ್ಮೂರಿನ ಬಡವರನ್ನು ನೆನಪಿಗೆ ತರುವಂತೆ ಮೈಮೇಲೆ ಎಲುಬುಗಳು ಕಾಣುವ ರೀತಿಯಲ್ಲಿ ರಾಜಾ-ರೋರರ್-ರಾಕೇಟ್-ಲೇಡಿಗಳು ಬಡವಾಗಿರುತ್ತವೆ, ಮಳೆಗಾಲ, ಮಳೆಗಾಲದ ತರುವಾಯದ ಕೆಲವು ತಿಂಗಳುಗಳು ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರನ್ನೇನಾದರೂ ವಿಶೇಷ ಸಂದರ್ಭಗಳಲ್ಲಿ ಬಿಟ್ಟರೆ ಆಗ ಮತ್ತೆ ಮೈತುಂಬಿಕೊಳ್ಳುತ್ತವೆ. ನೀರು ಕಡಿಮೆ ಇರುವ ಬೇಸಿಗೆಯಲ್ಲೇ ಜೋಗಕ್ಕೆ ಪ್ರವಾಸಿಗರು ಹೆಚ್ಚು ಬರೋದು. ಮಳೆಗಾಲದಲ್ಲಿ ಹೆಚ್ಚಿನ ಪಕ್ಷ ಮಂಜು ಕವಿದು ಏನನ್ನಾದರೂ ನೋಡಲು ಸಿಗುವುದೇ ದೊಡ್ಡ ವಿಷಯ. ಪರಿಸ್ಥಿತಿ ಹೀಗಿರುವಾಗ ಜಲಪಾತದ ಬುಡದಲ್ಲಿ ಸುಮಾರು ೬೦೦ ಜನರು ಕುಳಿತುಕೊಳ್ಳಬಹುದಾದ ಒಂದು ರೆಸ್ಟೋರಂಟನ್ನು ನಿರ್ಮಾಣಮಾಡಲು ಹಾಗೂ ಜಲಪಾತಕ್ಕೆ ಇಳಿಯುವ ಮೆಟ್ಟಿಲುಗಳನ್ನು ದುರಸ್ತಿ ಮಾಡಲು ಕೇಂದ್ರದಿಂದ ೪.೧೨ ಕೋಟಿ ರೂಪಾಯಿಗಳನ್ನು ಬಿಡುಗಡೆಮಾಡಿದ್ದಾರೆ ಎಂದು ವರದಿಯಾಗಿದೆ. ಬರೀ ಮೆಟ್ಟಿಲುಗಳನ್ನು ದುರಸ್ತಿಮಾಡುವುದಕ್ಕೆ ಮಾತ್ರ ನಾಲ್ಕು ಕೋಟಿ ರೂಪಾಯಿಗಳು ಸಾಕಾಗುತ್ತವೆ - ಏಕೆಂದರೆ ಅವರೂ-ಇವರೂ ತಿಂದು ಉಳಿದ ಹಣದಲ್ಲಿ ಮೆಟ್ಟಿಲುಗಳೂ ಸುಮಾರು ದುರಸ್ತಿಯನ್ನು ಪಡೆಯುತ್ತಿದ್ದವು, ಆದರೆ ನಾಲ್ಕು ಕೋಟಿ ರೂಪಾಯಿಯಲ್ಲಿ ಜಲಪಾತದ ಬುಡದಲ್ಲಿ ಆರು ನೂರು ಜನರು ಕೂರುವ ಒಂದು ರೆಸ್ಟೋರಂಟನ್ನು ಕಟ್ಟುವುದೂ, ಅಲ್ಲಿಗೆ ಹೋಗಿ ಬರಲು ಲಿಫ್ಟ್‌ಗಳನ್ನು ನಿರ್ಮಿಸುವುದೂ, ಹಾಗೂ ರೆಸ್ಟೋರಂಟಿನ ಮೇಂಟೆನೆನ್ಸ್ ಮಾಡುವುದು ಇವೆಲ್ಲ ಆಗಿಹೋಗದ ವಿಚಾರ ಎಂದು ಧೈರ್ಯವಾಗಿ ಹೇಳಬಲ್ಲೆ. ಒಂದು ವೇಳೆ ಹಣ ಮಂಜೂರಾದ ರೀತಿಯಲ್ಲೇ ಕಾರ್ಯ ನಡೆದಿದ್ದೇ ಆದರೂ ಸದಾ ಜಲಪಾತದ ಬುಡದಲ್ಲಿರುವ ಈ ರೆಸ್ಟೋರಂಟ್ ಒಂದು ದಿನ ಕಳಪೆ ಕಾಮಗಾರಿಯಿಂದ ಕುಸಿದು ಬೀಳಲಿಕ್ಕೂ ಸಾಕು. ನನ್ನನ್ನು ಕೇಳಿದರೆ ನಾಲ್ಕು ಕೋಟಿ ರೂಪಾಯಿಗಳನ್ನು ನಿಜವಾದ ಜೋಗದ ಅಭಿವೃದ್ಧಿಗೆ ಬಳಸಿಕೊಂಡು ಅಲ್ಲಿಗೆ ಹೋಗಿ ಬರುವವರಿಗೆ ಸಿಗುವ ಪ್ರವಾಸೀ ಮೌಲ್ಯವನ್ನು ಹೆಚ್ಚು ಮಾಡಲು ಬಳಸುವಂತಿದ್ದರೆ ಎಷ್ಟೋ ಚೆನ್ನಾಗಿತ್ತು.



ಸಾಗರದ ಸ್ಥಳೀಯ ರಾಜಕಾರಣಿಗಳು ಏನೇ ಹೇಳಿದರೂ ಜೋಗದ ಸುತ್ತಮುತ್ತಲೂ ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವ ನಾ. ಡಿಸೋಜಾರವರ ಮಾತಿಗೆ ನಾನು ಖಂಡಿತ ಬೆಲೆ ಕೊಡುತ್ತೇನೆ, 'ಜೋಗದ ಗುಂಡಿಯೊಳಗೆ ಯಾವುದೇ ಕಟ್ಟಡ ಕಟ್ಟುವುದು ಮೂರ್ಖತನ' ಎನ್ನುವಲ್ಲಿ ಅವರಲ್ಲಿರುವ ಸಾಹಿತಿಯ ಸಂವೇದನೆಗಳಷ್ಟೇ ಅಲ್ಲ ಒಬ್ಬ ನಾಗರಿಕನ ಸಾಮಾನ್ಯ ಜ್ಞಾನವೂ, ಒಬ್ಬ ಲೋಕೋಪಯೋಗಿ (ಇಲಾಖೆಯ) ನೌಕರನ ಕಳಕಳಿಯೂ ಇದೆ, ಅವರದೇ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತ ಕಾರ್ಗಲ್ಲಿನ ತಿಮ್ಮಪ್ಪನ ಮೂಲಕ ಅವರನ್ನು ನಾನು ಚೆನ್ನಾಗಿ ಬಲ್ಲೆ. ಜೋಗದ ಗುಂಡಿಯಲ್ಲಿ ಕಟ್ಟಡ ಕಟ್ಟುವ ವಿಚಾರಗಳು ಯಾರ ತಲೆಯಲ್ಲಿ ಹೇಗೆ ಬರುತ್ತವೋ, ಹೀಗೆ ದಿಢೀರನೆ ಹಣ ಸ್ಯಾಂಕ್ಷನ್ ಆಗಿದೆ ಎಂದರೆ ಅದರ ಹಿಂದಿರುವವರ ಕೆಲಸದ ಬಗ್ಗೆ ಊಹಿಸಿಕೊಳ್ಳಬಲ್ಲೆ, ಅವರೇನಾದರೂ ಒಂದು ಬಿಸಿನೆಸ್ ಪ್ಲಾನ್ ಮಾಡಿದ್ದು, ಅದರಲ್ಲಿ ಈ ಕಟ್ಟಡ ಕಟ್ಟುವುದರ ಬಗ್ಗೆ, ಕಟ್ಟಿ ವ್ಯವಹಾರ ಮಾಡುವ ಬಗ್ಗೆ, ಮಾಡಿ ಲಾಭ ಹೊಂದುವ ಬಗ್ಗೆ, ಹೆಚ್ಚು ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುವ ಬಗ್ಗೆ ವಿವರಗಳಿದ್ದಿರಬಹುದೇ ಎಂದು ಸೋಜಿಗಗೊಳ್ಳುತ್ತೇನೆ, ಆದರೆ ನಾನು ಓದಿದ ಪತ್ರಿಕೆಗಳಲ್ಲಿ ಯಾವ ವಿವರವೂ ಸಿಕ್ಕೋದಿಲ್ಲ. ಅಲ್ಲದೇ ಸ್ಥಳೀಯರಿಗೆ ಬೇಡವಾದ ಈ ಯೋಜನೆಯ ಹಿಂದೆ ದೆಹಲಿಯಲ್ಲಿ ಯಾವ ರೀತಿಯ ಕುಮ್ಮಕ್ಕು ಸಿಕ್ಕಿರಬಹುದು ಎಂದೂ ಆಶ್ಚರ್ಯವಾಗುತ್ತದೆ.

ಒಂದಂತೂ ನಿಜ - ಜೋಗದ ಗುಂಡಿಗೆ ಹೋಗಲಿರುವ ಈಗಿನ ಮೆಟ್ಟಿಲುಗಳಲ್ಲಿ ಜಾರಿ ಬಿದ್ದು ಕೈ ಕಾಲು ಮುರಿದುಕೊಂಡವರು ‍ಯಾರೂ ಇಲ್ಲಿಯವರ ಥರ 'ಕಿತ್ತು ಹೋದ ಮೆಟ್ಟಿಲುಗಳು ನನ್ನ ಬದುಕನ್ನು ಹಾಳುಗೆಡವಿದವು' ಎಂದು ಲಾ ಸೂಟನ್ನು ಇನ್ನೂ ಹಾಕಿಲ್ಲ, ಮುಂದೆ ಇಂತಹ ಕೋರ್ಟು ಕೇಸುಗಳಿಂದಲೇ ಪರಿಸ್ಥಿತಿ ಸುಧಾರಿಸುತ್ತೇನೋ ಎನ್ನುವ ಆಶಾವಾದವೂ ಮನದಲ್ಲಿ ಮಿಂಚಿ ಮರೆಯಾಗುತ್ತೆ.

***

ಇಲ್ಲಿನ ನಯಾಗರ ಜಲಪಾತಕ್ಕೆ ಯಾರ ಯಾರ ಜೊತೆಯಲ್ಲೋ ಹಲವಾರು ಬಾರಿ ಹೋಗಿದ್ದೇನೆ - ನನ್ನ ಜೊತೆ ಬಂದವರಲ್ಲಿ ಈಗಾಗಲೇ ಜೋಗ ಜಲಪಾತವನ್ನು ನೋಡಿದವರಿಗೆ ನಯಾಗರ ವಿಶೇಷವಾಗೇನೂ ಕಾಣುವುದಿಲ್ಲ, ಅದರಲ್ಲೂ ಇಲ್ಲಿಯವರ ಕೈ ಚಳಕದಿಂದ ನಿರ್ಮಿತವಾಗಿದ್ದೂ ಅಥವಾ ಮಾರ್ಪಾಟುಹೊಂದಿದ್ದೂ ಎಂದು ಕೇಳಿದ ಮೇಲೆ 'ಹೌದಾ' ಎನ್ನುವ ಉದ್ಗಾರ ಬರುತ್ತದೆ. ಆದರೆ, ಎಲ್ಲವೂ ಮೈ ತುಂಬಿಕೊಂಡಿರುವ ಇಲ್ಲಿ ನಯಾಗರವು ಎಂದೂ ಬತ್ತಿದ್ದಾಗಲೀ ಅಥವಾ ಕೃಶವಾಗಿದ್ದಾಗಲೀ ಕೇಳಿಲ್ಲ - ಛಳಿಗಾಲದಲ್ಲಿ ಮೇಲೆ ದಪ್ಪನಾದ ಹಿಮ ಆವರಿಸಿದ್ದರೂ ಹರಿಯುವ ನೀರಿನ ಪ್ರಮಾಣ ಅಷ್ಟೆ ಇರುವುದು ಸೋಜಿಗವಲ್ಲದೇ ಮತ್ತೇನು?

Sunday, May 28, 2006

ಕವಳೀಕಾಯಿಯನ್ನು ಹುಡುಕಿಕೊಂಡು ಹೋದ ದಿನ

ಕವಳೀಕಾಯಿ, ಅದರ ಉಪ್ಪಿನಕಾಯಿ, ಕವಳೀ ಹಣ್ಣು, ಇವೆಲ್ಲವನ್ನೂ ನೆನೆಸಿಕೊಂಡಾಗ ನಾಲಿಗೆಯಲ್ಲಿ ತನ್ನಷ್ಟಕ್ಕೆ ತಾನೇ ನೀರೂರುತ್ತದೆ. ಅಂಗಡಿಯಲ್ಲಿ ಸಿಗುವ ಇಲ್ಲಿನ ಕೆಲವೇ ಕೆಲವು ಉಪ್ಪಿನಕಾಯಿ ಬಾಟಲಿಗಳಲ್ಲಿ ಕವಳೀಕಾಯಿಯೆಂದು ಸ್ವಲ್ಪ ಸೇರಿಸಿದಂತೆ ಮಾಡಿರುತ್ತಾದರೂ, ನಮ್ಮ ಊರಿನಲ್ಲಿ ಬೊಗಸೆಗಟ್ಟಲೆ ಹಣ್ಣು-ಕಾಯಿಗಳನ್ನು ತಿನ್ನುವುದಕ್ಕೂ, ಇಲ್ಲಿ ಉಪ್ಪಿನಕಾಯಿಯಂತೆ ಒಂದೆರಡು ತುಂಡನ್ನು ನಂಚಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈ ಹಣ್ಣಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೋ, ಎಲ್ಲೆಲ್ಲಿ ಬೆಳೆಯುತ್ತೋ, ಅದರ ಮೂಲ ಮತ್ತು ಮಹತ್ವವೇನೋ ಯಾರಿಗೆ ಗೊತ್ತು, ಆದರೆ ಇವತ್ತಿಗೂ ಸಹ ನಮ್ಮೂರಲ್ಲಿ ಈ ಹಣ್ಣುಗಳು ಸ್ವಾಭಾವಿಕವಾಗಿ ಬೆಳೆದು ಯಾರದ್ದೋ ಬೇಲಿಯಲ್ಲೋ, ಇಲ್ಲಾ ಒಂದು ಕಾಲದಲ್ಲಿ ಕಾಡು ಇದ್ದ ಜಾಗದಲ್ಲೋ ಪೊದೆಗಳಲ್ಲಿ ಸಿಕ್ಕುವುದಂತೂ ಗ್ಯಾರಂಟಿ!

***

೨೦೦೩ ರಲ್ಲಿ ಆನವಟ್ಟಿಗೆ ಹೋದಾಗ ಬೇಸಿಗೆ ರಜೆಗೆಂದು ಬಂದ ಅಣ್ಣನ, ಅಕ್ಕ-ತಂಗಿಯ ಮಕ್ಕಳು ಬೇಕಾದಷ್ಟು ಹುಡುಗರು ಸಿಕ್ಕಿದ್ದರು. ನಾನೇ ಜೋರು ಎಂದರೆ ಈ ಹುಡುಗರು ಇನ್ನೂ ಜೋರು, ಹತ್ತು-ಹನ್ನೆರಡು ವರ್ಷಗಳಿಗಾಗಲೇ 'ಜಾಗಿಂಗ್ ಹೋಗೋಣ' ಎಂದರೆ ಬೆಳ್ಳಗಿನ ಸ್ನೀಕರ್ ಧರಿಸಿ ತಯಾರಿರುವಂತವರು, ನಾವೆಲ್ಲ ಬರೀ ಕಾಲಿನಲ್ಲಿ ಓಡಾಡಿದಂತೆ ಇವರೇನಾದರೂ ಮನೆಯಿಂದ ಹೊರಗಡೆ ಕಾಲಿಟ್ಟರೆ ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದಂತೆಯೇ ಸರಿ. ಮನೆಯಲ್ಲಿ ಸೇರಿಕೊಂಡಿದ್ದ ಹಲವಾರು ಹುಡುಗ-ಹುಡುಗಿಯರಲ್ಲಿ ಕೊನೆಗೆ 'ಹೊರಗಡೆ ಹೋಗುವ' ಉತ್ಸಾಹವನ್ನು ಉಳಿಸಿಕೊಂಡವರು ನನ್ನ ಅಣ್ಣನ ಮಗ ನಿತಿನ್ ಹಾಗೂ ನನ್ನ ತಂಗಿಯ ಮಗ ಆಕಾಶ್ ಇಬ್ಬರೇ. 'ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೇ ಮನೆ ಬಿಡಬೇಕು' ಎಂದು ಎಚ್ಚರಿಕೆ ನೀಡಿದ್ದರೆ 'ಹಾ...' ಎಂದವರು, ಬೆಳಿಗ್ಗೆ ಐದೂವರೆ ಆದರೂ ಇನ್ನೂ ಸಕ್ಕರೆ ನಿದ್ದೆಯಲ್ಲೇ ಬಿದ್ದಿರುವುದೇ? ಇಬ್ಬರನ್ನೂ ತಡವಿ ಎಬ್ಬಿಸಿದೆ 'ನೋಡ್ರೋ, ನಾನು ಹೊರಟಿದ್ದೇನೆ, ಕೊನೆಗೆ ಹೇಳ್ಲಿಲ್ಲಾ ಅನ್ನಬೇಡಿ!' ಎಂದು ಹೇಳುತ್ತಲೇ ಇಬ್ಬರೂ ಯಾವ ಮಾಯದಲ್ಲಿ ಎದ್ದರೋ, ಮುಖ ತೊಳೆದರೋ, ಹೊರಡಲು ತಯಾರೂ ಆದರು. ಬೆಳಿಗ್ಗೆ ಐದೂಮುಕ್ಕಾಲು ಸುಮಾರಿಗೆ ಇನ್ನೂ ಸೂರ್ಯ ಹುಟ್ಟುವ ಮೊದಲೇ ನಾವು ಮನೆ ಬಿಟ್ಟಾಗಿತ್ತು.

ಎಲ್ಲರಿಗೂ ಅವರವರ ಊರಿನ ಪರಿಚಯವಿರುವಂತೆ ನನಗೂ ನಮ್ಮ ಊರಿನ ಮೂಲೆ ಮೂಲೆಯ ಪರಿಚಯವಿದೆ, ಆದರೆ ಊರಿನ ಬೆಳವಣಿಗೆ ಹೆಚ್ಚಿದಂತೆಲ್ಲಾ ನಾನು ನಮ್ಮ ಊರನ್ನು ನೋಡುವುದು ಕಡಿಮೆ ಆದದ್ದರಿಂದ ಖಾಲಿ ಇದ್ದ ಜಾಗದಲ್ಲಿ ಮನೆಗಳು ಎದ್ದು, ಬೇಲಿಯೇ ಇರದ ಜಾಗದಲ್ಲಿ ಕಾಂಪೌಂಡುಗಳು ಬಂದು, ರಸ್ತೆಯಲ್ಲಿ 'ಯಾರೋ ಬಂದರು' ಎಂದು ಬೊಗಳುವ ನಿನ್ನೆ-ಮೊನ್ನೆ ಹುಟ್ಟಿದ ಕಂತ್ರೀ ನಾಯಿಗಳಿಗೂ ನನ್ನ ಪರಿಚಯವನ್ನೂ ಹೇಳಬೇಕಾದ್ದರಿಂದ ನನ್ನನ್ನು ನಮ್ಮ ಊರಿನಲ್ಲಿ ಪರಕೀಯ ಎಂದುಕೊಂಡರೇ ಸರಿ. ಮೊದಲೆಲ್ಲಾ ಸಹಜವಾಗಿ ಬೆಳೆದು ನಿಂತ ಗಂಧದ ಮರಗಳನ್ನು ಹತ್ತಿ ಸೊಪ್ಪನ್ನು ಕಿತ್ತು ತರುತ್ತಿದ್ದೆ, ಆದರೆ ಈ ದಿನಗಳಲ್ಲಿ ಆ ಗಂಧದ ಮರವಿರಲಿ ಅದರ ಬೇರಿನ ತುದಿಗೆ ಒಂದು ಕಾಲದಲ್ಲಿ ಅಂಟಿಕೊಂಡಿದ್ದ ಮಣ್ಣೂ ಸಿಗುವುದಿಲ್ಲ - ರಾತ್ರೋ ರಾತ್ರಿ ಹೀಗೆ ಎಷ್ಟೋ ಮರಗಳು ನಾನು ಅಲ್ಲಿದ್ದಾಗಲೇ ಕಾಣೆಯಾಗಿ ಯಾವನೋ ದಿಢೀರನೆ ಸ್ವಲ್ಪ ಕಾಸನ್ನು ಮಾಡುತ್ತಿದ್ದ, ನಾನು ಆಪ್ತ ಸ್ನೇಹಿತನೊಬ್ಬನನ್ನು ಕಳೆದುಕೊಂಡ ಹಾಗೆ 'ಅಲ್ಲಿರೋ ಮರಾನೂ ಹೋಯ್ತಾ' ಎಂದು ರೋಧಿಸುತ್ತಿದ್ದೆ. ನಾನು ನನ್ನ ಬಾಲಂಗೋಚಿಗಳು (ಜೊತೆಯಲ್ಲಿ ಬರುವ ಈ ಹುಡುಗರು) ಇಲ್ಲದೇ ಪೇಟೆಗೆ ಎಂದಾದರೂ ಹೋದರೆ, ನನ್ನ ವೇಷವನ್ನು ನೋಡಿ, ಮಾತನ್ನು ಕೇಳಿ 'ತಮ್ದು ಯಾವೂರಾಯ್ತೋ?' ಎನ್ನುವ ಜನಗಳಿಗೆ ನಾನು ಅದೇ ಊರಿನಲ್ಲಿ ಇದ್ದುಕೊಂಡೇ 'ಆನವಟ್ಟಿ!' ಎಂದು ನಗುತ್ತೇನೆ, ಅವರು 'ಇಲ್ಲಿ ಯಾರ ಮನೆ?' ಎಂದರೆ 'ನಮ್ಮ ಮನೆ!' ಎಂದು ಈ ಊರು ನಮ್ಮದು ಎನ್ನುವ ಹಠವನ್ನು ಪ್ರದರ್ಶಿಸುತ್ತೇನೆ, 'ಅಂದರೆ...' ಎಂದು ಇಲ್ಲೀವರೆಗೂ ಯಾರೂ ವಿವರಣೆಯನ್ನು ಕೇಳೋದಿಲ್ಲವಾದ್ದರಿಂದ, ಮುಂದೆ ಪ್ರಶ್ನೆಗಳೇನಾದರೂ ಬಂದರೆ ಆಗ ನೋಡೋಣವೆಂದು ಸುಮ್ಮನಿದ್ದೇನೆ.

ಆಕಾಶ ಮತ್ತು ನಿತಿನ್ ಕೊಯ್ಯೋ-ಮರ್ರೋ ಮಾಡುತ್ತಾ ನನ್ನ ಜೊತೆ ಬಂದು ಇನ್ನೂ ಸ್ವಲ್ಪ ದೂರವೂ ನಡೆದಿಲ್ಲ, 'ಯಾವ ಕಡೆ ಹೋಗೋದು ಮಾಮಾ' ಎಂದು ಆಕಾಶನೆಂದರೆ 'ಹೈ ಸ್ಕೂಲ್ ಫೀಲ್ಡಿಗೆ ಹೋಗೋಣ್ವಾ' ಎಂದು ನಿತಿನ್ ಸೂಚಿಸಿದ. ನಾನು 'ಹೈ ಸ್ಕೂಲ್ ಕಡೆ ಹೋಗಿ, ಅಲ್ಲಿ ಸಾಲ್ ಮರದಲ್ಲಿ ಒಂದಿಷ್ಟು ಮಾವಿನ್‌ಕಾಯಿ ಬಡಚಿಕೊಂಡು, ಆಮೇಲೆ ಒಂದಿಷ್ಟು ಕವಳೀಕಾಯಿ ಹುಡುಕಿಕೊಂಡು ಹೋಗೋಣ' ಎಂದೆ. ಆಕಾಶ ಇದ್ದವನು 'ಮತ್ತೆ, ಜಾಗಿಂಗೂ?' ಅಂದ, ನಾನು 'ಸರೀ ಓಡೋಣ ಹಾಗಾದರೆ' ಎಂದು ಓಟಕ್ಕೆ ಚಾಲನೆ ಕೊಟ್ಟೆ, ಆದರೆ ದಾರಿಯುದ್ದಕ್ಕೂ ಉಸಿರುಬಿಡುತ್ತಿದ್ದವನು ನಾನು, ಈ ಹುಡುಗರು ನೆಲದಲ್ಲಿ ಸುಮ್ಮನೇ ಪುಟಿಯುತ್ತಿದ್ದಂತೆ ಕಂಡು ಬಂತು. ಅದ್ಯಾವ ಪುಣ್ಯಾತ್ಮ ನಮ್ಮೂರಿನ ರಸ್ತೆಯನ್ನು ಹೇಗೆ ಡಿಸೈನ್ ಮಾಡಿದನೋ ಗೊತ್ತಿಲ್ಲ, ಆನವಟ್ಟಿಯಿಂದ ಶಿರಾಳಕೊಪ್ಪಕ್ಕೆ ಹೋಗೋ ರಸ್ತೆಯ ಎರಡೂ ಬದಿಗೆ ಥರಾವರಿ ಮಾವಿನಮರಗಳಿವೆ, ಸಾಲುಗಿಡಗಳೆಂದು ಚೆಂದವಾಗಿ ಅಂದು ನೆಟ್ಟಿದ್ದು ಇವತ್ತಿನವರೆಗೂ ಫಲ ಕೊಡುತ್ತಿದೆ, ನೆರಳು ನೀಡುತ್ತಿದೆ, ಆದರೆ ಎಲ್ಲವೂ ಪುಕ್ಕಟೆ, ಈ ಮಾವಿನ ಹಣ್ಣುಗಳಿಗೂ, ಇವುಗಳಿಂದ ಕೊಯ್ದು ಮನೆಗೆ ತೋರಣ ಕಟ್ಟಿದ ಎಲೆಗಳಿಗೂ, ಹೀಚು, ಕಾಯಿ, ದ್ವಾರೆ ಹಣ್ಣು, ಹಣ್ಣುಗಳೆಂದು ತಿಂದು ಚೆಲ್ಲಿದ ಎಣಿಸಲಾರದ ಅದೆಷ್ಟೋ ಹಣ್ಣುಗಳಿಗೆ ನಾನು ಈವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ, ಬೇರೆಯವರೂ ಕೊಟ್ಟಿರಲಾರರು. ಆಲಿಕಲ್ಲು ಮಳೆಬಿದ್ದ ಸಂಜೆಯ ಮಾರನೇ ಬೆಳಿಗ್ಗೆ ಹೋದರೆ ಹೊರಲಾರದಷ್ಟು ಹಣ್ಣುಗಳನ್ನು ಹುಡುಕಬಹುದು. ನಾವೆಣಿಸಿದಂತೆ ಕೆ.ಇ.ಬಿ. ಆಫೀಸಿನ ಮುಂದೆ, ಹಾಸ್ಟೆಲಿನ ಮುಂದೆ, ಜ್ಯೂನಿಯರ್ ಕಾಲೇಜಿನ ಮುಂದೆ, ಫಾರೆಸ್ಟ್ ಆಫೀಸಿನ ಮುಂದೆ ಎಷ್ಟೋ ಮಾವಿನ ಕಾಯಿಗಳನ್ನು ಕೈಗೆ ಸಿಕ್ಕ ಕಲ್ಲು ಕೋಲುಗಳಿಂದ ಬಡಚುತ್ತಾ ಹೋದರೆ ನನಗೆ ನನ್ನ ಹಳೆಯ ಗುರಿ ಸಿಕ್ಕುವಷ್ಟರಲ್ಲಿ ಕೈನೋವು ಬಂದಿತ್ತು, ಇನ್ನು ಈ ಹುಡುಗರಿಗೆ ಗುರಿಯಿಟ್ಟು ಹೊಡೀರೋ ಎಂದರೆ ಕಂಡ ಕಂಡಲ್ಲಿ ಕಲ್ಲುಗಳನ್ನು ಬೀಸುವಂತೆ ಕಂಡುಬಂದರು. ಮೊದಲೆಲ್ಲಾ ಆದರೆ ಮಾವಿನಕಾಯಿಗಳ ಗೊಂಚಲಿನ ಬುಡಕ್ಕೆ ಏಟುಬಿದ್ದು ಹಾಗೆ ಬೀಳುತ್ತಿರುವ ಹೊಂಚಲನ್ನು ನೆಲಕ್ಕೆ ಬೀಳುವ ಮುನ್ನ ಗಾಳಿಯಲ್ಲೇ ಹಿಡಿದು ತಂದಿದ್ದರೆ ಹೊಡೆತ ಬೀಳದ ಕಾಯಿಗಳೆಂದು ಅಮ್ಮ ಉಪ್ಪಿನಕಾಯಿ ಹಾಕುತ್ತಿದ್ದಳು, ಆದರೆ ಆ ಭಾಗ್ಯ ಈಗ ಲಭಿಸಲಿಲ್ಲ, ನಮ್ಮ ಏಟಿಗೆ ಬಿದ್ದ ಕೆಲವೇ ಕೆಲವು ಕಾಯಿಗಳು ನೇರವಾಗಿ ಏಟು ತಿಂದದ್ದೂ ಅಲ್ಲದೇ ಟಾರು ರಸ್ತೆಯ ಮೇಲೆ ಬಿದ್ದು ಎರಡೆರಡು ರೀತಿಯ ನೋವಿನಿಂದಾಗಿ ತಮ್ಮ ಹಸಿರು ಚರ್ಮವನ್ನು ಕೆತ್ತಿಕೊಂಡು ಒಳಗಿನ ಬಿಳಿ ಭಾಗವನ್ನು ಅಲ್ಲಲ್ಲಿ ತೋರಿಸುತ್ತಾ ಸೊನೆಯನ್ನು ಸೂಸುವುದು ಕಣ್ಣೀರಿಡುತ್ತಿದ್ದಂತೆ ಕಂಡು ಬಂದಿತು. ಆಕಾಶ 'ಮಾಮಾ, ಒಂದಿಷ್ಟು ಉಪ್ಪೂ-ಖಾರ ಇದ್ರೆ ಚೆನ್ನಾಗಿತ್ತು!' ಅಂದ. ನಾನು ಮನೆಗೆ ಹೋದ ಮೇಲೆ ನೋಡೋಣ, ಇನ್ನೂ ತುಂಬಾ ಕೆಲ್ಸಾ ಇದೆ' ಎಂದದ್ದು ಇಬ್ಬರ ಮುಖದ ಮೇಲೂ ಆಶ್ಚರ್ಯ ಹುಟ್ಟಿಸಿತು.

***

ನನಗೆ ಗೊತ್ತು ನಮ್ಮೂರಲ್ಲಿ ಈಗಿನ ಬೇಲಿಗಳು ಒಂದೇ ಸ್ಥಳಾಂತರಗೊಂಡಿವೆ ಅಥವಾ ಸಮಯಕ್ಕೆ ತಕ್ಕಂತೆ ಅವೂ ಬದಲಾಗಿವೆ - ಎರಡು ಗದ್ದೆ, ಬ್ಯಾಣಗಳ ಅಕ್ಕ ಪಕ್ಕದ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿ ಬೇಲಿಯಂತೂ ಇರಲೇಬೇಕು ಆದರೆ ಆಧುನಿಕ ಸಂಬಂಧಗಳಿಗೆ ತಕ್ಕಂತೆ ಅವೂ ಬದಲಾಗಲಿಲ್ಲವೆಂದರೆ? ಮೊದಲೆಲ್ಲಾ ಬೇಲಿಯಲ್ಲಿ ಇರುತ್ತಿದ್ದ ಮುಳ್ಳಿರುವ ಕವಳೀ ಗಿಡಗಳ ಪೊದೆಯ ಬದಲು ಈಗ ಗೊಬ್ಬರದ ಗಿಡಗಳು ಹುಲುಸಾಗಿ ಬೆಳೆದುಕೊಂಡಿದ್ದು ಕಣ್ಣಿಗೆ ಗೋಚರಿಸಿತು. ಈ ದಿನ ಕವಳೀಹಣ್ಣಿನ ಮಾತಿರಲಿ, ಕಾಯಿಯನ್ನು ಹುಡುಕುವುದಕ್ಕೆ ಬೇಕಾದಷ್ಟು ನಡೆಯುವುದಕ್ಕಿದೆ ಎಂದು ನನಗೆ ಅನ್ನಿಸಿದ್ದರಿಂದ ಜೊತೆಯಲ್ಲಿದ್ದ ಹುಡುಗರಿಗೆ 'ನಡೀರೀ ಹೋಗೋಣ - ಈ ಕಡೆ' ಎಂದು ಮನೆಗೆ ವಿರುದ್ಧವಾದ ದಿಕ್ಕಿಗೆ ಕೈ ತೋರಿಸಿದೆ. ಅವರು ಚಕಾರವೆತ್ತದೆ ನನ್ನನ್ನು ಹಿಂಬಾಲಿಸಿದ್ದರು. ಆ ಹುಡುಗರಿಗೆ ನನ್ನ ಜೊತೆ ಬರುವುದೇ ಗುರಿಯಾಗಿದ್ದರೆ, ನನಗೆ ಯಾವುದೇ ಗೊತ್ತು-ಗುರಿಗಳಿರಲಿಲ್ಲ, ಅದೆಲ್ಲಿಯೋ ಮುಂದೆ ಸಿಗಬಹುದಾದ ಸಹಜವಾಗಿ ಬೆಳೆದ ಕವಳಿ ಹಣ್ಣೊ, ಕಾಯಿಗಳನ್ನು ತಿನ್ನುವುದನ್ನು ಬಿಟ್ಟು!

ಏನಾಶ್ಚರ್ಯ, ನಾವು ಶಿರಾಳಕೊಪ್ಪದ ರಸ್ತೆಯಿಂದ ಸುಮಾರು ಒಂದು ಮೈಲಿನ ಮೇಲೆ ನಡೆದರೂ ಒಂದೇ ಒಂದು ಕಡೆ ಕವಳೀ ಗಿಡದ ಪೊದೆಯೂ ಕಾಣುತ್ತಿಲ್ಲ, ಜೊತೆಯಲ್ಲಿ ಆದಷ್ಟು ಬೇಗ ಸಿಗಲಿ ಅನ್ನೋ ಸಂಕಲ್ಪದಲ್ಲಿರೋ ಇವರ 'ಅದರ ಎಲೆಗಳು ಹೇಗಿರುತ್ತೆ?' ಅನ್ನೋ ಪ್ರಶ್ನೆಗೆ ಬೇರೆ ಉತ್ತರಕೊಡಬೇಕು. ಹೀಗೆ ಎಷ್ಟೋ ಹೊತ್ತು, ಎಷ್ಟೋ ದೂರ ನಡೆದ ಮೇಲೆ, ಹುಡುಗರು ಆಗಾಗ್ಗೆ ಕೊಡುತ್ತಿದ್ದ 'ಅಕಸ್ಮಾತ್ ನಮಗೆ ದಾರಿಯೇನಾದ್ರೂ ಕಳೆದು ಹೋದ್ರೆ!' ಎನ್ನುವ ಎಚ್ಚರಿಕೆಗಳ ನಡುವೆ, ಕೊನೆಗೂ ಅದ್ಯಾವುದೋ ಬೇಲಿಯೊಂದರಲ್ಲಿ ಕವಳಿಗಿಡ ಇರುವುದು ದೂರದಿಂದಲೇ ಕಂಡಿತು. ಕುರಿಗಳ ಬಾಯಿಗೆ ಸಿಗದಂತೆ ಬೇಲಿಯ ಪಕ್ಕದಲ್ಲಿ ಗುಂಡಿಯಿದ್ದುದರಿಂದ ಅದರಲ್ಲಿ ಕೆಲವುಕಾಯಿಗಳು ಇನ್ನೂ ಇದ್ದವು. ನನಗಾದ ಸಂತೋಷಕ್ಕಿಂತಲೂ ನನ್ನ ಜೊತೆಯಿದ್ದ ಹುಡುಗರಿಗೆ ತುಂಬಾ ಖುಷಿಯಾಗಿತ್ತು. ನಾನು ಗಿಡದ ಹತ್ತಿರ ಹುಷಾರಾಗಿ ಹೋಗಿ ಒಂದಿಷ್ಟು ಕಾಯಿಗಳನ್ನು ಕಿತ್ತುಕೊಂಡೆ, ಕಾಯಿಗಳನ್ನು ಕಿತ್ತುಕೊಂಡ ಕಡೆಯಿಂದ ಗಿಡದ ಹಾಲು ಒಸರತೊಡಗಿತು, ಹುಡುಗರಿಗೆ ತಲಾ ಒಂದಿಷ್ಟು ಕೊಟ್ಟು, 'ತಿನ್ರೋ' ಎಂದರೆ ಅವರು ಮೊದಲು ಮುಖ-ಮುಖ ನೋಡಿ ಆಮೇಲೆ ಬಾಯಿಗೆ ಹಾಕಿಕೊಂಡರು, ನಾನು ಈ ಕಾಯಿಗಳ ಮೇಲೆ ಲಘುವಾಗಿ ಪಸರಿಸಿದ ಧೂಳನ್ನು ನನ್ನ ಜೀನ್ಸ್ ಪ್ಯಾಂಟಿಗೆ ತಿಕ್ಕಿ ಒಂದೊಂದೇ ಕಾಯಿಗಳನ್ನು ತಿನ್ನ ತೊಡಗಿದೆ. ಹುಡುಗರು 'ಒಂಥರಾ ಒಗರು!' ಎಂದದ್ದಕ್ಕೆ 'ಅದರಲ್ಲೇ ಇರೋದು ಮಜಾ!' ಎಂದು ಸಮಜಾಯಿಷಿ ಕೊಟ್ಟೆ.

***

ಕವಳೀಕಾಯಿ ಕೀಳಲು ಹೋದದ್ದನ್ನು ಯಾರಿಗೂ ಹೇಳಬೇಡಿ ಎಂದಿದ್ದಕ್ಕೆ ಹುಡುಗರು ನನ್ನ ಮಾತನ್ನು ಕೇಳಿದರಾದರೂ ಮತ್ತೆ ಮರುದಿನ ಯಾರೂ 'ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತಾರೆಂದು' ನನ್ನ ಜೊತೆಯಲ್ಲಿ 'ಜಾಗ್ಗಿಂಗ್' ಗೆ ಬರಲಿಲ್ಲ, ನಮ್ಮೂರಿನ ಹೆಂಗಳೆಯರು ಮುಂಜಾನೆ ಅಂಗಳವನ್ನು ಗುಡಿಸಿ ಸಾರಿಸೋದೋರಳಗೆ ನಿರ್ಜನಗಲ್ಲಿಗಳನ್ನು ಹಳೆ ಸ್ನೇಹಿತರಂತೆ ಹುಡುಕಿಕೊಂಡು ಹೋಗುವ ಪರಿಪಾಟವನ್ನು ನಾನು ನಿಲ್ಲಿಸಲಿಲ್ಲ!

Saturday, May 27, 2006

ಬಂಕಸಾಣ-ಬೆಲ್‌ಮಾರ್‌ಗಳಲ್ಲಿ ಕಲಿತ ಪಾಠ

ಮೊನ್ನೆ ಸೂಪ್ ಲೇಖನ ಬರೆದ ಮೇಲೆ ಸಾವಿನ ಬಗ್ಗೆ ಮತ್ತೆ-ಮತ್ತೆ ಯೋಚಿಸತೊಡಗಿದಾಗ ನಾನು ಸಾವಿಗೆ ಅತ್ಯಂತ ಹತ್ತಿರ ಬಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು ಎರಡು ಬಾರಿ ಅನ್ನುವ ವಿಷಯ ಹೊಳೆಯಿತು. ೧೯೮೫ ರಲ್ಲಿ ಒಮ್ಮೆ ಆನವಟ್ಟಿಯ ಸಮೀಪವಿರುವ ವರದಾನದಿಯಲ್ಲಿ ಒಮ್ಮೆ ಪಾರಾಗಿದ್ದರೆ, ೧೯೯೯ ರಲ್ಲಿ ನ್ಯೂ ಜೆರ್ಸಿಯ ಬೆಲ್‌ಮಾರ್‌ನಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಎರಡನೆಯ ಬಾರಿ ಪಾರಾಗಿದ್ದೆ. ಬಂಕಸಾಣದಲ್ಲಿ ನನಗೆ ಅಷ್ಟೊಂದು ಸೋಜಿಗವೂ ಹೆದರಿಕೆಯೂ ಆಗಿರಲಿಲ್ಲ, ಆದರೆ ಬೆಲ್‌ಮಾರ್‍‌ನಲ್ಲಿ ಆದ ಅಸಾಧ್ಯ ಹೆದರಿಕೆ, ಭಯ ಎರಡೂ ನನ್ನನ್ನು ಬಹಳ ದಿನಗಳವರೆಗೆ ಬಾಧಿಸಿದ್ದವು. ಅಂದಿನಿಂದ ನೀರಿನೊಡನೆ ಸರಸ ಸಲ್ಲಾಪ ಅಷ್ಟೊಂದು ಇಟ್ಟುಕೊಂಡಿಲ್ಲ, ಇಟ್ಟುಕೊಂಡರೂ ಎಷ್ಟು ಸಾಧ್ಯವೋ ಅಷ್ಟು ಜಾಗೃತನಾಗಿರುತ್ತೇನೆ.

***

ಆನವಟ್ಟಿಯಿಂದ ಕಾಲುದಾರಿಯಲ್ಲಿ ನಡೆದರೆ ವರದಾನದಿಯ ಪಾತ್ರದಲ್ಲಿ ಇರುವ ಒಂದು ಚಿಕ್ಕ ಹಳ್ಳಿ ಬಂಕಸಾಣದಲ್ಲಿ ನೀರಿನಲ್ಲಿ ಮುಳುಗಿಕೊಂಡಿರುವ ಹೊಳೆಲಿಂಗೇಶ್ವರನ ಸಾನಿಧ್ಯವಿದೆ. ಮಳೆಗಾಲದಲ್ಲಿ ಶಿವಲಿಂಗ ಹಾಗೂ ಗರ್ಭಗುಡಿ (ಲಿಂಗದ ಸುತ್ತಲೂ ಅಳಿದುಳಿದ ಕಲ್ಲುಗಳ ಒಂದು ಕಟ್ಟೆ ಎನ್ನಬಹುದು) ಸಂಪೂರ್ಣ ಮುಚ್ಚಿಹೋಗುತ್ತದೆ, ಆದರೆ ಬೇಸಿಗೆಯ ಸಮಯದಲ್ಲಿ ನದಿಯನ್ನು ನಡೆದೇ ದಾಟಬಹುದಾದ್ದರಿಂದ ಲಿಂಗದ ದರ್ಶನ ಹಲವಾರು ತಿಂಗಳುಗಳವರೆಗೆ ಆಗುತ್ತದೆ. ಇಲ್ಲಿ ಪ್ರತಿ ಜನವರಿ ೧೪ ರಂದು ಮಕರ ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಜಾತ್ರೆ ನಡೆಯುತ್ತದೆ, ಆನವಟ್ಟಿ, ಜಡೆ ಹೋಬಳಿ ಹಾಗೂ ದೂರದೂರದ ಹಳ್ಳಿ ಪಟ್ಟಣಗಳಿಂದ ಸಾಕಷ್ಟು ಜನರು ಬಂದು ಸೇರುತ್ತಾರೆ. ನಮ್ಮೂರಿನಲ್ಲಿ ಮನೆಗೊಬ್ಬರಾದರೂ ಜಾತ್ರೆಗೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬರುವ ಪದ್ಧತಿ ಇದೆ, ಅಲ್ಲದೇ ಶಾಲಾ-ಕಾಲೇಜುಗಳಿಂದಲೂ ಪಿಕ್‌ನಿಕ್ ಹೆಸರಿನಲ್ಲಿ ಬೇಕಾದಷ್ಟು ಜನರು ಹೋಗುತ್ತಾರೆ. ಮೊದಲೆಲ್ಲಾ ವರದಾನದಿಗೆ ಅಡ್ಡವಾಗಿ ಸೇತುವೆ ಇರಲಿಲ್ಲ, ಇತ್ತೀಚೆಗೆ (ಹತ್ತು ವರ್ಷವಾಗಿರಬಹುದು) ಸೇತುವೆಯನ್ನೂ ಕಟ್ಟಿದ್ದಾರೆ. ಇದೇ ಬಂಕಸಾಣಕ್ಕೆ ಬಸ್ ಹೋಗುವ ಹಾದಿಯಲ್ಲಿ ಹೋದರೆ ಸುಮಾರು ೧೦ ಕಿ.ಮೀ. ಆಗಬಹುದು. ಆದರೆ, ಕುಬಟೂರು ಕೆರೆ ಏರಿ, ಲಕ್ಕವಳ್ಳಿ ಜಮೀನುಗಳ ಮಧ್ಯೆ ಇರುವ ಕಾಲ್ದಾರಿಗಳೆಲ್ಲವೂ ನನಗೆ ಚಿರಪರಿಚಿತವಾಗಿರುವುದರಿಂದ ಐದು ಕಿ.ಮೀ. ಇರುವ ಹಾದಿಯಲ್ಲಿ ಒಂದು ಘಂಟೆಯ ಒಳಗೆ ನಡೆದೇ ತಲುಪಬಹುದಾಗಿತ್ತು, ಅಥವಾ ಎಲ್ಲಾದರೂ ಬಾಡಿಗೆಗೆ ಸೈಕಲ್ ತೆಗೆದುಕೊಂಡರೆ ಎಲ್ಲವೂ ಸುಲಭವಾಗುತ್ತಿತ್ತು.

ಈ ಬಂಕಸಾಣ ಜಾತ್ರೆಗೆ ನಾನು ನನ್ನ ಸ್ನೇಹಿತರ ಜೊತೆಗೆ ಹೋಗಿದ್ದಕ್ಕಿಂತಲೂ ನನ್ನ ದೊಡ್ಡ ಅಣ್ಣ ಹಾಗೂ ಅವನ ಸ್ನೇಹಿತರ ಜೊತೆಗೆ ಹೋದದ್ದೇ ಹೆಚ್ಚು. ನನ್ನ ಅಣ್ಣ ಅವನ ಸ್ನೇಹಿತರಾದ ಗೋಪಿ, ಕಿತ್ತ, ಉಮೇಶ, ಪ್ರಕಾಶ ಮುಂತಾದವರ ಜೊತೆ ಪ್ರತೀವರ್ಷವೂ ಎಂಬಂತೆ ಹೋಗುತ್ತಿದ್ದ, ಅಲ್ಲಿ ಹೋದ ಮೇಲೆ ನೀರಿನಲ್ಲಿ ತೂರ್‌ಚೆಂಡು ಆದುವುದೇನು, ಆ ದಡದಿಂದ ಈ ದಡಕ್ಕೆ ಹೆಚ್ಚು ಆಳ ಇರುವಲ್ಲಿಯೇ ಹೋಗುವುದು ಎಂದರೇನು? ಅವರೆಲ್ಲರ ಜೊತೆಯಲ್ಲಿ ಹತ್ತರ ಜೊತೆ ಹನ್ನೊಂದು ಅನ್ನೋ ಹಾಗೇ ನಾನೂ ಒಬ್ಬ ಹಾಲುಂಡಿ. ನನ್ನ ಅಣ್ಣ ಒಳ್ಳೇ ಈಜುಗಾರ, ಅವನು ಜೋಗಾದಲ್ಲಿರೋ ಸ್ವಿಮ್ಮಿಂಗ್ ಪೂಲಿನ ಅತ್ಯಂತ ಎತ್ತರದ ಮೆಟ್ಟಿಲಿನಿಂದ (ಸುಮಾರು ಐವತ್ತು ಅಡಿ ಎತ್ತರವಿರಬಹುದು) ಡೈವ್ ಮಾಡಿದ್ದನ್ನೂ, ಕಂಡ-ಕಂಡ ಹೊಳೆ-ಬಾವಿಗಳಲ್ಲಿ ಲೀಲಾಜಾಲವಾಗಿ ಈಜೋದನ್ನೂ ಹಲವಾರು ಬಾರಿ ನೋಡಿ ಕಣ್ಣನ್ನು ತುಂಬಿಕೊಂಡಿದ್ದೇನೆಯೇ ಹೊರತು ಮೈಸೂರಿಗೆ ಹೋಗುವವರೆಗೆ ನನಗೆ ಈಜಿನ ಗಂಧವೂ ಬಾರದು. ಅವನಿಗಾದರೆ ಯಾವುದೇ ಕೆರೆ-ಬಾವಿ-ಹೊಳೆಗಳಲ್ಲಿ ಈಜು ಹೊಡೆಯುವುದಕ್ಕೆ, ಅಥವಾ ಯಾವುದೋ ತುಡುಗು ಕುದುರೆಗೆ ಮನೆಯಲ್ಲಿನ ಲೋಹದ ಹ್ಯಾಂಗರು-ಹಗ್ಗ-ಟವಲ್ಲನ್ನು ಬಳಸಿ ಲಗಾಮು ಹಾಕಿ ಸವಾರಿ ಮಾಡುವುದಕ್ಕೆ ಅಪ್ಪ-ಅಮ್ಮನಿಂದ ಆರಾಮವಾಗಿ ಪರ್ಮಿಷನ್ನು ಸಿಗುತ್ತಿತ್ತು, ಆದರೆ ನನಗೆ ಮಾತ್ರ ದನದ ಕೊಟ್ಟಿಗೆಯ ಸಮೀಪವೂ ಹೋಗಲು ಬಿಡುತ್ತಿರಲಿಲ್ಲ, ಹಾಲು ಕರೆಯುವ ಮಾತು ಹಾಗಿರಲಿ. ಇಂಥಾ ರೋಲ್‌ಮಾಡೆಲ್ ಅಣ್ಣನನ್ನು ಮನಸ್ಸಿನಲ್ಲಿ ವೈಭವೀಕರಿಸಿಕೊಂಡು ನನಗೆ ಕಷ್ಟ ಬಂದಾಗಲೆಲ್ಲ ಅವನೇನಾದರೂ ಇಲ್ಲಿದ್ದರೆ ಎಂದು ಇವತ್ತಿಗೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಅವನು ಹದಿನೈದು ವರ್ಷದ ಹಿಂದೆ ಬಾವಿಯಿಂದ ಎರಡೂ ಕೈಯಲ್ಲಿ ಎರಡು ದೊಡ್ಡ ದೊಡ್ಡ ಬಕೇಟುಗಳಲ್ಲಿ ನೀರು ತಂದು ಹಾಕುತ್ತಿದ್ದವನು, ನನಗೆ ಇವತ್ತಿಗೂ ಎರಡೂ ಕೈ ಸೇರಿದರೆ ಒಂದೇ ಬಕೇಟು ಎತ್ತುವುದಕ್ಕೆ ಆಗುವುದು ಎಂದು ಹೇಳಿದರೆ ಅಣ್ಣನ ಚಿತ್ರಣಕ್ಕೆ ಸರಿಯಾದ ನ್ಯಾಯ ಸಿಕ್ಕೀತು.

ಬಂಕಸಾಣದ ಹೊಳೆಯಲ್ಲಿ ಅಣ್ಣ ಮತ್ತು ಅವನ ಸ್ನೇಹಿತರು ಹೋಗೋದು ಪೂಜೆ ಮಾಡಿಸೋದು ಎನ್ನುವ ನೆಪಕ್ಕೆ ಮಾತ್ರ, ಆದರೆ ಅವರು ಅಲ್ಲಿ ನೀರಿನಲ್ಲಿ ಮನದಣಿಯೆ ಆಡಿ ಮನೆಗೆ ಹೊರಡುವಾಗ ಒಂದಿಷ್ಟು ಮಂಡಕ್ಕಿ, ಕಾರಸೇವು, ಬೆಂಡು ಬತ್ತಾಸುಗಳನ್ನು ತೆಗೆದುಕೊಂಡು ಹೋಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಅವರೆಲ್ಲರೂ ನೀರಿನಲ್ಲಿ ಇಳಿದರೆಂದರೆ ನಾನೂ ನೀರಿನಲ್ಲಿ ಇಳಿಯುತ್ತಿದ್ದೆ, ಆದರೆ ಈಜುಬಾರದ ನನಗೆ ಅಣ್ಣ ದೊಡ್ಡ ಕಣ್ಣು ಮಾಡಿ 'ಈ ಜಾಗ ಬಿಟ್ಟು ಎಲ್ಲೂ ಹೋಗಬೇಡ' ಎಂದು ಹೆದರಿಸಿ ಹೋಗುತ್ತಿದ್ದುದರಿಂದ ಅವರಿಗೆಲ್ಲ ಇದ್ದ ನೀರಿನ ವ್ಯಾಪ್ತಿ ನನಗಿರದೇ ಹೋಗಿತ್ತು, ಅದರೂ ಮೊಣಕಾಲು, ಸೊಂಟ, ಕೊನೆಗೆ ಎದೆ ಮಟ್ಟಕ್ಕೆ ನೀರಿನಲ್ಲಿ ಬಂದು, ತಲೆಯನ್ನು ಕಷ್ಟ ಪಟ್ಟು ಮೂರು ನಾಲ್ಕು ಸಾರಿ ನೀರಿನಲ್ಲಿ ಮುಳುಗಿಸಿ ಮತ್ತೆ ಕಡಿಮೆ ನೀರಿರುವ ಕಡೆಗೆ ಹೋದರೆ ನನ್ನ ಆಟವೆಲ್ಲ ಮುಗಿದುಹೋಗುತ್ತಿತ್ತು. ಆದರೆ, ಆ ಬಾರಿ ನನಗೆ ಅದೇನು ಅನಿಸಿತೋ ಬಿಟ್ಟಿತೋ ಗೊತ್ತಿಲ್ಲ, ಎದೆ ಮಟ್ಟದ ನೀರಿನಿಂದ ಕುತ್ತಿಗೆಯ ಮಟ್ಟಕ್ಕೆ ಹೋಗೋಣವೆನಿಸಿತು, ನಾನು ಹಾಗೆ ಹೋದಾಗ ನನ್ನ ಅಣ್ಣ ಮತ್ತು ಅವನ ಸ್ನೇಹಿತರು ತೂರ್‌ಚೆಂಡು ಆಡುತ್ತಿದ್ದುದನ್ನು ನೋಡುತ್ತಾ ಹೋದವನಿಗೆ ಏಕ್‌ದಂ ನೀರಿನಲ್ಲಿ ಕುತ್ತಿಗೆ ಮೀರಿ ಬಾಯಿಯವರೆಗೂ ನೀರು ಬಂದಿದ್ದು ದಿಗಿಲಾಗಿ ಕೈ-ಕಾಲು ಬಡಿದುಕೊಳ್ಳಲಾರಂಭಿಸಿದೆ, ಮೊಟ್ಟ ಮೊದಲು ಎಲ್ಲಕ್ಕಿಂತ ಮುಖ್ಯವಾಗಿ ಜೀವದ ಬೆಲೆ ಗೊತ್ತಾಗಿಹೋಯಿತೆಂದು ಹೃದಯ ಜೋರಾಗಿ ಹೊಡೆದುಕೊಳ್ಳಲಾರಂಭಿಸಿತು. ಚಿಕ್ಕವರು ಮುಳುಗಲು ಹೆಚ್ಚು ನೀರು ಬೇಕಾಗೋದಿಲ್ಲ, ಅಲ್ಲದೇ ಮುಳುಗಿದವರು ಕಷ್ಟಪಟ್ಟು ಮೇಲೆ ಬರುವ ಪ್ರಯತ್ನ ಹಾಗೂ ಸಾಯುವ ಭಯ ಇವೆರಡೂ ಮುಳುಗುವವನಿಗೆ ಸಹಾಯ ಮಾಡುವ ಸಾಧ್ಯತೆ ಕಡಿಮೆ - ಅಂದು ನನಗೂ ಹೀಗೇ ಆಗಿತ್ತು. ಆದರೆ ಅವರ ಆಟದ ಮಧ್ಯದಲ್ಲೇ ಚೆಂಡು ನನ್ನ ಕಡೆಗೆ ಬಂದಿತೆಂದು ಗೋಪಿ ನನ್ನ ಕಡೆಗೆ ಬಂದವನೇ 'ಇಲ್ಲೇನ್ ಮಾಡ್ತಾ ಇದ್ದೀಯೋ?' ಎಂದು ನನ್ನನ್ನು ಸಲೀಸಾಗಿ ಕೈ ಹಿಡಿದು ಎಳೆದು ಕಡಿಮೆ ನೀರಿರುವಲ್ಲಿ ತಂದು ಬಿಟ್ಟ! ಅವನು ಬರುವುದು ಒಂದು ನಿಮಿಷ ತಡವಾಗಿ ಹೋಗಿದ್ದರೂ ನನ್ನ ಕಥೆ ಮುಗಿದೇ ಹೋಗುತ್ತಿತ್ತು - ನಾನು ಈ ವಿಷಯವನ್ನೂ ಈ ವರೆಗೂ ಯಾರಲ್ಲೂ ಹೇಳಿಲ್ಲ, ಗೋಪಿಗೂ ನನ್ನನ್ನು ಆ ದಿನ ಜೀವದಿಂದುಳಿಸಿದೆ ಎನ್ನಿಸಲು ಇಲ್ಲ, ಅವನು ನನ್ನ ಕೈ ಹಿಡಿದು ಎಳೆದು ತಂದದ್ದು, ನಾನು ಭಯದಿಂದ ಸುಧಾರಿಸಿಕೊಂಡದ್ದೂ, ಮನೆಗೆ ಬರುವವರೆಗೆ, ಬಂದ ಮೇಲೆ ಇಲ್ಲೀವರೆಗೂ ಯಾರಲ್ಲೂ ಹೇಳದೇ ಸುಮ್ಮನಿದ್ದದ್ದೂ ಎಲ್ಲವೂ ಒಂದು ನಾಟಕದ ಅಂಕದಂತೆ ಸರಿದು ಹೋಗಿದೆಯೇ ವಿನಾ, ಮತ್ತಿನ್ನೇನೂ ಆಗಲಿಲ್ಲ, ಪ್ರತಿಯೊಂದರಿಂದ ಪಾಠ ಕಲಿಯಬೇಕಂತೆ, ಹಾಗಾದಿದ್ದುದೇ ನಾನು ಬೆಲ್‌ಮಾರ್ ಬೀಚ್‌ನಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿಹೋಗಿ ಜೀವಂತ ವಾಪಾಸು ಬಂದಿದ್ದು!

***

೧೯೯೯ ರಲ್ಲಿ ನಾನು ಇನ್ನೂ ಕನ್ಸಲ್‌ಟಂಟ್ ಆಗಿ ಪ್ರುಡೆಂಟಿಯಲ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಆಗ ನನ್ನ ಜೊತೆಯಿದ್ದ ಕನ್ನಡಿಗ ರೂಮ್‌ಮೇಟ್‌ಗಳಾದ ರಾಮಮೂರ್ತಿ, ರವಿ ಯೂ ಹಾಗೂ ಆಫೀಸಿನಲ್ಲಿ ಸ್ನೇಹಿತರಾದ ಕೆನ್, ಜೆನ್ನಿಫರ್, ರಾಬರ್ಟ್ ಹಾಗೂ ಮ್ಯಾನೇಜರ್ ಜ್ಯಾಕ್ ಅವರನ್ನೆಲ್ಲ ಜೀವಮಾನ ಪರ್ಯಂತ ಮರೆಯುವುದಿಲ್ಲ, ಆಗಿನ ದಿನಗಳಲ್ಲ ಬಹಳ ಒಳ್ಳೆಯ ದಿನಗಳು - ಏಕೆ ಹಾಗೆ ಹೇಳುತ್ತಿದ್ದೇನೆಂದರೆ, ಬೇಕಾದಷ್ಟು ಸಂಬಳ ಬರುತ್ತಿತ್ತು, ರೂಮ್‌ಮೇಟ್‌ಗಳ ದಸೆಯಿಂದ ಕಡಿಮೆ ಮನೆ ಬಾಡಿಗೆಯೂ ಹಾಗೂ ನನ್ನ ಸರಳ ಜೀವನಕ್ರಮದಿಂದ ಬಹಳ ಕಡಿಮೆ ಹಣವೂ ಖರ್ಚಾಗಿ ಬೇಕಾದಷ್ಟು ಹಣ ಬೇಡವೆಂದರೂ ಕೂಡಿಕೊಳ್ಳುತ್ತಿತ್ತು. ಆಗ ನಾನು ಹಗಲಿನ ಕೆಲಸ ಮುಗಿಸಿ ಎಷ್ಟೋ ಕಡೆ ರಾತ್ರಿ ಪಾಳಿಯಲ್ಲಿ ಮತ್ತೊಂದು ಪ್ರಾಜೆಕ್ಟಿನಲ್ಲಿ ಕೆಲವು ಕಡೆ ಕೆಲಸ ಮಾಡುತ್ತಿದ್ದುರಿಂದಲೂ, ನನ್ನ ಕಂಪನಿಯವರು ನನ್ನನ್ನು ಇಂಟರ್‌ವ್ಯೂವ್ ಮಾಡಲು ಬಳಸಿ ಮಾಡಿದ ಪ್ರತಿ ಇಂಟರ್‌ವ್ಯೂವ್‌ಗೆ ಇಷ್ಟು ಎಂದು ಹಣವನ್ನು ಕೊಡುತ್ತಿದ್ದುದರಿಂದಲೂ, ಹಾಗೂ ನನ್ನ ಸ್ನೇಹಿತರ ನೆಟ್‌ವರ್ಕ್‌ನಲ್ಲಿ ಅವರನ್ನು-ಇವರನ್ನು ರೆಫರ್ ಮಾಡಿದ್ದಕ್ಕೆ ರೆಫರಲ್ ಹಣವೆಂತಲು ಬಂದು ಸಾಕಷ್ಟು ಹಣ ಸಂಗ್ರಹಣೆಯಾಗುತ್ತಿತ್ತು. ಜೊತೆಯಲ್ಲಿ ಹೇಳಿ-ಕೇಳಿ ಸಿಂಗಲ್ ಬದುಕು, ಯಾರಿಗುಂಟು ಯಾರಿಗಿಲ್ಲ, ಅವು ಬಹಳ ಸ್ವೇಚ್ಚೆಯಿಂದ ಇರಬಹುದಾದ ದಿನಗಳಾಗಿದ್ದವು.

ಹೀಗೇ ಒಂದು ದಿನ ಇನ್ನೇನು ಮಾರ್ಚ್ ಮುಗಿದು ವಸಂತ ಋತು ಬಂದು ಹೊರಗೆಲ್ಲ ವಾತಾವರಣ ಮೈ ಛಳಿಯನ್ನು ಕಳೆದುಕೊಳ್ಳುತ್ತಿರುವಾಗ, ನನಗೆ ವರ್ಷಕ್ಕೆ ಆರು ಸಿಕ್ ಲೀವ್ ತೆಗೆದುಕೊಳ್ಳಬಹುದಾದ ಪ್ರಾವಿಜನ್ ಇರೋದರಿಂದ ಒಂದು ಶುಕ್ರವಾರವನ್ನು ರಜೆ ತೆಗೆದುಕೊಂಡು ಒಬ್ಬನೇ ಬೀಚ್‌ಗೆ ಹೋದರೆ ಹೇಗೆ ಎಂದು ಅನ್ನಿಸಿದ ತಕ್ಷಣವೇ ಗುರುವಾರ ಮಧ್ಯಾಹ್ನ ಮ್ಯಾನೇಜರ್ ಜಾಕ್‌ಗೆ 'ನನಗೆ ನಾಳೆ ಹುಷಾರಿರೋದಿಲ್ಲ!' ಎಂದು ಇ-ಮೈಲ್‌ನ್ನು ಗೀಚಿದೆ, ಜಾಕ್ ಆ ವಿಷಯವನ್ನು ಟೀಮಿನ ಎಲ್ಲರಿಗೂ ಕಳಿಸಿ ಅವರು ನನ್ನನ್ನು ತಮಾಷೆ ಮಾಡುತ್ತಿದ್ದಾಗ 'ನನ್ನ ಕಂಪನಿಗೆ ಮಾತ್ರ ಹೇಳಬೇಡಿ, ಏನು ಬೇಕಾದರೂ ಮಾಡಿ' ಎಂದು ತೋಡಿಕೊಂಡೆ.

ನಾನು ಆ ಶುಕ್ರವಾರ ಮಧ್ಯಾಹ್ನ ಮೂರು-ಮೂರೂವರೆ ಅಷ್ಟೊತ್ತಿಗೆ ಬೆಲ್‌ಮಾರ್ ಬೀಚಿಗೆ ಹೋದದಕ್ಕೆ ಹಲವಾರು ಕಾರಣಗಳಿದ್ದರೂ, ಮುಖ್ಯವಾಗಿ ನಾನು ಎಸ್.ಎಲ್. ಭೈರಪ್ಪನವರನ್ನೇ ದೂರೋದು! ನನ್ನ ಮ್ಯಾನೇಜರ್ ಜ್ಯಾಕ್ ಅಸಮಾನ್ಯ ಈಜುಗಾರ ಹಾಗೂ ಸ್ಕೀ ಮಾಡುವ ಮನುಷ್ಯ, ಅವನು ಬೇಸಿಗೆಯಲ್ಲಿ ಬೆಲ್‌ಮಾರ್‌ಗೆ ಬೇಕಾದಷ್ಟು ಸಾರಿ ಹೋಗಿ ಮನಪೂರ್ತಿ ಈಜಿ ಬರುತ್ತಿದ್ದ, ಛಳಿಗಾಲದಲ್ಲಿ ಬೀಚ್ ಪಟ್ರ್‍ಓಲ್ ಆಗಿ ಪೋಕೋನೋ ಬೆಟ್ಟಗಳಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದವ. ಅವನು ತನ್ನ ಈಜಿನ ಹಾಗೂ ಸ್ಕೀ ಅನುಭವಗಳನ್ನು ಪದೇ-ಪದೇ ನಮ್ಮೊಡನೆ ಹಂಚಿಕೊಳ್ಳುತಿದ್ದುದರಿಂದ ಅವನ ದೆಸೆಯಿಂದಾಗಿ ನಾನು ಗಾರ್ಡನ್ ಸ್ಟೇಟ್ ಪಾರ್ಕ್ ವೇ ಯಲ್ಲಿ ಸಿಗುವ ಉಳಿದೆಲ್ಲ ಬೀಚುಗಳಲ್ಲಿ ಬೆಲ್‌ಮಾರ್ ಅನ್ನೇ ಆರಿಸಿಕೊಂಡೆ. ಭೈರಪ್ಪನವರೇ ಮುಖ್ಯ ಕಾರ್‍ಅಣ ಅಂದದ್ದು ಏಕೆಂದರೆ ನಾನು ಆಗಷ್ಟೇ ಬಿಡುಗಡೆ ಹೊಂದಿದ್ದ 'ಸಾರ್ಥ'ವನ್ನು ಅದಾಗಲೇ ಎರಡು ಸಾರಿ ಓದಿದ್ದರೂ ವಿಶ್ವಕರ್ಮ ಸ್ಥಪತಿಯ ಪಾತ್ರ ಚಿತ್ರಣ, ಮಂಡನ ಮಿಶ್ರರು ಯತಿಯೊಡನೆ ವಾದದಲ್ಲಿ ಸೋತ ಪ್ರಸಂಗ ಹಾಗೂ ನಾಗಭಟ್ಟನ ಥರಾವರಿ ಅವತಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಹಂಬಲ ಇವುಗಳೆಲ್ಲವನ್ನೂ ಅಜೆಂಡಾದಲ್ಲಿ ಇಟ್ಟುಕೊಂಡು ಒಂದು ನೋಟ್‌ಪ್ಯಾಡೂ, ಕೂಲರ್ ತುಂಬಾ ತರಾವರಿ ಜ್ಯೂಸು, ಚಿಪ್ಸು, ನೀರು, ಹಾಗು ಹಣ್ಣುಗಳನ್ನು ತುಂಬಿಕೊಂಡು, ಬೀಚ್ ಚೇರು, ಸನ್ ಸ್ಕ್ರೀನು ಲೋಷನ್, ಟವೆಲ್‌ಗಳು ಹಾಗೂ ನೀರಿಗಿಳಿಯಬಹುದಾದ ಈಜುಡುಗೆಗಳನ್ನು ತೆಗೆದುಕೊಂಡು ಮನೆಯಿಂದ ಒಬ್ಬನೇ ಹೊರಟೆ. ಮಧ್ಯಾಹ್ನವಾದ್ದರಿಂದ ಎಲ್ಲಿಯೂ ಯಾವ ತೊಂದರೆಯೂ ಆಗದೆ ನಾಲ್ಕು ಘಂಟೆಯ ಹತ್ತಿರ ಹತ್ತಿರವಾದರೂ ಸೂರ್ಯ ಸುಡುತ್ತಲಿದ್ದರೂ, ನಾನೊಬ್ಬನೆ ಒಂದು ಒಳ್ಳೆಯ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಬೀಚಿಗೆ ಬಂದೆ. ಅಲ್ಲಲ್ಲಿ ಆಗಾಗ್ಗೆ ಸ್ವಲ್ಪ ಗಾಳಿಯಿತ್ತು, ಆದರೂ ಉಷ್ಣತೆ ಸುಮಾರು ಎಪ್ಪತ್ತು ಡಿಗ್ರಿ ಹತ್ತಿರ ಹತ್ತಿರ ಇದ್ದರೂ, ಶುಕ್ರವಾರ ಮಧ್ಯಾಹ್ನದ ಸಮಯವಾದರೂ ನನ್ನ ಕಾಣುವಷ್ಟು ದೂರ ಬೀಚಿನ ಎರಡೂ ಕಡೆಗಳಲ್ಲಿ ಯಾರೂ ಇರಲಿಲ್ಲ. ಯಾರು ಇದ್ದರೆ ಇರಲಿ, ಬಿಡಲಿ ಎಂದುಕೊಂಡು ಒಂದು ಸ್ಥಳವನ್ನು ಆರಿಸಿಕೊಂಡು ಅಲ್ಲಿ ನನ್ನ್ ಬೀಚು ಚೇರನ್ನು ಪ್ರತಿಷ್ಠಾಪಿಸಿ, ಮೈ ತುಂಬಾ ಸನ್ ಸ್ಕ್ರೀನನ್ನು ಹಚ್ಚಿಕೊಂಡು ಈಜುಡುಗೆಯಲ್ಲಿ ಕುಳಿತು, ತಲೆಗೊಂದು ಬೇಸ್ ಬಾಲ್ ಟೋಪಿ ಹಾಗೂ ಕಾರಿನಲ್ಲಿ ಡ್ರೈವ್ ಮಾಡಲು ಇಟ್ಟುಕೊಂಡ ಕಪ್ಪು ಕನ್ನಡಕವನ್ನು ಹಾಕಿಕೊಂಡು ಏನನ್ನೋ ಬರೆಯುತ್ತಾ ಕುಳಿತೆ. ಸ್ವಲ್ಪ ಹೊತ್ತು ಬರೆದು, ಮತ್ತು ಸ್ವಲ್ಪ ಹೊತ್ತು ಸಾರ್ಥವನ್ನು ಓದಿ ಹೀಗೆ ಒಂದು ಮೂವತ್ತು ನಲವತ್ತು ನಿಮಿಷಗಳಾಗಿರುವಾಗ ಒಮ್ಮೆ ನೀರಿಗಿಳಿದರೆ ಹೇಗೆ ಎನ್ನಿಸಿತೆಂದು ನಿಧಾನವಾಗಿ ನೀರಿನ ಕಡೆಗೆ ನಡೆಯತೊಡಗಿದೆ. ಅಲೆಗಳು ಕಾಲನ್ನು ಸೋಕಿದ ಕೂಡಲೇ ಹೊರಗಿನ ಉಷ್ಣತೆಗಿಂತ ನೀರಿನ ಉಷ್ಣತೆ ಕಡಿಮೆ ಇರುವುದು ಅರಿವಿಗೆ ಬಂದಿತಾದರೂ ಪ್ರತೀ ಸಾರಿ ಬೀಚಿಗೆ ಹೋದಾಗಲೂ ಮೊದಲ ಬಾರಿ ನೀರು ಮುಟ್ಟಿದಾಗ ಛಳಿ ಅನುಭವವಾಗೋದು ಸಹಜವೆಂದುಕೊಂಡು, ಪಾದ ತೋಯಿಸಿಕೊಂಡವನು, ಮೊಳಕಾಲುದ್ದಕ್ಕೂ, ಮೊಳಕಾಲು ಮುಳುಗಿಸಿಕೊಂಡವನು ಸೊಂಟದ ಮಟ್ಟಕ್ಕೂ ನಿಧಾನವಾಗಿ ಮುಂದೆ-ಮುಂದೆ ಹೋಗತೊಡಗಿದೆ. ಬಾಬರೀ ಮಸೀದಿ ಉರುಳಿದ ವರ್ಷ ನಾನು ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಒಂದು ತಿಂಗಳು ಪ್ರತಿದಿನವೂ ತಪ್ಪದೇ ಕಲಿತದ್ದರಿಂದ ನೀರೆಂದರೆ ಮೊದಲಿದ್ದಷ್ಟು ಭಯವೆನೂ ಇರಲಿಲ್ಲ, ಆದರೆ ಈಜುಕೊಳಕ್ಕೂ, ಮಹಾಸಾಗರದ ಅಲೆಗಳ ಹೊಡೆತಕ್ಕೂ ಬಹಳ ವ್ಯತ್ಯಾಸವಿದೆಯೆನ್ನೋದನ್ನು ನಾನು ಕೆಟ್ಟ ಅನುಭವದ ಮೂಲಕ ಕಲಿತಿರೋದರಿಂದ ಹೇಗೆ ತಾನೆ ಮರೆಯಲಿಕ್ಕೆ ಸಾಧ್ಯ?

ಹೀಗೆ ನಿಧಾನವಾಗಿ ನೀರಿನಲ್ಲಿ ಮುಂದೆ-ಮುಂದೆ ಹೋಗುತ್ತಿದ್ದವನಿಗೆ ದಡದಲ್ಲಿ ಇಟ್ಟಿದ್ದ ಕುರ್ಚಿ, ಹರವಿದ್ದ ಟವಲ್‌ಗಳು ದೀಪಸ್ತಂಭದಂತೆ ಡೈರೆಕ್ಷನ್ ನೀಡುತ್ತಿದ್ದವು, ಆದರೂ ಲಘುವಾಗಿ ಗಾಳಿ ಬೀಸುತ್ತಿದ್ದುರಿಂದ ಮುಂದೆ ಹೋಗಿ ಹಿಂದೆ ಬರುವ ಅಲೆಗಳ ರಭಸಕ್ಕೆ ನಾನು ಕ್ರಮೇಣ ಡೈಯಾಗನಲಿ ಶಿಫ್ಟ್ ಆಗುತ್ತಿದ್ದದ್ದು ನನ್ನ ಗಮನಕ್ಕೆ ಬರುವಾಗ ತುಂಬ ತಡವಾಗಿ ಹೋಗಿತ್ತು. ಇದ್ದಕಿದ್ದ ಹಾಗೇ ಅಲೆಯೊಂದು ಬಂದು ಅಪ್ಪಳಿಸಿತು, ನಾನು ನೀರಿನಲ್ಲಿ ಮುಳುಗಿ ಮತ್ತೆ ಮೇಲೆ ಎದ್ದೆ, ಆದರೆ ಸುತ್ತಲೂ ಎಲ್ಲವೂ ಬ್ರೈಟ್ ಆಗಿ ಕಾಣತೊಡಗಿತು, ಅದಾದ ಸ್ವಲ್ಪ ಹೊತ್ತಿನ ನಂತರವೇ ನನ್ನ ಕಪ್ಪು ಕನ್ನಡಕ ನೀರಿನಲ್ಲಿ ತೊಳೆದು ಹೋದದ್ದು ನನ್ನ ಅರಿವಿಗೆ ಬಂದಿದ್ದು! ನಾನು ಬೇಕೆಂದು ಕೇಳಿರದ ಡೈಯಾಗನಲ್ ಶಿಪ್ಟ್ ನನ್ನನ್ನು ನಿಧಾನವಾಗಿ ಆಳಕ್ಕೆ ಕರೆದುಕೊಂಡು ಹೋಗಿತ್ತು, ಮತ್ತೆ ಮುಂದಿನ ಅಲೆಯೊಂದು ಬಂದ ಹೊಡೆತಕ್ಕೆ ನನಗೆ ನೀರಿನಲ್ಲಿ ನೆಲದ ಆಸರೆ ತಪ್ಪಿ ಹೋಗಿತ್ತು, ನೆಲದ ಆಸರೆ ತಪ್ಪಿದ ತಕ್ಷಣ ನನ್ನ ಅಸ್ತಿತ್ವ ಪದೇ-ಪದೇ ಬಂದು ಹೊಡೆದು ಮತ್ತು ಅಷ್ಟೇ ಬಲದಿಂದ ಹಿಂದೆ ತಳ್ಳಿಕೊಂಡು ಹೋಗುತ್ತಿದ್ದ ಅಲೆಗಳ ಕೃಪೆಗೆ ಒಳಗಾಯಿತು. ನನ್ನ ಪುಟ್ಟ ತಲೆಗೆ ಪರಿಸ್ಥಿತಿ ಅರಿವಿಗೆ ಬರುವಾಗ ಎಲ್ಲವೂ ಕೈ ಮೀರಿ ಹೋಗಿತ್ತು, ಜೀವ ಭಯ ಬಹಳವಾಗಿ ಕಾಡತೊಡಗಿತ್ತು, ಆ ದಿನ ಕುಡಿದಷ್ಟು ಉಪ್ಪು ನೀರನ್ನು ನಾನು ಜೀವಮಾನದಲ್ಲಿ ಎಲ್ಲೂ ಕುಡಿದಿಲ್ಲ! ನಾನು ಮುಂದೆ (ದಡದ ಕಡೆಗೆ) ಬರಬೇಕೆಂಬ ಮಹತ್ವಾಕಾಂಕ್ಷೆಯಿಂದ ಎಷ್ಟೇ ಕಷ್ಟ ಪಟ್ಟು ಈಜಿದರೂ, ಹತ್ತು ಆಡಿ ಮುಂದೆ ಬಂದರೆ ಹನ್ನೊಂದು ಅಡಿ ಹಿಂದೆ ಹೋಗುತ್ತಿದ್ದೆ, ಹೀಗೆ ಒಂದೈದು ನಿಮಿಷಗಳಾಗಿದ್ದೇ ತಡ ಕಣ್ಣುರಿ ಬಂದಿತು, ಹೊಟ್ಟೆ ತೊಳಸ ತೊಡಗಿತು, ಕೈ-ಕಾಲುಗಳು ಪ್ರಯತ್ನಕ್ಕಿಂತಲೂ ಜೀವ ಭಯದಿಂದ ಸೋತು ಹೋದವು, ಕೂಗೋಣವೆಂದರೆ ಅಲ್ಲಿ ಯಾರೂ ಇಲ್ಲ, ಕೂಗಬೇಕಂದರೂ ಧ್ವನಿಯೂ ಬರಲಿಲ್ಲ. ಕೊನೆಗೆ ಸಾಗರ ದೇವ(ವಿ)ಗೆ ಏನನ್ನಿಸಿತೋ ಏನೋ, ಬಡಪಾಯಿ ಬದುಕಿಕೊಳ್ಳಲಿ ಎಂದು ಗಾಳಿ ಸ್ವಲ್ಪ ಹಗುರವಾದೊಡನೆ ನಾನು ಮತ್ತೆ-ಮತ್ತೆ ಪ್ರಯತ್ನ ಮಾಡಿ ಕೊನೆಗೂ ದಡವನ್ನು ತೆವಳುತ್ತಲೇ ತಲುಪಿ ಬದುಕಿದೆಯಾ ಬಡಜೀವವೇ ಎಂದುಕೊಂಡೆ!

ಸ್ವಲ್ಪ ಹೊತ್ತು ತೆವಳಿದವನು, ಮತ್ತೆ ನಡೆದು ನಿಧಾನವಾಗಿ ನನ್ನ ಕುರ್ಚಿ ಇಟ್ಟ ಸ್ಥಳದಲ್ಲಿ ಬಂದು ನೋಡಿದರೆ ಗಾಳಿ ಬೀಸಿದ್ದಕ್ಕೆ ನನ್ನ ಕುರ್ಚಿ ಸುಮಾರಾಗಿ ಮರಳಿನಲ್ಲಿ ಮುಚ್ಚಿ ಹೋಗಿದ್ದು ಕಂಡು ಬಂತು, ನಿಧಾನವಾಗಿ ಎಲ್ಲ ಸಾಮಾನುಗಳನ್ನು ಅದು ಹೇಗೆ ತುಂಬಿದೆನೋ ಬಿಟ್ಟೆನೋ, ಅಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕೆಂದು ಲಗುಬಗೆಯಿಂದ ಮನೆಯ ದಾರಿ ಹಿಡಿದೆ, ನನಗಾಶ್ಚರ್ಯವಾಗುವಂತೆ ನಾನು ಎಷ್ಟೊಂದು ಉಪ್ಪು ನೀರನ್ನು ಆದಿನ ಕುಡಿದಿದ್ದರೂ ಒಂದು ಹನಿಯನ್ನೂ ಕಕ್ಕಿಕೊಳ್ಳಲಿಲ್ಲ!

***

ಅಂದಿನಿಂದ ಇಂದಿನವರೆಗೆ ಆಳ ಗೊತ್ತಿರದ ನೀರಿಗೆ ನಾನು ಇಳಿಯುವುದಿಲ್ಲ, ಎಲ್ಲಿ ಬೇಕಾದಲ್ಲಿ ಭೈರಪ್ಪನನ್ನು ಓದುವುದಿಲ್ಲ ಹಾಗೂ ನಾನು ಯಾವ ದೇಶದಲ್ಲಿ ಹುಟ್ಟಿಲ್ಲವೋ ಅಲ್ಲಿ ಸಾಯಬಯಸುವುದಿಲ್ಲ!

Friday, May 26, 2006

ನೂರಾ ಎಂಭತೈದು ವರ್ಷದ ಜೈಲುವಾಸ ಹೇಗಿದ್ದಿರಬಹುದು?

ನಿನ್ನೆ ಎನ್ರಾನ್ ಕಂಪನಿಯ ಟ್ರಯಲ್ ಮುಗಿದು ಹಳೆಯ ಇಬ್ಬರು ಎಕ್ಸೆಕ್ಯೂಟಿವ್‌ಗಳನ್ನು ಜ್ಯೂರರ್‌ಗಳು ಕನ್‌ವಿಕ್ಟ್ ಮಾಡಿದ್ದನ್ನು ಕೇಳಿ ೨೦೦೧ ರಿಂದ ಇಲ್ಲಿಯವರೆಗೆ ಆದ ಅಕೌಂಟಿಂಗ್ ಫ್ರಾಡ್ ಹಗರಣಗಳೆಲ್ಲ ಒಮ್ಮೆ ಕಣ್ಣ ಮುಂದೆ ಬಂದವು. ಎನ್ರಾನ್, ಎಮ್‌ಸಿಐ, ಟೈಕೋ ಒಂದೇ ಎರಡೇ ಹೀಗೆ ಹಲವಾರು ಕಂಪನಿಗಳ ಸೀನಿಯರ್ ಎಕ್ಸೆಕ್ಯೂಟಿವ್‌ಗಳ ನಿದ್ದೆ ಕೆಡಿಸಿದ ಅಕೌಂಟಿಂಗ್‌ಗೆ ಸಂಬಂಧ ಪಟ್ಟ ತನಿಖೆಗಳೂ, ಅದರ ಪರಿಣಾಮಗಳೂ ಆಯಾ ಕಂಪನಿಗಳ ನೌಕರರನ್ನೂ, ಆಯಾ ಕಂಪನಿಗಳಲ್ಲಿ ಬಂಡವಾಳ ಹೂಡಿದವರನ್ನೂ ಯೋಚನೆಗೆ ಹಚ್ಚಿದ್ದವು. ನಾನು ಎನ್ರಾನ್‌ನ ಎಕ್ಸೆಕ್ಯೂಟಿವ್ ಕೆನ್ ಲೇ ಬಗ್ಗೆ ಈ ಹಗರಣದ ಮೊದಲೇ ಕೇಳಿದ್ದೆ ಆತ ಹ್ಯೂಸ್ಟನ್ ವಲಯದಲ್ಲಿ ಬಹಳ ದೊಡ್ಡ ಬ್ಯುಸಿನೆಸ್‌ಮನ್ ಆಗಿದ್ದೂ, ಸೀನಿಯರ್ ಬುಷ್ ಚುನಾವಣೆಯಲ್ಲಿ ನಿಂತಾಗ ರಿಪಬ್ಲಿಕನ್ ಪಾರ್ಟಿಯಲ್ಲಿ ಹೆಚ್ಚು ಹಣವನ್ನು ಕೂಡಿಸಿದ್ದೂ, ಆತ ದೊಡ್ಡ ಫಿಲಾಂತ್ರೊಪಿಷ್ಟ್ ಆಗಿದ್ದೂ, ಮುಂದೆ ಜ್ಯೂನಿಯರ್ ಬುಷ್‌ಗೂ ಚುನಾವಣೆಯಲ್ಲಿ ಸಹಾಯ ಮಾಡಿ ಬುಷ್ ಕುಟುಂಬದ ಹತ್ತಿರದ ಸ್ನೇಹಿತನಾಗಿದ್ದೂ ಇವೆಲ್ಲವೂ ಗೊತ್ತಿತ್ತು. ಆದರೆ ನಿನ್ನೆಯ ವರ್ಡಿಕ್ಟ್‌ನ ಪ್ರಕಾರ ಕೆನ್ ಲೇಯನ್ನು ಎಲ್ಲಾ ಆರು ಕೌಂಟುಗಳಲ್ಲೂ ತಪ್ಪಿತಸ್ಥನೆಂದು ಜ್ಯೂರಿಗಳು ತೀರ್ಮಾನಿಸಿದ್ದರಿಂದ ಆತನಿಗೆ ೪೫ ವರ್ಷಗಳವರೆಗೂ ಜೈಲು ಶಿಕ್ಷೆ ಆಗಬಹುದು, ಜೊತೆಯಲ್ಲಿ ಎನ್ರಾನ್‌ನ ಮತ್ತೊಬ್ಬ ಎಕ್ಸೆಕ್ಯೂಟಿವ್ ಜೆಫ್ರಿ ಸ್ಕಿಲ್ಲಿಂಗ್ ವಿಷಯದಲ್ಲಂತೂ ಹತ್ತೊಂಬತ್ತು ಕೌಂತುಗಳಲ್ಲಿ ತಪ್ಪಿತಸ್ಥನೆಂದು ಜ್ಯೂರಿಗಳು ತೀರ್ಮಾನಿಸಿದ್ದಾರೆಂದೂ ಅವನಿಗೆ ಹೆಚ್ಚೆಂದರೆ ೧೮೫ ವರ್ಷಗಳವರೆಗೆ ಜೈಲಿನಲ್ಲಿಡಬಹುದು ಎಂದು ಕೇಳಿದಾಗ ನಗದೇ ಇರಲಾಗಲಿಲ್ಲ.

ಇದೇ ವರ್ಷ ಸೆಪ್ಟೆಂಬರ್ ೧೧ರಂದು ಅವರ ಜೈಲು ಶಿಕ್ಷೆಯನ್ನು ತೀರ್ಮಾನಿಸೋ ಹಾಗೆ ಕೋರ್ಟು ಡೇಟು ಕೊಟ್ಟಿದೆ, ೬೪ ವರ್ಷದ ಲೇ ಗೆ ೪೫ ವರ್ಷ ಹಾಗೂ ೫೨ ವರ್ಷದ ಸ್ಕಿಲ್ಲಿಂಗ್‌ಗೆ ೧೮೫ ವರ್ಷ ಜೈಲು ಶಿಕ್ಷೆ ಆಗಲಾರದು, ಅದರ ಬದಲು ಇಬ್ಬರೂ ಕಡಿಮೆ ಎಂದರೆ ಒಂದು ಇಪ್ಪತ್ತು ವರ್ಷವಂತೂ ಫೆಡರಲ್ ಜೈಲಿನಲ್ಲಿ ಕೊಳೆಯುವುದು ಗ್ಯಾರಂಟಿ ಆದರೂ ಲೆಕ್ಕಕ್ಕೆ ಲೆಕ್ಕ ಸೇರಿಸಿ ಪ್ರತಿಯೊಂದು ಕೌಂಟನ್ನೂ ಪ್ರತ್ಯೇಕವಾಗಿ ನೋಡಿ ಅದರಲ್ಲಿ ತಪ್ಪಿತಸ್ಥನೆಂದು ಕಂಡುಬಂದ ಕೌಂಟಿಗೆಲ್ಲಾದಕ್ಕೂ ಶಿಕ್ಷೆಗಳನ್ನು ಕೂಡಿಸುತ್ತಾ ಹೋಗಿ ಕೊನೆಗೆ ಹೆಚ್ಚೆಂದರೆ ನೂರು ಚಿಲ್ಲರೆ ವರ್ಷ ಬದುಕಬೇಕಾದವನಿಗೆ ೧೮೫ ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲೂ ಹೇಸದ ಈ ವ್ಯವಸ್ಥೆಯನ್ನು ನೋಡಿ ಪಿಚ್ಚೆನಿಸಿತು.

***

ಅಮೇರಿಕದಲ್ಲಿ ತಪ್ಪು ಮಾಡಬಾರದು, ಮಾಡಿದರೆ ಸಿಕ್ಕಿ ಬೀಳಬಾರದು, ಅದು ಕ್ರಿಮಿನಲ್ ಕೇಸೇ ಆಗಲಿ, ಬಿಳಿ ಕಾಲರ್ ಕೇಸೇ ಆಗಲಿ, ಇಲ್ಲಿಯ ನ್ಯಾಯಾನ್ಯಾಯ ವ್ಯವಸ್ಥೆ ಹೇಗಿದೆ ಎಂದರೆ ಜೈಲು ಶಿಕ್ಷೆಯ ಅವಧಿ ಸಣ್ಣ ಹುಡುಗರು ಮಾಡಬಹುದಾದ ಗಣಿತವಾಗುತ್ತದೆ. ತಪ್ಪುಗಳಲ್ಲವಕ್ಕೂ ಇಷ್ಟಿಷ್ಟು ಶಿಕ್ಷೆ ಎಂದು ಸೇರಿಸಿದರಾಯಿತು. ಒಂದು ಸಣ್ಣ ವಯಲೇಷನ್ ಇದ್ದರೂ ಅದನ್ನು ರೆಕ್‌ಲೆಸ್ ಎಂಡೇಂಜರ್‌ಮೆಂಟ್ ಆಫ್ ಪಬ್ಲಿಕ್ ಲೈಫ್ ಎಂದು ಎಲ್ಲಿಯವರೆಗೆ ಬೇಕಾದರೂ ಎಳೆಯಬಹುದು. ಅದೇ ನಮ್ಮಲ್ಲಿ 'ಎಷ್ಟು ಕೊಲೇ ಮಾಡಿದ್ರೂ ಒಂದೇ ಶಿಕ್ಷೆ' ಅನ್ನೋದನ್ನ ಕೇಳಿದ್ದೇನೆ, ಹೆಚ್ಚೆಂದರೆ ಹದಿನಾಲ್ಕು ವರ್ಷ 'ಜೀವಾವಧಿ' ಶಿಕ್ಷೆ, ಅದರಲ್ಲೂ ಒಳ್ಳೇ ಬುದ್ಧಿ ತೋರಿಸಿದ್ರೆ ಬೇಗ ಹೊರಗೆ ಬಿಡ್ತಾರೆ ಅಂತಲೂ ಕೇಳಿದ್ದೇನೆ, ಎಷ್ಟು ಸುಳ್ಳೋ ನಿಜವೋ ಗೊತ್ತಿಲ್ಲ.

ಇಲ್ಲಿ ಎನ್ರಾನ್ ಎಕ್ಸೆಕ್ಯೂಟಿವ್‌ಗಳ ವಿಷಯದಲ್ಲಿ ಅವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಲಾಗಿದೆ ಆದರೆ ಆ ಕಂಪನಿಯಲ್ಲಿ ನಡೆದ ಹಗರಣಗಳಿಗೆಲ್ಲ ಬರೀ ಇಬ್ಬರನ್ನು ಮಾತ್ರ ಬೆರಳೆತ್ತಿ ಆಡಿದರೆ ತಪ್ಪಾಗುತ್ತದೆ. ಎನ್ರಾನ್ ಕಂಪನಿಯ ಟ್ರಯಲ್ ಇನ್ನೂ ತುಂಬಾ ಮುಂದೆಹೋಗುವುದಕ್ಕಿದೆ, ಅದರಲ್ಲಿ ತಪ್ಪು ಮಾಡಿದ ಬೇರೆ ಬೇರೆ ಅಧಿಕಾರಿಗಳೂ, ಎನ್ರಾನ್ ಬೀಳುವಲ್ಲಿ ಸಂಬಂಧಪಟ್ಟ ಇತರ ಕಂಪನಿಗಳ, ಅವುಗಳ ಎಕ್ಸೆಕ್ಯೂಟಿವ್‌ಗಳನ್ನೂ ಹೀಗೆ ಜೈಲಿಗೆ ಎಳೆಯುವುದನ್ನು ಕಾದು ನೋಡಬೇಕಷ್ಟೇ.

ಆದರೆ ಒಂದಂತೂ ಸತ್ಯ, ದೊಡ್ಡ ಬ್ಯುಸಿನೆಸ್‌ಮೆನ್‌ಗಳಾಗಿ ಲೇ ಮತ್ತು ಸ್ಕಿಲ್ಲಿಂಗ್ ಈಗಾಗಲೇ ಮೆರೆದಿದ್ದಾರೆ, ಅವರನ್ನು ಹತ್ತು ವರ್ಷವೋ, ಇಪ್ಪತ್ತು ವರ್ಷವೋ ಅಥವಾ ಮೂವತ್ತು ವರ್ಷವೋ ಜೈಲಿಗೆ ಹಾಕೋದರಿಂದ ಅವರ ಬದುಕಿನಲ್ಲಿ ವ್ಯತ್ಯಾಸವೇನೂ ಆಗೋದಿಲ್ಲ, ಲೇ ಜೈಲಿನಲ್ಲೇ ಒಂದು ದಿನ ಸತ್ತರೆ ಜೆಫ್ರಿ ಇನ್ಯಾವತ್ತೋ ಬಿಡುಗಡೆ ಹೊಂದಿದರೂ ಅವನಲ್ಲಿ ತಲೆ ಎತ್ತಿ ಬದುಕುವುದಕ್ಕೇನೂ ಉಳಿದಿರೋದಿಲ್ಲ - ಒಬ್ಬ ಕ್ರಿಮಿನಲ್ಲನ್ನು ಸಾರ್ವಜನಿಕರಿಗೆ ಮುಂದೆ ಯಾವುದೇ ತೊಂದರೆಯಾಗದಂತೆ ಬಂಧಿಸಿ ಇಡಬೇಕಾದದ್ದು ಒಳ್ಳೆಯದಾದರೂ ಇಂಥ ಎಕ್ಸೆಕ್ಯುಟೀವ್‌ಗಳನ್ನು ಜೈಲಿನಲ್ಲಿ ಕೊಳೆಸೋ ಬದಲು ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಇನ್ನ್ಯಾವತ್ತೂ ಕಡುಬಡವನಾಗಿ ಬದುಕುವಂತೆ ಮಾಡಿದ್ದರೆ, ಇಲ್ಲಾ ಅವರ ಮ್ಯಾನೇಜ್‌ಮೆಂಟ್ ಅನುಭವಗಳನ್ನು ಅತಿ ಕಡಿಮೆ ಸಂಬಳಕೊಟ್ಟು ದುಡಿಸಿ ಸಮಾಜದ ಒಳಿತಿಗೆ ಬಳಸಿಕೊಳ್ಳುವಂತಿದ್ದರೆ ಎಂಬ ಯೋಚನೆಯೂ ಬಂತು - ಈ ಅಕೌಂಟಿಂಗ್ ಹಗರಣಗಳಲ್ಲಿ ನೊಂದ, ಹಣ ಕಳೆದುಕೊಂಡವರ, ತಮ್ಮ ನಿವೃತ್ತ ಜೀವನದ ಕನಸನ್ನು ನುಚ್ಚು ನೂರು ಮಾಡಿಕೊಂಡ ಸಾವಿರಾರು ಜನರಿಗೆ ಇದರಿಂದ ನೆಮ್ಮದಿ ಹೇಗೆ ಸಿಗುತ್ತದೆಯೋ ಎನಿಸಿದೆ, ಇವರಿಗೆ ಜೈಲು ಶಿಕ್ಷೆಯಾಯಿತು ಸರಿ, ಹೂಡಿಕೆದಾರನಾಗಿ ಒಂದಿಷ್ಟು ಸಾವಿರ ಡಾಲರ್‌ಗಳನ್ನು ಕಳೆದುಕೊಂಡರೆ ಅದು ಅಷ್ಟೊಂದು ದೊಡ್ಡ ವಿಷಯವಲ್ಲ, ಆದರೆ ಜೀವಮಾನವಿಡೀ ದುಡಿದು, ನಿವೃತ್ತನಾಗೋ ಕೊನೆಯ ಹಂತದಲ್ಲಿ ತಮ್ಮ ಸರ್ವಸ್ವವನ್ನೂ ಎನ್ರಾನ್‌ನಲ್ಲಿ ಹೂಡಿಕೊಂದು ಬರಿಗೈ ಮಾಡಿಕೊಂಡವರಿಗೆ ಇಲ್ಲಿನ ವ್ಯವಸ್ಥೆ ಕಿಂಚಿತ್ ಕರುಣೆಯನ್ನೂ ತೋರದು. ಅರವತ್ತು ವರ್ಷದ ನಂತರ ನಿವೃತ್ತರಾಗಿ ಹಾಯಾಗಿ ಮನೆಯಲ್ಲಿರಬೇಕಾದವರು ನಾಳಿನ ಊಟದ ಬಗ್ಗೆ ಆಲೋಚಿಸಬೇಕಾದಾಗ ಪರಿಸ್ಥಿತಿಯ ಕಹಿ ಅರಿವಿಗೆ ಬರುತ್ತದೆ. ಈ ದೇಶದಲ್ಲಿ ಎಂತೆಂಥದಕ್ಕೋ ಹಣ ಖರ್ಚು ಮಾಡುವ ಸರ್ಕಾರ ಇಂತಹವರ ರಕ್ಷಣೆಗೆ ಬಂದಿದೆಯೇ, ಬಂದಿದ್ದರೆ ಒಳ್ಳೆಯದಿತ್ತು. ಈ ವರ್ಡಿಕ್ಟಿನಿಂದ ಬೋರ್ಡ್‌ರೂಮ್ ಎಕ್ಸೆಕ್ಯೂಟಿವ್‌ಗಳಿಗೊಂದು ಪಾಠ ಎನ್ನುವುದು ಎಷ್ಟರ ಮಟ್ಟಿಗೆ ಸರಿ, ತಪ್ಪಿತಸ್ಥರನ್ನು ದಂಡಿಸಿದಾಗೆಲ್ಲ ಉಳಿದವರು ಅದರಿಂದ ಕಲಿತು ಎಚ್ಚೆತ್ತಿಕೊಳ್ಳುವುದು ಸತ್ಯವಾಗಿದ್ದರೆ ಇಷ್ಟು ಹೊತ್ತಿಗೆ ಪ್ರಪಂಚದಲ್ಲಿ ಕ್ರೈಮ್ ಅನ್ನೋದೇಕಿರುತ್ತಿತ್ತು?

***

ಅಮೇರಿಕದಲ್ಲಿ ಮ್ಯಾನೇಜ್‌ಮೆಂಟಿನಲ್ಲಿ ಮುಂದುವರೆಯುವ ಆಸೆ ಇದ್ದವರು ಒಂದಲ್ಲ ಒಂದು ದಿನ ಬಿಗ್ ಫೈವ್ ಅಕೌಂಟಿಂಗ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಒಳ್ಳೆಯದು ಎಂದು ಹೇಳುವುದನ್ನು ಅಲ್ಲಲ್ಲಿ ಕೇಳಿದ್ದೇನೆ, ಆದರೆ ಎನ್ರಾನ್‌ನಂತಹ ಕಂಪನಿಯನ್ನು ನೆಲಮಟ್ಟ ಮಾಡುವಲ್ಲಿ ಸಕ್ರಿಯ ಪಾತ್ರವಹಿಸಿದ ಆರ್ಥರ್ ಆಂಡರ್‌ಸನ್ ಅಂಥ ಕಂಪನಿಯಲ್ಲೂ, ೨೦೦೫ ರಲ್ಲಿ ತಾವೇ ಒಪ್ಪಿಕೊಂಡಂತೆ ಬಿಲಿಯನ್ ಡಾಲರ್ ಟ್ಯಾಕ್ಸ್ ಶೆಲ್ಟರ್ ಫ್ರಾಡಿನಲ್ಲಿ ಭಾಗಿಗಳಾದ ಕೆಪಿಎಮ್‌ಜಿ ಅಂಥಹ ಕಂಪನಿಯಲ್ಲೂ ನಾನು ಖಂಡಿತವಾಗಿ ಕೆಲಸಮಾಡೋದಿಲ್ಲ, ಮಾಡಬಾರದು ಎಂದುಕೊಂಡಿದ್ದೇನೆ, ಅವರ ಎಷ್ಟೇ ಉನ್ನತ ಹುದ್ದೆಗಳಿದ್ದರೂ ಒಬ್ಬ ಕಂಪನಿಯ ಉದ್ಯೋಗಿಯಾಗಿ ಯಾವ ಮಟ್ಟದಲ್ಲೇ ಇರಲಿ ಆ ಕಂಪನಿಯ ಉದ್ಯೋಗಿ ನಾನು ಎಂದು ಹೇಳಿಕೊಳ್ಳುವಲ್ಲಿ ಹೆಮ್ಮೆ ಪಡುತ್ತೇನೆಯೇ ವಿನಾ ಇಂಥಾ ದೊಡ್ಡ ಹಗರಣಗಳಲ್ಲಿ ಸಿಕ್ಕಿಕೊಂಡ, ಸರ್ಕಾರಕ್ಕೆ ಮೋಸ ಮಾಡುವ, ಕೊನೆಯಲ್ಲಿ ಜನರ ಹಣ ಕೀಳುವ ಈ ಕಂಪನಿಗಳಿಂದ ದೂರವಿರಿ ಎಂದೇ ನಾನು ಎಲ್ಲರಿಗೂ ಹೇಳೋದು. ಕೆಪಿಎಮ್‌ಜಿ ಬಗ್ಗೆ ಫ್ರಂಟ್‌ಲೈನ್ ನಲ್ಲಿ ಡೇವಿಡ್ ಬ್ರಾಂಕಾಚಿಯೋ ಮಾಡಿದ್ದ ಒಂದು ವಿಡಿಯೋ ಕಾರ್ಯಕ್ರಮವನ್ನು ನೋಡಿದವರಿಗೆ ಗೊತ್ತು, ಕಂಪನಿಗಳು ಮೋಸ ಮಾಡುವುದಕ್ಕೆ ಯಾವ ಮಟ್ಟಕ್ಕೆ ಇಳಿಯುತ್ತವೆ ಎಂದು.

ಒಂದು ಕಂಪನಿಯಲ್ಲಿ ಅಷ್ಟೊಂದು ದೊಡ್ಡ ಹಗರಣಗಳು ಹೇಗಾದವು ಎಂದು ಯೋಚಿಸಿದರೆ ಬರೀ ಸೀನಿಯರ್ ಎಕ್ಸೆಕ್ಯೂಟಿವ್‌ಗಳು ಅಷ್ಟೇ ಅಲ್ಲ, ಪಾಪದ ಫಲವನ್ನು ಅನುಭವಿಸಿದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗಲೇ ಬೇಕಾಗುತ್ತದೆ. ಎನ್ರಾನ್‌ನವರು ತಪ್ಪು ಲೆಕ್ಕ ಪತ್ರಗಳನ್ನು ತೋರಿಸಿದ್ದರಿಂದ ಅವರ ಸ್ಟಾಕ್ ಕೆಲವು ವರ್ಷಗಳವರೆಗೆ ತುಂಬಾ ಮೇಲೆ ಹೋಯಿತು ಎನ್ನೋಣ, ಆ ಸಮಯದಲ್ಲಿ ಅವರ ಸುಳ್ಳು ಅಭಿವೃದ್ಧಿಯ ಅಂಕಿ ಅಂಶಗಳಿಂದ ಸ್ಟಾಕ್ ಮಾರ್ಕೇಟ್‌ನಲ್ಲಿ ದುಡ್ಡು ಮಾಡಿದವರೆಲ್ಲರೂ ಅದನ್ನು ಹಿಂತಿರುಗಿಸಲು ತಯಾರಿದ್ದಾರೆಯೇ? ಎನ್ರಾನ್‌ನ ನಿವೃತ್ತರು ಹಾಗೂ ಹಾಲೀ ಕೆಲಸಗಾರರು ಕಳೆದುಕೊಂಡ ಹಣ ಎಲ್ಲಿ ಹೋಯಿತು, ಅದು ಯಾರ ಕೈವಶವಾಗಿದೆ ಎಂಬುದನ್ನೆಲ್ಲಾ ಶೋಧಿಸಿ ಅವರಿಂದ ಹಣ ಹಿಂತಿರುಗಿ ಕೇಳಿದರೆ ಎಂದು ಒಮ್ಮೆ ಯೋಚಿಸುತ್ತೇನೆ, ಅದೊಂದು ಮೂರ್ಖವಾದ ಎಂದು ಅಲ್ಲಿಗೇ ಬಿಟ್ಟು ಬಿಡುತ್ತೇನೆ!

***

೨೦೦೩ ರಲ್ಲಿ ಅಮೇರಿಕದವರು ಇರಾಕ್‌ನ ಆಕ್ರಮಣ ಮಾಡಿ ಕೆಲವು ತಿಂಗಳುಗಳ ನಂತರ ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿದ್ದ ಇಸ್ಲಾಮ್‌ಗೆ ಸಂಬಂಧಿಸಿದ ಹೆಸರುಗಳನ್ನು ಹೊಂದಿದ್ದು, ಭಯೋತ್ಪಾದನೆಗೆ ಹಣ ಸರಬರಾಜು ಮಾಡುವ ಹಲವಾರು 'ಸಂಸ್ಥೆ'ಗಳು, ಅವುಗಳ ಹಣವನ್ನು ಅಮೇರಿಕ ಫ್ರೀಜ್ ಮಾಡಿತು. ಆಗ ಮುಚ್ಚಿ ಹೋದ 'ಸಂಸ್ಥೆ'ಗಳು ಬೇರೆ ಬೇರೆ ಹೆಸರಿನಿಂದ ಮತ್ತೆ ತಲೆ ಎತ್ತತೊಡಗಿದವು. ಅಮೇರಿಕದವರು ಭಯೋತ್ಪಾದಕರ ಒಂದೊಂದೇ ಆರ್ಗನೈಜೇಷನ್‌ಗಳನ್ನು ಹಿಡಿದು ಅವುಗಳನ್ನು 'ಭಯೋತ್ಪಾದಕರು' ಎಂದು ಘೋಷಿಸಿದಂತೆಲ್ಲ ಮತ್ತೊಂದು ಹೆಸರಿನಲ್ಲಿ ಅಷ್ಟೇ ವೇಗವಾಗಿ ಇನ್ನೇನೋ ಒಂದು ಹೆಸರಿನಿಂದ ಅವೆಲ್ಲಾ ಕೆಲಸ ಮಾಡತೊಡಗಿದವು. ಇಂಥದ್ದನ್ನು ಎಲ್ಲೋ ಓದಿದ್ದ ನನ್ನ ಸಹೋದ್ಯೋಗಿ ಒಬ್ಬಳು 'ಹೀಗೆ ಹೆಸರು ಬದಲಿಸಿ ಕೆಲಸ ಮಾಡೋ ಕಾರ್ಯತಂತ್ರವನ್ನು ಎಲ್ಲಿಂದ ಕಲಿತರೋ...' ಎಂದು ಆಶ್ಚರ್ಯಪಡುತ್ತಿರುವಾಗ ನಾನು 'ಮತ್ತಿನ್ನೆಲ್ಲಿಂದ? ಆಂಡರ್‌ಸನ್ ಕನ್ಸಲ್‌ಟಿಂಗ್‌ನವರು ತಮ್ಮ ಸಾಫ್ಟ್‌ವೇರ್ ಕನ್ಸಲ್ಟಿಂಗನ್ನು ಅಕ್ಸೆಂಚರ್ ಎಂದು ಬದಲಾಯಿಸಲಿಲ್ಲವೇ...' ಎಂದುದಕ್ಕೆ ಅವಳು ದುರುಗುಟ್ಟಿ ನೋಡಿದಳೇ ವಿನಾ ಮತ್ತೇನನ್ನೂ ಹೇಳಲಿಲ್ಲ!

Thursday, May 25, 2006

ಆ ಧ್ವನಿ - ಈ ಧ್ವನಿ: ಭಾಗ ೨

ಆ ಧ್ವನಿ: ಏನು ಕೊರತಿ ಆತು ಈಗಾಂತ ಹಿಂಗ ತಲಿ ಮ್ಯಾಗ ಕೈ ಹೊತಗೊಂಡ್ ಕುಂತೀ? ಏಳ್ ಏಳ್, ಯಾವಳೋ ಒಬ್ಳು ಅಂದಿದ್ಲಂತೆ ಇತ್ಲಾಗ್ ಅಕ್ಕಾನೂ ಉಳೀಲಿ, ಅಕ್ಕೀನಿ ಉಳೀಲಿ ಅಂತ, ಹಂಗಾತ್ ನೋಡ್ ನಿನ್ನ ಕಥಿ.

ಈ ಧ್ವನಿ: ಅಲ್ವೋ, ನನಗೆ ಒಂದ್ ಕಡೆ ಈ ಕೆಲ್ಸಾನೂ ಬೇಕು, ಮತ್ತೊಂದು ಕಡೆ ನಮ್ಮೂರಿಗೆ ರಜಕ್ಕ್ ಹೋಗ್ಲೂ ಬೇಕೂ, ಏನ್ ಮಾಡಕಾಗತ್ತೆ, ಏನಾದ್ರೂ ಒಂದ್ ಉಪಾಯ ಇರ್‍ಲೇ ಬೇಕಲ್ಲ?

ಆ ಧ್ವನಿ: ಏನಿಲ್ಲ, ನಾನ್ ಹೇಳ್ದೆ ಅಂತ ನನ್ ಮಾತ್ ನೀನ್ ಯಾವಾಗಾರಾ ಕೇಳೀಯೇನು? ಇದ್ದ ವಿಷ್ಯಾ ಇರಂಗಾ ಹೇಳೋವ್ ನೋಡ್ ನಾನು, ನಿನಗ್ ಬ್ಯಾಸ್ರಾ ಆದ್ರ ಅದಕ್ಕ ನನ್ನ ಹೊಣೀ ಮಾಡಬ್ಯಾಡಾ.

ಈ ಧ್ವನಿ: ಪರವಾಗಿಲ್ಲ ಹೇಳು, ನನಗೆ ನಿನ್ನ ಬಿಟ್ರೆ ಮತ್ತ್ಯಾರೂ ಇಲ್ಲ ಅಂತ್ಲೇ ಹೇಳ್‌ಬೇಕು, ಇಂಥ ವಿಷಯಕ್ಕೆಲ್ಲ ಹೀಗೆ ಯಾರ ಹತ್ರಾನಾದ್ರೂ ಹೇಳಿಕೊಂಡ್ರೆ ಒಂದಿಷ್ಟು ಸಮಾಧಾನಾನಾದ್ರೂ ಆಗುತ್ತೆ.

ಆ ಧ್ವನಿ: ಈಗ ಊರಿಗ್ ಹೋಗಿ ಬರೋಬ್ಬರಿ ಮೂರು ವರ್ಸದ ಮೇಲಾತೂ ಅಂತಿ, ಅತ್ಲಾಗಾ ಈ ಕೆಲ್ಸಾ ಬಿಟ್ಟು ಒಂದೆರಡು ತಿಂಗಳೂ ಅಂತ ಊರ್ ಕಡಿ ಬಂದ್ ಹೋಗು, ಆಮೇಲೆ ಹಿಂದಕ್ಕ್ ಬಂದು ನಿನಗ್ಯಾವ ಕೆಲ್ಸಾ ಬೇಕೋ ಅದನ್ನ ಹಿಡೀವಂತೆ, ಇದಕ್ಕಿಂತ ಅಗದಿ ಚಂದ ಇರೋ ಉಪಾಯ ನನ್ನಂತೋರ್ ತಲೀಗ್ ಎಲ್ಲಿ ಹೊಳೀಬೇಕು ಹೇಳು?

ಈ ಧ್ವನಿ: ಇರೋ ಕೆಲ್ಸಾನ ಬಿಟ್ಟು ಅದ್ಯಾವ ರಜೆ ಕಳೆಯೋಕಾಗುತ್ತೋ? ಈ ಕಂಪನೀಲಿ ಏನೋ ಸ್ಥಾನಾ-ಮಾನ ಅಂತ ಒಂದಿಷ್ಟಾದ್ರೂ ಇದೆ, ಅಕಸ್ಮಾತ್ ಈ ಕೆಲ್ಸಾ ಬಿಟ್ಟು ನಿನ್ನ ಮಾತು ಕೇಳಿ ಊರಿಗೇನಾದ್ರೂ ತಿಂಗಳುಗಟ್ಟಲೇ ಬಂದೆ ಅಂತಿಟ್ಕೋ, ಆಮೇಲೆ ಹಿಂದೆ ಬಂದ ಮೇಲೆ ಕೆಲ್ಸಾ ಸಿಗೋದು ತಡಾ ಆಯ್ತು ಅಂದ್ರೆ, ಸಿಕ್ರೂ ಒಳ್ಳೇ ಕೆಲ್ಸಾ ಸಿಗದೇ ಹೋದ್ರೆ... ಅದೂ ಅಲ್ದೇ ಕೆಲ್ಸಾ ಇಲ್ಲೇ ಏನೂ ಸಿಗಬೇಕು ಅಂತಿಲ್ವಲ್ಲಾ, ಎಲ್ಲಿ ಬೇಕಾದ್ರೂ ಸಿಗಬಹುದು, ಈ ಮನೆ-ಮಠಾ-ಮೂವು ಇವೆಲ್ಲವನ್ನು ನೆನಸಿಕೊಂಡ್ರೆ ವೆಕೇಷನ್ನೇ ಬೇಡ ಅನ್ನಿಸಿಬಿಡುತ್ತೇ ನೋಡು.

ಆ ಧ್ವನಿ: ಸರಿ ಹೋಯ್ತು, ನಿನ್ನ ಬಿಟ್ರೆ ಬೇರೆ ಯಾರೂ ಕೆಲ್ಸಾ ಮಾಡ್ದಂಗೇ ಕಾಣ್ಸಲ್ಲ! ನನ್ನ ಕೇಳ್ದ್ರೆ ಹೋಗಿ ನಿನ್ನ ಹೊಸ ಬಾಸನ್ನೇ ಯಾಕ್ ಕೇಳ್‌ಬಾರ್ದೂ ಅಂತೀನಿ? ಹೋದ್ರೆ ಒಂದ್ ಕಲ್ಲು ಬಂದ್ರೆ ಒಂದ್ ಮಾವಿನ್‌ಕಾಯಿ ಏನಂತಿ?

ಈ ಧ್ವನಿ: ಅವನು ಇನ್ನೂ ಹೊಸಬಾ, ಅವನಿಗೂ ನನಗೂ ಇನ್ನೂ ಚೆನ್ನಾಗ್ ಪರಿಚಯನೇ ಇಲ್ಲ, ನಾನು ಮಾತೆತ್ತಿದ ಹೊಡೆತಕ್ಕೇ ದಿಢೀರಂತ ರಜಾ ಕೇಳಿದ್ರೆ ಅವನು ನನ್ನ ಮೇಲೆ ಏನು ಇಂಪ್ರೆಷ್ಷನ್ ಇಟ್ಕೋತಾನೆ? ಅವನಿಗೂ ಆ ಕೆಲ್ಸಾ ಮಾಡಿಸ್‌ಬೇಕ್, ಈ ಕೆಲ್ಸಾ ಮಾಡಿಸ್‌ಬೇಕ್ ಅಂತಾ ಇರೋದಿಲ್ವೇನು?

ಆ ಧ್ವನಿ: ಇದೊಳ್ಳೇ ಉಗುಳಕೂ ಬರ್‍ದೇ, ಇತ್ಲಾಗ್ ನುಂಗಕೂ ಬರ್‍ದೇ ಇರೋ ಗಂಟ್ಲಲ್ಲಿರೋ ಬಿಸೀ ತುಪ್ಪಾ ಆತಲ್ಲಪ್ಪಾ, ಹಿಂಗ್ ಮಾಡಿದ್ರೆ ಹೆಂಗೆ? ನೀನೊಂದು ಮೂರು ತಿಂಗಳು ಮರ್ವಾದಿಯಿಂದ ಮೈ ಬಗಸಿ ಕೆಲ್ಸಾ ಮಾಡಿ, ಎಲ್ರೂ ಮೆಚ್ಚೋ ಹಾಗಾದ್ ಮೇಲೆ ಅವರ ಹತ್ರ ನಿನಗ್ ಎಲ್ಲಿ ಯಾವ್ ಯಾವ ರಜಾ ಬೇಕೋ ಅದನ್ನೆಲ್ಲ ತಗೋ...

ಈ ಧ್ವನಿ: ಅದ್ನೂ ಯೋಚ್ನೇ ಮಾಡೀದೀನೋ, ಹಿಂಗೆ ಆರು ತಿಂಗ್ಳೂ, ಮೂರು ತಿಂಗ್ಳೂ ಅಂತ ಮುಂದ್ ಹಾಕ್ ಹಾಕೇ ಈಗ ಹತ್ ಹತ್ರಾ ನಾಲ್ಕು ವರ್ಷಾ ಆಗ್ತಾ ಬಂತು. ಈ ಮೇ-ಜೂನ್ ನಲ್ಲಿ ಪ್ರಾಜೆಕ್ಟೂ ಅಂತಾರೆ, ಆರು ತಿಂಗಳು ದುಡ್ದ ಮೇಲೆ, ಥ್ಯಾಂಕ್ಸ್ ಗೀವಿಂಗೂ, ಕ್ರಿಸ್‌ಮಸ್ಸೂ, ರೇಟಿಂಗೂ-ರ್‍ಯಾಂಕಿಂಗೂ, ಬೋನಸ್ಸೂ ಮಣ್ಣೂ-ಮಸಿ ಅಂತ ತಲೆ ತಿಂತಾರೆ, ಈಗ ಹೋಗ್ದೇ ಇದ್ರೇ ಇನ್ನೊಂದ್ ವರ್ಷ ಹೋಗೋಕೆ ಆಗೋದಿಲ್ವೇನೋ ಅಂತ ಅನ್ನಿಸಿಬಿಟ್ಟಿದೆ!

ಆ ಧ್ವನಿ: ಅಯ್ಯೋ ಇವ್ನಾ, ಮುಂದ್ ಯಾವಾಗೋ ಬರೋ ರೊಕ್ಕದ್ ಆಸೀಗೆ ಇವತ್ತೇ ತಲಿ ಕೆಡಿಸ್ಕ್ಯಣಕಾಗ್ತತಾ?

ಈ ಧ್ವನಿ: ಬರೀ ದುಡ್ಡಿನ ವಿಚಾರ ಅಷ್ಟೇ ಅಲ್ಲ, ನನ್ನ ಮುಂದಿನ ಪ್ರಮೋಷನ್ನು ನಾನು ಈ ವರ್ಷ ಏನೇನ್ ಮಾಡ್ದೇ ಅನ್ನೋದ್ರ ಮೇಲೇನೆ ನಿರ್ಧಾರ ಆಗುತ್ತೆ, ಅಂತಾದ್ದರಲ್ಲಿ...

ಆ ಧ್ವನಿ: ಸುಮ್ಕಿರೋ ಸಾಕು, ಈ ಬಂಡ್‌ಬಾಳ್ವೆ ಯಾವನಿಗ್ ಬೇಕು, ಯಾವಾಗ್ ನೋಡಿದ್ರು ಸೋನೀಮಳಿ ಥರಾ ಕುಯ್ ಅಂತ ಅಂತಾನೇ ಇರ್ತಿ, ಹಿಂಗಾದ್ರೆ ಹಂಗೆ, ಹಂಗಾದ್ರೆ ಹಿಂಗೆ! ಇಂಥಾವ್ನೆಲ್ಲಾ ಯೋಚ್ನೇ ಮಾಡ್ ಮಾಡೇ ನಿಮ್ ತಲೀ ದೊಡ್ಡದಾಗೋದು, ನಮ್ಮಂಗ ಅವತ್ತಿನ್ ಕೆಲ್ಸಾ ಅವತ್ತ್ ಮಾಡಿಕ್ಯಂಡ್ ಇದ್ದಿದ್ರ ನೋಡ್ ತಮ್ಮಾ ಅದ್ರ ಮಜಾನೇ ಬ್ಯಾರೆ.

ಈ ಧ್ವನಿ: ...

ಆ ಧ್ವನಿ: ಅಷ್ಟೂ ಮಾಡಿ, ನಿನಗೇನ್ ಅಂಥಾ ದಾವಂತ ಊರಿಗ್ ಹೋಗ್‌ಬೇಕು ಅನ್ನಿಸಿರೋದು? ಇಲ್ಲೇನೂ ಅಂತಾದ್ ಹಾರಿ ಏನೂ ಹೋಗ್ತಾ ಇಲ್ವಲ್ಲಾ?

ಈ ಧ್ವನಿ: ಹಾರೇನೂ ಹೋಗ್ತಾ ಇಲ್ಲ, ನಾನು ಪ್ರತೀ ಸರ್ತಿ ಬಂದು ಮತ್ತೆ ವಾಪಾಸ್ಸು ಹೋಗೋದ್ರೊಳಗೆ ಎಷ್ಟೋ ಜನ ಸತ್ತಿರ್ತಾರೆ, ಎಷ್ಟೋ ಜನ ಹುಟ್ಟಿರ್ತಾರೆ, ಈ ಬದಲಾವಣೆಗಳಲ್ಲೆಲ್ಲ ನಾನೂ ಅಂತ ಇಲ್ಲದೇ ಹೋದ್ರೆ ಇದ್ರೆಷ್ಟು ಬಿಟ್ರೆಷ್ಟು ಅನ್ನಿಸಿಬಿಡುತ್ತೆ ನೋಡು...

ಆ ಧ್ವನಿ: ಅಯ್ಯೋ ಹುಚ್ಚಾ, ತೆಗೀ-ತೆಗೀ, ನಿನ್ನ ಕಷ್ಟಾ ಸುಖ ನೋಡೋಕೆ ಅವ್ರಿವ್ರು ಬರೋ ಕಾಲಾ ಯಾವಾಗೋ ಹೋಯ್ತು, ಇತ್ಲಾಗೆಲ್ಲ ನಮ್ಮ್ ಹಳ್ಳೀಗೂ ಪಟ್ನದ್ ಗಾಳಿ ಸುಳ್ದ್ ಬಿಟ್ಟೈತೆ, ಯಾವನೂ ಯಾರೀಗೂ ಕ್ಯಾರೇ ಅನ್ನಂಗಿಲ್ಲ, ಅವರವರ್ದು ಅವರಿಗೆ.

ಈ ಧ್ವನಿ: ಹಂಗೇನಿಲ್ಲಾ, ಎಷ್ಟೇ ಅಂದ್ರೂ ನಮ್ಮೂರು ನಮ್ಮೂರೇ. ಬದಲಾವಣೆ ಅನ್ನೋದ್ ಯಾರನ್ನ್ ಬಿಟ್ಟಿದೆ? ಏನೇ ಆದ್ರೂ ನಮ್ಮೂರಿಗೆ ಹೋಗಿ ಇದ್ರೆ ಅದರ ಸುಖಾನೇ ಬೇರೆ ಬಿಡು.

ಆ ಧ್ವನಿ: ನಿನಗೇನಪಾ, ಯಾವಾಗೋಮ್ಮಿ ಬರ್ತೀ, ಹೋಗ್ತೀ, ಎಲ್ಲವೂ ಚೆಂದ್ ಕಾಣ್ತದ, ನಮಿಗಂತೂ ಏನೂ ಗೊತ್ತಾಗಂಗಿಲ್ಲ. ನಿಮ್ಮಂತೋರು ಹೇಳಿದ್ದನ್ನ ಖರೆ ಅಂತ ನಂಬ್ದೇ ವಿಧೀ ಇಲ್ಲ.

ಈಗ ನೀನ್ ಊರಿಗೆ ಬರೋ ವಿಷ್ಯಕ್ಕೆ ಬರೋಣ, ಸಮಸ್ಯಾ ಎಂಥಾದಾರಾ ಇರ್‍ಲಿ, ಅದನ್ನ ನೇರ್‌ವಾಗೇ ಧೈರ್ಯದಿಂದ ಎದುರುಸ್‌ಬೇಕು ಅಂತ ಕರಡಯ್ಯ ಮೇಷ್ಟ್ರು ಹೇಳ್‌ತಿರಲಿಲ್ಲಾ? ಅವನೌನ್ ಆಗಿದ್ ಆಗ್ಲೀ ಹೋಗಿದ್ ಹೋಗ್ಲಿ ಅಂತ ನಿನ್ನ ಹೊಸ ಬಾಸಿಗೆ ನೀನು ಮೂರು ವಾರಕ್ಕ್ ಊರಿಗ್ ಹೋಗೋ ವಿಷ್ಯಾ ತಿಳಿಸ್‌ಬಿಡು, ಅವ ಹೂಂ ಅಂದ್ರೆ ಇತ್ಲಾಗ್ ಬಾ ಇಲ್ಲಾಂದ್ರ ಅಲ್ಲೇ ಕೊಳೀ. ನನ್ ತಲೀ ಮಾತ್ರ ತಿನ್ನಬ್ಯಾಡ.

ಈ ಧ್ವನಿ: ಇಲ್ಲೆಲ್ಲಾ ವೆಕೇಷನ್ನೂ ಅಂತ ರಜಾ ತಗೊಂಡ್ರೆ ಒಂದ್ ವಾರ ಹೆಚ್ಚಂದ್ರೆ ಎರಡು ವಾರ ತಗೋತಾರೋ, ನಾನೂ ಹಂಗೇ ಮಾಡ್ಲಾ ಅಂತಾ ಯೋಚ್ನೆ ಬಂತು.

ಆ ಧ್ವನಿ: ಥೂ ನಿನ್ನ, ಹಂಗೇನಾರಾ ಮಾಡಿ ಮತ್ತ, ಅದ್ಯಾವ್ದೋ ಭಾಗ್ಯಕ್ಕೆ ದೇಸಾ ಬಿಟ್ಟ್, ಬಾಸೇ ಬಿಟ್ ಹೋಗೋದೂ ಅಲ್ದೇ, ಬದುಕೋ ರೀತೀನೂ ಅವರ್ ಥರಾನೇ ಬದಲಾಯಿಸ್‌ಕೊಳ್ಳೋ ಅದೆಂಥಾ ಭಂಡ್‌ತನಾ ಅಂತೀನಿ? ಎಲ್ಲಿ ಕೆಲ್ಸಾ ಮಾಡಿದ್ರೂ ನಮ್-ನಮ್ ಥರಾನೇ ಇರಾಕ್ಕಾಗಲ್ಲೇನು? ಇಂಥಾದ್ರಗೆಲ್ಲ ಈ ಸಾಬ್ರೇ ಮೇಲ್ ನೋಡು - ಎಲ್ಲಿ ಹೋದ್ರೂ ತಮ್ ತನಾ ಅನ್ನೋದು ಬಾಳ ದೊಡ್ದು ಅವ್ರಿಗೆ.

ಈ ಧ್ವನಿ: ಒಂದ್ಸರ್ತಿ ನೋಡಿದ್ರೆ ಹೋದಲ್ಲಿ ಬಂದಲ್ಲಿ ಹೊಂದ್‌ಕೋ ಅಂತಿ, ಈಗ ನೋಡಿದ್ರೆ ನಿನಗ್ ಬಂದಂಗ್ ಬದುಕೂ ಅಂತೀ, ನಿನ್ನ ಹತ್ರಾ ಯಾವನ್ ಮಾತಾಡ್‌ತಾನೋ?

ಆ ಧ್ವನಿ: ಮತ್ತಿನ್ನೇನು, ಅಲ್ಲಿ ಕೆಲ್ಸಾ ಮಾಡೋರ್ ರಜಾ ತಗೊಂಡು ನಿನ್ನ ಥರಾ ಏಳ್ ಸಮುದ್ರಾ ಹಾರಿ ಬರಂಗಿಲ್ಲ, ಅಲ್ಲೇ ನೆಂಟ್ರೂ ಮನೀಗೋ ಮತ್ತೇಲ್ಲೋ ಹೋಗ್ತಾರೆ, ನೀನು ಇಷ್ಟೊಂದು ದುಡ್ ಖರ್ಚ್ ಮಾಡಿ, ಮೂರು ವರ್ಷಕ್ಕೊಮ್ಮಿ ನಾನ್ ಬದುಕೇನಿ ಅಂತ ಮುಖಾ ತೋರ್‌ಸೋಕ್ ಬರೋ ಮನ್ಷಾ, ಬರೀ ನಾಕೇ ದಿನ ಇದ್ದ್ ಹೋದ್ರೇ ಅದರಾಗೇನೂ ಮಜಾ ಇರಂಗಿಲ್ಲ. ಕೊನೀಪಕ್ಷ ಇಲ್ಲಿಗೆ ಬಂದಷ್ಟು ದಿನಾನಾದ್ರೂ ಅಲ್ಲೀದ್ ಮರ್‍ತು ಹಾಯಾಗಿ ಇದ್ರಂದ್ರ ನಿನಗೂ ಒಳ್ಳೇದು ಮಂದಿಗೂ ಒಳ್ಳೇದು.

ಈ ಧ್ವನಿ: ಇರ್ಲಿ ಬಿಡು ಏನೋ ಒಂದು ಆಗುತ್ತೆ ನೋಡೋಣ. ಈ ವರ್ಷ ಮೈಲಾರಲಿಂಗನ ಜಾತ್ರಿಗೇನಾದ್ರೂ ಹೋಗಿದ್ಯಾ? ಯಾರ್ ಯಾರು ಹೋಗಿದ್ರೀ?

ಆ ಧ್ವನಿ: ನನೀಗೆ ಸುತ್ತೀ ಬಳ್ಸೀ ಹೇಳಕ್ ಬರಂಗಿಲ್ಲ, ನೀನು ಮನಸಿನ್ಯಾಗೆ ಮಂಡಗೀ ತಿನ್ನೋದ್ ಕಡಿಮಿ ಮಾಡಿ ಜವಾಬ್ದಾರೀಂದ ಸ್ವಲ್ಪ ಒಂದು ಬದೀಗೆ ಬರೋಕ್ ನೋಡು, ಎತ್ಲಾಗ್ ಬಂದ್ರೂ ಒಂದಿಲ್ಲೊಂದು ಕಳಕೊಳ್ಳೋದ್ ಇದ್ದೇ ಇರ್ತತಿ, ಕಳಕೊಂಡಿದ್ದಕ್ ಚಿಂತೀ ಮಾಡೋದ್ ಬಿಟ್ಟು, ಪಡಕೊಂಡಿದ್ದರ ಬಗ್ಗೆ ಯೋಚ್ಸೋದು ನನ್ನ್ ಪ್ರಕಾರ ಜಾಣ್‌ತನಾನಪ್ಪಾ.
ಮೈಲಾರ್ ಲಿಂಗನ್ ಜಾತ್ರೀ ಬಗ್ಗೀ ಕೇಳ್ದಿ, ಅದು ಎಲ್ಲಿ ಯಾವತ್ತ್ ನಡೀತತಿ ಅಂತಾನಾರೂ ನೆನಪೈತಾ ನಿನಗಾ? ಈ ಸಾರಿ ನಾನೂ-ಮಂಜಣ್ಣನೂ ಹೋಗಿದ್ವು, ಭಾಳ್ ಚಂದಿತ್ತು. ನಿನ್ ಸುದ್ದೀನೂ ಬಂತು, ಮಂಜಣ್ಣ ನಿನ್ ಹೆಸ್ರು ಕೇಳಿದ್ದೇ ಜೋರಾಗಿ ನಕ್ಕ, ನಿನ್ ಹೆಸ್ರ್‌ನ್ಯಾಗೆ ಅಂತ ಸ್ವಲ್ಪ ದುಡ್ಡೂ ಹಾಕಿದ್ವಿ ಅನ್ನೂ.


ಈ ಧ್ವನಿ: ಸರಿ ಬಿಡು, ಮತ್ತೇನಾದ್ರೂ ವಿಷ್ಯಾ ಇಲ್ಲಾಂದ್ರೆ ಮತ್ತ ಮಾತಾಡೋಣಂತೆ, ನಾನು ಯಾವ್ದುಕ್ಕೂ ಈ ವರ್ಷಾ ಬರ್ತೀನೋ ಇಲ್ವೋ ಅಂತ ಗ್ಯಾರಂಟೀ ಹೇಳ್ತೀನಿ ಇನ್ನೊಂದೆರಡು ವಾರದೊಳಗೆ.

ಆ ಧ್ವನಿ: ಸರಿನಪ್ಪಾ, ಏನರಾ ಮಾಡು, ನನ್ನ ಮಾತ್ರ ಮರೀಬ್ಯಾಡ.

ಈ ಧ್ವನಿ: ಸರಿ, ಎಲ್ಲರನ್ನೂ ಕೇಳ್ದೇ ಅಂತ್ ಹೇಳು.

Wednesday, May 24, 2006

ಹಳೆಯ ಆಫೀಸೂ, ಫ್ಯಾಶನ್ ಸೂಪೂ!

ದಿನ ಹಳೆಯ ಆಫೀಸಿಗೆ ಕಾರಣಾಂತರಗಳಿಂದ ಹೋಗಿದ್ದೆ - ಆದಷ್ಟು ಬೇಗಬೇಗ ಕೆಲಸಗಳನ್ನು ಮುಗಿಸಿ ಸಂಜೆ ಬಿಗ್ ಬ್ರದರ್ಸ್ ಬಿಗ್ ಸಿಸ್ಟರ್ಸ್ ಪ್ರೋಗ್ರಾಮ್ ಆಡಿಯಲ್ಲಿ ನನಗೆ ಅಸೈನ್ ಮಾಡಿದ ಹೈ ಸ್ಕೂಲು ಹುಡುಗನನ್ನು ಮಾತನಾಡಿಸಿದ ಹಾಗೂ ಆಯಿತು, ಹಾಗೂ ಕೆಲವು ವಾರಗಳಿಂದ ಹೋಗಿರದ ಮುಂಜಾವಿನ ನ್ಯೂ ಯಾರ್ಕ್ ಸಿಟಿಯನ್ನು ನೋಡಿಕೊಂಡು ಬಂದರಾಯಿತು ಎಂದು. ನಮ್ಮ ಆಫೀಸಿನ ಕಟ್ಟಡವನ್ನು ಈಗಾಗಲೇ ಯಾರೋ ಖರೀದಿಸಿರೋದರಿಂದ ಒಂದು ಕಾಲದಲ್ಲಿ ದೊಡ್ಡ ಕಂಪನಿಯೊಂದರ ಹೆಡ್ ಆಫೀಸಾದ ೪೧ ಮಹಡಿಗಳ ಕಟ್ಟಡ ಕೆಲವೇ ವಾರಗಳಲ್ಲಿ ಒಡೆಯುವವರ ಕೈಗೆ ಸಿಕ್ಕು ತನ್ನ ಗತ್ತನ್ನೆಲ್ಲ ಕಳೆದುಕೊಂಡು ಒಂದು ಕಾಲದಲ್ಲಿ ಮೆರೆದ ಊರಿನ ಗೌಡ ಮುದುಕನಾದ ಹಾಗಿತ್ತು. ಸುಮಾರು ಮೂವತ್ತು ವರ್ಷಕ್ಕಿಂತಲೂ ಹಳೆಯದಾದ ಈ ಕಟ್ಟಡದಲ್ಲಿ ಅಲ್ಲಲ್ಲಿ ಹಾಕಿದ್ದ ಅಮೃತಶಿಲೆ ಸ್ಲ್ಯಾಬುಗಳನ್ನು ಹೇಗೆಬೇಕೋ ಹಾಗೆ ಒಡೆದು ಹಾಕಿದ್ದರು, ಮುಖ್ಯದ್ವಾರವನ್ನು ಮುಚ್ಚಿ ಎಲ್ಲೋ ಬದಿಯ ದ್ವಾರದಿಂದ ಕೆಲಸಗಾರರನ್ನು ಒಳಗೆ ಬಿಡುತ್ತಿದ್ದರು. 'ಇನ್ನೆಷ್ಟು ದಿನ ಇಲ್ಲಿ ಹೀಗೆ ಒಳಗೆ ಬಿಡುತ್ತಾರೆ?' ಎಂದು ಎಲಿವೇಟರ್‌ನ ಒಳಗೆ ಒಂದು ಕಾಲನ್ನು ಇಟ್ಟು ಕೈಯಿಂದ ಬಾಗಿಲನ್ನು ಹಿಡಿದುಕೊಂಡು ಅಲ್ಲೇ ನಿಂತಿದ್ದ ಸೆಕ್ಯುರಿಟಿಯವನನ್ನು ಕೇಳಿದ್ದಕ್ಕೆ 'ಈ ಶುಕ್ರವಾರವೇ ಕಡೆ ಅಂತ ಕಾಣ್ಸುತ್ತೆ, ಆದರೂ ಆಮೇಲೆ ಜನರನ್ನ ಬಿಟ್ಟರೂ ಬಿಡಬಹುದು' ಎಂದ. ಸರಿ ಎಂದು ಯಾವಾಗಲೂ ಬರುವಂತೆ ಹದಿನಾರನೇ ಮಹಡಿಗೆ ಬಂದೆ, ಯಾವಾಗಲೂ ಮುಚ್ಚಿರುತ್ತಿದ್ದ ಫೈರ್ ಡೋರುಗಳು ಅಪರೂಪಕ್ಕೆ ಬಂದವನನ್ನು ಸ್ವಾಗತಿಸಲೋ ಎಂಬಂತೆ ಪೂರ್ತಿ ತೆರೆದುಕೊಂಡು ಹಲ್ಲುಗಿಂಜುತ್ತಿದ್ದವಂತೆ ಕಂಡುಬಂದವು. ಮುಖ್ಯ ದ್ವಾರದಿಂದ ಒಳಗೆ ಬಂದು ನೋಡುತ್ತೇನೆ ಎಲ್ಲವೂ ಬಟಾಬಯಲು, ಹಿಂದೆ ಅಲ್ಲಿ ಎಷ್ಟೊಂದು ಜನರು ಕೆಲಸ ಮಾಡುತ್ತಿದ್ದರು, ಈಗ ಅವರ ‍ಯಾರ ಸುಳಿವೂ ಇರಲಿಲ್ಲ, ಅಲ್ಲೆಲ್ಲ ಕತ್ತಲು ತಾಂಡವಾಡುತ್ತಿದ್ದು, ನಾನು ಸ್ವಿಚ್ ಅದುಮಿದೊಡನೆಯೇ ಇವನೊಬ್ಬ ಬಂದ ಎಂದು ಬೈದುಕೊಂಡು ಅದೆಲ್ಲೋ ಮರೆಯಾಯಿತು.

ನನ್ನ ಹಳೆ ಮೇಜಿನ ಮೇಲೆ ಫೋನೂ ಇರಲಿಲ್ಲ, ನಾನು ಉಪಯೋಗಿಸುತ್ತಿದ್ದ ಖುರ್ಚಿಯೂ ಇದ್ದ ಜಾಗದಲ್ಲಿ ಇರಲಿಲ್ಲ. ಲ್ಯಾಪ್‌ಟಾಪ್ ಕನೆಕ್ಷನ್ ಕೊಟ್ಟು ಎಲ್ಲಿಂದಲೋ ಖುರ್ಚಿ ಫೋನುಗಳನ್ನು ಎಳೆತಂದು ಇನ್ನೇನು ಲಾಗಿನ್ ಆಗಬೇಕು ಎನ್ನುವಷ್ಟರಲ್ಲಿ ದಿಢೀರನೆ ಎರಡು ಸೀನುಗಳು ಒಂದರ ಮುಂದೊಂದು ಬಂದು ಧೂಳಿನ ಜೊತೆಗೆ ಗೆಳೆತನ ಬೆಳೆಸದೆ ಬೇರೆ ವಿಧಿಯಿಲ್ಲ ಎಂದು ಅಣಕಾವಾದಿದಂತೆ ಕಂಡುಬಂತು. ಅಲ್ಲಲ್ಲಿ ಇದ್ದ ಟಿಷ್ಯೂ ಪೇಪರುಗಳನ್ನು ತೆಗೆದುಕೊಂಡು ಮೇಜನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛ ಮಾಡಿಕೊಂಡು ಹದಿನೈದು ಇಂಚಿನ ಡೆಲ್ ಪರದೆಯಲ್ಲಿ ಮುಖ ಹುದುಗಿಸಿದೆ. ಮೊದಲೆಲ್ಲಾ ಆದರೆ ಯಾರು ಯಾರು ಬಂದು ಕಾಫಿಗೆ ಕರೆಯುತ್ತಿದ್ದರು, ಏನೇನೋ ಕೇಳುತ್ತಿದ್ದರು, ಕೊನೇಪಕ್ಷ ಹಾಲ್‌ವೇಗೆ ಮುಖ ಮಾಡಿ ಕುಳಿತ ನಾನು ಪ್ರತಿದಿನ ಅದೆಷ್ಟೋ ಸಾರಿ ಮಂತ್ರದಂತೆ ಗುಡ್‌ಮಾರ್ನಿಂಗ್, ಹೌ ಆರ್ ಯೂ ಗಳನ್ನು ಹೇಳಬೇಕಿತ್ತು, ಆಗೆಲ್ಲ ಮುಂಜಾನೆ ಜನಗಳು ಅದೂ-ಇದೂ ಮಾತನಾಡಿಕೊಂಡು, ಅವರು ಬಂದು ಇವರು ಹೋಗಿ ಎಲ್ಲರ ಕಾಫಿ ತಿಂಡಿ ಆಗುವಷ್ಟರಲ್ಲಿ ಹತ್ತು ಘಂಟೆಯಾಗಿಹೋಗುತ್ತಿತ್ತು, ಆದರೆ ಈ ದಿನ ಅದೆಷ್ಟೋ ದಿನಗಳನಂತರ ನಾನೊಬ್ಬನೇ ತುಂಬಾ ಹೊತ್ತು ಯಾರ ಜೊತೆಯಲ್ಲೂ ಮಾತನಾಡದೇ, ಮಧ್ಯೆ-ಮಧ್ಯೆ ಇನ್ಸ್ಟಂಟ್ ಮೆಸ್ಸೇಜುಗಳನ್ನು ಕಳಿಸಿದವರಿಗೆ ಸಮಾಧಾನ ಮಾಡುತ್ತಾ ಯಾವುದೋ ಸ್ಪ್ರೆಡ್‌ಶೀಟನ್ನು ತಿದ್ದುತ್ತಾ ಕುಳಿತೆ, ಅದು ಹೇಗೆ ಹನ್ನೊಂದು ಘಂಟೆಯಾಯಿತೋ ಗೊತ್ತಾಗಲಿಲ್ಲ. ಬೆಳಿಗ್ಗೆ ಪಾವ್‌ಬಾಜಿ ಬ್ರೆಡ್ಡಿಗೆ ನಿನ್ನೆಯ ಚಟ್ನಿಯನ್ನು ಹಚ್ಚಿ ತಿಂದುಕೊಂಡು, ಒಂದು ಲೋಟಾ ಕಾಫಿ ಕುಡಿದುಕೊಂಡು ಓಡಿದವನಿಗೆ ಹೊಟ್ಟೆಯಲ್ಲಿ ಆತ್ಮೀಯರರೊಬ್ಬರನ್ನು ನಿರ್ಲಕ್ಷಿಸುತ್ತಿರುವ ತಳಮಳ ಶುರುವಾಗಿ ಹನ್ನೊಂದರಿಂದ ಹನ್ನೆರಡು ಘಂಟೆಗಳವರೆಗೆ ಒಂದು ಹತ್ತು ಬಾರಿಯಾದರೂ ಗಡಿಯಾರವನ್ನು ನೋಡಿಕೊಂಡು ಹನ್ನೆರಡು ಹೊಡೆಯುವುದನ್ನೆ ಕಾಯುತ್ತಾ ಇರುವ ಕಾರ್ಖಾನೆ ಕೆಲಸಗಾರನ ಹಾಗೆ ಹೊರಗೆ ದೊಡ್ಡ ಸದ್ದು ಮಾಡಿಯೂ ಒಳಗೆ ಕೇಳಿಸದ ಸೈರನ್ ಧ್ವನಿಯಿಂದ ಬೆಳಗ್ಗಿನ ಪಾಳಿ ಮುಗಿಯುವ ಸೂಚನೆಗಳು ಸಿಕ್ಕವು.

ನ್ಯೂ ಯಾರ್ಕ್ ನಗರದಲ್ಲೇನು ರೆಸ್ಟೋರೆಂಟುಗಳಿಗೆ ಬರ - ಒಂದು ಸ್ಲೈಸ್ ಪೀಡ್ಜಾದಿಂದ ಹಿಡಿದು ಒಳ್ಳೊಳ್ಳೆಯ ಹೋಟೇಲುಗಳೆಲ್ಲವೂ ಕೂಗಳತೆಯಲ್ಲಿದ್ದುದರಿಂದ ಊಟ ತರೋಣವೆಂದು ಹೊರಗೆ ಹೋದಾಗಲೆಲ್ಲ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು, ಆದರೆ ಎಲಿವೇಟರ್‌ನಲ್ಲಿ ಬಂದು ಹೊರಗಡೆಯ ಗಾಳಿಯನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಅದಕ್ಕುತ್ತರ ಸಿಕ್ಕು ಕೈಕಾಲುಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದವು. ಆದರೆ ಈ ದಿನ ಹಾಗಾಗಲಿಲ್ಲ, ಹೊರಗಡೆ ಬಂದರೂ ಎಲ್ಲಿ ಹೋಗುವುದು ಎನ್ನುವದಕ್ಕೆ ಉತ್ತರ ಸಿಗಲಿಲ್ಲ, ಆದರೂ ೪೧ನೇ ಸ್ಟ್ರೀಟ್‌ನಲ್ಲಿರುವ ಸಬ್‌ವೇ ಗೆ ಹೋಗಿ ಒಂದು ಸ್ಯಾಂಡ್‌ವಿಚ್ ತಂದರಾಯಿತು ಎಂದು ಹೊರಟೆ. ಸಬ್ ವೇಗೆ ಹತ್ತಿಕೊಂಡಂತೆಯೇ ಒಂದು ಸೂಪ್ ಅಂಗಡಿ ಇದೆ, ಅದರ ಮುಂದೆ ಬಣ್ಣ-ಬಣ್ಣದ ಸೀಮೇಸುಣ್ಣದಲ್ಲಿ ಪ್ರತೀದಿನವೂ ಮೆನ್ಯುಗಳನ್ನು ಬರೆದಿರುತ್ತಾರಾದರೂ ನಾನು ಅದನ್ನು ಯಾವತ್ತೂ ನೋಡುವ ಗೌಜಿಗೇ ಹೋದವನಲ್ಲ, ಆದರೆ ಈ ದಿನ, ಸೈಡ್ ವಾಕ್‌ನಲ್ಲಿ ಹೆಚ್ಚು ಜನರಿರದಿದ್ದುದರಿಂದಲೋ ಅಥವಾ ಅದೇ ತಾನೆ ಹನ್ನೆರಡು ಹೊಡೆದು ಇನ್ನೂ ಲಂಚ್ ಅವರ್ ಶುರುವಾಗುತ್ತಾ ಇದ್ದುದರಿಂದಲೋ ಸೂಪ್ ಶಾಪ್‌ನಲ್ಲೂ, ಅದರ ಮುಂದಿನ ಸೈಡ್ ವಾಕ್‌ನಲ್ಲೂ ಯಾರೂ ಇರಲಿಲ್ಲ. ಅಂಗಡಿಯ ಹೆಸರನ್ನು ನೋಡಿದೆ 'ಫ್ಯಾಶನ್ ಸೂಪ್' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದರು. ಈ ಅಂಗಡಿಯನ್ನು ಎಷ್ಟೋ ಬಾರಿ ನೋಡಿ ಒಳಗೆ ಹೋಗಬೇಕು ಎಂದು ಮನಸ್ಸಾಗಿದ್ದರೂ ಎಂದೂ ಹೋಗಿರಲಿಲ್ಲ, ಆದರೆ ಇಂದು ಹಿಂದಿನಿಂದ ಯಾರೋ ತಳ್ಳಿದ ಅನುಭವವಾಯಿತು. ಒಳಗೆ ಕೌಂಟರಿನ ಹಿಂದೆ ಒಬ್ಬ ಕಪ್ಪು ದೈತ್ಯ ಮೈಮೇಲೆ ಏಪ್ರನ್ ಕಟ್ಟಿಕೊಂಡು ಥರಥರನ ಬಿಸಿಯಾದ ಸೂಪು ಇದ್ದಂತಹ ಕೊಳಗಂತಹ ಪಾತ್ರೆಗಳಲ್ಲಿ ಚಮಚೆಯಿಂದ ಕಲಕುತ್ತಿದ್ದವನು 'ಹೇಗಿದ್ದೀರಾ ಸಾರ್' ಎಂದ, ಕ್ಯಾಷ್ ರಿಜಿಷ್ಟರಿನ ಹಿಂದೆ ನಿಂತಿದ್ದ ಬಿಳಿ ಚೆಲುವೆ ಸುಮ್ಮನೇ ಮುಗುಳ್ನಕ್ಕಳು. ನಾನು 'ಇಲ್ಲಿ ವೆಜಿಟೇರಿಯನ್ ಸೂಪ್' ಸಿಗುತ್ತದೆಯೇ ಎಂದೆ, ಅವನು 'ಖಂಡಿತವಾಗಿ' ಎಂದು ನನ್ನ ಮುಂದೆ ಇದ್ದ ಆರೇಳು ಸೂಪುಗಳಲ್ಲಿ ಮೂರು ನಾಲ್ಕು ವೆಜಿಟೇರಿಯನ್ ಸೂಪುಗಳನ್ನು ಪರಿಚಯಿಸಿದ, ನನ್ನ ಹಿಂದೆಯಾಗಲೀ ಮುಂದೆಯಾಗಲೀ ಯಾರೂ ಜನರಿಲ್ಲದಿದ್ದರಿಂದ ಆತ ಏನು ಪ್ರಶ್ನೆ ಬೇಕಾದರೂ ಕೇಳು ಎನ್ನುವಂತೆ ಶಾಂತಚಿತ್ತನಾಗಿದ್ದ. ನಾನು 'ಬ್ರಾಥ್ ಏನೂ ಉಪಯೋಗಿಸುವುದಿಲ್ಲವೇ ವೆಜಿಟೇರಿಯನ್ ಸೂಪ್ ಮಾಡಲು' ಎಂದದ್ದಕ್ಕೆ ಅವನು 'ಇಲ್ಲ, ನಾವು ಬಳಸೋಲ್ಲ' ಎಂದ. ನಾನು ಇದ್ದ ಚಿಕ್ಕ ಕಪ್‌ನಲ್ಲಿ ಲೆಂಥಿಲ್ ಸೂಪ್ ತೆಗೆದುಕೊಂಡೆ, ಅವನು ಸೂಪ್ ಜೊತೆಗೆ ಬ್ರೆಡ್ ಅಥವಾ ಚಿಪ್ಸ್ ಬರುತ್ತದೆ ಯಾವುದು ಬೇಕು ಎಂದ, ಬ್ರೆಡ್ ಎಂದೆ, ಆತ ಸೂಪ್ ಮತ್ತು ಬ್ರೆಡ್ ಅನ್ನು ಬ್ರೌನ್‌ಬ್ಯಾಗ್‌ನಲ್ಲಿ ಇಟ್ಟು, ಸೂಪು ಕುಡಿಯೋದಕ್ಕೆ ಗುಂಡಿ ಇರುವ ಸಣ್ಣ ಪ್ಲಾಸ್ಟಿಕ್ ಚಮಚೆ ಹಾಗೂ ನ್ಯಾಪ್‌ಕಿನ್ ಇರುವ ಒಂದು ಪ್ಲಾಸ್ಟಿಕ್ ಕವರನ್ನೂ ಇಟ್ಟು, ಕ್ಯಾಷ್ ರೆಜಿಸ್ಟರಿನ ಹಿಂದಿದ್ದ ಚೆಲುವೆಗೆ ನಾನು ತೆಗೆದುಕೊಂಡ ಸೂಪಿನ ಬಗ್ಗೆ ಹೇಳಿದ. ಸೂಪಿನ ಜೊತೆಯಲ್ಲಿ ಒಂದು ಹಣ್ಣು ಸಹಾ ಬರುತ್ತದೆ - ಬಾಳೆಹಣ್ಣು, ಪಿಯರ್ ಅಥವಾ ಸೇಬುಗಳಲ್ಲಿ ಯಾವುದೊಂದನ್ನಾದರೂ ಆರಿಸಿಕೋ ಎಂದ, ನಾನು ಬಾಳೆಹಣ್ಣನ್ನು ತೆಗೆದುಕೊಂಡು 'ಎಷ್ಟಾಯಿತು' ಎಂದೆ, ಅವನು ಅಲ್ಲಿದ್ದ ಬೋರ್ಡನ್ನು ತೋರಿಸಿ, ಇದಕ್ಕೆ ಕೇವಲ ಮೂರು ಡಾಲರ್ ಎಪ್ಪತ್ತೈದು ಸೆಂಟ್, ಟ್ಯಾಕ್ಸ್ ಸೇರಿ ನಾಲ್ಕೂ ಚಿಲ್ಲರೆಯಾಗುತ್ತದೆ ಎಂದ, ನನಗೆ ಇಷ್ಟು ಕಡಿಮೆ ಬೆಲೆಗೆ ಅಷ್ಟೆಲ್ಲಾ ವಸ್ತುಗಳು ದೊರೆತಿದ್ದು ನೋಡಿ ಆಶ್ಚರ್ಯವಾಯಿತು. ನಾಲ್ಕು ಡಾಲರ್ ಹನ್ನೊಂದು ಸೆಂಟ್ ಕೊಟ್ಟು, ಚಿಲ್ಲರೆ ಪಡೆದು ಹೊರಬಂದೆ. ಇಷ್ಟು ಕಡಿಮೆ ಬೆಲೆಯಲ್ಲಿ, ಅದೂ ಟೈಮ್ಸ್ ಸ್ಕ್ವಯರ್‌ಗೆ ಕೂಗಳತೆ ದೂರದಲ್ಲಿ ಇಷ್ಟೊಂದು ವಸ್ತುಗಳು ಬಂದದ್ದನ್ನು ನೋಡಿ ನನಗೆ ಸೂಪಿನ ಕ್ವಾಲಿಟಿ ಬಗ್ಗೆ ಅನುಮಾನವಾಯಿತು. ಹೊರಗಡೆ ಇದ್ದ ನ್ಯೂಸ್ ಸ್ಟ್ಯಾಂಡಿನಲ್ಲಿ ಜ್ಯೂಸ್ ಒಂದನ್ನು ಕೊಂಡುಕೊಂಡು ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಲಗುಬಗೆಯಿಂದ ನನ್ನ ಅಫೀಸಿಗೆ ಬಂದೆ. ನನಗೆ ಖುಷಿಯಾಗುವಂತೆ ಸೂಪಿನ ಗುಣಮಟ್ಟ ಚೆನ್ನಾಗಿದ್ದುದೂ ಅಲ್ಲದೇ, ಬ್ರೆಡ್ಡಿನ ಜೊತೆಯಲ್ಲಿ ಅವನು ಒಂದು ಕುಕ್ಕೀಯನ್ನೂ ಇಟ್ಟಿದ್ದು ಬಹಳ ಇಷ್ಟವಾಯಿತು, ಇಷ್ಟು ದಿನ ಈ ಅಂಗಡಿಗೆ ಹೋಗದೇ ಇದ್ದುದಕ್ಕೆ ಕೈ-ಕೈ ಹಿಸುಕಿಕೊಂಡೆ!

ನಾನು ಇಲ್ಲಿಗೆ ಬರುವ ಮೊದಲು ಆಗೆಲ್ಲ ಇಲ್ಲಿ ಬಂದು ಎಮ್.ಎಸ್. ಮಾಡಿ ಬಹಳ ಕಷ್ಟಪಟ್ಟು ಮುಂದೆ ಬಂದ ನನ್ನ ಸಹೋದ್ಯೋಗಿಗಳು ನಾನು ಒಂದು ಕಾಲದಲ್ಲಿ ಉಪ್ಪಿಟ್ಟು ತಿಂದ ಹಾಗೆ ಅವರು ತಾವು ಕುಡಿದ ಸೂಪುಗಳ ಹಾಗೂ ತಿಂದ ಬ್ರೆಡ್ಡುಗಳ ಬಗ್ಗೆ ಬಹಳ ಹೆದರಿಸಿದ್ದರಾದರೂ ಫುಡ್ ನೆಟ್‌ವರ್ಕಿನ ದೆಸೆಯಿಂದಾಗಿ ನನಗಂತೂ ಸೂಪು ಎಂದರೆ ಪಂಚಪ್ರಾಣ, ಒಂದೆರಡು ಡಾಲರ್ ಕೊಟ್ಟರೆ ನಮ್ಮ ಕೆಫೆಟೇರಿಯಾದಲ್ಲಿ ದಿನಕ್ಕೊಂದು ಸೂಪನ್ನು ಕುಡಿಯಬಹುದು, ಸೂಪು ಎಂದರೆ ಸುಮ್ಮನೇ ನೀರಲ್ಲ, ಅದರಲ್ಲಿ ಏನೇನೋ ಮಹತ್ವವಿದೆ ಎಂದು ಗೊತ್ತಾದದ್ದು ಆಲ್ಟನ್ ಬ್ರೌನ್, ಎಮರಿಲ್ ಲಗಾಸಿ ಹಾಗೂ ನನ್ನ ಎರಡನೇ ಹೆಂಡತಿ ಎಂದು ನಾನು ಜಂಭದಿಂದ ಹೇಳಿಕೊಳ್ಳುವ ರೇಚಲ್ ರೇ ಯರಿಂದಾಗಿ - ಅವರು ತೋರಿಸಿದ ಅಡುಗೆಗಳನ್ನು ಮಾಡಿ ತಿನ್ನದ್ದಿದ್ದರೇನಂತೆ, ಕಣ್ತುಂಬ ನೋಡಲೇನೂ ಆಡ್ಡಿಯಿಲ್ಲ ಅಲ್ಲವೇ?

***

ನಾಲ್ಕೂ ಕಾಲರವರೆಗೆ ಕಮಕ್-ಕಿಮಕ್ ಎನ್ನದೇ ಕೆಲಸ ಮಾಡಿಕೊಂಡು, ನಾಲ್ಕೂ ಇಪ್ಪತ್ತಕ್ಕೆ ಆಫೀಸನ್ನು ಬಿಟ್ಟು (ಇನ್ನು ಇಲ್ಲಿಗೆ ಬರುತ್ತೇನೋ ಇಲ್ಲವೋ ಎಂದು ಯಾರೂ ಇಲ್ಲದ ಮೂಕ ಜಾಗಕ್ಕೆ ಗುಡ್ ಬೈ ಹೇಳಿ) ನಮ್ಮ ಕಡೆ ಬ್ಯಾಣ ನುಗ್ಗಿದೆಯೆಂದು ತುಡುಗು ದನಕ್ಕೆ ಕೊರಳಿನಲ್ಲಿ ದೊಣ್ಣೆ ಕಟ್ಟಿದಾಗ ಕಾಲನ್ನು ಎಳೆದುಕೊಂಡು ಓಡಾಡುವ ಹಾಗೆ ನಾನು ಬಗಲಿನಲ್ಲಿ ಲ್ಯಾಪ್‌ಟಾಪ್ ತುಂಬಿದ್ದ ಭಾರವಾದ ಚೀಲವನ್ನು ಹೆಗಲಿನಲ್ಲಿ ಆಗಾಗ್ಗೆ ಬದಲಾಯಿಸಿಕೊಂಡು ಬ್ರಯಾಂಟ್ ಪಾರ್ಕಿನಲ್ಲಿ ಈ ಹಿಂದೆಂದೂ ಬಿಸಿಲನ್ನೇ ನೋಡಿಲ್ಲ ಎಂದು ಮೈ ಚೆಲ್ಲಿ ಮಲಗಿದವರೆನ್ನೆಲ್ಲ ನನ್ನ ಕಪ್ಪು ಕನ್ನಡಕದ ಅಂಚಿನಲ್ಲಿ ನೋಡಿಕೊಂಡು ನಾಲ್ಕು ಸ್ಟ್ರೀಟ್‌‌ಗಳನ್ನೂ, ಐದು ಅವೆನ್ಯೂಗಳನ್ನೂ ದಾಟಿ ನನ್ನ ಮೆಂಟಿಯನ್ನು (ಹೈ ಸ್ಕೂಲು ಹುಡುಗ) ಭೇಟಿಯಾಗೋಣವೆಂದು ನಮ್ಮ ಮತ್ತೊಂದು ಆಫೀಸಿಗೆ ಬಂದೆ.

ಇಂದಿನ ಆಟದಲ್ಲಿ ಅಲ್ಲಿ ಸೇರಿದ್ದ ಬಿಗ್ ಮತ್ತು ಲಿಟ್ಲ್ ಗಳಿಗೆ ತಲಾ ಅವರವರ ಜೋಡಿಯಾಕ್ ಸೈನ್ (ರಾಶಿ), ಶೂ ಸೈಜ್, ಎತ್ತರ, ಬದುಕಿನಲ್ಲಿ ಅತ್ಯಂತ ಸಂತಸದ ಘಳಿಗೆ ಹಾಗೂ ಬದುಕಿನ ಅತಿ ದೊಡ್ಡ ಭಯವನ್ನು ಒಬ್ಬೊಬ್ಬರಾಗಿಯೇ ಚೀಟಿಯಲ್ಲಿ ಬರೆಯುವಂತೆ ಸೂಚಿಸಿದರು. ಹೀಗೆ ಬರೆದುದ್ದನ್ನು ಮಡಿಕೆಗಳನ್ನಾಗಿ ಮಡಚಿ ಒಂದು ದಬ್ಬದಲ್ಲಿ ಹಾಕಿ ಪ್ರತಿಯೊಬ್ಬರೂ ತಮಗೆ ಬಂದ ಚೀಟಿಯನ್ನು ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಓದಿ, ಹಾಗೆ ಬರೆದವರು ಯಾರು ಕಂಡುಹಿಡಿಯುವ ಆಟ ಅದಾಗಿತ್ತು. ಸನ್ ಸೈನ್, ಶೂ ಸೈಜ್, ಎತ್ತರಗಳನ್ನು ಬರೆದ ನನಗೆ ಬದುಕಿನ ಸಂತಸದ ಘಳಿಗೆಯ ಬಗ್ಗೆ ಒಂದು ಕ್ಷಣ ಯೋಚಿಸುವಂತಾಯಿತು, ಹಲವಾರು ಅಭ್ಯರ್ಥಿಗಳು ಮನದಲ್ಲಿ ಬಂದರೂ 'ನನ್ನ ಮಗಳು ಹುಟ್ಟಿದ ಕ್ಷಣ' ಎಂದು ಬರೆದೆ, ಆದರೆ ಬದುಕಿನ ದೊಡ್ಡ ಭಯಕ್ಕೆ ಏನು ಬರೆಯಬೇಕೆಂಬುದಕ್ಕೆ ತಿಳಿಯದೇ ಒದ್ದಾಡುತ್ತಿದ್ದಾಗ, ಇದಕ್ಕೂ 'ಕೆಲಸ ಕಳೆದುಕೊಳ್ಳುವುದು', 'ಆಕ್ಸಿಡೆಂಟ್ ಆಗುವುದು' ಎಂದು ಒಂದೆರಡು ಅಭ್ಯರ್ಥಿಗಳು ಸಿಕ್ಕಿದರೂ ಕೊನೆಯಲ್ಲಿ 'ಸಾವು' ಎಂದು ಬರೆದುಕೊಟ್ಟೆ.

ಬರೆದೇನೋ ಕೊಟ್ಟೆ, ಆದರೆ ಒಮ್ಮೆಗೇ ದಿಗಿಲಾಯಿತು, ನಾನು ಸಾಯುವುದಕ್ಕೆ ಏಕೆ ಹೆದರುತ್ತೇನೆ, ಅದೇ ನನ್ನ ಬದುಕಿನ ಮಹಾ ಭಯವೇ ಎಂಬ ಧ್ವನಿಯೂ, ನಾನು ಇನ್ನೂ ಸಾಯಲು ಸಿದ್ಧನಿಲ್ಲ, ಅದೇನನ್ನೋ ಕಡಿದು ಹಾಕುವುದಕ್ಕೆ ಇನ್ನೂ ಬಾಕಿಯಿದೆ ಎಂಬ ಸಮಜಾಯಷಿಯೂ ಒಂದೇ ಸಮಯಕ್ಕೆ ಮನಸ್ಸಿನಲ್ಲಿ ನುಗ್ಗಿದವು. ಉಳಿದವರ ಕೆಟ್ಟ ಭಯಗಳೇನೇನಿರಬಹುದು ಎಂದು ಮುಂದಾಗಿಯೇ ಯೋಚಿಸುವ ಪೀಕಲಾಟದ ಜೋಕಾಲಿಗೆ ಮನಸ್ಸು ತೂಗತೊಡಗಿತು. ಆದರೆ ನನಗೆ ಆಶ್ಚರ್ಯವಾಗುವಂತೆ ಅಲ್ಲಿ ಸೇರಿದ್ದ ಹೈ ಸ್ಕೂಲಿನ ಮಕ್ಕಳು ವಾಟರ್ ಬಗ್, ಪಾರಿವಾಳ, ಕಾಕ್‍ರೋಚ್, ಮುಂತಾದವುಗಳನ್ನು ಬರೆದಿದ್ದರೆ, ದೊಡ್ಡವರಲ್ಲಿ ಸುಮಾರು ಜನ 'ಸಾವಿನ' ಪ್ರಸ್ತಾಪವನ್ನು ಮಾಡಿದ್ದರು, ಒಂದೆರಡು ಜನ ನನ್ನ ಹಾಗೇ 'ಸಾವು' ಎಂದು ನೇರವಾಗಿ ಬರೆದಿದ್ದರೆ, ಇನ್ನು ಕೆಲವರು 'ಅಮ್ಮನ ಸಾವು', 'ಕುಟುಂಬದಲ್ಲಿ ಯಾರದ್ದಾದರೂ ಸಾವು', 'ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು' ಮುಂತಾಗಿ ಬರೆದಿದ್ದರು - ಅವನ್ನೆಲ್ಲ ಕೇಳಿ ನನ್ನ ವ್ಯಗ್ರ ಮನಸ್ಸಿಗೆ ಒಮ್ಮೆಲೆ ಬಹಳ ಖುಷಿಯಾದರೂ, ಆ ಖುಷಿ ಬಹಳ ಕಾಲ ನಿಲ್ಲದೇ 'ಅವರೆಲ್ಲರೂ ಹೀಗೇಕೆ ಬರೆದಿರಬಹುದು?' ಎಂದು ಮತ್ತೆ ಮನದಲ್ಲಿ ಮಂಡಿಗೆ ತಿನ್ನತೊಡಗಿದೆ. ಅಲ್ಲಿ ಸೇರಿದ ಹದಿನೈದು ಜನರಲ್ಲಿ ನನ್ನನ್ನು ಬಿಟ್ಟು ಬೇರೇ ಯಾರೂ ಕ್ಯಾಪ್ರಿಕಾರ್ನ್ ಜನರಿರಲಿಲ್ಲ!

ಪ್ರಾಂಕಿ ಎನ್ನುವ ಒಬ್ಬ ಹೈ ಸ್ಕೂಲು ಹುಡುಗ ಕೇಳಿಯೇ ಬಿಟ್ಟ - 'ಸಾವಿನಲ್ಲಿ ಅಂತದ್ದೇನಿದೆ? ತುಂಬಾ ಜನ ಸಾವು ಎಂದು ಬರೆದಿದ್ದಾರಲ್ಲಾ...' ಎಂದು, ಅವನ ಪ್ರಶ್ನೆಯನ್ನು ಕೇಳುವಾಗ ಮಾತ್ರ ಇದ್ದ ನಿಶ್ಶಬ್ದ ಮುಂದೆ ಅವರಿವರು ಅದೇನೇನೋ ಮಾತಿಗೆ ತೊಡಗಿ ಗದ್ದಲವಾಯಿತೇ ವಿನಾ ಆ ಹುಡುಗನ ಪ್ರಶ್ನೆಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ, 'ದೊಡ್ಡವರ ವಿಚಾರ ನನಗೇಕೆ...' ಎಂದು ಪ್ರಾಂಕಿ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುವವನಂತೆ ಕಂಡುಬಂದ.

Tuesday, May 23, 2006

ಗ್ರ್ಯಾನ್‌ವಿಲ್ಲ್ ಪ್ರಸಂಗ

ಒಂದೆರಡು ವಾರಗಳ ಹಿಂದೆ ನಮ್ಮ ಕಂಪನಿಯವರು ನಡೆಸಿಕೊಟ್ಟ ಲೀಡರ್‌ಶಿಪ್ ತರಗತಿಯೊಂದರಲ್ಲಿ ಇದ್ದ ಹದಿನಾಲ್ಕು ಜನರಲ್ಲಿ ನಾನು ಮತ್ತು ರಮೇಶ್ ಮಾತ್ರ ಭಾರತೀಯರು ಎಂದುಕೊಂಡಿದ್ದೆ, ಆದರೆ ನನ್ನ ಲೆಕ್ಕ ತಪ್ಪು ಎಂದು ಗೊತ್ತಾಗಿದ್ದು ಅದರ ಮುಂದಿನವಾರವೇ. ಅದೇ ತರಗತಿಯಲ್ಲಿ ಗ್ರ್ಯಾನ್‌ವಿಲ್ಲ್ (Granville - ಮೊದಲ ಹೆಸರು) ಎಂಬುವವರೂ ಇದ್ದರು, ಸುಮಾರು ನಲವತ್ತೈದರ ಆಸುಪಾಸಿನ ಇವರು ಸೂಟಿನಲ್ಲಿ ಕಂಗೊಳಿಸುತ್ತಿದ್ದರು, ನಾವೆಲ್ಲರೂ ಎಂದಿನಂತೆ ಬ್ಯುಸಿನೆಸ್ ಕ್ಯಾಷುವಲ್‌ನಲ್ಲಿ ಇದ್ದೆವು. ತರಗತಿಯಲ್ಲಿ ಆಶ್ಚರ್ಯಕರವೆನ್ನುವಂತೆ ಗ್ರ್ಯಾನ್‌ವಿಲ್ಲ್ ಎಲ್ಲ ಚರ್ಚೆಗಳಲ್ಲೂ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಕ್ಲಾಸನ್ನು ಅದೆಷ್ಟೋ ವರ್ಷಗಳಿಂದ ನಡೆಸುತ್ತಿರುವ ಇನ್ಸ್ಟ್ರಕ್ಟರ್‌ಗೂ ಗೊತ್ತಿರದ ಎಷ್ಟೋ ವಿಷಯಗಳಿಗೆ ಉತ್ತರಗಳನ್ನು ಹೇಳುತ್ತಿದ್ದರು, ಅಲ್ಲದೇ ಕ್ಲಾಸಿನಲ್ಲಿ ಬಹಳ ಚಟುವಟಿಕೆಯಿಂದಲೂ ಇದ್ದರು. ಅವರು ನನಗಿಂತ ಸ್ವಲ್ಪ ದೂರದಲ್ಲಿ ಕುಳಿತದ್ದರಿಂದ ಕ್ಲಾಸಿನಲ್ಲಿ ಒಂದೆರಡು ಮಾತುಗಳನ್ನು ಆಡಿಕೊಂಡಿದ್ದು ಬಿಟ್ಟರೆ ಮತ್ತಿನ್ಯಾವ ಚರ್ಚೆಯೂ ನಮ್ಮ ನಡುವೆ ನಡೆದಿರಲಿಲ್ಲ.

ಈ ಕ್ಲಾಸು ಮುಗಿದು ಒಂದು ವಾರದ ನಂತರ ಆಫೀಸಿನಲ್ಲಿ ಇದೇ ಗ್ರ್ಯಾನ್‌ವಿಲ್ಲ್ ದರ್ಶನವಾಯಿತು, ನಾವಿಬ್ಬರೂ 'Hello, Hi...''ಕ್ಲಾಸು ಹಾಗಿತ್ತು, ಹೀಗಿತ್ತು...' ಎಂದು ಉಭಯಕುಶಲೋಪರಿಯಾದ ಮೇಲೆ ನಮ್ಮ ನಮ್ಮ ಪಾಡಿಗೆ ಹೊರಟುಹೋದೆವು, ಗ್ರ್ಯಾನ್‌ವಿಲ್ಲ್ ಈ ದಿನವೂ ಸೂಟು ಧರಿಸಿದ್ದರು, ಆದರೆ ಈ ದಿನ ಬಹಳ ಹತ್ತಿರದಿಂದ ನೋಡಿದ ಮೇಲೆ ಗ್ರ್ಯಾನ್‌ವಿಲ್ಲ್ ಭಾರತೀಯನಿರಬಹುದು ಎಂಬ ಬಲವಾದ ಅನುವಾದ ಮೂಡಿತು, ಅವರನ್ನು ಸರಿಯಾಗಿ ನೋಡಿದಾಗ ನಮ್ಮೂರಿನಲ್ಲಿರುವ ಪುರೋಹಿತರೊಬ್ಬರ ನೆನಪು ಬಂತು - ಎತ್ತರವಾದ ನಿಲುವು, ಗೌರವರ್ಣ, ಸ್ವಲ್ಪ ನೆತ್ತಿ ಕಾಣುತ್ತಿತ್ತೇನೋ ಎನ್ನುವಂತೆ ತೆಳ್ಳಗಾದ ಅದೇ ಸುಮಾರು ಹಣ್ಣಾದ ಬಿಳಿ ಕೂದಲುಗಳು, ಸಾಕಷ್ಟು ಓದಿಕೊಂಡಿದ್ದಂತೆ ಕಂಡುಬಂದ ಆಳವಾದ ಕಣ್ಣುಗಳು, ಹಣೆಯ ಮೇಲೆ ಹರಡಿಕೊಂಡ ಉದ್ದುದ್ದ ಗೆರೆಗಳು ಇವುಗಳೆಲ್ಲವೂ ನನಗೆ ಗ್ರ್ಯಾನ್‌ವಿಲ್ಲ್ ಮೇಲೆ ಒಂದು ರೀತಿಯ ಗೌರವ ಭಾವನೆಯನ್ನು ಮೂಡಿಸಿದವು, ನಾನು ಲಗುಬಗೆಯಲ್ಲಿ ಇದ್ದುದರಿಂದ ಮತ್ತೆ ಹೆಚ್ಚೇನನ್ನೂ ಮಾತನಾಡಲಿಲ್ಲ, ಆದರೆ ಗ್ರ್ಯಾನ್‌ವಿಲ್ಲ್ ಗೆ ಯಾವುದೇ ಅರ್ಜೆಂಟಿಲ್ಲದಿದ್ದರೂ ನಾನೇ ಅವರ ಮಾತುಗಳನ್ನು ಮಧ್ಯದಲ್ಲಿ ತುಂಡು ಮಾಡಿ ಓಡಿಹೋದಂತೆನಿಸಿತು.

ಅದೇ ದಿನ ಸಂಜೆ ಆಶ್ಚರ್ಯವೆನ್ನುವಂತೆ ನಾಲ್ಕೂವರೆಗೆಲ್ಲಾ ಎಲ್ಲೋ ಅರ್ಜೆಂಟಾಗಿ ಹೋಗಬೇಕು ಎಂದು ಓಡಿಹೋಗುತ್ತಿದ್ದ ನನಗೆ ಅಷ್ಟೇ ಗಡಿಬಿಡಿಯಲ್ಲಿ ಮನೆಗೆ ಹೊರಟ ಗ್ರ್ಯಾನ್‌ವಿಲ್ಲ್ ಕಣ್ಣಿಗೆ ಬೀಳಬೇಕೆ - ಅದೂ ಎಲಿವೇಟರ್ ಹತ್ತಿರ? ಸರಿ, ಮತ್ತೆ ಹಾಯ್‌ಗಳ ವಿನಿಮಯವಾಯಿತು, ಎಲಿವೇಟರ್‌ನಲ್ಲಿ ನಾವಿಬ್ಬರೇ ಇದ್ದವರು, ನಾನು ಧೈರ್ಯ ಮಾಡಿ ಕೇಳಿ ಬಿಟ್ಟೆ - 'By any chance are you from India?!' ಈ ಪ್ರಶ್ನೆಗೆ ಗ್ರ್ಯಾನ್‌ವಿಲ್ಲ್ ಹೌದು ಎಂದು ಉತ್ತರಕೊಟ್ಟು, ನನ್ನನ್ನು ಭಾರತೀಯನೇ? ಎಂದದಕ್ಕೆ ಹೌದು ಎಂದಾಗ, ಭಾರತದಲ್ಲಿ ಎಲ್ಲಿ? ಎಂದರು, ನಾನು ಕರ್ನಾಟಕದವನು ಎಂದೆ, ಕರ್ನಾಟಕದಲ್ಲಿ ಎಲ್ಲಿ ಎನ್ನಬೇಕೆ? ನಾನು ಶಿವಮೊಗ್ಗದವನು ಎಂದೆ...ಮುಂದೆ ನಾನು ಅವರನ್ನು ಭಾರತದಲ್ಲಿ ಎಲ್ಲಿ? ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವಂತೆ 'ಮಂಗಳೂರಿನವನು' ಎಂದು ಇಂಗ್ಲೀಷಿನಲ್ಲೇ ಉತ್ತರ ಕೊಟ್ಟರು - ನಾನು 'ಹಾಗಾದರೆ ಕನ್ನಡ ಬರುತ್ತೆ ನಿಮಗೆ' ಎಂದೆ, ಅವರು 'ಖಂಡಿತವಾಗಿ...' ಎಂದು ಹೇಳಿ ಮತ್ತೆ ಸಿಗೋಣ ಎಂದು ಹೇಳಿಕೊಂಡು ಇಬ್ಬರೂ ಅರ್ಜೆಂಟಿನಲ್ಲಿದ್ದುದರಿಂದ ನಮ್ಮ ನಮ್ಮ ದಾರಿ ಹಿಡಿದೆವು, ಅಂದಿನಿಂದ ಇಲ್ಲಿಯವರೆಗೂ ಗ್ರ್ಯಾನ್‌ವಿಲ್ಲ್ ಎಲ್ಲೂ ಸಿಕ್ಕಿಲ್ಲ, ಸಿಕ್ಕಿದರೆ ಕನ್ನಡದಲ್ಲೇ ಮಾತನಾಡುವ ಇರಾದೆ ಇದೆ.

***

ನನ್ನ ಸ್ನೇಹಿತರೊಬ್ಬರ ಹತ್ತಿರ ಮಾತನಾಡುತ್ತಾ ಗ್ರ್ಯಾನ್‌ವಿಲ್ಲ್ ಪ್ರಸಂಗವನ್ನು ವಿವರಿಸಿದೆ - ಅವರು ಭಾರತೀಯರು ಅನ್ನೋ ಅನುಮಾನ ಇದ್ದಿತಾದರೂ ಅವರ ಹೆಸರಿನಿಂದ ನನಗೆ ಕನ್ನಡಿಗರು ಎಂದು ಗೊತ್ತಾಗುವ ಸಾಧ್ಯತೆಗಳೇ ಇರಲಿಲ್ಲ. ಅದಕ್ಕೆ ನನ್ನ ಸ್ನೇಹಿತರು ಒಂದು ಕಾಲದಲ್ಲಿ ಮಂಗಳೂರು-ಗೋವಾ ಕಡೆಯಲ್ಲಿನ ಬ್ರಾಹ್ಮಣರು ಕ್ರಿಶ್ಚಿಯನ್ನರಾಗಿ ಪರಿವರ್ತಿತಗೊಂಡಿದ್ದೂ, ಮುಂದೆ ಟಿಪ್ಪೂಸುಲ್ತಾನನ ಕಾಲದಲ್ಲಿ ಸಾವಿರಾರು ಜನರನ್ನು ಮಂಗಳೂರಿನಿಂದ ಶ್ರೀರಂಗ ಪಟ್ಟಣದವರೆಗೆ ನಡೆಸಿ, ಸಾಕಷ್ಟು ಸಂಖ್ಯೆಯಲ್ಲಿ ಸಾವುನೋವಿಗೆ ಕಾರಣವಾಗಿದ್ದೂ ಅಲ್ಲದೆ ಸುಮಾರು ಜನರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಪರಿವರ್ತಿತರನ್ನಾಗಿ ಮಾಡಿದ್ದೂ, ಹಾಗೆ ಮಾಡಿಯೂ ಎಲ್ಲ ಕಷ್ಟಗಳಿಗೆ ಹೆದರದೆಯೂ ಕೆಚ್ಚೆದೆಯಿಂದ ಮುಂದೆ ಬಿಡುಗಡೆಯಾಗಿ ಮಂಗಳೂರಿಗೆ ಹೋದ ಕ್ರಿಶ್ಚಿಯನ್ನರಿಗೆ ಬಹಳ ಬೆಲೆ ಇದೆ, ಅವರನ್ನು ಆಯಾ ಸಮುದಾಯಗಳಲ್ಲಿ ಬಹಳ ಗೌರವಪೂರ್ವಕವಾಗಿ ನೋಡಿಕೊಳ್ಳುತ್ತಾರೆಂತಲೂ ಕಥೆಗಳನ್ನು ಹೇಳಿದರು - ಅವರು ಹಾಗೆ ಹೇಳಿದ್ದನ್ನು ನಾನು ವಿಶ್ವಾಸಪೂರ್ವಕವಾಗಿ ನಂಬುತ್ತೇನಾದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸಲಿಲ್ಲವಾದ್ದರಿಂದ 'ಕಥೆ' ಎಂದು ಕರೆಯಬೇಕಾಯಿತು.

ಇದೇ ಮಾತುಗಳ ಮಧ್ಯೆ, ಸರಸ್ವತೀ ನದಿ ಮೂಲದ ಒಂದು ಪರಂಪರೆಯ ಬಗ್ಗೆ ಮಾತು ಬಂದಿತು - ಎಷ್ಟೋ ಜನರು ಸರಸ್ವತಿ ನದಿಯು ಬತ್ತಿ ಹೋಗಿಲ್ಲ ಅಥವಾ ಅದೃಶ್ಯವಾಗಿಲ್ಲ ಎಂದು ನಂಬಿಕೊಂಡಿದ್ದಾರಂತೆ, ಅಂದರೆ ಭಗೀರಥನ ಪ್ರಯತ್ನದಲ್ಲಿ ಸ್ವೇಚ್ಛಳಾಗಿ ಹರಿಯುತ್ತಿದ್ದ ಸರಸ್ವತಿಯ ಪಾತ್ರವನ್ನು ಬದಲಿಸಿ ಗಂಗೆಯನ್ನಾಗಿ ಪರಿವರ್ತಿಸಲಾಯಿತು - ಗಂಗೆ ನಿಜವಾಗಿಯೂ ಮೂಲ ನದಿಯಲ್ಲ ಎನ್ನುವ ಮಾತೂ ಕೇಳಿಬಂತು. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಗಂಗಾವತರಣ ಮಾಡಿದ ಭಗೀರಥನ ಪ್ರಯತ್ನ ನದಿಯ ಪಾತ್ರವನ್ನು ಬದಲಿಸಿ ನೀರು ಕೊಂಡೊಯ್ದು ತನ್ನ ಪೂರ್ವಿಕರಿಗೆ ಮೋಕ್ಷ ಕೊಡಿಸುವ ಒಂದು ಯೋಜನೆಯಾಗಿ ಕಂಡುಬಂದಿತು. ಹಾಗೇ ಮಾತುಗಳು ಋಗ್ವೇದದ ಕಡೆಗೆ ಹೊರಳಿದಾಗ ನಮ್ಮ ಈಗಿನ ಗೋವಾ-ಮಂಗಳೂರು ಪ್ರಾಂತ್ಯದ ಎಷ್ಟೋ ಜನ ಕ್ರಿಶ್ಚಿಯನ್ನರು ವೇದಗಳ ಬಗ್ಗೆ ಬ್ರಾಹ್ಮಣರಿಗಿಂತ ಹೆಚ್ಚು ತಿಳಿದುಕೊಂಡಿರುವ ಪ್ರಸ್ತಾವವೂ ಬಂತು - ಆಗಿನ ಕಾಲದಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನದಲ್ಲಿದ್ದ ಬ್ರಾಹ್ಮಣರನ್ನು ಮತಾಂತರಗೊಳಿಸಲು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರಲ್ಲಿ ಮಹಾ ಪೈಪೋಟಿ ಇದ್ದಿರಬಹುದು, ಏಕೆಂದರೆ ಬ್ರಾಹ್ಮಣರನ್ನು ಒಲಿಸಿಕೊಂಡರೆ ಉಳಿದ ವರ್ಗದವರನ್ನು ಒಲಿಸಿಕೊಳ್ಳುವುದು ಸುಲಭ ಎಂಬುದು ಅಂದಿನ ಆಲೋಚನೆ ಇದ್ದಿರಬಹುದು.

ಈ ಎರಡು ವಾರಗಳಲ್ಲಿ ವೇದಗಳ ಕುರಿತು ಯೋಚನೆ ಮಾಡುವಂತಹ ಹಲವಾರು ಅವಕಾಶಗಳು ಕಾಕತಾಳೀಯವೆಂಬಂತೆ 'ಗ್ರ್ಯಾನ್‌ವಿಲ್ಲ್' ಪ್ರಸಂಗದ ಜೊತೆಗೆ ಥಳುಕು ಹಾಕಿಕೊಂಡಿದ್ದರಿಂದ ಈ ಬರಹವನ್ನು ಬರೆಯಬೇಕಾಗಿ ಬಂತೇ ವಿನಾ ಮತ್ಯಾವುದೇ ulterior motivation ನನಲ್ಲಿಲ್ಲ.

***

ನಾನು ಗ್ರ್ಯಾನ್‌ವಿಲ್ಲ್ ಜೊತೆಯಲ್ಲಿ ಮತ್ತಿನ್ನೆಲ್ಲಾದರೂ ಬಿಡುವಿನಲ್ಲಿ ಸಿಕ್ಕರೆ ಮಾತನಾಡುತ್ತೇನೆ, ಅವರ ಬಗ್ಗೆ ಗೆರೆಯನ್ನು ದಾಟದೇ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟನ್ನು ತಿಳಿದುಕೊಳ್ಳುತ್ತೇನೆ, ಅವರು ಮಾತಿಗೆ ತೊಡಗುತ್ತಾರೆಂದರೆ ಮಾತಿಗೆ ಇಳಿಯಲು ನನಗೇನು ಹೆದರಿಕೆ? ಗ್ರ್ಯಾನ್‌ವಿಲ್ ಹೆಸರೋ, ಅವರು ಹಾಕಿಕೊಂಡ ಬಟ್ಟೆಯೋ, ಮಾತನಾಡುವ ವಿಧಿಯೋ, ಅಥವಾ ಮತ್ತಿನ್ಯಾವುದೋ ನನಗೆ ಅವರನ್ನು ಭಾರತೀಯರು ಎಂದು ನೋಡಿದ ಕೂಡಲೇ ಕಂಡು ಹಿಡಿಯದಂತೆ ಮಾಡಿದ್ದು ಸತ್ಯ, ಆದರೆ ಅದರ ಹಿಂದೆಯೇ ನಾನೂ ಕೂಡ ಅವರಂತೆಯೇ ಎಲ್ಲಿ ಬದಲಾಗಿಬಿಟ್ಟಿದ್ದೇನೋ ಎಂದು ಭಯವಾಗುತ್ತದೆ, ಇಲ್ಲವೆಂದಾದರೆ Are you from India? ಎಂದು ನನ್ನನ್ನೇಕೆ ಅವರು ಕೇಳುತ್ತಿದ್ದರು?

Monday, May 22, 2006

ನ್ಯೂ ಯಾರ್ಕ್ ನಗರದ ಕೆಲವು ನೆನಪುಗಳು





ಇತ್ತೀಚೆಗೆ ನ್ಯೂ ಯಾರ್ಕ್ ನಗರದಿಂದ ಹೊರವಲಯಕ್ಕೆ ನಮ್ಮ ಅಫೀಸು ಸ್ಥಳಾಂತರವಾಯಿತು. ೨೦೦೩ ರಿಂದ ೨೦೦೬ ರ ಏಪ್ರಿಲ್‌ವರೆಗೆ ನ್ಯೂ ಯಾರ್ಕ್ ನಗರದಲ್ಲಿ ಕೆಲಸ ಮಾಡಿ ಛಳಿ, ಮಳೆ, ಹಿಮ, ಹಾಗೂ ಬಿಸಿಲಿನಲ್ಲಿ ಈ ಮಹಾನಗರಿ ಹಲವು ರೀತಿಯಲ್ಲಿ ಕಂಡಿದೆ, ಹಾಗೆ ಕಂಡು ಬಂದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದರೆ ಹೇಗೆ ಎನಿಸಿತು.

***

ನಾನು ಇಲ್ಲಿಗೆ ಬರುವ ಮುನ್ನ ಬಾಂಬೆಯಲ್ಲಿ ಮೂರ್ನಾಲ್ಕು ತಿಂಗಳು ಇದ್ದವನು, ಅಲ್ಲಿಯ ಜನಸಂದಣಿ, ವ್ಯಸ್ತ ಜೀವನ, ಆಧುನಿಕತೆ ಇವುಗಳಿಗೆಲ್ಲ ಆಗಲೇ ಪರಿಚಯವಾಗಿ 'ಓಹ್' ಎನ್ನುವಂತಾಗಿತ್ತು. ಆದರೂ ಬಾಂಬೆ ಮಹಾನಗರಿಯಷ್ಟು ನಿಗೂಢವಾಗಿ ನನಗೆ ನ್ಯೂ ಯಾರ್ಕ್ ಎಂದಿಗೂ ಕಂಡದ್ದಿಲ್ಲ. ಅಲ್ಲಿಯ ಚರ್ಚ್ ಗೇಟ್, ಬೀಚು ಏರಿಯಾಗಳಲ್ಲಿ ತಿರುಗಾಡಿ ಸ್ನೇಹಿತರೊಡನೆ ಹರಟೆ ಹೊಡೆದಿದ್ದಿದೆ, ಚಿತ್ತಾಲರು ಇದನ್ನೇ ನೋಡಿ ಬರೆದಿದ್ದೇನೋ ಎಂದು ಹಲವು ಪ್ರತಿಮೆಗಳನ್ನು ಊಹಿಸಿಕೊಂಡಿದ್ದಿದೆ, ಆಗಿನ ನೂರು-ನೂರೈವತ್ತು ರೂಪಾಯಿ ಕೊಟ್ಟು ಒಂದು ಸಿನಿಮಾ ನೋಡುವ ಗತ್ತೂ, ಇಪ್ಪತ್ತೈದು ರೂಪಾಯಿ ಕೊಟ್ಟು ಒಂದು ಪ್ಲೇಟು ಇಡ್ಲಿ ತಿನ್ನುವ ಗಮ್ಮತ್ತೂ ಈ ನ್ಯೂ ಯಾರ್ಕ್ ನಗರದಲ್ಲಿ ನನಗೆಂದೂ ಬಂದಿದ್ದಿಲ್ಲ. ಆದರೆ, ನ್ಯೂ ಯಾರ್ಕ್ ನಗರ ತನ್ನದೇ ಆದ ವಿಶೇಷ ರೀತಿಯಲ್ಲಿ ನಾನು ಇನ್ನೆಂದೂ ಮರೆಯಲಾರದಂತೆ ನನ್ನ ಮನಸ್ಸಿನಲ್ಲಿ ಛಾಪು ಒತ್ತಿ ಬಿಟ್ಟಿದೆ - ಹೇಳಿಕೊಳ್ಳುವಂತಹ ಯಾವ ಒಳ್ಳೆಯ ಹಾಗೂ ಕೆಟ್ಟ ಅನುಭವಗಳು ಇಲ್ಲದಿದ್ದರೂ, ನನ್ನ ಇಂದಿನ ಪ್ರಬುದ್ಧತೆಯಲ್ಲಿ ಈ ಮಹಾನಗರಿಯಿಂದ ಕಲಿತದ್ದು ಬಹಳ.



ನನ್ನ ಸ್ನೇಹಿತ ಗಾರ್‌ಫೀಲ್ಡ್ ನ್ಯೂ ಯಾರ್ಕ್ ನಗರವನ್ನು ಹಗಲೂ ಮತ್ತು ರಾತ್ರೆಯೂ ಕಂಡವನು, ಅವನು ಹೇಳೋ ಪ್ರಕಾರ 'ಮಧ್ಯ ರಾತ್ರಿಯಿಂದ ಮುಂಜಾನೆ ವರೆಗೆ ಈ ನಗರ ಹಲವಾರು ಟ್ರಾನ್ಸ್‌ಫರ್ಮೇಷನ್ ಗೊಳಪಡುತ್ತೆ' ಎನ್ನುವುದನ್ನು ಹಲವಾರು ಸ್ವಾರಸ್ಯಕರವಾದ ನಿದರ್ಶನಗಳ ಮೂಲಕ ನನ್ನಲ್ಲಿ ಹಂಚಿಕೊಂಡಿದ್ದಾನೆ, ಆತನಿಗೆ ನಮ್ಮ ಕಂಪನಿಯಲ್ಲಿ ಕೆಲವು ವರ್ಷಗಳ ಹಿಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ಅವನು 'ರಾತ್ರಿ ಬೇರೆ ಮುಖವನ್ನು ಹೊತ್ತುಕೊಳ್ಳುವ' ನಾನು ಕಾಣದ ನ್ಯೂ ಯಾರ್ಕ್ ನಗರವನ್ನು ಕಂಡಿದ್ದಾನೆ. ಅವನ ಜೊತೆಯಲ್ಲಿ ಕಾರಿನಲ್ಲಿ ಕುಳಿತು ಎಷ್ಟೋ ಬಾರಿ ಆಫೀಸಿಗೆ ಹೋಗಿ ಬಂದ ಸಂದರ್ಭಗಳಲ್ಲಿ 'ನಿನಗೆ ಗೊತ್ತೇ, ನಾವು ಈ ದೊಡ್ಡ ನಗರದಲ್ಲಿ ಸಣ್ಣ ಧೂಳಿನ ಕಣಕ್ಕಿಂತಲೂ ಚಿಕ್ಕವರು!' ಎಂದು ಈ ನಗರದಲ್ಲಿ ಬೆಳೆದು ಶಾಲೆಗೆ ಹೋಗಿ ಮುಂದೆ ಇಲ್ಲೇ ಕೆಲಸಕ್ಕೆ ಸೇರಿಕೊಂಡರೂ ಈಗಷ್ಟೇ ನ್ಯೂ ಯಾರ್ಕಿಗೆ ಬಂದವನೇನೋ ಎಂಬಂತೆ - ಮೋಡವಿರದ ರಾತ್ರಿಯಲ್ಲಿ ಮೇಲೆ ಕಾಣುವ ನಕ್ಷತ್ರಗಳನ್ನು ಅಣಗಿಸುವಂತೆ ಅಲ್ಲಲ್ಲಿ ಕಾಣುವ ಪ್ರಜ್ವಲಿಸುವ ನಿಯಾನ್ ದೀಪಗಳನ್ನೂ, ಹುಚ್ಚಿಯಂತೆ ಸದಾ ತಲೆಯನ್ನು ಕೆದರಿಕೊಂಡೇ ಇರುವ ಟೈಮ್ಸ್ ಸ್ಕ್ವಯರನ್ನೂ ಕಂಡು ಸಂತಸಪಡುತ್ತಾನೆ.


ನ್ಯೂ ಯಾರ್ಕ್ ನಗರದಲ್ಲಿ ಈಗಿರುವ ಬಿಲ್ಡಿಂಗುಗಳಲ್ಲಿ ಅತಿ ಎತ್ತರವಾದದ್ದು ಎಂಪೈರ್ ಸ್ಟೇಟ್ ಬಿಲ್ಡಿಂಗ್, ನಮ್ಮ ಆಫೀಸಿನಲ್ಲಿ ಮೂವತ್ತ ಮೂರನೇ ಫ್ಲೋರಿನಲ್ಲಿರುವ ಕ್ಯಾಫೆಟೇರಿಯಾದಿಂದ ಈ ಕಟ್ಟಡದ ಅತ್ಯಂತ ಸುಂದರವಾದ ಚಿತ್ರ ಸಿಗುತ್ತದೆ, ನಾನು ಪ್ರತೀ ಸಾರಿ ಟ್ರೈನ್ ನಿಲ್ದಾಣದಿಂದ ಹೊರಕ್ಕೆ ಬಂದವನೇ ಈ ಕಟ್ಟಡವನ್ನು ತಲೆ ಎತ್ತಿ ನೋಡುತ್ತೇನೆ, ಅದು ತನ್ನದೇ ಆದ ಗಂಭೀರತೆಯಲ್ಲಿ ತನ್ನ ಮೈ ಮೇಲೆ ಬಿದ್ದ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವುದರ ಮೂಲಕ ಇಂದಿನ ಹವಾಮಾನ ಮುನ್ಸೂಚನೆಯನ್ನು ಸೂಕ್ಷ್ಮವಾಗಿ ನೀಡಿದರೂ ಅವರವರ ಭಾವಕ್ಕೆ ತಕ್ಕಂತೆ ಒಂದಲ್ಲ ಒಂದು ರೀತಿಯ ಅರ್ಥಗಳಿಗೆ - ಕೆಲವೊಮ್ಮೆ ಸರಳವಾಗಿಯೂ ಹಾಗೂ ಅಷ್ಟೇ ನಿಗೂಢವಾಗಿಯೂ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಹೆರಾಲ್ಡ್ ಸ್ಕ್ವಯರ್‌ನ ಸುತ್ತಮುತ್ತಲೂ ಎಷ್ಟು ಹೊತ್ತಿಗೆ ಹೋದರೂ ಒಬ್ಬರಲ್ಲ ಒಬ್ಬರು ಈ ಕಟ್ಟಡದ ಫೋಟೋ ತೆಗೆಯುತ್ತಿರುತ್ತಾರೆ, ಇಂಥಹ ಕಟ್ಟಡದ ದಿವ್ಯ ನಿಲುವು ನೋಡುಗರ ಕಣ್ಣುಗಳಲ್ಲಿ ಪ್ರತಿಫಲಿಸಿ, ಅವರ ಅರಳುವ ಮುಖಗಳನ್ನು ಕಾಣುವ ನನ್ನ ಭಾಗ್ಯ ಇನ್ನಿಲ್ಲವಲ್ಲಾ ಎಂದು ಎಷ್ಟೋ ಸಾರಿ ಬೇಸರವಾಗಿದೆ. ಒಂದೆರಡು ತಿಂಗಳುಗಳ ಹಿಂದೆ ಕ್ಯಾಫೆಟೇರಿಯಾವನ್ನು ಇನ್ನೇನು ಮುಚ್ಚಿ ಬಿಡುತ್ತಾರೆ ಎಂದು ನಾವೆಲ್ಲರೂ ಕಾಫಿ ಕುಡಿಯುತ್ತಾ ಕುಳಿತಿದ್ದೆವು, ಎಲ್ಲರೂ ಅವರವರಿಗೆ ಬೇಕಾದ ದಿಕ್ಕಿನಲ್ಲಿ ಕುಳಿತು ಹೊರಗಡೆ ನೋಡುತ್ತಾ ಮಾತಿಗೆ ಶುರುಮಾಡಿಕೊಂಡಿದ್ದೆವು, ನಾನು ಎಂಪೈರ್ ಸ್ಟೇಟ್ ಬಿಲ್ಡಿಂಗಿನ ಕಡೆಗೆ ನೋಡಿದೆ, ನಾನಿದ್ದ ಮೂವತ್ತ ಮೂರನೇ ಮಹಡಿಯಿಂದ ಈ ಕಟ್ಟಡವನ್ನು ನನ್ನ ಕಣ್ಣಿನ ನೇರದಲ್ಲಿ ನೋಡಿದಾಗ ನಾನು ಆ ಕಟ್ಟಡದ ಕಾಲು ಭಾಗಕ್ಕೂ ಬರುತ್ತಿರಲಿಲ್ಲ, ದಿನವೂ ರಸ್ತೆಯಲ್ಲಿ ಕಾಣುತ್ತಿದ್ದ ಆ ನೋಟಕ್ಕೂ, ಮೂವತ್ತ ಮೂರನೇ ಮಹಡಿಯ ಈ ನೋಟಕ್ಕೂ ಬಹಳ ವ್ಯತ್ಯಾಸವಿತ್ತು, ನನ್ನ ಜೊತೆಯವರಿಗೆಲ್ಲ ತೋರಿಸಿದೆ, ಅವರೆಲ್ಲರೂ ಹೌದುಹೌದೆಂದರು. ಅಲ್ಲದೇ ಐದು ಅಥವಾ ಆರನೇ ಅವೆನ್ಯೂಗಳ ಆಜೂಬಾಜಿನಲ್ಲಿ ನಿಂತು ನೋಡಿದರೆ ಈ ಕಟ್ಟಡ ಅತಿ ಎತ್ತರವಾದದ್ದು ಎಂದು ಅನ್ನಿಸುವುದೇ ಇಲ್ಲ - ಅಂದರೆ ನಮ್ಮ ನಡುವಿನಲ್ಲಿದ್ದ ಎತ್ತರವಾದದ್ದನ್ನು ನಾವು ಕಂಡು ಅನುಭವಿಸುವಾಗ ಒಂದೇ ಅದರಿಂದ ಕೊಂಚ ದೂರವಿದ್ದೋ, ಇಲ್ಲಾ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಏರಿಯೋ ನೋಡಿದರೆ ಅಷ್ಟು ಒಳ್ಳೆಯದು ಎಂದುಕೊಂಡೆ.

***



ನಮ್ಮ ಊರಿನಲ್ಲಿ ದೇವಸ್ಥಾನಕ್ಕೆ ಹೂವು ಕೊಟ್ಟು ಬರುತ್ತಿರುವಾಗಲೋ, ಬಾವಿಗೆ ಹೋಗಿ ನೀರು ತರುತ್ತಿರುವಾಗಲೋ ಹಾಡುಗಳನ್ನು ಗುನುಗಿಕೊಂಡೇ ಓಡಾಡುತ್ತಿದ್ದವನು ನಾನು. ಪ್ರತೀ ದಿನ ನ್ಯೂ ಯಾರ್ಕ್ ನಗರದಲ್ಲಿ ಆಫೀಸಿನಿಂದ ಮನೆಗೆ ಬರುವಾಗ ಹತ್ತು ನಿಮಿಷದ ಹಾದಿ ನಡೆಯುವುದಕ್ಕಿತ್ತು - ಆರನೇ ಅವೆನ್ಯೂವಿನಲ್ಲಿ ಬ್ರಯಾಂಟ್ ಪಾರ್ಕಿನ ಮುಂದೆ ೪೨ನೇ ರಸ್ತೆಯಿಂದ ಶುರುಮಾಡಿ ೩೩ರವರೆಗೆ ನಡೆಯುವ ಈ ಹಾದಿಯಲ್ಲಿ, ನನ್ನ ಸುತ್ತ ಮುತ್ತಲೂ ಸಮರೋಪಾದಿಯಲ್ಲಿ ಜನರು ನಡೆಯುತ್ತಿದ್ದರೂ, ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್‌ಗಳಿಗೆ ಕಾಯುತ್ತಾ ನಡೆಯುವವರ ಮಧ್ಯೆ ನಿಂತಿರುತ್ತಿದ್ದರೂ ಮನದಲ್ಲಿ ಸದಾ ಯಾವುದಾದರೊಂದು ಹಾಡು ಗುನುಗುತ್ತಿದ್ದೆ, ಮೂಡಿಗೆ ತಕ್ಕಂತೆ, ವಾತಾವರಣಕ್ಕೆ ತಕ್ಕಂತೆ, ಆಫೀಸು ಬಿಡುವುದಕ್ಕಿಂತ ಮುಂಚೆ ಓದಿದ ವಿಷಯಗಳು ನನ್ನ ಮೇಲೆ ಮಾಡಿದ ಪರಿಣಾಮಕ್ಕೆ ತಕ್ಕಂತೆ ಯಾವುದಾದರೊಂದು ಸಿನಿಮಾ ಹಾಡೋ, ಭಾವಗೀತೆಯೋ, ಕೆಲವು ಜನಪದಗೀತೆಗಳೋ ಮನದಲ್ಲಿ ಬಂದು, ೧೦ ಬ್ಲಾಕುಗಳನ್ನು ದಾಟುವವರೆಗೆ ಮನದಲ್ಲಿ ಮೂಡಿ ಮರೆಯಾಗುತ್ತಿದ್ದವು. ಅಪರೂಪಕ್ಕೊಮ್ಮೆ ಯಾವ ಭಾಷೆಯಲ್ಲಿನ ಹಾಡೂ ಬರದೆ ಬರೀ ಆಲಾಪನೆ ಬಂದದ್ದಿದೆ, ಕೆಲವೊಮ್ಮೆ ಯಾವ ಸದ್ದೂ ಬರದೆ 'ನಾಳೆಯ ಚಿಂತೆ' ಮುತ್ತಿಕೊಂಡಿದ್ದಿದೆ. ನಾನು ಹಾಡು ಗುನುಗಿಕೊಂಡು ಹತ್ತು ಬ್ಲಾಕುಗಳನ್ನು ಕ್ರಮಿಸುವ ದೂರದಷ್ಟು ಸಮಯ, ಸುಮಾರು ೮ ರಿಂದ ೧೦ ನಿಮಿಷಗಳ ಕಾಲ ನನ್ನದೊಂದು ಪ್ರಪಂಚವೇ ತೆರೆದುಕೊಳ್ಳುತ್ತಿತ್ತು, ಹೀಗೆ ಎಲ್ಲೇ ಹೋದರೂ ಎಲ್ಲೇ ಬಂದರೂ ನನ್ನದೊಂದು ಪ್ರಪಂಚದಲ್ಲಿ ಮುಳುಗಿಕೊಳ್ಳಲು ಹಾಡುಗಳು ನನಗೆ ನೆರವಾಗಿವೆ, ಈಗಂತೂ ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತೇನಾದ್ದರಿಂದ ಮಧ್ಯೆ-ಮಧ್ಯೆ ಟ್ರಾಫಿಕ್ಕಿನಿಂದ ತಲೆ ಚಿಟ್ಟುಹಿಡಿದರೂ ನನ್ನ ಪ್ರಪಂಚ ಸ್ವಲ್ಪ ವಿಸ್ತಾರಗೊಂಡಿದೆ - ಆದರೂ ನ್ಯೂ ಯಾರ್ಕ್ ನಗರದಲ್ಲಿ ಹಾಡನ್ನು ಗುನುಗಿಕೊಂಡು ಓಡಾಡುತ್ತಿದ್ದ ದಿನಗಳು ಇನ್ನಿಲ್ಲವಲ್ಲ ಎಂದೂ ಬೇಸರವಾಗುತ್ತದೆ. ಆದರೆ ಒಂದು ಆಶ್ಚರ್ಯವೆಂದರೆ ಹೀಗೆ ನಡೆಯುವಾಗ ಗುನುಗಿಕೊಳ್ಳುತ್ತಿದ್ದ ಹಾಡುಗಳು ನಾನು ಟ್ರೈನನ್ನು ಹತ್ತಿ ಮನೆಗೆ ಬಂದ ಮೇಲೆ ಅಷ್ಟು ಸುಲಭವಾಗಿ ನೆನಪಿಗೆ ಬರುವುದಿಲ್ಲ, ಬಂದರೂ ಅವು ಬಂದಷ್ಟು ವೇಗದಲ್ಲೇ ಹಾರಿ ಹೋಗಿ ಬಿಡುತ್ತವೆ!

***

ವರ್ಲ್ಡ್ ಟ್ರೇಡ್ ಸೆಂಟರ್ ಇದ್ದ ಜಾಗಕ್ಕೆ ಆಗಾಗ್ಗೆ ನಮ್ಮ ಮನೆಗೆ ಬಂದ ಅತಿಥಿಗಳನ್ನು ಕರೆದುಕೊಂಡು ಹೋಗುತ್ತಿರುತ್ತೇನೆ, ನಾನು ಮೊಟ್ಟ ಮೊದಲ ಸಲ ಬರಿದಾದ ಸ್ಥಳವನ್ನು ನೋಡಿದಾಗ ಒಂದು ರೀತಿಯ ಡಿಪ್ಪ್ರೆಷನ್ನಿಗೆ ಒಳಗಾಗಿದ್ದೆ, ಅಂದಿನಿಂದ ಯಾರೇ ಬಂದರೂ 'ನೀವೆ ಹೋಗಿ ನೋಡಿಕೊಂಡು ಬನ್ನಿ' ಎಂದು ನಾನು ದೂರವೇ ಉಳಿಯುತ್ತೇನೆ. ಹೋದವಾರ ಈ ಸ್ಥಳಕ್ಕೆ ಅಂಟಿಕೊಂಡೇ ಇರುವ ವೆಷ್ಟ್ ಸ್ಟ್ರೀಟ್‌ನಲ್ಲಿರುವ ನಮ್ಮ ಕಂಪನಿಯ ಮತ್ತೊಂದು ಆಫೀಸಿಗೆ ಹೋಗುವ ಅವಕಾಶ ಬಂದಿತ್ತು, ಆಗ ಬೇರೆ ಯಾವುದೇ ಮಾರ್ಗವಿರದೇ ಈಗ ಕಾಣುವ ದೊಡ್ಡ ಗುಂಡಿಯ ಹತ್ತಿರವೇ ಹೋಗಿ ಅದನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು, ನಾನು ಹತ್ತೊಂಬತ್ತನೇ ಮಹಡಿಯಿಂದ ಈ ಅವಶೇಷ, ಅಲ್ಲಿ ಮತ್ತೊಂದು ಹೊಸ ಕಟ್ಟಡವನ್ನು ಕಟ್ಟುತ್ತಿರುವುದನೆಲ್ಲಾ ನೋಡಿ, ನ್ಯೂ ಯಾರ್ಕಿನಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬನಿಗೆ 'ಇದನ್ನೆಲ್ಲ ನೋಡಿ ಏನನ್ನಿಸುತ್ತೆ' ಎಂದೆ, ಅವನು ನನ್ನ ಮಾತನ್ನು ಹೇಗೆ ಅರ್ಥ ಮಾಡಿಕೊಂಡನೋ ಏನೋ, 'ಎಲ್ಲರನ್ನೂ ಮೆಚ್ಚಿಸುತ್ತೇನೆ ಎನ್ನುವ ಪಟಾಕಿಯಲ್ಲಿ (George Pataki) ನನಗೆ ಯಾವತ್ತೂ ವಿಶ್ವಾಸವಿರಲಿಲ್ಲ, ೯/೧೧ ಆಗಿ ಐದು ವರ್ಷಗಳು ಕಳೆಯುತ್ತಾ ಬಂದಿದ್ದರೂ ಇಲ್ಲಿ ಇನ್ನೂ ಹೀಗೆ ಗುಂಡಿ ಇರುವುದು ನಮ್ಮ ದೌರ್ಭಾಗ್ಯ' ಎಂದ. ನಾನು ಅಲ್ಲಲ್ಲಿ ಓದಿ-ಕೇಳಿದಂತೆ ಈ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡ ಕಟ್ಟುವ ಪ್ರಕ್ರಿಯೆ, ಅದರ ಜೊತೆಯಲ್ಲೆ ಮೆಮೋರಿಯಲನ್ನು ಕಟ್ಟುವ ಚರ್ಚೆಗಳು ಬಹಳ ದಿನಗಳಿಂದ ಪ್ರಚಲಿತದಲ್ಲಿದ್ದು, ಯಾರಿಗೂ ತೃಪ್ತಿಯಾದಂತೆ ಕಂಡು ಬಂದಿಲ್ಲ, ಆದರೆ ಒಂದಂತೂ ಸತ್ಯ, ನ್ಯೂ ಯಾರ್ಕಿನಲ್ಲಿ ಯಾವುದಾದರೊಂದು ಇಂಥ ಪಬ್ಲಿಕ್ ಪ್ರಾಜೆಕ್ಟ್ ಮಾಡಿ ಗೆಲ್ಲುವುದಿದೆ ನೋಡಿ ಅದಕ್ಕಿಂತ ಮಹತ್ವದ ಗೆಲುವು ಮತ್ತೊಂದಿಲ್ಲ, ಏಕೆಂದರೆ ನ್ಯೂ ಯಾರ್ಕಿನವರನ್ನು ತೃಪ್ತಿ ಪಡಿಸಿದಿರೆಂದರೆ ಪ್ರಪಂಚದ ಯಾರನ್ನು ಬೇಕಾದರೂ ಸಂತೈಸಬಹುದಾದ ಶಕ್ತಿ ನಿಮ್ಮಲ್ಲಿ ತನ್ನಿಂದ ತಾನೇ ಬಂದು ಬಿಡುತ್ತದೆ.

***

ಈ ನಗರದ ಜೀವನ ಯಾಂತ್ರಿಕವಾದದ್ದು ಎಂದು ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ, ಎಲ್ಲಿ ಹೋದರೂ ಸುತ್ತಲೂ ಜನಗಳಿರುವ ನ್ಯೂ ಯಾರ್ಕ್ ನಗರ ನಾನು ಕಳೆದುಕೊಂಡ 'ಗಿಜಿಗಿಜಿ' ಪ್ರಪಂಚವನ್ನು ಆಗಾಗ್ಗೆ ನೆನಪಿಗೆ ತರುವುದೂ ಅಲ್ಲದೆ, ಇಲ್ಲಿಯ ವೈವಿಧ್ಯತೆ ನನ್ನನ್ನು 'ಅಮೇರಿಕದಲ್ಲಿ ಇಲ್ಲದಂತೆ' ಮಾಡುವಲ್ಲಿ ಸಫಲವಾಗಿದೆ.

Sunday, May 21, 2006

'ಅಲ್ಲಿ-ಇಲ್ಲಿ'ನ ಪಕ್ಷಿನೋಟ

ನನ್ನನ್ನು 'ಪಾಪಿಷ್ಟ' ಎಂದು ಕರೆದುಕೊಂಡು 'ಅನಿವಾಸಿ ಭಾರತೀಯ ಎಂಬುದಕ್ಕೆ ಸಮನಾರ್ಥಕ ಪದ' ಎಂದು ವಿವರಣೆಯನ್ನು ಪ್ರೊಫೈಲಿನಲ್ಲಿ ಕೊಟ್ಟುಕೊಂಡಿರುವುದು ನನ್ನ ಅನಿವಾಸಿತನಕ್ಕೆ ಅಪಮಾನಮಾಡುವುದಕ್ಕಂತೂ ಅಲ್ಲ. ಈ ಅನಿವಾಸಿ ಸ್ಥಿತಿಯ ಜೊತೆಯಲ್ಲಿ ಬರುವ ನೋವು-ನಲಿವುಗಳನ್ನು ಅವಲೋಕಿಸುವುದಕ್ಕಿಂತ ಮೊದಲು ಒಂದೆರಡು ಹೇಳಿಕೆಗಳನ್ನು ಘಂಟಾಘೋಷವಾಗಿ ದಾಖಲಿಸುವುದು, ಸದಾ 'ಅತ್ತಿಂದಿತ್ತ' ತೂಗುವ ನನ್ನ ಮನಸ್ಸಿಗೆ ಸಮಾಧಾನವನ್ನು ತರಬಹುದು ಎಂಬ ಆಶಯದಿಂದ. ನಾನು ಭಾರತೀಯನೂ, ಭಾವನಾಜೀವಿಯೂ ಹಾಗೂ ಭಾರವಾದ ಮನಸ್ಸುಳ್ಳವನೂ (ಹಲವಾರು ಸರಕುಗಳನ್ನು ತುಂಬಿಕೊಂಡು) ಆದ್ದರಿಂದ ಭಾರತದಲ್ಲಿ ನನ್ನ ವ್ಯಕ್ತಿತ್ವದ ಬುನಾದಿಯನ್ನು ಹಾಕಿದ ಇಪ್ಪತ್ತೈದು ವರ್ಷಗಳು, ನಾನು ಬೆಳೆದ ಪರಿಸರ, ಊರು-ಕೇರಿ-ಶಾಲೆ-ಪಡಸಾಲೆಗಳು ಸುಮ್ಮನೇ ಕೊಡವಿಕೊಂಡು ಬಿಡುವಷ್ಟು ಹಗುರವೂ ಅಲ್ಲ - ಇವುಗಳನ್ನು ನನ್ನಿಂದ ಬೇರ್ಪಡಿಸಿದರೆ ನನ್ನ ಅಸ್ತಿತ್ವದಲ್ಲಿ ಹೆಚ್ಚೇನೂ ಉಳಿಯುವುದಿಲ್ಲವಾದ್ದರಿಂದ ಒಂದಲ್ಲ ಒಂದು ರೀತಿಯಲ್ಲಿ ಇವುಗಳ ಕಡೆಗೆ ಮನಸ್ಸು ತೊನೆಯುತ್ತದೆ.

***

ಈಗ ಒಂದು ದಶಕ ಹಿಂದಕ್ಕೆ ಹೋಗಿ ನನಗೆ ಮತ್ತೆ ಅಮೇರಿಕೆಗೆ ಬಂದು ಈಗ ಬದುಕುವ ಹಾಗೆ ಮತ್ತೊಂದು ಅವಕಾಶ ಸಿಕ್ಕಿದರೆ ನಾನು ಖಂಡಿತವಾಗಿ ಅದೇ ನಿರ್ಧಾರವನ್ನು ಕೈಗೊಂಡು ಮತ್ತೆ ಇಲ್ಲಿಗೆ ಬರುತ್ತೇನೆ. ಹಾಗಿದ್ದ ಮೇಲೆ ನನ್ನ ಇಲ್ಲಿನ ಅಸ್ತಿತ್ವವನ್ನು ಖಂಡಿತವಾಗಿ ಮೆಚ್ಚುತ್ತೇನೆ: ಆದರೆ ಯುದ್ಧ, ವಿದೇಶಾಂಗ ನೀತಿಯಂತಹ ಹಲವು ದೊಡ್ಡ ವಿಷಯಗಳಲ್ಲಿ ಭಿನ್ನಾಬಿಪ್ರಾಯವಿದ್ದರೂ, ದಿನ ನಿತ್ಯದ ಒಡನಾಟ, ಆಟ-ಓಟ ಮುಂತಾದ ಅಷ್ಟೊಂದು ದೊಡ್ಡದಲ್ಲದ ವಿಷಯಗಳಲ್ಲಿ ವ್ಯತ್ಯಾಸವಿದ್ದರೂ ಇಲ್ಲಿಗೆ ಬಂದು ನೆಲೆಸಿದ ಮೇಲೆ ಆಗಿರುವ ಅನುಕೂಲಗಳು ಅನಾನುಕೂಲಗಳನ್ನು ಹೆಚ್ಚಿನ ಅನುಪಾತದಲ್ಲಿ ಗೆಲ್ಲುವುದರಿಂದ ನಾವೆಲ್ಲರೂ ಈದಿನ ಇಲ್ಲಿದ್ದೇವೆ, ಇನ್ನು ಮುಂದೆಯೂ ಹೀಗೇ ಇರುತ್ತೇವೆ. ಒಂದು ಯಾವುದೋ ಘಳಿಗೆಯಲ್ಲಿ 'ಸಾಕು' ಎನ್ನಿಸಿದಾದ ಕಿತ್ತುಕೊಂಡು ಹೋದರಾಯಿತು, ಹಾಗೆ ಎಷ್ಟೋ ಜನ ಯಾವು ಯಾವುದೋ ಹಂತದಲ್ಲಿ ಹೋಗಿದ್ದಾರೆ, ಹೋಗಬಹುದು.

ನಾನು ಬೆಂಗಳೂರಿನಲ್ಲಿದ್ದರೆ ಕನ್ನಡ ನಾಟಕಗಳನ್ನು ನೋಡುತ್ತಿದ್ದೆ, ಸಿನಿಮಾಗಳನ್ನು ನೋಡುತ್ತಿದ್ದೆ, ಕಂಡಕಂಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿದ್ದೆ, ವರ್ಷದ ಆರು ತಿಂಗಳ ಛಳಿಯಲ್ಲಿ ಕೊರಗಬೇಕಾಗುತ್ತಿರಲಿಲ್ಲ, ನನ್ನ ಸಪೋರ್ಟು ನೆಟ್‌ವರ್ಕ್‌ನ್ನು ಹಿಗ್ಗಿಸಿಕೊಳ್ಳಬಹುದಿತ್ತು, ಕಂಡಿದ್ದನ್ನೆಲ್ಲ ತಿನ್ನಬಹುದಿತ್ತು, ನನಗೆ ಬೇಕಾದ ಪರಿಸರವನ್ನು ಸೃಷ್ಟಿಸಿಕೊಳ್ಳಬಹುದಿತ್ತು, ನನ್ನದೇ ಆದ ರೀತಿಯಲ್ಲಿ ಸಮಾಜದಲ್ಲಿ ಬೆರೆಯಬಹುದಿತ್ತು, ಸಾಮಾಜಿಕವಾಗಿ-ರಾಜಕೀಯವಾಗಿ-ಸಾಂಸ್ಕೃತಿಕವಾಗಿ ನನ್ನ ಧ್ವನಿಯಲ್ಲಿ ಏರಿಳಿತವನ್ನು ಕಾಣಬಹುದಿತ್ತು, 'ಪ್ರತಿಭಾ ಪಲಾಯನ'ದ ಶಾಪದಿಂದ ಹೊರಬಂದು ನನ್ನ ಋಣವನ್ನು ತೀರಿಸಬಹುದಿತ್ತು ಎಂದೆಲ್ಲಾ ಯೋಚಿಸಿಕೊಂಡಾಗ ಯಾವುದೋ ಕರ್ಮದ ಫಲವೆಂದು ಇಲ್ಲಿಯ ನೀರು ಕುಡಿಯಬೇಕಾಗಿ ಬಂದಿದ್ದರಿಂದ 'ಪಾಪಿಷ್ಟ' ಎಂದು ನನ್ನನ್ನು ಕರೆದುಕೊಳ್ಳುವಂತಾಗುತ್ತದೆ.

ಅದೇ ಇಲ್ಲಿಗೆ ಬರದೇ ಹೋದರೆ ಲಂಚ, ಅಸತ್ಯಗಳಂತಹ ದೊಡ್ಡ ವಿಷಯಗಳನ್ನೂ, ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ, ಕೊಂಡ ಪ್ರತಿಯೊಂದು ವಸ್ತುವಿನಲ್ಲಿಯೂ ಉತ್ಕೃಷ್ಟತೆಯನ್ನು ನೋಡುವ ಮತ್ತೊಂದು ದೃಷ್ಟಿಕೋನ ಹುಟ್ಟಿಕೊಳ್ಳುತ್ತಿರಲಿಲ್ಲ, 'ಹೀಗೂ ಬದುಕಬಹುದು' ಎನ್ನಿಸುತ್ತಿರಲಿಲ್ಲ, ಸಾಮಾಜಿಕವಾಗಿ-ಆರ್ಥಿಕವಾಗಿ ಸ್ವಾಯುತ್ತತೆಯನ್ನು ಪಡೆಯಲಾಗುತ್ತಿರಲಿಲ್ಲ. ಸಾಗರದ ತಳವನ್ನು ಶೋಧಿಸಲೂ ಅದೆಷ್ಟೋ ಮೈಲು ಎತ್ತರದಲ್ಲಿ ನಭದಲ್ಲಿ ಹಾರಿಬಿಟ್ಟ ಉಪಗ್ರಹಗಳನ್ನು ಬಳಸುತ್ತಾರಂತೆ - ನನಗೆ ನಮ್ಮ ಬಗ್ಗೆ ಭಾರತದಲ್ಲಿ ಗೊತ್ತಿರದ ಎಷ್ಟೋ ವಿಷಯಗಳು ಇಲ್ಲಿಗೆ ಬಂದ ಮೇಲೇ ಗೊತ್ತಾಗಿದ್ದು.

***

ನಾನು ಪ್ರತೀವಾರವೂ ಭಾರತದಲ್ಲಿರುವ ನಮ್ಮ ಮನೆಯವರೊಡನೆ ಮಾತನಾಡುತ್ತೇನೆ, ಇಲ್ಲಿ ನನ್ನ ಮನೆಯಲ್ಲಿರುವ ಕಂಪ್ಯೂಟರುಗಳಲ್ಲಿ 'ಕನ್ನಡ ಪ್ರಭ' ಹೋಮ್ ಪೇಜ್ ಆಗಿದೆ - ಇಲ್ಲವೆಂದರೆ ರಾಜ್‌ಕುಮಾರ್ ನಮ್ಮನ್ನಗಲಿದ ಸುದ್ದಿ ನನ್ನ ಕಣ್ಣಿಗೆ ಸ್ವಲ್ಪ ತಡವಾಗಿ ಬೀಳುತ್ತಿತ್ತು. ನಾನು ಕನ್ನಡದಲ್ಲಿ ಓದುವ ವಿಷಯಗಳಲ್ಲಿ ಹೆಚ್ಚಿನವು ನಮ್ಮ ದೇಶಕ್ಕೆ ಸಂಬಂಧಿಸಿದವೇ. ಅಂತರ್ಜಾಲದಲ್ಲೂ ಸಹ ದಿನ ನಿತ್ಯದ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯ, ಸುದ್ದಿ, ವರದಿಗಳನ್ನು ಹೊರತುಪಡಿಸಿ ನಾನು ಓದುವುದೇನಿದ್ದರೂ ಕನ್ನಡದಲ್ಲಿ ಬರೆದುದ್ದನ್ನೇ. ಅಲ್ಲಿನ ಸಾಮಾಜಿಕ-ರಾಜಕೀಯ ವಿದ್ಯಮಾನಗಳಿಗೆ ಇಲ್ಲಿನವುಗಳಿಗಿಂತ ಹೆಚ್ಚಾಗಿ ಸ್ಪಂದಿಸುತ್ತೇನೆ. ಇವೆಲ್ಲ ನನ್ನ ಹೆಚ್ಚುಗಾರಿಕೆಯೇ ಎಂದು ಪ್ರಶ್ನಿಸಿಕೊಂಡರೆ 'ಇಲ್ಲ' ಎನ್ನುವ ಉತ್ತರ ಹೊರಬರುತ್ತದೆ, ಕನ್ನಡದಲ್ಲಿ ಬರೆದದ್ದನ್ನು ಓದುವುದು ಒಂದು ವೀಕ್‌ನೆಸ್ ಆಗಿ ಕಾಣುತ್ತದೆ. ಇಂಗ್ಲೀಷಿನಲ್ಲಿ ಬರೆದ ಸುಂದರಾತಿ ಸುಂದರ ಅನಾಲಿಸೀಸ್ಸುಗಳನ್ನು ಬೇಕಾದಷ್ಟು ಓದಿದ್ದೇನೆ, ತಾರಿ (ಬ್ಲಾಗು) ಗಳನ್ನು ನೋಡಿದ್ದೇನೆ ಅದರೂ ಕನ್ನಡದಲ್ಲಿ ಬರೆದುದನ್ನು ಓದಿದಾಗ, ನೋಡಿದಾಗ, ಕೇಳಿದಾಗ ಆಗುವ ಅನುಭವಕ್ಕೂ ಇತರ ಭಾಷೆಗಳಲ್ಲಿ ಅವೇ ವಸ್ತುಗಳನ್ನು ಗ್ರಹಿಸಿದಾಗ ಆಗುವ ಅನುಭವಕ್ಕೂ ವ್ಯತ್ಯಾಸವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದಲ್ಲಿ ಬರೆದದ್ದನ್ನ ಪುಟದಿಂದ ಪುಟಕ್ಕೆ ಓದಿದರೆ, ಬೇರೆ ಭಾಷೆಯಲ್ಲಿ ಬರೆದದ್ದನ್ನ ಸಾಲಿನಿಂದ ಸಾಲಿಗೆ ಓದಿಕೊಂಡು ಹೋಗುತ್ತೇನೆ - ಇವೆಲ್ಲವೂ ನನ್ನ ಮಿತಿಗಳೆಂದು ಮಾತ್ರ ಪರಿಗಣಿಸಬೇಕೇ ವಿನಾ ಎಲ್ಲಾ ಅನಿವಾಸಿಗಳೂ ಈ ರೀತಿ ಇರಲೇಬೇಕೆಂದೇನೂ ಇಲ್ಲ - ನಾನು ಭಿನ್ನನಾದುದರಿಂದಲೇ ಇಷ್ಟು ಹೊತ್ತಿಗೆ ಇದನ್ನು ಕುಟ್ಟುತಿರುವುದು, ಇಲ್ಲವೆಂದರೆ 'ಉಪಯೋಗಕ್ಕೆ ಬರುವ' ಬೇರೇನನ್ನೋ ಮಾಡಿಕೊಂಡಿರಬಹುದಿತ್ತು!

ಕೊನೇ ಪಕ್ಷ ಅಲ್ಲಿಂದ ಇಲ್ಲಿಗೆ ಬರುವಾಗ ಯಾವ ಪ್ರಬುದ್ಧತೆ, ಸ್ಪರ್ಧೆ, ಹಸಿವುಗಳಿದ್ದವೋ ಅವು ಈಗಂತೂ ಇಲ್ಲ, (ಯಾವತ್ತಾದರೂ ಒಂದು ದಿನ) ಮುಂದೆ ಇಲ್ಲಿಂದ ಗುಡಚಾಪೆ ಕಟ್ಟೋದಾದರೂ ಸ್ವಲ್ಪ ಸಮಾಧಾನವಾಗಿ ಯೋಚಿಸುವ ಮನಸ್ಸಿರುತ್ತದೆ, ನಾನೊಬ್ಬನೇ ಅಲ್ಲದೇ ಉಳಿದವರೂ, ಅವರವರ ಅಸ್ತಿತ್ವಗಳೂ ನನ್ನ ನಿರ್ಣಯದಲ್ಲಿ ಭಾಗಿಯಾಗಿರುತ್ತವೆ, ಇಲ್ಲಿಗೆ ಬರುವಾಗ ಇದ್ದ 'unknown factor' ಗಳು ಇಲ್ಲಿಂದ ಅಲ್ಲಿಗೆ ಹೋಗುವಾಗ ಕಡಿಮೆಯಾಗಿರುತ್ತವೆ. ಆದರೆ, ನನ್ನ ನೆನಪಿನಲ್ಲಿರುವ ಎಪ್ಪತ್ತರ, ಎಂಭತ್ತರ, ಅರ್ಧಭಾಗ ತೊಂಭತ್ತರ ದಶಕಗಳ ಮುಂದೆ ದೊಡ್ಡದೊಂದು ಹಳ್ಳ ಕಾಣತೊಡಗುತ್ತದೆ, ನಾನು ಇಲ್ಲಿ ಇದ್ದಷ್ಟು ವರ್ಷಗಳ ಮೇಲೆ ಆ ಹಳ್ಳದ ಆಳ-ಅಗಲಗಳು ನಿರ್ಧಾರಿತಗೊಳ್ಳಬಲ್ಲವು. ಈ ಹಳ್ಳವನ್ನು ನಾನು ಬೇರೆ ವಿಚಾರಧಾರೆಗಳಿಂದ ತುಂಬಿಕೊಂಡಿದ್ದರೂ, ಅಲ್ಲಿ ಮಹತ್ವಪೂರ್ಣ ಬದಲಾವಣೆಗಳಾದ ಹಲವು ವರ್ಷಗಳನ್ನು ಕಳೆದುಕೊಂಡಿದ್ದು ಮುಂದೆ ನಾನು ಅಲ್ಲಿ ಹೋಗಿ ಬದುಕಿದ ಮೇಲೆ ಒಂದಲ್ಲ ಒಂದು ದಿನ ಸತಾಯಿಸುತ್ತೆ ಎನ್ನುವುದು ಗ್ಯಾರಂಟಿ. ಏನಿಲ್ಲವೆಂದರೂ ಅಲ್ಲಿನ ಈಗಿನ ಬದಲಾದ ಜಗತ್ತಿಗೆ ಹೊಂದಿಕೊಳ್ಳುವುದು ಮೊದಮೊದಲು ಕಷ್ಟವಾದರೂ ನನಗಂತೂ ಅಲ್ಲಿ ಹೊಂದಿಕೊಂಡು ಬದುಕುತ್ತೇನೆ ಎನ್ನುವುದರಲ್ಲಿ ಲವಲೇಶವೂ ಸಂಶಯವಿಲ್ಲ.

***

ಹೀಗೆ - ನನ್ನ ಇಲ್ಲಿನ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತ್ತೇನೆ, ಇಲ್ಲಿ ಇರುವ ಅಗತ್ಯ, ಹಂಬಲ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಇರುತ್ತೇನೆ, ಅದು ಬದಲಾದ ಕ್ಷಣದಲ್ಲಿ ಇಲ್ಲಿಂದ ಕಂಬಿ ಕೀಳುತ್ತೇನೆ - ಆ ಕ್ಷಣ ಯಾವಾಗ ಬರಬಹುದು ಎಂಬ ಕಾತರತೆಯಿದ್ದರೂ 'ಅದು ಎಷ್ಟು ಬೇಗ ಬರುವುದೋ ಅಷ್ಟು ಒಳ್ಳೆಯದು' ಎಂದು ಪದಗಳಿಗೆ ನಿಲುಕದ ಯಾವುದೋ ಒಂದು ಧ್ವನಿ ಹೇಳುತ್ತದೆಯಾದ್ದರಿಂದ ಅಂತಹ ಘಳಿಗೆ ಆದಷ್ಟು ಬೇಗನೆ ಬರಲಿ ಎಂದು ಆರ್ತನಾಗುತ್ತೇನೆ.

ಅಂತಹ ಕ್ಷಣ ಬರುವವರೆಗೆ ವರ್ತಮಾನದಲ್ಲಿ ಬದುಕುವುದೇ ಜಾಣತನ, ಅದಕ್ಕಾಗಿಯೇ ವರ್ತಮಾನಕ್ಕೆ ಗೌರವ ಕೊಡುವ ಇಲ್ಲಿಯ ಪರಂಪರೆಯನ್ನು ಮೆಚ್ಚಿಕೊಂಡಿದ್ದು, ಅತಿಯಾಗಿ ಹಚ್ಚಿಕೊಂಡಿದ್ದು!

Saturday, May 20, 2006

ಹಲವು ಸಂದಿಗ್ಧಗಳು

'ಅಂತರಂಗ'ದಲ್ಲಿ ಹಾಗೂ-ಹೀಗೂ, ಅದೂ-ಇದನ್ನು ಬರೆದು ತುಂಬಿಸಿದ್ದಾಯಿತು, ಇವತ್ತಿಗೆ ಇದು ಐವತ್ತನೇ ಬರಹ, ಈ ಮೈಲಿಗಲ್ಲನ್ನು ತಲುಪಿದ್ದೇನೆಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವ ಮುನ್ನ ಈ ಬರಹಗಳನ್ನು ಬರೆಯುವ ಪ್ರಕ್ರಿಯೆಯಲ್ಲಿ ನನ್ನಲ್ಲಿ ಮೂಡಿದ ಹಲವು ಸಂದಿಗ್ಧಗಳಲ್ಲಿಯೂ ಓದುಗರನ್ನು ಸಹಭಾಗಿಗಳನ್ನಾಗಿ ಮಾಡಿದರೆ ಹೇಗೆ ಎಂಬ ಕುಹಕ ಮನದಲ್ಲಿ ಮೂಡಿದ್ದೇ ತಡ ಹೀಗೆ ಕುಟ್ಟಲು ಮೊದಲು ಮಾಡಿಕೊಂಡೆ.

***

'ಅಂತರಂಗ'ದ ಬರಹಗಳಿಗೆ ಕೆಲವು ಖಾಯಂ ಓದುಗರೂ, ಇನ್ನು ಕೆಲವು ವೀಕ್ಷಕರು, ಹಾಗೂ ಕೆಲವರು ಹಿತೈಷಿಗಳು ಸಮಯದಿಂದ ಸಮಯಕ್ಕೆ ಭೇಟಿಕೊಡುತ್ತಲೆ ಇದ್ದಾರೆ. ಇವರಲ್ಲಿ ಕೆಲವರು ತಮ್ಮ ನಿಜನಾಮದಲ್ಲಿ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ, ಇನ್ನು ಕೆಲವರು ಅನಾಮಿಕರಾಗಿ ಉಳಿದರು, ಮತ್ತೂ ಕೆಲವರು ತಮ್ಮ ನಿಜನಾಮದಲ್ಲಿ ಬರೀ ಇ-ಮೇಲ್‌ಗಳ ಮೂಲಕ ಮಾತ್ರ ನನಗೆ ಬರೆಯುತ್ತಾರಾದ್ದರಿಂದ ಪ್ರತಿಯೊಂದಕ್ಕೂ ಒಂದು ಸರ್ಕಲ್ ಹುಟ್ಟುವ ಹಾಗೆ ಈ ಬರಹಗಳಿಗೂ ಅದರದ್ದೆ ಆದ ಒಂದು ಬೇಸ್ ಹುಟ್ಟಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಹೆಚ್ಚುಗಾರಿಕೆಯೂ ಇಲ್ಲ.

ಆದರೆ, ನಾನು ಈ ಬರಹಗಳಿಗೆ ಎಷ್ಟು ಸಮಯವನ್ನು ವ್ಯಯಿಸುತ್ತೇನೆ, ಅವುಗಳನ್ನು ಯಾವಾಗ ಕುಟ್ಟುತ್ತೇನೆ, ಈ ಬರಹಗಳಲ್ಲಿ ಏನೇನನ್ನು ಬರೆಯಬಹುದು, ಬರೆದಿದ್ದೇನೆ, ಬರೆಯಬಲ್ಲೆ ಎಂದು ಆಲೋಚಿಸಿಕೊಂಡಂತೆಲ್ಲಾ ದೊಡ್ಡ ಕಂಪದ ಭೂಮಿಯಲ್ಲಿ ಸ್ವಲ್ಪಸ್ವಲ್ಪವೇ ಹುದುಗಿದ ಅನುಭವವಾಗತೊಡಗುತ್ತದೆ. ಸದ್ಯಕ್ಕೆ ನನ್ನ ಮುಂದಿರುವ ಸಂಕಷ್ಟಗಳು ಇವು:

೧) ನಾನು ಈವರೆಗಿನ ಬರಹಗಳಲ್ಲಿ ನನ್ನ ವೈಯುಕ್ತಿಕ ವಿಷಯಗಳನ್ನು ಪ್ರಥಮ ವ್ಯಕ್ತಿಯ ಮೂಲಕ ಸಾರ್ವಜನಿಕಗೊಳಿಸುತ್ತಿರುವುದು ಓದುಗರಲ್ಲಿ ಕೆಲವರಿಗೆ ಮೆಚ್ಚುಗೆಯಾದರೂ ನನ್ನ ಮನೆಯವರಿಗೆ (ನನ್ನ ಹೆಂಡತಿ ಹಾಗೂ ಇನ್ನು ನಾಲ್ಕು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುತ್ತಿರುವ ನನ್ನ ಅತ್ತೆಯವರಿಗೆ) ಅದು ಖಂಡಿತವಾಗಿ ಇಷ್ಟವಿಲ್ಲದ ಮಾತು. ನಾನೇನಾದರೂ ಹಾಗೆ ಬರೆಯುತ್ತಾ ಹೋದರೆ 'ಎಲ್ಲರೂ ನನ್ನ ಹಲ್ಲುಗಳನ್ನು ಎಣಿಸಿಕೊಂಡುಬಿಡುತ್ತಾರೆ' ಎಂಬುದು ಅವರ ವಾದ ಹಾಗೂ ನಮ್ಮ-ನಮ್ಮ ವಿಷಯಗಳು ನಮ್ಮಲ್ಲೇ ಇರಲಿ ಎಂಬುದು ಅವರ ತತ್ವ. ಹಾಗೇನಾದರೂ ನನಗೆ ನನ್ನ ಬಗ್ಗೆ ಬರೆಯಲೇ ಬೇಕಾಯಿತೆನ್ನಿಸಿದರೆ 'ಮೊದಲು ದೊಡ್ಡ ಮನುಷ್ಯನಾಗಿ ಐವತ್ತು ವರ್ಷ ಆದ ಮೇಲೆ ಆತ್ಮ ಚರಿತ್ರೆ ಬರೆ' ಎನ್ನುವುದು ಅವರ ಕಿವಿಮಾತು.

'ಅಂತರಂಗಿ'ಯನ್ನು ಎಷ್ಟು ಸಾಧ್ಯವೋ ಅಷ್ಟು ಗೋಪ್ಯವಾಗಿ ಇಡೋಣವೆಂದುಕೊಂಡರೆ ನನ್ನ ಬರವಣಿಗೆಯ ಶೈಲಿ, ಅದರಲ್ಲಿ ಬರುವ ವಿಷಯಗಳು ಹಾಗೂ 'ಅಂತರಂಗ' ನಿನ್ನದಾ ಎಂದು ಕೇಳಿದವರಿಗೆ ನಾನು ಸುಳ್ಳು ಹೇಳದೇ ಇದ್ದುದು ಎಲ್ಲವೂ ಸೇರಿಕೊಂಡು ಒಬ್ಬರಿಂದ ಇಬ್ಬರಿಗೆ, ಇಬ್ಬರಿಂದ ನಾಲ್ವರಿಗೆ ಗೊತ್ತಾಗಿ ಈಗ ಕೊನೇ ಪಕ್ಷ ಏನಿಲ್ಲವೆಂದರೂ ಒಂದು ಹತ್ತು-ಹದಿನೈದು ಜನರಿಗೆ ನಾನ್ಯಾರೆಂದು ಗೊತ್ತಾಗಿ ಬಿಟ್ಟಿದೆ!

೨) ಎರಡನೆಯದಾಗಿ ಆಫೀಸಿನ ಸಮಯದಲ್ಲಿ ವೈಯುಕ್ತಿಕ ಕೆಲಸಗಳನ್ನು ಮಾಡಬಾರದೆಂಬ ನನ್ನ ನಿಯಮ, ಕಂಪನಿಯ ಪಾಲಿಸಿ ಹಾಗೂ ನನಗೆ ಕೊಡುವ ಸಂಬಳಕ್ಕೆ ತಕ್ಕನಾಗಿ ದುಡಿಯಬೇಕೆಂದು ಸದಾ ಗೊಣಗುವ ಅಂತರಾತ್ಮ. ಈಗ ಉದಾಹರಣೆಗೆ (ಸುಮ್ಮನೇ ಲೆಕ್ಕಕ್ಕೆಂದು ಹೇಳುತ್ತಿದ್ದೇನೆ, ಎನ್.ಆರ್.ಐ. ಒಬ್ಬ ಇಷ್ಟು ದುಡಿಯುತ್ತಿದ್ದಾನೆಂದು ದಿಢೀರನೆ ನಿರ್ಣಯಕ್ಕೆ ಬರಬೇಡಿ) ನನ್ನ ಕೆಲಸಕ್ಕೆ ನಮ್ಮ ಕಂಪನಿಯವರು ಘಂಟೆಗೆ ಅರವತ್ತು ಡಾಲರ್‌ನ್ನು ಕೊಡುತ್ತಾರೆ ಎಂದುಕೊಳ್ಳೋಣ, ಹಾಗಿದ್ದ ಪಕ್ಷದಲ್ಲಿ ನಿಮಿಷಕ್ಕೆ ಒಂದು ಡಾಲರ್ ಆಯಿತಲ್ಲವೇ? ನಿನ್ನೆ (ಶುಕ್ರವಾರ) ನಾನು ಆಫೀಸಿನಲ್ಲಿ 'ಅಂತರಂಗ'ದ ಸಲುವಾಗಿ, ಅದರಲ್ಲಿ ಬರೆದಿರುವ ಕಾಮೆಂಟನ್ನು ಓದುವುದಕ್ಕೆ, ಅದಕ್ಕೆ ಉತ್ತರಕೊಡುವುದಕ್ಕೆ, ಅಲ್ಲಿ ಬಳಸಿದ ವಿಷಯ ವಸ್ತುಗಳ ಕುರಿತು ಚಾಟ್ ಮಾಡುವುದಕ್ಕೆ ಏನಿಲ್ಲವೆಂದರೂ ಒಂದು ಘಂಟೆಯನ್ನಾದರೂ ವ್ಯಯಿಸಿದ್ದೇನೆ. ದಿನದಲ್ಲಿ ಎಂಟು ಘಂಟೆ ಕೆಲಸ ಮಾಡಬೇಕಾದ ಅಗತ್ಯವಿರುವ ನನಗೆ ನಾನು ಕೊನೇಪಕ್ಷ ಏನಿಲ್ಲವೆಂದರೂ (ಮಧ್ಯಾಹ್ನ ಊಟ, ಇತರ ಬ್ರೇಕ್‌ಗಳನ್ನೂ ಸೇರಿ) ಕೊನೇ ಪಕ್ಷ ಹತ್ತು ಘಂಟೆಗಳಾದರೂ ಕೆಲಸ ಮಾಡುತ್ತೇನೆ. ಆದರೂ ಸಹ, ಕಂಪನಿಯ ಸಂಪನ್ಮೂಲಗಳನ್ನು ವ್ಯವಹಾರಕ್ಕೆ ಸಂಬಂಧಿಸದ ಕಾರ್ಯಗಳಲ್ಲಿ ಬಳಸುವುದು ತಪ್ಪು ಹಾಗು ಅದು ನೀತಿ, ನಿಯಮಗಳಿಗೆ ವಿರುದ್ಧವಾದುದು ಎಂದು ನನಗೆ ಚೆನ್ನಾಗಿ ಗೊತ್ತಿರುವುದರಿಂದ ಇಲ್ಲಿ ಸಂದಿಗ್ಧ ಹುಟ್ಟುತ್ತದೆ.

ಅಲ್ಲದೇ ಪ್ರತೀ ಪೋಸ್ಟ್ ಹಾಗೂ ಅದರ ಫಾಲ್ಲೋ ಅಪ್ ಎಲ್ಲವೂ ಸೇರಿ ದಿನಕ್ಕೆ ಒಂದೆರಡು ಘಂಟೆ ವ್ಯಯಿಸುವ ನಾನು, (ಬೇರೆ ಯಾರೂ ಹಾಗೆ ಮಾಡುತ್ತಿಲ್ಲವಾದ್ದರಿಂದ, ಅಥವಾ ಹಾಗೆ ಮಾಡುವವರು ಕಡಿಮೆ ಇರುವುದರಿಂದ), ಮನೆ, ಮಕ್ಕಳು, ಸಂಸಾರ, ಕೆಲಸ, ಕಮ್ಮ್ಯೂಟು ಇವುಗಳು ಬೇಡುವ ಅಟೆನ್ಷನ್ ಕೊಟ್ಟು ನ್ಯಾಯ ಒದಗಿಸಬಲ್ಲೆನೇ? ಹಾಗೆ ಮಾಡಿದರೂ ಮುಂದಿನ ವಾರ ನಮ್ಮ ಅತ್ತೆಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಉಪವಾಸವಂತೂ ಕೂರಲು ಸಾಧ್ಯವಿಲ್ಲ, ಅಡುಗೆ ಯಾವಾಗ ಮಾಡುವುದು, ಊಟ ಯಾವಾಗ ಮಾಡುವುದು, ನಿದ್ರೆ ಯಾವಾಗ ಮಾಡುವುದು, ಒಂದೋ ಎರಡೋ...

ಅನಿವಾಸಿಗಳ ಸಂಕಷ್ಟ ಭಾರತದಲ್ಲಿ ಕುಳಿತವರಿಗೋ, ಭಾರತದಿಂದ ಆರು ತಿಂಗಳ ಪ್ರವಾಸೀ ವೀಸಾದಲ್ಲಿ ಬರುವಂತಹವರಿಗೋ ಗೊತ್ತಾಗೋಲ್ಲ, ಸುಮ್ಮನೇ ಅವರಿಗನ್ನಿಸಿದ್ದನ್ನು ಗೊಣಗುತ್ತಾರಷ್ಟೇ - ನನ್ನ ಅತ್ತೆಯವರು ನಮ್ಮ ಬಗ್ಗೆ ಮರುಕಪಡುತ್ತಾರೆ, ಇಲ್ಲಿ ಬಂದು ನಮ್ಮನ್ನು 'ನೋಡಿದ' ಮೇಲೆ ನೀವು 'ಹೀಗೆ' ಬದುಕುತ್ತಿದ್ದೀರಿ ಎಂದು ಗೊತ್ತಿರಲಿಲ್ಲ ಎನ್ನುತ್ತಾರೆ. ಅವರು ನನ್ನ ತರಹ ಪುಸ್ತಕ ಬರೆಯೋದಿಲ್ಲವಾದರೂ ಇದ್ದದ್ದನ್ನ ಇದ್ದ ಹಾಗೇ ಹೇಳುವ ಕರುಣಾಮಯಿ!

೩) ಹೀಗೇ ನನ್ನ ಹಳವಂಡವನ್ನೆಲ್ಲ ಕೆದಕಿ ಆನವಟ್ಟಿಯಿಂದ ಇಲ್ಲಿಯವರೆಗೆ ಬರೆಯುತ್ತಾ ಹೋದರೆ ಸುಮಾರು ಐನೂರು ಪೋಸ್ಟ್‌ಗಳನ್ನು ಬರೆಯುವಷ್ಟು ಸರಕು ನನ್ನಲ್ಲಿದೆ - ಕೆಲವು ಕೆಟ್ಟವು, ಕೆಲವು ಒಳ್ಳೆಯವು, ಎಲ್ಲಾ ಥರದ ಅನುಭವಗಳನ್ನೂ ಹೀಗೆ ಬರೆಯಬಹುದು. ಆದರೆ ಹೀಗೆ ಬರೆಯುವುದರ ಗುರಿ ಏನು, ಯಾವ 'ಗುಡ್ಡಾ ಕಡಿಯೋದಕ್ಕೆ' ಹೀಗೆ ಬರೆಯಬೇಕು? ಒಂದು ಕಥೆಯನ್ನೋ ಕಾದಂಬರಿಯನ್ನೂ ವಿಮರ್ಶಿಸಿ ಬರೆದರೆ ಅದು ಒಂದು ಥರಾ, ಒಂದು ನನ್ನದೇ ಆದ ಕಥೆಯನ್ನೋ ಕಾವ್ಯವನ್ನೋ ಪ್ರಕಟಿಸಿದರೆ ಇನ್ನೊಂದು ಥರಾ, ಇಲ್ಲಾ ಹಾಸ್ಯದ ಶೈಲಿಯಲ್ಲಿ ಬರೆದು ಕೊನೆಗೆ ಏನೋ ಒಂದು ಸಂದೇಶವನ್ನು ಸಾರಿದರೆ ಮತ್ತೊಂದು ಥರಾ - ಚೂರುಪಾರು ಬರೆದಿದ್ದನ್ನೂ 'ಸಗಣೀ ತಿನ್ನೋರಿಗೆ ಮೀಸೆ ತಿಕ್ಕೋರ್ ಹದಿನಾರ್ ಜನ' ಅನ್ನೋ ಹಾಗೆ - ಬರೆದಿದ್ದನ್ನೆಲ್ಲ ಈ ಅಳಲು, ವಿಸ್ಮಯ, ನೋಟ, ವೈಯುಕ್ತಿಕ ಇತ್ಯಾದಿ ಮಣ್ಣೂ-ಮಸಿಗಳೆಂದು ವರ್ಗೀಕರಣ ಮಾಡಿ ತೆರೆದಿಟ್ಟದ್ದನ್ನ ಕೇಳುವವರು ‍ಯಾರು, ಹೇಳುವವರು ‍ಯಾರು? ಅಲ್ಲದೆ ನನ್ನಲ್ಲಿ ಹಳವಂಡ ಅಡಗಿದೆಯೆಂದಾಕ್ಷಣ ಪೂರ್ಣವಾಗಿ ಎಲ್ಲವನ್ನೂ ಬರೆಯಲು ಸಾಧ್ಯವಿದೆ ಎಂಬ ಮಾತು ಅಷ್ಟೊಂದು ನಿಜವಾದುದಲ್ಲ - ನನಗೆ ಬರೆಯಲು ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರೇರಣೆ ಸಿಗುತ್ತದೆ - ನನಗೆ ಬೇಕಾದ ಆತ್ಮೀಯರಲ್ಲಿ ಒಂದೇ ದೂರವಾಣಿಯ ಮೂಲಕವೋ ಇಲ್ಲಾ ಮುಖತಃ ಭೇಟಿಯಲ್ಲೋ ಮಾತನಾಡಿ ವಿಚಾರ ವಿನಿಮಯ ಮಾಡಿಕೊಳ್ಳುವುದು, ನಾನು ಎಲ್ಲಾದರೂ ಪ್ರಯಾಣ ಮಾಡುವುದು, ಹಾಗೂ ಪುಸ್ತಕಗಳಲ್ಲೋ, ಅಂತರ್ಜಾಲದಲ್ಲೋ ಯಾವುದಾದರೊಂದು ವಿಷಯ, ವಸ್ತುವನ್ನು ಓದುವುದು. ನನ್ನೊಳಗಿನ ಹಳವಂಡಗಳಿಗೆ ರೂಪಕೊಡುವಂತೆ ಬರೆಯುವ ಒಂದೊಂದು ಸಾಲಿಗೂ ಕನಿಷ್ಟ ಹತ್ತು ಸಾಲುಗಳನ್ನಾದರೂ ಓದಬೇಕು, ಹತ್ತು ಪಟ್ಟು ಮಾತನಾಡಬೇಕು ಇಲ್ಲಾ ಹತ್ತು ಪಟ್ಟು ತಿರುಗಾಡಬೇಕು, ಇವೆಲ್ಲವೂ ಎಲ್ಲಿ ಸಾಧ್ಯ?

***

ಸಾಧ್ಯವಾದಾಗ ಬರೆಯಬೇಕು ಎನ್ನುವುದಾಗಲೀ, ಎಷ್ಟು ಸಾಧ್ಯವೋ ಅಷ್ಟನ್ನು ಬರೆದು ಬದುಕುತ್ತಿರುವವರೆಲ್ಲರೂ ಬುದ್ಧಿವಂತರು. ಆದರೆ ನನಗೆ ಬರೆಯುವ ಚಟ ಬೆಳೆಯದೇ ಹೋದರೆ ನಾನು ಮತ್ತೆಂದೂ ಬರೆಯುವವನಲ್ಲ. ನಮ್ಮ ನಡುವೆ ಒಳ್ಳೆಯ ಪ್ರಕ್ರಿಯೆಗಳಿಗೆ ಕುಮ್ಮಕ್ಕು ಸಿಗುವುದಕ್ಕಿಂತಲೂ 'ಸೊಫಾಕ್ಕೆ ಅಂಟಿಕೊಂಡೇ ಇಡೀ ಸಂಜೆಯನ್ನು ಕಳೆಯುವ' ಪರಿಣಾಮ, ಅವಕಾಶಗಳೇ ಹೆಚ್ಚು. ಈ ನಿಟ್ಟಿನಲ್ಲಿ ಕೊನೇ ಪಕ್ಷ ದಿನಕ್ಕೊಂದಿಷ್ಟಾದರೂ ನಿಗದಿತ ಸಮಯದಲ್ಲಿ ಕೆಲವು ಸಾಲುಗಳನ್ನು ಗೀಚದಿದ್ದರೆ ಅದು ಒಂದು ಹವ್ಯಾಸವಾಗುವುದಾದರೂ ಹೇಗೆ? ಇನ್ನು ವಾರಕ್ಕೊಮ್ಮೆ ಬರೆಯಬಹುದಲ್ಲವೇ ಎಂಬ ಮಾತಿಗೆ ಅಮೇರಿಕದಲ್ಲಿ ಈಗಾಗಲೇ ಎಲ್ಲವೂ 'ವಾರಮಯ'ವಾಗಿರುವಾಗ ನನ್ನ ಬದುಕು-ಬರವಣಿಗೆಯಾದರೂ ವರ್ತಮಾನವೆಂಬ ಹೀಗೆ ಬಂದು ಹಾಗೆ ಹೋಗುವ ಜೀವವುಳ್ಳ ಸರಕಾಗಲೀ ಎಂದುಕೊಂಡೆ, ಬರೆಯಲು-ಓದಲು ಬೇಕಾದಷ್ಟಿರುವಾಗ ವಾರಕ್ಕೊಮ್ಮೆಯ ಸ್ಪಂದನ ಎಲ್ಲಿಯ ಲೆಕ್ಕ? ಆದರೆ... ಪ್ರಸಕ್ತ ವಿದ್ಯಮಾನಗಳ ಮೇಲಾಗಲೀ, ರಾಜಕೀಯ ಸ್ಥಿತಿಗತಿಗಳ ಕುರಿತಾಗಲೀ, ವ್ಯಾಪಾರ-ವಾಣಿಜ್ಯ-ವಿದ್ಯಮಾನಗಳ ಕುರಿತೋ ಬರೆದರೆ ಅದರಿಂದ ಲೋಕಕಲ್ಯಾಣವಾಗದಿದ್ದರೂ ಲೋಕದಲ್ಲಿರುವವರನ್ನು ನೇರವಾಗಿ ತಟ್ಟಬಹುದಾಗಿತ್ತು, ಇನ್ನು ಆಗುವಾಗ ಅನುಭವಿಸುವಾಗ ತಾಜಾ ಕಬ್ಬಿನಹಾಲಿನಂತಿದ್ದು ಮುಂದೆ ಕೊಳೆತು ಹುಳಿಹೆಂಡವಾದ ನನ್ನ ಸರಕುಗಳನ್ನು ಎಷ್ಟು ಜನರಿಗೆ ಹೇಗೆ ಉಣಬಡಿಸುವುದು ಅದರಿಂದ ಏನಾದೀತು ಎನ್ನುವ ಪ್ರಶ್ನೆಯೂ ಅಲ್ಲಲ್ಲಿ ಬಂದಿದೆ. ಸರೀ, ಈ ಬ್ಲಾಗುಗಳಲ್ಲಿ (ಬ್ಲಾಗಿಗೆ 'ತಾರಿ' ಎಂದು ನಾನೊಂದು ಹೊಸಪದವನ್ನು ಪರಿಚಯಿಸಿದರೆ ಹೇಗೆ? ತಾಣದಲ್ಲಿ ಬರೆದ ದಿನಚರಿ - ಎಂಬುದರ ಮೊದಲ ಹಾಗು ಕೊನೆಯ ಅಕ್ಷರ - ತಾರಿ), ಅಲ್ಲ ತಾರಿಗಳಲ್ಲಿ ಯಾರು ಯಾರು ಏನೇನು ಬರೆದಿದ್ದಾರೆ ಎಂದು ನೋಡಿಕೊಂಡು ಬಂದೆ, ಕನ್ನಡ-ಇಂಗ್ಲೀಷು ಭಾಷೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಓದಿದವನಿಗೆ ಕೆಲವರು ಇದ್ದದ್ದನ್ನು ತಮ್ಮ ನಿಲುವಿನಲ್ಲಿ ಬರೆದಂತೆಯೂ, ಇನ್ನು ಕೆಲವರು ಇದ್ದದ್ದನ್ನು ತಿರುಚಿ ಬರೆದಂತೆಯೂ, ಮತ್ತೆ ಕೆಲವರು ಶುದ್ಧ ಮನೋರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಸೂಕ್ಷ್ಮವಾಗಿ ನೋಡಿದಾಗ 'ಸುತ್ತಿ ಹೊಡೆದವರಂತೆ' ಕಂಡು ಬಂದರು. ಇದ್ದದ್ದನ್ನ ಇದ್ದಹಾಗೇ ಬರೆಯುವ (ಕೊನೇಪಕ್ಷ ಆ ಉದ್ದೇಶವನ್ನು ಹೊಂದಿರುವ) ಹಲವಾರು ಮಾಧ್ಯಮಗಳಿರುವಾಗ, ತಮ್ಮ-ತಮ್ಮ ನಿಲುವುಗಳನ್ನು ತಮಗೆ ತೋಚಿದ ರೀತಿಯಲ್ಲಿ ಹೇಳುವ ಘಟಾನುಘಟಿಗಳಿರುವಾಗ, ಹಾಸ್ಯ-ಮನೋರಂಜನೆಗೆ ಪ್ರತಿಭಾವಂತ ದಿಗ್ಗಜರಿರುವಾಗ ಇವರೆಲ್ಲರ ನಡುವೆ ನನ್ನ ಹಳವಂಡದ ಬರಹಗಳು ಎಷ್ಟರ ಮಟ್ಟಿಗೆ ಎಲ್ಲಿ ಸಲ್ಲುತ್ತವೆ ಎಂದು ಒಮ್ಮೆ ಅವಲೋಕಿಸಬೇಕಾಗಿ ಬಂದಿತು - ಅದರ ಫಲಿತಾಂಶ ದಿಗಿಲನ್ನೂ ಹುಟ್ಟಿಸಿತು!

***

ಹೀಗೆ ಸಂದಿಗ್ಧಗಳ ಬಗೆಗೆ ಬರೆದರೆ ಅದೇ ಒಂದು ಬರಹವಾಯಿತು, ನೋಡು ನೋಡುತ್ತಿದ್ದಂತೇ ಪುಟ ತುಂಬಿತು. ನನ್ನ ಹಿಂದಿನ ಪೋಸ್ಟ್‌ಗಳಲ್ಲಿ ಹೇಳುವುದನ್ನೂ ಇನ್ನೂ ಮುಗಿಸದೇ 'ಭಾಗ-೧' ಎಂದು ಶೀರ್ಷಿಕೆಯಲ್ಲೇ ತೋರಿಸುವ ನೀಚ ಹಾಗೂ ಭಂಡತನಕ್ಕೆ ಇಳಿದುಬಿಟ್ಟಿದ್ದೇನೆ ಎನ್ನಿಸುತ್ತದೆ. 'ಅಂತರಂಗ'ವನ್ನು ಓದಿದವರು after all, 'ಅಂತರಂಗಿ' ಯಾವೊಬ್ಬ ದೊಡ್ಡ ಮಹಾತ್ಮನೂ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನೇ ಹೀಗೆ ಬರೆಯುತ್ತಾನಲ್ಲ, ತಾನೊಬ್ಬನೇ ಬದುಕನ್ನು ಅನುಭವಿಸಿದ ಹಾಗೆ ಆಡುತ್ತಾನಲ್ಲ, ಅಬ್ಬಾ ಇವನ ಸೊಕ್ಕೇ!' ಎಂದು ನನಗೆ ಹಿಡಿಶಾಪವನ್ನು ಹಾಕುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ.

'ವಾರಕ್ಕೆ ಮೂರು ಬಾರಿಯಾದರೂ ಜಿಮ್‌ಗೆ ಹೋಗಿ' ಎನ್ನುವ ನನ್ನ ಡಾಕ್ಟರರ ಧ್ವನಿಯೂ, 'ಇವೆಲ್ಲಾ ಬರೆಯೋದರಿಂದ ಏನೂ ಪ್ರಯೋಜನ ಇಲ್ಲಾರೀ...' ಎನ್ನುವ ನಮ್ಮ ಅತ್ತೆಯವರ ಮಾತೂ, ಆಫೀಸಿನ ಸಂಪನ್ಮೂಲಗಳನ್ನು ವೈಯುಕ್ತಿಕ ಪ್ರಯೋಜನಕ್ಕೆ ಬಳಸಬಾರದೆಂಬ ನನ್ನ ನೀತಿಯೂ, ನನ್ನ ಬರಹಗಳಿಗೆ ಉತ್ತರಕೊಟ್ಟ, ಪ್ರೈವೇಟ್ ಆಗಿ ಇ-ಮೇಲ್ ಮಾಡಿದ ವರ್ಚುವಲ್ ಪ್ರಪಂಚದ ಮುಖಗಳೂ ನನ್ನನ್ನು ಸುತ್ತುವರಿಯತೊಡಗುತ್ತವೆ. ಸ್ವಾಗತ ದಲ್ಲಿ ಬರೆದಂತೆ ಡಜನ್‌ಗಟ್ಟಲೆ ವಿಷಯಗಳು ಮುತ್ತಿ ನನ್ನ ಸುತ್ತಲೂ ನರ್ತನವಾಡತೊಡಗುತ್ತವೆ, ಇಷ್ಟು ದಿನ ಹತ್ತಿರದಿಂದ ಕೇಳಿ ಬರುತ್ತಿದ್ದ 'ನೋಡೋಣ ಇದು ಎಲ್ಲೀವರೆಗೆ ಬರುತ್ತೋ ಅಂತ' ಎನ್ನುವ ಧ್ವನಿ ಈಗ ಅದೆಲ್ಲೋ ದೂರದಿಂದ ಕೇಳಿಬರುತ್ತಿರುವಂತೆ ಕ್ಷೀಣವಾಗುತ್ತದೆ - ನನ್ನೊಳಗಿನ ನಾನನ್ನು ಇನ್ನೂ ಸಂಪೂರ್ಣವಾಗಿ ಬಿಚ್ಚಿಕೊಂಡೇ ಇಲ್ಲ, ಆಗಲೇ ಬಾಗಿಲುಗಳು ಮುಚ್ಚಿಕೊಂಡಂತೆ ಅನ್ನಿಸಿ, ನನಗೇನಾದರೂ 'ಖಾಯಿಲೆ' ಬಂದು ಬಿಟ್ಟಿದೆಯೇ ಎಂದು ಒಮ್ಮೆಲೇ ಭಯವಾಗತೊಡಗುತ್ತದೆ.

Friday, May 19, 2006

ಅವಕಾಶವಾದಿ ಹಾಡುಹಗಲೇ ಸಿಕ್ಕಿಬಿದ್ದ ಘಳಿಗೆ

ನಿಮಗೆ ಗೊತ್ತಿಲ್ಲದಿರಬಹುದು, ೧೯೯೫ ರಲ್ಲಿ ಟೆಕ್ನಾಲಜಿ ಬ್ಯಾಂಡ್ ವ್ಯಾಗನ್‌ನ್ನು ಹತ್ತಲು ನಮ್ಮಲ್ಲಿ ಇದ್ದ ಪೈಪೋಟಿ ಹಾಗೂ ಹುರುಪು. ಆಗ ಸಿಕ್ಕ ಅವಕಾಶಗಳು ವಿಪುಲವಾಗಿದ್ದರೂ ಸರಿಯಾದ ನಿರ್ಣಯವನ್ನು ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳದವರು ಕೊನೆಗೆ ಒಂದಲ್ಲ ಒಂದು ರೀತಿಯಲ್ಲಿ ಬೆಲೆತೆತ್ತರು. ಆಗ ಬೆಳಿಗ್ಗೆಗೊಂದು, ಸಂಜೆಗೊಂದು ಎಂದು ವಿಶ್ವ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಕೆಲಸಗಳೂ, ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂದು ಯೋಚಿಸಲು ವ್ಯವಧಾನವೂ ಇಲ್ಲದ ನಮ್ಮ ಪರಿಸ್ಥಿತಿ ಒಂದು ಸೀಜನ್‌ನಲ್ಲಿ ನೀರಿನಿಂದ ಮೇಲೆ ಹಾರುವ ಸ್ಯಾಲ್ಮನ್‌ನ್ನು ಹಿಡಿಯುವ ಕರಡಿಗಳಂತಾಗಿತ್ತು.

***

ಮದ್ರಾಸಿನ ಪೆಂಟಾಫೋರ್‌ ಮೊಟ್ಟ ಮೊದಲ ಬಾರಿಗೆ ತರಬೇತಿಯನ್ನೂ, ಕೆಲಸವನ್ನೂ ಕೊಟ್ಟು ನನ್ನ ಜೀವವನ್ನು ಉಳಿಸಿದ ಕಂಪನಿಯದು. ನಾನು ಕೈಯಲ್ಲಿದ್ದ ಕಾಸನ್ನೂ ಖರ್ಚು ಮಾಡಿಕೊಂಡು ಇನ್ನೆಲ್ಲೂ ಕೆಲಸವು ಸಿಗದೇ ಹೋದರೆ ಎಲ್ಲಾದರೂ ಹಗ್ಗ ಹುಡುಕುವ ಸ್ಥಿತಿಯಲ್ಲಿದ್ದಾಗ ಕೊನೆಗೂ ಬಹಳ ನಿರೀಕ್ಷೆಯಂತೆ ಸಿಕ್ಕಿದ ಕೆಲಸ ಬದುಕುವ ಉತ್ಸಾಹವನ್ನು ಮರಳಿಸಿತ್ತು. ಆದರೆ ನನ್ನ ಜೊತೆಯವರಿಗೆಲ್ಲ ಕೆಲಸದ ಆರ್ಡರು ಇಂದು ಸಿಕ್ಕಿದರೆ ನನಗೆ ಸಿಕ್ಕಿದ್ದು ಒಂದು ವಾರದ ನಂತರವೇ...ಎಲ್ಲಿ ಹೋದರೂ ಪ್ರತಿಯೊಂದನ್ನೂ ಹೋರಾಡಿಯೇ ಪಡೆಯಬೇಕೆಂಬ ವಿಧಿ ನನ್ನನ್ನು ಇಲ್ಲಿಯೂ ಬಿಡಲಿಲ್ಲ. ನಾನು ಮದ್ರಾಸಿನಲ್ಲಿ ಕೋರ್ಸುಗಳನ್ನು ಮುಗಿಸಿಕೊಂಡು ಒಂದು ವಾರದ ರಜೆಯ ಮಟ್ಟಿಗೆ ಊರಿಗೆ ಹೋಗಿ ಬರೋಣವೆಂದುಕೊಂಡರೆ ಆಗಿದ್ದೇ ಬೇರೆ - ನನ್ನ ಸಂದರ್ಶನವು ತುಂಬಾ ಚೆನ್ನಾಗಿ ಆಗಿತ್ತು, ಇನ್ನೇನು ಕೆಲಸವೂ ಸಿಗುತ್ತದೆ ಎಂಬ ಸಂತೋಷದಲ್ಲಿ ನಾನು ನನ್ನ ಸರಕು ಸಾಮಾನುಗಳನ್ನೆಲ್ಲ ಯಾರದೋ ಕೋಣೆಯಲ್ಲಿಟ್ಟು ಊರಿಗೆ ಹೋಗಿಬರೋಣವೆಂದುಕೊಂಡೆ, ಆದರೆ ಕೆಲಸದ ಆರ್ಡರುಗಳನ್ನು ಇವರು ಕೊರಿಯರ್‌ನಲ್ಲಿ ಕಳಿಸುತ್ತಾರೆಂದು ಯಾರಿಗೆ ಗೊತ್ತಿತ್ತು, ನಾನು ಎಷ್ಟು ಕಾದರೂ ಬರಲೇ ಇಲ್ಲ. ಒಂದು ದಿನ ಬಹಳ ನಿರಾಶೆಯಿಂದ ಇನ್ನೇನು ಕೆಲಸ ಸಿಗಲೇ ಇಲ್ಲವೆಂದುಕೊಂಡು ಸತ್ತಮುಖವನ್ನು ಹೊತ್ತುಕೊಂಡು ಕೇಳಂಬಾಕ್ಕಂನ ಸಾಫ್ಟ್‌ವೇರ್ ಪಾರ್ಕಿಗೆ ಬಂದೆ, ನನ್ನ ಬ್ಯಾಚಿನವರೆಲ್ಲ ಆಗಲೇ ಕೆಲಸಕ್ಕೆ ಸೇರಿಕೊಂಡು ಒಂದು ವಾರವಾಗಿತ್ತು, ಅವರೆಲ್ಲ ಕಂಠ ಕೌಪೀನವನ್ನು (ಟೈ) ಕಟ್ಟಿಕೊಂಡು ಉತ್ಸಾಹದ ಬುಗ್ಗೆಗಳಾಗಿ ಪುಟಿಯುತ್ತಿದ್ದರು, ನಾನು ಯಾವುದೋ ಟಿ ಶರ್ಟೊಂದನ್ನು ಸಿಗಿಸಿಕೊಂಡು ಹೋದವನಿಗೆ ಬೆಳಗ್ಗೆ ಹನ್ನೊಂದು ಘಂಟೆಗೆ ಕಾಫೀ ಬ್ರೇಕ್‌ನಲ್ಲಿದ್ದ ನನ್ನ ಜೊತೆಯವರೆಲ್ಲ ಸಿಕ್ಕು ಕರುಳು ಕಿವುಚಿಕೊಂಡ ಹಾಗಾಯಿತು. 'ಏನೋ, ನಿನಗಿನ್ನೂ ಕೆಲ್ಸಾ ಸಿಗ್ಲಿಲ್ವಾ?' ಎಂದು ಕಿರಣನೋ ಸತ್ಯಬಾಬೂನೋ ಕೇಳಿದ ನೆನಪು, ಅವರೆಲ್ಲ ಕಾಫೀಗೆ ಕರೆದ್ರೂ ನಾನು ಹೋಗಲಿಲ್ಲ. ನಾನು ಮ್ಯಾನೇಜರ್ ಅರುಳಕುಮಾರನ್ ಕಂಡು ಮಾತಾಡಿಹೋಗಬೇಕೆಂದು ಬಂದವನು, ಅಷ್ಟು ಮಾಡಿದ್ದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದೆ.

ಕೊನೆಗೂ ಅರುಳಕುಮಾರನ ದರ್ಶನವಾಯಿತು, 'ನೋಡಿ, ನಿಮ್ಮಲ್ಲಿ ನನ್ನದೊಂದೇ ಪ್ರಶ್ನೆ ಇದೆ, ನೇರವಾಗಿ ಹೇಳಿಬಿಡಿ, ನನಗೆ ಇಲ್ಲಿ ಕೆಲಸ ಸಿಗುತ್ತದೆಯೋ ಇಲ್ಲವೋ' ಎಂದು ಪ್ರಶ್ನೆ ಕೇಳಿದೆನೋ ಅಥವಾ ಮೈಯನ್ನು ಹಿಡಿಯಷ್ಟು ಮಾಡಿಕೊಂಡೆನೋ ಯಾರಿಗೆ ಗೊತ್ತು, ನನ್ನ ಪ್ರಶ್ನೆಗೆ ಉತ್ತರವಾಗಿ ಅರುಳಕುಮಾರನ್ ನಕ್ಕು ಬಿಟ್ಟರು, 'ಆಗಲೇ ಆರ್ಡರ್ ಕಳಿಸಿದ್ದೇವಲ್ಲ, ಇನ್ನೂ ಸಿಕ್ಕಿಲ್ಲವೇ!' ಎಂದರು, ನನಗೆ ಹೋದ ಜೀವ ಬಂದಂತಾಯಿತು, 'ಹೋಗಿ, ಕೋಡಂ‌ಬಾಕ್ಕಂ ಆಫೀಸಿನಲ್ಲಿ ಕೇಳಿ ನೋಡಿ, ಯಾವ ಅಡ್ರಸ್ಸಿಗೆ ಕಳಿಸಿದ್ದಾರೋ...' ಎಂದುದೇ ತಡ, ನನಗೆ ಮನೋವೇಗದಲ್ಲಿ ಕೇಳಂಬಾಕ್ಕಂನಿಂದ ಕೋಡಂಬಾಕ್ಕಂಗೆ ಹೋಗಬೇಕೆನ್ನಿಸಿದರೂ, ಸುಮಾರು ಇಪ್ಪತ್ತು ಮೈಲಿ ಇದ್ದ ಆ ದೂರವನ್ನು ಕ್ರಮಿಸಲು ಎರಡು ಘಂಟೆಗಳೇ ಬೇಕಾದವು.

ಮಧ್ಯಾಹ್ನ ಒಂದೂವರೆಯ ಹೊತ್ತಿಗೆ ಕೋಡಂಬಾಕ್ಕಂ ಆಫೀಸಿಗೆ ಬಂದು ಏರ್‌ಕಂಡೀಷನ್ಡ್ ರಿಸೆಪ್ಶನಿಷ್ಟ್ ಕೊಠಡಿಯಲ್ಲಿ ಒಂದು ನಿಮಿಷ ತಲೆಯನ್ನು ತಣ್ಣಗಾಗಿಸಿಕೊಂಡು ಹೇಮಾ ಗಣೇಶನ್ ಎನ್ನುವವರ ಹತ್ತಿರ ಹೋಗಿ ನನಗಿನ್ನೂ ಕೆಲಸದ ಆರ್ಡರ್ ಸಿಕ್ಕಿಲ್ಲ ಎಂದು ತೋಡಿಕೊಂಡೆ, ಆಕೆ ಅಲ್ಲಿಯೇ ಹತ್ತಿರದಲ್ಲಿದ್ದ ಕೊರಿಯರ್ ಅಂಗಡಿಯಲ್ಲಿ ವಿಚಾರಿಸಿ ಎಂದು ವಿಳಾಸಕೊಟ್ಟರು. ಅಲ್ಲಿಯೇ ಹತ್ತಿರವಿದ್ದ ಅಂಗಡಿಗೆ ಲಗುಬಗೆಯಿಂದ ನಡೆದರೆ ಅಲ್ಲಿನ ಕ್ಲರ್ಕುಗಳಿಗೆ ನಾನು ಯಾವ ಭಾಷೆಯಲ್ಲಿ ಹೇಳಲಿ, ನನಗೆ ತಮಿಳು ಬಾರದು, ಅವರಿಗೆ ಬೇರೆಯೇನೂ ತಿಳಿಯದು...ಕೊನೆಗೆ ಇದ್ದವರಲ್ಲೇ ನನ್ನ ಮಾತನ್ನು ಲಕ್ಷ್ಯ ಕೊಟ್ಟು ಕೇಳುತ್ತಿದ್ದ ಮತಿವಣ್ಣನ್‌ಗೆ ಸ್ವಲ್ಪ ಸ್ವಲ್ಪ ಇಂಗ್ಲೀಷಿನಲ್ಲೇ ನಿಧಾನವಾಗಿ ಬರೆದು ವಿವರಿಸಿದಾಗ 'ಓ, ಅದಾ...ಗಾಜಿಯಾಬಾದಿಗೆ ಹೋಗಿ ಬಿಟ್ಟಿದೆ!' ಎಂದು ಬಿಟ್ಟ. ಎತ್ತಣ ಆನವಟ್ಟಿ, ಎತ್ತಣ ಗಾಜಿಯಾಬಾದ್? ನಾನು ಉತ್ತರಪ್ರದೇಶದ ಬನಾರಸ್‌ನಲ್ಲೇನೋ ಇದ್ದವನು, ಆದರೆ ಗಾಜಿಯಾಬಾದಿಗೂ ನನಗೂ ಸಂಬಂಧವಿಲ್ಲವೆಂದುಕೊಂಡು ಮುಖ ಸಣ್ಣಗೆ ಮಾಡಿಕೊಂಡಾಗ, ಮತಿವಣ್ಣನು 'ಫೋನ್ ಮಾಡಿ ಕೇಳುತ್ತೇನೆ...' ಎಂದು ಹೇಳಿಬಿಟ್ಟ. ನಾನು ಏನಾದರೂ ಇನ್‌ಫರ್‌ಮೇಷನ್ ಸಿಕ್ಕಿದರೆ ಹೇಮಾಗಣೇಶನ್‌ಗೆ ಹೇಳು ಎಂದು ಆಕೆಯ ನಂಬರ್ ಕೊಟ್ಟು ಪುನಃ ಹೆಡ್ ಆಫೀಸಿಗೆ ಬಂದೆ. ಒಳಗಿನ ಎ.ಸಿ. ಗಾಳಿಗೂ ನನ್ನ ಮನಸ್ಸನ್ನು ತಣ್ಣಗೆ ಮಾಡಲಾಗಲಿಲ್ಲ, ಭಾಷೆ ಬರದ, ಇತರರ ಬವಣೆಯನ್ನು ಕೇಳಲು ಪುರುಸೊತ್ತಿರದ ಯಾರಿಗೂ ನನ್ನ ಕಷ್ಟವನ್ನೂ ಹೇಳಿಕೊಳ್ಳಲಿಲ್ಲ, ಕೋಡಂಬಾಕ್ಕಂ ಆಫೀಸಿನ ಪಕ್ಕದಲ್ಲಿದ್ದ ಥಿಯೇಟರ್‌ನಲ್ಲಿ ಪ್ರದರ್ಶನಕ್ಕಿದ್ದ 'ಟಾಟ್ಟಾ ಬಿರ್ಲಾ' ಚಿತ್ರದ ಮಾರ್ನಿಂಗ್ ಶೋ ಮುಗಿದು ಚಿತ್ರ ಮಂದಿರದ ಮುಂದಿದ್ದ ರಸ್ತೆ ಸ್ವಲ್ಪ ಹೊತ್ತು ಜಾತ್ರೆಯ ಸಂಭ್ರಮವನ್ನುಭವಿಸಿ ಮತ್ತೆ ಖಾಲಿಯಾಯಿತು, ನಾನು ಹೊರಗಡೆಯೇ ಸುಮ್ಮನೇ ನಿಂತು, ಕೂತು, ಸ್ವಲ್ಪ ಹೊತ್ತು ಟೈಂ ಪಾಸು ಮಾಡಲು ನೋಡಿದೆ, ವಾಚಿನಲ್ಲಿದ್ದ ಸೆಕೆಂಡ್ ಮುಳ್ಳು ಎಂದಿಗಿಂತಲೂ ನಿಧಾನವಾಗಿ ಚಲಿಸುವಂತೆ ಕಂಡು ಬಂದಿತು.

ಮಧ್ಯಾಹ್ನ ಎರಡೂವರೆ ಆಗುತ್ತಲೇ ರಿಯಾಲಿಟಿ ಕಿಕ್ ಕೊಡತೊಡಗಿತು, ಬೆಳಿಗ್ಗೆ ಶಾಸ್ತ್ರಕ್ಕೆ ತಿಂಡಿ ತಿಂದಂತೆ ಮಾಡಿ ಕೇಳಂಬಾಕ್ಕಂಗೆ ಓಡಿದವನು ಎರಡೂವರೆವರೆಗೆ ಒಂದು ತೊಟ್ಟು ನೀರನ್ನೂ ಬಾಯಲ್ಲಿಟ್ಟಿರಲಿಲ್ಲ, ಇನ್ನು ರಾತ್ರಿ ಇಲ್ಲೆ ಉಳಿಯಬೇಕೆಂದರೇ ಒಂದೇ ಕೇಳಂಬಾಕ್ಕಂಗೆ ಹೋಗಿ ಅಲ್ಲಿ ಈಗಾಗಲೇ ಕೆಲಸಕ್ಕೆ ಸೇರಿರುವ ಯಾರದ್ದಾದರೂ ಜೊತೆಯಲ್ಲಿ ಅತಿಥಿಯಾಗಿ ನೆಲದ ಮೇಲೆ ಮುದುರಿಕೊಳ್ಳಬೇಕು ಇಲ್ಲಾ ಮದ್ರಾಸು ನಗರದ ಹೊರ ಪ್ರಾಂತ್ಯದಲ್ಲಿರುವ ಪುಳಿಚೆಲ್ಲೂರಿನಲ್ಲಿರುವ ನನ್ನ ಸ್ನೇಹಿತ ಪ್ರಕಾಶನ ಮನೆಗೆ ಹೋಗಬೇಕು, ಹೊರಗಡೆ ರೂಮು ಮಾಡೋಣವೆಂದರೆ ಕೈಯಲ್ಲಿ ಹೇಳಿಕೊಳ್ಳುವಷ್ಟೇನೂ ಕಾಸಿಲ್ಲ. ಕೇಳಂಬಾಕ್ಕಂಗೆ ಅಥವಾ ಪ್ರಕಾಶನ ಮನೆಗೆ ಹೋದರೆ ಅಲ್ಲಿರುವವರಿಗೆಲ್ಲ ನನ್ನ ಕೆಲಸವಿಲ್ಲದ ಪೆಚ್ಚುಮೋರೆಯನ್ನು ತೋರಿಸಿ ಕಥೆಯನ್ನು ಹೇಳಬೇಕಾಗುತ್ತದೆ, ಹೊರಗೆ ಹೋಟೇಲಿನಲ್ಲಿದ್ದರೆ ಕೈಲಿದ್ದ ದುಡ್ಡು ಎಷ್ಟು ದಿನ ಬಂದೀತು, ಇನ್ನೇನು ಮಾಡುವುದು ಎಂದು ಕಳವಳವಾಗತೊಡಗಿತು. ಸುಮಾರು ಮೂರು ಘಂಟೆಯಾಗುತ್ತಿದ್ದಂತೆಯೇ, ಮತಿವಣ್ಣನ್ ನನ್ನನ್ನು ಹುಡುಕಿಕೊಂಡು ಓಡೋಡಿ ಬಂದ 'ಶಾರ್ (ಅವನ ಸರ್ ಉಚ್ಚಾರ), ಸಿಕ್ಕಿತು!' ಎಂದ. ಅವನ ಕೈಯಲ್ಲಿ ನನ್ನ ಕಳೆದುಹೋದ ಆರ್ಡರ್ 'ಹೇಗೆ ಸತಾಯಿಸಿದೆ!' ಎಂದು ನನ್ನನ್ನು ಅಣಕಿಸಿ ನಗುತ್ತಿತ್ತು. ಅವನ ಪ್ರಕಾರ ಆನವಟ್ಟಿಗೆ ಕಳಿಸಿದ ಕೊರಿಯರ್ ಶಿವಮೊಗ್ಗದ ವರೆಗೆ ಹೋಗಿ ಅಲ್ಲಿಂದ ಮುಂದೆ ಕೊರಿಯಲ್ ಸರ್ವೀಸ್ ಇಲ್ಲ ಎಂದು ಹಣೆಯ ಮೇಲೆ ಬರೆಸಿಕೊಂಡು ವಾಪಾಸು ಮದ್ರಾಸಿಗೆ ಬಂದು ಯಾವುದೋ ಅದೃಶ್ಯ ಶಕ್ತಿಯ ಬಲಕ್ಕೊಳಗಾಗಿ ಉತ್ತರ ಪ್ರದೇಶದ ಗಾಜಿಯಾಬಾದಿಗೆ ಹೋಗಿ ಅಲ್ಲಿ ಪುನಃ ಡೆಲಿವರಿಯಾಗದೇ ಮತ್ತೆ ಮದ್ರಾಸಿಗೆ ಬಂದು ಮತಿವಣ್ಣನ ಕೈಗೆ ಸಿಕ್ಕಿತ್ತು, ನಾನು ವಿಳಾಸವನ್ನು ನೋಡಿದೆ ಎಲ್ಲವೂ ಸರಿಯಾಗೇ ಇತ್ತು! ನಾನಂತೂ ಅವನ ಕೈಯನ್ನು ಹಿಡಿದುಕೊಂಡು ನನಗೆ ಬಂದ ಭಾಷೆಗಳಲ್ಲಿ ಥ್ಯಾಂಕ್ಯೂ ಎಂದಿದ್ದೇ ಎಂದಿದ್ದು, ಅವನಿಗೂ ಖುಷಿಯಾಗಿತ್ತು - ನನ್ನಿಂದ ಹಣವನ್ನು ನಿರೀಕ್ಷಿಸಲೂ ಇಲ್ಲ, ನಾನು ಅವೆಲ್ಲ ಫಾರ್ಮಾಲಿಟಿಗಳನ್ನು ಮೀರಿ ಜೊಳ್ಳು ಮುಖದಲ್ಲಿ ನಗೆಯನ್ನು ಸೂಸಲು ಪ್ರಯತ್ನ ಪಡುತ್ತಿದ್ದೆ. ನನ್ನ ಕೈಗೆ ಕೆಲಸದ ಆರ್ಡರ್ ಸಿಗುತ್ತಲೂ ನಾನು ಒಬ್ಬ ಅಫೀಷಿಯಲ್ ಆಗಿ ಹೋಗಿದ್ದೆ, ಕಂಪನಿಯ ಷಟಲ್, ಫೋನು ಮತ್ತಿತರ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಯಾವ ಮುಜುಗರವೂ ಇರಲಿಲ್ಲ!

***

ಹೀಗೆ ಕೆಲಸಕ್ಕೆ ಸೇರಿ ಮೂರು ನಾಲ್ಕು ತಿಂಗಳುಗಳಲ್ಲಿ ಅಟ್ಟ ಹತ್ತಿದ ಮೇಲೆ ಏಣಿಯನ್ನು ನಿರ್ಲಕ್ಷಿಸುವ ಪ್ರಕ್ರಿಯೆ ನಮ್ಮಲ್ಲಿ ಶುರುವಾಗಿತ್ತು. ಪೆಂಟಾಫೋರ್‌ನಲ್ಲಿ ಅಮೇರಿಕಕ್ಕೆ ಕಳಿಸುವುದಿಲ್ಲವೆಂತಲೂ, ಕಳಿಸಿದರೂ ಮೂರು ವರ್ಷಗಳ ಮಹಾ ಬಾಂಡೊಂದನ್ನು ಸೈನ್ ಮಾಡಬೇಕೆಂತಲೂ, ಜಪಾನು, ಥೈಲಾಂಡಿಗೆ ಹೋಗಬಹುದೆಂತಲೂ ಒಂದಿಷ್ಟು ಸುದ್ದಿಗಳು, ಒಂದಿಷ್ಟು ಗಾಳಿ ಮಾತುಗಳು ಅಲ್ಲಲ್ಲಿ ಅನುರಣಿಸತೊಡಗಿದವು. ನಾನು ನನ್ನ ಆಫೀಸಿನ ಚೀಲದಲ್ಲಿ ನನ್ನ ರೆಸ್ಯೂಮೆಯ ಹತ್ತಾರು ಪ್ರತಿಗಳನ್ನೂ, ಒಂದೈವತ್ತು ಬಿಳಿ ಲಕೋಟೆಗಳನ್ನೂ, ಹಲವಾರು ಗಾಂಧೀಮುಖವಿರುವ ಎರಡು ರೂಪಾಯಿ ಸ್ಟ್ಯಾಂಪುಗಳನ್ನು ಇಟ್ಟುಕೊಂಡು ಓಡಾಡತೊಡಗಿದೆ - ಪ್ರತೀ ದಿನ ರಾತ್ರಿ ರೆಸ್ಯೂಮೆ ತಿದ್ದುವುದು, ಪ್ರಿಂಟ್ ಹಾಕುವುದು, 'ಎಕ್ಸ್‌ಪ್ರೆಸ್ ಕಂಪ್ಯೂಟರ್' ಹಾಗೂ 'ಡೇಟಾಕ್ವೆಸ್ಟ್' ಮ್ಯಾಗಜೀನುಗಳಲ್ಲಿ ಬಂದ ಪ್ರತಿಯೊಂದು ಕೆಲಸಕ್ಕೂ ಅಪ್ಲೈ ಮಾಡತೊಡಗಿದೆ, ಅದಕ್ಕುತ್ತರವಾಗಿ ಎನ್ನುವಂತೆ ದಿನಕ್ಕೆರಡು ಪ್ರಿ ಇಂಟರ್‌ವ್ಯೂವ್ ಕರೆಗಳು ಬರತೊಡಗಿದವು - ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ ರೋಸಲಿನ್‌ಳೂ, ಫ್ರಂಟ್ ಡೆಸ್ಕ್‌ನಲ್ಲಿ ಕೆಲಸಮಾಡುತ್ತಿದ್ದ - ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ - ಮತ್ತೊಂದು ಹುಡುಗಿಯೂ ನನ್ನ ಅಗದೀ ಗೆಳೆಯರಾದರು!

ಇವಕ್ಕೆಲ್ಲ ಉತ್ತರವೆನ್ನುವಂತೆ ಒಂದು ದಿನ ಆಫೀಸಿನ ಸಮಯದಲ್ಲೇ ಹನ್ನೊಂದು ಘಂಟೆಯ ಕಾಫೀ ಬ್ರೇಕ್‌‌ನಲ್ಲಿ ಅಟ್ಲಾಂಟಾದ ಒಂದು ಕಂಪನಿ ನನ್ನನ್ನು ಇಂಟರ್‌ವ್ಯೂವ್ ಮಾಡಿತು. ರೋಸಲಿನ್‌ಳ ಕೃಪೆಯಿಂದ ನಾನು ಈ ಕಾಲೊಂದನ್ನು ಯಾರೂ ಹೆಚ್ಚು ಓಡಾಡದ ಮೂಲೆಯ ಕೊಠಡಿಯೊಂದರಲ್ಲಿ ತೆಗೆದುಕೊಳ್ಳುವಂತಾಯಿತು, ಇಂಟರ್‌ವ್ಯೂವ್ ಮಾಡಿ ನನಗೆ ಆ ಕ್ಷಣದಲ್ಲೇ ಕೆಲಸವನ್ನೂ ಆಫರ್ ಮಾಡಿ ಆರ್ಡರ್ ಕಳಿಸುತ್ತೇವೆ ಎಂದು ಬಿಟ್ಟರು, ನನಗಂತೂ ಅಮೇರಿಕೆಗೆ ಹಾರಿದಷ್ಟೇ ಸಂತೋಷವಾಯಿತು, ಆದರೆ ಆ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ.

ಆಟ್ಲಾಂಟಾ ಕಂಪನಿಯವರು ಅಪಾಯಿಂಟ್‌ಮೆಂಟ್ ಆರ್ಡರನ್ನು ಫ್ಯಾಕ್ಸ್ ಕಳಿಸುತ್ತೇವೆ ಎಂದು ಹೇಳಿದ್ದರಿಂದ (ಸದ್ಯ ಕೊರಿಯರ್ ಅಲ್ಲ), ನಾನು ಪೆಂಟಾಪೋರಿನ ಫ್ಯಾಕ್ಸ್ ನಂಬರ್‌ನ್ನು ಕೊಟ್ಟು ಭಾರತದ ಸಮಯ ಸಂಜೆ ಏಳೂವರೆಯ ಮೇಲೆ ಫ್ಯಾಕ್ಸ್ ಮಾಡಿ ಎಂದು ಹೇಳಿದ್ದರೆ, ನಾನು ಎಷ್ಟು ಕಾದರೂ ಆ ಸಂಜೆ ಫ್ಯಾಕ್ಸ್ ಬರದೇ ಹೋಯಿತು! ಹೀಗೆ ಏನಾದರೊಂದು ತೊಂದರೆಯಿಲ್ಲದಿದ್ದರೆ ಹೇಗೆ - ರಾತ್ರಿ ಬರುವ ಫ್ಯಾಕ್ಸ್ ಮುಂಜಾನೆ ಎಂಟೂವರೆಗೆ ಬಂದು ನಮ್ಮ ಎಚ್.ಆರ್. ಅಧಿಕಾರಿಗೇ ಸಿಗಬೇಕೆ? ಅಲ್ಲಿಂದ ಶುರುವಾಯಿತು ನೋಡಿ ನನ್ನ ಕಷ್ಟ - ನನಗೆ ಅಟ್ಲಾಂಟಾದಿಂದ ಕೆಲಸ ಆರ್ಡರು ಹಾಡು ಹಗಲೇ ಅಫೀಸಿಗೆ ಬರುವುದು ಎಂದರೇನು, ಅದು ಹ್ಯೂಮನ್ ರಿಸೋರ್ಸ್ ಮುಖ್ಯಸ್ಥನಿಗೆ ಸಿಗುವುದು ಎಂದರೇನು, ನನ್ನ ಬಣ್ಣವೆಲ್ಲ ಬಟಾ ಬಯಲಾಯಿತು, ಇನ್ನೇನು ನನ್ನ ಕಥೆ ಮುಗಿಯಿತು ಎಂದುಕೊಂಡೆ - ಮೊದಲೇ ನನ್ನ ಪೇಪರುಗಳನ್ನೆಲ್ಲ ಪೆಂಟಾಫೋರ್‌ನವರು ತೆಗೆದುಕೊಂಡಿದ್ದರು, ಎಲ್ಲಾದರೂ ಕಳಿಸುತ್ತೇವೆ, ಬಾಂಡಿಗೂ ಸಹಿ ಮಾಡಿರೆಂದು ಅದಕ್ಕೂ ಸಹಿ ಹಾಕಿಸಿಕೊಂಡಿದ್ದರು, ನನ್ನನ್ನು ಮೆಚ್ಚಿಕೊಂಡಿದ್ದವರೆಲ್ಲ, ತಮ್ಮ ನೋಟದಲ್ಲೇ ಚುಚ್ಚುವಂತಾದರು - ಇಷ್ಟೆಲ್ಲಾ ಆದರೂ ನನ್ನ ಹೆಸರಿಗೆ ಬಂದ ಅಪಾಯಿಂಟ್‌ಮೆಂಟ್ ಆರ್ಡರನ್ನು ನನಗೇ ಕೊಟ್ಟಿದ್ದರು, ಅದನ್ನು ತೆಗೆದುಕೊಂಡು ಏನು ಮಾಡುವುದು ಬಿಡುವುದೂ ಗೊತ್ತಾಗಲಿಲ್ಲ. ಅದರಲ್ಲಿ ಮುದ್ರಿಸಿಕೊಂಡ H1b ಹಾಗೂ $41,000 ವರ್ಷದ ಸಂಬಳ ಇನ್ನೂ ಕಣ್ಣ ಮುಂದೆಯೇ ಇದ್ದಂತಿದೆ.

***

ಪೆಂಟಾಫೋರಿನ ಮ್ಯಾನೇಜಿಂಗ್ ಡೈರೆಕ್ಟರ್ ಚಂದ್ರಶೇಖರ್ ಮಹಾ ಒಳ್ಳೆಯ ಮನುಷ್ಯ, ಆದರೆ ಕೇಳಂಬಾಕ್ಕಂನಲ್ಲಿ ಅವರ ಸೆಕ್ರೆಟರಿ ಇದ್ದಾನಲ್ಲ ಅವನು ಒಂಥರಾ ಮುಸುರಿ ಕೃಷ್ಣಮೂರ್ತಿಯ ಸ್ವಭಾವದವನು. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಚಂದ್ರಶೇಖರ್ ನಮ್ಮನ್ನು ನೋಡಿ ನಕ್ಕರೂ ಈ ಮನುಷ್ಯ ನಗುವುದಿಲ್ಲ - ಎಲ್ಲಿ ಬಾಯಿ ತುಂಬಿಕೊಂಡ ಹಲ್ಲುಗಳು ಉದುರಿಬಿಡುತ್ತವೋ ಎಂಬಂತೆ ಯಾವಾಗಲೂ ಮುಖವನ್ನು ಗಂಟು ಹಾಕೇ ಇರುತ್ತಿದ್ದ. ನಾನು ಬಹಳ ಸಮಾಲೋಚನೆ ಮಾಡಿ ಈ ಸಂಕಷ್ಟದಿಂದ ಹೊರಬರಲು ಉಪಾಯವೊಂದನ್ನು ರೂಪಿಸಿದೆ, ಅದರ ಪ್ರಕಾರ ನನ್ನ ಫ್ಯಾಕ್ಸ್‌ನಲ್ಲಿ ಬಂದಿದ್ದ ಆರ್ಡರ್‌ನ್ನು ಹಿಡಿದುಕೊಂಡು ಮಾರನೇ ದಿನವೆ ಕಂಪನಿಯ ಷಟಲ್‌ನ್ನು ಹತ್ತಿ ಕೋಡಂಬಾಕ್ಕಂ ಆಫೀಸಿಗೆ ಬಂದೆ. ಹೆಡ್ ಅಫೀಸಿನಲ್ಲಿ ಚಂದ್ರಶೇಖರ್ ಅವರ ಸೆಕ್ರೆಟರಿ ನನ್ನನ್ನು ಏನು ಮಾಡಿದರೂ ಅಪಾಯಿಂಟ್‌ಮೆಂಟ್ ಕೊಡಲೊಲ್ಲಳು - ಅವಳಿಗೆ ಕಾಲಿಗೆ ಬೀಳುವಂತೆ ಬೇಡಿಕೊಂಡರೂ ಜುಪ್ಪಯ್ಯಾ ಎನ್ನಲಿಲ್ಲ, 'ಎರಡೇ ನಿಮಿಷ ಅವರ ಹತ್ತಿರ ಮಾತನಾಡಿ ಹೊರಬರುತ್ತೇನೆ' ಎಂದು ದೈನ್ಯದಿಂದ ಕೇಳಿದರೂ ಆಕೆ ಒಪ್ಪಲೇ ಇಲ್ಲ, ಅದೇ ಸಮಯಕ್ಕೆ ಎಲ್ಲಿಗೋ ಹೊರಟುನಿಂತಂತೆ ಕಂಡು ಬಂದ ಚಂದ್ರಶೇಖರ್ ಅವರೇ ತಮ್ಮ ಆಫೀಸಿನಿಂದ ಹೊರಗೆ ಬಂದರು, ನಾನು ಸ್ಯಾಲ್ಮನ್‌ಗೆ ಕಾಯುತ್ತಿದ್ದ ಕರಡಿಯಂತೆ ಬಂದ ಅವಕಾಶವನ್ನು ಗಪ್ಪನೆ ಹಿಡಿದುಕೊಂಡು, 'ನಿಮ್ಮಲ್ಲಿ ಒಂದು ಮುಖ್ಯ ವಿಷಯವನ್ನು ಮಾತನಾಡಬೇಕು, ಒಂದು ನಿಮಿಷ ಸಮಯವಿದೇಯೇ?' ಎಂದು ಬಿಟ್ಟೆ, ಇದ್ದುದರಲ್ಲಿಯೇ ಬೆಳ್ಳಗಿದ್ದ ನನ್ನ ಬಿಳಿ ಅಂಗಿಯೋ, ಮುಖದ ಮೇಲೆ ಮನೆ ಮಾಡಿದ್ದ ಕಾತರತೆಯೋ ಮತ್ತೇನೋ ಕ್ಲಿಕ್ ಆಗಿ 'ಸರಿ' ಎಂದು ಬಿಟ್ಟರು, ನಾನು ಅವರ ಜೊತೆಯಲ್ಲಿ ಒಳಗೆ ಹೋದವನು,

'ನಿಮ್ಮಲ್ಲಿ ಮೂರು ವಿಷಯಗಳನ್ನು ಹೇಳುವುದಕ್ಕಿದೆ:
- ನನ್ನ ತಂದೆಯವರು ತೀರಿಕೊಂಡಿದ್ದಾರೆ, ನನಗೆ ಮನೆಯಲ್ಲಿ ತುಂಬಾ ಜವಾಬ್ದಾರಿಯಿದೆ
- ನನ್ನ ಕೈಯಲ್ಲಿ ಅಟ್ಲಾಂಟಾದಿಂದ ಕೆಲಸಕ್ಕೆ ಬಂದು ಸೇರಿಕೊಳ್ಳುವಂತೆ ಅಪಾಯಿಂಟ್‌ಮೆಂಟ್ ಆರ್ಡರು ಕಳಿಸಿರುವುದಿದೆ ನೀವೇ ನೋಡಿ (ಎಂದು ಮುದುರಿರುವ ಪತ್ರವನ್ನು ಅವರಿಗೆ ಕೊಟ್ಟು)
- ಕೇಳಂಬಾಕ್ಕಂನಲ್ಲಿ ನನ್ನ ಪೇಪರುಗಳನ್ನು ಕೊಡುತ್ತಿಲ್ಲ' ಎಂದೆ.

ಚಂದ್ರಶೇಖರ್ ಅವರು ಒಂದೆರಡು ಚಿಕ್ಕ ಪ್ರಶ್ನೆಗಳನ್ನು ಕೇಳಿದರೇ ಹೊರತು ಮತ್ತೆನನ್ನೂ ಮಾತನಾಡಲಿಲ್ಲ, ಆ ಅಪಾಯಿಂಟ್‌ಮೆಂಟ್ ಪತ್ರವನ್ನು ಒಮ್ಮೆ ಓದಿ, ಅದರ ಮಗ್ಗುಲನ್ನು ತಿರುಗಿಸಿ 'ಇವರ ಪೇಪರುಗಳನ್ನು ರಿಲೀಸ್ ಮಾಡಿ' ಎಂದು ಕೇಳಂಬಾಕ್ಕಂ ಕ್ಲರ್ಕಿನ ಹೆಸರಿಗೆ ಷರಾ ಬರೆದುಬಿಟ್ಟರು! ನಾನು ಮತ್ತೆ-ಮತ್ತೆ ಥ್ಯಾಂಕ್ಯೂಗಳನ್ನು ಹೇಳಿ ಅಲ್ಲಿಂದ ಹೊರಬಂದೆ. ಸೆಕ್ರೆಟರಿ 'ಏನೋ ನಡೆಯಬಾರದು ನಡೆದುಹೋಯಿತೋ' ಎನ್ನುವಂತೆ ನನ್ನ ಸಂಭ್ರಮವನ್ನು ನೋಡಿ ಕಣ್ಣನ್ನು ಕಿರಿದುಮಾಡಿಕೊಂಡಳು.

***

ಕೇಳಂಬಾಕ್ಕಂ ಷಟಲ್ ಬಸ್ಸು ಹತ್ತಿದ ನನ್ನ ಸಂತೋಷ ಹೇಳತೀರದು - ಯಾರೊಡನೆಯೂ ಈ ವಿಷಯವನ್ನು ಹೇಳದೇ ದಾರಿಯುದ್ದಕ್ಕೂ ಇಲ್ಲಿನ ಕ್ಲರ್ಕ್‌ಗೆ ಹೇಗೆ ಮಾತನಾಡಿಸಬೇಕು ಎಂದುಕೊಳ್ಳುತ್ತಲೇ ಬಂದೆ, ಚಂದ್ರಶೇಖರ್ ಅವರು ಷರಾ ಬರೆದುಕೊಟ್ಟ ಪತ್ರದ ಫೋಟೋಕಾಪಿಯೊಂದನ್ನು ತೆಗೆದು ನನ್ನ ಬಳಿ ಇಟ್ಟುಕೊಂಡು, ಬಂದು ಸ್ವಲ್ಪ ಹೊತ್ತಿನಲ್ಲಿ ಅವನ ಕಛೇರಿಗೆ ನುಗ್ಗಿ, ಒರಿಜಿನಲ್ ಅನ್ನು ಆ ಕ್ಲರ್ಕಿನ ಮುಂದೆ ತೋರಿಸಿದೆ, ಅವನು ಅದನ್ನು ಎರಡು ಮೂರು ಬಾರಿ ತಿರುತಿರುಗಿಸಿ ನೋಡಿದವನು ಮುಖದ ಬಣ್ಣವನ್ನೇ ಬದಲಾಯಿಸಿಕೊಂಡು ತೀರಾ ಸಪ್ಪಗಾಗಿ ಬಿಟ್ಟ, ಇನ್ನೂ ಹುಡುಗನಾಗಿದ್ದುದರಿಂದ ಹಾರ್ಟ್ ಅಟ್ಯಾಕ್ ಆಗಲಿಲ್ಲ (ನನ್ನ ಪುಣ್ಯ), ಸುಮಾರು ಹೊತ್ತು ಮೌನವಾಗಿ ಯೋಚಿಸಿದವನೇ ಏನೂ ಮಾತನ್ನಾಡದೇ ನನ್ನ ಪೇಪರುಗಳನ್ನೂ, ಮೊದಲೇ ಸಹಿ ಹಾಕಿಸಿಕೊಂಡ ಬಾಂಡಿನ ನಕಲನ್ನು ತಾನಿಟ್ಟುಕೊಂಡು ಒರಿಜಿನಲ್ ಅನ್ನು ನನಗೆ ಕೊಟ್ಟ. 'ಯಾರಿಗೂ ಹೇಳಬೇಡ' ಎಂದು ಹೆದರಿಕೆಯ ಎಚ್ಚರಿಕೆಯನ್ನು ನೀಡುವುದು ಮರೆಯಲಿಲ್ಲ.

ಹೀಗೆ ಮದ್ರಾಸಿನಿಂದ ಬಿಡುಗಡೆ ನೀಡಿದ ಅಟ್ಲಾಂಟ ಕಂಪನಿಯನ್ನು ನಾನು ಸೇರಿಕೊಳ್ಳಲಿಲ್ಲ, ಇನ್ನೂ ಒಂದೆರಡು ದಿನಗಳನ್ನು ಕಳೆದರೆ ಮತ್ತೇನಾದರೂ ಆಫರ್ ಬರುತ್ತವೇನೋ ಎಂದು ನಿರೀಕ್ಷಿಸುತ್ತಿದ್ದವನಿಗೆ ಬಾಂಬೆಯ ಡೇಟಾ ಮ್ಯಾಟಿಕ್ಸ್ ಕಂಪನಿಯನ್ನು ಸೇರಿ ಬಾಂಬೆಯ ಬದುಕನ್ನು ನೋಡುವಂತಾಯಿತು - ಅದರ ಬಗ್ಗೆ ಮುಂದೆಲ್ಲಾದರೂ ಬರೆಯುತ್ತೇನೆ.

***

ನನ್ನಲ್ಲಿಯ ಈ ಅವಕಾಶವಾದಿತನ, ಸುತ್ತಲನ್ನು ಸ್ವಂತದ ಉಪಯೋಗಕ್ಕೆ ಬಗ್ಗಿಸಿಬಿಡುವ ಬುದ್ಧಿ ಎಲ್ಲಿಂದ ಬಂದಿತೋ ಎಂದು ಎಷ್ಟು ತಲೆ ತುರಿಸಿಕೊಂಡರೂ ಇಂದಿಗೂ ತಿಳಿದಿಲ್ಲ - ಆದರೆ, ಇವುಗಳೆಲ್ಲದರ ಹಿಂದೆ ತಂದೆಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡಿದ್ದೂ, ಬಡತನದ ಬೇಗೆಯಲ್ಲಿ ಬೆಂದಿದ್ದೂ ಇವೆಲ್ಲವೂ ಸಾಕಷ್ಟು ಪರಿಣಾಮವನ್ನಂತೂ ಬೀರಿವೆ.

Thursday, May 18, 2006

ಬನಾರಸ್ಸಿನ ಬದುಕು - ಭಾಗ ೧

ನಮ್ಮೂರು ಆನವಟ್ಟಿಯನ್ನು ಬಿಟ್ಟರೆ, ನನಗೆ ಬದುಕಿನಲ್ಲಿ ಹಲವು ದರ್ಶನಗಳನ್ನು ಮಾಡಿಸಿದ ಊರು ಬನಾರಸ್, ಅಲ್ಲಿದ್ದದ್ದು ಕೇವಲ ಹನ್ನೆರಡೇ ತಿಂಗಳಾದರೂ ಅದು ನನ್ನ ಮಟ್ಟಿಗೆ ಬಹಳ ದೊಡ್ಡದು. ಶಿವಮೊಗ್ಗದಿಂದ ಕಣ್ಣಿನಲ್ಲಿ ಹಲವು ಆದರ್ಶಗಳನ್ನು ತುಂಬಿಕೊಂಡು ಬೆನ್ನಿನ ಮೂಟೆಯ ತುಂಬಾ ಸಂಶೋಧನೆ ನಡೆಸಬೇಕು ಎನ್ನುವ ಉತ್ಸಾಹ ಹೇರಿಕೊಂಡು ಮುಗಿಲಿಗೆ ಮುಖ ಮಾಡಿಕೊಂಡಿದ್ದ ನನ್ನನ್ನು ಭೂಮಿಗೆ ತಂದಿದ್ದೇ ಬನಾರಸ್ಸಿನ ಬದುಕು. ಅಲ್ಲಿ ಸಿಕ್ಕ ಹೊಸ ಚೇತನ, ಹುರುಪು ಹಾಗೂ ನಾನು ಬೇರೆಯವರನ್ನು ನೋಡುವ ರೀತಿ ಹಾಗೂ ನನ್ನನ್ನು ಬೇರೆಯವರು ನೋಡುವ ಬಗೆ ಎಲ್ಲವೂ ಬದಲಾದವು.

***

ನಾನು ಅಲ್ಲಿ ಮೊದಲು ಎದುರಿಸಿದ ಸಂಕಷ್ಟವೆಂದರೆ ಇರುವುದಕ್ಕೊಂದು ಹಾಸ್ಟೆಲ್ ಸೀಟನ್ನು ಪಡೆದುಕೊಳ್ಳುವುದು. ಅಲ್ಲಿ ಹಾಸ್ಟೆಲ್ ಸೀಟುಗಳನ್ನು ಎಂ. ಎಸ್ಸಿ.ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತೀರ್ಮಾನಿಸುತ್ತಿದ್ದರು. ಆದಿನ ನಾನು ನಮ್ಮ ಡಿಪಾರ್ಟ್‌ಮೆಂಟಿನಲ್ಲಿ ಪ್ರಕಟವಾದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲವಾದ್ದರಿಂದ - ಏನೋ ಕಣ್ದೋಷದಿಂದಾಗಿ ತಪ್ಪಾಗಿರಬಹುದೇನೋ ಎಂದು ಹೆಡ್‌ಕ್ಲರ್ಕ್ ತಿವಾರಿಯವರನ್ನು ಕೇಳಿದ್ದಕ್ಕೆ ಅವರನ್ನು ಕೇಳಿ ಎಂದು ಮೂಲೆಯಲ್ಲಿ ಮೂಗಿನ ಮೇಲೆ ಕನ್ನಡಕವನ್ನಿರಿಸಿ ಯಾವುದೋ ಫೈಲಿನಲ್ಲಿ ತಲ್ಲೀನರಾದ ಶ್ರೀವಾತ್ಸವನನ್ನು ತೋರಿಸಿದ್ದರು. ಶ್ರೀವಾತ್ಸವ 'ಕಾಹೋ' ಎಂದು ನನ್ನನ್ನು ನೋಡಿ, ಹಾಸ್ಟೆಲ್ ನಲ್ಲಿ ಸೀಟು ಸಿಗದ ನನ್ನ ಹೆಸರನ್ನು ಹುಡುಕತೊಡಗಿದರು, ಸ್ವಲ್ಪ ಹೊತ್ತು ಹುಡುಕಿದ ಮೇಲೆ ಅವರು ನನ್ನ ಅಂಕಗಳು ಕಡಿಮೆ ಇರುವುದರಿಂದ ನನಗೆ ಹಾಸ್ಟೆಲ್ ಸೀಟು ಸಿಕ್ಕಿಲ್ಲವೆಂದು ಹೇಳಿದರು. ನಾನು ಕುತೂಹಲಕ್ಕೆ ಯಾರು ಯಾರಿಗೆ ಸೀಟು ಎಷ್ಟು ಅಂಕಗಳಿಗೆ ಸಿಕ್ಕಿದೆ ಎಂದು ನೋಡಲು ಹೋದರೆ ಏನಾಶ್ಚರ್ಯ - ಆ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದವನೂ ಎಂಭತ್ತು ಪರ್ಸೆಂಟುಗಳಿಗಿಂತ ಹೆಚ್ಚಿಗೆ ತೆಗೆದಿದ್ದ - ಉತ್ತರ-ದಕ್ಷಿಣಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನನಗೆ ಆದ ಮೊದಲ ಪಾಠ. ನಮ್ಮ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನನ್ನ ಬ್ಯಾಚಿನಲ್ಲಿ ಮೊದಲ ರ್‍ಯಾಂಕು ೬೫ ಪರ್ಸೆಂಟಿಗೆ ಬಂದಿತ್ತು, ನನ್ನದು ಅದರಿಂದ ಕೆಲವು ಅಂಕಗಳು ಕಡಿಮೆ ಅಷ್ಟೇ. ಅಂದರೆ ಬನಾರಸ್ಸಿನ ನಿಯಮದ ಪ್ರಕಾರ ನನ್ನ ಮೈಸೂರಿನಲ್ಲಿ ಮೊದಲ ರ್‍ಯಾಂಕ್ ತೆಗೆದವರಿಗೂ ಸೀಟು ಸಿಗುವುದಿಲ್ಲ, ಇದು ಯಾವ ನ್ಯಾಯ? ಅಲ್ಲದೇ ಅಲ್ಲಿಯ ಜೋನ್‌ಪುರ, ಬಾಗಲ್‌ಪುರ ಮುಂತಾದ ಕಡೆಗಳಿಗಿಂತ ಬಂದ ವಿದ್ಯಾರ್ಥಿಗಳಿಗಿಂತಲೂ ಶಿವಮೊಗ್ಗದಿಂದ ಒಬ್ಬನೇ ಹೋದ ನನಗೆ ಹಾಸ್ಟೆಲ್ ರೂಮಿನ ಅಗತ್ಯ ಹೆಚ್ಚಿತ್ತು. ಆದರೆ ಪರಿಸ್ಥಿತಿ ಹೀಗಿರುವಾಗ ತಿವಾರಿಯಾಗಲಿ, ಶ್ರೀವಾಸ್ತವರಾಗಲೀ ಏನೂ ಮಾಡಲು ಸಾಧ್ಯವಿರಲಿಲ್ಲ.

ಸರಿ, ಕನ್ನಡ ಚಲನಚಿತ್ರಗಳಲ್ಲಿ ಹೀರೋ-ಹೀರೋಯಿನ್ ಉತ್ತರ ಭಾರತಕ್ಕೆ ಪ್ರವಾಸಕ್ಕೆ ಹೋದಾಗಲೆಲ್ಲ ಕನ್ನಡ ಮಾತನಾಡುವವರು ಸಿಗುವಂತೆ ನನಗೂ ಬನಾರಸ್ಸಿನ ಕನ್ನಡ ಪೀಠದಲ್ಲಿ ಸಂಶೋಧನೆ ಮಾಡುತ್ತಿದ್ದ ಆಯನೂರಿನ ಹತ್ತಿರದ ಮುದ್ದೇನಹಳ್ಳಿಯ ಕುಮಾರ್‌ರ ಪರಿಚಯವಾಯಿತು. ಅವರು ಕ್ಯಾಂಪಸ್ಸಿನಿಂದ ಹೊರಗೆ ಸ್ವಲ್ಪ ದೂರದಲ್ಲೇ ಒಂದು ಸಣ್ಣ ಕೊಠಡಿಯನ್ನು ಬಾಡಿಗೆಗೆ ಹಿಡಿದಿದ್ದರು, ಹಾಸ್ಟೆಲ್ ಸೀಟು ಸಿಗುವವರೆಗೆ ಅವರ ಜೊತೆಯಲ್ಲಿ ನಾನಿರಲು ಅವರು ಒಪ್ಪಿಗೆ ಕೊಟ್ಟಿದ್ದು ಎಂದೂ ಮರೆಯಲಾರದಂತಹ ಸಂಗತಿ. ಕುಮಾರ್ ಅವರ ಒಡನಾಟದಲ್ಲಿ ಇನ್ನುಳಿದ ಕನ್ನಡಿಗರ ಪರಿಚಯವೂ ಆಯಿತು, ಹಾಗೇ ಬನಾರಸ್ಸಿನ ಒಳ್ಳೆಯ-ಕೆಟ್ಟ ವಿಷಯ-ವಸ್ತುಗಳಿಗೆಲ್ಲ ಒಂದು ಕ್ರಾಷ್ ಕೋರ್ಸ್ ಸಿಕ್ಕಹಾಗಾಯಿತು.

***

ಬನಾರಸ್ಸಿನ ವಿಷಯ ಹೇಳಿ ಬಿಹಾರಿಗಳ ಬಗ್ಗೆ ಬರೆಯದಿದ್ದರೆ ರಾಮಾಯಣದಲ್ಲಿ ರಾಮನನ್ನೇ ಬಿಟ್ಟಂತೆ, ನನ್ನ ಪ್ರಕಾರ ಬಿಹಾರಿಗಳಲ್ಲಿ ಕೇವಲ ಎರಡೇ ಎರಡು ತರಹದ ಜನಗಳು - ಅವರು ಒಂದೇ ಶುದ್ಧ ಶೂನ್ಯರು ಅಥವಾ ನೂರಕ್ಕೆ ನೂರು! ನನ್ನ ಜೊತೆಯಲ್ಲಿ ಸಂಶೋಧನೆಗಳಲ್ಲಿ ತೊಡಗಿದವರೆಲ್ಲ ಮಹಾ ಬುದ್ಧಿವಂತರೆಂದೇ ಹೇಳಬೇಕು - ಬಿಹಾರಿಗಳನ್ನು ಬಡವರು ಎಂದು ತಿಳಿದುಕೊಂಡಿದ್ದರೆ ನೀವು ಅದರ ಬಗ್ಗೆ ಮತ್ತೊಮ್ಮೆ ಯೋಚಿಸಿ ಏಕೆಂದರೆ ನಾನು ನೋಡಿದ ಬಿಹಾರಿಗಳಲ್ಲಿ ಕೆಲವರು ಹೆಚ್ಚೂ ಕಡಿಮೆ ಶಿವಮೊಗ್ಗವನ್ನೇ ಖರೀದಿಮಾಡಬಲ್ಲಂತಹವರಿದ್ದರು.

ಬನಾರಸ್ಸಿನ ಮೊದಲ ಕೆಲಸದ ದಿನವೇ ಸತ್ಯದ ದರ್ಶನವಾಯಿತು - ನಮ್ಮ ಪ್ರೊಫೆಸರ್, ಯಶವಂತ ಸಿಂಗ್, ಪಾಲಿಮರ್ ಥಿಯರಿಯಲ್ಲಿ ಜಗತ್ತಿನಾದ್ಯಂತ ಹೆಸರು ಗಳಿಸಿದ ಮನುಷ್ಯ, ಕೋಟಿ ರೂಪಾಯಿಕೊಟ್ಟರೂ ಬಗ್ಗದಂತವರು - ಅವರು ನನ್ನನ್ನು ಕೋಣೆಗೆ ಕರೆದು ಹೇಳಿದರು - 'ನೋಡು, ಸಂಶೋಧನೆ ಮಾಡುವುದೂ-ಬಿಡುವುದೂ ನಿನ್ನ ಕೈಯಲ್ಲೇ ಇರೋದು, ನಿನಗೇನಾದರೂ ಐಡಿಯಾಗಳಿದ್ದರೆ ಅದಕ್ಕೆ ನಾನು ಮಾರ್ಗದರ್ಶನ ಮಾಡುತ್ತೆನೇ ವಿನಾ ನೀನು ನನ್ನ ಬಳಿ ಇದ್ದ ಮಾತ್ರಕ್ಕೆ ನಿನ್ನ ಪಿ.ಎಚ್.ಡಿ. ಆಗುತ್ತದೆ ಎಂಬ ಭ್ರಮೆಯನ್ನು ಮಾತ್ರ ಇಟ್ಟುಕೊಳ್ಳಬೇಡ!' ಆದರಲ್ಲಿ ಅವರ ತಪ್ಪೆನೂ ಇಲ್ಲ, ಅವರನ್ನು ತಪ್ಪಾಗಿ ಅರ್ಥೈಸಿಕೊಂಡ ರಾಮ್‌ಸಿಂಗ್‌ನಂಥವರಿಗೆ ಪಿ.ಎಚ್.ಡಿ. ಮುಗಿಸಲು ಸುಮಾರು ಎಂಟು ವರ್ಷದ ಮೇಲೇ ಬೇಕಾಯಿತು. ನಾನು ಕೆಲಸಕ್ಕೆ ವರದಿ ಮಾಡಿಕೊಂಡ ಮೊದಲನೇ ದಿನವೇ ಹೀಗೆ ಕೇಳಬೇಕಾಯಿತಾದ್ದರಿಂದ, ನಾನು ಆ ಕೂಡಲೇ 'ಇಲ್ಲಾ ನಾನು ವಾಪಾಸ್ಸು ಹೊರಡುತ್ತೇನೆ' ಎಂದು ಹೊರಡಲು ಸಾಧ್ಯವಿರದಿದ್ದುದರಿಂದ ಅಲ್ಲೇ ಉಳಿದು ಸಂಶೋಧನೆಯನ್ನು ಮುಂದುವರಿಸದೇ ಬೇರೆ ವಿಧಿ ಇರಲಿಲ್ಲ.

ಆದರೆ ಇದ್ಯಾವ ನ್ಯಾಯ, ನನ್ನ ಜೊತೆಯಲ್ಲಿ ಇರೋ ಸಂಶೋಧಕ ರಾಮನ್, ಪ್ರೊ. ಶ್ರೀವಾಸ್ತವ ಅವರ ಜೊತೆ ಸಂಶೋಧನೆ ಮಾಡಿದರೆ ವರ್ಷಕ್ಕೊಂದು ಪೇಪರ್ ಪಬ್ಲಿಷ್ ಮಾಡಿ ನಾಲ್ಕು ವರ್ಷಕ್ಕೆಲ್ಲ ಸಂಶೋಧನೆ ಮುಗಿಸಿ ಥೀಸೀಸ್ ಸಬ್‌ಮಿಟ್ ಮಾಡುಬಹುದಾಗಿತ್ತು, ಆದರೆ ರಾಮ್‌ಸಿಂಗ್ ಲೆಕ್ಕಕ್ಕೆ ಹೋಲಿಸಿದರೆ ನಾನು ಎಂಟು ವರ್ಷವಾದರೂ ಥೀಸೀಸ್ ಇರಲಿ ಮೂರು ಪೇಪರ್ ಅನ್ನೂ ಪಬ್ಲಿಷ್ ಮಾಡಲಾಗುವುದಿಲ್ಲವಲ್ಲಾ? ಹೀಗೆ ನಾನು ಶಿವಮೊಗ್ಗದಿಂದ ಹೊತ್ತುಕೊಂಡು ಹೋದ ಕನಸುಗಳು ನುಚ್ಚುನೂರಾದವು, ಬನಾರಸ್ಸಿನಲ್ಲಿ ಒಮ್ಮೆ ಒಬ್ಬ ಪ್ರೊಫೆಸರರ ಅಡಿ (ಅದೂ ಯಶವಂತ್ ಸಿಂಗರ ಜೊತೆ) ಸೇರಿದರೆ ಮತ್ಯಾರೂ ತೆಗೆದುಕೊಳ್ಳುತ್ತಿರದಿದ್ದುದರಿಂದಲೂ, ನನಗೆ ಕಂಪ್ಯೂಟರ್ ಸಿಮಿಲೇಷನ್‌ನಲ್ಲಿ ಸಂಶೋಧನಾ ಮಟ್ಟದ ಐಡಿಯಾಗಳು ಇರದಿದ್ದುದರಿಂದಲೂ, 'ಛೇ, ಬನಾರಸ್ಸಿಗೆ ಬಂದು ತಪ್ಪು ಮಾಡಿದೆನೇ..., ಈಗ ಏನು ಮಾಡುವುದು' ಎಂದು ಎಷ್ಟೋ ರಾತ್ರಿಗಳನ್ನು ಯೋಚಿಸುತ್ತಾ ಕಳೆದಿದ್ದೇನೆ. ಮೊಟ್ಟ ಮೊದಲನೇ ಬಾರಿಗೆ ನಾನು ಶಿವಮೊಗ್ಗದಲ್ಲಿ ಬಿಟ್ಟು ಬಂದ ಅರೆಕಾಲಿಕ ಉಪನ್ಯಾಸಕನ ಕೆಲಸಗಳು ಬಹಳ ಅಪ್ಯಾಯಮಾನವಾಗಿ ಕಂಡುಬಂದವು. ಭಾರತ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿಯಲ್ಲಿ ಸಂಶೋಧನೆಗೆ ಸೇರಿಕೊಂಡಿದ್ದೇನೆಂದು ಅದ್ದೂರಿಯಾಗಿ ಬಿಟ್ಟುಬಂದವನಿಗೆ ಶಿವಮೊಗ್ಗಕ್ಕಾಗಲೀ, ಬೆಂಗಳೂರು-ಮೈಸೂರಿಗಾಗಲೀ ಹಿಂತಿರುಗಿ ಹೋಗುವ ಯಾವ ಆಲೋಚನೆಗಳು ಬಂದರೂ ಅವು ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದವು.

***

ಭಾರತದಲ್ಲಿ ಪ್ರತಿವರ್ಷ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದುವವರಲ್ಲಿ ಹೆಚ್ಚಿನ ಪಾಲು ಉತ್ತರ ಪ್ರದೇಶ ಹಾಗು ಬಿಹಾರಿನವರದ್ದು. ಅಲ್ಲದೇ ನಮ್ಮ ದೇಶಕ್ಕೆ ಉತ್ತರಪ್ರದೇಶ ಹಾಗೂ ಬಿಹಾರಿಗಳು ನೀಡಿರುವಷ್ಟು ದೇವ-ದೇವತೆಗಳನ್ನೂ, ರಾಜಕಾರಣಿಗಳನ್ನೂ ಮತ್ಯಾವ ರಾಜ್ಯವೂ ನೀಡಿಲ್ಲ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಬಿಹಾರಿಗಳು ಏಕೆ ಹೆಚ್ಚು ಜನ ಪಾಸಾಗುತ್ತಾರೆ ಎಂದು ಪ್ರಶ್ನಿಸಿಕೊಂಡರೆ ಅದಕ್ಕುತ್ತರವಾಗಿ 'ಅವರು ಕ್ರಮಬದ್ಧವಾಗಿ ಅಭ್ಯಾಸ ಮಾಡುತ್ತಾರೆ ಹಾಗೂ ಕಷ್ಟ ಪಡುತ್ತಾರೆ' ಎಂದು ಹೇಳಬಹುದು.

ನನ್ನ ಜೊತೆ ಇದ್ದ ಬಿಹಾರಿಗಳು ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಪದವೀದರರೇ, ಪದವಿಯಾದ ತರುವಾಯ ಸ್ನಾತಕ್ಕೋತ್ತರ ಪದವಿಗಳಿಗೆ (ಎಮ್.ಎ., ಎಂ.ಎಸ್ಸಿ. ಇತ್ಯಾದಿ) ಬನಾರಸ್ಸಿನ ವಿಶ್ವವಿದ್ಯಾನಿಲಯದಲ್ಲಿ ಅರ್ಜಿ ಗುಜರಾಯಿಸುತ್ತಿದ್ದರು - ನಾನು ತಿಳಿದ ಮಟ್ಟಿಗೆ ಬಿಹಾರ ಅಥವಾ ಒರಿಸ್ಸಾದಲ್ಲಿ ತರಗತಿಯ ಅತಿ ಹೆಚ್ಚಿನ ಅಂಕ ತೆಗೆದವರು ೯೯ ರ ಆಸುಪಾಸಿನಲ್ಲಿದ್ದರೆ, ಅತಿಕಡಿಮೆ ಅಂಕ ತೆಗೆದವರು ೯೦ ರ ಹತ್ತಿರಹತ್ತಿರವಿರುತ್ತಿದ್ದರು (ಇಂಥವರ ನಡುವೆ ಮೈಸೂರಿನ ಪದವೀದರರು ಸುಳಿದು ಬಿಡಲೂ ಯೋಗ್ಯರಲ್ಲ - ಇನ್ನು ಹಾಸ್ಟೆಲ್ ಸೀಟು ಹೇಗೆ ಸಿಕ್ಕೀತು). ನನಗೆ ಆಶ್ಚರ್ಯವಾಗುವಂತೆ ಪ್ರತಿಯೊಬ್ಬ ಬಿಹಾರಿಯೂ (ಉತ್ತರಪ್ರದೇಶದವರೂ ಸಹಾ) ಸ್ನಾತಕ್ಕೋತ್ತರ ವಿಭಾಗಕ್ಕೆ ಸೇರಲು ಆಯ್ದುಕೊಳ್ಳುತ್ತಿದ್ದುದು ಸುಲಭವಾದ ವಿಷಯಗಳಾದ ಗಾಂಧೀಯನ್ ಸ್ಟಡೀಸ್, ಕ್ರಿಶ್ಚಿಯಾನಿಟಿ, ಸಮಾಜಶಾಸ್ತ್ರ, ಇತ್ಯಾದಿ...ಅವರು ಹಾಗೆ ಮಾಡುತ್ತಿದ್ದುದು ಕೇವಲ ಹಾಸ್ಟೆಲಿನ ಸೀಟನ್ನು ಗಳಿಸುವುದಕ್ಕಾಗಿ ಮಾತ್ರ. ಒಮ್ಮೆ ಹಾಸ್ಟೆಲ್ ಸೀಟು ಸಿಕ್ಕ ನಂತರ ಈ ವಿದ್ಯಾರ್ಥಿಗಳಲ್ಲಿ ಎರಡು ಭಾಗಗಳಾಗುತ್ತಿದ್ದವು - ಒಂದು ಗುಂಪು ಬ್ಯಾಂಕು, ಮತ್ತಿತರ ಸುಲಭ ಪರೀಕ್ಷಗಳನ್ನು ಪಾಸು ಮಾಡುವುದಕ್ಕೆ ಗಮನ ಹರಿಸಿದರೆ, ಇನ್ನು ಎರಡನೆಯ ಗುಂಪು ಸಿವಿಲ್ ಸರ್ವೀಸ್ (ಮುಖ್ಯವಾಗಿ ಐ.ಎ.ಎಸ್.) ಪರೀಕ್ಷೆಗಳತ್ತ ಗಮನ ಹರಿಸುತ್ತಿತ್ತು. ಇನ್ನು ಇವರ ಪದವಿ ಬ್ಯಾಕ್‌ಗ್ರೌಂಡ್ ಯಾವುದೇ ಇದ್ದರೂ ಇವರು ಐ.ಎ.ಎಸ್. ಪರೀಕ್ಷೆಯಲ್ಲಿ ಆಯ್ದುಕೊಳ್ಳುತ್ತಿದ್ದ ವಿಷಯ ಭೂಗೋಳ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತ್ಯಾದಿ...ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳು ಕಡಿಮೆ. ಹೀಗೆ ಐ.ಎ.ಎಸ್. ಪಾಸು ಮಾಡುವ ಹಠ ತೊಟ್ಟ ಗುಂಪು ಮಾಡುತ್ತಿದ್ದ ಮುಖ್ಯ ಕೆಲಸಗಳು ಇಷ್ಟು:

- ತಮ್ಮ ಹಳ್ಳಿಗಳಿಂದ ಒಬ್ಬ ಅಡುಗೆ ಮಾಡುವನನ್ನೂ, ಅವನ ಸಹಾಯಕನನ್ನೂ ತಂದು ಹಾಸ್ಟೆಲ್‌ನಲ್ಲಿ ಇಟ್ಟುಕೊಳ್ಳುವುದು
- ಪರೀಕ್ಷೆ ಕಟ್ಟಿದ ಹುಡುಗರೆಲ್ಲರೂ ತಮ್ಮ-ತಮ್ಮ ತಲೆಗಳನ್ನು ನುಣ್ಣಗೆ ಬೋಳಿಸಿಕೊಳ್ಳುವುದು
- ಒಂದು ದಿನ ದೆಹಲಿಗೆ ಹೋಗಿ ತಮಗೆ ಬೇಕಾದ ಪುಸ್ತಕಗಳ ಕಂತೆಯನ್ನು ಹೊತ್ತು ತರುವುದು

ತಾವು ತಲೆ ಬೋಳಿಸಿಕೊಂಡರೆ (ಒಂದು ರೀತಿಯಲ್ಲಿ ಮಿಲಿಟರಿಯಲ್ಲಿ ಮಾಡಿದ ಹಾಗೆ) ಸ್ವಯಂ ದಂಡನೆಗೆ ಸುಲಭವಾಗುತ್ತೆಂತಲೋ ಏನೋ (ಬನಾರಸ್ಸಿನಲ್ಲಿ ನೀವು ಒಂದು ಸೀಜನ್‌ನಲ್ಲಿ ಎಲ್ಲಿ ಹೋದರೂ ತಲೆಬೋಳಿಸಿಕೊಂಡವರು ಕಾಣಸಿಗುತ್ತಾರೆ) ಐ.ಎ.ಎಸ್. ಪರೀಕ್ಷಾರ್ಥಿಗಳು ಮಾಡುವ ಮೊಟ್ಟ ಮೊದಲ ಕೆಲಸ ಅದಾಗಿತ್ತು. ದೆಹಲಿಗೆ ಹೋಗುವ ಉದ್ದೇಶ ಇಷ್ಟು, ಅಲ್ಲಿ ನೀವು ಐ.ಎ.ಎಸ್. ಪರೀಕ್ಷೆಗೆ ಆಯ್ದುಕೊಂಡ ವಿಷಯಗಳನ್ನು ತಿಳಿಸಿದರೆ ಸಾಕು ಸ್ಪೆಷಲೈಸ್ಡ್ ಪುಸ್ತಕದ ಅಂಗಡಿಗಳು ಸಿಗುತ್ತವೆ. ಇಂತಿಂಥ ಪುಸ್ತಕಗಳನ್ನೆ ತೆಗೆದುಕೊಂಡು ಓದಿ ಎನ್ನುವುದರೆ ಜೊತೆಗೆ ೯೮ ರಲ್ಲಿ ಈ ಪ್ರಶ್ನೆ ಬಂದಿತ್ತು, ೯೬ ರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದರು, ೯೯ ರಲ್ಲಿ ಗ್ಯಾರಂಟಿ ಈ ಪ್ರಶ್ನೆಯನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ಅನಾಲಿಸೀಸೂ ಸಿಗುತ್ತಿತ್ತು. ಹೀಗೆ ಹೋದ ಹುಡುಗರ ಗುಂಪು ಅವರು ಕಷ್ಟ ಪಟ್ಟು ಹೊತ್ತರೂ ಹೊರಲಾರದಷ್ಟು ಪುಸ್ತಕಗಳನ್ನು ತಂದು ರೂಮಿನಲ್ಲಿ ಸೇರಿಕೊಂಡರೆ ತಿಂಗಳಿಗೊಮ್ಮೆಯೂ ಸೂರ್ಯನಿಗೆ ಮುಖ ತೋರಿಸುತ್ತಿರಲಿಲ್ಲ. ರಾತ್ರೀ-ಹಗಲೂ ಓದಿ-ಓದೀ, ಐ.ಎ.ಎಸ್. ಪರೀಕ್ಷೆಯೇನು ಯಾವ ಪರೀಕ್ಷೆಯನ್ನಾದರೂ ಸುಲಭವಾಗಿ ಪಾಸು ಮಾಡಬಲ್ಲವರಾಗುತ್ತಿದ್ದರು. ಊಟ ತಿಂಡಿಗೆ ಮಹರಾಜ್ (ಅಡುಗೆಯವ) ಹಾಗೂ ಅವನ ಸೇವಕ ಸಹಾಯ ಮಾಡುತ್ತಿದ್ದರು, ದೇಹ ತೀಟೆಗೆ ಗಾಂಜಾ, ಅಫೀಮೂ ದೊರೆಯುತ್ತಿತ್ತು, ಹೆಣ್ಣುಗಳೂ ಬಂದು ಹೋಗುತ್ತಿದ್ದವು, ರೂಮಿನೊಳಗಡೆ ಏನೇನು ಆಗುತ್ತಿತ್ತೋ ಬಿಡುತ್ತಿತ್ತೋ, ಕೊನೆಗೆ ಹೀಗೆ ತಲೆ ಬೋಳಿಸಿ ದೀಕ್ಷೆ ತೆಗೆದುಕೊಂಡವರಲ್ಲಿ ಹೆಚ್ಚಿನ ಜನರಿಗೆ ಇಂಟರ್‌ವ್ಯೂವ್ ಬಂದೇ ಬರುತ್ತಿತ್ತು. ಈ ಸಂದರ್ಶನದ ಹಂತವೇ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗುತ್ತಿತ್ತು, ರಾತ್ರೀ-ಹಗಲು ಯಾವ ರ್‍ಯಾಪಿಡೆಕ್ಸ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ತೆಗೆದುಕೊಂಡರೂ, ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸಲು ಇವರಿಗೆಲ್ಲ ಬಹಳ ಸಮಯ ಹಿಡಿಯುತ್ತಿತ್ತು - ಇಂಥಾ ಸಮಯದಲ್ಲಿ ನನ್ನಂತ ದಕ್ಷಿಣದವರ ಸಹವಾಸಕ್ಕೆ ಹೆಚ್ಚು ಜನರು ಮುಗಿಬೀಳುತ್ತಿದ್ದರು ಏಕೆಂದರೆ ನಾವು ಹೇಗೇ ಇದ್ದರೂ ಇಂಗ್ಲೀಷನ್ನಂತೂ ಸುಮಾರಾಗಿ ಮಾತನಾಡುತ್ತಿದ್ದೆವು!

***

ಈ ಬಿಹಾರಿಗಳೆಲ್ಲ ಹೀಗೆ ಐ.ಎ.ಎಸ್. ಎಂದು ಕಷ್ಟ ಪಡುತ್ತಿದ್ದುದಕ್ಕೂ ಒಂದು ಕಾರಣ ಇದೆ - ಐ.ಎ.ಎಸ್. ಪಾಸು ಮಾಡಿದಾಕ್ಷಣ ರಾತ್ರೋ ರಾತ್ರಿ ಹೆಚ್ಚಾಗುತ್ತಿದ್ದ ಅವರ ಬೆಲೆ. ನೀವು ಉತ್ತರ ಭಾರತದ ಮದುವೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಅವರಲ್ಲಿ ವರದಕ್ಷಿಣೆ ಬಹಳ - ಒಬ್ಬ ಐ.ಎ.ಎಸ್. ಪರೀಕ್ಷೆಯನ್ನು ಕಟ್ಟಿದ ವಿದ್ಯಾರ್ಥಿಯ ಬೆಲೆ ಮೂರು ಕಾಸು, ಅದೇ ಐ.ಎ.ಎಸ್. ಪಾಸಾದರೆ ಮೂರು ಕೋಟಿ! ಹೀಗೆ ಐ.ಎ.ಎಸ್. ಪಾಸಾದವರೆಲ್ಲರೂ ನಗರಗಳಲ್ಲಿರಲು ಇಷ್ಟ ಪಡುತ್ತಿದ್ದುದು ಕಡಿಮೆ, ಏಕೆಂದರೆ ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಯಾಗಿ ಹೋದರೆ ರಾಜರ ತರಹ ಇರಬಹುದು ಎಂದು.

ಹೀಗೆ ನನ್ನಲ್ಲಿ ಮನೆ ಮಾಡಿದ ಶಿವಮೊಗ್ಗದ ನಯವನ್ನು ಒರಿಸಿ ಅದರಲ್ಲಿ ಬಿಹಾರಿಗಳ ನಾಜೂಕನ್ನು ತುಂಬಲು ಭೂಮಿಕೆಯಾಗಿದ್ದೇ ಬನಾರಸ್ಸು, ಹುಟ್ಟೂರಿನಲ್ಲಿ ಕಲಿಯದ ಬುದ್ಧಿಯನ್ನು ಬದುಕು ಇಲ್ಲಿ ಕಲಿಸಿದೆ, ಹಾಗೂ ಅಲ್ಲಿ ದೊರೆತ ದರ್ಶನದ ಬೆಳಕು ಇನ್ನೂ ನನ್ನ ಕಣ್ಣಲ್ಲಿದೆ. ಇಂಥ ಬಿಹಾರಿಗಳ ನಡುವೆ ಇದ್ದವನಾಗಿ ನಾನೇಕೆ ಐ.ಎ.ಎಸ್. ಓದಲಿಲ್ಲ ಎಂದು ನನಗೇ ಅನ್ನಿಸಿದೆ - ಅದಕ್ಕುತ್ತರ ಸಿಕ್ಕಿದೆ, ಅದನ್ನು ಮುಂದೆ ಎಲ್ಲಾದರೂ ಬರೆಯುತ್ತೇನೆ.

***

ನಾವು ದಕ್ಷಿಣ ಭಾರತದವರು ಸುಖಾ ಇಲ್ಲ, ಬಿಹಾರಿಗಳ ಅರ್ಧದಷ್ಟು ನಾವೇನಾದರೂ 'ಕಷ್ಟ' ಪಟ್ಟಿದ್ದರೆ ಅದರ ಕಥೆಯೇ ಬೇರೆ!