Showing posts with label ಗ್ಲೋಬಲೈಜೇಷನ್ನ್. Show all posts
Showing posts with label ಗ್ಲೋಬಲೈಜೇಷನ್ನ್. Show all posts

Monday, June 08, 2020

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...


ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...ಹೀಗೆನಿಸಿದ್ದು ನಮ್ಮ ಇತ್ತೀಚಿನ ಸ್ಟಾಕ್ ಮಾರ್ಕೆಟ್ ಮತ್ತು ಎಕಾನಮಿ ಇವುಗಳನ್ನು ಗಮನಿಸಿದಾಗಿನಿಂದ.  ಕೊರೋನಾ ವೈರಸ್ಸಿನ ಕೃಪೆಯಿಂದ ಎಷ್ಟೊಂದು ಜನರು ನಿರುದ್ಯೋಗಿಗಳಾಗಿದ್ದಾರೆ, ಎಷ್ಟೋ ಉದ್ಯಮಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.  ಇನ್ನು ಎಷ್ಟೋ ಸೆಕ್ಟರುಗಳು ಚೇತರಿಸಿಕೊಳ್ಳಲಾರದ ಮಟ್ಟಕ್ಕೆ ದೈನ್ಯ ಸ್ಥಿತಿಯನ್ನು ತಲುಪಿರುವಾಗ, ಇವತ್ತಿನ ಸ್ಟಾಕ್ ಮಾರ್ಕೆಟ್ಟಿನ ಪ್ರತಿಕ್ರಿಯೆಯನ್ನು ನೋಡಿದರೆ ಒಂದಕ್ಕೊಂದು ತಾಳೆಯಂದಂತೆನಿಸುವುದಿಲ್ಲ, ಅಲ್ಲವೇ?

ಎಕಾನಮಿ ಹದಗೆಟ್ಟಿದೆ, ಇನ್ನು ಚಿಗುರಿಕೊಳ್ಳಲು ಹಲವು ತಿಂಗಳುಗಳೇ ಬೇಕು, ವಿಶ್ವದಾದ್ಯಂತ ಎಲ್ಲ ಕಡೆಗೆ ರಿಸೆಶ್ಶನ್ನು ಎಂದು ನೀವು ಬೇಕಾದಷ್ಟು ಕಡೆ ಓದಿರುತ್ತೀರಿ, ಕೇಳಿರುತ್ತೀರಿ.  ಆದರೆ, ಇದನ್ನೆಲ್ಲ ಬದಿಗಿಟ್ಟು ವಿಶ್ವದಾದ್ಯಂತ ಮುಖ್ಯ ಮಾರುಕಟ್ಟೆಗಳು ತಮ್ಮ ಸ್ಟಾಕ್ ಇಂಡೆಕ್ಸುಗಳನ್ನು ಕಳೆದ ಎರಡು ತಿಂಗಳ ಕುಸಿತದಿಂದ ಸಂಪೂರ್ಣ ಚೇತರಿಸಿಕೊಂಡಂತೆ ಕಾಣಿಸುತ್ತಿದೆ.  ಮಾರ್ಚ್ ತಿಂಗಳ ಕೆಳ ಮಟ್ಟದ ಸೂಚ್ಯಂಕಗಳು, ಎರಡು-ಮೂರು ತಿಂಗಳುಗಳಲ್ಲಿ V ಆಕಾರದ ರಿಕವರಿಯನ್ನು ಪಡೆದುಕೊಂಡಿವೆ, ಇದಕ್ಕೆ ಏನು ಕಾರಣವಿರಬಹುದು?

- ಬೇರೆ ಕಡೆಗೆ ಹೂಡಿಕೆ ಮಾಡಲಾರದೆ ಹೆಚ್ಚಿನ ರಿಟರ್ನ್‌ಗೋಸ್ಕರ ಸ್ಟಾಕ್ ಮಾರ್ಕೆಟ್ ನಂಬಿಕೊಂಡು ಹೆಚ್ಚು ಹೆಚ್ಚು ಹಣ ಹೂಡುವ ಶ್ರೀಮಂತರು ಇನ್ನೂ ಇರಬಹುದೇ?
- ಮೊದಲೆಲ್ಲ ಮನುಷ್ಯರು ಮಾಡುವ ಕೆಲಸವನ್ನು ಈಗೀಗ ಕಂಪ್ಯೂಟರುಗಳು (algo trading) ಮಾಡುತ್ತಿರುವುದರಿಂದ, ಅಂತಹ ಟ್ರೇಡಿಂಗ್ ಸಿಸ್ಟಂಗಳಲ್ಲಿ ಜನ ಸಾಮಾನ್ಯರ ಯಾವುದೇ ಎಮೋಷನ್‌ಗೆ ಬೆಲೆ ನೀಡುತ್ತಿಲ್ಲವೇ?
- ಸೊರಗಿದ ಆರ್ಥಿಕತೆ, ರಿಸೆಶನ್ ಇತರ ಪದಪುಂಜಗಳೆಲ್ಲ ಕೇವಲ ಬಡವರಿಗೆ ಮಾತ್ರ ಅನ್ವಯಿಸುವಂತಹವೇ?
- ಕೊಳ್ಳುಬಾಕತನದ ಕನ್ಸೂಮರುಗಳು ಇಲ್ಲದಿದ್ದರೂ ಈ ಸ್ಟಾಕ್ ಮಾರ್ಕೆಟ್ ಅನ್ನು ಯಾವುದೋ ಅವ್ಯಕ್ತ ಶಕ್ತಿಯೊಂದು [ವಿದೇಶಿ ಹೂಡಿಕೆ (foreign investment), ಸರ್ಕಾರೀ ಮಧ್ಯವರ್ತಿತನ (quantitative easing), ಪುನಃ ಕೊಳ್ಳುವಿಕೆ (trade buyback), ಇತ್ಯಾದಿ] ಮುನ್ನಡೆಸುತ್ತಿರಬಹುದೇ?

ಈ ವರ್ಷ, ಬೆಳೆಯುವ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರಿಗೂ ಹೊಸ ಬಟ್ಟೆ ಬೇಕಾಗಿರಲಾರದು.  ಎಲ್ಲರ ಸಮ್ಮರ್ ವೆಕೇಶನ್ ಕೂಡ ಒಂದಲ್ಲ ಒಂದು ರೀತಿಯಿಂದ ಕೊರೋನಾ ವೈರಸ್ಸಿನ ಪ್ರಭಾವಕ್ಕೆ ಒಳಗಾಗಿದೆ.  ಮುಂದೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಅಮೇರಿಕದಲ್ಲಿ ಶಾಲೆಗಳು ತೆರೆಯದೇ ಮಕ್ಕಳು ಮನೆಯಲ್ಲೇ ಇದ್ದರೆ, ಬ್ಯಾಕ್-ಟು-ಸ್ಕೂಲ್ ಖರೀದಿಗೂ ದಕ್ಕೆಯಾಗುತ್ತದೆ.  ಜನರು ಕಡಿಮೆ ಡ್ರೈವ್ ಮಾಡುತ್ತಿದ್ದಾರೆ, ಹೆಚ್ಚಿನ ಕಾರುಗಳನ್ನು ಕೊಳ್ಳುತ್ತಿಲ್ಲ.  ಕಾರುಗಳು ರೀಪೇರಿಗಾಗಲೀ, ಸರ್ವೀಸಿಗಾಗಲೀ ಬರುತ್ತಿಲ್ಲ.  ರೆಸ್ಟೋರಂಟುಗಳಿಗೆ ಜನರು ಹೋಗುವುದು ಕಡಿಮೆಯಾಗಿದೆ.  ಜನರ ತಿಂಗಳ ಖರ್ಚು ಕನಿಷ್ಠ ಪ್ರಮಾಣಕ್ಕೆ ಬಂದು ನಿಂತಿದೆ.  ಇನ್ನು ಏರ್‌ಲೈನ್ಸ್ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ನೆನೆಗುದ್ದಿಗೆ ಬಿದ್ದಿದೆ. ಹೀಗೆ, ರೀಟೈಲ್-ಹೋಲ್‌ಸೇಲ್ ಎಲ್ಲ ಖರೀದಿಗಳೂ ಸಹ ಕಷ್ಟಕ್ಕೆ ಒಳಗಾಗಿ ಸೊರಗಿವೆ.  ಹಾಗಿದ್ದರೆ, ಇವುಗಳೆಲ್ಲದರ ಒಟ್ಟು ಹೊಡೆತ ಸ್ಟಾಕ್ ಮಾರ್ಕೆಟ್ಟಿನ ಮೇಲೆ ಒಂದಲ್ಲ ಒಂದು ರೀತಿಯಿಂದ ಆಗಲೇ ಬೇಕಲ್ಲವೇ?

ಒಂದು ವರದಿಯ ಪ್ರಕಾರ, ಅಮೇರಿಕದಲ್ಲಿ ನೂರಕ್ಕೆ ಐವತ್ತೈದು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೂಡಿಕೆ ಮಾಡುತ್ತಾರೆ.  ಈ ರೀತಿ ಹೂಡಿಕೆ ಮಾಡುವವರಲ್ಲಿ individual (retail) traders ಮತ್ತು institutional traders ಎಂದು ಎರಡು ರೀತಿಯವರನ್ನು ಗುರುತಿಸಬಹುದು.  ರೀಟೈಲ್ ಟ್ರೇಡರ್ಸ್ ತಮ್ಮ ಚಿಕ್ಕ ಚಿಕ್ಕ ಪೋರ್ಟ್‌ಫೋಲಿಯೋ ಗಳನ್ನು ಸ್ವಯಂ ಮ್ಯಾನೇಜು ಮಾಡುತ್ತಾರೆ, ಹೆಚ್ಚಿನವರು ಹಣ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಿರುವ ವಿಷಯ.  ಆದರೆ, Institutional traders ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ ಬಿಲಿಯನ್ ಗಟ್ಟಲೆ ಲಾಭಗಳಿಸುತ್ತಾರೆ... ಇವರ ಪ್ರಮಾಣ ಸಾವಿರದಲ್ಲಿ ಒಬ್ಬರ ಲೆಕ್ಕ. ಇಂಥ ಶ್ರೀಮಂತರು ಎಂತಹ ಎಕಾನಮಿ ಇದ್ದರೂ ಅದರಲ್ಲಿ ಲಾಭಗಳಿಸುವ "ತಂತ್ರ" ಉಳ್ಳವರಾಗಿರುತ್ತಾರೆ.  ಇವರಿಗೆ ಸಾಧಾರಣವಾಗಿ ಯಾವುದೇ ರೀತಿಯಲ್ಲಿ ಹೊಡೆತ ಬೀಳದಂತೆ ತಮ್ಮ ಪೋರ್ಟ್‌ಫೋಲಿಯೋಗಳಲ್ಲಿ ಹೆಡ್ಜ್ (hedge) ಮಾಡಿರುತ್ತಾರೆ.

ಈಗ ಈ ಎಲ್ಲ ವಿವರಗಳನ್ನಿಟ್ಟುಕೊಂಡು (ನಿಜವನ್ನು) ಯೋಚಿಸಿದರೆ, ಇಲ್ಲಿನ ಸ್ಟಾಕ್ ಮಾರ್ಕೆಟ್ಟುಗಳನ್ನು drive ಮಾಡುವವರು ಎಂಬುದು ನಿಮಗೆ ಗೊತ್ತಾಗುತ್ತದೆ.  ಒಂದು ಕಡೆಗೆ ಜನರ pension funds ಮತ್ತಿತರ long term investment ಗಳಿಗೆ ಕಾಲಕ್ರಮೇಣ ಹೂಡಿಕೆ ಮಾಡುವುದರ ಅಗತ್ಯ ಯಾವತ್ತೂ ಇದ್ದೇ ಇರುವಾಗ ಮಾರುಕಟ್ಟೆಗೆ ನಿಧಾನವಾಗಿ ಹಣ ಬರುತ್ತಲೇ ಇರುತ್ತದೆ.  ಮತ್ತೊಂದು ಕಡೆಗೆ, ಹಣವುಳ್ಳವರು ಇನ್ನೂ ಶ್ರೀಮಂತರಾಗುವ ಅನೇಕ ಸೌಲಭ್ಯಗಳ ವರದಾನವೇ ಅವರಿಗೆ ಸಿಗುತ್ತದೆ.   ಈ ಎಲ್ಲದರ ನಡುವೆ ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಪ್ರತಿದಿನದ ತಿಣುಕಾಟ-ಗೊಣಗಾಟಗಳು ಹಾಗೆ ಮುಂದುವರೆಯುತ್ತವೆ.  ಕಷ್ಟದ ಕಾಲದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ.  ಪ್ರಪಂಚದಾದ್ಯಂತ ನೀವು ಯಾವುದೇ ದೇಶವನ್ನು ಯಾವುದೇ "ಇಸಂ" (ism) ಮಸೂರದಲ್ಲಿ ನೋಡಿದರೂ ಎಲ್ಲ ಒಂದೇ ರೀತಿಯಲ್ಲಿ ಕಾಣುತ್ತದೆ!

Thursday, April 02, 2020

ಕೊರೋನಾ ವೈರಸ್ ನಮ್ಮ ಶಕ್ತಿಯನ್ನು ಕ್ಷೀಣಿಸಿದೆಯೇ?

ನಾವು, ಜನಸಾಮಾನ್ಯರು ಅಥವಾ ನಮ್ಮ ಮಾನವ ಜನಾಂಗವನ್ನು ಒಟ್ಟಿಗೆ ಪ್ರತಿನಿಧಿಸುವ ನಾವೆಲ್ಲರೂ ಈ ಕಳೆದ ನೂರು ವರ್ಷಗಳಲ್ಲಿ ದುರ್ಬಲರಾಗಿದ್ದೇವೆಯೇ?

ಅಂಕಿ-ಅಂಶಗಳ ಪ್ರಕಾರ ನಾವೆಲ್ಲರು ಧೀರ್ಘಾಯುಗಳು, ನಮ್ಮ ಬದುಕಿನ ಗುಣಮಟ್ಟ ಹೆಚ್ಚಿದೆ, ನಮ್ಮ ಮೌಲ್ಯ (net worth) ವೃದ್ಧಿಯಾಗಿದೆ.  ನಮ್ಮ ಸಂಖ್ಯೆ ಹೆಚ್ಚಿದೆ - 1900 ರಲ್ಲಿ 1.6 ಬಿಲಿಯನ್ ಇದ್ದದ್ದು 2020ಕ್ಕೆ 7.8 ಬಿಲಿಯನ್ ಆಗಿದೆ.  ಅದರಂತೆ ನಮ್ಮ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ: ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್, ರಸ್ತೆ ಅಫಘಾತ, ಡಯಬೀಟಿಸ್ ಮೊದಲಾದಂತೆ ಮಿಲಿಯನ್ನುಗಟ್ಟಲೆ ಜನ ಸಾಯುತ್ತಲೇ ಇದ್ದಾರೆ.  ಫ್ಲೂ (ಇನ್‌ಫ್ಲೂಯೆಂಜ಼ಾ) ಒಂದರಿಂದಲೇ ವರ್ಷಕ್ಕೆ ಸಾವಿರಾರು ಜನ ಸಾಯುತ್ತಿದ್ದಾರ‍ೆ.  ನಿಮಗೆಲ್ಲ ನೆನಪಿರುವಂತೆ, 2004ರ ಡಿಸೆಂಬರ್ 26ರಂದು ಬಂದ ಸುನಾಮಿಯಿಂದ ಸುಮಾರು ಎರಡೂವರೆ ಲಕ್ಷ ಜನ ಸತ್ತು ಹೋಗಿದ್ದು, ಸಾವಿರಾರು ಜನ ತಮ್ಮ ಮನೆ-ಮಠವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.


ಆದರೆ, ಈ ಕೋವಿಡ್-೧೯ ಎನ್ನುವ ಮಹಾಮಾರಿ ನಮ್ಮೆಲ್ಲರನ್ನು ಎಲ್ಲಿ ಆಪೋಷನ ತೆಗೆದುಕೊಳ್ಳುವುದೋ ಎನ್ನುವುದು ಎಲ್ಲರ ಭೀತಿ.  ಎಲ್ಲರನ್ನೂ ಒಮ್ಮೆಲೇ ಬಲಿ ತೆಗೆದುಕೊಂಡ ಸುನಾಮಿಯಂತಲ್ಲ ಇದರ ಕಥೆ, ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಹಂತ-ಹಂತವಾಗಿ ಮಲಗಿಸಿ, ಯಾವ ಶಸ್ತ್ರಾಸ್ತವನ್ನೂ ಬಳಸದೇ ಎಲ್ಲರನ್ನೂ ಮುಗಿಸಿಬಿಡುವ ಶಕ್ತಿ ಈ ವೈರಸ್ಸಿಗಿದೆ.
ಆದರೆ, ಮತ್ತೆ ಅದೇ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ: ಈ ನೂರು ವರ್ಷಗಳಲ್ಲಿ ನಾವು ದುರ್ಬಲರಾಗಿದ್ದೇವೆಯೇ?

ನಮ್ಮ ಗ್ಲೋಬಲೈಜೇಷನ್ ಅನ್ನೋದೇ ನಮಗೆ ಶಾಪವಾಯಿತು.  ನೂರು ವರ್ಷಗಳ ಹಿಂದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಕ್ಷಿಪ್ರವಾಗಿ ಹೋಗಿ-ಬರುವ ವ್ಯವಸ್ಥೆ ಇದ್ದಿರಲಿಲ್ಲ.  ಅಲ್ಲದೇ ನಮ್ಮೆಲ್ಲರ ಓಡಾಟಗಳು ಸ್ಥಳೀಯ ಜಿಲ್ಲೆ-ಪ್ರ್ಯಾಂತ್ಯಗಳಿಗೆ ಸೀಮಿತವಾಗಿರುತ್ತಿದ್ದುದು ವಿಶೇಷ.  ಒಂದು ದೇಶದಲ್ಲಿ ಹುಟ್ಟಿದ ಮಹಾಮಾರಿ ಮತ್ತೊಂದು ದೇಶವನ್ನು ಈಗ ಆಕ್ರಮಿಸುತ್ತಿರುವಂತೆ ಅತಿಯಾದ ವೇಗದಲ್ಲಂತೂ ಆಕ್ರಮಿಸುತ್ತಿರಲಿಲ್ಲ.  ಜೊತೆಗೆ, ಆಗಿನ ಕಾಲದಲ್ಲಿ ವಾಹನ ವ್ಯವಸ್ಥೆಗಳೇ ಇರಲಿಲ್ಲ - ಇದ್ದರೂ ಕೆಲವೇ ಜನರಿಗೆ ಸೀಮಿತವಾಗಿರುತ್ತಿತ್ತು.  ಆದರೆ, ಈಗ ಹಾಗಿಲ್ಲ.  ಪ್ರಪಂಚ ಒಂದು ಹಳ್ಳಿಯಾಗಿದೆ (global village), ಅದರಂತೆ ಒಂದು ಹಳ್ಳಿಯಲ್ಲಾಗುವ ಎಲ್ಲ ಘಟನೆಗಳಿಗೂ ಆ ಹಳ್ಳಿಯ ಎಲ್ಲರೂ ಸ್ಪಂದಿಸುತ್ತಾರೆ, ಅದನ್ನು ಪ್ರತಿಬಿಂಬಿಸುತ್ತಾರೆ.  ಈಗಿನ ಟ್ರೆಂಡುಗಳೂ ಕೂಡ ಹುಟ್ಟುವುದೂ-ಸಾಯುವುದೂ ಅಷ್ಟೇ ವೇಗವಾಗಿ.

ಆದರೆ, ನಮ್ಮ ಹೆಚ್ಚಿನ ವಿದ್ಯಾಭ್ಯಾಸ (or simply awareness), ನಮ್ಮಲ್ಲಿ ಹುಲುಸಾಗಿ ಬೆಳೆದು ಯಥೇಚ್ಛವಾಗಿ ಸಿಗುವ ತಂತ್ರಜ್ಞಾನ, ಇವು ನಮ್ಮಲ್ಲಿನ ಆರ್ಗನೈಜೇಷನ್ ಶಕ್ತಿಯನ್ನು ಕಡಿಮೆ ಮಾಡಿವೆಯೇ?

ಉದಾಹರಣೆಗೆ: ಭಾರತದ ಸ್ವಾತಂತ್ರ್ಯ ಸಂಗ್ರಾಮ (೧೮೫೭-೧೯೪೭) ವನ್ನು ವಿಶ್ಲೇಷಿಸಿದಾಗ, ಆಗಿನ ಕಾಲದಲ್ಲಿ ಅದು ಹೇಗೆ ಆರಂಭವಾಗಿ, ದೇಶದುದ್ದಕ್ಕೂ ಬೆಳೆಯಿತು? ಎಂದು ಸೋಜಿಗಗೊಳ್ಳಬೇಕಾಗುತ್ತದೆ.  ಈಗಿನ ಕಾಲದಲ್ಲಾದರೆ ಕ್ಷಣಾರ್ಧದಲ್ಲಿ ದೇಶವೇನು? ವಿಶ್ವದ ಯಾವ ಭಾಗವನ್ನು ಬೇಕಾದರೂ ನಮ್ಮ ಸುದ್ದಿಗಳಿಗಾಗಿ ತಡಕಾಡಬಹುದು.  ಆಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ, ಜನರು ಈಗಿನಂತೆ ಹೆಚ್ಚು-ಹೆಚ್ಚು ಪದವೀಧರರಾಗಿರಲಿಲ್ಲ, ಆದರೆ ಸಮರ್ಥ ನಾಯಕತ್ವವನ್ನು ನಂಬಿ ಅವರೆಲ್ಲರೂ ಮುಂದೆ ಬಂದಿದ್ದರು, ತಮ್ಮ ತಮ್ಮ ಮನೆ-ಮಠವನ್ನು ತೊರೆದು ರಾಷ್ಟ್ರದ ಬಲವಾಗಿ ನಿಂತಿದ್ದರು.  ಮಾಡು-ಇಲ್ಲವೇ-ಮಡಿ ಎನ್ನುವ ಚಳವಳಿಯಲ್ಲಿ ಆನೇಕರು ತಮ್ಮ ಕೊರಳನ್ನು ಸಮರ್ಪಿಸಿದ್ದರು.

ಅವರದ್ದೂ ಸಹ ಜೀವವಲ್ಲವೇ? ಅವರೆಲ್ಲರಿಗೂ ಜೀವವಿರಲಿಲ್ಲವೇ? ಅವರಿಗೂ ಕೂಡ ತಮ್ಮ-ತಮ್ಮ ಸಂಸಾರಗಳ ಹೊಣೆ ಇದ್ದಿರಲಿಲ್ಲವೇ? ಆದರೆ, ತಮ್ಮ ವೈಯಕ್ತಿಕ ಆಗುಹೋಗುಗಳ ಮುಂದೆ ರಾಷ್ಟ್ರ ದೊಡ್ಡದಾಗಿತ್ತು.  ಹೋರಾಟ ಉಸಿರಾಗಿತ್ತು.  ರಾಷ್ಟ್ರ ನಾಯಕರುಗಳಿಗೆ ಬೆಂಬಲ ಕೊಡಬೇಕಾಗಿತ್ತು.  ಹೀಗೆ, ಅವರುಗಳೆಲ್ಲ ದೊಡ್ಡದನ್ನು ಗುರಿಯಾಗಿಟ್ಟುಕೊಂಡು, ಉಳಿದೆಲ್ಲವನ್ನು ಗೌಣವಾಗಿ ಕಂಡಿದ್ದರು.

ಮುಂದೆ ಕಾಲ ಕ್ರಮೇಣ, ಕುಟುಂಬಗಳು ಅವಿಭಕ್ತ ಪರಿಧಿಯನ್ನು ದಾಟಿ, ನ್ಯೂಕ್ಲಿಯರ್ ಕುಟುಂಬಗಳಾದವು.  ಜನರ ವಲಸೆ ಸಹಜವಾಯಿತು.  ನಗರೀಕರಣ ಹೆಚ್ಚಿತು.  ವಿದ್ಯಾಭ್ಯಾಸದ ಮಟ್ಟ ಬೆಳೆಯಿತು.  ಆದರೆ - ರಾಷ್ಟ್ರ, ಸ್ವಾತಂತ್ರ್ಯ, ಬಿಡುಗಡೆ, ಸ್ವಇಚ್ಛೆ, ಪ್ರಜಾಪ್ರಭುತ್ವ ಇವುಗಳು ಜನರಿಗೆ ಆಯ್ಕೆಯ ಹಕ್ಕನ್ನು ನೀಡಿದವು.  ಜನರು ತಮಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವಂತಾದರು.
ಈ ಆಯ್ಕೆಯ ಪ್ರತಿಫಲವಾಗಿ ಕೆಲವೊಮ್ಮೆ ಅದರಲ್ಲಿ ನನಗೆ ಸ್ವಾರ್ಥ ಕಂಡುಬರುತ್ತದೆ.  ಒಂದುವೇಳೆ, ಈಗೇನಾದರೂ ಸ್ವತಂತ್ರ್ಯ ಭಾರತದ ಚಳುವಳಿಯಂಥವು ಆರಂಭವಾದರೆ, ಅದಕ್ಕೆ ಬೆಂಬಲ ಕೊಡುವವರಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.  ಈ ಬೆಂಬಲ ಎನ್ನುವುದು ತನು-ಮನ-ಧನದ ರೂಪದಲ್ಲಿರಬಹುದು, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಭಿಸಿರಬಹುದು (petition), ಅಥವಾ ಘೇರಾವ್/ಬಂದ್ (ಸತ್ಯಾಗ್ರಹ) ಮತ್ತಿತರ ಭೌತಿಕ ರೂಪದಲ್ಲಿರಬಹುದು.

ನಮ್ಮಲ್ಲಿ ಚಳವಳಿಗಳಾದಾಗ ವ್ಯವಸ್ಥೆಯ ವಿರುದ್ಧ ಜನ ತಮ್ಮ ’ಆತ್ಮಾರ್ಪಣೆ" ಮಾಡಿಕೊಳ್ಳುವುದನ್ನು ನೋಡಿದ್ದೇವೆ.  ಇದಕ್ಕೂ ಒಂದು ಹೆಜ್ಜೆ ಮುಂದುವರಿದು ಯೋಚಿಸಿದಾಗ ಒಂದು ವ್ಯವಸ್ಥೆಯ ವಿರುದ್ಧ ಅಥವಾ ಮತ್ತೊಂದು ವ್ಯವಸ್ಥೆಯ ಪರವಾಗಿ ಜನರು "ಆತ್ಮಾಹುತಿ"ಯನ್ನು ಮಾಡಿಕೂಳ್ಳುವುದನ್ನು ನೋಡಿದ್ದೇವೆ.  ಆದರೆ, ಒಂದು ಖಾಯಿಲೆಯನ್ನು ಹರಡುವ ವೈರಸ್ಸಿನ ವಿರುದ್ಧವಾಗಿ ಜನರನ್ನು ಮೂರು ವಾರಗಳ ಕಾಲ ಕೂಡಿ ಹಾಕಿರುವಂತೆ ಕೇಳಿಕೊಂಡಾಗ ಜನರಿಗೆ ಮನೆಯಲ್ಲಿರಲು ಕಷ್ಟವಾಗುತ್ತದೆ!  ಅದರಿಂದ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯಲ್ಲ!

***
ಜನರು ಸುಖದ ಸುಪ್ಪತ್ತಿಗೆಯಲ್ಲಿ (comfort zone) ಕುಳಿತು ತೇಲಾಡುತ್ತಿರುವಾಗ ಯಾವುದೇ ಸಂಶೋಧನೆಗಳು ಹೊರಗೆ ಬಾರವು.  ಆಭರಣವಾಗುವ ಮೊದಲು ಚಿನ್ನಕ್ಕೆ ಮೂಸೆಯಲ್ಲಿ ಪುಟವಿಟ್ಟ ಹಾಗೆ, ಶಿಲ್ಪ ಕಲಾಕೃತಿ ಆಗುವ ಮೊದಲು ಕಠಿಣವಾದ ಶಿಲೆಯನ್ನು ಬಾಚಿ-ಚಾಣಗಳ ಮೂಲಕ ಕುಟ್ಟಿದ ಹಾಗೆ, ಕಬ್ಬನ್ನು ಹಿಂಡಿ ಸವಿಯಾದ ಬೆಲ್ಲವನ್ನು ತೆಗೆದ ಹಾಗೆ - ಒಂದು ಸಮಾಜವೂ ತನ್ನ ಕಷ್ಟಗಳ ಕುಲುಮೆಯಲ್ಲಿ ಬೇಯಬೇಕಾಗುತ್ತದೆ, ಹಾಗಾಗುವುದರಿಂದಲೇ ಮುಂದಿನ ತಲೆಮಾರಿಗೆ ನಾವು ಹೊಸದೇನನ್ನೋ ತೆಗೆದುಕೊಂಡು ಹೋಗಲು ಸಾಧ್ಯ.  ಇಲ್ಲಿ ಸಾಧನೆ ಮುಖ್ಯವಾಗುತ್ತದೆ, ಇಲ್ಲಿ ದಿಢೀರ್ ಜನಪ್ರಿಯತೆ ಸಿಗುವುದಿರಲಿ ವರ್ಷಗಟ್ಟಲೇ ಮಾಡಿದ ಶ್ರಮಕ್ಕೆ ಕಿರುಗಾಸು ಬೆಲೆಯೂ ಸಿಗದಂತಾಗಬಹುದು, ಆದರೆ ಈ ರೀತಿಯು ಅನೇಕ ಪ್ರಯತ್ನಗಳು ನಮ್ಮನ್ನು ಸಂಪೂರ್ಣರನ್ನಾಗಿ ಮಾಡುವುದರ ಜೊತೆಗೆ ಸಬಲರನ್ನಾಗಿಯೂ ಮಾಡಬಲ್ಲವು - ಎಂಬುದು ಈ ಹೊತ್ತಿನ ನನ್ನ ನಂಬಿಕೆ!

Monday, February 09, 2009

ಅವರವರ ಹಾಡು ಅವರದು...

ಕೆಳಗಿನ ಮೂರು ವಾರದಿಂದ ಭರ್ಜರಿ ಕೆಲಸ. ಜನವರಿ ಬಂತೋ ಬಂತು ಬಹಳಷ್ಟು ಬದಲಾವಣೆಗಳನ್ನ ತಂದಿತು, ಅದರಲ್ಲಿ ನನ್ನ ಬದಲಾದ ಬಾಸು ಅದರ ಜೊತೆಗೆ ಬಂದ ಪ್ರಾಜೆಕ್ಟು ಇವೆಲ್ಲ ಉಳಿದವನ್ನೆಲ್ಲ ನಗಣ್ಯ ಮಾಡಿವೆ ಎಂದರೆ ತಪ್ಪೇ ಇಲ್ಲ. ಸಿನಿಮಾದಲ್ಲಿ ಆಗೋ ಹಾಗೆ ನಮ್ಮ ಆಫೀಸಿನಲ್ಲಿ ಕಳೆದ ಐದು ವಾರಗಳಲ್ಲಿ ಅದೆಷ್ಟೋ ಬದಲಾವಣೆಗಳು ನಡೆದು ಹೋದವು, ಇದ್ದುದರಲ್ಲಿ ಸ್ಟೇಬಲ್ಲ್ ಆಗಿರೋ ವಿಡಿಯೋ ಡಿವಿಜನ್ನಲ್ಲಿ ಹೀಗಾದರೆ ಇನ್ನುಳಿದ ಕಡೆ ಹೇಗೆ ಎಂದು ಯಾರೂ ಊಹಿಸಿಕೊಳ್ಳಬಹುದು, ಅದೂ ಇನ್ನುಳಿದ ಕಂಪನಿಗಳಲ್ಲಿ ಅದರಲ್ಲೂ ಫೈನಾನ್ಸಿಯಲ್ ಇಂಡಸ್ಟ್ರಿಯಲ್ಲಂತೂ ಭರ್ಜರಿ ಕಷ್ಟವಂತೆ.

ನನ್ನ ಇನ್ ಬಾಕ್ಸುಗಳಲ್ಲಿ ಈಗಾಗಲೇ ಕೆಲಸ ಕಳೆದುಕೊಂಡ ಹಲವರ ರೆಸ್ಯುಮೆ ಬಂದು ಹೋಗಿವೆ. ಅವರಿಗೆ ಇಂತಲ್ಲಿ ಕೆಲಸ ಹುಡುಕಿ ಎನ್ನುವುದಾಗಲೀ ಅಥವಾ ಹೀಗೆ ಮಾಡಿ ಎಂದು ಹೇಳುವುದಾಗಲೀ ಈಗ ಮೊದಲಿನಷ್ಟು ಸುಲಭವಂತೂ ಅಲ್ಲ. ಜನವರಿ ಒಂದರಲ್ಲೇ ಅಮೇರಿಕದಲ್ಲಿ ಸುಮಾರು 600 ಸಾವಿರ ಜನ (ನಾನ್ ಫಾರ್ಮ್) ಪೇರೋಲ್ ನಿಂದ ಹೊರಗೆ ಬಂದರಂತೆ, ಇನ್ನು ಇದೇ ಗತಿ ಇನ್ನೊಂದೆರಡು ತಿಂಗಳು ಅಥವಾ ವರ್ಸ್ಟ್ ಎಂದರೆ ಇನ್ನೊಂದರೆ ಕ್ವಾರ್ಟರು ಮುಂದುವರೆದದ್ದೇ ಆದರೆ ಒಬ್ಬೊರನೊಬ್ಬರು ಕಿತ್ತು ತಿನ್ನೋ ಪರಿಸ್ಥಿತಿ ಬರೋದಂತೂ ನಿಜ. ಯಾವಾಗಲೂ ಸೊನ್ನೆಯಿಂದ ಕೆಳಗೆ ಕೊರೆಯುತ್ತಿರುವ ಛಳಿ ಇರುವ ನಮ್ಮೂರಿನಲ್ಲಿ ನಿನ್ನೆ ಮರ್ಕ್ಯುರಿ ಅರವತ್ತು ಡಿಗ್ರಿ (ಫ್ಯಾರನ್‌ಹೈಟ್) ದಾಟಿ ಮುಂದು ಹೋಯಿತೆಂದುಕೊಂಡು ನಾನು ಜನರೆಲ್ಲ ಶಾಪ್ಪಿಂಗ್ ಮಾಲ್‌ಗಳಲ್ಲಿ ತುಂಬಿರುತ್ತಾರೆ ಎಂದುಕೊಂಡದ್ದು ತಪ್ಪಾಗಿ ಹೋಯಿತು. ವಾಲ್‌ಮಾರ್ಟ್ ಮುಂದಿನ ಪಾರ್ಕಿಂಗ್ ಲಾಟ್‌ಗಳೂ ಖಾಲಿ ಇದ್ದುದು ಇಂತಹ ದಿನಗಳಲ್ಲಿ ದೊಡ್ಡ ಆಶ್ಚರ್ಯವೇ ಸರಿ. ಇವೆಲ್ಲ ಅತಿಕಷ್ಟದ ಫೈನಾನ್ಸಿಯಲ್ ಸಮಯ, ಇಂತಹ ಸಮಯದಲ್ಲಿ ನಾವೆಲ್ಲ ಸರ್ವೈವಲ್ ಮೋಡ್‌ಗೆ ಹೋಗಿಬಿಟ್ಟಿರೋದು ಸಹಜವೇ.

ಈ ಕಷ್ಟದ ಆರ್ಥಿಕ ದಿನಗಳಲ್ಲಿ ಒಬ್ಬರಿಗೊಬ್ಬರಿಗೆ ಫ್ಯಾಮಿಲಿ ಸಪೋರ್ಟ್ ಖಂಡಿತ ಬೇಕೇ ಬೇಕಾಗುತ್ತದೆ. ಬೇಕಾದಷ್ಟು ಇದ್ದು, ತಿಂದು-ತೇಗಿ, ದುಂದು ವೆಚ್ಚ ಮಾಡುವ ದಿನಗಳಿಗಿಂತ ಕಠಿಣ ಆರ್ಥಿಕ ಪರಿಸ್ಥಿತಿ ಇರುವ ದಿನಗಳಲ್ಲೇ ಫ್ಯಾಮಿಲಿಗಳು ಒಬ್ಬರಿಗೊಬ್ಬರು ಕಷ್ಟಕ್ಕಾಗುವುದು ಎನ್ನುವುದು ನನ್ನ ಥಿಯರಿ. ಈ ದಿನಗಳಲ್ಲಿ ಎಷ್ಟೇ ಕಷ್ಟ ಬಂದರೂ ನಾವು ಒಬ್ಬೊರಿಗೊಬ್ಬರು ಆಗಿಯೇ ತೀರುತ್ತೇವೆ ಎನ್ನೋದು ಒಂದು ಕುಟುಂಬದ ಮೂಲ ಮಂತ್ರವಾಗಿ, ಜನರೆಲ್ಲ ದಿನ-ವಾರ-ತಿಂಗಳುಗಳನ್ನು ನಿಧಾನವಾಗಿ ತಳ್ಳುತ್ತಲಿರುವಾಗ ಜಗಳ-ವೈಮನಸ್ಯ-ವಿಚ್ಛೇದನಗಳಿಗೆ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಎಂತಲೇ ಹೇಳಬೇಕಾಗುತ್ತದೆ. ಜೊತೆಗೆ ಪ್ರತಿಯೊಂದನ್ನು ಒಟ್ಟಿಗಿಡುವುದಕ್ಕೆ ಎಷ್ಟು ದುಡ್ಡು ತೆರಬೇಕಾಗುತ್ತದೆಯೋ ಅದನ್ನೆಲ್ಲ ವಿಭಜಿಸೋದಕ್ಕೂ ಹೆಚ್ಚೂಕಡಿಮೆ ಅಷ್ಟೇ ಖರ್ಚಾಗುತ್ತದೆ ಎಂದರೂ ತಪ್ಪಲ್ಲ.

ನಮ್ಮ ಇನ್‌ವೆಷ್ಟ್‌ಮೆಂಟ್ ಪೋರ್ಟ್‌ಫೋಲಿಯೋ ಆಗಲೀ, ನಮ್ಮ ಉಳಿತಾಯವನ್ನಾಗಲೀ ನೋಡಿದರೆ ಕಣ್ಣಲ್ಲಿ ನೀರೇ ಬರುತ್ತೆ. ಕಳೆದ ವರ್ಷ ಪ್ರತಿಶತ ನಲವತ್ತರಷ್ಟು ಮೌಲ್ಯದಲ್ಲಿ ಕುಸಿದಿದ್ದ ನಂಬರುಗಳಿಗೆ ಈ ವರ್ಷದ ಜನವರಿಯಲ್ಲಿ ಮತ್ತೂ ಹತ್ತು ಪರ್ಸೆಂಟ್ ಕಡಿತ. ಇವೆಲ್ಲ ಇಳಿಮುಖದಿಂದಾಗಿ ನನ್ನಂತಹವರಿಗೆ ಸುಮಾರು ಆರೇಳು ವರ್ಷಗಳಲ್ಲಿ ದುಡಿದು-ಕೂಡಿಹಾಕಿದ್ದು ಏನೇನೂ ಇಲ್ಲ ಎನ್ನುವಂಥ ಪೆಚ್ಚು ಅನುಭವ. ಹ್ಞೂ, ಇವತ್ತಲ್ಲ ನಾಳೆ ಮುಂದೆ ಬಂದೇ ಬರುತ್ತೆ ಆದರೆ ನಮ್ಮ ನಂಬರುಗಳೆಲ್ಲ ಈಗ ಏಳು ವರ್ಷದ ಕೆಳಗೆ ಹೋಗಿವೆ, ಇದು ಇನ್ನು ಮೇಲೆ ಬರಲು ಮೂರು ವರ್ಷಗಳಾದರೂ ಬೇಕು, ಅಲ್ಲಿಗೆ ಈ ಹತ್ತು ವರ್ಷಗಳಲ್ಲಿ ನಾವು ಕಡಿದ್ದು ಹಾಕಿದ್ದು ಶೂನ್ಯ, ಅಷ್ಟೇ. ಈ ನಂಬರುಗಳಿಗೆಲ್ಲ ನನ್ನ ಧಿಕ್ಕಾರವಿರಲಿ, ಅದರ ಬದಲಿಗೆ ಚಿರಾಸ್ತಿ (immovable assett), ಅನ್ನೋದನ್ನೇನಾದರೂ ಗಳಿಸಿದ್ದರೆ ಅದು ಇಷ್ಟರ ಮಟ್ಟಿಗೆ ಕುಸಿಯುತ್ತಿರಲಿಲ್ಲ. ಉದಾಹರಣೆಗೆ ಹತ್ತು ವರ್ಷದ ಹಿಂದೆ ಒಂದೈದು ಎಕರೆ ತೋಟ ಮಾಡಬಹುದಾದ ಭೂಮಿಯನ್ನು ಖರೀದಿಸಿ ಅದರಲ್ಲಿ ಥರಥರನ ವಾಣಿಜ್ಯ ಬೆಳೆಯನ್ನು ಆರಂಭಿಸಿದ್ದರೆ ಇವತ್ತಿಗೆ ಒಂದು ಗಂಜಿ ಕಾಸಿನ ಆದಾಯವಾದರೂ ಬರುತ್ತಿತ್ತು.

ನಾವು ಮೊದಲೆಲ್ಲ - ’ಅಮೇರಿಕಕ್ಕೆ ಏಕೆ ಬಂದಿರಿ?’ ಎನ್ನುವ ಪ್ರಶ್ನೆಯನ್ನು ಕಠಿಣವಾದ ಪ್ರಶ್ನೆ ಎಂದುಕೊಳ್ಳುತ್ತಿದ್ದೆವು, ಈಗ ’ಭಾರತಕ್ಕೆ ಏಕೆ ಹಿಂತಿರುಗಿ ಹೋಗಬೇಕು?’ ಎನ್ನುವುದು ಅದಕ್ಕಿಂತ ಕಠಿಣ ಪ್ರಶ್ನೆಯಾಗಿ ತೋರುತ್ತಿದೆ. ಮೊದಲೆಲ್ಲ ಹಿಂತಿರುಗಿ ಹೋಗೋದಾದರೂ ಒಂದು ಆಫ್ಷನ್ನ್ ಆಗಿತ್ತೋ ಏನೋ, ಈಗಂತೂ - ಥ್ಯಾಂಕ್ಸ್ ಟು ಹತ್ತು ವರ್ಷದ ಹಿಂದಿನ ನಂಬರ್ಸ್ - ನಾವು ಹಿಂತಿರುಗಿ ಹೋಗೋದು ಸಾಧ್ಯವೇ? ಎಲ್ಲಿಗೆ, ಹೇಗೆ, ಯಾವ ಕೆಲಸಕ್ಕೆ, ಯಾವ ಊರಿಗೆ, ಎಂದು - ಮೊದಲಾದ ಪ್ರಶ್ನೆಗಳಿಗೆ ಯಾವ ಉತ್ತರವಂತೂ ತೋರೋದಿಲ್ಲ. ಅಮೇರಿಕದ ವ್ಯವಸ್ಥೆಯನ್ನು ಆಧರಿಸಿ ಉಳಿದ ವ್ಯವಸ್ಥೆಗಳು, ಉಳಿದವನ್ನು ಆಧರಿಸಿ ಆಮೇರಿಕದ್ದು ಎನ್ನುವಲ್ಲಿ ಇಲ್ಲಿನ ಕಷ್ಟ ಎಲ್ಲಾ ಕಡೆಗಿದೆ - ಬೆಂಗಳೂರಿನಿಂದ ಹಿಡಿದು ಬೀಜಿಂಗ್‌ನವರೆಗೆ ಎಲ್ಲರಿಗೂ ಬಿಸಿ ಈಗಾಗಲೇ ತಟ್ಟಿದೆ. ಕೆಲಸ ಕಳೆದುಕೊಳ್ಳುವವರ ಲೆಕ್ಕ ಮುಗಿಲು ಮುಟ್ಟಿದೆ ಹಾಗೇ ಕಂಪನಿಗಳೂ ಸಹ ಸರ್ವೈವಲ್ಲ್ ಮೋಡಿಗೆ ಹೋಗಿ ಬಿಟ್ಟಿವೆ, ಅನಗತ್ಯ ಖರ್ಚು ವೆರ್ಚಗಳು ಈಗಾಗಲೇ ನಿಂತು ಹೋಗಿವೆ. ನಮ್ಮ ಕಂಪನಿಯಲ್ಲಿ ಮೊದಲೆಲ್ಲ ಟೀಮ್ ಲಂಚ್ ಅನ್ನೋದನ್ನು ನನ್ನಂಥವರು ಎಷ್ಟು ಸಾರಿ ಬೇಕಾದರೂ ಸುಲಭವಾಗಿ ಹೊಂದಿಸಿಕೊಳ್ಳಬಹುದಾಗಿತ್ತು, ಈಗ ಅವೆಲ್ಲಕ್ಕೂ ಎಕ್ಸಿಕ್ಯೂಟಿವ್ ಪರ್ಮಿಷನ್ನ್ ಬೇಕಾಗಿದೆ. ನಮ್ಮ ಆಫೀಸಿನ ಉಳಿದೆಲ್ಲ ಡಾಕ್ಯುಮೆಂಟುಗಳಿಗೆ ಹೋಲಿಸಿದಾಗ spreadsheet rules! ಇಲ್ಲಿರುವ ನಂಬರುಗಳೇ ಪ್ರತಿಯೊಂದನ್ನು ನಿರ್ಧರಿಸೋದು, ಇಲ್ಲಿರುವ ನಂಬರುಗಳಿಗಿಂತ ಹೊರತಾಗಿ ಇನ್ನೇನೂ ಇಲ್ಲ.

1930 ರ ದಶಕದ ಡಿಪ್ರೆಷ್ಷನ್ನಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಚೀನಾ ದೇಶದಲ್ಲಿ ಎಷ್ಟೋ ಜನ ತಮ್ಮ ಮನೆ-ಜಮೀನುಗಳನ್ನು ಮಾರಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೆಚ್ಚಿನ ಉತ್ಪನ್ನಕ್ಕೆಂದು ಹಣ ತೊಡಗಿಸಿದ್ದರಂತೆ, ಅವರದ್ದೆಲ್ಲ ಪರಿಸ್ಥಿತಿ ಈಗ ಹೇಗಿದ್ದಿರಬಹುದು? ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಮಾರ್ಕೆಟ್ಟಿನಲ್ಲಿ ತಮ್ಮ ಹಣವನ್ನು ತೊಡಗಿಸಿ ಶಾರ್ಟ್ ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗಿದ್ದಾಗ, ಈಗಿನ ರಿಸೆಷನ್ನುಗಳು ಹೆಚ್ಚು ಜನರನ್ನು ತೊಂದರೆಗೀಡು ಮಾಡುತ್ತವೆ ಎನ್ನುವುದು ನನ್ನ ಲೆಕ್ಕ. ಸರ್ಕಾರಿ ಹಾಗೂ ಖಾಸಗಿ ನೌಕರರ ಸಂಖ್ಯೆಯಲ್ಲೂ ಬಹಳಷ್ಟು ವ್ಯತ್ಯಾಸವಾಗಿದೆ. ಮೊದಲೆಲ್ಲ ಸರ್ಕಾರದ ಕೆಲಸವೇ ಉನ್ನತ ಕೆಲಸ ಎನ್ನುವ ದಕ್ಷಿಣ ಭಾರತದಲ್ಲಿ ಇಂದು ಬೇಕಾದಷ್ಟು ಖಾಸಗಿ ಕೆಲಸಗಳು ಹುಟ್ಟಿಕೊಂಡಿವೆ (ಎಂಭತ್ತು, ತೊಂಭತ್ತರ ದಶಕದಲ್ಲಿ ಬದಲಾದ ಅಂಕಿಅಂಶಗಳ ಸಹಾಯದಿಂದ). ಬೆಂಗಳೂರು, ಮೈಸೂರು ಎನ್ನುವ ನಮ್ಮ ನೆರೆ ಊರುಗಳಲ್ಲಿ ಮಾರ್ಟ್‌ಗೇಜ್‌ನಲ್ಲಿ ಮನೆ ತೆಗೆದುಕೊಂಡವರ ಸಂಖ್ಯೆ ಹೆಚ್ಚಿದೆ. ನಾವು ಸಾಲವಿಲ್ಲದ ಕುಟುಂಬ ಎನ್ನುವಲ್ಲಿ, ಸಾಲದ ಮೇಲೇ ನಾವು ನಿಂತಿರೋದು ಎನ್ನುವ ಪ್ರಸಂಗ ಬಂದಿದೆ. ಹಾಗಿರುವಲ್ಲಿಯೇ ನಮ್ಮ-ನಿಮ್ಮ ಡಿಪೆಂಡೆನ್ಸಿ ಗ್ಲೋಬಲ್ ಮಾರ್ಕೆಟ್ ಮೇಲೆ ಹೆಚ್ಚಿರೋದು. ಹಳ್ಳಿಯ/ಪಟ್ಟಣದ ವರ್ಷದ ಕಂದಾಯವನ್ನು ಕಟ್ಟಿಕೊಂಡು ಪೆನ್ಷನ್ ಹಣದಲ್ಲಿ ಜೀವನ ಸಾಗಿಸುತ್ತಿರುವ ಪೋಷಕರಿಗೂ ತಾವು ಕೆಲಸ ಮಾಡುತ್ತಿರುವ ಕಾರ್ಪೋರೇಷನ್ನುಗಳ ಹಾಗೇ ಎಲ್ಲವೂ ಸಾಲದ ಮೇಲೆ ನಿಂತು ತಿಂಗಳು-ತಿಂಗಳಿಗೆ ಕಂತು ಕಟ್ಟುವ ಮುಂದಿನ ಜನರೇಷನ್ನಿಗೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಗೆ ಒಂದಿಷ್ಟು ಜನರ ಜೀವನ ಶೈಲಿ ದಿಢೀರ್ ಬದಲಾಗಿ ಹೋಗಿದ್ದೂ ಇದಕ್ಕೆಲ್ಲ ಪುಷ್ಟಿ ತಂದಿದೆ, ಅಲ್ಲಲ್ಲಿ ನಾಯಿಕೊಡೆಗಳ ಹಾಗೆ ಹುಟ್ಟಿದ ಕಂಪನಿಗಳಲ್ಲಿ ಕೆಲಸ ಮಾಡುತ್ತ ನಮ್ಮೂರಿನ ಹುಡುಗ-ಹುಡುಗಿಯರು ವರ್ಷಕ್ಕೆ ಲಕ್ಷಾಂತರ ಎಣಿಸೋದಕ್ಕೆ ಶುರು ಮಾಡಿದ ಮೇಲೆ ಆರ್ಥಿಕ ಅವಲಂಭನೆಗೆ ಹೊಸದೊಂದು ಅರ್ಥ ಹುಟ್ಟಿದೆ.

ಕಾದುಕೊಂಡು ಕುಳಿತಿರೋದನ್ನು ಬಿಟ್ಟು ಇನ್ನೇನನ್ನು ಮಾಡಲು ಸಾಧ್ಯ ಎಂದು ಯೋಚಿಸಿದರೆ ಹೆಚ್ಚು ಆಪ್ಷನ್ನುಗಳೇನು ತೋಚುತ್ತಿಲ್ಲ. ಡ್ರಾಸ್ಟಿಕ್ ಬದಲಾವಣೆಗಳನ್ನು ಮಾಡುವ ಮೊದಲು ಬೇಕಾದಷ್ಟು ಆಲೋಚಿಸಿದರೂ ಯಾವ ದಾರಿಯನ್ನು ಆಯ್ದುಕೊಂಡರೂ ಹೊಡೆತ ಬೀಳುವುದಂತೂ ಗ್ಯಾರಂಟಿ ಆಗಿದೆ. ನೀರಿನಲ್ಲಿ ಮುಳುಗಿದೋರಿಗೆ ಛಳಿಯೇನು ಮಳೆಯೇನು ಅಂತಾರಲ್ಲ ಹಾಗೆ ಸುಮ್ಮನಿರಬೇಕು, ಅಷ್ಟೇ.

***

An executive in my company..."I don't mind the change (move), thank god I have a job, it is good to be busy!'