Showing posts with label ವಿಡಂಬನೆ. Show all posts
Showing posts with label ವಿಡಂಬನೆ. Show all posts

Sunday, February 04, 2024

ಸ್ಥಳಾಂತರ

ಒಂದು ಶುಭ್ರವಾದ ಮಧ್ಯಾಹ್ನ ಎಲ್ಲರೂ ಸುಧಾ ಹೋಟ್ಲು ಸರ್ಕಲ್ ಹತ್ರ ಸೇರಿದ್ರು. ಅದು ಸರ್ಕಲ್ ಅಂದ್ರೆ ನಾಲ್ಕು ರಸ್ತೆ ಕೂಡೋ ಜಾಗಾನೇ ಅಂತ ಆಗಬೇಕಿಲ್ಲ.  ಅದೊಂದು ಸಣ್ಣ ವ್ಯಾಪಾರದ ಸ್ಥಳ. ಒಂದು ಮುಖ್ಯ ರಸ್ತೆ, ಅದಕ್ಕೆ ಲಂಭವಾಗಿ ಹೊರಟಿರೋ ಮತ್ತೊಂದು ರಸ್ತೆ ಅನ್ನಬೇಕು ಅಷ್ಟೇ. ಈ ಊರಿನ ಮುಖ್ಯವಾದ ಸ್ಥಳಕ್ಕೆ ಯಾವ ಒಬ್ಬ ಮಹಾತ್ಮರ ಹೆಸರೂ ಇನ್ನೂ ಯಾರೂ ಏಕೆ ಇಟ್ಟಿಲ್ಲ ಅನ್ನೋದು ಒಳ್ಳೆಯ ಪ್ರಶ್ನೆ.

ಹೀಗಿರೋ ಸ್ಥಳ, ಬೆಳಿಗ್ಗೆ ಮತ್ತು ಸಂಜೆ ಹೂವು ತರಕಾರಿ ಮಾರೋ ಜನರಿಂದ ಮತ್ತು ಅವನ್ನು ಖರೀದಿ ಮಾಡೋ ಗ್ರಾಹಕರಿಂದ ಒಂದು ರೀತಿ ಗಿಜುಗುಟ್ಟುತ್ತಾ ಇರೋದನ್ನ ಬಿಟ್ರೆ, ಮಧ್ಯಾಹ್ನ ಊಟದ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ತಣ್ಣಗೇ ಇರೋದು ಅಂತ ಹೇಳ್‌ಬಹುದು.

ಈ ಮೂರು ರಸ್ತೆಗಳು ಕೂಡುವಂತ ಸ್ಥಳದಲ್ಲಿ ಇರೋದು ಸುಧಾ ಹೋಟ್ಲು. ಘಟ್ಟದ ಕೆಳಗಿಂದ ದಶಕಗಳ ಹಿಂದೆ ಬಂದು, ಈ ಊರಿನಲ್ಲಿ ನೆಲೆನಿಂತ ಒಂದು ಸಣ್ಣ ಭಟ್ಟರ ಹೋಟೆಲ್. ಅಂದು ಅವರ ಹಿರಿಯ ಮಗಳ ಹೆಸರಿನಿಂದ ಆರಂಭವಾಗಿದ್ದು, ಇವತ್ತಿಗೂ ಇನ್ನೂ ಮುಂದುವರೆಯುತ್ತಿದೆ. ಭಟ್ಟರು ಕಾಲವಾಗಿ ಅದೆಷ್ಟೋ ವರ್ಷಗಳು ಸಂದಿವೆ. ಅವರ ಹೆಂಡತಿ ಇನ್ನೂ ತಮ್ಮ ಎಂಬತ್ತರ ಪ್ರಾಯದಲ್ಲಿ ಇದ್ದರೂ, ಆಗಾಗ್ಗೆ ಹೋಟೆಲ್ ಹಿಂದೆ ಮುಂದೆ ಸುಳಿಯುತ್ತಾರಾದರೂ, ಅವರು ಹಾಕಿಕೊಟ್ಟ ರೆಸಿಪಿ ಅಲ್ಲಿನ ಜನರ ಬಾಯಿ ರುಚಿಯಲ್ಲಿ ಗಾಢವಾಗಿ ನಿಂತು ಬಿಟ್ಟಿದೆ.

ದಿನ ಬೆಳಗ್ಗೆ ತಿಂಡಿಗೆ ಜನ ಅಷ್ಟೊಂದು ಬರ್ತಿರಲಿಲ್ಲ, ಆದ್ರೆ, ಮಧ್ಯಾಹ್ನ ಊಟದ ಹೊತ್ತಿಗೆ ಮಾತ್ರ ಜನ ದಂಡಿಯಾಗಿ ಅದೆಲ್ಲೆಲ್ಲಿಂದಲೋ ಬರೋರು. ಅಮ್ಮನ ಕೈ ರುಚಿ - ಅಂತಲೇ ಫ಼ೇಮಸ್ಸಾಗಿರೋ ಘಮಘಮಿಸೋ ಉಪ್ಪಿಟ್ಟು, ಚಿತ್ರಾನ್ನ, ಪುಳಿಯೋಗರೆ, ಅನ್ನ-ಸಾಂಬಾರ್ ಜೊತೆ ಜೊತೆಗೆ ಕೀರು-ಪಾಯಸ ಅಂತಾ ಏನಾದ್ರೂ ಸಿಹಿ ಪ್ರತಿದಿನ ಸಿಕ್ಕೇ ಸಿಗೋದು. ಈ ಬೆಲೆ ಏರಿಕೆ ದಿನಗಳಲ್ಲಿ ಕಡಿಮೆ ಬೆಲೆಗೆ ಪುಷ್ಕಳ ಭೋಜನ ಅನ್ನೋ ಮನೆ ಮಾತಿನ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಂದೋರೆಲ್ಲ ಸುಧಾ ಹೋಟ್ಲಲ್ಲೇ ಊಟ ಮಾಡೋದಕ್ಕೆ ಖಾಯಸ್ ಮಾಡ್ತಿದ್ರು ಅನ್ನಬಹುದು.

ಎಲ್ಲರ ಬಾಯಲ್ಲಿ "ಸುಧಾ ಹೋಟ್ಲು" ಅಂತ ಇದ್ದುದ್ದಕ್ಕೆ, ಭಟ್ಟರ ಮಗ "ಹೋಟೇಲ್ ಸುಧಾ" ಎಂದು ಇಂಗ್ಲೀಷಿನಲ್ಲಿ ಬರೆಸಿ ದಪ್ಪ ಅಕ್ಷರಗಳಲ್ಲಿ ಬೋರ್ಡು ಹಾಕಿದ ದಿನವೇ ನಮ್ಮೂರಿಗೆ ಆಧುನಿಕತೆ ಬಂದಿದ್ದೂ ಅಂತ ಅನ್ಸುತ್ತೆ. ಯಾರು ಏನ್ ಬೇಕಾದ್ರೂ ಬೋರ್ಡ್ ಹಾಕ್ಕೊಳ್ಳಿ, ಜನ್ರ ಬಾಯಲ್ಲಿ ಅದು ಸುಧಾ ಹೋಟ್ಲು, ಕೆಲವೊಮ್ಮೆ ಓಟ್ಲು ಆಗಿದ್ದು, ಮತ್ತೆ ಹಾಗೇ ಎಲ್ಲ ಕಡೆಗೂ ಹೇಳಿ-ಕೇಳೀ ಬರ್ತಾ ಇದ್ದದ್ದು ನಮ್ಮೂರಿನ ಒಂದು ಅಂಗವಾಗಿದ್ದಂತೂ ನಿಜ.

ಕಾಲ ಕ್ರಮೇಣ ಎಲ್ಲರೂ ಎಲ್ಲ ಕಡೆಗಳಲ್ಲಿ ವಲಸೆ ಹೋಗಿ ನೆಲೆ ನಿಂತ ಮೇಲೆ, ಭಟ್ಟರ ಕೊನೇ ಮಗ ಕೊಟ್ರೇಶಿ ಹೋಟ್ಲನ್ನ ಇನ್ನೂ ನಡೆಸಿಕೊಂಡು ಬರ್ತಾ ಇರೋದನ್ನ ಎಂಬತ್ತರ ಗಡಿ ದಾಟಿ ನಿಂತು, ಟೊಂಕ ಬಗ್ಗಿದ್ದರೂ ಮೈ ಬಗ್ಗದೇ ಇನ್ನೂ ಗಟ್ಟಿಯಾಗೇ ಇರೋ ಅಮ್ಮ, ಇವತ್ತಿಗೂ ತನ್ನ ಕೈ ರುಚಿ ಹೋಟೆಲಿನ ಗ್ರಾಹಕರಿಗೆ ತಪ್ಪದಂತೆ ಜತನದಿಂದ ನೋಡಿಕೊಂಡಿರುವುದು ನಮ್ಮೂರಿನ ಮೂರು ತಲೆಮಾರುಗಳ ಬಾಯಿ ರುಚಿ ಆಗಿ ಹೋಗಿದೆ ಎನ್ನಬಹುದು.

***

ಬಾಯಲ್ಲಿ ಮುಂಡು ಬೀಡಿ ಇಟ್ಟುಕೊಂಡು, ಮುಂಡಾಸ ಕಟ್ಟಿಕೊಂಡು ಅಡ್ಡಪಂಚೆಯನ್ನು ಗಂಟು ಹಾಕಿ ಗಟ್ಟಿಗೊಳಿಸಿದ ದಾಂಡಿಗರು ಓಡಾಡುವ ನಮ್ಮೂರಿನ ಬೀದಿಗಳಲ್ಲಿ ಕ್ರಮೇಣ ಪ್ಯಾಂಟು-ಶರಟುಗಳು ಓಡಾಡಲಾರಂಭಿಸಿದವು. ಅದೆಲ್ಲೋ ಒಂದು ಫ಼್ಯಾಕ್ಟರಿ ತೆಗೆದರು ಎನ್ನುವ ಹೆಸರಿನಲ್ಲಿಯೋ, ಅಥವಾ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿ ಹಾದು ಹೋಗುವ ಹೆದ್ದಾರಿಯ ದೆಸೆಯಿಂದ ನಮ್ಮೂರಿನಲ್ಲಿ ಆಗಂತುಕರ ಮತ್ತು ಅಪರಿಚಿತರ ಲವಲವಿಕೆಗಳು ಜೋರಾಗತೊಡಗಿದವು. ಊರಿಗೆ ನಾಲ್ಕು ಲ್ಯಾಂಡ್ ಲೈನುಗಳ ದೂರವಾಣಿ ಇದ್ದಂತಹ ಊರಿನಲ್ಲಿ ದಿಢೀರನೆ ಎಲ್ಲೆಂದರಲ್ಲಿ ಜಂಗಮವಾಣಿಗಳು ಬಂದವೆಂದರೆ? ಅವೇ ರಸ್ತೆಗಳು, ಅವು-ಅವೇ ಊರುಗಳು. ಆದರೆ, ಜನರು ನಿಂತಲ್ಲಿ ನಿಲ್ಲಲಾರರಾದರು. ಹೆಚ್ಚು ಹೆಚ್ಚು ಓಡಾಡುವುದೇ ಉದ್ದೇಶವೆಂಬಂತೆ ಎಲ್ಲರೂ ಎಲ್ಲ ಕಡೆಗೂ ಎಲ್ಲ ಕಾಲಗಳಲ್ಲಿ ಹರಡಿಕೊಳ್ಳುತ್ತಾ ಹೋದರು. ಒಂದು ಕಾಲದಲ್ಲಿ ದುಡ್ಡು ತೆಗೆದುಕೊಂಡು ಊಟ ಕೊಡುವ ಹೋಟೆಲಿನವರೂ ಸಹ, ತಮ್ಮಲ್ಲಿ ಬಂದು ತಿಂದು ಹೋಗುತ್ತಿದ್ದವರನ್ನು ತಮ್ಮ ಮನೆಯವರಂತೆಯೇ ವಿಚಾರಿಸಿಕೊಂಡು, ಅವರ ಹಿಂದು-ಮುಂದುಗಳನ್ನು ಅರಿತುಕೊಂಡಿರುತ್ತಿದ್ದರು. ಸುಧಾ ಹೋಟ್ಲು ಎನ್ನುವ ವೇದಿಕೆಯೊಂದರಲ್ಲೇ ಅನೇಕ ಆಗು-ಹೋಗುಗಳ ಬಗ್ಗೆ ವ್ಯಾಖ್ಯಾನಿಸಲಾಗುತ್ತಿತ್ತು. ಇನ್ನು ಊರಿನಲ್ಲಿದ್ದ ಸೆಲೂನುಗಳೂ, ಬೀಡಾ ಅಂಗಡಿಗಳೂ, ಕಿರಾಣಿ ಗುರಾಣಗಳೂ, ಹಿಟ್ಟಿನ ಮಿಲ್ಲುಗಳೂ ಇನ್ನೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ, ಯಾವೊಂದು ಸಂವಹನದ ಸಮರ್ಪಕ ವ್ಯವಸ್ಥೆಯಿಲ್ಲದಿದ್ದರೂ ಎಲ್ಲವೂ ಸಮರ್ಪಕವಾಗೇ ನಡೆದುಕೊಂಡು ಹೋಗುತ್ತಿತ್ತು. ಊರಿರುವಲ್ಲಿ ಪೋಸ್ಟ್ ಆಫ಼ೀಸು ಇರುವಷ್ಟೇ ಸಹಜವಾಗಿ ಒಮ್ಮೊಮ್ಮೆ ಹೊಡೆದಾಟಗಳೂ, ರೋಧನಗಳೂ, ಒ.ಸಿ. ನಂಬರುಗಳ ಎಕ್ಸ್ ಚೇಂಜುಗಳೂ, ಚುನಾವಣಾ ಪ್ರಣಾಳಿಕೆ ಮತ್ತು ಷಡ್ಯಂತ್ರಗಳೂ ಮೊದಲಾಗಿ ಎಲ್ಲವೂ ಇಂತಹ ಪಬ್ಲಿಕ್ ಸ್ಥಳಗಳಲ್ಲೇ ನಡೆಯುತ್ತಿದ್ದವೆಂದರೆ?

ಈ ಸಂಬಂಧವಾಗೇ ನಮ್ಮ ಹಿರಿಯರು ಹೇಳಿದ್ದಿರಬಹುದು - ನಾಲ್ಕು ಜನ ನಂಬುವಂತೆ ಬದುಕು ಮಗಾ! ಎಂಬುದಾಗಿ.

***

ಇತ್ತೀಚೆಗಂತೂ ನಮ್ಮೂರಿನ ರಸ್ತೆಗಳಲ್ಲಿ ಹೊರಗಿನವರದೇ ಆಟಾಟೋಪ. ಮಿರಿಮಿರಿ ಮಿಂಚುವ ಕಾರಿನಿಂದ ಇಳಿದು ರಸ್ತೆಗೆ ಓಡುವ ಮಕ್ಕಳಿಗೆ ಅವರ ಹಿಂದೆ ಮುಂದೆ ಯಾವ ವಾಹನಗಳು ಬಂದರೂ ಕಾಣವು. ಇಂತಹ ಮಕ್ಕಳನ್ನೇ ತಮ್ಮ ವೃತ್ತದ ಕೇಂದ್ರದಲ್ಲಿಟ್ಟುಕೊಂಡು ಸುತ್ತುವ ಪೋಷಕರಿಗೆ ಯಾವಾಗಲೂ ಅವುಗಳ ಸುತ್ತ ಸುತ್ತುವುದೇ ಕಾಯಕವಾಗಿ ಪರಿಣಮಿಸಿದೆ. ಗ್ರಾಹಕರ ಸಂತುಷ್ಟಿಯೇ ನಮ್ಮ ಖುಷಿ, ಎಂದು, ಒಂದಕ್ಕೆರಡು ರೇಟ್ ಹಾಕಿ ಸಾಮಾನ್ಯ ಗೃಹಬಳಕೆ ವಸ್ತುಗಳನ್ನೇ ಬಿಂಕ ಬಿನ್ನಾಣದಿಂದ ಮಾರಾಟ ಮಾಡುವ ಅಂಗಡಿಯ ಹುಡುಗಿಯರು ಊರಿನ ಸೇಲ್ಸ್ ಅನ್ನು ಅದ್ಯಾವಾಗಲೋ ಹೆಚ್ಚಿಸಿಯಾಗಿದೆ. ಅದೇನೇ ಆಗಲಿ, ಬಿಡಲಿ ಇವತ್ತಿಗೂ ಸುಧಾ ಹೋಟ್ಲಿಗೆ ಹೋಗುವ ಗ್ರಾಹಕರ ಸಂಖ್ಯೆಯಲ್ಲಾಗಲೀ, ಆ ಹೋಟೆಲಿನ ಆಯ-ವ್ಯಯದಲ್ಲಾಗಲೀ ಯಾವ ವ್ಯತ್ಯಾಸವೂ ಆದಂತಿಲ್ಲ... ಎಂದುಕೊಳ್ಳುವ ಹೊತ್ತಿಗೆ...

ಒಂದು ದಿನ ಒಳ್ಳೆಯ ನಾಜೂಕಾದ ಬಟ್ಟೆ ಧರಿಸಿದ ಯುವಕರು ದಿಢೀರನೇ ಕಾರಿನಲ್ಲಿ ಬಂದರು. ಆ ಮೂರು ರಸ್ತೆಗಳು ಕೂಡುವ ಕೇಂದ್ರದಲ್ಲಿ, ಸುಧಾ ಹೋಟ್ಲು ಇರುವ ಮೂಲೆಯಲ್ಲಿ ಹೊಸ ಬೈಕ್ ಶೋ ರೂಮ್ ಒಂದು ಆರಂಭವಾಗುವ ಸೂಚನೆಗಳನ್ನು ನೀಡಿ, ತಣ್ಣಗಿದ್ದ ಊರಿನಲ್ಲಿ, ಹೊಸ ಕಲರವವನ್ನು ಹುಟ್ಟು ಹಾಕುವ ಹಾಗೆ, ನೀರಿನಲ್ಲಿ ಕಲ್ಲು ಎಸೆದು ಹೋದಂತೆ ಮಾಡಿ ಹೋದರು.

ಶೋ ರೂಮ್ ತೆರೆದ ಮೊದಲ ವಾರ ಬೈಕ್ ಶೋ ರೂಮಿಗೆ ಬರುವ ಗ್ರಾಹಕರನ್ನು, ಲಲನೆಯರು ಹೂವಿನ ಪಕಳೆಗಳನ್ನು ಅವರು ನಡೆದು ಬರುವ ದಾರಿಯಲ್ಲಿ ಎರಚಿ ಸ್ವಾಗತಿಸುತ್ತಾರಂತೆ ಎನ್ನುವ ಸುದ್ದಿ ನಮ್ಮೂರಿನಲ್ಲಿ ಸದ್ದು ಮಾಡತೊಡಗಿತು. ಆದರೆ, ಒಂದು ಕಡೆ ಚಂಬಣ್ಣನವರ ಕಿರಾಣಿ ಅಂಗಡಿ, ಅದರ ಪಕ್ಕ ರಾಜೂ ಇಟ್ಟಿರುವ ಇಸ್ತ್ರಿ ಅಂಗಡಿ, ಅದರ ಪಕ್ಕದಲ್ಲಿ ಸೇಟ್ ಇಟ್ಟುಕೊಂಡ ಸೆಲೂನನ್ನು ಬಿಟ್ಟರೆ,. ಆ ಸರ್ಕಲ್‌ನಲ್ಲಿ ಇದ್ದದ್ದು ಸುಧಾ ಹೋಟ್ಲು ಮಾತ್ರವೇ! ಈ ಬೈಕ್ ಶೋ ರೋಮ್ ಅನ್ನು ಕಟ್ಟಲು, ಬೆಳೆಸಲು ಯಾವುದನ್ನ ಆಹುತಿ ತೆಗೆದುಕೊಳ್ಳುತ್ತಾರೋ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಯಿತು.

ಬೆಳೆಯುವ ಊರಿಗೆ ಬೈಕುಗಳು ಬೇಕು ನಿಜ... ಆದರೆ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ಕಟಿಂಗ್ ಶಾಪು ಮತ್ತು ಎಲ್ಲರ ನೆಚ್ಚಿನ ಹೋಟೆಲ್ಲು... ಯಾರು ಯಾರಿಗೆ ಬೇಕು  ಯಾರು ಯಾರಿಗೆ ಬೇಡ? ಹೀಗಿರುವಾಗ ಆ ಒಂದು ಕರಾಳ ದಿನವೂ ಬಂದೇ ಬಿಟ್ಟಿತು.

ಸುಮಾರು ಐದಾರು ಕಾರುಗಳಲ್ಲಿ ಬಂದಿಳಿದ ದಾಂಡಿಗರು, ಹೊಟೇಲಿನ ಕಡೆಗೆ ಧಾವಿಸಿದರು. ಇವರೆಲ್ಲ ಗುಂಪಾಗಿ ಒಟ್ಟಿಗೆ ಬಂದ ರಭಸವನ್ನು ಕಂಡು, ಗಲ್ಲಾ ಪೆಟ್ಟಿಗೆ ಮುಂದೆ ಕುಳಿತಿದ್ದ ಕೊಟ್ರೇಶಿ, ’ಪರವಾಗಿಲ್ಲ ಇವತ್ತು ಜನ ಮುಂಜಾನೆ ಹನ್ನೊಂದೂವರೆಗೇ ಊಟಕ್ಕೆ ಬರೋಕೆ ಶುರು ಮಾಡಿದ್ದಾರೆ...’ ಎಂದು ಕಣ್ಣರಳಿಸಿ ನೋಡುತ್ತಿರುವ ಹೊತ್ತಿಗೆ ಅದೇನೇನೋ ಮಾತುಗಳು ಕೇಳ ತೊಡಗಿದವು. ಬಂದ ದಾಂಢಿಗರು ಗಡ್ಡ ಧಾರಿಗಳು, ಅದೆಲ್ಲೋ ದೂರದ ಪಂಜಾಬಿನ ಲೂಧಿಯಾನದವರಂತೆ... ಅವರಲ್ಲಿ ಕೆಲವರು ದಷ್ಟಪುಷ್ಟರೂ, ಕೈಗೆ ವಿಷ್ಣುವರ್ಧನ್ ಬಳೆ ಧರಿಸಿದವರೂ ಇದ್ದರು. ಇಂಗ್ಲೀಷು, ಹಿಂದಿಗಳಲ್ಲಿ ಮಾತನಾಡುತ್ತಿದ್ದ ಜನರು ಹೋಟೇಲಿನಲ್ಲಿ ಒಮ್ಮೆಲೇ ಕೋಲಾಹಲ ನಡೆಸತೊಡಗಿದರು. ಅವರ ಮಾತಿನ ಸಾರಾಂಶದಂತೆ ಸುಧಾ ಹೋಟ್ಲು ಜಾಗದ ಸಮೇತ ಮಾರಾಟವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೈಕ್ ಶೋ ರೂಮ್ ಆಗಿ ಪರಿವರ್ತನೆಗೊಳ್ಳಲಿದೆ. ಈ ಆಸ್ತಿಯ ವ್ಯಾಪಾರವನ್ನೆಲ್ಲ ಕೊಟ್ರೇಶಿಯ ಅಣ್ಣ, ಆನಂದನೇ ಬೆಂಗಳೂರಿನಲ್ಲಿ ಕುಳಿತು ಮಾಡಿದ್ದಾನಂತೆ. ಅವನ ಹೆಂಡತಿಗೂ ಕೊಟ್ರೇಶಿಗೂ ಅಷ್ಟಾಗಿ ಆಗಿ ಬರದಿದ್ದರಿಂದ ಅಣ್ಣ ತಮ್ಮಂದಿರಲ್ಲಿ ಯಾವೊಂದು ಬಾಂಧವ್ಯವೂ ಉಳಿಯದೇ, ಕೊಟ್ರೇಶಿ ಈ ರೀತಿ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಸ್ಥಿತಿ ಬಂದೊದಗಿತಂತೆ.

ಈ ದಾಂಡಿಗರೆಲ್ಲ ಬಂದು ಬೆಂಚು-ಮೇಜುಗಳನ್ನು ಎಳೆದಾಡಿ ಒಂದು ಕಡೆಗೆ ಗುಂಪು ಹಾಕುವ ಹೊತ್ತಿಗೆ ಅಲ್ಲಿ ಕಣ್ಣೀರಿಡುವ ದೃಶ್ಯ ಭಟ್ಟರ ಹೆಂಡತಿಯದು...’ನಾನು ಸಾಯುವ ಮುಂಚೆ ಇಂತದ್ದನ್ನು ನೋಡಬೇಕಿತ್ತಾ? ದೇವರೇ, ನನ್ನನ್ಯಾಕೆ ಇನ್ನೂ ಜೀವಂತವಾಗಿಟ್ಟಿದ್ದೀಯ?’ ಎಂದು ಪ್ರಲಾಪಿಸಿ ಆರ್ತತೆಯಲ್ಲೂ ಇರುವಿಕೆಯನ್ನು ದೂರಿ, ಸುತ್ತಲಿನವರಿಂದ ಸಂತಾಪವನ್ನು ಗಳಿಸಿಕೊಳ್ಳುವುದರಲ್ಲೇನೋ ಶಕ್ತಳಾದ ಹೆಂಗಸು, ತನ್ನ ಹೋಟಲನ್ನು ಉಳಿಸಿಕೊಳ್ಳಲು ಅಸಹಾಯಕಳಾಗೇ ಕಂಡಳು.

ಹೋಟೆಲಿನ ನೈಋತ್ಯ ಮೂಲೆಯಲ್ಲಿ ಇನ್ನೂ ಈಗಷ್ಟೆ ಕತ್ತರಿಸಿಟ್ಟ ಕೊತ್ತುಬರಿ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪುಗಳು ಚಟ್ಟಂಬಡೆಯಾಗಿ ಹೊರಬರುವ ಹುನ್ನಾರದಲ್ಲಿ ಕಲಿಸಿದ ಹಿಟ್ಟಿನೊಂದಿಗೆ ಒಡನಾಟವನ್ನು ಬೆಳೆಸುವ ಆಲೋಚನೆಯಲ್ಲಿದ್ದವು. ಗ್ಯಾಸ್ ಒಲೆಯ ಮೇಲೆ ದೊಡ್ಡ ಬಾಂಡಲೆಯೊಂದು ತನ್ನ ಹಿನ್ನೆಲೆಯನ್ನು ಕೆನ್ನಾಲಗೆಗಳಿಗೆ ಒಡ್ಡಿಕೊಂಡಿದ್ದರೂ ಶಾಂತ ಚಿತ್ತನಾಗಿ ತನ್ನೊಳಗೆ ಹುದುಕಿಕೊಂಡಿದ್ದ ಎಣ್ಣೆಯೊಳಗೆ ಒಂದು ಗುಳ್ಳೆಯೂ ಬಾರದಂತೆ ನೋಡಿಕೊಂಡಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಒಕ್ಕರಿಸುವ ಹಸಿದ ಗ್ರಾಹಕರ ದಣಿವಾರಿಸಲು ಎಲ್ಲ ಸ್ಟೀಲಿನ ನೀರಿನ ಜಗ್ಗುಗಳೂ ತಮ್ಮೊಳಗೆ ತುಂಬಿಕೊಂಡಿದ್ದ ನೀರಿನ ಅಂತರಂಗದ ಶಕ್ತಿಯ ಫಲದಿಂದ ತಮ್ಮ ಹೊರ ಮೇಲ್ಮೈಯಲ್ಲಿಯೂ ಸಣ್ಣ ನೀರಿನ ಹನಿಗಳನ್ನು ಪ್ರಚುರ ಪಡಿಸತೊಡಗಿದ್ದವು.  ಮೇಲೆ ಇದ್ದ ಕರಿ ಬಣ್ಣದ ಮಂಗಳೂರು ಹಂಚಿನ ಸೂರಿನ ನಡುವೆ ಒಂದೇ ಒಂದು ಅಡ್ಡ ಪಟ್ಟಿಯ ಸಹವಾಸಕ್ಕೆ ಅಂಟಿಕೊಂಡಿದ್ದ ಫ಼್ಯಾನು, ತಾನು ನಿಧಾನವಾಗಿ ತಿರುಗುತ್ತ, ಗಾಳಿ ಬೀಸುವುದಿರಲಿ, ತನ್ನ ಸುತ್ತಲಿನ ಜೇಡರ ಬಲೆಗಳಿಗೆ, ’ಹತ್ತಿರ ಬಂದೀರಿ ಜೋಕೆ!’ ಎಂದು ಸೂಚನೆ ನೀಡುತ್ತಿದ್ದಂತಿತ್ತು.

ಹೊಟ್ಟೆ, ಮೈ-ಕೈ ತುಂಬಿ ಕೊಂಡ ದಾಂಡಿಗರಿಗೆ ಹಸಿದವರ ಸಂಕಟಗಳು ಅರ್ಥವಾಗುವುದಾದರೂ ಹೇಗೆ? 'ಇವತ್ತಿನಿಂದ ಹೋಟೆಲ್ ಬಂದ್!' ಎಂದು ದೊಡ್ಡ ದರ್ಪದ ಧ್ವನಿಯಲ್ಲಿ ಹೇಳಿ ಬಿಟ್ಟರೆ ಸಾಕೆ? ಒಂದು ಊರಿನ ಹೃದಯ ಭಾಗದಲ್ಲಿ ಮೂರು ತಲೆಮಾರುಗಳಿಂದ ಜನರನ್ನು ಸಂತೈಸಿಕೊಂಡು ಬಂದ ಅನ್ನಪೂರ್ಣೇಶ್ವರಿಯ ಅಪರಾವತಾರ ಸುಧಾ ಹೋಟೇಲಿನ ಆಂತರ್ಯದ ಆಳ ಕೇವಲ ಇಷ್ಟೆಯೇ?

ಈಗಾಗಲೇ ಮಧ್ಯಾಹ್ನದ ಊಟದ ಹೊತ್ತಾಗುತ್ತಿದ್ದರಿಂದ, ಕೊಟ್ರೇಶಿ ತನ್ನ ಹರುಕು ಮುರುಕು ಹಿಂದಿಯಲ್ಲಿ ಒಳ ನುಗ್ಗಿದ ದಾಂಡಿಗರಿಗೆ ಒಂದೆರಡು ಗಂಟೆ ಸಮಯಾವಕಾಶಕ್ಕಾಗಿ ಕಾಡಿ ಬೇಡಿದ ಮೇಲೆ, ಅವರು ಒಪ್ಪಿಕೊಂಡರು. ಬಂದ ಜನರೆಲ್ಲ ಮುಗಿ ಬಿದ್ದು ಊಟ ಮಾಡುವುದರ ಜೊತೆಗೆ, ಇನ್ನು ನಾಳೆಯಿಂದ ಎಲ್ಲಿಗೆ ಹೋಗೋದು ಎಂದು ಯೋಚಿಸ ತೊಡಗಿದರು. ಸರ್ಕಲ್ಲಿನಲ್ಲಿ ಹೊಸದಾಗಿ ಸಂಜೆಗೆ ಸೇರಿಕೊಂಡ ಪಾನೀಪೂರಿ ತಳ್ಳುಗಾಡಿಗಳಿಂದ ಎಂದಾದರೂ ಹೊಟ್ಟೆ ತುಂಬುವುದುಂಟೇ? ಒಂದು ವೇಳೆ ಹೊಟ್ಟೆ ತುಂಬಿದರೂ, ಅಮ್ಮನ ಕೈ ರುಚಿಯ ಅಡುಗೆ ಎಂದಾದರೂ ಸಿಗುವುದೇ? "ಛೇ, ಈ ಊರಿಗೆ ಈ ರೀತಿ ಕಲಿಗಾಲ ಬರಬಾರದಿತ್ತಪ್ಪಾ...’ ಎಂದು ಎಲ್ಲರೂ ಮಮ್ಮಲ ಮರುಗುವವರೇ!

***

ಇನ್ನೇನು ಮಧ್ಯಾಹ್ನದ ಊಟವಾದರೂ ಬಂದ ಜನ ಹೋಗಲೊಲ್ಲರು. ಇಷ್ಟರಲ್ಲೇ ಒಂದಿಷ್ಟು ಮಂದಿ ಊರಿನ ಹಿರಿಯರಾದ ಜರ್ಮಲೆ ಚಂದ್ರಣ್ಣನವರನ್ನು ಕರೆತಂದರು. ಕೊಟ್ರೇಶಿ ತನ್ನ ಪೋನಿನಿಂದ ತನ್ನ ಅಣ್ಣ ಆನಂದನಿಗೆ ಡಯಲ್ ಮಾಡಿ, ಚಂದ್ರಣ್ಣನಿಗೆ ಫೋನು ಕೊಟ್ಟ. ಚಂದ್ರಣ್ಣ ಅದ್ಯಾವ ಕಾರಣಕ್ಕೆ ಸ್ಫೀಕರಿನಲ್ಲಿ ಹಾಕಿದರೋ ಗೊತ್ತಿಲ್ಲ,... ಆ ಕಡೆಯಿಂದ ಆನಂದ, "ಚಂದ್ರಣ್ಣಾ... ನೀವು ಊರಿಗೆ ದೊಡ್ಡ ಮನುಷ್ಯರು... ನಾನು ನಿಮ್ಮ ಉಸಾಬರಿಗೆ ಬರಲ್ಲ... ನಿಮ್ಮ ಮೇಲಿನ ಗೌರವದಿಂದ ಹೇಳ್ತೀನಿ, ನಾನು ನನ್ನ ಹೆಸರಿನಲ್ಲಿರೋ ಪ್ರಾಪರ್ಟಿ ಯಾರಿಗಾದ್ರೂ ಮಾರ್ತೀನಿ, ಹೆಂಗಾದರೂ ಇರ್ತೀನಿ... ನಿಮ್ಮ ಕೆಲ್ಸ ನೀವ್ ನೋಡೋದು ಒಳ್ಳೇದು..." ಎಂದು, ಚಂದ್ರಣ್ಣನ ಮಾತೂ ಕೇಳದೇ ಆ ಕಡೆ ಫ಼ೋನು ಇಟ್ಟುಬಿಟ್ಟ. ಕೆಟ್ಟು ಪಟ್ಟಣ ಸೇರು ಅಂತಾರೆ ನಿಜ. ಆದರೆ, ಒಳ್ಳೆಯವನಾಗೇ ಇದ್ದ ಆನಂದನಿಗೆ ಈ ನಮನಿ ದಾರ್ಷ್ಯ ಬರಬಾರದಾಗಿತ್ತು... ಎಂದು ಎಲ್ಲರೂ ಅಂದುಕೊಳ್ಳುವ ಹೊತ್ತಿಗೆ, ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡ ಮನಸ್ಥಿತಿ ಚಂದ್ರಣ್ಣನದಾಗಿತ್ತು. ಅವರ ಮುಂದೆ ಆಟಾಡಿಕೊಂಡು ಬೆಳೆದು, ದೂರದ ಬೆಂಗಳೂರಿನ ನೀರು ಕುಡಿದ ಆನಂದನೇ ಇಷ್ಟು ಮಾಡಿರುವಾಗ ಸುತ್ತಲಿನ ಹತ್ತು ಕೆರೆಗಳಿಂದ ನೀರು ಕುಡಿದ ಚಂದ್ರಣ್ಣ ಸುಮ್ಮನೆ ಇರುವುದಾದರೂ ಹೇಗೆ?!

ಊರಿಗೆ ಹಿರೀ ಜನ ಅಂತ ಇರ್ತಾರಲ್ಲ, ಅವ್ರದ್ದೂ ಒಂದು ಮಾತು ಅಂತ ಇರತ್ತೆ ಊರಲ್ಲಿ. ತಕ್ಷಣ ಚಂದ್ರಣ್ಣ, ಹತ್ತಿರದ ಪೋಲೀಸ್ ಸ್ಟೇಷನ್ನಿಗೆ ಫ಼ೋನ್‌ ಮಾಡಿ, ದಫ಼ೇದಾರರ ಹತ್ರ ಅವರ ಸಾಹೇಬ್ರು ಜೊತೆ ತಕ್ಷಣ ಬರಬೇಕು ಎಂದು ತಾಕೀತು ಮಾಡಿದರು. ನಂತರ ಅಲ್ಲಿಗೆ ದೌಡಾಯಿಸಿದ ಪೋಲೀಸರಿಗೆ, ’ನಾನು ಹೇಳುವವರೆಗೂ ಇಲ್ಲೇನೂ ಕದಲದಂತೆ ನೋಡಿಕೊಳ್ಳಿ’ ಎಂದು ಹುಕುಂ ಹಾಕಿ ಹೊರಟು ಹೋದರು.

***

ಒಂದು ರೀತಿ ಚಲನ ಚಿತ್ರ ನೋಡಿದ ರೀತಿಯಲ್ಲಿ, ಬೈಕ್ ಶೋ ರೂಮ್ ಆರಂಭವಾಗುವ ಸೂಚನಾ ಫಲಕಗಳೂ, ಬ್ಯಾನರ್‌ಗಳೂ, ಕಲರ್ ಪೇಪರ್‌ಗಳೂ ಇದ್ದಕ್ಕಿದ್ದ ಹಾಗೆ ಸದ್ದಡಗಿದಂತೆ ನಿಶ್ಶಬ್ಧಗೊಂಡವು. ಊರಿನ ಮಂಡಲ ಪ್ರಧಾನರೂ, ಹಲವು ರಾಜಕೀಯ ಮುಖಂಡರೂ, ಹೋಟೇಲಿನ ಮುಂದೆ ನಿಂತು ಹಿಂದಿಯಲ್ಲಿ, ಬಂದಿದ್ದ ದಾಂಡಿಗರಿಗೆ ಹುಕುಂ ಕೊಡಲು, ಅವರೆಲ್ಲ ಯಾವುದೋ ದೊಡ್ಡ ಕೋರ್ಟಿನಿಂದ ಸ್ಟೇ ಆರ್ಡರು ಬಂದಂತೆ ಸ್ತಬ್ಧವಾಗಿ, ಬಂದ ದಾರಿಗೆ ಹಿಂತಿರುಗಿದರು. ಊರಿನ ಆಸ್ತಿಯ ಒಂದು ಭಾಗವಾಗಿರುವ ಸುಧಾ ಹೋಟಲ್ಲನ್ನು ಸ್ಥಳಾಂತರ ಮತ್ತು ಸ್ಥಳ ಪಲ್ಲಟಗೊಳಿಸಲು ಯಾರೂ ಅಕ್ಕಪಕ್ಕದವರು ಒಪ್ಪದಿದ್ದರಿಂದ ಈಗಾಗಲೇ ಕೊನೇ ಹಂತದವರೆಗೆ ಬಂದ ಆಸ್ತಿಯ ಲೇವಾದೇವಿಯನ್ನು ರದ್ದುಗೊಳಿಸಿದಂತೆ ಪಂಚಾಯತಿಯವರು ಪರವಾನಗಿ ಹೊಡಿಸಿದರು. ಯಾರು ಏನೇ ಅಂದರೂ ಪಟ್ಟಣ ಪಂಚಾಯಿತಿಯ ಅನುಮತಿ ಇಲ್ಲದೇ ಯಾವ ಮಾರಾಟವೂ ಇತ್ಯರ್ಥಗೊಳ್ಳದ್ದರಿಂದ ಎಲ್ಲರೂ ನಿರುಮ್ಮಳರಾಗುವಂತಾಯಿತು.

ಕೊಟ್ರೇಶಿ ತನ್ನ ಕಾಯಕವನ್ನು ಹಾಗೇ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ... ಆದರೆ, ಇವತ್ತಿನವರೆಗೂ ಆನಂದನ ಪತ್ತೆ ಯಾರಿಗೂ ನಮ್ಮೂರಿನ ಸುತ್ತುಮುತ್ತಲೂ ಎಲ್ಲೂ ಆದಂತಿಲ್ಲ! ಅಮ್ಮ ಕಾಲದಲ್ಲಿ ಲೀನವಾಗೇನೋ ಇದ್ದಾರೆ, ಆದರೆ ಅಮ್ಮನ ಕೈ ರುಚಿ ಈಗ ಮುಂದಿನ ತಲೆಮಾರನ್ನೂ ತಬ್ಬಿಕೊಳ್ಳುತ್ತಿದೆಯಂತೆ.

Thursday, May 21, 2020

ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

"ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

Thursday, April 23, 2020

ಬಂಡವಾಳಶಾಹಿ ವಚನಗಳು!

ನಾವು ಕರ್ನಾಟಕದ ಹಳ್ಳಿಯ ಶಾಲೆಗಳಿಂದ ಬಂದವರು.  ನಾವೆಲ್ಲ ವಚನಕಾರರ ಹೆಸರುಗಳು ಗೊತ್ತಿಲ್ಲದೇ ಅದೆಷ್ಟೋ ವಚನಗಳನ್ನು ಜಾನಪದ ಗೀತೆಗಳಂತೆ ಕಲಿಯುತ್ತಿದ್ದೆವು, ಅವುಗಳನ್ನು ಪ್ರಾರ್ಥನೆಯಾಗಿ ಹಾಡುತ್ತಿದ್ದೆವು...ಕರ್ನಾಟಕದ ಇತಿಹಾಸದಲ್ಲಿ ಹನ್ನೊಂದು-ಹನ್ನೆರಡನೇ ಶತಮಾನದಲ್ಲಿ ಜನಿಸಿದ ವಚನಕಾರರು, ಅವರ ಸಾಹಿತ್ಯ, ಅವರ ಜೀವನ ಶೈಲಿ, ಅವರ ಪರಂಪರೆ ಇವೆಲ್ಲವೂ ನಮ್ಮನ್ನು ಭಾರತದ ಸಾಮಾಜಿಕ ಪ್ರಗತಿಯ ಪಥದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುತ್ತವೆ.  ಈ ಹಿನ್ನೆಲೆಯಲ್ಲಿ ಬೆಳೆದು ಬಂದ ನಾವು ನಮ್ಮ "ವಚನ" ಶೈಲಿಯನ್ನು ಇಂದಿನ ಕ್ಯಾಪಿಟಲಿಸ್ಟಿಕ್ (ಬಂಡವಾಳಶಾಹಿ) ವ್ಯವಸ್ಥೆಯಲ್ಲಿ ಹೇಗೆ ಬದಲಾಯಿಸಿಕೊಳ್ಳುತ್ತೇವೆ ಎಂಬುದನ್ನು ಕುರಿತು ಒಂದು ವಿಡಂಬನಾತ್ಮಕ ಬರಹ - ವಚನಕಾರರ ಕ್ಷಮೆಯನ್ನು ಕೋರಿ!

***

Twice a year, during performance review time...
ಕಳಬೇಕು
ಕೊಲಬೇಕು
ಹುಸಿಯ ನುಡಿಯಲು ಬೇಕು
ಮುನಿಯಬೇಕು
ತನ್ನ ಬಣ್ಣಿಸ ಬೇಕು
ಇದಿರ ಹಳಿಯಲು ಬೇಕು
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ (ಬಾಸ್ ಎಂಬ) ಕ್ಯಾಪಿಟಲಿಸ್ಟಿಕ್
ದೇವನ ಒಲಿಸುವ ಪರಿ.

End of year, around Ratings & Rankings
ಸ್ಕಿಲ್ ಇದ್ದವರು ಕೋಡ್ ಅನ್ನು ಬರೆಯುವರು
ನಾನೇನು ಮಾಡಲಯ್ಯ ಬಡವನಯ್ಯಾ
ನಾನು ಆಫೀಸಿಗೆ ಬರುವುದೇ ಹೆಚ್ಚು,
ಬಂದು ಕಾಲ ಕಳೆಯುವುದೇ ದೊಡ್ಡದು,
ನನ್ನ ಇರುವಿಕೆಯೇ ಹೊನ್ನ ಕಳಸವಯ್ಯಾ,
ಎಲಾ ಬಾಸ್ ಕೇಳಾ,
ನಿಂತೋರಿಗೆ ಸುಖವಿಲ್ಲ, ಹಾರಾಡಿದವರಿಗೆ ಹಸಿವಿಲ್ಲ.

When promotions are few and far between
ಕೆಲ್ಸವಿದ್ದು ಫಲವೇನು? ಗ್ರೋತ್ ಇಲ್ಲದನ್ನಕ?
ಗ್ರೋತ್ ಇದ್ದು ಫಲವೇನು? ದುಡ್ಡಿಲ್ಲದನ್ನಕ?
ದುಡ್ಡಿದ್ದು ಫಲವೇನು? ಟೈಟಲ್ ಇಲ್ಲದನ್ನಕ?

When all else fail...
ಮೋಕ್ಷಕ್ಕೆ ಹೋರಾಡುವಣ್ಣಗಳಿರಾ, ಒಂದು ಹೆಜ್ಜೆ ಮುಂದೆ ಹೋದರೆ
ಮೋಕ್ಷಕ್ಕೆ ನೀವೇ ನಿಚ್ಚಣಿಗೆ
ಮೋಕ್ಷಕ್ಕೋಸ್ಕರ ಹೋರಾಡಿ ಮುಂದೆ ಹೋಗದಿರ್ದೆಡೆ
ಆ ಹರನಿಲ್ಲನೆಂದನಂಬಿಗ ಚೌಡಯ್ಯ.

During training time
ಮೂರ್ಖಂಗೆ ಯಾರು ಬುದ್ದಿ ಹೇಳಿದರೂ
ಗೋರ್ಕಲ್ಲ ಮೇಲೆ ನೂರ್ಕಾಲ ಮಳೆಕರೆದಂತೆ ಸರ್ವಜ್ಞ.


When deliverables are not delivered on time...
ರಿಸೋರ್ಸುಗಳನು ಕೊಂಬಾಗ ಹಾಲೋಗರ ಉಂಡಂತೆ
ಕ್ಲೈಂಟುಗಳು ಬಂದು ಎಳೆವಾಗ, ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.

When deliverables fail to function as per requirements...
ಹೊಸ ಹೊಸ ಟೆಕ್ನಾಲಜಿಯನು ಬಳಸಿಕೊಂಡು
ವೆಬ್ ಸೈಟು ವರ್ಕ್ ಆಗದಿರೆ ಎಂತಯ್ಯ?
ಹೊಸ ಹೊಸ ಕೆಲಸದವರನ್ನು ಸೇರ್ಸಿಕೊಂಡು
ಕೆಲಸ ಪೂರ್ತಿ ಮಾಡದೇ ಇದ್ದರೆ ಎಂತಯ್ಯ?
ಓಪನ್ ವರ್ಕ್ ಸ್ಪೇಸ್ ಎಂದು ಕೊಂಡು
ಗದ್ದಲಕೆ ನಾಚಿದೊಡೆ ಎಂತಯ್ಯ?
ಟೆಕ್ನಾಲಜಿ ಕೆಲಸಗಾರನಾದ ಮೇಲೆ
ಸ್ತುತಿ-ನಿಂದೆಗಳು ಬಂದರೆ ಸಮಾಧಾನಿಯಾಗಿರಬೇಕು.

Thursday, April 16, 2020

God is great!

ದಿನವಿಡೀ ಕಂಪ್ಯೂಟರ್ ಬಳಸುವ ನಮ್ಮಂತಹವರಿಗೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಆಗುವ ಬೆಳವಣಿಗೆಗಳು ಕೆಲವೊಮ್ಮೆ ತಲೆನೋವಾಗಿ ಪರಿಣಮಿಸುತ್ತವೆ.  ಸೆಕ್ಯೂರಿಟಿಯ ಹೆಸರಿನಲ್ಲಿ ಅಥವಾ ಹೊಸದಾಗಿ ಹುಟ್ಟಿರುವ ತಂತ್ರಜ್ಞಾನದ ಹೆಸರಿನಲ್ಲಿ ಆಗುವ ಒಂದಲ್ಲಾ ಒಂದು ಆವಿಷ್ಕಾರಗಳು ನಮ್ಮ ಲರ್ನಿಂಗ್ ಕರ್ವ್ ಅನ್ನು ಟೆಸ್ಟ್ ಮಾಡುತ್ತವೆ; ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ.  ಇಂತಹದರ ಉದಾಹರಣೆಗಳಲ್ಲಿ ನಮ್ಮ ಕಂಪನಿಯ ಕಂಪ್ಯೂಟರ್ ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಲವಂತವಾಗಿ ಬದಲಾಯಿಸುವ ಪಾಸ್ವರ್ಡ್ ನಿಯಮಗಳನ್ನು ಹೆಸರಿಸಲೇ ಬೇಕು.  ಮೊದಮೊದಲು ಸಹಜ ಎನ್ನುವಂತಿದ್ದ ಪಾಸ್ವರ್ಡ್ ಪಾಲಿಸಿಗಳು ಈಗ ತಲೆನೋವುಗಳಾಗುತ್ತಿವೆ (ಅಥವಾ ಈ ಒಂದು ಭಾವನೆ ನಮಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಸೂಚಕವೂ ಇರಬಹುದು!).

ಅಯ್ಯೋ ಪಾಸ್ವರ್ಡ್ ಅಂದರೆ ಅದೇನು ದೊಡ್ಡ ವಿಷಯ ಎಂದು ಮೂಗೆಳೆದುಬಿಟ್ಟೀರಾ - ಪ್ರತಿ ಐದು-ಹತ್ತು ನಿಮಿಷಗಳಿಗೊಮ್ಮೆ ಆಕ್ಟಿವಿಟಿ ಇಲ್ಲದಿದ್ದರೆ ತಮ್ಮಷ್ಟಕ್ಕೆ ತಾವೇ ಲಾಕ್ ಆಗುವ ಕಂಪ್ಯೂಟರುಗಳಿಗೆ ಪಾಸ್ವರ್ಡ್ ಪದೇಪದೇ ಹಾಕುತ್ತಲೇ ಇರಬೇಕು.  ಅಷ್ಟೇ ಅಲ್ಲ, ಒಮ್ಮೆ ಲಾಗಿನ್ ಆದ ಮೇಲೆ, ಮತ್ತೆ ನಾವು ಬಳಸುವ ಪ್ರತಿಯೊಂದು ಸಿಸ್ಟಮ್ಗೂ ಕೂಡ ಈ ಪಾಸ್ವರ್ಡ್ ಅನ್ನು ಹಾಕುತ್ತಲೇ ಇರಬೇಕು.  ಒಟ್ಟಿನಲ್ಲಿ, ದಿನಕ್ಕೆ ಏನಿಲ್ಲವೆಂದರೂ ಒಂದು ಇಪ್ಪತ್ತೈದು ಬಾರಿಯಾದರೂ ಬಳಸುವ ಈ ಪಾಸ್ವರ್ಡ್ ಬಹಳ ದುಬಾರಿಯಾದ ಕಮಾಡಿಟಿ ಎಂದರೆ ತಪ್ಪಿಲ್ಲ.  ಅಕಸ್ಮಾತ್, ಎಲ್ಲಾದರೂ ಮರೆತು ಬಿಟ್ಟರೆ, ಅಂತಹ ದೊಡ್ಡ ಉಪಟಳ ಇನ್ನೊಂದಿಲ್ಲ!  ಒಟ್ಟಿನಲ್ಲಿ, ನಾವು-ನಮ್ಮ ಕೆಲಸದ ನಡುವೆ ಅವಿನಾಭಾವ ಸಂಬಂಧವನ್ನು ಬೆರೆಸುವ ಈ ಪಾಸ್ವರ್ಡ್ ಗಳಿಗೆ ದೊಡ್ಡ ಸ್ಥಾನವನ್ನು ಕೊಡಲೇಬೇಕಾಗುತ್ತದೆ!

ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್ವರ್ಡ್ ಅನ್ನು ಕಡ್ಡಾಯವಾಗಿ ಬದಲಾಯಿಸುವುದು ಬಹಳ ವರ್ಷಗಳಿಂದ ನಡೆದುಬಂದಿದೆ, ಅದರಲ್ಲೇನೂ ವಿಶೇಷವಿಲ್ಲ.  ಆದರೆ ಮೊದಲೆಲ್ಲಾ, ಪಾಸ್ವರ್ಡ್ ಪಾಲಿಸಿಗಳು ನಮ್ಮ ಉಗ್ರಾಣದೊಳಗಿರುವ ನಾಲ್ಕೈದು ಪಾಸ್ವರ್ಡ್ಗಳನ್ನು ಒಂದಾದನಂತರ ಒಂದನ್ನಾಗಿ ಬಳಸಲು ಬಿಡುತ್ತಿದ್ದವು.  ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಪಾಸ್ವರ್ಡ್ನಂತೆ ವರ್ಷಕ್ಕೆ ನಾಲ್ಕು ಪಾಸ್ವರ್ಡ್ಗಳಿದ್ದರೆ ಆಯಿತು.  ಮತ್ತೆ ಅದನ್ನೇ ರೀಸೈಕಲ್ ಮಾಡಿದ್ದರೆ ರಗಳೆ ಇರುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ಮತ್ತೊಂದು ಪಾಲಿಸಿಯನ್ನು ಸೇರಿಸಿಬಿಟ್ಟರು - ಒಮ್ಮೆ ಬಳಸಿದ ಪಾಸ್ವರ್ಡ್ ಅನ್ನು ಮತ್ತೆ ಹನ್ನೆರಡು ಸಲ ಪಾಸ್ವರ್ಡ್ ಬದಲಾಯಿಸುವವರೆಗೂ ಬಳಸುವಂತಿಲ್ಲ!  ಅಂದರೆ, ಇಂದು ಬಳಸುವ ಪಾಸ್ವರ್ಡ್ ಇನ್ನು ಮೂವತ್ತಾರು ತಿಂಗಳ ನಂತರವೇ ಬಳಸಲು ಸಾಧ್ಯ!  ಅಂದರೆ ಮೂರು ವರ್ಷಗಳ ನಂತರ... ಇದನ್ನು ನೋಡಿ God is great! ಎನ್ನುವ ಉದ್ಗಾರ ತನ್ನಷ್ಟಕ್ಕೆ ತಾನೇ ಹೊರಗೆ ಬಂತು.  ನಾನೇ ಹನ್ನೆರಡು ಬಾರಿ ಪಾಸ್ವರ್ಡ್ ಅನ್ನು ಒಂದೇ ದಿನದಲ್ಲಿ ಬದಲಾಯಿಸಿ ಮತ್ತೆ ಅದೇ ಪಾಸ್ವರ್ಡ್ ಅನ್ನು ಉಪಯೋಗಿಸಿದರೆ ಹೇಗೆ ಎನ್ನುವ ಯೋಚನೆ ತಕ್ಷಣಕ್ಕೆ ಬಂತಾದರೂ, ಅದು ಸೆಕ್ಯೂರಿಟಿಯ ಉದ್ದೇಶವನ್ನು ಡಿಫೀಟ್ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಲಿಲ್ಲ, ಅದರ   ಬದಲಿಗೆ ’God is great! ಎನ್ನುವ ಪಾಸ್ವರ್ಡ್ ಅನ್ನೇ ಬಳಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬಂದೆ.  ಆದರೆ, ನಮ್ಮ ಪಾಸ್ವರ್ಡ್ನಲ್ಲಿ  upper case ಅಕ್ಷರಗಳಿರಬೇಕು, ಅಂಕಿಗಳಿರಬೇಕು ಎಂದೆಲ್ಲ ನಿಯಮಗಳಿವೆ.  ಅದನ್ನೆಲ್ಲ ಸೇರಿಸಿ, God is great! ಅನ್ನು ಬಳಸಿ ಒಂದು ಹೊಸ ಪಾಸ್ವರ್ಡ್ ಸೃಷ್ಟಿಸಿದೆ.  ಆದರೆ, ಈ ಪಾಪ್ಯುಲರ್ ಹೇಳಿಕೆಯಂಥ ಪಾಸ್ವರ್ಡ್ ಅನ್ನು ಪದೇಪದೇ ಟೈಪ್ ಮಾಡುವಾಗಲೂ ಒಂದಲ್ಲ ಒಂದು ಸಂವೇದನೆಗಳು ನನ್ನ ಮನಪಟಲದಲ್ಲಿ ಹಾದು ಹೋಗುತ್ತಿದ್ದವು.  God is great! ಅನ್ನುವುದನ್ನು ಅನೇಕ ಭಾವನೆಗಳಲ್ಲಿ ಈ ಮೂರು ತಿಂಗಳಲ್ಲಿ ಹೇಳಿಕೊಂಡಿದ್ದೇನೆ!

***
ಕನ್ನಡ ವ್ಯಾಕರಣ ತರಗತಿಯಲ್ಲಿ ನನಗೆ ಇಷ್ಟವಾಗುವ ವಿಷಯ ವಸ್ತುಗಳಲ್ಲಿ ವಿಭಕ್ತಿ-ಪ್ರತ್ಯಯಗಳೂ ಒಂದು.  ಪ್ರಥಮ-ಉ, ದ್ವಿತೀಯ-ಅನ್ನು, ತೃತೀಯ-ಇಂದ, ಚತುರ್ಥಿ-ಗೆ, ಇಗೆ, ಅಕ್ಕೆ, ಪಂಚಮಿ-ದೆಸೆಯಿಂದ, ಷಷ್ಟಿ-ನನ್ನ, ನಮ್ಮ, ಸಪ್ತಮಿ-ಲ್ಲಿ, ಒಳಗೆ, ಇತ್ಯಾದಿ...

ಇಂಗ್ಲೀಷ್ ನಲ್ಲಿ ಅನೇಕ ಪದಗಳಿವೆ ನಿಜ.  ಆದರೆ, ಈ ವಿಭಕ್ತಿ-ಪ್ರತ್ಯಯಗಳ ದೆಸೆಯಿಂದ ಭಾರತೀಯ ಭಾಷೆಗಳ ಪದಗಳು ಅನೇಕ ರೀತಿಯಲ್ಲಿ ಉಲ್ಭಣಗೊಳ್ಳುತ್ತವೆ, ಬದಲಾವಣೆಗೊಳಗಾಗುತ್ತವೆ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ.

ಉದಾಹರಣೆಗೆ: "ಬಾಳೇ ಪ್ರೇಮಗೀತೆ", "ಬಾಳೂ ಬೆಳಕಾಯಿತು", "ಬಾಳಿನ ದಾರಿಯಲಿ", "ಬಾಳಿನಿಂದ ಬಾಳಿಗೆ", "ಬಾಳಿನ ದೆಸೆಯಿಂದ", "ಬಾಳನ್ನು ಬದುಕಿ", "ಬಾಳೇ ಹಾಳಾಯಿತು"... ಹೀಗೆ ’ಬಾಳು’ ಎನ್ನುವ ಪದ ಅನೇಕ ಬೆಳವಣಿಗೆಗಳನ್ನು ಪಡೆಯುತ್ತದೆ. ಇವೆಲ್ಲವನ್ನೂ ಇಂಗ್ಲೀಷಿಗೆ ಅಷ್ಟು ಸುಲಭವಾಗಿ ತರ್ಜುಮೆ ಮಾಡಲಾಗದು.

ಹೀಗೆ ಯೋಚಿಸುತ್ತಿರುವಾಗ, ನನ್ನ ಪಾಸ್ವರ್ಡ್ "God is great!" ಅನ್ನು ತೆಗೆದುಕೊಂಡು ಈ ಮೂರು ಪದಗಳಲ್ಲಿ ಎಷ್ಟೊಂದು ಕಾಂಬಿನೇಷನ್ ಮಾಡಬಹುದು ಎಂದು ಯೋಚಿಸಿದಾಗ ನನಗೆ ಈ ಕೆಳಗಿನ ವಾಕ್ಯಗಳು ಹೊಳೆದವು ಆಷ್ಟೇ!

God is great
Is God great
Great is God

God is great! ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ "ದೇವರು ದೊಡ್ಡವನು" ಎಂದು ಯೋಚಿಸಿದೆ... ಈ ಎರಡೇ ಪದಗಳನ್ನು ಎಷ್ಟು ರೀತಿಯಲ್ಲಿ ಬದಲಾವಣೆ ಮಾಡಿ ಹೊಸ ಹೊಸ ಅರ್ಥಗಳನ್ನು ಹುಡುಕಬಹುದು ಎಂದು ಯೋಚಿಸಿದಾಗ ಈ ಕೆಳಗಿನ ಸಾಲುಗಳು ಹೊಳೆದವು:

ದೇವರು ದೊಡ್ಡವನು
ದೊಡ್ಡವನು ದೇವರು
ದೇವರೇ ದೊಡ್ಡವನು
ದೊಡ್ಡವನೇ ದೇವರು
ದೇವರು ದೊಡ್ಡವನೇ
ದೊಡ್ಡವನು ದೇವರೇ
ದೇವರೇ ದೊಡ್ಡವನೇ
ದೊಡ್ಡವನೇ ದೇವರೇ
ದೇವರೂ ದೊಡ್ಡವನು
ದೊಡ್ಡವನೂ ದೇವರು

ಈ ಮೇಲಿನವನ್ನು ಹೇಳುವಾಗಿನ ಇಂಟೋನೇಷನ್, ಅದಕ್ಕೆ ಸಂಬಂಧಿಸಿದ ಸಂದರ್ಭ ಹಾಗೂ ಅವುಗಳಿಗೆ ಜೋಡಿಸುವ ಭಾವನೆಗಳನ್ನು ಬಳಸಿ ಅನೇಕ ಕಾಂಬಿನೇಷನ್ನುಗಳನ್ನು ಮಾಡಬಹುದು.  ಇವುಗಳನ್ನು ಅಷ್ಟು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಲಾಗುವುದಿಲ್ಲ.  ಕೇವಲ ಎರಡೇ ಪದಗಳಲ್ಲಿ ಈ ಲಾಲಿತ್ಯವಿರುವ ನಮ್ಮ ಭಾಷೆಯನ್ನು ಒಂದು ದೇಶೀಯ (native) ಪರಿಸರದಲ್ಲಿ ಇದ್ದು ಕಲಿಯದಿದ್ದರೆ, ಅಷ್ಟು ಸಹಜವಾಗಿ ಮನಮುಟ್ಟುವುದಿಲ್ಲ.  ಉತ್ತರ ಅಮೇರಿಕದಲ್ಲಿ ನಾವು ಮಕ್ಕಳಿಗೆ ಕನ್ನಡ ಹೇಳಿಕೊಡುವಾಗ ಈ ಸೂಕ್ಷ್ಮಗಳನ್ನು ಹೇಳಿಕೊಡಲಾಗದು.  ಎಲ್ಲರೂ ವ್ಯಾಕರಣವನ್ನು ಕಲಿಯದಿದ್ದರೂ ದಿನನಿತ್ಯದ ನಮ್ಮ ಮಾತುಕತೆ, ಬರವಣಿಗೆಗಳಲ್ಲಿ ನಾವು ಅದೆಷ್ಟು ರೀತಿಯಲ್ಲಿ ಈ ವಿಭಕ್ತಿ-ಪ್ರತ್ಯಯಗಳನ್ನು ಬಳಸುತ್ತೇವೆ ಎಂದು ಯೋಚಿಸಿದಾಗ ಆಶ್ಚರ್ಯವೆನಿಸುತ್ತದೆ.
ನೋಡಿ, ಹೀಗೆ ಈ ಪಾಸ್ವರ್ಡ್ ಬದಲಾಯಿಸುವ ದೆಸೆಯಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡುವಂತಾಯ್ತು!

Friday, January 27, 2017

ಕಂಪನಿ ಹೆಸರು ಅಂದ್ರೆ...

S&P 500 ಕಂಪನಿಗಳ ಹೆಸರನ್ನು ಕುರಿತು ಸ್ವಲ್ಪ ಯೋಚಿಸತೊಡಗಿದರೆ ತಲೆ ಚಿಟ್ಟು ಹಿಡಿಯುತ್ತದೆ, ಅವುಗಳ ಹೆಸರಿನ ಮೂಲವೇನು, ಅವುಗಳನ್ನು ಎಲ್ಲೆಲ್ಲಿಂದ ಆಯ್ದು ತಂದಿರಬಹುದು ಎನ್ನುವುದು ಎಂಥವರನ್ನಾದರೂ ಆಳವಾಗಿ ಯೋಚಿಸುವಂತೆ ಮಾಡಬಹುದು.  ಉದಾಹರಣೆಗೆ Proctor & Gamble (P&G) ಕುರಿತು ಯೋಚಿಸಿದರೆ, Proctor ಎಂದರೆ ಎಕ್ಸಾಮಿನೇಷನ್ ಸೂಪರ್‌ವೈಸರ್, Gamble ಅಂದ್ರೆ ಜೂಜಾಡುವುದು ಅಂತ ಅರ್ಥ!  Johnson & Johnson (J&J) ಕುರಿತು ಯೋಚಿಸಿದರೆ, ಒಂದೇ ಹೆಸರನ್ನು ಎರಡು ಸರ್ತಿ ಏಕಾದ್ರೂ ತೋರಿಸ್ತಾರಪ್ಪಾ? ಸುಮ್ನೇ ಜಾಗ ವೇಸ್ಟ್ ಅನ್ನಿಸೋಲ್ಲ?  ಹೀಗೇ ಅನೇಕಾನೇಕ ಉದಾಹರಣೆಗಳು ನಿಮಗೆ ಸಿಗುತ್ತವೆ.

ಇನ್ನುGeneral ಎಂಬ ಸೀರೀಸ್‌ನಲ್ಲಿ ಶುರುವಾಗುವ ಕಂಪನಿಗಳ ಹೆಸರುಗಳೋ ಸಾಕಷ್ಟು ಸಿಗುತ್ತವೆ.  ಈ ಎಲ್ಲ ಕಂಪನಿಗಳು ತಯಾರಿಸುವುದು ಕೇವಲ "ಜೆನೆರಲ್" ಪ್ರಾಡಕ್ಟ್‌ಗಳನ್ನೋ ಅಥವಾ ಯಾವುದಾದರೂ ಸ್ಪೆಸಿಫಿಕ್ ಇವೆಯೋ ಎಂದು ಬೇಕಾದಷ್ಟು ಜನ ಸೈಂಟಿಸ್ಟುಗಳು ಈಗಾಗಲೇ ಸ್ಟಡಿ ಮಾಡಿರಬಹುದು.  ನಾವು ಯಾವುದೇ ಮೀಸಲಾತಿಗೆ ಸೇರಿರದ ಜನ, ಬರೀ ಜನರಲ್ ಕಂಪನಿಗಳ ಪ್ರಾಡಕ್ಟುಗಳನ್ನು ಮಾತ್ರ ಬಳಸುತ್ತೇವೆ ಎಂದು ಮುಂದಿನ ಸಾರಿ ಭಾರತಕ್ಕೆ ಹೋದಾಗ ನೀವು ನಿಮ್ಮ ಸೆಕ್ಯುಲರಿಸಂ ಅನ್ನು ಮೆರೆದು ನಿಮ್ಮ "ಜನರಲ್" ತನವನ್ನು ಸಾಬೀತು ಪಡಿಸಬಹುದು.  ನಮ್ಮ ಮನೆಯ ಲೈಟು ಬಲ್ಬುಗಳನ್ನು ತಯಾರಿಸಿದ್ದು ಜೆನರಲ್ ಎಲೆಕ್ಟ್ರಿಕಲ್ ಕಂಪನಿ, ನಾವು ಮುಂಜಾನೆ ಜೆನರಲ್ ಮಿಲ್ಸ್ ಸೀರಿಯಲ್ ತಿಂತೀವಿ.  ಜನರಲ್ ಫುಡ್ಸ್ ಪ್ರಾಡಕ್ಟುಗಳನ್ನೇ ಊಟಕ್ಕೆ ಬಳಸುತ್ತೇವೆ. ಹಾಗೂ ನಮ್ಮ ರಕ್ಷಣೆಗೆ ಜನರಲ್ ಡೈನಮಿಕ್ಸ್ ಪ್ರಾಡಕ್ಟುಗಳನ್ನೇ ಬಳಸ್ತೀವಿ.  ಹೇಗಿದೆ ಎಲ್ಲ ಜನರಲ್ ಮಯ?

ಮಣ್ಣಿನ ಮಡಕೆಯನ್ನು ಮಾಡಿ ಮಾರುವವ ಕುಂಬಾರ, ಹೂವನ್ನು ಮಾರುವವ ಹೂಗಾರನಾದರೆ, ಆಪಲ್‌ನ್ನ ಮಾರುವವ ಏನಾಗಬಹುದು? ಸೇಬುಗಾರ?!  ಕ್ಷಮಿಸಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳಿಗೂ ಸೇಬು ಹಣ್ಣಿಗೂ ಎತ್ತಣಿಂದೆತ್ತ ಸಂಬಂಧ ನಮಗೆ ತಿಳಿಯದು...ಒಂದು ರೀತಿಯಲ್ಲಿ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಇರುವ ಸಂಬಂಧದ ಹಾಗೆ ಏನಾದರೂ ನಿಗೂಢವಾದ ಸಂಬಂಧವಿದ್ದರೂ ಇರಬಹುದು... ನಮ್ಮ ಮನೆಯಲ್ಲೆಲ್ಲಾ ಆಪಲ್ ಮಯ... ದಿನಕ್ಕೊಂದು ಸೇಬು ಹಣ್ಣನ್ನು ತಿಂದು ದೂರವಿರುವ ಉಸಾಬರಿಯ ಸಹವಾಸವಲ್ಲವಿದು, ಜಾಗ್ರತೆ!  ಒಮ್ಮೆ ಮುಟ್ಟಿದರೆ ಮುಗಿಯಿತು, ಇನ್ನು ಸಾಯುವವರೆಗೂ ಮುಟ್ಟತ್ತಲೇ ಇರಬೇಕು... (ಅದು ಡಿವೈಸ್ ಆಗಿರಬಹುದು, ಅಥವಾ ವ್ಯಕ್ತಿಯಾಗಿರಬಹುದು, ಎರಡರಲ್ಲಿ ಒಂದು ಕೊನೆಯಾಗುವವರೆಗಿನ ಸಂಬಂಧವಿದು!)... ಎಂಥಾ ಗಾಢವಾದ ಸಂಬಂಧವಿರಬಹುದಿದು?  Only death can part this relationship!

ಇನ್ನು ಸೇಬುಹಣ್ಣಿನ (Apple) ಸಂಬಂಧ ಚಾಲ್ತಿಯಲ್ಲಿರುವಾಗಲೇ ನಮಗೆ ಹಳೆಯ Microsoftನ ಸಂಬಂಧ ನೆನಪಿಗೆ ಬರುತ್ತದೆ.  ನಮ್ಮ ಮನೆಯ ಕಿಟಕಿಗಳನ್ನು ಮಾಡಿದ್ದು ಈ ಮೈಕ್ರೋ ಸಾಫ್ಟ್ ಕಂಪನಿಯವರಲ್ಲದಿದ್ದರೂ ನಮ್ಮ ಕಂಪ್ಯೂಟರುಗಳಲ್ಲಿ ಹಲವಾರು ಕಿಟಕಿಗಳು ಸದಾ ತೆರೆದೇ ಇರುತ್ತವೆ.  ಇವು ಗಾಳಿ-ಬೆಳಕು ಬರುವ ಕಿಟಕಿಗಳಲ್ಲ...ಕಂಪ್ಯೂಟರ್ ಪ್ರಪಂಚಕ್ಕೆ ಸೂಕ್ಷ್ಮವಾಗಿ ಸಂಬಂಧ ಬೆರೆಸುವ ಕಿಂಡಿಗಳು.  ಆ ಕನಕದಾಸರ ಕಾಲದಲ್ಲಿ ’ಕನಕನ ಕಿಂಡಿ" ತೆರೆದ ಹಾಗೆ, ನಮ್ಮ ಕಾಲದಲ್ಲಿ ಮೈಕ್ರೋಸಾಫ್ಟ್ ಕಿಟಕಿಗಳು ಸದಾ ತೆರೆದೇ ಇರುತ್ತವೆ!

ಇನ್ನು ದಕ್ಷಿಣ ಅಮೇರಿಕಾದ ಮಹಾ ಕಾಡನ್ನು ನೆನಪಿಸುವ ಅಮೇಜಾನು. ತನ್ನ ಮಧ್ಯೆ ಅಸಂಖ್ಯಾತ ಸೊನ್ನೆಗಳನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಪ್ರತಿ ಶೋಧದ ಪುಟದ ಬುಡದಲ್ಲಿಯೂ ಉದ್ದಕ್ಕೆ ತನ್ನನ್ನು ತಾನು ಆವರಿಸಿಕೊಳ್ಳುವ ಗೂಗಲ್ಲು.  ಎಲ್ಲರ ಹಣೆಬರಹವನ್ನು ಅವರಿಂದಲೇ ಹೊರಸೂಸುವಂತೆ ಮಾಡಿ ಜನರು ಸೋಷಿಯಲ್ ಮೀಡಿಯಾ ಎಂಬ ನಾಮಪದದ ನೆಪದಲ್ಲಿ ಶುದ್ಧ ಸೋಂಬೇರಿಗಳಾಗುವಂತೆ ಮಾಡುವ ಫೇಸ್‌ಬುಕ್ಕು.  ತನ್ನ ಒಡಲಿನಲ್ಲಿ ಜಗತ್ತಿನ ದೊಡ್ಡ ಸೂಪರ್ ಕಂಫ್ಯೂಟರ್ರನ್ನು ಇರಿಸಿಕೊಂಡು ಸಂಭ್ರಮಿಸುವ ಐಬಿಎಮ್ಮು...  ಹೀಗೇ ಅನೇಕಾನೇಕ ಹೆಸರುಗಳು ನೆನಪಿಗೆ ಬರುತ್ತಲೇ ಹೋಗುತ್ತವೆ.  ನಿಮಗೆ ಬೇಕಾದ ಸೆಕ್ಟರುಗಳಲ್ಲಿ ಒಂದಲ್ಲ ಒಂದು ಕಂಪನಿಗಳು ಚಿರಪರಿಚಿತವೇ....ಬ್ಯಾಂಕು, ಇನ್ವೆಸ್ಟ್‌ಮೆಂಟು, ಟೆಲಿಕಾಮ್, ಹೆಲ್ತ್‌ಕೇರು, ಟ್ರಾನ್ಸ್‌ಪೋರ್ಟೇಷನ್ನು,    ಟೆಕ್ನಾಲಜಿ, ಎನರ್ಜಿ, ಇತ್ಯಾದಿ, ಇತ್ಯಾದಿ.  ಆದರೆ ಈ ಎಲ್ಲ ಹೆಸರುಗಳ ವಿಶೇಷವೇನು ಗೊತ್ತೇ?  ಒಂದರ ಹೆಸರಿನ ಹಾಗೆ ಮತ್ತೊಂದಿಲ್ಲ ಎಲ್ಲವೂ ಬೇರೆ ಬೇರೆಯವೇ... ಒಂದು ರೀತಿಯಲ್ಲಿ ನಮ್ಮ ಮಹಾಭಾರತ ಹಾಗೂ ರಾಮಾಯಣದ ಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ!  ನಿಮಗೆ ಎಂದಾದರೂ ಅನ್ನಿಸಿತ್ತೇ... ನಮ್ಮ ಪೂರ್ವಜರು ಅದ್ಯಾವ ಹೆಸರಿನ ಡೇಟಾಬೇಸನ್ನು ಉಪಯೋಗಿಸುತ್ತಿದ್ದರು ಅಂತ?  ಒಂದು ಮಹಾಕಾವ್ಯ, ಮಹಾಕಥೆಯಿಂದ ಮತ್ತೊಂದು ಮಹಾಕಥೆಗೆ ಯುಗಗಳ ಅಂತ್ಯವಿದ್ದರೂ ಎಲ್ಲ ಪಾತ್ರಗಳ ಹೆಸರೂ ಬೇರೆ ಬೇರೆಯವು, ಒಂದು ಕೂಡ ಕಾಮನ್ ಆಗಿಲ್ಲ!

ಇನ್ನು ಅಮೇರಿಕದಲ್ಲಿ ಚಾಲ್ತಿ ಇರೋ ಬ್ರ್ಯಾಂಡ್ ಹೆಸರುಗಳನ್ನು ಭಾರತದಲ್ಲಿ ಇಟ್ಟರೆ ಖಂಡಿತಾ ಕಷ್ಟವಾಗುತ್ತೆ ಅನ್ನೋದಕ್ಕೆ ಈ ಉದಾಹರಣೆ ನೋಡಿ.  ಅಮೇರಿಕದಲ್ಲಿ ಜನರಲ್ ಮೋಟಾರ್ಸ್‌ನವರು ಉತ್ಪಾದಿಸೋ ಸ್ಯಾಟರ್ನ್ (ಶನಿ) ಕಾರು ಬಹಳ ವರ್ಷಗಳಿಂದ ಪ್ರಚಲಿತವಾದುದು.  ಇದೇ ಕಾರನ್ನ ಭಾರತದ ಮಾರುಕಟ್ಟೆಯಲ್ಲಿ - ಶನಿ ಯಾಗಿ - ಉತ್ಪಾದಿಸಿದರೆ, ಯಾರು ತಾನೆ ಖರೀದಿಸುತ್ತಾರೆ ನೀವೇ ಹೇಳಿ?!  ಶನಿಗ್ರಹ ಎಲ್ಲರಿಗೂ ಬೇಕು ಹಾಗೂ ಯಾರಿಗೂ ಬೇಡವಾಗಿರುವ ಗ್ರಹ... ಬುಧ (Mercury) ಆದರೆ ಪರವಾಗಿಲ್ಲ, ಗುರು (Jupitor) ಆದರೆ ಓಕೆ, ಆದರೆ Olds Mobile ಮಾತ್ರ ಬೇಡಾ ಸ್ವಾಮಿ... ಈ ಹೆಸರನ್ನು ಇಟ್ಟವರಿಗೆ ನೊಬೆಲ್ ಪಾರಿತೋಷಕವೇನಾದರೂ ಸಿಕ್ಕಿದೆಯೇ? ಈ ಹೆಸರನ್ನು ಸೂಚಿಸಿದವರ ಕೈಗೆ ಕಡಗ ತೊಡಿಸಬೇಕು!  ಈ ಮಿಲೆನಿಯಲ್ಲ್ ಯುಗದಲ್ಲಿ ಓಲ್ಡ್ಸ್ ಮೊಬೈಲ್ ಅನ್ನುವ ಹೆಸರಿನ ಕಾರನ್ನು ಮೂವತ್ತು ವರ್ಷಗಳಿಗಿಂತ ಕೆಳವಯಸ್ಸಿನವರು ಹೇಗೆ ತಾನೇ ಖರೀದಿಸಬೇಕು?  ಪ್ರಪಂಚದಲ್ಲಿ ಜನರು ತಮ್ಮ ಕಳೆದು ಹೋದ ಯೌವನವನ್ನು ಮತ್ತೆ ಹುಟ್ಟು ಹಾಕಲು ಬಿಲಿಯನ್‌ಗಟ್ಟಲೆ ಹಣವನ್ನು ಸುರಿಯುತ್ತಿರುವಾಗ ನಮ್ಮ ಕಾರಿನ ಹೆಸರು ಓಲ್ಡ್ಸ್ ಮೊಬೈಲು ಹೇಗಾದೀತು?

ನಮ್ಮ ಭಾರತದಲ್ಲಾದರೂ ಗೋದ್ರೇಜ್, ಟಾಟಾ, ಬಿರ್ಲಾ, ವಿಪ್ರೋ, ಬಜಾಜ್, ಇನ್ಫೋಸಿಸ್ ಮುಂತಾದ ಕಂಪನಿಗಳು ತಲೆ ಎತ್ತಿದ್ದರೂ ಇದುವರೆಗೂ "ಪಟೇಲ್" ಎಂಬ ಬ್ರ್ಯಾಂಡ್ ಏಕೆ ತಲೆ ಎತ್ತಿಲ್ಲ ಎಂದು ಸೋಜಿಗವಾಗುತ್ತದೆ.  ಮಿಲಿಯನ್‌ಗಟ್ಟಲೆ ಪಟೇಲ್ ಜನರ ಪರಂಪರೆ ತಮ್ಮ ವಂಶಪಾರಂಪರ್ಯದವರವನ್ನು ವಿದೇಶಗಳಿಗೆ ರವಾನಿಸೋದರಲ್ಲೇ ಅವರ ಇನ್ನೋವೇಶನ್ ಸೀಮಿತವಾಗಿ ಹೋಯಿತೋ ಎಂದು ಸಂಶಯವಾಗುವುದಿಲ್ಲವೇ?

ಈ ಹೆಸರುಗಳೇ ಬ್ರ್ಯಾಂಡ್‌ಗಳಾಗುತ್ತವೆ... ಒಂದು ರೀತಿಯಲ್ಲಿ "ಹಮಾರಾ ಬಜಾಜ್" ಆದ ಹಾಗೆ!  ಅಫಘಾನಿಸ್ತಾನದಲ್ಲೂ ಪ್ರಚಲಿತವಾದ ಬ್ರ್ಯಾಂಡ್ ಎಂದರೆ ಕೋಕಾಕೋಲಾ ಹಾಗೂ ಮರ್ಸಿಡಿಸ್ ಬೆಂಜ್ ಮಾತ್ರ ಎಂಬುದು ಮತ್ತೊಂದು ಸಮೀಕ್ಷೆಯ ವರದಿ!  ಹೀಗೇ ನಿಮ್ಮ ಬ್ರ್ಯಾಂಡ್ ನಿಮ್ಮನ್ನು ನೀವೂ ಡಿಫೈನ್ ಮಾಡಿ, ಮಾರ್ಕೇಟ್ ಮಾಡಿ, ಅದನ್ನೂ ಎತ್ತರದಿಂದೆತ್ತರಕ್ಕೆ ಕೊಂಡೊಯ್ಯಬಹುದು...ಪ್ರಯತ್ನ ಮಾಡಿನೋಡಿ.


Friday, October 30, 2015

ಕನ್ನಡಿಗನೊಬ್ಬನ ಪಿರಿಪಿರಿ...

ಅಮೇರಿಕಕ್ಕೆ ಬಂದ ಮೊದಲಲ್ಲಿ ಗೋಪಾಲಕೃಷ್ಣ ಅಡಿಗರ "ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಹಾಡನ್ನು ಕೇಳಿದಾಗಲೆಲ್ಲ ನನ್ನ ಮನದಲ್ಲಿ ಈ ಕ್ಯಾಪಿಟಲಿಸಮ್ ಅನ್ನೋ ದೊಡ್ಡೋ ಸಮುದ್ರದಲ್ಲಿ ನಮ್ಮತನವೆಂಬ ಚಿಕ್ಕ ಸೋಷಿಯಲಿಸ್ಟ್ ದೋಣಿಯನ್ನು ನಾವು ಹುಟ್ಟು ಹಾಕಿ ಚಲಿಸುತ್ತಿದ್ದೇವೆಯೇನೋ ಎಂಬ ಆಲೋಚನೆಗಳು ಬರುತ್ತಿದ್ದವು.  ನಮ್ಮ ಕನ್ನಡಿಗರ ಪರಂಪರೆಯೇ ಹಾಗೆ, ದೊಡ್ಡವರನ್ನು ಗೌರವಿಸಬೇಕು, ಯಾವತ್ತೂ ನೀನು ಎಷ್ಟು ಚಿಕ್ಕವನೆಂಬುದನ್ನು ಅರಿತುಕೊಂಡಿರು...ಇತ್ಯಾದಿ ಇತ್ಯಾದಿ ಮಾತುಗಳು ನಮ್ಮ ಮನದಾಳದಲ್ಲಿ "ಗೌರವ"ವನ್ನು ಉಲ್ಬಣಿಸುವುದರ ಬದಲು ಕೀಳರಿಮೆಯನ್ನು ಸೃಷ್ಟಿಸುತ್ತಿತ್ತೇನೋ ಎಂದು ಒಮ್ಮೊಮ್ಮೆ ಗಾಭರಿಯಾಗತ್ತದೆ.  ಉದಾಹರಣೆಗೆ ನಾವು ನಂಬಿಕೊಂಡ ಪದ್ಯಗಳನ್ನು ಈ ಕ್ಯಾಪಿಟಲಿಸಮ್ಮಿನ ದರ್ಬಾರಿನಲ್ಲಿ ದಿನನಿತ್ಯವೂ ನಡೆಯುವ ಆಫೀಸಿನ ರಾಜಕೀಯದ ಮುಂದೆ ಅನ್ವಯಿಸುವುದಾದರೂ ಹೇಗೆ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ|


ಈ ಮೇಲಿನ ಪದ್ಯವನ್ನು ಫಾಲೋ ಮಾಡುತ್ತಾ ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳೋದು, ಯಾರನ್ನು ಎದುರು ಹಾಕಿಕೊಳ್ಳೋದು? ಅಥವಾ ಈ ವಚನವನ್ನು ನೋಡಿ:

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ|


ಈ ವಾಕ್ಯಗಳನ್ನು ಫಾಲೋ ಮಾಡಿದ್ರೆ ನಮ್ಮ ಆಫೀಸಿನಲ್ಲಿ ನಿಮಗೆ ಪ್ರೊಮೋಷನ್ ಸಿಕ್ಕ ಹಾಗೇ ಅಂದುಕೊಳ್ಳಿ... ಸುಳ್ಳು ಮತ್ತು ಸತ್ಯದ ನಡುವೆ ತಿhiಣe ಟie ಅನ್ನೋದಿದೆಯಂತೆ ಅದಕ್ಕೆ ಕನ್ನಡದಲ್ಲಿ ಯಾವುದೇ ಪದಗಳು ಇದ್ದ ಹಾಗಿಲ್ಲ.  ಈ ಮೇಲಿನ ಮಾತುಗಳಿಗೆ ತದ್ವಿರುದ್ಧವಾಗೇ ನಮ್ಮ ಕಣ್ಣೆದೆರು ಎಷ್ಟೋ ಘಟನೆಗಳು ಆಫೀಸಿನಲ್ಲಿ ನಡೆಯುತ್ತವೆ.  ಕ್ಯಾಪಿಟಲಿಸಮ್ಮಿನ ಲೀಡರುಗಳು ಎತ್ತರದ ಆಳುಗಳು, ಗಟ್ಟಿಯಾಗಿ ಒದರುವ ಇವರುಗಳು "ನುಡಿದರೆ ಸ್ಪಟಿಕದ ಸಲಾಖೆಯಂತಿರಬೇಕು" ಎಂಬುದನ್ನು ಅಕ್ಷರಶಃ ಅರಿತು ಘಂಟೆ ಹೊಡೆದಂತೆ ಮಾತನಾಡುವವರು.  ಹಿರಿಯರು ಕಿರಿಯರು ಎನ್ನುವ ವಯೋ ಬೇಧಭಾವ ಇರೋದಿಲ್ಲ. ಹಿಡಿದ ಕೆಲಸದಲ್ಲಿ  ಕ್ವಾರ್ಟರ್ ಅಥವಾ ಅರ್ಧ ವರ್ಷ ಆದ ಮೇಲೆ ರಿಸಲ್ಟ್ ಅನ್ನು ತಂದು ತೋರಿಸಿಯೇ ಬಿಡುತ್ತಾರೆ.  ಯಾವುದೇ No ಅನ್ನುವ ಪದವನ್ನು ಸಹಿಸದವರು.  ಸದಾ ಕರ್ಮಠ ಸ್ವಭಾವದವರು.  ಅವರಿಂದ ಇವರಿಂದ ಕೆಲಸ ತೆಗೆಯುವವರು.  ರಾಜಕಾರಣಿಗಳು.  ಅಗತ್ಯ ಬಂದಾಗ ಗುಡುಗುವವರು ಮತ್ತು ನಿರ್ದಾಕ್ಷಿಣ್ಯವಾಗಿ ಹಿಂದೇಟನ್ನು ಹಾಕದೆ, "oh, it was a tough decision to make" ಎಂದು ನೂರಾರು ಕೆಲಸಗಾರರನ್ನು ಒಂದೇ ದಿನದಲ್ಲಿ ಮನೆಗಟ್ಟುವವರು, ಇತ್ಯಾದಿ, ಇತ್ಯಾದಿ.  "ನೀವು ಇಷ್ಟು ವರ್ಷ ಮಾಡಿದ್ದನ್ನ ಬಿಡಿ, ನಿಮ್ಮಿಂದ ಇನ್ನು ಮುಂದೆ ಏನೇನು ಮಾಡೋಕಾಗ್ತದೆ ಅನ್ನೋದನ್ನು ಒದರಿ ಹಾಗೂ ಸಾಬೀತು ಮಾಡಿ ತೋರಿಸಿ" ಅನ್ನೋ ಮಾತು ಯಾರು ಯಾವತ್ತು ಬೇಕಾದರೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹೇಳಬಹುದು ಹಾಗೂ ಕೇಳಬಹುದು.

ನಾವು ಡಾರ್ವಿನ್ನನ ಥಿಯರಿಯನ್ನು ಹಿಂದೆ ಓದುತ್ತಿದ್ದಾಗ struggle for existence ಅನ್ನೋದನ್ನ ಬೇರೆ ರೀತಿ ಅರ್ಥ ಮಾಡಿಕೊಳ್ತಿದ್ವಿ,  ಆದರೆ ಈಗ struggle ಮತ್ತು existence ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ.  ಒಂಥರಾ ಮೈಕ್ರೋ ಬಡ್ಡಿಯ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡ ಹಾಗೆ ಪ್ರತಿದಿನ ಪ್ರತಿಕ್ಷಣ ನಿಮ್ಮನ್ನ ನೀವು ಪ್ರೋವ್ ಮಾಡಿಕೊಳ್ತಲೇ ಇರಬೇಕು, ಅದೇ ನ್ಯಾಯ, ಅದೇ ನಿಯಮ.

ಇಂಥಾ ಕ್ಯಾಪಿಟಲಿಸಮ್ಮಿನ ಸಾಗರದಲ್ಲಿ, ನೀರಿನ ಗುಣವಿರುವ ನಾವು ಕನ್ನಡಿಗರು ನಮ್ಮ ಯಥೇಚ್ಛವಾದ ಸಾಹಿತ್ಯ, ಸಂಗೀತ ಹಾಗೂ ಸಂದೇಶಗಳ ಹಿನ್ನೆಲೆಯಿಂದ ಒಂದು ರೀತಿ ಬಡಪಾಯಿಗಳಾಗಿ ಬಿಟ್ಟೆವೆನೋ ಅನ್ನಿಸೋದಿಲ್ವಾ ನಿಮಗೆ? ಚಿಕ್ಕ ಚಿಕ್ಕ ರಾಜಕೀಯಗಳಲ್ಲಿ rat race ಹಾಗೂ ಮೈಕ್ರೋ ಮ್ಯಾನೇಜುಮೆಂಟುಗಳಲ್ಲಿ Ph. D., ಮಾಡಿರುವ ನಮಗೆ ನಮ್ಮ ಕಾರ್ಪೋರೇಟ್ ವಲಯದಲ್ಲಿ ಯಾರೂ ಯಾವತ್ತೂ ಕರೆದು ಲೀಡರ್‌ಶಿಪ್ ರೋಲ್ ಅನ್ನು ಕೊಟ್ಟಿದ್ದು ನೋಡಿಲ್ಲ ಬಿಡಿ.  ನಮ್ಮ ಕಣ್ಣೆದುರೇ ತೆಲುಗು, ತಮಿಳು ಹಾಗೂ ಉತ್ತರ ಭಾರತದವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಮುಂದೆ ಹೋದರೆ ನಾವು ಕನ್ನಡಿಗರು ಅವರಿಗೆ ಅಡಿಯಾಳುಗಳಾಗಿ ಕೆಲಸ ಮಾಡಿಕೊಂಡು ಅದನ್ನು "ಕಾಯಕವೇ ಕೈಲಾಸ" ಎಂದು ಕರೆದು ಹನ್ನೆರಡನೇ ಶತಮಾನದ ವಚನಕಾರರ ಜೊತೆ ಸಮನ್ವಯ ಬೆಳೆಸಿಕೊಂಡು ಬಿಡುತ್ತೇವೆ.  ಕನ್ನಡಿಗರು risk ತಗೊಳೋದಿಲ್ಲ ಬಿಡ್ರಿ.  ನೀವೆಲ್ಲ ಬರೀ ಪುಳಿಚಾರಿನ ಜನ ನಿಮ್ಮಿಂದೇನಾಗುತ್ತೇ? ಅನ್ನುವವರಿಗೆ ನಾವು ಏನು ಎಂಬುದನ್ನು ತೋರಿಸೋ ಕಾಲ ಬರೋದಾದ್ರೂ ಯಾವಾಗ?

ಊಟ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಟೀ ಕುಡುದ್ ಮೇಲೆ ಮತ್ತೆ ನಮ್ಮನ್ನು ನಾವೇ ಈ ಪ್ರಶ್ನೆ ಕೇಳಿಕೊಂಡು ಸಮಾಧಾನ ಮಾಡ್ಕೋಬಹುದು ಅಥವಾ ಮಾಡ್ಕೋತೀವಿ: in the grand schema of things, so what?  ನಮಗೆಲ್ಲಾ ಈಗ ಕಷ್ಟಾ ಆಗೋಲ್ಲ.  ಯಾವಾಗ ನಮ್ಮ ಮಕ್ಳು ಹೈ ಸ್ಕೂಲು ಮುಗಿಸಿ ಕಾಲೇಜು ಸೇರಿ ಮೊದಲ ಸಲ ಥ್ಯಾಂಕ್ಸ್ ಗಿವಿಂಗ್‌ಗೆ ಮನೆಗೆ ಬರ್ತಾರಲ್ಲ, ಅವಾಗ ನಮ್ಮ್ ಮುಸುಡಿ ನೋಡಿ ಕೇಳ್ತಾರ್ ನೋಡಿ, "ಓ, ನೀನು ಇನ್ನು ಅದೇ ಕೆಲ್ಸದಲ್ಲಿ, ಅದೇ ಲೆವಲ್‌ನಲ್ಲಿ ಇದಿಯಾ?" ಆಗ ನಿಜವಾಗ್ಲೂ ಗೊತ್ತಾಗುತ್ತೆ ನಾವು ಯಾರು ಅಂತ.  ಅಷ್ಟೊತ್ತಿಗೆ ಸುಮಾರು ತಲೆ ಕೂದ್ಲು ಹಣ್ಣಾಗಿರುತ್ತೆ, ಇಲ್ಲಾ ಉದುರಿರುತ್ತೆ.  ಉಪೇಂದ್ರ ಹೇಳಿದ ಹಾಗೆ ಮೀಲ್ ಬೆಗ್ಗರ್ ಸ್ಟೇಟಸ್‌ಗೆ ಹತ್ರಾ ಹತ್ರಾ ಹೋಗ್ತೀವಿ.   ಇಲ್ಲೇ ಹುಟ್ಟಿ ಬೆಳೆದ ನಮ್ ಅಮೇರಿಕನ್ ಮಕ್ಳಿಗೆ ನಾವು ಬೇಡವಾಗಿ ಹೋಗ್ತೀವಿ.  ಆಗ ನಾವು, ಇನ್ನೇನು ನಾಳೆ ಇಂದನೇ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಅದು ಮಾಡೋಣ, ಇದು ಮಾಡೋಣ ಅಂದುಕೊಂಡು ಕನಸು ಕಾಣೋ ಅಷ್ಟರಲ್ಲಿ ತೂಕಡಿಗೆ ಜೋರಾಗಿ, ನಿದ್ರೆ ಬಂದು ಹೋಗಿರುತ್ತೆ, ನೋಡ್ತಾ ಇರಿ!

Sunday, November 01, 2009

ಅದುಮಿಕೊಂಡ ಆಸೆ-ಆತಂಕ

B&H ಪ್ರೊಫೆಷನಲ್ ಕ್ಯಾಟಲಾಗ್ ಇಟ್ಟುಕೊಂಡು ಒಂದೊಂದೇ ಕೆಟಗರಿಯನ್ನು ನೋಡುತ್ತಾ ಇದ್ದಂತೆಲ್ಲಾ ಏನೇನ್ನನ್ನೆಲ್ಲ ಮಾಡಬಹುದು ಮಾಡಬಹುದಿತ್ತು ಎನ್ನಿಸಿತು. ಪ್ರೊಫೆಷನ್ ಆಡಿಯೋ, ವಿಡಿಯೋ, ಆಪ್ಟಿಕಲ್, ಕಂಪ್ಯೂಟರ್, ಸ್ಟೋರೇಜ್, ಕ್ಯಾಮೆರಾ...ಹೀಗೆ ವಿಧ ವಿಧವಾದ ವಸ್ತುಗಳನ್ನೆಲ್ಲ ನೋಡುತ್ತಿದ್ದ ಹಾಗೆ, ಅಯ್ಯೋ ಅದನ್ನು ಮಾಡಬಹುದಿತ್ತು, ಇದನ್ನು ಮಾಡಬಹುದಿತ್ತು...ಎನ್ನಬಹುದಾದ ಆಸೆಗಳೆಲ್ಲವೂ ಅದೆಲ್ಲೋ ಅದುಮಿಟ್ಟು ಹೊರಗೆ ಬಿಟ್ಟ ಸ್ಪ್ರಿಂಗಿನಂತೆ ತಮ್ಮೊಳಗಿನ ಪ್ರಚನ್ನ ಶಕ್ತಿಯನ್ನು ತೋರ್ಪಡಿಸತೊಡಗಿದವು.

ಟರ್ಮಿನಲ್ ಕಾಯಿಲೆಗೊಳಗಾದ ಕ್ಯಾನ್ಸರ್ ರೋಗಿಯ ಮನದಾಳದ ಆಸೆಗಳಂತಲ್ಲದಿದ್ದರೂ ಪ್ರತಿಯೊಬ್ಬರಿಗೂ ಅವರವರೊಳಗೆ ಮೂಲೆಗುಂಪು ಮಾಡಿದ ಅದೆಷ್ಟೋ ಮನದಾಳದ ಆಮಿಷಗಳಿದ್ದಾವು: ಅದು ಫೋಟೋ ತೆಗೆಯುವ ಹವ್ಯಾಸವಾಗಿರಬಹುದು, ಚಿತ್ರಕಲೆಯಾಗಿರಬಹುದು, ಸಂಗೀತದ ಸಾಧನೆಯ ವಿಷಯವಾಗಿರಬಹುದು, ಪುಸ್ತಕ ಬರೆದು ಪ್ರಕಟಿಸುವ ಹುನ್ನಾರವಿರಬಹುದು, ನಾಟಕ-ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇರಬಹುದು, ಮ್ಯಾರಥಾನ ಓಡುವ ಕನಸಿರಬಹುದು, ದೊಡ್ಡ ಉದ್ಯಮಿಯಾಗುವ ಬಯಕೆ ಇರಬಹುದು, ಅಥವಾ ಊರಿನ ಪಂಚಾಯತಿಯ ಮುಖಂಡನೋ ದೊಡ್ಡ ರಾಜಕೀಯ ವ್ಯಕ್ತಿಯೋ...ಇನ್ನೂ ಏನೇನೋ ಕನಸುಗಳಿರಬಹುದು.

ನಮಗೆಲ್ಲ ಹೀಗೆ ಒಂದೊಂದು ಸಾಫ್ಟ್ ಕಾರ್ನರ್ ಇದೆ, ನಮ್ಮ ದಿನನಿತ್ಯದ ಗೊಂದಲವನ್ನು ಬದಿಗಿಟ್ಟು ಯಾವುದಾದರೊಂದು ರಿಸಾರ್ಟ್‌ನ ಹಾಸುಗಲ್ಲಿನ ಮೇಲೆ (ಅಥವಾ ಬೆಂಚ್‌ನ ಮೇಲೆ) ಮಲಗಿ ಅಗಾಧವಾದ ಮುಗಿಲನ್ನು ನೋಡುತ್ತಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾ ಇದ್ದರೆ ಒಂದು ದಿನವೋ ಅಥವಾ ಒಂದು ವಾರದ ನಂತರವಾದರೂ ಹೀಗೆ ಮಾಡಬೇಕು ಅಥವಾ ಮಾಡಬಹುದಿತ್ತು ಎನ್ನುವ ಅನೇಕಾನೇಕ ಯೋಚನೆಗಳು ಖಂಡಿತ ಬಂದೇ ಬರುತ್ತವೆ. ಆಂತೊನಿ ಬೋರ್ಡೇನ್‌ನ ಟ್ರಾವೆಲ್ ಅನುಭವದ ಬಗ್ಗೆ ಬರೆಯುತ್ತಾ ಮರಳುಗಾಡು ನಮಗೆ ಹೇಗೆ ಅತಿ ಅಗತ್ಯವಾದ ಧ್ಯಾನಕ್ಕೆ ತಕ್ಕುನಾದ ನಿಶ್ಯಬ್ದವಾದ ಒಂದು ನೆಲೆಯನ್ನು ಒದಗಿಸುವ ಬಗ್ಗೆ ಬರೆದಿದ್ದೆ. ಒಂದಲ್ಲ ಒಂದು ದಿನ ನಮ್ಮ ನಮ್ಮ ಮನಸ್ಥಿತಿಯನ್ನು ಇಂತಹ ಒಂದು ಸೈಲೆನ್ಸ್‌ಗೆ ಗುರಿಮಾಡಿ ಅದರಿಂದ ಏನು ಹೊರಬಂದೀತು ಎಂದು ಕಾದು ನೋಡುವುದು ಒಳ್ಳೆಯ ಅನುಭವವಾದೀತು.

ನನ್ನ ಹತೋಟಿಯಲ್ಲಿದ್ದ ಒಂದು ಘಂಟೆಯ ಸಮಯದಲ್ಲಿ ಸುಮಾರು ಐನೂರು ಪುಟಗಳ ಕ್ಯಾಟಲಾಗ್ ಅನ್ನು ಸೆಕ್ಷನ್ನ್‌ ನಿಂದ ಸೆಕ್ಷನ್ನ್‌ಗೆ ತಿರುವಿ ಹಾಕಿದ್ದೇ ಬಂತು: ಅದರ ಪರಿಣಾಮವಾಗಿ ನನ್ನ ಕನಸಿನ ರೆಕಾರ್ಡಿಂಗ್ ಸ್ಟುಡಿಯೋಗೆ ಬೇಕಾದ ಪರಿಕರಗಳು ಕಂಡು ಬಂದವು, ಹೆಚ್ಚಿನ ಎಕ್ಸ್‌ಟರ್ನಲ್ ಕಂಪ್ಯೂಟರ್ ಸ್ಟೋರೇಜ್ ಕಾಣಿಸಿತು, ಹಗಲು-ರಾತ್ರಿ ನೋಡಬಹುದಾದ ಬೈನಾಕ್ಯುಲರ್ ಮನದಲ್ಲಿ ಒಂದು ಕ್ಷಣ ನಿಂತಿತು, ಎಲ್ಲಾ ಮ್ಯೂಸಿಕ್ ಚಾನೆಲ್ಲಿನ ಲವಲೇಶಗಳನ್ನೂ ಬಿಡಿಬಿಡಿಯಾಗಿ ಹೊರಗೆ ಹಾಕುವ ಸುಂದರ ಹೋಮ್ ಥಿಯೇಟರ್ ಸಿಸ್ಟಮ್ಮ್‌ಗಳು ಕಂಡು ಬಂದವು, ನೂರೈವತ್ತು-ಇನ್ನೂರು ವ್ಯಾಟ್ ಪವರ್ ಇರುವ ಸ್ಪೀಕರುಗಳು ಕಂಡುಬಂದವು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಇನ್ನು ಈ ಎಕ್ಸ್‌ಪ್ಲೋರೇಷನ್ನಿನ್ನ ಮುಂದುವರಿದ ಭಾಗವಾಗಿ ಒಂದೆರಡು ಅಂಶಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ರಿಸರ್ಚ್ ಮಾಡಿದ್ದೂ ಆಯಿತು...ಒಂದು ಘಂಟೆಯ ನಂತರ ಪ್ರಚನ್ನ ಶಕ್ತಿಯ ಬಲದಿಂದಾಗಿ ಚಿಮ್ಮಿದ ಆಸೆ-ಆಕಾಂಕ್ಷೆಗಳು ಮತ್ತೆ ಗೂಡು ಸೇರಿಕೊಂಡವು. ಅದು ಮಾಡಬಹುದು-ಇದು ಮಾಡಬಹುದು ಎನ್ನುವ ಹೇಳಿಕೆಯ ಮೊದಲೇ ಅದು ಮಾಡಬೇಕು-ಇದು ಮಾಡಬೇಕು (ಭಾನುವಾರ ಮುಗಿಯುವುದರೊಳಗೆ) ಎನ್ನುವುದು ಬಲವಾಗತೊಡಗಿತು.

***
ಇಲ್ಲಿನ ಕಿರಾಣಿ ಅಂಗಡಿಯಲ್ಲಿ ನೋಡಿ-ಕೇಳಿದ್ದು: ಮಧ್ಯಮ ವಯಸ್ಸಿನ ಕಕೇಷಿಯನ್ ದಂಪತಿಗಳಿಬ್ಬರು ಅಂಗಡಿಯಲ್ಲಿ ಮಾರಟಕ್ಕೆ ಇಟ್ಟ ರಕ್ಕಸಕಳ್ಳಿಯನ್ನು (Aloe-vera) ನೋಡಿ:
"ಇದನ್ನು ಏತಕ್ಕೆ ಮತ್ತು ಹೇಗೆ ಬಳಸುತ್ತಾರೆಂದು ನಿನಗೆ ಗೊತ್ತೇನು?"
"ಇಲ್ಲ..."
"May be we will give it a shot in our next life..."

***
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು!

Monday, February 16, 2009

ಈಗಿನ ಹುಡ್ರು ಕಥೆ

ಪಾಪ, ಈಗಿನ ಹುಡ್ರು ತಮ್ ತಮ್ ಒಳಗೆ ಹಿಂಗೂ ಮಾತಾಡ್‌ಕೊಂತರೆ ನೋಡಿ, ಕರ್ರಗಿದ್ದೋರನ್ನ ಕರಿಯಾ ಅನ್ನೋದರಲ್ಲಿ ಅಫೆನ್ಸ್ ಏನಿದೆ? ದಿನಕ್ಕೆ ಐವತ್ತು ಸೆಂಟ್ಸ್ ಕೊಟ್ಟು ವಾರಕ್ಕೊಂದು ಸರ್ತಿ ಉದಯಾ ಟಿವಿ ನೋಡೋ ಭಾಗ್ಯದ ದೆಸೆಯಿಂದ ಈ ಹಾಡು ಕಿವಿಗೆ ಬಿದ್ದು ಹೀಗೆ ಬರೀಬೇಕಾಯ್ತು ನೋಡಿ.

ಕರಿಯಾ ಐ ಲವ್ ಯೂ
ಕರುನಾಡ ಮೇಲ್ ಆಣೆ
ಬೆಳ್ಳಿ ಐ ಲವ್ ಯೂ
ಬಿಳಿ ಮೋಡದಾ ಮೇಲ್ ಆಣೆ

ಭಾಳಾ ಹಿಂದಕೆ ಏನಿಲ್ಲ ಪ್ರೇಮಿಗಳೆಲ್ಲ ಇನ್ನೂ ಏನೇನನ್ನೋ ಇಟ್ಟು ಆಣೆ ಮಾಡಿಕೊಂತಿದ್ರು ಇಂದಿನ್ ಕಾಲ್ದಲ್ಲಿ ಅವೆಲ್ಲಾ ಶಾನೆ ಬದ್ಲಾಗಿರಂಗಿದೆ ಬಿಡಿ, ಏನ್ ಮಾಡಣ. ಇವತ್ತಿನ್ ಹುಡ್ರೆಲ್ಲಾ ಟೈಪ್‌ರೈಟರ್ ಕುಟ್ಟಿ ನೋಡಿಲ್ಲ, ರೆಕಾರ್ಡ್ ಪ್ಲೇಯುರ್ ತಟ್ಟೇನೆಲ್ಲ ಕಂಡೇ ಇಲ್ಲ. ನಮ್ ಕಾಲ್ದ ರೆಕಾರ್ಡ್ ತಟ್ಟೆಗಳ ಮೇಲ್ ಧೂಳೂ ಪಾಳೂ ಕುಂತಿದ್ದೇ ಆದ್ರೆ ಬರೀ ಹೇಳಿದ್ದೇ ಹೇಳ್ತಿತ್ತು, ಅದೇ ಈಗಿನ ಕಾಲ್ದ ತಟ್ಟೆಗಳೋ ಕೆಲ್ಸಾ ಮಾಡೋದೇ ನಿಲ್ಲಿಸ್ತವೆ. ಹೇಳಿದ್ದೇ ಹೇಳೋದ್ ಬೆಷ್ಟೋ ಅಥ್ವಾ ಕೆಲ್ಸಾ ನಿಲ್ಸೋದ್ ಬೆಷ್ಟೋ ನಿಮ್ ನಿಮ್ಗೇ ಬಿಟ್ಟಿದ್ದು. ಕೆಲವಂದ್ ಸರ್ತಿ ಹೇಳಿದ್ದೇ ಹೇಳೋ ಕಿಸ್‌ಬಾಯ್ ದಾಸ್ರೇ ಸರಿ, ಸುಮ್ಕಿರ್ ಮಂಗ್ಯಾನ್ ಮಕ್ಳೀಗ್ ಹೋಲ್ಸಿ ನೋಡಿದ್ರೆ ಅನ್ಸಲ್ಲಾ?

ನಿನಗೊಂದು ಪ್ರೇಮದ ಪತ್ರಾ
ಬರೆಯೋದು ನನಗಾಸೆ
ನಾನೆ ಇರುವೇ ಹತ್ರ
ಬಿಡು ಆಸೆ ಓ ಕೂಸೇ


ಆಯ್ತಲ್ಲಾ ಕಥೇ, ಪ್ರೇಮದ ಪತ್ರಾ ಇರ್ಲಿ, ಪತ್ರದ ಗೋಜಿಗೇ ಹೋಗಂಗಿಲ್ಲ ಈಗಿನ ಹುಡ್ರೂ ಅಂತೀನಿ. ಎಲ್ಲೋ ಇ-ಮೇಲೂ ಪಾಮೇಲೂ ಅಂತ ಕುಟ್ಟಿಗಂಡು ಬದುಕ್ಯಂಡಿದ್ದ್ ಬಡ್ಡಿ ಹೈಕ್ಳು ಈಗೀಗ ಎಸ್‌ಎಮ್ಮೆಸ್ ದಾರಿ ಹಿಡಕಂಡು ಒಂಥರಾ ಕಾಡುಕುದ್ರೆ ದಾರಿ ಹಿಡಿದವೆ ಇವರ ಕಮ್ಮ್ಯೂನಿಕೇಷನ್ನು. ಜೊತೆಗೆ ಸೆಂಟ್ರಲೈಜ್ಡ್ ಪೋಸ್ಟ್ ಆಫೀಸ್ ಕಥೆ ಏನ್ ಹೇಳಾಣ, ಅವರ ಪತ್ರಗಳ ಎಣಿಕೆ ಕಡಿಮೆ ಆದಂತೆ ಅವರ ಕಮ್ಮೀ ಆದ ಆದಾಯ ನೋಡಿ ಇಂದಿನ ಪೋಸ್ಟ್ ಮಾಸ್ಟರ್ ಜನರಲ್ಲುಗಳಿಗೆ ರಾತ್ರಿ ನಿದ್ದೇನೇ ಬರಂಗಿಲ್ಲಂತೆ ನಿಜವೇ? ಇವತ್ತಿನ ಮೊಬೈಲ್ ಫೋನ್ ಜಮಾನಾದಾಗೆ ಜನಗಳು ಲೆಟ್ರು ಬರೆಯೋದಿರ್ಲಿ ಮಾತೇ ಆಡೇ ಬರೀ ಫಿಂಗರ್ರುಗಳ ಮಸಲ್ಲುಗಳನ್ನು ಬೆಳೆಸ್ತಾ ಇದಾರಂತೆ ಹಿಂಗೇ ನಡೆದ್ರೆ ಇನ್ನು ಮುಂದಿನ ಪೀಳಿಗೆಗಳಿಗೆ ಒಂದೊಂದು ಬೆರಳು ಹೆಚ್ಚು ಹುಟ್ಟುತ್ತೋ ಏನೋ - ವಿಕಾಸವಾದದ ದೊರೆಗಳ್ನೇ ಕೇಳ್ಬೇಕು. ಬ್ಲ್ಯಾಕ್‌ಬೆರಿ ಅಂತಂದು ಜೀವನದುದ್ದಕ್ಕೂ ಯಾವ್ದೇ ಬೆರ್ರಿನ್ನೂ ಚೆರ್ರಿನ್ನೂ ನೋಡ್ದೇ ಇರೋರಿಗೆ ಕಮ್ಮ್ಯೂನಿಕೇಷನ್ನ್ ಫಿವರ್ರ್ ಹುಟ್ಟಿಸಿರೋರನ್ನ ಜೈಲಿಗೆ ಹಾಕ್ಬೇಕು, ಮತ್ತೇನು. ಇಷ್ಟೆಲ್ಲಾ ಮಾಧ್ಯಮಾ, ಕಮ್ಮ್ಯೂನಿಕೇಷನ್ನೂ ಅಂತಾ ಇದ್ರೂ ಜನಗಳ ನಡ್ವೆ ಸಂಬಂಧಗಳ ಅಪಸ್ವರ ಹೆಚ್ತಾನೇ ಇರೋದು ಇನ್ಯಾವ ವಾದದ ಮಾತೂ ಅಂತೀನಿ.

ಇವತ್ತಿನ ಕಾಯಂಗಿಲ್ಲ, ಕೆನೆ ಕಟ್ಟಂಗಿಲ್ಲ. ನೋಡಿಕ್ಯಂತಿರಿ ಇವತ್ತಲ್ಲ ನಾಳೆ ಒಂದು ನಿಮಿಷದೊಳಗೆ ಹಾಲು ಕೆನೆಕಟ್ಟೋ ಯಂತ್ರ ಕಂಡ್ ಹಿಡಿತಾರೋ ಇಲ್ಲಾ ಅಂತ. ಮೊಸರಿಗೆ ಇಡೋವಾಗ ಹಾಲನ್ನು ಬಿಸಿ ಮಾಡಿ ಆಮೇಲೆ ತಣ್ಣಗೆ ಮಾಡಿ ಅದರ ಮೇಲೆ ಹೆಪ್ಪು ಯಾಕ್ ಹಾಕಬೇಕು, ಯಾರ್ ಮಾಡಿದ್ರಪ್ಪಾ ಆ ನೀತೀನ.

Friday, November 21, 2008

ದೇವ್ರು ಇಲ್ಲಾ ಅಂತ ಅಂದೋರು ಯಾರು

ನಾವೆಲ್ಲಾ ಚಿಕ್ಕವರಿದ್ದಾಗ ದೇವ್ರು-ದೆವ್ವಗಳು ಇದ್ದಾವೋ ಇಲ್ಲವೋ ಅಂತ ಚಿಂತೆ-ಚಿಂತನೆ ನಡ್ಸಿ ನಡ್ಸಿ ಬಹಳ ಟೈಮು ಕಳೀತಿದ್ವಿ, ನಮ್ಮ ನಮ್ಮ ಮಟ್ಟಿನ ತತ್ವಗಳು ತರ್ಕಗಳು ನಮ್ಮನ್ನು ವಾದ-ವಿವಾದಗಳಲ್ಲಿ ತೊಡಗಿಸಿ ಕೆಲವೊಂದು ಕಥೆಗಳನ್ನು ಬಹಳ ರೋಚಕಗೊಳಿಸಿ (ಅಂದ್ರೆ ಮಸಾಲೆ ಸೇರಿಸಿ) ಹೇಳಿ ಹಂಚಿಕೊಳ್ಳುತ್ತಿದ್ದೆವು. ಪ್ರಪಂಚದಲ್ಲಿ ಇದ್ದ ಇಲ್ಲದ ದೆವ್ವ ಭೂತಗಳು, ಕೊಳ್ಳಿ ದೆವ್ವಗಳು ಇವೆಲ್ಲಾ ನಮ್ಮ ತಂಡದ ಅನುಪಸ್ಥಿತ ಸದಸ್ಯರಾಗಿದ್ದವು. ನಮ್ಮ ನಮ್ಮ ದೇವರುಗಳ ಜೊತೆಗೆ ನಮ್ಮೂರಿನ ಶ್ಮಶಾನದಲ್ಲಿದ್ದ ದೆವ್ವಗಳು ಹಾಗೂ ಅವುಗಳ ಕಥೆಗಳು ನಮ್ಮ ಜೊತೆಗೆ ಅಮೇರಿಕಕ್ಕೆ ಹೇಗೆ ಬಂದ್ವು, ಅವುಗಳಿಗೆ ವೀಸಾ ಕೊಟ್ಟೋರು ಯಾರು ಅನ್ನೋ ಪ್ರಶ್ನೆಗಳು ಇನ್ನು ಪ್ರಶ್ನೆಗಳಾಗೇ ಉಳಿದಿವೆ ಬಿಡಿ.

ಈ ತಣ್ಣನೆ ಹೊತ್ತಿನಲ್ಲಿ ದೇವ್ರ ಬಗ್ಗೆ ನೆನೆಸಿಕೊಳ್ಳೋದಕ್ಕೆ ಏನು ಕಾರಣ ಅಂತ ನನಗೇ ಅನ್ಸಿ ಒಂದು ನಗು ಹೊರಗೆ ಬಂತು, ಅದರ ಹಿಂದೇನೇ ದೇವ್ರ ಹೆಸರನ್ನ ಹಿಡಿದು ಒಂದಿಷ್ಟು ಕೀಟಲೆ ಮಾಡೋಣ ಅಂತ್ಲೂ ಅಂದುಕೊಂಡೆ, after all ಯಾವ ದೇವ್ರ ತಂಡವೂ ನಮ್ಮನ್ನೇನು sue ಮಾಡೋಲ್ಲ ಅಲ್ವೇ?

***

Thanks to my three year old - ಪ್ರತಿಯೊಂದು ಆಲ್ಟರ್‌ನೇಟ್ ಪದ ಇಂಚರಳ ಬಾಯಿಯಿಂದ ಹೊರಡೋದು "Why?" (but why, ಮತ್ತೆ ಅದಕ್ಕೆ ಅಮೇರಿಕನ್ ಆಕ್ಸೆಂಟಿನ ಟಚ್ ಜೊತೆ ಹಲವಾರು ವೇರಿಯೇಷನ್ನುಗಳೂ ಇವೆ!). ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋ ಹಿನ್ನೆಲೆ ಅಥವಾ ನೆಪದಲ್ಲಿ ಈ ಕೆಳಗಿನ ಪ್ರಶ್ನೆಗಳು ಅಷ್ಟೇ...(ತಮಾಷೆಗೆಂದು)

- ದೇವ್ರು ಬ್ಲಾಕೋ ವೈಟೋ ಅಥವಾ ಮಿಕ್ಸೋ? ಅಥ್ವಾ ಕಲರ್ಡ್ ಸ್ಕಿನ್ನೋ? ಹೌದೌದು, ರಾಮ-ಕೃಷ್ಣರ ಚಿತ್ರಗಳನ್ನು ನೋಡಿ ಸ್ವಲ್ಪ ನೀಲಿಯಾಗಿರುತ್ವೆ, ಶಿವನ ಕಂಠವೂ ಕೂಡಾ ನೀಲಿ.
- ಈ ಬ್ರಹ್ಮನ ತಲೆ ಕೂದಲನ್ನು ಕತ್ತರಿಸೋ ಪ್ರವೀಣ ಕಲಾವಿದ ಯಾರು? ಆ ನಾಲ್ಕು ತಲೆಗಳ ನಡುವೆ ಅವನ ಕತ್ತರಿ ಹೇಗೆ ಸಲೀಸಾಗಿ ಹರಿದಾಡುತ್ತೆ? ಯಾವ ಬಾಯಿಯಿಂದ ಹರಿಯೋ ಸಂವಾದಕ್ಕೆ ಆ ನಾಪಿತ ಯಾವ ಉತ್ತರ ಕೊಡ್ತಾನೆ?
- ಈ ನಾಲ್ಕು ಕೈ ಇರೋ ದೇವತೆಗಳಿಗೆ ಬಟ್ಟೆ ಹೊಲಿದು ಕೊಡೋರು (ಅಂದ್ರೆ ಡಿಸೈನರ್ಸ್) ಯಾರು?
- ಹತ್ತು ತಲೆ ಇರೋ ರಾವಣ ಯಾವ ಬಾಯಲ್ಲಿ ಅನ್ನಾ ಹಾಕ್ತಿದ್ದ?
- ಶಂಕರ ಕೋಪದಲ್ಲಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕತ್ತರಿಸಿದ (why?), ಭಂಟರು ಹೋಗಿ ಉತ್ತರಕ್ಕೆ ತಲೆ ಹಾಕಿ ಮಲಗಿದ ಆನೆ ತಲೆಯನ್ನು ಕತ್ತರಿಸಿ ತಂದರು (why?), ಹಾರ್ಟು, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡೋದನ್ನ ಕೇಳಿದ್ದೇವೆ, ಪ್ರಾಣಿಯಿಂದ ಮನುಷ್ಯನಿಗೆ ತಲೆ ಟ್ರಾನ್ಸ್‌ಪ್ಲಾಂಟ್ ಮಾಡಿದ್ದು ಯಾವ ಸರ್ಜನ್ನು? ಅನಸ್ತೇಷಿಯಾ ಕೊಟ್ಟೋರು ಯಾರು? ಆ ಬಾಲಕನ ಕಡಿದು ಹೋದ ತಲೆಯನ್ನೇ ಹುಡುಕಿ ಮತ್ತೇಕೆ ಜೋಡಿಸಲಿಲ್ಲ, ಆ ಆನೆಯ ಮುಂಡ ಏನಾಯ್ತು? ಇಡೀ ಬ್ರಹ್ಮಾಂಡದಲ್ಲಿ ಬರೀ ಅದೊಂದು ಬಡಪಾಯಿ ಆನೆ ಮಾತ್ರ ಉತ್ತರಕ್ಕೆ ತಲೆ ಹಾಕಿ ಮಲಗಿತ್ತೇ?
- ಈ ಕ್ಲೀನ್ ಶೇವನ್ನ್ ವಿಷ್ಣು ಬಳಸೋ ಬ್ಲೇಡ್ ಯಾವ್ದು? ಕೇವಲ ಶಿವ, ರಾಘವೇಂದ್ರ ಸ್ವಾಮಿ, ಹನುಮಂತ ಗಡ್ಡ ಬೆಳೆಸಿಕೊಂಡಿರೋ ಚಿತ್ರ ಮಾತ್ರ ನೋಡೋಕೆ ಯಾಕೆ ಸಿಗುತ್ತೆ?

ಈ ಮೇಲಿನ ಏನೆಲ್ಲ ಪ್ರಶ್ನೆಗಳು (ಹಾಗೂ ಅವುಗಳ ಉತ್ತರಗಳು) ಇದ್ರೂ ನಾವು ದೇವರನ್ನ ಘಟ್ಟಿಯಾಗಿ ನಂಬಿದವರೇ, ಪ್ರತಿನಿತ್ಯ ಶ್ರೀ ಗಣೇಶಾಯ ನಮಃ ಅಂದೇ ನಮ್ಮ ಜೀವನಗತಿಯನ್ನು ಆರಂಭಿಸುವವರೇ. ಈ ಪ್ರಶ್ನೆಗಳನ್ನ ನಾನು ಯಾವತ್ತೂ ಯಾರಿಗೂ ಕೇಳಿದ್ದಿಲ್ಲ (ಇಲ್ಲಿಯವರೆಗೆ), ಇವುಗಳೆಲ್ಲ ಹೀಗೆ ಬಾಲಿಶ ಅನ್ನಿಸಿದ್ರೂ ಪ್ರಶ್ನೆ ಕೇಳಬೇಕಾದ ವಯಸ್ಸಿನಲ್ಲಿ ಕೇಳಿದ್ರೆ ಉತ್ತರ ಕೊಡೋ ಬದಲು ’ಹೋಗೋ ತಲೆಹರಟೆ, ಅಧಿಕಪ್ರಸಂಗಿ...’ ಅಂತ ಯಾರಾದ್ರೂ ಬೈತಾರೆ ಅನ್ನೋ ಅವ್ಯಕ್ತ ಭಯವನ್ನು ಯಾರು ಹುಟ್ಟಿಹಾಕಿದ್ರೋ ಯಾರಿಗೆ ಗೊತ್ತು?

***

ಹೀಗೇ ಒಂದು ದಿನ ವರ್ಜೀನಿಯಾದ ಅಲೆಕ್ಸಾಂಡ್ರಿಯಾ ಮನೆಯಲ್ಲಿ ನಮ್ಮ ಮನೆಯ ಗೋಡೆಗಳಿಗೆ ಬಣ್ಣ ಹಚ್ಚೋಣ ಅನ್ನೋ ಆಲೋಚನೆ ಬಂದಿದ್ದೇ ತಡ ಬಣ್ಣ ಹಚ್ಚಲು ಬೇಕಾದ ಪರಿಕರಗಳನ್ನೆಲ್ಲ ಜೋಡಿಸಿಕೊಂಡು ಸುಸಜ್ಜಿತನಾದೆ, ಮೊದಮೊದಲು ಇದ್ದ ಉತ್ಸಾಹ ಕೆಲ್ಸಾ ಮಾಡ್ತಾ ಮಾಡ್ತಾ ಬತ್ತಿ ಹೋಗೋದರ ಜೊತೆಗೆ ದೊಡ್ಡ ತಲೆನೋವು ಇದು ಅನ್ನೋ ಭಾವನೆ ಬಲವಾಗಿ ಮುತ್ತಿಕೊಳ್ಳತೊಡಗಿತು. ದಿನಗಳೆದ ಮೇಲೆ ಇನ್ನೇನು ಸುಮಾರಾಗಿ ಎಲ್ಲ ಕೆಲ್ಸ ಮುಗಿದು ಫಯರ್ ಪ್ಲೇಸಿನ ಮೇಲೆ ಇದ್ದ ಗೋಡೆಯನ್ನು ಅರ್ಧ ಪೈಂಟ್ ಮಾಡುವ ಹೊತ್ತಿಗೆ ಅಚಾನಕ್ಕಾಗಿ ಏರ್‌ಪೋರ್ಟಿನಿಂದ ನನ್ನ ಸ್ನೇಹಿತನ ಕರೆ ಬಂತು.

’I am hungry, tired, jet lagged, cold - come and get me out of here!' ಅನ್ನೋ ಆಜ್ಞೆ. ನಮ್ಮ ಮನೆಯಿಂದ ಡಲ್ಲಸ್ ಏರ್‌ಪೋರ್ಟಿಗೆ ಕನಿಷ್ಠ ಒಂದು ಘಂಟೆ ದೂರ, ಮೊದಲೇ ಕೆಲಸ ಕಳ್ಳ ನಾನು (ಬಣ್ಣ ಹಚ್ಚೋ ಕೆಲಸ) ಒಂದು ನೆವ ಸಿಕ್ಕಿತೆಂದು ಕೆಲಸವನ್ನು ಅಲ್ಲೇ ಬಿಟ್ಟು ಏರ್‌ಪೋರ್ಟಿನ ಕಡೆ ಹೊರಟೆ. ನಾನು ಬರುವ ಹೊತ್ತಿಗೆ ಸುಮಾರು ಮೂರ್ನಾಲ್ಕು ಘಂಟೆ ಕಳೆದು ಹೋಗಿತ್ತು, ಟ್ರೇನಲ್ಲಿ ಇದ್ದ ಪೈಂಟೂ ಹಾಗೂ ನನ್ನ ರೋಲರ್ರುಗಳು, ಬ್ರಷ್ಷೂ ಇವೆಲ್ಲ ಒಣಗಿ ಹೋಗಿ ಉಪಯೋಗಕ್ಕೆ ಬಾರದವಾಗಿತ್ತು. ನೀರಿನಲ್ಲಿ ತೊಳೆದು ಅದೇನೇನು ಮಾಡಿದರೂ ಮೊದಲಿನ ಹಾಗೆ ಬಣ್ಣ ಹಚ್ಚಲು ಬಾರದವಾಗಿ ಹೋಗಿದ್ದವು. ಅದೇ ತಾನೆ ಮನೆಗೆ ಬಂದ ನನ್ನ ಸ್ನೇಹಿತನಿಗೆ ಸಹಸ್ರ ನಾಮ ಹಾಕುತ್ತಲೇ ಮತ್ತೆ ಇದ್ದ ಬದ್ದ ಒಣಗಿ ಕೃಶವಾದ ರೋಲರುಗಳಿಂದಲೇ ಬಣ್ಣ ಹಚ್ಚುವ ಬುದ್ಧಿವಂತ ಸಾಹಸಕ್ಕೆ ತೊಡಗಿದ್ದ ನನಗೆ ಬುದ್ಧಿ ಕಲಿಸುವ ಸಲುವಾಗಿ ಫೈಯರ್ ಪ್ಲೇಸಿನ ಮೇಲಿನ ಗೋಡೆಯ ಬಣ್ಣ ಬರೆಬರೆಯಾಗಿ ಹೋಯಿತು, ಮೊದಲು ಇದ್ದದ್ದಕ್ಕಿಂತಲೂ ಹಾಳಾಗಿ ಹೋಯಿತು. ಅದೂ ಸೆಮಿ ಗ್ಲಾಸ್ ಪೈಂಟು, ಅದರ ಸ್ಥಿತಿ ಇನ್ನೂ ಕಷ್ಟವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ನನ್ನ ಎಲ್ಲ ಕರ್ಮಾಕರ್ಮಗಳನ್ನು ಹಳಿಯುತ್ತ ಇದನ್ನೆಲ್ಲ ಹೇಗೆ ಸರಿಪಡಿಸಲಿ ಎಂದು ಯೋಚಿಸುತ್ತಿದ್ದ ನನಗೆ ಮರುದಿನ ಬಹಳ ಆಶ್ಚರ್ಯವೊಂದು ಕಾದಿತ್ತು.

ನಮ್ಮ ಮಹಡಿಯ ಮನೆಯ ಮೇಲೆ ಆಟಿಕ್‌ನಲ್ಲಿ ಆ ವರ್ಷ ಇದ್ದ ಮಹಾನ್ ಛಳಿಯಲ್ಲಿ ನೀರಿನ ಪೈಪುಗಳು ಒಡೆದು ಹೋಗಿ ಒಂದೆರಡು ಮಹಡಿಗಳ ಮನೆಗಳಲ್ಲೆಲ್ಲಾ ನೀರು-ನೀರು ಹರಿದುಹೋಗಿತ್ತು. ಎರಡು ಮಹಡಿ ಕೆಳಗಿರುವ ನಮ್ಮ ಮನೆಯಲ್ಲೂ ನೀರಿನ ಪ್ರಭಾವ ಕಾಣುತ್ತಿತ್ತು. ವಿಶೇಷವೆಂದರೆ ನಮ್ಮ ಮನೆಯ ಎಲ್ಲಾ ಗೋಡೆಯನ್ನು ಹೊರತುಪಡಿಸಿ ಕೇವಲ ಆ ಫೈಯರ್ ಪ್ಲೇಸಿನ ಮೇಲೆ ನಾನು ಕೆಟ್ಟದಾಗಿ ಪೈಂಟ್ ಮಾಡಿದ್ದೆನಲ್ಲ, ಅಲ್ಲಿ ಮಾತ್ರ ನೀರಿನ ಕಲೆ ಬಿದ್ದಿತ್ತು! It is true, ನನ್ನ ಕಣ್ಣನ್ನೇ ನಾನು ನಂಬದ ನಿಜ!

Thanks to america, it is not my problem any more! ನಮ್ಮ ಕಾಂಡೋ ಅಸೋಸಿಯೇಷನ್ನಿನ್ನ ಇನ್ಷೂರೆನ್ಸ್ ಪಾಲಿಸಿಯ ದಯೆಯಿಂದ ಎಲ್ಲೆಲ್ಲಿ ನೀರಿನ ಡ್ಯಾಮೇಜ್ ಇತ್ತೋ ಅದನ್ನೆಲ್ಲ ಅಸೋಸಿಯೇಷನ್ನ್ ನವರು ಸರಿಮಾಡಿಸಿಕೊಟ್ಟರು, ನಮ್ಮ ಫಯರ್ ಪ್ಲೇಸಿನ ಗೋಡೆಯನ್ನೂ ಸೇರಿ! ಅವತ್ತೇ ಅಂದುಕೊಂಡಿದ್ದು ನಾನು, ನನ್ನ ಆಕ್ರಂದನ ಆದ್ಯಾವ ಮುಗಿಲು (celing) ಮುಟ್ಟಿತೋ ಆ ದೇವರು ಕಣ್ಣು ಬಿಟ್ಟು ನಮ್ಮ ಗೋಡೆಯ ಬಣ್ಣವನ್ನು ಸರಿ ಮಾಡಿಕೊಟ್ಟನಲ್ಲ ಎಂದು. ಅವತ್ತಿಂದ ಇವತ್ತಿನವರೆಗೆ ದೇವರು ಇದ್ದಾನೆ ಅಂತ್ಲೇ ಅಂದುಕೊಂಡಿರೋದು ನಾನು, ಆದ್ರೆ ಅವತ್ತಿನಿಂದ ಮುಗಿಲು ನೋಡಿ ಆರ್ತನಾಗಿ ಮೊರೆ ಇಡುವಾಗ ಮನೆಯಿಂದ ಹೊರಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ, the last thing you want is another broken water pipe in the middle of a winter - that is below freezing weather.

Wednesday, October 22, 2008

If you elect me as a president...

ಪ್ರೆಸಿಡೆಂಟ್ ಆಫ್ ವಾಟ್? ಅಂತ ಪ್ರಶ್ನೆ ಬರೋದು ಸಹಜ, ಪ್ರೆಸಿಡೆಂಟ್ ಆಫ್ ವಾಟ್‌ಎವರ್...ಎಂದುಕೊಂಡು ಮುಂದೆ ಹೋಗೋಣ...ನಾವೆಲ್ಲ ಶಾಲಾ ದಿನಗಳಲ್ಲಿ ’ಎಲೈ ಹುಚ್ಚರ ಸಂಘದ ಅಧ್ಯಕ್ಷನೇ...’ ಎಂದು ನಮ್ಮ್ ನಮ್ಮೊಳಗೆ ಬೈದುಕೊಳ್ಳುತ್ತಿದ್ದುದೂ ನೆನಪಿಗೆ ಬಂತು.

ಏನೇ ಇರಲಿ ರಾಜಕಾರಣ ಹಾಗೂ ಆಶ್ವಾಸನೆ ಎನ್ನುವುವುಗಳು ಒಂದೇ ತಾಯಿಯ ಮಕ್ಕಳ ಹಾಗೆ, ನಮ್ಮ ಸುತ್ತ ಮುತ್ತ ನಡೆಯೋ ಬೇಕಾದಷ್ಟು ಚುನಾವಣೆಗಳ ಕ್ಯಾಂಪೇನುಗಳಲ್ಲಿ ’ನೀವು ನನ್ನನ್ನು ಆರಿಸಿ ತಂದಿದ್ದೇ ಆದರೆ...’ ಎನ್ನುವ ಪ್ರಣಾಳಿಕೆಗಳು ಪುಂಖಾನುಪುಂಕವಾಗಿ ಹೊರಬರುತ್ತಲೇ ಇವೆ. ಹಾಗೆ ಮಾನವಕುಲದಲ್ಲಿ ಪ್ರಚುರಗೊಂಡ ಆಶ್ವಾಸನೆಗಳಲ್ಲಿ ಶೇಕಡಾ ಹತ್ತರಷ್ಟು ಈಡೇರಿದ್ದರೂ ಇಂದು ನಾವು ಈ ಸ್ಥಿತಿಯಲ್ಲಿರುತ್ತಿರಲಿಲ್ಲ ಎನ್ನುವುದು ಬೇರೆ ವಿಷಯ. (ಸುಮ್ಮನೇ ಆರೋಪ ಹೊರಿಸ್ತೀನಿ, ಆದ್ರೆ ಅದಕ್ಕೆ ತಕ್ಕ ದಾಖಲೆ ಕೊಡೋದಿಲ್ಲ ಅನ್ನೋದಕ್ಕೆ ಈ ವಾಕ್ಯವೇ ಸಾಕ್ಷಿ - ದಾಖಲೆಗಳನ್ನು ಪೋಣಿಸಿ ಯಾರು ಉದ್ದಾರವಾಗಿದ್ದಾರೆ ನೀವೇ ಹೇಳಿ).

ಹೀಗೇ ದಿನನಿತ್ಯದ ಘಟನಾವಳಿಗಳನ್ನು ಅವಲೋಕಿಸಿ ಈ ಕೆಳಗಿನ ಅಣಿಮುತ್ತುಗಳನ್ನು ನಾನು ನನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇನೆ, ನೀವು ಓದಿನೋಡಿ ನಂತರ ನಿಮ್ಮ ಅಧ್ಯಕ್ಷನನ್ನು ನೀವೇ ಗುರುತಿಸಿ ಮತ ನೀಡಿ!

***
ನೀವು ನನ್ನನ್ನು ಅಧ್ಯಕ್ಷನನ್ನಾಗಿ ಚುನಾಯಿತನನ್ನಾಗಿ ಮಾಡಿದರೆ....
- I will eliminate all school buses from the roads for one week!
Oh, school buses! ಅಮೇರಿಕದ ಶಾಲಾ ವಾಹನಗಳು ಎಂದರೆ ’ಅಯ್ಯಪ್ಪಾ’ ಅನ್ನೋ ಹಾಗೆ, ಒಂದು ರೀತಿ ರಸ್ತೆ ಮೇಲಿನ ಟ್ಯಾಂಕರುಗಳು ಅವು. ನನ್ನ ಒಂದು ಊಹೆಯ ಪ್ರಕಾರ ಪ್ರತಿ ಶಾಲಾ ಬಸ್ಸಿಗೆ ಇಲ್ಲಿ ಕನಿಷ್ಟ ಇಪ್ಪತ್ತೈದು ಕನ್ನಡಿಗಳಾದರೂ ಇರಬಹುದು ಜೊತೆಗೆ ಒಂದು ಸಾವಿರ ಮಿನುಗುವ ಲೈಟ್‌ಗಳು (ಉತ್ಪ್ರೇಕ್ಷೆ). ಶಾಲಾ ಬಸ್ಸಿಗೆ ರಸ್ತೆಗಳ ಮೇಲೆ ಆದ್ಯತೆ, ಅವು ನಿಂತರೆ ಎಲ್ಲರೂ ನಿಲ್ಲಬೇಕು, ಅದೂ ನಾನು ಬಳಸೋ ಒನ್ ಲೇನ್ ರಸ್ತೆಯ ಕಥೆ ದೇವರೇ ಗತಿ. ಶಾಲಾ ಬಸ್ಸುಗಳ ಲೀಡರ್‌ಶಿಪ್ ನಲ್ಲಿ ನಾವೆಲ್ಲ ಅವುಗಳ ಹಿಂದೆ, ಮೇಷ್ಟ್ರು ನಾಯಕತ್ವದಲ್ಲಿ ವಿದ್ಯಾರ್ಥಿಗಳೇನೋ ಹಿಂದೆ ಸಾಲುಗಟ್ಟುತ್ತಾರೆ ಆದರೆ ಶಾಲೆಪಾಲೆ ಮುಗಿಸಿ ಅವುಗಳಿಗೆಲ್ಲ ಗುಡ್‌ಬೈ ಹೇಳಿರೋ ನನಗೇಕೆ ಈ ಶಿಕ್ಷೆ, ಅದಕ್ಕೆಂದೇ ಐವತ್ತೆರಡು ವಾರಗಳ ವರ್ಷಗಳಲ್ಲಿ ನನ್ನ ಆಡಳಿತದಲ್ಲಿ ಒಂದು ವಾರ ಸ್ಕೂಲ್ ಬಸ್ಸುಗಳು ರಸ್ತೆಯ ಮೇಲೆ ಬಾರದಂತೆ ಮಾಡುವ ಆಶ್ವಾಸನೆ.

- I will iradicate "retirement" (the word) from the dictionary!
ನಮ್ಮ ಕಾಲದವರು ರಿಟೈರ್ ಆಗುವ ಮಾತೇ ಬರೋದಿಲ್ಲ ಬಿಡಿ. ನಾವೆಲ್ಲ ಬಲ್ಲ ಹಾಗೆ ಬೇಬಿ ಬೂಮರ್ಸ್ ತಲೆಮಾರಿನವರು ಮತ್ತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳೋ ಹಾಗೆ ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮೆಲ್ಲ ಅಲ್ಪಸ್ವಲ್ಪ ಉಳಿತಾಯಗಳು ದಿನೇದಿನೇ ಕರಗುತ್ತಿರುವ ಶೋಚನೀಯ ಸ್ಥಿತಿಯನ್ನು ಕಂಡರೆ ನಮ್ಮ ತಲೆಮಾರಿಗೆ ’ನಿವೃತ್ತ’ ಅನ್ನೋ ಪದವೇ ದೂರವಾಗುವ ಹಾಗೆ ಕಾಣುತ್ತದೆ. ಆದ್ದರಿಂದ ಈ ಪದವನ್ನು ನಿಘಂಟಿನಿಂದ ತೆಗೆಯೋಣ ಎಂದು ಸಂಕಲ್ಪಿಸಿಕೊಂಡಿದ್ದೇನೆ.

- I will eliminate the 8 O'clock from the dial!
ಇದು ಒಂಥರ ಇಂಟರೆಸ್ಟಿಂಗ್ ಕಾನ್ಸೆಪ್ಟ್. ಗಡಿಯಾರದ ಡಯಲಿನಲ್ಲಿ ಏಳು ಘಂಟೆಯ ನಂತರ ಒಂಭತ್ತು ಘಂಟೆ ಬರುವಂತೆ ಮಾಡುವುದು. ಒಂದು ರೀತಿ ಸೀನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿಯ ನಂತರ ಒಂದೇ ಸಮನೆ ಜ್ಯೂನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿ ಬಂದ ಹಾಗೆ ಮಧ್ಯೆ ಬರುವ ಕ್ಲಿಂಟನ್ ನ ಎಂಟು ವರ್ಷಗಳ ಆಡಳಿತವನು ಇತಿಹಾಸದಿಂದ ಡಿಲ್ಲೀಟ್ ಮಾಡಿದ ಹಾಗೆ...

ಪ್ರತಿ ದಿನ ಒಂದಲ್ಲ ಒಂದು ಎಂಟು ಘಂಟೆಯ ಮೀಟಿಂಗ್ ಇಟ್ಟೇ ಇರ್ತಾರೆ ನಮ್ಮ್ ಆಫೀಸಿನಲ್ಲಿ. ನಾನೋ ಎಷ್ಟು ಬೇಗ ಹೊರಟರೂ ಒಂದಲ್ಲ ಒಂದು ಕಾರಣದಿಂದ ಟ್ರಾಫಿಕ್ ಗೊಂದಲದಲ್ಲಿ ಸಿಕ್ಕು ಹಾಕಿಕೊಳ್ಳುವುದೇ ಹೆಚ್ಚು (again, thanks to school buses noted above). ಅದಕ್ಕೆಂದೇ ನಾನು ಕಾಫಿ ಕುಡಿಯಲಿ ಬಿಡಲಿ ನನ್ನ ರಕ್ತದೊತ್ತಡ ಮುಂಜಾನೆ ಏಳರಿಂದ ಒಂಭತ್ತು ಘಂಟೆಯವರೆಗೆ ಹೆಚ್ಚು ಇರೋದು ಖಾಯಂ. ಆದ್ದರಿಂದಲೇ ನಾನು ವಾಚಿನ ಡಯಲಿನಲ್ಲಿ ಫಾರ್ ಎವರ್ ಎಂಟು ಘಂಟೆ ಎನ್ನುವ ಕಾನ್ಸೆಪ್ಟ್ ಅನ್ನೇ ತೆಗೆದು ಹಾಕಿ ಬೆಳಿಗ್ಗೆ ಏಳರಿಂದ ಒಂಭತ್ತರವರೆಗೆ ಆಫೀಸಿಗೆ ತಲುಪಿದರೆ ಸಾಕು ಎನ್ನುವ ಹೊಸ ಕಾನೂನನ್ನು ಜಾರಿಗೆ ತರೋದು.

- I will convert Shareholders into Chair holders!
ಇದು ಸಂಪೂರ್ಣ ರೆಬೆಲಿಯಸ್ ಅಪ್ರೋಚ್...ನಾವೆಲ್ಲ ಕಂಪನಿಗಳ ಸ್ಟಾಕ್ ಅಥವಾ ಶೇರುಗಳನ್ನು ಕೊಂಡುಕೊಂಡು ಬಡವರಾಗಿರೋದು ನಿಮಗೆಲ್ಲ ಗೊತ್ತೇ ಇರೋ ವಿಚಾರ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶೇರ್ ಹೋಲ್ಡರ್ ಕೂಡ ಆ ಕಂಪನಿಯ ತಕ್ಕಮಟ್ಟಿನ ಪಾಲುದಾರ. ಆದ್ದರಿಂದ ಇಂದಿದ್ದು ನಾಳೆ ಮರೆಯಾಗುವ ನಮ್ಮ ಪೇಪರ್ ಹಣ ಹಾಗೂ ಅದಕ್ಕೆ ಬರುವ ಇಮ್ಯಾಜಿನರಿ ಓನರ್‌ಶಿಪ್‌ಗೆ ಪ್ರತಿಯಾಗಿ ಕಂಪನಿ ಬೀಳುವ ಹೊತ್ತಿಗೆ ಹಣ ಬಾರದಿದ್ದರೂ ಆ ಕಂಪನಿಗಳ ಕುರ್ಚಿ, ಮೇಜು, ಅಲ್ಲಿನ ಫಿಕ್ಸ್‌ಚರುಗಳು ಮೊದಲಾದವುಗಳನ್ನು ನಾವು ಹಳೆಯ ಶತಮಾನದಲ್ಲಿ ಮಾಡುತ್ತಿದ್ದ ಹಾಗೆ ದಂಗೆ ಎದ್ದು ಕಿತ್ತುಕೊಳ್ಳಬೇಕು ಎನ್ನುವುದು ನನ್ನ ವಾದ. ಶೇರುಗಳು ಹೋದರೂ ಹೋಗಲಿ ಒಂದು ಚೇರ್ ಆದರೂ ಸಿಗಲಿ ಎನ್ನುವುದು ನನ್ನ ಅಭಿಮತ.

***
ನಿಮ್ಮ ಓಟ್ ಅನ್ನು ಖಂಡಿತ ನನಗೇ ಹಾಕ್ತೀರಿ ತಾನೆ?

Sunday, September 28, 2008

ನಾವು ಮಹಾ ಬುದ್ಧಿವಂತರು ಸಾರ್!

ಸೆಪ್ಟೆಂಬರ್ ಗಾಳಿ ತೇವ ಹಾಗೂ ತಂಪನ್ನು ಅದೆಲ್ಲಿಂದಲೋ ಹೊತ್ತು ತರುತ್ತಿದ್ದಂತೆ ಹೆಚ್ಚು ವಿಡಂಬನೆಗಳನ್ನು ’ಅಂತರಂಗ’ದಲ್ಲಿ ತುಂಬುವಂತೆ ಮಾಡುತ್ತಿದೆ. ಈ ವಿಡಂಬನೆಗಳ ವ್ಯಾಪ್ತಿ (ಕೊರಗು) ನಿಮಗೆ ಗೊತ್ತೇ ಇದೆ, ಈವರೆಗೆ ಬರೆದವುಗಳ ಬೆನ್ನಲ್ಲಿ ಇನ್ನೂ ಒಂದು.

***

ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್‌ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.

ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.

’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.

ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್‌ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.

ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.

***

ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:
- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್‌ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?

- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್‌ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್‌ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್‌ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.

ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!

ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?

- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್‌ಮೆಂಟೇ ಸರಿ.

ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್‌ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!

Thursday, September 18, 2008

ನಿಮ್ ಮಕ್ಳೆಲ್ಲಾ ಎಸ್ಸೆಮ್ಮೆಸ್ಸ್ ಮೆಸ್ಸೇಜುಗಳಲ್ಲೇ ಅಳ್ತಾವೇನು?

ನಮ್ ಆಫೀಸಿನಲ್ಲಿ ಒಬ್ರು ಇತ್ತೀಚೆಗೆ ಹೊಸ್ತಾಗಿ ಪರಿಚಯವಾದ ಕನ್ನಡಿಗರು, ಈಗಾಗ್ಲೇ ನಮ್ಮ್ ಮಾತುಕಥೆಗಳು ಎರಡೂ ಮೂರನೇ ಭೇಟಿಯಲ್ಲಿ ಬೆಳೆಯುತ್ತಿದ್ದವುಗಳಾಗಿದ್ದರಿಂದ ಅವೇ ಕನ್ನಡಿಗರ ಸಂಕೋಚಭರಿತ ’ನಮಸ್ಕಾರ, ಚೆನ್ನಾಗಿದೀರಾ!’ ಅನ್ನೋ ಹಲ್ಲು ಗಿಂಜೋ ಪದಪುಂಜಗಳಿಂದ ಸ್ವಲ್ಪ ದೂರವಾಗಿತ್ತು ಅಂತ್ಲೇ ಹೇಳ್ಬೇಕು. ’ಏನ್ಸಾರ್ ಮತ್ತೆ ಇತ್ತೀಚೆಗೆ ಏನ್ ಓದ್ತಾ ಇದ್ದೀರಾ?’ ಎನ್ನೋ ನನ್ನ ಹುಂಬ ಪ್ರಶ್ನೆಗೆ ಅವರು ’ಏನೂ ಇಲ್ಲ, ಈ ಬ್ಲ್ಯಾಕ್‌ಬೆರ್ರಿಯಲ್ಲಿ ಬರೋವನ್ನು ಜೋಕ್‌ಗಳನ್ನ ಬಿಟ್ರೆ ಮತ್ತೇನನ್ನೂ ಓದೋದೇ ಇಲ್ಲ!’ ಎಂದು ಬಿಡಬೇಕೆ.

ಶುರುವಾಯ್ತು ತಗಳಪ್ಪ, ಅದೇ ತಾನೇ ಬೆಚ್ಚಗೆ ಕಾಫಿ ಕುಡಿದಿದ್ನಾ ಎಲ್ಲಾ ಹೊರಕ್ಕ್ ಬಂತ್ ನೋಡಿ...ಕ್ಷಮಿಸಿ ಅವ್ರಿಗೇನೂ ಬೈದಿಲ್ಲಪ್ಪ ನಾನು - ನಮ್ಮ ಕನ್ನಡಿಗರ ಜಾಯಮಾನದಂತೆ ನಕ್ಕು ಸುಮ್ಮನಾಗ್ಬಿಟ್ಟೆ.

***

ಈ ವೇಗಮಯ ಜೀವನದಲ್ಲಿ ಎಲ್ಲವೂ ಕಿರುತೆರೆಗಳಿಗೆ ಮಾತ್ರ ಸೀಮಿತವಾಗೋ ಹಾಗೆ ಕಾಣ್ತಿದೆ. ದೊಡ್ಡ ಸಿನಿಮಾ ಪರದೆ ಚಿಕ್ಕ ಟಿವಿಗೆ ಮೀಸಲಾಗೋಯ್ತು, ಈಗ ಅದರಿಂದ ಸಣ್ಣ ಮೊಬೈಲ್ ಫೋನಿನ ಮಟ್ಟಿಗೆ ಇಳಿದು ಹೋಯ್ತು. ಸೋ, ಚಿಕ್ಕದಾಗಿರದೇ ಇರೋದು ಬ್ಯಾಡವೇ ಬ್ಯಾಡಾ...ಅನ್ನೋದು ಈ ಕಾಲದ ಘೋಷಣೆ.

ಯಕ್ಷಗಾನ ಅನ್ನೋದ್ ಯಾಕೆ ಬೇಕು ಹಾಗಾದ್ರೆ? ಒಂದೇ ಒಂದು ಕ್ಷಣದಲ್ಲಿ ಪಾತಾಳ, ಭೂಲೋಕ, ಮತ್ಸ್ಯಲೋಕ, ಯಮಲೋಕ, ಸರ್ಪಲೋಕಗಳನ್ನೆಲ್ಲವನ್ನು ಯಶಸ್ವಿಯಾಗಿ ಕಲ್ಪಿಸಿಕೊಳ್ಳುವ ವೇದಿಕೆ ಇರೋವಾಗ. ಒಂದು ರಾಗ-ತಾಳದ ಹಿಮ್ಮೇಳದ ಹಾಡಿನಿಂದ ಮತ್ತೊಂದಕ್ಕೆ ಡೈನಾಮಿಕ್ ಆಗಿ ಬದಲಾವಣೆ ಇರೋವಾಗ. ಹಿಮ್ಮೇಳಕ್ಕೆ ತಕ್ಕಂತೆ ಅದೇ ಕಾಲಕ್ಕೆ ಸಂದರ್ಭವನ್ನು ಶುದ್ಧ ಕನ್ನಡ-ಸಂಸ್ಕೃತದಲ್ಲಿ ಅರ್ಥೈಸುವ ಅಭಿವ್ಯಕ್ತಿ ಇರೋವಾಗ. ಗಾನ-ನಾಟ್ಯ-ಸರ್ವ ರಸಗಳೂ ಒಂದೇ ಒಂದು ರಂಗದಲ್ಲಿ ಮೇಳೈಸುವಾಗ.

ಎಲ್ರೂ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತಾ ಇದ್ರೆ ಸಾಕಲ್ವ - ಅವೇ ಟೇಕು ರೀಟೇಕುಗಳು ಸ್ಪೆಷಲ್ ಎಫೆಕ್ಟ್‌ಗಳೆಲ್ಲ ಇರೋವಾಗ ಅದರ ಮುಂದೆ ಬಯಲು ಸೀಮೆಯಲ್ಲಿನ ನಾಟಕ ಯಾವ ಮೂಲೆಯ ಲೆಕ್ಕ. ಎಂಟು ಡಾಲರ್ ಕೊಟ್ಟು ಒಂದೂವರೆ ಘಂಟೇಲಿ ಹಾಲಿವುಡ್ಡು ಸಿನಿಮಾಗಳು ನೋಡೋಕ್ ಸಿಗೋವಾಗ ಈ ನ್ಯೂ ಯಾರ್ಕಿನ ಬ್ರಾಡ್ ವೇ ಶೋಗಳಿಗೆ ನೂರು ಡಾಲರ್ ಯಾವನ್ನ್ ಹೋಗ್ತಾನೆ ಹೇಳಿ? ಸಿನಿಮಾದಲ್ಲಿರೋ ಮತ್ತು-ಗಮ್ಮತ್ತು ಈ ಪ್ಲೇನ್ ನಾಟಕ-ಮ್ಯೂಸಿಕಲ್ಲುಗಳಲ್ಲಿರುತ್ತೇ ಅಂತ ಅಂದೋರ್ ಯಾರು?

***

ರಾಮಾಯ್ಣ ಅಂದ್ರೆ ಸುಮ್ನೇ ಹೀಗ್ ಬರೆದ್ರೆ ಸಾಕಲ್ಪ:
ರಾಮಾ ಅನ್ನೋ ರಾಜಕುಮಾರ ಮೀನ್ ಮೈಂಡೆಡ್ ಮಂಥರೆ ಹಾಗೋ ಸ್ಟೆಪ್ ಮದರ್ ಕೈಕೆಯಿ ಮಾಡಿರೋ ಕರಾಮತ್ತಿನಿಂದಾಗಿ ತನ್ನ ಹೆಂಡ್ತಿ ಜೊತೆ ಕಾಡ್ ಸೇರ್ತಾನಂತೆ. ಆ ಹದಿನಾಲ್ಕು ವರ್ಷದ ವನವಾಸ್‌ದಲ್ಲಿ ಸುಂದರವಾದ ಹೆಂಡ್ತೀನ ಶ್ರೀಲಂಕಾದ ಒಬ್ಬ ರಾಕ್ಷಸ ಅಪಹರಿಸ್ತಾನಂತೆ. ರಾಮಾ ಮತ್ತ್ ಅವನ ತಮ್ಮ ಜೊತೆಗೆ ಕಾಡಲ್ಲೇ ಸಿಗೋ ಕಪಿ ಸೈನ್ಯದ ಸಹಾಯದಿಂದ ಲಂಕೆಗೆ ಹೋಗಿ ಆ ರಾಕ್ಷಸನನ್ನು ಕೊಂದು ಸತ್ಯಾ-ಧರ್ಮಕ್ಕೆ ಇವತ್ತೂ ಕಾಲಾ ಇದೇ ಅಂತ ಸಾಧಿಸಿ ತೋರಿಸ್ತಾರಂತೆ. ಹಂಗೇ ಹೆಣ್ತೀನೂ ಕರಕಂಡ್ ಬರ್ತಾನಂತೆ, ಆದ್ರೆ ಅವಳು ಯಾರೋ ಏನೋ ಅಂದ್ರೂ ಅಂತ ಬೆಂಕಿ ಹಾರಿ ಬೀಳ್ತಾಳಂತೆ!

ಪಾಪ ಯಾಕ್ ಆ ಕುವೆಂಪು ರಾಮಕೃಷ್ಣಾಶ್ರಮದಲ್ಲಿ ಕುತಗೊಂಡು ರಾಮಾಯಣ ದರ್ಶನಂ ಬರೀಬೇಕಿತ್ತು. ಅದೂ ಸಾಲ್ದೂ ಅಂತ ವೀರಪ್ಪ ಮೊಯಿಲಿ ಯಾಕೆ ತಮ್ಮದೇ ಆದ ಒಂದು ವರ್ಷನ್ನನ್ನ ಕುಟ್ಟಬೇಕಿತ್ತು. ಒಂದೇ ರಾಮಾಯ್ಣ ಅದನ್ನ ಹೇಳೋಕ್ ಹತ್ತಾರ್ ಭಾಷೇನಾದ್ರೂ ಯಾಕ್ ಬೇಕು, ಎಲ್ಲಾನು ಇಂಗ್ಲೀಷಿಗೆ ಟ್ರಾನ್ಸ್ಲೇಟ್ ಮಾಡಿದ್ರೆ ಆಯ್ತು, ನಾವೆಲ್ಲ ಇಂಗ್ಲೀಷ್ನಲ್ಲೇ ಓದ್‌ಕಂತೀವಲ್ಲ ಅಷ್ಟೇ ಸಾಕು. ಆ ನಾರಾಯಣಪ್ಪ ಯಾಕೆ ಕುಮಾರವ್ಯಾಸ ಭಾರತ ಬರೆದ, ಅದೂ ಸಾಲ್ದೂ ಅಂತ ಭೈರಪ್ಪನೋರು ಯಾಕೆ ತಮ್ಮ ಪರ್ವ ಕೊರೆದ್ರು? ಆ ಕಾರಂತ್ರು ನಲವತ್ತರ ಮೇಲೆ ಕಾದಂಬ್ರಿ ಬರೆದ್ರಂತೆಲ್ಲ ಅದ್ರಿಂದ ಏನಾಯ್ತು? ಅದ್ರ ಬದ್ಲಿ ಒಂದಿಷ್ಟು ಹಾಸ್ಯವಾಗಿ ಮಾತಾಡಿದ್ರೆ ಸಾಲ್ತಿತಿರ್ಲಿಲ್ವಾ?

ಯಾರೂ ಓದದ ಕೇಳದ ಕಂದಪದ್ಯಗಳು ಬೇಡವೇ ಬೇಡ. ರಗಳೆಗಳ ರಗಳೆ ಹಾಗೇ ಇರಲಿ. ಚಂಪೂ ಕಾವ್ಯ ಅಂತಂದ್ರೆ ಏನು, ಚಂದ್ರಶೇಖರ ಪಾಟೀಲರ ಹೊಸ ಕಾವ್ಯ ನಾಮಾನಾ? ಷಟ್ಪದಿ-ಗಿಟ್ಪದಿ ಅಷ್ಟೇ ಅಲ್ಲಲ್ಲೇ ಇರ್ಲಿ - ವೀರರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ ತಾತಂಗರ್ಘ್ಯವನು ಕೊಡುತ - ಅಂತ ಮತ್ತಿನ್ನೆಲಾದ್ರೂ ಭಾಮಿನಿನಲ್ಲಿ ಹಾಡಿ ಬಿಟ್ಟೀರ. ದೊಡ್ಡ ನಾವೆಲ್ಲುಗಳನ್ನೆಲ್ಲ ಈ ಸರ್ತಿ ಛಳಿಗಾಲಕ್ಕೆ ಸುಟ್ಟು ಮೈ ಬೆಚ್ಚಗೆ ಮಾಡಿಕೊಳ್ಳೋಣ. ನಮ್ಮ ಸುತ್ತ ಮುತ್ಲ ಇರೋ ಲೈಬ್ರರಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಆನ್‌ಲೈನ್‌ಗೆ ಹಾಕಿ ನಾವು ಓದ್ತೀವಿ. ಸೋಬಾನೇ ಪದ, ಸೋ ವಾಟ್? ಜನಪದ ಗೀತೆ ಹಳ್ಳಿಯೋರ್ ಗಾಥೆ ನಮಗಲ್ಲಪ್ಪ. ’ಹೊನ್ನ ಗಿಂಡಿಯ ಹಿಡಿದು ಕೈಯಲಿ...’ ಅಂದ್ರೆ ಏನ್ರಿ, ಈ ಮದ್ರಾಸಲ್ಲಿ ಗಿಂಡಿ ಇದೆಯಲ್ಲ ಅದಾ? ಆ ಡಿವಿ ಗುಂಡಪ್ಪೋರಿಗೆ ತಲೆ ನೆಟ್ಟಗಿತ್ತೋ ಇಲ್ವೋ ಅಷ್ಟೊಂದು ಬರೆಯೋದಾ? ಲೈಫು ಅಂದ್ರೆ ಸಿಂಪಲ್ಲು ಗೊತ್ತಿರಲಿಲ್ಲ ಅವ್ರಿಗೆ? ಪ್ರತಿಯೊಂದಕ್ಕೂ ಮಂಕುತಿಮ್ಮ ಅಂತ ಬರಕೊಂಡೋರ್ ಬೇರೆ, ಮಂಕುದಿಣ್ಣೇ ಅಂತ ಬರೀಲಿಲ್ಯಾಕೆ? ವಚನಾ - ಯಾರಿಗ್ ಯಾರ್ ಕೊಡೋ ಭಾಷೇ ಅದೂ?

ರೀ, ನಾಟ್ಕ ಯಾವನ್ರೀ ಬರೀತಾನೆ ಮತ್ತೆ ಅದನ್ನ ಓದೋರ್ ಯಾರು? ಸುಮ್ನೇ ಯಾವ್ದಾದ್ರೂ ಬ್ಲಾಗ್‌ನಲ್ಲೋ ಪೋರ್ಟಲಿನಲ್ಲೋ ಹಾಸ್ಯಮಯವಾಗಿ ಬರೀರಿ ಒಂದಿಷ್ಟ್ ಜನಾನಾದ್ರೂ ಓದ್ತಾರೆ. ಬಟ್, ನಿಮ್ ಬರಹ ಕೇವ್ಲ ಮುನ್ನೂರು ಪದಗಳಿಗೆ ಮಾತ್ರ ಇರ್ಲಿ, ಒಂದೊಂದು ಸಾಲೂ ಅದ್ರದ್ದೇ ಆದ ಪ್ಯಾರಾವಾಗಿರ್ಲಿ. ’ಅಂತಃಕರಣ’, ’ಅಶ್ಲೀಲ’ ಅನ್ನೋಪದಳನ್ನೇನಾದ್ರೂ ಉಪಯೋಗಿಸಿ ಬಿಟ್ಟೀರಾ ಮತ್ತೆ. ಈ ಪೋರ್ಟಲುಗಳ ಕ್ಲೈಂಟೆಲ್ಲುಗಳಿಗೆ ಗಂಟಲು ಕಟ್ಟಿಬಿಡುತ್ತೆ ಹುಷಾರು. ಮತ್ತೇ...ನಿಮ್ಮ್ ಟೈಟಲ್ಲು ಜನಪ್ರಿಯವಾಗಿರ್ಲಿ, ಯಾವ್ದಾದ್ರೂ ಹಾಡಿನ ಪಂಕ್ತಿ, ಅಲ್ಲ ಸಾಲಿದ್ರೆ ಒಳ್ಳೇದು - ’ಅನಿಸುತಿದೆ ಯಾಕೋ ಇಂದು...ಹೀಗೇ ಸುಮ್ಮನೇ’ ಅಂತ ಹಾಕಿ, ಅದು ಪ್ಯಾಪುಲ್ಲರ್ರು. ಈ ಸಾಲನ್ನು ಬರೆದ ಕವಿ ಅಂತ ಜನ ಕಾಯ್ಕಿಣಿಯವ್ರನ್ನ ಕೊಂಡಾಡೋದನ್ನ ನೋಡಿಲ್ಲ ನೀವು?

ಉತ್ತರ ಕರ್ನಾಟಕದ ಬಾಷೆ-ಮಾತು ಅದೊಂದ್ ಭಾಷೇನೇನ್ರಿ? ಏನ್ ಹೇಳೋದಿದ್ರೂ ಬೆಂಗ್ಳೂರ್ ಕನ್ನಡದಲ್ಲಿ ಹೇಳಿ. ’ನೀ ಹೀಂಗs ನೋಡಬ್ಯಾಡಾ ನನ್ನ’ ಅಂದ್ರೆ ಅದು ಕನ್ನಡಾನಾ? ಬೀದರ್-ಬೆಳಗಾವಿ ಎಲ್ಲಿವೆ? ಅಲ್ಲಿ ಯಾವ್ ಭಾಷೇ ಮಾತಾಡ್ತಾರೆ, ಜೈ ಸಿದನಾಯ್ಕ-ಮಾವೋತ್ಸೇ ತುಂಗಾ ಅಂತಾ ಕಂಬಾರರು ಅದೇನೇನೋ ಬರೆದಾರಂತಲ್ಲ?

***

ನಾವೇನೂ ಓದೋದಿಲ್ಲ ಅನ್ನೋದು ನಮ್ ಫ್ಯಾಷನ್ನ್ ಸಾರ್. ನಮ್ಮ ಸರ್ವತೋಮುಖ ಬೆಳವಣಿಗೆಗೆ ನಮ್ ನಮ್ ಮೊಬೈಲು-ಕಂಪ್ಯೂಟರ್ ಸ್ಕ್ರೀನ್‌ಗಳೇ ಸಾಕು ಸಾರ್. ಎರಡೇ ಎರಡು ಸಾಲಲ್ಲಿ ಹೇಳದ ಕಥೆ ಅದೂ ಕಥೇನಾ? ಎಸ್ಸೆಮೆಸ್ಸ್ ಮೆಸ್ಸೇಜುಗಳನ್ನು ಬಿಟ್ಟು ಇರೋವೆಲ್ಲಾ ಜೋಕಾ? ಸಂತಾ ಸಿಂಗ್, ಬಂತಾ ಸಿಂಗ್, ಕೋಲ್ಯಾ, ಸರ್ದಾರ್‌ ಜೀಗಳ ಅಜ್ಜ-ಮುತ್ತಾತರೆಲ್ಲ ಬಾವಿಯಲ್ಲಿ ಬಿದ್ದಿರೋ ಮಂದೀ ಗಡಿಯಾರಕ್ಕೆ ಕೀಲಿ ಕೊಡ್ತಾನೇ ಇದಾರ್ ಸಾರ್. ಅಲ್ಲಿಂದ ಕದ್ದು ಇಲ್ಲಿ, ಇಲ್ಲಿಂದ ತಂದು ಅಲ್ಲಿ ತುಂಬಿಸೋ ಫಾರ್ವಡ್ ಮಾಡಿರೋ ಸ್ಪ್ಯಾಮ್‌ ಸಂದೇಶಗಳೇ ಈ ಶತಮಾನದ ಅಂತಃಸತ್ವಾ ಸಾರ್...ಓಹ್ ಕ್ಷಮಿಸಿ, ಅಂತಃಸತ್ವಾ ಅಂದ್ರೆ ಏನು ಅಂತ ಯಾರಿಗ್ಗ್ ಗೊತ್ತು?

ನನ್ನದೊಂದು ಹೊಸಾ ಕವ್ನ ಬರ್ದಿದೀನಿ ಕೆಳಗೆ ನೋಡಿ: (ಪದಗಳ ಕೆಳಗೆ ಪದಗಳು ಬಂದ್ರೆ ಪದ್ಯಾ ಅಲ್ವಾ? ಪದ್ಯಾ-ಗದ್ಯಾ ಎಲ್ಲಾ ಒಂದೇ ಬಿಡಿ)
ಅಮೇರಿಕದಲ್ಲಿ ಇದೀವಿ ಕನ್ನಡ ಸಿನಿಮಾ ನೋಡಲ್ಲ
ಅಮೇರಿಕದಲ್ಲಿ ಇದೀವಿ ಕನ್ನಡ ಕಾನ್ಸರ್ಟ್ ಬ್ಯಾಡವೇ ಬ್ಯಾಡ.
ಕನ್ನಡ ಸಿಡಿ ಮಾರೋರ್ ಇದ್ರೆ ಅವರಿಂದ್ಯಾಕೆ ಕೊಳ್ಬೇಕು?
ಕನ್ನಡ ಪುಸ್ತಕ ಅನ್ನೋ ವಸ್ತೂನ ಕೊಂಡ್ ಕೊಂಡ್ ಯಾಕೆ ಓದ್ಬೇಕು?
ನಾವ್ ಇತ್ಲಾಗ್ ಕನ್ನಡ ಪ್ರೊಗ್ರಾಮ್ ನೋಡಲ್ಲ, ಇಂಗ್ಲೀಷ್ ಕಾನ್ಸರ್ಟ್ ತಿಳಿಯಲ್ಲ.
ಹಗ್ಲೂ ರಾತ್ರೀ ದುಡ್ದೂ ದುಡ್ದೂ, ಸ್ಟ್ರೆಸ್ಸಿನಿಂದ ಸೊರಗಿರೋ ಭುಜಕ್ಕೆ ಅಮೃತಾಂಜನ್ ಸ್ಟ್ರಾಂಗ್ ಲೇಪಿಸ್ಕೊಂಡು,
ನಲವತ್ತ್ ಆಗೋಕ್ಕಿಂತ ಮುಂಚೆ ಚಾಳೀಸ್ ತಗಲಾಡಿಸ್ಕೊಂಡ್
ನರನಾಡಿಗಳಲ್ಲೆಲ್ಲ ಕೊಬ್ಬು-ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡು
ನಮ್ಮೂರಿನ ದನಕಾಯೋ ಕೆಲಸ ಮಾಡೋರಿಗಿಂತ
ಐದೇ ಐದು ವರ್ಷ ಹೆಚ್ಗೆ ಬದುಕೋ ಬವಣೇನಾದ್ರೂ ಯಾತಕ್ಕೆ?

ಹೆಂಗಿದೆ? ನಿಮ್ಮ್ ಕಾಮೆಂಟ್ ಹಾಕಿ, ಸಕತ್ತಾಗಿದೆ ಕವ್ನಾ ಅಂತ ಬರೀರಿ. ನಿಮಿಗೆ ನಾನ್ ಕಾಮೆಂಟ್ ಹಾಕ್ತೀನಿ, ನನಿಗೆ ನೀವ್ ಹಾಕಿ. ಅದೇ ಸಂಬಂಧ ಹಂಗೇ ಬೆಳೀಲಿ. ನಾನು ಬರ್ದಾಗ್ಲೆಲ್ಲ ನೀವ್ ಬ್ಯಾಡಾ ಅಂದ್ರೂ ತಿಳಸ್ತೀನಿ - ಓದಿ, ಕಾಮೆಂಟ್ ಹಾಕಿ, ನಾನು ಅಷ್ಟೇ - ನಮ್ ಬಳಗಾ ಹಿಂಗೇ ಬೆಳೀಲಿ - ನಾಳೆ ನಮಗೆಲ್ಲರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ. ಒಂದ್ ಸ್ಟೇಜ್‌ ಮೇಲೆ ಅದೆಷ್ಟು ಜನಗಳಿಗೆ ನಿಲ್ಲೋಕ್ ಆಗುತ್ತೋ ಅವರಿಗೆಲ್ಲ ಪ್ರಶಸ್ತಿ ಸಿಗುತ್ತೆ. ಜಿಲ್ಲೆಗೊಂದೊಂದು, ಜಾತಿಗೊಂದೊಂದು, ಭೀತಿಗೊಂದೊಂದು, ಸರ್ಕಾರದ ಮಿನಿಷ್ಟ್ರುಗಳ ಶಿಫಾರಸ್ಸಿಗೊಂದೊಂದು. ನಾನು ಬರೆದಿದ್ದನ್ನೆಲ್ಲ ಬುಕ್ ಮಾಡಿಸ್ತೀನಿ. ಅದ್ರ ಬಿಡುಗಡೆಗೆ ನಿಮ್ಮನ್ನ್ ಕರ್ದು ಊಟ ಹಾಕಿಸ್ತೀನಿ. ನನ್ನ ಬುಕ್ಕ್ ಕೊಂಡು ಒಂದೈದು-ಹತ್ತು ಡಾಲರ್ ಕಳ್ಸಿ! ಯಾವ್ ಶಿವರಾಮ ಕಾರಂತ್ರೂ-ಬೈರಪ್ಪಾ-ಬೇಂದ್ರೆ ಮಾಡ್ದೇ ಇರೋ ರೆಕಾರ್ಡ್ ನನ್ನ ಪುಸ್ತಕಗಳು ಮಾಡಿವೆ, ಗೊತ್ತಿಲ್ಲಾ ನಿಮಗೇ - ನಾನೇ ಬೆಶ್ಟ್ ಸೆಲ್ಲರ್ರು.

***

ನಿಮ್ಮ್ ಮಕ್ಳು, ಅಲ್ಲ ಮಕ್ಳುಗಳು, ಕನ್ನಡದಲ್ಲೇ ಮಾತಾಡ್ತಾವಾ? ಎಲ್ರೂ ಅತ್ತಂಗೇ ಅಳ್ತಾವಾ ಅಥವಾ ಅದಕ್ಕೂ ಎಸ್ಸೆಮ್ಮೆಸ್ಸ್ ವರ್ಷನ್ನ್ ಬಂದಿದೆಯಾ? ಕನ್ನಡ ಮಾಧ್ಯಮವೇ ಬ್ಯಾಡ ಅಂತ ಕೋರ್ಟುಗಳೇ ತೀರ್ಪು ಕೊಟ್ವಂತೆ? ಪ್ರಪಂಚದ ಸಾವ್ರಾರು ಭಾಷೆ ಫೈಲುಗಳನ್ನೆಲ್ಲ ಡಿಲ್ಲೀಟ್ ಮಾಡಿ ಬಿಡಿ, ಇಂಗ್ಲೀಷ್ ಒಂದೇ ಸಾಕು. ಇನ್ನೂ ಈಗ್ತಾನೆ ಕಣ್ಣ್ ಬಿಟ್ಟು ನೋಡ್ತಾ ಇರೋ ಹುಡುಗ್ರಿಗೆ ಲೋಕಲ್ ಸಿಲಬಸ್ ಬ್ಯಾಡಾ, ಸಿಬಿಎಸ್ಸಿ-ಐಸಿಎಸ್ಸಿ ಕೊಡ್ಸಿ. ದೊಡ್ಡ ಸ್ಕೂಲಲ್ಲಿ ಓದ್ಸಿ ದೊಡ್ಡ ಮನ್ಷರಾಗ್ತಾರೆ. ಪಬ್ಲಿಕ್ ಸ್ಕೂಲ್ ಅಂತ ಹೆಸ್ರು ಇಟಗೊಂಡಿರೋ ಪ್ರೈವೇಟ್ ಸ್ಕೂಲ್‌ಗಳೇ ಚೆಂದ. ವರ್ಷವಿಡೀ ಇರೋ ಉರಿಬಿಸ್ಲಲ್ಲೂ ಮಕ್ಳು ಟೈ ಕಟ್ಲಿ, ಎಷ್ಟ್ ಚೆಂದ ಕಾಣ್ತಾರ್ ಗೊತ್ತಾ? ಅಮ್ಮ-ಅಪ್ಪ ಅನ್ನೋಕ್ ಮುಂಚೆ ಮಮ್ಮೀ-ಡ್ಯಾಡೀ ಅನ್ಲೀ ಆಗ್ಲೇ ನಮಗೊಂದ್ ಘನತೆ. ಅಯ್ಯೋ ಎಲ್ಲಾದ್ರೂ ಮಕ್ಳು ಓಡಾಡೋದು ಉಂಟೇ, ಕೈ ಕಾಲ್ ಸವದು-ಗಿವದು ಹೋದ್ರೆ ಕಷ್ಟಾ - ಹೋಗ್ ಕಾರಲ್ಲ್ ಬಿಟ್ಟ್ ಬನ್ನಿ, ಏನು?

ತಪ್ಪ್ ಮಾಡ್ದೇ ಸಾರ್ ನಾನು, ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಹುಟ್ಟಬೇಕಿತ್ತು. ನಮ್ಮ್ ಜನರೇಷನ್ನಲ್ಲಿರೋಷ್ಟು ಟೆನ್ಷನ್ನ್ ಎಲ್ಲಿದೆ ಹೇಳಿ...ನಾವೇ ದೊಡ್ಡೋರು, ನಾವೇ ಸರ್ವಸ್ವ, ನಮ್ಮದೇ ದೊಡ್ದು, ಗೊತ್ತಾಯ್ತಾ?

(Take it easy now)

Sunday, September 14, 2008

ನಿಮ್ standard ನಿಮಗೆ, ನಮ್ standard ನಮಿಗೆ

ಸಾರ್‍, ನೀವಾದ್ರೂ ಒಂದಿಷ್ಟ್ ಸಹಾಯಾ ಮಾಡ್ತೀರಾ? ನಾನು ನಮ್ ದೇಶದಲ್ಲಿರೋ ಕಂಪನಿಗಳ ಬಗ್ಗೆ, ಶಾಲೆಗಳ ಬಗ್ಗೆ ಅವರ ವೆಬ್‌ಸೈಟ್‌ನಲ್ಲಿ ಓದಿದ ಹಾಗೆಲ್ಲ ಎಲ್ರೂ ’State of the art', 'Best in class', 'Best of the breed' ಮುಂತಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನ ಹೇಳ್ಕೋತಾರಲ್ಲ, ಇವುಗಳನ್ನೆಲ್ಲ ಅದರ ಫೇಸ್‌ ವ್ಯಾಲ್ಯೂ ಅಂತ ತೆಗೊಂಡ್ರೆ ಹೇಗೆ? ತೆಗೊಳ್ಳೋ ಬೇಡವೋ ಅನ್ನೋ ಸಂಕಷ್ಟ ನನ್ನದು.

State of the art - ಅಂತ ಇವ್ರಿಗೆಲ್ಲ ಯಾರು ಬಿರ್ದು ಕೊಟ್ಟೋರು? ನನ್ನ ತಲೇಲೀ ಬರೀ ಪ್ರಶ್ನೆಗಳೇ ತುಂಬಿ ಬರ್ತವೆ ನೋಡಿ - ಭಾರತದ ಕಂಪ್ನಿಗಳು-ಶಾಲೆಗಳೆಲ್ಲ ಸ್ಟೇಟ್ ಆಫ್ ದಿ ಆರ್ಟ್ ಆದ್ರೆ, ಭಾರತ ಯಾಕೆ ಇನ್ನೂ ಬಿದ್ದು ಕೊಳೀತಾನೇ ಇರೋದೂ ಅಂತ?

ನನ್ ಸ್ನೇಹಿತ್ರ ಹತ್ರ ಹೇಳಿದ್ರೆ ನಿನಗೆ ತಲೆ ಸಮ ಇದೆಯಾ ಅಂತ ನಂಗೇ ಬೈತಾರೆ! ಅದ್ಯಾವ್ದೋ ISO ಅಂತ ಸ್ಟ್ಯಾಂಡರ್ಡ್ ಹೇಳಿ ತಲೆ ತಿಂತಾರೆ. ISO-CMM ಅವೆಲ್ಲಾ ನಮ್ ದೇಶದ ಸ್ಟ್ಯಾಂಡರ್ಡುಗಳಲ್ಲ ಕಣ್ರೋ, ನಮಿಗೆ ನಮ್ ದೇಶದ ಸ್ಟ್ಯಾಂಡರ್ಡೇ ಚೆಂದ, ಆ ಅಳತೇ ಕೋಲಿನಲ್ಲಿ ಅಳೆಯೋದೇನಾದ್ರೂ ಇದ್ರೆ ಹೇಳ್ರಿ ಅಂತಂದ್ರೆ ಬೆಬ್ಬೆಬ್ಬೆ ಅಂತಾರೆ. ನಮ್ಮನ್ನ ಅಳೆಯೋದಿಕೆ ಮಂದೀ ಕೋಲ್ಯಾಕೆ? ಮಂದೀ ಕೋಲಿನ್ಯಾಗ್ ನಮ್ಮನ್ ಅಳಕೊಂಡು ನಾವು ಯಾರನ್ನ ಹೆಂಗ್ ಕಂಪೇರ್ ಮಾಡೋದು ಅಂತ ಯೋಚ್ಸೀ ಯೋಚ್ಸೀ ತಲೆ ನುಣ್ಣಗಾತೇ ಹೊರತು ಅವರಪ್ಪನಾಣೆ ಇವತ್ತಿಗೂ ಉತ್ರಾ ಹೋಳೆದಿಲ್ಲಾ ನೋಡ್ರಿ.

ನಮ್ ದೇಶದಾಗೋ ನೂರು ಕೋಟಿ ಭರ್ತಿ ಜನಾ ಸಾರ್. ನೂರು ಕೋಟಿ ಜನಕ್ಕೆ ಸಾವಿರ ಕೋಟಿ ಮನಸು ಕೊಟ್ಟಾನೆ ಆ ದೇವ್ರು. ಅಂತರದಾಗೆ ನಾನು ಅದೆಲ್ಲೋ ಕುತಗಂಡು ಈ ಇಂಟರ್ನೆಟ್ಟು ಅನ್ನೋ ಪ್ರಪಂಚದೊಳಗಿಂದ ಇಣಕಿ ಹಾಕಿ ನೋಡಿದ್ರೆ ಈ ವೆಬ್‌ಸೈಟ್‌ಗಳನ್ನ ಬರೆಯೋರು ಬರೆಸೋರಿಗೆ ಒಂದಿಷ್ಟು ಕಾಮನ್ ಸೆನ್ಸ್ ಬ್ಯಾಡಾ? ತಮಿಗೆ ಏನೇನು ಬೇಕೋ ಅವನ್ನೆಲ್ಲ ಬರಕಂಡವರೆ ಅದರ ಪ್ರಕಾರ ಎಲ್ಲರ ಶಾಲೀನೂ ಬೆಸ್ಟ್ ರೀ. ಎಲ್ಲರ ಹತ್ರನೂ ’ದ ಬೆಸ್ಟ್’ ಟೀಚರ್ಸ್ ಇದಾರ್ ರೀ. ಎಲ್ಲಾ ಕಂಪನೀ ಒಳಗೂ ’ದ ಬೆಸ್ಟ್’ ಎಂಪ್ಲಾಯೀಸ್ ಇರೋರ್ ರೀ. ಹಿಂಗೆಲ್ಲಾ ಅಂದೂ ಅಂದೂ (ಬರೆದೂ ಬರೆದೂ) ಮೂಗಿಗೆ ತುಪ್ಪಾ ಸವರೋದ್ರಲ್ಲಿ ಶ್ಯಾಣ್ಯಾರ್ ನೋಡ್ರಿ ನಮ್ ಜನ. ನನ್ ಕೇಳಿದ್ರೆ ಈ ವೆಬ್‌ಸೈಟ್‌ಗಳ ಕಂಟೆಂಟ್ ಸ್ಕ್ರೂಟಿನಿ ಮಾಡೋಕ್ ಒಂದಿಷ್ಟ್ ಜನ ಇರಬೇಕ್ರಿ ಅಪ್ಪಾ. ಹಂಗೇನಾರಾ ಸುಳ್ಳೂ-ಪಳ್ಳೂ ಬರಕೊಂಡೋರನ್ನ ಇರಾಕ್-ಇರಾನ್‌ನ್ಯಾಗೆ ಹೊಡೆದು ಕೊಂದಂಗೆ ಕಲ್‌ನ್ಯಾಗ್ ಹೊಡೀಬಕು ಅಂತೀನಿ.

ಯಾರ್ ಹತ್ರ ದ ಬೆಸ್ಟ್ ಪ್ರಾಸೆಸ್ಸ್ ಇದಾವ್ರೀ? ಮನ್ಷಾ ಆದೋನು ಭೂಮಿಯಿಂದ ಚಂದ್ರಂಗೆ ರಾಕೇಟ್ ಕಳ್ಸಿ ಆರಾಮಾಗಿ ವಾಪಾಸ್ ತರಸೋದನ್ನ ಬಲ್ಲ, ಆದ್ರೆ ನೆಟ್ಟಗೆ ಸಾಫ್ಟ್‌ವೇರ್ ಡೆವಲಪ್ ಮಾಡೋದ್ ಕಲೀಲಿಲ್ಲ ಅಂತೀನಿ. ಎಲ್ಲೆಲ್ಲಿ ಕೋಡ್ ಮಾಡ್ತಾರೋ ಅಲ್ಲಲ್ಲಿ ಬಗ್‌ಗಳು ಇರ್ತಾವೆ, ಎಲ್ಲೆಲ್ಲಿ ಬಗ್‌ಗಳು ಇರ್ತಾವೋ ಅಲ್ಲಲ್ಲಿ ಬ್ರೇಕ್‌ಗಳು ಇರ್ತಾವೆ. ಇವೆಲ್ಲ ಮನುಜಕುಲ ಅನ್ನೋದು ತಮ್ಮ ಜಾಬ್ ಸೆಕ್ಯೂರಿಟಿಗೆ ಮಾಡಿಕೊಂಡಿರೋ ಒಂದು ವ್ಯವಸ್ಥೆ ಅನ್ಸೋಲ್ಲ? ನನ್ ಕೇಳಿದ್ರೆ ನೆಟ್ಟಗೆ ಒಂದು ತುಣುಕು ಕೋಡ್ ಬರೀದಿರೋ ಜನಕ್ಕೆ ಇನ್ನೇನು ಬಂದೀತು? ಇವತ್ತೇನಾದ್ರೂ ಇದೇ ಜನ ಪಿರಮಿಡ್ಡುಗಳನ್ನ ಕಟ್ಟಿದ್ರೆ ಇಷ್ಟೊತ್ತಿನ ಮಳೀಗೆ ಆ ಸೂರು ಸೋರಿ ಹೋಗ್ತಿತ್ತೋ ಏನೋ ಯಾರಿಗ್ ಗೊತ್ತು?

ನಂಗ್ ಗೊತ್ತು ನಾನೊಬ್ಬ ಹುಂಬಾ ಅಂತಂದು. ಎಲ್ರೂ ಒಳ್ಳೊಳ್ಳೇ ಪೊಗದಸ್ತಾದ ವೆಬ್‍ಸೈಟುಗಳನ್ನ ಕಟ್ಟಿಕೊಂಡು ಅದು ಹೇಗಿದೆಯೋ ಹಾಗೇ ನಾವಿದ್ದೇವೆ ಅಂತ ನಂಬಿಸೊದಕ್ಕೆ ಹೋಗ್ತಿದ್ದಾರೆ ಆದ್ರೆ ನಾನು ಅದನ್ನೆಲ್ಲ ನಂಬೋಲ್ಲ ಅಂತ. ಚರ್ಮದ ಕೆಳಗೆ ಅದೆಷ್ಟರ ಮಟ್ಟಿಗೆ ಇವರಿವರ ತರ್ಕ ಇಳಿದಿದೆ ಅಂತ ಕೆರೆದು ನೋಡಬೇಕು ಅನ್ಸುತ್ತೆ, ಆದ್ರೆ ಏನ್ ಮಾಡ್ಲಿ ವೆಬ್ ಸೈಟಿಗೆ ಚರ್ಮಾ ಅನ್ನೋದೇ ಇಲ್ವೇ? ಚರ್ಮ ಅಂತಿಲ್ಲದ ವೆಬ್‌ಸೈಟಿನ ಮೂಲ್ಕ ಜನರನ್ನ ನಂಬಿಸಿ ಆಕರ್ಷಿಸಿ ಬಿಸಿನೆಸ್ಸು ಮಾಡೋ ಇವರಿಗೆಲ್ಲ ನನ್ನಂಥ ದಡ್ರು ಗಿರಾಕಿಗಳ್ಯಾಕ್ ಆಗ್ಬೇಕು. ಈ ಬುದ್ಧಿವಂತ ಕಂಪ್ನಿಗಳಿಗೆ ಶಾಲೆಗಳಿಗೆ ಬುದ್ಧಿವಂತ ಕಷ್ಟಮರುಗಳೇ ಇರ್ಲಿ, ನಮ್ಮಂತ ದಡ್ಡರೆಲ್ಲ ಇನ್ಯಾವ್ದೋ ಮೂಲೆ ಸೇರ್ಲಿ ಏನಂತೀರಿ?

ನಿಮ್ standard ಏನೋ ಎಂತೋ, ನಮ್‌ದಂತೂ ಫೈವ್ ಸ್ಟಾರೂ ಅಲ್ಲ, ಸ್ಟೇಟ್ ಆಫ್ ದಿ ಆರ್ಟ್ ಇರ್ಲಿ ಕಾಮರ್ಸೂ ಅಲ್ಲ. ಅದಿರ್ಲಿ ಈ best of the class ಅನ್ನೋದಕ್ಕೆ state of the science ಅನ್ನೋದನ್ನ ಬಿಟ್ಟು art ಅಂತ ಯಾಕ್ ಅಂತಾರೆ? ನಾವು ಯಾವ್ದೂ ಜರ್ಮನ್ನೂ-ಜಪಾನರ ISO ಗೂ ತಲೆ ತೂಗೋಲ್ಲ. ನಮಿಗೆ ಬದುಕನ್ನ ಕಲ್ಸೋ ಪಾಠಗಳನ್ನ ಹೇಳ್ಕೊಡೋ ಬೇಸಿಕ್ ಎಜುಕೇಶನ್ ಇರ್ಲಿ ಅಂತ ಗುರುಕುಲದ ಕಥೆ ಹೇಳ್ತಿಲ್ಲ ನಾನು, ಇದ್ದಿದ್ದರಲ್ಲಿ ತಮ್ಮ ತಮ್ಮ ವೆಬ್‌ಸೈಟುಗಳಲ್ಲಿ ’ನಮ್ ಎಂಪ್ಲಾಯಿಗಳು ಹಂಗೆ-ಹಿಂಗೆ’ ಅಂತ ನಿಜವನ್ನಾದ್ರೂ ಹೇಳ್ಲಿ ಅಂತ ಅಷ್ಟೇ. ಕಪ್ಪೆಗಳನ್ನ ತಕ್ಕಡಿಯಲ್ಲಿಟ್ಟು ತೂಕಾ ಮಾಡೋರ್ ಹಾಗೆ ಎಂಪ್ಲಾಯಿಗಳನ್ನ ಹೈರು-ಫೈರು ಮಾಡೋ ಕಂಪನಿಗಳಲ್ಲಿ ಬಿಸಿನೆಸ್ಸು ಪ್ರಾಸೆಸ್ಸುಗಳು ಹೇಗೆ ನೆಲೆ ನಿಲ್ಲುತ್ವೆ? ಎಲ್ಲಿ ಬಿಸಿನೆಸ್ಸ್ ನೆಟ್ಟಗೆ ಗೊತ್ತಿರಲ್ವೋ ಅಲ್ಲಿ ತುಂಬಿ ತುಳುಕೋ ಟೆಕ್ನಾಲಜಿ ತಗೊಂಡು ಯಾವನ್ ಉದ್ದಾರಾಗಿದಾನೆ ನೀವೇ ಹೇಳಿ.

Sunday, August 31, 2008

ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು?

Even tea bags have instructions to follow! ಅಂತ ಅನ್ನಿಸಿದ್ದು ಇತ್ತೀಚೆಗೆ. ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು? ಬೆಳಕಿನ ಬಗ್ಗೆ ತಿಳಕೊಳ್ಳೋಣ ಅಂತ ಶಾಲೆ-ಕಾಲೇಜಿಗೆ ಹೋದ್ರೆ ಬೆಳಕು ಅಂದ್ರೆ ಪಾರ್ಟಿಕಲ್ಲೋ ವೇವೋ ಅಂತ ನಮ್ಮನ್ನೇ ಕನ್‌ಫ್ಯೂಸ್ ಮಾಡ್ತಾರೆ, ಕ್ಲಾಸಿಕಲ್ ಥಿಯರೀನೂ ಬೇಡಾ ಮಾಡರ್ನ್ ಸೈನ್ಸೂ ಬೇಡಾ ಅಂತಂದ್ರೆ ಯಾವಾಗ್ಲೂ ಕ್ವಾಂಟಮ್ ಮೆಕ್ಯಾನಿಕ್ಸ್ ಇದ್ದೇ ಇದೆ, ಆದ್ರೆ ನಮ್ಮ ಕಾಲೇಜು ಮೇಷ್ಟ್ರುಗಳು ಮಾಡೋ ಪಾಠವನ್ನು ಅರ್ಥ ಮಾಡ್ಕೋ ಬೇಕಾದ್ರೆ ವಿದ್ಯಾರ್ಥಿಗಳು ಬೆಳಕಿನ್ ವೇಗಕ್ಕಿಂತ್ಲೂ ಹೆಚ್ಚು ಚುರುಕಾಗಿರಬೇಕು. ಇನ್ನೇನು Heisenberg's Uncertainity Principle ತಲೆ ಒಳಗೆ ಹೊಕ್ಕಿರುತ್ತೋ ಇಲ್ವೋ ಅಷ್ಟೊತ್ತಿಗೆ ಎಕ್ಸಾಮ್ ಅಂತ ತಲೆ ತಿಂದು ಕಲಿ ಬೇಕಾದ್ದು ಕಲಿಯೋ ಹೊತ್ತಿಗೆ ಎಕ್ಸಾಮ್ ಪ್ರಿಪರೇಷನ್ನ್ ಎಕ್ಸಾಮ್ ಪ್ರಿಪರೇಷನ್ನ್ ಮಾಡೋ ಹೊತ್ತಿಗೆ ಕಲಿ ಬೇಕಾದ್ದು ಕಲಿಯೋ ಸಂದರ್ಭ ಬಂದಿದ್ದು ನನಗಂತೂ ಮೊದಲ್ನೇ ಸರ್ತಿ ಅಲ್ಲಾ ತಾನೆ?

ಇಂತಲ್ಲೇ ರಸ್ತೆ ದಾಟೀ ಅಂತ ಬಿಳಿ-ಗೆರೆಗಳನ್ನು ಎಳೆದಿರ್ತಾರೆ, ಅದನ್ನ ದಾಟೋದಕ್ಕಿಂತ ಮೊದ್ಲೇ zeebra crossing ಅಂತ ಹೇಳಿ ಕನ್‌ಫ್ಯೂಸ್ ಮಾಡ್ತಾರೆ. ಪೈಥಾಗೊರೋಸ್ ಥಿಯರಮ್ ಅಂತಾ ತಲೆ ತಿಂತಾರೆ, ಅದನ್ನು ಕಲಿತು ಮುಗೀತಿದ್ದ ಹಾಗೆ it is also known as Donkey's formula ಅಂತಾರೆ. ಝೀಬ್ರಾ ಕತ್ತೆ ಕುದುರೆಗಳಿಗೆ ಗೊತ್ತಿರೋ ಲಾಜಿಕ್ಕನ್ನ ತಿಳಕೊಳ್ಳೋದಕ್ಕೆ ನಾವ್ಯಾಕೆ ಶಾಲೆಗೆ ಹೋಗ್ಬೇಕು?

ನಮ್ ಕನ್ನಡಿಗರದ್ದು ಯಾವಾಗ್ಲೂ ಸಪ್ಪೆ ಸ್ವಭಾವ, ಯಾಕೆ ಅಂತೀರಾ? ಮತ್ತಿನ್ನೇನು, ನಾವೆಲ್ಲ ದೊಡ್ಡದಾಗಿ ’ನಮಸ್ಕಾರ, ಹೇಗಿದ್ದೀರಾ?’ ಅಂತ ಕೇಳ್ತೀವಲ್ಲ, ಈ ’ನಮಸ್ಕಾರ’ ಅನ್ನೋದರಲ್ಲಿ ಕಿಕ್ ಇಲ್ಲ, ಅದರಲ್ಲಿ ನಮಸ್ಕಾರಮ್, ವಣಕ್ಕುಮ್, ಸಲಾಮ್, Hey, Hi ಅನ್ನೋದರಲ್ಲಿರೋ ಗ್ಲಾಮರ್ ಇಲ್ಲ. ’ನಮಸ್ಕಾರ, ನಮಸ್ಕಾರ, ನಮಸ್ಕಾರ’ ಅಂತ ಹೇಳ್ಕೊಂಡು ಆ ಗಣೇಶನೇನೋ ಮುಂದೆ ಬಂದ, ಅದೇ ರೀತಿ ನೀವೇನಾದ್ರೂ ದಾರೀಲಿ ಹೋಗೋರ್ ಬರೋರಿಗೆ ’ನಮಸ್ಕಾರ ನಮಸ್ಕಾರ’ ಅಂದ್ರೆ ತಲೆ ಸರಿ ಇಲ್ಲ ಅಂದ್‌ಕೋತಾರೆ ಅಷ್ಟೇ. ಅದಕ್ಕೋಸ್ಕರನೇ ನಮ್ ಬಯಲ್ ಸೀಮೆಯಲ್ಲಿ ’ಅರಾಮಾ?’ ಅನ್ನೋದು ಅದು How're you doing? ಅನ್ನೋದರ ಯಥಾ ನಕಲೇ, ಆದ್ರೆ ಬಹಳ ಸಿಂಪಲ್ಲಾಗಿರೋದು. ಒಂದು ರೀತಿ ಅರ್ಧ ಪೇಜ್ ಬರೆದಿರೋ ಸ್ಪ್ಯಾನಿಷ್ ಡೈಲಾಗನ್ನು ಮೂರೇ ಮೂರು ಸಾಲು ಇಂಗ್ಲೀಷಿನಲ್ಲಿ ಹೇಳಿದ ಹಾಗೆ.

ಸಹ್ಯಾದ್ರಿ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೋತಿದ್ದೆ, ನಾನೋ ಟೈಮರನ್ನು ಒಡಲಾಳದಲ್ಲೇ ಇಟ್ಟುಕೊಂಡು ಹುಟ್ಟಿದ ಹಾಗೆ ಬಹಳ ಶಿಸ್ತಿನವನು. ಪಾಪ ಯಾವ್ದೋ ಹಳ್ಳಿ ವಿದ್ಯಾರ್ಥಿ ಒಂದೆರಡು ನಿಮಿಷ ಲೇಟ್ ಆಗಿ ಬಂದ, ’ಯಾಕೆ, ಕ್ಲಾಸ್ ಇರೋದ್ ಮರ್ತು ಹೋಯ್ತಾ?’ ಅಂದೆ (’ಊಟ ಮಾಡೋದ್ ಮರೆಯೋದಿಲ್ವಾ?’ ಅನ್ನೋದು ಫಾಲ್ಲೋ ಅಪ್ ಡೈಲಾಗು, ಪರಿಸ್ಥಿತಿ ಅಲ್ಲೀವರೆಗೆ ಹೋಗ್ಲಿಲ್ಲ), ಅವನು, ’ಇಲ್ಲಾ ಸಾರ್, ಈಗಷ್ಟೇ ಊರಿಂದ ಬಂದೆ?’ ಅಂದ. ನಾನು, ’ಹಾಗಾದ್ರೆ ನಾವೆಲ್ಲ ಕಾಡಿಂದ ಬರ್ತೀವೇನು?’ ಅಂದು ಸುಮ್ಮನಾದೆ, ಕ್ಲಾಸ್ ಎಲ್ಲ ನಗ್ತು, ಹುಡುಗನ ಮೋರೆ ಪೆಚ್ಚಗಾಗಿ ನನಗೆ ’ನೀನು ಅಮೇರಿಕದಲ್ಲಿ ಹೋಗಿ ಬೀಳು!’ ಅಂತ ಶಾಪಾ ಹಾಕ್ದಾ ಅನ್ಸತ್ತೆ, ಅದಕ್ಕೆ ಇಲ್ಲ್ ಬಂದ್ ಬಿದ್ದಿದ್ದೀನ್ ನೋಡಿ. ಇಲ್ಲೋ, ವಿದ್ಯಾರ್ಥಿಗಳು ಆನ್‌ಟೈಮ್ ಬರೋದಿರ್ಲಿ ಶಾಲೇಲಿ ಮೇಷ್ಟ್ರುಗಳ ಎದಿರು ವಿದ್ಯಾರ್ಥಿಗಳು ತಿಂಡಿ-ತೀರ್ಥ ತಿನ್ನಬಹುದು ಕುಡೀಬಹುದು. ನಾನು ಯಾವ್ದೋ ಡಾಕ್ಟ್ರು ಅಪಾಯಿಂಟ್‌ಮೆಂಟು ಅಂತ ಅವರು ಕೊಟ್ಟ ಟೈಮಿಗೆ ಹೋದ್ರೆ ಅವರು ಮೊದ್ಲು ದೊಡ್ಡ ರೂಮಿನಲ್ಲಿ ಕಾಯಿಸಿದ್ದು ಆಲ್ದೇ ಅದಕ್ಕಿಂತ ಸಣ್ಣ ರೂಮಿನಲ್ಲಿ ಮತ್ತೆ ಕಾಯಿಸ್ತಾರಲ್ಲ. ಇಲ್ಲಿಯವರಿಗೆ ಟೈಮ್ ಸೆನ್ಸೇ ಇಲ್ಲ, ನನ್ ಮೀಟಿಂಗ್‌ಗಳು ಆನ್‌ಟೈಮ್ ಶುರು ಆಗೋದಿರಲಿ, ಅವು ಸರಿಯಾದ ಟೈಮಿಗೆ ಮುಗಿಯೋದೂ ಇಲ್ಲ. ಯಾವ್ದೂ ಬೇಡಪ್ಪಾ ನ್ಯಾಸಾದ ಉಡಾವಣೆಗಳೇ ಸರಿಯಾದ ಸಮಯಕ್ಕೆ ಆಗೋದಿಲ್ಲ ಅಂದ್ರೆ, ಅಮೇರಿಕದಲ್ಲಿ ಟೈಮಿಗೆ ಎಲ್ಲಿ ಬೆಲೆ ಇದೆ ನೀವೇ ಹೇಳಿ? ನನ್ ತಂದೆ ತಾಯಿ ಮಾಡಿದ ಮೂವತ್ತೈದು ವರ್ಷ ಮೇಷ್ಟ್ರ ಸರ್ವೀಸ್‌ನಲ್ಲಿ ಪ್ರತಿದಿನ ಕೆಲ್ಸಕ್ಕೆ ಹೋಗೋವಾಗ್ಲೂ ಯಾವಾಗ್ಲೂ ಆನ್‌ಟೈಮ್ ಅವರು ಶುರು ಮಾಡುತ್ತಿದ್ದ ತರಗತಿಗಳು ಆನ್‌ಟೈಮ್, ಆದ್ರೆ ನಾನ್ ನೋಡಿ ನನ್ನ ಹದಿನೈದು ವರ್ಷದ ವೃತ್ತಿ ಜೀವನದಲ್ಲಿ ಒಂದ್ ದಿನಾನೂ ಮನೇನ ಆನ್‌ಟೈಮ್ ಬಿಟ್ಟಿದ್ದಿಲ್ಲ - ಎಲ್ಲಾ ಆ ಸಹ್ಯಾದ್ರಿ ಕಾಲೇಜ್ ಹುಡುಗನ್ದೇ ತಪ್ಪು!

ಇಷ್ಟು ಚಿಕ್ಕ ಮನುಷ್ಯ ನಾನು, ನನ್ನದೊಂದು ದೊಡ್ಡ ಮಾತಿದೆ - ಕನ್ನಡಿಗರಿಗೆ ಆತ್ಮಾಭಿಮಾನ ಕಮ್ಮಿ - ಅಂತ. ಬೇರೆ ಯಾವ್ ಭಾಷೇನೋರೂ ಆವರ ಮಾತುಕಥೆಯ ನಡುವೆ ಮತ್ತೊಬ್ಬ ಪರಭಾಷಿಯ ಆಗಮನವಾದ್ರೆ ತಮ್ ಮಾತೃಭಾಷೆಯಲ್ಲಿನ ಡೈಲಾಗನ್ನು ಬದಲಾಯಿಸೋದಿಲ್ಲ, ಕೇವಲ ಕನ್ನಡಿಗರು ಮಾತ್ರ ಒಂದೇ ಕಾಮನ್ ಲಾಂಗ್ವೇಜ್ ಇಂಗ್ಲೀಷಿಗೆ ಮೊರೆ ಹೋಕ್ತಾರೆ, ಇನ್ನೂ ವರ್ಸ್ಟ್ ಅಂದ್ರೆ ಆಗಮಿಸಿದ ಪರಭಾಷಿಯ ಭಾಷೆಯಲ್ಲಿ ತಮ್ಮ ಡೈಲಾಗನ್ನು ಕಂಟೀನ್ಯೂ ಮಾಡ್ತಾರೆ. ನನಗೆ ಹಾಗೆ ಆದಾಗ್ಲೆಲ್ಲ ಮೈ ಉರಿಯುತ್ತೆ ಅನ್ನೋದೇನೋ ನಿಜ, ಆದ್ರೆ ಏನ್ ಮಾಡ್ಲಿ ಹೇಳಿ? ಅದಕ್ಕೆ ಒಂದು ಹೊಸ ಫಾರ್ಮುಲಾ ಕಂಡ್ ಹಿಡಿದಿದ್ದೀನಿ. ನಿಮ್ಮ ಎದುರು ಯಾರಾದ್ರೂ ಕನ್ನಡಿಗರು ನನಗೆ ಆ ಭಾಷೆ ಬರುತ್ತೆ, ಈ ಭಾಷೆ ಬರುತ್ತೆ ಅಂತ ಕೊಚ್ಚಿಕೋತಾರೆ ನೋಡಿ, ಆಗ ಅವರಿಗೆ ಒಂದು ಸರಳ ಪ್ರಶ್ನೆ ಕೇಳಿ ಬಾಯಿ ಮುಚ್ಚಿಕೊಂಡು ಸುಮ್ಮನಿರ್ತಾರೆ. ನಮ್ಮ್ ಸೋದರಮಾವ ಹಾಗೆ ಭಾರತದಲ್ಲಿ ಅಲ್ಲಿ ಇಲ್ಲಿ ಇದ್ದು ಬಂದೋರು ಕನ್ನಡವೂ ಬರೋಲ್ಲ, ಉಳಿದ ಭಾಷೆಗಳೂ ಬರೋದಿಲ್ಲ ಅಂತಂದ್ರೇನೇ ಚೆನ್ನ. ಒಂದ್ ದಿನ ಅವರು ಕೊಚ್ಚಿ ಕೊಳ್ತಾ ಇದ್ರು, ನನಗೆ ತಮಿಳು ಬರುತ್ತೆ, ತೆಲುಗು ಬರುತ್ತೆ, ಮುಂತಾಗಿ ಒಟ್ಟು ಹನ್ನೊಂದೋ ಹನ್ನೆರಡೋ ಕೌಂಟು ಮಾಡುವಷ್ಟು. ನಾನೆಂದೆ ’ನಿಮಗೆ ತಮಿಳು ಬರುತ್ತಾ? ಹಾಗಾದ್ರೆ - ಆಧುನಿಕ ಭಾರತದಲ್ಲಿ ಜನಸಂಖ್ಯಾ ಸ್ಪೋಟದಿಂದ ಸಮಸ್ಯೆಗಳು ಉಲ್ಬಣಗೊಂಡಿವೆ - ಅನ್ನೋದನ್ನು ಆ ಭಾಷೆಯಲ್ಲಿ ಹೇಗೆ ಹೇಳ್ತೀರಿ?’ ನಮ್ಮ್ ಮಾವ ಬೆಬ್ಬೆಬ್ಬೆ ಆದ್ರು. ನಾನು ಹೇಳಿರೋ ಕನ್ನಡದ ವಾಕ್ಯದಲ್ಲಿ ಸಂಸ್ಕೃತ ಪದಗಳೇ ಇರಬಹುದು, ಆದ್ರೆ ನಾನು ಹೇಳಿದ್ದನ್ನ ಅವರು ಆಯಾ ಭಾಷೇನಲ್ಲಿ ಟ್ರಾನ್ಸ್‌ಲೇಟ್ ಮಾಡ್ದೇ ಹೋದ್ರೆ ಅವರಿಗೆ ಆ ಭಾಷೆ ಬರುತ್ತೇ ಅಂತ ಹೇಗ್ ಹೇಳ್ಲಿ, ಹೇಗೆ ಒಪ್ಪಿಕೊಳ್ಳಲಿ. ಸ್ವಲ್ಪ ವರ್ಷಗಳ ಮೇಲೆ ತಿಳೀತು, ನಾನು ಹೇಳಿದ ಕನ್ನಡದ ಸಾಲೇ ಅವರಿಗೆ ಅರ್ಥವಾಗಿರಲಿಲ್ಲ ಅಂತ!

ಗುರುದ್ವಾರ-ಗುದದ್ವಾರದ ಕಥೆ ಹೇಳಿ ನಿಮ್ಮನ್ನ ಬಿಟ್ಟು ಬಿಡ್ತೀನಿ, ನೈಜ ಘಟನೆ ಆದರೆ ಪಾತ್ರಗಳನ್ನು ಬದಲಾಯಿಸಿದ್ದೀನಿ ಅಷ್ಟೇ - ಆದ್ರೆ ಹೀಗೆ ಹೇಳ್ದೋನು ನಾನಂತೂ ಅಲ್ಲ!
ಒಂದು ದಿನ ನಮ್ಮ ಐಟಿ ಪ್ರಾಜೆಕ್ಟ್ ಟೀಮಿನ ಪ್ರೊಡಕ್ಷನ್ನ್ ಮೀಟಿಂಗ್ ನಡೀತಾ ಇತ್ತು, ವೀಕೆಂಡಿನಲ್ಲಿ ಯಾವ್ದೋ ಎಮರ್ಜನ್ಸಿ ಬಂದಿತ್ತಾದರಿಂದ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಎಲ್ಲರನ್ನೂ ಪೇಜ್ ಮಾಡೀ ಮಾಡೀ ಕಾನ್‌ಫರನ್ಸ್ ಕಾಲ್‌ಗೆ ಸೇರಿಕೊಳ್ಳೋದಕ್ಕೆ ಹೇಳ್ತಾ ಇದ್ವಿ. ಐಟಿ ಟೀಮು ಅಂದ್ರೆ ಭಾರತೀಯರ ಸಮೂಹ - ಬರೀ ವರ್ಕರ್ ಬೀಸ್ ಮಾತ್ರ ಸಾರ್, ಮ್ಯಾನೇಜ್‌ಮೆಂಟ್ ಅಲ್ಲ - ಅದರಲ್ಲಿ ಸರ್ದಾರ್‌ಜಿಗಳು, ಸೌತ್ ಇಂಡಿಯನ್ಸೂ (ಕನ್ನಡಿಗರೂ ಸೇರಿ!) ಇರೋ ಅಂತದ್ದು. ನಾನು ರಾಮ್ ಸಿಂಗ್ ಇನ್ನೂ ಯಾಕೆ ಬಂದಿಲ್ಲ ಅಂತ ಯೋಚಿಸ್ತಾ ಇರೋವಾಗ ನನ್ನ ಕನ್ನಡ ಮಿತ್ರ ಅವನಿಗೆ ಪೇಜ್ ಮಾಡಿ, ಅವನ ಜೊತೆ ಫೋನ್‌ನಲ್ಲಿ ಮಾತನಾಡಿದ ನಂತರ ಬಂದು ಕಿವಿಯಲ್ಲಿ ಹೇಳಿದ - ’ರಾಮ್ ಸಿಂಗ್, ಗುದದ್ವಾರಕ್ಕೆ ಹೋಗಿದ್ದಾನೆ, ಇನ್ನೊಂದು ಅರ್ಧ ಘಂಟೆ ಬರೋಕೆ ತಡವಾಗುತ್ತಂತೆ!’ ಅಂತ. ನಾನು ಮುಖ ಕಿವುಚಿ, ’What?!’ ಅಂದ್ರೆ, ಮತ್ತೆ ’ಅವನು ಗುದದ್ವಾರದಲ್ಲಿದ್ದಾನೆ!’ ಅಂತ ಹೇಳ್ದ. ಅವನು ಇನ್ನೊಂದ್ ಸರ್ತಿ ಹಂಗೇ ಹೇಳಿದ್ರೆ ನಾನು ನಂಬ್‌ಕೊಂಡ್ ಬಿಡ್ತಿದ್ನೋ ಏನೋ, ನನಗಂತೂ ನಗು ತಡೆಯಲಾಗದೇ ಕಾನ್‌ಫರೆನ್ಸ್ ಕಾಲ್‌ನ ಮ್ಯೂಟ್ ಮಾಡಿ, ’Are you sure?' ಅಂದೆ, ಆದರೆ ನನ್ನ ಕನ್ನಡ ಮಿತ್ರನಿಗೆ ತಾನು ಏನು ಹೇಳಬೇಕಾಗಿತ್ತು ಏನು ಹೇಳ್ದೆ ಅನ್ನೋದೇ ಅರ್ಥ ಆಗ್ಲಿಲ್ಲ. ’ಗುರುದ್ವಾರ, ಗುದದ್ವಾರ ಎರಡೂ ಭಗವಂತನ ಸೃಷ್ಟಿಗಳೇ, ಸದ್ಯ ಅಲ್ಲಿಂದ ಬರ್ತಾನಲ್ಲ ಸಾಕು’ ಎಂದು ಸುಮ್ಮನಾದೆ. ಈ ವಿಷಯವನ್ನು ನೆನೆಸಿಕೊಂಡಾಗಲೆಲ್ಲ ಎಂತಹ ಕಷ್ಟದ ಸಮಯದಲ್ಲೂ ನನಗೆ ತಿಳಿ ನಗು ಬರುತ್ತೆ.

***
ಕೊಸರು: ಇಂಗ್ಲೀಷೇ ದೊಡ್ಡದು ಅಂತ ಹಾರಾಡಿ ಒದ್ದಾಡೋರಿಗೆಲ್ಲ ಒಂದು ಸವಾಲು, ಯಾವಾಗ್ಲೂ ’ಶಿಟ್-ಶಿಟ್’ ಅಂತ ಅನ್ನೋರು ದಯವಿಟ್ಟು ತಮ್ಮ ಮಾತಿನ ಮಧ್ಯೆ ಒಂದ್ ಸರ್ತೀನಾದ್ರೂ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿ ನಿಮ್ಮ ಬಾಯಿ ಎಷ್ಟು ಕೊಳಕಾಗಿದೆ ಅಂತ ಎಲ್ಲರಿಗೆ ತೋರಿಸಬಾರದೇಕೆ?

Monday, June 02, 2008

...ಪ್ರಯೋಜನಕ್ಕೆ ಬಾರದ್ದು ಅಂತ ಯಾರಂದೋರು?

ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.

ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.

ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:
- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!
(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)
- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?
(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)
- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?
(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).

ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:
- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!
- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!
- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!

ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.

***

ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!

ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.

ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.

ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!