Showing posts with label ಸಮಾಜ. Show all posts
Showing posts with label ಸಮಾಜ. Show all posts

Sunday, April 05, 2020

ಎಲ್ಲರಿಗೂ ಬದುಕುವ ಹಕ್ಕಿದೆ

ಪ್ರಪಂಚದ ಅರ್ಧ ಭಾಗದ ಜನ ಇನ್ನರ್ಧ ಭಾಗದ ನಾಶಕ್ಕೆ ಕಾರಣರಾಗಬಲ್ಲರು ಎಂದೆನಿಸಿದ್ದು, ಪ್ರತೀ ದೇಶದ ಜನಸಂಖ್ಯೆಯ ವಿಶ್ಲೇಷಣೆಗೆ ತೊಡಗಿದಾಗ.  ಯು.ಎಸ್.ಎ.ನಲ್ಲಿ ಈಗ ನ್ಯಾಷನಲ್ ಸೆನ್ಸಸ್ ಸಮಯ.  ಮನೆ-ಮನೆಗೆ ಪತ್ರವನ್ನು ಕಳುಹಿಸಿ, ನಮಗೆಲ್ಲ ಒಂದು ಸೆನ್ಸಸ್-ಐಡಿ ಒಂದನ್ನು ಕೊಟ್ಟು ಗವರ್‌ಮೆಂಟ್‌ನವರೇ ನಮ್ಮೆಲ್ಲ ಅಂಕಿ-ಅಂಶಗಳನ್ನು ಹತ್ತು ವರ್ಷಕ್ಕೊಮ್ಮೆ ಸಂಗ್ರಹಿಸುವುದು ಪದ್ಧತಿ.  ಈ ರೀತಿ ಮಾಡೋದರಿಂದ ಸ್ಥಳೀಯ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಬಹುದು, ಎಲ್ಲರಿಗೂ ಸಮತೋಲನವಾದ ಆಡಳಿತವನ್ನು ಕೊಡಬಹುದು ಎನ್ನುವುದು ಅದರ ಉದ್ದೇಶ.  ಇದರಿಂದ ರಾಷ್ಟ್ರ‍ೀಯ ಮಟ್ಟದಲ್ಲೂ ಅನೇಕ ಪ್ರಯೋಜನಗಳಿವೆ.  ಇಷ್ಟರವರೆಗೆ ಎಲ್ಲಾ ಮನೆಗಳಲ್ಲಿಯೂ ಇದನ್ನು ಸಂಪೂರ್ಣಗೊಳಿಸಿ ಎಂದು ಪತ್ರಗಳನ್ನು ಕಳಿಸಿದ್ದಾರ‍ೆ.  ಈ ರೀತಿಯ ಪದ್ಧತಿ ಅನೇಕ ದೇಶಗಳಲ್ಲೂ ಕೂಡ ಚಾಲ್ತಿಯಲ್ಲಿದೆ, ಅಂತೆಯೇ ಭಾರತದಲ್ಲಿಯೂ ಕೂಡಾ.

ನೀವು ನ್ಯಾಷನಲ್ ಪಾಪ್ಯುಲೇಶನ್ ಕ್ಲಾಕ್ ವೆಬ್‌ಸೈಟ್‌ಗೆ ಹೋಗಿ ನೋಡಿದರೆ, ಈ ಕೆಳಗಿನ ಚಿತ್ರ ಕಾಣುತ್ತದೆ.


ಎಲ್ಲ ದೇಶಗಳ ಜನಸಂಖ್ಯೆಯನ್ನು ನೋಡಿದಾಗ, ವಿಶೇಷವೆಂದರೆ ಪ್ರಪಂಚದ ಅರ್ಧಭಾಗಕ್ಕಿಂತಲೂ ಹೆಚ್ಚು ಜನಸಂಖ್ಯೆ ಐದಾರು ದೇಶಗಳಲ್ಲಿ ಇರುವುದು ಗಮನಕ್ಕೆ ಬರುತ್ತದೆ.  ಅದರಲ್ಲೂ ಚೀನಾ ಮತ್ತು ಭಾರತವೇ ಮೂರರ ಒಂದು ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ.


"ವಸುಧೈವ ಕುಟುಂಬಕಮ್" ಎಂಬ ಮಹಾ ಉಪನಿಷತ್ತಿನ ಬಹುಮುಖ್ಯವಾದ ನೈತಿಕ ಮೌಲ್ಯದ ಹಿನ್ನೆಲೆಯಲ್ಲಿ ಬದುಕುವ 1.4 ಬಿಲಿಯನ್ ಭಾರತೀಯರೆಲ್ಲಿ? ಕಂಡದ್ದನ್ನೆಲ್ಲ ತಿಂದು ನೀರು ಕುಡಿಯುವ ಅಷ್ಟೇ ಪ್ರಮಾಣದ ಚೀನಾ ಪ್ರಜೆಗಳೆಲ್ಲಿ?  ಇಂಥವರಲ್ಲಿ ಮೌಲ್ಯವನ್ನು ಬಿತ್ತಲೆಂದೇ ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಮಹಾತ್ಮನ ಅವತಾರವಾಗಿದ್ದರೂ ಕೂಡ, ಇವತ್ತಿಗೂ ಚೈನಾದಲ್ಲಿ ಯಾವುದೇ ಧರ್ಮವಿಲ್ಲದೇ ಬದುಕುವವರೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ.  15% ಬುದ್ಧಿಸಮ್, ಇನ್ನೊಂದೈದು ಪರ್ಸೆಂಟ್ ಉಳಿದ ಧರ್ಮೀಯರನ್ನು ಬಿಟ್ಟರೆ, ಹೆಚ್ಚಿನವರು ಯಾವುದೇ ಧರ್ಮಕ್ಕೂ ಒಳಗಾಗದ ಧರ್ಮರಹಿತರು ಎಂದು ಕರೆಯಬೇಕಾದವರು ಕಂಡು ಬರುತ್ತಾರೆ.  ಯಾವುದೇ ಧರ್ಮದ ಚೌಕಟ್ಟಿಗೆ ಒಳಗಾಗದೇ ಇದ್ದವರು ಯಾವ ಭಾವನೆಗಳನ್ನು ಗೌರವಿಸಿಯಾರು? ಯಾರ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡಾರು.  ಹೆಚ್ಚಿನವರು ಪ್ರಾಣಿಗಳ ಹಾಗೆ: ತಾವು ಬದುಕಬೇಕು, ಮತ್ತೆ ಅಭಿವೃದ್ಧಿ ಹೊಂದಬೇಕು... ಅದಕ್ಕಾಗಿ ಯಾವ ಬೆಲೆಯನ್ನು ಬೇಕಾದರೂ ತೆರಲು ಸಿದ್ಧ!

***
ಈ ವಿಶ್ವದ ಪ್ರತಿಯೊಂದು ಅಣು-ರೇಣು-ತೃಣ-ಕಾಷ್ಠಗಳಿಗೂ ಸಮನಾಗಿ ಬದುಕುವ ಹಕ್ಕಿದೆ.  ಅಂತೆಯೇ ಈ ವಿಶ್ವದ ಪರಿತಂತ್ರ (ecosystem) ಜೀವಂತವಿರಬೇಕಾದರೆ ಎಲ್ಲ ಜೀವಿ-ನಿರ್ಜೀವಿಗಳಿಗೂ ಅವುಗಳದ್ದೇ ಧರ್ಮ (way of life) ಒಂದಿದೆ, ಅದನ್ನು ಬದಲಾಯಿಸಲಾಗದು.

Law of conservation of energy (1st law of Thermodynamics), ಹೇಳುವ ಪ್ರಕಾರ, energy can neither be created nor destroyed.  ಅದರಂತೆ, ಈ ವಿಶ್ವದ ಒಂದು ಚೈತನ್ಯ ಸ್ಥಿಮಿತದಲ್ಲಿರಬೇಕು ಇಲ್ಲವಾದರೆ ನಿಸರ್ಗ ತನ್ನನ್ನು ತಾನು ಸ್ಥಿಮಿತಕ್ಕೆ ತಂದುಕೊಳ್ಳುತ್ತದೆ.  ಕಳೆದ ನೂರು ವರ್ಷಗಳಲ್ಲಿ ಎರಡು ಬಿಲಿಯನ್ ಇದ್ದ ನಾವುಗಳು ಎಂಟು ಬಿಲಿಯನ್ (ಅಂದರೆ ನಾಲ್ಕು ಪಟ್ಟು) ಬೆಳೆದಿರುವಾಗ, ಅದರ ಸಮನಾದ ಪ್ರಮಾಣವನ್ನು ಮತ್ತೆಲ್ಲೋ ಮಾರ್ಪಾಡು ಮಾಡಿದ್ದೇವೆ ಎನಿಸೋದಿಲ್ಲವೇ?  ಉದಾಹರಣೆಗೆ, ಕೋಳಿ, ಹಂದಿ ಅಥವಾ ಬೀಫ್ ಫಾರಮ್‌ನಲ್ಲಿ ಕೃತಕ ಪರಿಸರದಲ್ಲಿ ಬೆಳೆಯುವ ಪ್ರಾಣಿ ದಿಢೀರನೆ ಅದರ ತೂಕದಲ್ಲಿ ಹೆಚ್ಚನ್ನು ಕಾಣುವುದನ್ನು, ಅದು ಅಷ್ಟೇ ಪ್ರಮಾಣದ ಅಥವಾ ಅದಕ್ಕಿಂತಲೂ ಹೆಚ್ಚು ಬಳಸುವ ಆಹಾರ ಪ್ರಮಾಣದ ಮೂಲಕ ವಿವರಿಸಬಹುದು.

ಈ ಸಂದಿಗ್ದದ ಸಮಯದಲ್ಲಿ, ನಾವು ನಿಸರ್ಗದೊಂದಿಗೆ ಸಂಧಾನಕ್ಕೆ ಬರದೇ ಇದೇ ರೀತಿ ನಿಸರ್ಗವನ್ನು ಒತ್ತೆಯಾಳಾಗಿಟ್ಟುಕೊಂಡು ಸತಾಯಿಸುತ್ತಲೇ ಹೋದರೆ, ನಮ್ಮ ಅಗಾಧವಾಗಿ ಹೆಚ್ಚುತ್ತಿರುವ ಸಂತತಿ, ಒಂದು ಅಳಿವಿನ ಹಂತಕ್ಕೆ ಬಂದರೂ ಅಚ್ಚರಿಯೇನಿಲ್ಲ.

ಅದಕ್ಕೆಯೇ, ನಾವೆಲ್ಲರನ್ನೂ ಬದುಕಲು ಬಿಡಬೇಕು, ಪ್ರಪಂಚವನ್ನೇ ಒಂದು ಕುಟುಂಬವೆಂದುಕೊಂಡು ಸಹಬಾಳ್ವೆಯನ್ನು ಅನುಸರಿಸಬೇಕು ಎನ್ನುವ ಮಾತು, ಇಂದಿಗೆ ಹೆಚ್ಚು ಅನ್ವಯವಾಗುತ್ತದೆ.

Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

Saturday, July 19, 2008

ಕಗ್ಗಂಟನ್ನು ಬಿಡಿಸುವ ಬಗೆ ಹೇಗೆ?

ಚಿತ್ರವನ್ನು ಸುಮ್ಮನೇ ಬ್ಲಾಗ್‌ನಲ್ಲಿ ಹಾಕಿದರೆ ಅದೇ ಒಂದು ಬರಹ - ಬೇರೆ ಏನೂ ಹೇಳೋದೇ ಬೇಡ!

(ಚಿತ್ರ ಕೃಪೆ: http://discussions.virtualdr.com)


ನಮ್ಮ ಕಂಪನಿಯಲ್ಲಿ ಈಗಾಗಲೇ ಕೆಲಸಗಾರರ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ನೆಗೋಷಿಯೇಷನ್ನಲ್ಲಿ ತೊಡಗಿರುವ ಮ್ಯಾನೇಜ್‌ಮೆಂಟಿನವರು ಮುಂದೆ ಒಂದುವೇಳೆ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ಸರಿಹೊಂದದಿದ್ದಲ್ಲಿ ಅವರೇನಾದರೂ ಮುಷ್ಕರ ಹೂಡಿದರೆಂದರೆ ಕೆಲಸ ಕಾರ್ಯಗಳು ನಿಲ್ಲದಿರಲಿ ಎಂದು ಮ್ಯಾನೇಜ್‌ಮೆಂಟಿನ ಎಲ್ಲರಿಗೂ ಯೂನಿಯನ್‌ನವರ ಕೆಲಸಗಳಲ್ಲಿ ತರಬೇತಿಯನ್ನು ಕೊಡುವುದು ಮಾಮೂಲಿ. ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರಿಪೀಟ್ ಆಗುವಂತಹ ವ್ಯವಸ್ಥೆ. ಅದರಂತೆ ಈ ವರ್ಷ ನನಗೆ ಟೆಲಿಫೋನ್ ಲೈನ್‌ಗಳನ್ನು ಇನ್ಸ್ಟಾಲ್ ಹಾಗೂ ದುರಸ್ತಿ ಮಾಡುವ ಟ್ರೈನಿಂಗ್ ಕೊಡುತ್ತಿದ್ದಾರೆ. ಹಾಗೆ ನಾನು ಆ ತರಬೇತಿಗೆ ಹೋದ ಮೊದಲನೇ ದಿನ ಅಲ್ಲಿನ ಬಿಳಿ ಬೋರ್ಡಿನಲ್ಲಿ ಈ ಚಿತ್ರದ ಕಪ್ಪು-ಬಿಳಿ ಆವೃತ್ತಿಯೊಂದನ್ನು ತೂಗು ಹಾಕಿದ್ದರು. ನಾನು ಇದು ಎಲ್ಲಿಯದು ಎಂದು ಹತ್ತಿರ ಹೋಗಿ ನೋಡಲಾಗಿ ಅದು ಭಾರತದ್ದು ಎಂದು ತಿಳಿಯಿತು. ನಮ್ಮ ಕ್ಲಾಸಿನಲ್ಲಿ ನಾನೊಬ್ಬನೇ ಭಾರತೀಯ, ಈ ಚಿತ್ರವನ್ನು ನೋಡಿದ ಹೆಚ್ಚಿನವರು - ಭಾರತದಲ್ಲಿ (ಹೀಗೂ) ಹೀಗಿದೆಯೇ ಎಂದು ನನ್ನನ್ನು ಪ್ರಶ್ನಿಸುವವರಂತೆ ಮುಖ ಮುಖ ನೋಡಿಕೊಳ್ಳುತ್ತಿರಲು ನಾನೂ ಈ ಕ್ರಿಸ್‌ಕ್ರಾಸ್ ಆದ ಲೈನುಗಳು, ಅದರ ಹಿಂದಿನ ವ್ಯವಸ್ಥೆಯ ಬಗ್ಗೆ ತುಸು ಯೋಚಿಸಿಕೊಂಡೆ.

***

ಈ ಚಿತ್ರವನ್ನು ಬೇಕಾದಷ್ಟು ರೀತಿಯಲ್ಲಿ ವ್ಯಾಖ್ಯಾನಿಸಬಹುದು - ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಬಹುದು:
- ಹೀಗೆ ಗಂಟು-ಗಂಟಾದ ಫೋನ್, ಕೇಬಲ್, ಎಲೆಕ್ಟ್ರಿಕ್ ಲೈನ್‌ಗಳು ಇರುವುದೇ ಹೀಗೋ ಅಥವಾ ಯಾವುದೋ ದೊಡ್ಡ ಬಿರುಗಾಳಿಯ ನಂತರ ಹುಟ್ಟಿದ ಸ್ಥಿತಿಯೋ?
- ಇವುಗಳನ್ನು ರಿಪೇರಿ ಮಾಡುವ ಬಗೆ ಹೇಗೆ?
- ಈ ರೀತಿ ಹಾಸು ಹೊಕ್ಕಾದ ಲೈನುಗಳಲ್ಲಿ ಯಾರದ್ದು ಯಾವುದು ಎಂದು ಹೇಗೆ ಕಂಡು ಹಿಡಿಯಲಾಗುತ್ತದೆ?
- ಈ ಲೈನುಗಳಲ್ಲಿ ಯಾವುದೋ ಒಂದು ಕೆಟ್ಟು ಹೋದರೆ ಅದನು ದುರಸ್ತಿ ಹೇಗೆ ಮಾಡುತ್ತಾರೆ, ಮಾಡುವವರು ಯಾರು?
- ಇದು ಎಲ್ಲೋ ಬಾಂಬೆಯದೋ ಉತ್ತರ ಭಾರತದ್ದೋ ಚಿತ್ರವಿದ್ದಿರಬಹುದು, ಇದೇ ಚಿತ್ರವನ್ನು ಇಡೀ ಭಾರತದಾದ್ಯಂತ ಹೀಗೇ ಎಂದು ಜೆನರಲೈಸ್ ಮಾಡಲಾಗುತ್ತದೆಯೇ?
- ಅಷ್ಟೊಂದು ಜನರಿರುವ ವ್ಯವಸ್ಥೆಯಲ್ಲಿ ಒಂದು ಫೋನ್ ಲೈನ್‌ಗಳಿಗಾಗಲೀ, ಕೇಬಲ್, ಎಲೆಕ್ಟ್ರಿಕ್ ತಂತಿಗಳಿಗೆ ಸರಿಯಾದ ನೆಲೆ ಏಕಿಲ್ಲ?
- ಈ ವ್ಯವಸ್ಥೆಯ ವಿರುದ್ಧ ಅಥವಾ ಪರವಾಗಿ ನಿಮ್ಮ ಹೋರಾಟಗಳಿದ್ದಲ್ಲಿ ಎಲ್ಲಿಂದ ಆರಂಭಿಸುವಿರಿ?
- ನಿಮ್ಮ ಉದ್ಯಮ ಅಥವಾ ಮನೆಯ ಮುಖ್ಯ ಸಂಪರ್ಕ ವಾಹಿನಿಗಳು ಇದೇ ರೀತಿಯ ಕಗ್ಗಂಟಿನಲ್ಲಿ ಹಾದು ಹೋಗುವುದಾದರೆ ನಿಮ್ಮ ಪ್ರಾಸೆಸ್ಸುಗಳು ಹಾಗೂ ಅವುಗಳ ನಿಖರತೆ, ರಕ್ಷಣೆ ಮೊದಲಾದವುಗಳ ಮೇಲೆ ಎಷ್ಟರ ಮಟ್ಟಿನ ನಂಬಿಕೆ ಇಡಬಹುದು?
- ಈ ಲೈನುಗಳ ಮೇಲೆ ಹೊಸದನ್ನು ಹೇಗೆ ಇನ್ಸ್ತಾಲ್ ಮಾಡಲಾಗುತ್ತದೆ, ಹಳೆಯದನ್ನು ಹೇಗೆ ದುರಸ್ತಿ ಮಾಡಲಾಗುತ್ತದೆ?

***

ಬನಾರಸ್ಸಿನಲ್ಲಿ ನಾನಿದ್ದಷ್ಟು ದಿನಗಳಲ್ಲಿ ಅಲ್ಲಿಯ ಉತ್ತಮೋತ್ತಮ ಪ್ರೊಫೆಸರುಗಳ ಮನೆಗಳಲ್ಲಿ ಪ್ರತಿನಿತ್ಯವೂ ಸಂಜೆಯಾಗುತ್ತಿದ್ದಂತೆ ಮನೆಯ ಪಕ್ಕದ ಎಲೆಕ್ಟ್ರಿಕ್ ತಂತಿಗಳಿಗೆ ಅವರ ಮಹಡಿಯಿಂದ ಕೋಲಿನ ಸಹಾಯದಿಂದ ತಮ್ಮ ಮನೆಯ ತಂತಿಗಳನ್ನು ಸಿಕ್ಕಿಸಿ ಕರೆಂಟನ್ನು ಕದಿಯುವುದನ್ನು ಮೊಟ್ಟ ಮೊದಲು ನೋಡಿದಾಕ್ಷಣ ಅಂದೇ ನನಗೆ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ರೋಷ ಬಂದಿತ್ತು. ನಮ್ಮೂರಿನ ಹಳ್ಳಿಗಳಲ್ಲಿ ಎಷ್ಟೋ ಜನ ಹೀಗೆ ಕರೆಂಟ್ ಕದಿಯುವುದನ್ನು ನಾನು ಕೇಳಿದ್ದೇನೆಯೇ ವಿನಾ ಪ್ರತಿದಿನವೂ ಹಾಡಹಗಲಿನಲ್ಲಿ ಒಬ್ಬ ಉನ್ನತ ಹುದ್ದೆಯ ಪ್ರೊಫೆಸರ್ ಹೀಗೆ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿಕೊಂಡಿರಲಿಲ್ಲ. ಬನಾರಸ್ಸಿನಿಂದ ಹಾಗೇ ಬಿಹಾರದ ಕೆಲವು ಊರುಗಳಲ್ಲಿ ಸುತ್ತಿ ಬರಲಾಗಿ ನನ್ನ ಕಲ್ಪನೆಯ ಭಾರತದ ಚಿತ್ರ ಸಂಪೂರ್ಣ ಬದಲಾಗಿ ಹೋಗಿತ್ತು ಎಂದರೆ ತಪ್ಪೇನೂ ಇಲ್ಲ. ನಾವು ದಕ್ಷಿಣದವರು ಆಲೋಚಿಸುವ ರೀತಿ ಒಂದು ಥರವಾದರೆ ಉತ್ತರ ಭಾರತದವರ ಗುಂಗೇ ಮತ್ತೊಂದು ಬಗೆ. ದಕ್ಷಿಣ ಭಾರತವನ್ನು ನೋಡಿ ಅದೇ ಭಾರತ ಎಂದು ಹೇಳಲಾಗದು, ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಎಲ್ಲ ದಿಕ್ಕುಗಳಲ್ಲೂ ಸಾಕಷ್ಟು ಅಲೆದಾಡಿ ನೋಡಿದಾಗ ಭಾರತದ ಒಂದು ಸ್ವರೂಪ ಸಿಕ್ಕಬಹುದು.

Single point of failure - ಎನ್ನುವ ಒಂದು ಹೊಸ ಅನಾಲಿಸ್ಸೀಸ್ ಅನ್ನು ಮುಗಿಸಿ ನಮ್ಮ ಕಂಪನಿಯ ನೆಟ್‌ವರ್ಕ್‌ನಲ್ಲಿ ಎಲ್ಲಿ ತೊಂದರೆ ಇದೆ, ಯಾವುದು ವೀಕೆಷ್ಟ್ ಲಿಂಕ್ ಎನ್ನುವ ವರದಿಯೊಂದನ್ನು ಕಳೆದ ವರ್ಷ ಪ್ರಸ್ತುತ ಪಡಿಸಿದ್ದೆ. ಅದರಿಂದಾಗಿ ಎಲ್ಲೆಲ್ಲಿ ಕೊರತೆಗಳಿವೆಯೋ ಅವುಗಳನ್ನು ನೀಗಿಸಲು ಹಲವಾರು ಸಣ್ಣ ಯೋಜನೆಗಳನ್ನು ಜಾರಿಗೊಳಿಸಲಾಯಿತು, ಕಳೆದ ವರ್ಷದ ಈ ಚಟುವಟಿಕೆಗಳ ಫಲವಾಗಿ ಈ ವರ್ಷ ನಮ್ಮಲ್ಲಿ ದೊಡ್ಡ ತೊಂದರೆಗಳು ಕಡಿಮೆಯೇ ಎನ್ನಬಹುದು. ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ (end-to-end) ಯಾವುದೇ ವ್ಯವಸ್ಥೆಯನ್ನು ನೋಡಿದರೆ ಅದರಲ್ಲಿ ವೀಕೆಷ್ಟ್ ಲಿಂಕ್‌ನ ಸ್ಟ್ರೆಂತ್ ಏನಿದೆ ಅದೇ ಆ ನೆಟ್‌ವರ್ಕ್‌ನ ಸ್ಟ್ರೆಂತ್ ಆಗುತ್ತದೆ. ಉದಾಹರಣೆಗೆ ಈ ಚಿತ್ರದಲ್ಲಿ ತೋರಿಸಿದ ತಂತಿಗಳ ಮೂಲಕ ನಿಮ್ಮ ಸಂಪರ್ಕ, ಕೇಬಲ್, ಎಲೆಕ್ಟ್ರಿಸಿಟಿ ಹಾದು ಬರುತ್ತಿದೆಯೆಂದಾರೆ, ಅದರಲ್ಲಿನ ಕೊರತೆಯೇ ನಿಮ್ಮ ಕೊರತೆಯಾಗುತ್ತದೆ - ಯೋಚಿಸಿ ನೋಡಿ.

ನಿಜ ಜೀವನದಲ್ಲಿ ನಿಮ್ಮೆದುರಿಗೆ ಹೀಗೆ ದುತ್ತನೆ ಎದುರಾಗುವ ಸಮಸ್ಯೆಯ ಕಗ್ಗಂಟನ್ನು ಎಲ್ಲಿಂದ ಬಿಡಿಸಲು ಆರಂಭಿಸುತ್ತೀರಿ? ಯಾರನ್ನು ಕಾಣುತ್ತೀರಿ? ಯಾರಿಗೆ ಉತ್ತರ ಹೇಳುತ್ತೀರಿ?

Thursday, June 19, 2008

ಸಮಸ್ಯೆ, ಅವಕಾಶ ಹಾಗೂ multiple right answers

ರಾಜಕಾರಣ, ಲಂಚ, ರಾಜಕೀಯ, ಭ್ರಷ್ಟಾಚಾರ ಇವೆಲ್ಲವನ್ನೂ ಬುದ್ಧಿವಂತ ಜನತೆ ಒಂದು ರೀತಿಯ ಅಲರ್ಜಿಯಿಂದ ನೋಡುತ್ತದೆ, ಹೇಸಿಗೆ ಮಾಡಿಕೊಳ್ಳುತ್ತದೆ. ’ಇವೆಲ್ಲ ನಮಗಲ್ಲ’ ಎಂದುಕೊಂಡು ಕೈ ತೊಳೆದುಕೊಳ್ಳಲು ನೋಡುತ್ತದೆ. ನಮ್ಮ ಜೀವನದಲ್ಲಿ ಸಾಂಸ್ಕೃತಿಕವಾಗಿ ಬೆಳವಣಿಗೆಗಳು ಇದ್ದಂತೆ ರಾಜಕೀಯವಾಗಿಯೂ ನಾವು ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ಹೆಚ್ಚು ಆಲೋಚಿಸಲು ತೊಡಗಿದ್ದು ದೇಶ ಬಿಟ್ಟು ದೇಶಕ್ಕೆ ಬಂದಾಗಲೆ. ಒಂದು ಕಾಲದಲ್ಲಿ ನನ್ನ ಹುಟ್ಟೂರಾದ ಆನವಟ್ಟಿಯ ಗ್ರಾಮಪಂಚಾಯತಿಯನ್ನು ಸೇರಿಕೊಂಡು ಅಲ್ಲಿನ ಸ್ಥಳೀಯ ಕೆಲಸಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು ಎನ್ನುವುದು ಯಾವತ್ತೂ ನನಸಾಗಲೇ ಇಲ್ಲ - ಹಲವಾರು ಕಾರಣಗಳಿಂದಾಗಿ. ಶಾಲಾ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಕೊಂಡು ಹೈ ಸ್ಕೂಲಿನವರೆಗೂ ಅನೇಕ ’ಮಂತ್ರಿ’, ’ನಾಯಕ’ ಪದವಿಗಳನ್ನು ಪಡೆದುಕೊಂಡು ಒಮ್ಮೆ ಹೈ ಸ್ಕೂಲು ಬಿಟ್ಟು ಕಾಲೇಜು ಸೇರಿಕೊಂಡ ಮೇಲೆ ನನ್ನಲ್ಲಿನ ರಾಜಕೀಯ ಉತ್ಸಾಹವೆಲ್ಲ ಸೂಜಿ ಚುಚ್ಚಿದ ಬೆಲೂನಿನ ಗಾಳಿಯಂತೆ ಖಾಲಿಯಾಗಿ ಹೋಯಿತು. ಮುಂದೆ ತಿಳುವಳಿಕೆ ಬೆಳೆದಂತೆಲ್ಲ ಒಂದು ಕ್ಷೇತ್ರದ ರೆಪ್ರೆಸೆಂಟೇಟಿವ್ ಆಗಲು ಏನೇನೆಲ್ಲ ಪೂರಕ ಅಂಶಗಳು ಬೇಕು ಎಂಬುದನ್ನು ಮನಗಂಡ ನಂತರ ಮುಂದೆ ಎಂದೂ ಈ ರಾಜಕೀಯಕ್ಕೆ ಕೈ ಹಾಕಲೇ ಬಾರದು ಎನ್ನುವಲ್ಲಿಯವರೆಗೆ ಬಂದು ನಿಂತಿದೆ.

***
ನಮ್ಮಲ್ಲಿನ ಅಂದರೆ ಭಾರತದಲ್ಲಿನ ಅನೇಕ ಮೂಲಭೂತ ಸಮಸ್ಯೆಗಳನ್ನು ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಪ್ರಶ್ನೆಯಿಂದ ಅರ್ಥೈಸಬಹುದು ಅಥವಾ ವೀಕ್ಷಿಸಬಹುದು - Can you take a "No" for an answer?

ನಮ್ಮಲ್ಲಿ ಈಗ ಚಾಲ್ತಿಯಲ್ಲಿರುವ ಯಾವುದೋ ಒಂದು ವ್ಯವಸ್ಥೆ ಅಥವಾ ಪ್ರಾಸೆಸ್ಸನ್ನು ತೆಗೆದುಕೊಂಡು ಅದರ ಬಗ್ಗೆ ಚರ್ಚೆ ಮಾಡಿಕೊಂಡರೆ ಸುಲಭವಾದೀತು. ಉದಾಹರಣೆಗೆ ಯಾವುದೋ ಒಂದು ಕಾಲೇಜಿನ ಅಡ್ಮಿಷನ್ನ್‌ ಗೆ ಈಗಾಗಲೇ ಕೊನೇ ದಿನವಾಗಿ ಹೋಗಿದೆ ಎಂದುಕೊಳ್ಳೋಣ. ನೀವು ನಿಮ್ಮ ವಿದ್ಯಾರ್ಥಿಯನ್ನು ಆ ಕಾಲೇಜಿಗೆ ಸೇರಿಸಲು ಹೋಗುತ್ತೀರಿ. ಅಲ್ಲಿನ ಗುಮಾಸ್ತರು ’ಕ್ಷಮಿಸಿ, ಈಗಾಗಲೇ ಡೆಡ್‌ಲೈನ್ ಮುಗಿದಿದೆ’ ಎನ್ನುತಾರೆ. ಆಗ ನೀವೇನು ಮಾಡುತ್ತೀರಿ? ಆ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಮ್ಮನೇ ಹಿಂತಿರುಗುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ಬೇರೆ ಯಾವುದಾದರೂ ನ್ಯಾಯವಾದ ದಾರಿಗಳಿವೆಯೇ (alternatives) ಎಂದು ಹುಡುಕುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ನಿಮ್ಮ ಶಿಫಾರಸ್ಸಿನಿಂದ ಅಥವಾ ಲಂಚಕೊಡುವ ಮೂಲಕ ಅಥವಾ ಮತ್ತ್ಯಾವುದೋ ’ನ್ಯಾಯವಲ್ಲದ’ ದಾರಿಗಳಿವೆಯೇ ಎಂದು ಹುಡುಕುತ್ತೀರೋ?

ಹೀಗೇ, ನಮ್ಮಲ್ಲಿ ನಾವು ಅನುಭವಿಸುವ ಪ್ರತಿಯೊಂದು ಸಂಕಷ್ಟ, ನೋವು, ನಲಿವು, ಅವಕಾಶ (opportunity) ಹಾಗೂ ಸವಾಲುಗಳಿಗೆ ಹಲವಾರು ಉತ್ತರಗಳಿವೆ - there are multiple right answers ಅಂತಾರಲ್ಲ ಹಾಗೆ. ಆದರೆ ಅವುಗಳನ್ನು ನಾವು ನೋಡೋ ದೃಷ್ಟಿಕೋನ ಬದಲಾಗಬೇಕು ಅಷ್ಟೇ.

***

ನಮ್ಮ ರಾಜಕಾರಣಿಗಳು ಅಂದರೆ ಬುದ್ಧಿವಂತ ಜನ ಮೂಗು ಮುರಿಯಬೇಕೇಕೆ? ಅವರು ಹೇಗಿದ್ದರೂ ಹೇಗಾದರೂ ನಮ್ಮ ಪ್ರತಿನಿಧಿಗಳೇ ಅಲ್ಲವೇ? ನಾವು ಎಲ್ಲ ರೀತಿಯಿಂದ ಚೆನ್ನಾಗಿದ್ದು ನಮ್ಮ ಪ್ರತಿನಿಧಿಗಳು ಸರಿಯಾಗಿಲ್ಲವೆಂದರೆ ಅದಾದರೂ ಒಂದು ವಾದವಾದೀತು. ನಮ್ಮ ಸಮಾಜದಲ್ಲಿ ಹಲವು ರೀತಿಯ ಜನರು ಇರೋದು ಸಹಜವಾದಲ್ಲಿ, ಅಂತಹವರನ್ನು ರೆಪ್ರೆಸೆಂಟ್ ಮಾಡುವವರು ಎಲ್ಲರಿಗೂ ಸ್ಪಂದಿಸಬೇಕಾದಲ್ಲಿ ನಮ್ಮ ನಾಯಕರು ಈಗಿರುವುದಕ್ಕಿಂತ ಭಿನ್ನರಾಗಲು ಸಾಧ್ಯವೇ ಇಲ್ಲ. ಯಾರೇ ವಿಧಾನಸೌಧಕ್ಕೋ ಅಥವಾ ಪಾರ್ಲಿಮೆಂಟಿನ ಒಳಗೆ ನುಗ್ಗಿ ಅಲ್ಲಿನ ಈಗಿನ ರಾಜಕಾರಣಿಗಳನ್ನೆಲ್ಲ ನಾಶ ಮಾಡಿದರೂ ಎಂದೇ ಇಟ್ಟುಕೊಳ್ಳಿ, ಆ ಪಾಯಿಂಟಿನಿಂದ ಮುಂದೆ ಬರುವ ಹೊಸ ರಾಜಕಾರಣಿಗಳು ಈಗಿನವರಿಗಿಂತ ಅದೆಷ್ಟು ಭಿನ್ನರಾಗಿರಬಲ್ಲರು ಎನ್ನುವುದು ಪ್ರಶ್ನಾರ್ಥಕ ವಿಚಾರ. ನನ್ನ ಪ್ರಕಾರ ಒಬ್ಬ ಸಾದು-ಸಂತನನ್ನು ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ಕೂರಿಸಿದರೂ ಅವನಿಗೆ ಜನರು ಲಂಚದ ಆಮಿಷ ಒಡ್ಡೇ ಒಡ್ಡುತ್ತಾರೆ. ಜೊತೆಗೆ ತಾಲ್ಲೂಕು ಆಫೀಸು, ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲಸ ಮಾಡುವವರೂ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗದ ಸದಸ್ಯರು ಎನ್ನುವುದನ್ನು ನಾವು ಹೇಗೆ ತಾನೇ ಮರೆಯಲಾದೀತು?

ನಮ್ಮ ಕಾನೂನು-ಕಟ್ಟಳೆಗಳು ಹಳೆಯದಾಗಿರಬಹುದು, ಇವತ್ತಿಗೂ ನಮ್ಮೂರಿನ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳು ಓಬೀರಾಯನ ಕಾಲದ ಮೌಲ್ಯವನ್ನು ತಾಲೂಕು ಆಫೀಸಿನ, ಗ್ರಾಮ ಪಂಚಾಯತಿಯ ರೆಕಾರ್ಡುಗಳಲ್ಲಿ ಬಿಂಬಿಸುತ್ತಿರಬಹುದು. ಇಂದು ನೀವು ಕೊಡುತ್ತಿರುವ ಕಂದಾಯ ಆಯಾ ಪಟ್ಟಣದ ಅಭಿವೃದ್ಧಿಗೆ ಮೀಸಲಾದ ಬಜೆಟ್ಟಿನಲ್ಲಿ ಯಾವುದೇ ಮಹತ್ವದ ಪಾತ್ರವನ್ನು ವಹಿಸುವಲ್ಲಿ ಬಹಳ ಚಿಕ್ಕದಾಗಿ ತೋರಬಹುದು. ನಾವು ಕೊಡುತ್ತಿರುವ ಕಂದಾಯ ಅಷ್ಟೇ ಇರಲಿ, ಆದರೆ ನಮ್ಮೂರಿನ ಅಭಿವೃದ್ಧಿ ಆಗಲಿ ಎಂದರೆ ಹೇಗೆ ಸಾಧ್ಯ? ಸರ್ಕಾರ ಎಲ್ಲದಕ್ಕೂ ದುಡ್ಡು ಕೊಡಲಿ ಅಂದರೆ ಅದು ಯಾರ ಹಣ, ಅದಕ್ಕೆ ಮೂಲ ಆದಾಯ ಎಲ್ಲಿಂದ ಬರಬೇಕು? ಸರಿಯಾಗಿ ತೆರಿಗೆ ಕಟ್ಟುವವರಿಂದ ಹಣ ವಸೂಲಿ ಮಾಡುವ ವ್ಯವಸ್ಥೆ ತೆರಿಗೆ ಕಟ್ಟದೇ ಬದುಕುವ ಅದೆಷ್ಟೋ ಕೋಟಿ ಜನರನ್ನು ಹೇಗೆ ಸಂತೈಸಲು ಸಾಧ್ಯ? ಪ್ರತಿ ಊರಿನ, ಗ್ರಾಮದ, ಪಟ್ಟಣದ, ನಗರದ ಬೆಳವಣಿಗೆಗೆ ತಕ್ಕಂತೆ ಅಲ್ಲಿನ ಬಜೆಟ್ ಬೆಳೆಯುತ್ತಿದೆಯೇ? ಒಂದು ಐಸ್ ಕ್ಯೂಬ್‌ನಂತೆ ಇದ್ದಲ್ಲೇ ಕರಗುವ ಹಣದ ಗಂಟು ಈ ಬೆಳವಣಿಗೆಗಳು ಒಡ್ಡುವ ಸವಾಲುಗಳನ್ನು ಅದೆಷ್ಟರ ಮಟ್ಟಿಗೆ ಎದುರಿಸ ಬಲ್ಲದು?

***

ನಾವು ಅಮೇರಿಕಕ್ಕೆ ಬಂದೆವು, ಬಂದ ದಿನದಿಂದ ಇಲ್ಲಿಯವರೆಗೆ ಕಾನೂನನ್ನು ಪಾಲಿಸಿಕೊಂಡು, ಇದ್ದ ಕಾನೂನು-ಕಟ್ಟಳೆಗಳಿಗೆಲ್ಲ ಸರಿಯಾಗಿ ಹೊಂದಿಕೊಂಡು ಬದುಕುತ್ತಿದ್ದೇವೆ. ಈಗ ನಾವಿರುವ ಟೌನ್‌ಶಿಪ್‌ನವರು ಮೊನ್ನೆ ನಮ್ಮ ಮನೆ ಕಂದಾಯವನ್ನು ಹೆಚ್ಚು ಮಾಡಿದರು, ಅದಕ್ಕೆ ನಾನು ಅಪೀಲು ಮಾಡಿದೆ. ಅದಕ್ಕೆ ತಕ್ಕ ಉತ್ತರದ ಜೊತೆಗೆ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟರು ನಾನು ಬಾಯಿ ಮುಚ್ಚಿಕೊಂಡು ಹಿಂದೆ ಬರದೆ ಬೇರೆ ದಾರಿ ಇರಲಿಲ್ಲ. ಇಲ್ಲಿನ ಸ್ಕೂಲ್ ಬಜೆಟ್‌ನ ಪ್ರಾಸೆಸ್ಸಿನಲ್ಲಾಗಲಿ, ಇಲ್ಲಿ ಆಗಾಗ್ಗೆ ಟೌನ್‌ಶಿಪ್‌ನವರು ತೆರಿಗೆಯನ್ನು ವಿಶ್ಲೇಶಿಸುವ ಬಗೆಯಲ್ಲಾಗಲೀ, ಇಲ್ಲಿನ ಸ್ಥಳೀಯ ಅಭ್ಯರ್ಥಿಗಳ ಚುನಾವಣೆಯಲ್ಲಾಗಲೀ ನಾನು ಯಾವುದೇ ರೀತಿಯ ಕ್ರಿಯಾತ್ಮಕ ಸ್ಪಂದನವನ್ನು ತೋರದವನು ಅದೇಕೋ ನಮ್ಮ ಮನೆಯ ಟ್ಯಾಕ್ಸ್ ಹೆಚ್ಚಳವನ್ನು ಅವರು ಹೆಚ್ಚಿಸಿದ ಮೇಲೆ ನೋಡಿ ನೊಂದಿದ್ದೇ ಬಂತು. ನಾನು ಈ ಸ್ಥಳೀಯ ಪ್ರಾಸೆಸ್ಸುಗಳಲ್ಲಿ ಇನ್‌ವಾಲ್ವ್ ಆಗಲೀ ಬಿಡಲೀ ಅದಕ್ಕೂ ಟ್ಯಾಕ್ಸ್ ಹೆಚ್ಚಳಕ್ಕೂ ನೇರ ಸಂಬಂಧವಿಲ್ಲದಿರಬಹುದು, ಕೊನೇಪಕ್ಷದ ಇಲ್ಲಿನ ನಿರ್ಧಾರಗಳಲ್ಲಿ ನಾನೂ ಭಾಗಿಯಾಗಬಹುದಿತ್ತೇನೋ.

ಇಲ್ಲಿಗೆ ಬಂದಂದಿನಿಂದ ಕೇವಲ ಪ್ರೊಪೆಷನಲ್ ಅಸ್ಥೆಯಿಂದಷ್ಟೇ ಅಮೇರಿಕವನ್ನು ನೋಡಿ ಅದರಲ್ಲಿ ಒಂದಾಗಿರುವ ನಾವು ಉಳಿದ - ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದರೆ, ತೊಡಗಿಸಿಕೊಂಡರೆ...ಎನ್ನುವುದು ಈ ಲೇಖನದ ಆಶಯವಷ್ಟೆ. ’ಅದು ನಮ್ಮದಲ್ಲದ ಸಮಸ್ಯೆ’ ಎಂದು ದೂರ ನಿಂತುಕೊಂಡರೆ ಸಮಸ್ಯೆಗಳೇನೂ ದೂರ ಹೋಗೋದಿಲ್ಲ. ಹುಟ್ಟಿನಿಂದ ಸಾಯುವವರೆಗೆ ಒಂದಲ್ಲ ಒಂದು ದಿನ ಅದೇ ಸಮಸ್ಯೆಯ ಸುಳಿಯಲ್ಲಿ ನೀವೂ ಸಿಕ್ಕಿ ಹಾಕಿಕೊಳ್ಳಬಹುದು, ಒಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ಅದಕ್ಕೆ ಪರಿಹಾರ ಕಂಡು ಹಿಡಿಯುವ ನಮ್ಮ ನಿಲುವು ಆ ಸಮಯಕ್ಕೆ ತಕ್ಕಂತೆ ಭಿನ್ನವಾಗಿರಬಹುದು ಅಥವಾ ನಮಗೆ ಏನು ಅನುಕೂಲವೋ ಅದನ್ನು ನಾವು ಸಮರ್ಥಿಸಿಕೊಳ್ಳಬಹುದು. ನಮ್ಮನ್ನು ಅಡರಿಕೊಳ್ಳುವ ಸಮಸ್ಯೆಗಳು ಒಂದೊಂದು ಅವಕಾಶಗಳು ಎಂದುಕೊಂಡು ಆ ಮಟ್ಟಿಗೆ ನಾವು ಏನು ಮಾಡಬಲ್ಲೆವು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಮನೆಯ ಮುಂದಿನ ಬೀದಿಯಲ್ಲಿ ನಾಯಿಯೊಂದು ಸತ್ತಿದೆ ಎಂದುಕೊಳ್ಳಿ - ಒಂದೆರಡು ದಿನಗಳಲ್ಲಿ ಅದು ಗಬ್ಬು ನಾತ ಹರಡಬಲ್ಲದು, ಅದರಿಂದ ಹರಡುವ ಕ್ರಿಮಿ ಕೀಟಗಳು ರೋಗ ರುಜಿನಗಳನ್ನು ತಂದೊಡ್ಡಬಹುದು. ಇಂತಹ ಒಂದು ಸರಳ ಸಮಸ್ಯೆಯನ್ನು ನಾವು ಹೇಗೆ ನೋಡುತ್ತೇವೆ, ಅದಕ್ಕೇನು ಉತ್ತರ ಕಂಡುಕೊಳ್ಳುತ್ತೇವೆ, ಅದಕ್ಕೆ ಒಬ್ಬೊಬ್ಬರ ಟಾಲರೆನ್ಸ್ ಒಂದೊಂದು ರೀತಿ ಇದ್ದು ಕೊನೆಗೆ ಅದು ಪರಿಹಾರಗೊಳ್ಳುವುದೋ ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿಕೊಳ್ಳಿ - ಅದೇ ರೀತಿ ನಮಗೆದುರಾಗುವ ಸಮಸ್ಯೆ-ಅವಕಾಶಗಳು ಹಾಗೇ - ಅವುಗಳಿಗೆಲ್ಲ multiple right answers ಇವೆ!

Saturday, May 31, 2008

ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ

’ಅದೆಲ್ಲಾ ಏನೂ ಬೇಡಾ ಸಾರ್, ನಾನು ಅಲ್ಲಿಂದಿಲ್ಲಿಗೆ ಓಡಾಡ್ತಾ ಇರೋವಾಗ ಉಪಯೋಗಿಸೋದಕ್ಕೆ ಒಂದು ಫೋನ್ ಇದ್ರೆ ಸಾಕು’ ಅಂತ ನಮ್ಮ ಮೊಬೈಲ್ ಫೋನ್ ಕಂಪನಿಯವರ ಹತ್ರ ಹೇಳಿ ಒಂದು ಸಾಧಾರಣ ಮೊಬೈಲ್ ಫೋನ್ ಇಟ್ಕೊಂಡೇ ಇರೋದನ್ನ ನೋಡಿದ ವೈರ್‌ಲೆಸ್ ಕಂಪನಿ ಸೇಲ್ಸ್‌ಮ್ಯಾನ್ ನನ್ನನ್ನ ಯಾವ್ದೋ ಶಿಲಾಯುಗದ ಪಳಯುಳಕೆಯನ್ನು ನೋಡಿದ ಹಾಗೆ ನೋಡಿ ಒಂದು ಲುಕ್ ಕೊಟ್ಟ.

ಹತ್ತೊಂಬತ್‌ ನೂರಾ ತೊಂಭತ್ತೆಂಟರಲ್ಲಿ ನಾನು ನನ್ನ ಮೊಬೈಲ್ ಫೋನ್ ಸಮೇತನಾಗಿ ಇಂಡಿಯಾಕ್ಕೆ ಹೋಗಿದ್ದಾಗ ಅಲ್ಲಿ ಇನ್ನೂ ಅದೇ ತಾನೇ ಫೋನ್ ರೆವಲ್ಯೂಷನ್ ಆಗ್ತಾ ಇದ್ರೂ ಸಹ ನನ್ನಣ್ಣ ನನ್ನ ಫೋನ್ ನೋಡಿ ’ಇದೇನು ಕಾರ್ಡ್‌ಲೆಸ್ ಫೋನ್ ಥರಾ ಇದೆ!’ ಅಂತ ತಮಾಷೆ ಮಾಡಿದ್ದು ನನಗಿನ್ನೂ ನೆನಪಿನಿಂದ ಮಾಸಿ ಹೋಗಿಲ್ಲ. ಅಲ್ಲೇನು? ಸಿಂಗಪುರ, ಹಾಂಗ್‌ಕಾಂಗ್, ತೈವಾನ್‌ನಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ಆಕರ್ಷಕವಾಗಿ ಸಿಗುತ್ವೆ, ದಿನಕ್ಕೊಂದು ಮಾಡೆಲ್ ಸಸ್ತಾದಲ್ಲೂ ಸಿಗುತ್ತೆ, ನೋಡೋಕೂ ಚೆನ್ನಾಗಿರುತ್ತೆ. ಈ ಅಮೇರಿಕದವರು ಟೆಕ್ನಾಲಜಿಯಲ್ಲಾಗಲೀ, ಇಂಟರ್ನೆಟ್ ಬಳಕೆಯಲ್ಲಾಗಲೀ ಏಷಿಯಾ ದೇಶಗಳಿಗಿಂತ ಹಿಂದಿದ್ರೆ ಅದು ನನ್ನ ತಪ್ಪೇ?

ಇತ್ತೀಚೆಗೇನಪ್ಪ ಎಲ್ಲರೂ ಬ್ಲ್ಯಾಕ್‌ಬೆರಿ ಹಿಡಕೊಂಡು ಓಡಾಡೋ ಕಾಲ, ಅದಿಲ್ಲದೇ ಹೋದ್ರೆ ಐ-ಫೋನ್ ಆದ್ರೂ ಜನ ಇಟ್ಕೊಂಡಿರೋದು ನಾರ್ಮು. ನಮ್ಮಂಥೋರು ಅದೇ ಹಳೇ ಫೋನುಗಳಿಗೆ ಗಂಟು ಬಿದ್ದುಕೊಂಡಿರೋದಂತೂ ನೋಡೋಕೂ ಸಿಗೋಲ್ಲ ಅನ್ನೋ ಕಾಲ. ಇರೋ ಡಿವೈಸ್‌ನಲ್ಲೇ ನನಗೆ ಬೇಕಾದ ಕೆಲಸಗಳನ್ನೆಲ್ಲ ಮಾಡಿಕೊಂಡಿದ್ರೆ ಸಾಲ್ದೇ ಅನ್ನೋದು ನಾನು ಅವಾಗಾವಾಗ ನನಗೇ ಹೇಳಿಕೊಂಡಿರೋ ಕಾರಣ ಅಷ್ಟೇ.

***

ಇವೆಲ್ಲ ಯಾಕೆ ಹೇಳಬೇಕಾಗಿ ಬಂತೂ ಅಂತಂದ್ರೆ - ಇತ್ತೀಚೆಗೆ ಹೊಸದೊಂದು ಕಾನ್ಸೆಪ್ಟ್ ಶುರು ಮಾಡಿದೀನಿ, ಅದೇ ಬ್ಲ್ಯಾಕ್‌ಬೆರಿ ರೆಸಿಸ್ಟೆನ್ಸ್ ಅಂತ. ಅದೇನಪ್ಪ ಅಂದ್ರೆ ಸರಳವಾಗಿ - ನಾನು ಬ್ಲ್ಯಾಕ್‌ಬೆರಿ ಉಪಯೋಗಿಸೋಲ್ಲ ಅನ್ನೋ ವಾದ, ಇನ್ನೂ ಕ್ಲಿಯರ್ ಆಗಿ ಹೇಳಬೇಕು ಅಂತಂದ್ರೆ ನನಗೀಗ ಅದರ ಅಗತ್ಯ ಇಲ್ಲಾ ಅನ್ನೋ ನೆಪ.

ದಿನದ ಹತ್ತು ಘಂಟೆ ಆಫೀಸ್ ಸಮಯದಲ್ಲಿ ಕೊನೇಪಕ್ಷ ಐದು ಘಂಟೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋ ಕೆಲಸದವರಿದ್ದರೂ ಅಂತಹವರು ತಮ್ಮ ಇ-ಮೇಲ್‌ಗಳನ್ನೋ, ಇನ್ಸ್ಟಂಟ್ ಮೆಸ್ಸೇಜುಗಳನ್ನೋ ತಮ್ಮ ಮೊಬೈಲ್ ಡಿವೈಸ್‌ನಲ್ಲಿ ನೋಡ್ತಾ ಕೂರೋದನ್ನ ನೋಡಿದ್ರೆ ಒಮ್ಮೊಮ್ಮೆ ಅಂಥಾ ಘನಂದಾರಿ ಕೆಲ್ಸ ಏನಿರಬಹುದು ಅಂತ ಸೋಜಿಗವಾಗುತ್ತೆ. ಇರೋ ಇ-ಮೇಲ್‌ಗಳನ್ನ ಕಂಪ್ಯೂಟರಿನಲ್ಲಿ ನೋಡಿ ಮ್ಯಾನೇಜ್ ಮಾಡೋದಕ್ಕೆ ಕಷ್ಟಾ ಪಡ್ತಾ ಇರೋ ನಾನು, ಇನ್ನು ಅದನ್ನ ಬ್ಲ್ಯಾಕ್‌ಬೆರಿನಲ್ಲೂ ನೋಡ್ತಾ ಕೂರೋದು, ಯಾವ್ ಯಾವ್ದನ್ನ ಎಲ್ಲೆಲ್ಲಿ ಓದಿ ಎಲ್ಲೆಲ್ಲಿ ಉತ್ರ ಕೊಡೋದು, ಸ್ಕೆಡ್ಯೂಲ್ ಕ್ಯಾಲೆಂಡರು ಕಾಂಟ್ಯಾಕ್ಟ್‌ಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡೋದು? ಎಲ್ಲೋ ಸುಖವಾಗಿ ಕುಳಿತು ಇನ್ನೇನನ್ನೋ ಮಾಡ್ತಾ ಇರೋವಾಗ ಈ ಮೊಬೈಲ್ ಡಿವೈಸ್‌ಗಳನ್ನ ನೋಡದಿರುವ ಶಿಸ್ತನ್ನ ಹೇಗೆ ಬೆಳೆಸಿಕೊಳ್ಳೋದು? ಮುಂತಾದ ಪ್ರಶ್ನೆಗಳಿಗೆ ಉತ್ರ ಕಂಡ್ ಹಿಡಿದುಕೊಳ್ಳದ ಹೊರತು ಬ್ಲ್ಯಾಕ್‌ಬೆರಿ ಮುಟ್ಟದೇ ಇದ್ರೆ ಒಳ್ಳೇದು, ಅಲ್ವೇ?

ಹಂಗ್ ನೋಡಿದ್ರೆ, ನಮ್ ಹತ್ರ ಇರೋ ಉಪಕರಣ (ಟೂಲ್ಸ್) ಗಳಲ್ಲಿ ನಾವು ಎಲ್ಲ ಫಂಕ್ಷನ್ಸ್ ಅನ್ನೂ ಬಳಸೋದಿಲ್ಲ. ಉದಾಹರಣೆಗೆ ನನ್ನ ಮೊಬೈಲ್ ಫೋನ್ ಅನ್ನು ಹೆಚ್ಚಾಗಿ ಫೋನ್ ಆಗೇ ಬಳಸ್ತಾ ಇರೋ ನಾನು ಮುಂದೆ ಬ್ಲ್ಯಾಕ್‌ಬೆರಿಯಲ್ಲಿನ ಎಲ್ಲಾ (ಹೆಚ್ಚಿನ) ಫಂಕ್ಷನ್ನುಗಳನ್ನು ಯಶಸ್ವಿಯಾಗಿ ಬಳಸಿ ಎಫಿಷಿಯಂಟ್ ಆಗ್ತೀನಿ ಅನ್ನೋದಕ್ಕೇನು ಗ್ಯಾರಂಟಿ? Use your current device to the best extent - ಅನ್ನೋದು ನನ್ನ ಇತ್ತೀಚಿನ ಸ್ಲೋಗನ್ನು. ಮುಂದೆ ನನ್ನ ಫೋನ್ ಅಪ್‌ಗ್ರೇಡ್ ಮಾಡುವ ಸಮಯ ಬಂದಾಗ್ಲೂ ನಾನಂತೂ ಶಿಪ್ಪಿಂಗೂ ಸೇರಿ ಫ್ರೀ ಆಗಿ ಸಿಗುವ ನನ್ನ ಅನುಕೂಲಕ್ಕೆ ತಕ್ಕನಾದ ಫೋನನ್ನೇ ಆರಿಸಿಕೊಳ್ಳೋದು. ಬ್ಲ್ಯಾಕ್‌ಬೆರಿನೋ ಮತ್ತೊಂದನ್ನೋ ಕೊಳ್ಳೋದಕ್ಕೆ ನೂರ್ ನೂರೈವತ್ತು ಡಾಲರ್ರನ್ನ ಯಾರ್ ಕೊಡ್ತಾರೆ ಹೇಳಿ?

ಈ ದಿನಕ್ಕೊಂದು ವಾರಕ್ಕೊಂದು, ವರ್ಷಕ್ಕೊಂದು ಅಂತ ಅನೇಕಾನೇಕ ಇಂಪ್ರೂವ್‌ಮೆಂಟ್ಸ್ ಮಾಡ್ತಾರಲ್ಲ ಅದೆಲ್ಲ ದೊಡ್ಡ ಕಾನ್ಸ್‌ಪಿರಸಿ ಸಾರ್. ನೀವು ಬೇಕಾದ್ರೆ ಇವತ್ತೇ ಹೋಗಿ ಇವತ್ತಿನ ಲೇಟೆಸ್ಟ್ ಅಂಡ್ ಗ್ರೇಟೆಸ್ಟ್ ಮಾಡೆಲ್ ಅಂತ ಯಾವ್ದೋ ಒಂದನ್ನ ತೆಗೊಳ್ಳಿ. ನಾಳೇನೇ ಅದಕ್ಕಿನ್ನೊಂದೋ, ಮತ್ತೊಂದನ್ನೋ ಸೇರಿಸಿ ಮಾರ್ತಾರೆ. ಹೀಗೆ ಜನರಿಗೆ ಘಳಿಗೆಗೊಂದು ಘಂಟೆಗೊಂದು ಹೊಸಹೊಸದನ್ನೆಲ್ಲ ಕೊಟ್ಟೂ ಕೊಟ್ಟೂ ಅಮೇರಿಕದ ಜನರಿಗೆ ಕೊನೆಗೆ ತಮ್ಮ ತಮ್ಮ ಹೆಂಡ್ತಿ-ಮಕ್ಳು ಹೀಗೇ ಹೊಸದಾಗಿ ಸಿಗ್ತಾ ಇದ್ರೆ ಅನ್ಸಿರೋದೋ ಏನೋ. ಒಂದ್ ಕಡೆ ತಮಗೆ ಅನ್ನಿಸಿದಂತೆ ನಡೆದುಕೊಳ್ಳೋ ಕನ್ಸ್ಯೂಮರ್ ಮೈಂಡ್‌ಸೆಟ್‌ಗೆ ಧೀರ್ಘಕಾಲದ ಬದುಕಿನ ವಂಡರ್ಸ್‌ಗಳನ್ನು ಹೇಗೆ ಅರ್ಥ ಮಾಡಿಸೋದು?

ಸದ್ಯ, ಈ ಅಮೇರಿಕದಲ್ಲಿ ಭಾರತದಲ್ಲಿದ್ದ ಹಾಗೆ ನೂರು ಕೋಟಿ ಜನರಿಲ್ಲಪ್ಪ ಅಂತ ನಿಮಗೂ ಅನ್ಸುತ್ತಾ? ಇಲ್ಲಿನ ಎಲ್ಲಾ ಕಾರ್ಪೋರೇಷನ್ನಿನವರೂ ತಮ್ಮ ತಮ್ಮ ಪದಾರ್ಥಗಳು ಹೆಚ್ಚು ಹೆಚ್ಚು ಜನ್ರಿಗೆ ತಲುಪ್ಲಿ ಅಂತ ಪ್ಲಾನು ಮಾಡೋದೇ ಮಾಡೋದು. ಒಂದು ಮಿಲಿಯನ್ ಕಷ್ಟಮರ್ಸ್ ಇದ್ದೋರು ಹತ್ತು ಮಿಲಿಯನ್ನ್ ಮಾಡೋ ಗುರಿ ಇಟ್ಕೋತಾರೆ, ಹತ್ತು ಮಿಲಿಯನ್ ಇದ್ದೋರು ನೂರು ಮಿಲಿಯನ್ನ್ ಅಂತಾರೆ. ಒಟ್ನಲ್ಲಿ ನೀವು ಇಲ್ಲಿನ ಕಂಪನಿಗಳಿಂದ ಹೆಚ್ಚು ಹೆಚ್ಚು ಕೊಳ್ತಾನೇ ಇರಬೇಕು ಅನ್ನೋದು ಅದರ ಮರ್ಮ ಅಷ್ಟೇ.

***

ನೀವು ಯಾವಾಗ್ಲೂ ಅಲ್ಲಿ-ಇಲ್ಲಿ ಓಡಾಡ್ಕೊಂಡೇ ಇರೋರಾದ್ರೆ ನಿಮಗೆ ನಿಜವಾಗ್ಲೂ ಒಂದು ಪವರ್‌ಫುಲ್ ಮೊಬೈಲ್ ಡಿವೈಸಿನ ಅಗತ್ಯವಿದೆ, ಅದು ನನಗೂ ಅರ್ಥವಾಗುತ್ತೆ. ಆದ್ರೆ ಬೆಳಗ್ಗಿಂದ ಸಂಜೇವರೆಗೂ ಖುರ್ಚೀ ಸ್ನೇಹಾ ಬೆಳಸ್ಕೊಂಡು ಕುಳಿತುಕೊಳ್ಳೋ ನನಗೆ ಅದ್ಯಾವ್ ಮೊಬೈಲೂ ಬೇಡಾ ಸಾರ್. ಎಲ್ಲಾದ್ರೂ ಅರ್ಜೆಂಟಿಗೆ ಅಂತ ಒಂದು ಫೋನ್ ಇದ್ರೆ ಸಾಕು. ಅದ್ಕೇನೇ, ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ ಅಂತ ಆದಷ್ಟು ದಿನ ಕಾಲಾ ತಳ್ತಾ ಇದ್ದೀನಿ ನೋಡೋಣ ಎಷ್ಟು ದಿನ ಬರುತ್ತೋ ಅಂತ.

Thursday, May 01, 2008

ಮೊದಲು ಅಪ್ಪ-ಅಮ್ಮನಿಗೆ ಬುದ್ಧಿ ಹೇಳಿ!

ಬ್ರೂ ಕಾಫಿ ಸ್ವಾದ-ತಾಜಾತನದ ಬಗ್ಗೆ ಒಂದು ಕಮರ್ಷಿಯಲ್ ಅಡ್ವರ್‌ಟೈಸ್‌ಮೆಂಟು ಉದಯ ಟಿವಿಯಲ್ಲಿ ಬರುತ್ತೆ, ಅದರಲ್ಲಿ ನವದಂಪತಿಗಳನ್ನು ಅವರ ಮನೆಯಲ್ಲಿ ಸಂದರ್ಶಿಸಲೆಂದು ಹತ್ತಿರದ ಸಂಬಂಧಿಕರು ಬಂದಿರುತ್ತಾರೆ, ಆಧುನಿಕ ಉಡುಪಿನಲ್ಲಿರುವ ಯುವತಿ ಮನೆಯನ್ನು ಕಿಟಕಿಯಿಂದಲೇ ಪ್ರವೇಶ ಮಾಡಿ ಮನೆಗೆ ಬಂದವರ ಸಮಾಧಾನಕ್ಕೆ ಹಾಗೂ ಅವರಿಗೆ ಆಶ್ಚರ್ಯವಾಗುವಂತೆ ಕೂಡಲೇ ಟ್ರೆಡಿಷನಲ್ ಡ್ರೆಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ತೋರಿಸುತ್ತಾರೆ. ಕೈ ಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಬರುವುದು ಅದರ ಜೊತೆಗೆ ಸೇರಿರುತ್ತೆ. ಆ ವಿಡಿಯೋ ತುಣುಕಿನ ಸಂದೇಶವೇನೇ ಇರಲಿ, ದೂರದ ನನಗೆ ನಮ್ಮ ದೇಶದಲ್ಲಿನ ಗೊಂದಲ ಒಡನೆಯೇ ನೆನೆಪಿಗೆ ಬಂತು. ಅದೇ ನಮ್ಮಲ್ಲಿನ ಜನರೇಶನ್ ಗ್ಯಾಪ್.

ಇಂದಿನ ಕಾಲದಲ್ಲಿ ಹೈ ಸ್ಕೂಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರವನ್ನು ಶಾಲೆಯ ಆವರಣದಲ್ಲಿ ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ ನೋಟ. ಶಾಲೆ-ಕಾಲೇಜಿನವರೆಗೆ ತಮ್ಮ ದಿನನಿತ್ಯದ ಡ್ರೆಸ್‌ಗಳಲ್ಲಿ ಬಂದು, ಶಾಲೆಯು ಹತ್ತಿರ ಬಂದಾಗ ಸಮವಸ್ತ್ರವನ್ನು ಧರಿಸಿಕೊಳ್ಳುವುದು ಬೆಳಗ್ಗಿನಿಂದ ಸಂಜೆವರೆಗೆ ಹೈ ಸ್ಕೂಲು ಸಮವಸ್ತ್ರವನ್ನೇ ಧರಿಸಿ ತಿರುಗಾಡುತ್ತಿದ್ದ ನಮಗೆ ವಿಶೇಷವಾಗಿ ಕಾಣಿಸುವುದರಲ್ಲಿ ತಪ್ಪೇನು ಇಲ್ಲ.

***

ಹಿಂದಿನ ಸಂಬಂಧ-ಸೂಕ್ಷ್ಮತೆ ಲೇಖನ ಬರೆದ ಮೇಲೆ ಆ ಕುರಿತು ಮತ್ತಿನ್ನಷ್ಟು ಆಲೋಚಿಸಲಾಗಿ ಈ ನಡುವೆ ಕುಟುಂಬಗಳಲ್ಲಿ ಅಸಮಧಾನ ಏಕೆ ಹೊಗೆ ಆಡುತ್ತದೆ ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಕ್ಕ ಹಾಗಿದೆ. ಅದರಲ್ಲಿ ಪ್ರತಿಯೊಬ್ಬರೂ ಅವರವರ ತಂದೆ-ತಾಯಿ ಬಂಧು ಬಳಗದವರನ್ನು ಅದೆಷ್ಟರ ಮಟ್ಟಿಗೆ ತಿಳುವಳಿಕೆ ಹೇಳಿಕೊಡುತ್ತಾರೆ ಅದರ ಮೇಲೂ ಬಹಳಷ್ಟು ನಿರ್ಧರಿತವಾಗುತ್ತದೆ. ಈ ಕೆಳಗಿನ ನಿದರ್ಶನಗಳನ್ನು ಪರಿಶೀಲಿಸಿ ನೋಡಿ:

೧) ಇತ್ತೀಚಿನ ಚಿಕ್ಕ (nuclear) ಕುಟುಂಬಗಳಲ್ಲಿ ಗಂಡ-ಹೆಂಡತಿಯರು ತಮ್ಮ ತಮ್ಮಲ್ಲಿ ಏಕವಚನದಲ್ಲೇ ಸಂಭಾಷಣೆ ನಡೆಸುತ್ತಾರೆ.
೨) ಡಬಲ್ ಇನ್‌ಕಮ್ ಇರುವ ಕುಟುಂಬಗಳಲ್ಲಿ ಗಂಡ-ಹೆಂಡತಿಯ ಸಂಬಳದಲ್ಲಿ ಹೆಚ್ಚು ವ್ಯತ್ಯಾಸವಿರಬೇಕಿಲ್ಲ, ಹೆಂಡತಿಗೆ ಗಂಡನಿಗಿಂತ ಹೆಚ್ಚು ಸಂಬಳಬರುವ ಸಾಧ್ಯತೆಗಳೂ ಇವೆ.
೩) ಗಂಡ-ಹೆಂಡತಿಯರ ವಯಸ್ಸಿನಲ್ಲಿ ಹೆಚ್ಚಿನ ಅಂತರವಿರಬೇಕೆಂದೇನಿಲ್ಲ ಜೊತೆಗೆ ಅವರ ವಿದ್ಯಾರ್ಹತೆಯೂ ಒಂದೇ ಮಟ್ಟದಲ್ಲಿರಬಹುದು.

ಪ್ರತಿಯೊಂದು ಕುಟುಂಬದಲ್ಲಿಯೂ ಈ ಹೌಸ್‌ಹೋಲ್ಡ್ ಕಾಯಕಗಳು ಸಹಜವಾದವುಗಳು: ಅವೇ - ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆದು-ಒಣಗಿಸಿ-ಮಡಚಿಡುವುದು, ಮಕ್ಕಳಿದ್ದರೆ ಅವರ ಹೋಮ್‌ವರ್ಕ್ ಊಟ-ಉಪಚಾರದಲ್ಲಿ ತೊಡಗುವುದು, ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮ್ಯಾನೇಜ್ ಮಾಡುವುದು, ದಿನಕ್ಕೆರಡು ಬಾರಿಯಾದರೂ ಅಡಿಗೆ ಮನೆಯಲ್ಲಿನ ಕೆಲಸಗಳಿಗೆ (ಕುಕು, ಕ್ಲೀನ್, ಆರ್ಗನೈಜ್, ಇತ್ಯಾದಿ) ಆದ್ಯತೆ ಕೊಡುವುದು ಇತ್ಯಾದಿ. ಈ ಕೆಲಸಗಳು ಒಂದು ದಿನಕ್ಕೆ ಮಾತ್ರ ಬಂದು ಹೋಗುವಂಥದ್ದಲ್ಲ, ಇವುಗಳನ್ನು ಪ್ರತಿದಿನ, ಪ್ರತಿರಾತ್ರಿ ನಿರ್ವಹಿಸುತ್ತಲೇ ಇರಬೇಕು ಎಂಥ ಕುಟುಂಬವಾದರೂ. ದುಡ್ಡಿದ್ದವರು ಕೆಲಸದವರನ್ನು ನೇಮಿಸಿಕೊಂಡಿರಬಹುದು, ಆದರೆ ಕೆಲಸ ಮಾಡುವವರನ್ನು ನಿಭಾಯಿಸುವುದು ತಪ್ಪುವುದಿಲ್ಲ. ಅಂದರೆ ಮನೆ ಎಂದರೆ ಇಂತಿಷ್ಟು ಕೆಲಸಗಳು ಇದ್ದೇ ಇರುತ್ತವಾದ್ದರಿಂದ ಈ ಆಧುನಿಕ ಕುಟುಂಬಗಳ ಹೆಚ್ಚಿನ ಸಮಸ್ಯೆಯೇ ಈ ಕೆಲಸಗಳ ಹೂಡಿಕೆ-ಹಂಚಿಕೆಗಳಿಂದ ಎಂದರೆ ತಪ್ಪಾಗಲಾರದು. ಇಂಥದರ ನಡುವೆ ಅಥವಾ ಇಷ್ಟೆಲ್ಲಾ ಇದ್ದೂ, ಅದರ ಮೇಲೆ ಬರುವುದೇ "in-law" factor, ಅಥವಾ ಸಂಬಂಧಿಕರ ಉಪದ್ರವ! ದೂರದ ಅಮೇರಿಕೆಯಲ್ಲಿರುವ ನಮಗೆ ಸಂಬಂಧಿಕರಿಲ್ಲ ಎಂದು ಕೊರಗುವವರು ಒಂದು ಕಡೆ, ದಿನಕ್ಕೊಮ್ಮೆ ಒಬ್ಬರಲ್ಲ ಒಬ್ಬರು ಬರುತ್ತಾರಲ್ಲ ಎಂದು ಹಲಬುವ ಬೆಂಗಳೂರಿನ ದಂಪತಿಗಳು ಮತ್ತೊಂದು ಕಡೆ.

ಅದೇ "in-law" factor ಎಂದರೆ ತಮ್ಮ ಸಣ್ಣ ಕುಟುಂಬಕ್ಕೆ ಅವರವರ ತಂದೆ-ತಾಯಿಯರಿಂದಲೇ ಕಷ್ಟಗಳು ಬರುತ್ತವೆ ಎನ್ನುವ ಮಾತು. ಉದಾಹರಣೆಗೆ, ಗಂಡ-ಹೆಂಡತಿ ಇಬ್ಬರೂ ಸಮವಯಸ್ಕ, ಸಮಾನ ಅಭಿರುಚಿ, ಸಮಾನ ವಿದ್ಯಾರ್ಹತೆ, ಸಮಾನ ಕೆಲಸದಲ್ಲಿದ್ದಾರೆಂದುಕೊಳ್ಳೋಣ. ಹುಡುಗನ ತಂದೆ ತಾಯಿಯರು ಈ ನವದಂಪತಿಗಳಿರುವ ಗೂಡಿಗೆ ದೂರದ ಊರಿನಿಂದ ಬಂದರೆಂದುಕೊಂಡರೆ ಅಲ್ಲಿ ತನ್ನ ಅತ್ತೆ-ಮಾವಂದಿರ ಉಪಚಾರವನ್ನು ಈ ಹುಡುಗಿಯೇ ಕೈಗೊಳ್ಳಬೇಕೆ, ಅದು ಎಷ್ಟರ ಮಟ್ಟಿನ ನಿರೀಕ್ಷೆಯಾಗಿರಬೇಕು ಎನ್ನುವುದು ಒಳ್ಳೆಯ ಪ್ರಶ್ನೆ. ಅದೇ ಮನೆಗೆ ಹುಡುಗಿಯ ತಂದೆ-ತಾಯಿಯರು ಬಂದರೆಂದುಕೊಂಡರೆ ಹುಡುಗನಿಂದ ಅವರು ಏನೇನನ್ನು ನಿರೀಕ್ಷಿಸಬಹುದು? ನಮ್ಮ ಸಮಾಜ ಇನ್ನೂ ಪುರುಷ-ಪ್ರಧಾನವಾದುದು ಎನ್ನುವ ಉತ್ತರ ನಾವಂದುಕೊಂಡಷ್ಟು ಪ್ರಬಲವಾಗಿ ಇಲ್ಲಿ ಸಹಾಯ ಮಾಡೋದಿಲ್ಲ. ಆ ಮನೆಯ ಹುಡುಗಿಗೂ ತಕ್ಕ ಕೆಲಸ, ಡೆಡ್‌ಲೈನುಗಳು, ಜವಾಬ್ದಾರಿ ಮುಂತಾದವುಗಳೆಲ್ಲ ಇದ್ದಾಗ ತನ್ನ ತಂದೆ-ತಾಯಿಯರಿಗೆ ತನ್ನ ಕೈಯಾರೇ ತಾನೇ ಮಗ ಒಂದು ಕಪ್ ಕಾಫಿ ಮಾಡಿಕೊಟ್ಟ ಎಂದೇ ಇಟ್ಟುಕೊಳ್ಳಿ ಆ ತಂದೆ-ತಾಯಿ ಅದನ್ನು ನೋಡುವ ರೀತಿಯೇ ಬೇರೆ. ಕೆಲಸಕ್ಕೆ-ಸಂಬಳಕ್ಕೆ-ಸ್ಟೇಟಸ್ಸಿಗೆ ಮಾತ್ರ ಹೆಂಡತಿ ಎಂದುಕೊಂಡರೆ ಆದೀತೆ? ಇಂತಹ ಸಮಯದಲ್ಲೇ ನಾನು ಆ ಹುಡುಗ ತನ್ನ ತಂದೆ-ತಾಯಿಯರ ನಿರೀಕ್ಷೆಗೆ ತಕ್ಕ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳಬೇಕು ಎನ್ನುವುದು. ಡಬಲ್ ಇನ್‌ಕಮ್ ಕುಟುಂಬಗಳಲ್ಲಿನ ಜವಾಬ್ದಾರಿಗಳು ತಕ್ಕಮಟ್ಟಿಗೆ ಡಿವೈಡ್ ಆಗಿ ಒಬ್ಬರಿಗೊಬ್ಬರು ಪೂರಕವಾಗಿ ನಡೆದುಕೊಳ್ಳುವುದೇ ಉತ್ತರ ಹೊರತು ಹೊರಗಿನ ಸಮಾಜಕ್ಕೆ (ತಮ್ಮ ತಂದೆ-ತಾಯಿ ಕುಟುಂಬದವರನ್ನೂ ಸೇರಿ) ತಕ್ಕಂತೆ ನಡೆಯುತ್ತೇವೆ ಎಂದುಕೊಳ್ಳುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನು?

ನಮ್ಮಲ್ಲಿ ಸಣ್ಣ-ಸಣ್ಣ ವಿಷಯಗಳೂ ದೊಡ್ಡದಾಗಿ ಬೆಳೆದುಕೊಳ್ಳಲು ಬೇಕಾದ ರೀತಿಯ ವಾತಾವರಣ ಇರುತ್ತೆ. ಈ ಉದಾಹರಣೆಯನ್ನು ನೋಡಿ: ನನಗೆ ಗೊತ್ತಿರುವ ಯುವ ದಂಪತಿಗಳು ತಮ್ಮ ತಮ್ಮನ್ನು ಏಕವಚನದಲ್ಲೇ ಸಂಬೋಧಿಸಿಕೊಳ್ಳೋದು - ಅಂದರೆ ಹೋಗೋ-ಬಾರೋ ಎಂಬ ರೀತಿಯಲ್ಲಿ. ಒಬ್ಬೊರಿಗೊಬ್ಬರು ಅನ್ಯೋನ್ಯವಾಗಿರುವ ಅವರು ತಮ್ಮನ್ನು ಪ್ರೀತಿಯಿಂದ ಈ ಸಂಬೋಧನೆಗೆ ಹೊಂದಿಸಿಕೊಂಡಿದ್ದಾರೆ ಅಷ್ಟೇ. ಅದೇ ದಂಪತಿಗಳು ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದಾಗಲೂ ತಮ್ಮ ಸಂಬಂಧಿಕರ ನಡುವೆಯೂ ತಮ್ಮನ್ನು ಹೀಗೇ ಕರೆದುಕೊಳ್ಳುತ್ತಾರಷ್ಟೇ. ಅಕಸ್ಮಾತ್ ಅವರು ತಮ್ಮತಮ್ಮ ತಂದೆತಾಯಿಯರ ನಡುವೆ "ಏನ್ರೀ-ಬನ್ರೀ" ಪ್ರಯೋಗಕ್ಕೆ ತೊಡಗಿಕೊಂಡರೆಂದರೆ ಹೇಗಿರಬಹುದು? ನೆರೆಹೊರೆಗೆ ಹೊಂದಿಕೊಂಡಿರುವುದೋ ಅಥವಾ ತಮಗೆ ಬೇಕಂತೆ ನಡೆದುಕೊಳ್ಳುವುದೋ ಎನ್ನುವ ಪ್ರಶ್ನೆ ಬರುತ್ತದೆ. ನನ್ನ ಅನಿಸಿಕೆ ಪ್ರಕಾರ, ಯುವ-ದಂಪತಿಗಳು ಈ ನಿಟ್ಟಿನಲ್ಲೂ ತಮ್ಮ ಹಿರಿಯರಿಗೆ ತಿಳಿಹೇಳುವ ಅಗತ್ಯವಿದೆ.

***

ಮೊನ್ನೆ ಯಾರೋ ಹೇಳೋದನ್ನು ಕೇಳಿದೆ - ’ನಮ್ಮ ಮಗ ಅಮೇರಿಕಕ್ಕೆ ಇದಷ್ಟೇ ಬಂದಿದ್ದಾನೆ, ಅವನಿಗೊಂದು ಭಾರತೀಯ ಮೂಲದ ಅಮೇರಿಕನ್ ಸಂಜಾತೆಯೊಡನೆ ಮದುವೆ ನಿಶ್ಚಯವಾಗಿದೆ, ಆದರೆ ನಮ್ಮದು ಒಂದೇ ಒಂದು ಕಂಡೀಷನ್ ಎಂದರೆ ಇನ್ನೈದು ವರ್ಷಗಳ ನಂತರ ಅವರಿಬ್ಬರೂ ಪರ್ಮನೆಂಟ್ ಆಗಿ ಭಾರತಕ್ಕೆ ಹಿಂದಿರುಗಿಬಿಡಬೇಕು!’. ನನ್ನ ಮನಸ್ಸಿನಲ್ಲಿ, ’ಏಕೆ?’ ಎನ್ನುವ ಪ್ರಶ್ನೆ ಬಂದು ಹಾಗೇ ಉಳಿದುಹೋಯಿತು.

ನಮಗೆಲ್ಲ ೨೪ ವರ್ಷವಾಗುವವರೆಗೆ ಫುಲ್‌ಟೈಮ್ ಓದಿಸುವವರೆಗೆ ನಮ್ಮ ನಮ್ಮ ಪೋಷಕರು ಸಹಾಯ ಮಾಡಿದ್ದಾರೆ ನಿಜ. ನಮಗೆಲ್ಲ ಜಾತಿ-ಜಾತಕಗಳ ಬಂಧನಕ್ಕೆಳೆದು ಅವರ ಮನಸ್ಸಿಗೆ ಸಮಾಧಾನವಾಗುವಂತೆ ವಿವಾಹ ಮಾಡಿದ್ದಾರೆ ನಿಜ. ಇದೇ ಪೋಷಣೆ ಸಾಯುವವರೆಗೂ ನಮ್ಮನ್ನು ಕಾಯಬೇಕೇಕೆ? ನಮ್ಮ ಪೋಷಕರು ನೋಡಿರದ ಅಮೇರಿಕಕ್ಕೆ ನಾವು ಬಂದಿರೋದು, ಇನೈದು ಹತ್ತು ಇಪ್ಪತ್ತು ವರ್ಷಗಳಲ್ಲಿ ಈ ಹುಡುಗ-ಹುಡುಗಿಯ ಪ್ರಬುದ್ಧತೆ ಬದಲಾಗುತ್ತೆ, ಅವರಿಗೂ ಒಂದು ಕುಟುಂಬವಿರುತ್ತೆ, ಮೇಲಾಗಿ ಜವಾಬ್ದಾರಿ ಇರುತ್ತೆ, ಅದರ ನಡುವೆ ಇನ್ನೈದು ವರ್ಷಗಳಲ್ಲಿ ’ಭಾರತಕ್ಕೆ ಹಿಂತಿರುಗಿ’ ಎಂದು ಆಜ್ಞೆ ಮಾಡಲು ಇವರ ಹಿನ್ನೆಲೆ ಏನಿರಬಹುದು? ಸರಿ, ಆ ಅಮೇರಿಕನ್ ಸಂಜಾತೆ ಹೆಣ್ಣಿಗೆ ಇವರ ಬಾಯಿ ನೀರೂರುವ ಇಡ್ಲಿ-ದೋಸೆಯನ್ನು ಮಾಡಲು ಬಾರದಿದ್ದರೆ ಅದು ಆಕೆಯ ತಪ್ಪೇ? ನಮ್ಮಲ್ಲಿ ಒಂದು ಗಾದೆ ಮಾತಿದೆ, ಅಕ್ಕನೂ ಉಳಿಯಲಿ ಅಕ್ಕಿಯೂ ಉಳಿಯಲಿ ಎಂದರಾಗದು. ಅತ್ತೆ-ಮಾವಂದಿರನ್ನು ಮೆಚ್ಚಿಸಿಕೊಂಡು ಗಂಡನ ಸಮಸಮಕ್ಕೆ ಕೆಲಸವನ್ನೂ ಮಾಡಿಕೊಂಡು ಮನೆಯಲ್ಲಿ ಮತ್ತೆ ಹೊರಗೆ "ತಗ್ಗಿ-ಬಗ್ಗಿ" ನಡೆಯುವ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಇಟ್ಟುಕೊಂಡರಾದರೆ ಅದು ಅನಿರೀಕ್ಷಿತ ಪ್ರತಿಫಲವನ್ನು ತಂದುಕೊಡಬಹುದು.

ಇಷ್ಟೇ ಅಲ್ಲದೆ, ಹಣ ಕಾಸಿನ ದೃಷ್ಟಿಯಿಂದಲೂ ಬೇಕಾದಷ್ಟು ಸಂಕಷ್ಟಗಳು ಬಂದೊದಗುವುದು ಸಹಜ. ತಮ್ಮ ಮಗ ತಮ್ಮನ್ನು ಇಳಿವಯಸ್ಸಿನಲ್ಲಿ ಸಲಹಲಿ ಎಂದು ಆಶಿಸುವ ಅಪ್ಪ-ಅಮ್ಮ ಅದೇ ರೀತಿ ತಮ್ಮ ಮನೆಯ ಸೊಸೆಗೂ ಹಾಗೇ ಜವಾಬ್ದಾರಿ ಇರಬಹುದು ಎನ್ನುವುದನ್ನು ನೋಡಲಾರರೇಕೆ? ತನ್ನ ತಂದೆಯ ಆಸ್ತಿಯಲ್ಲಿ ತನ್ನ ಸಹೋದರರ ಸಮಸಮಕ್ಕೆ ಪಾಲು ಕೇಳುವಂತೆ ಕಾನೂನೇ ಇದ್ದಾಗ ಗಂಡು ಮಕ್ಕಳ ಸಮಕ್ಕೆ ಹೆಣ್ಣು ಮಕ್ಕಳೂ ಅವರರವರ ಹೆತ್ತವರನ್ನು ನೋಡಿಕೊಂಡರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಎನ್ನುವ ಗಾದೆ ಮಾತಿನ ಮೊರೆ ಏಕೆ ಹೋಗಬೇಕು?

ಹೀಗೆ...ಈ ವಿಷಯವನ್ನು ಕುರಿತು ಬೇಕಾದಷ್ಟು ಬರೆಯಬಹುದು, ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ ಎಂದೆನಿಸಿದ್ದು ಈ ಹೊತ್ತಿನ ತತ್ವಗಳಲ್ಲೊಂದು!