Thursday, July 31, 2008

ನಾವು ಮತ್ತು ನಮ್ಮ ಕೆಲಸ (ಅದರ ಮೇಲಿನ ಪ್ರೀತಿ)

ಎಲ್ರೂ ಮಾಡೋದ್ ಹಾಗೇ, ಯಾವ್ದೋ ಒಂದ್ ಕಂಪ್ನಿಗೋ, ಗವರ್ನಮೆಂಟ್ ಕೆಲ್ಸಕ್ಕೋ ಜೀವಾ ತೇದೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆವಕ್ಕೆ... ಅಂತ ಅನ್ಸಿದ್ದು ಈ ವಾರದ ಕೊನೇಲಿ ನಿವೃತ್ತನಾಗ್ತಿರೋ ನನ್ನ ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ.

ಅವ್ನಿಗೆ ನಾನು ವಿಷ್ ಮಾಡ್ದೆ, ನನಗುತ್ತರವಾಗಿ ಅವನು ’Have fun at work!' ಎಂದು ನಕ್ಕ.

ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ.

ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದೀನಿ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವನ ಮುಖದ ಮೇಲೆ ಕಾಣ್ಲಿಲ್ಲ, ಜೊತೆಗೆ ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.

***

ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲ್ಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ನಾವೆಲ್ಲ ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳ ಸ್ಪಿರಿಟ್ಟು ಈಗಾಗಲೇ ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ, ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ಬೇಸ್ತು ಬಿದ್ದಿದ್ದೇನೆ. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಫೋನ್ ಹೆಡ್‌ಸೆಟ್ ಅನ್ನು ತಲೆಗೆ ಸಿಕ್ಕಿಸಿಕೊಂಡಿರುವುದನ್ನು ನೋಡೇ ಸುಸ್ತಾಗಿ ಹೋಗುವುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.

ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ರಿಟೈರ್‌ಮೆಂಟ್ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಫ್ಲೇವರ್‌ಗಳನ್ನು ನೀಡಿದರೆ ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನು ಮೊದಲಾದ ಬ್ಲಡ್ ಪ್ರಷರ್ ಏರಿಸಿ-ಇಳಿಸುವ ಹಂತ/ಮಟ್ಟ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job' ಅಥವಾ ’I love what I do for a living' ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.

***

Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ - ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, ಸ್ಕಿಲ್ಸ್‌ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?

ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ...’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಆದರೆ ಅವರವರು ನಿವೃತ್ತರಾಗುವುದಕ್ಕೆ ಮೊದಲು (ಸಾಧ್ಯವಾದರೆ) ಅವರ ಇಷ್ಟ ಪಡುವ ಕೆಲಸವನ್ನು ಸ್ವಲ್ಪ ದಿನ/ತಿಂಗಳುಗಳಾದರೂ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತೆ, ಅಲ್ವೇ?

Saturday, July 19, 2008

ಕಗ್ಗಂಟನ್ನು ಬಿಡಿಸುವ ಬಗೆ ಹೇಗೆ?

ಚಿತ್ರವನ್ನು ಸುಮ್ಮನೇ ಬ್ಲಾಗ್‌ನಲ್ಲಿ ಹಾಕಿದರೆ ಅದೇ ಒಂದು ಬರಹ - ಬೇರೆ ಏನೂ ಹೇಳೋದೇ ಬೇಡ!

(ಚಿತ್ರ ಕೃಪೆ: http://discussions.virtualdr.com)


ನಮ್ಮ ಕಂಪನಿಯಲ್ಲಿ ಈಗಾಗಲೇ ಕೆಲಸಗಾರರ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ನೆಗೋಷಿಯೇಷನ್ನಲ್ಲಿ ತೊಡಗಿರುವ ಮ್ಯಾನೇಜ್‌ಮೆಂಟಿನವರು ಮುಂದೆ ಒಂದುವೇಳೆ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ಸರಿಹೊಂದದಿದ್ದಲ್ಲಿ ಅವರೇನಾದರೂ ಮುಷ್ಕರ ಹೂಡಿದರೆಂದರೆ ಕೆಲಸ ಕಾರ್ಯಗಳು ನಿಲ್ಲದಿರಲಿ ಎಂದು ಮ್ಯಾನೇಜ್‌ಮೆಂಟಿನ ಎಲ್ಲರಿಗೂ ಯೂನಿಯನ್‌ನವರ ಕೆಲಸಗಳಲ್ಲಿ ತರಬೇತಿಯನ್ನು ಕೊಡುವುದು ಮಾಮೂಲಿ. ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರಿಪೀಟ್ ಆಗುವಂತಹ ವ್ಯವಸ್ಥೆ. ಅದರಂತೆ ಈ ವರ್ಷ ನನಗೆ ಟೆಲಿಫೋನ್ ಲೈನ್‌ಗಳನ್ನು ಇನ್ಸ್ಟಾಲ್ ಹಾಗೂ ದುರಸ್ತಿ ಮಾಡುವ ಟ್ರೈನಿಂಗ್ ಕೊಡುತ್ತಿದ್ದಾರೆ. ಹಾಗೆ ನಾನು ಆ ತರಬೇತಿಗೆ ಹೋದ ಮೊದಲನೇ ದಿನ ಅಲ್ಲಿನ ಬಿಳಿ ಬೋರ್ಡಿನಲ್ಲಿ ಈ ಚಿತ್ರದ ಕಪ್ಪು-ಬಿಳಿ ಆವೃತ್ತಿಯೊಂದನ್ನು ತೂಗು ಹಾಕಿದ್ದರು. ನಾನು ಇದು ಎಲ್ಲಿಯದು ಎಂದು ಹತ್ತಿರ ಹೋಗಿ ನೋಡಲಾಗಿ ಅದು ಭಾರತದ್ದು ಎಂದು ತಿಳಿಯಿತು. ನಮ್ಮ ಕ್ಲಾಸಿನಲ್ಲಿ ನಾನೊಬ್ಬನೇ ಭಾರತೀಯ, ಈ ಚಿತ್ರವನ್ನು ನೋಡಿದ ಹೆಚ್ಚಿನವರು - ಭಾರತದಲ್ಲಿ (ಹೀಗೂ) ಹೀಗಿದೆಯೇ ಎಂದು ನನ್ನನ್ನು ಪ್ರಶ್ನಿಸುವವರಂತೆ ಮುಖ ಮುಖ ನೋಡಿಕೊಳ್ಳುತ್ತಿರಲು ನಾನೂ ಈ ಕ್ರಿಸ್‌ಕ್ರಾಸ್ ಆದ ಲೈನುಗಳು, ಅದರ ಹಿಂದಿನ ವ್ಯವಸ್ಥೆಯ ಬಗ್ಗೆ ತುಸು ಯೋಚಿಸಿಕೊಂಡೆ.

***

ಈ ಚಿತ್ರವನ್ನು ಬೇಕಾದಷ್ಟು ರೀತಿಯಲ್ಲಿ ವ್ಯಾಖ್ಯಾನಿಸಬಹುದು - ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಬಹುದು:
- ಹೀಗೆ ಗಂಟು-ಗಂಟಾದ ಫೋನ್, ಕೇಬಲ್, ಎಲೆಕ್ಟ್ರಿಕ್ ಲೈನ್‌ಗಳು ಇರುವುದೇ ಹೀಗೋ ಅಥವಾ ಯಾವುದೋ ದೊಡ್ಡ ಬಿರುಗಾಳಿಯ ನಂತರ ಹುಟ್ಟಿದ ಸ್ಥಿತಿಯೋ?
- ಇವುಗಳನ್ನು ರಿಪೇರಿ ಮಾಡುವ ಬಗೆ ಹೇಗೆ?
- ಈ ರೀತಿ ಹಾಸು ಹೊಕ್ಕಾದ ಲೈನುಗಳಲ್ಲಿ ಯಾರದ್ದು ಯಾವುದು ಎಂದು ಹೇಗೆ ಕಂಡು ಹಿಡಿಯಲಾಗುತ್ತದೆ?
- ಈ ಲೈನುಗಳಲ್ಲಿ ಯಾವುದೋ ಒಂದು ಕೆಟ್ಟು ಹೋದರೆ ಅದನು ದುರಸ್ತಿ ಹೇಗೆ ಮಾಡುತ್ತಾರೆ, ಮಾಡುವವರು ಯಾರು?
- ಇದು ಎಲ್ಲೋ ಬಾಂಬೆಯದೋ ಉತ್ತರ ಭಾರತದ್ದೋ ಚಿತ್ರವಿದ್ದಿರಬಹುದು, ಇದೇ ಚಿತ್ರವನ್ನು ಇಡೀ ಭಾರತದಾದ್ಯಂತ ಹೀಗೇ ಎಂದು ಜೆನರಲೈಸ್ ಮಾಡಲಾಗುತ್ತದೆಯೇ?
- ಅಷ್ಟೊಂದು ಜನರಿರುವ ವ್ಯವಸ್ಥೆಯಲ್ಲಿ ಒಂದು ಫೋನ್ ಲೈನ್‌ಗಳಿಗಾಗಲೀ, ಕೇಬಲ್, ಎಲೆಕ್ಟ್ರಿಕ್ ತಂತಿಗಳಿಗೆ ಸರಿಯಾದ ನೆಲೆ ಏಕಿಲ್ಲ?
- ಈ ವ್ಯವಸ್ಥೆಯ ವಿರುದ್ಧ ಅಥವಾ ಪರವಾಗಿ ನಿಮ್ಮ ಹೋರಾಟಗಳಿದ್ದಲ್ಲಿ ಎಲ್ಲಿಂದ ಆರಂಭಿಸುವಿರಿ?
- ನಿಮ್ಮ ಉದ್ಯಮ ಅಥವಾ ಮನೆಯ ಮುಖ್ಯ ಸಂಪರ್ಕ ವಾಹಿನಿಗಳು ಇದೇ ರೀತಿಯ ಕಗ್ಗಂಟಿನಲ್ಲಿ ಹಾದು ಹೋಗುವುದಾದರೆ ನಿಮ್ಮ ಪ್ರಾಸೆಸ್ಸುಗಳು ಹಾಗೂ ಅವುಗಳ ನಿಖರತೆ, ರಕ್ಷಣೆ ಮೊದಲಾದವುಗಳ ಮೇಲೆ ಎಷ್ಟರ ಮಟ್ಟಿನ ನಂಬಿಕೆ ಇಡಬಹುದು?
- ಈ ಲೈನುಗಳ ಮೇಲೆ ಹೊಸದನ್ನು ಹೇಗೆ ಇನ್ಸ್ತಾಲ್ ಮಾಡಲಾಗುತ್ತದೆ, ಹಳೆಯದನ್ನು ಹೇಗೆ ದುರಸ್ತಿ ಮಾಡಲಾಗುತ್ತದೆ?

***

ಬನಾರಸ್ಸಿನಲ್ಲಿ ನಾನಿದ್ದಷ್ಟು ದಿನಗಳಲ್ಲಿ ಅಲ್ಲಿಯ ಉತ್ತಮೋತ್ತಮ ಪ್ರೊಫೆಸರುಗಳ ಮನೆಗಳಲ್ಲಿ ಪ್ರತಿನಿತ್ಯವೂ ಸಂಜೆಯಾಗುತ್ತಿದ್ದಂತೆ ಮನೆಯ ಪಕ್ಕದ ಎಲೆಕ್ಟ್ರಿಕ್ ತಂತಿಗಳಿಗೆ ಅವರ ಮಹಡಿಯಿಂದ ಕೋಲಿನ ಸಹಾಯದಿಂದ ತಮ್ಮ ಮನೆಯ ತಂತಿಗಳನ್ನು ಸಿಕ್ಕಿಸಿ ಕರೆಂಟನ್ನು ಕದಿಯುವುದನ್ನು ಮೊಟ್ಟ ಮೊದಲು ನೋಡಿದಾಕ್ಷಣ ಅಂದೇ ನನಗೆ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ರೋಷ ಬಂದಿತ್ತು. ನಮ್ಮೂರಿನ ಹಳ್ಳಿಗಳಲ್ಲಿ ಎಷ್ಟೋ ಜನ ಹೀಗೆ ಕರೆಂಟ್ ಕದಿಯುವುದನ್ನು ನಾನು ಕೇಳಿದ್ದೇನೆಯೇ ವಿನಾ ಪ್ರತಿದಿನವೂ ಹಾಡಹಗಲಿನಲ್ಲಿ ಒಬ್ಬ ಉನ್ನತ ಹುದ್ದೆಯ ಪ್ರೊಫೆಸರ್ ಹೀಗೆ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿಕೊಂಡಿರಲಿಲ್ಲ. ಬನಾರಸ್ಸಿನಿಂದ ಹಾಗೇ ಬಿಹಾರದ ಕೆಲವು ಊರುಗಳಲ್ಲಿ ಸುತ್ತಿ ಬರಲಾಗಿ ನನ್ನ ಕಲ್ಪನೆಯ ಭಾರತದ ಚಿತ್ರ ಸಂಪೂರ್ಣ ಬದಲಾಗಿ ಹೋಗಿತ್ತು ಎಂದರೆ ತಪ್ಪೇನೂ ಇಲ್ಲ. ನಾವು ದಕ್ಷಿಣದವರು ಆಲೋಚಿಸುವ ರೀತಿ ಒಂದು ಥರವಾದರೆ ಉತ್ತರ ಭಾರತದವರ ಗುಂಗೇ ಮತ್ತೊಂದು ಬಗೆ. ದಕ್ಷಿಣ ಭಾರತವನ್ನು ನೋಡಿ ಅದೇ ಭಾರತ ಎಂದು ಹೇಳಲಾಗದು, ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಎಲ್ಲ ದಿಕ್ಕುಗಳಲ್ಲೂ ಸಾಕಷ್ಟು ಅಲೆದಾಡಿ ನೋಡಿದಾಗ ಭಾರತದ ಒಂದು ಸ್ವರೂಪ ಸಿಕ್ಕಬಹುದು.

Single point of failure - ಎನ್ನುವ ಒಂದು ಹೊಸ ಅನಾಲಿಸ್ಸೀಸ್ ಅನ್ನು ಮುಗಿಸಿ ನಮ್ಮ ಕಂಪನಿಯ ನೆಟ್‌ವರ್ಕ್‌ನಲ್ಲಿ ಎಲ್ಲಿ ತೊಂದರೆ ಇದೆ, ಯಾವುದು ವೀಕೆಷ್ಟ್ ಲಿಂಕ್ ಎನ್ನುವ ವರದಿಯೊಂದನ್ನು ಕಳೆದ ವರ್ಷ ಪ್ರಸ್ತುತ ಪಡಿಸಿದ್ದೆ. ಅದರಿಂದಾಗಿ ಎಲ್ಲೆಲ್ಲಿ ಕೊರತೆಗಳಿವೆಯೋ ಅವುಗಳನ್ನು ನೀಗಿಸಲು ಹಲವಾರು ಸಣ್ಣ ಯೋಜನೆಗಳನ್ನು ಜಾರಿಗೊಳಿಸಲಾಯಿತು, ಕಳೆದ ವರ್ಷದ ಈ ಚಟುವಟಿಕೆಗಳ ಫಲವಾಗಿ ಈ ವರ್ಷ ನಮ್ಮಲ್ಲಿ ದೊಡ್ಡ ತೊಂದರೆಗಳು ಕಡಿಮೆಯೇ ಎನ್ನಬಹುದು. ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ (end-to-end) ಯಾವುದೇ ವ್ಯವಸ್ಥೆಯನ್ನು ನೋಡಿದರೆ ಅದರಲ್ಲಿ ವೀಕೆಷ್ಟ್ ಲಿಂಕ್‌ನ ಸ್ಟ್ರೆಂತ್ ಏನಿದೆ ಅದೇ ಆ ನೆಟ್‌ವರ್ಕ್‌ನ ಸ್ಟ್ರೆಂತ್ ಆಗುತ್ತದೆ. ಉದಾಹರಣೆಗೆ ಈ ಚಿತ್ರದಲ್ಲಿ ತೋರಿಸಿದ ತಂತಿಗಳ ಮೂಲಕ ನಿಮ್ಮ ಸಂಪರ್ಕ, ಕೇಬಲ್, ಎಲೆಕ್ಟ್ರಿಸಿಟಿ ಹಾದು ಬರುತ್ತಿದೆಯೆಂದಾರೆ, ಅದರಲ್ಲಿನ ಕೊರತೆಯೇ ನಿಮ್ಮ ಕೊರತೆಯಾಗುತ್ತದೆ - ಯೋಚಿಸಿ ನೋಡಿ.

ನಿಜ ಜೀವನದಲ್ಲಿ ನಿಮ್ಮೆದುರಿಗೆ ಹೀಗೆ ದುತ್ತನೆ ಎದುರಾಗುವ ಸಮಸ್ಯೆಯ ಕಗ್ಗಂಟನ್ನು ಎಲ್ಲಿಂದ ಬಿಡಿಸಲು ಆರಂಭಿಸುತ್ತೀರಿ? ಯಾರನ್ನು ಕಾಣುತ್ತೀರಿ? ಯಾರಿಗೆ ಉತ್ತರ ಹೇಳುತ್ತೀರಿ?

Sunday, July 06, 2008

ಕರಿಹೈದನ ಬರ್ಡನ್ನು

’ಏ, ಸೇರ್ಸಿಕೊಳ್ಳೋಲ್ಲ ಹೋಗೋ’
ಎಂದು ಕಂದು ತಂಡದವರು ಬೈದು ತಳ್ಳಿದಾಗಲೇ ಕರಿಹೈದನಿಗೆ ತಾನು ತನ್ನ ಹಳೆಯ ತಂಡವನ್ನು ಬಿಟ್ಟು ಬಂದು ಪೇಚಿಗೆ ಸಿಕ್ಕಿಕೊಂಡಿದ್ದು ತನ್ನ ಮೇಲೆಯೇ ಅಸಹ್ಯವನ್ನು ಮೂಡಿಸತೊಡಗಿತು.

’ಇಲ್ರೋ ನಾನು ಅದೇನೇನೋ ಹೊಸ ಹೊಸ ವರಸೆಗಳನ್ನ ಕಲಿತಿದೀನಿ, ನನ್ನನ್ನೂ ಆಟಕ್ಕ್ ಸೇರಿಸ್‌ಕೊಂಡು ನೋಡ್ರಿ, ಒಂದು ಚಾನ್ಸ್ ಕೊಡ್ರಿ...’ ಎಂದಿದ್ದನ್ನ ಕಂದು ತಂಡದವರು ಯಾರೂ ಅಷ್ಟೊಂದು ಹಚ್ಚಿಕೊಂಡಂತೆ ಅನ್ನಿಸಲೇ ಇಲ್ಲ, ಜೊತೆಗೆ ಕಂದು ತಂಡದಲ್ಲಿ ಇತ್ತೀಚೆಗೆ ಸೇರಿಸಿಕೊಂಡ ಹೊಸ ಹುರುಪಿನ ಆಟಗಾರರೆಲ್ಲ ಒಳ್ಳೇ ತರಬೇತಿ ಪಡೆದು ಕರಿಹೈದ ಆ ತಂಡವನ್ನು ಬಿಡುವಾಗ ಏನೇನು ಇರಲಿಲ್ಲ ಏನೇನು ಇದ್ದಿದ್ದರೆ ಚೆನ್ನಿತ್ತು ಎಂದು ಹಲಬುತ್ತಿದ್ದನೋ ಅದೆಲ್ಲವೂ ಅಲ್ಲಿ ಮೇಳೈಸಿದಂತಿತ್ತು.

ಯಾವ ಯಾವ ಬಗೆಗಳಿವೆ - ದೈನ್ಯದಿಂದ ಬೇಡಿಕೊಂಡಿದ್ದಾಯಿತು, ಹೊಸ ಉಪಾಯಗಳನ್ನು ಹೇಳಿಕೊಡುತ್ತೇನೆ ಎಂದು ಮೂಗಿನ ಮೇಲೆ ತುಪ್ಪ ಸವರಿದ್ದಾಯಿತು, ಇನ್ನು ಹೆದರಿಸುವುದೊಂದೇ ಬಾಕಿ ಎಂದು ಅನ್ನಿಸಿದ್ದೇ ತಡ, ಕರಿಹೈದ,
’ನೋಡ್ರೋ, ನನ್ನನ್ನೇನಾದ್ರೂ ಆಟಕ್ಕೆ ಸೇರಿಸಿಕೊಳ್ಳದೇ ಹೋದ್ರೆ you don't know what you are missing!' ಎಂದು ಬ್ರಹ್ಮಾಸ್ತ್ರವನ್ನು ಎಸೆದಷ್ಟೇ ಸುಖವಾಗಿ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ತೆರೆದು ನಿರೀಕ್ಷೆಯಲ್ಲಿ ಒಂದು ಕ್ಷಣದ ಮೌನವನ್ನು ಸಹಿಸಿಕೊಂಡ.

ಕಂದು ತಂಡದ ಆಟಗಾರರು ಇವನು ಹೇಳಿದ ಮಾತಿಗೆ ಒಂದು ಕ್ಷಣ ಸ್ತಂಭೀಭೂತರಾದರು, ಅವರ ಆಟದ ವರಸೆಗಳು ’ಲಂಡನ್-ಲಂಡನ್’ ಆಟದಲ್ಲಿ ಆಟಗಾರರು ಕಿಂಚಿತ್ತೂ ಅಲುಗಾಡದೇ ನಿಲ್ಲುತ್ತಿದ್ದರಲ್ಲ ಹಾಗಾದರು, ಆದರೆ ಕರಿಹೈದನ ಮೋಡಿಗೆ ಯಾರೂ ಬಿದ್ದಂತೆ ಕಾಣಲಿಲ್ಲ, ಇವನು ಹೇಳಿದ ಮಾತನ್ನು ಕೊಡಗಿಕೊಂಡು ಕಂದು ತಂಡ ಮತ್ತೆ ತಮ್ಮ ತಮ್ಮ ವರಸೆಗಳನ್ನು ಬದಲಾಯಿಸಿ ತಮ್ಮ ತಮ್ಮ ಆಟಗಳಲ್ಲಿ ಲೀನವಾದರು, ಕರಿ ಹೈದನ ಮೌನ ಅವನ ಹೊಟ್ಟೆಯೊಳಗೆ ಕಲಸುತ್ತ ಅದು ಇದ್ದಲ್ಲೇ ಹಸಿವಾದ ಹೊಟ್ಟೆಯಂತೆ ಕುರ್ ಕುರ್ ಸದ್ದು ಮಾಡಿ ಸುಮ್ಮನಾಯಿತು.

ಬಿಳಿತಂಡವನ್ನು ಬಂದು ಸೇರಿ ಅದರಲ್ಲಿದ್ದನ್ನು ಇವನಿಗೆ ತೋಚಿದಷ್ಟು ಅನುಭವಿಸಿ ಈಗ ನಡುನಡುವೆಯೇ ಕೈ ಬಿಟ್ಟು ಹಳೆಯ ಕಂದು ತಂಡವನ್ನು ಸೇರುತ್ತೇನೆ ಎನ್ನುವ ಕರಿಹೈದನ ವರಸೆಯನ್ನು ಅವನ ಸ್ನೇಹಿತರು ಹಗಲೂರಾತ್ರಿ ಆಡಿಕೊಂಡು ನಗುತ್ತಾರೆ. ಆಗಾಗ್ಗೆ, ’ಮುಠ್ಠಾಳ’ ಎಂದು ಗುನಗಾನ ಮಾಡುತ್ತಾರೆ. ’ಇಲ್ಲಿರಲಾರದವನು ಅಲ್ಲಿ ಹೋಗಿ ಮಾಡಿ ಕಡಿಯುವುದೇನು’ ಎಂದು ಛೇಡಿಸುತ್ತಾರೆ. ’ಹಸಿವೋ ಸಮೃದ್ಧಿಯೋ ನಮ್ಮದು ನಮಗೆ ಚೆಂದ’ ಎಂದು ಕರಿಹೈದ ಯಾವುದೋ ಕಾಡಕವಿಯ ಪಂಕ್ತಿಗಳನ್ನು ಅರಹುತ್ತಾ ಇಂದಲ್ಲ ನಾಳೆ ಕಂದು ತಂಡವನ್ನು ಸೇರಿಯೇ ಸೇರೇನು ಎಂದು ಕನಸು ಕಾಣುವುದನ್ನು ಮಾತ್ರ ಬಿಡಲೊಲ್ಲ.

ಕರಿಹೈದ ಮೊದಲು ಕಂದುತಂಡವನ್ನು ಬಿಟ್ಟು ಬಿಳಿತಂಡವನ್ನು ಸೇರಿಕೊಂಡಾಗ ಆತನಿಗೆ ಹೀಗೊಂದು ದಿನ ಬವಣೆಯನ್ನು ಅನುಭವಿಸಬಹುದು ಎಂದೆನಿಸಿರಲಿಲ್ಲ. ಹೀಗೆ ತಂಡಗಳನ್ನು ಬದಲಾಯಿಸಿದವರು ಯಾರೂ ಮತ್ತೆ ಪುನಃ ಪಕ್ಷಾಂತರ ಮಾಡುವುದು ಕಡಿಮೆಯಾದರೂ ಹಾಗೆ ಅಂದಿನ ಲೆಕ್ಕದಲ್ಲಿ ಸಿಕ್ಕ ಹಾಗೆ ಒಳಿತು-ಕೆಡಕುಗಳನ್ನು ಯಾರೂ ವಿವರಿಸಿ ಹೇಳಿದ್ದಂತೂ ಇಲ್ಲ. ಕರಿಹೈದ ಬೇಕಾದಷ್ಟು ತೊಳಲಾಡುತ್ತಾನೆ - ಒಮ್ಮೆ ದ್ರಾಕ್ಷಿ ಸಿಗದ ನರಿಯ ಹಾಗೆ ಆ ಹುಳಿ ದ್ರಾಕ್ಷಿ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂದು ಹೂಂಕರಿಸುತ್ತಾನೆ, ಮತ್ತೊಮ್ಮೆ ಕಂದು ತಂಡದಲ್ಲಿ ಆಡಿಬೆಳೆದು ಓಡಿಯಾಡಿದ ಹಾಗೆ ನೆನಪಿಸಿಕೊಂಡು ನಾಸ್ಟಾಲ್ಜಿಯಾವನ್ನು ಹೊಗಳುವುದೇ ಬದುಕು ಎಂದುಕೊಳ್ಳುತ್ತಾನೆ.

ಹೆಚ್ಚಾಗಿ ವಿಷಾದ ಆವರಿಸುತ್ತದೆ, ಅದರ ಬೆಳಕಿನ ನೆರಳಿನ ಬೆನ್ನಿಗೆ ಹೊಸ ತತ್ವಗಳು ಮೂಡಿಬರುವಂತೆ ಕಾಣಿಸುತ್ತದೆ - ’ಯಾವ ತಂಡದಲ್ಲಿದ್ದು ಆಡಿದರೇನು, ವಿಶ್ವವೇ ಒಂದು ತಂಡ. ಆ ತಂಡ-ಈ ತಂಡ ಇವೆಲ್ಲ ಬರೀ ಕಾಗದ ಪತ್ರಗಳ ಮೇಲಿನ ಒಡಂಬಡಿಕೆ ಮಾತ್ರ, ಅವರವರ ಹೃದಯದಲ್ಲೇನಿದೆ ಅದು ಮುಖ್ಯ. ಬಿಳಿ ತಂಡದಲ್ಲಿದ್ದುಕೊಂಡೇ ಕಂದು ತಂಡಕ್ಕೆ ಸಪ್ಪೋರ್ಟ್ ಮಾಡಲಾಗದೇನು, ಹೊರಗಿನಿಂದ ಅವರವರ ಬೆಂಬಲವನ್ನು ಯಾರೂ ಸೂಚಿಸಬಹುದಲ್ಲ. ಈ ಆಟಗಳೇ ಹೀಗೆ - ಇದರ ಹಿಂದಿನ ಸಂಸ್ಕೃತಿ, ರಾಜಕೀಯ, ಧರ್ಮ ಇವೆಲ್ಲ ಒಂದೇ ಎಲ್ಲಿದ್ದರೂ ಹೇಗಿದ್ದರೂ!’

ಹೀಗೆ ಹಲವಾರು ತತ್ವಗಳು ಮೈತಳೆತಳೆದು ಅವುಗಳು ತಮ್ಮಷ್ಟಕ್ಕೆ ತಾವು ಒಂದಕ್ಕೊಂದು ತೀಡಿಕೊಂಡು ಕಾಡಿಕೊಂಡು ಗಡುಸಾದ ಕಪ್ಪಗಿನ ಕಲ್ಲಿದ್ದಿಲು ಕೆಂಪಾಗಿ ಬೆಂಕಿಯಾಗಿ ನಿಗಿನಿಗಿ ಕೆಂಡವಾಗಿ ಕೊನೆಗೆ ಹಗುರವಾದ ಬಿಳಿಯ ಬೂದಿಯಾಗುವಲ್ಲಿಯವರೆಗಿನ ರೂಪಾಂತರವನ್ನು ಪಡೆದುಕೊಳ್ಳುತ್ತವೆ. ಅಲ್ಲಲ್ಲಿ ಕಿಡಿಗಳೋ ಅಥವಾ ಬೆಂಕಿ ಇರುವ ತಾವೋ ತಾವಿದ್ದ ಕಡೆ ಮೊದಲು ಸುಡುವಂತೆ ಹೊಸ ತತ್ವಗಳ ಚುರುಕು ಅದೆಷ್ಟರ ಮಟ್ಟಿಗೆ ಏರುತ್ತದೆ ಎಂದರೆ ಪಕ್ಕದಲ್ಲಿನ ಏರ್‌ಕಂಡೀಷನರ್ ಬೀಸುವ ತಂಗಾಳಿಯೂ ತನ್ನ ತಂಪನ್ನು ಈ ಬಿಸಿಯಲ್ಲಿ ಕಳೆದುಕೊಳ್ಳುತ್ತದೆ.

ಕ್ಯಾನ್ಸರ್ ರೋಗಿ ತನ್ನ ಕ್ಯಾನ್ಸರ್ ಅನ್ನು ಒಪ್ಪಿಕೊಂಡು ಸಮಾಧಾನಿಯಾಗುವ ಮೊದಲು ಬೇಕಾದಷ್ಟು ಕಿರಿಚಾಡಿ ಕೂಗಾಡಿ ಅವರಿವರಿಗೆಲ್ಲ ಬೈದು ದೇವರನ್ನೂ ಸೇರಿಸಿಕೊಂಡು ಮತ್ತೆ ಸಂತನ ಮನಸ್ಥಿತಿಯನ್ನು ತಂದುಕೊಳ್ಳುವಂತೆ ಕರಿಹೈದ ಕಂದು ತಂಡದವರನ್ನು ಕುರಿತು ಸಹಸ್ರನಾಮ ಶುರುಮಾಡಿ ಸುಮ್ಮನಾಗುತ್ತಾನೆ:
’ಯಾರಿಗ್ ಬೇಕ್ ಹೋಗಿ ನಿಮ್ಮ ತಂಡದಲ್ಲಿ ಆಡೋ ಭಾಗ್ಯ. ನೀವೋ ನಿಮ್ಮ ಪ್ರಾಸೆಸ್ಸೋ ನಿಮ್ಮ ರೂಲ್ಸ್-ರೆಗ್ಯುಲೇಷನ್ನುಗಳೋ ಎಲ್ಲವೂ ಸಾಯ್ಲಿ! ನನ್ನಂತಹವರ ಯೋಗ್ಯತೆಯನ್ನು ಇವತ್ತಿಗೂ ಕಂಡು ಮಣೆಹಾಕದ ನಿಮ್ಮ ಸಂಸ್ಕೃತಿಗಿಷ್ಟು ಧಿಕ್ಕಾರವಿರಲಿ. ನನ್ನಂತೋರುನ್ನ ಸೇರಿಸಿಕೊಳ್ದೇ ಅದು ಹೆಂಗ್ ಆಡ್ತೀರೋ ಆಡ್ರಿ ನೋಡೇ ಬಿಡ್ತೀನಿ. ನಿಮ್ಮಲ್ಲಿನ ಕೆಟ್ಟ ಪರಂಪರೆಯೇ ಸಾಕು ನಿಮ್ಮವರ ಕಾಲುಗಳನ್ನು ಎಳೆದೆಳೆದು ನೀವಿದ್ದಲ್ಲೇ ನಿಮ್ಮನ್ನು ಕೂರಿಸಲು, ನೀವು ಮುಂದೆ ಬರುವ ಸಾಧ್ಯತೆಯೇ ಇಲ್ಲ - ಎಂದಿಗೂ ಯಾವತ್ತೂ. ಎಲ್ರೂ ಹಾಳಾಗ್ ಹೋಗಿ...’

ಕರಿಹೈದನ ಆಕ್ರಂದನ ಮುಗಿಲು ಮುಟ್ಟುತ್ತೆ. ನಂತರ ಧೀರ್ಘ ಸಮಾಧಾನ ಮೂಡುತ್ತೆ. ಕರಿಹೈದ ಸಂತನಂತೂ ಆಗೋದಿಲ್ಲ, ತನ್ನ ಬಿಳಿತಂಡದವರ ಜೊತೆ ಸರಿಯಾಗಿ ಮನಸಿಟ್ಟು ಆಡಲೊಲ್ಲ, ಹಳೆಯ ಕಂದುತಂಡದವರ ನೆನಪನ್ನು ಬದಿಗಿಟ್ಟು ಮುಂದಿನ ದಾರಿಯನ್ನು ಮಾತ್ರ ನೋಡೋದಿಲ್ಲ. ಹಲವಾರು ಲೇನುಗಳು ಇರುವ ನುಣುಪಾದ ರಸ್ತೆಯ ಮೇಲೆ ನಾಗಾಲೋಟದಿಂದೋಡುವ ದೊಡ್ಡ ಕಾರಿರುವ ಕರಿಹೈದ ಮುಂದಿನ ಅಗಲವಾದ ವಿಂಡ್‌ಶೀಲ್ಡನ್ನು ನೋಡಿ ತಾನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುವ ನಡುನಡುವೆ ಚಿಕ್ಕದಾದ ಹಾಗೂ ಚೊಕ್ಕದಾದ ರಿಯರ್ ವ್ಯೂ ಮಿರರ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೋಡಿಕೊಂಡಿರುವುದನ್ನು ಕಂಡ ಕರಿಹೈದನ ಸ್ನೇಹಿತರು ಕರಿಹೈದನ ಮನಸ್ಸಿನಲ್ಲಿರುವುದನ್ನು ಗೊತ್ತು ಮಾಡಿಕೊಂಡವರಂತೆ ಅವರೊಳಗೇ ಹಲ್ಲುಕಿರಿದುಕೊಂಡಿರುವುದನ್ನು ನೆನೆಸಿಕೊಂಡು ಕರಿಹೈದನ ಮನಸ್ಸು ಮತ್ತಷ್ಟು ಪಿಚ್ಚಾಗುತ್ತದೆ.