Showing posts with label ಆಟೋಟ. Show all posts
Showing posts with label ಆಟೋಟ. Show all posts

Tuesday, August 12, 2008

ಎದೆಕರಗದ ದೇಶಭಕ್ತಿ, ನೋವಿರದ ನಾಗರಿಕತೆ

ಬೀಜಿಂಗ್ ಓಲಂಪಿಕ್ಸ್ ಪಂದ್ಯಾವಳಿಗಳು ವಿಶ್ವದ ಉದ್ದಗಲದ ಆಟೋಟಗಳನ್ನು ಅಮೇರಿಕನ್ ಟಿವಿ ಪರದೆಯ ಮೇಲೆ ಮೂಡಿಸುತ್ತವೆ ಎಂದೇ ಹೇಳಬೇಕು. ನನಗೆ ಆಶ್ಚರ್ಯವಾಗುವ ಹಾಗೆ ಕೆಲವು ಕಡೆ ಸಾಕರ್ ಎನ್ನುವ ಬದಲು ಫುಟ್‌ಬಾಲ್ ಎಂದು ಮಾಧ್ಯಮಗಳು ಬಳಸುವುದನ್ನು ನೋಡಿ ಸೋಜಿಗವಾಗಿತ್ತು. ಇನ್ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಈ ಅವಕಾಶ ಈ ಹಿಂದೆ ಎಂದೂ ಬಂದಿರಲಾರದು. ಅಲ್ಲಲ್ಲಿ ಭಾರತೀಯ ಕ್ರೀಡಾಳುಗಳು ಭಾಗವಹಿಸಿದ ತುಣುಕುಗಳನ್ನು ಬಿಟ್ಟರೆ ಇಲ್ಲಿನ ಪ್ರೈಮ್ ಟೈಮ್‌ನಲ್ಲಿ ನನಗೆ ಸಿಗುತ್ತಿರುವುದು ಅಮೇರಿಕನ್ ತಂಡಗಳು ಭಾಗವಹಿಸಿದ ಸ್ಪರ್ಧೆಗಳು ಮಾತ್ರ.

ಆಟವನ್ನು ನೋಡುವುದೂ ಒಂದು ರೀತಿಯ ಮನೋರಂಜನೆಯಂತೆ, ಯಾವೊಂದು ಟೀಮ್ ಇವೆಂಟ್ ಅನ್ನು ನೋಡಿದರೂ ವೀಕ್ಷಕನ ಮನಸ್ಸಿನಲ್ಲಿ ಒಂದಲ್ಲ ಒಂದು ತಂಡ ಅಥವಾ ಸ್ಪರ್ಧಿಯ ಪರವಾಗಿ ಆಲೋಚಿಸದೆ ಇರುವುದು ಕಷ್ಟ. ನಾನು ಇಲ್ಲಿಯವರೆಗಿನ ಕ್ರೀಡೆಗಳನ್ನು ನೋಡಿದಂತೆ ಮನಸ್ಸು ಒಂದಲ್ಲ ಒಂದು ಸ್ಪರ್ಧಿಯನ್ನು ಬೆಂಬಲಿಸತೊಡಗುತ್ತದೆ, ಕೆಲವೊಮ್ಮೆ ಅವರು ನನಗೆ ಈವರೆಗೆ ತಿಳಿಯದ ಯಾವುದೋ ದೇಶದವರೂ ಆಗಿರಬಹುದು. ಅದೇ ಭಾರತೀಯರು ಸ್ಪರ್ಧಿಸುವ ಕ್ರೀಡೆಗಳಲ್ಲಿ ನನ್ನ ಮೈಮಸ್ಸುಗಳೆಲ್ಲ ಭಾರತೀಯರ ಪರವೇ.

1932 ರ ಲಾಸ್ ಎಂಜಲೀಸ್ ಒಲಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಅಮೇರಿಕವನ್ನು 24-1 ಗೋಲುಗಳಿಂದ ಸೋಲಿಸಿದ ಕ್ಷಣಗಳು ಮತ್ತೆ ಮರುಕಳಿಸಲಾರವು. ಹಾಗೆ ಏನಾದರೂ ಭಾರತೀಯ ತಂಡ ಅಮೇರಿಕನ್ ತಂಡವನ್ನು ಎದುರಿಸಿ ಆಡುತ್ತಿದೆಯೆಂದರೆ ನನ್ನೊಳಗಿನ ನೋಡುಗ ಯಾವ ದೇಶವನ್ನು ಪ್ರತಿಬಿಂಬಿಸುತ್ತಾನೆ, ಯಾವ ದೇಶವನ್ನು ಪ್ರೋತ್ಸಾಹಿಸುತ್ತಾನೆ ಎಂದು ಊಹಿಸಿಕೊಂಡಾಕ್ಷಣ ನಮ್ಮಂತಹವರು ವಲಸೆ ಬಂದು ಮತ್ತೊಂದು ದೇಶದ ನಾಗರಿಕತೆಯನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಅದು ಒಂದು ಪಾಸ್‌ಪೋರ್ಟ್ ಕೊಟ್ಟು ಮತ್ತೊಂದು ಪಾಸ್‌ಪೋರ್ಟ್ ಅನ್ನು ಪಡೆದಷ್ಟು ಸುಲಭವಂತೂ ಅಲ್ಲ ಎನ್ನಿಸಿತು. ನಾವು ಹುಟ್ಟಿ ಬೆಳೆದ ದೇಶ, ನಮ್ಮಲ್ಲಿ ಹುದುಗಿದ ನಮ್ಮ ದೇಶದ ಇತಿಹಾಸ, ಪರಂಪರೆ ಇವುಗಳನ್ನೆಲ್ಲ ಒಂದೇ ಉಸಿರಿನಲ್ಲಿ ಬದಿಗೊತ್ತಲು ಪಾಸ್‌ಪೋರ್ಟ್ ಅಂತಹ ಪುಸ್ತಕಗಳಿಗೆ ಸಾಧ್ಯವಿರಲಾರದು.

ನಾವು ಇದ್ದಲ್ಲಿ ಹೋದಲ್ಲಿ ನಮ್ಮತನವನ್ನು ಉಳಿಸಿ-ಬೆಳೆಸಿಕೊಳ್ಳುವುದು ದೇಶದ್ರೋಹಿತನವಂತೂ ಅಲ್ಲ. ನಾವು ನಮ್ಮಲ್ಲಿಯ ಕ್ರೀಡೆ-ಕೌಶಲ್ಯಗಳನ್ನು ಆಡಿ ಅರಿತಂತೆ ಇಲ್ಲಿಯ ಕ್ರೀಡೆ ಅವುಗಳ ರೀತಿ ನೀತಿಯನ್ನು ಬಲ್ಲವರಲ್ಲ. ನಮಗೆ ಗೊತ್ತಿರುವ ಕ್ರಿಕೇಟ್ ಪಂದ್ಯಗಳ ನಿಯಮಗಳಷ್ಟು ಸುಲಭವಾಗಿ ಇಲ್ಲಿಯ ಬೇಸ್‌ಬಾಲ್ ಸೂತ್ರಗಳು ನಮ್ಮನ್ನು ಸುತ್ತುವರಿಯಲಾರವು. ನಮಗೆ ನಮದೇ ಆದ ಬ್ಯಾಸ್ಕೆಟ್ ಬಾಲ್, ಅಮೇರಿಕನ್ ಫುಟ್‌ಬಾಲ್ ಹಾಗೂ ಬೇಸ್‌ಬಾಲ್‌ಗಳ ಆಟಗಾರ ಪ್ರತಿಭೆಗಳ ಪಟ್ಟಿ ಇದ್ದರೂ ನಮ್ಮ ಕ್ರಿಕೆಟ್ ಆಟಗಾರರ ಹೆಸರುಗಳಷ್ಟು ಉದ್ದ ಪಟ್ಟಿ ಬೆಳೆಯಲಾರದು - ಪಟೌಡಿ, ಬೇಡಿ, ಮದನ್‌ಲಾಲ್, ಕಿರ್ಮಾನಿ, ಚಂದ್ರಶೇಖರ್, ಗವಾಸ್ಕರ್ ಅಲ್ಲಿಂದ ಹಿಡಿದು ತೆಂಡೂಲ್ಕರ್, ಧೋನಿ, ದ್ರಾವಿಡ್‌, ಕುಂಬ್ಳೆವರೆಗೆ ಬೆಳೆಯಲಾರದು, ಕ್ರಿಕೆಟ್ ಆಡುವ ಇತರೆ ಅಂತಾರಾಷ್ಟ್ರೀಯ ದೇಶಗಳ ಪೈಕಿ ಪ್ರತಿಯೊಂದು ದೇಶದ ಕೊನೆಪಕ್ಷ ಐದು ಆಟಗಾರರನ್ನು ಗುರುತಿಸುವ ನೆನಪು ಅಮೇರಿಕನ್ ಆಟಗಾರರ ಹೆಸರುಗಳನ್ನು ಉಳಿಸಿಕೊಳ್ಳಲಾರದು. ಮೊನ್ನೆ ಯಾರೋ ದಾನಕ್ಕೆ ಕೊಟ್ಟರೆಂದು ನ್ಯೂ ಯಾರ್ಕ್ Knicks ಬ್ಯಾಸ್ಕೆಟ್ ಬಾಲ್ ತಂಡದ ಟೋಪಿಯೊಂದನ್ನು ಹಾಕಿಕೊಂಡು ನ್ಯೂ ಯಾರ್ಕ್ ಸಿಟಿಯಲ್ಲಿ ತಿರುಗುತ್ತಿರುವಾಗ ಯಾರಾದರೂ ’Knicks ತಂಡದಲ್ಲಿ ನಿನ್ನ ಫೇವರೈಟ್ ಆಟಗಾರ ಯಾರು?’ ಎಂದು ಪ್ರಶ್ನಿಸಿದರೆ ಏನು ಉತ್ತರ ಹೇಳೋಣ ಎನ್ನಿಸಿ ಒಮ್ಮೆ ಹೆದರಿಕೆಯಾಗಿದ್ದಂತೂ ನಿಜ!

ಪೌರತ್ವ ಅನ್ನೋದು not just a status, rather it is status of mind. ಈ ವಾಕ್ಯವನ್ನು ಬೇಕಾದಷ್ಟು ರೀತಿಯಲ್ಲಿ ವಿವರಿಸಿಕೊಳ್ಳಬಹುದು. ನಾವು ಎಲ್ಲಿದ್ದರೇನು ಹೇಗಿದ್ದರೇನು ಭಾರತೀಯರಾಗಿಯೇ ಇರುತ್ತೇವೆ ಎನ್ನುವುದು ಒಂದು ಬಗೆಯಾದರೆ, ಒಮ್ಮೆ ಪೌರತ್ವದ ಸ್ಟೇಟಸ್ ಒಮ್ಮೆ ಬದಲಾದ ಮೇಲೆ ಅಫಿಷಿಯಲ್ ಆಗಿ ಹೊಸ ದೇಶವನ್ನು ಬೆಂಬಲಿಸೋದೇ ಅವರವರ ಕರ್ತವ್ಯ, ಹೀಗೆ ವಿಧವಿಧವಾಗಿ ನೋಡಬಹುದು. ಉದ್ಯೋಗ ಅನ್ನ-ನೀರು ಕೊಡುವ ದೇಶವೆಂದು ಅಮೇರಿಕವನ್ನು ಪ್ರೀತಿಸಿ ಗೌರವಿಸುವ ನನ್ನತನ ಅದೇ ಅಮೇರಿಕನ್ ಕ್ರೀಡಾಳುಗಳನ್ನು ಅಷ್ಟೇ ವಿಶ್ವಾಸದಿಂದ ನೋಡೋದಿಲ್ಲ, ಅವರನ್ನು ಹುರಿದುಂಬಿಸೋದಿಲ್ಲ. ಭಯೋತ್ಪಾದಕತನ-ದೇಶದ್ರೋಹ ಮೊದಲಾದ ಕಟ್ಟು ನಿಟ್ಟಾದ ಪದಗಳಿಗೆ ಸಿಗದ ವಿಶೇಷ ನಿಲುವು ನಮ್ಮಂತಹವರದ್ದು - ಜೊತೆಗೆ ನಾವು ಯಾರಿಗೂ ಯಾವ ತೊಂದರೆಯನ್ನೂ ಕೊಡೋದಿಲ್ಲ ಎನ್ನುವುದೂ ಮುಖ್ಯ. ಒಲಂಪಿಕ್ಸ್ ಪಂದ್ಯಗಳಲ್ಲಿ ಯಾವುದೋ ಬಡದೇಶದ ಸ್ಪರ್ಧಿ ವಿಶ್ವದ ಬಲಾಢ್ಯ ರಾಷ್ಟ್ರಗಳ ಎದುರು ಸೆಣೆಸಿ ಚಿನ್ನವನ್ನು ಪಡೆದಾಗ ಆ ಸ್ಪರ್ಧಿ ಹಾಗೂ ಆತನ ದೇಶವನ್ನು ನಾನು ಬೆಂಬಲಿಸೋದು ಅಮೇರಿಕದ ವಿರೋಧಿ ನಿಲುವುಗಳಿಂದಲಂತೂ ಅಲ್ಲವೇ ಅಲ್ಲ. ಅಮೇರಿಕದಂತಹ ಮುಂದುವರೆದ ದೇಶಗಳಲ್ಲಿ ಪ್ರತಿಭೆ ಇದ್ದವರಿಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಯಾವ ರೀತಿಯ ಬೆಲೆ, ಬೆಂಬಲ, ಅವಕಾಶಗಳು ದೊರಕುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು, ಅದೇ ಬಡದೇಶಗಳಲ್ಲಿ ಅಷ್ಟೊಂದು ಕೊರತೆಗಳ ನಡುವೆ ಒಬ್ಬ ಸ್ಪರ್ಧಿ ಎಲ್ಲರನ್ನೂ ಮೀರಿಸಿ ಮುಂದೆ ಬರುವುದು ನಿಜವಾಗಿಯೂ ದೊಡ್ಡದು ಎನ್ನುವ ಕಾರಣದಿಂದ ಅದು ಮನಸ್ಸಿಗೆ ಹತ್ತಿರವಾಗುತ್ತದೆ. ಈವರೆಗೆ ಭಾರತ ಗಳಿಸಿದ ಒಂದೇ ಒಂದು ಸ್ವರ್ಣ ಪದಕ ಅದಕ್ಕೆ ಸಂಬಂಧಿಸಿದ ಸುದ್ದಿ-ಚಿತ್ರಗಳು ನಮ್ಮವರು ಎಷ್ಟೋ ವರ್ಷಗಳ ನಂತರ ಗೆದ್ದರಲ್ಲ ಎನ್ನುವ ರೋಮಾಂಚನ ಉಂಟು ಮಾಡುತ್ತದೆ, ಈ ಮಾನಸಿಕ ನೆಲೆಗಟ್ಟಿಗೆ ಹೋಲಿಸಿದ್ದಲ್ಲಿ ಅಮೇರಿಕದವರು ಮೇಲಿಂದ ಮೇಲೆ ಗೆಲ್ಲುತ್ತಲೇ ಇರುವ ಪದಕಗಳು ಗೌಣವಾಗುತ್ತವೆ.

ನಮ್ಮಲ್ಲಿನ ಭಾರತೀಯತೆ ಎನ್ನೋದು ಬರೀ ಪಾಸ್‌ಪೋರ್ಟ್ ಎನ್ನುವ ಪುಸ್ತಕವಂತೂ ಅಲ್ಲ, ಅದಕ್ಕೂ ಮಿಗಿಲಾಗಿ ನಮ್ಮ ಚರ್ಮದ ಬಣ್ಣಕ್ಕಷ್ಟೇ ಸೀಮಿತವಾಗೂ ಇಲ್ಲ. ನಮ್ಮಲ್ಲಿನ ಸಂವೇದನೆಗಳು ಎಂದಿಗೂ ಭಾರತೀಯ ಸಂವೇದನೆಗಳು ಎನ್ನುವುದು ದೃಢವಾದಲ್ಲಿ ನಮ್ಮ ಸಂವಿಧಾನ ಬದ್ಧವಾದ ಗುರುತಿನ ಚೀಟಿ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದೂ ಮತ್ತೊಂದು ತರ್ಕವಾಗುತ್ತದೆ. ನಮ್ಮಲ್ಲಿನ ದೇಶಪ್ರೇಮ, ದೇಶಭಕ್ತಿ ಎನ್ನುವ ಭಾವನೆಗಳು, ತಳಮಳಗಳು ಅಮೇರಿಕದ ಪರ್ಲ್ ಹಾರ್ಬರ್ ನಂತಹ ಐತಿಹಾಸಿಕ ಘಟನೆಗಳಿಗೆ ಹೇಗಾದರೂ ಸ್ಪಂದಿಸಬಲ್ಲವು, ಅದೇ ಹತ್ತೊಂಭತ್ ನೂರಾ ಹತ್ತೊಂಭತ್ತರಲ್ಲಿ (1919) ಬ್ರಿಟೀಷ್ ಸರ್ಕಾರ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಎದೆ ನಡುಗುವಂತೆ ಮಾಡಿದ್ದನ್ನು ನಾವು ಮರೆಯುವುದಾರೂ ಹೇಗೆ?

ಯಾವ ನಾಗರಿಕತೆಯಲ್ಲಿ ನಾವು ನಮ್ಮನ್ನು ಕರಗಿಸಿಕೊಳ್ಳುವುದಿಲ್ಲವೋ, ಎಲ್ಲಿ ನೋವು-ನಲಿವುಗಳು ಐತಿಹಾಸಿಕವಾಗಿ ಒಬ್ಬನ ಮೈಮನಸ್ಸುಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದು ಪುಸ್ತಕದ ಮಟ್ಟದಲ್ಲಿ ಮಾತ್ರ ಉಳಿಯುತ್ತದೆ. ಅದನ್ನು ಪೌರತ್ವ/ಸಿಟಿಜನ್‌ಶಿಪ್ ಎಂದೇನಾದರೂ ಕರೆದುಕೊಳ್ಳಿ ನಮ್ಮೊಳಗಿನ ಉಸಿರಿರುವವರೆಗೆ ’ವಂದೇ ಮಾತರಂ’ ಹಾಗೂ ’ಜನಗಣಮನ’ವನ್ನು ಮರೆಯದ ನಾವು ಮತ್ತೊಂದು ದೇಶದ ಹಕ್ಕು-ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸುವಷ್ಟರ ಮಟ್ಟಿಗೆ ಅಲ್ಲಿನ ಪೌರರಾಗುತ್ತೇವೆ ಎನ್ನುವುದು ನಿಜವೆನಿಸುತ್ತದೆ.