Showing posts with label ಕವನ. Show all posts
Showing posts with label ಕವನ. Show all posts

Saturday, June 06, 2020

ಗೋಲ್ಫ್ ಆಡುತ್ತಾರೆ ಬಿಡಿ...ಗೋಲ್ಫ್ ಆಡುತ್ತಾರೆ ಬಿಡಿ

ಉಳ್ಳವರಿಗೇನು ಬಿಡಿ ಸ್ವಾಮಿ ಬಿಸಿಲೇ ನೆರಳೇ 
ಇನ್ಯಾರೋ ಸೃಷ್ಟಿಸಿದ ಕಷ್ಟ ಕಾರ್ಪಣ್ಯಗಳ ಗೋಳೇ
ತಮ್ಮ ತನವನು ಇನ್ಯಾರೋ ಕಲಿತು ಬಿಟ್ಟಾರೇನೋ ಎಂದು
ಛಲ ಬಿಡದ ತ್ರಿವಿಕ್ರಮರು ಎಲ್ಲ ಕಡೆ ಗೋಲ್ಫ್ ಆಡುತ್ತಾರೆ ಬಿಡಿ|

ಸುತ್ತ ಮುತ್ತಲು ಮನಸುಗಳು ಚದುರಿ
ಕನಸುಗಳು ಫಾಲ್ ಎಲೆಗಳ ತರಹ ಉದುರಿ
ನಾವೇ ಹುಟ್ಟಿಸಿದ ರಣರಂಗ ನಮ್ಮನ್ನೇ 
ಅಣಕಿಸುತ್ತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

ಇವರ ತಲೆಯ ಮೇಲಿನ ಟೋಪಿ ಬಿಸಿಲನ್ನು ನಾಚಿಸಿ
ಇವರ ಮುಖಗಳ ಮೇಲಿನ ಮಂದಹಾಸವ ಉಳಿಸಿ
ಕಡಕ್ಕಾಗಿ ಇಸ್ತ್ರಿ ಕಾಣಿಸಿದ ಇವರ ಪೋಷಾಕುಗಳು
ಸೆಟೆದು ನಿಂತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

ನೆಲೆದ ಮೇಲೆ ನಿಂತ ನೀರಿರಲಿ ಇಲ್ಲದಿರಲಿ
ಪ್ರಪಂಚದ ಆಗುಹೋಗುಗಳು ಆಗದೇ ಇರಲಿ
ಇವರ ಶಾಂತಿಗೆಂದೂ ಭಂಗ ಬಾರದು ನಿಂತ ನೆಲವೂ
ಕದಲದೇ ಶಾಂತವಾಗಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

ಆಡುತ್ತಲೇ ಕಾಸು ಮಾಡುವ, ಕಾಸು ಮಾಡಲೆಂದೇ ಆಡುವ
ತಂಪು ಕನ್ನಡಕದೊಳಗಿಂದ ದೂರದ ನೋಟ ನೋಡುವ
ಜಡ ಹಿಡಿದ ಬಿಳಿ ಚೆಂಡು ಎನಿಸಿಕೊಳ್ಳುವ ಗಟ್ಟಿ ಉರುಳನು
ದೂರದ ಗುಂಡಿಯಲಿ ತೂರುವ ಗಂಡಸರು ಗೋಲ್ಫ್ ಆಡುತ್ತಾರೆ ಬಿಡಿ|

ಬಡವರೆಲ್ಲೂ ಸುತ್ತ ಸುಳಿಯದ ಶ್ರೀಮಂತರ ಆಟವಿದು
ದುಡ್ಡು ಹೆಚ್ಚಾದಂತೆ ಚೆಂಡಿನ ಗಾತ್ರ ಚಿಕ್ಕದಾಗುವ ಸೂತ್ರವಿದು
ಯಾರೂ ಹೇಗಾದರೂ ಇರಲಿ ಅವರವರ ನಿರ್ಲಿಪ್ತತೆಯ ಮುಸುಕಿನಲಿ
ಸುಮ್ಮಿನಿರುವ ಪಾಠ ಉರು ಹೊಡೆದ ಸೋಗಿನಲಿ ಗೋಲ್ಫ್ ಆಡುತ್ತಾರೆ ಬಿಡಿ|

ಇವರು ನಡೆದ ದಾರಿಯಲ್ಲಿ ಹುಲ್ಲು ಬೆಳೆಸಿ ನೀರು ಕುಡಿಸಲು ಒಬ್ಬ
ಆಡುವುದು ಇವರೇ ಕಂಡುಕೊಂಡ ಪರಿ ಕರಗಿಸಲು ಕೊಬ್ಬ
ತಗ್ಗಿದ್ದಲ್ಲಿ ಬಂದು ಸೇರುವ ಚೆಂಡಿನ ಹಾಗೆ ಹಣಬಂದು ಕೂಡುತಿರುವಾಗ
ಇನ್ನೇನು ತಾನೇ ಮಾಡಬಲ್ಲರು? ಗೋಲ್ಫ್ ಆಡುತ್ತಾರೆ ಬಿಡಿ|

Tuesday, May 26, 2020

ಮತ್ತೆ ಬಾ ಕರೋನಾ...


ಇಂದಲ್ಲ ನಾಳೆ ನಮ್ಮವರಿಗೆಲ್ಲ ತಿಳಿ ಹೇಳುವುದಕ್ಕಾಗಿ
ಇಂದು ತಿಳಿಯದ ಮಂದಿಗೆ ತಿದಿಯ ತಿವಿದು
ಬಗ್ಗಿದರೂ ಬಾಗದ ಜನರ ನಡುವಿಗೆ ಒದೆದು
ಸರಳ ಸೂತ್ರವನು ಎಲ್ಲರಲ್ಲೂ ಅಳವಡಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ವಿಶ್ವ ಜೀವ ಸಂಕುಲಗಳನ್ನೆಲ್ಲ ಕಡೆಗಣಿಸಿ ದುಡಿಸಿದ್ದಕ್ಕಾಗಿ
ಹಡೆದವ್ವನ ಕೆಡವಿ ಸಲಹದವರಿಗೆ ನೀರು ಕುಡಿಸಿ
ಅವರವರ ಹೊಟ್ಟೆಯಲ್ಲಿರುವ ವಿಷವ ಕಕ್ಕಿಸಿ
ಎಲ್ಲರೆದೆಯೆಲ್ಲೂ ಸಾವಿನ ಭಯವ ಹುಟ್ಟಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ಜೀವ ಜಂತುಗಳ ಸಂಹರಿಸಿ ತಮ್ಮ ಸಂತತಿ ಬೆಳೆಸಿದ್ದಕ್ಕಾಗಿ
ಮುಗಿಲಿನಲ್ಲೂ ತಮ್ಮ ಕಚಡವನ್ನು ಹರಡುವ
ನೆಲದಾಳವನ್ನು ಬಗೆದು ತಮ್ಮ ದಾಹ ತೀರಿಸಿಕೊಳ್ಳುವ
ನಮಗೆ ಕ್ಷುದ್ರ ಜೀವಿಗಳಿಂದ ಬದುಕಿನ ಪಾಠ ಕಲಿಸುವುದಕ್ಕಾಗಿ...

ಮತ್ತೆ ಬಾ ಕರೋನಾ...
ವಸುಧೈವ ಕುಟುಂಬದ ನಿಜ ಮೌಲ್ಯ ಬಿತ್ತರಿಸುವುದಕ್ಕಾಗಿ
ಕಣ್ಣೀರಲ್ಲಿ ಕೈ ತೊಳೆಯುವರಿಗೆ ಸಮತೆಯ ಸಾರುತ
ಹೊಟ್ಟೆಯ ಬೆಂಕಿಯನು ನೀಗಿಸಲು ಹಾರಾಡುತ
ಅಸಮಾನತೆಯಲ್ಲಿ ತೂಗುವವರ ಸಮಾಧಾನದ ಹಾಡಾಗಿ...

ಮತ್ತೆ ಬಾ ಕರೋನಾ...
ಎಲ್ಲವನೂ ಸ್ತಬ್ಧ ಸ್ತಂಬೀಭೂತಗೊಳಿಸುವುದಕ್ಕಾಗಿ
ಓಡುವುದನ್ನೇ ಬದುಕಾಗಿಸಿಕೊಂಡವರ ತುಸು ನಿಲ್ಲಿಸಿ
ಜೀವ ಜಲ ವಾಯು ಸುತ್ತಲಿನ ಪ್ರಕೃತಿಯನ್ನು ಲಾಲಿಸಿ
ಎಲ್ಲರಿಗೂ ಮತ್ತೆ ಮತ್ತೆ ಬುದ್ಧಿ ಹೇಳುವುದಕ್ಕಾಗಿ|

ಮತ್ತೆ ಬಾ ಕರೋನಾ...  ಮತ್ತೆ ಬಾ ಕರೋನಾ...

Sunday, May 17, 2020

ಕೆಲಸಕ್ಕೆ ಜನರಿಲ್ಲ ಕೆಲಸಕ್ಕೆ ಮನಸಿಲ್ಲ

ಕೆಲಸಕ್ಕೆ ಜನರಿಲ್ಲ ಕೆಲಸಕ್ಕೆ ಮನಸಿಲ್ಲ
ಆಲಸ್ಯವೇ ನಮಗಂಟಿದ ದೊಡ್ಡ ಶಾಪ|

ಕೆಲಸವಿರೆ ಹೆಚ್ಚೆಂಬರು, ಇಲ್ಲದಿರೆ ಕೊರಗುವರು
ಕಾಯಕವೇ ಕೈಲಾಸ ಎನುವ ಧರ್ಮ
ಹಣವಂತರು ಬೆಳೆಯುವರು ಸುಖ ಕಾಣದೆ ಸೊರಗುವರು
ಎಲ್ಲಿದೆ ಕೆಲಸ-ಹಣ-ಸುಖ ಸಮಾಧಾನದ ಮರ್ಮ|

ದಿನ ನಿತ್ಯ ತಮ್ಮ ಕೆಲಸವ ಮಾಡೆ ಮಂದಿ ಬೇಕು
ನಮ್ಮ ಕೆಲಸ ಕಾರ್ಯಗಳನು ನಾವು ಮಾಡುವುದು ತರವೇ
ದಿನ ದಿನ ಸುತ್ತಿ ತಿರುಗಿ ಮತ್ತೆ ಬರುವ ಬಂಧ ಸಾಕು
ಮೈಬಗ್ಗಿಸಿ ದುಡಿಯುವುದೂ ಒಂದು ವರವೇ|

ನಿನ್ನ ಕರ್ಮಗಳನು ನೀ ಮಾಡು ಫಲ ನಾನು ಕಾಯ್ವೆನೆನಿಸಿ
ಪರಮಾತ್ಮ ಕೆಲಸ-ಕಾರ್ಯ-ಕರ್ಮಗಳಿಗೆ ಜೋತು ಬಿದ್ದ
ವಿಪುಲ ಸಂಸಾರದ ಜೋಳಿಗೆಯ ಕೊರಳಿಗೆ ಸಿಂಗರಿಸಿ
ಕರ್ಮ ಭೂಮಿಯ ಪಳೆಯುಳಿಕೆಯೊಳಂದಾಗಿ ಎಡವಿ ಬಿದ್ದ|

Tuesday, May 05, 2020

ಪಕ್ಕದ ಮನಿ ಚೈನಾದ್ ಮಂದಿ ಸುಳ್ಳ ಹೇಳ್ಯಾರ್ ರೀ

ಪಕ್ಕದ ಮನಿ ಚೈನಾದ್ ಮಂದಿ ಸುಳ್ಳ ಹೇಳ್ಯಾರ್ ರೀ
ವೈರಸ್ ಇಲ್ಲ ವೈರಸ್ ಇಲ್ಲಾಂತ ಸಾರಿ ಹೇಳ್ಯಾರ್ ರೀ|

ಇಂಗ್ಲೀಸ್ ಬರದ ಮಾತಾಡೋ ಮಂದೀನ
ಇಂಗ್ಲೀಸ್ ಪಿರಂಗಿಗಳು ನಂಬಂಗಿಲ್ಲಾರೀ
ಬ್ಯಾರೇ ದೇಶ್‌ದಾಗ್ ಏನಾರಾ ಆಗ್ಲೀ
ನಮಗ್ಯಾಕ್ ಉಸಾಬರೀ ಅಂತಾರ್ ರೀ|

ಹಿಂದಿನ ಸಾಲ ಕಟ್ಟಂಗಿಲ್ಲ ಇಂದಿನ ವ್ಯಾಪಾರ ಬಿಡಂಗಿಲ್ಲ
ಎಲ್ಲಾ ಕೆಲ್ಸಕೂ ಚೈನಾ ಮಂದೀನೆ ಬೇಕು ಅಂತಾರ್ ರೀ
ಎಡವಟ್ಟಾಗಿ ಕಾರ್ಖಾನೆ ಮುಚ್ಚಿದ ಎಡಬಿಡಂಗಿ ಮಕ್ಳೆಲ್ಲ
ಎಲ್ಲಾ ವಸ್ತೂನೂ ಚೈನಾದಿಂದಾನೆ ತರಸ್ತಾರ್ ರೀ| 

ಸರಕು ಸಾಗಣೆ ಎಲ್ಲಾ ಕಡೆಗೂ ಚೈನಾದಿಂದ್ಲೇ ಹೋಗುತಲಿತ್ತು
ಭಾರೀ ಭಾರೀ ವ್ಯಾಪಾರ್‌ದ ಹಡಗೂ ಬಂದು ನಿಲ್ತಿದ್ವು ರೀ
ಸ್ವಲ್ಪ ರೊಕ್ಕಕ ಬಾಳಾ ಸಾಮಾನು ತಂದ್ರು ಮುಂದ ಹಾಕ್ಕೊಂಡ್ರು
ಮೈ ಚರಬಿ ಬೆಳಸಿಕೊಂಡು ಕೆಲ್ಸಾ ಇಲ್ಲದೆ ಅಡ್ಡ್ಯಾಡಾರ್ ರೀ|

ಕೊರೋನಾ ವೈರಸ್ ಹಾವಳಿ ನೋಡ್ರಿ ಎಲ್ಲಾ ಆಟ ಬಂದ್ ಆತು
ಇತ್ಲಾಗ್ ಉಗಿಯಂಗಿಲ್ಲ ನುಂಗಂಗಿಲ್ಲ ಅನ್ನೋ ಹಂಗಾತ್ ರೀ
ಚೈನಾ ದೇಶದ್ ಸಾವಾಸಾ ಬ್ಯಾಡಾಂತ ಎಲ್ಲರೂ ಅಂದ್ಕೊಂಡ್ರೂ
ಅಷ್ಟು ಸುಲಭ್‌ದಾಗ ಕಳಚಕಣಂಗಿಲ್ಲ ಚೈನಾ ಮಂದಿ ಅಂತೋರ್ ರೀ|

ಏನಾರ ಆಗ್ಲಿ, ಏನಾರ ಹೋಗ್ಲಿ ನಿಯತ್ತು ಇರಬೇಕ್ರಿ
ದೊಡ್ಡ ಮಂದಿಗೆ ಇಷ್ಟು ಸಣ್ಣ ವಿಷ್ಯ ತಿಳಿದಂಗ್ ಆಗೇತ್ರಿ
ಇಂಥವ್ರನ್ನೆಲ್ಲ ನೋಡಿ ನೋಡಿ ಕಣ್ಣ್ ಕಣ್ಣ್ ಬಿಡಬೇಕ್ರಿ
ಮಾಡಿದ್ದುಣ್ಣೋ ಮಾರಾಯಾ ಅಂದು ಸುಮ್ಮನಿರಬೇಕ್ರಿ|

Wednesday, April 29, 2020

ಅಕ್ಕಿ ಆರಿಸುವಾಗ...

ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್


 ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು.  ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು.  ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ.  ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.

ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ.  ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು


ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು.  ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ.     ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ.  ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ!  ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ.  ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು.  ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ.  ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು.  ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ.  ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ.  ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ.  ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.

ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|

ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ.  ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ.  ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ.  ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.


ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|

ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ.  ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ.  ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು

ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು  ಇರುತ್ತಿರಲಿಲ್ಲ.  ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ.  ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು.  ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು.  ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು.  ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.


ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|

ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ.  ಒಳಮನೆ ಹಾಗೂ ಆಡುಗೆ  ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು.  ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ.  ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ.  ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು

ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ.  ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.

ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|

ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ   ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ.  ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ.  ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ.  ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ.  ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Monday, April 27, 2020

ಮೊದಲ ದಿನ ಮೌನ

ಮೊದಲ ದಿನ ಮೌನ
ಕವಿ: ಕೆ. ಎಸ್. ನರಸಿಂಹ ಸ್ವಾಮಿ



ಮೊದಲ ದಿನ ಮೌನ... ಮೈಸೂರ ಮಲ್ಲಿಗೆಯ ಈ ಹಾಡನ್ನು ಕೇಳಿದಾಗೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಯನ್ನು ಪ್ರವೇಶಿಸಿದ ಹೆಣ್ಣುಮಗಳ ತಳಮಳ ಅರಿವಾಗುತ್ತದೆ.  ಆಗಿನ ಕಾಲದಲ್ಲಿ ತವರು ಮನೆ ತೊರೆದು ಮತ್ತು ಗಂಡನ ಮನೆಯನ್ನು ಸೇರಿ  ಅಲ್ಲಿ ಅವಿಭಕ್ತ ಕುಟುಂಬದಲ್ಲಿ ಹೊಸ ಜೀವನವನ್ನು ಸಾಗಿಸುವುದು ಪ್ರತಿ ಹೆಣ್ಣುಮಗಳ ಬದುಕಿನಲ್ಲಿ ಮಹತ್ವದ ಬದಲಾವಣೆಯೇ ಸರಿ.  ಈ ಹಾಡಿನ ಉದ್ದಕ್ಕೂ ಬರುವ ಅಲಂಕಾರಗಳು ಒಂದೊಂದು ಹಂತದಲ್ಲಿಯೂ ಹೊಸತನ್ನೇನೋ ಸಾರುತ್ತಿವೆ ಎನ್ನಿಸುತ್ತದೆ.  ಕನ್ನಡ ಸಾಹಿತ್ಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳ ಮನದ ತಲ್ಲಣವನ್ನು ಮೈಸೂರ ಮಲ್ಲಿಗೆಯ ಈ ಕವನ ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಈ ಮೂರು ದಿನಗಳ ಪರಿವರ್ತನೆಯ ಸಮಯದಲ್ಲಿ ಸಾಂದರ್ಭಿಕವಾಗಿ ಆಕೆಯ ಒಳತೋಟಿಯನ್ನು ಇಣುಕಿ ನೋಡುತ್ತದೆ.  ಹಲವು ದಶಕಗಳ ಹಿಂದೆ ಎಲ್ಲರೂ ಸಹಜವಾಗಿ ಗಮನಿಸಬಹುದಾದ ಭಾವನೆಯೇನೋ ಎನ್ನುವಂತಿದ್ದ ಕಾಲದಲ್ಲಿ ಈ ಹಾಡು ಜನಮಾನಸದಲ್ಲಿ ಅದರ ಸ್ಥಾನವನ್ನು ಪಡೆದುಕೊಂಡಿದ್ದಿರಬಹುದು, ಆದರೆ ಈ ಹಾಡಿನ ಭಾವನೆಗಳ ಸಾಂದ್ರತೆಯ ವಸ್ತುನಿಷ್ಠತೆ ಇಂದಿನ ಆಧುನಿಕ ಯುಗದಲ್ಲೂ ಕೇಳುಗರನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡು ಒಂದು ಕ್ಷಣ ಈ  ಹಾಡಿನಲ್ಲಿ ಅಡಗಿದ ಭಾವನೆಗಳ ಕೋಟಲೆಗಳೊಳಗೆ ಒಂದು ಮಾಡಿ ಬಿಡುತ್ತದೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 

ಗಂಡನ ಮನೆ ಸೇರಿದ ಮೊದಲ ದಿನ ಹೆಚ್ಚೂ ಕಡಿಮೆ ಮೌನದಲ್ಲೇ ಕಳೆದು ಹೋಗುತ್ತದೆ.  ಗುರುತು ಪರಿಚಯವಿಲ್ಲದ ಊರು,  ಮನೆಯಲ್ಲಿ ಮದುಮಗಳು ಅಲಂಕಾರಕ್ಕಿಟ್ಟ ಬೊಂಬೆಯೇನೋ ಎನ್ನುವಂತೆ ಎಲ್ಲರೂ ನೋಡುವವರೇ.  ಕುಳಿತರೂ ಕಷ್ಟ, ನಿಂತರೂ ಕಷ್ಟ.  ನಡುನಡುವೆ ತವರಿನ ಜ್ಞಾಪಕದಿಂದ ಕಣ್ಣು ಹನಿಗೂಡುತ್ತವೆ.  ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು.  ಚಿಂತೆ ಬಿಡಿ ಹೂವು ಮುಡಿದಂತೆ ಸಣ್ಣಗೆ ಇದ್ದರೂ ಇಲ್ಲದಂತೆ ತಲೆ ಏರಿ ಕುಳಿತಿರುತ್ತದೆ.

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ|

ನೆರೆ ಹೊರೆಯವರು ಹಾಗೂ ಮನೆ ಮಂದಿ ಎಲ್ಲರೂ ಬಂದು ನೋಡುವವರೇ.  ನವ ವಧು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಚಿಕ್ಕವರಿಂದ ದೊಡ್ಡವರ ವರೆಗೆ.  ಎಲ್ಲ ಕಡೆಯಿಂದ ಇಣುಕಿ ನೋಡುವ ಕಣ್ಣುಗಳು ಸಣ್ಣಗೆ ದೀಪ ಉರಿದಂತೆ ಕಂಡರೆ, ತಳಮಳದ ಜೀವದಲ್ಲಿ ಜಾತ್ರೆ ಮುಗಿದಂತೆನಿಸುತ್ತದೆ.  ಜಾತ್ರೆ ಮುಗಿದಾಗ ಏನೇನಾಗಬಹುದು... ಜಾತ್ರೆಗೆಂದು ತಲೆ ಎತ್ತಿದ್ದ ಅಂಗಡಿ ಮುಗ್ಗಟ್ಟುಗಳು ತಮ್ಮ ಟೆಂಟನ್ನು ಕಿತ್ತು ಗಂಟು ಮೂಟೆ ಕಟ್ಟುವುದು, ಅಲ್ಲಲ್ಲಿ ನಿಲ್ಲಿಸಿದ ಎತ್ತಿನ ಬಂಡಿ ಜಾನುವಾರುಗಳು ಪುನಃ ಮನೆ ಕಡೆಗೆ ದಾರಿ ಹಿಡಿವುದು, ಇಷ್ಟೊಂದು ಹೊತ್ತು ಗಿಜುಗಿಟ್ಟುತ್ತಿದ್ದ ಬೀದಿ-ವಠಾರಗಳು ನಿಧಾನವಾಗಿ ಖಾಲಿ ಆಗುವುದು.  ಊರಿನ ತೇರು ಆಗಲೇ ಗುಡಿ ಸೇರಿ ಜನರು ದೇವಸ್ಥಾನದಿಂದ ಪುನಃ ಮನೆಗೆ ಮರಳುವುದು.  ಜನಜಂಗುಳಿಯಿಂದ ಮೇಲೆದ್ದಿದ್ದ ಧೂಳು ನಿಧಾನವಾಗಿ ತಿಳಿಯಾಗುವುದು...ಹೀಗೆ ಒಂದು ಸಂಭ್ರಮದ ಕ್ಷಣ ಸಹಜವಾಗಿ ಮುಂದಿನ ಗತಿಯಲ್ಲಿ ಲೀನವಾಗುವುದರ ಚಿತ್ರಣದ ಮೂಲಕ ಈ ಸಾಲುಗಳು ಅನೇಕ ನೆನಪುಗಳನ್ನು ಹಲವು ರೂಪಕಗಳ ಮುಖೇನ ಕಣ್ಣಿಗೆ ಕಟ್ಟಿಕೊಡುತ್ತದೆ.

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ|

ಅಂತೂ ಕಷ್ಟದ ಮೊದಲ ದಿನ ಮುಗಿದು ಎರಡನೆಯ ದಿನ ಸ್ವಲ್ಪ ಚೇತರಿಕೆ ಶುರುವಾಗುತ್ತದೆ.  ಎರಡನೆಯ ಹಗಲು ಎಂದು ಶುರುವಾಗುವ ಸಾಲುಗಳು ಬಹಳ ನಿಧಾನವಾಗಿ ಸಾಗುವ ಉದ್ದದ ದಿನಗಳನ್ನು ತೋರಿಸುತ್ತವೆ.  ಸುತ್ತಲಿನ ಪರಿಸರ ನಿನ್ನೆಯಷ್ಟು ಹೊಸತೆನಿಸುವುದಿಲ್ಲ, ಆದ್ದರಿಂದ ಇಳಿ ಮುಖವಿರದೆ ಸ್ವಲ್ಪ ಕೊರಗು ಕಡಿಮೆಯಾದಂತೆನಿಸುತ್ತದೆ.  ಮನೆಯ ಒಳ ಹೊರಗೆ ಓಡಾಡಿದಂತೆಲ್ಲ ಹೊಸ ಮೂಗುತಿಯ ಮಿಂಚು ಅಲ್ಲಲ್ಲಿ ಕಾಣಸಿಗುತ್ತದೆ.  ಆದರೂ ಅವರಿವರ ಮಾತುಗಳಲ್ಲಿ ಅಷ್ಟೊಂದು ಸ್ಪಷ್ಟತೆ ಇಲ್ಲ, ಈ ಕಡೆ ಮಾತನಾಡಿದಂತೆಯೂ ಇರಬೇಕು, ಆಡದಂತೆಯೂ ಇರಬೇಕು.  ತೆಳುವಾದ ದುಃಖದ ಗುಂಗಿನಲ್ಲಿ ತೇಲುವ ಮನಸಿಗೆ ಆಡಿದ ಮಾತುಗಳು ಬರೀ ತುಟಿಯ ಚಲನೆಯಂತೆ ಕಂಡು ಬರಬಹುದು.  ಈ ಸಂದರ್ಭಗಳಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸುತ್ತದೆ.  ಬೇಲಿಯಲ್ಲಿ ಹಾವು ಸರಿದಂತೆ ಎನ್ನುವ ರೂಪಕ ತವರು ಮತ್ತು ಗಂಡನ ಮನೆಯ ಎರಡು ಕಡೆಗಳಲ್ಲಿ ಹರಿದಾಡುವ ಮನಸ್ಸಿನ ಪ್ರತೀಕವಿರಬಹುದು.  ಜೊತೆಗೆ ಬೇಲಿಯಲ್ಲಿ ಹರಿದಾಡುವ ಹಾವು ಜೊತೆಗೆ ಅಲ್ಲಿ ಹರಡಿದ ಹೂವು-ಮುಳ್ಳುಗಳ ಜೊತೆಗೆ ಸಹ ಪರಿಸರದಲ್ಲಿ ಹೊಂದಿಕೊಂಡಿರುವುದನ್ನು ಕಣ್ಣಿಗೆ ಕಟ್ಟುತ್ತದೆ.

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂದಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ 
ಹುಣ್ಣಿಮೆಯ ಹಾಲು ಹರಿದಂತೆ|

ಇನ್ನು ಮೂರನೆ ದಿನ ನಿಜವಾಗಿಯೂ ಚೇತರಿಕೆಯ ದಿನ.  ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡಿಸಿ ಮನೆಯವರೊಂದಿಗೆ ಸೇರಿಕೊಳ್ಳುವ ಪರಿ.  ಅತ್ತೆ, ಮಾವ, ಗಂಡ, ನಾದಿನಿ, ಮೈದುನರನ್ನೆಲ್ಲ ಸಂಬಾಳಿಸಿಕೊಂಡು ಹೋಗುವ ಪರಿ.  ಹೆರಳಿನ ತುಂಬಾ ಹೂ ಮುಡಿದಂತೆ ಆ ಹೂವಿಗೂ ಜೀವ ಬಂದಂತೆ ಎನ್ನುವ ಸಾಲುಗಳು ತಾಜಾ ಹೂಗಳು ಗುಂಪಾಗಿ ದಂಡೆಯ ರೂಪದಲ್ಲಿ ಸಂಭ್ರಮಿಸುವುದನ್ನು ನೋಡಬಹುದು, ಕೇವಲ ಮೂರೇ ದಿನಗಳಲ್ಲಿ ಇದು ಬಿಡಿ ಹೂವಿನ ಚಿಂತೆಯಿಂದ ಬಹಳ ದೂರ ಬಂದ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ.  ಮೂರನೆಯ ಸಂಜೆ ಎಂದು ಆರಂಭವಾಗುವ ಪದಗಳು ಎರಡನೆಯ ಭಾರವಾದ ಹಗಲಿನಿಂದ ಬಹಳಷ್ಟು ಮುಂದೆ ಬಂದ ಸೂಚನೆಯನ್ನು ಕೊಡುತ್ತದೆ.  ಜೊತೆಗೆ ರಾತ್ರಿ ಇಳಿದಂತೆ ಕತ್ತಲಾದರೂ ಇಡೀ ಬಾನನ್ನು ಆವರಿಸುವ ಹುಣ್ಣಿಮೆಯ ಹಾಲು   ಬೆಳದಿಂಗಳ ಕೊರಗುವ ಕತ್ತಲಿನಿಂದ ಮನಸ್ಸು ದೂರಸರಿದಿರುವುದನ್ನು ಪ್ರತಿಬಿಂಬಿಸುತ್ತದೆ.

ಈ ಹಾಡನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು/ಕೇಳಬಹುದು.

Sunday, April 26, 2020

ಜೀವದ ಬೆಲೆ ಜೀವದ ಸೆಲೆ


ಆರೇ ಆರು ವಾರಗಳಲ್ಲಿ ಗಂಗೆ-ಜಮುನೆ ಶುದ್ಧರಾದರು
ಜೀವಕೆ ಹೆದರಿದ ಕುಲ ಬಾಂಧವರು ಮುಗ್ಧರಾದರು
ಎಲ್ಲಾ ಜೀವಕು ಬೆಲೆ ಇದೆಯೆಂಬ ಪಾಠ ಕಲಿತರು
ತಾನೇ ಎಲ್ಲ ಎನ್ನುವ ಹಟವ ಮರೆತರು|

ಗೂಡಲಿ ಗುಹೆಯಲಿ ಅವಿತಿಹ ಮನುಜ
ಹೊರಬರಲಾರದೆ ಹೆದರಿಹ ನಿಜ
ಸಹ ಬಾಳುವೆ ಸಹ ಜೀವನ ಆಗಿದೆ ಸಜ
ತೂಗಿಸಿಕೊಳ್ಳುವ ಪ್ರಕೃತಿ ಎಂದಿಗೂ ರಾಜ|

ಕಣ್ಣಿಗೆ ಕಾಣದ ಜೀವದ ಬೆಲೆಯನು
ಕಣ್ಣಿಗೆ ಕಾಣದ ಜೀವಿಯು ಕಲಿಸಿತು
ನೋಟಕೆ ಮೀರಿದ ಪಾಠವು ನೂರಿದೆ
ಅದು ಆಟವಾಗದೆ ಅಳಲು ತೋಡಿದೆ|

ಜೀವದ ಬೆಲೆ ಜೀವದ ಸೆಲೆ ಸಂಭ್ರಮವೋ ಅಣ್ಣಾ
ತಿಂದು ತೇಗುವ ಮೊದಲು ತೆರೆಯಿರೋ ಕಣ್ಣಾ|

Sunday, September 27, 2009

ಅವನ ರೂಮು ಅವನ ಮನ

ಒಂಟಿ ಗೂಟಕ್ಕೆ ತಗುಲಿ ಹಾಕಿದಾ ಕೋಟು
ಒಣಗಿದ ಹೂಗಳ ತುರುಕಿಕೊಂಡ ಕಪಾಟು
ಅಲ್ಲಲ್ಲಿ ಚೆದುರಿ ಹೋದ ಪುಸ್ತಕಗಳ ಸಂತೆ
ಹುಲ್ಲು ಕುತ್ರೆ ತಲೆಯಲ್ಲಿ ಹಿಡಿಸಲಾರದ ಕಂತೆ.

ಯುದ್ಧವಿರದ ಸಿಪಾಯಿ ಕಾಡ ಮೇಲಿನ ದಂಗೆ
ಹಸಿವಿರದಿದ್ದರೂ ಕೂಳಿನ ಅಟ್ಟಹಾಸದ ನಗೆ
ಕಾಣದ ಕೈಗಳು ದೂರದಿಂದಲೇ ಆಡಿಸೊ ಆಟ
ಗೊತ್ತಿದ್ದೂ ಗೊತ್ತಿರದ ಚಕ್ರವ್ಯೂಹದ ಹೂಟ.

ಇವನ್ಯಾರು ಅವನ್ಯಾರು ಅದು ಬೇರೆ ಇದು ಬೇರೆ
ದೂರವಿರೆ ಮುಂದೆ ಬೇರೆ ಪ್ರಮೇಯವೇ ಬರದು
ಸಂತೆಯೊಳಗೆ ಹರವಿಟ್ಟ ಹತ್ತು ಹಲವು ತರಕಾರಿ
ಬರಿ ಬಿಸಿಲೊಳಗೇ ಬೇಯಿಸಿ ಹದ ಮಾಡುವ ಪರಿ.

ಪ್ರತಿ ಬಾಗಿಲಿಗೂ ಚಿಲಕವಿರೆ ಏನಂತೆ ಮನಕಿಲ್ಲವಲ್ಲ
ಕೋಣೆ ಕೋಣೆಗೆ ಅವುಗಳದೇ ಒಂದು ವಾಸ್ತವ್ಯವಲ್ಲ
ಹರವಿಬಿಟ್ಟ ಮನ ಎಲ್ಲೂ ಹೋಗದೆ ನಿಂತ ಹಾಗಿದೆ
ಮುಚ್ಚಿಟ್ಟ ಕೋಣೆ ನಿಂತು ನಿಂತಲ್ಲೇ ಎಲ್ಲೋ ಹೋಗಿದೆ.

ಚೌಕ ಆಯತಾಕಾರಗಳ ಪ್ರತಿಬಿಂಬ ಅವನ ಕೋಣೆ
ಆದರವನ ಮನದ ಮೂಲೆಗಳ ಇತಿಮಿತಿಗಳ ಕಾಣೆ
ಒಂದರದು ನಿಂತ ಹಾಗಿರುವಾಗಲೇ ಒಂದೊಂದು ಚಿತ್ರ
ಮತ್ತೊಂದರದು ಎಲ್ಲಾ ಕಡೆ ತಿರುಗಿಕೊಂಡಿಹ ವಿಚಿತ್ರ.

(ಲೈಬ್ರರಿಯ ರೀಡಿಂಗ್ ರೂಮಿನಲ್ಲಿ ತದೇಕ ಚಿತ್ತನಾಗಿ ಓದುತ್ತಿದ್ದ ವ್ಯಕ್ತಿಯೊಬ್ಬನನ್ನು ಕುರಿತು)

Sunday, August 17, 2008

ಚಿತ್ರವಿಲ್ಲದ ಕವನ

Its all your fault...ಚಿತ್ರಕವನ! ಕಳೆದ ಅರವತ್ತೈದು ವಾರಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನನ್ನನ್ನು ನಾಲ್ಕು ಸಾಲು ಕವನದ ರೀತಿಯಲ್ಲಿ ಗೀಚುವಂತೆ ಪ್ರೇರೇಪಿಸುತ್ತಿದ್ದ ಚಿತ್ರಗಳನ್ನು ಬಿಂಬಿಸುತ್ತಿದ್ದ ತಾಣ ಈಗ ಒಂದು ವಾರದಿಂದ ಸ್ಥಗಿತಗೊಂಡಿದೆ, ಅಥವಾ ಸೆಪ್ಪೆಯಾಗಿದೆ.

So, what is the impact? ನಾನು ಪ್ರತಿವಾರ ಏನಾದರೊಂದನ್ನು ಕವನದ ರೂಪದಲ್ಲಿ ಬರೆಯಬೇಕೆನ್ನುವುದು ರೂಢಿಯಾಗಿ ಹೋಗಿದೆ, ಅದಕ್ಕೋಸ್ಕರ ಈ ಬ್ಲಾಗ್‌ಪೋಸ್ಟ್‌ನಲ್ಲಿ ಮುಂದೆ ಒಂದು ಕವನ ಹುಟ್ಟಲಿದೆ - ಈವರೆಗೆ ಅದರ ತತ್ವವಾಗಲಿ, ಸತ್ವವಾಗಲಿ, ಯಾವುದರ ಬಗ್ಗೆ ಬರೆಯಬೇಕು ಬಿಡಬೇಕು ಎಂಬುದರ ಬಗ್ಗೆ ಒಂದು ಚೂರೂ ಗೊತ್ತಿಲ್ಲ - ಕೆಳಗೆ ಕವನ ಡೈನಮಿಕ್ ಆಗಿ ಹುಟ್ಟೋದೇ ಈ ಬ್ಲಾಗ್ ಬರಹಗಳ ವಿಶೇಷ!

***

ಕಳೆದ ವರ್ಷ ಮೇ ತಿಂಗಳಿನಲ್ಲಿ, ಅರವತ್ತೈದು ವಾರಗಳ ಹಿಂದೆ ಶ್ರೀದೇವಿ ಹೀಗೊಂದು ಸೈಟು ಹುಟ್ಟು ಹಾಕಿದ್ದೇವೆ ನೋಡಿ ಎಂದು ಹೇಳಿದ್ದೇ ತಡ ನನ್ನೊಳಗಿನ ಕವಿಗೆ ಒಂದು ಜೀವ ಬಂದು ಹಾಕಿದ ಚಿತ್ರಗಳಿಗೆಲ್ಲ ಒಂದು ಕವನವನ್ನು ಬರೆದು ಹಾಕಿದ್ದಾಯಿತು. ಮುಂದೆ ಅವರು ತಮ್ಮದೇ ಆದ ವೆಬ್‌ಸೈಟ್ ಅನ್ನು ಹುಟ್ಟು ಹಾಕುತ್ತೇವೆ, ಅದು ’ಚಿತ್ರಸ್ಪಂದನ’ವಾಗಿ ಹೊರಬರಲಿದೆ ಎಂದಾಗ ನಾನೇ ’ಯಾಕೆ, ಈಗಿರುವುದು ಚೆನ್ನಾಗೇ ಇದೆಯೆಲ್ಲ’ ಎಂದು ಕೊಂಕು ನುಡಿದಿದ್ದೆ. ಕೆಲವರ ಹುಮ್ಮಸ್ಸು ನೋಡಿ ನನಗೆ ಬಹಳಷ್ಟು ಸಂತೋಷವಾದರೂ, ಹಿಂದೆ ’ಕರ್ನಾಟಕಪತ್ರ ಡಾಟ್ ಕಾಮ್’ ನಮ್ಮದೇ ಆದ ವೆಬ್‌ಸೈಟ್ ಇಲ್ಲದೇ ನಮ್ಮ ಬದುಕೇ ನಡೆಯದು ಎಂದು ಹಂಬಲಿಸಿದ ಒಂದಿಬ್ಬರು ಬೆಂಗಳೂರಿನ ಯುವಕರಿಗೆ ನಾನು ದುಡ್ಡು ಖರ್ಚು ಮಾಡಿ ಒಂದು ಇಂಡಿಪೆಂಡೆಂಟ್ ವೆಬ್‌ಸೈಟ್ ಅನ್ನು ಮಾಡಿಕೊಟ್ಟ ಮೇಲೆ ಏನಾಯಿತು, ಫ್ರೀ ಸೈಟ್‌ನಲ್ಲಿದ್ದ ಕಂಟೆಂಟಾಗಲೀ, ಅದರ ಹುಮ್ಮಸ್ಸಾಗಲೀ ಸ್ವತಂತ್ರ ಸೈಟ್‌ನಲ್ಲಿ ಮೂಡಿ ಬರಲೇ ಇಲ್ಲ. ಈ ಯುವಕರು ಮುಂದೆ ತಮ್ಮ ತಮ್ಮ ದಾರಿ ಹಿಡಿದು ಹೊರಟು ಹೋದರು, ನಾನು ಮರೀಚಿಕೆಗೆ ಇನ್ನೂರೈವತ್ತು ಡಾಲರ್ ಸುರಿದು ಬೆಪ್ಪನಾದೆ. ಈ ಹಿಂದೆ ಹೀಗೆ ಕೈ ಸುಟ್ಟುಕೊಂಡ ಕಾರಣಕ್ಕಾಗಿಯೇ ನಾನು ’ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ’ ಎಂದು ಹಾರಾಡುವವರನ್ನೆಲ್ಲ ಭೂಮಿಗೆ ಹಿಡಿದು ಒಂದು ಮೊಳೆ ಹೊಡೆದಿಡಲು ಪ್ರಯತ್ತಿಸುವುದು, ಅವರ ಪರಿಶ್ರಮ ನಿಜವಾಗಿಯೇ ಇದ್ದಲ್ಲಿ ಅದು ಪರಿಶುದ್ಧ ಚಿನ್ನದಂತೆ ಮೂಸೆಯಲ್ಲಿ ಕುದಿಯುವಾಗಲೂ ಹೊಳೆಯುತ್ತದೆ, ಸಣ್ಣಪುಟ್ಟ ಅಡೆತಡೆಗಳು ದೊಡ್ಡ ಗುರಿಯನ್ನಾಗಲೀ, ಆಶಾವಾದವನ್ನಾಗಲೀ ನಿಲ್ಲಿಸಲಾರವು.

***

ಈಗ ಕೆಳಗೆ ಬರೆಯಬೇಕಾದ ಕವನ - ಚಿತ್ರವೆಲ್ಲಿದೆ ಎಂದುಕೊಳ್ಳುತ್ತೀರಾದರೆ, ನೀವು ಕಣ್ಣು ಮುಚ್ಚಿ ಐದು ಕ್ಷಣ ನಿಮ್ಮೊಳಗೆ ನೀವು ನೋಡಿಕೊಂಡಿದ್ದೇ ಆದರೆ ಅದೇ ಚಿತ್ರ, ಅದಕ್ಕೆ ತಕ್ಕನಾಗಿ ನಿಮಗೊಬ್ಬರಿಗೆ ಮಾತ್ರ ಅರ್ಥವಾಗುವ ಈ ಕವಿತೆಯ ಸಾಲುಗಳು - here you go:

ಪಯಣ ದೊಡ್ಡದೋ ಹಾದಿ ದೊಡ್ಡದೋ
ಹಾದಿ ಹಿಡಿದು ಹೊರಟ ಪಯಣ
ತಲುಪೋ ಗುರಿಯು ದೊಡ್ಡದೋ.
ತೇರು ದೊಡ್ಡದೋ ಕಲಶ ದೊಡ್ಡದೋ
ಸುತ್ತ ಹತ್ತು ಕಷ್ಟ ಹೇಳಿಕೊಂಡು
ಬೇಡೋ ಜನರ ಮನಸು ದೊಡ್ಡದೋ.

ನಡೆಯತೊಡಗಿ ನೋಡಿದಂತೆ ಮುಂದೆ
ದೂರ ಎಷ್ಟೋ ಭಾರ ಎಷ್ಟೋ ಹಿಂದೆ
ನಾಳೆ ಇರುವ ಕಷ್ಟಗಳ ಯೋಚನೆ
ಇಂದು ಗಟ್ಟಿ ನಿಂತ ಮನದ ಯಾಚನೆ.

ಮೇಲೆ ಎಷ್ಟೇ ಮಳೆಯು ಸುರಿದರೂ
ಸೂರಿನಿಂದ ನೀರು ಹನಿಯಾಗಿ ಬೀಳುವಂತೆ
ಕೈಕೊಂಡಿಹ ಕೆಲಸಕೆ ಆತಂಕವು ಸಹಜವು.
ಅಲ್ಲಿ ಇಲ್ಲಿ ಹಾಗೆ ದುಡಿದು ಬೇಡವಾದುದನ್ನು
ಬಗೆದು ಸವಾಲುಗಳನ್ನೆಲ್ಲ ಮೀರಿ ಒಮ್ಮೆ ಸಿಕ್ಕ
ನೆಲೆಯಿಂದ ಇನ್ನೆಲ್ಲೋ ಸಾಗುವುದೇ ಕ್ಷೇಮವು.

ಒಳಗಿರುವ ಸುಖವನ್ನು ನೋಡುವವರೇ ಇಲ್ಲ
ಯಾವಾಗಲೂ ಹೊರಗೆ ಅರ್ಭಟಿಸುವುದೇ ಎಲ್ಲ
ಸುಖವೆಂಬುದು ಅವರವರ ಮನಸಿನಾ ನೆಲೆ
ಇರದಿದ್ದಲ್ಲಿ ಹುಡುಕುವುದು ಒಂದು ಕಷ್ಟದ ಬಲೆ.


***

So, what do you think? ಚಿತ್ರವಿಲ್ಲದೇ ಕವನ ಚಿತ್ರಕವನ ತಂಡದ ಕೃಪೆಯಿಂದ ಇಲ್ಲಿ ಹೀಗೆ ಪಬ್ಲಿಷ್ ಆಗ್ತಾ ಇದೆ. ಇದಕ್ಕೆ ಹಿನ್ನೆಲೆ-ಮುನ್ನೆಲೆ, ಮಣ್ಣೂ-ಮಸಿ ಒಂದೂ ಇಲ್ಲ, ಸುಮ್ಮನೇ ಎಂದಿನಂತೆ ಬರೆದ ಈ ಹೊತ್ತಿನ ತತ್ವವಷ್ಟೇ!

ಈ ಸಾರಿ ಶ್ರಾವಣ ಮಾಸ ಆರಂಭವಾಗಿ ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ, ನೂಲು ಹುಣ್ಣಿಮೆ, ರಕ್ಷಾ ಬಂಧನ ಇವುಗಳೆಲ್ಲ ಆದ್ರೂ ಇನ್ನೂ ’ಅಂತರಂಗ’ದಲ್ಲಿ ಶ್ರಾವಣ ಅನ್ನೋ ಪದವೇ ಬಳಕೆ ಯಾಕೆ ಆಗಿಲ್ಲ ಅಂತ ನನಗೆ ನನ್ನದೇ ಪ್ರಶ್ನೆ. ಈ ಒಲಂಪಿಕ್ಸ್ ಆಟಗಳನ್ನು ನೋಡೋದರಲ್ಲಿ ಟೈಮು ಕಳೆಯುತ್ತಿದ್ದೇನೆ ಅನ್ನೋದು ಒಂದು ಸುಳ್ಳು ನೆಪ ಅಷ್ಟೇ, ಯಾಕೋ ಬರೆದೇ ಇಲ್ಲ ಇತ್ತೀಚೆಗೆ. ಈ ಬ್ಲಾಗ್ ಬರಹಗಳು ಒಂದು ರೀತಿ ಫ್ರೀಡಂ ಅನ್ನೋ ಕೊಡೋದರ ಜೊತೆಗೆ ಬರೀ ಇದಕ್ಕೆ ಅಡಿಕ್ಟ್ ಆಗಿದ್ದುಕೊಂಡು ಇದರಲ್ಲೇ ನಮ್ಮ ಮಿತಿಗಳನ್ನು ಆಡಿಸಿಕೊಂಡು ಬರೋದು ಹುಚ್ಚಾಟವಾಗುತ್ತದೆ. ಆ ಕಾರಣದಿಂದಲೇ ಇತ್ತೀಚೆಗೆ ಒಂದಿಷ್ಟು ಓದೋದನ್ನ ರೂಢಿಸಿಕೊಳ್ಳುತ್ತಿದ್ದೇನೆ. After all, ಚೆನ್ನಾಗಿ ಓದದೇ ಏನು ಬರೆದರೇನು, ಬಿಟ್ಟರೇನು?! ನಾವು ನಾವೇ ಬರೆಯೋದು ಎಲ್ಲರಿಗೂ ಮಹಾನ್ ಆಗಿ ಕಾಣೋದರಲ್ಲಿ ತಪ್ಪಿಲ್ಲ, ನಮ್ಮದನ್ನು ಬಿಟ್ಟು ಬೇರೆಯವರದೂ ಇದೆ ಎಂದುಕೊಂಡು ಬೇರೆಲ್ಲೋ ನಮ್ಮನ್ನು ನಾವು ಕಂಡುಕೊಳ್ಳೋದು ಇದೆಯಲ್ಲ ಅದು ದೊಡ್ಡದು.