Showing posts with label ರಾಜಕಾರಣ. Show all posts
Showing posts with label ರಾಜಕಾರಣ. Show all posts

Sunday, July 28, 2019

ರಾಜಕೀಯ ಪ್ರಹಸನ

ವರ್ಷದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಎರಡು ಮಹತ್ವದ ಅಂಶಗಳು ಗಮನ ಸೆಳೆದವು: ಒಂದು, ದೇಶದಾದ್ಯಂತ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜನರು ನಂಬಿಕೆ ಇಟ್ಟು ಇನ್ನೈದು ವರ್ಷಗಳ ಸ್ಥಿರ ಆಡಳಿತಕ್ಕೆ ಬುನಾದಿ ಹಾಕಿರುವ ವಿಷಯ, ಅದರ ಜೊತೆಗೆ ಉಳಿದ ಪಕ್ಷಗಳ ಪ್ರಣಾಳಿಕೆಗಳ ಸಾರಾಸಗಟು ತಿರಸ್ಕಾರ.  ಮೇಲ್ನೋಟಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡು ಬಂದರೂ, ಈ ಚುನಾವಣೆಯಲ್ಲಿ ಹಿರಿಯ ಮುತ್ಸದ್ದಿ ಇಲ್ಲದ ಉಳಿದ ರಾಷ್ಟ್ರೀಯ ಪಕ್ಷಗಳಿಗೆ ಬೆಲೆ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ.  ಹೀಗಾಗಿ ಒಂದು ಪಕ್ಷ ಅಥವಾ ಬಣಕ್ಕೆ ಅವುಗಳ ಧ್ಯೇಯೋದ್ದೇಶಗಳು ಎಷ್ಟು ಮುಖ್ಯವೋ ಅಷ್ಟೇ ಅವುಗಳನ್ನು ಪ್ರತಿಬಿಂಬಿಸಿ ಜನಮನಗಳಿಗೆ ತಲುಪಿಸುವ ಒಂದು ಹಿರಿಯ ಧ್ವನಿಯೂ ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ.  ಇದು ಯಾವತ್ತಿಗೂ ಸತ್ಯ.  ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ವರ್ಚಸ್ವಿ ಜನನಾಯಕರುಗಳ ಕರೆಗೆ ಓಗೊಟ್ಟು ಲಕ್ಷಾಂತರ ಜನ ತಮ್ಮ ಮನೆಮಠಗಳನ್ನು ತೊರೆದು ಚಳವಳಿಯಲ್ಲಿ ಧುಮುಕಲಿಲ್ಲವೇ? ಹಾಗೇ, ಇಂದಿನ ಪ್ರಜಾಸತ್ತೆಯಲ್ಲಿಯೂ ಸಹ ಹಿರಿಯ ನಾಯಕರ ಕರೆಗೆ ಬೆಲೆ ಇದೆ, ಆದರೆ ಅಂತಹ ವರ್ಚಸ್ಸಿನ ಹಿರಿಯ ನಾಯಕರುಗಳ ಕೊರತೆ ಬಹಳ ಎದ್ದು ಕಾಣುತ್ತದೆ.  ದೇಶದ ಉದ್ದಗಲಕ್ಕೆ ಎಣಿಸಿದರೆ ನೂರಾರು ಪಕ್ಷಗಳು ತಲೆ ಎತ್ತಿರುವ ನಮ್ಮ ದೇಶದಲ್ಲಿ ಅಷ್ಟೇ ಪ್ರಭಾವಿಗಳಾಗಿ ಜನಾಕರ್ಷಣೆಯನ್ನು ಹೊಂದಿರುವ ಮೂರು ಜನ ಮುಖಂಡರುಗಳಿಲ್ಲ ಎಂದು ಹೇಳಲು ಖೇದವಾಗುತ್ತದೆ.  ಪ್ರಾದೇಶಿಕ ಮಟ್ಟದಲ್ಲಿ ಅನೇಕ ಜನಸ್ಪಂದನದ ವ್ಯಕ್ತಿತ್ವಗಳು ಗೋಚರಿಸಬಹುದು, ಆದರೆ ಅಂತಹ ಮುಂದಾಳುಗಳ ಧ್ವನಿಗಳು ತಮ್ಮ ತಮ್ಮ ಸ್ಥಳೀಯ ಜಂಜಾಟಗಳಲ್ಲಿ ಕಳೆದುಕೊಳ್ಳುತ್ತವೆಯೇ ವಿನಾ ದೇಶವನ್ನು ಬೆಳೆಸುವ ಮಟ್ಟಿಗೆ ಬೆಳೆಯುವುದು ಅಪರೂಪ.  ಈ ನಿಟ್ಟಿನಲ್ಲಿ, ಗುಜರಾತ್ ಮೂಲದಲ್ಲಿ ಉದ್ಭವಿಸಿ ರಾಷ್ಟ್ರವ್ಯಾಪಿ ಬೆಳೆದು ನಿಂತಿರುವ ಹೆಮ್ಮರ ಮೋದಿ ಎನ್ನಬಹುದು.

***
ನಮ್ಮ ಜನ ಸಾಮಾನ್ಯರಲ್ಲಿ ಒಂದು ಸಹಜವಾದ ಪ್ರಶ್ನೆ ಆಗಾಗ್ಗೆ ಏಳುತ್ತಿರುತ್ತದೆ: ಈ ರಾಜಕಾರಣಿಗಳಿಗೆ ಎಷ್ಟು ದುಡ್ಡು ಮಾಡಿದರೂ (ತಿಂದರೂ) ತೃಪ್ತಿಯಾಗುವುದಿಲ್ಲವಲ್ಲ, ಏಕೆ?  ಈ ಪ್ರಶ್ನೆಯ ಆಳಕ್ಕೆ ಹೋದಂತೆಲ್ಲ, ಹುಲಿ ಸವಾರಿ ಮಾಡಿಕೊಂಡು ಅಟ್ಟಹಾಸ ಮಾಡುತ್ತಿರುವ ಅನೇಕ ಜನನಾಯಕರ ಮುಖ ಗೋಚರಿಸಬಹುದು. ಇವರೆಲ್ಲ ದಾಹದ ಕೂಪವೆನ್ನುವ ಆಳವಾದ ಕೊರಕಲಿನಲ್ಲಿ ಭ್ರಷ್ಟಾಚಾರವೆನ್ನುವ ಹುಲಿ ಸವಾರಿಯನ್ನು ಮಾಡಿಕೊಂಡು ಗುಟುರು ಹಾಕಿಕೊಂಡಿರುತ್ತಾರೆ.  ಆದರೆ, ಪಾಪ, ಇವರ ಜೀವಮಾನದಲ್ಲೆಲ್ಲೂ ಇವರು ಹುಲಿಯ ಬೆನ್ನಿನಿಂದ ಕೆಳಗಿಳಿಯಲು ಸಾಧ್ಯವೇ ಇಲ್ಲದೇ, ಈ ಹುಲಿ ಸವಾರಿ ಮಾಡುತ್ತಲೇ ನಿವೃತ್ತಿ, ಮೋಕ್ಷ ಮತ್ತಿನ್ನೆಲ್ಲವನ್ನೂ ಕಂಡುಕೊಳ್ಳುತ್ತಾರೆ.  ನಮ್ಮ ರಾಜಕಾರಣಿಗಳು ಯಾವ ಸ್ಥರದಲ್ಲೇ ಇರಲಿ, ಮನೆಗೆ ಬಂದು ಮೂಟೆಗಟ್ಟಲೆ, ಸೂಟ್‌ಕೇಸುಗಟ್ಟಲೆ ಕೋಟ್ಯಾಂತರ ರೂಪಾಯಿ "ಅನುದಾನ"ವನ್ನು ತಂದು ಕೊಡುವವರಿರುವಾಗ ಹುಲಿ ಸವಾರರು ಒಲ್ಲೆ ಎಂದು ಹೇಳಲು ಸಾಧ್ಯವಿದೆಯೇ? ಉದಾಹರಣೆಗೆ, ಪ್ರತಿವರ್ಷ ಪ್ರತಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಐವತ್ತು ಕೋಟಿ ಅನುದಾನ ಬರುತ್ತದೆ ಎಂದುಕೊಂಡರೆ, ಅದರ ಹತ್ತು ಪರ್ಸೆಂಟ್, ಅಂದರೆ ಐದು ಕೋಟಿ ನಮ್ಮ ಎಂ.ಪಿ.ಗಳ ಮನೆಗೆ ಬಂದು ಸೇರಿತೆಂದುಕೊಳ್ಳಿ.  ಅದನ್ನು ಬೇಡವೆಂದರೆ, ಇವರ ಹುಲಿ ಸವಾರಿಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಕೊನೆಗೆ ಆ ಹುಲಿಯೇ ಇವರನ್ನು ಬಲಿತೆಗೆದುಕೊಳ್ಳುತ್ತದೆ.  ಅದನ್ನು ಇಟ್ಟುಕೊಂಡರೆ, ಅದು ಕಪ್ಪು ಹಣದ ಲೆಕ್ಕಕ್ಕೆ ಸೇರಿಕೊಂಡು ಮುಂದಿನ ಚುನಾವಣೆಯವರೆಗೆ ಎಲ್ಲೋ ಮೂಲೆಯಲ್ಲಿ ಕೊಳೆಯುತ್ತದೆ!  ಈ ಹುಲಿ ಸವಾರಿ ಒಂದು ಉದಾಹರಣೆ ಅಷ್ಟೇ.  ತಮ್ಮ ತಮ್ಮ ತಾಕತ್ತಿಗೆ ತಕ್ಕಂತೆ, ತಮ್ಮ ತಮ್ಮ ಪರಿಸರಕ್ಕೆ ತಕ್ಕಂತೆ, ಬೇರೆಬೇರೆ ಪ್ರಾಣಿಗಳ ಸವಾರಿ ಮಾಡಿ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಳ್ಳುವವರು ಇದ್ದಾರೆ.

***
ಹುಲಿ ಸವಾರಿಯ ಬಯಕೆಯ ಮೂಲವೇನು? ಅದೆಲ್ಲಿಂದ ಉತ್ಪನ್ನವಾಯಿತು ಎಂದು ಶೋಧಿಸಿ ನೋಡಿದಾಗ ನಮ್ಮ ಚುನಾವಣಾ ಪ್ರಕ್ರಿಯೆ ಕಣ್ಣಿಗೆ ಬಿತ್ತು.  ನೀವು ಹಣಕಾಸು ವಿಲೇವಾರಿಯ ಯಾವುದೇ ಶಾಸನವನ್ನು ಬರೆಯಿಸಿ.  ಪ್ರಪಂಚದ ಪೋಲೀಸರನ್ನೆಲ್ಲ ತಂದು ನಮ್ಮ ನಮ್ಮ ಜಿಲ್ಲೆಯಲ್ಲಿ ಎಲೆಕ್ಷನ್ ಉಸ್ತುವಾರಿಕೆಗೆ ಬಿಡಿ, ತಪ್ಪಿತಸ್ತರಿಗೆ ಎಂತಹ ಕಠಿಣ ಶಿಕ್ಷೆಯನ್ನಾದರೂ ಕೊಡಿಸಿ... ನೀವು ಅದೇನೇ ತಿಪ್ಪರಲಾಗ ಹಾಕಿದರೂ, ಹಣ-ಹೆಂಡ ಮತ್ತಿತರ ವಸ್ತುಗಳನ್ನು ಹಂಚಿ ಚುನಾವಣೆ ಗೆಲ್ಲುವ ಶಕ್ತಿಗಳಿಗೆ ಕಡಿವಾಣ ಹಾಕಲಾರಿರಿ.  ಇತ್ತೀಚೆಗೆ ನಾನು ಕೇಳಿದ ಒಂದೆರಡು "ಕೊಟ್ಟು-ತೆಗೆದುಕೊಳ್ಳುವ" ಉದಾಹರಣೆಗಳಲ್ಲಿ, ಒಬ್ಬ ಮಲ್ಟಿ ಅಪಾರ್ಟ್‌ಮೆಂಟ್ ಮಾಲಿಕ ತನ್ನ ಒಂದು ವರ್ಷದ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕೊಡದೇ ಉಳಿಸಿಕೊಂಡಿರುತ್ತಾನೆ.  ತನ್ನ ಹತ್ತಿರ ಓಟು ಕೇಳಲು ಹೋದವರಿಗೆ, ’ಈ ಬಿಲ್ ಅನ್ನು ಕಟ್ಟಿ ಬಾ...’ ಎಂದು ಬಿಲ್ ಕೊಟ್ಟು ಕಳುಹಿಸುತ್ತಾನೆ.  ಒಂದು ಪಕ್ಷದವರಿಗೆ ಕರೆಂಟ್ ಬಿಲ್, ಮತ್ತೊಂದು ಪಕ್ಷದವರಿಗೆ ನೀರಿನ ಬಿಲ್ ಕೊಟ್ಟರೆ, ಈ ರೀತಿಯ ಲೇವಾದೇವಿಯನ್ನು ಯಾರು ಹೇಗೆ ಕಂಡು ಹಿಡಿಯಲು ಸಾಧ್ಯ?  ನಮ್ಮ ಜನಗಳ ದುಡ್ಡೇ ಈ ರೀತಿ ತಿರುತಿರುಗಿ ಬೇನಾಮಿ ಖರ್ಚಾದಂತೆ ಕಂಡು ಬರುತ್ತಿದೆ ಎಂದು ಯಾರಿಗೆ ಹೇಳೋದು, ಯಾರಿಗೆ ಕೇಳೋದು?  ಒಂದು ಲೋಕಸಭಾ ಚುನಾವಣೆಯಲ್ಲಿ ಎಷ್ಟು ದುಡ್ಡು ಹೇಗೆ ಖರ್ಚು ಆಗುತ್ತದೆ ಎಂದು ನಿಮಗೆ ನಿಜವಾಗಿಯೂ ಕುತೂಹಲವಿದ್ದರೆ, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಸೋತ ಮಧು ಬಂಗಾರಪ್ಪ ಅವರನ್ನು ಕೇಳಿ ನೋಡಿ!

ಒಂದು ಸಮೀಕ್ಷೆಯ ಪ್ರಕಾರ ಒಂದು ಜಿಲ್ಲೆಯ ಚುನಾವಣೆಯ ಖರ್ಚು ಕಡಿಮೆ ಎಂದರೆ ನೂರು ಕೋಟಿ ರುಪಾಯಿಗಳು!  ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ನೀರಿನಂತೆ ಹಣ ಹರಿದು ಇನ್ನೂ ಹೆಚ್ಚು ಖರ್ಚಾಗಿರುವ ಉದಾಹರಣೆಗಳು ಕೂಡಾ ಇವೆ.  ಈ ನೂರು ಕೋಟಿಯನ್ನು ಒಬ್ಬ ಅಭ್ಯರ್ಥಿ ಅನೇಕ ಮೂಲಗಳಲ್ಲಿ "ಸಂಪಾದಿಸ"ಬಹುದು.  ಪಾರ್ಟಿ ಫಂಡಿನಿಂದ ದುಡ್ಡು ಹರಿಯಬಹುದು, ಉಳ್ಳವರ ಕಿಸೆಯಿಂದ ಹರಿದು ಬಂದಿರಬಹುದು, ತಾವೇ (ವಾಮಮಾರ್ಗದಲ್ಲಿ) ಕೂಡಿ ಹಾಕಿದ ಫಂಡ್ ಇರಬಹುದು, ಅಥವಾ ಇತರರ "ದೇಣಿಗೆ" ಇರಬಹುದು... ಇಷ್ಟೆಲ್ಲಾ ಖರ್ಚು ಮಾಡಿ, ಗೆಲ್ಲುವ, ಗೆದ್ದು ಮುನ್ನುಗ್ಗುವ ಛಲದ ಮೂಲ - ಈ (ಬಂಡವಾಳ) ದುಡ್ಡಿನ ನೂರು ಪಟ್ಟು ದುಡ್ಡು ಮಾಡುವುದು.  ಹೀಗೆ ದುಡ್ಡು ಮಾಡುತ್ತಾ ಮಾಡುತ್ತಾ, ಇವರುಗಳು ಬಿದ್ದ ಕೂಪದ ಆಳ ಹೆಚ್ಚಾದಂತೆಲ್ಲ, ಇವರುಗಳು ಏರುವ ಹುಲಿಯ ಕೊಬ್ಬು ಏರುತ್ತಲೇ ಹೋಗುತ್ತದೆ.

ಇನ್ನೈದು ವರ್ಷ ಕೇಂದ್ರದಲ್ಲಿ ಸ್ಥಿರ ಸರ್ಕಾರ, ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಧೂಳೀಪಟ - ಇವೆರಡರ ಮೊತ್ತ, ಕರ್ನಾಟಕದ ಅಸ್ಥಿರ ರಾಜಕಾರಣ, ಅಥವಾ "ಪ್ರಬಲ"ವಾದ ಪಕ್ಷದ ಆಡಳಿತ.  ಒಮ್ಮೆ ಪ್ರಬಲ ಸರ್ಕಾರದ ಆಡಳಿತವೆಂದರೆ ಅದು ಮೂರು, ಐದು, ಹತ್ತುವರ್ಷಗಳ ವರೆಗೆ ನಿರಂತರವಾಗಿ ಮುಂದೆ ಹೋಗುತ್ತಲೇ ಇರಬಹುದು.  ಈ ಹಂತದಲ್ಲಿಯೇ ತಮ್ಮ ತಮ್ಮ ಪಕ್ಷದ ನಿಷ್ಠತೆಯನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಕೆಲವರು, ಅವಕಾಶ ಸಿಕ್ಕಿದ್ದೇ ತಡ ಜಿಗಿದರು.  ಇನ್ನು ಕೆಲವರು, ನೀತಿ, ನಿಯಮ, ಸತ್ಯಸಂಧತೆಯ ಹಿನ್ನೆಲೆಯಲ್ಲಿ ರಾಜೀನಾಮೆ ಬಿಸಾಡಿದರು.  ಇನ್ನು ಕೆಲವರು ಗೆದ್ದೆತ್ತಿನ ಬಾಲ ಹಿಡಿದರು.

***
ಗೆದ್ದು ಶಾಸಕ, ಸಂಸದನಾಗಿ ಆರಿಸಿ ಬಂದ ವ್ಯಕ್ತಿಗೆ ಮುಖ್ಯ ಎರಡು ಗುರಿಗಳಿವೆ: ತಮ್ಮ ಮೂಲ ಬಂಡವಾಳವನ್ನು ದ್ವಿಗುಣ-ತ್ರಿಗುಣ (ಉಲ್ಬಣ) ಗೊಳಿಸುವುದು, ತಮ್ಮ ಕಾರ್ಯಕರ್ತ-ಹಿತೈಷಿ-ಸಂತಾಪಕರ ನಡುವೆ ತಮ್ಮ ಪಾರಮ್ಯವನ್ನು ಮೆರೆಯುವುದು.  ಇವೆರಡೂ ಒಂದಕ್ಕೊಂದು ಪೂರಕವಾಗಲು ಸಾಧ್ಯವಾಗುವ ಸುಲಭ ವಿಧಾನವೇ - ಮಂತ್ರಿಯಾಗುವುದು!  ಈ ಸುಲಭ ಫಾರ್ಮುಲಾವನ್ನು ಮನದಟ್ಟು ಮಾಡಿಕೊಂಡ ರಾಜಕಾರಣಿಗಳೆಲ್ಲ ರಾತ್ರೋರಾತ್ರಿ ಮುತ್ಸದ್ದಿಗಳಾಗಿ, ಹಿರಿಯ ಹೋರಾಟಗಾರರಾಗಿ ವಿಜೃಂಭಿಸುವುದು.  ಮೊದಲೆಲ್ಲ ಐದು ಬಾರಿ ಗೆದ್ದು ಶಾಸಕರಾದರೂ ಮಂತ್ರಿ ಪದವಿಯನ್ನು ಕೇಳದೇ ತಮ್ಮ ಪಾಲಿಗೆ ಬಂದದ್ದನ್ನು ಪಾಲಿಸುವ ಪಕ್ಷನಿಷ್ಠರಿದ್ದರು. ಆದರೆ ಇಂದು, ಕೇವಲ ಎರಡು ಸಾರಿ ಶಾಸಕರಾಗಿ ಒಂದು ಕ್ಷೇತ್ರದಿಂದ ಆರಿಸಿ ಬಂದವರೆಲ್ಲ ಮಂತ್ರಿಗಳಾಗುವ ಕನಸು ಕಾಣುವವರಾಗಿದ್ದಾರೆ.  ಇರುವ ಇನ್ನೂರು ಚಿಲ್ಲರೆ ಶಾಸಕರೆಲ್ಲರಿಗೂ ಒಂದೊಂದು ಪದವಿ ಬೇಕು - ಅವರು ಪರ-ವಿರೋಧ ಯಾವುದೇ ಪಕ್ಷದಲ್ಲಿರಲಿ!

***
ಈ ಎಲ್ಲ ಗೊಂದಲಗಳ ನಡುವೆ ತಮ್ಮ ತಮ್ಮ ಕ್ಷೇತ್ರಗಳ ಬೆಳವಣಿಗೆಯನ್ನು ನೋಡುವವರು ಯಾರು? ತಮ್ಮ ತಮ್ಮ ಊರು, ಜಿಲ್ಲೆ, ರಾಜ್ಯಗಳನ್ನು ಬೆಳೆಸುವವರಾರು? ಎಲ್ಲರೂ ದುಡ್ಡು ಮಾಡಿಕೊಂಡಿದ್ದರೆ, ಅದಕ್ಕೆ ಮಿತಿಯೆಂಬುದೇ ಇಲ್ಲವೇ? ಇವರೆಲ್ಲ ಈ ರೀತಿ ದುಡ್ಡು ಮಾಡಿ ಕೊನೆಗೆ ಏನನ್ನು ಸಾಧಿಸುತ್ತಾರೆ? ಈ ರೀತಿ ಯಶಸ್ಸನ್ನು ಕಲ್ಪಿಸಿಕೊಳ್ಳುವ ನಮ್ಮ ನಡುವೆ, ದಶಕಗಳ ನಿರಂತರ ಶೋಧನೆ-ಸಂಶೋಧನೆ ಮಾಡಿ, ಮನುಕುಲದ ನಾಶಕ್ಕೆ ಟೊಂಕಕಟ್ಟಿ ನಿಂತ ಕಣ್ಣಿಗೆ ಕಾಣದ ವೈರಸ್ಸಿಗೆ ವಿರುದ್ಧವಾಗಿ ಹೋರಾಡಿ ಔಷಧಿ ಕಂಡು ಹಿಡಿಯಲು ತಮ್ಮ ಜೀವನವನ್ನೇ ಮುಡಿಪಾಗಿಡುವ ವಿಜ್ಞಾನಿಗಳು ಈ ಸಮಾಜದಲ್ಲಿ ಹುಟ್ಟುವುದು ಹೇಗೆ ಸಾಧ್ಯ?

ಇವರುಗಳು ಹೊಕ್ಕಿನಿಂತ ಆಳವಾದ ಬಾವಿಯ ದಾಹ ಇನ್ನೂ ಆಳಕ್ಕಿಳಿಸುತ್ತದೆ, ಅದು ಬತ್ತುವುದೂ ಇಲ್ಲ ಹಾಗೂ ತುಂಬುವುದೂ ಇಲ್ಲ ಎನ್ನುವ ಜಾಯಮಾನದ್ದು.  ಈ ವ್ಯವಸ್ಥೆಯೇ ನಮ್ಮ ನಡುವೆ ಭ್ರಷ್ಟಾಚಾರಕ್ಕೆ ಇಂಬುಕೊಡುವುದು.  ಒಬ್ಬ ಹಸಿದ ನಿರಕ್ಷರ ಬಡವನಿಗೆ ಸಾವಿರ ರೂಪಾಯಿ ತೋರಿಸಿ ಚುನಾವಣೆಯಲ್ಲಿ ಮತಹಾಕುವಂತೆ ಅಂಗಲಾಚಿ ಗೆಲ್ಲುವುದರಲ್ಲಿ ಏನು ದೊಡ್ಡತನವಡಗಿದೆ ಎಂದು ನಾವೆಲ್ಲ ಸಹಿಸಿಕೊಂಡು ಬಂದಿದ್ದೇವೋ ಎಂದು ಬೇಸರವಾಗುತ್ತದೆ.  ಇಂತವರೆಲ್ಲ ನಮ್ಮನ್ನು (ಏನೂ ಕೆಲಸ ಮಾಡದೆ) ಆಳುವವರು, ಇಂತವರನ್ನು ಸಹಿಸಿಕೊಳ್ಳುವ ನಾವು (ಕೈಲಾಗದ) ಪ್ರಜೆಗಳು!

ಇದು ಇಂದು ನಿನ್ನೆಯದಲ್ಲ - ಹಿಂದೆ ಆಗಿದೆ, ಇಂದು ಆಗುತ್ತಿದೆ, ಮುಂದೆ ಎಂದೆಂದೂ ಆಗುತ್ತದೆ, ಆಗುತ್ತಲೇ ಇರುತ್ತದೆ!

Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.

Thursday, August 09, 2012

ಅಣ್ಣಾ, ಹೊಸ ಪಕ್ಷ ಬೇಡಣ್ಣ

ಇಷ್ಟು ದೊಡ್ಡ ದೇಶದಲ್ಲಿ, ಎಷ್ಟೊಂದು ಜನ ಮುತ್ಸದ್ದಿಗಳು, ವಾದಿ-ಪ್ರತಿವಾದಿಗಳು, ವಿಚಾರವಂತರು, ಚಿಂತನಶೀಲರು, ಮುಖಂಡರು, ಪ್ರತಿಭಾವಂತರು ತುಂಬಿ ತುಳುಕಾಡುತ್ತಿರುವಾಗ ಯಾರೊಬ್ಬರೂ ಕೆ.ಬಿ. ಹಜಾರೆ (aka ಅಣ್ಣಾ ಹಜಾರೆ) ಅವರನ್ನು ಬದಿಗೆ ಕರೆದು, 'ನಿಮ್ಮ ನಿಲುವುಗಳೇನೋ ಸತ್ವವುಳ್ಳವು, ಆದರೆ ಅವುಗಳನ್ನು ಪ್ರತಿಪಾದಿಸುವಲ್ಲಿ ನೀವು ಹಿಡಿದಿರುವ ಇಂಪ್ಲಿಮೆಂಟೇಷನ್ನ್ ಮೆಥಡ್ ಅಷ್ಟೊಂದು ಯೋಗ್ಯವಲ್ಲದ್ದು’ ಎಂದು ಯಾರೂ ಏಕೆ ಹೇಳುತ್ತಿಲ್ಲ?

***


(picture source: thecommonspeaks.com)

ನಮ್ಮ ಅಂತರಂಗವನ್ನು ನಾವು ಅವಲೋಕಿಸಿಕೊಂಡರೆ ನಾವೆಲ್ಲರೂ ಒಂದೇ ಒಕ್ಕೊರಲಿನಲ್ಲಿ 'ಭ್ರಷ್ಟಾಚಾರದ ಮೂಲ ರಾಜಕಾರಣಿಗಳು!’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ರಿಯಲಿ? ನನ್ನ ಜೊತೆ ನೀವೂ ಯೋಚಿಸಿ, ಈ ಲೇಖನವನ್ನು ಓದಿದ ಬಳಿಕವೂ ನೀವು ನಿಮ್ಮ ಅಭಿಪ್ರಾಯವೇ ನಿಜವೆಂದುಕೊಂಡರೆ ಅದರ ಬಗ್ಗೆ ವಿವರವಾಗಿ ಇಲ್ಲ ಸಂಕ್ಷಿಪ್ತವಾಗಿ ನನಗೊಂದು ಸಾಲು ಬರೆಯಿರಿ.

ಉದಾಹರಣೆ 1: ನಾನು ತಾಲೂಕು ಆಫೀಸಿಗೆ ಹೋಗುತ್ತೇನೆ. ಅಲ್ಲಿ ನನಗೊಂದು ಸಣ್ಣ ಕೆಲಸವಾಗಬೇಕಾಗಿದೆ, ಆದರೆ ಆ ಕೆಲಸವನ್ನು ಮಾಡಿಕೊಡಲು ಸುಮಾರು 4 ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಲ್ಲಿನ ಹೆಡ್‌ಕ್ಲರ್ಕ್ ಹೇಳುತ್ತಾರೆ.
ನಾನು ಪರವಾಗಿಲ್ಲ, ನಾಲ್ಕು ಘಂಟೆಗಳನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತೇನೆ, ಮತ್ತು ಸರಿಯಾಗಿ ನಾಲ್ಕು ಘಂಟೆಗಳ ನಂತರ ಹೋದರೆ, ಅದೇ ಹೆಡ್‌ಕ್ಲರ್ಕ್ ದೊಡ್ಡ ತಗಾದೆ ತೆಗೆಯುತ್ತಾರೆ.
’ನನಗೆ ಸುಮಾರು 24 ಫೈಲುಗಳನ್ನು ನೋಡಿ ಮುಗಿಸಬೇಕು, ಇನ್ನು ಒಂದು ವಾರ ಬಿಟ್ಟು ಬನ್ನಿ!’

ಆಗ ನನ್ನ ಆಪ್ಷನ್ನುಗಳೇನು?
- option 1 - ಸರಿಯಾಗಿ ಇನ್ನೊಂದು ವಾರ ಬಿಟ್ಟು ಬಂದು ಕೆಲಸವಾಗಿದೆಯೋ ಇಲ್ಲವೋ ಎಂದು ನೋಡುವುದು.
- option 2 - ಅಲ್ಲಿನ ಮತ್ತೊಬ್ಬ ಕ್ಲರ್ಕ್ ಸಲಹೆ ಮಾಡಿದ ಪ್ರಕಾರ 800 ರುಪಾಯಿಗಳನ್ನು ಕೊಟ್ಟರೆ ಅದೇ ದಿನ ಅವರು ಕೆಲಸ ಮಾಡಿಕೊಡುತ್ತಾರೆ, ಬೇಕಾದರೆ ಆ ಮತ್ತೊಬ್ಬ ಕ್ಲರ್ಕ್ ನನ್ನ ಪರವಾಗಿ ಶಿಫಾರಸ್ಸ್ ಮಾಡುತ್ತಾರಂತೆ.

ನಿಮಗೆ ಈ ಕೆಲಸ ಬಹಳ ಮುಖ್ಯವಾದುದು, ನಾಲ್ಕು ಘಂಟೆಗಳನ್ನು ಕಾಯಬಹುದು, ಆದರೆ ನಾಲ್ಕು ದಿನ ಕಾಯುವಂತಿಲ್ಲ, ನನ್ನ ಜಾಗೆಯಲ್ಲಿದ್ದರೆ ನೀವೇನು ಮಾಡುತ್ತೀರಿ?

ಉದಾಹರಣೆ 2: ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಪೋಸ್ಟೆಡ್ ಸ್ಪೀಡ್ ಲಿಮಿಟ್ಟಿಗಿಂತ ಘಂಟೆಗೆ 25 ಮೈಲಿ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿ, ದೊಡ್ಡ ತಪ್ಪನ್ನು ಎಸಗಿದ್ದೀರಿ.
ಟ್ರಾಫಿಕ್ ಪೋಲಿಸ್ ರೇಡಾರ್ ಡಿಟೆಕ್ಟರ್ ಮೂಲಕ ನಿಮ್ಮ ತಪ್ಪನ್ನು ಸಾಬೀತುಗೊಳಿಸುವ ರಿಪೋರ್ಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ (ಡ್ರೈವರ್) ಪಕ್ಕದ ಕಿಟಕಿಯಲ್ಲಿ ನಿಂತಿದ್ದಾನೆ.
ಸ್ಥಳದಲ್ಲೇ ದಂಡ ಕಟ್ಟಿದರೆ 8 ಸಾವಿರ ರೂಪಾಯಿ ಆಗುತ್ತದೆ (ಕೊಡದಿದ್ದರೆ ಗಾಡಿ ಬಿಡೋದಿಲ್ಲ ಮುಂದೆ).
ಅದೇ ಸಮಯುಕ್ಕೆ ಮತ್ತೊಬ್ಬ ಪೋಲಿಸ್ ಕಾರಿನ ಇನ್ನೊಂದು ಕಿಟಕಿಯಲ್ಲಿ ಬಂದು, 8 ಸಾವಿರ ಇಲ್ಲದಿದ್ರೆ 4 ಸಾವಿರ ಕೊಡಿ ಪರವಾಗಿಲ್ಲ, ಆದ್ರೆ ನಿಮಗೆ ಕಂಪ್ಯೂಟರ್ ರಶೀದಿ ಸಿಗೋದಿಲ್ಲ ಅಂತಾನೆ.

ನೀವು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು. ಹೆಚ್ಚು ಹೊತ್ತು ತರ್ಕವಾಗಲಿ, ತಕರಾರನ್ನಾಗಲೀ ಮಾಡಲು ವ್ಯವಧಾನವಿಲ್ಲ.
ನೀವು ಪೋಲೀಸ್‌ಗೆ ೮ ಸಾವಿರ ಕೊಡ್ತೀರಾ? ೪ ಸಾವಿರ ಕೊಡ್ತೀರಾ?

***

ನನ್ನ ಹಾಗೆ ನೀವೂ ಸಹ ನಿಮ್ಮ ಬದುಕಿನಲ್ಲಿ ಈಗಾಗಲೇ ಬಹಳ ರಾಜಕೀಯ ಪಕ್ಷಗಳು ಹುಟ್ಟಿ-ಸತ್ತಿದ್ದನ್ನು ನೋಡಿರಬಹುದು. ಕ್ರಾಂತಿರಂಗ, ತೃಣಮೂಲ, ಹೊಟ್ಟೆ, ಸಮಾಜವಾದಿ, ದಳ, ಹಲವಾರು ಬಗೆಯ "ಕಾಂಗ್ರೆಸ್ಸು"ಗಳು, ಲಲ್ಲೂ ಪಕ್ಷ, ಅವನ ಹೆಂಡತಿ ಪಕ್ಷ, ಜಾತಿ-ಜಾತಿಗಳ ಪಕ್ಷ, ಜಾತಿ ಇಲ್ಲದವರ ಪಕ್ಷ - ಹೀಗೆ ಹಲವು...ಈ ಪಟ್ಟಿ ಬಹಳ ಮುಂದುವರೆಯುತ್ತದೆ. ಎಲ್ಲದರ ಪ್ರಣಾಳಿಕೆಗಳು ಒಂದೇ - ದೇಶೋದ್ದಾರ.  66 ವರ್ಷದ ಸ್ವತಂತ್ರ್ಯೋತ್ತರ ಬಾಳ್ವೆಯಲ್ಲಿ ದೇಶದ ಉದ್ದಗಲಕ್ಕೂ ಅಂದಿನ ಮೂಲ ಸಮಸ್ಯೆಗಳು, ಇಂದಿಗೂ ಇವೆ; ಅವುಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಮೇಲೆ ಹುಟ್ಟಿ ಕೆಳಗೆ ಹರಿದು ಬರುವಂತದಲ್ಲ, ಕೆಳಗೆ ಹುಟ್ಟಿ ಸರ್ವತೋಮುಖವಾಗಿ ಬೆಳೆಯುವಂತದು. ತಾಲೂಕು ಆಫೀಸಿನಲ್ಲಿ 'ಅಡ್ಜಸ್ಟ್’ ಮಾಡಿಕೊಳ್ಳುವ ನಮ್ಮ ಮೆಂಟಾಲಿಟಿ, ನಾವು ಕಾನೂನನ್ನು ಮುರಿದಾಗ ನಮ್ಮ ಸಹಾಯಕ್ಕೆ ಬರುವ ಅಡ್ಡದಾರಿತನ ಇವುಗಳು ಲಂಚಕೋರತನದ ಮೂಲ ಕಾರಣ (ರೂಟ್‌ಕಾಸ್) ಗಳಲ್ಲೊಂದು. ಲಂಚ ಕೊಡುವವರು ನಾವು, ತೆಗೆದುಕೊಳ್ಳುವವರು ನಾವು - ಇದನ್ನು ಅರಿವಿನಿಂದ, ಬೆಳೆದ ವ್ಯವಸ್ಥೆಯಿಂದ, ಆಧುನಿಕ ಪರಿಕರಗಳಿಂದ ಹೊಡೆಯಬೇಕೇ ವಿನಾ ಮತ್ತೊಂದು ಪಕ್ಷ ಕಟ್ಟುವುದರಿಂದಲ್ಲ.

ಹಜಾರೆ ನಂಬಿಕೊಂಡ ಗಾಂಧಿ ಮಹಾತ್ಮ ಯಾವುದೇ ರಾಜಕೀಯ ಪದವಿಯನ್ನು ಅಲಂಕರಿಸದಿದ್ದರೂ, ಸಮಾಜದಲ್ಲಿ ಬದಲಾವಣೆಗಳನ್ನು ತರಲಿಲ್ಲವೇನು? ಹೊಸ ಪಕ್ಷ ಕಟ್ಟುವುದರಿಂದ ಏನಾದೀತು? ಮತ್ತೆ ಈ ಪಕ್ಷದ ವಕ್ತಾರರು ಇಂದಿನ ಕ್ಷೋಭೆಗಳ ನಡುವೆ ಮುಕ್ತವಾಗಿ ಸ್ಪರ್ಧಿಸಿ, ಗೆದ್ದು ಮೇಲೆ ಬರುವುದು, ಹಾಗೆ ಬಂದ ನಂತರ ಸುಧಾರಣೆಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವೇನು?

ನಾವು, ಲಂಚಾವತರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವವರೆಲ್ಲರೂ, ಒಂದು ರೀತಿಯಲ್ಲಿ ಹುಲಿ ಸವಾರಿಯಲ್ಲಿ ತೊಡಗಿದ್ದೇವೆ. ಹುಲಿ ಸವಾರಿಯನ್ನು ನಿಲ್ಲಿಸಿ ಹುಲಿಯಿಂದ ಕೆಳಗಿಳಿದರೆ ಹುಲಿಯೇ ನಮ್ಮನ್ನು ಕಬಳಿಸಿ ಬಿಡುವ ಸಾಧ್ಯತೆ ಇದೆ. ಸಾವಿರಾರು ವರ್ಷಗಳ ಸಮಸ್ಯೆಗೆ ಮತ್ತೊಂದು ಪಕ್ಷ ಕಟ್ಟುವುದು ಉತ್ತರವಲ್ಲ, 'ಅಣ್ಣಾ’ ಎಂದು ಕರೆಯುವವರೆಲ್ಲ, ನಾವು ಇಂದಿನಿಂದ ಭ್ರಷ್ಟರಾಗೋದಿಲ್ಲ ಎಂದು ಪ್ರಮಾಣ ಮಾಡಿ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಬಹಳಷ್ಟು ಸುಧಾರಣೆಗಳಾಗುತ್ತವೆ. ಈಗಾಗಲೇ ಇಳಿ ವಯಸ್ಸಿನ ಹಜಾರೆ ಅವರು ತಮ್ಮ ಮೂಲ ಮಂತ್ರ ಬೀಜವನ್ನು ಬಿತ್ತಿ, ಅದರಿಂದ ಹುಲುಸಾಗಿ ಕೃಷಿ ಬೆಳೆಯುವಂತೆ ಮಾಡಿದರೆ ಅದು ಜನಜನಿತವಾಗುತ್ತದೆ, ಹಾಗೂ ಕಾಲನ ಜೊತೆಗೆ ಬೆಳೆಯುತ್ತದೆ. ಅದನ್ನು ಬಿಟ್ಟು ಪಕ್ಷ ಕಟ್ಟಿದರೆ ಅದು ಕಾಲನಿಗೆ ಆಹಾರವಾಗುತ್ತದೆ.

***

ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸೀಮಿತವೇ?
ಬದಲಾಗಬೇಕಾದವರು ಯಾರು ಎಂದು ತಿಳಿಯಬೇಕಾದರೆ, ಹೋಗಿ ಕನ್ನಡಿ ಮುಂದೆ ನಿಲ್ಲಿ!

Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Thursday, June 19, 2008

ಸಮಸ್ಯೆ, ಅವಕಾಶ ಹಾಗೂ multiple right answers

ರಾಜಕಾರಣ, ಲಂಚ, ರಾಜಕೀಯ, ಭ್ರಷ್ಟಾಚಾರ ಇವೆಲ್ಲವನ್ನೂ ಬುದ್ಧಿವಂತ ಜನತೆ ಒಂದು ರೀತಿಯ ಅಲರ್ಜಿಯಿಂದ ನೋಡುತ್ತದೆ, ಹೇಸಿಗೆ ಮಾಡಿಕೊಳ್ಳುತ್ತದೆ. ’ಇವೆಲ್ಲ ನಮಗಲ್ಲ’ ಎಂದುಕೊಂಡು ಕೈ ತೊಳೆದುಕೊಳ್ಳಲು ನೋಡುತ್ತದೆ. ನಮ್ಮ ಜೀವನದಲ್ಲಿ ಸಾಂಸ್ಕೃತಿಕವಾಗಿ ಬೆಳವಣಿಗೆಗಳು ಇದ್ದಂತೆ ರಾಜಕೀಯವಾಗಿಯೂ ನಾವು ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ಹೆಚ್ಚು ಆಲೋಚಿಸಲು ತೊಡಗಿದ್ದು ದೇಶ ಬಿಟ್ಟು ದೇಶಕ್ಕೆ ಬಂದಾಗಲೆ. ಒಂದು ಕಾಲದಲ್ಲಿ ನನ್ನ ಹುಟ್ಟೂರಾದ ಆನವಟ್ಟಿಯ ಗ್ರಾಮಪಂಚಾಯತಿಯನ್ನು ಸೇರಿಕೊಂಡು ಅಲ್ಲಿನ ಸ್ಥಳೀಯ ಕೆಲಸಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು ಎನ್ನುವುದು ಯಾವತ್ತೂ ನನಸಾಗಲೇ ಇಲ್ಲ - ಹಲವಾರು ಕಾರಣಗಳಿಂದಾಗಿ. ಶಾಲಾ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಕೊಂಡು ಹೈ ಸ್ಕೂಲಿನವರೆಗೂ ಅನೇಕ ’ಮಂತ್ರಿ’, ’ನಾಯಕ’ ಪದವಿಗಳನ್ನು ಪಡೆದುಕೊಂಡು ಒಮ್ಮೆ ಹೈ ಸ್ಕೂಲು ಬಿಟ್ಟು ಕಾಲೇಜು ಸೇರಿಕೊಂಡ ಮೇಲೆ ನನ್ನಲ್ಲಿನ ರಾಜಕೀಯ ಉತ್ಸಾಹವೆಲ್ಲ ಸೂಜಿ ಚುಚ್ಚಿದ ಬೆಲೂನಿನ ಗಾಳಿಯಂತೆ ಖಾಲಿಯಾಗಿ ಹೋಯಿತು. ಮುಂದೆ ತಿಳುವಳಿಕೆ ಬೆಳೆದಂತೆಲ್ಲ ಒಂದು ಕ್ಷೇತ್ರದ ರೆಪ್ರೆಸೆಂಟೇಟಿವ್ ಆಗಲು ಏನೇನೆಲ್ಲ ಪೂರಕ ಅಂಶಗಳು ಬೇಕು ಎಂಬುದನ್ನು ಮನಗಂಡ ನಂತರ ಮುಂದೆ ಎಂದೂ ಈ ರಾಜಕೀಯಕ್ಕೆ ಕೈ ಹಾಕಲೇ ಬಾರದು ಎನ್ನುವಲ್ಲಿಯವರೆಗೆ ಬಂದು ನಿಂತಿದೆ.

***
ನಮ್ಮಲ್ಲಿನ ಅಂದರೆ ಭಾರತದಲ್ಲಿನ ಅನೇಕ ಮೂಲಭೂತ ಸಮಸ್ಯೆಗಳನ್ನು ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಪ್ರಶ್ನೆಯಿಂದ ಅರ್ಥೈಸಬಹುದು ಅಥವಾ ವೀಕ್ಷಿಸಬಹುದು - Can you take a "No" for an answer?

ನಮ್ಮಲ್ಲಿ ಈಗ ಚಾಲ್ತಿಯಲ್ಲಿರುವ ಯಾವುದೋ ಒಂದು ವ್ಯವಸ್ಥೆ ಅಥವಾ ಪ್ರಾಸೆಸ್ಸನ್ನು ತೆಗೆದುಕೊಂಡು ಅದರ ಬಗ್ಗೆ ಚರ್ಚೆ ಮಾಡಿಕೊಂಡರೆ ಸುಲಭವಾದೀತು. ಉದಾಹರಣೆಗೆ ಯಾವುದೋ ಒಂದು ಕಾಲೇಜಿನ ಅಡ್ಮಿಷನ್ನ್‌ ಗೆ ಈಗಾಗಲೇ ಕೊನೇ ದಿನವಾಗಿ ಹೋಗಿದೆ ಎಂದುಕೊಳ್ಳೋಣ. ನೀವು ನಿಮ್ಮ ವಿದ್ಯಾರ್ಥಿಯನ್ನು ಆ ಕಾಲೇಜಿಗೆ ಸೇರಿಸಲು ಹೋಗುತ್ತೀರಿ. ಅಲ್ಲಿನ ಗುಮಾಸ್ತರು ’ಕ್ಷಮಿಸಿ, ಈಗಾಗಲೇ ಡೆಡ್‌ಲೈನ್ ಮುಗಿದಿದೆ’ ಎನ್ನುತಾರೆ. ಆಗ ನೀವೇನು ಮಾಡುತ್ತೀರಿ? ಆ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಮ್ಮನೇ ಹಿಂತಿರುಗುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ಬೇರೆ ಯಾವುದಾದರೂ ನ್ಯಾಯವಾದ ದಾರಿಗಳಿವೆಯೇ (alternatives) ಎಂದು ಹುಡುಕುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ನಿಮ್ಮ ಶಿಫಾರಸ್ಸಿನಿಂದ ಅಥವಾ ಲಂಚಕೊಡುವ ಮೂಲಕ ಅಥವಾ ಮತ್ತ್ಯಾವುದೋ ’ನ್ಯಾಯವಲ್ಲದ’ ದಾರಿಗಳಿವೆಯೇ ಎಂದು ಹುಡುಕುತ್ತೀರೋ?

ಹೀಗೇ, ನಮ್ಮಲ್ಲಿ ನಾವು ಅನುಭವಿಸುವ ಪ್ರತಿಯೊಂದು ಸಂಕಷ್ಟ, ನೋವು, ನಲಿವು, ಅವಕಾಶ (opportunity) ಹಾಗೂ ಸವಾಲುಗಳಿಗೆ ಹಲವಾರು ಉತ್ತರಗಳಿವೆ - there are multiple right answers ಅಂತಾರಲ್ಲ ಹಾಗೆ. ಆದರೆ ಅವುಗಳನ್ನು ನಾವು ನೋಡೋ ದೃಷ್ಟಿಕೋನ ಬದಲಾಗಬೇಕು ಅಷ್ಟೇ.

***

ನಮ್ಮ ರಾಜಕಾರಣಿಗಳು ಅಂದರೆ ಬುದ್ಧಿವಂತ ಜನ ಮೂಗು ಮುರಿಯಬೇಕೇಕೆ? ಅವರು ಹೇಗಿದ್ದರೂ ಹೇಗಾದರೂ ನಮ್ಮ ಪ್ರತಿನಿಧಿಗಳೇ ಅಲ್ಲವೇ? ನಾವು ಎಲ್ಲ ರೀತಿಯಿಂದ ಚೆನ್ನಾಗಿದ್ದು ನಮ್ಮ ಪ್ರತಿನಿಧಿಗಳು ಸರಿಯಾಗಿಲ್ಲವೆಂದರೆ ಅದಾದರೂ ಒಂದು ವಾದವಾದೀತು. ನಮ್ಮ ಸಮಾಜದಲ್ಲಿ ಹಲವು ರೀತಿಯ ಜನರು ಇರೋದು ಸಹಜವಾದಲ್ಲಿ, ಅಂತಹವರನ್ನು ರೆಪ್ರೆಸೆಂಟ್ ಮಾಡುವವರು ಎಲ್ಲರಿಗೂ ಸ್ಪಂದಿಸಬೇಕಾದಲ್ಲಿ ನಮ್ಮ ನಾಯಕರು ಈಗಿರುವುದಕ್ಕಿಂತ ಭಿನ್ನರಾಗಲು ಸಾಧ್ಯವೇ ಇಲ್ಲ. ಯಾರೇ ವಿಧಾನಸೌಧಕ್ಕೋ ಅಥವಾ ಪಾರ್ಲಿಮೆಂಟಿನ ಒಳಗೆ ನುಗ್ಗಿ ಅಲ್ಲಿನ ಈಗಿನ ರಾಜಕಾರಣಿಗಳನ್ನೆಲ್ಲ ನಾಶ ಮಾಡಿದರೂ ಎಂದೇ ಇಟ್ಟುಕೊಳ್ಳಿ, ಆ ಪಾಯಿಂಟಿನಿಂದ ಮುಂದೆ ಬರುವ ಹೊಸ ರಾಜಕಾರಣಿಗಳು ಈಗಿನವರಿಗಿಂತ ಅದೆಷ್ಟು ಭಿನ್ನರಾಗಿರಬಲ್ಲರು ಎನ್ನುವುದು ಪ್ರಶ್ನಾರ್ಥಕ ವಿಚಾರ. ನನ್ನ ಪ್ರಕಾರ ಒಬ್ಬ ಸಾದು-ಸಂತನನ್ನು ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ಕೂರಿಸಿದರೂ ಅವನಿಗೆ ಜನರು ಲಂಚದ ಆಮಿಷ ಒಡ್ಡೇ ಒಡ್ಡುತ್ತಾರೆ. ಜೊತೆಗೆ ತಾಲ್ಲೂಕು ಆಫೀಸು, ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲಸ ಮಾಡುವವರೂ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗದ ಸದಸ್ಯರು ಎನ್ನುವುದನ್ನು ನಾವು ಹೇಗೆ ತಾನೇ ಮರೆಯಲಾದೀತು?

ನಮ್ಮ ಕಾನೂನು-ಕಟ್ಟಳೆಗಳು ಹಳೆಯದಾಗಿರಬಹುದು, ಇವತ್ತಿಗೂ ನಮ್ಮೂರಿನ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳು ಓಬೀರಾಯನ ಕಾಲದ ಮೌಲ್ಯವನ್ನು ತಾಲೂಕು ಆಫೀಸಿನ, ಗ್ರಾಮ ಪಂಚಾಯತಿಯ ರೆಕಾರ್ಡುಗಳಲ್ಲಿ ಬಿಂಬಿಸುತ್ತಿರಬಹುದು. ಇಂದು ನೀವು ಕೊಡುತ್ತಿರುವ ಕಂದಾಯ ಆಯಾ ಪಟ್ಟಣದ ಅಭಿವೃದ್ಧಿಗೆ ಮೀಸಲಾದ ಬಜೆಟ್ಟಿನಲ್ಲಿ ಯಾವುದೇ ಮಹತ್ವದ ಪಾತ್ರವನ್ನು ವಹಿಸುವಲ್ಲಿ ಬಹಳ ಚಿಕ್ಕದಾಗಿ ತೋರಬಹುದು. ನಾವು ಕೊಡುತ್ತಿರುವ ಕಂದಾಯ ಅಷ್ಟೇ ಇರಲಿ, ಆದರೆ ನಮ್ಮೂರಿನ ಅಭಿವೃದ್ಧಿ ಆಗಲಿ ಎಂದರೆ ಹೇಗೆ ಸಾಧ್ಯ? ಸರ್ಕಾರ ಎಲ್ಲದಕ್ಕೂ ದುಡ್ಡು ಕೊಡಲಿ ಅಂದರೆ ಅದು ಯಾರ ಹಣ, ಅದಕ್ಕೆ ಮೂಲ ಆದಾಯ ಎಲ್ಲಿಂದ ಬರಬೇಕು? ಸರಿಯಾಗಿ ತೆರಿಗೆ ಕಟ್ಟುವವರಿಂದ ಹಣ ವಸೂಲಿ ಮಾಡುವ ವ್ಯವಸ್ಥೆ ತೆರಿಗೆ ಕಟ್ಟದೇ ಬದುಕುವ ಅದೆಷ್ಟೋ ಕೋಟಿ ಜನರನ್ನು ಹೇಗೆ ಸಂತೈಸಲು ಸಾಧ್ಯ? ಪ್ರತಿ ಊರಿನ, ಗ್ರಾಮದ, ಪಟ್ಟಣದ, ನಗರದ ಬೆಳವಣಿಗೆಗೆ ತಕ್ಕಂತೆ ಅಲ್ಲಿನ ಬಜೆಟ್ ಬೆಳೆಯುತ್ತಿದೆಯೇ? ಒಂದು ಐಸ್ ಕ್ಯೂಬ್‌ನಂತೆ ಇದ್ದಲ್ಲೇ ಕರಗುವ ಹಣದ ಗಂಟು ಈ ಬೆಳವಣಿಗೆಗಳು ಒಡ್ಡುವ ಸವಾಲುಗಳನ್ನು ಅದೆಷ್ಟರ ಮಟ್ಟಿಗೆ ಎದುರಿಸ ಬಲ್ಲದು?

***

ನಾವು ಅಮೇರಿಕಕ್ಕೆ ಬಂದೆವು, ಬಂದ ದಿನದಿಂದ ಇಲ್ಲಿಯವರೆಗೆ ಕಾನೂನನ್ನು ಪಾಲಿಸಿಕೊಂಡು, ಇದ್ದ ಕಾನೂನು-ಕಟ್ಟಳೆಗಳಿಗೆಲ್ಲ ಸರಿಯಾಗಿ ಹೊಂದಿಕೊಂಡು ಬದುಕುತ್ತಿದ್ದೇವೆ. ಈಗ ನಾವಿರುವ ಟೌನ್‌ಶಿಪ್‌ನವರು ಮೊನ್ನೆ ನಮ್ಮ ಮನೆ ಕಂದಾಯವನ್ನು ಹೆಚ್ಚು ಮಾಡಿದರು, ಅದಕ್ಕೆ ನಾನು ಅಪೀಲು ಮಾಡಿದೆ. ಅದಕ್ಕೆ ತಕ್ಕ ಉತ್ತರದ ಜೊತೆಗೆ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟರು ನಾನು ಬಾಯಿ ಮುಚ್ಚಿಕೊಂಡು ಹಿಂದೆ ಬರದೆ ಬೇರೆ ದಾರಿ ಇರಲಿಲ್ಲ. ಇಲ್ಲಿನ ಸ್ಕೂಲ್ ಬಜೆಟ್‌ನ ಪ್ರಾಸೆಸ್ಸಿನಲ್ಲಾಗಲಿ, ಇಲ್ಲಿ ಆಗಾಗ್ಗೆ ಟೌನ್‌ಶಿಪ್‌ನವರು ತೆರಿಗೆಯನ್ನು ವಿಶ್ಲೇಶಿಸುವ ಬಗೆಯಲ್ಲಾಗಲೀ, ಇಲ್ಲಿನ ಸ್ಥಳೀಯ ಅಭ್ಯರ್ಥಿಗಳ ಚುನಾವಣೆಯಲ್ಲಾಗಲೀ ನಾನು ಯಾವುದೇ ರೀತಿಯ ಕ್ರಿಯಾತ್ಮಕ ಸ್ಪಂದನವನ್ನು ತೋರದವನು ಅದೇಕೋ ನಮ್ಮ ಮನೆಯ ಟ್ಯಾಕ್ಸ್ ಹೆಚ್ಚಳವನ್ನು ಅವರು ಹೆಚ್ಚಿಸಿದ ಮೇಲೆ ನೋಡಿ ನೊಂದಿದ್ದೇ ಬಂತು. ನಾನು ಈ ಸ್ಥಳೀಯ ಪ್ರಾಸೆಸ್ಸುಗಳಲ್ಲಿ ಇನ್‌ವಾಲ್ವ್ ಆಗಲೀ ಬಿಡಲೀ ಅದಕ್ಕೂ ಟ್ಯಾಕ್ಸ್ ಹೆಚ್ಚಳಕ್ಕೂ ನೇರ ಸಂಬಂಧವಿಲ್ಲದಿರಬಹುದು, ಕೊನೇಪಕ್ಷದ ಇಲ್ಲಿನ ನಿರ್ಧಾರಗಳಲ್ಲಿ ನಾನೂ ಭಾಗಿಯಾಗಬಹುದಿತ್ತೇನೋ.

ಇಲ್ಲಿಗೆ ಬಂದಂದಿನಿಂದ ಕೇವಲ ಪ್ರೊಪೆಷನಲ್ ಅಸ್ಥೆಯಿಂದಷ್ಟೇ ಅಮೇರಿಕವನ್ನು ನೋಡಿ ಅದರಲ್ಲಿ ಒಂದಾಗಿರುವ ನಾವು ಉಳಿದ - ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದರೆ, ತೊಡಗಿಸಿಕೊಂಡರೆ...ಎನ್ನುವುದು ಈ ಲೇಖನದ ಆಶಯವಷ್ಟೆ. ’ಅದು ನಮ್ಮದಲ್ಲದ ಸಮಸ್ಯೆ’ ಎಂದು ದೂರ ನಿಂತುಕೊಂಡರೆ ಸಮಸ್ಯೆಗಳೇನೂ ದೂರ ಹೋಗೋದಿಲ್ಲ. ಹುಟ್ಟಿನಿಂದ ಸಾಯುವವರೆಗೆ ಒಂದಲ್ಲ ಒಂದು ದಿನ ಅದೇ ಸಮಸ್ಯೆಯ ಸುಳಿಯಲ್ಲಿ ನೀವೂ ಸಿಕ್ಕಿ ಹಾಕಿಕೊಳ್ಳಬಹುದು, ಒಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ಅದಕ್ಕೆ ಪರಿಹಾರ ಕಂಡು ಹಿಡಿಯುವ ನಮ್ಮ ನಿಲುವು ಆ ಸಮಯಕ್ಕೆ ತಕ್ಕಂತೆ ಭಿನ್ನವಾಗಿರಬಹುದು ಅಥವಾ ನಮಗೆ ಏನು ಅನುಕೂಲವೋ ಅದನ್ನು ನಾವು ಸಮರ್ಥಿಸಿಕೊಳ್ಳಬಹುದು. ನಮ್ಮನ್ನು ಅಡರಿಕೊಳ್ಳುವ ಸಮಸ್ಯೆಗಳು ಒಂದೊಂದು ಅವಕಾಶಗಳು ಎಂದುಕೊಂಡು ಆ ಮಟ್ಟಿಗೆ ನಾವು ಏನು ಮಾಡಬಲ್ಲೆವು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಮನೆಯ ಮುಂದಿನ ಬೀದಿಯಲ್ಲಿ ನಾಯಿಯೊಂದು ಸತ್ತಿದೆ ಎಂದುಕೊಳ್ಳಿ - ಒಂದೆರಡು ದಿನಗಳಲ್ಲಿ ಅದು ಗಬ್ಬು ನಾತ ಹರಡಬಲ್ಲದು, ಅದರಿಂದ ಹರಡುವ ಕ್ರಿಮಿ ಕೀಟಗಳು ರೋಗ ರುಜಿನಗಳನ್ನು ತಂದೊಡ್ಡಬಹುದು. ಇಂತಹ ಒಂದು ಸರಳ ಸಮಸ್ಯೆಯನ್ನು ನಾವು ಹೇಗೆ ನೋಡುತ್ತೇವೆ, ಅದಕ್ಕೇನು ಉತ್ತರ ಕಂಡುಕೊಳ್ಳುತ್ತೇವೆ, ಅದಕ್ಕೆ ಒಬ್ಬೊಬ್ಬರ ಟಾಲರೆನ್ಸ್ ಒಂದೊಂದು ರೀತಿ ಇದ್ದು ಕೊನೆಗೆ ಅದು ಪರಿಹಾರಗೊಳ್ಳುವುದೋ ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿಕೊಳ್ಳಿ - ಅದೇ ರೀತಿ ನಮಗೆದುರಾಗುವ ಸಮಸ್ಯೆ-ಅವಕಾಶಗಳು ಹಾಗೇ - ಅವುಗಳಿಗೆಲ್ಲ multiple right answers ಇವೆ!

Sunday, August 12, 2007

ತಮೀಗೆ ಯುನಿಕ್ಸೂ, ಮಂದೀಗೆ ವಿಂಡೋಸೂ...

'ಲೋ ಶಿಷ್ಯಾ ಇಲ್ಲಿ ಬಾ, ಬಂದಾ ನಿನ್ ಫ್ರೆಂಡೂ ಹಲ್ಲ್ ಕಿರಕಂಡೂ...' ಎಂದು ಸೋಫಾದಲ್ಲಿ ಕೂತು ಟಿವಿ ನೋಡುತ್ತಿದ್ದ ಸುಬ್ಬ ಒಂದೇ ಸಮನೇ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ನಾನು ವಸ್ತ್ರಕ್ಕೆ ಕೈ ಒರೆಸಿಕೊಳ್ಳುತ್ತಲೇ ಓಡೋಡಿ ಬಂದೆ,

'ಏನಾಗ್ತಾ ಇದೆ?...' ಎಂದು ನಾನು ಬರುವಷ್ಟರಲ್ಲಿ ಪ್ರೆಸಿಡೆಂಟ್ ಬುಷ್ ಪತ್ರಿಕಾಕರ್ತರನ್ನುದ್ದೇಶಿಸಿ ಭಾಷಣ ಮಾಡಲು ಪೋಡಿಯಂ ಹತ್ತಿ ನಿಂತಾಗಿತ್ತು, 'ಏ, ಬುಷ್ಷ್ ಮಾತಾಡ್ತಾ ಇದಾನಾ..., ನಾನು ಏನೋ ಆಗ್ತಾ ಇದೆ ಅಂದುಕೊಂಡೆ. ಆದಿರ್ಲಿ ಅವನ್ಯಾವಾಗ ನನ್ನ ಫ್ರೆಂಡ್ ಆಗಿದ್ದು?' ಎಂದು ಪ್ರಶ್ನೆ ಎಸೆದೆ.

'ಮತ್ತೇ? ಅವನನ್ನ, ಈ ದೇಶವನ್ನ ನಂಬಿಕೊಂಡು ಬಂದಿದ್ದೀರಲ್ಲಾ, ಅವನು ನಿಮ್ಮ ಸ್ನೇಹಿತನಾಗ್ದೇ ಇನ್ನೇನ್ ವೈರಿ ಆಗ್ತಾನಾ?' ಎಂದು ನನ್ನನ್ನೇ ಕೆಣಕಿದ.

'ಏ, ಬುಷ್ಷನ್ನ ನಂಬಿಕೊಂಡು ನಾವ್ ಬರಲಿಲ್ಲ, ಅದ್ರಲ್ಲೂ ನಾನು ಈ ದೇಶಕ್ಕೆ ಬರೋವಾಗ ಕ್ಲಿಂಟನ್ನು ಇದ್ದ ಕಾಲ, ಎಲ್ಲವೂ ಸುಭಿಕ್ಷವಾಗಿತ್ತು, ಒಂದು ರೀತಿ ರಾಮರಾಜ್ಯ ಅಂತಾರಲ್ಲಾ ಹಾಗಿತ್ತು, ಇವನು ಅದೆಲ್ಲಿಂದ ಬಂದ್ನೋ ಬಂದ ಘಳಿಗೇನೇ ಸರೀ ಇಲ್ಲ ನೋಡು, ಒಂದಲ್ಲ ಒಂದು ಅಲ್ಲೋಲಕಲ್ಲೋಲ ನಡೆದೇ ಇದೆ ಮೊದಲಿನಿಂದ್ಲೂ...' ಎಂದು ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

'ಸ್ವಲ್ಪ ಸುಮ್ನಿರು, ವೆಕೇಷನ್ನಿಗೆ ಹೊಂಟು ನಿಂತಿದಾನಂತೆ, ಅದೇನ್ ಬೊಗೊಳ್ತಾನೇ ಅಂತ ಕೇಳೋಣ...' ಎಂದು ಟಿವಿಯ ಧ್ವನಿಗೆ ಕಿವಿ ಹಚ್ಚಿದ. ಸೆನೆಟ್ಟೂ ಕಾಂಗ್ರೇಸ್ಸೂ ಈಗಾಗಲೇ ಸಮರ್ ರಿಸೆಸ್‌ಗೆಂದ್ ಬಂದ್ ಆದ ಹಾಗೆ ಕಾಣ್ಸುತ್ತೆ, ಈಗ ಪ್ರೆಸಿಡೆಂಟೂ ವೆಕೇಷನ್ನಿಗೆ ಹೊರಟು ನಿಂತಿರೋದನ್ನ ಕೊನೇ ಆಪರ್ಚುನಿಟಿ ಎಂದು ಬೇಕಾದಷ್ಟು ಜನ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಕುಕ್ಕರುಗಾಲಿನಲ್ಲಿ ಕುಳಿತಿದ್ದರು. ಇನ್ನೊಂದ್ ವರ್ಷ ಚಿಲ್ಲರೆ ಅವಧಿಯಲ್ಲಿ ತನ್ನ ರಾಜ್ಯಭಾರ ಹೊರಟು ಹೋಗುತ್ತೇ ಅನ್ನೋ ನೋವಿಗೋ ಏನೋ ಬುಷ್ಷ್ ಇತ್ತೀಚೆಗೆ ಬಹಳ ಫಿಲಾಸಫಿಕಲ್ ಆದ ಹಾಗೆ ಕಾಣುತ್ತಿದ್ದ ಹಾಗನ್ನಿಸಿತು. ನಾನು ಪ್ರೆಸಿಡೆಂಟ್ ಹೇಳೋ ಮಾತುಗಳಿಗೆ ಅಷ್ಟೊಂದು ಗಮನ ಕೊಡದೇ ಬೇರೇನೋ ಯೋಚಿಸ್ತಾ ಇರೋದನ್ನ ಗಮನಿಸಿದ ಸುಬ್ಬ,

'ಅದ್ಸರಿ, ನನಗೆ ಮೊನ್ನೇ ಇಂದಾ ಈ ಪ್ರಶ್ನೆ ತಲೇ ಒಳಗೆ ಕೊರೀತಾ ಇದೆ, ನಿನಗೇನಾದ್ರೂ ಉತ್ತರಗೊತ್ತಿರಬಹುದು...' ಎಂದ.

ನಾನು ಬರೀ, 'ಹ್ಞಾ...' ಎಂದು ಸುಬ್ಬನ ಕಡೆಯೇ ಪ್ರಶ್ನಾರ್ಥಕವಾಗಿ ನೋಡಿದೆ.

ಸುಬ್ಬ ಮುಂದುವರೆಸಿದ, 'ಈ ಅಮೇರಿಕದೋರು ಇರಾಕ್ ಆಕ್ರಮಣ ಮಾಡೋದಕ್ಕೆ ಮೊದಲು ಅಲ್ಲಿ ಸದ್ದಾಮನ ಪ್ರೆಸಿಡೆಂಟ್ ರೂಲ್ ಇತ್ತೋ ಇಲ್ವೋ?'

'ಹೌದು, ಇತ್ತು'.

'ಆಂದ್ರೆ ಅಧ್ಯಕ್ಷೀಯ ಪದ್ದತಿ ಸರ್ಕಾರ ಅನ್ನು...'

'ಅದನ್ನ ಅಧ್ಯಕ್ಷೀಯ ಪದ್ದತಿ ಅನ್ನಬಹುದು, ಆದ್ರೆ ಪ್ರಜಾಪ್ರಭುತ್ವವೋ ಹೌದೋ ಅಲ್ವೋ ಗೊತ್ತಿಲ್ಲ, ಚುನಾವಣೆಗಳು ಆಗ್ತಿದ್ವು, ಆದ್ರೆ ಸದ್ದಾಮನೇ ಗೆಲ್ತಿದ್ದ!'

'ಇರ್ಲಿ, ಅಲ್ಲಿ ಅಧ್ಯಕ್ಷೀಯ ಪದ್ಧತಿ ಇತ್ತು ಅಂತ ಇಟಗೋ, ಇಲ್ಲೂ ಅಧ್ಯಕ್ಷೀಯ ಮಾದರಿ ಸರ್ಕಾರಾನೇ ಇರೋದು ಯಾವಾಗ್ಲೂ...'

ಇವನು ತನ್ನ ಈ ಲಾಜಿಕ್ಕಿನಿಂದ ಎಲ್ಲಿಗೆ ಹೊರಟವನೆ ಎಂದು ಹೇಳಲು ಬರದೇ ನಾನು ಈ ಬಾರಿ ಸುಮ್ಮನಿದ್ದವನನ್ನು ತಿವಿದು,

'ಹೌದೋ ಅಲ್ವೋ ಹೇಳು?' ಎಂದು ಒತ್ತಾಯಿಸಿದ.

'ಹೌದು' ಎನ್ನದೇ ಬೇರೆ ವಿಧಿ ಇರಲಿಲ್ಲ.

'ಸರಿ ಹಂಗಾದ್ರೆ, ಇರಾಕ್‍ನ ಆಕ್ರಮಣ ಮಾಡಿ, ಅಲ್ಲಿ ಹಳೇ ಸರಕಾರ ತೆಗೆದು ಹೊಸ ಸರ್ಕಾರ ಇಟ್ಟಾಗ ಅಲ್ಲಿ ಪ್ರಧಾನ ಮಂತ್ರಿ ವ್ಯವಸ್ಥೇನಾ ಯಾತಕ್ಕ್ ತಂದ್ರೂ ಅಂತಾ?'

'...'

'ಅಲ್ಲಪಾ, ಈ ನೂರಿ ಅಲ್ ಮಲ್ಲಿಕೀ, ಅಲ್ಲಿ ಪ್ರಧಾನ್ ಮಂತ್ರೀ ತಾನೆ? ಪ್ರಪಂಚಕ್ಕೆ ಡೆಮಾಕ್ರಸಿನಾ ಹಂಚೋಕ್ ಹೋಗೋರು ತಮ್ಮ ವ್ಯವಸ್ಥೇನೇ ಇನ್ನೊಬ್ರಿಗೂ ಯಾಕ್ ಕೊಡೋದಿಲ್ಲಾ? ಅದರ ಬದಲಿಗೆ ಇವರಿಗೇ ಗೊತ್ತಿರದ, ಇನ್ನು ಅವರಿಗೂ ಗೊತ್ತಿರದ ಪ್ರಧಾನಮಂತ್ರಿ ವ್ಯವಸ್ಥೇನಾ ಯಾತಕ್ ತಂದ್ರೂ ಅಂತ ನಿನಗೆನಾದ್ರೂ ಗೊತ್ತಾ? ಇದೇ ಪ್ರಶ್ನೇ ಸುಮಾರ್ ದಿನದಿಂದ ತಲೇ ಕೊರಿತಾನೇ ಇದೇ ನೋಡು' ಎಂದು ಸುಮ್ಮನಾದ ನನ್ನನ್ನು ಉತ್ತರಕ್ಕೆ ಪೀಡಿಸುವ ಒಂದು ನೋಟ ಬೀರಿ.

'ನಂಗೊತ್ತಿಲ್ಲ, ನನ್ನ ಊಹೆ ಪ್ರಕಾರ, ಎಲ್ಲಿ ಸಮ್ಮಿಶ್ರ ಸರಕಾರ ಇರುತ್ತೋ ಅಲ್ಲೆಲ್ಲಾ ಪ್ರಧಾನಮಂತ್ರಿ ಸಿಷ್ಟಮ್ಮೇ ವರ್ಕ್ ಆಗೋ ಹಂಗ್ ಕಾಣುತ್ತೇ...' ಎಂದು ನನಗೆ ತೋಚಿದ್ದನ್ನು ಹೇಳಿದೆ. ಅದಕ್ಕವನು, 'ಅದೆಲ್ಲಾ ಬ್ಯಾಡಾ, ಈ ನನ್ ಮಕ್ಳು ತಮಿಗೆ ಯುನಿಕ್ಸ್ ಆಪರೇಟಿಂಗ್ ಸಿಷ್ಟಂ ಇಟಗೊಂಡು, ಇನ್ನೊಬ್ರಿಗೆ ವಿಂಡೋಸ್ ಹಂಚ್‌ತಾರಲ್ಲಾ ಅದಕ್ಕೇನ್ ಅನ್ನಣ?' ಎಲ್ಲಿಂದ ಎಲ್ಲಿಗೋ ಒಂದು ಕನೆಕ್ಷನ್ ಮಾಡಿ ಮಾತನಾಡಿದ.

'ಎಲಾ ಇವನಾ, ನಿನಗೇನು ಗೊತ್ತೋ ಆಪರೇಟಿಂಗ್ ಸಿಷ್ಟಂ ಬಗ್ಗೆ?' ಎಂದು ವಿಶ್ವಾಸದ ನಗೆ ಬೀರಿದರೂ, ಅವನ ತುಲನೆಯನ್ನು ಪೋಷಿಸದೇ, 'ಒಂದ್ ದೇಶವನ್ನು ಅತಂತ್ರ ಮಾಡಿದೋರಿಗೆ ಅಲ್ಲಿ ಏನು ನಡೆಯುತ್ತೇ ಅನ್ನೋದು ಗೊತ್ತಿರದೇ ಇದ್ದೀತೇನು...ಅದಿರ್ಲಿ, ವಿಂಡೋಸ್‌ನಲ್ಲಿ ಏನ್ ಸಮಸ್ಯೆ ಇದೇ?' ಎಂದೆ.

'ಏನೋ ಅಲ್ಪಾ ಸೊಲ್ಪಾ ತಿಳಕಂಡೀದೀನಿ, ಅಲ್ಲೀ ಇಲ್ಲೀ ಓದಿ...ವಿಂಡೋಸ್ ನಲ್ಲಿ ಬರೀ ಬಗ್ಸ್ ಅಂತೇ...ದೊಡ್ಡ ದೊಡ್ಡ ಕಾರ್ಪೋರೇಷನ್ನಿನ ಸರ್ವರುಗಳೆಲ್ಲಾ ಯುನಿಕ್ಸ್ ಬೇಸ್ಡ್ ಸಿಷ್ಟಂ‍ಗಳಂತೆ...ಅಂತ ಎಲ್ಲೋ ಓದಿದ ನೆನಪು, ಅದಕ್ಕೇ ಅಂದೆ' ಎಂದು ಸಮಜಾಯಿಷಿ ನೀಡಿದ.

'ಪ್ರಧಾನಮಂತ್ರಿ ವ್ಯವಸ್ಥೆಯಲ್ಲಿ ತೊಂದ್ರೆ ಇದೇ ಅಂತ ಜನರಲೈಜ್ ಮಾಡಕ್ ಆಗಲ್ಲಾ, ಯುಕೆ ನಲ್ಲಿ ಹತ್ತು ವರ್ಷಾ ನಡೀಲಿಲ್ವೇ ಬ್ಲೇರ್‌ನ ಆಡಳಿತ? ಇನ್ನು ಇಂಡಿಯಾದವ್ರ ಕಥೆ ಬಿಡೂ ಅಲ್ಲಿ ಬರೋ ಮಂತ್ರಿ ಮಹೋದಯ್ರನ್ನ ಲೆಕ್ಕ ಇಟ್‌ಗಳಕೆ ಕೈ ಬೆರಳುಗಳು ಸಾಲಲ್ಲ!

ಸುಬ್ಬ, 'ಏನೋ...ಈ ವಯ್ಯಾ ವೆಕೇಷನ್ನ್ ಇಂದ ಬರೋ ಹೊತ್ತಿಗೆ ಇನ್ನೊಂದ್ ರಾಮಾಯ್ಣ ಆಗ್ದೇ ಇದ್ರೆ ಸಾಕು...' ಎಂದು ರಾಗ ಎಳೆದು ಮತ್ತೆ ಬುಷ್ಷನ ಕಾನ್‌ಫರೆನ್ಸ್ ಕಡೆಗೆ ಕಿವಿಕೊಟ್ಟ, ನಾನು ಅಡುಗೆಮನೆ ಕಡೆಗೆ ನಡೆದೆ.