Showing posts with label ಅನಿವಾಸಿ. Show all posts
Showing posts with label ಅನಿವಾಸಿ. Show all posts

Thursday, May 21, 2020

ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

"ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

Friday, May 01, 2020

ಸಾಲವೆಂಬ ಶೂಲ!

ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...".  ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು.  "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ.  ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ.  ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು.  ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು.  ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು.  ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.

***
ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ.  ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು.  ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು.  ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.  ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ.  ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು.  ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.

ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು".  ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು.  ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು.  ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು.  ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ!  ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.

ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ.  ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು.  ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು.  ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು.  ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು.  ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು.  ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!

ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು.  ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.

***
ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ.  ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"!  ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.

ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ.  "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ.  ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.

ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು,  ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್‌ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು,  ಹಾಗೆ ಮಾಡುವುದರಿಂದ ಟ್ಯಾಕ್ಸ್‌ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!

ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ,  ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ!  (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!).  ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ!  ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು.  ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!

ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ!  ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು.  ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು.  ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!

ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!

***
ನಮ್ಮ ಸುತ್ತಲೂ ಈಗ ಯಂತ್ರಗಳಿವೆ:  ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು  ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ!  ಸಾಲ ದೊಡ್ಡದಿದೆ.  ಹೂಡಿಕೆಗಳು ಹಲವಿವೆ.  ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ.  "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ!  ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!

ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?

Wednesday, April 15, 2020

ಬದಲಾದವರು ಯಾರು?

ಹಾಳಾದ ವೈರಸ್ಸು ನಮ್ಮನ್ನೆಲ್ಲ ಹಗಲೂ-ರಾತ್ರಿ ತನ್ನ ಧ್ಯಾನದಲ್ಲೇ ತೊಡಗಿಸಿರುವಂತೆ ಮಾಡಿರುವುದೂ ಅಲ್ಲದೇ, ವಿಶ್ವದಾದ್ಯಂತ ಅನೇಕ ಹಸಿದ ಹೊಟ್ಟೆಗಳನ್ನೂ, ಸಾವು-ನೋವಿನ ಕಣ್ಣೀರ ಕೋಡಿಯನ್ನೂ ಹರಿಸಿರುವುದು ನಿಜ.  ಈ ವೈರಸ್ಸಿನ ಭೀತಿ ಒಂದು ರೀತಿಯ ಕಾಡ್ಗಿಚ್ಚಿನಂತೆ ಎಲ್ಲ ಕಡೆಗೆ ಹರಡಿದ್ದು, ಇದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಭಸ್ಮವನ್ನಾಗಿಸಿ, ಆ ಜಾಗದಲ್ಲಿ ಮತ್ತೆ ಹೊಸ ಹುಟ್ಟುಗಳನ್ನು ಕಾಣಬಹುದು.  ಕೆಲವರು ಈ ವೈರಸ್ಸಿನಿಂದ ಬದುಕಿಗೆ ಆಗಿ ಮಿಗುವಷ್ಟು ಪಾಠ ಕಲಿಯುತ್ತಾರೆ, ಇನ್ನು ಕೆಲವರು ತಮಗೇನೂ ಆಗೇ ಇಲ್ಲ, ಈ ಸೃಷ್ಟಿಯ ಸೌಲಭ್ಯಗಳು ಇರುವುದೇ ನಮ್ಮ ಪೋಷಣೆಗಾಗಿ ಎಂದುಕೊಳ್ಳುವವರೂ ಇದ್ದಾರೆ.  ದೂರದ ಸ್ನೇಹಿತರು, ನೆಂಟರು-ಇಷ್ಟರನ್ನು ಮಾತನಾಡಿಸಲು ಇದು ಸಕಾಲ.  ಸಂಜೆಯ ವೇಳೆ (ಆಫೀಸಿನ ಅವಧಿ ಮುಗಿದ ಮೇಲೆ), ವಾರಾಂತ್ಯದಲ್ಲಿ ಎಲ್ಲರೂ ಕೂಡ ಗೊಂದಲವಿಲ್ಲದೇ ಹೆಚ್ಚು ಕಾಲ ಫೋನ್ ಅಥವಾ ವಿಡಿಯೋ ಸಂಭಾಷಣೆಯಲ್ಲಿ ಸಿಗುವುದು ಇತ್ತೀಚಿನ ಒಂದು ಬದಲಾವಣೆ ಎನ್ನಬಹುದು.  ನಮ್ಮ ಪರಿವಾರದವರಿಗೆ ನಾವು ಕಷ್ಟಕಾಲದಲ್ಲಿ ಆಗಿ ಬರಲಿಲ್ಲ ಎನ್ನುವ ವ್ಯಥೆ ಒಮ್ಮೊಮ್ಮೆ ಬಾಧಿಸುತ್ತಾದರೂ, ಮರುದಿನ ಫೋನ್‌ನಲ್ಲಿ ಮಾತನಾಡಿದಾಗ ಮನಸ್ಸು ಹಗುರವಾಗುತ್ತದೆ.  ಕಾಲ ಎಲ್ಲರನ್ನೂ ಬದಲಾಗಿಸುತ್ತದೆ... ಅದರಲ್ಲೂ ದೇಶ-ಭಾಷೆ-ಬಂಧುಗಳನ್ನು ಬಿಟ್ಟು ದೂರ ಬಂದ ನಾವುಗಳು ಹೆಚ್ಚು ಬದಲಾಗಿದ್ದೇವೆ ಎಂದು ಅನಿಸುತ್ತದೆ.

***

ಕಳೆದ ವರ್ಷ ಭಾರತಕ್ಕೆ ಹೋಗಿದ್ದಾಗ ನಮ್ಮ ಹಳೆಯ ಸಂಬಂಧಿಕರೆನ್ನೆಲ್ಲ ನೋಡಿ ಮಾತನಾಡಿಸುವ ಅವಕಾಶವೊಂದು ಬಂದಿತ್ತು. ಭಾರತದ ಬೇರುಗಳನ್ನು ಬಿಟ್ಟು ಬಂದವರಿಗೆ ಈ ರೀತಿಯ ಸುಯೋಗಗಳು ಸಿಗುವುದು ಅಪರೂಪವಷ್ಟೇ. ನಾವು ಎಷ್ಟೇ ದೂರದಿಂದ ಫೋನಿನಲ್ಲಿ ಮಾತನಾಡಿದರೂ ಹತ್ತಿರ ಕುಳಿತು, ಪರಸ್ಪರ ಭೇಟಿಯಾಗಿ ಮಾತನಾಡುವ ಅನುಕೂಲ ಸುಖಕ್ಕೆ ಯಾವ ರೀತಿಯಲ್ಲೂ ತಾಳೆ ನೋಡಲಾಗದು. ಇತ್ತೀಚಿನ ತಂತ್ರಜ್ಞಾನದ ಉನ್ನತಿಯ ದೆಸೆಯಿಂದ ಅಪರೂಪಕ್ಕೊಮ್ಮೆ ವೀಡಿಯೋ ಕಾಲ್ ಮಾಡಿದರೂ ಸಹ ಅದೂ ಕೂಡ ಪರಸ್ಪರ ಭೇಟಿಯ ಅನುಭವವನ್ನು ಕೊಡಲು, 8000 ಮೈಲಿಯ ದೂರದ ಅಂತರದಲ್ಲಿ ಸೋಲುತ್ತದೆ ಎಂದೇ ಹೇಳಬೇಕು. ನಮ್ಮ ಸಹಪಾಠಿಗಳು, ಸ್ನೇಹಿತರು ನೆಂಟರು, ಇಷ್ಟರು, ಬಂಧು-ಬಳಗದವರು ಇವರನ್ನೆಲ್ಲ ಲೆಕ್ಕ ಹಾಕಿದರೆ ಸುಮಾರು ಎರಡು ಸಾವಿರ ಜನರಷ್ಟಾಗಬಹುದು. ನಮ್ಮ ಮದುವೆಗಳಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಜನರಾದರೂ ಬಂದಿರುತ್ತಾರಲ್ಲ?

ಹೀಗೇ ಒಂದು ಭೇಟಿಯಲ್ಲಿ, ನಮ್ಮ ಹಿರಿಯ ತಲೆಗಳನ್ನು ನೋಡಿ ಮಾತನಾಡಿಸುವ ಸುಯೋಗ ಬಂದಿತ್ತು. ನಾನು ಅವರುಗಳ ಮನೆಗೆ ಹೋದಾಗ ಅವರು ನನ್ನನ್ನು ’ಅತಿಥಿ’ಯಾಗಿ ನೋಡಿಕೊಳ್ಳುವ ರೀತಿಯಲ್ಲಿ ಅನೇಕ ಹೊಸತುಗಳಿದ್ದವು. ದೂರದಿಂದ ಬಂದಿದ್ದಾನೆ ಎಂದು ಒಂದಿಷ್ಟು ಉಪಚಾರಗಳು, ಅವುಗಳ ನಡುವೆ ನೆಲದ ಮೇಲೆ ಕೂರಿಸಿ ಊಟಕ್ಕೆ ಹಾಕಬೇಕೋ, ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕೂರಿಸಬೇಕೋ ಎನ್ನುವ ಕಸಿವಿಸಿ. ಎಲೆಯಿಟ್ಟು ಊಟ ಮಾಡುತ್ತಾರೋ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಬೇಕೋ ಎನ್ನುವ ಮುಜುಗರ. ಊಟಕ್ಕೆ ಏನು ಬಡಿಸಬೇಕು ಅಥವಾ ಬೇಡ ಎನ್ನುವ ಅಳುಕು. ಹೀಗೇ ನನ್ನ ಭೇಟಿಯುದ್ದಕ್ಕೂ ಸ್ಥಳೀಯ ಭಾಷೆಯನ್ನು ಬಿಟ್ಟು ಯಾರದ್ದೋ ಜೊತೆಗೆ ನಡೆಸಬಹುದಾದ ಗ್ರಾಂಥಿಕ ಭಾಷೆಯನ್ನು ಬಳಸಿ ನಡೆಸುವ ಸಂವಾದದ ಸಂಕಟ... ಈ ಎಲ್ಲದರ ಹಿನ್ನೆಲೆಯಲ್ಲಿ ನಾನು ಯಾರ ಮನೆಗೆ ಬಂದಿದ್ದೇನೆ, ಇವರಿಗೆಲ್ಲ ಏನಾಗಿದೆ? ಒಂದು ಕಾಲದಲ್ಲಿ ಎಷ್ಟೊಂದು ಸಹಜವಾಗಿ ವರ್ತಿಸುತ್ತಿದ್ದ ನಮ್ಮ ಜನರಿಗೆ ಈ ರೀತಿ ಇರುಸುಮುರುಸೇಕಾಗುತ್ತಿದೆ ಎಂದು ಯೋಚಿಸಲು ತೊಡಗಿದೆ. ನಾನು ಊರಿಗೆ ಹೋದೊಡನೆ ಅಲ್ಲಿನ ಸ್ಥಳೀಯ ಉಡುಪುಗಳನ್ನು ತೊಡುವುದರ ಮೂಲಕ ’ಎಲ್ಲರೊಳಗೊಂದಾಗ’ ಬಯಸುವ ನನ್ನ ಪ್ರಯತ್ನಕ್ಕೆ ಅನಾಯಾಸ ಸೋಲು! ನಾನು ದಂಗಾಗಿ ಹೋಗಿದ್ದೆ.

ಒಂದು ಕಾಲದಲ್ಲಿ ಎಷ್ಟೊಂದು ವಿಷಯಗಳಿಗೆ ಬಡಿದಾಡುತ್ತಿದ್ದೆವು, ತಾಳಮದ್ದಳೆಯ ಪ್ರತೀಕವಾಗಿ ಅನೇಕ ವಾದ-ವಿವಾದಗಳನ್ನು ಹೂಡುತ್ತಿದ್ದೆವು, ಆಯಾ ಸಮಯದ ಮಟ್ಟಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮ ಸಂಘರ್ಷಗಳಲ್ಲಿ ಘರ್ಷಣೆಗಳಿದ್ದವು, ಘೋಷಣೆಗಳಿದ್ದವು. ಮದುವೆ-ಮುಂಜಿಯ ಮಾತುಗಳು ಬರುತ್ತಿದ್ದವು. ಜಾತಿ-ಆಸ್ತಿ-ಅಂತಸ್ತಿನ ವಿಚಾರಗಳು ಹಿಣುಕಿ ಹಾಕುತ್ತಿದ್ದವು... ಆದರೆ, ಈ ಅಸಹಜ ವರ್ತಮಾನದ ಒಡನಾಟದಲ್ಲಿ ಈ ಮೇಲಿನೆಲ್ಲವೂ ಮಾಯವಾಗಿ, ಯಾರೋ (ದಾರಿ ತಪ್ಪಿ ಬಂದ) ಅತಿಥಿಗಳ ಸತ್ಕಾರದಂತೆ ನಮ್ಮ ಭೇಟಿ ನಡೆಯತೊಡಗಿದ್ದನ್ನು ನೋಡಿ ಮನ ಹಿಂಡಿಹೋಗಿತ್ತು.

ಇದನ್ನು ಹೀಗೇ ಬಿಟ್ಟರೆ, ನನ್ನವರೆನ್ನುವವರನ್ನೆಲ್ಲ ಎಲ್ಲಿ ದೀರ್ಘಕಾಲೀನವಾಗಿ ಕಳೆದುಕೊಳ್ಳಬೇಕಾಗುತ್ತೋ ಎಂದು ನಾನು ಅನೇಕ ಸೂಕ್ಷ್ಮ ವಿಷಯಗಳನ್ನು ಎತ್ತಿ ನಿಧಾನವಾಗಿ ವಾದಗಳನ್ನು ಮಂಡಿಸತೊಡಗಿದೆ. ಹೀಗಾದಲಾಗರೂ ಅವರುಗಳು ತೆರೆದುಕೊಳ್ಳಲಿ ಎಂದು... ಊಹ್ಞೂ, ನಾನು ಏನೇ ಮಾಡಿದರೂ ಅವರು ತಿಪ್ಪೆ ಸಾರಿಸಿದ ಹಾಗೆ ಉತ್ತರಗಳನ್ನೇ ಕೊಡುತ್ತಾ ಬಂದರು. ಹೀಗೇ ಬಿಟ್ಟರೆ, ಇವರುಗಳು ನನ್ನಿಂದ ದೂರವೇ ಇರುತ್ತಾರೆ ಎಂಬ ಯೋಚನೆ ಬಂದಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತು... ಮರುದಿನ ಒಂದು ಹೊಸ ಆಲೋಚನೆಯೊಡನೆ ಅವರನ್ನೆಲ್ಲ ಭೇಟಿ ಮಾಡಲು ಹೋದೆ.

***
ಹಳ್ಳಿಗಳಲ್ಲಿ ಸಹಜವಾಗಿ ಸೂರ್ಯ ಹುಟ್ಟುತ್ತಲೇ ಜೀವನ ಆರಂಭವಾಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಆನೇಕ ಮನೆಗಳಲ್ಲಿ ಬೆಳಗಾಗುವುದರ ಒಳಗೆ ಜಾನುವಾರುಗಳಿಗೆ ಬಾಯಾರು (ಗಂಜಿ-ನೀರು) ಕೊಡುವುದರಿಂದ ಹಿಡಿದು, ಅಂಗಳವನ್ನು ಗುಡಿಸಿ ಸಾರಿಸಿ, ಹೊಸ್ತಿಲಿಗೆ ಅರಿಶಿಣ-ಕುಂಕುಮವಿಡುವುದರಿಂದ ಹಿಡಿದು, ಮನೆ ಮಂದಿಯೆಲ್ಲ ಮಿಂದು ತಮ್ಮ ತಮ್ಮ ಕೆಲಸ ನೋಡಿಕೊಳ್ಳುವ ವಾಡಿಕೆಯಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ತಿಂಡಿಗೆ ಖಾಯಂ ಅವಲಕ್ಕಿ ಅಥವಾ ದೋಸೆಯ ಪರಿಪಾಠ ಇನ್ನೂ ಜಾರಿ ಇದೆ. ನಾನು ನನ್ನ ಪರಿವಾರವನ್ನು ಬಿಟ್ಟು, ಒಂದು ಲುಂಗಿಯನ್ನು ಸುತ್ತಿಕೊಂಡು, ಬೆಳ್ಳಂಬೆಳಗ್ಗೆ ಇವರುಗಳ ಮನೆಯ ಅಡುಗೆ ಮನೆ ತಡಕಾಡಿದರೆ  ಒಂದಿಷ್ಟು ದೋಸೆಗೇನೂ ಕಡಿಮೆ ಇಲ್ಲ ಎನ್ನುವ ನಂಬಿಕೆಯಿಂದ ನಮ್ಮ ನೆಂಟರೊಬ್ಬರ ಮನೆಗೆ ಹಿಂಬದಿ ಬಾಗಿಲಿನಿಂದ ಹೋಗಿ... ಎಂದಿನಂತೆ ಮಾತಿಗೆ ತೊಡಗುತ್ತಾ, ಅಲ್ಲೇ ಹತ್ತಿರದಲ್ಲಿದ್ದ ಮಣೆಯನ್ನೊಂದು ಎಳೆದುಕೊಂಡು ಕುಳಿತುಕೊಂಡೆ. ಆಗ ನೋಡಿ ನಿಜವಾಗಿ ನಮ್ಮ-ಅವರ ಮಾತುಕಥೆ ಶುರುವಾಗಿದ್ದು.... ಉಭಯ ಕುಶಲೋಪರಿಗೆ ಕತ್ತರಿ ಹಾಕಿ, ಕಳೆದ ನಾಲ್ಕು ವರ್ಷಗಳ ಆಗು-ಹೋಗುಗಳ ಒಟ್ಟು ಲೆಕ್ಕಾಚಾರವನ್ನು ನಾಲ್ಕು ಘಂಟೆಗಳಲ್ಲಿ ಮುಗಿಸುವ ಹುನ್ನಾರದಲ್ಲಿದ್ದವನಿಗೆ ಸಮಯ ಹೋದುದೇ ತಿಳಿಯಲಿಲ್ಲ. (ಜೊತೆಗೆ ಅಕ್ಕ-ಪಕ್ಕದ ಮನೆಗಳಿಂದಲೂ ಪರಿಚಯದವರು ಬಂದು ಸೇರತೊಡಗಿದರು. ನಮ್ಮ ಮಾತುಕಥೆಗಳಲ್ಲಿ ’ಬನ್ನಿ-ಹೋಗಿ’ಗಳು ಇರಲಿಲ್ಲ!) ತಿಂಡಿ-ಕಾಫಿಯ ಸಮಯವೆಲ್ಲವೂ ಮುಗಿದು, ಮಧ್ಯಾಹ್ನದ ಊಟದ ಸಮಯವೂ ಆಗಿ ಹೋಯಿತು. ನೀವು ಮಾಡಿದ್ದನ್ನೇ ಬಡಿಸಿ ಎಂದು ತೋಚಿಕೊಳ್ಳುವ ನನಗೆ, ಏನಾದರೂ ವಿಶೇಷವಾದ ಅಡಿಗೆಯನ್ನ ಮಾಡಲೇ ಬೇಕು ಎಂದು ಅವರು, ಒಬ್ಬರಿಗೊಬ್ಬರು ಮತ್ತೆ ’ಹೋರಾಟ’ ನಡೆಸಿದೆವು. ಕೊನೆಗೆ ನಾನೇ ಸೋತು, ಅಲ್ಲೇ ಇದ್ದ ಒಂದೆಲಗದ ತಂಬಳಿಯನ್ನು ಮಾಡಿರೆಂದು ಕೇಳಿಕೊಂಡೆ. ಊಟವಾದ ಮೇಲೂ ಮಣೆ ಬಿಡದ ನನ್ನ ಜಿಗಣೆಯ ಜಿದ್ದಿಗೆ ಅವರು ಸೋತಿದ್ದರು. ಕೊನೆಗೆ ಅಲ್ಲಿಯೇ ಇದ್ದ ಎಲೆ-ಅಡಿಕೆ ಬಟ್ಟಲನ್ನು ಎಳೆದುಕೊಂಡು ಕವಳ ಹಾಕಿದ ಮೇಲೆ ಅವರಲ್ಲಿ ಒಬ್ಬನಾಗಿ ಹೋಗಿದ್ದೆ.
"ಹೀಂಗೆ ಬರ್ತಾ ಇರು ಮಾರಾಯ, ನೀ ಬಂದ್ರೆ ಒಂಥರ ಚೆಂದ ನೋಡು!" ಎನ್ನುವ ಮನದಾಳದ (ಬರೆಯಲಾರದ) ಷರಾ ವನ್ನು ಹೇಳಿಸಿಕೊಂಡು ಹಿಂತಿರುಗಿ ಹೊರಟೆ.

***
ಈ ಒಂದು ಘಟನೆಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾಗ, ನನ್ನ ಮನದಲ್ಲಿ ಬದಲಾದವರು ಯಾರು? ಎಂಬ ಪ್ರಶ್ನೆ ಬಲವಾಗಿ ಏಳತೊಡಗಿತು. ಕಾಲ ಕಳೆದಂತೆ ನಮ್ಮ-ನಮ್ಮ ವ್ಯಕ್ತಿತ್ವ, ಪ್ರಬುದ್ಧತೆ, ವಿಚಾರಗಳು ಬದಲಾಗಲಿ. ಆದರೆ, ಈ ಬದಲಾವಣೆಯ ದೆಸೆಯಿಂದ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೆ, ಅಥವಾ ಈ ಬದಲಾವಣೆಯ ಕೃಪೆಯಿಂದ ನಮ್ಮವರೊಡನೆ ನಾವೇ ಒಂದಾಗಲಾರದವರಾದರೆ, ಅದು ನಮ್ಮನ್ನು ಬೇರ್ಪಡಿಸಿ, ನಮ್ಮಲ್ಲಿ ಪ್ರತ್ಯೇಕತಾ ಭಾವನೆಯನ್ನು ಮೂಡಿಸೋದಿಲ್ಲವೇ? ಬಂಧುಗಳಿಗೆ, ಸ್ನೇಹಿತರಿಗೆ ಅವರವರ ಧರ್ಮವಿದೆ, ಅವರಿಗೆ ಒಂದು ಕಾರ್ಯಭಾರವಿದೆ, ಪಾತ್ರವಿದೆ... ಅವುಗಳನ್ನೆಲ್ಲ ತೊರೆದು ಅವರು ಅವರಾಗಿಲ್ಲದಿದ್ದಾಗ ನಾವು ನಾವಾಗದಿದ್ದರೆ ಯಾರನ್ನು ನೋಡಲು ಎಷ್ಟು ದೂರ ಹೋದರೆ ಏನು ಪ್ರಯೋಜನ?

ಅಮೇರಿಕದ ನೀರು ಕುಡಿದು ಅಮೇರಿಕನ್ ಇಂಗ್ಲೀಷ್ ಬಳಸಿ ನನ್ನೊಡನೆ ಬರೀ ಇಂಗ್ಲೀಷಿನಲ್ಲೇ ಸಂವಾದಿಸುವ ನನ್ನ ಖಾಸಾ ಪರಿಚಿತ (ಸ್ನೇಹಿತ) ಶೃಂಗೇರಿಯ ರಾಜೇಂದ್ರನಾಗಲೀ, ಅಥವಾ ತಮ್ಮತನವನ್ನು ಬಿಟ್ಟು ನಮ್ಮೊಡನೆ ಗ್ರಾಂಥಿಕ ಭಾಷೆಯನ್ನು ಬಳಸಿ ನಟಿಸುವ ನನ್ನ ಹಿರಿಯ ಸಂಬಂಧಿಕರಾಗಲೀ ನನಗೇಕೆ ಬೇಕು?

ಬದಲಾದವರು ಯಾರೋ ಅವರೇ ಉತ್ತರ ಕೊಡಬೇಕು!

Saturday, April 12, 2014

... ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌‍ಗಳು...

ಬಹಳ ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ.

"ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ?" ಅಂತ ಲೋಕೋಭಿರಾಮವಾಗಿ ಕೇಳಿದೆ,

"ಏನಿಲ್ಲ, ಚೆನ್ನಾಗಿದ್ದೀನಿ, ಬೆಳೆ, ಕೊಯ್ಲು, ಎಲೆಕ್ಷನ್ನು ಅಂತೆಲ್ಲಾ ಸ್ವಲ್ಪ ಬ್ಯುಸಿ ಅಷ್ಟೇ...ನೀನ್ ಹೆಂಗಿದಿ? ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್"

"ನಮಿಗೇನ್ ಆಗತ್ತೆ, ನಾವೆಲ್ಲಾ ಚೆನ್ನಾಗೇ ಇದ್ದೀವಿ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ" ಅಂದೆ.

"ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ?" ಎಂದು ಕಾಳಜಿ ತೋರಿಸಿದ.

"ಅದೇನಿಲ್ಲ, ಲಾಸ್ಟ್ ಈಯರ್ ಮಾರ್ಕೆಟ್ಟುಗಳೆಲ್ಲ ಮೇಲ್ ಹೋಯ್ತಲ್ಲಾ, ಈ ವರ್ಷ ಒಂದಲ್ಲಾ ಒಂದು ಕಾರ್ಣ ಹಿಡಕೊಂಡು ಅವಕಾಶ ಸಿಕ್ಕಾಗೆಲ್ಲ ಕೆಳಗಡೆ ಬೀಳ್ತಾನೇ ಇವೆ. ಒಂದ್ಸರ್ತಿ ಚೈನಾದಲ್ಲಿ ಪ್ರಾಬ್ಲಮ್ಮು ಅಂತ ಬಿತ್ತು, ಇನ್ನೊಂದ್ಸರ್ತಿ ಎಮರ್ಜಿಂಗ್ ಮಾರ್ಕೇಟ್ಟಲ್ಲಿ ಪ್ರಾಬ್ಲಂ ಅಂತ ಬಿತ್ತು, ಮತ್ತೊಂದ್ ಸರ್ತಿ ರಷ್ಯಾದ ಪೂಟಿನ್ನ್ ದೆಸೆಯಿಂದ ಬಿತ್ತು...ಇನ್ನೂ ವರ್ಷ ಶುರುವಾಗಿ ಮೂರು ತಿಂಗಳು ಮುಗ್ದು ನಾಕಕ್ಕೆ ಬಿತ್ತು - ಆಗ್ಲೆ ನಾಕ್ ಸರ್ತಿ ಮಗುಚಿಕೊಂತು ನೋಡು..." ಎಂದು ಸಿಎನ್‌ಬಿಸಿ ಡಾಮಿನಿಕ್ ಚು ಥರ ನನ್ನ ಸ್ಟಾಕ್ ಮಾರ್ಕೆಟ್ ತತ್ವವನ್ನು ಅರುಹಿದೆ.

ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, "ಅಲ್ಲಾ ಮಾರಾಯಾ, ಆ ಪುಟಿನ್ ನೋಡು, ಹೆಂಗ್ ಗೆದ್ಕೋಂಬಿಟ್ಟಾ, ಕ್ರಿಮಿಯಾ ಅಂತಾ ಅಲ್ಲಿಗೇ ನಿಲ್ಲುಸ್ತಾನೋ, ಅಥವಾ ಇನ್ನೂ ತನ್ನದೇ ದೊಡ್ಡು ಅಂತ ಮಂತ ಶುರು ಹಚ್ಗೊಂತಾನೋ?"
"ಅವ್ನು ಏನ್ ಮಾಡ್ತಾನೋ ಕಾಣೇ, ಆದ್ರೆ ನಮ್ ಕಡೆಯವ್ರು ಸ್ಯಾಂಕ್ಷನ್ನು, ಗೀಂಕ್ಷನ್ನು ಅಂತ ಫೋರ್ಸ್ ಹಾಕ್ತಾನೇ ಅವ್ರೆ" ಅನ್ನೋಷ್ಟರಲ್ಲಿ,

"ಏ ಸುಮ್ನಿರೋ, ನಿಮ್ ಸ್ಯಾಂಕ್ಷನ್ನುಗಳ ಮುಖಾ ನೋಡ್ಕೊಂಡು ಅದುಮಿಕ್ಯಂಡ್ ಇರೋಕೇ ಅವ್ನೇನು ಸದ್ದಾಮ್ ಹುಸೇನ್ ಕೆಟ್ಟೋದ್ನೇ? ಒಂದ್ಸರ್ತಿ ಕಮ್ಯುನಿಷ್ಟ್ ಆದ್ರೇ ಯಾವಾಗ್ಲೂ ಕಮ್ಮುನಿಷ್ಟೇ ತಿಳಕಾ" ಎಂದು ಅವನ ಪ್ರಪಂಚದ ಇತಿಹಾಸದ ಪ್ರಹಸನವನ್ನು ನಿವೇದಿಸಿದ.

ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊಂಡು, ನಿಧಾನವಾಗಿ ಟಾಪಿಕ್ ಬದಲಾಯಿಸಿದೆ, "ಹೌದು, ಅಡಿಕೆ ಬೆಳೆ ಬಂಪರ್ ಬಂದಿದೆ ಅಂತ ಕೇಳ್ದೆ, ಹೆಂಗಿದೆ ವ್ಯವಹಾರ?"

"ಕೆಂಪ್ ಅಡಿಕೆಗೆ ಸ್ವಲ್ಪ ಬೆಲೆ ಬಂದ್ ನಾವ್ ಬಚಾವಾದ್ವಿ, ಇಲ್ಲಾಂದ್ರೆ ಈ ವರ್ಷ ಬಾಳ ಕಷ್ಟ ಇತ್ತು. ಎಲ್ಲ ಕಡೆ ಬೆಲೆ ಜಾಸ್ತಿ, ದುಡ್ಡೀಗ್ ಬೆಲೇನೇ ಇಲ್ಲ, ಹೆಂಗ್ ನಮ್ ಜೀವ್ನ ನಡೀತಾ ಇದೆ ಅಂತ ಬಿಡಿಸಿ ಹೇಳೋದೇ ಕಷ್ಟಾ"

"ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬಿಟ್ಟು, ನೀನು ಒಂದಿಷ್ಟು ಎಲೆಕ್ಷನ್ನ್ ಟೈಮಲ್ಲಿ ಕಾಸ್ ಮಾಡ್ಕೊಳ್ಳೋದಪ್ಪಾ"

"ಏ ಸುಮ್ನಿರೋ ಮಾರಾಯಾ, ಇವರು ಕೊಡೋ ಎಂಜಲು ಕಾಸಿಗೆ ನಾವ್ ಕೈ ಚೆಲ್ಲಿಕೊಂಡು ಕೂತ್ರೆ ತೋಟದ ಕೆಲ್ಸಾ ಎಲ್ಲಾ ಮಠ ಹತ್ತ್ ಹೋಗುತ್ತೆ, ಅದರ ಸವಾಸ ಅಲ್ಲ..."


"ಏ ಯಾಕೋ ಹಂಗಂತಿ? ನಾನು ಎಲೆಕ್ಷನ್ನ್ ಕಮೀಷನ್ನ್ ವೆಬ್ ಸೈಟ್ ನೋಡಿದ್ನಪ್ಪಾ, ಒಂದೊಂದು ಕ್ಯಾಂಡಿಡೇಟ್‌ಗಳು ಫೈಲ್ ಮಾಡಿರೋ ಅಫಿಡೇವಿಟ್ಟ್ ನೋಡಿದ್ರೆ, ಎಲ್ಲೆಲ್ಲೂ ಕೋಟಿ ಕೋಟೀ, ಎಲ್ಲಿಂದ ಬಂತೋ ಇವುಗಳ್ ಹತ್ರ ಇಷ್ಟೊಂದು? ಒಬ್ಬೊಬ್ರ ಹತ್ರ ನೂರು, ಸಾವಿರ ಕೋಟಿ..." ಎಂದು ನಿಜವಾಗಿ ಆಶ್ಚರ್ಯ ವ್ಯಕ್ತಪಡಿಸಿದೆ.

"ಅದೇ ನಿಜವಾದ ಮರ್ಮ ನೋಡು. ಎಷ್ಟೋ ಜನ ನೆಟ್ಟಗೆ ಹೈಸ್ಕೂಲೂ ಪಾಸಾಗಿರಂಗಿಲ್ಲ, ಲೆಕ್ಕಕ್ಕೆ ತೋರಿಸಿರೋದೆ ಕೋಟಿಗಟ್ಟಲೆ ಅಂದ್ರೆ ಇನ್ನು ಒಳಗೆಷ್ಟು ಇಟ್ಟಿರಬಹುದು?"

"ಹಂಗಂದ್ರೆ ಇವುಗಳ ಮುಂದೆ ನಮ್ಮ ವಾರನ್ನ್ ಬಫೆಟ್ಟು, ಬಿಲ್ ಗೇಟ್ಸ್ ಇವ್ರೆಲ್ಲ ಲೆಕ್ಕಕ್ಕೇ ಇಲ್ಲ..." ಅಂತ ಲೇವಡಿ ಮಾಡಿದೆ, ಅವನು ಅದನ್ನು ನಿಜ ಅಂದುಕೊಂಡು,

"ಮತ್ತಿನ್ನೇನು, ಆ ಫೋರ್ಬ್ಸು, ಫಾರ್ಚೂನ್ ನವರಿಗೆಲ್ಲ ಇಂಡಿಯಾದ್ ಬಗ್ಗೆ ಒಂದು ವರದಿ ಮಾಡೋಕ್ ಹೇಳು, ನಮ್ಮಲ್ಲಿ ನಿಜವಾಗಿ ಎಷ್ಟು ದುಡ್ಡಿದೇ ಅಂತ ಗೊತ್ತಾಗುತ್ತೆ?"

"ಹಾಗಾದ್ರೆ, ನಮ್ ಅಮೇರಿಕದ ಬಿಲಿಯನ್ನುಗಳೆಲ್ಲ ಲೆಕ್ಕಕ್ಕೇ ಇಲ್ಲ ಅನ್ನು?" ಎಂದು ಮೂದಲಿಸಿದ್ದಕ್ಕೆ...

"ಗುರುವೇ, ನಿನಗೇನ್ ಗೊತ್ತಿದೆ ಹೇಳು, ಒಂಥರ ಇನ್ನೂ ಹೈಸ್ಕೂಲ್ ಹುಡುಗನಂಗೆ ಮಾತಾಡ್ತಿ ನೋಡು. ಕಳೆದ ವರ್ಷ ನಿನ್ನ ಅಮೇರಿಕದ ಇಂಡೆಕ್ಸ್‌ಗಳು ಅಬ್ಬಬ್ಬ ಅಂದ್ರೆ ಎಷ್ಟು ಪರ್ಸೆಂಟ್ ಮೇಲಕ್ಕ್ ಹೋದ್ವು ಹೇಳೂ, ಇಪ್ಪತ್ತೋ ಮೂವತ್ತೋ ಪರ್ಸೆಂಟ್ ತಾನೆ? ಕಳೆದ ಐದು ವರ್ಷದಲ್ಲಿ ಮಾರ್ಕೆಟ್ಟು ಕೆಳಗ್ ಬಿದ್ದದ್ದು ಡಬ್ಬಲ್ಲೋ ತ್ರಿಬ್ಬಲ್ಲೋ ಆಯ್ತಲ್ಲಾ? ಅದೇ ದೊಡ್ದು ತಾನೆ? ಹುಚ್ಚಪ್ಪಾ, ಕೇಳು...2009 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರ್‌ಗಳನ್ನ 2014 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರುಗಳಿಗೆ ಕಂಪೇರ್ ಮಾಡಿ ನೋಡು. ನಮ್ಮ ದೇಶದ ಒಬ್ಬೊಬ್ಬ ರಾಜಕೀಯ ನಾಯಕನ ಪರ್ಸನಲ್ಲ್ ಸ್ವತ್ತು ಅದೆಷ್ಟು ಸಾವಿರ ಪರ್ಸೆಂಟ್ ಬೆಳೆದಿದೆ ಅಂತ? ಒಂದ್ ಕೆಲ್ಸಿಲ್ಲ, ಉದ್ಯಮಾ ಇಲ್ಲಾ, ಹೇಳಿ-ಕೇಳಿ ಸಮಾಜ ಸೇವೆ ರಾಜಕೀಯದ ಕೆಲ್ಸ, ಎಲ್ಲಿ ನೋಡಿದ್ರೂ ಇನ್‌ಫ್ಲೇಷನ್ನ್ ಜಾಸ್ತಿ ಅಗಿರೋ ಹೊತ್ನಲ್ಲಿ ಅದ್‍ ಹೆಂಗೆ ಐದು ವರ್ಷದ ಹಿಂದೆ ಹತ್ತು ಕೋಟಿ ಡಿಕ್ಲೇರ್ ಮಾಡ್ದೋನು ಈ ಸರ್ತಿ ನೂರು ಕೋಟಿ ಡಿಕ್ಲೇರ್ ಮಾಡ್ತಾನೆ? ಅದನ್ನ್ ಯಾವ್ ಇಂಡೆಕ್ಸಿಗೆ ಹೋಲಿಸ್ತಿ?"

"ಹೌದೋ ಸುಬ್ಬಾ ಎಲ್ಲಿಂದ ಬರುತ್ತೆ ದುಡ್ಡು ಇವ್ರಿಗೆ? ಕೆಲವ್ರದ್ದಂತೂ 760, 800 ಕೋಟಿಗಳಷ್ಟು ಒಟ್ಟು ಮೊತ್ತ ಅಂತಲ್ಲಪ್ಪಾ?"

"ಏಳ್ನೂರು ಕೋಟಿ ಬಾಳಾ ಕಡಿಮೆ ಆಯ್ತು, ಇನ್ನೂ ಸಾವ್ರ ಸಾವ್ರ ಕೋಟಿಗಟ್ಟಲೇ ಇದ್ದೋರು ಇದಾರೆ, ತಿಳ್ಕಾ"

"ಮತ್ತೆ ಇವ್ರ ಹತ್ರ ಇಷ್ಟೊಂದು ದುಡ್ಡು ಇರೋರ್, ರಾಜಕೀಯಾನಾದ್ರೂ ಯಾಕ್ ಮಾಡ್ತಾರೆ, ಸುಮ್ನೆ ತಾವ್ ತಮ್ದು ಅಂತ ಇರಬಾರ್ದಾ?"

"ಅದೇ ವಿಶೇಷ ನೋಡು, ಅದು ನಿಮ್ಮಂತೋರಿಗೆ ಅರ್ಥ ಆಗಲ್ಲ, ಯಾರು ರಾಜಕೀಯಕ್ಕ್ ಬರ್ತಾರೆ ಅಂತ ತಿಳಕಂಡೀ? ದುಡ್ಡ್ ಇಲ್ದೋನ್ ದುಡ್ಡು ಮಾಡೋಕ್ ಬರ್ತಾನೆ, ದುಡ್ಡ್ ಮಾಡ್ದೋನ್ ಅದನ್ನ ಉಳಸ್ ಕೊಳೋಕ್ ಬರ್ತಾನೆ".

"ಅಲ್ಲಾ ಮಾರಾಯಾ, ನಾವ್ ಸುಮ್ನೇ ಊರೂ-ಕೇರೀ, ದೇಶ-ಮನೆ ಬಿಟ್ಟು ಅದನ್ನ ಇದನ್ನ ಓದಿ, ಇತ್ಲಾ ಕಡೇ ಬಂದಿದ್ದೆಲ್ಲಾ ವೇಷ್ಟ್ ಆಯ್ತು ಅನ್ನು, ಸುಮ್ನೇ ಯಾವ್ದಾರ ಪಾರ್ಟಿ ಪಕ್ಷದ ಹೆಸ್ರು ಹಿಡಕೊಂಡ್ ಒಂದಿಪ್ಪತ್ತ್ ವರ್ಷ ಓಡಾಡಿದ್ರೆ ನಾವೂ ಕೋಟಿ-ಕೋಟಿ ಎಣಿಸ್ಬೋದಿತ್ತು..." ಈ ಮಾತಿನಿಂದ ಸುಬ್ಬನಿಗೆ ಸ್ವಲ್ಪ ಸಿಟ್ಟು ಬಂತು ಅಂತ ಅನ್ಸುತ್ತೆ, ನನ್ನ ಮಾತಿನ್ನ ಮಧ್ಯೆ ಹೀಗನ್ನೋದೇ,

"ಅವಾಗ ಇದು ಎಲ್ಲಿಗೆ ಬರುತ್ತೆ ಗೊತ್ತೇನೋ? ನಿನ್ನಂಥಾ ಎನ್ನಾರೈಗಳು ಒಂಥರಾ ಸಪ್ಪೆ ನಾಯ್‌ಗಳು ಇದ್ದಂಗೆ, ಇತ್ಲಾಗ್ ಬೊಗೊಳೋದೂ ಇಲ್ಲ, ಅತ್ಲಾಗ್ ಕಚ್ಚೋದೂ ಇಲ್ಲ. ನಾಯಿ ಅಂದ್ರೆ ನಾಯಿ ಇದ್ದ ಹಾಗೆ ಇರ್‌ಬಕು, ಇವೆಲ್ಲ ನಮಿಗ್ ಬ್ಯಾಡಾ ಅಂತ ಬಿಟ್ಟ್ ವಿರಾಗಿಗಳಾಗ್ ಹೋದ್‌ಮೇಲೆ ಅವಾಗವಾಗ ಇಂಥಾ ಚಿಂತಿ ಯಾಕ್ ಹಚ್‌ಗಂತೀರ್ ಹೇಳು? ಅದರಿಂದ ಏನ್ ಉದ್ದಾರಾಗಿದೆ? ಒಂದ್ಸರ್ತಿ ಮೂಡ್ ಬಂದಾಗ ದುಡ್ಡೇನು ಸರ್ವಸ್ವ ಅಲ್ಲಾ ಅಂತಾ ಬಾಷ್ಣಾ ಬಿಗೀತಿ, ಈಗ ಇಲೆಕ್ಷನ್ನ್ ಅಂಕಿ-ಅಂಶ ನೋಡ್ಕೊಂಡು ದುಡ್ಡೇ ದುಡ್ಡೂ ಅಂತೀ, ನಿನಗೂ ಈ ರಾಜಕಾರ್ಣಿಗಳಿಗೂ ಏನರ ವ್ಯತ್ಯಾಸ ಐತಾ?" ಎಂದು ಎಲೆ-ಅಡಿಕೆ ಹಾಕ್ಕೊಂಡು ಚೆನ್ನಾಗ್ ಉಗದಾ... ಆದ್ರೆ ನಾನು ಬಿಟ್ಟು ಕೊಡ್ಲಿಲ್ಲಾ,

"ನಿಮ್ದು ದೊಡ್ಡ ವ್ಯಾಪಾರೀ ಮನೋಭಾವ್ನೆ ದೇಶ, ನಿನ್ನಂಥೋರ್ ಹತ್ರ ತಪ್ಪೂ-ಸರಿ ಅಂತ ಏನ್ ಮಾತಾಡೋದ್ ಹೇಳು? ಭ್ರಷ್ಟಾಚಾರ ವ್ಯವಸ್ಥೆನಲ್ಲಿ ಪ್ರತಿ ಓಟಿಗೆ ಎರಡೆರಡು ಸಾವ್ರ ಅಂತ ಮಾರ್ಕೋಳ್ಳೋರು ನೀವು" ಅಂತ ನಾನು ಧ್ವನಿ ಜೋರು ಮಾಡಿದೆ,

’ನೋಡು, ಸುಖಾ ಸುಮ್ನೇ ಅನ್ನಬ್ಯಾಡ. ಭ್ರಷ್ಟಾಚಾರ ವ್ಯವಸ್ಥೇ ಎಲ್ಲಾ ಕಡೆ ಇದೆ, ನಿಮ್ಮಲ್ಲಿ ನಾಜೂಕಾಗಿ ಸಗಣೀನ ಫೋರ್ಕ್ ತೊಗೊಂಡ್ ತಿಂತೀರಿ, ಆ ಚೈನಾದವ್ರು ಚಾಪ್ ಸ್ಟಿಕ್ಕ್‌ನಲ್ಲಿ ತಿಂತಾರೆ, ಮತ್ತೊಂದ್ ಕಡೆ ಚಮಚಾದಲ್ಲಿ ತಿಂತಾರೆ, ಆದ್ರೆ ನಮ್ ಕಡೆ ಅವಕಾಶ ಸಿಕ್ಕಾಗ ನೀಟಾಗಿ ಕೈ ಹಾಕಿ ಕಲಸಿಗೊಂಡು ತಿಂತಾರೆ. ಅಲ್ಟಿಮೇಟ್ಲಿ ಅಂತಾ ಏನ್ ವ್ಯತ್ಯಾಸ ಇಲ್ಲ, ಎಲ್ಲಾ ಒಂದೇ"

"ಏನ್ ಅಂತ ಮಾತಾಡ್ತಿಯೋ, ಏನೇ ಆದ್ರೂ ಅಮೇರಿಕದ ಜನ ನಿಮ್ ಥರ ದುಡ್ಡಿಗ್ ಓಟ್ ಹಾಕೋದಿಲ್ಲ, ತಿಳಕಾ..."

"ನೀ ಏನ್ ಮಾತಾಡ್ತಿದಿಯೋ, ಇಷ್ಟು ವರ್ಷ ಅಲ್ಲಿದೀ, ಇಷ್ಟೋ ಗೊತ್ತಾಗಂಗಿಲ್ಲ ಅಂದ್ರೆ ಹೆಂಗೆ? ಗುರುವೇ ಎಲೆಕ್ಷನ್ನ್ ಕ್ಯಾಂಫೇನ್ ಫಂಡು ಅಂಥ ಕಾರ್ಪೋರೇಷನ್ನುಗಳು ಪಕ್ಷಕ್ಕೆ ಕೊಡೋ ದುಡ್ಡೂ ಎಲ್ಲಿಂದ ಬರುತ್ತೆ ಎಲ್ಲೀಗ್ ಹೋಗುತ್ತೆ?"

"ಅದು ಲೀಗಲೈಜ್ಡ್ ವ್ಯವಸ್ಥೆ ಅಲ್ವಾ..."

"ನಿನ್ ತಲೆ, ಲೀಗಲ್ಲು... ನಾವು ನಿಮ್ಮನ್ನ ಸಪೋರ್ಟ್ ಮಾಡ್ತೀವಿ ಅಂತ ಪಾರ್ಟಿಗಳಿಗೆ ದೇಣಿಗೆ ಕೋಡೋದರಲ್ಲಿ ಕಂಪನಿಗಳ ಸ್ವ ಇಚ್ಚೆ ಸ್ವಾರ್ಥ ಒಂದಿಷ್ಟೂ ಇಲ್ಲಾ ಅಂದ್ರೆ ಅವರ್ಯಾಕೆ ಕೊಡ್ತಾರೆ?"

"ಅದು ಕಂಪನಿಗಳ ಲೆಕ್ಕ, ನಮ್ಮ ಜನಸಾಮಾನ್ಯರದ್ದೇನು ಅದ್ರಲ್ಲಿ ಪಾತ್ರ ಇಲ್ಲ"

"ಥೂ ನಿನ್ನ, ಅದೇ ತಪ್ಪು, ನೀನು ಕಂಪನೀನಲ್ಲಿ ಇನ್ವೆಷ್ಟ್ ಮಾಡ್ದಿ ಅಂದ್ರೆ, ಅದ್ರಲ್ಲಿ ನೀನೂ ಶಾಮೀಲೂ ಅಂತ ತಾನೇ ಅರ್ಥ. ನಿನಗೆ ಬೇಕೋ ಬೇಡ್ವೋ ನೀನಿರೋ ವ್ಯವಸ್ಥೆ ನಿನ್ ಸುತ್ಲೂ ಸುತ್ತ್ ಕೊಳ್ಳೋದೇ ಮಾಡರ್ನ್ ಸೋಷಿಯಲ್ಲಿಸ್ಸಮ್ಮು ನೋಡು, ಒಂಥರಾ ಡೊಕೋಮೋ ಅಂಥ ನೆಟ್‌ವರ್ಕ್ ಕರೀತಾನೇ ಇರುತ್ತೆ ಎಲ್ಲ್ ಹೋದ್ರೂ ಬಿಡಂಗಿಲ್ಲ" ಎಂದು "ಡೊಕೋಮೋ..." ಅಡ್ವರ್ಟೈಸ್‌ಮೆಂಟ್ ಇಮಿಟೇಟ್ ಮಾಡಿ ಜೋರಾಗಿ ನಕ್ಕ.

"ಹಂಗಂದ್ರೆ ಎಲೆಕ್ಷನ್ನು ಅಂದ್ರೆ ಬರೀ ರೊಕ್ಕ ಇರೋರ್ ಆಟ ಅನ್ನು, ಇನ್ನು ಸಾಮಾನ್ಯರ ಪಾಲು ನಾಯಿ ಪಾಲು ?"

"ಇದು ಹೆಂಗೆ ಗೊತ್ತಾ, ಇದು ಬೈ ಡೆಫನಿಷನ್ ಯಾರು ಬೇಕಾದ್ರೂ ಭಾಗವಹಿಸೋ ಪ್ರಜಾಪ್ರಭುತ್ವ ವ್ಯವಸ್ಥೇನೇ, ಆದ್ರೆ ದುಡ್ಡಿರೋರು ದೊಡ್ಡಪ್ಪ ಅಷ್ಟೇ. ಒಂಥರಾ ಈ-ಟಿವಿ ಡ್ಯಾನ್ಸ್ ಪ್ರೋಗ್ರಾಂ ತಕಧಿಮಿತ ಬರುತ್ತಲ್ಲ ಹಂಗೆ, ಅವರ ಸ್ಲೋಗನ್ನ್ ಏನ್ ಹೇಳು? ’ಯಾರು ಬೇಕಾದ್ರು ಕುಣೀಬೋದು’ - ಆದ್ರೆ ನಾವು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡ್ತೀವಿ ಅಂತ ಹಂಗೆ.

"ಸರಿ ಬಿಡು, ಇನ್ನೇನು ಎಲೆಕ್ಷನ್ನು ಮುಗಿಯುತ್ತೇ, ಅಮೇಲೇ ಕುದುರೆ ವ್ಯಾಪಾರ ಶುರು, ಒಬ್ಬೊಬ್ಬ ಎಮ್ಮೆಲ್ಲೆಗಳನ್ನ ಎಂಪಿಗಳನ್ನ ಕೊಡೊ-ಕೊಳ್ಳೋ ಆಟ ನಡೆಯುತ್ತೇ" ಅಂದೆ,

"ಈ ಎಮ್ಮೆಲ್ಲೆಗಳನ್ನ ಹೆಂಗೆ ಕೊಳ್ತಾರೆ ಅನ್ನೋದಕ್ಕೆ ತೆಲುಗಿನಲ್ಲಿ ಲೀಡರ್ ಅಂತ ಒಂದು ಸಿನಿಮಾ ಇದೆ ನೋಡು, ಅದ್ರಲ್ಲಿ ಒಂದು ಫ್ಯಾಟ್ ಕೀ ಕೊಟ್ಟು ಅದ್ರಲ್ಲಿರೋ ಎಲ್ಲಾ ಬೀರು ಅಲ್ಮೇರಾಗಳಲ್ಲಿ ನೋಟುಗಳನ್ನ ತುಂಬಿ ಇಟ್ಟಿರ್ತಾರೆ, ಅಂತದನ್ನ ಬ್ಯಾಡ ಅನ್ನೋದಕ್ಕೆ ಬಾಳಾ ಗಟ್ಟಿ ಎದೆ ಬೇಕು, ಸೋ ಐ ಡೋಂಟ್ ಬ್ಲೇಮ್ ದೆಮ್"

"ಸರಿ, ಟೈಮ್ ಆಯ್ತು...ಈ ಎಲೆಕ್ಷನ್ನಲ್ಲಿ ನಿನ್ ಪ್ರಿಡಿಕ್ಷನ್ನ್ ಏನು, ಕರ್ನಾಟಕದಲ್ಲಿ ಯಾರ್ ಬರ್ತಾರೆ, ದೇಶದ ಚುಕ್ಕಾಣೀ ಯಾರ್ ಹಿಡೀತಾರೆ?"


"ನನ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಕಷ್ಟ, ಗಣಿ ದೊರೆಗಳ ಸವಾಸದಿಂದ ಬಾಳ ಗಬ್ಬಿಟ್ಟ್ ಹೋಗವ್ರೆ ನಮ್ ನಾಯಕ್ರು. ಅಲ್ದೇ ಆಳೋ ಪಕ್ಷದ ಪರವಾಗಿ ಕಾಂಗ್ರೆಸ್ ಮೆಜಾರಿಟಿ ಬರ್ಬೋದು. ಆದ್ರೆ ದೇಶದಲ್ಲಿ ಸ್ವಲ್ಪ ಮೋದಿ ಅಲೆ ನಡೀತಾ ಇದೆ. ಏನಾಗತ್ತೋ ಗೊತ್ತಿಲ್ಲ"

"ಮತ್ತೇ, ಆಪೂ... ಪಾಪೂ, ಇವೆಲ್ಲ?"

"ಏ, ತೆಗಿ ತೆಗಿ, ಆಪ್ ಬರ್ಬೇಕು ಅಂದ್ರೆ, ಇನ್ನೊಂದು ಇಪ್ಪತ್ತೈದು ವರ್ಷಾನಾದ್ರೂ ಬೇಕು, ಒಬ್ಬ ಕಪಾಳ ಮೋಕ್ಷದ ನಾಯಕನಿಂದ ಇಡೀ ದೇಶದ ರಾಜ್‌ಕಾರ್ಣ ಬದಲಾಗೋಕ್ಕೆ ಸಾಧ್ಯವೇ?"

"ಯಾಕ್ ಆಗ್‌ಬಾರ್ದು?"

"ಅದೇ ನಿಂಗೊತ್ತಾಗೋಲ್ಲ ಅನ್ನೋದು. ದುಡ್ಡಿಗೆ ಓಟ್ ಮಾರ್ಕೊಳ್ಳೋ ಜನರಲ್ಲಿ ಒಂಥರ ಎನ್‌ಟೈಟಲ್ಲ್‌ಮೆಂಟ್ ಬರುತ್ತೆ. ಅದ್ಕೇ ನಮ್ ಜನ ಗಾದೆ ಮಾಡಿರೋದು - ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡಾ - ಅಂತ" ಎಂದು ದೊಡ್ಡದಾಗಿ ನಕ್ಕ.

"ಮತ್ತೇನಪ್ಪಾ ಸಮಾಚಾರ..."

"ಮತ್ತೇನಿಲ್ಲ ಗುರುವೇ, ಅಯ್ಯೋ ಅಡಿಕೇ ಮಂಡಿಗ್ ಹೋಗ್ಬೇಕು, ನಿನ್ ಹತ್ರ ಮಾತಾಡಿ ಹೊತ್ ಹೋಗಿದ್ದೇ ಗೊತ್ತಾಗಿಲ್ಲ, ಅವಾಗವಾಗ ಫೋನ್ ಮಾಡ್ತಾ ಇರು" ಎಂದು ನನ್ನ ಉತ್ತರಕ್ಕೂ ಕಾಯ್ದೆ ಫೋನ್ ಇಟ್ಟೇಬಿಟ್ಟ...ನಾನು ಒಂಥರಾ ಟಿ.ವಿ. ನೈನ್ ಬ್ರೇಕಿಂಗ್ ನ್ಯೂಸ್ ನೋಡಿದ ಶಾಕ್‌ನಲ್ಲಿ ಆಫೀಸಿನ ಕೆಲಸಕ್ಕೆ ತಿರುಗಿದೆ.

Sunday, January 26, 2014

ದಿನಕ್ಕೊಂದು ಕಥೆ...

ನಮ್ಮನೇಲಿ ಮಕ್ಕಳು ಮಲಗೋ ಹೊತ್ತಿಗೆ ದಿನಕ್ಕೊಂದೆರಡು ಕಥೆಗಳು ಹುಟ್ಟೇ ಹುಟ್ಟುತ್ತವೆ. ಅವುಗಳಿಗೆ ಮೇಲ್ಮೈಯಲ್ಲಿ ಯಾವುದೇ ನಿರ್ದಿಷ್ಟವಾದ structure ಇಲ್ಲದಿದ್ದರೂ ಅವುಗಳಲ್ಲಿ ಸಸ್ಪೆನ್ಸ್ ಅಥವಾ ಹಾಸ್ಯದ ಸನ್ನಿವೇಶ ಇರೋದು ಗ್ಯಾರಂಟಿ. ಪ್ರತಿಯೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು (problem sovling) ಬಗೆಹರಿಸುತ್ತೇವೆ, I am sure some king, or prince or princess or some merchant has some problem somewhere! ಅದರಿಂದ leadership skills ಬೆಳೆಯಬಹುದು ಎಂಬುದು ನನ್ನ ನಂಬಿಕೆ. ನನ್ನ ಕಥೆಗಳು ಕುವೆಂಪು ಅವರ ಕಥಾ ಸರಿತ್ಸಾಗರ ಮಂಜಣ್ಣನ ಕಥೆಗಳಂತಲ್ಲ, ಆದರೆ ನನ್ನ ಕಥೆಗಳಲ್ಲಿ ಅಲ್ಲಿ-ಇಲ್ಲಿಯ ಟ್ವಿಸ್ಟುಗಳಿವೆ, ತಲ್ಲಣಗಳಿವೆ, ಪ್ರಯೋಗಗಳಿವೆ. ಯಕ್ಷಗಾನದ ಒಂದೇ ಅಂಕಣದಲ್ಲಿ ಕಲಾವಿದರು - ಅತಳ ಸುತಳ, ಪಾತಾಳ, ಭೂಲೋಕ, ಮತ್ಸ್ಯಲೋಕ, ಸರ್ಪಲೋಕ, ದೈವಲೋಕಗಳನ್ನೆಲ್ಲ - ಕ್ಷಣಾರ್ಧಲ್ಲಿ ಹೋಗಿ ಹಿಂತಿರುಗಿ ಬರುವಂತ ಧಕ್ಷತೆ (efficiency) ಇದೆ. ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಒಂದಿಷ್ಟು ಕನ್ನಡವನ್ನು ಕಲಿಸಿಯೇ ತೀರುತ್ತೇನೆಂಬ ಛಲವಿದೆ. ಜೊತೆಗೆ ವಯೋಮಾನಕ್ಕೆ ತಕ್ಕ ಫಿಲ್ಟರ್ ಇದೆ.

***

ನನ್ನ ಕೆಲವು ಕಥೆಗಳು ಮಕ್ಕಳ ಪ್ರಶ್ನೆಯನ್ನಾಧರಿಸಿ ಒಮ್ಮೊಮ್ಮೆ ದಿಢೀರ್ turnಗಳನ್ನು ತೆಗೆದುಕೊಳ್ಳುವುದುಂಟು, ನಿನ್ನೆಯ ಕಥೆಯಲ್ಲಿ ಹಾಗೇ ಆಯಿತು:

ಒಬ್ಬ ರಾಜನಿದ್ದನಂತೆ

ಅವನಿಗೆ ಮೂವರು ಗಂಡು ಮಕ್ಕಳು

ಅವರಲ್ಲಿ ಹಿರಿಯವನು ಕುರುಡ, ಮಧ್ಯದವನು ಕಿವುಡ (ಕೆಪ್ಪ), ಕಿರಿಯವನು ಮೂಕ

They were able to understand the concept of a blind boy (thanks to Dhritaraastra ?), but not deaf and mute, there were a lot of questions around why were they not able to talk or hear. it is interesting to note, these kids could not imagine why some kids are unable to speak or hear.

ರಾಜನಿಗೆ ವಯಸ್ಸಾಗುತ್ತಾ ಬಂದ ಹಾಗೆ ತನ್ನ ಉತ್ತರಾಧಿಕಾರಿ ಯಾರು ಆಗಬೇಕು, ಆಗುತ್ತಾರೆ ಎನ್ನುವುದರ ಕುರಿತು ಚಿಂತೆಯಾಗತೊಡಗಿತು.


So, we have a problem here, what do you think the Raaja should do, who should become the next king and why?

My kids took turns and tried every one of the three sons - there were a lot of pros and cons that came out of it...believe me there were quite a lot.

Finally, we didn't get a democratic conclusion between 2 kids and 3 potential alternatives (but I gave them more choices later)...the suspense started to build now -- more pressure on me, what option do I recommend, who do you think will be the next king in line and best yet, explain why?
ಕುರುಡ - ನೋ.

ಕಿವುಡ - ನೋ.

ಮೂಕ...ನೋ.


then who else? the king himself, he's old, no he can't.
ರಾಜ ಗುರೂಜಿಯನ್ನು ಕರೆದನಂತೆ..."ಗುರೂಜಿ, ಏನು ಮಾಡೋದು, ನಿಮ್ಮ ಆಜ್ಞೆ ಅನುಸಾರ ನಡೀತೀನಿ, ಯಾರನ್ನು ರಾಜನನ್ನಾಗಿ ಮಾಡಲಿ?"


Now, guruji (saint) is under stress...imagine the pressure, it is almost sleeping time...
ಗುರುಜೀ ಹೇಳಿದ್ರು, "ರಾಜ, ನಿನ್ನ ಮಕ್ಕಳಲ್ಲಿ ಯಾರೂ ಮುಂದಿನ ರಾಜನಾಗೋದಕ್ಕೆ ಸಾಧ್ಯವಿಲ್ಲ...ಯಾಕೇ ಅಂದ್ರೆ..." list the drawbacks of every one of his sons becoming the next king...

ರಾಜ, "ಹಾಗಿದ್ರೆ, ಮುಂದಿನ ರಾಜ ಯಾರು?"


Now there is pin drop silence
Guruji says, "Adopt an able kid from my Ashram, and he will be next king, however, your sons will get respective portfolios..." like ಸಬ್ ರಾಜಾಸ್


there were quite a lot of interruptions here...questions, concerns and what not.

Is the Queen okay with this?

Story takes a sub-routine, where Rama and Bharata and their mommies had issues with who can be the next king, also, Inchara pointed out that Rama himself studied in Guruji's Ashram, not in the palace, but Ninad is still not conviced with Guruji's answer.
ಗುರೂಜಿ, ಒಬ್ಬ ಒಳ್ಳೆಯ ಶಿಷ್ಯನನ್ನು ಅಪಾಯಿಂಟ್ ಮಾಡ್ತಾರೆ.

ಜೊತೆಗೆ ರಾಜನ ಮೂವರು ಮಕ್ಕಳನ್ನು ಜೂನಿಯರ್ ಕಿಂಗ್ ಆಗಿ ಕೂಡ ಮಾಡ್ತಾರೆ...

ಇಲ್ಲೇ ನಮ್ಮ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು...


So, for 3 potential sub-kings we debate which portfolio we can give them in the kingdom....for quite some time....

Finally
ಕುರುಡನಿಗೆ - News media and mail service incharge

ಕಿವುಡನಿಗೆ - Store room incharge

ಮೂಕನಿಗೆ - Palace decoration and cleanliness incharge

ಇವುಗಳಿಗೆಲ್ಲ - ಯಾಕೇ ಅಂದ್ರೆ ಅಂಥ ಸೇರಿಸಿ, ತುಂಬಾ ಕಾರಣಗಳನ್ನು ಕೊಡಬೇಕಾಗುತ್ತೆ...

ರಾಜ ಹ್ಯಾಪ್ಪೀ, ಗುರೂಜಿ ಹ್ಯಾಪ್ಪೀ, ಸಬ್ ಕಿಂಗ್ಸ್ ಹ್ಯಾಪ್ಪೀ...


The End!

ಒಂದ್ಸರ್ತಿ ಕಥೆ ಮುಗಿದ ಮೇಲೆ, ನಾವು 2 minutes silence mode ಗೆ ಹೋಗ್ತೀವಿ. ಅಷ್ಟರಲ್ಲಿ ಒಬ್ಬರಲ್ಲ ಒಬ್ರು ನಿದ್ರಾ ದೇವಿಗೆ ಶರಣು ಹೋಗಿರ್ತಾರೆ...this formula works for me - try it, rinse & repeat!
***
If it works or not, drop a line here...

Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.

Tuesday, March 29, 2011

ದದ್ದಾ, who made god?

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ!

ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

***

ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

ಪಲ್ಲವಿಯಲ್ಲಿ
- who is 'ga na nA tha'?
- why we have to worship him first ? (so you may use sub-story of kartikeya-ganesha race story, beware of more questions)
- why ganesha has so many names?
- what his friends call him?

You think these are easy questions? Be careful... and remember that classic joke about Johny?

Kid asks mom, "Mom, where am I from?"
Mom blinks her eyes and begin to answer the question starting from creation, birth, etc
Kid interrupts her, '...but Johny says he is from New Jersey..., where am I from?'

ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
ಫಸ್ಟ್ ಪ್ಯಾರಾ:
-who is 'da r ma roya'?
- why that guy worship ganesha?
- what was he doing?
- how old was he?
- what is jaya? isn't that amma's friend's name? also your chikkamma has the same name?
- how does ganesh know who does pooja?
- why he helps?
- and then what happened? 'ಆ ಮೆಲೆ ಏನು?' (screaming because i don't answer the questions immediately).

ಸೆಕೆಂಡ್ ಪ್ಯಾರಾ:
-who is ravnaa?
-why he didn't do pooja? (his dad scold him?)
-why he died?
-who killed him? why?
-'rana' means what?

ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

***

ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

Again the same series of "Why's"...

ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

her question - 'why ganesha's mommy want him to wait at the door? she could have locked the door herself'.

ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


***

ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

***
"ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!

Thursday, June 17, 2010

ಗೋಲ್ಡ್ ಫಿಶ್ - 2010

 

ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ, ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ (oranda) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು.  ಒಂದು ಸಾಕು ಪ್ರಾಣಿಯ ಕುರಿತು, ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ.

 

Gold fish 2010

***

ಮಕ್ಕಳಿದ್ದವರ ಮನೆಯಲ್ಲಿ ಈ ಪ್ರಶ್ನೆ ಬಂದೇ ಬರುತ್ತೆ - ನಮ್ಮ ಮನೆಯಲ್ಲೂ ಬೇರೆ ಬೇರೆ ಸಾಕು ಪ್ರಾಣಿಗಳೇಕಿಲ್ಲ? ಎಂಬುದಾಗಿ.  ಈ ನಿಟ್ಟಿನಲ್ಲಿ ಹೆಚ್ಚಿನವರು ಒಂದು ಬೆಕ್ಕನ್ನೋ ಅಥವಾ ನಾಯಿಯನ್ನೋ ಸಾಕುವುದು ಸಾಮಾನ್ಯ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೊಲವನ್ನೋ, ಗಿಣಿಯನ್ನೋ ಇಟ್ಟುಕೊಂಡಾರು.  ಕೆಲವರು ಎಲ್ಲರನ್ನು ಮೀರಿ exotic ಪ್ರಾಣಿಗಳಾದ ಚೇಳು, ಹಾವು ಮೊದಲಾದ ಸರೀಸೃಪಗಳನ್ನು ಪೋಷಿಸಿಯಾರು.  ಆದರೆ ಇವೆಲ್ಲಕ್ಕಿಂತ ಸುಲಭವಾದ ವಿಧಾನವೊಂದಿದೆ, ಅದು ಮನೆಯಲ್ಲೇ ಅವರವರ ಸಾಮರ್ಥ್ಯ ಅನುಕೂಲಗಳಿಗೆ ತಕ್ಕಂಥ ಫಿಶ್ ಟ್ಯಾಂಕ್ ಒಂದನ್ನು ಇಟ್ಟು ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು.

ನಮ್ಮ ಮನೆಯಲ್ಲಿ ಸುಮಾರು ೨೦೦೧ ರಿಂದ ಹೀಗೇ ನೋಡಿಕೊಂಡು ಬಂದ ಐದು ಗ್ಯಾಲನ್ ನೀರು ಹಿಡಿಯುವ ಮೀನಿನ ಒಂದು ಚಿಕ್ಕ ಟ್ಯಾಂಕ್ ಇದೆ, ಅದರಲ್ಲಿ ಗೋಲ್ಡ್ ಫಿಶ್‌ಗಳನ್ನು ಬಿಟ್ಟು ಮತ್ತೇನನ್ನೂ ನಾವು ಸಾಕಿ ನಮಗೆ ಗೊತ್ತಿಲ್ಲ.  ನಮ್ಮ ಪ್ರಯೋಗದ ಮೊದ ಮೊದಲು ಅನೇಕ ಮೀನುಗಳು ಸಾಯುತ್ತಿದ್ದವು: ಪಿ.ಎಚ್. ಅಮೋನಿಯಾ, ಕ್ಲೋರೀನ್, ನೈಟ್ರೇಟ್, ನೈಟ್ರೈಟ್ ಮೊದಲಾದ ಕೆಮಿಕಲ್ ವಸ್ತುಗಳಲ್ಲಿ ಯಾವುದೇ ಏರುಪೇರಾದರೂ ಮೀನುಗಳು ಗೊಟಕ್.  ಹೀಗೆ ಜೋಡಿಸಿಟ್ಟ ಫಿಶ್ ಟ್ಯಾಂಕ್‌ಗೆ ನಾವು ಹೊಂದಿಕೊಳ್ಳಲು ನಮಗೆ ಸುಮಾರು ಒಂದು ವರ್ಷವೇ ಬೇಕಾಯಿತು, ಜೊತೆಗೆ ಅನೇಕ ಮೀನುಗಳನ್ನು ನಮ್ಮ ಪ್ರಯೋಗಗಳಿಗೆ ಬಲಿಕೊಟ್ಟದ್ದೂ ಆಯಿತು.  ಹೀಗೆ ನಡೆದು ಬಂದ ಫಿಶ್ ಮ್ಯಾನೇಜ್‌ಮೆಂಟ್ ಅನುಭವದ ಕೊನೆಗೆ ಬಂದು ಮುಟ್ಟಿದಾಗ ಉಳಿದವು ಎರಡು ಗೋಲ್ಡ್ ಫಿಶ್‌ಗಳು - ಅದರಲ್ಲಿ ಒಂದು ಬಿಳಿ ಬಣ್ಣದ್ದು, ಮತ್ತೊಂದು ಕಿತ್ತಳೆ ಬಣ್ಣದ್ದು.  ಎರಡೂ ಕೂಡ ಚೆನ್ನಾಗಿ ರೆಕ್ಕೆಗಳನ್ನು ಉದ್ದುದ್ದವಾಗಿ ಬೆಳೆಸಿಕೊಂಡು ಟ್ಯಾಂಕ್‌ನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಈಜಾಡುವುದನ್ನು ನೋಡುವುದೇ ಎಂಥವರಿಗೂ ಮುದಕೊಡುತ್ತಿತ್ತು.

ನಮ್ಮ ಚಲನವಲನಗಳು, ವೆಕೇಷನ್ನುಗಳು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಬದಲಾವಣೆ ಮಾಡುವುದು ಇವೆಲ್ಲ ನಮ್ಮ ಮನೆಯ ಫಿಶ್ ಟ್ಯಾಂಕ್‌ನ ನಿವಾಸಿಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು.  ನಾವು ಮೂರು ವಾರ ಭಾರತಕ್ಕೆ ವೆಕೇಷನ್ನ್ ಹೊರಟರೆ ನಮ್ಮ ಬದಲಿಗೆ ಬೇರೆ ಯಾರಾದರೂ ನಮ್ಮ ಮನೆಗೆ ಬಂದು ಈ ಮೀನುಗಳಿಗೆ ಊಟ ಹಾಕುವ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದೆವು, ಅಥವಾ ಈ ಮೀನಿನ ಟ್ಯಾಂಕ್ ಅನ್ನೇ ಅವರ ಮನೆಯಲ್ಲಿಟ್ಟು ನಾವು ಬರುವ ತನಕ ಜೋಪಾನವಾಗಿ ಕಾಯ್ದುಕೊಂಡಿರುವಂತೆ ಮಾಡಿದ್ದೂ ಇದೆ.  ಒಟ್ಟಿನಲ್ಲಿ ಒಂದು ಕಡೆ ಸರಿಯಾಗಿ ನೆಲೆ ನಿಂತ ಇಕೋ ಸಿಸ್ಟಂ ಅನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುವುದು ಅಷ್ಟು ಸುಲಭದ ಮಾತಂತೂ ಅಲ್ಲ.  ಈ ನಿಟ್ಟಿನಲ್ಲಿ ನನ್ನ ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಿದೆ.

ನಮ್ಮ ಮನೆಯಲ್ಲಿ ಇದ್ದ ಎರಡು ಮೀನುಗಳನ್ನು ಅವುಗಳ ಟ್ಯಾಂಕ್ ಹಾಗೂ ಪರಿಕರಗಳ ಸಮೇತ ವರ್ಜೀನಿಯಾದಿಂದ ನ್ಯೂ ಜೆರ್ಸಿಗೆ ೨೫೦ ಮೈಲು ದೂರ ತಂದು ನಮ್ಮ ಮನೆಯ ಸಾಮಾನುಗಳ ಜೊತೆಗೆ ಅವುಗಳನ್ನು ಜೋಡಿಸುವಾಗ ಆದ ಕಷ್ಟ ಅಷ್ಟಿಷ್ಟಲ್ಲ.  ಹೀಗೆ ಮಾಡಿ ಅನೇಕ ತಿಂಗಳುಗಳ ತರುವಾಯ ಬಿಳಿಯ ಮೀನು ಯಾವುದೋ ಖಾಯಿಲೆಗೆ ಬಲಿಯಾಗಿ ಸತ್ತು ಹೋದ ಮೇಲೆ ಉಳಿದದ್ದು ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಒಂದೇ.  ಎರಡು ಮೂರು ಮನೆಗಳನ್ನು ತಿರುಗಿ ಬಂದ ಮೇಲೆ ಅದು ಟ್ಯಾಂಕ್‌ನಲ್ಲಿ ತಾನೊಂದೇ ಪ್ರಾಬಲ್ಯವನ್ನು ಮೆರೆಯುತ್ತಾ ತಂದಾಗ ಎರಡು ಅಂಗುಲ ಉದ್ದ ಇದ್ದದ್ದು ದಿನೇ ದಿನೇ ಬೆಳೆದು ಸುಮಾರು ಆರು ಅಂಗುಲ ಉದ್ದಕ್ಕೂ ಹೆಚ್ಚು ದೊಡ್ಡದಾಯಿತು.  ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ಸ್ನೇಹಿತ ಗಾರ್‌ಫೀಲ್ಡ್ ಮನೆಯಲ್ಲಿ ನಾವು ವೇಕೇಷನ್ನಿಗೆ ಹೋದಾಗ ಮೊಕ್ಕಾಂ ಹೂಡಿ ಜನವರಿಯಿಂದ ಮೇ ವರೆಗೂ ಚೆನ್ನಾಗಿಯೇ ಇತ್ತು.

ಮೇ ತಿಂಗಳ ಮೊದಲ ವಾರದಲ್ಲಿ ಅದರ ಲವಲವಿಕೆ ಕುಂಠಿತಗೊಂಡಿತು, ಅದು ಆಹಾರ ಸೇವಿಸುವುದನ್ನು ಸಂಪೂರ್ಣ ಬಿಟ್ಟು ಟ್ಯಾಂಕಿನ ಬುಡದಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿ ಬಿದ್ದುಕೊಂಡಿರುತ್ತಿತ್ತು.  ಅದು ಇನ್ನೇನು ಸರಿ ಹೋದೀತು ಎಂದುಕೊಂಡವನಿಗೆ ಮುಪ್ಪಿನಿಂದ ಅದು ದಿನೇದಿನೇ ಕುಗ್ಗತೊಡಗಿದ್ದು ಗಮನಕ್ಕೆ ಬಂದು ಈ ಮೀನಿನ ಬದುಕಿಗೆ ಯಾವ ರೀತಿಯ ಅಂತ್ಯವನ್ನು ಹಾಡಬೇಕು ಎಂದು ಗೊತ್ತಾಗದೆ ಒಂದೆರೆಡು ಬಾರಿ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಎಲ್ಲವನ್ನು ಸ್ವಚ್ಛಗೊಳಿಸಿಟ್ಟು ಹಾಗಾದರೂ ಮೀನಿನ ಲವಲವಿಕೆ ಮರುಕಳಿಸಲಿ ಎಂದುಕೊಂಡರೆ ಹಾಗಾಗಲಿಲ್ಲ.

ನನ್ನ ಸ್ನೇಹಿತರು ಹಾಗೂ ಹಿರಿಯರು ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ಟ್ಯಾಂಕಿನಿಂದ ಸಣ್ಣದೊಂದು ಗಾಜಿನ ಜಾಡಿಗೆ ಬದಲಾಯಿಸಿ ಅದರ ಬದಲಿಗೆ ಬೇರೆ ಹೊಸ ಮೀನುಗಳನ್ನು ತಂದು ಹಾಕುವುದೆಂದು ಯೋಚಿಸಿ ಹಾಗೆ ಮಾಡಲನುವಾದೆ.  ಅಂಗಡಿಗೆ ಹೋಗಿ ಉತ್ಸಾಹದಿಂದ ಪುಟಿಯುತ್ತಿದ್ದ ಅವೇ ಒರ್ಯಾಂಡಾ (oranda) ಜಾತಿಯ ಥರಾವರಿ ಬಣ್ಣಗಳ ನಾಲ್ಕು ಮೀನುಗಳನ್ನು ತಂದೆ.  ಒಂದು ಕಡೆ ಹೊಸ ಮೀನುಗಳನ್ನು ಅವುಗಳನ್ನು ತಂದ ಪ್ಲಾಸ್ಟಿಕ್ ಕವರ್ ಸಮೇತ ಟ್ಯಾಂಕಿನ ನೀರಿನ ತಾಪಮಾನಕ್ಕೆ ಹೊಂದುಕೊಳ್ಳಲು ಬಿಟ್ಟು, ಮತ್ತೊಂದು ಸಣ್ಣ ಗಾಜಿನ ಜಾಡಿಯನ್ನು ಅನುಗೊಳಿಸಿದೆ.  ಅದರಲ್ಲಿ ಹಳೆಯ ಮೀನನ್ನು ಹುಷಾರಾಗಿ ಇಟ್ಟೆ, ನಾನು ತೆಗೆದು ಹಾಕುವಾಗ ಒಂದಿಷ್ಟು ಕೊಸರಾಡಿದ ಮೀನು, ಹೊಸ ಜಾಡಿಯ ತಳದಲ್ಲಿ ನಿಧಾನವಾಗಿ ಉಸಿರಾಡುತ್ತಾ ಬಿದ್ದುಕೊಂಡಿದ್ದು ನೋಡಿ ಕರುಳು ಕಿವುಚಿದಂತಾಯಿತು.  ಅದನ್ನು ಅಲ್ಲಿಗೆ ಬಿಟ್ಟು ಹೊಸ ಮೀನುಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಾಗ ಅವುಗಳಿಗೆ ಒಂದು ಕಡೆ ಸಂಭ್ರಮವೂ ಮತ್ತೊಂದು ಕಡೆ ಹೆದರಿಕೆಯೂ ಸೇರಿಕೊಂಡು ಟ್ಯಾಂಕಿನ ಮೂಲೆ ಮೂಲೆಗಳಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು.  ಸ್ವಲ್ಪ ಹೊತ್ತಿನ ತರುವಾಯ ಅವುಗಳು ತಮ್ಮ ಹೊಸ ವಾತಾವರಣಕ್ಕೆ ಹೊಂದಿಕೊಂಡ ಎಲ್ಲ ಸೂಚನೆಗಳೂ ಕಂಡು ಬಂದು, ಈ ಟ್ಯಾಂಕಿನಲ್ಲಿ ವರ್ಷಾನುಗಟ್ಟಲೆ ಮನೆ ಮಾಡಿದ್ದ ನೆಲೆ ನಿಂತಿದ್ದ ಆ ಮಹಾಶಯನ ಗುರುತು ಪರಿಚಯವೂ ವಾಸನೆಯೂ ಅವುಗಳಿಗೆ ಒಂದಿಷ್ಟು ಇರದಿದ್ದ ಮುಗ್ಧತೆಯಲ್ಲಿ ಜೀವಿಸತೊಡಗಿದವು.

ಇತ್ತ ಸಣ್ಣ ಗಾಜಿನ ಜಾಡಿಯಲ್ಲಿನ ಹಳೆಯ ಮೀನಿನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗದೇ ಅದೇ ದಿನ ರಾತ್ರಿ ಎಷ್ಟೋ ಹೊತ್ತಿಗೆ ಅದರ ಪ್ರಾಣಪಕ್ಷಿ ಹಾರಿ ಹೋಗಿದ್ದು ನಮಗೆಲ್ಲ ನಿಚ್ಛಳವಾಯಿತು.  ನಮಗೆಲ್ಲ ಇಷ್ಟೊಂದು ವರ್ಷ ಫ್ಯಾಮಿಲಿ ಮೆಂಬರಿನಂತಿದ್ದ ಮೀನಿನ ಅಂತ್ಯಕ್ರಿಯೆಗೋಸ್ಕರ ನಾನು ಶವೆಲ್ಲೊಂದನ್ನು ತೆಗೆದುಕೊಂಡು ರಾತ್ರಿ ನಮ್ಮ ಹಿತ್ತಲಿಗೆ ಹೋಗಿ ಸಣ್ಣ ತಗ್ಗನ್ನು ತೆಗೆದು ಅಲ್ಲಲ್ಲಿ ಮಿಡತೆಗಳು ಅಳುತ್ತವೆಯೇನೋ ಎನ್ನುವ ಕಿರುಗುಟ್ಟುವಿಕೆಯ ಹಿನ್ನೆಲೆಯ ನಡುವಿನ ಮೌನದ ಸಹಾಯದಿಂದ ಯಾವೊಂದು ಮಾತನಾಡದೆ ಎರಡು ಮುಷ್ಠಿ ಮಣ್ಣನ್ನು ಕೈಯಿಂದ ಹಾಕಿ ಉಳಿದದ್ದನ್ನು ಶವೆಲ್ಲಿನಿಂದಲೇ ಮುಚ್ಚಿ ಸಂಸ್ಕಾರ ಮಾಡಿದೆ.

ಮರುದಿನ ಇಂಚರ (ನಮ್ಮ ನಾಲ್ಕು ವರ್ಷದ ಮಗಳು) ಅನೇಕ ಬಾರಿ ಹಳೇ ಮೀನು ಎಲ್ಲಿ ಹೋಯಿತು? ಅದು ಏಕೆ ಸತ್ತಿತು? ಸತ್ತಾಗ ಏನಾಗುತ್ತದೆ? ಯಾಕೆ ಹಿತ್ತಲಿನಲ್ಲಿ ಮಣ್ಣು ಮಾಡಿದೆ? ನನ್ನನ್ನೇಕೆ ಕರೆಯಲಿಲ್ಲ? ಎಂದು ಕೇಳಿದ ಅನೇಕಾನೇಕ ಪ್ರಶ್ನೆಗಳಿಗೆ ನನ್ನ ಶಕ್ತಿ ಮೀರಿ ಸರಳವಾಗಿ ಉತ್ತರಿಸಿದ್ದಾಯಿತು.  ನಾವು ಹಳೇ ಮೀನಿಗೆ ಯಾವುದೇ ಹೆಸರನ್ನಿಟ್ಟಿರಲಿಲ್ಲ - Elmo’s world ನಲ್ಲಿ ಬರುವ Dorothyಯ ದೆಸೆಯಿಂದ ಇಂಚರ ಅದನ್ನು ನಮ್ಮ ಮನೆಯ ಡೊರೋತಿ ಅಂದುಕೊಂಡಿದ್ದನ್ನು ಬಿಟ್ಟರೆ, ಅದೇ ಛಾಳಿಯನ್ನು ಮುಂದುವರೆಸಿ ನಾವು ಈ ಹೊಸ ಮೀನುಗಳಿಗೂ ಹೆಸರನ್ನೂ ಇಟ್ಟಿಲ್ಲ.

ಪ್ರತಿ ದಿನ ಆಫೀಸಿನಿಂದ ಬಂದಾಗ ಶೂ ತೆಗೆದು ಅದರ ಸ್ಥಳದಲ್ಲಿಟ್ಟು ನಂತರ ಮಾಡುವ ಕೆಲಸವೇ ಈ ಮೀನಿನ ಟ್ಯಾಂಕಿನ ಲೈಟ್ ಹಾಕಿ ಅವುಗಳಿಗೆ ಪ್ಲ್ಹೇಕ್ ಫುಡ್ಡನ್ನು ಹಾಕುವುದು, ಈ ಹೊಸ ಮೀನುಗಳ ಸಹಾಯದಿಂದ ವರ್ಷಾನುಗಟ್ಟಲೆ ನಡೆದ ಬಂದ ಕಾಯಕ ಇಂದಿಗೂ ಹಾಗೇ ಮುಂದುವರೆದಿದೆ.

***

ಸಾವು-ನೋವಿನ ವಿಚಾರಕ್ಕೆ ಬಂದಾಗ ಅಮೇರಿಕದ ನಮ್ಮ ಅನುಭವ ವ್ಯಾಪ್ತಿ ಕಡಿಮೆಯೇ.  ಬೇರೆ ಯಾರೂ ರಕ್ತ ಸಂಬಂಧಿಗಳಿಲ್ಲದ ಈ ದೇಶದಲ್ಲಿ ಸಾವು ಎನ್ನುವ ಮಹತ್ವಪೂರ್ಣವಾದ ಬದುಕಿನ ಮಜಲಿನ ಅನುಭವ ನಮಗೆ ಭಾರತದಲ್ಲಿ ಇದ್ಧಾಗ ಆಗುವಂತೆ ಇಲ್ಲಿ ಆಗುವುದಿಲ್ಲ.  ನಮ್ಮ ನೆಂಟರು-ಇಷ್ಟರು-ಬಂಧು-ಬಳಗ ಇವರೆಲ್ಲರ ಮದುವೆ ಮುಂಜಿಗಳಿಗೆ, ಕಷ್ಟ-ನಷ್ಟಗಳಿಗೆ ನಾವು ಎಂದಿನ ಸಂವೇದನೆಯನ್ನು ತೋರೋದಿಲ್ಲ.  ಸಾವನ್ನು ಬೇಕು ಎಂದು ಆರಿಸಿಕೊಳ್ಳದಿದ್ದರೂ ಹುಟ್ಟು ತರುವಷ್ಟೇ ಮುಖ್ಯವಾದ ಬದಲಾವಣೆಯನ್ನು ಸಾವೂ ತರಬಲ್ಲದು.  ಈ ನಿಟ್ಟಿನಲ್ಲಿ ಸಾಕು ಪ್ರಾಣಿ ಮೀನಿನ ಸಾವು ಅದರ ಜೊತೆಗಿದ್ದ ನಮ್ಮ ವರ್ಷಾನುಗಟ್ಟಲೆಯ ಬಂಧನವನ್ನು ಕಳಚಿ ಹಾಕುವುದರ ಮೂಲಕ ದೂರದಲ್ಲಿರುವ ನಮಗೆ ಹತ್ತಿರದ ಬಂಧುವನ್ನು ಕಳೆದುಕೊಂಡ ನೆನಪನ್ನು ಎತ್ತಿ ಹಿಡಿಯಿತು.  ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನವನ್ನು ಇನ್ನೂ ಯಾರಾದರೂ ಮಾಡುತ್ತಿದ್ದರೆ ಆ ದೃಷ್ಟಿಯಲ್ಲಿ ನಾವು ಹೊರಗುಳಿದಿರುವುದು ಸ್ಪಷ್ಟವಾಯಿತು.  ನಮ್ಮಂಥ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಸಣ್ಣ ಅಗಲಿಕೆ ಬದುಕು ಒಡ್ಡುವ ಅನೇಕ ಬದಲಾವಣೆಗಳ ನೆನಪು ಮಾಡುವಲ್ಲಿ ಯಶಸ್ವಿಯಾಯಿತು.  ಜೊತೆಯಲ್ಲಿ ನಮ್ಮ ಸಂಬಂಧಿಗಳ, ಬಂಧು-ಮಿತ್ರರ, ಒಡಹುಟ್ಟಿದವರ ನೋವು-ನಲಿವುಗಳಿಗೆ ಸಕಾಲಕ್ಕೆ ಆಗಿಬರದ ನಾವು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಬಿಟ್ಟೆವೇನೋ ಎನ್ನಿಸಿಬಿಟ್ಟಿತು.

Monday, May 03, 2010

ಮನೆಯು ಚಿಕ್ಕದಾಗಿರಬೇಕು, ಬಾತ್ ರೂಮ್ ದೊಡ್ಡದಾಗಿರಬೇಕು...

ನಮ್ಮ ಐದು ಸಾವಿರ ವರ್ಷದ ಇತಿಹಾಸ ಮತ್ತು ಪರಂಪರೆಯಲ್ಲಿ ನಾವು ಅಡುಗೆ ಮನೆಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಬಚ್ಚಲು ಮನೆಗೆ ಕೊಡೋದಿಲ್ಲ ಅನ್ನೋದು ನನ್ನ ಅಭಿಪ್ರಾಯ ಅಷ್ಟೇ. ನಮ್ಮ ಹಿರಿಯರ ಹಳೆ ಕಾಲದ ಮನೆಗಳನ್ನೋ ಅಥವಾ ಇತ್ತೀಚೆಗೆ ೬೦X೪೦ ಸೈಟ್‌ಗಳಲ್ಲಿ ಕಟ್ಟಿದ ಸುಂದರವಾದ ಆರ್‌ಸಿಸಿ ಮನೆಗಳನ್ನೋ ಉದಾಹರಣೆಯಾಗಿ ತೆಗೆದುಕೊಂಡರೆ ನಿಮಗೇ ಗೊತ್ತಾಗುತ್ತದೆ. ಹಳೆಯ ಕಾಲದ ಮನೆಗಳಲ್ಲಿ ಗಂಡಸರು ಮುಖಕ್ಷೌರ ಮಾಡುವುದಕ್ಕೆ ಕಿಟಕಿ ಮೇಲೆ ಸಣ್ಣ ಕನ್ನಡಿಯನ್ನಿಟ್ಟುಕೊಂಡು ಅದರ ಪಕ್ಕದಲ್ಲಿ ಬಿಂದಿಗೆ ಬಿಸಿನೀರು ಇಟ್ಟುಕೊಳ್ಳುವುದು ರೂಢಿ, ದಿನಾ ನಡೆಸೋ ನಿತ್ಯ ಕರ್ಮವಾಗಿರುವ ಮುಖ ಕ್ಷೌರಕ್ಕೆ ಯಾಕಪ್ಪಾ ಇಷ್ಟೊಂದು ಕೀಳು ಪ್ರಾಶಸ್ತ್ಯ ಅನ್ನಿಸೋದಿಲ್ಲವೇ? ಹೊಸದಾಗಿ ಕಟ್ಟಿದ ಮನೆಗಳಲ್ಲೂ ಅಷ್ಟೇ ಸಿಂಕ್ ಇದ್ದರೆ, ಅದರ ಮೇಲೆ ಒಂದು ಲೈಟ್ ಇರುತ್ತದೆ (ಹೆಚ್ಚಿನ ಪಕ್ಷ ಝೀರೋ ಕ್ಯಾಂಡಲ್ ಬಲ್ಬ್ ಹೊತ್ತಿಸಿಕೊಂಡು), ಸಿಂಕ್‌ನ ಮೇಲೆ ಸೋಪ್ ಅಥವಾ ಮತ್ತಿತರ ಸಾಮಾನುಗಳನ್ನು ಇಟ್ಟುಕೊಳ್ಳೋದಕ್ಕೆ ಜಾಗ ಇರೋದೇ ಕಡಿಮೆ.

ಮನೆಯ ವಿಚಾರದಲ್ಲಿ ಬಚ್ಚಲು/ಕಕ್ಕಸ್ಸು ಮನೆಗಳಿಗೆ ಕೊಡೋ ಪ್ರಾಶಸ್ತ್ಯ ಹಾಗಿರಲಿ, ದಿನಾ ನೂರಾರು ಜನ ಬಂದು ಹೋಗೋ ಯಾವುದೇ ಹೊಟೇಲಿಗೆ ಹೋಗಿ ನೋಡಿ ತಿನ್ನೋ ವಿಚಾರಗಳಿಗೆ ಎಷ್ಟೊಂದು ಮಹತ್ವ ಕೊಟ್ಟಿರುತ್ತಾರೆ, ತಿಂದು ಕುಡಿದದ್ದನ್ನು ವಿಸರ್ಜಿಸಲು ಮಾತ್ರ ಯಾವ ಮಹತ್ವವನ್ನೂ ಕೊಟ್ಟಿರೋ ಹಾಗೆ ಕಾಣೆ. ಯಾಕೋ ನಮ್ಮ ಜನಗಳಿಗೆ ಶುಚಿ ಅಥವಾ ಸ್ವಚ್ಛತೆ ಅನ್ನೋದು ಬಂದೇ ಇಲ್ಲವೇನೋ ಅನ್ನಿಸುತ್ತೆ. ನಮ್ಮ ಇತಿಹಾಸದ ದೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ಏಕೆ ಸಿಗಲಿಲ್ಲ? ಬಡತನ, ಹೆಚ್ಚಿನ ಜನಸಂಖ್ಯೆ ಕಾರಣವೋ ಅಥವಾ ನಮ್ಮಲ್ಲಿ ಮೂಲಭೂತ ಸಮಸ್ಯೆಗಳು ಇಂದಿಗೂ ಮೂಲಭೂತವಾಗಿಯೇ ಉಳಿದಿರುವುದು ಏಕೆ ಎನ್ನುವುದಕ್ಕೆ ಒಂದು ಹೆಜ್ಜೆ ನಮ್ಮ ಅಂತರಾಳವನ್ನು ಹುಡುಕಬೇಕಾಗುತ್ತದೆ.

ಅಮೇರಿಕದವರು ಕಡಿಮೆ ಜನ ಹೆಚ್ಚು ಸಂಪನ್ಮೂಲಗಳನ್ನು ಬಳಸುತ್ತಾರೆ ಎನ್ನೋದನ್ನ ಹಲವು ರೀತಿಯಲ್ಲಿ ಬಳಸಬಹುದು, ಅದನ್ನ ಒಂದು ಕಂಪ್ಲೇಟ್ ಅನ್ನಾಗಿಯೂ ನೋಡಬಹುದು ಅಥವಾ ಅದನ್ನ ಒಂದು ಮುಂದುವರೆದ ಸಂಸ್ಕೃತಿಯನ್ನಾಗಿಯಾದರೂ ಅರಿತುಕೊಳ್ಳಬಹುದು. ನಮ್ಮ ಆಫೀಸಿನ ಉದಾಹರಣೆಯನ್ನು ತೆಗೆದುಕೊಳ್ಳಿ, ನಾನು ಪವರ್‌ಪಾಯಿಂಟ್ ಸ್ಲೈಡ್‌ಗಳನ್ನು ಮಾಡಿ ಕಳಿಸಿದ್ದನ್ನ ನನ್ನ ಬಾಸ್ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡದೇ ಅದನ್ನು ಕಲರ್ ಪ್ರಿಂಟರಿನಲ್ಲಿ ಮುದ್ರಿಸಿ ಅನಂತರ ಅದರಲ್ಲಿ ತಿದ್ದು ಪಡಿಗಳನ್ನು ಮಾಡುವುದು ರೂಢಿ. ಆದರೆ ನಾನು ತಿಣುಕಿ-ತಿಣುಕಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ಓದಿದ್ದೇ ಓದಿದ್ದು, ಆದರೆ ಮುದ್ರಿತವಾದ ಕಾಗದವನ್ನು ನಾವು ಓದುವ ದೃಷ್ಟಿಯೇ ಬೇರೆ ಹಾಗಾಗಿ ಅದರಲ್ಲಿರುವ ತಪ್ಪು-ಸರಿಗಳನ್ನು ನೋಡಿದಷ್ಟು ಸುಲಭವಾಗಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡಲಾಗದು ಎಂಬುದು ನನ್ನ ಅನುಭವ. ಸರಿ, ಒಂದು ಪೇಜ್ ಸ್ಲೈಡ್ ಹುಟ್ಟಬೇಕಾದರೆ ಒಂದು ನಾಲ್ಕು ಡ್ರಾಪ್ಟ್ ಪೇಜ್‌ಗಳನ್ನು ಮುದ್ರಣ ಮಾಡೋಣ, ಅದರಲ್ಲೇನಂತೆ? ರಿಸೋರ್ಸುಗಳು ಇವೆ, ಸಂಪನ್ಮೂಲಗಳ ಬಳಕೆ ಹಾಗೂ ಅದರ ವೆಚ್ಚಕ್ಕೆ ನಾವೇನೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಪೇಪರ್ರೂ ಚೀಪು, ಪ್ರಿಂಟರ್ರೂ ಚೀಪು...ಹೀಗಾದ ಮೇಲೆ ಒಂದು ಪಬ್ಲಿಕ್ ಕಂಪನಿಯ ಆಯ-ವ್ಯಯಗಳ ಕಥೆ ಹಾಗೂ ಅವುಗಳ ದೊಡ್ಡ ಲಿಸ್ಟ್ ಇದ್ದೇ ಇರುತ್ತೆ, ಹತ್ತರ ಜೊತೆ ಹನ್ನೊಂದು ಅಂತ ಇವೂ ಸೇರಿಕೊಂಡು ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಒಳ್ಳೆಯ ಕ್ವಾಲಿಟಿ ಸ್ಲೈಡುಗಳನ್ನು ತಯಾರು ಮಾಡಿದರೆ ಆಯಿತಪ್ಪಾ ಅಷ್ಟೇ, ಅನ್ನಿಸೋದಿಲ್ಲವೇ?

ನಮ್ಮ ದೇಶದಲ್ಲಿ ಮನೆಗೆ ಒಂದೋ ಎರಡೋ ಪ್ಲಗ್ ಪಾಯಿಂಟುಗಳಿರುತ್ತವೆ, ಇಂದಿಗೂ ಹಳೆಯ ಕಾಲದಲ್ಲಿನ ಮನೆಗಳಲ್ಲಿ ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಯನ್ನ ಲಿವಿಂಗ್ ರೂಮಿನಲ್ಲಿಟ್ಟು ಅಲ್ಲೇ ಬಟ್ಟೇ ಇಸ್ತ್ರಿ ಮಾಡಿಕೊಳ್ಳುವುದು ರೂಢಿ. ನನಗೆ ಗೊತ್ತಿರೋ ಹಾಗೆ ಮನೆಯಲ್ಲಿರುವ ಪ್ಲಗ್ ಪ್ಲಾಯಿಂಟುಗಳ ಲೆಕ್ಕದಲ್ಲಿ ಪ್ರತಿ ತಿಂಗಳಿಗೆ ಇಂತಿಷ್ಟು ರಿಕರ್ರಿಂಗ್ ಚಾರ್ಜಸ್ ಕೊಡಬೇಕಾಗುತ್ತದೆ. ಪ್ರತಿ ತಿಂಗಳ ಎಕ್ಸ್‌ಪೆನ್ಸ್ ಲೆಕ್ಕದಲ್ಲಿ ಯಾರಿಗೆ ತಾನೆ ಹತ್ತೋ ಇಪ್ಪತ್ತು ರೂಪಾಯಿ ಕೊಡಲು ಮನಸ್ಸಾದೀತೂ ಹೇಳಿ? ಆದರೆ ಅಮೇರಿಕದ ಮನೆಗಳಲ್ಲಿ ಪ್ರತಿ ಆರು ಅಡಿಗಳಿಗೊಂದರಂತೆ ಎಲ್ಲಾ ರೂಮುಗಳಲ್ಲೂ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್‌ಗಳನ್ನು ಮನೆ ಕಟ್ಟುವಾಗಲೇ ಅಳವಡಿಸಿರುವುದು ನಮ್ಮಂಥ ಅನಿವಾಸಿಗಳ ಕಣ್ಣಿಗೆ ಮೊದಲ ದಿನವೇ ಗೊತ್ತಾಗಿರುತ್ತದೆ. ವ್ಯಾಕ್ಕ್ಯೂಮ್ ಹಾಕುವುದಿರಲಿ, ಇಸ್ತ್ರಿ ಹಾಕುವುದಿರಲಿ ಯಾವ ರೂಮಿನಲ್ಲಿ ಬೇಕಾದರೂ ಹಾಕುವ ಹಾಗಿರುತ್ತದೆ. ನಿಮಗೆ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಬೇಕೋ ಅದಕ್ಕೆ ತಕ್ಕಂತೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಪ್ರತಿಯೊಂದನ್ನೂ "ಕಡಿಮೆ ದರ" ಎನ್ನುವ ಮಾನದಂಡ ಒಂದರಲ್ಲಿ ಮಾತ್ರ ನೋಡಿದಾಗ ಅಲ್ಲಿ ಕ್ವಾಲಿಟಿಯೋ ಮತ್ತೊಂದೋ ಬಲಿಪಶುವಾಗುತ್ತದೆ. ಇದೇ ಸಮೀಕರಣವನ್ನು ಹತ್ತು ಡಾಲರ್ ಉಳಿಸುವ ವಿಚಾರಕ್ಕೆ ಬಂದಾಗ ನಾವೆಷ್ಟು ಸಮಯ (==ಹಣ) ವನ್ನು ವ್ಯಯಿಸಬಲ್ಲೆವು ಎಂಬುದಕ್ಕೂ ಅಳವಡಿಸಬಹುದು. ನಿಮ್ಮ ಮನೆಯ ಪಕ್ಕದ ಬೀದಿಯ ಅಂಗಡಿಯೊಂದರಲ್ಲಿ ಒಂದು ವಸ್ತು ಇಪ್ಪತ್ತೈದು ಡಾಲರಿಗೆ ಸಿಗುವ ಹಾಗಿರುವಾಗ ಅದೇ ವಸ್ತು ನಿಮ್ಮ ಮನೆಯಿಂದ ಅರ್ಧ ಘಂಟೆ ದೂರದ ಅಂಗಡಿಯೊಂದರಲ್ಲಿ ಹದಿನೈದು ಡಾಲರಿಗೆ ಸಿಗುವ ಹಾಗಿದ್ದರೆ ನೀವು ಅಲ್ಲಿಗೆ ಹೋಗಿ ಬಂದು ಮಾಡುವ ಸಲುವಾಗಿ ಒಂದು ಘಂಟೆಯನ್ನು ವ್ಯಯಿಸಿ ಹತ್ತು ಡಾಲರ್ರ್ ಉಳಿಸುವ ಶ್ರಮವನ್ನು ಪಡುತ್ತೀರೊ? ಅಥವಾ ನಿಮ್ಮ ಮನೆಯ ಪಕ್ಕದ ಬೀದಿಯಲ್ಲೇ ನಿಮಗೆ ಅಗತ್ಯವಿರುವ ಆ ವಸ್ತುವನ್ನು ನಿಮಗೆ ಬೇಕಾದಾಗ ಕೊಳ್ಳುತ್ತೀರೋ?

ಇನ್ನು ಬಾತ್ ರೂಮ್ ವಿಚಾರಕ್ಕೆ ಹಿಂತಿರುಗೋಣ. ನಮ್ಮ ಸಂಸ್ಕೃತಿಯಲ್ಲಿ ಅದನ್ನು "ಬಚ್ಚಲು ಮನೆ" ಎಂದು ಕರೆದು ಮನೆಯ ಪಟ್ಟವನ್ನು ಕೊಟ್ಟರೋ ವಿನಾ ಆ ಸ್ಥಳವನ್ನು ಯಾವಾಗಲೂ ಗಾಳಿ ಬೆಳಕು ಬಾರದ ರೀತಿ, ಕತ್ತಲ ಗವಿಯಾಗಿ, ತೆಗೆದ ಹಾಗೂ ಸ್ನಾನದ ನಂತರ ಉಡುವ ಬಟ್ಟೆಗಳನ್ನು ಇಡಲೂ ಸಹ ಅಗತ್ಯವಾದ ಸೌಕರ್ಯಗಳಿಲ್ಲದೆ ಕಟ್ಟಿಬಿಟ್ಟರು. ಬಾತ್ ರೂಮ್‌ಗೆ ಈ ಸ್ಥಿತಿಯಾದರೆ ಇನ್ನು ಕಕ್ಕಸು ಕೋಣೆ/ಮನೆಯ ಪರಿಸ್ಥಿತಿಯಂತೂ ಕೇಳಲೇ ಬೇಡಿ. ನಮಗೆ ತಿಂಡಿ-ಊಟದಷ್ಟೇ ಮುಖ್ಯವಾದ ಸ್ನಾನ-ಶೌಚಗಳಿಗೆ ಯಾಕಿಷ್ಟು ಕಡಿಮೆ ಬೆಂಬಲ? ನಮ್ಮ ಬೆಳೆದ ಪರಂಪರೆಗೆ ಯಾಕೆ ಈ ರೂಮುಗಳನ್ನು ತ್ಯಾಜ್ಯವಸ್ತುವನ್ನು ನೋಡುವ ರೀತಿಯ ಮನಸ್ಥಿತಿ ಬಂದೊದಗಿದೆ ಎಂದು ಕೊರಗುತ್ತೇನೆ. ನನ್ನ ಪ್ರಕಾರ ಬಡವರಿರಲಿ ಶ್ರೀಮಂತರಿರಲಿ ಅವರವರ ಶ್ಯಕ್ಯಾನುಸಾರ ಲಿವಿಂಗ್ ರೂಮ್, ಬೆಡ್ ರೂಮ್, ಅಡುಗೆ ಮನೆಗೆ ನೀಡಿದ ಪ್ರಾಶಸ್ತ್ಯವನ್ನೇ ಬಚ್ಚಲು-ಕಕ್ಕಸು ಮನೆಗಳಿಗೂ ಕೊಡಬಹುದುಲ್ಲ? ನನಗಂತೂ ಕನ್ನಡಿಯಿಲ್ಲದ ಬಾತ್‌ರೂಮ್‌ಗಳಲ್ಲಿ ಮುಖ ಕ್ಷೌರ ಮಾಡುವ ಸಾಹಸಅ ಅರಿವಿದೆ, ಸರಿಯಾದ ಬೆಳಕಿಲ್ಲದ ಗೂಡು ದೀಪದಡಿಯಲ್ಲಿನ ಬಚ್ಚಲು ದಿಂಡೆಯ ಮೇಲೆ ಒಣ ಟವಲನ್ನಿಟ್ಟು ನಾನು ಸ್ನಾನ ಮಾಡಿದ ನೀರು ಅದರ ಮೇಲೆ ಬಿದ್ದು ನನ್ನ ಜೊತೆ ಅದೂ ನೆನೆದ ಅನುಭವವಿದೆ, ಬಚ್ಚಲು ಮನೆಯ ಮೇಲೆ ನೋಡಿದರೆ ಜೇಡರ ಬಲೆಗಳು ಕಟ್ಟಿದ ಮೂಲೆಗಳು ಕಂಡಿವೆ, ಯಾವತ್ತೂ ಧೂಳು ಹೊಡೆಯ ಮಾಳಿಗೆಗಳ ಬೇಸತ್ತ ಮುಖಗಳು ಎಂದೂ ಮರೆಯದ ಹಾಗಿವೆ.

ಯಾಕೆ ಹೀಗೆ? ಇವೆಲ್ಲವನ್ನೂ ನಾವು ಬದಲಾಯಿಸ ಬಲ್ಲೆವು, ಬದಲಾಯಿಸಬೇಕು. ನಮ್ಮ ಅಡುಗೆ ಮನೆಯಷ್ಟೇ ಶುಚಿಯಾಗಿ ಬಚ್ಚಲು ಮನೆಯೂ ಇರಬೇಕು, ಅಂಗಳದಿಂದ ಹಿತ್ತಿಲವರೆಗೆ ಮನೆಯ ಪ್ರತಿಯೊಂದು ಅಂಗವೂ ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವಾಗ ಅವುಗಳಿಗೆ ಸರಿಯಾದ ಮಹತ್ವವನ್ನು ಕೊಡಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ’ಬಾತ್ ರೂಮ್‌ಗೆ ಅಷ್ಟೊಂದು ಜಾಗ್ ಯಾಕೆ ವೇಸ್ಟ್ ಮಾಡ್ತೀರಾ...’ ಎಂದು ಹಿನ್ನೆಡೆ ತೋರುವ ಮನೆ ಕಟ್ಟುವ ಇಂಜಿನಿಯರುಗಳನ್ನು ಝಾಡಿಸಬೇಕು!

Thursday, April 01, 2010

Take (good) care of yourself...

ಸ್ಪ್ರಿಂಗ್ ತರೋ ಅಲರ್ಜಿ ಸೀಜನ್ನ್ ದೆಶೆಯಿಂದ ಈ ಮಾತನ್ನ ಹೇಳ್ತಾ ಇಲ್ಲ, ನನ್ನದೊಂದು ಫಂಡಮೆಂಟಲ್ ನಂಬಿಕೆ ಇಲ್ಲಿನ ಅನುಭವಗಳ ಮೂಲಕ ಬದಲಾದ ಬಗೆಯನ್ನು ಹೇಳ್ತಾ ಇದ್ದೇನೆ ಅಷ್ಟೇ. ನೀವು ಯಾರನ್ನಾದರೂ ’Take care...' ಎಂದು ಅಮೇರಿಕದಲ್ಲಿ ಬೀಳ್ಕೊಡಬಹುದು ಅದು ’how are you?' ಅನ್ನೋ ಔಪಚಾರಿಕ ಮಾತಿನ ಹಾಗೇ ಕಂಡು ಬಂದರೂ ನನ್ನ ಮಟ್ಟಿಗಂತೂ ಅದು ಯಾವುದೋ ಒಂದು ಫಾಸಿಟಿವ್ ಫೀಡ್‌ಬ್ಯಾಕ್ ಅನ್ನು ಆಗಾಗ್ಗೆ ರೀಇನ್‌ಫೋರ್ಸ್ ಮಾಡ್ತಾ ಇರುತ್ತೆ ಅನ್ಸುತ್ತೆ ಒಂದು ರೀತಿಯಲ್ಲಿ ಟಿವಿಯಲ್ಲಿ ಬರೋ ಕಮರ್ಷಿಯಲ್ಲ್ ನೋಡಿ ನಮಗೆ ಹೌಸ್‌ಹೋಲ್ಡ್ ಕೆಲಸಗಳು ನೆನಪಿಗೆ ಬರೋಲ್ವೇ ಹಾಗೆ.

ನಮ್ಮ ಹಿಂದಿನ ತಲೆಮಾರಿನಲ್ಲಿ ಜನರು ಒಂದೇ ಕಂಪನಿಗೆ ಅಥವಾ ಸರ್ಕಾರಕ್ಕೆ ತಮ್ಮ ಪೂರ್ಣ ಸೇವೆಯನ್ನು ಸಲ್ಲಿಸಿ ಅಲ್ಲೇ ನಿವೃತ್ತರಾಗೋ ವ್ಯವಸ್ಥೆ ಅಥವಾ ನಡವಳಿಕೆ ಇತ್ತು, ಆದರೆ ಈಗಿನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಇತಿ-ಮಿತಿಗಳು ನಮ್ಮನ್ನು ಸದಾ ’ಈ ಕೆಲಸ ಕೈ ಬಿಟ್ಟು ಹೋದರೆ ಮುಂದೇನು...’ ಅನ್ನೋ ಯೋಚನೆಯನ್ನು ಯಾವಾಗಲೂ ಜಾಗೃತವಾಗೇ ಇಟ್ಟಿರುತ್ತವೆ. ಹಿಂದಿನ ಪರಂಪರೆಯ ಹಾಗೆ ನಿಮ್ಮ ಬಾಸ್ ಆಗಲಿ ನಿಮ್ಮ ಸಹೋದ್ಯೋಗಿಗಳಾಗಲಿ ನಿಮ್ಮ ಯೋಗಕ್ಷೇಮವನ್ನು ನೋಡಿಕೊಂಡಾರು ಅನ್ನೋದು ಮರೀಚಿಕೆಯಾಗಿ ನಿಮ್ಮ ಕೆಲಸ ಹೇಗೇ ಇದ್ದರೂ ನಿಮ್ಮ ಫರ್‌ಫಾರ್ಮೆನ್ಸ್ ಯಾವ ರೀತಿ ಇದ್ದರೂ ಕಾರ್ಪೋರೇಟ್ ಲ್ಯಾಡರ್ರ್‌ನಲ್ಲಿ ಮೇಲೆ ಹೋಗಲೂ ಅನೇಕ ಕಸರತ್ತುಗಳನ್ನು ಮಾಡಬೇಕಾಗುತ್ತದೆ.

ಒಂದು ಕಡೆ ಹೊಸ ನೀರು ಅಂದರೆ ಹೊಸ ಕೆಲಸ ಮಾಡುವ ತಲೆಮಾರು ಕಂಪನಿಗಳಲ್ಲಿ ಬರುವ ಸಾಧ್ಯತೆ ಅಥವಾ ಸಂಖ್ಯೆ ಕಡಿಮೆಯಾಗಿದ್ದು, ಮತ್ತೊಂದು ಈಗಾಗಲೇ ಕಂಪನಿಯಲ್ಲಿ ಸೇರಿಕೊಂಡು ಬೆಳೆದ ತಿಮಿಂಗಲಗಳು ಅಲ್ಲೇ ಬೀಡುಬಿಟ್ಟಿರೋದರಿಂದ ಒಬ್ಬ ಮಧ್ಯ ವರ್ಗದ ಕೆಲಸಗಾರ ಮೇಲೆ ಹೋಗುವ ಸಾಧ್ಯತೆಗೆ ಕುತ್ತು ಬರುತ್ತದೆ. ತಾನು ಮಾಡುವ ಕೆಲಸವನ್ನು ಮತ್ತೊಬ್ಬರಿಗೆ ಕೊಡಲು ಅಲ್ಲಿ ತನ್ನ ಲೆವೆಲ್ಲ್‌ನಲ್ಲಿ ಬೇರೆ ಯಾರೂ ಇಲ್ಲ, ಜೊತೆಗೆ ತಾನು ಮೇಲೆ ಹೋಗಲೂ ಅವಕಾಶವಿಲ್ಲ ಎನ್ನೋ boxed up ಮನಸ್ಥಿತಿ ಎದುರಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆದ ಆರ್ಥಿಕ ಏರುಪೇರುಗಳಲ್ಲಿ ಸುಧಾರಿಸಿಕೊಳ್ಳಲು ಕಂಪನಿಗಳು ಇನ್ನೂ ಹೆಣಗುತ್ತಿರುವಾಗ ಬೇರೆ ಕಡೆಗೆ ಅಥವಾ ಕಂಪನಿಗೆ ವಲಸೆ ಹೋಗಿ ಸೇರಿಕೊಳ್ಳುವ ಸಾಧ್ಯತೆಗಳು ಕಡಿಮೆ ಆಗುತ್ತವೆ ಅಥವಾ ರಿಸ್ಕೀ ಆಗಿರುತ್ತವೆ.

ಒಂದಂತೂ ನನಗೆ ಚೆನ್ನಾಗಿ ಮನದಟ್ಟಾಗಿದೆ: ಇಲ್ಲಿ ಯಾರೂ ನಮ್ಮ ಬಗ್ಗೆ ಕೇರ್ ಮಾಡೋದಿಲ್ಲ, ಯಾರೂ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳೋದಿಲ್ಲ - ನಮ್ಮ ಊರಿನ ಬಸ್ಸುಗಳಲ್ಲಿ ಬರೆದಿರುವ ಹಾಗೆ ’ನಮ್ಮ ಲಗೇಜಿಗೆ ನಾವೇ ಜವಾಬ್ದಾರರು!’. ಸರ್ಕಾರಗಳು, ಅವು ಯಾವುದೇ ಪಕ್ಷದ್ದಿರಲಿ ಯಾರ ನಾಯಕತ್ವದಲ್ಲೇ ಇರಲಿ, ತಮ್ಮ ತಮ್ಮ ಬೇಳೇಕಾಳುಗಳನ್ನು ಬೇಯಿಸಿಕೊಳ್ಳುವುದರಲ್ಲಿ ಮಗ್ನರಾಗಿರುತ್ತವೆ, ತಮ್ಮ ಓಟುಬ್ಯಾಂಕುಗಳನ್ನು ಓಲೈಸುವತ್ತ ಪಾಲಿಸಿಗಳು ವಾಲಿರುತ್ತವೆ. ಎಂಪ್ಲಾಯರ್ಸ್, ಅವರಿಗೆ ನಾವೊಂದು ಕಮಾಡಿಟಿ, ಹ್ಯೂಮನ್ ರಿಸೋರ್ಸ್, ಸ್ಪ್ರೆಡ್‌ಶೀಟ್ ಹಾಗೂ ಎಕ್ಸ್‌ಪೆನ್ಸ್ ವಿಚಾರದಲ್ಲಿ ಬಂದಾಗ ಕತ್ತರಿಸಿ ತೆಗೆದು ಬಿಸಾಡಲು ಒಂದು ಬಾಡಿ ಅಷ್ಟೇ. ಫೈನಾನ್ಶಿಯಲ್ ಅಡ್ವೈಸರ್ಸ್, ಯಾವತ್ತೂ ನಮ್ಮ ಸ್ನೇಹಿತರಂತೂ ಅಲ್ಲ, ಇವರೆಲ್ಲ hyped ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಷ್ಟೇ, ನಿಮ್ಮ ದುಡ್ಡು ಕಾಸಿನ ವಿಚಾರಕ್ಕೆ ಬಂದಾಗ ಅವರ ತರ್ಕದಲ್ಲಿ ಯಾವುದೇ ಭಾವನೆಗಳಾಗಲೀ ನೋವಾಗಲಿ ಇರೋದಿಲ್ಲ. ಸಹೋದ್ಯೋಗಿಗಳು, ನಾನು ಈ ಹಿಂದೆ ಬರೆದ ಹಾಗೆ ಸ್ನೇಹಿತರೆಂದೂ ಆಗೋದಿಲ್ಲ, ಯಾವತ್ತಿದ್ದರೂ ರ್ಯಾಟ್‌ರೇಸ್ ಅನ್ನು ನೆನಪಿಸೋ ಹಾಗೆ ಅವರವರ ಏಳಿಗೆ ಅವರವರಿಗೆ ಮುಖ್ಯ. ಹೀಗೆ ನಾವು ಒಡನಾಡುವ external circle ಅನ್ನೋ ಪರೀಕ್ಷಿಸಿ ನೋಡಿದಾಗ ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರು ಅನ್ನಿಸೋದಿಲ್ಲವೇ? ಇದು ಭಾರತದಲ್ಲಿ ಕೆಲಸ ಮಾಡುವವರಿಗೂ ಅನ್ವಯವಾಗಬಹುದು, ನಮ್ಮಂಥ ಅನಿವಾಸಿಗಳಿಗೆ, ಯಾಕೆಂದರೆ ಅನಿವಾಸಿತನವನ್ನು ನೋವಿರದ ನಾಗರಿಕತೆ ಎಂದು ನಾನು ಕರೆಯೋದರಿಂದ, ಇಲ್ಲಿನ ಪಾಲಿಸಿಗಳಲ್ಲಿ ಎಲ್ಲೂ feel for pain ಇದೆ ಎಂದು ಅನ್ನಿಸೋದೇ ಇಲ್ಲ.

ಅದಕ್ಕೆ, ನಮ್ಮ ಕೇರ್ ಅನ್ನು ನಾವೇ ಮಾಡಿಕೊಳ್ಳಬೇಕು, ನೋಡಿಕೊಳ್ಳಬೇಕು ಎಂದಿದ್ದು; ಬೇರೆ ಯಾರಾದರೂ ನಿಮ್ಮ ಯೋಗಕ್ಷೇಮವನ್ನು ಮಾಡುತ್ತಾರೆ ಎಂದುಕೊಂಡಿದ್ದರೆ ತಟ್ಟನೆ ಆ ಮನಸ್ಥಿತಿಯಿಂದ ಹೊರಬನ್ನಿ.

Thursday, January 07, 2010

ಲಘುವಾಗೆಲೆ ಅನಿವಾಸಿ ಮನ...

ನವೆಂಬರ್ ೧೩ ರಂದು ಬರೆದ ’ಗೆಲುವಾಗೆಲೆ ಅನಿವಾಸಿ ಮನ...’ಬರಹಕ್ಕೆ ಪೂರಕವಾಗಿ ಈ ಲೇಖನ. ನವೆಂಬರ್ ೧೩ ನಾವು ಭಾರತಕ್ಕೆ ವೆಕೇಷನ್ನ್ ಹೋಗೋದರ ಹಿಂದಿನ ದಿನ, ಹಲವಾರು ಕೆಲಸಗಳ ನಡುವೆಯೂ ನಾನು ಮೂರು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿರೋ ಭಾರತ ಈಗ ಹೇಗಿರಬಹುದು, ಏನೇನೆಲ್ಲ ಬದಲಾವಣೆಗಳಾಗಿರಬಹುದು...ಎಂದು ಯೋಚಿಸಿಕೊಳ್ಳುತ್ತಲೇ ಇಲ್ಲಿ-ಅಲ್ಲಿಯ ತವಕಗಳ ಎರಡು ಚಿತ್ರಗಳನ್ನು ತರಾತುರಿಯಾಗಿ ಕಕ್ಕಿ ಕೊಂಡು ಆ ಲೇಖನವನ್ನು ಬರೆದು ಮುಗಿಸಿದ್ದಾಯಿತು. ಈಗ ಭಾರತದ ವೆಕೇಷನ್ನ್ ಮುಗಿಸಿ ಹಿಂತಿರುಗಿ ಬಂದ ಮೇಲೆ ಹಾಗೂ ಸುಧಾರಿಸಿಕೊಂಡ ಮೇಲೆ ನನ್ನ ಅನುಭವಗಳನ್ನು ಹೊರಹಾಕಿ ಮತ್ತೊಂದು ಲೇಖನವನ್ನು ಬರೆಯಬೇಕು ಎನ್ನುವ ಆಶಯದ ಫಲವೇ ಇದು.

ಈ ಬದುಕು-ಬವಣೆಗಳು ಅದೇನೇ ಕಷ್ಟವನ್ನು ತಂದು ಒಡ್ಡಲಿ, ಜಾಗತೀಕರಣದ ಪರಿಣಾಮಗಳು ಎಷ್ಟು ದೂರ ಬೇಕಾದರೂ ಪಸರಿಸಿಕೊಂಡಿರಲಿ ನಮ್ಮ ಊರು ನಮ್ಮ ದೇಶ ನಮ್ಮ ಮನೆ...ಇವೆಲ್ಲವೂ ಎಂದಿಗೂ ಅಪ್ಯಾಯಮಾನವೇ. ನನ್ನೊಳಗೆ ಹುದುಗಿರುವ ಫಾಸಿಟಿವ್ ಸ್ಪಿರಿಟ್ಸ್ ಈ ವಿಚಾರದಲ್ಲಿ ನೆಗೆಟಿವ್ ಎಂದೂ ಆಗಲು ಸಾಧ್ಯವಿಲ್ಲ!

***

ತೊಂಭತ್ತರ ಮಧ್ಯೆ ಹಾಗೂ ಕೊನೆಯಲ್ಲಿ ಪ್ರಪಂಚವನ್ನು ಅರಸುತ್ತಾ ಬಂದಂತಹ ನನ್ನಂಥ ಟೆಕ್ಕಿಗಳಿಗೆ (ಅಂದಿನ ಕಾಲದ ಹೆಸರು) ನಮ್ಮ ಅಗತ್ಯಗಳು ಬೇರೆಯಾಗಿದ್ದವು. ಜೇಬಿನಲ್ಲಿ ಮೂರು ಸಾವಿರ ಡಾಲರ್ ಇಟ್ಟುಕೊಂಡು ಬಂದು ನೆವರ್ಕ್ ಲಿಬರ್ಟಿ ಏರ್‌ಪೋರ್ಟಿನಲ್ಲಿ ಇಳಿದ ನನ್ನ ಹಾಗಿನವರಿಗೆ ಅವರ ದೃಷ್ಟಿಕೋನ ಬೇರೆಯಾಗಿತ್ತು. Y2K ಮುಗಿದು, ಮತ್ತೊಂದು ದಶಕವೂ ಕಳೆದು ಹೋಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಇಲ್ಲಿನ ಪೈಪೋಟಿಗೆ ಏಗಿ-ಬೇಗಿ ಹಾಗೂ ಇಲ್ಲಿನ ಸಂಪನ್ಮೂಲಗಳನ್ನುಂಡು ನಮ್ಮ ಬೆಳವಣಿಗೆ ಬೇರೆ ರೀತಿಯದ್ದೇ ಆಗಿದೆ. ನನ್ನ ಜೊತೆಯವರು, ವಾರಗೆಯವರು ಇಲ್ಲಿಗೆ ಬಂದು ಈಗಾಗಲೇ ಅಮೇರಿಕನ್ ಸಿಟಿಜನ್ನ್ ಪಟ್ಟಕಟ್ಟಿಕೊಂಡಿರಬಹುದಾದ ಸಮಯದಲ್ಲಿ ಸೇಫ್‌ನಲ್ಲಿರುವ ನನ್ನ ಭಾರತದ ಪಾಸ್‌ಪೋರ್ಟ್ ಯಾವತ್ತೋ ಒಮ್ಮೆ ಭಾರತಕ್ಕೆ ಹೋಗಿ ತಿಣುಕುವ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ ಎಂದೇ ಹೇಳಬೇಕು. ಸೋಜಿಗದ ವಿಷಯವೆಂದರೆ ನಾವು ಬದಲಾದಂತೆ ನಮ್ಮ ಹಳೆಯ ಪಾಸ್‌ಪೋರ್ಟಿನಲ್ಲಿರುವ ಚಿತ್ರವಾಗಲೀ ಮಾಹಿತಿಯಾಗಲೀ ಬದಲಾಗುವುದೇ ಇಲ್ಲ, ಅವು ಯಾವತ್ತಿದ್ದರೂ ’ನಾನೇ’ ಎನ್ನುವ ಚಿರಂತನ ಪ್ರತಿಮೆಯನ್ನು ಎತ್ತಿ ತೋರಿಸುವ ಮಾಧ್ಯಮ.

ಈ ಒಂದು ದಶಕದಲ್ಲಿ ಬೇಕಾದಷ್ಟಾಗಿದೆ: ನಮ್ಮ ಸ್ಪ್ರೆಡ್‌ಶೀಟು, ಗ್ರಾಫು, ನಂಬರುಗಳು ತಮ್ಮನ್ನು ತಾವು ನಮ್ಮ ಎದುರು ತೋರಿಸಿಕೊಂಡು ನಮ್ಮನ್ನು ಲೇವಡಿ ಮಾಡುವ ಪರಿಸ್ಥಿತಿಯೂ ಬಂದು ಹೋಗಿದೆ. ಈ ಒಂದು ದಶಕದಲ್ಲಿ ಮಾರ್ಕೆಟ್ಟಿನ ಮುಖ್ಯ ಮೂರು ಏಳು ಬೀಳುಗಳ ಕೃಪೆಯಿಂದಾಗಿ - ಡಾಟ್ ಕಾಮ್, ರಿಯಲ್ ಎಸ್ಟೇಟ್ ಹಾಗೂ ಕ್ರೆಡಿಟ್ ಕ್ರಂಚ್ - ನಮ್ಮ ದುಡಿಮೆಯ ಫಲ ಸ್ಟ್ರೆಸ್ಸಿಗೆ ಒಳಗಾಗಿದೆ, ನಮ್ಮ ಹೂಡಿಕೆಯ ಹಣ ಇನ್‌ಫ್ಲೇಷನ್ನಿನ ಎದುರು ತಲೆ ತಗ್ಗಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇವೆಲ್ಲದರ ಜೊತೆಗೆ ಸೆಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕತನ ನನ್ನಂಥ ಅನಿವಾಸಿಗಳಿಗೆ ಸಾಕಷ್ಟು ಕಷ್ಟ ಸುಖದ ದರ್ಶನ ಮಾಡಿಸಿದೆ.

’ವಿಜಯ ಕರ್ನಾಟಕ’ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ "Take it easy...ಟೆಕ್ಕಿ" ಲೇಖನಗಳು ನ್ಯೂಕ್ಲಿಯರ್ ಕುಟುಂಬಗಳ ಬವಣೆಯನ್ನು ಒಂದು ಹೆಜ್ಜೆ ಮುಂದುವರೆದು ರಸ್ತೆ ಮೇಲೆ ಬಿಸಾಡಿ ಮಾನ ಕಳೆದಿವೆ, ಆಧುನಿಕ ಕುಟುಂಬಗಳಲ್ಲಿನ ಇರಿಸು-ಮುರಿಸುಗಳು ಮನ-ಮನೆಯನ್ನು ಮುರಿಯುವ ಪ್ರಸಂಗಗಳನ್ನು ಲೇವಡಿ ಮಾಡಿವೆ. ಈ ನ್ಯೂಕ್ಲಿಯರ್ ಕುಟುಂಬಗಳ ಕ್ಲೀಷೆಗಳು ಮೈನ್‌ಸ್ಟ್ರೀಮ್ ಸಮಾಜಕ್ಕೆ ಗೊತ್ತೇ ಆಗದೇ ಒಂದು ದಶಕ ಉರುಳಿ ಹೋಗಿದ್ದು ವಿಪರ್ಯಾಸ. ’ನಮ್ಮ ಮಗ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಾನೆ...’ ಎನ್ನುವುದರ ಹಿಂದೆ ಬಳುವಳಿಯಾಗಿ ಬರುವ ಫಲಾಫಲಗಳನ್ನು ದೂರದ ತಂದೆ-ತಾಯಿಯರು ಯಾಕೆ ಗುರುತಿಸುವುದರಲ್ಲಿ ಸೊರಗಿ ಹೋದರೋ? ನನ್ನ ಹಾಗೆ ಹೆಚ್ಚಿನವರು ಇಲ್ಲಿ ಬಂದೇ ಕುಟುಂಬವನ್ನು ಆರಂಭಿಸಿದ್ದು ನಿಜವಾದರೆ ನಮಗೆಲ್ಲ ಸಹಬಾಳ್ವೆ ಎನ್ನೋದರ ಪರಿಕಲ್ಪನೆಯೇ ಇಲ್ಲ ಎನ್ನಬೇಕು. ನಾವು ಪರಿವಾರದವರೊಟ್ಟಿಗೆ ಮದುವೆ-ಮುಂಜಿಗಳಲ್ಲಿ ಭಾಗವಹಿಸೋದಿಲ್ಲ, ವಾರದ ದಿನಗಳನ್ನು ಒಂದು ರೀತಿ, ವಾರಾಂತ್ಯವನ್ನು ಮತ್ತೊಂದು ರೀತಿಯಲ್ಲಿ ಉರುಳಿಸಿ ವಾರ-ವರ್ಷಗಳನ್ನು ಕಳೆಯುವ ನಮಗೆ ಅವಿಭಾಜ್ಯ ಕುಟುಂಬಗಳ ಕಷ್ಟಗಳು ಹತ್ತಿರ ಸಹ ಸುಳಿಯೋದಿಲ್ಲ. ಸಹೋದರ-ಸಹೋದರಿ, ನಾದಿನಿ, ಮೈದುನ, ಅತ್ತೆ-ಮಾವ, ತಂದೆ-ತಾಯಿ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮಗಳ "interference" ನಮ್ಮ ಕುಟುಂಬಗಳಿಗಿರೋದಿಲ್ಲ. ನಮ್ಮ ಮಕ್ಕಳ ಡೈಪರ್ರ್ ತೆಗೆದು ತೊಳೆಯೋದು, ಅವರ ಯೋಗ-ಕ್ಷೇಮ ನೋಡಿಕೊಳ್ಳೋದು ನಮ್ಮ ದಿನನಿತ್ಯದ ಸಾಧನೆಗಳಲ್ಲೊಂದು. ನಾವು ನಮ್ಮ ಖರ್ಚನ್ನು ಮೀರಿ ಕೂಡಿಸೋ ಹಣ ಕೆಲವರಿಗೆ ಒಂದು ರೀತಿಯಲ್ಲಿ ನಾಯಿ ಮೊಲೆಯ ಹಾಲು - ಅದು ಬಹಳಷ್ಟು ಸಾರಿ ನೆರೆಹೊರೆಯ ಕಷ್ಟಗಳಿಗೆ ಸ್ಪಂದಿಸಿರಲಾರದು, ಹಾಗೆ ಕೂಡಿಟ್ಟ ಹಣ ಭದ್ರತೆಯಿದ್ದರೂ ಅದರ ಜೊತೆ ಅಸಹಾಯಕತೆಯನ್ನೂ ಸೇರಿಸಿಕೊಂಡಿರುತ್ತದೆ. ಹಾಗೆ ಸೇರಿಕೊಂಡ ಡಾಲರ್ ಹಣ ಇಲ್ಲಿಯ ಮಿಡ್ಲ್‌ಕ್ಲಾಸ್ ಮಟ್ಟದ್ದಿದ್ದರೂ ಅದು ಭಾರತದ ರೂಪಾಯಿಗೆ ಬದಲಾದಾಗ ಒಂದು ಹೊಸ ಅರ್ಥ ಪಡೆದುಕೊಳ್ಳುತ್ತದೆಯೇ ಹೊರತು ಕ್ಲಾಸ್ ವಿಚಾರದಲ್ಲಿ ಹೆಚ್ಚು ಬದಲಾವಣೆ ಆಗೋದಿಲ್ಲ.

***

ಯಾಕೆ ಭಾರತಕ್ಕೆ ಹಿಂತಿರುಗಿ ಹೋಗಬೇಕು? ಎನ್ನುವ ಆಲೋಚನೆಗಳು ಒಂದು ದಶಕದ ನಂತರ ಆಗಾಗ್ಗೆ ನಾಯಿಕೊಡೆಗಳಂತೆ ತಲೆ ಎತ್ತುವುದು ಸಾಮಾನ್ಯವಾಗುತ್ತದೆ. ಮೊದಲೆಲ್ಲ ಯಾವತ್ತು ಹೋದೇವೋ ಎನ್ನುವ ಆಲೋಚನೆಯೇ ರೋಮಾಂಚನವನ್ನು ಮೂಡಿಸುವಂತಹ ವಿಚಾರಗಳು ಈಗ ಹತ್ತಿರ ಸುಳಿಯೋದಿಲ್ಲ. ಅದರ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸುವ ಮನಸ್ಸು ಎಲ್ಲರಿಗಿಂತ ಮುಂದಾಗಿ ಭಾವನೆಗಳು ಹಾಗೂ ಸ್ಪಂದನಗಳೆಂಬ ಮೊದಲಾದ ಮನಸ್ಸಿನ ಲಘು ವಿಹಾರಗಳು ಕನಸಿಗೆ ಹತ್ತಿರವಾಗತೊಡಗುತ್ತವೆ. ಮೊದಲು ಎರಡು ಭುಜಗಳ ಜೊತೆಗೆ ಎರಡು ಸೂಟ್‌ಕೇಸ್ ಇಟ್ಟುಕೊಂಡು ಬಂದವರಿಗೆ ಸಂಸಾರದ ಹಲವಾರು ಇತರ ಭುಜಗಳ ಮತ್ತಿನ್ನೊಂದಿಷ್ಟು ಬ್ಯಾಗೇಜುಗಳು ಬೆನ್ನೇರುತ್ತವೆ. ಇಲ್ಲಿ ಇದ್ದೂ ಇಲ್ಲದವರ ಹಾಗೆ ಬದುಕಿ ಸುಸ್ತಾಗಿ ಹೋದ ಪರಿಣಾಮಕ್ಕೆ ನಮ್ಮ ಇಮ್ಮೂವಬೆಲ್ಲ್ ಅಸ್ಸೆಟ್ಟಿನ ಲಿಸ್ಟಿಗೆ ಇಲ್ಲಿಯ "ಮನೆ"ಯೂ ಸೇರಿಕೊಳ್ಳುತ್ತದೆ.

ಯಾಕೆ ಹೋಗಬೇಕು ಅನ್ನೋ ಪ್ರಶ್ನೆಗೆ ಒಂದೇ ಒಂದು ಬ್ರಹ್ಮಾಸ್ತ್ರದಂತಹ ಉತ್ತರವನ್ನು ನೀಡಬಹುದು - ಅದು ನಮ್ಮೂರಿನ ಹವಾಮಾನ. ಅಲ್ಲಿನವರಿಗೆ ಅದರ ಬೆಲೆ ಖಂಡಿತ ಗೊತ್ತಿಲ್ಲ ಬಿಡಿ. ನಾನಂತೂ ಡಿಸೆಂಬರಿನ ಅಲ್ಲಿನ ಛಳಿಗಾಲದ ರಾತ್ರಿ ಹಾಗೂ ಹಗಲು ಯಾವುದೇ ಹೀಟರ್ ಅಥವಾ ಏರ್‌ಕಂಡೀಷನರ್ ಇಲ್ಲದೇ ಕಳೆಯಬಹುದಾದಂಥ ಪರಿಸ್ಥಿತಿ ಯಾವತ್ತಿದ್ದರೂ ಮನಸ್ಸಿಗೆ ಮುದ ನೀಡುವ ಅನುಭವವೇ ಹೌದು. ಹವಾಮಾನದ ಜೊತೆಗೆ ನಮ್ಮವರು, ತಮ್ಮವರು, ನಮ್ಮಂತೇ ಇರುವವರು, ನಮ್ಮ ಜೊತೆ ಒಡನಾಡುವವರು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುವವರು - ಮೊದಲಾಗಿ ಇಡೀ ನಾಡನ್ನೇ ’ಯಾಕೆ ಹಿಂತಿರುಗಿ ಹೋಗಬೇಕು?’ ಎನ್ನುವ ಪ್ರಶ್ನೆಗೆ ಪಣವಾಗಿ ಒಡ್ಡಬಹುದು. ಆದರೆ ’ನಮ್ಮೂರು-ನಮ್ಮ ಜನ’ ಎನ್ನುವುದು ಪ್ಲಸ್ ಪಾಯಿಂಟ್ ಹೇಗೋ ಹಾಗೇ ಮೈನಸ್ಸ್ ಕೂಡ ಆಗಬಹುದು ಎನ್ನುವುದು ವಿಪರ್ಯಾಸವಲ್ಲದೇ ಮತ್ತಿನ್ನೇನು!

ಒಂದು ದಶಕಕ್ಕಿಂತ ಹೆಚ್ಚು ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಬದುಕಿಕೊಂಡಿದ್ದವರಿಗೆ (ಅಥವಾ ಅದನ್ನೇ ಬದುಕು ಎಂದು ನಂಬಿಕೊಂಡಿದ್ದವರಿಗೆ) ಧಿಡೀರನೇ ಮನೆಯ ಬಾಗಿಲನ್ನು ಬಡಿದು ಬರುವ ಅಥವಾ ಹಾಗೇ ಒಳನುಗ್ಗುವ ಬಂಧು-ಬಳಗದವರು ಅನಾಗರಿಕರಂತೆ ಕಂಡು ಬರಬಹುದು. ಅಥವಾ ಮದುವೆ-ಮುಂಜಿಗಳಲ್ಲಿ ನಾವು ಡಾಲರ್ ಮಹಾತ್ಮೆಯನ್ನು ಬಲ್ಲವರಾದರೂ ನಮ್ಮ ಎದುರೇ ಗುಲಗಂಜಿ ಬಂಗಾರಕ್ಕೆ ಕಿತ್ತು ತಿನ್ನುವ ಜಗಳವಾಗಬಹುದು. ’ನಾನು ಸತ್ತರೂ ನಿಮ್ಮ ಮನೆಯಲ್ಲಿ ನೀರು ಕುಡಿಯಲ್ಲ...’ ಎನ್ನುವ ವರಸೆಯೂ; ’ನೀನು ಯಾರ ಮನೆಗೆ ಹೋದ್ರೂ ಅವರ ಮನೆಗೆ ಮಾತ್ರ ಹೋಗಬೇಡ...’ ಎನ್ನುವ ಹಕ್ಕೀಕತ್ತೂ...ಹೀಗೆ ಅನೇಕಾನೇಕ ಅಗೋಚರ ಅವ್ಯಕ್ತ ಹಾಗೂ ಅಮೂರ್ತ ಮಾನವೀಯ ಸಂಬಂಧಗಳ ದರ್ಶನದ ಓವರ್‌ಲೋಡ್ ಆಗಿಬಿಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರ-ಪ್ರೈವಸಿ ಎಂಬುದರ ಬುಡವನ್ನೇ ಅಲುಗಾಡಿಸುವ ಘಟನೆಗಳು ನಡೆಯಬಹುದು. ಅಥವಾ ’ಬೆಂಡೇಕಾಯ್, ಸೋರೇಕಾಯ್...’ ಎಂದು ಬೀದಿಯಲ್ಲಿ ತರಕಾರಿ ಮಾರುವವರ ತಾರಕ ಸ್ವರದಿಂದ ಹಿಡಿದು ವಾಹನಗಳ ಹಾರ್ನ್‌ನಿಂದ ಕಮ್ಮ್ಯೂನಿಕೇಟ್ ಮಾಡುವ ಅಲ್ಲಿನ ವಾತಾವರಣ ಶಬ್ದಮಾಲಿನ್ಯವಾಗಿ ಕಾಡಬಹುದು. ಇವೆಲ್ಲದರ ಜೊತೆಯಲ್ಲಿ ಓವರ್‌ಲೋಡ್ ಆಗಿ ಓಡುವ ವಾಹನಗಳಿಂದ ಹಿಡಿದು ಲಂಗು-ಲಗಾಮಿಲ್ಲದ ಫ್ಯಾಕ್ಟರಿಗಳ ಹೊಗೆ ನಮಗೆ ಉಸಿರುಕಟ್ಟಿಸಬಹುದು. ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಈ ಹೆಚ್ಚಿನ ಜನಸಂಖ್ಯೆ ಯಾವುದೇ ಒಂದು ಸಮಸ್ಯೆಗೂ ಅದರದ್ದೇ ಆದ ಒಂದು ಹೊಸ ಆಯಾಮವನ್ನು ಸೃಷ್ಟಿಸಬಲ್ಲದು. ಹೀಗೇ...ಅನೇಕಾನೇಕ ನೆಗೆಟಿವ್ ಕಾಂಟೆಕ್ಸ್ಟ್‌ಗಳನ್ನು ತೋರಿಸಿದರೂ ಸಹ ’ವೆದರ್’ ಎನ್ನುವ ಒಂದೇ ಒಂದು ರಾಮಬಾಣಕ್ಕೆ ನಮ್ಮ ಊರನ್ನು ಕ್ಷಣಾರ್ಧದಲ್ಲಿ ಎಲ್ಲಕ್ಕಿಂತ ಹತ್ತಿರವಾಗಿಸಬಲ್ಲ ಶಕ್ತಿ ಇರುವುದಂತೂ ನಿಜ.

ಕೇವಲ ಹವಾಮಾನದ ಬಗ್ಗೆ ನ್ಯೂ ಜೆರ್ಸಿಯಲ್ಲಿ ಈ ಕಡುವಿಂಟರಿನ ನಡುವೆ ಬೆಚ್ಚಗೆ ಕುಳಿತು ಬರೆಯೋದು ದೊಡ್ಡ ವಿಷಯವಲ್ಲ. ಜೊತೆಗೆ ನಾರ್ಥ್ ಈಸ್ಟ್ ಬಿಟ್ಟು ಈ ದೇಶದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೋಡಿದರೆ ಅಲ್ಲಿ ಇಷ್ಟು ಕೆಟ್ಟ ಹವಾಮಾನ ಇಲ್ಲ. ವಾರ್ಮರ್ ಕ್ಲೈಮೇಟ್ ಬೇಕು ಎಂದರೆ ಫ್ಲೋರಿಡಾಗೆ ಹೋದರೆ ಆಗದೇ? ಬಹಳ ಸುಲಭವಾದ ಪ್ರಶ್ನೆ ಆದರೆ ಅದಕ್ಕೆ ಉತ್ತರ ಅಷ್ಟೊಂದು ಸುಲಭವಲ್ಲ. ಪ್ರತೀವರ್ಷ ಹರಿಕೇನ್‌ಗಳು ಬಂದರೂ, ಸುಂಟರಗಾಳಿ ಸುಳಿದರೂ, ಏನೇ ಹಾನಿ ಆದರೂ ಎಷ್ಟೋ ಕುಟುಂಬಗಳು ಅದೇ ಪ್ರದೇಶದಲ್ಲಿ ನೆಲೆಸೋದಿಲ್ಲವೇನು? ವೆದರ್ ಒಂದೇ ಕಾರಣವೆಂದರೆ ಇವತ್ತು ವಿಂಡೀಸಿಟಿ ಶಿಕಾಗೋ ಈ ಛಳಿಗಾಲದಲ್ಲಿ ನಿರ್ಜನಪೀಡಿತವಾಗಬೇಕಿತ್ತು. ಪ್ರತೀವರ್ಷ ಆರು ಅಡಿಗಳಷ್ಟು ಸ್ನೋ ಬಂದ ಬಫೆಲೋ ನಗರದಿಂದ ಎಲ್ಲರೂ ಗುಳೇ ಹೊರಡಬೇಕಿತ್ತು...ಹಾಗಾಗೋದಿಲ್ಲ. ಕರ್ಮವನ್ನು ಅರಸಿಬಂದ ನಮಗೆ ಒಂದು ಒಳ್ಳೆಯ ಕೆಲಸ ಬೇಕು, ಅದರ ಜೊತೆಯಲ್ಲಿ ನಮಗೆ ಅನುಕೂಲಕರವಾದ ನೆರೆಹೊರೆ ಇರಬೇಕು, ಇತ್ಯಾದಿ ಇತ್ಯಾದಿ. ಇವೆಲ್ಲವನ್ನೂ ಮೀರಿ ಒಮ್ಮೆ ಯಾರಾದರೂ ಅಮೇರಿಕದ ನೆಲದಲ್ಲಿ ಬೇರು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಮತ್ತೆ ಇನ್ನೇಲ್ಲೋ ನೆಲೆಸುವುದು ಕಷ್ಟದ ಮಾತೆ ಸರಿ.

***

ನಾವು ಕೇವಲ ಕರ್ಮವನ್ನು ಅರಸಿಬಂದವರು, ಅದರ ಜೊತೆಯಲ್ಲಿ ಪ್ರಾಸ್ಪೆರಿಟಿ ಕೂಡ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ನಾವು ರಿಡಿಫೈನ್ ಮಾಡಬೇಕಾದ ಅಗತ್ಯವಿದೆ. ನಿಧಾನವಾಗಿ ಮುವತ್ತರ ಮಡಿಲಿನಿಂದ ಜಾರಿ ನಲವತ್ತರ ಹರೆಯಕ್ಕೆ ನನ್ನಂಥವರು ಬೀಳತೊಡಗುತ್ತೇವೆ. ಒಂದು ಕಾಲದಲ್ಲಿ ’ರಿಟೈರ್‌ಮೆಂಟ್ ಎಂದರೆ ನಮಗಲ್ಲ...’ ಎನ್ನುವ ಆಟಿಟ್ಯೂಡ್ ಇಟ್ಟುಕೊಂಡವರಿಗೆ ಈಗ ಮಾರ್ಕೆಟ್ಟುಗಳ ಏಳುಬೀಳುಗಳಲ್ಲಿ ಬಳಲಿದ ಮೇಲೆ ರಿಟೈರ್‌ಮೆಂಟ್ ಎನ್ನುವುದು ಮರೀಚಿಕೆಯಾಗದಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ. ನಮ್ಮ ಮಕ್ಕಳು ಬೆಳೆದು ದೊಡ್ಡವರಾದಂತೆ ನಮ್ಮ ಮೂಲ ಸಂಸ್ಕಾರ-ಸಂಸ್ಕೃತಿಗಳು ದಿನನಿತ್ಯದ ಅಗತ್ಯಗಳಲ್ಲೊಂದಾಗುತ್ತವೆ. ಹಣವನ್ನು ಕೂಡಿಡುವುದರ ಜೊತೆಗೆ ’ಇನ್ನು ಮುಂದೆ ಹೇಗೋ?’ ಎನ್ನುವ ಹೆದರಿಕೆ ಸೇರಿಕೊಂಡು ಕನ್ಸರ್‌ವೆಟಿವ್ ಮೈಂಡ್ ಜಾಗೃತವಾಗುತ್ತದೆ.

ಇವೆಲ್ಲ ಚಿಂತೆಗಳು ಯಾವತ್ತಿದ್ದರೂ ಇರೋವೆ, ದಿನೇದಿನೇ ಮನದಾಳದಲ್ಲಿ ಖಾಲಿಯಾಗುವ ದೂರದ ಭಾರತದ ನೆನಪು ನಾಸ್ಟಾಲ್ಜಿಯಾ ಆಗಿ ಹೋಗುತ್ತಾ ಸ್ಥಳೀಯ ಅನಿವಾಸಿ ಕರ್ಮಗಳು ಬೆನ್ನಿಗೆ ಅಂಟಿಕೊಂಡು ಹೊರೆ ಯಾವತ್ತಿಗೂ ತೂಕವಾಗೋದು ಇದ್ದೇ ಇದೆ, ಇವೆಲ್ಲದರ ನಡುವೆಯೂ ನಗುವ ಅಗತ್ಯವಿದೆ, ಸಹಜವಾಗಿ ಬದುಕುವ ತುಡಿತವಿದೆ. ಹಗುರವಾಗಬೇಕು, ಲಘುವಾಗಬೇಕು ಎಂದುಕೊಳ್ಳುತ್ತಾ ಅನಿವಾಸಿ ಮನ ಅಲ್ಲಿಯ ಹಳೆಯ ಹಾಗೂ ಇಲ್ಲಿಯ ಹೊಸ ತಲೆಮಾರುಗಳಿಗೆ ಬೆಸೆಯುವ ಕೊಂಡಿಯಾಗುತ್ತದೆ. ತನ್ನೊಳಗಿನ ತುಮುಲ-ತುಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಮುಂದಿನ ಸಂತತಿ ತನ್ನಂತಾಗದು ಎಂದು ಮಮ್ಮಲ ಮರಗುತ್ತದೆ, ಇವೆಲ್ಲದರ ಜೊತೆಯಲ್ಲಿ ಅಲ್ಲಿಯವರಿಗೆ ನಾವು "ಆಗಿ" ಬರಲಿಲ್ಲ ಎನ್ನುವ ಚಿಂತೆ ಕೊರೆಯತೊಡಗುತ್ತದೆ.

Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

Monday, September 28, 2009

ಕಾಫಿ ಫಿಲ್ಟರ್, ಕಿವಿಗೆ ಹಾಕುವ ಹತ್ತಿ ಹಾಗೂ ಅನಿವಾಸಿತನ

ಭಾರತದಿಂದ ಬಂದ ಹೊಸತರಲ್ಲಿ ಅಮೇರಿಕದಲ್ಲಿ ದೊರೆಯುವ ಕಾಫಿ (ಲೋಟಾಗಳ) ಸೈಜು, ಅದನ್ನು ಬಳಸುವ ಬಳಕೆದಾರರೆಲ್ಲ ನನ್ನಲ್ಲಿ ಬಹಳ ಕಳವಳವನ್ನೂ ದಿಗ್ಬ್ರಾಂತಿಯುನ್ನು ಮೂಡಿಸುತ್ತಿದ್ದರು ಎನ್ನುವುದು ನನ್ನ ಅನುಭವ ಅಥವಾ ಅನಿಸಿಕೆ. ಇಲ್ಲಿ ಎಲ್ಲವೂ ಲಾರ್ಜ್ ಸೈಜು - ಕಾಫಿ, ಸೋಡಾ, ತಿನ್ನುವ ಸ್ಯಾಂಡ್‌ವಿಚ್, ಆಹಾರ ಪದಾರ್ಥ, ಆಚಾರ-ವಿಚಾರ ಎಲ್ಲವೂ. ನಮ್ಮ ಭಾರತೀಯ ಪದ್ದತಿಯ ಪ್ರಕಾರ ನಾನು ಬೆಳಗ್ಗೆ ಒಂದು ಲೋಟಾ ಮತ್ತು ಸಂಜೆ ಒಂದು ಲೋಟಾ ಕಾಫಿ ಅಥವಾ ಚಹಾಕ್ಕೆ ಹೊಂದಿಕೊಂಡವನು. ಇಲ್ಲಿ ಬಂದ ಹೊಸತರಲ್ಲಿ ಈ ಲಾರ್ಜ್ ಸೈಜುಗಳು ಖಂಡಿತ ನನ್ನಂತಹವರಿಗಲ್ಲ ಅಲ್ಲದೇ ಎಂದೂ ನನಗೆ ಇಷ್ಟು ದೊಡ್ಡ ಸರ್ವಿಂಗ್ ಸೈಜಿನ ಅಗತ್ಯವಿಲ್ಲ ಎಂಬುದು ಅಂದಿನ ನಿಲುವಾಗಿತ್ತು.

ಭಾರತದಲ್ಲಿ ನಾವು ಫಿಲ್ಟರ್ ಕಾಫಿ ಕುಡಿಯುತ್ತಿದ್ದೆವು, ಆದರೆ ಅಲ್ಲೆಲ್ಲೂ ಹತ್ತು-ಹನ್ನೆರಡು ಕಪ್ ಕಾಫಿ ಹಿಡಿಯುವಷ್ಟು ದೊಡ್ಡ ಪ್ರಮಾಣದ ಫಿಲ್ಟರ್ ನಾನು ನೋಡಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ ಒಮ್ಮೆ ನಾವು ಒಂದಿಷ್ಟು ಜನ ಬ್ಯಾಚುಲರ್ಸ್ ಸೇರಿಕೊಂಡು ಕಾಫಿ ಫಿಲ್ಟರ್ ಹೆಸರಿನಲ್ಲಿ ಒಂದಿಷ್ಟು ಕಾಫಿ ಫಿಲ್ಟರುಗಳನ್ನು ತಂದು, ಈ ಪೇಪರಿನ ಕೊಟ್ಟೆಯನ್ನು ಹೇಗೆ ಉಪಯೋಗಿಸಬೇಕು ಎಂಬುದು ತಿಳಿಯದೇ ಅದನ್ನು ಹಾಗೇ ಎಸೆದ ಹಾಗೆ ನೆನಪು.

ಅದಾದ ನಂತರದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಫಿ ಕುಡಿಯುವುದಕ್ಕೆ ಒಗ್ಗಿ ಹೋದ ನಾನು ಲಾರ್ಜ್ ಕಾಫಿಗಳನ್ನು ಗಣನೀಯ ಪ್ರಮಾಣದಲ್ಲಿ ಸೇವಿಸ ತೊಡಗಿದ ಮೇಲೆ ಮಿಸ್ಟರ್ ಕಾಫಿಯ ಬಳಕೆಗೆ ಹೊಂದಿಕೊಂಡಿದ್ದು. ಹಾಗೇ ದಿನದ ಆರಂಭದಲ್ಲಿ ನಮ್ಮೂರಿನ ನಾಲ್ಕು ಲೋಟಾಗಳು ಹಿಡಿಯುವಷ್ಟು ಕಾಫಿಯನ್ನು ಅರ್ಧ ಘಂಟೆಯ ಒಳಗೆ ಒಂದು ಕೈಯಿಂದ ಕಾರನ್ನು ಡ್ರೈವ್ ಮಾಡುತ್ತಲೇ ಮತ್ತೊಂದು ಕೈಯಿಂದ ಸೇವಿಸುವುದನ್ನು ಕರತಾಮಲಕ ಮಾಡಿಕೊಂಡಿದ್ದು. ಇಲ್ಲಿ ನಮ್ಮ ಮನೆಯಲ್ಲಿ ಇಂತಹ ದಿನನಿತ್ಯ ಉಪಯೋಗಿ ವಸ್ತುವಾಗಿ ಕಾಫಿಯ ಬಳಕೆಯಾದ ಮೇಲೆ ಅದರ ಸಂಗಾತಿ ಪೇಪರ್ ಫಿಲ್ಟರ್ರೂ ಇಲ್ಲವೆಂದರೆ ಹೇಗೆ? ಜೊತೆಗೆ ಒಂದೋ ಎರಡೋ ಕಾಫಿ ವೆರೈಟಿಗೆ ಹೊಂದಿಕೊಂಡ ದೇಹಕ್ಕೆ (ಹಾಗೂ ಮನಸ್ಸಿಗೆ) ಇಲ್ಲಿನ ಹತ್ತು ಹಲವಾರು ಪ್ಲೇವರುಗಳೂ ಅವುಗಳ ಜೊತೆಗೆ ಕಾಫಿ ಬೀಜದ ರೋಸ್ಟ್ (ಲೈಟ್, ಮೀಡಿಯಂ, ಡಾರ್ಕ್) ಸೇರಿಕೊಂಡು ಆಹ್ಲಾದಕರ ಕಾಫಿಯ ಅನುಭವಕ್ಕೆ ಇನ್ನೊಂದಿಷ್ಟು ರುಚಿಗಳನ್ನು ಸೇರಿಸಿಕೊಂಡಿದ್ದು.

ಇಲ್ಲಿ ನಾವು ಹೋಲ್ ಸೇಲ್ ಮಳಿಗೆಗಳಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳುವಲ್ಲಿ ಕೇವಲ ಎರಡೂವರೆ ಡಾಲರ್‌ಗೆ ಆರು ನೂರು (೬೦೦) ಫಿಲ್ಟರುಗಳನ್ನು ತಂದು ಬಳಸುವುದು ರೂಢಿ. ಆದರೆ ಒಮ್ಮೆ ಖರೀದಿಸಿದ ಈ ಫಿಲ್ಟರ್ ಖಾಲಿ ಆಗುವಾಗ ದಿನಕ್ಕೊಂದರಂತೆ ಬಳಸಿದರೂ ಮನಯಲ್ಲಿ ಕಾಫಿ ಕುದಿಸದ ವರ್ಷದ ಇತರ ದಿನಗಳನ್ನು ಲೆಕ್ಕ ಹಾಕಿದರೆ ಕೊನೇ ಪಕ್ಷ ಆರು ನೂರು ಫಿಲ್ಟರ್ ಪೇಪರುಗಳು ಎರಡು ವರ್ಷದ ಮಟ್ಟಿಗಾದರೂ ಬಂದಾವು. ಆದರೆ ನಾನು ಕಾಫಿ ಹೀರುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗೆ ಮಾತ್ರ ಹಾಗಾಗಿ ಐದು ವರ್ಷಗಳ ಹಿಂದೆ ತಂದ ಫಿಲ್ಟರ್ ಪೇಪರುಗಳು ಖಾಲಿಯಾಗಿ ಹೀಗೆ ಈ ಘಳಿಗೆಯಲ್ಲಿ ಅವುಗಳ ಬಗ್ಗೆ ಬರೆಯುವಂತಾಯಿತು.

ಕಾಫಿ ಫಿಲ್ಟರುಗಳಿಗೆ ಅನ್ವಯವಾಗುವ ಇತಿಹಾಸ ಹಾಗೂ ವಾಸ್ತವದ ಅನುಭವಗಳು ಕಿವಿಗೆ ಹಾಕುವ ಹತ್ತಿಯ ಕಡ್ಡಿಗೂ ಅನ್ವಯಿಸುತ್ತವೆ ಎಂದೇ ಹೇಳಬೇಕು. ಐದು ಡಾಲರುಗಳಿಗೆ ಸಾವಿರದ ಇನ್ನೂರು (೧೨೦೦) ಹತ್ತಿ ಕಡ್ಡಿಯನ್ನು ತಂದು ಅದೆಷ್ಟೋ ವರ್ಷಗಳ ಹಿಂದೆ ಮನೆಯಲ್ಲಿಟ್ಟು ಈಗ ಖಾಲಿ ಆಗಿ ಹೋಗಿದೆ. ಮತ್ತೆ ಫಿಲ್ಟರುಗಳ ಹಾಗೆ ಒಂದು ದೊಡ್ಡ ಪ್ರಮಾಣದ ಖರೀದಿಯನ್ನು ಸಣ್ಣ ಬೆಲೆಗೆ ಮಾಡಬೇಕಾಗಿ ಬಂದಿದೆ, ಅವಿನ್ನು ಖಾಲಿಯಾಗುವುದು ಇನ್ನೆಷ್ಟು ವರ್ಷಗಳ ನಂತರವೋ. ನಾವೇನು ಭಾರತದಲ್ಲಿ ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಿವಿಯೊಳಗೆ ಹತ್ತಿಯನ್ನು ತೂರಿಸಿ ಕ್ಲೀನ್ ಮಾಡಿಕೊಳ್ಳುತ್ತಿರಲಿಲ್ಲ, ಹಾಗೇ ಇಲ್ಲೂ ಕೂಡ. ಕಿವಿಗೆ ಹಾಕುವ ಹತ್ತಿ ಕಡ್ಡಿಯ ಉಪಯೋಗ ಅಪರೂಪಕ್ಕೊಮ್ಮೆ, ಅದೂ ಕೆಲವೊಮ್ಮೆ ಸೈನ್‌ಫೆಲ್ಡ್‌ನ ಕ್ರೇಮರ್ ಕಿವಿಯೊಳಗೆ ನೀರು ತುಂಬಿಸಿಕೊಂಡು ಕುಣಿದಾಡುವ ಪ್ರಸಂಗ ಬಂದ ಹಾಗೆ ನಮಗೂ ಈ ಹತ್ತಿ ಕಡ್ಡಿಯ ಬಳಕೆಗೂ ನಂಟು.

ಈ ಅನಿವಾಸಿತನಕ್ಕೂ ಈ ಕಾಫಿ ಫಿಲ್ಟರ್-ಹತ್ತಿ ಕಡ್ಡಿಯ ಅವಿನಾಭಾವ ಸಂಬಂಧದ ಬಗ್ಗೆ ಬರೆಯೋದಕ್ಕೂ ಒಂದು ಕಾರಣವಿದೆ. ಸಂಪನ್ಮೂಲಗಳು ಕಡಿಮೆ ಇದ್ದು ಅವು ಹೆಚ್ಚು-ಹೆಚ್ಚು ಮಟ್ಟದಲ್ಲಿ ಸಿಗದ ಅಥವಾ ಅಭಾವದ ಪರಿಸ್ಥಿತಿ ಒಂದು ಕಡೆ, ಆದರೆ ಇಲ್ಲಿ ಹಣವೊಂದಿದ್ದರೆ ಸಾಕು ಬೇಕಾದಷ್ಟು ಸಿಗುವುದು ಮತ್ತೊಂದು ಕಡೆ. ಚಿಕ್ಕ ಸೈಜಿನ ಕಾಫಿ ಲೋಟಾಗಳಿಂದ ಹಿಡಿದು ಕಿವಿಗೆ ಹಾಕುವ ಹತ್ತಿಯ ಬಳಕೆಯ ಪ್ರಮಾಣ ಕಡಿಮೆಯಿತ್ತು, ಆದರೆ ಇಲ್ಲಿ ಎಲ್ಲವೂ ಲಾರ್ಜ್ ಸೈಜು. ಒಂದೋ ಎರಡೋ ಎಕರೆ ಗದ್ದೆ-ಭೂಮಿ ಪ್ರಮಾಣ ನನ್ನಂಥವರ ಮಧ್ಯಮ ವರ್ಗದವರಿಗೆ ದೊಡ್ಡವಾಗಿದ್ದವು, ಆದರೆ ಇಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಎರಡು-ಮೂರು ಸಾವಿರ ಎಕರೆಗಳ ಒಡೆಯರು. ನನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ನನ್ನ ಸಹೋದ್ಯೋಗಿ ಇತ್ತೀಚೆಗೆ ಇಪ್ಪತ್ತು ಎಕರೆಗಳನ್ನು ತನ್ನ ಸ್ವಂತ ಊರಿನಲ್ಲಿ ಖರೀದಿಸಿದ್ದು ದೊಡ್ಡ ಸುದ್ದಿಯಲ್ಲ. ನಮ್ಮ ಕಾರುಗಳ ಇಂಜಿನ್ ದೊಡ್ಡವು. ನಿನ್ನೆ ಗಾರ್‌ಫೀಲ್ಡ್ ಪರಿಚಿಯಿಸಿದ ಸಾಧಾರಣ ಗಾತ್ರದ ಅವನ ಮೋಟಾರ್‍ ಸೈಕಲ್ ಇಂಜಿನ್ ೧೫೦೦ ಸಿ.ಸಿ. (1500 cc), ಭಾರತದಲ್ಲಿ ಎಷ್ಟೋ ಕಾರುಗಳ ಇಂಜಿನ್ ಇದಕ್ಕಿಂತ ಚಿಕ್ಕವು. ದೊಡ್ಡ ರಸ್ತೆಗಳು. ದೊಡ್ಡ ದೇಶ - ಎಲ್ಲವೂ ದೊಡ್ಡದೇ.

ಆದರೆ ಈ ಮಹಾನ್ ಗಾತ್ರ ಹಾಗೂ ಮಹಾನ್ ಸಂಸ್ಕೃತಿಗೆ ನಮ್ಮ ಚಿಕ್ಕ ಅಥವಾ ಮೀಡಿಯಮ್ ಸೈಜಿನ ಮನಸ್ಸುಗಳಾಗಲೀ, ಆಚಾರ-ವಿಚಾರಗಳಾಗಲಿ ದಿಢೀರನೆ ಹೇಗೆ ಹೊಂದಿಕೊಂಡಾವು. ಇವತ್ತೋ ನಿನ್ನೆಯೋ ಭಾರತದಿಂದ ಬಂದವರಿಗೆ ಒಂದು ಲಾರ್ಜ್ ಸ್ಟಾರ್‌ಬಕ್ಸ್ ಕಾಫಿ ಕೊಟ್ಟು ನೋಡಿ, ಅದನ್ನು ಅವರು ಪೂರ್ತಿ ಮುಗಿಸುತ್ತಾರೆಯೇ ಎಂದು. ಈ ಚಿಕ್ಕ-ದೊಡ್ಡ ವಿಚಾರಗಳು ಮೊದಲಿನಿಂದ ಕೊನೆಯವರೆಗೆ ನಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ ಎನ್ನೋದು ಈ ಹೊತ್ತಿನ ನನ್ನ ತತ್ವ.

ಇಂದು ಖರೀದಿಸಿ ಆದಷ್ಟು ಬೇಗನೇ ಬಳಸಿ ಮತ್ತೆ ಹೊಸತನ್ನು ಖರೀದಿಸುವುದು ಒಂದು ವಿಧ, ನಮ್ಮಲ್ಲಿ ಉಗ್ರಾಣಗಳಿವೆ ಎಂದು ಬೇಕಾದ್ದನ್ನೆಲ್ಲ ಹೋಲ್‌ಸೇಲ್ ದರದಲ್ಲಿ ಕೊಂಡು ಹಲವು ವರ್ಷಗಳ ವರೆಗೆ ಅನುಭವಿಸುವುದು ಮತ್ತೊಂದು ವಿಧ. ಪ್ರೆಸೆಂಟ್ ವ್ಯಾಲ್ಯೂ ಫ್ಯೂಚರ್ ವ್ಯಾಲ್ಯೂನಿಂದಾನಾದರೂ ಲೆಕ್ಕ ಹಾಕಿ, ಬೇಕಾಗಿದ್ದು ಸಾಕಾದಷ್ಟು ಇರಲಿ ಎಂದಾದರೂ ಸಮಜಾಯಿಸಿ ಕೊಟ್ಟುಕೊಳ್ಳಿ.

ಅವೇ ಲಾರ್ಜ್ ಕಾಫಿಗಳನ್ನು ಬಿಕರಿ ಮಾಡುವ ಪೇಪರ್ ಫಿಲ್ಟರುಗಳು, ಸಾವಿರಗಟ್ಟಲೆ ಸಿಗುವ ಕಿವಿಗೆ ಹಾಕುವ ಹತ್ತಿ ಕಡ್ಡಿಗಳು ಅಗಾಧ ಪ್ರಮಾಣದಲ್ಲಿ ಸಿಗುವ ಇವುಗಳನ್ನು ನಿಯಂತ್ರಣಕ್ಕೆ ತಂದುಕೊಂಡು ದಿನ-ವಾರ-ವರ್ಷಗಳನ್ನು ದೂಡುವ ಅನಿವಾಸಿ ಬದುಕು. ಇವುಗಳ ಮುಂದೆ ಹರಿದು ಹೋಗುವವರೆಗೆ ಉಪಯೋಗಕ್ಕೆ ಬರುವ ನಮ್ಮ ಅಲ್ಯುಮಿನಮ್ ಅಥವಾ ಪ್ಲಾಸ್ಟಿಕ್ ಜಾಲರಿ ಇರುವ ಫಿಲ್ಟರುಗಳು ಹಳೆಯವಾಗುತ್ತವೆ, ಅಮೇರಿಕದ ಮಿಸ್ಟರ್ ಕಾಫಿ ಇಳಿಸಲು ಭಾರತದ ಫಿಲ್ಟರ್ ಕೆಲಸ ಮಾಡದಾಗುತ್ತದೆ. ಇಲ್ಲಿನ ಹೆಚ್ಚು ಧೂಳಿಲ್ಲದ ಏರ್ ಕಂಡೀಷನ್ನ್ ವಾತಾವರಣದಲ್ಲಿ ಬೆಳೆಯುತ್ತಿದ್ದರೂ ಕಿವಿಯಲ್ಲಿ ಸೇರಿದ ಕೊಳೆ ತೆಗೆಯಲು ಸಾವಿರ ಸಂಖ್ಯೆಯಲ್ಲಿ ಸಿಗುವ ಕಡ್ಡಿ ಸರದಾರರು ನೆರವಿಗೆ ಬರುತ್ತಾರೆ, ಹಿಂದೆ ಹಗಲೂ-ರಾತ್ರಿ ಧೂಳಿನಲ್ಲೇ ಜೀವನ ಸಾಗಿಸಿ ಬಂದು ಯಾವತ್ತೋ ಕಿವಿಯ ಕೊಳೆಯನ್ನು ತೆಗೆದಿದ್ದು ಗೌಣವಾಗುತ್ತದೆ.

Sunday, February 17, 2008

ಇಲ್ಲಿಗೂ ಅಲ್ಲಿಗೂ ಏನೂ ವ್ಯತ್ಯಾಸವಿಲ್ಲಾ ಅಂತಂದ್ರೆ...

ಇನ್ನೇನು ಸೂರ್ಯ ಹುಟ್ಟಿ ಜಗತ್ತನ್ನ ಬೆಳಗಬೇಕು ಅನ್ನೋ ಸೂಚನೆಗಳು ಸಿಕ್ಕೊಡನೆ ನಮ್ಮನೇ ಮೂಲೆಯಲ್ಲಿರೋ ಮಲ್ಲಿಗೆ ಗಿಡಗಳ ಎಲೆಗಳ ಮುಖದಲ್ಲಿ ಒಂದು ಮಂದಹಾಸ ಮಿನುಗ ತೊಡಗಿತು. ಅನತಿ ದೂರದಲ್ಲಿ ಮೋಡ ಮತ್ತು ಖಾಲಿ ಆಕಾಶಗಳ ನಡುವೆ ಅದೇ ತಾನೇ ಜಗತ್ತಿಗೆ ತನ್ನನ್ನು ಸಾರಿಕೊಂಡು ಕೆಂಪನ್ನು ಸಾರುತ್ತಿರುವ ಕಿರಣಗಳು ಈ ಎಲೆಗಳ ಮೇಲೆ ಹನಿ ಹನಿ ಸೇರಿ ತೆಳುವಾಗಿ ಮಂಜು ಕಟ್ಟಿದ್ದ ಲೇಪನದಲ್ಲೂ ಪ್ರತಿಫಲನವಾಗತೊಡಗಿತು. ಇನ್ನೇನು ಸೂರ್ಯ ಜಗತ್ತಿಗೆ ಬಂದೇ ಬಿಟ್ಟ ಕತ್ತಲೆ ಅನ್ನೋದು ಹಾರಿ ಹೋಯ್ತು ಎಂದು ಈ ಮಲ್ಲಿಗೆಯಲ್ಲಿನ ಎಲೆಗಳು ಬೀಗಿದ್ದೇ ಬಂತು. ಅದೆಷ್ಟೋ ಹೊತ್ತಿನಿಂದ ಹನಿಹನಿ ನೀರಿನ ಪಸೆಯನ್ನು ತಮ್ಮ ಮೈಮೇಲೆ ಶೇಖರಿಸಿಕೊಂಡು ’ಸದ್ಯ, ಈಗಲಾದರೂ ಬಂದ ಸೂರ್ಯ!’ ಎಂದು ಉಸ್ಸ್ ಎಂದು ಉಸಿರು ಬಿಡುವಷ್ಟರಲ್ಲಿ, ಅದ್ಯಾವುದೋ ತಣ್ಣಗಿನ ಗಾಳಿಯೊಂದು ಬೀಸಿತೋ ಇಲ್ಲವೋ ಎನ್ನುವಂತೆ ಬಂದು ಹೋದಂತಾಗಿ ಎಲೆಗಳು ಸ್ವಲ್ಪ ನಲುಗಿದ್ದೇ ತಡ, ಅವುಗಳ ಮೇಲಿನ ನೀರಿನ ಪಸೆ ನಿಧಾನವಾಗಿ ಹನಿಯೊಂದಾಗಿ ಜಾರಿ ಮಣ್ಣಿಗೆ ಬಿದ್ದು ಹೋಗೋದೇ! ’ಛೇ’ ಎಂದು ಎಲೆಗಳೆಲ್ಲ ಒಮ್ಮೆ ಕಿರುಚಿಕೊಂಡು ಬೇಕೋ ಬೇಡವೋ ಎನ್ನುವಂತೆ ಗಾಳಿಗೆ ತಲೆ ಆಡಿಸತೊಡಗಿದವು. ’ಹೋಯ್ತಲ್ಲಪ್ಪಾ!’ ಎನ್ನುವ ರೋಧನ ಇನ್ನೂ ಕೇಳಿಬರುತ್ತಿತ್ತೋ ಏನೋ, ಅಷ್ಟರಲ್ಲಿ ದಿಗಂತದ ಗೆರೆಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮೇಲೆದ್ದು ಬಂದ ಸೂರ್ಯನ ಕಿರಣಗಳು ಎಲೆಗಳ ಮುಖದ ಮೇಲೆ ಬಿದ್ದು, ಅವು ಹಸಿರು ಬಣ್ಣದವಿದ್ದರೂ ಅವನ್ನು ತನ್ನ ಕೆಂಪಿನಲ್ಲಿ ತೋಯಿಸಿಕೊಂಡವು. ಒಂದು ಕಡೆ ತಮ್ಮ ನೀರಿನ ಪಸೆಯನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಅದ್ಯಾವುದೋ ಹೊಸದರ ಸಂಭ್ರಮ. ಎಲೆಗಳ ಕಸಿವಿಸಿ ಚೆನ್ನಾಗಿ ಅವುಗಳ ಮುಖದ ಮೇಲೆ ಹೊಸಬೆಳಕಿನಲ್ಲಿ ಗೋಚರಿಸತೊಡಗಿತ್ತು. ಇದು ಯಾವುದೂ ತನಗೆ ಗೊತ್ತಿಲ್ಲ, ತನ್ನ ಹೊನ್ನ ಕಿರಣಗಳು ಎಲ್ಲೆಲ್ಲೋ ಹರಡಿ ಅವು ಏನೇನನ್ನೋ ಕಂಡುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎನ್ನುವ ಧೋರಣೆ ತಳೆದ ಸೂರ್ಯ ಒಂದಿನಿತೂ ಎಲ್ಲೂ ನಿಲ್ಲುವಂತೇನೂ ತೋರಲಿಲ್ಲ.

***

’ಯಾಕೋ ಬೇಜಾರ್ ಮಾಡ್ಕೊಂಡಿದಿಯಾ?’ ಎಂದೆ.

’ಏನಿಲ್ಲ, ಇಲ್ಲಿದ್ರೆ ಅಲ್ಲೀ ಯೋಚ್ನೆ, ಅಲ್ಲಿದ್ರೆ ಇಲ್ಲೀ ಯೋಚ್ನೆ...’

’ಏಕೆ, ಇತ್ತೀಚೆಗಷ್ಟೇ ಅಲ್ವೇ ನೀನು ಅಮೇರಿಕ ಬಿಟ್ಟು ಇಂಡಿಯಾಕ್ ಹೋಗಿದ್ದು? ಎಲ್ಲ ಸುಖವಾಗಿರಬೇಕಲ್ಲ’.

’ಅದೇ, ಸುಖವಾಗೇನೋ ಇದೀನಿ. ಆದ್ರೆ...’

’ಆದ್ರೆ ಏನು?’

’ಏನಿಲ್ಲ, ಇಲ್ಲಿಗೆ ಹಿಂತಿರುಗಿದಂದಿನಿಂದ ನನಗೆ ಆರೋಗ್ಯನೇ ಅಷ್ಟೊಂದು ಸರಿಯಾಗಿಲ್ಲ ಕಣೋ. ಅದೇನ್ ಅಮೇರಿಕದಲ್ಲಿ ಸ್ವಚ್ಛತೆಯ ವಾತಾವರಣದಲ್ಲಿದ್ವೋ ಬಿಟ್ವೋ ಇಷ್ಟೊಂದು ವರ್ಷಾ, ಇಲ್ಲಿಗೆ ಬರ್ತಾ ಇದ್ದ ಹಾಗೆ ಪ್ರತಿದಿನವೂ ಬ್ಯಾಕ್ಟೀರಿಯಾ ವೈರಸ್ಸುಗಳ ವಿರುದ್ಧ ಸೆಣೆಸೋದೇ ಆಗಿದೆ ನೋಡು. ಒಂದಲ್ಲ ಒಂದು ರೀತಿಯ ಕಷ್ಟ, ನಾಲ್ಕು ದಿನ ನೆಟ್ಟಗಿದ್ರೆ ಇನ್ನು ನಾಲ್ಕು ದಿನ ಮಲಗಿರ್ತೀನಿ ಅನ್ನೋ ಹಾಗಿದೆ.’

’ಏ, ಇಂಡಿಯಾ ಅನ್ನೋ ವಾತಾವರಣದಲ್ಲೇ ಅಲ್ವೇ ನಾವು ಬೆಳೆದು ಬಂದಿರೋದು. ಮತ್ತೆ ಅಲ್ಲಿಗೆ ವಾಪಾಸ್ ಹೋಗಿ ಬದುಕೋದು ಯಾಕ್ ಕಷ್ಟಾ ಆಗುತ್ತೆ? ಈ ಪೊಲ್ಯೂಷನ್ನೂ ಮತ್ತಿನ್ನೊಂದು ಹಿಂದೆಯೂ ಇತ್ತು ಮುಂದೆಯೂ ಇರುತ್ತೆ ಅದರಲ್ಲೇನು ವಿಶೇಷ?’

’ಅಲ್ಲೇ ಇರೋದು ವಿಶೇಷ, ಈ ಪ್ರಪಂಚ ಬಹಳಷ್ಟು ಬೆಳೆದಿದೆ. ನಾವು ಹತ್ತು ವರ್ಷದ ಹಿಂದೆ ನೋಡಿದ ಪೊಲ್ಯೂಷನ್ನು ಇವತ್ತಿನ ಪೊಲ್ಯೂಷನ್ನಿಗೆ ಯಾವ ಹೋಲಿಕೆಯೂ ಅಲ್ಲ. ಜೊತೆಗೆ ಇಂದಿನ ಬೆಳೆದ ವಾತಾವರಣದಲ್ಲಿರೋ ಸ್ಟ್ರೆಸ್ಸೂ ಕಾರಣಾ ಅನ್ನು’.

’ಸ್ಟ್ರೆಸ್ಸೂ ಅಂದ್ರೆ...’

’ಅದೇ, ಬೆಳಿಗ್ಗೆ ಎಂಟು ಘಂಟೆಗೆ ಆಫೀಸಿಗೆ ಹೋದ್ರೆ ಸಂಜೆ ಎಂಟರ ಮೇಲಾಗುತ್ತೆ ಬರೋದು. ಈ ಟ್ರಾಫಿಕ್ ಜಾಮ್ ಅನ್ನೋ ನಕ್ಷತ್ರಿಕ ಯಾವನಿಗೂ ಬಿಡೋ ಹಾಗೇ ಕಾಣ್ಸಲ್ಲ. ದಿನಕ್ಕೆ ಒಟ್ಟಿಗೆ ಹದಿನಾಲ್ಕು ಘಂಟೆ ಒದ್ದಾಡೋದನ್ನ ವೃತ್ತಿ ಜೀವನ ಅಂತ ಕರೆಯೋದಕ್ಕೂ ಹೇಸಿಗೆ ಅನ್ಸುತ್ತೆ ನೋಡು. ಇಲ್ಲಿಗೆ ಬಂದು ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದುಕೊಂಡಿದ್ದ ಆಸೆಗಳೆಲ್ಲ ಬಲೂನಿಗೆ ಸೂಜಿ ಚುಚ್ಚಿದ ಹಾಗೆ ಠುಸ್ಸ್ ಎಂದು ಹೋದ್ವು. ಕೆಲವೊಂದು ಸರ್ತೀ ಅಂತೂ ಇಲ್ಲಿನ ಟ್ರಾಫಿಕ್ ಜಾಮಿಗೆ ಹೆದರಿ ಅಥವಾ ಅದನ್ನ ನೆನೆಸಿಕೊಂಡೇ ನಾನು ಎಷ್ಟೋ ಕಾರ್ಯಕ್ರಮಗಳಿಗೆ ಹೋಗೋದೇ ಇಲ್ಲ. ಅಲ್ಲಿಗೆ ಹೋದ್ರೂ ಪಾರ್ಕಿಂಗ್ ಮಾಡಿ ಗೆಲ್ತೀನೀ ಅಂತ ಇನ್ನೂವರೆಗೆ ನನಗೆ ಎಲ್ಲೂ ಖಾತ್ರಿ ಆಗಿದ್ದಿಲ್ಲ’.

’ಹೌದಾ, ಅಷ್ಟೊಂದು ಕಷ್ಟವೇ?’

’ಕಷ್ಟಾನಾ, ಇದಕ್ಕೆ ಕಷ್ಟಾ ಅಂತಂದ್ರೆ ಅದು ಒಂದು ಅಂಡರ್ ಸ್ಟೇಟ್‌ಮೆಂಟು’.

’ಅವೆಲ್ಲ ಇರ್ಲಿ, ಆಫೀಸ್ ವಾತಾವರಣ ಹೇಗಿದೆ?’

’ಇದರಲ್ಲಿ ಹೆಚ್ಚಿಗೆ ಬದಲಾದಂತೆ ಅನ್ಸಲ್ಲ, ಅವೇ ಮೈಂಡ್‌ಸೆಟ್ಟುಗಳು, ಜನರು ಎಲ್ಲೀವರೆಗೆ ಬದಲಾಗೋಲ್ವೋ ಅಲ್ಲೀವರೆಗೆ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ರೆಡ್ ಟೇಪಿಸ್ಸಮ್ಮು, ಡರ್ಟೀ ಪಾಲಿಟಿಕ್ಸೂ ಅಂತ ಅಮೇರಿಕದಲ್ಲಿ ಕರಿಯರಿಗೆ-ಬಿಳಿಯರಿಗೆ ನಾನು ಬೈದುಕೊಂಡಿದ್ದೇ ಬಂತು, ಇಲ್ಲಿ ನಡೆಯೋ ರಾಜಕೀಯ ಅವಾಂತರಗಳನ್ನ ನೋಡಿದ್ರೆ ಅಲ್ಲೇ ಎಷ್ಟೋ ವಾಸಿ ಅಂತ ಅನ್ಸುತ್ತೆ’.

’ವಿದೇಶದಲ್ಲಿ ಇಷ್ಟೊಂದು ವರ್ಷ ಅನುಭವ ಇದೆ ಅಂತ್ಲೂ ನಮ್ಮಂತೋರಿಗೆ ಬೆಲೆ ಸಿಗೋದಿಲ್ವೇನು?’

’ಓಹ್ ಸಿಗುತ್ತೆ, ಯಾಕ್ ಸಿಗಲ್ಲ. ಆದ್ರೆ ನೀನು ಹತ್ತು ಅಂದ್ರೆ ಜನ ಇಪ್ಪತ್ತು ಅನ್ನೋರ್ ಸಿಕ್ಕೇ ಸಿಗ್ತಾರೆ ಎಲ್ಲ್ ಹೋದ್ರೂ. ಜೊತೆಗೆ ಕೇವಲ ಎಕ್ಸ್‌ಪೀರಿಯೆನ್ಸ್ ಅಳತೇ ಮೇಲೆ ನಿನಗೇನೂ ಸಿಗೋದಿಲ್ಲ, ಯಾವ ಅನುಭವ ಎಲ್ಲಿ ಹೇಗಿತ್ತು ಅನ್ನೋದರ ಮೇಲೆ ಬಹಳಷ್ಟು ನಿರ್ಧಾರವಾಗುತ್ತೆ’.

’ಅದೆಲ್ಲ ಇರ್ಲಿ, ಮನೆಯವ್ರು, ಮಕ್ಳಾದ್ರೂ ಆರಾಮಾಗಿದ್ದಾರಾ?’

’ಹ್ಞೂ, ಒಂದು ರೀತಿ ಅವರೇ ಅರಾಮಾಗಿರೋರು ನನಗಿಂತ. ಒಂದು ಕಾಲ್ದಲ್ಲಿ ಇಂಡಿಯಾ ಮುಖವನ್ನ ನೋಡದ ಮಕ್ಳು ಇಲ್ಲಿಗೆ ಹೊಂದಿಕೋತಾರಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇವತ್ತು ಅವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದಾರೆ, ಕಷ್ಟಾ ಬಂದಿರೋದೇ ನನಗೆ ನೋಡು...

’ಅದೇನ್ ಅಂತಾ ಕಷ್ಟಾ?’

’ಅದೇ, ಅಮೇರಿಕದಲ್ಲೂ ಮೈ ತುಂಬಾ ಸಾಲಾ ಮಾಡ್ಕೊಂಡು ಮಾರ್ಟ್‌ಗೇಜ್ ಕೊಟಗಂಡು ಮನೆಯಲ್ಲಿದ್ವಿ, ಇಲ್ಲಿ ಬಂದು ನೋಡಿದ್ರೆ ಒಂದು ಸಾಧಾರಣ ಮನೆ ಕಟ್ಸೋಕೇ ಒಂದು ಕೋಟಿ ರೂಪಾಯ್ ಅಂತಾರೆ - ಕಾಲು ಮಿಲಿಯನ್ ಅಮೇರಿಕನ್ ಡಾಲರ್ ನನ್ಹತ್ರ ಇದ್ದಿದ್ರೆ ಇಷ್ಟೊತ್ತಿಗೆ ನಾನು ಇಲ್ಯಾಕ್ ಇರ್ತಿದ್ದೆ? ಜೊತೆಗೆ ಸೈಟ್ ಅಂತ ಒಂದು ಇದ್ರೆ ಪುಣ್ಯ, ಇಲ್ಲ ಅಂದ್ರೆ ಇನ್ನೊಂದು ಐವತ್ತು ಲಕ್ಷವಾದ್ರೂ ಹೋಗುತ್ತೆ. ಎಲ್ಲಿಂದ ತರೋದು ಇಷ್ಟೊಂದು ದುಡ್ಡು? ಅದಕ್ಕೇ ಇಲ್ಲಿನ ಬ್ಯಾಂಕುಗಳ ಮೊರೆ ಹೋಗಿ ಮೈ ತುಂಬಾ ಸಾಲಾ ಮಾಡ್ಕೊಂಡಿದ್ದೀನಿ. ಅದರ ಫಲವೇ ನನ್ನ ಅಹರ್ನಿಶಿ ದುಡಿಮೆ, ಹೀಗೇ ಸಾಲಾ-ದುಡಿಮೆಯ ಚಕ್ಕರದಲ್ಲಿ ಮುಳುಗಿ ಹೋಗಿದ್ದೇನೆ ನೋಡು’.

’ಅಷ್ಟೊಂದು ವರ್ಷ ಅಮೇರಿಕದಲ್ಲಿದ್ರೆ ಸ್ವಲ್ಪವೂ ದುಡ್ಡು ಹುಟ್ಟೋಲ್ವೇ, ಉಳಿಯೋಲ್ವೇ?’

’ಇರುತ್ತೆ ಯಾಕಿಲ್ಲ? ಅವುಗಳೆಲ್ಲ ಒಂದಲ್ಲ ಒಂದು ಕಡೆ ಈಗಾಗ್ಲೇ ತೊಡಗಿಕೊಂಡಿರುತ್ತೆ, ಇಲ್ಲಾ ಅಂತಂದ್ರೂ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲಿಡಬೇಕು ಅಂತಂದ್ರೆ ಅಮೇರಿಕದಲ್ಲಿ ಪೇ ಚೆಕ್ ನಿಂದ ಪೇ ಚೆಕ್ ಗೆ ದುಡಿಯೋರ್ ಹತ್ರ ಕಷ್ಟ ಸಾಧ್ಯವೇ ಸರಿ. ಏನೇ ಅಂದ್ರೂ ಮಿಲಿಯನ್ ಡಾಲರ್ ಯಾವನ ಹತ್ರ ಇದೆ ನೀನೇ ಹೇಳು’.

’ಮತ್ತೇ, ಅಮೇರಿಕದಲ್ಲಿರೋರು ಇಂಡಿಯಾಕ್ ಬರ್ತೀವಿ ಅಂತಂದ್ರೆ ನೀನ್ ಅವರಿಗೆ ಹೇಳೋದೇನಾದ್ರೂ ಇದೆಯೇನು?’

’ಶೂರ್, ದಿನಕ್ಕೆ ಹದಿನಾಲ್ಕು ಘಂಟೆ ದುಡಿದು ಸಾಲದ ಚಕ್ಕರದಲ್ಲಿ ಬೀಳೋ ಹಾಗಿದ್ರೆ ನೀವ್ ಎಲ್ಲಿರ್ತೀರೋ ಅಲ್ಲೇ ಇರ್ರಿ, ಅದರ ಬದ್ಲಿ ಒಂದು ಸಣ್ಣ ಊರಲ್ಲಿ ಒಂದು ಉದ್ಯಮವನ್ನ ಶುರು ಹಚ್ಚಿಕೊಂಡು ನಿಮಗೆ ನೀವೇ ಬಾಸ್ ಆಗೋ ಹಾಗಿದ್ರೆ ಇಲ್ಲಿಗೆ ಬನ್ನಿ! ಇಲ್ಲೂ-ಅಲ್ಲಿಗೂ ಏನೂ ವ್ಯತ್ಯಾಸವಿಲ್ಲ ಅನ್ನೋದು ಒಳ್ಳೆಯದೋ ಕೆಟ್ಟದ್ದೋ ಅನ್ನೋದೂ ಅವರವರಿಗೆ ಬಿಟ್ಟಿದ್ದು ಅಂತ್ಲೂ ಹೇಳ್ತೀನಿ.

’ಮತ್ತೇ, ಎಲ್ರೂ ಬೆಂಗಳೂರಿಗೇ ಬರ್ತಾರೇ ಅಂತ ಕೇಳ್ದೆ...’

’ಅದೂ ನಿಜವೇ, ಎಲ್ರೂ ಇಲ್ಲೇ ಬಂದು ಸಾಯೋದ್ರಿಂದ್ಲೇ ಬೆಂಗಳೂರಿನವರಾದ ನಮಗೆ ಈ ಕಷ್ಟ ಬಂದಿರೋದು...ನನ್ನ ಕೇಳಿದ್ರೆ ಇಂಡಿಯಾದಲ್ಲಿ ಬೇರೆ ಊರುಗಳೇ ಇಲ್ವೇ, ಅಲ್ಲಿಗೆ ಹೋಗ್ಲಿ’ .

***

ನಮ್ಮನೆಯ ಮಲ್ಲಿಗೆಯ ಗಿಡದ ಎಲೆಗಳು ಇಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಬಲಿತ ಸೂರ್ಯ ರಶ್ಮಿಯಲ್ಲಿ ತೋಯ್ದು ಹೋಗಿದ್ದವು. ಗಾಳಿ ಬೀಸುತ್ತೆ ಬೆಳಕು ಬೀಳುತ್ತೆ ಮೈ ಮೇಲೆ ಮಂಜು ಕೂರುತ್ತೆ, ಅದು ನಿಸರ್ಗ ನಿಯಮ ಅನ್ನೋ ಉಪದೇಶ ಸಾರುವ ಮುಖವನ್ನು ಮಾಡಿಕೊಂಡಿದ್ದವು. ಅವುಗಳ ವೈರಾಗ್ಯ ಮನಸ್ಸಿನ ನೆರಳಿನಲ್ಲಿ ಇವತ್ತಲ್ಲ ನಾಳೆ ಎಲ್ಲವೂ ಸರಿ ಹೋಗೇ ಹೋಗುತ್ತೆ ಎನ್ನುವ ಛಾಯೆ ಕಂಡು ಬರುತ್ತಿತ್ತು. ಅದನ್ನ ಆಶಾಭಾವನೆ ಅನ್ನೋಣವೇ ಅಥವಾ ಬದುಕಿನ ಯೋಜನೆ ಎಂದು ಕರೆದುಕೋಳ್ಳೋಣವೇ ಎಂದು ಎಲೆಗಳ ನಡುವೆ ಇನ್ನೇನು ವಾದ ಏಳುವ ಹುರುಪು ಕಂಡುಬರುತ್ತಿತ್ತು.

Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

Saturday, December 29, 2007

ಕ್ರಿಸ್‌ಮಸ್ ಲೈಟೂ ಕ್ಲೀನ್ ಶೇವನ್ ಡ್ಯಾಡೂ...

೨೦೦೧ ನೇ ಸೆಪ್ಟೆಂಬರ್ ಹೊತ್ತಿಗೆ ನಾವಿನ್ನೂ ವಾಷಿಂಗ್ಟನ್ ಡಿಸಿ ಪ್ರಾಂತ್ಯದ ಹತ್ತಿರವೇ ಇದ್ದೆವು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಿಂದ ಡಿಸಿಯ ಜಾರ್ಜ್‌ಟೌನ್ ಯೂನಿವರ್ಸಿಟಿಗೆ ರೆಫೆರೆನ್ಸ್ ಪುಸ್ತಕಗಳಿಗೆಂದು ಹೋಗುತ್ತಿದ್ದ ನಮಗೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮುಸ್ಲಿಮ್ ಯುವಕ ಯಾವಾಗಲೂ ಕಣ್ಣಿಗೆ ಬೀಳುತ್ತಿದ್ದ. ಈತ ನಮಗೆ ಬೇಕಾದಷ್ಟು ಸಲ ನಾವು ಡಿಸಿ ಗೆ ಹೋಗುವ ಟ್ರೈನ್‌ನಲ್ಲಿ ಸಿಕ್ಕಿದ್ದೂ ಇದೆ. ಅಮೇರಿಕಾದ ಮೇಲೆ ಸೆಪ್ಟೆಂಬರ್ ೧೧ರ ಭಯೋತ್ಪಾದಕರ ಧಾಳಿ ನಡೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ಹೇಟ್‌ಕ್ರೈಮ್‌ಗಳ ಬಗ್ಗೆ ವರದಿಗಳು ಬರುತ್ತಿದ್ದು, ಸ್ಥಳೀಯರ ಹಾಗೆ ಎಷ್ಟೋ ಜನ ಭಾರತ ಅಥವಾ ಇತರೆ ದೇಶದ ಮೂಲದಿಂದ ಬಂದವರು ತಮ್ಮ ತಮ್ಮ ಕಾರು ಮನೆಯ ಮುಂದೆ ಅಮೇರಿಕನ್ ಧ್ವಜವನ್ನು ಹಾಕಿಕೊಳ್ಳುತ್ತಿದ್ದುದೂ ಕಂಡು ಬರುತ್ತಿದ್ದವು. ಸ್ಥಳೀಯರು ಸಾಲಿಡ್ಯಾರಿಟಿಗೆಂದು ಅಮೇರಿಕ ಧ್ವಜಗಳನ್ನು ತಮ್ಮ ಕಾರಿಗೆ ತಗುಲಿಸಿಕೊಂಡಿದ್ದರೆ ವಲಸೆ ಬಂದವರು ಹಲವಾರು ಕಾರಣಗಳಿಗೆ ಆ ರೀತಿ ತೋರಿಸಿಕೊಳ್ಳುತ್ತಿದ್ದುದು ಎದ್ದು ಕಾಣುತ್ತಿತ್ತು. ಯಾರೇ ತಮ್ಮ ತಮ್ಮ ಸ್ವರೂಪಗಳಲ್ಲಿ ಅದೇನೇ ಬದಲಾವಣೆಗಳನ್ನು ಮಾಡಿಕೊಂಡರೂ ಈ ಲೈಬ್ರರಿಯಲ್ಲಿ ಕೆಲಸ ಮಾಡುವ ಯುವಕ - ಆರು ಅಡಿಗಿಂತಲೂ ಎತ್ತರದ ನಿಲುವು, ಉದ್ದನೆಯ ಗಡ್ದದಾರಿ, ಯಾವಾಗಲೂ ಬಿಳಿ ನಿಲುವಂಗಿ (ಕುರ್ತಾ) ಧರಿಸಿರುವ, ಅವನದ್ದೇ ಆದ ಆಳವಾದ ಶುಭ್ರ ಕಣ್ಣುಗಳಲ್ಲಿ ಅದಮ್ಯ ಶಾಂತಿಯನ್ನು ಅಡಗಿಸಿಕೊಂಡು - ತಾನಾಯಿತು ತನ್ನ ಕೆಲಸವಾಯಿತು ಎಂದು ಬಾಹ್ಯ ನೋಟಕ್ಕೆ ನಿರ್ಲಿಪ್ತವಾಗಿದ್ದುದು ನನಗಂತೂ ಬಹಳ ಆಶ್ಚರ್ಯವನ್ನುಂಟುಮಾಡಿತ್ತು. ಆಗಷ್ಟೇ ಮಾಧ್ಯಮಗಳಲ್ಲಿ ತೋರಿಸುತ್ತಿದ್ದ ಬಿನ್ ಲಾಡೆನ್ ಚಿತ್ರಗಳಿಗೂ ಈ ಯುವಕನ ಗುರುತಿಗೂ ಬಹಳಷ್ಟು ಸಾಮ್ಯತೆಗಳಿದ್ದವು. ಅಪರೂಪಕ್ಕೆ ಟ್ರೈನ್‌ನಲ್ಲಿ ಸಿಕ್ಕುವ ಈತನನ್ನು ಸುತ್ತಲಿನ ಜನರು ಕಣ್ಣಿಟ್ಟು ನೋಡುವುದನ್ನು ನೋಡಿ ನನಗೇ ಮುಜುಗರವಾಗುತ್ತಿತ್ತು. ತನ್ನ ಸುತ್ತ ಮುತ್ತಲು ಅದೆಷ್ಟೇ ಕೋಲಾಹಲ ನಡೆದುಕೊಂಡಿದ್ದರೂ ಈತ ತನ್ನತನವನ್ನು ಬಿಡದೇ ಸಹಜವಾಗಿದ್ದುದು ನನಗೆ ಇಂದಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ ಜೊತೆಗೆ ಆತನ ಮೇಲಿನ ಅಭಿಮಾನವೂ ಹೆಚ್ಚುತ್ತದೆ.

***

ನಾವು ಜರ್ಸಿ ಸಿಟಿಯಿಂದ ಪ್ಲಾಂಡರ್ಸ್‌ಗೆ ಬಂದ ವರ್ಷ ಇದು. ನಾವಿರುವ ಮನೆಯ ಮೂಲ ಓನರ್ ಕ್ರಿಸ್‌ಮಸ್ ಸಮಯದಲ್ಲಿ ಬಹಳ ಚೆನ್ನಾಗಿ ಮನೆಯ ಹೊರಗೆ ಮತ್ತು ಒಳಗೆ ಲೈಟ್ ಹಾಕಿ ಅಲಂಕಾರ ಮಾಡಿರುತ್ತಿದ್ದರಂತೆ. ನಮಗೆ ಗೊತ್ತಿರುವ ಎಷ್ಟೋ ಜನ ಸ್ಥಳೀಯರು - ’ನೀವು ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡುವುದಿಲ್ಲವೇ?’, ’ಹಿಂದಿನವರು ಚೆನ್ನಾಗಿ ಲೈಟ್ ಅಲಂಕಾರ ಮಾಡಿರುತ್ತಿದ್ದರು!’ ಎನ್ನುವ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಥ್ಯಾಂಕ್ಸ್‌ಗಿವಿಂಗ್ ಗಿಂತಲೂ ಮುಂಚೆಯೇ ಬರುವ ದೀಪಾವಳಿ ಸಂದರ್ಭದಲ್ಲಿ ನಾವು ಹೊರಗಡೆ ಹೊತ್ತಿಸಿದ ಲೈಟ್, ದೀಪಗಳನ್ನು ಪ್ರಶ್ನಿಸಿಯೂ ಇದ್ದಾರೆ. ನಮ್ಮ ನಂಬಿಕೆ ಸಂಪ್ರದಾಯಗಳ ಪ್ರಕಾರ ನಾವು ನಮ್ಮ ನಮ್ಮ ಹಬ್ಬ ಹರಿದಿನಗಳಿಗೆ ಬೇಕಾದ ಅಲಂಕಾರ ಮಾಡುವುದು ನಮಗೆ ಸೇರಿದ್ದು, ಜೊತೆಗೆ ನಮ್ಮ ನೆರೆಹೊರೆಯ ಆಚಾರ-ವಿಚಾರಗಳಿಗೆ ತಕ್ಕಂತೆ ಸ್ಪಂದಿಸಬೇಕಾದದ್ದೂ ನಮ್ಮ ಕರ್ತವ್ಯಗಳಲ್ಲೊಂದು ಎಂದು ನಂಬಿ ಥ್ಯಾಂಕ್ಸ್‌ಗಿವಿಂಗ್‌ನಿಂದ ಇಂದಿನವರೆಗೂ ಹೊರಗಡೆ ದೀಪಾಲಂಕಾರವನ್ನು ಮಾಡಿ ಅದನ್ನು ಉರಿಸಿಕೊಂಡೇ ಬಂದಿದ್ದೇವೆ. ಹಿಂದಿನ ಮನೆಯ ಮಾಲಿಕನಿಗೆ ಹೋಲಿಸಿದರೆ ನಮ್ಮ ಅಲಂಕಾರವೇನೂ ಇರಲಾರದು, ನಾವು ಕ್ರಿಸ್‌ಮಸ್ ಟ್ರೀ ಅನ್ನೂ ಇಟ್ಟಿಲ್ಲ ಆದರೆ ನಮ್ಮ ಕೈಲಾದಂತೆ ಸುತ್ತಲಿನವರಲ್ಲಿ ಒಂದಾಗಿ ಇರುವ ಪ್ರಯತ್ನವಷ್ಟೇ.

***

ನಮ್ಮ ಆಫೀಸಿನಲ್ಲಾಗಲೀ ಅಥವಾ ಹೊರಗಡೆ ಮತ್ತಿನ್ನೆಲ್ಲಾದರೂ ಸರದಾರ್‌ಜೀ ಗಳನ್ನು ನೋಡಿದಾಗ ಅವರ ಮೇಲೆ ಪ್ರಶಂಸೆಯೂ ಹಾಗೂ ಹಲವಾರು ಪ್ರಶ್ನೆಗಳು ಮನದಲ್ಲೇಳುತ್ತವೆ. ನಿಜವಾಗಿಯೂ ಪಗಡಿ ಧಾರಣೆ ಮಾಡಿರುವ ಮೀಸೆ-ಗಡ್ಡ-ತಲೆ ಕೂದಲನ್ನು ಹುಟ್ಟಿದಂದಿನಿಂದ ಬೋಳಿಸದಿರುವ ಇವರನ್ನು ತಮ್ಮ ಸಂಪ್ರದಾಯ ಹಾಗೂ ತಮ್ಮ ನೆರೆಹೊರೆ ಇವುಗಳ ನಡುವೆ ತೂಗಿ ನೋಡಿದಾಗ ದೈಹಿಕವಾಗಿ ಕೂದಲನ್ನು ಬೆಳೆಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಧರಿಸಿಕೊಂಡಿರುವುದು ಹುಟ್ಟಿದಂದಿನಿಂದ ಬಂದ ಅಭ್ಯಾಸವಾದರೂ ನಾವಿರುವ ನೆರೆಹೊರೆಯಲ್ಲಿ ’ಕ್ಲೀನ್‌ಶೇವನ್‍’ ಜನರಿಗೆ ಸಿಗುವ ಪ್ರಾಶಸ್ತ್ಯಗಳನ್ನು ನೋಡಿದಾಗ ಹಲವಾರು ರೀತಿಯಲ್ಲಿ ತರ್ಕಿಸಬಹುದು. ವಾಷಿಂಗ್ಟನ್ ಡಿಸಿಯ ಲೈಬ್ರರಿ ನೌಕರನಾಗಲೀ, ಅನ್‌ಶೇವನ್ ಸರ್ದಾರ್‌ಜೀಗಳಾಗಲೀ ನಿಜವಾಗಿಯೂ ತಮ್ಮ ಪರಂಪರೆಯನ್ನು ಪ್ರತಿಕ್ಷಣವೂ ಹೊತ್ತುಕೊಂಡೇ ತಿರುಗುತ್ತಾರೆ ಅನ್ನಿಸೋದಿಲ್ಲವೇ?

ನಾವು ಕಂಡ ನಮ್ಮ ದಕ್ಷಿಣ ಭಾರತದ ಆಚರಣೆ/ವಿಧಿಗಳ ಪ್ರಕಾರ ನಮ್ಮಲ್ಲಿನ ಗಂಡಸರು ಮುಖದ ಮೇಲೆ ಮೀಸೆಯೊಂದನ್ನು ಇಟ್ಟುಕೊಳ್ಳುವುದು ಸಹಜ. ಮೀಸೆಯ ಹೊರತಾಗಿ ಗಡ್ಡವೇನಾದರೂ ಇದ್ದರೆ ಅದು ರೋಗಿಗಳ, ವೈರಾಗಿಗಳ, ಸೋಮಾರಿಗಳ ಹಾಗೂ ಬುದ್ಧಿಜೀವಿಗಳ ಸೂಚಕವಾಗಿತ್ತಷ್ಟೇ. ನಮ್ಮಲ್ಲಿನ ಯುವಕರನ್ನು ಅವರು ಎಂದಾದರೂ ಮೀಸೆಯನ್ನು ಬೋಳಿಸಿಕೊಂಡರೆ ಉತ್ತರ ಭಾರತದ ಅಥವಾ ಹಿಂದಿ ಸಿನಿಮಾಗಳ ಹೀರೋಗಳಿಗೆ ಹೋಲಿಸಿ ಜನರು ಛೇಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈಗಲೂ ಸಹ ಅಮೇರಿಕದಲ್ಲಿಯೂ ದಕ್ಷಿಣ ಭಾರತ ಮೂಲದ ಯುವಕರು ಮೀಸೆಯನ್ನು ಇಟ್ಟುಕೊಂಡಿರುವುದು ನಮ್ಮ ಕಣ್ಣಿಗೆ ಬೀಳುತ್ತದೆ, ಅದರ ಮತ್ಯಾವುದೇ ವೇರಿಯೇಷನ್ನುಗಳೂ ಸಹ ಉಳಿದ ಕಡೆಗಳಿಂದ ಅವರವರು ಪಡೆದ ಇನ್‌ಫ್ಲುಯೆನ್ಸ್‌ಗಳ ಮೇಲೆ ಅವಲಂಭಿತವಾರುತ್ತದೆ. ಭಿನ್ನ ಪ್ರಪಂಚ ಹಾಗೂ ಸಂಸ್ಕೃತಿಯ ಸಂಗಮದಲ್ಲಿ ಬೆಳೆಯುವ ನಮ್ಮ ಮುಂದಿನ ತಲೆಮಾರಿಗೆ ಅನ್ನಿಸಬಹುದು - ನಮ್ಮ ತಂದೆಯೂ ಇಲ್ಲಿಯವರ ಹಾಗೆ ಕ್ಲೀನ್ ಶೇವನ್ ಯಾಕಿರಬಾರದೆಂದು. ಬಾಹ್ಯವಾಗೇಳುವ ಅಂತಹ ಪ್ರಶ್ನೆಗಳಿಗೆ ನಮ್ಮ ಮುಖದ ಮೀಸೆ ಏಕಿದೆ ಎಂದು ಹಲವಾರು ರೀತಿಯ ವಿವರವನ್ನು ಕೊಡಬಹುದಾದರೂ ಮನದೊಳಗಿನ ವ್ಯಾಪಾರವನ್ನು ನಾವು ಯಾವತ್ತಿಗೂ ನಿಯಂತ್ರಿಸಲಾಗೋದೇ ಇಲ್ಲ.

***

ನಾನೂ ಒಂದು ಕ್ರಿಸ್‌ಮಸ್ ಟ್ರೀ ಅನ್ನು ಇಡಬಲ್ಲೆ, ಅದನ್ನು ವಿಧವಿಧವಾಗಿ ಅಲಂಕಾರ ಮಾಡಬಲ್ಲೆ, ಅದನ್ನು ದುಡ್ಡಿನಿಂದಲೇ ಮುಚ್ಚಬಲ್ಲೆ, ಅದರ ಕೆಳಗೆ ಗಿಫ್ಟ್‌ಗಳನ್ನು ಥರಥರವಾಗಿ ಪೇಪರ್‌ಗಳಿಂದ ರ್ಯಾಪ್ ಮಾಡಿ ಅದನ್ನು ಸ್ಯಾಂಟಾಕ್ಲಾಸ್ ಹೆಸರಿನಲ್ಲಿ ಮಕ್ಕಳಿಗೆ ಹಂಚಬಲ್ಲೆ. ಆದರಿಂದ ನಮ್ಮ ಮನೆಯ ಕ್ರಿಸ್‌ಮಸ್ ಟ್ರೀಗೂ ಡಿಪಾರ್ಟ್‌ಮೆಂಟ್ ಸ್ಟೋರ್ ಕ್ರಿಸ್‌ಮಸ್ ಟ್ರೀಗೂ ಏನು ವ್ಯತ್ಯಾಸ ಉಳಿಯಿತು? ನಮ್ಮ ಮನೆಯಲ್ಲಿ ಅಲಂಕೃತಗೊಂಡ ಟ್ರೀ ನೋಡಲು ಚೆನ್ನಾಗಿರಬಹುದು, ಆದರೆ ಅದರಲ್ಲಿ ಯಾವುದೇ ಪರಂಪರೆಯಿಲ್ಲ, ಸಂಪ್ರದಾಯವಿಲ್ಲ, ಹಿನ್ನೆಲೆಯಿಲ್ಲ. ಶಾಲೆಯಲ್ಲಿ ನಮ್ಮ ಮಕ್ಕಳನ್ನು ಅವರ ಸಹಪಾಠಿಗಳು ಕೇಳಿಯಾರು ಎಂಬ ಒಂದೇ ಕಾರಣಕ್ಕೆ, ನಾವು ನಮ್ಮ ನೆರೆಹೊರೆಯವರಲ್ಲಿ ಮಿಳಿತವಾಗಿ ಬದುಕಬೇಕು ಎಂಬುದಕ್ಕೆ ನಾವು ಇನ್ನೂ ಏನೇನನ್ನು ತ್ಯಾಗ ಮಾಡಬೇಕು, ಎಷ್ಟರ ಮಟ್ಟಿಗೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ಅಮೇರಿಕದಲ್ಲೇ ಬೇಕಾದಷ್ಟು ಕಡೆ ಇರುವ ಭಾರತೀಯ ಮೂಲದ ಜನರು ಬೇಕಾದಷ್ಟು ಉತ್ತರಗಳನ್ನು ಕಂಡುಕೊಳ್ಳಬಹುದು. ನ್ಯೂ ಜೆರ್ಸಿ, ನ್ಯೂ ಯಾರ್ಕ್ ಅಂತ ಪ್ರದೇಶಗಳಲ್ಲಿ ಹೆಚ್ಚು ಜನರಿರುವ ದೇಸೀ ಸ್ಥಳಗಳಲ್ಲಿ ನಮ್ಮ ಆಚರಣೆಗಳಿಗೆ ಸಂವೇದನೆಗಳಿಗೆ ಆದ್ಯತೆ ಪ್ರಾಧಾನ್ಯತೆ ಸಿಕ್ಕರೆ ಅದೇ ಅಮೇರಿಕದ ಉಳಿದೆಡೆ ಹೆಚ್ಚು ಭಾರತೀಯರಿಲ್ಲದ ಕಡೆ ಅಂತಹ ಪ್ಲೆಕ್ಸಿಬಿಲಿಟಿ ಇರದೇ ಇರಬಹುದು. ನಾವೆಲ್ಲಿ ಹೋದರೂ ಅಲ್ಲಿಯವರಾಗಿರುವುದು ಒಂದು ರೀತಿಯ ಸೂಕ್ಷ್ಮ, ನಾವು ಭಿನ್ನರಾಗಿದ್ದುಕೊಂಡೇ ನಮ್ಮ ತನವನ್ನು ಬೆಳೆಸಿ ಪೋಷಿಸಿಕೊಂಡು ಹೋಗುವುದು ಮತ್ತೊಂದು ರೀತಿಯ ಅಗತ್ಯ.

ನಮ್ಮತನವೆನ್ನುವುದನ್ನು ನಾವು ಬಿಡುವುದೋ ಹಿಡಿದುಕೊಳ್ಳುವುದೋ ಎನ್ನುವುದು ಕೆಲವರಿಗೆ ಅನಿವಾರ್ಯತೆಯ ಪ್ರಶ್ನೆ, ಇನ್ನು ಕೆಲವರಿಗೆ ಅದು ಬದಲಾವಣೆಗಳ ಅಗತ್ಯ - ಬೇರೆಲ್ಲಿ ಹೇಗಾದರೂ ಇರಲಿ ನಮ್ಮ ಮನೆಯಲ್ಲಿನ ಅನ್-ಕ್ಲೀನ್‌ಶೇವನ್ ಡ್ಯಾಡ್ ಬದಲಾಗದಿದ್ದರೆ ಸಾಕು!