Showing posts with label ಅನುಭವ. Show all posts
Showing posts with label ಅನುಭವ. Show all posts

Sunday, June 14, 2020

ಓಡುವುದೇ ಗುರಿ...

ನಾವು ಗ್ರೇಡ್ ಸ್ಕೂಲಿನಲ್ಲಿದ್ದಾಗ ನಮಗೆ "ಪರೀಕ್ಷೆ" ಎನ್ನುವ ಈ ರೀತಿಯ ಒಂದು ಪದ್ಯ ಇತ್ತು...
ಸತ್ವವನು ಪರಿಕಿಸುವ ಸಮಯ ಬಂದಿಹುದು
ಬಲ ಕುಶಲ ಸಾಹಸಗಳಿವೆ ನೋಡು|
ಆರು ಯೋಜನ ನೀರನೀಜಿ ಬರಬಲ್ಯಾ?
ನೂರು ಮೈಲಿಯ ಓಟ ಓಡಬಲ್ಯಾ?
ಮದಿಸಿದ ಸಲಗವ ಕಟ್ಟಿ ಹಿಡಿಯಬಲ್ಯಾ?

ಇತ್ಯಾದಿ ಪ್ರಶ್ನೆಗಳಿಂದ ಕೊನೆಯಾಗುವ ಈ ಪರೀಕ್ಷೆಯ ಪರಿ ಬಹಳ ಇಷ್ಟವಾಗಿತ್ತು... ಇದರಲ್ಲಿ ವರ್ಣಿಸಿರುವ ಈ ಉಪಾದಿಗಳಲ್ಲಿ ಯಾವುದಾದರೊಂದನ್ನು ಯಾರಾದರೂ ಮಾಡುತ್ತಾರೆಯೇ ಎಂದು ಆಲೋಚಿಸಿ ಸೋಜಿಗಗೊಳ್ಳುವ ಕ್ಷಣಗಳನ್ನು ಅಂದಿನ ಕನ್ನಡ ತರಗತಿಗಳು ತಂದುಕೊಟ್ಟಿದ್ದವು.  ಈ ಎಲ್ಲ ಬಲ ಕುಶಲ ಸಾಹಸಗಳನ್ನು ಯೋಚಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ "ಓಡು"ವುದಕ್ಕೆ ಹೆಚ್ಚಿನ ಜನರು ಒಲವು ತೋರಿಸುತ್ತಾರಾದ್ದರಿಂದ, ಓಡುವುದನ್ನು ಕುರಿತು ಧೀರ್ಘವಾಗಿ ಆಲೋಚಿಸಿಕೊಂಡಾಗ ಈ ಲೇಖನ ಹುಟ್ಟಿತು.
***

ಕ್ರಿಸ್ತಪೂರ್ವ 490 ರಲ್ಲಿ ಗ್ರೀಸ್‌ನ ಫೈಡಿಪಿಡಿಸ್ ಎಂಬಾತ ಮ್ಯಾರಥಾನ ಪಟ್ಟಣದಿಂದ ರಾಜಧಾನಿ ಏಥೆನ್ಸ್‌ವರೆಗಿನ ದೂರ (26.2 ಮೈಲಿ ಅಥವಾ 42 ಕಿ.ಮಿ.) ದೂರವನ್ನು ಓಡಿ ಕ್ರಮಿಸಿದ.  ಗ್ರೀಕ್ ಸೈನಿಕರು ಪರ್ಶಿಯನ್‌ರ ವಿರುದ್ಧ ಗೆದ್ದ ಸಂದೇಶವನ್ನು ಸಾರುವುದು ಅವನ ಕೆಲಸವಾಗಿತ್ತು.  ಆ ದೂರವನ್ನು ಕ್ರಮಿಸಿ, ಅವನು ಓಡಿ ನಿತ್ರಾಣನಾದ್ದರಿಂದ ಸತ್ತು ಹೋದನೆಂದು ಪ್ರತೀತಿ ಇದೆ.  ಇದು ನಮ್ಮ ಆಧುನಿಕ "ಮ್ಯಾರಥಾನ್" ಎಂಬ ಕ್ರೀಡೆಗೆ ಹಿನ್ನೆಲೆ.  ಫೈಡಿಪಿಡಿಸ್ ಸತ್ತು ಹೋದನೆಂದು ಯಾರೂ ಹೇಳೋದಿಲ್ಲ, ಆದರೆ ಅವನ ನೆನಪಿಗಾಗಿ 26.2 ಮೈಲು ದೂರವನ್ನು ಕ್ರಮಿಸುವ ಓಟ ಇಂದಿಗೂ ಬಹಳ ಜನಪ್ರಿಯವಾಗಿದೆ.  ಅಷ್ಟೇ ಅಲ್ಲ, ದಿನೇ ದಿನೇ ಹೆಚ್ಚು ಹೆಚ್ಚು ಜನರನ್ನು ಓಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇಪ್ಪತ್ತಾರು ಮೈಲಿಯ ಮ್ಯಾರಥಾನ್ ಓಟ ಬಹಳ ಹೊತ್ತು ತೆಗೆದುಕೊಳ್ಳುತ್ತದೆ ಹಾಗೂ ಸರಿಯಾಗಿ ಟ್ರೈನಿಂಗ್ ಮಾಡದೇ ಓಡಲು ಸಾಧ್ಯವಿಲ್ಲ ಎಂಬಿತರ ಕಾರಣಗಳಿಗಾಗಿ ದೊಡ್ಡ ಮ್ಯಾರಥಾನ್ ಓಟದ ಕಸಿನ್‌ಗಳಾಗಿ ಅರ್ಧ ಮ್ಯಾರ್‌ಥಾನ್ (13.1 ಮೈಲು), 10ಕೆ (6.2 ಮೈಲು), 5ಕೆ (3.1 ಮೈಲು), ಇತ್ಯಾದಿಗಳೂ ಇವೆ.  ಮ್ಯಾರಥಾನ್ ಎನ್ನುವ ಕ್ರೀಡೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡ್ಯೊಯ್ಯುವ ನೆಲೆಯಲ್ಲಿ ಆಧುನಿಕ ಕ್ರೀಡಾಳುಗಳು, 50 ರಿಂದ 200 ಮೈಲಿಯ ದೂರದ ಅಲ್ಟ್ರಾ ಮ್ಯಾರಥಾನ್ ಎನ್ನುವ ಬಗೆಯನ್ನು ಕಂಡುಕೊಂಡಿದ್ದಾರೆ.  ಈ ಅಲ್ಟ್ರಾ ಮ್ಯಾರಥಾನ್‌ಗಳು ಕೆಲವೊಮ್ಮೆ ಕೆಲವು ದಿನಗಳ ವರೆಗೆ ನಡೆಯುವುದೂ ಉಂಟು (ರಾತ್ರಿ ಮತ್ತು ಹಗಲೂ ಸೇರಿ).

ಈ ಓಡುವುದರ ಹಿಂದಿನ ವಿಶೇಷತೆಯನ್ನು ತಿಳಿದುಕೊಳ್ಳೋಣ.  ಈ ಆಧುನಿಕ ಪ್ರಪಂಚದಲ್ಲಿ ಯಾರಾದರೂ ಏಕೆ 26 ಮೈಲಿಗಳ ದೂರವನ್ನು ಓಡುತ್ತಾರೆ, ಅದರಿಂದ ಸಿಗುವ ಮಜವೇನು? ಅದರ ಹಿಂದಿನ ರಹಸ್ಯವೇನು?

ಪ್ರಾಣಿ ಸಂಕುಲದಲ್ಲಿ ಎರಡು ಕಾಲಿನ ಮೇಲೆ ಓಡಾಡುವ ಅನೇಕ ಪಕ್ಷಿ-ಪ್ರಾಣಿ ಪ್ರಬೇಧಗಳಿದ್ದರೂ ಮನುಷ್ಯನಷ್ಟು ನೇರವಾಗಿ ನಿಲ್ಲುವಂತಹ ದೈಹಿಕ ಕ್ಷಮತೆ ಇನ್ನೊಂದು ಪ್ರಾಣಿಗೆ ವಿಕಾಸಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ಬಂದಿರಲಾರದು.  ಹುಟ್ಟುವಾಗ ಅತ್ಯಂತ ಅಸಹಾಯಕವಾಗಿ ಹುಟ್ಟುವ ನಾವು ಅದೆಷ್ಟು ಬೇಗ ನಮ್ಮ ದೈಹಿಕ ಸಮತೋಲನವನ್ನು ಕಂಡುಕೊಂಡು ನಿಲ್ಲುತ್ತೇವೆ.  ಒಮ್ಮೆ ನಿಂತೆವೆಂದರೆ ಓಡುವುದೇ ಗುರಿ... ಈ ಕಾರಣಕ್ಕಾಗಿಯೇ ಕವಿ ನಿಸಾರ್ ಅಹ್ಮದ್ ಅವರು ತರುಣ ಮಿತ್ರನಿಗೆ ಎಂಬ ಕವನದಲ್ಲಿ "ಓಡುವುದೇ ಗುರಿಯೇ? ಓಡುವುದಿರಲಿ, ನಡುನಡುವೆ ನಿಂತು ನೋಡುವ ತಾಳ್ಮೆಯೂ ನಿನಗೆ ಬರಲಿ" ಎಂದು ಹೇಳಿರಬೇಕು.  ಹಿಂದಿನ ಕಾಲದಲ್ಲಿ ಓಡುವುದು ನಿಜವಾಗಲೂ ಗುರಿಯಾಗಿದ್ದಿತು... ಗವಿಗಳಲ್ಲಿ ವಾಸಿಸುತ್ತಿದ್ದ ನಮ್ಮ ಪೂರ್ವಜರು ಪ್ರಾಣಿಗಳಿಗಿಂತ ಹೆಚ್ಚು ವೇಗವಾಗಿ ಓಡಬಲ್ಲವರಾಗಿದ್ದರು, ಅವರು ಅಂದಿನ ದಿನಗಳಲ್ಲಿ ಬೇಟೆಯಾಡಿ ಬದುಕಿದ್ದರಿಂದಲೇ ನಾವು ಇಂದಿಗೂ ಜೀವಂತವಾಗಿರುವುದು, ಅಷ್ಟೇ ಅಲ್ಲ, ನಮ್ಮ ವಂಶಾವಳಿಗಳಲ್ಲಿ ಓಡುವುದು ಸಹಜವಾಗಿರುವುದು... ಆದ್ದರಿಂದ ನಡೆಯಬಲ್ಲವರೆಲ್ಲ ಓಡಬಲ್ಲರು ಎಂದರೆ ತಪ್ಪೇನಿಲ್ಲ!  ಓಡುವುದಕ್ಕೋಸರವೆಂದೇ ಮಿಲಿಯನ್ನುಗಟ್ಟಲೆ ವರ್ಷಗಳ ? ಕಾಲಮಾನದಲ್ಲಿ ನಮ್ಮ ಶರೀರ ತಕ್ಕನಾಗಿ ಅನುವಾಗಿದೆ.  ನಮ್ಮ ದೈಹಿಕ ಸಮತೋಲನವನ್ನು ಕೇವಲ ಪುಟ್ಟ ಪಾದಗಳಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ನಾವು ನಿಲ್ಲುವ, ನಡೆಯುವ ಮತ್ತು ಓಡುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಕಾಸ ವಾದದಲ್ಲಿ ನಾವು ಹೇಗೆ ಬೆಳೆದು ಬಂದಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.

ಇಂದಿನ ಟೆಕ್ನಾಲಜಿ ಕೆಲಸಗಾರರು ಹೆಚ್ಚಿನ ಮಟ್ಟಿಗೆ ಆಫೀಸುಗಳಲ್ಲಿ ದಿನಕ್ಕೆ ಎಂಟು ಘಂಟೆ ಕೂತು ಮೀಟಿಂಗುಗಳಲ್ಲಿ ಕಳೆಯುವ ಅಭ್ಯಾಸಕ್ಕೆ ಒಗ್ಗಿಕೊಂಡು ಹೋಗಿದ್ದಾರೆ ಎನ್ನಬಹುದು.  ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ರೋಗಗಳಿಗೆ ನಾವು ದಕ್ಷಿಣ ಏಷ್ಯಾದ ಜನರು ಬಲಿಯಾಗುವುದನ್ನು ನಾವು ಅಂಕಿ-ಅಂಶಗಳಲ್ಲಿ ನೋಡಬಹುದು.  ಈ ನಿಟ್ಟಿನಲ್ಲಿ ಒಳಾಂಗಣ ಜಿಮ್‌ನಲ್ಲಿ ಟ್ರೆಡ್‌ಮಿಲ್ ಉಪಯೋಗಿಸಿಕೊಂಡಾಗಲೀ, ಅಥವಾ ಹೊರಾಂಗಣದಲ್ಲಿ ಒಂದು ಸುತ್ತು ಓಡಿದರಾಗಲೀ ದೇಹದ ನರನಾಡಿಗಳಲ್ಲಿ ಸಂವೇದನೆ ಉಂಟಾಗಿ ಓಡುವವರಿಗೆ ಒಂದು ರೀತಿಯ ಸ್ಪೂರ್ತಿ ಸಿಕ್ಕಂತಾಗುವುದು ಅವರ ಅನುಭವದ ಮಾತು.  ಕೆಲವರಿಗೆ ಓಡುವುದು ಒಂದು ರೀತಿಯ ಮೆಡಿಟೇಷನ್‌ಗೆ ಸಮನಾದರೆ, ಇನ್ನು ಕೆಲವರಿಗೆ ಓಡುವುದು ಒಂದು ರೀತಿಯ "ಕೆಲಸ", ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸುವ ಆತುರ.  ಇನ್ನು ಕೆಲವರಿಗೆ ಹೊರಗಡೆ ನಿಸರ್ಗದ ಜೊತೆಗೆ ಬೆರೆಯುವ ಒಂದು ಅವಕಾಶ.  ಕೆಲವರು ಸೂರ್ಯೋದಯಕ್ಕೂ ಮೊದಲಿನ ಸದ್ದಿಲ್ಲದ, ತಣ್ಣಗಿನ ವಾತಾವರಣವನ್ನು ಆಯ್ದುಕೊಂಡರೆ, ಇನ್ನು ಕೆಲವರು ಸಂಜೆಯ ಹೊತ್ತನ್ನು ಆರಿಸಿಕೊಳ್ಳುವುದುಂಟು.

ಓಡುವುದರಿಂದ ಉಪಯೋಗಗಳು ಎಷ್ಟೋ, ಸರಿಯಾದ ರೀತಿಯಲ್ಲಿ ಓಡದಿದ್ದರೆ ಅದರಿಂದ ಅಷ್ಟೇ ಅನಾನುಕೂಲಗಳೂ ಇವೆ.  68 ಕೆಜಿ (150 ಪೌಂಡ್) ತೂಕ ಇರುವ ಒಬ್ಬ ವ್ಯಕ್ತಿ ಹತ್ತು ನಿಮಿಷಕ್ಕೆ ಒಂದು ಮೈಲು ಓಡುತ್ತಾ ಆರು ಮೈಲು (ಒಂದು ಘಂಟೆಯಲ್ಲಿ) ದೂರವನ್ನು ಓಡಿದರೆ ಸುಮಾರು 750 ಕ್ಯಾಲೊರಿ ಖರ್ಚು ಮಾಡಿದಂತಾಗುತ್ತದೆ.  ಇದೇ ಸಮಯದಲ್ಲಿ, ಆ ವ್ಯಕ್ತಿಯ ಹೃದಯದ ಬಡಿತ ಕೂಡ ಎರಡರಷ್ಟು ವೇಗವಾಗಿ ಹೊಡೆದುಕೊಳ್ಳತೊಡಗುತ್ತದೆ.  ಹೀಗೆ, ದೇಹವನ್ನು ಅತಿಯಾಗಿ "ಶಿಕ್ಷಿಸುವ" ಕಾಯಕವಾದ ಓಡುವಿಕೆ, ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲ.  ಅಕಸ್ಮಾತ್, ತನಗೆ ಗೊತ್ತಿಲ್ಲದೇ ಹೃದಯ ಸಂಬಂಧಿ ಖಾಯಿಲೆಗೆ ತೊಡಗಿದ ವ್ಯಕ್ತಿ, ಸ್ಥಳದಲ್ಲೇ ಸತ್ತು ಹೋಗುವ ಅಪಾಯವಿದೆ.  ಆದ್ದರಿಂದ, ಓಡುವ ಇಷ್ಟ ಇರುವ ಯಾರಾದರೂ ತಮ್ಮ ಓಡುವ ವೇಗ ಹಾಗೂ ದೂರವನ್ನು ನಿಧಾನವಾಗಿ ಹೆಚ್ಚಿಸಿಕೊಂಡು ತಮ್ಮ ಫಿಟ್‌ನೆಸ್ ಅನ್ನು ಪರೀಕ್ಷಿಸಿಕೊಳ್ಳುವುದು ಸಾಮಾನ್ಯ.

ಮೊದಮೊದಲು ಅರ್ಧ, ಒಂದು, ಎರಡು... ಮೂರು ಹೀಗೆ ನಿಧಾನವಾಗಿ ಮೈಲುಗಳನ್ನು ಓಡುತ್ತಾ ಬಂದಾಗ ದೇಹಕ್ಕೆ ಅಭ್ಯಾಸವಾಗತೊಡಗಿ ನಿಧಾನವಾಗಿ ದಿನೇದಿನೇ ಮೈಲುಗಳು ಹೆಚ್ಚುತ್ತಾ ಹೋಗುತ್ತವೆ.  ಹೀಗೆ ಒಂದೆರಡು ವರ್ಷ ವಾರಕ್ಕೆ ಕನಿಷ್ಥ ಪಕ್ಷ ಮೂರು ಬಾರಿಯಾದರೂ ಓಡುತ್ತಾ ಹೋದರೆ ಆಗ ಮ್ಯಾರಥಾನ್ ಓಡುವಷ್ಟು ಆತ್ಮವಿಶ್ವಾಸ ಮೂಡುತ್ತದೆ.  ಓಡುವುದಕ್ಕೆ ಅನುವಾಗುವಲ್ಲಿ ದೇಹದ ಕೆಲಸ ಎಷ್ಟು ಮುಖ್ಯವೋ ಮನಸ್ಸಿನ ಕೆಲಸವೂ ಅಷ್ಟೇ ಮುಖ್ಯ.  ಅವರೆಡರ ತಾಳಮೇಳವಿಲ್ಲದಿದ್ದಲ್ಲಿ ಒಂದು ಮೈಲು ಓಡುವುದೂ ಅಸಾಧ್ಯವಾದೀತು.
***

ನಾನೇಕೆ ಓಡುತ್ತೇನೆ?
ಈ ಪ್ರಶ್ನೆಯನ್ನು ಕೇಳಿಕೊಂಡಾಗಲೆಲ್ಲ ಅನೇಕ ಉತ್ತರಗಳು ಹೊಳೆಯುತ್ತವೆಯಾದರೂ, ಅವುಗಳಲ್ಲೆಲ್ಲಾ ಮುಖ್ಯವಾದುದು "ಅದು ಒಂದು ರೀತಿಯ ಮೆಡಿಟೇಶನ್ ಇದ್ದ ಹಾಗೆ".  You compete against yourself and you meditate as you run!


***
ಕಳೆದ ವರ್ಷ (2019) ಉತ್ತರ ಅಮೇರಿಕದಲ್ಲಿ ಮ್ಯಾರಥಾನ್ ಓಟವನ್ನು ಪೂರೈಸಿದವರ ಸಂಖ್ಯೆ:

    MonthRacesFinishers
    January4028,589
    February4614,220
    March7146,252
    April7355,060
    May8642,352
    June6123,344
    July259,012
    August426,744
    September9419,964
    October107122,194
    November6190,903
    December2941,050

    2019 gÀ°è 53,518 d£ÀgÀÄ £ÀÆå AiÀiÁPïð ¹n ªÀiÁågÀxÁ£ï C£ÀÄß ¥ÀÇgÉʹzÀgÀÄ.
    GvÀÛgÀ CªÉÄÃjPÀzÀ mÁ¥ï 10 ªÀiÁågÀxÁ£ï NlªÀ£ÀÄß DAiÉÆÃf¹zÀ £ÀUÀgÀUÀ¼ÀÄ ºÁUÀÆ ¥ÀÇgÉʹzÀªÀgÀÄ.

    RaceFinishers
    New York City Marathon53,518
    Chicago Marathon45,858
    Boston Marathon26,632
    Los Angeles Marathon20,081
    Honolulu Marathon18,804
    Marine Corps Marathon18,357
    Walt Disney World Marathon11,968
    Philadelphia Marathon10,068
    California International Marathon7,504
    Twin Cities Marathon6,747

    NqÀ®Ä DtªÁVgÀĪÀ d£À¸ÁUÀgÀ!

    Monday, June 01, 2020

    ಕೆಲಸಕ್ಕೆ ಜನರಿಲ್ಲ!



    ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


    1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

    2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

    ***



    ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

    ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

    ***

    ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

    ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

    ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

    ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

    ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

    ***
    ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

    ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

    ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

    ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.

    Thursday, May 21, 2020

    ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

    ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

    ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

    ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

    "ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

    ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

    ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

    ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

    ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

    ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

    ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

    ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

    Wednesday, May 13, 2020

    Time ಇದ್ರೆ Photo organize ಮಾಡಿ!

    ಹೆಚ್ಚು ಜನರಿಗೆ ಈಗ ನೆನಪಿನಲ್ಲಿರಲಿಕ್ಕಿಲ್ಲ... ಒಂದು ಕಾಲದಲ್ಲಿ ನಾವೂ ಸಹ ಕ್ಯಾಮೆರಾದಲ್ಲಿ ರೀಲುಗಳನ್ನು ಹಾಕಿ ಮತ್ತೆ ಅವುಗಳನ್ನ ಡೆವಲಪ್ ಮಾಡಿ, ಬೇಕಾದ ಚಿತ್ರಗಳನ್ನು ಪ್ರಿಂಟ್ ಹಾಕಿಸಿಕೊಂಡು ನೋಡುತ್ತಿದ್ದೆವು.  ಆದರೆ, ಒಮ್ಮೆ ಡಿಜಿಟಲ್ ಕ್ಯಾಮೆರಾ ಪ್ರಪಂಚ ತೆರೆದುಕೊಂಡ ಮೇಲೆ,  ರೀಲುಗಳು ಮತ್ತು ರೀಲು ಹಾಕುವ ಕ್ಯಾಮೆರಾಗಳು ಔಟ್‌ಡೇಟೆಡ್ ಆದವು.  ಜೊತೆಗೆ ಡಿಜಿಟಲ್ ಕ್ಯಾಮೆರಾದ ಮತ್ತೊಂದು ಕೊಡುಗೆಯೆಂದರೆ ಎಲ್ಲರ ಮನೆಯಲ್ಲೂ ಅಗಾಧವಾಗ ಚಿತ್ರ ಸಂಗ್ರಹಗಳು.  ರೀಲು ಹಾಕುತ್ತಿದ್ದಾಗ ನಾವುಗಳು ಎಷ್ಟು ಕ್ಲಿಕ್ ಮಾಡಬೇಕು, ಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆವು... ಆದರೆ, ಡಿಜಿಟಲ್ ಕ್ಯಾಮೆರಾದ ಶಕ್ತಿಯೆಂದರೆ ಎಷ್ಟು ಸಾಧ್ಯವೋ ಅಷ್ಟು ಪಿಕ್ಚರುಗಳನ್ನು ತೆಗೆಯೋದು... ನಂತರ ಅವುಗಳನ್ನು ಸರಿಯಾಗಿ ಆರ್ಗನೈಜ್ ಮಾಡಿ ಇಡದೇ ಇದ್ದರೆ, ಬೇಕಾದ ಚಿತ್ರ ಯಾವಾಗ ಬೇಕೋ ಆಗ ಸಿಗದೇ ತೊಂದರೆಯಾಗೋದು.  ಜೊತೆಗೆ, ಕೆಲವೊಮ್ಮೆ ಕಂಪ್ಯೂಟರ್ ಹಾರ್ಡ್‌ಡ್ರೈವ್ ಅಥವಾ ಸ್ಟೋರೇಜ್ ಏನಾದ್ರೂ ಫೇಲ್ ಆದ್ರೆ, ಹಳೆಯದೆಲ್ಲ ಚಿತ್ರಗಳನ್ನು ಕಳೆದುಕೊಳ್ಳುವುದೂ ಆಗಿ ಹೋಗಿ ಹೋಗಿದೆ.

    ಹೀಗೆ, ಕೋವಿಡ್‌ಮಯವಾದ ಈಗಿನ ದಿನಗಳಲ್ಲಿ ಮಾಡುವುದಕ್ಕೆ ಏನಾದರೂ ಕೆಲಸವೊಂದಿರಬೇಕಲ್ಲ? ಅದಕ್ಕೋಸ್ಕರ ಕಳೆದ ಎರಡು ದಿನಗಳಿಂದ ಹಳೆಯ ಫೋಟೋಗಳನ್ನೆಲ್ಲ ಹರಡಿಕೊಂಡು ಕುಳಿತುಕೊಂಡಿದ್ದೇನೆ.  ಅದನ್ನು ಆರ್ಗನೈಜ್ ಮಾಡುವುದು ಹೇಗೆ ಎಂದು ಗಮನಿಸಿದಾಗ ಫೋಟೋ ಅರ್ಗನೈಜ್ ಮಾಡುವುದರ ಬಗ್ಗೆ ಓದುತ್ತಾ ಹೋದೆ.  ಅದರಲ್ಲೂ ಆರ್ಗನೈಜ್ ಮಾಡುವುದಕ್ಕೆ ಯಾವ ಯಾವ ಸಾಫ್ಟ್‌ವೇರ್‌ಗಳಿವೆ ಎಂದು ಹುಡುಕಿದಾಗ ಈ ಸೈಟು ದೊರೆಯಿತು, 25 photo organizing software & apps ಅದರಲ್ಲೂ ಮತ್ತೆ ಕೆದಕುತ್ತಾ ಹೋದ ಹಾಗೆ ಈ ಕೆಳಗಿನ ಫ್ರೀ ಸಾಫ್ಟ್‌ವೇರ್/ಅಪ್ಲಿಕೇಶನ್‌ಗಳು ಕಣ್ಣಿಗೆ ಬಿದ್ದವು:

    Adobe bridge
    StudioLine
    DigiKam
    Nomacs
    Apple Photos (Mac)
    Mylio
    ಮತ್ತು
    Google Photos

    ಗೂಗಲ್ ಫೋಟೋಸ್ ಫ್ರೀ ಇರಬಹುದು, ಆದರೆ ಈ ದೊಡ್ಡ ಮನುಷ್ಯರ ಸಹವಾಸ ಬೇಡ, ಎಂದು ಸಣ್ಣ ಕಂಪನಿಗಳ ಪ್ರಾಡಕ್ಟ್‍ಗಳನ್ನು ನೋಡುತ್ತಾ ಅವುಗಳ ರಿವ್ಯೂ ಓದುತ್ತಾ ಸಮಯ ಕಳೆದೆ.  ಅಡೋಬಿ ಬ್ರಿಜ್ ಕೂಡಾ ಅಷ್ಟೊಂದು ಇಷ್ಟವಾಗಲಿಲ್ಲ.  ಅಲ್ಲದೇ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಕೆಲಸ ಮಾಡುವ ಅಪ್ಲಿಕೇಶನ್ ಬೇಕಾಗಿದ್ದರಿಂದ, ಇದ್ದವುಗಳಲ್ಲಿ Mylio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದೆ.

    ಅದಕ್ಕೆ ನನ್ನಲ್ಲಿದ್ದ ಸುಮಾರು 8 TB ಸ್ಟೋರೇಜ್ ಇರುವ NAS ಅನ್ನು import ಮಾಡಿ, ಅದರ ಜೊತೆಗೆ ಒಂದೆರಡು ಹಳೆಯ 4 TB USB storageಗಳನ್ನೂ ಸಹ ಕನೆಕ್ಟ್ ಮಾಡಿಟ್ಟೆ.  ನನ್ನ ಘನಂದಾರಿ ಕಂಪ್ಯೂಟರ್ ನಿನ್ನೆಯಿಂದ ತಿರುಗುತ್ತಲೇ ಇದೆ.  ಈಗಾಗಲೇ ಸುಮಾರು 25,000ಕ್ಕೂ ಹೆಚ್ಚು photo/videoಗಳನ್ನು ಅದು ಹುಡುಕಿದ್ದು, ಕಳೆದ 15 ವರ್ಷದ ಹಳವಂಡಗಳೆಲ್ಲ ಹೊರಗೆ ಬರುತ್ತಲಿದೆ!

    ಇನ್ನು ಕೆಲವೇ ದಿನಗಳಲ್ಲಿ ನನ್ನ ಎಲ್ಲ ಫೋಟೋಗಳೂ ಸಹ ಆರ್ಗನೈಜ್ ಆಗಿ, ಎಲ್ಲರ ಮುಖಗಳನ್ನೂ ಗುರುತಿಸಿ, ಎಲ್ಲ ಲೊಕೇಶನ್ನುಗಳನ್ನೂ ಸಹ ಪಟ್ಟಿ ಮಾಡಿಕೊಂಡು, ಅದರಲ್ಲಿದ್ದ ಡ್ಯೂಪ್ಲಿಕೇಟುಗಳನ್ನೆಲ್ಲ ತೆಗೆದುಹಾಕಿದ ಮೇಲೆ, ಪ್ರತಿಯೊಂದು ಇವೆಂಟುಗಳ ಟ್ಯಾಗ್ ಪ್ರಕಾರ ಆರ್ಗನೈಜ್ ಮಾಡಿ ಬಿಟ್ಟರೆ... ನನ್ನ ಕೆಲಸ ಮುಗಿದಂತೆ.  ಆದರೆ, ಈ ಸಂಪೂರ್ಣ "ಎಡಿಟಿಂಗ್" ಕೆಲಸ ಮುಗಿಯಬೇಕಾದರೆ - ನನ್ನ ಕೆಲಸ ಕಾರ್ಯಗಳ ಮಧ್ಯೆ, ಕೇವಲ ಪಾರ್ಟ್‌ಟೈಮ್ ಮಾತ್ರ ಈ ಕೆಲಸಕ್ಕೆ ವ್ಯಯಿಸುತ್ತಿರುವುದರಿಂದ - ಏನಿಲ್ಲವೆಂದರೂ ಒಂದು ತಿಂಗಳಾದರೂ ಬೇಕು!

    ***
    ಹದಿನೈದು ಇಪ್ಪತ್ತು ವರ್ಷಗಳ ಫೋಟೋಗಳನ್ನು ಹರವಿಕೊಂಡು ಒಮ್ಮೆ ನೋಡಿ - ನಿಮ್ಮ ಪ್ರಬುದ್ಧತೆ, ಒಳ-ಹೊರಗುಗಳೆಲ್ಲ ಸ್ವಲ್ಪ ಸ್ವಲ್ಪವೇ ಬದಲಾಯಿಸುವುದನ್ನು ಕಣ್ಣಾರೆ ನೋಡಬಹುದು!

    Tuesday, May 12, 2020

    ಕೊರೋನಾ ಹೇರ್ ಕಟಿಂಗ್ ಪ್ರಹಸನ...

    ಹತ್ತು ವರ್ಷಗಳ ಹಿಂದೆ ಪೋಸ್ಟ್ ಡಾಕ್ ಕೆಲಸಕ್ಕೋಸ್ಕರ ಜರ್ಮನಿಯಲ್ಲಿ ಕೆಲವು ತಿಂಗಳು ಶ್ರಮಿಸಬೇಕಾಗಿದ್ದ ಡಾ. ಪೆರುಮಾಳ್‌ಗೆ ಅಲ್ಲಿನ ಭಾಷಾ ಸಮಸ್ಯೆಗಿಂತ ಹೆಚ್ಚಾಗಿ, ತಲೆ ಕೂದಲು ಕತ್ತರಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿತ್ತಂತೆ!  ಮೊದಲೇ ತಲೆಯಲ್ಲಿ ಕೂದಲು ವಿರಳವಾಗಿದ್ದ ಮನುಷ್ಯ, ಮತ್ತು ತಾನು ಹೇಳಿದ್ದೊಂದು, ಕತ್ತರಿಸುವಾತ/ಕತ್ತರಿಸುವಾಕೆ ಮತ್ತೊಂದನ್ನು ಮಾಡಿ ಬಿಟ್ಟರೆ? ಅದಕ್ಕೆ ತನ್ನಷ್ಟಕ್ಕೆ ತಾನೇ ತನ್ನ ಕೂದಲನ್ನು ಕತ್ತರಿಸುವುದನ್ನು ಕಲಿತುಕೊಂಡಿದ್ದರಂತೆ.  ಮೊದ ಮೊದಲು ಕಷ್ಟವಾಗುತ್ತಿತ್ತಾದರೂ ಕೊನೆಗೆ ಅದೇ ಅಭ್ಯಾಸವಾಗಿ, ಈ ಜರ್ಮನಿಯವರ ದೆಸೆಯಿಂದ ಜೀವನ ಪರ್ಯಂತ ತನ್ನ ಕೂದಲನ್ನು ತಾನೇ ಕತ್ತರಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಸ್ಕಿಲ್ಸ್ ಸಿಕ್ಕಂತಾಗಿತ್ತಂತೆ!

    ಈ ಕೊರೋನಾ ವೈರಸ್ ಹೇರಿದ ವರ್ಕಿಂಗ್ ಫ್ರಮ್ ಹೋಮ್ ಕಟ್ಟಳೆಯನ್ನು ಆಚರಿಸುತ್ತಾ ನಾನೂ ಋಷಿ ಮುನಿಗಳ ಹಾಗೆ ಉದ್ದ ಕೂದಲನ್ನೂ ಹಾಗೇ ಗಡ್ಡವನ್ನೂ ಬಿಟ್ಟು ಎಂಟು ವಾರಗಳಾಗಿತ್ತು.  ಮತ್ತೆ ನಮ್ಮ ಆಫೀಸಿನಲ್ಲಿ ವಿಡಿಯೋ ಕಾನ್‌ಫರೆನ್ಸ್‌ಗಳು ಹೆಚ್ಚಾಗ ತೊಡಗಿ, ನಾನೂ ಕೂದಲು ಕತ್ತರಿಸಿಕೊಳ್ಳೋದು ಅನಿವಾರ್ಯವಾಯಿತು.

    ತಲೆಯ ಮೇಲೆ ಕೂದಲು ಕಡಿಮೆ ಇದ್ದವರದ್ದು ಒಂದು ರೀತಿಯ ಸಂಕಟವಾದರೆ, ನನ್ನಂತಹವರಿಗೆ ಹುಲುಸಾಗಿ ಕೂದಲು ಬೆಳೆಯುವುದು ಇನ್ನೊಂದು ರೀತಿಯ ಸಂಕಟ.  ಸರಿಯಾಗಿ ಮೂರು ಹೆಚ್ಚೆಂದರೆ ನಾಲ್ಕು ವಾರಗಳಲ್ಲಿ ಕೂದಲು ಕತ್ತರಿಸದಿದ್ದರೆ ತಲೆಯ ಮೇಲೆ ಒಂದು ಕಿರೀಟ ಬಂದ ಹಾಗಿರುತ್ತದೆ.  ಹಾಗಿರುವಾಗ, ನಾನೂ ಏಕೆ ಪ್ರಯತ್ನ ಮಾಡಬಾರದು ಎಂದು ಕಳೆದ ಶನಿವಾರ ಮನೆಯಲ್ಲಿದ್ದ ಹತ್ಯಾರಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಬಚ್ಚಲು ಮನೆಯಲ್ಲಿ ಉಪಸ್ಥಿತನಾದೆ.

    ಇಲ್ಲೇ ಯಡವಟ್ಟಾಗಿದ್ದು, ನೋಡಿ!  ನಮ್ಮ ಕೂದಲನ್ನು ನಾವೇ ಕತ್ತರಿಸುವುದು ನಾನು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.  ಮೊದಲು ಕಿವಿಯ ಅಕ್ಕ-ಪಕ್ಕ ಒಂದು ಕಡೆಯಿಂದ ಟ್ರಿಮ್ಮರ್ ಹಿಡಿದುಕೊಂಡು ಕತ್ತರಿಸಲು ಶುರುಮಾಡಿದ ನನಗೆ ಸ್ವಲ್ಪ ಸಮಯದ ನಂತರ ಮೆಟ್ಟಿಲು-ಮೆಟ್ಟಿಲಿನ ಹಾಗೆ ಕೂದಲು ಕತ್ತರಿಸಿಕೊಂಡು ಅಲ್ಲಲ್ಲಿ ಸ್ಟೆಪ್ಪುಗಳಾದವು.  ಒಮ್ಮೊಮ್ಮೆ ಸ್ವಲ್ಪ ಒತ್ತಿ ತೆಗೆದಿದ್ದಕ್ಕೋ ಏನೋ ಕೆಲವು ಕಡೆ ಬುರುಡೆ ಕಾಣುವಷ್ಟು ಸಣ್ಣಕೂ ಅದರ ಪಕ್ಕದಲ್ಲಿ ಸ್ವಲ್ಪ ಉದ್ದಕೂ ಬಿಟ್ಟುಕೊಂಡು ಹೋಯಿತು.  ಸೈಡು ಮತ್ತೆ ಮುಂದೇನೋ ಸರಿ, ಆದರೆ ಹಿಂದಿನ ಭಾಗವನ್ನು ಹೇಗೆ ಕತ್ತರಿಸೋದು?  ಅದರಲ್ಲೂ ಮಿರರ್ ಇಮೇಜ್ ನೋಡಿಕೊಂಡು?  ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಬೆರಳುಗಳೂ ಕೂಡ ನೋವು ಕೊಡತೊಡಗಿದವು.  ಕೊನೆಗೆ ಅರ್ಧ ಘಂಟೆಯ ಹೊತ್ತಿಗೆಲ್ಲ ಸುಮಾರು ಒಂದು ಪೌಂಡ್ ಅಷ್ಟು ಕೂದಲು ನೆಲದ ಮೇಲೆ ಕರಿಮುಗಿಲು ಕವುಚಿಕೊಂಡ ಹಾಗೆ ಬಿದ್ದುಕೊಂಡಿತ್ತು!

    ಇಷ್ಟು ಹೊತ್ತಿಗಾಗಲೇ ನಮ್ಮ ಮನೆಯವರಿಗೆಲ್ಲ ನಾನು ಹಾಸ್ಯದ ವಸ್ತುವಾಗಿದ್ದೆ.  ತಲೆಯ ಹಿಂದಿನ ಭಾಗವಷ್ಟೇ ಏನೂ ಪೂರ್ಣ ತಲೆಯನ್ನೇ ನನ್ನ ಹನ್ನೊಂದು ವರ್ಷದ ಮಗನಿಗೂ ಮತ್ತು ಹೆಂಡತಿಗೂ ವಹಿಸಿ (ಏನು ಬೇಕಾದರೂ ಮಾಡಿ, ಆದರೆ ಇದಕ್ಕಿಂತ ಕೆಟ್ಟದಾಗಿ ಮಾಡಬೇಡಿ), ಆರ್ತನಾಗಿ ಒಪ್ಪಿಸಿಕೊಂಡ ಮೇಲೆ ನನಗೆ ಸಮಾಧಾನವಾಗುವ ಮಟ್ಟವನ್ನು ತಲುಪಿದೆ.  ಒಟ್ಟು ನಲವತ್ತೈದು ನಿಮಿಷಗಳ ನಂತರ ತಲೆ ಹಗುರವಾಗಿ ಸ್ನಾನ ಮಾಡಿ ಹೊರಬಂದೆ.  ಅದಕ್ಕಿಂತ ಮುಂಚೆ, ಹತ್ತು ನಿಮಿಷ ಇಡೀ ಬಚ್ಚಲುಮನೆಯನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದ್ದೂ ಸಹ ತುಸು ಹೆಚ್ಚೇ ಕೆಲಸವೆನಿಸಿತು.

    ಸ್ನಾನ ಮಾಡಿ ಎಂದಿನಂತೆ ತಲೆ ಬಾಚಿ ನೋಡಿದರೆ, ಕೆಲವು ಕಡೆ ಕಡಿಮೆ, ಕೆಲವು ಕಡೆ ಹೆಚ್ಚು ಕೂದಲು ಇದ್ದ ನಾನು ಎಲ್ಲೋ ಇಲಿಗಳು ಭತ್ತದ ಚೀಲವನ್ನು ತಿಂದು ಹಾಕಿ ಧ್ವಂಸಮಾಡಿದ ವಿಷಯವನ್ನು ನೆನಪಿಗೆ ತಂದವು.  ಮೊದಲೆಲ್ಲ ಸ್ಟೆಪ್ಪುಗಳಾಗಿ ಕೆಟ್ಟದಾಗಿ ಕಾಣುತ್ತಿದ್ದ ಬದಿಯ ಕೂದಲು, ಈಗ ಯಾವುದೋ ಪುರಾತನ ದೇವಸ್ಥಾನದ ಅವಶೇಷದಂತೆ ಕಂಡುಬಂದು, ನಗುಬಂದಿತು.  ಅಲ್ಲದೇ, ಒಂದು ಬದಿಯ ಕೋನದಲ್ಲಿ ನೋಡಿದಾಗ ನನ್ನ ತಲೆ, ಮಾಗಿದ ಉತ್ತುತ್ತಿಯಂತೆ ಕಂಡುಬಂತು!

    ಆದರೆ ಕೊರೋನಾ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ... ಹೇರ್ ಕಟ್ ಕೆಟ್ಟದಾಗಿರಲಿ, ಬಿಡಲಿ... ಇನ್ನೆರಡು ವಾರಗಳಲ್ಲಿ ಮತ್ತೆ ಪ್ರಯತ್ನಿಸುವ ಛಲವಂತೂ ಹುಟ್ಟಿದೆ!  ದಿನೇದಿನೇ ನೋಡುವ ಮನೆಮಂದಿಗೆ ಇದೀಗ ಕೆಟ್ಟ ಹೇರ್ ಕಟ್ಟೂ ಸಹ ಒಗ್ಗಿ ಹೋಗಿ ಅದೇ ಒಂದು ಸ್ಟೈಲ್ ಆಗಿದೆ!  ಇನ್ನೆರಡು ವಾರಗಳಲ್ಲಿ ಒಂದಿಷ್ಟು ಒಳ್ಳೆಯ ಟ್ರಿಮ್ಮರ್ ಮೇಲೆ ಹಣ ಹೂಡಿದರೆ, ಜೀವಮಾನ ಪರ್ಯಂತ ಹೊರಗೆ ಕೂದಲು ಕತ್ತರಿಸುವ ಪ್ರಸಂಗ ಬರದೆಯೂ ಇರಬಹುದು! ಯಾರು ಬಲ್ಲರು?

    Thursday, May 07, 2020

    ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

    ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
    ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

    ***
    ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

    ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

    ***

    ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

    ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

    Friday, May 01, 2020

    ಸಾಲವೆಂಬ ಶೂಲ!

    ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...".  ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು.  "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ.  ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ.  ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

    ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು.  ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು.  ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು.  ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.

    ***
    ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ.  ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು.  ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು.  ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.  ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ.  ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು.  ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.

    ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು".  ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು.  ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು.  ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು.  ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ!  ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.

    ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ.  ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು.  ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು.  ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು.  ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು.  ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು.  ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!

    ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು.  ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.

    ***
    ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ.  ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"!  ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

    ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.

    ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ.  "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ.  ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.

    ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು,  ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್‌ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು,  ಹಾಗೆ ಮಾಡುವುದರಿಂದ ಟ್ಯಾಕ್ಸ್‌ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!

    ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ,  ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ!  (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!).  ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ!  ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು.  ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!

    ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ!  ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು.  ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು.  ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!

    ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!

    ***
    ನಮ್ಮ ಸುತ್ತಲೂ ಈಗ ಯಂತ್ರಗಳಿವೆ:  ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು  ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ!  ಸಾಲ ದೊಡ್ಡದಿದೆ.  ಹೂಡಿಕೆಗಳು ಹಲವಿವೆ.  ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ.  "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ!  ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!

    ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?

    Thursday, April 30, 2020

    ಬರಹದತ್ತ ಮುಖ ಮಾಡಿಸಿದ ಕೋವಿಡ್

    ಇವತ್ತಿಗೆ ಬರೋಬ್ಬರಿ ಏಳು ವಾರವಾಯಿತು... ನನ್ನಂಥವರು ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿ.  ಈ ಕೋವಿಡ್‌ನಿಂದ ಯಾರು ಯಾರಿಗೆ ಏನೇನು ಅನುಕೂಲ-ಅನಾನುಕೂಲವಾಗಿದೆಯೋ, ನನಗಂತೂ ಇದು ಬರಹ-ಓದು-ಸಂಭಾಷಣೆಗಳಲ್ಲಿ ತೊಡಗಿಸಿದೆ.

    ಏನೇನು ಹೊಸತುಗಳು ಈ ಏಳು ವಾರದಲ್ಲಿ ಶುರುವಾದವು ಎಂದು ಪಟ್ಟಿ ಮಾಡುತ್ತಾ ಹೋದಾಗ ಈ ಕೆಳಗಿನವು ಕಂಡು ಬಂದವು:
    - ಮೂರು ಹೊತ್ತೂ ಮನೆ ಊಟ ನಮಗೆ ಬೇಕಾದಂತೆ ಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕುಕಿಂಗ್ ಶೋಗಳನ್ನು ನೋಡಲು ಶುರು ಮಾಡಿದ್ದು, ಜೊತೆಗೆ ರೆಸಿಪಿಗಳನ್ನು ಹುಡುಕಿದ್ದು
    - ಮನೆಯಲ್ಲೇ ಇದ್ದುದರಿಂದ ನಾಲ್ಕೈದು ಜೊತೆ ಬಟ್ಟೆಗಳನ್ನೇ ಪುನರಾವರ್ತನೆಯಾಗಿ ಬಳಸಿದ್ದು
    - ಈ ವರೆಗೆ ಮರೆತು ಹೋಗಿದ್ದ ಅನೇಕ ಬ್ಲಾಗುಗಳನ್ನು ತೆರೆದು ಓದಿದ್ದು
    - ಈ ವರೆಗೆ ಮರೆತಂತಿದ್ದ "ಅಂತರಂಗ"ದ ಬಾಗಿಲು ತೆಗೆದು ಮತ್ತೆ ಬರೆಯಲು ಶುರು ಮಾಡಿದ್ದು (ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೊಂದು ಲೇಖನವನ್ನು ಹಾಕಿದ್ದು)
    - ಸ್ನೇಹಿತರ ಬಳಿ ಒಳ್ಳೆಯ ಸಿನಿಮಾಗಳ ರೆಕಮೆಂಡೇಷನ್ ಅನ್ನು ಕೇಳಿ ಸಿನಿಮಾ ನೋಡಿದ್ದು
    - ಬಂಧುಗಳ ಜೊತೆ, ಸ್ನೇಹಿತರ ಜೊತೆ ದೀರ್ಘಕಾಲ ಮಾತನಾಡಿದ್ದು
    - ವಾರದಲ್ಲಿ ಒಂದು ನಿಮಿಷವೂ ಕೂಡ ಕಾರಿನಲ್ಲಿ  ಪ್ರಯಾಣಿಸದೇ ಇದ್ದದ್ದು
    - ಬಂದಂತ ವಾಟ್ಸಾಪ್ ಮೆಸ್ಸೇಜುಗಳನ್ನೆಲ್ಲ ನೋಡಿದ್ದು
    - ವೀಕೆಂಡ್ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂದು ಚಿಂತಿಸಿದ್ದು
    - ನಮ್ಮ ಪಕ್ಕದ ಮನೆಯವರ ಜೊತೆ ವೆಬೆಕ್ಸ್ ಕಾನ್‌ಫರೆನ್ಸಿನಲ್ಲಿ ಮಾತನಾಡಿದ್ದು
    - ಮನೆಯ ಮೂಲೆ ಮೂಲೆಯನ್ನೂ (ಸ್ಟೆಪ್ಸ್ ಕೌಂಟ್ ಆಗಲೆಂದು) ತಿರುಗಿದ್ದು
    - (ಅನೇಕ ವರ್ಷಗಳ ನಂತರ) ಮನೆಯನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ್ದು

    ಇವೆಲ್ಲ ಏನೋ ದೊಡ್ಡ ವಿಷಯ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರಬಹುದು.  ಆದರೆ, ಎರಡು ತಿಂಗಳ ಹಿಂದಿನ (ವ್ಯವಸ್ಥಿತ) ವ್ಯಸ್ತ ಜೀವನ ಇಂದು ಅವ್ಯಸ್ತವಾಗಿದೆ ಎಂದು ಹೇಳಲು ಬಾರದು.  ಆದರೆ, ನಮ್ಮೆಲ್ಲರಿಗೂ ಸಿಗುವುದು ಇಂತಿಷ್ಟೇ ಸಮಯವಾದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.  ನಾವು ನಮ್ಮ ಬದುಕಿನಲ್ಲಿ ಸಾಧಿಸಿರುವುದು ಒಂದು ಸಾಸಿವೆ ಕಾಳು ಗಾತ್ರದಷ್ಟು ಮಾತ್ರ ಎನ್ನುವ ಭಾವನೆ ಮೂಡಲು ಗುರು ಶಂಕರಾಚಾರ್ಯರು ಕೇವಲ 32 ವರ್ಷದ ಅವರ ಜೀವಿತದಲ್ಲಿ ಎಷ್ಟೊಂದನ್ನು ಸಾಧಿಸಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ.  ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ಭರತ ಖಂಡದ ಉದ್ದಕ್ಕೂ ಅಲೆದಾಡಿ ಅದೆಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.


    ***
    ಈ ಕೋವಿಡ್‌ ದಯೆಯಿಂದ ನಿಮ್ಮ ನಿಮ್ಮ ಹೊಸ ಅನುಭವಗಳೇನೇನಿವೆ? ಹಂಚಿಕೊಳ್ಳಬಹುದೇ?

    Thursday, April 16, 2020

    God is great!

    ದಿನವಿಡೀ ಕಂಪ್ಯೂಟರ್ ಬಳಸುವ ನಮ್ಮಂತಹವರಿಗೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಆಗುವ ಬೆಳವಣಿಗೆಗಳು ಕೆಲವೊಮ್ಮೆ ತಲೆನೋವಾಗಿ ಪರಿಣಮಿಸುತ್ತವೆ.  ಸೆಕ್ಯೂರಿಟಿಯ ಹೆಸರಿನಲ್ಲಿ ಅಥವಾ ಹೊಸದಾಗಿ ಹುಟ್ಟಿರುವ ತಂತ್ರಜ್ಞಾನದ ಹೆಸರಿನಲ್ಲಿ ಆಗುವ ಒಂದಲ್ಲಾ ಒಂದು ಆವಿಷ್ಕಾರಗಳು ನಮ್ಮ ಲರ್ನಿಂಗ್ ಕರ್ವ್ ಅನ್ನು ಟೆಸ್ಟ್ ಮಾಡುತ್ತವೆ; ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ.  ಇಂತಹದರ ಉದಾಹರಣೆಗಳಲ್ಲಿ ನಮ್ಮ ಕಂಪನಿಯ ಕಂಪ್ಯೂಟರ್ ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಲವಂತವಾಗಿ ಬದಲಾಯಿಸುವ ಪಾಸ್ವರ್ಡ್ ನಿಯಮಗಳನ್ನು ಹೆಸರಿಸಲೇ ಬೇಕು.  ಮೊದಮೊದಲು ಸಹಜ ಎನ್ನುವಂತಿದ್ದ ಪಾಸ್ವರ್ಡ್ ಪಾಲಿಸಿಗಳು ಈಗ ತಲೆನೋವುಗಳಾಗುತ್ತಿವೆ (ಅಥವಾ ಈ ಒಂದು ಭಾವನೆ ನಮಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಸೂಚಕವೂ ಇರಬಹುದು!).

    ಅಯ್ಯೋ ಪಾಸ್ವರ್ಡ್ ಅಂದರೆ ಅದೇನು ದೊಡ್ಡ ವಿಷಯ ಎಂದು ಮೂಗೆಳೆದುಬಿಟ್ಟೀರಾ - ಪ್ರತಿ ಐದು-ಹತ್ತು ನಿಮಿಷಗಳಿಗೊಮ್ಮೆ ಆಕ್ಟಿವಿಟಿ ಇಲ್ಲದಿದ್ದರೆ ತಮ್ಮಷ್ಟಕ್ಕೆ ತಾವೇ ಲಾಕ್ ಆಗುವ ಕಂಪ್ಯೂಟರುಗಳಿಗೆ ಪಾಸ್ವರ್ಡ್ ಪದೇಪದೇ ಹಾಕುತ್ತಲೇ ಇರಬೇಕು.  ಅಷ್ಟೇ ಅಲ್ಲ, ಒಮ್ಮೆ ಲಾಗಿನ್ ಆದ ಮೇಲೆ, ಮತ್ತೆ ನಾವು ಬಳಸುವ ಪ್ರತಿಯೊಂದು ಸಿಸ್ಟಮ್ಗೂ ಕೂಡ ಈ ಪಾಸ್ವರ್ಡ್ ಅನ್ನು ಹಾಕುತ್ತಲೇ ಇರಬೇಕು.  ಒಟ್ಟಿನಲ್ಲಿ, ದಿನಕ್ಕೆ ಏನಿಲ್ಲವೆಂದರೂ ಒಂದು ಇಪ್ಪತ್ತೈದು ಬಾರಿಯಾದರೂ ಬಳಸುವ ಈ ಪಾಸ್ವರ್ಡ್ ಬಹಳ ದುಬಾರಿಯಾದ ಕಮಾಡಿಟಿ ಎಂದರೆ ತಪ್ಪಿಲ್ಲ.  ಅಕಸ್ಮಾತ್, ಎಲ್ಲಾದರೂ ಮರೆತು ಬಿಟ್ಟರೆ, ಅಂತಹ ದೊಡ್ಡ ಉಪಟಳ ಇನ್ನೊಂದಿಲ್ಲ!  ಒಟ್ಟಿನಲ್ಲಿ, ನಾವು-ನಮ್ಮ ಕೆಲಸದ ನಡುವೆ ಅವಿನಾಭಾವ ಸಂಬಂಧವನ್ನು ಬೆರೆಸುವ ಈ ಪಾಸ್ವರ್ಡ್ ಗಳಿಗೆ ದೊಡ್ಡ ಸ್ಥಾನವನ್ನು ಕೊಡಲೇಬೇಕಾಗುತ್ತದೆ!

    ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್ವರ್ಡ್ ಅನ್ನು ಕಡ್ಡಾಯವಾಗಿ ಬದಲಾಯಿಸುವುದು ಬಹಳ ವರ್ಷಗಳಿಂದ ನಡೆದುಬಂದಿದೆ, ಅದರಲ್ಲೇನೂ ವಿಶೇಷವಿಲ್ಲ.  ಆದರೆ ಮೊದಲೆಲ್ಲಾ, ಪಾಸ್ವರ್ಡ್ ಪಾಲಿಸಿಗಳು ನಮ್ಮ ಉಗ್ರಾಣದೊಳಗಿರುವ ನಾಲ್ಕೈದು ಪಾಸ್ವರ್ಡ್ಗಳನ್ನು ಒಂದಾದನಂತರ ಒಂದನ್ನಾಗಿ ಬಳಸಲು ಬಿಡುತ್ತಿದ್ದವು.  ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಪಾಸ್ವರ್ಡ್ನಂತೆ ವರ್ಷಕ್ಕೆ ನಾಲ್ಕು ಪಾಸ್ವರ್ಡ್ಗಳಿದ್ದರೆ ಆಯಿತು.  ಮತ್ತೆ ಅದನ್ನೇ ರೀಸೈಕಲ್ ಮಾಡಿದ್ದರೆ ರಗಳೆ ಇರುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ಮತ್ತೊಂದು ಪಾಲಿಸಿಯನ್ನು ಸೇರಿಸಿಬಿಟ್ಟರು - ಒಮ್ಮೆ ಬಳಸಿದ ಪಾಸ್ವರ್ಡ್ ಅನ್ನು ಮತ್ತೆ ಹನ್ನೆರಡು ಸಲ ಪಾಸ್ವರ್ಡ್ ಬದಲಾಯಿಸುವವರೆಗೂ ಬಳಸುವಂತಿಲ್ಲ!  ಅಂದರೆ, ಇಂದು ಬಳಸುವ ಪಾಸ್ವರ್ಡ್ ಇನ್ನು ಮೂವತ್ತಾರು ತಿಂಗಳ ನಂತರವೇ ಬಳಸಲು ಸಾಧ್ಯ!  ಅಂದರೆ ಮೂರು ವರ್ಷಗಳ ನಂತರ... ಇದನ್ನು ನೋಡಿ God is great! ಎನ್ನುವ ಉದ್ಗಾರ ತನ್ನಷ್ಟಕ್ಕೆ ತಾನೇ ಹೊರಗೆ ಬಂತು.  ನಾನೇ ಹನ್ನೆರಡು ಬಾರಿ ಪಾಸ್ವರ್ಡ್ ಅನ್ನು ಒಂದೇ ದಿನದಲ್ಲಿ ಬದಲಾಯಿಸಿ ಮತ್ತೆ ಅದೇ ಪಾಸ್ವರ್ಡ್ ಅನ್ನು ಉಪಯೋಗಿಸಿದರೆ ಹೇಗೆ ಎನ್ನುವ ಯೋಚನೆ ತಕ್ಷಣಕ್ಕೆ ಬಂತಾದರೂ, ಅದು ಸೆಕ್ಯೂರಿಟಿಯ ಉದ್ದೇಶವನ್ನು ಡಿಫೀಟ್ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಲಿಲ್ಲ, ಅದರ   ಬದಲಿಗೆ ’God is great! ಎನ್ನುವ ಪಾಸ್ವರ್ಡ್ ಅನ್ನೇ ಬಳಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬಂದೆ.  ಆದರೆ, ನಮ್ಮ ಪಾಸ್ವರ್ಡ್ನಲ್ಲಿ  upper case ಅಕ್ಷರಗಳಿರಬೇಕು, ಅಂಕಿಗಳಿರಬೇಕು ಎಂದೆಲ್ಲ ನಿಯಮಗಳಿವೆ.  ಅದನ್ನೆಲ್ಲ ಸೇರಿಸಿ, God is great! ಅನ್ನು ಬಳಸಿ ಒಂದು ಹೊಸ ಪಾಸ್ವರ್ಡ್ ಸೃಷ್ಟಿಸಿದೆ.  ಆದರೆ, ಈ ಪಾಪ್ಯುಲರ್ ಹೇಳಿಕೆಯಂಥ ಪಾಸ್ವರ್ಡ್ ಅನ್ನು ಪದೇಪದೇ ಟೈಪ್ ಮಾಡುವಾಗಲೂ ಒಂದಲ್ಲ ಒಂದು ಸಂವೇದನೆಗಳು ನನ್ನ ಮನಪಟಲದಲ್ಲಿ ಹಾದು ಹೋಗುತ್ತಿದ್ದವು.  God is great! ಅನ್ನುವುದನ್ನು ಅನೇಕ ಭಾವನೆಗಳಲ್ಲಿ ಈ ಮೂರು ತಿಂಗಳಲ್ಲಿ ಹೇಳಿಕೊಂಡಿದ್ದೇನೆ!

    ***
    ಕನ್ನಡ ವ್ಯಾಕರಣ ತರಗತಿಯಲ್ಲಿ ನನಗೆ ಇಷ್ಟವಾಗುವ ವಿಷಯ ವಸ್ತುಗಳಲ್ಲಿ ವಿಭಕ್ತಿ-ಪ್ರತ್ಯಯಗಳೂ ಒಂದು.  ಪ್ರಥಮ-ಉ, ದ್ವಿತೀಯ-ಅನ್ನು, ತೃತೀಯ-ಇಂದ, ಚತುರ್ಥಿ-ಗೆ, ಇಗೆ, ಅಕ್ಕೆ, ಪಂಚಮಿ-ದೆಸೆಯಿಂದ, ಷಷ್ಟಿ-ನನ್ನ, ನಮ್ಮ, ಸಪ್ತಮಿ-ಲ್ಲಿ, ಒಳಗೆ, ಇತ್ಯಾದಿ...

    ಇಂಗ್ಲೀಷ್ ನಲ್ಲಿ ಅನೇಕ ಪದಗಳಿವೆ ನಿಜ.  ಆದರೆ, ಈ ವಿಭಕ್ತಿ-ಪ್ರತ್ಯಯಗಳ ದೆಸೆಯಿಂದ ಭಾರತೀಯ ಭಾಷೆಗಳ ಪದಗಳು ಅನೇಕ ರೀತಿಯಲ್ಲಿ ಉಲ್ಭಣಗೊಳ್ಳುತ್ತವೆ, ಬದಲಾವಣೆಗೊಳಗಾಗುತ್ತವೆ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ.

    ಉದಾಹರಣೆಗೆ: "ಬಾಳೇ ಪ್ರೇಮಗೀತೆ", "ಬಾಳೂ ಬೆಳಕಾಯಿತು", "ಬಾಳಿನ ದಾರಿಯಲಿ", "ಬಾಳಿನಿಂದ ಬಾಳಿಗೆ", "ಬಾಳಿನ ದೆಸೆಯಿಂದ", "ಬಾಳನ್ನು ಬದುಕಿ", "ಬಾಳೇ ಹಾಳಾಯಿತು"... ಹೀಗೆ ’ಬಾಳು’ ಎನ್ನುವ ಪದ ಅನೇಕ ಬೆಳವಣಿಗೆಗಳನ್ನು ಪಡೆಯುತ್ತದೆ. ಇವೆಲ್ಲವನ್ನೂ ಇಂಗ್ಲೀಷಿಗೆ ಅಷ್ಟು ಸುಲಭವಾಗಿ ತರ್ಜುಮೆ ಮಾಡಲಾಗದು.

    ಹೀಗೆ ಯೋಚಿಸುತ್ತಿರುವಾಗ, ನನ್ನ ಪಾಸ್ವರ್ಡ್ "God is great!" ಅನ್ನು ತೆಗೆದುಕೊಂಡು ಈ ಮೂರು ಪದಗಳಲ್ಲಿ ಎಷ್ಟೊಂದು ಕಾಂಬಿನೇಷನ್ ಮಾಡಬಹುದು ಎಂದು ಯೋಚಿಸಿದಾಗ ನನಗೆ ಈ ಕೆಳಗಿನ ವಾಕ್ಯಗಳು ಹೊಳೆದವು ಆಷ್ಟೇ!

    God is great
    Is God great
    Great is God

    God is great! ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ "ದೇವರು ದೊಡ್ಡವನು" ಎಂದು ಯೋಚಿಸಿದೆ... ಈ ಎರಡೇ ಪದಗಳನ್ನು ಎಷ್ಟು ರೀತಿಯಲ್ಲಿ ಬದಲಾವಣೆ ಮಾಡಿ ಹೊಸ ಹೊಸ ಅರ್ಥಗಳನ್ನು ಹುಡುಕಬಹುದು ಎಂದು ಯೋಚಿಸಿದಾಗ ಈ ಕೆಳಗಿನ ಸಾಲುಗಳು ಹೊಳೆದವು:

    ದೇವರು ದೊಡ್ಡವನು
    ದೊಡ್ಡವನು ದೇವರು
    ದೇವರೇ ದೊಡ್ಡವನು
    ದೊಡ್ಡವನೇ ದೇವರು
    ದೇವರು ದೊಡ್ಡವನೇ
    ದೊಡ್ಡವನು ದೇವರೇ
    ದೇವರೇ ದೊಡ್ಡವನೇ
    ದೊಡ್ಡವನೇ ದೇವರೇ
    ದೇವರೂ ದೊಡ್ಡವನು
    ದೊಡ್ಡವನೂ ದೇವರು

    ಈ ಮೇಲಿನವನ್ನು ಹೇಳುವಾಗಿನ ಇಂಟೋನೇಷನ್, ಅದಕ್ಕೆ ಸಂಬಂಧಿಸಿದ ಸಂದರ್ಭ ಹಾಗೂ ಅವುಗಳಿಗೆ ಜೋಡಿಸುವ ಭಾವನೆಗಳನ್ನು ಬಳಸಿ ಅನೇಕ ಕಾಂಬಿನೇಷನ್ನುಗಳನ್ನು ಮಾಡಬಹುದು.  ಇವುಗಳನ್ನು ಅಷ್ಟು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಲಾಗುವುದಿಲ್ಲ.  ಕೇವಲ ಎರಡೇ ಪದಗಳಲ್ಲಿ ಈ ಲಾಲಿತ್ಯವಿರುವ ನಮ್ಮ ಭಾಷೆಯನ್ನು ಒಂದು ದೇಶೀಯ (native) ಪರಿಸರದಲ್ಲಿ ಇದ್ದು ಕಲಿಯದಿದ್ದರೆ, ಅಷ್ಟು ಸಹಜವಾಗಿ ಮನಮುಟ್ಟುವುದಿಲ್ಲ.  ಉತ್ತರ ಅಮೇರಿಕದಲ್ಲಿ ನಾವು ಮಕ್ಕಳಿಗೆ ಕನ್ನಡ ಹೇಳಿಕೊಡುವಾಗ ಈ ಸೂಕ್ಷ್ಮಗಳನ್ನು ಹೇಳಿಕೊಡಲಾಗದು.  ಎಲ್ಲರೂ ವ್ಯಾಕರಣವನ್ನು ಕಲಿಯದಿದ್ದರೂ ದಿನನಿತ್ಯದ ನಮ್ಮ ಮಾತುಕತೆ, ಬರವಣಿಗೆಗಳಲ್ಲಿ ನಾವು ಅದೆಷ್ಟು ರೀತಿಯಲ್ಲಿ ಈ ವಿಭಕ್ತಿ-ಪ್ರತ್ಯಯಗಳನ್ನು ಬಳಸುತ್ತೇವೆ ಎಂದು ಯೋಚಿಸಿದಾಗ ಆಶ್ಚರ್ಯವೆನಿಸುತ್ತದೆ.
    ನೋಡಿ, ಹೀಗೆ ಈ ಪಾಸ್ವರ್ಡ್ ಬದಲಾಯಿಸುವ ದೆಸೆಯಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡುವಂತಾಯ್ತು!

    Monday, April 06, 2020

    ಮೋಡ ಕರಗುವ ಸಮಯ

    ಸೋಶಿಯಲ್ ಅಥವಾ ಫಿಸಿಕಲ್ ಡಿಸ್ಟನ್ಸಿಂಗ್?

    ಈ ಕರೋನಾ ವೈರಸ್ ಹಾವಳಿಯಿಂದಾಗಿ ಇತ್ತೀಚೆಗೆ ಇನ್ನೊಂದು phrase ನಮ್ಮನ್ನೆಲ್ಲ ಆಳುತ್ತಿದೆ: ಸೋಶಿಯಲ್ ಡಿಸ್ಟನ್ಸಿಂಗ್ (social distancing).  ನಾವೆಲ್ಲರೂ ಈ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಒಬ್ಬರಿಂದ ಮತ್ತೊಬ್ಬರ ಕಾಂಟ್ಯಾಕ್ಟ್ ಅನ್ನು ಕಡಿಮೆ ಮಾಡುವುದು, ಗ್ರೂಪ್/ಗ್ಯಾದರಿಂಗ್‌ಗಳಿಂದ ಸಂಪೂರ್ಣವಾಗಿ ದೂರವಿರುವುದು ಎಂದರ್ಥ.
    ಒಂದು ಕುಟುಂಬದ ಸದಸ್ಯರಲ್ಲಿ ಯಾರಿಗೂ ಖಾಯಿಲೆ ಅಥವಾ ರೋಗದ ಲಕ್ಷಣಗಳು ಇಲ್ಲದಿದ್ದರೆ, ಅವರೆಲ್ಲರೂ ಒಟ್ಟಿಗೆ ಇರಬಹುದು.  ಆದರೆ, ಅದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ ಸೋಂಕು ತಗಲಿದರೆ ಅವರನ್ನು ಕೂಡ ಪ್ರತ್ಯೇಕಿಸಿ ಇಡಬೇಕಾಗುತ್ತದೆ.

    ಇದು ನಮ್ಮೆಲ್ಲರ ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಇದು ಭೌತಿಕವಾದ ಡಿಸ್ಟನ್ಸಿಂಗ್? ಇದಕ್ಕೇಕೆ ಫಿಸಿಕಲ್ ಡಿಸ್ಟನ್ಸಿಂಗ್ ಅನ್ನೋದಿಲ್ಲ ಎಂದು ಕೆಲವರು ಯೋಚಿಸಬಹುದು.  Social distancing, ಎಂದು ಹೇಳುವಾಗ ಅಲ್ಲಿ ಜನರು ಒಬ್ಬರಿಂದ ಮತ್ತೊಬ್ಬರಿಗೆ ಇಂತಿಷ್ಟು ದೂರದಲ್ಲಿ ಇರಿ ಎಂದು ಹೇಳುತ್ತಿದ್ದಾರೆ, ಗುಂಪುಗಳಲ್ಲಿ ಸೇರಬೇಡಿ ಎಂದು ಹೇಳುತ್ತಿದ್ದಾರ‍ೆ - ಇಲ್ಲಿ ಅವರು Social ಎಂದು ಬಳಸುತ್ತಿರುವುದು ’ಸಾಮಾಜಿಕ’ ಎನ್ನುವ ಪದದ ಸಮನಾರ್ಥಕ.  ಆದರೆ, ಒಬ್ಬರಿಂದ ಮತ್ತೊಬ್ಬರು ದೂರವಿದ್ದ ಮೇಲೆ, ಅಲ್ಲಿ ಭೌತಿಕವಾಗಿ (physically) ಯಾವುದೇ ಕಾಂಟ್ಯಾಕ್ಟ್ ಬರುವುದೇ ಇಲ್ಲವಾದ್ದರಿಂದ, ಈ ಕೊರೋನಾ ವೈರಸ್ ಸಂಬಂಧವಾಗಿ ಎಲ್ಲರೂ Social Distancing ಎಂತಲೇ ಹೇಳುತ್ತಿರುವುದು.

    ಜೊತೆಗೆ, ಇಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಅನ್ನು ಒಂದು ಸಮುದಾಯದ ಪರವಾಗಿ ಹೇಳುವಂತೆಯೂ ಪರಿಗಣಿಸಬಹುದು.  ಜನರು ಗುಂಪುಗಳಲ್ಲಿ ಭಾಗವಹಿಸುತ್ತಿರುವಾಗ ಒಬ್ಬರನ್ನು ಪರಸ್ಪರ ಮುಟ್ಟದೇ ಇದ್ದರೂ ಸಹ, ಅವರೆಲ್ಲರೂ ಒಂದು ಕೋಣೆಯಲ್ಲಿ ಸೇರಿಕೊಂಡರೆಂದರೆ, ಅಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯವಿದೆ.  ಈ ಕಾರಣದಿಂದಲೇ, ಹತ್ತಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬಾರದು ಎಂದು ಹೇಳುತ್ತಿರುವುದು.

    ***
    ರಾಜ್ಯಗಳ ಬಾರ್ಡರುಗಳು

    ಉತ್ತರ ಅಮೇರಿಕದ ಹೆಗ್ಗಳಿಕೆಯಾಗಿ ನಾವೆಲ್ಲ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ "ಫ್ರೀ" ಆಗಿ ಓಡಾಡಿಕೊಂಡಿದ್ದೆವು.  ಈ ಕೋವಿಡ್ ದಯೆಯಿಂದ,  ಜನರ ಸ್ವಾತಂರ್ತ್ಯಕ್ಕೆ ಮೊಟ್ಟ ಮೊದಲ ಸಲ ಉತ್ತರ ಅಮೇರಿಕದಲ್ಲಿ ಸಂಕಷ್ಟ ಬಂದಿದೆ.  ಈಗ ಅಮೇರಿಕದ ಸಣ್ಣ ರಾಜ್ಯಗಳಲ್ಲೊಂದಾದ ರೋಡ್ ಐಲ್ಯಾಂಡ್, ತನ್ನ ರಾಜ್ಯಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರನ್ನು (ಅದರಲ್ಲೂ ನ್ಯೂ ಯಾರ್ಕ್‌ನವರನ್ನು) ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸುತ್ತಿದೆ.  ಇದೇ ಮಾದರಿ ಉಳಿದ ರಾಜ್ಯಗಳಲ್ಲೂ ನಡೆಯುತ್ತಿದೆ, ಎಂದು ಕೇಳಿಬರುತ್ತಿದೆ.

    ನಮ್ಮ ಕರ್ನಾಟಕದಿಂದ ತಮಿಳು ನಾಡು, ಕೇರಳ, ಮಹಾರಾಷ್ಟ್ರ‍, ಆಂಧ್ರಪದೇಶ ರಾಜ್ಯಗಳಿಗೆ ಹೋಗಿ ಬಂದವರಿಗೆ ಗೊತ್ತಾಗುತ್ತದೆ.  ಒಂದು ಗಡಿ ದಾಟಿ ಬಂದ ಮೇಲೆ ಅದೆಷ್ಟು ಬದಲಾವಣೆಗಳು ಕಾಣಸಿಗುತ್ತವೆ ಎಂದು.  ಆದರೆ, ಇಂದು ಮೊಟ್ಟ ಮೊದಲ ಬಾರಿ ಅಮೇರಿಕದಲ್ಲಿ ಗಡಿಯನ್ನು ಮುಚ್ಚುವುದರ ಮೂಲಕ ಅಲ್ಲದೇ ರಾಜ್ಯಗಳ ಗಡಿಗಳಲ್ಲಿ ಪೋಲೀಸರು ಕಾಯುತ್ತಿರುವುದರ ಮೂಲಕ free ಯಾಗಿದ್ದ ದೇಶ ಮೊಟ್ಟ ಮೊದಲ ಬಾರಿಗೆ ಕೋವಿಡ್ ವೈರಸ್ಸಿನ ಸಂಕೋಲೆಗಳಲ್ಲಿ ಸುತ್ತಿಕೊಂಡು ಬಳಲುತ್ತಿದೆ ಎನ್ನುವಂತಾಗಿದೆ.

    ***
    ಮೋಡ ಕರಗುವ ಸಮಯ

    ಇಂದು ಮಧ್ಯಾಹ್ನ ಒಳ್ಳೆಯ ಬಿಸಿಲಿನ ಸಮಯ ನಮ್ಮ ಮನೆಯ ಹೊರಗಡೆಯ ಥರ್ಮಾಮೀಟರಿನಲ್ಲಿ 66 ಡಿಗ್ರಿ (ಸುಮಾರು 17 ಡಿಗ್ರಿ ಸೆಲ್ಸಿಯಸ್) ತೋರಿಸುತ್ತಿತ್ತು.  ನಮ್ಮ ಮನೆಯ ಹಿಂದಿನ ಡೆಕ್‌ನಲ್ಲಿ ಒಳ್ಳೆಯ ಗಾಳಿ ಬೀಸುತ್ತಿತ್ತು.  ಮೇಲೆ ಶುಭ್ರವಾದ ಆಕಾಶ.  ಯಾರು ಹೊರಗೆ ಬರಲಿ ಬಿಡಲಿ, ಸೂರ್ಯದೇವ ತನ್ನ ದೈನಂದಿನ ಕಾರ‍್ಯಾಚರಣೆಯನ್ನು ಮುಂದುವರೆಸಿ ಮೇಲೇರಿ ಕೆಳಗಿಳಿಯುತ್ತಿದ್ದ.  ಪಶ್ಚಿಮದ ಕಡೆ ಒಂದಿಷ್ಟು ಬಿಳಿಯ ಮೋಡಗಳು ಹಿಂಡು ಹಿಂಡಾಗಿ ತುಂಬಿಕೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಉಳಿದ ಕಡೆಯೆಲ್ಲ ಶುಭ್ರವಾದ ನೀಲಾಕಾಶವಿತ್ತು.
    ಇಷ್ಟು ದಿನ ಹೊರಗೆ ಬರದೆ ಇದ್ದುದರಿಂದಲೋ ಏನೋ, ನನಗೆ ಈ ತಿಳಿ ಬಿಸಿಲು ಬಹಳ ಅಪ್ಯಾಯಮಾನವಾಗಿ ಗೋಚರಿಸಿತು.  ಜೊತೆಗೆ ಹದವಾಗಿ ಕಾದ ಡೆಕ್ಕಿನ ಮರದ ಹಲಗೆಗಳು ಬರಿಗಾಲಿಗೂ ಮುದವನ್ನು ನೀಡುತ್ತಿದ್ದವು.  ಆ ಸಮಯಕ್ಕೆ ಖಾಲಿ ಇದ್ದ ಡೆಕ್ ಮೇಲೆ ಮಲಗಿದರೆ ಹೇಗೆ ಎನ್ನಿಸಿದ್ದೇ ತಡ, ತಡ ಮಾಡದೆ ಅಲ್ಲೇ ಒಂದು ಕಡೆ ಮೇಲ್ಮುಖವಾಗಿ ಮಲಗಿಕೊಂಡು, ಸೂರ್ಯ ತಮ್ಮನ್ನೇನು ತಿಂದು ಬಿಡುತ್ತಾನೇನೋ ಎಂದು ಸ್ವಲ್ಪ ಹೆದರಿದಂತೆ ನಿಧಾನವಾಗಿ ಚದುರುತ್ತಿದ್ದ ಮೋಡಗಳ ಕಡೆಗೆ ಗಮನಕೊಟ್ಟೆ.

    ಒಂದಿಷ್ಟು ಮೋಡಗಳು ಒಟ್ಟಿಗಿದ್ದವು, ಸ್ವಲ್ಪ ಹೊತ್ತು ಬಿಟ್ಟು ನೋಡುವುದರಲ್ಲಿ, ಅವುಗಳ ಯಾವುದೋ ಒಂದು ತುಣುಕು ಗುಂಪಿನಿಂದ ಮತ್ತೊಂದು ಕಡೆ ಚಲಿಸಿತು. ಸ್ವಲ್ಪ ಹೊತ್ತಿನಲ್ಲಿ ಅದು ಇದ್ದಲ್ಲಿಯೇ ಕರಗಿ ಮಾಯವಾಯಿತು!  ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಹಾಗೆಯೇ, ಮೋಡದ ತುಣುಕೊಂದು ಗುಂಪಿನಿಂದ ಬೇರ್ಪಡುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದು ನಿಧಾನವಾಗಿ ಕರಗಿ ಗಾಳಿಯೊಳಗೆ ಲೀನವಾಗುತ್ತದೆ - ಒಂದು ರೀತಿಯಲ್ಲಿ ಕಾಟನ್‌ಕ್ಯಾಂಡಿ ತಿನ್ನುವ ಹುಡುಗನ ಮಿಠಾಯಿ ಕಡಿಮೆಯಾಗುವಂತೆ.  ಅವೆಲ್ಲ ಮೋಡವೇ ಸರಿ, ಆದರೆ ಆ ಮೋಡದ ತುಣುಕುಗಳು ನನ್ನ ಕಣ್ಣೆದುರೇ ಕರಗಿ ಗಾಳಿಯಲ್ಲಿ ಲೀನವಾಗುವ ಪರಿಯನ್ನು ಇಷ್ಟು ಕ್ಲಿಯರ್ ಆಗಿ ನಾನು ನೋಡಿದ್ದಿಲ್ಲ... ಐದು ನಿಮಿಷದೊಳಗೆ, ಬೀಸುವ ಗಾಳಿ ಜೋರಾಗ ತೊಡಗಿತೆಂದು ಮತ್ತೆ ಮನೆ ಒಳಗೆ ಬಂದೆ, ಆದರೆ ಮೋಡದ ಗುಂಪು ನಿಧಾನವಾಗಿ ಚದುರುತ್ತಲೇ ಇತ್ತು.  ಅದೇ ಸಮಯದಲ್ಲಿ, ಎಲ್ಲಿಯೋ ಹುಟ್ಟಿ ಎಲ್ಲೋ ಸೇರುವ, ಮೋಡಕ್ಕಾಗಲೀ, ಮುಗಿಲಿಗಾಗಲೀ ಯಾವ ಬಣ್ಣವೂ ಇಲ್ಲ, ಅವೆಲ್ಲವೂ ತನ್ನ ಸುತ್ತಲಿನ ಸೂರ್ಯನ ಕೃಪೆಯಿಂದ ಬಣ್ಣವನ್ನು ಪಡೆದವುಗಳು ಎಂಬ ಸೂಕ್ಷ್ಮ ಹೊಳೆದು, ಅದು ಈ ಹೊತ್ತಿನ ತತ್ವವಾಯಿತು!

    Saturday, April 30, 2016

    ಶಾಂತವಕ್ಕನ ಸಡಗರ

    ಇನ್ನೇನು ಶ್ರಾವಣ ಮಾಸ ಹತ್ರ ಬಂತು ಅಂತ ಊರಿನ ಹೆಂಗಳೆಯರೆಲ್ಲ ಮನೆ ಜಗಲಿ, ಅಂಗಳ ಸಾರ್ಸಿ ಶುಭ್ರವಾಗಿಟ್ಟುಕೊಂಡಿದ್ರು.  ಎವರೆಡಿ ಶೆಲ್ಲಿನ ಒಳಗಿನಾಗಿರೋ ಕರ್ರಗಿನ ಪೌಡರ್ರ್ ಹಾಕಿ ತಿಕ್ಕಿಂದ್ರಿಂದ್ಲೋ ಏನೋ ಕೆಲವರ ಮನಿ ಮುಂದಿನ ಅಂಗಳ ಟಾರ್ ರಸ್ತೆಗಿಂತ ಕಪ್ಪಗಿತ್ತು ನೋಡ್ರಿ.  ಇತ್ಲಾಗೆ ಶಾಲೇಗ್ ಹೋಗೋ ಮಕ್ಳು ಸಧ್ಯ ಛಳೀ ಹೊಂಟೋಯ್ತು ಅಂತ ತಮ್ಮ ತಮ್ಮ ಚಿಕ್ಕ ಚಿಕ್ಕ ಯೂನೀಫಾರ್ಮಿನೊಳಗೆ ತಮ್ಮನ್ನ ತುರುಕಿಕೊಂಡಿದ್ರು, ಮೇಲ್ನಿಂದ ಕೊರೆಯೋ ಮಳೆಗೋ ಬಿಸಿಲಿಗೋ ರಕ್ಷಣೆ ಇರ್ಲೀ ಅಂತ ಹೆಂಗಳೆಯರಲ್ಲಿ ಕೆಲವ್ರು ಆಶ್ಚರ್ಯ ಸೂಚಕ ಮಾರ್ಕಿನಂಗಿರೋ ಛತ್ರಿ ಹಿಡಕೊಂಡು ಓಡಾಡ್ತಿದ್ರು.  ಕೆಲವೊಮ್ಮೆ ಪುಷ್ಯಾ ಮಳಿಯಿಂದ ತಪ್ಪಿಸಿಕೊಂಡ್ರೂ ಆರ್ದ್ರೀ ಮಳಿ ಬಿಡ್ಲಿಲ್ಲಾ ಅನ್ನೋ ಹಂಗೆ ಜಿಟಿಪಿಟಿ ಮಳೆ ಎಷ್ಟೊತ್ತಿಗೆ ಬರುತ್ತೆ ಅಂತ ಹೇಳೋಕಾಗ್ದಿದ್ರೂ, ಅದರ ಪರಿಣಾಮ ಅನ್ನೋ ಹಂಗೆ ಕೆಂಪನೆ ಕಿಚಿಪಿಚಿ ಕೆಸರು ಕಾಲು-ಪ್ಯಾಂಟುಗಳಿಗೆ ಅಂಟೋದು ಗ್ಯಾರಂಟಿ ಆಗಿತ್ತು.

    ಇದೇ ಹೊತ್ತಲ್ಲಿ ಊರ್‌ನಾಗಿರೋ ಬ್ರಾಂಬ್ರ ಓಣಿಯಲ್ಲಿ ಏನೋ ಒಂಥರ ಸಂಭ್ರಮ.  ಅದೇ ಮಗ್ಗಲ ಮನಿ ಶಾಂತವ್ವಕ್ಕ ಇದಾಳಲ್ಲ ಅಕಿ ನೂರಾ ನಾಕನೇ ವರ್ಷಕ್ಕೆ ಕಾಲಿಟ್ಟ ಸಂಬಂಧ ಊರ್‌ನಾಗಿನ ಮುಖಂಡ್ರು ಎಲ್ಲಾ ಸೇರಿ ಹುಟ್ಟಿದ ಹಬ್ಬಾನ ದೊಡ್ಡದಾಗಿ ಆಚರ್‌ಸಬೇಕು ಅಂತ ಒಂದು ಕಾರ್ಯಕ್ರಮ ಹಮ್ಮಿಕೊಂಡಾರಂತ.  ಭಾನುವಾರ ಮಟಮಟ ಮಧ್ಯಾಹ್ನ ಎರಡು ಘಂಟಿಗೆ ಶುರುವಾಗೋ ಕಾರ್ಯಕ್ರಮ ಇನ್ನೂ ಸ್ಥಳೀಯ ಎಮ್ಮೆಲ್ಲೆ ಬರ್ಲಿ ಅಂತ ಕಾಯ್ಕೊಂಡ್ ಕುಂತು ಘಂಟೆ ಮೂರ್ ಆದ್ರೂ ಶುರೂ ಆಗೋ ಭಾಗ್ಯ ಬಂದಂಗಿರ್ಲಿಲ್ಲ.  ಆದ್ರೂ ರಗಡು ಮಂದಿ ಸೇರಿದ್ರು.  ಎಲ್ಲೆಲ್ಲಿಂದಾನೋ ಬಂದಿದ್ರು.  ಅವರಾಗೆ ಬಾಳ ಮುಖ್ಯ ಅಂದ್ರ, ಶಾಂತವಕ್ಕನ್ನ ಗಿರಿಮಗಳು ಮೋಹಿನಿ - ದೂರ ದೇಶ ಅಮೇರಿಕಾದಾಗೆ ಅದೇನೋ ಕಾಯ್ಕ ಮಾಡ್ಕಂಡು ಅಲ್ಲೇ ಇದಾರಂತೆ, ಅದ್ರೂ ಅತ್ಯಂತ ಮುತುವರ್ಜಿ ವಹಿಸಿ ಶಾಂತವಕ್ಕನ್ನ ಬರ್ತ್‌ಡೇ ಆಚರಿಸಾಕ ಹದಿಮೂರು ಸಾವಿರ ಕಿಲೋಮೀಟರ್ ದೂರದಿಂದ ಬಂದಿರೋದು ನಮ್ಮೂರಿಗೆ ಹೆಚ್ಚೇ ಬಿಡ್ರಿ.  ಆದ್ರೂ ಅವನವ್ವನ, ಇದೇ ತಾಲೂಕಿನಾಗೆ ಬಿದ್ದು ಎದ್ದು ಸಾಯೋ ಈ ಎಮ್ಮೆಲ್ಲೆ ಮಂದಿಗೆ ಏನ್ ಅಂತಾದ್ ಬಂದೀತು? ಇನ್ನೂ ಸುದ್ದೀನೇ ಇಲ್ಲಲ!

    ಹಂಗೂ ಮಾಡಿ ಶಾಂತವ್ವಕ್ಕನ ವಯಸ್ಸು ಇಷ್ಟೇ ಹಿಂಗೇ ಎಂದು ಯಾರೂ ಬರ್ದಿಟ್ಟಂಗಿದ್ದಿದ್ದು ಯಾರಿಗೂ ನೆನಪಿಲ್ಲ ನೋಡ್ರಿ.  ಅದರಾಗೂ ಒಂದ್ ಸರ್ತಿ ನೂರರ ಹತ್ರಾ ಹೋದ್ರಿ ಅಂದ್ರ ನಿಮ್ಮ ಜೀವಮಾನದಾಗೆ ಬಂದ್ ಹೋಗಿರೋ ಮುಕ್ಕಾಲ್ ಜನ ಆಗ್ಲೇ ಟಿಕೇಟ್ ತಗೊಂಡಂಗೇ ಲೆಕ್ಕ!  ಅದ್ರಾಗೂ ನೂರ್ ವರ್ಷದ ಹಿಂದೇ ಜಾತ್ಕಾ ಪಾತ್ಕಾ ಬರೀತಿದ್ರೋ ಏನೋ ಆದ್ರೂ, ಜನನಪತ್ರಿಕೆ ಮರಣ ಪತ್ರಿಕೆ ಅಂಥಾ ಯಾರೂ ಪ್ರಿಂಟ್ ಹಾಕಿದ್ದು ನಾನಂತೂ ಕಂಡಿಲ್ಲ.  ಅದೂ ಹೋಗೀ ಹೋಗಿ ಬ್ರಿಟೀಷ್ ಸರಕಾರದಾಗ ಹುಟ್ಟಿರೋ ಮುದುಕಿ ಒಂಥರಾ ಬ್ರಿಟೀಷರ ಹಂಗಾ ಗರ್ವದಾಕಿ ಬಿಡ್ರಿ.  ಶಾಂತವ್ವಕ್ಕ ಈಗ್ಲೇ ಇಷ್ಟು ಉರೀತಾಳೆ, ಆಗ ಹೆಂಗಿದ್ಲೋ ಅಂತ ಕೆಲವು ಹೆಣ್ ಮಕ್ಳು ಕೈ ಮುರ್ದು ಲಟಗಿ ತಗೊಂಡಿದ್ದಂತೂ ನಿಜ.  ಒಂದ್ ಹತ್ತ್ ವರ್ಷದ ಹಿಂದಿನ್ ವರೆಗೂ ಈ ಮುದುಕಿ ಕಡಿಮೀ ಏನ್ ಇರ್ಲಿಲ್ಲ.  ದಿನಾ ಅಗಸೀ ಬಾಗ್ಲು ಮಟಾ ನಡ್ದು ಬಾವೀ ನೀರ್ ಸೇದಿ ತರೋದೇನೋ, ಬಾಗ್ಲೂ ಬಳ್ದು, ರಂಗೋಲಿ ಹಾಕಿದ್ದಷ್ಟೇ ಅಲ್ದೇ, ಒಂದೇ ಒಂಚೂರು ಬಿಡದೇ ದೊಡ್ಡ ಹಿತ್ಲು ಗುಡುಸ್ತಿತ್ತ್ ನೋಡ್ರಿ ಈ ಮುದುಕಿ.  ದರ್ಲೆ ತೆಗೆದು ಒಲೀ ಮ್ಯಾಲೆ ದನಗಳಿಗೆ ಬಾಯಾರು ಬಿಸಿಮಾಡಿ ಕೊಟ್ಟು, ಕೊಟಗಿ ಶುದ್ದಾ ಮಾಡಿ ಹಾಲ್ ಕರಕಂಡ್ ಬಂದು ಸುರ್ ಅಂತಾ ಒಂದು ಲೋಟಾ ಕಾಪೀ ಹೀರೋದ್ರೊಳಗೆ ಹತ್ತ್ ಘಂಟ್ ಆಗಿತ್ತು.  ನಾವ್ ಇವತ್ತಿನ ದಿನಾ ವಾರಕ್ಕ ನಲವತ್ತು ಘಂಟಿ ಅಂತ ಏನ್ ಕೆಲ್ಸಾ ಮಾಡ್ತೀವಿ, ಈ ವಮ್ಮ, ಭಾನುವಾರದಿಂದ ಮಂಗಳವಾರದೊಳಗೇ ನಲವತ್ತೇನು ಐವತ್ತು ಘಂಟಿ ದುಡಿಯೋದ್ ನೋಡ್ರಿ.  ಜಿಮ್ಮು-ಗಿಮ್ಮು ಅಂತ ಒಂದ್ ದಿನ ಅದರ ಬಗ್ಗೆ ಕೇಳದಿದ್ರೂ ಮೈಯಾಗೆ ಒಂದು ಚೂರು ನೆಣಾ ಅಂತ ಇದ್ದಂಗಿಲ್ಲ ನೋಡ್ರಿ, ಯಾವತ್ತಿದ್ರೂ ಒಂದೇ ಒಂದ್ ಲಕ್ಷಣಾ.  ಇಂದಿನ ಕಾಲದ ಹೆಣ್ಣ್ ಮಕ್ಳು ಒಂದೊಂದು ಹಡದು ಹತ್ತು ವರ್ಷ ಹಳೇದಾದ ಎಸ್.ಟಿ. ಬಸ್ಸಿನ ಹಂಗೆ ನಡೆಯೋದಾದ್ರೆ ಈವಮ್ಮ ಎಂಟು ಮಕ್ಳನ್ನ ಹಡದು ಅದೆಷ್ಟೋ ಬಾಣಂತನಾನ ಮಾಡಿ ಇನ್ನೂ ಒಂಚೂರೂ ಬೆನ್ನ್ ಬಾಗಿಸದೇ ನಡೀತಾಳ ಅಂದ್ರ ಅದೊಂದು ದೊಡ್ಡ ಪವಾಡನೇ ಬಿಡ್ರಿ.  ಈ ವಮ್ಮನ ಗಂಡಾ ಅದ್ಯಾವಾಗೆ ಟಿಕೇಟ್ ತೆಗೆಂಡು ಹೋದನೋ ನನಗೆ ಗೊತಿಲ್ಲಾ, ಅದ್ರೂ ಈವಮ್ಮ ಮರೆ-ಮೈಲಿಗೆ-ಮಡಿ ಅಂತಾ ಇಡೀ ಊರಿಗೆ ಫೇಮ್ಮಸ್ಸು ನೋಡ್ರಿ.  ಶಾಂತವಕ್ಕನ ಉಪ್ಪಿನಕಾಯಿ, ಹಪ್ಪಳಾ, ಸಂಡಿಗೆ ಅವರ ಸಂಬಂಧಿಕರ ದೆಸೆಯಿಂದ ಎಲ್ಲೆಲ್ಲೋ ಹೊಗ್ತಿತ್ತು.  ಆಕಿ ಕೈ ರುಚೀನೇ ಬ್ಯಾರೆ.  ಆರು ತಿಂಗಳೇನು, ಅರು ವರ್ಷಾ ಅದ್ರೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಕಡದ್ರ ಇನ್ನೂ ಕಟುಂ ಅನ್ನೋದು ನೋಡ್ರಿ!

    ಕೊನೀಗೂ ಎಮ್ಮೆಲ್ಲೆ ಸಾಹೇಬ್ರು ಬಂದ್ರೂ ಅಂತ ಕಾರ್ಯಕ್ರಮ ಶುರೂ ಆಗೂ ಹಂಗ ಕಾಣಸ್ತು.  ಶಾಂತವಕ್ಕನ ಮನಿ ಮುಂದೆ ನಾಲ್ಕು ಅಡಕೆ ಮರದ ಕಂಬಾ ನೆಟ್ಟು ಒಂದು ಸಣ್ಣ ಚಪ್ರ ಕಟ್ಟಿದ್ರು.  ಅದರ ಮ್ಯಾಲೆ ಸ್ವಲ್ಪಾನೂ ಬಿಸಿಲು ಬರದೇ ಇರ್ಲಿ ಅಂತ ತೆಂಗಿನ ಮಡ್ಲು ಹೆಣೆದು ಕಟ್ಟಿದ್ರು.  ಮದುವೀ ಮನೆ ಅಷ್ಟು ದೊಡ್ಡು ಚಪ್ರಾ ಅಲ್ದಿದ್ರೂ ಮೂರು ಜನ ಕೂರೋ ಹಂಗ ಅನುಕೂಲ ಮಾಡಿದ್ರು.  ಮಧ್ಯ ಶಾಂತವ್ವಕ್ಕ, ಅಕಿ ಬಗಲಿಗೆ ಊರಿನ ಮಹಿಳಾ ಕಲ್ಯಾಣ ಇಲಾಖೆ ಸೂಪರ್‌ವೈಸರ್ರು ಸುಶೀಲಮ್ಮೋರು, ಮತ್ತೊಂದು ಕಡೆ ಎಮ್ಮೆಲ್ಲೆ ಮಹಾಂತೇಶಪ್ಪೋರು ಕುಂತಿದ್ರು.  ನೂರಾ ನಾಲ್ಕು ಮುಟ್ಟಿರೋ ಶಾಂತವಕ್ಕ ತನ್ನ ಬಗಲಿಗೆ ಕುಂತೋರಿಗಿಂತಲೂ ನೆಟ್ಟಗೆ ಬೆನ್ನ ಮಾಡಿ ಕುಂತಿದ್ಲು.  ಅವಳು ಉಟ್ಟಿರೋ ಅದೆಷ್ಟೋ ವರ್ಷದಿಂದ ಹಳೇ ಟ್ರಂಕಿನಾಗಿರೋ ಕಂದು ಬಣ್ಣದ ಪಟ್ಟೇ ಸೀರೇ ಇವತ್ತು-ನಿನ್ನೇ ಅಂಗಡಿಯಿಂದ ತಂದ ಹಾಗೆ ಮಡಿಕೇನೂ ಮುರೀದೇ ತನ್ನ ಮೈ ಮೇಲೆ ಗೆರೆಗಳನ್ನ ಹಂಗೇ ಜೋಪಾನವಾಗಿ ಉಳಿಸಿಕೊಂಡಿತ್ತು.

    ಊರಿನ ಕಾರ್ಯಕ್ರಮ, ಆದ್ರೆ ಬಂದೋರಿಗೆ ತಿಂಡೀ-ಗಿಂಡೀ ಮಾಡೋರು ಯಾರು? ಅದ್ಯಾವ್ದೋ ಸೊರಬದ ಬೇಕ್ರಿ ಇಂದ ಸುಮಾರು ದೊಡ್ಡ ಕೇಕ್ ತರಸ್ಯಾರಂತ, ಅದು ಬಿಸಲಿಗೆ ಕರಗೀತು ಅಂತ ಇನ್ನೂ ಒಳಗೇ ಇಟ್ಟಿದ್ರು.  ಮೈಕೂ ಪೈಕೂ ಏನೂ ಬ್ಯಾಡ, ಸುಮ್ನೇ ದುಡ್ಡು ಖರ್ಚು ಅಂತ ಹಂಗೇ ಸುತ್ಲೂ ಸೇರಿರೋ ಜನ್ರನ್ನ ಕುರುತು ಮೊದಲಿಗೆ ಸುಶೀಲಮ್ಮೋರು ಮಾತಾಡಿದ್ರು.  ಇವತ್ತಿನ ದಿನಾ ನೂರೇನು ಎಪ್ಪತ್ತು ವರ್ಷ ನೋಡೋ ಮಂದಿ ಭಾಳಾ ಇಲ್ಲ, ಅಂತಾದ್ರಾಗೆ ನಮ್ಮೂರಿನ ಶಾಂತವ್ವಕ್ಕ ನೂರಾ ನಾಕು ಮುಟ್ಟೈತಿ ಅಂದ್ರ ಅದೊಂದು ರಾಜ್ಯದ ವಿದ್ಯಮಾನ ಅಂತ ಭಾಳ ಚೊಲೋ ಭಾಷ್ಣ ಮಾಡಿದ್ರು.  ಅವರ ನಂತ್ರ ಮಹಾಂತೇಶಪ್ಪೋರು ನಾನು ವಿಧಾನ ಸಭೆ ಕಾರ್ಯಕಲಾಪದಾಗ ಈ ಸಂಬಂಧ ಚರ್ಚೇ ಮಾಡ್ಸಿ, ಶಾಂತವಕ್ಕಂಗ ಒಂದ್ ಅವಾರ್ಡ್ ಕೊಡಸ್ತೀನಿ ಅಂತ ಆಶೋತ್ತರ ಮೂಡಿಸಿ ಆಸೆ ತೋರ್ಸಿದ ಕೂಡ್ಲೇ ಅವರ ಚೇಲಾಗಳೆಲ್ಲ ದೊಡ್ಡದಾಗಿ ಚಪ್ಪಾಳೆ ಹೊಡ್ದಿದ್ದು ನೋಡಿ ನಾವೂ ಹೊಡದ್ವಿ.  ಅಮ್ಯಾಲೆ ಶಾಂತವಕ್ಕನ ಮನೆ ಮಂದೀ ಎಲ್ಲ ಬಂದೂ ಅರತೀ ಮಾಡಿದ್ರು.  ಅವರ ಮನೇ ಮಂದೀನೇ ಸುಮಾರು ನೂರು ಜನ ಇದ್ದಂಗಿದ್ರು ನೋಡ್ರಿ.  ಎಲ್ಲ ಮಕ್ಳೂ, ಮೊಮ್ಮಕ್ಳು, ಮರಿಮಕ್ಳು, ಗಿರಿಮಕ್ಳು ಇವರ್ದ್ರೆಲ್ಲಾ ಲೆಕ್ಕಾ ಹಾಕ್ಕೊಂಡಿರೋರು ಯಾರು? ಕುದ್ದು ಶಾಂತವಕ್ಕಂಗೇ ಇವರೆಲ್ಲ ನೆನಪಿದಾರೋ ಇಲ್ವೋ!  ಶಾಂತವ್ವಕ್ಕಾ ನೀನೂ ಒಂದಿಷ್ಟು ಮಾತಾಡು ಅಂದ್ರು.  "ನನ್ದೇನೂ ಬ್ಯಾಡಾ, ಎಲ್ಲಾ ಚೆನ್ನಾಗಿರ್ರಿ!" ಅಂತ ಅದ್ರಾಗೂ ಬಿನ್ನಾಣ ತೋರಿಸ್ತು ಮುದುಕಿ.

    ಇನ್ನೇನು ಕೇಕ್ ಕಟ್ ಮಾಡೋಣ ಅಂತ ಎಲ್ರೂ ಅಂದ್ರೂ.  ಅಷ್ಟ್ರೊಳಗ ಶಾಂತವಕ್ಕನ ಅಮೇರಿಕದಿಂದ ಬಂದ ಗಿರಿಮಗಳು ಮೋಹಿನಿ, ಅದೇನೋ ಇಂಗ್ಲೀಷ್ನಾಗೆ ಅಂದ್ಲು, ಅದರ ಪ್ರಕಾರ ಶಾಂತವಕ್ಕನ್ನೂ ಒತ್ತಾಯ ಮಾಡಿ ಸ್ವಲ್ಪ ಮಾತಾಡಕ್ ಬಿಟ್ರು ನೋಡ್ರಿ.  ಶಾಂತವಕ್ಕ ಹೆಚ್ಗೆ ಏನೂ ಹೇಳ್ಲಿಲ್ಲ,  "ಎಲ್ರೂ ಸುಖವಾಗಿರ್ರಿ, ಜಗಳಾಪಗಳಾ ಮಾಡಬೇಡ್ರಿ.  ಮನಸು ಚೆನ್ನಾಗಿದ್ರೆ ದೇಹ ಚೆನ್ನಾಗಿರ್ತತಿ.  ವ್ಯಾಯಾಮಾ ಪಾಯಾಮಾ ಎನೂ ಬ್ಯಾಡ, ನೀವ್ ಏನ್ ತಿಂತೀರಿ, ಎಷ್ಟು ತಿಂತೀರಿ ಮತ್ತ ಯಾವಾಗ ತಿಂತೀರಿ ಅನ್ನೋದರ ಬಗ್ಗೆ ನಿಗಾ ಇರ್ಲಿ" ಅಂದ್ಲು.  ಎಲ್ರೂ ಮತ್ತೆ ದೊಡ್ಡ ಚಪ್ಪಾಳೆ ಹೊಡೆದ್ರು.  ಮೋಹಿನಿ ತನ್ನ ಅಮ್ಮನ ಹತ್ರ ಅದೇನೋ ಇಂಗ್ಲೀಷಿನಾಗೆ ಅಂದ್ಲು.  ಅದನ್ನ ಅವರಮ್ಮ ತರ್ಜುಮೆ ಮಾಡಿ -"ಶಾಂತವಕ್ಕ, ನಿನ್ನ್ ಜೀವನದಾಗೆ ಇದೂವರೆಗೆ ಕಂಡಿರೋ ಮಹಾ ಅವಿಷ್ಕಾರ ಅಂದ್ರೆ ಯಾವ್ದು?" ಅಂತ ದೊಡ್ಡದಾಗಿ ಕೇಳಿದ್ರು.  ಅವರು ಹೇಳೋದನ್ನ ಮೋಹಿನಿ ತನ್ನ ಬಂಗಾರ ಬಣ್ಣದ ಐಫೋನಿನ್ಯಾಗೆ ರೆಕಾರ್ಡ್ ಮಾಡಿಕೊಂತಿದ್ಲು.

    ಶಾಂತವಕ್ಕ ಒಂದ್ ಸರ್ತಿ "ಹ್ಞೂ..." ಅಂತ ದೊಡ್ಡದಾಗಿ ಉಸಿರು ಎಳಕೊಂಡು ಒಂದು ಹತ್ತು ಸೆಕೆಂಡು ಯೋಚ್ನೇ ಮಾಡಿದ್ಲು.  ನಾವೆಲ್ಲ ಕಂಪ್ಯೂಟರ್ರೋ, ಫೋನೋ, ಸಿನಿಮಾನೋ, ಮೋಟಾರೋ-ರೈಲೋ ಅಂತಾಳೆ ಅಂದುಕೊಂಡು ಖಾತರದಿಂದ ನೋಡ್ತಾ ಇದ್ವಿ.  ಮೋಹಿನಿನೂ ತನಗೆ ಕನ್ನಡ ಬರುತ್ತೆ ಅಂತ ತೋರಿಸ್ ಬೇಕು ಅಂತ "ನನ್ ಕಡೇ ನೋಡು..., ಹೇಳಜ್ಜಿ ಹೇಳು..." ಅಂತಾ ಜೋಗಕ್ಕೆ ಬರೋ ಬಿಳಿ ಟೂರಿಸ್ಟ್‌ಗಳ ಧ್ವನಿಯಲ್ಲಿ ದೊಂಬಾಲು ಹಾಕಿದ್ಲು.  ಶಾಂತವಕ್ಕ ಒಂಥರಾ ಟಿವಿ ನೈನಿನ ರಿಪೋರ್ಟರುಗಳು ಕ್ಯಾಮೆರಾ ನೋಡಿಕೊಂಡೇ ಮಾತಾಡ್ತಾವಲ್ಲ ಹಂಗೆ ಕ್ಯಾಮೆರಾನ ದಿಟ್ಟಿಸಿ ನೋಡಿ, "ನಮ್ಮೂರಿಗೆ...     ಕರೆಂಟ್ ಬಂತು ನೋಡ್ರಿ, ಎಲ್ಲಕ್ಕಿಂತ ಅದೇ ದೊಡ್ದು!  ಅದ್ಯಾವ ಪುಣ್ಯಾತ್ಮ ಕರೆಂಟ್ ಕಂಡ್ ಹಿಡಿದ್ನೋ ಅದೇ ದೊಡ್ಡ ವಿಷ್ಯಾ, ಕರೆಂಟ್ ಇಲ್ಲಾ ಅಂತಂದ್ರೆ ನಿಮ್ಮ ಆಟ ಏನೂ ನಡೆಯಂಗಿಲ್ಲ!" ಅಂದು ಬಿಡ್ತು.

    ತನ್ನ್ ಐಫೋನೇ ದೊಡ್ಡು ಅಂತ ಅಂದಕಂಡಿದ್ದ ಮೋಹಿನಿ ಮುಖಾ ಸಪ್ಪಗಾಯ್ತು.  ಎಮ್ಮೆಲ್ಲೆ ಸಾಹೇಬ್ರು ಮುಖದ ಮ್ಯಾಲೆ ಇದುವರೆಗೆ ತೇಲಾಡ್ತಿದ್ದ ತೆಳು ನಗೆ ಒಂದು ಕ್ಷಣಾ ನಿಲ್ತು.  ಸೇರಿದ್ದ ಜನ ಭೂತ ನೋಡಿದ್ರೇನೋ ಅನ್ನೋ ಹಂಗೆ ಒಂಥರಾ ಸ್ತಂಭೀಭೂತರಾದ್ರು.  ಇಷ್ಟರಾಗೆ ಸುಧಾರಿಸಿಕೊಂಡ ಸುಶೀಲಮ್ಮ ಚಪ್ಪಾಳೆ ಹೊಡ್ದು, "ಭಾಳಾ ಸತ್ಯವಾದ ಮಾತು..., ಸತ್ಯವಾದ ಮಾತು" ಅಂದು, ಮುಂದೆ "...ಕೇಕ್ ಕಟ್ ಮಾಡ್ರಿ?..." ಅಂತ ಆದೇಶ ಕೊಟ್ರು.  ಈ ಜನಗಳ ಈ ಪ್ರತಿಕ್ರಿಯೆಯನ್ನ ನಿರೀಕ್ಷೆ ಮಾಡಿರದ ಶಾಂತವಕ್ಕ ತನ್ನ ಮನಸ್ಸಿನೊಳಗೇ - "ಇವೆಲ್ಲ ನಿಮಗೆ ಈ ಜನಮದಾಗ ತಿಳಿಯಂಗಿಲ್ಲ ಬಿಡ್ರಿ" ಅಂದುಕೊಂಡ ಹಂಗಾಯ್ತು.

    ***
    ಈ ಲೇಖನ ಏಪ್ರಿಲ್ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.

    Sunday, January 26, 2014

    ದಿನಕ್ಕೊಂದು ಕಥೆ...

    ನಮ್ಮನೇಲಿ ಮಕ್ಕಳು ಮಲಗೋ ಹೊತ್ತಿಗೆ ದಿನಕ್ಕೊಂದೆರಡು ಕಥೆಗಳು ಹುಟ್ಟೇ ಹುಟ್ಟುತ್ತವೆ. ಅವುಗಳಿಗೆ ಮೇಲ್ಮೈಯಲ್ಲಿ ಯಾವುದೇ ನಿರ್ದಿಷ್ಟವಾದ structure ಇಲ್ಲದಿದ್ದರೂ ಅವುಗಳಲ್ಲಿ ಸಸ್ಪೆನ್ಸ್ ಅಥವಾ ಹಾಸ್ಯದ ಸನ್ನಿವೇಶ ಇರೋದು ಗ್ಯಾರಂಟಿ. ಪ್ರತಿಯೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು (problem sovling) ಬಗೆಹರಿಸುತ್ತೇವೆ, I am sure some king, or prince or princess or some merchant has some problem somewhere! ಅದರಿಂದ leadership skills ಬೆಳೆಯಬಹುದು ಎಂಬುದು ನನ್ನ ನಂಬಿಕೆ. ನನ್ನ ಕಥೆಗಳು ಕುವೆಂಪು ಅವರ ಕಥಾ ಸರಿತ್ಸಾಗರ ಮಂಜಣ್ಣನ ಕಥೆಗಳಂತಲ್ಲ, ಆದರೆ ನನ್ನ ಕಥೆಗಳಲ್ಲಿ ಅಲ್ಲಿ-ಇಲ್ಲಿಯ ಟ್ವಿಸ್ಟುಗಳಿವೆ, ತಲ್ಲಣಗಳಿವೆ, ಪ್ರಯೋಗಗಳಿವೆ. ಯಕ್ಷಗಾನದ ಒಂದೇ ಅಂಕಣದಲ್ಲಿ ಕಲಾವಿದರು - ಅತಳ ಸುತಳ, ಪಾತಾಳ, ಭೂಲೋಕ, ಮತ್ಸ್ಯಲೋಕ, ಸರ್ಪಲೋಕ, ದೈವಲೋಕಗಳನ್ನೆಲ್ಲ - ಕ್ಷಣಾರ್ಧಲ್ಲಿ ಹೋಗಿ ಹಿಂತಿರುಗಿ ಬರುವಂತ ಧಕ್ಷತೆ (efficiency) ಇದೆ. ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಒಂದಿಷ್ಟು ಕನ್ನಡವನ್ನು ಕಲಿಸಿಯೇ ತೀರುತ್ತೇನೆಂಬ ಛಲವಿದೆ. ಜೊತೆಗೆ ವಯೋಮಾನಕ್ಕೆ ತಕ್ಕ ಫಿಲ್ಟರ್ ಇದೆ.

    ***

    ನನ್ನ ಕೆಲವು ಕಥೆಗಳು ಮಕ್ಕಳ ಪ್ರಶ್ನೆಯನ್ನಾಧರಿಸಿ ಒಮ್ಮೊಮ್ಮೆ ದಿಢೀರ್ turnಗಳನ್ನು ತೆಗೆದುಕೊಳ್ಳುವುದುಂಟು, ನಿನ್ನೆಯ ಕಥೆಯಲ್ಲಿ ಹಾಗೇ ಆಯಿತು:

    ಒಬ್ಬ ರಾಜನಿದ್ದನಂತೆ

    ಅವನಿಗೆ ಮೂವರು ಗಂಡು ಮಕ್ಕಳು

    ಅವರಲ್ಲಿ ಹಿರಿಯವನು ಕುರುಡ, ಮಧ್ಯದವನು ಕಿವುಡ (ಕೆಪ್ಪ), ಕಿರಿಯವನು ಮೂಕ

    They were able to understand the concept of a blind boy (thanks to Dhritaraastra ?), but not deaf and mute, there were a lot of questions around why were they not able to talk or hear. it is interesting to note, these kids could not imagine why some kids are unable to speak or hear.

    ರಾಜನಿಗೆ ವಯಸ್ಸಾಗುತ್ತಾ ಬಂದ ಹಾಗೆ ತನ್ನ ಉತ್ತರಾಧಿಕಾರಿ ಯಾರು ಆಗಬೇಕು, ಆಗುತ್ತಾರೆ ಎನ್ನುವುದರ ಕುರಿತು ಚಿಂತೆಯಾಗತೊಡಗಿತು.


    So, we have a problem here, what do you think the Raaja should do, who should become the next king and why?

    My kids took turns and tried every one of the three sons - there were a lot of pros and cons that came out of it...believe me there were quite a lot.

    Finally, we didn't get a democratic conclusion between 2 kids and 3 potential alternatives (but I gave them more choices later)...the suspense started to build now -- more pressure on me, what option do I recommend, who do you think will be the next king in line and best yet, explain why?
    ಕುರುಡ - ನೋ.

    ಕಿವುಡ - ನೋ.

    ಮೂಕ...ನೋ.


    then who else? the king himself, he's old, no he can't.
    ರಾಜ ಗುರೂಜಿಯನ್ನು ಕರೆದನಂತೆ..."ಗುರೂಜಿ, ಏನು ಮಾಡೋದು, ನಿಮ್ಮ ಆಜ್ಞೆ ಅನುಸಾರ ನಡೀತೀನಿ, ಯಾರನ್ನು ರಾಜನನ್ನಾಗಿ ಮಾಡಲಿ?"


    Now, guruji (saint) is under stress...imagine the pressure, it is almost sleeping time...
    ಗುರುಜೀ ಹೇಳಿದ್ರು, "ರಾಜ, ನಿನ್ನ ಮಕ್ಕಳಲ್ಲಿ ಯಾರೂ ಮುಂದಿನ ರಾಜನಾಗೋದಕ್ಕೆ ಸಾಧ್ಯವಿಲ್ಲ...ಯಾಕೇ ಅಂದ್ರೆ..." list the drawbacks of every one of his sons becoming the next king...

    ರಾಜ, "ಹಾಗಿದ್ರೆ, ಮುಂದಿನ ರಾಜ ಯಾರು?"


    Now there is pin drop silence
    Guruji says, "Adopt an able kid from my Ashram, and he will be next king, however, your sons will get respective portfolios..." like ಸಬ್ ರಾಜಾಸ್


    there were quite a lot of interruptions here...questions, concerns and what not.

    Is the Queen okay with this?

    Story takes a sub-routine, where Rama and Bharata and their mommies had issues with who can be the next king, also, Inchara pointed out that Rama himself studied in Guruji's Ashram, not in the palace, but Ninad is still not conviced with Guruji's answer.
    ಗುರೂಜಿ, ಒಬ್ಬ ಒಳ್ಳೆಯ ಶಿಷ್ಯನನ್ನು ಅಪಾಯಿಂಟ್ ಮಾಡ್ತಾರೆ.

    ಜೊತೆಗೆ ರಾಜನ ಮೂವರು ಮಕ್ಕಳನ್ನು ಜೂನಿಯರ್ ಕಿಂಗ್ ಆಗಿ ಕೂಡ ಮಾಡ್ತಾರೆ...

    ಇಲ್ಲೇ ನಮ್ಮ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು...


    So, for 3 potential sub-kings we debate which portfolio we can give them in the kingdom....for quite some time....

    Finally
    ಕುರುಡನಿಗೆ - News media and mail service incharge

    ಕಿವುಡನಿಗೆ - Store room incharge

    ಮೂಕನಿಗೆ - Palace decoration and cleanliness incharge

    ಇವುಗಳಿಗೆಲ್ಲ - ಯಾಕೇ ಅಂದ್ರೆ ಅಂಥ ಸೇರಿಸಿ, ತುಂಬಾ ಕಾರಣಗಳನ್ನು ಕೊಡಬೇಕಾಗುತ್ತೆ...

    ರಾಜ ಹ್ಯಾಪ್ಪೀ, ಗುರೂಜಿ ಹ್ಯಾಪ್ಪೀ, ಸಬ್ ಕಿಂಗ್ಸ್ ಹ್ಯಾಪ್ಪೀ...


    The End!

    ಒಂದ್ಸರ್ತಿ ಕಥೆ ಮುಗಿದ ಮೇಲೆ, ನಾವು 2 minutes silence mode ಗೆ ಹೋಗ್ತೀವಿ. ಅಷ್ಟರಲ್ಲಿ ಒಬ್ಬರಲ್ಲ ಒಬ್ರು ನಿದ್ರಾ ದೇವಿಗೆ ಶರಣು ಹೋಗಿರ್ತಾರೆ...this formula works for me - try it, rinse & repeat!
    ***
    If it works or not, drop a line here...

    Tuesday, March 29, 2011

    ದದ್ದಾ, who made god?

    ವಂದಿಪೆ ನಿನಗೆ ಗಣನಾಥ
    ಮೊದಲೊಂದಿಪೆ ನಿನಗೆ ಗಣನಾಥ!

    ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
    ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

    ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
    ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

    ***

    ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

    ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

    ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

    ಪಲ್ಲವಿಯಲ್ಲಿ
    - who is 'ga na nA tha'?
    - why we have to worship him first ? (so you may use sub-story of kartikeya-ganesha race story, beware of more questions)
    - why ganesha has so many names?
    - what his friends call him?

    You think these are easy questions? Be careful... and remember that classic joke about Johny?

    Kid asks mom, "Mom, where am I from?"
    Mom blinks her eyes and begin to answer the question starting from creation, birth, etc
    Kid interrupts her, '...but Johny says he is from New Jersey..., where am I from?'

    ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

    ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
    ಫಸ್ಟ್ ಪ್ಯಾರಾ:
    -who is 'da r ma roya'?
    - why that guy worship ganesha?
    - what was he doing?
    - how old was he?
    - what is jaya? isn't that amma's friend's name? also your chikkamma has the same name?
    - how does ganesh know who does pooja?
    - why he helps?
    - and then what happened? 'ಆ ಮೆಲೆ ಏನು?' (screaming because i don't answer the questions immediately).

    ಸೆಕೆಂಡ್ ಪ್ಯಾರಾ:
    -who is ravnaa?
    -why he didn't do pooja? (his dad scold him?)
    -why he died?
    -who killed him? why?
    -'rana' means what?

    ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

    ***

    ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

    ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

    Again the same series of "Why's"...

    ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

    ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

    ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

    her question - 'why ganesha's mommy want him to wait at the door? she could have locked the door herself'.

    ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


    ***

    ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

    ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

    ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

    ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

    ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

    ***
    "ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

    ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

    ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!