Showing posts with label ವ್ಯವಸ್ಥೆ. Show all posts
Showing posts with label ವ್ಯವಸ್ಥೆ. Show all posts

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Saturday, July 19, 2008

ಕಗ್ಗಂಟನ್ನು ಬಿಡಿಸುವ ಬಗೆ ಹೇಗೆ?

ಚಿತ್ರವನ್ನು ಸುಮ್ಮನೇ ಬ್ಲಾಗ್‌ನಲ್ಲಿ ಹಾಕಿದರೆ ಅದೇ ಒಂದು ಬರಹ - ಬೇರೆ ಏನೂ ಹೇಳೋದೇ ಬೇಡ!

(ಚಿತ್ರ ಕೃಪೆ: http://discussions.virtualdr.com)


ನಮ್ಮ ಕಂಪನಿಯಲ್ಲಿ ಈಗಾಗಲೇ ಕೆಲಸಗಾರರ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ನೆಗೋಷಿಯೇಷನ್ನಲ್ಲಿ ತೊಡಗಿರುವ ಮ್ಯಾನೇಜ್‌ಮೆಂಟಿನವರು ಮುಂದೆ ಒಂದುವೇಳೆ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ಸರಿಹೊಂದದಿದ್ದಲ್ಲಿ ಅವರೇನಾದರೂ ಮುಷ್ಕರ ಹೂಡಿದರೆಂದರೆ ಕೆಲಸ ಕಾರ್ಯಗಳು ನಿಲ್ಲದಿರಲಿ ಎಂದು ಮ್ಯಾನೇಜ್‌ಮೆಂಟಿನ ಎಲ್ಲರಿಗೂ ಯೂನಿಯನ್‌ನವರ ಕೆಲಸಗಳಲ್ಲಿ ತರಬೇತಿಯನ್ನು ಕೊಡುವುದು ಮಾಮೂಲಿ. ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರಿಪೀಟ್ ಆಗುವಂತಹ ವ್ಯವಸ್ಥೆ. ಅದರಂತೆ ಈ ವರ್ಷ ನನಗೆ ಟೆಲಿಫೋನ್ ಲೈನ್‌ಗಳನ್ನು ಇನ್ಸ್ಟಾಲ್ ಹಾಗೂ ದುರಸ್ತಿ ಮಾಡುವ ಟ್ರೈನಿಂಗ್ ಕೊಡುತ್ತಿದ್ದಾರೆ. ಹಾಗೆ ನಾನು ಆ ತರಬೇತಿಗೆ ಹೋದ ಮೊದಲನೇ ದಿನ ಅಲ್ಲಿನ ಬಿಳಿ ಬೋರ್ಡಿನಲ್ಲಿ ಈ ಚಿತ್ರದ ಕಪ್ಪು-ಬಿಳಿ ಆವೃತ್ತಿಯೊಂದನ್ನು ತೂಗು ಹಾಕಿದ್ದರು. ನಾನು ಇದು ಎಲ್ಲಿಯದು ಎಂದು ಹತ್ತಿರ ಹೋಗಿ ನೋಡಲಾಗಿ ಅದು ಭಾರತದ್ದು ಎಂದು ತಿಳಿಯಿತು. ನಮ್ಮ ಕ್ಲಾಸಿನಲ್ಲಿ ನಾನೊಬ್ಬನೇ ಭಾರತೀಯ, ಈ ಚಿತ್ರವನ್ನು ನೋಡಿದ ಹೆಚ್ಚಿನವರು - ಭಾರತದಲ್ಲಿ (ಹೀಗೂ) ಹೀಗಿದೆಯೇ ಎಂದು ನನ್ನನ್ನು ಪ್ರಶ್ನಿಸುವವರಂತೆ ಮುಖ ಮುಖ ನೋಡಿಕೊಳ್ಳುತ್ತಿರಲು ನಾನೂ ಈ ಕ್ರಿಸ್‌ಕ್ರಾಸ್ ಆದ ಲೈನುಗಳು, ಅದರ ಹಿಂದಿನ ವ್ಯವಸ್ಥೆಯ ಬಗ್ಗೆ ತುಸು ಯೋಚಿಸಿಕೊಂಡೆ.

***

ಈ ಚಿತ್ರವನ್ನು ಬೇಕಾದಷ್ಟು ರೀತಿಯಲ್ಲಿ ವ್ಯಾಖ್ಯಾನಿಸಬಹುದು - ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಬಹುದು:
- ಹೀಗೆ ಗಂಟು-ಗಂಟಾದ ಫೋನ್, ಕೇಬಲ್, ಎಲೆಕ್ಟ್ರಿಕ್ ಲೈನ್‌ಗಳು ಇರುವುದೇ ಹೀಗೋ ಅಥವಾ ಯಾವುದೋ ದೊಡ್ಡ ಬಿರುಗಾಳಿಯ ನಂತರ ಹುಟ್ಟಿದ ಸ್ಥಿತಿಯೋ?
- ಇವುಗಳನ್ನು ರಿಪೇರಿ ಮಾಡುವ ಬಗೆ ಹೇಗೆ?
- ಈ ರೀತಿ ಹಾಸು ಹೊಕ್ಕಾದ ಲೈನುಗಳಲ್ಲಿ ಯಾರದ್ದು ಯಾವುದು ಎಂದು ಹೇಗೆ ಕಂಡು ಹಿಡಿಯಲಾಗುತ್ತದೆ?
- ಈ ಲೈನುಗಳಲ್ಲಿ ಯಾವುದೋ ಒಂದು ಕೆಟ್ಟು ಹೋದರೆ ಅದನು ದುರಸ್ತಿ ಹೇಗೆ ಮಾಡುತ್ತಾರೆ, ಮಾಡುವವರು ಯಾರು?
- ಇದು ಎಲ್ಲೋ ಬಾಂಬೆಯದೋ ಉತ್ತರ ಭಾರತದ್ದೋ ಚಿತ್ರವಿದ್ದಿರಬಹುದು, ಇದೇ ಚಿತ್ರವನ್ನು ಇಡೀ ಭಾರತದಾದ್ಯಂತ ಹೀಗೇ ಎಂದು ಜೆನರಲೈಸ್ ಮಾಡಲಾಗುತ್ತದೆಯೇ?
- ಅಷ್ಟೊಂದು ಜನರಿರುವ ವ್ಯವಸ್ಥೆಯಲ್ಲಿ ಒಂದು ಫೋನ್ ಲೈನ್‌ಗಳಿಗಾಗಲೀ, ಕೇಬಲ್, ಎಲೆಕ್ಟ್ರಿಕ್ ತಂತಿಗಳಿಗೆ ಸರಿಯಾದ ನೆಲೆ ಏಕಿಲ್ಲ?
- ಈ ವ್ಯವಸ್ಥೆಯ ವಿರುದ್ಧ ಅಥವಾ ಪರವಾಗಿ ನಿಮ್ಮ ಹೋರಾಟಗಳಿದ್ದಲ್ಲಿ ಎಲ್ಲಿಂದ ಆರಂಭಿಸುವಿರಿ?
- ನಿಮ್ಮ ಉದ್ಯಮ ಅಥವಾ ಮನೆಯ ಮುಖ್ಯ ಸಂಪರ್ಕ ವಾಹಿನಿಗಳು ಇದೇ ರೀತಿಯ ಕಗ್ಗಂಟಿನಲ್ಲಿ ಹಾದು ಹೋಗುವುದಾದರೆ ನಿಮ್ಮ ಪ್ರಾಸೆಸ್ಸುಗಳು ಹಾಗೂ ಅವುಗಳ ನಿಖರತೆ, ರಕ್ಷಣೆ ಮೊದಲಾದವುಗಳ ಮೇಲೆ ಎಷ್ಟರ ಮಟ್ಟಿನ ನಂಬಿಕೆ ಇಡಬಹುದು?
- ಈ ಲೈನುಗಳ ಮೇಲೆ ಹೊಸದನ್ನು ಹೇಗೆ ಇನ್ಸ್ತಾಲ್ ಮಾಡಲಾಗುತ್ತದೆ, ಹಳೆಯದನ್ನು ಹೇಗೆ ದುರಸ್ತಿ ಮಾಡಲಾಗುತ್ತದೆ?

***

ಬನಾರಸ್ಸಿನಲ್ಲಿ ನಾನಿದ್ದಷ್ಟು ದಿನಗಳಲ್ಲಿ ಅಲ್ಲಿಯ ಉತ್ತಮೋತ್ತಮ ಪ್ರೊಫೆಸರುಗಳ ಮನೆಗಳಲ್ಲಿ ಪ್ರತಿನಿತ್ಯವೂ ಸಂಜೆಯಾಗುತ್ತಿದ್ದಂತೆ ಮನೆಯ ಪಕ್ಕದ ಎಲೆಕ್ಟ್ರಿಕ್ ತಂತಿಗಳಿಗೆ ಅವರ ಮಹಡಿಯಿಂದ ಕೋಲಿನ ಸಹಾಯದಿಂದ ತಮ್ಮ ಮನೆಯ ತಂತಿಗಳನ್ನು ಸಿಕ್ಕಿಸಿ ಕರೆಂಟನ್ನು ಕದಿಯುವುದನ್ನು ಮೊಟ್ಟ ಮೊದಲು ನೋಡಿದಾಕ್ಷಣ ಅಂದೇ ನನಗೆ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ರೋಷ ಬಂದಿತ್ತು. ನಮ್ಮೂರಿನ ಹಳ್ಳಿಗಳಲ್ಲಿ ಎಷ್ಟೋ ಜನ ಹೀಗೆ ಕರೆಂಟ್ ಕದಿಯುವುದನ್ನು ನಾನು ಕೇಳಿದ್ದೇನೆಯೇ ವಿನಾ ಪ್ರತಿದಿನವೂ ಹಾಡಹಗಲಿನಲ್ಲಿ ಒಬ್ಬ ಉನ್ನತ ಹುದ್ದೆಯ ಪ್ರೊಫೆಸರ್ ಹೀಗೆ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿಕೊಂಡಿರಲಿಲ್ಲ. ಬನಾರಸ್ಸಿನಿಂದ ಹಾಗೇ ಬಿಹಾರದ ಕೆಲವು ಊರುಗಳಲ್ಲಿ ಸುತ್ತಿ ಬರಲಾಗಿ ನನ್ನ ಕಲ್ಪನೆಯ ಭಾರತದ ಚಿತ್ರ ಸಂಪೂರ್ಣ ಬದಲಾಗಿ ಹೋಗಿತ್ತು ಎಂದರೆ ತಪ್ಪೇನೂ ಇಲ್ಲ. ನಾವು ದಕ್ಷಿಣದವರು ಆಲೋಚಿಸುವ ರೀತಿ ಒಂದು ಥರವಾದರೆ ಉತ್ತರ ಭಾರತದವರ ಗುಂಗೇ ಮತ್ತೊಂದು ಬಗೆ. ದಕ್ಷಿಣ ಭಾರತವನ್ನು ನೋಡಿ ಅದೇ ಭಾರತ ಎಂದು ಹೇಳಲಾಗದು, ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಎಲ್ಲ ದಿಕ್ಕುಗಳಲ್ಲೂ ಸಾಕಷ್ಟು ಅಲೆದಾಡಿ ನೋಡಿದಾಗ ಭಾರತದ ಒಂದು ಸ್ವರೂಪ ಸಿಕ್ಕಬಹುದು.

Single point of failure - ಎನ್ನುವ ಒಂದು ಹೊಸ ಅನಾಲಿಸ್ಸೀಸ್ ಅನ್ನು ಮುಗಿಸಿ ನಮ್ಮ ಕಂಪನಿಯ ನೆಟ್‌ವರ್ಕ್‌ನಲ್ಲಿ ಎಲ್ಲಿ ತೊಂದರೆ ಇದೆ, ಯಾವುದು ವೀಕೆಷ್ಟ್ ಲಿಂಕ್ ಎನ್ನುವ ವರದಿಯೊಂದನ್ನು ಕಳೆದ ವರ್ಷ ಪ್ರಸ್ತುತ ಪಡಿಸಿದ್ದೆ. ಅದರಿಂದಾಗಿ ಎಲ್ಲೆಲ್ಲಿ ಕೊರತೆಗಳಿವೆಯೋ ಅವುಗಳನ್ನು ನೀಗಿಸಲು ಹಲವಾರು ಸಣ್ಣ ಯೋಜನೆಗಳನ್ನು ಜಾರಿಗೊಳಿಸಲಾಯಿತು, ಕಳೆದ ವರ್ಷದ ಈ ಚಟುವಟಿಕೆಗಳ ಫಲವಾಗಿ ಈ ವರ್ಷ ನಮ್ಮಲ್ಲಿ ದೊಡ್ಡ ತೊಂದರೆಗಳು ಕಡಿಮೆಯೇ ಎನ್ನಬಹುದು. ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ (end-to-end) ಯಾವುದೇ ವ್ಯವಸ್ಥೆಯನ್ನು ನೋಡಿದರೆ ಅದರಲ್ಲಿ ವೀಕೆಷ್ಟ್ ಲಿಂಕ್‌ನ ಸ್ಟ್ರೆಂತ್ ಏನಿದೆ ಅದೇ ಆ ನೆಟ್‌ವರ್ಕ್‌ನ ಸ್ಟ್ರೆಂತ್ ಆಗುತ್ತದೆ. ಉದಾಹರಣೆಗೆ ಈ ಚಿತ್ರದಲ್ಲಿ ತೋರಿಸಿದ ತಂತಿಗಳ ಮೂಲಕ ನಿಮ್ಮ ಸಂಪರ್ಕ, ಕೇಬಲ್, ಎಲೆಕ್ಟ್ರಿಸಿಟಿ ಹಾದು ಬರುತ್ತಿದೆಯೆಂದಾರೆ, ಅದರಲ್ಲಿನ ಕೊರತೆಯೇ ನಿಮ್ಮ ಕೊರತೆಯಾಗುತ್ತದೆ - ಯೋಚಿಸಿ ನೋಡಿ.

ನಿಜ ಜೀವನದಲ್ಲಿ ನಿಮ್ಮೆದುರಿಗೆ ಹೀಗೆ ದುತ್ತನೆ ಎದುರಾಗುವ ಸಮಸ್ಯೆಯ ಕಗ್ಗಂಟನ್ನು ಎಲ್ಲಿಂದ ಬಿಡಿಸಲು ಆರಂಭಿಸುತ್ತೀರಿ? ಯಾರನ್ನು ಕಾಣುತ್ತೀರಿ? ಯಾರಿಗೆ ಉತ್ತರ ಹೇಳುತ್ತೀರಿ?

Saturday, June 28, 2008

ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ

ನೀವು ನನ್ನ ಹಾಗೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ್ದರೆ ಇನ್ನೇನು ಇಂಗ್ಲೀಷರು ಭಾರತವನ್ನು ಬಿಟ್ಟು ಹೋದರು ನಾವೆಲ್ಲ ನಮ್ಮ ನಮ್ಮ ಮೂಲ ಸಂಸ್ಕೃತಿಯಲ್ಲಿ ಬೆಳೆಯುತ್ತೇವೆ ಬದುಕುತ್ತೇವೆ ಎಂದು ಒಳಗೊಳಗೆ ಅಂದುಕೊಳ್ಳುತ್ತಲೇ ಮಾತಿನ ಮಧ್ಯೆ ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ಪೋಷಕರೋ ಸಂಬಂಧಿಕರ ನಡುವೆ ಬೆಳೆದು ಬಂದಿರುತ್ತೀರಿ. ’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು!’ ಎನ್ನುವ ಹಾಡಿನ ಗುಂಗಿನಲ್ಲಿ ಬೆಲ್ ಬಾಟಮ್ ಪ್ಯಾಂಟುಗಳನ್ನು ಧರಿಸಿಕೊಂಡಿರುತ್ತೀರಿ. ಆಗಷ್ಟೇ ನಾಯಿಕೊಡೆಗಳಂತೆ ಎಲ್ಲೆಲ್ಲೆ ಬೇಕು ಅಲ್ಲಲ್ಲಿ ತಲೆ ಎತ್ತಿ ನಿಂತು ತಮ್ಮನ್ನು ತಾವು ಸೃಷ್ಟಿಯಲ್ಲಿ ಲೀನವಾಗಿಸಿಕೊಳ್ಳಲು ಸಾಹಸ ಮಾಡುವ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸುವವರನ್ನು ನೋಡಿ ಬೆರಗಾಗಿರುತ್ತೀರಿ. ಆಗಷ್ಟೇ ಕಣ್ತೆರೆಯುತ್ತಿದ್ದ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಎನ್ನುವ ವರ್ತುಲದಲ್ಲಿ ನೀವೂ ತೊಡಗಿಕೊಂಡಿದ್ದು, ಸಾಗರ-ಸೊರಬದಂತಹ ಹಳ್ಳಿಯೂರುಗಳಲ್ಲೂ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಆಬ್ಜೆಕ್ಟಿವ್ ಪರೀಕ್ಷೆಗಳ ಪ್ರಭಾವಕ್ಕೊಳಗಾಗಿರುತ್ತೀರಿ.

ಹೀಗೆ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ನಾವು Y2K ಗೆ ತಯಾರಿ ಮಾಡಲೆಂದು ಸಿಸ್ಟಮ್ ಪ್ಲಾನಿಂಗ್ ಮೀಟಿಂಗ್ ಸೇರಿ ಇಂದಿಗೆ ಹತ್ತು ವರುಷಗಳು ಕಳೆದು ಹೋದವು! ಹೀಗೆ ಕಳೆದ ಮೂರು ದಶಕಗಳಲ್ಲಿ ಉಪೇಂದ್ರನ ’ಡೇಂಜರ್’ ಹಾಡಿನ ಎಫೆಕ್ಟ್ ಏನೂ ಅಷ್ಟೊಂದು ಗೊತ್ತಾಗದಿದ್ದರೂ ನನ್ನಲ್ಲಿ ನನ್ನ ಸುತ್ತಲಿನಲ್ಲಿ ಆದ ಬೇಕಾದಷ್ಟು ಬದಲಾವಣೆಗಳು ಇಂದು ಅದೇನನ್ನೋ ಯೋಚಿಸಿಕೊಂಡು ಹಳೆಯ ಫೈಲ್ ಒಂದನ್ನು ಹುಡುಕಿಕೊಂಡು ಹೋದವನಿಗೆ ಕಣ್ಣ ಮುಂದೆ ಸುಳಿದು ಹೋದವು.

ಈ ಕಂಪ್ಯೂಟರುಗಳು ಒಂದಲ್ಲ ಒಂದು ನಮ್ಮ ಮನೆಯ ಫೋನ್ ಆದ ಹಾಗೆ ಆಗುತ್ತವೆ ಎಂದು ಯಾರೋ ಹೇಳಿದ್ದು ನಿಜವಾಗಿದೆ ಅನ್ನಿಸುತ್ತೆ. ಹತ್ತು ವರ್ಷದ ಹಿಂದೆ ದಿನಕ್ಕೆ ಪರ್ಸನಲ್ ಕೆಲಸಗಳಿಗೆಂದು ನಾಲ್ಕೈದು ಘಂಟೆಗಳನ್ನು ಕಳೆಯುತ್ತಿದ್ದವನಿಗೆ (ಅದರಲ್ಲೂ ವೀಕೆಂಡಿನಲ್ಲಿ ಇನ್ನೂ ಹೆಚ್ಚು), ಇಂದೆಲ್ಲ ಪರ್ಸನಲ್ ಬಳಕೆಗೆಂದು ಕಂಪ್ಯೂಟರ್ ಉಪಯೋಗ ಅತ್ಯಂತ ಮಿತವಾಗಿದೆ ಎಂದೇ ಹೇಳಬೇಕು: ಎಲ್ಲೋ ಒಂದಿಷ್ಟು ಇ-ಮೇಲ್‌ಗಳನ್ನು ನೋಡಬೇಕು, ಕೆಲವಕ್ಕೆ ಉತ್ತರಿಸಬೇಕು, ಇನ್ನು ದಿನದ ಸುದ್ದಿ ವಿಶೇಷಗಳನ್ನೂ ಓದಿ/ಕೇಳುವುದಕ್ಕೆ ಮೊದಲಿನ ತರಾತುರಿಯಿಲ್ಲದಿರುವುದು ವಿಶೇಷವೇ ಸರಿ, ಜೊತೆಗೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ನೋಡುವುದಾಗಲೀ ಆಡಿಯೋ ಕೇಳುವುದಾಗಲೀ ಬಹಳ ಅಪರೂಪವೆಂದೇ ಹೇಳಬೇಕು. ಮೊದಲೆಲ್ಲ ಇದ್ದ Hy factors ಗಳಿಗೂ ಇಂದಿನ ಅವೇ ಫ್ಯಾಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. Hy factors ಎಂದರೆ ಏನು ಎಂದಿರಾ? ಅವೇ - Happy, Hobby, Hungry ಮೊದಲಾದವುಗಳು. ಅವರವರ ಹಸಿವು, ದಾಹ, ಸಂತೋಷ-ದುಃಖ, ಹವ್ಯಾಸ ಮೊದಲಾದವುಗಳ ಮೇಲೆ ಅವುಗಳನ್ನು ಅವಲಂಭಿಸಿದ ಅಗತ್ಯಗಳ ಮೇಲೆ ತಾನೆ ಅವರವರ ಚಟುವಟಿಕೆಗಳು ಸುತ್ತುವರೆದಿರೋದು? (ನಿಮಗೇನಾದರೂ ಬೇರೆ Hy factor ಗಳು ಗೊತ್ತಿದ್ದರೆ ತಿಳಿಸಿ).

ಅಂದಿಗಿಂತ ಇಂದು ಇನ್‌ಫರ್ಮೇಷನ್ ಲೋಕ ಬದಲಾಗಿದೆ, ಅಂದು ಸಿಗುತ್ತಿದ್ದ ಒಂದೊಂದು ವೆಬ್ ಸೈಟ್‌ಗಳಿಗೂ ಇಂದು ಅದರ ಹತ್ತು-ನೂರರ ಪಟ್ಟು ಹೆಚ್ಚು ವೆಬ್ ಸೈಟ್‌ಗಳು ಸಿಗತೊಡಗಿವೆ. ಆದರೆ ಇವೆಲ್ಲದರಲ್ಲೂ ಯಾವುದೇ ಆಸಕ್ತಿ ಎನ್ನುವುದು ಇಲ್ಲದಿರುವುದು ನನಗೊಬ್ಬನಿಗೆ ಮಾತ್ರ ಆಗಿಲ್ಲವಷ್ಟೇ? ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳನ್ನು ನಾನು ಬೆನ್ನೆತ್ತಿ ಹೋಗುತ್ತಿದ್ದ ಕಾಲವೊಂದಿತ್ತು, ಏಷ್ಯಾದಿಂದ ಹಿಡಿದು ಅಂಟಾರ್ಟಿಕಾವರೆಗಿನ ವಿದ್ಯಮಾನವನ್ನು ಪ್ರಪಂಚದ ಬೇರೆ ಬೇರೆ ಮಾಧ್ಯಮದವರು ಹೇಗೆ ಬಿಂಬಿಸಿದ್ದಾರೆ ಎಂದು ತೂಗಿ ನೋಡುವುದಿತ್ತು, ಪಾಕಿಸ್ತಾನದ Dawn ನಿಂದ ಹಿಡಿದು, BBC ಮೊದಲಾದವರ ವೆಬ್ ‌ಸೈಟ್‌ಗಳನ್ನು ತಡಕಿ ನೋಡುವುದಿತ್ತು. ಇಂದೆಲ್ಲ ಈ ಪ್ರಪಂಚದಲ್ಲಿ ಕಚ್ಚಾಡಿಕೊಂಡಿರುವವರು ಯಾವಾಗಲೂ ಇದ್ದೇ ಇರುತ್ತಾರೆ ಎನ್ನುವುದು ಗ್ಯಾರಂಟಿಯಾದಂದಿನಿಂದ - ಅವರಲ್ಲಿ ಕಚ್ಚಾಡಿಕೊಂಡು ಹೊಡೆದಾಡಿ ಸತ್ತರೆ ನಾನೇಕೆ ಇಲ್ಲಿ ತಲೆಕೆಡಿಸಿಕೊಳ್ಳಲಿ? - ಎನ್ನುವ ಉದಾಸೀನ ಮೈತುಂಬಿಕೊಂಡಿದೆ. ಕರ್ನಾಟಕದ ರಾಜ್ಯಕಾರಣವೆಂದರೆ ಇನ್ನಾದರೂ ಸ್ವಲ್ಪ ಆಸಕ್ತಿ ಇರೋ ವಿಷಯ, ಅದೇ ಆಸಕ್ತಿ ನನಗೆ ಭಾರತದ ಮಟ್ಟದಲ್ಲಾಗಲೀ ಅಮೇರಿಕದ ವಿಷಯಕ್ಕಾಗಲೀ ಹೋಲಿಸಿಕೊಂಡರೆ 2004 ರಲ್ಲಿ ಬುಷ್-ಕೆರ್ರಿ ಅವರ ಪ್ರತಿಯೊಂದು ಡಿಬೇಟುಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನಿಗೆ ಈ ವರ್ಷ ಆ ಆಸಕ್ತಿಯೂ ಇಲ್ಲವೆಂದೇ ಹೇಳಬೇಕು. ಈ ಯಡಿಯೂರಪ್ಪನ ಸರ್ಕಾರವೇನಾದರೂ ಇನ್ನೊಂದು ವರ್ಷದಲ್ಲಿ ಬಿದ್ದು ಮತ್ತೆ ಅತಂತ್ರ ವ್ಯವಸ್ಥೆ ಉದ್ಭವವಾದರೆ ಕರ್ನಾಟಕದ ರಾಜಕೀಯ ಸ್ಥಿತಿಗತಿಯೂ ನನ್ನ ಆಸಕ್ತಿಯಿಂದ ಮರೆಯಾಗುವುದರಲ್ಲಿ ಸಂಶಯವಂತೂ ಇಲ್ಲ.

ಏನಾಗಿದೆ ನನಗೆ? ನನ್ನ Hy factor ಗಳ ವ್ಯಾಪ್ತಿ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ? ನನ್ನ ಬದಲಾವಣೆಗಳಿಗೆ ಕನ್ನಡಿ ಅನ್ನೋ ಹಾಗೆ ನನ್ನ ಇಂಟರ್ನೆಟ್ ಬ್ರೌಸಿಂಗ್ ಹ್ಯಾಬಿಟ್ಟನ್ನೇ ತೆಗೆದುಕೊಂಡರೆ ಅಗತ್ಯವಿದ್ದಷ್ಟು ಆನ್‌ಲೈನ್ ಮ್ಯಾಪ್, ಮಿತವಾದ ಪರ್ಸನಲ್ ಇ-ಮೇಲ್‍ಗಳು (unsolicited ಇ-ಮೇಲ್‌ಗಳು ತಮ್ಮಷ್ಟಕ್ಕೆ ತಾವೇ ಕಸದ ಬುಟ್ಟಿಗೆ ಹೋದ ಬಳಿಕ), ಬ್ಯಾಂಕ್ ಅಕೌಂಟುಗಳು (ಬಿಲ್ ಪೇಮೇಂಟ್‌ಗೆಂದು), ಫೈನಾನ್ಸಿಯಲ್ ಹೆಡ್‌ಲೈನ್ಸುಗಳು (ಸ್ಟಾಕ್ ಮಾರ್ಕೆಟ್ಟಿನ ಮೇಲೆ ಕಣ್ಣಿಟ್ಟುಕೊಂಡೇ ಇರಬೇಕಲ್ಲ ಅದಕ್ಕೆ), ಇವೆಲ್ಲದರ ಜೊತೆಗೆ ನಮ್ಮನೆ ಕಂಪ್ಯೂಟರಿನ ಹೋಮ್ ಪೇಜ್ ಆದ ಪ್ರಜಾವಾಣಿಯ ಹೆಡ್‌ಲೈನ್‌ಗಳನ್ನು ಇಪ್ಪತ್ತು ಸೆಕೆಂಡು ಜಾಲಾಡಿ ನೋಡುವುದನ್ನು ಬಿಟ್ಟರೆ ಮತ್ತೆ ಹೆಚ್ಚು ಹೊತು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಕಷ್ಟವೆಂದೇ ಹೇಳಬೇಕು. ಮೊದಲೆಲ್ಲ ಉಳಿದವರ ಬ್ಲಾಗ್‌ಗೆ ಹೋಗಿ ಓದಿ, ಅಪರೂಪಕ್ಕೆ ಕಾಮೆಂಟುಗಳನ್ನು ಬಿಡುತ್ತಿದ್ದವನು ಇಂದು ಅದನ್ನು ಮಿತಿಗೊಳಿಸಿದ್ದೇನೆಂದು ಹೇಳಿಕೊಳ್ಳುವುದಕ್ಕೇ ಕಷ್ಟವೆನಿಸುತ್ತದೆ. ಆಗೆಲ್ಲ ಒಂದೇ ದಿನ ಐದು-ಆರು-ಎಂಟು ಘಂಟೆಗಳಷ್ಟು ಹಲವಾರು ವ್ಯಕ್ತಿಗಳೊಡನೆ ಧೀರ್ಘವಾದ ಚಾಟ್ ಮಾಡುತ್ತಿದ್ದವನು ಇತ್ತೀಚೆಗೆ ವಾರಕ್ಕೊಮ್ಮೆಯೂ ಒಬ್ಬರಿಗೂ ’ಹಾಯ್’ ಹೇಳದ ಮಟ್ಟಕ್ಕೆ ಬಂದಿಳಿದಿದ್ದೇನೆ! ಆಫೀಸಿನಲ್ಲೂ ಅಷ್ಟೇ ಇನ್ಸ್ಟಂಟ್ ಮೆಸ್ಸೇಜ್ ಸಂಭಾಷಣೆಗಳು ನೀರಸವೆನ್ನಿಸತೊಡಗಿ ಪಕ್ಕದಲ್ಲಿನ ಫೋನ್ ಎತ್ತಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾತನಾಡಿ ಆಗಬೇಕಾದ ಕೆಲಸವನ್ನು ಮುಗಿಸಿಕೊಳ್ಳುತ್ತೇನೆ.

ಈ ಇಂಟರ್ನೆಟ್ ಎಂದರೆ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ - ನೆನಪಿದೆಯಾ ನಿಮಗೆ ನಿಮ್ಮ ಸುತ್ತಮುತ್ತಲೂ ಅಗಾಧವಾದ ಪುಸ್ತಕಗಳ ರಾಶಿಯೇ ಇದ್ದರೂ ನೀವು ನಿಮಗೆ ಬೇಕಾದ ಯಾವುದೋ ಒಂದು ಪುಸ್ತಕಕ್ಕಂಟಿಕೊಂಡು ದಿನಪೂರ್ತಿ ಅದೇ ಲೈಬ್ರರಿಯಲ್ಲಿ ಕಳೆಯುತ್ತಿದ್ದುದು? ಒಂದು ಕಾಲದಲ್ಲಿ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿನ ನನಗೆ ಬೇಕಾದ ಲೇಖಕರ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುವ ದಾಹವಿದ್ದವನಿಗೆ ಇಂದು ಅದೇ ವಾತಾವರಣದಲ್ಲಿ ಬಿಟ್ಟರೆ ಯಾವೊಂದು ಪುಸ್ತಕವನ್ನು ತೆಗೆದು ಓದುತ್ತೇನೆ ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ನಮ್ಮ ಮನೆಗೆ ನ್ಯೂ ಯಾರ್ಕ್ ಟೈಮ್ ನ್ಯೂಸ್ ಪೇಪರನ್ನು ತರಿಸೋಣವೆಂದುಕೊಂಡರೆ ಅದನ್ನು ಓದೋರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆಂಬ ಉತ್ತರ ಬಂತು. ಎಲ್ಲಾದರೂ ಬಿಸಿನೆಸ್ ಟ್ರಿಪ್‌ನಲ್ಲಿ ನಾನುಳಿದುಕೊಳ್ಳುವ ಹೋಟೇಲಿನಲ್ಲಿ ಪುಕ್ಕಟೆ ನ್ಯೂಸ್ ಪೇಪರನ್ನು ಕೊಟ್ಟರೂ ಓದದೇ ಇರುವ ಪರಿಗೆ ಬಂದು ತಲುಪಿದ್ದೇನೆ ಎಂದು ಹೇಳಿಕೊಳ್ಳಲು ಹೆದರಿಕೆಯಾಗುತ್ತದೆ. ನಿನ್ನೆಯವರೆಗೆ ನಡೆದ ವಿಶ್ವದೆಲ್ಲ ಸುದ್ದಿಗಳನ್ನು ಇಂತಿಷ್ಟೇ ಪುಟಗಳಲ್ಲಿ ಹೀಗೇ ಕಟ್ಟಿ ಹಿಡಿಯುತ್ತೇವೆ ಎನ್ನುವ ಹಠವಾದಿಗಳ ಅಗತ್ಯ ಈಗಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ ಬೇಕು ಹೇಳಿ, ಹಾಗೆ ಮುಕ್ತವಾಗಿ ಸಿಗುವ ವಿಷಯಗಳನ್ನೆ ನಮ್ಮ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಓದದಿರುವ ನಾವು ಇನ್ನು ಭೌತಿಕ ಪುಟಗಳನ್ನು ತಿರುಗಿಸಿ ಓದುವುದು ನಿಜವೇ?

ಇವತ್ತಿಗೆ ನನ್ನ ಸ್ವ ಇಚ್ಛೆಯಿಂದ ರೇಡಿಯೋವನ್ನು ಕೇಳದೆ ಆರು ತಿಂಗಳು ಸಂದವು. ಹಿಂತಿರುಗಿ ನೋಡಿದರೆ ನಾನು ಕಳೆದುಕೊಂಡದ್ದೇನು ಇಲ್ಲ ಅನ್ನುವ ವಾದಕ್ಕೆ ಪೂರಕವಾದ ಅಂಶಗಳೇ ಹೆಚ್ಚು ಎನ್ನಿಸುತ್ತಿರುವುದು ಈ ಹೊತ್ತಿನ ತತ್ವಗಳಲ್ಲೊಂದು. ಇತ್ತೀಚೆಗೆ ಟಿವಿಯಲ್ಲಿ ಬೇಕಾದಷ್ಟು ಸಿಗುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯೂ ಅಷ್ಟೊಂದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಹೊತ್ತಿಗೆ ನನ್ನ ಫೇವರೈಟ್ ಕಮಿಡಿಯನ್ George Carlin ಸತ್ತು ಹೋದ ವಿಷಯ ನಿನ್ನೆ ಆಫೀಸಿನಲ್ಲಿ ಯಾರದ್ದೋ ಇನ್ಸ್ಟಂಟ್ ಮೆಸ್ಸೇಜಿನ ಸೇಟಸ್ಸ್ ಮೆಸ್ಸೇಜಿನ ಮೂಲಕ ಗೊತ್ತಾಯಿತು - One good thing about being dead is you automatically qualify for putting your picture on stamps and notes! ಅಡಿಗರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಅದೆಷ್ಟೋ ವರ್ಷಗಳ ಹಿಂದೆ ಬರೆದದ್ದೂ, ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಸಂಸಾರ ಸೋಜಿಗವನ್ನು ಸರಳ ವಿಷಯ-ವಸ್ತುಗಳಲ್ಲಿ ಹಿಡಿದದ್ದೂ ನನ್ನನ್ನಂತೂ ಅಗಾಧವಾಗಿ ಕಾಡಿಸುತ್ತಲೇ ಎನ್ನಬಹುದು. ನಾವಂತೂ ಇತ್ತೀಚೆಗೆ ಧೀರ್ಘವಾಗಿ ಗಾಢವಾಗಿ ಅದೇನನ್ನು ಓದಿಲ್ಲವಾದರೂ ಅಲ್ಲಲ್ಲಿ ಸಿಗುವ ಈ ಹಳೆಯ ಗ್ರಂಥಗಳ ಪುಟಗಳು ನನ್ನನ್ನು ಯಾವತ್ತೂ ಒಂದು ಕ್ಷಣ ನಿಲ್ಲಿಸಿಯೇ ನಿಲ್ಲಿಸುತ್ತವೆ - ಅದು ಮಾತ್ರ ಬದಲಾಗಿಲ್ಲ ಎನ್ನುವುದೇ ಸಂತೋಷದ ವಿಷಯ.

ಈ information overload ಕಾಲದಲ್ಲಿ ಈಗಷ್ಟೇ ಇನ್ನೂ ಮೂರೂವರೆ ದಶಕಗಳನ್ನು ಪೂರೈಸಿಕೊಂಡು ದಿನದಿನಕ್ಕೂ ಪ್ರಬುದ್ಧಗೊಳ್ಳುತ್ತಿರುವ (ಅಥವಾ ಹಾಗೆಂದುಕೊಂಡು) ಮೈಮನಗಳಿಂದ ಜಗತ್ತನ್ನು ನೋಡುವ ನನ್ನ ಪರಿ ಇನ್ನು ಇಷ್ಟೇ ವರ್ಷಗಳಲ್ಲಿ ಅದೇನೇನೂ ಬದಲಾವಣೆಗಳನ್ನು ತಾಳುವುದಿದೆಯೋ? 2000 ದ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರಿಗಿಂತ ಮೊದಲು ನೋಂದಾವಣೆ ಮಾಡಿಸಿಕೊಂಡು ಹೋಗಿ ಖುಷಿಯಾಗಿ ವಾಪಾಸು ಬಂದಿದ್ದ ನನಗೆ ಇಂದು 2008 ರ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಲು ಅಷ್ಟೊಂದು ಮನಸ್ಸು ಬಾರದಿರುವುದು ಏಕೆ ಎಂದು ಕೇಳಿಕೊಳ್ಳುತ್ತಲೇ ಇರುವಂತಾಗಿರುವುದು ವಿಶೇಷ. ನಮ್ಮದೇ ಆದದ್ದನ್ನು ಬರೆಯುವ ವ್ಯವಧಾನ ಆಸಕ್ತಿ ಹಗುರವಾಗುತ್ತಾ ಬಂದ ಹಾಗೆ ಇನ್ನೊಬ್ಬರದನ್ನು ಓದುವ ಕಾಳಜಿ ಕಳಕಳಿ ದೂರವಾಗದಿದ್ದರೆ ಸಾಕು. ಸುತ್ತಮುತ್ತಲಿನಿಂದ ದೂರವಿದ್ದುಕೊಂಡು ಸ್ವಯಂ ಅನ್ನೇ ಸರ್ವಸ್ವ ಎಂದುಕೊಂಡು ಈ ದೊಡ್ಡ ಜಗದ ಚಿಕ್ಕ ಗೂಡಿನೊಳಗೆ ಮನಸ್ಸು ಹೂತು ಹೋಗದಿದ್ದರೆ ಸಾಕು. ಬೆಟ್ಟದಷ್ಟು ಬಿದ್ದುಕೊಂಡಿರುವ ಕಸದಲ್ಲಿ ರಸವನ್ನು ಹುಡುಕಿ ತೆಗೆದು ಅದನ್ನು ಅರಗಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಇಂದು ಹೆಚ್ಚಿನ ಶ್ರಮ ಬೇಕು ಅನ್ನುವುದಕ್ಕೆ ನನ್ನನ್ನು ಕೇಳಿ - ಮೊದಲೆಲ್ಲ ಸ್ನೇಹಿತರು ಈ ಪುಸ್ತಕವನ್ನು ಓದಿ/ಓದಿದೆ - ಎನ್ನುತಲಿದ್ದರು, ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬೇಕು.

ನಿಮ್ಮ ನಿಮ್ಮ (ಬದಲಾಗುತ್ತಿರುವ) Hy factor ಗಳ ಅವಸ್ಥೆ/ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೀವು ಬದಲಾಗಿದ್ದೀರಿ ಎಂದುಕೊಂಡಿದ್ದೀರೇನು?

Saturday, May 31, 2008

ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ

’ಅದೆಲ್ಲಾ ಏನೂ ಬೇಡಾ ಸಾರ್, ನಾನು ಅಲ್ಲಿಂದಿಲ್ಲಿಗೆ ಓಡಾಡ್ತಾ ಇರೋವಾಗ ಉಪಯೋಗಿಸೋದಕ್ಕೆ ಒಂದು ಫೋನ್ ಇದ್ರೆ ಸಾಕು’ ಅಂತ ನಮ್ಮ ಮೊಬೈಲ್ ಫೋನ್ ಕಂಪನಿಯವರ ಹತ್ರ ಹೇಳಿ ಒಂದು ಸಾಧಾರಣ ಮೊಬೈಲ್ ಫೋನ್ ಇಟ್ಕೊಂಡೇ ಇರೋದನ್ನ ನೋಡಿದ ವೈರ್‌ಲೆಸ್ ಕಂಪನಿ ಸೇಲ್ಸ್‌ಮ್ಯಾನ್ ನನ್ನನ್ನ ಯಾವ್ದೋ ಶಿಲಾಯುಗದ ಪಳಯುಳಕೆಯನ್ನು ನೋಡಿದ ಹಾಗೆ ನೋಡಿ ಒಂದು ಲುಕ್ ಕೊಟ್ಟ.

ಹತ್ತೊಂಬತ್‌ ನೂರಾ ತೊಂಭತ್ತೆಂಟರಲ್ಲಿ ನಾನು ನನ್ನ ಮೊಬೈಲ್ ಫೋನ್ ಸಮೇತನಾಗಿ ಇಂಡಿಯಾಕ್ಕೆ ಹೋಗಿದ್ದಾಗ ಅಲ್ಲಿ ಇನ್ನೂ ಅದೇ ತಾನೇ ಫೋನ್ ರೆವಲ್ಯೂಷನ್ ಆಗ್ತಾ ಇದ್ರೂ ಸಹ ನನ್ನಣ್ಣ ನನ್ನ ಫೋನ್ ನೋಡಿ ’ಇದೇನು ಕಾರ್ಡ್‌ಲೆಸ್ ಫೋನ್ ಥರಾ ಇದೆ!’ ಅಂತ ತಮಾಷೆ ಮಾಡಿದ್ದು ನನಗಿನ್ನೂ ನೆನಪಿನಿಂದ ಮಾಸಿ ಹೋಗಿಲ್ಲ. ಅಲ್ಲೇನು? ಸಿಂಗಪುರ, ಹಾಂಗ್‌ಕಾಂಗ್, ತೈವಾನ್‌ನಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ಆಕರ್ಷಕವಾಗಿ ಸಿಗುತ್ವೆ, ದಿನಕ್ಕೊಂದು ಮಾಡೆಲ್ ಸಸ್ತಾದಲ್ಲೂ ಸಿಗುತ್ತೆ, ನೋಡೋಕೂ ಚೆನ್ನಾಗಿರುತ್ತೆ. ಈ ಅಮೇರಿಕದವರು ಟೆಕ್ನಾಲಜಿಯಲ್ಲಾಗಲೀ, ಇಂಟರ್ನೆಟ್ ಬಳಕೆಯಲ್ಲಾಗಲೀ ಏಷಿಯಾ ದೇಶಗಳಿಗಿಂತ ಹಿಂದಿದ್ರೆ ಅದು ನನ್ನ ತಪ್ಪೇ?

ಇತ್ತೀಚೆಗೇನಪ್ಪ ಎಲ್ಲರೂ ಬ್ಲ್ಯಾಕ್‌ಬೆರಿ ಹಿಡಕೊಂಡು ಓಡಾಡೋ ಕಾಲ, ಅದಿಲ್ಲದೇ ಹೋದ್ರೆ ಐ-ಫೋನ್ ಆದ್ರೂ ಜನ ಇಟ್ಕೊಂಡಿರೋದು ನಾರ್ಮು. ನಮ್ಮಂಥೋರು ಅದೇ ಹಳೇ ಫೋನುಗಳಿಗೆ ಗಂಟು ಬಿದ್ದುಕೊಂಡಿರೋದಂತೂ ನೋಡೋಕೂ ಸಿಗೋಲ್ಲ ಅನ್ನೋ ಕಾಲ. ಇರೋ ಡಿವೈಸ್‌ನಲ್ಲೇ ನನಗೆ ಬೇಕಾದ ಕೆಲಸಗಳನ್ನೆಲ್ಲ ಮಾಡಿಕೊಂಡಿದ್ರೆ ಸಾಲ್ದೇ ಅನ್ನೋದು ನಾನು ಅವಾಗಾವಾಗ ನನಗೇ ಹೇಳಿಕೊಂಡಿರೋ ಕಾರಣ ಅಷ್ಟೇ.

***

ಇವೆಲ್ಲ ಯಾಕೆ ಹೇಳಬೇಕಾಗಿ ಬಂತೂ ಅಂತಂದ್ರೆ - ಇತ್ತೀಚೆಗೆ ಹೊಸದೊಂದು ಕಾನ್ಸೆಪ್ಟ್ ಶುರು ಮಾಡಿದೀನಿ, ಅದೇ ಬ್ಲ್ಯಾಕ್‌ಬೆರಿ ರೆಸಿಸ್ಟೆನ್ಸ್ ಅಂತ. ಅದೇನಪ್ಪ ಅಂದ್ರೆ ಸರಳವಾಗಿ - ನಾನು ಬ್ಲ್ಯಾಕ್‌ಬೆರಿ ಉಪಯೋಗಿಸೋಲ್ಲ ಅನ್ನೋ ವಾದ, ಇನ್ನೂ ಕ್ಲಿಯರ್ ಆಗಿ ಹೇಳಬೇಕು ಅಂತಂದ್ರೆ ನನಗೀಗ ಅದರ ಅಗತ್ಯ ಇಲ್ಲಾ ಅನ್ನೋ ನೆಪ.

ದಿನದ ಹತ್ತು ಘಂಟೆ ಆಫೀಸ್ ಸಮಯದಲ್ಲಿ ಕೊನೇಪಕ್ಷ ಐದು ಘಂಟೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋ ಕೆಲಸದವರಿದ್ದರೂ ಅಂತಹವರು ತಮ್ಮ ಇ-ಮೇಲ್‌ಗಳನ್ನೋ, ಇನ್ಸ್ಟಂಟ್ ಮೆಸ್ಸೇಜುಗಳನ್ನೋ ತಮ್ಮ ಮೊಬೈಲ್ ಡಿವೈಸ್‌ನಲ್ಲಿ ನೋಡ್ತಾ ಕೂರೋದನ್ನ ನೋಡಿದ್ರೆ ಒಮ್ಮೊಮ್ಮೆ ಅಂಥಾ ಘನಂದಾರಿ ಕೆಲ್ಸ ಏನಿರಬಹುದು ಅಂತ ಸೋಜಿಗವಾಗುತ್ತೆ. ಇರೋ ಇ-ಮೇಲ್‌ಗಳನ್ನ ಕಂಪ್ಯೂಟರಿನಲ್ಲಿ ನೋಡಿ ಮ್ಯಾನೇಜ್ ಮಾಡೋದಕ್ಕೆ ಕಷ್ಟಾ ಪಡ್ತಾ ಇರೋ ನಾನು, ಇನ್ನು ಅದನ್ನ ಬ್ಲ್ಯಾಕ್‌ಬೆರಿನಲ್ಲೂ ನೋಡ್ತಾ ಕೂರೋದು, ಯಾವ್ ಯಾವ್ದನ್ನ ಎಲ್ಲೆಲ್ಲಿ ಓದಿ ಎಲ್ಲೆಲ್ಲಿ ಉತ್ರ ಕೊಡೋದು, ಸ್ಕೆಡ್ಯೂಲ್ ಕ್ಯಾಲೆಂಡರು ಕಾಂಟ್ಯಾಕ್ಟ್‌ಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡೋದು? ಎಲ್ಲೋ ಸುಖವಾಗಿ ಕುಳಿತು ಇನ್ನೇನನ್ನೋ ಮಾಡ್ತಾ ಇರೋವಾಗ ಈ ಮೊಬೈಲ್ ಡಿವೈಸ್‌ಗಳನ್ನ ನೋಡದಿರುವ ಶಿಸ್ತನ್ನ ಹೇಗೆ ಬೆಳೆಸಿಕೊಳ್ಳೋದು? ಮುಂತಾದ ಪ್ರಶ್ನೆಗಳಿಗೆ ಉತ್ರ ಕಂಡ್ ಹಿಡಿದುಕೊಳ್ಳದ ಹೊರತು ಬ್ಲ್ಯಾಕ್‌ಬೆರಿ ಮುಟ್ಟದೇ ಇದ್ರೆ ಒಳ್ಳೇದು, ಅಲ್ವೇ?

ಹಂಗ್ ನೋಡಿದ್ರೆ, ನಮ್ ಹತ್ರ ಇರೋ ಉಪಕರಣ (ಟೂಲ್ಸ್) ಗಳಲ್ಲಿ ನಾವು ಎಲ್ಲ ಫಂಕ್ಷನ್ಸ್ ಅನ್ನೂ ಬಳಸೋದಿಲ್ಲ. ಉದಾಹರಣೆಗೆ ನನ್ನ ಮೊಬೈಲ್ ಫೋನ್ ಅನ್ನು ಹೆಚ್ಚಾಗಿ ಫೋನ್ ಆಗೇ ಬಳಸ್ತಾ ಇರೋ ನಾನು ಮುಂದೆ ಬ್ಲ್ಯಾಕ್‌ಬೆರಿಯಲ್ಲಿನ ಎಲ್ಲಾ (ಹೆಚ್ಚಿನ) ಫಂಕ್ಷನ್ನುಗಳನ್ನು ಯಶಸ್ವಿಯಾಗಿ ಬಳಸಿ ಎಫಿಷಿಯಂಟ್ ಆಗ್ತೀನಿ ಅನ್ನೋದಕ್ಕೇನು ಗ್ಯಾರಂಟಿ? Use your current device to the best extent - ಅನ್ನೋದು ನನ್ನ ಇತ್ತೀಚಿನ ಸ್ಲೋಗನ್ನು. ಮುಂದೆ ನನ್ನ ಫೋನ್ ಅಪ್‌ಗ್ರೇಡ್ ಮಾಡುವ ಸಮಯ ಬಂದಾಗ್ಲೂ ನಾನಂತೂ ಶಿಪ್ಪಿಂಗೂ ಸೇರಿ ಫ್ರೀ ಆಗಿ ಸಿಗುವ ನನ್ನ ಅನುಕೂಲಕ್ಕೆ ತಕ್ಕನಾದ ಫೋನನ್ನೇ ಆರಿಸಿಕೊಳ್ಳೋದು. ಬ್ಲ್ಯಾಕ್‌ಬೆರಿನೋ ಮತ್ತೊಂದನ್ನೋ ಕೊಳ್ಳೋದಕ್ಕೆ ನೂರ್ ನೂರೈವತ್ತು ಡಾಲರ್ರನ್ನ ಯಾರ್ ಕೊಡ್ತಾರೆ ಹೇಳಿ?

ಈ ದಿನಕ್ಕೊಂದು ವಾರಕ್ಕೊಂದು, ವರ್ಷಕ್ಕೊಂದು ಅಂತ ಅನೇಕಾನೇಕ ಇಂಪ್ರೂವ್‌ಮೆಂಟ್ಸ್ ಮಾಡ್ತಾರಲ್ಲ ಅದೆಲ್ಲ ದೊಡ್ಡ ಕಾನ್ಸ್‌ಪಿರಸಿ ಸಾರ್. ನೀವು ಬೇಕಾದ್ರೆ ಇವತ್ತೇ ಹೋಗಿ ಇವತ್ತಿನ ಲೇಟೆಸ್ಟ್ ಅಂಡ್ ಗ್ರೇಟೆಸ್ಟ್ ಮಾಡೆಲ್ ಅಂತ ಯಾವ್ದೋ ಒಂದನ್ನ ತೆಗೊಳ್ಳಿ. ನಾಳೇನೇ ಅದಕ್ಕಿನ್ನೊಂದೋ, ಮತ್ತೊಂದನ್ನೋ ಸೇರಿಸಿ ಮಾರ್ತಾರೆ. ಹೀಗೆ ಜನರಿಗೆ ಘಳಿಗೆಗೊಂದು ಘಂಟೆಗೊಂದು ಹೊಸಹೊಸದನ್ನೆಲ್ಲ ಕೊಟ್ಟೂ ಕೊಟ್ಟೂ ಅಮೇರಿಕದ ಜನರಿಗೆ ಕೊನೆಗೆ ತಮ್ಮ ತಮ್ಮ ಹೆಂಡ್ತಿ-ಮಕ್ಳು ಹೀಗೇ ಹೊಸದಾಗಿ ಸಿಗ್ತಾ ಇದ್ರೆ ಅನ್ಸಿರೋದೋ ಏನೋ. ಒಂದ್ ಕಡೆ ತಮಗೆ ಅನ್ನಿಸಿದಂತೆ ನಡೆದುಕೊಳ್ಳೋ ಕನ್ಸ್ಯೂಮರ್ ಮೈಂಡ್‌ಸೆಟ್‌ಗೆ ಧೀರ್ಘಕಾಲದ ಬದುಕಿನ ವಂಡರ್ಸ್‌ಗಳನ್ನು ಹೇಗೆ ಅರ್ಥ ಮಾಡಿಸೋದು?

ಸದ್ಯ, ಈ ಅಮೇರಿಕದಲ್ಲಿ ಭಾರತದಲ್ಲಿದ್ದ ಹಾಗೆ ನೂರು ಕೋಟಿ ಜನರಿಲ್ಲಪ್ಪ ಅಂತ ನಿಮಗೂ ಅನ್ಸುತ್ತಾ? ಇಲ್ಲಿನ ಎಲ್ಲಾ ಕಾರ್ಪೋರೇಷನ್ನಿನವರೂ ತಮ್ಮ ತಮ್ಮ ಪದಾರ್ಥಗಳು ಹೆಚ್ಚು ಹೆಚ್ಚು ಜನ್ರಿಗೆ ತಲುಪ್ಲಿ ಅಂತ ಪ್ಲಾನು ಮಾಡೋದೇ ಮಾಡೋದು. ಒಂದು ಮಿಲಿಯನ್ ಕಷ್ಟಮರ್ಸ್ ಇದ್ದೋರು ಹತ್ತು ಮಿಲಿಯನ್ನ್ ಮಾಡೋ ಗುರಿ ಇಟ್ಕೋತಾರೆ, ಹತ್ತು ಮಿಲಿಯನ್ ಇದ್ದೋರು ನೂರು ಮಿಲಿಯನ್ನ್ ಅಂತಾರೆ. ಒಟ್ನಲ್ಲಿ ನೀವು ಇಲ್ಲಿನ ಕಂಪನಿಗಳಿಂದ ಹೆಚ್ಚು ಹೆಚ್ಚು ಕೊಳ್ತಾನೇ ಇರಬೇಕು ಅನ್ನೋದು ಅದರ ಮರ್ಮ ಅಷ್ಟೇ.

***

ನೀವು ಯಾವಾಗ್ಲೂ ಅಲ್ಲಿ-ಇಲ್ಲಿ ಓಡಾಡ್ಕೊಂಡೇ ಇರೋರಾದ್ರೆ ನಿಮಗೆ ನಿಜವಾಗ್ಲೂ ಒಂದು ಪವರ್‌ಫುಲ್ ಮೊಬೈಲ್ ಡಿವೈಸಿನ ಅಗತ್ಯವಿದೆ, ಅದು ನನಗೂ ಅರ್ಥವಾಗುತ್ತೆ. ಆದ್ರೆ ಬೆಳಗ್ಗಿಂದ ಸಂಜೇವರೆಗೂ ಖುರ್ಚೀ ಸ್ನೇಹಾ ಬೆಳಸ್ಕೊಂಡು ಕುಳಿತುಕೊಳ್ಳೋ ನನಗೆ ಅದ್ಯಾವ್ ಮೊಬೈಲೂ ಬೇಡಾ ಸಾರ್. ಎಲ್ಲಾದ್ರೂ ಅರ್ಜೆಂಟಿಗೆ ಅಂತ ಒಂದು ಫೋನ್ ಇದ್ರೆ ಸಾಕು. ಅದ್ಕೇನೇ, ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ ಅಂತ ಆದಷ್ಟು ದಿನ ಕಾಲಾ ತಳ್ತಾ ಇದ್ದೀನಿ ನೋಡೋಣ ಎಷ್ಟು ದಿನ ಬರುತ್ತೋ ಅಂತ.

Sunday, May 25, 2008

ಸೋಜಿಗಗಳು ನೂರು

ವರ್ಷದ ಮೇ ಒಂದು ವಿಶೇಷವಾದ ತಿಂಗಳೆಂದೇ ಹೇಳಬೇಕು. ೨೦೦೬ ರ ಮೇ ತಿಂಗಳಿನಲ್ಲಿ ದಿನಕ್ಕೊಂದರಂತೆ ೩೧ ಲೇಖನಗಳು ಬರೆದು ’ಅಂತರಂಗ’ದಲ್ಲಿ ಪ್ರಕಟಿಸಿದ ನನಗೆ ೨೦೦೭ ರ ಮೇ ತಿಂಗಳಿನಲ್ಲಿ ಕೇವಲ ೭ ಲೇಖನಗಳನ್ನಷ್ಟೇ ಪ್ರಕಟಿಸಲು ಸಾಧ್ಯವಾಯಿತು, ಹಾಗೇ ಈ ವರ್ಷದ ಮೇ ತಿಂಗಳಿನ ಈ ೨೫ ದಿನಗಳಲ್ಲಿ ಇದುವರೆಗೂ ಬರೆದು ಪ್ರಕಟಿಸಿದ್ದು ಕೇವಲ ಎರಡೇ ಎರಡು ಲೇಖನಗಳು. ಈ ಕಡೆ ಆಫೀಸಿನ ಕೆಲಸ ಓಡಾಟ ಹಾಗೂ ಅನೇಕಾನೇಕ ಕಾರಣಗಳಿಂದ ಕಂಪ್ಯೂಟರಿನ ಮುಂದೆ ಕುಳಿತು ಪರ್ಸನಲ್ ಟೈಮ್ ಎಂದು ಪುರುಸೊತ್ತು ಸಿಕ್ಕಿದ್ದೇ ಹೆಚ್ಚಾದರೆ ನನಗೆ ಆಶ್ಚರ್ಯವಾಗುವಂತೆ ಕನ್ನಡಪ್ರಭದ ಬ್ಲಾಗಾಯಣ ಹಾಗೂ ದಟ್ಸ್‌ಕನ್ನಡ ಪೋರ್ಟಲ್ಲುಗಳ ಮೂಲಕ ’ಅಂತರಂಗ’ಕ್ಕೆ ಭೇಟಿಕೊಡುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು ಈಗಾಗಲೇ ಈ ತಿಂಗಳ ಮೇ ಭೇಟಿ ಹಾಗೂ ಪೇಜ್ ವ್ಯೂವ್ ಅಂಕಿ-ಅಂಶಗಳ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವ ವಿಶೇಷವೇ ಹೌದು. Thanks to the portals and thanks to all of you!


***

ಈ ತಿಂಗಳು, ಈ ದಿನ ಮತ್ತೊಂದು ರೀತಿಯಲ್ಲಿ ವಿಶೇಷವಾದದ್ದೇ ಅನ್ನಬೇಕು - ಯಾವೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದೇ ಮತ್ತೆ ತೇಲಾಡುವ ಒಪ್ಪಂದಗಳು ಸರ್ಕಾರಗಳು ಬರುತ್ತವೆಯೇನೋ ಎಂದು ಕೊರಗುತ್ತಿದ್ದವರಲ್ಲಿ ನಾನೂ ಒಬ್ಬ. ಕಾಂಗ್ರೇಸೋ ಬಿಜೇಪಿಯೋ ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂತಲ್ಲ, ಇನ್ನಾದರೂ ಇವರಿವರಲ್ಲೇ ಕಚ್ಚಾಡಿಕೊಳ್ಳದೇ ಒಂದು ಐದು ವರ್ಷ ನಿರಾಳವಾಗಿ ಸರ್ಕಾರವನ್ನು ನಡೆಸಿ ಜನರ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳು ಸ್ಪಂದಿಸುವ ವ್ಯವಸ್ಥೆಯಾದರೆ ಸಾಕು!

ಹ್ಞಾ, ಈಗಾಗಲೇ ಕಾಲಚಕ್ರದ ಬರಹಗಳು ಆರಂಭವಾಗಿವೆ, ಇನ್ನು ಕಾಲಚಕ್ರದ ಮೇಷ್ಟ್ರು-ನಂಜ, ತಿಮ್ಮಕ್ಕ ಇವರೆಲ್ಲ ಸೇರಿ ಹೆಚ್ಚು ಹೆಚ್ಚು ಕಟ್ಟೆ ಪಂಚಾಯಿತಿ ಹಚ್ಚಿಕೊಳ್ಳುತ್ತಾರೆ ನೋಡುತ್ತಿರಿ.

ಈ ವರ್ಷದ ಚುನಾವಣೆಯ ಫಲಿತಾಂಶ ಬಹಳ ಸ್ವಾರಸ್ಯಕರವಾಗಿದೆ:
224 ಸ್ಥಳಗಳಲ್ಲಿ ನಡೆದ ಚುನಾವಣೆಗಳಲ್ಲಿ 943 ಪಕ್ಷೇತರರನ್ನು ಬಿಟ್ಟು 31 ಪಕ್ಷಗಳ 1299 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತದೆ. ನೂರಕ್ಕೆ 42 ರಷ್ಟು ಪಕ್ಷೇತರರು, ಕೆಲವೊಂದು ಕ್ಷೇತ್ರಗಳಲ್ಲಿ ಐದು-ಆರು ಜನರು ಸ್ಪರ್ಧಿಸಿದ್ದು ಹೊಸಬರಲ್ಲಿ ಹೆಚ್ಚು ಉತ್ಸಾಹವನ್ನು ಇನ್ನೂ ಉಳಿಸಿರುವುದು ನನಗಂತೂ ಆಶ್ಚರ್ಯ ತಂದಿತು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನಸ್ಪಂದನಕ್ಕೆ ಕಿವಿಗೊಡುವ ತಾಳ್ಮೆ ಎಷ್ಟು ಜನರಿಗಿದ್ದೀತು? NDTV ಯ ವರದಿಯಂತೆ ಇಂದಿನ ರಾಜಕೀಯದ ಹಿರಿಯ ತಲೆಗಳೆಲ್ಲ ಭಯಂಕರ ಶ್ರೀಮಂತರಿರಬಹುದು, ಕೋಟ್ಯಾಧೀಶ್ವರರಿರಬಹುದು ಆದರೆ ಈ ರಾಜಕೀಯವನ್ನೇ ನಂಬಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತೇವೆ, ಇದರಲ್ಲೇ ಇದ್ದು ನಾವೂ ಒಂದು ದಿನ ಕೋಟ್ಯಾಧಿಪತಿಗಳಾಗುತ್ತೇವೆ ಎನ್ನುವ ತತ್ವ ನಿನ್ನೆಯಷ್ಟಂತೂ ಇಂದು ಸರಳವಿಲ್ಲ.

ಆರು ಜನ ಪಕ್ಷೇತರ ಅಭ್ಯರ್ಥಿಗಳನ್ನು ಬಿಟ್ಟು ಖಾತೆ ತೆರೆದ ಪಕ್ಷಗಳೆಂದರೆ ಮೂರೇ ಮೂರು: ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್. ಉಳಿದ 28 ಪಕ್ಷದ 634 ಜನ ಅಭ್ಯರ್ಥಿಗಳಲ್ಲಿ ಹೆಚ್ಚು ಜನರಿಗೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದಾಗಿದ್ದು ನನಗೆ ಜನಾದೇಶ ಕಡಿಮೆ ಪಕ್ಷಗಳ ಸರ್ಕಾರದತ್ತ ಒಲವು ತೋರಿಸುತ್ತಿರುವಂತೆ ಕಂಡುಬಂತು.

ನನ್ನ ಹುಟ್ಟೂರು ಆನವಟ್ಟಿ, ಸೊರಬಾ ತಾಲೂಕಿನಲ್ಲಿ 1967 ರಿಂದ ಗೆದ್ದು ಬರುತ್ತಿದ್ದ ಬಂಗಾರಪ್ಪನವರ ಕುಟುಂಬದ ಯಶೋಗಾಥೆಗೆ ಕಡಿವಾಣ ಬಿದ್ದಿದೆ, ನಾಲ್ಕು ದಶಕಗಳ ನಂತರ ಹೊಸನಗರದ ಹಾಲಪ್ಪನವರು ಬಿಜೆಪಿ ಟಿಕೇಟಿನಲ್ಲಿ ಸಾಕಷ್ಟು ಬಹುಮತದಲ್ಲೇ ಗೆದ್ದುಬಂದಿರುವುದು (43%) ನಿಜವಾಗಲೂ ವಿಶೇಷ ಹಾಗೂ ವಿಚಿತ್ರ. ನಮ್ಮೂರಿನ ರಸ್ತೆಗಳಲ್ಲಿ, ಅಂಗಡಿ ಗೂಡುಗಳಲ್ಲಿ, ಹಳ್ಳಿಪಾಡುಗಳಲ್ಲಿ ಯಾವ ಯಾವ ರೀತಿಯ ಮಾತುಕಥೆಗಳು ನಡೆದಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ ಅಷ್ಟೇ. ಪಕ್ಕದ ಶಿಕಾರಿಪುರದಲ್ಲಿ ಬಂಗಾರಪ್ಪನವರು ಈ ಇಳಿ ವಯಸ್ಸಿನಲ್ಲಿ ಸ್ಪರ್ಧಿಸಿ ಏನು ಮಾಡುತ್ತಾರೋ ಎಂದುಕೊಂಡ ನನಗೆ ಗೆದ್ದ ಎಡಿಯೂರಪ್ಪನವರ ಮುಂದೆ (66%) ಬಂಗಾರಪ್ಪನವರು 30% ಮತಗಳಿಸಿದ್ದು ನಿಜವಾಗಲೂ ಸೋಜಿಗ ಮೂಡಿಸಿತು.

ಇನ್ನು ಬೆಂಗಳೂರು-ಜಯನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾಗವಹಿಸಿದ್ದ ರವಿರೆಡ್ಡಿಯವರನ್ನು ಕುರಿತು ಅವರ ಅನುಭವಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಮ್ಮೆಲ್ಲರ ನಡುವಿನ ಧ್ವನಿಯಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ರಾಜಕೀಯ ಕರ್ಮಕಾಂಡದಲ್ಲಿ ಮೌಲ್ಯಾಧಾರಿತ ಧೋರಣೆಗಳನ್ನು ಮುಂದಿಟ್ಟುಕೊಂಡು ಅವರು ಪಡೆದ 244 ಮತಗಳಿಂದ ನಾವೆಲ್ಲ ಕಲಿಯುವುದು ಸಾಕಷ್ಟಿದೆ.

ನಾವಿರುವ ಅಮೇರಿಕದಲ್ಲಾಗಲೀ ಮುಂದುವರೆದ ಜನರಿರುವ ನಗರಗಳಲ್ಲಿ ಹೆಚ್ಚು ಜನರು ಓಟ್ ಹಾಕಲು ಹೋಗುತ್ತಾರೆ ಎನ್ನುವುದು ಒಂದು ದೊಡ್ಡ ಕಲ್ಪನೆಯೇ ಸರಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚು ಹೆಚ್ಚು ಮತಗಟ್ಟೆಗೆ ಬಂದಿದ್ದು ಚುನಾವಣಾ ಅಂಕಿ-ಅಂಶಗಳನ್ನು ಗಮನಿಸಿದ ನಿಮಗೆ ಮನವರಿಕೆಯಾದೀತು.

***

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಇಷ್ಟವಾಗುವಂತೆ ನಮ್ಮ ಸರ್ಕಾರಿ ಪೋರ್ಟಲುಗಳು ಚೆನ್ನಾಗಿ ಬೆಳೆದು ಬಂದಿವೆ, ಚುನಾವಣೆ ಸಂಬಂಧಿ ಅಂಕಿ-ಅಂಶಗಳಿಗಾಗಿ ನಾನು ಈ ಪೋರ್ಟಲುಗಳನ್ನು ನೋಡಿದಾಗಲೆಲ್ಲ ನನಗೆ ಎಂದೂ ನಿರಾಶೆಯಾದದ್ದಂತೂ ಇಲ್ಲ, ಬೇಕಾದರೆ ಚುನಾವಣಾ ಆಯೋಗದ ವಿವರಗಳನ್ನು ನೀವೇ ಖುದ್ದಾಗಿ ನೋಡಿ, ಇಲ್ಲಿ ನಿಮಗೆ ಬೇಕಾದ ಅಭ್ಯರ್ಥಿಯ ಚುನಾವಣೆ ಅರ್ಜಿ, ಅದಕ್ಕೆ ಲಗತ್ತಿಸಿದ ಕಾಗದ ಪತ್ರಗಳಿಂದ ಹಿಡಿದು ವಿವರವಾದ ಫಲಿತಾಂಶವನ್ನೂ ಇಲ್ಲಿ ನೋಡಬಹುದು.

Thursday, May 15, 2008

ಐದೇ ಐದ್ ನಿಮಿಷ...

ನಾನು ಕೆಲ್ಸಾ ಮಾಡೋ ಕಂಪ್ಯೂಟರ್ರುಗಳ ಸ್ಪೀಡೂ ಪ್ರಾಸೆಸ್ಸರ್ರುಗಳ ಪವರ್ರು ಜಾಸ್ತೀ ಆದ ಹಾಗೆ, ನಾನು ಉಪಯೋಗಿಸೋ ಸಾಫ್ಟ್‌ವೇರ್ ಅಥವಾ ಅಪ್ಲಿಕೇಷನ್ನುಗಳ ವರ್ಷನ್ನುಗಳು ಹೆಚ್ಚಾದ ಹಾಗೆ ನನ್ನ ಧಕ್ಷತೇನೂ ಹೆಚ್ಚಾಗುತ್ತೇ ಅನ್ನೋದು ಬರೀ ಕನಸೇ ಆಗಿ ಹೋಗಿದೆ ಅನ್ನೋದು ಇತ್ತೀಚಿನ ನನ್ನ ಕೊರೆತಗಳಲ್ಲೊಂದು! ಯಾವಾಗ್ ನೋಡಿದ್ರೂ ’ಟೈಮೇ ಇಲ್ಲಾ ಸಾರ್!’ ಎಂದು ರಾಗ ಎಳಿತಾ ಇರೋ ನನಗೆ ನನ್ನ ಇದ್ದ ಬದ್ದ ಟೈಮ್ ಎಲ್ಲಾ ಎಲ್ಲಿ ಕರಗಿ ಹೋಗುತ್ತೇ ಅನ್ನೋದು ಹೊಳೆಯದೇ ಬಹಳ ಸಂಕಷ್ಟಕ್ಕೆ ಬಂದಿರೋದರ ಜೊತೆಗೆ ಟೈಮೇ ಇಲ್ಲವಲ್ಲ ಅಂಥ ಯೋಚಿಸೋದಕ್ಕೂ ಟೈಮ್ ಇಲ್ಲದ ಹಾಗೆ ಆಗಿದೆ ಅನ್ನೋದು ನನ್ನ ಹೊಸ ಕೀರ್ತನೆ ಅಷ್ಟೇ.

ನೀವೇ ನೋಡಿ, ಯಾವತ್ತಾದ್ರೂ ಎಲ್ಲಿಗೋ ಹೊರಟಿರೋ ಹೊತ್ತಿನಲ್ಲಿ ಒಂದು ನಿಮಿಷ ಕಂಪ್ಯೂಟರಿನಲ್ಲಿ ಏನೋ ನೋಡೋಣ ಅಂತ ಕೂತಿರೋದಷ್ಟೇ ನೆನೆಪು, ಅದು ಹೇಗೆ ನಿಮಿಷಗಳು-ಘಂಟೆಗಳು ಉರುಳುತ್ತವೋ ಗೊತ್ತೇ ಆಗಲ್ಲ. ದಿನಾ ಆನ್ ಮಾಡಿ ಆಫ್ ಮಾಡೀರೋ ಕಂಪ್ಯೂಟರಿನಿಂದ ಹಿಡಿದು ಎರಡು ವಾರಕ್ಕೊಮ್ಮೆ ಸ್ಟ್ಯಾಂಡ್ ಬೈ ಮೋಡ್ ನಲ್ಲೇ ಇರೋ ನನ್ನ ಲ್ಯಾಪ್‌ಟಾಪಿನ ವರೆಗೆ ಅದರಲ್ಲಿರೋ ಅಪ್ಲಿಕೇಷನ್ನಿನ ಗೊಂಚಲುಗಳಲ್ಲಿ ಒಬ್ಬನಲ್ಲ ಒಬ್ಬನು ಏನನ್ನಾದರೊಂದನ್ನು ಇನ್ಸ್ಟಾಲ್ ಮಾಡಿಕೊಂಡೇ ಇರ್ತಾನೆ. ಆಂಟಿ ವೈರಸ್ಸು ಪ್ಯಾಚುಗಳಿಂದ ಹಿಡಿದು ಅಪ್ಲಿಕೇಶನ್ನ್ ಪ್ಯಾಚುಗಳವರೆಗೆ ಸದಾ ಕರಕರಕರ ಶಬ್ದ ಮಾಡ್ತಾ ಹಾರ್ಡ್ ಡ್ರೈವ್ ತಿರುಗೋ ಶಬ್ದವನ್ನು ಕೇಳ್ದೇ ಇದ್ರೆ ತಿಂದ ಅನ್ನಾನೇ ಅರಗಲ್ಲ. ಹೀಗೆ ಅವರು ಬಿಟ್ಟು ಇವರು ಬಿಟ್ಟು ಯಾರ್ಯಾರೋ ಏನನ್ನೋ ಇನ್ಸ್ಟಾಲ್ ಮಾಡಿ ಅನಂತರ ಕಂಪ್ಯೂಟರಿನ ಪ್ರಾಸೆಸ್ಸರು ಫ್ರೀ ಇರೋ ಹೊತ್ತಿಗೆ ದಿನವೇ ಮುಗಿದು ಹೋಗಿರುತ್ತೆ. ಮೊದಲೆಲ್ಲ ಸರಳವಾಗಿದ್ದ ಇ-ಮೇಲ್ ಇಂಟರ್‌ಫೇಸುಗಳು ಈಗ ಇನ್ನಷ್ಟು ಸಂಕೀರ್ಣಗೊಂಡಿವೆ, ಮೊದಲೆಲ್ಲ ಡಿಸ್ಟಿಂಕ್ಟ್ ಆಗಿ ಸಿಗುತ್ತಿದ್ದ ವ್ಯವಸ್ಥೆಯ ಪರಿಕರಗಳೆಲ್ಲ ಒಂದಕ್ಕೊಂದು ಇಂಟೆಗ್ರೇಟ್ ಆದ ಮೇಲೆ ಇಷ್ಟೆಲ್ಲ ತಲೆ ನೋವು ಬಂದಿದ್ದು ಅನ್ನೋದು ನನ್ನ ಅಂಬೋಣ.

ಕಳೆದ ನಾಲ್ಕು ವಾರಗಳಿಂದ ಅವರ ಕಾಲ್ ಹಿಡಿದು ಇವರ ಕೈ ಹಿಡಿದು ಆಫೀಸಿನಲ್ಲಿ ಪರ್‌ಚೇಸ್ ಆರ್ಡರ್ ಒಂದನ್ನು ಇನ್ನೇನು ಕೊನೆಯ ಹಂತದವರೆಗೆ ತಂದೆ, ಮೇಲಿನವರ ಅಪ್ರೂವಲ್ ಸಿಕ್ಕೇ ಬಿಟ್ಟಿತು ಎಂದು ಮೀಸೇ ಮೇಲೆ ಕೈ ಹಾಕಿ ನಗುವನ್ನು ತಂದುಕೊಂಡಿದ್ದೇ ಬಂತು, ಅಪ್ರೂವ್ ಮಾಡುವವರು ಅಪ್ರೂವ್ ಮಾಡುವ ಸಿಸ್ಟಮ್‌ಗೆ ಲಾಗ್ ಇನ್ ಮಾಡಲು ಹೋದರೆ ಅಲ್ಲಿ ಬ್ಯಾಕ್ ಎಂಡಿನಲ್ಲಿ ಮೈಕ್ರೋ ಸಾಫ್ಟ್‌ನವರ ಸರ್ವರ್ ಮುಷ್ಕರ ಹೂಡಿ ಕುಳಿತುಕೊಂಡಿದೆ. ಸಾಯಂಕಾಲ ಎಷ್ಟೊತ್ತು ಕಾದರೂ ಸರ್ವರ್ ಎದ್ದು ಬರುವಂತೆ ಕಾಣಲಿಲ್ಲ, ನಾಳೆ ಈ ಅಪ್ರೂವ್ ಮಾಡುವ ಮನುಷ್ಯ ಬೇರೆ ಆಫೀಸಿನಲ್ಲಿ ಇಲ್ಲ, ಅವನು ಇನ್ಯಾವನಿಗೆ ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿ, ಹೇಳಿಸಿಕೊಂಡವನು ನನ್ನ ಅನುಕೂಲಕ್ಕೆ ಸ್ಪಂದಿಸಿ ’ಅಪ್ರೂವ್ ಆಯ್ತು’ ಎಂದು ಬಟನ್ ಒತ್ತುವಷ್ಟರಲ್ಲಿ ನನ್ನ ತಲೆ ಕೂದಲೆಲ್ಲ ಬೆಳ್ಳಗಾಗದಿದ್ದರೆ ಸಾಕು. ಒಂದೊಂದು ಸರ್ವರ್ರುಗಳು ಅಂದ್ರೆ ಅದೆಷ್ಟು ಪವರ್ ಇರುವ ಮೆಷಿನುಗಳು, ಅಂಥವು ದಿನಕ್ಕೊಂದಲ್ಲ ಒಂದು ಔಟ್ ಆಗುತ್ತಲೇ ಇರುತ್ತವೆ, ಅದನ್ನ ಅಡ್ಮಿನಿಶ್ಟ್ರೇಷನ್ನವರು ಬೌನ್ಸ್ ಮಾಡಿ ಮತ್ತೆ ಜೀವ ಕೊಡುತ್ತಲೇ ಇರುತ್ತಾರೆ. ಹೀಗೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲ ಕ್ಲೈಂಟು-ಸರ್ವರುಗಳ ಕೈಂಕರ್ಯಕ್ಕೆ ಅದೆಷ್ಟು ಹೊಂದಿಕೊಂಡಿವೆ ಅಂದರೆ ಇನ್ನೊಂದು ಕೆಲವು ವರ್ಷಗಳಲ್ಲಿ ಸಾಯೋರಿಗೂ ಪರ್ಮಿಷನ್ನ್ ಸಿಗುವ ಹಾಗೆ ಮಾಡುತ್ತವೆ ಈ ಸರ್ವರುಗಳು ನೋಡ್ತಾ ಇರಿ.

ಐದೇ ಐದು ನಿಮಿಷ ಅಂತ ಯಾರೂ ಹೇಳೋದಿಲ್ಲ ಬಿಡಿ...’ಒಂದು ನಿಮಿಷ ಬಂದೇ ಬಿಟ್ಟೇ!’ ಅಂತಾರೆ, ಆದರೆ ಘಂಟೆಗಟ್ಟಲೆ ಆದ್ರೂ ತಮ್ಮ ಪ್ರಪಂಚದಿಂದ ಹೊರಗೆ ಬರೋದಿಲ್ಲ. ಒಂದು ನಿಮಿಷ, ಒಂದು ಸೆಕೆಂಡು ಅನ್ನೋ ಮಾತುಗಳು ಔಪಚಾರಿಕ ಮಾತುಕಥೆಗಳಾಗಿವೆ ಅಷ್ಟೇ. ನಾವೆಲ್ಲ ’ಒಂದ್ ಸೆಕೆಂಡ್’ ಅನ್ನೋದನ್ನ ಯಾರಾದ್ರೂ ಬೇರೆ ಗ್ರಹದ ಪ್ರಾಣಿಪಕ್ಷಿಗಳು ಕೇಳಿಕೊಂಡವು ಅಂತಂದ್ರೆ ಅವರ ಹೃದಯ ನಿಂತು ಹೋಗೋದು ಗ್ಯಾರಂಟಿ - ಅದೇನು ಒಂದು ಸೆಕೆಂಡಿನಲ್ಲಿ ಅದೇನೇನೆಲ್ಲ ಮಾಡ್ತಾರಲ್ಲ ಅಂತ. ನಮ್ಮ ಒಂದೊಂದು ಸೆಕೆಂಡುಗಳು ’ಬ್ರಹ್ಮ ಶೌಚ’ದ ಯೂನಿಟ್‌ನಲ್ಲಿವೆ ಅನ್ನೋದು ಅವರಿಗೇನು ಗೊತ್ತು?

ಯಾವ್ದೇ ಮ್ಯಾಪ್ ಅಪ್‌ಲೋಡ್ ಮಾಡಿ, ಯಾವ್ದೇ ಇ-ಮೇಲ್ ಕ್ಲೈಂಟ್ ಹೊರಗೆ ತನ್ನಿ, ಯಾವ್ದೇ ವೆಬ್‌ ಪೇಜ್ ಮೇಲೆ ಕಣ್ಣಾಡಿಸಿ - ಅದು ನಿಧಾನವಾಗಿ ಲೋಡ್ ಆಗುತ್ತಿದ್ದರೆ ನಿಮ್ಮ ಇಂಟರ್ನೆಟ್ ಕನೆಕ್ಷನ್ನನ್ನೋ ಅಥವಾ ಹಳೆಯ-ಹೊಸ ಕಂಪ್ಯೂಟರನ್ನ ನೀವು ಬೈದುಕೊಳ್ಳೋ ಸನ್ನಿವೇಶ ಬಂದೇ ಬರುತ್ತೆ. ’ಕನ್ನಡಪ್ರಭ’, ’ಪ್ರಜಾವಾಣಿ’ ಅಂಥ ವೆಬ್‌ಸೈಟ್‌ಗಳು ASP ತಂತ್ರಜ್ಞಾನವನ್ನು ಮೊರೆಹೊಕ್ಕರು, ಅವರಿಗೆಲ್ಲ ಅದರಿಂದ ಏನೇನು ಅನುಕೂಲವಾಗಿದೆಯೋ ಬಿಟ್ಟಿದೆಯೋ User friendliness ಮಾತ್ರ ಮಾಯವಾಗಿ ಬಿಟ್ಟಿದೆ. ಹನ್ನೊಂದು ವರ್ಷದ ಹಿಂದೆ ನನ್ನ ಪೆಂಟಿಯಮ್ 166 MHz ಕಂಪ್ಯೂಟರಿನಲ್ಲಿ 56 Mbps ಡಯಲ್ ಅಪ್ ಕನೆಕ್ಷನ್ನ್ ನಲ್ಲಿ ನನಗೆ ವೆಬ್‌ಸೈಟ್ ಓದುವಾಗ ಸಿಗುತ್ತಿದ್ದ ಫ್ರೀಡಮ್ ಈಗ ಕಡಿಮೆ ಆಗಿದೆ. ಆಗೆಲ್ಲ HTML ಪುಟಗಳಲ್ಲಿ ಆಡ್ರಸ್ ಬಾರ್ ನಲ್ಲಿ ಯಾವ ಯಾವ ದಿನದ ಪತ್ರಿಕೆಗಳ ದಿನಾಂಕಗಳನ್ನೆಲ್ಲ ಹಾಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದ್ರೂ ನೇವಿಗೇಟ್ ಮಾಡುತ್ತಿದ್ದ ನನಗೆ ಇಂದಿನ ASP ಯುಗದಲ್ಲಿ ದಿಕ್ಕೇ ತೋಚದ ಹಾಗಾಗುತ್ತೆ ಎಷ್ಟೋ ಸಲ. ಅದೂ ಅಲ್ದೇ ಯಾವ್ದಾದ್ರೂ ಫ್ಲಾಶ್ ಇರೋ ಪುಟಕ್ಕೆ ಹೋದ್ರಂತೂ ಆ ಪುಟದಲ್ಲಿ ಉಪಯೋಗಿಸಿರೋ ಫ್ಲ್ಯಾಶ್ ವರ್ಶನ್ ನನ್ನ ಹತ್ರ ಇರೋಲ್ಲ, ಅವರ ಪುಟಗಳನ್ನು ನೋಡೋಕೆ ಮತ್ತೊಂದೇನನ್ನ ಇನ್ಸ್ಟಾಲ್ ಮಾಡೂ ಅಂತಾನೆ, ಅವನು ಹೇಳಿದ್ದನ್ನ ಕೇಳಿದ್ರೆ ಇನ್ನೊಬ್ರ ಪುಟ ಮತ್ತೆನ್ನೆಲ್ಲೋ ಸರಿಯಾಗಿ ಲೋಡ್ ಆಗಲ್ಲ, ಬ್ಯಾಕ್‌ವರ್ಡ್ ಕಂಪ್ಯಾಟಿಬಿಲಿಟಿ ಇದ್ರೆ ಫಾರ್‌ವರ್ಡ್ ಇರಲ್ಲ, ಇವನನ್ನ ಓಲೈಸಿದ್ರೆ ಮತ್ತೊಬ್ಬನಿಗೆ ಸಿಟ್ಟು ಬರುತ್ತೆ ಅನ್ನೋ ಹಾಗೆ.

ಇವತ್ತೆಲ್ಲ 3-4 GB RAM ಇರೋ ಲ್ಯಾಪ್ ಟಾಪ್‌ಗಳೇ ಸಿಕ್ತಾವೆ, ಅವೇ ಹಲ್ಲು ಕಿರಿದು ನಿಲ್ಲೋ ಜನರ ಫೋಟೋ ಹೊಡೆಯೋಕೆ ಹದಿನೈದ್ ಪಿಕ್ಸೆಲ್ ವರೆಗಿನ ಕ್ಯಾಮರಾಗಳು ಬಂದಿರಬಹುದು. ಒಂದೊಂದು ಫೋಟೋ ಸೈಜೂ ಹತ್ತು MB ಆಗುತ್ತೋ ಏನೋ, ಅವನ್ನ ಸ್ಟೋರ್ ಮಾಡೋಕೆ, ಕಳಿಸೋಕೆ, ಬಳಸೋಕೆ ಹೆಚ್ಚು ಹೆಚ್ಚು ಜಾಗ ಬೇಕು, ಮೆಮರಿ ಬೇಕು - ಎಲ್ಲಿಂದ ತರಾಣಾ? ಹೊಸ ಕ್ಯಾಮರ ಕೊಂಡ್ರೆ ಹೊಸ ಕಂಪ್ಯೂಟರ್ ಬೇಕು ಅಂತ ಆಗುತ್ತೆ, ಹೊಸ ಕಂಪ್ಯೂಟರ್ ಕೊಂಡ್ರೆ ಹೊಸ ಸಾಫ್ಟ್‌ವೇರ್ ಬೇಕು ಅಂತ ಆಗುತ್ತೆ, ಹೊಸ ಸಾಫ್ಟ್‌ವೇರ್ ಸಿಕ್ರೆ ನಮಗೆ ಬೇಕಾದ್ದ್ ಎಲ್ಲ ಇರಲ್ಲ, ಇದೂ ಅದೆಲ್ಲೆಲ್ಲೋ ಹುದುಗಿಸಿ ಇಡ್ತಾರೆ - ಹೊಸದರ ಜೊತೆಗೆ ಹಳೆಯದು ಕೆಲ್ಸಾ ಮಾಡಲ್ಲ...ಹೀಗೆ ಇದರ ಪಟ್ಟಿ ಇಲ್ಲಿಗೆ ನಿಲ್ಲದೆ ಮುಂದೆ ಬೆಳಿಯುತ್ಲೇ ಇರುತ್ತೆ. ನಾನು ಇವತ್ತೇ ಹೋಗಿ ಸ್ಯಾಮ್ಸ್ ಕ್ಲಬ್ಬಿನಿಂದ ಏಳ್‌ನೂರ್ ಡಾಲರ್ ಕೊಟ್ಟು ಹೊಸ ಕಂಪ್ಯೂಟರ್ ತಂದು ಬಿಸಾಕೇನು, ಅದನ್ನ ಸಂಪೂರ್ಣವಾಗಿ ಕಷ್ಟಮೈಜ್ ಮಾಡಿ ನನಗೆ ಬೇಕಾದ್ದನ್ನೆಲ್ಲ ಇನ್ಸ್ಟಾಲ್ ಮಾಡಿ ರನ್ ಮಾಡೋ ಅಷ್ಟೊತ್ತಿಗೆ ನನ್ನ ಒಂದು ದಶಕದ ಆಯಸ್ಸೇ ಮುಗಿದು ಹೋಗುತ್ತೆ, ಅಷ್ಟೊತ್ತಿಗೆ ಆ ಕಂಪ್ಯೂಟರ್ರೇ ಹಳೆಯದಾಗಿರುತ್ತೆ. ಇವುಗಳ ಮುಂದೆ ಯಾವತ್ತೂ ಗೆಲ್ಲೋಕೇ ಆಗಲ್ಲ ಅನ್ಸಲ್ವಾ?

ನಮ್ ಜೀವ್ನಾ ಎಲ್ಲಾ ಐದೇ ಐದ್ ನಿಮಿಷ ಅಂದು ಒಂದೊಂದು ಘಂಟೆ ಸವೆಸೋದ್ರಲ್ಲೇ ಆಗ್ ಹೋಯ್ತು, ಇನ್ನು ಮುಂದಿನ ಜನರೇಷಿನ್ನಿನ ಕಥೆ ದೇವ್ರೇ ಕಾಪಾಡ್ ಬೇಕು.

ನಾವು ಸಾಮಾನ್ಯರು, ನಮಗೆ ಹೆಚ್ಗೆ ಪವರ್ ಬೇಡಾ, ಇವತ್ತು ಸಾವಿರ ಡಾಲರ್ ಕೊಟ್ಟು ತಂದ ಕಾರು ಇನೈದು ವರ್ಷ ಬಿಟ್ರೂ ಇವತ್ತಿನ ಹಾಗೇ ಓಡಾಡೋಲ್ವೇ ಅದೇ ಥರ ಈ ಕಂಪ್ಯೂಟರಿಗೊಂದು ಹೊಸ ಇಕ್ವೇಷನ್ನ್ ತಂದು, ’ಇಲ್ಲಿಗೆ ಸಾಕು, ಶಿವಾ’ ಅನ್ನೋ ಒಂದು ಕಾನ್‌ಫಿಗರೇಷನ್ನಿಗೆ ನಿಲ್ಲಿಸಿಬಿಡಿ, ಅಷ್ಟೇ ಸಾಕು. ಜಗತ್ತಿನ ಒಂದೊಂದು ಇಂಚನ್ನೂ IP ಅಡ್ರಸ್ಸುಗಳಿಂದ ಅಳೀತೀವಿ ಅನ್ನೋ ಜನರಿಗೆ ಯಾವನೋ ಎಲ್ಲೋ ಬರೆದ ಕಂಪ್ಯೂಟರ್ ವೈರಸ್ಸುಗಳನ್ನು ಕಂಡು ಹಿಡಿಯೋದ್ ಕಷ್ಟಾನೇ? ಹಾಗೆ ವೈರಸ್ಸುಗಳನ್ನು ಬರೆದು ಜನರನ್ನು ಹಿಂಸಿಸೋರನ್ನ ಪಬ್ಲಿಕ್‌ನಲ್ಲಿ ಕಲ್ ತಗೊಂಡ್ ಹೊಡೀರಿ ಅವಾಗ್ಲಾದ್ರೂ ಜನರಿಗ್ ಬುದ್ಧಿ ಬರುತ್ತೋ ಏನೋ. ನಮ್ಮ್ ನಮ್ಮ್ ಇ-ಮೇಲ್ ನೋಡ್ಕೊಂಡು ಜೀವ್ನಾ ಸಾಗ್ಸದೇ ಕಷ್ಟಾ ಅನ್ಸಿರುವಾಗ ಅದ್ಯಾವನಿಗೆ ಅದೆಲ್ಲಿಂದ ವೈರಸ್ ಬರೆಯೋಕ್ ಟೈಮ್ ಸಿಗುತ್ತೋ ಯಾರಿಗ್ ಗೊತ್ತು?

Sunday, February 24, 2008

ಬೆಂಕಿ-ಉರಿ-ಬೆಳಕು

ಅಗ್ಗಿಷ್ಟಿಕೆಯಲ್ಲಿ (fireplace) ಬೆಂಕಿ ನಿಗಿ ನಿಗಿ ಉರಿತಾ ಉರಿತಾ ಇರೋ ಹೊತ್ತಿಗೆ ನಾನು ಕುಳಿತುಕೊಂಡ ಜಾಗೆಯೆಲ್ಲ ಗರಂ ಆಗಿ ಹೋಗಿತ್ತು. ಬಹಳ ದಿನಗಳ ನಂತರ ಕಟ್ಟಿಗೆ ಸುಟ್ಟು ಬೂದಿ ಆಗಿ ಬೆಂಕಿ ಸಂಪೂರ್ಣ ಆರಿ ಹೋಗುವ ಕಾಯಕವನ್ನು (process) ಅನ್ನು ನೋಡೋದಕ್ಕೆ ಒಂದು ರೀತಿ ಚೆನ್ನಾಗಿತ್ತು. ನಿಧಾನವಾಗಿ ಯಾರೋ ಹೇಳಿಕೊಟ್ಟು ಹೋಗಿದ್ದಾರೆ ಅನ್ನೋ ಹಾಗೆ ಘನವಾದ ಕಟ್ಟಿಗೆ ಉರಿದು, ಬೆಂಕಿಯಾಗಿ ಕೆಂಪು ಕೆಂಡವಾಗಿ ಮುಂದೆ ಬಿಳಿ ಬೂದಿಯಾಗಿ ಹೋಗೋದು ಈ ಭಾನುವಾರದ ಸಂಜೆಯ ಮಟ್ಟಿಗೆ ಅದೊಂದು ವಿಸ್ಮಯವೇ ಅನ್ನಿಸಿದ್ದು ಹೌದು. ಮೊದಲೆಲ್ಲ ಬಚ್ಚಲ ಒಲೆಗೆ ದರಲೆ ತುಂಬುವಾಗ ನಮ್ಮ ಮುಗ್ಧ ಮನಸ್ಸಿನಲ್ಲಿ ಅದೇನೇನೋ ಅನ್ನಿಸದ ವಿಷಯ ವಸ್ತುವೆಲ್ಲ ಒಂದು ರೀತಿ ಬೆಂಕಿ ಹೊತ್ತಿ ಹೊಮ್ಮಿಸಿದ ಹೊಗೆಯ ಹಾಗೆ ಮನದಲ್ಲಿ ಎದ್ದುಕೊಂಡಿದ್ದವು. ಎಷ್ಟೇ ಪ್ರಭಲವಾಗಿ ಉರಿದರೂ ಬೆಂಕಿಯಿಂದ ಬೆಳಕಾಗದು ಎಂದು ಎನ್ನಿಸಿದ್ದು ಅಂತಹ ಶುಷ್ಕ ಮನಸ್ಸಿನ ವೇದಾಂತಗಳಲ್ಲೊಂದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಬೆಂಕಿಯ ಜೊತೆಗಿನ ಬೂದಿ ಬೆಳಕಿನ ಬಗ್ಗೆ ಮಾತನಾಡುವ ಬದಲು, ಈ ಬೆಂಕಿ ಉರಿಯುತ್ತಿರುವಾಗ ನಾನು ಮೊದಲಿನಿಂದಲೂ ಮಾಡಿಕೊಂಡಿದ್ದ ಅಂಶವೊಂದು ಗಮನಕ್ಕೆ ಬಂತು - ಬೆಂಕಿಯು ಹತ್ತಿ ಉರಿದಂತೆಲ್ಲಾ ಕಟ್ಟಿಗೆ ತುಂಡುಗಳನ್ನು ಒಂದಕ್ಕೊಂದು ತಾಕಿಸಿ ಕೂಡಿಟ್ಟು ಮತ್ತೆ ಅವುಗಳ ನಡುವೆ ಜ್ವಾಲೆ ಹೆಚ್ಚುವಂತೆ ಮಾಡುವುದು. ಎಷ್ಟೇ ಜೋರಾಗಿ ಬೆಂಕಿ ಉರಿಯುತ್ತಲಿದ್ದರೂ ಒಮ್ಮೆ ಒಂದು ಕಟ್ಟಿಗೆಯ ಅಡ್ಡವಾಗಿ ಮತ್ತೊಂದು ಕಟ್ಟಿಗೆ ಬಾರದೇ ಹೋದರೆ, ಅಥವಾ ಅಡ್ಡ ಕಟ್ಟಿಗೆ ಉರಿಯುವುದು ನಿಂತರೆ ಈ ಕೂಡಿಟ್ಟ ಕಟ್ಟಿಗೆಗಳ ಮಗ್ಗಲು ಬದಲಾಯಿಸುವುದು ಅನಿವಾರ್ಯ, ಇಲ್ಲವೆಂದರೆ ಬೆಂಕಿ ಆರಿ ಹೋದೀತು, ಇಲ್ಲವಾದರೆ ನಿಧಾನವಾಗಿ ಉರಿದು ಕಾವೇ ಬಾರದೇ ಹೊಗೆಯೇ ಹೆಚ್ಚಾದೀತು.


***

ಅನ್ನ, ಪ್ರಾಣ, ಜ್ಞಾನ, ವಿಜ್ಞಾನ, ಆನಂದಗಳೆಂಬ ಹಂತಗಳನ್ನು ನಮ್ಮ ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಯಾರೂ ಬೇಕಾದರೂ ವಿವರಿಸಬಲ್ಲರು. ಒಂದಿಷ್ಟು ಜನರು ದಿನನಿತ್ಯದ ವಿಷಯದಲ್ಲಿ ಅನ್ನ-ಪ್ರಾಣಗಳ ಸಲುವಾಗಿ ದುಡಿದು-ಬಡಿದಾಡಿ-ಕಾದಾಡಿಕೊಂಡರೆ, ಇನ್ನೊಂದಿಷ್ಟು ಜನರಿಗೆ ಅನ್ನ-ಪ್ರಾಣಗಳು ದೇವರು ಕೊಟ್ಟ ವರವಾಗಿ, ಅವರ ಕಷ್ಟ-ನಷ್ಟಗಳೇನಿದ್ದರೂ ಜ್ಞಾನ-ವಿಜ್ಞಾನಕ್ಕೆ ಮೀಸಲಾದವು. ಇನ್ನು ಕೆಲವೇ ಕೆಲವು ಜನರು ಮುಂದೆ ಹೋಗಿ ಬದುಕನ್ನು ಆಳವಾದ ಆನಂದವನ್ನು ಪಡೆಯುವುದಕ್ಕೆ ಮೀಸಲಾಗಿಟ್ಟಿರುವುದು ನಮಗೆಲ್ಲರಿಗೂ ಜನಜನಿತ. ಇದನ್ನೇ Maslow's hierarchy of needs ಎಂದಾದರೂ ಕರೆದುಕೊಳ್ಳಲಿ, ಅಥವಾ High Performance Business Program ಎಂದಾದರೂ ಕರೆದುಕೊಳ್ಳಲಿ. ವ್ಯಕ್ತಿ ಅಥವಾ ಸಂಸ್ಥೆಗಳು ಸಾವಿರಾರು ವರ್ಷದಿಂದ ಮಾಡಿದ್ದನ್ನೇ, ಅಥವಾ ಬಲ್ಲದ್ದನ್ನೇ ಬೇರೆ ಪದಗಳಲ್ಲಿ ಬಣ್ಣಿಸಿಯೋ ಅಥವಾ ಅವರದ್ದೇ ಆದ ಮಸೂರದಲ್ಲಿ ತೋರಿಸಿಯೋ ಯಾವುದೋ ಒಂದು ರೀತಿಯಲ್ಲಿ ಹೊಸ ಹೊಸ ವಿವರಣೆಗಳು, ಅನ್ವೇಷಣೆಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ ಕೆಲವೊಮ್ಮೆ ಅವುಗಳನ್ನು ಕುರಿತು ಓದಲು ತೊಡಗಿದರೆ.

ಓಹ್ ನಮ್ಮದೇನು ಸಾವಿರಾರು ವರ್ಷಗಳ ಇತಿಹಾಸ ಇರುವಂಥದ್ದು ಎಂದು ನಾವು ಸುಮ್ಮನೇ ಕೂರುವಂತೂ ಇಲ್ಲ. ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಅಥವಾ ದೇಶವಾಗಲೀ ಮುಂದಾಳತ್ವದ ದೃಷ್ಟಿಯಿಂದ ಇಂದು ಏನೇನು ಚೆನ್ನಾಗಿ ನಡೆಯುತ್ತಿದೆಯೋ ಅದನ್ನು ಬಿಟ್ಟು ಇನ್ನು ಏನು ಚೆನ್ನಾಗಿ ನಡೆಯಬೇಕು ಎಂದು ಯೋಚಿಸುವುದು, ಯೋಚಿಸಿ ಕಾರ್ಯತಂತ್ರವನ್ನು ರೂಪಿಸಿ ಹಾಗೆ ನಡೆಯುವುದೇ ಇಂದಿನ ದಿನಗಳ ಸವಾಲು. ಪ್ರಪಂಚದ ಯಾವುದೋ ಒಂದು ದೇಶದ ಜನರು ಉಳಿದೆಲ್ಲರನ್ನು ಆಳುವ ಕಾಲ ದೂರವಾಗಿ ಅಲ್ಲಲ್ಲಿ ಕ್ರಮೇಣ ಬಲಿಷ್ಠ ರಾಷ್ಟ್ರಗಳು ಹುಟ್ಟಿಕೊಳ್ಳುವ ಬೆಳವಣಿಗೆಯ ದೃಷ್ಟಿಯಿಂದಂತೂ ಇಂದು ಬೆಳೆಯುತ್ತಿರುವ ಪ್ರತಿಯೊಂದು ರಾಷ್ಟ್ರಗಳು ಮುಬರುವ ನಾಳೆಗಳ ಕುರಿತು ಯೋಚಿಸಿ ಯಾವುದೋ ಒಂದು ತಂತ್ರವನ್ನು ಅನುಸರಿಸುತ್ತ ಹಾಗಿರುವಂತೆ ತೋರುತ್ತದೆ ಇಂದಿನ ದಿನಗಳ ವಿದ್ಯಮಾನ.

ನಿನ್ನೆಯ ದಿನಗಳ ನೆರಳಲ್ಲಾಗಲೀ ಹಳೆಯ ಇತಿಹಾಸದಲ್ಲಾಗಲಿ ಕಲಿಯುವುದು ಬೇಕಾದಷ್ಟಿರಬಹುದು, ಆದರೆ ಅವುಗಳಿಂದ ಕಲಿಯುವವರು ಕಡಿಮೆಯೇ ಎನ್ನುವುದು ನನ್ನ ಅಂಬೋಣ. ಹಾಗಿಲ್ಲದೇ ಹೋದರೆ ಜಗತ್ತಿನಲ್ಲೇನು ದಿನವಿಡೀ ಹೊಸ ಮೂರ್ಖರು ಹುಟ್ಟುತ್ತಲೆಯೇ ಇರುತ್ತಾರೆಯೇನು? ಅವರಿವರು ಮಾಡಿದ್ದನ್ನು ನಾವೂ ನೋಡಬೇಕು, ಹಳೆಯದೆಲ್ಲವನ್ನು ನಾವೂ ತಿಳಿಯಬೇಕು ಎನ್ನುವುದರ ಹಿಂದೆ ಇರುವ ತತ್ವವೇ ಅದರಿಂದೇನಾದರೊಂದಿಷ್ಟು ಕಲಿಯಬೇಕು ಎಂಬುದು. ಆ ಕಲಿಕೆ ಇನ್ನಷ್ಟು ಹೆಚ್ಚಿ ವ್ಯವಸ್ಥಿತವಾದಷ್ಟು ಪ್ರತಿಯೊಬ್ಬರಿಗೂ ಒಳ್ಳೆಯದೇ. ನಿನ್ನೆ ನಡೆದ ಕಾರ್ಯತಂತ್ರಗಳು ಇಂದು ಹಳಸಲಾದಾವು, ಅವುಗಳು ಹಳೆಯದಾಗುವಷ್ಟರಲ್ಲೇ ಹೊಸದನ್ನು ಹುಡುಕಿಕೊಳ್ಳುವುದರಲ್ಲಿ ಸಮಯವನ್ನು ವ್ಯಯಿಸುವ ತಾರ್ಕಿಕತೆ ಎಷ್ಟೋ ಸಂಸ್ಥೆ, ದೇಶಗಳಲ್ಲಿರುವುದರಿಂದಲೇ ಅವು ತಾವು ಮಾಡುತ್ತಿರುವುದರಲ್ಲಿ ಮುಂದಿರುವುದು.

***

ಹೀಗೆ ಬರೆಯುತ್ತ ಹೋದ ಹಾಗೆ ಇಷ್ಟು ಹೊತ್ತು ಉರಿದು ಅಟ್ಟ ಹಾಸ ಬೀರುತ್ತಿದ್ದ ಜ್ವಾಲೆಯ ಆಟ ಸ್ವಲ್ಪ ಕಡಿಮೆಯಾಯಿತು. ನಾನು ಸುಮ್ಮನೇ ಇದ್ದರೆ ಇನ್ನು ಬೆಂಕಿ ಆರಿ ಹೋಗಿ ಕೊನೆಗೆ ಉಳಿಯುವುದು ಇತಿಹಾಸ ಸಾರುವ ಅರ್ಧ ಸುಟ್ಟ ಕಟ್ಟಿಗೆ ಬೊಡ್ಡೆಗಳ ಅವಶೇಷ ಮಾತ್ರ. ಕಾಲದ ಸ್ವರೂಪದಲ್ಲಿ ಇತಿಹಾಸವನ್ನು ಬಿಂಬಿಸುವ ಈ ಬೊಡ್ಡೆಗಳ ಅವಶೇಷ ಮುಂಬರುವವರಿಗೆ ಯಾವುದೋ ಒಂದು ಪಾಠವನ್ನು ಕಲಿಸೀತು ಎನ್ನುವ ಹುಮ್ಮಸ್ಸಿನಿಂದ ನಾನು ಅವುಗಳನ್ನು ಹಾಗೆಯೇ ಬಿಡಬಹುದು. ಅಥವಾ ಉರಿಯುವ ತಾಕತ್ತು ಅವುಗಳಲ್ಲಿ ಇರುವವರೆಗೆ ನಾನು ಅವುಗಳನ್ನು ಮುಂದೂಡುತ್ತಲೋ ಅಥವಾ ಬದಿಯಿಂದ ಬದಿಗೆ ತಿರುಗಿಸುತ್ತಲೋ ಅಥವಾ ಒಂದಕ್ಕೊಂದು ತಾಗಿಕೊಂಡೋ ಇರುವಂತೆ ಮಾಡಿ ಅವುಗಳಲ್ಲಿದ್ದ ಶಕ್ತಿಯನ್ನು ಉರಿಯ ರೂಪದಲ್ಲಿ ಹೊರತೆಗೆದು ಬಿಡಬಹುದು. ಈ ಬದಲಾವಣೆಯ ಸಮಯ ಹೆಚ್ಚು ಹೊತ್ತು ಇರಲೊಲ್ಲದು, ಆದಷ್ಟು ಬೇಗ ಅರ್ಧ ಉರಿದ, ಅಲ್ಲಲ್ಲಿ ಉರಿಯುತ್ತಲ್ಲಿದ್ದ ಬೊಡ್ಡೆಗಳನ್ನು ಇನ್ನಷ್ಟು ಮುಂದೆ ತಳ್ಳುತ್ತೇನೆ. ಅವು ತಾವೇ ಸುಟ್ಟುಕೊಂಡು ಹೋಗುತ್ತಿದ್ದರೂ ಅದ್ಯಾವುದೋ ಕಷ್ಟದಿಂದ ಅವುಗಳನ್ನು ದೂರ ಸರಿಸಿದೆನೆಂದೋ ಇಲ್ಲಾ ಈಗಿನ ಮಟ್ಟಿಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಬಳಸಿದೆನೆಂದೋ ಒಂದು ರೀತಿಯ ಕೃತಜ್ಞತೆಯನ್ನು ಸ್ಪುರಿಸತೊಡಗುತ್ತವೆ, ಅದೇ ಖುಷಿಯಲ್ಲಿ ತಮ್ಮಲ್ಲಡಗಿದ ಯಾವುದೋ ಅವ್ಯಕ್ತ ಶಕ್ತಿಯ ಹುರುಪಿನಲ್ಲಿ ಗುರ್ರ್ ಗುರ್ರು ಎಂದು ಎಲ್ಲಾ ಕಡೆ ಜ್ವಾಲೆಯನ್ನು ಹತ್ತಿಸಿ ಆ ಕಾಲಕ್ಕಾದರೂ ಬೆಳಕು ಹಾಗೂ ದಗೆಯನ್ನು ಹರಡುತ್ತವೆ. ಉರಿಯುವ ಕೊಳ್ಳಿಗಳು ತಮ್ಮ ತಮ್ಮಲ್ಲಿ ತಡಕಾಡಿಕೊಂಡಾಗಲೇ ಜ್ವಾಲೆ ಹೆಚ್ಚಾಗುವುದೆಂದಾದರೆ ಹಾಗೆಯೇ ಆಗಲಿ.

Sunday, February 17, 2008

ಇಲ್ಲಿಗೂ ಅಲ್ಲಿಗೂ ಏನೂ ವ್ಯತ್ಯಾಸವಿಲ್ಲಾ ಅಂತಂದ್ರೆ...

ಇನ್ನೇನು ಸೂರ್ಯ ಹುಟ್ಟಿ ಜಗತ್ತನ್ನ ಬೆಳಗಬೇಕು ಅನ್ನೋ ಸೂಚನೆಗಳು ಸಿಕ್ಕೊಡನೆ ನಮ್ಮನೇ ಮೂಲೆಯಲ್ಲಿರೋ ಮಲ್ಲಿಗೆ ಗಿಡಗಳ ಎಲೆಗಳ ಮುಖದಲ್ಲಿ ಒಂದು ಮಂದಹಾಸ ಮಿನುಗ ತೊಡಗಿತು. ಅನತಿ ದೂರದಲ್ಲಿ ಮೋಡ ಮತ್ತು ಖಾಲಿ ಆಕಾಶಗಳ ನಡುವೆ ಅದೇ ತಾನೇ ಜಗತ್ತಿಗೆ ತನ್ನನ್ನು ಸಾರಿಕೊಂಡು ಕೆಂಪನ್ನು ಸಾರುತ್ತಿರುವ ಕಿರಣಗಳು ಈ ಎಲೆಗಳ ಮೇಲೆ ಹನಿ ಹನಿ ಸೇರಿ ತೆಳುವಾಗಿ ಮಂಜು ಕಟ್ಟಿದ್ದ ಲೇಪನದಲ್ಲೂ ಪ್ರತಿಫಲನವಾಗತೊಡಗಿತು. ಇನ್ನೇನು ಸೂರ್ಯ ಜಗತ್ತಿಗೆ ಬಂದೇ ಬಿಟ್ಟ ಕತ್ತಲೆ ಅನ್ನೋದು ಹಾರಿ ಹೋಯ್ತು ಎಂದು ಈ ಮಲ್ಲಿಗೆಯಲ್ಲಿನ ಎಲೆಗಳು ಬೀಗಿದ್ದೇ ಬಂತು. ಅದೆಷ್ಟೋ ಹೊತ್ತಿನಿಂದ ಹನಿಹನಿ ನೀರಿನ ಪಸೆಯನ್ನು ತಮ್ಮ ಮೈಮೇಲೆ ಶೇಖರಿಸಿಕೊಂಡು ’ಸದ್ಯ, ಈಗಲಾದರೂ ಬಂದ ಸೂರ್ಯ!’ ಎಂದು ಉಸ್ಸ್ ಎಂದು ಉಸಿರು ಬಿಡುವಷ್ಟರಲ್ಲಿ, ಅದ್ಯಾವುದೋ ತಣ್ಣಗಿನ ಗಾಳಿಯೊಂದು ಬೀಸಿತೋ ಇಲ್ಲವೋ ಎನ್ನುವಂತೆ ಬಂದು ಹೋದಂತಾಗಿ ಎಲೆಗಳು ಸ್ವಲ್ಪ ನಲುಗಿದ್ದೇ ತಡ, ಅವುಗಳ ಮೇಲಿನ ನೀರಿನ ಪಸೆ ನಿಧಾನವಾಗಿ ಹನಿಯೊಂದಾಗಿ ಜಾರಿ ಮಣ್ಣಿಗೆ ಬಿದ್ದು ಹೋಗೋದೇ! ’ಛೇ’ ಎಂದು ಎಲೆಗಳೆಲ್ಲ ಒಮ್ಮೆ ಕಿರುಚಿಕೊಂಡು ಬೇಕೋ ಬೇಡವೋ ಎನ್ನುವಂತೆ ಗಾಳಿಗೆ ತಲೆ ಆಡಿಸತೊಡಗಿದವು. ’ಹೋಯ್ತಲ್ಲಪ್ಪಾ!’ ಎನ್ನುವ ರೋಧನ ಇನ್ನೂ ಕೇಳಿಬರುತ್ತಿತ್ತೋ ಏನೋ, ಅಷ್ಟರಲ್ಲಿ ದಿಗಂತದ ಗೆರೆಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಮೇಲೆದ್ದು ಬಂದ ಸೂರ್ಯನ ಕಿರಣಗಳು ಎಲೆಗಳ ಮುಖದ ಮೇಲೆ ಬಿದ್ದು, ಅವು ಹಸಿರು ಬಣ್ಣದವಿದ್ದರೂ ಅವನ್ನು ತನ್ನ ಕೆಂಪಿನಲ್ಲಿ ತೋಯಿಸಿಕೊಂಡವು. ಒಂದು ಕಡೆ ತಮ್ಮ ನೀರಿನ ಪಸೆಯನ್ನು ಕಳೆದುಕೊಂಡ ದುಃಖ, ಮತ್ತೊಂದು ಕಡೆ ಅದ್ಯಾವುದೋ ಹೊಸದರ ಸಂಭ್ರಮ. ಎಲೆಗಳ ಕಸಿವಿಸಿ ಚೆನ್ನಾಗಿ ಅವುಗಳ ಮುಖದ ಮೇಲೆ ಹೊಸಬೆಳಕಿನಲ್ಲಿ ಗೋಚರಿಸತೊಡಗಿತ್ತು. ಇದು ಯಾವುದೂ ತನಗೆ ಗೊತ್ತಿಲ್ಲ, ತನ್ನ ಹೊನ್ನ ಕಿರಣಗಳು ಎಲ್ಲೆಲ್ಲೋ ಹರಡಿ ಅವು ಏನೇನನ್ನೋ ಕಂಡುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎನ್ನುವ ಧೋರಣೆ ತಳೆದ ಸೂರ್ಯ ಒಂದಿನಿತೂ ಎಲ್ಲೂ ನಿಲ್ಲುವಂತೇನೂ ತೋರಲಿಲ್ಲ.

***

’ಯಾಕೋ ಬೇಜಾರ್ ಮಾಡ್ಕೊಂಡಿದಿಯಾ?’ ಎಂದೆ.

’ಏನಿಲ್ಲ, ಇಲ್ಲಿದ್ರೆ ಅಲ್ಲೀ ಯೋಚ್ನೆ, ಅಲ್ಲಿದ್ರೆ ಇಲ್ಲೀ ಯೋಚ್ನೆ...’

’ಏಕೆ, ಇತ್ತೀಚೆಗಷ್ಟೇ ಅಲ್ವೇ ನೀನು ಅಮೇರಿಕ ಬಿಟ್ಟು ಇಂಡಿಯಾಕ್ ಹೋಗಿದ್ದು? ಎಲ್ಲ ಸುಖವಾಗಿರಬೇಕಲ್ಲ’.

’ಅದೇ, ಸುಖವಾಗೇನೋ ಇದೀನಿ. ಆದ್ರೆ...’

’ಆದ್ರೆ ಏನು?’

’ಏನಿಲ್ಲ, ಇಲ್ಲಿಗೆ ಹಿಂತಿರುಗಿದಂದಿನಿಂದ ನನಗೆ ಆರೋಗ್ಯನೇ ಅಷ್ಟೊಂದು ಸರಿಯಾಗಿಲ್ಲ ಕಣೋ. ಅದೇನ್ ಅಮೇರಿಕದಲ್ಲಿ ಸ್ವಚ್ಛತೆಯ ವಾತಾವರಣದಲ್ಲಿದ್ವೋ ಬಿಟ್ವೋ ಇಷ್ಟೊಂದು ವರ್ಷಾ, ಇಲ್ಲಿಗೆ ಬರ್ತಾ ಇದ್ದ ಹಾಗೆ ಪ್ರತಿದಿನವೂ ಬ್ಯಾಕ್ಟೀರಿಯಾ ವೈರಸ್ಸುಗಳ ವಿರುದ್ಧ ಸೆಣೆಸೋದೇ ಆಗಿದೆ ನೋಡು. ಒಂದಲ್ಲ ಒಂದು ರೀತಿಯ ಕಷ್ಟ, ನಾಲ್ಕು ದಿನ ನೆಟ್ಟಗಿದ್ರೆ ಇನ್ನು ನಾಲ್ಕು ದಿನ ಮಲಗಿರ್ತೀನಿ ಅನ್ನೋ ಹಾಗಿದೆ.’

’ಏ, ಇಂಡಿಯಾ ಅನ್ನೋ ವಾತಾವರಣದಲ್ಲೇ ಅಲ್ವೇ ನಾವು ಬೆಳೆದು ಬಂದಿರೋದು. ಮತ್ತೆ ಅಲ್ಲಿಗೆ ವಾಪಾಸ್ ಹೋಗಿ ಬದುಕೋದು ಯಾಕ್ ಕಷ್ಟಾ ಆಗುತ್ತೆ? ಈ ಪೊಲ್ಯೂಷನ್ನೂ ಮತ್ತಿನ್ನೊಂದು ಹಿಂದೆಯೂ ಇತ್ತು ಮುಂದೆಯೂ ಇರುತ್ತೆ ಅದರಲ್ಲೇನು ವಿಶೇಷ?’

’ಅಲ್ಲೇ ಇರೋದು ವಿಶೇಷ, ಈ ಪ್ರಪಂಚ ಬಹಳಷ್ಟು ಬೆಳೆದಿದೆ. ನಾವು ಹತ್ತು ವರ್ಷದ ಹಿಂದೆ ನೋಡಿದ ಪೊಲ್ಯೂಷನ್ನು ಇವತ್ತಿನ ಪೊಲ್ಯೂಷನ್ನಿಗೆ ಯಾವ ಹೋಲಿಕೆಯೂ ಅಲ್ಲ. ಜೊತೆಗೆ ಇಂದಿನ ಬೆಳೆದ ವಾತಾವರಣದಲ್ಲಿರೋ ಸ್ಟ್ರೆಸ್ಸೂ ಕಾರಣಾ ಅನ್ನು’.

’ಸ್ಟ್ರೆಸ್ಸೂ ಅಂದ್ರೆ...’

’ಅದೇ, ಬೆಳಿಗ್ಗೆ ಎಂಟು ಘಂಟೆಗೆ ಆಫೀಸಿಗೆ ಹೋದ್ರೆ ಸಂಜೆ ಎಂಟರ ಮೇಲಾಗುತ್ತೆ ಬರೋದು. ಈ ಟ್ರಾಫಿಕ್ ಜಾಮ್ ಅನ್ನೋ ನಕ್ಷತ್ರಿಕ ಯಾವನಿಗೂ ಬಿಡೋ ಹಾಗೇ ಕಾಣ್ಸಲ್ಲ. ದಿನಕ್ಕೆ ಒಟ್ಟಿಗೆ ಹದಿನಾಲ್ಕು ಘಂಟೆ ಒದ್ದಾಡೋದನ್ನ ವೃತ್ತಿ ಜೀವನ ಅಂತ ಕರೆಯೋದಕ್ಕೂ ಹೇಸಿಗೆ ಅನ್ಸುತ್ತೆ ನೋಡು. ಇಲ್ಲಿಗೆ ಬಂದು ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದುಕೊಂಡಿದ್ದ ಆಸೆಗಳೆಲ್ಲ ಬಲೂನಿಗೆ ಸೂಜಿ ಚುಚ್ಚಿದ ಹಾಗೆ ಠುಸ್ಸ್ ಎಂದು ಹೋದ್ವು. ಕೆಲವೊಂದು ಸರ್ತೀ ಅಂತೂ ಇಲ್ಲಿನ ಟ್ರಾಫಿಕ್ ಜಾಮಿಗೆ ಹೆದರಿ ಅಥವಾ ಅದನ್ನ ನೆನೆಸಿಕೊಂಡೇ ನಾನು ಎಷ್ಟೋ ಕಾರ್ಯಕ್ರಮಗಳಿಗೆ ಹೋಗೋದೇ ಇಲ್ಲ. ಅಲ್ಲಿಗೆ ಹೋದ್ರೂ ಪಾರ್ಕಿಂಗ್ ಮಾಡಿ ಗೆಲ್ತೀನೀ ಅಂತ ಇನ್ನೂವರೆಗೆ ನನಗೆ ಎಲ್ಲೂ ಖಾತ್ರಿ ಆಗಿದ್ದಿಲ್ಲ’.

’ಹೌದಾ, ಅಷ್ಟೊಂದು ಕಷ್ಟವೇ?’

’ಕಷ್ಟಾನಾ, ಇದಕ್ಕೆ ಕಷ್ಟಾ ಅಂತಂದ್ರೆ ಅದು ಒಂದು ಅಂಡರ್ ಸ್ಟೇಟ್‌ಮೆಂಟು’.

’ಅವೆಲ್ಲ ಇರ್ಲಿ, ಆಫೀಸ್ ವಾತಾವರಣ ಹೇಗಿದೆ?’

’ಇದರಲ್ಲಿ ಹೆಚ್ಚಿಗೆ ಬದಲಾದಂತೆ ಅನ್ಸಲ್ಲ, ಅವೇ ಮೈಂಡ್‌ಸೆಟ್ಟುಗಳು, ಜನರು ಎಲ್ಲೀವರೆಗೆ ಬದಲಾಗೋಲ್ವೋ ಅಲ್ಲೀವರೆಗೆ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ರೆಡ್ ಟೇಪಿಸ್ಸಮ್ಮು, ಡರ್ಟೀ ಪಾಲಿಟಿಕ್ಸೂ ಅಂತ ಅಮೇರಿಕದಲ್ಲಿ ಕರಿಯರಿಗೆ-ಬಿಳಿಯರಿಗೆ ನಾನು ಬೈದುಕೊಂಡಿದ್ದೇ ಬಂತು, ಇಲ್ಲಿ ನಡೆಯೋ ರಾಜಕೀಯ ಅವಾಂತರಗಳನ್ನ ನೋಡಿದ್ರೆ ಅಲ್ಲೇ ಎಷ್ಟೋ ವಾಸಿ ಅಂತ ಅನ್ಸುತ್ತೆ’.

’ವಿದೇಶದಲ್ಲಿ ಇಷ್ಟೊಂದು ವರ್ಷ ಅನುಭವ ಇದೆ ಅಂತ್ಲೂ ನಮ್ಮಂತೋರಿಗೆ ಬೆಲೆ ಸಿಗೋದಿಲ್ವೇನು?’

’ಓಹ್ ಸಿಗುತ್ತೆ, ಯಾಕ್ ಸಿಗಲ್ಲ. ಆದ್ರೆ ನೀನು ಹತ್ತು ಅಂದ್ರೆ ಜನ ಇಪ್ಪತ್ತು ಅನ್ನೋರ್ ಸಿಕ್ಕೇ ಸಿಗ್ತಾರೆ ಎಲ್ಲ್ ಹೋದ್ರೂ. ಜೊತೆಗೆ ಕೇವಲ ಎಕ್ಸ್‌ಪೀರಿಯೆನ್ಸ್ ಅಳತೇ ಮೇಲೆ ನಿನಗೇನೂ ಸಿಗೋದಿಲ್ಲ, ಯಾವ ಅನುಭವ ಎಲ್ಲಿ ಹೇಗಿತ್ತು ಅನ್ನೋದರ ಮೇಲೆ ಬಹಳಷ್ಟು ನಿರ್ಧಾರವಾಗುತ್ತೆ’.

’ಅದೆಲ್ಲ ಇರ್ಲಿ, ಮನೆಯವ್ರು, ಮಕ್ಳಾದ್ರೂ ಆರಾಮಾಗಿದ್ದಾರಾ?’

’ಹ್ಞೂ, ಒಂದು ರೀತಿ ಅವರೇ ಅರಾಮಾಗಿರೋರು ನನಗಿಂತ. ಒಂದು ಕಾಲ್ದಲ್ಲಿ ಇಂಡಿಯಾ ಮುಖವನ್ನ ನೋಡದ ಮಕ್ಳು ಇಲ್ಲಿಗೆ ಹೊಂದಿಕೋತಾರಾ ಅನ್ನೋದು ನನ್ನ ಪ್ರಶ್ನೆಯಾಗಿತ್ತು. ಇವತ್ತು ಅವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದಾರೆ, ಕಷ್ಟಾ ಬಂದಿರೋದೇ ನನಗೆ ನೋಡು...

’ಅದೇನ್ ಅಂತಾ ಕಷ್ಟಾ?’

’ಅದೇ, ಅಮೇರಿಕದಲ್ಲೂ ಮೈ ತುಂಬಾ ಸಾಲಾ ಮಾಡ್ಕೊಂಡು ಮಾರ್ಟ್‌ಗೇಜ್ ಕೊಟಗಂಡು ಮನೆಯಲ್ಲಿದ್ವಿ, ಇಲ್ಲಿ ಬಂದು ನೋಡಿದ್ರೆ ಒಂದು ಸಾಧಾರಣ ಮನೆ ಕಟ್ಸೋಕೇ ಒಂದು ಕೋಟಿ ರೂಪಾಯ್ ಅಂತಾರೆ - ಕಾಲು ಮಿಲಿಯನ್ ಅಮೇರಿಕನ್ ಡಾಲರ್ ನನ್ಹತ್ರ ಇದ್ದಿದ್ರೆ ಇಷ್ಟೊತ್ತಿಗೆ ನಾನು ಇಲ್ಯಾಕ್ ಇರ್ತಿದ್ದೆ? ಜೊತೆಗೆ ಸೈಟ್ ಅಂತ ಒಂದು ಇದ್ರೆ ಪುಣ್ಯ, ಇಲ್ಲ ಅಂದ್ರೆ ಇನ್ನೊಂದು ಐವತ್ತು ಲಕ್ಷವಾದ್ರೂ ಹೋಗುತ್ತೆ. ಎಲ್ಲಿಂದ ತರೋದು ಇಷ್ಟೊಂದು ದುಡ್ಡು? ಅದಕ್ಕೇ ಇಲ್ಲಿನ ಬ್ಯಾಂಕುಗಳ ಮೊರೆ ಹೋಗಿ ಮೈ ತುಂಬಾ ಸಾಲಾ ಮಾಡ್ಕೊಂಡಿದ್ದೀನಿ. ಅದರ ಫಲವೇ ನನ್ನ ಅಹರ್ನಿಶಿ ದುಡಿಮೆ, ಹೀಗೇ ಸಾಲಾ-ದುಡಿಮೆಯ ಚಕ್ಕರದಲ್ಲಿ ಮುಳುಗಿ ಹೋಗಿದ್ದೇನೆ ನೋಡು’.

’ಅಷ್ಟೊಂದು ವರ್ಷ ಅಮೇರಿಕದಲ್ಲಿದ್ರೆ ಸ್ವಲ್ಪವೂ ದುಡ್ಡು ಹುಟ್ಟೋಲ್ವೇ, ಉಳಿಯೋಲ್ವೇ?’

’ಇರುತ್ತೆ ಯಾಕಿಲ್ಲ? ಅವುಗಳೆಲ್ಲ ಒಂದಲ್ಲ ಒಂದು ಕಡೆ ಈಗಾಗ್ಲೇ ತೊಡಗಿಕೊಂಡಿರುತ್ತೆ, ಇಲ್ಲಾ ಅಂತಂದ್ರೂ ಕೋಟಿಗಟ್ಟಲೇ ಹಣ ಬ್ಯಾಂಕಿನಲ್ಲಿಡಬೇಕು ಅಂತಂದ್ರೆ ಅಮೇರಿಕದಲ್ಲಿ ಪೇ ಚೆಕ್ ನಿಂದ ಪೇ ಚೆಕ್ ಗೆ ದುಡಿಯೋರ್ ಹತ್ರ ಕಷ್ಟ ಸಾಧ್ಯವೇ ಸರಿ. ಏನೇ ಅಂದ್ರೂ ಮಿಲಿಯನ್ ಡಾಲರ್ ಯಾವನ ಹತ್ರ ಇದೆ ನೀನೇ ಹೇಳು’.

’ಮತ್ತೇ, ಅಮೇರಿಕದಲ್ಲಿರೋರು ಇಂಡಿಯಾಕ್ ಬರ್ತೀವಿ ಅಂತಂದ್ರೆ ನೀನ್ ಅವರಿಗೆ ಹೇಳೋದೇನಾದ್ರೂ ಇದೆಯೇನು?’

’ಶೂರ್, ದಿನಕ್ಕೆ ಹದಿನಾಲ್ಕು ಘಂಟೆ ದುಡಿದು ಸಾಲದ ಚಕ್ಕರದಲ್ಲಿ ಬೀಳೋ ಹಾಗಿದ್ರೆ ನೀವ್ ಎಲ್ಲಿರ್ತೀರೋ ಅಲ್ಲೇ ಇರ್ರಿ, ಅದರ ಬದ್ಲಿ ಒಂದು ಸಣ್ಣ ಊರಲ್ಲಿ ಒಂದು ಉದ್ಯಮವನ್ನ ಶುರು ಹಚ್ಚಿಕೊಂಡು ನಿಮಗೆ ನೀವೇ ಬಾಸ್ ಆಗೋ ಹಾಗಿದ್ರೆ ಇಲ್ಲಿಗೆ ಬನ್ನಿ! ಇಲ್ಲೂ-ಅಲ್ಲಿಗೂ ಏನೂ ವ್ಯತ್ಯಾಸವಿಲ್ಲ ಅನ್ನೋದು ಒಳ್ಳೆಯದೋ ಕೆಟ್ಟದ್ದೋ ಅನ್ನೋದೂ ಅವರವರಿಗೆ ಬಿಟ್ಟಿದ್ದು ಅಂತ್ಲೂ ಹೇಳ್ತೀನಿ.

’ಮತ್ತೇ, ಎಲ್ರೂ ಬೆಂಗಳೂರಿಗೇ ಬರ್ತಾರೇ ಅಂತ ಕೇಳ್ದೆ...’

’ಅದೂ ನಿಜವೇ, ಎಲ್ರೂ ಇಲ್ಲೇ ಬಂದು ಸಾಯೋದ್ರಿಂದ್ಲೇ ಬೆಂಗಳೂರಿನವರಾದ ನಮಗೆ ಈ ಕಷ್ಟ ಬಂದಿರೋದು...ನನ್ನ ಕೇಳಿದ್ರೆ ಇಂಡಿಯಾದಲ್ಲಿ ಬೇರೆ ಊರುಗಳೇ ಇಲ್ವೇ, ಅಲ್ಲಿಗೆ ಹೋಗ್ಲಿ’ .

***

ನಮ್ಮನೆಯ ಮಲ್ಲಿಗೆಯ ಗಿಡದ ಎಲೆಗಳು ಇಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಬಲಿತ ಸೂರ್ಯ ರಶ್ಮಿಯಲ್ಲಿ ತೋಯ್ದು ಹೋಗಿದ್ದವು. ಗಾಳಿ ಬೀಸುತ್ತೆ ಬೆಳಕು ಬೀಳುತ್ತೆ ಮೈ ಮೇಲೆ ಮಂಜು ಕೂರುತ್ತೆ, ಅದು ನಿಸರ್ಗ ನಿಯಮ ಅನ್ನೋ ಉಪದೇಶ ಸಾರುವ ಮುಖವನ್ನು ಮಾಡಿಕೊಂಡಿದ್ದವು. ಅವುಗಳ ವೈರಾಗ್ಯ ಮನಸ್ಸಿನ ನೆರಳಿನಲ್ಲಿ ಇವತ್ತಲ್ಲ ನಾಳೆ ಎಲ್ಲವೂ ಸರಿ ಹೋಗೇ ಹೋಗುತ್ತೆ ಎನ್ನುವ ಛಾಯೆ ಕಂಡು ಬರುತ್ತಿತ್ತು. ಅದನ್ನ ಆಶಾಭಾವನೆ ಅನ್ನೋಣವೇ ಅಥವಾ ಬದುಕಿನ ಯೋಜನೆ ಎಂದು ಕರೆದುಕೋಳ್ಳೋಣವೇ ಎಂದು ಎಲೆಗಳ ನಡುವೆ ಇನ್ನೇನು ವಾದ ಏಳುವ ಹುರುಪು ಕಂಡುಬರುತ್ತಿತ್ತು.

Sunday, February 03, 2008

...ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

’ಓಹ್, ನಿಮಗೇನ್ರಿ? ನೀವು ಅಮೇರಿಕದಲ್ಲಿದ್ದೀರ ನಿಮಗೇನು ಕಡಿಮೆ!’ ಎಂದು ಇನ್ನು ಮುಂದೆ ಯಾರಾದ್ರೂ ನಿಮಗೆ ಹೇಳಿದರಾದರೆ ಅವರಿಗೆ ನೀವು,

’ಅಮೇರಿಕದಲ್ಲಿ ವ್ಯಕ್ತಿಯೊಬ್ಬ ಒಂದು ವ್ಯವಸ್ಥೆಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಹೋರಾಡುತ್ತಲೇ ಜೀವನ ಸವೆಸಬೇಕಾಗುತ್ತದೆ!’ ಎಂದು ಉತ್ತರ ನೀಡಿ ಆಗ ಆ ಉತ್ತರವನ್ನು ಕೇಳಿದವರ ಹುಬ್ಬುಗಳು ಗಂಟು ಕಟ್ಟುವುದನ್ನು ನೋಡಿ ಸಂತೋಷ ಪಡಿ.

ಹಿಂದೆ ’ಅಂತರಂಗ’ದಲ್ಲಿ ಇದೇ ವಿಷಯವಾಗಿ ಹಲವಾರು ಸಾರಿ ಬರೆದರೂ ಅದರ ಬಗ್ಗೆ ಮತ್ತೂ ಬರೆಯುವಷ್ಟು ಸ್ಪೂರ್ತಿ ನೀಡುವ ಹಲವಾರು ವಿಷಯಗಳು ಒಟ್ಟೊಟ್ಟಿಗೆ ಸಂಭವಿಸಿದವಾದ್ದರಿಂದ ಮತ್ತೆ ಬರೆಯಬೇಕಾಯಿತು.

***

ನಾನು ಸೆಪ್ಟೆಂಬರ್ ೨೬, ೨೦೦೭ ರ ಶುಭದಿನ ಲ್ಯಾಬ್‌ಕಾರ್ಪ್‌ಗೆ ಖುದ್ದಾಗಿ ಹೋಗಿ ರಕ್ತದಾನ ಮಾಡಿ ಅಲ್ಲಿ ಟೆಕ್ನಿಷಿಯನ್ನ್‌ಗೆ ರಿಪೋರ್ಟಿನ ಒಂದು ಕಾಪಿಯನ್ನು ಮನೆಗೂ ಕಳಿಸುವಂತೆ ಕಿವಿಕಿವಿ ಹೇಳಿ ಅಂಗಾಲಾಚಿದ ಪ್ರಯುಕ್ತ ಆಕೆ ತನ್ನ ಕೋಮಲ ಕೈಗಳಿಂದ ".cc customer" ಎಂದು ಮೊದಲ ಪುಟದಲ್ಲೇ ಬರೆದುಕೊಂಡಳಾದರೂ ನನಗೆ ಇವತ್ತಿಗೂ, ನಾಲ್ಕು ತಿಂಗಳ ಬಳಿಕವೂ ಆ ವರದಿಯ ಕಾಪಿ ಸಿಗದಿದ್ದುದನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದಾಗಿದೆ. ಆದರೆ ಆಶ್ಚರ್ಯವೆಂಬಂತೆ ನಾನು ಕೊಡಬೇಕಾದ ೧೫ ಡಾಲರ್ ಕೋ-ಪೇಮೆಂಟ್‌ಗೆಂದು ಅವರು ಮೇಲಿಂದ ಮೇಲೆ ಬಿಲ್ ಕಳಿಸಿಯೇ ಕಳಿಸಿದರು, ಕೊನೆಗೆ ನಾನು ರೋಸಿ ಡಿಸೆಂಬರ್ ೨೬ ರಂದು ಹದಿನೈದು ಡಾಲರ್ ಕೋ-ಪೇಮೆಂಟ್ ಅನ್ನು ಕೊಟ್ಟು ಅದೇ ದಿನ ಲ್ಯಾಬ್‌ಕಾರ್ಪ್ ಕಸ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಮತ್ತೆ ರಿಪೋರ್ಟ್ ಕಳಿಸಲು ಬೇಡಿಕೊಂಡರೆ ಫೋನಿನಲ್ಲಿ ಉತ್ತರಿಸಿದ ಲಲನಾಮಣಿ ’ಆಗಲಿ, ಇನ್ನೆರಡು ವಾರಗಳಲ್ಲಿ ಕಳಿಸುತ್ತೇವೆ’ ಎಂದು ಉತ್ತರ ಕೊಟ್ಟಳಾದರೂ ಈಗ ಒಂದೂವರೆ ತಿಂಗಳ ಬಳಿಕ ಇವತ್ತಿಗೆ ನನ್ನ ಬ್ಲಡ್ ರಿಪೋರ್ಟ್ ಪತ್ತೆಯೇ ಇಲ್ಲ!

ಒಬ್ಬ ಸಾಮಾನ್ಯ ಬಳಕೆದಾರನಾಗಿ ನಾನು ಏನು ಮಾಡೋದು, ಏನು ಬಿಡೋದು...ಮೇಲಿಂದ ಮೇಲೆ ಕಾಲ್ ಮಾಡಿ ತಲೆಕೆಡಿಸಿಕೊಳ್ಳೋಣವೆಂದರೆ ನನಗೆ ಬಿಡುವಿರದ ಆಫೀಸಿನ ಕೆಲಸ, ಜೊತೆಗೆ ಮತ್ತೆ ಜನವರಿಯ ಕೊನೆಯಲ್ಲಿ ಪ್ರಯತ್ನಿಸಿದಾಗ ’ಇನ್ನೆರಡು ವಾರಗಳಲ್ಲಿ ಬಂದೇ ಬಿಡುತ್ತೆ’ ಎಂದು ಇನ್ಯಾರೋ ಆಶ್ವಾಸನೆ ನೀಡಿರೋದರಿಂದ ಮತ್ತೊಂದು ವಾರ ಕಾಯ್ದು ನೋಡೋಣವೆಂದುಕೊಂಡು ನನ್ನ ಬ್ರಹ್ಮಾಸ್ತ್ರಗಳಿಗೆ ಒಂದಿಷ್ಟು ರೆಸ್ಟ್ ಕೊಟ್ಟಿದ್ದೇನೆ ನೋಡಿ.

ನಾವು ದುಡ್ಡು ಕೊಟ್ಟು ನಾವು ಕೊಟ್ಟ ನಮ್ಮ ರಕ್ತದ ವರದಿಯನ್ನು ಕೇಳಲು ಹೋದರೆ ಅದಕ್ಕೆ ನೂರಾ ಎಂಟು ಸೆಕ್ಯೂರಿಟಿ ಪ್ರಶ್ನೆಗಳು. HIPAA (Health Insurance Portability & Accountability Act) ಮಣ್ಣೂ ಮಸಿಯೆಂದು ನಮ್ಮ ತಲೆಯೆನ್ನೆಲ್ಲ ತಿಂಥಾರಲ್ಲ ಶಿವಾ, ಎಂಥಾ ಲೋಕವಯ್ಯಾ ಇದು?

***

ಸೋಶಿಯಲ್ ಸೆಕ್ಯೂರಿಟಿ ನಂಬರ್, ಕ್ರೆಡಿಟ್ ಹಿಸ್ಟರಿ, ಡ್ರೈವರ್ಸ್ ಲೈಸನ್ಸ್ ಮುಂತಾದವುಗಳ ಮೇಲೆ ನಿಂತ ವ್ಯವಸ್ಥೆಯ ವಿರುದ್ಧ ಹೋರಾಡೋದಕ್ಕೆ ನೀವು ರಾವಣರಾಗಬೇಕು, ಅಂದರೆ ನಿಮಗೆ ಹತ್ತು ತಲೆಗಳಿದ್ದರೂ ಸಾಲದು. ಯಾವನೋ ಬರೆದ ಬಿಸಿನೆಸ್ ರೂಲ್ಸ್‌ಗಳು, ಯಾರೋ ಅದೆಲ್ಲಿಯೋ ಕುಳಿತು ಕುಟ್ಟಿದ ಕಂಪ್ಯೂಟರ್ ವ್ಯವಸ್ಥೆ ನಿಮಗೆ ಚೆನ್ನಾಗಿ ನೀರು ಕುಡಿಸಬಲ್ಲದು. ನನ್ನ ಮಾತಿನಲ್ಲಿ ವಿಶ್ವಾಸವಿಲ್ಲದೇ ಹೋದರೆ ಕೇವಲ ಒಂದೇ ಒಂದು ಸಾರಿ ನಿಮ್ಮ ಕ್ರೆಡಿಟ್ ಕಾರ್ಡಿನ ಬಿಲ್ಲನ್ನು ಡ್ಯೂ ಡೇಟ್ ಆಗಿ ಒಂದು ತಿಂಗಳ ನಂತರ ಕಟ್ಟಿ ನೋಡಿ, ಆಗ ನಿಮಗೇ ತಿಳಿಯುತ್ತದೆ. ನೀವು ಸಾವಿರ ವರ್ಷಗಳಿಂದ ನಿರಂತರವಾಗಿ ಬಿಲ್ ಅನ್ನು ಕಟ್ಟಿಕೊಂಡು ಬಂದಿರುತ್ತೀರಿ, ಯಾವುದೋ ಒಂದು ಫ್ಯಾಮಿಲಿ ಎಮರ್ಜನ್ಸಿಯ ಸಂಬಂಧವಾಗಿ ನೀವು ಒಂದು ತಿಂಗಳು ಬಿಲ್ ಅನ್ನು ಕಟ್ಟುವುದನ್ನು ನಿರ್ಲಕ್ಷಿಸುತ್ತೀರಿ ಎಂದುಕೊಳ್ಳಿ - ಅದು ಮಾನವೀಯ ವಿಷಯವೇ ಸರಿ - ಅದನ್ನು ಫೈಟ್ ಮಾಡಬೇಕಾದೀತು, ಹಾಗೆ ಮಾಡುತ್ತಾ ಮಾಡುತ್ತಾ ನಿಮ್ಮ ಕಪ್ಪಗಿನ ಕೂದಲ ಆಯುಷ್ಯವನ್ನು ಬಲಿಕೊಡಬೇಕಾದೀತು, ನಿಮ್ಮ ಮುಖದಲ್ಲಿ ನೆರಿಗೆಗಳನ್ನು ಹೆಚ್ಚಿಸಿಕೊಳ್ಳಬೇಕಾದೀತು.

ದೊಡ್ಡ ದೊಡ್ಡ ಶಾಪ್ಪಿಂಗ್ ಮಾಲ್‌ಗಳಲ್ಲಿ ರೀಟೈಲ್-ಹೋಲ್‌ಸೇಲ್ ಅಂಗಡಿಗಳನ್ನು ಇಟ್ಟುಕೊಂಡಿರುವ ಸಿಯರ್ಸ್ (Sears) ಅಂತಹ ಕಂಪನಿಗಳು ತಮ್ಮ ಗಿರಾಕಿಗಳಿಗೆ ವಸ್ತುಗಳನ್ನು ಮಾರಿ ಅದರಿಂದ ಬರುವ ಲಾಭಕ್ಕಿಂತಲೂ ತಮ್ಮ ಗಿರಾಕಿಗಳು ಕೊಡುವ ಲೇಟ್-ಫೀ, ಬಡ್ಡಿಗಳಿಂದ ಹೆಚ್ಚು ಸಂಪಾದನೆ ಮಾಡುತ್ತವೆ ಎನ್ನುವುದಕ್ಕೆ ನಿದರ್ಶನಗಳು ಬೇಕೇ? ಅಂತಹ ಕಂಪನಿಗಳ ಕ್ರೆಡಿಟ್ ವಿಭಾಗವನ್ನು ಕೊಂಡುಕೊಳ್ಳಲು ಬ್ಯಾಂಕುಗಳು ನಾ ಮುಂದು, ತಾ ಮುಂದು ಎಂದು ಹಾತೊರೆದುದನ್ನು ನಾವು ಕಣ್ಣಾರೆಯೇ ನೋಡಿದ್ದೇವೆ.

ನೀನು ದುಡಿ, ದುಡಿದ ದುಡ್ದಿನಲ್ಲಿ ಮನೆ ಕಟ್ಟಿಸಿ ಅನುಭವಿಸು ಎನ್ನುವ ನಮ್ಮ ತತ್ವಗಳನ್ನು ಹೊಸಕಿ ಹಾಕಿ, ನಿಮಗೆ ಮೈ ತುಂಬಾ ಸಾಲವನ್ನು ಹೊರಿಸುತ್ತೇವೆ, ಆದರೆ ಈ ಮನೆ ಇವತ್ತಿನಿಂದಲೇ ನಿಮ್ಮದು ಎನ್ನುವ ಬಂಡೆಗಲ್ಲಿನಡಿ ನಮ್ಮನ್ನು ನೂಕಿ ನಮ್ಮ ಬಡ್ಡಿ ಹಣದಿಂದ ಬದುಕುವ ವ್ಯವಸ್ಥೆಯ ಕೂಸುಗಳಾಗಿ ಹೋಗಿದ್ದೇವಲ್ಲ ನಾವು ಏನು ಹೇಳೋಣ? ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಲ್ಲಿ ಐಶಾರಾಮವಿಲ್ಲದಿದ್ದರೂ ನೆಮ್ಮದಿ ಇದ್ದೀತು, ಮನಸು ಬೇಡಿದಷ್ಟು ಮನೆ ಕೊಂಡು ಇಂದೋ ನಾಳೆಯೋ ಕೆಲಸ ಹೋದರೆ ಎನ್ನುವ ಹೆದರಿಕೆಯ ಗೂಡಿನೊಳಗೆ ಮಲಗುವುದು ಆಧುನಿಕ ಬದುಕಿನ ಬವಣೆಗಳಲ್ಲೊಂದೇ ಎಂದು ನಾನು ಹೇಳೋದು.

***

ಹೇಳಿ - ಇಡೀ ಅಮೇರಿಕದ ವ್ಯವಸ್ಥೆ ಸಾಲದಲ್ಲಿ ನಿಂತಿದೆ! ಇಲ್ಲಿಯ ಕಾರ್ಪೋರೇಷನ್ನುಗಳು ಬಿಲಿಯನ್ನುಗಟ್ಟಲೆ ಸಾಲವನ್ನು ಹೊಂದಿವೆ, ಇಲ್ಲಿ ಜೀವಿಸುವ ಪ್ರಜೆಗೂ ನೇರವಾಗಿಯೋ, ಪರೋಕ್ಷವಾಗಿಯೋ ಸಾಲ ಇದ್ದೇ ಇದೆ. ಹಾಗಾದರೆ ಯಾವ ದೇಶದಲ್ಲಿ ಪರೋಕ್ಷ ಸಾಲವಿಲ್ಲ ಎಂದು ಪ್ರಶ್ನೆ ಕೇಳಿಯೇ ಕೇಳಿರುತ್ತೀರಿ, ಪರೋಕ್ಷ ಸಾಲ ನಮ್ಮನ್ನು ಮೀರಿದ್ದು, ನಾವು ಮೈ ಮೇಲೆ ಹೇರಿಕೊಳ್ಳುವ ಸಾಲ ನಮ್ಮನ್ನು ಮಟ್ಟ ಮಾಡೋದು.

ಏನ್ ಸಾರ್, ಇಷ್ಟೊಂದ್ ದಿನಾ ಅಮೇರಿಕದಲ್ಲಿದ್ದುಕೊಂದು ಒಂದು ಬಾಯ್ ತುಂಬಾ ಒಳ್ಳೇ ಮಾತನಾದ್ರೂ ಹೇಳಬಾರ್ದಾ? ಹೇಳ್ತೀವಿ, ಯಾಕಿಲ್ಲ - ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಸ್ವಾಮೀ, ನಿಮ್ಮ ಮನೆಯಲ್ಲಿ ಕಾಫಿ ಪುಡಿ ಇದೆಯೋ ಇಲ್ಲವೋ ಅನ್ನೋದನ್ನೂ ಒಂದು ದಿನ ನೀವು ನಿಮ್ಮ ಕಂಪ್ಯೂಟರ್ ಲಾಗಿನ್ ಆಗಿ ನಿಮ್ಮ ಇನ್ವೆಂಟ್ರೆ ಚೆಕ್ ಮಾಡಿಕೊಂಡೇ ಕಾಫಿ ಡಬ್ಬವನ್ನು ಬೇಸ್‌ಮೆಂಟ್‌ನಲ್ಲಿ ಹುಡುಕಿಕೊಂಡು ಹೋಗೋ ವ್ಯವಸ್ಥೆಗೆ ದಾಸರಾಗ್ತೀರಿ ನೋಡಿ ಆಗ ನಿಮ್ಮನ್ನು ನಾನು ಇದೇ ಪ್ರಶ್ನೆ ಕೇಳ್ತೀನಿ.

***

ಈ ವರ್ಷ ಎಲೆಕ್ಷನ್ನ್ ವರ್ಷ, ನಮ್ಮನೆ-ಕಾರಿನ ರೆಡಿಯೋಗಳಿಗೆ ರಜಾ ಘೋಷಿಸಿಬಿಟ್ಟಿರೋದರಿಂದ ನಾನು ಸ್ವಲ್ಪ ನ್ಯೂಸ್ ಮಾಧ್ಯಮಗಳಿಂದ ಬಿಡುವನ್ನು ಪಡೆದುಕೊಂಡು ಹಾಯಾಗಿ ಇರೋಣಾ ಅಂತ ತೀರ್ಮಾನ ಮಾಡಿಕೊಂಡಿದ್ದೀನಿ. ನಿಮ್ಮ ಅಮೇರಿಕನ್ ಪುರಾಣ ಏನ್ ಬೇಕಾದ್ರೂ ಹೇಳಿ ಆದ್ರೆ ಮಾತ್ರ ಈ ಡೆಮೋಕ್ರಾಟೂ-ರಿಪಬ್ಲಿಕ್ಕೂ ಅಂಥಾ ಮಾತ್ರ ಶುರು ಮಾಡ್‌ಬೇಡಿ. ಕಳೆದ ವರ್ಷ ಈ ಹಾಳೂ ಮೂಳೂ ಸುದ್ಧಿಗಳನ್ನು ಕೇಳೇ ನನ್ನ ಬ್ಲಡ್ ಪ್ರೆಷರ್ ಸ್ವಲ್ಪ ಹೆಚ್ಚಾಗಿದ್ದೂ ಅಂತ ಕಾಣ್ಸುತ್ತೆ, ಅದನ್ನ ಚೆಕ್ಕ್ ಮಾಡೋಣ ಅಂತ ಹೋದ್ರೆ ಡಾಕ್ಟರೇನೋ ದೊಡ್ಡ ರಕ್ತದ ಟೆಸ್ಟ್ ಅನ್ನು ಬರೆದು ಕೊಟ್ರು, ಅಲ್ಲಿ ಹೋಗಿ ರಕ್ತದಾನ ಮಾಡಿ ಬಂದು ಐದು ತಿಂಗಳಾದ್ರೂ ಇನ್ನೂ ನನಗಾಗ್ಲೀ ನನ್ನ ಡಾಕ್ಟರಿಗಾಗ್ಲಿ ರಕ್ತದ ವರದಿಯೇ ಬಂದಿಲ್ಲವಾದ್ರಿಂದ ನನಗೆ ಖಾಯಿಲೆ ಇದ್ಯೋ ಇಲ್ಲವೋ ಅನ್ನೋದನ್ನ ಈ ವ್ಯವಸ್ಥೆಯಿಂದ ತಿಳಿದುಕೊಳ್ಳೋಕೇ ನನಗೆ ಆರು ತಿಂಗಳು ಬೇಕಾಗುತ್ತೆ. ಖಾಯಿಲೆ ಇದ್ಯೋ ಇಲ್ಲವೋ ಅನ್ನೋ ಪರೀಕ್ಷೆಯ ಪಲಿತಾಂಶ ಪ್ರಕಟವಾಗಿಲ್ಲದ್ದನ್ನು ನೋಡಿ ಅದನ್ನು ಹಿಂಬಾಲಿಸಿ, ಫಾಲೋ ಅಪ್ ಮಾಡಿಕೊಂಡು ಶ್ರಮ ವಹಿಸಿದ್ದಕ್ಕೆ ಮತ್ತೇನೇನೋ ಖಾಯಿಲೆಗಳು ಅಂಟಿಕೊಡು ಮತ್ತೆ ಡಾಕ್ಟರ್ ಆಫೀಸಿಗೆ ಹೋಗೋದಕ್ಕೆ ಹೆದರಿಕೆ ಆಗುತ್ತೆ.

ನಾನು ಈ ಒಂಥರಾ ಡಾಕ್ಟರು-ಬ್ಲಡ್ ರಿಪೋರ್ಟಿನ ಚಕ್ಕರದಲ್ಲಿ ಸಿಲುಕಿ ನಾನು ಒದ್ದಾಡ್ತಾ ಇರೋದನ್ನ ನೋಡಿಕೊಂಡು ನನಗೆ ಒಂದೊಂದ್ ಸರ್ತಿ ಅನ್ಸುತ್ತೆ - ಸೀದಾ ಭಾರತದ ಏರ್‌ಪೋರ್ಟಿನಲ್ಲಿ ಹೋಗಿ ಒಂದು ಭೂತ್ ಹಾಕಿ ಬಿಡ್ಲಾ ಅಂತಾ...ಅಲ್ಲಿ ಹಸಿದ ಕಣ್ಣುಗಳನ್ನು ಹೊತ್ತುಕೊಂಡು ಫಾರಿನ್ನಿಗೆ ಹೋಗೋರನ್ನ ತಡೆಯೋ ಒಂದು ಪಡೆಯನ್ನ ಹುಟ್ಟು ಹಾಕಿದ್ರೆ ಹೇಗೆ ಅಂತ ಅನ್ಸೋದು ನಿಜ, ನಮ್ ಭೂತ್‌ನಲ್ಲಿ ಮೆಂಬರ್‌ಶಿಪ್‌ಗೆ ನೀವೂ ಅರ್ಜಿ ಗುಜರಾಯಿಸ್ತೀರೋ ಹೇಗೆ?!

Tuesday, January 29, 2008

ಬಂಡವಾಳಶಾಹಿ ಜಗತ್ತಿನ ಎರಡು ಮಹಾಮಂತ್ರಗಳು

ಬದಲಾವಣೆಯೇ ಜಗದ ನಿಯಮ - ಅನ್ನೋದು ನಿಜವಾದರೆ ಬದಲಾವಣೆಯ ಆಗು ಹೋಗುಗಳನ್ನು ಮ್ಯಾನೇಜು ಮಾಡುವುದೂ ಅಷ್ಟೇ ನಿಜ ಅಥವಾ ಅಗತ್ಯ. ನಾವು ಎಷ್ಟರ ಮಟ್ಟಿಗೆ ಬದಲಾವಣೆಗಳನ್ನು ನಿರ್ವಹಿಸಿಕೊಂಡು ಹೋಗುತ್ತೇವೆ ಅನ್ನೋದು ನಮ್ಮಲ್ಲಿ ಜನರು ಹುಡುಕಿಕೊಂಡು ಬರುವ ಸ್ವಭಾವ ಅಥವಾ ಗುಣವಾಗಬಹುದು. ಈ ಬದಲಾವಣೆಯ ಅಗತ್ಯಗಳಿಗೆ ನಮ್ಮ ಸ್ಪಂದನ ಇಂದಿನ ದಿನಗಳಲ್ಲಂತೂ ಇನ್ನೂ ಮುಖ್ಯ, ಬದಲಾವಣೆ ಎನ್ನೋದು ಯಾವ ರೂಪದಲ್ಲಿ ಹೇಗೆ ಬೇಕಾದರೂ ಪ್ರತ್ಯಕ್ಷವಾಗಿ ನಮ್ಮ ನೆಲೆಗಟ್ಟನ್ನು ಅಲುಗಾಡಿಸುವ ನಿರೀಕ್ಷೆಯಂತೂ ಇರೋದು ನಿಜ.

ಈ ಬದಲಾವಣೆಗಳು ಯಾವುದೋ ಒಂದು ನಮಗೆ ಗೊತ್ತಿರುವ ರಸ್ತೆಯಲ್ಲಿ ಹೋಗುತ್ತಿರುವ ನಮ್ಮ ಕಂಫೋರ್ಟ್ ಝೋನ್ ಅನ್ನು ಪ್ರಶ್ನಿಸುವ ಡೀ-ಟೂರ್ ಇದ್ದ ಹಾಗೆ, ಅವುಗಳು ಒಡ್ಡುವ ಆ ಮಟ್ಟಿನ ಅನಿರೀಕ್ಷಿತ ತಿರುವುಗಳನ್ನು ಸಾವಧಾನ ಚಿತ್ತದಲ್ಲಿ ಸ್ವೀಕರಿಸಿ ಮುನ್ನಡೆಯದೇ ಇದ್ದರೆ ಅಪಾಯವಂತೂ ಖಂಡಿತ. ಅದೇ ಬದಲಾವಣೆಗಳಿಗೆ ಕಿವಿಗೊಡದೇ ಇದ್ದ ರಸ್ತೆಯಲ್ಲೇ ಮುನ್ನಡೆದರೆ ಯಾವುದಾದರೂ ಗುಂಡಿ ಸೇರುವ ಅಪಾಯ ಬೇರೆ. ಹೀಗಾಗಿ ಬದಲಾವಣೆಗಳು ನಮ್ಮನ್ನು ಹೇಳಿಕೇಳಿ ಬರದೇ ಇದ್ದರೂ ಅವುಗಳನ್ನು ನಿರೀಕ್ಷಿಸಿಕೊಂಡೇ ಸಾಧ್ಯವಾದಷ್ಟರ ಮಟ್ಟಿಗೆ ತಯಾರಾಗಿರುವುದು ಈಗಿನ ಕಾಲದ ಅಗತ್ಯಗಳಲ್ಲೊಂದು. ಇಂದಿದ್ದ ಬಾಸ್ ನಾಳೆ ಇರದಿರಬಹುದು, ನಮ್ಮ ನೆಚ್ಚಿನ ಕೆಲಸ ಕಾರ್ಯಗಳು ಬೇರೆಯವರ ಕೈಗೆ ದಿಢೀರ್ ಹೋಗಿ ನಮಗೆ ಹೊಸ ಕೆಲಸಗಳು ಬರಬಹುದು, ಇಂದು ಮುಂಜಾನೆ ಇದ್ದ ಕೆಲಸವೇ ಸಂಜೆಗೆ ಇರದಿರಬಹುದು. ೨೦೦೦ ದಿಂದ ೨೦೦೩ ರವರೆಗೆ ಅನೇಕ ಕಂಪನಿಗಳು (ವಿಶೇಷವಾಗಿ ಡಾಟ್‌ಕಾಮ್) ಮುಚ್ಚಿ ಹೋದ ಹಿನ್ನೆಲೆಯಲ್ಲಿ ಅಥವಾ ಅವರ ವರ್ಕ್ ಫೋರ್ಸ್ ಅನ್ನು ಕಡಿಮೆ ಮಾಡುವ ಹುನ್ನಾರದಲ್ಲಿ ಅನೇಕ ಜನ ಕೆಲಸವನ್ನು ಕಳೆದುಕೊಂಡದ್ದು ಬೇಕಾದಷ್ಟು ಉದಾಹರಣೆಗಳಿವೆ. ಈಗಲೂ ಸಹ ಅಲ್ಲಲ್ಲಿ ಸಾವಿರಾರು ಜನರನ್ನು ಕೆಲಸವಿಲ್ಲದೇ ಮನೆಗೆ ಕಳಿಸುವುದನ್ನು ನಾವು ಕಾರ್ಪೋರೇಟ್ ರಿಪೋರ್ಟುಗಳಲ್ಲಿ ಓದಬಹುದು. ಹೀಗೆ ಒಂದು ಕಂಪನಿಯಲ್ಲಿನ ನಮ್ಮ ಅಸ್ತಿತ್ವವನ್ನು ದಿಢೀರ್ ಕಳೆದುಕೊಂಡು ಮತ್ತೊಂದು ಕಂಪನಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಬದಲಾವಣೆ ಒಬ್ಬನ ವೃತ್ತಿ ಜೀವನದಲ್ಲಿ ಬೇಕೆ? ಕೆಲಸ ಬದಲಾವಣೆ ಅನ್ನೋದು ಹೆಚ್ಚು ಸ್ಟ್ರೆಸ್ ಹುಟ್ಟಿಸುವ ಲೈಫ್ ಇವೆಂಟುಗಳಲ್ಲಿ ಒಂದು. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ, ಎರಡು ವಾರಗಳ ಹಿಂದೆ ಇದ್ದಕ್ಕಿದ್ದ ಹಾಗೆ ಕಂಪನಿಯಲ್ಲಿ ಅನೇಕ ಬದಲಾವಣೆಗಳು ನಾನಿಲ್ಲದ ವೇಳೆಯಲ್ಲಿ ಸಂಭವಿಸಿ ರಾತ್ರೋ ರಾತ್ರಿ ನನಗೆ ಹೊಸ ಬಾಸೂ, ಹೊಸ ಕೆಲಸವೂ ಬಂದಿದ್ದು ಇಂದಿಗೂ ನಿಜವೇ ಎಂದು ಕೇಳಿಕೊಳ್ಳುವಷ್ಟರ ಮಟ್ಟಿಗೆ ಕ್ಷಿಪ್ರವಾಗಿ ನಡೆದು ಹೋಗಿದೆ. ಹಳೆಯದನ್ನು ನೆನೆಸಿಕೊಂಡು ಕೊರಗುವ ಮನಸ್ಸಿದ್ದರೂ ಹೊಸದಕ್ಕೆ ಹೊಂದಿಕೊಂಡು ಹೋಗದೇ ಬೇರೆ ನಿರ್ವಾಹವೇ ಇಲ್ಲ. ಬದಲಾವಣೆ ಎನ್ನೋದು ಯಾವತ್ತಿದ್ದರೂ ಗೆಲ್ಲುತ್ತೆ, ಅದಕ್ಕೆ ಸ್ಪಂದಿಸಿ ಹೊಂದಿಕೊಂಡು ಹೋಗುವುದು ಎನ್ನುವುದು ರೂಲ್ ಅದು ಯಾವತ್ತೂ ಎಕ್ಸೆಪ್ಷನ್ನ್ ಅಲ್ಲ.

***

ಇಂದಿನದು ಇಂದಿಗೆ ನಾಳೆಯದು ನಾಳೆಗೆ ಎನ್ನುವ ಬಂಡವಾಳಶಾಹಿ ವ್ಯವಸ್ಥೆಯ ಮಹಾಮಂತ್ರಕ್ಕೆ ಎಂಥವರೂ ಮನಸೋಲಲೇ ಬೇಕು. ಇಲ್ಲಿ ಕ್ವಾರ್ಟರಿನಿಂದ ಕ್ವಾರ್ಟರಿಗೆ ತಿಂಗಳಿನಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ನಮ್ಮನ್ನು ನಾವು ಪುನರ್ ವ್ಯಾಖ್ಯಾನಿಸುವ ಅಗತ್ಯವಿದೆ. ನಿನ್ನೆ ಉತ್ತಮವಾದದ್ದು ಇಂದಿಗೆ ನಿಜವಾಗ ಬೇಕೆಂದೇನೂ ಇಲ್ಲ, ಇಂದು ನಡೆದದ್ದು ನಾಳೆಗೆ ನಡೆಯುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಎಲ್ಲವೂ ಆಯಾ ವರ್ಷಕ್ಕೆ ಅನುಗುಣವಾದವುಗಳು, ಪ್ರತಿ ಮೂರು/ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆಯಾ ಕಂಪನಿಗಳ ಪರ್‌ಫಾರ್ಮೆನ್ಸ್ ಅನ್ನು ಲೆಕ್ಕ ಹಾಕುವ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ತಿಂಗಳಿನಿಂದ ತಿಂಗಳಿಗೆ ಚೇತರಿಸಿಕೊಳ್ಳುವ ವ್ಯವಸ್ಥೆ ಇರುವುದರ ಜೊತೆಗೆ ಹಳೆಯದನ್ನು ಆದಷ್ಟು ಬೇಗನೆ ಹಿಂದಕ್ಕೆ ತಳ್ಳಿ ಮುನ್ನುಗ್ಗುವ ಆತುರವೂ ಕಂಡುಬರುತ್ತದೆ. ಹಲವಾರು ವರ್ಷಗಳ ಕಾಲ ಒಂದೇ ಸಮನೆ ಒಂದು ’ಕ್ಯಾರೆಕ್ಟರ್’ ಅನ್ನು ಹುಟ್ಟಿಸಿ ಬೆಳೆಸುಕೊಳ್ಳುವುದಕ್ಕಿಂತಲೂ ಆಯಾ ಮಟ್ಟಿನ ಬೆಳವಣಿಗೆಗೆ ಹೆಚ್ಚು ಆಸ್ಪದ ನೀಡಿದಂತನಿಸುತ್ತದೆ. ಈ ಕೆಳಗಿನ ನ್ಯಾಸ್‍ಡಾಕ್ ಬೆಳವಣಿಗೆಯನ್ನು ನೋಡಿ.

ಜನವರಿ ೩, ೨೦೦೦ ರಂದು 4,186 ಕ್ಕೆ ತೆರೆದುಕೊಂಡ NASDAQ ಮಾರ್ಕೆಟ್ಟಿನ ಇಂಡೆಕ್ಸ್ ಅದೇ ವರ್ಷದ ಮಾರ್ಚ್ ೬ ರಂದು 5,048 ಹೋಗಿದ್ದನ್ನು ಬಿಟ್ಟರೆ ಅಲ್ಲಿಂದ ಕ್ರಮೇಣ ಹಂತ ಹಂತವಾಗಿ ಕೆಳಮುಖವಾಗಿ ಹರಿದ ಮಾರ್ಕೆಟ್ಟಿನ ಗ್ರಾಫು ಬುಡ ಬಂದು ಸೇರಿದ್ದು ಸೆಪ್ಟೆಂಬರ್ ೩೦, ೨೦೦೨ ರಂದೇ - ಅಂದು 1,139 ಕ್ಕೆ ಕ್ಲೋಸ್ ಆದ ಮಾರ್ಕೆಟ್ಟಿನ ಕೆಲ ದಾಖಲೆ ಎಂದೇ ಹೇಳಬೇಕು. ಸುಮಾರು ನಾಲ್ಕು ಸಾವಿರ ಪಾಯಿಂಟುಗಳಷ್ಟು ಕುಸಿತ ಕೇವಲ ಎರಡೂವರೆ ವರ್ಷಗಳಲ್ಲಿ. ಲಕ್ಷಾಂತರ ಜನ ತಮ್ಮ ಟೆಕ್ನಾಲಜಿ ಇನ್ವೆಷ್ಟುಮೆಂಟುಗಳಲ್ಲಿ ಹಣ ಕಳೆದುಕೊಂಡರು, ಬುದ್ಧಿವಂತರು ಆದಷ್ಟು ಬೇಗ ಟೆಕ್ನಾಲಜಿ ಸೆಕ್ಟರುಗಳಿಂದ ಜಾಗ ಖಾಲಿ ಮಾಡಿ ರಿಯಲ್ ಎಸ್ಟೇಟೋ ಮತ್ತಿನ್ನೆಲ್ಲೋ ತೊಡಗಿಸಿ ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಂಡರು, ಇನ್ನುಳಿದವರು Yahoo, Oracle, Microsoft, Cisco ಮೊದಲಾದ ಕಂಪನಿಗಳಲ್ಲಿ ತಮ್ಮ ಹಣ ದಿನೇ ದಿನೇ ಕುಸಿಯೋದನ್ನು ನೋಡಿಕೊಂಡೇ ಸುಮ್ಮನಿದ್ದರು. ಇವೆಲ್ಲವನ್ನೂ ಮಾರ್ಕೆಟ್ ಪಂಡಿತರು ಬೇಕಾದ ರೀತಿಯಲ್ಲಿ ಅವಲೋಕಿಸಿ ಬೇಕಾದಷ್ಟನ್ನು ಪಬ್ಲಿಷ್ ಮಾಡಿರಬಹುದು, ಆದರೆ ಜನವರಿ ೨೦೦೩ ರಿಂದ ನಂತರದ ಕಥೆಯೇ ಬೇರೆ.

ಜನವರಿ ೬, ೨೦೦೩ ರಂದು 1,390 ಗೆ ತೆರೆದುಕೊಂಡ NASDAQ ಅದೇ ವರ್ಷ ಡಿಸೆಂಬರ್ ಅಂತ್ಯದ ಹೊತ್ತಿಗೆ 2,000 ದ ಗಡಿ ದಾಟಿತ್ತು. ಫೈನಾನ್ಸ್ ಪಂಡಿತರು, ಟಿವಿಯಲ್ಲಿನ ಮಾತನಾಡುವ ತಲೆಗಳು, ಮತ್ತಿತರ ಮಹಾಮಹಿಮರೆಲ್ಲರೂ ಮಾರ್ಕೆಟ್ಟನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಆ ವರ್ಷದ ಮಟ್ಟಿಗೆ NASDAQ ನಲ್ಲಿ 30% ಗಿಂತಲೂ ಹೆಚ್ಚು ಉತ್ತಮ ರಿಟರ್ನ್ಸ್‌ಗಳನ್ನು ಕಂಡುಕೊಂಡಿದ್ದು ನಿಜವಾದರೂ ಅದರ ಹಿಂದಿನ ಎರಡೂವರೆ ವರ್ಷಗಳಲ್ಲಿ ಹಣ ಕಳೆದುಕೊಂಡ ಬಗ್ಗೆ ಏನೂ ಸೆನ್ಸಿಟಿವಿಟಿಯೇ ಇಲ್ಲವೇ ಎಂದು ಅನ್ನಿಸಿದ್ದೂ ನಿಜ.

***

ಹೀಗೆ ಬಂಡವಾಳಶಾಹಿ ಜಗತ್ತಿನ ಬದುಕಿನಲ್ಲಿ ಇನ್ನೂ ಅನೇಕ ಸೂತ್ರಗಳಿವೆ, ಅವುಗಳನ್ನೆಲ್ಲ ಹೆಕ್ಕಿ ಹೇಳುತ್ತಾ ಹೋದರೆ ದೊಡ್ಡ ಕಥೆಯಾದೀತು. ಈ ಮಹಾಮಂತ್ರಗಳ ಪಟ್ಟಿ ಇಲ್ಲಿಗೆ ನಿಲ್ಲೋದಿಲ್ಲ, ಇನ್ನೂ ಬೇಕಾದಷ್ಟಿವೆ, ಅವುಗಳನ್ನು ಪುರುಸೊತ್ತು ಮಾಡಿಕೊಂಡು ಬೆಳೆಸಿಕೊಂಡು ಹೋಗಬೇಕಷ್ಟೆ, ಅಥವಾ ಅದರ ಬದಲಿಗೆ ಒಂದು ಪುಸ್ತಕ ಬರೆದರೂ ಆದೀತು!

ಇನ್ನು ಮುಂದೆ ಎಂದಾದರೂ ಒಮ್ಮೆ ಬಂಡವಾಳಶಾಹಿ ಜಗತ್ತಿನ ತಪ್ಪು-ಒಪ್ಪುಗಳ ಬಗ್ಗೆಯೂ, ತಪ್ಪನ್ನು ಕಂಡು ಹಿಡಿದವರಿಗೆ ಕೊಡುವ ಇನಾಮಿನಿಂದ ಹಿಡಿದು, ಕಂಪನಿಗಳು ಸರ್ಕಾರಕ್ಕೆ, ಸರ್ಕಾರದ ವಿವಿಧ ಎಂಟಿಟಿಗಳಿಗೆ ಸೆಟಲ್‌ಮೆಂಟ್ ದೃಷ್ಟಿಯಲ್ಲಿ ಹಂಚುವ ಹಣದ ಬಗ್ಗೆ ಬರೆಯುತ್ತೇನೆ.

Saturday, January 26, 2008

ಸುಂಕ ವ್ಯವಸ್ಥೆಯ ಸುಖ ದುಃಖಗಳು

ರಸ್ತೆಗಳೆಂಬ ಮಟ್ಟಗಾರರ ಬಗ್ಗೆ ಬರೆಯೋ ಹೊತ್ತಿಗೆ ಉಳಿದ ಮಟ್ಟಗಾರರ ಬಗ್ಗೆ ಯೋಚಿಸಿದಂತೆಲ್ಲಾ ಟ್ಯಾಕ್ಸ್ ಸೀಜನ್ನಿನಲ್ಲಿ ಟ್ಯಾಕ್ಸ್ ಬಗ್ಗೆ ಯೋಚಿಸಿ ಬರೆಯದೇ ಹೋದರೆ ಹೇಗೆ ಎಂದು ಅನ್ನಿಸಿದ್ದಂತೂ ನಿಜ. ಈ ಟ್ಯಾಕ್ಸ್, ತೆರಿಗೆ, ಕರ, ಸುಂಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಕಾನ್ಸೆಪ್ಟ್ ಮಹಾ ಮಟ್ಟಗಾರರಲ್ಲೊಂದು, ಸರ್ಕಾರ ಟ್ಯಾಕ್ಸ್ ಅನ್ನು ಹೇಗೆ ವ್ಯಾಖ್ಯಾನಿಸಿಕೊಂಡರೂ, ಜನರು ಅದನ್ನು ತಮ್ಮ ತಮ್ಮ ಮಟ್ಟಿಗೆ ಅದನ್ನು ಹೇಗೇ ಅನ್ವಯಿಸಿಕೊಂಡರೂ ಟ್ಯಾಕ್ಸ್ ಅನ್ನುವುದು ಯಾರನ್ನೂ ಬಿಟ್ಟಂತಿಲ್ಲ.

ಮೊನ್ನೆ ಹೀಗೇ ಅಫಘಾನಿಸ್ತಾನದವರ ಬಗ್ಗೆ ನನ್ನ ಸಹೋದ್ಯೋಗಿಯೊಡನೆ ಮಾತು ಬಂತು. ಅಭಿವೃದ್ಧಿ ಹೊಂದಿದ ದೇಶದ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೋಶಿಯಲ್ ಸೆಕ್ಯೂರಿಟಿ ನಂಬರ್ ಎನ್ನುವ ಒಂಭತ್ತು ಸಂಖ್ಯೆಗಳಿಂದ ಅಳೆದು ಪ್ರತಿಯೊಬ್ಬರಿಂದ ಲೆಕ್ಕಕ್ಕೆ ತಕ್ಕಂತೆ ಟ್ಯಾಕ್ಸ್ ಕೀಳುವುದು ಇರಲಿ ಕೊನೆಗೆ ವರ್ಷಕ್ಕೊಮ್ಮೆ ಅಮೇರಿಕದ ನಾಗರಿಕರು ತಮ್ಮ ವಾರ್ಷಿಕ ಆದಾಯ ಇಂತಿಷ್ಟಕ್ಕಿಂತ ಹೆಚ್ಚಿದ್ದರೆ ಅವರ ಟ್ಯಾಕ್ಸ್ ಅನ್ನು ಫೈಲ್ ಮಾಡಬೇಕಾದ ಅಗತ್ಯವನ್ನು ಮನಗಾಣುವುದು ಸುಲಭವಾಗಿತ್ತು. ನನ್ನ ಪ್ರಕಾರ (ಯಾವುದೇ ದಾಖಲೆಯ ಬೆಂಬಲವಿಲ್ಲದೆ) ತೃತೀಯ ಜಗತ್ತಿನಲ್ಲಿ ಎಷ್ಟೋ ಜನರಿಂದ ಅಪರೋಕ್ಷವಾಗಿ ವಸೂಲಿ ಮಾಡುವ ಸೇಲ್ಸ್ ಟ್ಯಾಕ್ಸ್ ಅನ್ನು ಬಿಟ್ಟರೆ ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ತಮ್ಮ ಆದಾಯಕ್ಕನುಗುಣವಾಗಿ ಟ್ಯಾಕ್ಸ್ ಅನ್ನು ಕಟ್ಟುವುದಾಗಲೀ ಅದನ್ನು ಫೈಲ್ ಮಾಡುವುದಾಗಲೀ ಸಾಧ್ಯತೆಗಳೇ ಇಲ್ಲ. ಸೇಲ್ಸ್ ಟ್ಯಾಕ್ಸ್ ಜೊತೆಗೆ ಯಾರು ಯಾರು ನಿಜವಾದ ಪೇ ಚೆಕ್ (ಸ್ಟಬ್) ಗಳನ್ನು ತೆಗೆದುಕೊಳ್ಳುತ್ತಾರೋ ಅವರಿಂದ ಸರ್ಕಾರದವರು, ಸಂಬಂಧಿತ ಇಲಾಖೆಯವರು ಟ್ಯಾಕ್ಸ್ ಅನ್ನು ವಜಾ ಮಾಡಿಕೊಳ್ಳುವ ಸಾಧ್ಯತೆಗಳಿರಬಹುದು, ಅದನ್ನು ಬಿಟ್ಟರೆ ರೈತರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಸಣ್ಣ (ಗೃಹ) ಕೈಗಾರಿಕೆಗಳನ್ನು ನಡೆಸಿಕೊಂಡಿರುವವರು ಇತ್ಯಾದಿಗಳಿಂದ ಇಂತಿಷ್ಟೇ ಆದಾಯ ಹಾಗೂ ಅದಕ್ಕೆ ತಕ್ಕ ಟ್ಯಾಕ್ಸ್ ಎಂದು ವಸೂಲಿ ಮಾಡಿದ್ದನ್ನು ನಾನು ನೋಡಿಲ್ಲ, ಇತ್ತೀಚೆಗೇನಾದರೂ ಭಾರತದಲ್ಲಿ ಟ್ಯಾಕ್ಸ್ ಬದಲಾವಣೆಗಳಾಗಿದ್ದರೆ ಅದು ನನ್ನ ಮೌಢ್ಯವಷ್ಟೆ. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಕ್ಕಿರುವ ಅಫಘಾನಿಸ್ತಾನದಲ್ಲಿ ಯಾವ ಮಟ್ಟದ ಟ್ಯಾಕ್ಸ್ ವ್ಯವಸ್ಥೆ ಇದೆ, ಅಲ್ಲಿನ ಪ್ರತಿಯೊಬ್ಬ ನಾಗರಿಕರು ಹೇಗೆ ಟ್ಯಾಕ್ಸ್‌ಗೆ ಒಳಪಟ್ಟಿದ್ದಾರೆ ಎನ್ನುವುದು ನನಗೆ ನಿಖರವಾಗಿ ಗೊತ್ತಿಲ್ಲದಿದ್ದರೂ, ಬಡತನದಲ್ಲಿ ಬಾಂಗ್ಲಾ ದೇಶಕ್ಕೆ ಪೈಪೋಟಿ ಕೊಡುತ್ತಿರುವ ಅಲ್ಲಿನ ಜನರ ಉತ್ಪಾದನೆಯೇ ಕಡಿಮೆ ಇದ್ದು ಇನ್ನು ಪಾಪ ಅವರಾದರೂ ಯಾವ ಟ್ಯಾಕ್ಸ್ ಅನ್ನು ಕೊಟ್ಟಾರು. ಹಾಗೆಯೇ ಅಮೇರಿಕದಲ್ಲಿನ ಪ್ರತಿ ರಾಜ್ಯದ ಪ್ರತಿಯೊಬ್ಬರೂ ನಿಖರವಾಗಿ ಟ್ಯಾಕ್ಸ್ ಕೊಡುತ್ತಾರೆ ಎಂದೇನೂ ಅಲ್ಲ, ಇಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸೋಶಿಯಲ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಷನ್ನ್ ನವರು ಒಂಭತ್ತು ಸಂಖ್ಯೆಗಳನ್ನೇನೋ ಒದಗಿಸಿಕೊಟ್ಟಿರಬಹುದು, ಆದರೆ ಅಮೇರಿಕದ ಉದ್ದಗಲಕ್ಕೂ ಪ್ರತಿಯೊಬ್ಬರಿಗೂ ಕನಿಷ್ಠ ಟ್ಯಾಕ್ಸ್ ಕೊಡುವ ಆದಾಯವಿದ್ದು, ಅವರು ಲೆಕ್ಕಕ್ಕೆ ತಕ್ಕಂತೆ ಕೊಡುತ್ತಾರೆ ಎನ್ನುವ ಜನರಲೈಜೇಷನ್ನನ್ನು ಮಾಡಲಾಗದು.

ಈ ಹಿನ್ನೆಲೆಯಲ್ಲಿಯೇ ಯೋಚಿಸಿ ಮತ್ತೊಂದು ಹೆಜ್ಜೆ ಮುಂದೆ ಹೋದಾಗ ಅಮೇರಿಕದವರಿಗೆ ಪ್ರಪಂಚದ ಉಳಿದ ದೇಶಗಳಲ್ಲಿನ ಅನುಕೂಲ, ಅನಾನುಕೂಲಗಳನ್ನು ಯೋಚಿಸಿಕೊಳ್ಳಲು ಕಷ್ಟವಾಗಬಹುದು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿನ ಭ್ರಷ್ಟಾಚಾರವನ್ನಾಗಲೀ, ರಷ್ಯಾದಲ್ಲಿನ ಮಾಫಿಯಾವನ್ನಾಗಲೀ, ಎಷ್ಟೋ ದೇಶಗಳಲ್ಲಿನ ಅರಾಜಕತೆ, ಡಿಕ್ಟೇಟರ್‌ಶಿಪ್ಪುಗಳನ್ನಾಗಲೀ, ಅಲ್ಲಲ್ಲಿ ನಡೆಯುವ ಜನರ ದುರ್ಮರಣದ ಸಂಖ್ಯೆಯನ್ನಾಗಲೀ, ಅಥವಾ ಉಳಿದ ಮತ-ಧರ್ಮ-ಸಂಪ್ರದಾಯಗಳ ಹಿನ್ನೆಲೆಯನ್ನಾಗಲೀ ಅರ್ಥ ಮಾಡಿಕೊಳ್ಳಲು ದೊಡ್ಡ ಮನಸ್ಸೇ ಬೇಕು. ಇರಾಕ್‌ನಲ್ಲಿ ಸದ್ದಾಮನ ಸರ್ಕಾರವನ್ನು ಬೀಳಿಸಿದ್ದೇವೆ, ಅಲ್ಲಿನ ಜನರು ಸುಖವಾಗಿ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇಕೆ ಇರಬಾರದು? ಎಂದು ಕೇಳುವ ಪ್ರಶ್ನೆಗಳು ಬಾಲಿಶವೇ ಹೌದು. ಪ್ರಪಂಚದ ಎಲ್ಲರೂ ತಮ್ಮ ತಮ್ಮ ಲೆಕ್ಕದ ಟ್ಯಾಕ್ಸ್ ಅನ್ನು ನಿಖರವಾಗಿ ಕೊಟ್ಟು ಅವರವರ ಸರ್ಕಾರದ ಹುಂಡಿಯನ್ನೇಕೆ ಬೆಳೆಸಬಾರದು ಎನ್ನುವಷ್ಟೇ ಹುಂಬ ಪ್ರಶ್ನೆಯಾದೀತು. ಒಂದು ವ್ಯವಸ್ಥೆ - ಅದು ಟ್ಯಾಕ್ಸ್ ಕೊಟ್ಟು ಅದನ್ನು ಪರಿಶೀಲಿಸಿಕೊಳ್ಳುವ ಕ್ರಮವಾಗಿರಬಹುದು, ಲಂಚ ತೆಗೆದುಕೊಂಡವರನ್ನು ಗುರುತಿಸಿ ಥಳಿಸುವ ನಿಯಮವಾಗಿರಬಹುದು, ಕ್ರಿಮಿನಲ್ಲ್‌ಗಳನ್ನು ಹುಡುಕಿ ಶಿಕ್ಷಿಸುವ ಪರಿಯಾಗಿರಬಹುದು - ಅದು ಬೆಳೆದು ನಿಲ್ಲಲು ಆಯಾ ಸಮಾಜದ ಬೆಂಬಲವಂತೂ ಖಂಡಿತ ಬೇಕೇ ಬೇಕು, ಜೊತೆಗೆ ಹೆಚ್ಚಿನವರು ನಿಯಮಗಳನ್ನು ಪಾಲಿಸುವವರಾಗಿದ್ದಾಗ ಮಾತ್ರ ಹಾಗೆ ಮಾಡದವರನ್ನು ಹುಡುಕಿ ತೆಗೆಯುವುದು ಸುಲಭವಾದೀತು. ಆದರೆ ಸಮಾಜದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭ್ರಷ್ಟಾಚಾರದ ಸುಳಿಗೆ ಸಿಲುಕುವವರು ಹೆಚ್ಚಿದ್ದಾಗ, ತಮ್ಮ ಹಕ್ಕು-ಕರ್ತವ್ಯಗಳ ಬಗ್ಗೆ ತಿಳುವಳಿಕೆಯೇ ಇಲ್ಲದವರಿದ್ದಾಗ ಹಾಗೂ ಅಂತಹವರನ್ನು ಶೋಷಿಸುವ ವ್ಯವಸ್ಥೆ ಇದ್ದಾಗ ಯಾವೊಂದು ಸಮಾಜ ತಾನೇ ಆರೋಗ್ಯಕರವಾಗಿರಬಲ್ಲದು?

ಭಾರತದಲ್ಲಿ ಮಾರಾಟ ಮಾಡುವ ಬೆಂಕಿ ಪೊಟ್ಟಣದಿಂದ ಹಿಡಿದು ಉಳಿದ ವಸ್ತುಗಳಿಗೂ ಮಾರಾಟ ತೆರಿಗೆಯನ್ನು ಸೇರಿಸಿಯೇ ಮಾರಾಟ ಮಾಡುವ ವ್ಯವಸ್ಥೆಯನ್ನು ನೀವು ನೋಡಿರಬಹುದು. ಅಂಗಡಿಯಲ್ಲಿ ಕೊಂಡ ದಿನಸಿಯ ಚೀಟಿಯ ಕೊನೆಗೆ ನಾನಂತೂ ಟ್ಯಾಕ್ಸ್ ಕೊಟ್ಟಿದ್ದಿಲ್ಲ, ಇತ್ತೀಚೆಗೆ ಬಂದ ವ್ಯಾಟ್ (VAT) ಪದ್ಧತಿಯ ಪ್ರಕಾರ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ತೆರಿಗೆ/ಸುಂಕವನ್ನು ತೆಗೆದುಕೊಳ್ಳುತ್ತಿರಬಹುದಾದರೂ ಹೆಚ್ಚಿನ ವಸ್ತುಗಳು ನನಗೆ ಗೊತ್ತಿದ್ದ ಹಾಗೆ ’inclusive of all taxes' ಎಂದು ಹಣೆ ಪಟ್ಟಿಯನ್ನು ಹಚ್ಚಿಕೊಂಡದ್ದು ನನ್ನ ನೆನಪು. ಅಮೇರಿಕದ ರೆಸ್ಟೋರೆಂಟುಗಳಲ್ಲಿ ಕೆಲಸ ಮಾಡುವ ವೇಟರ್ (ಸರ್ವರ್)ಗಳಾಗಲೀ, ಇಲ್ಲಿನ ಟ್ಯಾಕ್ಸಿ ಚಾಲಕರಾಗಲೀ ತಾವು ಪಡೆಯುವ ಟಿಪ್ಸ್ ಅನ್ನೆಲ್ಲ ನಿಖರವಾಗಿ ಲೆಕ್ಕ ಹಿಡಿದು ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎಂದು ನಾನೇನೂ ನಂಬುವುದಿಲ್ಲ. ಹಾಗೇ ಭಾರದಲ್ಲಿನ ರಿಕ್ಷಾ ಡ್ರೈವರುಗಳೂ ಜನರಿಂದ ಪಡೆಯುವ ಮೀಟರ್ ಹಣದ ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಟ್ಯಾಕ್ಸ್ ಕೊಡುತ್ತಾರೆ ಎನ್ನುವುದು ನಂಬಲು ಕಷ್ಟವಾದ ವಿಷಯವೇ. ಹಾಗಿದ್ದ ಮೇಲೆ ಈ ರೀತಿಯ ಕೆಲಸಗಾರರಿಂದ ಹಿಡಿದು ಮಹಾ ಉದ್ಯಮಿಗಳಿಗೆಲ್ಲ ಅನ್ವಯವಾಗುವಂತೆ ವ್ಯಾಟ್ ಒಂದನ್ನು ಜಾರಿಗೆ ತಂದು ಬಿಡಿ ಎನ್ನುವುದು ನಿಜವಾಗಿ ಕಷ್ಟದ ಮಾತೇ. ಒಂದು ವಸ್ತು ಹಂತಹಂತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ ಕೈಯಿಂದ ಕೈಗೆ ಸಾಗುವ ವ್ಯವಸ್ಥೆಯೇ ಬೇರೆ ಅಲ್ಲಿ ಹೊಂದುವ ಟ್ಯಾಕ್ಸ್ ಪರಿಭಾಷೆಯನ್ನು ಸಾಮಾನ್ಯ ಜನರಿಗೂ ಬಳಸಿ ಅಲ್ಲಿ ಗೆಲ್ಲುವ ಮಾತಾದರೂ ಎಲ್ಲಿ ಬರುತ್ತದೆ.

ಅಮೇರಿಕದಲ್ಲಿ ತಲೆಯಿಂದ ತಲೆಗೆ ಬರುವ ಆಸ್ತಿಗಳಿಗೂ ಅನ್ವಯವಾಗುವಂತೆ ಟ್ಯಾಕ್ಸ್ ಬಳಸುವ ವ್ಯವಸ್ಥೆ ಇದೆ, ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮ್ಮಂತಹವರಿಗೆ ಕಷ್ಟವಾಗಬಹುದು. ಒಂದು ತಲೆಯಿಂದ ಮತ್ತೊಂದು ತಲೆಗೆ ವ್ಯವಸ್ಥಿತವಾಗಿ ಹಂಚಿಹೋಗುವ ಆಸ್ತಿಗೆ ಮತ್ತೇಕೆ ಅವರು ಟ್ಯಾಕ್ಸ್ ಕೊಡಬೇಕು ಎನ್ನುವುದು ನನಗಂತೂ ಕಠಿಣವಾದ ಪ್ರಶ್ನೆಯೇ. ನಾವು ಬ್ಯಾಂಕಿನಲ್ಲಿಟ್ಟ ಹಣಕ್ಕೆ ವರ್ಷಕ್ಕೆ ಹತ್ತೇ ಹತ್ತು ಡಾಲರ್ ಬಡ್ಡಿ ಬಂದರೂ ಅದನ್ನು ನಮ್ಮ ಆದಾಯವೆಂದು ಪರಿಗಣಿಸಿ ಅದಕ್ಕೂ ತಕ್ಕದಾದ ಟ್ಯಾಕ್ಸ್ ವಸೂಲಿ ಮಾಡುವ ವ್ಯವಸ್ಥೆ ನನಗಂತೂ ಮೊದಲಿನಿಂದಲೂ ಇಷ್ಟವಾಗದ ವಿಚಾರವೇ. ಇಷ್ಟವೋ ಕಷ್ಟವೋ ಅದನ್ನು ನಿಖರವಾಗಿ ತೋರಿಸಿ ಅಷ್ಟರಮಟ್ಟಿಗೆ ಟ್ಯಾಕ್ ಕೊಟ್ಟು ಇರುವುದು ಕಷ್ಟವಾಗೇನೂ ಇಲ್ಲ. ಆದರೆ ನಮ್ಮಂತಹವರು ಈ ದೇಶದಿಂದ ಹೊರಕ್ಕೆ ಗಿಫ್ಟ್ ಆಗಿಯೋ ಮತ್ತೊಂದಕ್ಕೋ ಕಳಿಸುವ ಹಣವಿದೆಯೆಲ್ಲ ಅದನ್ನು ನಾವು ಯಾವುದೇ ರೀತಿಯಿಂದಲೂ ತೋರಿಸಲು ಸಾಧ್ಯವಾಗಿಲ್ಲ. ನೀವು ಇಷ್ಟೊಂದು ಹಣವನ್ನು ದುಡಿದಿದ್ದೀರಿ ಎನ್ನುವುದರ ಹಿಂದೆ ಎಷ್ಟೊಂದು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಳೆದುಕೊಂಡಿದ್ದೀರಿ ಎನ್ನುವುದು ನಿಜ, ಅದರ ಜೊತೆಗೆ ನೀವು ನಿಮಗೆ ಬೇಕಾದವರಿಗೆ ಕೊಡಬಹುದಾದ ಗಿಫ್ಟ್ ಭಾರತದಿಂದ ಹೊರಗಿದ್ದರೆ ಇಲ್ಲಿನ ಸರ್ಕಾರದವರಿಗೆ ಅದು ಲೆಕ್ಕಕ್ಕೆ ಸಿಗದ ಕಾರಣ ಅದನ್ನು ವೆಚ್ಚವಾಗಿ ಬಳಕೆಯಾಗಿ ನೋಡುತಾರೆಯೇ ವಿನಾ ಅದಕ್ಕೆ ತೆರಿಗೆ ವಿನಾಯಿತಿಯನ್ನು ಕೊಡಲು ಕಷ್ಟವಾದೀತು. ಒಟ್ಟಿನಲ್ಲಿ ಪೇ ಚೆಕ್ಕ್‌ನಿಂದ ಪೇ ಚೆಕ್ಕ್‌ಗೆ ಹೋಗುವ ವ್ಯವಸ್ಥೆಯಲ್ಲಿ ಉಳಿಸುವುದೇನಿದ್ದರೂ ಟ್ಯಾಕ್ಸ್ ಅನ್ನು ಕೊಟ್ಟಬಳಿಕವೇ ಎನ್ನುವುದು ನಿಜ, ನಿಮಗೆ ಬೇಕೋ ಬೇಡವೋ ಅಗತ್ಯವಾದ ಟ್ಯಾಕ್ಸ್ ಅನ್ನು ಮೊದಲೇ ಹಿಡಿದುಕೊಂಡಿರುವುದರಿಂದ ವರ್ಷದ ಕೊನೆಗೆ ನಾವು ನಾವು ಫೈಲ್ ಮಾಡಿ ಸರ್ಕಾರದಿಂದ ಹಣವೇನಾದರೂ ಹಿಂತಿರುಗಿ ಬರುತ್ತದೆಯೇನೋ ಎಂದು ಬಕಪಕ್ಷಿಯ ಹಾಗೆ ಕಾದುಕೊಂಡಿರುವುದು ತಪ್ಪೋದಂತೂ ಇಲ್ಲ.

Monday, December 31, 2007

Byteಗಳು bite ಮಾಡುವ ಮೊದಲು...

ವರ್ಷದ ಕೊನೆಯಲ್ಲಿ ಇ-ಮೇಲ್‌ ಮೆಸ್ಸೇಜು, ಫೈಲು, ಫೋಲ್ಡರುಗಳನ್ನ ಆರ್ಗನೈಜ್ ಮಾಡಿಬಿಡೋಣವೆಂದುಕೊಂಡು ಉತ್ಸಾಹದಿಂದ ಬೇಕಾದಷ್ಟು ವಿಂಡೋಸ್‌ಗಳನ್ನು ತೆರೆದಿಟ್ಟುಕೊಂಡೋನಿಗೆ ಕಳೆದ ಆರು ತಿಂಗಳಲ್ಲಿ ಆಕೈವ್ ಫೈಲು 1.7 GB ಅಷ್ಟು ಬೆಳೆದಿರೋದು ನೋಡಿ ಆಶ್ಚರ್ಯವಾಯಿತು. ಮೊದಲೆಲ್ಲ ಕೆಲವೇ ಕೆಲವು ಕಿಲೋ ಬೈಟುಗಳಷ್ಟು ದೊಡ್ಡದಿರುತ್ತಿದ್ದ ಮೆಸ್ಸೇಜುಗಳು ಆಪರೇಟಿಂಗ್ ಸಿಸ್ಟಮ್ ಬದಲಾದ ಹಾಗೆ ಟೂಲ್ಸ್‌ಗಳು ಅಭಿವೃದ್ಧಿಗೊಂಡ ಹಾಗೆ ತಾವೂ ಬೇಕಾದಷ್ಟು ಬೆಳೆದಿರೋದು ನಿಜ. ಕೇವಲ ಹತ್ತು ವರ್ಷಗಳಲ್ಲಿ ಇಷ್ಟೊಂದು ದೊಡ್ಡದಾಗಿ ಬೆಳೆಯೋ ಮೆಸ್ಸೇಜುಗಳಾಗಲೀ, ಅಪ್ಲಿಕೇಷನ್ನುಗಳಾಗಲೀ ಇನ್ನೊಂದು ಇಪ್ಪತೈದು ವರ್ಷಗಳಲ್ಲಿ ಏನೇನು ಬೆಳೆಯುತ್ತವೋ ಎಂದು ಯೋಚಿಸಿಕೊಂಡಂತೆಲ್ಲ ಸೈನ್ಸ್ ಫಿಕ್ಷನ್ ಮೂವಿಯೊಂದು ತಲೆಯಲ್ಲಿ ಅನ್‌ವೈಂಡ್ ಆಗತೊಡಗಿತು, ಮೊಬೈಲು ಡಿವೈಸುಗಳಲ್ಲಿ ಟೆರ್ರಾಬೈಟುಗಳ ಸಾಗಣೆಯ ವ್ಯವಸ್ಥೆ ಬರುವ ಕಾಲ ದೂರವೇನೂ ಇಲ್ಲ!

ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಇ-ಮೇಲ್ ಅನ್ನು ದಿನನಿತ್ಯವೂ ಬಳಸೀ ಬಳಸೀ ನನಗೆ ಬೇಕಾದ ಮೆಸ್ಸೇಜುಗಳನ್ನೆಲ್ಲ (ಅಂದರೆ ಎಲ್ಲ ಇ-ಮೇಲುಗಳನ್ನೂ) ಒಂದಲ್ಲ ಒಂದು ಫಾರ್ಮ್/ಡಿವೈಸಿನಲ್ಲಿಡಲು ಪ್ರಯತ್ನಿಸಿ ನಾನಂತೂ ಸೋತು ಹೋಗುತ್ತಿದ್ದೇನೆ ಎನ್ನಿಸಿತು. ಪ್ರತಿ ಆರು ತಿಂಗಳಿಗೊಮ್ಮೆ ಫೈಲು, ಮೆಸ್ಸೇಜುಗಳನ್ನೆಲ್ಲ ಆರ್ಕೈವ್ ಮಾಡಿಡುವುದು ಜಾಣ ಪದ್ದತಿಯಾಗಿತ್ತು, ಈಗ ಅದು ಉಲ್ಬಣವಾಗದ ರೋಗವಾಗಿದೆ. ಅಷ್ಟೂ ಮಾಡಿ ೧೯೯೭ ರಿಂದ ಉಳಿಸಿಕೊಂಡ ಮೆಸ್ಸೇಜುಗಳನ್ನು ಒಮ್ಮೆಯೂ ನೋಡಿರದಿದ್ದರೂ ಇಟ್ಟುಕೊಂಡಿರಬೇಕೇಕೆ ಎನ್ನುವುದು ಒಂದು ಬಣದ ವಾದ, ಇವತ್ತಲ್ಲ ನಾಳೆ ಬೇಕಾದೀತು ಇರಲಿ ಎನ್ನುವುದು ಮತ್ತೊಂದು ಬಣದ ಆಚರಣೆ.

ನನಗೆ ಕಂಡದ್ದೆಲ್ಲವನ್ನು ಉಳಿಸುವ ಖಾಯಿಲೆ ಆರಂಭವಾದದ್ದು ೨೦೦೦ ದ ಇಸ್ವಿಯ ಹೊತ್ತಿಗೆ Y2K ಜ್ವರ ಬಂದು ಅಮೇರಿಕನ್ ಕಂಪನಿಗಳು ನಲುಗುವ ಸಮಯದಲ್ಲೇ ಎಂದರೆ ತಪ್ಪಾಗಲಾರದು. ಅದು ಹೀಗೇ ಒಂದು ಮಾಮೂಲಿ ಡಿಸೆಂಬರ್ ೩೧ ರ ದಿನವಾಗಿರಲಿ, ಆಗಬಹುದು ಎನ್ನುವುದು ಆಗ ಒಂದು ಉತ್ಸಾಹಬರಿತ ನಿರೀಕ್ಷೆ ಆಗಿತ್ತು ಎಂದರೆ ತಪ್ಪಲ್ಲ. ನ್ಯೂ ಝೀಲ್ಯಾಂಡಿನಿಂದ ಹಿಡಿದು ಯೂರೋಪಿನವರೆಗೆ ಎಲ್ಲ ದೇಶದವರೂ ಹೊಸ ವರ್ಷವನ್ನು ಆಚರಿಸಿಕೊಂಡು ಬಂದರೂ ಅಮೇರಿಕದ ಈಸ್ಟ್ ಕೋಸ್ಟ್‌ನಲ್ಲಿ ರಾತ್ರಿ ಹನ್ನೆರಡು ಬಜಾಯಿಸುವವರೆಗೆ ತದನಂತರದ ಕೆಲವು ಘಂಟೆಗಳವರೆಗೆ ಇಲ್ಲಿನ ಕಾರ್ಪೋರೇಟ್ ವ್ಯವಸ್ಥೆ ನಿದ್ರೆ ಮಾಡಿದ್ದೇ ಇಲ್ಲ. ಕಂಪನಿಯ ಮೇಲ್ ರೂಮಿನಿಂದ ಹಿಡಿದು ಸಿಇಓ ವರೆಗೆ ಎಲ್ಲರೂ ಹೊಸ ವರ್ಷದ ನಿರೀಕ್ಷೆಯಲ್ಲಿದ್ದವರೇ, ಆದರೆ ಆ ನಿರೀಕ್ಷೆಯ ಕಣ್ಣುಗಳಲ್ಲಿ ಕುತೂಹಲದ ಜೊತೆಗೆ ಚಿಂತೆಯೂ ಮನೆಮಾಡಿತ್ತು ಎಂದರೆ ತಪ್ಪಲ್ಲ. ಪಾಪ, ಹಗಲೂ-ರಾತ್ರಿ ದುಡಿದ ಪ್ರಾಜೆಕ್ಟ್ ಟೀಮುಗಳು ಹೆಚ್ಚಿನ ವ್ಯವಸ್ಥೆಯನ್ನು ಸುಗಮವಾಗಿಸುವಲ್ಲಿ ಪಟ್ಟ ಕಷ್ಟ ಬಹಳಷ್ಟು ಕೆಲಸ ಮಾಡಿತ್ತು. ಮನುಕುಲ ಕಂಪ್ಯೂಟರ್ ಸಿಸ್ಟಮ್ ಮೇಲೆ ಅವಲಂಭಿತವಾದ ಒಂದು ದೊಡ್ಡ ಸಂಬಂಧಕ್ಕೆ ಹಾಗೂ ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಸವಾಲಾಗಿದ್ದ ಆ ರಾತ್ರಿಯೂ ಬಂದಿತು, ಮತ್ತೆ ಅದು ಹೋಗಿ ಈಗ ಏಳು ವರ್ಷಗಳು ಮುಗಿಯುತ್ತಾ ಬಂತು.

ಒಂದು ಕಾಲದಲ್ಲಿ ಸರಳವಾಗಿದ್ದ ಡಾಸ್ ವ್ಯವಸ್ಥೆ ಈಗಿಲ್ಲ, ಈಗೇನಿದ್ದರೂ ಪ್ರಭಲವಾದ ವಿಸ್ತಾದಂತಹ ಕಾರ್ಯಾಚರಣ ವ್ಯವಸ್ಥೆ. ದೊಡ್ಡ ಮನುಷ್ಯರ ಸಹವಾಸದಲ್ಲೆಲ್ಲ ದೊಡ್ಡವು ಎನ್ನುವ ಹಾಗೆ ಒಂದೇ ರೀತಿಯ ಫೈಲ್‌ (ಸ್ಪ್ರೆಡ್‌ಶೀಟ್) ಅನ್ನು ಮೈಕ್ರೋಸಾಫ್ಟಿನ ಎರಡು ಎಕ್ಸೆಲ್ ವರ್ಷನ್‌ಗಳಲ್ಲಿ ಸೇವ್ (ಉಳಿಸಿ) ಮಾಡಿದರೆ ಅದರ ಸೈಜ್‌ನಲ್ಲಿ ಹೆಚ್ಚಿನ ವ್ಯತ್ಯಾಸ. ನನ್ನ ಬಳಿ ಇರೋ ಆಫೀಸ್ ೨೦೦೩ ರ ಫೈಲುಗಳಿಗೂ ಅವೇ ಆಫೀಸ್ ೨೦೦೭ ರಲ್ಲಿ ಉಳಿಸಿದ ಫೈಲುಗಳಿಗೂ ಕನ್ಸಿಡರೆಬಲ್ ವ್ಯತ್ಯಾಸವಿದೆ ಫೈಲ್ ಸೈಜ್‌ನಲ್ಲಿ ಎಂದರೆ ನಂಬಲಾಗದು. ದಿನೇ ದಿನೇ ಟೆಕ್ನಾಲಜಿ ಹೆಚ್ಚಿದಂತೆ ನನ್ನ ಕೆಲಸದ ಅಗತ್ಯಗಳಲ್ಲಿ ಬರೀ ಇ-ಮೇಲ್ ಓದುವುದು, ಬರೆಯುವುದನ್ನು ಬಿಟ್ಟರೆ ಉಳಿದ ಅಪ್ಲಿಕೇಶನ್ನು ಗಳನ್ನು ಹೆಚ್ಚು ಕಲಿಯುವುದಾಗಲೀ ಬಳಸುವುದಾಗಲೀ ನಿಂತೇ ಹೋಗಿರುವಾಗ ಫೈಲ್ ಹಾಗೂ ಇ-ಮೇಲ್ ಮ್ಯಾನೇಜ್‌ಮೆಂಟೇ ಬದುಕಾಗಿ ಹೋಗಿದೆ. ಆಶ್ಚರ್ಯವೆನ್ನುವಂತೆ ಒಂದು ಕಾಲದಲ್ಲಿ ಚೆನ್ನಾಗೇ ಓಡುತ್ತಿದ್ದ ಹಳೆಯ ಕಂಪ್ಯೂಟರ್ ಈಗ ಯಾವುದೋ ತಗಡು ಡಬ್ಬವಾಗಿ ಕಂಡುಬರುತ್ತಿರೋದು.

ಹಾರ್ಡ್ ಡಿಸ್ಕೇ ಇಲ್ಲದ ಕಂಪ್ಯೂಟರುಗಳಿಂದ ಹಿಡಿದು ಐವತ್ತು MB ಹಾರ್ಡ್‌ಡಿಸ್ಕ್ ಇರುವ ಪರ್ಸನಲ್ ಕಂಪ್ಯೂಟರ್ ಅನ್ನು ಬಳಸಿದವರಿಗೆ ಇಂದಿನ ಟೆರ್ರಾಬೈಟುಗಳನ್ನು ನೋಡಿ ಏನನಿಸುತ್ತೋ ಏನೋ. ಹಾಗಾದರೆ ನಮ್ಮ ಬದುಕಿನಲ್ಲಿ ಅಷ್ಟೊಂದು ಬದಲಾವಣೆಗಳಾಗಿವೆಯೇ? ಉದಾಹರಣೆಗೆ ಒಂದು ಕಾಲದಲ್ಲಿ ಒಂದು ಮೆಗಾಪಿಕ್ಸೆಲ್ ಕ್ಯಾಮರಾಗಳನ್ನು ಬಳಸಿ ಚಿತ್ರ ತೆಗೆಯುತ್ತಿದ್ದ ಫೋಟೋಗ್ರಾಫರುಗಳು ಇಂದಿನ ಹತ್ತು ಮೆಗಾಪಿಕ್ಸೆಲ್ ಕ್ಯಾಮಾರಾದಲ್ಲಿ ಅಂತಹದನ್ನೇನು ಅಚೀವ್ ಮಾಡುತ್ತಿದ್ದಾರೆ ಎನ್ನುವುದು ನನ್ನಲ್ಲಿನ ಗೊಂದಲ. ನಾನು ಚಿತ್ರವನ್ನು ಪ್ರಿಂಟ್ ಮಾಡಿದರೂ 8X10 ಸೈಜ್ ಬಿಟ್ಟು ಬೇರೆ ಸೈಜ್ ನಲ್ಲಿ ಪ್ರಿಂಟ್ ಹಾಕಿಸಿಲ್ಲ, ಅಂದ ಹಾಗೆ ಮೊದಲೆಲ್ಲ ಫಿಲ್ಮ್ ರೀಲುಗಳನ್ನು ಸಂಸ್ಕರಿಸುತ್ತಿದ್ದ ನಮಗೆ ಎಷ್ಟು ಮೆಗಾಪಿಕ್ಸೆಲ್ಲುಗಳು ಸಿಗುತ್ತಿದ್ದವು, ಇಂದಿನ ಡಿಜಿಟಲ್ ಯುಗದ ಚಿತ್ರಗಳು ಯಾವ ರೀತಿ ಭಿನ್ನ? ನನ್ನ ಸಹೋದ್ಯೋಗಿ ತನ್ನ ಆಫೀಸಿನಲ್ಲಿ ತನಗೆ ಬೇಕಾದ ಹಲವಾರು ಚಿತ್ರಗಳನ್ನು ಪ್ರಿಂಟ್‌ಹಾಕಿಸಿ ಇಟ್ಟುಕೊಂಡಿದ್ದಾನೆ, ಆತನ ಪ್ರಕಾರ ಸಾವಿರಾರು ಚಿತ್ರಗಳನ್ನು ತೆಗೆದರೆ ಒಂದಿಷ್ಟು ಚಿತ್ರಗಳು ಚೆನ್ನಾಗಿ ಬರುತ್ತವೆ, ಹಾಗಿದ್ದ ಮೇಲೆ ಇಂದಿನ ಡಿಜಿಟಲ್ ಯುಗದ ಕ್ಯಾಮೆರಾಗಳು ಟ್ರೈಯಲ್-ಎಂಡ್-ಎರರ್ ಮೆಥೆಡ್ಡುಗಳನ್ನು ಪುರಸ್ಕರಿಸುತ್ತವೆಯೆಂದು ಅರ್ಥವೇ? ಒಂದು ಕಾಲದಲ್ಲಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತಿದ್ದವರು, ಇಂದು ಅನೇಕ ಮೆಗಾಬೈಟುಗಳಲ್ಲಿ ನಮ್ಮನ್ನು ಅವಿಷ್ಕರಿಸಿಕೊಳ್ಳುತ್ತಿದ್ದೇವಷ್ಟೇ. ಆದರೆ, ಇತ್ತೀಚೆಗೆ ಬಳಕೆಗೆ ಬಂದಿರುವ HD ವಿಡಿಯೋ ಕಾರ್ಯಕ್ರಮಗಳನ್ನು ನೋಡಿದವರಿಗೆ ಗೊತ್ತು, ಸೆಕೆಂಡಿಗೆ 13.5 ರಿಂದ 19.8 (ಕಡಿಮೆ ಎಂದರೆ 13.5) ಮೆಗಾಬೈಟುಗಳನ್ನು ಹೊತ್ತು ತರುವ ಕಮ್ಮೂನಿಕೇಷನ್ ಮಾಧ್ಯಮ, ಅಲ್ಲಿನ ಚಿತ್ರ, ಸೌಂಡಿನ ಕ್ಲಾರಿಟಿಗೆ ಎಂಥವರ ಮನಸೋತು ಹೋಗೋದು ಖಂಡಿತ. ಸ್ಟ್ಯಾಂಡರ್ಡ್ ಡೆಫಿನಿಷನ್ನ್‌ನಲ್ಲಿ (ಸೆಕೆಂಡಿಗೆ 1.2 ಇಂದ 3.8 ಮೆಗಾಬೈಟುಗಳನ್ನು ಭಿತ್ತರಿಸುವ ಕಾರ್ಯಕ್ರಮಗಳು) ನೋಡುವ ಕಾರ್ಯಕ್ರಮಗಳು ಸೆಪ್ಪೆ ಎನಿಸೋದು ನಿಜ. ಎಲ್ಲ ಕಾರ್ಯಕ್ರಮಗಳೂ ಹೈ ಡಿಫನಿಷನ್ನಲ್ಲಿರೋದೇನೂ ಬೇಕಾಗಿಲ್ಲ, ಆದರೆ ಕೆಲವೊಂದು ಡಿಸ್ಕವರಿ ಕಾರ್ಯಕ್ರಮಗಳು, ಆಟೋಟಗಳನ್ನು ಹೈ ಡೆಫನಿಷನ್ನಿನ್ನಲ್ಲಿ ನೋಡಿದಾಗ ಅದರ ಅನುಭವವೇ ಬೇರೆ.

ತಂತ್ರಜ್ಞಾನ ಬದಲಾಗುತ್ತದೆ, ಆದರೆ ನಾವು? ನಾವು ಬದಲಾಗದಿದ್ದರೆ ಉಳಿಗಾಲವಿಲ್ಲ ಎನ್ನುವಂತಾಗಿದೆ, ವೈಯಕ್ತಿಕವಾಗಲ್ಲದಿದ್ದರೂ ಆಫೀಸಿನ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ, ಇಲ್ಲವೆಂದರೆ ಬದಲಾವಣೆಗಳನ್ನು ಎದುರಿಸಿ ಸೋತ ಹಣೆಪಟ್ಟಿ ನಮ್ಮನ್ನು ಅಂಟಿಕೊಂಡು ಬಿಡುತ್ತದೆ.

ಈಗಾಗಲೇ ನ್ಯೂ ಝೀಲ್ಯಾಂಡಿನವರು ಹೊಸವರ್ಷವನ್ನು ಆಚರಿಸಿ ನಾಳೆ ಇರುವುದನ್ನು ಸಾಭೀತುಪಡಿಸಿದ್ದಾರಾದ್ದರಿಂದ ನನಗೆ ನಾಳೆಯ ಬಗ್ಗೆ ಚಿಂತೆ ಇಲ್ಲವೇ ಇಲ್ಲ. ಬೇಡವೆಂದರೂ ಬರುವ ನಾಳೆಗಳು ಎಂದು ಭವಿಷ್ಯವನ್ನು ಸೂಚಿಸುವ ವಿಚಾರ ನಿಜ - ಈ ಕೆಳಗಿನ ನೈಜ ಘಟನೆಯನ್ನು ನೋಡಿ:
ನನ್ನ ಸಹೋದ್ಯೋಗಿ ಮೈಕಲ್ ತನ್ನ ಐದು ವರ್ಷದ ಮಗಳನ್ನು ನಿದ್ರೆ ಮಾಡಿಸುವಾಗ, ’ಹನಿ, ನೀನು ಕಣ್ಣು ಮುಚ್ಚಿ ಮಲಗಿಕೋ, ಕಣ್ಣು ಬಿಟ್ಟು ನೋಡುವಾಗ ನಾಳೆಯಾಗುತ್ತದೆ’ ಎಂದನಂತೆ. ಮಗಳು ಮರುದಿನ ಎದ್ದು ತಂದೆಯನ್ನು ಕೇಳಿದಳಂತೆ, ’ಡ್ಯಾಡೀ, is it tomorrow now?'
ಮೈಕಲ್, ’No, it is not tomorrow, it is Today!'
ಮಗಳು, ’then you lied to me! you said when I wake up it will be tomorrow, where is it?!'

***

Happy New Year everyone!
(I think I have given up...)

December 07, 2006 ರ ಬರಹ, ಸೂರ್ಯ-ಚಂದ್ರರ ನೆರಳಿನಲಿ ಇಂದ ಆಯ್ದುಕೊಂಡಿದ್ದು...

'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.

Sunday, December 16, 2007

ಎಲ್ಲವೂ ಆನ್‌ಲೈನ್ ಮಯ...

ಎಲ್ಲವೂ ಆನ್‌ಲೈನ್ ಅನ್ನೋ ಕಾಲದಲ್ಲಿ ನಮ್ಮ ಭಾರತೀಯ ಬ್ಯಾಂಕಿಂಗ್ ಅಗತ್ಯಗಳಿಗೆ ಇವತ್ತಿಗೂ ಫೋನ್ ಮಾಡಿಯೋ ಅಥವಾ ಪತ್ರ ಬರೆದೋ ಮುಟ್ಟುವ ಅಗತ್ಯವಿರುವ ಹೊತ್ತಿಗೆ ಎಷ್ಟೋ ಭಾರತೀಯ ಸಂಸ್ಥೆಗಳೂ ಇತ್ತೀಚೆಗೆ ಕಂಪ್ಯೂಟರ್ ಲಾಗ್‌ಇನ್ ವ್ಯವಸ್ಥೆಯನ್ನು ಕೊಡುತ್ತಿವೆ ಎಂದು ನನಗೆ ತಿಳಿದದ್ದು ಇತ್ತೀಚೆಗೆ ಮಾತ್ರ. ವಿಶ್ವದ ಮಹಾಬ್ಯಾಂಕ್ ಸಿಟಿಬ್ಯಾಂಕ್‌ನಿಂದ ಹಿಡಿದು ನನ್ನ ಪೇವರೈಟ್ ಬ್ಯಾಂಕಾದ ಮೈಸೂರು ಬ್ಯಾಂಕಿನವರೆಗೆ ಈ ದಿನಗಳಲ್ಲಿ ಹೆಚ್ಚೂ ಕಡಿಮೆ ಎಲ್ಲ ಟ್ರಾನ್ಸಾಕ್ಷನುಗಳನ್ನು ಕಂಪ್ಯೂಟರ್ ನೆಟ್‌ವರ್ಕ್ ಮೂಲಕ ಎಲ್ಲಿದ್ದರೂ ಎಲ್ಲಿಂದಲಾದರೂ ಮಾಡಬಹುದು ಎನ್ನುವುದು ನಿಜವಾಗಲೂ ಥ್ರಿಲ್ಲಿಂಗ್ ಅನುಭವವಲ್ಲದೇ ಮತ್ತಿನ್ನೇನು?


ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿ ಈ ವ್ಯವಸ್ಥೆ ಯಾವಾಗಿನಿಂದಲೋ ಇದೆ, ಆದರೇ ಕರ್ನಾಟಕದ ರಿಮೋಟ್ ಎನ್ನುವ ಹಳ್ಳಿ, ಹೋಬಳಿಗಳಲ್ಲಿ ಎಟಿಎಮ್ ಕಾರ್ಡ್ ವ್ಯವಸ್ಥೆ ಬಂದಿದ್ದು ಇತ್ತೀಚೆಗೆ ಮಾತ್ರ. ಒಂದು ಊರಿಗೆ ಎಟಿಎಮ್ ವ್ಯವಸ್ಥೆ ಬಂದು ಅಲ್ಲಿನ ಜನರ ಜೇಬು ಪಾಕೇಟುಗಳಲ್ಲಿ ವೀಸಾ/ಮಾಸ್ಟರ್‌ಕಾರ್ಡ್ ಲೋಗೋಗಳು ಸ್ಥಳೀಯ ಬಿಸಿಲಿಗೆ ಮಿಂಚತೊಡಗಿದ್ದರ ಬಗ್ಗೆ ಉದಾರೀಕರಣ, ವ್ಯವಹಾರ, ಜಾಗತೀಕರಣ, ಬಂಡವಾಳಶಾಹಿ ವ್ಯವಸ್ಥೆ, ಅಭಿವೃದ್ಧಿ, ಕಂಪ್ಯೂಟರ್ ನೆಟ್‌ವರ್ಕ್ ಮುಂತಾದ ಯಾವುದೇ ನೆಲೆಗಟ್ಟಿನಲ್ಲೂ ಸಾಕಷ್ಟು ಚಿಂತನೆ ನಡೆಸಬಹುದು. ಒಂದು ಕಾಲದಲ್ಲಿ ಬ್ಯಾಂಕಿಗೆ ಹಣ ಸಂದಾಯ ಮಾಡಿ ನಮ್ಮ ಹಣವನ್ನೇ ನಾವು ತೆಗೆಯುವಾಗಲೂ ಅದ್ಯಾವುದೋ ಅವ್ಯಕ್ತ ಮುಜುಗರಕ್ಕೆ ಒಳಪಡಬೇಕಾಗಿದ್ದ ನಮ್ಮಲ್ಲಿ ಇಂದಿನ ಅನುಕೂಲಗಳು ಅದೆಂತಹ ಟ್ರಾನ್ಸ್‌ಪರೆನ್ಸಿಯನ್ನು ಹುಟ್ಟುಹಾಕಿವೆಯೆಂದರೆ, ನಮ್ಮ ಹಣವನ್ನು ನಾವೇ ಎಲ್ಲಿಂದ ಬೇಕಾದರೂ ಹೇಗೆ ಬೇಕಾದರೂ ಬಳಸಬಹುದು ಎನ್ನುವುದು ಇವತ್ತಿಗೆ ಹಳ್ಳಿಗಳಲ್ಲೂ ನಿಜ.

ಕೇವಲ ಹತ್ತು ಹದಿನೈದು ವರ್ಷಗಳ ಹಿಂದೆ, ಉತ್ತರ ಭಾರತದ ಕೆಲವು ಕಡೆ, ದಕ್ಷಿಣ ಭಾರತದ ಉದ್ದಗಲಕ್ಕೂ ಬ್ಯಾಂಕಿನ ಪರೀಕ್ಷೆಗಳನ್ನು (BSRB) ತೆಗೆದುಕೊಂಡು ಬ್ಯಾಂಕಿನಲ್ಲಿ ಕ್ಲರ್ಕ್ ಕಮ್ ಕ್ಯಾಷಿಯರ್ ಅಥವಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಗೊಳ್ಳುವುದು ಮಹಾನ್ ವಿಷಯವಾಗಿತ್ತು. ನಮ್ಮ ದೇಶದ ಘನತೆಯಾದ ಲಕ್ಷಾಂತರ ಪದವಿಧರರಲ್ಲಿ ಕೇವಲ ಹತ್ತು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ಜನರು ಪರೀಕ್ಷೆಗೆ ತಕ್ಕ ತಯಾರಿಯನ್ನು ನಡೆಸಿಕೊಂಡು ಅದೇ ಮೊಟ್ಟ ಮೊದಲ ಬಾರಿಗೆ ಎಂಬಂತೆ ರೀಸನಿಂಗ್, ಇಂಗ್ಲೀಷ್, ಮ್ಯಾಥ್‌ಮ್ಯಾಟಿಕ್ಸ್ ಮುಂತಾದವುಗಳಲ್ಲಿ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಸಕಾಲದಲ್ಲಿ ಎದುರಿಸಿ, ಮುಂದೆ ಸಂದರ್ಶನದ ಮಜಲನ್ನು ದಾಟಿ ಸಾಯುವವರೆಗೆ ಊಟ ಹಾಕುವ "ಬ್ಯಾಂಕ್" ಎನ್ನುವ ವ್ಯವಸ್ಥೆಯನ್ನು ಸೇರುವುದು ಬಹಳ ದೊಡ್ಡ ವಿಷಯವಾಗಿತ್ತು. ಹೀಗಿರುತ್ತಿದ್ದ ಈ ಬ್ಯಾಂಕ್ ಪರೀಕ್ಷೆಗಳು ಮೊಟ್ಟ ಮೊದಲ ಬಾರಿಗೆ ಯಾವಾಗ ಶುರುವಾದವೋ ಗೊತ್ತಿಲ್ಲ, ತೊಂಭತ್ತರ ದಶಕದಲ್ಲಂತೂ ಈ ಹುದ್ದೆಗಳಿಗೆ ಅತೀವ ಬೇಡಿಕೆ ಇತ್ತು ಎನ್ನುವ ಹಾಗೆ ಕೋಟ್ಯಾಂತರ ಜನರು ಪರೀಕ್ಷೆಯನ್ನು ಎದುರಿಸುತ್ತಿದ್ದರು, ಅದರಲ್ಲಿ ತೇರ್ಗಡೆಯಾಗಿ ಮುಂದೆ ಹೋದ ಎಷ್ಟೋ ಜನರ (ನನ್ನ ಸಹಪಾಠಿಗಳಲ್ಲಿ) ಮನೆಗಳಲ್ಲಿ ಇಂದಿಗೂ ಬ್ಯಾಂಕ್ ನೌಕರನಾಗಿರುವುದು ಬಹಳ ಹೆಮ್ಮೆಯ ವಿಷಯವೂ ಹೌದು. ಮಧ್ಯಮ ವರ್ಗವನ್ನು ಸಾಯುವವರೆಗೆ ನೆನಪಿನಲ್ಲಿಡುವಂತೆ ಮಾಡುವ, ಇನ್ನೊಬ್ಬರ ಲೆಕ್ಕಪತ್ರವನ್ನು ಬರೆದು ಜೋಪಾನ ಮಾಡಿಡುವ, ಪ್ರತಿ ಮೂರು ವರ್ಷಗಳಿಗೊಮ್ಮೆ ಊರು ಬಿಟ್ಟು ಊರು ಸೇರುವಂತೆ ಮಾಡುವ ಈ ಕಾಯಕವನ್ನು ನಾನು ದ್ವೇಷಿಸುತ್ತಿದ್ದೆ ಎಂದೇ ಹೇಳಬೇಕು. ’ನನ್ನ ಲೆಕ್ಕಗಳನ್ನು ನಾವೇ ಬರೆದಿಡೋಲ್ಲ, ಇನ್ನು ಮಂದಿಯ ಲೆಕ್ಕವನ್ನು ನಾನೇಕೆ ಬರೆದಿಡಲಿ?’ ಎನ್ನುವುದು ನನ್ನ ಚೀಪ್ ಜೋಕ್‌ಗಳಲ್ಲಿ ಒಂದು, ಅದನ್ನು ನಾನು ನನ್ನ ಬ್ಯಾಂಕ್ ಮಿತ್ರರೊಂದಿಗೆ ಹೇಳಿಕೊಂಡು ನಕ್ಕಿದ್ದಿದೆ.

ನಾನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗೆ ಯಾರೋ ಕೊಟ್ಟ ಚೆಕ್ ತೆಗೆದುಕೊಂಡು ನಮ್ಮೂರಿನ ಕರ್ನಾಟಕ ಬ್ಯಾಂಕ್ ಒಳ ಹೊಕ್ಕಾಗ ನನ್ನ ಮನದಲ್ಲಿ ತುಂಬಿಕೊಂಡ ಬೇಕಾದಷ್ಟು ಅವ್ಯಕ್ತ ಭಯಗಳು ಇವತ್ತಿಗೂ ಇಲ್ಲಿನ ಬ್ಯಾಂಕ್‌ಗಳನ್ನು ಹೊಕ್ಕಾಗ ಸತಾಯಿಸುತ್ತವೆಯೇನೋ ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ನಾನು ಚೆಕ್ ತೆಗೆದುಕೊಂಡು ಹೋಗಿ ಯಾರಲ್ಲಿ ಕೊಡುವುದು ಹೇಗೆ ಕೊಡುವುದು ಎಂದು ಮನಸ್ಸಿನಲ್ಲಿ ಸಂಘರ್ಷವನ್ನು ನಡೆಸಿಕೊಂಡು ಬ್ಯಾಂಕ್ ಒಳಹೊಕ್ಕರೆ ನಾನು ಅಲ್ಲಿನ ಕಟಕಟೆಯಷ್ಟು ಎತ್ತರವೂ ಇದ್ದಿರಲಿಲ್ಲ. ಅಲ್ಲೆಲ್ಲಾ ನನ್ನ ತಲೆ ಮಟ್ಟಕ್ಕಿಂತಲೂ ಎತ್ತರವಾದ ವಿಶಾಲವಾದ ಮೇಜುಗಳು (ಸಾಮಾನ್ಯವಾಗಿ L ಆಕಾರದಲ್ಲಿರುವವಗಳು), ಅದರ ಕೊನೆಗೆ ಒಂದು ಸಣ್ಣ ಡಿಪ್, ಅದರ ಪಕ್ಕದಲ್ಲಿ ಕ್ಯಾಷಿಯರ್ ಕುಳಿತುಕೊಳ್ಳುವ ಕಬ್ಬಿಣದ ಕಟಕಟೆ. ಹೋಗಿ ಕ್ಯಾಷಿಯರ್ ಪಕ್ಕದವರಿಗೆ ಚೆಕ್ ಕೊಟ್ಟರೆ ಕಟಕಟೆಯಲ್ಲಿರುವವರಿಗೆ ಕೊಡಿ ಎಂದರು, ಅಲ್ಲಿ ಕೊಟ್ಟರೆ ಇಲ್ಲಿ ಸಹಿ ಮಾಡಿ ಎನ್ನುವ ಆದೇಶ, ಅದರ ಬೆನ್ನಿಗೆ ಸಣ್ಣ ಕಂಡಿಯಲ್ಲಿ ತೂರಿಕೊಂಡು ಬರುವ ನಡುವೆ ತೂತವಿದ್ದ ಒಂದು ಕಾಯಿನ್ ಮಾದರಿಯ ’ಟೋಕನ್’. ಅದರ ಮೇಲೆ ಮುದ್ರಿತವಾದ ನಂಬರ್ ಅನ್ನು ಕರೆಯುವವರೆಗೆ ಕುಳಿತು ಕಾಯಿ ಎನ್ನುವ ’ನಮಗೇನ್ ಆಗಬೇಕು’ ಎನ್ನುವ ಧೋರಣೆ! ಅಂತೂ ಇಂತೂ ನಮಗೆ ಸಿಗಬೇಕಾದ ದುಡ್ಡು ಕೈಗೆ ಬಂದಾಗ ಅದೇನೋ ಅಗಾಧವಾದ ಖುಷಿ! ಚಡ್ಡಿ ಜೇಬಿನಲ್ಲಿ ಕುಳಿತ ಕ್ಯಾಷಿಯರ್ ಕೊಟ್ಟ ಗರಿಗರಿ ನೋಟನ್ನು ದಾರಿ ಉದ್ದಕ್ಕೂ ಭದ್ರವಾಗಿ ಮುಟ್ಟಿ ನೋಡಿಕೊಳ್ಳುವುದರ ಜೊತೆಗೆ ’ಅಲ್ಲಾ, ನಮ್ಮ ದುಡ್ಡನ್ನು ಬ್ಯಾಂಕ್‌ನಲ್ಲಿ ನಾವೇಕೆ ಇಡಬೇಕು, ಇಷ್ಟೆಲ್ಲಾ ಪರಿಪಾಟಲೆ ಯಾಕೆ?’ ಎನ್ನುವ ಪ್ರಶ್ನೆಗಳು ಬೇರೆ. ಮನೆಯಲ್ಲಿ ಹೋಗಿ ಕೇಳಿದರೆ ಸಂಬಳ ನೇರವಾಗಿ ಬ್ಯಾಂಕ್‌ಗೇ ಹೋಗೋದರಿಂದ ನಾವು ಅಲ್ಲಿಗೆ ಹೋಗಿಯೇ ಹಣವನ್ನು ತೆಗೆದುಕೊಳ್ಳಬೇಕು, ಇಲ್ಲವಾದರೆ ಇಲ್ಲ ಎನ್ನುವ ಧೋರಣೆಯ ’ನಮ್ಮೂರಿನ ಆರ್ಥಿಕ ವ್ಯವಸ್ಥೆಯ ಮೊದಲ ಪಾಠ.

ಸಂಬಳ ನೇರವಾಗಿ ಹೋಗಿ ಬ್ಯಾಂಕ್ ಸೇರುತ್ತದೆ ಎನ್ನುವುದರಲ್ಲಿ ಇವತ್ತಿಗೂ ಬಹಳಷ್ಟೇನೂ ಬದಲಾಗಿಲ್ಲ - ಅಲ್ಲವೇ? ಅಂದಿನ ದಿನಗಳಲ್ಲಿ ನಾವೆಲ್ಲ ’ಸಂಬಳ’ವನ್ನು ಪಡೆಯುವುದನ್ನು ದೊಡ್ಡದಾಗಿ ಪರಿಗಣಿಸಿ ಇಂದು (ಇಂದಿಗೂ) ಸಂಬಳದಾರರಾಗಿಯೇ ಉಳಿದು ಬಿಟ್ಟೆವು. ಮೊದಲತೇದಿ ಚಿತ್ರದ ’ಒಂದರಿಂದ ಇಪ್ಪತ್ತರವರೆಗೆ ಉಂಡಾಟ’ ಹಾಡನ್ನು ಕೇಳಿದ ನಮ್ಮೂರಿನ ವೈಶ್ಯ ಯುವಕರು ತಮ್ಮ ಕುಟುಂಬದ ವ್ಯವಹಾರವನ್ನು ಅನುಸರಿಸಿಕೊಂಡು ಮುಂದೆ ಹೋದರೆ ಸಂಬಳದಾರರ ಮಕ್ಕಳಾದ ನಾವು ಸಂಬಳಕ್ಕೆ ದುಡಿಯುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡೆವು.

***

ಎಲೆಕ್ಟ್ರಾನಿಕ್ ಯುಗದ ವಿಶೇಷತೆ ಏನೆಂದರೆ ಹಣಕಾಸಿನ ವ್ಯವಹಾರವೆಲ್ಲ ದಾಖಲೆಗಳಲ್ಲೇ ನಡೆದು ಹೋಗುವುದು. ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಒಂದು ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದರ ಮೂಲಕ ಮಾಡುವಂತೆ ಆಗಿರುವುದು ಒಂದು ವರದಾನವೇ ಸರಿ, ಮೊದಲೆಲ್ಲ ಆನವಟ್ಟಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುವವರು ತಮ್ಮ ಹಣವನ್ನು ದಾರಿಯಲ್ಲಿ ಕಳೆದುಕೊಂಡು ಪಜೀತಿಗೆ ಸಿಕ್ಕ ಉದಾಹರಣೆಗಳು ಈಗ ಸಿಗಲಾರವು. ಹೀಗೇ ನಿಧಾನಕ್ಕೆ ಈ ವ್ಯವಸ್ಥೆ ಬೆಳೆದೂ ಬೆಳೆದೂ ಜನರು ಹಾರ್ಡ್ ಕರೆನ್ಸಿಯನ್ನು ತಮ್ಮ ಕಬ್ಬಿಣದ ಬೀರುಗಳಲ್ಲಿ ಕೂಡಿಹಾಕುವ ಕಾಲ ಕಡಿಮೆಯಾಗಿ ಅದನ್ನು ಅಲ್ಲಲ್ಲಿ ತೊಡಗಿಸುವ ಕಾಲ ಬರಲಿ, ಜೊತೆಗೆ ಕಪ್ಪುಹಣದ ವ್ಯವಸ್ಥೆ ಕುಸಿಯಲಿ ಎಂದು ವಾದವನ್ನು ಮಾಡುತ್ತಾ, ಅದರ ಬೆನ್ನಿಗೇ ಲಂಚವೆನ್ನುವ ಶಾಪ ನಮ್ಮ ವ್ಯವಸ್ಥೆಯಿಂದ ದೂರಾಗುವಂತಿದ್ದರೆ ಎನ್ನುವುದು ನಿಜವಾಗಿಯೂ ಆಶಾದಾಯಕವಾದ ಆಲೋಚನೆ ಅಲ್ಲದೇ ಮತ್ತಿನ್ನೇನು?

ಆನ್‌ಲೈನ್ ವ್ಯವಸ್ಥೆಯ ಹಿನ್ನೆಲೆಯಲ್ಲಿನ ಒಂದೇ ಒಂದು ಬೇಸರ ಸಂಗತಿಯೆಂದರೆ - ಈ ಕಳೆದ ಹತ್ತು ವರ್ಷಗಳಿಂದ ನನಗೆ ಹಲವಾರು ರೀತಿಯ ಸಹಾಯ ಮಾಡಿದ ನಮ್ಮೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿ ವರ್ಗದವರ ಜೊತೆ ಸಂಪರ್ಕ ಕಡಿದು ಹೋಗಿದ್ದು. ನಾನು ಒಂದು ಫೋನ್ ಕಾಲ್ ಮಾಡಿ ಹೇಳಿದ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ನಾನು ಹೇಳಿದವರಿಗೆ ತಲುಪಿಸುತ್ತಿದ್ದ ಅವರ ಸರ್ವೀಸ್ ಅನ್ನು ಅಮೇರಿಕದ ಬ್ಯಾಂಕ್‌ಗಳೂ ಕೊಡಲಾರವು ಎಂದು ನಾನು ಬೇಕಾದಷ್ಟು ಹೊಗಳಿದ್ದೇನೆ. ಪ್ರತಿವರ್ಷದ ಹಬ್ಬಕ್ಕೋ ಅಥವಾ ಮತ್ತಿತರ ಕಾರಣಗಳಿಗೋ - ಅಲ್ಲಿಂದ ಗ್ರೀಟಿಂಗ್ ಕಾರ್ಡ್‌ಗಳನ್ನು ಕಳಿಸಿದ, ಸ್ಟೇಟ್‌ಮೆಂಟ್‍ಗಳ ಜೊತೆಗೆ ಕ್ಯಾಲೆಂಡರನ್ನು ಕಳಿಸಿದ ಎಷ್ಟೋ ಘಟನೆಗಳು ನಮ್ಮೂರಿನ ಬ್ಯಾಂಕ್ ಅನ್ನು ಎತ್ತಿ ಹಿಡಿಯುತ್ತವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾದ ಮ್ಯಾನೇಜರುಗಳು ನಾನು ಅವರ ಮುಖ ನೋಡಿ ಮಾತನಾಡಿಸದಿದ್ದರೂ ನಮ್ಮೂರಿನ ಕೆಲವೇ ಕೆಲವು ಎನ್‌ಆರ್‌ಐ ಅಕೌಂಟು ಹೋಲ್ಡರುಗಳಲ್ಲಿ ಒಬ್ಬನು ಎಂಬ ಅಭಿಮಾನವನ್ನು ತಲತಲಾಂತರದಿಂದ ಇಟ್ಟುಕೊಳ್ಳುತ್ತಲೇ ಬಂದಿದ್ದಾರೆ, ನಾನು ಹೋದಾಗಲೆಲ್ಲ ಆತ್ಮೀಯವಾಗಿ ಮಾಡಿಸಿ ತಮ್ಮ ಕೈಲಾದ ಸಹಾಯವನ್ನೂ ಮಾಡಿದ್ದಾರೆ.

ಈ ಆನ್‌ಲೈನ್ ಪ್ರಪಂಚದಲ್ಲಿ ಅಂತಹ ಸೇವೆಗಳನ್ನು ಎಲ್ಲಿಂದ ಹುಡುಕಿ ತರಲಿ?

Wednesday, October 31, 2007

ಒಂದು ವ್ಯವಸ್ಥೆಯ ಕುರಿ

ಅಮೇರಿಕದಲ್ಲಿ ಎಲ್ಲರೂ ಅದೆಷ್ಟು ಚೆನ್ನಾಗಿ ರೂಲ್ಸುಗಳನ್ನು ಫಾಲ್ಲೋ ಮಾಡ್ತಾರೆ, ಆದರೆ ಭಾರತದಲ್ಲಿ ಹಾಗೇಕೆ ಮಾಡೋಲ್ಲ ಎನ್ನೋ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಸಾರಿ ಬಂದೇ ಬಂದಿರುತ್ತೆ. ಹಾಗೆ ಆಗೋದಕ್ಕೆ ಏನು ಕಾರಣ, ಪ್ರಪಂಚದಲ್ಲಿರೋ ಜನರೆಲ್ಲ ಒಂದೇ ಅಥವಾ ಬೇರೆ-ಬೇರೆ ಎಂದು ವಾದ ಮಾಡಬಹುದೋ ಅಥವಾ ಇಲ್ಲಿನ ವ್ಯವಸ್ಥೆಯ ಬಗ್ಗೆ ಹೇಳಬಹುದೋ ಗೊತ್ತಿಲ್ಲ.

ಅಮೇರಿಕದ ವ್ಯವಸ್ಥೆ ಕಂಪ್ಯೂಟರ್ ನೆಟ್‌ವರ್ಕ್, ಡೇಟಾಬೇಸುಗಳಿಂದ ತುಂಬಿರುವಂಥ ಒಂದು ಜಾಲ. ಈ ಜಾಲದಲ್ಲಿ ನಮ್ಮನ್ನು ಸಿಕ್ಕಿ ಹಾಕಿಕೊಳ್ಳುವ ಹಾಗೆ ಮಾಡುವ ಬಂಧನಗಳು ಹಲವಾರು - ಅವುಗಳಲ್ಲಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್, ಡ್ರೈವರ್ಸ್ ಲೈಸನ್ಸ್, ಕ್ರೆಡಿಟ್ ಕಾರ್ಡ್, ಟ್ಯಾಕ್ಸ್ ಐಡಿ, ಬ್ಯಾಂಕ್ ಅಕೌಂಟುಗಳು ಇತ್ಯಾದಿ. ಇಲ್ಲಿಗೆ ಬಂದು ಜೀವಿಸುವವರಲ್ಲಿ ಎರಡು ಯಾವಾಗಲೂ ಇದ್ದೇ ಇರುತ್ತವೆ, ಒಂದು ಸಾಲ ಮತ್ತೊಂದು ಥರಾವರಿ ಕಾರ್ಡುಗಳು. ಹೀಗೆ ನಿಮಗೆ ಬೇಕೋ ಬೇಡವೋ ಜಾಲದಲ್ಲಿ ಮೊದಲ ದಿನದಿಂದಲೇ ಗೊತ್ತಿರದೇ ಸೇರಿಕೊಳ್ಳುತ್ತೀರಿ. ಭಾರತದಲ್ಲಿ ಎಷ್ಟೋ ಜನ ಸಂಸಾರ ಬಂಧನವನ್ನು ಬಿಟ್ಟು ಯೋಗಿಗಳಾಗಿ ಹೇಳಲೂ ಹೆಸರೂ ಇಲ್ಲದೇ ಯಾವುದೋ ನದಿ ತೀರದಲ್ಲಿ, ತಪ್ಪಲಿನಲ್ಲಿ ಇವತ್ತಿಗೂ ಬದುಕೋದಿಲ್ಲವೇ? ಹಾಗೋಗೋದು ಇಲ್ಲಿ ಹೋಮ್‌ಲೆಸ್ ಜನರಿಗೆ ಮಾತ್ರ (ಅವರಿಗೋ ಒಂದೆರಡು ಐಡಿ ಗಳಾದರೂ ಇರುತ್ತವೆ).

ಈ ವ್ಯವಸ್ಥೆ - ಕಾರ್ಡು, ಐಡಿ ಗಳಿಂದ ಕೂಡಿದ ಜಾಲ - ಇದೇ ನಿಮ್ಮನ್ನು ಕಟ್ಟಿ ಹಾಕುವುದು. ಅವುಗಳ ತೂಕ ಎಷ್ಟರ ಮಟ್ಟಿಗೆ ಇರುತ್ತದೆಯೆಂದರೆ ಭಾರತದಲ್ಲಿದ್ದರೆ ಹತ್ತು ಲಕ್ಷ ಜನ್ಮಗಳ ನಂತರವಾದರೂ ಮೋಕ್ಷ ದೊರಕೀತು, ಆದರೆ ಇಲ್ಲಿ ಅದಕ್ಕೂ ಆಸ್ಪದವಿಲ್ಲ. ನನ್ನ ಪ್ರಕಾರ ಅಮೇರಿಕದಲ್ಲಿರುವ ಆತ್ಮಗಳಿಗೆ ಮೋಕ್ಷವೆಂಬುದೇ ಇಲ್ಲ!

***
ನಿಮ್ಮ ಟೆಲಿಫೋನ್ ಸಂಪರ್ಕದಿಂದ ಹಿಡಿದು ಕ್ರೆಡಿಟ್ ಕಾರ್ಡುಗಳವರೆಗೆ, ಟ್ಯಾಕ್ಸ್ ಕಟ್ಟುವುದರಿಂದ ಹಿಡಿದು ನಿಮ್ಮ ಹೆಲ್ತ್ ಇನ್ಷೂರೆನ್ಸ್‌ವರೆಗೆ ಪ್ರತಿಯೊಂದಕ್ಕೂ ನೀವು ಒಂದು ವ್ಯವಸ್ಥೆಗೆ ತಲೆ ಬಾಗಲೇ ಬೇಕು. ನಿಮ್ಮ ಜೀವನದ ಅತ್ತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಈ ವ್ಯವಸ್ಥೆ ನಿಮ್ಮ ಬೆನ್ನ ಹಿಂದೆ ಬಿದ್ದಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಮದುವೆಯಾಗುವವರೆಲ್ಲರೂ, ಹುಟ್ಟಿದ ಮಕ್ಕಳೆಲ್ಲರನ್ನೂ ಕಡ್ಡಾಯವಾಗಿ ನೋಂದಾಯಿಸಲೇ ಬೇಕು ಎಂಬ ಕಾನೂನೂ ಇಲ್ಲ, ಹಾಗೆ ಮಾಡದೇ ಇರುವುದರಿಂದಾಗುವ ಪರಿಣಾಮಗಳೂ ಅಷ್ಟೇನು ದೊಡ್ಡದಲ್ಲ. ಆದರೆ ಇಲ್ಲಿ ಹುಟ್ಟುವ ಮಗುವಿಗೆ ಆಸ್ಪತ್ರೆಯವರೇ ಹೆಸರನ್ನು ನೋಂದಾಯಿಸಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್ ಅನ್ನು ತೆಗೆದುಕೊಡುತ್ತಾರೆ, ಜೊತೆಗೆ ಜನ್ಮ ಪ್ರಮಾಣ ಪತ್ರವೂ ದೊರಕಿಸಿಕೊಳ್ಳಬೇಕಾದುದು ಅನಿವಾರ್ಯ.

ಕ್ರೆಡಿಟ್ ಕಾರ್ಡ್ ಬಿಲ್ಲ್ ಅನ್ನು ಮೂವತ್ತು ದಿನಗಳ ಒಳಗೆ ಕೊಡದೇ ಹೋದರೆ ದಂಡ ವಿಧಿಸಲಾಗುತ್ತದೆ, ಅವರವರ ಜಾತಕಗಳನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಆಗಾಗ್ಗೆ ಅಪ್‌ಡೇಟ್ ಮಾಡುವ ಕ್ರೆಡಿಟ್ ರೇಟಿಂಗ್‌ಗಳನ್ನು ಕಾಯ್ದುಕೊಂಡು ವರದಿ ಒಪ್ಪಿಸುವ ಸಂಸ್ಥೆಗಳಿಗೆ ನಿಮ್ಮ ತಪ್ಪನ್ನು ತೋರಿಸಿ ನಿಮ್ಮ "ಒಳ್ಳೆಯ ದಾಖಲೆಗೆ" ಮಸಿ ಬಳಿಯಲಾಗುತ್ತದೆ. ಮುಂದೆ ಹುಟ್ಟುವ ಲೋನ್‌ಗಳಿಗೆ ಹೆಚ್ಚು ಬಡ್ಡಿ ದರವನ್ನು ಕೊಡಬೇಕಾಗಬಹುದು. ಹಾಗೆಯೇ ನಿಮ್ಮ ಮನೆಗೆ ಬಂದು ಬೀಳುವ ಟ್ರಾಫಿಕ್ ಅಥವಾ ಪಾರ್ಕಿಂಗ್ ವಯಲೇಷನ್ ಟಿಕೇಟುಗಳ ಹಿಂದೆ ಅಥವಾ ಕೆಳಗೆ ನೀವು ಸರಿಯಾದ ಸಮಯಕ್ಕೆ ದಂಡ ಕಟ್ಟದಿದ್ದಲ್ಲಿ ನಿಮ್ಮನ್ನು ಅರೆಷ್ಟು ಮಾಡಬಹುದು ಅಥವಾ ನಿಮ್ಮ ಡ್ರೈವಿಂಗ್ ಪ್ರಿವಿಲೇಜನ್ ತೆಗೆದು ಹಾಕಬಹುದು ಎಂದು ಬರೆದಿರುತ್ತದೆ. ಇವು ಕೇವಲ ಸ್ಯಾಂಪಲ್ಲ್ ಅಷ್ಟೇ - ಈ ಸಾಲಿಗೆ ಸೇರಬೇಕಾದವುಗಳು ಅನೇಕಾನೇಕ ಇವೆ. ಇಂಥ ಒಂದು ವ್ಯವಸ್ಥೆಯಲ್ಲಿ ಯಾರು ತಾನೇ ಸರಿಯಾಗಿ ನಡೆದುಕೊಳ್ಳದೇ ಇರುವುದು ಸಾಧ್ಯ? ಬರೀ ರೂಲ್ಸ್‌ಗಳು ಇದ್ದರಷ್ಟೇ ಸಾಲದು, ಅವುಗಳನ್ನು ಇಂಪ್ಲಿಮೆಂಟ್ ಮಾಡುವ ಶುದ್ಧ ವ್ಯವಸ್ಥೆಯೂ ಇರಬೇಕು ಎನ್ನುವುದನ್ನು ನಾನೂ ಒಂದು ಕಾಲದಲ್ಲಿ ಬೆನ್ನು ತಟ್ಟುತ್ತಿದ್ದೆ, ಆದರೆ ಈಗ ಅದು ಹರ್ಯಾಸ್‌ಮೆಂಟ್ ಆಗಿ ತೋರುತ್ತದೆ.

ಇಲ್ಲಿನ ಒಂದು ದೊಡ್ಡ ಬ್ಯಾಂಕ್ ಒಂದರಲ್ಲಿ ಅವರು ಮಾಡಿದ ತಪ್ಪಿನ ಸಲುವಾಗಿ ನನ್ನ ಯಾವತ್ತೂ ಉಪಯೋಗಿಸದ ಕ್ರೆಡಿಟ್ ಕಾರ್ಡ್ ಒಂದಕ್ಕೆ $1.50 ಚಾರ್ಜ್ ಮಾಡಿಕೊಂಡಿದ್ದರು. ನಾನು ಬ್ಯಾಂಕಿನ ಕಷ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಹತ್ತು-ಹದಿನೈದು ನಿಮಿಷಗಳ ಮಾತುಕಥೆಯ ನಂತರ ಆ ತುದಿಯಲ್ಲಿದ್ದ ಲಲನಾಮಣಿ ’ಆಗಲಿ ಸರ್, ಎಲ್ಲ ಸರಿ ಹೋಗುತ್ತದೆ’ ಎಂದ ಮಾತ್ರಕ್ಕೆ ಅದು ಸರಿ ಎಂದು ನಂಬಿಕೊಂಡು ಸುಮ್ಮನಿದ್ದೆ. ಆದರೆ ಇಪ್ಪತ್ತೈದು ದಿನಗಳ ಬಳಿಕ ನನಗೊಂದು ಬಿಲ್ ಬಂತು, ಅದರಲ್ಲಿ ಬ್ಯಾಲೆನ್ಸ್ $1.50 ಇನ್ನೂ ಹಾಗೇ ಇದೆ! ಇನ್ನೆರಡು ದಿನಗಳಲ್ಲಿ ಕಟ್ಟದಿದ್ದರೆ 148% (no kidding) ಬಡ್ಡಿ ಹಾಕುತ್ತೇವೆ ಎಂಬ ಹೇಳಿಕೆ ಬೇರೆ. ಒಡನೆಯೇ ನನಗೆ ಇನ್ನೇನನ್ನೂ ಮಾಡಲು ತೋಚದೆ, ಕೂಡಲೇ ಲಾಗಿನ್ ಆಗಿ ಒಂದೂವರೆ ಡಾಲರ್ ಅನ್ನು ಕಟ್ಟಿದೆ, ಎಲ್ಲವೂ ಸರಿ ಹೋಯಿತು. ನಾನು ಬ್ಯಾಂಕಿಗೆ ಹೋಗಿ (ಅರ್ಧ ದಿನದ ಕೆಲಸ), ಅಥವಾ ಕಷ್ಟಮರ್ ಸರ್ವೀಸ್ ಅನ್ನು ಮತ್ತೆ ಸಂಪರ್ಕಿಸಿ (ಅರ್ಧ ಘಂಟೆಯ ಕೆಲಸ) ’ಇದು ನಿಮ್ಮದೇ ತಪ್ಪು, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ’ ಎಂದು ಕೂಗಬಹುದಿತ್ತು. ಆ ಕಡೆಯಲ್ಲಿರುವ ಮತ್ತಿನ್ಯಾವುದೋ ಕಷ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್‌ಗೆ ನನ್ನ ಮೇಲೆ ಕರುಣೆ ಇದೆ ಎಂದುಕೊಳ್ಳಲೇ? ಆಕೆಗೆ ಬೈದರೆ ನಾವೇ ಮೂರ್ಖರು - she has nothing to lose - ನಾವು ಇಲ್ಲಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಯೇ ವಿನಾ ಆಕೆಯ ವಿರುದ್ಧವಲ್ಲ. ಆಕೆಗೆ ನೀವು ಒರಟಾಗಿ ನಡೆದುಕೊಂಡರೆ ಆಕೆ ಕೆಲಸ ಮಾಡುವುದೇ ಇಲ್ಲ, ಏನು ಮಾಡುತ್ತೀರಿ? (ಹಿಂದೆ ದೊಡ್ಡ ಬ್ಯಾಂಕ್ ಒಂದರಲ್ಲಿ ಹೀಗೆ ನನಗೆ ಅನುಭವವೂ ಆಗಿದೆ, ಅಲ್ಲಿನ ಮ್ಯಾನೇಜರುಗಳು ಅಪಾಲಜಿ ಪತ್ರವನ್ನು ಕಳಿಸುವ ಮಟ್ಟಿಗೆ). So, ಪುರುಸೊತ್ತಿಲ್ಲದ ನಾನು ಇತ್ತೀಚೆಗೆ - pick your battles ಅಂಥಾರಲ್ಲ ಹಾಗೆ ಮೆತ್ತಗಾಗಿ ಹೋಗಿದ್ದೇನೆ. ನನ್ನ ಬಳಿ ಅರ್ಧ ದಿನವಿರಲಿ, ಅರ್ಧ ಘಂಟೆಯೂ ಇಲ್ಲ ಇವರ ವಿರುದ್ಧ ಹೋರಾಡಲು ಅದಕ್ಕೋಸ್ಕರವೇ ಒಂದೂವರೆ ಡಾಲರನ್ನು ದಾನ ಮಾಡಿದ್ದು.

ಇಲ್ಲಿ ಚಿಪ್ಸ್ ಮಾಡಿ ಮಾರುವುದರಿಂದ ಹಿಡಿದು ಸಗಣಿ ಮಾರುವವರ ವರೆಗೆ ಎಲ್ಲರೂ ಒಂದು ಕಾರ್ಪೋರೇಷನ್ನುಗಳು, ಈ ಕಾರ್ಪೋರೇಷನ್ನುಗಳ ಬೆನ್ನೆಲುಬಾಗಿ "ವ್ಯವಸ್ಥೆ"ಗಳಿವೆ, ಪ್ರಾಸೆಸ್ಸುಗಳಿವೆ. ಕಾರ್ಪೋರೇಷನ್ನಿನಲ್ಲಿ ಇಬ್ಬರೇ ಎಂಪ್ಲಾಯಿಗಳು ಇದ್ದರೂ ಅವರು ದುಡ್ಡನ್ನು ಹೀಗೇ ಖರ್ಚು ಮಾಡಬೇಕು, ಬಿಡಬೇಕು ಎಂಬ ಕಟ್ಟಲೆಗಳಿವೆ. ಹೆಚ್ಚು ಬುದ್ಧಿವಂತ ಜನರಿರುವ ಪ್ರಪಂಚದಲ್ಲಿ ಹೆಚ್ಚು-ಹೆಚ್ಚು ಪ್ರಾಸೆಸ್ಸುಗಳು ಹುಟ್ಟಿಕೊಂಡಿವೆ. ವ್ಯವಸ್ಥೆ ದಿನದಿಂದ ದಿನಕ್ಕೆ ಬಹಳೇ ಬದಲಾಗುತ್ತಿದೆ. ಏರ್‍‌ಪೋರ್ಟಿನಲ್ಲಿ ಪ್ರತಿಯೊಬ್ಬರ ಶೂ-ಚಪ್ಪಲಿ ಕಳಚಬೇಕು ಎಂಬ ನಿಯಮ ಇನ್ನೂ ಎರಡು ವರ್ಷ ತುಂಬದ ನನ್ನ ಮಗಳಿಗೂ ಅನ್ವಯವಾಗುತ್ತದೆ. ಎಲ್ಲಿ ಹೋದರೂ ನಿಯಮ, ಕಾನೂನು, ಪ್ರಾಸೆಸ್ಸು, ವ್ಯವಸ್ಥೆ - ಇವೇ ನಮ್ಮನ್ನು ಹೆಚ್ಚು ಸ್ಟ್ರೆಸ್‌ಗೆ ಒಳಪಡಿಸುವುದು ಹಾಗೂ ಅವುಗಳಿಂದ ಬಿಡುಗಡೆ ಎಂಬುದೇ ಇಲ್ಲವೇನೋ ಎಂದು ಪದೇ ಪದೇ ಅನ್ನಿಸುವುದು.

ಹಾಗಂತ ನಾನು ಶಿಲಾಯುಗದ ಬದುಕನ್ನು ಸಮರ್ಪಿಸುವವನಲ್ಲ. ಒಂದು ಕಾಲದಲ್ಲಿ ಬಕಪಕ್ಷಿಯಂತೆ ಕ್ರೆಡಿಟ್ ಕಾರ್ಡುಗಳು ಸಿಗುವುದನ್ನು ಕಾತರದಿಂದ ನೋಡುತ್ತಿದ್ದವನಿಗೆ, ಹಾಗೆ ಸಿಕ್ಕ ಮೊಟ್ಟ ಮೊದಲ ಕಾರ್ಡ್‌ನಲ್ಲಿ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗು ಎಂದು ತಾಕೀತು ಮಾಡಿದ ನನ್ನ ರೂಮ್‌ಮೇಟ್ ಒತ್ತಾಯಕ್ಕೆ ಬಾಗಿ ಸಂಭ್ರಮಿಸಿದವನಿಗೆ ಇಂದು ಕ್ರೆಡಿಟ್ಟು ಕಾರ್ಡುಗಳನ್ನು ಉಪಯೋಗಿಸಲು ಮನಸೇ ಬಾರದಾಗಿದೆ. ಅವರು ಕೊಡುವ ಫ್ರೀ ಮೈಲುಗಳಾಗಲೀ, ಡಿವಿಡೆಂಡು ಡಾಲರುಗಳಾಗಲೀ, ಪಾಯಿಂಟುಗಳಾಗಲೀ ಬೇಡವೇ ಬೇಡ ಎನ್ನಿಸಿದೆ. ನನ್ನ ಡೆಬಿಟ್ಟ್ ಕಾರ್ಡ್ ಅನ್ನು ಉಪಯೋಗಿಸಿ ಕಾಲು ಇರುವಷ್ಟೇ ಹಾಸಿಗೆ ಚಾಚಿದರೆ ಸಾಕೆ? ಎಂದು ಕೇಳಿಕೊಂಡು ಹಾಗೇ ಅನುಸರಿಸಿಕೊಂಡು ಬಂದಿದ್ದೇನೆ. ಆದರೆ, ಏಳೆಂಟು ಕ್ರೆಡಿಟ್ ಕಾರ್ಡ್ ಇರುವ ನಾನು ಪ್ರತಿ ತಿಂಗಳಿಗೊಮ್ಮೆ ಇಂಟರ್‌ನೆಟ್ ನಲ್ಲಿ ಅವುಗಳ ಬಿಲ್ ಬ್ಯಾಲೆನ್ಸ್ ಅನ್ನು ಪರೀಕ್ಷಿಸದೇ ಇರುವ ಹಾಗಿಲ್ಲ. ಪೇಪರ್ ಸ್ಟೇಟ್‌ಮೆಂಟ್ ಕಳಿಸಲು ಏರ್ಪಾಟು ಮಾಡಿದರೆ ಪ್ರತಿ ದಿನಕ್ಕೆ ಕಂತೆಗಟ್ಟಲೆ ಬರುವ ಪೋಷ್ಟಲ್ ಮೇಲ್‌ಗಳನ್ನು ಓದುವ ವ್ಯವಧಾನವಿಲ್ಲ, ಹಾಗೆ ಮಾಡುವುದು ಬೇಡವೆಂದರೆ ಆನ್‌ಲೈನ್ ನಲ್ಲಿ ಬಿಲ್ ಬ್ಯಾಲೆನ್ಸ್ ನೋಡದೇ ವಿಧಿ ಇಲ್ಲ. ಒಂದು ತಿಂಗಳು ಅವರೇನಾದರೂ ತಪ್ಪು ಚಾರ್ಜು ಉಜ್ಜಿಕೊಂಡರೂ ಅದರ ಫಲಾನುಭವಿ ನಾನೇ!

ಹೀಗೆ ದಿನೇದಿನೇ ಮನಸ್ಸು ಈ ವ್ಯವಸ್ಥೆಯಿಂದ ದೂರವಾಗ ಬಯಸುತ್ತದೆ, ಯಾವ ವ್ಯವಸ್ಥೆಗೂ ಬಗ್ಗದ ನಮ್ಮೂರು ಮೊದಮೊದಲು ತಡೆಯಲಸಾಧ್ಯವೆಂದೆನಿಸಿದರೂ ಅಲ್ಲಿ ಮಾನಸಿಕವಾಗಿ ನೆಮ್ಮದಿ ಇರುತ್ತದೆ. ಇಲ್ಲಿನ ವ್ಯವಸ್ಥೆ ತರುವ ಭಾಗ್ಯಗಳಲ್ಲಿ ರಸ್ತೆಯಲ್ಲಿ ಅಪಘಾತ-ಅವಘಡ ಸಂಭವಿಸಿದರೆ ಸಿಗುವ ತುರ್ತು ಚಿಕಿತ್ಸೆಯೂ ಒಂದು, ಆದರೆ ಹಾಗೆ ಎಂದೋ ಆಗಬಹುದಾದಂತಹ ಅಪಘಾತದ ಫಲಾನುಭವಕ್ಕೆ ಇಡೀ ಜೀವನವನ್ನೇ ಸ್ಟ್ರೆಸ್‌ನಲ್ಲಿ ಕಳೆಯಲಾಗುತ್ತದೆಯೇ? ಅಥವಾ ’ಸಾಯೋ(ರಿ)ದಿದ್ದರೆ ಎಲ್ಲಿದ್ದರೇನು?’ ಎಂದು ಕೇಳಿಕೊಳ್ಳುವ ನಮ್ಮೂರಿನ ಜಾಣ್ಣುಡಿ ಅಪ್ಯಾಯಮಾನವಾಗುತ್ತದೆಯೇ?

Sunday, October 28, 2007

"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ

ಕಾರ್ಪೋರೇಷನ್ನುಗಳ ಜಗತ್ತಾದ ಅಮೇರಿಕದ ಬಗ್ಗೆ, ಇಲ್ಲಿನ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಪ್ರಪಂಚದ ಯಾವ ಮೂಲೆಗೆ ಹೋದರೂ ಅಮೇರಿಕದ ದೊಡ್ಡ ಕಂಪನಿಗಳನ್ನು, ಅವುಗಳ ಲಾಭಗಳನ್ನು ಕಂಡು ಅಸೂಯೆಯಿಂದ ಜನ ನೋಡುವುದನ್ನು ಬೇಕಾದಷ್ಟು ಕಡೆ ಗಮನಿಸಬಹುದು. ಅಮೇರಿಕದ ಅರ್ಥ ವ್ಯವಸ್ಥೆಯ ಜೀವಾಳವೇ ಈ ದೊಡ್ಡ ಕಂಪನಿಗಳು ಆಯಿಲ್ಲಿನಿಂದ ಹಿಡಿದು ಸಾಫ್ಟ್‌ವೇರುಗಳವರೆಗೆ, ಫ್ಯಾಷನ್ ಉದ್ಯಮದಿಂದ ಹಿಡಿದು ಹೋಟೇಲ್ ಉದ್ಯಮಗಳವರೆಗೆ ಪ್ರತಿಯೊಂದೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿದೆ. ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಅರ್ಥ ವ್ಯವಸ್ಥೆ ಎಷ್ಟೋ ದೇಶಗಳಿಗೆ ಮಾದರಿ ಹಾಗೂ ಇಲ್ಲಿ ತುಸು ತೊಡಕಾದರೂ ಉಳಿದ ದೇಶಗಳ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಹೆಚ್ಚು. ಇಂಥಾ ಒಂದು ವ್ಯವಸ್ಥೆಯಲ್ಲಿ ಚೇತರಿಸಿಕೊಳ್ಳುತ್ತಿರುವುದು ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರಿ - ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡುವ ನನ್ನಂಥವರೂ ಬೇಡವೆಂದರೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳೇ ಆದ್ದರಿಂದ ನಾನು ಸಾಮಾನ್ಯವಾಗಿ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಬಗ್ಗೆ ಬರೆಯುವುದು ಕಡಿಮೆ, ಆದರೆ ಈ ದಿನ ಸುಮ್ಮನೇ ಹಾಗೆ ಒಂದು ವಿಚಾರವನ್ನು ಹರಿಯಬಿಟ್ಟರೆ ಹೇಗೆ ಎಂದೆನಿಸಿತು.

ಫ್ಯಾಕ್ಟ್:
- ಗೂಗಲ್‌ನಂತಹ ಕಂಪನಿಯವರ ಮಾರ್ಕೇಟ್ ಕ್ಯಾಪಿಟಲ್ ಸುಮಾರು 210 ಬಿಲಿಯನ್ ಡಾಲರುಗಳು (ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ)
- ಎಕ್ಸಾನ್ ಮೋಬಿಲ್ ಕಂಪನಿ ಕಳೆದ ವರ್ಷ (2006) ರಲ್ಲಿ ಸುಮಾರು 40 ಬಿಲಿಯನ್ ಡಾಲರುಗಳ ವಾರ್ಷಿಕ ಆದಾಯವನ್ನು ದಾಖಲಿಸಿದೆ
- ಮೈಕ್ರೋಸಾಫ್ಟ್ ಕಂಪನಿಗೆ ಇತ್ತೀಚೆಗೆ (ಸೆಪ್ಟೆಂಬರ್) ಯೂರೋಪಿಯನ್ ಯೂನಿಯನ್‌ವರು 690 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಮರ್ಕ್ ಕಂಪನಿಗೆ ಎರಡು ವರ್ಷಗಳ ಹಿಂದೆ (2005) ಟೆಕ್ಸಾಸ್ ಜ್ಯೂರಿ Vioxx ಮಾತ್ರೆಗಳನ್ನುಪಯೋಗಿಸಿ ಅಸುನೀಗಿದ ವ್ಯಕ್ತಿಯ ಕುಟುಂಬಕ್ಕೆ 253 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಎನ್ರಾನ್ ಹಾಗೂ ಎಮ್‌ಸಿಐ ಕಂಪನಿಗಳಲ್ಲಿ ಹಣ ತೊಡಗಿಸಿ ಸಹಸ್ರಾರು ಜನ ಹಣವನ್ನು ಕಳೆದುಕೊಂಡರು


ಹೀಗೆ ಬರೆದುಕೊಂಡು ಹೋದರೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಆಳ ಬಹು ದೊಡ್ಡದು. ಪ್ರಪಂಚದ ಎಲ್ಲರಿಗೂ ತಮ್ಮ ಅಂಕಿ-ಅಂಶಗಳನ್ನು ಮುಕ್ತವಾಗಿ ಹಂಚುತ್ತೇವೆ, ಕಂಪನಿಯಲ್ಲಿ ಹಣ ತೊಡಗಿಸಿದವರೇ ನಿಜವಾದ ಕಂಪನಿಯ ಓನರುಗಳು, ಎಲ್ಲರ ಒಳಿತಿಗಾಗೇ ನಾವು ದುಡಿಯುವುದು ಎಂದೇನೇನೆಲ್ಲ ಸಾರಿದರೂ ಪ್ರತಿಯೊಂದು ಕಂಪನಿಗೆ ಅವರವರದೇ ಆದ ರಹಸ್ಯಗಳಿವೆ. ಅದು ತಮ್ಮ ಕಂಪನಿ ಹುಟ್ಟು ಹಾಕಿದ ಪೇಟೆಂಟ್ ಇರಬಹುದು, ಕೆಮಿಕಲ್ ಫಾರ್ಮುಲಾ ಇರಬಹುದು ಅಥವಾ ಬಿಸಿನೆಸ್ ಸ್ಟ್ರಾಟೆಜಿ ಇರಬಹುದು. ಪ್ರತಿದಿನವೂ ತಮ್ಮ ಜೀವಂತಿಕೆಯನ್ನು ಜಗತ್ತಿಗೆ ಸಾರುವುದರ ಜೊತೆಗೆ ಪ್ರತಿಯೊಂದು ಕ್ವಾರ್ಟರ್‍ಗೂ ಅನಲಿಸ್ಟ್‌ಗಳ ಪ್ರಕಾರ ತಮ್ಮ ನಂಬರುಗಳನ್ನು ಹೊರಹಾಕಿ ಮಾರ್ಕೆಟ್ಟಿನ ಒತ್ತಡಕ್ಕೆ ಸಿಲುಕುವ ಸವಾಲೂ ಕೂಡ ಈ ಕಂಪನಿಗಳಿಗಿದೆ.

***

’ಓಹ್, ಇಂಡಿಯಾದಲ್ಲಾದರೆ ಈ ಮಾತ್ರೆಗಳನ್ನು ಮುಕ್ತವಾಗಿ ಎಲ್ಲರಿಗೂ ಫ್ರೀ ಆಗಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಘಟಕಗಳಲ್ಲೂ ಹಂಚುತ್ತಾರೆ, ಆದರೆ ಆಮೇರಿಕದಲ್ಲೇಕೆ ಇಷ್ಟೊಂದು ಬೆಲೆ?’ ಎನ್ನುವುದು ಇಲ್ಲಿಗೆ ಬಂದ ಹಲವರ ಸಹಜವಾದ ಪ್ರಶ್ನೆ. ಅವರು ಹೇಳುವ ಮಾತೂ ನಿಜ: ಮಾಲಾ-ಡಿ ಅಂತಹ ಸಂತಾನ ನಿರೋಧಕ ಮಾತ್ರೆಗಳಾಗಲೀ, ಸೆಪ್ಟ್ರಾನ್‌ನಂತಹ ಲಘು ಆಂಟಿಬಯಾಟಿಕ್‌ಗಳಾಗಲೀ ಬಹಳ ಕಡಿಮೆ ಬೆಲೆಗೆ ಅಲ್ಲಿ ಸಿಕ್ಕೀತು, ಆದರೆ ಅವುಗಳ ಬೆಲೆ ಇಲ್ಲಿ ಖಂಡಿತ ದುಬಾರಿ - ಏನಿಲ್ಲವೆಂದರೂ ಒಂದು ಡೋಸ್ ಮಾತ್ರೆಗೆ ಕನಿಷ್ಟ 25 ಡಾಲರ್ ಆಗಬಹುದು, ಅಂದರೆ ಭಾರತೀಯ ರುಪಾಯಿಯಲ್ಲಿ ಸಾವಿರವಾದೀತು. ಇಲ್ಲಿನ ವ್ಯವಸ್ಥೆ ಸರಿ ಇಲ್ಲ, ಎಲ್ಲ ಕಡೆ ಚೀಪ್ ಆಗಿ ಸಿಗುವ ಮಾತ್ರೆಗಳ ಬೆಲೆಯನ್ನು ಇಲ್ಲಿನವರು ಹೆಚ್ಚಿಸಿ ದುಡ್ಡು ಮಾಡುತ್ತಾರೆ ಆದ್ದರಿಂದಲೇ ಈ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಣ ಮಾಡಿ ಮುಂದುಬರುವುದು ಎಂದು ಏಕ್‌ದಂ ನಿರ್ಧಾರಕ್ಕೆ ಬಂದು ಬಿಟ್ಟೀರಿ, ಇಲ್ಲಿನ ವ್ಯವಸ್ಥೆಯನ್ನು ಪೂರ್ತಿ ಅರಿಯುವವರೆಗೆ ಆ ರೀತಿ ತೆಗೆದುಕೊಂಡ ನಿರ್ಣಯಗಳಲ್ಲಿ ಯಾವ ಹುರುಳೂ ಇಲ್ಲ. ಹತ್ತು ವರ್ಷದ ಹಿಂದೆ ಫಾರ್ಮಾ ಕಂಪನಿಗಳು ಹತ್ತಿರಹತ್ತಿರ ವರ್ಷಕ್ಕೆ 10-15 ಬಿಲಿಯನ್ ಡಾಲರುಗಳನ್ನು R&D Spending ಗಾಗಿ ಬಳಸುತ್ತಿದ್ದವು, ಆದರೆ ಇಂದು ಏನಿಲ್ಲವೆಂದರೂ ವರ್ಷಕ್ಕೆ 40 ಬಿಲಿಯನ್‌ಗಿಂತಲೂ ಹೆಚ್ಚು ಖರ್ಚು ಮಾಡುತ್ತಿವೆ (Source: Economist), ಹಾಗೆಯೇ ಒಂದು ನೋವು ನಿವಾರಕ ಮಾತ್ರೆಯಾಗಲೀ, ಕೊಲೆಷ್ಟರಾಲ್ ಕಡಿಮೆ ಆಗುವ ಮಾತ್ರೆಗಳಾಗಲೀ ಮಾರುಕಟ್ಟೆಗೆ ಬರಲು ಕಂಪನಿಯವರು ಸುಮಾರು 600-800 ಮಿಲಿಯನ್ ಡಾಲರುಗಳನ್ನು ಖರ್ಚು ಮಾಡುತ್ತಾರೆ. ಒಮ್ಮೆ ಹಾಗೆ ಮಾರುಕಟ್ಟೆಗೆ ಬಂದ ಮೇಲೂ ಈ ಔಷಧಿ-ಮಾತ್ರೆಗಳು ತುಂಬಾ ಕಂಟ್ರೋಲ್ಡ್ ಆಗಿ ಬಳಸಲ್ಪಡುತ್ತವೆ ಜೊತೆಗೆ ತುಂಬಾ ರೆಗ್ಯುಲೇಟೆಡ್ ವ್ಯವಸ್ಥೆಯಲ್ಲಿಯೇ ವ್ಯವಹಾರ ಮುಂದುವರೆಯುತ್ತದೆ.

ಪ್ರತಿಯೊಂದು ದೇಶ-ಖಂಡದಲ್ಲಿಯೂ ಅದರದ್ದೇ ಆದ ಒಂದು ಫಾರ್ಮಾಸ್ಯೂಟಿಕಲ್ ವ್ಯವಸ್ಥೆ ಇರುತ್ತದೆ. ಕೆಲವು ದೇಶಗಳಲ್ಲಿ ಮುಕ್ತ ಸಂಶೋಧನೆಗೆ ಅವಕಾಶ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಮುಕ್ತ ಮಾರುಕಟ್ಟೆ ಇದ್ದಿರಬಹುದು. ಅಫಘಾನಿಸ್ತಾನದಂತಹ ದೇಶಗಳಲ್ಲಿ ಮನೆಮನೆಯಲ್ಲಿ ಅಫೀಮು/ಗಾಂಜಾ ಬೆಳೆದರೆ ಇನ್ನು ಕೆಲವು ದೇಶಗಳಲ್ಲಿ ಹಾಗೆ ಇಟ್ಟುಕೊಳ್ಳುವುದು ಕಾನೂನು ಬಾಹಿರವಾಗಬಹುದು. ಹೀಗೆ ಹಲವು ಸೂತ್ರಗಳಿಗೆ ಕುಣಿಯುವ ಔಷಧಿ ಮಾರುಕಟ್ಟೆ ಹಾಗೂ ಮಾತ್ರೆಗಳನ್ನು ಕೇವಲ ಎರಡು ಕರೆನ್ಸಿಗಳಲ್ಲಿ ಅಳೆದು ನೋಡಿ ಅಲ್ಲಿ ತುಂಬಾ ಸಸ್ತಾ ಇಲ್ಲಿ ತುಂಬಾ ದುಭಾರಿ ಎನ್ನಲಾದೀತೆ? ಜೊತೆಗೆ ಇಲ್ಲಿ ಒಂದು ಮಾತ್ರೆಯನ್ನು ಸೇವಿಸಿ - ಸೇವಿಸಿದವನದೇ ತಪ್ಪು ಇದ್ದರೂ - ಆತ ಕಂಪನಿಯ ಮೇಲೆ ಮಿಲಿಯನ್ ಡಾಲರುಗಳ ಲಾ ಸೂಟ್ ಹಾಕುವ ಹೆದರಿಕೆ ಇದೆ, ಮತ್ತೊಂದು ಕಡೆ ಸತ್ತವರು ಹೇಗೆ ಸತ್ತರು ಎಂದು ಕೇಳುವ/ಹೇಳುವ ವ್ಯವಸ್ಥೆಯೂ ಇದ್ದಿರಲಾರದು. ಯಾವುದೇ ಒಂದು ಉತ್ಪನ್ನದಲ್ಲಿ ಏನಾದರೂ ಹೆಚ್ಚು-ಕಡಿಮೆ ಕಾಣಿಸಿಕೊಂಡರೆ ಇಲ್ಲಿ ಅಂತಹ ಉತ್ಪನ್ನವನ್ನು ರೀಕಾಲ್ ಮಾಡುವ ವ್ಯವಸ್ಥೆ ಇದೆ, ಉದಾಹರಣೆಗೆ ಎರಡು ವರ್ಷಗಳ ಹಿಂದೆ ನಾನೇ ಕೊಂಡು ಉಪಯೋಗಿಸಿದ ಮಕ್ಕಳಿಗೆ ಹಾಕುವ ಬಿಬ್ ಒಂದನ್ನು ಮೊನ್ನೆ ಟಿವಿಯ ವರದಿಯಲ್ಲಿ ತೋರಿಸಿದರೆಂದು - ಅದರಲ್ಲಿ ಲೆಡ್ ಪೇಂಟ್ ಇರಬಹುದಾದ ಬಗ್ಗೆ -ಇನ್ಯಾವುದೋ ಅಂಗಡಿಯೊಂದಕ್ಕೆ ತೆಗೆದುಕೊಂಡು ಹೋಗಿ ಕೊಟ್ಟರೆ ಅದರ ಪೂರ್ಣ ಬೆಲೆಯನ್ನು ಒಂದೂ ಪ್ರಶ್ನೆಯನ್ನು ಕೇಳದೇ ಹಿಂತಿರುಗಿಸಿದರು. ಹೀಗೆ ಒಂದು ಉತ್ಪನ್ನವನ್ನು ಅದೇ ಕೆಮಿಕಲ್ ಕಂಪೋಸಿಷನ್ ಇದ್ದ ಮಾತ್ರಕ್ಕೆ ಎರಡು ದೇಶಗಳ ಬೇರೆ ಬೇರೆ ವ್ಯವಸ್ಥೆಯಲ್ಲಿ ತೂಗಿ ನೋಡಲು ಬರೋದಿಲ್ಲ ಎನ್ನುವುದು ನನ್ನ ಅನಿಸಿಕೆ. ಇನ್ಯಾರಾದರೂ ನಿಮಗೆ ಭಾರತದಲ್ಲಿ ತಲೆ ನೋವಿನ ಮಾತ್ರೆ ರೂಪಾಯಿಗೆ ಒಂದು ಸಿಗುತ್ತದೆ ಎಂದು ಹೇಳಿದರೆ ನೀವು ಅವರಿಗೆ ಇಲ್ಲಿ ಗ್ಯಾಸೋಲಿನ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಮರು ಉತ್ತರ ಕೊಡಬಹುದು!

ಫಾರ್ಮಾಸ್ಯೂಟಿಕಲ್ ಕಂಪನಿಗಳವರು ಏನೇನನ್ನಾದರೂ ಮಾಡಿ ತಮ್ಮ ತಮ್ಮ ಮಾತ್ರೆ-ಔಷಧಿಗಳನ್ನು ಹೊರತರಬಹುದು - ಆದರೂ ಅಮೇರಿಕನ್ ವ್ಯವಸ್ಥೆಯಲ್ಲಿ ಅವರು ಬಹಳ ಕಷ್ಟನಷ್ಟವನ್ನು ಅನುಭವಿಸೋದಂತೂ ನಿಜ. ಇಷ್ಟು ಕಷ್ಟಪಟ್ಟು ಹೊರಡಿಸಿದ ಉತ್ಪನ್ನವನ್ನು ಉದಾಹರಣೆ ಏಡ್ಸ್ ಔಷಧಿ/ಮಾತ್ರೆಗಳನ್ನು ಆಫ್ರಿಕಾ ಖಂಡದಲ್ಲಿ ಕಾಲು ಭಾಗ ಜನರಿಗೆ ಏಡ್ಸ್ ಇದೆಯೆಂದ ಮಾತ್ರಕ್ಕೆ ಅಲ್ಲಿ ಪುಕ್ಕಟೆ ಮಾತ್ರೆಗಳನ್ನು ಹಂಚಲು ಹೇಗೆ ಸಾಧ್ಯ?

***
ಈ ರೀತಿ ಜನರ ಮನಸ್ಸಿನಲ್ಲಿ ಆಲೋಚನೆಗಳು ಬರಲು ಬೇಕಾದಷ್ಟು ಕಾರಣಗಳಿವೆ. ಪ್ರಿನ್ಸೆಸ್ ಡಯಾನಾ ಸತ್ತಳೆಂದು ಭಾರತದ ವೃತ್ತಪತ್ರಿಕೆಗಳು ವರದಿ ಮಾಡುವಾಗ ಆಕೆ ಕುಳಿತಿದ್ದ ಕಾರು ಅತಿವೇಗದಿಂದ ಚಲಿಸುತ್ತಿತ್ತು ಎಂದು ಬರೆಯುತ್ತಾ ಆಕೆ ಕುಳಿತ ಕಾರು ಘಂಟೆಗೆ ನೂರಾ ಇಪ್ಪತ್ತು (ಅಂದಾಜು) ಕಿಲೋ ಮೀಟರ್ ಓಡುತ್ತಿತ್ತು ಎಂದು ಭಾರತದಲ್ಲಿ ಘಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಓಡಾಡುವ ಜನರಿಗೆ ದಂಗುಬಡಿಸುತ್ತಾರೆ, ಆವರಣದಲ್ಲಿ ಅಲ್ಲಿನ ಸ್ಪೀಡ್‌ ಲಿಮಿಟ್ ಅನ್ನು ಕೊಟ್ಟರೆ ಏನಿಲ್ಲವೆಂದರೂ ಮುಂದುವರೆದ ದೇಶದ ಹೈವೇಗಳಲ್ಲಿ ಘಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಜನರು ಕಾರು ಚಲಿಸುವುದು ಸರ್ವೇ ಸಾಮಾನ್ಯ ಎನ್ನುವ ಅಂಶ ಓದುಗರಿಗೆ ಮನವರಿಕೆಯಾದೀತು. ಇತ್ತೀಚೆಗೆ ಒಂದು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ ಒಬ್ಬ ಅಂಕಣಕಾರರು Al Gore ಗೆ ನೊಬೆಲ್ ಶಾಂತಿ ಪಾರಿತೋಷಕ ಬಂದಿದ್ದರ ಬಗ್ಗೆ ಬರೆಯುತ್ತಾ ಆಲ್ ಗೊರೆ ಎಂದು ಬರೆದಿದ್ದನ್ನು ನೋಡಿ ನಗು ಬಂತು. ನಾವೆಲ್ಲ ಶಾಲಾ ಕಾಲೇಜಿನಲ್ಲಿದ್ದ ದಿನಗಳಲ್ಲಿ ಬಿಬಿಸಿ ಅಥವಾ ಇತರ ಸುದ್ದಿಗಳನ್ನು ಕೇಳಿ ವಿದೇಶಿ ಹೆಸರುಗಳನ್ನು ಸರಿಯಾಗಿಯೇ ಉಚ್ಚರಿಸುತ್ತಿದ್ದೆವು. ಒಬ್ಬ ಅಂಕಣಕಾರ ’ಗೊರೆ’ ಎಂದು ಬರೆಯುತ್ತಾರೆಂದರೆ ಅವರು ರೆಫೆರೆನ್ಸ್ ಮಾಡಿರುವ ವಿಷಯ ಕೇವಲ ಇಂಟರ್‌ನೆಟ್‌ಗೆ ಮಾತ್ರ ಸೀಮಿತ ಎಂದು ಅನುಮಾನ ಬರುತ್ತದೆ. 1988 ರಲ್ಲಿ Seoul ನಲ್ಲಿ ಓಲಂಪಿಕ್ಸ್ ಆದಾಗ ಭಾರತದ ಮಾಧ್ಯಮಗಳು ಮೊದಮೊದಲು "ಸಿಯೋಲ್" ಎಂದು ವರದಿ ಮಾಡಿ ನಂತರ "ಸೋಲ್" ಎಂದು ತಿದ್ದಿಕೊಂಡಿದ್ದವು. ಹೆಸರಿನಲ್ಲೇನಿದೆ ಬಿಡಿ, ಅದು ನಾಮಪದ ಯಾರು ಹೇಗೆ ಬೇಕಾದರೂ ಉಚ್ಚರಿಸಬಹುದು ಬಳಸಬಹುದು, ಆದರೆ ನಮ್ಮ ವರದಿಗಾರರು ಅಲ್ಲಿಲ್ಲಿ ಕದ್ದು ವಿಷಯವನ್ನು ಪೂರ್ತಿ ಗ್ರಹಿಸದೇ ಮಾಡುವ ತಪ್ಪುಗಳಿಗೆ ಅಮಾಯಕ ಜನರು ಬಲಿಯಾಗಬೇಕಾಗುತ್ತದೆ ಎನ್ನುವುದು ನನ್ನ ಕಳಕಳಿ.

"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ - ಆದ್ದರಿಂದ "ಆ ದೇಶ" ಸರಿ ಇಲ್ಲ - ಎನ್ನುವ ಮಾತುಗಳು ಇನ್ನಾದರೂ ಕಡಿಮೆಯಾಗಲಿ.