Showing posts with label ಅವಕಾಶ. Show all posts
Showing posts with label ಅವಕಾಶ. Show all posts

Wednesday, March 16, 2011

Facebook ಅನ್ನು ಎದುರಿಸಿ...

ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.

ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?

Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.

ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).

ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.

ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!

Monday, March 14, 2011

ಬಹಳ ದಿನಗಳ ಗೆಳೆಯ...







ಚುಕ್ಕು, ಚುಕ್ಕು, ಚುಕ್ಕು... ಸದ್ದು ಮಾಡುತ್ತಾ ಡೋವರ್‌ನಿಂದ ಹೊಬೋಕನ್ನ್ ಕಡೆಗೆ ಗಾಳಿಯನ್ನು ಎರಡು ಬಣವಾಗಿ ಇಬ್ಬಾಗಿಸಿಕೊಂಡು ಹಳಿಗಳ ಮೇಲೆ ಹುಳುವಾಗಿ ಹರಿದುಕೊಂಡು ಹೋಗುತ್ತಿದ್ದ ನಮ್ಮೂರಿನ ಲೋಕಲ್ ಟ್ರೇನು, ಬಹಳ ದಿನಗಳ ನಂತರ ಗೆಳೆಯನ ಮನೆಗೆ ಹೋಗುವ ಸಂಭ್ರಮವನ್ನು ನನ್ನ ಪಾಲಿಗೆ ತಂದುಕೊಟ್ಟಿತ್ತು. ಶುಕ್ರವಾರ (ಮಾರ್ಚ್ ೧೧) ಬೆಳ್ಳಂಬೆಳಿಗ್ಗೆಯೇ ಇಲ್ಲಿನ ರೇಡಿಯೋ ಸ್ಟೇಷನ್ನುಗಳು ಅರಚಿಕೊಂಡ ಪ್ರಕಾರ ಜಪಾನ್‌ನಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿ ಅನೇಕ ಹಾನಿಗಳ ಬಗ್ಗೆ, ಸಾವು ನೋವುಗಳ ಬಗ್ಗೆ ಮನದಲ್ಲಿ ಒಂದು ಥ್ರೆಡ್ ಕೊರೆಯ ತೊಡಗಿದರೆ, ಕೈಯಲ್ಲಿ ಅಪರೂಪಕ್ಕೆ ಹಿಡಿದುಕೊಂಡ ಡಿ.ಆರ್. ನಾಗರಾಜ್‌ ಅವರ "ಸಂಸ್ಕೃತಿ ಕಥನ" ಭಾರವಾಗ ತೊಡಗಿತ್ತು, ತೊಡೆಯ ಮೇಲೆ ಮಲಗಿ ಸುಮ್ಮನಿದ್ದ ಲ್ಯಾಪ್‌ಟಾಪ್‌ ತನ್ನ ಮಡಿಲಲ್ಲಿನ ಬಿಸಿ ಬ್ಯಾಟರಿಯಿಂದ ಸುಟ್ಟು ತನ್ನ ಇರುವನ್ನು ಬ್ಯಾಗಿನೊಳಗಿಂದಲೇ ಸ್ಪಷ್ಟ ಪಡಿಸಿತ್ತು.

ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂ ಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿ ಕೊಳ್ಳುತ್ತಿದ್ದವು.

ನಾಗರಾಜ್ ೧೯೯೬ ರ ನಿನಾಸಂನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ-ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರೀ ಮೊದಲಾದವರಿಂದ ಹೇಗೆ ಭಿನ್ನರು - ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ - ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್., ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, ೧೯೯೭ ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋ ಗಳಿದ್ದರೆ ಹುಡುಕಬೇಕು...ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು. ಜೊತೆಗೆ ನಾಗರಾಜ್ ಅವರ ಪುಸ್ತಕಗಳಲ್ಲಿ ಹೆಸರಿಸುವ, ಉದಾಹರಿಸುವ ಅನೇಕಾನೇಕ ಪುಸ್ತಕಗಳನ್ನೂ-ಪರಾಮರ್ಶೆಗಳನ್ನೂ ಖುದ್ದಾಗಿ ಪರಿಶೀಲಿಸಬೇಕು ಎಂಬೆಲ್ಲ ಮಲ್ಟಿ-ಜನ್ಮಗಳ ಟ್ಯಾಸ್ಕ್ ಲಿಸ್ಟುಗಳು ಹುಟ್ಟತೊಡಗಿದವು. ಜೊತೆಯಲ್ಲಿ ಒಂದು ಜನಾಂಗ, ಸಂಸ್ಕೃತಿ, ಭಾಷೆಯನ್ನು ಸ್ಥೂಲವಾಗಿ ಅರಿಯದೇ ಹುಟ್ಟಿನಿಂದ ಅದರ ಒಡನಾಟದಲ್ಲಿ ತೊಡಗದೇ ಹೊರಗಿನವರಾಗಿ ಸಂಸ್ಕೃತಿಯೊಂದನ್ನು ಅವಲೋಕಿಸುವುದರಲ್ಲಿನ ಮಿತಿಗಳು ಪರಕೀಯತೆಯನ್ನು ಹೆಚ್ಚು ದೊಡ್ಡದನ್ನಾಗಿ ಮಾಡಿ ತೋರಿಸತೊಡಗಿದ್ದು, ಒಂದು ರೀತಿ ಮ್ಯಾಪ್‌ಕ್ವೆಸ್ಟಿನಲ್ಲಿ ಚಿಕ್ಕದಾಗಿ ಕಾಣಸಿಗುವ ನ್ಯೂ ಯಾರ್ಕ್ ನಗರದ ಬಿಲ್ಡಿಂಗುಗಳು ನಮ್ಮ ಕಣ್ಣೆದುರೇ ಅವುಗಳ ಬೃಹತ್ ನೆಲೆಯನ್ನು ತೆರೆದುಕೊಂಡ ಹಾಗೆ ಬೆನ್ನ ಹುರಿಯಲ್ಲಿ ಮಿಂಚಿನ ಸಂಚಕಾರವಾಯಿತು. ನಾಗರಾಜ್ ಅವರ ಕಥನಗಳನ್ನು ಓದುತ್ತಿದ್ದ ಹಾಗೆ "ಪತ್ರಿಕೆ" ಹಾಗೂ ಅದರ ವಿಶೇಷಣಗಳ ನೆನಪುಗಳಾಗಿ - ಪುಂಡಲೀಕ ಶೇಟ್, ರವೀಂದ್ರ ರೇಶ್ಮೆ, ಕಟ್ಟೆ ಪುರಾಣ, ಬಂ, ಗುಂ, ಟೀಕೆ-ಟಿಪ್ಪಣಿ - ಮೊದಲಾದವುಗಳೆಲ್ಲ ಜಾತ್ರೆಯ ತೇರನ್ನು ಎಳೆಯಲು ತಯಾರಾಗಿ ನಿಂತ ಯುವಕರಂತೆ ಹಗ್ಗವನ್ನು ಹಿಡಿದುಕೊಂದು ಮನದಲ್ಲಿ ಪುಟಿದು ನಿಂತವು. ೧೯೯೭ರಲ್ಲಿ ಮೊದಲು ಇಂಟರ್ನೆಟ್ಟಿನಲ್ಲಿ "ಸಂಜೆವಾಣಿ"ಯನ್ನು ಓದಿದ ಪುಳಕಗಳಾಗಿ, ಅಂದೇ ಕನ್ನಡದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಅನಿವಾಸಿ ಕನ್ನಡಿಗರಿಗೆಲ್ಲ ಹೊಸ ಹುರುಪನ್ನು ನೀಡಿದ್ದ ಮಣಿಯವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವಲ್ಲಿ, ನಾಗರಾಜ್‌ರ ಅನುಭವಗಳು ಸಹಾಯಕಾರಿಯಾದವು.

ಕನ್ನಡದ ಹಿಂದಿನ ವಿದ್ವಾಂಸರ ಸಾಹಿತ್ಯ, ದಾರ್ಶನಿಕತೆ, ನವ್ಯರ ಕಲಸು ಮೇಲೋಗರ, ನವ್ಯೋತ್ತರ ಪ್ರಯೋಗಳು, ಬಂಡಾಯ-ದಲಿತರ ಧ್ವನಿಗಳು, ಜಾತಿ-ರಾಜಕೀಯದಲ್ಲಿ ಹೊರಬಂದ ಕೂಗುಗಳು, ದೊಡ್ಡ ದೊಡ್ಡ ಸಂಭ್ರಮಗಳನ್ನು ಸಣ್ಣ ಕಥೆಗಳಲ್ಲೇ ನೇಯ್ದ ಅಥವಾ ಕಟ್ಟು ಹಾಕಿದ ಬಂಧನಗಳ ರೂಪಗಳು, ಇನ್ನೂ ಹಳೆಯ ನಾಟಕಗಳಿಗೆ ಜೋತು ಬಿದ್ದು ಹೊಳಪನ್ನು ಕಾಣದ ರಂಗದ ಪರದೆಗಳು, ಸಿನಿಮಾ ಎಂಬ ಭ್ರಮಾಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಇತರ ಕಲಾ ಪ್ರಕಾರಗಳು - ಹೀಗೆ ಅನೇಕಾನೇಕ ಯೋಚನೆಗಳ ಅಲೆಗಳನ್ನು ನಾಗರಾಜ್‌ ಅವರ ಪುಸ್ತಕ ಕೇವಲ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ಏಳಿಸಿ ಚಲಿಸುತ್ತಿರುವ ಟ್ರೈನಿನಲ್ಲಿ ಚಲನೆಯಿಲ್ಲದ ದೇಹದೊಳಗೆ ಅನೇಕ ರೋಚಕತೆಗಳನ್ನು ಹುಟ್ಟುವಲ್ಲಿ ಯಶಸ್ವಿಯಾಗಿತ್ತು. ಪಂಡಿತರಲ್ಲದವರಿಂದ ಎಂತಹ ಸಾಹಿತ್ಯ ಬರುತ್ತದೆ, ಮಾರಿ ಜಾತ್ರೆಯನ್ನು ಕಾಣದ, ಕೋಣನ ಬಲಿಯನ್ನೆ ನೋಡದ, ಗಡಿ-ಮಾರಿಗಳನ್ನು ಅರ್ಥ ಮಾಡಿಕೊಳ್ಳದ ಸಂತತಿ ಈ ಸಮುದಾಯಕ್ಕೆ ಎಂತಹ ರೂಪವನ್ನು ಕೊಟ್ಟೀತು? ಚಂದ್ರಗುತ್ತಿಯಲ್ಲಿನ ಬೆತ್ತಲೆ ಪೂಜೆಯ ಸುತ್ತಣ ನಡೆದ ಸಾಮಾಜಿಕ ಚಳುವಳಿ, ಅದೆಷ್ಟೋ ದೂರದಲ್ಲಿಂದ "ಉಧೋ ಉಧೋ" ಹಾಡಿಕೊಂಡು ಹೊರಟು ಹೋಗುತ್ತಿದ್ದ ಎತ್ತಿನ ಗಾಡಿಗಳು, ಬೆತ್ತಲನ್ನು ಮುಚ್ಚಲು ಬಳಕೆಗೆ ಯಥೇಚ್ಛವಾಗಿ ಸಿಗುತ್ತಿದ್ದ ಬೇವಿನ ಸೊಪ್ಪು, ನಾಗರಿಕರಷ್ಟೇ ಗುರುತಿಸುವ ಅನಾಗರಿಕ ವರ್ತನೆ - ಇತ್ಯಾದಿಗಳೆಲ್ಲ ನರ್ತಿಸತೊಡಗಿದವು. ಯಾರೋ ಮನದೊಳಗೆ ಮಲಗಿದ್ದ ಬುಗುರಿಗೆ ಹುರಿಯನ್ನು ಸುತ್ತಿ ಎಂತಿ ಅಂತರ ಪಿಚ್ಚನ್ನು ಹಾಕಿದಂತೆ ಗಾಳಿಯಲ್ಲಿ ಸುತ್ತಿ ಬಂದು ಅಂಗೈನ ಮಧ್ಯೆಯಲ್ಲಿನ ನನ್ನ ಆಟಿಕೆ ಸುತ್ತಿ-ಸುತ್ತಿ ಗಿರುಕಿ ಹೊಡೆಯಲಾರಂಭಿಸುವ ಹೊತ್ತಿಗೆ ನ್ಯೂ ಯಾರ್ಕ್ ನಗರ ದುತ್ತನೆ ಎದುರಾಗಿತ್ತು.

***

ಅದೇ ನ್ಯೂ ಯಾರ್ಕ್ ನಗರ?! ಅಲ್ಲ, ಬದಲಾಗಿರುವ ಚಿತ್ರ, ಇಲ್ಲ, ಅವೇ ಬಿಲ್ಡಿಂಗುಗಳು, ಅಲ್ಲ, ಹೊಸ ವಿನ್ಯಾಸಗಳು, ಅಲ್ಲ, ಅದೇ ನಿರಂತರತೆ.... ಹೀಗೆ ಅನೇಕ ಅಲ್ಲ-ಇಲ್ಲಗಳ ನಂತರ ನಾನಿದ್ದೇನೆ ಇಲ್ಲಿಯೇ - ಶತಶತಮಾನಗಳಿಂದ ಎನ್ನುವ ಅಖಂಡತೆ ಅನುಭವಕ್ಕೆ ಬಂತು. ಅದರ ಸೌಂದರ್ಯ, ವಿಸ್ತಾರ, ಅಬ್ಬರದ ಮುಂದೆ ನಮ್ಮ ಅನುಭವಗಳು ಎಷ್ಟು ಕನಿಷ್ಠವಾದವುಗಳು ಎಂದೂ ಅನಿಸಿತು, ಒಂದು ರೀತಿ ನೊಣ ದೊಡ್ಡದೊಂದು ಆನೆಯ ದೇಹದ ಮೇಲೆ ಕಾಣುವ ಧೂಳಿನ ಹಾಗೆ. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಅದೇ ಗಾಂಭೀರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್! ಉಳಿದ ಕಟ್ಟಡಗಳು ಹಾಗೂ ಕಲರವಗಳ ನಡುವೆ ನೋಡಿದರೆ ಅದು ಅಷ್ಟೊಂದು ದೊಡ್ಡದೇ ಎಂದು ಒಮ್ಮೆ ಅನುಮಾನವಾದರೂ ಕೆಲವೊಮ್ಮೆ ದೊಡ್ಡದನ್ನು ದೂರದಿಂದ ನೋಡಿಯೇ ತಿಳಿಯಬೇಕು ಎನ್ನಿಸಿದ್ದು ನಿಜ.

ಬಿಸಿನೆಸ್ಸು ಮೀಟಿಂಗ್‌ಗೆ ಹೊಗಿ ಅಲ್ಲಿ ಕಾಫಿ ಹೀರುತ್ತಿದ್ದ ಹಾಗೆ ಸರ್ವಾಂತರ್ಯಾಮಿ ಸಿಎನ್‌ಬಿಸಿ ವರದಿಗಳೆಲ್ಲ ನನ್ನ ಸಹೋದ್ಯೋಗಿಗಳಲ್ಲೂ ಪಸರಿಸಿ ನೈಸರ್ಗಿಕ ಪ್ರಕೋಪದ ಪರಿಣಾಮದ ಚರ್ಚೆಗಳು ಜಪಾನ್‌ನಿಂದ ದೂರದ ಹವಾಯಿಯಲ್ಲಿ ಸುನಾಮಿ ಅಲೆಗಳೆದ್ದು ತೊಂದರೆಯಾದ ಬಗ್ಗೆ ವಿಸ್ತಾರಗೊಂಡಿದ್ದವು. ಎಲ್ಲೇ ಏನಾದರೂ ತಮ್ಮ ಬಾಟಮ್‌ಲೈನಿನ ಬಗ್ಗೆ ಆಲೋಚಿಸುವ ಅಮೇರಿಕನ್ನ್ ಮನಸ್ಸಿನ ಮಿತಿ ಎಂದುಕೊಂಡರೆ ತಪ್ಪಾದೀತು. ಇಂದಿನ ಗ್ಲೋಬಲ್ ವ್ಯವಸ್ಥೆಯಲ್ಲಿ ದೊಡ್ಡ-ದೊಡ್ಡ ಆಟಗಾರರಿಗೆ ನೆಗಡಿ-ಜ್ವರ ಬಂದರೇ ಕಷ್ಟವಾಗುವಾಗ ಇನ್ನು ಭೂಕಂಪ, ಸುನಾಮಿಗಳು ಬರೀ ನೀರಿನ ಅಲೆಗಳಾಗಿ ಮಾತ್ರ ತಟ್ಟದೇ ಗಾಳಿ ಹಾಗೂ ಉಳಿದ ಮಾಧ್ಯಮಗಳಲ್ಲೂ ಸಂವಹಿಸಬಲ್ಲ ಶಕ್ತಿ ಅಥವಾ ದೌರ್ಬಲ್ಯವನ್ನು ಕುರಿತು ಚಿಂತಿಸುವಂತಾಯಿತು.

ಒಟ್ಟಿನಲ್ಲಿ, ಈ ವಿಶ್ವದ ದೊಡ್ಡಣ್ಣ ನ್ಯೂ ಯಾರ್ಕ್ ನಗರದ ಒಂದು ದಿನದ ಸಹವಾಸದಿಂದಾಗಿ, ನಾಗರಾಜ್ ಅಂಥವರ ಮಹಾನ್ ಚೇತನಗಳ ಬರಹದ ದೆಸೆಯಿಂದ "ಅಂತರಂಗ"ದ ಅನಿವಾಸಿ ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ದಿನನಿತ್ಯದ ಜಂಜಾಟಗಳಿಂದ ದೂರಗೊಂಡು ಕನ್ನಡ-ನಮ್ಮತನ-ನಾಡಿನ ಬಗ್ಗೆ ಯೋಚಿಸುವಂತೆ ಮಾಡಿದ್ದು ದೊಡ್ಡದೆ. ಈ ಅಗಾಧತೆಗಳ ನಡುವೆ ನಮ್ಮ ನಮ್ಮ ದೊಡ್ಡದನ್ನು ಚಿಕ್ಕದಾಗಿ ಪರಿವರ್ತಿಸಬಲ್ಲ ಇಂತಹ ಮಹಾನ್ ಅವಕಾಶಗಳು ಆಗಾಗ್ಗೆ ಬರುತ್ತಿರಲಿ.

Thursday, June 19, 2008

ಸಮಸ್ಯೆ, ಅವಕಾಶ ಹಾಗೂ multiple right answers

ರಾಜಕಾರಣ, ಲಂಚ, ರಾಜಕೀಯ, ಭ್ರಷ್ಟಾಚಾರ ಇವೆಲ್ಲವನ್ನೂ ಬುದ್ಧಿವಂತ ಜನತೆ ಒಂದು ರೀತಿಯ ಅಲರ್ಜಿಯಿಂದ ನೋಡುತ್ತದೆ, ಹೇಸಿಗೆ ಮಾಡಿಕೊಳ್ಳುತ್ತದೆ. ’ಇವೆಲ್ಲ ನಮಗಲ್ಲ’ ಎಂದುಕೊಂಡು ಕೈ ತೊಳೆದುಕೊಳ್ಳಲು ನೋಡುತ್ತದೆ. ನಮ್ಮ ಜೀವನದಲ್ಲಿ ಸಾಂಸ್ಕೃತಿಕವಾಗಿ ಬೆಳವಣಿಗೆಗಳು ಇದ್ದಂತೆ ರಾಜಕೀಯವಾಗಿಯೂ ನಾವು ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ಹೆಚ್ಚು ಆಲೋಚಿಸಲು ತೊಡಗಿದ್ದು ದೇಶ ಬಿಟ್ಟು ದೇಶಕ್ಕೆ ಬಂದಾಗಲೆ. ಒಂದು ಕಾಲದಲ್ಲಿ ನನ್ನ ಹುಟ್ಟೂರಾದ ಆನವಟ್ಟಿಯ ಗ್ರಾಮಪಂಚಾಯತಿಯನ್ನು ಸೇರಿಕೊಂಡು ಅಲ್ಲಿನ ಸ್ಥಳೀಯ ಕೆಲಸಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು ಎನ್ನುವುದು ಯಾವತ್ತೂ ನನಸಾಗಲೇ ಇಲ್ಲ - ಹಲವಾರು ಕಾರಣಗಳಿಂದಾಗಿ. ಶಾಲಾ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಕೊಂಡು ಹೈ ಸ್ಕೂಲಿನವರೆಗೂ ಅನೇಕ ’ಮಂತ್ರಿ’, ’ನಾಯಕ’ ಪದವಿಗಳನ್ನು ಪಡೆದುಕೊಂಡು ಒಮ್ಮೆ ಹೈ ಸ್ಕೂಲು ಬಿಟ್ಟು ಕಾಲೇಜು ಸೇರಿಕೊಂಡ ಮೇಲೆ ನನ್ನಲ್ಲಿನ ರಾಜಕೀಯ ಉತ್ಸಾಹವೆಲ್ಲ ಸೂಜಿ ಚುಚ್ಚಿದ ಬೆಲೂನಿನ ಗಾಳಿಯಂತೆ ಖಾಲಿಯಾಗಿ ಹೋಯಿತು. ಮುಂದೆ ತಿಳುವಳಿಕೆ ಬೆಳೆದಂತೆಲ್ಲ ಒಂದು ಕ್ಷೇತ್ರದ ರೆಪ್ರೆಸೆಂಟೇಟಿವ್ ಆಗಲು ಏನೇನೆಲ್ಲ ಪೂರಕ ಅಂಶಗಳು ಬೇಕು ಎಂಬುದನ್ನು ಮನಗಂಡ ನಂತರ ಮುಂದೆ ಎಂದೂ ಈ ರಾಜಕೀಯಕ್ಕೆ ಕೈ ಹಾಕಲೇ ಬಾರದು ಎನ್ನುವಲ್ಲಿಯವರೆಗೆ ಬಂದು ನಿಂತಿದೆ.

***
ನಮ್ಮಲ್ಲಿನ ಅಂದರೆ ಭಾರತದಲ್ಲಿನ ಅನೇಕ ಮೂಲಭೂತ ಸಮಸ್ಯೆಗಳನ್ನು ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಪ್ರಶ್ನೆಯಿಂದ ಅರ್ಥೈಸಬಹುದು ಅಥವಾ ವೀಕ್ಷಿಸಬಹುದು - Can you take a "No" for an answer?

ನಮ್ಮಲ್ಲಿ ಈಗ ಚಾಲ್ತಿಯಲ್ಲಿರುವ ಯಾವುದೋ ಒಂದು ವ್ಯವಸ್ಥೆ ಅಥವಾ ಪ್ರಾಸೆಸ್ಸನ್ನು ತೆಗೆದುಕೊಂಡು ಅದರ ಬಗ್ಗೆ ಚರ್ಚೆ ಮಾಡಿಕೊಂಡರೆ ಸುಲಭವಾದೀತು. ಉದಾಹರಣೆಗೆ ಯಾವುದೋ ಒಂದು ಕಾಲೇಜಿನ ಅಡ್ಮಿಷನ್ನ್‌ ಗೆ ಈಗಾಗಲೇ ಕೊನೇ ದಿನವಾಗಿ ಹೋಗಿದೆ ಎಂದುಕೊಳ್ಳೋಣ. ನೀವು ನಿಮ್ಮ ವಿದ್ಯಾರ್ಥಿಯನ್ನು ಆ ಕಾಲೇಜಿಗೆ ಸೇರಿಸಲು ಹೋಗುತ್ತೀರಿ. ಅಲ್ಲಿನ ಗುಮಾಸ್ತರು ’ಕ್ಷಮಿಸಿ, ಈಗಾಗಲೇ ಡೆಡ್‌ಲೈನ್ ಮುಗಿದಿದೆ’ ಎನ್ನುತಾರೆ. ಆಗ ನೀವೇನು ಮಾಡುತ್ತೀರಿ? ಆ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಮ್ಮನೇ ಹಿಂತಿರುಗುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ಬೇರೆ ಯಾವುದಾದರೂ ನ್ಯಾಯವಾದ ದಾರಿಗಳಿವೆಯೇ (alternatives) ಎಂದು ಹುಡುಕುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ನಿಮ್ಮ ಶಿಫಾರಸ್ಸಿನಿಂದ ಅಥವಾ ಲಂಚಕೊಡುವ ಮೂಲಕ ಅಥವಾ ಮತ್ತ್ಯಾವುದೋ ’ನ್ಯಾಯವಲ್ಲದ’ ದಾರಿಗಳಿವೆಯೇ ಎಂದು ಹುಡುಕುತ್ತೀರೋ?

ಹೀಗೇ, ನಮ್ಮಲ್ಲಿ ನಾವು ಅನುಭವಿಸುವ ಪ್ರತಿಯೊಂದು ಸಂಕಷ್ಟ, ನೋವು, ನಲಿವು, ಅವಕಾಶ (opportunity) ಹಾಗೂ ಸವಾಲುಗಳಿಗೆ ಹಲವಾರು ಉತ್ತರಗಳಿವೆ - there are multiple right answers ಅಂತಾರಲ್ಲ ಹಾಗೆ. ಆದರೆ ಅವುಗಳನ್ನು ನಾವು ನೋಡೋ ದೃಷ್ಟಿಕೋನ ಬದಲಾಗಬೇಕು ಅಷ್ಟೇ.

***

ನಮ್ಮ ರಾಜಕಾರಣಿಗಳು ಅಂದರೆ ಬುದ್ಧಿವಂತ ಜನ ಮೂಗು ಮುರಿಯಬೇಕೇಕೆ? ಅವರು ಹೇಗಿದ್ದರೂ ಹೇಗಾದರೂ ನಮ್ಮ ಪ್ರತಿನಿಧಿಗಳೇ ಅಲ್ಲವೇ? ನಾವು ಎಲ್ಲ ರೀತಿಯಿಂದ ಚೆನ್ನಾಗಿದ್ದು ನಮ್ಮ ಪ್ರತಿನಿಧಿಗಳು ಸರಿಯಾಗಿಲ್ಲವೆಂದರೆ ಅದಾದರೂ ಒಂದು ವಾದವಾದೀತು. ನಮ್ಮ ಸಮಾಜದಲ್ಲಿ ಹಲವು ರೀತಿಯ ಜನರು ಇರೋದು ಸಹಜವಾದಲ್ಲಿ, ಅಂತಹವರನ್ನು ರೆಪ್ರೆಸೆಂಟ್ ಮಾಡುವವರು ಎಲ್ಲರಿಗೂ ಸ್ಪಂದಿಸಬೇಕಾದಲ್ಲಿ ನಮ್ಮ ನಾಯಕರು ಈಗಿರುವುದಕ್ಕಿಂತ ಭಿನ್ನರಾಗಲು ಸಾಧ್ಯವೇ ಇಲ್ಲ. ಯಾರೇ ವಿಧಾನಸೌಧಕ್ಕೋ ಅಥವಾ ಪಾರ್ಲಿಮೆಂಟಿನ ಒಳಗೆ ನುಗ್ಗಿ ಅಲ್ಲಿನ ಈಗಿನ ರಾಜಕಾರಣಿಗಳನ್ನೆಲ್ಲ ನಾಶ ಮಾಡಿದರೂ ಎಂದೇ ಇಟ್ಟುಕೊಳ್ಳಿ, ಆ ಪಾಯಿಂಟಿನಿಂದ ಮುಂದೆ ಬರುವ ಹೊಸ ರಾಜಕಾರಣಿಗಳು ಈಗಿನವರಿಗಿಂತ ಅದೆಷ್ಟು ಭಿನ್ನರಾಗಿರಬಲ್ಲರು ಎನ್ನುವುದು ಪ್ರಶ್ನಾರ್ಥಕ ವಿಚಾರ. ನನ್ನ ಪ್ರಕಾರ ಒಬ್ಬ ಸಾದು-ಸಂತನನ್ನು ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ಕೂರಿಸಿದರೂ ಅವನಿಗೆ ಜನರು ಲಂಚದ ಆಮಿಷ ಒಡ್ಡೇ ಒಡ್ಡುತ್ತಾರೆ. ಜೊತೆಗೆ ತಾಲ್ಲೂಕು ಆಫೀಸು, ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲಸ ಮಾಡುವವರೂ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗದ ಸದಸ್ಯರು ಎನ್ನುವುದನ್ನು ನಾವು ಹೇಗೆ ತಾನೇ ಮರೆಯಲಾದೀತು?

ನಮ್ಮ ಕಾನೂನು-ಕಟ್ಟಳೆಗಳು ಹಳೆಯದಾಗಿರಬಹುದು, ಇವತ್ತಿಗೂ ನಮ್ಮೂರಿನ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳು ಓಬೀರಾಯನ ಕಾಲದ ಮೌಲ್ಯವನ್ನು ತಾಲೂಕು ಆಫೀಸಿನ, ಗ್ರಾಮ ಪಂಚಾಯತಿಯ ರೆಕಾರ್ಡುಗಳಲ್ಲಿ ಬಿಂಬಿಸುತ್ತಿರಬಹುದು. ಇಂದು ನೀವು ಕೊಡುತ್ತಿರುವ ಕಂದಾಯ ಆಯಾ ಪಟ್ಟಣದ ಅಭಿವೃದ್ಧಿಗೆ ಮೀಸಲಾದ ಬಜೆಟ್ಟಿನಲ್ಲಿ ಯಾವುದೇ ಮಹತ್ವದ ಪಾತ್ರವನ್ನು ವಹಿಸುವಲ್ಲಿ ಬಹಳ ಚಿಕ್ಕದಾಗಿ ತೋರಬಹುದು. ನಾವು ಕೊಡುತ್ತಿರುವ ಕಂದಾಯ ಅಷ್ಟೇ ಇರಲಿ, ಆದರೆ ನಮ್ಮೂರಿನ ಅಭಿವೃದ್ಧಿ ಆಗಲಿ ಎಂದರೆ ಹೇಗೆ ಸಾಧ್ಯ? ಸರ್ಕಾರ ಎಲ್ಲದಕ್ಕೂ ದುಡ್ಡು ಕೊಡಲಿ ಅಂದರೆ ಅದು ಯಾರ ಹಣ, ಅದಕ್ಕೆ ಮೂಲ ಆದಾಯ ಎಲ್ಲಿಂದ ಬರಬೇಕು? ಸರಿಯಾಗಿ ತೆರಿಗೆ ಕಟ್ಟುವವರಿಂದ ಹಣ ವಸೂಲಿ ಮಾಡುವ ವ್ಯವಸ್ಥೆ ತೆರಿಗೆ ಕಟ್ಟದೇ ಬದುಕುವ ಅದೆಷ್ಟೋ ಕೋಟಿ ಜನರನ್ನು ಹೇಗೆ ಸಂತೈಸಲು ಸಾಧ್ಯ? ಪ್ರತಿ ಊರಿನ, ಗ್ರಾಮದ, ಪಟ್ಟಣದ, ನಗರದ ಬೆಳವಣಿಗೆಗೆ ತಕ್ಕಂತೆ ಅಲ್ಲಿನ ಬಜೆಟ್ ಬೆಳೆಯುತ್ತಿದೆಯೇ? ಒಂದು ಐಸ್ ಕ್ಯೂಬ್‌ನಂತೆ ಇದ್ದಲ್ಲೇ ಕರಗುವ ಹಣದ ಗಂಟು ಈ ಬೆಳವಣಿಗೆಗಳು ಒಡ್ಡುವ ಸವಾಲುಗಳನ್ನು ಅದೆಷ್ಟರ ಮಟ್ಟಿಗೆ ಎದುರಿಸ ಬಲ್ಲದು?

***

ನಾವು ಅಮೇರಿಕಕ್ಕೆ ಬಂದೆವು, ಬಂದ ದಿನದಿಂದ ಇಲ್ಲಿಯವರೆಗೆ ಕಾನೂನನ್ನು ಪಾಲಿಸಿಕೊಂಡು, ಇದ್ದ ಕಾನೂನು-ಕಟ್ಟಳೆಗಳಿಗೆಲ್ಲ ಸರಿಯಾಗಿ ಹೊಂದಿಕೊಂಡು ಬದುಕುತ್ತಿದ್ದೇವೆ. ಈಗ ನಾವಿರುವ ಟೌನ್‌ಶಿಪ್‌ನವರು ಮೊನ್ನೆ ನಮ್ಮ ಮನೆ ಕಂದಾಯವನ್ನು ಹೆಚ್ಚು ಮಾಡಿದರು, ಅದಕ್ಕೆ ನಾನು ಅಪೀಲು ಮಾಡಿದೆ. ಅದಕ್ಕೆ ತಕ್ಕ ಉತ್ತರದ ಜೊತೆಗೆ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟರು ನಾನು ಬಾಯಿ ಮುಚ್ಚಿಕೊಂಡು ಹಿಂದೆ ಬರದೆ ಬೇರೆ ದಾರಿ ಇರಲಿಲ್ಲ. ಇಲ್ಲಿನ ಸ್ಕೂಲ್ ಬಜೆಟ್‌ನ ಪ್ರಾಸೆಸ್ಸಿನಲ್ಲಾಗಲಿ, ಇಲ್ಲಿ ಆಗಾಗ್ಗೆ ಟೌನ್‌ಶಿಪ್‌ನವರು ತೆರಿಗೆಯನ್ನು ವಿಶ್ಲೇಶಿಸುವ ಬಗೆಯಲ್ಲಾಗಲೀ, ಇಲ್ಲಿನ ಸ್ಥಳೀಯ ಅಭ್ಯರ್ಥಿಗಳ ಚುನಾವಣೆಯಲ್ಲಾಗಲೀ ನಾನು ಯಾವುದೇ ರೀತಿಯ ಕ್ರಿಯಾತ್ಮಕ ಸ್ಪಂದನವನ್ನು ತೋರದವನು ಅದೇಕೋ ನಮ್ಮ ಮನೆಯ ಟ್ಯಾಕ್ಸ್ ಹೆಚ್ಚಳವನ್ನು ಅವರು ಹೆಚ್ಚಿಸಿದ ಮೇಲೆ ನೋಡಿ ನೊಂದಿದ್ದೇ ಬಂತು. ನಾನು ಈ ಸ್ಥಳೀಯ ಪ್ರಾಸೆಸ್ಸುಗಳಲ್ಲಿ ಇನ್‌ವಾಲ್ವ್ ಆಗಲೀ ಬಿಡಲೀ ಅದಕ್ಕೂ ಟ್ಯಾಕ್ಸ್ ಹೆಚ್ಚಳಕ್ಕೂ ನೇರ ಸಂಬಂಧವಿಲ್ಲದಿರಬಹುದು, ಕೊನೇಪಕ್ಷದ ಇಲ್ಲಿನ ನಿರ್ಧಾರಗಳಲ್ಲಿ ನಾನೂ ಭಾಗಿಯಾಗಬಹುದಿತ್ತೇನೋ.

ಇಲ್ಲಿಗೆ ಬಂದಂದಿನಿಂದ ಕೇವಲ ಪ್ರೊಪೆಷನಲ್ ಅಸ್ಥೆಯಿಂದಷ್ಟೇ ಅಮೇರಿಕವನ್ನು ನೋಡಿ ಅದರಲ್ಲಿ ಒಂದಾಗಿರುವ ನಾವು ಉಳಿದ - ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದರೆ, ತೊಡಗಿಸಿಕೊಂಡರೆ...ಎನ್ನುವುದು ಈ ಲೇಖನದ ಆಶಯವಷ್ಟೆ. ’ಅದು ನಮ್ಮದಲ್ಲದ ಸಮಸ್ಯೆ’ ಎಂದು ದೂರ ನಿಂತುಕೊಂಡರೆ ಸಮಸ್ಯೆಗಳೇನೂ ದೂರ ಹೋಗೋದಿಲ್ಲ. ಹುಟ್ಟಿನಿಂದ ಸಾಯುವವರೆಗೆ ಒಂದಲ್ಲ ಒಂದು ದಿನ ಅದೇ ಸಮಸ್ಯೆಯ ಸುಳಿಯಲ್ಲಿ ನೀವೂ ಸಿಕ್ಕಿ ಹಾಕಿಕೊಳ್ಳಬಹುದು, ಒಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ಅದಕ್ಕೆ ಪರಿಹಾರ ಕಂಡು ಹಿಡಿಯುವ ನಮ್ಮ ನಿಲುವು ಆ ಸಮಯಕ್ಕೆ ತಕ್ಕಂತೆ ಭಿನ್ನವಾಗಿರಬಹುದು ಅಥವಾ ನಮಗೆ ಏನು ಅನುಕೂಲವೋ ಅದನ್ನು ನಾವು ಸಮರ್ಥಿಸಿಕೊಳ್ಳಬಹುದು. ನಮ್ಮನ್ನು ಅಡರಿಕೊಳ್ಳುವ ಸಮಸ್ಯೆಗಳು ಒಂದೊಂದು ಅವಕಾಶಗಳು ಎಂದುಕೊಂಡು ಆ ಮಟ್ಟಿಗೆ ನಾವು ಏನು ಮಾಡಬಲ್ಲೆವು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಮನೆಯ ಮುಂದಿನ ಬೀದಿಯಲ್ಲಿ ನಾಯಿಯೊಂದು ಸತ್ತಿದೆ ಎಂದುಕೊಳ್ಳಿ - ಒಂದೆರಡು ದಿನಗಳಲ್ಲಿ ಅದು ಗಬ್ಬು ನಾತ ಹರಡಬಲ್ಲದು, ಅದರಿಂದ ಹರಡುವ ಕ್ರಿಮಿ ಕೀಟಗಳು ರೋಗ ರುಜಿನಗಳನ್ನು ತಂದೊಡ್ಡಬಹುದು. ಇಂತಹ ಒಂದು ಸರಳ ಸಮಸ್ಯೆಯನ್ನು ನಾವು ಹೇಗೆ ನೋಡುತ್ತೇವೆ, ಅದಕ್ಕೇನು ಉತ್ತರ ಕಂಡುಕೊಳ್ಳುತ್ತೇವೆ, ಅದಕ್ಕೆ ಒಬ್ಬೊಬ್ಬರ ಟಾಲರೆನ್ಸ್ ಒಂದೊಂದು ರೀತಿ ಇದ್ದು ಕೊನೆಗೆ ಅದು ಪರಿಹಾರಗೊಳ್ಳುವುದೋ ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿಕೊಳ್ಳಿ - ಅದೇ ರೀತಿ ನಮಗೆದುರಾಗುವ ಸಮಸ್ಯೆ-ಅವಕಾಶಗಳು ಹಾಗೇ - ಅವುಗಳಿಗೆಲ್ಲ multiple right answers ಇವೆ!