Showing posts with label ವರ್ಷಾವಲೋಕನ. Show all posts
Showing posts with label ವರ್ಷಾವಲೋಕನ. Show all posts

Friday, December 26, 2008

ಗಿರಕಿ ಹೊಡೆಯೋ ಲೇಖನಗಳು...

ಯಾಕೋ ಈ ವರ್ಷ ಆಲೋಚನೆಗಳ ಒರತೆಯಲ್ಲಿ ಬರೆಯುವಂತಹ ವಿಚಾರಗಳ ಸೆಲೆ ಉಕ್ಕಿ ಬಂದಿದ್ದೇ ಕಡಿಮೆ ಎನ್ನಬಹುದು, ಕಳೆದ ಒಂದೆರಡು ವರ್ಷಗಳಿಗೆ ಹೋಲಿಸಿದರೆ ೨೦೦೮ ರಲ್ಲಿ ಬರೆದ ಬರಹಗಳ ಪಟ್ಟಿ ಅವುಗಳ ಅರ್ಧದಷ್ಟೂ ಇಲ್ಲ ಎಂದು ಗೊತ್ತಾದ ಮೇಲಂತೂ ಏಕೆ ಹೀಗೆ ಎನ್ನುವ ಆಲೋಚನೆಗಳು ಹುಟ್ಟತೊಡಗಿದವು.

ಈ ವರ್ಷ ಜನವರಿ ೨೦ ರಂದು "ಅಂತರಂಗ-೩೦೦" ರ ಲೇಖನದಲ್ಲಿ ಬರೆದ ಮುಂದಿನ ಗುರಿ/ಒತ್ತಾಸೆಗಳೆಲ್ಲ ಇನ್ನೂ ಹಾಗೇ ಇವೆ. ಬರಹಗಳ ಸಂಖ್ಯೆ ಇಳಿಮುಖವಾದರೂ ಅವುಗಳ ಗುಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದೆಲ್ಲ ಅಂದುಕೊಂಡಿದ್ದಷ್ಟೇ ಬಂತು, ’ಅಂತರಂಗ’ದಲ್ಲಿ ಯಾವತ್ತಿದ್ದರೂ ಒಂದೇ ರೀತಿ ಬರಹಗಳು ಎಂದು ಕೆಲವು ಪ್ರಯೋಗಗಳನ್ನು ಮಾಡಿದ್ದು ಆಯ್ತು. ಇನ್ನು ಈ ಬ್ಲಾಗಿಗೆ ಪ್ರತ್ಯೇಕ ವೆಬ್‌ಸೈಟ್ ಬೇರೆ (ಕೇಡಿಗೆ); ಈ ಪುಕ್ಕಟೆ ಬ್ಲಾಗನ್ನು ಅಪ್‌ಡೇಟ್ ಮಾಡಿಕೊಂಡಿದ್ದರೆ ಸಾಲದೂ ಅಂತ ಸ್ವತಂತ್ರ ವೆಬ್‍ಸೈಟ್ ಅನ್ನು ಮ್ಯಾನೇಜ್ ಮಾಡೋ ಕಷ್ಟ ಬೇರೆ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು


’ಅಂತರಂಗ’ದಲ್ಲಿ ನೀವು ಪ್ರಕಟಿಸೋ ಬರಹದಂತಿರುವವುಗಳನ್ನು ನಾವು ನಮ್ಮ ಸೈಟ್‌ನಲ್ಲಿ ಪ್ರಕಟಿಸೋದಿಲ್ಲ ಅಂತ ಬೇರೆ ಹೇಳಿಸಿಕೊಳ್ಳಬೇಕಾಗಿ ಬಂತು - ಅದೂ ನನಗೆ ದಶಕಗಳಿಂದ ಪರಿಚಯವಿರುವ ಸಂಪಾದಕರೊಬ್ಬರಿಂದ - ಅದೂ ಈ ಲೇಖನಗಳು ಉದ್ದವಾದುವು ಈಗಿನ ಚೀಪ್ ಸ್ಟೋರೇಜ್ ಯುಗದಲ್ಲೂ ನಮ್ಮಲ್ಲಿ ನಿಮ್ಮ ಲೇಖನಗಳಿಗೆ ಸ್ಥಳಾವಕಾಶವಿಲ್ಲ ಎಂಬುದಾಗಿ - I think he was just being decent, in saying so.

***

- ಯಾಕೆ ನಮ್ಮ ಲೇಖನಗಳು ನಮ್ಮ ಮಕ್ಕಳ ಹಾಗೆ ಯಾವಾಗಲೂ ನಮ್ಮ ಸುತ್ತಲೇ ಗಿರಕಿ ಹೊಡಿತಾ ಇರ್ತವೆ?
- ಯಾಕೆ ನಮ್ಮ ಲೇಖನಗಳಲ್ಲಿ ಇನ್ನೊಬ್ಬರ ಹೃದಯಸ್ಪರ್ಶಿ ಅಂಶಗಳು ಕಡಿಮೆಯಾಗಿ ಹೋಗಿವೆ?
- ಯಾಕೆ ನಮ್ಮ ಸೃಜನಶೀಲತೆ ಅನ್ನೋದು ಮಳೆಗಾಲದಲ್ಲಿ ಮಂಡಕ್ಕಿ ಮಾರೋ ಸಾಬಿಯ ಪ್ಯಾಂಟಿನ ಹಾಗೆ ಮಂಡಿಗಿಂತ ಮೇಲೆ ಮಡಿಚಿಕೊಂಡಿದೆ?
- ನಮ್ಮ ಲೇಖನಗಳಲ್ಲಿ ಬಡತನ, ನೋವು, ಬದಲಾವಣೆಗಳಿಗೆ ಸ್ಪಂದನವೇ ಸಿಗೋದಿಲ್ಲವೆ?
- ಈ ಆನ್‌ಲೈನ್ ಮಾಧ್ಯಮಗಳ ಓದುಗರಿಗೆ ಏನು ಬೇಕೋ ಅದನ್ನು ಕೊಡೋದಕ್ಕೆ ನಮ್ಮ ಕೈಯಲ್ಲಾಗೋದಿಲ್ಲವೇನು?
- ನಮ್ಮ ವರದಿಗಳಾಗಲೀ, ನಮ್ಮ ಭಾಷಣಗಳಾಗಲೀ ಮೊನಟನಸ್ ಆಗಿ ಹೋಗೋದೇಕೆ?

****

ಆಫೀಸಿನಲ್ಲಿ ವಿಪರೀತ ಕೆಲಸ ಸಾರ್, ಜೊತೆಗೆ ಅನಿವಾಸಿತನ ಬೇರೆ. ಈ ವರ್ಷವನ್ನೇ ತೊಗೊಳ್ಳಿ, ಪ್ರತೀವಾರ ಐವತ್ತೈದು ಅರವತ್ತು ಘಂಟೆಗಳ ಕೆಲಸ ಮಾಡೋದು ನಮ್ಮ ಕರ್ಮ ಜೀವ(ನ); ಯಾವ ಪುಸ್ತಕವನ್ನೂ ಓದಿಲ್ಲ, ಯಾರೊಬ್ಬ ಸ್ನೇಹಿತರ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡಿದ ನೆನಪಿಲ್ಲ. ಹೀಗೇ ಆಗ್ತಾ ಹೋದ್ರೆ ನಮ್ಮ ಪ್ರೇರಣೆಗಳು, ಸೃಜನಶೀಲತೆ ಬದುಕಿದ ಹಾಗೇ. ಆನ್‌ಲೈನ್ ಮಾಧ್ಯಮದಲ್ಲಿ ಬೇಕಾದಷ್ಟು ಓದೋ ಹಾಗಿದ್ದರೂ ಓದೋಕೆ ಸಮಯವಿಲ್ಲವೋ ಅಥವಾ ಓದೋಕೆ ಸಾಧ್ಯವೇ ಇಲ್ಲವೋ ಅನ್ನೋ ಹಾಗೆ ಆಗಿದೆ.

ಇದಕ್ಕೆಲ್ಲ ನಮ್ಮ ಬೆಳವಣಿಗೆಯೂ ಕಾರಣ ಅನ್ನಬೇಕು. ಈ ಹಾಳಾದ ಇ-ಮೇಲ್‌ ಗಳನ್ನು ಓದೀ-ಓದಿ ಉದ್ದವಾದದ್ದನ್ನು ಬೇರೆ ಏನೂ ಓದೋಕ್ಕೇ ಸಾಧ್ಯವಿಲ್ಲವೆನ್ನುವ ಹಾಗೆ ಆಗಿದೆ. ಆಫೀಸಿನಲ್ಲಿ ಯಾರಾದರೂ ಬರೆದ ಉದ್ದವಾದ ಇ-ಮೇಲ್ ಅನ್ನೋ ಅಥವಾ ಡಾಕ್ಯುಮೆಂಟ್ ಅನ್ನೋ ಓದಿ ಅರ್ಥ ಮಾಡಿಕೊಂಡು ಉತ್ತರ ಕೊಡೋದಾಗಲೀ ಅಥವಾ ತಿದ್ದೋದಾಗಲೀ ಪೀಕ್ ಅವರ್ ನಲ್ಲಿ ಸಾಧ್ಯವೇ ಇಲ್ಲದ ಚಟುವಟಿಕೆಯಾಗಿ ಹೋಗಿದೆ. ನಾವೆಲ್ಲ (ಅಥವಾ ನಾನು) ಅಲ್ಪತೃಪ್ತರಾಗಿ ಹೋಗಿದ್ದೇವೆ, ಏನಾದರೊಂದನ್ನು ಹಿಡಿದುಕೊಂಡು ಹಠ ಸಾಧಿಸುವುದಿರಲಿ ಒಂದು ಪುಸ್ತಕಕ್ಕೆ ಅರ್ಧ ಘಂಟೆ ಮನಸ್ಸು ಕೊಡದವರಾಗಿ ಹೋಗಿದ್ದೇವೆ. ಒಂದು ಒಳ್ಳೆಯ ಪದ್ಯವನ್ನು ಓದಿ, ಒಂದು ಉತ್ತಮವಾದ ಕಾದಂಬರಿಯನ್ನು ಮೆಲುಕು ಹಾಕಿ ಜಮಾನವಾಗಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ನನ್ನ ತಿಳುವಳಿಕೆ ಸೀಮಿತವಾಗಿದೆ.

ಮೊದಲೆಲ್ಲ ಒಂದಿಷ್ಟು ಟೆಕ್ನಿಕಲ್ ಸ್ಕಿಲ್ಸ್ ಆದರೂ ಇತ್ತು - ಜಾವಾದಲ್ಲಿ ಬರೆದು ಡಿಬಿ೨ (DB2) ಡೇಟಾ ತೆಗೆದು ಅನಲೈಸ್ ಮಾಡುವುದಾಗಲೀ, ಸಿಐಸಿಎಸ್ (CICS) ನಲ್ಲಿ ಮಲ್ಟಿ ಯೂಸರ್ ಸೆಷನ್ನುಗಳನ್ನು ಕ್ರಿಯೇಟ್ ಮಾಡಿ ಅದನ್ನು ಈ ದೇಶದ ನಾನಾ ಭಾಗಗಳಿಂದ ಯೂಸರ್‌ಗಳು ಟೆಸ್ಟ್ ಮಾಡಿ ಸಾಧಿಸಿಕೊಂಡಿದ್ದಾಗಲೀ ಇವತ್ತು ಇತಿಹಾಸವಾಗಿ ಹೋಗಿದೆ. ಒಂದು ಸಣ್ಣ HTML ಟ್ಯಾಗ್‌ಗೆ ಕೂಡಾ ರೆಫೆರೆನ್ಸ್ ಬೇಕಾಗಿದೆ. ನನ್ನ ಇಂಡಷ್ಟ್ರಿ ಸ್ಕಿಲ್ಸ್ ಅನ್ನುವುದು ಏನೇ ಇದ್ದರೂ ಕರಿಮಣಿ ಸರದ ನಡುವೆ ಇರುವ ತಾಳಿಯ ಹಾಗೆ, ಈ ಕಂಪನಿಯಿಂದ ಹೊರಗೆ ಬಂದು ಮತ್ತೊಂದು ಕಂಪನಿಯ ಹಿತಾಸಕ್ತಿಯಿಂದ ನೋಡಿದರೆ ಅದಕ್ಕಷ್ಟು ಮೌಲ್ಯವಿಲ್ಲ. ಈ ಹದಿಮೂರು ವರ್ಷಗಳ ಎಕ್ಸ್‌ಪೀರಿಯನ್ಸ್ ಅನ್ನುವುದು ಎರಡೂ ಕಡೆ ಹರಿತವಾದ ಕತ್ತಿಯ ಹಾಗೆ, ಅದರ ಬಳಕೆಯ ಬಗ್ಗೆ ಹುಷಾರಾಗಿರುವುದೇ ಒಳ್ಳೆಯದು. ಮೊದಲೆಲ್ಲ ಕನ್ಸಲ್‌ಟೆಂಟ್ ಆಗಿದ್ದಾಗ ಒಂದು ಕಂಪನಿಯಿಂದ ಮತ್ತೊಂದಕ್ಕೆ ಹಾರಲು ಅನುಕೂಲವಾದ ಸ್ಕಿಲ್‌ಗಳೆಲ್ಲ ಇಂದು ಒಂದೇ ಕಂಪನಿಯಲ್ಲಿ ಇದ್ದ ಪ್ರಯುಕ್ತ ಸಾಣೆ ಹಿಡಿಯದ ಕತ್ತಿಯಾಗಿ ಹೋಗಿದೆ. ಆಫೀಸಿನಲ್ಲಿ ನಾನು ಮಾಡುವ ತಪ್ಪುಗಳು ಅವು ಹುಟ್ಟಿದ ಹಾಗೇ ಮುಚ್ಚಿಯೂ ಹೋಗುತ್ತವೆ.

***
You have to get your ass kicked once in a while... ಅಂತಾರಲ್ಲ ಹಾಗೆ. ಏನಾದರೊಂದು ಛಾಲೆಂಜ್ ಇರಬೇಕು ಬದುಕಿನಲ್ಲಿ. ಯಾವುದೋ ಕಷ್ಟಕರವಾದ ಕಾದಂಬರಿಯನ್ನು ಹತ್ತು ಸಾರಿ ಓದಿ ಆಯಾ ಪಾತ್ರಗಳ ಹಿಂದಿನ ಸಂವೇದನೆಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನವಾಗಲೀ; ಇಂದಿನ ಕಷ್ಟಕರವಾದ ಎಕಾನಮಿಯಲ್ಲಿ ಎಲ್ಲೂ ಇದ್ದು ಬದುಕಬಲ್ಲೆ ಎನ್ನುವ ಛಲಕ್ಕೆ ಬೇಕಾದ ಸ್ಕಿಲ್ಲುಗಳನ್ನು ಬೆಳೆಸಿಕೊಳ್ಳುವುದಾಗಲೀ; ನಿರಂತರವಾಗಿ ಒಂದಿಷ್ಟು ಪುಸ್ತಕಗಳನ್ನು ಅಭ್ಯಸಿಸುವ ರೂಢಿಯಾಗಲೀ ಅಥವಾ ಸ್ನೇಹಿತರ-ಸಂಬಂಧಿಕರ-ಒಡನಾಡಿಗಳಿಗೆ ಸ್ಪಂದಿಸುವ ಮನಸ್ಥಿತಿಯಾಗಲೀ...ಹೀಗೆ ಒಂದಿಷ್ಟು ತೊಡಗಿಕೊಳ್ಳುವುದು ಯೋಗ್ಯ ಅನ್ನಿಸೋದು ಈ ಹೊತ್ತಿನ ತತ್ವ. ಅಂತೆಯೇ ಈ ಮುಂದಿನ ವರ್ಷಕ್ಕೆ ಯಾವುದೇ ಗುರಿ/ಒತ್ತಾಸೆಗಳು ಇಲ್ಲದಿರುವುದೇ ಇಂದಿನ ವಿಶೇಷ!