Showing posts with label ನೆರೆಹೊರೆ. Show all posts
Showing posts with label ನೆರೆಹೊರೆ. Show all posts

Saturday, April 18, 2020

ದೊಡ್ಡ ನೋವಿನ ಮುಂದೆ...

ದೊಡ್ಡ ನೋವಿನ ಮುಂದೆ ಚಿಕ್ಕ-ಚಿಕ್ಕ ನೋವುಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ ಎನ್ನುವ ಹಾಗೆ... ಇತ್ತೀಚೆಗೆ ನಮ್ಮ ಮೆಡಿಕಲ್ ಫೆಸಿಲಿಟೀಸ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳದ್ದೇ ಹೆಚ್ಚಿನ ಪಾಲು.  ಅಂದಂತೆ ಎಲ್ಲ ಕಡೆ ಹೆಚ್ಚು ಹೆಚ್ಚು ಹಾಸಿಗೆಗಳು ಇರುವ ಆಸ್ಪತ್ರೆಗಳನ್ನು ಸಮರೋಪಾದಿಯಲ್ಲಿ ತೆರೆಯಲಾಗಿದೆ.  ದೊಡ್ಡ ಕನ್ವೆನ್ಷನ್ ಸೆಂಟರುಗಳಲ್ಲಿ ಈಗಾಗಲೇ ಅನೇಕ ರೋಗಿಗಳನ್ನು ಒಟ್ಟೊಟ್ಟಿಗೆ ಏಕಕಾಲಕ್ಕೆ ನೋಡುವಂತೆ ಮುಂಜಾಗರೂಕತೆಯನ್ನು ಕೈಗೊಳ್ಳಲಾಗಿದೆ.  ನಮ್ಮ ಹತ್ತಿರದಲ್ಲಿರುವ ನ್ಯೂ ಯಾರ್ಕ್‌ ನಗರದಲ್ಲಿ ಜಾವಿಟ್ಸ್ ಸೆಂಟರ್‌ ಅನ್ನು ಈಗಾಗಲೇ ಆಸ್ಪತ್ರೆಯಾಗಿ ಬದಲಾಯಿಸಲಾಗಿದ್ದು ಸುಮಾರು 2500 ಜನರನ್ನು ಏಕಕಾಲಕ್ಕೆ ನೋಡುವಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದರೂ ಅದರ ಕಾಲು ಭಾಗವೂ ಇನ್ನೂ ತುಂಬಿಲ್ಲ.  ಯು.ಎಸ್. ನೇವಿ  ಹಾಸ್ಪಿಟಲ್ ಶಿಪ್ "ಕಂಫರ್ಟ್" ಇನ್ನೂ ಖಾಲಿ ಇದೆ.  ಈ ನಿಟ್ಟಿನಲ್ಲಿ, ನ್ಯೂ ಯಾರ್ಕ್ ಮೇಯರ್ ಮತ್ತು ಗವರ್ನರುಗಳು ಸುಕಾ ಸುಮ್ಮನೇ ಆರ್ತನಾದ ಹೊರಡಿಸಿದರೇ? ಎನ್ನುವುದು ಇನ್ನೊಂದು ದಿನದ ಪ್ರಶ್ನೆ!

ಈ ಕೊರೋನಾ ವೈರಸ್ ಹಾವಳಿಯಿಂದ ಒಂದಂತೂ ಗ್ಯಾರಂಟಿ - ಯಾರು ಯಾರಿಗೆ ತಡೆದುಕೊಳ್ಳಬಲ್ಲ ಖಾಯಿಲೆ ಇದೆಯೋ ಅವರು ಯಾರೂ ಆಸ್ಪತ್ರೆಯ ಬಳಿ ಸುಳಿಯುತ್ತಿಲ್ಲ.  ಎಲ್ಲ ಎಲೆಕ್ಟಿವ್ ಸರ್ಜರಿಗಳು ಮುಂದೂಡಲ್ಪಟ್ಟಿವೆ.  ಒಂದು ಮಾಹಿತಿಯ ಪ್ರಕಾರ, ಕೇವಲ ಕ್ರಿಟಿಕಲ್ ಪೇಷಂಟ್‌ಗಳನ್ನು ಮಾತ್ರ ಆಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ, ಉಳಿದವರನ್ನು ಹೊರಗೇ ಟ್ರೀಟ್ ಮಾಡಿ ಮನೆಗೆ ಕಳಿಸುತ್ತಿದ್ದಾರೆ.  ಕ್ರಿಟಿಕಲ್ ಪೇಷಂಟ್ ಎಂದರೆ ಹಾರ್ಟ್‌ಅಟ್ಯಾಕ್, ಸ್ಟ್ರೋಕ್, ಮೊದಲಾದ ಜೀವಕ್ಕೆ ಅಪಾಯ ತಂದೊಡ್ಡುವ ಖಾಯಿಲೆ ಇರುವ ರೋಗಿಗಳು ಎಂದರ್ಥ.

***
ನಮ್ಮ ಆಸ್ಪತ್ರೆಗಳಿಗೆ ಮೊದಲೆಲ್ಲ ಅಂದರೆ ದಿನದಲ್ಲಿ ಒಂದಿಷ್ಟು ಮೋಟಾರು ವೆಹಿಕಲ್ ಅಫಘಾತದ ಕೇಸುಗಳು ಬರುತ್ತಿದ್ದವು.  ಎಲೆಕ್ಟಿವ್ ಸರ್ಜರಿ ಕೇಸುಗಳು ಬರುತ್ತಿದ್ದವು.  ಏನಿಲ್ಲವೆಂದರೂ "ರುಟೀನ್ ಟೆಸ್ಟ್" ಎಂದುಕೊಂಡು, ಬಂದ ಪೇಷೆಂಟುಗಳಿಗೆ ತಲೆನೋವಿಂದ ಕಾಲು ನೋವಿನವರೆಗೆ ಅನೇಕ ಟೆಸ್ಟ್‌ಗಳನ್ನು ಮಾಡುವ ವ್ಯವಸ್ಥೆ ಇತ್ತು.  ಅದನ್ನು ಅವಲಂಬಿಸಿ ದೊಡ್ಡದೊಂದು ಬಿಸಿನೆಸ್ ವಾತಾವರಣ ನಿರ್ಮಾಣಗೊಂಡಿತ್ತು.

ಈ ಕೊರೋನಾ ವೈರಸ್‌ನ ದೆಸೆಯಿಂದಾಗಿ ಅವೆಲ್ಲ ಈಗ ಕಡಿಮೆಯಾಗಿದೆ.  ಲಾಭ ಮಾಡುವುದೇ ತಮ್ಮ ಧ್ಯೋತಕ ಎಂಬಂತೆ (ಭಾರತದಲ್ಲಿ) ನಾಯಿಕೊಡೆಗಳಂತೆ ಎದ್ದು ನಿಂತ ಅನೇಕ ನರ್ಸಿಂಗ್ ಹೋಮ್‌ಗಳು ಇವತ್ತು ಖಾಲಿಯಾಗಿವೆ.  ಅದೇ ರೀತಿ ಅಮೇರಿಕದಲ್ಲೂ ಸಹ, ಎಲ್ಲ ಕಡೆ ಕೋವಿಡ್ ಮಯವಾದ್ದರಿಂದ ಆಸ್ಪತ್ರೆಗಳು ಹಾಗೂ ಅದಕ್ಕೆ ಹೊಂದಿಕೊಂಡ ಹಲವಾರು ಸರ್ವಿಸ್ ಪ್ರೊವೈಡರುಗಳಿಗೆ ಅವರ ಆದಾಯಕ್ಕೇ ಸಂಚಕಾರ ಬಂದಿದೆ.

ಇನ್ನು ಕೋವಿಡ್ ಗಲಾಟೆ ಭರಾಟೆ ಎಲ್ಲ ಮುಗಿದ ಮೇಲೆ, ನಮ್ಮ ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಧೀರ್ಘಕಾಲೀನವಾಗಿ ಏನೇನು ಪರಿಣಾಮಗಳು ಬೀರುತ್ತವೆಯೋ? ಅವನ್ನೆಲ್ಲ ನಾವು ಕಾದು ನೋಡಬೇಕು.

ಒಟ್ಟಿನಲ್ಲಿ, ಕೋವಿಡ್ ನಮ್ಮನ್ನು ಕೊಳ್ಳುಬಾಕತನದಿಂದ ದೂರವಿರಿಸಿ, ಉತ್ತಮ ಹಾಗೂ ಸಮತೋಲಿತ ಆಹಾರ ಸೇವನೆಯತ್ತ ಗಮನ ಕೊಡುವಂತೆ ಮಾಡಿ, ನಮ್ಮ ನಮ್ಮ ಸಂಬಂಧಗಳ ಸುಧಾರಣೆಗೆ ಆದ್ಯತೆಯನ್ನು ಹೆಚ್ಚಿಸಿ, ಇನ್ನೆಂದಿಗೂ ನಮ್ಮ ಸರ್ವತೋಮುಖ ಆರೋಗ್ಯವನ್ನು ನಾವೆಲ್ಲ ಜೋಪಾನ ಮಾಡಿಕೊಳ್ಳುವಂತೆ ಪಾಠ ಕಲಿಸಿದೆಯೆಲ್ಲ... ಅದರಿಂದಲಾದರೂ ನಮ್ಮ ಹೆಲ್ತ್‌ಕೇರ್ ವ್ಯವಸ್ಥೆ ಎಲ್ಲರ ಒಳಿತನ್ನು ಗಮನದಲ್ಲಿಟ್ಟುಕೊಂಡು ಸುಧಾರಿಸಲಿ!

Friday, April 10, 2020

ದಿನಗಳು ಬೇರೆ, ದಿನಚರಿ ಒಂದೇ...

ನಮಗೂ ನೈಬರ್ಸ್ ಇದ್ದಾರೆ ಅಂತ ಅನ್ನಿಸಿದ್ದು ಇವತ್ತು ಬೆಳಿಗ್ಗೆ ಎದ್ದ ನಂತರ ನರಿ ಮುಖ ನೋಡಿದ ಮೇಲೆ.  ಮನೆಯ ಬಾಗಿಲನ್ನು ತೆಗೆಯಲು ಹೊರಗೆ ಬಂದು ನೋಡಿದರೆ ನಮ್ಮ ಯಾರ್ಡ್‌ನಲ್ಲಿ ಒಂದು ನರಿ, ಸ್ವಲ್ಪ ದೂರದಲ್ಲಿ ಎರಡು ಕಾಡು ಟರ್ಕಿಗಳು ಹಾಗೂ ಕೆಲವು ಜಿಂಕೆಗಳು ಕಂಡು ಬಂದವು. ಇವೆಲ್ಲ ನಮ್ಮ ಮನೆಯ ಸುತ್ತ ಇರೋ ಅಂತ ಪ್ರಾಣಿಗಳೇ, ಆದರೆ ನಮ್ಮ ನಮ್ಮ ವ್ಯಸ್ತ ಬದುಕಿನಲ್ಲಿ ನಮಗೆ ಅವುಗಳನ್ನು ನೋಡಲಾಗೋದಿಲ್ಲ ಅಷ್ಟೇ. ’ಅಯ್ಯೋ, ನಮ್ಮ ಮನೆ ಹತ್ರ ಬಂದಿದ್ದಾವೆ!’ ಎಂದು ಆಶ್ಚರ್ಯ ಸೂಚಿಸಿದ ನನ್ನ ಮಗಳಿಗೆ ಹೇಳಿದೆ,’ ನಾವು ಅವುಗಳ ಮನೆಯ ಹತ್ತಿರ ಬಂದಿದ್ದೇವೆಯೇ ವಿನಾ ಅವುಗಳು ನಮ್ಮ ಮನೆ ಬಳಿ ಅಲ್ಲ’, ಎಂದು. ಅವಳು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡು ಬಂದಳು.

ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ.  ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ.  ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ.  ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ.  ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು.  ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ.  ಆದರೆ ಈಗೆಲ್ಲ ಬದಲಾಗಿದೆ.

ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು.  ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ.  ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್‌ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ.  ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್‌ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ.  ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ.  ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.

ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ.  ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.

ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ.  ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು.  ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು.  ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ.  ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ.  ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!

ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು.  ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು.  ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು.  ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ.  ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!

Tuesday, February 09, 2010

ಬೀಳದೇ ಏಳೋದಾದರೂ ಹೇಗೆ?

ಹೀಗೇ ಒಂದು ಛಳಿಗಾಲದ ದಿನ, ಮಧ್ಯಾಹ್ನ ಆಗಿ ಸಂಜೆ ನಾಲ್ಕು ಘಂಟೆ ಹೊತ್ತಿಗೆಲ್ಲಾ ಅದನ್ನು ದಿನ ಎನ್ನಬೇಕೋ, ಕತ್ತಲು ಎನ್ನಬೇಕೋ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದಾದಂತಹ ಮಸುಕು ಮುಸುಕಿದ ಮುಸ್ಸಂಜೆ. ಈಗಲೋ ಆಗಲೋ ಉಸಿರು ಕಳೆದುಕೊಂಡು ಹೋಗೇ ಬಿಟ್ಟ ಎನ್ನುವ ಸೂರ್ಯನನ್ನು ಸಂತೈಸುವ ಹಾಗೆ ಅಲ್ಲಲ್ಲಿ ಬಿದ್ದುಕೊಂಡು ಛಳಿಗೆ ಗಟ್ಟಿಯಾಗಿ ಮುಖ ಸಿಂಡರಿಸಿಕೊಂಡ ಹಿಮದ ತುಕುಡಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಬೆಳಕಿನ ಸೈನಿಕರ ಉತ್ಸಾಹ ಕತ್ತಲಿನ ಶತ್ರುಗಳ ಎದುರು ಸಂಪೂರ್ಣವಾಗಿ ಕಳೆದು ಹೋಗದ ಹಾಗೆ ಕಾಪಾಡಿಕೊಂಡಿದ್ದವು. ಯಾವತ್ತಿನಂತೆ ರಸ್ತೆಗಳು ಊರ್ಧ್ವಮುಖಿಗಳಾಗಿ ತಮ್ಮನ್ನು ತಾವು ಸೇವೆಗೆ ಒಪ್ಪಿಸಿಕೊಂಡಿದ್ದರೂ ಕಪ್ಪಗಿನ ರಸ್ತೆಗಳ ಮೇಲೆ ಬೂದಿ ಬಳಿದುಕೊಂಡ ಹಾಗಿನ ಛಾಯೆ ಯಾಕೋ ಮುಂಬರುವ ಕೆಟ್ಟದ್ದನ್ನು ತಾವು ಬಲ್ಲೆವು ಎಂಬಂತೆ ಅಜ್ಜ-ಮುತ್ತಾತರ ಭಂಗಿಯಲ್ಲಿ ಇದ್ದವು. ನಮ್ಮ ಮನೆಯ ಡ್ರೈವ್‌ ವೇ ತನ್ನ ಮೇಲಿನ ಅರ್ಧ ಇಂಚು ದಪ್ಪಗಿನ ಐಸ್ ಲೇಯರ್‌ನ್ ಅವಶೇಷಗಳಡಿಯಲ್ಲಿ ಸಮಾಧಿಯಾಗಿತ್ತು, ನಮ್ಮ ಮನೆಯ ಮೇಲ್ ಬಾಕ್ಸ್ Mohawk Indian ಹೇರ್ ಸ್ಟೈಲ್ ಮಾಡಿಕೊಂಡು ತನ್ನ ಮೇಲೆ ಒಂದು ರೀತಿಯ ಚೂಪನೆ ಐಸ್ ಪದರವನ್ನು ನಿರ್ಮಿಸಿಕೊಂಡಿತ್ತು, ಅದರ ಬುಡದಲ್ಲಿ ಲಾಲಿ ಪಾಪ್ ನೆಕ್ಕಿ ಬಣ್ಣದ ಜೊಲ್ಲು ಸುರಿಸುವ ಮುಗ್ಧ ಮಗುವಿನಂತೆ ಬಿಸಿಲಿಗೆ ಕರಗಿ ಐಸ್ ನೀರಾಗುತ್ತ ನೀರಾಗುತ್ತ ಹನಿಗಳು ಅಲ್ಲಲ್ಲಿ ಹೆಪ್ಪು ಕಟ್ಟಿಕೊಂಡು ಮೇಲ್ ಬಾಕ್ಸ್ ಸಂರಕ್ಷರ ಹಾಗಿನ ಚೂಪುಗಳನ್ನು ನಿರ್ಮಿಸಿಕೊಂಡಿದ್ದವು.

ಬ್ಲ್ಮೂಮ್‌ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು, ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು. ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ’ಬಿಸಿಲೇ ಇರಲಿ, ಮಳೆಯೇ ಇರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ…’ ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು, ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ. ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು, ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್‌ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು.

ಮನೆಯ ಟ್ರ್ಯಾಷ್ ಕ್ಯಾನುಗಳನ್ನು ಎತ್ತಿಡುತ್ತಾ ನಾನು ’ನಿಧಾನವಾಗಿ ನಡೆಯಬೇಕು, ಬಿದ್ದರೆ ಅಷ್ಟೇ ಗತಿ…’ ಎಂದು ಏನೇನೆಲ್ಲ ಮನಸ್ಸಿನ್ನಲ್ಲಿ ಅಂದುಕೊಂಡರೂ, ಅಂದುಕೊಂಡವುಗಳು ಪ್ರಯೋಜನಕ್ಕೆ ಬಾರವು ಏನಿದ್ದರೂ ಕ್ರಿಯಾಶೀಲತೆ ಮುಖ್ಯ ಎನ್ನುವ ವಿಧಿ ಕಣ್ಣು ತೆಗೆದು ಕಣ್ಣು ಬಿಡುವಷ್ಟರಲ್ಲಿ ನನ್ನ ಕಾಲುಗಳು ತಲೆಗಿಂತ ಮೊದಲು ಹೋಗತೊಡಗಿ ದೊಪ್ಪನೆ ಜಾರಿ ಬಿದ್ದದ್ದಾಯಿತು. ಕೈ ಊರಿ ಎದ್ದು, ಮೈ ಕೈ ಕೊಡವಿಕೊಂಡು ಸುಧಾರಿಸಿಕೊಳ್ಳೂತ್ತಾ ಸದ್ಯ ಯಾವುದೇ ಎಲುಬು ಮುರಿಯಲಿಲ್ಲ ಎಂದು ಸಮಾಧಾನ ಪಡುವಂತಾಯಿತು. ಕತ್ತಲಿನ ದಯೆಗೆ ನಾನು ನೆಲಕ್ಕೆ ಅಪ್ಪಳಿಸಿದ ದೃಷ್ಯ ಜನಜನಿತವಾಗಲಿಲ್ಲ. ನೆಲದಲ್ಲಿನ ಐಸ್ ಪದರ ನಮಗೇನೂ ಆಗಿಲ್ಲ ಎಂದು ಬೀಗಿದಂತೆ ಕಾಣಿಸಿತು. ನಾನು ಚೆಲ್ಲಾ ಪಿಲ್ಲಿಯಾದ ಟ್ರ್ಯಾಷ್ ಕ್ಯಾನ್‌ಗಳನ್ನು ಮತ್ತೆ ಎತ್ತಿಟ್ಟು ಕೆಲಸ ಮುಂದುವರೆಸಿದೆ.

ಈ ಏಳು-ಬೀಳುಗಳು ಸಹಜ, ಆದರೆ ವಯಸ್ಸಾಗುತ್ತಾ ಬಂದ ಹಾಗೆ ಬೀಳುಗಳ ಬಗ್ಗೆ ಗಮನಕೊಡಬೇಕಾಗುತ್ತದೆ, ಎಲ್ಲ ಬೀಳುಗಳೂ ಏಳುಗಳಲ್ಲಿ ಕೊನೆಯಾಗಬೇಕು ಎಂದೇನೂ ಇಲ್ಲ. ಬಹಳ ಸರಳವಾದ ಸಿದ್ಧಾಂತ, ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದು ಸರಿ, ಆದರೆ ಹೆಚ್ಚಿನ ರಿಟರ್ನ್ ಬಯಸಿದಂತೆ ಅಲ್ಲಿ ರಿಸ್ಕ್ ಹೆಚ್ಚಾಗುತ್ತದೆ, ಎಲ್ಲರಿಗೂ ಎಲ್ಲ ರಿಸ್ಕ್ ಟೇಕಿಂಗ್ ಸ್ಟ್ರಾಟೆಜಿ ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸೇಫ್ಟಿ ಫರ್ಸ್ಟ್ ಎಂದುಕೊಂಡು ಯಾವುದು ನಮ್ಮ ಹಿತರಕ್ಷಣೆಯನ್ನು ಮಾಡಬಹುದೋ ಅಂತಹ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಇವೆಲ್ಲ ಗುಡ್ ಎಕನಾಮಿಕ್ಸ್ ಇಂಡಿಕೇಟರುಗಳು, ಹೂಡಿಕೆಯ ಮೂಲಭೂತ ಅಂಶಗಳು – ಇವುಗಳ ಬಗ್ಗೆ ಅದೆಷ್ಟೇ ಪಬ್ಲಿಷ್ ಆಗಿದ್ದರೂ ಸಹ ಬೀಳುವವರು ಮಾತ್ರ ಕಡಿಮೆಯಾಗೋದಿಲ್ಲ. ಅದರಲ್ಲೂ ನನ್ನಂತಹವರು ಎಲ್ಲವನ್ನು ತಮ್ಮಷ್ಟಕ್ಕೇ ತಾವೇ ಅನುಭವಿಸಿ ನೋಡುತ್ತೇವೆ ಎಂದು ಕಂಕಣ ತೊಟ್ಟುಕೊಂಡಿರುವಾಗ…ಯಾವ ಉಪದೇಶ ಎಲ್ಲಿಯ ಲೆಕ್ಕ ಬಿಡಿ. ಬೀಳದೇ ಏಳೋದಾದರೂ ಹೇಗೆ? ಒಮ್ಮೆ ಬಿದ್ದ ಅನುಭವದ ಲೆಕ್ಕಕ್ಕೆ ಮತ್ತೆ-ಮತ್ತೆ ಮೇಲೆ ಹೋಗುವ ರಿಯಾಯತಿ ಸಿಗಬಹುದೇ? ಬಿದ್ದರೆ ಮಾತ್ರ ಏಳಲು ಬಿಡುತ್ತೇನೆ ಎನ್ನುವ ಆಟದ ನಿಯಮಗಳನ್ನು ಯಾರು ಬರೆದವರು? ಅದನ್ನೇಕೆ ನಾವು ಒಪ್ಪಿಕೊಳ್ಳಬೇಕು? ಈ ಒಪ್ಪಿಕೊಳ್ಳದ ನಿಯಮಕ್ಕೆ ಬೀಳುವ-ಏಳುವ ಅನುಪಾತಗಳನ್ನಾದರೂ ಸಮತೂಕ ಮಾಡಬೇಕು ಎನ್ನುವ ಹಂಬಲವೇಕಿಲ್ಲ? ಕೆಟ್ಟ ಮೇಲೆ ಬುದ್ದಿ ಬಂದದ್ದು ಎಲ್ಲಿ ಹೋಯಿತು, ಅದು ಮತ್ತೆ-ಮತ್ತೆ ನಮ್ಮನ್ನು ಬೀಳದಂತೆ ತಡೆಹಿಡಿಯೋದರಲ್ಲಿ ವಿಫಲವಾಗೋದೇಕೆ?

ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ. ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ. ಇವತ್ತಿಲ್ಲದಿದ್ದರೆ ನಾಳೆ, ಇಂದಲ್ಲದಿದ್ದರೆ ಮುಂದೆ ಎನ್ನುವ ಆಶಾವಾದ ತಿಪ್ಪೆ ಸಾರುವ ಸಗಣಿಯಾಗುತ್ತದೆ. ಮುಂದಿನ ಜನ್ಮದಲ್ಲಿ ಮಾಡಿದರೆ ಆಯಿತು ಎನ್ನುವುದು ನನಗದು ಬೇಕೇ ಬೇಕು ಎಂದು ಹಠ ಹಿಡಿದ ಮಗುವಿಗೆ ನಾಳೆ ಕೊಡುತ್ತೇನೆ ಎಂದು ಸಾಂತ್ವನ ಹೇಳುವ ಒಣ ತತ್ವವಾಗುತ್ತದೆ. ಏನೆಲ್ಲವನ್ನು ಮಾಡಬೇಕು ಎನ್ನುವ ಉನ್ಮಾದ ಏನೂ ಮಾಡಿಲ್ಲವಲ್ಲ ಎನ್ನುವ ಉದ್ವೇಗದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹದ ನೀರಿನ ಒಂದು ಭಾಗವಾಗುತ್ತದೆ. ಅವರವರ ತೂಕಕ್ಕೆ ಅವರವರ ಸಾಮರ್ಥ್ಯಕ್ಕೆ ಬೀಳದೇ ಎದ್ದೋ ಅಥವಾ ಎದ್ದು ಬಿದ್ದೋ ನೆಲೆ ನಿಲ್ಲಿಸುವ ಗುರುತ್ವಾಕರ್ಷಣ ಶಕ್ತಿ ಈ ಹೊತ್ತಿನ ತತ್ವದ ಮಹಾ ಲೆವೆಲ್ಲರ್ ಆಗಿಬಿಡುತ್ತದೆ.

Thursday, October 01, 2009

ಕ್ರಿಕೆಟ್ ಕ್ಯಾಪ್ಟನ್ ಕಲಿತ ಪಾಠ

ಒಮ್ಮೆ ನಮ್ಮ ಹೈ ಸ್ಕೂಲು ವಿದ್ಯಾರ್ಥಿಗಳಲ್ಲೇ ಎರಡು ತಂಡಗಳನ್ನು ಮಾಡಿ ಒಂದು ಕ್ರಿಕೆಟ್ ಮ್ಯಾಚ್ ನಡೆಸುವ ಇರಾದೆ ನಮ್ಮ ಪಿ.ಇ. ಮೇಷ್ಟ್ರಿಗೆ ಇದ್ದಿತ್ತು. ಕ್ರಿಕೆಟ್ ಟೀಮಿನ ಮುಖ್ಯಸ್ಥನಾಗಿ ಆ ಜವಾಬ್ದಾರಿ ನನಗೇ ಬಂತು. ಆಸಕ್ತಿ ಇದ್ದ ಸಹಪಾಠಿಗಳನ್ನು ಸೇರಿಸಿಕೊಂಡು, ಅವರೆಲ್ಲರಿಂದ ಒಂದೊಂದು ರುಪಾಯಿ ಶುಲ್ಕ ವಸೂಲು ಮಾಡಿಕೊಂಡು ಕೊನೆಗೆ ಎರಡು ತಂಡಗಳನ್ನಾಗಿ ಮಾಡುವಾಗ ಆ ವಯಸ್ಸಿಗೆ ಅದು ದೊಡ್ಡ ಕೆಲಸವಾಗಿರಬೇಕು. ಈ ಎರಡು ತಂಡಗಳಲ್ಲಿ ಒಂದಕ್ಕೆ ನಾನು ಕ್ಯಾಪ್ಟನ್, ಮತ್ತೊಂದಕ್ಕೆ ನನ್ನ ಸಹಪಾಠಿಯೊಬ್ಬ. ಕೊನೆಯಲ್ಲಿ ಮ್ಯಾಚ್ ದಿನ ಹತ್ತಿರ ಬಂದಾಗ ಅದೂ ನಮ್ಮ ತಂಡ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಂಪೈರ್ ಒಂದು ಫೌಲ್ ಕಾಲ್ ಕೊಟ್ಟರು. ಆ ಸಮಯದಲ್ಲಿ ಎಣಿಸಲಾಗಿ ಫೀಲ್ಡಿಂಗ್ ಮಾಡುತ್ತಿದ್ದವರಲ್ಲಿ ಬೌಲರ್ ಕೀಪರ್ ಎಲ್ಲರನ್ನೂ ಸೇರಿಸಿಕೊಂಡು ಹದಿನಾಲ್ಕು ಜನ ಫೀಲ್ಡಿಂಗ್ ಮಾಡುತ್ತಿದ್ದೆವು, ಆದರೆ ನಿಯಮದ ಪ್ರಕಾರ ಹನ್ನೊಂದು ಜನ ಮಾತ್ರ ಫೀಲ್ಡಿಂಗ್ ಮಾಡಬೇಕಿತ್ತು.

ಆಗ ಅದು ದೊಡ್ಡ ಪ್ರಮಾದ, ಮ್ಯಾಚ್ ಸಂಬಂಧ ಅದಕ್ಕೆ ತಕ್ಕ ಬೆಲೆಯನ್ನು ನಾನು ತೆರಬೇಕಾಯ್ತು, ಜೊತೆಗೆ ನನ್ನ ಸಹಪಾಠಿಗಳ ಎದುರಿಗೆ ಹಾಗೆ ಅವರ ಎದುರಲ್ಲಿ ತಂಡವನ್ನು ಸರಿಯಾಗಿ ಮ್ಯಾನೇಜ್ ಮಾಡದಿದ್ದುದಕ್ಕೆ ಅಪಹಾಸ್ಯಕ್ಕೂ ಗುರಿಯಾಗಬೇಕಾಗಿ ಬಂತು. ನಾವೆಲ್ಲ ಇಲ್ಲಿಗೆ ಬಂದು ಕನ್ನಡ ಟಿವಿ ಸೀರಿಯಲ್ಲ್ ನಲ್ಲಿ ನೋಡಿದ ಹಾಗೆ ಅಲ್ಲಿನವರಿಗೆ (ಅಂದರೆ ಭಾರತದಲ್ಲಿ) ಈತರಹದ ಸಣ್ಣ-ಪುಟ್ಟ ಘಟನೆಗಳು ಬಹಳ ದೊಡ್ಡವಾಗಿ ಹೋಗುತ್ತವೆ, ಸಹಪಾಠಿಗಳೊಡನೆ, ನೆರೆಹೊರೆಯವರೊಂದಿಗೆ ಮಾನ-ಮರ್ಯಾದೆಯ ಪ್ರಶ್ನೆಯಾಗಿ ಬಿಡುತ್ತದೆ. ನನಗೂ ಅಂದು ಹಾಗಿದ್ದರಿಂದಲೇ ಎರಡು ದಶಕಗಳ ನಂತರ ಇವತ್ತಿಗೂ ಅದು ನನ್ನ ಸ್ಮರಣಪಠಲದಲ್ಲಿರೋದು ಅಂದರೆ ತಪ್ಪೇನಿಲ್ಲ.

ಆದದ್ದಿಷ್ಟೇ: ಯಾರು ಯಾರು ಕ್ರಿಕೇಟ್ ತಂಡಕ್ಕೆ ಸೇರಿಕೊಳ್ಳಬೇಕು ಎಂದುಕೊಂಡಿದ್ದರೋ ಅವರೆಲ್ಲ ಒಂದೊಂದು ರುಪಾಯಿ ಸಲ್ಲಿಸಿ ತಮ್ಮ ಹೆಸರನ್ನು ನನ್ನ ಬಳಿ ಬರೆಸಿಕೊಂಡಿದ್ದರು. ಟೀಮಿಗೆ ಹನ್ನೊಂದು ಜನ, ಒಂದಿಬ್ಬರು ಬ್ಯಾಕ್‌ಅಪ್ ಜನರನ್ನು ಬಿಟ್ಟರೆ ಉಳಿದವರಿಗೆ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇರುವಾಗ ಉತ್ಸಾಹಿ ಸಹಪಾಠಿಗಳ ಪಟ್ಟಿಯನ್ನು ಕಂಟ್ರೋಲ್ ಮಾಡಿ ಅವರೆಲ್ಲರಿಗೂ ಇತಿ-ಮಿತಿ ಹಾಗೂ ಅವರು ಆಟದಲ್ಲಿ ಆಡುವ ಅವಕಾಶ ಹಾಗೂ ನಾವು ಗೆಲ್ಲುವ ಸಾಧ್ಯತೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿತ್ತು. ಜೊತೆಗೆ ಅಗತ್ಯಕ್ಕಿಂತ ಹೆಚ್ಚಿನ ಜನ ಆಸಕ್ತಿ ತೋರಿಸಿದಾಗ ಯಾರು ಯಾರು ತಂಡಲಿದ್ದಾರೆ, ಯಾರಿಲ್ಲ ಎನ್ನುವುದನ್ನು ಸರಿಯಾಗಿ ಬಿಡಿಸಿ ಹೇಳಬೇಕಾಗಿತ್ತು ಹಾಗೂ ಟೀಮುಗಳಲ್ಲಿ ಸೆಲೆಕ್ಟ್ ಆಗದವರ ಹಣವನ್ನು ಹಿಂತಿರುಗಿಸಿ ಕೊಡಬೇಕಾಗಿತ್ತು. ಇದೆಲ್ಲವನ್ನು ನಾನು ಮಾಡಬೇಕಿತ್ತೋ, ನಮ್ಮ ಮೇಷ್ಟ್ರು ಮಾಡಬೇಕಿತ್ತೋ ಅನ್ನುವುದು ಅಷ್ಟೊಂದು ಸರಿಯಾಗಿ ನೆನಪಿಲ್ಲ. ಆದರೆ ಇವೆಲ್ಲಕ್ಕೂ ನನ್ನ ಹೊಣೆಗಾರಿಕೆಯನ್ನು ಗುರುತಿಸಿಕೊಂಡು ಅಂದು ಕಲಿತದ್ದನ್ನು ನಾನು ಯಾವತ್ತೂ ಮರೆಯಲಾರದ ಪಾಠ ಎಂದೇ ನಾನು ಈ ಘಟನೆಯನ್ನು ಗುರುತಿಸಿಕೊಳ್ಳೋದು.

ಈಗ ನನಗಿರುವ ಕೆಲಸದ ಚೌಕಟ್ಟಿನಲ್ಲಿ ಪ್ರತಿದಿನವೂ ಮಾತನಾಡುತ್ತೇವೆ - ಅವೇ ರೆಸ್ಪಾನ್ಸಿಬಿಲಿಟಿ, ಅಕೌಂಟೆಬಿಲಿಟಿ, ಲೀಡರ್‌ಶಿಪ್, ಇನಿಷಿಯೇಟಿವ್ - ಮೊದಲಾದ ಪದಗಳು ಪುಂಖಾನುಪುಂಖವಾಗಿ ಬಳಕೆಯಾಗುತ್ತವೆ. ಒಂದು ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುವಾಗ ಒಂದು ಸಂಸ್ಕೃತಿಯ ಚೌಕಟ್ಟಿನಲ್ಲಿ ದುಡಿಯುವಾಗ ನಾವು ಅಂದುಕೊಂಡಂತೆ ಮಾಡುವುದಕ್ಕಿಂತ ಇತರರ ಗವರ್ನೆನ್ಸ್‌ಗೆ ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ. ಈ ವಿಚಾರಗಳನ್ನು ನಾವು ನಮ್ಮ ಮುಖ್ಯ ಕೆಲಸಕ್ಕೂ ಹಾಗೂ ವಾಲೆಂಟಿಯರ್ ಆಗಿ ಮಾಡುವ ಕೆಲಸಗಳಿಗೂ ಅನ್ವಯಿಸಬಹುದು. ಉದಾಹರಣೆಗೆ ಯಾವುದೋ ಒಂದು ಕಮಿಟಿಯನ್ನು ಹುಟ್ಟು ಹಾಕಬೇಕಾಗಿ ಬಂದಿದೆಯೆಂದುಕೊಳ್ಳಿ, ಯಾರನ್ನು ಆಯ್ದುಕೊಳ್ಳುತ್ತೀರಿ, ಮತ್ತು ಏಕೆ? ಹೀಗಿರುವ ಆಯ್ಕೆಯ ಹಿಂದಿರುವ ರೂಪುರೇಶೆಗಳೇನು? ಯಾವ ನಿಯಮಗಳ ಅಡಿಯಲ್ಲಿ ಇವು ನಡೆಯುತ್ತವೆ? ಯಾವುದಾದರೂ ಇನ್‌ಫ್ಲುಯೆನ್ಸ್‌ಗೆ ಒಳಗಾಗುತ್ತೀರೋ, ಅಥವಾ ಅವುಗಳಿಂದ ಹೇಗೆ ದೂರವಿರಲು ಪ್ರಯತ್ನಿಸುತ್ತೀರಿ? ನಿಮ್ಮಲ್ಲೇ ಮನೆ ಮಾಡಿಕೊಂಡಿರುವ ಸ್ಟೀರಿಯೋಟೈಪ್‌ಗಳು ನೀವು ಕೈಗೊಂಡ ನಿರ್ಧಾರಗಳ ಮೇಲೆ ಯಾವ ಪರಿಣಾಮ ಬೀರುತ್ತವೆ? ಇತ್ಯಾದಿ.

ನಾವು ಅಂದು ಬಡ ಹೈ ಸ್ಕೂಲುಗಳಲ್ಲಿ ಓದುತ್ತಿದ್ದೆವು, ಸಾರ್ವಜನಿಕ ಹೈ ಸ್ಕೂಲುಗಳ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ಸಂಪನ್ಮೂಲಗಳಿಗೂ ಕೊರತೆ ಇತ್ತು. ಅಂದು ಯಾರಾದರೊಬ್ಬರು ತಂಡವನ್ನು ನಿರ್ಮಿಸುವ ಸೂಕ್ಷತೆಗಳ ಬಗ್ಗೆ ತಿಳಿಸಿ ಹೇಳಿದ್ದರೆ ಅಥವಾ ನಾನು ಹೈ ಸ್ಕೂಲು ಕ್ರಿಕೆಟ್ ತಂಡ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡುವಾಗ ಮಾರ್ಗದರ್ಶನ ನೀಡಿದ್ದರೆ...ಹೀಗೆ ಅನೇಕ ’ರೆ’ಗಳನ್ನು ಇಂದು ಯೋಚಿಸಿಕೊಂಡು ನಗು ಬರುತ್ತದೆ. ಒಂದಂತೂ ನಿಜ, ಲೀಡರ್‌ಶಿಪ್, ಮ್ಯಾನೇಜ್‌ಮೆಂಟ್, ಆರ್ಗನೈಜೇಶನ್ ಮೊದಲಾದ ಸಮೂಹ ಸಂಬಂಧಿ ಪ್ರಕ್ರಿಯೆಗಳು ಅಮೇರಿಕಕ್ಕೆ ಮಾತ್ರ ಸೀಮಿತವಾಗಿಲ್ಲ ಅಲ್ಲದೇ ಅವು ಸಂಪನ್ಮೂಲಗಳು ಇದ್ದಲ್ಲಿ ಮಾತ್ರ ಹುಟ್ಟಿ ಬೆಳೆಯಬೇಕೆಂದೇನೂ ಇಲ್ಲ. ಎಲ್ಲರಿಗೂ ಅವರ ಜೀವನಕ್ರಮಕ್ಕನುಸಾರವಾಗಿ ಅವರ ಸವಾಲುಗಳನ್ನು ಸಿಕ್ಕೇ ಸಿಗುತ್ತವೆ, ಅವುಗಳನ್ನು ಹೇಗೆ ನಿಭಾಯಿಸಬಲ್ಲೆವು ಎಂಬುದರ ಹಾಸುಹೊಕ್ಕಾಗಿ ಇರುವುದೇ ಅವರವರ ಶಕ್ತಿ. ನಮಗೆ ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನೇ ನಾವು ಅವಲೋಕಿಸುತ್ತಾ ಬಂದರೆ ಒಂದು ನಿರ್ಣಯವನ್ನು ಅನೇಕ ಮಜಲುಗಳಲ್ಲಿ ಹೇಗೆ ನೋಡಬಹುದೋ ಹಾಗೇ ನಮಗೆ ವಹಿಸಿದ ಕೆಲಸಗಳ ಫಲಿತಾಂಶ ಕೂಡಾ.

ಪ್ರಾಕ್ಟಿಕಲ್ಲಾಗಿ ಆಲೋಚಿಸಬೇಕು ಮತ್ತು ಹಾಗೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಒಂದು ಕಡೆ, ಅದಕ್ಕೆ ವಿರುದ್ಧವಾಗಿ ಎಮೋಷನಲ್ಲಾಗಿ ಯೋಚಿಸಿ ಇನ್ಯಾವುದೋ ಮಾನದಂಡಗಳಿಗೆ ಒಳಪಟ್ಟೋ ಪಡೆದೆಯೋ ನಾವು ನಡೆಸಿಕೊಂಡು ಬರುವ ಕೆಲಸ ಕಾರ್ಯಗಳು ಹಾಗೂ ಅವುಗಳ ದೂರದ ಪರಿಣಾಮಗಳು ಮತ್ತೊಂದು ಕಡೆ.

Friday, August 14, 2009

ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ

’ಬಹಳ ಕಷ್ಟಾ ಸ್ವಾಮಿ, ಇತ್ತೀಚೆಗೆ’. ಅನ್ನೋ ಮಾತು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಕೆಲಸ ಕಳೆದುಕೊಂಡವರ ಬಗ್ಗೆ, ಮನೆಗಳ ಬೆಲೆ ಕುಸಿದು ಮಾರಲೂ ಆಗದೇ ಅವುಗಳ ಸಾಲವನ್ನು ಕಟ್ಟಲೂ ಆಗದೇ ಕೊರಗುವವರ ಬಗ್ಗೆ, ಒಂದೇ ಮನೆಯಲ್ಲಿ ಇತ್ತೀಚೆಗಷ್ಟೇ ಕಾಲೇಜು ಮುಗಿಸಿದ ಕೆಲಸ ಹುಡುಕುತ್ತಿರುವ ಮಕ್ಕಳ ಜೊತೆಗೆ ಪೋಷಕರೂ ಕೆಲಸ ಹುಡುಕುತ್ತಿರುವುದರ ಬಗ್ಗೆ, ಇನ್ನೇನು ನಿವೃತ್ತರಾಗಬೇಕು ಎನ್ನುಕೊಳ್ಳುವವರು ಮತ್ತಿನ್ನೊಂದಿಷ್ಟು ವರ್ಷಗಳ ಕಾಲ ಕೆಲಸ ಮಾಡಲೇ ಬೇಕು ಎನ್ನುವುದರ ಬಗ್ಗೆ ಹೀಗೆ ಹಲವಾರು ವರದಿಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಬಡತನದಲ್ಲಿ ಹುಟ್ಟಿ ಬೆಳೆದವರಿಗೆ ಮುಂದೆ ಅವರು ಯಾವುದೇ ಸ್ಟೇಟಸ್‌ನಲ್ಲಿದ್ದರೂ ಅವರ ಸರ್ವೈವಲ್ ತಂತ್ರಗಳು ಯಾವಾಗಲೂ ಜೀವಂತವಾಗಿಯೇ ಇರುತ್ತವೆ ಎಂದು ಹೇಳಬೇಕು. ಒಮ್ಮೆ ಬಡತನದಲ್ಲಿ ಸಿಕ್ಕಿಕೊಂಡರೆ ಅದರ ಪರಿಣಾಮಗಳು ಒಂಥರಾ ರಕ್ತದಲ್ಲಿರುವ ಯಾವುದೇ ಖಾಯಿಲೆಯ ವೈರಾಣುಗಳ ಹಾಗೆ ಯಾವತ್ತೂ ಜೀವಂತವಾಗೇ ಉಳಿದು ಕಷ್ಟದ ಪರಿಸ್ಥಿತಿಯಲ್ಲಿ ಹಳೆಯ ಇನ್‌ಸ್ಟಿಂಕ್ಸ್ ಎಲ್ಲ ಕೆಲಸ ಮಾಡಲು ಆರಂಭಿಸುತ್ತವೆ. ಅದೇ ಹುಟ್ಟಿದಂದಿನಿಂದ ಬಡತನವನ್ನು ಕಾಣದೇ ಇದ್ದವರ ಮೊದಲ ಬಡತನದ ಬವಣೆ ಬಲುಕಷ್ಟ.

ನಮ್ಮ ಪಕ್ಕದ ಮನೆಯವರು ಈ ಹತ್ತು ವರ್ಷಗಳಿಂದಲೂ ಪ್ರತಿನಿತ್ಯ ತಮ್ಮ ಮನೆಯ ಸುತ್ತಲೂ ಕನಿಷ್ಠ ಇಪ್ಪತ್ತು ವಿದ್ಯುತ್ ದೀಪಗಳನ್ನು ಉರಿಸುತ್ತಿದ್ದರು - ಗರಾಜ್ ಲೈಟ್‌ಗಳು, ಎದುರು ಲಾನ್‌ನಲ್ಲಿರುವ ಮರಗಳಿಗೆ ಫೋಕಸ್ ಲೈಟ್‌ಗಳು, ಮನೆಯ ಮುಂದಿನ ಬಾಗಿಲಿಗೆ, ಡ್ರೈವ್‍ ವೇ ಅಕ್ಕಪಕ್ಕದಲ್ಲಿ ಇತ್ಯಾದಿ. ಈ ಲೈಟುಗಳೆಲ್ಲ ಅಟೋಮ್ಯಾಟಿಕ್ ಆಗಿ ರಾತ್ರಿ ಪೂರ್ತಿ ಉರಿದು ಬೆಳಿಗ್ಗೆ ಆರಿಹೋಗುತ್ತಿದ್ದವು, ಅದೇ ನಮ್ಮ ಮನೆಯಲ್ಲಿ ದಿನಕ್ಕೆ ಕೆಲವು ಘಂಟೆಗಳು ಮಾತ್ರ ಮುಂದಿನ ಬಾಗಿಲಿನ ಎರಡು ಎನರ್ಜಿ ಎಫಿಷಿಯಂಟ್ ಬಲ್ಬ್‌ಗಳು ಉರಿಯುತ್ತಿದ್ದವು. ಹೋದ ವರ್ಷದ ಕೊನೆಯಲ್ಲಿ ಇದ್ದಕ್ಕಿದ್ದ ಹಾಗೆ ನಮ್ಮ ಇಲೆಕ್ಟ್ರಿಕ್ ಬಿಲ್ ಡಬಲ್ ಆಯಿತು, ನಾನೂ ಗಾಬರಿಗೊಂಡು ಒಂದಿಬ್ಬರನ್ನು ಕೇಳಿ ತಿಳಿದಾಗ ಅವರದ್ದೂ ಅದೇ ಪರಿಸ್ಥಿತಿ. ಹಾಗಾದ ಮರುದಿನವೇ ಪಕ್ಕದ ಮನೆಯ ಲೈಟುಗಳು ಎಲ್ಲವೂ ನಿಂತು ಹೋದವು, ಅವರು ಮನೆಯಲ್ಲಿದ್ದ ದಿನಗಳು ಮಾತ್ರ ಮುಂದಿನ ಬಾಗಿಲಿಗೆ ಒಂದು ಎನರ್ಜಿ ಎಫಿಷಿಯಂಟ್ ಲೈಟ್ ಬಲ್ಬ್ ಉರಿಯತೊಡಗಿತು. ಕೇವಲ ಎಲೆಕ್ಟ್ರಿಕ್ ಬಿಲ್ ವಿಚಾರವೊಂದೇ ಅಲ್ಲ, ಅವರ ಖರ್ಚು-ವೆಚ್ಚ ಜೀವನ ಶೈಲಿಯಲ್ಲೂ ಬದಲಾವಣೆಗಳು ಗೋಚರಿಸತೊಡಗಿದವು: ನ್ಯೂಸ್ ಪೇಪರ್ ಸಬ್‌ಸ್ಕ್ರಿಫ್ಷನ್ ನಿಂತು ಹೋಗುವುದು, ವರ್ಷದ ವೆಕೇಷನ್ನ್ ಕ್ಯಾನ್ಸಲ್ ಆಗುವುದು, ಮುಂತಾಗಿ.

ಒಂದು ವಸ್ತು ನಮ್ಮದೋ ಅಲ್ಲವೋ ಎಲ್ಲ ಕಡೆ ಕನ್ಸರ್‌ವೇಟಿವ್ ಆಗಿರುವುದು ಒಂದು ಬಗೆ - ಉದಾಹರಣೆಗೆ ನಮ್ಮ ಆಫೀಸಿನಲ್ಲಿ ನಾವು ಪ್ರಿಂಟ್ ಮಾಡುವ ಪ್ರತಿಯೊಂದು ಡಾಕ್ಯುಮೆಂಟ್ ಜೊತೆಗೆ ನಮ್ಮ ಹೆಸರಿನ ಕವರ್ ಪೇಜ್ ಅನ್ನು ನಾನು ಸಾಧ್ಯವಾದಷ್ಟು ಬಳಸುತ್ತೇನೆ, ಅದರ ಖಾಲಿ ಇರುವ ಮತ್ತೊಂದು ಪುಟದಲ್ಲಿ ಏನಾದರೂ ನೋಟ್ಸ್ ಮಾಡುವುದಕ್ಕೋ ಅಥವಾ ಚಿಕ್ಕದಾಗಿ ಕತ್ತರಿಸಿಕೊಂಡು ’ಪೋಸ್ಟ್ ಇಟ್’ ನೋಟ್ಸ್ ಥರವೋ, ಅಥವಾ ಇನ್ನೊಂದು ರೀತಿ. ಇನ್ನುಳಿದವರು ಆ ಕವರ್ ಪುಟವನ್ನು ಟ್ಯ್ರಾಷ್ ಮಾಡಬಹುದು, ಅಥವಾ ರಿಸೈಕಲ್ ಮಾಡಬಹುದು, ಹೀಗೆ ಅವರವರ ಬುದ್ಧಿಗೆ ತಕ್ಕಂತೆ ಆ ಕವರ್ ಪೇಜ್ ಬಳಕೆಗೊಳ್ಳುತ್ತೆ. ಇಲ್ಲಿ ಒಂದೇ ಸರಿಯುತ್ತರವೆಂಬುದೇನೂ ಇಲ್ಲ, ಆ ಪುಟವನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಹಲವಾರು ಸರಿ ಉತ್ತರಗಳಿವೆ. ನನ್ನ ನಿಲುವಿನಲ್ಲಿ ಅಥವಾ ನಾನು ಹೇಗೆ ಆ ಕವರ್ ಪುಟವನ್ನು ಬಳಸುತ್ತೇನೆ ಎಂಬುದರಲ್ಲಿ ಯಾವುದೇ ಬದಲಾವಣೆಗಳೂ ಆಗಲಾರವು, ಅದು ಎಕಾನಮಿಯನ್ನೂ ಆದರಿಸಿಲ್ಲ, ಅದಕ್ಕೆ ನೇರವಾಗಿ ನಾನು ಹಣಕೊಡುವುದೂ ಇಲ್ಲ. ಇದು ಹೇಗೆ ನನ್ನ ನಿಲುವೋ ಉಳಿದವರದೂ ಹಾಗೆ, ಅಷ್ಟೇ.

ಇನ್ನು ಕಷ್ಟದ ಮಾತಿಗೆ ಬರೋಣ, ಅವರವರ ಕಷ್ಟ ಅವರಿಗೆ ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ. ಆದರೆ ಕಷ್ಟಗಳು, ಸಾಂಸಾರಿಕ ಜಂಜಾಟಗಳು, ನಮಗೊದಗುವ ಅನೇಕ ತೊಂದರೆಗಳನ್ನು ಹಲವಾರು ರೀತಿಯಲ್ಲಿ ನೋಡಬಹುದು. ಅವುಗಳ ತುಲನಾತ್ಮಕ ಅರಿವು ನಮ್ಮನ್ನು ಎಷ್ಟೋ ಸಾರಿ ’ಸದ್ಯ, ನಮಗೆ ಹಾಗಾಗದಿದ್ದರೆ ಸಾಕು!’ ಎನ್ನುವ ಮನೋಭಾವನೆಯಿಂದ ಆ ಮಟ್ಟಿಗೆ ಸಮಾಧಾನ ಹುಟ್ಟಬಹುದು. ದೈಹಿಕ ಕೆಲಸಗಳಿಂದ ಸ್ನಾಯುಗಳು ಬಲಗೊಳ್ಳುವ ಹಾಗೆ ಈ ಸಂಕಷ್ಟಗಳ ಪರಂಪರೆ ಮನಸ್ಸನ್ನು ಗಟ್ಟಿಗೊಳಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಂಜಾಟಗಳಲ್ಲಿ ಬಳಲಿ, ತೊಳಲಿ, ಬಗ್ಗಿ, ಬಾಗಿ, ನೊಂದು, ನಲಿದು ಮುಂದೆ ಇವೆಲ್ಲದರ ದೆಸೆಯಿಂದ ಲಕ್ಷಾಂತರ ಜನ್ಮಗಳಲ್ಲಿ ಮೋಕ್ಷ ಸಿಗಬಹುದು.

ನಮಗೆಲ್ಲ ಕಷ್ಟದ ಬಗ್ಗೆ ಏನು ಗೊತ್ತಿದೆ? ಮನೆಯಲ್ಲಿ ಮೂರೋ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎನ್ನುವ ಪೋಷಕರ ನಡುವೆ, ಹುಟ್ಟಿದಂದಿನಿಂದ ವಿಕಲಾಂಗರಾಗಿ ಬೆಳೆಯುವ ಮಕ್ಕಳನ್ನು ಪೋಷಿಸುವ ತಂದೆ-ತಾಯಿಗಳ ನಡುವೆ, ಇಂದಿದ್ದರೆ ನಾಳೆ ಬೆಳಿಗ್ಗೆ ತಿನ್ನುವುದಕ್ಕಿಲ್ಲ ಎನ್ನುವವರ ನಡುವೆ, ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿರುವ ಕುಟುಂಬದ ಸದಸ್ಯರ ಜೊತೆ ತಮ್ಮ ದಿನಚರಿಯನ್ನು ಕಂಡುಕೊಳ್ಳುವವರ ನಡುವೆ, ಇದ್ದ ಮಕ್ಕಳಲ್ಲಿ ಕೆಲವರನ್ನು ದುರಂತಗಳಲ್ಲಿ ಕಳೆದುಕೊಂಡು ಜೀವನ ಪರ್ಯಂತ ನರಳುವವರ ನಡುವೆ, ಆಫೀಸಿನ ಕೆಲಸ ಮನೆಯಲ್ಲಿನ ಕೆಲಸಗಳ ಜೊತೆಗೆ ತಮ್ಮ ಕುಟುಂಬದ ಹಿರಿಯರನ್ನು ಪೋಷಿಸಿಕೊಂಡು ಹೋಗುವವರ ನಡುವೆ, ತಮ್ಮ ಪ್ರೈಮರಿ ರೆಸಿಡೆನ್ಸ್ ಅಥವಾ ತಮ್ಮ ಜೀವನದ ಇಡುಗಂಟನ್ನು ಕಳೆದುಕೊಂಡವರ ನಡುವೆ...ಹೀಗೆ ಈ ಪಟ್ಟಿ ಮುಂದುವರೆಯುತ್ತದೆ. ಪ್ರತಿಯೊಬ್ಬರ ಕಷ್ಟದ ಅರಿವು ಹಾಗೂ ಅವರ ಅನುಭವ ಸಾಪೇಕ್ಷವಾದುದು. ನಮ್ಮ ಕಷ್ಟ ದೊಡ್ಡದು ಎಂದೆನಿಸಿದ ಮರು ಕ್ಷಣವೇ ಮತ್ತೊಬ್ಬರ ಇನ್ನೂ ಹೆಚ್ಚಿನ ಕಷ್ಟದ ಸ್ಥಿತಿಯನ್ನು ಕೇಳಿದಾಗ ಸಮಾಧಾನವಾಗುತ್ತದೆ. ಹೀಗೆ ಆದಾಗಲೆಲ್ಲ ’ಸದ್ಯ ನಮಗೆ ಆ ಪರಿಸ್ಥಿತಿ ಬರಲಿಲ್ಲವಲ್ಲ’ ಎನ್ನುವ ದನಿಯೂ ಹುಟ್ಟುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕ್ಷಣದಲ್ಲಿ ’ದೇವರ ದಯೆ’ ಅಥವಾ ’ದೇವರು ದೊಡ್ಡವನು’ ಭಾವನೆಯೂ ಉದ್ಭವಿಸುತ್ತದೆ.

Monday, April 13, 2009

ನಿಂತ ಮೇಲೆ ಹಾಸ್ಯ!

ಹತ್ತನೇ ಕ್ಲಾಸ್ ವರೆಗೆ ಕನ್ನಡ ಮೀಡಿಯಮ್‌ನಲ್ಲಿ ಓದಿರೋ ನನ್ನಂಥವರಿಗೆ Stand-up comedy ಅನ್ನೋದನ್ನ ಕನ್ನಡಕ್ಕೆ ಭಾಷಾಂತರ ಮಾಡಿ ಅಂದ್ರೆ, ಅದನ್ನ ’ನಿಂತ-ಮೇಲೆ ಹಾಸ್ಯ!’ ಅಂತ ಮಾಡಿಬಿಡ್ತೀನೇನೋ ಅನ್ನೋದು ನನ್ನ ಹೆದರಿಕೆ. ಉದಯ ಟಿವಿಯಲ್ಲಿ ಬರ್ತಾ ಇದ್ದ ನಗೆ ಸಖತ್ ಸವಾಲನ್ನು ನೋಡಿದಾಗಲೆಲ್ಲ ನಮ್ಮ ಜನರಿಗೆ ಹಾಸ್ಯದ ಚುರುಕು ಇತ್ತೀಚೆಗೆ ಬಹಳ ತಾಗಿದೆ ಅನ್ನಿಸ್ತಾ ಇತ್ತು, ಆದ್ರೆ ಜೊತೆಯಲ್ಲಿ ಇನ್ನೂ ಅವರಿವರು ಬಾವಿಗಳಲ್ಲಿ ಬೀಳಿಸ್ಕೊಂಡಿರೋ ವಾಚ್‌ಗಳಿಗೆ ಕೀಲಿ ಕೊಡೋದರಲ್ಲೇ ನಮ್ಮ ಜೋಕ್ ಮಾರರು ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟ ಹಾಗೆ ಕಾಣಿಸ್ತಾನೂ ಇತ್ತು.

ಕಾಮಿಡಿ-ಹಾಸ್ಯ-ತಮಾಷೆ-ನಗೆ ಅಂತ ಹುಡುಕ್ತಾ ಹೋದ್ರೆ ಎಷ್ಟು ಜನ ತಮ್ಮ ಒರಿಜಿನಲ್ ಕಂಟೆಂಟ್ ಅನ್ನ ತಮ್ಮ ಒರಿಜಿನಲ್ ಶೈಲಿಯಲ್ಲಿ ಪ್ರದರ್ಶನ ನೀಡಿ ಪ್ರಖ್ಯಾತರಾಗಿದ್ದಾರೆ, ಅದರಲ್ಲಿ ಕನ್ನಡಿಗರ ಪಾಲು ಎಷ್ಟು ಅಂತ ಅನ್ನೋದು ದೊಡ್ಡ ಸವಾಲೇ ಸರಿ. ನನ್ನ ಮಟ್ಟಿಗೆ ಅಮೇರಿಕದ ಜಾರ್ಜ್ ಕಾರ್ಲಿನ್ ಕಾಮಿಡಿ ಬಹಳ ಹೆಚ್ಚಿನ ಮಟ್ಟದ್ದು ಅನ್ನಿಸ್ತು. ನನ್ನ ಸಹೋದ್ಯೋಗಿಯೊಬ್ಬನನ್ನ ನಿನಗ್ಯಾವ ಕಾಮಿಕ್ಕುಗಳು ಇಷ್ಟ ಅಂತ ಪ್ರಶ್ನೆ ಕೇಳಿದ್ರೆ ಜೆರ್ರಿ ಸೈನ್‌ಫೆಲ್ಡ್ ಅಂದ. ಯಾಕೆ ಅಂದ್ರೆ, ಸೈನ್‌ಫೆಲ್ಡ್ ಜನರ ಬದುಕಿನ ಸೂಕ್ಷ್ಮಗಳನ್ನು ಹಾಸ್ಯವಾಗಿ ಜನರ ಜೊತೆಗೆ ಅಶ್ಲೀಲತೆಯ ಸೋಗಿಲ್ಲದೆ ಹಂಚಿಕೊಂಡವರಲ್ಲಿ ನಿಸ್ಸೀಮ ಎಂದು ತನ್ನ ನಿಲುವನ್ನ ನನ್ನ ಸಹೋದ್ಯೋಗಿ ಹಂಚಿಕೊಂಡ. ನನಗೆ ಆಗ್ಲೇ ಅನ್ಸಿದ್ದು, ಕಾಮಿಡಿ ಅಂದ್ರೆ, ಹೊಲಸು ಭಾಷೆಯ ಬಳಕೆ ಅಥವಾ ದುರ್ಬಳಕೆ ಇರ್ಲೇ ಬೇಕು ಅಂತೇನು ಇಲ್ಲ ಅಂತ.

***

ಯಾರಾದ್ರೂ ಹೊಸದಾಗಿ ಪರಿಚಯವಾದವರು ನನ್ನನ್ನ ಕೇಳೋ ಹಾಗೆ, ’...ಎಲ್ಲಾ ಸೆಟ್ಲ್ ಆಗಿರಬೇಕು ನೀವು ಹಾಗಾದ್ರೆ...’ ಇಲ್ಲಿ ಬಂದು ಇಷ್ಟು ವರ್ಷ ಅದ್ರೂ ಎಲ್ಲೂ ನಾವು ನೆಲೆ ನಿಂತೇ ಇಲ್ಲಾ - ಇನ್ನು ನಿಲ್ಲದ ಮೇಲೆ ಎಲ್ಲಿ ಹಾಸ್ಯ ಅಂತ ಅನ್ನೋ ಪ್ರಶ್ನೆ ಸಹಜವಾಗಿ ಬರುತ್ತೆ. ಅದಕ್ಕೆ ವಿರುದ್ಧವಾಗಿ ಕವಿವಾಣಿ ಬೇರೆ ಅದೇಶ ಕೊಟ್ಟಿದೆ - ’...ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು...’ಎಂದು...ಹೀಗೆ ತಿರುಗಾಡ್ತಾ ಇರೋ ಜೀವನಕ್ಕೇನೇ ಹೆಚ್ಚು ಹೆಚ್ಚು ಐಡಿಯಾಗಳು ಬರೋದು (ಹಾಸ್ಯದ ರೂಪದಲ್ಲಿ) ಅಂತ ಕಾಣ್ಸುತ್ತೆ, ಉದಾಹರಣೆಗೆ ಏರ್‌ಪೋರ್ಟಿನಲ್ಲಿ TSA (Transportation Security Administration) ಅವರನ್ನು Thousands Standing Around! ಅಲ್ಲಿ ಲೈನಿನಲ್ಲಿ ನಿಂತಿರುವ ಜನಸಮೂಹ ಕಿಚಾಯಿಸಬಹುದು.

***

ಹಾಸ್ಯದ ಮೇಲೆ ಮತ್ತೆ ತಮಾಷೆಯಾಗಿ ಬರೀತಾನೇ ಇರ್ತೀನಿ, ಕೊನೇಪಕ್ಷ ’ಅಂತರಂಗ’ ಅಂದ್ರೆ ಅಳುಮುಂಜಿ ಐಡಿಯಾಗಳ ಆಗರ ಮುಖ ಮುದುಡಿಕೊಳ್ಳುವವರನ್ನ ಸಂತೈಸೋಕಾದ್ರೂ. ಇನ್ನು ಕೆಲವರಿಗೆ ಬ್ಲಾಗ್‌ ನಿಂದ ಜೀವನ ದರ್ಶನ ಸಿಗಬೇಕು ಅಂತ ಸಂಕಲ್ಪ ಇದ್ರೆ ಅವರು ತಮ್ಮ ಬಿಸಿನೆಸ್ಸನ್ನ ಬೇರೆ ಎಲ್ಲಾದ್ರೂ ತೊಗೊಂಡು ಹೋಗ್ಲಿ, ಏನಂತೀರಿ?

Sunday, April 05, 2009

ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...



























ಮಾರ್ಚ್ ೨೯ ರ ವಿ.ಕ.ದಲ್ಲಿ ’ಜನಗಳ ಮನ’ದಲ್ಲಿ ರವಿ ರೆಡ್ಡಿ ಹಾಗೂ ಜಗದೀಶ್ ರಾವ್ ಕಲ್ಮನೆಯವರ ಬಗ್ಗೆ ಓದಿ ಹೀಗನಿಸಿದ್ದು ನಿಜ.

ಹ್ಞೂ, ’ಇಂಥವರ ಬಗ್ಗೆ ಎರಡು ಸಾಲು ಬರೆದರೂ ಜಾಗ ವೇಷ್ಟು’ ಎಂದಿದ್ದಾರಲ್ಲವೇ? ಜೊತೆಗೆ, ’...ಬೆಂಗಳೂರು ಸುಧಾರಣೆಯಾಗಬೇಕಿದೆ.’ ಎನ್ನುವ ಕುಹಕ ಅಲ್ಲ, ನಿಜ ಸ್ಥಿತಿ ಬೇರೆ ಕೇಡಿಗೆ.

***

’ನಾವು ಭಾರತೀಯರೂ, ಒಹೋಯ್!’ ಎಂದು ಮೊನ್ನೆ ಮೊನ್ನೆ ತಾನೆ ಅಶ್ವಥ್ ಕೂಗಿ ಹೋಗಿದ್ದರಲ್ಲವೇ? ಸಗಣಿಯೊಳಗಿನ ಹುಳುಗಳಿಗೆ ಅದೇ ಪ್ರಪಂಚ, ಒಂದು ವೇಳೆ ಅವುಗಳನ್ನೇನಾದರೂ ಯಾರಾದರೂ ಎತ್ತಿ ಹೊರಗೆ ಬಿಟ್ಟರೂ ಮತ್ತೆ ಸಗಣಿಯೊಳಗೆ ಸಿಗುವ ಸುಖಕ್ಕೆ ಜೋತು ಬೀಳುವ ಜಾತಿ. ಹಾಗೇ ಬಾವಿ ಕಪ್ಪೆಗಳೂ ಕೂಡ, ತಮ್ಮದೇ ಪ್ರಪಂಚದಲ್ಲಿ ತಾವೇ ದೊಡ್ಡವರು ಎಂದುಕೊಂಡ ಹಾಗೆ.

ಇವೇ ಅತಿರಥ-ಮಹಾರಥರು ಅಮೇರಿಕದ ಸಮ್ಮೇಳನಗಳಿಗೆ ಬಂದಾಗ ಬಾಲ ಮುದುರಿಕೊಂಡು ತಮಗೆ ತೋಚಿದ್ದನ್ನ ಬರೀತಾರೇ ವಿನಾ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕಾಯಕಕ್ಕಂತೂ ಕೈಗೂಡಿದ್ದನ್ನ ನಾನು ನೋಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಮೇರಿಕದಲ್ಲಿ ಇನ್ನೂ ಮುಗಿಯದೇ ಇದ್ದ ’ಬಾಲ್ಟಿಮೋರ್ ಸಮ್ಮೇಳನ’ವನ್ನು ಈಗಾಗಲೇ ಮುಗಿದು ಹೋಯಿತು ಎಂದು ವರದಿಯನ್ನು ಹೊರಗೆ ಹಾಕಿದ್ದಕ್ಕೂ ಒಂದು ಅಪಾಲಜಿ ಇವುಗಳ ಮುಸುಡಿಯಿಂದ ಹೊರಡಲ್ಲ. ಇದ್ದ ಬದ್ದ ಸುದ್ದಿಗೆ ಒಂದಿಷ್ಟು ಕಣ್ಣೊರೆಸುವ ಚಾಕಚಕ್ಯತೆಯನ್ನು ಮುಟ್ಟಿಸಿ ಸುಳ್ಳಿನ ಮೇಲೆ ನೂರೆಂಟು ಸುಳ್ಳನ್ನು ಹೇಳೋ ಪದ್ಧತಿಯೂ ಇನ್ನೂ ನಿಂತ ಹಾಗಿಲ್ಲ.

***

’ಮೌಲ್ಯ’ವೆಂದರೇನು ಎಂದು ತಿಳಿದು ಅದನ್ನು ಪಚನ ಮಾಡಿಕೊಳ್ಳಲು ಇನ್ನೂ ಒಂದೈದು ಸಾವಿರ ವರ್ಷಗಳಾಗಬೇಕು ನಮಗೆ. ಇನ್ನು ಮೌಲ್ಯವನ್ನು ಆಧರಿಸಿದ ರಾಜಕಾರಣವೆಂದರೇನದು? ನಾವೆಲ್ಲ ಕುರಿಗಳು ಎಂದು ಕವಿಗಳು ಆಡಿ ಅಣಗಿಸಲಿಲ್ಲವೇ? ಅಂಥ ಕುರಿಗಳ ಮಂದೆಗೆ ಅಮೇರಿಕದೊಂದಿಷ್ಟು ಜನ ಪಾಪ ಏನೋ ಸಹಾಯವಾಗಲಿ ಎಂದು ಮನೆ-ಮಠ ಬಿಟ್ಟು, ಇರುವ ರಜಾ ವಜಾ ಮಾಡಿಕೊಂಡು, ಕೈಯಲ್ಲಿನ ಕಾಸು ಕರಗುವ ವರೆಗೂ ಪ್ರಯತ್ನ ಮಾಡುವ ಗೋಜಿಗಾದರೂ ಹೋಗುತ್ತಾರಲ್ಲ ಅದೇ ಮುಖ್ಯ.

ಐವತ್ತು ವರ್ಷಗಳಿಂದ ಚಲಾವಣೆಯಲ್ಲಿದ್ದ ಸಂವಿಧಾನ ಬದ್ಧ ’ಬಾವುಟ ಹಾರಿಸುವ ಕಾಯಿದೆ’ಯನ್ನು ಮುರಿದು ನಮ್ಮ ದೇಶದ ಬಾವುಟವನ್ನು ನಾವು ನಮ್ಮ ಮನೆ ಮುಂದೆ ಹಾರಿಸಿದರೆ ತಪ್ಪೇ? ಎಂದು ಸಾಧಿಸಿಕೊಂಡಿದ್ದು ನಮ್ಮಂಥ ಒಬ್ಬ ಅನಿವಾಸಿಯೇ.
ಅಮೇರಿಕದಲ್ಲಿ ಓದಿಕೊಂಡು, ಸದನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮುಂದೆ ಒಬ್ಬ ಪ್ರತಿಭಾವಂತ ಮುಖ್ಯಮಂತ್ರಿ ಎಂದು ಎಸ್. ಎಮ್. ಕೃಷ್ಣ ಹೆಸರು ತೆಗೆದುಕೊಳ್ಳಲಿಲ್ಲವೇ?

***

ಇಂಥವರ ಬಗ್ಗೆ ಬರೀ ಬೇಡ್ರಿ, ನಿಮ್ಮ ಮೂರುಕಾಸ್ ಪತ್ರಿಕೆಯಲ್ಲಿ, ಯಾರ್ ಕೇರ್ ಮಾಡ್ತಾರೆ? ಹಾಗೆ ಬರೆಯದೇ ಉಳಿದ ಜಾಗೆಯಲ್ಲಿ ಅವೇ-ಅವೇ ಪ್ರಭೃತಿಗಳ ದರ್ಶನ ಮಾಡಿಸಿಕೊಂಡು ಸುಖವಾಗಿರಿ. ಲಂಚ, ಭ್ರಷ್ಟಾಚಾರ ಅನ್ನೋದು ಹಾಡು ಹಗಲಿನ ದಂದೆಯಾಗಿದ್ದರೂ ಅದನ್ನು ಇದ್ದ ಹಾಗೆ ಬರೆದು ವರ್ಷಕ್ಕೊಬ್ಬ ಪುಂಡು ರಾಜಕಾರಣಿಯನ್ನಾದರೂ ಜೈಲಿಗೆ ಸೇರಿಸಿದ್ದೇ ನಿಜವಾಗಿದ್ದರೆ ಪತ್ರಿಕೆ ಪಾವನವಾಗುತ್ತಿತ್ತು, ಹಾಗಾಗೋದಿಲ್ಲ ಎಂದ ಮೇಲೆ ತಿಪ್ಪೇ ಸಾರಿಸಿಕೊಂಡೇ ಬಿದ್ದಿರಿ.

ಹೆಂಡ-ಸೀರೆ ಹಂಚಿ ಮತ ತೆಗೆದುಕೊಳ್ಳೋ ನಿಮ್ಮ ದೊರೆಗಳ ಪಾದ ನೆಕ್ಕೊಂಡು ಬಿದ್ದಿರಿ, ಇವತ್ತಲ್ಲ ನಾಳೆ ನಿಮಗೂ ಬೆಳಕಿನ ದರ್ಶನವಾದೀತು. ಬಡವರನ್ನ ದೋಚಿ ಸುಲಿಗೆ ಮಾಡಿ ಜಾತಿ ರಾಜಕಾರಣ ಮಾಡೋರು ನಿಮಗೆಲ್ಲ ಆದರ್ಶವಾಗಲಿ.

ದೇಶ ಬಿಟ್ಟು ಭಾಷೆ ಬಿಟ್ಟು, ಎಲ್ಲರಿಗಿಂತ ಹೆಚ್ಚು ಕೊರಗಿಕೊಂಡು, ಮನಸಲ್ಲಿ ಅಪ್ಪಟ ಮಾನವನಾಗಿ ಬೆಳೆಯೋ ಆಲೋಚನೆಗಳಿಗೆ ದಿನೇದಿನೇ ನೀರು ಕುಡಿಸುತ್ತಾ ಒಂದು ಕಡೆ ಬೇಡವೆಂದರೂ ದೂರ ಹೋಗುವ ಭಾರತೀಯತೆಯನ್ನು ಮತ್ತೊಂದು ಕಡೆ ಗಟ್ಟಿಯಾಗಿ ಅಪ್ಪಿಕೊಂಡೇ ನಾವು ನಿಟ್ಟುಸಿರು ಬಿಡ್ತೀವಿ, ಅವು ನಿಮಗೆಲ್ಲ ಖಂಡಿತ (ಈ ಜನುಮದಲ್ಲಿ) ಅರ್ಥ ಆಗಲ್ಲ ಬಿಡಿ.

Sunday, March 22, 2009

ಸ್ಪ್ರಿಂಗ್ ಬಂತು ಸ್ಪ್ರಿಂಗು

ಮೊನ್ನೆ ಇಲ್ಲೆಲ್ಲಾ ಸ್ಪ್ರಿಂಗ್ ಆರಂಭವಾದ ದಿನ. ಇವತ್ತಾದರೂ ಪರಿಸ್ಥಿತಿ ಹೇಗಿದೆ ನೋಡೋಣ ಎಂದು ಪ್ಯಾಟಿಯೋದಿಂದ ಹೊರಗೆ ನೋಡಿದರೆ ಅಂತಾ ಏನೂ ವಿಶೇಷ ಕಾಣಿಸ್ಲಿಲ್ಲ. ಮರ-ಗಿಡಗಳೆಲ್ಲ ಅವೇ ಗ್ರೇ ಸ್ಕೇಲ್ ಪೇಂಟಿಂಗ್‌ನಲ್ಲಿ ನಿಂತ ಹಾಗೆ ಒಂದಿನಿತೂ ಅಲುಗಾಡದೆ ನಿಂತಿದ್ದವು. ಡೆಕ್ ಮೇಲೆ ಅಮ್ಮ ಚಪಾತಿ ಮಣೆಯ ಮೇಲೆ ಹಿಟ್ಟು ಸವರಿಕೊಳ್ಳೋ ಹಾಗೆ ಒಂದು ಪದರು ಸ್ನೋ ಬಿದ್ದಿತ್ತು. ಹೊರಗಡೆ ಇರೋ ಥರ್ಮಾ ಮೀಟರ್‌ನ ಮುಳ್ಳು ಕೆಟ್ಟು ಹೋಗಿರುವ ಗಡಿಯಾರದಲ್ಲಿ ಮುಳ್ಳುಗಳು ನಿರ್ಜೀವವಾಗಿ ಬಿದ್ದ ಹಾಗೆ ಮುವತ್ತು ಡಿಗ್ರಿಯ (ಫ್ಯಾರನ್‌ಹೈಟ್) ಬಲಮಗ್ಗುಲಿಗೆ ಸತ್ತು ಬಿದ್ದ ಹಾಗಿತ್ತು.

ಈ ಸ್ಪ್ರಿಂಗ್ ನದೇ ವಿಶೇಷ, ಇಲ್ಲಿ ಅದೆಷ್ಟು ವರ್ಷ ಇದ್ದರೂ ನಮಗಿನ್ನೂ ಚರ್ಮದಿಂದ ಕೆಳಗೆ ಇಳಿಯೋದೇ ಇಲ್ಲ. ಸ್ಪ್ರಿಂಗ್‌ಗೆ ಕನ್ನಡದಲ್ಲಿ ಏನಂತಾರೆ ಎಂದು ಡಿಕ್ಷನರಿಯನ್ನು ನೋಡಿದರೆ ಅಲ್ಲೂ ನಿರಾಶೆ ಕಾದಿತ್ತು. ಇವರೋ ವರ್ಷವನ್ನು ಸಮನಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ಪ್ರಿಂಗು, ಸಮ್ಮರ್ರು, ಫಾಲ್ ಹಾಗೂ ವಿಂಟರ್ ಎಂದು ಕರೆದರು. ಆದರೆ ನಮ್ಮ ಚೈತ್ರ, ವೈಶಾಖ ಮಾಸಗಳಾಗಲೀ ವಸಂತ ಋತುವಾಗಲಿ ವರ್ಷವನ್ನು ನೋಡುವ ರೀತಿಯೇ ಬೇರೆ. ಅಲ್ಲದೆ ನಮ್ಮ ಕಡೆಗೆಲ್ಲ ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ಎಂದು ಮಾತನಾಡಿಕೊಂಡಿದ್ದನ್ನು ಕೇಳಿದ್ದೆನೆಯೇ ವಿನಾ ಈ ಸ್ಪ್ರಿಂಗ್ ಬಗ್ಗೆ ಕೇಳಿಲ್ಲ. ಇದನ್ನು ಸುಗ್ಗಿ ಅನ್ನೋಣವೇ, ಸಂಕ್ರಮಣ ಅನ್ನೋಣವೇ, ಯುಗಾದಿ ಅನ್ನೋಣವೇ, ಅಥವಾ ಬಾಯ್ತುಂಬ ಸ್ಪ್ರಿಂಗ್ ಎಂದು ಸುಮ್ಮನಿದ್ದು ಬಿಡೋಣವೆ.

ಇಲ್ಲಿ ಮಂಜಿನ ಹನಿಗಳದೊಂದು ಮತ್ತೊಂದು ವಿಶೇಷ, ಹಗುರವಾಗಿ ನೆಲದ ಮೇಲೆಲ್ಲಾ ಹರಡಿ ಹೂ-ಎಲೆಗಳನ್ನು ಸ್ಪರ್ಶಿಸಿ ಅವುಗಳನ್ನು ತೇವವಾಗಿಡುವುದರ ಬದಲು ಇಳಿಯುವ ಉಷ್ಣತೆಯ ದೋಸ್ತಿಗೆ ಕಟ್ಟುಬಿದ್ದು ಅವೂ ಘನೀಭವಿಸತೊಡಗಿವೆ. ಡಿಸೆಂಬರ್ ಇಪ್ಪತ್ತೊಂದರಿಂದಲೇ ಮೆಜಾರಿಟಿಗೆ ಬಂದ ಸೂರ್ಯನ ಕಿರಣಗಳು ಈಗಾಗಲೇ ತಮ್ಮ ಮಧ್ಯ ವಯಸ್ಸನ್ನು ತಲುಪಿ ಮುದುಕರಂತೆ ಕಂಡು ಬರುತ್ತಿವೆ, ಇನ್ನೇನು ಜೂನ್ ಇಪ್ಪತ್ತೊಂದು ಬರುವಷ್ಟರೊಳಗೆ ಸತ್ತೇ ಹೋದಾವೇನೋ ಎನ್ನೋ ಹಾಗೆ.

ಛಳಿಯಲ್ಲಿ ಇದ್ದು ಬಂದವರಿಗೆ ಬೇಸಿಗೆಯ ಆಸೆ, ಬೇಸಿಗೆಯಲ್ಲಿ ಒಂದೇ ಒಂದಿಷ್ಟು ಬಿಸಿಲಲ್ಲಿ ಬಸವಳಿದು ಹೋದರೂ ತಂಪಾಗಿರಬಾರದೇ ಎನ್ನುವ ತವಕ. ಏನೇ ಅಂದರೂ ಶೇಕ್ಸ್‌ಪಿಯರ್ ಅಂಥವರು - shall I compare thee to a summers day! ಎಂದು ಏಕೆ ಬರೆದರು ಎಂದು ಅನುಭವಿಸಲು ಅಂತಹ ವಾತಾವರಣದಲ್ಲೇ ಇರಬೇಕು ಎನ್ನುವುದು ನನ್ನ ಅಭಿಮತ. ಮಳೆಯಲ್ಲಿ ನೆಂದವರ ಬವಣೆಯನ್ನು ಅರಿಯಲು ಓದುಗರು ಮಳೆಯಲ್ಲಿ ನೆನೆದು ನೋಡಬೇಕಾಗೇನೂ ಇಲ್ಲ, ಆದರೆ ವರ್ಷದ ಎಂಟು ತಿಂಗಳು ಶೀತ ವಾತಾವರಣವನ್ನು ಅನುಭವಿಸಿ ಇರುವ ಒಂದೋ ಎರಡೋ ತಿಂಗಳ ಬೇಸಿಗೆಯ ಸುಖದಲ್ಲಿ ಚಿಗುರುವ ಕವಿಯ ಕಲ್ಪನೆಗಳು ನಮ್ಮ ದಕ್ಷಿಣ ಭಾರತದ ಸುಡು ಬಿಸಿಲಿನಲ್ಲಿ ಹುಟ್ಟಿ ಬೆಳೆದು ಓದಿದವರಿಗೇನು ಗೊತ್ತು?

ನಮಗಿಲ್ಲಿ ಕ್ಯಾಲೆಂಡರಿನಲ್ಲಿ ಹೇಳಿ ಕೊಟ್ಟಂತೆ ಸ್ಪ್ರಿಂಗ್ ಬರುತ್ತದೆ. ಅವಾಗಾವಾಗ ಅಮ್ಮ ನೆನಪಿಸುತ್ತಲೇ ಇರುತ್ತಾಳೆ, ಈ ತಿಂಗಳು ಇಪ್ಪತ್ತೇಳಕ್ಕೆ ಯುಗಾದಿ ಹಬ್ಬ ಇದೆ, ನೀವೂ ಮಾಡಿ ಎಂದು. ನಮಗಿಲ್ಲಿ ಎಳ್ಳೂ-ಬೆಲ್ಲ ಬರಲಿಲ್ಲ, ಮುಂದೆ ಬೇವೂ-ಬೆಲ್ಲವೂ ಇರೋದಿಲ್ಲ. ಇಲ್ಲಿ ನಮಗೆ ಹೊಂಗೆ ಹೂವ ತೊಂಗಲು ಕಣ್ಣಿಗೆ ಕಾಣೋದಿಲ್ಲ, ಯಾವುದೋ ಭಾಷೆಯಲ್ಲಿ ಅದೇನೆಂದೋ ಕರೆಯುವ ಒಂದಿಷ್ಟು ಮರಗಿಡಗಳು ದಾರಿ ಉದ್ದಕ್ಕೂ ಕಾಣ ಸಿಗುತ್ತವೆ, ತಮ್ಮ ಸುತ್ತ ಮುತ್ತಲೂ ಬಣ್ಣದೋಕುಳಿಯನ್ನು ಹರಡಿಕೊಳ್ಳುತ್ತವೆ. ಮಾವಿನೆಲೆಗಳಾಗಲೀ, ಚಿಗುರುಗಳಾಗಲೀ ನೋಡದೇ ಎಷ್ಟೋ ವರ್ಷಗಳೇ ಕಳೆದವೇನೋ, ಅವುಗಳ ಬದಲಿಗೆ ನಮ್ಮ ಮನೆಯ ಬಾಗಿಲಿಗೆ ಯಾವತ್ತೂ ಹಸಿರನ್ನು ತರುವ ಪ್ಲಾಸ್ಟಿಕ್ ಎಲೆಗಳನ್ನು ಪೋಣಿಸಿದ ಸರವೊಂದನ್ನು ನೇತು ಹಾಕಿದ್ದಾಗಿದೆ. ಸಂವತ್ಸರಗಳು ಕೆಲವೇ ಕೆಲವು ನೆನಪಿವೆ. ಆರು ಋತುಗಳನ್ನು ನೆನಪಿಸಿಕೊಳ್ಳಲು ಕನಿಷ್ಠ ಆರು ನಿಮಿಷವಾದರೂ ಬೇಕು, ಚೈತ್ರ-ವೈಶಾಖರನ್ನು ಎಡಬಿಡದೆ ಕಲಿತದ್ದರಿಂದಾಗಿ ಇನ್ನೂ ಸ್ಮೃತಿಪಠಲದಲ್ಲೇ ಇವೆ. ಅಶ್ವಿನಿ-ಭರಣಿ-ಕೃತ್ತಿಕಾ-ರೋಹಿಣಿಯರು ಒಮ್ಮೊಮ್ಮೆ ಪೂರ್ಣ ನೆನಪಿಗೆ ಬರುತ್ತಾರೆ, ಮತ್ತೆ ಇಲ್ಲ. ಯಾವ ಮಳೆ ನಕ್ಷತ್ರ ಯಾವ ತಿಂಗಳಲ್ಲಿ ಎನ್ನುವುದು ನೆನಪಿಗೆ ಗುಡ್ ಬೈ ಹೇಳಿ ಬಹಳ ವರ್ಷಗಳೇ ಆಗಿವೆ. ಯಾವ ಹುಣ್ಣಿಮೆಗೆ ಏನೇನು ವಿಶೇಷ ಎನ್ನುವುದು ಈಗ ಇತಿಹಾಸವಷ್ಟೇ.

ನಮಗಲ್ಲಾದರೆ ಯುಗಾದಿ ಒಂದು ಸಮೂಹದಾಚರಣೆಯಾಗುತ್ತಿತ್ತು. ಒಂದೆರಡು ಬೇವು-ಮಾವಿನ ಮರಗಳನ್ನು ಹತ್ತಿಳಿದು ಎಲೆಗಳನ್ನು ಕಿತ್ತು ತರುತ್ತಿದ್ದೆವು. ಅದೇ ದಿನ ಸಂಜೆಯೋ ಮರುದಿನವೋ ಕಂಡೂ ಕಾಣದ ಚಂದ್ರನ ಗೆರೆಯನ್ನು ತವಕದಿಂದ ಹುಡುಕುತ್ತಿದ್ದೆವು. ನಾವು ತಿಂದು ಹಂಚುವ ಬೇವು-ಬೆಲ್ಲದ ಪ್ರತೀಕ ಬಹಳ ದೊಡ್ಡದಿತ್ತು. ಇಲ್ಲಿ ಸ್ಪ್ರಿಂಗ್ ಬಂದರೆ it's just another day, ಅದೇ ರೀತಿ ಉಳಿದ ದಿನಗಳೂ ಬಂದು ಹೋಗುತ್ತವೆ. ಹಾಗೆ ಬಂದು ಹೋಗುವ ಕಾಲ(ಮಾನ)ಕ್ಕೆ ನಾವು ಒಂದಿಷ್ಟು ಪ್ರತಿರೋಧ ಒಡ್ಡಿದಂತೆ ಮಾಡುತ್ತೇವಾದರೂ ಅಂತಹ ಪ್ರತಿರೋಧದ ಧ್ವನಿಯೂ ನಮ್ಮಲ್ಲೇ ಹುಟ್ಟಿ ಅಲ್ಲೇ ಮುದುರಿಕೊಳ್ಳುವುದು ಈ ಸ್ಪ್ರಿಂಗ್ ಬಂದು ಹೋದಷ್ಟೇ ಸಹಜವಾಗಿ ಹೋಗುತ್ತದೆ.

Friday, March 20, 2009

ನಮ್ಮೂರ ರಸ್ತೆ ಹಾಗೂ ಜನರ ಮನಸ್ಥಿತಿ

"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.

ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್‌ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.

ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್‌ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್‌ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.

ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?

Tuesday, March 17, 2009

ಅವೇ ಆಲೋಚನೆಗಳು...

ಆಲೋಚನೆಗಳೇ ಹಾಗೆ ನಿಲ್ಲೋದೇ ಇಲ್ಲ, ಅವುಗಳ ಒರತೆ ಬತ್ತೋದಂತೂ ಖಂಡಿತ ಇಲ್ಲ. ನೀವು ಜನನಿಬಿಡ ಮರಳುಗಾಡಿನಲ್ಲೇ ಇರಲಿ ಅಥವಾ ಯಾವ ಕಾಡಿನ ಯಾವ ಮೂಲೆಯಲ್ಲಿದ್ದರೂ ಆಲೋಚನೆಗಳ ಸರಣಿ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ನಾನು ಇತ್ತೀಚೆಗೆ ಖರೀದಿ ಮಾಡಿದ ಉಗುರಿನಷ್ಟು ದೊಡ್ಡ ಸೆಮಿಕಂಡಕ್ಟರ್ ಸ್ಟೋರೇಜ್ ಡಿವೈಸಿನಲ್ಲಿ ಹದಿನಾರು ಗಿಗಾಬೈಟುಗಳಷ್ಟು ಮಾಹಿತಿಯನ್ನು ಸ್ಟೋರ್ ಮಾಡಬಹುದು ಎನ್ನುವುದು ನನ್ನಂತಹವನ ಕಣ್ಣಿಗೆ ದೊಡ್ಡ ಅಚೀವ್‌ಮೆಂಟ್ ಆಗಿ ಕಾಣಬಹುದು. ಹಾಗೆ ಕಂಡ ಮರುಘಳಿಗೆಯಲ್ಲಿಯೇ ಈ ಸೃಷ್ಟಿಯ ಸ್ಟೋರೇಜಿನ ಮುಂದೆ ಇವೆಲ್ಲಾ ಯಾವ ಲೆಕ್ಕ ಎನ್ನಿಸಲೂ ಬಹುದು. ನಮ್ಮ ಮಿದುಳು ಸಂಸ್ಕರಿಸಿ, ಪೋಷಿಸುವ ಅದೆಷ್ಟೋ ಆಡಿಯೋ ವಿಡಿಯೋ, ಡೇಟಾ ಮತ್ತಿತರ ಅಂಶಗಳನ್ನೆಲ್ಲ ಪೋಣಿಸಿ ಗಿಗಾಬೈಟುಗಳಲ್ಲಿ ಎಣಿಸಿದ್ದೇ ಆದರೆ ಇಂದಿನ ಟೆರಾಬೈಟ್ ಮಾನದಂಡವೂ ಅದರ ಮುಂದೆ ಸೆಪ್ಪೆ ಅನಿಸೋದಿಲ್ಲವೇ? ಈ ಸೃಷ್ಟಿಯ ಅದ್ಯಾವ ತಂತ್ರಜ್ಞಾನ ಅದು ಹೇಗೆ ನರಮಂಡಲದ ವ್ಯೂಹವಾಗಿ ಬೆಳೆದುಬಂದಿದ್ದಿರಬಹುದು ಎಂದು ಸೋಜಿಗೊಂಡಿದ್ದೇನೆ.

ಇಂತಹ ಸೋಜಿಗಗಳಿಂದ ದಿಢೀರ್ ಮತ್ತೊಂದು ಆಲೋಚನೆ: ನಮ್ಮಲ್ಲಿ ನಿಕ್ ನೇಮ್ ಗಳನ್ನು ಬಳಸುವ ಬಗ್ಗೆ. ಭಾರತದಲ್ಲಿ ’ಕೃಷ್ಣಮೂರ್ತಿ’ ಎನ್ನುವ ಅಫಿಷಿಯಲ್ ನೇಮ್ ಮನೆಯಲ್ಲಿ ’ಕಿಟ್ಟಿ’ ಆಗಿ ರೂಪಗೊಳ್ಳಬಹುದು, ಅದೇ ಅಮೇರಿಕದಲ್ಲಿ ’ವಿಲಿಯಮ್’ ಎನ್ನುವ ಅಫಿಷಿಯಲ್ ನೇಮ್ ’ಬಿಲ್’ ಉಪಯೋಗಕ್ಕೊಳಗಾಗಬಹುದು. ಇದರಲ್ಲಿ ಒಂದು ವ್ಯತ್ಯಾಸವಂತೂ ಇದೆ - ನಮ್ಮ ನಿಕ್ ನೇಮ್‌ಗಳು ಖಾಸಗಿ ಆದರೆ ಇಲ್ಲಿಯವರ ನಿಕ್ ನೇಮ್‌ಗಳು ಎಲ್ಲರ ಬಳಕೆಗೂ ಸಿಗುತ್ತವೆ, ಅದು ಎಷ್ಟರ ಮಟ್ಟಿಗೆ ಪ್ರಭಾವಿ ಎಂದರೆ ಪ್ರೆಸಿಡೆಂಟುಗಳಿಂದ ಹಿಡಿದು ಸಾಮಾನ್ಯ ’ಜೋ’ ವರೆಗೂ ಅವರ ನಿಕ್‌ನೇಮ್ ಗಳೇ ಮುಖ್ಯನಾಮ. ಅಫಿಷಿಯಲ್ ನೇಮ್ ಏನಿದ್ದರೂ ಪುಸ್ತಕಕ್ಕೆ ಮಾತ್ರ.

ಈ ಆಲೋಚನೆಯಿಂದ ಹೊರಬರುವ ಹೊತ್ತಿಗೆ, ಭಾರತಕ್ಕೆ ಒಂದು ಫೋನು ಮಾಡಬಾರದೇಕೆ ಎನ್ನಿಸಿ, ತಕ್ಷಣ ಸೆಲ್ ಫೋನಿನಲ್ಲಿ ಕುಕ್ಕ ತೊಡಗಿದೆ. ೮೦೦ ನಂಬರ್ ಅನ್ನು ಹೊಡೆದು ಇನ್ನೊಂದೆರೆಡು ಕ್ಷಣಗಳಲ್ಲಿ ಎಲೆಕ್ಟ್ರಾನಿಕ್ ಚೆಲುವೆಯ (ಧ್ವನಿ) ಕೃಪೆಯಿಂದ ನನ್ನ ಅಣ್ಣನ ಮೊಬೈಲ್ ನಂಬರನ್ನು ಒತ್ತತೊಡಗಿದೆ. ಎರಡು ರಿಂಗುಗಳ ನಂತರ ಆತ ಫೋನ್ ಎತ್ತಿಕೊಂಡ, ಉಭಯ ಕುಶಲೋಪರಿಯ ಜೊತೆಗೆ ಎಲ್ಲಿದ್ದೀಯಾ? ಆಫೀಸಿಗೆ ಹೊರಟಿದ್ದೀಯಾ? ಏನು ತಿಂಡಿ? ಎಂದು ಕೇಳುವ ಅವನ ಪ್ರಶ್ನೆಗಳಿಗೆ ಡ್ರೈವ್ ಮಾಡುತ್ತಿದ್ದೇನೆ, ಇನ್ನೇನು ಆಫೀಸು ಹತ್ತಿರ ಬಂತು. ’ತಿಂಡಿ ಮಾಮೂಲಿ - ಅದೇ ಬ್ರೆಡ್ಡು, ಬಾಳೆಹಣ್ಣು, ಜ್ಯೂಸ್, ಕಾಫಿ’, ಎಂದೆ. ನಾನು ಹೀಗೆ ಹೇಳಿದಾಗಲೆಲ್ಲ ಆ ಕಡೆಯಿಂದ ಮಾಮೂಲಿ ಮೌನ. ಮತ್ತೆ ನಾನೇ ಅದೂ-ಇದೂ ಕೇಳಿದಂತೆ ಸಂಭಾಷಣೆ ವಿಷಯನ್ನು ಆಧರಿಸಿ ಎರಡು ನಿಮಿಷದಿಂದ ಹಿಡಿದು ಇಪ್ಪತ್ತು ನಿಮಿಷದ ವರೆಗೂ ನಡೆಯುತ್ತೆ.

ನಾನೆಂದೆ, ’ಹೌದು, ನೀನು ಇತ್ತೀಚೆಗೆ ಅಡುಗೆ ಮಾಡಿದ್ದು ಯಾವತ್ತು?’
ಅವನೆಂದ, ’ನಾನು ಆಡುಗೆ ಮಾಡಿ ಅದ್ಯಾವ ಕಾಲವೋ ಆಗಿದೆ.’
’ನೀನು, ಮನೆಯನ್ನು ಸ್ವಚ್ಛ ಮಾಡಲು ಸಹಾಯ ಮಾಡ್ತೀಯೋ, ಇಲ್ವೋ?’
’ಖಂಡಿತ, ಇಲ್ಲ - ನಾನು ಶಾಲೆಗೆ ಹೋಗಿ ಬರೋ ಹೊತ್ತಿಗೆ ಸಾಕಾಗಿರುತ್ತೆ, ಮತ್ತೇನೂ ಮಾಡೋದಿಲ್ಲ’

ಹೀಗೆ ನಾನು ಹುಡುಕಿ-ಹುಡುಕಿ ಕೇಳಿದ ಪ್ರಶ್ನೆಗಳು ನಾನು ಇಲ್ಲಿ ಆಗಾಗ್ಗೆ (ನಿತ್ಯ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ) ಮಾಡೋ ಕೆಲಸಗಳನ್ನು ಕುರಿತವಾಗಿದ್ದವು (ಉದಾಹರಣೆಗೆ ಬಟ್ಟೆ ಒಗೆದು ಒಣಗಿಸಿ ಮಡಚಿಡುವುದು). ಆದರೆ ಅವನು ಮನೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಒಂದೇ ನಮ್ಮ ಅತ್ತಿಗೆಯ ಹೆಸರನ್ನೋ ಅಥವಾ ಆಳುಗಳು ಮಾಡುವ ಕೆಲಸವೆಂದೋ ಹೇಳುತ್ತಿದ್ದ.

ಅವನಿಗೆ ’ಬೈ’ ಹೇಳಿ ಫೋನ್ ಇಟ್ಟ ಹೊತ್ತಿಗೆಲ್ಲ ಕುಡಿಯುತ್ತಿದ್ದ ಸುಡುಸುಡು ಕಾಫಿ ಇತ್ತೀಚೆಗಷ್ಟೇ ಎಲೆಕ್ಷನ್ನು ಗೆದ್ದು ಅಸೆಂಬ್ಲಿ ಸೇರಿದ ರೆಪ್ರೆಸೆಂಟಿವ್‌ನ ಥರ ನರಮಂಡಲದ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ಕೆಲಸವನ್ನು ಆರಂಭಿಸಿತ್ತು. ಥೂ, ಈ ಅಮೇರಿಕದಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಂಡು ಜೀವಿಸೋದರಲ್ಲೇ ಕಾಲ ಕಳೆದು ಹೋಗುತ್ತೆ. ಎಷ್ಟು ದುಡ್ಡಾಗಲಿ ಏನು ಕೆಲಸವಾಗಲಿ ಇದ್ದರೆ ಏನು ಬಂತು - ದಿನಾ ನಮ್ಮ ದುಗುಡ ಇದ್ದದ್ದೇ. ಬನೀನ್ ಎಲ್ಲಿದೆ? ಪ್ಯಾಂಟಿಗೆ ಮ್ಯಾಚ್ ಆಗುವ ಕಾಲುಚೀಲ ಸಿಗುತ್ತಿಲ್ಲ (ಬೆಳಗ್ಗೆ ಅದೂ ಚಿಮುಚಿಮು ಬೆಳಕಿನಲ್ಲಿ)! ಕಾಫಿ ಮಾಡಿಕೋ ಬೇಕು, ತಿಂಡಿಗೆ ಅವೇ ಬ್ರೆಡ್ಡು ಸ್ಲೈಸುಗಳು, ಅವೇ ಜ್ಯೂಸಿನ ಬಾಟಲುಗಳು. ವಾರಾಂತ್ಯದಲ್ಲಿ ಅಪರೂಪಕ್ಕೆ ಬ್ರೇಕ್‌ಫಾಸ್ಟ್‌ಗೆಂದು ತಿನ್ನುವ ದೋಸೆ-ಇಡ್ಲಿಗಳು ಹೆಚ್ಚಾಗಿ ಮಧ್ಯಾಹ್ನ ಲಂಚ್ ಸೇರದ ಅಥವಾ ರುಚಿಸದ ಅನುಭವ. ಮಿಸ್ಟರ್ ಕಾಫಿಯಿಂದ ಇಳಿದ ಲಾರ್ಜ್ ಕಾಫಿಯ ಗುಲಾಮಗಿರಿಯನ್ನು ಒಪ್ಪಿಕೊಂಡ ನರಮಂಡಲ ಚಿಕ್ಕ ಲೋಟಾದಲ್ಲಿ ಕುಡಿಯುವ ಕಾಫಿಯನ್ನು ’ಚಿಕ್ಕ ಸೈಜ್’ ಎಂದು ಪರಿಗಣಿಸುವ ಅನುಭೂತಿ. ಕಾಫಿಯ ಸ್ಟಿಮ್ಯುಲೇಶನ್ನಿಂದ ಹುಟ್ಟಿ ಕಾಫಿಯ ವಿರುದ್ಧವೇ ತಿರುಗುವ ಆಲೋಚನೆಗಳ ಪಾಪಪ್ರಜ್ಞೆ!

ಇಷ್ಟು ಹೊತ್ತಿಗೆ ಆಫೀಸಿನ ವಾತಾವರಣ ಹತ್ತಿರ ಬರುತ್ತಿದ್ದ ಹಾಗೆ - Oh! there is a 8 am meeting today! ಎನ್ನುವ ಅಮೇರಿಕನ್ ಉದ್ಗಾರ ನನ್ನಲ್ಲಿಯ ಕನ್ನಡತನವನ್ನು ಇನ್ನು ಹತ್ತು ಘಂಟೆಗಳ ಮಟ್ಟಿಗೆ ಅದುಮಿಕೊಳ್ಳುವ ಹಾಗೆ ಸೆಡ್ಡು ಹೊಡೆಯುವ ಅಟ್ಟಹಾಸದ ಆಲೋಚನೆ. ಆಫೀಸ್ ಬಂದೇ ಬಿಡ್ತು, ಇಲ್ಲ ನಾನೇ ಅದರ ಹತ್ತಿರ ಹೋಗ್ತಾ ಇದ್ದೇನೆ. ದೂರದ ಇಂಡಿಯಾಕ್ಕೆ ಕಾಲ್ ಮಾಡಿ ಸಂಭಾಷಣೆಯಿಂದ ಸೋತ ಸೆಲ್ ಫೋನ್ ಪಕ್ಕದಲ್ಲಿ ಬಿದ್ದುಕೊಂಡಿದೆ, ಅದರ ಗಂಟಲನ್ನೂ ಹಿಚುಕಿ (ವೈಬ್ರೇಷನ್ನ್ ಮೋಡ್‌ಗೆ ಹಾಕಿ) ಕೋಟಿನ ಜೇಬಿನಲ್ಲಿ ತುರುಕಿ ಲಂಚ್ ಪ್ಯಾಕ್ (ಅದೇ ಅನ್ನ, ಸಾರು, ಮೊಸರು, ಕೆಲವೊಮ್ಮೆ ಪಲ್ಯ) ಅನ್ನು ಕೈಯಲ್ಲಿ ಹಿಡಿದುಕೊಂಡು ಲಗುಬಗೆಯಿಂದ (ಇನ್ನೇನು ಆಫೀಸು ಎಲ್ಲಿಯಾದರೂ ಓಡಿ ಹೋದೀತೋ ಎನ್ನುವಂತೆ) ಹೆಜ್ಜೆ ಹಾಕತೊಡಗುತ್ತೇನೆ.

ಆಲೋಚನೆಗಳು ಇನ್ನೂ ಮುಂದುವರೆಯುತ್ತಲೇ ಇವೆ...

Monday, February 09, 2009

ಅವರವರ ಹಾಡು ಅವರದು...

ಕೆಳಗಿನ ಮೂರು ವಾರದಿಂದ ಭರ್ಜರಿ ಕೆಲಸ. ಜನವರಿ ಬಂತೋ ಬಂತು ಬಹಳಷ್ಟು ಬದಲಾವಣೆಗಳನ್ನ ತಂದಿತು, ಅದರಲ್ಲಿ ನನ್ನ ಬದಲಾದ ಬಾಸು ಅದರ ಜೊತೆಗೆ ಬಂದ ಪ್ರಾಜೆಕ್ಟು ಇವೆಲ್ಲ ಉಳಿದವನ್ನೆಲ್ಲ ನಗಣ್ಯ ಮಾಡಿವೆ ಎಂದರೆ ತಪ್ಪೇ ಇಲ್ಲ. ಸಿನಿಮಾದಲ್ಲಿ ಆಗೋ ಹಾಗೆ ನಮ್ಮ ಆಫೀಸಿನಲ್ಲಿ ಕಳೆದ ಐದು ವಾರಗಳಲ್ಲಿ ಅದೆಷ್ಟೋ ಬದಲಾವಣೆಗಳು ನಡೆದು ಹೋದವು, ಇದ್ದುದರಲ್ಲಿ ಸ್ಟೇಬಲ್ಲ್ ಆಗಿರೋ ವಿಡಿಯೋ ಡಿವಿಜನ್ನಲ್ಲಿ ಹೀಗಾದರೆ ಇನ್ನುಳಿದ ಕಡೆ ಹೇಗೆ ಎಂದು ಯಾರೂ ಊಹಿಸಿಕೊಳ್ಳಬಹುದು, ಅದೂ ಇನ್ನುಳಿದ ಕಂಪನಿಗಳಲ್ಲಿ ಅದರಲ್ಲೂ ಫೈನಾನ್ಸಿಯಲ್ ಇಂಡಸ್ಟ್ರಿಯಲ್ಲಂತೂ ಭರ್ಜರಿ ಕಷ್ಟವಂತೆ.

ನನ್ನ ಇನ್ ಬಾಕ್ಸುಗಳಲ್ಲಿ ಈಗಾಗಲೇ ಕೆಲಸ ಕಳೆದುಕೊಂಡ ಹಲವರ ರೆಸ್ಯುಮೆ ಬಂದು ಹೋಗಿವೆ. ಅವರಿಗೆ ಇಂತಲ್ಲಿ ಕೆಲಸ ಹುಡುಕಿ ಎನ್ನುವುದಾಗಲೀ ಅಥವಾ ಹೀಗೆ ಮಾಡಿ ಎಂದು ಹೇಳುವುದಾಗಲೀ ಈಗ ಮೊದಲಿನಷ್ಟು ಸುಲಭವಂತೂ ಅಲ್ಲ. ಜನವರಿ ಒಂದರಲ್ಲೇ ಅಮೇರಿಕದಲ್ಲಿ ಸುಮಾರು 600 ಸಾವಿರ ಜನ (ನಾನ್ ಫಾರ್ಮ್) ಪೇರೋಲ್ ನಿಂದ ಹೊರಗೆ ಬಂದರಂತೆ, ಇನ್ನು ಇದೇ ಗತಿ ಇನ್ನೊಂದೆರಡು ತಿಂಗಳು ಅಥವಾ ವರ್ಸ್ಟ್ ಎಂದರೆ ಇನ್ನೊಂದರೆ ಕ್ವಾರ್ಟರು ಮುಂದುವರೆದದ್ದೇ ಆದರೆ ಒಬ್ಬೊರನೊಬ್ಬರು ಕಿತ್ತು ತಿನ್ನೋ ಪರಿಸ್ಥಿತಿ ಬರೋದಂತೂ ನಿಜ. ಯಾವಾಗಲೂ ಸೊನ್ನೆಯಿಂದ ಕೆಳಗೆ ಕೊರೆಯುತ್ತಿರುವ ಛಳಿ ಇರುವ ನಮ್ಮೂರಿನಲ್ಲಿ ನಿನ್ನೆ ಮರ್ಕ್ಯುರಿ ಅರವತ್ತು ಡಿಗ್ರಿ (ಫ್ಯಾರನ್‌ಹೈಟ್) ದಾಟಿ ಮುಂದು ಹೋಯಿತೆಂದುಕೊಂಡು ನಾನು ಜನರೆಲ್ಲ ಶಾಪ್ಪಿಂಗ್ ಮಾಲ್‌ಗಳಲ್ಲಿ ತುಂಬಿರುತ್ತಾರೆ ಎಂದುಕೊಂಡದ್ದು ತಪ್ಪಾಗಿ ಹೋಯಿತು. ವಾಲ್‌ಮಾರ್ಟ್ ಮುಂದಿನ ಪಾರ್ಕಿಂಗ್ ಲಾಟ್‌ಗಳೂ ಖಾಲಿ ಇದ್ದುದು ಇಂತಹ ದಿನಗಳಲ್ಲಿ ದೊಡ್ಡ ಆಶ್ಚರ್ಯವೇ ಸರಿ. ಇವೆಲ್ಲ ಅತಿಕಷ್ಟದ ಫೈನಾನ್ಸಿಯಲ್ ಸಮಯ, ಇಂತಹ ಸಮಯದಲ್ಲಿ ನಾವೆಲ್ಲ ಸರ್ವೈವಲ್ ಮೋಡ್‌ಗೆ ಹೋಗಿಬಿಟ್ಟಿರೋದು ಸಹಜವೇ.

ಈ ಕಷ್ಟದ ಆರ್ಥಿಕ ದಿನಗಳಲ್ಲಿ ಒಬ್ಬರಿಗೊಬ್ಬರಿಗೆ ಫ್ಯಾಮಿಲಿ ಸಪೋರ್ಟ್ ಖಂಡಿತ ಬೇಕೇ ಬೇಕಾಗುತ್ತದೆ. ಬೇಕಾದಷ್ಟು ಇದ್ದು, ತಿಂದು-ತೇಗಿ, ದುಂದು ವೆಚ್ಚ ಮಾಡುವ ದಿನಗಳಿಗಿಂತ ಕಠಿಣ ಆರ್ಥಿಕ ಪರಿಸ್ಥಿತಿ ಇರುವ ದಿನಗಳಲ್ಲೇ ಫ್ಯಾಮಿಲಿಗಳು ಒಬ್ಬರಿಗೊಬ್ಬರು ಕಷ್ಟಕ್ಕಾಗುವುದು ಎನ್ನುವುದು ನನ್ನ ಥಿಯರಿ. ಈ ದಿನಗಳಲ್ಲಿ ಎಷ್ಟೇ ಕಷ್ಟ ಬಂದರೂ ನಾವು ಒಬ್ಬೊರಿಗೊಬ್ಬರು ಆಗಿಯೇ ತೀರುತ್ತೇವೆ ಎನ್ನೋದು ಒಂದು ಕುಟುಂಬದ ಮೂಲ ಮಂತ್ರವಾಗಿ, ಜನರೆಲ್ಲ ದಿನ-ವಾರ-ತಿಂಗಳುಗಳನ್ನು ನಿಧಾನವಾಗಿ ತಳ್ಳುತ್ತಲಿರುವಾಗ ಜಗಳ-ವೈಮನಸ್ಯ-ವಿಚ್ಛೇದನಗಳಿಗೆ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಎಂತಲೇ ಹೇಳಬೇಕಾಗುತ್ತದೆ. ಜೊತೆಗೆ ಪ್ರತಿಯೊಂದನ್ನು ಒಟ್ಟಿಗಿಡುವುದಕ್ಕೆ ಎಷ್ಟು ದುಡ್ಡು ತೆರಬೇಕಾಗುತ್ತದೆಯೋ ಅದನ್ನೆಲ್ಲ ವಿಭಜಿಸೋದಕ್ಕೂ ಹೆಚ್ಚೂಕಡಿಮೆ ಅಷ್ಟೇ ಖರ್ಚಾಗುತ್ತದೆ ಎಂದರೂ ತಪ್ಪಲ್ಲ.

ನಮ್ಮ ಇನ್‌ವೆಷ್ಟ್‌ಮೆಂಟ್ ಪೋರ್ಟ್‌ಫೋಲಿಯೋ ಆಗಲೀ, ನಮ್ಮ ಉಳಿತಾಯವನ್ನಾಗಲೀ ನೋಡಿದರೆ ಕಣ್ಣಲ್ಲಿ ನೀರೇ ಬರುತ್ತೆ. ಕಳೆದ ವರ್ಷ ಪ್ರತಿಶತ ನಲವತ್ತರಷ್ಟು ಮೌಲ್ಯದಲ್ಲಿ ಕುಸಿದಿದ್ದ ನಂಬರುಗಳಿಗೆ ಈ ವರ್ಷದ ಜನವರಿಯಲ್ಲಿ ಮತ್ತೂ ಹತ್ತು ಪರ್ಸೆಂಟ್ ಕಡಿತ. ಇವೆಲ್ಲ ಇಳಿಮುಖದಿಂದಾಗಿ ನನ್ನಂತಹವರಿಗೆ ಸುಮಾರು ಆರೇಳು ವರ್ಷಗಳಲ್ಲಿ ದುಡಿದು-ಕೂಡಿಹಾಕಿದ್ದು ಏನೇನೂ ಇಲ್ಲ ಎನ್ನುವಂಥ ಪೆಚ್ಚು ಅನುಭವ. ಹ್ಞೂ, ಇವತ್ತಲ್ಲ ನಾಳೆ ಮುಂದೆ ಬಂದೇ ಬರುತ್ತೆ ಆದರೆ ನಮ್ಮ ನಂಬರುಗಳೆಲ್ಲ ಈಗ ಏಳು ವರ್ಷದ ಕೆಳಗೆ ಹೋಗಿವೆ, ಇದು ಇನ್ನು ಮೇಲೆ ಬರಲು ಮೂರು ವರ್ಷಗಳಾದರೂ ಬೇಕು, ಅಲ್ಲಿಗೆ ಈ ಹತ್ತು ವರ್ಷಗಳಲ್ಲಿ ನಾವು ಕಡಿದ್ದು ಹಾಕಿದ್ದು ಶೂನ್ಯ, ಅಷ್ಟೇ. ಈ ನಂಬರುಗಳಿಗೆಲ್ಲ ನನ್ನ ಧಿಕ್ಕಾರವಿರಲಿ, ಅದರ ಬದಲಿಗೆ ಚಿರಾಸ್ತಿ (immovable assett), ಅನ್ನೋದನ್ನೇನಾದರೂ ಗಳಿಸಿದ್ದರೆ ಅದು ಇಷ್ಟರ ಮಟ್ಟಿಗೆ ಕುಸಿಯುತ್ತಿರಲಿಲ್ಲ. ಉದಾಹರಣೆಗೆ ಹತ್ತು ವರ್ಷದ ಹಿಂದೆ ಒಂದೈದು ಎಕರೆ ತೋಟ ಮಾಡಬಹುದಾದ ಭೂಮಿಯನ್ನು ಖರೀದಿಸಿ ಅದರಲ್ಲಿ ಥರಥರನ ವಾಣಿಜ್ಯ ಬೆಳೆಯನ್ನು ಆರಂಭಿಸಿದ್ದರೆ ಇವತ್ತಿಗೆ ಒಂದು ಗಂಜಿ ಕಾಸಿನ ಆದಾಯವಾದರೂ ಬರುತ್ತಿತ್ತು.

ನಾವು ಮೊದಲೆಲ್ಲ - ’ಅಮೇರಿಕಕ್ಕೆ ಏಕೆ ಬಂದಿರಿ?’ ಎನ್ನುವ ಪ್ರಶ್ನೆಯನ್ನು ಕಠಿಣವಾದ ಪ್ರಶ್ನೆ ಎಂದುಕೊಳ್ಳುತ್ತಿದ್ದೆವು, ಈಗ ’ಭಾರತಕ್ಕೆ ಏಕೆ ಹಿಂತಿರುಗಿ ಹೋಗಬೇಕು?’ ಎನ್ನುವುದು ಅದಕ್ಕಿಂತ ಕಠಿಣ ಪ್ರಶ್ನೆಯಾಗಿ ತೋರುತ್ತಿದೆ. ಮೊದಲೆಲ್ಲ ಹಿಂತಿರುಗಿ ಹೋಗೋದಾದರೂ ಒಂದು ಆಫ್ಷನ್ನ್ ಆಗಿತ್ತೋ ಏನೋ, ಈಗಂತೂ - ಥ್ಯಾಂಕ್ಸ್ ಟು ಹತ್ತು ವರ್ಷದ ಹಿಂದಿನ ನಂಬರ್ಸ್ - ನಾವು ಹಿಂತಿರುಗಿ ಹೋಗೋದು ಸಾಧ್ಯವೇ? ಎಲ್ಲಿಗೆ, ಹೇಗೆ, ಯಾವ ಕೆಲಸಕ್ಕೆ, ಯಾವ ಊರಿಗೆ, ಎಂದು - ಮೊದಲಾದ ಪ್ರಶ್ನೆಗಳಿಗೆ ಯಾವ ಉತ್ತರವಂತೂ ತೋರೋದಿಲ್ಲ. ಅಮೇರಿಕದ ವ್ಯವಸ್ಥೆಯನ್ನು ಆಧರಿಸಿ ಉಳಿದ ವ್ಯವಸ್ಥೆಗಳು, ಉಳಿದವನ್ನು ಆಧರಿಸಿ ಆಮೇರಿಕದ್ದು ಎನ್ನುವಲ್ಲಿ ಇಲ್ಲಿನ ಕಷ್ಟ ಎಲ್ಲಾ ಕಡೆಗಿದೆ - ಬೆಂಗಳೂರಿನಿಂದ ಹಿಡಿದು ಬೀಜಿಂಗ್‌ನವರೆಗೆ ಎಲ್ಲರಿಗೂ ಬಿಸಿ ಈಗಾಗಲೇ ತಟ್ಟಿದೆ. ಕೆಲಸ ಕಳೆದುಕೊಳ್ಳುವವರ ಲೆಕ್ಕ ಮುಗಿಲು ಮುಟ್ಟಿದೆ ಹಾಗೇ ಕಂಪನಿಗಳೂ ಸಹ ಸರ್ವೈವಲ್ಲ್ ಮೋಡಿಗೆ ಹೋಗಿ ಬಿಟ್ಟಿವೆ, ಅನಗತ್ಯ ಖರ್ಚು ವೆರ್ಚಗಳು ಈಗಾಗಲೇ ನಿಂತು ಹೋಗಿವೆ. ನಮ್ಮ ಕಂಪನಿಯಲ್ಲಿ ಮೊದಲೆಲ್ಲ ಟೀಮ್ ಲಂಚ್ ಅನ್ನೋದನ್ನು ನನ್ನಂಥವರು ಎಷ್ಟು ಸಾರಿ ಬೇಕಾದರೂ ಸುಲಭವಾಗಿ ಹೊಂದಿಸಿಕೊಳ್ಳಬಹುದಾಗಿತ್ತು, ಈಗ ಅವೆಲ್ಲಕ್ಕೂ ಎಕ್ಸಿಕ್ಯೂಟಿವ್ ಪರ್ಮಿಷನ್ನ್ ಬೇಕಾಗಿದೆ. ನಮ್ಮ ಆಫೀಸಿನ ಉಳಿದೆಲ್ಲ ಡಾಕ್ಯುಮೆಂಟುಗಳಿಗೆ ಹೋಲಿಸಿದಾಗ spreadsheet rules! ಇಲ್ಲಿರುವ ನಂಬರುಗಳೇ ಪ್ರತಿಯೊಂದನ್ನು ನಿರ್ಧರಿಸೋದು, ಇಲ್ಲಿರುವ ನಂಬರುಗಳಿಗಿಂತ ಹೊರತಾಗಿ ಇನ್ನೇನೂ ಇಲ್ಲ.

1930 ರ ದಶಕದ ಡಿಪ್ರೆಷ್ಷನ್ನಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಚೀನಾ ದೇಶದಲ್ಲಿ ಎಷ್ಟೋ ಜನ ತಮ್ಮ ಮನೆ-ಜಮೀನುಗಳನ್ನು ಮಾರಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೆಚ್ಚಿನ ಉತ್ಪನ್ನಕ್ಕೆಂದು ಹಣ ತೊಡಗಿಸಿದ್ದರಂತೆ, ಅವರದ್ದೆಲ್ಲ ಪರಿಸ್ಥಿತಿ ಈಗ ಹೇಗಿದ್ದಿರಬಹುದು? ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಮಾರ್ಕೆಟ್ಟಿನಲ್ಲಿ ತಮ್ಮ ಹಣವನ್ನು ತೊಡಗಿಸಿ ಶಾರ್ಟ್ ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗಿದ್ದಾಗ, ಈಗಿನ ರಿಸೆಷನ್ನುಗಳು ಹೆಚ್ಚು ಜನರನ್ನು ತೊಂದರೆಗೀಡು ಮಾಡುತ್ತವೆ ಎನ್ನುವುದು ನನ್ನ ಲೆಕ್ಕ. ಸರ್ಕಾರಿ ಹಾಗೂ ಖಾಸಗಿ ನೌಕರರ ಸಂಖ್ಯೆಯಲ್ಲೂ ಬಹಳಷ್ಟು ವ್ಯತ್ಯಾಸವಾಗಿದೆ. ಮೊದಲೆಲ್ಲ ಸರ್ಕಾರದ ಕೆಲಸವೇ ಉನ್ನತ ಕೆಲಸ ಎನ್ನುವ ದಕ್ಷಿಣ ಭಾರತದಲ್ಲಿ ಇಂದು ಬೇಕಾದಷ್ಟು ಖಾಸಗಿ ಕೆಲಸಗಳು ಹುಟ್ಟಿಕೊಂಡಿವೆ (ಎಂಭತ್ತು, ತೊಂಭತ್ತರ ದಶಕದಲ್ಲಿ ಬದಲಾದ ಅಂಕಿಅಂಶಗಳ ಸಹಾಯದಿಂದ). ಬೆಂಗಳೂರು, ಮೈಸೂರು ಎನ್ನುವ ನಮ್ಮ ನೆರೆ ಊರುಗಳಲ್ಲಿ ಮಾರ್ಟ್‌ಗೇಜ್‌ನಲ್ಲಿ ಮನೆ ತೆಗೆದುಕೊಂಡವರ ಸಂಖ್ಯೆ ಹೆಚ್ಚಿದೆ. ನಾವು ಸಾಲವಿಲ್ಲದ ಕುಟುಂಬ ಎನ್ನುವಲ್ಲಿ, ಸಾಲದ ಮೇಲೇ ನಾವು ನಿಂತಿರೋದು ಎನ್ನುವ ಪ್ರಸಂಗ ಬಂದಿದೆ. ಹಾಗಿರುವಲ್ಲಿಯೇ ನಮ್ಮ-ನಿಮ್ಮ ಡಿಪೆಂಡೆನ್ಸಿ ಗ್ಲೋಬಲ್ ಮಾರ್ಕೆಟ್ ಮೇಲೆ ಹೆಚ್ಚಿರೋದು. ಹಳ್ಳಿಯ/ಪಟ್ಟಣದ ವರ್ಷದ ಕಂದಾಯವನ್ನು ಕಟ್ಟಿಕೊಂಡು ಪೆನ್ಷನ್ ಹಣದಲ್ಲಿ ಜೀವನ ಸಾಗಿಸುತ್ತಿರುವ ಪೋಷಕರಿಗೂ ತಾವು ಕೆಲಸ ಮಾಡುತ್ತಿರುವ ಕಾರ್ಪೋರೇಷನ್ನುಗಳ ಹಾಗೇ ಎಲ್ಲವೂ ಸಾಲದ ಮೇಲೆ ನಿಂತು ತಿಂಗಳು-ತಿಂಗಳಿಗೆ ಕಂತು ಕಟ್ಟುವ ಮುಂದಿನ ಜನರೇಷನ್ನಿಗೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಗೆ ಒಂದಿಷ್ಟು ಜನರ ಜೀವನ ಶೈಲಿ ದಿಢೀರ್ ಬದಲಾಗಿ ಹೋಗಿದ್ದೂ ಇದಕ್ಕೆಲ್ಲ ಪುಷ್ಟಿ ತಂದಿದೆ, ಅಲ್ಲಲ್ಲಿ ನಾಯಿಕೊಡೆಗಳ ಹಾಗೆ ಹುಟ್ಟಿದ ಕಂಪನಿಗಳಲ್ಲಿ ಕೆಲಸ ಮಾಡುತ್ತ ನಮ್ಮೂರಿನ ಹುಡುಗ-ಹುಡುಗಿಯರು ವರ್ಷಕ್ಕೆ ಲಕ್ಷಾಂತರ ಎಣಿಸೋದಕ್ಕೆ ಶುರು ಮಾಡಿದ ಮೇಲೆ ಆರ್ಥಿಕ ಅವಲಂಭನೆಗೆ ಹೊಸದೊಂದು ಅರ್ಥ ಹುಟ್ಟಿದೆ.

ಕಾದುಕೊಂಡು ಕುಳಿತಿರೋದನ್ನು ಬಿಟ್ಟು ಇನ್ನೇನನ್ನು ಮಾಡಲು ಸಾಧ್ಯ ಎಂದು ಯೋಚಿಸಿದರೆ ಹೆಚ್ಚು ಆಪ್ಷನ್ನುಗಳೇನು ತೋಚುತ್ತಿಲ್ಲ. ಡ್ರಾಸ್ಟಿಕ್ ಬದಲಾವಣೆಗಳನ್ನು ಮಾಡುವ ಮೊದಲು ಬೇಕಾದಷ್ಟು ಆಲೋಚಿಸಿದರೂ ಯಾವ ದಾರಿಯನ್ನು ಆಯ್ದುಕೊಂಡರೂ ಹೊಡೆತ ಬೀಳುವುದಂತೂ ಗ್ಯಾರಂಟಿ ಆಗಿದೆ. ನೀರಿನಲ್ಲಿ ಮುಳುಗಿದೋರಿಗೆ ಛಳಿಯೇನು ಮಳೆಯೇನು ಅಂತಾರಲ್ಲ ಹಾಗೆ ಸುಮ್ಮನಿರಬೇಕು, ಅಷ್ಟೇ.

***

An executive in my company..."I don't mind the change (move), thank god I have a job, it is good to be busy!'

Sunday, November 23, 2008

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ


ವರ್ಷದ ಆಗಷ್ಟು ಎರಡರ ಮಧ್ಯಾಹ್ನ 1:11:25 (August 02, 08) ಇದ್ದ ನ್ಯಾಷನಲ್ ಸಾಲದ ಗಡಿಯಾರದ ಪ್ರಕಾರ US ನ ಪ್ರತಿಯೊಂದು ಫ್ಯಾಮಿಲಿಯ ದೇಶದ ಸಾಲದ ಪಾಲು ಸುಮಾರು 81 ಸಾವಿರ ಡಾಲರುಗಳು. ಟೈಮ್ ಸ್ಕ್ವಯರ್ ಹತ್ತಿರದಲ್ಲಿದ್ದ ಈ ಗಡಿಯಾರದ ಚಿತ್ರವನ್ನು ನಾನು ಬಹಳ ವರ್ಷಗಳಿಂದ ತೆಗೆಯಬೇಕು ಎಂದುಕೊಂಡರೂ ಆಗದಿದ್ದುದು ಕೊನೆಗೆ ೨೦೦೮ ರಲ್ಲಿ ಕೈಗೂಡಿತು, ಆದರೆ ಏನಾಶ್ಚರ್ಯ ಈ ಗಡಿಯಾರದ ಅವಧಿಯೂ ಮುಗಿಯುತ್ತ ಬಂದಹಾಗಿದೆಯಲ್ಲ ಎಂದುಕೊಂಡವನಿಗೆ ನನ್ನ ಊಹೆಗೆ ತಕ್ಕಂತೆ ಈ ಗಡಿಯಾರದ ಡಿಜಿಟ್ಟುಗಳೆಲ್ಲ "ಖಾಲಿ" ಆಗಿ ಮತ್ತೆ ಈ ಗಡಿಯಾರದ ಡಿಜಿಟ್ಟುಗಳನ್ನು ಹೆಚ್ಚಿಸಬೇಕಾಗಿ ಬಂದಿತೆಯಂತೆ. ಅಂದರೆ ಈ ದೇಶದ ಸಾಲ ಹತ್ತು ಟ್ರಿಲಿಯನ್ ಡಾಲರ್‌ಗಳಿಗೂ ಹೆಚ್ಚು!

ಈ ಗಡಿಯಾರದ ಮೂಲ Durst Organization ಹೇಳಿಕೆ ಪ್ರಕಾರ ಮುಂದಿನ ವರ್ಷ ಇದರಲ್ಲಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾರಂತೆ, ಹೀಗೆ ಹೆಚ್ಚಿಸುವ ಸಂಖ್ಯೆಗಳ ಬಳಕೆ ಇನ್ನೆಷ್ಟು ಬರುತ್ತದೋ ಕಾದು ನೋಡಬೇಕು.

ಅಂದಹಾಗೆ ಈ ಗಡಿಯಾರದ ಹಿಂದಿನ ತತ್ವವನ್ನು ಪಂಡಿತರಿಗೆ ಬಿಡೋಣ, ಅಂಥವರು ಈ ಬರಹದ ಓದುಗರ ಸಮುದಾಯದಲ್ಲಿದ್ದಲ್ಲಿ ನಮಗೂ ಒಂದಿಷ್ಟು ವಿವರವನ್ನು ತಿಳಿಸಬಾರದೇಕೆ?

Sunday, November 16, 2008

ತುಮಕೂರಿನ ಶಾಲೆಯೂ ಬಡ್‌ಲೇಕಿನ ವೈನ್ ಅಂಗಡಿಯೂ...

ನವೆಂಬರ್ ಮಾಸದಲ್ಲಿ ಕನ್ನಡ-ಕನ್ನಡಿಗರ ಬಗ್ಗೆ ಬರೆಯದಿದ್ದರೆ ಅಪಚಾರವಾದಂತಲ್ಲವೇ?! ನಮ್ಮ ಕನ್ನಡಿಗರು ಯಾರು ಎಂದು ವ್ಯಾಖ್ಯಾನಿಸೋದು ಹಾಗಿರಲಿ, ದೇಶ-ವಿದೇಶಗಳ ಜನರಿಗೆ ವಿದ್ಯೆ ಹಂಚುವ ನಮ್ಮ ಕರುನಾಡಿನ ಸಂಸ್ಥೆಗಳಲ್ಲಿ ಓದಿದವರನ್ನು, ಕೊನೇಪಕ್ಷ ಕರ್ನಾಟಕದಲ್ಲಿ ಒಂದೈದು ವರ್ಷ ಕಳೆದವರನ್ನು ಕನ್ನಡಿಗರು ಎಂದು ನಾವು ಗಣನೆಗೆ ತೆಗೆದುಕೊಂಡಿದ್ದೇ ಆದರೆ ಐದು ಕೋಟಿ ಕನ್ನಡಿಗರ ಸಂಖ್ಯೆ ಬೆಳೆಯೋದಂತೂ ನಿಜ, ಆದರೆ ಕರ್ನಾಟಕದಲ್ಲಿ ಒಂದೈದು ವರ್ಷ ಓದಿ ಬೆಳೆದರೂ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಅನ್ನೋ ಅಷ್ಟು ಮಟ್ಟಿಗೆ ಮಾತ್ರ ನಮ್ಮಲ್ಲಿಯ ವಿಸಿಟರುಗಳಿಗೆ ಕನ್ನಡ ಕಲಿಸೋದು ನಮ್ಮ ಉದಾರತೆ ಅಲ್ಲದೇ ಮತ್ತಿನ್ನೇನು?

ನಾವಿರುವ ಫ್ಲಾಂಡರ್ಸ್ ಊರಿನ ಅದೇ ಮೌಂಟ್ ಆಲಿವ್ ಟೌನ್‌ಶಿಪ್‌ಗೆ ಹೊಂದಿಕೊಂಡಿಂತಿರುವ ಊರೇ ಬಡ್ ಲೇಕ್. ಒಂದು ಎಂಟು ಸಾವಿರ ಜನರಿರುವ ಪುಟ್ಟ ಊರು, ಇಲ್ಲಿ ನಾವು ಕೆಲವು ಅಂಗಡಿಗಳಿಗೆ ಹೋಗಿ ಬರೋದು ಇದೆ, ಅವುಗಳಲ್ಲಿ ಸ್ಯಾಂಡಿಸ್ ಡಿಸ್ಕೌಂಟ್ ಲಿಕರ್ ಶಾಪ್ (Sandy's) ಕೂಡಾ ಒಂದು. ನಾನು ಮೊದಲು ಹೋದಾಗ ಇದು ಭಾರತೀಯ ಮೂಲದವರೊಬ್ಬರು ನಡೆಸುತ್ತಿರುವ ಸಣ್ಣ ಬಿಸಿನೆಸ್ ಎಂದು ಗೊತ್ತೇ ಇರಲಿಲ್ಲ, ಆ ಬಗ್ಗೆ ತಲೆಕೆಡಿಸಿಕೊಂಡಿರಲೂ ಇಲ್ಲ. ನಂತರ ಭೇಟಿ ನೀಡಿದಾಗ ಅಂಗಡಿಯ ಓನರ್ ಅನ್ನು ಕೇಳಿಯೇ ಬಿಟ್ಟೆ (ನಮ್ಮ ಸಂಭಾಷಣೆ ಇಂಗ್ಲೀಷ್-ಹಿಂದಿ ಮಿಶ್ರ ಭಾಷೆಯಲ್ಲಿ ನಡೆಯುತ್ತಿತ್ತು) - ತಾವು ಎಲ್ಲಿಯವರು ಎಂಬುದಾಗಿ. ಅವರು ಗುಜರಾತಿನ ಮೂಲದವರು ಎಂಬುದು ಗೊತ್ತಾಯಿತು. ನನ್ನ ಬಗ್ಗೆ ವಿಚಾರಿಸಿದ್ದಕ್ಕೆ ನಾವು ಕರ್ನಾಟಕದವರು ಎಂದು ಪರಿಚಯಿಸಿಕೊಂಡೆ. ’ಕರ್ನಾಟಕದಲ್ಲಿ ಎಲ್ಲಿ?’ ಎಂದು ಕೇಳಿದ್ದಕ್ಕೆ ಆಶ್ಚರ್ಯವಾಗಿ ’ಶಿವಮೊಗ್ಗ’ ಎಂದು ಉತ್ತರಕೊಡಲು, ’I know that place!' ಎಂಬ ಉತ್ತರ ಬಂತು.

ಶಿವಮೊಗ್ಗದ ಬಗ್ಗೆ ಹೇಗೆ ಗೊತ್ತು ಎಂದು ಕೆದಕಿ ಕೇಳಲು, ಅವರು ತುಮಕೂರಿನ ಸಿದ್ಧಗಂಗಾ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದೂ ತಿಳಿಯಿತು. ಉದ್ದೇಶ ಪೂರ್ವಕವಾಗಿ ಕೇಳಿದ ನನ್ನ ಮುಂದಿನ ಪ್ರಶ್ನೆ - ಕನ್ನಡದ ಪೆನೆಟ್ರೇಷನ್ ಅಥವಾ ಪ್ರಚಾರದ ಬಗ್ಗೆ - ’ಹಾಗಾದರೆ ನಿಮಗೆ ಕನ್ನಡ ಬರುತ್ತೆ!’ ಎನ್ನುವುದಕ್ಕೆ ’ಸ್ವಲ್ಪ-ಸ್ಪಲ್ಪ ಆತಾ ಹೈ’ ಎನ್ನುವ ಉತ್ತರ ಬಂತು. ಅವರ ಶ್ರೀಮತಿಯವರ ಹೆಸರು ಸಂಧ್ಯಾ ಎಂದು, ಅದನ್ನೇ ಬದಲಾಯಿಸಿ Sandy ಮಾಡಿಕೊಂಡಿದ್ದೂ ಗೊತ್ತಾಯಿತು.

***

ನಮ್ಮ ಹುಟ್ಟು-ಬೆಳವಣಿಗೆ-ವಿದ್ಯಾಭ್ಯಾಸ ಹಾಗೂ ನಾವು ಎಲ್ಲಿ (ಎಲ್ಲೆಲ್ಲಿ) ನೆಲೆಸುತ್ತೇವೆ ಎನ್ನೋದನ್ನು ಯೋಚಿಸಿಕೊಂಡಾಗ ಬಹಳಷ್ಟು ವಿಚಾರಗಳು ತಲೆತಿನ್ನತೊಡಗುತ್ತವೆ. ಭಾರತೀಯ ಸಂಜಾತ ಇಂಜಿನಿಯರ್ ಒಬ್ಬರು ಅಮೇರಿಕದ ಒಂದು ಸಣ್ಣ ಪಟ್ಟಣದಲ್ಲಿ ಡಿಸ್ಕೌಂಟ್ ಲಿಕರ್ ಎನ್ನುವ ಸ್ಮಾಲ್ ಬಿಸಿನೆಸ್ ನಡೆಸುತ್ತಿರುವುದು ಇಲ್ಲಿಯ ಚರ್ಚೆಯ ವಿಷಯ. ಪ್ರತಿಯೊಬ್ಬರದೂ ಅವರವರ ಜೀವನ ಶೈಲಿ - ಅದರಲ್ಲಿ ತಪ್ಪೇನೂ ಇಲ್ಲ.

ಇಲ್ಲಿಗೆ ನನಗೆ ಹೊಳೆದ ಅಂಶಗಳನ್ನು ಇಲ್ಲಿ ಬರೆದು ಹಾಕುತ್ತೇನೆ, ಅವುಗಳು ಯಾವುದೇ ರೀತಿಯ ಚರ್ಚೆಯನ್ನು ಮೂಡಿಸಲೂ ಬಹುದು, ಇರದೆಯೂ ಇರಬಹುದು:
- ನಾನು ಇಂಜಿನಿಯರ್ ಆಗುತ್ತೇನೆ ಎಂದು ಕನಸುಕಂಡು ಭಾರತೀಯ ವ್ಯವಸ್ಥೆಯಲ್ಲಿ ಇಂಜಿನಿಯರ್ ಆಗಿ ಹೊರಬಹುದಾದ ಪಧವೀದರನ ಹಿನ್ನೆಲೆ
- ಭಾರತದಲ್ಲಿ ಒಬ್ಬ ಇಂಜಿನಿಯರ್ ಅನ್ನು ಹೊರತರಲು ಸಮಾಜ ತೊಡಗಿಸುವ ಸಂಪನ್ಮೂಲಗಳು
- ಅಮೇರಿಕಕ್ಕೆ ಕನಸುಗಳನ್ನು ಹೊತ್ತುಕೊಂಡು ಬಂದು ಇಲ್ಲಿಯ ವ್ಯವಸ್ಥೆಯಲ್ಲಿ ಒಂದು ಸಣ್ಣ ಉದ್ಯಮವನ್ನು ಹುಡುಕಿಕೊಂಡು ಇಲ್ಲೇ ನೆಲೆಸುವ ನಿರ್ಧಾರವನ್ನು ಕೈಗೊಳ್ಳುವುದರ ಹಿಂದಿರುವ ಮನಸ್ಥಿತಿ
- ’ತಾನೇನು ಆಗಬೇಕು’ ಎನ್ನುವ ಗುರಿ ಹಾಗೂ ’ತಾನೆಲ್ಲಿ ತಲುಪಬಲ್ಲೆ / ತಲುಪಿದ್ದೇನೆ’ ಎನ್ನುವ ನಿಜ ಸ್ಥಿತಿಗಳ ವ್ಯತ್ಯಾಸ, if any
- ಅಮೇರಿಕದಲ್ಲಿದ್ದವರದೆಲ್ಲ ಗ್ರ್ಯಾಂಡ್ ಜೀವನವವಲ್ಲ ಎನ್ನುವ ಸಮಜಾಯಿಷಿ, ಒಂದು ಸಣ್ಣ ಉದ್ಯಮ ಬಹಳ ಫ್ರಾಫಿಟೆಬಲ್ ಆಗಿಯೂ ಇರಬಹುದು ಹಾಗೆ ಇರದಿರಲೂ ಬಹುದು
- ಹೀಗೆ ವಲಸೆಗಾರರಾಗಿ ಬಂದವರು ಮತ್ತು ಅವರ ಮುಂದಿನ ಸಂತತಿಗಳು ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ನೆಲೆನಿಲ್ಲಬಹುದಾದ ಬೆಳವಣಿಗೆ (ಒಬ್ಬ ಉದ್ಯಮದಾರ ಅಥವಾ ಪ್ರೊಫೆಷನಲ್ ಕುಟುಂಬದ ಹಿನ್ನೆಲೆಯವರ ಸಂತತಿ ಹಾಗೇ ಮುಂದುವರೆಯಬಹುದು ಎನ್ನುವ ಕಲ್ಪನೆಯ ವಿರುದ್ಧ ಹಾಗೂ ಪೂರಕವಾಗಿ)

***

’ನೀನು ದೊಡ್ಡವನಾದ ಮೇಲೆ ಏನಾಗ್ತೀಯೋ?’ ಅಂದ್ರೆ ನಾನಂತೂ ಮೊದಲೆಲ್ಲ ’ಪೈಲಟ್!’ ಅಂತಿದ್ದೆ. ನಮ್ಮ ವಂಶದವರು ಯಾವತ್ತೂ ಹತ್ತಿ ಕೂರದಿದ್ದ ಆಕಾಶಪಕ್ಷಿಯನ್ನು ನಡೆಸುವ ಕಾಯಕವೆಂದರೆ ಸುಮ್ಮನೆಯೇ? ಅವೆಲ್ಲ ನಾಲ್ಕನೇ ಕ್ಲಾಸು ಮುಗಿಸಿ ಮಾಧ್ಯಮಿಕ ತರಗತಿಗಳನ್ನು ತಲುಪುತ್ತಿದ್ದ ಹಾಗೆ ಬದಲಾದ ಹಾಗೆ ನೆನಪು. ನಾನು ಇವತ್ತು ನಡೆಸಿಕೊಂಡು ಬರುತ್ತಿರುವ ಪ್ರಾಜೆಕ್ಟ್ ಮ್ಯಾನೇಜರ್ ಕೆಲಸವನ್ನಂತೂ ನಾನೂ ಒಂದು ದಿನ ಮಾಡಿಕೊಂಡಿರುತ್ತೇನೆ ಎಂದು ಕನಸನ್ನಂತೂ ಕಂಡಿದ್ದಿಲ್ಲ ಆದರೆ ಎಲ್ಲೋ ಇದ್ದವನು ನಾನು ಇಲ್ಲಿಗೆ ಬಂದು ತಲುಪಿದ್ದು ಈ ಸ್ಥಿತಿಯಲ್ಲಿ ಈಗ ಇರೋದಂತೂ ನಿಜವೇ.

ನಮ್ಮ ಡೆಸ್ಟಿನಿ ನಮ್ಮ ಮೂಲ ಇವುಗಳ ಬಗ್ಗೆ ನಿಮಗಂತೂ ನಂಬಿಕೆ ಇದೆಯೋ ಇಲ್ಲವೋ. ಎಲ್ಲೋ ಅಹಮದಾಬಾದಿನ ಆಸುಪಾಸಿನಲ್ಲಿ ಹುಟ್ಟಿ ಬೆಳೆದು ತುಮಕೂರಿನಲ್ಲಿ ಪದವೀಧರನಾಗಿ ಮುಂದೆ ಈ ಬಡ್‌ಲೇಕಿನ ಅಂಗಡಿಯಿಂದ ಜನರಿಗೆ ಮದ್ಯ ಸರಬರಾಜು ಮಾಡುವ Sandy's Liquor ಅಂಗಡಿಯ ಮಾಲಿಕನ ನಸೀಬನ್ನು ನೆನೆದು ಹೀಗೆ ಬರೆಯಬೇಕಾಯಿತಷ್ಟೇ.

Sunday, September 07, 2008

ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು

ಆಫೀಸಿನಲ್ಲಿ ತಲೆ ಎತ್ತಿ ನೋಡಿದೆ: ಸುಮಾರು 25X50 ಚದುರ ಅಡಿ ಆವರಣದಲ್ಲಿ ನೂರಕ್ಕಿಂತಲೂ ಹೆಚ್ಚು ಟ್ಯೂಬ್‌ಲೈಟುಗಳು ಕಣ್ಣು ಕುಕ್ಕುತ್ತಿವೆ. ನಮ್ಮ ವಾಕ್‌ವೇ (ಕಾರಿಡಾರ್) ಗಳಲ್ಲಂತೂ ಎರಡೆರಡು ಅಡಿಗಳಿಗೊಂದು ಮರ್ಕ್ಯುರಿ ಲೈಟ್ ಸೀಲಿಂಗ್‌ನ ಹೊಟ್ಟೆಯಲ್ಲಿನ ಹೊಕ್ಕಳಿನ ಹಾಗೆ ಕೋರೈಸುತ್ತದೆ. ಎಲಿವೇಟರುಗಳಲ್ಲಿ ಐದಡಿ ಚದರವಿರುವ ಸ್ಥಳದಲ್ಲಿ ಒಂಭತ್ತು ಲೈಟುಗಳು. ಆಫೀಸಿನ ವಾತಾವರಣದಲ್ಲಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸದೇ ಹೋದರೆ ಹಗಲೋ ರಾತ್ರಿಯೋ ಗೊತ್ತಾಗುವ ಹಾಗೇ ಇಲ್ಲ.

ಸುಮಾರು ಮುನ್ನೂರು ಮಿಲಿಯನ್ ಇರುವ ಅಮೇರಿಕನ್ ಜನಸಂಖ್ಯೆ ಬಳಸುವ ಇಂಧನ, ಶಕ್ತಿ ಸೌಲಭ್ಯಗಳು ಸುಮಾರು ಪ್ರಪಂಚದ ಕಾಲು ಭಾಗದಷ್ಟಿರಬಹುದು ಎಂದು ಎಲ್ಲೋ ಓದಿದ ನೆನಪು. ಆಫೀಸಿನ ಅಥವಾ ಮನೆಯ ವಾತಾವರಣದಲ್ಲಿ ಪವರ್ ಕಟ್ ಆಗುತ್ತದೆ ಎಂದು ಯಾವುದೇ ಮುನ್ನೆಚ್ಚರಿಕೆಯನ್ನು ನಾವು ಭಾರತದಲ್ಲಿದ್ದ ಹಾಗೆ ತೆಗೆದುಕೊಳ್ಳುತ್ತಿದ್ದಂತೆ ಇಲ್ಲಿ ತೆಗೆದುಕೊಳ್ಳುವುದಿಲ್ಲವಾದರೂ ಅಪರೂಪಕ್ಕೊಮ್ಮೆ ಚಂಡಮಾರುತವೋ, ಸುಂಟರಗಾಳಿಯೋ ಬೀಸಿ ಅಥವಾ ಜೋರಾಗಿ ಮಳೆ ಬಂದು ಕರೆಂಟು ಹೋಗೋದು ಇದೆ. ಅಕಸ್ಕಾತ್ ಹಾಗೇನೇ ಆದರೂ ಜನರೇಟರುಗಳು, ಯುಪಿಎಸ್‌ಗಳು ಮೊದಲಾದವುಗಳು ಅಪರೂಪಕ್ಕೊಮ್ಮೆ ದುಡಿಯಲು ಸಿಗುವ ತಮ್ಮ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತವೆ.

ಈ ಮೇಲಿನ ಮಾತುಗಳನ್ನು NSG ಕಳೆದ 34 ವರ್ಷಗಳಿಂದ ಭಾರತದ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ಹೇಳಬೇಕಾಗಿ ಬಂತು. ಭಾರತದಂತಹ ಅಭಿವೃದ್ಧಿಪರ ದೇಶಗಳಿಗೆ "ಪವರ್" ಅಗತ್ಯ ಬಹಳ ಹೆಚ್ಚಿದೆ. ದಿನೇ ದಿನೇ ಹೆಚ್ಚುವ ಜನಸಂಖ್ಯೆ, ತಂತ್ರಜ್ಞಾನ ಮತ್ತೊಂದೇನೇ ಇದ್ದರೂ ಕತ್ತಲ ದಿನ ಮತ್ತು ರಾತ್ರಿಗಳು ಸಮಾಜದ ಉತ್ಪಾದನೆಯನ್ನೇ ಕುಂಠಿತಗೊಳಿಸಿವೆ. ಕೇವಲ ಇಲೆಕ್ಟ್ರಿಸಿಟಿ ಒಂದೇ ಅಲ್ಲ ಅದನ್ನು ಆಧರಿಸಿದ ಅನೇಕ ಬೆಳವಣಿಗೆಗಳಲ್ಲಿ ಭಾರತ ಹಿಂದಿದೆ. ಯಾವುದೇ ಸಾಮಾನ್ಯ ಮನೆವಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳಿಗೆ ಎಲೆಕ್ಟ್ರಿಸಿಟಿ ಕಡಿತ ಹಿಡಿಶಾಪವೆಂದೇ ಹೇಳಬೇಕು.

***

ನಮಗೆ ಎಲೆಕ್ಟ್ರಿಸಿಟಿ ಸಿಗಬೇಕಾದರೆ ಒಂದಲ್ಲ ಒಂದು ರೀತಿಯಿಂದ ಶಕ್ತಿಯ ಪರಿವರ್ತನೆ ನಡೆಯಲೇ ಬೇಕು. ಗಾಳಿ, ಸೋಲಾರ್, ನೀರು, ಉಷ್ಣತೆ (ಕಲ್ಲಿದ್ದಲು), ನ್ಯೂಕ್ಲಿಯರ್ ಮೊದಲಾದವುಗಳಿಂದ ಎಲೆಕ್ಟ್ರಿಕ್ ಎನರ್ಜಿ ಸಿಗಬಹುದಾದರೂ ಹೆಚ್ಚಿನ ದೇಶಗಳು ನ್ಯೂಕ್ಲಿಯರ್ ಮೂಲವೊಂದನ್ನು ಹೊರತುಪಡಿಸಿ ಮತ್ತಿನ್ನೆಲ್ಲವನ್ನೂ ಮೈಗೂಡಿಸಿಕೊಂಡಿವೆ. ಪರಿಸರವಾದಿಗಳು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದನ್ನು ತಡೆಯಬಹುದು, ಇಂದಲ್ಲ ನಾಳೆ ಖಾಲಿಯಾಗುವ ಕಲ್ಲಿದ್ದಲು ಎಲ್ಲರನ್ನೂ ಹೆದರಿಸಬಹುದು, ಯಥೇಚ್ಚವಾಗಿ ಸಿಗಬಹುದಾದ ಗಾಳಿ-ಸೂರ್ಯನ ಬೆಳಕಿನಿಂದ ವಿದ್ಯುತ್‌ಚ್ಛಕ್ತಿಯನ್ನು ಪಡೆಯುವುದು ನಿಧಾನವಾಗಿ ಬೆಳೆಯುತ್ತಿರಬಹುದು. ಅದೇ ನ್ಯೂಕ್ಲಿಯರ್ ಮೂಲಗಳಿಗೆ ಬಂದಾಗ ಎಲ್ಲವೂ ಸರಿ ಹೋದರೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿಯಂತ್ರಿಸಿದರೆ ಅಗಾಧವಾದ ಶಕ್ತಿಯ ಭಂಡಾರವನ್ನೇ ಪಡೆದಂತಾಗುವುದು ನಿಜ. ಆದರೆ ಒಂದೇ ಒಂದು ಸಣ್ಣ ತಪ್ಪಾದರೂ ಆ ದುರಂತ ಮಾನವಕುಲ ಊಹಿಸುವುದಕ್ಕಿಂತಲೂ ದೊಡ್ಡದಾದುದರಿಂದಲೇ ನ್ಯೂಕ್ಲಿಯರ್ ಶಕ್ತಿಯನ್ನು ಅದರ ಬಳಕೆ/ದುರ್ಬಳಕೆಯನ್ನು ತಡೆಯಲು ವಿಶ್ವದಾದ್ಯಂತ ಹಲವು ರಾಷ್ಟ್ರಗಳ ಸಂಘಟನೆಗಳು ನ್ಯೂಕ್ಲಿಯರ್ ಬೆಳವಣಿಗೆಯನ್ನು ಹದ್ದು ಕಾದಂತೆ ಕಾಯುತ್ತಿರುವುದು.

ಭಾರತ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಹಿ ಹಾಕದ, ಹಿಂದೆ ಅಣ್ವಸ್ತ್ರ ಪರೀಕ್ಷೆ ನಡೆಸಿ ತನ್ನಲ್ಲಿ ಅಣ್ವಸ್ತ್ರ ಇದೆ ಎಂದು ಸಾಭೀತುಗೊಳಿಸಿಕೊಂಡ ದೇಶ. ನಾನ್ ಪ್ರೊಲಿಫರೇಷನ್ ಟ್ರೀಟಿಗೆ ಸಹಿ ಹಾಕದೆಯೂ ನ್ಯೂಕ್ಲಿಯರ್ ಮೂಲವನ್ನು ನಾಗರಿಕರ ಒಳಿತಿಗೆ ಬಳಸುವ ಬಗ್ಗೆ ವಿಶ್ವವನ್ನು ಮನವೊಲಿಸುವುದು ಹೇಗೆ ಎಂಬುದು ಪಂಡಿತರ ತಲೆನೋವಾಗಿತ್ತು, ಈಗ ನಿನ್ನೆಯ (ಸೆಪ್ಟೆಂಬರ್ ಆರು) ವಿಯೆನ್ನಾ ಸಭೆಯಲ್ಲಿ ದೊರೆತ ಅನುಮೋದನೆಯಿಂದ ಭಾರತಕ್ಕೆ ಒಂದು ಮುನ್ನಡೆ ದೊರೆತಿದೆ ಎಂದೇ ಹೇಳಬೇಕು. ಭಾರತದ ಮನೆ ಮತ್ತು ಆಫೀಸುಗಳಲ್ಲಿ ಹಗಲು-ರಾತ್ರಿಗಳಿಗೆ ವ್ಯತ್ಯಾಸವಿರದ ಹಾಗೆ ಎಲೆಕ್ಟ್ರಿಸಿಟಿ ಬಳಕೆ ಆಗುವುದಕ್ಕೆ ಕೊನೇಪಕ್ಷ ಒಂದು ನೂರು ವರ್ಷವಾದರೂ ಬೇಕಿದೆ, ಆದರೆ ಆ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆ ಇಟ್ಟಂತಾಗಿದೆ.

***

ಈ ಐತಿಹಾಸಿಕ ದಿನವನ್ನು ಎರಡೂ ನಿಟ್ಟಿನಲ್ಲಿ ನೋಡಬಹುದು: ಅಣುಶಕ್ತಿಯನ್ನು ಜನರ ಒಳಿತಿಗೆ ಬಳಸುವ ದೇಶದ ಗುಂಪಿನಲ್ಲಿ ಭಾರತಕ್ಕೆ ಸಿಕ್ಕ ಸ್ಥಾನ ಒಂದು ರೀತಿಯದಾದರೆ, ಅಂತಹ ತಂತ್ರಜ್ಞಾನವನ್ನು ಮಾರಲು ತುದಿಗಾಲಿನಲ್ಲಿ (ಅಥವಾ ಮುಂಚೂಣಿಯಲ್ಲಿ) ನಿಂತಿರುವ ಅಮೇರಿಕಾ, ರಷ್ಯಾ, ಪ್ರಾನ್ಸ್ ಮೊದಲಾದ ದೇಶಗಳಿಗೆ ದೊಡ್ಡ ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಕಾದು ನಿಂತಿದೆ. ವೇಗದಲ್ಲಿ ಬೆಳೆಯುವ ದೇಶದ ಅಗತ್ಯಗಳಿಗೆ ಶಕ್ತಿ ಪೂರೈಕೆಯನ್ನು ಮಾಡಲು ಅಣುಶಕ್ತಿಯನ್ನು ಹೊರತುಪಡಿಸಿ ಬೇರೆ ವಿಧಾನಗಳಿಂದ ಪ್ರಯತ್ನಿಸುತ್ತಾ ಸಾಗುವುದು ಒಂದು ವಿಧಾನವಾಗಿತ್ತು. ಈಗಾಗಲೇ ಇರುವ ಶಕ್ತಿ ಮೂಲಗಳ ಜೊತೆಗೆ ಅಣುಶಕ್ತಿಯನ್ನು ಬಳಸುವುದು ಮತ್ತೊಂದು ವಿಧಾನ. ಯಾವುದೇ ದೇಶ ಅದೆನೇ ತಂತ್ರಜ್ಞಾನವನ್ನು ಮಾರಿದರೂ ಚೆರ್ನೋಬೆಲ್ ದುರಂತದಂತಹ ದುರಂತವನ್ನು ದೂರವಿಡುವುದು ಭಾರತೀಯರ ಕೈಯಲ್ಲಿದೆ. ಆ ಜವಾಬ್ದಾರಿಯನ್ನು ಮುಂಬರುವ ನೂರಾರು ವರ್ಷಗಳವರೆಗೆ ಯಾವುದೇ ಕೊರತೆ ಇಲ್ಲದೇ ಒಂದೇ ಒಂದು ತಪ್ಪು ಇಲ್ಲದೇ ನಿಭಾಯಿಸುವುದು ಬಹಳ ದೊಡ್ಡ ಜವಾಬ್ದಾರಿಯೇ ಸರಿ. ಆದರೆ, ಈ ಅಣುಶಕ್ತಿಯನ್ನು ದೂರವಿಟ್ಟು ಕನ್ವೆನ್ಷನಲ್ ಶಕ್ತಿ ಮೂಲಗಳನ್ನು ಪರಿಸರವಾದಿಗಳ ಅನುಮತಿ ಪಡೆದು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಇನ್ನೂ ದೂರದ ಪ್ರಶ್ನೆಯಾಗಿಯೇ ಉಳಿಯುವುದು. ಈ ಅಣುಶಕ್ತಿಯ ಬೆಳವಣಿಗೆಗೆ ಇನ್ನೇನೇನು ಅಡೆತಡೆಗಳು ಬರುತ್ತವೆಯೋ, ಒಬ್ಬ ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಹಿಡಿದು, ರಾಜಕಾರಣಿಗಳ, ಪಕ್ಷಗಳ, ಮುತ್ಸದ್ದಿಗಳ, ವಿಚಾರವಾದಿಗಳ, ಪರಿಸರ ಸಂರಕ್ಷರು ಮೊದಲಾದವರುಗಳಿಗೆ ಸಾಂತ್ವನ ಹೇಳಿಕೊಂಡು ಭಾರತದಲ್ಲಿ ಈ ಹೊಸ ಬೆಳವಣಿಗೆ ಯಾವ ದಿಕ್ಕನ್ನು ಹಿಡಿಯುತ್ತದೆಯೋ ಕಾದು ನೋಡಬೇಕು.

Wednesday, August 27, 2008

ಮರಳು ಭೂಮಿ ಮತ್ತು ಮೌನ

ಟೋನಿ ಬೋರ್ಡೇನ್ (Anthony Bourdain) ನ Without Pyramids ಕಾರ್ಯಕ್ರಮವನ್ನು ಟ್ರಾವೆಲ್ ಚಾನೆಲ್‌ನಲ್ಲಿ ನೋಡಿದಾಗಲೇ ಈಜಿಪ್ಟಿನ ಮರಳುಗಾಡು calm ಮತ್ತು clean ಆಗಿರುವ ಬಗ್ಗೆ ಅವನ ವಿವರಣೆಗಳನ್ನು ಕೇಳುತ್ತಲೇ ಒಂದು ಮರಳುಭೂಮಿಯಲ್ಲೂ ಒಬ್ಬನ ಅಂತಃಸತ್ವವನ್ನು ಶುದ್ಧೀಕರಿಸುವ ಅಗಾಧವಾದ ಮೌನವಿದೆ ಎಂದು ಅರಿವಿಗೆ ಬಂದದ್ದು. ಒಬ್ಬನ ಒಡಲಾಳದ ಸಂಸ್ಕಾರಗಳನ್ನು ಕೂಲಂಕಷವಾಗಿ ಸೋಸಿ ಶುದ್ಧೀಕರಿಸುವ ಬಗ್ಗೆ ಭಾರತೀಯ ಮೂಲದ ಧ್ಯಾನದಲ್ಲೂ ಪರಮರ್ಶೆಗಳು ದೊರೆಯುತ್ತವೆ (self-purification by introspection). ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳು ಹಿಮಾಲಯದ ತಪ್ಪಲಿನ ಮೊರೆ ಹೊಕ್ಕಿದ್ದರ ಬಗ್ಗೆ ಕೇಳಿದ್ದೆನೆ ಹೊರತು ರಾಜಸ್ತಾನದ ಮರಳುಗಾಡಿನಲ್ಲಿ ಅಗಮ್ಯ ಹಾಗೂ ಅನಂತವಾದ ಮೌನವನ್ನು ಹುಡುಕಿಕೊಂಡು ಹೋದವರ ಬಗ್ಗೆ ನಾನು ಕೇಳಿಲ್ಲ. ನಕ್ಷತ್ರಗಳು ಮಿನುಗುವ ನಿಶ್ಶಬ್ದ ಮುಗಿಲಿನ ರಾತ್ರಿಗಳಲ್ಲಿ, ಕಾಲ ಬೆರಳುಗಳ ನಡುವೆ ಸೋಕಿ ಹರಿದಾಡುವ ಬಿಸಿ-ತಂಪು ಮರಳಿನ ಕಣಗಳಲ್ಲಿ ಜೊತೆಗೆ ಒಬ್ಬನ ಒಳಗನ್ನು ಹೊರತೆರೆದು ತೋರುವ ಏಕತಾನ ಮೌನದ ಬಗ್ಗೆ ಟೋನಿ ಹಾಗೂ ಆತನ ಸಹ ಪ್ರಯಾಣಿಕರು ವಿವರಿಸಿದ ಅನುಭವ ಬಹಳಷ್ಟು ಮುದ ನೀಡಿತು. ಈ ಕಾರ್ಯಕ್ರಮದಲ್ಲಿನ ಈಜಿಪ್ಟಿನ ಮರಳುಭೂಮಿಯ ಮೂಲದವನೊಬ್ಬನು ವಿವರಿಸುವಂತೆ ಐದೇ ಐದು ದಿನಗಳು ಸಾಕು ಎಂತಹವರ ಅಂತರಾಳವನ್ನು ಬಡಿದೆಬ್ಬಿಸಲು ಎಂಬರ್ಥ ಬರುವ ಮಾತುಗಳು ಗಮನ ಸೆಳೆದವು.

ಈಜಿಪ್ಟ್ ಎಂದರೆ ನೈಲ್ ನದಿ, ಪಿರಮಿಡ್ಡುಗಳು, ಪುರಾತನ ಕಾಲದಿಂದಲೂ ಬಂದ ಪರಂಪರೆ ಎಂಬುದು ಎಲ್ಲರ ಮನಸ್ಸಿಗೆ ಬರಬಹುದಾದ ಅಂಶ. ಸುಮಾರು USA ಭೂವಿಸ್ತಾರದಷ್ಟೇ ದೊಡ್ಡದಾದ ಸಹಾರ ಮರುಭೂಮಿ ಪ್ರಪಂಚದ ಅತಿದೊಡ್ಡ ಮರಳುಭೂಮಿ. ಕ್ರಿಸ್ತಪೂರ್ವ ೬೦೦೦ ವರ್ಷಗಳ ಹಿಂದಿನ ಉಲ್ಲೇಖಗಳು ಸಿಗುವಂತಹ ಈಜಿಪ್ಟ್ ಸಂಸ್ಕೃತಿಗೆ ಈ ಮರುಭೂಮಿಯ ಸಂಸ್ಕೃತಿ ಇನ್ನೂ ಹಳೆಯದು!

***

ಇದು ಮರುಭೂಮಿಯ ಕಥೆಯನ್ನಾಗಲೀ ಈಜಿಪ್ಟಿನ ಬಗ್ಗೆ ವ್ಯವಸ್ಥಿತವಾಗಿ ಹೇಳುವ ಪ್ರಯತ್ನವಂತೂ ಆಗಲಾರದು ಏಕೆಂದರೆ ಅವೆರೆಡನ್ನೂ ನಾನು ನೋಡೇ ಇಲ್ಲ, ಅನುಭವಿಸಿಯೂ ಇಲ್ಲ - ಟಿವಿ ಪರದೆಯ ಮೇಲೆ ನೋಡಿದ್ದನ್ನು ಹೊರತು ಪಡಿಸಿ. ಇನ್ನು ಭಾರತದ ಥಾರ್ ಮರುಭೂಮಿಯ ಬಗ್ಗೆ ಓದಿದ್ದೇನಾದರೂ ಕಣ್ಣಿಂದ ನೋಡಿದ್ದಂತೂ ಇಲ್ಲ. ಈ ಯುಎಸ್‌ಎ ಅಷ್ಟು ದೊಡ್ಡದಾದ ಮರಳುಗಾಡನ್ನು ಊಹಿಸಿಕೊಳ್ಳುತ್ತಾ ಹೋದಂತೆ, ಒಬ್ಬ ಪಶ್ಚಿಮದವನು ಮರುಭೂಮಿಯಲ್ಲಿ ನಡೆಯುತ್ತಾ ಅದರ ವೈಭವವನ್ನು ವರ್ಣಿಸುತ್ತಾ ಹೋದದ್ದನ್ನು ನೋಡಿದಂತೆ, ಸ್ಥಳೀಯ ಈಜಿಪ್ಟ್ ಮೂಲದವನು ಈ ಮರುಭೂಮಿ ಎಂಥವರನ್ನೂ ತಮ್ಮನ್ನು ಅವಿಷ್ಕರಿಸಿಕೊಳ್ಳಲು ಸಹಾಯಮಾಡುವುದು ಎಂಬ ಮಾತನ್ನು ಕೇಳಿದಂತೆ ನನ್ನ ಮನದಲ್ಲಿ ಮರುಭೂಮಿಯ ಬಗ್ಗೆ ಹೊಸದಾದ ಗೌರವ ಭಾವವೊಂದು ತಳೆಯತೊಡಗಿತು. ಈ ಸೃಷ್ಟಿಯಲ್ಲಿ ಮರುಭೂಮಿಯ ಪಾತ್ರವೂ ಇದೆ, ಅದಕ್ಕೂ ಒಂದು ನೆಲೆ ಇದೆ ಎನ್ನುವ ಆಲೋಚನೆ ಹೊಮ್ಮಿದ್ದು.

ಈ ಪ್ರಪಂಚದಲ್ಲಿ ಮೌನವಿದೆ, ಹುಡುಕಿಕೊಂಡು ಹೋಗಬೇಕಷ್ಟೇ. ಅದಕ್ಕೆ ಬೇಕು ಎರಡು ರೀತಿಯ ಪ್ರಯಾಣ - ಒಂದು ಅಂತರಾಳದ ಒಳಗೆ ಇನ್ನೊಂದು ಇರುವುದರೆಲ್ಲದರಿಂದ ದೂರ. ಇವೆರಡನ್ನೂ ಮಾಡಲು ದೂರವೆಲ್ಲೂ ಹೋಗಬೇಕಾದುದಿಲ್ಲ, ಮರುಭೂಮಿಯೂ ಬೇಡ ಬಯಲೂ ಬೇಡ, ಎಲ್ಲವೂ ನಮ್ಮೊಳಗೇ ಇದೆ. ಹಾಡುಹಗಲು ಎಂತಹ ಸಂತೆಯ ವಾತಾವರಣದಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರೆ ಮಾಡುವವರಿಲ್ಲವೇನು? ಆದರೆ ನಮಗೆ ಅಂಟಿಕೊಂಡವುಗಳಿಂದ ’ದೂರ’ ಹೋಗುವುದು ಸರಳವಂತೂ ಅಲ್ಲ, ಅದಕ್ಕೆ ಬಹಳಷ್ಟು ಕಷ್ಟಪಡಬೇಕಾದ ಅಗತ್ಯವಿದೆ. ಈ ’ದೂರ’ ಹೋಗುವಿಕೆಗೆ ಅನುಕೂಲವಾಗಿ ಬರಬಹುದಾದ ಭೌತಿಕವಾಗಿ ಒಂದು ನೆಲೆಯಿಂದ ಮತ್ತೊಂದು ನೆಲೆಯಲ್ಲಿ ನಮ್ಮನ್ನು ಕಂಡುಕೊಳ್ಳಲು ಅನುವುಮಾಡಿಕೊಡುವಲ್ಲಿ ಮರುಭೂಮಿಯ ಪಾತ್ರವಂತೂ ಸ್ಪಷ್ಟವಾಯಿತು. ಇನ್ನು ಅಲ್ಲಿಗೆ ಹೋಗುವುದು ಹೇಗೆ ಅಲ್ಲಿ ಒಂದು ವಾರ ಕಳೆಯುವುದು ಹೇಗೆ ಎಂದೆಲ್ಲ ಯೋಚಿಸಿಕೊಂಡು ಬಾಯಿ ತುಟಿಯೊಣಗಿ ಹತ್ತಿರದ ನೀರಿನ ಬಾಟಲಿಯನೆತ್ತಿ ಮರುಭೂಮಿಯಲ್ಲಿ ನೀರು ಕುಡಿಯುವವರ ಹಾಗೆ ನೀರು ಕುಡಿದದ್ದಷ್ಟೇ ಬಂತು, ಆದರೆ ಅದು ಅಷ್ಟು ಸುಲಭವಂತೂ ಅಲ್ಲ.

***

ನಮ್ಮನ್ನಂಟಿದ ಸಂಕೋಲೆಗಳನ್ನೆಲ್ಲ ಬದಿಗೊತ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮತ್ಯಾವುದೋ ದೇಶದವರಾದ ನಾವು ಹೋಗುವುದು ಬರುವುದು ಬಹಳ ದೂರದ ಮಾತು. ಐದು ವರ್ಷಗಳ ಹಿಂದೆ ಯೂರೋಪಿನಲ್ಲಿ ಕಳೆದ ಹನ್ನೆರಡು ದಿನಗಳನ್ನು ಇತ್ತೀಚಿನ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ನೋಡಿದಾಗ ಅದು ದೊಡ್ಡ ಸಾಹಸವೆಂದೇ ಕಂಡೀತು. ಇನ್ನು ನನಗೆ ಆಸಕ್ತಿ ತಂದ ಸಹಾರ ಮರುಭೂಮಿಯನ್ನು ನೋಡಿ ಅನುಭವಿಸುವುದು ಕನಸಿನ ಮಾತೇ. ಅದಕ್ಕೆಂದೇ ನಾನು ಟಿವಿ ಚಾನೆಲ್ಲುಗಳಿಗೆ ಪ್ರವಾಸಿ ಪುಸ್ತಕ/ವೆಬ್ ಸೈಟ್‌ಗಳಿಗೆ ಜೋತು ಬೀಳೋದು. ’ಕೋಶ ಓದು’ ಎನ್ನುವ ಮಾತಿನಲ್ಲಿ ಬಲವಿದೆ, ಬೆಂಬಲವಿದೆ. ನಾವು ಈಗಿರುವ ನೆಲೆಯಿಂದ ಹೊರಬಂದು ಮತ್ತಿನ್ಯಾವುದೋ ನೆಲೆಯಲ್ಲಿ ನಮ್ಮನ್ನವಿಷ್ಕರಿಸಿಕೊಂಡು ಎಲ್ಲವೂ ನೆಮ್ಮದಿಯಿದ್ದಾಗ ತಾನೇ ಆ ದಿವ್ಯ ಮೌನ ಹೊಮ್ಮೋದು? ಹಾಗಾಗಲೂ ಬಹಳ ಕಷ್ಟವಿದೆ, ದಿವ್ಯ ಮೌನ ಹೊಮ್ಮದಿರುವ ಮಾತಲ್ಲ ಅದಕ್ಕೆ ಮೊದಲಿನ ನೆಮ್ಮದಿಯ ಬಗ್ಗೆ. ನಮ್ಮ ಆಹಾರ ಆಚಾರ-ವಿಚಾರಗಳು ಭಿನ್ನ, ನಮ್ಮ ನಿಲುವು ನೋಟ ಭಿನ್ನ, ಈ ಭಿನ್ನತೆ ಮತ್ತೊಂದು ಅಗಾಧವಾದ ಸಂಸ್ಕೃತಿಯ ಮುಂದೆಯೂ ಎದ್ದು ಕಾಣುತ್ತದೆ. ಪ್ರವಾಸಿಗರಾಗಿ ಹೋದಲ್ಲಿ ನಾವು ನಮ್ಮತನವನ್ನು ಎತ್ತಿ ಗಂಟುಕಟ್ಟಿಕೊಂಡು ಹೋಗೋದೋ ಅಥವಾ ಹೋದಲ್ಲಿ ಬಂದಲ್ಲಿ ಅಲ್ಲಿಯವರಲ್ಲೊಂದಾಗಿ ಅವರ ಸ್ಥಳೀಯ ಅನುಭವಗಳಿಗೆ ಸ್ಪಂದಿಸುವುದೋ ಎನ್ನುವ ದ್ವಂದ್ವ ಎದುರಾಗುತ್ತದೆ. (ಭಾರತೀಯ ಮೂಲದ ನಾವು ಅಮೇರಿಕದಿಂದ ಈಜಿಪ್ಟಿಗಾಗಲೀ ಯೂರೋಪಿಗಾಗಲೀ ಎಲ್ಲೇ ಹೋದರೂ ನಾವು ಅಲ್ಲಿಯವರ ಕಣ್ಣಿಗೆ ಭಾರತೀಯರೇ ಎಂಬುದನ್ನು ನಾನು ನನ್ನ ಯುರೋಪಿನ ಪ್ರವಾಸದಲ್ಲಿ ಸ್ವತಃ ಅನುಭವಿಸಿದ್ದು ನಿಜ.) ಪ್ರವಾಸಿಗರು ಏನನ್ನು ’ನೋಡಲು’ ಹೋಗುತ್ತಾರೆ, ಎಷ್ಟು ’ದೂರ’ ಹೋಗುತ್ತಾರೆ ಎನ್ನುವುದು ಮುಖ್ಯ. ನೀವು ಕೇವಲ ನೋಡಲು ಹೋಗುವವರಾದರೆ ನಿಮ್ಮ ಪುಳಿಯೊಗರೆ, ತಿಳಿಸಾರು-ಅನ್ನ, ಮೊಸರು ನಿಮ್ಮ ಜೊತೆ ಬಂದೀತು, ಅಲ್ಲಿಯ ಬದುಕನ್ನು ಅನುಭವಿಸಿ ನೋಡುವವರಿಗೆ ಗೋಟ್ ಚೀಜೂ ಇಷ್ಟವಾದೀತು ಎನ್ನುವುದು ಈ ಹೊತ್ತಿನ ತತ್ವವಷ್ಟೇ!

Thursday, July 31, 2008

ನಾವು ಮತ್ತು ನಮ್ಮ ಕೆಲಸ (ಅದರ ಮೇಲಿನ ಪ್ರೀತಿ)

ಎಲ್ರೂ ಮಾಡೋದ್ ಹಾಗೇ, ಯಾವ್ದೋ ಒಂದ್ ಕಂಪ್ನಿಗೋ, ಗವರ್ನಮೆಂಟ್ ಕೆಲ್ಸಕ್ಕೋ ಜೀವಾ ತೇದೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆವಕ್ಕೆ... ಅಂತ ಅನ್ಸಿದ್ದು ಈ ವಾರದ ಕೊನೇಲಿ ನಿವೃತ್ತನಾಗ್ತಿರೋ ನನ್ನ ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ.

ಅವ್ನಿಗೆ ನಾನು ವಿಷ್ ಮಾಡ್ದೆ, ನನಗುತ್ತರವಾಗಿ ಅವನು ’Have fun at work!' ಎಂದು ನಕ್ಕ.

ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ.

ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದೀನಿ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವನ ಮುಖದ ಮೇಲೆ ಕಾಣ್ಲಿಲ್ಲ, ಜೊತೆಗೆ ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.

***

ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲ್ಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ನಾವೆಲ್ಲ ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳ ಸ್ಪಿರಿಟ್ಟು ಈಗಾಗಲೇ ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ, ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ಬೇಸ್ತು ಬಿದ್ದಿದ್ದೇನೆ. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಫೋನ್ ಹೆಡ್‌ಸೆಟ್ ಅನ್ನು ತಲೆಗೆ ಸಿಕ್ಕಿಸಿಕೊಂಡಿರುವುದನ್ನು ನೋಡೇ ಸುಸ್ತಾಗಿ ಹೋಗುವುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.

ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ರಿಟೈರ್‌ಮೆಂಟ್ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಫ್ಲೇವರ್‌ಗಳನ್ನು ನೀಡಿದರೆ ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನು ಮೊದಲಾದ ಬ್ಲಡ್ ಪ್ರಷರ್ ಏರಿಸಿ-ಇಳಿಸುವ ಹಂತ/ಮಟ್ಟ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job' ಅಥವಾ ’I love what I do for a living' ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.

***

Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ - ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, ಸ್ಕಿಲ್ಸ್‌ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?

ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ...’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಆದರೆ ಅವರವರು ನಿವೃತ್ತರಾಗುವುದಕ್ಕೆ ಮೊದಲು (ಸಾಧ್ಯವಾದರೆ) ಅವರ ಇಷ್ಟ ಪಡುವ ಕೆಲಸವನ್ನು ಸ್ವಲ್ಪ ದಿನ/ತಿಂಗಳುಗಳಾದರೂ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತೆ, ಅಲ್ವೇ?

Sunday, July 06, 2008

ಕರಿಹೈದನ ಬರ್ಡನ್ನು

’ಏ, ಸೇರ್ಸಿಕೊಳ್ಳೋಲ್ಲ ಹೋಗೋ’
ಎಂದು ಕಂದು ತಂಡದವರು ಬೈದು ತಳ್ಳಿದಾಗಲೇ ಕರಿಹೈದನಿಗೆ ತಾನು ತನ್ನ ಹಳೆಯ ತಂಡವನ್ನು ಬಿಟ್ಟು ಬಂದು ಪೇಚಿಗೆ ಸಿಕ್ಕಿಕೊಂಡಿದ್ದು ತನ್ನ ಮೇಲೆಯೇ ಅಸಹ್ಯವನ್ನು ಮೂಡಿಸತೊಡಗಿತು.

’ಇಲ್ರೋ ನಾನು ಅದೇನೇನೋ ಹೊಸ ಹೊಸ ವರಸೆಗಳನ್ನ ಕಲಿತಿದೀನಿ, ನನ್ನನ್ನೂ ಆಟಕ್ಕ್ ಸೇರಿಸ್‌ಕೊಂಡು ನೋಡ್ರಿ, ಒಂದು ಚಾನ್ಸ್ ಕೊಡ್ರಿ...’ ಎಂದಿದ್ದನ್ನ ಕಂದು ತಂಡದವರು ಯಾರೂ ಅಷ್ಟೊಂದು ಹಚ್ಚಿಕೊಂಡಂತೆ ಅನ್ನಿಸಲೇ ಇಲ್ಲ, ಜೊತೆಗೆ ಕಂದು ತಂಡದಲ್ಲಿ ಇತ್ತೀಚೆಗೆ ಸೇರಿಸಿಕೊಂಡ ಹೊಸ ಹುರುಪಿನ ಆಟಗಾರರೆಲ್ಲ ಒಳ್ಳೇ ತರಬೇತಿ ಪಡೆದು ಕರಿಹೈದ ಆ ತಂಡವನ್ನು ಬಿಡುವಾಗ ಏನೇನು ಇರಲಿಲ್ಲ ಏನೇನು ಇದ್ದಿದ್ದರೆ ಚೆನ್ನಿತ್ತು ಎಂದು ಹಲಬುತ್ತಿದ್ದನೋ ಅದೆಲ್ಲವೂ ಅಲ್ಲಿ ಮೇಳೈಸಿದಂತಿತ್ತು.

ಯಾವ ಯಾವ ಬಗೆಗಳಿವೆ - ದೈನ್ಯದಿಂದ ಬೇಡಿಕೊಂಡಿದ್ದಾಯಿತು, ಹೊಸ ಉಪಾಯಗಳನ್ನು ಹೇಳಿಕೊಡುತ್ತೇನೆ ಎಂದು ಮೂಗಿನ ಮೇಲೆ ತುಪ್ಪ ಸವರಿದ್ದಾಯಿತು, ಇನ್ನು ಹೆದರಿಸುವುದೊಂದೇ ಬಾಕಿ ಎಂದು ಅನ್ನಿಸಿದ್ದೇ ತಡ, ಕರಿಹೈದ,
’ನೋಡ್ರೋ, ನನ್ನನ್ನೇನಾದ್ರೂ ಆಟಕ್ಕೆ ಸೇರಿಸಿಕೊಳ್ಳದೇ ಹೋದ್ರೆ you don't know what you are missing!' ಎಂದು ಬ್ರಹ್ಮಾಸ್ತ್ರವನ್ನು ಎಸೆದಷ್ಟೇ ಸುಖವಾಗಿ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ತೆರೆದು ನಿರೀಕ್ಷೆಯಲ್ಲಿ ಒಂದು ಕ್ಷಣದ ಮೌನವನ್ನು ಸಹಿಸಿಕೊಂಡ.

ಕಂದು ತಂಡದ ಆಟಗಾರರು ಇವನು ಹೇಳಿದ ಮಾತಿಗೆ ಒಂದು ಕ್ಷಣ ಸ್ತಂಭೀಭೂತರಾದರು, ಅವರ ಆಟದ ವರಸೆಗಳು ’ಲಂಡನ್-ಲಂಡನ್’ ಆಟದಲ್ಲಿ ಆಟಗಾರರು ಕಿಂಚಿತ್ತೂ ಅಲುಗಾಡದೇ ನಿಲ್ಲುತ್ತಿದ್ದರಲ್ಲ ಹಾಗಾದರು, ಆದರೆ ಕರಿಹೈದನ ಮೋಡಿಗೆ ಯಾರೂ ಬಿದ್ದಂತೆ ಕಾಣಲಿಲ್ಲ, ಇವನು ಹೇಳಿದ ಮಾತನ್ನು ಕೊಡಗಿಕೊಂಡು ಕಂದು ತಂಡ ಮತ್ತೆ ತಮ್ಮ ತಮ್ಮ ವರಸೆಗಳನ್ನು ಬದಲಾಯಿಸಿ ತಮ್ಮ ತಮ್ಮ ಆಟಗಳಲ್ಲಿ ಲೀನವಾದರು, ಕರಿ ಹೈದನ ಮೌನ ಅವನ ಹೊಟ್ಟೆಯೊಳಗೆ ಕಲಸುತ್ತ ಅದು ಇದ್ದಲ್ಲೇ ಹಸಿವಾದ ಹೊಟ್ಟೆಯಂತೆ ಕುರ್ ಕುರ್ ಸದ್ದು ಮಾಡಿ ಸುಮ್ಮನಾಯಿತು.

ಬಿಳಿತಂಡವನ್ನು ಬಂದು ಸೇರಿ ಅದರಲ್ಲಿದ್ದನ್ನು ಇವನಿಗೆ ತೋಚಿದಷ್ಟು ಅನುಭವಿಸಿ ಈಗ ನಡುನಡುವೆಯೇ ಕೈ ಬಿಟ್ಟು ಹಳೆಯ ಕಂದು ತಂಡವನ್ನು ಸೇರುತ್ತೇನೆ ಎನ್ನುವ ಕರಿಹೈದನ ವರಸೆಯನ್ನು ಅವನ ಸ್ನೇಹಿತರು ಹಗಲೂರಾತ್ರಿ ಆಡಿಕೊಂಡು ನಗುತ್ತಾರೆ. ಆಗಾಗ್ಗೆ, ’ಮುಠ್ಠಾಳ’ ಎಂದು ಗುನಗಾನ ಮಾಡುತ್ತಾರೆ. ’ಇಲ್ಲಿರಲಾರದವನು ಅಲ್ಲಿ ಹೋಗಿ ಮಾಡಿ ಕಡಿಯುವುದೇನು’ ಎಂದು ಛೇಡಿಸುತ್ತಾರೆ. ’ಹಸಿವೋ ಸಮೃದ್ಧಿಯೋ ನಮ್ಮದು ನಮಗೆ ಚೆಂದ’ ಎಂದು ಕರಿಹೈದ ಯಾವುದೋ ಕಾಡಕವಿಯ ಪಂಕ್ತಿಗಳನ್ನು ಅರಹುತ್ತಾ ಇಂದಲ್ಲ ನಾಳೆ ಕಂದು ತಂಡವನ್ನು ಸೇರಿಯೇ ಸೇರೇನು ಎಂದು ಕನಸು ಕಾಣುವುದನ್ನು ಮಾತ್ರ ಬಿಡಲೊಲ್ಲ.

ಕರಿಹೈದ ಮೊದಲು ಕಂದುತಂಡವನ್ನು ಬಿಟ್ಟು ಬಿಳಿತಂಡವನ್ನು ಸೇರಿಕೊಂಡಾಗ ಆತನಿಗೆ ಹೀಗೊಂದು ದಿನ ಬವಣೆಯನ್ನು ಅನುಭವಿಸಬಹುದು ಎಂದೆನಿಸಿರಲಿಲ್ಲ. ಹೀಗೆ ತಂಡಗಳನ್ನು ಬದಲಾಯಿಸಿದವರು ಯಾರೂ ಮತ್ತೆ ಪುನಃ ಪಕ್ಷಾಂತರ ಮಾಡುವುದು ಕಡಿಮೆಯಾದರೂ ಹಾಗೆ ಅಂದಿನ ಲೆಕ್ಕದಲ್ಲಿ ಸಿಕ್ಕ ಹಾಗೆ ಒಳಿತು-ಕೆಡಕುಗಳನ್ನು ಯಾರೂ ವಿವರಿಸಿ ಹೇಳಿದ್ದಂತೂ ಇಲ್ಲ. ಕರಿಹೈದ ಬೇಕಾದಷ್ಟು ತೊಳಲಾಡುತ್ತಾನೆ - ಒಮ್ಮೆ ದ್ರಾಕ್ಷಿ ಸಿಗದ ನರಿಯ ಹಾಗೆ ಆ ಹುಳಿ ದ್ರಾಕ್ಷಿ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂದು ಹೂಂಕರಿಸುತ್ತಾನೆ, ಮತ್ತೊಮ್ಮೆ ಕಂದು ತಂಡದಲ್ಲಿ ಆಡಿಬೆಳೆದು ಓಡಿಯಾಡಿದ ಹಾಗೆ ನೆನಪಿಸಿಕೊಂಡು ನಾಸ್ಟಾಲ್ಜಿಯಾವನ್ನು ಹೊಗಳುವುದೇ ಬದುಕು ಎಂದುಕೊಳ್ಳುತ್ತಾನೆ.

ಹೆಚ್ಚಾಗಿ ವಿಷಾದ ಆವರಿಸುತ್ತದೆ, ಅದರ ಬೆಳಕಿನ ನೆರಳಿನ ಬೆನ್ನಿಗೆ ಹೊಸ ತತ್ವಗಳು ಮೂಡಿಬರುವಂತೆ ಕಾಣಿಸುತ್ತದೆ - ’ಯಾವ ತಂಡದಲ್ಲಿದ್ದು ಆಡಿದರೇನು, ವಿಶ್ವವೇ ಒಂದು ತಂಡ. ಆ ತಂಡ-ಈ ತಂಡ ಇವೆಲ್ಲ ಬರೀ ಕಾಗದ ಪತ್ರಗಳ ಮೇಲಿನ ಒಡಂಬಡಿಕೆ ಮಾತ್ರ, ಅವರವರ ಹೃದಯದಲ್ಲೇನಿದೆ ಅದು ಮುಖ್ಯ. ಬಿಳಿ ತಂಡದಲ್ಲಿದ್ದುಕೊಂಡೇ ಕಂದು ತಂಡಕ್ಕೆ ಸಪ್ಪೋರ್ಟ್ ಮಾಡಲಾಗದೇನು, ಹೊರಗಿನಿಂದ ಅವರವರ ಬೆಂಬಲವನ್ನು ಯಾರೂ ಸೂಚಿಸಬಹುದಲ್ಲ. ಈ ಆಟಗಳೇ ಹೀಗೆ - ಇದರ ಹಿಂದಿನ ಸಂಸ್ಕೃತಿ, ರಾಜಕೀಯ, ಧರ್ಮ ಇವೆಲ್ಲ ಒಂದೇ ಎಲ್ಲಿದ್ದರೂ ಹೇಗಿದ್ದರೂ!’

ಹೀಗೆ ಹಲವಾರು ತತ್ವಗಳು ಮೈತಳೆತಳೆದು ಅವುಗಳು ತಮ್ಮಷ್ಟಕ್ಕೆ ತಾವು ಒಂದಕ್ಕೊಂದು ತೀಡಿಕೊಂಡು ಕಾಡಿಕೊಂಡು ಗಡುಸಾದ ಕಪ್ಪಗಿನ ಕಲ್ಲಿದ್ದಿಲು ಕೆಂಪಾಗಿ ಬೆಂಕಿಯಾಗಿ ನಿಗಿನಿಗಿ ಕೆಂಡವಾಗಿ ಕೊನೆಗೆ ಹಗುರವಾದ ಬಿಳಿಯ ಬೂದಿಯಾಗುವಲ್ಲಿಯವರೆಗಿನ ರೂಪಾಂತರವನ್ನು ಪಡೆದುಕೊಳ್ಳುತ್ತವೆ. ಅಲ್ಲಲ್ಲಿ ಕಿಡಿಗಳೋ ಅಥವಾ ಬೆಂಕಿ ಇರುವ ತಾವೋ ತಾವಿದ್ದ ಕಡೆ ಮೊದಲು ಸುಡುವಂತೆ ಹೊಸ ತತ್ವಗಳ ಚುರುಕು ಅದೆಷ್ಟರ ಮಟ್ಟಿಗೆ ಏರುತ್ತದೆ ಎಂದರೆ ಪಕ್ಕದಲ್ಲಿನ ಏರ್‌ಕಂಡೀಷನರ್ ಬೀಸುವ ತಂಗಾಳಿಯೂ ತನ್ನ ತಂಪನ್ನು ಈ ಬಿಸಿಯಲ್ಲಿ ಕಳೆದುಕೊಳ್ಳುತ್ತದೆ.

ಕ್ಯಾನ್ಸರ್ ರೋಗಿ ತನ್ನ ಕ್ಯಾನ್ಸರ್ ಅನ್ನು ಒಪ್ಪಿಕೊಂಡು ಸಮಾಧಾನಿಯಾಗುವ ಮೊದಲು ಬೇಕಾದಷ್ಟು ಕಿರಿಚಾಡಿ ಕೂಗಾಡಿ ಅವರಿವರಿಗೆಲ್ಲ ಬೈದು ದೇವರನ್ನೂ ಸೇರಿಸಿಕೊಂಡು ಮತ್ತೆ ಸಂತನ ಮನಸ್ಥಿತಿಯನ್ನು ತಂದುಕೊಳ್ಳುವಂತೆ ಕರಿಹೈದ ಕಂದು ತಂಡದವರನ್ನು ಕುರಿತು ಸಹಸ್ರನಾಮ ಶುರುಮಾಡಿ ಸುಮ್ಮನಾಗುತ್ತಾನೆ:
’ಯಾರಿಗ್ ಬೇಕ್ ಹೋಗಿ ನಿಮ್ಮ ತಂಡದಲ್ಲಿ ಆಡೋ ಭಾಗ್ಯ. ನೀವೋ ನಿಮ್ಮ ಪ್ರಾಸೆಸ್ಸೋ ನಿಮ್ಮ ರೂಲ್ಸ್-ರೆಗ್ಯುಲೇಷನ್ನುಗಳೋ ಎಲ್ಲವೂ ಸಾಯ್ಲಿ! ನನ್ನಂತಹವರ ಯೋಗ್ಯತೆಯನ್ನು ಇವತ್ತಿಗೂ ಕಂಡು ಮಣೆಹಾಕದ ನಿಮ್ಮ ಸಂಸ್ಕೃತಿಗಿಷ್ಟು ಧಿಕ್ಕಾರವಿರಲಿ. ನನ್ನಂತೋರುನ್ನ ಸೇರಿಸಿಕೊಳ್ದೇ ಅದು ಹೆಂಗ್ ಆಡ್ತೀರೋ ಆಡ್ರಿ ನೋಡೇ ಬಿಡ್ತೀನಿ. ನಿಮ್ಮಲ್ಲಿನ ಕೆಟ್ಟ ಪರಂಪರೆಯೇ ಸಾಕು ನಿಮ್ಮವರ ಕಾಲುಗಳನ್ನು ಎಳೆದೆಳೆದು ನೀವಿದ್ದಲ್ಲೇ ನಿಮ್ಮನ್ನು ಕೂರಿಸಲು, ನೀವು ಮುಂದೆ ಬರುವ ಸಾಧ್ಯತೆಯೇ ಇಲ್ಲ - ಎಂದಿಗೂ ಯಾವತ್ತೂ. ಎಲ್ರೂ ಹಾಳಾಗ್ ಹೋಗಿ...’

ಕರಿಹೈದನ ಆಕ್ರಂದನ ಮುಗಿಲು ಮುಟ್ಟುತ್ತೆ. ನಂತರ ಧೀರ್ಘ ಸಮಾಧಾನ ಮೂಡುತ್ತೆ. ಕರಿಹೈದ ಸಂತನಂತೂ ಆಗೋದಿಲ್ಲ, ತನ್ನ ಬಿಳಿತಂಡದವರ ಜೊತೆ ಸರಿಯಾಗಿ ಮನಸಿಟ್ಟು ಆಡಲೊಲ್ಲ, ಹಳೆಯ ಕಂದುತಂಡದವರ ನೆನಪನ್ನು ಬದಿಗಿಟ್ಟು ಮುಂದಿನ ದಾರಿಯನ್ನು ಮಾತ್ರ ನೋಡೋದಿಲ್ಲ. ಹಲವಾರು ಲೇನುಗಳು ಇರುವ ನುಣುಪಾದ ರಸ್ತೆಯ ಮೇಲೆ ನಾಗಾಲೋಟದಿಂದೋಡುವ ದೊಡ್ಡ ಕಾರಿರುವ ಕರಿಹೈದ ಮುಂದಿನ ಅಗಲವಾದ ವಿಂಡ್‌ಶೀಲ್ಡನ್ನು ನೋಡಿ ತಾನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುವ ನಡುನಡುವೆ ಚಿಕ್ಕದಾದ ಹಾಗೂ ಚೊಕ್ಕದಾದ ರಿಯರ್ ವ್ಯೂ ಮಿರರ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೋಡಿಕೊಂಡಿರುವುದನ್ನು ಕಂಡ ಕರಿಹೈದನ ಸ್ನೇಹಿತರು ಕರಿಹೈದನ ಮನಸ್ಸಿನಲ್ಲಿರುವುದನ್ನು ಗೊತ್ತು ಮಾಡಿಕೊಂಡವರಂತೆ ಅವರೊಳಗೇ ಹಲ್ಲುಕಿರಿದುಕೊಂಡಿರುವುದನ್ನು ನೆನೆಸಿಕೊಂಡು ಕರಿಹೈದನ ಮನಸ್ಸು ಮತ್ತಷ್ಟು ಪಿಚ್ಚಾಗುತ್ತದೆ.

Saturday, June 28, 2008

ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ

ನೀವು ನನ್ನ ಹಾಗೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ್ದರೆ ಇನ್ನೇನು ಇಂಗ್ಲೀಷರು ಭಾರತವನ್ನು ಬಿಟ್ಟು ಹೋದರು ನಾವೆಲ್ಲ ನಮ್ಮ ನಮ್ಮ ಮೂಲ ಸಂಸ್ಕೃತಿಯಲ್ಲಿ ಬೆಳೆಯುತ್ತೇವೆ ಬದುಕುತ್ತೇವೆ ಎಂದು ಒಳಗೊಳಗೆ ಅಂದುಕೊಳ್ಳುತ್ತಲೇ ಮಾತಿನ ಮಧ್ಯೆ ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ಪೋಷಕರೋ ಸಂಬಂಧಿಕರ ನಡುವೆ ಬೆಳೆದು ಬಂದಿರುತ್ತೀರಿ. ’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು!’ ಎನ್ನುವ ಹಾಡಿನ ಗುಂಗಿನಲ್ಲಿ ಬೆಲ್ ಬಾಟಮ್ ಪ್ಯಾಂಟುಗಳನ್ನು ಧರಿಸಿಕೊಂಡಿರುತ್ತೀರಿ. ಆಗಷ್ಟೇ ನಾಯಿಕೊಡೆಗಳಂತೆ ಎಲ್ಲೆಲ್ಲೆ ಬೇಕು ಅಲ್ಲಲ್ಲಿ ತಲೆ ಎತ್ತಿ ನಿಂತು ತಮ್ಮನ್ನು ತಾವು ಸೃಷ್ಟಿಯಲ್ಲಿ ಲೀನವಾಗಿಸಿಕೊಳ್ಳಲು ಸಾಹಸ ಮಾಡುವ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸುವವರನ್ನು ನೋಡಿ ಬೆರಗಾಗಿರುತ್ತೀರಿ. ಆಗಷ್ಟೇ ಕಣ್ತೆರೆಯುತ್ತಿದ್ದ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಎನ್ನುವ ವರ್ತುಲದಲ್ಲಿ ನೀವೂ ತೊಡಗಿಕೊಂಡಿದ್ದು, ಸಾಗರ-ಸೊರಬದಂತಹ ಹಳ್ಳಿಯೂರುಗಳಲ್ಲೂ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಆಬ್ಜೆಕ್ಟಿವ್ ಪರೀಕ್ಷೆಗಳ ಪ್ರಭಾವಕ್ಕೊಳಗಾಗಿರುತ್ತೀರಿ.

ಹೀಗೆ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ನಾವು Y2K ಗೆ ತಯಾರಿ ಮಾಡಲೆಂದು ಸಿಸ್ಟಮ್ ಪ್ಲಾನಿಂಗ್ ಮೀಟಿಂಗ್ ಸೇರಿ ಇಂದಿಗೆ ಹತ್ತು ವರುಷಗಳು ಕಳೆದು ಹೋದವು! ಹೀಗೆ ಕಳೆದ ಮೂರು ದಶಕಗಳಲ್ಲಿ ಉಪೇಂದ್ರನ ’ಡೇಂಜರ್’ ಹಾಡಿನ ಎಫೆಕ್ಟ್ ಏನೂ ಅಷ್ಟೊಂದು ಗೊತ್ತಾಗದಿದ್ದರೂ ನನ್ನಲ್ಲಿ ನನ್ನ ಸುತ್ತಲಿನಲ್ಲಿ ಆದ ಬೇಕಾದಷ್ಟು ಬದಲಾವಣೆಗಳು ಇಂದು ಅದೇನನ್ನೋ ಯೋಚಿಸಿಕೊಂಡು ಹಳೆಯ ಫೈಲ್ ಒಂದನ್ನು ಹುಡುಕಿಕೊಂಡು ಹೋದವನಿಗೆ ಕಣ್ಣ ಮುಂದೆ ಸುಳಿದು ಹೋದವು.

ಈ ಕಂಪ್ಯೂಟರುಗಳು ಒಂದಲ್ಲ ಒಂದು ನಮ್ಮ ಮನೆಯ ಫೋನ್ ಆದ ಹಾಗೆ ಆಗುತ್ತವೆ ಎಂದು ಯಾರೋ ಹೇಳಿದ್ದು ನಿಜವಾಗಿದೆ ಅನ್ನಿಸುತ್ತೆ. ಹತ್ತು ವರ್ಷದ ಹಿಂದೆ ದಿನಕ್ಕೆ ಪರ್ಸನಲ್ ಕೆಲಸಗಳಿಗೆಂದು ನಾಲ್ಕೈದು ಘಂಟೆಗಳನ್ನು ಕಳೆಯುತ್ತಿದ್ದವನಿಗೆ (ಅದರಲ್ಲೂ ವೀಕೆಂಡಿನಲ್ಲಿ ಇನ್ನೂ ಹೆಚ್ಚು), ಇಂದೆಲ್ಲ ಪರ್ಸನಲ್ ಬಳಕೆಗೆಂದು ಕಂಪ್ಯೂಟರ್ ಉಪಯೋಗ ಅತ್ಯಂತ ಮಿತವಾಗಿದೆ ಎಂದೇ ಹೇಳಬೇಕು: ಎಲ್ಲೋ ಒಂದಿಷ್ಟು ಇ-ಮೇಲ್‌ಗಳನ್ನು ನೋಡಬೇಕು, ಕೆಲವಕ್ಕೆ ಉತ್ತರಿಸಬೇಕು, ಇನ್ನು ದಿನದ ಸುದ್ದಿ ವಿಶೇಷಗಳನ್ನೂ ಓದಿ/ಕೇಳುವುದಕ್ಕೆ ಮೊದಲಿನ ತರಾತುರಿಯಿಲ್ಲದಿರುವುದು ವಿಶೇಷವೇ ಸರಿ, ಜೊತೆಗೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ನೋಡುವುದಾಗಲೀ ಆಡಿಯೋ ಕೇಳುವುದಾಗಲೀ ಬಹಳ ಅಪರೂಪವೆಂದೇ ಹೇಳಬೇಕು. ಮೊದಲೆಲ್ಲ ಇದ್ದ Hy factors ಗಳಿಗೂ ಇಂದಿನ ಅವೇ ಫ್ಯಾಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. Hy factors ಎಂದರೆ ಏನು ಎಂದಿರಾ? ಅವೇ - Happy, Hobby, Hungry ಮೊದಲಾದವುಗಳು. ಅವರವರ ಹಸಿವು, ದಾಹ, ಸಂತೋಷ-ದುಃಖ, ಹವ್ಯಾಸ ಮೊದಲಾದವುಗಳ ಮೇಲೆ ಅವುಗಳನ್ನು ಅವಲಂಭಿಸಿದ ಅಗತ್ಯಗಳ ಮೇಲೆ ತಾನೆ ಅವರವರ ಚಟುವಟಿಕೆಗಳು ಸುತ್ತುವರೆದಿರೋದು? (ನಿಮಗೇನಾದರೂ ಬೇರೆ Hy factor ಗಳು ಗೊತ್ತಿದ್ದರೆ ತಿಳಿಸಿ).

ಅಂದಿಗಿಂತ ಇಂದು ಇನ್‌ಫರ್ಮೇಷನ್ ಲೋಕ ಬದಲಾಗಿದೆ, ಅಂದು ಸಿಗುತ್ತಿದ್ದ ಒಂದೊಂದು ವೆಬ್ ಸೈಟ್‌ಗಳಿಗೂ ಇಂದು ಅದರ ಹತ್ತು-ನೂರರ ಪಟ್ಟು ಹೆಚ್ಚು ವೆಬ್ ಸೈಟ್‌ಗಳು ಸಿಗತೊಡಗಿವೆ. ಆದರೆ ಇವೆಲ್ಲದರಲ್ಲೂ ಯಾವುದೇ ಆಸಕ್ತಿ ಎನ್ನುವುದು ಇಲ್ಲದಿರುವುದು ನನಗೊಬ್ಬನಿಗೆ ಮಾತ್ರ ಆಗಿಲ್ಲವಷ್ಟೇ? ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳನ್ನು ನಾನು ಬೆನ್ನೆತ್ತಿ ಹೋಗುತ್ತಿದ್ದ ಕಾಲವೊಂದಿತ್ತು, ಏಷ್ಯಾದಿಂದ ಹಿಡಿದು ಅಂಟಾರ್ಟಿಕಾವರೆಗಿನ ವಿದ್ಯಮಾನವನ್ನು ಪ್ರಪಂಚದ ಬೇರೆ ಬೇರೆ ಮಾಧ್ಯಮದವರು ಹೇಗೆ ಬಿಂಬಿಸಿದ್ದಾರೆ ಎಂದು ತೂಗಿ ನೋಡುವುದಿತ್ತು, ಪಾಕಿಸ್ತಾನದ Dawn ನಿಂದ ಹಿಡಿದು, BBC ಮೊದಲಾದವರ ವೆಬ್ ‌ಸೈಟ್‌ಗಳನ್ನು ತಡಕಿ ನೋಡುವುದಿತ್ತು. ಇಂದೆಲ್ಲ ಈ ಪ್ರಪಂಚದಲ್ಲಿ ಕಚ್ಚಾಡಿಕೊಂಡಿರುವವರು ಯಾವಾಗಲೂ ಇದ್ದೇ ಇರುತ್ತಾರೆ ಎನ್ನುವುದು ಗ್ಯಾರಂಟಿಯಾದಂದಿನಿಂದ - ಅವರಲ್ಲಿ ಕಚ್ಚಾಡಿಕೊಂಡು ಹೊಡೆದಾಡಿ ಸತ್ತರೆ ನಾನೇಕೆ ಇಲ್ಲಿ ತಲೆಕೆಡಿಸಿಕೊಳ್ಳಲಿ? - ಎನ್ನುವ ಉದಾಸೀನ ಮೈತುಂಬಿಕೊಂಡಿದೆ. ಕರ್ನಾಟಕದ ರಾಜ್ಯಕಾರಣವೆಂದರೆ ಇನ್ನಾದರೂ ಸ್ವಲ್ಪ ಆಸಕ್ತಿ ಇರೋ ವಿಷಯ, ಅದೇ ಆಸಕ್ತಿ ನನಗೆ ಭಾರತದ ಮಟ್ಟದಲ್ಲಾಗಲೀ ಅಮೇರಿಕದ ವಿಷಯಕ್ಕಾಗಲೀ ಹೋಲಿಸಿಕೊಂಡರೆ 2004 ರಲ್ಲಿ ಬುಷ್-ಕೆರ್ರಿ ಅವರ ಪ್ರತಿಯೊಂದು ಡಿಬೇಟುಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನಿಗೆ ಈ ವರ್ಷ ಆ ಆಸಕ್ತಿಯೂ ಇಲ್ಲವೆಂದೇ ಹೇಳಬೇಕು. ಈ ಯಡಿಯೂರಪ್ಪನ ಸರ್ಕಾರವೇನಾದರೂ ಇನ್ನೊಂದು ವರ್ಷದಲ್ಲಿ ಬಿದ್ದು ಮತ್ತೆ ಅತಂತ್ರ ವ್ಯವಸ್ಥೆ ಉದ್ಭವವಾದರೆ ಕರ್ನಾಟಕದ ರಾಜಕೀಯ ಸ್ಥಿತಿಗತಿಯೂ ನನ್ನ ಆಸಕ್ತಿಯಿಂದ ಮರೆಯಾಗುವುದರಲ್ಲಿ ಸಂಶಯವಂತೂ ಇಲ್ಲ.

ಏನಾಗಿದೆ ನನಗೆ? ನನ್ನ Hy factor ಗಳ ವ್ಯಾಪ್ತಿ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ? ನನ್ನ ಬದಲಾವಣೆಗಳಿಗೆ ಕನ್ನಡಿ ಅನ್ನೋ ಹಾಗೆ ನನ್ನ ಇಂಟರ್ನೆಟ್ ಬ್ರೌಸಿಂಗ್ ಹ್ಯಾಬಿಟ್ಟನ್ನೇ ತೆಗೆದುಕೊಂಡರೆ ಅಗತ್ಯವಿದ್ದಷ್ಟು ಆನ್‌ಲೈನ್ ಮ್ಯಾಪ್, ಮಿತವಾದ ಪರ್ಸನಲ್ ಇ-ಮೇಲ್‍ಗಳು (unsolicited ಇ-ಮೇಲ್‌ಗಳು ತಮ್ಮಷ್ಟಕ್ಕೆ ತಾವೇ ಕಸದ ಬುಟ್ಟಿಗೆ ಹೋದ ಬಳಿಕ), ಬ್ಯಾಂಕ್ ಅಕೌಂಟುಗಳು (ಬಿಲ್ ಪೇಮೇಂಟ್‌ಗೆಂದು), ಫೈನಾನ್ಸಿಯಲ್ ಹೆಡ್‌ಲೈನ್ಸುಗಳು (ಸ್ಟಾಕ್ ಮಾರ್ಕೆಟ್ಟಿನ ಮೇಲೆ ಕಣ್ಣಿಟ್ಟುಕೊಂಡೇ ಇರಬೇಕಲ್ಲ ಅದಕ್ಕೆ), ಇವೆಲ್ಲದರ ಜೊತೆಗೆ ನಮ್ಮನೆ ಕಂಪ್ಯೂಟರಿನ ಹೋಮ್ ಪೇಜ್ ಆದ ಪ್ರಜಾವಾಣಿಯ ಹೆಡ್‌ಲೈನ್‌ಗಳನ್ನು ಇಪ್ಪತ್ತು ಸೆಕೆಂಡು ಜಾಲಾಡಿ ನೋಡುವುದನ್ನು ಬಿಟ್ಟರೆ ಮತ್ತೆ ಹೆಚ್ಚು ಹೊತು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಕಷ್ಟವೆಂದೇ ಹೇಳಬೇಕು. ಮೊದಲೆಲ್ಲ ಉಳಿದವರ ಬ್ಲಾಗ್‌ಗೆ ಹೋಗಿ ಓದಿ, ಅಪರೂಪಕ್ಕೆ ಕಾಮೆಂಟುಗಳನ್ನು ಬಿಡುತ್ತಿದ್ದವನು ಇಂದು ಅದನ್ನು ಮಿತಿಗೊಳಿಸಿದ್ದೇನೆಂದು ಹೇಳಿಕೊಳ್ಳುವುದಕ್ಕೇ ಕಷ್ಟವೆನಿಸುತ್ತದೆ. ಆಗೆಲ್ಲ ಒಂದೇ ದಿನ ಐದು-ಆರು-ಎಂಟು ಘಂಟೆಗಳಷ್ಟು ಹಲವಾರು ವ್ಯಕ್ತಿಗಳೊಡನೆ ಧೀರ್ಘವಾದ ಚಾಟ್ ಮಾಡುತ್ತಿದ್ದವನು ಇತ್ತೀಚೆಗೆ ವಾರಕ್ಕೊಮ್ಮೆಯೂ ಒಬ್ಬರಿಗೂ ’ಹಾಯ್’ ಹೇಳದ ಮಟ್ಟಕ್ಕೆ ಬಂದಿಳಿದಿದ್ದೇನೆ! ಆಫೀಸಿನಲ್ಲೂ ಅಷ್ಟೇ ಇನ್ಸ್ಟಂಟ್ ಮೆಸ್ಸೇಜ್ ಸಂಭಾಷಣೆಗಳು ನೀರಸವೆನ್ನಿಸತೊಡಗಿ ಪಕ್ಕದಲ್ಲಿನ ಫೋನ್ ಎತ್ತಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾತನಾಡಿ ಆಗಬೇಕಾದ ಕೆಲಸವನ್ನು ಮುಗಿಸಿಕೊಳ್ಳುತ್ತೇನೆ.

ಈ ಇಂಟರ್ನೆಟ್ ಎಂದರೆ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ - ನೆನಪಿದೆಯಾ ನಿಮಗೆ ನಿಮ್ಮ ಸುತ್ತಮುತ್ತಲೂ ಅಗಾಧವಾದ ಪುಸ್ತಕಗಳ ರಾಶಿಯೇ ಇದ್ದರೂ ನೀವು ನಿಮಗೆ ಬೇಕಾದ ಯಾವುದೋ ಒಂದು ಪುಸ್ತಕಕ್ಕಂಟಿಕೊಂಡು ದಿನಪೂರ್ತಿ ಅದೇ ಲೈಬ್ರರಿಯಲ್ಲಿ ಕಳೆಯುತ್ತಿದ್ದುದು? ಒಂದು ಕಾಲದಲ್ಲಿ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿನ ನನಗೆ ಬೇಕಾದ ಲೇಖಕರ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುವ ದಾಹವಿದ್ದವನಿಗೆ ಇಂದು ಅದೇ ವಾತಾವರಣದಲ್ಲಿ ಬಿಟ್ಟರೆ ಯಾವೊಂದು ಪುಸ್ತಕವನ್ನು ತೆಗೆದು ಓದುತ್ತೇನೆ ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ನಮ್ಮ ಮನೆಗೆ ನ್ಯೂ ಯಾರ್ಕ್ ಟೈಮ್ ನ್ಯೂಸ್ ಪೇಪರನ್ನು ತರಿಸೋಣವೆಂದುಕೊಂಡರೆ ಅದನ್ನು ಓದೋರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆಂಬ ಉತ್ತರ ಬಂತು. ಎಲ್ಲಾದರೂ ಬಿಸಿನೆಸ್ ಟ್ರಿಪ್‌ನಲ್ಲಿ ನಾನುಳಿದುಕೊಳ್ಳುವ ಹೋಟೇಲಿನಲ್ಲಿ ಪುಕ್ಕಟೆ ನ್ಯೂಸ್ ಪೇಪರನ್ನು ಕೊಟ್ಟರೂ ಓದದೇ ಇರುವ ಪರಿಗೆ ಬಂದು ತಲುಪಿದ್ದೇನೆ ಎಂದು ಹೇಳಿಕೊಳ್ಳಲು ಹೆದರಿಕೆಯಾಗುತ್ತದೆ. ನಿನ್ನೆಯವರೆಗೆ ನಡೆದ ವಿಶ್ವದೆಲ್ಲ ಸುದ್ದಿಗಳನ್ನು ಇಂತಿಷ್ಟೇ ಪುಟಗಳಲ್ಲಿ ಹೀಗೇ ಕಟ್ಟಿ ಹಿಡಿಯುತ್ತೇವೆ ಎನ್ನುವ ಹಠವಾದಿಗಳ ಅಗತ್ಯ ಈಗಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ ಬೇಕು ಹೇಳಿ, ಹಾಗೆ ಮುಕ್ತವಾಗಿ ಸಿಗುವ ವಿಷಯಗಳನ್ನೆ ನಮ್ಮ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಓದದಿರುವ ನಾವು ಇನ್ನು ಭೌತಿಕ ಪುಟಗಳನ್ನು ತಿರುಗಿಸಿ ಓದುವುದು ನಿಜವೇ?

ಇವತ್ತಿಗೆ ನನ್ನ ಸ್ವ ಇಚ್ಛೆಯಿಂದ ರೇಡಿಯೋವನ್ನು ಕೇಳದೆ ಆರು ತಿಂಗಳು ಸಂದವು. ಹಿಂತಿರುಗಿ ನೋಡಿದರೆ ನಾನು ಕಳೆದುಕೊಂಡದ್ದೇನು ಇಲ್ಲ ಅನ್ನುವ ವಾದಕ್ಕೆ ಪೂರಕವಾದ ಅಂಶಗಳೇ ಹೆಚ್ಚು ಎನ್ನಿಸುತ್ತಿರುವುದು ಈ ಹೊತ್ತಿನ ತತ್ವಗಳಲ್ಲೊಂದು. ಇತ್ತೀಚೆಗೆ ಟಿವಿಯಲ್ಲಿ ಬೇಕಾದಷ್ಟು ಸಿಗುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯೂ ಅಷ್ಟೊಂದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಹೊತ್ತಿಗೆ ನನ್ನ ಫೇವರೈಟ್ ಕಮಿಡಿಯನ್ George Carlin ಸತ್ತು ಹೋದ ವಿಷಯ ನಿನ್ನೆ ಆಫೀಸಿನಲ್ಲಿ ಯಾರದ್ದೋ ಇನ್ಸ್ಟಂಟ್ ಮೆಸ್ಸೇಜಿನ ಸೇಟಸ್ಸ್ ಮೆಸ್ಸೇಜಿನ ಮೂಲಕ ಗೊತ್ತಾಯಿತು - One good thing about being dead is you automatically qualify for putting your picture on stamps and notes! ಅಡಿಗರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಅದೆಷ್ಟೋ ವರ್ಷಗಳ ಹಿಂದೆ ಬರೆದದ್ದೂ, ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಸಂಸಾರ ಸೋಜಿಗವನ್ನು ಸರಳ ವಿಷಯ-ವಸ್ತುಗಳಲ್ಲಿ ಹಿಡಿದದ್ದೂ ನನ್ನನ್ನಂತೂ ಅಗಾಧವಾಗಿ ಕಾಡಿಸುತ್ತಲೇ ಎನ್ನಬಹುದು. ನಾವಂತೂ ಇತ್ತೀಚೆಗೆ ಧೀರ್ಘವಾಗಿ ಗಾಢವಾಗಿ ಅದೇನನ್ನು ಓದಿಲ್ಲವಾದರೂ ಅಲ್ಲಲ್ಲಿ ಸಿಗುವ ಈ ಹಳೆಯ ಗ್ರಂಥಗಳ ಪುಟಗಳು ನನ್ನನ್ನು ಯಾವತ್ತೂ ಒಂದು ಕ್ಷಣ ನಿಲ್ಲಿಸಿಯೇ ನಿಲ್ಲಿಸುತ್ತವೆ - ಅದು ಮಾತ್ರ ಬದಲಾಗಿಲ್ಲ ಎನ್ನುವುದೇ ಸಂತೋಷದ ವಿಷಯ.

ಈ information overload ಕಾಲದಲ್ಲಿ ಈಗಷ್ಟೇ ಇನ್ನೂ ಮೂರೂವರೆ ದಶಕಗಳನ್ನು ಪೂರೈಸಿಕೊಂಡು ದಿನದಿನಕ್ಕೂ ಪ್ರಬುದ್ಧಗೊಳ್ಳುತ್ತಿರುವ (ಅಥವಾ ಹಾಗೆಂದುಕೊಂಡು) ಮೈಮನಗಳಿಂದ ಜಗತ್ತನ್ನು ನೋಡುವ ನನ್ನ ಪರಿ ಇನ್ನು ಇಷ್ಟೇ ವರ್ಷಗಳಲ್ಲಿ ಅದೇನೇನೂ ಬದಲಾವಣೆಗಳನ್ನು ತಾಳುವುದಿದೆಯೋ? 2000 ದ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರಿಗಿಂತ ಮೊದಲು ನೋಂದಾವಣೆ ಮಾಡಿಸಿಕೊಂಡು ಹೋಗಿ ಖುಷಿಯಾಗಿ ವಾಪಾಸು ಬಂದಿದ್ದ ನನಗೆ ಇಂದು 2008 ರ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಲು ಅಷ್ಟೊಂದು ಮನಸ್ಸು ಬಾರದಿರುವುದು ಏಕೆ ಎಂದು ಕೇಳಿಕೊಳ್ಳುತ್ತಲೇ ಇರುವಂತಾಗಿರುವುದು ವಿಶೇಷ. ನಮ್ಮದೇ ಆದದ್ದನ್ನು ಬರೆಯುವ ವ್ಯವಧಾನ ಆಸಕ್ತಿ ಹಗುರವಾಗುತ್ತಾ ಬಂದ ಹಾಗೆ ಇನ್ನೊಬ್ಬರದನ್ನು ಓದುವ ಕಾಳಜಿ ಕಳಕಳಿ ದೂರವಾಗದಿದ್ದರೆ ಸಾಕು. ಸುತ್ತಮುತ್ತಲಿನಿಂದ ದೂರವಿದ್ದುಕೊಂಡು ಸ್ವಯಂ ಅನ್ನೇ ಸರ್ವಸ್ವ ಎಂದುಕೊಂಡು ಈ ದೊಡ್ಡ ಜಗದ ಚಿಕ್ಕ ಗೂಡಿನೊಳಗೆ ಮನಸ್ಸು ಹೂತು ಹೋಗದಿದ್ದರೆ ಸಾಕು. ಬೆಟ್ಟದಷ್ಟು ಬಿದ್ದುಕೊಂಡಿರುವ ಕಸದಲ್ಲಿ ರಸವನ್ನು ಹುಡುಕಿ ತೆಗೆದು ಅದನ್ನು ಅರಗಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಇಂದು ಹೆಚ್ಚಿನ ಶ್ರಮ ಬೇಕು ಅನ್ನುವುದಕ್ಕೆ ನನ್ನನ್ನು ಕೇಳಿ - ಮೊದಲೆಲ್ಲ ಸ್ನೇಹಿತರು ಈ ಪುಸ್ತಕವನ್ನು ಓದಿ/ಓದಿದೆ - ಎನ್ನುತಲಿದ್ದರು, ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬೇಕು.

ನಿಮ್ಮ ನಿಮ್ಮ (ಬದಲಾಗುತ್ತಿರುವ) Hy factor ಗಳ ಅವಸ್ಥೆ/ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೀವು ಬದಲಾಗಿದ್ದೀರಿ ಎಂದುಕೊಂಡಿದ್ದೀರೇನು?

Tuesday, June 17, 2008

ಪಾಪ, ಇಂದಿನ ಮಕ್ಕಳು!

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.

ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.

’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.

ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.

ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!

ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?

Sunday, June 08, 2008

ಬೆತ್ತಲಾಗದ ಮನಸ್ಸಿನ ಕತ್ತಲೆ

ಹನ್ನೊಂದು ವರ್ಷದ ಹಿಂದೆ ಈ ದೇಶಕ್ಕೆ ಬಂದ ಹೊಸದರಲ್ಲಿ ಇಲ್ಲಿ ಜಿಮ್‍ಗೆ ಸೇರಿಕೊಳ್ಳಬೇಕು, ನಾನೂ ಎಲ್ಲರಂತೆ ಒಂದು ಎಕ್ಸರ್‌ಸೈಸ್ ರುಟೀನ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇ ಬಂತು, ನಮ್ಮ ಮನೆಯ ಹತ್ತಿರದ ಹೆಲ್ತ್ ಕ್ಲಬ್ ಒಂದಕ್ಕೆ ಮೆಂಬರ್ ಆದದ್ದು ಚೆನ್ನಾಗಿ ನೆನಪಿದೆ. ನನ್ನಂತಹವರು ಖುರ್ಚಿ ಮೇಲೆ ಕುಳಿತೇ ದುಡಿದು ತಿನ್ನುವ ಕಾಯಕಕ್ಕೆ ಬದ್ಧರಾದಂತೆ, ಆಗಾಗ್ಗೆ ಹಲವಾರು ದಿಕ್ಕುಗಳಲ್ಲಿ ತಿರುಗಿ ಬಾಗಿ ಬಳಕುವ ಖುರ್ಚಿಯ ಮುಂದಿನ ಜಡ ಚೇತನ ಟೇಬಲ್ಲಿನ ಸಂಗಕ್ಕೆ ಜೋತು ಬಿದ್ದು ನನ್ನ ಹೊಟ್ಟೆ ಕಿಂಚಿತ್ತು ಕಿಂಚಿತ್ತಾಗೇ ಮುಂದೆ ಬರಲು ಆರಂಭಗೊಂಡಿದ್ದು ಅನೇಕ ರೀತಿಯಲ್ಲಿ ನನಗೆ ಸೋಜಿಗವನ್ನುಂಟು ಮಾಡುತ್ತಲೇ ಇದೆ, ಆದರೆ ಪರಿತ್ಯಾಗಿ ಮನಸ್ಸು ಅದೇನೇ ಸಂಕಲ್ಪಗಳನ್ನು ಮಾಡಿಕೊಂಡರೂ ದಿನಕ್ಕೊಮ್ಮೆಯಾದರೂ ಹಲ್ಲು ತಿಕ್ಕುವ ಕಾಯಕದಂತೆ ಇಂದಿಗೂ ಮೈ ಮುರಿದು ವ್ಯಾಯಾಮ ಮಾಡುತ್ತಿಲ್ಲವಲ್ಲ ಎನ್ನುವುದು ನನ್ನ ಲಾಂಗ್‌ಟರ್ಮ್ ಕೊರಗುಗಳಲ್ಲೊಂದು. ದಶಕದ ಹಿಂದೆ ಒಂದಿಷ್ಟು ದಿನ ನೆಪಕ್ಕೆಂದು ಹೆಲ್ತ್‌ಕ್ಲಬ್‌ಗೆ ಹೋದಂತೆ ಮಾಡಿ ಕೊನೆಗೆ ಇವತ್ತಿನವರೆಗೂ ಮತ್ತೆ ಅಂತಹ ಸ್ಥಳಗಳಿಗೆ ಕಾಲಿಕ್ಕದ ಭೂಪ ನಾನು ಎಂದು ನನ್ನನ್ನು ನಾನೇ ಹೀಯಾಳಿಸಿಕೊಂಡು ನಗುವ ಪ್ರಸಂಗವೊಂದು ನೆನಪಿಗೆ ಬಂತು.

ಅವತ್ತೇ ಮೊದಲು ನಾನು ಇಲ್ಲಿನ ಹೆಲ್ತ್‌ಕ್ಲಬ್‌ನ ಶೌಚಾಲಯಗಳಿಗೆ ಭೇಟಿ ನೀಡಿದ್ದು. ನಾನು ಅಲ್ಲಿನ ಥರಾವರಿ ಉಪಕರಣಗಳನ್ನು, ಮಷೀನುಗಳನ್ನು ಬಳಸಿ ಏನು ಬೇಕಾದರೂ ಮಾಡಿ ಧಾರಾಳವಾಗಿ ಬೆವರಿಸಿಕೊಂಡು ಅಲ್ಲಿನ ಶೌಚಾಲಯ ದಾರಿ ಹಿಡಿದು ಅಲ್ಲಿ ನೋಡಿದರೆ ಅಲ್ಲಿ ಬೇಕಾದಷ್ಟು ಜನ ತಮ್ಮ ಹುಟ್ಟುಡುಗೆಲ್ಲಿರುವುದೇ? ಅಂದರೆ ಬರೀ ಬೆತ್ತಲಾಗಿ ನಿಂತುಕೊಂಡು ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿರುವುದೇ? ಇದು ಮುಂದುವರೆದ ದೇಶ, ಇಲ್ಲಿನ ಜನರಿಗೆ ತಮ್ಮ ಮಾನ-ಮರ್ಯಾದೆ, ನಾಚಿಕೆ-ಸಂಕೋಚಗಳು ಒಂದೂ ಅಡ್ಡಿ ಬಾರವೇ? ಎನ್ನಿಸಿ ಶಾಕ್ ಹೊಡೆದದ್ದು ನಿಜ. ಅಂದಿನಿಂದ ನಾನು ಮತ್ತೆ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಮನಸ್ಸು ಮಾಡಿಲ್ಲ.

ಹೌದು, ನಮ್ಮ ಬೆಳವಣಿಗೆಯೇ ಹಾಗಿದೆ, ಹಾಗಿತ್ತು. ಶಾಲಾ ದಿನಗಳಲ್ಲಿ ನಮ್ಮೂರಿನ ಹಳ್ಳಿ ಬಯಲಿನಲ್ಲಿ ಕೊ ಎಜುಕೇಶನ್‌ ಇದ್ದ ಕಾರಣ ನಾವೆಲ್ಲರೂ ಮಧ್ಯಂತರ ವಿರಾಮ ಕಾಲದಲ್ಲಿ ಸಾಲಿನಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಿದ್ದೇ ನಮ್ಮಲ್ಲಿನ ಇಂಟಿಮಸಿ. ಅದನ್ನು ಬಿಟ್ಟರೆ ಬತ್ತಲಾಗುವುದೆಂದರೆ ಶಾಪ, ಅದೂ ತನ್ನ ಸಹಪಾಠಿಗಳೆದುರು, ಸಹೋದರ-ಸಹೋದರಿಯರ ಎದುರು, ಊಹ್ಞೂ ಸಾಧ್ಯವಿಲ್ಲದ ಮಾತು. ಹಾಗಿದ್ದ ಮೇಲೆ, ಇನ್ನು ಸ್ಟ್ರೇಂಜರ್ಸ್ ಎದುರು ಬತ್ತಲಾಗುವುದಕ್ಕೆ ಸಂಕೋಚವೇಕೆ ಎಂದು ಪ್ರಶ್ನೆ ಎದ್ದಿದ್ದೂ ಸಹಜ. ಆದರೆ, ಸಾರ್ವಜನಿಕವಾಗಿ ಬತ್ತಲಾಗುವುದು ಖಂಡಿತವಾಗಿ ಸಲ್ಲದ ನಡವಳಿಕೆ, ಅದು ನನ್ನ ಕಲ್ಪನೆಯಲ್ಲಂತೂ ಈವರೆಗೆ ಬಂದೇ ಇಲ್ಲ ಎನ್ನಬಹುದು.

ಸೆಪ್ಟೆಂಬರ್ ಹನ್ನೊಂದರ ನಂತರ ಬಿಗಿಯಾದ ಭದ್ರತಾ ವ್ಯವಸ್ಥೆಯಲ್ಲಿ ಒಂದು ಕೋಮಿನವರನು ಬೆತ್ತಲೆ ಸರ್ಚ್ ಮಾಡುವುದರ ಬಗ್ಗೆ ಕೇಳಿದ್ದೇನೆ. ತಮ್ಮ ಬಗಲಿನ ಚೀಲದಲ್ಲಿರುವ ಕುರ್ ಆನ್ ಪುಸ್ತಕವನ್ನು ಪೋಲೀಸ್ ನಾಯಿಗಳು ಮೂಸುವುದನ್ನು ತಪ್ಪು ಎಂದುಕೊಂಡ ಮನಸ್ಥಿತಿಗಳ ಬಗ್ಗೆ ಕೇಳಿದ್ದೇನೆ. ನನ್ನ ಹಾಗೆ ನನ್ನ ಹಿನ್ನೆಲೆಯಲ್ಲಿಂದ ಬಂದಿರುವವರು ಸಾರ್ವಜನಿಕವಾಗಿ ಬೆತ್ತಲಾಗದಿರುವುದನ್ನು ಅನೋಮೋದಿಸುವುದನ್ನು ನೋಡಿದ್ದೇನೆ. ಹೀಗಿರುವಲ್ಲಿ ನಾವಿರುವ ಪರಿಸರ ಹೊಸದಾದರೂ, ಏಕ್ ದಂ ನಮಗೆಲ್ಲ ಇಲ್ಲಿನ ರೀತಿ-ರಿವಾಜುಗಳಿಗೆ ಹೊಂದಿಕೊಳ್ಳಿ ಎನ್ನುವುದು ಹೇಳಲು ಮಾತ್ರ ಚೆಂದ, ಆಚರಿಸಲು ಅಷ್ಟೇ ಕಷ್ಟ ಎನ್ನುವುದಕ್ಕೆ ನನ್ನದೇ ಉದಾಹರಣೆ ತೆಗೆದುಕೊಳ್ಳಿ - ಇಂದಿಗೂ ಸಾರ್ವಜನಿಕವಾಗಿ ಬತ್ತಲಾಗುವುದನ್ನು ಮನಸ್ಸು ಒಪ್ಪದು.

***

ಆಫೀಸಿನಲ್ಲಿ ನನ್ನ ಸಮವಯಸ್ಕ, ಈಗಾಗಲೇ ಅಮೇರಿಕದ ಸಿಟಿಜನ್‌ಶಿಪ್ ಪಡೆದುಕೊಂಡು ನಮ್ಮ ಆಫೀಸಿನ ವ್ಯಾಪ್ತಿಯಲ್ಲೆ ಇರುವ ಫಿಟ್‌ನೆಸ್ ಸೆಂಟರ್ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕಟ್ಟು ಮಸ್ತಾಗಿರುವ ಪರಾಗ್ ನನ್ನನ್ನು ಒತ್ತಾಯ ಮಾಡಿ ಸುಮ್ಮನೆ ವಿಸಿಟ್‌ಗೆಂದು ಫಿಟ್‌ನೆಸ್ ಸೆಂಟರ್‌ ಅನ್ನು ನೋಡಲು ಕಳೆದ ವಾರ ಕರೆದುಕೊಂಡು ಹೋದ. ಮತ್ತೆ ಅದೇ - ಮಟ ಮಟ ಮಧ್ಯಾಹ್ನ ಮೈ ಬಗ್ಗಿಸಿ ವ್ಯಾಯಾಮ ಮಾಡಿದ ಪ್ರಯುಕ್ತ ಅನೇಕರು ಸ್ನಾನದ ಕೋಣೆಗಳಿಂದ ಬೆತ್ತಲೆ ಓಡಾಡಿಕೊಂಡಿದ್ದರು ತಮ್ಮ ಸುತ್ತು ಮುತ್ತಲೂ ಏನೂ ಯಾರೂ ಇಲ್ಲವೇ ಇಲ್ಲ ಎನ್ನೋ ಹಾಗೆ. ನನಗಂತೂ ಒಂದು ರೀತಿಯ ಅಸಮಧಾನ, ಕಸಿವಿಸಿ - ಅದೇನೋ ಹೇಳಿಕೊಳ್ಳಲಾಗದ ಕಷ್ಟ... ’ನಿನಗೂ ಇವತ್ತಲ್ಲ ನಾಳೆ ರೂಢಿಯಾಗುತ್ತೆ!’ ಎನ್ನುವ ಪರಾಗ್‌ನ ಧ್ವನಿಗೆ ನನ್ನನ್ನು ಸಮಾಧಾನ ಮಾಡಲಾಗಲಿಲ್ಲ. ನಾನೋ ಇನ್ನೆಂದೂ ಇಲ್ಲಿ ಕಾಲಿಡಬಾರದು ಎಂದುಕೊಳ್ಳುತ್ತಲೇ ಅಲ್ಲಿಂದ ಕಂಬಿಕಿತ್ತೆ.

ಸಾರ್ವಜನಿಕವಾಗಿ ಬೆತ್ತಲಾಗದ, ಸಾರ್ವಜನಿಕವಾಗಿ ಬೆತ್ತಲನ್ನು ನೋಡದ ಕತ್ತಲ ಮನಸ್ಥಿತಿಗೆ ಒಂದಿಷ್ಟು ಬೆಳಕು ಚೆಲ್ಲೋಣ: ನನ್ನ ಮನಸ್ಸಿನಲ್ಲಾಗಲೀ, ನನ್ನ ಹಾಗೆ ಆಲೋಚಿಸುವವರ ಮನಸ್ಸಿನಲ್ಲೇನಿದೆ? ನಾವು ಏಕೆ ಈ ರೀತಿ ಆಲೋಚಿಸುತ್ತೇವೆ. ಅದರ ಹಿನ್ನೆಲೆ ಏನು? ಸಭ್ಯತೆ, ಸಂಸ್ಕೃತಿಗಳ ಚೌಕಟ್ಟಿನಲ್ಲಾಗಲೀ, ಅಥವಾ ನಾವು ಬೆಳೆದು ಬಂದ ರೀತಿಯನ್ನು ಶೋಧಿಸಿ ನೋಡಿದರೆ ಈ ರೀತಿಯ ಮನಸ್ಥಿತಿಗೆ ತಕ್ಕ ಉತ್ತರ ಸಿಗುತ್ತದೆ.

ನೀನು ಹಾಲು ಕುಡಿದು ಮಲಗದೇ ಇದ್ದರೆ ಗುಮ್ಮನನ್ನು ಕರೆಯುತ್ತೇನೆ ಎಂದು ಹೆದರಿಸುವ ಅಮ್ಮನ ಧ್ವನಿಯಿಂದ ನಮ್ಮ ನೆರೆಹೊರೆಯಲ್ಲಿನ ಕತ್ತಲು-ಬೆಳಕುಗಳ ಮೇಲೆ ನಮ್ಮ ಅವಲಂಭನೆ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ’ಶೇಮ್-ಶೇಮ್, ಸ್ವಲ್ಪವೂ ಇವನಿಗೆ ಸ್ವಲ್ಪ ನಾಚಿಕೆ-ಮಾನ-ಮರ್ಯಾದೆ ಅನ್ನೋದೇ ಇಲ್ಲ, ಎಲ್ಲರ ಎದುರಿಗೆ ಹೀಗೆ ಬೆತ್ತಲೆ ಬಂದಿದ್ದಾನೆ!’ ಎನ್ನುವ ಮಾತುಗಳು ಮುಗ್ಧ ಮನಸ್ಸಿನ ಮೇಲೆ ಅವುಗಳ ಪ್ರಭಾವವನ್ನು ಮಾಡುತ್ತವೆ. ಬಸ್‌ಸ್ಟ್ಯಾಂಡಿನ ಆವರಣಗಳಲ್ಲಿ ಸಿಗುವ ಅರೆಬೆತ್ತಲೆ ಭಿಕ್ಷುಕರೂ, ಅಲ್ಲಲ್ಲಿ ಹುಚ್ಚು ಹಿಡಿದು ಅಲೆಯುವ ಬೆತ್ತಲೆ ಹುಚ್ಚರೂ ನೆನಪಾಗಿ ಒಂದು ಹೀನ ಸ್ಥಿತಿಗೆ ತಳಪಾಯವಾಗುತ್ತಾರೆ. ಇನ್ನು ನಮ್ಮ ಭಾರತೀಯ ನೆಲೆಯಲ್ಲಿ ಬೆತ್ತಲೆ ಇರುವವರೆಂದರೆ ಯಾರು? ಆದಿವಾಸಿಗಳು, ಕಾಡಿನಲ್ಲಿ ಬದುಕುವವರು, ಮೊದಲಾದ ವಿಭಿನ್ನ ಸಂಸ್ಕೃತಿಯ ಜನರು. ಈ ಮನಸ್ಸಿನ ಮೂಲದ ನಾವುಗಳು ಹತ್ತು-ಹದಿನೈದು ವರ್ಷಗಳ ಹಿಂದೆ ಆಧುನಿಕ ಫಿಟ್‌ನೆಸ್ ಸೆಂಟರ್‍ಗೆ ಬೆಂಗಳೂರು-ಮದ್ರಾಸ್ ವಾತಾವರಣದಲ್ಲಿ ಹೋಗಿದ್ದೂ ಇಲ್ಲ, ಅಲ್ಲೂ ಇಂದು ಪರಿಸ್ಥಿತಿ ಬದಲಾಗಿದೆ ಎಂದು ಹೇಳುವ ಪರಾಗ್‌ನ ಮಾತುಗಳು ನಂಬಲೂ ಕಷ್ಟವಾಗುತ್ತಿರುವುದಕ್ಕೆ ಸಾಕಲ್ಲವೇ ಇಷ್ಟು ಕಾರಣಗಳು?

***

ಬೆತ್ತಲಾಗದ ನಮ್ಮ ಮನಸ್ಸಿನ ಹಿಂದಿನ ಕಾರಣಗಳೇನು? ನಾವೂ ಈ ರೀತಿ ಇಲ್ಲಿನವರಂತೆ ಬದಲಾಗಬೇಕೇ? ಎಲ್ಲರೊಳಗೊಂದಾಗದ ಮನಸ್ಸಿನಲ್ಲೇ ಮಂಡಿಗೆ ತಿಂದುಕೊಂಡು ನಮ್ಮ ಪ್ರಪಂಚದ ಖುರ್ಚಿ ಮೇಜಿಗೆ ಸಂಬಂಧವನ್ನು ಗಟ್ಟಿಯಾಗಿ ಬೆಳೆಸಿಕೊಂಡು ಜೊತೆಗೆ ದಿನೇದಿನೇ ಬೊಜ್ಜನ್ನು ಹೆಚ್ಚಿಸಿಕೊಳ್ಳುವ ಬತ್ತಲಾಗದ ನಮ್ಮ ಮನಸ್ಸಿನ ಕತ್ತಲೆಗೆ ಕನ್ನಡಿ ಹಿಡಿಯುವವರಾರು? ಅಥವಾ ಇಲ್ಲಿಗೆ ಬಂದು ನಮ್ಮ ತನವೆಲ್ಲ ದಿನೇದಿನೇ ಕಳೆದುಕೊಂಡು ಹೋಗುತ್ತಿರುವ ಹಾಗೆ ಇದೂ ಒಂದು ಬಿಹೇವಿಯರ್ ಅನ್ನು ಬದಲಾಯಿಸಿಕೊಳ್ಳದೇ ಹಾಗೇ ಇದ್ದರೆ ಏನಾದೀತು?