Showing posts with label ಅಲ್ಲಿ-ಇಲ್ಲಿ. Show all posts
Showing posts with label ಅಲ್ಲಿ-ಇಲ್ಲಿ. Show all posts

Monday, June 01, 2020

ಕೆಲಸಕ್ಕೆ ಜನರಿಲ್ಲ!



ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

***



ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

***

ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

***
ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.

Tuesday, May 19, 2020

ಯಾರನ್ನ ನಂಬುವುದು? ಬಿಡುವುದು?

ಈಗಿನ ಕಾಲದ ನ್ಯೂಸ್ ಚಾನೆಲ್‌ಗಳನ್ನ ನೋಡ್ತಾ ಇದ್ರೆ ಒಂದು ರೀತಿ ವಾಕರಿಕೆ ಬಂದಂಗೆ ಆಗೋಲ್ಲ?  ಒಂದು ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ನಾವು ವಿಶ್ವದ ಆಗುಹೋಗುಗಳನ್ನು ಫಾಲೋ ಮಾಡುತ್ತಿದ್ದೆವು.  ರೇಡಿಯೋ ಇಟ್ಟುಕೊಂಡು BBC, VoA, SLBC, AIR ಮೊದಲಾದ ಸ್ಟೇಷನ್ನುಗಳನ್ನು ತಿರುಗಿಸಿ ನೋಡುತ್ತಿದ್ದೆವು.  ಆಗಿನ ಕಾಲದಲ್ಲಿ ಮ್ಯಾಗಜೀನುಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದುತ್ತಿದ್ದೆವು.  ಆಗಿನ ಕಾಲದ ಜರ್ನಲಿಸಮ್ ಅಂದ್ರೆ ಅದರಲ್ಲಿ ತಿರುಳಿತ್ತು, ಹುರುಳಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಸ್ ಇತ್ತು.  ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡುವ ಪ್ರಕ್ರಿಯೆ ಇತ್ತು.  ಓದುಗರನ್ನು, ಕೇಳುಗರನ್ನು ಪತ್ರಿಕಾ ಸಿಬ್ಬಂದಿ ಸೀರಿಯಸ್ ಆಗಿ ಪರಿಗಣಿಸುತ್ತಿದ್ದರು, ಗಮನಿಸುತ್ತಿದ್ದರು.

ಇದನ್ನು ಬೇಕಾದ್ರೆ, ನಾಸ್ಟಾಲ್ಜಿಯಾ ಎಂದು ಕರೆದು ಬದಿಗೆ ತಳ್ಳಬಹುದು, ಆದರೆ ಇಂದಿನ ನ್ಯೂಸ್‌ ನೆಟ್‌ವರ್ಕ್‌ಗಳಲ್ಲಿ  ಯಾವುದೇ ಹುರುಳಿದ್ದಂತೆ ನನಗನ್ನಿಸೋದಿಲ್ಲ.  ನ್ಯೂಸ್‌ಗಿಂತ ಹೆಚ್ಚಾಗಿ ಒಪಿನಿಯನ್ (Op Ed) ನಿಂದ ಎಲ್ಲ ಅಂಕಣಗಳು ತುಂಬಿರುತ್ತವೆ.  ಕೆಲವೊಂದು ನ್ಯೂಸ್ ಪೇಪರುಗಳು, ಚಾನೆಲ್ಲುಗಳಂತೂ ಆಯಾ ಪೊಲಿಟಿಕಲ್ ಮ್ಯಾನಿಫೆಸ್ಟೋ ಅನ್ನು ಸಪೋರ್ಟ್ ಮಾಡುತ್ತಾ, ತಮ್ಮ ರಾಜಕೀಯ/ದುರೀಣರ ಮೌತ್‌ಪೀಸ್ ಆಗಿ ಬಿಟ್ಟಿವೆ.

***
ನಾನು ಈ ಕೊರೋನ ಬೆಳವಣಿಗೆಯನ್ನು ಪ್ರತಿದಿನ ರಾತ್ರಿ ಒಂಭತ್ತು ಘಂಟೆಗೆ ಪ್ರಸಾರವಾಗುವ ABD News Live ನೋಡುತ್ತೇನೆ.  Linsey Davis ಇದ್ದವರಲ್ಲಿ ಒಳ್ಳೆಯ anchor ಎಂದೇ ಹೇಳಬೇಕು.  ಸ್ಫುಟವಾಗಿ ಯಾವ ತಪ್ಪೂ ಇಲ್ಲದೇ ಉತ್ತಮ ಧ್ವನಿಯಿಂದ ಈಕೆ ABC ನ್ಯೂಸ್ ನೋಡುಗರಿಗೆ ಇಷ್ಟವಾಗುತ್ತಾರೆ.  ಜೊತೆಗೆ, ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವಷ್ಟರ ಮಟ್ಟಿನ objectivity ಯನ್ನು ನಾನು ಈವರೆಗೆ ಕಂಡಿದ್ದೇನೆ, ಅದರಲ್ಲೂ ಯಾವುದೇ "ಸ್ವಾಮಿನಿಷ್ಠೆ" ಈವರೆಗೆ ನನ್ನ ಅರಿವಿಗೆ ಬಂದಿಲ್ಲ.


ಒಂದು ಮೂವತ್ತು ನಿಮಿಷದ ನ್ಯೂಸ್ ದಿನಕ್ಕೊಮ್ಮೆ ಸಿಕ್ಕರೆ ಸಾಕು ಪ್ರಪಂಚದಲ್ಲಿ ಏನಾಗುತ್ತದೆ ಎಂದು ಗೊತ್ತಾಗಲು.  ಅದಲ್ಲದೇ ನಮ್ಮನ್ನೆಲ್ಲ ಯಾವಾಗಲೂ ತಮ್ಮ ಕಡೆಗೆ ತಿರುಗಿಕೊಂಡಿರುವಂತೆ ಮಾಡುವ ಸೋಶಿಯಲ್ ಮೀಡಿಯಾ "ಚಾನಲ್ಲು"ಗಳಂತೂ ಇದ್ದೇ ಇರುತ್ತಾವಲ್ಲ, ನೀವು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳಲು?!

ಅಪ್ಪಿ-ತಪ್ಪಿಯೇನಾದರೂ ಒಳ್ಳೆಯ ಇಂಗ್ಲೀಷ್ ಬರವಣಿಗೆ ಸಿಗುತ್ತದೆಯೆಂದು NY Times ಏನಾದರೂ ನೋಡಿದರೆ ಸಾಕು, Trump ಮಹಾಶಯ ತಪ್ಪು ಮಾಡುವುದನ್ನೇ ಕಾಯುತ್ತಿರುವವರ ಹಾಗೆ ಇಲ್ಲಿನ ರಿಪೋರ್ಟರುಗಳು, ಅಲ್ಲ ಬರಹಗಾರರು ವರದಿ ಒಪ್ಪಿಸಿಯಾರು.  ಅವರಿಗೆ ಮತಿ ಇಲ್ಲ, ಇವರಿಗೆ ಗತಿ ಇಲ್ಲ ಎನ್ನುವುದು ಖಚಿತವಾಯಿತು.

ಅಲ್ಲದೇ ಈ ಸೊಫೆಸ್ಟಿಕೇಟೆಡ್ ಚಾನೆಲ್‌ನ anchor ಗಳೆಲ್ಲ ಯಾವಾಗಲೂ breaking news ಗಳಲ್ಲೇ ತಮ್ಮನ್ನೇ ಕಳೆದುಕೊಂಡು ಅದು ಯಾಕಾದರೂ ಅರಚುತ್ತಿರುತ್ತಾರೋ, ಯಾರು ಬಲ್ಲರು?

Monday, May 04, 2020

ತಿನ್ನಬಾರದ್ದನ್ನ ತಿಂದರೆ...

ತಿನ್ನಬಾರದ್ದನ್ನ ತಿಂದರೆ... ಆಗಬಾರದ್ದು ಆದೀತು... ಇದು ಈ ಹೊತ್ತಿನ ತತ್ವ.  ಮುನ್ನೂರು ಮಿಲಿಯನ್‌ಗೂ ಹೆಚ್ಚು ಜನಸಂಖ್ಯೆ ಹೊಂದಿದ ಯುಎಸ್‌ಎ ನಂತಹ ಮುಂದುವರಿದ ದೇಶದಲ್ಲಿ ವರ್ಷಕ್ಕೆ 60 ರಿಂದ 75 ಸಾವಿರ ಜನರು ತೀರಿಕೊಳ್ಳುತ್ತಿರುವ ವರದಿಗಳು CDCಯ ಸೈಟ್‌ನಲ್ಲಿ ಸಿಗುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಫ್ಲೂ ಎನ್ನುವ ಮಹಾಮಾರಿ (pandemic, ಸರ್ವವ್ಯಾಪಿ ವ್ಯಾಧಿ) ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಂಟಿಕೊಳ್ಳುವ ಈ ಖಾಯಿಲೆಯ ಸೋಂಕು ವೈರಸ್ಸುಗಳು ವರ್ಷಕ್ಕೊಂದು strain ನಂತೆ ಬದಲಾಗಿ ಮನುಕುಲಕ್ಕೆ ಸೆಡ್ಡುಹೊಡೆದಿವೆ ಎಂದರೆ ಅತಿಶಯವೇನೂ ಅಲ್ಲ. ಹೀಗೆ ಹಬ್ಬಿಕೊಳ್ಳುವ ಮತ್ತು ವರ್ಷದಿಂದ ವರ್ಷಕ್ಕೆ ವೃದ್ಧಿಸುವ ವ್ಯಾಧಿಯ ಹಿನ್ನೆಲೆಯಲ್ಲಿ ಚೈನಾದಂತಹ ರಾಷ್ಟ್ರಗಳು ಎದ್ದು ಕಾಣುತ್ತವೆ. ಫ್ಲೂ ಹೇಗೆ ಹುಟ್ಟಿ ಹೇಗೆ ಬೆಳೆಯುತ್ತದೆ ಎಂದು ನೋಡಿದಾಗ ಅದರ ಹಿನ್ನೆಲೆಯಲ್ಲಿ ಅನೇಕ ಪ್ರಾಣಿಗಳೂ ಕಂಡುಬರುತ್ತವೆ!
***


ಚೀನಾದಲ್ಲಿ ಏನೇನಾಗುತ್ತೋ, ಅದೆಷ್ಟು ಸತ್ಯ ಹೊರಗೆ ಬರುತ್ತೋ ಎನ್ನುವುದು ನಮಗೆಲ್ಲ ಮೊದಲಿಂದಲೂ ಇದ್ದ ಸಂಶಯ. ಕಮ್ಯುನಿಸ್ಟ್ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿ ನಲುಗುವ ಈ ರೀತಿಯ ದೇಶಗಳು ವಿಶ್ವದ ಆರ್ಥಿಕ ಮಾನದಂಡದಲ್ಲಿ ಎಲ್ಲರಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶವಾಗಿವೆ. ಕೆಲವೊಮ್ಮೆ ಸರ್ವಾಧಿಕಾರದ ನಡೆ ಅನೇಕ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದೆ. ರಾತ್ರೋ ರಾತ್ರಿ ಎಲ್ಲರನ್ನು ತೆರವುಗೊಳಿಸಿ ಹೊಸ ಅಣೆಕಟ್ಟುಗಳನ್ನು ಕಟ್ಟಿದ್ದಿದೆ. ಅಲ್ಲದೇ ಈ ರೀತಿಯ ಅಣೆಕಟ್ಟುಗಳು ಒಡೆದು ಹೋದಾಗ ಲೆಕ್ಕಕ್ಕೆ ಸಿಗದ ಮಿಲಿಯನ್ನುಗಟ್ಟಲೆ ಜನರನ್ನು ಇನ್ನೂ ಹುಡುಕುತ್ತಿರುವವರು ಇದ್ದಾರೆ. ಮನೆಗೆ ಒಂದೇ ಮಗು, ಎಂದು ಕಾನೂನನ್ನು ಬಳಸಿ ದೇಶದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳುವಂತಹ ನಿಸರ್ಗದೊಂದಿಗೆ ಹೊಡೆದಾಡುವ ದಾರ್ಷ್ಟ್ಯವನ್ನೂ ಈ ದೇಶ ಪ್ರಕಟಿಸಿದ್ದಿದೆ. ಇಂತಹುದರಲ್ಲಿ ಅಲ್ಲಿನ ದೇಶವಾಸಿಗಳು ತಮಗೆ ಇಷ್ಟವಾದುದ್ದನ್ನು ತಿನ್ನಬೇಕು, ತಿನ್ನಬಾರದು ಎಂದು ಏಕೆ ತಾನೆ ಕಾನೂನನ್ನು ನಿರ್ಮಿಸೀತು?

ಹನ್ನೊಂದು ಮಿಲಿಯನ್ ಜನರಿರುವ ವುಹಾನ್ ನಗರದ ಮಾರ್ಕೆಟ್ಟಿನಲ್ಲಿ ಯಾವ ಯಾವ ಪ್ರಾಣಿಗಳನ್ನು ಮಾರುತ್ತಾರೆ ಎಂದು ಶೋಧಿಸಿದಾಗ ನಾಯಿ, ನವಿಲು, ಆಟರ್ಸ್, ಒಂಟೆ, ಕೊವಾಲ, ಹಾವುಗಳ ಜೊತೆಗೆ ತೋಳದ ಮರಿಗಳು, ಕಾಡು ಬೆಕ್ಕುಗಳು ಕಂಡುಬಂದವು. ಈ ಜನರ ಹೊಟ್ಟೆ ಹೊರೆಯಲು ಅಗಾಧವಾದ ಸೀ ಫುಡ್ ಇದ್ದರೂ ಸಹ ಇಲ್ಲಿನ ಜನರಿಗೆ ಕಾಡಿನಲ್ಲಿ ವಾಸಿಸುವ ಡೆಲಿಕಸಿಗಳೇ ಇಷ್ಟ! ಯುಎಸ್‌ಎನಲ್ಲಿಯೇ ಚೈನಾದ ರೆಸ್ಟೋರೆಂಟುಗಳಲ್ಲಿ ಮೀನು, ಕಪ್ಪೆ, ಲಾಬ್‌ಸ್ಟರ್‌ಗಳನ್ನು ದಯನೀಯ ಸ್ಥಿತಿಯಲ್ಲಿ ತುಂಬಿಟ್ಟುಕೊಂಡು ತಮ್ಮ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಇವರುಗಳು ಇನ್ನು ಮೈನ್ ಲ್ಯಾಂಡ್ ಚೈನಾದ ನೆಲದಲ್ಲಿ ಪ್ರಾಣಿಗಳನ್ನು ಯಾವ ರೀತಿ ಸತಾಯಿಸುತ್ತಿರಬೇಡ. ಒಂದು ಲೆಕ್ಕದಲ್ಲಿ ಇವರೇ ಫಾರ್ಮ್‌ನಲ್ಲಿ ಬೆಳೆಸಿ ಕೊಂದು ತಿನ್ನುವುದಿದ್ದರೆ ಹೇಗಾದರೂ ಇದ್ದುಕೊಂಡಿರಲಿ ಎನ್ನಬಹುದಿತ್ತು. ಆದರೆ, ಕಾಡು ಪ್ರಾಣಿಗಳನ್ನ ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳುವ ಇವರ ಈ ದುರ್ಗುಣವನ್ನ ಯಾವ ರೀತಿಯಿಂದಲೂ ಸಹಿಸಲಾಗದು.  ಮೇಲಾಗಿ ಕಾಡಿನಲ್ಲಿನ ಪ್ರಾಣಿಗಳನ್ನು ತಮ್ಮ ಉದರ ಪೋಷಣೆಗೆ ಬಳಸಿಕೊಳ್ಳಲು ಇವರಿಗೆ ಯಾರು ಲೈಸನ್ಸ್ ಕೊಟ್ಟವರು?  ಬಿಲಿಯನ್ನುಗಟ್ಟಲೆ ಬೆಳೆಯುತ್ತಿರುವ ಇವರ ಜನಸಂಖ್ಯೆಯನ್ನು ಮತ್ತಿನ್ಯಾವುದೋ ಜೀವಿ ಕೊಲ್ಲುವದು ನ್ಯಾಯ ಸಮ್ಮತವೇ?

ನಿಸರ್ಗದ ನಿಯಮಗಳನ್ನು ಗಾಳಿಗೆ ತೂರಿ ಅನೇಕ ಇಂಡಸ್ಟ್ರಿಗಳನ್ನು ಕಟ್ಟಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಪೊಲ್ಯೂಷನ್ ಅನ್ನು ಹುಟ್ಟಿಸುವ ಈ ದೇಶದ ವಿರುದ್ಧ ಯಾವುದೇ ಶಕ್ತಿಯೂ ತನ್ನ ಧ್ವನಿ ಎತ್ತುವುದಿಲ್ಲ. ಮಾರುಕಟ್ಟೆಯ ಬೆಲೆ ಮತ್ತು ತನ್ನ ಕರೆನ್ಸಿಯನ್ನು ಡಾಲರ್ ಒಂದಿಗೆ ತುಲನೆ ಮಾಡಿಕೊಂಡು ರಾತ್ರೋ ರಾತ್ರಿ ಡೀವ್ಯಾಲ್ಯೂ ಮಾಡುವ ಈ ದೇಶವನ್ನು ಯಾವ ವಿಶ್ವ ಸಂಸ್ಥೆಯೂ ಎಚ್ಚರಿಸುವ ಗೋಜಿಗೆ ಹೋಗುವುದಿಲ್ಲ. ಮಿತಿಮೀರಿ ಕಟ್ಟಡ, ರಸ್ತೆ, ಡ್ಯಾಮ್ ಮೊದಲಾದವುಗಳನ್ನು ಕಟ್ಟಿ ತನ್ನ ಕಾಡನ್ನು ನಾಶಮಾಡಿಕೊಳ್ಳುವುದು ಬರೀ ಆಂತರಿಕ ಸಮಸ್ಯೆಯಾಗುತ್ತದೆ. ಯಾವುದೇ ಪೊಲ್ಯೂಷನ್ ಕಂಟ್ರೋಲ್ ಅಥವಾ ನ್ಯೂಕ್ಲಿಯರ್ ಪ್ರೊಲಿಫಿರೇಷನ್ ಕಾನೂನಿಗೆ ಸಿಗದೇ ಮನಬಂದಂತೆ ವರ್ತಿಸುವುದರಿಂದ ಹೆಚ್ಚಾಗುವ ಗ್ಲೋಬಲ್ ವಾರ್ನಿಂಗ್ ಎದುರಿಗೆ ಯಾರು ಜವಾಬು ಕೊಡುತ್ತಾರೆ?

***

ಕೊರೋನಾ ವೈರಸ್ ಇಂದು ನಿನ್ನೆಯದಲ್ಲ, ಅದು ಎಂದಿಗೂ ಸಾಯುವುದಿಲ್ಲ. ಎಲ್ಲಿಯವರೆಗೆ ಮನುಕುಲ ತನ್ನನ್ನು ತಾನು ಜನಸಂಖ್ಯೆಯ ಸ್ಫೋಟದ ಮುಖಾಂತರ ದ್ವಿಗುಣ ತ್ರಿಗುಣಗೊಳ್ಳುತ್ತಾ ತನ್ನ ಸುತ್ತಲಿನ ಸಂಪನ್ಮೂಲವನ್ನೆಲ್ಲ ತಿಂದು ತೇಗುತ್ತದೆಯೋ,  ಅಲ್ಲಿಯವರೆಗೆ ಈ ವಿಶ್ವದ ಉಳಿದ ಜೀವಿಗಳಿಗೆ ಉಳಿಗಾಲವಿಲ್ಲ. ಸಣ್ಣ ಏಕಾಣುಕೋಶದ ಜೀವಿಯಿಂದ ಹಿಡಿದು ಆನೆಯವರೆಗೆ, ತಿಮಿಂಗಲದವರೆಗೆ ಎಲ್ಲ ಪ್ರಾಣಿ-ಪಕ್ಷಿಗಳೂ ನಮ್ಮ ಕೃಪೆಯಲ್ಲಿ ಬದುಕುವಂತೆ ಮಾಡಿಕೊಂಡಿರುವುದು ನಮ್ಮ ಮುಂದುವರಿದ ಪೀಳಿಗೆಯ ಹೆಗ್ಗಳಿಕೆ.

***
ಈ ಕೆಳಗಿನ ಚಿತ್ರಗಳನ್ನು ನೋಡಿ:


ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಒಂದು ರೇಟ್ ಫಲಕವನ್ನು ನೋಡಿ!  ನಿಜವೋ ಸುಳ್ಳೋ ಆದರೆ ಇಲ್ಲಿ ಎಲ್ಲ ರೀತಿಯ ಪ್ರಾಣಿಗಳೂ ಕಾಣ ಸಿಗುತ್ತವೆ.




ಚೈನಾದ ಮಾರ್ಕೆಟ್ಟಿನಲ್ಲಿ ಇರೋ ಮೀಟ್ ಮಾರ್ಕೆಟ್ಟಿನ ಫೋಟೋ.  

Friday, May 01, 2020

ಸಾಲವೆಂಬ ಶೂಲ!

ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...".  ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು.  "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ.  ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ.  ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು.  ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು.  ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು.  ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.

***
ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ.  ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು.  ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು.  ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.  ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ.  ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು.  ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.

ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು".  ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು.  ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು.  ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು.  ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ!  ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.

ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ.  ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು.  ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು.  ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು.  ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು.  ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು.  ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!

ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು.  ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.

***
ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ.  ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"!  ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.

ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ.  "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ.  ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.

ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು,  ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್‌ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು,  ಹಾಗೆ ಮಾಡುವುದರಿಂದ ಟ್ಯಾಕ್ಸ್‌ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!

ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ,  ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ!  (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!).  ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ!  ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು.  ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!

ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ!  ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು.  ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು.  ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!

ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!

***
ನಮ್ಮ ಸುತ್ತಲೂ ಈಗ ಯಂತ್ರಗಳಿವೆ:  ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು  ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ!  ಸಾಲ ದೊಡ್ಡದಿದೆ.  ಹೂಡಿಕೆಗಳು ಹಲವಿವೆ.  ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ.  "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ!  ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!

ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?

Saturday, April 18, 2020

ದೊಡ್ಡ ನೋವಿನ ಮುಂದೆ...

ದೊಡ್ಡ ನೋವಿನ ಮುಂದೆ ಚಿಕ್ಕ-ಚಿಕ್ಕ ನೋವುಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ ಎನ್ನುವ ಹಾಗೆ... ಇತ್ತೀಚೆಗೆ ನಮ್ಮ ಮೆಡಿಕಲ್ ಫೆಸಿಲಿಟೀಸ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳದ್ದೇ ಹೆಚ್ಚಿನ ಪಾಲು.  ಅಂದಂತೆ ಎಲ್ಲ ಕಡೆ ಹೆಚ್ಚು ಹೆಚ್ಚು ಹಾಸಿಗೆಗಳು ಇರುವ ಆಸ್ಪತ್ರೆಗಳನ್ನು ಸಮರೋಪಾದಿಯಲ್ಲಿ ತೆರೆಯಲಾಗಿದೆ.  ದೊಡ್ಡ ಕನ್ವೆನ್ಷನ್ ಸೆಂಟರುಗಳಲ್ಲಿ ಈಗಾಗಲೇ ಅನೇಕ ರೋಗಿಗಳನ್ನು ಒಟ್ಟೊಟ್ಟಿಗೆ ಏಕಕಾಲಕ್ಕೆ ನೋಡುವಂತೆ ಮುಂಜಾಗರೂಕತೆಯನ್ನು ಕೈಗೊಳ್ಳಲಾಗಿದೆ.  ನಮ್ಮ ಹತ್ತಿರದಲ್ಲಿರುವ ನ್ಯೂ ಯಾರ್ಕ್‌ ನಗರದಲ್ಲಿ ಜಾವಿಟ್ಸ್ ಸೆಂಟರ್‌ ಅನ್ನು ಈಗಾಗಲೇ ಆಸ್ಪತ್ರೆಯಾಗಿ ಬದಲಾಯಿಸಲಾಗಿದ್ದು ಸುಮಾರು 2500 ಜನರನ್ನು ಏಕಕಾಲಕ್ಕೆ ನೋಡುವಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದರೂ ಅದರ ಕಾಲು ಭಾಗವೂ ಇನ್ನೂ ತುಂಬಿಲ್ಲ.  ಯು.ಎಸ್. ನೇವಿ  ಹಾಸ್ಪಿಟಲ್ ಶಿಪ್ "ಕಂಫರ್ಟ್" ಇನ್ನೂ ಖಾಲಿ ಇದೆ.  ಈ ನಿಟ್ಟಿನಲ್ಲಿ, ನ್ಯೂ ಯಾರ್ಕ್ ಮೇಯರ್ ಮತ್ತು ಗವರ್ನರುಗಳು ಸುಕಾ ಸುಮ್ಮನೇ ಆರ್ತನಾದ ಹೊರಡಿಸಿದರೇ? ಎನ್ನುವುದು ಇನ್ನೊಂದು ದಿನದ ಪ್ರಶ್ನೆ!

ಈ ಕೊರೋನಾ ವೈರಸ್ ಹಾವಳಿಯಿಂದ ಒಂದಂತೂ ಗ್ಯಾರಂಟಿ - ಯಾರು ಯಾರಿಗೆ ತಡೆದುಕೊಳ್ಳಬಲ್ಲ ಖಾಯಿಲೆ ಇದೆಯೋ ಅವರು ಯಾರೂ ಆಸ್ಪತ್ರೆಯ ಬಳಿ ಸುಳಿಯುತ್ತಿಲ್ಲ.  ಎಲ್ಲ ಎಲೆಕ್ಟಿವ್ ಸರ್ಜರಿಗಳು ಮುಂದೂಡಲ್ಪಟ್ಟಿವೆ.  ಒಂದು ಮಾಹಿತಿಯ ಪ್ರಕಾರ, ಕೇವಲ ಕ್ರಿಟಿಕಲ್ ಪೇಷಂಟ್‌ಗಳನ್ನು ಮಾತ್ರ ಆಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ, ಉಳಿದವರನ್ನು ಹೊರಗೇ ಟ್ರೀಟ್ ಮಾಡಿ ಮನೆಗೆ ಕಳಿಸುತ್ತಿದ್ದಾರೆ.  ಕ್ರಿಟಿಕಲ್ ಪೇಷಂಟ್ ಎಂದರೆ ಹಾರ್ಟ್‌ಅಟ್ಯಾಕ್, ಸ್ಟ್ರೋಕ್, ಮೊದಲಾದ ಜೀವಕ್ಕೆ ಅಪಾಯ ತಂದೊಡ್ಡುವ ಖಾಯಿಲೆ ಇರುವ ರೋಗಿಗಳು ಎಂದರ್ಥ.

***
ನಮ್ಮ ಆಸ್ಪತ್ರೆಗಳಿಗೆ ಮೊದಲೆಲ್ಲ ಅಂದರೆ ದಿನದಲ್ಲಿ ಒಂದಿಷ್ಟು ಮೋಟಾರು ವೆಹಿಕಲ್ ಅಫಘಾತದ ಕೇಸುಗಳು ಬರುತ್ತಿದ್ದವು.  ಎಲೆಕ್ಟಿವ್ ಸರ್ಜರಿ ಕೇಸುಗಳು ಬರುತ್ತಿದ್ದವು.  ಏನಿಲ್ಲವೆಂದರೂ "ರುಟೀನ್ ಟೆಸ್ಟ್" ಎಂದುಕೊಂಡು, ಬಂದ ಪೇಷೆಂಟುಗಳಿಗೆ ತಲೆನೋವಿಂದ ಕಾಲು ನೋವಿನವರೆಗೆ ಅನೇಕ ಟೆಸ್ಟ್‌ಗಳನ್ನು ಮಾಡುವ ವ್ಯವಸ್ಥೆ ಇತ್ತು.  ಅದನ್ನು ಅವಲಂಬಿಸಿ ದೊಡ್ಡದೊಂದು ಬಿಸಿನೆಸ್ ವಾತಾವರಣ ನಿರ್ಮಾಣಗೊಂಡಿತ್ತು.

ಈ ಕೊರೋನಾ ವೈರಸ್‌ನ ದೆಸೆಯಿಂದಾಗಿ ಅವೆಲ್ಲ ಈಗ ಕಡಿಮೆಯಾಗಿದೆ.  ಲಾಭ ಮಾಡುವುದೇ ತಮ್ಮ ಧ್ಯೋತಕ ಎಂಬಂತೆ (ಭಾರತದಲ್ಲಿ) ನಾಯಿಕೊಡೆಗಳಂತೆ ಎದ್ದು ನಿಂತ ಅನೇಕ ನರ್ಸಿಂಗ್ ಹೋಮ್‌ಗಳು ಇವತ್ತು ಖಾಲಿಯಾಗಿವೆ.  ಅದೇ ರೀತಿ ಅಮೇರಿಕದಲ್ಲೂ ಸಹ, ಎಲ್ಲ ಕಡೆ ಕೋವಿಡ್ ಮಯವಾದ್ದರಿಂದ ಆಸ್ಪತ್ರೆಗಳು ಹಾಗೂ ಅದಕ್ಕೆ ಹೊಂದಿಕೊಂಡ ಹಲವಾರು ಸರ್ವಿಸ್ ಪ್ರೊವೈಡರುಗಳಿಗೆ ಅವರ ಆದಾಯಕ್ಕೇ ಸಂಚಕಾರ ಬಂದಿದೆ.

ಇನ್ನು ಕೋವಿಡ್ ಗಲಾಟೆ ಭರಾಟೆ ಎಲ್ಲ ಮುಗಿದ ಮೇಲೆ, ನಮ್ಮ ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಧೀರ್ಘಕಾಲೀನವಾಗಿ ಏನೇನು ಪರಿಣಾಮಗಳು ಬೀರುತ್ತವೆಯೋ? ಅವನ್ನೆಲ್ಲ ನಾವು ಕಾದು ನೋಡಬೇಕು.

ಒಟ್ಟಿನಲ್ಲಿ, ಕೋವಿಡ್ ನಮ್ಮನ್ನು ಕೊಳ್ಳುಬಾಕತನದಿಂದ ದೂರವಿರಿಸಿ, ಉತ್ತಮ ಹಾಗೂ ಸಮತೋಲಿತ ಆಹಾರ ಸೇವನೆಯತ್ತ ಗಮನ ಕೊಡುವಂತೆ ಮಾಡಿ, ನಮ್ಮ ನಮ್ಮ ಸಂಬಂಧಗಳ ಸುಧಾರಣೆಗೆ ಆದ್ಯತೆಯನ್ನು ಹೆಚ್ಚಿಸಿ, ಇನ್ನೆಂದಿಗೂ ನಮ್ಮ ಸರ್ವತೋಮುಖ ಆರೋಗ್ಯವನ್ನು ನಾವೆಲ್ಲ ಜೋಪಾನ ಮಾಡಿಕೊಳ್ಳುವಂತೆ ಪಾಠ ಕಲಿಸಿದೆಯೆಲ್ಲ... ಅದರಿಂದಲಾದರೂ ನಮ್ಮ ಹೆಲ್ತ್‌ಕೇರ್ ವ್ಯವಸ್ಥೆ ಎಲ್ಲರ ಒಳಿತನ್ನು ಗಮನದಲ್ಲಿಟ್ಟುಕೊಂಡು ಸುಧಾರಿಸಲಿ!

Wednesday, April 15, 2020

ಬದಲಾದವರು ಯಾರು?

ಹಾಳಾದ ವೈರಸ್ಸು ನಮ್ಮನ್ನೆಲ್ಲ ಹಗಲೂ-ರಾತ್ರಿ ತನ್ನ ಧ್ಯಾನದಲ್ಲೇ ತೊಡಗಿಸಿರುವಂತೆ ಮಾಡಿರುವುದೂ ಅಲ್ಲದೇ, ವಿಶ್ವದಾದ್ಯಂತ ಅನೇಕ ಹಸಿದ ಹೊಟ್ಟೆಗಳನ್ನೂ, ಸಾವು-ನೋವಿನ ಕಣ್ಣೀರ ಕೋಡಿಯನ್ನೂ ಹರಿಸಿರುವುದು ನಿಜ.  ಈ ವೈರಸ್ಸಿನ ಭೀತಿ ಒಂದು ರೀತಿಯ ಕಾಡ್ಗಿಚ್ಚಿನಂತೆ ಎಲ್ಲ ಕಡೆಗೆ ಹರಡಿದ್ದು, ಇದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಭಸ್ಮವನ್ನಾಗಿಸಿ, ಆ ಜಾಗದಲ್ಲಿ ಮತ್ತೆ ಹೊಸ ಹುಟ್ಟುಗಳನ್ನು ಕಾಣಬಹುದು.  ಕೆಲವರು ಈ ವೈರಸ್ಸಿನಿಂದ ಬದುಕಿಗೆ ಆಗಿ ಮಿಗುವಷ್ಟು ಪಾಠ ಕಲಿಯುತ್ತಾರೆ, ಇನ್ನು ಕೆಲವರು ತಮಗೇನೂ ಆಗೇ ಇಲ್ಲ, ಈ ಸೃಷ್ಟಿಯ ಸೌಲಭ್ಯಗಳು ಇರುವುದೇ ನಮ್ಮ ಪೋಷಣೆಗಾಗಿ ಎಂದುಕೊಳ್ಳುವವರೂ ಇದ್ದಾರೆ.  ದೂರದ ಸ್ನೇಹಿತರು, ನೆಂಟರು-ಇಷ್ಟರನ್ನು ಮಾತನಾಡಿಸಲು ಇದು ಸಕಾಲ.  ಸಂಜೆಯ ವೇಳೆ (ಆಫೀಸಿನ ಅವಧಿ ಮುಗಿದ ಮೇಲೆ), ವಾರಾಂತ್ಯದಲ್ಲಿ ಎಲ್ಲರೂ ಕೂಡ ಗೊಂದಲವಿಲ್ಲದೇ ಹೆಚ್ಚು ಕಾಲ ಫೋನ್ ಅಥವಾ ವಿಡಿಯೋ ಸಂಭಾಷಣೆಯಲ್ಲಿ ಸಿಗುವುದು ಇತ್ತೀಚಿನ ಒಂದು ಬದಲಾವಣೆ ಎನ್ನಬಹುದು.  ನಮ್ಮ ಪರಿವಾರದವರಿಗೆ ನಾವು ಕಷ್ಟಕಾಲದಲ್ಲಿ ಆಗಿ ಬರಲಿಲ್ಲ ಎನ್ನುವ ವ್ಯಥೆ ಒಮ್ಮೊಮ್ಮೆ ಬಾಧಿಸುತ್ತಾದರೂ, ಮರುದಿನ ಫೋನ್‌ನಲ್ಲಿ ಮಾತನಾಡಿದಾಗ ಮನಸ್ಸು ಹಗುರವಾಗುತ್ತದೆ.  ಕಾಲ ಎಲ್ಲರನ್ನೂ ಬದಲಾಗಿಸುತ್ತದೆ... ಅದರಲ್ಲೂ ದೇಶ-ಭಾಷೆ-ಬಂಧುಗಳನ್ನು ಬಿಟ್ಟು ದೂರ ಬಂದ ನಾವುಗಳು ಹೆಚ್ಚು ಬದಲಾಗಿದ್ದೇವೆ ಎಂದು ಅನಿಸುತ್ತದೆ.

***

ಕಳೆದ ವರ್ಷ ಭಾರತಕ್ಕೆ ಹೋಗಿದ್ದಾಗ ನಮ್ಮ ಹಳೆಯ ಸಂಬಂಧಿಕರೆನ್ನೆಲ್ಲ ನೋಡಿ ಮಾತನಾಡಿಸುವ ಅವಕಾಶವೊಂದು ಬಂದಿತ್ತು. ಭಾರತದ ಬೇರುಗಳನ್ನು ಬಿಟ್ಟು ಬಂದವರಿಗೆ ಈ ರೀತಿಯ ಸುಯೋಗಗಳು ಸಿಗುವುದು ಅಪರೂಪವಷ್ಟೇ. ನಾವು ಎಷ್ಟೇ ದೂರದಿಂದ ಫೋನಿನಲ್ಲಿ ಮಾತನಾಡಿದರೂ ಹತ್ತಿರ ಕುಳಿತು, ಪರಸ್ಪರ ಭೇಟಿಯಾಗಿ ಮಾತನಾಡುವ ಅನುಕೂಲ ಸುಖಕ್ಕೆ ಯಾವ ರೀತಿಯಲ್ಲೂ ತಾಳೆ ನೋಡಲಾಗದು. ಇತ್ತೀಚಿನ ತಂತ್ರಜ್ಞಾನದ ಉನ್ನತಿಯ ದೆಸೆಯಿಂದ ಅಪರೂಪಕ್ಕೊಮ್ಮೆ ವೀಡಿಯೋ ಕಾಲ್ ಮಾಡಿದರೂ ಸಹ ಅದೂ ಕೂಡ ಪರಸ್ಪರ ಭೇಟಿಯ ಅನುಭವವನ್ನು ಕೊಡಲು, 8000 ಮೈಲಿಯ ದೂರದ ಅಂತರದಲ್ಲಿ ಸೋಲುತ್ತದೆ ಎಂದೇ ಹೇಳಬೇಕು. ನಮ್ಮ ಸಹಪಾಠಿಗಳು, ಸ್ನೇಹಿತರು ನೆಂಟರು, ಇಷ್ಟರು, ಬಂಧು-ಬಳಗದವರು ಇವರನ್ನೆಲ್ಲ ಲೆಕ್ಕ ಹಾಕಿದರೆ ಸುಮಾರು ಎರಡು ಸಾವಿರ ಜನರಷ್ಟಾಗಬಹುದು. ನಮ್ಮ ಮದುವೆಗಳಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಜನರಾದರೂ ಬಂದಿರುತ್ತಾರಲ್ಲ?

ಹೀಗೇ ಒಂದು ಭೇಟಿಯಲ್ಲಿ, ನಮ್ಮ ಹಿರಿಯ ತಲೆಗಳನ್ನು ನೋಡಿ ಮಾತನಾಡಿಸುವ ಸುಯೋಗ ಬಂದಿತ್ತು. ನಾನು ಅವರುಗಳ ಮನೆಗೆ ಹೋದಾಗ ಅವರು ನನ್ನನ್ನು ’ಅತಿಥಿ’ಯಾಗಿ ನೋಡಿಕೊಳ್ಳುವ ರೀತಿಯಲ್ಲಿ ಅನೇಕ ಹೊಸತುಗಳಿದ್ದವು. ದೂರದಿಂದ ಬಂದಿದ್ದಾನೆ ಎಂದು ಒಂದಿಷ್ಟು ಉಪಚಾರಗಳು, ಅವುಗಳ ನಡುವೆ ನೆಲದ ಮೇಲೆ ಕೂರಿಸಿ ಊಟಕ್ಕೆ ಹಾಕಬೇಕೋ, ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕೂರಿಸಬೇಕೋ ಎನ್ನುವ ಕಸಿವಿಸಿ. ಎಲೆಯಿಟ್ಟು ಊಟ ಮಾಡುತ್ತಾರೋ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಬೇಕೋ ಎನ್ನುವ ಮುಜುಗರ. ಊಟಕ್ಕೆ ಏನು ಬಡಿಸಬೇಕು ಅಥವಾ ಬೇಡ ಎನ್ನುವ ಅಳುಕು. ಹೀಗೇ ನನ್ನ ಭೇಟಿಯುದ್ದಕ್ಕೂ ಸ್ಥಳೀಯ ಭಾಷೆಯನ್ನು ಬಿಟ್ಟು ಯಾರದ್ದೋ ಜೊತೆಗೆ ನಡೆಸಬಹುದಾದ ಗ್ರಾಂಥಿಕ ಭಾಷೆಯನ್ನು ಬಳಸಿ ನಡೆಸುವ ಸಂವಾದದ ಸಂಕಟ... ಈ ಎಲ್ಲದರ ಹಿನ್ನೆಲೆಯಲ್ಲಿ ನಾನು ಯಾರ ಮನೆಗೆ ಬಂದಿದ್ದೇನೆ, ಇವರಿಗೆಲ್ಲ ಏನಾಗಿದೆ? ಒಂದು ಕಾಲದಲ್ಲಿ ಎಷ್ಟೊಂದು ಸಹಜವಾಗಿ ವರ್ತಿಸುತ್ತಿದ್ದ ನಮ್ಮ ಜನರಿಗೆ ಈ ರೀತಿ ಇರುಸುಮುರುಸೇಕಾಗುತ್ತಿದೆ ಎಂದು ಯೋಚಿಸಲು ತೊಡಗಿದೆ. ನಾನು ಊರಿಗೆ ಹೋದೊಡನೆ ಅಲ್ಲಿನ ಸ್ಥಳೀಯ ಉಡುಪುಗಳನ್ನು ತೊಡುವುದರ ಮೂಲಕ ’ಎಲ್ಲರೊಳಗೊಂದಾಗ’ ಬಯಸುವ ನನ್ನ ಪ್ರಯತ್ನಕ್ಕೆ ಅನಾಯಾಸ ಸೋಲು! ನಾನು ದಂಗಾಗಿ ಹೋಗಿದ್ದೆ.

ಒಂದು ಕಾಲದಲ್ಲಿ ಎಷ್ಟೊಂದು ವಿಷಯಗಳಿಗೆ ಬಡಿದಾಡುತ್ತಿದ್ದೆವು, ತಾಳಮದ್ದಳೆಯ ಪ್ರತೀಕವಾಗಿ ಅನೇಕ ವಾದ-ವಿವಾದಗಳನ್ನು ಹೂಡುತ್ತಿದ್ದೆವು, ಆಯಾ ಸಮಯದ ಮಟ್ಟಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮ ಸಂಘರ್ಷಗಳಲ್ಲಿ ಘರ್ಷಣೆಗಳಿದ್ದವು, ಘೋಷಣೆಗಳಿದ್ದವು. ಮದುವೆ-ಮುಂಜಿಯ ಮಾತುಗಳು ಬರುತ್ತಿದ್ದವು. ಜಾತಿ-ಆಸ್ತಿ-ಅಂತಸ್ತಿನ ವಿಚಾರಗಳು ಹಿಣುಕಿ ಹಾಕುತ್ತಿದ್ದವು... ಆದರೆ, ಈ ಅಸಹಜ ವರ್ತಮಾನದ ಒಡನಾಟದಲ್ಲಿ ಈ ಮೇಲಿನೆಲ್ಲವೂ ಮಾಯವಾಗಿ, ಯಾರೋ (ದಾರಿ ತಪ್ಪಿ ಬಂದ) ಅತಿಥಿಗಳ ಸತ್ಕಾರದಂತೆ ನಮ್ಮ ಭೇಟಿ ನಡೆಯತೊಡಗಿದ್ದನ್ನು ನೋಡಿ ಮನ ಹಿಂಡಿಹೋಗಿತ್ತು.

ಇದನ್ನು ಹೀಗೇ ಬಿಟ್ಟರೆ, ನನ್ನವರೆನ್ನುವವರನ್ನೆಲ್ಲ ಎಲ್ಲಿ ದೀರ್ಘಕಾಲೀನವಾಗಿ ಕಳೆದುಕೊಳ್ಳಬೇಕಾಗುತ್ತೋ ಎಂದು ನಾನು ಅನೇಕ ಸೂಕ್ಷ್ಮ ವಿಷಯಗಳನ್ನು ಎತ್ತಿ ನಿಧಾನವಾಗಿ ವಾದಗಳನ್ನು ಮಂಡಿಸತೊಡಗಿದೆ. ಹೀಗಾದಲಾಗರೂ ಅವರುಗಳು ತೆರೆದುಕೊಳ್ಳಲಿ ಎಂದು... ಊಹ್ಞೂ, ನಾನು ಏನೇ ಮಾಡಿದರೂ ಅವರು ತಿಪ್ಪೆ ಸಾರಿಸಿದ ಹಾಗೆ ಉತ್ತರಗಳನ್ನೇ ಕೊಡುತ್ತಾ ಬಂದರು. ಹೀಗೇ ಬಿಟ್ಟರೆ, ಇವರುಗಳು ನನ್ನಿಂದ ದೂರವೇ ಇರುತ್ತಾರೆ ಎಂಬ ಯೋಚನೆ ಬಂದಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತು... ಮರುದಿನ ಒಂದು ಹೊಸ ಆಲೋಚನೆಯೊಡನೆ ಅವರನ್ನೆಲ್ಲ ಭೇಟಿ ಮಾಡಲು ಹೋದೆ.

***
ಹಳ್ಳಿಗಳಲ್ಲಿ ಸಹಜವಾಗಿ ಸೂರ್ಯ ಹುಟ್ಟುತ್ತಲೇ ಜೀವನ ಆರಂಭವಾಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಆನೇಕ ಮನೆಗಳಲ್ಲಿ ಬೆಳಗಾಗುವುದರ ಒಳಗೆ ಜಾನುವಾರುಗಳಿಗೆ ಬಾಯಾರು (ಗಂಜಿ-ನೀರು) ಕೊಡುವುದರಿಂದ ಹಿಡಿದು, ಅಂಗಳವನ್ನು ಗುಡಿಸಿ ಸಾರಿಸಿ, ಹೊಸ್ತಿಲಿಗೆ ಅರಿಶಿಣ-ಕುಂಕುಮವಿಡುವುದರಿಂದ ಹಿಡಿದು, ಮನೆ ಮಂದಿಯೆಲ್ಲ ಮಿಂದು ತಮ್ಮ ತಮ್ಮ ಕೆಲಸ ನೋಡಿಕೊಳ್ಳುವ ವಾಡಿಕೆಯಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ತಿಂಡಿಗೆ ಖಾಯಂ ಅವಲಕ್ಕಿ ಅಥವಾ ದೋಸೆಯ ಪರಿಪಾಠ ಇನ್ನೂ ಜಾರಿ ಇದೆ. ನಾನು ನನ್ನ ಪರಿವಾರವನ್ನು ಬಿಟ್ಟು, ಒಂದು ಲುಂಗಿಯನ್ನು ಸುತ್ತಿಕೊಂಡು, ಬೆಳ್ಳಂಬೆಳಗ್ಗೆ ಇವರುಗಳ ಮನೆಯ ಅಡುಗೆ ಮನೆ ತಡಕಾಡಿದರೆ  ಒಂದಿಷ್ಟು ದೋಸೆಗೇನೂ ಕಡಿಮೆ ಇಲ್ಲ ಎನ್ನುವ ನಂಬಿಕೆಯಿಂದ ನಮ್ಮ ನೆಂಟರೊಬ್ಬರ ಮನೆಗೆ ಹಿಂಬದಿ ಬಾಗಿಲಿನಿಂದ ಹೋಗಿ... ಎಂದಿನಂತೆ ಮಾತಿಗೆ ತೊಡಗುತ್ತಾ, ಅಲ್ಲೇ ಹತ್ತಿರದಲ್ಲಿದ್ದ ಮಣೆಯನ್ನೊಂದು ಎಳೆದುಕೊಂಡು ಕುಳಿತುಕೊಂಡೆ. ಆಗ ನೋಡಿ ನಿಜವಾಗಿ ನಮ್ಮ-ಅವರ ಮಾತುಕಥೆ ಶುರುವಾಗಿದ್ದು.... ಉಭಯ ಕುಶಲೋಪರಿಗೆ ಕತ್ತರಿ ಹಾಕಿ, ಕಳೆದ ನಾಲ್ಕು ವರ್ಷಗಳ ಆಗು-ಹೋಗುಗಳ ಒಟ್ಟು ಲೆಕ್ಕಾಚಾರವನ್ನು ನಾಲ್ಕು ಘಂಟೆಗಳಲ್ಲಿ ಮುಗಿಸುವ ಹುನ್ನಾರದಲ್ಲಿದ್ದವನಿಗೆ ಸಮಯ ಹೋದುದೇ ತಿಳಿಯಲಿಲ್ಲ. (ಜೊತೆಗೆ ಅಕ್ಕ-ಪಕ್ಕದ ಮನೆಗಳಿಂದಲೂ ಪರಿಚಯದವರು ಬಂದು ಸೇರತೊಡಗಿದರು. ನಮ್ಮ ಮಾತುಕಥೆಗಳಲ್ಲಿ ’ಬನ್ನಿ-ಹೋಗಿ’ಗಳು ಇರಲಿಲ್ಲ!) ತಿಂಡಿ-ಕಾಫಿಯ ಸಮಯವೆಲ್ಲವೂ ಮುಗಿದು, ಮಧ್ಯಾಹ್ನದ ಊಟದ ಸಮಯವೂ ಆಗಿ ಹೋಯಿತು. ನೀವು ಮಾಡಿದ್ದನ್ನೇ ಬಡಿಸಿ ಎಂದು ತೋಚಿಕೊಳ್ಳುವ ನನಗೆ, ಏನಾದರೂ ವಿಶೇಷವಾದ ಅಡಿಗೆಯನ್ನ ಮಾಡಲೇ ಬೇಕು ಎಂದು ಅವರು, ಒಬ್ಬರಿಗೊಬ್ಬರು ಮತ್ತೆ ’ಹೋರಾಟ’ ನಡೆಸಿದೆವು. ಕೊನೆಗೆ ನಾನೇ ಸೋತು, ಅಲ್ಲೇ ಇದ್ದ ಒಂದೆಲಗದ ತಂಬಳಿಯನ್ನು ಮಾಡಿರೆಂದು ಕೇಳಿಕೊಂಡೆ. ಊಟವಾದ ಮೇಲೂ ಮಣೆ ಬಿಡದ ನನ್ನ ಜಿಗಣೆಯ ಜಿದ್ದಿಗೆ ಅವರು ಸೋತಿದ್ದರು. ಕೊನೆಗೆ ಅಲ್ಲಿಯೇ ಇದ್ದ ಎಲೆ-ಅಡಿಕೆ ಬಟ್ಟಲನ್ನು ಎಳೆದುಕೊಂಡು ಕವಳ ಹಾಕಿದ ಮೇಲೆ ಅವರಲ್ಲಿ ಒಬ್ಬನಾಗಿ ಹೋಗಿದ್ದೆ.
"ಹೀಂಗೆ ಬರ್ತಾ ಇರು ಮಾರಾಯ, ನೀ ಬಂದ್ರೆ ಒಂಥರ ಚೆಂದ ನೋಡು!" ಎನ್ನುವ ಮನದಾಳದ (ಬರೆಯಲಾರದ) ಷರಾ ವನ್ನು ಹೇಳಿಸಿಕೊಂಡು ಹಿಂತಿರುಗಿ ಹೊರಟೆ.

***
ಈ ಒಂದು ಘಟನೆಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾಗ, ನನ್ನ ಮನದಲ್ಲಿ ಬದಲಾದವರು ಯಾರು? ಎಂಬ ಪ್ರಶ್ನೆ ಬಲವಾಗಿ ಏಳತೊಡಗಿತು. ಕಾಲ ಕಳೆದಂತೆ ನಮ್ಮ-ನಮ್ಮ ವ್ಯಕ್ತಿತ್ವ, ಪ್ರಬುದ್ಧತೆ, ವಿಚಾರಗಳು ಬದಲಾಗಲಿ. ಆದರೆ, ಈ ಬದಲಾವಣೆಯ ದೆಸೆಯಿಂದ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೆ, ಅಥವಾ ಈ ಬದಲಾವಣೆಯ ಕೃಪೆಯಿಂದ ನಮ್ಮವರೊಡನೆ ನಾವೇ ಒಂದಾಗಲಾರದವರಾದರೆ, ಅದು ನಮ್ಮನ್ನು ಬೇರ್ಪಡಿಸಿ, ನಮ್ಮಲ್ಲಿ ಪ್ರತ್ಯೇಕತಾ ಭಾವನೆಯನ್ನು ಮೂಡಿಸೋದಿಲ್ಲವೇ? ಬಂಧುಗಳಿಗೆ, ಸ್ನೇಹಿತರಿಗೆ ಅವರವರ ಧರ್ಮವಿದೆ, ಅವರಿಗೆ ಒಂದು ಕಾರ್ಯಭಾರವಿದೆ, ಪಾತ್ರವಿದೆ... ಅವುಗಳನ್ನೆಲ್ಲ ತೊರೆದು ಅವರು ಅವರಾಗಿಲ್ಲದಿದ್ದಾಗ ನಾವು ನಾವಾಗದಿದ್ದರೆ ಯಾರನ್ನು ನೋಡಲು ಎಷ್ಟು ದೂರ ಹೋದರೆ ಏನು ಪ್ರಯೋಜನ?

ಅಮೇರಿಕದ ನೀರು ಕುಡಿದು ಅಮೇರಿಕನ್ ಇಂಗ್ಲೀಷ್ ಬಳಸಿ ನನ್ನೊಡನೆ ಬರೀ ಇಂಗ್ಲೀಷಿನಲ್ಲೇ ಸಂವಾದಿಸುವ ನನ್ನ ಖಾಸಾ ಪರಿಚಿತ (ಸ್ನೇಹಿತ) ಶೃಂಗೇರಿಯ ರಾಜೇಂದ್ರನಾಗಲೀ, ಅಥವಾ ತಮ್ಮತನವನ್ನು ಬಿಟ್ಟು ನಮ್ಮೊಡನೆ ಗ್ರಾಂಥಿಕ ಭಾಷೆಯನ್ನು ಬಳಸಿ ನಟಿಸುವ ನನ್ನ ಹಿರಿಯ ಸಂಬಂಧಿಕರಾಗಲೀ ನನಗೇಕೆ ಬೇಕು?

ಬದಲಾದವರು ಯಾರೋ ಅವರೇ ಉತ್ತರ ಕೊಡಬೇಕು!

Friday, April 03, 2020

... ಸ್ಕ್ರೀನುಗಳೇ ಗೆದ್ದವು!

ಕೊರೋನಾ ವೈರಸ್ ದೆಸೆಯಿಂದ ಕೊನೆಗೆ ಗೆದ್ದವು - ಈ ಸ್ಕ್ರೀನುಗಳು!  ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೆ ಈ ಸ್ಕ್ರೀನುಗಳದ್ದೇ ದರ್ಬಾರು, ಅವುಗಳ ಸುತ್ತಮುತ್ತಲೂ ನಮ್ಮದೆಲ್ಲ ಒಂದು ರೀತಿ ಡೊಂಬರಾಟ ಇದ್ದ ಹಾಗೆ!

ವಿಪರ್ಯಾಸವೆಂದರೆ, ನಾನು ಇತ್ತೀಚೆಗಷ್ಟೇ Tiffany Shlain ಬರೆದ 24/6 The Power of Unplugging One Day A Week ಪುಸ್ತಕ ಓದಿದ ನಂತರ ಹೀಗಾಗಿದ್ದು.  ಎಷ್ಟೆಲ್ಲ ತಂತ್ರಜ್ಞಾನ ಮುಂದುವರೆದಿದ್ದರೂ ಸಹ, ಅರ್ಥೋಡಾಕ್ಸ್ ಯಹೂದಿಗಳು ಇಂದಿಗೂ ಕೂಡ ಸೆಬಾತ್ (Shabbat) ಆಚರಿಸಿಕೊಂಡು ಬಂದಿದ್ದಾರ‍ೆ.  ಅವರುಗಳು ವೃತ್ತಿಯಿಂದ ವೈದ್ಯರಿರಲಿ, ಇಂಜಿನಿಯರುಗಳಿರಲಿ, ಅಥವಾ ಯಾರೇ ಇರಲಿ ವಾರಕ್ಕೊಂದು ದಿನ, ಯಂತ್ರಗಳ ಸಹವಾಸವಿಲ್ಲದೆ ಬದುಕುತ್ತಾರೆ.  ಈ ಪುಸ್ತಕದಲ್ಲಿ ಲೇಖಕಿ ತನ್ನ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳನ್ನು ತಂತ್ರಜ್ಞಾನಕ್ಕೂ ವಿಸ್ತರಿಸಿ Techonology Shabbat ಅನ್ನು ಪರಿಚಯಿಸುತ್ತಾರೆ.  ನಾನು ಈ ಪುಸ್ತಕವನ್ನು ಓದಿ, ಕಷ್ಟಸಾಧ್ಯ ಎಂದು ಪಕ್ಕದಲ್ಲಿಟ್ಟೆ, ಆದರೂ ಸಹ ವಾರಕ್ಕೊಂದು ದಿನ ಟೆಕ್ನಾಲಜಿ ಅಥವಾ ಯಾವುದೇ ಸ್ಕ್ರೀನುಗಳ ಪರಾಧೀನತೆ ಇಲ್ಲದೇ ಬದುಕುವಂತಿದ್ದರೆ ಎಂದು ಅನ್ನಿಸದೇ ಇರಲಿಲ್ಲ.

***
ಎಲ್ಲ ಕಡೆ ಕೊರೋನಾ ವೈರಸ್ಸು ಹಾವಳಿಯಿಂದ ನಮ್ಮ ಆಫೀಸಿನ ಕೆಲಸವಷ್ಟೇ ಅಲ್ಲ, ದೈನಂದಿನ ಸಂಭಾಷಣೆ, ವಿಚಾರ-ವಿನಿಮಯ, ಮನರಂಜನೆ, ಮಾಹಿತಿ, ಸುದ್ದಿ-ಸಮಾಚಾರ ಮೊದಲಾದ ಎಲ್ಲವೂ ನಮಗೆ ಈ ಸ್ಕ್ರೀನುಗಳಿಂದಾನೇ ದೊರೆಯೋದು.  ನಾವು ಹೊಸದಾಗಿ iPhoneನಲ್ಲಿ ಬಂದಿರೋ Screen Time ಉಪಯೋಗಿಸಿ ದಿನದಲ್ಲಿ/ವಾರದಲ್ಲಿ ಬಳಸಿದ ಎಲ್ಲ ಅಪ್ಲಿಕೇಶನ್ನುಗಳನ್ನೂ ನೋಡುತ್ತಿದ್ದೆವು.  ಆದರೆ, ಈಗೆಲ್ಲ ನಮ್ಮ ಸ್ಕ್ರೀನುಗಳ ಉಪಯೋಗ ದಿನೇದಿನೇ ಹೆಚ್ಚಾಗುತ್ತಿದೆ.  ಅದರಲ್ಲೂ ಹೊರಗಡೆ ಹೋಗದೆ ಮನೆಯಲ್ಲಿ ಕುಳಿತಿರುವ ನಮಗೆಲ್ಲ ಈ ಚಿಕ್ಕ-ದೊಡ್ಡ ಸ್ಕ್ರೀನುಗಳೇ ದೊಡ್ಡ ಸವಲತ್ತುಗಳಾಗಿವೆ.  ಅಕಸ್ಮಾತ್ ನಮ್ಮಿಂದ ಊಟವನ್ನಾದರೂ ದೂರವಿಡಬಹುದು, ಆದರೆ ಸ್ಕ್ರೀನುಗಳನ್ನಲ್ಲ ಎಂದು ರಚ್ಚೆ ಹಿಡಿದು ಒದ್ದಾಡುವ ಮಗುವಿನಂತಾಗಿದೆ ಮನಸ್ಥಿತಿ.

ಇತ್ತೀಚೆಗೆ ಎಲ್ಲೋ ಓದಿದ ನೆನಪು, "ಹೊರಗೆಲ್ಲೂ ಸುತ್ತಾಡಲಾಗದಿದ್ದರೇನಂತೆ... ಮನದಾಳದ ಒಳಗೆ ಹೋಗಿ ನೋಡಿ!"  ಇದಂತೂ ಹೇಳಲು ಬಹಳ ಸುಲಭವಾದುದು.  ಆದರೆ ಮನದಾಳದೊಳಗಡೆ ಇಳಿಯಲು ತೊಡಗಿದರೆ, ನೂರೊಂದು ತೊಡಕುಗಳು.  ಜಗದೆಲ್ಲ ಸಮಸ್ಯೆಗಳು ಬಂದು ನಮ್ಮ ಕೊರಳನ್ನು ಸುತ್ತಿಕೊಳ್ಳುವ ಅನುಭವ.  ಇರದ ಜಂಜಡಗಳೆಲ್ಲ ಬಂದು ಒಮ್ಮೆಲೇ ರಭಸದಿಂದ ಅಪ್ಪಳಿಸುವ ಅಳೆಯಂತೆ ಒಂದರ ಹಿಂದೆ ಮತ್ತೊಂದು ಬಂದು ಮನದ ದಂಡೆಯನ್ನು ತಬ್ಬಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಚಂದವಾಗಿ  ಹೊರಗಡೆ ಸುತ್ತಾಡುವ ಮನಸ್ಸಿಗೆ ಒಳಗಿನ ಪಯಣಕ್ಕೆ ಇಷ್ಟೊಂದು ಗಾಭರಿ ಏಕೋ?  ಮನಸ್ಸನ್ನು ತಡುವಿಕೊಂಡು ಒಂದೊಂದೇ ಮೆಟ್ಟಿಲನ್ನು ಇಳಿದು ನೆಲಮಾಳಿಗೆಯ ನೆಲವೇನೋ ತಡಕಾಡೀತೆಂದು ಕಾಲನ್ನು ಆಡಿಸಿ ನೋಡಿದರೆ ಆ ಕತ್ತಲೆಯ ಕೋಣೆಯಲ್ಲಿನ ತೆಳ್ಳಗಿನ ಹವೆ ತನ್ನೊಳಗಿನ ಆರ್ಧ್ರತೆಯೊಂದಿಗೆ ಒಂದು ಕುಮುಟು ವಾಸನೆಯನ್ನೂ ಅಲವತ್ತುಕೊಂಡಿರುವುದರಿಂದಲೋ ಏನೋ ಒಂದು ರೀತಿಯ ತಣ್ಣಗಿನ ಅನುಭವದ ಜೊತೆಗೆ ನಮ್ಮ ಹಳೆಯ ನೆನಪುಗಳ ಪದರಗಳನ್ನು ಪಕ್ಕಳ ಪಕ್ಕಳವಾಗಿ ಕಿತ್ತು ತರುವುದು.

***

ಸದಾ ಸುಖವನ್ನು ಬಯಸುವ ನಾವು, ಸಾವಿಗೆ ಹೆದರುವ ಸಂತತಿಯಾಗಿ ಇತಿಹಾಸದಲ್ಲಿ ದಾಖಲಾಗಲಿದ್ದೇವೆ.  ಕಣ್ಣಿಗೆ ಕಾಣದ, ಜೀವವಿದ್ದೂ ಇರದ, ಉಸಿರಿನ ಮೂಲಕ್ಕೇ ತಂತ್ರದಿಂದ ಲಗ್ಗೆ ಹಾಕುವ ಸೂಕ್ಷ್ಮ ಜೀವಿಗಳ ವಿರುದ್ಧ ಹೆಣೆಯುವ ಪಾಟೀ ಸವಾಲುಗಳು ನಮ್ಮಲ್ಲಿಲ್ಲ.  ನಾವು ಈ ಯುದ್ಧಕ್ಕೆ ಸನ್ನದ್ದರಾದವರಂತೂ ಅಲ್ಲವೇ ಅಲ್ಲ.  ಒಂದು ದೇಶದ ಮಿಲಿಟರಿ ಪಡೆಗೆ ಶತ್ರುಗಳ ವಿರುದ್ಧ ಸೆಣೆಸಾಡುವ ತರಬೇತಿಯನ್ನು ನೀಡಲಾಗಿರುತ್ತದೆ.  ನಿಜವಾದ ಯುದ್ಧವಿರಲಿ, ಇಲ್ಲದಿರಲಿ ಒಂದು ಸಿಮ್ಯುಲೇಟೆಡ್ ಎನೈರ್‌ಮೆಂಟಿನಲ್ಲಾದರೂ ಅವರಿಗೆ ಯುದ್ಧದ ಆಗು-ಹೋಗುಗಳನ್ನು ಅರಿವಿಗೆ ಮೂಡಿಸಿ ಅವರನ್ನು ತಕ್ಕ ಮಟ್ಟಿಗೆ ತಯಾರು ಮಾಡಿರಲಾಗುತ್ತದೆ.  ಅವರು ತಮ್ಮ ಮೈ-ಮನಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಗಾಗ್ಗೆ ಕವಾಯತ್ ಅನ್ನಾದರೂ ಮಾಡಿಕೊಂಡು ತಯಾರಿರುತ್ತಾರೆ.  ಆದರೆ, ವಿಶ್ವದಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು, ನರ್ಸುಗಳು, ಮೊದಲಾದವರಿಗೆ ಈ ರೀತಿಯ ಯುದ್ಧಕಾಲದ ಯಾವುದೇ ತಯಾರಿಯೂ ಇರೋದಿಲ್ಲ.  ಮೆಡಿಕಲ್ ಸ್ಕೂಲ್‌ನಲ್ಲಿ ಓದು ಮುಗಿಸಿ ರೆಸಿಡೆನ್ಸಿ ಮಾಡಿದವರೆಲ್ಲರೂ ಈ ಕಣ್ಣಿಗೆ ಕಾಣದ ಶತ್ರುಗಳನ್ನು ಹೊಡೆದೋಡಿಸೋ ಯೋಧರಲ್ಲ.  ಪ್ರತಿ ದಿನವೂ ಎದ್ದು ಕೊರೋನಾ ವೈರಸ್ ಸೋಂಕಿದ ರಣರಂಗಕ್ಕೆ ಸೇವಾ ಮನೋಭಾವನೆಯಿಂದ ಹೋಗಿ, ಕೈಲಾದ ಸೇವೆಯನ್ನು ಮಾಡಿ, ಯಾವುದೇ ಸೋಂಕನ್ನು ತಮಗೆ ತಗುಲಿಸಿಕೊಳ್ಳದೇ, ಇನ್ನೊಬ್ಬರಿಗೆ ಹರಡದೇ, ಕೆಲಸ ಮುಗಿದ ಮೇಲೆ ಮತ್ತೆ ಮನೆಗೆ ಬಂದು ತಮ್ಮ ಕುಟುಂಬದವರನ್ನು ಸಂತೈಸುವ ಕೆಲಸ ಮಾಡುತ್ತಿರುವ ಈ ಎಲ್ಲ ಯೋಧರಿಗೂ ಈ ಯುದ್ಧದಲ್ಲಿ ಬದುಕುಳಿದ ನಾವೆಲ್ಲರೂ ಚಿರಋಣಿಗಳಾಗುತ್ತೇವೆ.  ಈ ಮೆಡಿಕಲ್ ಫೀಲ್ಡ್‌ನಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಇಂಥ ಯೋಧರದ್ದು ನಿಜವಾದ ಕೆಚ್ಚೆದೆ, ಇವರೇ ಇಂದಿನ ಹೀರೋಗಳು.  ನಮ್ಮ ಮಾನವ ಜನಾಂಗ ಮುಂದಿನ ಹೆಜ್ಜೆ ಇಡುವಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುತ್ತಿರುವ ಯೋಧರು.

Thursday, April 02, 2020

ಕೊರೋನಾ ವೈರಸ್ ನಮ್ಮ ಶಕ್ತಿಯನ್ನು ಕ್ಷೀಣಿಸಿದೆಯೇ?

ನಾವು, ಜನಸಾಮಾನ್ಯರು ಅಥವಾ ನಮ್ಮ ಮಾನವ ಜನಾಂಗವನ್ನು ಒಟ್ಟಿಗೆ ಪ್ರತಿನಿಧಿಸುವ ನಾವೆಲ್ಲರೂ ಈ ಕಳೆದ ನೂರು ವರ್ಷಗಳಲ್ಲಿ ದುರ್ಬಲರಾಗಿದ್ದೇವೆಯೇ?

ಅಂಕಿ-ಅಂಶಗಳ ಪ್ರಕಾರ ನಾವೆಲ್ಲರು ಧೀರ್ಘಾಯುಗಳು, ನಮ್ಮ ಬದುಕಿನ ಗುಣಮಟ್ಟ ಹೆಚ್ಚಿದೆ, ನಮ್ಮ ಮೌಲ್ಯ (net worth) ವೃದ್ಧಿಯಾಗಿದೆ.  ನಮ್ಮ ಸಂಖ್ಯೆ ಹೆಚ್ಚಿದೆ - 1900 ರಲ್ಲಿ 1.6 ಬಿಲಿಯನ್ ಇದ್ದದ್ದು 2020ಕ್ಕೆ 7.8 ಬಿಲಿಯನ್ ಆಗಿದೆ.  ಅದರಂತೆ ನಮ್ಮ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ: ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್, ರಸ್ತೆ ಅಫಘಾತ, ಡಯಬೀಟಿಸ್ ಮೊದಲಾದಂತೆ ಮಿಲಿಯನ್ನುಗಟ್ಟಲೆ ಜನ ಸಾಯುತ್ತಲೇ ಇದ್ದಾರೆ.  ಫ್ಲೂ (ಇನ್‌ಫ್ಲೂಯೆಂಜ಼ಾ) ಒಂದರಿಂದಲೇ ವರ್ಷಕ್ಕೆ ಸಾವಿರಾರು ಜನ ಸಾಯುತ್ತಿದ್ದಾರ‍ೆ.  ನಿಮಗೆಲ್ಲ ನೆನಪಿರುವಂತೆ, 2004ರ ಡಿಸೆಂಬರ್ 26ರಂದು ಬಂದ ಸುನಾಮಿಯಿಂದ ಸುಮಾರು ಎರಡೂವರೆ ಲಕ್ಷ ಜನ ಸತ್ತು ಹೋಗಿದ್ದು, ಸಾವಿರಾರು ಜನ ತಮ್ಮ ಮನೆ-ಮಠವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.


ಆದರೆ, ಈ ಕೋವಿಡ್-೧೯ ಎನ್ನುವ ಮಹಾಮಾರಿ ನಮ್ಮೆಲ್ಲರನ್ನು ಎಲ್ಲಿ ಆಪೋಷನ ತೆಗೆದುಕೊಳ್ಳುವುದೋ ಎನ್ನುವುದು ಎಲ್ಲರ ಭೀತಿ.  ಎಲ್ಲರನ್ನೂ ಒಮ್ಮೆಲೇ ಬಲಿ ತೆಗೆದುಕೊಂಡ ಸುನಾಮಿಯಂತಲ್ಲ ಇದರ ಕಥೆ, ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಹಂತ-ಹಂತವಾಗಿ ಮಲಗಿಸಿ, ಯಾವ ಶಸ್ತ್ರಾಸ್ತವನ್ನೂ ಬಳಸದೇ ಎಲ್ಲರನ್ನೂ ಮುಗಿಸಿಬಿಡುವ ಶಕ್ತಿ ಈ ವೈರಸ್ಸಿಗಿದೆ.
ಆದರೆ, ಮತ್ತೆ ಅದೇ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ: ಈ ನೂರು ವರ್ಷಗಳಲ್ಲಿ ನಾವು ದುರ್ಬಲರಾಗಿದ್ದೇವೆಯೇ?

ನಮ್ಮ ಗ್ಲೋಬಲೈಜೇಷನ್ ಅನ್ನೋದೇ ನಮಗೆ ಶಾಪವಾಯಿತು.  ನೂರು ವರ್ಷಗಳ ಹಿಂದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಕ್ಷಿಪ್ರವಾಗಿ ಹೋಗಿ-ಬರುವ ವ್ಯವಸ್ಥೆ ಇದ್ದಿರಲಿಲ್ಲ.  ಅಲ್ಲದೇ ನಮ್ಮೆಲ್ಲರ ಓಡಾಟಗಳು ಸ್ಥಳೀಯ ಜಿಲ್ಲೆ-ಪ್ರ್ಯಾಂತ್ಯಗಳಿಗೆ ಸೀಮಿತವಾಗಿರುತ್ತಿದ್ದುದು ವಿಶೇಷ.  ಒಂದು ದೇಶದಲ್ಲಿ ಹುಟ್ಟಿದ ಮಹಾಮಾರಿ ಮತ್ತೊಂದು ದೇಶವನ್ನು ಈಗ ಆಕ್ರಮಿಸುತ್ತಿರುವಂತೆ ಅತಿಯಾದ ವೇಗದಲ್ಲಂತೂ ಆಕ್ರಮಿಸುತ್ತಿರಲಿಲ್ಲ.  ಜೊತೆಗೆ, ಆಗಿನ ಕಾಲದಲ್ಲಿ ವಾಹನ ವ್ಯವಸ್ಥೆಗಳೇ ಇರಲಿಲ್ಲ - ಇದ್ದರೂ ಕೆಲವೇ ಜನರಿಗೆ ಸೀಮಿತವಾಗಿರುತ್ತಿತ್ತು.  ಆದರೆ, ಈಗ ಹಾಗಿಲ್ಲ.  ಪ್ರಪಂಚ ಒಂದು ಹಳ್ಳಿಯಾಗಿದೆ (global village), ಅದರಂತೆ ಒಂದು ಹಳ್ಳಿಯಲ್ಲಾಗುವ ಎಲ್ಲ ಘಟನೆಗಳಿಗೂ ಆ ಹಳ್ಳಿಯ ಎಲ್ಲರೂ ಸ್ಪಂದಿಸುತ್ತಾರೆ, ಅದನ್ನು ಪ್ರತಿಬಿಂಬಿಸುತ್ತಾರೆ.  ಈಗಿನ ಟ್ರೆಂಡುಗಳೂ ಕೂಡ ಹುಟ್ಟುವುದೂ-ಸಾಯುವುದೂ ಅಷ್ಟೇ ವೇಗವಾಗಿ.

ಆದರೆ, ನಮ್ಮ ಹೆಚ್ಚಿನ ವಿದ್ಯಾಭ್ಯಾಸ (or simply awareness), ನಮ್ಮಲ್ಲಿ ಹುಲುಸಾಗಿ ಬೆಳೆದು ಯಥೇಚ್ಛವಾಗಿ ಸಿಗುವ ತಂತ್ರಜ್ಞಾನ, ಇವು ನಮ್ಮಲ್ಲಿನ ಆರ್ಗನೈಜೇಷನ್ ಶಕ್ತಿಯನ್ನು ಕಡಿಮೆ ಮಾಡಿವೆಯೇ?

ಉದಾಹರಣೆಗೆ: ಭಾರತದ ಸ್ವಾತಂತ್ರ್ಯ ಸಂಗ್ರಾಮ (೧೮೫೭-೧೯೪೭) ವನ್ನು ವಿಶ್ಲೇಷಿಸಿದಾಗ, ಆಗಿನ ಕಾಲದಲ್ಲಿ ಅದು ಹೇಗೆ ಆರಂಭವಾಗಿ, ದೇಶದುದ್ದಕ್ಕೂ ಬೆಳೆಯಿತು? ಎಂದು ಸೋಜಿಗಗೊಳ್ಳಬೇಕಾಗುತ್ತದೆ.  ಈಗಿನ ಕಾಲದಲ್ಲಾದರೆ ಕ್ಷಣಾರ್ಧದಲ್ಲಿ ದೇಶವೇನು? ವಿಶ್ವದ ಯಾವ ಭಾಗವನ್ನು ಬೇಕಾದರೂ ನಮ್ಮ ಸುದ್ದಿಗಳಿಗಾಗಿ ತಡಕಾಡಬಹುದು.  ಆಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ, ಜನರು ಈಗಿನಂತೆ ಹೆಚ್ಚು-ಹೆಚ್ಚು ಪದವೀಧರರಾಗಿರಲಿಲ್ಲ, ಆದರೆ ಸಮರ್ಥ ನಾಯಕತ್ವವನ್ನು ನಂಬಿ ಅವರೆಲ್ಲರೂ ಮುಂದೆ ಬಂದಿದ್ದರು, ತಮ್ಮ ತಮ್ಮ ಮನೆ-ಮಠವನ್ನು ತೊರೆದು ರಾಷ್ಟ್ರದ ಬಲವಾಗಿ ನಿಂತಿದ್ದರು.  ಮಾಡು-ಇಲ್ಲವೇ-ಮಡಿ ಎನ್ನುವ ಚಳವಳಿಯಲ್ಲಿ ಆನೇಕರು ತಮ್ಮ ಕೊರಳನ್ನು ಸಮರ್ಪಿಸಿದ್ದರು.

ಅವರದ್ದೂ ಸಹ ಜೀವವಲ್ಲವೇ? ಅವರೆಲ್ಲರಿಗೂ ಜೀವವಿರಲಿಲ್ಲವೇ? ಅವರಿಗೂ ಕೂಡ ತಮ್ಮ-ತಮ್ಮ ಸಂಸಾರಗಳ ಹೊಣೆ ಇದ್ದಿರಲಿಲ್ಲವೇ? ಆದರೆ, ತಮ್ಮ ವೈಯಕ್ತಿಕ ಆಗುಹೋಗುಗಳ ಮುಂದೆ ರಾಷ್ಟ್ರ ದೊಡ್ಡದಾಗಿತ್ತು.  ಹೋರಾಟ ಉಸಿರಾಗಿತ್ತು.  ರಾಷ್ಟ್ರ ನಾಯಕರುಗಳಿಗೆ ಬೆಂಬಲ ಕೊಡಬೇಕಾಗಿತ್ತು.  ಹೀಗೆ, ಅವರುಗಳೆಲ್ಲ ದೊಡ್ಡದನ್ನು ಗುರಿಯಾಗಿಟ್ಟುಕೊಂಡು, ಉಳಿದೆಲ್ಲವನ್ನು ಗೌಣವಾಗಿ ಕಂಡಿದ್ದರು.

ಮುಂದೆ ಕಾಲ ಕ್ರಮೇಣ, ಕುಟುಂಬಗಳು ಅವಿಭಕ್ತ ಪರಿಧಿಯನ್ನು ದಾಟಿ, ನ್ಯೂಕ್ಲಿಯರ್ ಕುಟುಂಬಗಳಾದವು.  ಜನರ ವಲಸೆ ಸಹಜವಾಯಿತು.  ನಗರೀಕರಣ ಹೆಚ್ಚಿತು.  ವಿದ್ಯಾಭ್ಯಾಸದ ಮಟ್ಟ ಬೆಳೆಯಿತು.  ಆದರೆ - ರಾಷ್ಟ್ರ, ಸ್ವಾತಂತ್ರ್ಯ, ಬಿಡುಗಡೆ, ಸ್ವಇಚ್ಛೆ, ಪ್ರಜಾಪ್ರಭುತ್ವ ಇವುಗಳು ಜನರಿಗೆ ಆಯ್ಕೆಯ ಹಕ್ಕನ್ನು ನೀಡಿದವು.  ಜನರು ತಮಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವಂತಾದರು.
ಈ ಆಯ್ಕೆಯ ಪ್ರತಿಫಲವಾಗಿ ಕೆಲವೊಮ್ಮೆ ಅದರಲ್ಲಿ ನನಗೆ ಸ್ವಾರ್ಥ ಕಂಡುಬರುತ್ತದೆ.  ಒಂದುವೇಳೆ, ಈಗೇನಾದರೂ ಸ್ವತಂತ್ರ್ಯ ಭಾರತದ ಚಳುವಳಿಯಂಥವು ಆರಂಭವಾದರೆ, ಅದಕ್ಕೆ ಬೆಂಬಲ ಕೊಡುವವರಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.  ಈ ಬೆಂಬಲ ಎನ್ನುವುದು ತನು-ಮನ-ಧನದ ರೂಪದಲ್ಲಿರಬಹುದು, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಭಿಸಿರಬಹುದು (petition), ಅಥವಾ ಘೇರಾವ್/ಬಂದ್ (ಸತ್ಯಾಗ್ರಹ) ಮತ್ತಿತರ ಭೌತಿಕ ರೂಪದಲ್ಲಿರಬಹುದು.

ನಮ್ಮಲ್ಲಿ ಚಳವಳಿಗಳಾದಾಗ ವ್ಯವಸ್ಥೆಯ ವಿರುದ್ಧ ಜನ ತಮ್ಮ ’ಆತ್ಮಾರ್ಪಣೆ" ಮಾಡಿಕೊಳ್ಳುವುದನ್ನು ನೋಡಿದ್ದೇವೆ.  ಇದಕ್ಕೂ ಒಂದು ಹೆಜ್ಜೆ ಮುಂದುವರಿದು ಯೋಚಿಸಿದಾಗ ಒಂದು ವ್ಯವಸ್ಥೆಯ ವಿರುದ್ಧ ಅಥವಾ ಮತ್ತೊಂದು ವ್ಯವಸ್ಥೆಯ ಪರವಾಗಿ ಜನರು "ಆತ್ಮಾಹುತಿ"ಯನ್ನು ಮಾಡಿಕೂಳ್ಳುವುದನ್ನು ನೋಡಿದ್ದೇವೆ.  ಆದರೆ, ಒಂದು ಖಾಯಿಲೆಯನ್ನು ಹರಡುವ ವೈರಸ್ಸಿನ ವಿರುದ್ಧವಾಗಿ ಜನರನ್ನು ಮೂರು ವಾರಗಳ ಕಾಲ ಕೂಡಿ ಹಾಕಿರುವಂತೆ ಕೇಳಿಕೊಂಡಾಗ ಜನರಿಗೆ ಮನೆಯಲ್ಲಿರಲು ಕಷ್ಟವಾಗುತ್ತದೆ!  ಅದರಿಂದ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯಲ್ಲ!

***
ಜನರು ಸುಖದ ಸುಪ್ಪತ್ತಿಗೆಯಲ್ಲಿ (comfort zone) ಕುಳಿತು ತೇಲಾಡುತ್ತಿರುವಾಗ ಯಾವುದೇ ಸಂಶೋಧನೆಗಳು ಹೊರಗೆ ಬಾರವು.  ಆಭರಣವಾಗುವ ಮೊದಲು ಚಿನ್ನಕ್ಕೆ ಮೂಸೆಯಲ್ಲಿ ಪುಟವಿಟ್ಟ ಹಾಗೆ, ಶಿಲ್ಪ ಕಲಾಕೃತಿ ಆಗುವ ಮೊದಲು ಕಠಿಣವಾದ ಶಿಲೆಯನ್ನು ಬಾಚಿ-ಚಾಣಗಳ ಮೂಲಕ ಕುಟ್ಟಿದ ಹಾಗೆ, ಕಬ್ಬನ್ನು ಹಿಂಡಿ ಸವಿಯಾದ ಬೆಲ್ಲವನ್ನು ತೆಗೆದ ಹಾಗೆ - ಒಂದು ಸಮಾಜವೂ ತನ್ನ ಕಷ್ಟಗಳ ಕುಲುಮೆಯಲ್ಲಿ ಬೇಯಬೇಕಾಗುತ್ತದೆ, ಹಾಗಾಗುವುದರಿಂದಲೇ ಮುಂದಿನ ತಲೆಮಾರಿಗೆ ನಾವು ಹೊಸದೇನನ್ನೋ ತೆಗೆದುಕೊಂಡು ಹೋಗಲು ಸಾಧ್ಯ.  ಇಲ್ಲಿ ಸಾಧನೆ ಮುಖ್ಯವಾಗುತ್ತದೆ, ಇಲ್ಲಿ ದಿಢೀರ್ ಜನಪ್ರಿಯತೆ ಸಿಗುವುದಿರಲಿ ವರ್ಷಗಟ್ಟಲೇ ಮಾಡಿದ ಶ್ರಮಕ್ಕೆ ಕಿರುಗಾಸು ಬೆಲೆಯೂ ಸಿಗದಂತಾಗಬಹುದು, ಆದರೆ ಈ ರೀತಿಯು ಅನೇಕ ಪ್ರಯತ್ನಗಳು ನಮ್ಮನ್ನು ಸಂಪೂರ್ಣರನ್ನಾಗಿ ಮಾಡುವುದರ ಜೊತೆಗೆ ಸಬಲರನ್ನಾಗಿಯೂ ಮಾಡಬಲ್ಲವು - ಎಂಬುದು ಈ ಹೊತ್ತಿನ ನನ್ನ ನಂಬಿಕೆ!

Sunday, January 26, 2014

ದಿನಕ್ಕೊಂದು ಕಥೆ...

ನಮ್ಮನೇಲಿ ಮಕ್ಕಳು ಮಲಗೋ ಹೊತ್ತಿಗೆ ದಿನಕ್ಕೊಂದೆರಡು ಕಥೆಗಳು ಹುಟ್ಟೇ ಹುಟ್ಟುತ್ತವೆ. ಅವುಗಳಿಗೆ ಮೇಲ್ಮೈಯಲ್ಲಿ ಯಾವುದೇ ನಿರ್ದಿಷ್ಟವಾದ structure ಇಲ್ಲದಿದ್ದರೂ ಅವುಗಳಲ್ಲಿ ಸಸ್ಪೆನ್ಸ್ ಅಥವಾ ಹಾಸ್ಯದ ಸನ್ನಿವೇಶ ಇರೋದು ಗ್ಯಾರಂಟಿ. ಪ್ರತಿಯೊಂದು ಕಥೆಯಲ್ಲಿ ಒಂದೊಂದು ಸಮಸ್ಯೆಯನ್ನು (problem sovling) ಬಗೆಹರಿಸುತ್ತೇವೆ, I am sure some king, or prince or princess or some merchant has some problem somewhere! ಅದರಿಂದ leadership skills ಬೆಳೆಯಬಹುದು ಎಂಬುದು ನನ್ನ ನಂಬಿಕೆ. ನನ್ನ ಕಥೆಗಳು ಕುವೆಂಪು ಅವರ ಕಥಾ ಸರಿತ್ಸಾಗರ ಮಂಜಣ್ಣನ ಕಥೆಗಳಂತಲ್ಲ, ಆದರೆ ನನ್ನ ಕಥೆಗಳಲ್ಲಿ ಅಲ್ಲಿ-ಇಲ್ಲಿಯ ಟ್ವಿಸ್ಟುಗಳಿವೆ, ತಲ್ಲಣಗಳಿವೆ, ಪ್ರಯೋಗಗಳಿವೆ. ಯಕ್ಷಗಾನದ ಒಂದೇ ಅಂಕಣದಲ್ಲಿ ಕಲಾವಿದರು - ಅತಳ ಸುತಳ, ಪಾತಾಳ, ಭೂಲೋಕ, ಮತ್ಸ್ಯಲೋಕ, ಸರ್ಪಲೋಕ, ದೈವಲೋಕಗಳನ್ನೆಲ್ಲ - ಕ್ಷಣಾರ್ಧಲ್ಲಿ ಹೋಗಿ ಹಿಂತಿರುಗಿ ಬರುವಂತ ಧಕ್ಷತೆ (efficiency) ಇದೆ. ಎಲ್ಲದಕ್ಕೂ ಮುಖ್ಯವಾಗಿ ಪ್ರತಿದಿನ ಒಂದಿಷ್ಟು ಕನ್ನಡವನ್ನು ಕಲಿಸಿಯೇ ತೀರುತ್ತೇನೆಂಬ ಛಲವಿದೆ. ಜೊತೆಗೆ ವಯೋಮಾನಕ್ಕೆ ತಕ್ಕ ಫಿಲ್ಟರ್ ಇದೆ.

***

ನನ್ನ ಕೆಲವು ಕಥೆಗಳು ಮಕ್ಕಳ ಪ್ರಶ್ನೆಯನ್ನಾಧರಿಸಿ ಒಮ್ಮೊಮ್ಮೆ ದಿಢೀರ್ turnಗಳನ್ನು ತೆಗೆದುಕೊಳ್ಳುವುದುಂಟು, ನಿನ್ನೆಯ ಕಥೆಯಲ್ಲಿ ಹಾಗೇ ಆಯಿತು:

ಒಬ್ಬ ರಾಜನಿದ್ದನಂತೆ

ಅವನಿಗೆ ಮೂವರು ಗಂಡು ಮಕ್ಕಳು

ಅವರಲ್ಲಿ ಹಿರಿಯವನು ಕುರುಡ, ಮಧ್ಯದವನು ಕಿವುಡ (ಕೆಪ್ಪ), ಕಿರಿಯವನು ಮೂಕ

They were able to understand the concept of a blind boy (thanks to Dhritaraastra ?), but not deaf and mute, there were a lot of questions around why were they not able to talk or hear. it is interesting to note, these kids could not imagine why some kids are unable to speak or hear.

ರಾಜನಿಗೆ ವಯಸ್ಸಾಗುತ್ತಾ ಬಂದ ಹಾಗೆ ತನ್ನ ಉತ್ತರಾಧಿಕಾರಿ ಯಾರು ಆಗಬೇಕು, ಆಗುತ್ತಾರೆ ಎನ್ನುವುದರ ಕುರಿತು ಚಿಂತೆಯಾಗತೊಡಗಿತು.


So, we have a problem here, what do you think the Raaja should do, who should become the next king and why?

My kids took turns and tried every one of the three sons - there were a lot of pros and cons that came out of it...believe me there were quite a lot.

Finally, we didn't get a democratic conclusion between 2 kids and 3 potential alternatives (but I gave them more choices later)...the suspense started to build now -- more pressure on me, what option do I recommend, who do you think will be the next king in line and best yet, explain why?
ಕುರುಡ - ನೋ.

ಕಿವುಡ - ನೋ.

ಮೂಕ...ನೋ.


then who else? the king himself, he's old, no he can't.
ರಾಜ ಗುರೂಜಿಯನ್ನು ಕರೆದನಂತೆ..."ಗುರೂಜಿ, ಏನು ಮಾಡೋದು, ನಿಮ್ಮ ಆಜ್ಞೆ ಅನುಸಾರ ನಡೀತೀನಿ, ಯಾರನ್ನು ರಾಜನನ್ನಾಗಿ ಮಾಡಲಿ?"


Now, guruji (saint) is under stress...imagine the pressure, it is almost sleeping time...
ಗುರುಜೀ ಹೇಳಿದ್ರು, "ರಾಜ, ನಿನ್ನ ಮಕ್ಕಳಲ್ಲಿ ಯಾರೂ ಮುಂದಿನ ರಾಜನಾಗೋದಕ್ಕೆ ಸಾಧ್ಯವಿಲ್ಲ...ಯಾಕೇ ಅಂದ್ರೆ..." list the drawbacks of every one of his sons becoming the next king...

ರಾಜ, "ಹಾಗಿದ್ರೆ, ಮುಂದಿನ ರಾಜ ಯಾರು?"


Now there is pin drop silence
Guruji says, "Adopt an able kid from my Ashram, and he will be next king, however, your sons will get respective portfolios..." like ಸಬ್ ರಾಜಾಸ್


there were quite a lot of interruptions here...questions, concerns and what not.

Is the Queen okay with this?

Story takes a sub-routine, where Rama and Bharata and their mommies had issues with who can be the next king, also, Inchara pointed out that Rama himself studied in Guruji's Ashram, not in the palace, but Ninad is still not conviced with Guruji's answer.
ಗುರೂಜಿ, ಒಬ್ಬ ಒಳ್ಳೆಯ ಶಿಷ್ಯನನ್ನು ಅಪಾಯಿಂಟ್ ಮಾಡ್ತಾರೆ.

ಜೊತೆಗೆ ರಾಜನ ಮೂವರು ಮಕ್ಕಳನ್ನು ಜೂನಿಯರ್ ಕಿಂಗ್ ಆಗಿ ಕೂಡ ಮಾಡ್ತಾರೆ...

ಇಲ್ಲೇ ನಮ್ಮ ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು...


So, for 3 potential sub-kings we debate which portfolio we can give them in the kingdom....for quite some time....

Finally
ಕುರುಡನಿಗೆ - News media and mail service incharge

ಕಿವುಡನಿಗೆ - Store room incharge

ಮೂಕನಿಗೆ - Palace decoration and cleanliness incharge

ಇವುಗಳಿಗೆಲ್ಲ - ಯಾಕೇ ಅಂದ್ರೆ ಅಂಥ ಸೇರಿಸಿ, ತುಂಬಾ ಕಾರಣಗಳನ್ನು ಕೊಡಬೇಕಾಗುತ್ತೆ...

ರಾಜ ಹ್ಯಾಪ್ಪೀ, ಗುರೂಜಿ ಹ್ಯಾಪ್ಪೀ, ಸಬ್ ಕಿಂಗ್ಸ್ ಹ್ಯಾಪ್ಪೀ...


The End!

ಒಂದ್ಸರ್ತಿ ಕಥೆ ಮುಗಿದ ಮೇಲೆ, ನಾವು 2 minutes silence mode ಗೆ ಹೋಗ್ತೀವಿ. ಅಷ್ಟರಲ್ಲಿ ಒಬ್ಬರಲ್ಲ ಒಬ್ರು ನಿದ್ರಾ ದೇವಿಗೆ ಶರಣು ಹೋಗಿರ್ತಾರೆ...this formula works for me - try it, rinse & repeat!
***
If it works or not, drop a line here...

Monday, April 04, 2011

ಆನವಟ್ಟಿ ಸಾಲುಮರಗಳು ಈಗ ಇತಿಹಾಸ...

ಸ್ನೇಹಿತನೊಡನೆ ಜೊತೆ ನಿನ್ನೆಯ ಮಾತುಕಥೆ: - ಜಾಗತೀಕರಣ, ವಾಲ್‌ಮಾರ್ಟ್ ಹೇಗೆ ೩೦ ವರ್ಷದ ಹಿಂದೆ ಚೈನಾದಿಂದ ಕಡಿಮೆ ಬೆಲೆಗೆ ಸಾಮಾನುಗಳನ್ನು ಆಮದು ಮಾಡಿಕೊಂಡು ಹೊಸ ಕ್ರಾಂತಿ ಸೃಷ್ಟಿಸಿತ್ತು. - ಅಮೇರಿಕದ ಕೆಲಸಗಾರರು ಪ್ರತಿ ಘಂಟೆಗೆ ೨೫ ಡಾಲರ್ ಪಡೆಯುತ್ತಿದ್ದಾಗ, ಚೈನಾದಂತಹ ದೇಶಗಳಲ್ಲಿ ಪ್ರತಿದಿನಕ್ಕೆ ಒಬ್ಬೊಬ್ಬ ಒಂದೊಂದು ಡಾಲರ್‌ಗೆ ಕೆಲಸ ಮಾಡುತ್ತಿರುವಂತೆ ಗಳಿಕೆಯಲ್ಲಿನ ವ್ಯತ್ಯಾಸ ಹೇಗೆ ರೀಟೈಲರುಗಳನ್ನು ಸ್ವಲ್ಪ ಕಡಿಮೆ ಕ್ವಾಲಿಟಿ ಆದರೂ ಕಡಿಮೆ ಬೆಲೆಗೆ ಪದಾರ್ಥಗಳನ್ನು ಕೊಳ್ಳುವಂತೆ ಮಾಡಿದ್ದು. (೨೦೦೮, ೨೦೦೯ ವಿಶ್ವ ಬ್ಯಾಂಕ್ ಮೂಲಗಳ ಪ್ರಕಾರ) -ಚೈನಾದ ಜನಸಂಖ್ಯೆ ೧.೩೩ ಬಿಲಿಯನ್, GDP $6,890 - ಭಾರತದ ಜನಸಂಖ್ಯೆ ೧.೧೭ ಬಿಲಿಯನ್, GDP $3,250 -ಚೈನಾದ ಕಮ್ಮ್ಯೂನಿಸಮ್ಮ್, ಅಲ್ಲಿನ ಮೆಗಾ ಪ್ರಾಜೆಕ್ಟುಗಳು ಮಿಲಿಯನ್ನ್‌ಗಟ್ಟಲೆ ಜನರನ್ನು ಎತ್ತಂಗಡಿ ಮಾಡಿದರೂ ವಿಶ್ವದ ಉಳಿದ ಜನರಿಗೆ ಕಿಂಚಿತ್ತೂ ಗೊತ್ತಾಗದಿರುವುದು, ಪರಿಸರ ಕಾಳಜಿ, ಸಾಮಾಜಿಕ ಮೌಲ್ಯ ಮೊದಲಾದವುಗಳ ಬಗ್ಗೆ ಇರುವ ಅವರದ್ದೇ ಆದ ವ್ಯಾಖ್ಯೆ ಪರಿಕಲ್ಪನೆ. - ಭಾರತದ ಜನತಂತ್ರ ವ್ಯವಸ್ಥೆ, ಮೆಗಾ ಮಿನಿ ಪ್ರಾಜೆಕ್ಟುಗಳು, ರಸ್ತೆ ಅಗಲೀಕರಣದ ವಾಸ್ತವ ಚಿತ್ರ - ರಾತ್ರೋ ರಾತ್ರಿ ಎದ್ದೇಳುವ ಮಂದಿರ, ಮಸೀದಿ, ಚರ್ಚುಗಳು - ಪರಿಸರ ವಾದಿಗಳು, ದಿವ್ಯ ನದಿಗಳು, ತೆರೆದ ರಾಜಕೀಯ, ಜಾತಿ-ಮತ, ಭ್ರಷ್ಟಾಚಾರಗಳಂತ ತಿಮಿಂಗಲಗಳು, ಮೊದಲಾದವುಗಳು. ಅಮ್ಮನೊಡನೆ ಇಂದಿನ ಚರ್ಚೆ: - ಈ ವರ್ಷವೆ ಕೊನೇ ಇನ್ನು ಮುಂದೆ ನಮಗೆ ಸಾಲು ಮರಗಳಿಂದ ಮಾವಿನ ಮಿಡಿ ಸಿಗೋದಿಲ್ಲ. - ಆನವಟ್ಟಿ ಇಂದ ಶಿರಾಳಕೊಪ್ಪದ ವರೆಗೆ (ಸುಮಾರು ೨೫ ಕಿ.ಮಿ.) ರಸ್ತೆಯ ಎರಡೂ ಬದಿಯ ಸಾಲು ಮರಗಳನ್ನು ಕಡಿದು ಹಾಕುತ್ತಿದ್ದಾರೆ, ರಸ್ತೆ ಅಗಲ ಮಾಡುತ್ತಿದ್ದಾರೆ. - ಯಡಿಯೂರಪ್ಪನವರ ದೊಡ್ಡ ಪ್ರಾಜೆಕ್ಟುಗಳಲ್ಲಿ ಇದೂ ಒಂದಂತೆ. - ಸುಮಾರು ನೂರು ವರ್ಷಕ್ಕೂ ಹಿಂದಿನಿಂದಲೂ ಇದ್ದ ಮರಗಳು ಅವು, ಅವನ್ನೆಲ್ಲ ಕಡಿದು ದೊಡ್ಡ ದೊಡ್ಡ ಮಿಷೀನುಗಳನ್ನು ಬಳಸಿ ಬುಡ ಸಮೇತ ಎತ್ತುತ್ತಿದ್ದಾರೆ. - ಬೋಳು-ಬೋಳು ರಸ್ತೆಗಳನ್ನು ನೋಡೋದಕ್ಕೆ ಬೇಜಾರಾಗುತ್ತೆ. - ಈ ಮರಗಳ ಬದಲಿಗೆ ಬೇರೆ ಎಲ್ಲಿಯಾದರೂ ಅಕೇಷಿಯಾ ಪಕೇಷಿಯಾ ನೆಡ್ತಾರೆ ಅಷ್ಟೇ, ನಮ್ಮ ಹಿಂದಿನವರ ಥರ ಮಾವು-ಬೇವುಗಳನ್ನು ಯಾರು ನೆಡ್ತಾರೆ ಈಗಿನ ಕಾಲದಲ್ಲಿ? - ಆ ಮರಗಳಲ್ಲಿದ್ದ ಅಷ್ಟೊಂದು ಪಕ್ಷಿಗಳು ಇನ್ನೆಲ್ಲಿ ಹೋಗ್ತಾವೋ ಏನೋ? *** ಹೂರಣ: ಭಾರತದ ಮೂಲೆ-ಮೂಲೆಗಳಿಂದ ಅಮೇರಿಕಕ್ಕೆ ಬಂದಂಥ ನಾವು, Caterpillar (CAT) ನಂತಹ ಕಂಪನಿಗಳಲ್ಲಿ ಕೆಲಸ ಮಾಡೋದು ಯೋಗ್ಯ, ಏಕೆಂದರೆ ಇವರ ಬುಲ್‌ಡೋಝರ್ ಮೊದಲಾದ ಕನ್‌ಷ್ಟ್ರಕ್ಷನ್ನ್ ಉಪಕರಣ ಹಾಗೂ ಮಿಷೀನುಗಳಿಗೆ ಜಗತ್ತಿನಾದ್ಯಂತ ಬಹಳ ಬೇಡಿಕೆ. ಅಲ್ಲದೆ, ಪರೋಕ್ಷವಾಗಿ ನೀವು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಮತ್ತೊಂದು ಮೂಲೆಯನ್ನು ಅಗೆಯಬಹುದು! ನಿಮ್ಮ ಜಾಗತಿಕರಣದ ಊಹೆ ಅಥವಾ ಕನಸನ್ನ ಎಲ್ಲರಿಗೂ ತಲುಪಿಸಬಹುದು! ಹೂರಣದ crust: CAT ನಲ್ಲಿ ಪ್ರತಿಯೊಬ್ಬರೂ ದುಡಿಯಲು ಸಾಧ್ಯವೇ? ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೇನಂತೆ? ಆ ಕಂಪನಿಯಲ್ಲಿ ಹಣ ತೊಡಗಿಸಬಹುದು, ಎಲ್ಲಾ ಒಂದೇ! *** ’ಅಂತರಂಗ’ದ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಖರನಾಮ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ!

Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

Monday, May 10, 2010

Claire ಎಂಬ ಕಳೆದು ಹೋದ ನಾಯಿ...

ಇವತ್ತಿಗೆ ಸರಿಯಾಗಿ ಒಂದು ವಾರ ಆಯ್ತು, ಕಳೆದ ಸೋಮವಾರ ನಾನು ಆಫೀಸಿಗೆ ಹೋಗೋ ದಾರಿಯಲ್ಲಿ ನಾಯಿ ಕಳೆದು ಹೋಗಿದ್ದರ ಬಗ್ಗೆ Mendham ಪಟ್ಟಣದ ಸರಹದ್ದಿನಲ್ಲಿ ಹಲವಾರು ಸೈನ್ ಪೋಸ್ಟ್‌ಗಳನ್ನು ಲೈಟ್ ಕಂಭಗಳ ಮೇಲೆ ಅಂಟಿಸಿದ್ದರು, ಕೆಲವು ಕಡೆ ಬಣ್ಣ ಬಣ್ಣದ ಕೋಲುಗಳನ್ನು ಹುಗಿದು ಅದರ ಮೇಲೆ ಕಳೆದು ಹೋದ ನಾಯಿಯ ಚಿತ್ರ ಹಾಗೂ ವಿವರಗಳನ್ನು ತೋರಿಸಿ, ಸಿಕ್ಕಿದ್ದರೆ ತಿಳಿಸಿ ಎಂಬ ಮನವಿಯನ್ನು ಎಲ್ಲಾ ಕಡೆಗೂ ಅಂಟಿಸಿದ್ದರು.  ಸುಮಾರು ಐದು ಮೈಲು ಸುತ್ತಳತೆಯ ಕಾಡಿನಂತಹ ಆ ವಾತಾವರಣದಲ್ಲಿ ಕಳೆದು ಹೋದ ನಾಯಿ ಎಲ್ಲಿ ಹೋಯಿತೋ ಯಾರಿಗೆ ಸಿಕ್ಕಿತೋ, ಆದರೆ ಆ ನಾಯಿಯ ವಾರಸುದಾರರು ಪಟ್ಟ ಶ್ರಮ ನಿಜವಾಗಲೂ ಬಣ್ಣಿಸಲಸದಳವಾಗಿತ್ತು.  ನಾಯಿಯನ್ನು ಕಳೆದುಕೊಂಡ ವಾರಸುದಾರರ ಶ್ರಮವನ್ನು ನೋಡಿ ನಾನಾದರೂ ಒಂದು ದಿನ ಆಫೀಸಿಗೆ ರಜೆ ಹಾಕಿ ಹುಡುಕಲು ಸಹಾಯ ಮಾಡಲೇ ಎನ್ನಿಸದಿರಲಿಲ್ಲ.

ಆ ನಾಯಿಯ ಹೆಸರು Claire - ಕಳೆದು ಹೋಗಿದ್ದಾಳೆ, ಹುಡುಕಲು ಸಹಾಯ ಮಾಡಿ ಎಂದು ತಮ್ಮ ಫೋನ್ ನಂಬರ್ ಅನ್ನು ನೀಡಿದ ಸರಳವಾದ ಸಂದೇಶ ಆ ಪೋಸ್ಟರ್‌ಗಳಲ್ಲಿತ್ತು.  ಪೋಸ್ಟರ್‌ಗಳನ್ನು ಥರಾವರಿ ಬಣ್ಣ-ಬಣ್ಣದ ಪೇಪರುಗಳಲ್ಲಿ ಮುದ್ರಿಸಿ ಅಲ್ಲಲ್ಲಿ ಮರಗಳಿಗೆ ಮೊಳೆ ಹೊಡೆದಿದ್ದರು, ಜೊತೆಗೆ ಕಡು ಹಳದಿ ಬಣ್ಣ ಹಾಗೂ ಗುಲಾಬಿ ಬಣ್ಣಗಳ ಗೂಟಗಳನ್ನು ಅಲ್ಲಲ್ಲಿ ಹುಗಿದು ಅವುಗಳಿಗೂ ರಟ್ಟಿನ ಸೈನ್ ಅನ್ನು ಎರಡೂ ಕಡೆಗಳಿಂದಲೂ ಓದುವಂತೆ ತಗುಲಿಸಿದ್ದರು.  ನಾಯಿಯ ಚಿತ್ರವನ್ನು ಸೇರಿಸಿದ್ದರು, Claire ಸಣ್ಣ ಸೈಜಿನ ನಾಯಿ, ಚಪ್ಪರ ಕಾಲುಳ್ಳ dachshund ಜಾತಿಯ ವೆರಾಂಡಾದ ಅಲಂಕೃತ ನಾಯಿಯ ಹಾಗಿತ್ತು, Curious George ವೀಡಿಯೋಗಳಲ್ಲಿ ಬರೋ Hundley ಅಷ್ಟು ದೊಡ್ಡದಿರಬಹುದು ಎಂಬುದು ನನ್ನ ಊಹೆ.

ಒಬ್ಬ ವ್ಯಕ್ತಿ ಅಥವಾ ಸಾಕು ಪ್ರಾಣಿಯ ಬಗ್ಗೆ ನಾವು ತೋರುವ ಕಾಳಜಿ ಹಾಗೂ ಮುತುವರ್ಜಿಗಳನ್ನು ಯೋಚಿಸಿಕೊಂಡಾಗ, ಒಬ್ಬ ವ್ಯಕ್ತಿ ಅಥವಾ ಸಾಕು ಪ್ರಾಣಿ ಇಲ್ಲವಾದಾಗ ನಾವು ಅನುಭವಿಸುವ ದುಃಖ ಇವೆಲ್ಲವನ್ನೂ ಹತ್ತಿರದಿಂದ ಗಮನಿಸಿದಾಗ ಆಯಾ ದೃಷ್ಟಿಕೋನ ಅಥವಾ ಪ್ರೀತಿಯ ಆಳದ ಬಗ್ಗೆ ಅರಿವಾಗುತ್ತದೆ.  ಈ ನಾಯಿಯನ್ನು ಕಳೆದುಕೊಂಡ ವ್ಯಕ್ತಿ ಸುಮಾರು ಐವತ್ತಕ್ಕೂ ಹೆಚ್ಚು ಪೋಸ್ಟರುಗಳನ್ನು ಪ್ರಿಂಟ್ ಮಾಡಿ ಆಯಕಟ್ಟಿನ ಸ್ಥಳಗಳಲ್ಲಿ ಗೂಟಗಳನ್ನು ಹುಗಿದು ಮರಗಳಿಗೆ ಎಲ್ಲರಿಗೂ ತೋರುವ ಹಾಗೆ ಪೋಸ್ಟರುಗಳನ್ನು ಸುಮಾರು ಐದು ಚದುರ ಮೈಲು ವಿಸ್ತೀರ್ಣದಲ್ಲಿ ಹಚ್ಚಿರುವಾಗ ಅವರು ಪಟ್ಟ ಶ್ರಮವನ್ನು ನೋಡಿ ಆಶ್ಚರ್ಯವಾಯಿತು, ಈ ಪೋಸ್ಟರುಗಳ ಜೊತೆಗೆ ಇಂಟರ್ನೆಟ್ ಹಾಗೂ ಲೋಕಲ್ ಪ್ರಿಂಟ್ ಮಾಧ್ಯಮಗಳಲ್ಲೂ ’ನಾಯಿ ಕಳೆದಿದೆ’ ಎಂದು ಮೆಸ್ಸೇಜನ್ನು ಹಾಕಿರಲಿಕ್ಕೂ ಸಾಕು.  ಕಳೆದು ಹೋದ ನಾಯಿಯ ಬಗ್ಗೆಯೇ ಕಳೆದುಕೊಂಡವರ ಕಳಕಳಿ ಹೀಗಿರುವಾಗ ಕಳೆದು ಹೋಗುವ ಮೊದಲು ಆ ನಾಯಿಯ ಆರೈಕೆಯನ್ನು ಎಷ್ಟರ ಮಟ್ಟಿಗೆ ಆ ವಾರಸುದಾರರು ಮಾಡಿರಬಹುದು ಎಂದು ಊಹಿಸತೊಡಗಿದೆ.  Claire ಅಂತಹ ಕುಳ್ಳನೆ ಚಪ್ಪರ ಕಾಲಿನ ಲಾಬ್ಬಿ ನಾಯಿಗಳು ಸಾಮಾನ್ಯವಾಗಿ ಶ್ರೀಮಂತರ ಮನೆಯ ನಾಯಿಗಳು, ಅವು ಸಹಜವಾಗಿ ಎತ್ತರದ (elevated) ವಾತಾವರಣದಲ್ಲಿ ಬೆಳೆದಿರುತ್ತವೆ, ಜೊತೆಗೆ ತಕ್ಕ ಆರೈಕೆಗೂ ಒಳಗಾಗಿರುತ್ತವೆ.  ಶ್ರೀಮಂತರ ಮನೆಯ ಸಕಲೈಶ್ವೈರ್ಯವನ್ನೂ ಹೊಂದಿದ ನಾಯಿಗಳು ಆ ಮನೆಯ ಎಲ್ಲಾ ಸದಸ್ಯರಂತೆಯೇ ಎಂಬುದು ಇವತ್ತು ನಿನ್ನೆಯ ವಿಷಯವೇನಲ್ಲ.

ಹಾಗಾದರೆ ಪ್ರತಿಯೊಬ್ಬರೂ ತಮ್ಮ ನೆರೆಹೊರೆಯನ್ನು, ಬಂಧು ಮಿತ್ರರನ್ನೂ, ಸಾಕು ಪ್ರಾಣಿಗಳನ್ನು ಪ್ರೀತಿಸುವ ಅಥವಾ ನೋಡುವ ದೃಷ್ಟಿಕೋನ ಅವರವರ ಅಂತಸ್ತಿನ ಮೇಲೆ ಅವಲಂಭಿತವಾಗಿದೆಯೇ? ಬಡವರ ಮನೆಯ ನಾಯಿ ಎಂದರೆ ಈ ರೀತಿಯ ಹುಡುಕುವಿಕೆ ದೊರೆಯುತ್ತಿರಲಿಲ್ಲವೆಂದೇ? ಅಥವಾ ಬಡವರ ಮನೆಯ ನಾಯಿಗಳು ಹುಡುಕಲು ಯೋಗ್ಯವಲ್ಲವೋ? ಅಥವಾ ಬಡವರು ಶ್ರೀಮಂತರು ಎನ್ನುವ ವ್ಯತ್ಯಾಸಗಳಲ್ಲಿ ಬದುಕುವಾಗ ಅವರವರ ಅಗತ್ಯ, ಆಲೋಚನೆಗಳು ಬದಲಾಗುವುದು ಸ್ಪಷ್ಟವೋ?

***

ಅಮೇರಿಕದಲ್ಲಿ ಸಾಕು ಪ್ರಾಣಿಗಳನ್ನು ಪುಲ್ಲಿಂಗ/ಸ್ತ್ರೀಲಿಂಗವನ್ನು ಬಳಸಿ ಕರೆಯುವ ರೀತಿಯನ್ನು ನೀವು ನೋಡಿರಬಹುದು.  ನಾವು ಭಾರತದಲ್ಲಿ ನಮ್ಮ ಸಾಕು ಪ್ರಾಣಿಗಳಿಂದ ಹಿಡಿದ ಯಾವುದೇ ಪ್ರಾಣಿ-ಪಕ್ಷಿಗಳನ್ನೂ ಕೂಡಾ ಅದು-ಇದು ಎಂದು ನಪುಂಸಕ ಲಿಂಗದಲ್ಲಿ ಹೇಗೆ ಸಂಬೋಧಿಸುತ್ತೇವೋ ಇಲ್ಲಿ ಪ್ರಾಣಿ-ಪಕ್ಷಿಗಳನ್ನು ಪುಲ್ಲಿಂಗ/ಸ್ತ್ರೀಲಿಂಗವನ್ನು ಉಪಯೋಗಿಸಿ ಮಾತನಾಡುವುದು ವಿಶೇಷ ಅನ್ನಿಸುತ್ತೆ.  ತಮ್ಮದೇ ಸಾಕು ಪ್ರಾಣಿಗಳಿಂದ ಹಿಡಿದು ಕಾಡಿನ ಪಕ್ಷಿಗಳು, ರಕ್ಕೂನುಗಳು, ಇಣಚಿಗಳು...ಯಾವುದೇ ಪ್ರಾಣಿ ಪಕ್ಷಿಗಳಿಗೂ, He ಅಥವಾ She ಯ 3rd person singular ಬಳಕೆಯಾಗುತ್ತದೆ.  ಈ ಕಳೆದು ಹೋದ ನಾಯಿಯ ವಿಚಾರಕ್ಕೆ ಬಂದರೆ "Claire - ಕಳೆದು ಹೋಗಿದ್ದಾಳೆ!" ಹುಡುಕಲು ಸಹಾಯ ಮಾಡಿ ಎಂಬುದಾಗುತ್ತದೆ.

ನಮ್ಮ, ಅದರಲ್ಲೂ ಕನ್ನಡದ ನಪುಂಸಕ ಲಿಂಗದ ಬಳಕೆ ಎರಡು ರೀತಿಯದ್ದು: ಒಂದು, ಕಲ್ಲು, ಬುಕ್ಕು, ಬಸ್ಸು ಮೊದಲಾದ ’ಜೀವವಿರದ’ ವಸ್ತುಗಳನ್ನು "ಇದು, ಅದು, ಹೋಯ್ತು, ಬಂತು" ಎಂದು ಸಂಬೋಧಿಸುವ ಪರಿ; ಎರಡು, ದನ, ಕರು, ನಾಯಿ, ನರಿ, ಗಿಡ, ಮರ ಮೊದಲಾದ ಜೀವವಿರುವ ವಸ್ತುಗಳನ್ನೂ "ಇದು, ಅದು, ಹೋಯ್ತು, ಬಂತು" ಎಂದು ಸಂಬೋಧಿಸುವ ಪರಿ.  ಇದಕ್ಕೆ ಸ್ವಲ್ಪ ಭಿನ್ನವಾಗಿ ಹಿಂದಿಯಲ್ಲಿ ’ರೇಲ್ ಆ ರಹಿ ಹೈ’ ಎನ್ನುವಂತೆ ಬಸ್ಸು, ಲಾರಿ, ಟ್ರೇನುಗಳಿಗೂ ಸ್ತ್ರೀಲಿಂಗದ ಬಳಕೆ.  ಕನ್ನಡದ 3rd person singular ಬಳಕೆಯಂತೆ ನಾವು ನಮ್ಮ ಸಾಕು ಪ್ರಾಣಿಗಳನ್ನು ’ಅದು, ಇದು’ ಎಂದು ಕರೆಯಬಲ್ಲೆವು, ಹಾಗೆ ಕರೆಯುವ ರೂಢಿ ಪ್ರಾಣಿಗಳನ್ನು ನೋಡುವ ಹೊಸ ದೃಷ್ಟಿಕೋನವನ್ನು ನಮಗೆ ತಂದುಕೊಟ್ಟಿದೆ ಎಂದು ನನ್ನ ವಾದ.  ’ನಾಯಿ ಬಂತಾ?’ ಎನ್ನುವುದು ಸಹಜವಾದ ವಾಕ್ಯವೇ ಹೊರತು, ’ನಾಯಿ ಬಂದಳೋ?’ ಎನ್ನುವುದು ಅಷ್ಟು ಸರಿಯಾಗಿ ಉಪಯೋಗಕ್ಕೆ ಬಾರದು.

***

ಒಂದು ವಾರದ ನಂತರವೂ Claire ಇನ್ನೂ ಕಳೆದೇ ಹೋಗಿದ್ದಾಳೆ!  ಅಕಸ್ಮಾತ್ ಈಗಾಗಲೇ ಅವಳು ಸಿಕ್ಕಿದ್ದರೆ, ಅವಳ ವಾರಸುದಾರರು ಆ ಪೋಸ್ಟರುಗಳನ್ನು ತೆಗೆದಿರುತ್ತಿದ್ದರು.  ಸುಮಾರು ಈ ಎರಡು ವಾರಗಳ ಅಂತರದಲ್ಲಿ ಆ ಚಪ್ಪರಕಾಲಿನ ಕುಳ್ಳ ನಾಯಿಯ ಅರಣ್ಯದ ರೋಧನ ಯಾರಿಗೂ ಕೇಳಿರಲಿಕ್ಕಿಲ್ಲ.  ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿದ Claireಗೆ ರಾತ್ರಿ ಹೊತ್ತಿನ ಫ್ರೀಜಿಂಗ್ ಉಷ್ಣತೆಯಲ್ಲಿ ಕಷ್ಟವಾಗಿರುತ್ತದೆ, ದಪ್ಪನೆ ಚರ್ಮ ಹಾಗೂ ಕಠಿಣ ಪರಿಸ್ಥಿತಿಗಳಿಗೆ ಈಗಾಗಲೇ ಒಗ್ಗದ ಮನಸ್ಸು ಕಷ್ಟದ ಸಮಯದಲ್ಲಿ ಬಗ್ಗದೇ ಹೋಗುತ್ತದೆ.

Monday, May 03, 2010

ಮನೆಯು ಚಿಕ್ಕದಾಗಿರಬೇಕು, ಬಾತ್ ರೂಮ್ ದೊಡ್ಡದಾಗಿರಬೇಕು...

ನಮ್ಮ ಐದು ಸಾವಿರ ವರ್ಷದ ಇತಿಹಾಸ ಮತ್ತು ಪರಂಪರೆಯಲ್ಲಿ ನಾವು ಅಡುಗೆ ಮನೆಗೆ ಕೊಟ್ಟಷ್ಟು ಪ್ರಾಶಸ್ತ್ಯವನ್ನು ಬಚ್ಚಲು ಮನೆಗೆ ಕೊಡೋದಿಲ್ಲ ಅನ್ನೋದು ನನ್ನ ಅಭಿಪ್ರಾಯ ಅಷ್ಟೇ. ನಮ್ಮ ಹಿರಿಯರ ಹಳೆ ಕಾಲದ ಮನೆಗಳನ್ನೋ ಅಥವಾ ಇತ್ತೀಚೆಗೆ ೬೦X೪೦ ಸೈಟ್‌ಗಳಲ್ಲಿ ಕಟ್ಟಿದ ಸುಂದರವಾದ ಆರ್‌ಸಿಸಿ ಮನೆಗಳನ್ನೋ ಉದಾಹರಣೆಯಾಗಿ ತೆಗೆದುಕೊಂಡರೆ ನಿಮಗೇ ಗೊತ್ತಾಗುತ್ತದೆ. ಹಳೆಯ ಕಾಲದ ಮನೆಗಳಲ್ಲಿ ಗಂಡಸರು ಮುಖಕ್ಷೌರ ಮಾಡುವುದಕ್ಕೆ ಕಿಟಕಿ ಮೇಲೆ ಸಣ್ಣ ಕನ್ನಡಿಯನ್ನಿಟ್ಟುಕೊಂಡು ಅದರ ಪಕ್ಕದಲ್ಲಿ ಬಿಂದಿಗೆ ಬಿಸಿನೀರು ಇಟ್ಟುಕೊಳ್ಳುವುದು ರೂಢಿ, ದಿನಾ ನಡೆಸೋ ನಿತ್ಯ ಕರ್ಮವಾಗಿರುವ ಮುಖ ಕ್ಷೌರಕ್ಕೆ ಯಾಕಪ್ಪಾ ಇಷ್ಟೊಂದು ಕೀಳು ಪ್ರಾಶಸ್ತ್ಯ ಅನ್ನಿಸೋದಿಲ್ಲವೇ? ಹೊಸದಾಗಿ ಕಟ್ಟಿದ ಮನೆಗಳಲ್ಲೂ ಅಷ್ಟೇ ಸಿಂಕ್ ಇದ್ದರೆ, ಅದರ ಮೇಲೆ ಒಂದು ಲೈಟ್ ಇರುತ್ತದೆ (ಹೆಚ್ಚಿನ ಪಕ್ಷ ಝೀರೋ ಕ್ಯಾಂಡಲ್ ಬಲ್ಬ್ ಹೊತ್ತಿಸಿಕೊಂಡು), ಸಿಂಕ್‌ನ ಮೇಲೆ ಸೋಪ್ ಅಥವಾ ಮತ್ತಿತರ ಸಾಮಾನುಗಳನ್ನು ಇಟ್ಟುಕೊಳ್ಳೋದಕ್ಕೆ ಜಾಗ ಇರೋದೇ ಕಡಿಮೆ.

ಮನೆಯ ವಿಚಾರದಲ್ಲಿ ಬಚ್ಚಲು/ಕಕ್ಕಸ್ಸು ಮನೆಗಳಿಗೆ ಕೊಡೋ ಪ್ರಾಶಸ್ತ್ಯ ಹಾಗಿರಲಿ, ದಿನಾ ನೂರಾರು ಜನ ಬಂದು ಹೋಗೋ ಯಾವುದೇ ಹೊಟೇಲಿಗೆ ಹೋಗಿ ನೋಡಿ ತಿನ್ನೋ ವಿಚಾರಗಳಿಗೆ ಎಷ್ಟೊಂದು ಮಹತ್ವ ಕೊಟ್ಟಿರುತ್ತಾರೆ, ತಿಂದು ಕುಡಿದದ್ದನ್ನು ವಿಸರ್ಜಿಸಲು ಮಾತ್ರ ಯಾವ ಮಹತ್ವವನ್ನೂ ಕೊಟ್ಟಿರೋ ಹಾಗೆ ಕಾಣೆ. ಯಾಕೋ ನಮ್ಮ ಜನಗಳಿಗೆ ಶುಚಿ ಅಥವಾ ಸ್ವಚ್ಛತೆ ಅನ್ನೋದು ಬಂದೇ ಇಲ್ಲವೇನೋ ಅನ್ನಿಸುತ್ತೆ. ನಮ್ಮ ಇತಿಹಾಸದ ದೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ಏಕೆ ಸಿಗಲಿಲ್ಲ? ಬಡತನ, ಹೆಚ್ಚಿನ ಜನಸಂಖ್ಯೆ ಕಾರಣವೋ ಅಥವಾ ನಮ್ಮಲ್ಲಿ ಮೂಲಭೂತ ಸಮಸ್ಯೆಗಳು ಇಂದಿಗೂ ಮೂಲಭೂತವಾಗಿಯೇ ಉಳಿದಿರುವುದು ಏಕೆ ಎನ್ನುವುದಕ್ಕೆ ಒಂದು ಹೆಜ್ಜೆ ನಮ್ಮ ಅಂತರಾಳವನ್ನು ಹುಡುಕಬೇಕಾಗುತ್ತದೆ.

ಅಮೇರಿಕದವರು ಕಡಿಮೆ ಜನ ಹೆಚ್ಚು ಸಂಪನ್ಮೂಲಗಳನ್ನು ಬಳಸುತ್ತಾರೆ ಎನ್ನೋದನ್ನ ಹಲವು ರೀತಿಯಲ್ಲಿ ಬಳಸಬಹುದು, ಅದನ್ನ ಒಂದು ಕಂಪ್ಲೇಟ್ ಅನ್ನಾಗಿಯೂ ನೋಡಬಹುದು ಅಥವಾ ಅದನ್ನ ಒಂದು ಮುಂದುವರೆದ ಸಂಸ್ಕೃತಿಯನ್ನಾಗಿಯಾದರೂ ಅರಿತುಕೊಳ್ಳಬಹುದು. ನಮ್ಮ ಆಫೀಸಿನ ಉದಾಹರಣೆಯನ್ನು ತೆಗೆದುಕೊಳ್ಳಿ, ನಾನು ಪವರ್‌ಪಾಯಿಂಟ್ ಸ್ಲೈಡ್‌ಗಳನ್ನು ಮಾಡಿ ಕಳಿಸಿದ್ದನ್ನ ನನ್ನ ಬಾಸ್ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡದೇ ಅದನ್ನು ಕಲರ್ ಪ್ರಿಂಟರಿನಲ್ಲಿ ಮುದ್ರಿಸಿ ಅನಂತರ ಅದರಲ್ಲಿ ತಿದ್ದು ಪಡಿಗಳನ್ನು ಮಾಡುವುದು ರೂಢಿ. ಆದರೆ ನಾನು ತಿಣುಕಿ-ತಿಣುಕಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ಓದಿದ್ದೇ ಓದಿದ್ದು, ಆದರೆ ಮುದ್ರಿತವಾದ ಕಾಗದವನ್ನು ನಾವು ಓದುವ ದೃಷ್ಟಿಯೇ ಬೇರೆ ಹಾಗಾಗಿ ಅದರಲ್ಲಿರುವ ತಪ್ಪು-ಸರಿಗಳನ್ನು ನೋಡಿದಷ್ಟು ಸುಲಭವಾಗಿ ಕಂಪ್ಯೂಟರ್ ಸ್ಕ್ರೀನಿನಲ್ಲಿ ನೋಡಲಾಗದು ಎಂಬುದು ನನ್ನ ಅನುಭವ. ಸರಿ, ಒಂದು ಪೇಜ್ ಸ್ಲೈಡ್ ಹುಟ್ಟಬೇಕಾದರೆ ಒಂದು ನಾಲ್ಕು ಡ್ರಾಪ್ಟ್ ಪೇಜ್‌ಗಳನ್ನು ಮುದ್ರಣ ಮಾಡೋಣ, ಅದರಲ್ಲೇನಂತೆ? ರಿಸೋರ್ಸುಗಳು ಇವೆ, ಸಂಪನ್ಮೂಲಗಳ ಬಳಕೆ ಹಾಗೂ ಅದರ ವೆಚ್ಚಕ್ಕೆ ನಾವೇನೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಪೇಪರ್ರೂ ಚೀಪು, ಪ್ರಿಂಟರ್ರೂ ಚೀಪು...ಹೀಗಾದ ಮೇಲೆ ಒಂದು ಪಬ್ಲಿಕ್ ಕಂಪನಿಯ ಆಯ-ವ್ಯಯಗಳ ಕಥೆ ಹಾಗೂ ಅವುಗಳ ದೊಡ್ಡ ಲಿಸ್ಟ್ ಇದ್ದೇ ಇರುತ್ತೆ, ಹತ್ತರ ಜೊತೆ ಹನ್ನೊಂದು ಅಂತ ಇವೂ ಸೇರಿಕೊಂಡು ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಒಳ್ಳೆಯ ಕ್ವಾಲಿಟಿ ಸ್ಲೈಡುಗಳನ್ನು ತಯಾರು ಮಾಡಿದರೆ ಆಯಿತಪ್ಪಾ ಅಷ್ಟೇ, ಅನ್ನಿಸೋದಿಲ್ಲವೇ?

ನಮ್ಮ ದೇಶದಲ್ಲಿ ಮನೆಗೆ ಒಂದೋ ಎರಡೋ ಪ್ಲಗ್ ಪಾಯಿಂಟುಗಳಿರುತ್ತವೆ, ಇಂದಿಗೂ ಹಳೆಯ ಕಾಲದಲ್ಲಿನ ಮನೆಗಳಲ್ಲಿ ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಯನ್ನ ಲಿವಿಂಗ್ ರೂಮಿನಲ್ಲಿಟ್ಟು ಅಲ್ಲೇ ಬಟ್ಟೇ ಇಸ್ತ್ರಿ ಮಾಡಿಕೊಳ್ಳುವುದು ರೂಢಿ. ನನಗೆ ಗೊತ್ತಿರೋ ಹಾಗೆ ಮನೆಯಲ್ಲಿರುವ ಪ್ಲಗ್ ಪ್ಲಾಯಿಂಟುಗಳ ಲೆಕ್ಕದಲ್ಲಿ ಪ್ರತಿ ತಿಂಗಳಿಗೆ ಇಂತಿಷ್ಟು ರಿಕರ್ರಿಂಗ್ ಚಾರ್ಜಸ್ ಕೊಡಬೇಕಾಗುತ್ತದೆ. ಪ್ರತಿ ತಿಂಗಳ ಎಕ್ಸ್‌ಪೆನ್ಸ್ ಲೆಕ್ಕದಲ್ಲಿ ಯಾರಿಗೆ ತಾನೆ ಹತ್ತೋ ಇಪ್ಪತ್ತು ರೂಪಾಯಿ ಕೊಡಲು ಮನಸ್ಸಾದೀತೂ ಹೇಳಿ? ಆದರೆ ಅಮೇರಿಕದ ಮನೆಗಳಲ್ಲಿ ಪ್ರತಿ ಆರು ಅಡಿಗಳಿಗೊಂದರಂತೆ ಎಲ್ಲಾ ರೂಮುಗಳಲ್ಲೂ ಎಲೆಕ್ಟ್ರಿಕ್ ಪ್ಲಗ್ ಪಾಯಿಂಟ್‌ಗಳನ್ನು ಮನೆ ಕಟ್ಟುವಾಗಲೇ ಅಳವಡಿಸಿರುವುದು ನಮ್ಮಂಥ ಅನಿವಾಸಿಗಳ ಕಣ್ಣಿಗೆ ಮೊದಲ ದಿನವೇ ಗೊತ್ತಾಗಿರುತ್ತದೆ. ವ್ಯಾಕ್ಕ್ಯೂಮ್ ಹಾಕುವುದಿರಲಿ, ಇಸ್ತ್ರಿ ಹಾಕುವುದಿರಲಿ ಯಾವ ರೂಮಿನಲ್ಲಿ ಬೇಕಾದರೂ ಹಾಕುವ ಹಾಗಿರುತ್ತದೆ. ನಿಮಗೆ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಬೇಕೋ ಅದಕ್ಕೆ ತಕ್ಕಂತೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಪ್ರತಿಯೊಂದನ್ನೂ "ಕಡಿಮೆ ದರ" ಎನ್ನುವ ಮಾನದಂಡ ಒಂದರಲ್ಲಿ ಮಾತ್ರ ನೋಡಿದಾಗ ಅಲ್ಲಿ ಕ್ವಾಲಿಟಿಯೋ ಮತ್ತೊಂದೋ ಬಲಿಪಶುವಾಗುತ್ತದೆ. ಇದೇ ಸಮೀಕರಣವನ್ನು ಹತ್ತು ಡಾಲರ್ ಉಳಿಸುವ ವಿಚಾರಕ್ಕೆ ಬಂದಾಗ ನಾವೆಷ್ಟು ಸಮಯ (==ಹಣ) ವನ್ನು ವ್ಯಯಿಸಬಲ್ಲೆವು ಎಂಬುದಕ್ಕೂ ಅಳವಡಿಸಬಹುದು. ನಿಮ್ಮ ಮನೆಯ ಪಕ್ಕದ ಬೀದಿಯ ಅಂಗಡಿಯೊಂದರಲ್ಲಿ ಒಂದು ವಸ್ತು ಇಪ್ಪತ್ತೈದು ಡಾಲರಿಗೆ ಸಿಗುವ ಹಾಗಿರುವಾಗ ಅದೇ ವಸ್ತು ನಿಮ್ಮ ಮನೆಯಿಂದ ಅರ್ಧ ಘಂಟೆ ದೂರದ ಅಂಗಡಿಯೊಂದರಲ್ಲಿ ಹದಿನೈದು ಡಾಲರಿಗೆ ಸಿಗುವ ಹಾಗಿದ್ದರೆ ನೀವು ಅಲ್ಲಿಗೆ ಹೋಗಿ ಬಂದು ಮಾಡುವ ಸಲುವಾಗಿ ಒಂದು ಘಂಟೆಯನ್ನು ವ್ಯಯಿಸಿ ಹತ್ತು ಡಾಲರ್ರ್ ಉಳಿಸುವ ಶ್ರಮವನ್ನು ಪಡುತ್ತೀರೊ? ಅಥವಾ ನಿಮ್ಮ ಮನೆಯ ಪಕ್ಕದ ಬೀದಿಯಲ್ಲೇ ನಿಮಗೆ ಅಗತ್ಯವಿರುವ ಆ ವಸ್ತುವನ್ನು ನಿಮಗೆ ಬೇಕಾದಾಗ ಕೊಳ್ಳುತ್ತೀರೋ?

ಇನ್ನು ಬಾತ್ ರೂಮ್ ವಿಚಾರಕ್ಕೆ ಹಿಂತಿರುಗೋಣ. ನಮ್ಮ ಸಂಸ್ಕೃತಿಯಲ್ಲಿ ಅದನ್ನು "ಬಚ್ಚಲು ಮನೆ" ಎಂದು ಕರೆದು ಮನೆಯ ಪಟ್ಟವನ್ನು ಕೊಟ್ಟರೋ ವಿನಾ ಆ ಸ್ಥಳವನ್ನು ಯಾವಾಗಲೂ ಗಾಳಿ ಬೆಳಕು ಬಾರದ ರೀತಿ, ಕತ್ತಲ ಗವಿಯಾಗಿ, ತೆಗೆದ ಹಾಗೂ ಸ್ನಾನದ ನಂತರ ಉಡುವ ಬಟ್ಟೆಗಳನ್ನು ಇಡಲೂ ಸಹ ಅಗತ್ಯವಾದ ಸೌಕರ್ಯಗಳಿಲ್ಲದೆ ಕಟ್ಟಿಬಿಟ್ಟರು. ಬಾತ್ ರೂಮ್‌ಗೆ ಈ ಸ್ಥಿತಿಯಾದರೆ ಇನ್ನು ಕಕ್ಕಸು ಕೋಣೆ/ಮನೆಯ ಪರಿಸ್ಥಿತಿಯಂತೂ ಕೇಳಲೇ ಬೇಡಿ. ನಮಗೆ ತಿಂಡಿ-ಊಟದಷ್ಟೇ ಮುಖ್ಯವಾದ ಸ್ನಾನ-ಶೌಚಗಳಿಗೆ ಯಾಕಿಷ್ಟು ಕಡಿಮೆ ಬೆಂಬಲ? ನಮ್ಮ ಬೆಳೆದ ಪರಂಪರೆಗೆ ಯಾಕೆ ಈ ರೂಮುಗಳನ್ನು ತ್ಯಾಜ್ಯವಸ್ತುವನ್ನು ನೋಡುವ ರೀತಿಯ ಮನಸ್ಥಿತಿ ಬಂದೊದಗಿದೆ ಎಂದು ಕೊರಗುತ್ತೇನೆ. ನನ್ನ ಪ್ರಕಾರ ಬಡವರಿರಲಿ ಶ್ರೀಮಂತರಿರಲಿ ಅವರವರ ಶ್ಯಕ್ಯಾನುಸಾರ ಲಿವಿಂಗ್ ರೂಮ್, ಬೆಡ್ ರೂಮ್, ಅಡುಗೆ ಮನೆಗೆ ನೀಡಿದ ಪ್ರಾಶಸ್ತ್ಯವನ್ನೇ ಬಚ್ಚಲು-ಕಕ್ಕಸು ಮನೆಗಳಿಗೂ ಕೊಡಬಹುದುಲ್ಲ? ನನಗಂತೂ ಕನ್ನಡಿಯಿಲ್ಲದ ಬಾತ್‌ರೂಮ್‌ಗಳಲ್ಲಿ ಮುಖ ಕ್ಷೌರ ಮಾಡುವ ಸಾಹಸಅ ಅರಿವಿದೆ, ಸರಿಯಾದ ಬೆಳಕಿಲ್ಲದ ಗೂಡು ದೀಪದಡಿಯಲ್ಲಿನ ಬಚ್ಚಲು ದಿಂಡೆಯ ಮೇಲೆ ಒಣ ಟವಲನ್ನಿಟ್ಟು ನಾನು ಸ್ನಾನ ಮಾಡಿದ ನೀರು ಅದರ ಮೇಲೆ ಬಿದ್ದು ನನ್ನ ಜೊತೆ ಅದೂ ನೆನೆದ ಅನುಭವವಿದೆ, ಬಚ್ಚಲು ಮನೆಯ ಮೇಲೆ ನೋಡಿದರೆ ಜೇಡರ ಬಲೆಗಳು ಕಟ್ಟಿದ ಮೂಲೆಗಳು ಕಂಡಿವೆ, ಯಾವತ್ತೂ ಧೂಳು ಹೊಡೆಯ ಮಾಳಿಗೆಗಳ ಬೇಸತ್ತ ಮುಖಗಳು ಎಂದೂ ಮರೆಯದ ಹಾಗಿವೆ.

ಯಾಕೆ ಹೀಗೆ? ಇವೆಲ್ಲವನ್ನೂ ನಾವು ಬದಲಾಯಿಸ ಬಲ್ಲೆವು, ಬದಲಾಯಿಸಬೇಕು. ನಮ್ಮ ಅಡುಗೆ ಮನೆಯಷ್ಟೇ ಶುಚಿಯಾಗಿ ಬಚ್ಚಲು ಮನೆಯೂ ಇರಬೇಕು, ಅಂಗಳದಿಂದ ಹಿತ್ತಿಲವರೆಗೆ ಮನೆಯ ಪ್ರತಿಯೊಂದು ಅಂಗವೂ ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವಾಗ ಅವುಗಳಿಗೆ ಸರಿಯಾದ ಮಹತ್ವವನ್ನು ಕೊಡಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ’ಬಾತ್ ರೂಮ್‌ಗೆ ಅಷ್ಟೊಂದು ಜಾಗ್ ಯಾಕೆ ವೇಸ್ಟ್ ಮಾಡ್ತೀರಾ...’ ಎಂದು ಹಿನ್ನೆಡೆ ತೋರುವ ಮನೆ ಕಟ್ಟುವ ಇಂಜಿನಿಯರುಗಳನ್ನು ಝಾಡಿಸಬೇಕು!

Saturday, January 30, 2010

ನಮ್ಮೊಳಗಿನ ಬದಲಾವಣೆ ದೊಡ್ಡದು...

’ಇಂಡಿಯಾ ಪ್ರವಾಸ ಹೇಗಿತ್ತು?’ ಅನ್ನೋ ಪ್ರಶ್ನೆಗೆ ’ಅದು ಪ್ರವಾಸವೇ ಅಲ್ಲ!’ ಎಂದು ಉತ್ತರ ಕೊಟ್ಟು ಪ್ರಶ್ನೆ ಕೇಳಿದವರ ಮುಖದ ಮೇಲೆ ಸಹಜವಾಗಿ ಏಳುವ ಆಶ್ಚರ್ಯದ ಅಲೆಗಳನ್ನು ನೋಡೋದಕ್ಕೆ ಒಂದು ರೀತಿ ಖುಷಿ ಅನ್ಸುತ್ತೆ. ನಮ್ಮ ಊರಿಗೆ ನಾವು ಟೈಮ್ ಸಿಕ್ಕಾಗ ಕೊಡೋ ಭೇಟಿಯನ್ನು ಯಾರಾದ್ರೂ ಪ್ರವಾಸ ಅಂತ ಕರೀತಾರೇನು? ಅದು ಯಾವತ್ತಿದ್ದರೂ ಋಣ ಕರ್ಮಗಳಿಗೆ ಅಂಟಿಕೊಂಡಂತ ಒಂದು ಬಂಧನ, ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಯಾವುದೋ ಒಂದು ಹೆಸರಿನಿಂದ ಕರೆಯಲೇ ಬೇಕು ಅಂತಾದರೆ ಅದನ್ನು "ಭೇಟಿ" ಎಂದು ಕರೆಯೋಣ, ಅದು ನನ್ನ ಮಟ್ಟಿಗೆ ಪ್ರವಾಸವಂತೂ ಖಂಡಿತ ಅಲ್ಲ. ಇಲ್ಲಿಂದ ಅಲ್ಲಿಗೆ ಹೋಗಿ ಮತ್ತಿನ್ಯಾವುದಾದರೂ ಯಾತ್ರಾ ಸ್ಥಳಗಳಿಗೋ ಪ್ರೇಕ್ಷಣೀಯ ಸ್ಥಾಣಗಳಿಗೋ ಹೋಗಿ ಬಂದರೆ ಅದಾದರೂ ಪ್ರವಾಸವಾದೀತು, ನಮ್ಮದೇನಿದ್ದರೂ ಏರ್‌ಪೋರ್ಟಿನಿಂದ ಮನೆ, ಮನೆಯಿಂದ ಏರ್‌ಪೋರ್ಟ್ ಅನ್ನಬಹುದು ಅಷ್ಟೇ.

’ಸಾಕಪ್ಪಾ ಸಾಕು ಆ ಗುಂಡಿ ರಸ್ತೆಗಳು...’, ’ಸಾಕಪ್ಪಾ ಆ ಟ್ರಾಫಿಕ್ ಜ್ಯಾಮು...’ ಎಂದು ಮೂಗೆಳೆಯುವವರಿಗಂತೂ ನನ್ನ ಹತ್ತಿರ ಸಿದ್ಧ ಉತ್ತರವಿದೆ. ’ಮತ್ತಿನೇನನ್ನು ತಾನೇ ನಿರೀಕ್ಷಿಸಬಲ್ಲಿರಿ? ಬದಲಾದವರು ನೀವು ಹಾಗೂ ನಿಮ್ಮ ನಿಲುವು, ನೀವು ಬದಲಾದ ಮಾತ್ರಕ್ಕೆ ಪ್ರಪಂಚವೇ ಬದಲಾಗಬೇಕೇನು? ನೀವು ಅಮೇರಿಕದವರು ಸ್ವಿಟ್ಜರ್‌ಲೆಂಡ್ ಹೋಗಿ ಬಂದಾಕ್ಷಣ ಅಲ್ಲಿಯವರ ಹಾಗೆ ಸಮಯ ಪಾಲಿಸುತ್ತೀರೇನು?’ ನಮ್ಮ ದೇಶ ಬಡ ದೇಶವಾಗಿತ್ತು, ಈಗ ನಿಧಾನವಾಗಿ ಅಭಿವೃದ್ಧಿಯ ಹಂತಕ್ಕೆ ಕಾಲಿಡುತ್ತಿದೆ. ನಾವು ಹಾಗೂ ನಮ್ಮ ತತ್ವಗಳು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವವು, ರಾತ್ರೋ ರಾತ್ರಿ ಕಾನೂನನ್ನು ಸೃಷ್ಟಿಸಿ ಅದನ್ನು ಎಲ್ಲರು ನಾಳೆಯಿಂದ ಪಾಲಿಸಿ ಎನ್ನಲು ನಮ್ಮದು ಸರ್ವಾಧಿಕಾರಿ ಸರ್ಕಾರವಂತೂ ಅಲ್ಲ. ರಸ್ತೆಯ ಮೇಲೆ ಉದ್ದಾನುದ್ದಕೂ ಲೇನ್‌ಗಳನ್ನು ಎಳೆದುಕೊಂಡ ಮಾತ್ರಕ್ಕೆ ಅದನ್ನು ಎಲ್ಲರೂ ಪಾಲಿಸಬೇಕು ಎನ್ನುವ ನಿಯಮವನ್ನು ಎಲ್ಲರೂ ಅನುಕರಿಸಿದ್ದೇ ಆದರೆ ಟ್ರಾಫಿಕ್ ಲೈಟ್‌ನಿಂದ ಹಿಡಿದು ರಸ್ತೆಯ ಉದ್ದಾನುದ್ದಕ್ಕೂ, ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅವೇ ದೇಶ, ಅವೇ ರಸ್ತೆಗಳು ಆದರೆ ದಿನೇ-ದಿನೇ ಹಿಗ್ಗುತ್ತಿರುವ ಜನಸಂಖ್ಯೆ ಮತ್ತು ಅದರ ಡಿಮ್ಯಾಂಡುಗಳಿಗೆ ಸ್ಪಂದಿಸೋದಕ್ಕೆ ಆ ಹಳೆಯ ಇನ್‌ಪ್ರಾಸ್ಟ್ರಕ್ಚರ್ರಿನಿಂದ ಹೇಗಾದರೂ ಸಾಧ್ಯವಿದೆ ಹೇಳಿ?

***

ಅಮೇರಿಕದಿಂದ ಭಾರತಕ್ಕೆ ಬಂದು ಲ್ಯಾಂಡ್ ಆಗುವ ವಿಮಾನಗಳು ಹಾಗೂ ಭಾರತವನ್ನು ಬಿಟ್ಟು ಹೊರಡುವ ವಿಮಾನಗಳು ಮಧ್ಯರಾತ್ರಿಯ ನಂತರ ಹಾಗೂ ಬ್ರಾಹ್ಮೀ ಮಹೂರ್ತಕ್ಕೆ ಮುಂಚೆ ಏಕೆ ಬಂದು ಹೋಗುತ್ತವೆ ಎಂದು ಯೋಚಿಸಿದ್ದಕ್ಕೆ ಈ ಸಾರಿ ಉತ್ತರ ಸಿಕ್ಕಿತು. ನಮ್ಮಂತೆ ದೇಶವನ್ನು ಅದೆಷ್ಟೋ ವರ್ಷಗಳ ನಂತರ ಅರಸಿ ಬಂದವರಿಗೆ ಏಕ್‌ದಂ ಭ್ರಮನಿರಸನವಾಗಬಾರದಲ್ಲ ಅದಕ್ಕೆ. ಉದಾಹರಣೆಗೆ ಚಿಕಾಗೋದಿಂದ ಹೊರಟ ವಿಮಾನ ಸರಿ ಬೆಳಗ್ಗೆ ಒಂಭತ್ತು ಘಂಟೆಗೆ ಬೆಂಗಳೂರನ್ನು ತಲುಪಿತು ಎಂದುಕೊಳ್ಳಿ, ಅಲ್ಲಿನ ಪೀಕ್ ಅವರ್ ನಲ್ಲಿ ನೀವು ಆ ದಿನ ಮನೆ ಸೇರುವಾಗ ಅದೆಷ್ಟು ಹೊತ್ತಾಗುತ್ತೋ ಯಾರು ಬಲ್ಲರು? ನಿಮಗೆ ಎದಿರಾಗಿ ದಿಢೀರನೆ ಉದ್ಭವಿಸೋ ಮುಷ್ಕರ ಮೆರವಣಿಗೆಗಳಿರಬಹುದು, ಯಾರೋ ಸತ್ತರು ಎಂದು ತೂರಿ ಬರುವ ಕಲ್ಲುಗಳಿಗೆ ಆಹುತಿಯಾಗುವ ಗಾಜಿನ ತುಣುಕುಗಳಿರಬಹುದು ಅಥವಾ ಸಾಮಾನ್ಯ ಟ್ರಾಫಿಕ್ಕ್ ಜಾಮೇ ನಿಮ್ಮನ್ನು ಮೊದಲ ದಿನವೇ ಹೈರಾಣಾಗಿಸಿಬಿಡಬಹುದು. ಇಲ್ಲಿ ಬರುವಾಗ ಅದೇನೇನೋ ಕನಸುಗಳನ್ನು ಕಟ್ಟಿಕೊಂಡ ನಮಗೆ ಇಲ್ಲಿ ಬರುವ ಅವಕಾಶ ಅವಸ್ಥೆಗಳೆಲ್ಲ ಒಂದು ರೀತಿಯ ಓಪನ್ ಎಂಡೆಡ್ ಪ್ರಶ್ನೆಗಳ ಥರ, ಅದೇ ಇಲ್ಲಿಂದ ಅಲ್ಲಿಗೆ ಹೋದಾಗ ನಮ್ಮ ನಿರೀಕ್ಷೆ ಮತ್ತು ನಮಗಾಗೂ ನಿರಾಶೆಗಳ ಮೂಲವೇ ಬೇರೆ.

ಪಲಾಯನವಾದ ಅನ್ನೋದು ನಮ್ಮ ಹೆಸರುಗಳಿಗೆ ನಮ್ಮ ಪ್ರತಿಭೆಗೆ ಮಾತ್ರ ಅಂಟಿದ್ದಲ್ಲ, ನಾವು ನಮ್ಮ ಮ್ಯಾನೇಜ್‌ಮೆಂಟಿನ ಸ್ಥರಗಳಲ್ಲಿ ನಮ್ಮ ಅನುಭವಗಳನ್ನು ವಿಸ್ತರಿಸಿಕೊಂಡ ಹಾಗೆಲ್ಲ ದುತ್ತನೆ ಎದುರಾಗುವ ಸಮಸ್ಯೆಗಳಿಗೆ ಥಟ್ಟನೆ ಉತ್ತರ ಹೇಳುವಲ್ಲಿ ಸೋತು ಹೋಗುತ್ತೇವೇನೋ ಅನ್ನಿಸುತ್ತದೆ. ಎಂಥ ವಾಜ್ಞಿ ರಾಜಕಾರಣಿ ಅಧಿಕಾರಕ್ಕೆ ಬಂದರೂ ಮುಂದೆ ಪಬ್ಲಿಕ್ ಸ್ಟೇಟ್‌ಮೆಂಟ್ ಕೊಡೋವಾಗ ಪದಗಳ ನಂತರ ಪದಗಳನ್ನು ಹುಷಾರಾಗಿ ಪೋಣಿಸಿ ವಾಕ್ಯಗಳನ್ನು ರಚಿಸುವಂತೆ ಭಾರತದಲ್ಲಿ ಎದಿರಾಗೋ ಸಮಸ್ಯೆಗಳಿಗೆ ಅಮೇರಿಕದಿಂದ ಹೋದೋರು ಸ್ಪಂದಿಸೋದು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಓರಗೆಯವರ ಬ್ಯಾಂಕ್‌ ಬ್ಯಾಲೆನ್ಸಿಗಿಂತ ನಮ್ಮದು ತುಸು ಹೆಚ್ಚಿರಬಹುದು ಎನ್ನುವಲ್ಲಿ ನಾವೇ ಮುಂದೇ ಹೊರತು ಅಲ್ಲಿಯ ಆಗು ಹೋಗುಗಳಿಗೆ ನಿಜವಾಗಿ ಸ್ಪಂದಿಸೋದಕ್ಕೆ ನಮ್ಮಿಂದ ಸಾಧ್ಯವೇ? ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದು ಸ್ಥಳೀಯ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಹೋಗಿ ಅಥವಾ ಕೈಲಾದರೆ ಪ್ರೈವೇಟ್ ನರ್ಸಿಂಗ್ ಹೋಮ್‌ಗಳಲ್ಲಿ ಟ್ರೀಟ್‌ಮೆಂಟ್ ಕೊಡಿಸಿ ನೋಡಿ, ಅಲ್ಲಿಯ ಚಲನವಲನ (ಲಾಜಿಸ್ಟಿಕ್ಸ್)ಗಳಿಗೆ ನಮ್ಮಿಂದ ಹೊಂದಿಕೊಳ್ಳೋದಕ್ಕೆ ಇನ್ನೊಂದು ದಶಕವೇ ಬೇಕು ಎನ್ನಿಸುತ್ತೆ ಕೆಲವೊಮ್ಮೆ. ಇಲ್ಲಿಯ ವೇಷವನ್ನು ಕಳಚಿ ಕ್ರಮೇಣ ಅಲ್ಲಿಯವರಾದಂತೆ ನಟಿಸಿದರೂ ನಮ್ಮೊಳಗಿನ ಭಿನ್ನ ಮನ ಸದಾ ಬದಲಾವಣೆಯನ್ನು ನಿರೀಕ್ಷಿಸುತ್ತದೆ, ಆದರೆ ಅಲ್ಲಿಯ ವ್ಯವಸ್ಥೆ ಮನೋ ವೇಗಕ್ಕೆ (ಅಥವಾ ರೋಗಕ್ಕೆ) ಸ್ಪಂದಿಸೋದಾದರೂ ಹೇಗೆ ಸಾಧ್ಯ?

ನಮ್ಮ ಕೈಯಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ - ಒಂದು ಹೊತ್ತು ಉಂಡರೆ ಮತ್ತೊಂದು ಹೊತ್ತು ಊಟದ ಬಗ್ಗೆ ಕೊರಗುವ ನಾಗರಿಕತೆ ಇರುವಾಗ, ನಮ್ಮ ಸಂಪನ್ಮೂಲ ಸ್ತೀಮಿತವಾಗುತ್ತದೆ. ನಾವು ನಿರೀಕ್ಷಿಸುವ ಬದಲಾವಣೆಗಳು ಲಾರ್ಜ್‌ಸ್ಕೇಲ್‌ನಲ್ಲಿ ಇಂಪ್ಲಿಮೆಂಟ್ ಮಾಡಲಾಗದ ಪುಸ್ತಕದ ಬದನೆಕಾಯಿಯಾಗುತ್ತದೆ. ದಿನೇ-ದಿನೇ ಉಳ್ಳವರ-ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಾ ಹೋಗುತ್ತಿರುವಾಗ ನಮ್ಮ ಧನಾತ್ಮಕ ಆಲೋಚನೆಗಳು ಮುರಿದು ಹೋದ ಚಿಕ್ಕ ಮರದ ತುಂಡನ್ನು ಅಂಟಿಸೋ ಗೋಂದಾಗುತ್ತದೆಯೇ ಹೊರತು ಅದು ದೊಡ್ಡ ಪ್ರಮಾಣದ ಬಂಧನವಾಗೋದಿಲ್ಲ. ನಾವು ಎಲ್ಲವನ್ನು ಮಾಡಲಾಗದಿದ್ದರೂ ನಮ್ಮ ಮನಸ್ಸಿನಲ್ಲಿರುವ ಕ್ವಾಲಿಟಿಗೆ ತಕ್ಕಂತೆ ಎಲ್ಲರಿಂದ ಕೆಲಸವನ್ನು ನಿರೀಕ್ಷಿಸುವುದು ಇನ್ನೂ ಕಷ್ಟದ ಮಾತೇ. ಬೆಂಗಳೂರಿನಲ್ಲಿ ಮನೆ ಕೆಲಸದವರ ಜೊತೆ ಏಗಿ ಸರಿಯಾಗಿ ಪಾತ್ರೆ ತೊಳೆಸಿಕೊಂಡು ಬಟ್ಟೆ ಒಗೆಸಿಕೊಂಡು ನೆಲವನ್ನು ಸ್ವಚ್ಛವಾಗಿಸಿಕೊಳ್ಳುವುದಕ್ಕೆ ಪೀಪಲ್ ಮ್ಯಾನೇಜ್‌ಮೆಂಟಿನಲ್ಲಿ ಹೊಸ ಡಿಗ್ರಿ ಬೇಕಾಗುತ್ತದೆ. ಆಳು ಮಾಡಿದ್ದು ಹಾಳು...ಅಂತಹ ಹಾಳು ಕೆಲಸದ ನಡುವೆ ನಮ್ಮ ಬದುಕನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವಾಗ ಮೈಕ್ರೋ-ಮಿನಿ ಮ್ಯಾನೇಜುಮೆಂಟುಗಳಿಗೆ ಜೋತು ಬೀಳಬೇಕಾಗುತ್ತದೆ.

***

ಭಾರತಕ್ಕೆ ಹೋಗಿ ಬರೋ ಅನುಭವ ಪ್ರವಾಸವಲ್ಲ, ಅದು ಒಂದು ದರ್ಶನ, ಒಂದು ವಾತಾವರಣದಲ್ಲಿ ಪಕ್ವಗೊಂಡ ಮನಸ್ಸು ಮತ್ತೊಂದು ವಾತಾವರಣದಲ್ಲಿ ಬೆರೆಯುವ ಯೋಗ, ತಾಯ ಮಡಿಲನ್ನು ಸೇರಿ ಹಾಯಾಗಿ ಕಣ್ಮುಚ್ಚಿ ಮಲಗುವ ಮಗುವಿಗೆ ದೊರೆತ ಒಂದು ಅವಕಾಶ. ಸಮಸ್ಯೆಗಳು ಎಲ್ಲಿಲ್ಲ, ಹಾಗಿರುವಾಗ ನಾವು ಹೋದಲೆಲ್ಲ ಸುತ್ತಲಿನ ಕೊಳೆಯನ್ನು ಮಾತ್ರ ನೋಡಿಕೊಂಡು "ಶಿಟ್" ಎಂದು ಮೂಗು ಸಿಂಡರಿಸಿದಾಕ್ಷಣ ಅಲ್ಲಿಯದೇನೂ ಬದಲಾಗೋದಿಲ್ಲ. ಬದಲಾವಣೆ ಎಲ್ಲ ಕಡೆಗಿದೆ, ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಬದಲಾವಣೆಗೊಳಪಟ್ಟ ನಮ್ಮ ಮನಸ್ಸು ಎಲ್ಲ ಕಡೆ ಅದನ್ನೇ ನಿರೀಕ್ಷಿಸಿದರೆ ಅದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ನಮ್ಮ ಆಫೀಸಿನಿಂದ ಬಿಸಿನೆಸ್ ಗೋಸ್ಕರ ಹೋಗುವವರಿಗೆ ನಾನು ಹೇಳೋದು ಇಷ್ಟೇ: ’ಅಲ್ಲಿ ಬೇಕಾದಷ್ಟು ಸಂಸ್ಕೃತಿಗಳಿವೆ, ಒಂದು ಬಿಲಿಯನ್ನ್‌ಗಿಂತಲೂ ಹೆಚ್ಚು ಜನರಿದ್ದಾರೆ, ದೊಡ್ಡ ಸಾಗರವನ್ನು ನೋಡೋ ಹಾಗೆ ನೋಡಿ, ಅದನ್ನು ಬಿಟ್ಟು ಆಗಾಗ್ಗೆ ಬರುವ ಅಲೆಗಳಿಗೆ ತಲೆಕೆಡಿಸಿಕೊಳ್ಳಬೇಡಿ!"

Thursday, January 07, 2010

ಲಘುವಾಗೆಲೆ ಅನಿವಾಸಿ ಮನ...

ನವೆಂಬರ್ ೧೩ ರಂದು ಬರೆದ ’ಗೆಲುವಾಗೆಲೆ ಅನಿವಾಸಿ ಮನ...’ಬರಹಕ್ಕೆ ಪೂರಕವಾಗಿ ಈ ಲೇಖನ. ನವೆಂಬರ್ ೧೩ ನಾವು ಭಾರತಕ್ಕೆ ವೆಕೇಷನ್ನ್ ಹೋಗೋದರ ಹಿಂದಿನ ದಿನ, ಹಲವಾರು ಕೆಲಸಗಳ ನಡುವೆಯೂ ನಾನು ಮೂರು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿರೋ ಭಾರತ ಈಗ ಹೇಗಿರಬಹುದು, ಏನೇನೆಲ್ಲ ಬದಲಾವಣೆಗಳಾಗಿರಬಹುದು...ಎಂದು ಯೋಚಿಸಿಕೊಳ್ಳುತ್ತಲೇ ಇಲ್ಲಿ-ಅಲ್ಲಿಯ ತವಕಗಳ ಎರಡು ಚಿತ್ರಗಳನ್ನು ತರಾತುರಿಯಾಗಿ ಕಕ್ಕಿ ಕೊಂಡು ಆ ಲೇಖನವನ್ನು ಬರೆದು ಮುಗಿಸಿದ್ದಾಯಿತು. ಈಗ ಭಾರತದ ವೆಕೇಷನ್ನ್ ಮುಗಿಸಿ ಹಿಂತಿರುಗಿ ಬಂದ ಮೇಲೆ ಹಾಗೂ ಸುಧಾರಿಸಿಕೊಂಡ ಮೇಲೆ ನನ್ನ ಅನುಭವಗಳನ್ನು ಹೊರಹಾಕಿ ಮತ್ತೊಂದು ಲೇಖನವನ್ನು ಬರೆಯಬೇಕು ಎನ್ನುವ ಆಶಯದ ಫಲವೇ ಇದು.

ಈ ಬದುಕು-ಬವಣೆಗಳು ಅದೇನೇ ಕಷ್ಟವನ್ನು ತಂದು ಒಡ್ಡಲಿ, ಜಾಗತೀಕರಣದ ಪರಿಣಾಮಗಳು ಎಷ್ಟು ದೂರ ಬೇಕಾದರೂ ಪಸರಿಸಿಕೊಂಡಿರಲಿ ನಮ್ಮ ಊರು ನಮ್ಮ ದೇಶ ನಮ್ಮ ಮನೆ...ಇವೆಲ್ಲವೂ ಎಂದಿಗೂ ಅಪ್ಯಾಯಮಾನವೇ. ನನ್ನೊಳಗೆ ಹುದುಗಿರುವ ಫಾಸಿಟಿವ್ ಸ್ಪಿರಿಟ್ಸ್ ಈ ವಿಚಾರದಲ್ಲಿ ನೆಗೆಟಿವ್ ಎಂದೂ ಆಗಲು ಸಾಧ್ಯವಿಲ್ಲ!

***

ತೊಂಭತ್ತರ ಮಧ್ಯೆ ಹಾಗೂ ಕೊನೆಯಲ್ಲಿ ಪ್ರಪಂಚವನ್ನು ಅರಸುತ್ತಾ ಬಂದಂತಹ ನನ್ನಂಥ ಟೆಕ್ಕಿಗಳಿಗೆ (ಅಂದಿನ ಕಾಲದ ಹೆಸರು) ನಮ್ಮ ಅಗತ್ಯಗಳು ಬೇರೆಯಾಗಿದ್ದವು. ಜೇಬಿನಲ್ಲಿ ಮೂರು ಸಾವಿರ ಡಾಲರ್ ಇಟ್ಟುಕೊಂಡು ಬಂದು ನೆವರ್ಕ್ ಲಿಬರ್ಟಿ ಏರ್‌ಪೋರ್ಟಿನಲ್ಲಿ ಇಳಿದ ನನ್ನ ಹಾಗಿನವರಿಗೆ ಅವರ ದೃಷ್ಟಿಕೋನ ಬೇರೆಯಾಗಿತ್ತು. Y2K ಮುಗಿದು, ಮತ್ತೊಂದು ದಶಕವೂ ಕಳೆದು ಹೋಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಇಲ್ಲಿನ ಪೈಪೋಟಿಗೆ ಏಗಿ-ಬೇಗಿ ಹಾಗೂ ಇಲ್ಲಿನ ಸಂಪನ್ಮೂಲಗಳನ್ನುಂಡು ನಮ್ಮ ಬೆಳವಣಿಗೆ ಬೇರೆ ರೀತಿಯದ್ದೇ ಆಗಿದೆ. ನನ್ನ ಜೊತೆಯವರು, ವಾರಗೆಯವರು ಇಲ್ಲಿಗೆ ಬಂದು ಈಗಾಗಲೇ ಅಮೇರಿಕನ್ ಸಿಟಿಜನ್ನ್ ಪಟ್ಟಕಟ್ಟಿಕೊಂಡಿರಬಹುದಾದ ಸಮಯದಲ್ಲಿ ಸೇಫ್‌ನಲ್ಲಿರುವ ನನ್ನ ಭಾರತದ ಪಾಸ್‌ಪೋರ್ಟ್ ಯಾವತ್ತೋ ಒಮ್ಮೆ ಭಾರತಕ್ಕೆ ಹೋಗಿ ತಿಣುಕುವ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ ಎಂದೇ ಹೇಳಬೇಕು. ಸೋಜಿಗದ ವಿಷಯವೆಂದರೆ ನಾವು ಬದಲಾದಂತೆ ನಮ್ಮ ಹಳೆಯ ಪಾಸ್‌ಪೋರ್ಟಿನಲ್ಲಿರುವ ಚಿತ್ರವಾಗಲೀ ಮಾಹಿತಿಯಾಗಲೀ ಬದಲಾಗುವುದೇ ಇಲ್ಲ, ಅವು ಯಾವತ್ತಿದ್ದರೂ ’ನಾನೇ’ ಎನ್ನುವ ಚಿರಂತನ ಪ್ರತಿಮೆಯನ್ನು ಎತ್ತಿ ತೋರಿಸುವ ಮಾಧ್ಯಮ.

ಈ ಒಂದು ದಶಕದಲ್ಲಿ ಬೇಕಾದಷ್ಟಾಗಿದೆ: ನಮ್ಮ ಸ್ಪ್ರೆಡ್‌ಶೀಟು, ಗ್ರಾಫು, ನಂಬರುಗಳು ತಮ್ಮನ್ನು ತಾವು ನಮ್ಮ ಎದುರು ತೋರಿಸಿಕೊಂಡು ನಮ್ಮನ್ನು ಲೇವಡಿ ಮಾಡುವ ಪರಿಸ್ಥಿತಿಯೂ ಬಂದು ಹೋಗಿದೆ. ಈ ಒಂದು ದಶಕದಲ್ಲಿ ಮಾರ್ಕೆಟ್ಟಿನ ಮುಖ್ಯ ಮೂರು ಏಳು ಬೀಳುಗಳ ಕೃಪೆಯಿಂದಾಗಿ - ಡಾಟ್ ಕಾಮ್, ರಿಯಲ್ ಎಸ್ಟೇಟ್ ಹಾಗೂ ಕ್ರೆಡಿಟ್ ಕ್ರಂಚ್ - ನಮ್ಮ ದುಡಿಮೆಯ ಫಲ ಸ್ಟ್ರೆಸ್ಸಿಗೆ ಒಳಗಾಗಿದೆ, ನಮ್ಮ ಹೂಡಿಕೆಯ ಹಣ ಇನ್‌ಫ್ಲೇಷನ್ನಿನ ಎದುರು ತಲೆ ತಗ್ಗಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇವೆಲ್ಲದರ ಜೊತೆಗೆ ಸೆಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕತನ ನನ್ನಂಥ ಅನಿವಾಸಿಗಳಿಗೆ ಸಾಕಷ್ಟು ಕಷ್ಟ ಸುಖದ ದರ್ಶನ ಮಾಡಿಸಿದೆ.

’ವಿಜಯ ಕರ್ನಾಟಕ’ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ "Take it easy...ಟೆಕ್ಕಿ" ಲೇಖನಗಳು ನ್ಯೂಕ್ಲಿಯರ್ ಕುಟುಂಬಗಳ ಬವಣೆಯನ್ನು ಒಂದು ಹೆಜ್ಜೆ ಮುಂದುವರೆದು ರಸ್ತೆ ಮೇಲೆ ಬಿಸಾಡಿ ಮಾನ ಕಳೆದಿವೆ, ಆಧುನಿಕ ಕುಟುಂಬಗಳಲ್ಲಿನ ಇರಿಸು-ಮುರಿಸುಗಳು ಮನ-ಮನೆಯನ್ನು ಮುರಿಯುವ ಪ್ರಸಂಗಗಳನ್ನು ಲೇವಡಿ ಮಾಡಿವೆ. ಈ ನ್ಯೂಕ್ಲಿಯರ್ ಕುಟುಂಬಗಳ ಕ್ಲೀಷೆಗಳು ಮೈನ್‌ಸ್ಟ್ರೀಮ್ ಸಮಾಜಕ್ಕೆ ಗೊತ್ತೇ ಆಗದೇ ಒಂದು ದಶಕ ಉರುಳಿ ಹೋಗಿದ್ದು ವಿಪರ್ಯಾಸ. ’ನಮ್ಮ ಮಗ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಾನೆ...’ ಎನ್ನುವುದರ ಹಿಂದೆ ಬಳುವಳಿಯಾಗಿ ಬರುವ ಫಲಾಫಲಗಳನ್ನು ದೂರದ ತಂದೆ-ತಾಯಿಯರು ಯಾಕೆ ಗುರುತಿಸುವುದರಲ್ಲಿ ಸೊರಗಿ ಹೋದರೋ? ನನ್ನ ಹಾಗೆ ಹೆಚ್ಚಿನವರು ಇಲ್ಲಿ ಬಂದೇ ಕುಟುಂಬವನ್ನು ಆರಂಭಿಸಿದ್ದು ನಿಜವಾದರೆ ನಮಗೆಲ್ಲ ಸಹಬಾಳ್ವೆ ಎನ್ನೋದರ ಪರಿಕಲ್ಪನೆಯೇ ಇಲ್ಲ ಎನ್ನಬೇಕು. ನಾವು ಪರಿವಾರದವರೊಟ್ಟಿಗೆ ಮದುವೆ-ಮುಂಜಿಗಳಲ್ಲಿ ಭಾಗವಹಿಸೋದಿಲ್ಲ, ವಾರದ ದಿನಗಳನ್ನು ಒಂದು ರೀತಿ, ವಾರಾಂತ್ಯವನ್ನು ಮತ್ತೊಂದು ರೀತಿಯಲ್ಲಿ ಉರುಳಿಸಿ ವಾರ-ವರ್ಷಗಳನ್ನು ಕಳೆಯುವ ನಮಗೆ ಅವಿಭಾಜ್ಯ ಕುಟುಂಬಗಳ ಕಷ್ಟಗಳು ಹತ್ತಿರ ಸಹ ಸುಳಿಯೋದಿಲ್ಲ. ಸಹೋದರ-ಸಹೋದರಿ, ನಾದಿನಿ, ಮೈದುನ, ಅತ್ತೆ-ಮಾವ, ತಂದೆ-ತಾಯಿ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮಗಳ "interference" ನಮ್ಮ ಕುಟುಂಬಗಳಿಗಿರೋದಿಲ್ಲ. ನಮ್ಮ ಮಕ್ಕಳ ಡೈಪರ್ರ್ ತೆಗೆದು ತೊಳೆಯೋದು, ಅವರ ಯೋಗ-ಕ್ಷೇಮ ನೋಡಿಕೊಳ್ಳೋದು ನಮ್ಮ ದಿನನಿತ್ಯದ ಸಾಧನೆಗಳಲ್ಲೊಂದು. ನಾವು ನಮ್ಮ ಖರ್ಚನ್ನು ಮೀರಿ ಕೂಡಿಸೋ ಹಣ ಕೆಲವರಿಗೆ ಒಂದು ರೀತಿಯಲ್ಲಿ ನಾಯಿ ಮೊಲೆಯ ಹಾಲು - ಅದು ಬಹಳಷ್ಟು ಸಾರಿ ನೆರೆಹೊರೆಯ ಕಷ್ಟಗಳಿಗೆ ಸ್ಪಂದಿಸಿರಲಾರದು, ಹಾಗೆ ಕೂಡಿಟ್ಟ ಹಣ ಭದ್ರತೆಯಿದ್ದರೂ ಅದರ ಜೊತೆ ಅಸಹಾಯಕತೆಯನ್ನೂ ಸೇರಿಸಿಕೊಂಡಿರುತ್ತದೆ. ಹಾಗೆ ಸೇರಿಕೊಂಡ ಡಾಲರ್ ಹಣ ಇಲ್ಲಿಯ ಮಿಡ್ಲ್‌ಕ್ಲಾಸ್ ಮಟ್ಟದ್ದಿದ್ದರೂ ಅದು ಭಾರತದ ರೂಪಾಯಿಗೆ ಬದಲಾದಾಗ ಒಂದು ಹೊಸ ಅರ್ಥ ಪಡೆದುಕೊಳ್ಳುತ್ತದೆಯೇ ಹೊರತು ಕ್ಲಾಸ್ ವಿಚಾರದಲ್ಲಿ ಹೆಚ್ಚು ಬದಲಾವಣೆ ಆಗೋದಿಲ್ಲ.

***

ಯಾಕೆ ಭಾರತಕ್ಕೆ ಹಿಂತಿರುಗಿ ಹೋಗಬೇಕು? ಎನ್ನುವ ಆಲೋಚನೆಗಳು ಒಂದು ದಶಕದ ನಂತರ ಆಗಾಗ್ಗೆ ನಾಯಿಕೊಡೆಗಳಂತೆ ತಲೆ ಎತ್ತುವುದು ಸಾಮಾನ್ಯವಾಗುತ್ತದೆ. ಮೊದಲೆಲ್ಲ ಯಾವತ್ತು ಹೋದೇವೋ ಎನ್ನುವ ಆಲೋಚನೆಯೇ ರೋಮಾಂಚನವನ್ನು ಮೂಡಿಸುವಂತಹ ವಿಚಾರಗಳು ಈಗ ಹತ್ತಿರ ಸುಳಿಯೋದಿಲ್ಲ. ಅದರ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸುವ ಮನಸ್ಸು ಎಲ್ಲರಿಗಿಂತ ಮುಂದಾಗಿ ಭಾವನೆಗಳು ಹಾಗೂ ಸ್ಪಂದನಗಳೆಂಬ ಮೊದಲಾದ ಮನಸ್ಸಿನ ಲಘು ವಿಹಾರಗಳು ಕನಸಿಗೆ ಹತ್ತಿರವಾಗತೊಡಗುತ್ತವೆ. ಮೊದಲು ಎರಡು ಭುಜಗಳ ಜೊತೆಗೆ ಎರಡು ಸೂಟ್‌ಕೇಸ್ ಇಟ್ಟುಕೊಂಡು ಬಂದವರಿಗೆ ಸಂಸಾರದ ಹಲವಾರು ಇತರ ಭುಜಗಳ ಮತ್ತಿನ್ನೊಂದಿಷ್ಟು ಬ್ಯಾಗೇಜುಗಳು ಬೆನ್ನೇರುತ್ತವೆ. ಇಲ್ಲಿ ಇದ್ದೂ ಇಲ್ಲದವರ ಹಾಗೆ ಬದುಕಿ ಸುಸ್ತಾಗಿ ಹೋದ ಪರಿಣಾಮಕ್ಕೆ ನಮ್ಮ ಇಮ್ಮೂವಬೆಲ್ಲ್ ಅಸ್ಸೆಟ್ಟಿನ ಲಿಸ್ಟಿಗೆ ಇಲ್ಲಿಯ "ಮನೆ"ಯೂ ಸೇರಿಕೊಳ್ಳುತ್ತದೆ.

ಯಾಕೆ ಹೋಗಬೇಕು ಅನ್ನೋ ಪ್ರಶ್ನೆಗೆ ಒಂದೇ ಒಂದು ಬ್ರಹ್ಮಾಸ್ತ್ರದಂತಹ ಉತ್ತರವನ್ನು ನೀಡಬಹುದು - ಅದು ನಮ್ಮೂರಿನ ಹವಾಮಾನ. ಅಲ್ಲಿನವರಿಗೆ ಅದರ ಬೆಲೆ ಖಂಡಿತ ಗೊತ್ತಿಲ್ಲ ಬಿಡಿ. ನಾನಂತೂ ಡಿಸೆಂಬರಿನ ಅಲ್ಲಿನ ಛಳಿಗಾಲದ ರಾತ್ರಿ ಹಾಗೂ ಹಗಲು ಯಾವುದೇ ಹೀಟರ್ ಅಥವಾ ಏರ್‌ಕಂಡೀಷನರ್ ಇಲ್ಲದೇ ಕಳೆಯಬಹುದಾದಂಥ ಪರಿಸ್ಥಿತಿ ಯಾವತ್ತಿದ್ದರೂ ಮನಸ್ಸಿಗೆ ಮುದ ನೀಡುವ ಅನುಭವವೇ ಹೌದು. ಹವಾಮಾನದ ಜೊತೆಗೆ ನಮ್ಮವರು, ತಮ್ಮವರು, ನಮ್ಮಂತೇ ಇರುವವರು, ನಮ್ಮ ಜೊತೆ ಒಡನಾಡುವವರು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುವವರು - ಮೊದಲಾಗಿ ಇಡೀ ನಾಡನ್ನೇ ’ಯಾಕೆ ಹಿಂತಿರುಗಿ ಹೋಗಬೇಕು?’ ಎನ್ನುವ ಪ್ರಶ್ನೆಗೆ ಪಣವಾಗಿ ಒಡ್ಡಬಹುದು. ಆದರೆ ’ನಮ್ಮೂರು-ನಮ್ಮ ಜನ’ ಎನ್ನುವುದು ಪ್ಲಸ್ ಪಾಯಿಂಟ್ ಹೇಗೋ ಹಾಗೇ ಮೈನಸ್ಸ್ ಕೂಡ ಆಗಬಹುದು ಎನ್ನುವುದು ವಿಪರ್ಯಾಸವಲ್ಲದೇ ಮತ್ತಿನ್ನೇನು!

ಒಂದು ದಶಕಕ್ಕಿಂತ ಹೆಚ್ಚು ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಬದುಕಿಕೊಂಡಿದ್ದವರಿಗೆ (ಅಥವಾ ಅದನ್ನೇ ಬದುಕು ಎಂದು ನಂಬಿಕೊಂಡಿದ್ದವರಿಗೆ) ಧಿಡೀರನೇ ಮನೆಯ ಬಾಗಿಲನ್ನು ಬಡಿದು ಬರುವ ಅಥವಾ ಹಾಗೇ ಒಳನುಗ್ಗುವ ಬಂಧು-ಬಳಗದವರು ಅನಾಗರಿಕರಂತೆ ಕಂಡು ಬರಬಹುದು. ಅಥವಾ ಮದುವೆ-ಮುಂಜಿಗಳಲ್ಲಿ ನಾವು ಡಾಲರ್ ಮಹಾತ್ಮೆಯನ್ನು ಬಲ್ಲವರಾದರೂ ನಮ್ಮ ಎದುರೇ ಗುಲಗಂಜಿ ಬಂಗಾರಕ್ಕೆ ಕಿತ್ತು ತಿನ್ನುವ ಜಗಳವಾಗಬಹುದು. ’ನಾನು ಸತ್ತರೂ ನಿಮ್ಮ ಮನೆಯಲ್ಲಿ ನೀರು ಕುಡಿಯಲ್ಲ...’ ಎನ್ನುವ ವರಸೆಯೂ; ’ನೀನು ಯಾರ ಮನೆಗೆ ಹೋದ್ರೂ ಅವರ ಮನೆಗೆ ಮಾತ್ರ ಹೋಗಬೇಡ...’ ಎನ್ನುವ ಹಕ್ಕೀಕತ್ತೂ...ಹೀಗೆ ಅನೇಕಾನೇಕ ಅಗೋಚರ ಅವ್ಯಕ್ತ ಹಾಗೂ ಅಮೂರ್ತ ಮಾನವೀಯ ಸಂಬಂಧಗಳ ದರ್ಶನದ ಓವರ್‌ಲೋಡ್ ಆಗಿಬಿಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರ-ಪ್ರೈವಸಿ ಎಂಬುದರ ಬುಡವನ್ನೇ ಅಲುಗಾಡಿಸುವ ಘಟನೆಗಳು ನಡೆಯಬಹುದು. ಅಥವಾ ’ಬೆಂಡೇಕಾಯ್, ಸೋರೇಕಾಯ್...’ ಎಂದು ಬೀದಿಯಲ್ಲಿ ತರಕಾರಿ ಮಾರುವವರ ತಾರಕ ಸ್ವರದಿಂದ ಹಿಡಿದು ವಾಹನಗಳ ಹಾರ್ನ್‌ನಿಂದ ಕಮ್ಮ್ಯೂನಿಕೇಟ್ ಮಾಡುವ ಅಲ್ಲಿನ ವಾತಾವರಣ ಶಬ್ದಮಾಲಿನ್ಯವಾಗಿ ಕಾಡಬಹುದು. ಇವೆಲ್ಲದರ ಜೊತೆಯಲ್ಲಿ ಓವರ್‌ಲೋಡ್ ಆಗಿ ಓಡುವ ವಾಹನಗಳಿಂದ ಹಿಡಿದು ಲಂಗು-ಲಗಾಮಿಲ್ಲದ ಫ್ಯಾಕ್ಟರಿಗಳ ಹೊಗೆ ನಮಗೆ ಉಸಿರುಕಟ್ಟಿಸಬಹುದು. ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಈ ಹೆಚ್ಚಿನ ಜನಸಂಖ್ಯೆ ಯಾವುದೇ ಒಂದು ಸಮಸ್ಯೆಗೂ ಅದರದ್ದೇ ಆದ ಒಂದು ಹೊಸ ಆಯಾಮವನ್ನು ಸೃಷ್ಟಿಸಬಲ್ಲದು. ಹೀಗೇ...ಅನೇಕಾನೇಕ ನೆಗೆಟಿವ್ ಕಾಂಟೆಕ್ಸ್ಟ್‌ಗಳನ್ನು ತೋರಿಸಿದರೂ ಸಹ ’ವೆದರ್’ ಎನ್ನುವ ಒಂದೇ ಒಂದು ರಾಮಬಾಣಕ್ಕೆ ನಮ್ಮ ಊರನ್ನು ಕ್ಷಣಾರ್ಧದಲ್ಲಿ ಎಲ್ಲಕ್ಕಿಂತ ಹತ್ತಿರವಾಗಿಸಬಲ್ಲ ಶಕ್ತಿ ಇರುವುದಂತೂ ನಿಜ.

ಕೇವಲ ಹವಾಮಾನದ ಬಗ್ಗೆ ನ್ಯೂ ಜೆರ್ಸಿಯಲ್ಲಿ ಈ ಕಡುವಿಂಟರಿನ ನಡುವೆ ಬೆಚ್ಚಗೆ ಕುಳಿತು ಬರೆಯೋದು ದೊಡ್ಡ ವಿಷಯವಲ್ಲ. ಜೊತೆಗೆ ನಾರ್ಥ್ ಈಸ್ಟ್ ಬಿಟ್ಟು ಈ ದೇಶದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೋಡಿದರೆ ಅಲ್ಲಿ ಇಷ್ಟು ಕೆಟ್ಟ ಹವಾಮಾನ ಇಲ್ಲ. ವಾರ್ಮರ್ ಕ್ಲೈಮೇಟ್ ಬೇಕು ಎಂದರೆ ಫ್ಲೋರಿಡಾಗೆ ಹೋದರೆ ಆಗದೇ? ಬಹಳ ಸುಲಭವಾದ ಪ್ರಶ್ನೆ ಆದರೆ ಅದಕ್ಕೆ ಉತ್ತರ ಅಷ್ಟೊಂದು ಸುಲಭವಲ್ಲ. ಪ್ರತೀವರ್ಷ ಹರಿಕೇನ್‌ಗಳು ಬಂದರೂ, ಸುಂಟರಗಾಳಿ ಸುಳಿದರೂ, ಏನೇ ಹಾನಿ ಆದರೂ ಎಷ್ಟೋ ಕುಟುಂಬಗಳು ಅದೇ ಪ್ರದೇಶದಲ್ಲಿ ನೆಲೆಸೋದಿಲ್ಲವೇನು? ವೆದರ್ ಒಂದೇ ಕಾರಣವೆಂದರೆ ಇವತ್ತು ವಿಂಡೀಸಿಟಿ ಶಿಕಾಗೋ ಈ ಛಳಿಗಾಲದಲ್ಲಿ ನಿರ್ಜನಪೀಡಿತವಾಗಬೇಕಿತ್ತು. ಪ್ರತೀವರ್ಷ ಆರು ಅಡಿಗಳಷ್ಟು ಸ್ನೋ ಬಂದ ಬಫೆಲೋ ನಗರದಿಂದ ಎಲ್ಲರೂ ಗುಳೇ ಹೊರಡಬೇಕಿತ್ತು...ಹಾಗಾಗೋದಿಲ್ಲ. ಕರ್ಮವನ್ನು ಅರಸಿಬಂದ ನಮಗೆ ಒಂದು ಒಳ್ಳೆಯ ಕೆಲಸ ಬೇಕು, ಅದರ ಜೊತೆಯಲ್ಲಿ ನಮಗೆ ಅನುಕೂಲಕರವಾದ ನೆರೆಹೊರೆ ಇರಬೇಕು, ಇತ್ಯಾದಿ ಇತ್ಯಾದಿ. ಇವೆಲ್ಲವನ್ನೂ ಮೀರಿ ಒಮ್ಮೆ ಯಾರಾದರೂ ಅಮೇರಿಕದ ನೆಲದಲ್ಲಿ ಬೇರು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಮತ್ತೆ ಇನ್ನೇಲ್ಲೋ ನೆಲೆಸುವುದು ಕಷ್ಟದ ಮಾತೆ ಸರಿ.

***

ನಾವು ಕೇವಲ ಕರ್ಮವನ್ನು ಅರಸಿಬಂದವರು, ಅದರ ಜೊತೆಯಲ್ಲಿ ಪ್ರಾಸ್ಪೆರಿಟಿ ಕೂಡ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ನಾವು ರಿಡಿಫೈನ್ ಮಾಡಬೇಕಾದ ಅಗತ್ಯವಿದೆ. ನಿಧಾನವಾಗಿ ಮುವತ್ತರ ಮಡಿಲಿನಿಂದ ಜಾರಿ ನಲವತ್ತರ ಹರೆಯಕ್ಕೆ ನನ್ನಂಥವರು ಬೀಳತೊಡಗುತ್ತೇವೆ. ಒಂದು ಕಾಲದಲ್ಲಿ ’ರಿಟೈರ್‌ಮೆಂಟ್ ಎಂದರೆ ನಮಗಲ್ಲ...’ ಎನ್ನುವ ಆಟಿಟ್ಯೂಡ್ ಇಟ್ಟುಕೊಂಡವರಿಗೆ ಈಗ ಮಾರ್ಕೆಟ್ಟುಗಳ ಏಳುಬೀಳುಗಳಲ್ಲಿ ಬಳಲಿದ ಮೇಲೆ ರಿಟೈರ್‌ಮೆಂಟ್ ಎನ್ನುವುದು ಮರೀಚಿಕೆಯಾಗದಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ. ನಮ್ಮ ಮಕ್ಕಳು ಬೆಳೆದು ದೊಡ್ಡವರಾದಂತೆ ನಮ್ಮ ಮೂಲ ಸಂಸ್ಕಾರ-ಸಂಸ್ಕೃತಿಗಳು ದಿನನಿತ್ಯದ ಅಗತ್ಯಗಳಲ್ಲೊಂದಾಗುತ್ತವೆ. ಹಣವನ್ನು ಕೂಡಿಡುವುದರ ಜೊತೆಗೆ ’ಇನ್ನು ಮುಂದೆ ಹೇಗೋ?’ ಎನ್ನುವ ಹೆದರಿಕೆ ಸೇರಿಕೊಂಡು ಕನ್ಸರ್‌ವೆಟಿವ್ ಮೈಂಡ್ ಜಾಗೃತವಾಗುತ್ತದೆ.

ಇವೆಲ್ಲ ಚಿಂತೆಗಳು ಯಾವತ್ತಿದ್ದರೂ ಇರೋವೆ, ದಿನೇದಿನೇ ಮನದಾಳದಲ್ಲಿ ಖಾಲಿಯಾಗುವ ದೂರದ ಭಾರತದ ನೆನಪು ನಾಸ್ಟಾಲ್ಜಿಯಾ ಆಗಿ ಹೋಗುತ್ತಾ ಸ್ಥಳೀಯ ಅನಿವಾಸಿ ಕರ್ಮಗಳು ಬೆನ್ನಿಗೆ ಅಂಟಿಕೊಂಡು ಹೊರೆ ಯಾವತ್ತಿಗೂ ತೂಕವಾಗೋದು ಇದ್ದೇ ಇದೆ, ಇವೆಲ್ಲದರ ನಡುವೆಯೂ ನಗುವ ಅಗತ್ಯವಿದೆ, ಸಹಜವಾಗಿ ಬದುಕುವ ತುಡಿತವಿದೆ. ಹಗುರವಾಗಬೇಕು, ಲಘುವಾಗಬೇಕು ಎಂದುಕೊಳ್ಳುತ್ತಾ ಅನಿವಾಸಿ ಮನ ಅಲ್ಲಿಯ ಹಳೆಯ ಹಾಗೂ ಇಲ್ಲಿಯ ಹೊಸ ತಲೆಮಾರುಗಳಿಗೆ ಬೆಸೆಯುವ ಕೊಂಡಿಯಾಗುತ್ತದೆ. ತನ್ನೊಳಗಿನ ತುಮುಲ-ತುಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಮುಂದಿನ ಸಂತತಿ ತನ್ನಂತಾಗದು ಎಂದು ಮಮ್ಮಲ ಮರಗುತ್ತದೆ, ಇವೆಲ್ಲದರ ಜೊತೆಯಲ್ಲಿ ಅಲ್ಲಿಯವರಿಗೆ ನಾವು "ಆಗಿ" ಬರಲಿಲ್ಲ ಎನ್ನುವ ಚಿಂತೆ ಕೊರೆಯತೊಡಗುತ್ತದೆ.

Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Tuesday, November 03, 2009

...there goes Jon Corzine!

ನ್ಯೂ ಜೆರ್ಸಿ ಅಂದರೆ ಡೆ‌ಮಾಕ್ರಟಿಕ್ ರಾಜ್ಯ - ಹತ್ತು ವರ್ಷಗಳಿಗಿಂತಲೂ ಹೆಚ್ಚು ಡೆಮಾಕ್ರಟಿಕ್ ಪಕ್ಷದವರು ಆಡಳಿತ ನಡೆಸಿಕೊಂಡು ಬಂದ ಸಂಭ್ರಮ ಇಂದು ಗವರ್ನರ್ ಜಾನ್ ಕಾರ್‌ಝೈನ್ ಎಲೆಕ್ಷನ್ನಿನ್ನಲ್ಲಿ ಸೋಲುವುದರೊಂದಿಗೆ ಕೊನೆಯಾಯಿತು ಅನ್ನಬಹುದು.

ನಮ್ಮಂಥವರು, ಅದೇ ಹಸಿರು ಕಾರ್ಡು ಫಲಾನುಭವಿಗಳು, ಇಲ್ಲಿ ಮತ ಚಲಾವಣೆ ನಡೆಸದಿದ್ದರೂ ರಾಜ್ಯದಾದ್ಯಂತ ನಡೆಯೋ ಚುನಾವಣೆಯ ವಿಚಾರಗಳನ್ನು ಬೇಡವೆಂದು ದೂರವಿರಿಸಿದರೂ ಅವುಗಳ ವಿಚಾರ ಒಂದಲ್ಲ ಒಂದು ರೀತಿಯಿಂದ ನಮ್ಮ ಮನ-ಮನೆಗಳಲ್ಲಿ ನುಸುಳುವುದು ಸಹಜ. ರಾಜ್ಯದ ಬಜೆಟ್, ನಿರುದ್ಯೋಗ, ಆದಾಯ ತೆರಿಗೆ, ಹೈವೇ ಸುಂಕ ಮೊದಲಾದವುಗಳು ಎಲ್ಲರಿಗೂ ಅನ್ವಯವಾಗುತ್ತವೆ.

ವಾಲ್‌ಸ್ಟ್ರೀಟ್ ಗುರು, ಗೋಲ್ಡ್‌ಮನ್ ಸ್ಯಾಕ್ಸ್‌ನ ಎಕ್ಸಿಕ್ಯೂಟಿವ್ ಎಂದೇ ಪ್ರಖ್ಯಾತಿಯಾಗಿದ್ದ ಜಾನ್ ಕಾರ್‌ಝೈನ್ ಕೇವಲ ವರ್ಷಕ್ಕೆ ಒಂದೇ ಒಂದು ಡಾಲರ್ ಸಂಬಳ ತೆಗೆದುಕೊಂಡು ಹೆಸರು ಮಾಡಿದ ಮನುಷ್ಯ. ಜಾನ್ ಪಕ್ಕದ ನ್ಯೂ ಯಾರ್ಕ್ ನಗರ ಮೇಯರ್ (ಮತ್ತೊಮ್ಮೆ ಮೂರನೇ ಟರ್ಮ್‌ಗೆ ಇಂದು ಆಯ್ಕೆಗೊಂಡ) ಮೈಕಲ್ ಬ್ಲೂಮ್‌ಬರ್ಗ್ ಥರ ಬಿಲಿಯುನರ್ ಅಲ್ಲದಿದ್ದರೂ ಮಲ್ಟಿ ಮಿಲಿಯನರ್ ಖಂಡಿತ ಹೌದು. ಅಂಥವರಿಗೆ ಈ ಗವರ್ನರ್‌ಗೆ ಕೊಡುವ ಸಂಬಳ ಯಾವ ಲೆಕ್ಕವೂ ಅಲ್ಲ. ಜಾನ್ ಕಾರ್‌ಝೈನ್‌ನ ಮಾತುಗಳನ್ನು ಕೇಳಿದರೆ, ಅದು ಯಾವುದೇ ಸಮಾರಂಭದಲ್ಲಿರಬಹುದು ಅಥವಾ ಎಲೆಕ್ಷನ್ನ್ ಕ್ಯಾಂಪೇನ್‌ನಲ್ಲಿರಬಹುದು, ಅವರು ಹಿಂದೆ ವಾಲ್‌ಸ್ಟ್ರೀಟ್‌ನಲ್ಲಿ ಒಬ್ಬ ಎಕ್ಸಿಕ್ಯೂಟಿವ್ ವರ್ಚಸ್ಸನ್ನು ಬಳಸಿಕೊಳ್ಳೋದಿಲ್ಲ ಅಥವ ತೋರಿಸಿಕೊಳ್ಳೋದಿಲ್ಲ ಎನ್ನೋದು ನನ್ನ ಅನಿಸಿಕೆ. ಜೊತೆಗೆ, ಒಬ್ಬ ಸೀಜನ್ಡ್ ರಾಜಕಾರಣಿಯ ಚಾಕಚಕ್ಯತೆ, ತಂತ್ರಗಳೂ ಅವರಿಗೆ ಈ ನಾಲ್ಕು ವರ್ಷಗಳಲ್ಲಿ ಸಿದ್ಧಿಸಿದ ಹಾಗೆ ಕಂಡುಬರಲಿಲ್ಲ.

ಐತಿಹಾಸಿಕವಾಗಿ ಹಾಲಿ ಗವರ್ನರ್ ಮರು ಎಲೆಕ್ಷನ್ನಿನ್ನಲ್ಲಿ ಸೋಲುವುದು ನ್ಯೂ ಜೆರ್ಸಿಯಲ್ಲಿ ಗಮನಾರ್ಹವಾದುದು. ಕೇಂದ್ರದಲ್ಲಿ ಡೆಮಾಕ್ರಟಿಕ್ ಸರ್ಕಾರ ಇದ್ದು - ಕಾಂಗ್ರೆಸ್, ಸೆನೆಟ್, ವೈಟ್‌ಹೌಸ್ ಎಲ್ಲಕಡೆಗೆ ಡೆಮಾಕ್ರಟ್ ಪಕ್ಷದವರು ತುಂಬಿರುವ ಸನ್ನಿವೇಶದಲ್ಲಿ ಹಾಗೂ ಒಬಾಮ ಖುದ್ದಾಗಿ ಬಂದು ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದರೂ ಇದ್ದ ಸೀಟ್ ಅನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬಹಳ ದೊಡ್ಡ ವಿಷಯವಾಗುತ್ತದೆ. ಇಲ್ಲಿ ರಿಪಬ್ಲಿಕನ್ ಪಕ್ಷದ್ದ ಕ್ರಿಸ್ ಕ್ರಿಸ್ಟೀಯ ಜಯ, ಸಫಲತೆ ಮುಖ್ಯವಾಗಿ ಕಾಣಿಸುತ್ತದೆ. ಹೀಗೇ ವರ್ಜೀನಿಯ ರಾಜ್ಯದಲ್ಲೂ ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಗವರ್ನರ್ ಸೀಟು ಉಳಿಯದೆ ಅದೂ ರಿಪಬ್ಲಿಕನ್ ಪಕ್ಷದವರ ಪಾಲಾಗಿರುವುದು ಮತ್ತೊಂದು ಮುಖ್ಯ ಅಂಶ.

ಈ ಎರಡು ಅಂಶಗಳನ್ನು ಗಮನಿಸಿ ಇನ್ನು ಮೂರು ವರ್ಷಗಳ ನಂತರ ಬರುವ ಪ್ರೆಸಿಡೆಂಟ್ ಎಲೆಕ್ಷನ್ನ್ ಬಗ್ಗೆ ಈಗಲೇ ಏನನ್ನು ಹೇಳುವುದು ತಪ್ಪಾಗುತ್ತದೆ. ಆದರೆ, ಕಳೆದ ವರ್ಷ ಓಟಿನಲ್ಲಿ ಭಾಗವಹಿಸಿದಷ್ಟು ಜನ ಮುಖ್ಯವಾಗಿ ಮೊಟ್ಟ ಮೊದಲನೇ ಭಾರಿ ಮತ ಚಲಾಯಿಸಿದವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖುವಾಗಿರುವುದು ಗೊತ್ತಾಗುತ್ತದೆ.

ನಾವು, ನ್ಯೂ ಜೆರ್ಸಿಯ ಜನ, ಈ ಹೊಸ ರಿಪಬ್ಲಿಕನ್ ರಾಜ್ಯ ಸರ್ಕಾರದ ಕಡೆಗೆ ನೋಡುತ್ತೆವೆ, ಹಾಗಾದರೂ ಒಂದಿಷ್ಟು ಟ್ಯಾಕ್ಸ್ ಕಡಿಮೆಯಾಗಲಿ ಎಂದು!

***

ದೂರದಲ್ಲಿ - ನಾವು, ನಮ್ಮ ಕರ್ನಾಟಕದ ಮುಖ್ಯಮಂತ್ರಿ ಎಡೆಯೂರಪ್ಪನವರ ಸರ್ಕಾರ, ಅವರ ಖುರ್ಚಿಗೆ ಏನು ಆತಂಕ ಕಾದಿದೆಯೋ ಎಂದು ಬಿಟ್ಟುಗಣ್ಣು ಬಿಟ್ಟು ನೋಡುತ್ತಲೇ ಇದ್ದೇವೆ. ಅಲ್ಲಿ ಐದು ವರ್ಷಗಳ ಒಬ್ಬ ಮುಖ್ಯ ಮಂತ್ರಿಯ ಆಳ್ವಿಕೆ ಮುಂದುವರೆಯಲಿ, ರಾಜ್ಯದ ಜನರಿಗೆ ನೆಮ್ಮದಿ ಸಿಗಲಿ ಎನ್ನುವುದು ಆಶಯ ಅಷ್ಟೇ. ಎರಡೆರಡು ವರ್ಷಕ್ಕೊಮ್ಮೆ ಎಲೆಕ್ಷನ್ನುಗಳನ್ನು ನಡೆಸಿಕೊಂಡು ಹಣ ಚೆಲ್ಲುವುದರ ಬದಲು ಇದ್ದ ಸರ್ಕಾರವನ್ನೇ ಮುಂದುವರೆಸಿಕೊಂಡು ಒಳಜಗಳಗಳು ಮುಖ್ಯವಾಗದೇ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಮುಖ ತೋರುವುದು ಒಳಿತು.

Thursday, October 01, 2009

ಕ್ರಿಕೆಟ್ ಕ್ಯಾಪ್ಟನ್ ಕಲಿತ ಪಾಠ

ಒಮ್ಮೆ ನಮ್ಮ ಹೈ ಸ್ಕೂಲು ವಿದ್ಯಾರ್ಥಿಗಳಲ್ಲೇ ಎರಡು ತಂಡಗಳನ್ನು ಮಾಡಿ ಒಂದು ಕ್ರಿಕೆಟ್ ಮ್ಯಾಚ್ ನಡೆಸುವ ಇರಾದೆ ನಮ್ಮ ಪಿ.ಇ. ಮೇಷ್ಟ್ರಿಗೆ ಇದ್ದಿತ್ತು. ಕ್ರಿಕೆಟ್ ಟೀಮಿನ ಮುಖ್ಯಸ್ಥನಾಗಿ ಆ ಜವಾಬ್ದಾರಿ ನನಗೇ ಬಂತು. ಆಸಕ್ತಿ ಇದ್ದ ಸಹಪಾಠಿಗಳನ್ನು ಸೇರಿಸಿಕೊಂಡು, ಅವರೆಲ್ಲರಿಂದ ಒಂದೊಂದು ರುಪಾಯಿ ಶುಲ್ಕ ವಸೂಲು ಮಾಡಿಕೊಂಡು ಕೊನೆಗೆ ಎರಡು ತಂಡಗಳನ್ನಾಗಿ ಮಾಡುವಾಗ ಆ ವಯಸ್ಸಿಗೆ ಅದು ದೊಡ್ಡ ಕೆಲಸವಾಗಿರಬೇಕು. ಈ ಎರಡು ತಂಡಗಳಲ್ಲಿ ಒಂದಕ್ಕೆ ನಾನು ಕ್ಯಾಪ್ಟನ್, ಮತ್ತೊಂದಕ್ಕೆ ನನ್ನ ಸಹಪಾಠಿಯೊಬ್ಬ. ಕೊನೆಯಲ್ಲಿ ಮ್ಯಾಚ್ ದಿನ ಹತ್ತಿರ ಬಂದಾಗ ಅದೂ ನಮ್ಮ ತಂಡ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಅಂಪೈರ್ ಒಂದು ಫೌಲ್ ಕಾಲ್ ಕೊಟ್ಟರು. ಆ ಸಮಯದಲ್ಲಿ ಎಣಿಸಲಾಗಿ ಫೀಲ್ಡಿಂಗ್ ಮಾಡುತ್ತಿದ್ದವರಲ್ಲಿ ಬೌಲರ್ ಕೀಪರ್ ಎಲ್ಲರನ್ನೂ ಸೇರಿಸಿಕೊಂಡು ಹದಿನಾಲ್ಕು ಜನ ಫೀಲ್ಡಿಂಗ್ ಮಾಡುತ್ತಿದ್ದೆವು, ಆದರೆ ನಿಯಮದ ಪ್ರಕಾರ ಹನ್ನೊಂದು ಜನ ಮಾತ್ರ ಫೀಲ್ಡಿಂಗ್ ಮಾಡಬೇಕಿತ್ತು.

ಆಗ ಅದು ದೊಡ್ಡ ಪ್ರಮಾದ, ಮ್ಯಾಚ್ ಸಂಬಂಧ ಅದಕ್ಕೆ ತಕ್ಕ ಬೆಲೆಯನ್ನು ನಾನು ತೆರಬೇಕಾಯ್ತು, ಜೊತೆಗೆ ನನ್ನ ಸಹಪಾಠಿಗಳ ಎದುರಿಗೆ ಹಾಗೆ ಅವರ ಎದುರಲ್ಲಿ ತಂಡವನ್ನು ಸರಿಯಾಗಿ ಮ್ಯಾನೇಜ್ ಮಾಡದಿದ್ದುದಕ್ಕೆ ಅಪಹಾಸ್ಯಕ್ಕೂ ಗುರಿಯಾಗಬೇಕಾಗಿ ಬಂತು. ನಾವೆಲ್ಲ ಇಲ್ಲಿಗೆ ಬಂದು ಕನ್ನಡ ಟಿವಿ ಸೀರಿಯಲ್ಲ್ ನಲ್ಲಿ ನೋಡಿದ ಹಾಗೆ ಅಲ್ಲಿನವರಿಗೆ (ಅಂದರೆ ಭಾರತದಲ್ಲಿ) ಈತರಹದ ಸಣ್ಣ-ಪುಟ್ಟ ಘಟನೆಗಳು ಬಹಳ ದೊಡ್ಡವಾಗಿ ಹೋಗುತ್ತವೆ, ಸಹಪಾಠಿಗಳೊಡನೆ, ನೆರೆಹೊರೆಯವರೊಂದಿಗೆ ಮಾನ-ಮರ್ಯಾದೆಯ ಪ್ರಶ್ನೆಯಾಗಿ ಬಿಡುತ್ತದೆ. ನನಗೂ ಅಂದು ಹಾಗಿದ್ದರಿಂದಲೇ ಎರಡು ದಶಕಗಳ ನಂತರ ಇವತ್ತಿಗೂ ಅದು ನನ್ನ ಸ್ಮರಣಪಠಲದಲ್ಲಿರೋದು ಅಂದರೆ ತಪ್ಪೇನಿಲ್ಲ.

ಆದದ್ದಿಷ್ಟೇ: ಯಾರು ಯಾರು ಕ್ರಿಕೇಟ್ ತಂಡಕ್ಕೆ ಸೇರಿಕೊಳ್ಳಬೇಕು ಎಂದುಕೊಂಡಿದ್ದರೋ ಅವರೆಲ್ಲ ಒಂದೊಂದು ರುಪಾಯಿ ಸಲ್ಲಿಸಿ ತಮ್ಮ ಹೆಸರನ್ನು ನನ್ನ ಬಳಿ ಬರೆಸಿಕೊಂಡಿದ್ದರು. ಟೀಮಿಗೆ ಹನ್ನೊಂದು ಜನ, ಒಂದಿಬ್ಬರು ಬ್ಯಾಕ್‌ಅಪ್ ಜನರನ್ನು ಬಿಟ್ಟರೆ ಉಳಿದವರಿಗೆ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇರುವಾಗ ಉತ್ಸಾಹಿ ಸಹಪಾಠಿಗಳ ಪಟ್ಟಿಯನ್ನು ಕಂಟ್ರೋಲ್ ಮಾಡಿ ಅವರೆಲ್ಲರಿಗೂ ಇತಿ-ಮಿತಿ ಹಾಗೂ ಅವರು ಆಟದಲ್ಲಿ ಆಡುವ ಅವಕಾಶ ಹಾಗೂ ನಾವು ಗೆಲ್ಲುವ ಸಾಧ್ಯತೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿತ್ತು. ಜೊತೆಗೆ ಅಗತ್ಯಕ್ಕಿಂತ ಹೆಚ್ಚಿನ ಜನ ಆಸಕ್ತಿ ತೋರಿಸಿದಾಗ ಯಾರು ಯಾರು ತಂಡಲಿದ್ದಾರೆ, ಯಾರಿಲ್ಲ ಎನ್ನುವುದನ್ನು ಸರಿಯಾಗಿ ಬಿಡಿಸಿ ಹೇಳಬೇಕಾಗಿತ್ತು ಹಾಗೂ ಟೀಮುಗಳಲ್ಲಿ ಸೆಲೆಕ್ಟ್ ಆಗದವರ ಹಣವನ್ನು ಹಿಂತಿರುಗಿಸಿ ಕೊಡಬೇಕಾಗಿತ್ತು. ಇದೆಲ್ಲವನ್ನು ನಾನು ಮಾಡಬೇಕಿತ್ತೋ, ನಮ್ಮ ಮೇಷ್ಟ್ರು ಮಾಡಬೇಕಿತ್ತೋ ಅನ್ನುವುದು ಅಷ್ಟೊಂದು ಸರಿಯಾಗಿ ನೆನಪಿಲ್ಲ. ಆದರೆ ಇವೆಲ್ಲಕ್ಕೂ ನನ್ನ ಹೊಣೆಗಾರಿಕೆಯನ್ನು ಗುರುತಿಸಿಕೊಂಡು ಅಂದು ಕಲಿತದ್ದನ್ನು ನಾನು ಯಾವತ್ತೂ ಮರೆಯಲಾರದ ಪಾಠ ಎಂದೇ ನಾನು ಈ ಘಟನೆಯನ್ನು ಗುರುತಿಸಿಕೊಳ್ಳೋದು.

ಈಗ ನನಗಿರುವ ಕೆಲಸದ ಚೌಕಟ್ಟಿನಲ್ಲಿ ಪ್ರತಿದಿನವೂ ಮಾತನಾಡುತ್ತೇವೆ - ಅವೇ ರೆಸ್ಪಾನ್ಸಿಬಿಲಿಟಿ, ಅಕೌಂಟೆಬಿಲಿಟಿ, ಲೀಡರ್‌ಶಿಪ್, ಇನಿಷಿಯೇಟಿವ್ - ಮೊದಲಾದ ಪದಗಳು ಪುಂಖಾನುಪುಂಖವಾಗಿ ಬಳಕೆಯಾಗುತ್ತವೆ. ಒಂದು ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುವಾಗ ಒಂದು ಸಂಸ್ಕೃತಿಯ ಚೌಕಟ್ಟಿನಲ್ಲಿ ದುಡಿಯುವಾಗ ನಾವು ಅಂದುಕೊಂಡಂತೆ ಮಾಡುವುದಕ್ಕಿಂತ ಇತರರ ಗವರ್ನೆನ್ಸ್‌ಗೆ ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ. ಈ ವಿಚಾರಗಳನ್ನು ನಾವು ನಮ್ಮ ಮುಖ್ಯ ಕೆಲಸಕ್ಕೂ ಹಾಗೂ ವಾಲೆಂಟಿಯರ್ ಆಗಿ ಮಾಡುವ ಕೆಲಸಗಳಿಗೂ ಅನ್ವಯಿಸಬಹುದು. ಉದಾಹರಣೆಗೆ ಯಾವುದೋ ಒಂದು ಕಮಿಟಿಯನ್ನು ಹುಟ್ಟು ಹಾಕಬೇಕಾಗಿ ಬಂದಿದೆಯೆಂದುಕೊಳ್ಳಿ, ಯಾರನ್ನು ಆಯ್ದುಕೊಳ್ಳುತ್ತೀರಿ, ಮತ್ತು ಏಕೆ? ಹೀಗಿರುವ ಆಯ್ಕೆಯ ಹಿಂದಿರುವ ರೂಪುರೇಶೆಗಳೇನು? ಯಾವ ನಿಯಮಗಳ ಅಡಿಯಲ್ಲಿ ಇವು ನಡೆಯುತ್ತವೆ? ಯಾವುದಾದರೂ ಇನ್‌ಫ್ಲುಯೆನ್ಸ್‌ಗೆ ಒಳಗಾಗುತ್ತೀರೋ, ಅಥವಾ ಅವುಗಳಿಂದ ಹೇಗೆ ದೂರವಿರಲು ಪ್ರಯತ್ನಿಸುತ್ತೀರಿ? ನಿಮ್ಮಲ್ಲೇ ಮನೆ ಮಾಡಿಕೊಂಡಿರುವ ಸ್ಟೀರಿಯೋಟೈಪ್‌ಗಳು ನೀವು ಕೈಗೊಂಡ ನಿರ್ಧಾರಗಳ ಮೇಲೆ ಯಾವ ಪರಿಣಾಮ ಬೀರುತ್ತವೆ? ಇತ್ಯಾದಿ.

ನಾವು ಅಂದು ಬಡ ಹೈ ಸ್ಕೂಲುಗಳಲ್ಲಿ ಓದುತ್ತಿದ್ದೆವು, ಸಾರ್ವಜನಿಕ ಹೈ ಸ್ಕೂಲುಗಳ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ಸಂಪನ್ಮೂಲಗಳಿಗೂ ಕೊರತೆ ಇತ್ತು. ಅಂದು ಯಾರಾದರೊಬ್ಬರು ತಂಡವನ್ನು ನಿರ್ಮಿಸುವ ಸೂಕ್ಷತೆಗಳ ಬಗ್ಗೆ ತಿಳಿಸಿ ಹೇಳಿದ್ದರೆ ಅಥವಾ ನಾನು ಹೈ ಸ್ಕೂಲು ಕ್ರಿಕೆಟ್ ತಂಡ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡುವಾಗ ಮಾರ್ಗದರ್ಶನ ನೀಡಿದ್ದರೆ...ಹೀಗೆ ಅನೇಕ ’ರೆ’ಗಳನ್ನು ಇಂದು ಯೋಚಿಸಿಕೊಂಡು ನಗು ಬರುತ್ತದೆ. ಒಂದಂತೂ ನಿಜ, ಲೀಡರ್‌ಶಿಪ್, ಮ್ಯಾನೇಜ್‌ಮೆಂಟ್, ಆರ್ಗನೈಜೇಶನ್ ಮೊದಲಾದ ಸಮೂಹ ಸಂಬಂಧಿ ಪ್ರಕ್ರಿಯೆಗಳು ಅಮೇರಿಕಕ್ಕೆ ಮಾತ್ರ ಸೀಮಿತವಾಗಿಲ್ಲ ಅಲ್ಲದೇ ಅವು ಸಂಪನ್ಮೂಲಗಳು ಇದ್ದಲ್ಲಿ ಮಾತ್ರ ಹುಟ್ಟಿ ಬೆಳೆಯಬೇಕೆಂದೇನೂ ಇಲ್ಲ. ಎಲ್ಲರಿಗೂ ಅವರ ಜೀವನಕ್ರಮಕ್ಕನುಸಾರವಾಗಿ ಅವರ ಸವಾಲುಗಳನ್ನು ಸಿಕ್ಕೇ ಸಿಗುತ್ತವೆ, ಅವುಗಳನ್ನು ಹೇಗೆ ನಿಭಾಯಿಸಬಲ್ಲೆವು ಎಂಬುದರ ಹಾಸುಹೊಕ್ಕಾಗಿ ಇರುವುದೇ ಅವರವರ ಶಕ್ತಿ. ನಮಗೆ ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನೇ ನಾವು ಅವಲೋಕಿಸುತ್ತಾ ಬಂದರೆ ಒಂದು ನಿರ್ಣಯವನ್ನು ಅನೇಕ ಮಜಲುಗಳಲ್ಲಿ ಹೇಗೆ ನೋಡಬಹುದೋ ಹಾಗೇ ನಮಗೆ ವಹಿಸಿದ ಕೆಲಸಗಳ ಫಲಿತಾಂಶ ಕೂಡಾ.

ಪ್ರಾಕ್ಟಿಕಲ್ಲಾಗಿ ಆಲೋಚಿಸಬೇಕು ಮತ್ತು ಹಾಗೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಒಂದು ಕಡೆ, ಅದಕ್ಕೆ ವಿರುದ್ಧವಾಗಿ ಎಮೋಷನಲ್ಲಾಗಿ ಯೋಚಿಸಿ ಇನ್ಯಾವುದೋ ಮಾನದಂಡಗಳಿಗೆ ಒಳಪಟ್ಟೋ ಪಡೆದೆಯೋ ನಾವು ನಡೆಸಿಕೊಂಡು ಬರುವ ಕೆಲಸ ಕಾರ್ಯಗಳು ಹಾಗೂ ಅವುಗಳ ದೂರದ ಪರಿಣಾಮಗಳು ಮತ್ತೊಂದು ಕಡೆ.