Monday, April 04, 2011

ಆನವಟ್ಟಿ ಸಾಲುಮರಗಳು ಈಗ ಇತಿಹಾಸ...

ಸ್ನೇಹಿತನೊಡನೆ ಜೊತೆ ನಿನ್ನೆಯ ಮಾತುಕಥೆ: - ಜಾಗತೀಕರಣ, ವಾಲ್‌ಮಾರ್ಟ್ ಹೇಗೆ ೩೦ ವರ್ಷದ ಹಿಂದೆ ಚೈನಾದಿಂದ ಕಡಿಮೆ ಬೆಲೆಗೆ ಸಾಮಾನುಗಳನ್ನು ಆಮದು ಮಾಡಿಕೊಂಡು ಹೊಸ ಕ್ರಾಂತಿ ಸೃಷ್ಟಿಸಿತ್ತು. - ಅಮೇರಿಕದ ಕೆಲಸಗಾರರು ಪ್ರತಿ ಘಂಟೆಗೆ ೨೫ ಡಾಲರ್ ಪಡೆಯುತ್ತಿದ್ದಾಗ, ಚೈನಾದಂತಹ ದೇಶಗಳಲ್ಲಿ ಪ್ರತಿದಿನಕ್ಕೆ ಒಬ್ಬೊಬ್ಬ ಒಂದೊಂದು ಡಾಲರ್‌ಗೆ ಕೆಲಸ ಮಾಡುತ್ತಿರುವಂತೆ ಗಳಿಕೆಯಲ್ಲಿನ ವ್ಯತ್ಯಾಸ ಹೇಗೆ ರೀಟೈಲರುಗಳನ್ನು ಸ್ವಲ್ಪ ಕಡಿಮೆ ಕ್ವಾಲಿಟಿ ಆದರೂ ಕಡಿಮೆ ಬೆಲೆಗೆ ಪದಾರ್ಥಗಳನ್ನು ಕೊಳ್ಳುವಂತೆ ಮಾಡಿದ್ದು. (೨೦೦೮, ೨೦೦೯ ವಿಶ್ವ ಬ್ಯಾಂಕ್ ಮೂಲಗಳ ಪ್ರಕಾರ) -ಚೈನಾದ ಜನಸಂಖ್ಯೆ ೧.೩೩ ಬಿಲಿಯನ್, GDP $6,890 - ಭಾರತದ ಜನಸಂಖ್ಯೆ ೧.೧೭ ಬಿಲಿಯನ್, GDP $3,250 -ಚೈನಾದ ಕಮ್ಮ್ಯೂನಿಸಮ್ಮ್, ಅಲ್ಲಿನ ಮೆಗಾ ಪ್ರಾಜೆಕ್ಟುಗಳು ಮಿಲಿಯನ್ನ್‌ಗಟ್ಟಲೆ ಜನರನ್ನು ಎತ್ತಂಗಡಿ ಮಾಡಿದರೂ ವಿಶ್ವದ ಉಳಿದ ಜನರಿಗೆ ಕಿಂಚಿತ್ತೂ ಗೊತ್ತಾಗದಿರುವುದು, ಪರಿಸರ ಕಾಳಜಿ, ಸಾಮಾಜಿಕ ಮೌಲ್ಯ ಮೊದಲಾದವುಗಳ ಬಗ್ಗೆ ಇರುವ ಅವರದ್ದೇ ಆದ ವ್ಯಾಖ್ಯೆ ಪರಿಕಲ್ಪನೆ. - ಭಾರತದ ಜನತಂತ್ರ ವ್ಯವಸ್ಥೆ, ಮೆಗಾ ಮಿನಿ ಪ್ರಾಜೆಕ್ಟುಗಳು, ರಸ್ತೆ ಅಗಲೀಕರಣದ ವಾಸ್ತವ ಚಿತ್ರ - ರಾತ್ರೋ ರಾತ್ರಿ ಎದ್ದೇಳುವ ಮಂದಿರ, ಮಸೀದಿ, ಚರ್ಚುಗಳು - ಪರಿಸರ ವಾದಿಗಳು, ದಿವ್ಯ ನದಿಗಳು, ತೆರೆದ ರಾಜಕೀಯ, ಜಾತಿ-ಮತ, ಭ್ರಷ್ಟಾಚಾರಗಳಂತ ತಿಮಿಂಗಲಗಳು, ಮೊದಲಾದವುಗಳು. ಅಮ್ಮನೊಡನೆ ಇಂದಿನ ಚರ್ಚೆ: - ಈ ವರ್ಷವೆ ಕೊನೇ ಇನ್ನು ಮುಂದೆ ನಮಗೆ ಸಾಲು ಮರಗಳಿಂದ ಮಾವಿನ ಮಿಡಿ ಸಿಗೋದಿಲ್ಲ. - ಆನವಟ್ಟಿ ಇಂದ ಶಿರಾಳಕೊಪ್ಪದ ವರೆಗೆ (ಸುಮಾರು ೨೫ ಕಿ.ಮಿ.) ರಸ್ತೆಯ ಎರಡೂ ಬದಿಯ ಸಾಲು ಮರಗಳನ್ನು ಕಡಿದು ಹಾಕುತ್ತಿದ್ದಾರೆ, ರಸ್ತೆ ಅಗಲ ಮಾಡುತ್ತಿದ್ದಾರೆ. - ಯಡಿಯೂರಪ್ಪನವರ ದೊಡ್ಡ ಪ್ರಾಜೆಕ್ಟುಗಳಲ್ಲಿ ಇದೂ ಒಂದಂತೆ. - ಸುಮಾರು ನೂರು ವರ್ಷಕ್ಕೂ ಹಿಂದಿನಿಂದಲೂ ಇದ್ದ ಮರಗಳು ಅವು, ಅವನ್ನೆಲ್ಲ ಕಡಿದು ದೊಡ್ಡ ದೊಡ್ಡ ಮಿಷೀನುಗಳನ್ನು ಬಳಸಿ ಬುಡ ಸಮೇತ ಎತ್ತುತ್ತಿದ್ದಾರೆ. - ಬೋಳು-ಬೋಳು ರಸ್ತೆಗಳನ್ನು ನೋಡೋದಕ್ಕೆ ಬೇಜಾರಾಗುತ್ತೆ. - ಈ ಮರಗಳ ಬದಲಿಗೆ ಬೇರೆ ಎಲ್ಲಿಯಾದರೂ ಅಕೇಷಿಯಾ ಪಕೇಷಿಯಾ ನೆಡ್ತಾರೆ ಅಷ್ಟೇ, ನಮ್ಮ ಹಿಂದಿನವರ ಥರ ಮಾವು-ಬೇವುಗಳನ್ನು ಯಾರು ನೆಡ್ತಾರೆ ಈಗಿನ ಕಾಲದಲ್ಲಿ? - ಆ ಮರಗಳಲ್ಲಿದ್ದ ಅಷ್ಟೊಂದು ಪಕ್ಷಿಗಳು ಇನ್ನೆಲ್ಲಿ ಹೋಗ್ತಾವೋ ಏನೋ? *** ಹೂರಣ: ಭಾರತದ ಮೂಲೆ-ಮೂಲೆಗಳಿಂದ ಅಮೇರಿಕಕ್ಕೆ ಬಂದಂಥ ನಾವು, Caterpillar (CAT) ನಂತಹ ಕಂಪನಿಗಳಲ್ಲಿ ಕೆಲಸ ಮಾಡೋದು ಯೋಗ್ಯ, ಏಕೆಂದರೆ ಇವರ ಬುಲ್‌ಡೋಝರ್ ಮೊದಲಾದ ಕನ್‌ಷ್ಟ್ರಕ್ಷನ್ನ್ ಉಪಕರಣ ಹಾಗೂ ಮಿಷೀನುಗಳಿಗೆ ಜಗತ್ತಿನಾದ್ಯಂತ ಬಹಳ ಬೇಡಿಕೆ. ಅಲ್ಲದೆ, ಪರೋಕ್ಷವಾಗಿ ನೀವು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಮತ್ತೊಂದು ಮೂಲೆಯನ್ನು ಅಗೆಯಬಹುದು! ನಿಮ್ಮ ಜಾಗತಿಕರಣದ ಊಹೆ ಅಥವಾ ಕನಸನ್ನ ಎಲ್ಲರಿಗೂ ತಲುಪಿಸಬಹುದು! ಹೂರಣದ crust: CAT ನಲ್ಲಿ ಪ್ರತಿಯೊಬ್ಬರೂ ದುಡಿಯಲು ಸಾಧ್ಯವೇ? ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೇನಂತೆ? ಆ ಕಂಪನಿಯಲ್ಲಿ ಹಣ ತೊಡಗಿಸಬಹುದು, ಎಲ್ಲಾ ಒಂದೇ! *** ’ಅಂತರಂಗ’ದ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಖರನಾಮ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ!