Showing posts with label ವಿದೇಶ. Show all posts
Showing posts with label ವಿದೇಶ. Show all posts

Thursday, May 21, 2020

ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

"ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

Thursday, December 27, 2007

ಮರೆಯಾದಳು ಭುಟ್ಟೋ

(photo source unknown)

ನಾಡಿನ ಕತ್ತಲೆ ಎಳೆಗಳು ಕಳೆದೇ ಹೋದವು
ಇನ್ನೇನು ಸುಂದರ ದಿನಗಳು ಬಂದೆ ಬಂದವು
ಸೂರ್ಯನು ಮುಳುಗಿ ಮರುದಿನ ಹುಟ್ಟೋ
ಮೊದಲೇ ಮರೆಯಾದಳು ಭುಟ್ಟೋ.

ಕಂಬಳಿ ಹುಳುವಿನ ಹಾಗೆ ಎಂಟು ವರ್ಷ
ಕೊರೆದು ತಿಂದ ಮನದಾಳದ ಬುತ್ತಿಯ ಹರ್ಷ
ಅರವತ್ತೊಂಭತ್ತು ದಿನದ ಬಣ್ಣದ ಹಾಯಿ
ಚಿಟ್ಟೆಯನ್ನ ಕೊಂದೇ ಬಿಟ್ಟರಲ್ಲ ತಾಯಿ.

ಅಪ್ಪ ತಮ್ಮಂದಿರ ಒಡಗೂಡಿ ಕಟ್ಟಿದ ಸೇನೆಗೆ
ಶೋಷಿತ ಜನರ ಸರ್ಕಾರವನು ಎತ್ತಿ ಬಾನಿಗೆ
ಸೇನಾಡಳಿತದ ವಿರೋಧವನೇ ಎದುರಿಸಿ
ಕೊನೆಗೆ ಎಲ್ಲರನ್ನೂ ಬಲಿಗೊಟ್ಟ ಕಸಿವಿಸಿ.

ಎರಡೆರಡು ಬಾರಿ ಅಧಿಕಾರ ಕಿತ್ತುಕೊಂಡೂ
ಕಾರಾಗೃಹ ವಾಸದ ನೋವ ನುಂಗಿಕೊಂಡೂ
ಸಗಣಿಯೊಳಗಿನ ಹುಳುಗಳ ಮೇಲುತ್ತುವ ತಾಯೆ
ಮತ್ತಾರಿಗೂ ಬರದು ನೀನೆಸೆಯುವ ಮಾಯೆ.

ನಿನ್ನ ಕನಸುಗಳ ನುಂಗಿ ನೀರು ಕುಡಿದ ನಾಡನ್ನು ಬಿಟ್ಟು
ಮುಂದಿನ ಜನುಮದಲ್ಲಾದರೂ ನಮ್ಮ ನಾಡಲ್ಲಿ ಹುಟ್ಟು.
***
October 18, 2007 ರಂದು ಪ್ರಕಟಿಸಿದ ಈ ಲೇಖನವನ್ನೂ ಓದಿ: ಭುಟ್ಟೋ ಬಂದಳು ಶಾಂತಿ ತಂದಳು!
...ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

Thursday, October 18, 2007

ಭುಟ್ಟೋ ಬಂದಳು ಶಾಂತಿ ತಂದಳು!

ಎಂಟು ವರ್ಷದ ಅಜ್ಞಾತವಾಸದ ಬಳಿಕ ಮರಳಿ ಬಂದ ಬೆನಜೀರ್ ತಾವು ತಮ್ಮ ಪ್ರಯಾಣದುದ್ದಕ್ಕೂ ಶಾಂತಿಯ ಕನಸನ್ನು ಕಾಣುತ್ತಿದ್ದರೆ ಅವರು ಕಾಲಿಟ್ಟ ದಿನ ಪಾಕಿಸ್ತಾನದಲ್ಲಿ ಆದದ್ದೇ ಬೇರೆ. ನೂರಾರು ಜನರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡುದಿರಲಿ ಸ್ವತಃ ತಾವೇ ಸ್ವಲ್ಪದರಲ್ಲಿ ಪಾರಾದುದು ಆಶ್ಚರ್ಯದ ಸಂಗತಿ. ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ನಿಜವಾಗಿಯೂ ಬೇರೆಯೇ ಆದ ದೇಶ, ಅಲ್ಲಿನ ಸುಪ್ರೀಮ್ ಕೋರ್ಟ್ ಪ್ರೆಸಿಡೆಂಟ್ ಮುಷಾರಫ್ ಅವರ ಮೇಲೇ ತಿರುಗಿ ಬಿದ್ದುದೂ, ಮತ್ತೊಬ್ಬ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ದೇಶಕ್ಕೆ ಹೊಕ್ಕಿಸದೇ ಹಿಂತಿರುಗಿ ಕಳಿಸಿದ್ದುದೂ ಇತ್ತೀಚಿನ ಬೆಳವಣಿಗೆಗಳಲ್ಲಿ ಒಂದು.

ಅಮೇರಿಕದ ದೃಷ್ಟಿಯಲ್ಲಿ ಪಾಕಿಸ್ತಾನ ಭಯೋತ್ಪಾದಕತೆಯ ಅಲೆಯನ್ನು ಹುಟ್ಟಗಿಸುವ ಪ್ರಯತ್ನದಲ್ಲಿನ ಬಹುಮುಖ್ಯ ಆಟಗಾರ. ಇಂಥ ಒಂದು ನೋಷನ್‌ಗೆ ವಿರುದ್ಧವಾಗಿ ಭಾರತ ಹಾಗೂ ಉಳಿದ ದೇಶಗಳು ಪಾಕಿಸ್ತಾನದ ವಿರುದ್ಧ ಏನೇ ಹೇಳುತ್ತ ಬಂದಿದ್ದರೂ ಹಾಲೀ ಅಮೇರಿಕದ ಸರ್ಕಾರದ ಸವಾಲುಗಳು ಪಾಕಿಸ್ತಾನವನ್ನು ಪುರಸ್ಕರಿಸುವತ್ತಲೇ ಸಮಯ ವ್ಯಯಿಸುತ್ತಿದೆಯೇ ವಿನಾ ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವ ಹಾಗೆ ಕಾಣಿಸುತ್ತಿಲ್ಲ. ಮುಷಾರಫ್ ರಕ್ತ ರಹಿತ ಕ್ರಾಂತಿ ಕಳೆದ ಏಳೆಂಟು ವರ್ಷಗಳಲ್ಲಿ ಬೇಕಾದಷ್ಟನ್ನು ಸಾಧಿಸಿದ್ದರೂ ತಮ್ಮ ದೇಶದ ಜನ ತಮ್ಮ ವಿರುದ್ಧವೇ ತಿರುಗಿ ಬೀಳುವುದನ್ನು ಕನಸು ಮನಸಿನಲ್ಲೂ ಯೋಚಿಸಿರಲಾರದ ಮುಷಾರಫ್‌ಗೆ ಅಮೇರಿಕ ಹಾಗೂ ಉಳಿದ ಹಿತೈಷಿಗಳ ಮಾತನ್ನು ಕೇಳಿ ಬೆನಜೀರ್ ಅವರನ್ನು ದೇಶದೊಳಕ್ಕೆ ಬಿಟ್ಟುಕೊಂಡು ಒಂದು ರೀತಿಯ ಒಪ್ಪಂದಕ್ಕೆ ಬರದೇ ಬೇರೆ ಗತ್ಯಂತರವಿರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾಕಿಸ್ತಾನದ ಪ್ರಧಾನಮಂತ್ರಿ ಎನ್ನುವ ಸ್ಥಾನ ರಾಜಕೀಯದ ಉತ್ತುಂಗವನ್ನು ವ್ಯಕ್ತಿಯೊಬ್ಬರಿಗೆ ಕೊಡಿಸಿದರೆ ಅಲ್ಲಿನ ಅಧ್ಯಕ್ಷ ಸ್ಥಾನವಾಗಲೀ, ಮಿಲಿಟರಿ ನಾಯಕತ್ವವಾಗಲೀ ಮತ್ತೊಂದು ಮಹತ್ವದ ಸ್ಥಾನವೇ. ಇಂತಹ ಎರಡು ಬಣಗಳಿಗೆ ಸೇರದೇ ತನ್ನದೇ ಆದ ಪ್ರಾಬಲ್ಯವನ್ನು ಮೆರೆದದ್ದು ಇತ್ತೀಚಿನ ಸುಪ್ರೀಮ್ ಕೋರ್ಟ್ ಬೆಳವಣಿಗೆ. ಪ್ರಜಾಪ್ರಭುತ್ವವಿರದ ದೇಶದಲ್ಲಿ ಸುಪ್ರೀಮ್ ಕೋರ್ಟ್‌ಗೆ ಒಂದು ಧ್ವನಿಯೆಂಬುದು ಹುಟ್ಟಿದ್ದು ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿದರೂ ಮುಷಾರಫ್ ಬೇರೇನನ್ನು ಮಾಡದೇ ಸುಮ್ಮನೇ ಇದ್ದರೆ ದೇಶಾದ್ಯಂತ ಕ್ರಾಂತಿ ಹುಟ್ಟುವ ಸನ್ನಿವೇಶ ನಿರ್ಮಾಣವಾಗಲು ಇನ್ನು ಹೆಚ್ಚು ದಿನಗಳು ಇದ್ದಂತೆ ಕಂಡು ಬರುತ್ತಿರಲಿಲ್ಲ. ಮುಷಾರಫ್ ಯಾವುದೇ ಎಲೆಕ್ಷನ್ ಮತಗಳನ್ನು ಎಷ್ಟೇ ತಿದ್ದಿ ತನ್ನ ಖುರ್ಚಿಯನ್ನು ಉಳಿಸಿಕೊಂಡರೂ ದೇಶದಾದ್ಯಂತ ಅಮೇರಿಕದ ಗುಲಾಮನನ್ನಾಗಿ ಮುಷಾರಫ್ ಅವರನ್ನು ಜನ ನೋಡುವುದೇ ಅವರ ಮೇಜರ್ ವೀಕ್‌ನೆಸ್ ಆಗಿ ಕಂಡು ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ಮುತ್ಸದ್ದಿ ಮುಷಾರಫ್‌ಗೆ ಬೆನಜೀರ್ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ವಿಧಿ ಇರಲಿಲ್ಲ ಎನ್ನುವುದು ಹಲವರ ಅಂಬೋಣ.

ಪಾಕಿಸ್ತಾನ ಪೀಪಲ್ಸ್ ಪಕ್ಷದ ನೇತಾರೆ ಬೆನಜೀರ್ ಭುಟ್ಟೋ ಭ್ರಷ್ಟಾಚಾರದ ಅರೋಪದಲ್ಲಿ ಸಿಕ್ಕಿರುವುದು, ಅವುಗಳ ವಿಚಾರಣೆಗೆ ತೊಡಗಿಕೊಂಡರೆ ಇನ್ನೆಂದೂ ರಾಜಕೀಯ ಆಶೋತ್ತರಗಳಿಗೆ ನೀರು ಹಾಕದ ಪರಿಸ್ಥಿತಿ ನಿರ್ಮಾಣವಾಗುವ ಹಂತ ಒಂದು ಕಡೆ. ಜೊತೆಗೆ ಈಗಾಗಲೇ ತಾವು ಎರಡು ಭಾರಿ ಪ್ರಧಾನಿಯಾಗಿರುವುದರಿಂದ ಮೂರನೇ ಭಾರಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುಕ್ಕಾಣಿ ಹಿಡಿಯಬೇಕಾಗಿ ಬಂದರೆ ಅಲ್ಲಿ ಕಾನೂನನ್ನು ತಿದ್ದುವ ಅನಿವಾರ್ಯತೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಮನದಲ್ಲಿನ ಪೀಡೆ ಮುಷಾರಫ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ದೇಶದಲ್ಲಿ ಕಾಲಿಡುತ್ತ ಮುಷಾರಫ್ ವಿರುದ್ಧವೇ ಇವತ್ತಲ್ಲ ನಾಳೆ ಎದ್ದು ನಿಲ್ಲಬೇಕಾದ ವಿಪರ್ಯಾಸ ಬೇರೆ.

ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರುಕಳಿಸಿದಂತೆ ಮುಷಾರಫ್ ಹಿನ್ನೆಲೆಗೆ ಸರಿಯುತ್ತಾರೆ. ಅಲ್ಲಿನ ಯುವ ರಾಜಕೀಯ ಶಕ್ತಿಗಳಿಗೆ ಚಾಲನೆ ದೊರೆಯುತ್ತದೆ. ಇವತ್ತಲ್ಲ ನಾಳೆ ತಾನೂ ಹಿಂತಿರುಗಿ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕನಸು ಕಾಣುವ ನವಾಜ್ ಶರೀಫ್ ಅವರಿಗಿಂತಲೂ ಸುಮಾರು ಒಂದು ದಶಕಗಳಲ್ಲಿ ತಮ್ಮ ಹಿತಾಸಕ್ತಿಗಳನ್ನು ಅಂತರಂಗದಲ್ಲಿ ಒತ್ತಿಕೊಂಡ ಅನೇಕ ಯುವ ಮುಖಂಡರುಗಳಿಗೆ ಬೆನಜೀರ್ ಆಗಮನ ಬಹಳಷ್ಟು ಸಹಾಯ ಮಾಡಿದೆ. ಪಾಕಿಸ್ತಾನದಲ್ಲೂ ನಾಯಕರಿದ್ದಾರೆ, ನಡೆಸುವವರಿದ್ದಾರೆ. ಅಲ್ಲೂ ಹೊಸ ಬೆಳಕು ಮೂಡುತ್ತಿದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ನೊಂದ ದೇಶಕ್ಕೆ ಶಾಂತಿಧೂತಳಾಗಿ ಬಂದ ಬೆನಜೀರ್ ಅಧ್ಯಾಯವನ್ನು ಮತ್ತೆ ತೆರೆದುದು ರಕ್ತದೋಕುಳಿಯಿಂದಲೇ ಎನ್ನುವುದು ಮತ್ತೊಂದು ವಿಪರ್ಯಾಸವಲ್ಲದೇ ಇನ್ನೆನು?