Showing posts with label ಜನಾದೇಶ. Show all posts
Showing posts with label ಜನಾದೇಶ. Show all posts

Saturday, April 12, 2014

... ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌‍ಗಳು...

ಬಹಳ ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ.

"ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ?" ಅಂತ ಲೋಕೋಭಿರಾಮವಾಗಿ ಕೇಳಿದೆ,

"ಏನಿಲ್ಲ, ಚೆನ್ನಾಗಿದ್ದೀನಿ, ಬೆಳೆ, ಕೊಯ್ಲು, ಎಲೆಕ್ಷನ್ನು ಅಂತೆಲ್ಲಾ ಸ್ವಲ್ಪ ಬ್ಯುಸಿ ಅಷ್ಟೇ...ನೀನ್ ಹೆಂಗಿದಿ? ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್"

"ನಮಿಗೇನ್ ಆಗತ್ತೆ, ನಾವೆಲ್ಲಾ ಚೆನ್ನಾಗೇ ಇದ್ದೀವಿ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ" ಅಂದೆ.

"ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ?" ಎಂದು ಕಾಳಜಿ ತೋರಿಸಿದ.

"ಅದೇನಿಲ್ಲ, ಲಾಸ್ಟ್ ಈಯರ್ ಮಾರ್ಕೆಟ್ಟುಗಳೆಲ್ಲ ಮೇಲ್ ಹೋಯ್ತಲ್ಲಾ, ಈ ವರ್ಷ ಒಂದಲ್ಲಾ ಒಂದು ಕಾರ್ಣ ಹಿಡಕೊಂಡು ಅವಕಾಶ ಸಿಕ್ಕಾಗೆಲ್ಲ ಕೆಳಗಡೆ ಬೀಳ್ತಾನೇ ಇವೆ. ಒಂದ್ಸರ್ತಿ ಚೈನಾದಲ್ಲಿ ಪ್ರಾಬ್ಲಮ್ಮು ಅಂತ ಬಿತ್ತು, ಇನ್ನೊಂದ್ಸರ್ತಿ ಎಮರ್ಜಿಂಗ್ ಮಾರ್ಕೇಟ್ಟಲ್ಲಿ ಪ್ರಾಬ್ಲಂ ಅಂತ ಬಿತ್ತು, ಮತ್ತೊಂದ್ ಸರ್ತಿ ರಷ್ಯಾದ ಪೂಟಿನ್ನ್ ದೆಸೆಯಿಂದ ಬಿತ್ತು...ಇನ್ನೂ ವರ್ಷ ಶುರುವಾಗಿ ಮೂರು ತಿಂಗಳು ಮುಗ್ದು ನಾಕಕ್ಕೆ ಬಿತ್ತು - ಆಗ್ಲೆ ನಾಕ್ ಸರ್ತಿ ಮಗುಚಿಕೊಂತು ನೋಡು..." ಎಂದು ಸಿಎನ್‌ಬಿಸಿ ಡಾಮಿನಿಕ್ ಚು ಥರ ನನ್ನ ಸ್ಟಾಕ್ ಮಾರ್ಕೆಟ್ ತತ್ವವನ್ನು ಅರುಹಿದೆ.

ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, "ಅಲ್ಲಾ ಮಾರಾಯಾ, ಆ ಪುಟಿನ್ ನೋಡು, ಹೆಂಗ್ ಗೆದ್ಕೋಂಬಿಟ್ಟಾ, ಕ್ರಿಮಿಯಾ ಅಂತಾ ಅಲ್ಲಿಗೇ ನಿಲ್ಲುಸ್ತಾನೋ, ಅಥವಾ ಇನ್ನೂ ತನ್ನದೇ ದೊಡ್ಡು ಅಂತ ಮಂತ ಶುರು ಹಚ್ಗೊಂತಾನೋ?"
"ಅವ್ನು ಏನ್ ಮಾಡ್ತಾನೋ ಕಾಣೇ, ಆದ್ರೆ ನಮ್ ಕಡೆಯವ್ರು ಸ್ಯಾಂಕ್ಷನ್ನು, ಗೀಂಕ್ಷನ್ನು ಅಂತ ಫೋರ್ಸ್ ಹಾಕ್ತಾನೇ ಅವ್ರೆ" ಅನ್ನೋಷ್ಟರಲ್ಲಿ,

"ಏ ಸುಮ್ನಿರೋ, ನಿಮ್ ಸ್ಯಾಂಕ್ಷನ್ನುಗಳ ಮುಖಾ ನೋಡ್ಕೊಂಡು ಅದುಮಿಕ್ಯಂಡ್ ಇರೋಕೇ ಅವ್ನೇನು ಸದ್ದಾಮ್ ಹುಸೇನ್ ಕೆಟ್ಟೋದ್ನೇ? ಒಂದ್ಸರ್ತಿ ಕಮ್ಯುನಿಷ್ಟ್ ಆದ್ರೇ ಯಾವಾಗ್ಲೂ ಕಮ್ಮುನಿಷ್ಟೇ ತಿಳಕಾ" ಎಂದು ಅವನ ಪ್ರಪಂಚದ ಇತಿಹಾಸದ ಪ್ರಹಸನವನ್ನು ನಿವೇದಿಸಿದ.

ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊಂಡು, ನಿಧಾನವಾಗಿ ಟಾಪಿಕ್ ಬದಲಾಯಿಸಿದೆ, "ಹೌದು, ಅಡಿಕೆ ಬೆಳೆ ಬಂಪರ್ ಬಂದಿದೆ ಅಂತ ಕೇಳ್ದೆ, ಹೆಂಗಿದೆ ವ್ಯವಹಾರ?"

"ಕೆಂಪ್ ಅಡಿಕೆಗೆ ಸ್ವಲ್ಪ ಬೆಲೆ ಬಂದ್ ನಾವ್ ಬಚಾವಾದ್ವಿ, ಇಲ್ಲಾಂದ್ರೆ ಈ ವರ್ಷ ಬಾಳ ಕಷ್ಟ ಇತ್ತು. ಎಲ್ಲ ಕಡೆ ಬೆಲೆ ಜಾಸ್ತಿ, ದುಡ್ಡೀಗ್ ಬೆಲೇನೇ ಇಲ್ಲ, ಹೆಂಗ್ ನಮ್ ಜೀವ್ನ ನಡೀತಾ ಇದೆ ಅಂತ ಬಿಡಿಸಿ ಹೇಳೋದೇ ಕಷ್ಟಾ"

"ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬಿಟ್ಟು, ನೀನು ಒಂದಿಷ್ಟು ಎಲೆಕ್ಷನ್ನ್ ಟೈಮಲ್ಲಿ ಕಾಸ್ ಮಾಡ್ಕೊಳ್ಳೋದಪ್ಪಾ"

"ಏ ಸುಮ್ನಿರೋ ಮಾರಾಯಾ, ಇವರು ಕೊಡೋ ಎಂಜಲು ಕಾಸಿಗೆ ನಾವ್ ಕೈ ಚೆಲ್ಲಿಕೊಂಡು ಕೂತ್ರೆ ತೋಟದ ಕೆಲ್ಸಾ ಎಲ್ಲಾ ಮಠ ಹತ್ತ್ ಹೋಗುತ್ತೆ, ಅದರ ಸವಾಸ ಅಲ್ಲ..."


"ಏ ಯಾಕೋ ಹಂಗಂತಿ? ನಾನು ಎಲೆಕ್ಷನ್ನ್ ಕಮೀಷನ್ನ್ ವೆಬ್ ಸೈಟ್ ನೋಡಿದ್ನಪ್ಪಾ, ಒಂದೊಂದು ಕ್ಯಾಂಡಿಡೇಟ್‌ಗಳು ಫೈಲ್ ಮಾಡಿರೋ ಅಫಿಡೇವಿಟ್ಟ್ ನೋಡಿದ್ರೆ, ಎಲ್ಲೆಲ್ಲೂ ಕೋಟಿ ಕೋಟೀ, ಎಲ್ಲಿಂದ ಬಂತೋ ಇವುಗಳ್ ಹತ್ರ ಇಷ್ಟೊಂದು? ಒಬ್ಬೊಬ್ರ ಹತ್ರ ನೂರು, ಸಾವಿರ ಕೋಟಿ..." ಎಂದು ನಿಜವಾಗಿ ಆಶ್ಚರ್ಯ ವ್ಯಕ್ತಪಡಿಸಿದೆ.

"ಅದೇ ನಿಜವಾದ ಮರ್ಮ ನೋಡು. ಎಷ್ಟೋ ಜನ ನೆಟ್ಟಗೆ ಹೈಸ್ಕೂಲೂ ಪಾಸಾಗಿರಂಗಿಲ್ಲ, ಲೆಕ್ಕಕ್ಕೆ ತೋರಿಸಿರೋದೆ ಕೋಟಿಗಟ್ಟಲೆ ಅಂದ್ರೆ ಇನ್ನು ಒಳಗೆಷ್ಟು ಇಟ್ಟಿರಬಹುದು?"

"ಹಂಗಂದ್ರೆ ಇವುಗಳ ಮುಂದೆ ನಮ್ಮ ವಾರನ್ನ್ ಬಫೆಟ್ಟು, ಬಿಲ್ ಗೇಟ್ಸ್ ಇವ್ರೆಲ್ಲ ಲೆಕ್ಕಕ್ಕೇ ಇಲ್ಲ..." ಅಂತ ಲೇವಡಿ ಮಾಡಿದೆ, ಅವನು ಅದನ್ನು ನಿಜ ಅಂದುಕೊಂಡು,

"ಮತ್ತಿನ್ನೇನು, ಆ ಫೋರ್ಬ್ಸು, ಫಾರ್ಚೂನ್ ನವರಿಗೆಲ್ಲ ಇಂಡಿಯಾದ್ ಬಗ್ಗೆ ಒಂದು ವರದಿ ಮಾಡೋಕ್ ಹೇಳು, ನಮ್ಮಲ್ಲಿ ನಿಜವಾಗಿ ಎಷ್ಟು ದುಡ್ಡಿದೇ ಅಂತ ಗೊತ್ತಾಗುತ್ತೆ?"

"ಹಾಗಾದ್ರೆ, ನಮ್ ಅಮೇರಿಕದ ಬಿಲಿಯನ್ನುಗಳೆಲ್ಲ ಲೆಕ್ಕಕ್ಕೇ ಇಲ್ಲ ಅನ್ನು?" ಎಂದು ಮೂದಲಿಸಿದ್ದಕ್ಕೆ...

"ಗುರುವೇ, ನಿನಗೇನ್ ಗೊತ್ತಿದೆ ಹೇಳು, ಒಂಥರ ಇನ್ನೂ ಹೈಸ್ಕೂಲ್ ಹುಡುಗನಂಗೆ ಮಾತಾಡ್ತಿ ನೋಡು. ಕಳೆದ ವರ್ಷ ನಿನ್ನ ಅಮೇರಿಕದ ಇಂಡೆಕ್ಸ್‌ಗಳು ಅಬ್ಬಬ್ಬ ಅಂದ್ರೆ ಎಷ್ಟು ಪರ್ಸೆಂಟ್ ಮೇಲಕ್ಕ್ ಹೋದ್ವು ಹೇಳೂ, ಇಪ್ಪತ್ತೋ ಮೂವತ್ತೋ ಪರ್ಸೆಂಟ್ ತಾನೆ? ಕಳೆದ ಐದು ವರ್ಷದಲ್ಲಿ ಮಾರ್ಕೆಟ್ಟು ಕೆಳಗ್ ಬಿದ್ದದ್ದು ಡಬ್ಬಲ್ಲೋ ತ್ರಿಬ್ಬಲ್ಲೋ ಆಯ್ತಲ್ಲಾ? ಅದೇ ದೊಡ್ದು ತಾನೆ? ಹುಚ್ಚಪ್ಪಾ, ಕೇಳು...2009 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರ್‌ಗಳನ್ನ 2014 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರುಗಳಿಗೆ ಕಂಪೇರ್ ಮಾಡಿ ನೋಡು. ನಮ್ಮ ದೇಶದ ಒಬ್ಬೊಬ್ಬ ರಾಜಕೀಯ ನಾಯಕನ ಪರ್ಸನಲ್ಲ್ ಸ್ವತ್ತು ಅದೆಷ್ಟು ಸಾವಿರ ಪರ್ಸೆಂಟ್ ಬೆಳೆದಿದೆ ಅಂತ? ಒಂದ್ ಕೆಲ್ಸಿಲ್ಲ, ಉದ್ಯಮಾ ಇಲ್ಲಾ, ಹೇಳಿ-ಕೇಳಿ ಸಮಾಜ ಸೇವೆ ರಾಜಕೀಯದ ಕೆಲ್ಸ, ಎಲ್ಲಿ ನೋಡಿದ್ರೂ ಇನ್‌ಫ್ಲೇಷನ್ನ್ ಜಾಸ್ತಿ ಅಗಿರೋ ಹೊತ್ನಲ್ಲಿ ಅದ್‍ ಹೆಂಗೆ ಐದು ವರ್ಷದ ಹಿಂದೆ ಹತ್ತು ಕೋಟಿ ಡಿಕ್ಲೇರ್ ಮಾಡ್ದೋನು ಈ ಸರ್ತಿ ನೂರು ಕೋಟಿ ಡಿಕ್ಲೇರ್ ಮಾಡ್ತಾನೆ? ಅದನ್ನ್ ಯಾವ್ ಇಂಡೆಕ್ಸಿಗೆ ಹೋಲಿಸ್ತಿ?"

"ಹೌದೋ ಸುಬ್ಬಾ ಎಲ್ಲಿಂದ ಬರುತ್ತೆ ದುಡ್ಡು ಇವ್ರಿಗೆ? ಕೆಲವ್ರದ್ದಂತೂ 760, 800 ಕೋಟಿಗಳಷ್ಟು ಒಟ್ಟು ಮೊತ್ತ ಅಂತಲ್ಲಪ್ಪಾ?"

"ಏಳ್ನೂರು ಕೋಟಿ ಬಾಳಾ ಕಡಿಮೆ ಆಯ್ತು, ಇನ್ನೂ ಸಾವ್ರ ಸಾವ್ರ ಕೋಟಿಗಟ್ಟಲೇ ಇದ್ದೋರು ಇದಾರೆ, ತಿಳ್ಕಾ"

"ಮತ್ತೆ ಇವ್ರ ಹತ್ರ ಇಷ್ಟೊಂದು ದುಡ್ಡು ಇರೋರ್, ರಾಜಕೀಯಾನಾದ್ರೂ ಯಾಕ್ ಮಾಡ್ತಾರೆ, ಸುಮ್ನೆ ತಾವ್ ತಮ್ದು ಅಂತ ಇರಬಾರ್ದಾ?"

"ಅದೇ ವಿಶೇಷ ನೋಡು, ಅದು ನಿಮ್ಮಂತೋರಿಗೆ ಅರ್ಥ ಆಗಲ್ಲ, ಯಾರು ರಾಜಕೀಯಕ್ಕ್ ಬರ್ತಾರೆ ಅಂತ ತಿಳಕಂಡೀ? ದುಡ್ಡ್ ಇಲ್ದೋನ್ ದುಡ್ಡು ಮಾಡೋಕ್ ಬರ್ತಾನೆ, ದುಡ್ಡ್ ಮಾಡ್ದೋನ್ ಅದನ್ನ ಉಳಸ್ ಕೊಳೋಕ್ ಬರ್ತಾನೆ".

"ಅಲ್ಲಾ ಮಾರಾಯಾ, ನಾವ್ ಸುಮ್ನೇ ಊರೂ-ಕೇರೀ, ದೇಶ-ಮನೆ ಬಿಟ್ಟು ಅದನ್ನ ಇದನ್ನ ಓದಿ, ಇತ್ಲಾ ಕಡೇ ಬಂದಿದ್ದೆಲ್ಲಾ ವೇಷ್ಟ್ ಆಯ್ತು ಅನ್ನು, ಸುಮ್ನೇ ಯಾವ್ದಾರ ಪಾರ್ಟಿ ಪಕ್ಷದ ಹೆಸ್ರು ಹಿಡಕೊಂಡ್ ಒಂದಿಪ್ಪತ್ತ್ ವರ್ಷ ಓಡಾಡಿದ್ರೆ ನಾವೂ ಕೋಟಿ-ಕೋಟಿ ಎಣಿಸ್ಬೋದಿತ್ತು..." ಈ ಮಾತಿನಿಂದ ಸುಬ್ಬನಿಗೆ ಸ್ವಲ್ಪ ಸಿಟ್ಟು ಬಂತು ಅಂತ ಅನ್ಸುತ್ತೆ, ನನ್ನ ಮಾತಿನ್ನ ಮಧ್ಯೆ ಹೀಗನ್ನೋದೇ,

"ಅವಾಗ ಇದು ಎಲ್ಲಿಗೆ ಬರುತ್ತೆ ಗೊತ್ತೇನೋ? ನಿನ್ನಂಥಾ ಎನ್ನಾರೈಗಳು ಒಂಥರಾ ಸಪ್ಪೆ ನಾಯ್‌ಗಳು ಇದ್ದಂಗೆ, ಇತ್ಲಾಗ್ ಬೊಗೊಳೋದೂ ಇಲ್ಲ, ಅತ್ಲಾಗ್ ಕಚ್ಚೋದೂ ಇಲ್ಲ. ನಾಯಿ ಅಂದ್ರೆ ನಾಯಿ ಇದ್ದ ಹಾಗೆ ಇರ್‌ಬಕು, ಇವೆಲ್ಲ ನಮಿಗ್ ಬ್ಯಾಡಾ ಅಂತ ಬಿಟ್ಟ್ ವಿರಾಗಿಗಳಾಗ್ ಹೋದ್‌ಮೇಲೆ ಅವಾಗವಾಗ ಇಂಥಾ ಚಿಂತಿ ಯಾಕ್ ಹಚ್‌ಗಂತೀರ್ ಹೇಳು? ಅದರಿಂದ ಏನ್ ಉದ್ದಾರಾಗಿದೆ? ಒಂದ್ಸರ್ತಿ ಮೂಡ್ ಬಂದಾಗ ದುಡ್ಡೇನು ಸರ್ವಸ್ವ ಅಲ್ಲಾ ಅಂತಾ ಬಾಷ್ಣಾ ಬಿಗೀತಿ, ಈಗ ಇಲೆಕ್ಷನ್ನ್ ಅಂಕಿ-ಅಂಶ ನೋಡ್ಕೊಂಡು ದುಡ್ಡೇ ದುಡ್ಡೂ ಅಂತೀ, ನಿನಗೂ ಈ ರಾಜಕಾರ್ಣಿಗಳಿಗೂ ಏನರ ವ್ಯತ್ಯಾಸ ಐತಾ?" ಎಂದು ಎಲೆ-ಅಡಿಕೆ ಹಾಕ್ಕೊಂಡು ಚೆನ್ನಾಗ್ ಉಗದಾ... ಆದ್ರೆ ನಾನು ಬಿಟ್ಟು ಕೊಡ್ಲಿಲ್ಲಾ,

"ನಿಮ್ದು ದೊಡ್ಡ ವ್ಯಾಪಾರೀ ಮನೋಭಾವ್ನೆ ದೇಶ, ನಿನ್ನಂಥೋರ್ ಹತ್ರ ತಪ್ಪೂ-ಸರಿ ಅಂತ ಏನ್ ಮಾತಾಡೋದ್ ಹೇಳು? ಭ್ರಷ್ಟಾಚಾರ ವ್ಯವಸ್ಥೆನಲ್ಲಿ ಪ್ರತಿ ಓಟಿಗೆ ಎರಡೆರಡು ಸಾವ್ರ ಅಂತ ಮಾರ್ಕೋಳ್ಳೋರು ನೀವು" ಅಂತ ನಾನು ಧ್ವನಿ ಜೋರು ಮಾಡಿದೆ,

’ನೋಡು, ಸುಖಾ ಸುಮ್ನೇ ಅನ್ನಬ್ಯಾಡ. ಭ್ರಷ್ಟಾಚಾರ ವ್ಯವಸ್ಥೇ ಎಲ್ಲಾ ಕಡೆ ಇದೆ, ನಿಮ್ಮಲ್ಲಿ ನಾಜೂಕಾಗಿ ಸಗಣೀನ ಫೋರ್ಕ್ ತೊಗೊಂಡ್ ತಿಂತೀರಿ, ಆ ಚೈನಾದವ್ರು ಚಾಪ್ ಸ್ಟಿಕ್ಕ್‌ನಲ್ಲಿ ತಿಂತಾರೆ, ಮತ್ತೊಂದ್ ಕಡೆ ಚಮಚಾದಲ್ಲಿ ತಿಂತಾರೆ, ಆದ್ರೆ ನಮ್ ಕಡೆ ಅವಕಾಶ ಸಿಕ್ಕಾಗ ನೀಟಾಗಿ ಕೈ ಹಾಕಿ ಕಲಸಿಗೊಂಡು ತಿಂತಾರೆ. ಅಲ್ಟಿಮೇಟ್ಲಿ ಅಂತಾ ಏನ್ ವ್ಯತ್ಯಾಸ ಇಲ್ಲ, ಎಲ್ಲಾ ಒಂದೇ"

"ಏನ್ ಅಂತ ಮಾತಾಡ್ತಿಯೋ, ಏನೇ ಆದ್ರೂ ಅಮೇರಿಕದ ಜನ ನಿಮ್ ಥರ ದುಡ್ಡಿಗ್ ಓಟ್ ಹಾಕೋದಿಲ್ಲ, ತಿಳಕಾ..."

"ನೀ ಏನ್ ಮಾತಾಡ್ತಿದಿಯೋ, ಇಷ್ಟು ವರ್ಷ ಅಲ್ಲಿದೀ, ಇಷ್ಟೋ ಗೊತ್ತಾಗಂಗಿಲ್ಲ ಅಂದ್ರೆ ಹೆಂಗೆ? ಗುರುವೇ ಎಲೆಕ್ಷನ್ನ್ ಕ್ಯಾಂಫೇನ್ ಫಂಡು ಅಂಥ ಕಾರ್ಪೋರೇಷನ್ನುಗಳು ಪಕ್ಷಕ್ಕೆ ಕೊಡೋ ದುಡ್ಡೂ ಎಲ್ಲಿಂದ ಬರುತ್ತೆ ಎಲ್ಲೀಗ್ ಹೋಗುತ್ತೆ?"

"ಅದು ಲೀಗಲೈಜ್ಡ್ ವ್ಯವಸ್ಥೆ ಅಲ್ವಾ..."

"ನಿನ್ ತಲೆ, ಲೀಗಲ್ಲು... ನಾವು ನಿಮ್ಮನ್ನ ಸಪೋರ್ಟ್ ಮಾಡ್ತೀವಿ ಅಂತ ಪಾರ್ಟಿಗಳಿಗೆ ದೇಣಿಗೆ ಕೋಡೋದರಲ್ಲಿ ಕಂಪನಿಗಳ ಸ್ವ ಇಚ್ಚೆ ಸ್ವಾರ್ಥ ಒಂದಿಷ್ಟೂ ಇಲ್ಲಾ ಅಂದ್ರೆ ಅವರ್ಯಾಕೆ ಕೊಡ್ತಾರೆ?"

"ಅದು ಕಂಪನಿಗಳ ಲೆಕ್ಕ, ನಮ್ಮ ಜನಸಾಮಾನ್ಯರದ್ದೇನು ಅದ್ರಲ್ಲಿ ಪಾತ್ರ ಇಲ್ಲ"

"ಥೂ ನಿನ್ನ, ಅದೇ ತಪ್ಪು, ನೀನು ಕಂಪನೀನಲ್ಲಿ ಇನ್ವೆಷ್ಟ್ ಮಾಡ್ದಿ ಅಂದ್ರೆ, ಅದ್ರಲ್ಲಿ ನೀನೂ ಶಾಮೀಲೂ ಅಂತ ತಾನೇ ಅರ್ಥ. ನಿನಗೆ ಬೇಕೋ ಬೇಡ್ವೋ ನೀನಿರೋ ವ್ಯವಸ್ಥೆ ನಿನ್ ಸುತ್ಲೂ ಸುತ್ತ್ ಕೊಳ್ಳೋದೇ ಮಾಡರ್ನ್ ಸೋಷಿಯಲ್ಲಿಸ್ಸಮ್ಮು ನೋಡು, ಒಂಥರಾ ಡೊಕೋಮೋ ಅಂಥ ನೆಟ್‌ವರ್ಕ್ ಕರೀತಾನೇ ಇರುತ್ತೆ ಎಲ್ಲ್ ಹೋದ್ರೂ ಬಿಡಂಗಿಲ್ಲ" ಎಂದು "ಡೊಕೋಮೋ..." ಅಡ್ವರ್ಟೈಸ್‌ಮೆಂಟ್ ಇಮಿಟೇಟ್ ಮಾಡಿ ಜೋರಾಗಿ ನಕ್ಕ.

"ಹಂಗಂದ್ರೆ ಎಲೆಕ್ಷನ್ನು ಅಂದ್ರೆ ಬರೀ ರೊಕ್ಕ ಇರೋರ್ ಆಟ ಅನ್ನು, ಇನ್ನು ಸಾಮಾನ್ಯರ ಪಾಲು ನಾಯಿ ಪಾಲು ?"

"ಇದು ಹೆಂಗೆ ಗೊತ್ತಾ, ಇದು ಬೈ ಡೆಫನಿಷನ್ ಯಾರು ಬೇಕಾದ್ರೂ ಭಾಗವಹಿಸೋ ಪ್ರಜಾಪ್ರಭುತ್ವ ವ್ಯವಸ್ಥೇನೇ, ಆದ್ರೆ ದುಡ್ಡಿರೋರು ದೊಡ್ಡಪ್ಪ ಅಷ್ಟೇ. ಒಂಥರಾ ಈ-ಟಿವಿ ಡ್ಯಾನ್ಸ್ ಪ್ರೋಗ್ರಾಂ ತಕಧಿಮಿತ ಬರುತ್ತಲ್ಲ ಹಂಗೆ, ಅವರ ಸ್ಲೋಗನ್ನ್ ಏನ್ ಹೇಳು? ’ಯಾರು ಬೇಕಾದ್ರು ಕುಣೀಬೋದು’ - ಆದ್ರೆ ನಾವು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡ್ತೀವಿ ಅಂತ ಹಂಗೆ.

"ಸರಿ ಬಿಡು, ಇನ್ನೇನು ಎಲೆಕ್ಷನ್ನು ಮುಗಿಯುತ್ತೇ, ಅಮೇಲೇ ಕುದುರೆ ವ್ಯಾಪಾರ ಶುರು, ಒಬ್ಬೊಬ್ಬ ಎಮ್ಮೆಲ್ಲೆಗಳನ್ನ ಎಂಪಿಗಳನ್ನ ಕೊಡೊ-ಕೊಳ್ಳೋ ಆಟ ನಡೆಯುತ್ತೇ" ಅಂದೆ,

"ಈ ಎಮ್ಮೆಲ್ಲೆಗಳನ್ನ ಹೆಂಗೆ ಕೊಳ್ತಾರೆ ಅನ್ನೋದಕ್ಕೆ ತೆಲುಗಿನಲ್ಲಿ ಲೀಡರ್ ಅಂತ ಒಂದು ಸಿನಿಮಾ ಇದೆ ನೋಡು, ಅದ್ರಲ್ಲಿ ಒಂದು ಫ್ಯಾಟ್ ಕೀ ಕೊಟ್ಟು ಅದ್ರಲ್ಲಿರೋ ಎಲ್ಲಾ ಬೀರು ಅಲ್ಮೇರಾಗಳಲ್ಲಿ ನೋಟುಗಳನ್ನ ತುಂಬಿ ಇಟ್ಟಿರ್ತಾರೆ, ಅಂತದನ್ನ ಬ್ಯಾಡ ಅನ್ನೋದಕ್ಕೆ ಬಾಳಾ ಗಟ್ಟಿ ಎದೆ ಬೇಕು, ಸೋ ಐ ಡೋಂಟ್ ಬ್ಲೇಮ್ ದೆಮ್"

"ಸರಿ, ಟೈಮ್ ಆಯ್ತು...ಈ ಎಲೆಕ್ಷನ್ನಲ್ಲಿ ನಿನ್ ಪ್ರಿಡಿಕ್ಷನ್ನ್ ಏನು, ಕರ್ನಾಟಕದಲ್ಲಿ ಯಾರ್ ಬರ್ತಾರೆ, ದೇಶದ ಚುಕ್ಕಾಣೀ ಯಾರ್ ಹಿಡೀತಾರೆ?"


"ನನ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಕಷ್ಟ, ಗಣಿ ದೊರೆಗಳ ಸವಾಸದಿಂದ ಬಾಳ ಗಬ್ಬಿಟ್ಟ್ ಹೋಗವ್ರೆ ನಮ್ ನಾಯಕ್ರು. ಅಲ್ದೇ ಆಳೋ ಪಕ್ಷದ ಪರವಾಗಿ ಕಾಂಗ್ರೆಸ್ ಮೆಜಾರಿಟಿ ಬರ್ಬೋದು. ಆದ್ರೆ ದೇಶದಲ್ಲಿ ಸ್ವಲ್ಪ ಮೋದಿ ಅಲೆ ನಡೀತಾ ಇದೆ. ಏನಾಗತ್ತೋ ಗೊತ್ತಿಲ್ಲ"

"ಮತ್ತೇ, ಆಪೂ... ಪಾಪೂ, ಇವೆಲ್ಲ?"

"ಏ, ತೆಗಿ ತೆಗಿ, ಆಪ್ ಬರ್ಬೇಕು ಅಂದ್ರೆ, ಇನ್ನೊಂದು ಇಪ್ಪತ್ತೈದು ವರ್ಷಾನಾದ್ರೂ ಬೇಕು, ಒಬ್ಬ ಕಪಾಳ ಮೋಕ್ಷದ ನಾಯಕನಿಂದ ಇಡೀ ದೇಶದ ರಾಜ್‌ಕಾರ್ಣ ಬದಲಾಗೋಕ್ಕೆ ಸಾಧ್ಯವೇ?"

"ಯಾಕ್ ಆಗ್‌ಬಾರ್ದು?"

"ಅದೇ ನಿಂಗೊತ್ತಾಗೋಲ್ಲ ಅನ್ನೋದು. ದುಡ್ಡಿಗೆ ಓಟ್ ಮಾರ್ಕೊಳ್ಳೋ ಜನರಲ್ಲಿ ಒಂಥರ ಎನ್‌ಟೈಟಲ್ಲ್‌ಮೆಂಟ್ ಬರುತ್ತೆ. ಅದ್ಕೇ ನಮ್ ಜನ ಗಾದೆ ಮಾಡಿರೋದು - ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡಾ - ಅಂತ" ಎಂದು ದೊಡ್ಡದಾಗಿ ನಕ್ಕ.

"ಮತ್ತೇನಪ್ಪಾ ಸಮಾಚಾರ..."

"ಮತ್ತೇನಿಲ್ಲ ಗುರುವೇ, ಅಯ್ಯೋ ಅಡಿಕೇ ಮಂಡಿಗ್ ಹೋಗ್ಬೇಕು, ನಿನ್ ಹತ್ರ ಮಾತಾಡಿ ಹೊತ್ ಹೋಗಿದ್ದೇ ಗೊತ್ತಾಗಿಲ್ಲ, ಅವಾಗವಾಗ ಫೋನ್ ಮಾಡ್ತಾ ಇರು" ಎಂದು ನನ್ನ ಉತ್ತರಕ್ಕೂ ಕಾಯ್ದೆ ಫೋನ್ ಇಟ್ಟೇಬಿಟ್ಟ...ನಾನು ಒಂಥರಾ ಟಿ.ವಿ. ನೈನ್ ಬ್ರೇಕಿಂಗ್ ನ್ಯೂಸ್ ನೋಡಿದ ಶಾಕ್‌ನಲ್ಲಿ ಆಫೀಸಿನ ಕೆಲಸಕ್ಕೆ ತಿರುಗಿದೆ.

Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.

Thursday, August 09, 2012

ಅಣ್ಣಾ, ಹೊಸ ಪಕ್ಷ ಬೇಡಣ್ಣ

ಇಷ್ಟು ದೊಡ್ಡ ದೇಶದಲ್ಲಿ, ಎಷ್ಟೊಂದು ಜನ ಮುತ್ಸದ್ದಿಗಳು, ವಾದಿ-ಪ್ರತಿವಾದಿಗಳು, ವಿಚಾರವಂತರು, ಚಿಂತನಶೀಲರು, ಮುಖಂಡರು, ಪ್ರತಿಭಾವಂತರು ತುಂಬಿ ತುಳುಕಾಡುತ್ತಿರುವಾಗ ಯಾರೊಬ್ಬರೂ ಕೆ.ಬಿ. ಹಜಾರೆ (aka ಅಣ್ಣಾ ಹಜಾರೆ) ಅವರನ್ನು ಬದಿಗೆ ಕರೆದು, 'ನಿಮ್ಮ ನಿಲುವುಗಳೇನೋ ಸತ್ವವುಳ್ಳವು, ಆದರೆ ಅವುಗಳನ್ನು ಪ್ರತಿಪಾದಿಸುವಲ್ಲಿ ನೀವು ಹಿಡಿದಿರುವ ಇಂಪ್ಲಿಮೆಂಟೇಷನ್ನ್ ಮೆಥಡ್ ಅಷ್ಟೊಂದು ಯೋಗ್ಯವಲ್ಲದ್ದು’ ಎಂದು ಯಾರೂ ಏಕೆ ಹೇಳುತ್ತಿಲ್ಲ?

***


(picture source: thecommonspeaks.com)

ನಮ್ಮ ಅಂತರಂಗವನ್ನು ನಾವು ಅವಲೋಕಿಸಿಕೊಂಡರೆ ನಾವೆಲ್ಲರೂ ಒಂದೇ ಒಕ್ಕೊರಲಿನಲ್ಲಿ 'ಭ್ರಷ್ಟಾಚಾರದ ಮೂಲ ರಾಜಕಾರಣಿಗಳು!’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ರಿಯಲಿ? ನನ್ನ ಜೊತೆ ನೀವೂ ಯೋಚಿಸಿ, ಈ ಲೇಖನವನ್ನು ಓದಿದ ಬಳಿಕವೂ ನೀವು ನಿಮ್ಮ ಅಭಿಪ್ರಾಯವೇ ನಿಜವೆಂದುಕೊಂಡರೆ ಅದರ ಬಗ್ಗೆ ವಿವರವಾಗಿ ಇಲ್ಲ ಸಂಕ್ಷಿಪ್ತವಾಗಿ ನನಗೊಂದು ಸಾಲು ಬರೆಯಿರಿ.

ಉದಾಹರಣೆ 1: ನಾನು ತಾಲೂಕು ಆಫೀಸಿಗೆ ಹೋಗುತ್ತೇನೆ. ಅಲ್ಲಿ ನನಗೊಂದು ಸಣ್ಣ ಕೆಲಸವಾಗಬೇಕಾಗಿದೆ, ಆದರೆ ಆ ಕೆಲಸವನ್ನು ಮಾಡಿಕೊಡಲು ಸುಮಾರು 4 ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಲ್ಲಿನ ಹೆಡ್‌ಕ್ಲರ್ಕ್ ಹೇಳುತ್ತಾರೆ.
ನಾನು ಪರವಾಗಿಲ್ಲ, ನಾಲ್ಕು ಘಂಟೆಗಳನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತೇನೆ, ಮತ್ತು ಸರಿಯಾಗಿ ನಾಲ್ಕು ಘಂಟೆಗಳ ನಂತರ ಹೋದರೆ, ಅದೇ ಹೆಡ್‌ಕ್ಲರ್ಕ್ ದೊಡ್ಡ ತಗಾದೆ ತೆಗೆಯುತ್ತಾರೆ.
’ನನಗೆ ಸುಮಾರು 24 ಫೈಲುಗಳನ್ನು ನೋಡಿ ಮುಗಿಸಬೇಕು, ಇನ್ನು ಒಂದು ವಾರ ಬಿಟ್ಟು ಬನ್ನಿ!’

ಆಗ ನನ್ನ ಆಪ್ಷನ್ನುಗಳೇನು?
- option 1 - ಸರಿಯಾಗಿ ಇನ್ನೊಂದು ವಾರ ಬಿಟ್ಟು ಬಂದು ಕೆಲಸವಾಗಿದೆಯೋ ಇಲ್ಲವೋ ಎಂದು ನೋಡುವುದು.
- option 2 - ಅಲ್ಲಿನ ಮತ್ತೊಬ್ಬ ಕ್ಲರ್ಕ್ ಸಲಹೆ ಮಾಡಿದ ಪ್ರಕಾರ 800 ರುಪಾಯಿಗಳನ್ನು ಕೊಟ್ಟರೆ ಅದೇ ದಿನ ಅವರು ಕೆಲಸ ಮಾಡಿಕೊಡುತ್ತಾರೆ, ಬೇಕಾದರೆ ಆ ಮತ್ತೊಬ್ಬ ಕ್ಲರ್ಕ್ ನನ್ನ ಪರವಾಗಿ ಶಿಫಾರಸ್ಸ್ ಮಾಡುತ್ತಾರಂತೆ.

ನಿಮಗೆ ಈ ಕೆಲಸ ಬಹಳ ಮುಖ್ಯವಾದುದು, ನಾಲ್ಕು ಘಂಟೆಗಳನ್ನು ಕಾಯಬಹುದು, ಆದರೆ ನಾಲ್ಕು ದಿನ ಕಾಯುವಂತಿಲ್ಲ, ನನ್ನ ಜಾಗೆಯಲ್ಲಿದ್ದರೆ ನೀವೇನು ಮಾಡುತ್ತೀರಿ?

ಉದಾಹರಣೆ 2: ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಪೋಸ್ಟೆಡ್ ಸ್ಪೀಡ್ ಲಿಮಿಟ್ಟಿಗಿಂತ ಘಂಟೆಗೆ 25 ಮೈಲಿ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿ, ದೊಡ್ಡ ತಪ್ಪನ್ನು ಎಸಗಿದ್ದೀರಿ.
ಟ್ರಾಫಿಕ್ ಪೋಲಿಸ್ ರೇಡಾರ್ ಡಿಟೆಕ್ಟರ್ ಮೂಲಕ ನಿಮ್ಮ ತಪ್ಪನ್ನು ಸಾಬೀತುಗೊಳಿಸುವ ರಿಪೋರ್ಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ (ಡ್ರೈವರ್) ಪಕ್ಕದ ಕಿಟಕಿಯಲ್ಲಿ ನಿಂತಿದ್ದಾನೆ.
ಸ್ಥಳದಲ್ಲೇ ದಂಡ ಕಟ್ಟಿದರೆ 8 ಸಾವಿರ ರೂಪಾಯಿ ಆಗುತ್ತದೆ (ಕೊಡದಿದ್ದರೆ ಗಾಡಿ ಬಿಡೋದಿಲ್ಲ ಮುಂದೆ).
ಅದೇ ಸಮಯುಕ್ಕೆ ಮತ್ತೊಬ್ಬ ಪೋಲಿಸ್ ಕಾರಿನ ಇನ್ನೊಂದು ಕಿಟಕಿಯಲ್ಲಿ ಬಂದು, 8 ಸಾವಿರ ಇಲ್ಲದಿದ್ರೆ 4 ಸಾವಿರ ಕೊಡಿ ಪರವಾಗಿಲ್ಲ, ಆದ್ರೆ ನಿಮಗೆ ಕಂಪ್ಯೂಟರ್ ರಶೀದಿ ಸಿಗೋದಿಲ್ಲ ಅಂತಾನೆ.

ನೀವು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು. ಹೆಚ್ಚು ಹೊತ್ತು ತರ್ಕವಾಗಲಿ, ತಕರಾರನ್ನಾಗಲೀ ಮಾಡಲು ವ್ಯವಧಾನವಿಲ್ಲ.
ನೀವು ಪೋಲೀಸ್‌ಗೆ ೮ ಸಾವಿರ ಕೊಡ್ತೀರಾ? ೪ ಸಾವಿರ ಕೊಡ್ತೀರಾ?

***

ನನ್ನ ಹಾಗೆ ನೀವೂ ಸಹ ನಿಮ್ಮ ಬದುಕಿನಲ್ಲಿ ಈಗಾಗಲೇ ಬಹಳ ರಾಜಕೀಯ ಪಕ್ಷಗಳು ಹುಟ್ಟಿ-ಸತ್ತಿದ್ದನ್ನು ನೋಡಿರಬಹುದು. ಕ್ರಾಂತಿರಂಗ, ತೃಣಮೂಲ, ಹೊಟ್ಟೆ, ಸಮಾಜವಾದಿ, ದಳ, ಹಲವಾರು ಬಗೆಯ "ಕಾಂಗ್ರೆಸ್ಸು"ಗಳು, ಲಲ್ಲೂ ಪಕ್ಷ, ಅವನ ಹೆಂಡತಿ ಪಕ್ಷ, ಜಾತಿ-ಜಾತಿಗಳ ಪಕ್ಷ, ಜಾತಿ ಇಲ್ಲದವರ ಪಕ್ಷ - ಹೀಗೆ ಹಲವು...ಈ ಪಟ್ಟಿ ಬಹಳ ಮುಂದುವರೆಯುತ್ತದೆ. ಎಲ್ಲದರ ಪ್ರಣಾಳಿಕೆಗಳು ಒಂದೇ - ದೇಶೋದ್ದಾರ.  66 ವರ್ಷದ ಸ್ವತಂತ್ರ್ಯೋತ್ತರ ಬಾಳ್ವೆಯಲ್ಲಿ ದೇಶದ ಉದ್ದಗಲಕ್ಕೂ ಅಂದಿನ ಮೂಲ ಸಮಸ್ಯೆಗಳು, ಇಂದಿಗೂ ಇವೆ; ಅವುಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಮೇಲೆ ಹುಟ್ಟಿ ಕೆಳಗೆ ಹರಿದು ಬರುವಂತದಲ್ಲ, ಕೆಳಗೆ ಹುಟ್ಟಿ ಸರ್ವತೋಮುಖವಾಗಿ ಬೆಳೆಯುವಂತದು. ತಾಲೂಕು ಆಫೀಸಿನಲ್ಲಿ 'ಅಡ್ಜಸ್ಟ್’ ಮಾಡಿಕೊಳ್ಳುವ ನಮ್ಮ ಮೆಂಟಾಲಿಟಿ, ನಾವು ಕಾನೂನನ್ನು ಮುರಿದಾಗ ನಮ್ಮ ಸಹಾಯಕ್ಕೆ ಬರುವ ಅಡ್ಡದಾರಿತನ ಇವುಗಳು ಲಂಚಕೋರತನದ ಮೂಲ ಕಾರಣ (ರೂಟ್‌ಕಾಸ್) ಗಳಲ್ಲೊಂದು. ಲಂಚ ಕೊಡುವವರು ನಾವು, ತೆಗೆದುಕೊಳ್ಳುವವರು ನಾವು - ಇದನ್ನು ಅರಿವಿನಿಂದ, ಬೆಳೆದ ವ್ಯವಸ್ಥೆಯಿಂದ, ಆಧುನಿಕ ಪರಿಕರಗಳಿಂದ ಹೊಡೆಯಬೇಕೇ ವಿನಾ ಮತ್ತೊಂದು ಪಕ್ಷ ಕಟ್ಟುವುದರಿಂದಲ್ಲ.

ಹಜಾರೆ ನಂಬಿಕೊಂಡ ಗಾಂಧಿ ಮಹಾತ್ಮ ಯಾವುದೇ ರಾಜಕೀಯ ಪದವಿಯನ್ನು ಅಲಂಕರಿಸದಿದ್ದರೂ, ಸಮಾಜದಲ್ಲಿ ಬದಲಾವಣೆಗಳನ್ನು ತರಲಿಲ್ಲವೇನು? ಹೊಸ ಪಕ್ಷ ಕಟ್ಟುವುದರಿಂದ ಏನಾದೀತು? ಮತ್ತೆ ಈ ಪಕ್ಷದ ವಕ್ತಾರರು ಇಂದಿನ ಕ್ಷೋಭೆಗಳ ನಡುವೆ ಮುಕ್ತವಾಗಿ ಸ್ಪರ್ಧಿಸಿ, ಗೆದ್ದು ಮೇಲೆ ಬರುವುದು, ಹಾಗೆ ಬಂದ ನಂತರ ಸುಧಾರಣೆಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವೇನು?

ನಾವು, ಲಂಚಾವತರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವವರೆಲ್ಲರೂ, ಒಂದು ರೀತಿಯಲ್ಲಿ ಹುಲಿ ಸವಾರಿಯಲ್ಲಿ ತೊಡಗಿದ್ದೇವೆ. ಹುಲಿ ಸವಾರಿಯನ್ನು ನಿಲ್ಲಿಸಿ ಹುಲಿಯಿಂದ ಕೆಳಗಿಳಿದರೆ ಹುಲಿಯೇ ನಮ್ಮನ್ನು ಕಬಳಿಸಿ ಬಿಡುವ ಸಾಧ್ಯತೆ ಇದೆ. ಸಾವಿರಾರು ವರ್ಷಗಳ ಸಮಸ್ಯೆಗೆ ಮತ್ತೊಂದು ಪಕ್ಷ ಕಟ್ಟುವುದು ಉತ್ತರವಲ್ಲ, 'ಅಣ್ಣಾ’ ಎಂದು ಕರೆಯುವವರೆಲ್ಲ, ನಾವು ಇಂದಿನಿಂದ ಭ್ರಷ್ಟರಾಗೋದಿಲ್ಲ ಎಂದು ಪ್ರಮಾಣ ಮಾಡಿ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಬಹಳಷ್ಟು ಸುಧಾರಣೆಗಳಾಗುತ್ತವೆ. ಈಗಾಗಲೇ ಇಳಿ ವಯಸ್ಸಿನ ಹಜಾರೆ ಅವರು ತಮ್ಮ ಮೂಲ ಮಂತ್ರ ಬೀಜವನ್ನು ಬಿತ್ತಿ, ಅದರಿಂದ ಹುಲುಸಾಗಿ ಕೃಷಿ ಬೆಳೆಯುವಂತೆ ಮಾಡಿದರೆ ಅದು ಜನಜನಿತವಾಗುತ್ತದೆ, ಹಾಗೂ ಕಾಲನ ಜೊತೆಗೆ ಬೆಳೆಯುತ್ತದೆ. ಅದನ್ನು ಬಿಟ್ಟು ಪಕ್ಷ ಕಟ್ಟಿದರೆ ಅದು ಕಾಲನಿಗೆ ಆಹಾರವಾಗುತ್ತದೆ.

***

ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸೀಮಿತವೇ?
ಬದಲಾಗಬೇಕಾದವರು ಯಾರು ಎಂದು ತಿಳಿಯಬೇಕಾದರೆ, ಹೋಗಿ ಕನ್ನಡಿ ಮುಂದೆ ನಿಲ್ಲಿ!

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Sunday, May 25, 2008

ಸೋಜಿಗಗಳು ನೂರು

ವರ್ಷದ ಮೇ ಒಂದು ವಿಶೇಷವಾದ ತಿಂಗಳೆಂದೇ ಹೇಳಬೇಕು. ೨೦೦೬ ರ ಮೇ ತಿಂಗಳಿನಲ್ಲಿ ದಿನಕ್ಕೊಂದರಂತೆ ೩೧ ಲೇಖನಗಳು ಬರೆದು ’ಅಂತರಂಗ’ದಲ್ಲಿ ಪ್ರಕಟಿಸಿದ ನನಗೆ ೨೦೦೭ ರ ಮೇ ತಿಂಗಳಿನಲ್ಲಿ ಕೇವಲ ೭ ಲೇಖನಗಳನ್ನಷ್ಟೇ ಪ್ರಕಟಿಸಲು ಸಾಧ್ಯವಾಯಿತು, ಹಾಗೇ ಈ ವರ್ಷದ ಮೇ ತಿಂಗಳಿನ ಈ ೨೫ ದಿನಗಳಲ್ಲಿ ಇದುವರೆಗೂ ಬರೆದು ಪ್ರಕಟಿಸಿದ್ದು ಕೇವಲ ಎರಡೇ ಎರಡು ಲೇಖನಗಳು. ಈ ಕಡೆ ಆಫೀಸಿನ ಕೆಲಸ ಓಡಾಟ ಹಾಗೂ ಅನೇಕಾನೇಕ ಕಾರಣಗಳಿಂದ ಕಂಪ್ಯೂಟರಿನ ಮುಂದೆ ಕುಳಿತು ಪರ್ಸನಲ್ ಟೈಮ್ ಎಂದು ಪುರುಸೊತ್ತು ಸಿಕ್ಕಿದ್ದೇ ಹೆಚ್ಚಾದರೆ ನನಗೆ ಆಶ್ಚರ್ಯವಾಗುವಂತೆ ಕನ್ನಡಪ್ರಭದ ಬ್ಲಾಗಾಯಣ ಹಾಗೂ ದಟ್ಸ್‌ಕನ್ನಡ ಪೋರ್ಟಲ್ಲುಗಳ ಮೂಲಕ ’ಅಂತರಂಗ’ಕ್ಕೆ ಭೇಟಿಕೊಡುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು ಈಗಾಗಲೇ ಈ ತಿಂಗಳ ಮೇ ಭೇಟಿ ಹಾಗೂ ಪೇಜ್ ವ್ಯೂವ್ ಅಂಕಿ-ಅಂಶಗಳ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವ ವಿಶೇಷವೇ ಹೌದು. Thanks to the portals and thanks to all of you!


***

ಈ ತಿಂಗಳು, ಈ ದಿನ ಮತ್ತೊಂದು ರೀತಿಯಲ್ಲಿ ವಿಶೇಷವಾದದ್ದೇ ಅನ್ನಬೇಕು - ಯಾವೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದೇ ಮತ್ತೆ ತೇಲಾಡುವ ಒಪ್ಪಂದಗಳು ಸರ್ಕಾರಗಳು ಬರುತ್ತವೆಯೇನೋ ಎಂದು ಕೊರಗುತ್ತಿದ್ದವರಲ್ಲಿ ನಾನೂ ಒಬ್ಬ. ಕಾಂಗ್ರೇಸೋ ಬಿಜೇಪಿಯೋ ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂತಲ್ಲ, ಇನ್ನಾದರೂ ಇವರಿವರಲ್ಲೇ ಕಚ್ಚಾಡಿಕೊಳ್ಳದೇ ಒಂದು ಐದು ವರ್ಷ ನಿರಾಳವಾಗಿ ಸರ್ಕಾರವನ್ನು ನಡೆಸಿ ಜನರ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳು ಸ್ಪಂದಿಸುವ ವ್ಯವಸ್ಥೆಯಾದರೆ ಸಾಕು!

ಹ್ಞಾ, ಈಗಾಗಲೇ ಕಾಲಚಕ್ರದ ಬರಹಗಳು ಆರಂಭವಾಗಿವೆ, ಇನ್ನು ಕಾಲಚಕ್ರದ ಮೇಷ್ಟ್ರು-ನಂಜ, ತಿಮ್ಮಕ್ಕ ಇವರೆಲ್ಲ ಸೇರಿ ಹೆಚ್ಚು ಹೆಚ್ಚು ಕಟ್ಟೆ ಪಂಚಾಯಿತಿ ಹಚ್ಚಿಕೊಳ್ಳುತ್ತಾರೆ ನೋಡುತ್ತಿರಿ.

ಈ ವರ್ಷದ ಚುನಾವಣೆಯ ಫಲಿತಾಂಶ ಬಹಳ ಸ್ವಾರಸ್ಯಕರವಾಗಿದೆ:
224 ಸ್ಥಳಗಳಲ್ಲಿ ನಡೆದ ಚುನಾವಣೆಗಳಲ್ಲಿ 943 ಪಕ್ಷೇತರರನ್ನು ಬಿಟ್ಟು 31 ಪಕ್ಷಗಳ 1299 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತದೆ. ನೂರಕ್ಕೆ 42 ರಷ್ಟು ಪಕ್ಷೇತರರು, ಕೆಲವೊಂದು ಕ್ಷೇತ್ರಗಳಲ್ಲಿ ಐದು-ಆರು ಜನರು ಸ್ಪರ್ಧಿಸಿದ್ದು ಹೊಸಬರಲ್ಲಿ ಹೆಚ್ಚು ಉತ್ಸಾಹವನ್ನು ಇನ್ನೂ ಉಳಿಸಿರುವುದು ನನಗಂತೂ ಆಶ್ಚರ್ಯ ತಂದಿತು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನಸ್ಪಂದನಕ್ಕೆ ಕಿವಿಗೊಡುವ ತಾಳ್ಮೆ ಎಷ್ಟು ಜನರಿಗಿದ್ದೀತು? NDTV ಯ ವರದಿಯಂತೆ ಇಂದಿನ ರಾಜಕೀಯದ ಹಿರಿಯ ತಲೆಗಳೆಲ್ಲ ಭಯಂಕರ ಶ್ರೀಮಂತರಿರಬಹುದು, ಕೋಟ್ಯಾಧೀಶ್ವರರಿರಬಹುದು ಆದರೆ ಈ ರಾಜಕೀಯವನ್ನೇ ನಂಬಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತೇವೆ, ಇದರಲ್ಲೇ ಇದ್ದು ನಾವೂ ಒಂದು ದಿನ ಕೋಟ್ಯಾಧಿಪತಿಗಳಾಗುತ್ತೇವೆ ಎನ್ನುವ ತತ್ವ ನಿನ್ನೆಯಷ್ಟಂತೂ ಇಂದು ಸರಳವಿಲ್ಲ.

ಆರು ಜನ ಪಕ್ಷೇತರ ಅಭ್ಯರ್ಥಿಗಳನ್ನು ಬಿಟ್ಟು ಖಾತೆ ತೆರೆದ ಪಕ್ಷಗಳೆಂದರೆ ಮೂರೇ ಮೂರು: ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್. ಉಳಿದ 28 ಪಕ್ಷದ 634 ಜನ ಅಭ್ಯರ್ಥಿಗಳಲ್ಲಿ ಹೆಚ್ಚು ಜನರಿಗೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದಾಗಿದ್ದು ನನಗೆ ಜನಾದೇಶ ಕಡಿಮೆ ಪಕ್ಷಗಳ ಸರ್ಕಾರದತ್ತ ಒಲವು ತೋರಿಸುತ್ತಿರುವಂತೆ ಕಂಡುಬಂತು.

ನನ್ನ ಹುಟ್ಟೂರು ಆನವಟ್ಟಿ, ಸೊರಬಾ ತಾಲೂಕಿನಲ್ಲಿ 1967 ರಿಂದ ಗೆದ್ದು ಬರುತ್ತಿದ್ದ ಬಂಗಾರಪ್ಪನವರ ಕುಟುಂಬದ ಯಶೋಗಾಥೆಗೆ ಕಡಿವಾಣ ಬಿದ್ದಿದೆ, ನಾಲ್ಕು ದಶಕಗಳ ನಂತರ ಹೊಸನಗರದ ಹಾಲಪ್ಪನವರು ಬಿಜೆಪಿ ಟಿಕೇಟಿನಲ್ಲಿ ಸಾಕಷ್ಟು ಬಹುಮತದಲ್ಲೇ ಗೆದ್ದುಬಂದಿರುವುದು (43%) ನಿಜವಾಗಲೂ ವಿಶೇಷ ಹಾಗೂ ವಿಚಿತ್ರ. ನಮ್ಮೂರಿನ ರಸ್ತೆಗಳಲ್ಲಿ, ಅಂಗಡಿ ಗೂಡುಗಳಲ್ಲಿ, ಹಳ್ಳಿಪಾಡುಗಳಲ್ಲಿ ಯಾವ ಯಾವ ರೀತಿಯ ಮಾತುಕಥೆಗಳು ನಡೆದಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ ಅಷ್ಟೇ. ಪಕ್ಕದ ಶಿಕಾರಿಪುರದಲ್ಲಿ ಬಂಗಾರಪ್ಪನವರು ಈ ಇಳಿ ವಯಸ್ಸಿನಲ್ಲಿ ಸ್ಪರ್ಧಿಸಿ ಏನು ಮಾಡುತ್ತಾರೋ ಎಂದುಕೊಂಡ ನನಗೆ ಗೆದ್ದ ಎಡಿಯೂರಪ್ಪನವರ ಮುಂದೆ (66%) ಬಂಗಾರಪ್ಪನವರು 30% ಮತಗಳಿಸಿದ್ದು ನಿಜವಾಗಲೂ ಸೋಜಿಗ ಮೂಡಿಸಿತು.

ಇನ್ನು ಬೆಂಗಳೂರು-ಜಯನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾಗವಹಿಸಿದ್ದ ರವಿರೆಡ್ಡಿಯವರನ್ನು ಕುರಿತು ಅವರ ಅನುಭವಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಮ್ಮೆಲ್ಲರ ನಡುವಿನ ಧ್ವನಿಯಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ರಾಜಕೀಯ ಕರ್ಮಕಾಂಡದಲ್ಲಿ ಮೌಲ್ಯಾಧಾರಿತ ಧೋರಣೆಗಳನ್ನು ಮುಂದಿಟ್ಟುಕೊಂಡು ಅವರು ಪಡೆದ 244 ಮತಗಳಿಂದ ನಾವೆಲ್ಲ ಕಲಿಯುವುದು ಸಾಕಷ್ಟಿದೆ.

ನಾವಿರುವ ಅಮೇರಿಕದಲ್ಲಾಗಲೀ ಮುಂದುವರೆದ ಜನರಿರುವ ನಗರಗಳಲ್ಲಿ ಹೆಚ್ಚು ಜನರು ಓಟ್ ಹಾಕಲು ಹೋಗುತ್ತಾರೆ ಎನ್ನುವುದು ಒಂದು ದೊಡ್ಡ ಕಲ್ಪನೆಯೇ ಸರಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚು ಹೆಚ್ಚು ಮತಗಟ್ಟೆಗೆ ಬಂದಿದ್ದು ಚುನಾವಣಾ ಅಂಕಿ-ಅಂಶಗಳನ್ನು ಗಮನಿಸಿದ ನಿಮಗೆ ಮನವರಿಕೆಯಾದೀತು.

***

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಇಷ್ಟವಾಗುವಂತೆ ನಮ್ಮ ಸರ್ಕಾರಿ ಪೋರ್ಟಲುಗಳು ಚೆನ್ನಾಗಿ ಬೆಳೆದು ಬಂದಿವೆ, ಚುನಾವಣೆ ಸಂಬಂಧಿ ಅಂಕಿ-ಅಂಶಗಳಿಗಾಗಿ ನಾನು ಈ ಪೋರ್ಟಲುಗಳನ್ನು ನೋಡಿದಾಗಲೆಲ್ಲ ನನಗೆ ಎಂದೂ ನಿರಾಶೆಯಾದದ್ದಂತೂ ಇಲ್ಲ, ಬೇಕಾದರೆ ಚುನಾವಣಾ ಆಯೋಗದ ವಿವರಗಳನ್ನು ನೀವೇ ಖುದ್ದಾಗಿ ನೋಡಿ, ಇಲ್ಲಿ ನಿಮಗೆ ಬೇಕಾದ ಅಭ್ಯರ್ಥಿಯ ಚುನಾವಣೆ ಅರ್ಜಿ, ಅದಕ್ಕೆ ಲಗತ್ತಿಸಿದ ಕಾಗದ ಪತ್ರಗಳಿಂದ ಹಿಡಿದು ವಿವರವಾದ ಫಲಿತಾಂಶವನ್ನೂ ಇಲ್ಲಿ ನೋಡಬಹುದು.