Showing posts with label ನಮ್ಮತನ. Show all posts
Showing posts with label ನಮ್ಮತನ. Show all posts

Wednesday, April 22, 2020

ನನ್ನ ದೇಶ ನನ್ನ ಜನ

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ|
ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು|

ನಮ್ಮ ದೇಶದಲ್ಲಿ ಒಂದು ಕೋಮಿನವರು ವೈರಸ್ ಸೋಂಕನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿದ್ದಾರೆ... ಇಡೀ ಪ್ರಪಂಚವೇ ವೈರಸ್‌ ದೆಸೆಯಿಂದ ನಲುಗುತ್ತಿದ್ದರೆ ಅದನ್ನು ಕೆಲವರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ... ನಮ್ಮ ಯುವಕ-ಯುವತಿಯರು ಪಾಕಿಸ್ತಾನಕ್ಕೆ ಜೈಕಾರ ಹಾಕುವುದನ್ನು ತಮ್ಮ ಹಕ್ಕು ಎಂದುಕೊಂಡಿದ್ದಾರೆ... ಎಂದೆಲ್ಲ ಮಾಧ್ಯಮಗಳಲ್ಲಿ ಓದಿದಾಗ ಚೆನ್ನವೀರ ಕಣವಿಯವರ ಈ ಹಾಡು ನೆನಪಿಗೆ ಬಂತು.  ಇನ್ನೂ ಕೇವಲ ಎಪ್ಪತ್ತಮೂರು ವರ್ಷಗಳನ್ನು ಕಳೆದ ನಮ್ಮ "ಸ್ವಾತಂತ್ರ್ಯ" ನಮ್ಮನ್ನು ಈ ಸ್ಥಿತಿಗೆ ತಂದಿದೆ.  ಇನ್ನೊಂದಿನ್ನೂರು ವರ್ಷಗಳಲ್ಲಿ ನಮ್ಮ ಯುವ ಜನರ "ದೇಶಭಕ್ತಿ" ಇದೇ ರೀತಿಯಲ್ಲಿ ಮುಂದುವರೆದು, ನಮ್ಮೆಲ್ಲರ ದೇಶ ಪ್ರೇಮ, ವಿಶ್ವಾಸ, ಒಗ್ಗಟ್ಟು, ಭಾವೈಕ್ಯತೆ, ಘನತೆ ಇವೆಲ್ಲವೂ ಏನಾಗಬಹುದು ಎಂದು ಯೋಚಿಸಿದಾಗ ನಿಜವಾಗಿಯೂ ಬೆನ್ನ ಹುರಿಯಲ್ಲಿ ಕಂಪನವಾಯಿತು.  ಇಂದಿನ ಯುವಕರೇ ಮುಂದಿನ ಪ್ರಜೆಗಳು, ನಾಳಿನ ಭಾರತದ ಭವಿತವ್ಯರು - ಎಂದೆಲ್ಲ ಯೋಚಿಸಿಕೊಂಡಾಗ ಹೆದರಿಕೆಯ ಜೊತೆಗೆ, ಖೇದವೂ ಒಡಮೂಡಿತು.

***
1947ರ ಸ್ವಾತ್ರಂತ್ರ್ಯ ನಿಜವಾಗಿಯೂ ನಮ್ಮನ್ನು ಒಂದುಗೂಡಿಸಿತೇ? ಬ್ರಿಟೀಷ್ ಮತ್ತು ಇತರ ವಸಾಹತುಶಾಹಿಗಳ ಅಧಿಕಾರ ಅವಧಿ ಇರದೇ ಇರುತ್ತಿದ್ದರೆ ಇಂದಿನ ನಮ್ಮ ಅಖಂಡ ಭಾರತ ಹೇಗಿರುತ್ತಿತ್ತು? ಬ್ರಿಟೀಷರ ಭಾಷೆ ನಮ್ಮನ್ನು ಒಂದುಗೂಡಿಸಿತೇ? ಅವರ ಆಚಾರ-ವಿಚಾರ ಹಾಗೂ ನಡೆವಳಿಕೆಗಳು ನಮ್ಮನ್ನು ಮುಂದುವರೆದವರನ್ನಾಗಿ ಮಾಡಿದವೇ? ಎಪ್ಪತ್ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂಗ್ರಾ?ಮದ ಸಮಯದಲ್ಲಿ ಮಾಹಿತಿ ಇರದಿದ್ದರೂ ಕೋಟ್ಯಾಂತರ ಮಂದಿ ಬ್ರಿಟೀಷರ ವಿರುದ್ಧ ಹೋರಾಡಿ ತಂದು ಕೊಟ್ಟ ಈ ಸ್ವಾಂತಂತ್ರ್ಯಕ್ಕೆ ಇಂದು ಅಂಗೈಯಲ್ಲಿ ಮಾಹಿತಿ ಸಿಗುವ ಅನುಕೂಲದ ಸಮಯದಲ್ಲಿ ಯುವ ಜನತೆಯಿಂದ ಅದಕ್ಕೇಕೆ ಕಡಿವಾಣ ಬೀಳುತ್ತಿದೆ? ದೇಶದ ಸಹನೆಯನ್ನೇಕೆ ಕೆಲವರು ಪರೀಕ್ಷಿಸುವಂತಾಗಿದೆ?  ನಿಜವಾಗಿಯೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆಯೇ? ಹಾಗಿದ್ದರೆ ಅದರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ?

***

ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ, ಇಸ್ಲಾಂ ಮೂಲದ ಜೊತೆಗೆ ಮಧ್ಯ ಪ್ರಾಚ್ಯ ನೆರೆಹೊರೆಯ ಸಂಪ್ರದಾಯವನ್ನು ಮೈವೆತ್ತ ನೆರೆಯ ಪಾಕಿಸ್ತಾನ 1947ರಿಂದಲೂ ಬಡರಾಷ್ಟ್ರವಾಗೇ ಮುಂದುವರೆದಿದೆ.  ಒಂದು ಕಾಲದಲ್ಲಿ ತನ್ನಲ್ಲಿ ಬೆಳೆಯುವ ಹತ್ತಿಯನ್ನು ಸಂಸ್ಕರಿಸುವ ಕೈಗಾರಿಕೆಯೂ ಇಲ್ಲದೆ ಒಂದು ಸಣ್ಣ ಸೂಜಿಯಿಂದ ಹಿಡಿದು ಕಾರಿನವರೆಗೂ ಹೊರ ರಾಷ್ಟ್ರಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡು ತನ್ನ ಆಂತರಿಕ ಸಂಘರ್ಷಗಳನ್ನು ಒಂದು ಕಡೆ ಹತ್ತಿಕ್ಕಲೂ ಆಗದೆ ಬಚ್ಚಿಡಲೂ ಆಗದೆ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನ.  ಅನೇಕ ಮುತ್ಸದ್ದಿಗಳು ಹುಟ್ಟಿಬಂದ ನೆಲದಲ್ಲೇ ಇಸ್ಲಾಂ ಪ್ರವಾದಿಗಳು ಜನರ ಮನದಲ್ಲಿ ಸೇಡು, ಕಿಚ್ಚಿನ ಕ್ರಾಂತಿಯನ್ನು ಬಿತ್ತುತ್ತಾ ಬಂದರು.  ಭಾರತವನ್ನು ದ್ವೇಷಿಸುವುದೇ ಪ್ರಣಾಳಿಕೆಯೆಂಬಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಪಕ್ಷಗಳು ಹುಟ್ಟಿದವು.  ಅವೇ ಮುಂದೆ ಭಯೋತ್ಪಾದಕ ಸಂಘಟನೆಗಳಾದವು.  ಅನೇಕ ಮಿಲಿಟರಿ ಕ್ಯೂ (ರಕ್ತಪಾತ) ಹಾಗೂ ಅನೇಕ ಭ್ರಷ್ಟಾಚಾರದ ಅಧೋಗತಿಯಲ್ಲಿ ದೇಶ ಹಾಳಾಗಿ ಹೋಯಿತು.  ಒಂದು ಕಾಲದಲ್ಲಿ ವಿದೇಶೀ ಸಹಾಯವಿಲ್ಲದಿದ್ದರೆ ಯಾವತ್ತೋ ಭೂಪಟದಲ್ಲಿ ನಾಪತ್ತೆಯಾಗಿ ಹೋಗುವಂತಿದ್ದ ಪಾಕಿಸ್ತಾನಕ್ಕೆ ಬಲವಾಗಿ ಸಿಕ್ಕಿದ್ದು ನ್ಯೂಕ್ಲಿಯರ್ ಶಕ್ತಿ.  ನವದೆಹಲಿಯಿಂದ ಕೇವಲ ಐನೂರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಅಸ್ಥಿರತೆಯನ್ನು ನಾವು ಬಹಳ ಸೂಕ್ಷವಾಗಿ ನೋಡಿಕೊಂಡು ಬರುವಂತ ಸ್ಥಿತಿ ಇಂದಿಗೂ ಇದೆ.  ಯಾವುದೋ ಧಾರ್ಮಿಕ ಮೂಲಭೂತವಾದಿಗೆ ಈ ಅಣ್ವಸ್ತ್ರವೇನಾದರೂ ದೊರೆತರೆ ಅದು ಪ್ರಪಂಚದ ವಿನಾಶಕ್ಕೆ ಕಾರಣವಾಗಬಹುದು!

ಇಂತಹ ಪಾಕಿಸ್ತಾನವನ್ನು ನಮ್ಮಲ್ಲಿನ ಕೆಲವು ಯುವಕ-ಯುವತಿಯರು ಬೆಂಬಲಿಸುತ್ತಾರೆ.  ಇಂತಹ ಪಾಕಿಸ್ತಾನಕ್ಕೆ ಜಯಕಾರ ಹಾಕುತ್ತಾರೆ ಎಂದು ಕೇಳುತ್ತಲೇ ಹೊಟ್ಟೆ ತೊಳಸಿದಂತಾಗುತ್ತದೆ.  ಈ ಯುವಕ-ಯುವತಿಯರಿಗೆ ನಿಜವಾದ ಪಾಕಿಸ್ತಾನದ ಅರಿವೇ ಇಲ್ಲ.  ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆಯೋ, ಯಾವ ದೇಶದಲ್ಲಿ ಮೈನಾರಿಟಿ ಜನರ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೋ, ಯಾವ ದೇಶದಲ್ಲಿ ಧರ್ಮದ ಹೊರೆಯನ್ನು ಬಲವಂತವಾಗಿ ಹೇರಲಾಗುತ್ತದೆಯೋ - ಅಂತಹ ದೇಶದ ಮೇಲೆ ನಮ್ಮ ದೇಶದಲ್ಲಿ ನಿಜವಾದ ಸ್ವಾತಂತ್ರ್ಯದ ಉಸಿರಿನ ಬೆಲೆ ಗೊತ್ತಿರದ ಯುವಕ-ಯುವತಿಯರ ಮಮಕಾರ ಹೆಚ್ಚಾಗಲು ಏನು ಕಾರಣ, ಅದರ ಮೂಲ ನೆಲೆಯೇನು ಎಂದು ಗಂಭೀರವಾಗಿ ಯೋಚನೆ ಮಾಡಬೇಕಾಗುತ್ತದೆ.

ಪಾಕಿಸ್ತಾನದ ಪರವಾಗಿ ಕೂಗಿದ ಜೆ.ಎನ್.ಯು. ವಿದ್ಯಾರ್ಥಿಗಳು ಎಲ್ಲರೂ ಮುಸಲ್ಮಾನರಲ್ಲ.  ಕಾಶ್ಮೀರದಿಂದ ಕೇರಳದವರೆಗೆ ಒಂದು ರೀತಿಯಲ್ಲಿ ಯುವಜನತೆಯ ಬ್ರೈನ್‌ವಾಶ್ ಮಾಡಲಾಗುತ್ತಿದೆ.   ಚೀನಾದಲ್ಲಿ ಹುಟ್ಟಿ ಅಲ್ಲಿ ಪ್ರಬಲವಾಗಿ ಬೆಳೆದ ಮಾವೋಯಿಸಂ ನಮ್ಮ ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತದೆ.  ಸರ್ಕಾರದ ವಿರುದ್ಧ, ಪ್ರಜಾಸತ್ತತೆಯ ವಿರುದ್ಧ ಧ್ವನಿ ಎತ್ತುವುದು ಎಂದರೆ ಪಕ್ಕದ ಪಾಕಿಸ್ತಾನವನ್ನು ಹೊಗಳುವುದು ಎಂದಾಗಿ ಹೋಗಿಬಿಟ್ಟಿದೆ. ನಮಗೆ  ಸ್ವಾತಂತ್ರ್ಯ ಸಿಕ್ಕ ಮೊದಲ ಐವತ್ತು ವರ್ಷಗಳಲ್ಲಿ ಈ ಸ್ಥಿತಿ ಇರಲಿಲ್ಲ... ನಾವೆಲ್ಲ ಕಂಡ ಎಂಭತ್ತರ, ತೊಂಭತ್ತರ ದಶಕದ ಭಾರತದಲ್ಲಿ, ನಮ್ಮ ಶಾಲಾದಿನಗಳಲ್ಲಿ ಒಂದು ದಿನವೂ ಯಾರೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಿಲ್ಲ... ನಾವೆಲ್ಲ  ಅನೇಕ ಜನವಿರೋಧಿ ನೀತಿಗಳ ವಿರುದ್ಧವೋ, ಕಾನೂನಿನ ಪರವಾಗಿಯೋ, ಅಥವಾ ರಾಜ್ಯ-ದೇಶ-ಭಾಷೆಗಳ ಪರವಾಗಿಯೋ ಸತ್ಯಾಗ್ರಹ, ಸಂಗ್ರಾಮಗಳನ್ನು ಮಾಡಿದ್ದೇವೆ.  ಆದರೆ, ಇಂದಿನ ಯುವಜನತೆಯ ದೇಶದ್ರೋಹದ ಹಾದಿಯನ್ನು ಎಂದೂ ಹಿಡಿದಿದ್ದಿಲ್ಲ.  ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನವೂ ರಾಷ್ಟ್ರಗೀತೆಯನ್ನು ಹೇಳುತ್ತಿದ್ದೆವು, ಧ್ವಜವಂದನೆಯನ್ನು ಮಾಡುತ್ತಿದ್ದೆವು.  ನಮ್ಮೆಲ್ಲರಿಗಿಂತ ದೇಶ ಯಾವತ್ತೂ ದೊಡ್ಡದಾಗಿತ್ತು.  ಆದರೆ ಇಂದಿನ ಯುವಜನತೆಯ ಮನಃಸ್ಥಿತಿಯನ್ನು ನೋಡಿದಾಗ ಅದೇ ಭಾವನೆ ಖಂಡಿತ ಒಡಮೂಡುವುದಿಲ್ಲ.
ನನ್ನ ದೇಶ ಉನ್ನತವಾದುದು.  ಜನರಿಗೆ ನಿಜವಾಗಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬದುಕನ್ನು ಕಲ್ಪಿಸಿಕೊಟ್ಟಿದೆ.  ಹಾಡು ಹಗಲೇ ದರೋಡೆ, ಅತ್ಯಾಚಾರ, ಕೊಲೆ-ಸುಲಿಗೆ ಮಾಡಿದವರೂ ಸಂವಿಧಾನದ ವಿಧಿಯ ಪ್ರಕಾರ ಶಿಕ್ಷೆಗೆ ಗುರಿಪಡುತ್ತಾರೆ.  ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿವೆ.  ಆದರೆ ಜನರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವೇ ಹಕ್ಕುಗಳ ಮಗ್ಗುಲಲ್ಲಿರುವ ಕರ್ತವ್ಯಗಳನ್ನು ಮರೆಯುತ್ತಾರೆ.  ತಮ್ಮ ಮೈಕ್ರೋ ಫ್ಯಾಮಿಲಿಗಳ ಸಂತೋಷಕ್ಕಾಗಿ ದೊಡ್ಡ ದೇಶದ ಘನತೆ ಗೌರವವನ್ನು ಮರೆಯುತ್ತಾರೆ.  ರಾಷ್ಟ್ರ ಯಾವತ್ತೂ ಸೆಕೆಂಡರಿಯಾಗುತ್ತದೆ, ತಮ್ಮ ಸ್ವಾರ್ಥ ದೊಡ್ಡದಾಗುತ್ತಾ ಹೋಗುತ್ತದೆ.

ಎಪ್ಪತ್ತು ವರ್ಷಗಳ ನಂತರ ನಮ್ಮ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೇ ಇರುವಾಗ, ಈ ಎದೆಕರಗದ ದೇಶಭಕ್ತಿಯ ಜನ ಯಾವ ರೀತಿಯಲ್ಲಿ ದೇಶವನ್ನು ಮುಂದೆ ತಂದಾರು? ಇನ್ನು ನೂರಿನ್ನೂರು ವರ್ಷಗಳಲ್ಲಿ ನಮ್ಮ ದೇಶ ನಮ್ಮ ದೇಶವಾಗೇ ಇರುವುದೋ ಅಥವಾ ಮೊದಲಿನ ಹಾಗೆ ಹಂಚಿಕೊಂಡು ತುಂಡು ತುಂಡಾಗುವುದೋ ಎಂದು ಸಂಕಟವಾಗುತ್ತದೆ.


 




















ಭಾರತ ದೇಶವನ್ನು ಹಳಿಯುವವರು ತಮ್ಮ ದೇಶದ ಬಗ್ಗೆ ಒಂದಿಷ್ಟು ಕನಿಷ್ಠ ಮಾಹಿತಿಯನ್ನಾದರೂ ತಿಳಿದುಕೊಂಡು ತಮ್ಮ ವಾದವನ್ನು ಮಂಡಿಸಿದ್ದರೆ ಚೆನ್ನಾಗಿತ್ತು.  ಒಂದು ದೇಶದ ನಿಜವಾದ ಸ್ವಾತಂತ್ರ್ಯದ ಅರಿವಾಗುವುದು ಆ ಸ್ವಾತ್ಯಂತ್ರ್ಯ ಇಲ್ಲವಾದಾಗಲೇ!
(ಮಾಹಿತಿ ಕೃಪೆ: ವಿಕಿಪೀಡಿಯ)

Friday, April 17, 2020

ಚಿತ್ರಗಳ ನೆನಪು

ಈ ಕೋವಿಡ್ ವೈರಸ್ಸಿನ ದೆಸೆಯಿಂದ ನಾವೆಲ್ಲರೂ "ಗೃಹಬಂಧನ"ದಲ್ಲಿ ಇದ್ದ ಪರಿಣಾಮದಿಂದಾಗಿ ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡೆ.  ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

***
ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ      ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!



Sunday, April 05, 2020

ಎಲ್ಲರಿಗೂ ಬದುಕುವ ಹಕ್ಕಿದೆ

ಪ್ರಪಂಚದ ಅರ್ಧ ಭಾಗದ ಜನ ಇನ್ನರ್ಧ ಭಾಗದ ನಾಶಕ್ಕೆ ಕಾರಣರಾಗಬಲ್ಲರು ಎಂದೆನಿಸಿದ್ದು, ಪ್ರತೀ ದೇಶದ ಜನಸಂಖ್ಯೆಯ ವಿಶ್ಲೇಷಣೆಗೆ ತೊಡಗಿದಾಗ.  ಯು.ಎಸ್.ಎ.ನಲ್ಲಿ ಈಗ ನ್ಯಾಷನಲ್ ಸೆನ್ಸಸ್ ಸಮಯ.  ಮನೆ-ಮನೆಗೆ ಪತ್ರವನ್ನು ಕಳುಹಿಸಿ, ನಮಗೆಲ್ಲ ಒಂದು ಸೆನ್ಸಸ್-ಐಡಿ ಒಂದನ್ನು ಕೊಟ್ಟು ಗವರ್‌ಮೆಂಟ್‌ನವರೇ ನಮ್ಮೆಲ್ಲ ಅಂಕಿ-ಅಂಶಗಳನ್ನು ಹತ್ತು ವರ್ಷಕ್ಕೊಮ್ಮೆ ಸಂಗ್ರಹಿಸುವುದು ಪದ್ಧತಿ.  ಈ ರೀತಿ ಮಾಡೋದರಿಂದ ಸ್ಥಳೀಯ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಬಹುದು, ಎಲ್ಲರಿಗೂ ಸಮತೋಲನವಾದ ಆಡಳಿತವನ್ನು ಕೊಡಬಹುದು ಎನ್ನುವುದು ಅದರ ಉದ್ದೇಶ.  ಇದರಿಂದ ರಾಷ್ಟ್ರ‍ೀಯ ಮಟ್ಟದಲ್ಲೂ ಅನೇಕ ಪ್ರಯೋಜನಗಳಿವೆ.  ಇಷ್ಟರವರೆಗೆ ಎಲ್ಲಾ ಮನೆಗಳಲ್ಲಿಯೂ ಇದನ್ನು ಸಂಪೂರ್ಣಗೊಳಿಸಿ ಎಂದು ಪತ್ರಗಳನ್ನು ಕಳಿಸಿದ್ದಾರ‍ೆ.  ಈ ರೀತಿಯ ಪದ್ಧತಿ ಅನೇಕ ದೇಶಗಳಲ್ಲೂ ಕೂಡ ಚಾಲ್ತಿಯಲ್ಲಿದೆ, ಅಂತೆಯೇ ಭಾರತದಲ್ಲಿಯೂ ಕೂಡಾ.

ನೀವು ನ್ಯಾಷನಲ್ ಪಾಪ್ಯುಲೇಶನ್ ಕ್ಲಾಕ್ ವೆಬ್‌ಸೈಟ್‌ಗೆ ಹೋಗಿ ನೋಡಿದರೆ, ಈ ಕೆಳಗಿನ ಚಿತ್ರ ಕಾಣುತ್ತದೆ.


ಎಲ್ಲ ದೇಶಗಳ ಜನಸಂಖ್ಯೆಯನ್ನು ನೋಡಿದಾಗ, ವಿಶೇಷವೆಂದರೆ ಪ್ರಪಂಚದ ಅರ್ಧಭಾಗಕ್ಕಿಂತಲೂ ಹೆಚ್ಚು ಜನಸಂಖ್ಯೆ ಐದಾರು ದೇಶಗಳಲ್ಲಿ ಇರುವುದು ಗಮನಕ್ಕೆ ಬರುತ್ತದೆ.  ಅದರಲ್ಲೂ ಚೀನಾ ಮತ್ತು ಭಾರತವೇ ಮೂರರ ಒಂದು ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ.


"ವಸುಧೈವ ಕುಟುಂಬಕಮ್" ಎಂಬ ಮಹಾ ಉಪನಿಷತ್ತಿನ ಬಹುಮುಖ್ಯವಾದ ನೈತಿಕ ಮೌಲ್ಯದ ಹಿನ್ನೆಲೆಯಲ್ಲಿ ಬದುಕುವ 1.4 ಬಿಲಿಯನ್ ಭಾರತೀಯರೆಲ್ಲಿ? ಕಂಡದ್ದನ್ನೆಲ್ಲ ತಿಂದು ನೀರು ಕುಡಿಯುವ ಅಷ್ಟೇ ಪ್ರಮಾಣದ ಚೀನಾ ಪ್ರಜೆಗಳೆಲ್ಲಿ?  ಇಂಥವರಲ್ಲಿ ಮೌಲ್ಯವನ್ನು ಬಿತ್ತಲೆಂದೇ ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಮಹಾತ್ಮನ ಅವತಾರವಾಗಿದ್ದರೂ ಕೂಡ, ಇವತ್ತಿಗೂ ಚೈನಾದಲ್ಲಿ ಯಾವುದೇ ಧರ್ಮವಿಲ್ಲದೇ ಬದುಕುವವರೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ.  15% ಬುದ್ಧಿಸಮ್, ಇನ್ನೊಂದೈದು ಪರ್ಸೆಂಟ್ ಉಳಿದ ಧರ್ಮೀಯರನ್ನು ಬಿಟ್ಟರೆ, ಹೆಚ್ಚಿನವರು ಯಾವುದೇ ಧರ್ಮಕ್ಕೂ ಒಳಗಾಗದ ಧರ್ಮರಹಿತರು ಎಂದು ಕರೆಯಬೇಕಾದವರು ಕಂಡು ಬರುತ್ತಾರೆ.  ಯಾವುದೇ ಧರ್ಮದ ಚೌಕಟ್ಟಿಗೆ ಒಳಗಾಗದೇ ಇದ್ದವರು ಯಾವ ಭಾವನೆಗಳನ್ನು ಗೌರವಿಸಿಯಾರು? ಯಾರ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡಾರು.  ಹೆಚ್ಚಿನವರು ಪ್ರಾಣಿಗಳ ಹಾಗೆ: ತಾವು ಬದುಕಬೇಕು, ಮತ್ತೆ ಅಭಿವೃದ್ಧಿ ಹೊಂದಬೇಕು... ಅದಕ್ಕಾಗಿ ಯಾವ ಬೆಲೆಯನ್ನು ಬೇಕಾದರೂ ತೆರಲು ಸಿದ್ಧ!

***
ಈ ವಿಶ್ವದ ಪ್ರತಿಯೊಂದು ಅಣು-ರೇಣು-ತೃಣ-ಕಾಷ್ಠಗಳಿಗೂ ಸಮನಾಗಿ ಬದುಕುವ ಹಕ್ಕಿದೆ.  ಅಂತೆಯೇ ಈ ವಿಶ್ವದ ಪರಿತಂತ್ರ (ecosystem) ಜೀವಂತವಿರಬೇಕಾದರೆ ಎಲ್ಲ ಜೀವಿ-ನಿರ್ಜೀವಿಗಳಿಗೂ ಅವುಗಳದ್ದೇ ಧರ್ಮ (way of life) ಒಂದಿದೆ, ಅದನ್ನು ಬದಲಾಯಿಸಲಾಗದು.

Law of conservation of energy (1st law of Thermodynamics), ಹೇಳುವ ಪ್ರಕಾರ, energy can neither be created nor destroyed.  ಅದರಂತೆ, ಈ ವಿಶ್ವದ ಒಂದು ಚೈತನ್ಯ ಸ್ಥಿಮಿತದಲ್ಲಿರಬೇಕು ಇಲ್ಲವಾದರೆ ನಿಸರ್ಗ ತನ್ನನ್ನು ತಾನು ಸ್ಥಿಮಿತಕ್ಕೆ ತಂದುಕೊಳ್ಳುತ್ತದೆ.  ಕಳೆದ ನೂರು ವರ್ಷಗಳಲ್ಲಿ ಎರಡು ಬಿಲಿಯನ್ ಇದ್ದ ನಾವುಗಳು ಎಂಟು ಬಿಲಿಯನ್ (ಅಂದರೆ ನಾಲ್ಕು ಪಟ್ಟು) ಬೆಳೆದಿರುವಾಗ, ಅದರ ಸಮನಾದ ಪ್ರಮಾಣವನ್ನು ಮತ್ತೆಲ್ಲೋ ಮಾರ್ಪಾಡು ಮಾಡಿದ್ದೇವೆ ಎನಿಸೋದಿಲ್ಲವೇ?  ಉದಾಹರಣೆಗೆ, ಕೋಳಿ, ಹಂದಿ ಅಥವಾ ಬೀಫ್ ಫಾರಮ್‌ನಲ್ಲಿ ಕೃತಕ ಪರಿಸರದಲ್ಲಿ ಬೆಳೆಯುವ ಪ್ರಾಣಿ ದಿಢೀರನೆ ಅದರ ತೂಕದಲ್ಲಿ ಹೆಚ್ಚನ್ನು ಕಾಣುವುದನ್ನು, ಅದು ಅಷ್ಟೇ ಪ್ರಮಾಣದ ಅಥವಾ ಅದಕ್ಕಿಂತಲೂ ಹೆಚ್ಚು ಬಳಸುವ ಆಹಾರ ಪ್ರಮಾಣದ ಮೂಲಕ ವಿವರಿಸಬಹುದು.

ಈ ಸಂದಿಗ್ದದ ಸಮಯದಲ್ಲಿ, ನಾವು ನಿಸರ್ಗದೊಂದಿಗೆ ಸಂಧಾನಕ್ಕೆ ಬರದೇ ಇದೇ ರೀತಿ ನಿಸರ್ಗವನ್ನು ಒತ್ತೆಯಾಳಾಗಿಟ್ಟುಕೊಂಡು ಸತಾಯಿಸುತ್ತಲೇ ಹೋದರೆ, ನಮ್ಮ ಅಗಾಧವಾಗಿ ಹೆಚ್ಚುತ್ತಿರುವ ಸಂತತಿ, ಒಂದು ಅಳಿವಿನ ಹಂತಕ್ಕೆ ಬಂದರೂ ಅಚ್ಚರಿಯೇನಿಲ್ಲ.

ಅದಕ್ಕೆಯೇ, ನಾವೆಲ್ಲರನ್ನೂ ಬದುಕಲು ಬಿಡಬೇಕು, ಪ್ರಪಂಚವನ್ನೇ ಒಂದು ಕುಟುಂಬವೆಂದುಕೊಂಡು ಸಹಬಾಳ್ವೆಯನ್ನು ಅನುಸರಿಸಬೇಕು ಎನ್ನುವ ಮಾತು, ಇಂದಿಗೆ ಹೆಚ್ಚು ಅನ್ವಯವಾಗುತ್ತದೆ.

Friday, September 27, 2019

ತಿಂಗಳಯಾನ ತಂಗಳಾಗದಿರಲಿ...

ಭಾರತದ ಬಾಹ್ಯಾಕಾಶದ ಬಹು ಮುಖ್ಯ ಮೈಲಿಗಲ್ಲಾಗಿ ಈ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವದಾದ್ಯಂತ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿದ್ದ ನಮಗೆ, ಸಿಕ್ಕಿದ್ದು ಕಡಿಮೆ ಯಶಸ್ಸೇನಲ್ಲ.  ಅತಿ ಚಿಕ್ಕ ಬಜೆಟ್ಟಿನಲ್ಲಿ ವಿಶ್ವವೇ ಬೆರಗಾಗುವಂತೆ ಈ ಸಾಹಸಕ್ಕೆ ಕೈ ಹಾಕಿ, ವಿಶ್ವದ ಹಿರಿಯಣ್ಣರನ್ನೂ ಬೆಚ್ಚಿ ಬೀಳಿಸುವ ಹಾಗೆ ಸೆಡ್ಡು ಹೊಡೆದು ಆಂತರಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಮತ್ತು ಪ್ರಜ್ಞಾನ್‌ರು ಚಂದ್ರನ ನೆಲದಿಂದ ಇನ್ನೇನು ಕೇವಲ ಎರಡು ಕಿಲೋಮೀಟರ್ ಇರುವಂತೆ ಅಪ್ಪಳಿಸಿ ಅಸು ನೀಗಿದ್ದು ನಮ್ಮ ವಿಜ್ಞಾನಿಗಳಲ್ಲಿ ಹೊಸ ಚಾಲೆಂಜ್ ಅನ್ನು ಹುಟ್ಟಿಸಲಿ.  ಏನಿಲ್ಲವೆಂದರೂ ಚಂದ್ರನ ಸುತ್ತಲೂ ಒಂದು ವರ್ಷ ಸುತ್ತುವ ಆರ್ಬಿಟರ್‌ನಿಂದಾಗಿಯೂ ನಾವು ಕಲಿಯುವುದು ಬಹಳಷ್ಟಿದೆ.  ಯಾರೂ ಕಾಲಿಡದ ಚಂದ್ರನ ದಕ್ಷಿಣ ಪ್ರದೇಶವನ್ನು ಹೊಕ್ಕೇ ತೀರುತ್ತೇವೆಂದು ಚಂದ್ರಯಾನ-೩ ರಲ್ಲಿ ನಮ್ಮ ವಿಜ್ಞಾನಿಗಳು ಗೆದ್ದು ಸಂಭ್ರಮಿಸುವ ದಿನಗಳು ಹತ್ತಿರ ಬರಲಿ.

***
ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಅಳತೆ ಮಾಡಿದಾಗ ಮೌಂಟ್ ಎವರೆಸ್ಟ್ ಪರ್ವತದ ಎತ್ತರ 27 ಸಾವಿರ ಅಡಿಗಳು (8800 ಮೀಟರುಗಳು, 8.8 ಕಿಲೋಮೀಟರುಗಳು).  ನನ್ನ ಊಹೆಯ ಪ್ರಕಾರ ಚಂದ್ರನ ದಕ್ಷಿಣ ಪ್ರದೇಶ ಅದು ಉದ್ಭವಿಸಿದಾಗಿನಿಂದ ಸೂರ್ಯನ ಬೆಳಕನ್ನೇ ಕಾಣದೆ ದಟ್ಟವಾದ ಮೋಡ, ಮಂಜಿನ ಪರದೆಯೊಳಗೆ ಏನಾದರೂ ಅವಿತಿದ್ದಿರಬಹುದು.  ನಮ್ಮ ವಿಕ್ರಮ್ ಲ್ಯಾಂಡ್ ಆಗಬೇಕಾದ ಜಾಗದಲ್ಲಿ ಒಂದು ವೇಳೆ ಯಾವುದಾದರೂ ಪರ್ವತದಂಥ ಪ್ರದೇಶ ಹಾದು ಬಂದಿದ್ದರೆ?  ಸೂರ್ಯನಿಗೆ ದಿನವೂ ಮುಖವೊಡ್ಡುವ ಭೂಮಂಡಲದಲ್ಲೇ 8 ಕಿಲೋಮೀಟರ್ ಎತ್ತರದ ಪರ್ವತಗಳಿರುವಾಗ ಚಂದ್ರನ ಯಾರೂ ಅಳೆಯದ ಈ ಭಾಗದಲ್ಲಿ ಪರ್ವತಮಯವಾಗಿದ್ದರೆ, ಅಥವಾ ಉಬ್ಬು ತಗ್ಗುಗಳು ದೊಡ್ಡದಾಗಿದ್ದು ನಾವು ಅವುಗಳನ್ನು ಅಳೆಯಲಾರದೆಯೋ ಅಥವಾ ತಪ್ಪಾಗಿ ಅಳೆದೋ ಏನೋ ಗೊಂದಲವಾಗಿರಬಹುದು.  ದುರದೃಷ್ಟವಶಾತ್, ಸೆಪ್ಟೆಂಬರ್ 6 ನೇ ತಾರೀಖಿನಂದು ತನ್ನ ಲ್ಯಾಂಡಿಂಗ್ ಸೈಟ್ ಹತ್ತಿರಕ್ಕೆ ಹೋದ ವಿಕ್ರಮ್ ಕೊನೆಯ ಕೆಲವು ನಿಮಿಷಗಳಲ್ಲಿ ಪತನಗೊಂಡಿದ್ದನ್ನು ಬಿಟ್ಟರೆ, ಆರ್ಬಿಟರ್‌ನಿಂದಾಗಲೀ, ಮತ್ತಿನ್ಯಾವ ಉಪಗ್ರಹಗಳಿಂದಾಗಲೀ ಬೇರೆ ಯಾವುದೇ ಮಾಹಿತಿಯನ್ನು ಕಂಡುಕೊಳ್ಳಲಾಗದೇ, ಏಕೆ ಹೀಗಾಯಿತು ಎನ್ನುವುದೂ ಗೊತ್ತಿಲ್ಲದಂತಾಗಿರುವುದು ಸೈಂಟಿಫಿಕ್ ಕಮ್ಯುನಿಟಿಗೆ ಅರಗಿಸಿಕೊಳ್ಳಲು ಬಹಳ ಕಷ್ಟದ ವಿಚಾರ.
ಕೇವಲ 87 ಮಿಲಿಯನ್ ಡಾಲರುಗಳಲ್ಲಿ (ರೂ.600 ಕೋಟಿ) ಈ ಮಹತ್ಸಾಧನೆಯನ್ನು ನಾವು ಮಾಡಿರುವುದು ಬಹಳ ಸಣ್ಣ ವಿಷಯವೇನಲ್ಲ.  ನಾವಿರುವ ಅಮೇರಿಕದಲ್ಲಿ ಕೆಲವು ಮ್ಯಾನ್ಷನ್ನುಗಳಿಗೆ 87 ಮಿಲಿಯನ್ನುಗಟ್ಟಲೇ ಹೆಚ್ಚು ಹಣ ಕೊಟ್ಟು ಕೊಳ್ಳುವವರಿರುವಾಗ, ಈ ಹಿಂದಿನ ಸಾಧನೆಯ ಸಹಾಯದಿಂದ ಇನ್ನು ಮುಂದೆ ಇನ್ನೂ ಕಡಿಮೆ ಖರ್ಚಿನಲ್ಲಿ ಮತ್ತೊಮ್ಮೆ ಚಂದ್ರಯಾನದ ಕನಸನ್ನು ನಾವು ಸಾಕಾರಗೊಳಿಸಿಕೊಳ್ಳಬಹುದಾಗಿದೆ.

***
ಅಂತರಿಕ್ಷವನ್ನು ಅಳೆಯುವಲ್ಲಿ ರಷ್ಯಾದವರು ಮೊದಲಿಗರು... ಅವರನ್ನು ಹಿಂದೆ ಹಾಕುವಂತೆ ತಮ್ಮ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಸಿ ಬೆಳೆದಿದ್ದು ಅಮೇರಿಕ.  ಈ ಎರಡು ದೇಶಗಳಿಗೆ ಪೈಪೋಟಿ ಒಡ್ಡುವಂತೆ ತಮ್ಮನ್ನು ತಾವು ಬೆಳೆಸಿಕೊಂಡವರು ಚೈನಾದವರು.  ಜಗತ್ತಿನ ನಾಲ್ಕನೇ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದು ಭಾರತ.  ಚೈನಾದವರು ಏನು ಮಾಡಿದರೋ ಬಿಟ್ಟರೋ ಎಂದು ವೆರಿಫೈ ಮಾಡುವುದು ಬಿಡುವುದು ನಿಮಗೆ ಬಿಟ್ಟಿದ್ದು.  ಯಾಕೆಂದರೆ ಐವತ್ತು ವರ್ಷದ ಹಿಂದೆ ಅಮೇರಿಕದವರು ನಿಜವಾಗಿಯೂ ಮಾನವನನ್ನು ಚಂದ್ರನ ಮೇಲೆ ಕಳಿಸಿದ್ದು ಹೌದೇ? ಹಾಗೆ ಅಂದು ಕಳಿಸಿದ್ದು ನಿಜವಾಗಿದ್ದರೆ, ಈ ದಿನ ಮತ್ತೆ ಬೇರೆ ಯಾರೂ ಏಕೆ ಹೋಗುತ್ತಿಲ್ಲ... ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಕೆರಳಿಸುವ ಅನೇಕ ಕಾಂಟ್ರೋವರ್ಷಿಯಲ್, ಕಾನ್ಸ್‌ಪಿರಸಿ ವಿಡಿಯೋಗಳು ಇಂಟರ್ನೆಟ್ಟಿನಲ್ಲಿ ದೊರೆಯುತ್ತವೆ, ಅಂತಹ ಒಂದು ತುಣುಕನ್ನು ಇಲ್ಲಿ ನೋಡಬಹುದು.

ಅಮೇರಿಕದವರ ಈ ಪ್ರಯತ್ನವನ್ನೇ ಸುಳ್ಳು ಎನ್ನುವ ವಾದಗಳಿರುವಾಗ ಇನ್ನು ಚೀನಾದವರು ತಮ್ಮದೇ ತಂತ್ರಜ್ಞಾನದಿಂದ ಅದು ಏನನ್ನು ಸಾಧಿಸಿದ್ದಾರೋ ಬಿಟ್ಟಿದ್ದಾರೋ ಎಂದು ನೀವೇ ಊಹಿಸಬಹುದು.  ಆದರೆ ನಮ್ಮ ಚಂದ್ರಯಾನದ ವಿಚಾರದಲ್ಲಿ ರಷ್ಯಾದವರು ಹನ್ನೆರಡು ವರ್ಷಗಳ ಹಿಂದೆ ನಮ್ಮ ಕೈ ಜೋಡಿಸಿದ್ದು ನಿಜ. ಆದರೆ, ಕಳೆದ ಆರು ವರ್ಷಗಳಲ್ಲಿ ನಮ್ಮವರು ಬೇರೆ ಯಾರ ಹಂಗಿಲ್ಲದೆ ನಾವೇ ಮುಂದುವರೆಯುತ್ತೇವೆ ಎಂದು ಮುಂದೆ ಸಾಗಿದ್ದು ಬಹಳ ಹೆಮ್ಮೆಯ ವಿಷಯ.  ರಷ್ಯಾದವರು ಲ್ಯಾಂಡರ್ ಮಾಡಿ ಮುಗಿಸುವಲ್ಲಿ ವಿಳಂಬಿಸಿದರು ಅನ್ನೋ ಕಾರಣವೂ ಇದೆ.  ಆದರೆ, ಈ ಲ್ಯಾಂಡರ್ ಇಳಿಯುವಾಗಿನ ವೈಫಲ್ಯದಿಂದಲೇ ನಾವು ಕೊನೆಯ ಘಳಿಗೆಯಲ್ಲಿ ಅನಿರೀಕ್ಷಿತ ತಿರುವನ್ನು ಪಡೆಯಬೇಕಾಗಿ ಬಂತು ಎನ್ನುವುದು ಗಮನಿಸಬೇಕಾದ ವಿಚಾರ.

***
ಈಗ ನಮ್ಮ ಮುಂದಿರುವ ಮಹತ್ವದ ಸವಾಲೆಂದರೆ, ಲ್ಯಾಂಡರ್‌ಗೆ ಏನು ಆಗಿರಬಹುದು ಎಂಬುದು ಗೊತ್ತಾಗದೇ ಮುಂದಿನ ಚಂದ್ರಯಾನದ ಲ್ಯಾಂಡರ್ ಅನ್ನು ತಯಾರಿಸಿ ಪರೀಕ್ಷಿಸುವುದು ಕತ್ತಲೆಯಲ್ಲಿ ಕತ್ತಿಯಾಡಿಸಿದಂತಾಗುತ್ತದೆ.  ಆದರೆ, ತಮ್ಮ ಒಂದು ತಪ್ಪಿನಿಂದಾಗಿ ಈ ಬಹುಮುಖ್ಯವಾದ ಯೋಜನೆಯನ್ನು ಅನಿರೀಕ್ಷಿತವಾಗಿ ಮುಂದುಹಾಕಿಕೊಂಡು ಕಾಯುವ ಕಷ್ಟವೂ ನಮ್ಮ ವಿಜ್ಞಾನಿಗಳಿಗೆ ಬರದಿರಲಿ.  ಈ ಸಂದರ್ಭದಲ್ಲಿ, ದೇಶದ ಬಹುಪಾಲು ಜನರು ಈ ಯೋಜನೆಯನ್ನು ಬೆಂಬಲಿಸುತ್ತಾರಾದ್ದರಿಂದ, ಈಗಿನ ಸುಭದ್ರ ಸರ್ಕಾರ ಇರುವವರೆಗೆ ನಮ್ಮ ಇನ್ನೊಂದು ಪ್ರಯತ್ನಕ್ಕೆ ಖಂಡಿತ ಹಸಿರು ನಿಶಾನೆ ಸಿಗುವುದೆಂಬ ಭರವಸೆ ನಮ್ಮದು.  ತಿಂಗಳಯಾನದ ಕನಸು ತಂಗಳಾಗದಿರಲಿ!






Friday, October 30, 2015

ಕನ್ನಡಿಗನೊಬ್ಬನ ಪಿರಿಪಿರಿ...

ಅಮೇರಿಕಕ್ಕೆ ಬಂದ ಮೊದಲಲ್ಲಿ ಗೋಪಾಲಕೃಷ್ಣ ಅಡಿಗರ "ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ" ಹಾಡನ್ನು ಕೇಳಿದಾಗಲೆಲ್ಲ ನನ್ನ ಮನದಲ್ಲಿ ಈ ಕ್ಯಾಪಿಟಲಿಸಮ್ ಅನ್ನೋ ದೊಡ್ಡೋ ಸಮುದ್ರದಲ್ಲಿ ನಮ್ಮತನವೆಂಬ ಚಿಕ್ಕ ಸೋಷಿಯಲಿಸ್ಟ್ ದೋಣಿಯನ್ನು ನಾವು ಹುಟ್ಟು ಹಾಕಿ ಚಲಿಸುತ್ತಿದ್ದೇವೆಯೇನೋ ಎಂಬ ಆಲೋಚನೆಗಳು ಬರುತ್ತಿದ್ದವು.  ನಮ್ಮ ಕನ್ನಡಿಗರ ಪರಂಪರೆಯೇ ಹಾಗೆ, ದೊಡ್ಡವರನ್ನು ಗೌರವಿಸಬೇಕು, ಯಾವತ್ತೂ ನೀನು ಎಷ್ಟು ಚಿಕ್ಕವನೆಂಬುದನ್ನು ಅರಿತುಕೊಂಡಿರು...ಇತ್ಯಾದಿ ಇತ್ಯಾದಿ ಮಾತುಗಳು ನಮ್ಮ ಮನದಾಳದಲ್ಲಿ "ಗೌರವ"ವನ್ನು ಉಲ್ಬಣಿಸುವುದರ ಬದಲು ಕೀಳರಿಮೆಯನ್ನು ಸೃಷ್ಟಿಸುತ್ತಿತ್ತೇನೋ ಎಂದು ಒಮ್ಮೊಮ್ಮೆ ಗಾಭರಿಯಾಗತ್ತದೆ.  ಉದಾಹರಣೆಗೆ ನಾವು ನಂಬಿಕೊಂಡ ಪದ್ಯಗಳನ್ನು ಈ ಕ್ಯಾಪಿಟಲಿಸಮ್ಮಿನ ದರ್ಬಾರಿನಲ್ಲಿ ದಿನನಿತ್ಯವೂ ನಡೆಯುವ ಆಫೀಸಿನ ರಾಜಕೀಯದ ಮುಂದೆ ಅನ್ವಯಿಸುವುದಾದರೂ ಹೇಗೆ?

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೇ
ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ|


ಈ ಮೇಲಿನ ಪದ್ಯವನ್ನು ಫಾಲೋ ಮಾಡುತ್ತಾ ಯಾವ ರೀತಿಯ ರಿಸ್ಕ್ ತೆಗೆದುಕೊಳ್ಳೋದು, ಯಾರನ್ನು ಎದುರು ಹಾಕಿಕೊಳ್ಳೋದು? ಅಥವಾ ಈ ವಚನವನ್ನು ನೋಡಿ:

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವನ ಒಲಿಸುವ ಪರಿ|


ಈ ವಾಕ್ಯಗಳನ್ನು ಫಾಲೋ ಮಾಡಿದ್ರೆ ನಮ್ಮ ಆಫೀಸಿನಲ್ಲಿ ನಿಮಗೆ ಪ್ರೊಮೋಷನ್ ಸಿಕ್ಕ ಹಾಗೇ ಅಂದುಕೊಳ್ಳಿ... ಸುಳ್ಳು ಮತ್ತು ಸತ್ಯದ ನಡುವೆ ತಿhiಣe ಟie ಅನ್ನೋದಿದೆಯಂತೆ ಅದಕ್ಕೆ ಕನ್ನಡದಲ್ಲಿ ಯಾವುದೇ ಪದಗಳು ಇದ್ದ ಹಾಗಿಲ್ಲ.  ಈ ಮೇಲಿನ ಮಾತುಗಳಿಗೆ ತದ್ವಿರುದ್ಧವಾಗೇ ನಮ್ಮ ಕಣ್ಣೆದೆರು ಎಷ್ಟೋ ಘಟನೆಗಳು ಆಫೀಸಿನಲ್ಲಿ ನಡೆಯುತ್ತವೆ.  ಕ್ಯಾಪಿಟಲಿಸಮ್ಮಿನ ಲೀಡರುಗಳು ಎತ್ತರದ ಆಳುಗಳು, ಗಟ್ಟಿಯಾಗಿ ಒದರುವ ಇವರುಗಳು "ನುಡಿದರೆ ಸ್ಪಟಿಕದ ಸಲಾಖೆಯಂತಿರಬೇಕು" ಎಂಬುದನ್ನು ಅಕ್ಷರಶಃ ಅರಿತು ಘಂಟೆ ಹೊಡೆದಂತೆ ಮಾತನಾಡುವವರು.  ಹಿರಿಯರು ಕಿರಿಯರು ಎನ್ನುವ ವಯೋ ಬೇಧಭಾವ ಇರೋದಿಲ್ಲ. ಹಿಡಿದ ಕೆಲಸದಲ್ಲಿ  ಕ್ವಾರ್ಟರ್ ಅಥವಾ ಅರ್ಧ ವರ್ಷ ಆದ ಮೇಲೆ ರಿಸಲ್ಟ್ ಅನ್ನು ತಂದು ತೋರಿಸಿಯೇ ಬಿಡುತ್ತಾರೆ.  ಯಾವುದೇ No ಅನ್ನುವ ಪದವನ್ನು ಸಹಿಸದವರು.  ಸದಾ ಕರ್ಮಠ ಸ್ವಭಾವದವರು.  ಅವರಿಂದ ಇವರಿಂದ ಕೆಲಸ ತೆಗೆಯುವವರು.  ರಾಜಕಾರಣಿಗಳು.  ಅಗತ್ಯ ಬಂದಾಗ ಗುಡುಗುವವರು ಮತ್ತು ನಿರ್ದಾಕ್ಷಿಣ್ಯವಾಗಿ ಹಿಂದೇಟನ್ನು ಹಾಕದೆ, "oh, it was a tough decision to make" ಎಂದು ನೂರಾರು ಕೆಲಸಗಾರರನ್ನು ಒಂದೇ ದಿನದಲ್ಲಿ ಮನೆಗಟ್ಟುವವರು, ಇತ್ಯಾದಿ, ಇತ್ಯಾದಿ.  "ನೀವು ಇಷ್ಟು ವರ್ಷ ಮಾಡಿದ್ದನ್ನ ಬಿಡಿ, ನಿಮ್ಮಿಂದ ಇನ್ನು ಮುಂದೆ ಏನೇನು ಮಾಡೋಕಾಗ್ತದೆ ಅನ್ನೋದನ್ನು ಒದರಿ ಹಾಗೂ ಸಾಬೀತು ಮಾಡಿ ತೋರಿಸಿ" ಅನ್ನೋ ಮಾತು ಯಾರು ಯಾವತ್ತು ಬೇಕಾದರೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹೇಳಬಹುದು ಹಾಗೂ ಕೇಳಬಹುದು.

ನಾವು ಡಾರ್ವಿನ್ನನ ಥಿಯರಿಯನ್ನು ಹಿಂದೆ ಓದುತ್ತಿದ್ದಾಗ struggle for existence ಅನ್ನೋದನ್ನ ಬೇರೆ ರೀತಿ ಅರ್ಥ ಮಾಡಿಕೊಳ್ತಿದ್ವಿ,  ಆದರೆ ಈಗ struggle ಮತ್ತು existence ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ.  ಒಂಥರಾ ಮೈಕ್ರೋ ಬಡ್ಡಿಯ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡ ಹಾಗೆ ಪ್ರತಿದಿನ ಪ್ರತಿಕ್ಷಣ ನಿಮ್ಮನ್ನ ನೀವು ಪ್ರೋವ್ ಮಾಡಿಕೊಳ್ತಲೇ ಇರಬೇಕು, ಅದೇ ನ್ಯಾಯ, ಅದೇ ನಿಯಮ.

ಇಂಥಾ ಕ್ಯಾಪಿಟಲಿಸಮ್ಮಿನ ಸಾಗರದಲ್ಲಿ, ನೀರಿನ ಗುಣವಿರುವ ನಾವು ಕನ್ನಡಿಗರು ನಮ್ಮ ಯಥೇಚ್ಛವಾದ ಸಾಹಿತ್ಯ, ಸಂಗೀತ ಹಾಗೂ ಸಂದೇಶಗಳ ಹಿನ್ನೆಲೆಯಿಂದ ಒಂದು ರೀತಿ ಬಡಪಾಯಿಗಳಾಗಿ ಬಿಟ್ಟೆವೆನೋ ಅನ್ನಿಸೋದಿಲ್ವಾ ನಿಮಗೆ? ಚಿಕ್ಕ ಚಿಕ್ಕ ರಾಜಕೀಯಗಳಲ್ಲಿ rat race ಹಾಗೂ ಮೈಕ್ರೋ ಮ್ಯಾನೇಜುಮೆಂಟುಗಳಲ್ಲಿ Ph. D., ಮಾಡಿರುವ ನಮಗೆ ನಮ್ಮ ಕಾರ್ಪೋರೇಟ್ ವಲಯದಲ್ಲಿ ಯಾರೂ ಯಾವತ್ತೂ ಕರೆದು ಲೀಡರ್‌ಶಿಪ್ ರೋಲ್ ಅನ್ನು ಕೊಟ್ಟಿದ್ದು ನೋಡಿಲ್ಲ ಬಿಡಿ.  ನಮ್ಮ ಕಣ್ಣೆದುರೇ ತೆಲುಗು, ತಮಿಳು ಹಾಗೂ ಉತ್ತರ ಭಾರತದವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಮುಂದೆ ಹೋದರೆ ನಾವು ಕನ್ನಡಿಗರು ಅವರಿಗೆ ಅಡಿಯಾಳುಗಳಾಗಿ ಕೆಲಸ ಮಾಡಿಕೊಂಡು ಅದನ್ನು "ಕಾಯಕವೇ ಕೈಲಾಸ" ಎಂದು ಕರೆದು ಹನ್ನೆರಡನೇ ಶತಮಾನದ ವಚನಕಾರರ ಜೊತೆ ಸಮನ್ವಯ ಬೆಳೆಸಿಕೊಂಡು ಬಿಡುತ್ತೇವೆ.  ಕನ್ನಡಿಗರು risk ತಗೊಳೋದಿಲ್ಲ ಬಿಡ್ರಿ.  ನೀವೆಲ್ಲ ಬರೀ ಪುಳಿಚಾರಿನ ಜನ ನಿಮ್ಮಿಂದೇನಾಗುತ್ತೇ? ಅನ್ನುವವರಿಗೆ ನಾವು ಏನು ಎಂಬುದನ್ನು ತೋರಿಸೋ ಕಾಲ ಬರೋದಾದ್ರೂ ಯಾವಾಗ?

ಊಟ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಟೀ ಕುಡುದ್ ಮೇಲೆ ಮತ್ತೆ ನಮ್ಮನ್ನು ನಾವೇ ಈ ಪ್ರಶ್ನೆ ಕೇಳಿಕೊಂಡು ಸಮಾಧಾನ ಮಾಡ್ಕೋಬಹುದು ಅಥವಾ ಮಾಡ್ಕೋತೀವಿ: in the grand schema of things, so what?  ನಮಗೆಲ್ಲಾ ಈಗ ಕಷ್ಟಾ ಆಗೋಲ್ಲ.  ಯಾವಾಗ ನಮ್ಮ ಮಕ್ಳು ಹೈ ಸ್ಕೂಲು ಮುಗಿಸಿ ಕಾಲೇಜು ಸೇರಿ ಮೊದಲ ಸಲ ಥ್ಯಾಂಕ್ಸ್ ಗಿವಿಂಗ್‌ಗೆ ಮನೆಗೆ ಬರ್ತಾರಲ್ಲ, ಅವಾಗ ನಮ್ಮ್ ಮುಸುಡಿ ನೋಡಿ ಕೇಳ್ತಾರ್ ನೋಡಿ, "ಓ, ನೀನು ಇನ್ನು ಅದೇ ಕೆಲ್ಸದಲ್ಲಿ, ಅದೇ ಲೆವಲ್‌ನಲ್ಲಿ ಇದಿಯಾ?" ಆಗ ನಿಜವಾಗ್ಲೂ ಗೊತ್ತಾಗುತ್ತೆ ನಾವು ಯಾರು ಅಂತ.  ಅಷ್ಟೊತ್ತಿಗೆ ಸುಮಾರು ತಲೆ ಕೂದ್ಲು ಹಣ್ಣಾಗಿರುತ್ತೆ, ಇಲ್ಲಾ ಉದುರಿರುತ್ತೆ.  ಉಪೇಂದ್ರ ಹೇಳಿದ ಹಾಗೆ ಮೀಲ್ ಬೆಗ್ಗರ್ ಸ್ಟೇಟಸ್‌ಗೆ ಹತ್ರಾ ಹತ್ರಾ ಹೋಗ್ತೀವಿ.   ಇಲ್ಲೇ ಹುಟ್ಟಿ ಬೆಳೆದ ನಮ್ ಅಮೇರಿಕನ್ ಮಕ್ಳಿಗೆ ನಾವು ಬೇಡವಾಗಿ ಹೋಗ್ತೀವಿ.  ಆಗ ನಾವು, ಇನ್ನೇನು ನಾಳೆ ಇಂದನೇ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಅದು ಮಾಡೋಣ, ಇದು ಮಾಡೋಣ ಅಂದುಕೊಂಡು ಕನಸು ಕಾಣೋ ಅಷ್ಟರಲ್ಲಿ ತೂಕಡಿಗೆ ಜೋರಾಗಿ, ನಿದ್ರೆ ಬಂದು ಹೋಗಿರುತ್ತೆ, ನೋಡ್ತಾ ಇರಿ!

Thursday, August 09, 2012

ಅಣ್ಣಾ, ಹೊಸ ಪಕ್ಷ ಬೇಡಣ್ಣ

ಇಷ್ಟು ದೊಡ್ಡ ದೇಶದಲ್ಲಿ, ಎಷ್ಟೊಂದು ಜನ ಮುತ್ಸದ್ದಿಗಳು, ವಾದಿ-ಪ್ರತಿವಾದಿಗಳು, ವಿಚಾರವಂತರು, ಚಿಂತನಶೀಲರು, ಮುಖಂಡರು, ಪ್ರತಿಭಾವಂತರು ತುಂಬಿ ತುಳುಕಾಡುತ್ತಿರುವಾಗ ಯಾರೊಬ್ಬರೂ ಕೆ.ಬಿ. ಹಜಾರೆ (aka ಅಣ್ಣಾ ಹಜಾರೆ) ಅವರನ್ನು ಬದಿಗೆ ಕರೆದು, 'ನಿಮ್ಮ ನಿಲುವುಗಳೇನೋ ಸತ್ವವುಳ್ಳವು, ಆದರೆ ಅವುಗಳನ್ನು ಪ್ರತಿಪಾದಿಸುವಲ್ಲಿ ನೀವು ಹಿಡಿದಿರುವ ಇಂಪ್ಲಿಮೆಂಟೇಷನ್ನ್ ಮೆಥಡ್ ಅಷ್ಟೊಂದು ಯೋಗ್ಯವಲ್ಲದ್ದು’ ಎಂದು ಯಾರೂ ಏಕೆ ಹೇಳುತ್ತಿಲ್ಲ?

***


(picture source: thecommonspeaks.com)

ನಮ್ಮ ಅಂತರಂಗವನ್ನು ನಾವು ಅವಲೋಕಿಸಿಕೊಂಡರೆ ನಾವೆಲ್ಲರೂ ಒಂದೇ ಒಕ್ಕೊರಲಿನಲ್ಲಿ 'ಭ್ರಷ್ಟಾಚಾರದ ಮೂಲ ರಾಜಕಾರಣಿಗಳು!’ ಎಂದು ಸುಲಭವಾಗಿ ಹೇಳಿಬಿಡಬಲ್ಲೆವು. ರಿಯಲಿ? ನನ್ನ ಜೊತೆ ನೀವೂ ಯೋಚಿಸಿ, ಈ ಲೇಖನವನ್ನು ಓದಿದ ಬಳಿಕವೂ ನೀವು ನಿಮ್ಮ ಅಭಿಪ್ರಾಯವೇ ನಿಜವೆಂದುಕೊಂಡರೆ ಅದರ ಬಗ್ಗೆ ವಿವರವಾಗಿ ಇಲ್ಲ ಸಂಕ್ಷಿಪ್ತವಾಗಿ ನನಗೊಂದು ಸಾಲು ಬರೆಯಿರಿ.

ಉದಾಹರಣೆ 1: ನಾನು ತಾಲೂಕು ಆಫೀಸಿಗೆ ಹೋಗುತ್ತೇನೆ. ಅಲ್ಲಿ ನನಗೊಂದು ಸಣ್ಣ ಕೆಲಸವಾಗಬೇಕಾಗಿದೆ, ಆದರೆ ಆ ಕೆಲಸವನ್ನು ಮಾಡಿಕೊಡಲು ಸುಮಾರು 4 ಘಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಲ್ಲಿನ ಹೆಡ್‌ಕ್ಲರ್ಕ್ ಹೇಳುತ್ತಾರೆ.
ನಾನು ಪರವಾಗಿಲ್ಲ, ನಾಲ್ಕು ಘಂಟೆಗಳನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತೇನೆ, ಮತ್ತು ಸರಿಯಾಗಿ ನಾಲ್ಕು ಘಂಟೆಗಳ ನಂತರ ಹೋದರೆ, ಅದೇ ಹೆಡ್‌ಕ್ಲರ್ಕ್ ದೊಡ್ಡ ತಗಾದೆ ತೆಗೆಯುತ್ತಾರೆ.
’ನನಗೆ ಸುಮಾರು 24 ಫೈಲುಗಳನ್ನು ನೋಡಿ ಮುಗಿಸಬೇಕು, ಇನ್ನು ಒಂದು ವಾರ ಬಿಟ್ಟು ಬನ್ನಿ!’

ಆಗ ನನ್ನ ಆಪ್ಷನ್ನುಗಳೇನು?
- option 1 - ಸರಿಯಾಗಿ ಇನ್ನೊಂದು ವಾರ ಬಿಟ್ಟು ಬಂದು ಕೆಲಸವಾಗಿದೆಯೋ ಇಲ್ಲವೋ ಎಂದು ನೋಡುವುದು.
- option 2 - ಅಲ್ಲಿನ ಮತ್ತೊಬ್ಬ ಕ್ಲರ್ಕ್ ಸಲಹೆ ಮಾಡಿದ ಪ್ರಕಾರ 800 ರುಪಾಯಿಗಳನ್ನು ಕೊಟ್ಟರೆ ಅದೇ ದಿನ ಅವರು ಕೆಲಸ ಮಾಡಿಕೊಡುತ್ತಾರೆ, ಬೇಕಾದರೆ ಆ ಮತ್ತೊಬ್ಬ ಕ್ಲರ್ಕ್ ನನ್ನ ಪರವಾಗಿ ಶಿಫಾರಸ್ಸ್ ಮಾಡುತ್ತಾರಂತೆ.

ನಿಮಗೆ ಈ ಕೆಲಸ ಬಹಳ ಮುಖ್ಯವಾದುದು, ನಾಲ್ಕು ಘಂಟೆಗಳನ್ನು ಕಾಯಬಹುದು, ಆದರೆ ನಾಲ್ಕು ದಿನ ಕಾಯುವಂತಿಲ್ಲ, ನನ್ನ ಜಾಗೆಯಲ್ಲಿದ್ದರೆ ನೀವೇನು ಮಾಡುತ್ತೀರಿ?

ಉದಾಹರಣೆ 2: ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಪೋಸ್ಟೆಡ್ ಸ್ಪೀಡ್ ಲಿಮಿಟ್ಟಿಗಿಂತ ಘಂಟೆಗೆ 25 ಮೈಲಿ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿ, ದೊಡ್ಡ ತಪ್ಪನ್ನು ಎಸಗಿದ್ದೀರಿ.
ಟ್ರಾಫಿಕ್ ಪೋಲಿಸ್ ರೇಡಾರ್ ಡಿಟೆಕ್ಟರ್ ಮೂಲಕ ನಿಮ್ಮ ತಪ್ಪನ್ನು ಸಾಬೀತುಗೊಳಿಸುವ ರಿಪೋರ್ಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ (ಡ್ರೈವರ್) ಪಕ್ಕದ ಕಿಟಕಿಯಲ್ಲಿ ನಿಂತಿದ್ದಾನೆ.
ಸ್ಥಳದಲ್ಲೇ ದಂಡ ಕಟ್ಟಿದರೆ 8 ಸಾವಿರ ರೂಪಾಯಿ ಆಗುತ್ತದೆ (ಕೊಡದಿದ್ದರೆ ಗಾಡಿ ಬಿಡೋದಿಲ್ಲ ಮುಂದೆ).
ಅದೇ ಸಮಯುಕ್ಕೆ ಮತ್ತೊಬ್ಬ ಪೋಲಿಸ್ ಕಾರಿನ ಇನ್ನೊಂದು ಕಿಟಕಿಯಲ್ಲಿ ಬಂದು, 8 ಸಾವಿರ ಇಲ್ಲದಿದ್ರೆ 4 ಸಾವಿರ ಕೊಡಿ ಪರವಾಗಿಲ್ಲ, ಆದ್ರೆ ನಿಮಗೆ ಕಂಪ್ಯೂಟರ್ ರಶೀದಿ ಸಿಗೋದಿಲ್ಲ ಅಂತಾನೆ.

ನೀವು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು. ಹೆಚ್ಚು ಹೊತ್ತು ತರ್ಕವಾಗಲಿ, ತಕರಾರನ್ನಾಗಲೀ ಮಾಡಲು ವ್ಯವಧಾನವಿಲ್ಲ.
ನೀವು ಪೋಲೀಸ್‌ಗೆ ೮ ಸಾವಿರ ಕೊಡ್ತೀರಾ? ೪ ಸಾವಿರ ಕೊಡ್ತೀರಾ?

***

ನನ್ನ ಹಾಗೆ ನೀವೂ ಸಹ ನಿಮ್ಮ ಬದುಕಿನಲ್ಲಿ ಈಗಾಗಲೇ ಬಹಳ ರಾಜಕೀಯ ಪಕ್ಷಗಳು ಹುಟ್ಟಿ-ಸತ್ತಿದ್ದನ್ನು ನೋಡಿರಬಹುದು. ಕ್ರಾಂತಿರಂಗ, ತೃಣಮೂಲ, ಹೊಟ್ಟೆ, ಸಮಾಜವಾದಿ, ದಳ, ಹಲವಾರು ಬಗೆಯ "ಕಾಂಗ್ರೆಸ್ಸು"ಗಳು, ಲಲ್ಲೂ ಪಕ್ಷ, ಅವನ ಹೆಂಡತಿ ಪಕ್ಷ, ಜಾತಿ-ಜಾತಿಗಳ ಪಕ್ಷ, ಜಾತಿ ಇಲ್ಲದವರ ಪಕ್ಷ - ಹೀಗೆ ಹಲವು...ಈ ಪಟ್ಟಿ ಬಹಳ ಮುಂದುವರೆಯುತ್ತದೆ. ಎಲ್ಲದರ ಪ್ರಣಾಳಿಕೆಗಳು ಒಂದೇ - ದೇಶೋದ್ದಾರ.  66 ವರ್ಷದ ಸ್ವತಂತ್ರ್ಯೋತ್ತರ ಬಾಳ್ವೆಯಲ್ಲಿ ದೇಶದ ಉದ್ದಗಲಕ್ಕೂ ಅಂದಿನ ಮೂಲ ಸಮಸ್ಯೆಗಳು, ಇಂದಿಗೂ ಇವೆ; ಅವುಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಮೇಲೆ ಹುಟ್ಟಿ ಕೆಳಗೆ ಹರಿದು ಬರುವಂತದಲ್ಲ, ಕೆಳಗೆ ಹುಟ್ಟಿ ಸರ್ವತೋಮುಖವಾಗಿ ಬೆಳೆಯುವಂತದು. ತಾಲೂಕು ಆಫೀಸಿನಲ್ಲಿ 'ಅಡ್ಜಸ್ಟ್’ ಮಾಡಿಕೊಳ್ಳುವ ನಮ್ಮ ಮೆಂಟಾಲಿಟಿ, ನಾವು ಕಾನೂನನ್ನು ಮುರಿದಾಗ ನಮ್ಮ ಸಹಾಯಕ್ಕೆ ಬರುವ ಅಡ್ಡದಾರಿತನ ಇವುಗಳು ಲಂಚಕೋರತನದ ಮೂಲ ಕಾರಣ (ರೂಟ್‌ಕಾಸ್) ಗಳಲ್ಲೊಂದು. ಲಂಚ ಕೊಡುವವರು ನಾವು, ತೆಗೆದುಕೊಳ್ಳುವವರು ನಾವು - ಇದನ್ನು ಅರಿವಿನಿಂದ, ಬೆಳೆದ ವ್ಯವಸ್ಥೆಯಿಂದ, ಆಧುನಿಕ ಪರಿಕರಗಳಿಂದ ಹೊಡೆಯಬೇಕೇ ವಿನಾ ಮತ್ತೊಂದು ಪಕ್ಷ ಕಟ್ಟುವುದರಿಂದಲ್ಲ.

ಹಜಾರೆ ನಂಬಿಕೊಂಡ ಗಾಂಧಿ ಮಹಾತ್ಮ ಯಾವುದೇ ರಾಜಕೀಯ ಪದವಿಯನ್ನು ಅಲಂಕರಿಸದಿದ್ದರೂ, ಸಮಾಜದಲ್ಲಿ ಬದಲಾವಣೆಗಳನ್ನು ತರಲಿಲ್ಲವೇನು? ಹೊಸ ಪಕ್ಷ ಕಟ್ಟುವುದರಿಂದ ಏನಾದೀತು? ಮತ್ತೆ ಈ ಪಕ್ಷದ ವಕ್ತಾರರು ಇಂದಿನ ಕ್ಷೋಭೆಗಳ ನಡುವೆ ಮುಕ್ತವಾಗಿ ಸ್ಪರ್ಧಿಸಿ, ಗೆದ್ದು ಮೇಲೆ ಬರುವುದು, ಹಾಗೆ ಬಂದ ನಂತರ ಸುಧಾರಣೆಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವೇನು?

ನಾವು, ಲಂಚಾವತರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವವರೆಲ್ಲರೂ, ಒಂದು ರೀತಿಯಲ್ಲಿ ಹುಲಿ ಸವಾರಿಯಲ್ಲಿ ತೊಡಗಿದ್ದೇವೆ. ಹುಲಿ ಸವಾರಿಯನ್ನು ನಿಲ್ಲಿಸಿ ಹುಲಿಯಿಂದ ಕೆಳಗಿಳಿದರೆ ಹುಲಿಯೇ ನಮ್ಮನ್ನು ಕಬಳಿಸಿ ಬಿಡುವ ಸಾಧ್ಯತೆ ಇದೆ. ಸಾವಿರಾರು ವರ್ಷಗಳ ಸಮಸ್ಯೆಗೆ ಮತ್ತೊಂದು ಪಕ್ಷ ಕಟ್ಟುವುದು ಉತ್ತರವಲ್ಲ, 'ಅಣ್ಣಾ’ ಎಂದು ಕರೆಯುವವರೆಲ್ಲ, ನಾವು ಇಂದಿನಿಂದ ಭ್ರಷ್ಟರಾಗೋದಿಲ್ಲ ಎಂದು ಪ್ರಮಾಣ ಮಾಡಿ, ಅದಕ್ಕೆ ತಕ್ಕಂತೆ ನಡೆದುಕೊಂಡರೆ ಬಹಳಷ್ಟು ಸುಧಾರಣೆಗಳಾಗುತ್ತವೆ. ಈಗಾಗಲೇ ಇಳಿ ವಯಸ್ಸಿನ ಹಜಾರೆ ಅವರು ತಮ್ಮ ಮೂಲ ಮಂತ್ರ ಬೀಜವನ್ನು ಬಿತ್ತಿ, ಅದರಿಂದ ಹುಲುಸಾಗಿ ಕೃಷಿ ಬೆಳೆಯುವಂತೆ ಮಾಡಿದರೆ ಅದು ಜನಜನಿತವಾಗುತ್ತದೆ, ಹಾಗೂ ಕಾಲನ ಜೊತೆಗೆ ಬೆಳೆಯುತ್ತದೆ. ಅದನ್ನು ಬಿಟ್ಟು ಪಕ್ಷ ಕಟ್ಟಿದರೆ ಅದು ಕಾಲನಿಗೆ ಆಹಾರವಾಗುತ್ತದೆ.

***

ಭ್ರಷ್ಟಾಚಾರ ಕೇವಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸೀಮಿತವೇ?
ಬದಲಾಗಬೇಕಾದವರು ಯಾರು ಎಂದು ತಿಳಿಯಬೇಕಾದರೆ, ಹೋಗಿ ಕನ್ನಡಿ ಮುಂದೆ ನಿಲ್ಲಿ!

Friday, October 31, 2008

ಗಂಟಲ ಒಳಗಿನ ಪದಗಳು

ನಾವೆಲ್ಲ ಹಾಗೇ ನಮ್ಮ ಬಾಯಲ್ಲಿ ಪದಗಳೇ ಹೊರಡೋದಿಲ್ಲ, ಯಾರೋ ನಮ್ಮ ಗಂಟಲಿನಲ್ಲಿ ಶವೆಲ್ಲನ್ನು ತೆಗೆದು ಪದಗಳನ್ನು ಗೋಚಿ ಬದಿಗೆ ಎತ್ತಿ ಹಾಕಿದ ಹಾಗೆ ಒಂದು ರೀತಿ ಛಳಿಗಾಲದಲ್ಲಿ ರಸ್ತೆಯ ಬದಿ ಗೋಚಿಹಾಕಿದ ಬಿಳಿಯ ಹಿಮದಂತೆ. ನಮ್ಮಲ್ಲಿನ ಪದಗಳೋ ಹಿಮದ ಹಾಗೆ ಕಪ್ಪು ಮಣ್ಣಿನ ಬಣ್ಣ ಕಂಡು ಬಿಸಿಲಿಗೆ ಕರಗಿ ಮತ್ತೆ ನೀರಾಗಿ ಇಂದಲ್ಲ ನಾಳೆ ಮತ್ತೆ ಬಿಳಿಯ ಹಿಮವಾಗುವ ಪ್ರಕ್ರಿಯೆಯಂತೆ ಹಿಂದೆ ಬಾರದೇ ಎಲ್ಲೋ ಅನತಿ ದೂರದ ಮೋಡಗಳ ಹಾಗೆ ದೂರವೇ ಉಳಿದು ಬಿಡುತ್ತವೆ. ನಾವು ನಮ್ಮ ಭಾಷೆ ನಮ್ಮತನವೆನ್ನುವುದು ಪದೇ ಪದೇ ಅವುಗಳ ಅಸ್ತಿತ್ವವನ್ನು ಹುಡುಕಿಕೊಳ್ಳುವ ಎಂದೂ ಮುಗಿಯದ ಲೂಪ್‌ನಲ್ಲಿ ಸೇರಿಕೊಂಡು ಮತ್ತೆ ಬರೋದೇ ಇಲ್ಲ.

ನಮಗೆ ನಮ್ಮತನ ನಮ್ಮದರ ನಡುವೆ ಇರೋದು ಭಾಷೆಯ ಸಮಸ್ಯೆಯೋ, ಅಭಿರುಚಿಯ ಸಮಸ್ಯೆಯೋ ಅಥವಾ ನಮ್ಮ ಸಂಸ್ಕೃತಿಯೇ ಹಾಗೋ? ಇಲ್ಲಿ ದಿನಕ್ಕೆ ನೂರು ಬಾರಿ ’ಧನ್ಯವಾದಗಳು’ ಎಂದು ಒಣಗಂಟಲಿನಲ್ಲಿ ಅನ್ನುವ ನಾವು ನಮ್ಮೂರುಗಳಲ್ಲಿ ಅಂದದ್ದಿಲ್ಲ. ಎಂದೋ ಯಾರದ್ದೋ ಕೈ ಹಿಡಿದುಕೊಂಡು ಕೃತಾರ್ಥರಾಗಿದ್ದೇವೆ, ನಿಂತು ಹೋದ ಮದುವೆಯನ್ನು ನಡೆಸಿಕೊಟ್ಟವರ ಕುರಿತು ಕನ್ಯಾಪಿತೃಗಳು ಗದ್ಗದರಾದ ಹಾಗೆ ಮಂಜುಕಣ್ಣಿನವರಾಗಿದ್ದೇವೆ, ದೊಡ್ಡವರು-ದೇವರ ಮುಂದೆ ಆರ್ತರಾಗಿದ್ದೇವೆ, ಅಷ್ಟೇ. ನಮ್ಮೂರಿನ ಮೇಷ್ಟ್ರುಗಳೋ ಬರೀ ಬೈಯುತ್ತಲೇ ಕಲಿಸುತ್ತಾ ಹೋದರು, ಬೈಗಳು ಮಾಮೂಲಿ ಸಂವಹನಾ ಶಬ್ದಗಳಾದವು. ನಮ್ಮ ಹಿರಿಯರು ನಮ್ಮನ್ನು ಕಣ್ಣಿನಿಂದಲೇ ಹೆದರಿಸುತ್ತಾ ಬಂದರು, ಅವರನ್ನು ನೋಡಿದಾಗಲೆಲ್ಲ ತಾಯ ಮಡಿಲಿನಲ್ಲಿ ಮಗು ಕಂಡು ಕೇಳರಿಯದ ಗುಮ್ಮನ ಹೆಸರನ್ನು ಕೇಳಿ ಮುದುರಿಕೊಳ್ಳುವ ಹಾಗೆ ಮಾಡಿದರು, ಶಕ್ತಿ ಸಾಧಿಸುವವರು ಸಾಧಿಸಿ ತೋರಿಸಿದರು, ಇಲ್ಲದವರು ಇದ್ದವರ ವ್ಯತ್ಯಾಸವನ್ನು ಗುರುತಿಸುತ್ತಲೇ ಬಂದರು.

ನಮ್ಮ ಭಾಷೆ, ಪದ ಬಂಡಾರ ಬೆಳೆಯಲೇ ಇಲ್ಲ. ನಮ್ಮ ಸ್ನೇಹಿತರು ವಾರಿಗೆಯವರು ಇಂಗ್ಲೀಷೇ ಸರ್ವಸ್ವ ಎಂದುಕೊಂಡು ಊಟ ಮಾಡಿದವರು ಕೈತೊಳೆದುಕೊಂಡಷ್ಟು ಸಲೀಸಾಗಿ ಉತ್ತಮವಾಗೇ ಮಾತನಾಡುತ್ತಿದ್ದ ಕನ್ನಡವನ್ನು ಮರೆತು, ಹರಿದು-ಬೆರೆತು-ಅರಿಯದೇ ಇಂಗ್ಲೀಷಿಗೆ ತೊಡಗಿಕೊಂಡರು. ನಮ್ಮ ಸಹಪಾಠಿಗಳಿಗಾಗಲೇ ಇಂಗ್ಲೀಷು ಓದಿನ ಹುಚ್ಚು ಹತ್ತಿ ಹೋಗಿತ್ತು, ಇಂಗ್ಲೀಷು ಸಿನಿಮಾಗಳು ಸರ್ವವ್ಯಾಪಿಗಳಾಗಿ ಹೋಗಿದ್ದವಾಗಲೇ. ಕನ್ನಡ ಸಿನಿಮಾಗಳ ಕೌಟುಂಬಿಕ ಚಿತ್ರಣಕ್ಕೆ ಮೀರಿ ನಮ್ಮ ಪಡ್ಡೆತನಕ್ಕೆ ಇಂಗ್ಲೀಷಿನ ಬೆತ್ತಲೆ ಚೆಲುವೆಯರು ಉತ್ತರ ಕೊಡತೊಡಗಿದ್ದರು, ನಮಗೆ ಗೊತ್ತಿಲ್ಲದೇ ನಾವೇ ಮಾರು ಹೋಗಿದ್ದೆವು - ನಮ್ಮ ಭಾಷೆ, ಔಚಿತ್ಯ, ಗಾಂಭೀರ್ಯತೆಯನ್ನು ಮೀರಿ ಮತ್ತೆಂದೂ ಹಿಂದೆ ಬರದಷ್ಟು ದೂರಕ್ಕೆ. ನಾವು ಬಳಸುವ ಶಾಲೆ ಮೇಜು ಪಡಸಾಲೆ ಕಾಲುಚೀಲ ಎನ್ನುವ ಪದಗಳು ನಮ್ಮ ಓರಗೆಯವರ ಹುಬ್ಬೇರುವುದಕ್ಕೆ ಕಾರಣವಾದವು. ಈ ಕಡೆ ಕನ್ನಡವನ್ನೂ ಓದದ ಆ ಕಡೆ ಇಂಗ್ಲೀಷನ್ನೂ ಸರಿಯಾಗಿ ತಿಳಿಯದವರ ಜೊತೆ ನಾವು ಕನ್ನಡವನ್ನು ಬಲ್ಲ ಕೆಲವರು ಅಲ್ಪರಾದೆವು. ನಮ್ಮೊಳಗೆ ನಾವು ಅಂತರ್ಮುಖರಾಗಿಕೊಂಡು ವರ್ಷಕ್ಕೊಮ್ಮೆ ಕಷ್ಟಪಟ್ಟು ಸಂಪಾದಿಸಿಕೊಳ್ಳುವ ಕಾಲೇಜು ವಾರ್ಷಿಕೋತ್ಸವದ ಮ್ಯಾಗಜೀನಿನಲ್ಲಿ ಒಂದು ಕವನ ಲೇಖನ ಬರೆಯುವಷ್ಟರಲ್ಲಿ ಸ್ಖಲಿತರಾಗಿ ಹೋಗುವಲ್ಲಿ ನಮ್ಮ ಅಂತಃಸತ್ವ ಮಿತಗೊಂಡಿತು. ಹಾಗೆ ಬರೆದ ಲೇಖನ ನಮ್ಮ ನಡುಗೆ ಉಡುಗೆ ಮಾತುಕಥೆಗಳು ಓರಗೆಯವರಿಗೆ ಗಾಂಧೀತನವಾಗಿ ಕಂಡಿತು. ರೆಟ್ಟೆಗಳನ್ನು ಬಲಿಸಿಕೊಳ್ಳದ ನಾವು ಮಿದುಳನ್ನು ಬಲಿಸಿಕೊಳ್ಳುವತ್ತ ವಾಲಿಕೊಂಡಾಗ ರೆಕ್ಕೆ ಬಲಿತ ಕೆಲವು ಪಡ್ಡೆ ಹುಡುಗರು ನಮ್ಮಕ್ಕ ತಂಗಿಯರನ್ನು ಕೀಟಲೆ ಮಾಡಿ ನಕ್ಕರೆ ಅವರಿಗೆರಡೇಟು ಬಿಡದಿರುವುದು ಮೇಲ್ನೋಟಕ್ಕೆ ಆದರ್ಶವೆಂದುಕೊಂಡರೂ ಅದು ನಮ್ಮ ಕೈಲಾಗದ ಮಾತು ಎನ್ನುವುದು ನಮ್ಮ ಹೊಟ್ಟೆಯಲ್ಲೇ ಹುಟ್ಟಿ ಸತ್ತ ಸತ್ಯವಾಗಿ ಹೋಗಿತ್ತು.

***

ಹೀಗೇ ಒಂದು ತಣ್ಣನೆ ಸೋಮವಾರದ ಸಂಜೆ. ಅಮೇರಿಕದಲ್ಲಿ ನಮ್ಮ ಬದುಕಿನ ಸುಗಮ ಸಂಗೀತವೆನ್ನುವುದು ಆರಂಭ ಹಾಗೂ ಅಂತ್ಯವಾಗುವುದು ವಾರಾಂತ್ಯಗಳಲ್ಲೇ ಎಂದು ಯಾರೋ ಬರೆದು ಶಾಸನ ಮಾಡಿಟ್ಟು ಹೋದ ಹಾಗಿದ್ದುದನ್ನು ಉಲ್ಲಂಘಿಸಿ ಸೋಮವಾರ ಆಫೀಸಿನ ತರುವಾಯ ನಡೆದ ಮುಖಾಮುಖಿ ಮಾತುಕಥೆಯೊಂದರಲ್ಲಿ ಜಯಂತ ಕಾಯ್ಕಿಣಿ ನನ್ನನ್ನು ಕೇಳಿದರು, ’ನಿಮ್ಮ ತಲೆಮಾರುಗಳಲ್ಲಿ ಮೇಷ್ಟ್ರುಗಳೇ ಇಲ್ಲ, ಭಾರತದಲ್ಲಿ ಚೆನ್ನಾಗಿ ಅಂಕಪಡೆದ ಎಲ್ಲರೂ ಉದ್ಯಮವನ್ನು ಕುರಿತ ಶಿಕ್ಷಣವನ್ನು ಪಡೆಯಲು ಸ್ಪರ್ಧಿಸಿದಂತೆ ಮೂಲ ಶಿಕ್ಷಣ - ಹ್ಯುಮಾನಿಟೀಸ್, ಬೇಸಿಕ್ ಸೈನ್ಸ್, ಎಜುಕೇಷನ್, ಆರ್ಥಶಾಸ್ತ್ರ ಮುಂತಾದವುಗಳು - ಎನ್ನುವುದನ್ನು ಕಲಿಯುವರೂ ಇಲ್ಲ, ಕಲಿಸುವವರೂ ಇಲ್ಲ. ಹೀಗಾದರೆ ಮುಂಬರುವ ತಲೆಮಾರು ಹೇಗಿದ್ದಿರಬಹುದು?’

ನಾನೆಂದೆ, ’ಬೇಕಾದಷ್ಟು ಹೊಸ ಶಾಲೆಗಳಿವೆ, ಖಾಸಗಿಯವರು ಜೋರಾಗಿಯೇ ಇದ್ದಾರೆ, ಇವುಗಳ ನಡುವೆ ಗುರುಗಳೇ ಇಲ್ಲವೇ?’

ಅವರೆಂದರು, ’ಇಲ್ಲ, ಚೆನ್ನಾಗಿ ಓದುವವರು ವೃತ್ತಿನಿರತ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡರೆ ಉಳಿದ ಶಿಕ್ಷಣ ಕ್ಷೇತ್ರಗಳಿಗೆ ಕಾಲಿರುಸುವವರು ಮೊದಲಿನವರು ಕಷ್ಟಪಡುತ್ತಿದ್ದಷ್ಟಂತೂ ಕಷ್ಟಪಡುತ್ತಿಲ್ಲ.’

ಇದು ನಿಜ, ನಾವು ಹತ್ತನೇ ತರಗತಿ ಪಾಸ್ ಮಾಡುತ್ತಿದ್ದ ಹೊತ್ತಿಗೇನೇ ಫಸ್ಟ್ ಕ್ಲಾಸ್ ಪಡೆದವರು ಪಿಯುಸಿ ಸೈನ್ಸ್ ಅಥವಾ ಡಿಪ್ಲೋಮಾ ವಿಭಾಗ, ಸೆಕೆಂಡ್ ಹಾಗೂ ಥರ್ಡ್ ಕ್ಲಾಸ್ ಪಾಸ್ ಮಾಡಿದವರು ಕಾಮರ್ಸ್ ಅಥವಾ ಆರ್ಟ್ಸ್ ತೆಗೆದುಕೊಳ್ಳುತ್ತಿದ್ದುದು ಸಹಜವಾಗಿತ್ತು. ಅಲ್ಲಲ್ಲಿ ಎಕ್ಸೆಪ್ಷನ್ನುಗಳನ್ನು ನೋಡಿದ್ದೇನೆ, ತುಂಬ ಬುದ್ಧಿವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮಗೆ ಬೇಕಾದ ವಾಣಿಜ್ಯ, ಅರ್ಥಶಾಸ್ತ್ರವನ್ನು ತೆಗೆದುಕೊಂಡು ಅದನ್ನು ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗಿಂತಲೂ ಅವರೇ ಹೆಚ್ಚು ಓದಿಕೊಂಡಿದ್ದ ಪ್ರಸಂಗಗಳನ್ನು.

ಕಾಯ್ಕಿಣಿಯವರ ನಡುವಿನ ಮಾತುಕಥೆಯಲ್ಲಿ ಮತ್ತೊಂದು ವಾಸ್ತವಾಂಶ ಸ್ಪಷ್ಟವಾಗಿತ್ತು: ಇಂದಿನ ಜನ ಅದೆಷ್ಟು ಬೇಗ ಪ್ರತಿಫಲವನ್ನು ಆಶಿಸುತ್ತಾರೆ ಎಂಬುದು ಆಶ್ಚರ್ಯ ಮೂಡಿಸಿತ್ತು. ಟಿವಿ ಕಾರ್ಯಕ್ರಮಗಳಿಗೆ ತಯಾರಾಗಲೆಂದೇ ಮಕ್ಕಳಿಗೆ ಸಂಗೀತ ಕಲಿಸಿಕೊಡುವ ವ್ಯವಸ್ಥೆ ಹುಟ್ಟಿದೆ, ಒಂದು ವಾರ-ತಿಂಗಳು ಅಥವಾ ಕೆಲವೇ ತಿಂಗಳುಗಳಲ್ಲಿ ಮಕ್ಕಳಲ್ಲಿ ಸಂಗೀತವನ್ನು ತುಂಬುತ್ತೇವೆನ್ನುವ ಗ್ಯಾರಂಟಿ ಕೊಡುವ ವ್ಯವಸ್ಥೆ ಬಂದಿದೆ ಅಥವಾ ಹಾಗಿರುವುದಕ್ಕೆ ಡಿಮ್ಯಾಂಡ್ ಇದೆ ಎನ್ನುವ ಮಾತು ಆಶ್ಚರ್ಯ ಮೂಡಿಸಿತ್ತು. ಎಲ್ಲವೂ ವೇಗವಾಗಿ ಆಗಬೇಕೆನ್ನುವ ವ್ಯವಸ್ಥೆಯಲ್ಲಿ ಸಾಧನೆಗೆ ಸ್ಥಳವಿಲ್ಲ. ಸಾನ್ಯಾ ಮಿರ್ಜಾ ಲಿಯಾಂಡರ್ ಪೇಸ್ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ಕಠಿಣ ಪರಿಶ್ರಮ ಪಟ್ಟು ಮುಂದೆ ಬರುವುದನ್ನು ನೋಡಿಕೊಂಡೂ ಜನರು ಒಂದೇ ಉಸಿರಿನಲ್ಲಿ ಚಾಂಪಿಯನ್ನರಾಗುವ ಕನಸು ಕಂಡರೆ ಅದಕ್ಕೇನೆನ್ನೋಣ? ನಮ್ಮ ಗುರುಗಳು ತಮ್ಮ ಜೀವನ ಪರ್ಯಂತ ಹಿಂದೂಸ್ತಾನೀ ಸಂಗೀತ ಸಾಧನೆ ಮಾಡಿಯೂ ಸಂಗೀತವೆನ್ನುವುದು ಒಂದು ಸಾಗರ ಅದರಲ್ಲಿ ನಾನು ಕುಡಿದದ್ದು ಒಂದು ಬೊಗಸೆ ಉಪ್ಪು ನೀರು ಅಷ್ಟೇ ಎನ್ನುವುದನ್ನು ಇಂದಿನ ವೇಗಮಯ ಜೀವನದ ಮುಂದೆ ಸರಳವಲ್ಲದ್ದು ಎನ್ನೋಣವೆ?

***

ಏಕೋ ಅಶ್ವಥ್ ತಮ್ಮ ಹಾಡಿನ ನಡುವೆ ’ನಾವು ಭಾರತೀಯರು...’ ಎಂದಾಗ ಸ್ವಲ್ಪ ಹೊತ್ತಿನ ಮೊದಲು ’...ಇವರು ನಿಮ್ಮ ದೇಶದವರು!’ ಎಂದು ಯಾರನ್ನೋ ಪರಿಚಯಿಸಿಕೊಟ್ಟ ನನ್ನನ್ನೇ ನೋಡಿ ಕೈ ಮಾಡಿ ’ನಾವು ಭಾರತೀಯರು...’ ಎಂದು ಹಾಡಿದಂತಾಯಿತು. ನಾವು ಭಾರತೀಯರು ಎನ್ನುವುದರಲ್ಲಿ ಹುರುಳಿದೆ ತಿರುಳಿದೆ, ಒಂದೇ ಒಂದು ಮಾತಿನಲ್ಲಿ ಎಲ್ಲವೂ ಇದೆ. ಅಮೇರಿಕದಲ್ಲೇ ಹುಟ್ಟಿ ಬೆಳೆದವನಂತಿರುವ ನನ್ನ ಸಹೋದ್ಯೋಗಿ ನಮ್ಮ ಕಾನ್‌ಫರೆನ್ಸ್ ಕಾಲಿನ ನಡುವೆ ಇನ್ಯಾರನ್ನೋ ಕುರಿತು, ’ಅದೊಂದು ಆರ್ಡರನ್ನು ಹೇಗೋ ತಳ್ಳಿಬಿಡು, ಸ್ವಲ್ಪ ಅಡ್ಜಷ್ಟ್ ಮಾಡಿಕೋ...’ ಎಂದು ಹೇಳಿದಾಗ ನನ್ನ ಪಕ್ಕೆಗೆ ತಿವಿದಂತಾಗಿ ಒಂದು ಕಡೆ ರಿಪೀಟಬೆಲ್ ಪ್ರಾಸೆಸ್ಸುಗಳನ್ನು ಎಸ್ಟಾಬ್ಲಿಷ್ ಮಾಡುವುದು ನನ್ನ ಜವಾಬ್ದಾರಿ ಅಂತಹುದರಲ್ಲಿ ’ಸ್ವಲ್ಪ ಅಡ್ಜಷ್ಟ್ ಮಾಡಿಕೊಳ್ಳುವುದನ್ನು’ ಅದು ಹೇಗೆ ರಿಪೀಟ್ ಮಾಡಲಿ? ಅಥವಾ ಅದು ನಮ್ಮ ಕ್ರೋಮೋಸೋಮು, ಡಿಎನ್‍ಎ ಗಳಲ್ಲಿ ಯಾವತ್ತೂ ರಿಪೀಟ್ ಆಗುತ್ತಲೆಯೇ ಇದೆಯೋ?

ನಮ್ಮ ಗುರುಗಳೆಲ್ಲ ಇಂಗ್ಲೀಷನ್ನು ಗಾಢವಾಗಿ ಓದಿಕೊಂಡ ಪಂಡಿತರು ಅಥವಾ ಅಂತಹ ಪಂಡಿತರನ್ನು ಬಲ್ಲವರು. ಅವರು ಇಂಗ್ಲೀಷನ್ನು ಓದಿಕೊಂಡ ಹಿನ್ನೆಲೆಗೆ ತಕ್ಕಂತೆ ಕನ್ನಡದ ಗಂಧ-ಗಾಳಿಯನ್ನೂ ಬಲ್ಲವರು ಒಂದು ರೀತಿ ಫ್ಲ್ಯಾಷ್ ಲೈಟ್‌ನ ನೇರಕ್ಕೆ ಒಂದು ಒಂದು ಬೆಳಕಿನ ವರ್ತುಲ ಬಿದ್ದರೆ ಅದಕ್ಕೆ ಸುತ್ತಲಿನ ಪ್ರಭಾವಳಿ ಇದ್ದಂತೆ. ನಾವುಗಳೆಲ್ಲ ನಮಗೆ ಬೇಕಾದುದನ್ನು ಓದಿಕೊಂಡು ಬೇಕಾದಷ್ಟು ಅಂಕಗಳನ್ನು ಗಳಿಸಿ ಮುಂದೆ ಬಂದೆವು. ಇಲ್ಲಿಯವರೆಗೂ ನಮ್ಮ ಸಬ್ಜೆಕ್ಟಿನ ಬಗ್ಗೆಯೇ ಯಾರೇ ಪ್ರಶ್ನೆ ಕೇಳಿದರೂ ’ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎನ್ನುವ ಉತ್ತರವನ್ನು ಆ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಿಂತ ಮೊದಲು ಯೋಚಿಸಿಕೊಳ್ಳುತ್ತಿದ್ದೆವು. ಒಂದು ದಿನವೂ ನಾವು ಕಲಿಯುವುದರ ಹಿನ್ನೆಲೆ ಮುಂದೆ ಅದನ್ನು ಜೀವನದಲ್ಲಿ ಬಳಸುವ ಬಗ್ಗೆ ತಲೆ ಕೆಡಿಸಿಕೊಂಡು ಗೊತ್ತಿಲ್ಲದವರಾಗಿದ್ದೆವು. ನಮಗೆ ಗೊತ್ತಿರದೆಯೋ ಗೊತ್ತಿದ್ದೋ ಮುಂದಿನ ಜಗತ್ತಿಗೆ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುತ್ತಿದ್ದೆವು ಆದರೆ ಅದರ ವೇಗ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದ್ದುದೂ ಇತ್ತು.

ಮತ್ತದೇ ಮಾತು, ಕೆಲವೊಂದು ಭಾವನೆಗಳು ಭಾಷೆಯನ್ನೂ ಮೀರುತ್ತವೆಯಂತೆ, ಆದರೆ ಆ ಸಮಸ್ಯೆಯ ಆಳ ನಮಗೆಂದೂ ಅರಿವಾಗದು ಏಕೆಂದರೆ ನಮ್ಮ ಭಾಷೆಯ ಆಳವೇ ಅಷ್ಟು. ಯಾರಾದರೊಡನೆ ಮುಖ ಕೊಟ್ಟು ಮಾತನಾಡೋಣವೆಂದರೆ ಅವರು ಇಂಗ್ಲೀಷಿನ ಮೊರೆ ಹೊಕ್ಕು ಕೊನೆಗೆ ಮಾತೇ ನಿಂತು ಹೋಗುವ ಸ್ಥಿತಿ ಬರುವ ಹಾಗೆ ನಮಗೆ ನಮ್ಮತನವೇ ದೊಡ್ಡದಾಗಿ ಯಾವತ್ತೂ ಎಲ್ಲೂ ಕಾಣೋದಕ್ಕೆ ಒಂದು ಕಾರಣ ಹುಟ್ಟಿಕೊಳ್ಳುತ್ತದೆ. ನಮ್ಮ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಹಲವಾರು ಧ್ವನಿಗಳು ಹುಟ್ಟೋದೇನೋ ನಿಜ, ಆದರೆ ಅವುಗಳು ರಾಗವಾಗಿ ಬೆಳೆಯೋದೇ ಇಲ್ಲ, ಒಂದು ಆಲಾಪನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಹಾಗೆ ಮತ್ತೊಂದು ಹುಟ್ಟಿದರೂ ಹುಟ್ಟಬಹುದು ಎನ್ನುವ ನಿರೀಕ್ಷೆಯಲ್ಲೇ ಬದುಕು-ಭಾವನೆ-ಬಂಡವಾಳವೆಲ್ಲವೂ ಕಳೆದು ಹೋದ ಹಾಗೆ. ಹ್ಞೂ, ನಮ್ಮ ನಮ್ಮ ಮುಸುಡಿಯನ್ನು ನಾವು ನಾವೇ ನೋಡಿಕೊಂಡು ನಮ್ಮ ಪ್ರಪಂಚದಲ್ಲಿ ನಾವೇ ತೇಲಾಡಿ ಓಲಾಡಿಕೊಂಡು ನಾವೇ ಬರೆದು ಸಂಪಾದಿಸಿ ಪ್ರಕಟಿಸುವ ಸಾಹಿತ್ಯದಲ್ಲಾದರೂ ಅದೇನು ಮಹತ್ತವಿದ್ದಿರಬಹುದು? ತೀಡಿ ಗಂಧವಾಗಲಿಲ್ಲ, ಕಾಯಿಸಿ ಬಗ್ಗಿ ಹೊಳೆಯಲಿಲ್ಲ ಎನ್ನುವ ಸಂಬಂಧಗಳಲ್ಲಿ ಸೂಕ್ಷ್ಮವಾದರೂ ಎಲ್ಲಿಂದ ಬಂದೀತು? ನಿಜವಾದ ನೋವಿಗೆ ಸ್ಪಂದಿಸದೇ ಅದೆಷ್ಟು ದಿನ ಎಲ್ಲವನ್ನೂ ಮುಂದೆ ತಳ್ಳಲಾದೀತು?

Sunday, October 05, 2008

ಜಾಗೃತಿ ಆರ್ಯಾವತಿ ಹಾಗೂ ನಮ್ಮತನ

’ಏಕೆ ನಿನ್ನ ಹೆಸರನ್ನು J J ಅಂತ ಬದಲಾಯಿಸಿಕೊಂಡಿದ್ದೀಯಾ?’ ಎಂದು ಇಂದು ವಾಲ್‌ಮಾರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸೊಬ್ಬಳನ್ನು ಕೇಳಿದೆ. ಭಾರತೀಯ ಮೂಲದ ಆಕೆ ಅಪರೂಪಕ್ಕೊಮ್ಮೆ ನಾನು ಶಾಪ್ಪಿಂಗ್ ಹೋದಾಗಲೆಲ್ಲ ಸಿಕ್ಕು ಮುಖ ಪರಿಚಯವಿದ್ದಂತೆ ’ನಾವು ಭಾರತೀಯರು’ ಎನ್ನುವ ಸಂಬಂಧವೂ ನಮಗೆ ಹೇಳದ ಹಾಗೆ ಬೆಳೆದು ಬಂದಿದೆ. ಆಕೆಯ ನೇಮ್ ಟ್ಯಾಗ್‌ನಲ್ಲಿದ್ದದ್ದು ’ಜಾಗೃತಿ’ ಎಂಬುದಾಗಿ, ಇಂದು ಅದರ ಮೇಲೆ ಮತ್ತೊಂದು ಹೊಸ ಹೆಸರಿನ ಟ್ಯಾಗ್ ಮುದ್ರಿಸಿಕೊಂಡು ಜೆಜೆ ಎಂದು ಓಡಾಡಿಕೊಂಡಿದ್ದಾಳೆ.

’ಏನಾಯ್ತು?’ ಎಂದರೆ ಆಕೆ ’ಅವರಿಗೆಲ್ಲ ನನ್ನ ಹೆಸರನ್ನು ಉಚ್ಛರಿಸುವುದಕ್ಕೆ ಕಷ್ಟವಾಗುತ್ತಿತ್ತು, ಅದಕ್ಕೇ ಈ ಹೆಸರು ಕೊಟ್ಟಿದ್ದಾರೆ...’
ನಾನು ಆಕೆಯ ಮಾತನ್ನು ಮಧ್ಯದಲ್ಲಿ ತುಂಡು ಮಾಡಿ ಕೇಳಿದೆ, ’ಜಾಗೃತಿ ಅನ್ನೋ ಪದ ಕಷ್ಟವೇ? ನೀನು ಹಾಗೆ ಆಗೋದಿಲ್ಲ ಎನ್ನಬೇಕಿತ್ತು...’ ಎನ್ನುವಾಗ, ಆಕೆ ಚಿಕ್ಕ ಮುಖ ಮಾಡಿಕೊಂಡು ಹೇಳಿದಳು, ’ಪುಸ್ತಕದಲ್ಲೆಲ್ಲಾ ಜಾಗೃತಿ ಅಂತಲೇ ಇದೆ, ಆದರೆ ಕರೆಯುವುದಕ್ಕೆ ಈ ಹೆಸರನ್ನು ಕೊಟ್ಟರು ನಾನೇನು ಹೇಳಲಿಲ್ಲ’.

ನಮ್ಮ ಒಂದು ನಿಮಿಷದ ಭೇಟಿಯಲ್ಲಿ ನಾನೇನೂ ಹೆಚ್ಚು ಮಾತು ಬೆಳೆಸಲಿಲ್ಲ, ಬದಲಿಗೆ ’ಮತ್ತೆ ಹೇಳಿ ನೋಡಿ, ಜಾಗೃತಿ ಅನ್ನೋ ಹೆಸರು ನಿಜವಾಗಿಯೂ ಚೆನ್ನಾಗಿದೆ, ಜೊತೆಗೆ ಅಮೇರಿಕನ್ನರಿಗೆ ಹೇಳುವುದಕ್ಕೆ ಅಷ್ಟೊಂದು ಕಷ್ಟವಾದುದೇನೂ ಅಲ್ಲ’ ಎಂದು ಹೇಳಿ ನನ್ನ ದಾರಿ ಹಿಡಿದೆ.

ನನ್ನ ಈ ಹೆಸರಿನ ಉಚ್ಛಾರಕ್ಕೆ ಪುಷ್ಟಿಕೊಡುವ ಹಾಗೆ ಆಗಷ್ಟೇ ಲೈಬ್ರರಿಯಲ್ಲಿ ಬಾರೋ ಮಾಡಿದ ಸಿಎನ್‌ಎನ್ ನ ಆಂಡರ್‌ಸನ್ ಕೂಪರ್ (Anderson Cooper) ನ ಟಿಪ್ಪಣಿಗಳ ಆಡಿಯೋ ಸಿಡಿ ಕಾರಿನಲ್ಲಿ ನಡೆಯುತ್ತಿತ್ತು, ಅದರಲ್ಲಿ ಆತ ಶ್ರೀಲಂಕಾದಲ್ಲಿ ಸುನಾಮಿಯ ಅನುಭವಗಳನ್ನು ದಾಖಲು ಮಾಡಿದ ಬಗ್ಗೆ ಓದುತ್ತಾ ಹೋಗುತ್ತಿದ್ದಾಗ ಅಲ್ಲಿ ಸುನಾಮಿಯ ತರುವಾಯ ಆಕ್ಸಿಡೆಂಟ್‌ಗೆ ಒಳಗಾದ ರೈಲಿನ ಅವಶೇಷವೊಂದನ್ನು ವಿವರಿಸುತ್ತಾ ಆರ್ಯವಾಟಿಯ ಕಣ್ಣೆದುರೇ ಆಕೆಯ ಮಗ ಹಾಗೂ ಅಮ್ಮ ಕಾಣೆಯಾದುದರ ಬಗ್ಗೆ ವಿವರಿಸುವ ಒಂದು ಪ್ಯಾರಾಗ್ರಾಫ್ ಬಂತು. ಆರ್ಯ...ವಾಟಿ...ಯ ಬಗ್ಗೆ ಮತ್ತಷ್ಟು ಚಿಂತಿಸಲಾಗಿ ಅದು ಆರ್ಯಾವತಿ ಇದ್ದಿರಬಹುದೇನೋ ಅನ್ನೋ ಕಲ್ಪನೆ ಮೂಡಿಬಂತು. Mom Yes, Son No...ಎಂದು ಹೇಳುತ್ತಾ ಇಬ್ಬರನ್ನೂ ಕಳೆದುಕೊಂಡು ಒಬ್ಬರ ಕಳೇಬರವನ್ನಷ್ಟೇ ಕಳೆದುಕೊಂಡ ದುಃಖದಲ್ಲಿದ್ದ ಆರ್ಯಾವತಿಯ ಪ್ರೈಯಾರಿಟಿಗಳು ಖಂಡಿತವಾಗಿಯೂ ಬೇರೆಯೇ ಇದ್ದಿರುತ್ತವೆ. ಆಂಡರ್‍ಸನ್ ಕೂಪರ್ ಎನ್ನುವ ರಿಪೋರ್ಟರ್ ತನ್ನ ಹೆಸರನ್ನು ಒಂದು ದಿನ ಹೀಗೆ ಬಳಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಆಕೆಗೆ ಇರಲಿಕ್ಕಿಲ್ಲ.

***

ನಮಗೆ ನಮ್ಮತನ ನಮ್ಮದರಲ್ಲಿ ಏನೋ ಕೊರತೆ ಇದೆ. ಆ ಕೊರತೆ ನಮಗೆ ಕೀಳು ಮನೋಭಾವನೆಯನ್ನು ತಂದುಕೊಟ್ಟಿದೆ. ಜಾಗೃತಿಯ ಹೆಸರನ್ನು ಇದ್ದ ಹಾಗೆ ಹೇಳುವಷ್ಟು ನಾಲಿಗೆ ತಿರುಗಿಸುವುದಕ್ಕೆ ಆಕೆಯ ವಾಲ್‌ಮಾರ್ಟ್ ಸಹೋದ್ಯೋಗಿಗಳು ಕಷ್ಟಪಡಬೇಕಾಗಿಲ್ಲ, ಆಕೆಯೇ ಬದಲಾಗಿದ್ದಾಳೆ. ವಿಶ್ವದ ದೊಡ್ಡ ಕಾರ್ಪೋರೇಟ್ ವ್ಯವಸ್ಥೆಯ ಮುಂದೆ ಘಂಟೆಗೆ ಇಂತಿಷ್ಟು ಎಂದು ಕೆಲಸ ಮಾಡುವ ಆಕ್ರಂದನವೆಲ್ಲಿ ನಡೆದೀತು? ಇದರಲ್ಲಿ ಘಂಟೆಗೆ ಇಂತಿಷ್ಟು ಕೆಲಸ ಮಾಡುವ ಮಿತಿಯಾಗಲೀ ನಮ್ಮ ಪದವಿ ಹುದ್ದೆಗಳ್ಯಾವುವೂ ಲೆಕ್ಕಕ್ಕೆ ಬಾರದವು. ನಾನು ’ಹೊಸನಗರ’ ಎಂದು ಅಮೇರಿಕನ್ನರಿಗೆ ಹೇಳುವಲ್ಲಿ ನನ್ನ ಉಚ್ಛಾರಣೆಯಲ್ಲಿ ಏನನ್ನಾದರೂ ಬದಲಾಯಿಸಿಕೊಳ್ಳುತ್ತೇನೆಯೇ? ಏಕೆ?

ನಿನ್ನೆ ನಮ್ಮ ಮನೆಯಿಂದ ಅರವತ್ತು ಮೈಲು ದೂರದಲ್ಲಿರೋ ನ್ಯೂ ಯಾರ್ಕ್ ನಗರದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅನ್ನು ನೋಡಿಕೊಂಡು ಬರಲು ನಮ್ಮ ಮನೆಯವರೊಂದಿಗೆ ಹೋಗಿದ್ದೆ. ಅಲ್ಲಿ ಹೆಚ್ಚು ಜನ ಬರೋ ಪ್ರವಾಸಿಗರಿಗೆ ಆಡಿಯೋ ಉಪಕರಣವನ್ನು ಕೊಡುತ್ತಿದ್ದವ ನೀವು ಯಾವ ದೇಶದವರು ಎಂದು ಔಪಚಾರಿಕವಾಗೇ ಮಾತನಾಡುತ್ತಾ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಿದ್ದ. ಇದೇ ಕಟ್ಟದ ಪಕ್ಕದಲ್ಲೇ ದಿನವೂ ನಡೆದುಕೊಂಡು ಹೋಗಿ ಸುಮಾರು ನಾಲ್ಕು ವರ್ಷ ಕೆಲಸ ಮಾಡಿದ್ದೇನೆ ಎನ್ನುವ ಕನ್ಸೆಷನ್ನ್ ಕೂಡಾ ಇಲ್ಲದೇ ’ನೀವು ಭಾರತೀಯರು!’ ಎಂದು ಅವನೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದ. ಅವನ ಕಣ್ಣೆದುರಿನಲ್ಲಿ ನಾನು ಭಾರತೀಯನೇ, ಇಂದಿಗೂ ಎಂದಿಗೂ. ನಾನು ಕುಡಿದ ಅದೆಷ್ಟೋ ಸ್ಟಾರ್‌ಬಕ್ಸ್ ಕಾಫಿಯ ಗತ್ತು, ನಾನು ಓದಿದ ಅದೆಷ್ಟೋ ವಾಲ್ ಸ್ಟ್ರೀಟ್ ಜರ್ನಲ್ಲ್‌ನ ಕಿಮ್ಮತ್ತು, ನಾನು ಟ್ರೇನಿನಲ್ಲಿ ಮುಖದ ಮೇಲೆ ಆಗಾಗ್ಗೆ ಸೃಷ್ಟಿಸಿಕೊಂಡ ಹುಸಿಗಾಂಭೀರ್ಯದ ಚಹರೆ ಹಾಗೂ ಅದರ ಹಿಂದಿನ ಮೆದು ಧ್ವನಿ, ಇಲ್ಲಿ ಎಲ್ಲರಂತೆ ನಾನೂ ಟ್ಯಾಕ್ಸ್ ಕೊಟ್ಟು ಅನುಭವಿಸುವ ಹಸಿರು ಕಾರ್ಡಿನ ವೈಭವದ ದ್ವಂದ್ವ ಇವೆಲ್ಲವನ್ನೂ ಎಂಭತ್ತನೇ ಮಹಡಿಯಿಂದ ಎತ್ತಿ ಹಲವಾರು ಆಶಾವಾದಗಳೆನ್ನುವ ತರಗೆಲೆಗಳನ್ನು ಅದೆಲ್ಲಿಂದಲೋ ಸುತ್ತಿ ಸುಳಿದು ತರುತ್ತಿದ್ದ ಗಾಳಿಗೆ ಎಸೆದ ಹಾಗಾಯಿತು.

’ಹೌದು, ನಾನು ಭಾರತೀಯನೇ!’ ಅಷ್ಟೇ ಗಟ್ಟಿಯಾಗಿ ಹೇಳಿದೆ. ’ಬೇಕಾಗಿಲ್ಲ ನಿಮ್ಮ ಪರಂಪರೆಯನ್ನು ಸಾರಿ ಹೇಳುವ ಕಿವಿ ಮಾತು (ಆಡಿಯೋ ಯಂತ್ರ), ಅದರ ಬಗ್ಗೆಯೂ ಸಾಕಷ್ಟು ಬಲ್ಲೆ’ ಎಂದು ಹೇಳಿದವನೇ ಬಿರುಬಿರನೆ ನಡೆದು ಮುಂದೆ ಹೋದೆ. ಭೂಮಿಗೂ ಆಕಾಶಕ್ಕೂ ನಡುವೆ ಸಂಪರ್ಕ ಏರ್ಪಡಿಸುವಂತೆ ಬೆಳೆಸಿದ ಕಟ್ಟಡವನ್ನು ಅದೆಲ್ಲೆಲ್ಲಿಂದಲೋ ಬಂದು ಹತ್ತೊಂಭತ್ತು ಡಾಲರ್ರನ್ನು ಕೊಟ್ಟು ನೋಡುವ ಜನರಿಗೆ ಮೂರು ಡಾಲರಿಗೊಂದರಂತೆ ಆಡಿಯೋ ಉಪಕರಣವನ್ನು ಬಾಡಿಗೆಗೆ ಕೊಡುವ ಮೂರು ಕಾಸಿನವನ ಬಳಿ ನನ್ನದೇನು ಅಹವಾಲು? ನೀನು ಕರಿ ಕಪ್ಪಗಿನವನು, ಮೊದಲು ನಿನ್ನ ಮೂಲ ಹಾಗೂ ಮರ್ಮವನ್ನು ಕೆದಕಿಕೊಂಡು ನೋಡು ಎಂದು ನಮ್ಮೂರಿನಲ್ಲಾಗಿದ್ದರೇ ಗಟ್ಟಿಯಾಗಿ ಹೇಳಿಯೇ ಬಿಡುತ್ತಿದ್ದೆ.

ಎಂಭತ್ತಾರನೇ ಮಹಡಿಯ ಹೊರಗೆ ಮೌನವಿದೆ! ಬೆಳೆದು ಆಕಾಶವನ್ನು ಉಳಿದವರೆಲ್ಲರಿಗಿಂತ ಹೆಚ್ಚು ಮುಟ್ಟಿದ ಗಾಂಭೀರ್ಯತೆ ಇದೆ. ದಿನಕ್ಕೊಂದಿಷ್ಟು ಬೆರಗು ಕಣ್ಣಿನವರನ್ನು ಸಮಾಧಾನಗೊಳಿಸಿದ ಸಾಂತ್ವನ ಮನಸ್ಥಿತಿ ಇದೆ. ಅದೇ ಮುಗಿಲು ಅಲ್ಲಿ ಭಾರತೀಯರು-ಅಮೇರಿಕನ್ನರು ಎಂಬ ಬೇಧ-ಭಾವವಿಲ್ಲ. ಆದರೆ ನೆಲಕ್ಕಿದೆ, ನೆಲದ ಮೇಲೆ ನಿಂತ ನಮಗಿದೆ ನಮ್ಮ ಜೊತೆಗಿನ ಕಟ್ಟಡಕ್ಕೂ ಇದೆ. ಮೇಲೆ ಹಾರಬೇಕೆನ್ನುವ ಕನಸುಗಳಿಗೆ ಯಾವ ಬಂಧನವಿಲ್ಲ, ಅಡ್ಡಿ ಆತಂಕಗಳಿಲ್ಲ; ಕೆಳಗೆ ಬದುಕಬೇಕೆನ್ನುವ ಬದುಕಿಗೆ ಹಲವಾರು ಬಂಧನಗಳಿವೆ, ಹೀಗಿರಬೇಕು ಎನ್ನುವವರಿದ್ದಾರೆ. ಹೀಗಿರುವ ನೆಲ ಮುಗಿಲುಗಳಲ್ಲಿ ನಾನು ಯಾವತ್ತಿದ್ದರೂ ಭಿನ್ನನೇ, ಎಲ್ಲಿದ್ದರೂ ನನ್ನ ಸ್ವಂತಿಕೆ ಎನ್ನುವುದು ಇದ್ದೇ ಇದೆ. ಅದಕ್ಕೇನಾದರೂ ಯಾರಾದರೂ ಅಡ್ಡಿ ಬಂದಾರೆಂದರೆ ಅಲ್ಲಿಂದ ಕಂಬಿ ಕೀಳುವಂತೆ ಪ್ರಚೋದಿಸುವುದು ನನ್ನತನವೇ. ಎಲ್ಲ ಕಡೆಯೂ ಇದ್ದು, ಎಲ್ಲೂ ಇರದಿರುವುದೇ ನಮ್ಮತನ.

Wednesday, August 27, 2008

ಮರಳು ಭೂಮಿ ಮತ್ತು ಮೌನ

ಟೋನಿ ಬೋರ್ಡೇನ್ (Anthony Bourdain) ನ Without Pyramids ಕಾರ್ಯಕ್ರಮವನ್ನು ಟ್ರಾವೆಲ್ ಚಾನೆಲ್‌ನಲ್ಲಿ ನೋಡಿದಾಗಲೇ ಈಜಿಪ್ಟಿನ ಮರಳುಗಾಡು calm ಮತ್ತು clean ಆಗಿರುವ ಬಗ್ಗೆ ಅವನ ವಿವರಣೆಗಳನ್ನು ಕೇಳುತ್ತಲೇ ಒಂದು ಮರಳುಭೂಮಿಯಲ್ಲೂ ಒಬ್ಬನ ಅಂತಃಸತ್ವವನ್ನು ಶುದ್ಧೀಕರಿಸುವ ಅಗಾಧವಾದ ಮೌನವಿದೆ ಎಂದು ಅರಿವಿಗೆ ಬಂದದ್ದು. ಒಬ್ಬನ ಒಡಲಾಳದ ಸಂಸ್ಕಾರಗಳನ್ನು ಕೂಲಂಕಷವಾಗಿ ಸೋಸಿ ಶುದ್ಧೀಕರಿಸುವ ಬಗ್ಗೆ ಭಾರತೀಯ ಮೂಲದ ಧ್ಯಾನದಲ್ಲೂ ಪರಮರ್ಶೆಗಳು ದೊರೆಯುತ್ತವೆ (self-purification by introspection). ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳು ಹಿಮಾಲಯದ ತಪ್ಪಲಿನ ಮೊರೆ ಹೊಕ್ಕಿದ್ದರ ಬಗ್ಗೆ ಕೇಳಿದ್ದೆನೆ ಹೊರತು ರಾಜಸ್ತಾನದ ಮರಳುಗಾಡಿನಲ್ಲಿ ಅಗಮ್ಯ ಹಾಗೂ ಅನಂತವಾದ ಮೌನವನ್ನು ಹುಡುಕಿಕೊಂಡು ಹೋದವರ ಬಗ್ಗೆ ನಾನು ಕೇಳಿಲ್ಲ. ನಕ್ಷತ್ರಗಳು ಮಿನುಗುವ ನಿಶ್ಶಬ್ದ ಮುಗಿಲಿನ ರಾತ್ರಿಗಳಲ್ಲಿ, ಕಾಲ ಬೆರಳುಗಳ ನಡುವೆ ಸೋಕಿ ಹರಿದಾಡುವ ಬಿಸಿ-ತಂಪು ಮರಳಿನ ಕಣಗಳಲ್ಲಿ ಜೊತೆಗೆ ಒಬ್ಬನ ಒಳಗನ್ನು ಹೊರತೆರೆದು ತೋರುವ ಏಕತಾನ ಮೌನದ ಬಗ್ಗೆ ಟೋನಿ ಹಾಗೂ ಆತನ ಸಹ ಪ್ರಯಾಣಿಕರು ವಿವರಿಸಿದ ಅನುಭವ ಬಹಳಷ್ಟು ಮುದ ನೀಡಿತು. ಈ ಕಾರ್ಯಕ್ರಮದಲ್ಲಿನ ಈಜಿಪ್ಟಿನ ಮರಳುಭೂಮಿಯ ಮೂಲದವನೊಬ್ಬನು ವಿವರಿಸುವಂತೆ ಐದೇ ಐದು ದಿನಗಳು ಸಾಕು ಎಂತಹವರ ಅಂತರಾಳವನ್ನು ಬಡಿದೆಬ್ಬಿಸಲು ಎಂಬರ್ಥ ಬರುವ ಮಾತುಗಳು ಗಮನ ಸೆಳೆದವು.

ಈಜಿಪ್ಟ್ ಎಂದರೆ ನೈಲ್ ನದಿ, ಪಿರಮಿಡ್ಡುಗಳು, ಪುರಾತನ ಕಾಲದಿಂದಲೂ ಬಂದ ಪರಂಪರೆ ಎಂಬುದು ಎಲ್ಲರ ಮನಸ್ಸಿಗೆ ಬರಬಹುದಾದ ಅಂಶ. ಸುಮಾರು USA ಭೂವಿಸ್ತಾರದಷ್ಟೇ ದೊಡ್ಡದಾದ ಸಹಾರ ಮರುಭೂಮಿ ಪ್ರಪಂಚದ ಅತಿದೊಡ್ಡ ಮರಳುಭೂಮಿ. ಕ್ರಿಸ್ತಪೂರ್ವ ೬೦೦೦ ವರ್ಷಗಳ ಹಿಂದಿನ ಉಲ್ಲೇಖಗಳು ಸಿಗುವಂತಹ ಈಜಿಪ್ಟ್ ಸಂಸ್ಕೃತಿಗೆ ಈ ಮರುಭೂಮಿಯ ಸಂಸ್ಕೃತಿ ಇನ್ನೂ ಹಳೆಯದು!

***

ಇದು ಮರುಭೂಮಿಯ ಕಥೆಯನ್ನಾಗಲೀ ಈಜಿಪ್ಟಿನ ಬಗ್ಗೆ ವ್ಯವಸ್ಥಿತವಾಗಿ ಹೇಳುವ ಪ್ರಯತ್ನವಂತೂ ಆಗಲಾರದು ಏಕೆಂದರೆ ಅವೆರೆಡನ್ನೂ ನಾನು ನೋಡೇ ಇಲ್ಲ, ಅನುಭವಿಸಿಯೂ ಇಲ್ಲ - ಟಿವಿ ಪರದೆಯ ಮೇಲೆ ನೋಡಿದ್ದನ್ನು ಹೊರತು ಪಡಿಸಿ. ಇನ್ನು ಭಾರತದ ಥಾರ್ ಮರುಭೂಮಿಯ ಬಗ್ಗೆ ಓದಿದ್ದೇನಾದರೂ ಕಣ್ಣಿಂದ ನೋಡಿದ್ದಂತೂ ಇಲ್ಲ. ಈ ಯುಎಸ್‌ಎ ಅಷ್ಟು ದೊಡ್ಡದಾದ ಮರಳುಗಾಡನ್ನು ಊಹಿಸಿಕೊಳ್ಳುತ್ತಾ ಹೋದಂತೆ, ಒಬ್ಬ ಪಶ್ಚಿಮದವನು ಮರುಭೂಮಿಯಲ್ಲಿ ನಡೆಯುತ್ತಾ ಅದರ ವೈಭವವನ್ನು ವರ್ಣಿಸುತ್ತಾ ಹೋದದ್ದನ್ನು ನೋಡಿದಂತೆ, ಸ್ಥಳೀಯ ಈಜಿಪ್ಟ್ ಮೂಲದವನು ಈ ಮರುಭೂಮಿ ಎಂಥವರನ್ನೂ ತಮ್ಮನ್ನು ಅವಿಷ್ಕರಿಸಿಕೊಳ್ಳಲು ಸಹಾಯಮಾಡುವುದು ಎಂಬ ಮಾತನ್ನು ಕೇಳಿದಂತೆ ನನ್ನ ಮನದಲ್ಲಿ ಮರುಭೂಮಿಯ ಬಗ್ಗೆ ಹೊಸದಾದ ಗೌರವ ಭಾವವೊಂದು ತಳೆಯತೊಡಗಿತು. ಈ ಸೃಷ್ಟಿಯಲ್ಲಿ ಮರುಭೂಮಿಯ ಪಾತ್ರವೂ ಇದೆ, ಅದಕ್ಕೂ ಒಂದು ನೆಲೆ ಇದೆ ಎನ್ನುವ ಆಲೋಚನೆ ಹೊಮ್ಮಿದ್ದು.

ಈ ಪ್ರಪಂಚದಲ್ಲಿ ಮೌನವಿದೆ, ಹುಡುಕಿಕೊಂಡು ಹೋಗಬೇಕಷ್ಟೇ. ಅದಕ್ಕೆ ಬೇಕು ಎರಡು ರೀತಿಯ ಪ್ರಯಾಣ - ಒಂದು ಅಂತರಾಳದ ಒಳಗೆ ಇನ್ನೊಂದು ಇರುವುದರೆಲ್ಲದರಿಂದ ದೂರ. ಇವೆರಡನ್ನೂ ಮಾಡಲು ದೂರವೆಲ್ಲೂ ಹೋಗಬೇಕಾದುದಿಲ್ಲ, ಮರುಭೂಮಿಯೂ ಬೇಡ ಬಯಲೂ ಬೇಡ, ಎಲ್ಲವೂ ನಮ್ಮೊಳಗೇ ಇದೆ. ಹಾಡುಹಗಲು ಎಂತಹ ಸಂತೆಯ ವಾತಾವರಣದಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರೆ ಮಾಡುವವರಿಲ್ಲವೇನು? ಆದರೆ ನಮಗೆ ಅಂಟಿಕೊಂಡವುಗಳಿಂದ ’ದೂರ’ ಹೋಗುವುದು ಸರಳವಂತೂ ಅಲ್ಲ, ಅದಕ್ಕೆ ಬಹಳಷ್ಟು ಕಷ್ಟಪಡಬೇಕಾದ ಅಗತ್ಯವಿದೆ. ಈ ’ದೂರ’ ಹೋಗುವಿಕೆಗೆ ಅನುಕೂಲವಾಗಿ ಬರಬಹುದಾದ ಭೌತಿಕವಾಗಿ ಒಂದು ನೆಲೆಯಿಂದ ಮತ್ತೊಂದು ನೆಲೆಯಲ್ಲಿ ನಮ್ಮನ್ನು ಕಂಡುಕೊಳ್ಳಲು ಅನುವುಮಾಡಿಕೊಡುವಲ್ಲಿ ಮರುಭೂಮಿಯ ಪಾತ್ರವಂತೂ ಸ್ಪಷ್ಟವಾಯಿತು. ಇನ್ನು ಅಲ್ಲಿಗೆ ಹೋಗುವುದು ಹೇಗೆ ಅಲ್ಲಿ ಒಂದು ವಾರ ಕಳೆಯುವುದು ಹೇಗೆ ಎಂದೆಲ್ಲ ಯೋಚಿಸಿಕೊಂಡು ಬಾಯಿ ತುಟಿಯೊಣಗಿ ಹತ್ತಿರದ ನೀರಿನ ಬಾಟಲಿಯನೆತ್ತಿ ಮರುಭೂಮಿಯಲ್ಲಿ ನೀರು ಕುಡಿಯುವವರ ಹಾಗೆ ನೀರು ಕುಡಿದದ್ದಷ್ಟೇ ಬಂತು, ಆದರೆ ಅದು ಅಷ್ಟು ಸುಲಭವಂತೂ ಅಲ್ಲ.

***

ನಮ್ಮನ್ನಂಟಿದ ಸಂಕೋಲೆಗಳನ್ನೆಲ್ಲ ಬದಿಗೊತ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮತ್ಯಾವುದೋ ದೇಶದವರಾದ ನಾವು ಹೋಗುವುದು ಬರುವುದು ಬಹಳ ದೂರದ ಮಾತು. ಐದು ವರ್ಷಗಳ ಹಿಂದೆ ಯೂರೋಪಿನಲ್ಲಿ ಕಳೆದ ಹನ್ನೆರಡು ದಿನಗಳನ್ನು ಇತ್ತೀಚಿನ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ನೋಡಿದಾಗ ಅದು ದೊಡ್ಡ ಸಾಹಸವೆಂದೇ ಕಂಡೀತು. ಇನ್ನು ನನಗೆ ಆಸಕ್ತಿ ತಂದ ಸಹಾರ ಮರುಭೂಮಿಯನ್ನು ನೋಡಿ ಅನುಭವಿಸುವುದು ಕನಸಿನ ಮಾತೇ. ಅದಕ್ಕೆಂದೇ ನಾನು ಟಿವಿ ಚಾನೆಲ್ಲುಗಳಿಗೆ ಪ್ರವಾಸಿ ಪುಸ್ತಕ/ವೆಬ್ ಸೈಟ್‌ಗಳಿಗೆ ಜೋತು ಬೀಳೋದು. ’ಕೋಶ ಓದು’ ಎನ್ನುವ ಮಾತಿನಲ್ಲಿ ಬಲವಿದೆ, ಬೆಂಬಲವಿದೆ. ನಾವು ಈಗಿರುವ ನೆಲೆಯಿಂದ ಹೊರಬಂದು ಮತ್ತಿನ್ಯಾವುದೋ ನೆಲೆಯಲ್ಲಿ ನಮ್ಮನ್ನವಿಷ್ಕರಿಸಿಕೊಂಡು ಎಲ್ಲವೂ ನೆಮ್ಮದಿಯಿದ್ದಾಗ ತಾನೇ ಆ ದಿವ್ಯ ಮೌನ ಹೊಮ್ಮೋದು? ಹಾಗಾಗಲೂ ಬಹಳ ಕಷ್ಟವಿದೆ, ದಿವ್ಯ ಮೌನ ಹೊಮ್ಮದಿರುವ ಮಾತಲ್ಲ ಅದಕ್ಕೆ ಮೊದಲಿನ ನೆಮ್ಮದಿಯ ಬಗ್ಗೆ. ನಮ್ಮ ಆಹಾರ ಆಚಾರ-ವಿಚಾರಗಳು ಭಿನ್ನ, ನಮ್ಮ ನಿಲುವು ನೋಟ ಭಿನ್ನ, ಈ ಭಿನ್ನತೆ ಮತ್ತೊಂದು ಅಗಾಧವಾದ ಸಂಸ್ಕೃತಿಯ ಮುಂದೆಯೂ ಎದ್ದು ಕಾಣುತ್ತದೆ. ಪ್ರವಾಸಿಗರಾಗಿ ಹೋದಲ್ಲಿ ನಾವು ನಮ್ಮತನವನ್ನು ಎತ್ತಿ ಗಂಟುಕಟ್ಟಿಕೊಂಡು ಹೋಗೋದೋ ಅಥವಾ ಹೋದಲ್ಲಿ ಬಂದಲ್ಲಿ ಅಲ್ಲಿಯವರಲ್ಲೊಂದಾಗಿ ಅವರ ಸ್ಥಳೀಯ ಅನುಭವಗಳಿಗೆ ಸ್ಪಂದಿಸುವುದೋ ಎನ್ನುವ ದ್ವಂದ್ವ ಎದುರಾಗುತ್ತದೆ. (ಭಾರತೀಯ ಮೂಲದ ನಾವು ಅಮೇರಿಕದಿಂದ ಈಜಿಪ್ಟಿಗಾಗಲೀ ಯೂರೋಪಿಗಾಗಲೀ ಎಲ್ಲೇ ಹೋದರೂ ನಾವು ಅಲ್ಲಿಯವರ ಕಣ್ಣಿಗೆ ಭಾರತೀಯರೇ ಎಂಬುದನ್ನು ನಾನು ನನ್ನ ಯುರೋಪಿನ ಪ್ರವಾಸದಲ್ಲಿ ಸ್ವತಃ ಅನುಭವಿಸಿದ್ದು ನಿಜ.) ಪ್ರವಾಸಿಗರು ಏನನ್ನು ’ನೋಡಲು’ ಹೋಗುತ್ತಾರೆ, ಎಷ್ಟು ’ದೂರ’ ಹೋಗುತ್ತಾರೆ ಎನ್ನುವುದು ಮುಖ್ಯ. ನೀವು ಕೇವಲ ನೋಡಲು ಹೋಗುವವರಾದರೆ ನಿಮ್ಮ ಪುಳಿಯೊಗರೆ, ತಿಳಿಸಾರು-ಅನ್ನ, ಮೊಸರು ನಿಮ್ಮ ಜೊತೆ ಬಂದೀತು, ಅಲ್ಲಿಯ ಬದುಕನ್ನು ಅನುಭವಿಸಿ ನೋಡುವವರಿಗೆ ಗೋಟ್ ಚೀಜೂ ಇಷ್ಟವಾದೀತು ಎನ್ನುವುದು ಈ ಹೊತ್ತಿನ ತತ್ವವಷ್ಟೇ!