Showing posts with label ಇತಿಹಾಸ. Show all posts
Showing posts with label ಇತಿಹಾಸ. Show all posts

Wednesday, April 22, 2020

ನನ್ನ ದೇಶ ನನ್ನ ಜನ

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ|
ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು|

ನಮ್ಮ ದೇಶದಲ್ಲಿ ಒಂದು ಕೋಮಿನವರು ವೈರಸ್ ಸೋಂಕನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿದ್ದಾರೆ... ಇಡೀ ಪ್ರಪಂಚವೇ ವೈರಸ್‌ ದೆಸೆಯಿಂದ ನಲುಗುತ್ತಿದ್ದರೆ ಅದನ್ನು ಕೆಲವರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ... ನಮ್ಮ ಯುವಕ-ಯುವತಿಯರು ಪಾಕಿಸ್ತಾನಕ್ಕೆ ಜೈಕಾರ ಹಾಕುವುದನ್ನು ತಮ್ಮ ಹಕ್ಕು ಎಂದುಕೊಂಡಿದ್ದಾರೆ... ಎಂದೆಲ್ಲ ಮಾಧ್ಯಮಗಳಲ್ಲಿ ಓದಿದಾಗ ಚೆನ್ನವೀರ ಕಣವಿಯವರ ಈ ಹಾಡು ನೆನಪಿಗೆ ಬಂತು.  ಇನ್ನೂ ಕೇವಲ ಎಪ್ಪತ್ತಮೂರು ವರ್ಷಗಳನ್ನು ಕಳೆದ ನಮ್ಮ "ಸ್ವಾತಂತ್ರ್ಯ" ನಮ್ಮನ್ನು ಈ ಸ್ಥಿತಿಗೆ ತಂದಿದೆ.  ಇನ್ನೊಂದಿನ್ನೂರು ವರ್ಷಗಳಲ್ಲಿ ನಮ್ಮ ಯುವ ಜನರ "ದೇಶಭಕ್ತಿ" ಇದೇ ರೀತಿಯಲ್ಲಿ ಮುಂದುವರೆದು, ನಮ್ಮೆಲ್ಲರ ದೇಶ ಪ್ರೇಮ, ವಿಶ್ವಾಸ, ಒಗ್ಗಟ್ಟು, ಭಾವೈಕ್ಯತೆ, ಘನತೆ ಇವೆಲ್ಲವೂ ಏನಾಗಬಹುದು ಎಂದು ಯೋಚಿಸಿದಾಗ ನಿಜವಾಗಿಯೂ ಬೆನ್ನ ಹುರಿಯಲ್ಲಿ ಕಂಪನವಾಯಿತು.  ಇಂದಿನ ಯುವಕರೇ ಮುಂದಿನ ಪ್ರಜೆಗಳು, ನಾಳಿನ ಭಾರತದ ಭವಿತವ್ಯರು - ಎಂದೆಲ್ಲ ಯೋಚಿಸಿಕೊಂಡಾಗ ಹೆದರಿಕೆಯ ಜೊತೆಗೆ, ಖೇದವೂ ಒಡಮೂಡಿತು.

***
1947ರ ಸ್ವಾತ್ರಂತ್ರ್ಯ ನಿಜವಾಗಿಯೂ ನಮ್ಮನ್ನು ಒಂದುಗೂಡಿಸಿತೇ? ಬ್ರಿಟೀಷ್ ಮತ್ತು ಇತರ ವಸಾಹತುಶಾಹಿಗಳ ಅಧಿಕಾರ ಅವಧಿ ಇರದೇ ಇರುತ್ತಿದ್ದರೆ ಇಂದಿನ ನಮ್ಮ ಅಖಂಡ ಭಾರತ ಹೇಗಿರುತ್ತಿತ್ತು? ಬ್ರಿಟೀಷರ ಭಾಷೆ ನಮ್ಮನ್ನು ಒಂದುಗೂಡಿಸಿತೇ? ಅವರ ಆಚಾರ-ವಿಚಾರ ಹಾಗೂ ನಡೆವಳಿಕೆಗಳು ನಮ್ಮನ್ನು ಮುಂದುವರೆದವರನ್ನಾಗಿ ಮಾಡಿದವೇ? ಎಪ್ಪತ್ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂಗ್ರಾ?ಮದ ಸಮಯದಲ್ಲಿ ಮಾಹಿತಿ ಇರದಿದ್ದರೂ ಕೋಟ್ಯಾಂತರ ಮಂದಿ ಬ್ರಿಟೀಷರ ವಿರುದ್ಧ ಹೋರಾಡಿ ತಂದು ಕೊಟ್ಟ ಈ ಸ್ವಾಂತಂತ್ರ್ಯಕ್ಕೆ ಇಂದು ಅಂಗೈಯಲ್ಲಿ ಮಾಹಿತಿ ಸಿಗುವ ಅನುಕೂಲದ ಸಮಯದಲ್ಲಿ ಯುವ ಜನತೆಯಿಂದ ಅದಕ್ಕೇಕೆ ಕಡಿವಾಣ ಬೀಳುತ್ತಿದೆ? ದೇಶದ ಸಹನೆಯನ್ನೇಕೆ ಕೆಲವರು ಪರೀಕ್ಷಿಸುವಂತಾಗಿದೆ?  ನಿಜವಾಗಿಯೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆಯೇ? ಹಾಗಿದ್ದರೆ ಅದರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ?

***

ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ, ಇಸ್ಲಾಂ ಮೂಲದ ಜೊತೆಗೆ ಮಧ್ಯ ಪ್ರಾಚ್ಯ ನೆರೆಹೊರೆಯ ಸಂಪ್ರದಾಯವನ್ನು ಮೈವೆತ್ತ ನೆರೆಯ ಪಾಕಿಸ್ತಾನ 1947ರಿಂದಲೂ ಬಡರಾಷ್ಟ್ರವಾಗೇ ಮುಂದುವರೆದಿದೆ.  ಒಂದು ಕಾಲದಲ್ಲಿ ತನ್ನಲ್ಲಿ ಬೆಳೆಯುವ ಹತ್ತಿಯನ್ನು ಸಂಸ್ಕರಿಸುವ ಕೈಗಾರಿಕೆಯೂ ಇಲ್ಲದೆ ಒಂದು ಸಣ್ಣ ಸೂಜಿಯಿಂದ ಹಿಡಿದು ಕಾರಿನವರೆಗೂ ಹೊರ ರಾಷ್ಟ್ರಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡು ತನ್ನ ಆಂತರಿಕ ಸಂಘರ್ಷಗಳನ್ನು ಒಂದು ಕಡೆ ಹತ್ತಿಕ್ಕಲೂ ಆಗದೆ ಬಚ್ಚಿಡಲೂ ಆಗದೆ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನ.  ಅನೇಕ ಮುತ್ಸದ್ದಿಗಳು ಹುಟ್ಟಿಬಂದ ನೆಲದಲ್ಲೇ ಇಸ್ಲಾಂ ಪ್ರವಾದಿಗಳು ಜನರ ಮನದಲ್ಲಿ ಸೇಡು, ಕಿಚ್ಚಿನ ಕ್ರಾಂತಿಯನ್ನು ಬಿತ್ತುತ್ತಾ ಬಂದರು.  ಭಾರತವನ್ನು ದ್ವೇಷಿಸುವುದೇ ಪ್ರಣಾಳಿಕೆಯೆಂಬಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಪಕ್ಷಗಳು ಹುಟ್ಟಿದವು.  ಅವೇ ಮುಂದೆ ಭಯೋತ್ಪಾದಕ ಸಂಘಟನೆಗಳಾದವು.  ಅನೇಕ ಮಿಲಿಟರಿ ಕ್ಯೂ (ರಕ್ತಪಾತ) ಹಾಗೂ ಅನೇಕ ಭ್ರಷ್ಟಾಚಾರದ ಅಧೋಗತಿಯಲ್ಲಿ ದೇಶ ಹಾಳಾಗಿ ಹೋಯಿತು.  ಒಂದು ಕಾಲದಲ್ಲಿ ವಿದೇಶೀ ಸಹಾಯವಿಲ್ಲದಿದ್ದರೆ ಯಾವತ್ತೋ ಭೂಪಟದಲ್ಲಿ ನಾಪತ್ತೆಯಾಗಿ ಹೋಗುವಂತಿದ್ದ ಪಾಕಿಸ್ತಾನಕ್ಕೆ ಬಲವಾಗಿ ಸಿಕ್ಕಿದ್ದು ನ್ಯೂಕ್ಲಿಯರ್ ಶಕ್ತಿ.  ನವದೆಹಲಿಯಿಂದ ಕೇವಲ ಐನೂರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಅಸ್ಥಿರತೆಯನ್ನು ನಾವು ಬಹಳ ಸೂಕ್ಷವಾಗಿ ನೋಡಿಕೊಂಡು ಬರುವಂತ ಸ್ಥಿತಿ ಇಂದಿಗೂ ಇದೆ.  ಯಾವುದೋ ಧಾರ್ಮಿಕ ಮೂಲಭೂತವಾದಿಗೆ ಈ ಅಣ್ವಸ್ತ್ರವೇನಾದರೂ ದೊರೆತರೆ ಅದು ಪ್ರಪಂಚದ ವಿನಾಶಕ್ಕೆ ಕಾರಣವಾಗಬಹುದು!

ಇಂತಹ ಪಾಕಿಸ್ತಾನವನ್ನು ನಮ್ಮಲ್ಲಿನ ಕೆಲವು ಯುವಕ-ಯುವತಿಯರು ಬೆಂಬಲಿಸುತ್ತಾರೆ.  ಇಂತಹ ಪಾಕಿಸ್ತಾನಕ್ಕೆ ಜಯಕಾರ ಹಾಕುತ್ತಾರೆ ಎಂದು ಕೇಳುತ್ತಲೇ ಹೊಟ್ಟೆ ತೊಳಸಿದಂತಾಗುತ್ತದೆ.  ಈ ಯುವಕ-ಯುವತಿಯರಿಗೆ ನಿಜವಾದ ಪಾಕಿಸ್ತಾನದ ಅರಿವೇ ಇಲ್ಲ.  ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆಯೋ, ಯಾವ ದೇಶದಲ್ಲಿ ಮೈನಾರಿಟಿ ಜನರ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೋ, ಯಾವ ದೇಶದಲ್ಲಿ ಧರ್ಮದ ಹೊರೆಯನ್ನು ಬಲವಂತವಾಗಿ ಹೇರಲಾಗುತ್ತದೆಯೋ - ಅಂತಹ ದೇಶದ ಮೇಲೆ ನಮ್ಮ ದೇಶದಲ್ಲಿ ನಿಜವಾದ ಸ್ವಾತಂತ್ರ್ಯದ ಉಸಿರಿನ ಬೆಲೆ ಗೊತ್ತಿರದ ಯುವಕ-ಯುವತಿಯರ ಮಮಕಾರ ಹೆಚ್ಚಾಗಲು ಏನು ಕಾರಣ, ಅದರ ಮೂಲ ನೆಲೆಯೇನು ಎಂದು ಗಂಭೀರವಾಗಿ ಯೋಚನೆ ಮಾಡಬೇಕಾಗುತ್ತದೆ.

ಪಾಕಿಸ್ತಾನದ ಪರವಾಗಿ ಕೂಗಿದ ಜೆ.ಎನ್.ಯು. ವಿದ್ಯಾರ್ಥಿಗಳು ಎಲ್ಲರೂ ಮುಸಲ್ಮಾನರಲ್ಲ.  ಕಾಶ್ಮೀರದಿಂದ ಕೇರಳದವರೆಗೆ ಒಂದು ರೀತಿಯಲ್ಲಿ ಯುವಜನತೆಯ ಬ್ರೈನ್‌ವಾಶ್ ಮಾಡಲಾಗುತ್ತಿದೆ.   ಚೀನಾದಲ್ಲಿ ಹುಟ್ಟಿ ಅಲ್ಲಿ ಪ್ರಬಲವಾಗಿ ಬೆಳೆದ ಮಾವೋಯಿಸಂ ನಮ್ಮ ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತದೆ.  ಸರ್ಕಾರದ ವಿರುದ್ಧ, ಪ್ರಜಾಸತ್ತತೆಯ ವಿರುದ್ಧ ಧ್ವನಿ ಎತ್ತುವುದು ಎಂದರೆ ಪಕ್ಕದ ಪಾಕಿಸ್ತಾನವನ್ನು ಹೊಗಳುವುದು ಎಂದಾಗಿ ಹೋಗಿಬಿಟ್ಟಿದೆ. ನಮಗೆ  ಸ್ವಾತಂತ್ರ್ಯ ಸಿಕ್ಕ ಮೊದಲ ಐವತ್ತು ವರ್ಷಗಳಲ್ಲಿ ಈ ಸ್ಥಿತಿ ಇರಲಿಲ್ಲ... ನಾವೆಲ್ಲ ಕಂಡ ಎಂಭತ್ತರ, ತೊಂಭತ್ತರ ದಶಕದ ಭಾರತದಲ್ಲಿ, ನಮ್ಮ ಶಾಲಾದಿನಗಳಲ್ಲಿ ಒಂದು ದಿನವೂ ಯಾರೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಿಲ್ಲ... ನಾವೆಲ್ಲ  ಅನೇಕ ಜನವಿರೋಧಿ ನೀತಿಗಳ ವಿರುದ್ಧವೋ, ಕಾನೂನಿನ ಪರವಾಗಿಯೋ, ಅಥವಾ ರಾಜ್ಯ-ದೇಶ-ಭಾಷೆಗಳ ಪರವಾಗಿಯೋ ಸತ್ಯಾಗ್ರಹ, ಸಂಗ್ರಾಮಗಳನ್ನು ಮಾಡಿದ್ದೇವೆ.  ಆದರೆ, ಇಂದಿನ ಯುವಜನತೆಯ ದೇಶದ್ರೋಹದ ಹಾದಿಯನ್ನು ಎಂದೂ ಹಿಡಿದಿದ್ದಿಲ್ಲ.  ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನವೂ ರಾಷ್ಟ್ರಗೀತೆಯನ್ನು ಹೇಳುತ್ತಿದ್ದೆವು, ಧ್ವಜವಂದನೆಯನ್ನು ಮಾಡುತ್ತಿದ್ದೆವು.  ನಮ್ಮೆಲ್ಲರಿಗಿಂತ ದೇಶ ಯಾವತ್ತೂ ದೊಡ್ಡದಾಗಿತ್ತು.  ಆದರೆ ಇಂದಿನ ಯುವಜನತೆಯ ಮನಃಸ್ಥಿತಿಯನ್ನು ನೋಡಿದಾಗ ಅದೇ ಭಾವನೆ ಖಂಡಿತ ಒಡಮೂಡುವುದಿಲ್ಲ.
ನನ್ನ ದೇಶ ಉನ್ನತವಾದುದು.  ಜನರಿಗೆ ನಿಜವಾಗಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬದುಕನ್ನು ಕಲ್ಪಿಸಿಕೊಟ್ಟಿದೆ.  ಹಾಡು ಹಗಲೇ ದರೋಡೆ, ಅತ್ಯಾಚಾರ, ಕೊಲೆ-ಸುಲಿಗೆ ಮಾಡಿದವರೂ ಸಂವಿಧಾನದ ವಿಧಿಯ ಪ್ರಕಾರ ಶಿಕ್ಷೆಗೆ ಗುರಿಪಡುತ್ತಾರೆ.  ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿವೆ.  ಆದರೆ ಜನರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವೇ ಹಕ್ಕುಗಳ ಮಗ್ಗುಲಲ್ಲಿರುವ ಕರ್ತವ್ಯಗಳನ್ನು ಮರೆಯುತ್ತಾರೆ.  ತಮ್ಮ ಮೈಕ್ರೋ ಫ್ಯಾಮಿಲಿಗಳ ಸಂತೋಷಕ್ಕಾಗಿ ದೊಡ್ಡ ದೇಶದ ಘನತೆ ಗೌರವವನ್ನು ಮರೆಯುತ್ತಾರೆ.  ರಾಷ್ಟ್ರ ಯಾವತ್ತೂ ಸೆಕೆಂಡರಿಯಾಗುತ್ತದೆ, ತಮ್ಮ ಸ್ವಾರ್ಥ ದೊಡ್ಡದಾಗುತ್ತಾ ಹೋಗುತ್ತದೆ.

ಎಪ್ಪತ್ತು ವರ್ಷಗಳ ನಂತರ ನಮ್ಮ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೇ ಇರುವಾಗ, ಈ ಎದೆಕರಗದ ದೇಶಭಕ್ತಿಯ ಜನ ಯಾವ ರೀತಿಯಲ್ಲಿ ದೇಶವನ್ನು ಮುಂದೆ ತಂದಾರು? ಇನ್ನು ನೂರಿನ್ನೂರು ವರ್ಷಗಳಲ್ಲಿ ನಮ್ಮ ದೇಶ ನಮ್ಮ ದೇಶವಾಗೇ ಇರುವುದೋ ಅಥವಾ ಮೊದಲಿನ ಹಾಗೆ ಹಂಚಿಕೊಂಡು ತುಂಡು ತುಂಡಾಗುವುದೋ ಎಂದು ಸಂಕಟವಾಗುತ್ತದೆ.


 




















ಭಾರತ ದೇಶವನ್ನು ಹಳಿಯುವವರು ತಮ್ಮ ದೇಶದ ಬಗ್ಗೆ ಒಂದಿಷ್ಟು ಕನಿಷ್ಠ ಮಾಹಿತಿಯನ್ನಾದರೂ ತಿಳಿದುಕೊಂಡು ತಮ್ಮ ವಾದವನ್ನು ಮಂಡಿಸಿದ್ದರೆ ಚೆನ್ನಾಗಿತ್ತು.  ಒಂದು ದೇಶದ ನಿಜವಾದ ಸ್ವಾತಂತ್ರ್ಯದ ಅರಿವಾಗುವುದು ಆ ಸ್ವಾತ್ಯಂತ್ರ್ಯ ಇಲ್ಲವಾದಾಗಲೇ!
(ಮಾಹಿತಿ ಕೃಪೆ: ವಿಕಿಪೀಡಿಯ)

Saturday, April 11, 2020

ಇತಿಹಾಸ-ಯುದ್ಧ-ಕಲಿಕೆ

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ|| ೧೧

1943ರಲ್ಲಿ ಪ್ರಕಟಗೊಂಡ ಮಂಕುತಿಮ್ಮನ ಕಗ್ಗದ 'ಮಾನವರೋ ದಾನವರೋ?' ಅವತರಣಿಕೆಯಲ್ಲಿ ಬರುವ 11ನೇ ಪದ್ಯ ಇದು.  ಇಂದಿಗೆ 77 ವರ್ಷದ ಮೊದಲೇ ಈ ಪದ್ಯವನ್ನು ಬರೆದಾಗ ಆಗಿನ ಸ್ಥಿತಿಗತಿ ಹೇಗಿರಬಹುದು ಎಂದು ಯೋಚನೆ ಬಂತು.

ನಮಗೆ ಕಷ್ಟ ಬಂದಾಗ ನಮ್ಮ ಮೂಲ ಸಿದ್ಧಾಂತ-ಸಂಸ್ಕಾರಗಳೇ ನಮಗೆ ಆಶ್ರಯವಾಗುತ್ತವಂತೆ.  ಇಂದು ಇಡೀ ವಿಶ್ವವೇ ಸಂಕಷ್ಟದ ಸಮಯದಲ್ಲಿರುವಾಗ ಹಾಗೆಯೇ ಓದ ತೊಡಗಿದ್ದ, ಕನ್ನಡದ ಭಗವದ್ಗೀತೆ, ಕಗ್ಗದ ಪುಟಗಳು ನಿಲ್ಲಲಾರದೇ ಹಾಗೇ ಮುಂದುವರೆಯತೊಡಗಿದವು!

See the source image
(World in 1943 - AlternateHistory.com)

ಆಗೆಲ್ಲ ಎರಡನೇ ಮಹಾಯುದ್ಧ ಎಲ್ಲ ಕಡೆಗೆ ಹರಡಿಕೊಂಡಿತ್ತು.  ಅದೇ ಸಮಯದಲ್ಲಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಭಾರತದ ಉದ್ದಗಲಕ್ಕೂ ಕೂಡ ಸ್ವಾತ್ರಂತ್ಯದ ಕಿಡಿ ಹೊತ್ತಿ ಪ್ರಜ್ವಾಲಮಾನವಾಗಿ ಉರಿಯುತ್ತಿದ್ದ ಸಮಯ.  1943ರ ಡಿಸೆಂಬರ್ 30 ರಂದು ಸುಭಾಶ್‌ಚಂದ್ರ ಬೋಸ್ ಪೋರ್ಟ್ ಬ್ಲೇರ್‌ನಲ್ಲಿ ಭಾರತದ ಸ್ವಾತಂತ್ರ್ಯ ಪಟವನ್ನು ಹಾರಿಸಿದ್ದು ಬಹಳಷ್ಟು ಸುದ್ದಿ ಮಾಡಿತ್ತು.

ಆಗಿನ ಸಂದರ್ಭದಲ್ಲಿ ಗುಂಡಪ್ಪನವರು ಪ್ರಪಂಚವನ್ನು ಸುತ್ತುವರೆದಿದ್ದ "ದುರ್ದೈವ"ದ ಬಗ್ಗೆ ಬರೆದಿದ್ದು ಇಂದಿನ ಕಾಲಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ನಾವೆಲ್ಲ ಕಲ್ಪನೆ ಮಾಡಿಕೊಳ್ಳಬಹುದು.  ಇದೇ ಮಾತನ್ನು ನಾಲ್ಕು ತಿಂಗಳ ಹಿಂದೆ ಹೇಳಿದ್ದರೆ ಯಾರೂ ನಂಬುತ್ತಿರಲಿಲ್ಲ.  ಆದರೆ ಈ ಪದ್ಯ ಪ್ರಸಕ್ತ ಸನ್ನಿವೇಶಕ್ಕೆ ಹೇಳಿ ಬರೆಸಿದ ಹಾಗಿದೆ.

***

ಆಗೆಲ್ಲ ಯುದ್ಧಗಳು ಒಂದು ರೀತಿಯ ಲೆವೆಲರುಗಳಾಗಿದ್ದವು.  ಜನರ ದೇಶ-ಭಾಷೆ-ಗಡಿಗಳಿಗಿಂತಲೂ ಹೆಚ್ಚಾಗಿ ಆಗಿನ ಸೈನಿಕರೆಲ್ಲ ಯಾವ ಯಾವ ಬಣಗಳಿಗೆ ಸೇರಿದ್ದರೋ ಅಲ್ಲೆಲ್ಲಾ ಭೀಕರವಾದ ಸಾವು-ನೋವುಗಳಾಗಿವೆ.  ಮಾನವ ಸಂತತಿ ಕಂಡ ಅತ್ಯಂತ ಕೆಟ್ಟ ವರ್ಷಗಳು ಎಂದರೆ ಮೊದಲ ಮತ್ತು ಎರಡನೇ ಮಹಾಯುದ್ಧದ ಕಾಲ (World War I 1914-1918, World War II 1939-1945).  ಒಂದು ಅಂದಾಜಿನ ಪ್ರಕಾರ ಈ ಎರಡು ಯುದ್ಧಗಳಲ್ಲಿ ಸುಮಾರು ಒಂದು ನೂರು ಮಿಲಿಯನ್ ಜನರಿಗಿಂತಲೂ ಹೆಚ್ಚು ಜನರು ಕಾಲವಾದರು.  ಯುದ್ಧ ಮುಗಿದ ನಂತರವೂ ಸಾವು-ನೋವಿನ ಪ್ರಮಾಣ ಮುಂದುವರೆಯುತ್ತಲೇ ಇತ್ತು.


ಮಾನವ ಹುಟ್ಟಿದ-ಹೋರಾಡಿದ-ಸತ್ತ ಎಂದು ಸರಳವಾಗಿ ಹೇಳುವ ಹಾಗೆ, ನಮ್ಮ ಇತಿಹಾಸದ ಉದ್ದಾನುದ್ದಕ್ಕೂ ಹೋರಾಟ-ಹೊಡೆದಾಟವೇ ಎಲ್ಲ ಕಡೆಗೆ ಕಂಡುಬರುತ್ತದೆ.  ಪೈಮೇಟ್‌ಗಳಿಂದ (Primate) ಬಳುವಳಿಯಾಗಿ ಪಡೆದ ಗುಣವಾಗಿ ತಮ್ಮ ತಮ್ಮ ನೆರೆಹೊರೆಯನ್ನು ಕಾಪಾಡಿಕೊಳ್ಳುವುದು ಅದಕ್ಕೋಸ್ಕರ ಹೋರಾಡುವುದು ನಮ್ಮ ಇಂದು-ನಿನ್ನೆಯ ಗುಣವಲ್ಲ, ಮಿಲಿಯನ್‌ಗಟ್ಟಲೆ ವರ್ಷಗಳಿಂದ ನಮ್ಮ ವಂಶವಾಹಿಯಲ್ಲಿದೆ.  ಆದ್ದರಿಂದಲೇ ಅದು ನಮಗೆ ಸಹಜ ಕೂಡ.

***

ಯುದ್ಧದಿಂದೇನು ಕಲಿತಿದ್ದೇವೆ?  ಇತಿಹಾಸದಿಂದೇನು ಕಲಿತಿದ್ದೇವೆ? ನೂರು ವರ್ಷಗಳು ಕಳೆದ ನಂತರ  ಮತ್ತೆ ಎಲ್ಲವೂ ಮರುಕಳಿಸುವ ಹಾಗಿದೆ ಎನ್ನಿಸೋದಿಲ್ಲವೇ?  ಇದು ವಿಶ್ವದ ದೊಡ್ಡ ಶಕ್ತಿಗಳು ಕಟ್ಟಿರುವ ಆಂತರಿಕ ಯುದ್ಧವೋ? ಅಥವಾ ನಿಸರ್ಗ ನಮ್ಮ ಮೇಲೆ ಹೂಡಿರುವ ಯುದ್ಧವೋ? ಇವೆಲ್ಲವನ್ನು ಮತ್ತೆ ನಮ್ಮ ಮುಂದಿನ ಸಂತತಿ ಅವರ ಇತಿಹಾಸದಲ್ಲಿ ಕಂಡುಕೊಳ್ಳುತ್ತಾರೆ!  ಇಂದಿನದನ್ನು ನಾಳಿನವರು ಕಂಡುಕೊಂಡು ಅದರ ಬಗ್ಗೆ ಏನನ್ನೂ ಮಾಡದಿರುವುದೇ ಇತಿಹಾಸ ಎಂಬುದು ಈ ಹೊತ್ತಿನ ತತ್ವ!

Wednesday, April 01, 2020

ನೀರವತೆಯ ಮರಣ ಮೃದಂಗ

ಎಲ್ಲೆಲ್ಲೂ ಶೂನ್ಯತೆ, ಎಲ್ಲ ಕಡೆ ನಿಶ್ಶಬ್ಧ, ಒಂದು ರೀತಿಯಲ್ಲಿ ಇಡೀ ಪ್ರಪಂಚದ ಚಲನವಲನವೇ ನಿಂತು ಹೋದ ಹಾಗೆ, ಒಂದು ರೀತಿಯಲ್ಲಿ ಜಗತ್ತಿನ ನರನಾಡಿಗಳೇ ಸ್ತಬ್ಧವಾದ ಹಾಗೆ.  ಬೀಸುತ್ತಿರುವ ಗಾಳಿಯಿಂದ ಹಿಡಿದು, ಹರಿಯುವ ನೀರಿನವರೆಗೆ, ಪಕ್ಷಿ-ಪ್ರಾಣಿ ಸಂಕುಲಗಳು ಬೆರಗಾಗಿ, ಗಿಡ-ಮರಗಳೂ ತಮ್ಮನ್ನು ತಾವು ಚಿವುಟಿ ನೋಡಿಕೊಳ್ಳುವ ಹಾಗೆ... ಮನುಕುಲ ಸಂಪೂರ್ಣ ತಟಸ್ಥಗೊಂಡಿದೆ.  ಜೊತೆಗೆ ತನ್ನ ಜೀವಕ್ಕೇ ಕುತ್ತಾಗಿ ಹೆದರಿಕೊಂಡು ತಾನು ಕಟ್ಟಿಕೊಂಡ ಗೂಡಿನಲ್ಲೇ ಅವಿತು ಕುಳಿತಿದೆ.

ಇವೆಲ್ಲವೂ ಆಗಿರುವುದು ಯಾವುದೋ ದೈತ್ಯ ಪರಂಪರೆಯ ಬೂಟಾಟಿಕೆಯ ಆಕ್ರಮಣದಿಂದಲ್ಲ, ಯಾವುದೋ ಭೀಕರ ಶಕ್ತಿಯ ಅವ್ಯಾಹತ ಹೊಡೆತದಿಂದಲ್ಲ.  ಇವೆಲ್ಲವೂ ಆಗಿರುವುದು ಯಾವುದೋ ನೆರಳಿಗಿಂತಲೂ ಮಿಗಿಲಾದ, ಮನಸ್ಸಿಗಿಂತಲೂ ವೇಗವಾದ, ಬೆಂಕಿಗಿಂತಲೂ ತೀಕ್ಷ್ಣವಾದ, ಪ್ರಕಾಶಮಾನವಾದ ಆಯುಧದಿಂದಲ್ಲ... ಎಲ್ಲಕ್ಕೂ ಮಿಗಿಲಾಗಿ ಕಣ್ಣಿಗೆ ಕಾಣದ, ಇತ್ತ ಕಡೆ ಪೂರ್ಣ ಪ್ರಮಾಣದಲ್ಲಿ ಜೀವವೂ ಇರದ, ಎಲ್ಲೋ ಹುಟ್ಟಿ ಎಲ್ಲೋ ಪಸರಿಸಿ, ಎಲ್ಲೋ ರೂಪ ಪರಿವರ್ತನೆಯನ್ನು ಪಡೆದು ಪ್ರಪಂಚದಾದ್ಯಂತ ಇರುವ ಟ್ರಿಲಿಯನ್ನುಗಟ್ಟಲೆ ಜೀವ ಪ್ರಮಾಣದಲ್ಲಿ ಕೇವಲ ಮಾನವನನ್ನು ಆಧರಿಸಿ ಕಾಡುತ್ತಿರುವುದು ಮೈಕ್ರೋಸ್ಕೋಪಿನಲ್ಲೂ ಕಷ್ಟಪಟ್ಟು ಹುಡುಕಿದರೆ ಕಾಣುವ ಒಂದು ವೈರಾಣು, ಅಷ್ಟೇ!

ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ.  ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಬೇಧಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!

***

ಏಳು ಬಿಲಿಯನ್‌ಗಿಂತಲೂ ಹೆಚ್ಚಿರುವ ನಾವೆಲ್ಲ ನಮ್ಮ ಪರಾಕ್ರಮದ ಉತ್ತುಂಗದಲ್ಲಿದ್ದೆವು.  ಪಕ್ಷಿಗಿಂತಲೂ ಮಿಗಿಲಾಗಿ ಹಾರಿದೆವು, ಮೀನಿಗಿಂತಲೂ ವೇಗವಾಗಿ ಈಜಿದೆವು.  ಇಡೀ ಭೂಮಂಡಲದ ಮೂಲೆ-ಮೂಲೆಗಳಲ್ಲಿ ನಮ್ಮ ಉಸಿರಿನ ಸೋಂಕನ್ನು ಪಸರಿಸಿದೆವು.  ನಾವು ಯಂತ್ರಗಳನ್ನು ಹುಟ್ಟುಹಾಕಿದೆವು, ತಂತ್ರಗಳನ್ನು ಹೆಣೆದೆವು.  ನಮ್ಮ ಇರುವಿಕೆಯನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ಆಗಿಂದಾಗ್ಗೆ ಹೊಡೆತಗಳನ್ನೂ ತಿಂದೆವು.  ಸುಮಾರು ನೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಗಾಳಿಯಲ್ಲಿ ಹರಡಿದ ಫ್ಲೂ (ಸ್ಪಾನಿಷ್ ಫ್ಲೂ) ಐವತ್ತು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ದಾಖಲೆಗಳಿವೆ.  ತದನಂತರ ಐವತ್ತರ ದಶಕದಲ್ಲಿ ಹಾಂಗ್‌ಕಾಂಗ್‌ನಿಂದ ಶುರುವಾಗಿ ಎಲ್ಲಕಡೆಗೆ ಹರಡಿದ ಏಷಿಯನ್ ಫ್ಲೂ, ಒಂದು ಮಿಲಿಯನ್‌ಗೂ ಹೆಚ್ಚು ಜನರನ್ನು ಕೊಂದು ಹಾಕಿತು.  ತದನಂತರ SARS, H1N1, AIDS ಮೊದಲಾದ ಖಾಯಿಲೆಗಳಿಂದ ಮನುಕುಲ ಸತತವಾಗಿ ಸಂಕಷ್ಟಕ್ಕೆ ಒಳಗಾಗಿದ್ದರೂ, ಕಳೆದ ನೂರು ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ ಬಂದ್ ಮಾಡಿದ ಕೀರ್ತಿ ೨೦೧೯-೨೦ರ ಕೋವಿಡ್ ಕೊರ‍ೋನಾ ವೈರಸ್‌ಗೆ ಸಲ್ಲುತ್ತದೆ. ನಮ್ಮ ಇತಿಹಾಸದಲ್ಲಿ  ಬರೀ ಫ್ಲೂ ಖಾಯಿಲೆ ಒಂದೇ ಅಲ್ಲದೇ ಪ್ಲೇಗ್, ಮೀಸಲ್ಸ್, ಸ್ಮಾಲ್‌ಪಾಕ್ಸ್, ಮೊದಲಾದವೂ ಕೂಡ ತಮ್ಮ ಶಕ್ತ್ಯಾನುಸಾರ ಮಾನವನನ್ನು ಕಟ್ಟಿಹಾಕಿವೆ.  ಇವೆಲ್ಲ ಸರ್ವವ್ಯಾಪಿಯಾಗಿ ಗಾಳಿಯಲ್ಲೇ ಹರಡುವಂಥ ಮಹಾಮಾರಿಗಳ ವಿಶೇಷವೆಂದರೆ, ಈ ಎಲ್ಲ ಖಾಯಿಲೆಗಳು ಮೂಲತಃ  ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಜೀವ-ನಿರ್ಜೀವ ಹಂತದಲ್ಲಿರುವ ಕೀಟಾಣು-ಜೀವಾಣುಗಳಿಂದ ಶುರು ಆದಂತವುಗಳು.  ಹಾಗೆಯೇ, ಈ ಎಲ್ಲ ಖಾಯಿಲೆಗಳು ನಮಗೆ ಬಂದಿದ್ದರಿಂದಲೇ ನಮ್ಮ ವೈದ್ಯಕೀಯ ವಿಜ್ಞಾನ ಇಷ್ಟೊಂದು ಮುಂದುವರೆದಿರುವುದು ಎಂದರೂ ತಪ್ಪಾಗಲಾರದು.  ಒಂದು ರೀತಿಯಲ್ಲಿ ಕಣ್ಣಿಗೆ ಕಾಣದ ಈ ಸೂತ್ರಧಾರಿ ಜೀವ ವೈವಿಧ್ಯ ನಮ್ಮನ್ನು ಕಾಲಕ್ರಮೇಣ ಕುಣಿಸುತ್ತಿರುವುದು.

***

ಮನುಕುಲ ಇದನ್ನೂ ಗೆದ್ದು ನಿಲ್ಲುತ್ತದೆ.  ಆದರೆ, ಈ ಬಾರಿ ವಿಶೇಷವಾದ ಪಾಠವನ್ನು ಕಲಿಯುವುದರ ಮೂಲಕ ಇನ್ನು ಮುಂದಿನ ಐವತ್ತು-ಎಪ್ಪತ್ತೈದು ವರ್ಷಗಳಿಗಾಗುವಷ್ಟರ ಮಟ್ಟಿನ ಅನುಭವವನ್ನು ಪಡೆಯುತ್ತದೆ.  ಉತ್ತುಂಗಕ್ಕೆ ಏರುತ್ತಿರುವ ನಾವು ಎಷ್ಟು ಚಿಕ್ಕವರು ಎಂಬುದನ್ನು ನೆನಪಿಸುವುದಕ್ಕಾದರೂ ಇದು ಬೇಕಾಗುತ್ತದೆ.  ಹಿಂದಿನ ಮಹಾಮಾರಿ ರೋಗಗಳ ಮೂಲದಲ್ಲಿ ಬರೀ ನಿಸರ್ಗದ ಕೈ ಇತ್ತೋ, ಅಥವಾ ಜಾಗತಿಕ ಯುದ್ಧಗಳಲ್ಲಿ ತನ್ನನ್ನು ತಾನೇ ಹುಡುಕಿಕೊಳ್ಳುತ್ತಿರುವ ಮಾನವ ತನ್ನ ಸಂತತಿಯನ್ನೇ ಪರೀಕ್ಷೆಗೊಡ್ಡುವ ವಿಷಮ ಹಂತಕ್ಕೆ ಬಂದು ತಲುಪಿದ್ದನೋ ಯಾರು ಬಲ್ಲವರುಆದರೆ, ಇಂದಿನ ದಿನಗಳಲ್ಲಿ ಅಧಿಕವಾಗಿ ಹರಡುತ್ತಿರುವ ಕೋವಿಡ್ ಸಂತತಿಯ  ಹಿನ್ನೆಲೆಯಲ್ಲಿ ಮಾನವನ ಹುನ್ನಾರ ಖಂಡಿತ ಇದೆ - ಇದು, ಒಂದೇ ಮುಗ್ಧ ಜೀವಿಗಳ ಮಾರಣ ಹೋಮದ ಫಲ, ಅಥವಾ ಯಾವುದೋ ಒಂದು ದೇಶ, ಜಗತ್ತಿನಲ್ಲಿ ತಾನೇ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕು ಎನ್ನುವುದರ ಹುನ್ನಾರ.  ಇಂದಿನ ವೈರಸ್ ವಿದ್ಯಮಾನಗಳನ್ನು ಮಾನವ ನಿರ್ಮಿತ ಎಂದುಕೊಂಡರೆ, ಕೆ.ಎಂ. ಗಣೇಶಯ್ಯನವರ ಶಿಲಾಕುಲ ವಲಸೆಯಲ್ಲಿ ಬರೆದ ಹಾಗೆ, ನಮ್ಮ ಇತಿಹಾಸವನ್ನು, "ಮಾನವ ಹುಟ್ಟಿದ, ಕಾದಾಡಿದ, ಮತ್ತೆ ಸತ್ತ" ಎಂದು ಸಂಕ್ಷಿಪ್ತವಾಗಿ ವರದಿ ಮಾಡಲೇನೂ ಅಡ್ಡಿಯಿಲ್ಲ. ಇನ್ನೂರು ವರ್ಷಗಳ ಹಿಂದೆ ಬ್ರಿಟೀಷ್ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ಎಲ್ಲ ಕಡೆ ಮೆರೆದಿತ್ತು - ಜನರ ಜಲ, ಕುಲ, ನೆಲೆ, ಭಾಷೆ, ಸಂಸ್ಕೃತಿ, ಧರ್ಮಗಳನ್ನು ಬದಿಗೊತ್ತಿ ತನ್ನ "ಧರ್ಮ"ವನ್ನು ಅದು ಹೇರಿತ್ತು.  ಆದರೆ, ಆಗ ಜಗತ್ತು ವಿಭಿನ್ನವಾಗಿತ್ತುವಿಶ್ವದೆಲ್ಲ ಕಡೆಯ ದೇಶ-ಜನರಲ್ಲಿ ಇಷ್ಟೊಂದು ಮಟ್ಟದ ಸಾಮರಸ್ಯ ಇರಲಿಲ್ಲ.  ಆದರೆ, ಇಂದು ಜಗತ್ತು ಒಂದು ಜಾಗತಿಕ ವಲಯವಾಗಿದೆ, ಪ್ರತಿಯೊಂದು ರೀತಿಯಲ್ಲಿಯೂ ನಾವು ಮತ್ತೊಬ್ಬರನ್ನುಅವಲಂಬಿಸಿದ್ದೇವೆ. ಈ ಸಂದರ್ಭದಲ್ಲಿ ಜಗತ್ತಿನ ಯಾವುದೋ ಒಂದು ಭಾಗ ತನ್ನ ಹೆಚ್ಚುಗಾರಿಕೆಯನ್ನು ಇತರರ ಸೋಲಿನಲ್ಲಿ ಪ್ರದರ್ಶಿಸುವುದು ಕಷ್ಟಸಾಧ್ಯ.

***

ಗಾಳಿ ಇರುವಲ್ಲಿ ಧೂಳು ಇರುವುದು ಸಹಜ.  ಆದರೆ, ಆ ಧೂಳೇ ನಮ್ಮನ್ನು ಸಂಕಷ್ಟಕ್ಕೆ ತಳ್ಳದಿರಲಿ.  ವಿಕಾರಿ ನಾಮ ಸಂವತ್ಸರದ ವಿಕಾರತೆ, ಅದರ ಕಾಲ ಅಂತ್ಯವಾದ ನಂತರ ಇನ್ನಾದರೂ ಕಡಿಮೆ ಆಗಲಿ.  ಕಳೆದೊಂದು ವರ್ಷದಿಂದ ಅತಿವೃಷ್ಟಿ, ಕಾಡಿನ ಬೆಂಕಿ, ಧರ್ಮ ಸಂಬಂಧಿ ಅತ್ಯಾಚಾರ-ಅನಾಚಾರಗಳಲ್ಲಿ ನೊಂದ ಎಲ್ಲರಿಗೂ ಸಾಂತ್ವನ ಸಿಗಲಿ.  ಈ ಕೊರೋನಾ ವೈರಸ್ಸು ನಮ್ಮ ನಿಜ ಸ್ಥಿತಿಯನ್ನು ಹೊರತರುತ್ತಿದೆ.  ಕುಲುಮೆಯಲ್ಲಿ ಕುದಿಸಿ ಪುಟಗಟ್ಟಿದ ಚಿನ್ನದಲ್ಲೇ ಒಂದು ಆಕರ್ಷಕ ಆಕಾರ ಮತ್ತು ಹೊಳಪು ಬರುವುದು, ಸುಪ್ಪತ್ತಿಗೆಯ ವಲಯ ಸೃಷ್ಟಿಸುವ ಆರಾಮಿನಲ್ಲಿ ಎಂದೂ ಸಂಶೋಧನೆಗಳಾಗಲೀ, ಆವಿಷ್ಕಾರಗಳಾಗಲೀ ನಡೆಯವು.  ಹಾಗೆಯೇ, ಈ ಪ್ರಸ್ತುತ (ದುಃ)ಸ್ಥಿತಿಯಲ್ಲಿ, ಮನುಕುಲ ಮತ್ತೆ ಸೆಡ್ಡು ಹೊಡೆದು ನಿಲ್ಲುವಂಥ ಸಂಶೋಧನೆಗಳು, ನವನಾವಿನ್ಯತೆಗಳು ಪ್ರಚುರಗೊಳ್ಳುತ್ತವೆ.  ಮನುಕುಲ ಹಿಂದಿಗಿಂತಲೂ ಮತ್ತಷ್ಟು ಬಲಶಾಲಿಯಾಗುತ್ತದೆ.  ಆದರೆ, ನಾವು ಬಲವಾದಷ್ಟೂ ನಿಸರ್ಗವನ್ನು ಗೌರವಿಸುವುದನ್ನು ಕಲಿಯಬೇಕು, ಇಲ್ಲವೆಂದಾದರೆ ಇದಕ್ಕಿಂತಲೂ ಹೆಚ್ಚು ಬೆಲೆ ಕೊಡಬೇಕಾದ ಕಾಲ ಬರುವುದು ದೂರವೇನಿಲ್ಲ.


Friday, August 31, 2007

ಅಬ್ಬಾ, ಒಂದು ದಶಕವೆಂದರೆ...

ಕೇವಲ ಹತ್ತೇ ವರ್ಷಗಳ ಹಿಂದೆ...ಮಾರ್ರಿಸ್ ಕೌಂಟಿಯ ಪಾರ್ಸಿಪನಿ (Parsippany) ಎಂಬ ಪಟ್ಟಣದ ಮಾರ್ಕ್ ಫುಸಾರಿ ಎಂಬೊಬ್ಬರ ಮನೆಯ ಬೇಸ್‌ಮೆಂಟಿನಲ್ಲಿ ಎರಡು ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಹಿಡಿದು ಸಿಸ್ಟಮ್ ಅನಲಿಸ್ಟ್ ಕೆಲಸವನ್ನು ಕೆಲವು ತಿಂಗಳುಗಳ ಹಿಂದೆ ಆರಂಭಿಸಿ, ಇನ್ನೂ ಅಂಬೆಕಾಲಿಡುತ್ತಿದ್ದ ಇಂಟರ್‌ನೆಟ್ಟ್ ಅನ್ನು ಸರ್ಫ್ ಮಾಡುತ್ತಿದ್ದ ಕಾಲ. ನನಗ್ಗೊತ್ತು, ಇದು ’ಬೀಸ್ ಸಾಲ್ ಬಾದ್’ ನಂತಹ ಹಳೇ ಹಿಂದೀ ಸಿನಿಮಾದ ಯಾದಿಯಲ್ಲೇ ಆರಂಭವಾದ ಬರಹ ಮುಂದೆ ಎಲ್ಲಿಗೆ ಮುಟ್ಟೀತು ಎಂದು. ಆದರೆ ನಿನ್ನೆ ವಿಶೇಷವಾಗಿ ಈ ಹತ್ತು ವರ್ಷಗಳನ್ನು ನೆನಪಿಸಿಕೊಳ್ಳಬೇಕಾಯಿತು, ರೆಡಿಯೋದಲ್ಲಿ ಪ್ರಿನ್ಸೆಸ್ ಡಯಾನಾ ಸತ್ತು ಹತ್ತು ವರ್ಷವಾದ ಸುದ್ದಿಯನ್ನು ಕೇಳಿದ ಬಳಿಕ.

ಆಗೆಲ್ಲಾ ಎಂಟು ವರ್ಷಗಳ ಡೆಮಾಕ್ರಟಿಕ್ ಪಕ್ಷದ ಆಡಳಿತವನ್ನು ಸಹಿಸಿಯೋ ಸಹಿಸಲಾರೆದೆಯೋ ರಿಪಬ್ಲಿಕನ್ ಪಕ್ಷದವರು ಸೆಡ್ಡು ಹೊಡೆದು ನಿಂತು ಮುಂಬರುತ್ತಿದ್ದ ಬುಷ್ ಚುನಾವಣೆಗೆ ಹೊಂಚು ಹಾಕುತ್ತಿದ್ದ ಕಾಲ. ಕೆನೆತ್ ಸ್ಟಾರ್ ಎನ್ನುವ ಮುತ್ಸದ್ದಿ ಪ್ರತಿದಿನವೂ ಅಂದಿನ ಪ್ರೆಸಿಡೆಂಟ್ ಬಿಲ್ ಕ್ಲಿಂಟನ್ನರ ಕಾಲು ಎಳೆಯುತ್ತಿದ್ದ ಕಾಲ - ಯಾವ ನ್ಯೂಸ್ ಚಾನೆಲ್ ತಿರುಗಿಸಿದರೂ ಮೊನಿಕಾ ಲ್ಯುಯಿನ್ಸ್ಕೀಯೇ ಪ್ರತ್ಯಕ್ಷವಾಗುತ್ತಿದ್ದಳು. ಅಂತಹ ನ್ಯೂಸ್ ಹಂಗ್ರೀ ಮಾಧ್ಯಮಗಳಿಗೆ ಸ್ವಲ್ಪ ತಿರುವು ನೀಡಿದ್ದೆ ಡಯಾನ ಕಾಲವಾದ ವಿಚಾರ. ಜನಮನಗಳಲ್ಲಿ ಆಕೆ ಹೇಗೆ ನಿಂತು ಹೋಗಿದ್ದಳು, ಬೆರೆತು ಹೋಗಿದ್ದಳು ಎನ್ನುವುದಕ್ಕೆ ಸಾಕ್ಷಿಯಾಗುವಂತೆ ಜನರ ಪ್ರತಿಕ್ರಿಯೆ ವ್ಯಕ್ತವಾಗತೊಡಗಿ ಅಮೇರಿಕನ್ ಮಾಧ್ಯಮಗಳೂ ತಮ್ಮ ಕ್ಯಾಮರಾಗಳನ್ನು ಯುರೋಪಿನ ಕಡೆಗೆ ಮುಖಮಾಡಿ ನಿಂತಿದ್ದಂತಹ ಘಳಿಗೆಯೊಂದು ಸೃಷ್ಟಿಯಾಗಿತ್ತು.

ಅಂದಿನ ದಿನಗಳಲ್ಲಿ ನಾನೂ ಒಂದು ಹೊಸ ಕಂಪ್ಯೂಟರ್ ಕೊಂಡಿದ್ದೆ - ಆಫೀಸಿನಲ್ಲಿ ನನಗೆ ಬೇಕಾದ ವೆಬ್‌ಸೈಟುಗಳನ್ನು ನೋಡಿದರೆ, ನೋಡಿದ್ದು ಗೊತ್ತಾದರೆ ಎಲ್ಲಿ ಮನೆಗೆ ಕಳಿಸುತ್ತಾರೋ ಎಂಬ ಭಯ ಬೇರೆ ಇತ್ತು! ಹತ್ತು ವರ್ಷಗಳ ಹಿಂದೆ ಇಂತಹ ಪ್ರತೀ ಶುಕ್ರವಾರ ಸಂಜೆಯಿಂದ ಹಿಡಿದು ಶನಿವಾರದವರೆಗೆ ನಾನು ನಿದ್ರೆ ಮಾಡುತ್ತಿದ್ದುದೇ ಕಡಿಮೆ. ಅದರ ಬದಲಿಗೆ ಓದಲಿಕ್ಕೆ ಬೇಕಾದಷ್ಟು ವೆಬ್ ಸೈಟುಗಳು. ಮೊಟ್ಟ ಮೊದಲ ಬಾರಿಗೆ ನನ್ನ ತಮಿಳು ಸ್ನೇಹಿತ ಕಳಿಸಿದ ಲಿಂಕ್‌ನ ದಯೆಯಿಂದಾಗಿ ಸಂಜೆವಾಣಿ ಪತ್ರಿಕೆಯ ಅಂತರ್ಜಾಲ ದರ್ಶನ - ಬೆಂಗಳೂರಿನ ಸುದ್ದಿಯಾಗಿರಲಿ, ಇನ್ಯಾವುದಾಗಿರಲಿ ಕನ್ನಡವನ್ನು ಕಂಪ್ಯೂಟರ್ರ್‌ನಲ್ಲಿ ನೋಡುತ್ತಿದ್ದೇನಲ್ಲಾ ಅನ್ನೋ ಸಂತೋಷವೇ ದೊಡ್ಡದಾಗಿತ್ತು. ಯಾರೋ ಪುಣ್ಯಾತ್ಮರು ಹಾಕಿದ ’ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ...’ ಹಾಡು ರಾಜ್‌ಕುಮಾರ್ ಧ್ವನಿಯಲ್ಲಿ ಕೇಳಿದಷ್ಟೂ ತಣಿಯದು, ಅದರ ಜೊತೆಯಲ್ಲಿ ’ಅಳುವಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ’. ನನ್ನ ತೆಲುಗು ರೂಮ್ ಮೇಟ್ ಪವನ್ ಕೂಡಾ ’ಅಮೃತವಾಹಿನಿ...’, ಹಾಗೂ ’ಅಳುವಕಡಲೊಳು...’ ಹಾಡನ್ನು ಬಾಯಿಪಾಟ ಮಾಡಿಕೊಂಡಿದ್ದ, ಏಕೆಂದರೆ ಅವೇ ಪದೇ-ಪದೇ ನನ್ನ ಕಂಪ್ಯೂಟರ್‌ನಿಂದ ಕೇಳಿಬರುತ್ತಿದ್ದವು.

ಓಹ್, ಅಲ್ಲೊಂದು ದೊಡ್ಡ ಚಾಟ್ ಪ್ರಪಂಚವೇ ಇತ್ತು. ನಾನೂ, ಪವನ್ ಹಾಗೂ ನಮ್ಮನ್ನು ಬಹಳ ಮುತುವರ್ಜಿಯಿಂದ ಪದೇಪದೇ ಭೇಟಿಯಾಗುತ್ತಿದ್ದ ಆಕಾಶ್‌ಗೆ ಕಂಪ್ಯೂಟರ್‌ನಲ್ಲಿನ ಚಾಟ್ ಬಹಳ ಮಹತ್ವಪೂರ್ಣದಾಗಿತ್ತು. ಫ್ಲ್ಯಾಟ್‌ಲೈನ್ ಫೋನ್ ಸರ್ವೀಸ್‌ನಲ್ಲಿ ಡಯಲ್ ಅಪ್ ಕನೆಕ್ಷನ್ ಇದ್ದುದಾದರೂ ನಮಗೆ ವೀಕ್ ಎಂಡ್‌ಗಳಲ್ಲಿ ನಿರಂತರವಾಗಿ ಚಾಟ್ ಮಾಡಲು ಯಾವ ತೊಂದರೆಯೂ ಇರುತ್ತಿರಲಿಲ್ಲ. ಕೆಲವೊಮ್ಮೆ ಪಾಳಿಯ ಮೇಲೆ ಒಬ್ಬರಾದ ಮೇಲೆ ಒಬ್ಬರು, ನಾಲ್ಕು-ಐದು-ಆರು ಘಂಟೆಗಳ ನಿರಂತರ ಚಾಟ್‌ಗಳಲ್ಲಿ ತೊಡಗಿದ್ದೂ ಉಂಟು. ಹೀಗಿನ ನಿರಂತರ ತಪಸ್ಸಿನ ಚಾಟ್‌ನಿಂದ ನಾನೂ ಹಾಗೂ ಪವನ್ ಕೆಲವೇ ವಾರಗಳಲ್ಲಿ ಹೊರಗೆ ಬಂದು ಮುಕ್ತರಾದೆವು. ನಮ್ಮ ಪ್ರಬುದ್ಧತೆ ಬದಲಾಯಿತೋ, ಅಥವಾ ವರ್ಚುವಲ್ ಪ್ರಪಂಚದ ಇತಿಮಿತಿಗಳು ಸ್ಪಷ್ಟವಾದವೋ ಗೊತ್ತಿಲ್ಲ, ಆದರೆ ಆಕಾಶ್ ಅದರಿಂದೆಂದೂ ಮುಕ್ತನಾಗಲೇ ಇಲ್ಲ. ನಾನೂ-ಪವನ್ ಚಾಟ್‌ಗೆ ಬಳಸದ ಕಂಪ್ಯೂಟರ್ ಆಕಾಶನ ಪೂರ್ಣ ಸ್ವತ್ತಾಯಿತು. ಕೆಲವೊಮ್ಮೆ ಮಧ್ಯೆ ಯಾವುದಾದರೊಂದು ಕರೆ ಮಾಡಬೇಕೆಂದರೂ ಬಿಡುವು ಕೊಡದ ಹಾಗೆ ಆಕಾಶ್ ನಮ್ಮ ಮನೆಯ ಕಂಪ್ಯೂಟರ್ರ್ ಅನ್ನು ಬಳಸುವುದನ್ನು ನೋಡಿ ಪವನ್‌ಗೆ ಆಗಾಗ ಸಿಟ್ಟುಬರಲು ತೊಡಗಿತು. ಇದ್ದಕ್ಕಿದ್ದಂತೆ ಒಂದು ದಿನ ಪವನ್‌ಗೂ ಆಕಾಶ್‌ಗೂ ಸ್ವಲ್ಪ ಮಾತು ಬೆಳೆದಂತೆ ನೆನಪು. ನಂತರ ನಮ್ಮ ಮನೆಗೆ ಆಕಾಶ್ ಬರುವುದನ್ನು ಕಡಿಮೆ ಮಾಡಿದ, ಆದರೆ ಅಷ್ಟೊತ್ತಿಗಾಗಲೇ ಅವನ ಮನೆಯಲ್ಲೇ ಒಂದು ಕಂಪ್ಯೂಟರ್ ಇತ್ತು ಎಂದು ಕೇಳಿದ ನೆನಪು. ಆಕಾಶ್ ಚಾಟ್‌ನಿಂದ ಮುಕ್ತನಾಗಲೇ ಇಲ್ಲ ಎಂದು ಹೇಳಿದ್ದಕ್ಕೆ ಕಾರಣವಿದೆ. ಆಕಾಶ್‌ಗೂ ಹಾಗೂ ಕ್ಯಾತಿ ಎನ್ನುವ ಬಿಳಿ ಅಮೇರಿಕನ್ ಹುಡುಗಿಗೂ ಸ್ನೇಹ ಬೆಳೆದು ಅದು ಮುಂದೆ ಪ್ರೀತಿಯಾಗಿ ಮದುವೆಯಾಗುವಲ್ಲಿಯವರೆಗೂ ಹೋಯಿತು. ಆ ದಿನಗಳಲ್ಲಿ ಆಕಾಶ್ ಕ್ಯಾತಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಕ್ಕಾಗಿ ನನ್ನ ಕಂಪ್ಯೂಟರ್ರ್ ಅನ್ನು ಹೊಗಳುತ್ತಿದ್ದನೆಂದು ತೋರುತ್ತದೆ, ಈ ದಿನ ಅವನ ನಿಲುವು ಹೇಗಿದೆಯೋ ಗೊತ್ತಿಲ್ಲ. ಆಕಾಶ್ ಜೊತೆಯಲ್ಲಿ ನಾನು ಕ್ಯಾತಿಯನ್ನು ನೋಡಿದ್ದು ನ್ಯೂ ಬ್ರನ್ಸ್‌ವಿಕ್‌ನ ಒಂದು ಇಂಡಿಯನ್ ಹೊಟೇಲಿನಲ್ಲಿ, ಕೆಲವು ವರ್ಷಗಳ ನಂತರ - ಆಗ ಅವನು ಕ್ಯಾತಿಯನ್ನು ತನ್ನ ಹೆಂಡತಿ ಎಂದು ಪರಿಚಯ ಮಾಡಿಕೊಟ್ಟಿದ್ದ ನೆನಪು. ಮುಂದೆ ಆಕಾಶ್, ಪವನ್ ಅವರವರ ದಿಕ್ಕು ಹಿಡಿದು ನಡೆದವರು ಇವತ್ತಿಗೂ ಭೇಟಿಯಾದದ್ದಿಲ್ಲ. ನನ್ನ ಹಾಗೇ ಅವರೂ ಹತ್ತು ವರ್ಷಗಳನ್ನು ನೆನೆಸಿಕೊಳ್ಳುತ್ತಿರಬಹುದು.

೧೯೯೭ ರಿಂದ ೨೦೦೦-೨೦೦೧ ರ ಹೊತ್ತಿಗೆಲ್ಲಾ ಸ್ಟಾಕ್ ಮಾರ್ಕೇಟ್, ಟೆಕ್ನಾಲಜಿ ಮಾರ್ಕೇಟ್ ತುಂಬಾ ಮೇಲು ಹೋಗುತ್ತಿದ್ದ ಕಾಲ. ರಿಯಲ್ ಎಸ್ಟೇಟ್ ಸಹಾ ಆಗಷ್ಟೇ ಚಿಗುರಿಕೊಳ್ಳುತಲಿತ್ತು. ಆದರೆ ನಾನು, ಹಾಗೂ ನನ್ನ ಹಾಗಿನವರು ದಿನವೂ ಆಫೀಸಿಗೆ ಹೋಗಿ ಬರುವುದನಷ್ಟೇ ಕಾಯಕವೆಂದುಕೊಂಡು ಇವತ್ತಿನವರೆಗೂ ಅನುಸರಿಸಿಕೊಂಡು ಬಂದೆವೇ ವಿನಾ ಯಾವೊಂದು ರಿಸ್ಕ್ ಅನ್ನೂ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಿಲ್ಲ. ಉದ್ಯಮವನ್ನು ಆರಂಭಿಸುವುದಕ್ಕೆ, ತಮ್ಮದೇ ಆದ ಕಂಪನಿಯನ್ನು ಶುರು ಮಾಡಲಿಕ್ಕೆ, ಆಯಕಟ್ಟಿನ ಜಾಗಗಳಲ್ಲಿ ಹಣ ಹೂಡುವುದಕ್ಕೆ, ಮನೆ-ಮಠ ಖರೀದಿ ಮಾಡುವುದಕ್ಕೆ ಎಲ್ಲದಕ್ಕೂ ಹೇಳಿ ಮಾಡಿಸಿದ ಸಮಯವಾಗಿತ್ತು. ೨೦೦೧ ರ ಸೆಪ್ಟೆಂಬರ್ ಬರುತ್ತಿದ್ದ ಹಾಗೆ, ಅಲ್ಲ, ಬುಷ್ ಚುಕ್ಕಾಣಿ ಹಿಡಿದು ಶ್ವೇತಭವನವನ್ನು ಸೇರಿದ ಘಳಿಗೆ ಸರಿ ಇರದಿದ್ದ ಕಾರಣ ಏನೇನೋ ಅನಾಹುತಗಳಾದವು. ಪ್ರಪಂಚದ ರೀತಿ-ನೀತಿಗಳೇ ಬದಲಾಗಿ ಹೋದವು. ಎಲ್ಲವೂ ಅಮೇರಿಕಮಯವಾಯಿತು. ಉದಯವಾಣಿಯಂತಹ ಪತ್ರಿಕೆಗಳು ನಮ್ಮಲ್ಲಿನ ಬಸ್ಸುಲೋಡು ಜನರು ತುಂಬಿ ಅಮೇರಿಕದಿಂದ ಭಾರತಕ್ಕೆ ಹಿಂತಿರುಗುವ ಹಾಗೆ ವೃತ್ತಿಕರ್ಮಿಗಳನ್ನು ಬಿಂಬಿಸತೊಡಗಿ, ಆಗಾಗ್ಗೆ ಊರಿನಿಂದ ಅಣ್ಣ ಫೋನ್ ಮಾಡಿ ’ಎಲ್ಲಾ ಚೆನ್ನಾಗಿದೆಯಾ?’ ಎಂದು ಕೇಳುವಂತಾಗಿತ್ತು. ಎಷ್ಟೋ ಜನ ಕಂಪನಿಗಳನ್ನು ಬದಲಾಯಿಸಿದರು. ಎಷ್ಟೊ ಜನ ಹಿಂತಿರುಗಿ ಹೋದರು. ಇನ್ನೆಷ್ಟೋ ಜನ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿದರು. ಗ್ರೀನ್‌ಕಾರ್ಡ್ ಸುಳಿಯಲ್ಲಿ ಸಿಕ್ಕವರ ಅವಸ್ಥೆ ಹೇಳತೀರದಾಗಿತ್ತು, ಕೊನೆಯ ಹಂತದವರೆಗೆ ಬಂದು ಕಂಪನಿಯನ್ನು ಬಿಟ್ಟವರ ಕೊರಗು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹತ್ತು ವರ್ಷಗಳಲ್ಲಿ ಏನೇನೆಲ್ಲ ಆಗಿ ಹೋದವು. ಹತ್ತು ವರ್ಷ ಕೋಮಾದಲ್ಲಿದ್ದ ವ್ಯಕ್ತಿ ಇಂದು ಎಚ್ಚೆತ್ತು ಪ್ರಪಂಚವನ್ನು ನೋಡಿದ್ದೇ ಹೌದಾದರೆ ಅಗಾಧವಾದ ವ್ಯತ್ಯಾಸ ಎಲ್ಲ ಸ್ಥರಗಳಲ್ಲಿ ಕಂಡುಬರುವುದು ಸಾಮಾನ್ಯ. ಕಂಪ್ಯೂಟಿಂಗ್ ಪವರ್‌ನಿಂದ ಹಿಡಿದು ಟೆಕ್ನಾಲಜಿವರೆಗೆ, ಜಾಗತಿಕ ವಿಷಯಗಳನ್ನು ಲೆಕ್ಕ ಹಾಕಿಕೊಂಡರೆ, ಬಂದು ಹೋದವರ, ಕಾಲವಾದವರ ನೆನಪು ಮಾಡಿಕೊಂಡರೆ ಈ ಹತ್ತು ವರ್ಷಗಳು ಬಹಳ ದೊಡ್ಡವೇ. ಅಬ್ಬಾ, ಒಂದು ದಶಕವೆಂದರೆ ಎಷ್ಟು ದೊಡ್ಡದು! ಹೀಗೆ ಹತ್ತು ದಶಕಗಳಷ್ಟು ಬಾಳ ಬಹುದಾದ ಮಾನವ ಜೀವನ ದೊಡ್ಡದೇ ಎಂದು ಈ ಹೊತ್ತಿನಲ್ಲಿ ಅನ್ನಿಸಿದ್ದು ಸುಳ್ಳಲ್ಲ.

ಹತ್ತು ವರ್ಷಗಳ ನಂತರ ನಾನು ಇಂದೂ ಮಾರ್ರಿಸ್ ಕೌಂಟಿಯ ಮತ್ತೊಂದು ಪಟ್ಟಣ ಫ್ಯ್ಲಾಂಡರ್ಸ್ (Flanders) ನಲ್ಲಿ ನೆಲೆನಿಂತಿದ್ದೇನೆ - ಒಂದು ರೀತಿ ಫುಲ್ ಸೈಕಲ್ ಬಂದ ಹಾಗನ್ನಿಸುತ್ತೆ.