Showing posts with label ಪ್ರವಾಸ. Show all posts
Showing posts with label ಪ್ರವಾಸ. Show all posts

Wednesday, August 27, 2008

ಮರಳು ಭೂಮಿ ಮತ್ತು ಮೌನ

ಟೋನಿ ಬೋರ್ಡೇನ್ (Anthony Bourdain) ನ Without Pyramids ಕಾರ್ಯಕ್ರಮವನ್ನು ಟ್ರಾವೆಲ್ ಚಾನೆಲ್‌ನಲ್ಲಿ ನೋಡಿದಾಗಲೇ ಈಜಿಪ್ಟಿನ ಮರಳುಗಾಡು calm ಮತ್ತು clean ಆಗಿರುವ ಬಗ್ಗೆ ಅವನ ವಿವರಣೆಗಳನ್ನು ಕೇಳುತ್ತಲೇ ಒಂದು ಮರಳುಭೂಮಿಯಲ್ಲೂ ಒಬ್ಬನ ಅಂತಃಸತ್ವವನ್ನು ಶುದ್ಧೀಕರಿಸುವ ಅಗಾಧವಾದ ಮೌನವಿದೆ ಎಂದು ಅರಿವಿಗೆ ಬಂದದ್ದು. ಒಬ್ಬನ ಒಡಲಾಳದ ಸಂಸ್ಕಾರಗಳನ್ನು ಕೂಲಂಕಷವಾಗಿ ಸೋಸಿ ಶುದ್ಧೀಕರಿಸುವ ಬಗ್ಗೆ ಭಾರತೀಯ ಮೂಲದ ಧ್ಯಾನದಲ್ಲೂ ಪರಮರ್ಶೆಗಳು ದೊರೆಯುತ್ತವೆ (self-purification by introspection). ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳು ಹಿಮಾಲಯದ ತಪ್ಪಲಿನ ಮೊರೆ ಹೊಕ್ಕಿದ್ದರ ಬಗ್ಗೆ ಕೇಳಿದ್ದೆನೆ ಹೊರತು ರಾಜಸ್ತಾನದ ಮರಳುಗಾಡಿನಲ್ಲಿ ಅಗಮ್ಯ ಹಾಗೂ ಅನಂತವಾದ ಮೌನವನ್ನು ಹುಡುಕಿಕೊಂಡು ಹೋದವರ ಬಗ್ಗೆ ನಾನು ಕೇಳಿಲ್ಲ. ನಕ್ಷತ್ರಗಳು ಮಿನುಗುವ ನಿಶ್ಶಬ್ದ ಮುಗಿಲಿನ ರಾತ್ರಿಗಳಲ್ಲಿ, ಕಾಲ ಬೆರಳುಗಳ ನಡುವೆ ಸೋಕಿ ಹರಿದಾಡುವ ಬಿಸಿ-ತಂಪು ಮರಳಿನ ಕಣಗಳಲ್ಲಿ ಜೊತೆಗೆ ಒಬ್ಬನ ಒಳಗನ್ನು ಹೊರತೆರೆದು ತೋರುವ ಏಕತಾನ ಮೌನದ ಬಗ್ಗೆ ಟೋನಿ ಹಾಗೂ ಆತನ ಸಹ ಪ್ರಯಾಣಿಕರು ವಿವರಿಸಿದ ಅನುಭವ ಬಹಳಷ್ಟು ಮುದ ನೀಡಿತು. ಈ ಕಾರ್ಯಕ್ರಮದಲ್ಲಿನ ಈಜಿಪ್ಟಿನ ಮರಳುಭೂಮಿಯ ಮೂಲದವನೊಬ್ಬನು ವಿವರಿಸುವಂತೆ ಐದೇ ಐದು ದಿನಗಳು ಸಾಕು ಎಂತಹವರ ಅಂತರಾಳವನ್ನು ಬಡಿದೆಬ್ಬಿಸಲು ಎಂಬರ್ಥ ಬರುವ ಮಾತುಗಳು ಗಮನ ಸೆಳೆದವು.

ಈಜಿಪ್ಟ್ ಎಂದರೆ ನೈಲ್ ನದಿ, ಪಿರಮಿಡ್ಡುಗಳು, ಪುರಾತನ ಕಾಲದಿಂದಲೂ ಬಂದ ಪರಂಪರೆ ಎಂಬುದು ಎಲ್ಲರ ಮನಸ್ಸಿಗೆ ಬರಬಹುದಾದ ಅಂಶ. ಸುಮಾರು USA ಭೂವಿಸ್ತಾರದಷ್ಟೇ ದೊಡ್ಡದಾದ ಸಹಾರ ಮರುಭೂಮಿ ಪ್ರಪಂಚದ ಅತಿದೊಡ್ಡ ಮರಳುಭೂಮಿ. ಕ್ರಿಸ್ತಪೂರ್ವ ೬೦೦೦ ವರ್ಷಗಳ ಹಿಂದಿನ ಉಲ್ಲೇಖಗಳು ಸಿಗುವಂತಹ ಈಜಿಪ್ಟ್ ಸಂಸ್ಕೃತಿಗೆ ಈ ಮರುಭೂಮಿಯ ಸಂಸ್ಕೃತಿ ಇನ್ನೂ ಹಳೆಯದು!

***

ಇದು ಮರುಭೂಮಿಯ ಕಥೆಯನ್ನಾಗಲೀ ಈಜಿಪ್ಟಿನ ಬಗ್ಗೆ ವ್ಯವಸ್ಥಿತವಾಗಿ ಹೇಳುವ ಪ್ರಯತ್ನವಂತೂ ಆಗಲಾರದು ಏಕೆಂದರೆ ಅವೆರೆಡನ್ನೂ ನಾನು ನೋಡೇ ಇಲ್ಲ, ಅನುಭವಿಸಿಯೂ ಇಲ್ಲ - ಟಿವಿ ಪರದೆಯ ಮೇಲೆ ನೋಡಿದ್ದನ್ನು ಹೊರತು ಪಡಿಸಿ. ಇನ್ನು ಭಾರತದ ಥಾರ್ ಮರುಭೂಮಿಯ ಬಗ್ಗೆ ಓದಿದ್ದೇನಾದರೂ ಕಣ್ಣಿಂದ ನೋಡಿದ್ದಂತೂ ಇಲ್ಲ. ಈ ಯುಎಸ್‌ಎ ಅಷ್ಟು ದೊಡ್ಡದಾದ ಮರಳುಗಾಡನ್ನು ಊಹಿಸಿಕೊಳ್ಳುತ್ತಾ ಹೋದಂತೆ, ಒಬ್ಬ ಪಶ್ಚಿಮದವನು ಮರುಭೂಮಿಯಲ್ಲಿ ನಡೆಯುತ್ತಾ ಅದರ ವೈಭವವನ್ನು ವರ್ಣಿಸುತ್ತಾ ಹೋದದ್ದನ್ನು ನೋಡಿದಂತೆ, ಸ್ಥಳೀಯ ಈಜಿಪ್ಟ್ ಮೂಲದವನು ಈ ಮರುಭೂಮಿ ಎಂಥವರನ್ನೂ ತಮ್ಮನ್ನು ಅವಿಷ್ಕರಿಸಿಕೊಳ್ಳಲು ಸಹಾಯಮಾಡುವುದು ಎಂಬ ಮಾತನ್ನು ಕೇಳಿದಂತೆ ನನ್ನ ಮನದಲ್ಲಿ ಮರುಭೂಮಿಯ ಬಗ್ಗೆ ಹೊಸದಾದ ಗೌರವ ಭಾವವೊಂದು ತಳೆಯತೊಡಗಿತು. ಈ ಸೃಷ್ಟಿಯಲ್ಲಿ ಮರುಭೂಮಿಯ ಪಾತ್ರವೂ ಇದೆ, ಅದಕ್ಕೂ ಒಂದು ನೆಲೆ ಇದೆ ಎನ್ನುವ ಆಲೋಚನೆ ಹೊಮ್ಮಿದ್ದು.

ಈ ಪ್ರಪಂಚದಲ್ಲಿ ಮೌನವಿದೆ, ಹುಡುಕಿಕೊಂಡು ಹೋಗಬೇಕಷ್ಟೇ. ಅದಕ್ಕೆ ಬೇಕು ಎರಡು ರೀತಿಯ ಪ್ರಯಾಣ - ಒಂದು ಅಂತರಾಳದ ಒಳಗೆ ಇನ್ನೊಂದು ಇರುವುದರೆಲ್ಲದರಿಂದ ದೂರ. ಇವೆರಡನ್ನೂ ಮಾಡಲು ದೂರವೆಲ್ಲೂ ಹೋಗಬೇಕಾದುದಿಲ್ಲ, ಮರುಭೂಮಿಯೂ ಬೇಡ ಬಯಲೂ ಬೇಡ, ಎಲ್ಲವೂ ನಮ್ಮೊಳಗೇ ಇದೆ. ಹಾಡುಹಗಲು ಎಂತಹ ಸಂತೆಯ ವಾತಾವರಣದಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರೆ ಮಾಡುವವರಿಲ್ಲವೇನು? ಆದರೆ ನಮಗೆ ಅಂಟಿಕೊಂಡವುಗಳಿಂದ ’ದೂರ’ ಹೋಗುವುದು ಸರಳವಂತೂ ಅಲ್ಲ, ಅದಕ್ಕೆ ಬಹಳಷ್ಟು ಕಷ್ಟಪಡಬೇಕಾದ ಅಗತ್ಯವಿದೆ. ಈ ’ದೂರ’ ಹೋಗುವಿಕೆಗೆ ಅನುಕೂಲವಾಗಿ ಬರಬಹುದಾದ ಭೌತಿಕವಾಗಿ ಒಂದು ನೆಲೆಯಿಂದ ಮತ್ತೊಂದು ನೆಲೆಯಲ್ಲಿ ನಮ್ಮನ್ನು ಕಂಡುಕೊಳ್ಳಲು ಅನುವುಮಾಡಿಕೊಡುವಲ್ಲಿ ಮರುಭೂಮಿಯ ಪಾತ್ರವಂತೂ ಸ್ಪಷ್ಟವಾಯಿತು. ಇನ್ನು ಅಲ್ಲಿಗೆ ಹೋಗುವುದು ಹೇಗೆ ಅಲ್ಲಿ ಒಂದು ವಾರ ಕಳೆಯುವುದು ಹೇಗೆ ಎಂದೆಲ್ಲ ಯೋಚಿಸಿಕೊಂಡು ಬಾಯಿ ತುಟಿಯೊಣಗಿ ಹತ್ತಿರದ ನೀರಿನ ಬಾಟಲಿಯನೆತ್ತಿ ಮರುಭೂಮಿಯಲ್ಲಿ ನೀರು ಕುಡಿಯುವವರ ಹಾಗೆ ನೀರು ಕುಡಿದದ್ದಷ್ಟೇ ಬಂತು, ಆದರೆ ಅದು ಅಷ್ಟು ಸುಲಭವಂತೂ ಅಲ್ಲ.

***

ನಮ್ಮನ್ನಂಟಿದ ಸಂಕೋಲೆಗಳನ್ನೆಲ್ಲ ಬದಿಗೊತ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮತ್ಯಾವುದೋ ದೇಶದವರಾದ ನಾವು ಹೋಗುವುದು ಬರುವುದು ಬಹಳ ದೂರದ ಮಾತು. ಐದು ವರ್ಷಗಳ ಹಿಂದೆ ಯೂರೋಪಿನಲ್ಲಿ ಕಳೆದ ಹನ್ನೆರಡು ದಿನಗಳನ್ನು ಇತ್ತೀಚಿನ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ನೋಡಿದಾಗ ಅದು ದೊಡ್ಡ ಸಾಹಸವೆಂದೇ ಕಂಡೀತು. ಇನ್ನು ನನಗೆ ಆಸಕ್ತಿ ತಂದ ಸಹಾರ ಮರುಭೂಮಿಯನ್ನು ನೋಡಿ ಅನುಭವಿಸುವುದು ಕನಸಿನ ಮಾತೇ. ಅದಕ್ಕೆಂದೇ ನಾನು ಟಿವಿ ಚಾನೆಲ್ಲುಗಳಿಗೆ ಪ್ರವಾಸಿ ಪುಸ್ತಕ/ವೆಬ್ ಸೈಟ್‌ಗಳಿಗೆ ಜೋತು ಬೀಳೋದು. ’ಕೋಶ ಓದು’ ಎನ್ನುವ ಮಾತಿನಲ್ಲಿ ಬಲವಿದೆ, ಬೆಂಬಲವಿದೆ. ನಾವು ಈಗಿರುವ ನೆಲೆಯಿಂದ ಹೊರಬಂದು ಮತ್ತಿನ್ಯಾವುದೋ ನೆಲೆಯಲ್ಲಿ ನಮ್ಮನ್ನವಿಷ್ಕರಿಸಿಕೊಂಡು ಎಲ್ಲವೂ ನೆಮ್ಮದಿಯಿದ್ದಾಗ ತಾನೇ ಆ ದಿವ್ಯ ಮೌನ ಹೊಮ್ಮೋದು? ಹಾಗಾಗಲೂ ಬಹಳ ಕಷ್ಟವಿದೆ, ದಿವ್ಯ ಮೌನ ಹೊಮ್ಮದಿರುವ ಮಾತಲ್ಲ ಅದಕ್ಕೆ ಮೊದಲಿನ ನೆಮ್ಮದಿಯ ಬಗ್ಗೆ. ನಮ್ಮ ಆಹಾರ ಆಚಾರ-ವಿಚಾರಗಳು ಭಿನ್ನ, ನಮ್ಮ ನಿಲುವು ನೋಟ ಭಿನ್ನ, ಈ ಭಿನ್ನತೆ ಮತ್ತೊಂದು ಅಗಾಧವಾದ ಸಂಸ್ಕೃತಿಯ ಮುಂದೆಯೂ ಎದ್ದು ಕಾಣುತ್ತದೆ. ಪ್ರವಾಸಿಗರಾಗಿ ಹೋದಲ್ಲಿ ನಾವು ನಮ್ಮತನವನ್ನು ಎತ್ತಿ ಗಂಟುಕಟ್ಟಿಕೊಂಡು ಹೋಗೋದೋ ಅಥವಾ ಹೋದಲ್ಲಿ ಬಂದಲ್ಲಿ ಅಲ್ಲಿಯವರಲ್ಲೊಂದಾಗಿ ಅವರ ಸ್ಥಳೀಯ ಅನುಭವಗಳಿಗೆ ಸ್ಪಂದಿಸುವುದೋ ಎನ್ನುವ ದ್ವಂದ್ವ ಎದುರಾಗುತ್ತದೆ. (ಭಾರತೀಯ ಮೂಲದ ನಾವು ಅಮೇರಿಕದಿಂದ ಈಜಿಪ್ಟಿಗಾಗಲೀ ಯೂರೋಪಿಗಾಗಲೀ ಎಲ್ಲೇ ಹೋದರೂ ನಾವು ಅಲ್ಲಿಯವರ ಕಣ್ಣಿಗೆ ಭಾರತೀಯರೇ ಎಂಬುದನ್ನು ನಾನು ನನ್ನ ಯುರೋಪಿನ ಪ್ರವಾಸದಲ್ಲಿ ಸ್ವತಃ ಅನುಭವಿಸಿದ್ದು ನಿಜ.) ಪ್ರವಾಸಿಗರು ಏನನ್ನು ’ನೋಡಲು’ ಹೋಗುತ್ತಾರೆ, ಎಷ್ಟು ’ದೂರ’ ಹೋಗುತ್ತಾರೆ ಎನ್ನುವುದು ಮುಖ್ಯ. ನೀವು ಕೇವಲ ನೋಡಲು ಹೋಗುವವರಾದರೆ ನಿಮ್ಮ ಪುಳಿಯೊಗರೆ, ತಿಳಿಸಾರು-ಅನ್ನ, ಮೊಸರು ನಿಮ್ಮ ಜೊತೆ ಬಂದೀತು, ಅಲ್ಲಿಯ ಬದುಕನ್ನು ಅನುಭವಿಸಿ ನೋಡುವವರಿಗೆ ಗೋಟ್ ಚೀಜೂ ಇಷ್ಟವಾದೀತು ಎನ್ನುವುದು ಈ ಹೊತ್ತಿನ ತತ್ವವಷ್ಟೇ!

Sunday, August 10, 2008

ನಯಾಗರ ಜಲಪಾತ, ಕಾಮನಬಿಲ್ಲು ಹಾಗೂ ಡೆಲಾವೇರ್ ವ್ಯಾಲಿ

ಅಮೇರಿಕಕ್ಕೆ ಬಂದ ಹೊಸದರಲ್ಲಿ ಮೊಟ್ಟಮೊದಲು ನಾನು ನಯಾಗರ ಜಲಪಾತವನ್ನು ನೋಡಲು ಹೋಗಿದ್ದು ೧೯೯೮ ರಲ್ಲಿ, ಹತ್ತು ವರ್ಷಗಳಲ್ಲಿ ನಾನು ಒಂದಲ್ಲ ಒಂದು ಕಾರಣದಿಂದ ನಯಾಗರಕ್ಕೆ ಹೋಗಿ ಬರುತ್ತಲೇ ಇದ್ದೇನಾದರೂ ಮೊದಲ ಸಲವೊಂದನ್ನು ಬಿಟ್ಟು ಇನ್ನುಳಿದ ಸಲವೆಲ್ಲ ನಾನು ಹೊಸದಾಗಿ ನಯಾಗರ ಫಾಲ್ಸ್ ಅನ್ನು ನೋಡಲು ಹೋಗುವವರ ಜೊತೆಗೆ ಹೋಗಿದ್ದೇನೇದ್ದಾರಿಂದ ನನ್ನ ಪಾಲಿನ ಪ್ರವಾಸವನ್ನು ನಯಾಗರವನ್ನು ನೋಡುವವರನ್ನು ನೋಡಲು ಹೋಗುವುದು ಎಂದು ವರ್ಣಿಸುವುದು ಸರಿ ಎನ್ನಿಸುತ್ತೆ.

ನಮ್ಮ ಮಲೆನಾಡಿನ ಆಜುಬಾಜಿನವರು, ಈಗಾಗಲೇ ನಮ್ಮೂರಿನ ಹತ್ತಿರವಿರುವ ಜೋಗ ಗೇರುಸೊಪ್ಪೆ ಜಲಪಾತವನ್ನು ನೋಡಿದವರು ನಯಾಗರವನ್ನು ನೋಡಿ ’ಇಷ್ಟೇನಾ!’ ಎಂದು ಉದ್ಗರಿಸುವುದನ್ನು ನಾನು ಗಮನಿಸಿದ್ದೇನೆ. ಕೃತಕವಾಗಿ ನಿರ್ಮಿತಗೊಂಡ ಜಲಪಾತಗಳ ಮಜಲು ಹಾಗೂ ಮನರಂಜನೆಗೆಂದು ಹೆಚ್ಚು ನೀರನ್ನು ಹಾಯಬಿಟ್ಟಿರುವುದು ಮುಂದುವರೆದ ದೇಶಗಳಲ್ಲಿ ಕಣ್ಣಿಗೆ ಕೊಬ್ಬಿದಂತೆ ಕಾಣುವ ಎಲ್ಲ ಅಂಶಗಳಲ್ಲಿ ಒಂದಾಗುವುದಕ್ಕೆ ಮೊದಲು ನಾವು ಬೇಡವೆಂದರೂ ನಮ್ಮವರ ಮನಸ್ಸು ಒಂದಲ್ಲ ಒಂದು ತುಲನೆಯಲ್ಲಿ ತೊಡಗಿರುತ್ತದೆ. ಆ ತುಲನೆಯ ಹಿನ್ನೆಲೆಯಲ್ಲೇ ನಮ್ಮೂರಿನ ಸಹಜವಾದ ಜೋಗದ ಆರ್ಭಟದ ಮುಂದೆ ಇಲ್ಲಿನ ಕೊಬ್ಬಿನ ಜಲಪಾತಗಳು ಸಪ್ಪೆಯಾಗಿ ಕಾಣುತ್ತವೆ, ಇದು ನನ್ನೊಬ್ಬನ ಮಾತಂತೂ ಖಂಡಿತ ಅಲ್ಲ.

(ಜೊತೆಗೆ, ನಾವು ಇಲ್ಲಿ ಏನನ್ನೇ ಮಾಡಿದರೂ ದುಡಿದರೂ ಕಡಿದರೂ ಅವುಗಳಿಗೆಲ್ಲ ಒಂದು ಅರ್ಥ ಸಿಗುವುದು ನಮ್ಮ ಅದೇ ತುಲನೆಯಲ್ಲೇ ಎಂಬುದು ಇನ್ನೊಂದು ದಿನದ ವಿಚಾರವಾಗಲಿ!).


ನಯಾಗರದಿಂದ ಮರಳಿಬರುತ್ತಿರುವಾಗ ರೂಟ್ ೮೧ ರಿಂದ ರೂಟ್ ೮೦ ಕ್ಕೆ ಇನ್ನೇನು ಬಂದು ತಲುಪಬೇಕು ಎನ್ನುವ ಹೊತ್ತಿಗೆ ಪೆನ್ಸಿಲ್‌ವೇನಿಯಾ-ನ್ಯೂ ಜೆರ್ಸಿ ರಾಜ್ಯಗಳ ಗಡಿಯಲ್ಲಿ ಸಿಕ್ಕ ಕಾಮನಬಿಲ್ಲಿನ ಚಿತ್ರ.

ನಾನು ಇಂತಹ ಸುಂದರವಾದ ಕಾಮನಬಿಲ್ಲನ್ನು ನೋಡಿ ಅದೆಷ್ಟು ವರ್ಷವಾಗಿತ್ತೋ ಏನೋ? ಇತ್ತೀಚೆಗಂತೂ ಮಳೆಯಲ್ಲಿ ನೆನೆಯುವುದೂ ದಶಕಕ್ಕೊಂದು ದಿನದ ಅನುಭವವಾಗಿ ಹೋಗಿದೆ ಎನ್ನೋದು ನನ್ನೊಳಗಿನ ಮತ್ತೊಂದು ಕೊರಗು, ಇನ್ನು ಮಳೆ ಬೀಳುವಾಗ ಬಿಸಿಲಿದ್ದು, ಬಿಸಿಲಿರುವಾಗ ನಾವಿದ್ದು, ನಾವಿರುವಾಗ ಪುರುಸೊತ್ತು ಇದ್ದು, ಪುರುಸೊತ್ತು ಇದ್ದಾಗ ಹೊರಗಡೆ ಹೋಗಿ ನೋಡುವ ಮನಸ್ಸಿರುವ ಸಾಧ್ಯತೆ ಎಷ್ಟರ ಮಟ್ಟಿಗೆ ಸಾಧ್ಯ ನೀವೇ ಹೇಳಿ.

ಊಹ್ಞೂ, ’ಮಳೆ ಬಿಲ್ಲು ಬಂದರೇನು, ಮತ್ತೇನೇ ಆದರೇನು, ಕಾರು ನಿಲ್ಲೋಲ್ಲ, ಬ್ರೇಕು ಹಿಡಿಯೋಲ್ಲ’ ಎಂದು ಡ್ರೈವರ್ ಬದಿಯ ಕಿಟಕಿಯ ಗಾಜನ್ನು ಇಳಿಸಿ ಘಂಟೆಗೆ ಅರವತ್ತೈದು ಮೈಲು ವೇಗವಾಗಿ ಹೋಗುವ ಕಾರಿನಲ್ಲೇ ಈ ಚಿತ್ರವನ್ನು ಹಿಡಿಯುವಂತಾಯ್ತು. ಆ ತುದಿಯಿಂದ ಈ ತುದಿಗೆ ಬಾಗಿದ ಬಿಲ್ಲನ್ನು ಸೆರೆ ಹಿಡಿಯಲು ಹಲವಾರು ಆತಂಕಗಳು, ಅವುಗಳ ಮಧ್ಯೆ ಚಿತ್ರವನ್ನೂ ಹಿಡಿದದ್ದಾಯ್ತು, ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಮ್ಮ ಜೊತೆಗೇ ಪಯಣಿಸಿದ ಕಾಮನಬಿಲ್ಲನ್ನು ನೋಡಿ ಹರ್ಷಿಸಿದ್ದೂ ಆಯ್ತು.





ಇನ್ನೇನು ರೂಟ್ ೮೦ ಹತ್ತಿ ಮನೆಯಿಂದ ಮುವತ್ತು ಮೈಲು ದೂರವಿದೆ ಎನ್ನುವಾಗ ಡೆಲಾವರ್ ರಿವರ್ ವ್ಯಾಲಿಯಲ್ಲಿ ಸೆರೆಹಿಡಿದದ್ದೇ ಮೂರನೇ ಚಿತ್ರ. ಈ ತಾಣ ಯಾವತ್ತೂ ನನ್ನ ಮನಸ್ಸಿಗೆ ಮುದಕೊಡುತ್ತದೆ. ನಮ್ಮ ಕೊಡಚಾದ್ರಿಯ ಚಾರಣದ ಅನುಭವವನ್ನು ಕೊಡುವ ಅನೇಕ ಹೈಕಿಂಕ್ ಟ್ರೇಲ್‌ಗಳನ್ನು ಇಲ್ಲಿ ಕಂಡುಕೊಂಡಿದ್ದೇನೆ. ಅಪರೂಪಕ್ಕೊಮ್ಮೆ ಅಲ್ಲಲ್ಲಿ ಇನ್ನೂ ಹೆಸರಿಡದ ಝರಿಗಳನ್ನು ಕಂಡು ಖುಷಿಪಟ್ಟಿದ್ದೇನೆ. ಎಂತಹ ಬೇಸಿಗೆಯಲ್ಲೂ ತನ್ನೊಡಲಲ್ಲಿ ತಂಪನ್ನು ಕಾಯ್ದುಕೊಂಡು ಇರುವ ತಾಣಗಳಲ್ಲಿ ಕೆಲವೆಡೆ ನಿಂತು ಹರಿಯುವ ಐಸ್ ಕೋಲ್ಡ್ ನೀರಿನಲ್ಲಿ ಸ್ವಚ್ಛಂದವಾಗಿ ಆಡಿದ್ದೇನೆ.

Tuesday, December 11, 2007

ನಮ್ಮ ತಂತ್ರ ’ದೂರದೃಷ್ಟಿ’ಗಳೇ ಬೇರೆಯವೋ?

There is something wrong in the equation ಅಂತ ಅನ್ನಿಸಿದ್ದು ಇತ್ತೀಚೆಗೆ ಮಾತ್ರ - ನಮ್ಮ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಹಬ್ಬಿಕೊಂಡ ಬೀಚುಗಳಿಗೇಕೆ ಬಾಂಬೆ, ಗೋವಾ ಹಾಗೂ ಕೇರಳದ ಬೀಚುಗಳಿಗೆ ಮುತ್ತಿಕೊಂಡಂತೆ ಜನರೇಕೆ ಬರುವುದಿಲ್ಲ? (ಏನೂ ಇಲ್ಲದ) ಮರುಭೂಮಿಯ ರಾಜಸ್ತಾನದವರು, ಚಿಕ್ಕ ರಾಜ್ಯದವರಾದ ಕೇರಳದವರು ಬೆಳೆಸಿದಂತೆ ನಾವೇಕೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಲಿಲ್ಲ? ಔದಾರ್ಯತೆಗೆ ಇನ್ನೊಂದು ಹೆಸರಾದ ಕನ್ನಡಿಗರಿಗೆ ಜಗತ್ತಿನ ಮಾರುಕಟ್ಟೆಯಲ್ಲಿ ಹೆಗ್ಗಳಿಕೆ ಪಡೆದ ಬೆಂಗಳೂರಿಗೆ ಬಂದ ಜನರನ್ನು ರಾಜ್ಯದ ಇತರೆಡೆ ಪ್ರವಾಸಿಗಳಾಗಿ ಬಿಟ್ಟುಕೊಳ್ಳುವಲ್ಲಿ ಯಾವ ಅಡೆತಡೆಗಳಿರಬಹುದು? ನ್ಯೂ ಯಾರ್ಕ್‌ನಿಂದ ವಾಷಿಂಗ್ಟನ್‌ಗೆ ಹೋದಷ್ಟೇ ಬೆಂಗಳೂರಿನಿಂದ 240 ಮೈಲು ದೂರದಲ್ಲಿರುವ ದೂರದಲ್ಲಿರುವ ಜೋಗ ಜಲಪಾತಕ್ಕಾಗಲೀ ಹತ್ತಿರದ ಹಳೇಬೀಡಿಗಾಗಲೀ ಹಂಪೆಗಾಗಲೀ ನಾವೂ ಏಕೆ ಜನರನ್ನು (ಹೆಚ್ಚೆಚ್ಚು) ಬರಮಾಡಿಕೊಳ್ಳಬಾರದು? ನಮ್ಮ ಪ್ರವಾಸೋದ್ಯಮಕ್ಕೆ ಯಾವ ದಾಡಿ ಹಿಡಿದಿದೆ, ನಮ್ಮ ಮಂದಮತಿಗೆ ಏನು ಮಂಕು ಕವಿದಿದೆ?

ಕೇರಳದ ಜನ ಉಳಿದೆಲ್ಲ ಪ್ರಯೋಗಗಳನ್ನು ಮಾಡಿ ಈ ವರ್ಷದಿಂದ ಮಾನ್ಸೂನ್ ಸೀಜನ್ನಲ್ಲಿ ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವ ಬಗ್ಗೆ ಇತ್ತೀಚೆಗಷ್ಟೇ NPR ನಲ್ಲಿ ವರದಿಯೊಂದು ಕೇಳಿದ್ದು ನನ್ನ ಮನಸ್ಸಿನಲ್ಲಿ ವಾರಗಟ್ಟಲೇ ಹುಳುವಾಗಿ ಕೊರೆಯುತ್ತಲೇ ಇತ್ತು, ಈವರೆಗೂ ಅದೆಷ್ಟೇ ತಲೆತುರಿಸಿಕೊಂಡರೂ ಮೇಲಿನ ಏಕೆ/ಹೇಗೆ ಪ್ರಶ್ನೆಗಳಿಗೆ ಉತ್ತರಗಳಂತೂ ಸಿಕ್ಕಿಲ್ಲ. ನಮ್ಮಲ್ಲಿನ ಜನರ ನೀತಿ, ನಿಯತ್ತು ನಿಯಮಗಳು ಕಾರಣಗಳೇ? ಅಥವಾ ನಮ್ಮಲ್ಲಿನ ಅತಂತ್ರ ರಾಜಕೀಯ ಪರಿಸ್ಥಿತಿ ಬಂದು ಹೋಗುವ ಪ್ರವಾಸಿಗರನ್ನು ದೂರ ನಿಲ್ಲಿಸುತ್ತಿದೆಯೇ? ಎಲ್ಲಕ್ಕಿಂತ ಮುಖ್ಯವಾಗಿ ಇನ್‌ಫ್ರಾಸ್ಟ್ರಕ್ಷರ್ ಇರದಿರುವುದು ದೊಡ್ಡ ಕೊರತೆಯೇ? ಒಂದೂ ಗೊತ್ತಾಗುತ್ತಿಲ್ಲ.

ಕೆಲವು ವರ್ಷಗಳ ಹಿಂದೆ ಜೋಗವನ್ನು ನೋಡಲು ಹೋದಾಗ ಅಲ್ಲಿ ಮೊದಲಿನ ಹಾಗೆ ಎಲ್ಲಿ ಬೇಕೆಂದರಲ್ಲಿ ಕಸ ನೋಡಲು ಧಾರಾಳವಾಗಿ ಸಿಗುತ್ತಿತ್ತು, ನಮ್ಮ ಮಾಮೂಲಿನ ಕಸದ ಜೊತೆಗೆ ಈಚೆಗೆ ಅತಿಯಾಗಿ ಬಳಸಲ್ಪಡುವ ಪ್ಲಾಸ್ಟಿಕ್ ಲೋಟಾಗಳ ಹಾವಳಿ ಒಂದು ಕಡೆಯಾದರೆ ಯುವಕರು ಕುಡಿದು ಬಿಸಾಡುವ ಮದ್ಯ-ಬಿಯರ್ ಬಾಟಲಿಗಳದ್ದು ಮತ್ತೊಂದು. ಅಲ್ಲಿ ಹೋಗಿ ಬಂದವರಿಗೆ ತಂಗುವುದಕ್ಕೆ ಸರಿಯಾದ ವ್ಯವಸ್ಥೆ ಇಲ್ಲವೆಂದು ಕೇಳಿದ್ದೆ. ಸರ್ಕಾರದವತಿಯಿಂದಾಗಲೀ ಸ್ಥಳೀಯ ಸಂಘ ಸಂಸ್ಥೆಗಳಿಂದಾಗಲೀ ಹೋಗಿ ಬರುವವರಿಗೆ ಯಾವುದೇ ಸಹಾಯವೆಂಬುದೇನೂ ದೊರಕಿದಂತೆ ನನಗೆ ಕೇಳಿ ಕಂಡು ಗೊತ್ತಿಲ್ಲ. ಸಾಗರದ ಬಸ್‌ಸ್ಟ್ಯಾಂಡ್‌‍ನಲ್ಲಿ ’ಜೋಗಾ ಜೋಗಾ ಜೋಗಾ...’ ಎಂದು ಅರಚಿಕೊಳ್ಳುವ ಟಿಕೇಟ್ ಕೊಡುವ ಏಜೆಂಟರುಗಳು ಬಂದು ಹತ್ತುವ ಪ್ರಯಾಣಿಕರೆಲ್ಲರೂ ಸ್ಥಳೀಯರು ಎಂಬಂತೆ ಧಾರಾಳತೆಯಿಂದ ಬಸ್ಸು ತುಂಬುವ ದಂಧೆಗಳಲ್ಲಿ ಸಹಜವಾಗಿ ತೊಡಗಿಕೊಂಡಿದ್ದರೆ, ಒಂದು ತಾಲ್ಲೂಕು-ಜಿಲ್ಲಾ ಕೇಂದ್ರದ ಬಸ್‌ನಿಲ್ದಾಣದ ಮೂತ್ರಾಲಯಕ್ಕೆ ಒಮ್ಮೆ ದರ್ಶನ ನೀಡಿದವರು ಇನ್ನು ಜೋಗಾದ ವಿಷಯವಿರಲಿ ಸಾಗರ-ಶಿವಮೊಗ್ಗದ ಕಡೆಗೆ ತಲೆ ಹಾಕಿಯೂ ಮಲಗಲಾರರು.

ಬಹಳ ವರ್ಷಗಳಿಂದ ನನ್ನನ್ನು ಈ ಪ್ರಶ್ನೆ ಬಾಧಿಸುತ್ತಿದೆ - ನಮ್ಮ ಪರಂಪರೆಯಲ್ಲಿ ತಿಂದುಕುಡಿಯುವುದಕ್ಕೆ ಆದ್ಯತೆ ಕೊಡುವ ನಾವು ಶೌಚಾಲಯದ ವಿಚಾರಕ್ಕೆ ಬಂದಾಗ ಅದನ್ನು ಕಡೆಗಣಿಸುವುದಾದರೂ ಏಕೆ? ಎಂಥಾ ಶ್ರೀಮಂತರ ಮನೆಯನ್ನೇ ನೋಡಿ ಅಲ್ಲಿನ ಶೌಚಾಲಯ ಕಿರಿದಾಗಿ ಯಾವುದೋ ಮೂಲೆಯಲ್ಲಿರುವುದು ಸಾಮಾನ್ಯ ನೋಟವಾಗಬಹುದು, ಎಂಥಾ ಅದ್ದೂರಿ ಹೊಟೇಲನ್ನೇ ನೋಡಿ ಅಲ್ಲಿನ ಸಾರ್ವಜನಿಕ ಮೂತ್ರಾಲಯಗಳು ಶಿಥಿಲಗೊಂಡು ಹದಗೆಟ್ಟು ಹೋದರೂ ಅದನ್ನು ದುರಸ್ತಿ ಮಾಡಿಸುವುದಕ್ಕೆ ಸಂಬಂಧಪಟ್ಟವರು ನೆಗ್ಲೆಕ್ಟ್ ಮಾಡುವುದು ನಾನು ನೋಡಿದ ಭಾರತದಲ್ಲಂತೂ ಇತ್ತು.

ಪ್ರವಾಸೋದ್ಯಮವೆನ್ನುವುದು ಕೇವಲ ಪ್ರವಾಸಿಗರನ್ನು ಒಂದು ಟೂರಿಸ್ಟ್ ಡೆಸ್ಟಿನೇಷನ್ನ್ ಕಡೆಗೆ ದೂರದಿಂದ ಆಕರ್ಷಿಸುವುದಷ್ಟೇ ಅಲ್ಲ, ಹಾಗೆ ಬಂದವರನ್ನು ನಮ್ಮ ಮನೆಯ ಅತಿಥಿಗಳ ಹಾಗೆ ನೋಡಿಕೊಳ್ಳುವುದು, ಅವರು ತರುವ ವ್ಯಾಪಾರ-ವಹಿವಾಟು-ಸಂಸ್ಕೃತಿಯಲ್ಲಿ ಒಂದಾಗುವುದೂ ಸೇರಿಕೊಂಡಿದೆ. ದೂರದಿಂದ ಭಾಷೆ ಬರದ ವಿದೇಶೀ ಪ್ರಯಾಣಿಕರ ಪರ್ಸ್ ಒಂದನ್ನು ನಮ್ಮೂರಿನ ನಿಪುಣ ಪಿಕ್‌ಪಾಕೇಟ್ ತಜ್ಞರು ಏಮಾರಿಸಿಕೊಂಡು ಹೋದರೆ ಆ ಪ್ರಯಾಣಿಕರನ್ನು ರಕ್ಷಿಸುವುದು, ಪ್ರವಾಸಿಗರ ಆಸಕ್ತಿಗಳನ್ನು ಬೆಳೆಸುವುದೂ ನಮ್ಮ ಕರ್ತವ್ಯವೆಂಬುದನ್ನು ಜನಸಾಮಾನ್ಯರಿಗೆ ಮನನ ಮಾಡಿಕೊಡುವುದು ಹೇಗೆ?

ಭಾರತವನ್ನು ಸಿಂಗಪುರಕ್ಕೋ ಮತ್ಯಾವುದೋ ದೇಶಕ್ಕೆ ಹೋಲಿಸಿಕೊಳ್ಳುವುದಕ್ಕಿಂತ ಭಾರತದ ಇತರ ರಾಜ್ಯಗಳಲ್ಲಿ ಬಳಕೆಗೆ ಬಂದ ಹಾಗೂ ಯಶಸ್ವಿಯಾದ ತಂತ್ರಗಳನ್ನು ಬಳಸಿ ನಮ್ಮಲ್ಲಿಯೂ ವ್ಯವಸ್ಥಿತವಾದ ಪ್ರವಾಸೋದ್ಯಮವನ್ನು ಹುಟ್ಟು ಹಾಕಲು ಬೆಳೆಸಲು ಮುತ್ಸದ್ದಿಗಳು ಬೇಕು, ಸ್ಥಳೀಯ ನಾಗರಿಕರ ಕಷ್ಟ ಕಾರ್ಪಣ್ಯಗಳು ಎಂದಿಗೂ ಇರುವವೇ, ಈ ಪ್ರವಾಸಿಗರು ತರಬಹುದಾದ ಬಿಸಿನೆಸ್ ಅನ್ನು ಪ್ರತಿಯೊಬ್ಬರಿಗೂ ತಿಳಿಸಿ ಲೋಕಲ್ ಮಟ್ಟದಲ್ಲಿ ಪ್ರವಾಸಿಗರ ಹೆಚ್ಚಳದಿಂದಾಗುವ ಅನುಕೂಲಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವುದು ಮೊಟ್ಟ ಮೊದಲ ಹೆಜ್ಜೆಯಾಗಬೇಕು. ಯಾವುದೇ ಸರ್ಕಾರ ಬಂದರೂ ಜನಪರ ಯೋಜನೆಗಳ ಯಾದಿಯಲ್ಲಿ ಪ್ರವಾಸೋದ್ಯಮವನ್ನೂ ನಿಲ್ಲಿಸಬೇಕು, ಜೊತೆಗೆ ಪ್ರವಾಸೀ ಕೇಂದ್ರಗಳು ಮುಖ್ಯವಾಗಿ ಉಳಿದೆಲ್ಲೆಡೆ ಹಬ್ಬಿರುವ ರಸ್ತೆಜಾಲವನ್ನು ಅಭಿವೃದ್ಧಿಗೊಳಿಸುವ ಧೀಮಂತ ಯೋಜನೆಗಳು ಬರಬೇಕು. ಪ್ರವಾಸಿಗರಿಗೆ ಸಹಾಯ ಮಾಡುವ ವಾಲಂಟರಿ ಸಂಸ್ಥೆಗಳಿಂದ ಹಿಡಿದು, ಪ್ರವಾಸಿಗರ ಮಟ್ಟವನ್ನು ’ಅಳೆ’ದು ಅನುಕೂಲ/ಅನಾನುಕೂಲವನ್ನು ಕೂಲಂಕಷವಾಗಿ ಯೋಚಿಸುವ ಬುದ್ಧಿಜೀವಿಗಳೂ, ಜೊತೆಗೆ ಪ್ರವಾಸಿಗರಿಗೆ ಕಂಟಕಗಳನ್ನೊಡ್ಡುವ ಪ್ರತಿಯೊಬ್ಬರನ್ನೂ ಕಾನೂನಿಗೆ ಸಿಲುಕಿಸುವ ವ್ಯವಸ್ಥೆಯೂ ಬೆಳೆಯಬೇಕು.

ಸ್ವಾತಂತ್ರ್ಯ ಬಂದು ಐದು ದಶಕಗಳು ಸಂದರೂ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿದ್ದರೂ, ಜನ ಸಾಮಾನ್ಯರಲ್ಲಿ ನಗರೀಕರಣ ಮನೋಭಾವನೆ ಬೆಳೆದಂತೆ ವಿಶ್ವದ ಪ್ರತಿಯೊಂದು ಹಳ್ಳಿಯೂ ಟೆಕ್ನಾಲಜಿಯಿಂದ ಆವೃತ್ತವಾದಂತೆ ಪ್ರವಾಸೋದ್ಯಮದ ಬೆಳವಣಿಗೆ ಕರ್ನಾಟಕದಂತಹ ರಾಜ್ಯಗಳಿಗೆ ಸಹಜವಾಗಬೇಕು. ’ಅಯ್ಯೋ, ನಮ್ಮ ಸಮಸ್ಯೆಗಳಿಗೆಲ್ಲ ಮೊದಲು ಉತ್ತರ ಸಿಗಲಿ!’ ಎನ್ನುವ ಮನೋಭಾವವನ್ನು ಬಿಟ್ಟು ಮೂಲ ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಆಧುನಿಕತೆಯನ್ನು ಸ್ವಾಗತಿಸುವ ಔದಾರ್ಯ ಹುಟ್ಟಲಿ. ಕೇರಳಿಗರು ಮಾಡಿದ್ದಾರೆ, ರಾಜಸ್ತಾನದವರು ಮಾಡಿದ್ದಾರೆ ಎನ್ನುವುದಕ್ಕಿಂತಲೂ ನಮ್ಮಲ್ಲೂ ಪ್ರವಾಸೋದ್ಯಮಕ್ಕೆ ಲಾಯಕ್ಕಾದ ಸೌಂದರ್ಯವಿದೆ ಸೊಬಗಿದೆ ಎನ್ನುವ ಮನೋಭಾವ ಬೆಳೆದು ಅದರಿಂದ ನಾಡಿನ ಆದಾಯ ಹೆಚ್ಚಲಿ. ದೂರದ ಜೋಗ ಹಂಪೆಗಳು ಹಾಗಿರಲಿ ಬೆಂಗಳೂರಿಗೆ ವರ್ಷಕ್ಕೆ ಬಂದು ಹೋಗುವ ಸಾವಿರಾರು ಜನರನ್ನು ಹತ್ತಿರದ ಮೈಸೂರಿಗೆ ಮೈಸೂರಿನ ಅರಮನೆಗೆ ಪ್ರವಾಸಿಗಳಾಗಿ ಕರೆತರಲು ಏನೇನೆಲ್ಲವನ್ನು ಮಾಡಬಹುದು? ಹಾಗೆ ಮೈಸೂರಿಗೆ ಬಂದವರನ್ನು ಒಳನಾಡಿಗೆ ಕರೆದುಕೊಂಡು ಹೋಗಲು ಹಾಸನ-ಶ್ರವಣಬೆಳಗೊಳ-ಹಳೇಬೀಡು-ಚಿಕ್ಕಮಗಳೂರು-ಶಿವಮೊಗ್ಗ ಮೂದಲಾದವನ್ನು ತೋರಿಸಲು ಯಾವ ತಂತ್ರವನ್ನು ಅನುಸರಿಸಬಹುದು? ಇದಕ್ಕೂ ಮಿಗಿಲಾಗಿ ಉತ್ತರ ಕರ್ನಾಟಕದ ಹಲವು ರಮಣೀಯ ಸ್ಥಾನಗಳಿಗೆ ಪ್ರವಾಸಿಗರನ್ನು ಕೊಂಡೊಯ್ಯುವುದು ಹೇಗೆ? ಕೇರಳಿಗರು ಮಾನ್ಸೂನನ್ನೇ ದೊಡ್ಡ ಸೇಲ್ಸ್ ಪಾಯಿಂಟ್ ಮಾಡಿಟ್ಟುಕೊಂಡು ತಮ್ಮ ಪ್ರವಾಸಿ ಸಂಬಂಧಿಸಿದ ವೆಬ್‌ಸೈಟುಗಳಲ್ಲಿ ವೀದೇಶಿಯರನ್ನು ಕೈ ಬೀಸಿ ಕರೆಯುತ್ತಿದ್ದಾರೆ - ಪಕ್ಕದ ರಾಜ್ಯಕ್ಕೆ ಬಂದವರನ್ನು ನಾವೂ ಆಮಂತ್ರಿಸೋಣವೇ? ಅಥವಾ ನಮ್ಮ ತಂತ್ರ ’ದೂರದೃಷ್ಟಿ’ಗಳೇ ಬೇರೆಯವೋ?