Showing posts with label ಪೌರತ್ವ. Show all posts
Showing posts with label ಪೌರತ್ವ. Show all posts

Wednesday, April 22, 2020

ನನ್ನ ದೇಶ ನನ್ನ ಜನ

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ|
ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು|

ನಮ್ಮ ದೇಶದಲ್ಲಿ ಒಂದು ಕೋಮಿನವರು ವೈರಸ್ ಸೋಂಕನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿದ್ದಾರೆ... ಇಡೀ ಪ್ರಪಂಚವೇ ವೈರಸ್‌ ದೆಸೆಯಿಂದ ನಲುಗುತ್ತಿದ್ದರೆ ಅದನ್ನು ಕೆಲವರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ... ನಮ್ಮ ಯುವಕ-ಯುವತಿಯರು ಪಾಕಿಸ್ತಾನಕ್ಕೆ ಜೈಕಾರ ಹಾಕುವುದನ್ನು ತಮ್ಮ ಹಕ್ಕು ಎಂದುಕೊಂಡಿದ್ದಾರೆ... ಎಂದೆಲ್ಲ ಮಾಧ್ಯಮಗಳಲ್ಲಿ ಓದಿದಾಗ ಚೆನ್ನವೀರ ಕಣವಿಯವರ ಈ ಹಾಡು ನೆನಪಿಗೆ ಬಂತು.  ಇನ್ನೂ ಕೇವಲ ಎಪ್ಪತ್ತಮೂರು ವರ್ಷಗಳನ್ನು ಕಳೆದ ನಮ್ಮ "ಸ್ವಾತಂತ್ರ್ಯ" ನಮ್ಮನ್ನು ಈ ಸ್ಥಿತಿಗೆ ತಂದಿದೆ.  ಇನ್ನೊಂದಿನ್ನೂರು ವರ್ಷಗಳಲ್ಲಿ ನಮ್ಮ ಯುವ ಜನರ "ದೇಶಭಕ್ತಿ" ಇದೇ ರೀತಿಯಲ್ಲಿ ಮುಂದುವರೆದು, ನಮ್ಮೆಲ್ಲರ ದೇಶ ಪ್ರೇಮ, ವಿಶ್ವಾಸ, ಒಗ್ಗಟ್ಟು, ಭಾವೈಕ್ಯತೆ, ಘನತೆ ಇವೆಲ್ಲವೂ ಏನಾಗಬಹುದು ಎಂದು ಯೋಚಿಸಿದಾಗ ನಿಜವಾಗಿಯೂ ಬೆನ್ನ ಹುರಿಯಲ್ಲಿ ಕಂಪನವಾಯಿತು.  ಇಂದಿನ ಯುವಕರೇ ಮುಂದಿನ ಪ್ರಜೆಗಳು, ನಾಳಿನ ಭಾರತದ ಭವಿತವ್ಯರು - ಎಂದೆಲ್ಲ ಯೋಚಿಸಿಕೊಂಡಾಗ ಹೆದರಿಕೆಯ ಜೊತೆಗೆ, ಖೇದವೂ ಒಡಮೂಡಿತು.

***
1947ರ ಸ್ವಾತ್ರಂತ್ರ್ಯ ನಿಜವಾಗಿಯೂ ನಮ್ಮನ್ನು ಒಂದುಗೂಡಿಸಿತೇ? ಬ್ರಿಟೀಷ್ ಮತ್ತು ಇತರ ವಸಾಹತುಶಾಹಿಗಳ ಅಧಿಕಾರ ಅವಧಿ ಇರದೇ ಇರುತ್ತಿದ್ದರೆ ಇಂದಿನ ನಮ್ಮ ಅಖಂಡ ಭಾರತ ಹೇಗಿರುತ್ತಿತ್ತು? ಬ್ರಿಟೀಷರ ಭಾಷೆ ನಮ್ಮನ್ನು ಒಂದುಗೂಡಿಸಿತೇ? ಅವರ ಆಚಾರ-ವಿಚಾರ ಹಾಗೂ ನಡೆವಳಿಕೆಗಳು ನಮ್ಮನ್ನು ಮುಂದುವರೆದವರನ್ನಾಗಿ ಮಾಡಿದವೇ? ಎಪ್ಪತ್ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂಗ್ರಾ?ಮದ ಸಮಯದಲ್ಲಿ ಮಾಹಿತಿ ಇರದಿದ್ದರೂ ಕೋಟ್ಯಾಂತರ ಮಂದಿ ಬ್ರಿಟೀಷರ ವಿರುದ್ಧ ಹೋರಾಡಿ ತಂದು ಕೊಟ್ಟ ಈ ಸ್ವಾಂತಂತ್ರ್ಯಕ್ಕೆ ಇಂದು ಅಂಗೈಯಲ್ಲಿ ಮಾಹಿತಿ ಸಿಗುವ ಅನುಕೂಲದ ಸಮಯದಲ್ಲಿ ಯುವ ಜನತೆಯಿಂದ ಅದಕ್ಕೇಕೆ ಕಡಿವಾಣ ಬೀಳುತ್ತಿದೆ? ದೇಶದ ಸಹನೆಯನ್ನೇಕೆ ಕೆಲವರು ಪರೀಕ್ಷಿಸುವಂತಾಗಿದೆ?  ನಿಜವಾಗಿಯೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆಯೇ? ಹಾಗಿದ್ದರೆ ಅದರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ?

***

ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ, ಇಸ್ಲಾಂ ಮೂಲದ ಜೊತೆಗೆ ಮಧ್ಯ ಪ್ರಾಚ್ಯ ನೆರೆಹೊರೆಯ ಸಂಪ್ರದಾಯವನ್ನು ಮೈವೆತ್ತ ನೆರೆಯ ಪಾಕಿಸ್ತಾನ 1947ರಿಂದಲೂ ಬಡರಾಷ್ಟ್ರವಾಗೇ ಮುಂದುವರೆದಿದೆ.  ಒಂದು ಕಾಲದಲ್ಲಿ ತನ್ನಲ್ಲಿ ಬೆಳೆಯುವ ಹತ್ತಿಯನ್ನು ಸಂಸ್ಕರಿಸುವ ಕೈಗಾರಿಕೆಯೂ ಇಲ್ಲದೆ ಒಂದು ಸಣ್ಣ ಸೂಜಿಯಿಂದ ಹಿಡಿದು ಕಾರಿನವರೆಗೂ ಹೊರ ರಾಷ್ಟ್ರಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡು ತನ್ನ ಆಂತರಿಕ ಸಂಘರ್ಷಗಳನ್ನು ಒಂದು ಕಡೆ ಹತ್ತಿಕ್ಕಲೂ ಆಗದೆ ಬಚ್ಚಿಡಲೂ ಆಗದೆ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನ.  ಅನೇಕ ಮುತ್ಸದ್ದಿಗಳು ಹುಟ್ಟಿಬಂದ ನೆಲದಲ್ಲೇ ಇಸ್ಲಾಂ ಪ್ರವಾದಿಗಳು ಜನರ ಮನದಲ್ಲಿ ಸೇಡು, ಕಿಚ್ಚಿನ ಕ್ರಾಂತಿಯನ್ನು ಬಿತ್ತುತ್ತಾ ಬಂದರು.  ಭಾರತವನ್ನು ದ್ವೇಷಿಸುವುದೇ ಪ್ರಣಾಳಿಕೆಯೆಂಬಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಪಕ್ಷಗಳು ಹುಟ್ಟಿದವು.  ಅವೇ ಮುಂದೆ ಭಯೋತ್ಪಾದಕ ಸಂಘಟನೆಗಳಾದವು.  ಅನೇಕ ಮಿಲಿಟರಿ ಕ್ಯೂ (ರಕ್ತಪಾತ) ಹಾಗೂ ಅನೇಕ ಭ್ರಷ್ಟಾಚಾರದ ಅಧೋಗತಿಯಲ್ಲಿ ದೇಶ ಹಾಳಾಗಿ ಹೋಯಿತು.  ಒಂದು ಕಾಲದಲ್ಲಿ ವಿದೇಶೀ ಸಹಾಯವಿಲ್ಲದಿದ್ದರೆ ಯಾವತ್ತೋ ಭೂಪಟದಲ್ಲಿ ನಾಪತ್ತೆಯಾಗಿ ಹೋಗುವಂತಿದ್ದ ಪಾಕಿಸ್ತಾನಕ್ಕೆ ಬಲವಾಗಿ ಸಿಕ್ಕಿದ್ದು ನ್ಯೂಕ್ಲಿಯರ್ ಶಕ್ತಿ.  ನವದೆಹಲಿಯಿಂದ ಕೇವಲ ಐನೂರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಅಸ್ಥಿರತೆಯನ್ನು ನಾವು ಬಹಳ ಸೂಕ್ಷವಾಗಿ ನೋಡಿಕೊಂಡು ಬರುವಂತ ಸ್ಥಿತಿ ಇಂದಿಗೂ ಇದೆ.  ಯಾವುದೋ ಧಾರ್ಮಿಕ ಮೂಲಭೂತವಾದಿಗೆ ಈ ಅಣ್ವಸ್ತ್ರವೇನಾದರೂ ದೊರೆತರೆ ಅದು ಪ್ರಪಂಚದ ವಿನಾಶಕ್ಕೆ ಕಾರಣವಾಗಬಹುದು!

ಇಂತಹ ಪಾಕಿಸ್ತಾನವನ್ನು ನಮ್ಮಲ್ಲಿನ ಕೆಲವು ಯುವಕ-ಯುವತಿಯರು ಬೆಂಬಲಿಸುತ್ತಾರೆ.  ಇಂತಹ ಪಾಕಿಸ್ತಾನಕ್ಕೆ ಜಯಕಾರ ಹಾಕುತ್ತಾರೆ ಎಂದು ಕೇಳುತ್ತಲೇ ಹೊಟ್ಟೆ ತೊಳಸಿದಂತಾಗುತ್ತದೆ.  ಈ ಯುವಕ-ಯುವತಿಯರಿಗೆ ನಿಜವಾದ ಪಾಕಿಸ್ತಾನದ ಅರಿವೇ ಇಲ್ಲ.  ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆಯೋ, ಯಾವ ದೇಶದಲ್ಲಿ ಮೈನಾರಿಟಿ ಜನರ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೋ, ಯಾವ ದೇಶದಲ್ಲಿ ಧರ್ಮದ ಹೊರೆಯನ್ನು ಬಲವಂತವಾಗಿ ಹೇರಲಾಗುತ್ತದೆಯೋ - ಅಂತಹ ದೇಶದ ಮೇಲೆ ನಮ್ಮ ದೇಶದಲ್ಲಿ ನಿಜವಾದ ಸ್ವಾತಂತ್ರ್ಯದ ಉಸಿರಿನ ಬೆಲೆ ಗೊತ್ತಿರದ ಯುವಕ-ಯುವತಿಯರ ಮಮಕಾರ ಹೆಚ್ಚಾಗಲು ಏನು ಕಾರಣ, ಅದರ ಮೂಲ ನೆಲೆಯೇನು ಎಂದು ಗಂಭೀರವಾಗಿ ಯೋಚನೆ ಮಾಡಬೇಕಾಗುತ್ತದೆ.

ಪಾಕಿಸ್ತಾನದ ಪರವಾಗಿ ಕೂಗಿದ ಜೆ.ಎನ್.ಯು. ವಿದ್ಯಾರ್ಥಿಗಳು ಎಲ್ಲರೂ ಮುಸಲ್ಮಾನರಲ್ಲ.  ಕಾಶ್ಮೀರದಿಂದ ಕೇರಳದವರೆಗೆ ಒಂದು ರೀತಿಯಲ್ಲಿ ಯುವಜನತೆಯ ಬ್ರೈನ್‌ವಾಶ್ ಮಾಡಲಾಗುತ್ತಿದೆ.   ಚೀನಾದಲ್ಲಿ ಹುಟ್ಟಿ ಅಲ್ಲಿ ಪ್ರಬಲವಾಗಿ ಬೆಳೆದ ಮಾವೋಯಿಸಂ ನಮ್ಮ ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತದೆ.  ಸರ್ಕಾರದ ವಿರುದ್ಧ, ಪ್ರಜಾಸತ್ತತೆಯ ವಿರುದ್ಧ ಧ್ವನಿ ಎತ್ತುವುದು ಎಂದರೆ ಪಕ್ಕದ ಪಾಕಿಸ್ತಾನವನ್ನು ಹೊಗಳುವುದು ಎಂದಾಗಿ ಹೋಗಿಬಿಟ್ಟಿದೆ. ನಮಗೆ  ಸ್ವಾತಂತ್ರ್ಯ ಸಿಕ್ಕ ಮೊದಲ ಐವತ್ತು ವರ್ಷಗಳಲ್ಲಿ ಈ ಸ್ಥಿತಿ ಇರಲಿಲ್ಲ... ನಾವೆಲ್ಲ ಕಂಡ ಎಂಭತ್ತರ, ತೊಂಭತ್ತರ ದಶಕದ ಭಾರತದಲ್ಲಿ, ನಮ್ಮ ಶಾಲಾದಿನಗಳಲ್ಲಿ ಒಂದು ದಿನವೂ ಯಾರೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಿಲ್ಲ... ನಾವೆಲ್ಲ  ಅನೇಕ ಜನವಿರೋಧಿ ನೀತಿಗಳ ವಿರುದ್ಧವೋ, ಕಾನೂನಿನ ಪರವಾಗಿಯೋ, ಅಥವಾ ರಾಜ್ಯ-ದೇಶ-ಭಾಷೆಗಳ ಪರವಾಗಿಯೋ ಸತ್ಯಾಗ್ರಹ, ಸಂಗ್ರಾಮಗಳನ್ನು ಮಾಡಿದ್ದೇವೆ.  ಆದರೆ, ಇಂದಿನ ಯುವಜನತೆಯ ದೇಶದ್ರೋಹದ ಹಾದಿಯನ್ನು ಎಂದೂ ಹಿಡಿದಿದ್ದಿಲ್ಲ.  ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನವೂ ರಾಷ್ಟ್ರಗೀತೆಯನ್ನು ಹೇಳುತ್ತಿದ್ದೆವು, ಧ್ವಜವಂದನೆಯನ್ನು ಮಾಡುತ್ತಿದ್ದೆವು.  ನಮ್ಮೆಲ್ಲರಿಗಿಂತ ದೇಶ ಯಾವತ್ತೂ ದೊಡ್ಡದಾಗಿತ್ತು.  ಆದರೆ ಇಂದಿನ ಯುವಜನತೆಯ ಮನಃಸ್ಥಿತಿಯನ್ನು ನೋಡಿದಾಗ ಅದೇ ಭಾವನೆ ಖಂಡಿತ ಒಡಮೂಡುವುದಿಲ್ಲ.
ನನ್ನ ದೇಶ ಉನ್ನತವಾದುದು.  ಜನರಿಗೆ ನಿಜವಾಗಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬದುಕನ್ನು ಕಲ್ಪಿಸಿಕೊಟ್ಟಿದೆ.  ಹಾಡು ಹಗಲೇ ದರೋಡೆ, ಅತ್ಯಾಚಾರ, ಕೊಲೆ-ಸುಲಿಗೆ ಮಾಡಿದವರೂ ಸಂವಿಧಾನದ ವಿಧಿಯ ಪ್ರಕಾರ ಶಿಕ್ಷೆಗೆ ಗುರಿಪಡುತ್ತಾರೆ.  ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿವೆ.  ಆದರೆ ಜನರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವೇ ಹಕ್ಕುಗಳ ಮಗ್ಗುಲಲ್ಲಿರುವ ಕರ್ತವ್ಯಗಳನ್ನು ಮರೆಯುತ್ತಾರೆ.  ತಮ್ಮ ಮೈಕ್ರೋ ಫ್ಯಾಮಿಲಿಗಳ ಸಂತೋಷಕ್ಕಾಗಿ ದೊಡ್ಡ ದೇಶದ ಘನತೆ ಗೌರವವನ್ನು ಮರೆಯುತ್ತಾರೆ.  ರಾಷ್ಟ್ರ ಯಾವತ್ತೂ ಸೆಕೆಂಡರಿಯಾಗುತ್ತದೆ, ತಮ್ಮ ಸ್ವಾರ್ಥ ದೊಡ್ಡದಾಗುತ್ತಾ ಹೋಗುತ್ತದೆ.

ಎಪ್ಪತ್ತು ವರ್ಷಗಳ ನಂತರ ನಮ್ಮ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೇ ಇರುವಾಗ, ಈ ಎದೆಕರಗದ ದೇಶಭಕ್ತಿಯ ಜನ ಯಾವ ರೀತಿಯಲ್ಲಿ ದೇಶವನ್ನು ಮುಂದೆ ತಂದಾರು? ಇನ್ನು ನೂರಿನ್ನೂರು ವರ್ಷಗಳಲ್ಲಿ ನಮ್ಮ ದೇಶ ನಮ್ಮ ದೇಶವಾಗೇ ಇರುವುದೋ ಅಥವಾ ಮೊದಲಿನ ಹಾಗೆ ಹಂಚಿಕೊಂಡು ತುಂಡು ತುಂಡಾಗುವುದೋ ಎಂದು ಸಂಕಟವಾಗುತ್ತದೆ.


 




















ಭಾರತ ದೇಶವನ್ನು ಹಳಿಯುವವರು ತಮ್ಮ ದೇಶದ ಬಗ್ಗೆ ಒಂದಿಷ್ಟು ಕನಿಷ್ಠ ಮಾಹಿತಿಯನ್ನಾದರೂ ತಿಳಿದುಕೊಂಡು ತಮ್ಮ ವಾದವನ್ನು ಮಂಡಿಸಿದ್ದರೆ ಚೆನ್ನಾಗಿತ್ತು.  ಒಂದು ದೇಶದ ನಿಜವಾದ ಸ್ವಾತಂತ್ರ್ಯದ ಅರಿವಾಗುವುದು ಆ ಸ್ವಾತ್ಯಂತ್ರ್ಯ ಇಲ್ಲವಾದಾಗಲೇ!
(ಮಾಹಿತಿ ಕೃಪೆ: ವಿಕಿಪೀಡಿಯ)

Tuesday, August 12, 2008

ಎದೆಕರಗದ ದೇಶಭಕ್ತಿ, ನೋವಿರದ ನಾಗರಿಕತೆ

ಬೀಜಿಂಗ್ ಓಲಂಪಿಕ್ಸ್ ಪಂದ್ಯಾವಳಿಗಳು ವಿಶ್ವದ ಉದ್ದಗಲದ ಆಟೋಟಗಳನ್ನು ಅಮೇರಿಕನ್ ಟಿವಿ ಪರದೆಯ ಮೇಲೆ ಮೂಡಿಸುತ್ತವೆ ಎಂದೇ ಹೇಳಬೇಕು. ನನಗೆ ಆಶ್ಚರ್ಯವಾಗುವ ಹಾಗೆ ಕೆಲವು ಕಡೆ ಸಾಕರ್ ಎನ್ನುವ ಬದಲು ಫುಟ್‌ಬಾಲ್ ಎಂದು ಮಾಧ್ಯಮಗಳು ಬಳಸುವುದನ್ನು ನೋಡಿ ಸೋಜಿಗವಾಗಿತ್ತು. ಇನ್ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಈ ಅವಕಾಶ ಈ ಹಿಂದೆ ಎಂದೂ ಬಂದಿರಲಾರದು. ಅಲ್ಲಲ್ಲಿ ಭಾರತೀಯ ಕ್ರೀಡಾಳುಗಳು ಭಾಗವಹಿಸಿದ ತುಣುಕುಗಳನ್ನು ಬಿಟ್ಟರೆ ಇಲ್ಲಿನ ಪ್ರೈಮ್ ಟೈಮ್‌ನಲ್ಲಿ ನನಗೆ ಸಿಗುತ್ತಿರುವುದು ಅಮೇರಿಕನ್ ತಂಡಗಳು ಭಾಗವಹಿಸಿದ ಸ್ಪರ್ಧೆಗಳು ಮಾತ್ರ.

ಆಟವನ್ನು ನೋಡುವುದೂ ಒಂದು ರೀತಿಯ ಮನೋರಂಜನೆಯಂತೆ, ಯಾವೊಂದು ಟೀಮ್ ಇವೆಂಟ್ ಅನ್ನು ನೋಡಿದರೂ ವೀಕ್ಷಕನ ಮನಸ್ಸಿನಲ್ಲಿ ಒಂದಲ್ಲ ಒಂದು ತಂಡ ಅಥವಾ ಸ್ಪರ್ಧಿಯ ಪರವಾಗಿ ಆಲೋಚಿಸದೆ ಇರುವುದು ಕಷ್ಟ. ನಾನು ಇಲ್ಲಿಯವರೆಗಿನ ಕ್ರೀಡೆಗಳನ್ನು ನೋಡಿದಂತೆ ಮನಸ್ಸು ಒಂದಲ್ಲ ಒಂದು ಸ್ಪರ್ಧಿಯನ್ನು ಬೆಂಬಲಿಸತೊಡಗುತ್ತದೆ, ಕೆಲವೊಮ್ಮೆ ಅವರು ನನಗೆ ಈವರೆಗೆ ತಿಳಿಯದ ಯಾವುದೋ ದೇಶದವರೂ ಆಗಿರಬಹುದು. ಅದೇ ಭಾರತೀಯರು ಸ್ಪರ್ಧಿಸುವ ಕ್ರೀಡೆಗಳಲ್ಲಿ ನನ್ನ ಮೈಮಸ್ಸುಗಳೆಲ್ಲ ಭಾರತೀಯರ ಪರವೇ.

1932 ರ ಲಾಸ್ ಎಂಜಲೀಸ್ ಒಲಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಅಮೇರಿಕವನ್ನು 24-1 ಗೋಲುಗಳಿಂದ ಸೋಲಿಸಿದ ಕ್ಷಣಗಳು ಮತ್ತೆ ಮರುಕಳಿಸಲಾರವು. ಹಾಗೆ ಏನಾದರೂ ಭಾರತೀಯ ತಂಡ ಅಮೇರಿಕನ್ ತಂಡವನ್ನು ಎದುರಿಸಿ ಆಡುತ್ತಿದೆಯೆಂದರೆ ನನ್ನೊಳಗಿನ ನೋಡುಗ ಯಾವ ದೇಶವನ್ನು ಪ್ರತಿಬಿಂಬಿಸುತ್ತಾನೆ, ಯಾವ ದೇಶವನ್ನು ಪ್ರೋತ್ಸಾಹಿಸುತ್ತಾನೆ ಎಂದು ಊಹಿಸಿಕೊಂಡಾಕ್ಷಣ ನಮ್ಮಂತಹವರು ವಲಸೆ ಬಂದು ಮತ್ತೊಂದು ದೇಶದ ನಾಗರಿಕತೆಯನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಅದು ಒಂದು ಪಾಸ್‌ಪೋರ್ಟ್ ಕೊಟ್ಟು ಮತ್ತೊಂದು ಪಾಸ್‌ಪೋರ್ಟ್ ಅನ್ನು ಪಡೆದಷ್ಟು ಸುಲಭವಂತೂ ಅಲ್ಲ ಎನ್ನಿಸಿತು. ನಾವು ಹುಟ್ಟಿ ಬೆಳೆದ ದೇಶ, ನಮ್ಮಲ್ಲಿ ಹುದುಗಿದ ನಮ್ಮ ದೇಶದ ಇತಿಹಾಸ, ಪರಂಪರೆ ಇವುಗಳನ್ನೆಲ್ಲ ಒಂದೇ ಉಸಿರಿನಲ್ಲಿ ಬದಿಗೊತ್ತಲು ಪಾಸ್‌ಪೋರ್ಟ್ ಅಂತಹ ಪುಸ್ತಕಗಳಿಗೆ ಸಾಧ್ಯವಿರಲಾರದು.

ನಾವು ಇದ್ದಲ್ಲಿ ಹೋದಲ್ಲಿ ನಮ್ಮತನವನ್ನು ಉಳಿಸಿ-ಬೆಳೆಸಿಕೊಳ್ಳುವುದು ದೇಶದ್ರೋಹಿತನವಂತೂ ಅಲ್ಲ. ನಾವು ನಮ್ಮಲ್ಲಿಯ ಕ್ರೀಡೆ-ಕೌಶಲ್ಯಗಳನ್ನು ಆಡಿ ಅರಿತಂತೆ ಇಲ್ಲಿಯ ಕ್ರೀಡೆ ಅವುಗಳ ರೀತಿ ನೀತಿಯನ್ನು ಬಲ್ಲವರಲ್ಲ. ನಮಗೆ ಗೊತ್ತಿರುವ ಕ್ರಿಕೇಟ್ ಪಂದ್ಯಗಳ ನಿಯಮಗಳಷ್ಟು ಸುಲಭವಾಗಿ ಇಲ್ಲಿಯ ಬೇಸ್‌ಬಾಲ್ ಸೂತ್ರಗಳು ನಮ್ಮನ್ನು ಸುತ್ತುವರಿಯಲಾರವು. ನಮಗೆ ನಮದೇ ಆದ ಬ್ಯಾಸ್ಕೆಟ್ ಬಾಲ್, ಅಮೇರಿಕನ್ ಫುಟ್‌ಬಾಲ್ ಹಾಗೂ ಬೇಸ್‌ಬಾಲ್‌ಗಳ ಆಟಗಾರ ಪ್ರತಿಭೆಗಳ ಪಟ್ಟಿ ಇದ್ದರೂ ನಮ್ಮ ಕ್ರಿಕೆಟ್ ಆಟಗಾರರ ಹೆಸರುಗಳಷ್ಟು ಉದ್ದ ಪಟ್ಟಿ ಬೆಳೆಯಲಾರದು - ಪಟೌಡಿ, ಬೇಡಿ, ಮದನ್‌ಲಾಲ್, ಕಿರ್ಮಾನಿ, ಚಂದ್ರಶೇಖರ್, ಗವಾಸ್ಕರ್ ಅಲ್ಲಿಂದ ಹಿಡಿದು ತೆಂಡೂಲ್ಕರ್, ಧೋನಿ, ದ್ರಾವಿಡ್‌, ಕುಂಬ್ಳೆವರೆಗೆ ಬೆಳೆಯಲಾರದು, ಕ್ರಿಕೆಟ್ ಆಡುವ ಇತರೆ ಅಂತಾರಾಷ್ಟ್ರೀಯ ದೇಶಗಳ ಪೈಕಿ ಪ್ರತಿಯೊಂದು ದೇಶದ ಕೊನೆಪಕ್ಷ ಐದು ಆಟಗಾರರನ್ನು ಗುರುತಿಸುವ ನೆನಪು ಅಮೇರಿಕನ್ ಆಟಗಾರರ ಹೆಸರುಗಳನ್ನು ಉಳಿಸಿಕೊಳ್ಳಲಾರದು. ಮೊನ್ನೆ ಯಾರೋ ದಾನಕ್ಕೆ ಕೊಟ್ಟರೆಂದು ನ್ಯೂ ಯಾರ್ಕ್ Knicks ಬ್ಯಾಸ್ಕೆಟ್ ಬಾಲ್ ತಂಡದ ಟೋಪಿಯೊಂದನ್ನು ಹಾಕಿಕೊಂಡು ನ್ಯೂ ಯಾರ್ಕ್ ಸಿಟಿಯಲ್ಲಿ ತಿರುಗುತ್ತಿರುವಾಗ ಯಾರಾದರೂ ’Knicks ತಂಡದಲ್ಲಿ ನಿನ್ನ ಫೇವರೈಟ್ ಆಟಗಾರ ಯಾರು?’ ಎಂದು ಪ್ರಶ್ನಿಸಿದರೆ ಏನು ಉತ್ತರ ಹೇಳೋಣ ಎನ್ನಿಸಿ ಒಮ್ಮೆ ಹೆದರಿಕೆಯಾಗಿದ್ದಂತೂ ನಿಜ!

ಪೌರತ್ವ ಅನ್ನೋದು not just a status, rather it is status of mind. ಈ ವಾಕ್ಯವನ್ನು ಬೇಕಾದಷ್ಟು ರೀತಿಯಲ್ಲಿ ವಿವರಿಸಿಕೊಳ್ಳಬಹುದು. ನಾವು ಎಲ್ಲಿದ್ದರೇನು ಹೇಗಿದ್ದರೇನು ಭಾರತೀಯರಾಗಿಯೇ ಇರುತ್ತೇವೆ ಎನ್ನುವುದು ಒಂದು ಬಗೆಯಾದರೆ, ಒಮ್ಮೆ ಪೌರತ್ವದ ಸ್ಟೇಟಸ್ ಒಮ್ಮೆ ಬದಲಾದ ಮೇಲೆ ಅಫಿಷಿಯಲ್ ಆಗಿ ಹೊಸ ದೇಶವನ್ನು ಬೆಂಬಲಿಸೋದೇ ಅವರವರ ಕರ್ತವ್ಯ, ಹೀಗೆ ವಿಧವಿಧವಾಗಿ ನೋಡಬಹುದು. ಉದ್ಯೋಗ ಅನ್ನ-ನೀರು ಕೊಡುವ ದೇಶವೆಂದು ಅಮೇರಿಕವನ್ನು ಪ್ರೀತಿಸಿ ಗೌರವಿಸುವ ನನ್ನತನ ಅದೇ ಅಮೇರಿಕನ್ ಕ್ರೀಡಾಳುಗಳನ್ನು ಅಷ್ಟೇ ವಿಶ್ವಾಸದಿಂದ ನೋಡೋದಿಲ್ಲ, ಅವರನ್ನು ಹುರಿದುಂಬಿಸೋದಿಲ್ಲ. ಭಯೋತ್ಪಾದಕತನ-ದೇಶದ್ರೋಹ ಮೊದಲಾದ ಕಟ್ಟು ನಿಟ್ಟಾದ ಪದಗಳಿಗೆ ಸಿಗದ ವಿಶೇಷ ನಿಲುವು ನಮ್ಮಂತಹವರದ್ದು - ಜೊತೆಗೆ ನಾವು ಯಾರಿಗೂ ಯಾವ ತೊಂದರೆಯನ್ನೂ ಕೊಡೋದಿಲ್ಲ ಎನ್ನುವುದೂ ಮುಖ್ಯ. ಒಲಂಪಿಕ್ಸ್ ಪಂದ್ಯಗಳಲ್ಲಿ ಯಾವುದೋ ಬಡದೇಶದ ಸ್ಪರ್ಧಿ ವಿಶ್ವದ ಬಲಾಢ್ಯ ರಾಷ್ಟ್ರಗಳ ಎದುರು ಸೆಣೆಸಿ ಚಿನ್ನವನ್ನು ಪಡೆದಾಗ ಆ ಸ್ಪರ್ಧಿ ಹಾಗೂ ಆತನ ದೇಶವನ್ನು ನಾನು ಬೆಂಬಲಿಸೋದು ಅಮೇರಿಕದ ವಿರೋಧಿ ನಿಲುವುಗಳಿಂದಲಂತೂ ಅಲ್ಲವೇ ಅಲ್ಲ. ಅಮೇರಿಕದಂತಹ ಮುಂದುವರೆದ ದೇಶಗಳಲ್ಲಿ ಪ್ರತಿಭೆ ಇದ್ದವರಿಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಯಾವ ರೀತಿಯ ಬೆಲೆ, ಬೆಂಬಲ, ಅವಕಾಶಗಳು ದೊರಕುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು, ಅದೇ ಬಡದೇಶಗಳಲ್ಲಿ ಅಷ್ಟೊಂದು ಕೊರತೆಗಳ ನಡುವೆ ಒಬ್ಬ ಸ್ಪರ್ಧಿ ಎಲ್ಲರನ್ನೂ ಮೀರಿಸಿ ಮುಂದೆ ಬರುವುದು ನಿಜವಾಗಿಯೂ ದೊಡ್ಡದು ಎನ್ನುವ ಕಾರಣದಿಂದ ಅದು ಮನಸ್ಸಿಗೆ ಹತ್ತಿರವಾಗುತ್ತದೆ. ಈವರೆಗೆ ಭಾರತ ಗಳಿಸಿದ ಒಂದೇ ಒಂದು ಸ್ವರ್ಣ ಪದಕ ಅದಕ್ಕೆ ಸಂಬಂಧಿಸಿದ ಸುದ್ದಿ-ಚಿತ್ರಗಳು ನಮ್ಮವರು ಎಷ್ಟೋ ವರ್ಷಗಳ ನಂತರ ಗೆದ್ದರಲ್ಲ ಎನ್ನುವ ರೋಮಾಂಚನ ಉಂಟು ಮಾಡುತ್ತದೆ, ಈ ಮಾನಸಿಕ ನೆಲೆಗಟ್ಟಿಗೆ ಹೋಲಿಸಿದ್ದಲ್ಲಿ ಅಮೇರಿಕದವರು ಮೇಲಿಂದ ಮೇಲೆ ಗೆಲ್ಲುತ್ತಲೇ ಇರುವ ಪದಕಗಳು ಗೌಣವಾಗುತ್ತವೆ.

ನಮ್ಮಲ್ಲಿನ ಭಾರತೀಯತೆ ಎನ್ನೋದು ಬರೀ ಪಾಸ್‌ಪೋರ್ಟ್ ಎನ್ನುವ ಪುಸ್ತಕವಂತೂ ಅಲ್ಲ, ಅದಕ್ಕೂ ಮಿಗಿಲಾಗಿ ನಮ್ಮ ಚರ್ಮದ ಬಣ್ಣಕ್ಕಷ್ಟೇ ಸೀಮಿತವಾಗೂ ಇಲ್ಲ. ನಮ್ಮಲ್ಲಿನ ಸಂವೇದನೆಗಳು ಎಂದಿಗೂ ಭಾರತೀಯ ಸಂವೇದನೆಗಳು ಎನ್ನುವುದು ದೃಢವಾದಲ್ಲಿ ನಮ್ಮ ಸಂವಿಧಾನ ಬದ್ಧವಾದ ಗುರುತಿನ ಚೀಟಿ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದೂ ಮತ್ತೊಂದು ತರ್ಕವಾಗುತ್ತದೆ. ನಮ್ಮಲ್ಲಿನ ದೇಶಪ್ರೇಮ, ದೇಶಭಕ್ತಿ ಎನ್ನುವ ಭಾವನೆಗಳು, ತಳಮಳಗಳು ಅಮೇರಿಕದ ಪರ್ಲ್ ಹಾರ್ಬರ್ ನಂತಹ ಐತಿಹಾಸಿಕ ಘಟನೆಗಳಿಗೆ ಹೇಗಾದರೂ ಸ್ಪಂದಿಸಬಲ್ಲವು, ಅದೇ ಹತ್ತೊಂಭತ್ ನೂರಾ ಹತ್ತೊಂಭತ್ತರಲ್ಲಿ (1919) ಬ್ರಿಟೀಷ್ ಸರ್ಕಾರ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಎದೆ ನಡುಗುವಂತೆ ಮಾಡಿದ್ದನ್ನು ನಾವು ಮರೆಯುವುದಾರೂ ಹೇಗೆ?

ಯಾವ ನಾಗರಿಕತೆಯಲ್ಲಿ ನಾವು ನಮ್ಮನ್ನು ಕರಗಿಸಿಕೊಳ್ಳುವುದಿಲ್ಲವೋ, ಎಲ್ಲಿ ನೋವು-ನಲಿವುಗಳು ಐತಿಹಾಸಿಕವಾಗಿ ಒಬ್ಬನ ಮೈಮನಸ್ಸುಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅದು ಪುಸ್ತಕದ ಮಟ್ಟದಲ್ಲಿ ಮಾತ್ರ ಉಳಿಯುತ್ತದೆ. ಅದನ್ನು ಪೌರತ್ವ/ಸಿಟಿಜನ್‌ಶಿಪ್ ಎಂದೇನಾದರೂ ಕರೆದುಕೊಳ್ಳಿ ನಮ್ಮೊಳಗಿನ ಉಸಿರಿರುವವರೆಗೆ ’ವಂದೇ ಮಾತರಂ’ ಹಾಗೂ ’ಜನಗಣಮನ’ವನ್ನು ಮರೆಯದ ನಾವು ಮತ್ತೊಂದು ದೇಶದ ಹಕ್ಕು-ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸುವಷ್ಟರ ಮಟ್ಟಿಗೆ ಅಲ್ಲಿನ ಪೌರರಾಗುತ್ತೇವೆ ಎನ್ನುವುದು ನಿಜವೆನಿಸುತ್ತದೆ.