Showing posts with label ಸುಬ್ಬ. Show all posts
Showing posts with label ಸುಬ್ಬ. Show all posts

Wednesday, May 06, 2009

ಬೆಂಗಳೂರ್ ಹೋಯ್ತು ಬಫೆಲೋ ಬಂತು - ಡುಂ! ಡುಂ!

’ಲೋ, ಒಳ್ಳೇ ನಾಯ್ಕನನ್ನೇ ಆರ್ಸಿಕೊಂಡಿದ್ದೀರಿ ಕಣ್ರೋ!’ ಎಂದಿದ್ದು ಇನ್ಯಾರು ಅಲ್ಲ - ನಮ್ ಸುಬ್ಬ.
ಸುಮ್ನೇ ಕುಶಾಲಕ್ಕೆ ’ಹೆಂಗಿದ್ಯೋ?’ ಅಂತ ಫೋನ್ ಕಾಲ್ ಮಾಡಿದ್ರೆ ತಗಳಾಪ್ಪಾ ಪೂರ್ತಿ ರಾಮಾಯ್ಣನೇ ಶುರು ಹಚ್ಚಿಕೊಂಬಿಟ್ನಲ್ಲಾ!

ಮತ್ತೆ ಮುಂದುವರೆಸುತ್ತಾ, ’...ಬೆಂಗ್ಳೂರಿಗೂ ಬಫೆಲೋಗೂ ಎಲ್ಲಿಯ ಹೋಲಿಕೆ ಹೊಂದಾಣಿಕೆ, ಏನೋ ಕರಿಯರ ನಾಯ್ಕ ಅಂತ ಸುಮ್ನೇ ಇದ್ದಿದ್ದಕ್ಕೆ ಸಪೋರ್ಟ್ ಮಾಡಿದ್ದಕ್ಕೆ ತಂದ್ನಲ್ಲಪ್ಪಾ ಕಾಣಿ. ಒಂದಿಷ್ಟ್ ಜನ ಅವ್ನನ್ನ ಮುಸ್ಲಿಮ್ ಅಂತಾರೆ, ಒಂದಿಷ್ಟ್ ಜನ ಅವನನ್ನ ಬಿಳಿಯ ಅಂತಾರೆ, ಒಂದಿಷ್ಟು ಜನ ಅವನೇ ದೇವ್ರು ಅಂತ ಕೊಂಡಾಡ್ತಾರೆ, ಒಳ್ಳೇ ಬ್ರೂಸ್ ಆಲ್‌ಮೈಟ್ ಕಥೆ ಆಯ್ತು ನೋಡು!’ ಎಂದು ಸುಮ್ಮನಾದ.

’ಯಾರೋ ಮುಸ್ಲೀಮ್, ಅವನೋ ಚರ್ಚಿಗೆ ಹೋಗೋ ಒಳ್ಳೇ ಕ್ರಿಶ್ಚಿಯನ್ನ್ ಅಲ್ವೇ?’ ಎನ್ನೋ ಪ್ರಶ್ನೆಯನ್ನ ತಾಳಲಾರದೆ ತಾಳಿಕೊಂಡು,
’ಲೋ, ಹುಸೇನ್ ಅಂತ ಮಿಡ್ಲ್ ನೇಮ್ ಇಟ್ಟುಕೊಂಡು ಮಿಡ್ಲ್ ಈಸ್ಟ್ ನಲ್ಲಿ ಪಾಪ್ಯುಲ್ಲರ್ ಅಗೀರೊ ಬರಾಕ್ ಅಂದ್ರೆ ಏನ್ ಅಂತ ತಿಳುಕೊಂಡಿದೀಯಾ? ಬರಾಕ್‍ಗೆ ಬಹು ಪರಾಕ್! ಹಹ್ಹಹ್ಹ...’ ಎಂದು ದೊಡ್ಡದಾಗಿ ನಗಾಡಿದ.

’ಹ್ಞೂ, ಅದಿರ್ಲಿ, ಬೆಂಗ್ಳೂರಿನವರು ಏನಂತಾರೆ?’

’ಬೆಂಗ್ಳೂರಿಗೂ ಬಫೆಲ್ಲೋಗೂ ಏನು ತಾಳೆ ಗುರುವೇ? ವರ್ಷದ ಆರು ತಿಂಗಳು ಆರು ಅಡಿ ಸ್ನೋನಲ್ಲಿ ಮುಚ್ಚಿರೋ ನಗರಕ್ಕೂ ಸೌತ್ ಇಂಡಿಯನ್ ಸ್ವರ್ಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಈ ನನ್ ಮಕ್ಳು ನಮ್ಮಲ್ಲಿನ ರಸವನ್ನೆಲ್ಲ ಹೀರಿಕೊಂಡು ಈಗ ಸಿಪ್ಪೆ ಬಿಸಾಡಿದ ಹಾಗಾಯ್ತು. ನನ್ ಕೇಳಿದ್ರೆ ಔಟ್‌ಸೋರ್ಸಿಂಗ್ ವಿರುದ್ಧ ತಿರುಗಿ ಬಿದ್ದಿರೋ ಅಮೇರಿಕನ್ಸ್ ನೀತಿ ವಿರೋಧಿಸಿ ದೊಡ್ಡ ರ್ಯಾಲಿ ಆಗಬೇಕು. ಏನ್ ಆದ್ರೆ ಏನಂತೆ, ಇವೆಲ್ಲ ಕ್ವಾಣನ ಮುಂದೆ ಕಿನ್ನರಿ ಬಾರಿಸಿದಂಗೇ ಸೈ’.

’ಅಂದ ಹಾಗೆ, ನ್ಯೂ ಯಾರ್ಕ್ ರಾಜ್ಯದ ಬಫೆಲ್ಲೋಗೂ ಕಾಡು ಎಮ್ಮೆಗೂ ವ್ಯತ್ಯಾಸವಿದೆ ಗೊತ್ತಲ್ವಾ? ನಮ್ ನ್ಯೂಸ್ ಪೇಪರ್ರ್‌ಗಳು ಎಮ್ಮೆ-ಕ್ವಾಣ ಅಂತ ಬರೆಯೋಕ್ ಮುನ್ನ ಸ್ವಲ್ಪ ಯೋಚಿಸ್ಲಿ ಅಂತ ಹೇಳ್ದೆ ಅಷ್ಟೇ...’

’ಏನಾದ್ರೂ ಹಾಳಾಗ್ ಹೋಗ್ಲಿ ಬಿಡು, ಈಗಿನ ಕಾಲ್ದಲ್ಲಿ ನ್ಯೂಸ್ ಪೇಪರ್ ಓದೋರ್ ಯಾರು? ಎಲ್ಲರೂ ದಿವಾಳಿ ಆಗ್ಲಿ, ಅಡ್ವರ್‌ಟೈಸ್ ರೆವಿನ್ಯೂ ನಂಬಿಕೊಂಡಿರೋ ನ್ಯೂ ಯಾರ್ಕ್ ಟೈಮ್ಸ್ ಬಂಡವಾಳವೇ ಅಲುಗಾಡ್ತಾ ಇರುವಾಗ ಇನ್ನು ರೀಜನಲ್ಲ್ ನ್ಯೂಸ್ ಪ್ರಿಂಟ್‌ಗಳ ಕಥೆ ದೇವ್ರೆ ಕಾಪಾಡ್‌ಬೇಕು.’

’ಮತ್ತೇನಾದ್ರೂ ಇದೆಯಾ? I got to go' ಎಂದೆ.

’ಏನೂ ಇಲ್ಲ, ಬೆಂಗ್ಳೂರ್ ಹೋಯ್ತು, ಬಫೆಲ್ಲೋ ಬಂತು, ಡುಂ, ಡುಂ!’ ಎಂದ, ಕಾಲ್ ಕತ್ತರಿಸಿದೆ.

Wednesday, September 26, 2007

ಸುಬ್ಬನೂ ಎಲೆಕ್ಷನ್ನಿಗೆ ನಿಲ್ತಾನಂತೆ!

’ಯಾಕೋ ಸುಬ್ಬ, ಒಂಥರಾ ಇದೀಯಾ ಇವತ್ತು!’ ಎಂದು ಈ ಸಂಜೆ ಅವನ ಮುಖವನ್ನು ನೋಡಿದ ಕೂಡ್ಲೇ ಕೇಳಬೇಕು ಅನ್ನಿಸಿದ್ದು ನಿಜ. ಅವನ ಮುಖ ನೋಡಿದ್ರೆ ಇನ್ನೇನು ಇವತ್ತೋ ನಾಳೆಯೋ ಅವನೇ ಸಾಯ್ತಾನೇನೋ ಅನ್ನೋ ಹಾಗಿದ್ದ.

’ಏನಿಲ್ಲ...’ ಎಂಬ ಚಿಕ್ಕದಾದ ಬೇಸರದ ಉತ್ತರ ಮತ್ತೇನೋ ಇದೆ ಕೆಣಕು, ಕೇಳು ಎಂದು ನನ್ನನ್ನು ಪುಸಲಾಯಿಸುತ್ತಿತ್ತು.

’ಅದೇನ್ ಇದ್ರೂ ನನ್ನ ಹತ್ರ ಹೇಳೋ ಪರವಾಗಿಲ್ಲ...’ ಎಂದು ಎಲ್ಲಾ ಸಮಸ್ಯೆಗಳಿಗೂ ಉತ್ತರ ಕಂಡು ಹಿಡಿಯೋನ ಹಾಗೆ ದೊಡ್ಡ ಆಶ್ವಾಸನೆಯನ್ನು ನೀಡಿದೆ, ನನ್ನ ಬಳಿ ಉತ್ತರದ ಬದಲಿಗೆ ಪ್ರಶ್ನೆಗಳೇ ಹೆಚ್ಚಿರೋವು ಎಂದು ನನಗೂ ಇತ್ತೀಚೆಗೆ ಅರಿವಾಗಿರುವುದರಿಂದ ಅವನ ಸಮಸ್ಯೆಗೆ ನಾನು ಕೇಳೋ ಪ್ರಶ್ನೆಗಳು ಉತ್ತರವನ್ನು ಕಂಡುಕೊಳ್ಳದಿದ್ದರೆ ಎಂದು ನನಗೂ ಒಮ್ಮೆ ದಿಗಿಲಾಯಿತು.

ಸುಬ್ಬ ಸಾವಕಾಶವಾಗಿ ಸೋಫಾದಲ್ಲಿ ಕೊಸರಿಕೊಂಡು, ’ನಾನು ಬದಲಾಗಿಬಿಟ್ಟಿದ್ದೀನಿ ಕಣೋ!’ ಎಂದ. ನನಗೋ ಇವನೇನು ಬದಲಾಗ್ತಾನೆ ಮಹಾ ಎಂದು ಒಮ್ಮೆ ಲೇವಡಿ ಮಾಡೋಣ ಎನ್ನಿಸಿದರೂ ಸುಬ್ಬ ಫೈನಲ್‌ನಲ್ಲಿ ಕ್ಯಾಚು ಬಿಟ್ಟು ಪಾಕಿಸ್ತಾನ ಸೋಲಲು ಕಾರಣವಾದ ಮಹಮದ್ ಹಫೀಜನ ಥರ ಮುಖ ಗಂಟು ಹಾಕಿಕೊಂಡಿದ್ದನ್ನು ನೋಡಿ, ’ಯಾವುದರ ಬಗ್ಗೆ ಹೇಳ್ತಿದ್ದೀಯೋ ಪುಣ್ಯಾತ್ಮ...’ ಎಂದು ಸಾಂತ್ವನವನ್ನು ನುಡಿಯುವಂತೆ ತೋರಿಯೂ ಹೆಚ್ಚು ವಿವರವನ್ನು ಕೇಳಲು ಶುರು ಮಾಡಿದೆ.

ಸುಬ್ಬ ಸ್ವಲ್ಪ ಚೇತರಿಸಿಕೊಂಡು, ’ಏನಿಲ್ಲ, ನನ್ನ ಆಕ್ಸೆಂಟು ಬದಲಾಗಿದೆ, ಇಲ್ಲಿ ಬಂದ ಮೇಲೆ ನಮ್ಮೂರಿನ ಥರ ಕಾಫಿ ಕುಡುದ್ರೆ ರುಚಿ ಸೇರೋದಿಲ್ಲ ಬಿಸಿ ನೀರು ಕುಡಿದ ಹಾಗಿರುತ್ತೆ, ಅದರ ಬದಲಿಗೆ ಬ್ಲ್ಯಾಕ್ ಕಾಫಿ ಕುಡುದ್ರೇನೇ ಸಮಾಧಾನ, ಇನ್ನು ಇಲ್ಲಿನ ಚಾನೆಲ್ ಸೆವೆನ್ ನ್ಯೂಸ್ ನೋಡೀ ನೋಡೀ ಬಿಬಿಸಿ ನ್ಯೂಸ್ ಯಾವುದೋ ಬೇರೆ ಗ್ರಹವೊಂದರ ಸಮಾಚಾರವನ್ನು ಭಿತ್ತರಿಸುವಂತೆ ಕಾಣ್ಸುತ್ತೆ...’ ಎಂದು ಇನ್ನೇನನ್ನೋ ಮುಂದುವರೆಸುತ್ತಾ ಅವನ ರೈಲನ್ನು ಹೊಡೆಯುತ್ತಲೇ ಇದ್ದವನಿಗೆ ನಾನು ಮಧ್ಯೆ ಬಾಯಿ ಹಾಕಿ ತಡೆಯೊಡ್ಡಿದೆ,

’ಎಲಾ ಇವನಾ, ಟೂರಿಸ್ಟ್ ಅಂತ ಬಂದೋನ್ ನೀನಪಾ, ನೀನೇ ಹಿಂಗಂದ್ರೆ?!’

’ಟೂರಿಸ್ಟ್ ಅಂತ ಏನೋ ಬಂದಿದ್ದೀನಿ, ಅದು ವೀಸಾ-ಟಿಕೇಟ್ ಮಟ್ಟಿಗೆ ಮಾತ್ರ, ನಾನು ಎಲ್ಲ್ ಹೋದ್ರೂ ಅಲ್ಲಿನ ಸ್ಥಿತಿ-ಗತಿ ಬಗ್ಗೆ ತಲೆಕೆಡಿಸಿಕೊಳ್ಳೋದು ನಿನಗೆ ಗೊತ್ತೇ ಇದೆಯಲ್ಲಾ? ನಾನು ಅಲ್ಲಿದ್ರೆ ಮಳೆ-ಬೆಳೆ ಹೆಂಗಾಗುತ್ತೇ ಈ ವರ್ಷಾ ಅಂತ ಮುಗಿಲ್ ನೋಡ್ತೀನಿ, ಇಲ್ಲಿ ಬಂದ ಮೇಲೂ ಫಾರ್ಮರ್ಸ್ ಆಲ್ಮನ್ಯಾಕ್ ಓದ್ತೀರೋದನ್ನ ನೀನೇ ನೋಡಿದ್ದೀಯಲ್ಲಾ? ನಾವು ತೋಟಾ ಮಾಡೋರು ಎಲ್ಲಿದ್ರೂ ತೋಟಾ ಮಾಡೋರೇ - ಅಮೇರಿಕದಲ್ಲಿರಲಿ, ಆಫ್ರಿಕದಲ್ಲಿರಲಿ’ ಎಂದು ತನ್ನನ್ನು ತಾನು ಮೆಚ್ಚಿಸಿಕೊಂಡ.

’ಅದ್ಸರಿ, ನೀನು ಬಂದು ಇಷ್ಟೊಂದು ತಿಂಗಳಾಯ್ತು, ಇವತ್ತ್ಯಾಕೆ ನಿನಗೆ - ನಾನು ಬದಲಾಗಿದ್ದೇನೆ - ಅನ್ನೋ ದಿವ್ಯದೃಷ್ಟಿ ಬಂತೋ?’ ಎಂದು ನಾಟಕೀಯವಾಗಿ ಕೇಳಿದ್ದಕ್ಕೆ,

’ಅದೇ ಬರ್ಮಾ ದೇಶದಲ್ಲಿ ಅರಾಜಕತೆ ಶುರುವಾಯ್ತಲ್ಲಾ ಅದರ ಬಗ್ಗೆ ಓದ್ತಾ ಇದ್ದೆ ಎಲ್ಲೋ ಒಂದು ಕಡೆ, ಊರಿನ್ ನೆನಪು ಬಂತು. ಜೊತೆಗೆ ಇಲ್ಲಿನ ಮಾಧ್ಯಮಗಳನ್ನು ತಿರುತಿರುವಿ ನೋಡಿದ್ರೆ ಇವರಿಗೆ ಬೆಳಗ್ಗಿಂದಾ ಸಂಜೀವರಿಗೂ ಡಾವ್ ಜೋನ್ಸೂ-ನ್ಯಾಸ್‌ಡಾಕೂ ಬಿಟ್ರೆ ಬೇರೆ ಪ್ರಪಂಚಾನೇ ಇಲ್ಲೇನೋ ಅನ್ನಿಸಿ ಬಿಟ್ಟಿತು. ಎಲ್ಲ್ಯಾದ್ರೂ ಚೂರೂ-ಪಾರೂ ಸುದ್ದಿ ಬರತಾವೆ ಇಲ್ಲಾ ಅಂತಲ್ಲಾ...ಆದ್ರೂ ಈ ದೇಶ ಒಂಥರಾನಪಾ...’

ಈಗ ಗೊತ್ತಾಯ್ತು ಸುಬ್ಬನ ಈ ಸ್ಥಿತಿಗೆ ಕಾರಣವೇನು ಎಂದು ಅಂದುಕೊಂಡಿದ್ದು ನನ್ನ ತಪ್ಪು ಊಹೆಯಾಗಿತ್ತು. ಬದಲಾದ ಬರ್ಮಾದ ಸ್ಥಿತಿಗತೀಗೂ, ತಾನೇ ಬದಲಾಗಿದ್ದೇನೆ ಅನ್ನೋದಕ್ಕೂ ಯಾವ ತಾಳಮೇಳವೂ ಕಾಣಲಿಲ್ಲ. ಹೋಗ್ಲಿ, ಪ್ರವಾಸಿಯಾಗಿ ಬಂದವರು ಒಂದೆರಡು ಅಂಶಗಳನ್ನು ಬಳುವಳಿ ಪಡೆದು ಕಲಿಯಬಾರದೇಕೆ, ತಮ್ಮ ತನವನ್ನು ಬಿಟ್ಟು ಇತರರದ್ದನ್ನು ಪ್ರಯತ್ನಿಸಬಾರದೇಕೆ ಎಂದು ನನ್ನ ಮನಸ್ಸಿನಲ್ಲಿ ಸಮಜಾಯಿಷಿ-ಸಾಂತ್ವನಗಳು ಹುಟ್ಟುತ್ತಿದ್ದರೆ ಅವುಗಳನ್ನು ಅವನಿಗೆ ಹೇಗೆ ಹೇಳುವುದು ಎಂಬ ಗುಂಗಿನಲ್ಲೇ ನಾನು ಮುಳುಗಿ ಹೋಗುತ್ತಿರುವಾಗ ಅವನ ಈ ಮಾತು ನನ್ನನ್ನು ಎಚ್ಚರಿಸಿತು,

’ಅಮೇರಿಕ ಅನ್ನೋದು ಮಹಾನ್ ಅಲೆ, ಅದು ತನ್ನೊಳಗೆ ಎಂತಹ ಪರ್ವತವನ್ನೂ ಎತ್ತಿ ಹಾಕ್ಕೊಳ್ಳುತ್ತೆ, ಅದರ ವಿರುದ್ಧ ಎದ್ದು ನಿಲ್ಲೋನು, ತನ್ನತನವನ್ನೇ ರೂಢಿಸಿಕೊಂಡು ಮುಂದುವರೆಯೋನು ಅದಕ್ಕಿಂತ ಬಲಶಾಲಿಯಾಗಬೇಕೇ ವಿನಾ ದುರ್ಬಲನಾಗಿರಬಾರ್ದು - ಆ ಬಲ ನಮ್ಮಂಥ ತೃತೀಯ ಜಗತ್ತಿನಿಂದ ಬಂದಂತಹವರಿಗೆ ಕಷ್ಟ ಸಾಧ್ಯ. ಹಾಗಾಗಿ ನಮ್ಮತನವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕಳೆದುಕೊಳ್ಳುವಂತೆ ಮಾಡುವಲ್ಲಿ ಇಲ್ಲಿನ ವಾತಾವರಣ ಬಹಳಷ್ಟು ಸಹಾಯವನ್ನೇನೋ ಮಾಡುತ್ತೇ, ಆದರೆ ಅವರವರತನವನ್ನು ಕಳೆದುಕೊಂಡ ಜಾಗದಲ್ಲಿ ಮತ್ತಿನ್ನೇನೋ ಬಂದು ನೆಲೆಸಿ ಅಂತಹ ಪ್ರತಿಯೊಬ್ರೂ ಮುಖ್ಯವಾಹಿನಿಯಲ್ಲಿ ಭೌತಿಕವಾಗಿದ್ರೂ ಮಾನಸಿಕವಾಗಿ ವಿಮುಖರಾಗುವಂತೆ ಮಾಡುತ್ತೆ’.

ಇವನ್ಯಾವತ್ತಿಂದ ಸಿನಿಮಾ ಪಾಟೀಲನ ಥರ ನಾನ್ ಸ್ಟಾಪ್ ಡೈಲಾಗುಗಳನ್ನು ಶುರು ಹಚ್ಚಿಕೊಂಡ ಎಂದು ಗೊತ್ತಾಗದೇ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತಾಗಿತ್ತು ನನ್ನ ಪರಿಸ್ಥಿತಿ. ಆದ್ರೂ ಸ್ವಲ್ಪ ಪುಶ್ ಬ್ಯಾಕ್ ಮಾಡಿದ್ರೆ ಇನ್ನೇನಾದ್ರೂ ಧ್ವನಿ ಹೊರಡುತ್ತೋ ನೋಡೋಣ ಎಂದುಕೊಂಡವನಿಗೆ ಸ್ವಲ್ಪ ನಿರಾಶೆ ಹುಟ್ಟಿಸಿತ್ತು ಸುಬ್ಬನ ಪ್ರಕ್ರಿಯೆ,

ನಾನೆಂದೆ, ’ನೋಡೋ, ಪ್ರವಾಸಿಯಾಗಿ ಬಂದವನಾಗಲೀ, ವಲಸಿಗರಾಗಿ ಬಂದವರಾಗಲೀ ಅವರವರ ನೆಲೆಗಟ್ಟನ್ನು-ಮಿತಿಯನ್ನು ಅರಿತು ಅದರಂತೆ ನಡೆಯಬೇಕೇ ವಿನಾ ಇರೋ ಸ್ವಲ್ಪ ಸಮಯದಲ್ಲಿ ಎಲ್ಲವನ್ನು ಅರೆದು ಕುಡೀತೀನೀ ಅನ್ನೋದು ಭಂಡತನವಾಗೋದಿಲ್ವೇ?’

ಅದಕ್ಕವನು ಉತ್ತರವಾಗಿ, ’ಭಂಡತನ ಅನ್ನೋದೇನೂ ಅಷ್ಟೊಂದು ಸಮಂಜಸ ಅನ್ಸಲ್ಲ, ನಮ್ಮೊಳಗೆ ನಡೆಯೋ ಬದಲಾವಣೇನ ಒಂದು ಹೆಜ್ಜೆ ಮುಂದೆ ಹೋಗಿ ಹೇಳ್ದೆ ಅಂತಂದ್ರೆ ಒಪ್ಪಿಕೋಬೋದೋ ಏನೋ’ ಎಂದು ಅಡ್ಡಗೋಡೆಯ ದೀಪ ಇಟ್ಟವರ ಹಾಗೆ ಮಾತನಾಡಿದ.

ಅವನಿಗೆ ನೋವಾದಲ್ಲೇ ಚುಚ್ಚೋಣವೆಂದುಕೊಂಡು, ’ಈಗ ನನಗೆ ಗ್ಯಾರಂಟಿ ಅನ್ಸಿತು ನೀನು ಬದಲಾಗಿದೀಯಾ ಅಂತ!’ ಎಂದೆ.

ಅವನು ಒಂದು ಕ್ಷಣ ಮುಖದ ಮೇಲೆ ಖುಷಿಯನ್ನು ವ್ಯಕ್ತಪಡಿಸಿದವನಂತೆ ಕಂಡುಬಂದು, ’ಆಞ್, ಹೌದಾ...’ ಎಂದು ಇನ್ನೇನನ್ನೋ ಹೇಳಲು ಹೋದವನನ್ನು ಅರ್ಧಕ್ಕೆ ತಡೆದು,

’ಇನ್ನೇನ್ ಮತ್ತೇ, ನಿನ್ನ ಪ್ರಶ್ನೆಗಳೋ, ಉತ್ತರಗಳೋ, ನೀನು ನೀಡೋ ಸಮಜಾಯಿಷಿಯೋ...ಇವೆಲ್ಲ ಇಲ್ಲಿನ ಕಾಂಗ್ರೇಸ್‌ಮನ್ನುಗಳ ಥರ ಆಗ್ತಾ ಇವೆ ನೋಡು, ಅವರು ಯಾವತ್ತು ಯಾವ ಪ್ರಶ್ನೆಗೆ ನೇರವಾಗಿ ಉತ್ತರಕೊಟ್ಟಿರ್ತಾರೆ ತಾವು ಹುಟ್ಟಿದಾಗಿನಿಂದ?’ ಎಂದು ಕಿಚಾಯಿಸಿದೆ.

’ಹೌದಾ, ಹಂಗಾಂದ್ರೆ ಊರಿಗ್ ಹೋದೇನೇ ಪುರಪಂಚಾಯ್ತಿ ಎಲೆಕ್ಷನ್ನಿಗ್ ನಿತಗಂಬಿಡ್ತೀನಿ!’ ಎಂದು ತನ್ನೊಳಗಿನ ಸಂಭ್ರಮದಲ್ಲಿ ಕಳೆದುಕೊಂಡ. ನಾನು ಮುರಾ ಸಂಜೆ ಹೊತ್ತಿಗೆ ಸ್ವಲ್ಪ ಬೆಳಕು-ಗಾಳಿಯಾದರೂ ಬರಲಿ ಎಂದು ಕಿಟಕಿ ಬಾಗಿಲನ್ನು ಎತ್ತಿದೆ, ಈಗಾಗಲೇ ಫಾಲ್ ಬಿದ್ದಿರೋದನ್ನು ಸೂಚಿಸುವಂತೆ ನೆಲದ ಮೇಲೆ ಅಲ್ಲಲ್ಲಿ ಒಣಗಿದ ಎಲೆಗಳು ಹರಡಿಕೊಂಡಿದ್ದವು. ಇನ್ನೇನು ಇವತ್ತಿನ ನನ್ನ ಕಥೆ ಮುಗಿಯಿತು ಎಂದು ಡ್ಯೂಟಿ ಪೂರೈಸಿದವನ ಹಾಗೆ ನಿಧಾನವಾಗಿ ಸೂರ್ಯ ಜಾರಿಕೊಳ್ಳುತ್ತಿದ್ದ.

ನಾನು ’ಎಲೆಕ್ಷನ್ನಿಗೆ ನಿಂತಾರೂ ನಿತಗೋ, ಕೂತಾರೂ ಕೂರು...ಕೊನೆಗೆ ಒಂದಿಷ್ಟು ಲೋಕಕಲ್ಯಾಣ ಕೆಲ್ಸವನ್ನು ಮಾಡೋದ್ ಮರೀ ಬ್ಯಾಡಾ!’ ಎನ್ನೋ ಮಾತುಗಳು ಅವನದ್ದೇ ಅದ ಗುಂಗಿನಲ್ಲಿದ್ದ ಸುಬ್ಬನಿಗೆ ಕೇಳಿಸಲೇ ಇಲ್ಲ.

Sunday, August 12, 2007

ತಮೀಗೆ ಯುನಿಕ್ಸೂ, ಮಂದೀಗೆ ವಿಂಡೋಸೂ...

'ಲೋ ಶಿಷ್ಯಾ ಇಲ್ಲಿ ಬಾ, ಬಂದಾ ನಿನ್ ಫ್ರೆಂಡೂ ಹಲ್ಲ್ ಕಿರಕಂಡೂ...' ಎಂದು ಸೋಫಾದಲ್ಲಿ ಕೂತು ಟಿವಿ ನೋಡುತ್ತಿದ್ದ ಸುಬ್ಬ ಒಂದೇ ಸಮನೇ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ನಾನು ವಸ್ತ್ರಕ್ಕೆ ಕೈ ಒರೆಸಿಕೊಳ್ಳುತ್ತಲೇ ಓಡೋಡಿ ಬಂದೆ,

'ಏನಾಗ್ತಾ ಇದೆ?...' ಎಂದು ನಾನು ಬರುವಷ್ಟರಲ್ಲಿ ಪ್ರೆಸಿಡೆಂಟ್ ಬುಷ್ ಪತ್ರಿಕಾಕರ್ತರನ್ನುದ್ದೇಶಿಸಿ ಭಾಷಣ ಮಾಡಲು ಪೋಡಿಯಂ ಹತ್ತಿ ನಿಂತಾಗಿತ್ತು, 'ಏ, ಬುಷ್ಷ್ ಮಾತಾಡ್ತಾ ಇದಾನಾ..., ನಾನು ಏನೋ ಆಗ್ತಾ ಇದೆ ಅಂದುಕೊಂಡೆ. ಆದಿರ್ಲಿ ಅವನ್ಯಾವಾಗ ನನ್ನ ಫ್ರೆಂಡ್ ಆಗಿದ್ದು?' ಎಂದು ಪ್ರಶ್ನೆ ಎಸೆದೆ.

'ಮತ್ತೇ? ಅವನನ್ನ, ಈ ದೇಶವನ್ನ ನಂಬಿಕೊಂಡು ಬಂದಿದ್ದೀರಲ್ಲಾ, ಅವನು ನಿಮ್ಮ ಸ್ನೇಹಿತನಾಗ್ದೇ ಇನ್ನೇನ್ ವೈರಿ ಆಗ್ತಾನಾ?' ಎಂದು ನನ್ನನ್ನೇ ಕೆಣಕಿದ.

'ಏ, ಬುಷ್ಷನ್ನ ನಂಬಿಕೊಂಡು ನಾವ್ ಬರಲಿಲ್ಲ, ಅದ್ರಲ್ಲೂ ನಾನು ಈ ದೇಶಕ್ಕೆ ಬರೋವಾಗ ಕ್ಲಿಂಟನ್ನು ಇದ್ದ ಕಾಲ, ಎಲ್ಲವೂ ಸುಭಿಕ್ಷವಾಗಿತ್ತು, ಒಂದು ರೀತಿ ರಾಮರಾಜ್ಯ ಅಂತಾರಲ್ಲಾ ಹಾಗಿತ್ತು, ಇವನು ಅದೆಲ್ಲಿಂದ ಬಂದ್ನೋ ಬಂದ ಘಳಿಗೇನೇ ಸರೀ ಇಲ್ಲ ನೋಡು, ಒಂದಲ್ಲ ಒಂದು ಅಲ್ಲೋಲಕಲ್ಲೋಲ ನಡೆದೇ ಇದೆ ಮೊದಲಿನಿಂದ್ಲೂ...' ಎಂದು ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

'ಸ್ವಲ್ಪ ಸುಮ್ನಿರು, ವೆಕೇಷನ್ನಿಗೆ ಹೊಂಟು ನಿಂತಿದಾನಂತೆ, ಅದೇನ್ ಬೊಗೊಳ್ತಾನೇ ಅಂತ ಕೇಳೋಣ...' ಎಂದು ಟಿವಿಯ ಧ್ವನಿಗೆ ಕಿವಿ ಹಚ್ಚಿದ. ಸೆನೆಟ್ಟೂ ಕಾಂಗ್ರೇಸ್ಸೂ ಈಗಾಗಲೇ ಸಮರ್ ರಿಸೆಸ್‌ಗೆಂದ್ ಬಂದ್ ಆದ ಹಾಗೆ ಕಾಣ್ಸುತ್ತೆ, ಈಗ ಪ್ರೆಸಿಡೆಂಟೂ ವೆಕೇಷನ್ನಿಗೆ ಹೊರಟು ನಿಂತಿರೋದನ್ನ ಕೊನೇ ಆಪರ್ಚುನಿಟಿ ಎಂದು ಬೇಕಾದಷ್ಟು ಜನ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಕುಕ್ಕರುಗಾಲಿನಲ್ಲಿ ಕುಳಿತಿದ್ದರು. ಇನ್ನೊಂದ್ ವರ್ಷ ಚಿಲ್ಲರೆ ಅವಧಿಯಲ್ಲಿ ತನ್ನ ರಾಜ್ಯಭಾರ ಹೊರಟು ಹೋಗುತ್ತೇ ಅನ್ನೋ ನೋವಿಗೋ ಏನೋ ಬುಷ್ಷ್ ಇತ್ತೀಚೆಗೆ ಬಹಳ ಫಿಲಾಸಫಿಕಲ್ ಆದ ಹಾಗೆ ಕಾಣುತ್ತಿದ್ದ ಹಾಗನ್ನಿಸಿತು. ನಾನು ಪ್ರೆಸಿಡೆಂಟ್ ಹೇಳೋ ಮಾತುಗಳಿಗೆ ಅಷ್ಟೊಂದು ಗಮನ ಕೊಡದೇ ಬೇರೇನೋ ಯೋಚಿಸ್ತಾ ಇರೋದನ್ನ ಗಮನಿಸಿದ ಸುಬ್ಬ,

'ಅದ್ಸರಿ, ನನಗೆ ಮೊನ್ನೇ ಇಂದಾ ಈ ಪ್ರಶ್ನೆ ತಲೇ ಒಳಗೆ ಕೊರೀತಾ ಇದೆ, ನಿನಗೇನಾದ್ರೂ ಉತ್ತರಗೊತ್ತಿರಬಹುದು...' ಎಂದ.

ನಾನು ಬರೀ, 'ಹ್ಞಾ...' ಎಂದು ಸುಬ್ಬನ ಕಡೆಯೇ ಪ್ರಶ್ನಾರ್ಥಕವಾಗಿ ನೋಡಿದೆ.

ಸುಬ್ಬ ಮುಂದುವರೆಸಿದ, 'ಈ ಅಮೇರಿಕದೋರು ಇರಾಕ್ ಆಕ್ರಮಣ ಮಾಡೋದಕ್ಕೆ ಮೊದಲು ಅಲ್ಲಿ ಸದ್ದಾಮನ ಪ್ರೆಸಿಡೆಂಟ್ ರೂಲ್ ಇತ್ತೋ ಇಲ್ವೋ?'

'ಹೌದು, ಇತ್ತು'.

'ಆಂದ್ರೆ ಅಧ್ಯಕ್ಷೀಯ ಪದ್ದತಿ ಸರ್ಕಾರ ಅನ್ನು...'

'ಅದನ್ನ ಅಧ್ಯಕ್ಷೀಯ ಪದ್ದತಿ ಅನ್ನಬಹುದು, ಆದ್ರೆ ಪ್ರಜಾಪ್ರಭುತ್ವವೋ ಹೌದೋ ಅಲ್ವೋ ಗೊತ್ತಿಲ್ಲ, ಚುನಾವಣೆಗಳು ಆಗ್ತಿದ್ವು, ಆದ್ರೆ ಸದ್ದಾಮನೇ ಗೆಲ್ತಿದ್ದ!'

'ಇರ್ಲಿ, ಅಲ್ಲಿ ಅಧ್ಯಕ್ಷೀಯ ಪದ್ಧತಿ ಇತ್ತು ಅಂತ ಇಟಗೋ, ಇಲ್ಲೂ ಅಧ್ಯಕ್ಷೀಯ ಮಾದರಿ ಸರ್ಕಾರಾನೇ ಇರೋದು ಯಾವಾಗ್ಲೂ...'

ಇವನು ತನ್ನ ಈ ಲಾಜಿಕ್ಕಿನಿಂದ ಎಲ್ಲಿಗೆ ಹೊರಟವನೆ ಎಂದು ಹೇಳಲು ಬರದೇ ನಾನು ಈ ಬಾರಿ ಸುಮ್ಮನಿದ್ದವನನ್ನು ತಿವಿದು,

'ಹೌದೋ ಅಲ್ವೋ ಹೇಳು?' ಎಂದು ಒತ್ತಾಯಿಸಿದ.

'ಹೌದು' ಎನ್ನದೇ ಬೇರೆ ವಿಧಿ ಇರಲಿಲ್ಲ.

'ಸರಿ ಹಂಗಾದ್ರೆ, ಇರಾಕ್‍ನ ಆಕ್ರಮಣ ಮಾಡಿ, ಅಲ್ಲಿ ಹಳೇ ಸರಕಾರ ತೆಗೆದು ಹೊಸ ಸರ್ಕಾರ ಇಟ್ಟಾಗ ಅಲ್ಲಿ ಪ್ರಧಾನ ಮಂತ್ರಿ ವ್ಯವಸ್ಥೇನಾ ಯಾತಕ್ಕ್ ತಂದ್ರೂ ಅಂತಾ?'

'...'

'ಅಲ್ಲಪಾ, ಈ ನೂರಿ ಅಲ್ ಮಲ್ಲಿಕೀ, ಅಲ್ಲಿ ಪ್ರಧಾನ್ ಮಂತ್ರೀ ತಾನೆ? ಪ್ರಪಂಚಕ್ಕೆ ಡೆಮಾಕ್ರಸಿನಾ ಹಂಚೋಕ್ ಹೋಗೋರು ತಮ್ಮ ವ್ಯವಸ್ಥೇನೇ ಇನ್ನೊಬ್ರಿಗೂ ಯಾಕ್ ಕೊಡೋದಿಲ್ಲಾ? ಅದರ ಬದಲಿಗೆ ಇವರಿಗೇ ಗೊತ್ತಿರದ, ಇನ್ನು ಅವರಿಗೂ ಗೊತ್ತಿರದ ಪ್ರಧಾನಮಂತ್ರಿ ವ್ಯವಸ್ಥೇನಾ ಯಾತಕ್ ತಂದ್ರೂ ಅಂತ ನಿನಗೆನಾದ್ರೂ ಗೊತ್ತಾ? ಇದೇ ಪ್ರಶ್ನೇ ಸುಮಾರ್ ದಿನದಿಂದ ತಲೇ ಕೊರಿತಾನೇ ಇದೇ ನೋಡು' ಎಂದು ಸುಮ್ಮನಾದ ನನ್ನನ್ನು ಉತ್ತರಕ್ಕೆ ಪೀಡಿಸುವ ಒಂದು ನೋಟ ಬೀರಿ.

'ನಂಗೊತ್ತಿಲ್ಲ, ನನ್ನ ಊಹೆ ಪ್ರಕಾರ, ಎಲ್ಲಿ ಸಮ್ಮಿಶ್ರ ಸರಕಾರ ಇರುತ್ತೋ ಅಲ್ಲೆಲ್ಲಾ ಪ್ರಧಾನಮಂತ್ರಿ ಸಿಷ್ಟಮ್ಮೇ ವರ್ಕ್ ಆಗೋ ಹಂಗ್ ಕಾಣುತ್ತೇ...' ಎಂದು ನನಗೆ ತೋಚಿದ್ದನ್ನು ಹೇಳಿದೆ. ಅದಕ್ಕವನು, 'ಅದೆಲ್ಲಾ ಬ್ಯಾಡಾ, ಈ ನನ್ ಮಕ್ಳು ತಮಿಗೆ ಯುನಿಕ್ಸ್ ಆಪರೇಟಿಂಗ್ ಸಿಷ್ಟಂ ಇಟಗೊಂಡು, ಇನ್ನೊಬ್ರಿಗೆ ವಿಂಡೋಸ್ ಹಂಚ್‌ತಾರಲ್ಲಾ ಅದಕ್ಕೇನ್ ಅನ್ನಣ?' ಎಲ್ಲಿಂದ ಎಲ್ಲಿಗೋ ಒಂದು ಕನೆಕ್ಷನ್ ಮಾಡಿ ಮಾತನಾಡಿದ.

'ಎಲಾ ಇವನಾ, ನಿನಗೇನು ಗೊತ್ತೋ ಆಪರೇಟಿಂಗ್ ಸಿಷ್ಟಂ ಬಗ್ಗೆ?' ಎಂದು ವಿಶ್ವಾಸದ ನಗೆ ಬೀರಿದರೂ, ಅವನ ತುಲನೆಯನ್ನು ಪೋಷಿಸದೇ, 'ಒಂದ್ ದೇಶವನ್ನು ಅತಂತ್ರ ಮಾಡಿದೋರಿಗೆ ಅಲ್ಲಿ ಏನು ನಡೆಯುತ್ತೇ ಅನ್ನೋದು ಗೊತ್ತಿರದೇ ಇದ್ದೀತೇನು...ಅದಿರ್ಲಿ, ವಿಂಡೋಸ್‌ನಲ್ಲಿ ಏನ್ ಸಮಸ್ಯೆ ಇದೇ?' ಎಂದೆ.

'ಏನೋ ಅಲ್ಪಾ ಸೊಲ್ಪಾ ತಿಳಕಂಡೀದೀನಿ, ಅಲ್ಲೀ ಇಲ್ಲೀ ಓದಿ...ವಿಂಡೋಸ್ ನಲ್ಲಿ ಬರೀ ಬಗ್ಸ್ ಅಂತೇ...ದೊಡ್ಡ ದೊಡ್ಡ ಕಾರ್ಪೋರೇಷನ್ನಿನ ಸರ್ವರುಗಳೆಲ್ಲಾ ಯುನಿಕ್ಸ್ ಬೇಸ್ಡ್ ಸಿಷ್ಟಂ‍ಗಳಂತೆ...ಅಂತ ಎಲ್ಲೋ ಓದಿದ ನೆನಪು, ಅದಕ್ಕೇ ಅಂದೆ' ಎಂದು ಸಮಜಾಯಿಷಿ ನೀಡಿದ.

'ಪ್ರಧಾನಮಂತ್ರಿ ವ್ಯವಸ್ಥೆಯಲ್ಲಿ ತೊಂದ್ರೆ ಇದೇ ಅಂತ ಜನರಲೈಜ್ ಮಾಡಕ್ ಆಗಲ್ಲಾ, ಯುಕೆ ನಲ್ಲಿ ಹತ್ತು ವರ್ಷಾ ನಡೀಲಿಲ್ವೇ ಬ್ಲೇರ್‌ನ ಆಡಳಿತ? ಇನ್ನು ಇಂಡಿಯಾದವ್ರ ಕಥೆ ಬಿಡೂ ಅಲ್ಲಿ ಬರೋ ಮಂತ್ರಿ ಮಹೋದಯ್ರನ್ನ ಲೆಕ್ಕ ಇಟ್‌ಗಳಕೆ ಕೈ ಬೆರಳುಗಳು ಸಾಲಲ್ಲ!

ಸುಬ್ಬ, 'ಏನೋ...ಈ ವಯ್ಯಾ ವೆಕೇಷನ್ನ್ ಇಂದ ಬರೋ ಹೊತ್ತಿಗೆ ಇನ್ನೊಂದ್ ರಾಮಾಯ್ಣ ಆಗ್ದೇ ಇದ್ರೆ ಸಾಕು...' ಎಂದು ರಾಗ ಎಳೆದು ಮತ್ತೆ ಬುಷ್ಷನ ಕಾನ್‌ಫರೆನ್ಸ್ ಕಡೆಗೆ ಕಿವಿಕೊಟ್ಟ, ನಾನು ಅಡುಗೆಮನೆ ಕಡೆಗೆ ನಡೆದೆ.

Sunday, August 05, 2007

... ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!

ಶನಿವಾರ ಬೆಳಗ್ಗೆ ತಡವಾಗಿ ಎದ್ರೂ ನಡೆಯುತ್ತೇ ಎಂದು ಮಹದಾಸೆ ಇಟ್ಟುಕೊಂಡು ಮಲಗಿದ್ದ ನನ್ನನ್ನು ಅದ್ಯಾವುದೋ ಬ್ರಹ್ಮಲೋಕದಲ್ಲಿ ಸುಬ್ಬ ಜೋರು ಜೋರಾಗಿ ಮಾತನಾಡಿಕೊಳ್ಳುತ್ತಿರುವುದು ಕೇಳಿಬಂದು ನಿದ್ದೆಯಿಂದ ಎಚ್ಚರವಾದದ್ದೂ ಅಲ್ಲದೇ ಅವನು ಯಾರ ಹತ್ತಿರ ಅದೇನು ಮಾತನಾಡುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳುವಷ್ಟರ ಮಟ್ಟಿಗೆ ನನ್ನ ನಿದ್ರೆ ದೂರವಾಗಿ ಹೋಗಿದ್ದರಿಂದ ನನಗರಿವಿಲ್ಲದಂತೆ, 'ಥೂ ಇವನೊಬ್ಬ, ಸದ್ಯ ಇಂಡಿಯಾದವರ ಹತ್ತಿರ ಮಾತನಾಡಿದ್ರೆ ಹೀಗೆ ಅರಚಿಕೊಳ್ತಾನೆ, ಇನ್ನು ಮಂಗಳಗ್ರಹದವರ ಹತ್ತಿರ ಮಾತನಾಡಿದ್ರೆ ಹೆಂಗೋ!' ಬೈಗಳ ಹೊರಗೆ ಬಿತ್ತು. ಅದರಲ್ಲೂ ಸುಬ್ಬ ಫೋನ್ ಬಳಸುವ ಪರಿಯನ್ನು ನೋಡಿದರೆ ಅವನ ಧ್ವನಿಯ ಆವೇಶದಲ್ಲಿಯೇ ಆ ಕಡೆ ಇರುವವರ ದೂರವನ್ನು ಗುರುತುಹಿಡಿಯಬಹುದು, ದೂರ ಹೆಚ್ಚಾದಷ್ಟೂ ಅಬ್ಬರ ಹೆಚ್ಚು ಎನ್ನುವಂತೆ.

ಇಂಥವನೊಬ್ಬ ನಮ್ ಆಫೀಸಿನಲ್ಲಿ ಇರಬೇಕಿತ್ತು, ದಿನವೂ ಕ್ಯಾಲಿಫೋರ್ನಿಯಾದವರಿಗೆ ಕರೆ ಮಾಡಿದಾಗಲೆಲ್ಲ ಕಿರುಚಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳಬಹುದಿತ್ತು ಎನ್ನುವ ಕುಹಕ ಮನದಲ್ಲಿಯೇ ಸುಳಿದು ಅಲ್ಲೇ ನಿಂತಿತು.

ಕೆಳಗಿನಿಂದ ಬೇಡವೆಂದರೂ ಸುಬ್ಬನ ಮಾತುಗಳು ಕಿವಿಗೆ ಬಂದು ರಾಚುತ್ತಿದ್ದವು, ಒನ್ ವೇ ಮಾತುಗಳನ್ನು ಕೇಳಲಿಕ್ಕೆ ಕೆಲವೊಮ್ಮೆ ಎಷ್ಟೋ ಸರ್ತಿ ಚೆನ್ನಾಗಿರುತ್ತೇ ಅಂತ ಅನ್ಸಿದ್ದೇ ನಾನು ಸುಬ್ಬನ ಮಾತುಗಳಿಗೆ ಕಿವಿಕೊಟ್ಟಮೇಲೆ,

'ನಾನ್ ಬಡಕಂಡೆ ಕೇಳ್ತೀರಾ ನನ್ ಮಾತು, ಈಗ ಅನುಭವಿಸಿ'.

'...'

'ಅಲ್ಲಮ್ಮಾ, ಅವಳಿಗೆ ಸ್ವಲ್ಪಾ ಬುದ್ಧೀ ಅನ್ನದ್ ಬ್ಯಾಡಾ, ನಾನು ವಿದೇಶಿ ಕಂಪ್ನಿಗಳಿಗೆ ದುಡಿತೀನೀ ಅಂತ ಒಂದೇ ಸಮಾ ಉರೀತಾ ಇದ್ಲು, ಈಗ ನೋಡ್ರಿ ಹೆಂಗಾತು.'

'...'

'ಸಮಾಧಾನ ಮಾಡ್ಕಳ್ರಿ, ಎಲ್ಲ್ ಹೋಗ್ತಾಳೇ ಬಂದೆ ಬರ್ತಾಳೆ...ಇನ್ನೊಂದ್ ಅರ್ಧಾ ಘಂಟೇ ಬಿಟ್ಟು ನಾನೇ ಫೋನ್ ಮಾಡ್ತೀನಿ, ಇಡ್ಲಾ ಹಂಗಾರೆ'...ಎಂದು ಫೋನ್ ಇಟ್ಟ ಹಾಗೆ ಸದ್ದು ಕೇಳಿಸಿತು.

ಏನ್ ಅವಾಂತರ ಆಗಿದೆ ನೋಡೇ ಬಿಡೋಣ, ಈ ವೀರಾವೇಶಕ್ಕೇನಾದ್ರೂ ಕಾರ್ಣ ಇರ್ಲೇ ಬೇಕು ಎಂದುಕೊಂಡು ಮುಖಕ್ಕೊಂದಿಷ್ಟು ನೀರು ತೋರಿಸಿದಂತೆ ಮಾಡಿ, ಕೆಳಗೆ ಬಂದೆ. ಸುಬ್ಬನ ಮುಖ ಸಿಟ್ಟಿನಿಂದ ದುಮುಗುಡುತ್ತಿತ್ತು, ನಾನು ಇವನ ಸಿಟ್ಟಿಗೆ ಆಹಾರವಾಗದಿದ್ದರೆ ಸಾಕು ಎನ್ನುವ ದೂರಾಲೋಚನೆಯಲ್ಲಿ 'ಸುಮ್ಮನಿರು' ಎಂದು ಮನಸ್ಸು ಹೇಳುತ್ತಿದ್ದರೂ, ಅದಕ್ಕೆ ವಿರುದ್ಧವಾಗಿ ನಾಲಿಗೆ, 'ಏನಯ್ಯಾ, ಏನ್ ಸಮಾಚಾರ?' ಎಂದು ಕೇಳೇಬಿಟ್ಟಿತು.

'ನಮ್ಮ್ ಅಕ್ಕನ ಮಗಳು ಸುಶೀಲು ಇಷ್ಟೊತ್ತಾದ್ರೂ ಇನ್ನೂ ಮನೆಗೆ ಬಂದಿಲ್ಲವಂತೆ, ರಾತ್ರಿ ಕೆಲಸಕ್ಕ್ ಹೋದೋಳು ಬೆಳಿಗ್ಗೆಯೆಲ್ಲಾ ಬಂದಿರೋಳು, ಆದ್ರೆ ಈಗ ನೋಡು ಘಂಟೇ ಎಂಟಾದ್ರೂ ಇನ್ನೂ ಬಂದಿಲ್ಲ ಅಂತ ಎಲ್ಲರೂ ತಲೆಕೆಡಿಸಿಕೊಂಡು ಕುಂತವರಂತೆ'.

'ಎಲ್ಲಿ ಕೆಲ್ಸಾ ಮಾಡ್ತಾ ಇದಾಳವಳೂ?'

'ನನಗೆ ವಿವರ ಎಲ್ಲ್ಲಾ ಗೊತ್ತಿಲ್ಲ, ಅದ್ಯಾವುದೋ ಕಾಲ್‌ಸೆಂಟರ್‌ನಲ್ಲಿ ಆರೇಳ್ ತಿಂಗಳಿಂದ ಇದಾಳೆ ಅಂತ ಸುದ್ದಿ'.

'ನಿಮ್ಮನೆಯವರಿಗೆ ಕಾಲ್‌ಸೆಂಟರ್ ಫೋನ್ ನಂಬರ್ ತಗೊಂಡು ಫೋನ್ ಮಾಡಿ ಕೇಳೋಕ್ ಹೇಳು, ಸಾಮಾನ್ಯವಾಗಿ ಅವರದ್ದೇ ಕಂಪನಿ ಗಾಡಿ ಇರುತ್ತೇ, ಅದರಲ್ಲೇ ಓಡಾಡೋದ್ ತಾನೆ' ಎಂದೆ.

'ಅವರಪ್ಪಾ ಅಮ್ಮನ್ ಹತ್ರ ನಂಬರ್ ಇಲ್ಲವಂತೆ, ನಮ್ ಮಾವನ್ ಮಗ ನೋಡ್ಕಂಬರೋಕ್ ಹೋಗಿದ್ದಾನೆ' ಎಂದ ಕಷ್ಟಪಟ್ಟು.

'ಲೋ, ಇದೊಳ್ಳೇ ಕಥೆಯಾಯ್ತಲ್ಲೋ' ಎಂದು ಬುದ್ಧಿವಾದ ಹೇಳುವ ಟೋನ್‌ನಲ್ಲಿ ನಾನು ಮುಂದುವರೆಸಿದೆ, 'ಮಗಳು ಎಲ್ಲಿ ಕೆಲ್ಸಾ ಮಾಡ್ತಾಳೇ ಏನೂ ಅಂತ ಹ್ಯಾಗೆ ತಿಳಿದುಕೊಳ್ಳದೇ ಇರ್ತಾರೋ ಜನ?'

'ಸುಮ್ನಿರೋ ನಿಂದೊಳ್ಳೋ ಆಯ್ತು. ಹಂಗಾರೆ ಈಗ ನೀನು ಅದ್ಯಾವುದೋ ಕಂಪನಿಗೆ ದುಡೀತಿ ಅಂತ ನಿಮ್ಮನೆಯವರ ಹತ್ರ ಆ ಕಂಪನಿ ವಿವರಾ ಎಲ್ಲಾ ಇದೆಯಾ? ಕೆಲವೊಂದು ಮಾತು ಆಡೋಕಷ್ಟೇ ಚೆನ್ನಾ, ಸ್ವಲ್ಪ ಯೋಚ್ನೆ ಮಾಡ್ಭೇಕು ಮಾತು ಅನ್ನಬೇಕಾದ್ರೆ' ಎಂದು ನನ್ನನ್ನೇ ತಿವಿಯಲು ನೋಡಿದ.

'ಅದು ಹಾಗಲ್ಲಾ, ನಾನಿಲ್ಲಿ ಕೆಲ್ಸಾ ಮಾಡೋದು...' ಎಂದು ಸಮಜಾಯಿಷಿ ನೀಡಲು ಹೊರಟಿದ್ದ ನನ್ನನ್ನು ತಡೆದು, 'ಅಲ್ಲಿಗೊಂದು, ಇಲ್ಲಿಗೊಂದು ನ್ಯಾಯಾ ಅಂತಲ್ಲ, ನಿಮ್ ಮನೆಯವರಿಗೆ ನೀನು ಎಲ್ಲಿದ್ದೀ, ಹೇಗಿದ್ದೀ ಅಂತ ಗೊತ್ತಿರಬೇಕು, ಎಲ್ಲಾ ನೆಟ್ಟಗಿದ್ದಾಗ ಅದರ ಬೆಲೆ ಗೊತ್ತಾಗಂಗಿಲ್ಲ, ಇಂಥಾ ಸಮಯದಾಗ ಉಪಯೋಗಕ್ಕೆ ಬರತತಿ ನೋಡು.'

ನಾನು ಇನ್ನೇನು ಹೇಳುವುದೆಂದು ಸುಮ್ಮನಿದ್ದೆ, ಸುಬ್ಬ ತನ್ನ ಮಾತನ್ನು ಮುಂದುವರೆಸಿದ.

'ಇದೆಲ್ಲಾ ಹಾಳಾದೋರ್ ಸಂಸ್ಕೃತಿ! ಇಂಥಾ ಮನೇಹಾಳ್ ಜನರಿಂದ್ಲೇ ನಮ್ಮನೇ ನಮ್ಮ್ ಊರ್ ಹುಡುಗಾ-ಹುಡುಗೀರೆಲ್ಲ ರಾತ್ರೀ ಎಲ್ಲಾ ದುಡಿಯಂಗಾಗಿದ್ದು!' ಎಂದು ಒಂದು ಮಹಾನ್ ಬಾಂಬ್ ಎಸೆದು ಸುಮ್ಮನಾದ. ಅವನಷ್ಟಕ್ಕೇನಾದ್ರೂ ಹೇಳ್‌ಕೊಳ್ಲೀ ನಾನು ಸುಮ್ನೇ ಇದ್ರೇ ಹೆಂಗೆ ಅಂತ ಒಮ್ಮೆ ಯೋಚ್ನೇ ಬಂದ್ರೂ, ಇವನ ಮಾತನ್ನು ಕೇಳಿ ಸುಮ್ಮನಿದ್ರೆ ಇವನ ರೀತಿ-ನೀತಿಗಳಿಗೆ ಎಲ್ಲಿ ಒಪ್ಪಿದ ಹಾಗಾಗುತ್ತೋ ಎನ್ನುವ ಹಂಬನೀತಿಯ ಹಿನ್ನೆಲೆಯಲ್ಲಿ ಅವನನ್ನೇ ದಬಾಯಿಸಿದೆ.

'ಮೂವತ್ತು ವರ್ಷಾ ಮೇಷ್ಟ್ರಾಗಿ ದುಡಿದು ರಿಟೈರ್ ಆದೋರು ಮನೆಗೆ ತರೋ ದುಡ್ಡನ್ನ ಈ ಹುಡುಗಾ-ಹುಡುಗೀರು ಒಂದೇ ವರ್ಷದಲ್ಲಿ ದುಡಿಯೋ ದುಡ್ಡನ್ನ ಎಣಿಸೋವಾಗ ಈ ಸಂಸ್ಕೃತಿ ವಿಷ್ಯಾ ತಲೇಗ್ ಬರೋದಿಲ್ಲಂತೇನು?' ಎಂದೆ ಸ್ವಲ್ಪ ಖಾರವಾಗಿ.

ಅವನೂ ಅಷ್ಟೇ ಜೋರಾಗಿ, 'ಓಹೋಹೋ, ಯಾವನಿಗ್ ಬೇಕಿತ್ತು ಈ ಚಾಕರಿ... ನಾವೇನು ನಿಮ್ಮಲ್ಲಿದ್ದ ಬಿಸಿನೆಸ್ ಪ್ರಾಸೆಸ್ಸುಗಳನ್ನೆಲ್ಲ ಹಾಳುಬಡಿಸಿ ತಂದ್ ಹಾಕಿ ಎಂದು ಮಡಿಲು ಒಡ್ಡಿ ಹೋಗಿದ್ವೇನು ಇವರ ಹತ್ರ? ತಮ್ ದೇಶದಲ್ಲಿ ಕೂಲಿ ಕೊಟ್ಟು ಸುಧಾರಸ್ಕಾಗಲ್ಲ ಅಂತ ಇಡೀ ಪ್ರಪಂಚವನ್ನೇ ಹಾಳ್ ಮಾಡ್ತಾ ಇದಾರೆ ನನ್ ಮಕ್ಳು. ಇಂಥಾ ಬಂಡ್ ಗೆಟ್ಟೋರ್ ಎಣಿಸೋ ಯೂರೋ, ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!' ಎಂದು ಅವಾಜ್ ಹಾಕಿದ.

ನಾನೆಂದೆ, 'ಹೌದು, ಎಲ್ಲೋ ಬೀಡುಬೀಸಾಗಿದ್ದ ಕಂಪನಿಗಳು ಬಿಲಿಯನ್ನ್ ಎಣಿಸೋಕ್ ಶುರುಮಾಡಿದ್ದೇ ಇಂಥಾ ಉದ್ಯಮದಿಂದ...ನೀವ್ ಅಲ್ದಿದ್ರೆ ಇನ್ಯಾವಾನಾದ್ರೂ ಮಾಡ್ತಾನೆ, ಅಷ್ಟು ದಮ್ಮಿದ್ರೆ ಈ ಕಾಲ್ ಸೆಂಟರುಗಳನ್ನೆಲ್ಲ ಇವತ್ತೇ ಮುಚ್ಚಿಕಳ್ರಿ ನೋಡಾಣಾ'.

'ಅದೇನೋ ಅಂತಾರಲ್ಲ, ಊರ ಕೊಳ್ಳೇ ಹೊಡೆದ ಮೇಲೇ ದಿಡ್ಡೀ ಬಾಗಿಲು ಹಾಕಿದ್ರಂತೆ ಅಂತ ಹಂಗಾಯ್ತು...ನಮ್ ಯುವ ಜನತೆ ಸಾಯ್ತಾ ಐತೆ ಕಣಯ್ಯಾ. ಅವರು ತರೋ ದುಡ್ಡಲ್ಲ ಮುಖ್ಯ, ನಮ್ಮಲ್ಲಿನ ಪದವೀಧರರನ್ನ ಅವರಿಗೆ ಬೇಕೋ ಬ್ಯಾಡ್ವೋ ಯಾವುದೋ ದೇಶದ ಯಾವ್ದೋ ಹೆಸರನ್ನ ಕಟ್ಟಿ ಯಾರ್ದೋ ರಾಗದಲ್ಲಿ ಹಾಡು, ಯಾವ್ದೋ ತಾಳಕ್ಕೆ ಕುಣೀ ಅಂತಾ ಅಂದ್ರೆ, ಹಗಲ್ ಮಲಗಿ ರಾತ್ರೀ ಒದ್ದಾಡೋ ಇಂಥಾ ನಿಶಾಚರರಿಂದ ಯಾವ್ ಲೋಕ ಉದ್ಧಾರಾಗುತ್ತೇ ನೀನೇ ಹೇಳು?'

'ಅಂದ್ರೇ ನೀನ್ ಹೇಳೋದರ ಅರ್ಥ, ಈ ಕಾಲ್‌ಸೆಂಟರುಗಳು ಬರೋಕ್ ಮುಂಚೆ ರಾತ್ರೋ ರಾತ್ರಿ ಏನೂ ಕೆಲ್ಸಗಳೇ ಆಗ್ತಿರಲಿಲ್ಲಾ ಅಂತಲೇ?'

'ಹಂಗಲ್ಲ, ವಾಚ್‌ಮನ್, ಫ್ಯಾಕ್ಟರಿ ಶಿಫ್ಟ್ ಕೆಲಗಳೆಲ್ಲ ಯಾವತ್ತಿನಿಂದ್ಲೋ ಇರೋವೇಯಾ, ಆದರೆ ಈ ಕಾಲ್‌ಸೆಂಟರುಗಳಿಂದ ಸಮಾಜಕ್ಕೆ ಬಹಳಷ್ಟು ದೊಡ್ಡ ಹೊಡೆತಾ ಇದೇ ನೋಡು, ಇವತ್ತಲ್ಲ ನಾಳೆ ಅದು ನಿಜವಾಗುತ್ತೆ - ನಮ್ಮ್ ಸಿಟಿಗಳು ಈಗಾಗ್ಲೇ ರಾತ್ರೀ-ಬೆಳಗೂ ದುಡದೂ ದುಡದೂ ಸಪ್ಪಗಾಗ್‌ಹೋಗಿರೋದು. ವೇಗಾ ಅನ್ನೋದು ಸಹಜವಾಗಿರ್ಬೇಕು, ಅದನ್ನ ಬಿಟ್ಟು ಸೈಕಲ್ ಟಯರ್ ಹಾಕ್ಕೊಂಡು ಐವತ್ತ್ ಮೈಲಿ ಸ್ಪೀಡ್ ಹೋಗಾಗ್ ಬರೋದಿಲ್ಲ ತಿಳಕೋ'.

'ನೋಡೋ, ಆರ್ಥಿಕವಾಗಿ ದೇಶ ಬೆಳೀತಾ ಇದೆ, ಅದು ಮುಖ್ಯ. ಮೊದಲೆಲ್ಲ ಕೆಲಸ ಇಲ್ಲದೇ ಅಲೀತಿದ್ದ ಪುಡುಪೋಕರಿಗಳಿಗೆ ಈಗ ಕೆಲ್ಸಾ ಅನೋದೊಂದಿದೆ, ಅದು ಮುಖ್ಯ. ಬದಲಾವಣೆಗೆ ನಾವು ಈಗ ಕಣ್ಣು ಮುಚ್ಚಿ ಕುಳಿತುಕೊಂಡಿದ್ರೆ, ಕೊನೇಗಷ್ಟೇ - ಚಿಂಕುಗಳು ನಮ್ಮನ್ನು ಹಿಂದಕ್ ಹಾಕಿ ಒಂದಲ್ಲ ಒಂದು ದಿನ ಮುಂದ್ ಹೋಗೇ ಹೋಗ್ತಾರೆ...ಆಗ ಬಾಯಿಮೇಲೆ ಬೆರಳಿಟ್ಟುಕೊಂಡು ನಮ್ಮ ಐದಾರು ಸಾವಿರವರ್ಷದ ಸಂಸ್ಕೃತಿಯನ್ನ ಉಪ್ಪಿನಕಾಯಿ ಹಾಕ್ಕೂಂಡು ನೆಕ್ಕೋಣಂತೆ'.

'ನೀನು ಏನಂದ್ರೂ ನಾನ್ ಒಪ್ಪಲ್ಲಪ್ಪಾ...' ತನ್ನ ಅಲ್ಟಿಮೇಟಮ್ಮ್ ಅನ್ನು ಮುಂದಿಟ್ಟ, '...ನಮ್ಮ್ ಸಂಸ್ಕೃತಿ ನಮಗೆ ದೊಡ್ದು, ರಾತ್ರೀ-ಹಗಲೂ ದುಡಿದು ಸುಖವನ್ನು ಕಂಡೆವು ಎನ್ನೋ ಮರೀಚಿಕೆಯನ್ನು ಸವಾರಿ ಮಾಡೋ ಸರದಾರರು ನಮಗೆ ಬ್ಯಾಡಾ'.

ನಾನು, 'ಸರಿ ನಿನ್ನಿಷ್ಟ...' ಎನ್ನುವಷ್ಟರಲ್ಲಿ ಫೋನ್ ರಿಂಗ್ ಆದದ್ದರಿಂದ ಇಂಡಿಯಾದಿಂದ ಬಂದಿರಬಹ್ದು ಎಂದು ಸುಬ್ಬ ಓಡಲುತೊಡಗಿದ್ದನ್ನು ನೋಡಿದರೆ ಅವನು ನಿಜವಾಗಿಯೂ ಚಿಂತಿತನಾದಂತೆ ಕಂಡುಬಂತು.

Sunday, July 29, 2007

ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ...

ಸಾಯಂಕಾಲ ನಮ್ಮ ಟೌನ್‌ಶಿಪ್ಪ್‌ನಲ್ಲ್ ನಡೆಯೋ ವರ್ಷಾವಧಿ ಕಾರ್ನಿವಲ್ಲ್‌ಗೆ ಕರಕೊಂಡ್ ಹೋಗ್ತೀನಿ ಅಂತ ಬೆಳಿಗ್ಗೆ ಹೊರಡ್ ಬೇಕಾದ್ರೆ ನೆನಪಿಸಿದ್ದೂ ಅಲ್ದೇ ಮಧ್ಯಾಹ್ನ ಫೋನ್ ಮಾಡಿ ಹೇಳಿದ್ದರಿಂದ ಸುಬ್ಬ ರೆಡಿ ಆಗಿ ಕೂತಿರ್ತಾನೆ, ಒಂದು ಕಾಫೀನೋ ತಿಂಡೀನೋ ಮಾಡಿಕೊಂಡು ಎಂದು ಆಲೋಚಿಸಿಕೊಂಡು ಬಂದ ನನಗೆ ಸೋಫಾದ ಮೇಲೆ ಕುಳಿತ ಸುಬ್ಬನನ್ನು ನೋಡಿ ಸಂಪತ್ತಿಗೆ ಸವಾಲಿನ ವಜ್ರಮುನಿಯ ನೆನಪಾಯಿತು.

'ಲೋ, ರೆಡೀನಾ, ಅಲ್ಲಿ ಪಾರ್ಕಿಂಗ್ ಸಿಗೋದಿಲ್ಲ ಜಲ್ದೀ ಹೋಗ್ಬೇಕು - ನಾನು ಎದ್ನೋ ಬಿದ್ನೋ ಅಂತ ಬಂದ್ರೆ ಇನ್ನೂ ಹಾಳ್ ಮುಖಕ್ಕೆ ನೀರೂ ತೋರಿಸ್ದೇ ಕುತಗಂಡ್ ಇದ್ದೀಯಲ್ಲೋ?' ಎಂದು ಕಿಚಾಯಿಸಿದೆ, ನನ್ ಮಾತಿಗೆ ಉತ್ರ ಕೊಡೋ ಹಾಗೆ ಬಾಯಿ ತೆರದವನು 'ಅದ್ಯಾವ್ ಸೀಮೇ ಡಬ್ಬಾ ಇಸ್ತ್ರೀ ಪೆಟ್ಟಿಗೆ ಇಟ್ಟ್ಕೊಂಡಿದ್ದೀಯೋ...' ಒಮ್ಮೆ ಉಗುಳು ನುಂಗಿ, 'ನನ್ ಜೀನ್ಸ್ ಪ್ಯಾಂಟ್ ಮೇಲೆ ಇಡತಿದ್ದ ಹಾಗೇನೇ ಸುಟ್ಟು ಹೋಯ್ತು' ಎಂದು ಸಮಜಾಯಿಷಿ ಕೊಡಲು ನೋಡಿದನೋ ಆಗಲೇ ನನಗೆ ತಿಳಿದದ್ದು ಏನೋ ಎಡವಟ್ಟು ಆಗಿರಲೇ ಬೇಕು ಎಂದು.

'ನಿಜವಾಗೀ? ಸುಟ್ಟೇ ಹೋಯ್ತಾ...ಎಷ್ಟೋ ವರ್ಷದಿಂದ ಇಟ್ಟ್‌ಕೊಂಡಿದ್ದನಲ್ಲೋ...' ಎಂದು ನಾನು ಸುಟ್ಟು ಹೋದ ಐರನ್ ಬಾಕ್ಸ್ ಗತಿ ಕಂಡು ಮರುಕ ಪಡುತ್ತಿದ್ದರೆ, ಹಲ್ಲಿ ಮೇಲೆ ಆಕ್ರಮಣ ಮಾಡಿ ಬಾಲದ ತುಂಡಿನ ಜೊತೆ ಆಟವಾಡ್ತಾ ಇರೋ ಬೆಕ್ಕಿನ ಮರಿಯಂತೆ ಇವನ ಮುಖದ ಮೇಲೆ ಮಂದ ಹಾಸ ಸುಳಿಯತೊಡಗಿತು.

'ಅದ್ಕೇ ಅನ್ನೋದು ಅಮೇರಿಕದ ಪ್ರಾಡಕ್ಟ್‌ಗಳೆಲ್ಲಾ ಸರಿ ಇಲ್ಲಾ ಅನ್ನೋದು...'

'ಆಞ್, ನಿನಗೇನು ತಲೆಗಿಲೆ ಕೆಟ್ಟಿದಿಯೇನು?'

'ಮತ್ತೇನು, ಒಂದು ಇಪ್ಪತ್ ಡಾಲರ್ ಬಿಸಾಕಿ ನಿನ್ನಂಥಾ ಜುಜುಬಿ ನನ್ ಮಕ್ಳು ಇಸ್ತ್ರೀ ಪೆಟ್ಗೇ ತಗಂಡು ಅದನ್ನ ವರ್ಷಗಳ ಮಟ್ಟಿಗೆ ಬಳಸಿ ಬಾಳುಸ್ತಾ ಕುತಗಂಬಿಟ್ರೆ?' ಎಂದು ಅವನದ್ದೇ ಒಂದು ಭಾಷೆ, ತಾರ್ಕಿಕತೆಯಲ್ಲಿ ಸವಾಲನ್ನೊಡ್ಡಿದ, ನನ್ನ ಪರಿಸ್ಥಿತಿ ಮುಕ್ಕಾಲು ಘಂಟೇಯಿಂದ ಸಿಟಿಬಸ್ಸು ಕಾದು ಕುಳಿತ ಮಾರವಾಡಿ ಹುಡುಗ ಕೊನೆಗೂ ಬಂದ ಬಸ್ಸಿನ ಕನ್ನಡ ಅಂಕೆಗಳನ್ನು ಓದೋಕೆ ತಡವರಿಸೋರ ಥರ ಆಗಿತ್ತು.

'ಒಂದ್ ಸಾಮಾನ್ ತಗೊಂಡ್ರೆ ಅದು ಬಾಳಾ ದಿನಗಳವರೆಗೆ ಬಾಳಕೆ ಬರಲೀ ಅನ್ನೋದು ಲೋಕರೂಢಿ, ನಿನ್ನ ತಲೆ ಒಳಗೆ ಇನ್ನೇನಾದ್ರೂ ಇದ್ರೆ ಅದನ್ನು ದಯವಿಟ್ಟು ಬಿಡಿಸಿ ಹೇಳುವಂತವನಾಗು' ಎಂದೆ ನಾಟಕೀಯವಾಗಿ, ಅಲ್ಲಿ ನೋಡಿದ್ರೆ ಆಫೀಸ್ನಲ್ಲಿ ತಲೆ ತಿಂತಾರೆ, ಇಲ್ಲಿ ನೋಡಿದ್ರೆ ಇವನ್ದು ಬೇರೆ ಕೇಡಿಗೆ...ಎಂದು ಸ್ವಗತದಲ್ಲಿ ಹೇಳಿಕೊಳ್ಳುವವನಂತೆ.

'ನಿನಗೆ ಇಂಥವನ್ನೆಲ್ಲ ನನ್ನಂಥೋರ್ ಹೇಳ್ಕೊಡಬೇಕಾ? ನೋಡು, ನಮ್ ದೇಶದಲ್ಲಿ ಒಂದ್ ಸಾಮಾನ್ ತಗೊಂಡ್ರೆ, ಉದಾಹರಣೆಗೆ ಇಸ್ತ್ರೀ ಪೆಟ್ಗೇ ಅಂತಾನೇ ಇಟ್ಕೋ, ಅದು ವರ್ಷಕ್ಕೊಂದ್ ಸಾರೀನಾದ್ರೂ ಸುಟ್ಟ್ ಹೋಗುತ್ತೆ, ಅದರಿಂದ ದೇಶಕ್ಕೆ ಒಳ್ಳೇದೇ ಅಲ್ವೇ? ಯಾಕೇ ಅಂದ್ರೆ, ಹೀಗೆ ತಗೊಂಡ್ ಸಾಮಾನುಗಳು ಸುಟ್ಟು ಹೋಗೋದ್ರಿಂದ ಉತ್ಪತ್ತಿ ಹೆಚ್ಚುತ್ತೆ, ಅದರ ಪಾರ್ಟ್ಸು, ಸ್ಪೇರೂ ಅಂತ ಇನ್ನೊಂದಿಷ್ಟು ಬಿಸಿನೆಸ್ಸ್ ಬೆಳೆಯುತ್ತೆ, ಸರ್ವೀಸ್ ಸೆಂಟರುಗಳು ಹೆಚ್ಚುತ್ತೆ, ನಾಲ್ಕು ಜನಕ್ಕೆ ಕೆಲ್ಸಾ ಸಿಗುತ್ತೆ...ಅದನ್ನು ಬಿಟ್ಟು ಇಲ್ಲೀ ಥರ ಒಂದ್ಸರ್ತಿ ತಗೊಂಡ್ ಸಾಮಾನು ಹತ್ತು ವರ್ಷಾ ಬಂತು ಅಂತಂದ್ರೆ ಆ ಕಂಪನಿ ಬೆಳೆಯೋದ್ ಹೇಗೆ?' ಎಂದು ದೊಡ್ಡ ಸಾಮ್ರಾಜ್ಯವನ್ನು ಜಯಿಸಿದ ಸಾಮ್ರಾಟನ ನಗೆ ನಕ್ಕ.

'ಓಹೋ, ಹೀಗೋ...ವರ್ಷಾ ವರ್ಷಾ ತಗೊಂಡಿದ್ನೇ ತಗೊಳಕ್ಕೆ ದುಡ್ಡ್ ಯಾವಾನ್ ಕೊಡ್ತಾನೆ?' ನನ್ನ ಕುಹಕದ ಪ್ರಶ್ನೆ.

'ಅದೋ, ಬಾಳಾ ಸುಲ್ಬಾ, ಅಗತ್ಯ ವಸ್ತುವಿನ್ ಮೇಲೆ ಜನ ಖರ್ಚ್ ಮಾಡೋದ್ರಿಂದ ಅವರಲ್ಲಿರೋ ದುಡ್ಡ್ ಕಡಿಮೆಯಾಗಿ, ಕೆಟ್ಟ್ ಚಟಾ ಯಾವ್ದೂ ಬೆಳಸ್ಕೊಳ್ಳಿಕ್ಕೆ ಆಸ್ಪದಾನೇ ಇಲ್ಲಾ ನೋಡು!'

'ನೀನೋ ನಿನ್ ಲಾಜಿಕ್ಕೋ...ಒಂದ್ ಕೆಲ್ಸಾ ಮಾಡು, ಇಲ್ಲಿರೋ ಸಾಮಾನ್‌ಗಳನ್ನೆಲ್ಲಾ ಒಂದು ಸುತ್ಗೆ ತಗೊಂಡು ಕುಟಕೋಂತ ಬಾ...ಇಷ್ಟು ದಿನಾ ಚೆನ್ನಾಗ್ ಕೆಲ್ಸಾ ಮಾಡಿರೋ ಐರನ್ ಬಾಕ್ಸು ನೀನ್ ಕೈ ಹಾಕಿದ್ ಕೂಡ್ಲೇ ಕೈ ಕೊಡ್ತು ನೋಡು...ಏನು ಕೆಟ್ಟ ಕೈ ನೋಡು ನಿನ್ದು...ಅಲ್ಲಾದ್ರೆ ವೋಲ್ಟೇಜ್ ಏರುಪೇರು ಅಂತಾನಾದ್ರೂ ಅಂದು ಇನ್ನೊಬ್ರ ಕಡೇ ಬೆಟ್ಟ್ ಮಾಡಿ ತೋರಿಸ್‌ಬೋದಿತ್ತು, ಇಲ್ಲಿ ಬೇರೆ ಯಾರ್ದೂ ತಪ್ಪಿಲ್ಲ, ನಿನ್ದೇ, ಯೂಸರ್ ಎರರ್' ಎಂದಕೂಡ್ಲೇ ಶತಕವಂಚಿತ ತೆಂಡೂಲ್ಕರ್ ಪೆವಿಲಿಯನ್ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿರುವಾಗ ಮಾಡಿಕೊಂಡ ಮುಖದ ಹಾಗೆ ಸುಬ್ಬನ ಮುಖದಲ್ಲಿನ ನಗು ಮಾಯವಾಗಿ ಅದರ ಬದಲಿಗೆ ಒಂದು ಗಡಿಗೆಯ ಮುಖಕ್ಕೆ ಕಣ್ಣು, ಮೂಗು, ಕಿವಿ ಬರೆದು ಬೋರಲಾಗಿ ಹಾಕಿದ ಹಾಗೆ ಕಾಣತೊಡಗಿತು.

'ಈಗ ಯಾವನ್ದಾರ್ರೂ ತಪ್ಪಿರ್ಲಿ, ನನ್ನ್ ಪ್ಯಾಂಟು ಅರ್ಧ ಇಸ್ತ್ರೀ ಆಗಿರೋದ್ರಿಂದ ನಾನು ಜೀನ್ಸ್‌ನ ಹಂಗೇ ಹಾಕ್ಕೊಂಡು ಬರ್ತೀನಿ, ದಾರಿಯಲ್ಲಿ ಯಾವನಾದ್ರೂ ಪರಿಚಯ ಮಾಡ್ಸಿ, ಬರೀ ಪ್ಯಾಂಟಿನ ಒಂದೇ ಕಾಲನ್ನು ಇಸ್ತ್ರೀ ಮಾಡಿ ಹಾಕ್ಕೊಳೋದೇ ಇವನ ಅಭ್ಯಾಸ ಅಂತ ಮತ್ತೆಲ್ಲಾದ್ರೂ ಅಪಹಾಸ್ಯ ಮಾಡಿದ್ರೆ ನೋಡ್ಕೋ ಮತ್ತೆ' ಎಂದು ಅಡ್ವಾನ್ಸ್ ವಾರ್ನಿಂಗ್ ಕೊಟ್ಟ. ಬಚ್ಚಲುಮನೆಯ ಕಡೆಗೆ ಮುಖ ತೊಳೆಯಲು ಹೋಗುತ್ತೇನೆ ಎಂದು ಸನ್ನೆ ಮಾಡಿ ಹೋಗುತ್ತಿರುವಾಗ - 'ಹೊಸ ಇಸ್ತ್ರೀ ಪೆಟ್ಗೇ ತರಬೇಕಾದ್ರೆ ಎರಡನ್ನ್ ತರೋದ್ ಮರೀಬೇಡಾ, ನಾನೂ ಒಂದ್ ತಗೊಂಡ್ ಹೋಗ್ತೀನಿ, ವೋಲ್ಟೇಜ್ ನೋಡ್ಕೊಂಡ್ ತರಬೇಕಷ್ಟೇ...' ಎಂದು ಹೊಸ ಬೇಡಿಕೆಯೊಂದನ್ನು ಮಂಡಿಸಿದ.

ಕಾರ್ನಿವಲ್‌ಗೆ ಹೋದಾಗ ಅದಾಗಲೇ ಬಹಳಷ್ಟು ಜನರು ಬಂದಿದ್ದರಿಂದ ಎಲ್ಲಿ ಬೇಕೋ ಅಲ್ಲಿ ಪಾರ್ಕಿಂಗ್ ಸಿಗದಿದ್ದುದರಿಂದ ದೂರದಲ್ಲಿ ಪಾರ್ಕ್ ಮಾಡಿ ಸ್ವಲ್ಪ ನಿಧಾನವಾಗಿ ಜಾತ್ರೆಗೆ ಬರುವಂತಾಯಿತು. ಅಲ್ಲಲ್ಲಿ ಇನ್ನೂ ಚುಮುಚುಮು ಬೆಳಕಿನಿಂದಲೂ ಹುಣ್ಣಿಮೆಯ ನಂತರದ ದಿನವಾದ್ದರಿಂದ ತಿಳಿಮುಗಿಲಲ್ಲಿ ಅದೀಗ ತಾನೇ ಊಟಮಾಡಿ ತೊಳೆದಿಟ್ಟ ಸ್ಟೀಲ್ ತಟ್ಟೆಯಂತೆ ಹೊಳೆಯುತ್ತಿದ್ದ ಚಂದ್ರನಿಂದಲೂ ಜಾತ್ರೆಗೆ ಮತ್ತಷ್ಟು ಮೆರುಗುಬಂದಿತ್ತು. ಅದು ಆಡ್ತೀಯಾ, ಇದು ಆಡ್ತೀಯಾ ಎಂದು ಏನೇನೆಲ್ಲವನ್ನು ತೋರಿಸಿದರೂ ಸುಬ್ಬ ಯಾವುದರಲ್ಲೂ ಆಸಕ್ತಿಯನ್ನು ತೋರಿಸುವವನಂತೆ ಕಂಡುಬರಲಿಲ್ಲ. ಕಾಟನ್ ಕ್ಯಾಂಡಿ ತರತೀನಿ ತಡಿ ಎಂದು ಹೋದವನು ಭಾಳಾ ಜನ ಇದಾರೆ ಲೈನ್‌ನಲ್ಲಿ ಎಂದು ಬರಿ ಕೈಲಿ ಹಿಂತಿರುಗಿ ಬಂದಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಇನ್ನು ಐದು ನಿಮಿಷಗಳಲ್ಲಿ ಫೈರ್‌ವರ್ಕ್ಸ್ ಆರಂಭವಾಗುತ್ತದೆ ಎಂದು ಧ್ವನಿವರ್ಧಕದಲ್ಲಿ ಬಂದ ಶಬ್ದ ಪುರಾಣ ಕಾಲದ ಅಶರೀರವಾಣಿಯನ್ನು ನೆನಪಿಗೆ ತಂದಿತ್ತು.

ಪಾರ್ಕ್‌ನ ಯಾವುದೋ ಒಂದು ಮೂಲೆಯಲ್ಲಿ ಫೈರ್‌ವರ್ಕ್ಸ್ ಕಾಣುವುದೋ ಇಲ್ಲವೋ ಎಂಬ ಅನುಮಾನದಲ್ಲೇ ಕುಳಿತ ನಮಗೆ ಇನ್ನೂರು ಅಡಿಗಳಷ್ಟು ದೂರದಲ್ಲಿ ಸ್ವಚ್ಚಂದ ನಭದಲ್ಲಿ ಶಬ್ದಮಾಡಿಕೊಂಡು ಹಾರಿ ಥರಥರನ ರಂಗು ಮೂಡಿಸಿ ಮರೆಯಾಗುತ್ತಿದ್ದ ಪಟಾಕಿ, ಬಾಣಬಿರುಸುಗಳು ಸಾಕಷ್ಟು ಮುದನೀಡತೊಡಗಿದವು.

'there goes your tax dollar...' ಎಂದು ಸುಬ್ಬನ ಧ್ವನಿ ಗುಹೆಯೊಳಗಿನಿಂದ ಬಂದಂತೆ ಕೇಳಿಸಿತು, ಮೊದಲ ಎರಡು ನಿಮಿಷ ಸುಂದರವಾದ ಬಣ್ಣ ಬಣ್ಣದ ಪಟಾಕಿಯ ವೈವಿಧ್ಯಗಳನ್ನು ನೋಡಿ ಹೇಳಿದ ಕಾಮೆಂಟ್ ಅದಾಗಿತ್ತು.

ನಾನು, 'ಬರೀ ಬಣ್ಣಗಳನ್ನು ಮಾತ್ರ ನೋಡ್ಬೇಡಾ, ಆ ಪಟಾಕಿ ಹತ್ತಿ ಹಾರಿ ಸಿಡಿಯುವಾಗ ಬಣ್ಣದ ಹಿಂದಿನ ಹೊಗೆಯ ವಿನ್ಯಾಸವನ್ನೂ ನೋಡು' ಎಂದೆ.

'ಹೌದಲ್ವಾ, ಬರೀ ನಿನ್ನ್ ಟ್ಯಾಕ್ಸ್ ಡಾಲರ್ ಅಷ್ಟೇ ಅಲ್ಲ, ಒಂದ್ ರೀತಿ ಗ್ಲೋಬಲ್ ಪೊಲ್ಲ್ಯೂಷನ್ ಇದ್ದ ಹಾಗೆ ಇದು, ಇಂಥವನ್ನೆಲ್ಲ ಬ್ಯಾನ್ ಮಾಡ್ಬೇಕು' ಎಂದು ಸುಬ್ಬ ಹತ್ತು ವರ್ಷದಿಂದ ವಿಚಾರಣೆಗೆ ಒಳಪಟ್ಟ ಖೈದಿಗೆ ಮರಣದಂಡನೆ ವಿಧಿಸುವ ನ್ಯಾಯಾಧೀಶನಂತೆ ಹೇಳಿದ.

ಸ್ವಲ್ಪ ಚುಚ್ಚೋಣವೆಂದುಕೊಂಡು ನಾನು, 'ಹೌದು, ಅದೆಲ್ಲಾ ಹೊಟ್ಟೆಗೆ ಹಿಟ್ಟ್ ಇಲ್ದಿರೋ ಬಡ ದೇಶದೋರು ಹೇಳೋ ಮಾತು' ಎಂದೆ.

ಸುಬ್ಬ ತನಗೆ ನೋವಾದರೂ ತೋರಿಸಿಕೊಳ್ಳದೇ, 'ಒಂದ್ ಹೊಸ ಐಡಿಯಾ ಬಂತು! ಎಂದ.

ಟಾಪಿಕ್ ಏನಾದ್ರೂ ಬದಲಾಯಿಸ್ತಾನೋ ಎಂದು ಕುಹಕ ಯೋಚನೆ ನನ್ನ ತಲೆಯಲ್ಲಿ ಒಂದು ಕ್ಷಣದ ಮಟ್ಟಿಗೆ ಬಂದರೂ, ಇರಲಿ ನೋಡೋಣವೆಂದುಕೊಂಡು, 'ಏನಪ್ಪಾ ಅಂತಾ ಮಹಾ ಐಡಿಯಾ?' ಎಂದೆ.

'ಏನಿಲ್ಲ, ನಿನ್ನಂಥ ಘನಂದಾರೀ ತಲೇ ಇರೋ ಬೃಹಸ್ಪತಿಗಳನ್ನ ಒಂದೇ ಈ ಉಪಗ್ರಹ ಉಡಾವಣೇ ಮಾಡ್ತಾರಲ್ಲ, ಆಗ ಅವುಗಳಿಗೆ ಕಟ್ಟಿ ಹಾರಿಸ್‌ಬೇಕು, ಇಲ್ಲಾ ಈ ಪಟಾಕಿಗಳಿಗಾದ್ರೂ ಕಟ್ಟಿ ಬಿಟ್ಟು ಸುಮ್ನೇ ಹಾರಿಸಿ ಯಾವ್ದಾದ್ರೂ ಲೋಕಾ ಸೇರಿಸ್‌ಬೇಕು ನೋಡು' ಎಂದ. ಇವನೇನಪ್ಪಾ ಬಯ್ಯೋಕ್ ಶುರು ಹಚ್ಕೊಂಡ್ನಲ್ಲಾ ಎಂದು ಯೋಚಿಸ್ತಿದ್ದ ನನ್ನನ್ನು ತಡೆದು, 'ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ ತಿಳಕೋ!' ಎಂದು ಹೇಳಿ ಬಾಯಿ ಹೊಲಿಸಿಕೊಂಡವನಂತೆ ಸುಮ್ಮನಾಗಿ ಅದ್ಯಾವುದೋ ಪಥವನ್ನು ಹುಡುಕಿ ಮೇಲೆ ಹಾರುತ್ತಿದ್ದ ಪಟಾಕಿ ರಾಕೇಟುಗಳನ್ನು ನೋಡೋದರಲ್ಲಿ ತಲ್ಲೀನನಾಗಿ ಹೋದ, ನಾನು ನನ್ನ ಪ್ರಪಂಚದಲ್ಲಿ ಮುಳುಗಿಕೊಂಡೆ.

Sunday, July 22, 2007

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.

ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!

ಬಟ್ಟೆಗಳನ್ನು ಒಂದ್ ಲೋಡ್ ವಾಷಿಗೆ ಹಾಕಿ ಲಿವಿಂಗ್ ರೂಮ್‌ಗೆ ಬಂದ ನನಗೆ, ಸೋಫಾದ್ ಮೇಲೆ ಎರಡೂ ಕಾಲನ್ನು ಇಟ್ಟುಕೊಂಡು ಮಂಡಕ್ಕಿ ಭಟ್ಟೀ ಮುಂದೆ ಕೂರೋ ಮೆಹಮೂದನ ಥರ ಕುಕ್ಕರಗಾಲಿನಲ್ಲಿ ಕುಳಿತು ಟೀವೀನೇ ತಿಂದು ಹೋಗೋ ಹಾಗೆ ಏನೋ ಕಾರ್ಯಕ್ರಮ ನೋಡ್ತಾ ಇದ್ದ ಸುಬ್ಬನ್ನ ನೋಡಿ ನನಗೆ ಸಿಟ್ಟೇ ಬಂತು, 'ಏನೋ ಅದು, ನೆಟ್ಟಗ್ ಕುತಗಾ...' ಎಂದು ತಿವಿದು ಹೇಳಲು ನನ್ನ ಮಾತು ಎಮ್ಮೆ ಚರ್ಮದವನಿಗೆ ಸೊಳ್ಳೆ ಕಚ್ಚಿದಂತೆ ಯಾವ ಪರಿಣಾಮವನ್ನೂ ಬೀರಲಿಲ್ಲ.

'ಇಲ್ಲ್ ಬಂದು ನೋಡು, ಏನು ಆಕ್ಟಿಂಗ್ ಮಾಡವನೇ ಅಂತ...' ಎಂದು ಟಿವಿಯಲ್ಲಿ ರಾಜ್‌ಕುಮಾರ್ ವಿಠ್ಠಲ ವಿಠ್ಠಲ ಎಂದು ಹಾಡಿಕೊಂಡು ಕುಣಿಯುತ್ತಿದ್ದ ದೃಶ್ಯವನ್ನು ತೋರಿಸಿ ಟೀಪಾಯ್ ಮೇಲಿರೋ ಹುರಿದ ಗೋಡಂಬಿ ಬೀಜಗಳನ್ನು ಬಾಯಿಗೆ ತುಂಬಿ ಮತ್ತೆ ಮುಂದುವರೆಸಿದ, 'ಆಹಾ, ಸಿನಿಮಾ ಅಂದ್ರೆ ಹಿಂಗಿರಬೇಕು ನೋಡು, ಬಕ್‍ತಾ ಕುಂಬಾರ್‌ನ ಥರಾ ಈಗೆಲ್ಲಾ ಸಿನಿಮಾನೇ ಬರಲ್ಲ ನೋಡು...' ಎಂದು ಇನ್ನೇನನ್ನೋ ಹೇಳುವವನನ್ನು ಅಲ್ಲಿಗೆ ನಿಲ್ಲಿಸಿ,

'ಭತ್ತ ಕುಂಬಾರ ಅಲ್ಲ, ಹುರುಳೀ ಕುಂಬಾರ, ರಾಗೀ ಕುಂಬಾರ ಅನ್ನು... ಅಂಥಾ ಸಿನಿಮಾಗಳೇ ಬರ್ತಾವೆ...ನೆಟ್ಟಗೆ ಭಕ್ತ ಕುಂಬಾರ ಅನ್ನಾಕ್ ಬರಲ್ಲಾ ನಿನಗೆ...ಮತ್ತೆ ಒಳ್ಳೊಳ್ಳೇ ಸಿನಿಮಾ ನೋಡೋದ್ ಬೇರೆ ಕೇಡಿಗೆ' ಎಂದು ತಿವಿದೆ.

'ಅವರಿವ್ರುನ್ನ್ ಆಡಿಕೊಳ್ಳೋದೇ ಬದುಕಾಗಿ ಹೋಯ್ತು ಬಿಡು ನಿಂದು' ಎಂದು ಸಿಟ್ಟು ಬಂದವನಂತೆ ಮುಖ ಮಾಡಿ, ಸ್ವಲ್ಪ ಹೊತ್ತು ಸುಮ್ಮನಿದ್ದವನು ಟಿವಿಯ ಕಡೆಗೆ ಕೈ ತೋರಿಸಿ, 'ಈ ಹೃದಯದಿಂದ ಅಂತ ಪ್ರೋಗ್ರಾಮ್ ಬರತ್ತಲ್ಲಾ ಅದರ ತಲೆ-ಬುಡಾ ಒಂದೂ ಅರ್ಥಾ ಆಗಲ್ಲಪ್ಪಾ...ಯಾರ್ದೋ ಹುಟ್ಟಿದ ಹಬ್ಬ, ಈ ಹುಡುಗಿ ಓದಿ ಹೇಳ್ತಾಳೆ, ಕೊನೆಗೊಂದು ಅಣಿಮುತ್ತು ಸುರುಸೋದ್ ಬೇರೆ ಕೇಡಿಗೆ, ಒಂದೂ ಸುಖಾ ಇಲ್ಲಾ, ಸಂಬಂಧಿಲ್ಲ...ಫೋಟೋ ತೋರುಸ್ದೋರುನ್ನ ಬಸವರಾಜು ಅಂತಾನಾದ್ರೂ ಕರಕೊಳ್ಳೀ, ವಿಶ್ವನಾಥಾ ಅಂತಾ ಬೇಕಾದ್ರೂ ಅನ್ಲಿ...ಯಾವನಿಗ್ ಗೊತ್ತಾಗುತ್ತೆ...ಯಾರ್ದೋ ಮುಖಾ, ಯಾವ್ದೋ ನುಡಿ, ಇನ್ಯಾರ್ದೋ ಹಾಡು...ಈ ಕರ್ಮಕಾಂಡವನ್ನ ಎರಡ್ ಸಾವಿರದ ಏಳ್‌ರಲ್ಲೂ ಹೊಸತೂ ಅಂತ ತೋರ್ಸೋರ್ ಕರ್ಮಾ ದೊಡ್ದಾ, ಇಂಥವನ್ನೆಲ್ಲಾ ಬಾಯ್‌ಬಿಟ್ಟ್ಕೊಂಡ್ ನೋಡೋರ್ ಮರ್ಮಾ ದೊಡ್ದಾ?'

'ನಿಂಗ್ ಬೇಕಾಗಿದ್ದು ಹಾಡ್‌ಗಳು ತಾನೇ, ಅಷ್ಟನ್ನ್ ಮಾತ್ರಾ ನೋಡು, ಒಂದ್ ರೀತಿ ಜಟಕಾ ಕುದ್ರೆಗೆ ಕಣ್‌ಪಟ್ಟೀ ಕಟ್ತಾರಲ್ಲಾ ಹಾಗೆ, ನಿನ್ನ್ ಚಿತ್ತ ಚಾಂಚಲ್ಲ್ಯ ಕಡಿಮೇ ಆಗ್ಲೀ ಅಂತ್ಲೇ ಇಷ್ಟೆಲ್ಲಾ ವೇರಿಯೇಷನ್ನ್‌ಗಳಿರೋ ಪ್ರೋಗ್ರಾಮ್ ಹಾಕಿರೋ ಆ ಮಹಾನುಭಾವರು ಒಂದು ರೀತೀಲೀ ನಮ್ ಪರಂಪರೇಗೇ ಕನ್ನಡಿ ಹಿಡಿದಂಗ್ ಕಾಣ್ಸಲ್ಲಾ...'

'ಸಾಯ್ಲಿ ಬಿಡು, ನಮ್ಮ್ ಕರ್ಮಾ...ಮತ್ತೊಂದ್ ವಿಷ್ಯಾ ಗೊತ್ತಾ ನಿನಗೇ? ಈ ಪುನೀತನ್ನ ಮುಂದಿನ್ ಸಾರಿ ಓಲಂಪಿಕ್ಸ್‌ಗೆ ಕಳಿಸ್ತಾರಂತೆ!'

'ಲೋ, ನಾನೇನ್ ಕಿವೀ ಮೇಲ್ ಹೂವಿಟ್‌ಗೊಂಡಂಗ್ ಕಾಣ್ತೀನಾ?'

'ಇಲ್ವೋ, ನಿನ್ನೇ ರೆಕಾರ್ಡ್ ಮಾಡಿಟ್ಟಿದ್ ಸಿನಿಮಾ ನೋಡ್ಲಿಲ್ಲಾ ನೀನು? ಅದೆಷ್ಟ್ ಎತ್ರ ಹಾರ್‌ತವನೇ, ಜಿಗಿತವನೇ...ಪೋಲ್‌ವಾಲ್ಟ್ ಇಲ್ದೇನೇ ಸರ್ಗೈ ಬುಬ್ಕಾನಾ ಸೋಲ್ಸೋ ಅಷ್ಟ್ ಎತ್ರಾ ಹಾರಿ ನಾಲ್ಕ್ ಜನರಿಗೆ ಒದೆಯೋನ್ನ ಈ ಓಲಂಪಿಕ್ಸ್ ಆಯ್ಕೆ ಕಮಿಟಿಯೋರು ಯಾಕ್ ನೋಡೋದಿಲ್ಲಾ ಅಂತ? ನಮ್ ಸಿನಿಮಾಗಳ್ನ ಅದ್ಯಾವ್ದೋ ದೇಶದ ಪ್ರಶಸ್ತಿಗಳಿಗೆ ಕಳಿಸಿ ಬಾಯಲ್ಲಿ ಜೊಲ್ಲ್ ಸುರಿಸೋ ಬದ್ಲಿ ಈ ಓಲಂಪಿಕ್ಸ್ ಆಯ್ಕೆ ಸಮಿತೀಗಾದ್ರೂ ಕಳ್ಸ್‌ಬೇಕಪ್ಪಾ?'

ಅವನ ಈ ಮಾತ್ ಕೇಳಿ ಏನ್ ಹೇಳೋಕೂ ನನಗೊತ್ತಾಗ್ಲಿಲ್ಲಾ, ಇವನ ಕುಚೇಷ್ಟೆಗೆ ಸುಮ್ನಿರೋದೇ ವಾಸಿ ಎಂದು ಸುಮ್ನಿದ್ದೋನ್ನ ಮತ್ತೆ ತಿವಿದು ಹೃದಯದಿಂದ ಕಾರ್ಯಕ್ರಮದಲ್ಲಿ ಬರೋ ಯಾವ್ದೋ ಅನಂತ್‌ನಾಗ್ ಹಾಡು ತೋರಿಸಿ...'ನೋಡು, ಇವನೊಬ್ಬ...ಯಾರೇ ಸುಂದರಿ ತನ್ನೆದುರಿಗೆ ಕುಣಿದ್ರೂ ಬರೀ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ಓಡ್ತೀನಿ ಅಂತ ಪ್ರಮಾಣ ಮಾಡಿರೋ ಹಾಗಿದೆ!' ಎಂದು ಸ್ಪ್ರಿಂಗ್ ಆಕ್ಷನ್ನ್‌ನಲ್ಲಿ ನಿಧಾನವಾಗಿ ಓಡೋ ಬಿಳಿ ಅಂಗಿ ಬಿಳಿ ಪ್ಯಾಂಟಿನ ಅನಂತ್‌ನಾಗ್ ಕಡೆ ಬೆರಳು ತೋರಿಸಿದ.

'ಅವನಿಗೆ ಡ್ಯಾನ್ಸ್ ಬರಲ್ಲಾ ಆದ್ರೆ ಒಳ್ಳೇ ನಟಾ ತಾನೆ...' ಎಂದು ನನಗೆ ಮುಂದುವರಿಸುವುದಕ್ಕೂ ಆಸ್ಪದ ಕೊಡದೇ,

'ಕುಣೀಯೋಕ್ ಬರ್ದೇ ಇದ್ರೇ ಸುಮ್ನೇ ಇರಬೇಕಪ್ಪಾ, ಅತ್ಲಾಗ್-ಇತ್ಲಾಗ್ ಓಡು ಅಂತ ಯಾರ್ ಹೇಳ್ದೋರು? ನಿಜ ಜೀವನದಲ್ಲಿ ಕೆಆರ್‌ಎಸ್ ಹೋಗ್ ನೋಡು, ಅಲ್ಲಿ ಯಾವನೂ ಹಾಡೋದೂ ಇಲ್ಲ, ಯಾವನೂ ಓಡೋದೂ ಇಲ್ಲಾ...'

ಇವನ್ದೂ ಬಾಳಾ ಅತಿಯಾಯ್ತು ಎಂದು ಸ್ವಲ್ಪ ತಲೆ ತಿನ್ನತೊಡಗಿದೆ...'ನಿನಗೇನ್ ಬೇಕು ಸಿನಿಮಾದಲ್ಲಿ? ಕಥೆಯೋ, ನಟನೆಯೋ, ಗಾನವೋ, ಗಾಯನವೋ? ಒಂದು ನೂರು ಕೋಟಿ ಇರೋ ಜನರ ಮಧ್ಯೆ ಯಾರ್ ಯಾರಿಗೆ ಏನೇನ್ ಬೇಕು ಅಂತೆಲ್ಲಾ ಕೇಳಿಕೊಂಡು ಅದನ್ನೆಲ್ಲಾ ಎರಡೂವರೆ ಘಂಟೆ ಸಿನಿಮಾದಲ್ಲಿ ತೋರ್ಸೋಕ್ ಮನುಷ್ಯನ್ ಕೈಯಿಂದ ಸಾಧ್ಯವೇ? ಯಾವ್ದೋ ದೇಶದಲ್ಲಿ ಓಪನ್ ಸೆಕ್ಸ್ ಇದ್ದಂಗೆ ನಮ್ಮಲ್ಲಿನ್ನೂ ಬಂದಿಲ್ಲದ್ದಕ್ಕೆ ಜನಗಳು ಸಿನಿಮಾದಲ್ಲೇ ಸರ್ವಸ್ವವನ್ನೂ ಕಾಣ್‌ಬೇಕು ಅಂತ ಹಾತ್ ಹೊರೀತಾರೆ, ಅವ್ರೇ ಅಭಿಮಾನಿಗಳು, ಅವ್ರೇ ಈ ಡಿವಿಡೀ, ವಿಡಿಯೋ ಕಾಲ್ದಲ್ಲೂ ಕಷ್ಟಪಟ್ಟ್ ದುಡ್ದಿರೋದನ್ನ ಖರ್ಚ್ ಮಾಡಿ ಥಿಯೇಟ್ರಿಗ್ ಹೋಗೋರು...ನಿನ್ನಂಥ ಬುದ್ಧಿವಂತ್ರುನ್ನ ನಂಬ್‌ಕೊಂಡ್ ಯಾವನ್ನಾದ್ರೂ ಸಿನಿಮಾ ಮಾಡಿದ್ರೆ ಅವ್ರ ಹೊಟ್ಟೇ ಮೇಲೆ ತಣ್ಣೀರ್ ಬಟ್ಟೇನೇ ಗತಿ!' ಎನ್ನಲು ಸುಬ್ಬನ ಮುಖ ತುಸು ಗಂಭೀರವಾಯಿತು...ಇಷ್ಟೊತ್ತು ಗೋಡಂಬಿಯನ್ನು ಮೇಯುತ್ತಿದ್ದ ಒಸಡುಗಳು ಮೆಲುಕು ಹಾಕುವ ಜಾನುವಾರಿನಂತೆ ನಿಧಾನವಾಗಿ ಅಲ್ಲಾಡತೊಡಗಿದವು.

'ಓಹೊಹೋ, ಎನು ಪುಳಿಚಾರು ತಿನ್ನೋ ಬ್ರಾಹ್ಮಣ ಮಸಾಲೆಯನ್ನು ಸಾಧಿಸಿಕೊಳ್ಳೋ ಸ್ವರೂಪಾ ಕಾಣ್ತಿದೆಯಲ್ಲಾ...' ಎಂದು ನನ್ನನ್ನು ಲೇವಡಿ ಮಾಡೋದಕ್ಕೆ ಪ್ರಯತ್ನ ಮಾಡಿದ, 'ನಾವೂ ಸಿನಿಮಾಗಳ ಧ್ವನಿಯೇ...ಮುಕ್ತ ಮಾಧ್ಯಮ ಅನ್ನೋ ಹೆಸರಿನಲ್ಲಿ ಇವರೆಲ್ಲಾ ಉಣಿಸಿದ್ದನ್ನು ಊಟಾ ಅಂತಂದು ಉಂಡೂ ಉಂಡೂ ಈಗ ಹೊಟ್ಟೇ ಎಲ್ಲಾ ಉರೀತಿರದು...ಜನ ಸಾಮಾನ್ಯರಿಗೆ ಮನರಂಜನೇ ಹಂಚ್ತೀವಿ ಅಂತಂದು ದೊನ್ನೇನಲ್ಲಿ ಸಗಣೀ ತಿನ್ಸೋರನ್ನ ಪುರಸ್ಕರಿಸ್ತಾ ಇದ್ದೀಯಲ್ಲಾ, ತೆಲೆಗಿಲೇ ನೆಟ್ಟಗಿದೆಯೋ ಇಲ್ವೋ?'

'ಮತ್ತೆ...ತಲೆ ನೆಟ್ಟಗಿರೋ ನೀನು ಇಂಥವನ್ನೆಲ್ಲಾ ನೋಡೋದ್ಯಾಕೆ, ನೋಡಿದ್‌ಮೇಲೆ ಅವುಗಳ ಬಗ್ಗೆ ಅರಚೋದ್ಯಾಕೆ...ಸುಮ್ನಿರಬೇಕು...ನಿನ್ನ ವಿಮರ್ಶೆ ಕೇಳಿ ಬಹಳಷ್ಟು ಕೋಟೇ ಕೊತ್ತಲಗಳು ಉರುಳಿ ಹೋಗೋದ್ ಅಷ್ಟರಲ್ಲೇ ಇದೆ...' ಎಂದೆ ಸ್ವಲ್ಪ ಗಡಸು ಧ್ವನಿಯಲ್ಲಿ.

ನನ್ನ ಧ್ವನಿ ಇಷ್ಟವಾಗಲಿಲ್ಲವೆಂದು ಮುಖದಲ್ಲಿ ತೋರಿಸಿಕೊಳ್ಳದಿದ್ದರೂ ಪಕ್ಕದ ರಿಮೋಟನ್ನು ಎತ್ತಿಕೊಂಡು ಒಡನೇ ಹೃದಯದಿಂದ ಕಾರ್ಯಕ್ರಮವನ್ನು ಅಷ್ಟಕ್ಕೇ ನಿಲ್ಲಿಸಿ ಯಾವುದೋ ವಿಷ್ಣುವರ್ಧನ್ ನಟಿಸಿರೋ ಸಿನಿಮಾವನ್ನು ಅರ್ಧದಿಂದ ನೋಡಲಾರಂಭಿಸಿದ...

'ಸರಿ ನನಗೆ ಕೆಲ್ಸವಿದೆ...' ಎಂದು ಬಟ್ಟೆ ಒಗೆದಾಯ್ತೋ ಎಂದು ನೋಡಲು ವಾಷಿಂಗ್ ಮೆಷೀನ್ ಇರೋ ರೂಮಿನ ಕಡೆಗೆ ಹೊರಟೆ, ನಾನು ಮತ್ತಿನ್ನೆಲ್ಲೋ ಹೊರಟೆನೆಂದು ಊಹಿಸಿ, 'ಮತ್ತೇ...ಮದುವೆ ಊಟಾ ಮುಗಿಸ್ಕೊಂಡೇ ಹೋಗು!..' ಎಂದು ನನ್ನ ಊಹೆಗೂ ನಿಲುಕದ ದೊಡ್ಡ ಸವಾಲೊಂದನ್ನು ಎಸೆದನಾದ್ದರಿಂದ ನಾನು ಅರ್ಧದಲ್ಲೇ ನಿಂತು, ಅವನ ಕಡೆಗೆ ಪ್ರಶ್ನಾರ್ಥಕ ನೋಟ ಹರಿಸಿದ್ದಕ್ಕೆ,

'ಏನಿಲ್ಲ, ಈ ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಮದುವೆ ಆಗುತ್ತಲ್ಲಾ, ಆ ಮದುವೆ ಊಟದ ಬಗ್ಗೆ ಹೇಳಿದೆ!' ಎಂದು ಜೋರಾಗಿ ನಗಾಡಲು ತೊಡಗಿದ.

'ಮದುವೆ ಮಾಡ್ದೋನೂ, ನೋಡ್ದೋನು ಎಲ್ಲಾ ನೀನೆ...ಮರ್ಯಾದೆಯಿಂದ ಎದ್ದು ಪಾತ್ರೆ ತೊಳೀ...' ಎಂದು ಆದೇಶ ಹೊರಡಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ, ಸುಬ್ಬನ ಕಣ್ಣುಗಳು ಮತ್ತೆ ಟೀವಿಯಲ್ಲಿ ಲೀನವಾದವು.