Showing posts with label ದೇವರು. Show all posts
Showing posts with label ದೇವರು. Show all posts

Sunday, November 28, 2021

ಸೋಜಿಗದ ಸಮೂಹ

 ಈ ವಿಶ್ವದ ಒಂದು ಸಣ್ಣ ಗೋಲವಾದ ಭೂಮಿಯ ಪದರು-ಮಡಿಕೆ-ಪೊಟರೆಗಳಲ್ಲಿ ಅನೇಕಾನೇಕ ಜೀವರಾಶಿಗಳು... ಈ ಸಮೂಹವನ್ನ ಕೋಟ್ಯಾಂತರ ಜೀವರಾಶಿಗಳೇ ಎನ್ನಬಹುದು.  ಹೆಚ್ಚಿನವು ಮಾನವನ ಕಣ್ಣಿಗೆ ಬಿದ್ದು ಅವುಗಳ ’ಜನಗಣತಿ’ ಅಥವಾ ಅವನತಿ ಆದಂತಿದ್ದರೆ, ಇನ್ನು ಕೆಲವು ಜೀವಜಂತುಗಳನ್ನು ಇದುವರೆಗೂ ಯಾರೂ ನೋಡಿಯೂ ಇಲ್ಲ!  ಸಮುದ್ರ-ಸಾಗರಗಳ ಆಳದಿಂದ ಹಿಡಿದು, ಭೂಮಿಯ ಅನೇಕ ಮೈಲುಗಳ ಕೆಳ ಪದರಗಳಲ್ಲಿಂದ ಹಿಡಿದು, ಭೂಮಿಯ ಮೇಲಿನ ವಾತಾವರಣದಲ್ಲಿಯೂ ಬದುಕಿ ಬಾಳಬಲ್ಲ ಈ ಜೀವ ಸಮೂಹವನ್ನು ಸೃಷ್ಟಿ ಅದೆಷ್ಟು ಚೆನ್ನಾಗಿ ಹೆಣೆದುಕೊಂಡಿದೆ! ಒಂದರ ಮೇಲೆ ಮತ್ತೊಂದು ಜೀವ-ಜೀವಿಯ ಅವಲಂಭನೆಯನ್ನು ಯಾರೋ ಅದೆಷ್ಟು ಚೆನ್ನಾಗಿ ಸೃಷ್ಟಿಸಿದ್ದಾರೆ ಎನ್ನಿಸೋದಿಲ್ಲವೇ?

***

ನಮ್ಮ ನ್ಯೂ ಯಾರ್ಕ್ ನಗರದ ಎಂಪೈರ್ ‌ಸ್ಟೇಟ್ ಬಿಲ್ಡಿಂಗ್ ನೆಲದಿಂದ ಸುಮಾರು 1400 ಅಡಿ ಎತ್ತರದಲ್ಲಿದೆ.  ಒಬ್ಬ ವ್ಯಕ್ತಿಯ ಎತ್ತರ ಸುಮಾರು ಆರು ಅಡಿಗಳು ಎಂದಾದಲ್ಲಿ ಈ ಕಟ್ಟಡ ಎತ್ತರ ಸುಮಾರು 235 ಪಟ್ಟು.  ಅದೇ ಒಂದು ಇರುವೆಯ ಎತ್ತರ ಸುಮರು 0.14 ಇಂಚುಗಳು, ಅಂದರೆ, 0.012 ಅಡಿಗಳು ಎಂದಾದಲ್ಲಿ, ಆ ಇರುವೆಯ ಎತ್ತರವನ್ನು ಒಬ್ಬ ಆರು ಅಡಿಯ ಮನುಷ್ಯನಿಗೆ ಹೋಲಿಸಿದಲ್ಲಿ, ಇರುವೆಗಿಂತ ಮಾನವ ಸುಮಾರು 500 ಪಟ್ಟು ಎತ್ತರ, ಅಂದರೆ, ಮಾನವನ ಗಾತ್ರ ಇರುವೆಗೆ, ಒಂದು ಬುರ್ಜ್ ಖಲೀಫ಼ಾ ಕಟ್ಟಡವಾಗಿ ಕಾಣಬಹುದು (ಬುರ್ಜ್ ಖಲೀಫ಼ಾದ ಎತ್ತರ 2722 ಅಡಿ, ಅಂದರೆ ಮಾನವಗಿಂತ ಸುಮಾರು 453 ಪಟ್ಟು ಹೆಚ್ಚು).

ಇನ್ನು ನಮ್ಮ ಕಣ್ಣಿನ ಎತ್ತರದ ಆಕಾಶದ ವಿಚಾರಕ್ಕೆ ಬರುವುದಾದರೆ, ಸುಮಾರು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ನಾವು ಮೋಡಗಳನ್ನು ನೋಡುತ್ತೇವೆ, ಅದಕ್ಕಿಂತಲೂ ಎತ್ತರದಲ್ಲಿ ಅಂದರೆ 36,000 ಅಡಿಗಳಷ್ಟು ಎತ್ತರದಲ್ಲಿ ನಮ್ಮ ವಿಮಾನಗಳು ಹಾರಾಡುತ್ತವೆ.  ಇದಕ್ಕಿಂತಲೂ ಹೆಚ್ಚಿನದ್ದು ನಮ್ಮ ಆಕಾಶವಾಗುತ್ತದೆ.  ಅದು ಎಲ್ಲದ್ದಕ್ಕೂ ಮೀರಿದ್ದು.

ಇದೇ ಆಕಾಶವನ್ನು ನಾವು ಒಂದು ಇರುವೆಯ ಗಾತ್ರದಲ್ಲಿ ಯೋಚನೆ ಮಾಡಿದರೆ, ಆ ಇರುವೆಯ 20 ಅಡಿಗಳಲ್ಲಿ ಮೋಡಗಳು ತೇಲುತ್ತವೆ, ಹಾಗೆ 72 ಅಡಿ ಎತ್ತರದಲ್ಲಿ ಕಮರ್ಷಿಯಲ್ ವಿಮಾನಗಳು ಹಾರಾಡುತ್ತವೆ...ಉಳಿದದ್ದೆಲ್ಲ ನಭೋಮಂಡಲವಾಗುತ್ತದೆ.

ಈ ವಿಚಾರವನ್ನು ಏಕೆ ಹೇಳಬೇಕಾಗಿ ಬಂತೆಂದರೆ: ನಾವು ಹುಲು ಮಾನವರು.  ಈ ಪ್ರಾಣಿ ಪ್ರಬೇಧಗಳಲ್ಲಿ ನಾವು ನಮ್ಮನ್ನೇ ಹಿರಿದು ಎಂದುಕೊಂಡು ಹಿಗ್ಗುತ್ತೇವೆ, ಜೊತೆಗೆ ನಮಗೆ ಸಿಗಬಹುದಾದ ಸಂಪನ್ಮೂಲಗಳನ್ನು ಯಥಾ ಇಚ್ಚೆ ಬಳಸುತ್ತೇವೆ.  ಆದರೆ, ನಮಗಿಂತಲೂ ದೊಡ್ಡ ಜೀವಜಂತುಗಳು ಈ ವಿಶ್ವದಲ್ಲಿ ಇರಬಹುದೇ ಎಂದು ನಮಗೆ ಯೋಚಿಸಲು ಸಾಧ್ಯವಿದೆಯೇ? ನಾವು ನಮ್ಮನ್ನು ಒಂದು ಇರುವೆಯ ಗಾತ್ರಕ್ಕೆ ಹೋಲಿಸಿಕೊಂಡರೆ, ಆ ಇರುವೆಯ ಕಣ್ಣುಗಳಲ್ಲಿ ಒಂದು ಮಾನವನಷ್ಟು ದೊಡ್ಡ ಜೀವಿಯನ್ನು ನೋಡಲು ಸಾಧ್ಯವಿದೆಯೇ?

ಕೆಲವೊಮ್ಮೆ ಫ್ರೀವೇಗಳಲ್ಲಿ ಟ್ರಾಫ಼ಿಕ್ ಜಾಮ್ ಆದ ದೃಶ್ಯಗಳನ್ನು ನೋಡಿದಾಗ, ಅಲ್ಲಿ ಒಂದರ ಹಿಂದೆ ಒಂದರಂತೆ ನಿಧಾನವಾಗಿ ತೆವಳುವ ಕಾರುಗಳು ಇರುವೆಯ ಸಾಲುಗಳನ್ನು ನೆನಪಿಸುತ್ತವೆ.  ನೀವು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹೋಗಿ ಅಲ್ಲಿನ ಅಬ್ಸರ್‌ವೇಟರಿಯಿಂದ ನೋಡಿದರೆ, ಕೆಳಗೆ ಹರಿದಾಡುವ ಮನುಷ್ಯರು ಚಿಕ್ಕ ಇರುವೆಗಳಂತೆಯೇ ಕಾಣುತ್ತಾರೆ.

ಇನ್ನು ಈ ಇರುವೆಯ ಹವಾಮಾನ ಮುನ್ಸೂಚನೆ ಹೇಗಿರಬಹುದು? ನಾವು ಕಸ ಹೊಡೆದರೆ ಅವಕ್ಕೆ ಬಿರುಗಾಳಿ ಬೀಸಿದ ಅನುಭವವಾಗಬಹುದು.  ನಮ್ಮ ಬಚ್ಚಲು ಮನೆಗಳಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗುವ ಅವುಗಳಿಗೆ ಮಹಾಪ್ರಪಾತದ ದೃಶ್ಯದ ಅರಿವಾಗಬಹುದು.  ತಮ್ಮ ಮೇಲೆ ಬೀಳುವ ಒಂದೊಂದು ಹನಿ ನೀರೂ ಸಹ, ದೊಡ್ಡ ಪರ್ವತದ ಗಾತ್ರವನ್ನು ಮೈ ಮೇಲೆ ಹಾಕಿದ ಹಾಗೆ ಆಗಬಹುದು.  ಇನ್ನು ಬೆಂಕಿಯ ವಿಚಾರವಂತೂ ಯೋಚಿಸಲೂ ಆಗದಷ್ಟು ದೊಡ್ಡದಿರಬಹುದು.  ಹೀಗೆ ನಮ್ಮನ್ನು ನಾವು ಒಂದು ಇರುವೆಯನ್ನಾಗಿ ಊಹಿಸಿಕೊಂಡು ನೋಡಿದರೆ, ಈ ವಿಶ್ವದಲ್ಲಿ ಅದೆಷ್ಟು ಸೋಜಿಗಗಳಿರಬಹುದು ಎನಿಸೋದಿಲ್ಲವೇ?

***

ಇನ್ನು ಆತ್ಮದ ವಿಷಯಕ್ಕೆ ಬರುವುದಾದರೆ, ಎಲ್ಲ ಜೀವಿಗಳಲ್ಲೂ "ಜೀವ" ಇರುವ ಹಾಗೆ, ಅವುಗಳಲ್ಲೂ ಒಂದೊಂದು ಆತ್ಮ ಇದೆಯೇ?  ಅಥವಾ ಆತ್ಮ ಕೇವಲ ಮಾನವರಿಗೆ ಮಾತ್ರ ಸಂಬಂಧಿಸಿದ್ದೋ?

ಈ ವಿಶ್ವದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆತ್ಮಗಳಿದ್ದು, ಅವೇ ದೇಹದಿಂದ ದೇಹಕ್ಕೆ ವರ್ಗಾವಣೆಯಾಗುತ್ತವೆಯೋ? ಅಥವಾ ಜೀವಿಗಳು ಹೇಗೆ ಅನಿರ್ಧಿಷ್ಟ ಪ್ರಮಾಣದಲ್ಲಿರುವಂತೆ ಆತ್ಮಗಳೂ ಇದ್ದು, ಎಲ್ಲ ಜೀವಿಗೂ ಒಂದೊಂದು ಆತ್ಮ ಯಾವಾಗಲೂ ಇರುತ್ತದೆಯೋ?  ಹಾಗಾದರೆ ಮುಕ್ತಿ ಹೊಂದುವ ಆತ್ಮಗಳು ಹೋಗುವುದಾದರೂ ಎಲ್ಲಿಗೆ?  ಈ ಆತ್ಮ ಇಂದಿಗೆ ಮುಕ್ತಿ ಹೊಂದುತ್ತದೆ ಎಂದು ಲೆಕ್ಕ ಇಡುವವರಾರು?  ಇರುವೆಯ ಜೀವಿತಾವಧಿಯ ಆತ್ಮದ ಬದುಕಿಗೂ, ಮನುಷ್ಯನ ಜೀವಿತಾವಧಿಯ ಆತ್ಮದ ಬದುಕಿಗೂ ವ್ಯತ್ಯಾಸವಿದೆಯೇ? ಹಾಗಾದರೆ, ಈ ಪ್ರತಿಯೊಂದು ಜೀವಜಂತುವಿನ ಆತ್ಮದ ಜೀವಿತಾವಧಿಯ ಬೆಳವಣಿಗೆಗಳನ್ನು ಪೋಷಣೆಗಳನ್ನು ಯಾವ ವೈಟೇಜ್‌ನಲ್ಲಿ ಇಟ್ಟು ನೋಡಲಾಗುತ್ತದೆ?  ಮಾನವನ 80 ವರ್ಷದ ಆತ್ಮದ ಪರ್‌ಫಾರ್ಮೆನ್ಸ್ ಅನ್ನು ಮುಟ್ಟಲು ಇರುವೆಯ ಆರು ತಿಂಗಳಿನ ಆತ್ಮ ಯಾವ ಮಟ್ಟಕ್ಕೆ ಕಷ್ಟ ಪಡಬೇಕು?

ಈ ಭೂಮಂಡಲದಲ್ಲಿ ಇರುವ ಎಲ್ಲ ರಸಾಯನಿಕ ಪದಾರ್ಥ, ಮೂಲವಸ್ತುಗಳ ಪ್ರಮಾಣ ಯಾವಾಗಲೂ ಒಂದೇ ಇರುವುದೆಂದಾದರೆ, ಒಂದು ಕಡೆ ಹೆಚ್ಚುವುದು ಮತ್ತೊಂದು ಕಡೆ ಕಡಿಮೆ ಆಗಲೇ ಬೇಕು ಅಲ್ಲವೇ (conservation)? ಅಂದರೆ, ಹೆಚ್ಚು ಹೆಚ್ಚು ಹುಟ್ಟುವ ಮಾನವ ಸಂತತಿ ತನ್ನ ಮಡಿಲಲ್ಲಿ ಹೆಚ್ಚು ಹೆಚ್ಚು ರಸಾಯನಿಕಗಳನ್ನು ಅಡಗಿಸಿಕೊಳ್ಳುವುದರಿಂದ ಉಳಿದ ಯಾವುದೋ ಜೀವಿಯ ಸಂತತಿಗೆ ಅಥವಾ ಸಂತತಿಗಳಿಗೆ ಅದು ಕಡಿಮೆ ಆಗುತ್ತದೆಯೇ?

ಎಲ್ಲಕ್ಕಿಂತ ಮುಖ್ಯವಾಗಿ, ಸದಾ ಊರ್ದ್ವ ಮುಖಿಯಾಗಿರುವ ಈ ಆತ್ಮದ ಆತ್ಮ ಯಾಕೆ ಯಾವಾಗಲೂ ಹೋರಾಡುತ್ತಿರುತ್ತದೆ, ಆಶಾಂತವಾಗಿರುತ್ತದೆ?  "ಇಂಥವರ ಆತ್ಮಕೆ ಶಾಂತಿ ಸಿಗಲಿ!" ಎಂದು ಮೊಟ್ಟ ಮೊದಲ ಬಾರಿಗೆ ಯಾವ ನಾಗರೀಕತೆಯಲ್ಲಿ ಯಾರು ಮೊದಲು ಹೇಳಿದರು?  ಇಂದಲ್ಲ ನಾಳೆ ಮೋಕ್ಷ ಸಿಗುವುದೇ ಹೌದು ಎಂದಾದಲ್ಲಿ ಅದಕ್ಕೆಂದೇ ಹೋರಾಟವಾದರೂ ಏಕೆ ಬೇಕು?

***

ನಮಗೆ ನಾವೇ ದೇವರು! ನಮ್ಮ ದೇವರುಗಳ ಚಿತ್ರಣಗಳಲ್ಲಿ ಅವರನ್ನು ನಮಂತೆಯೇ ಸೃಷ್ಟಿಸಿಕೊಂಡಿದ್ದೇವೆ, ಆದರೆ ಸ್ವಲ್ಪ ಬಲ, ಭಿನ್ನತೆಗಳನ್ನು ತೋರುವುದರ ಮೂಲಕ ಅವರನ್ನೆಲ್ಲ ಸೂಪರ್ ಹ್ಯೂಮನ್ ಮಾಡಿದ್ದೇವೆ.  ಅದೇ ರೀತಿ ಇರುವೆಗಳಲ್ಲೂ ಸೂಪರ್ ಇರುವೆಗಳ ದೇವರುಗಳು ಇರಬಹುದು!  ನಮ್ಮ ದೇವರುಗಳೆಲ್ಲ ಸಾವನ್ನು ಗೆದ್ದವರು, ಚಿರಂತನರು ಮತ್ತು ಸರ್ವವ್ಯಾಪಿಗಳು.  ಅಂದರೆ, ನಮ್ಮ ಸುತ್ತಲಿರುವ ನಮ್ಮನ್ನು ಆವರಿಸಿರುವ ಪಂಚಭೂತಗಳು! ನಾವು ಒಂದು ಕ್ಷಣ ಇರುವೆಯಾಗಿ ಯೋಚಿಸಿದಾಗ ಈ ವ್ಯವಸ್ಥೆ ಮತ್ತು ವಿಶ್ವ ಅದೆಷ್ಟು ಅಗಾಧವಿದೆಯೆಲ್ಲ ಎಂದು ಅನ್ನಿಸುವುದು ಖಂಡಿತ.  ಆದರೆ, ನಾವು ಹುಲು ಮಾನವರಾಗಿ ಈ ಅಗಾಧತೆಯನ್ನ ಅಷ್ಟು ಸಲೀಸಾಗಿ ಗ್ರಹಿಸೋದಿಲ್ಲ. ಈ ಎತ್ತರ ಕಟ್ಟಡಗಳೂ, ಅವುಗಳ ಅತಿ ಎತ್ತರದಲ್ಲಿ ಹಾರಾಡುವ ವಿಮಾನಗಳೂ, ಅದಕ್ಕೂ ಮಿಗಿಲಾದ ಮುಗಿಲಿನಲ್ಲಿ ತೇಲುವ ಉಪಗ್ರಹಗಳು ಇವೆಲ್ಲ ನಮ್ಮ ಸೃಷ್ಟಿಯೇ!  ಹಾಗೇ ನಮ್ಮ ಸುತ್ತಲೂ ಇರುವೆಗಳು ಈಗಾಗಲೇ ಹಾರಾಡಿಸಿರುವ ಉಪಗ್ರಹಗಳೂ ಇರುಬಹುದಾದ ಸಾಧ್ಯತೆಗಳಿಲ್ಲವೆನ್ನಲಾಗದು.  ಏಕೆಂದರೆ, ಗೆದ್ದಲು ಕಟ್ಟುವ ಮಣ್ಣಿನ ಮನೆ ಆಧುನಿಕವಾಗಿರುವುದಷ್ಟೇ ಅಲ್ಲದೇ ನಮ್ಮಅನೇಕ ಬುರ್ಜ್ ಖಲೀಫ಼ಾಗಳ ಎತ್ತರವನ್ನೂ ಮೀರಿ ಬೆಳೆದಿರುತ್ತದೆ ಎನ್ನುವುದನ್ನು ಹೆಚ್ಚಿನವರು ನಂಬಲಾರರು, ಆದರೆ, ಅದು ನಿಜ.

ಹಾಗಾದರೆ, ಈ ಅಗಾಧವಾದ ಪೃಥ್ವಿಯಲ್ಲಿ ನಾವು ಒಂದು ಸಣ್ಣ ಹುಳುವಾದರೆ, ಈ ಇರುವೆಗಳು ನಮಗಿಂತ ಕನಿಷ್ಟ ಮಟ್ಟದ ಜೀವಿಗಳು ಎನ್ನಬಹುದು.  ಆಯಾ ಜೀವಿಗಳಿಗೆ ಅವುಗಳ ಬದುಕಿನ ಒಂದು ಧರ್ಮವಿದೆ, ಅದರೊಳಗೊಂದು ಮರ್ಮವಿದೆ.  ಆದರೆ, ಮನುಷ್ಯನ ಮಟ್ಟಿಗೆ ಮಾತ್ರ ತನ್ನ ಅಳಿವು ಮತ್ತು ಉಳಿವಿಗೆ ಮೊದಲಿನಿಂದಲೂ ಆತ ತನ್ನ ಸುತ್ತಲನ್ನು ದ್ವಂಸ ಮಾಡುತ್ತಲೇ ಬಂದಿದ್ದಾನೆ.  ಈ ಮನುಷ್ಯನಿಗೆ ಬದುಕಲು ವಿಶೇಷವಾದ ಹಕ್ಕನ್ನು ಕೊಟ್ಟವರಾರು? ಈ ಜಗತ್ತಿನ ನ್ಯಾಯಾಲಯದಲ್ಲಿ ನಾವೆಲ್ಲರೂ ಸಮಾನರು ಎಂದು ಇನ್ನಾದರೂ ನಮ್ಮ ಅರಿವಿಗೆ ಬರುತ್ತದೆಯೇ?

Saturday, April 04, 2020

ಹವ್ಯಾಸ-ದೇವರು-ಸ್ವಾತಂತ್ರ್ಯ

ಯಾವುದೇ ಒಂದು ಹವ್ಯಾಸ ಬೆಳೆಯ ಬೇಕಾದರೂ ಕನಿಷ್ಠ ಮೂರು ವಾರಗಳ ಕಾಲ ಬೇಕಾಗುತ್ತದೆ ಎಂಬುದು ಹಲವರ ಅನುಭವ.  ಈ ಕಳೆದ ಮೂರು ವಾರಗಳಲ್ಲಿ (ಮನೆಯಲ್ಲಿಯೇ ಕುಳಿತು) ಮನೆಯಿಂದಲೇ ಕೆಲಸ ಮಾಡುವ ನನ್ನಂಥ ಎಷ್ಟೋ ಜನ ಟೆಕ್ನಾಲಜಿ ಮ್ಯಾನೇಜರುಗಳು ಈ ಹೊಸ ಪರಿಯ ಕೆಲಸಕ್ಕೆ ರೂಢಿಯಾಗಿಲ್ಲ?  ಆದರೆ, ಮನೆಯಲ್ಲಿಯೇ ಅಥವಾ ಮನೆಯಿಂದಲೇ ಕೆಲಸ ಮಾಡುವ ಜನರಿಗೆಲ್ಲ ’ಅಂತರಂಗ’ದ ಹೇಳಲೇ ಬೇಕಾದ ಕಿವಿ ಮಾತೊಂದಿದೆ: ಮನೆಯಿಂದಲೇ ಕುಳಿತು ಕೆಲಸ ಮಾಡುವುದೆಂದರೆ ಬೊಕ್ಕ ತಲೆಯ ವ್ಯಕ್ತಿ ಮುಖ ತೊಳೆದ ಹಾಗೆ!  ಎಲ್ಲಿ ಶುರು ಮಾಡಿ ಎಲ್ಲಿ ನಿಲ್ಲಿಸಬೇಕು ಎಂಬುದು ಅಷ್ಟು ಸುಲಭವಾಗಿ ತಿಳಿಯದು.  ಘಂಟೆಗೊಂದರಂತೆ ಟ್ಯಾಸ್ಕುಗಳು ನಮ್ಮ ತಲೆ ಏರಿ ಕುಳಿತಿರುವಾಗ, ಕೊನೆಯಿಲ್ಲದ ಹಾಗೆ ಇ-ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ ಬಂದು ಇಳಿಯುತ್ತಿರುವಾಗ, ಕಂಪನಿಯಲ್ಲಿದ್ದವರೆಲ್ಲ ನಾಳೆಯೇ ಪ್ರಪಂಚದ ಕೊನೆಯೆಂಬಂತೆ ಇನ್ಸ್ಟಂಟ್ ಮೆಸೇಜುಗಳಲ್ಲಿ ತಮ್ಮ ಕಥನಗಳನ್ನೇ ಹೆಣೆಯುತ್ತಿರುವಾಗ - ಎಲ್ಲಿಂದ ಆರಂಭಿಸುವುದು, ಎಲ್ಲಿ ನಿಲ್ಲಿಸುವುದು?  ಆಫೀಸಿನಲ್ಲಿದ್ದವರಾದರೆ ಮನೆಗೆ ಹೋಗುತ್ತೇವೆಂದಾದರೂ, ಕಾಫಿ-ಟೀ-ಲಂಚ್ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತೇವೆಂದಾದರೂ ಅತ್ತಿಂದಿತ್ತ ಓಡಾಡುತ್ತಿದ್ದೆವು.  ಈಗ ಹಾಗಿಲ್ಲ.  ಡೆಸ್ಕ್ ಅನ್ನು ಬಿಟ್ಟು ಬದಿಗೆ ಬಂದರೆ, ಯಾರದ್ದಾದರೊಬ್ಬರದ್ದು ಕಾಟ ತಪ್ಪಿದ್ದಲ್ಲ.  ಮನೆಯೇ ಆಫೀಸು, ಆಫೀಸಿನ ಪಕ್ಕದಲ್ಲೇ ಅಡುಗೆ ಮನೆ, ಅದರ ಮಗ್ಗುಲಲ್ಲೇ ಬಾತ್‌ರೂಮು... ಹೀಗೆ ಗೂಟಕ್ಕೆ ಕಟ್ಟಿ ಹಾಕಿದ ಘೂಳಿಯಂತಾದ ಮನಸ್ಸು ಇದ್ದ ಸಣ್ಣ ಆವರಣದಲ್ಲೇ ಸದಾ ಗಿರಕಿ ಹೊಡೆಯುತ್ತಿರುತ್ತದೆ.  ಮೊನ್ನೆ ಯಾವುದೇ ಕಾರಣಕ್ಕೋ ಏನೋ ಚಪ್ಪಲಿ ಇಡುವ ಕ್ಲಾಸೆಟ್ಟಿನ ಬಾಗಿಲು ತೆಗೆದು ನೋಡಿದರೆ, ಅಲ್ಲಿ ನಾನು ಹಾಕುವ ಡ್ರೆಸ್ ಶೂ‌ಗಳು, ಹಳೆಯ ಕಸ್ಟಮರ್‌ ಅನ್ನು ನಕ್ಕು ಸ್ವಾಗತಿಸುವ ಗೂಡು ಅಂಗಡಿಯ ಮಾಲಿಕನಂತೆ ಕಂಡುಬಂದವು.  ನಾನು ಅವುಗಳನ್ನು ಮುಟ್ಟಿಯೂ ಸಹ ನೋಡಲಿಲ್ಲವಲ್ಲ ಎನ್ನುವ ಕಳಕಳಿಯಲ್ಲಿಯೇ ಕ್ಲಾಸೆಟ್ ಬಾಗಿಲು ಹಾಕುತ್ತಿದ್ದಂತೆ ಅನ್‌ಲೈನ್ ಅಡ್ವರ್‌ಟೈಸ್‌ಮೆಂಟ್‌‍ನಲ್ಲಿ ಬಂದು ಹೋಗುವ ಮುಖಗಳಾಗಿ ಮಾಯವಾದವು॒!  ಇನ್ನು ಬಾಗಿಲ ಬಳಿಯೇ ಬಿಡುವ ಶೂಗಳ ಕಥೆ ಇದಾದರೆ, ಮೇಲೆ ಕೊಂಡೊಯ್ದು (ಅಚ್ಚುಕಟ್ಟಾಗಿ) ಇಟ್ಟಿದ್ದ ಕೋಟು-ಸೂಟುಗಳು, ನಾನು ಇನ್ಯಾರದೋ ಮನೆಯನ್ನು ಹೊಕ್ಕೆನೇನೋ ಎಂಬ ಆಶ್ಚರ್ಯ ಸೂಚಕ ಭಾವನೆಯನ್ನು ನನ್ನ ಮುಖದ ಮೇಲೆ ಹೊರಡಿಸಿದವು.  ಕಳೆದ ಮೂರು ವಾರಗಳಲ್ಲಿ ನಾವು ಬಳಸಿದ ಸಂಪನ್ಮೂಲಗಳನ್ನು ನೆನೆದುಕೊಂಡರೆ "ಸಮರಸದ ಬಾಳುವೆಗೆ ಸರಳ ಜೀವನವೇ ಕಾರಣ॒!" ಎಂಬ ಪುಸ್ತಕವನ್ನು ಬರೆಯುವಷ್ಟು ಮಟೀರಿಯಲ್ ಸಿಗುವುದಂತೂ ಖಂಡಿತ!


***
ಈ ಕೋರೋನಾ ವೈರಸ್ಸಿನ ದೆಸೆಯಿಂದ ನಮ್ಮ ದೇವರುಗಳಿಗೆ ಒಂದು ಹೊಸದಾದ ಪ್ರೌಢಿಮೆ ಬಂದಿದೆ.  ಸಂಕಟಕಾಲದಲ್ಲಿ ವೆಂಕಟರಮಣ ಎನ್ನುವಂತೆ ಎಲ್ಲ ಮಾನವ ಆತ್ಮಗಳೂ ಸಹ ಅವುಗಳ ನೆಚ್ಚಿನ ದೇವರನ್ನು ನೆನೆಯುತ್ತಿರುವಾಗ, ನಮ್ಮೆಲ್ಲರ ಮೊರೆಯನ್ನು ಏಕ ಕಾಲದಲ್ಲಿ ದೇವರುಗಳನ್ನು ತಲುಪಿಸುತ್ತಿರುವ  ಕಮ್ಯುನಿಕೇಷನ್ ನೆಟ್‌ವರ್ಕ್‌ನಲ್ಲಿಯೂ ಸಹ ಕಂಜೆಷನ್ ಇರುವುದರಿಂದ, ಬ್ಯಾಂಡ್‌ವಿಡ್ತ್ ಸಮಸ್ಯೆಗಳು ಖಂಡಿತ ಇರಬಹುದು.  ಅಂತೆಯೇ ವಿಶ್ವದ ಏಳೂ ಮುಕ್ಕಾಲು ಬಿಲಿಯನ್ ಮಾನವ ರೂಪದಲ್ಲಿನ ಆತ್ಮಗಳು ಅರ್ಧ ಸತ್ತ (ಅಥವಾ ಅರ್ಧ ಬದುಕಿರಬಹುದಾದ) ಜೀವಿಯ ವಿರುದ್ಧ ರಕ್ಷಿಸು ಎಂದು ಮೊರೆ ಹೊತ್ತಿರುವಾಗ, ದಶಾವತಾರದ ನಂತರ ಮುಂದಿನ ಅವತಾರ ಏನಾಗಬಹುದು ಎಂದು ದೇವರೂ ಯೋಚಿಸಬೇಕಾಗುತ್ತದೆ.

೧. ಮೀನಾಗಿ ಬಂದವನು ಪ್ರಳಯದಿಂದ ರಕ್ಷಿಸಿದ
೨. ಆಮೆಯಾಗಿ ಬಂದವನು ಸಮುದ್ರ ಮಂಥನದ ಭಾರವನ್ನು ಹೊತ್ತ
೩. ಹಂದಿಯಾಗಿ ಬಂದವನು ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ
೪. ನರಸಿಂಹನಾಗಿ ಬಂದವನು ಸಾವೇ ಇಲ್ಲದ ಹಿರಣ್ಯಕಷ್ಯಪುವನ್ನು ಸಂಹರಿಸಿದ
೫. ಕುಳ್ಳನಾಗಿ ಬಂದವನು ಬಲಿಯನ್ನು ಪಾತಾಳಕ್ಕೆ ತಳ್ಳಿದ
೬. ಕೊಡಲಿ ರಾಮನಾಗಿ ಬಂದು ಕ್ಷತ್ರಿಯ ಸಂಹಾರಕ್ಕೆ ಇಳಿದು, ಮಹೇಂದ್ರಗಿರಿಯಲ್ಲಿ ಚಿರಂಜೀವಿಯಾಗಿ ನೆಲೆಸಿದ
೭. ರಾಮನಾಗಿ ರಾವಣ ಸಂಹಾರ ಮಾಡಿದ
೮. ಕೃಷ್ಣನಾಗಿ ಕೌರವ ಸಂಹಾರ ಮಾಡಿದ (ಬಲರಾಮನ ಶೇಷನ ಅವತಾರವೂ ಇದೇ ಅವಧಿಯಲ್ಲಿ ಸೇರುತ್ತದೆ)
೯.  ಬುದ್ಧನಾಗಿ ಎಲ್ಲರಿಗೂ ಬೋಧಿಸಿದ
೧೦. ಕಲ್ಕಿಯಾಗಿ ಬಿಳಿಯ ಕುದುರೆಯನ್ನೇರಿ ಕಲಿಯುಗದ ಉದ್ದಕ್ಕೂ ಉಲ್ಕಾಪಾತವಾಗಿ ತಿರುಗುತ್ತಿದ್ದಾನೆ... ಕಲಿಯುಗದಲ್ಲಿ ಅಧರ್ಮ ತಾಂಡವವಾಡಿದರೆ ಮತ್ತೆ ಬಂದೇ ಬಿಟ್ಟಾನು, ಉಲ್ಕೆಯಾಗಿ ಅಪ್ಪಳಿಸುವ ಮುಖೇನ ಪ್ರಜ್ವಲಿಸಿಬಿಟ್ಟಾನು!

ಪ್ರಭೂ! ಈ ಕಣ್ಣಿಗೆ ಕಾಣದ ಜೀವಿಯಿಂದ ನಮ್ಮೆಲ್ಲರ ರಕ್ಷಣೆ ಹೇಗೆ ಸಾಧ್ಯ? ನೀನೇನಾದರೂ ವಿಶೇಷ ವಿಕಿರಣಗಳನ್ನು ಹೊರಸೂಸಿ ಗಾಳಿಯಲ್ಲಿನ ಈ ಅಣುಜೀವಿಗಳನ್ನು ಮಾತ್ರ ನಾಶಪಡಿಸಿದರೆ ಆಗಬಹುದು! (ಮಾನವನಿಂದ ನಿರ್ನಾಮವಾಗುತ್ತಿರುವ ಜೀವಿಗಳ ಮೊರೆಯನ್ನೇಕೆ ನೀನು ಆಲಿಸುತ್ತಿಲ್ಲ? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ, ಅದೇಕೆ? ಮಾನವರಲ್ಲದ ಜೀವಿಗಳು ನಿನ್ನ ಮಕ್ಕಳಲ್ಲವೇನು?)

***
ಒಂದು ವಸ್ತು ಇಲ್ಲದಾಗಲೇ ಅದರ ಬೆಲೆ ಗೊತ್ತಾಗುವುದಂತೆ.  ಈ "ವಸ್ತು"ಗಳ ಪಟ್ಟಿಯಲ್ಲಿ ನಮ್ಮ "ಸ್ವಾತಂತ್ರ್ಯ"ವೂ ಸೇರಿದೆ.  ನಾವೆಲ್ಲ ಸಂಘಜೀವಿಗಳು.  ನಮ್ಮ ನಮ್ಮ ಮನೆಗಳಲ್ಲಿ ನಮಗೆ ಬೇಕಾದ ಐಶಾರಾಮ, ಭೌತಿಕವಸ್ತುಗಳು, ನಮ್ಮವರು, ಮುಖ್ಯವಾಗಿ ಸಮಯ, ಇವೆಲ್ಲ ಇದ್ದಾಗಲೂ ಕೂಡ ನಮ್ಮಲ್ಲಿ ಏನೋ ಒಂದು ಅಪರಿಪೂರ್ಣ ಭಾವನೆ ತುಂಬಿಕೊಳ್ಳೋದಿಲ್ಲವೇ? ಹಾಗೆ. ಈ ಆಯ್ಕೆಯನ್ನು -  ಸ್ವಾತಂತ್ರ್ಯ, ಮುಕ್ತಿ, ತೆರವು, ಬಿಡುಗಡೆ, ಅನಿರ್ಬಂಧಿತ ಸ್ಥಿತಿ, ವಿಮೋಚನೆ, ಸ್ವಚ್ಛಂದತೆ, ಸ್ವತಂತ್ರತೆ - ಎನ್ನುವ ಅನೇಕ ಪದಗಳಲ್ಲಿ ನಾವು ಅಳೆದರೂ ಅದರ ಮಹತ್ವವನ್ನು ಅಷ್ಟು ಸುಲಭವಾಗಿ ಸಾರಲಾಗುವುದಿಲ್ಲ.  ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿರುವ ಯಾವುದೇ ಮಾಹಿತಿ-ಮನರಂಜನೆಯನ್ನು ನೋಡಿದರೂ ಮನ ತುಂಬದು.  ಅದೇ, ಅಪರೂಪಕ್ಕೊಮ್ಮೆ ಕರೆ ಮಾಡುವ ಹಳೆಯ ಸ್ನೇಹಿತರನ್ನು ಯಾವಾಗ ಬೇಕಾದರೂ ಆಗ ಕರೆ ಮಾಡಿ ಮಾತನಾಡಿ, ನಿಮಗೆ ಗೊತ್ತಿಲ್ಲದಂತೆ ಒಂದು ಘಂಟೆ ಆರಾಮವಾಗಿ ಕಳೆದುಹೋಗುತ್ತದೆ.  ನಮ್ಮ ನಮ್ಮ ಗೂಡುಗಳಲ್ಲಿ ನಮ್ಮನ್ನು ಕಟ್ಟಿ ಹಾಕಿದ್ದರೂ ಸಹ, ಈ ಕೋವಿಡ್ ದೆಸೆಯಿಂದ ನಾವೆಲ್ಲರೂ ದೂರವಿದ್ದೂ ಹತ್ತಿರವಾಗಿದ್ದೇವೆ ಎನ್ನಬಹುದು.  ಆಯ್ಕೆ, ಸ್ವಾತಂತ್ರ್ಯ, ಸಹಬಾಳ್ವೆಯ ಸಮತೋಲನದಲ್ಲಿ ನಮಗೆಲ್ಲ ಬದುಕಿನ ಗಂಭೀರ ಮುಖವನ್ನು ದರ್ಶನ ಮಾಡಿಸಿದ ಕೋವಿಡ್‌ಗೆ ಜೈ॒!

Tuesday, March 29, 2011

ದದ್ದಾ, who made god?

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ!

ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯ
ಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...

ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...

***

ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು ಇತ್ತೀಚೆಗಷ್ಟೇ.

ನಮ್ಮ ಮನೆಯಲ್ಲಿರೋ ಈ 5&2 client ಗಳ ಪ್ರಶ್ನೆಗಳಿಗೆ ಉತ್ತರ ಈ ಗಣನಾಥನೇ ಕೊಡಬೇಕು - 5&2 ಅಂದ್ರೆ ನನ್ನ ಐದು ಮತ್ತು ಎರಡು ವರ್ಷದ ಮಕ್ಕಳು ಅಂತ ಅರ್ಥ. ಅವರು ಕೇಳಿದಂತಾ ಪ್ರಶ್ನೆಗಳನ್ನು ನಾನು ಚಿಕ್ಕವನಾಗಿದ್ದಾಗಲೇನಾದರೂ ಕೇಳಿದ್ರೆ, ಆ ರಾವಣ ಗಣಪತಿ ತಲೆ ಮೇಲೆ ಗೋಕರ್ಣದಲ್ಲಿ ಕೊಟ್ಟನಲ್ಲ ಹಂಗೆ ನನಗೆ ಪ್ರತೀ ದಿನಾನೂ ಬೀಳೋದು ಅಂತ ಕಾಣ್ಸುತ್ತೆ... ನಾನು ಪ್ರಶ್ನೆಗಳನ್ನಂತೂ ಕೇಳೋವಾಗ ಕೇಳ್ಲಿಲ್ಲ, ಇನ್ನು ಅವುಗಳಿಗೆ ಉತ್ತರ ಎಲ್ಲಿಂದ ತರಲಿ ಹೇಳಿ.

ಈ ಮೆಲೆ ತೋರಿಸಿದ ಗಣನಾಥನ ಹಾಡಿನ ಕೆಲವು ಸಾಲುಗಳನ್ನೇ ನೋಡಿ, ಎಷ್ಟೊಂದು ಪ್ರಶ್ನೆಗಳನ್ನ ಹುಟ್ಟಿ ಹಾಕ್ಸುತ್ವೆ ಅಂತ, ನೀವು ಕೊಡೋ ಪ್ರತಿ ಒಂದು ಉತ್ತರಕ್ಕೂ ಒಂದೊಂದು sub-ಕಥೆ ಇರುತ್ತೆ, ಹಾಗೆ ನೀವು ಉತ್ತರ ಕೊಟ್ಟಂತೆಲ್ಲ, ಒಂದೊಂದು ಉತ್ತರಕ್ಕೆ ಐದೈದು WHY ಗಳು ಬಂದು ಸೇರಿಕೊಳ್ಳುತ್ವೆ, ಉದಾಹರಣೆ ಬೇಕಾ, ತೊಗೊಳ್ಳಿ:

ಪಲ್ಲವಿಯಲ್ಲಿ
- who is 'ga na nA tha'?
- why we have to worship him first ? (so you may use sub-story of kartikeya-ganesha race story, beware of more questions)
- why ganesha has so many names?
- what his friends call him?

You think these are easy questions? Be careful... and remember that classic joke about Johny?

Kid asks mom, "Mom, where am I from?"
Mom blinks her eyes and begin to answer the question starting from creation, birth, etc
Kid interrupts her, '...but Johny says he is from New Jersey..., where am I from?'

ನಮ್ಮ ಹಾಡುಗಳು ಒಂಥರಾ ಯಕ್ಷಗಾನ ಕಾರ್ಯಕ್ರಮ ಇದ್ದ ಹಾಗೆ, ಒಂದು ಪ್ಯಾರಾದಲ್ಲಿ ವರ್ತಮಾನ ಕಾಲದಲ್ಲಿರೋದು, ಮತ್ತೊಂದು ಪ್ಯಾರಾದಲ್ಲಿ ತ್ರೇತಾಯುಗಕ್ಕೆ ಹೋದ ಹಾಗೆ, ತ್ರೇತಾ ಯುಗದಿಂದ ದ್ವಾಪರ ಯುಗಕ್ಕೆ ಒಂದೆ ಕ್ಷಣದಲ್ಲಿ ಹಾರಿದ ಹಾಗೆ. ಅಥವಾ ಅತಳ, ಭೂತಳ, ಪಾತಾಳ, ಅಂತರಿಕ್ಷ, ಸ್ವರ್ಗ, ನರಕ, ಮತ್ಸ್ಯಲೋಕ, ಮೊದಲಾದವುಗಳನ್ನು ಒಂದೇ ಕ್ಷಣದಲ್ಲಿ ಬದಲಾಯಿಸಿದ ಹಾಗೆ... do you think I am joking? ನಿಮ್ಮ ಮಕ್ಕಳಿಗೆ ಬಭ್ರುವಾಹನ ಚಿತ್ರದ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು..." ಹಾಡನ್ನು youtube ನಲ್ಲಿ ತೋರಿಸಿ ನೋಡಿ, ನಿಮಗೆ ಗೊತ್ತಾಗುತ್ತೆ ನನ್ನ ಕಷ್ಟ ಏನು ಅಂತ. (why did I watch or why they saw this song with me - that is a different and long story.... a topic in itself for some other day).

ಇನ್ನೂ ಪಲ್ಲವಿಯಲ್ಲೇ ಇದ್ದೇನೆ...
ಫಸ್ಟ್ ಪ್ಯಾರಾ:
-who is 'da r ma roya'?
- why that guy worship ganesha?
- what was he doing?
- how old was he?
- what is jaya? isn't that amma's friend's name? also your chikkamma has the same name?
- how does ganesh know who does pooja?
- why he helps?
- and then what happened? 'ಆ ಮೆಲೆ ಏನು?' (screaming because i don't answer the questions immediately).

ಸೆಕೆಂಡ್ ಪ್ಯಾರಾ:
-who is ravnaa?
-why he didn't do pooja? (his dad scold him?)
-why he died?
-who killed him? why?
-'rana' means what?

ಇನ್ನು ಪುರಂದರ-ಗಿರಂದರ ಅಂದ್ರೆ ಕಥೇನೇ ಮುಗೀತು, ಅದಕ್ಕೆ ಎರಡೇ ಪ್ಯಾರಾಕ್ಕೆ ಹಾಡು ಮೊಟಕು ಮಾಡಿದ್ದು.

***

ಹೀಗೆ ಪ್ರಶ್ನೆಗಳ ಯಾದಿ, ಅವುಗಳಿಗೆ ಉತ್ತರ, ಅವರದ್ದೇ ಆದ ತರ್ಕ, ಕಲ್ಪನೆ, ಕಲ್ಪನೆಯಿಂದ ಬೆಳೆಯೋ ಉತ್ತರ - ಇವೆಲ್ಲ ನಮ್ಮ ಮನೆಯಲ್ಲಿ ಬೆಳೀತಾನೇ ಇವೆ. ನಮ್ಮಮ್ಮನ್ನ "ನೀನು ಅಷ್ಟೊಂದು ಮಕ್ಳನ್ನ ಹೆಂಗ್ ಸಾಕ್ದೇ?" ಅಂತ ಕೇಳಿದ್ರೆ, ನಕ್ಕೊಂಡು "...ಈಗ ನಿಮ್ಮ ಸರದಿ, ಅನುಭವಿಸಿ!" ಅನ್ನೋ ಉತ್ರ ಕೊಡೋದೇ?

ನನಗೆ ಮೊಟ್ಟ ಮೊದಲನೇ ಬಾರಿಗೆ ಗಣೇಶನ ಕಥೆ Rated R ಅನ್ನಿಸಿದ್ದು... Youtube ನಲ್ಲಿರೋ ಗಣೇಶನ ಕಥೆ ಈಗ ಯಾಕಾದ್ರೂ ತೋರಿಸಿದ್ನೋ ಅನ್ನೋ ಹಾಗಿದೆ ನನ್ನ ಪರಿಸ್ಥಿತಿ.

Again the same series of "Why's"...

ಅದೂ ನಮ್ಮ ಗಣೇಶನ ಕಥೆಯಲ್ಲೇ ಎಷ್ಟೊಂದು ವರೈಟಿಗಳು. ಯಾಕೆ ಆನೆಯ ತಲೆಯನ್ನು ಇಟ್ರು ಅನ್ನೋದಕ್ಕೆ ಎಷ್ಟೊಂದು ಥರನ ಉತ್ತರಗಳು? ಗಜಾಸುರನೆಂಬ ರಾಕ್ಷಸನ ತಲೆಯೋ ಅಥವಾ ಉತ್ತರಕ್ಕೆ ತಲೆ ಹಾಕಿ ಮಲಗಿದ ಪ್ರಾಣಿಯ ಕತೆಯೋ? why that rAkShasa had elephant's head in the first place? (ಇವೆಲ್ಲ ನನ್ನ ಪ್ರಶ್ನೆಗಳು: isn't that head big for a small boy? who did the transplantation? ಅಷ್ಟೆಲ್ಲಾ ಮಂತ್ರಶಕ್ತಿ ಇರೋ ಶಿವನಿಗೆ ಹುಡುಗನ ಕಡಿದಿರೋ ತಲೆ ಹುಡುಕೋದಕ್ಕೆ ಆಗಲಿಲ್ಲವೇ? ಯಾಕೆ ಅಷ್ಟೊಂದು ಸಿಟ್ಟು? ತ್ರಿಶೂಲ ಹಿಡಿದಿರೋ ಶಿವನಿಗೆ ಆ ಬಾಲಕನ ಹತ್ತಿರ ನೆಗೋಶಿಯೇಟ್ ಮಾಡೋಕಾಗಲಿಲ್ವ?)

ನಿನ್ನೆ ರುದ್ರಾಭಿಷೇಕದ ಹೊತ್ತಿಗೆ ಬ್ರಿಜ್‌ವಾಟರ್ ದೇವಸ್ಥಾನದ ಅರ್ಚಕರು ತ್ರಿಶೂಲವನ್ನು ತೊಳೆದು ಶಿವನ ಬದಿಯಲ್ಲಿಟ್ಟಾಗ ನನ್ನ ಮಗಳು ಕೇಳಿಯೇ ಬಿಟ್ಟಳು: is this the same that shiva cut the boy's head?

ನಮ್ಮದೆಲ್ಲಾ ಸಂಕೀರ್ಣದೊಳಗಿನ ಸಂಕೀರ್ಣ ಅಂತ ಅನ್ನಿಸೋಲ್ವಾ? ಐದು ವರ್ಷದ ಮಕ್ಕಳಿಗೆ "ಏ, ನಿನಗೊತ್ತಾಗಲ್ಲ ಸುಮ್ಮನಿರು!" ಎಂದು ಗದ್ದರಿಸೋದನ್ನು ಬಿಟ್ಟು ನಿಧಾನವಾಗಿ ಇವನ್ನೆಲ್ಲ ತಿಳಿ ಹೇಳೋ ಉಪಾಯಗಳ ಜೊತೆಗೆ ಗಣೇಶನ ಬಗ್ಗೆ ಒಂದು comprehensive ಕಥೆ, ಅಥವಾ ಪುರಾಣವಾದರೂ ನಮ್ಮಲ್ಲಿದೆಯಾ? ಅದಕ್ಕೆ ಅದನ್ನ ಕಥೆ-ಪುರಾಣ ಅಂತ ಕರೆಯೋದಿರಬೇಕು. ಒಂಥರಾ ಇಂಡಿಯನ್ ಮಿಥಾಲಜಿ ಅಂದ್ರೆ ಇವತ್ತಿನ ವಿಕ್ಕಿಪೀಡಿಯಾ ಇದ್ದ ಹಾಗೆ, ಯಾರು ಹೇಗೆ ಬೇಕೋ ಹಾಗೆ ಎಡಿಟ್ ಮಾಡ್ಕೊಂಡು ಹೋದ್ರೆ ಆಯ್ತು, ಆದ್ರೆ, edit history ಅಥವಾ chronology ಮಾತ್ರಾ ಕೇಳ್ಬೇಡಿ.

her question - 'why ganesha's mommy want him to wait at the door? she could have locked the door herself'.

ಈ ಮಕ್ಕಳಿಗೆ ಕೃಷ್ಣ ಹೇಗೆ ಬೆಣ್ಣೆ ಕದೀತಿದ್ದ ಅಂತ ಕಥೆ ಹೇಳಿದ್ರೆ, "ಅಯ್ಯೋ ಯಾಕೆ? ಫ್ರಿಜ್ಜ್ ತೆಗೆದಿದ್ರೆ ಸಿಕ್ಕಿರೋದು" ಅಂತ ನಮಗೇ ಪ್ರಶ್ನೆ ಕೇಳ್ತಾರಲ್ಲ, ಅಲ್ಲಿಗೇ ನಿಲ್ಲದೇ, "Why they didn't have a ladder?" ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳೋ audience ಇರೋವಾಗ, ನಮ್ಮ ಕಥೆಗಳು ಇನ್ನಷ್ಟು ಸರಳವಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಲ್ವಾ? ("why he eats just ಬೆನ್ನೆ? no bread! ವೂ, that is gross!") and more questions (why that ಬೆನ್ನೆ white, ours yellow)? and more questions... why ಬಲ್ ರಾಮಾ not blue, only krishna? (you want to try that?)


***

ಇವೆಲ್ಲ ಇರಲಿ, ಹೊಂಕಣ ಸುತ್ತಿ ಮೈಲಾರಕ್ಕೆ ಬಂದಾ ಅನ್ನೋ ಹಾಗೆ, ನನ್ನ ಹೆಡ್ಡಿಂಗ್‍ಗೆ ಬರ್ತೀನಿ:

ಮೊನ್ನೆ ಬೆಳಿಗೆ ಆಫೀಸಿಗೆ ಬರೋ ತರಾತುರಿಯಲ್ಲೇ ದೇವರಿಗೆ ದೀಪ ಹಚ್ಚಿ, ತಲೆಯಲ್ಲಿ ಬರೋ ನೂರಾ ಒಂದು ಆಲೋಚನೆಗಳ ಮಧ್ಯೆಯೇ ಪೂಜೆ ಮಾಡಿದ ಹಾಗೆ ಮಾಡಿ ಬರುತ್ತಿರುವಾಗ, ಆಗಷ್ಟೇ ಎದ್ದು ಕಣ್ಣು ಒರೆಸುತ್ತಿದ್ದ ನನ್ನ ಐದು ವರ್ಷದ ಮಗಳು ಕೇಳಿದಳು, "ದದ್ದಾ, who made god?" (and that is the first question, no idea, what was in her mind).

ಆಗ ಸಧ್ಯಕ್ಕೆ ನನಗೆ ಏನೂ ತಿಳಿಯದೇ ಒಂದು ಕ್ಷಣ ಕಣ್ಣು ಪಿಳಿಪಿಳಿ ಬಿಟ್ಟೆನಾದರೂ "god made god" ಎಂದು ಉತ್ತರ ಹೇಳಿದೆ, ಉಳಿದದ್ದನ್ನ ಸಾಯಂಕಾಲ ಹೇಳ್ತೀನಿ ಎಂದು ಬೀಸೋ ದೊಣ್ಣೆಯಿಂದ ಬಚಾವ್ ಆದೆ... ಆದರೂ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅನ್ನೋದಕ್ಕೆ ಇನ್ನೂ ಯೋಚಿಸ್ತಾನೇ ಇದ್ದೀನಿ. ಪ್ರಶ್ನೆಗೆ ಉತ್ತರ ಹೇಳಲೋ, ಅಥವಾ ಇನ್ನೊಂದಿಷ್ಟು ಪ್ರಶ್ನೆಯನ್ನೇ ಕೇಳಿ ಸಮಾಧಾನ ಮಾಡಿ ಉತ್ತರವನ್ನು ಅವರ ಕಲ್ಪನೆಗೆ ಬಿಡಲೋ? who do you think made god? why do you want to know? who asked you that question?

ನಮಗೆ ಇಲ್ಲಿ ಯಾರು ಬೇಕು ಅಂದ್ರೆ, "ಅತಿಥಿ ತುಮ್ ಕಬ್ ಜಾವೋಗೇ?" ಸಿನಿಮಾದ ಪರೇಶ್ ರಾವಲ್ ಅಂತ ಸಂಬಂಧಿಕರು! ಅಥವಾ ಮಕ್ಕಳ ಎಲ್ಲಾ ಚಿಕ್ಕ-ಪುಟ್ಟ ಪ್ರಶ್ನೆಗಳಿಗೂ ಸಮಾಧಾನ ಚಿತ್ತದಿಂದ ಸಾವಧಾನವಾಗಿ ಉತ್ತರಿಸುವ ತಿಳುವಳಿಕೆ ಹಾಗೂ ಮನಸ್ಥಿತಿ ಇರುವವರು. ಅವರ ಪ್ರಶ್ನೆಗಳಿಗೆ ಉತ್ತರಕೊಡುವುದರ ಬದಲಿಗೆ ಕೆಲವೊಮ್ಮೆ ನಾವು ನಮ್ಮ ಆಫೀಸಿನ ಸಂಕಷ್ಟಗಳನ್ನೆಲ್ಲ ಮಕ್ಕಳ ಎದುರಿಗೆ ಅವರನ್ನು ಬೈಯ್ಯೋದರ ಮೂಲಕ ಪ್ರದರ್ಶಿಸುತ್ತೇವೇನೋ ಎಂದು ಹೆದರಿಕೆ ಆಗೋದೂ ಇದೆ.

ಅದಕ್ಕೆ, ದದ್ದಾ, who made god? ಅನ್ನೋ ಶೀರ್ಷಿಕೆಯನ್ನು "...ಅರ್ಥಾಥ್ ಪ್ರಶ್ನೆಗಳಿಗೆ ಉತ್ತರ ಹೇಳೋ ಅಜ್ಜ-ಅಜ್ಜಿ ಬೇಕಾಗಿದ್ದಾರೆ", ಎಂದು ಬದಲಾಯಿಸಿದರೆ ಹೇಗೆ ಎಂಬ ಯೋಚನೆ ಕೂಡಾ ಬಂತು...

***
"ದೇವ್ರುನ್ನ ಯಾರಾದ್ರೂ ಮಾಡ್ಲಿ, ಬಿಡ್ಲಿ - ಸುಮ್ನೇ ಕೆಲ್ಸ ನೋಡ್ರೋ - ಹೋಗ್ರೋ" ಅಂತ ಗದರಿಸೋದು ನಮ್ಮ ಕಾಲಕ್ಕೆ ಆಯ್ತು, ಅಲ್ಲೇ ಇರ್ಲಿ ಅದು.

ನನಗ್ಗೊತ್ತು, ದೊಡ್ಡ ದೊಡ್ಡ ಮಕ್ಕಳಿದ್ದವರೆಲ್ಲ ಈ ಬರಹವನ್ನು ನೋಡಿ ನಗತಾರೆ ಅಂತ, ದೊಡ್ಡವರಿಗೆ ದೊಡ್ಡ ಕಷ್ಟಾ, ಆನೆ ಭಾರ ಆನೆಗೆ, ಇರುವ ಭಾರ ಇರುವೆಗೆ ಅಂಥಾರಲ್ಲ ಹಾಗೆ!

ದೇವ್ರೆ, ಇವತ್ತಿನ ಪ್ರಶ್ನೆಗಳ ಉತ್ತರ ಪತ್ರಿಕೆಯನ್ನು ದಯವಿಟ್ಟು ಬಹಿರಂಗ ಮಾಡಪ್ಪಾ ಅನ್ನೋದು "ಅಂತರಂಗ" ಈ ಹೊತ್ತಿನ ಆರ್ತ ಮೊರೆ ಅಷ್ಟೇ!

Tuesday, February 17, 2009

ನಾನು ಮತ್ತು ನನ್ನ ದೇವರುಗಳು - ಭಾಗ ೧

ಶಾಲಾ ಕಾಲೇಜು ದಿನಗಳಲ್ಲಿ ದೇವರನ್ನು ಕುರಿತು ಅದೆಷ್ಟೋ ವಾದ-ವಿವಾದಗಳನ್ನು ನಡೆಸಿಕೊಂಡು ಬಂದು, ’ದೇವಸ್ಥಾನಕ್ಕೆ ಏಕೆ ಹೋಗಬೇಕು?’, ’ದೇವರೆಲ್ಲಿದ್ದಾನೆ?’ ಎನ್ನುವ ಅರ್ಥ ಕೊಡುವ ಇನ್ನೂ ಹಲವಾರು ಪ್ರಶ್ನೆಗಳಿಗೆ ನಮ್ಮದೇ ಆದ ಉತ್ತರಗಳನ್ನು ಕಂಡುಕೊಂಡು ನಾವು ಸಮಾಧಾನ ಪಟ್ಟಿದ್ದಿದೆ. ಕೊನೆಗೆ ದೇವರ ಪೂಜೆಯನ್ನು ಮಾಡದೇ, ಹಬ್ಬ-ಹರಿದಿನಗಳಿಗೆ ಮನೆಯಲ್ಲಿ ಅಬ್ಸೆಂಟ್ ಆಗುತ್ತಾ ಬಂದು ಒಂದು ರೀತಿಯ ರೆಬೆಲ್ ಜೀವನವನ್ನು ಸಾಗಿಸಿದ ನನ್ನಂತಹವರು ಈಗ ಮೇಲೇರಿದ ಏಣಿ ಗೋಡೆಗೆ ಹೆಚ್ಚು ಒರಗುವಂತಾಗುವ ಹಾಗೆ ದಿನವೂ ದೇವರ ನಾಮ ಸ್ಮರಣೆಯಿಲ್ಲದೇ ದಿನವನ್ನು ಆರಂಭಿಸೋದು ಕಡಿಮೆ. ದೇವರು ಎನ್ನುವ ಕಾನ್ಸೆಪ್ಟಿಗೂ ಮೂರ್ತಿ ಪೂಜೆ (ವಿಗ್ರಹಾರಾಧನೆ) ಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ದೇವರು ಎನ್ನುವ ಪ್ರತಿಮೆ ಒಬ್ಬ ವ್ಯಕ್ತಿ (ಪರಿವಾರ) ಕ್ಕೆ ಸೀಮಿತಗೊಳ್ಳಬಹುದು, ಅಥವಾ ಅದು ನಿಸರ್ಗದ ಮತ್ತೊಂದು ವಸ್ತು/ಜೀವಿಗೆ ನಾವು ನಮ್ಮ ಮನದಲ್ಲಿ ಕೊಡಬಹುದಾದ ಉನ್ನತ ಪರಿಭಾಷೆ ಇರಬಹುದು. ದೇವರು ಎನ್ನುವುದು ಇಂದಿಗೆ ಪ್ರಸ್ತುತವಾದ ಅಂಶವಿರಬಹುದು ಅಥವಾ ಸಾವಿರಾರು ವರ್ಷಗಳ ಹಿಂದಿನ ಯಾವುದೋ ಒಂದು ಉಲ್ಲೇಖಕ್ಕೆ ಸಂಬಂಧಪಟ್ಟಿರಬಹುದು. ಹೀಗೆ ದೇವರು ಎನ್ನುವ ಎಂದೂ ಮುಗಿಯದ ವಿಚಾರಗಳ ಖಜಾನೆಯನ್ನು ಶೋಧಿಸಿದಂತೆಲ್ಲ ಅವರವರ ಪರಿಮಿತಿಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ರೂಪ/ಆಕೃತಿ ಅದರಿಂದ ಹೊರ ಹೊಮ್ಮುತ್ತಲೇ ಇರುತ್ತೆ ಎನ್ನುವುದು ನನ್ನ ಅಂಬೋಣ.

ಉದಾಹರಣೆಗೆ, ನಮ್ಮ ಇಂದಿನ ಅನಿವಾಸಿ ಬದುಕಿನ ಒಂದು ದಿನವನ್ನು ಅವಲೋಕಿಸಿಕೊಳ್ಳೋಣ: ಇಲ್ಲಿ ನಾವು ಬೇಡವೆಂದರೂ ಘಂಟೆಗಳ ನಿನಾದ ನಮ್ಮ ಕಿವಿಗೆ ಬೀಳುವ ಗಲ್ಲಿಗಳ ದೇವಸ್ಥಾನಗಳ ಗೊಂದಲವಿಲ್ಲ. ’ಲಾ ಇಲಾಹ ಇಲ್ಲಲ್ಲ...’ ಎನ್ನುವ ಮುಂಜಾನೆ ಐದೂವರೆಗೆ ಮಸೀದಿಯಿಂದ ಕೂಗುವ ಮುಲ್ಲಾನ ಸ್ವರವಿಲ್ಲ. ಮೊದಲು ವೇಣುವಾದನದಲ್ಲಿ (ಮೋಹನರಾಗ) ಆರಂಭಗೊಂಡು ಶಹನಾಯಿವಾದನದ ಮೂಲಕ ನಮ್ಮನ್ನು ಎದ್ದೇಳಿಸುವ ಬಾನುಲಿಗಳಿಲ್ಲ (ರೆಡಿಯೋ ಸ್ಟೇಷನ್‌). ಅಪರಿಮಿತವಾಗಿ ನಮ್ಮ ಇಂದ್ರಿಯಗಳಿಗೆ ದೊರೆಯುವ ಒಂದಲ್ಲ ಒಂದು ರೀತಿಯ ದೇವರ ಉಲ್ಲೇಖಗಳಿಲ್ಲ. ಹೀಗೆಲ್ಲ ಇದ್ದಾಗ್ಯೂ ನಾನು ಕಂಡ ಅನೇಕಾನೇಕ ಅನಿವಾಸಿಗಳ ಮನೆಗಳ ಮೂಲೆಗಳಲ್ಲಿ ಕಾರಿನ ಮೂಲೆಗಳಲ್ಲಿ ದೇವರಿಗೆ ಸ್ಥಾನವಿದೆ, ಜೊತೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ದೇವರುಗಳ ದರ್ಶನ ಮಾಡುವ ರೂಢಿಯಿದೆ. ಭಾರತದಲ್ಲಿ ಎಲ್ಲವೂ ಇದ್ದು ಅಲ್ಲಿ ನಮಗಿಲ್ಲದ ದೇವರುಗಳ ಜೊತೆ/ಸಾಂಗತ್ಯಕ್ಕೆ ಇಲ್ಲಿ ಹೆಚ್ಚಿನ ಅಗತ್ಯ ಕಂಡುಬರುತ್ತೆ.

ಜನವರಿ-ಫೆಬ್ರುವರಿ ದಿನಗಳಲ್ಲಿ ನಾನು ಆಫೀಸಿಗೆ ಹೋಗೋ ಹೊತ್ತಿಗೆಲ್ಲಾ ಸೂರ್ಯೋದಯದ ಸಮಯ. ದಿನಕ್ಕೊಂದು ಬಗೆಬಗೆಯ ಚಿತ್ತಾರವನ್ನು ಆಕಾಶದಲ್ಲಿ ಸೃಷ್ಟಿಸಿರೋ ಆ ಮೋಡಿಗೆ ಮಾರುಹೋಗದೇ ಇರಲು ಯಾರಿಗಾದರೂ ಹೇಗೆ ಸಾಧ್ಯ? ಅದೇ ಸಮಯಕ್ಕೆ ನಾನು ’ಓ ದಿನಕರ ಶುಭಕರ ಧರೆಗೆ ಬಾ ಎಂದು ಹಾಡುತ್ತೇನೆ’, ಅಥವಾ ’ಓ ಮಿತ್ರಾಯ ನಮಃ’ ಎನ್ನುತ್ತೇನೆ, ಅಥವಾ ತೈತ್ರೇಯ ಉಪನಿಷತ್ತೋ ಅಥವಾ ಮತ್ತಿನ್ನೆಲ್ಲೋ ಉಲ್ಲೇಖಗೊಂಡ ’ನಿನ್ನ ಹೊನ್ನ ಕಿರಣಗಳಿಂದ ನಮ್ಮನ್ನು ಪಾವನಗೊಳಿಸು’ ಎಂದು ಬೇಡಿಕೊಳ್ಳುತ್ತೇನೆ. ನಾನು ಹೀಗೆ ಮಾಡದಿದ್ದರೂ (ಅಥವಾ ಸೂರ್ಯನನ್ನು ನೋಡದೇ ಇದ್ದರೂ) ಸೂರ್ಯನ ದಿನಚರಿಯಲ್ಲಿ ಏನೂ ಬದಲಾಗೋದಿಲ್ಲ. ಹಾಗೆಂದಾಕ್ಷಣ ಎರಡು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತವೆ: ೧) ನಿಯಮಿತವಾಗಿ ನಡೆಯುವ ಪ್ರಕೃತಿಯ ಕ್ರಿಯೆಗೆ ನಾನು ಪ್ರತಿಕ್ರಿಯಿಸಿದರೆಷ್ಟು ಬಿಟ್ಟರೆಷ್ಟು? ೨) ಈ ಪ್ರಕೃತಿಯ ಬದಲಾವಣೆಯ ಉಲ್ಲೇಖಕ್ಕೂ ದೇವರಿಗೂ ಏನು ಸಂಬಂಧ?

ಬಹಳ ಸುಲಭವಾಗಿ ದೇವರನ್ನು ಹೀಗೆ ಪರಿಕಲ್ಪಿಸಿಕೊಳ್ಳಬಹುದು: ನಮ್ಮ ಪ್ರಕೃತಿಯೇ ದೇವರು. ಅದರಲ್ಲಿ ಸೂರ್ಯ-ಚಂದ್ರರಿದ್ದಾರೆ, ನದಿ-ಸಾಗರಗಳಿವೆ, ಹಾವು-ಮುಂಗುಸಿ-ಹಂದಿ-ಕಪ್ಪೆ ಇತ್ಯಾದಿಗಳಿದ್ದಾವೆ, ಪಕ್ಷಿಗಳಿವೆ, ಎಲ್ಲವೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸರಪಳಿ ಇದೆ. ಯಾವ ವಿಜ್ಞಾನಿಯೂ ಬರೆದಿಡದ ತತ್ವದ ಪ್ರಕಾರ ನಡೆಯುವ ಅದೆಷ್ಟೋ ಅನನ್ಯವಾದ ಚಕ್ರಗಳಿವೆ, ಕೋಟ್ಯಾನುಕೋಟಿ ಜೀವರಾಶಿ ಇದೆ, ಇನ್ನೂ ಏನೇನೋ ಇದೆ. ನನಗೆ ಮುಂಜಾನೆ ಸೂರ್ಯ ದೇವರಾಗಿ ಕಂಡು ಬಂದರೆ ಒಬ್ಬ ರೈತನಿಗೆ ಅವನ ಬೆಳೆಯನ್ನು ಕಾಡುವ ಇಲಿಗಳಿಂದ ರಕ್ಷಣೆಕೊಡುವ ಹಾವು ದೇವರಾಗಿ ಕಂಡುಬರಬಹುದು, ಇನ್ನೊಬ್ಬರಿಗೆ ಅನ್ನವನ್ನು ಕೊಡುವ ಭೂತಾಯಿ ದೇವರಾಗಬಹುದು. ನೀರೆ ಒಂದು ದೊಡ್ಡ ಸಿದ್ಧಾಂತವಾಗಬಹುದು. ಗಾಳಿ, ಮಳೆ, ಬೆಂಕಿ ಮಣ್ಣು, ಮತ್ತೊಂದು ಎಲ್ಲವೂ ಅವರವರ ದೇವರಾಗಬಹುದು. ಈ ಸೃಷ್ಟಿಯ ಅಗಾಧತೆ ಹಾಗೂ ಅದರಲ್ಲಿನ ಶಕ್ತಿ ಎಲ್ಲಗಿಂತ ಮಿಗಿಲಾಗಿರಬಹುದು - ಸಣ್ಣದಾಗಿ ದೇವರ ಮುಂದೆ ಉರಿಯುವ ನಂದಾದೀಪದ ಬೆಂಕಿಗೂ ಇತ್ತೀಚೆಗಷ್ಟೇ ಆಷ್ಟ್ರೇಲಿಯದಲ್ಲಿ ಸಾವಿರಾರು ಮೈಲನ್ನು ಕಬಳಿಸಿದ ಕಾಡ್ಗಿಚ್ಚಿಗೂ ನಂಟಿದೆ. ಈ ಭೂಮಿಯನ್ನು ಸುಮಾರು ಎಂಭತ್ತು ಭಾಗ ಆವರಿಸಿಕೊಂಡ ನೀರಿನ ಅವತಾರಗಳಿಗೆ ಅಪರಿಮಿತ ಶಕ್ತಿ ಇದೆ.

ಈ ಮೇಲೆ ಉಲ್ಲೇಖಿಸಿದ ದೇವರಿನ ಪರಿಕಲ್ಪನೆಗೆ ಜಾತಿಗಳಿಲ್ಲ, ಪ್ರವಾದಿಗಳಿಲ್ಲ, ಮತಗಳಿಲ್ಲ ಹಾಗೇ ಇವು ಎಲ್ಲವೂ ಎಲ್ಲ ಕಡೆಯೂ ಇವೆ. ಅದೇ ಸರ್ವಾಂತರ್ಯಾಮಿ. ಅದೇ ಸರ್ವಶಕ್ತ. ಅದೇ ಭಗವಂತ.

***
’ಓ ಶ್ರೀ ಗಣೇಶಾಯ ನಮಃ’ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ. ಅಪರೂಪಕ್ಕೊಮ್ಮೆ ದೇವಸ್ಥಾನದಲ್ಲಿ ಕಾಲು ನೋಯಿಸಿಕೊಂಡು ವಿಷ್ಣು ಸಹಸ್ರನಾಮ ಓದಿ ಬರುತ್ತೇವೆ. ಧರ್ಮಸ್ಥಳದಲ್ಲಿ ಕೊಟ್ಟ ಶಿವಸಹಸ್ರ ನಾಮಾರ್ಚನೆಯ ಪುಸ್ತಕದಲ್ಲಿ ಕೊನೆಯ ಪಕ್ಷ ಒಂದು ನೂರು ನಾಮವನ್ನಾದರೂ ಬಾಯಿ ಪಾಠ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನಗಳಿಗೆ ನಮ್ಮದೇ ಒಂದು ವರ್ಶನ್ನನ್ನು ಅನ್ನು ಸೃಷ್ಟಿಸಿಕೊಂಡಿದ್ದೇವೆ. ದಿನವನ್ನು ಆರಂಭಿಸುವ ಮೊದಲು ದೇವರ ಮುಂದೆ ದೀಪ ಹಚ್ಚುತ್ತೇವೆ, ಅಪರೂಪಕ್ಕೊಮ್ಮೆ ಸ್ಮೋಕ್ ಡಿಟೆಕ್ಟರುಗಳಿಗೆ ಹೆದರಿಕೊಂಡೇ ಊದುಬತ್ತಿಯನ್ನು ಉರಿಸುತ್ತೇವೆ. ಹಬ್ಬ ಹರಿದಿನಗಳೇನಾರೂ ವಾರಾಂತ್ಯಕ್ಕೆ ಒದಗಿ ಬಂದರೆ ದೇವಸ್ಥಾನಗಳ ಕಡೆಗೆ ಮುಖ ತಿರುಗಿಸುತ್ತೇವೆ.

ಈ ದೇವಸ್ಥಾನ ಎನ್ನುವುದು ನಮ್ಮ ಸಮುದಾಯ. ಭಾರತದಲ್ಲಿ ವಿಷ್ಣು ದೇವರ ಮುಂದೆ ಹಾಗೂ ಆಜೂ-ಬಾಜಿನಲ್ಲಿ ಹೆಚ್ಚು ದೇವರುಗಳನ್ನು ನಾವು ಸೃಷ್ಟಿಸಿಕೊಳ್ಳೋದಿಲ್ಲ, ಆದರೆ ನಮ್ಮ ಅನಿವಾಸಿ ಬದುಕಿನಲ್ಲಿ ನಾವು ಎಡೆತಾಕುವ ದೇವಸ್ಥಾನಗಳ ಹೆಸರುಗಳು ಏನೇ ಇದ್ದರೂ ಅದರಲ್ಲಿ ಎಲ್ಲವೂ ಇವೆ. ಗಣೇಶ (ಅದರಲ್ಲೂ ಹಲವಾರು ವಿಧ, ಭಂಗಿ, ಗಾತ್ರ - ಒಂದೇ ದೇವಸ್ಥಾನದ ಹಲವು ಕಡೆ), ಶಿವ, ಅಂಬಿಕೆ, ಸತ್ಯನಾರಾಯಣ ಸ್ವಾಮಿ (ಪರಿವಾರ), ರಾಮ (ಪರಿವಾರ), ಭೂಮಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ (ಪರಿವಾರ), ಶ್ರೀಕೃಷ್ಣ (ಪರಿವಾರ), ಆಂಜನೇಯ, ನವಗ್ರಹಗಳು, ಇತ್ಯಾದಿ - ಜೊತೆಗೆ ಮುಖ್ಯ ದೇವತೆ (ದೇವಸ್ಥಾನದ ಹೆಸರಿಗೆ ತಕ್ಕಂತೆ). ದೊಡ್ಡ ಬಾಲಾಜಿಯು ವಿಗ್ರಹದ ಕೆಳಗೆ ಸಣ್ಣದೊಂದಿದೆ, ಅದಕ್ಕೂ ಚಿಕ್ಕದಾಗಿ ಮತ್ತೊಂದು ಗಣೇಶ ಮೂರ್ತಿ ಇದೆ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಬೇಕಾದಷ್ಟು ಸಣ್ಣ-ಪುಟ್ಟ ಗಣೇಶ-ಶಿವರು ಕಂಡುಬರುತ್ತಾರೆ.

ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಅನಿವಾಸಿಗಳು ಸೃಷ್ಟಿಸಿಕೊಂಡ ದೇವಸ್ಥಾನಗಳು ದೇವಸ್ಥಾನಗಳೇ ಅಲ್ಲ ಎನ್ನಬಹುದು. ಇಲ್ಲಿನ ಮಳೆ-ಛಳಿ-ವ್ಯವಸ್ಥೆಗೆ ತಕ್ಕಂತೆ ಬನಿಯನ್-ಕಾಲುಚೀಲ ಧರಿಸಿ ಪೂಜೆ ನಡೆಸಿಕೊಡುವ ಅರ್ಚಕರಿದ್ದಾರೆ. ಆ ಮೂಲ ವಿನೀತ ಭಾವನೆಯಿಂದ ದೇವರಿಗೆ ನಮ್ಮ ಪ್ರಾರ್ಥನೆಯನ್ನು ಅರ್ಪಿಸಿಕೊಳ್ಳುವ (ನಮ್ಮಲ್ಲಿ) ಮನೋಭಾವನೆಯಲ್ಲಿ ಬಹಳಷ್ಟು ಬದಲಾವಣೆ ಇದೆ/ಆಗಿದೆ. ಬೇಸಿಗೆ ಸಮಯದಲ್ಲಿ ಹೊರಗಡೆ ಜೀನ್ಸ್ ಚೆಡ್ಡಿ(ಬರ್ಮುಡಾ) ವನ್ನು ಧರಿಸಿಕೊಂಡು ಓಡಾಡುವ ನಮಗೆ ದೇವಸ್ಥಾನಗಳಲ್ಲಿ ’ಶಿಸ್ತಾಗಿ ಬನ್ನಿ’ ಎನ್ನುವ ವಿನಂತಿ/ಆದೇಶವಿದೆ. ಶೂಗಳನ್ನು ಯಾವಾಗಲೂ ರ್ಯಾಕ್‌ನಲ್ಲೇ ಇಡಿ ಎಂದು ಅದ್ಯಾವುದೇ ಭಾಷೆಯಲ್ಲಿ ಅದೆಷ್ಟೇ ಬೋರ್ಡುಗಳನ್ನು ಬರೆಸಿಹಾಕಿದ್ದರೂ ಅದನ್ನೆಲ್ಲ ಧಿಕ್ಕರಿಸಿ ಬಾಗಿಲ ಬಳಿಯೇ ಚಪ್ಪಲಿ/ಶೂ ರಾಶಿ ಪೇರಿಸುವ ’ಅದು ನಮಗಲ್ಲ’ ಎಂದು ಕೊಡಗಿಕೊಳ್ಳುವ ಮನೋಭಾವನೆ ಇದೆ (ಇದೇ ಒಂದು ಅಂಶ ಸಾಕು ನಾವು, ಭಾರತೀಯರು ರೂಲ್ಸ್, ರೆಗ್ಯುಲೇಶನ್ನ್ ಹಾಗೂ ಕಾನೂನನ್ನು ಹೇಗೆ ಪರಿಪಾಲಿಸುತ್ತೇವೆ ಎಂದು ಸಾಧಿಸಲು).

ಹೀಗೆ ನಮ್ಮ ಮನೆ, ಮನ, ಕಾರುಗಳಲ್ಲಿರುವುದು ದೇವರೋ ಅಥವಾ ಈ ದೇವಸ್ಥಾನವೆಂದು ಹೆಸರಿಟ್ಟುಕೊಂಡ ಸಮುದಾಯಗಳಲ್ಲಿರುವುದು ದೇವರೋ ಅಥವಾ ನಮ್ಮ ಊರು/ಪರಂಪರೆಯಲ್ಲಿರುವುದು ದೇವರೋ ಎನ್ನುವ ಪ್ರಶ್ನೆ ಬಹುಷಃ ಎಲ್ಲರಿಗೂ ಬಂದಿರಬಹುದು. ಇಷ್ಟೆಲ್ಲಾ ದೇವರಿನ ಪರಿಕಲ್ಪನೆ ಸಾಲದು ಎಂದು ನಮ್ಮ ನಮ್ಮ ಕಲ್ಪನೆಯ ಮಠಗಳನ್ನು ಹುಟ್ಟು ಹಾಕಿಕೊಂಡಿದ್ದೇವೆ. ಸಂಕಟಕ್ಕೆ ತಿರುಪತಿಯ ವೆಂಕಟರಮಣನಿದ್ದಾನೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯಿದೆ (ಒಂದು ಆಬ್ಜೆಕ್ಟ್ ಪರಿಕಲ್ಪನೆ ಗಮನಿಸಿ), ಮಂತ್ರಾಲಯವಿದೆ, ಹೊರನಾಡಿದೆ, ಶೃಂಗೇರಿಯಿದೆ. ನಮ್ಮ ಊರಿನ ಕೈಟಭೇಶ್ವರನಿದ್ದಾನೆ, ಸರ್ಕಲ್ಲಿನ ಚೌಡಮ್ಮಳಿದ್ದಾಳೆ, ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಇದ್ದಾನೆ, ಸುಬ್ರಹ್ಮಣ್ಯ ಸ್ವಾಮಿಯ ಸಾನಿಧ್ಯವಿದೆ. ನಮ್ಮ ಹಿಂದೂ ಪರಿಕಲ್ಪನೆಯೇ ಎಷ್ಟು ವಿಸ್ತಾರವಾದುದೆಂದು ನಾನು ಸೋಜಿಗಗೊಂಡಿದ್ದೇನೆ - ಅವರವರ ಅನುಕೂಲಕ್ಕೆ ತಕ್ಕಂತೆ ಯಾರು/ಏನನ್ನು ಬೇಕಾದರೂ ಮೆಚ್ಚಿ/ಹಚ್ಚಿಕೊಳ್ಳುವ ಸ್ವಾತಂತ್ರ್ಯವಿದೆ.


***

ಸೃಷ್ಟಿ, ಪ್ರಕೃತಿ ಹಾಗೂ ಮೂರ್ತಿ ಪೂಜೆಯ ಆಧಾರದಲ್ಲಿ ಈ ಎಲ್ಲ ಉಲ್ಲೇಖಗಳನ್ನು ಮಂಡಿಸಿದಂತೆ ಒಂದು ಅಂಶ ಪ್ರಸ್ತುತವಾಗುತ್ತದೆ - ಅದೇ ನಮ್ಮ ಸಮುದಾಯ. ಭಾರತದಲ್ಲಿ ನಾವು ಬೆಳೆದುಬಂದಂತೆ ಒಂದು (ಮೆಜಾರಿಟಿ) ವ್ಯವಸ್ಥೆಯ ಅಂಗವಾಗಿದ್ದೆವು, ಆ ವ್ಯವಸ್ಥೆ ಇಲ್ಲಿ ಇರದಿದ್ದ ಮಾತ್ರಕ್ಕೆ ಅದನ್ನು ನಾವು-ನಾವೇ ಹುಟ್ಟುಹಾಕಿಕೊಂಡಿರೋದು (ಪ್ರಯತ್ನ). ಸಂಘಜೀವ ಪ್ರತಿಯೊಬ್ಬರಿಗೂ ಬೇಕಾದ ಹಾಗೇ ಒಂದಲ್ಲ ಒಂದು ಗೋಡೆಗೆ ನಾವು ಒರಗಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಮನ-ಕಾರು-ಮನೆಗಳಲ್ಲಿನ ದೇವರುಗಳನ್ನು ಒಂದು ಸ್ವಲ್ಪ ದಿನಗಳ ಮಟ್ಟಿಗೆ ತೆಗೆದುಹಾಕಿ ನೋಡಿದಾಗ (ಸಾಧ್ಯವಿದ್ದರೆ) ಅಲ್ಲಿ ಒಂದು ನಿರ್ವಾತ (ವ್ಯಾಕ್ಯೂಮ್) ಹುಟ್ಟತ್ತದೆ, ಈ ನಿರ್ವಾತದ ವಿಶೇಷವೆಂದರೆ ಅದನ್ನು ಮತ್ತೊಂದರಿಂದ ತುಂಬಲೇ ಬೇಕಾಗುತ್ತದೆ. ಒಂದು ರೀತಿಯ ಪೆಂಡುಲಮ್ ಗುಂಡು ಇದ್ದ ಹಾಗೆ, ನೀವು ಒಂದು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋದಂತೆಲ್ಲ ಅದು ಅಷ್ಟೇ ವಿರುದ್ಧ ದಿಕ್ಕಿಗೆ ಚಲಿಸುವ ಸಹಜತೆ ಇರುವ ಹಾಗೆ.

ಪ್ರತಿಯೊಬ್ಬರಿಗೂ ಅವರವರ ಬೇಡಿಕೆಗಳಿವೆ ಹಾಗೂ ಅಗತ್ಯಗಳಿವೆ, ಅದಕ್ಕೆ ತಕ್ಕಂತೆ ಅವರವರ ಮನಸ್ಸಿನಲ್ಲಿ ಎಲ್ಲೋ ಮೂಲೆಯಲ್ಲಿ ದೇವರ ಪರಿಕಲ್ಪನೆ ಇದೆ. ದೇವರು ಇಲ್ಲ ಎನ್ನುವ ವಾದವೂ, ದೇವರ ಮೇಲಿನ ಸೇಡೂ, ವಿರೋಧಾಲೋಚನೆಗಳು ಎಲ್ಲವೂ ಆ ದೇವರ ಕೃಪೆಯೇ ಎಂದುಕೊಂಡರೆ ಎಲ್ಲವೂ ದೇವರ ಮಯ. ದೇವರು ಎನ್ನುವ ಭಾವನೆ ಅಥವಾ ಆ ಭಾವನೆ ಇಲ್ಲದಿರುವ ಭಾವನೆಯೇ ದಿವ್ಯವಾದುದು, ಅಷ್ಟೇ!