Showing posts with label ಪರಿಸರ. Show all posts
Showing posts with label ಪರಿಸರ. Show all posts

Saturday, May 16, 2020

ಹಾಲು-ನೀರಿನ ಅನ್ಯೋನ್ಯತೆ!

"ಕಾಯದಿದ್ರೆ ಕೆನೆ ಕಟ್ಟೋದಿಲ್ಲ!" ಎಂದು ಎನಿಸಿದ್ದು ಇವತ್ತು ಚಹಾ ಮಾಡೋದಕ್ಕೋಸ್ಕರ ಹಾಲು ಕಾಯಿಸುತ್ತಿರುವಾಗ.  ನಾವು ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟು ಸಲ ನೀರು ಅಥವಾ ಹಾಲನ್ನು ಬಿಸಿ ಮಾಡಿರೋದಿಲ್ಲ?  ಕೆಲವೊಮ್ಮೆ ಈ ಗೊತ್ತಿರುವ ವಿಷಯಗಳನ್ನೂ ಗಹನವಾಗಿ ನೋಡಿದಾಗ, ಅವುಗಳಲ್ಲಿನ ಜೀವನ ಸೂಕ್ಷ್ಮ ನಮಗೆ ಗೊತ್ತಾಗುತ್ತದೆ.  ಈ ವಿಚಾರದಲ್ಲಿ ನಿಸರ್ಗ ನಮಗೆಲ್ಲರಿಗೂ ಕಲಿಸೋ ಪಾಠಗಳು ಜೀವನ ಪರ್ಯಂತ ಅನೇಕಾನೇಕ ಇದ್ದೇ ಇರುತ್ತವೆ, ನಾವು ನೋಡಬೇಕು, ಗಮನಿಸಬೇಕು ಅಷ್ಟೇ.

ನಮ್ಮ ಕಡೆ ನೀರು ಕುದ್ದು (ಕುದಿದು) ಮರಳುತ್ತದೆ ಎನ್ನುತ್ತಾರೆ... ಅದನ್ನು ಇಂಗ್ಲೀಷಿನಲ್ಲಿ rolling boil ಅಂತಲೂ ಹೇಳ್ತಾರೆ.  ಕಾಯುವ, ಕುದಿಯುವ ಪ್ರಕ್ರಿಯೆ ಬಹಳ ಸುಲಭವಾದದ್ದು.  ನಾವು ಒಲೆ/ಸ್ಟೋವ್ ಮೇಲೆ ನೀರನ್ನು ಕಾಯಲು ಇಟ್ಟಾಗ ಅದರ ತಳ ಬೆಂಕಿಯಿಂದ ಬಿಸಿಯಾಗಿ ತಳಕ್ಕೆ ಹತ್ತಿರವಿರುವ ನೀರಿನ ಅಣುಗಳು ಬಿಸಿಯನ್ನು ತಗುಲಿಕೊಂಡು ಮೇಲೆ ಬರುತ್ತವೆ.  ಅವುಗಳು ಮೇಲೆ ಬಂದಂತೆಲ್ಲ, ಮೇಲಿನ ತಂಪಾಗಿರುವ (relatively) ಅಣುಗಳು ಕೆಳಗೆ ಹೋಗುತ್ತವೆ.  ಹೀಗೆ ನೀರು ಕುದಿಯುವ ಮಟ್ಟವನ್ನು ತಲುಪಿದ ಹಾಗೆ, ಈ ನೀರಿನ ಅಣುಗಳು, ಕೆಳಗೆ ಹೋದವು, ಮತ್ತೆ "ಮರಳು"ವ ಹೊತ್ತಿಗೆ ಅವುಗಳ ವೇಗ ಹೆಚ್ಚಾಗುತ್ತದೆ... ನಂತರ ನೀರು ಕೊತ ಕೊತ ಕುದಿಯತೊಡಗುತ್ತದೆ.

ಆದರೆ, ಹಾಲನ್ನು ಬಿಸಿ ಮಾಡಿದಾಗ ಅದೇ ರೀತಿ ಹಾಲಿನ ಕಣಗಳು ಮೇಲೆ ಕೆಳಗೆ ಹೋಗುತ್ತಿದ್ದರೂ ಸಹ, ಹಾಲು ಬಿಸಿ ಆದಂತೆಲ್ಲ, ಅದರ ಮೇಲ್ಮೈ ಮೇಲೆ ಒಂದು ತೆಳುವಾದ ಕೆನೆಯ ಪರದೆ ಹುಟ್ಟಲು ಆರಂಭವಾಗುತ್ತದೆ.  ಹಾಲು ನೀರಿಗಿಂತ ಸ್ವಲ್ಪ "ದಪ್ಪ"ನಾದ ದ್ರವ ಪದಾರ್ಥವಾದರೂ ಕೂಡ, ಹಾಲಿನ boiling point ನೀರಿಗಿಂತ ಹೆಚ್ಚೇನೂ ಭಿನ್ನವಾಗಿರೋದಿಲ್ಲ, ಆದರೆ ಈ ಎರಡೂ ದ್ರವ ಪದಾರ್ಥಗಳು ಕುದಿಯುವ ಹೊರಮುಖ ಬೇರೆ ಬೇರೆ ಅಷ್ಟೇ.

ಹಾಲು ಕುದಿಯುತ್ತಾ ಹೋದಂತೆಲ್ಲ ಅದರ ಮೇಲ್ಮೈಯಲ್ಲಿರುವ ಕೆನೆಯ ದಪ್ಪ ಹೆಚ್ಚಾಗುತ್ತಾ ಹೋಗುತ್ತದೆ.  ಪಾತ್ರೆಯ ಬುಡದಲ್ಲಿ ಬಿಸಿ ಎಲ್ಲ ರೀತಿಯಲ್ಲೂ ಒಂದೇ ಸಮನಾಗಿ ಇದೆಯೆಂದು ಭಾವಿಸಿದರೆ, ಹಾಲು ಕುದಿಯುವ ಮಟ್ಟವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಕಟ್ಟಿರುವ ಕೆನೆಯ ಪರದೆ ಒಡೆದು ಒಂದೇ ಸಮನೆ ಮೇಲೆ ಉಕ್ಕಲು ಆರಂಭಿಸುತ್ತದೆ.  ಆದರೆ ನೀರು ಹೀಗು ಕುದ್ದು ಉಕ್ಕೋದಿಲ್ಲ.


ಇದನ್ನು ಇಬ್ಬರು ಗೆಳೆಯರ ಅನಾಲಜಿಯನ್ನು ಉಪಯೋಗಿಸಿಯೂ ವಿವರಿಸಬಹುದು!  ಹಾಲು ಮತ್ತು ನೀರು ಇಬ್ಬರೂ ಜೀವದ ಗೆಳೆಯರು. ಹಾಲಿನಲ್ಲಿ ಸಾಮಾನ್ಯವಾಗಿ ನೀರನ್ನು ಮಿಶ್ರ ಮಾಡಿರುತ್ತಾರೆ, ಅಥವಾ ನೀರಿನ ಪ್ರಮಾಣ ಇದ್ದೇ ಇರುತ್ತದೆ. ಹಾಲು ಕುದಿಯುತ್ತಾ ಬಂದ ಹಾಗೆ ನಿಧಾನವಾಗಿ ಹಬೆಯಾಡತೊಡಗುತ್ತದೆ... ಅಂದರೆ, ಅದರಲ್ಲಿನ ನೀರು ಆವಿಯಾಗಲು ತೊಡಗುತ್ತದೆ... ಅಂದರೆ, ಹಾಲಿನ ಸ್ನೇಹಿತ ನಿಧಾನವಾಗಿ ಹೊರಗಡೆ ಹೋಗುತ್ತಾನೆ.  ಆದರೆ, ತನ್ನ ಸ್ನೇಹಿತ ನೀರು ಇನ್ನೇನು ಪೂರ್ಣ ಪ್ರಮಾಣದಲ್ಲಿ ಆವಿಯಾಗಿ ಹೋಗೇ ಬಿಟ್ಟಿತು ಎಂದು ಹೆದರಿಕೆಯಿಂದ ಹಾಲೂ ಸಹ "ನೀನು ಹೋದಲ್ಲಿಗೆ ನಾನೂ ಬರುತ್ತೇನೆ!" ಎಂದು ಹಠ ಹಿಡಿದು ಉಕ್ಕುತ್ತಾನಂತೆ.  ಅದೇ ಸಮಯಕ್ಕೆ ನೀವು ಸ್ವಲ್ಪ ನೀರನ್ನು ಪಾತ್ರೆಯ ಮೇಲೆ ಚಿಮುಕಿಸಿದರೆ ಉಕ್ಕುವ ಹಾಲು ಸುಮ್ಮನಾಗುತ್ತಾನಂತೆ!

ಹೀಗೆ, ಈ ದಿನ ಚಹಾ ಮಾಡಲು ಹೋಗಿ, ಹಾಲು-ನೀರಿನ ಜೋಡಿಗಳನ್ನು ಬೆಂಕಿಯ ಸಹವಾಸದಲ್ಲಿ ಕುದಿಯುವಂತೆ ಮಾಡಿದ್ದು, ಅವುಗಳ ಅನ್ಯೋನ್ಯ ಗೆಳೆತನವನ್ನು ಪರೀಕ್ಷೆಗೆ ಒಡ್ಡಿ ಹತ್ತಿರದಿಂದ ನೋಡಿದ್ದು ಕೋವಿಡ್ ಕವಿದು ಮನೆಯಲ್ಲೇ ಮುದುರಿಕೊಂಡಿರುವ ನಮ್ಮಂತಹವರು ಮಾಡಿದ ದೊಡ್ಡ ಕಾರ್ಯ!

Monday, April 13, 2020

ನೋಡುವ ಕಣ್ಣಿರಲು...

ನಿನ್ನೆ ಶುಭ್ರವಾದ ಮುಂಜಾನೆ ಹೊರಗೆ ತಿರುಗಾಡಿಕೊಂಡು ಬರುವಾಗ ಇನ್ನೇನು ಅದಾಗ್ಗೆ ನಿದ್ದೆಯಿಂದ ಕಣ್ಣೊರೆಸಿಕೊಂಡು ಎದ್ದೇಳುತ್ತಿದ್ದ ಸೂರ್ಯ.  ಸೂರ್ಯನ ಸ್ನೇಹಿತರಾದ ಪಕ್ಷಿ ಸಂಕುಲದ ಸದಸ್ಯರುಗಳು ಬಹಳ ಗಡಿಬಿಡಿಯಲ್ಲಿ ತಮ್ಮ ದಿನಗಳನ್ನು ಆರಂಭಿಸುತ್ತಿದ್ದಂತೆ ಕಂಡುಬಂತು.  ಅವುಗಳ ಚಿಲಿಪಿಲಿ ಧ್ವನಿಯೊಂದಿಗೆ ಪೈಪೋಟಿ ನೀಡುತ್ತೇವೆ ಎಂದು ನಂಬಿಕೊಂಡು ಆಗೊಮ್ಮೆ ಈಗೊಮ್ಮೆ ಬೊಗಳುವ ನಾಯಿಗಳ ಸದ್ದು ದೂರದಲ್ಲಿ ಕೇಳುತ್ತಿತ್ತು.  ಹಿಂದಿನ ದಿನದ ವಿಪರೀತ ಗಾಳಿ, ಸ್ವಲ್ಪ ಮಳೆ/ಆಲಿಕಲ್ಲುಗಳ ಆಘಾತದಲ್ಲಿಸ್ವಲ್ಪ ನೊಂದಂತೆ ಕಂಡ ಗಿಡಮರಗಳೂ ಸಹ ಮುಂಬರುವ ಬಿಸಿಲನ್ನು ಆಹ್ಲಾದಿಸಲು ಸ್ವಲ್ಪವೂ ಅಲುಗಾಡದೇ ಕಾಯುತ್ತಿದ್ದವು.  ವಿಶ್ವದಾದ್ಯಂತ ಕೊರೋನಾ ವೈರಸ್ ಸುದ್ದಿಗೆ ಗ್ರಾಸವಾಗಿ ಹೆದರಿದ್ದ ಚಂದ್ರ ದೂರದಲ್ಲಿ ಅವತರಿಸಿದ್ದರೂ, ಇಂದು ಮತ್ತೇನು ಗ್ರಹಚಾರ ಕಾದಿದೆಯೋ, ತನಗೆಲ್ಲಿ ಸೋಂಕು ತಗುಲೀತು ಎನ್ನುವ ಹುನ್ನಾರದಿಂದ ಮೋಡಗಳ ನಡುವೆಯೇ ಮುಖವನ್ನು ಹುದುಗಿಸಿಕೊಂಡು ಆಗಾಗ್ಗೆ ಚಲಿಸುವ ಮೋಡಗಳ ಕೃಪೆಯಲ್ಲಿ ತೂಗುಯ್ಯಾಲೆಯಲ್ಲಿ ಆಟವಾಡುತ್ತಿದ್ದ.




ಸುತ್ತಲಿನಲ್ಲಿ ಹಸಿರು ತುಂಬಿಕೊಂಡಿದ್ದರೂ ನಾವು ನಡೆಯುವ ರಸ್ತೆಯಲ್ಲಿ ಮಾಗಿದ ಎಲೆಗಳು ಹಿಂದಿನ ದಿನದ ಗಾಳಿ-ಮಳೆಯ ರಭಸದ ಭರಾಟೆಯನ್ನು ನೆನಪಿಸುವಂತೆ ತಮ್ಮನ್ನು ತಾವು ರಸ್ತೆಯ ಮುಖದ ಮೇಲೆ ಚಾಚಿಕೊಂಡಿದ್ದವು.  ಅಲ್ಲಿಲ್ಲಿ ಮುರಿದು ಬಿದ್ದ ಒಣಗಿದ ಎಲೆರಹಿತ ಮರದ ಟೊಂಗೆಗಳು ಅದ್ಯಾವುದೋ ಗಣಿತದ ಸಮೀಕರಣವನ್ನು ಧ್ಯಾನಿಸಿಕೊಳ್ಳುವಂತೆ ತಮ್ಮನ್ನು ತಾವು ಚದುರಿಸಿಕೊಂಡಿದ್ದು, ಹಲವಾರು ಕೋನಗಳಿಂದ ಅನೇಕ ಬಹುಭುಜಾಕೃತಿಗಳ ಸಾಧ್ಯತೆಯನ್ನು ಎತ್ತಿ ತೋರಿಸುತ್ತಿದ್ದವು.  ಈಗಾಗಲೇ ಹಲವಾರು ಬಾರಿ ಮಳೆಯಲ್ಲಿ ಮಿಂದು ತೋಯ್ದು ಹೋದ ನೆಲ ಯಾವುದೇ ಕಂಪನ್ನು ಬೀರುತ್ತಿರಲಿಲ್ಲ, ಅದರ ಬದಲಿಗೆ ಹಿಂದಿನ ದಿನ ಕತ್ತರಿಸಿದ ಹುಲ್ಲಿನ ಗರಿಕೆಗಳು ಬೀಸುವ ಗಾಳಿಗೆ ತಮ್ಮ ಹಲುಬನ್ನು ನಿಲ್ಲಿಸಿ, ಒಂದು ರೀತಿಯ ಗಾಢವಾದ ಪರಿಮಳವನ್ನು ಎಲ್ಲಕಡೆಗೆ ಹರಡಿದ್ದವು.  ರಸ್ತೆಯ ಬದಿಯಲ್ಲಿ ಗುಂಪು ಕಟ್ಟಿಕೊಂಡು, ಪುಡಿಪುಡಿ ಮಣ್ಣಿನಲ್ಲಿ ಮನೆಕಟ್ಟುವ ಇರುವೆಗಳ ಚಡಪಟಿಕೆ ಜೋರಾಗಿ ನಡೆದಿತ್ತು.  ತಮ್ಮ ಭವಿಷ್ಯದ ಸೌಧದ ಮೇಲೆ ತಣ್ಣೀರೆರೆಚಿದ ಮಳೆರಾಯನಿಗೆ ಆಗಾಗ್ಗೆ ಎದ್ದು ಎರಡು ಕಾಲಿನಲ್ಲಿ ನಿಂತು ಶಾಪಹಾಕುತ್ತಿರುವವರಂತೆ ಕಂಡುಬಂದವು.  ಏನೇ ಆದರೂ ಛಲವನ್ನು ಬಿಡಬಾರದು ಎಂದು ತಮ್ಮ ಸೈನಿಕರುಗಳಿಗೆ ಮಳೆಯಿಲ್ಲದ ಶುಭ್ರ ಮುಗಿಲಿನಡಿಯಲ್ಲಿ ಕವಾಯತು ಮಾಡಿಸಲು ಹಿರಿಯ ಇರುವೆಗಳು ತಾಕೀತು ಮಾಡುತ್ತಿರುವಂತೆನಿಸಿತು.

"ನೋಡೋದಕ್ಕೆ ಎಷ್ಟೆಲ್ಲಾ ಇದೆ!" ಎಂಬ ಉದ್ಗಾರ ಹೊರಬರಲು ಯಾವ ಸದ್ದಿನ ಸಹಕಾರವೂ ಬೇಕಾಗಿರಲ್ಲ.  ಇದೇ ಸೃಷ್ಟಿಯಲ್ಲಿ ಎಲ್ಲವೂ ಇವೆ...ನೋಡುವ ಕಣ್ಣಿರಲು...ಬ್ರಹ್ಮಾಂಡವೇ ಒಂದು ಚಿತ್ರಪಟವಾಗುತ್ತದೆ.  ಆದರೆ ಚಿತ್ರಕಾರನೊಬ್ಬನನ್ನು ಬಿಟ್ಟು ಮತ್ತೆಲ್ಲವನ್ನೂ ಇಲ್ಲಿ ಕಾಣಲು ಸಾಧ್ಯ? ಅಥವಾ ಚಿತ್ರಕಾರನೇ ಚಿತ್ರದ ಒಂದು ಅಂಗವಾಗಿಬಿಡುತ್ತಾನೆಯೋ? ಇಲ್ಲಿನ ವಿಸ್ಮಯದ ಲೋಕ ಮೇಲ್ನೋಟಕ್ಕೆ ಸರಳ, ಗೊಂದಲ ರಹಿತವಾಗಿ ಕಂಡುಬಂದರೂ ಒಳಗೊಳಗೆ ಎಂತೆಂಥ ಸತ್ಯಗಳನ್ನು ಬಚ್ಚಿಟ್ಟುಕೊಂಡ ಪ್ರಸಂಗಗಳಿವೆ.  ಚಿಂತೆ-ಚಿಂತನೆಗಳಲ್ಲಿ ತೊಡಗಿಕೊಂಡ ಮನಗಳಿಗೆ ಮೇಲ್ನೋಟಕ್ಕೆ ಬಿಡುಬೀಸಾಗಿ ಎಲ್ಲವೂ ತೆರೆದುಕೊಂಡಂತೆ ಕಂಡರೂ, ಸುತ್ತಲಿನ ಜೀವ-ನಿರ್ಜೀವ ವಸ್ತುಗಳಲ್ಲಿ ವಿಷಯಗಳು ಅಡಗಿಕೊಂಡಿವೆ.  ಅದಕ್ಕಾಗಿಯೇ ಇಂಥವುಗಳನ್ನು "ವಸ್ತು-ವಿಷಯ" ಎನ್ನೋದಿರಬೇಕು!  ವಸ್ತುನಿಷ್ಠತೆ, ವಾಸ್ತವವನ್ನು ಆಧರಿಸಿರುವಂತೆ ಅದೇ ನಿಜ ಹಾಗೂ ಅದೇ ನಿಜವಾದ ನೆರೆಹೊರೆಯಾಗಬಲ್ಲದು.

ಈ ನೆರೆಹೊರೆಯ ಮೋಡಿಯಲ್ಲಿ ಮಿಂದ ಮನಸ್ಸು ಒಂದು ಕ್ಷಣ ಯಾವುದು ನಿಜ, ಯಾವುದು ಅದ್ಭುತ, ಯಾವುದು ಗೋಪ್ಯ, ಯಾವುದು ನಿಗೂಢವಾದದ್ದು ಎನ್ನುವುದನ್ನೆಲ್ಲ ಲೆಕ್ಕ ಹಾಕತೊಡಗಿತು.  ಇವೆಲ್ಲಕ್ಕಿಂತ ಮೇಲಾಗಿ ಇಂಥ ನಿಗೂಢತೆಯನ್ನು ತನ್ನ ಮಡಿಲಿನಲ್ಲಿ ಹುದುಗಿಕೊಂಡು ಅದ್ಯಾವ ಗಣಿತದ ಸಮೀಕರಣಗಳನ್ನು ಹೆಣೆದು ಈ ವ್ಯವಸ್ಥೆಯನ್ನು ಅದ್ಯಾರು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದಾರೋ ಎಂದು ಸೋಜಿಗವಾಯಿತು!

Friday, April 10, 2020

ದಿನಗಳು ಬೇರೆ, ದಿನಚರಿ ಒಂದೇ...

ನಮಗೂ ನೈಬರ್ಸ್ ಇದ್ದಾರೆ ಅಂತ ಅನ್ನಿಸಿದ್ದು ಇವತ್ತು ಬೆಳಿಗ್ಗೆ ಎದ್ದ ನಂತರ ನರಿ ಮುಖ ನೋಡಿದ ಮೇಲೆ.  ಮನೆಯ ಬಾಗಿಲನ್ನು ತೆಗೆಯಲು ಹೊರಗೆ ಬಂದು ನೋಡಿದರೆ ನಮ್ಮ ಯಾರ್ಡ್‌ನಲ್ಲಿ ಒಂದು ನರಿ, ಸ್ವಲ್ಪ ದೂರದಲ್ಲಿ ಎರಡು ಕಾಡು ಟರ್ಕಿಗಳು ಹಾಗೂ ಕೆಲವು ಜಿಂಕೆಗಳು ಕಂಡು ಬಂದವು. ಇವೆಲ್ಲ ನಮ್ಮ ಮನೆಯ ಸುತ್ತ ಇರೋ ಅಂತ ಪ್ರಾಣಿಗಳೇ, ಆದರೆ ನಮ್ಮ ನಮ್ಮ ವ್ಯಸ್ತ ಬದುಕಿನಲ್ಲಿ ನಮಗೆ ಅವುಗಳನ್ನು ನೋಡಲಾಗೋದಿಲ್ಲ ಅಷ್ಟೇ. ’ಅಯ್ಯೋ, ನಮ್ಮ ಮನೆ ಹತ್ರ ಬಂದಿದ್ದಾವೆ!’ ಎಂದು ಆಶ್ಚರ್ಯ ಸೂಚಿಸಿದ ನನ್ನ ಮಗಳಿಗೆ ಹೇಳಿದೆ,’ ನಾವು ಅವುಗಳ ಮನೆಯ ಹತ್ತಿರ ಬಂದಿದ್ದೇವೆಯೇ ವಿನಾ ಅವುಗಳು ನಮ್ಮ ಮನೆ ಬಳಿ ಅಲ್ಲ’, ಎಂದು. ಅವಳು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡು ಬಂದಳು.

ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ.  ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ.  ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ.  ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ.  ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು.  ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ.  ಆದರೆ ಈಗೆಲ್ಲ ಬದಲಾಗಿದೆ.

ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು.  ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ.  ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್‌ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ.  ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್‌ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ.  ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ.  ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.

ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ.  ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.

ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ.  ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು.  ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು.  ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ.  ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ.  ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!

ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು.  ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು.  ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು.  ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ.  ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!

Monday, April 06, 2020

ಮೋಡ ಕರಗುವ ಸಮಯ

ಸೋಶಿಯಲ್ ಅಥವಾ ಫಿಸಿಕಲ್ ಡಿಸ್ಟನ್ಸಿಂಗ್?

ಈ ಕರೋನಾ ವೈರಸ್ ಹಾವಳಿಯಿಂದಾಗಿ ಇತ್ತೀಚೆಗೆ ಇನ್ನೊಂದು phrase ನಮ್ಮನ್ನೆಲ್ಲ ಆಳುತ್ತಿದೆ: ಸೋಶಿಯಲ್ ಡಿಸ್ಟನ್ಸಿಂಗ್ (social distancing).  ನಾವೆಲ್ಲರೂ ಈ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಒಬ್ಬರಿಂದ ಮತ್ತೊಬ್ಬರ ಕಾಂಟ್ಯಾಕ್ಟ್ ಅನ್ನು ಕಡಿಮೆ ಮಾಡುವುದು, ಗ್ರೂಪ್/ಗ್ಯಾದರಿಂಗ್‌ಗಳಿಂದ ಸಂಪೂರ್ಣವಾಗಿ ದೂರವಿರುವುದು ಎಂದರ್ಥ.
ಒಂದು ಕುಟುಂಬದ ಸದಸ್ಯರಲ್ಲಿ ಯಾರಿಗೂ ಖಾಯಿಲೆ ಅಥವಾ ರೋಗದ ಲಕ್ಷಣಗಳು ಇಲ್ಲದಿದ್ದರೆ, ಅವರೆಲ್ಲರೂ ಒಟ್ಟಿಗೆ ಇರಬಹುದು.  ಆದರೆ, ಅದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ ಸೋಂಕು ತಗಲಿದರೆ ಅವರನ್ನು ಕೂಡ ಪ್ರತ್ಯೇಕಿಸಿ ಇಡಬೇಕಾಗುತ್ತದೆ.

ಇದು ನಮ್ಮೆಲ್ಲರ ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಇದು ಭೌತಿಕವಾದ ಡಿಸ್ಟನ್ಸಿಂಗ್? ಇದಕ್ಕೇಕೆ ಫಿಸಿಕಲ್ ಡಿಸ್ಟನ್ಸಿಂಗ್ ಅನ್ನೋದಿಲ್ಲ ಎಂದು ಕೆಲವರು ಯೋಚಿಸಬಹುದು.  Social distancing, ಎಂದು ಹೇಳುವಾಗ ಅಲ್ಲಿ ಜನರು ಒಬ್ಬರಿಂದ ಮತ್ತೊಬ್ಬರಿಗೆ ಇಂತಿಷ್ಟು ದೂರದಲ್ಲಿ ಇರಿ ಎಂದು ಹೇಳುತ್ತಿದ್ದಾರೆ, ಗುಂಪುಗಳಲ್ಲಿ ಸೇರಬೇಡಿ ಎಂದು ಹೇಳುತ್ತಿದ್ದಾರ‍ೆ - ಇಲ್ಲಿ ಅವರು Social ಎಂದು ಬಳಸುತ್ತಿರುವುದು ’ಸಾಮಾಜಿಕ’ ಎನ್ನುವ ಪದದ ಸಮನಾರ್ಥಕ.  ಆದರೆ, ಒಬ್ಬರಿಂದ ಮತ್ತೊಬ್ಬರು ದೂರವಿದ್ದ ಮೇಲೆ, ಅಲ್ಲಿ ಭೌತಿಕವಾಗಿ (physically) ಯಾವುದೇ ಕಾಂಟ್ಯಾಕ್ಟ್ ಬರುವುದೇ ಇಲ್ಲವಾದ್ದರಿಂದ, ಈ ಕೊರೋನಾ ವೈರಸ್ ಸಂಬಂಧವಾಗಿ ಎಲ್ಲರೂ Social Distancing ಎಂತಲೇ ಹೇಳುತ್ತಿರುವುದು.

ಜೊತೆಗೆ, ಇಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಅನ್ನು ಒಂದು ಸಮುದಾಯದ ಪರವಾಗಿ ಹೇಳುವಂತೆಯೂ ಪರಿಗಣಿಸಬಹುದು.  ಜನರು ಗುಂಪುಗಳಲ್ಲಿ ಭಾಗವಹಿಸುತ್ತಿರುವಾಗ ಒಬ್ಬರನ್ನು ಪರಸ್ಪರ ಮುಟ್ಟದೇ ಇದ್ದರೂ ಸಹ, ಅವರೆಲ್ಲರೂ ಒಂದು ಕೋಣೆಯಲ್ಲಿ ಸೇರಿಕೊಂಡರೆಂದರೆ, ಅಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯವಿದೆ.  ಈ ಕಾರಣದಿಂದಲೇ, ಹತ್ತಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬಾರದು ಎಂದು ಹೇಳುತ್ತಿರುವುದು.

***
ರಾಜ್ಯಗಳ ಬಾರ್ಡರುಗಳು

ಉತ್ತರ ಅಮೇರಿಕದ ಹೆಗ್ಗಳಿಕೆಯಾಗಿ ನಾವೆಲ್ಲ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ "ಫ್ರೀ" ಆಗಿ ಓಡಾಡಿಕೊಂಡಿದ್ದೆವು.  ಈ ಕೋವಿಡ್ ದಯೆಯಿಂದ,  ಜನರ ಸ್ವಾತಂರ್ತ್ಯಕ್ಕೆ ಮೊಟ್ಟ ಮೊದಲ ಸಲ ಉತ್ತರ ಅಮೇರಿಕದಲ್ಲಿ ಸಂಕಷ್ಟ ಬಂದಿದೆ.  ಈಗ ಅಮೇರಿಕದ ಸಣ್ಣ ರಾಜ್ಯಗಳಲ್ಲೊಂದಾದ ರೋಡ್ ಐಲ್ಯಾಂಡ್, ತನ್ನ ರಾಜ್ಯಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರನ್ನು (ಅದರಲ್ಲೂ ನ್ಯೂ ಯಾರ್ಕ್‌ನವರನ್ನು) ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸುತ್ತಿದೆ.  ಇದೇ ಮಾದರಿ ಉಳಿದ ರಾಜ್ಯಗಳಲ್ಲೂ ನಡೆಯುತ್ತಿದೆ, ಎಂದು ಕೇಳಿಬರುತ್ತಿದೆ.

ನಮ್ಮ ಕರ್ನಾಟಕದಿಂದ ತಮಿಳು ನಾಡು, ಕೇರಳ, ಮಹಾರಾಷ್ಟ್ರ‍, ಆಂಧ್ರಪದೇಶ ರಾಜ್ಯಗಳಿಗೆ ಹೋಗಿ ಬಂದವರಿಗೆ ಗೊತ್ತಾಗುತ್ತದೆ.  ಒಂದು ಗಡಿ ದಾಟಿ ಬಂದ ಮೇಲೆ ಅದೆಷ್ಟು ಬದಲಾವಣೆಗಳು ಕಾಣಸಿಗುತ್ತವೆ ಎಂದು.  ಆದರೆ, ಇಂದು ಮೊಟ್ಟ ಮೊದಲ ಬಾರಿ ಅಮೇರಿಕದಲ್ಲಿ ಗಡಿಯನ್ನು ಮುಚ್ಚುವುದರ ಮೂಲಕ ಅಲ್ಲದೇ ರಾಜ್ಯಗಳ ಗಡಿಗಳಲ್ಲಿ ಪೋಲೀಸರು ಕಾಯುತ್ತಿರುವುದರ ಮೂಲಕ free ಯಾಗಿದ್ದ ದೇಶ ಮೊಟ್ಟ ಮೊದಲ ಬಾರಿಗೆ ಕೋವಿಡ್ ವೈರಸ್ಸಿನ ಸಂಕೋಲೆಗಳಲ್ಲಿ ಸುತ್ತಿಕೊಂಡು ಬಳಲುತ್ತಿದೆ ಎನ್ನುವಂತಾಗಿದೆ.

***
ಮೋಡ ಕರಗುವ ಸಮಯ

ಇಂದು ಮಧ್ಯಾಹ್ನ ಒಳ್ಳೆಯ ಬಿಸಿಲಿನ ಸಮಯ ನಮ್ಮ ಮನೆಯ ಹೊರಗಡೆಯ ಥರ್ಮಾಮೀಟರಿನಲ್ಲಿ 66 ಡಿಗ್ರಿ (ಸುಮಾರು 17 ಡಿಗ್ರಿ ಸೆಲ್ಸಿಯಸ್) ತೋರಿಸುತ್ತಿತ್ತು.  ನಮ್ಮ ಮನೆಯ ಹಿಂದಿನ ಡೆಕ್‌ನಲ್ಲಿ ಒಳ್ಳೆಯ ಗಾಳಿ ಬೀಸುತ್ತಿತ್ತು.  ಮೇಲೆ ಶುಭ್ರವಾದ ಆಕಾಶ.  ಯಾರು ಹೊರಗೆ ಬರಲಿ ಬಿಡಲಿ, ಸೂರ್ಯದೇವ ತನ್ನ ದೈನಂದಿನ ಕಾರ‍್ಯಾಚರಣೆಯನ್ನು ಮುಂದುವರೆಸಿ ಮೇಲೇರಿ ಕೆಳಗಿಳಿಯುತ್ತಿದ್ದ.  ಪಶ್ಚಿಮದ ಕಡೆ ಒಂದಿಷ್ಟು ಬಿಳಿಯ ಮೋಡಗಳು ಹಿಂಡು ಹಿಂಡಾಗಿ ತುಂಬಿಕೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಉಳಿದ ಕಡೆಯೆಲ್ಲ ಶುಭ್ರವಾದ ನೀಲಾಕಾಶವಿತ್ತು.
ಇಷ್ಟು ದಿನ ಹೊರಗೆ ಬರದೆ ಇದ್ದುದರಿಂದಲೋ ಏನೋ, ನನಗೆ ಈ ತಿಳಿ ಬಿಸಿಲು ಬಹಳ ಅಪ್ಯಾಯಮಾನವಾಗಿ ಗೋಚರಿಸಿತು.  ಜೊತೆಗೆ ಹದವಾಗಿ ಕಾದ ಡೆಕ್ಕಿನ ಮರದ ಹಲಗೆಗಳು ಬರಿಗಾಲಿಗೂ ಮುದವನ್ನು ನೀಡುತ್ತಿದ್ದವು.  ಆ ಸಮಯಕ್ಕೆ ಖಾಲಿ ಇದ್ದ ಡೆಕ್ ಮೇಲೆ ಮಲಗಿದರೆ ಹೇಗೆ ಎನ್ನಿಸಿದ್ದೇ ತಡ, ತಡ ಮಾಡದೆ ಅಲ್ಲೇ ಒಂದು ಕಡೆ ಮೇಲ್ಮುಖವಾಗಿ ಮಲಗಿಕೊಂಡು, ಸೂರ್ಯ ತಮ್ಮನ್ನೇನು ತಿಂದು ಬಿಡುತ್ತಾನೇನೋ ಎಂದು ಸ್ವಲ್ಪ ಹೆದರಿದಂತೆ ನಿಧಾನವಾಗಿ ಚದುರುತ್ತಿದ್ದ ಮೋಡಗಳ ಕಡೆಗೆ ಗಮನಕೊಟ್ಟೆ.

ಒಂದಿಷ್ಟು ಮೋಡಗಳು ಒಟ್ಟಿಗಿದ್ದವು, ಸ್ವಲ್ಪ ಹೊತ್ತು ಬಿಟ್ಟು ನೋಡುವುದರಲ್ಲಿ, ಅವುಗಳ ಯಾವುದೋ ಒಂದು ತುಣುಕು ಗುಂಪಿನಿಂದ ಮತ್ತೊಂದು ಕಡೆ ಚಲಿಸಿತು. ಸ್ವಲ್ಪ ಹೊತ್ತಿನಲ್ಲಿ ಅದು ಇದ್ದಲ್ಲಿಯೇ ಕರಗಿ ಮಾಯವಾಯಿತು!  ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಹಾಗೆಯೇ, ಮೋಡದ ತುಣುಕೊಂದು ಗುಂಪಿನಿಂದ ಬೇರ್ಪಡುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದು ನಿಧಾನವಾಗಿ ಕರಗಿ ಗಾಳಿಯೊಳಗೆ ಲೀನವಾಗುತ್ತದೆ - ಒಂದು ರೀತಿಯಲ್ಲಿ ಕಾಟನ್‌ಕ್ಯಾಂಡಿ ತಿನ್ನುವ ಹುಡುಗನ ಮಿಠಾಯಿ ಕಡಿಮೆಯಾಗುವಂತೆ.  ಅವೆಲ್ಲ ಮೋಡವೇ ಸರಿ, ಆದರೆ ಆ ಮೋಡದ ತುಣುಕುಗಳು ನನ್ನ ಕಣ್ಣೆದುರೇ ಕರಗಿ ಗಾಳಿಯಲ್ಲಿ ಲೀನವಾಗುವ ಪರಿಯನ್ನು ಇಷ್ಟು ಕ್ಲಿಯರ್ ಆಗಿ ನಾನು ನೋಡಿದ್ದಿಲ್ಲ... ಐದು ನಿಮಿಷದೊಳಗೆ, ಬೀಸುವ ಗಾಳಿ ಜೋರಾಗ ತೊಡಗಿತೆಂದು ಮತ್ತೆ ಮನೆ ಒಳಗೆ ಬಂದೆ, ಆದರೆ ಮೋಡದ ಗುಂಪು ನಿಧಾನವಾಗಿ ಚದುರುತ್ತಲೇ ಇತ್ತು.  ಅದೇ ಸಮಯದಲ್ಲಿ, ಎಲ್ಲಿಯೋ ಹುಟ್ಟಿ ಎಲ್ಲೋ ಸೇರುವ, ಮೋಡಕ್ಕಾಗಲೀ, ಮುಗಿಲಿಗಾಗಲೀ ಯಾವ ಬಣ್ಣವೂ ಇಲ್ಲ, ಅವೆಲ್ಲವೂ ತನ್ನ ಸುತ್ತಲಿನ ಸೂರ್ಯನ ಕೃಪೆಯಿಂದ ಬಣ್ಣವನ್ನು ಪಡೆದವುಗಳು ಎಂಬ ಸೂಕ್ಷ್ಮ ಹೊಳೆದು, ಅದು ಈ ಹೊತ್ತಿನ ತತ್ವವಾಯಿತು!

Monday, April 04, 2011

ಆನವಟ್ಟಿ ಸಾಲುಮರಗಳು ಈಗ ಇತಿಹಾಸ...

ಸ್ನೇಹಿತನೊಡನೆ ಜೊತೆ ನಿನ್ನೆಯ ಮಾತುಕಥೆ: - ಜಾಗತೀಕರಣ, ವಾಲ್‌ಮಾರ್ಟ್ ಹೇಗೆ ೩೦ ವರ್ಷದ ಹಿಂದೆ ಚೈನಾದಿಂದ ಕಡಿಮೆ ಬೆಲೆಗೆ ಸಾಮಾನುಗಳನ್ನು ಆಮದು ಮಾಡಿಕೊಂಡು ಹೊಸ ಕ್ರಾಂತಿ ಸೃಷ್ಟಿಸಿತ್ತು. - ಅಮೇರಿಕದ ಕೆಲಸಗಾರರು ಪ್ರತಿ ಘಂಟೆಗೆ ೨೫ ಡಾಲರ್ ಪಡೆಯುತ್ತಿದ್ದಾಗ, ಚೈನಾದಂತಹ ದೇಶಗಳಲ್ಲಿ ಪ್ರತಿದಿನಕ್ಕೆ ಒಬ್ಬೊಬ್ಬ ಒಂದೊಂದು ಡಾಲರ್‌ಗೆ ಕೆಲಸ ಮಾಡುತ್ತಿರುವಂತೆ ಗಳಿಕೆಯಲ್ಲಿನ ವ್ಯತ್ಯಾಸ ಹೇಗೆ ರೀಟೈಲರುಗಳನ್ನು ಸ್ವಲ್ಪ ಕಡಿಮೆ ಕ್ವಾಲಿಟಿ ಆದರೂ ಕಡಿಮೆ ಬೆಲೆಗೆ ಪದಾರ್ಥಗಳನ್ನು ಕೊಳ್ಳುವಂತೆ ಮಾಡಿದ್ದು. (೨೦೦೮, ೨೦೦೯ ವಿಶ್ವ ಬ್ಯಾಂಕ್ ಮೂಲಗಳ ಪ್ರಕಾರ) -ಚೈನಾದ ಜನಸಂಖ್ಯೆ ೧.೩೩ ಬಿಲಿಯನ್, GDP $6,890 - ಭಾರತದ ಜನಸಂಖ್ಯೆ ೧.೧೭ ಬಿಲಿಯನ್, GDP $3,250 -ಚೈನಾದ ಕಮ್ಮ್ಯೂನಿಸಮ್ಮ್, ಅಲ್ಲಿನ ಮೆಗಾ ಪ್ರಾಜೆಕ್ಟುಗಳು ಮಿಲಿಯನ್ನ್‌ಗಟ್ಟಲೆ ಜನರನ್ನು ಎತ್ತಂಗಡಿ ಮಾಡಿದರೂ ವಿಶ್ವದ ಉಳಿದ ಜನರಿಗೆ ಕಿಂಚಿತ್ತೂ ಗೊತ್ತಾಗದಿರುವುದು, ಪರಿಸರ ಕಾಳಜಿ, ಸಾಮಾಜಿಕ ಮೌಲ್ಯ ಮೊದಲಾದವುಗಳ ಬಗ್ಗೆ ಇರುವ ಅವರದ್ದೇ ಆದ ವ್ಯಾಖ್ಯೆ ಪರಿಕಲ್ಪನೆ. - ಭಾರತದ ಜನತಂತ್ರ ವ್ಯವಸ್ಥೆ, ಮೆಗಾ ಮಿನಿ ಪ್ರಾಜೆಕ್ಟುಗಳು, ರಸ್ತೆ ಅಗಲೀಕರಣದ ವಾಸ್ತವ ಚಿತ್ರ - ರಾತ್ರೋ ರಾತ್ರಿ ಎದ್ದೇಳುವ ಮಂದಿರ, ಮಸೀದಿ, ಚರ್ಚುಗಳು - ಪರಿಸರ ವಾದಿಗಳು, ದಿವ್ಯ ನದಿಗಳು, ತೆರೆದ ರಾಜಕೀಯ, ಜಾತಿ-ಮತ, ಭ್ರಷ್ಟಾಚಾರಗಳಂತ ತಿಮಿಂಗಲಗಳು, ಮೊದಲಾದವುಗಳು. ಅಮ್ಮನೊಡನೆ ಇಂದಿನ ಚರ್ಚೆ: - ಈ ವರ್ಷವೆ ಕೊನೇ ಇನ್ನು ಮುಂದೆ ನಮಗೆ ಸಾಲು ಮರಗಳಿಂದ ಮಾವಿನ ಮಿಡಿ ಸಿಗೋದಿಲ್ಲ. - ಆನವಟ್ಟಿ ಇಂದ ಶಿರಾಳಕೊಪ್ಪದ ವರೆಗೆ (ಸುಮಾರು ೨೫ ಕಿ.ಮಿ.) ರಸ್ತೆಯ ಎರಡೂ ಬದಿಯ ಸಾಲು ಮರಗಳನ್ನು ಕಡಿದು ಹಾಕುತ್ತಿದ್ದಾರೆ, ರಸ್ತೆ ಅಗಲ ಮಾಡುತ್ತಿದ್ದಾರೆ. - ಯಡಿಯೂರಪ್ಪನವರ ದೊಡ್ಡ ಪ್ರಾಜೆಕ್ಟುಗಳಲ್ಲಿ ಇದೂ ಒಂದಂತೆ. - ಸುಮಾರು ನೂರು ವರ್ಷಕ್ಕೂ ಹಿಂದಿನಿಂದಲೂ ಇದ್ದ ಮರಗಳು ಅವು, ಅವನ್ನೆಲ್ಲ ಕಡಿದು ದೊಡ್ಡ ದೊಡ್ಡ ಮಿಷೀನುಗಳನ್ನು ಬಳಸಿ ಬುಡ ಸಮೇತ ಎತ್ತುತ್ತಿದ್ದಾರೆ. - ಬೋಳು-ಬೋಳು ರಸ್ತೆಗಳನ್ನು ನೋಡೋದಕ್ಕೆ ಬೇಜಾರಾಗುತ್ತೆ. - ಈ ಮರಗಳ ಬದಲಿಗೆ ಬೇರೆ ಎಲ್ಲಿಯಾದರೂ ಅಕೇಷಿಯಾ ಪಕೇಷಿಯಾ ನೆಡ್ತಾರೆ ಅಷ್ಟೇ, ನಮ್ಮ ಹಿಂದಿನವರ ಥರ ಮಾವು-ಬೇವುಗಳನ್ನು ಯಾರು ನೆಡ್ತಾರೆ ಈಗಿನ ಕಾಲದಲ್ಲಿ? - ಆ ಮರಗಳಲ್ಲಿದ್ದ ಅಷ್ಟೊಂದು ಪಕ್ಷಿಗಳು ಇನ್ನೆಲ್ಲಿ ಹೋಗ್ತಾವೋ ಏನೋ? *** ಹೂರಣ: ಭಾರತದ ಮೂಲೆ-ಮೂಲೆಗಳಿಂದ ಅಮೇರಿಕಕ್ಕೆ ಬಂದಂಥ ನಾವು, Caterpillar (CAT) ನಂತಹ ಕಂಪನಿಗಳಲ್ಲಿ ಕೆಲಸ ಮಾಡೋದು ಯೋಗ್ಯ, ಏಕೆಂದರೆ ಇವರ ಬುಲ್‌ಡೋಝರ್ ಮೊದಲಾದ ಕನ್‌ಷ್ಟ್ರಕ್ಷನ್ನ್ ಉಪಕರಣ ಹಾಗೂ ಮಿಷೀನುಗಳಿಗೆ ಜಗತ್ತಿನಾದ್ಯಂತ ಬಹಳ ಬೇಡಿಕೆ. ಅಲ್ಲದೆ, ಪರೋಕ್ಷವಾಗಿ ನೀವು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಮತ್ತೊಂದು ಮೂಲೆಯನ್ನು ಅಗೆಯಬಹುದು! ನಿಮ್ಮ ಜಾಗತಿಕರಣದ ಊಹೆ ಅಥವಾ ಕನಸನ್ನ ಎಲ್ಲರಿಗೂ ತಲುಪಿಸಬಹುದು! ಹೂರಣದ crust: CAT ನಲ್ಲಿ ಪ್ರತಿಯೊಬ್ಬರೂ ದುಡಿಯಲು ಸಾಧ್ಯವೇ? ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೇನಂತೆ? ಆ ಕಂಪನಿಯಲ್ಲಿ ಹಣ ತೊಡಗಿಸಬಹುದು, ಎಲ್ಲಾ ಒಂದೇ! *** ’ಅಂತರಂಗ’ದ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಖರನಾಮ ಸಂವತ್ಸರ ಎಲ್ಲರಿಗೂ ಶುಭವನ್ನು ತರಲಿ!

Tuesday, March 17, 2009

ಅವೇ ಆಲೋಚನೆಗಳು...

ಆಲೋಚನೆಗಳೇ ಹಾಗೆ ನಿಲ್ಲೋದೇ ಇಲ್ಲ, ಅವುಗಳ ಒರತೆ ಬತ್ತೋದಂತೂ ಖಂಡಿತ ಇಲ್ಲ. ನೀವು ಜನನಿಬಿಡ ಮರಳುಗಾಡಿನಲ್ಲೇ ಇರಲಿ ಅಥವಾ ಯಾವ ಕಾಡಿನ ಯಾವ ಮೂಲೆಯಲ್ಲಿದ್ದರೂ ಆಲೋಚನೆಗಳ ಸರಣಿ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ನಾನು ಇತ್ತೀಚೆಗೆ ಖರೀದಿ ಮಾಡಿದ ಉಗುರಿನಷ್ಟು ದೊಡ್ಡ ಸೆಮಿಕಂಡಕ್ಟರ್ ಸ್ಟೋರೇಜ್ ಡಿವೈಸಿನಲ್ಲಿ ಹದಿನಾರು ಗಿಗಾಬೈಟುಗಳಷ್ಟು ಮಾಹಿತಿಯನ್ನು ಸ್ಟೋರ್ ಮಾಡಬಹುದು ಎನ್ನುವುದು ನನ್ನಂತಹವನ ಕಣ್ಣಿಗೆ ದೊಡ್ಡ ಅಚೀವ್‌ಮೆಂಟ್ ಆಗಿ ಕಾಣಬಹುದು. ಹಾಗೆ ಕಂಡ ಮರುಘಳಿಗೆಯಲ್ಲಿಯೇ ಈ ಸೃಷ್ಟಿಯ ಸ್ಟೋರೇಜಿನ ಮುಂದೆ ಇವೆಲ್ಲಾ ಯಾವ ಲೆಕ್ಕ ಎನ್ನಿಸಲೂ ಬಹುದು. ನಮ್ಮ ಮಿದುಳು ಸಂಸ್ಕರಿಸಿ, ಪೋಷಿಸುವ ಅದೆಷ್ಟೋ ಆಡಿಯೋ ವಿಡಿಯೋ, ಡೇಟಾ ಮತ್ತಿತರ ಅಂಶಗಳನ್ನೆಲ್ಲ ಪೋಣಿಸಿ ಗಿಗಾಬೈಟುಗಳಲ್ಲಿ ಎಣಿಸಿದ್ದೇ ಆದರೆ ಇಂದಿನ ಟೆರಾಬೈಟ್ ಮಾನದಂಡವೂ ಅದರ ಮುಂದೆ ಸೆಪ್ಪೆ ಅನಿಸೋದಿಲ್ಲವೇ? ಈ ಸೃಷ್ಟಿಯ ಅದ್ಯಾವ ತಂತ್ರಜ್ಞಾನ ಅದು ಹೇಗೆ ನರಮಂಡಲದ ವ್ಯೂಹವಾಗಿ ಬೆಳೆದುಬಂದಿದ್ದಿರಬಹುದು ಎಂದು ಸೋಜಿಗೊಂಡಿದ್ದೇನೆ.

ಇಂತಹ ಸೋಜಿಗಗಳಿಂದ ದಿಢೀರ್ ಮತ್ತೊಂದು ಆಲೋಚನೆ: ನಮ್ಮಲ್ಲಿ ನಿಕ್ ನೇಮ್ ಗಳನ್ನು ಬಳಸುವ ಬಗ್ಗೆ. ಭಾರತದಲ್ಲಿ ’ಕೃಷ್ಣಮೂರ್ತಿ’ ಎನ್ನುವ ಅಫಿಷಿಯಲ್ ನೇಮ್ ಮನೆಯಲ್ಲಿ ’ಕಿಟ್ಟಿ’ ಆಗಿ ರೂಪಗೊಳ್ಳಬಹುದು, ಅದೇ ಅಮೇರಿಕದಲ್ಲಿ ’ವಿಲಿಯಮ್’ ಎನ್ನುವ ಅಫಿಷಿಯಲ್ ನೇಮ್ ’ಬಿಲ್’ ಉಪಯೋಗಕ್ಕೊಳಗಾಗಬಹುದು. ಇದರಲ್ಲಿ ಒಂದು ವ್ಯತ್ಯಾಸವಂತೂ ಇದೆ - ನಮ್ಮ ನಿಕ್ ನೇಮ್‌ಗಳು ಖಾಸಗಿ ಆದರೆ ಇಲ್ಲಿಯವರ ನಿಕ್ ನೇಮ್‌ಗಳು ಎಲ್ಲರ ಬಳಕೆಗೂ ಸಿಗುತ್ತವೆ, ಅದು ಎಷ್ಟರ ಮಟ್ಟಿಗೆ ಪ್ರಭಾವಿ ಎಂದರೆ ಪ್ರೆಸಿಡೆಂಟುಗಳಿಂದ ಹಿಡಿದು ಸಾಮಾನ್ಯ ’ಜೋ’ ವರೆಗೂ ಅವರ ನಿಕ್‌ನೇಮ್ ಗಳೇ ಮುಖ್ಯನಾಮ. ಅಫಿಷಿಯಲ್ ನೇಮ್ ಏನಿದ್ದರೂ ಪುಸ್ತಕಕ್ಕೆ ಮಾತ್ರ.

ಈ ಆಲೋಚನೆಯಿಂದ ಹೊರಬರುವ ಹೊತ್ತಿಗೆ, ಭಾರತಕ್ಕೆ ಒಂದು ಫೋನು ಮಾಡಬಾರದೇಕೆ ಎನ್ನಿಸಿ, ತಕ್ಷಣ ಸೆಲ್ ಫೋನಿನಲ್ಲಿ ಕುಕ್ಕ ತೊಡಗಿದೆ. ೮೦೦ ನಂಬರ್ ಅನ್ನು ಹೊಡೆದು ಇನ್ನೊಂದೆರೆಡು ಕ್ಷಣಗಳಲ್ಲಿ ಎಲೆಕ್ಟ್ರಾನಿಕ್ ಚೆಲುವೆಯ (ಧ್ವನಿ) ಕೃಪೆಯಿಂದ ನನ್ನ ಅಣ್ಣನ ಮೊಬೈಲ್ ನಂಬರನ್ನು ಒತ್ತತೊಡಗಿದೆ. ಎರಡು ರಿಂಗುಗಳ ನಂತರ ಆತ ಫೋನ್ ಎತ್ತಿಕೊಂಡ, ಉಭಯ ಕುಶಲೋಪರಿಯ ಜೊತೆಗೆ ಎಲ್ಲಿದ್ದೀಯಾ? ಆಫೀಸಿಗೆ ಹೊರಟಿದ್ದೀಯಾ? ಏನು ತಿಂಡಿ? ಎಂದು ಕೇಳುವ ಅವನ ಪ್ರಶ್ನೆಗಳಿಗೆ ಡ್ರೈವ್ ಮಾಡುತ್ತಿದ್ದೇನೆ, ಇನ್ನೇನು ಆಫೀಸು ಹತ್ತಿರ ಬಂತು. ’ತಿಂಡಿ ಮಾಮೂಲಿ - ಅದೇ ಬ್ರೆಡ್ಡು, ಬಾಳೆಹಣ್ಣು, ಜ್ಯೂಸ್, ಕಾಫಿ’, ಎಂದೆ. ನಾನು ಹೀಗೆ ಹೇಳಿದಾಗಲೆಲ್ಲ ಆ ಕಡೆಯಿಂದ ಮಾಮೂಲಿ ಮೌನ. ಮತ್ತೆ ನಾನೇ ಅದೂ-ಇದೂ ಕೇಳಿದಂತೆ ಸಂಭಾಷಣೆ ವಿಷಯನ್ನು ಆಧರಿಸಿ ಎರಡು ನಿಮಿಷದಿಂದ ಹಿಡಿದು ಇಪ್ಪತ್ತು ನಿಮಿಷದ ವರೆಗೂ ನಡೆಯುತ್ತೆ.

ನಾನೆಂದೆ, ’ಹೌದು, ನೀನು ಇತ್ತೀಚೆಗೆ ಅಡುಗೆ ಮಾಡಿದ್ದು ಯಾವತ್ತು?’
ಅವನೆಂದ, ’ನಾನು ಆಡುಗೆ ಮಾಡಿ ಅದ್ಯಾವ ಕಾಲವೋ ಆಗಿದೆ.’
’ನೀನು, ಮನೆಯನ್ನು ಸ್ವಚ್ಛ ಮಾಡಲು ಸಹಾಯ ಮಾಡ್ತೀಯೋ, ಇಲ್ವೋ?’
’ಖಂಡಿತ, ಇಲ್ಲ - ನಾನು ಶಾಲೆಗೆ ಹೋಗಿ ಬರೋ ಹೊತ್ತಿಗೆ ಸಾಕಾಗಿರುತ್ತೆ, ಮತ್ತೇನೂ ಮಾಡೋದಿಲ್ಲ’

ಹೀಗೆ ನಾನು ಹುಡುಕಿ-ಹುಡುಕಿ ಕೇಳಿದ ಪ್ರಶ್ನೆಗಳು ನಾನು ಇಲ್ಲಿ ಆಗಾಗ್ಗೆ (ನಿತ್ಯ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ) ಮಾಡೋ ಕೆಲಸಗಳನ್ನು ಕುರಿತವಾಗಿದ್ದವು (ಉದಾಹರಣೆಗೆ ಬಟ್ಟೆ ಒಗೆದು ಒಣಗಿಸಿ ಮಡಚಿಡುವುದು). ಆದರೆ ಅವನು ಮನೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಒಂದೇ ನಮ್ಮ ಅತ್ತಿಗೆಯ ಹೆಸರನ್ನೋ ಅಥವಾ ಆಳುಗಳು ಮಾಡುವ ಕೆಲಸವೆಂದೋ ಹೇಳುತ್ತಿದ್ದ.

ಅವನಿಗೆ ’ಬೈ’ ಹೇಳಿ ಫೋನ್ ಇಟ್ಟ ಹೊತ್ತಿಗೆಲ್ಲ ಕುಡಿಯುತ್ತಿದ್ದ ಸುಡುಸುಡು ಕಾಫಿ ಇತ್ತೀಚೆಗಷ್ಟೇ ಎಲೆಕ್ಷನ್ನು ಗೆದ್ದು ಅಸೆಂಬ್ಲಿ ಸೇರಿದ ರೆಪ್ರೆಸೆಂಟಿವ್‌ನ ಥರ ನರಮಂಡಲದ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ಕೆಲಸವನ್ನು ಆರಂಭಿಸಿತ್ತು. ಥೂ, ಈ ಅಮೇರಿಕದಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಂಡು ಜೀವಿಸೋದರಲ್ಲೇ ಕಾಲ ಕಳೆದು ಹೋಗುತ್ತೆ. ಎಷ್ಟು ದುಡ್ಡಾಗಲಿ ಏನು ಕೆಲಸವಾಗಲಿ ಇದ್ದರೆ ಏನು ಬಂತು - ದಿನಾ ನಮ್ಮ ದುಗುಡ ಇದ್ದದ್ದೇ. ಬನೀನ್ ಎಲ್ಲಿದೆ? ಪ್ಯಾಂಟಿಗೆ ಮ್ಯಾಚ್ ಆಗುವ ಕಾಲುಚೀಲ ಸಿಗುತ್ತಿಲ್ಲ (ಬೆಳಗ್ಗೆ ಅದೂ ಚಿಮುಚಿಮು ಬೆಳಕಿನಲ್ಲಿ)! ಕಾಫಿ ಮಾಡಿಕೋ ಬೇಕು, ತಿಂಡಿಗೆ ಅವೇ ಬ್ರೆಡ್ಡು ಸ್ಲೈಸುಗಳು, ಅವೇ ಜ್ಯೂಸಿನ ಬಾಟಲುಗಳು. ವಾರಾಂತ್ಯದಲ್ಲಿ ಅಪರೂಪಕ್ಕೆ ಬ್ರೇಕ್‌ಫಾಸ್ಟ್‌ಗೆಂದು ತಿನ್ನುವ ದೋಸೆ-ಇಡ್ಲಿಗಳು ಹೆಚ್ಚಾಗಿ ಮಧ್ಯಾಹ್ನ ಲಂಚ್ ಸೇರದ ಅಥವಾ ರುಚಿಸದ ಅನುಭವ. ಮಿಸ್ಟರ್ ಕಾಫಿಯಿಂದ ಇಳಿದ ಲಾರ್ಜ್ ಕಾಫಿಯ ಗುಲಾಮಗಿರಿಯನ್ನು ಒಪ್ಪಿಕೊಂಡ ನರಮಂಡಲ ಚಿಕ್ಕ ಲೋಟಾದಲ್ಲಿ ಕುಡಿಯುವ ಕಾಫಿಯನ್ನು ’ಚಿಕ್ಕ ಸೈಜ್’ ಎಂದು ಪರಿಗಣಿಸುವ ಅನುಭೂತಿ. ಕಾಫಿಯ ಸ್ಟಿಮ್ಯುಲೇಶನ್ನಿಂದ ಹುಟ್ಟಿ ಕಾಫಿಯ ವಿರುದ್ಧವೇ ತಿರುಗುವ ಆಲೋಚನೆಗಳ ಪಾಪಪ್ರಜ್ಞೆ!

ಇಷ್ಟು ಹೊತ್ತಿಗೆ ಆಫೀಸಿನ ವಾತಾವರಣ ಹತ್ತಿರ ಬರುತ್ತಿದ್ದ ಹಾಗೆ - Oh! there is a 8 am meeting today! ಎನ್ನುವ ಅಮೇರಿಕನ್ ಉದ್ಗಾರ ನನ್ನಲ್ಲಿಯ ಕನ್ನಡತನವನ್ನು ಇನ್ನು ಹತ್ತು ಘಂಟೆಗಳ ಮಟ್ಟಿಗೆ ಅದುಮಿಕೊಳ್ಳುವ ಹಾಗೆ ಸೆಡ್ಡು ಹೊಡೆಯುವ ಅಟ್ಟಹಾಸದ ಆಲೋಚನೆ. ಆಫೀಸ್ ಬಂದೇ ಬಿಡ್ತು, ಇಲ್ಲ ನಾನೇ ಅದರ ಹತ್ತಿರ ಹೋಗ್ತಾ ಇದ್ದೇನೆ. ದೂರದ ಇಂಡಿಯಾಕ್ಕೆ ಕಾಲ್ ಮಾಡಿ ಸಂಭಾಷಣೆಯಿಂದ ಸೋತ ಸೆಲ್ ಫೋನ್ ಪಕ್ಕದಲ್ಲಿ ಬಿದ್ದುಕೊಂಡಿದೆ, ಅದರ ಗಂಟಲನ್ನೂ ಹಿಚುಕಿ (ವೈಬ್ರೇಷನ್ನ್ ಮೋಡ್‌ಗೆ ಹಾಕಿ) ಕೋಟಿನ ಜೇಬಿನಲ್ಲಿ ತುರುಕಿ ಲಂಚ್ ಪ್ಯಾಕ್ (ಅದೇ ಅನ್ನ, ಸಾರು, ಮೊಸರು, ಕೆಲವೊಮ್ಮೆ ಪಲ್ಯ) ಅನ್ನು ಕೈಯಲ್ಲಿ ಹಿಡಿದುಕೊಂಡು ಲಗುಬಗೆಯಿಂದ (ಇನ್ನೇನು ಆಫೀಸು ಎಲ್ಲಿಯಾದರೂ ಓಡಿ ಹೋದೀತೋ ಎನ್ನುವಂತೆ) ಹೆಜ್ಜೆ ಹಾಕತೊಡಗುತ್ತೇನೆ.

ಆಲೋಚನೆಗಳು ಇನ್ನೂ ಮುಂದುವರೆಯುತ್ತಲೇ ಇವೆ...

Sunday, April 13, 2008

ಇಂದಿನದು ಇಂದಿರಲಿ

ಎಲ್ಲರೂ ಇಲ್ಲಿ ಬೇಸಿಗೆ ಯಾವಾಗ ಬರುತ್ತೋ ಎಂದು ಕುತೂಹಲಿತರಾಗಿ ಕಾದುಕೊಂಡು ಕುಳಿತಿರುವುದರ ಬಗ್ಗೆ ಯೋಚಿಸುತ್ತಿರುವಾಗ ನನಗನ್ನಿಸಿದ್ದು ಹೀಗೆ: ಡಿಸೆಂಬರ್ ನಿಂದ ಜೂನ್ ವರೆಗೆ ನಿಧಾನವಾಗಿ ದಿನದಲ್ಲಿ ಬೆಳಕು ಹೆಚ್ಚಾಗುತ್ತಾ ಹೋಗಿ, ಜೂನ್‌ನಿಂದ ಮತ್ತೆ ಕತ್ತಲಿನ ಆರ್ಭಟ ಹೆಚ್ಚಾಗುವುದು ಇಲ್ಲಿನ ಋತುಮಾನ. ಮಾರ್ಚ್ ಹಾಗೂ ಸೆಪ್ಟೆಂಬರ್ ನಡುವೆ ಇರುವ ಎಲ್ಲ ದಿನಗಳನ್ನು ಬೇಸಿಗೆಯೆಂದೇ ಏಕೆ ಸ್ವೀಕರಿಸಬಾರದು? ಬೇಸಿಗೆ ಬೆಳಕು ಜೂನ್ ವರೆಗೆ ಹೆಚ್ಚಾಗಿ ಮುಂದೆ ಸೆಪ್ಟೆಂಬರ್ ನಲ್ಲಿ ಎಲೆಗಳು ಉದುರಿ ನಿಧಾನವಾಗಿ ಛಳಿ ಹಿಡಿದುಕೊಳ್ಳುವಲ್ಲಿಯವರೆಗೆ ಎಲ್ಲಿಯವರೆಗೆ ಹೊರಗಿನ ಉಷ್ಣತೆ ಸಹಿಸಿಕೊಳ್ಳಬಹುದೋ ಅಲ್ಲಿಯವರೆಗೆ ಬೇಸಿಗೆಯನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ಇಲ್ಲಿನ ಕಾರ್ಟೂನ್ ಶೋ‌ಗಳಿಂದ ಹಿಡಿದು ನಾನು ನೋಡಿದ ಬೇಕಾದಷ್ಟು ಜನರವರೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಉಡುಪುಗಳನ್ನು ಬದಲಾಯಿಸುವವರೆ. ನಮ್ಮ ದಕ್ಷಿಣ ಭಾರತದಲ್ಲಿ ವರ್ಷದುದ್ದಕ್ಕೂ ಒಂದೇ ವೇಷ-ಭೂಷಣ ನಡೆದೀತು ಎನ್ನುವಂತಲ್ಲ. ಅಲ್ಲದೇ, ಗೋಲ್ಫ್ ಆಡುವುದಕ್ಕೆ ಹೋಗುವುದರಿಂದ ಹಿಡಿದು ಫಿಶಿಂಗ್ ಹೋಗುವಲ್ಲಿಯವರೆಗೆ, ಆಫೀಸಿಗೆ ಹೋಗುವುದರಿಂದ ಹಿಡಿದು, ಟೆನ್ನಿಸ್ ಆಡುವಲ್ಲಿಯವರೆಗೆ, ಛಳಿಗೆ-ಬಿಸಿಲಿಗೆ ಥರಾವರಿ ವೇಶಗಳು ಅವುಗಳದ್ದೇ ಆದ ಬಣ್ಣ-ವಿನ್ಯಾಸಗಳಲ್ಲಿ. ನಮ್ಮ ಉತ್ತರ ಭಾರತದ ಜನರಲ್ಲಿ ಸ್ವಲ್ಪ ಈ ರೀತಿಯ ಆದ್ಯತೆ ಇರಬಹುದು, ಛಳಿ ಇರಲಿ ಇಲ್ಲದಿರಲಿ ಆ ಒಂದು ಸೀಜನ್ ಬಂದಿತೆಂದರೆ ಕೊನೇ ಪಕ್ಷ ಒಂದು ಸ್ವೆಟರ್ ಇಲ್ಲದೆ ಜನರು ಹೊರಗೆ ಕಾಲಿಡೋದೇ ಇಲ್ಲವೇನೋ.

***

’ರಿಟೈರ್ಡ್ ಆದ ಮೇಲೆ ಬದುಕೇನಿದೆ, ಈಗ ಇದ್ದು ಬದುಕೋದೇ ಸೊಗಸು. ಮುಂದೇನಾಗುತ್ತೋ ಎಂದು ಯಾರಿಗೆ ಗೊತ್ತು?’ ಎಂದು ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಈ ಅಣಿಮುತ್ತುಗಳು ಉದುರಿದವು. ನನ್ನ ಜೊತೆಯಲ್ಲಿ ಕಾಫಿ ಕುಡಿಯೋದಕ್ಕೆ ಬಂದ ಮತ್ತಿಬ್ಬರು ತಮ್ಮ ವೃದ್ಧ ತಂದೆ-ತಾಯಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಒಂದು ರೀತಿಯಲ್ಲಿ ಕಾರಣ ಎಂದು ಹೇಳಿದರೂ ಮಧ್ಯಾಹ್ನ ನಾಲ್ಕು ಘಂಟೆಯ ಮೇಲೆ ಹೊಟ್ಟೆಯೊಳಗೆ ಇಳಿಯುತ್ತಿದ್ದ ಗರಮ್ ಕಾಫಿಗೆ ನಾನು ಕೃತಜ್ಞತೆಯನ್ನು ಹೇಳಲೇಬೇಕು. ಪ್ರತೀ ಸಾರಿ ಮಧ್ಯಾಹ್ನದ ಕಾಫಿಯ ನಂತರ ಮನಸ್ಸು ಅದರದ್ದೇ ಒಂದು ತತ್ವವನ್ನು ಹೊಕ್ಕಿಕೊಂಡು ಅದರ ನೆಲೆಯಲ್ಲಿ ಹೊರಗಿನದನ್ನು ನೋಡೋದು ಸಹಜವೇ ನನಗೆ.

ನನ್ನ ಮಾತುಗಳು ಜೊತೆಗಿದ್ದವರಿಗೆ ಸ್ವಲ್ಪ ಆಶ್ಚರ್ಯವನ್ನು ಮೂಡಿಸಿದರೂ ಅವರು ನನ್ನ ತರ್ಕವನ್ನು ಒಪ್ಪಿಕೊಂಡ ಹಾಗಿತ್ತು, ಅದರ ವಿರುದ್ಧವಾಗಿ ಏನನ್ನೂ ಹೇಳದಿದ್ದುದನ್ನು ನೋಡಿ ನಾನು ಹಾಗಂದುಕೊಳ್ಳಬೇಕಾಯ್ತು. ಏನಿರಬಹುದು, ಈ ನಿವೃತ್ತ ಜೀವನದ ಮರ್ಮ? ಎಂದು ಮನಸ್ಸು ತನ್ನದೇ ಯಾವುದೋ ಒಂದು ಸಬ್ ರುಟೀನ್‌ನಲ್ಲಿ ಕಳೆದುಕೊಳ್ಳತೊಡಗಿತು.

ಭಾರತದಲ್ಲಿದ್ದೋರು ತಮ್ಮ ಮಕ್ಕಳ ಮದುವೆ ಯೋಗಕ್ಷೇಮಕ್ಕೆ ಒಂದಿಷ್ಟು ದುಡ್ಡು-ಕಾಸು ಉಳಿಸಿಕೊಂಡಿರುತ್ತಾರೆ. ಸರಿಯಾದ ಆಹಾರ, ದಿನಚರಿ ಇಲ್ಲದ ಶರೀರಗಳು ಕುಬ್ಜವಾಗುವುದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಬೊಜ್ಜು ಕಟ್ಟಿಕೊಳ್ಳತೊಡಗುತ್ತವೆ. ತಲೆಯ ಕೂದಲು ನೆರೆತೋ ಅಥವಾ ಉದುರಿಹೋಗಿ, ಹಲ್ಲುಗಳು ಸಂದುಗಳಲ್ಲಿ ಜಾಗ ಕಾಣಿಸಿಕೊಂಡು, ಮುಖದ ಮೇಲೆ ನೆರಿಗೆಗಳು ಹುಟ್ಟಿ, ಮೂಗಿನ ಮೇಲೆ ಕನ್ನಡಕ ಕುಳಿತು, ಆಗಾಗ್ಗೆ ’ಒಂದು ಕಾಲದಲ್ಲಿ ಹಾಗಿತ್ತು...’ ಎನ್ನುವ ವಾಕ್ಯಗಳು ಸಹಜವಾಗಿ ಹೋಗುವುದು ನಿವೃತ್ತ ಬದುಕಿನ ಲಕ್ಷಣವಾಗಿದ್ದಿರಬಹುದು. ಅದೇ ಭಾರತೀಯರು ವಿದೇಶಗಳಲ್ಲಿದ್ದರೂ ಈ ವಿವರಣೆಯನ್ನು ಬಿಟ್ಟು ಹೆಚ್ಚು ಬದಲಾದಂತೆ ಕಾಣಿಸಿಕೊಂಡಿಲ್ಲದಿರುವುದು ನನ್ನ ಕಲ್ಪನೆ ಅಲ್ಲವಷ್ಟೇ.

ನನಗೆ ಇಲ್ಲಿನ ಸಾಲ ಕೂಪದಲ್ಲಿ ಸೇರಿಕೊಳ್ಳುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ ಇಲ್ಲಿನ ಜನರ ಪ್ರಾಯೋಗಿಕತೆಗೆ ತಲೆಬಾಗಲೇ ಬೇಕಾಗುತ್ತದೆ. ನೀವು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಬಾಡಿಗೆ ಮನೆಯಲ್ಲಿದ್ದು ಎಲ್ಲ ಸಂಕಷ್ಟಗಳ ನಡುವೆ ಹಣವನ್ನು ಕೂಡಿಟ್ಟು, ಬೆಳೆಸಿ ಮುಂದೆ ನಿವೃತ್ತರಾಗುವ ಹೊತ್ತಿಗೆ ಮನೆ ಕಟ್ಟಿಸಿಕೊಂಡು ಹಾಯಾಗಿ ಇರುವ ಕನಸು ಅಥವಾ ಆಲೋಚನೆ ಹೇಗಿದೆ? ಅದರ ಜೊತೆಗೆ ಮೊದಲಿನಿಂದಲೇ ನೀವು ನಿಮಗೆ ಬೇಕಾದ ಮನೆಯನ್ನು ಸಾಲದ ಮುಖೇನ ತೆಗೆದುಕೊಂಡು ಅದನ್ನು ಕಂತುಗಳಲ್ಲಿ ಬಡ್ಡಿ-ಅಸಲನ್ನಾಗಿ ಹಲವಾರು ವರ್ಷಗಳು ತೀರಿಸುತ್ತಾ ಹೋಗುವುದು ಹೇಗೆ? ಸಾಲ ಎಲ್ಲರಿಗೂ ಇದೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು ನಮ್ಮಂಥ ಹುಲುಮಾನವರವರೆಗೆ, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಮುಂದುವರೆದೆ ದೇಶಗಳವರೆಗೆ. ನಮ್ಮ ಅಗತ್ಯಗಳಿಗೋಸ್ಕರ ಮುಂದಾಲೋಚನೆಯಿಂದ ಸಾಲ ಮಾಡುವುದು ತಪ್ಪಾದರೂ ಹೇಗೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಈಗಾಗಲೇ ಆಲೋಚನೆಗಳು ಬೆಳೆದುಕೊಂಡಿವೆ, ಊಹೂ ಪ್ರಯೋಜನವಿಲ್ಲ - ನಿಮಗೆ ಬೇಕೋ ಬೇಡವೋ ಸಾಲದೊಳಗೆ ನೀವಿದ್ದೀರಿ, ನಿಮ್ಮೊಳಗೆ ಸಾಲವಿದೆ.

***

ನಾಳಿನದರಲ್ಲಿ ಏನಿದೆ ಏನಿಲ್ಲವೋ ಯಾರೂ ಗ್ಯಾರಂಟಿ ಕೊಡೋದಿಲ್ಲ. ಅದಕ್ಕೇ ನಮ್ಮ ಹಿರಿಯರು "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ" ಎಂದಿದ್ದು. ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು? ನಿನ್ನೆ ನಿನ್ನೆಯೇ ಆಗಿಕೊಂಡಿದ್ದರೂ ಇಂದು ನಾಳೆಯ ಸೇರುವುದರೊಳಗೆ ಆ ಇಂದನ್ನು ಇಂದೇ ಅನುಭವಿಸುವ ಮನಸ್ಥಿತಿ ನಮಗೇಕಿಲ್ಲ? ಅಷ್ಟೂ ಮಾಡಿ ನಾಳೆಯ ನಾಳೆಗಳು ಹೀಗೇ ಇರುತ್ತವೆ ಎಂದು ಯಾರೂ ಬರೆದಂತೂ ಕೊಟ್ಟಿಲ್ಲ, ಎಂತಹ ಅತಿರಥ ಮಹಾರಥರಿಗೂ ನಾಳೆಯ ಪಾಡು ಸಂಪೂರ್ಣವಾಗಿ ತಿಳಿದಿಲ್ಲ ಹಾಗಿರುವಾಗ ಎಲ್ಲವೂ ಭವಿಷ್ಯಮಯವಾಗೇ ಏಕಿರಬೇಕು? ಇಂದಿನ ದಿನವನ್ನು ’ಏನೋ ಒಂದು ಮಾಡಿ ತಿಂದರಾಯಿತು...’ ಎನ್ನುವ ಅಸಡ್ಡೆಯ ಮನೋಭಾವನೆಯಿಂದೇಕೆ ನೋಡಬೇಕು ನಾಳೆ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳೂತ್ತವೆ ಎನ್ನುವ ಗ್ಯಾರಂಟಿ ಎನೂ ಇಲ್ಲದಿರುವಾಗ?

Tuesday, December 18, 2007

ನೀರಿನ ಮತ್ತೊಂದು ಹೆಸರು

ಎಲ್ಲರ ಮಹಾತಾಯಿ ನೀರಿನ ಹಲವಾರು ರೂಪಗಳು ನಮಗೆಲ್ಲಾ ಪರಿಚಿತವೇ, ವಿಶ್ವದ ತುಂಬೆಲ್ಲಾ ತುಂಬಿಕೊಂಡು ಅನೇಕಾನೇಕ ರೂಪಗಳಲ್ಲಿ ಜೀವಕುಲದ ಬೆಳವಣಿಗೆಯ ಮಾಧ್ಯಮವಾಗಿರುವ ಅಪಾರ ಜಲರಾಶಿ ಹಾಗೂ ಅದರ ವಿಶ್ವಸ್ವರೂಪವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಘನ ಗಾಳಿ ಹಾಗೂ ದ್ರಾವಕ ರೂಪ (ಸ್ಥಿತಿ) ದಲ್ಲಿ ಮಾತ್ರ ಇರಬಹುದಾದ ಒಂದು ವಸ್ತು, ರುಚಿ ಇಲ್ಲದ್ದು, ಬಣ್ಣವಿಲ್ಲದ್ದು ಎಂದೇನೇ ಓದಿಕೊಂಡು ಬಂದು ನಮ್ಮ ಗಂಟು ಮೂಟೆಗಳ (Bags) ಸಮೇತ ಅಮೇರಿಕಕ್ಕೆ ಬಂದರೂ ಇಲ್ಲಿಗೆ ಬಂದ ಮೇಲೆ ಇವೇ ಇಷ್ಟು ಸ್ಥಿತಿಗಳಲ್ಲಿ ಇನ್ನೂ ಹಲವಾರು ರೀತಿಯ ನೀರಿನ ದರ್ಶನವಾಗಿದ್ದು ಮಹದಾಶ್ಚರ್ಯಗಳಲ್ಲೊಂದು.

ಭಾರತದಲ್ಲೂ ಹಿಮಾಲಯವಿದೆ, ಕಾಶ್ಮೀರವಿದೆ - ಆದರೆ ನಾವು ಕಂಡ ಹಿಮವೇನಿದ್ದರೂ ಚಿತ್ರ ಅಥವಾ ಟಿವಿ ಪರದೆಯ ನೋಟಕ್ಕೆ ಮಾತ್ರ ಸೀಮಿತವಾಗಿತ್ತು. ಇಲ್ಲಿಗೆ ಬಂದ ಮೇಲೇನೇ ಅದು "ಸ್ನೋ" ಎನ್ನುವ ಬೃಹತ್ ಆಕಾರವನ್ನು ತಳೆದು ವರ್ಷದ ಆರು ತಿಂಗಳ ಛಳಿಯ ವಾತಾವರಣದ ಅನುಭವಗಳ ಅವಿಭಾಜ್ಯ ಅಂಗವಾಗಿ ಹೋಯಿತು. ಸ್ನೋ, ಸ್ಲೀಟ್, ಫ್ರೀಜಿಂಗ್ ರೈನ್, ಬ್ಲ್ಯಾಕ್ ಐಸ್, ಪೌಡರಿ ಸ್ನೋ, ಸ್ಟಿಕ್ಕಿಂಗ್ ಸ್ನೋ, ಸ್ನೋ ಫ್ಲೇಕ್ಸ್, ಹೇಯಿಲ್ (Hail), ಗ್ರಾಪೆಲ್ (Graupel), ರೈಮ್ (Rime), ಸ್ಲಷ್ (Slush) ಇನ್ನೂ ಹಲವಾರು ರೀತಿ/ರೂಪಗಳಲ್ಲಿ ಕಂಗೊಳಿಸುವ ಈ ತಾಯಿಯ ವಿಶ್ವರೂಪವನ್ನು ವರ್ಣಿಸುವುದೇ ಅಸದಳ, ಅದು ನನ್ನ ಭಾಷೆಗೆ ಮೀರಿದ ಮಾತು.

***

ಮನೆಯ ಬದಿಯಲ್ಲಿನ ಕರಿಯ ಡ್ರೈವ್ ವೇ ಮುಖದ ಮೇಲೆ ನಿಸರ್ಗ ಅಗಾಧವಾದ ಸ್ನೋ ಪ್ಲೇಕ್ಸ್‌ಗಳನ್ನು ಒಂದರ ಹಿಂದೆ ಒಂದರಂತೆ ಸುರಿಸುತ್ತಲೇ ಇತ್ತು, ಈ ಮಹಾಲೀಲೆಯ ಮುಂದೆ ನಾನು ಹೋಮ್‌ಡಿಪೋದಲ್ಲಿ ಖರೀದಿಸಿ ಹರಡುತ್ತಿರುವ ಸಣ್ಣ ಸಣ್ಣ ಬಿಳಿಯ ಉಪ್ಪಿನ ಹರಳಿನ ಗುಂಡುಗಳು ಹೊಳೆಯಲ್ಲಿ ಹುಣಿಸೇಹಣ್ಣು ಕಲಿಸಿದ ಆಗಿ ಹೋಗಿಹೋಗಿತ್ತು. ಶಾಲೆಯಲ್ಲಿ ಓದಿದ ಹಾಗೆ ನೀರಿಗೆ ಉಪ್ಪು ಸೇರಿಸಿದಾಗ ಅದು ಕುದಿಯುವ ತಾಪಮಾನವನ್ನು ಹೆಚ್ಚಿಸುತ್ತದೆ, ಘನೀಭವಿಸುವ ತಾಪಮಾನವನ್ನು ಕುಗ್ಗಿಸುತ್ತದೆ ಎಂಬುದನ್ನು ಇಲ್ಲಿ ಅಕ್ಷರಷಃ ನಂಬಿಕೊಂಡು ನಿಧಾನವಾಗಿ ಉಪ್ಪಿನ ಹರಳುಗಳನ್ನು ಹರಡುತ್ತಲೇ ಹೋದೆ (elevation of boiling point, depression of freezing point), ಈ ನಿಯಮಗಳನ್ನು ನಾನು ನೆನಪಿನಲ್ಲಿಟ್ಟುಕೊಂಡಿದ್ದೆನೇನ್ನುವ ಒಂದು ಸರಳ ಅಭಿಮಾನವನ್ನೂ ಪ್ರಶಂಸಿಸದ ನಿರ್ದಯಿ ಮುಗಿಲು ನಮ್ಮ ಮನೆಯ ಮುಂದೆ ಸ್ನೋ ಸುರಿಸುತ್ತಲೇ ಹೋಯಿತು. ಇದೀಗ ಬಿದ್ದ ಸ್ನೋವನ್ನು ತೆಗೆಯುವಲ್ಲಿ ಕೆಲವೇ ಘಂಟೆಗಳ ವಿಳಂಬಕ್ಕೆ ಮನಸೋತ ನಾನು, ಕೊನೆಗೆ ಅದನ್ನು ತೆಗೆಯಲು ಒದ್ದಾಡೀ ಒದ್ದಾಡೀ ಅದನ್ನು ಹಾಗೆ ಬಿಟ್ಟು ಕರಿಯ ಡ್ರೈವ್ ವೇ ಮೇಲೆ ಬಿಳಿಯ ಕಾಂಕ್ರೀಟಿನ ಹಾಗೆ ಬಿದ್ದುಕೊಂಡು ಕಲ್ಲಿಗಿಂತಲೂ ಗಟ್ಟಿಯಾದ ಐಸ್ ಅನ್ನು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡಿ ಅನುಭವಿಸುವ ಆಸಕ್ತಿಯಿಂದ ಚೂಪಾದ ಉಕ್ಕಿನ ಶೆವೆಲ್ ತೆಗೆದುಕೊಂಡು ಕೆದಕುತ್ತಲೇ ಹೋದರೆ ಜಪ್ಪಯ್ಯಾ-ಜುಪ್ಪಯ್ಯಾ ಎಂದರೂ ಒಂದಿಂಚೂ ಕದಲಲಿಲ್ಲ!

ಅದು ಅಲ್ಲಿಯೇ ಬಿದ್ದು ಸಾಯಲಿ ಎಂದುಕೊಂಡು ಎಷ್ಟು ಸಾಧ್ಯವೋ ಅಷ್ಟನ್ನು ಮನೆಯ ಮುಂದೆ ಹಾಗೂ ಬದಿಗೆ ಸ್ವಚ್ಛ ಮಾಡಿಕೊಂಡು ಅದರ ಮೇಲೆ ಕಾರನ್ನು ಓಡಿಸಿಕೊಂಡು ಇವತ್ತಿಗೂ ಇರುವ ನನ್ನನ್ನು ನನ್ನ ನೆರೆಹೊರೆಯವರು ಮಹಾ ಸೋಂಬೇರಿ ಎಂದು ಈಗಾಗಲೇ ಹಣೆಪಟ್ಟಿ ಕಟ್ಟಿಕೊಂಡಿರಬಹುದು, ಅವರು ಏನೆಂದುಕೊಳ್ಳುತ್ತಾರೆ ಎಂದು ನಾನಾದರೂ ಏಕೆ ಯೋಚಿಸಲಿ? ಹಾಗೆ ಯೋಚಿಸಿದ ಮಾತ್ರಕ್ಕೆ ಅವರೇನಾದರೂ ಬಂದು ಸ್ವಚ್ಛ ಮಾಡಿಕೊಡುತ್ತಾರೇನು? ಅಕ್ಕಪಕ್ಕದವರ ಮನೆಯ ಮುಂದಿನ ಲಾನ್ ಅನ್ನು ನೋಡಿದರೆ ಅಲ್ಲಿ ಈಗಷ್ಟೇ ಸಗಣಿ ಸಾರಿಸಿಟ್ಟ ಹಾಗೆ ನುಣುಪಾಗಿ ಐಸ್‌ನಿಂದ ಮಾಡಿದ ಜಗುಲಿ ಕಂಡುಬರುತ್ತಿತ್ತು. ಕೊನೇಪಕ್ಷ ಈ ಜಗುಲಿಯ ರೂಪದಲ್ಲಾದರೂ ಎಲ್ಲರ ಮನೆಯ ಮುಂದೆ ಎಷ್ಟೊಂದು ಸಾಮ್ಯತೆ ಇದೆಯಲ್ಲಾ ಎನ್ನುವ ಸಮಾಧಾನವೂ ಮನದಲ್ಲಿ ಮನೆ ಮಾಡಿಕೊಂಡಿತು.

ಕಾರನ್ನು ತೆಗೆದುಕೊಂಡು ಆಫೀಸಿಗೆ ಹೋಗುವ ಮಾರ್ಗದಲ್ಲಿ ಈಗಾಗಲೇ ಎಲೆಗಳನ್ನು ಕಳೆದುಕೊಂಡು ಬೋಳಾದ ಮರಗಳ ನಡುವೆ ಸೂರ್ಯನ ಕಿರಣಗಳು ಹೊರಗೆ ಬರಲೋ ಬೇಡವೋ ಎನ್ನುವ ಮುಜುಗರದಿಂದಲೋ ಎನ್ನುವಂತೆ ಸಾವಕಾಶವಾಗಿ ಹರಡುತ್ತಿದ್ದವು. ಹಸಿರಿನ ಹಿನ್ನೆಲೆಯಲ್ಲಿ ಕಂಗೊಳಿಸಬೇಕಾದ ಬಿಳಿಯ ಬೆಳಕು ಎತ್ತ ನೋಡಿದರತ್ತ ಬಿದ್ದ ಬಿಳಿಯ ಸ್ನೋ, ಐಸ್ ಮೇಲೆ ಬಿದ್ದು ಪ್ರತಿಫಲನವಾಗುತ್ತಲೇ ನಾನು ಇದ್ದಲ್ಲೇ ದ್ವಿಗುಣ, ತ್ರಿಗುಣನಾಗುತ್ತೇನೆ ಎಂದು ಒಮ್ಮೆ ಹೆಮ್ಮೆಯಿಂದ ಬೀಗುವಂತೆ ಕಂಡುಬಂದರೂ, ಕಾರಿನ ಡಯಲಿನಲ್ಲಿ ತೋರಿಸುತ್ತಿದ್ದ 23 ಡ್ರಿಗ್ರಿ ಫ್ಯಾರನ್‌ಹೈಟ್ ಉಷ್ಣತೆ - ನಿಮ್ಮ ಆಟವೇನೂ ನಡೆಯೋದಿಲ್ಲ - ಎಂದು ಸೂರ್ಯ ಕಿರಣಗಳ ಬಿಮ್ಮನ್ನು ಕುಸಿಯುವಂತೆ ಮಾಡಿತ್ತು. ಮರಗಳ ಮೇಲೆ ತಲೆಯೆತ್ತಿ ನೋಡುತ್ತೇನೆ, ಪ್ಲಾಟಿನಮ್‌ನಲ್ಲಿ ಮಾಡಿದ ಜುಮುಕಿ ತೊಟ್ಟ ಮದುವಣಗಿತ್ತಿಯಂತೆ ಮರಗಳ ತುದಿಗಳು ತಮ್ಮ ಮೇಲೆ ಹರಳುಕಟ್ಟಿದ ಐಸ್ ಕ್ರಿಸ್ಟಲ್ಲುಗಳನ್ನು ಹೊತ್ತುಕೊಂಡು ಬಿಸಿಲಿಗೆ ಕಂಗೊಳಿಸುತ್ತಿವೆ. ಇನ್ನೂ ಕೆಲವು ಬೃಹದಾದ ಮರದ ತುದಿ ಅದ್ಯಾವುದೋ ದೊಡ್ಡ ಹೊಟೇಲೋ ಕ್ಯಾಸಿನೋಗಳಲ್ಲಿರುವ (ಚಾ)ಶಾಂಡಲೀಯರ್‌ಗಳನ್ನು ನೆನಪಿಸುತ್ತಿದ್ದವು. ಹೊರಗಡೆ ಛಳಿ ಇದ್ದು ಈ ಮರಗಳು ಸುರುಟಿ ಹೋಗುವುದಂತೂ ನಿಜ, ಜೊತೆಗೆ ತಮ್ಮ ಮೇಲಿನ ಐಸ್‌ನ ಭಾರವನ್ನೂ ಹೊತ್ತುಕೊಂಡಿರಬೇಕಲ್ಲ ಎಂದು ಮೊದಲ ಬಾರಿಗೆ ಮರಗಳ ಬಗ್ಗೆ ಅನುಕಂಪ ಮೂಡಿತು, ಜೊತೆಗೆ ಅವರವರ ಕರ್ಮ ಅವರಿಗೆ ಎಂಬ ವೇದಾಂತದ ಅಲೋಚನೆಯೂ ಹೊರಗೆ ಬಂತು.

***

ಪುಷ್ಪಕ ವಿಮಾನ ಸಿನಿಮಾದಲ್ಲಿ ಖಳನೊಬ್ಬ ಐಸ್‌ನಲ್ಲಿ ಮಾಡಿದ ಚೂರಿಯಿಂದ ಇರಿದು ಕೊಲ್ಲಲು ಪ್ರಯತ್ನಿಸುವ ದೃಶ್ಯ ನೆನಪಿಗೆ ಬಂತು. ಆ ಸಿನಿಮಾವನ್ನು ಭಾರತದಲ್ಲಿ ನೋಡಿದವರಿಗೆ ಮಂಜು ಕಟ್ಟಿದ ನೀರು ಉಕ್ಕಿನಷ್ಟು ಗಟ್ಟಿ ಇರಬಲ್ಲದೇ ಎಂಬ ಸಂಶಯ ಮೂಡಿರಲೂಬಹುದು. ಆದರೆ ಅತಿ ಕಡಿಮೆ ತಾಪಮಾನದಲ್ಲಿ ಹರಳುಗಟ್ಟಿದ ಮಂಜೂ ಸಹ ಉಕ್ಕಿನಷ್ಟೇ ಕಠಿಣವಾದದ್ದು ಎಂದು ನೋಡಿ ಅನುಭವಿಸಿದವರಿಗೇ ಗೊತ್ತು. ವೆದರ್ ಚಾನೆಲ್ಲ್ ಅನ್ನು ತಿರುಗಿಸಿ ನೋಡಿದರೆ ಅಲ್ಲಿ ಒಮಾಹಾ, ನೆಬ್ರಾಸ್ಕಾದಲ್ಲಿ 1 ಡಿಗ್ರಿ ಫ್ಯಾರನ್‌ಹೈಟ್ ತಾಪಮಾನವನ್ನು ತೋರಿಸುತ್ತಿದ್ದರು, ಅದರ ಮುಂದೆ ನಮ್ಮೂರಿನ 26 ಡಿಗ್ರಿ ಫ್ಯಾರನ್‌ಹೈಟ್ ಭಿಕ್ಷುಕರ ಮುಂದೆ ಲಕ್ಷಾಧೀಶ್ವರನ ಹಾಗೆ ಕಾಣಿಸುತ್ತಿತ್ತು.

ಈ ನೀರು ಎನ್ನುವುದಾಗಲೀ, ಅದರ ಅಸಾಧಾರಣ ರೂಪಗಳಾಗಲೀ, ಅದರ ವಿಭಿನ್ನ ಸ್ಥಿತಿಗಳಾಗಲೀ ನನ್ನ ಮನಸ್ಸಿನಲ್ಲಿ ಯಾವತ್ತೂ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡೇ ಇರುತ್ತೆ. ನನ್ನ ಪ್ರಕಾರ ಹೊರಗಿನ ತಾಪಮಾನದ ಹಿನ್ನೆಲೆಯಲ್ಲಿ ನೀರು ಹರಳುಗಟ್ಟುವ ರೀತಿಯನ್ನು ಹಲವಾರು ವರ್ಷಗಳಿಂದ ಅನುಭವಿಸಿ ಬಲ್ಲವರು ಪ್ರಕೃತಿಯ ವಿಶೇಷವಾದ ವ್ಯವಸ್ಥೆಯೊಂದನ್ನು ಹತ್ತಿರದಿಂದ ಬಲ್ಲವರು, ನೀರನ್ನಾಗಲೀ ಅದರ ವಿಭಿನ್ನ ನೆಲೆಗಳನ್ನಾಗಲೀ ಜಯಿಸಿದವರಿಗೆ ಸೋಲೆನ್ನುವುದು ಖಂಡಿತ ಇಲ್ಲ!

ನಾವು ಓದಿದ ಓಡರ್‌ಲೆಸ್ ಕಲರ್‌ಲೆಸ್ ಟೇಸ್ಟ್‌ಲೆಸ್ ಎನ್ನುವ ಒಂದು ಮೂಲಭೂತ ಅಂಶ, ನನ್ನ ಕಣ್ಣ ಮುಂದೆಯೇ ಹಲವಾರು ವಿಸ್ತೃತ ಸ್ವರೂಪವನ್ನು ಧರಿಸಿದ್ದನ್ನು ನೋಡಿದ್ದೇನೆ. ಬಣ್ಣವಿಲ್ಲದ ನೀರು, ಘನೀಭವಿಸಿ ಬಿಳಿಯಾಗಿ ಎಲ್ಲ ಬಣ್ಣವನ್ನೂ ತನ್ನಲ್ಲಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಬಿಳಿಯ ಮೋಡಗಳು ಮಳೆಯನ್ನು ತಾರವು, ಕರಿಯ ಮೋಡಗಳು ಬಿಳಿಯ ಮೋಡಗಳಿಗಿಂತ ದೊಡ್ಡ ದೊಡ್ಡ ಕಣಗಳನ್ನು ಹೊಂದಿರುತ್ತವೆ, ಅವೇ ಮೋಡಗಳಿಗೂ ಬಣ್ಣವನ್ನು ಬದಲಾಯಿಸುತ್ತವೆ ಎಂದು ಓದಿಕೊಂಡು ವಿಜೃಂಭಿಸಿದ್ದೇನೆ. ನೀರಿಗೆ ಹಲವಾರು ರೂಪವಿದೆ, ಭೋಗೋಳದ ಪ್ರತಿಶತ ಎಂಭತ್ತು ಭಾಗವನ್ನು ನೀರು ಅಥವಾ ನೀರಿನ ರೂಪ ಆವರಿಸಿದೆ ಎಂದೆಲ್ಲಾ ಡಿಸ್ಕವರಿ ಚಾನೆಲ್ಲುಗಳಲ್ಲಿ ನೋಡಿದಾಗ ಹುಬ್ಬೇರಿಸಿದ್ದೇನೆ. ನಮ್ಮ ನಿಮ್ಮಲ್ಲೂ ನೀರಡಗಿದೆ, ಈ ನೀರು ನಿಜವಾಗಿಯೂ ಸರ್ವಾಂತರ್ಯಾಮಿ, ಎಲ್ಲರಿಗೂ ಜೀವಜಲವಾದ ನೀರೇ ದೇವರು! (ಬೇಸಿಗೆಯಲ್ಲಿ ಈ ಮಾತು ಬದಲಾಗಿ ಗಾಳಿ, ಮಣ್ಣು, ಅಗ್ನಿ ಮೊದಲಾದ ಪಂಚಭೂತಗಳಿಗೆ ಆದ್ಯತೆಕೊಟ್ಟರಾಯಿತು, ಈಗ ಛಳಿಗಾಲ, ಅದು ನೀರಿನ ಕಾಲ!)