Showing posts with label ಸಂಸ್ಕೃತಿ. Show all posts
Showing posts with label ಸಂಸ್ಕೃತಿ. Show all posts

Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

Sunday, September 28, 2008

ನಾವು ಮಹಾ ಬುದ್ಧಿವಂತರು ಸಾರ್!

ಸೆಪ್ಟೆಂಬರ್ ಗಾಳಿ ತೇವ ಹಾಗೂ ತಂಪನ್ನು ಅದೆಲ್ಲಿಂದಲೋ ಹೊತ್ತು ತರುತ್ತಿದ್ದಂತೆ ಹೆಚ್ಚು ವಿಡಂಬನೆಗಳನ್ನು ’ಅಂತರಂಗ’ದಲ್ಲಿ ತುಂಬುವಂತೆ ಮಾಡುತ್ತಿದೆ. ಈ ವಿಡಂಬನೆಗಳ ವ್ಯಾಪ್ತಿ (ಕೊರಗು) ನಿಮಗೆ ಗೊತ್ತೇ ಇದೆ, ಈವರೆಗೆ ಬರೆದವುಗಳ ಬೆನ್ನಲ್ಲಿ ಇನ್ನೂ ಒಂದು.

***

ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್‌ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.

ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.

’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.

ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್‌ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.

ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.

***

ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:
- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್‌ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?

- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್‌ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್‌ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್‌ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.

ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!

ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?

- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್‌ಮೆಂಟೇ ಸರಿ.

ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್‌ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!

Monday, September 24, 2007

ಏನು ರೋಷ, ಏಕೀ ವೈಭವೀಕರಣ?

ಈಗ್ಗೆ ಮೂರ್ನಾಲ್ಕು ತಿಂಗಳಿನಿಂದ ಉದಯ ಟಿವಿ ಸಬ್‌ಸ್ಕ್ರೈಬ್ ಮಾಡಿಕೊಂಡು ಕನ್ನಡ ಕಾರ್ಯಕ್ರಮಗಳನ್ನು ಬಿಡುವಿನಲ್ಲೋ ಅಥವಾ ಡಿವಿಆರ್ ಕೃಪಾಕಟಾಕ್ಷದಿಂದಲೋ ನೋಡಿ ಒಂದು ಹೆಜ್ಜೆ ನಮ್ಮೂರಿಗೆ ಹತ್ತಿರವಾಗುತ್ತೇನೆ ಎಂದುಕೊಂಡಿದ್ದ ನನಗೆ ಸಂತೋಷಕ್ಕಿಂತಲೂ ಭ್ರಮನಿರಸನವಾದದ್ದೇ ಹೆಚ್ಚು ಎಂದರೆ ತಪ್ಪಾಗಲಾರದು. ನನ್ನ ಈ ಮಾನಸಿಕ ಜಾಗೃತಿಯ ಹಿಂದೆ ಕನ್ನಡಿಗರದ್ದಾಗಲೀ, ಉದಯ ಟಿವಿಯವರದ್ದಾಗಲೀ ತಪ್ಪು ಇದೆ ಎನ್ನುವುದಕ್ಕಿಂತಲೂ ನನ್ನಲ್ಲಿನ ಬದಲಾವಣೆಯನ್ನು ಒರೆಗೆ ಹಚ್ಚಿ ಸುತ್ತಲನ್ನು ವಿಶೇಷವಾಗಿ ನೋಡುವ ಪ್ರಯತ್ನವಿದು ಅಷ್ಟೇ.

ನನಗೆ ಬುದ್ಧಿ ತಿಳಿದಾಗಿನಿಂದಲೂ ಕನ್ನಡ ನಾಟಕ, ಸಿನಿಮಾ, ದೊಡ್ಡಾಟ, ಬಯಲಾಟ, ವೀರಗಾಸೆ, ಯಕ್ಷಗಾನ, ಜಾನಪದ ಗಾಯನ/ನೃತ್ಯ ಮುಂತಾದವುಗಳನ್ನು ಸಹಜವಾಗಿ ನೋಡಿ ಬೆಳೆದವನು ನಾನು. ಇವತ್ತಿಗೂ ಯಕ್ಷಗಾನದ ಒಂದು ಪದವಾಗಲೀ ಸಂಭಾಷಣೆಯಾಗಲಿ ಮೈನವಿರೇಳುವಂತೆ ಮಾಡುವುದು ಖಂಡಿತ. ಅದೇ ರೀತಿ ಹಳೆಯ ಜಾನಪದ ಹಾಡುಗಳಾಗಲೀ, ಮಟ್ಟಾಗಲೀ ಮತ್ತೊಂದಾಗಲೀ ಅವುಗಳನ್ನು ಕೇಳುವುದೇ ಮನದಲ್ಲಿ ಬಹಳಷ್ಟು ಉತ್ಸಾಹವನ್ನು ಉಂಟು ಮಾಡುತ್ತವೆ. ಕೆರೆಗೆಹಾರದ ಕಥೆಯಾಗಿರಬಹುದು, ಗೋವಿನ ಹಾಡಾಗಿರಬಹುದು, ಮಾಯದಂಥ ಮಳೆಯಾಗಿರಬಹುದು, ಹಳೆಯ ಸಿನಿಮಾ ಹಾಡುಗಳಾಗಿರಬಹುದು - ಇವುಗಳಲ್ಲಿ ಏಕತಾನತೆ ಇದೆ, ಒರಿಜಿನಾಲಿಟಿ ಇದೆ, ಮೂಲವಿದೆ ಹಾಗೂ ಶೋಧಿಸುವ ಮನಸ್ಸಿಗೆ ಮುದ ನೀಡುವ ಗುಂಗಿದೆ. ಹಲವಾರು ಸಾಮಾಜಿಕ ನಾಟಕಗಳಲ್ಲಿ, ತಾಳಮದ್ದಳೆಗಳಲ್ಲಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಯಾವುದೊಂದು ಮನೋರಂಜನಾ ಪ್ರಬೇಧದಲ್ಲಿಯೂ ನಮ್ಮದೇ ಆದ ಒಂದು ಸೊಗಡಿದೆ. ಕ್ಷಮಿಸಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಮನೋರಂಜನಾ ಪ್ರಬೇಧದ ಜೀವ ಸಂಕುಲದಲ್ಲಿ ಸಿನಿಮಾ ಪ್ರಪಂಚವಾಗಲೀ, ಅಥವಾ ಇಂದಿನ ಕಿರುತೆರೆಯ ಕಣ್ಣೀರಿನ ಕೋಡಿಗಳಾಗಲೀ ಇವೆಯೇ ಅನ್ನೋದು ಬಹು ದೊಡ್ಡ ಪ್ರಶ್ನೆ. ಆದರೆ ನೀವೇ ನೋಡಿದಂತೆ ನನಗೆ ಅಪ್ಯಾಯಮಾನವಾಗುವಂತಹ ಯಾವುದೇ ಮಾಧ್ಯಮದ ಹತ್ತಿರಕ್ಕೂ ಸಿನಿಮಾ ಬಂದಿಲ್ಲ, ಅದರಲ್ಲಿಯೂ ಇತ್ತೀಚಿನ ಸಿನಿಮಾಗಳಾಗಲೀ ಹಾಗೂ ಅನೇಕ ಕಿರುತೆರೆಯ ಕಾರ್ಯಕ್ರಮಗಳಾಗಲೀ ಬಹು ದೂರ.

ನಾವು ಹೈ ಸ್ಕೂಲು ಕಾಲೇಜುಗಳಲ್ಲಿ ಅನೇಕ ಚರ್ಚಾಸ್ಪರ್ಧೆಗಳಲ್ಲಿ ವಾದ ಮಾಡುತ್ತಿದ್ದುದು ಇನ್ನೂ ನನಗೆ ಚೆನ್ನಾಗಿ ನೆನಪಿದೆ - ಭಾರತದ ಸುದ್ದಿ ಮಾಧ್ಯಮಗಳು ಸ್ವಾಯುತ್ತವಾಗಬೇಕು, ಶಾಲಾ ಕಾಲೇಜುಗಳಲ್ಲಿ ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಪಾಠ ಹೇಳಿಕೊಡಬೇಕು, ವಿದೇಶಿ ಮಾಧ್ಯಮಗಳ ನಡೆನುಡಿ ಸಂಸ್ಕೃತಿಗಳ ಅನುಕರಣೆ ಸಲ್ಲ - ಮುಂತಾಗಿ. ಇಂದಿಗೂ ನಮ್ಮಲ್ಲಿನ ಸುದ್ದಿ ಮಾಧ್ಯಮಗಳು (ಟಿವಿ, ರೆಡಿಯೋ ಹಾಗೂ ವೃತ್ತಪತ್ರಿಕೆಗಳು) ಸ್ವಾಯುತ್ತವಾಗಿವೆ ಎಂದೇನೂ ನನಗನ್ನಿಸೋದಿಲ್ಲ, ಆದರೆ ಯಾವುದಾದರೊಂದು ಕ್ರೈಮ್ ಸಂಗತಿಯನ್ನು ವರದಿ ಮಾಡುವಾಗ ನಮ್ಮಲ್ಲಿನ ಮಾಧ್ಯಮಗಳಿಗೆ ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿ ಎಂಬುದೇ ಇಲ್ಲ ಎನ್ನಿಸಿದೆ. ರಕ್ತದ ಹೊಳೆ, ಕೊಳೆತು ಕೃಶವಾಗುತ್ತಿರುವ ಹೆಣಗಳು, ಸತ್ತ ಮಕ್ಕಳು, ಛಿದ್ರವಿಛಿದ್ರವಾದ ಜಾನುವಾರುಗಳು, ಮುಖದ ಮೇಲೆ ಬ್ಲೇಡಿನಿಂದ ಕೊಯಿಸಿಕೊಂಡು ಹತ್ಯೆಗೊಳಗಾದ ರೌಡಿಗಳು, ಗುಂಡಿನೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದ ದೇಹಗಳು ಇತ್ಯಾದಿ - ಇವುಗಳನ್ನೆಲ್ಲ ವಾರ್ತಾ ಮಾಧ್ಯಮದಲ್ಲಿ ನೋಡಿ ನನಗಂತೂ ಸಾಕಾಗಿ ಹೋಗಿದೆ. ನಿಜವಾಗಿಯೂ ಕೇಳುಗರಿಗೆ ಆ ಪ್ರಮಾಣದ ಡೀಟೈಲ್‌ನ ಅವಶ್ಯಕತೆ ಇದೆಯೇ? ನಮ್ಮಲ್ಲಿನ ಸುದ್ಧಿ ಮಾಧ್ಯಮಗಳ ಕಾರ್ಯಕ್ರಮ ಹಾಗೂ ಬರಹ ಯಾವ ರೇಟಿಂಗ್‌ಗೆ ಒಳಪಡುತ್ತವೆ? ಶಾಲಾ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಓದಿ/ನೋಡಲು ಅವು ಲಾಯಕ್ಕೇ ಎನ್ನುವ ಪ್ರಶ್ನೆ ನನಗಂತೂ ಪದೇಪದೇ ಮನಸ್ಸಿನಲ್ಲಿ ಏಳುತ್ತಿರುತ್ತದೆ. ಆದರೆ ಅವುಗಳಿಗೆಲ್ಲಾ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಾಧ್ಯಮಗಳ ತಂತ್ರಜ್ಞಾನ ಏನೇ ಬದಲಾದರೂ ಅವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು, ವರದಿಗಳನ್ನು ಹೀಗೆಯೇ ತೋರಿಸಿಕೊಂಡು ಬಂದಿದ್ದರೆ ಇಂದು ಅಂತಹ ಕಾರ್ಯಕ್ರಮಗಳನ್ನು ವಿಶೇಷವಾಗಿ ನೋಡುತ್ತಿರುವ ನನ್ನಲ್ಲಿನ ಬದಲಾವಣೆಗಳನ್ನೇ ದೂರಲೇ? ಅಥವಾ ಸದಾ ವಿದೇಶಿ ಸೋಗನ್ನು ಹಾಕಿಕೊಂಡಿರುವ ದೇಶಿಗಳಿಗೆ ಬೇಕಾದಷ್ಟು ವಿದೇಶಿ ಚಾನೆಲ್ಲುಗಳ ಕಾರ್ಯಕ್ರಮಗಳ ರೂಪುರೇಶೆಯನ್ನು ನೋಡಿ ಕಲಿಯುವುದಾಗಲೀ, ತಮಗೆ ಅನ್ವಯಿಸಿಕೊಳ್ಳುವುದಾಗಲೀ ಏನೂ ಇಲ್ಲವೇ?

ನಾನು ಹಿಂದಿ ಸಿನಿಮಾಗಳನ್ನು ನೋಡದೇ ಹಲವಾರು ವರ್ಷಗಳೇ ಕಳೆದು ಹೋದವು, ಇತ್ತೀಚಿನ ಅನೇಕ ಕನ್ನಡ ಚಲನ ಚಿತ್ರಗಳನ್ನು ನೋಡಿ ನನಗಂತೂ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ ಹಾಗೂ ಬಿಗಡಾಯಿಸಿದೆ ಎನ್ನಿಸಿಬಿಟ್ಟಿತು. ಇಂದಿನ ಸಿನಿಮಾಗಳು ಜನಪ್ರಿಯತೆಯ ಸೋಗಿಗೆ ಕಟ್ಟುಬಿದ್ದು ಅನೇಕ ರಂಗುರಂಗಿನ ಅಂಶಗಳನ್ನು ಒಳಗೊಂಡು ಈಗಿನ ಟಿವಿ-ವಿಸಿಡಿ ಕಾಲದಲ್ಲೂ ಪ್ರೇಕ್ಷಕ ಪರಮಾತ್ಮನನ್ನು ಥಿಯೇಟರಿಗೆ ಹೊರಡಿಸುವ ಯಾವುದೋ ಒಂದು ಮಹಾನ್ ಪ್ರಯತ್ನವಿದ್ದಿರಬಹುದು, ನನ್ನಂತಹವರು ಥಿಯೇಟರಿಗೆ ಹೊಕ್ಕು ಕೊಡುವ ರೂಪಾಯಿಯನ್ನು ನಂಬದೇ ಇದ್ದಿರಬಹುದಾದ ಒಂದು ವ್ಯವಸ್ಥಿತ ಇಂಡಸ್ಟ್ರಿಯಾಗಿರಬಹುದು. ಆದರೆ, ಇಂದು ಥಿಯೇಟರಿನಲ್ಲಿ ಬಿಡುಗಡೆಯಾದದ್ದು ನಾಳೆ ಪುಕ್ಕಟೆಯಾಗಿ ಟಿವಿ ಮುಂತಾದ ಮಾಧ್ಯಮಗಳ ಮೂಲಕ ಬಿಕರಿಯಾಗಿ ಸಮಾಜವನ್ನು ಅಲ್ಲೋಲಕಲ್ಲೋಲಗೊಳಿಸುತ್ತಲ್ಲಾ, ಅದಕ್ಕ್ಯಾರು ಜವಾಬ್ದಾರರು? ಇಂದಿನ ಹೀರೋಗಳಿಗೆ ಅದೇನು ರೋಷ, ಅದೇನು ಆವೇಶ, ಸಿನಿಮಾಗಳಲ್ಲಿ ಸೇಡು-ರೋಷದ ಅದೇನು ವೈಭವಿಕರಣ? ಪ್ರೇಕ್ಷಕರನ್ನು ಕುರಿಗಳೆಂದು ಭಾವಿಸಿ ಸಿನಿಮಾದಲ್ಲಿ ಹೀರೋಗಳ ರೂಪುರೇಶೆಯನ್ನು ಅವರ ನಡತೆಯನ್ನು ಯದ್ವಾತದ್ವಾ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಕಲಾವಿದರ ಹೆಸರಿನಲ್ಲಿ ಕಳಪೆಯನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ತಂಡದವರಿಗೆ ಧಿಕ್ಕಾರವಿರಲಿ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅದು ಹೇಗೆ ತಾನೇ ನ್ಯಾಯವಾದೀತು? ಇವರ ಮನೆಯಲ್ಲಿರೋ ಶಾಲೆಗೆ ಹೋಗೋ ಮಕ್ಕಳು ಆ ರೀತಿಯ ಪ್ರಶ್ನೆಗಳನ್ನು ಕೇಳೋದಿಲ್ಲವೇ? ಒಬ್ಬನನ್ನು ಕೊಲೆಗೈದವನು ಕೊಲೆಗಡುಕನೇ - ಯಾವ ಕಾರಣಕ್ಕಾದರೇನಂತೆ, ಅದಕ್ಕೆ ನ್ಯಾಯಾನ್ಯಾಯ ಹೇಳುವುದು ಎರಡೂವರೆ ಘಂಟೆ ನಂತರ ಸಿನಿಮಾದ ಕರ್ಕಶ ಶಬ್ದಗಳಿಗೆ ಅಲ್ಲಿ ಹುಟ್ಟಿ ಹೊರಬರುವ ಧ್ವನಿಗಳಿಗೆ ಕಂಗಾಲಾದ ಪ್ರೇಕ್ಷಕನ ಮನಸ್ಥಿತಿಯಲ್ಲ. ಸಾಮಾಜಿಕ ನ್ಯಾಯ ಎಂದಿಗೂ ಸಾಮಾಜಿಕ ನ್ಯಾಯವೇ ಎನ್ನುವ ಸರಳ ಸಮೀಕರಣ ನಮ್ಮ ಪರಂಪರೆಗೆ ಏಕೆ ಸಿದ್ಧಿಸದೋ ಕಾಣೆ. ಗಟ್ಟಿ ಇದ್ದವನು ಬದುಕುತ್ತಾನೆ ಅನ್ನೋದು ಹೊಡೆದಾಡಿ ಬಡಿದಾಡಿ ಬದುಕುವುದು ಎನ್ನುವ ಮಟ್ಟಿಗೆ ಸಂದು ಹೋಗಿರೋದು ನಮ್ಮವರ ಸಮಸ್ಯೆ ಅಲ್ಲ, ನನ್ನ ಸಮಸ್ಯೆ - ಏಕೆಂದರೆ ಮೊದಲೆಲ್ಲ ಈ ರೀತಿಯ ವಿಷಯಗಳು ಕಾಣಿಸುತ್ತಿರಲಿಲ್ಲ, ಕಾಣಿಸಿದ್ದರೂ ಅವು ಎಲ್ಲೋ ಹುಟ್ಟಿ ಕರಗುವ ಧ್ವನಿಗಳಾಗುತ್ತಿದ್ದವು, ಆದರೆ ಇಂದು ಅಂತಹ ಧ್ವನಿಗಳೇ ಮುಖ್ಯವಾಹಿನಿಗಳಾಗಿವೆ ನನ್ನ ಮನಸ್ಸಿನಲ್ಲಿ.

ನಮ್ಮ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ಬೇಕಾದಷ್ಟು ಸೃಜನಶೀಲತೆ ಇದೆ. ಇವತ್ತಿಗೂ ಒಂದು ಪ್ರೇಮಗೀತೆಯಿಂದ ಹಿಡಿದು, ಧಾರುಣ ಕಥೆಯವರೆಗೆ ಹೆಣಿಗೆಯನ್ನು ನೇಯಬಲ್ಲ ಒರಿಜಿನಾಲಿಟಿ ನಮ್ಮಲ್ಲೂ ಇದೆ. ಹಾಗಿದ್ದಾಗ ಹೊರಗಿನಿಂದ ಕದ್ದು ತಂದು ತಮ್ಮದನ್ನಾಗಿ ಮಾಡಿ ತೋರಿಸುವ ಅವಸ್ಥೆ ಯಾರಿಗೂ ಬೇಡ. ನಮ್ಮಲ್ಲಿನ ಯುವಕರಾಗಲೀ, ವೃತ್ತಿಕರ್ಮಿಗಳಾಗಲೀ ತಟ್ಟನೆ ಪ್ರತಿಫಲವನ್ನು ಹುಡುಕಿ ಹೀಗಾಯಿತೋ ಎಂದು ಎಷ್ಟೋ ಸಾರಿ ಯೋಚಿಸಿದ್ದೇನೆ. ಹತ್ತು-ಹದಿನೈದು ವರ್ಷ ಸಂಗೀತ ಸಾಧನೆ ಮಾಡಿ ಮುಂದೆ ಬರಲಿ - ಆಗ ಒಡಲೊಳಗಿನ ಪ್ರತಿಭೆಗೆ ಒಂದು ಒರೆಹಚ್ಚಿ ತೀಡಿದಂತಾಗಿ ಪ್ರಭೆ ಹೊರ ಸೂಸುತ್ತಿತ್ತೋ ಏನೋ ಆದರೆ ನಮ್ಮಲ್ಲಿನ ವಜ್ರದ ಹರಳುಗಳು ಅದರಿನ ರೂಪದಲ್ಲೇ ಹೊಳೆಯಲು ಹೊರಟು ಯಾವುದೋ ವಕ್ರಕಿರಣ-ವರ್ಣಗಳನ್ನು ಸೂಸುವುದನ್ನು ನೋಡಲು ಸಾಧ್ಯವೇ ಇಲ್ಲ ಎನ್ನಿಸಿದೆ. ಮನೋರಂಜನೆಗೆ ಸೀಮಿತವಾದ ಯಾವುದೇ ಅಂಗವಿರಲಿ - ನಿರ್ದೇಶನವಿರಲಿ, ವಸ್ತ್ರವಿನ್ಯಾಸವಿರಲಿ, ಚಿತ್ರಕಥೆ ಬರೆಯುವುದಿರಲಿ, ಸಂಕಲನ ಮಾಡುವುದಿರಲಿ - ಇವುಗಳಿಗೆ ತಕ್ಕ ಮಟ್ಟಿನ ತರಬೇತಿ ಇಲ್ಲದೇ ನಾನೂ ಕೆಲಸ ಮಾಡುತ್ತೇನೆ ಎಂದು ಮೀಡಿಯೋಕರ್ ಕೆಲಸ ಮಾಡಿ ಅದರ ಮೇಲೆ ಜೀವನವನ್ನಾಧರಿಸುವುದಿದೆ ನೋಡಿ - ಅದು ಬಹಳ ಕಷ್ಟದ ಕೆಲಸ. ವಿದೇಶದ ಸಿಂಫನಿ ಆರ್ಕೇಷ್ಟ್ರಾಗಳಲ್ಲಿ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ನಿರಂತರವಾಗಿ ದುಡಿದು ಅದರ ಮೇಲೇ ಜೀವನವನ್ನಾಧರಿಸುವ ಸಾಮಾಜಿಕ ನೆಲೆಗಟ್ಟು ನಮ್ಮಲ್ಲಿ ಇಲ್ಲದಿರಬಹುದು, ಕಲಾವಿದರಿಗೆ ಅವರ ಪ್ರತಿಭೆಗೆ ತಕ್ಕ ಪೋಷಣೆ ಸಿಗದೇ ಇರಬಹುದು ಆದರೆ ನನ್ನಂತಹ ಸಾಮಾನ್ಯನಿಗೂ ಗೊತ್ತಾಗುವಷ್ಟು ಕಳಪೆ ಗುಣಮಟ್ಟದ ಕಾರ್ಯಕ್ರಮಗಳನ್ನು ಹೊರತರುವುದಾದರೂ ಏಕೆ? ಅದರಿಂದ ಯಾರಿಗೇನು ಲಾಭವಿದೆ ಹೇಳಿ ನೋಡೋಣ.

ಮಚ್ಚೂ-ಲಾಂಗು ಸಂಸ್ಕೃತಿ ನಮ್ಮದೇ, ಇಲ್ಲವೆಂದಾದರೆ ಎಲ್ಲಿಂದ ಬಂತು? ಒಂದು ಕಾಲದಲ್ಲಿ ರಿವಾಲ್ವರ್‌ನಿಂದ ಗುಂಡು ಹೊಡೆಸಿಕೊಂಡು ಸಾಯುವುದೇ ಅಪರೂಪವಾಗಿರುವಂಥ ಕನ್ನಡ ನಾಡಿನಲ್ಲಿ ಇಂದು ಎಷ್ಟೋ ಜನರ ಕೊಲೆಯನ್ನು ಗುರುತು ಸಿಗದ ಮುಸುಕುಧಾರಿಗಳು ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಏನು ಕಾರಣ? ಸಿನಿಮಾದಿಂದ ಸಮಾಜ ಪ್ರೇರಣೆ ಪಡೆಯುತ್ತದೆಯೋ, ಅಥವಾ ಸಮಾಜ ಇರುವುದನ್ನು ಸಿನಿಮಾ ಹೀಗೆ ಎಂದು ಗುರುತಿಸುತ್ತದೆಯೋ? ಕಾಲೇಜ್‌ಗೆ ಚಕ್ಕರ್ ಹೊಡೆದು ಮನೆಯಲ್ಲಿ ಅಪ್ಪ ಅಮ್ಮರಿಗೆ ತಿನ್ನೋಕೆ ಗತಿ ಇರದ ಪರಿಸ್ಥಿತಿಯಲ್ಲಿನ ನಾಯಕನನ್ನು ವೈಭವೀಕರಿಸಿ ನಮ್ಮ ಸಿನಿಮಾ ಕಥೆಗಳು ಯಾವ ನ್ಯಾಯವನ್ನು ಸಾರುತ್ತಿವೆ? ಸಿನಿಮಾ ಹೀರೋಗಳೆಲ್ಲಾ ಗೆಲ್ಲಲೇ ಬೇಕೆಂದರೆ ಹಾಗಾದರೆ ಅವು ಸಮಾಜದ ನಿಜವಾದ ಪ್ರತಿಬಿಂಬವಲ್ಲ ಎಂದಂತಾಗಲಿಲ್ಲವೇ? ಬುದ್ಧಿವಂತರು ಕಳಪೆ ಸಿನಿಮಾವನ್ನೇಕೆ ನೋಡಬೇಕು, ಅವುಗಳಿಗೆ ನಮ್ಮ ಭಾಷೆ, ಭಾವನೆ, ಹಾಗೂ ನಾವು ನೆಚ್ಚುವ ನಾಯಕರನ್ನೇಕೆ ಬಲಿಕೊಡಬೇಕು?

ನೀವು ಏನೇ ಹೇಳಿ ಕಳಪೆಯನ್ನು, ಕಡಿಮೆ ಗುಣಮಟ್ಟದ್ದನ್ನು ಹೀಗಿದೆ ಎಂದು ಹೇಳುವ ಸ್ಪಷ್ಟತೆ ನಮ್ಮಲ್ಲಿನ್ನೂ ಬರಲೇ ಇಲ್ಲ - ನಾನೋದುವ ಸಿನಿಮಾ ವಿಮರ್ಶೆಗಳಿಗೆ ಜೀವವೇ ಇರೋದಿಲ್ಲ. ವಿಮರ್ಶೆಗೆ ಒಳಪಡದ ಮಾಧ್ಯಮಕ್ಕೆ ಒಂದು ರೀತಿ ಲಂಗುಲಗಾಮು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಒಂದು ಕಾಲದಲ್ಲಿ ನಾನೋದುತ್ತಿದ್ದ ’ವಿಜಯಚಿತ್ರ’ ವಾರಪತ್ರಿಕೆಯಲ್ಲಿ ’ಮೆಚ್ಚದ್ದು-ಮೆಚ್ಚಿದ್ದು’ ಎಂಬ ಅಂಕಣದಲ್ಲಾದರೂ ನಮ್ಮಂತಹವರು ಒಂದಿಷ್ಟು ಸಂಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆವು. ಇಂದಿನ ಮುಂದುವರೆದ ಮಾಧ್ಯಮಗಳಲ್ಲಿ ಅಂತಹ ಸುಲಭವಾದ ಸಾಧನಗಳು ಪ್ರೇಕ್ಷಕನಿಗೆ ಇವೆಯೋ ಇಲ್ಲವೋ, ಇದ್ದರೂ ಅಲ್ಲಿಂದ ಅಣಿಮುತ್ತುಗಳನ್ನು ಆರಿಸಿ ತಮ್ಮನ್ನು ತಾವು ಬೆಳೆಯಲು ಬಳಸಿಕೊಳ್ಳುವ ಮಹಾನ್ ಕಲಾವಿದರ ಕಾಲವಂತೂ ಇದ್ದಂತಿಲ್ಲ...

ಕ್ಷಮಿಸಿ, ಇವೆಲ್ಲವೂ ನನ್ನಲ್ಲಿನ ಬದಲಾವಣೆಯಿಂದ ಹುಟ್ಟಿಬಂದವುಗಳು - ನಮ್ಮ ಮಾಧ್ಯಮಗಳು ಹೇಗಿವೆಯೋ ಹಾಗೇ ಇರಲಿ!