Showing posts with label ಚರ್ಚೆ. Show all posts
Showing posts with label ಚರ್ಚೆ. Show all posts

Tuesday, June 30, 2020

ನಮ್ಮೊಳಗಿನ ಶತ್ರು


ನಮ್ಮೊಳಗಿನ ಶತ್ರು (...why it is not easy to boycott Chinese products)

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಇಂದಿನವರೆಗೆ "ಸ್ವದೇಶೀ ಬಳಕೆ"ಯನ್ನು ಅನುಮೋದಿಸಲಾಗುತ್ತಿದೆ.  "ಸ್ವದೇಶಿ" ಸ್ವಾಯುತ್ತತೆ, ಸ್ವಾವಲಂಬನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ಇತ್ತೀಚೆಗೆ ಅನೇಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯೋಚಿಸುವುದನ್ನು ಕಾಣಬಹುದು.  ಹೊರಗಿನವರು ಬಂದು ನಮ್ಮ jobs ಗಳನ್ನು ಕಸಿದುಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು, Make America Great Again! ಎನ್ನುವ ಕ್ಯಾಂಪೇನಿನ ಮೂಲದಲ್ಲಿ ಸ್ವದೇಶೀ ಸ್ವಾವಲಂಬನೆಯ ಅಗತ್ಯದ ಬಗ್ಗೆ ಚಿಂತನೆ ಎದ್ದು ಕಾಣುತ್ತದೆ.  ಯಾರು ಸ್ವದೇಶಿಗಳು, ಯಾರು ವಿದೇಶಿಗಳು, ಯಾವುದು "ನಮ್ಮ" ದೇಶದಲ್ಲೇ ಉತ್ಪಾದಿತವಾದದ್ದು, ಯಾವುದು ಹೊರಗಿನಿಂದ ಬಂದಿದ್ದು ಎಂಬುದನ್ನು ಕುರಿತು ಯೋಚಿಸಿದಾಗ, ಹೊರಗಿನವರನ್ನು "ಶತ್ರು"ಗಳು ಎಂದು ಕಂಡುಕೊಂಡಾಗ ಆ ಶತ್ರುಗಳು ನಮ್ಮೊಳಗೆ ಎಷ್ಟರ ಮಟ್ಟಿಗೆ ವಿಲೀನವಾಗಿಬಿಟ್ಟಿವೆಯೆಂದರೆ ಅದನ್ನು ಬೇರ್ಪಡಿಸುವುದೂ ಅಷ್ಟೇ ಕ್ಲಿಷ್ಟಕರವಾಗಿದೆ.

***

ನಾಲ್ಕು ಟ್ರಿಲಿಯನ್ ಡಾಲರಿಗಿಂತಲೂ ಹೆಚ್ಚು ವಸ್ತುಗಳನ್ನು ಉತ್ಪಾದಿಸುತ್ತಿರುವ ಚೀನಾ, ಇಡೀ ಪ್ರಪಂಚದ ಎಲ್ಲ ದೇಶಗಳಿಗೂ ತನ್ನ ವಸ್ತುಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲ ರಾಷ್ಟ್ರಗಳಿಗಿಂತ ಅಗ್ರಗಣ್ಯ ಸ್ಥಾನದಲ್ಲಿದೆ.  ಚೀನಾ ದೇಶವನ್ನು ವಿಶ್ವದ ಮ್ಯಾನುಫ್ಯಾಕ್ಚರಿಂಗ್ ದೇಶವೆಂದು ಸುಲಭವಾಗಿ ಕರೆಯಬಹುದು.  USA ಮುಖ್ಯವಾಗಿ ಯುದ್ಧ ಸಾಮಗ್ರಿಗಳ ತಯಾರಿಕೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿ 2.3 ಟ್ರಿಲಿಯನ್ ಡಾಲರ್‌ ಉತ್ಪನ್ನದಿಂದ  ನಂತರದ ಸ್ಥಾನದಲ್ಲಿ ನಿಲ್ಲುತ್ತದೆ.  ಒಂದು ಟ್ರಿಲಿಯನ್ ಉತ್ಪನ್ನದಿಂದ ಜಪಾನ್ ಮೂರನೇ ಸ್ಥಾನದಲ್ಲಿದ್ದರೆ ಕೇವಲ 412 ಬಿಲಿಯನ್ ಡಾಲರ್ ಉತ್ಪನ್ನದಿಂದ ಭಾರತ ದಕ್ಷಿಣ ಕೊರಿಯಾಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ತನ್ನನ್ನು ತಾನು ಕಂಡುಕೊಂಡಿದೆ.

ಇದು ಕೇವಲ ಭೌತಿಕ ವಸ್ತುಗಳ ಉತ್ಪಾದನೆ ಮತ್ತು ಆಮದು-ರಫ್ತಿನ ವಿಚಾರವಾಗಿರಬಹುದು.  ಇದರ ಜೊತೆಯಲ್ಲಿ ತಂತ್ರಜ್ಞಾನದ ಕೊಡು ತೆಗೆದುಕೊಳ್ಳುವಿಕೆ ಮತ್ತು ಬಳಸುವಿಕೆಯೂ ತಳುಕು ಹಾಕಿಕೊಂಡಿದೆ.  ಉದಾಹರಣೆಗೆ, ಭಾರತದಲ್ಲಿ ಜನರು ಬಳಸುವ ಮೈಕ್ರೋಸಾಫ್ಟ್ ಲೈಸನ್ಸ್ ಇರುವ ಪ್ರಾಡಕ್ಟ್‌ಗಳನ್ನು USA ಲೆಕ್ಕಕ್ಕೆ ಹಾಕಿಕೊಳ್ಳೋಣ.  ಅದೇ ರೀತಿ Boeing, Apple, Amazon ಮೊದಲಾದ ಕಂಪನಿಗಳ ಉತ್ಪನ್ನದ ಬಳಕೆಯ "ಕ್ರೆಡಿಟ್" ಅನ್ನು ಆಯಾ ಕಂಪನಿಗಳು ಹುಟ್ಟಿದ ದೇಶಗಳಿಗೆ ಕೊಡೋಣ.  ಹೀಗೆ ಮಾಡುವುದರಿಂದ ಪ್ರತಿಯೊಂದು ರಾಷ್ಟ್ರವೂ ಇನ್ನೊಂದು ರಾಷ್ಟ್ರದ ಉತ್ಪನ್ನವನ್ನು (product) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇಗೆ ಬಳಸುತ್ತಿದೆ ಎಂದು ಗೊತ್ತಾಗುತ್ತದೆ.  ಮೇಲ್ಮಟ್ಟದಲ್ಲಿ, ಇದು ಅಷ್ಟೊಂದು ಸುಲಭವಾಗಿ ಗೋಚರಿಸಿದರೂ, ಆಳದಲ್ಲಿ ಆಯಾ ಕಂಪನಿಗೆ ಸೇರಿಕೊಂಡ ಅನೇಕ ಎಂಟಿಟಿಗಳು ಅದೇ ಕಂಪನಿಯ ಹೆಸರಿನ subsidiary ಆಗಿ ಹಲವಾರು ದೇಶಗಳಲ್ಲಿ ನೋಂದಾವಣೆ ಮಾಡಿಕೊಂಡು ಅಲ್ಲಿಯ ಟ್ಯಾಕ್ಸ್ ಅನ್ನು ಕೊಡುವುದು ಅಥವಾ ಕೊಡದಿರುವುದು - ಟ್ಯಾಕ್ಸ್ ಸಂಬಂಧಿ ಅನುಕೂಲವಾಗಿ - ಎದ್ದು ಕಾಣುತ್ತದೆ.  ಆದ್ದರಿಂದ, ಒಂದು ಕಂಪನಿಯ ವಾರಸುದಾರಿಕೆ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಒಂದು ದೇಶದ ಅಸ್ತಿತ್ವವನ್ನು ಹೀಗೇ ಇದೆ ಎಂದು ಅಷ್ಟು ಸುಲಭವಾಗಿ ವ್ಯಾಖ್ಯಾನಿಸಲಾಗದು.

ಆದರೆ, ಇದೇ ಸೀಳು ನೋಟವನ್ನು ಇನ್ನೂ focus ಮಾಡಿ ನೋಡಿದಾಗ ಹಲವಾರು ಗೊಂದಲ ಅಥವಾ ಜಟಿಲತೆಯ (complications) ಅರಿವಾಗುತ್ತದೆ.  ಯಾವುದೇ ಕಂಪನಿಯ ನಿಜವಾದ ಮಾಲೀಕ/ಮಾಲೀಕರು ಎಂದರೆ ಆಯಾ ಕಂಪನಿಯ ಶೇರ್ ಹೋಲ್ಡರ್‌ಗಳು.  ಅಂತೆಯೇ ಒಂದು ಕಂಪನಿಯ ಶೇರುಗಳನ್ನು ಓಪನ್ ಮಾರುಕಟ್ಟೆಯಲ್ಲಿ ಯಾರು ಬೇಕಾದರೂ ಖರೀದಿಸಬಹುದು.  ನಾವು ಅಮೇರಿಕದಲ್ಲಿ ಕುಳಿತು ಚೀನಾ ದೇಶದ ಕಂಪನಿಯ ಎಕ್ಸ್‌ಚೇಂಜ್‌ನಲ್ಲಿ ಬಿಕರಿಯಾಗುವ ಕಂಪನಿಯ ಶೇರುಗಳನ್ನು ADR (American Depository Receipt) ವ್ಯಾಪ್ತಿಯಲ್ಲಿ ಖರೀದಿಸುತ್ತೇವೆ.  ಅಂತೆಯೇ ಚೀನಾದವರೂ ಸಹ ಬೇರೆ ದೇಶದ ಕಂಪನಿಗಳ ಶೇರುಗಳನ್ನು ಖರೀದಿಸುತ್ತಾರೆ.
ಇದೇ ವಿಶ್ಲೇಷಣೆಯನ್ನು ಇನ್ನೂ ತೀಕ್ಷ್ಣವಾಗಿಸಿದರೆ, ಒಂದು ದೇಶದ ಸರ್ಕಾರ ಅಥವಾ ಸರ್ವಾಧಿಕಾರಿ ರಾಜಸತ್ತೆ ಮತ್ತೊಂದು ದೇಶದ ಹೂಡಿಕೆಯ(ways to invest) ಮಾರ್ಗಗಳನ್ನು treasury, bonds, stocks, derivatives, futures, real estate, fixed assets ಹೀಗೆ ಇನ್ನೂ ಅನೇಕಾನೇಕ ಸಾಧನಗಳಲ್ಲಿ ತೊಡಗಿಸಬಹುದು.  ಉದಾಹರಣೆಗೆ, ಚೀನಾ ದೇಶದ ಪ್ರಜೆ, ತನ್ನ ಕಂಪನಿಯ ಮುಖೇನ ನ್ಯೂ ಯಾರ್ಕ್‌ನಲ್ಲಿನ ತುಂಡು ಭೂಮಿಯನ್ನು ಖರೀದಿಸಬಹುದು.  ಅದೇ ರೀತಿ, ಚೀನಾ ದೇಶದ ಸರ್ಕಾರ ತನ್ನ ಹೂಡಿಕೆಗಳನ್ನು (for hedging or for growth), ಅಮೇರಿಕದ treasury billsಗಳ ಮೇಲೆ ಮಾಡಬಹುದು.  ಹೀಗೆ ಯೋಚಿಸುತ್ತಾ ಹೋದಾಗಲೆಲ್ಲಾ ಯಾರು ಯಾವುದನ್ನು ಖರೀದಿಸುತ್ತಾರೆ, ಬಿಡುತ್ತಾರೆ, ಯಾರಿಗೆ ಎಷ್ಟು ಪರ್ಸೆಂಟ್ ಯಾವುದರ ಮೇಲೆ ownership ಇದೆ ಎಂಬುದನ್ನು ಯೋಚಿಸಿದಂತೆ ನಾವು ನಿಜವಾಗಿಯೂ ವಿಶ್ವ ಮಾನವರಾಗಿ ಕಂಡುಬರುತ್ತೇವೆ!
ಭಾರತದಲ್ಲಿ FDI (Foreign Direct Investment) ಅನ್ನೋ ಹೆಸರಿನಲ್ಲಿ ನಾವು ಹೊರ ದೇಶಗಳಿಗೆ ನಮ್ಮ ದೇಶದ "ಆಗುಹೋಗು"ಗಳಲ್ಲಿ ಹೂಡಿಕೆ ಮಾಡಲು ಅನುಮೋದಿಸಿದೆವು.  ಹೀಗೆ ಭಾರತಕ್ಕೆ ಹರಿದು ಬಂದ ಹಣವುಳ್ಳ ದೇಶಗಳ ಮುಂಚೂಣಿಯಲ್ಲಿ ಅಮೇರಿಕ, ಚೀನಾ, ರಷ್ಯಾ, ಜಪಾನ್, ಸೌದಿ, ಮೊದಲಾದ ದೇಶಗಳಿವೆ.  ಇದ್ದುದರಲ್ಲಿ, ಕನ್ಸೂಮರ್ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು-ರೈತಾಪಿ ಮಿಷೀನುಗಳವರೆಗೆ, ಆಟದ ಸಾಮಾನಿನಿಂದ ಹಿಡಿದು ಟೆಲಿಫೋನ್ ತಂತ್ರಜ್ಞಾನದ ವರೆಗೆ, ಹೀಗೆ ಅನೇಕ ಕಡೆ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.  ಅದರಲ್ಲಿ ಚೀನಾದ ಸಿಂಹ ಪಾಲು ಇದೆ.  ನಾವೆಲ್ಲ Hero ಸೈಕಲ್ಲುಗಳನ್ನು ಓಡಿಸುತ್ತಿದ್ದಾಗ, ಜಪಾನ್ ನವರು ಬಂದು Hero ಕಂಪನಿಯ ಜೊತೆ ಸಂಬಂಧ ಕುದುರಿಸಿಕೊಂಡು Hero-Honda ಎಂಬ ಮೋಟಾರು ಬೈಕುಗಳನ್ನು ಹೊರ ತಂದರಲ್ಲ! ಹಾಗೆ ವಿದೇಶಿ ಹೂಡಿಕೆ ನೀವು ಬೇಡವೆಂದರೂ ನಮ್ಮ ಪಂಚಭೂತಗಳಲ್ಲಿ ಈಗಾಗಲೇ ಸೇರಿ ಹೋಗಿದೆ.

***
ಹಾಗಾದರೆ, ಈ ವಿದೇಶಿ ಕಂಪನಿಗಳ ನಿಜವಾದ (ಮಾಲಿಕರು) ಓನರುಗಳು ಯಾರು?  ವಿದೇಶಿ ಹೂಡಿಕೆಯಿಂದ ಒಂದು ದೇಶದ ಸ್ವಾಯುತ್ತತೆಗೆ ಭಂಗ ಬರುತ್ತದೆಯೇ? ವಿದೇಶಿ ಹೂಡಿಕೆ ಇಲ್ಲದೇ ಸ್ವಾವಲಂಬನೆಯನ್ನು ನಂಬಿಕೊಂಡೇ ಒಂದು ದೇಶದ (ಮತ್ತು ಅದರ ನಿವಾಸಿಗಳು) ಬೆಳೆಯಲು ಸಾಧ್ಯವೇ? ಚೀನಾ ದೇಶದಲ್ಲಿ ತಯಾರು ಮಾಡಿದ ಪ್ರಾಡಕ್ಟ್‌ಗಳನ್ನು ನಮ್ಮಲ್ಲಿ ನಿಜವಾಗಿಯೂ ಬ್ಯಾನ್ ಮಾಡಿ ಬದುಕಲು ಸಾಧ್ಯವೇ? ಒಂದು ವೇಳೆ,  ನಮ್ಮ ನಡೆಗೆ ಪ್ರತಿಯಾಗಿ ವಿದೇಶಿಗಳು ತಮ್ಮ ಹಣದ ಹೂಡಿಕೆಯಲ್ಲಿ ವ್ಯತ್ಯಯ ಉಂಟು ಮಾಡಿದರೆ, ಅಥವಾ ತಮ್ಮ "ಶೇರ್"ಗಳನ್ನು "ಸೆಲ್" ಮಾಡಿದರೆ ಅದರಿಂದ ನಮ್ಮ ಎಕಾನಮಿ ಮೇಲೆ ಯಾವ ರೀತಿಯ ಪ್ರಭಾವವಾಗುತ್ತದೆ?  ಹೆಚ್ಚುತ್ತಿರುವ ಗ್ಲೋಬಲೈಜೇಷನ್ ನಮ್ಮ "ವಸುಧೈವ ಕುಟುಂಬಕಂ" ಅನ್ನುವ ತತ್ವವನ್ನು ಅನುಮೋದಿಸುತ್ತದೆಯೋ ಅಥವಾ ವಿರೋಧಿಸುತ್ತದೆಯೋ?  ವಿಶ್ವವೇ ಒಂದು ಚಿಕ್ಕ ಹಳ್ಳಿಯಾಗಿ ಎಲ್ಲರಿಗೂ ಎಲ್ಲದರ access ಇರುವಾಗ ಒಂದು ದೇಶ ತನ್ನ ಬಾರ್ಡರ್ ವಿವಾದವನ್ನು ಪ್ರತಿಪಾದಿಸುವುದಕ್ಕೋಸ್ಕರ "ದೇಶೀಯ ವಸ್ತುಗಳನ್ನು ಬಳಸಿ, ಚೈನೀಸ್ ವಸ್ತುಗಳನ್ನು ತಿರಸ್ಕರಿಸಿ" ಎಂದು ಸ್ಲೋಗನ್ ಕೊಡಲು ಸಾಧ್ಯವೇ?  ಒಂದು ವೇಳೆ ಹಾಗೆ ಮಾಡಿದರೆ ಅದರ ಪರಿಣಾಮಗಳೇನಾಗಬಹುದು? ಇಂದು ಮಿತ್ರ ದೇಶವಾಗಿರುವವರನ್ನು ಒಳಕರೆದು ಮಣೆ ಹಾಕಿ ಕೂರಿಸಿಕೊಂಡ ಮೇಲೆ, ಕಾಲಾನಂತರ ಅವರು ತಿರುಗಿ ಬಿದ್ದರೆ, ಆಯಾ ಸಂಬಂಧಗಳನ್ನು ಮುರಿದುಕೊಳ್ಳುವುದು ಮತ್ತು ಕಳೆದುಕೊಂಡ ಸಂಪನ್ಮೂಲದ ಕೊಂಡಿಯನ್ನು ಇನ್ನೊಂದು ದೇಶದ ಜೊತೆಗೆ ಬೆಳೆಸಿಕೊಳ್ಳುವುದು ಅಷ್ಟು ಸುಲಭದ ವಿಚಾರವೇ?

***
ಹೀಗೆ, ಧೀರ್ಘವಾಗಿ ಯೋಚಿಸಿದಂತೆಲ್ಲ, ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತವೆ.  ನಮ್ಮ "ದೇಶಿ-ಸ್ವದೇಶಿ" ಎನ್ನುವ ನಿಲುವು ಒಂದು ರೀತಿಯ ಭಾವನಾತ್ಮಕ ಉದ್ವಿಗ್ನತೆಯಾಗಿ ಗೋಚರಿಸುತ್ತದೆಯೇ ವಿನಾ ಅರ್ಥಶಾಸ್ತ್ರದ ಯಾವುದೋ ಪುಸ್ತಕದ ಅಧ್ಯಾಯದಂತಲ್ಲ.  ನಮಗೆ ಎದುರಾಗಿರುವ ಶತ್ರು ಒಂದು ರೀತಿಯ ಕೊರೋನಾ ವೈರಸ್ಸಿನ ಹಾಗೆ ಗಾಳಿಯಲ್ಲಿ ವ್ಯಾಪಿಸಿಕೊಂಡು ತನ್ನ ಕಬಂಧ ಬಾಹುಗಳನ್ನು ದಿನೇದಿನೇ ಹರಡಿಕೊಳ್ಳುತ್ತಿರುವಾಗ ಈ ಎಲ್ಲ ವಿದೇಶಿ ಬಂಡವಾಳವನ್ನು "ಸ್ವದೇಶಿ ಬಳಸಿ" ಎನ್ನುವ ಒಂದು ಹೇಳಿಕೆಯನ್ನು ಹೇಳಿ ಪರಿಹರಿಸುತ್ತೇವೆ ಎನ್ನುವುದು ಹಾಸ್ಯಾಸ್ಪದವಾಗುತ್ತದೆ.  ಇಡೀ ಉತ್ತರ ಅಮೇರಿಕವನ್ನೇ ಅಲುಗಾಡಿಸುವಷ್ಟು ಸಾಮರ್ಥ್ಯವನ್ನು ಹೊಂದಿರುವ ಚೀನಾ ದೇಶದವರನ್ನು ನಮ್ಮ ದೇಶದ ಎಮೋಷನಲ್ ಮುತ್ಸದ್ದಿಗಳು ಇನ್ನಾದರೂ ಹಗುರವಾಗಿ ತೆಗೆದುಕೊಳ್ಳದಿದ್ದರೆ ಸಾಕು!

ನಾವು ಭಾವಜೀವಿಗಳು.  ಕ್ರೂರ ಪಾಕಿಸ್ತಾನದವರಿಗೆ ನಾವು ಭಾವನಾತ್ಮಕವಾಗಿ ಉತ್ತರಕೊಡುತ್ತೇವೆ.  ಮುಳ್ಳನ್ನು ಮುಳ್ಳಿನಿಂದ ತೆಗಿ ಎನ್ನುವ ಗಾದೆಯನ್ನು ಮರೆತು ನಮ್ಮ ಹೃದಯ ವಿಶಾಲತೆಯನ್ನು ಮೆರೆಯುತ್ತೇವೆ.  ಅದೇ ರೀತಿ ಉತ್ತರದ ಒಂದು ಆಯಕಟ್ಟಿನ ಜಾಗಕ್ಕೋಸ್ಕರ (strategic place) ಚೀನಾದವರು ಹೊಂಚು ಹಾಕಿ ನಮ್ಮ ಸೈನಿಕರನ್ನು ಮುಳ್ಳು-ಮೊಳೆಕಟ್ಟಿದ ಕಬ್ಬಿಣದ ರಾಡುಗಳಿಂದ ಹೊಡೆದಾಕ್ಷಣ ನಮ್ಮ emotional response ಅನ್ನು ಜಾಗರೂಕಗೊಳಿಸಿಕೊಂಡು ಅನೇಕ (ಸಾಮಾಜಿಕ) ಮಾಧ್ಯಮಗಳಲ್ಲಿ ದೊಡ್ಡ ಭಾಷಣವನ್ನು ಬಿಗಿಯುತ್ತೇವೆ.  ಆದರೆ, ಕಳೆದ 25 ವರ್ಷಗಳಿಂದ ಚೈನಾದವರು ನಿಧಾನವಾಗಿ ಅಮೇರಿಕ ಮತ್ತಿತರ ದೇಶಗಳಿಂದ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಈಗ ಇಡೀ ವಿಶ್ವವೇ ತಲೆತಗ್ಗಿಸಿ ನಿಲ್ಲುವಂತ ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡರು.  ಹಾಗೆಯೇ, ಉತ್ತರದ ಆಯಕಟ್ಟಿನ ಜಾಗದ ಹೋರಾಟದ ಹಿಂದೆಯೂ ಅವರದ್ದೇ ಆಳವಾದ ಒಂದು ಚಿಂತನೆ ಇದೆ.  ಈ "ಸಿಲ್ಕ್ ರೋಡಿ"ನ ಮಾಲಿಕತ್ವ ಅವರಿಗೆ ಬೇಕಾಗಿದೆ.  ಹಣದ ಆಮಿಶ ಒಡ್ಡಿ ಪಾಕಿಸ್ತಾನಕ್ಕೆ ನೆರವಾಗಿ ಭಾರತದ ಮೇಲೆ ಛೂ ಬಿಟ್ಟು, ಭಾರತ ಭೂಮಿಯನ್ನು ಅಸ್ಥಿರವಾಗಿಟ್ಟರೆ ಅವರ ಬೇಳೆಕಾಳುಗಳು ಸಲೀಸಾಗಿ ಬೇಯುತ್ತವೆ.  ದಿನೇದಿನೇ ಹೆಚ್ಚುವ ಜನಸಂಖ್ಯೆಯ ಹೊಟ್ಟೆ ತುಂಬುವುದು ಭಾರತದ ಸಂಕಷ್ಟವಾಗಿರುವಾಗ ಭಾರತದಲ್ಲಿ ತಯಾರಾದ ಯಾವುದೇ ಉತ್ಪನ್ನಗಳ ಮುಖದ ಮೇಲೆ ಸೆಡ್ಡು ಹೊಡೆಯುವ ಪ್ರಾಡಕ್ಟ್ ಅನ್ನು ಕಡಿಮೆ ಬೆಲೆಗೆ ತಯಾರಿಸಿ, ಬಿಡುಗಡೆ ಮಾಡಿ, ಮಾರುವ ದಕ್ಷತೆ ಇದೆ.  ಈಗಾಗಲೇ ನಮ್ಮ ಜನಜೀವನದಲ್ಲಿ ಸೇರಿಕೊಂಡ ಚೀನಾದ ಉತ್ಪನ್ನಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಾಗದು.  ಒಳ್ಳೆಯದೋ ಕೆಟ್ಟದ್ದೋ ಒಂದು ವಸ್ತುವನ್ನು displace ಮಾಡುವುದಾದರೆ, ಅದನ್ನು ಯಾವುದರಿಂದ ಮಾಡುತ್ತೇವೆ ಅನ್ನುವುದು ಮುಖ್ಯವಾಗುತ್ತದೆ.  ಹತ್ತು ರೂಪಾಯಿಗೆ ದೊರೆಯುವ ಚೀನಾದ ವಸ್ತುವನ್ನು ನೂರು ರೂಪಾಯಿಗೆ ಸಿಗುವ ಭಾರತದಲ್ಲಿ ತಯಾರು ಮಾಡಿದ ವಸ್ತುವಿನಿಂದ displace ಮಾಡಲಾಗದು... ಯೋಚನೆ ಮಾಡಿ!

Thursday, April 30, 2020

ಬರಹದತ್ತ ಮುಖ ಮಾಡಿಸಿದ ಕೋವಿಡ್

ಇವತ್ತಿಗೆ ಬರೋಬ್ಬರಿ ಏಳು ವಾರವಾಯಿತು... ನನ್ನಂಥವರು ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿ.  ಈ ಕೋವಿಡ್‌ನಿಂದ ಯಾರು ಯಾರಿಗೆ ಏನೇನು ಅನುಕೂಲ-ಅನಾನುಕೂಲವಾಗಿದೆಯೋ, ನನಗಂತೂ ಇದು ಬರಹ-ಓದು-ಸಂಭಾಷಣೆಗಳಲ್ಲಿ ತೊಡಗಿಸಿದೆ.

ಏನೇನು ಹೊಸತುಗಳು ಈ ಏಳು ವಾರದಲ್ಲಿ ಶುರುವಾದವು ಎಂದು ಪಟ್ಟಿ ಮಾಡುತ್ತಾ ಹೋದಾಗ ಈ ಕೆಳಗಿನವು ಕಂಡು ಬಂದವು:
- ಮೂರು ಹೊತ್ತೂ ಮನೆ ಊಟ ನಮಗೆ ಬೇಕಾದಂತೆ ಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕುಕಿಂಗ್ ಶೋಗಳನ್ನು ನೋಡಲು ಶುರು ಮಾಡಿದ್ದು, ಜೊತೆಗೆ ರೆಸಿಪಿಗಳನ್ನು ಹುಡುಕಿದ್ದು
- ಮನೆಯಲ್ಲೇ ಇದ್ದುದರಿಂದ ನಾಲ್ಕೈದು ಜೊತೆ ಬಟ್ಟೆಗಳನ್ನೇ ಪುನರಾವರ್ತನೆಯಾಗಿ ಬಳಸಿದ್ದು
- ಈ ವರೆಗೆ ಮರೆತು ಹೋಗಿದ್ದ ಅನೇಕ ಬ್ಲಾಗುಗಳನ್ನು ತೆರೆದು ಓದಿದ್ದು
- ಈ ವರೆಗೆ ಮರೆತಂತಿದ್ದ "ಅಂತರಂಗ"ದ ಬಾಗಿಲು ತೆಗೆದು ಮತ್ತೆ ಬರೆಯಲು ಶುರು ಮಾಡಿದ್ದು (ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೊಂದು ಲೇಖನವನ್ನು ಹಾಕಿದ್ದು)
- ಸ್ನೇಹಿತರ ಬಳಿ ಒಳ್ಳೆಯ ಸಿನಿಮಾಗಳ ರೆಕಮೆಂಡೇಷನ್ ಅನ್ನು ಕೇಳಿ ಸಿನಿಮಾ ನೋಡಿದ್ದು
- ಬಂಧುಗಳ ಜೊತೆ, ಸ್ನೇಹಿತರ ಜೊತೆ ದೀರ್ಘಕಾಲ ಮಾತನಾಡಿದ್ದು
- ವಾರದಲ್ಲಿ ಒಂದು ನಿಮಿಷವೂ ಕೂಡ ಕಾರಿನಲ್ಲಿ  ಪ್ರಯಾಣಿಸದೇ ಇದ್ದದ್ದು
- ಬಂದಂತ ವಾಟ್ಸಾಪ್ ಮೆಸ್ಸೇಜುಗಳನ್ನೆಲ್ಲ ನೋಡಿದ್ದು
- ವೀಕೆಂಡ್ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂದು ಚಿಂತಿಸಿದ್ದು
- ನಮ್ಮ ಪಕ್ಕದ ಮನೆಯವರ ಜೊತೆ ವೆಬೆಕ್ಸ್ ಕಾನ್‌ಫರೆನ್ಸಿನಲ್ಲಿ ಮಾತನಾಡಿದ್ದು
- ಮನೆಯ ಮೂಲೆ ಮೂಲೆಯನ್ನೂ (ಸ್ಟೆಪ್ಸ್ ಕೌಂಟ್ ಆಗಲೆಂದು) ತಿರುಗಿದ್ದು
- (ಅನೇಕ ವರ್ಷಗಳ ನಂತರ) ಮನೆಯನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ್ದು

ಇವೆಲ್ಲ ಏನೋ ದೊಡ್ಡ ವಿಷಯ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರಬಹುದು.  ಆದರೆ, ಎರಡು ತಿಂಗಳ ಹಿಂದಿನ (ವ್ಯವಸ್ಥಿತ) ವ್ಯಸ್ತ ಜೀವನ ಇಂದು ಅವ್ಯಸ್ತವಾಗಿದೆ ಎಂದು ಹೇಳಲು ಬಾರದು.  ಆದರೆ, ನಮ್ಮೆಲ್ಲರಿಗೂ ಸಿಗುವುದು ಇಂತಿಷ್ಟೇ ಸಮಯವಾದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.  ನಾವು ನಮ್ಮ ಬದುಕಿನಲ್ಲಿ ಸಾಧಿಸಿರುವುದು ಒಂದು ಸಾಸಿವೆ ಕಾಳು ಗಾತ್ರದಷ್ಟು ಮಾತ್ರ ಎನ್ನುವ ಭಾವನೆ ಮೂಡಲು ಗುರು ಶಂಕರಾಚಾರ್ಯರು ಕೇವಲ 32 ವರ್ಷದ ಅವರ ಜೀವಿತದಲ್ಲಿ ಎಷ್ಟೊಂದನ್ನು ಸಾಧಿಸಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ.  ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ಭರತ ಖಂಡದ ಉದ್ದಕ್ಕೂ ಅಲೆದಾಡಿ ಅದೆಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.


***
ಈ ಕೋವಿಡ್‌ ದಯೆಯಿಂದ ನಿಮ್ಮ ನಿಮ್ಮ ಹೊಸ ಅನುಭವಗಳೇನೇನಿವೆ? ಹಂಚಿಕೊಳ್ಳಬಹುದೇ?

Friday, April 10, 2020

ದಿನಗಳು ಬೇರೆ, ದಿನಚರಿ ಒಂದೇ...

ನಮಗೂ ನೈಬರ್ಸ್ ಇದ್ದಾರೆ ಅಂತ ಅನ್ನಿಸಿದ್ದು ಇವತ್ತು ಬೆಳಿಗ್ಗೆ ಎದ್ದ ನಂತರ ನರಿ ಮುಖ ನೋಡಿದ ಮೇಲೆ.  ಮನೆಯ ಬಾಗಿಲನ್ನು ತೆಗೆಯಲು ಹೊರಗೆ ಬಂದು ನೋಡಿದರೆ ನಮ್ಮ ಯಾರ್ಡ್‌ನಲ್ಲಿ ಒಂದು ನರಿ, ಸ್ವಲ್ಪ ದೂರದಲ್ಲಿ ಎರಡು ಕಾಡು ಟರ್ಕಿಗಳು ಹಾಗೂ ಕೆಲವು ಜಿಂಕೆಗಳು ಕಂಡು ಬಂದವು. ಇವೆಲ್ಲ ನಮ್ಮ ಮನೆಯ ಸುತ್ತ ಇರೋ ಅಂತ ಪ್ರಾಣಿಗಳೇ, ಆದರೆ ನಮ್ಮ ನಮ್ಮ ವ್ಯಸ್ತ ಬದುಕಿನಲ್ಲಿ ನಮಗೆ ಅವುಗಳನ್ನು ನೋಡಲಾಗೋದಿಲ್ಲ ಅಷ್ಟೇ. ’ಅಯ್ಯೋ, ನಮ್ಮ ಮನೆ ಹತ್ರ ಬಂದಿದ್ದಾವೆ!’ ಎಂದು ಆಶ್ಚರ್ಯ ಸೂಚಿಸಿದ ನನ್ನ ಮಗಳಿಗೆ ಹೇಳಿದೆ,’ ನಾವು ಅವುಗಳ ಮನೆಯ ಹತ್ತಿರ ಬಂದಿದ್ದೇವೆಯೇ ವಿನಾ ಅವುಗಳು ನಮ್ಮ ಮನೆ ಬಳಿ ಅಲ್ಲ’, ಎಂದು. ಅವಳು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡು ಬಂದಳು.

ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ.  ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ.  ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ.  ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ.  ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು.  ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ.  ಆದರೆ ಈಗೆಲ್ಲ ಬದಲಾಗಿದೆ.

ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು.  ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ.  ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್‌ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ.  ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್‌ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ.  ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ.  ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.

ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ.  ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.

ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ.  ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು.  ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು.  ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ.  ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ.  ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!

ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು.  ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು.  ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು.  ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ.  ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!

Monday, April 06, 2020

ಮೋಡ ಕರಗುವ ಸಮಯ

ಸೋಶಿಯಲ್ ಅಥವಾ ಫಿಸಿಕಲ್ ಡಿಸ್ಟನ್ಸಿಂಗ್?

ಈ ಕರೋನಾ ವೈರಸ್ ಹಾವಳಿಯಿಂದಾಗಿ ಇತ್ತೀಚೆಗೆ ಇನ್ನೊಂದು phrase ನಮ್ಮನ್ನೆಲ್ಲ ಆಳುತ್ತಿದೆ: ಸೋಶಿಯಲ್ ಡಿಸ್ಟನ್ಸಿಂಗ್ (social distancing).  ನಾವೆಲ್ಲರೂ ಈ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಒಬ್ಬರಿಂದ ಮತ್ತೊಬ್ಬರ ಕಾಂಟ್ಯಾಕ್ಟ್ ಅನ್ನು ಕಡಿಮೆ ಮಾಡುವುದು, ಗ್ರೂಪ್/ಗ್ಯಾದರಿಂಗ್‌ಗಳಿಂದ ಸಂಪೂರ್ಣವಾಗಿ ದೂರವಿರುವುದು ಎಂದರ್ಥ.
ಒಂದು ಕುಟುಂಬದ ಸದಸ್ಯರಲ್ಲಿ ಯಾರಿಗೂ ಖಾಯಿಲೆ ಅಥವಾ ರೋಗದ ಲಕ್ಷಣಗಳು ಇಲ್ಲದಿದ್ದರೆ, ಅವರೆಲ್ಲರೂ ಒಟ್ಟಿಗೆ ಇರಬಹುದು.  ಆದರೆ, ಅದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ ಸೋಂಕು ತಗಲಿದರೆ ಅವರನ್ನು ಕೂಡ ಪ್ರತ್ಯೇಕಿಸಿ ಇಡಬೇಕಾಗುತ್ತದೆ.

ಇದು ನಮ್ಮೆಲ್ಲರ ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಇದು ಭೌತಿಕವಾದ ಡಿಸ್ಟನ್ಸಿಂಗ್? ಇದಕ್ಕೇಕೆ ಫಿಸಿಕಲ್ ಡಿಸ್ಟನ್ಸಿಂಗ್ ಅನ್ನೋದಿಲ್ಲ ಎಂದು ಕೆಲವರು ಯೋಚಿಸಬಹುದು.  Social distancing, ಎಂದು ಹೇಳುವಾಗ ಅಲ್ಲಿ ಜನರು ಒಬ್ಬರಿಂದ ಮತ್ತೊಬ್ಬರಿಗೆ ಇಂತಿಷ್ಟು ದೂರದಲ್ಲಿ ಇರಿ ಎಂದು ಹೇಳುತ್ತಿದ್ದಾರೆ, ಗುಂಪುಗಳಲ್ಲಿ ಸೇರಬೇಡಿ ಎಂದು ಹೇಳುತ್ತಿದ್ದಾರ‍ೆ - ಇಲ್ಲಿ ಅವರು Social ಎಂದು ಬಳಸುತ್ತಿರುವುದು ’ಸಾಮಾಜಿಕ’ ಎನ್ನುವ ಪದದ ಸಮನಾರ್ಥಕ.  ಆದರೆ, ಒಬ್ಬರಿಂದ ಮತ್ತೊಬ್ಬರು ದೂರವಿದ್ದ ಮೇಲೆ, ಅಲ್ಲಿ ಭೌತಿಕವಾಗಿ (physically) ಯಾವುದೇ ಕಾಂಟ್ಯಾಕ್ಟ್ ಬರುವುದೇ ಇಲ್ಲವಾದ್ದರಿಂದ, ಈ ಕೊರೋನಾ ವೈರಸ್ ಸಂಬಂಧವಾಗಿ ಎಲ್ಲರೂ Social Distancing ಎಂತಲೇ ಹೇಳುತ್ತಿರುವುದು.

ಜೊತೆಗೆ, ಇಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಅನ್ನು ಒಂದು ಸಮುದಾಯದ ಪರವಾಗಿ ಹೇಳುವಂತೆಯೂ ಪರಿಗಣಿಸಬಹುದು.  ಜನರು ಗುಂಪುಗಳಲ್ಲಿ ಭಾಗವಹಿಸುತ್ತಿರುವಾಗ ಒಬ್ಬರನ್ನು ಪರಸ್ಪರ ಮುಟ್ಟದೇ ಇದ್ದರೂ ಸಹ, ಅವರೆಲ್ಲರೂ ಒಂದು ಕೋಣೆಯಲ್ಲಿ ಸೇರಿಕೊಂಡರೆಂದರೆ, ಅಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯವಿದೆ.  ಈ ಕಾರಣದಿಂದಲೇ, ಹತ್ತಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬಾರದು ಎಂದು ಹೇಳುತ್ತಿರುವುದು.

***
ರಾಜ್ಯಗಳ ಬಾರ್ಡರುಗಳು

ಉತ್ತರ ಅಮೇರಿಕದ ಹೆಗ್ಗಳಿಕೆಯಾಗಿ ನಾವೆಲ್ಲ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ "ಫ್ರೀ" ಆಗಿ ಓಡಾಡಿಕೊಂಡಿದ್ದೆವು.  ಈ ಕೋವಿಡ್ ದಯೆಯಿಂದ,  ಜನರ ಸ್ವಾತಂರ್ತ್ಯಕ್ಕೆ ಮೊಟ್ಟ ಮೊದಲ ಸಲ ಉತ್ತರ ಅಮೇರಿಕದಲ್ಲಿ ಸಂಕಷ್ಟ ಬಂದಿದೆ.  ಈಗ ಅಮೇರಿಕದ ಸಣ್ಣ ರಾಜ್ಯಗಳಲ್ಲೊಂದಾದ ರೋಡ್ ಐಲ್ಯಾಂಡ್, ತನ್ನ ರಾಜ್ಯಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರನ್ನು (ಅದರಲ್ಲೂ ನ್ಯೂ ಯಾರ್ಕ್‌ನವರನ್ನು) ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸುತ್ತಿದೆ.  ಇದೇ ಮಾದರಿ ಉಳಿದ ರಾಜ್ಯಗಳಲ್ಲೂ ನಡೆಯುತ್ತಿದೆ, ಎಂದು ಕೇಳಿಬರುತ್ತಿದೆ.

ನಮ್ಮ ಕರ್ನಾಟಕದಿಂದ ತಮಿಳು ನಾಡು, ಕೇರಳ, ಮಹಾರಾಷ್ಟ್ರ‍, ಆಂಧ್ರಪದೇಶ ರಾಜ್ಯಗಳಿಗೆ ಹೋಗಿ ಬಂದವರಿಗೆ ಗೊತ್ತಾಗುತ್ತದೆ.  ಒಂದು ಗಡಿ ದಾಟಿ ಬಂದ ಮೇಲೆ ಅದೆಷ್ಟು ಬದಲಾವಣೆಗಳು ಕಾಣಸಿಗುತ್ತವೆ ಎಂದು.  ಆದರೆ, ಇಂದು ಮೊಟ್ಟ ಮೊದಲ ಬಾರಿ ಅಮೇರಿಕದಲ್ಲಿ ಗಡಿಯನ್ನು ಮುಚ್ಚುವುದರ ಮೂಲಕ ಅಲ್ಲದೇ ರಾಜ್ಯಗಳ ಗಡಿಗಳಲ್ಲಿ ಪೋಲೀಸರು ಕಾಯುತ್ತಿರುವುದರ ಮೂಲಕ free ಯಾಗಿದ್ದ ದೇಶ ಮೊಟ್ಟ ಮೊದಲ ಬಾರಿಗೆ ಕೋವಿಡ್ ವೈರಸ್ಸಿನ ಸಂಕೋಲೆಗಳಲ್ಲಿ ಸುತ್ತಿಕೊಂಡು ಬಳಲುತ್ತಿದೆ ಎನ್ನುವಂತಾಗಿದೆ.

***
ಮೋಡ ಕರಗುವ ಸಮಯ

ಇಂದು ಮಧ್ಯಾಹ್ನ ಒಳ್ಳೆಯ ಬಿಸಿಲಿನ ಸಮಯ ನಮ್ಮ ಮನೆಯ ಹೊರಗಡೆಯ ಥರ್ಮಾಮೀಟರಿನಲ್ಲಿ 66 ಡಿಗ್ರಿ (ಸುಮಾರು 17 ಡಿಗ್ರಿ ಸೆಲ್ಸಿಯಸ್) ತೋರಿಸುತ್ತಿತ್ತು.  ನಮ್ಮ ಮನೆಯ ಹಿಂದಿನ ಡೆಕ್‌ನಲ್ಲಿ ಒಳ್ಳೆಯ ಗಾಳಿ ಬೀಸುತ್ತಿತ್ತು.  ಮೇಲೆ ಶುಭ್ರವಾದ ಆಕಾಶ.  ಯಾರು ಹೊರಗೆ ಬರಲಿ ಬಿಡಲಿ, ಸೂರ್ಯದೇವ ತನ್ನ ದೈನಂದಿನ ಕಾರ‍್ಯಾಚರಣೆಯನ್ನು ಮುಂದುವರೆಸಿ ಮೇಲೇರಿ ಕೆಳಗಿಳಿಯುತ್ತಿದ್ದ.  ಪಶ್ಚಿಮದ ಕಡೆ ಒಂದಿಷ್ಟು ಬಿಳಿಯ ಮೋಡಗಳು ಹಿಂಡು ಹಿಂಡಾಗಿ ತುಂಬಿಕೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಉಳಿದ ಕಡೆಯೆಲ್ಲ ಶುಭ್ರವಾದ ನೀಲಾಕಾಶವಿತ್ತು.
ಇಷ್ಟು ದಿನ ಹೊರಗೆ ಬರದೆ ಇದ್ದುದರಿಂದಲೋ ಏನೋ, ನನಗೆ ಈ ತಿಳಿ ಬಿಸಿಲು ಬಹಳ ಅಪ್ಯಾಯಮಾನವಾಗಿ ಗೋಚರಿಸಿತು.  ಜೊತೆಗೆ ಹದವಾಗಿ ಕಾದ ಡೆಕ್ಕಿನ ಮರದ ಹಲಗೆಗಳು ಬರಿಗಾಲಿಗೂ ಮುದವನ್ನು ನೀಡುತ್ತಿದ್ದವು.  ಆ ಸಮಯಕ್ಕೆ ಖಾಲಿ ಇದ್ದ ಡೆಕ್ ಮೇಲೆ ಮಲಗಿದರೆ ಹೇಗೆ ಎನ್ನಿಸಿದ್ದೇ ತಡ, ತಡ ಮಾಡದೆ ಅಲ್ಲೇ ಒಂದು ಕಡೆ ಮೇಲ್ಮುಖವಾಗಿ ಮಲಗಿಕೊಂಡು, ಸೂರ್ಯ ತಮ್ಮನ್ನೇನು ತಿಂದು ಬಿಡುತ್ತಾನೇನೋ ಎಂದು ಸ್ವಲ್ಪ ಹೆದರಿದಂತೆ ನಿಧಾನವಾಗಿ ಚದುರುತ್ತಿದ್ದ ಮೋಡಗಳ ಕಡೆಗೆ ಗಮನಕೊಟ್ಟೆ.

ಒಂದಿಷ್ಟು ಮೋಡಗಳು ಒಟ್ಟಿಗಿದ್ದವು, ಸ್ವಲ್ಪ ಹೊತ್ತು ಬಿಟ್ಟು ನೋಡುವುದರಲ್ಲಿ, ಅವುಗಳ ಯಾವುದೋ ಒಂದು ತುಣುಕು ಗುಂಪಿನಿಂದ ಮತ್ತೊಂದು ಕಡೆ ಚಲಿಸಿತು. ಸ್ವಲ್ಪ ಹೊತ್ತಿನಲ್ಲಿ ಅದು ಇದ್ದಲ್ಲಿಯೇ ಕರಗಿ ಮಾಯವಾಯಿತು!  ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಹಾಗೆಯೇ, ಮೋಡದ ತುಣುಕೊಂದು ಗುಂಪಿನಿಂದ ಬೇರ್ಪಡುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದು ನಿಧಾನವಾಗಿ ಕರಗಿ ಗಾಳಿಯೊಳಗೆ ಲೀನವಾಗುತ್ತದೆ - ಒಂದು ರೀತಿಯಲ್ಲಿ ಕಾಟನ್‌ಕ್ಯಾಂಡಿ ತಿನ್ನುವ ಹುಡುಗನ ಮಿಠಾಯಿ ಕಡಿಮೆಯಾಗುವಂತೆ.  ಅವೆಲ್ಲ ಮೋಡವೇ ಸರಿ, ಆದರೆ ಆ ಮೋಡದ ತುಣುಕುಗಳು ನನ್ನ ಕಣ್ಣೆದುರೇ ಕರಗಿ ಗಾಳಿಯಲ್ಲಿ ಲೀನವಾಗುವ ಪರಿಯನ್ನು ಇಷ್ಟು ಕ್ಲಿಯರ್ ಆಗಿ ನಾನು ನೋಡಿದ್ದಿಲ್ಲ... ಐದು ನಿಮಿಷದೊಳಗೆ, ಬೀಸುವ ಗಾಳಿ ಜೋರಾಗ ತೊಡಗಿತೆಂದು ಮತ್ತೆ ಮನೆ ಒಳಗೆ ಬಂದೆ, ಆದರೆ ಮೋಡದ ಗುಂಪು ನಿಧಾನವಾಗಿ ಚದುರುತ್ತಲೇ ಇತ್ತು.  ಅದೇ ಸಮಯದಲ್ಲಿ, ಎಲ್ಲಿಯೋ ಹುಟ್ಟಿ ಎಲ್ಲೋ ಸೇರುವ, ಮೋಡಕ್ಕಾಗಲೀ, ಮುಗಿಲಿಗಾಗಲೀ ಯಾವ ಬಣ್ಣವೂ ಇಲ್ಲ, ಅವೆಲ್ಲವೂ ತನ್ನ ಸುತ್ತಲಿನ ಸೂರ್ಯನ ಕೃಪೆಯಿಂದ ಬಣ್ಣವನ್ನು ಪಡೆದವುಗಳು ಎಂಬ ಸೂಕ್ಷ್ಮ ಹೊಳೆದು, ಅದು ಈ ಹೊತ್ತಿನ ತತ್ವವಾಯಿತು!

Friday, August 14, 2009

ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ

’ಬಹಳ ಕಷ್ಟಾ ಸ್ವಾಮಿ, ಇತ್ತೀಚೆಗೆ’. ಅನ್ನೋ ಮಾತು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಕೆಲಸ ಕಳೆದುಕೊಂಡವರ ಬಗ್ಗೆ, ಮನೆಗಳ ಬೆಲೆ ಕುಸಿದು ಮಾರಲೂ ಆಗದೇ ಅವುಗಳ ಸಾಲವನ್ನು ಕಟ್ಟಲೂ ಆಗದೇ ಕೊರಗುವವರ ಬಗ್ಗೆ, ಒಂದೇ ಮನೆಯಲ್ಲಿ ಇತ್ತೀಚೆಗಷ್ಟೇ ಕಾಲೇಜು ಮುಗಿಸಿದ ಕೆಲಸ ಹುಡುಕುತ್ತಿರುವ ಮಕ್ಕಳ ಜೊತೆಗೆ ಪೋಷಕರೂ ಕೆಲಸ ಹುಡುಕುತ್ತಿರುವುದರ ಬಗ್ಗೆ, ಇನ್ನೇನು ನಿವೃತ್ತರಾಗಬೇಕು ಎನ್ನುಕೊಳ್ಳುವವರು ಮತ್ತಿನ್ನೊಂದಿಷ್ಟು ವರ್ಷಗಳ ಕಾಲ ಕೆಲಸ ಮಾಡಲೇ ಬೇಕು ಎನ್ನುವುದರ ಬಗ್ಗೆ ಹೀಗೆ ಹಲವಾರು ವರದಿಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಬಡತನದಲ್ಲಿ ಹುಟ್ಟಿ ಬೆಳೆದವರಿಗೆ ಮುಂದೆ ಅವರು ಯಾವುದೇ ಸ್ಟೇಟಸ್‌ನಲ್ಲಿದ್ದರೂ ಅವರ ಸರ್ವೈವಲ್ ತಂತ್ರಗಳು ಯಾವಾಗಲೂ ಜೀವಂತವಾಗಿಯೇ ಇರುತ್ತವೆ ಎಂದು ಹೇಳಬೇಕು. ಒಮ್ಮೆ ಬಡತನದಲ್ಲಿ ಸಿಕ್ಕಿಕೊಂಡರೆ ಅದರ ಪರಿಣಾಮಗಳು ಒಂಥರಾ ರಕ್ತದಲ್ಲಿರುವ ಯಾವುದೇ ಖಾಯಿಲೆಯ ವೈರಾಣುಗಳ ಹಾಗೆ ಯಾವತ್ತೂ ಜೀವಂತವಾಗೇ ಉಳಿದು ಕಷ್ಟದ ಪರಿಸ್ಥಿತಿಯಲ್ಲಿ ಹಳೆಯ ಇನ್‌ಸ್ಟಿಂಕ್ಸ್ ಎಲ್ಲ ಕೆಲಸ ಮಾಡಲು ಆರಂಭಿಸುತ್ತವೆ. ಅದೇ ಹುಟ್ಟಿದಂದಿನಿಂದ ಬಡತನವನ್ನು ಕಾಣದೇ ಇದ್ದವರ ಮೊದಲ ಬಡತನದ ಬವಣೆ ಬಲುಕಷ್ಟ.

ನಮ್ಮ ಪಕ್ಕದ ಮನೆಯವರು ಈ ಹತ್ತು ವರ್ಷಗಳಿಂದಲೂ ಪ್ರತಿನಿತ್ಯ ತಮ್ಮ ಮನೆಯ ಸುತ್ತಲೂ ಕನಿಷ್ಠ ಇಪ್ಪತ್ತು ವಿದ್ಯುತ್ ದೀಪಗಳನ್ನು ಉರಿಸುತ್ತಿದ್ದರು - ಗರಾಜ್ ಲೈಟ್‌ಗಳು, ಎದುರು ಲಾನ್‌ನಲ್ಲಿರುವ ಮರಗಳಿಗೆ ಫೋಕಸ್ ಲೈಟ್‌ಗಳು, ಮನೆಯ ಮುಂದಿನ ಬಾಗಿಲಿಗೆ, ಡ್ರೈವ್‍ ವೇ ಅಕ್ಕಪಕ್ಕದಲ್ಲಿ ಇತ್ಯಾದಿ. ಈ ಲೈಟುಗಳೆಲ್ಲ ಅಟೋಮ್ಯಾಟಿಕ್ ಆಗಿ ರಾತ್ರಿ ಪೂರ್ತಿ ಉರಿದು ಬೆಳಿಗ್ಗೆ ಆರಿಹೋಗುತ್ತಿದ್ದವು, ಅದೇ ನಮ್ಮ ಮನೆಯಲ್ಲಿ ದಿನಕ್ಕೆ ಕೆಲವು ಘಂಟೆಗಳು ಮಾತ್ರ ಮುಂದಿನ ಬಾಗಿಲಿನ ಎರಡು ಎನರ್ಜಿ ಎಫಿಷಿಯಂಟ್ ಬಲ್ಬ್‌ಗಳು ಉರಿಯುತ್ತಿದ್ದವು. ಹೋದ ವರ್ಷದ ಕೊನೆಯಲ್ಲಿ ಇದ್ದಕ್ಕಿದ್ದ ಹಾಗೆ ನಮ್ಮ ಇಲೆಕ್ಟ್ರಿಕ್ ಬಿಲ್ ಡಬಲ್ ಆಯಿತು, ನಾನೂ ಗಾಬರಿಗೊಂಡು ಒಂದಿಬ್ಬರನ್ನು ಕೇಳಿ ತಿಳಿದಾಗ ಅವರದ್ದೂ ಅದೇ ಪರಿಸ್ಥಿತಿ. ಹಾಗಾದ ಮರುದಿನವೇ ಪಕ್ಕದ ಮನೆಯ ಲೈಟುಗಳು ಎಲ್ಲವೂ ನಿಂತು ಹೋದವು, ಅವರು ಮನೆಯಲ್ಲಿದ್ದ ದಿನಗಳು ಮಾತ್ರ ಮುಂದಿನ ಬಾಗಿಲಿಗೆ ಒಂದು ಎನರ್ಜಿ ಎಫಿಷಿಯಂಟ್ ಲೈಟ್ ಬಲ್ಬ್ ಉರಿಯತೊಡಗಿತು. ಕೇವಲ ಎಲೆಕ್ಟ್ರಿಕ್ ಬಿಲ್ ವಿಚಾರವೊಂದೇ ಅಲ್ಲ, ಅವರ ಖರ್ಚು-ವೆಚ್ಚ ಜೀವನ ಶೈಲಿಯಲ್ಲೂ ಬದಲಾವಣೆಗಳು ಗೋಚರಿಸತೊಡಗಿದವು: ನ್ಯೂಸ್ ಪೇಪರ್ ಸಬ್‌ಸ್ಕ್ರಿಫ್ಷನ್ ನಿಂತು ಹೋಗುವುದು, ವರ್ಷದ ವೆಕೇಷನ್ನ್ ಕ್ಯಾನ್ಸಲ್ ಆಗುವುದು, ಮುಂತಾಗಿ.

ಒಂದು ವಸ್ತು ನಮ್ಮದೋ ಅಲ್ಲವೋ ಎಲ್ಲ ಕಡೆ ಕನ್ಸರ್‌ವೇಟಿವ್ ಆಗಿರುವುದು ಒಂದು ಬಗೆ - ಉದಾಹರಣೆಗೆ ನಮ್ಮ ಆಫೀಸಿನಲ್ಲಿ ನಾವು ಪ್ರಿಂಟ್ ಮಾಡುವ ಪ್ರತಿಯೊಂದು ಡಾಕ್ಯುಮೆಂಟ್ ಜೊತೆಗೆ ನಮ್ಮ ಹೆಸರಿನ ಕವರ್ ಪೇಜ್ ಅನ್ನು ನಾನು ಸಾಧ್ಯವಾದಷ್ಟು ಬಳಸುತ್ತೇನೆ, ಅದರ ಖಾಲಿ ಇರುವ ಮತ್ತೊಂದು ಪುಟದಲ್ಲಿ ಏನಾದರೂ ನೋಟ್ಸ್ ಮಾಡುವುದಕ್ಕೋ ಅಥವಾ ಚಿಕ್ಕದಾಗಿ ಕತ್ತರಿಸಿಕೊಂಡು ’ಪೋಸ್ಟ್ ಇಟ್’ ನೋಟ್ಸ್ ಥರವೋ, ಅಥವಾ ಇನ್ನೊಂದು ರೀತಿ. ಇನ್ನುಳಿದವರು ಆ ಕವರ್ ಪುಟವನ್ನು ಟ್ಯ್ರಾಷ್ ಮಾಡಬಹುದು, ಅಥವಾ ರಿಸೈಕಲ್ ಮಾಡಬಹುದು, ಹೀಗೆ ಅವರವರ ಬುದ್ಧಿಗೆ ತಕ್ಕಂತೆ ಆ ಕವರ್ ಪೇಜ್ ಬಳಕೆಗೊಳ್ಳುತ್ತೆ. ಇಲ್ಲಿ ಒಂದೇ ಸರಿಯುತ್ತರವೆಂಬುದೇನೂ ಇಲ್ಲ, ಆ ಪುಟವನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಹಲವಾರು ಸರಿ ಉತ್ತರಗಳಿವೆ. ನನ್ನ ನಿಲುವಿನಲ್ಲಿ ಅಥವಾ ನಾನು ಹೇಗೆ ಆ ಕವರ್ ಪುಟವನ್ನು ಬಳಸುತ್ತೇನೆ ಎಂಬುದರಲ್ಲಿ ಯಾವುದೇ ಬದಲಾವಣೆಗಳೂ ಆಗಲಾರವು, ಅದು ಎಕಾನಮಿಯನ್ನೂ ಆದರಿಸಿಲ್ಲ, ಅದಕ್ಕೆ ನೇರವಾಗಿ ನಾನು ಹಣಕೊಡುವುದೂ ಇಲ್ಲ. ಇದು ಹೇಗೆ ನನ್ನ ನಿಲುವೋ ಉಳಿದವರದೂ ಹಾಗೆ, ಅಷ್ಟೇ.

ಇನ್ನು ಕಷ್ಟದ ಮಾತಿಗೆ ಬರೋಣ, ಅವರವರ ಕಷ್ಟ ಅವರಿಗೆ ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ. ಆದರೆ ಕಷ್ಟಗಳು, ಸಾಂಸಾರಿಕ ಜಂಜಾಟಗಳು, ನಮಗೊದಗುವ ಅನೇಕ ತೊಂದರೆಗಳನ್ನು ಹಲವಾರು ರೀತಿಯಲ್ಲಿ ನೋಡಬಹುದು. ಅವುಗಳ ತುಲನಾತ್ಮಕ ಅರಿವು ನಮ್ಮನ್ನು ಎಷ್ಟೋ ಸಾರಿ ’ಸದ್ಯ, ನಮಗೆ ಹಾಗಾಗದಿದ್ದರೆ ಸಾಕು!’ ಎನ್ನುವ ಮನೋಭಾವನೆಯಿಂದ ಆ ಮಟ್ಟಿಗೆ ಸಮಾಧಾನ ಹುಟ್ಟಬಹುದು. ದೈಹಿಕ ಕೆಲಸಗಳಿಂದ ಸ್ನಾಯುಗಳು ಬಲಗೊಳ್ಳುವ ಹಾಗೆ ಈ ಸಂಕಷ್ಟಗಳ ಪರಂಪರೆ ಮನಸ್ಸನ್ನು ಗಟ್ಟಿಗೊಳಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಂಜಾಟಗಳಲ್ಲಿ ಬಳಲಿ, ತೊಳಲಿ, ಬಗ್ಗಿ, ಬಾಗಿ, ನೊಂದು, ನಲಿದು ಮುಂದೆ ಇವೆಲ್ಲದರ ದೆಸೆಯಿಂದ ಲಕ್ಷಾಂತರ ಜನ್ಮಗಳಲ್ಲಿ ಮೋಕ್ಷ ಸಿಗಬಹುದು.

ನಮಗೆಲ್ಲ ಕಷ್ಟದ ಬಗ್ಗೆ ಏನು ಗೊತ್ತಿದೆ? ಮನೆಯಲ್ಲಿ ಮೂರೋ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎನ್ನುವ ಪೋಷಕರ ನಡುವೆ, ಹುಟ್ಟಿದಂದಿನಿಂದ ವಿಕಲಾಂಗರಾಗಿ ಬೆಳೆಯುವ ಮಕ್ಕಳನ್ನು ಪೋಷಿಸುವ ತಂದೆ-ತಾಯಿಗಳ ನಡುವೆ, ಇಂದಿದ್ದರೆ ನಾಳೆ ಬೆಳಿಗ್ಗೆ ತಿನ್ನುವುದಕ್ಕಿಲ್ಲ ಎನ್ನುವವರ ನಡುವೆ, ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿರುವ ಕುಟುಂಬದ ಸದಸ್ಯರ ಜೊತೆ ತಮ್ಮ ದಿನಚರಿಯನ್ನು ಕಂಡುಕೊಳ್ಳುವವರ ನಡುವೆ, ಇದ್ದ ಮಕ್ಕಳಲ್ಲಿ ಕೆಲವರನ್ನು ದುರಂತಗಳಲ್ಲಿ ಕಳೆದುಕೊಂಡು ಜೀವನ ಪರ್ಯಂತ ನರಳುವವರ ನಡುವೆ, ಆಫೀಸಿನ ಕೆಲಸ ಮನೆಯಲ್ಲಿನ ಕೆಲಸಗಳ ಜೊತೆಗೆ ತಮ್ಮ ಕುಟುಂಬದ ಹಿರಿಯರನ್ನು ಪೋಷಿಸಿಕೊಂಡು ಹೋಗುವವರ ನಡುವೆ, ತಮ್ಮ ಪ್ರೈಮರಿ ರೆಸಿಡೆನ್ಸ್ ಅಥವಾ ತಮ್ಮ ಜೀವನದ ಇಡುಗಂಟನ್ನು ಕಳೆದುಕೊಂಡವರ ನಡುವೆ...ಹೀಗೆ ಈ ಪಟ್ಟಿ ಮುಂದುವರೆಯುತ್ತದೆ. ಪ್ರತಿಯೊಬ್ಬರ ಕಷ್ಟದ ಅರಿವು ಹಾಗೂ ಅವರ ಅನುಭವ ಸಾಪೇಕ್ಷವಾದುದು. ನಮ್ಮ ಕಷ್ಟ ದೊಡ್ಡದು ಎಂದೆನಿಸಿದ ಮರು ಕ್ಷಣವೇ ಮತ್ತೊಬ್ಬರ ಇನ್ನೂ ಹೆಚ್ಚಿನ ಕಷ್ಟದ ಸ್ಥಿತಿಯನ್ನು ಕೇಳಿದಾಗ ಸಮಾಧಾನವಾಗುತ್ತದೆ. ಹೀಗೆ ಆದಾಗಲೆಲ್ಲ ’ಸದ್ಯ ನಮಗೆ ಆ ಪರಿಸ್ಥಿತಿ ಬರಲಿಲ್ಲವಲ್ಲ’ ಎನ್ನುವ ದನಿಯೂ ಹುಟ್ಟುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕ್ಷಣದಲ್ಲಿ ’ದೇವರ ದಯೆ’ ಅಥವಾ ’ದೇವರು ದೊಡ್ಡವನು’ ಭಾವನೆಯೂ ಉದ್ಭವಿಸುತ್ತದೆ.

Tuesday, February 17, 2009

ನಾನು ಮತ್ತು ನನ್ನ ದೇವರುಗಳು - ಭಾಗ ೧

ಶಾಲಾ ಕಾಲೇಜು ದಿನಗಳಲ್ಲಿ ದೇವರನ್ನು ಕುರಿತು ಅದೆಷ್ಟೋ ವಾದ-ವಿವಾದಗಳನ್ನು ನಡೆಸಿಕೊಂಡು ಬಂದು, ’ದೇವಸ್ಥಾನಕ್ಕೆ ಏಕೆ ಹೋಗಬೇಕು?’, ’ದೇವರೆಲ್ಲಿದ್ದಾನೆ?’ ಎನ್ನುವ ಅರ್ಥ ಕೊಡುವ ಇನ್ನೂ ಹಲವಾರು ಪ್ರಶ್ನೆಗಳಿಗೆ ನಮ್ಮದೇ ಆದ ಉತ್ತರಗಳನ್ನು ಕಂಡುಕೊಂಡು ನಾವು ಸಮಾಧಾನ ಪಟ್ಟಿದ್ದಿದೆ. ಕೊನೆಗೆ ದೇವರ ಪೂಜೆಯನ್ನು ಮಾಡದೇ, ಹಬ್ಬ-ಹರಿದಿನಗಳಿಗೆ ಮನೆಯಲ್ಲಿ ಅಬ್ಸೆಂಟ್ ಆಗುತ್ತಾ ಬಂದು ಒಂದು ರೀತಿಯ ರೆಬೆಲ್ ಜೀವನವನ್ನು ಸಾಗಿಸಿದ ನನ್ನಂತಹವರು ಈಗ ಮೇಲೇರಿದ ಏಣಿ ಗೋಡೆಗೆ ಹೆಚ್ಚು ಒರಗುವಂತಾಗುವ ಹಾಗೆ ದಿನವೂ ದೇವರ ನಾಮ ಸ್ಮರಣೆಯಿಲ್ಲದೇ ದಿನವನ್ನು ಆರಂಭಿಸೋದು ಕಡಿಮೆ. ದೇವರು ಎನ್ನುವ ಕಾನ್ಸೆಪ್ಟಿಗೂ ಮೂರ್ತಿ ಪೂಜೆ (ವಿಗ್ರಹಾರಾಧನೆ) ಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ದೇವರು ಎನ್ನುವ ಪ್ರತಿಮೆ ಒಬ್ಬ ವ್ಯಕ್ತಿ (ಪರಿವಾರ) ಕ್ಕೆ ಸೀಮಿತಗೊಳ್ಳಬಹುದು, ಅಥವಾ ಅದು ನಿಸರ್ಗದ ಮತ್ತೊಂದು ವಸ್ತು/ಜೀವಿಗೆ ನಾವು ನಮ್ಮ ಮನದಲ್ಲಿ ಕೊಡಬಹುದಾದ ಉನ್ನತ ಪರಿಭಾಷೆ ಇರಬಹುದು. ದೇವರು ಎನ್ನುವುದು ಇಂದಿಗೆ ಪ್ರಸ್ತುತವಾದ ಅಂಶವಿರಬಹುದು ಅಥವಾ ಸಾವಿರಾರು ವರ್ಷಗಳ ಹಿಂದಿನ ಯಾವುದೋ ಒಂದು ಉಲ್ಲೇಖಕ್ಕೆ ಸಂಬಂಧಪಟ್ಟಿರಬಹುದು. ಹೀಗೆ ದೇವರು ಎನ್ನುವ ಎಂದೂ ಮುಗಿಯದ ವಿಚಾರಗಳ ಖಜಾನೆಯನ್ನು ಶೋಧಿಸಿದಂತೆಲ್ಲ ಅವರವರ ಪರಿಮಿತಿಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ರೂಪ/ಆಕೃತಿ ಅದರಿಂದ ಹೊರ ಹೊಮ್ಮುತ್ತಲೇ ಇರುತ್ತೆ ಎನ್ನುವುದು ನನ್ನ ಅಂಬೋಣ.

ಉದಾಹರಣೆಗೆ, ನಮ್ಮ ಇಂದಿನ ಅನಿವಾಸಿ ಬದುಕಿನ ಒಂದು ದಿನವನ್ನು ಅವಲೋಕಿಸಿಕೊಳ್ಳೋಣ: ಇಲ್ಲಿ ನಾವು ಬೇಡವೆಂದರೂ ಘಂಟೆಗಳ ನಿನಾದ ನಮ್ಮ ಕಿವಿಗೆ ಬೀಳುವ ಗಲ್ಲಿಗಳ ದೇವಸ್ಥಾನಗಳ ಗೊಂದಲವಿಲ್ಲ. ’ಲಾ ಇಲಾಹ ಇಲ್ಲಲ್ಲ...’ ಎನ್ನುವ ಮುಂಜಾನೆ ಐದೂವರೆಗೆ ಮಸೀದಿಯಿಂದ ಕೂಗುವ ಮುಲ್ಲಾನ ಸ್ವರವಿಲ್ಲ. ಮೊದಲು ವೇಣುವಾದನದಲ್ಲಿ (ಮೋಹನರಾಗ) ಆರಂಭಗೊಂಡು ಶಹನಾಯಿವಾದನದ ಮೂಲಕ ನಮ್ಮನ್ನು ಎದ್ದೇಳಿಸುವ ಬಾನುಲಿಗಳಿಲ್ಲ (ರೆಡಿಯೋ ಸ್ಟೇಷನ್‌). ಅಪರಿಮಿತವಾಗಿ ನಮ್ಮ ಇಂದ್ರಿಯಗಳಿಗೆ ದೊರೆಯುವ ಒಂದಲ್ಲ ಒಂದು ರೀತಿಯ ದೇವರ ಉಲ್ಲೇಖಗಳಿಲ್ಲ. ಹೀಗೆಲ್ಲ ಇದ್ದಾಗ್ಯೂ ನಾನು ಕಂಡ ಅನೇಕಾನೇಕ ಅನಿವಾಸಿಗಳ ಮನೆಗಳ ಮೂಲೆಗಳಲ್ಲಿ ಕಾರಿನ ಮೂಲೆಗಳಲ್ಲಿ ದೇವರಿಗೆ ಸ್ಥಾನವಿದೆ, ಜೊತೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ದೇವರುಗಳ ದರ್ಶನ ಮಾಡುವ ರೂಢಿಯಿದೆ. ಭಾರತದಲ್ಲಿ ಎಲ್ಲವೂ ಇದ್ದು ಅಲ್ಲಿ ನಮಗಿಲ್ಲದ ದೇವರುಗಳ ಜೊತೆ/ಸಾಂಗತ್ಯಕ್ಕೆ ಇಲ್ಲಿ ಹೆಚ್ಚಿನ ಅಗತ್ಯ ಕಂಡುಬರುತ್ತೆ.

ಜನವರಿ-ಫೆಬ್ರುವರಿ ದಿನಗಳಲ್ಲಿ ನಾನು ಆಫೀಸಿಗೆ ಹೋಗೋ ಹೊತ್ತಿಗೆಲ್ಲಾ ಸೂರ್ಯೋದಯದ ಸಮಯ. ದಿನಕ್ಕೊಂದು ಬಗೆಬಗೆಯ ಚಿತ್ತಾರವನ್ನು ಆಕಾಶದಲ್ಲಿ ಸೃಷ್ಟಿಸಿರೋ ಆ ಮೋಡಿಗೆ ಮಾರುಹೋಗದೇ ಇರಲು ಯಾರಿಗಾದರೂ ಹೇಗೆ ಸಾಧ್ಯ? ಅದೇ ಸಮಯಕ್ಕೆ ನಾನು ’ಓ ದಿನಕರ ಶುಭಕರ ಧರೆಗೆ ಬಾ ಎಂದು ಹಾಡುತ್ತೇನೆ’, ಅಥವಾ ’ಓ ಮಿತ್ರಾಯ ನಮಃ’ ಎನ್ನುತ್ತೇನೆ, ಅಥವಾ ತೈತ್ರೇಯ ಉಪನಿಷತ್ತೋ ಅಥವಾ ಮತ್ತಿನ್ನೆಲ್ಲೋ ಉಲ್ಲೇಖಗೊಂಡ ’ನಿನ್ನ ಹೊನ್ನ ಕಿರಣಗಳಿಂದ ನಮ್ಮನ್ನು ಪಾವನಗೊಳಿಸು’ ಎಂದು ಬೇಡಿಕೊಳ್ಳುತ್ತೇನೆ. ನಾನು ಹೀಗೆ ಮಾಡದಿದ್ದರೂ (ಅಥವಾ ಸೂರ್ಯನನ್ನು ನೋಡದೇ ಇದ್ದರೂ) ಸೂರ್ಯನ ದಿನಚರಿಯಲ್ಲಿ ಏನೂ ಬದಲಾಗೋದಿಲ್ಲ. ಹಾಗೆಂದಾಕ್ಷಣ ಎರಡು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತವೆ: ೧) ನಿಯಮಿತವಾಗಿ ನಡೆಯುವ ಪ್ರಕೃತಿಯ ಕ್ರಿಯೆಗೆ ನಾನು ಪ್ರತಿಕ್ರಿಯಿಸಿದರೆಷ್ಟು ಬಿಟ್ಟರೆಷ್ಟು? ೨) ಈ ಪ್ರಕೃತಿಯ ಬದಲಾವಣೆಯ ಉಲ್ಲೇಖಕ್ಕೂ ದೇವರಿಗೂ ಏನು ಸಂಬಂಧ?

ಬಹಳ ಸುಲಭವಾಗಿ ದೇವರನ್ನು ಹೀಗೆ ಪರಿಕಲ್ಪಿಸಿಕೊಳ್ಳಬಹುದು: ನಮ್ಮ ಪ್ರಕೃತಿಯೇ ದೇವರು. ಅದರಲ್ಲಿ ಸೂರ್ಯ-ಚಂದ್ರರಿದ್ದಾರೆ, ನದಿ-ಸಾಗರಗಳಿವೆ, ಹಾವು-ಮುಂಗುಸಿ-ಹಂದಿ-ಕಪ್ಪೆ ಇತ್ಯಾದಿಗಳಿದ್ದಾವೆ, ಪಕ್ಷಿಗಳಿವೆ, ಎಲ್ಲವೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸರಪಳಿ ಇದೆ. ಯಾವ ವಿಜ್ಞಾನಿಯೂ ಬರೆದಿಡದ ತತ್ವದ ಪ್ರಕಾರ ನಡೆಯುವ ಅದೆಷ್ಟೋ ಅನನ್ಯವಾದ ಚಕ್ರಗಳಿವೆ, ಕೋಟ್ಯಾನುಕೋಟಿ ಜೀವರಾಶಿ ಇದೆ, ಇನ್ನೂ ಏನೇನೋ ಇದೆ. ನನಗೆ ಮುಂಜಾನೆ ಸೂರ್ಯ ದೇವರಾಗಿ ಕಂಡು ಬಂದರೆ ಒಬ್ಬ ರೈತನಿಗೆ ಅವನ ಬೆಳೆಯನ್ನು ಕಾಡುವ ಇಲಿಗಳಿಂದ ರಕ್ಷಣೆಕೊಡುವ ಹಾವು ದೇವರಾಗಿ ಕಂಡುಬರಬಹುದು, ಇನ್ನೊಬ್ಬರಿಗೆ ಅನ್ನವನ್ನು ಕೊಡುವ ಭೂತಾಯಿ ದೇವರಾಗಬಹುದು. ನೀರೆ ಒಂದು ದೊಡ್ಡ ಸಿದ್ಧಾಂತವಾಗಬಹುದು. ಗಾಳಿ, ಮಳೆ, ಬೆಂಕಿ ಮಣ್ಣು, ಮತ್ತೊಂದು ಎಲ್ಲವೂ ಅವರವರ ದೇವರಾಗಬಹುದು. ಈ ಸೃಷ್ಟಿಯ ಅಗಾಧತೆ ಹಾಗೂ ಅದರಲ್ಲಿನ ಶಕ್ತಿ ಎಲ್ಲಗಿಂತ ಮಿಗಿಲಾಗಿರಬಹುದು - ಸಣ್ಣದಾಗಿ ದೇವರ ಮುಂದೆ ಉರಿಯುವ ನಂದಾದೀಪದ ಬೆಂಕಿಗೂ ಇತ್ತೀಚೆಗಷ್ಟೇ ಆಷ್ಟ್ರೇಲಿಯದಲ್ಲಿ ಸಾವಿರಾರು ಮೈಲನ್ನು ಕಬಳಿಸಿದ ಕಾಡ್ಗಿಚ್ಚಿಗೂ ನಂಟಿದೆ. ಈ ಭೂಮಿಯನ್ನು ಸುಮಾರು ಎಂಭತ್ತು ಭಾಗ ಆವರಿಸಿಕೊಂಡ ನೀರಿನ ಅವತಾರಗಳಿಗೆ ಅಪರಿಮಿತ ಶಕ್ತಿ ಇದೆ.

ಈ ಮೇಲೆ ಉಲ್ಲೇಖಿಸಿದ ದೇವರಿನ ಪರಿಕಲ್ಪನೆಗೆ ಜಾತಿಗಳಿಲ್ಲ, ಪ್ರವಾದಿಗಳಿಲ್ಲ, ಮತಗಳಿಲ್ಲ ಹಾಗೇ ಇವು ಎಲ್ಲವೂ ಎಲ್ಲ ಕಡೆಯೂ ಇವೆ. ಅದೇ ಸರ್ವಾಂತರ್ಯಾಮಿ. ಅದೇ ಸರ್ವಶಕ್ತ. ಅದೇ ಭಗವಂತ.

***
’ಓ ಶ್ರೀ ಗಣೇಶಾಯ ನಮಃ’ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ. ಅಪರೂಪಕ್ಕೊಮ್ಮೆ ದೇವಸ್ಥಾನದಲ್ಲಿ ಕಾಲು ನೋಯಿಸಿಕೊಂಡು ವಿಷ್ಣು ಸಹಸ್ರನಾಮ ಓದಿ ಬರುತ್ತೇವೆ. ಧರ್ಮಸ್ಥಳದಲ್ಲಿ ಕೊಟ್ಟ ಶಿವಸಹಸ್ರ ನಾಮಾರ್ಚನೆಯ ಪುಸ್ತಕದಲ್ಲಿ ಕೊನೆಯ ಪಕ್ಷ ಒಂದು ನೂರು ನಾಮವನ್ನಾದರೂ ಬಾಯಿ ಪಾಠ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನಗಳಿಗೆ ನಮ್ಮದೇ ಒಂದು ವರ್ಶನ್ನನ್ನು ಅನ್ನು ಸೃಷ್ಟಿಸಿಕೊಂಡಿದ್ದೇವೆ. ದಿನವನ್ನು ಆರಂಭಿಸುವ ಮೊದಲು ದೇವರ ಮುಂದೆ ದೀಪ ಹಚ್ಚುತ್ತೇವೆ, ಅಪರೂಪಕ್ಕೊಮ್ಮೆ ಸ್ಮೋಕ್ ಡಿಟೆಕ್ಟರುಗಳಿಗೆ ಹೆದರಿಕೊಂಡೇ ಊದುಬತ್ತಿಯನ್ನು ಉರಿಸುತ್ತೇವೆ. ಹಬ್ಬ ಹರಿದಿನಗಳೇನಾರೂ ವಾರಾಂತ್ಯಕ್ಕೆ ಒದಗಿ ಬಂದರೆ ದೇವಸ್ಥಾನಗಳ ಕಡೆಗೆ ಮುಖ ತಿರುಗಿಸುತ್ತೇವೆ.

ಈ ದೇವಸ್ಥಾನ ಎನ್ನುವುದು ನಮ್ಮ ಸಮುದಾಯ. ಭಾರತದಲ್ಲಿ ವಿಷ್ಣು ದೇವರ ಮುಂದೆ ಹಾಗೂ ಆಜೂ-ಬಾಜಿನಲ್ಲಿ ಹೆಚ್ಚು ದೇವರುಗಳನ್ನು ನಾವು ಸೃಷ್ಟಿಸಿಕೊಳ್ಳೋದಿಲ್ಲ, ಆದರೆ ನಮ್ಮ ಅನಿವಾಸಿ ಬದುಕಿನಲ್ಲಿ ನಾವು ಎಡೆತಾಕುವ ದೇವಸ್ಥಾನಗಳ ಹೆಸರುಗಳು ಏನೇ ಇದ್ದರೂ ಅದರಲ್ಲಿ ಎಲ್ಲವೂ ಇವೆ. ಗಣೇಶ (ಅದರಲ್ಲೂ ಹಲವಾರು ವಿಧ, ಭಂಗಿ, ಗಾತ್ರ - ಒಂದೇ ದೇವಸ್ಥಾನದ ಹಲವು ಕಡೆ), ಶಿವ, ಅಂಬಿಕೆ, ಸತ್ಯನಾರಾಯಣ ಸ್ವಾಮಿ (ಪರಿವಾರ), ರಾಮ (ಪರಿವಾರ), ಭೂಮಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ (ಪರಿವಾರ), ಶ್ರೀಕೃಷ್ಣ (ಪರಿವಾರ), ಆಂಜನೇಯ, ನವಗ್ರಹಗಳು, ಇತ್ಯಾದಿ - ಜೊತೆಗೆ ಮುಖ್ಯ ದೇವತೆ (ದೇವಸ್ಥಾನದ ಹೆಸರಿಗೆ ತಕ್ಕಂತೆ). ದೊಡ್ಡ ಬಾಲಾಜಿಯು ವಿಗ್ರಹದ ಕೆಳಗೆ ಸಣ್ಣದೊಂದಿದೆ, ಅದಕ್ಕೂ ಚಿಕ್ಕದಾಗಿ ಮತ್ತೊಂದು ಗಣೇಶ ಮೂರ್ತಿ ಇದೆ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಬೇಕಾದಷ್ಟು ಸಣ್ಣ-ಪುಟ್ಟ ಗಣೇಶ-ಶಿವರು ಕಂಡುಬರುತ್ತಾರೆ.

ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಅನಿವಾಸಿಗಳು ಸೃಷ್ಟಿಸಿಕೊಂಡ ದೇವಸ್ಥಾನಗಳು ದೇವಸ್ಥಾನಗಳೇ ಅಲ್ಲ ಎನ್ನಬಹುದು. ಇಲ್ಲಿನ ಮಳೆ-ಛಳಿ-ವ್ಯವಸ್ಥೆಗೆ ತಕ್ಕಂತೆ ಬನಿಯನ್-ಕಾಲುಚೀಲ ಧರಿಸಿ ಪೂಜೆ ನಡೆಸಿಕೊಡುವ ಅರ್ಚಕರಿದ್ದಾರೆ. ಆ ಮೂಲ ವಿನೀತ ಭಾವನೆಯಿಂದ ದೇವರಿಗೆ ನಮ್ಮ ಪ್ರಾರ್ಥನೆಯನ್ನು ಅರ್ಪಿಸಿಕೊಳ್ಳುವ (ನಮ್ಮಲ್ಲಿ) ಮನೋಭಾವನೆಯಲ್ಲಿ ಬಹಳಷ್ಟು ಬದಲಾವಣೆ ಇದೆ/ಆಗಿದೆ. ಬೇಸಿಗೆ ಸಮಯದಲ್ಲಿ ಹೊರಗಡೆ ಜೀನ್ಸ್ ಚೆಡ್ಡಿ(ಬರ್ಮುಡಾ) ವನ್ನು ಧರಿಸಿಕೊಂಡು ಓಡಾಡುವ ನಮಗೆ ದೇವಸ್ಥಾನಗಳಲ್ಲಿ ’ಶಿಸ್ತಾಗಿ ಬನ್ನಿ’ ಎನ್ನುವ ವಿನಂತಿ/ಆದೇಶವಿದೆ. ಶೂಗಳನ್ನು ಯಾವಾಗಲೂ ರ್ಯಾಕ್‌ನಲ್ಲೇ ಇಡಿ ಎಂದು ಅದ್ಯಾವುದೇ ಭಾಷೆಯಲ್ಲಿ ಅದೆಷ್ಟೇ ಬೋರ್ಡುಗಳನ್ನು ಬರೆಸಿಹಾಕಿದ್ದರೂ ಅದನ್ನೆಲ್ಲ ಧಿಕ್ಕರಿಸಿ ಬಾಗಿಲ ಬಳಿಯೇ ಚಪ್ಪಲಿ/ಶೂ ರಾಶಿ ಪೇರಿಸುವ ’ಅದು ನಮಗಲ್ಲ’ ಎಂದು ಕೊಡಗಿಕೊಳ್ಳುವ ಮನೋಭಾವನೆ ಇದೆ (ಇದೇ ಒಂದು ಅಂಶ ಸಾಕು ನಾವು, ಭಾರತೀಯರು ರೂಲ್ಸ್, ರೆಗ್ಯುಲೇಶನ್ನ್ ಹಾಗೂ ಕಾನೂನನ್ನು ಹೇಗೆ ಪರಿಪಾಲಿಸುತ್ತೇವೆ ಎಂದು ಸಾಧಿಸಲು).

ಹೀಗೆ ನಮ್ಮ ಮನೆ, ಮನ, ಕಾರುಗಳಲ್ಲಿರುವುದು ದೇವರೋ ಅಥವಾ ಈ ದೇವಸ್ಥಾನವೆಂದು ಹೆಸರಿಟ್ಟುಕೊಂಡ ಸಮುದಾಯಗಳಲ್ಲಿರುವುದು ದೇವರೋ ಅಥವಾ ನಮ್ಮ ಊರು/ಪರಂಪರೆಯಲ್ಲಿರುವುದು ದೇವರೋ ಎನ್ನುವ ಪ್ರಶ್ನೆ ಬಹುಷಃ ಎಲ್ಲರಿಗೂ ಬಂದಿರಬಹುದು. ಇಷ್ಟೆಲ್ಲಾ ದೇವರಿನ ಪರಿಕಲ್ಪನೆ ಸಾಲದು ಎಂದು ನಮ್ಮ ನಮ್ಮ ಕಲ್ಪನೆಯ ಮಠಗಳನ್ನು ಹುಟ್ಟು ಹಾಕಿಕೊಂಡಿದ್ದೇವೆ. ಸಂಕಟಕ್ಕೆ ತಿರುಪತಿಯ ವೆಂಕಟರಮಣನಿದ್ದಾನೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯಿದೆ (ಒಂದು ಆಬ್ಜೆಕ್ಟ್ ಪರಿಕಲ್ಪನೆ ಗಮನಿಸಿ), ಮಂತ್ರಾಲಯವಿದೆ, ಹೊರನಾಡಿದೆ, ಶೃಂಗೇರಿಯಿದೆ. ನಮ್ಮ ಊರಿನ ಕೈಟಭೇಶ್ವರನಿದ್ದಾನೆ, ಸರ್ಕಲ್ಲಿನ ಚೌಡಮ್ಮಳಿದ್ದಾಳೆ, ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಇದ್ದಾನೆ, ಸುಬ್ರಹ್ಮಣ್ಯ ಸ್ವಾಮಿಯ ಸಾನಿಧ್ಯವಿದೆ. ನಮ್ಮ ಹಿಂದೂ ಪರಿಕಲ್ಪನೆಯೇ ಎಷ್ಟು ವಿಸ್ತಾರವಾದುದೆಂದು ನಾನು ಸೋಜಿಗಗೊಂಡಿದ್ದೇನೆ - ಅವರವರ ಅನುಕೂಲಕ್ಕೆ ತಕ್ಕಂತೆ ಯಾರು/ಏನನ್ನು ಬೇಕಾದರೂ ಮೆಚ್ಚಿ/ಹಚ್ಚಿಕೊಳ್ಳುವ ಸ್ವಾತಂತ್ರ್ಯವಿದೆ.


***

ಸೃಷ್ಟಿ, ಪ್ರಕೃತಿ ಹಾಗೂ ಮೂರ್ತಿ ಪೂಜೆಯ ಆಧಾರದಲ್ಲಿ ಈ ಎಲ್ಲ ಉಲ್ಲೇಖಗಳನ್ನು ಮಂಡಿಸಿದಂತೆ ಒಂದು ಅಂಶ ಪ್ರಸ್ತುತವಾಗುತ್ತದೆ - ಅದೇ ನಮ್ಮ ಸಮುದಾಯ. ಭಾರತದಲ್ಲಿ ನಾವು ಬೆಳೆದುಬಂದಂತೆ ಒಂದು (ಮೆಜಾರಿಟಿ) ವ್ಯವಸ್ಥೆಯ ಅಂಗವಾಗಿದ್ದೆವು, ಆ ವ್ಯವಸ್ಥೆ ಇಲ್ಲಿ ಇರದಿದ್ದ ಮಾತ್ರಕ್ಕೆ ಅದನ್ನು ನಾವು-ನಾವೇ ಹುಟ್ಟುಹಾಕಿಕೊಂಡಿರೋದು (ಪ್ರಯತ್ನ). ಸಂಘಜೀವ ಪ್ರತಿಯೊಬ್ಬರಿಗೂ ಬೇಕಾದ ಹಾಗೇ ಒಂದಲ್ಲ ಒಂದು ಗೋಡೆಗೆ ನಾವು ಒರಗಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಮನ-ಕಾರು-ಮನೆಗಳಲ್ಲಿನ ದೇವರುಗಳನ್ನು ಒಂದು ಸ್ವಲ್ಪ ದಿನಗಳ ಮಟ್ಟಿಗೆ ತೆಗೆದುಹಾಕಿ ನೋಡಿದಾಗ (ಸಾಧ್ಯವಿದ್ದರೆ) ಅಲ್ಲಿ ಒಂದು ನಿರ್ವಾತ (ವ್ಯಾಕ್ಯೂಮ್) ಹುಟ್ಟತ್ತದೆ, ಈ ನಿರ್ವಾತದ ವಿಶೇಷವೆಂದರೆ ಅದನ್ನು ಮತ್ತೊಂದರಿಂದ ತುಂಬಲೇ ಬೇಕಾಗುತ್ತದೆ. ಒಂದು ರೀತಿಯ ಪೆಂಡುಲಮ್ ಗುಂಡು ಇದ್ದ ಹಾಗೆ, ನೀವು ಒಂದು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋದಂತೆಲ್ಲ ಅದು ಅಷ್ಟೇ ವಿರುದ್ಧ ದಿಕ್ಕಿಗೆ ಚಲಿಸುವ ಸಹಜತೆ ಇರುವ ಹಾಗೆ.

ಪ್ರತಿಯೊಬ್ಬರಿಗೂ ಅವರವರ ಬೇಡಿಕೆಗಳಿವೆ ಹಾಗೂ ಅಗತ್ಯಗಳಿವೆ, ಅದಕ್ಕೆ ತಕ್ಕಂತೆ ಅವರವರ ಮನಸ್ಸಿನಲ್ಲಿ ಎಲ್ಲೋ ಮೂಲೆಯಲ್ಲಿ ದೇವರ ಪರಿಕಲ್ಪನೆ ಇದೆ. ದೇವರು ಇಲ್ಲ ಎನ್ನುವ ವಾದವೂ, ದೇವರ ಮೇಲಿನ ಸೇಡೂ, ವಿರೋಧಾಲೋಚನೆಗಳು ಎಲ್ಲವೂ ಆ ದೇವರ ಕೃಪೆಯೇ ಎಂದುಕೊಂಡರೆ ಎಲ್ಲವೂ ದೇವರ ಮಯ. ದೇವರು ಎನ್ನುವ ಭಾವನೆ ಅಥವಾ ಆ ಭಾವನೆ ಇಲ್ಲದಿರುವ ಭಾವನೆಯೇ ದಿವ್ಯವಾದುದು, ಅಷ್ಟೇ!