Showing posts with label ತತ್ವ. Show all posts
Showing posts with label ತತ್ವ. Show all posts

Thursday, November 30, 2023

ಸುಖ-ದುಃಖ

ಬಾಳಿನಲ್ಲಿ ಬರೋ ಸಂತೋಷದ ಕ್ಷಣಗಳೇ ಒಂದು ರೀತಿಯಲ್ಲಿ ಸೂಕ್ಷ್ಮವಾದವುಗಳು. ಈ ಸಂತೋಷವನ್ನ ಸುಖ, ಹರ್ಷ, ನಲಿವು, ಉಲ್ಲಾಸ, ಹಿಗ್ಗು, ಖುಷಿ, ಮೋಜು, ವಿನೋದ... ಮೊದಲಾದ ಸಮಾನಾರ್ಥಕ ಪದಗಳನ್ನು ಉಪಯೋಗಿಸಿ ಕರೆದರೂ ಅದೊಂದು ಅಗಮ್ಯವಾದ ಲೋಕವಾಗೇ ಉಳಿದುಬಿಡುತ್ತದೆ. ಸುಖದಲ್ಲಿ, ಕಷ್ಟ, ಕಾರ್ಪಣ್ಯ, ದುಃಖ, ನೋವುಗಳಿಲ್ಲ ಅನ್ನೋದರ ಜೊತೆಗೆ ಸುಖವೆಂದೂ ದಂಡಿಯಾಗಿ ಬುಟ್ಟಿಯಲ್ಲಿ ಮೊಗೆಯುವಷ್ಟು ಸಿಗುವುದಂತೂ ಅಲ್ಲವೇ ಅಲ್ಲ. ಅದು ಮಳೆಯ ದಿನಗಳಲ್ಲಿ ಬರುವ ಕೋಲ್ಮಿಂಚಿನ ಹಾಗೆ, ಹೀಗೆ ಬಂದು ಹಾಗೆ ಹೋಗುವುದು. ಎಷ್ಟೋ ಸಮಯ ಗೊತ್ತಾಗುವುದೂ ಇಲ್ಲ. ಅದರಲ್ಲಿಯೂ ಮೋಡ ಕವಿದ ಆಕಾಶವಿದ್ದರೆ ಮುಗಿದೇ ಹೋಯಿತು, ದೂರದಲ್ಲೆಲ್ಲೋ ಮಿಂಚಿ ಮಾಯವಾಗುವ ಮಾಯಾಂಗನೆಯ ಹಾಗೆ, ಅದು ಇದ್ದೂ ಇರಲೊಲ್ಲದು.


ಈ ಕಾರಣಗಳಿಂದಲೇ ಇರಬೇಕು, ಇಂಗ್ಲೀಷಿನವರು, ಚೆನ್ನಾಗಿರುವುದಕ್ಕೆ awesome ಎಂದು ಹೇಳೋದು... ಅದರಲ್ಲಿ "some" ಅಡಕವಾಗಿದೆ. ಅದೇ, ಮನಸ್ಸಿಗೆ ಅಹಿತವಾದ ವಿಷಯಗಳಿಗೆ, awful ಎಂದು ಹೇಳುವಾಗ, ಅದು ಯಾವಾಗಲೂ "full" ಆಗಿಯೇ ತೋರೋದು! ಸುಖ-ಸಂತೋಷಗಳು ಹಿತಮಿತವಾಗಿಯೂ, ಕಷ್ಟ-ಕಾರ್ಪಣ್ಯಗಳು ದಂಡಿ ದಂಡಿಯಾಗಿಯೂ ಬರುತ್ತವೆ ಎಂದು ಒಂದೊಂದು ಪದದಲ್ಲಿಯೇ ಹೇಳುವ ಅವರ ಜಾಣ್ಮೆಯನ್ನು ಮೆಚ್ಚಬೇಕಾದ್ದೆ!


ಯಾರು ಯಾರಿಗೋ ಯಾವುದೋ ಕಾರಣಗಳಿಗೆ ಖುಷಿಯಾಗುವುದುಂಟು. ಇಡೀ ದಿನ ದಣಿದ ತಾಯಿಯ ದಣಿವು ತನ್ನ ಮಗುವಿನ ಒಂದು ಕಿರುನಗೆಯನ್ನು ನೆನಪಿಸಿಕೊಳ್ಳುವುದರ ಮೂಲಕವೇ ಮರೆಯಾಗಬಲ್ಲದು. ಸಂಜೆ ಒಮ್ಮೊಮ್ಮೆ ಒಂದು ಒಳ್ಳೆಯ ಚಹಾ ಕುಡಿದಾಗ, ಮಲೆನಾಡಿನ ಮಳೆ ಮತ್ತು ಚಳಿ ಪ್ರಕೃತಿಯಲ್ಲಿ ಮುಂಜಾನೆ ಒಂದು ಮಜಬೂತಾದ ಫ಼ಿಲ್ಟರ್ ಕಾಫ಼ಿ ಕುಡಿದಾಗ, ಬೇಸಿಗೆಯ ಬಿಸಿಲಿನ ಬಳಲಿಕೆಯಲ್ಲಿ ಒಂದು ಶುಂಠಿ ಹಾಕಿದ ಮಜ್ಜಿಗೆ ಕುಡಿದಾಗ - ಈ ಕಿರು ಸಂತೋಷ ಸುಖವಾಗಿ ಪ್ರಕಟವಾಗುವುದುಂಟು. ಹೀಗಿರುವಾಗ ಸುಖವೆನ್ನುವುದು ದಂಡಿ ದಂಡಿಯಾಗಿ ಸಿಗಬೇಕೆಂದೇನೂ ಇಲ್ಲ... ಬಳಲಿದ ಮನಸ್ಸಿಗೆ ಹಿತವಾಗುವುದಕ್ಕೆ ಚಿಕ್ಕ ಲೋಟದಲ್ಲಿ ಸಿಗುವ ಪಾನೀಯ ಸಾಕಾಗುವುದರಿಂದ, ನಿಮಗೆ ಬಕೇಟುಗಟ್ಟಲೆ ಎಂದೂ ಕಾಫ಼ಿಯನ್ನು ಕುಡಿಯಬೇಕೆನ್ನಿಸುವುದಿಲ್ಲ. ನಾವು ಚಿಕ್ಕವರಿದ್ದಾಗ ಭದ್ರಾವತಿಯ ಸಕ್ಕರೆ ಕಾರ್ಖಾನೆಯನ್ನು ನೋಡಲು ಹೋಗಿದ್ದೆವು. ಶಾಲಾ ಮಕ್ಕಳಿಗೆ ಪ್ರವಾಸದ ಕೊನೆಯಲ್ಲಿ ಒಂದು ಮೂಟೆ ಸಕ್ಕರೆಯನ್ನು ತೋರಿಸಿ, ಯಾರು ಎಷ್ಟು ಬೇಕಾದರೂ ತಿನ್ನಬಹುದು ಎಂದು ಹೇಳಿದಾಗ ನಾವ್ಯಾರೂ ಒಂದು ಚಿಟುಕೆಯಷ್ಟು ಕೂಡ ಸಕ್ಕರೆಯನ್ನು ತಿನ್ನದಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. ದಂಡಿಯಾಗಿ ಸಿಗುವುದೆಲ್ಲವೂ ಸುಖವಲ್ಲ, ಜೊತೆಗೆ ಯಥೇಚ್ಛವಾಗಿ ದೊರಕುವುದು ಸುಖವನ್ನು ಕಸಿದುಕೊಳ್ಳಲೂಬಹುದು. ಊಟ-ತಿಂಡಿಗಳು ಬಹಳ ಇಷ್ಟ ಎಂದು ಹೊಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡವರು, ಸಮಯ ಸರಿದಂತೆಲ್ಲ, ಊಟ-ತಿಂಡಿಯ ಬಗೆಗಿನ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುವ ಹಾಗೆ.


ನನ್ನ ಪ್ರಕಾರ, ಎಲ್ಲಿದೆ ಸುಖ? ಎಂದು ಅರಸಿಕೊಂಡು ಹೋಗುವುದೇ ತಪ್ಪು. ಸುಖ-ಸಂತೋಷ ನಮ್ಮ ಒಳಗಿದೆ, ನಮ್ಮ ಹೊರಗಿದೆ, ಮುಖ್ಯ ಅದು ನಾವಿರುವಲ್ಲೇ ಇದೆ. ಆಧ್ಯಾತ್ಮಿಕ ಚಿಂತನಶೀಲರು, ನಿಮ್ಮ ಒಳಗಡೆ ಗಮನಕೊಡಿ, ಅದರಲ್ಲಿ ಅಂತರ್ಧಾನದ ಸುಖವಿದೆ ಎಂದಾರು. ಕವಿಗಳು, ನಿಮ್ಮ ಸುತ್ತಮುತ್ತಲಿನ ಪ್ರಕೃತಿಯ ಆರಾಧನೆಯಲ್ಲಿದೆ ಸುಖ ಎಂದಾರು. ತನ್ನ ಮನಸ್ಸನ್ನು ತನ್ನೊಳಗೇ ಕೇಂದ್ರೀಕರಿಸಿ ಹತೋಟಿಯಲ್ಲಿಡಲು ಪ್ರಯತ್ನಿಸುವ ಯೋಗಿಗೆ, ಪಕ್ಕದ ಮರದ ಮೇಲೆ ಕುಳಿತು ವಸಂತನ ಆಗಮನವನ್ನು ಸಾರುವ ಕೋಗಿಲೆಯ ಸಂದೇಶ ಕಿರಿಕಿರಿ ತರಿಸಲಿಕ್ಕೂ ಸಾಕು. ಅದೇ ಬಾಹ್ಯ ಪ್ರಕೃತಿಗೆ ತನ್ನನ್ನು ತಾನು ಒಡ್ಡಿಕೊಂಡು ಹೊಸತೇನನ್ನೋ ನಿರೀಕ್ಷಿಸುತ್ತಿರುವ ಕವಿ ಮನಸ್ಸಿಗೆ ಕ್ರೌಂಚ ಪಕ್ಷಿಗಳ ಕಲರವವೂ ಮುದ ತರಬಹುದು. ಅವರವರ ಭಾವನೆ-ಭಕ್ತಿ ಮತ್ತು ಶ್ರದ್ಧೆಗೆ ಸಂಬಂಧಿಸಿದಂತೆ ಸುಖ ಎಲ್ಲ ಕಡೆಯೂ ಇದೆ... ಆದರೆ ಅದು ದಂಡಿಯಾಗಿ ಸಿಗುವ ಸರಕು-ಸಾಮಗ್ರಿಯಾಗಂತೂ ಅಲ್ಲವೇ ಅಲ್ಲ.


***

ಸುಖ ಮನಸ್ಸಿಗೆ ಸಂಬಂಧಿಸಿದ್ದಾದರೂ, ಅದರ ಮೂಲ ಹೃದಯದಲ್ಲಿದೆ ಎನ್ನಬಹುದೇ? ಸುಖದ ನಿರೀಕ್ಷೆ ಒಂದು ರೀತಿಯಲ್ಲಿ ತಪ್ಪು. ಮುಂದಿನ ಸುಖದ ಕ್ಷಣ ಹೀಗೇ ಇದ್ದೀತು ಎಂದು ಮೊದಲೇ ಊಹಿಸಿಕೊಳ್ಳುವುದಾದರೂ ಹೇಗೆ? ಸುಖ-ಸಂತೋಷದ ವಿಷಯಕ್ಕೆ ಬಂದಾಗ ಬಡವ-ಬಲ್ಲಿದನೆಂಬ ಬೇಧ-ಭಾವ ಏನಾದರೂ ಇರಬಹುದೇ? ಅತಿ ಶ್ರೀಮಂತರಿಗೆ ಹೆಚ್ಚಿನ ಸಂತೋಷ ಸಿಗುವುದು ನಿಜವೇ? ಹಾಗಿಲ್ಲವಾದರೆ, ಜನ ತಮ್ಮ ಹಂಗುಗಳನ್ನು ತೊರೆದು ಸದಾಕಾಲ ಶ್ರೀಮಂತರಾಗುವ, ಇನ್ನೂ ಹೆಚ್ಚು ಹೆಚ್ಚು ಸಂಪಾದಿಸಿ, ಕೂಡಿಡುವ ಕನಸನ್ನು ಕಾಣುವುದಾದರೂ ಏಕೆ? ಬಡವರ ಸಂತೋಷಗಳಿಗೂ, ಉಳ್ಳವರ ಸಂತೋಷಗಳಿಗೂ ಏನು ವ್ಯತ್ಯಾಸ? ಸುಖ ಎನ್ನುವುದು ನಮ್ಮೊಳಗಿದೆಯೋ, ನಮ್ಮ ಹೊರಗಿದೆಯೋ? ಸುಖ ಎನ್ನುವುದು ವ್ಯಕ್ತಿಗತವೋ, ಅಥವಾ ಒಂದು ನೆರೆಹೊರೆಗೆ ಸಂಬಂಧಿಸಿದ ವಿಷಯವೋ? ಸುಖವನ್ನು ಅಳೆಯುವುದಾದರೂ ಹೇಗೆ? ಇಂತಿಷ್ಟು ದಿನ ಈ ಕೆಲಸವನ್ನು ಮಾಡಿದರೆ ಇಂತಿಷ್ಟು ಸುಖ ಎಂಬ ನಿಯಮವೇನಾದರೂ ಇದೆಯೇ?


***

ಬೆಂಗಳೂರಿನಿಂದ ನೆಲಮಂಗಲದ ಕಡೆಗೆ ಹೋಗುವ ದಾರಿಯಲ್ಲಿ, ಬೆಂಗಳೂರು ನಗರ ಮುಗಿಯುವ ಸರಹದ್ದಿನಲ್ಲಿ ಅದೆಷ್ಟೋ ನಿರ್ಗತಿಕ ಕುಟುಂಬಗಳು ಬಯಲುಗಳಲ್ಲಿ ಗುಡಿಸಲು ಅಲ್ಲದ ಡೇರೆಗಳಲ್ಲಿ ಬದುಕುವುದನ್ನು ನೋಡಬಹುದು. ಇಲ್ಲಿ ಬದುಕುವ ಕುಟುಂಬದ ಸದಸ್ಯರುಗಳಿಗೆ ಆಯಾ ಹಂಗಾಮಿ ವಸತಿ ಸೌಕರ್ಯವೇ ಸುಖವನ್ನು ತಂದುಕೊಟ್ಟೀತು. ಹಾಗಂತ, ಲೀಲಾ ಪ್ಯಾಲೇಸಿನಲ್ಲಿ ದಿನದ ಬಾಡಿಗೆಯಾಗಿ ಲಕ್ಷಾಂತರ ರುಪಾಯಿಯನ್ನು ಸುರಿವ ಶ್ರೀಮಂತರಿಗೆ ಸುಖವಿಲ್ಲ ಎಂದು ಹೇಳಲಾಗದು. ಹಾಗಿದ್ದ ಮೇಲೆ, ಸುಖ ಎನ್ನುವುದು ಅವರವರ ಮಾನಸಿಕ, ಸಾಮಾಜಿಕ, ಶಾರೀರಿಕ ಮೌಲ್ಯಗಳ ಮೇಲೆ ನಿಂತಿದೆ ಎನ್ನಬಹುದೇ? ಬಯಲಿನ ಗುಡಿಸಲಲ್ಲಿರುವ ವ್ಯಕ್ತಿಯ ಸೌಕರ್ಯಗಳನ್ನು ಲೀಲಾ ಪ್ಯಾಲೇಸಿನಲ್ಲಿರುವ ವ್ಯಕ್ತಿಯ ಸೌಕರ್ಯಕ್ಕೆ ಅದಲು ಬದಲು ಮಾಡಿದಾಗ ಇಬ್ಬರಿಗೂ ಅವರವರ ಸುಖ ದೂರವಾಗಬಹುದು. ಅದೇ ಪ್ರಪಂಚದಲ್ಲಿ ಒಂದಿಷ್ಟು ದಿನ ಇರಲಾಗಿ ಪ್ರತಿಯೊಬ್ಬನೂ ಅದಕ್ಕೆ ಹೊಂದಿಕೊಂಡು ಹೋಗಬಹುದು.


ಗಾಜ಼ಾ ಗಡಿಯಲ್ಲಿ ನಡೆದ ಯುದ್ಧದಿಂದಾಗಿ ಅದೆಷ್ಟೋ ಕುಟುಂಬಗಳು ರಾತ್ರೋರಾತ್ರಿ ತಮ್ಮ ತಮ್ಮ ನೆರೆಹೊರೆಯನ್ನು ಬಿಟ್ಟು ಕದಲಬೇಕಾದಾಗ, ಅವರವರ ಸುಖ-ಸಂಭ್ರಮಗಳು ಸಂಘರ್ಷದಲ್ಲಿ ಕೊಚ್ಚಿಹೋದವು. ಒಂದು ವಟಾರದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದ ಕುಟುಂಬಗಳು ಕೇವಲ ನಿರ್ಗತಿಕರಾಗಷ್ಟೇ ಅಲ್ಲ, ಅವರ ನೆಲೆಯನ್ನು ಕಳೆದುಕೊಂಡರೂ ಕೂಡ. ಆದರೆ, ಹೊಸ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಕ್ಕಳು ತಮ್ಮ ಆಟದ ಸುಖವನ್ನು ಅನುಭವಿಸುವುದರಲ್ಲಿ ನಿರತರಾದಂತೆ ತೋರಿತು. ಸುಖದ ಪರಿಭ್ರಮೆಗೆ ನಾವೊಂದು ಪರಿಧಿಯನ್ನು ಹಾಕಿಕೊಂಡಿರುತ್ತೇವೆ. ಕೊನೆಮೊದಲಿಲ್ಲದ ಆ ಪರಿಧಿ, ಒಂದೇ ಒಂದು ಸಂಘರ್ಷದ ಸಂಕಟಕ್ಕೆ ಚೂರುಚೂರಾಗಿ ಹೋಗುವುದಾದರೆ, ಮನುಕುಲ ಸಂಘರ್ಷವನ್ನು ಹುಟ್ಟುಹಾಕುವುದಾದರೂ ಏಕೆ ಎನಿಸೊಲ್ಲವೇ? ಇಂದಿನ ತಲೆಮಾರಿನ ಜೊತೆಜೊತೆಗೆ ಇನ್ನೆರೆಡು ತಲೆಮಾರುಗಳು ಅನುಭವಿಸಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವ ಈ ಸಂಘರ್ಷದ ಫಲಿತಾಂಶವಾದರೂ ಏನು? ಕೈಯಲ್ಲಿ ಬಂದೂಕು ಹಿಡಿದು ಹೋರಾಡುವ (ಉಗ್ರ) ತರುಣರಿಗೆ ಈ ಸರಳ ಸಂದೇಶವೇಕೆ ಅರ್ಥವಾಗುವುದಿಲ್ಲ? ಹುಟ್ಟಿ-ಸಾಯುವ ಹಲವು ವರ್ಷಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ನಾಲ್ಕು ಅವಸ್ಥೆಗಳಲ್ಲಿ ನಾವು ಏನನ್ನಾದರೂ ಬದಲಾಯಿಸುತ್ತೇವೆ ಎಂದುಕೊಳ್ಳುವುದೇ ತಪ್ಪಲ್ಲವೇನು? ಅಕಸ್ಮಾತ್ ಬದಲಾವಣೆಯೇ ಆಗುವುದು ಎಂದಾದಲ್ಲಿ, What difference does it make? ಎಂದು ಕೇಳಬೇಕೆನಿಸುತ್ತದೆ.


ಸೂರ್ಯನು ಮುಳುಗದ ಸಾಮ್ರಾಜ್ಯವಾಗಿ ಇಂಗ್ಲೀಷ್ ಸಾಮ್ರಾಜ್ಯ ಬೆಳೆಯಿತು ಮತ್ತೆ ಕಳೆದುಹೋಯಿತು. ತಮ್ಮದೇ ಆದ ತಂತ್ರವನ್ನು ಜಗದೆಲ್ಲೆಡೆ ಸಾರುತ್ತೇವೆಂದು ಮಾವೋವಾದಿಗಳು, ಸಮತಾವಾದಿಗಳು ಹೋರಾಡುತ್ತಲೇ ಪ್ರಾಣಬಿಟ್ಟರು. ತಮ್ಮದೇ ಮತ ದೊಡ್ಡದು, ತಮ್ಮ ಧರ್ಮವೇ ನಿಜವಾದ ವಿಶ್ವ ಧರ್ಮವೆಂದು ಎಂದೋ ಘಟಿಸಿ ಆಗಿ ಹೋದ ಪ್ರವಾದಿಗಳ ಹೆಸರಿನಲ್ಲಿ ಕಾಡು-ಮೇಡು, ಗುಡ್ಡ-ಬೆಟ್ಟ, ನದಿ-ದ್ವೀಪಗಳನ್ನೆಲ್ಲ ಗುಡ್ಡೆ ಹಾಕಿ ತಮ್ಮ ಮತವನ್ನು ಸ್ಠಾಪಿಸಿಕೊಂಡರು, So what? ಯೂರೋಪಿನ ಸ್ಪೇನ್ ದೇಶದ ಮೂಲೆಯಲ್ಲಿ ಒಂದು ಕರ್ಚೀಫ಼ಿನ ಅಗಲದಷ್ಟು ಹರಡಿಕೊಂಡು ತನ್ನ ಅಸ್ತಿತ್ವವನ್ನೇ ಇನ್ನೂ ಸರಿಯಾಗಿ ಕಂಡುಕೊಳ್ಳದ ಪೋರ್ಚುಗೀಸರು ದೂರದ ದಕ್ಷಿಣ ಅಮೇರಿಕದ ಅರ್ಧ ಭಾಗದಷ್ಟು ದೊಡ್ಡದಾದ ಬ್ರೆಜಿಲ್ ದೇಶದ ಮೇಲೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ದಬ್ಬಾಳಿಕೆಯನ್ನು ಹೇರಲೇಬೇಕಿತ್ತೇನು? ಹಾಗಿಲ್ಲದಿದ್ದರೆ ಅವರೇನು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಸಾಯುತ್ತಿದ್ದರೇನು? ಈ ಮಾನವನ ಕ್ಷುಲ್ಲಕ ತಂತ್ರಗಳನ್ನು ಒಂದೇ ಒಂದು ಮಾತಿನಲ್ಲಿ ಹೇಳುವುದಾದರೆ, ಹುಟ್ಟಿ ಹೋರಾಡುತ್ತಲೇ ಹತನಾಗುವ ಹುಲುಮಾನವನಿಗೆ ಸುಖವೆನ್ನುವ ಅದ್ಯಾವ ಮರೀಚಿಕೆಯ ಹಂಬಲವಿದ್ದಿರಬಹುದು?


ತನ್ನ ಸುಖದ ಚೌಕಟ್ಟಿಗೆ ಒಳಪಡದಿರುವುದು ಅಸುಖ ಎಂದುಕೊಳ್ಳುವುದೇ ತಪ್ಪು. ಚೀನಾ ದೇಶದ ಜನರಿಗೆ ಹಾವು-ಹಲ್ಲಿ-ಸರೀಸೃಪಗಳನ್ನು ತಿಂದು ತೇಗುವ ಬಯಕೆ, ಅವರು ಮಾಡಿಕೊಳ್ಳಲಿ. ದೂರದ ಆಸ್ಟ್ರೇಲಿಯ ದೇಶವಾಸಿಗಳು ಕಾಂಗರೂ ಪ್ರಾಣಿಯನ್ನು ತಿಂದು ಆನಂದಿಸಲಿ, ಅದು ಅವರ ಪರಿಸರ ಕೊಟ್ಟ ಬಳುವಳಿ. ಇನ್ನೆಲ್ಲೋ ಮೆಕ್ಸಿಕೋ ದೇಶದಲ್ಲಿ ಕೆಲವರು ಜಿರಲೆಗಳನ್ನು ತಿಂಡಿಯಾಗಿ ತಿನ್ನಲಿ. ಮಂಗೋಲಿಯಾ, ಕಜಾಕ್‌ಸ್ತಾನ್‌ದವರು ಕುದುರೆ ಮಾಂಸವನ್ನು ತಿನ್ನವಂತೆ, ತೈವಾನ್-ವಿಯೆಟ್ನಾಮ್ ದೇಶವಾಸಿಗಳು ನಾಯಿ-ಬೆಕ್ಕುಗಳನ್ನು ತಿನ್ನಲಿ - ಅದರಲ್ಲಿ ಅವರವರ ಸಂತೋಷ ಆಯಾ ದೇಶವಾಸಿಗಳ ಅಗತ್ಯ-ಅನುಕೂಲಗಳನ್ನು ಹೊಂದಿಕೊಂಡಿದೆ. ಇದನ್ನೇ ದೊಡ್ಡ ಕಾನೂನನ್ನಾಗಿ ಮಾಡಿ ಎಲ್ಲರೂ ನಮ್ಮ ಪಾಕಶಾಸ್ತ್ರವನ್ನೇ ಬಳಸಿ, ನಮ್ಮ ಅಡುಗೆಯ ವಿಧಾನವೇ ವಿಶೇಷವಾದುದು ಎಂದು ತಮಟೆ ಸಾರಿಸಿಕೊಂಡರೆ? ಒಂದು ಹೆಜ್ಜೆ ಮುಂದೆ ಹೋಗಿ ಅದನ್ನೇ ಇನ್ನೊಬ್ಬರ ಮೇಲೆ ಹೇರಿಬಿಟ್ಟರೆ? ಭೂಮಿಯ ಸಮಭಾಜಕ ವೃತ್ತದ ಆಸುಪಾಸಿನಲ್ಲಿ ದಿನವಿಡೀ ಉರಿಬಿಸಿಲಿನಲ್ಲಿ ಬದುಕುವವರಿಗೂ ಉತ್ತರ-ದಕ್ಷಿಣ ಧೃವ ಪ್ರದೇಶಗಳ ಹತ್ತಿರ ಬದುಕುವ ಜನರ ಆಗು-ಹೋಗು, ಆಚಾರ-ವಿಚಾರ, ಉಡುಗೆ-ತೊಡುಗೆ, ಊಟ-ವಿಶೇಷಗಳಲ್ಲಿ ವ್ಯತ್ಯಾಸಗಳಿರುವುದು ಸಹಜವೇ. ಸಮುದ್ರಕ್ಕೆ ಹತ್ತಿರವಾದವನಿಗೆ ನದೀ ಮೂಲವನ್ನು ಅರಸಿ ಹೋಗುವ ಅಗತ್ಯವಿಲ್ಲ, ನೀರು- ನದಿಗಳು ಅವನಿದ್ದಲ್ಲೇ ಬರುವುದು ಸಹಜ. ಅಂತೆಯೇ, ಗುಡ್ಡ-ಗವಿಗಳಲ್ಲಿ ಬದುಕುವ ಮಾನವನಿಗೆ, ಮಿತವಾಗಿ ದೊರಕುವ ನೀರೊಂದು ಅಗತ್ಯದ ವಸ್ತುವಷ್ಟೇ. ಹಾಗಾಗಿ ಸುಖ-ಸಮೃದ್ಧಿ ಎನ್ನುವುದು ಅವರವರ ಸ್ಥಳವನ್ನು ಅವಲಂಬಿಸಿದೆ ಎಂದಾಯ್ತು!


***

ಸುಖವೆನ್ನುವ ಪರಮಾರ್ಥವನ್ನು ಅರಸಿಕೊಂಡು ಹೋಗಬೇಕಾದ ಅಗತ್ಯ ಯಾರಿಗೂ ಇಲ್ಲ. ತನ್ನೊಳಗೆ ಮತ್ತು ಹೊರಗೆ ಸಿಗುವ ಆ ಸುಖಮಯ ಕ್ಷಣಗಳನ್ನು ಅನುಭವಿಸುವ ರಸಾನುಭೂತಿಯನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಹೇರಳವಾದ ಕತ್ತಲಿದ್ದಲ್ಲಿ ಒಂದು ಚಿಕ್ಕ ಹಣತೆ ತನ್ನ ಪ್ರಕಾಶವನ್ನು ಚೆಲ್ಲುವ ಹಾಗೆ, ಕತ್ತಲಿನಿಂದ ಕತ್ತಲಿಗೆ ಸೇರುವ ಈ ಬದುಕು ಅಂತಹ ಹಣತೆಗಳ ಬೆಳಕನ್ನು ನಂಬಬೇಕಾಗುವುದು ತಾರ್ಕಿಕವಾದದ್ದು. ಸುಖವನ್ನು ಹುಡುಕದೇ ತನ್ನೊಳಗೆ ಹುದುಗಿದ ಭಾವನೆಗಳನ್ನು ಜಾಲಾಡುತ್ತಾ ಹೋದ ಹಾಗೆ ಸುಖ ಕಾಣುವುದು ಖಂಡಿತ, ಎನ್ನುವುದು ಈ ಹೊತ್ತಿನ ತತ್ವ!

Sunday, December 05, 2021

ಸಾಕು ಬೇಕುಗಳ ಮರ್ಮ

ಪ್ರಪಂಚದಲ್ಲಿ ನೂರಕ್ಕೆ ಒಂಬತ್ತು ಜನ ದಿನದ ಊಟದ ಬಗ್ಗೆ ಚಿಂತೆ ಮಾಡ್ತಾರಂತೆ.  ನೂರರಲ್ಲಿ 12 ಜನಕ್ಕೆ ಅಕ್ಷರ ಬರೋದಿಲ್ಲವಂತೆ.  ಎಲ್ಲಕ್ಕಿಂತ ಮುಖ್ಯವಾಗಿ ನೂರರಲ್ಲಿ 11 ಜನ ಬಡತನದಲ್ಲಿ ಬದುಕುತ್ತಾರಂತೆ.  ಅಮೇರಿಕ ಅಭಿವೃದ್ಧಿ ಹೊಂದಿದ ದೇಶವಾದರೂ, ಇಲ್ಲಿನ ಕಾಲು ಭಾಗದಷ್ಟು ಜನರಿಗೆ ನಿವೃತ್ತಿಯಾದ ಮೇಲೆ ಬದುಕಲು ಯಾವುದೇ ಉಳಿತಾಯವೂ ಇಲ್ಲವಂತೆ.  ಈ ಅಂಕಿ ಅಂಶಗಳನ್ನೆಲ್ಲ ಸುಮ್ಮನೆ ನೀವು ಅಂತರ್ಜಾಲದಲ್ಲಿ ಹುಡುಕಿದರೆ ಅನೇಕ ಸಮೀಕ್ಷೆ ಮತ್ತು ಅಧ್ಯಯನಗಳ ಮೂಲಕ ದೊರೆಯುತ್ತವೆ.

ನಾವು ಹಣಕಾಸಿನ ವಿಚಾರದಲ್ಲಿ ನಮ್ಮ ನಿಲುವನ್ನು ಕಂಡುಕೊಳ್ಳುವಷ್ಟರಲ್ಲಿ ನಮ್ಮ ಜೀವನದ ಅರ್ಧ ಆಯಸ್ಸಿನ ಸಮೀಪ ಬಂದಿರುತ್ತೇವೆ.   ಅರ್ಧ ಜೀವನದ ತರುವಾಯ ಅನೀರೀಕ್ಷಿತವಾಗಿ ಹಲವಾರು ತೊಂದರೆಗಳು ಬಂದು, ಅವರವರ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಬಹುದಾದರೂ ಹೆಚ್ಚಿನವರು ತಮ್ಮ ನಿವೃತ್ತಿಯ ಬದುಕಿನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಯೋಚಿಸಿಯೇ ಇರುತ್ತಾರೆ.  ಇಂತಹ ಸಮಯದಲ್ಲಿಯೇ ನಮ್ಮ ರಿಸ್ಕ್ ಮ್ಯಾನೇಜ್‌ಮೆಂಟ್ ಪ್ರಕ್ರಿಯೆ ಜಾಗರೂಕವಾಗಿರುವುದು.  ನಿಮ್ಮ ಬಳಿ ಇರುವ ಹಣವನ್ನು ಕೇವಲ ಐದೇ ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎನ್ನುವ ಹೂಡಿಕೆಗಳಲ್ಲಿ ತೊಡಗಿಸಲು ಇದು ಸೂಕ್ತ ಸಮಯವಾಗಿರುವುದಿಲ್ಲ.

ಹಾಗೇ, ಒಂದು ಕುಟುಂಬದ ಜೀವನ "ಸೆಟಲ್" ಆಗುವ ಕಡೆಗೆ ಹೋಗುವುದೂ ಇದೇ ಸಮಯದಲ್ಲಿಯೇ.  ಒಬ್ಬರ ವಯೋಮಾನದ ನಲವತ್ತರಿಂದ ಐವತ್ತರ ಹರೆಯದಲ್ಲಿ ಹೆಚ್ಚು ಖರ್ಚುಗಳು ಸಂಭವಿಸುತ್ತವೆ ಎಂದುಕೊಂಡರೆ, ಐವತ್ತರಿಂದ ಅರವತ್ತರ ದಶಕದಲ್ಲಿ ಖರ್ಚುಗಳು ಕಡಿಮೆ ಎಂದುಕೊಳ್ಳಬೇಕಾಗುತ್ತದೆ. ಒಮ್ಮೆ ಅರವತ್ತು ಮುಂದೆ ಎಪ್ಪತ್ತು ಕಳೆದ ನಂತರ ಖರ್ಚುಗಳು ಇನ್ನೂ ಕಡಿಮೆ ಆಗಿ, ಮುಂದೆ ಅಗತ್ಯಕ್ಕಿಂತ ಹೆಚ್ಚು ಹಣ ಬಿದ್ದು ಕೊಳೆಯತೊಡಗುತ್ತದೆ.

ಇಂತಹ ಸಮಯದಲ್ಲಿಯೇ, ಮುಂದುವರೆದ ದೇಶಗಳಲ್ಲಿ Philanthropy, Giving, Charity, Social Responsibility, Humanitarianism... ಮೊದಲಾದ ಪದಗಳ ಬಳಕೆ ಹೆಚ್ಚು ಅನ್ವಯವಾಗೋದು.  ಇಪ್ಪತ್ತರ ಹರೆಯದಲ್ಲಿರುವ ದಂಪತಿಗಳು ಚಾರಿಟಿಯ ವಿಚಾರದಲ್ಲಿ ಸ್ಪಂದಿಸಬಾರಂದೇನೂ ಇಲ್ಲ, ಆದರೆ, ಅವರು ಚಾರಿಟಿಗೆ ಸಂಬಂಧಿಸಿದ್ದನ್ನು ಹೇಗೆ ಸ್ವೀಕರಿಸುತ್ತಾರೋ, ಅದೇ ಎಪ್ಪತ್ತರ ಹರೆಯದಲ್ಲಿರುವ ದಂಪತಿಗಳು ಈ ಪದವನ್ನು ಸ್ವೀಕರಿಸುವ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ.

***

ಮಾನವ ಮಾನವನಿಗೆ ಸಹಾಯ ಮಾಡಲು ಸಾಧ್ಯವಿದೇಯೇ? ಮಾಡಬೇಕೋ ಬೇಡವೋ, ಎಷ್ಟು ಮಾಡಿದರೆ ಒಳ್ಳೆಯದು ಅಥವಾ ಇಲ್ಲ? ಯಾರು ಯಾರಿಗಾದರೂ ಏಕೆ ಸಹಾಯ ಮಾಡಬೇಕು? ದೇವರು ಸೃಷ್ಟಿಸಿದ ಈ ಸೃಷ್ಟಿಯನ್ನು ದೇವರೇ ನಿಯಂತ್ರಿಸಿಕೊಳ್ಳುತ್ತಾನಾದ್ದರಿಂದ ಅದರಲ್ಲಿ ಹುಲುಮಾನವರದ್ದೇನು ಪಾತ್ರ?  ಅಥವಾ ಖಾಯಿಲೆಗೆ ಔಷಧಿಯನ್ನು ಕಂಡು ಹಿಡಿಯುವ ವಿಜ್ಞಾನಿಯ ಕೆಲಸದ ಹಾಗೇಯೇ ಒಬ್ಬ ಔದ್ಯಮಿ ತನ್ನ ಸಂಪನ್ಮೂಲಗಳ ಸಹಾಯದಿಂದ ಸಮಾಜದ ಏಳಿಗೆಗೆ ಶ್ರಮಿಸುವುದು ನ್ಯಾಯವಲ್ಲವೇ?  ಕಣ್ಣಿಗೆ ಕಾಣದ ವೈರಾಣುಗಳ ವಿರುದ್ಧ ಇಡೀ ಪ್ರಪಂಚವೇ ಹೋರಾಡುತ್ತಿಲ್ಲವೇ ಹಾಗೇಯೇ ಮುಂದೆ ಎಂದಾದರೂ ದುಷ್ಟ ಜಂತುಗಳೋ, ಅನ್ಯ ಗ್ರಹದ ಜೀವಿಗಳೋ ಬಂದು ಆಕ್ರಮಣ ಮಾಡಿದರೆಂದರೆ ಇಡೀ ಮನುಕುಲವೇ ಒಂದಾಗಿ ನಿಂತು ಹೋರಾಡುವುದಿಲ್ಲವೇ?

ತಮ್ಮ ತಮ್ಮ ಕರ್ತ್ಯವ್ಯವನ್ನು ಎಲ್ಲರೂ ನಿಭಾಯಿಸಿಕೊಂಡು ಹೋಗುವುದು ನ್ಯಾಯ.  ಅಂತಹ ಒಂದು ಕರ್ತ್ಯವ್ಯದ ತುಣುಕಾಗಿ ನಮ್ಮ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ.  ನಮ್ಮೆಲ್ಲರಲ್ಲಿ ಸಾಮಾನ್ಯ ಜನರೇ ಹೆಚ್ಚು, ಅಪರೂಪಕ್ಕೊಮ್ಮೆ ವಿಶೇಷವಾಗಿರುವ ಜನರನ್ನು ಭೇಟಿಯಾಗುತ್ತೇವೆಯೇ ವಿನಾ, ನಾವೆಲ್ಲರೂ ಜನ ಸಾಮಾನ್ಯರು.  ಆದರೆ, ನಮ್ಮಂತಹ ಸಾಮಾನ್ಯರಲ್ಲಿ ಒಂದು ಶಕ್ತಿ ಇದೆ, ಅದು ನಮ್ಮ ಸಂಖ್ಯೆ.  ಜನಸಾಮಾನ್ಯರೆಲ್ಲ ಒಂದು ದೊಡ್ಡ ಸಂಘಟನೆಯ ಅಡಿಯಲ್ಲಿ ಒಂದಾದಾಗ ಒಂದು ಮಹಾ ಕ್ರಾಂತಿಯಾಗುತ್ತದೆ, ಒಂದು ಸಂಗ್ರಾಮ ನಡೆಯುತ್ತದೆ, ಒಂದು ವ್ಯವಸ್ಥೆಯ ಪರವಾಗಿಯೋ ವಿರುದ್ಧವಾಗಿಯೋ ಒಂದು ಮಹಾ ಆಂದೋಲನವೇ ಹುಟ್ಟುತ್ತದೆ. ಮುಂದಾಳುತನದ ವಿಚಾರದಲ್ಲಿ ಅನೇಕ ನಾಯಕರನ್ನು ನಾವು ಹೆಸರಿಸಬಹುದಾದರೂ, ವಿಶ್ವದ ಎಲ್ಲ ಚಳವಳಿಯ ಶಕ್ತಿಯಾಗಿ ಜನಸಾಮಾನ್ಯರೇ ಇರುವುದು.  ಈ ಜನಸಾಮಾನ್ಯರನ್ನು ಯಾವುದೋ ಒಂದು ಕಾರಣಕ್ಕೆ ಬಂಧಿಸಿ ಅವರನ್ನು ಒಪ್ಪಿಸಿ ಹೋರಾಡುವಂತೆ ಮಾಡುವುದು ಇದೆಯಲ್ಲ, ಅದು ಸಾಮಾನ್ಯರಿಗೆ ಆಗುವ ಕೆಲಸವಲ್ಲ. ಆದರೆ, ಪ್ರತಿಯೊಬ್ಬ ಸಾಮಾನ್ಯನೂ ಕಡಿಮೆ ಎಂದರೆ ಒಂದಲ್ಲ ಒಂದರ ಪರ ಅಥವಾ ವಿರುದ್ಧ ಸಂಘಟಿತಗೊಳ್ಳುವ ಅವಕಾಶ ಇದೆ.  ಯಾವುದಕ್ಕೂ ಸ್ಪಂದಿಸದೇ ಬದುಕುವುದೆಂದರೆ, ಅಂತಹ ಬದುಕಿಗೆ ಒಂದು ಅರ್ಥವಾದರೂ ಹೇಗೆ ಬಂದೀತು!

ಇತ್ತೀಚೆಗೆ, ಒಂದೂವರೆ ಬಿಲಿಯನ್ ಅಷ್ಟು ಸಂಪತ್ತು (ನೆಟ್‌ವರ್ತ್) ಇರುವ ಶ್ರೀಮಂತ ಕುಟುಂಬವೊಂದು ಸುಮಾರು ಐವತ್ತು ಮಿಲಿಯನ್ ಅನ್ನು ಕ್ಯಾನ್ಸರ್‌ಗೆ ಸಂಬಂಧಿಸಿದ ಒಳ್ಳೆಯ ಬೆಳವಣಿಗೆಯೊಂದಕ್ಕೆ ದಾನ ಮಾಡಿದ ನಿದರ್ಶನವೊಂದು ಸಿಕ್ಕಿತು.  ಒಂದಿಷ್ಟು ಸೊನ್ನೆಗಳನ್ನು ಕಡಿಮೆ ಮಾಡಿ ನೋಡಿದರೆ, ಒಂದು ಮಿಲಿಯನ್ ಸಂಪತ್ತು ಇರುವ ಎಷ್ಟು ಜನರು ಸುಮಾರು 33 ಸಾವಿರ ಡಾಲರುಗಳನ್ನು ಒಂದು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಬಲ್ಲರು? ಇಂಗ್ಲೀಷಿನಲ್ಲಿ ಟೈದ್ (Tithe) ಎನ್ನುವ ಒಂದು ಪರಂಪರೆ ಕಂಡುಬರುತ್ತದೆ.  ಇದು ಮುಖ್ಯವಾಗಿ ಕ್ರಿಶ್ಚಿಯನ್ ಸಮೂಹದಲ್ಲಿ, ಆಯಾ ಕುಟುಂಬಗಳು ತಮ್ಮ ಆದಾಯದ ಮೊದಲ ಹತ್ತನೇ ಒಂದು ಭಾಗದಷ್ಟನ್ನು ಸಂಬಂಧಿಸಿದ ಚರ್ಚುಗಳಿಗೆ ದಾನವಾಗಿ ಕೊಡುವುದು ಎಂದರ್ಥ ಮಾಡಿಕೊಳ್ಳಬಹುದು.  ಆದರೆ, ನಮ್ಮ ಭಾರತೀಯ ಮೂಲದಲ್ಲಿ ಈ ರೀತಿಯ ಆಚರಣೆ ಕಡಿಮೆ.  ಫ಼ಿಲಾಂತ್ರೊಪಿ, ಚಾರಿಟಿ ಮೊದಲಾದ ಪದಗಳು ನಮಗೆ ಹೊಸದಾಗಿ ಕೇಳಿಬರಬಹುದು.  ಆದರೆ, ನಮ್ಮಲ್ಲೂ ಸಹ ಈ ರೀತಿಯ ದೇಣಿಗೆಗಳು, ಕೊಡುಗೆಗಳು ಇದ್ದವು.  ಅನೇಕ ದತ್ತಿ ಛತ್ರಗಳು ನಡೆಯುತ್ತಿದ್ದವು.  ರಾಜಾಶ್ರಯದಲ್ಲಿ ಅನೇಕ ಉಸ್ತುವಾರಿ ಯೋಜನೆಗಳು ನಡೆಯುತ್ತಿದ್ದವು, ಅನ್ನದಾಸೋಹಗಳು ಇದ್ದವು.  ಎಷ್ಟೋ ಹಳ್ಳಿ-ಪಟ್ಟಣಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ನೋಡಿಕೊಳ್ಳಲಾಗುತ್ತಿತ್ತು.  ಆದರೆ, ನಮ್ಮಲ್ಲಿ ನಮ್ಮ ಆದಾಯದ ಮೊದಲ ಹತ್ತನೇ ಒಂದು ಭಾಗವನ್ನು ನಾವೆಲ್ಲರೂ ಎಂದೂ ಯಾರಿಗೂ ಕೊಟ್ಟಿಲ್ಲ.  ಹೀಗೆ ಕೊಟ್ಟ ಹಣ ಹೇಗೆ ಬಳಕೆಗೆ ಬರುತ್ತದೆ, ಅದರಿಂದ ಏನೇನಾಗಬಹುದು, ಇಲ್ಲ ಎನ್ನುವುದನ್ನು ಇಲ್ಲಿ ಚರ್ಚಿಸುವುದಕ್ಕಿಂತ - ಹೀಗೂ ಕೊಡಬಹುದು ಎನ್ನುವ ಪ್ರಕ್ರಿಯೆಯ ಬಗ್ಗೆ ಯೋಚಿಸೋಣ. ಒಳ್ಳೆಯದೋ, ಕೆಟ್ಟದ್ದೋ - ಕೈ ಬಿಚ್ಚಿ ಕೊಟ್ಟರೆ ತಾನೇ ಅದರಿಂದ ಏನೋ ಒಂದು ಆಗುವುದು?  ಒಳ್ಳೆಯದು ಅಥವಾ ಒಳ್ಳೆಯದಲ್ಲದ್ದು ಎನ್ನುವುದನ್ನು ನೀವು ನಾಣ್ಯದ ಯಾವ ಮುಖವನ್ನು ನೋಡಿ ಮಾತನಾಡುತ್ತಿದ್ದೀರಿ ಎನ್ನುವುದರ ಮೇಲೆ ತಾನೇ ನಿರ್ಣಯವಾಗೋದು?

***

ಬಹದ್ದೂರ್ ಗಂಡು ಚಿತ್ರದಲ್ಲಿ ಚಿ. ಉದಯಶಂಕರ್ ಅವರು ಬರೆದು, ಎಂ. ರಂಗಾರಾವ್ ಸಂಗೀತ ನೀಡಿದ ಜನಪ್ರಿಯ ಹಾಡಿನೊಂದರ ಸಾಲುಗಳು ನೆನಪಾಗುತ್ತವೆ:

ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?

ಮೀಸೆ ತಿರುವಿ ಕುಣಿದೋರೆಲ್ಲ ಮಣ್ಣಾದರು!

ಈ ಸಾಲುಗಳ ಮರ್ಮವನ್ನು ಎರಡು ಕಾರಣಕ್ಕಾಗಿ ಯೋಚಿಸಿಕೊಳ್ಳಬೇಕು.  ಮೊದಲನೆಯದಾಗಿ, ಯಾರು ಎಷ್ಟೇ ಆಸ್ತಿ-ಪಾಸ್ತಿ ಮಾಡಿ ಕೂಡಿಟ್ಟರೂ ಎಲ್ಲರೂ ಒಂದು ದಿನ ಅದನ್ನು ಬಿಟ್ಟು ಹೋಗಲೇ ಬೇಕು.  ಯಾರ ಚಟ್ಟದ ಹಿಂದೆಯೂ ಒಂದು ಸರಕಿನ ಲಾರಿಯನ್ನು ಏನೂ ಅವರು ತೆಗೆದುಕೊಂಡು ಹೋಗೋದಿಲ್ಲವಲ್ಲ!  ಎರಡನೆಯದಾಗಿ, ಈಗಾಗಲೇ ಕೋಟ್ಯಾಂಟರ ರೂಪಾಯಿಗಳ ಆಸ್ತಿಯನ್ನು ಮಾಡಿಟ್ಟು, ತಮ್ಮ ಜೀವನದ ಅರ್ಧ ಆಯಸ್ಸಿಗಿಂತಲೂ ಹೆಚ್ಚನ್ನು ಕಳೆದು, ಇನ್ನೇನು ನಿವೃತ್ತಿಯ ಹೊಸ್ತಿಲಿನಲ್ಲಿ ನಿಂತು ನೋಡುತ್ತಿರುವ ಎಲ್ಲ ಮಹಾನುಭಾವರೂ ತಮ್ಮ ಆಸ್ತಿಯ ಹತ್ತನೇ ಒಂದು ಭಾಗವನ್ನು ತಮ್ಮ ತಮ್ಮ ಹೆಸರಿನ ಫ಼ೌಂಡೇಶನ್‌ನ ಹೆಸರಿನಲ್ಲಿ ಸಮಾಜದ ಏಳಿಗೆಗೆ ಏಕೆ ಬಳಸಬಾರದು?

ಕೊನೇ ಪಕ್ಷ, ವಿಶ್ವದ ಎಲ್ಲ ಮಿಲಿಯನ್-ಬಿಲಿಯನ್ನೈರುಗಳು ತಮ್ಮ ಸಂಪತ್ತಿನ ಸಾವಿರದ ಒಂದು ಭಾಗವನ್ನು ತಮ್ಮ ತಮ್ಮ ನೆರೆಹೊರೆಯನ್ನು ಚೊಕ್ಕಗೊಳಿಸುವುದಕ್ಕೆ, ಅಭಿವೃದ್ಧಿಗೊಳಿಸುವುದಕ್ಕೆ, ಆರೋಗ್ಯಪೂರ್ಣವಾಗಿಸುವುದಕ್ಕೆ ಬಳಸಿಕೊಂಡಿದ್ದೇ ಆದರೆ, ನಮ್ಮ ಸಮಾಜಕ್ಕೆ ಅಂಟಿದ ಕಷ್ಟಗಳು ಅರ್ಧಕರ್ಧ ಕಡಿಮೆಯಾದಾವು.  ಅದು ಯಾವುದೂ ಬೇಡ, ಪ್ರಪಂಚದ ಒಂಬತ್ತು ಪರ್ಸೆಂಟು ಜನ ದಿನ ರಾತ್ರಿ ಊಟವಿಲ್ಲದೇ ಮಲಗುವುದಾದರೂ ತಪ್ಪೀತು. ಸಾಕು ಮತ್ತು ಬೇಕು ಎನ್ನುವ ಈ ಎರಡು ಪದಗಳ ಮರ್ಮವನ್ನು ಬಲ್ಲವರಿಗೆ, ಕೈ ಮುಂದು ಮಾಡಿ ಕೊಡಲು ಕಷ್ಟವಾಗೋದಿಲ್ಲ.  ನಾವೆಲ್ಲರೂ ನಮ್ಮ ಆದಾಯ ಮತ್ತು ಸಂಪತ್ತಿನ ಹತ್ತು ಪರ್ಸೆಂಟು ಕೊಡೋದು ಬೇಡ, ವರ್ಷಕ್ಕೆ ಒಂದು ಪರ್ಸೆಂಟ್ ಅನ್ನು ಯಾವುದಾದರೊಂದು ಅಭ್ಯುದಯಕ್ಕೆ ಬಳಸಿದರೆ, ಅದೆಷ್ಟೋ ಅನುಕೂಲಗಳಾಗುತ್ತವೆ ಎನ್ನುವುದೇ ಈ ಹೊತ್ತಿನ ತತ್ವ.

Thursday, May 07, 2020

ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

***
ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

***

ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

Tuesday, February 09, 2010

ಬೀಳದೇ ಏಳೋದಾದರೂ ಹೇಗೆ?

ಹೀಗೇ ಒಂದು ಛಳಿಗಾಲದ ದಿನ, ಮಧ್ಯಾಹ್ನ ಆಗಿ ಸಂಜೆ ನಾಲ್ಕು ಘಂಟೆ ಹೊತ್ತಿಗೆಲ್ಲಾ ಅದನ್ನು ದಿನ ಎನ್ನಬೇಕೋ, ಕತ್ತಲು ಎನ್ನಬೇಕೋ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದಾದಂತಹ ಮಸುಕು ಮುಸುಕಿದ ಮುಸ್ಸಂಜೆ. ಈಗಲೋ ಆಗಲೋ ಉಸಿರು ಕಳೆದುಕೊಂಡು ಹೋಗೇ ಬಿಟ್ಟ ಎನ್ನುವ ಸೂರ್ಯನನ್ನು ಸಂತೈಸುವ ಹಾಗೆ ಅಲ್ಲಲ್ಲಿ ಬಿದ್ದುಕೊಂಡು ಛಳಿಗೆ ಗಟ್ಟಿಯಾಗಿ ಮುಖ ಸಿಂಡರಿಸಿಕೊಂಡ ಹಿಮದ ತುಕುಡಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಬೆಳಕಿನ ಸೈನಿಕರ ಉತ್ಸಾಹ ಕತ್ತಲಿನ ಶತ್ರುಗಳ ಎದುರು ಸಂಪೂರ್ಣವಾಗಿ ಕಳೆದು ಹೋಗದ ಹಾಗೆ ಕಾಪಾಡಿಕೊಂಡಿದ್ದವು. ಯಾವತ್ತಿನಂತೆ ರಸ್ತೆಗಳು ಊರ್ಧ್ವಮುಖಿಗಳಾಗಿ ತಮ್ಮನ್ನು ತಾವು ಸೇವೆಗೆ ಒಪ್ಪಿಸಿಕೊಂಡಿದ್ದರೂ ಕಪ್ಪಗಿನ ರಸ್ತೆಗಳ ಮೇಲೆ ಬೂದಿ ಬಳಿದುಕೊಂಡ ಹಾಗಿನ ಛಾಯೆ ಯಾಕೋ ಮುಂಬರುವ ಕೆಟ್ಟದ್ದನ್ನು ತಾವು ಬಲ್ಲೆವು ಎಂಬಂತೆ ಅಜ್ಜ-ಮುತ್ತಾತರ ಭಂಗಿಯಲ್ಲಿ ಇದ್ದವು. ನಮ್ಮ ಮನೆಯ ಡ್ರೈವ್‌ ವೇ ತನ್ನ ಮೇಲಿನ ಅರ್ಧ ಇಂಚು ದಪ್ಪಗಿನ ಐಸ್ ಲೇಯರ್‌ನ್ ಅವಶೇಷಗಳಡಿಯಲ್ಲಿ ಸಮಾಧಿಯಾಗಿತ್ತು, ನಮ್ಮ ಮನೆಯ ಮೇಲ್ ಬಾಕ್ಸ್ Mohawk Indian ಹೇರ್ ಸ್ಟೈಲ್ ಮಾಡಿಕೊಂಡು ತನ್ನ ಮೇಲೆ ಒಂದು ರೀತಿಯ ಚೂಪನೆ ಐಸ್ ಪದರವನ್ನು ನಿರ್ಮಿಸಿಕೊಂಡಿತ್ತು, ಅದರ ಬುಡದಲ್ಲಿ ಲಾಲಿ ಪಾಪ್ ನೆಕ್ಕಿ ಬಣ್ಣದ ಜೊಲ್ಲು ಸುರಿಸುವ ಮುಗ್ಧ ಮಗುವಿನಂತೆ ಬಿಸಿಲಿಗೆ ಕರಗಿ ಐಸ್ ನೀರಾಗುತ್ತ ನೀರಾಗುತ್ತ ಹನಿಗಳು ಅಲ್ಲಲ್ಲಿ ಹೆಪ್ಪು ಕಟ್ಟಿಕೊಂಡು ಮೇಲ್ ಬಾಕ್ಸ್ ಸಂರಕ್ಷರ ಹಾಗಿನ ಚೂಪುಗಳನ್ನು ನಿರ್ಮಿಸಿಕೊಂಡಿದ್ದವು.

ಬ್ಲ್ಮೂಮ್‌ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು, ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು. ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ’ಬಿಸಿಲೇ ಇರಲಿ, ಮಳೆಯೇ ಇರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ…’ ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು, ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ. ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು, ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್‌ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು.

ಮನೆಯ ಟ್ರ್ಯಾಷ್ ಕ್ಯಾನುಗಳನ್ನು ಎತ್ತಿಡುತ್ತಾ ನಾನು ’ನಿಧಾನವಾಗಿ ನಡೆಯಬೇಕು, ಬಿದ್ದರೆ ಅಷ್ಟೇ ಗತಿ…’ ಎಂದು ಏನೇನೆಲ್ಲ ಮನಸ್ಸಿನ್ನಲ್ಲಿ ಅಂದುಕೊಂಡರೂ, ಅಂದುಕೊಂಡವುಗಳು ಪ್ರಯೋಜನಕ್ಕೆ ಬಾರವು ಏನಿದ್ದರೂ ಕ್ರಿಯಾಶೀಲತೆ ಮುಖ್ಯ ಎನ್ನುವ ವಿಧಿ ಕಣ್ಣು ತೆಗೆದು ಕಣ್ಣು ಬಿಡುವಷ್ಟರಲ್ಲಿ ನನ್ನ ಕಾಲುಗಳು ತಲೆಗಿಂತ ಮೊದಲು ಹೋಗತೊಡಗಿ ದೊಪ್ಪನೆ ಜಾರಿ ಬಿದ್ದದ್ದಾಯಿತು. ಕೈ ಊರಿ ಎದ್ದು, ಮೈ ಕೈ ಕೊಡವಿಕೊಂಡು ಸುಧಾರಿಸಿಕೊಳ್ಳೂತ್ತಾ ಸದ್ಯ ಯಾವುದೇ ಎಲುಬು ಮುರಿಯಲಿಲ್ಲ ಎಂದು ಸಮಾಧಾನ ಪಡುವಂತಾಯಿತು. ಕತ್ತಲಿನ ದಯೆಗೆ ನಾನು ನೆಲಕ್ಕೆ ಅಪ್ಪಳಿಸಿದ ದೃಷ್ಯ ಜನಜನಿತವಾಗಲಿಲ್ಲ. ನೆಲದಲ್ಲಿನ ಐಸ್ ಪದರ ನಮಗೇನೂ ಆಗಿಲ್ಲ ಎಂದು ಬೀಗಿದಂತೆ ಕಾಣಿಸಿತು. ನಾನು ಚೆಲ್ಲಾ ಪಿಲ್ಲಿಯಾದ ಟ್ರ್ಯಾಷ್ ಕ್ಯಾನ್‌ಗಳನ್ನು ಮತ್ತೆ ಎತ್ತಿಟ್ಟು ಕೆಲಸ ಮುಂದುವರೆಸಿದೆ.

ಈ ಏಳು-ಬೀಳುಗಳು ಸಹಜ, ಆದರೆ ವಯಸ್ಸಾಗುತ್ತಾ ಬಂದ ಹಾಗೆ ಬೀಳುಗಳ ಬಗ್ಗೆ ಗಮನಕೊಡಬೇಕಾಗುತ್ತದೆ, ಎಲ್ಲ ಬೀಳುಗಳೂ ಏಳುಗಳಲ್ಲಿ ಕೊನೆಯಾಗಬೇಕು ಎಂದೇನೂ ಇಲ್ಲ. ಬಹಳ ಸರಳವಾದ ಸಿದ್ಧಾಂತ, ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದು ಸರಿ, ಆದರೆ ಹೆಚ್ಚಿನ ರಿಟರ್ನ್ ಬಯಸಿದಂತೆ ಅಲ್ಲಿ ರಿಸ್ಕ್ ಹೆಚ್ಚಾಗುತ್ತದೆ, ಎಲ್ಲರಿಗೂ ಎಲ್ಲ ರಿಸ್ಕ್ ಟೇಕಿಂಗ್ ಸ್ಟ್ರಾಟೆಜಿ ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸೇಫ್ಟಿ ಫರ್ಸ್ಟ್ ಎಂದುಕೊಂಡು ಯಾವುದು ನಮ್ಮ ಹಿತರಕ್ಷಣೆಯನ್ನು ಮಾಡಬಹುದೋ ಅಂತಹ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಇವೆಲ್ಲ ಗುಡ್ ಎಕನಾಮಿಕ್ಸ್ ಇಂಡಿಕೇಟರುಗಳು, ಹೂಡಿಕೆಯ ಮೂಲಭೂತ ಅಂಶಗಳು – ಇವುಗಳ ಬಗ್ಗೆ ಅದೆಷ್ಟೇ ಪಬ್ಲಿಷ್ ಆಗಿದ್ದರೂ ಸಹ ಬೀಳುವವರು ಮಾತ್ರ ಕಡಿಮೆಯಾಗೋದಿಲ್ಲ. ಅದರಲ್ಲೂ ನನ್ನಂತಹವರು ಎಲ್ಲವನ್ನು ತಮ್ಮಷ್ಟಕ್ಕೇ ತಾವೇ ಅನುಭವಿಸಿ ನೋಡುತ್ತೇವೆ ಎಂದು ಕಂಕಣ ತೊಟ್ಟುಕೊಂಡಿರುವಾಗ…ಯಾವ ಉಪದೇಶ ಎಲ್ಲಿಯ ಲೆಕ್ಕ ಬಿಡಿ. ಬೀಳದೇ ಏಳೋದಾದರೂ ಹೇಗೆ? ಒಮ್ಮೆ ಬಿದ್ದ ಅನುಭವದ ಲೆಕ್ಕಕ್ಕೆ ಮತ್ತೆ-ಮತ್ತೆ ಮೇಲೆ ಹೋಗುವ ರಿಯಾಯತಿ ಸಿಗಬಹುದೇ? ಬಿದ್ದರೆ ಮಾತ್ರ ಏಳಲು ಬಿಡುತ್ತೇನೆ ಎನ್ನುವ ಆಟದ ನಿಯಮಗಳನ್ನು ಯಾರು ಬರೆದವರು? ಅದನ್ನೇಕೆ ನಾವು ಒಪ್ಪಿಕೊಳ್ಳಬೇಕು? ಈ ಒಪ್ಪಿಕೊಳ್ಳದ ನಿಯಮಕ್ಕೆ ಬೀಳುವ-ಏಳುವ ಅನುಪಾತಗಳನ್ನಾದರೂ ಸಮತೂಕ ಮಾಡಬೇಕು ಎನ್ನುವ ಹಂಬಲವೇಕಿಲ್ಲ? ಕೆಟ್ಟ ಮೇಲೆ ಬುದ್ದಿ ಬಂದದ್ದು ಎಲ್ಲಿ ಹೋಯಿತು, ಅದು ಮತ್ತೆ-ಮತ್ತೆ ನಮ್ಮನ್ನು ಬೀಳದಂತೆ ತಡೆಹಿಡಿಯೋದರಲ್ಲಿ ವಿಫಲವಾಗೋದೇಕೆ?

ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ. ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ. ಇವತ್ತಿಲ್ಲದಿದ್ದರೆ ನಾಳೆ, ಇಂದಲ್ಲದಿದ್ದರೆ ಮುಂದೆ ಎನ್ನುವ ಆಶಾವಾದ ತಿಪ್ಪೆ ಸಾರುವ ಸಗಣಿಯಾಗುತ್ತದೆ. ಮುಂದಿನ ಜನ್ಮದಲ್ಲಿ ಮಾಡಿದರೆ ಆಯಿತು ಎನ್ನುವುದು ನನಗದು ಬೇಕೇ ಬೇಕು ಎಂದು ಹಠ ಹಿಡಿದ ಮಗುವಿಗೆ ನಾಳೆ ಕೊಡುತ್ತೇನೆ ಎಂದು ಸಾಂತ್ವನ ಹೇಳುವ ಒಣ ತತ್ವವಾಗುತ್ತದೆ. ಏನೆಲ್ಲವನ್ನು ಮಾಡಬೇಕು ಎನ್ನುವ ಉನ್ಮಾದ ಏನೂ ಮಾಡಿಲ್ಲವಲ್ಲ ಎನ್ನುವ ಉದ್ವೇಗದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹದ ನೀರಿನ ಒಂದು ಭಾಗವಾಗುತ್ತದೆ. ಅವರವರ ತೂಕಕ್ಕೆ ಅವರವರ ಸಾಮರ್ಥ್ಯಕ್ಕೆ ಬೀಳದೇ ಎದ್ದೋ ಅಥವಾ ಎದ್ದು ಬಿದ್ದೋ ನೆಲೆ ನಿಲ್ಲಿಸುವ ಗುರುತ್ವಾಕರ್ಷಣ ಶಕ್ತಿ ಈ ಹೊತ್ತಿನ ತತ್ವದ ಮಹಾ ಲೆವೆಲ್ಲರ್ ಆಗಿಬಿಡುತ್ತದೆ.

Sunday, August 30, 2009

ನಾವೂ ನಮ್ಮ ವೆಕೇಷನ್ನೂ...

ನಮ್ಮ ಆಫೀಸಿನಲ್ಲಿ ಸಮ್ಮರ್ ಬಂತೆಂದರೆ ವೆಕೇಷನ್ನುಗಳ ಅಧಿಕೃತ ಆರಂಭವೆಂದೇ ಅರ್ಥ. ಮಾರ್ಚ್‌ಗೆ ಆರಂಭವಾಗುವ ಸ್ಪ್ರಿಂಗ್ ತನ್ನ ಆಗಮನದ ಜೊತೆಗೆ ಒಂದಿಷ್ಟು ಚಿಗುರುಗಳಲ್ಲಿ ಹುರುಪನ್ನು ಮೂಡಿಸುತ್ತದೆಯೇ ವಿನಾ ವಾತಾವರಣದ ಉಷ್ಣತೆ ಎಪ್ಪತ್ತು ಡಿಗ್ರಿ (ಫ್ಯಾರನ್‌ಹೈಟ್) ಮೇಲೆ ಏರಿ ಸುಯ್ ಎಂದು ತೀಡುವ ಮೃದುವಾದ ಗಾಳಿಯಿಂದ ರೋಮಾಂಚನವಾಗುವುದರಿಂದ ಹಿಡಿದು ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಷ್ಟರಲ್ಲಿ ಸಮ್ಮರ್ ಹೋಗೇ ಬಿಟ್ಟಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಶಾಲೆಗಳಿಗೆ ರಜೆ, ಪೋಷಕರು ತಮ್ಮ ಮಕ್ಕಳನ್ನು ವರ್ಷಾವಧಿ ವೆಕೇಷನ್ನುಗಳಿಗೆ ಕೊಂಡೊಯ್ಯುವುದು ಕುಟುಂಬ ರೂಢಿ.

ನಾನು ನ್ಯೂ ಜೆರ್ಸಿಯಲ್ಲಿ ನೋಡಿರೋ ಹಾಗೆ ಅನಫಿಷಿಯಲ್ ಸಮ್ಮರ್ ಎಂದರೆ ಮೇ ತಿಂಗಳ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕ್ ಎಂಡ್ ನಿಂದ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ. ಜೂನ್-ಜುಲೈ-ಆಗಷ್ಟ್ ಇವೇ ಮೂರು ತಿಂಗಳು, ಅದೇನು ಕಡಿದು ಹಾಕುತ್ತೀರೋ ಬಿಡುತ್ತೀರೋ, ಇವೇ ವರ್ಷದ ಉಳಿದ ಒಂಭತ್ತು ತಿಂಗಳನ್ನು ಸಹಿಸಿಕೊಳ್ಳುವಂತೆ, ಪ್ರತಿ ಸಮ್ಮರ್‌ನಲ್ಲಿ ಹೊಸದೇನನ್ನೋ ಸೃಷ್ಟಿಸುವಂತೆ ನಮ್ಮನ್ನೆಲ್ಲ ಕಟ್ಟಿ ಹಾಕಿರೋದು.

ಸಾಗರದ ಎಲ್.ಬಿ. ಕಾಲೇಜಿನಲ್ಲಿ ಓದಿಕೊಂಡಿರುವಾಗ ಇದ್ದಿಲು ಒಲೆಗೆ ಬೆಂಕಿ ತಗಲಿಸಿ ಹೊಟ್ಟೆ ತುಂಬಿಕೊಂಡ ಕರ್ಮ ಇನ್ನೂ ಮುಗಿದಿಲ್ಲವೇನೋ ಅನ್ನೋ ಹಾಗೆ ನಮ್ಮನೆ ಡೆಕ್ ನಲ್ಲಿ ಇರುವ ಕಲ್ಲಿದ್ದಲು ಗ್ರಿಲ್‌ ಏಪ್ರಿಲ್ ಅಂಚಿನಲ್ಲಿ ಬೇಸ್‌ಮೆಂಟ್ ನಿಂದ ಡೆಕ್‌ ಮೇಲೆ ಬಂದು ಇದ್ದಿಲಿಗೂ ನನಗೂ ಇರುವ ಋಣವನ್ನು ನೆನಪಿಸಿಕೊಡುತ್ತದೆ. ’ವೆಜಿಟೇರಿಯುನ್ನ್ ಜನ ನೀವೇನು ಗ್ರಿಲ್ ಮಾಡ್ತೀರಿ?’ ಎನ್ನೋರು ವಿಸ್ಮಿತರಾಗುವ ಹಾಗೆ ನನ್ನ ವೆಜಿಟೇರಿಯನ್ನ್ ಗ್ರಿಲ್ಲಿಂಗ್ ಪುರಾಣವನ್ನೆಲ್ಲ ಹೊರಗೆ ತೆಗೆದಿಡುತ್ತೇನೆ. ಈ ಕಲ್ಲಿದ್ದಲು ಶಾಖ ಎಷ್ಟು ಜೋರು ಅಂದ್ರೆ ಸರಿಯಾಗಿ ಮ್ಯಾನೇಜ್ ಮಾಡಿದ್ರೆ ಒಂದು ದಿನದ ಊಟ-ವ್ಯವಸ್ಥೆಯನ್ನು ಈ ಗ್ರಿಲ್ ಒಲೆಯಲ್ಲೇ ಮಾಡಿಬಿಡಬಹುದು. ಅಮೇರಿಕನ್ ಊಟದ ಪದ್ಧತಿಯ ಹಾಗೆ ನಾವು ಒಂದಿಷ್ಟು ವೆಜಿಟೇರಿಯನ್ ಪ್ಯಾಟ್ಟಿಗಳು, ಉಪ್ಪು-ಹುಳಿ-ಖಾರ ಸವರಿದ ಗೊಂಜೋಳ, ಸ್ಕಿವರ್‌ಗೆ ಪೋಣಿಸಿದ ಥರಥರ ತರಕಾರಿಗಳು, ಚಿಪ್ಸ್ ಮುಳುಗಿಸಿ ತಿನ್ನಲಿಕ್ಕೆ ಮಾವಿನ ಹಣ್ಣಿನ ಚಟ್ನಿ (ಸಾಲ್ಸಾ), ಸವತೆಕಾಯಿ ತುಂಡುಗಳು, ಮಾವಿನ ಹಣ್ಣು, ಮನೆಯಲ್ಲೇ ಮಾಡಿದ ಲಿಂಬೆ ಪಾನಕ (ಲೆಮನೇಡ್), ಹಲವು ಥರದ ಬ್ರೆಡ್ಡು, ಕೆಚಪ್, ಸುಟ್ಟ ಈರುಳ್ಳಿ, ರೆಡ್ ವೈನ್ ಮೊದಲಾದವುಗಳನ್ನು ನಮ್ಮ ಬ್ಯಾಕ್ ಯಾರ್ಡ್‌ನಲ್ಲಿ ಹರಡಿಕೊಂಡು ವರ್ಷದ ಒಂದಿಷ್ಟು ದಿನಗಳು ಮನೆಯಲ್ಲೇ "ಪಿಕ್‌ನಿಕ್" ಮಾಡೋದು ರೂಢಿ. ಇವುಗಳ ಜೊತೆಗೆ ಮೆಣಸಿನ ಕಾಯಿ ಬೋಂಡಾ, ಆಲೂಗಡ್ಡೆ ಬಜ್ಜಿ ಹಾಗೂ ಪನ್ಕೋಡಾ ಸೇರಿಕೊಂಡು ನಮ್ಮ ಸಮ್ಮರ್ ಪಾರ್ಟಿಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತವೆ. ಸ್ವಿಚ್ ಒತ್ತಿ ಗ್ಯಾಸ್ ಗ್ರಿಲ್ ಮೇಲೆ ಒಂದೇ ಕ್ಷಣದಲ್ಲಿ ಬರ್ಗರ್‌ಗಳನ್ನು ಮಾಡುವುದಕ್ಕಿಂತ ಕಲ್ಲಿದ್ದಲ ಗ್ರಿಲ್ ಹೊತ್ತಿಸಿ ಅದಕ್ಕೆ ಗಾಳಿ ಬೀಸಿ ನಿಧಾನವಾಗಿ ಹೊತ್ತಿ ಉರಿಯುವ ಬೆಂಕಿಯಲ್ಲಿ ದಿನದ ಒಂದೆರಡು ಘಂಟೆ ಹೊರಗಿರುವುದು ಸುಖ ತರುತ್ತದೆ. ನಮ್ಮ ಅತಿಥಿಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಹುಟ್ಟುತ್ತದೆ.

ಆದರೆ ಇವು ಯಾವುದೂ ನಮ್ಮ ವೇಕೇಷನ್ನ್ ಅಲ್ಲವೇ ಅಲ್ಲ. ಬಾರ್ ಬೇ ಕ್ಯೂ ಏನಿದ್ದರೂ ವಾರಾಂತ್ಯದಲ್ಲಿ ನಾವು ಮನೆಯಿಂದ ಹೊರಗಿರುವ ಪ್ರಯತ್ನವಷ್ಟೇ. ಇನ್ನು ಎಲ್ಲರಂತೆ ಪಡೆದುಕೊಳ್ಳುವ ನಮ್ಮ ವೆಕೇಶನ್ನ್ ದಿನಗಳು ಎಲ್ಲಿಗೆ ಹೋಗುತ್ತವೆ, ಹೋಗಿಬಿಟ್ಟವು. ವರ್ಷಕ್ಕೆ ಒಂದೋ ಎರಡೋ ಬಾರಿ ಸಮುದ್ರ ಇನ್ನೂ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವ ಹಾಗೆ ಬೀಚ್‌ಗೆ ಹೋಗುವುದು ವೇಕೇಷನ್ನ್ ಅಲ್ಲ. ಮುಂದಿನ ವರ್ಷ ನೋಡೋಣ ಎನ್ನುತ್ತಲೇ ಮುಂದೆ ತಳ್ಳುತ್ತ ಬಂದ ಡಿಸ್ನಿ ವರ್ಲ್ಡ್ ಮತ್ತು ಇತರ ಸ್ಥಳೀಯ ಆಕರ್ಷಣೆಗಳು ಇನ್ನೂ ಪುಸ್ತಕದ ಗಂಟಾಗೇ ಉಳಿದಿವೆ. ನಮ್ಮ ಮನೆಯಿಂದ ಕೇವಲ ಐವತ್ತೇ ಮೈಲು ದೂರದ ನ್ಯೂ ಯಾರ್ಕ್ ನಗರವನ್ನು ನೋಡೋದು ಯಾವಾಗಲೋ ಒಂದು ಬಾರಿ, ’ಯಾರು ಹೋಗುತ್ತಾರೆ ಅಲ್ಲಿಗೆ, ಹಳ್ಳ-ಕೊಳ್ಳವನ್ನು ದಾಟಿ’ ಎನ್ನುವ ಉದಾಸೀನ ಗೆದ್ದು ಬಿಡುತ್ತದೆ. ಅಮೇರಿಕದ ನಮ್ಮ ಬದುಕಿನಲ್ಲಿ ಆಫೀಸಿನ ಕೆಲಸ, ಕಾರ್ಯ ಹಾಗೂ ಅದರ ಸಂಬಂಧಿ ಯೋಚನೆಗಳನ್ನು ತೆಗೆದು ಹಾಕಿ ಬಿಟ್ಟರೆ ನಮ್ಮದು ಎಂದು ಉಳಿಯುವ ಭಾಗ ಬಹಳ ಕಡಿಮೆಯೇ ಎನ್ನಿಸಿ ಒಮ್ಮೆ ಭಯವಾಗುತ್ತದೆ.

ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುವಾಗ ವಾರಕ್ಕೆರಡು ಮತ್ತು ತಿಂಗಳಿಗೆರಡು ಸಿಗುವ ರಜೆಗಳನ್ನು ಒಟ್ಟು ಪೋಣಿಸಿಕೊಂಡು ವಾರಗಟ್ಟಲೆ ಕರ್ನಾಟಕದಲ್ಲಿ ತಿರುಗಾಡಿದರೂ ಇನ್ನೂ ಮುಗಿಯದ ಕೆಲಸಗಳು ಹವ್ಯಾಸಗಳು ಅದೆಷ್ಟೋ ಇದ್ದವು. ಇನ್ನೂ ತಂತ್ರಜ್ಞಾನ ಇಷ್ಟು ಮುಂದುವರಿಯದೆ ನಮ್ಮ ನಮ್ಮ ನಡುವೆ ಅಗಾಧ ದೂರಗಳಿದ್ದರೂ ಭೇಟಿಯಾಗಿ, ಮಾತನಾಡಿ, ಮುಟ್ಟಿ, ಹರಟಿ, ಹಾಡಿ, ಜಗಳವಾಡಿ ಮತ್ತೆ ಒಂದು ಗೂಡಿ, ಕುಣಿದು ಕುಪ್ಪಳಿಸುವ ಅನೇಕ ಚಟುವಟಿಕೆಗಳ ತುಡಿತವಿತ್ತು. ಬೇಕಾದಷ್ಟು ನೆಪಗಳಿದ್ದವು, ನೆನಪುಗಳಿದ್ದವು. ಸಾಕಷ್ಟು ಸಂಖ್ಯೆಯ ಗುರುತು-ಪರಿಚಯದವರಿದ್ದರು, ಸಂಬಂಧಿಗಳಿದ್ದರು. ತಿರುಗಲು ದೇವಸ್ಥಾನಗಳಿದ್ದವು, ಮರುಗುವ ಮನಸ್ಸಿತ್ತು. ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎನ್ನುವ ತುಡಿತವಿತ್ತು. ಸಾಹಿತ್ಯವಿತ್ತು, ಸಂಗೀತವಿತ್ತು, ಸಿನಿಮಾಗಳಿದ್ದವು, ಪುಸ್ತಕಗಳಿದ್ದವು, ನಿಯತಕಾಲಿಕಗಳಿದ್ದವು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಾರ್ಗದಲ್ಲಿ ಓದಿ ಮುಗಿಸಿದ ಅದೆಷ್ಟೋ ಲಂಕೇಶ್, ಸುಧಾ, ತರಂಗ, ಮಯೂರ, ಉತ್ಥಾನ, ಮಲ್ಲಿಗೆ, ಪ್ರಜಾಮತದ ವಾಹಿನಿಗಳಿದ್ದವು. ಊರಿಗೊಂದಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬೇಂದ್ರೆ, ಭೈರಪ್ಪ, ತರಾಸು, ಕಾರಂತ, ಮಾಸ್ತಿ, ಕುವೆಂಪು ಮೊದಲಾದ ಸ್ನೇಹಿತರ ಅನುಭವಗಳು ಅನಂತವಾಗಿ ಹಾಗೂ ಪುಕ್ಕಟೆಯಾಗಿ ಸಿಗುತ್ತಿದ್ದವು. ಇಂತಹ ಅಪರಿಮಿತ ಅನುಭವಗಳನ್ನು ಪಠಿಸಿ-ಪ್ರವಚಿಸಿದ ಘಟಾನುಗಟಿಗಳ ಸಾರ ಸುಲಭವಾಗಿ ಸಿಗುತ್ತಿತ್ತು. ಹಲವಾರು ತತ್ವಗಳು ಸಿಗುತ್ತಿದ್ದವು - ಒಂದು ರೀತಿ ಬಯಲಿನಲ್ಲಿ ಮೇಯುವ ದನಕ್ಕೆ ಸಿಗುವ ಅವಕಾಶದ ಹಾಗೆ, ಅಂತಹ ಅಗಾಧವಾದ ಅನೇಕಾನೇಕ ಬಯಲುಗಳು ಮೇಯಲಿದ್ದವು.

ಇವೆಲ್ಲದರ ಬಗ್ಗೆ ಈಗ ಬರೀತಾ ಹೋದರೆ ಅದು ಸವಿ ನೆನಪಾಗುತ್ತದೆ, ಅದರ ಮರುಘಳಿಗೆ ಅದು ನಾಸ್ಟಾಲ್ಜಿಯಾವಾಗಿ ಕಾಣುತ್ತದೆ. ಆದರೆ ಈವರೆಗೆ ಒಂದು ವಿಷಯವಂತೂ ಸತ್ಯ - ನಾವು, ನಮ್ಮ ವೇಕೇಷನ್ನುಗಳು, ನಮ್ಮ ದುಡಿಮೆ-ಇಡುಗಂಟು ಇವೆಲ್ಲದರ ಸಾಕ್ಷಾತ್ಕಾರ ಈ ಮೇಲಿನ ನಾಸ್ಟಾಲ್ಜಿಯಾದೊಂದಿಗೆ ಮಾತ್ರವೇ. ಅದನ್ನು ಹೊರತು ಪಡಿಸಿ, ಅಮೇರಿಕದಲ್ಲಿ ನಮ್ಮ ವೇಕೇಷನ್ನುಗಳಿಗೆ ಪೂರ್ಣ ಅರ್ಥ ಬಂದಿದ್ದಿಲ್ಲ, ನಮ್ಮ ಅರ್ಥ ಪರಿಸ್ಥಿತಿ ಪರಿಪೂರ್ಣವಾದದ್ದಿಲ್ಲ. ನಿಜವಾಗಿಯೂ ನಮ್ಮತನವನ್ನು ಕಲಕಿ ನೋಡುವ ವೆಕೇಷನ್ನುಗಳು ಕೆಲವು ಪುಣ್ಯಾತ್ಮರಿಗೆ ವರ್ಷಕ್ಕೊಮ್ಮೆ ಬರುತ್ತವೆ, ಇನ್ನು ಕೆಲವು ನಮ್ಮಂಥವರಿಗೆ ಮೂರು-ನಾಲ್ಕು ವರ್ಷಕ್ಕೊಮ್ಮೆ ಕೂಡಿ ಬರುತ್ತದೆ. ಬರೀ ವಿದೇಶ ಪ್ರಯಾಣದ ಯೋಗವೊಂದಿದ್ದರೆ ಸಾಲದು, ಮತ್ತೆ ಮರಳಿ ಸ್ವದೇಶವನ್ನು ಆಗಾಗ್ಗೆ ನೋಡುವ ಯೋಗವೂ ಇರಬೇಕು ಎನ್ನುವ ಆಲೋಚನೆ ಬಂದಿದ್ದು ಇತ್ತೀಚೆಗೆ ಮಾತ್ರ.

ಹಿಂದೆ ಎರಡು ಭುಜಗಳಿದ್ದ ಮನಕ್ಕೆ ಇಂದು ಎಂಟು ರೆಕ್ಕೆಗಳಿವೆ, ಎಲ್ಲಿಗಾದರೂ ಹೋಗಬೇಕು ಬರಬೇಕು ಎಂದರೆ ಅದರ ಮುಂದಿನ ತಯಾರಿ ಮತ್ತು ಅದರ ನಂತರದ ಚಿಂತೆಗಳು ಅನಿವಾರ್ಯವಾಗುತ್ತವೆ. ಹಣ ಹೆದರಿಕೆ ಎರಡೂ ಒಂದೇ ನಾಣ್ಯದ ಮುಖಗಳ ಹಾಗೆ ಒಂದನ್ನೊಂದು ಅನುಸರಿಸಿಕೊಂಡು ಬಂದಿವೆ - ಹಿಂದೆ ಹೆಗ್ಗೋಡಿನಿಂದ ಸಾಗರಕ್ಕೆ ನಿನಾಸಂ ನಾಟಕ ಮುಗಿಸಿ ನಡೆದುಕೊಂಡು ಬಂದಾಗ ಕತ್ತಲಿನ ದಾರಿಯಲ್ಲಿ ಹಾವಿದ್ದರೆ ಎನ್ನುವ ಹೆದರಿಕೆ ಇರಲಿಲ್ಲ, ಇಂದು ಕಾರಿನಲ್ಲಿ ಬೆಚ್ಚಗೆ ಕುಳಿತು ರಾತ್ರಿ ಡ್ರೈವ್ ಮಾಡುತ್ತಿದ್ದರೆ ರಸ್ತೆಯ ನಡುವೆ ಜಿಂಕೆಗಳು ಬಂದರೆ ಎಂದು ಕಂಪನ ಶುರುವಾಗುತ್ತದೆ.

ವರ್ಷವಿಡೀ ದುಡಿದು ಇರುವ ಮೂರು ನಾಲ್ಕು ವಾರಗಳನ್ನು ಒಟ್ಟುಗೂಡಿಸಿ ಕೆಲವು ವರ್ಷಗಳಿಗೊಮ್ಮೆ ಮಾಡುವ ಸ್ವದೇಶ ಪ್ರಯಾಣ ತರುವ ಸುಖಕ್ಕಿಂತ ಹೆಚ್ಚು ಕೆಲಸವಾಗುತ್ತದೆ, ವೆಕೇಷನ್ನಿನ್ನಲ್ಲಿ ಎಲ್ಲರೂ ಎಣಿಸಿ ಖರ್ಚು ಮಾಡುವುದಕ್ಕಿಂತ ಹೆಚ್ಚೇ ಕಾಸು ಕಳಚಿ ಹೋಗುತ್ತದೆ. ನಮ್ಮನ್ನು ಭೇಟಿಯಾಗುವವರ ಅನೇಕಾನೇಕ ಮುಖಗಳು ಅವುಗಳ ಹಿಂದಿನ ಕಥನವನ್ನು ಮನಸ್ಸಿನಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ನೆನಪಿನಲ್ಲಿರುವ ಹಾಗಿನ ಎಷ್ಟೋ ವ್ಯಕ್ತಿಗಳು ಇನ್ನೂ ಹರೆಯದವರಾಗಿರದೆ ಮುದುಕುರಾಗಿರುವುದನ್ನು ಅಪ್‌ಡೇಟ್ ಮಾಡಿಕೊಳ್ಳಲು ವಿದುಳು ಹೆಣಗುತ್ತದೆ. ಇತ್ತೀಚೆಗೆ ಕೇಳಿರದ ಅನೇಕ ಪದ-ವಾಕ್ಯಗಳ ಬಳಕೆ ಬೆಚ್ಚಿ ಬೀಳಿಸುತ್ತದೆ. ಅಲ್ಲಲ್ಲಿ ಕೇಳಿಬರುವ ಸಿನಿಮಾ ಹಾಡುಗಳು ಹೊಸದಾಗೇ ಉಳಿಯುತ್ತವೆ. ಹುಟ್ಟಿದ ಹೊಸಬರು, ಸತ್ತ ಹಳೆಯವರನ್ನು ಕುಟುಂಬಗಳ ಹಿನ್ನೆಲೆಯಲ್ಲಿ ತಾಳೆ ಹಾಕಿಕೊಳ್ಳುವುದು ಮುಗಿಯದ ಲೆಕ್ಕವಾಗುತ್ತದೆ.

’ನಾಲ್ಕು ವಾರ ವೆಕೆಷೆನ್ನಾ...’ ಎಂದು ಕೇಳಿ ಬರುವ ಉದ್ಗಾರಗಳಿಗೆ ಉತ್ತರವಾಗಿ ’ನಮ್ಮ ವೆಕೇಷನ್ನುಗಳ ಹಣೆಬರಹ ಇವರಿಗೇನು ಗೊತ್ತು!’ ಎನ್ನುವ ಹೇಳಿಕೆ ಮನದಲ್ಲೇ ಉಳಿದುಬಿಡುತದೆ. ವೆಕೇಷನ್ನಿಗೆ ಹೋಗುವುದಕ್ಕಿಂತ ಮೊದಲು ಹಾಗೂ ವೆಕೇಷನ್ನಿಂದ ಬಂದ ನಂತರ ಕೆಲಸಗಳು ಮಾತ್ರ ಅತಿಯಾಗಿ ಹೋಗುತ್ತವೆ. ಪ್ರತಿವರ್ಷ ಹೀಗೆ ಹೋಗಬೇಕು ಎನ್ನುವ ಆಸೆ, ಆಸೆಯಾಗಿಯೇ ಉಳಿದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮೂರು-ನಾಲ್ಕು ವರ್ಷಗಳಿಗೊಮ್ಮೆಯಾಗಿ ಬಿಡುತ್ತದೆ.

Saturday, December 06, 2008

ಈ ತತ್ವಗಳ ಹಣೇಬರಾನೇ ಇಷ್ಟು...

...ಅಂತ ಅನ್ಸಿದ್ದು ಇತ್ತೀಚೆಗಷ್ಟೇ ಏನಲ್ಲ, ಆದ್ರೆ ಈ ಹೊತ್ತಿನ ತತ್ವದ ಹಿನ್ನೆಲೆಗೆ ಒಂದು ಸಮಜಾಯಿಷಿಯಂತೂ ಖಂಡಿತ ಇದೆ. ನಾನು ನನ್ನ ಕ್ರೆಡಿಟ್ ಕಾರ್ಡ್ ಬಿಲ್ಲುಗಳನ್ನ ಸಮಯ ಸಿಕ್ಕಾಗ ರಿವ್ಯೂವ್ ಮಾಡ್ತಾ ಇದ್ದಾಗ ಒಂದು ಸಂಗತಿ ಗೊತ್ತಾಯಿತು, ಆದೇನಂದರೆ ನನ್ನ ಸಂಬಳದ ಒಂದು ಅಂಶ ನಿಯಮಿತವಾಗಿ ವಾಲ್‌ಮಾರ್ಟ್ ಹಾಗೂ ಸಾಮ್ಸ್‌ಕ್ಲಬ್‌ಗೆ ಹೋಗ್ತಾ ಇರೋದು! ಅಂದ್ರೆ ಅದೇನು ಇಲ್ಲೀಗಲ್ ಟ್ರಾನ್ಸಾಕ್ಷನ್ನ್ ಅಲ್ಲ, ನಾನೇ ಹೋಗಿ ಬಂದು ಅಲ್ಲಿ ಖರೀದಿ ಮಾಡಿದ ಸಾಮಾನಿನ ಪ್ರತಿಯಾಗಿ ಅವರು ನನ್ನ ಕ್ರೆಡಿಟ್ ಕಾರ್ಡಿನಿಂದ ಎಳೆದುಕೊಂಡ ಹಣ, ಎಲ್ಲ ನ್ಯಾಯವಾದ್ದೇ ಅದ್ರಲ್ಲೇನೂ ತಪ್ಪಿಲ್ಲ ಬಿಡಿ. ಆದ್ರೆ, ಇತ್ತೀಚೆಗೆ ಪ್ರತೀ ತಿಂಗಳು ವಾಲ್‌ಮಾರ್ಟ್, ಸ್ಯಾಮ್ಸ್‌ಕ್ಲಬ್ಬಿಗೆ ಹೋಗಿ ಅಲ್ಲಿ ಖರೀದಿ ಮಾಡಿ ತರುವ ಸಾಮಾನುಗಳ ಪಟ್ಟಿ ಬೆಳೆದಿದ್ದು ಹೇಗೆ? ಮೊದ್ಲೆಲ್ಲ ಆ ಸ್ಟೋರುಗಳಿಂದ ದೂರವಿರಬೇಕು ಎಂಬ ಪಣತೊಟ್ಟ ತ್ರಿವಿಕ್ರಮನಂತೆ ನಾನು ದೂರವಿದ್ದು ಕೊನೆಗೆ ಬೇತಾಳನ ಸವಾಲಿಗೆ ಸರಿಯಾಗಿ ಉತ್ತರ ಹೇಳಿಯೂ ಅದು ಹೆಗಲು ಬಿಟ್ಟು ಹಾರಿ ಹೋಗಿ ಕೊನೆಗೆ ಕೊಂಬೆಗೆ ನೇತಾಡುವ ರೀತಿಯಲ್ಲಿ ನಾನು ವಾಲ್‌ಮಾರ್ಟ್ ಅಂಗಡಿಯಿಂದ ದೂರವಿದ್ದಷ್ಟೂ ಅದಕ್ಕೆ ಹತ್ತಿರ ಹತ್ತಿರ ಹೋಗಿ ಕೊನೆಗೆ ನನ್ನ ಹೆಚ್ಚಿನ ಪರ್ಚೇಸುಗಳೆಲ್ಲ ಅವೇ ಅಂಗಡಿಯಿಂದ ಆಗುತ್ತಿದೆ ಏನಾಶ್ಚರ್ಯ!

ವಾಲ್‌ಮಾರ್ಟ್ ಅಂದರೆ ನನಗೇನೂ ಅಲರ್ಜಿ ಇಲ್ಲ, ಆದರೆ ಅದು ಅಮೇರಿಕನ್ ಕ್ಯಾಪಿಟಲಿಸಮ್ ಅನ್ನು ಪರಮಾವಧಿ ಮುಟ್ಟಿಸಿರುವ ಕಂಪನಿ ಎಂದೂ; ಆ ಅಂಗಡಿಗಳಲ್ಲಿ ಸಾಮಾನುಗಳನ್ನು ಕಡಿಮೆ ದರದಲ್ಲಿ ಮಾರಬೇಕಾಗುವಲ್ಲಿ ಬೇಕಾದಷ್ಟು ತಂತ್ರಗಳನ್ನು ಅಳವಡಿಸಿ ಅದನ್ನು ಅನುಸರಿಸಿರುತ್ತಾರೆಂತಲೂ; ನಮ್ಮ ಊರಿನ ಹಾಗೂ ನೆರೆಹೊರೆಯವರು ನೆಲಸಮಾಧಿಯಾಗುವಷ್ಟು ಮಟ್ಟಿನ ಸ್ಪರ್ಧೆಯನ್ನು ಒಡ್ಡುವುದರಲ್ಲಿ ನಿಸ್ಸೀಮರೆಂತಲೂ, ಮಿಲಿಯನ್ನ್‌ಗಟ್ಟಲೆ ಜನರನ್ನು ಎಂಪ್ಲಾಯ್ ಮಾಡಿಕೊಂಡಿದ್ದರೂ ಗ್ರಾಹಕರಿಗೆ ಬೇಕಾದ ಸಮಯದಲ್ಲಿ ಕಷ್ಟಮರ್ ಸರ್ವೀಸ್ ಹೇಳ ಹೆಸರಿಲ್ಲದೇ ನೀಲಿ ಓವರ್‌ಕೋಟ್ ಧರಿಸಿದ ಯಾವೊಬ್ಬರೂ ಕಣ್ಣಿಗೆ ಬೀಳೋದೇ ಇಲ್ಲವೆಂತಲೂ; ಗೋಲ್ಡ್‌‌ಫಿಶ್‌ನಿಂದ ಹಿಡಿದು ಒಣ ಸಗಣಿಯವರೆಗೆ (ಉತ್ಪ್ರೇಕ್ಷೆ) ಒಂದೇ ಸೂರಿನಡಿಯಲ್ಲಿ ಉದ್ದಾನುದ್ದ ಸ್ಟೋರುಗಳಲ್ಲಿ ಮಾರಿ ಗ್ರಾಹಕರಿಗೆ ತಲೆಕೆಡಿಸುತ್ತಾರೆಂತಲೂ; ಘಂಟೆಗೆ ಎಂಟು-ಹತ್ತು ಡಾಲರ್‌ ಕೊಟ್ಟು ಬೆನಿಫಿಟ್ ಹೆಸರಿನಲ್ಲಿ ಎಂಪ್ಲಾಯಿಗಳನ್ನು ಶೋಷಿಸುತ್ತಾರೆಂತಲೂ, ಇತ್ಯಾದಿ ಇತ್ಯಾದಿಯಾಗಿ ಬಹಳಷ್ಟು ಹೇಳಲಾಗದ ಕಾರಣಗಳಿಂದ ನಾನು ದೂರವಿರಬೇಕು ಎಂಬುದು ನನ್ನ ತತ್ವವಾಗಿತ್ತು.

ಈ ಹೇಟ್ರೆಡ್ ಹಿಂದೆ ಕೆಲವು ನಿಜ ಅಂಶಗಳೂ ಇನ್ನು ಕೆಲವು ನಾನೇ ಕಲ್ಪಿಸಿಕೊಂಡವುಗಳೂ ಇರಲಿಕ್ಕೆ ಸಾಕು, ಕೈಲಾಗದವನು ಮೈಯೆಲ್ಲಾ ಪರಚಿಕೊಂಡನಂತೆ ಹಾಗೆ. ನಾನು ಯಾವುದನ್ನು ಬಹಳಷ್ಟು ದ್ವೇಷಿಸುತ್ತೇನೆಯೋ ಅದಕ್ಕೇ ನಾನು ಹೆಚ್ಚು ಹೆಚ್ಚು ಜೋತು ಬೀಳುವ ನಿದರ್ಶನ ಇವತ್ತು ನಿನ್ನೆಯದಲ್ಲ - ಆ ಪಟ್ಟಿಗೆ ಇಂದು ವಾಲ್‌ಮಾರ್ಟ್ ಅನ್ನೂ ಸೇರಿಸಿಕೊಂಡಿದ್ದೇನೆ. (ಆ ಪಟ್ಟಿಯ ಇನ್ನುಳಿದವುಗಳೆಂದರೆ - ನಾನು ಮದ್ರಾಸ್ ಅನ್ನು ಮನಸಾ ದ್ವೇಷಿಸಿದ್ದ ಪಾಡಿನಿಂದಾಗಿ ಮದ್ರಾಸಿನ ಹೊರವಲಯದಲ್ಲಿ ಹದಿನೆಂಟು ತಿಂಗಳು ಕಳೆಯುವಂತಾಗಿದ್ದು, ಅಮೇರಿಕದ ಹಾದಿಯೇ ಬೇಡವೆಂದವನಿಗೆ ಈಗ ಹತ್ತಿರ ಹತ್ತಿರ ಹನ್ನೆರಡು ವರ್ಷ "ವನವಾಸ" ತಾಗಿಕೊಂಡಿದ್ದು, ಬೆಂಗಳೂರಿನ ಕನ್ನಡಿಗರೋ, ದೇವಾ, ಅವರನ್ನು ನೀನೇ ಕಾಪಾಡಬೇಕು ಎಂದು ದ್ವೇಷಿಸಿದಂತೆ ಬೆಂಗಳೂರಿನ ಕನ್ನಡತಿಯೇ ನನ್ನ ಅರ್ಧಾಂಗಿಯಾಗಿದ್ದು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ). (ನಾನು ದ್ವೇಷಿಸಿದ್ದಲ್ಲ ಹತ್ತಿರವಾಗುತ್ತಿರುವ ನಿದರ್ಶನಗಳನ್ನು ಕಂಡರೆ ನಾಳೆಯಿಂದ ಮಿಲಿಯನ್ನುಗಟ್ಟಲೆ ಹಣಗೆಲ್ಲುವ ಲಾಟರಿ ಟೆಕೇಟ್ ಅನ್ನು ದ್ವೇಷಿಸಿದರೆ ಹೇಗೆ ಎನ್ನುವುದು ಈ ಹೊತ್ತಿನ ತತ್ವಗಳ ಉಪತತ್ವ, ಆ ಮಾತು ಬೇರೆ).

***

ಏಪ್ರಿಲ್, ೨೦೦೮ ರ ಹೊತ್ತಿಗೆಲ್ಲ ಒಂದು ಗ್ಯಾಲನ್ ಗ್ಯಾಸೋಲಿನ್ ಬೆಲೆ ಡಾಲರ್ 3.41 ಇದ್ದಿತ್ತು. ಅದು ಕ್ರಮೇಣ ನಂತರದ ಐದಾರು ತಿಂಗಳಲ್ಲಿ ಗ್ಯಾಲನ್‌ಗೆ ಡಾಲರ್ 3.99 ಆಗಿ ಹೋಗಿತ್ತು. ನಾನು ಒಮ್ಮೆ ನನ್ನ ಕಾರನ್ನು ಫಿಲ್ ಮಾಡಿಸಿದರೆ ಸುಮಾರು 65 ಡಾಲರ್ ಕೊಡಬೇಕಾದ ಪರಿಸ್ಥಿತಿ, ಎಲ್ಲರಂತೆ ನಾವೂ ಕೂಡ ಅನಗತ್ಯ ಪ್ರಯಾಣಗಳಿಗೆ ಕತ್ತರಿ ಹಾಕಿದ್ದೆವು. ಈ ಏರುತ್ತಿರುವ ಗ್ಯಾಸೋಲಿನ್ ಬೆಲೆಗೂ ಸ್ಯಾಮ್ಸ್‌ಕ್ಲಬ್ಬಿನಲ್ಲಿ ಮಾರುವ ಜೋಡಿ ಬ್ರೆಡ್ಡುಗಳ ಕಂತೆಗೂ ಎಲ್ಲೋ ಅವಿನಾಭಾವ ಸಂಬಂಧ. ಮೊದಲು ಜೋಡಿ ಬ್ರೆಡ್ ಲೋಫ್‌ಗೆ $2.07 ಇದ್ದಿದ್ದು ಮುಂದೆ $3.40 ಆಗಿ ಹೋಯಿತು. ಏನೇ ಆದ್ರೂ ಸ್ಯಾಮ್ಸ್‌ಕ್ಲಬ್ಬ್‌ನಲ್ಲಿ ದೊರೆಯುವ ಹಾಲು, ಬ್ರೆಡ್ಡುಗಳಷ್ಟು ಕಡಿಮೆ ಬೇರೆ ಯಾರೂ ಮಾರಲಿಕ್ಕಿಲ್ಲ. ಇಲ್ಲಿನ ಗೌಳಿಗರ ಮನೆಯಲ್ಲಿನ ಹಾಲೂ ಅದಕ್ಕಿಂತ ತುಟ್ಟಿಯಾಗಿದ್ದಿರಬಹುದು! ಮೊದಲೆಲ್ಲ, ಇಷ್ಟು ಎಕಾನಮಿ ಹದಗೆಟ್ಟಿರಲಿಲ್ಲ; ಒಂದು ವರ್ಷದ ಮೊದಲು ನನ್ನ ಪೋರ್ಟ್‌ಫೋಲಿಯೋ ಡಬಲ್ ಡಿಜಿಟ್ ಗೈನ್ ಮಾಡಿಕೊಂಡು ನಗುತ್ತಿತ್ತು (ಅವೆಲ್ಲ ಪೇಪರ್ ಹಣ ಮಾತ್ರ). 2008 ರ ಮಧ್ಯ ಭಾಗದಿಂದ ಶುರುವಾಯಿತು ನೋಡಿ ಕಷ್ಟಗಳು - ಒಂದೇ, ಎರಡೇ...ಬೇಕಾದಷ್ಟು. ನಾವು ಪೇ ಚೆಕ್ ನಂಬಿಕೊಂಡವರದೆಲ್ಲ ಆದಾಯ ಅಷ್ಟೇ, ಆದರೆ ಖರ್ಚು ಮಾತ್ರ ಮುಗಿಲೆತ್ತರ. ಈ ದಿನಗಳಲ್ಲೇ ಇರಬೇಕು ನಾನು ಬೇರೆಲ್ಲ ಅಂಗಡಿ ಮುಗ್ಗಟ್ಟುಗಳಿಗೆ ಹೋಗೋದನ್ನು ನಿಲ್ಲಿಸಿ ಇದ್ದುದರಲ್ಲಿ ಕಡಿಮೆ ಬೆಲೆಗೆ ಮಾರುವ ಸ್ಯಾಮ್ಸ್‌ಕ್ಲಬ್/ವಾಲ್‌ಮಾರ್ಟ್ ನಂಬಿಕೊಂಡಿದ್ದು. ಮುಂಬರುವ ದಿನಗಳು ಹೇಗೋ ಏನೋ, ಕೆಲಸವಿದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ - ಅದಕ್ಕಾಗಿ ಎಲ್ಲರೂ ಉಳಿಸುವವರೇ, ಮಿತವಾಗಿ ಖರ್ಚು ಮಾಡುವವರೇ. ನಮ್ಮ ಮನೆಗೆ ಹತ್ತಿರವಿರುವ ಎಕ್ಸಾನ್‌ನಲ್ಲಿ ಕೆಲಸ ಮಾಡುವ ಪಟೇಲ ಒಂದೇ ಶಿಫ್ಟಿನಲ್ಲಿ ಹದಿನೈದು ಸಾವಿರ ಡಾಲರ್ ವ್ಯಾಪಾರಮಾಡಿ ದೊಡ್ಡ ರೆಕಾರ್ಡ್ ಮಾಡಿದ್ದನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದ, ಆದರೆ ಇಲ್ಲಿ ಬರುವ ವಾಹನಗಳು ಕಡಿಮೆಯಾಗಿವೆ ಇತ್ತೀಚೆಗೆ ಅನ್ನೋದನ್ನೂ ಮರೆಯದೇ ಹೇಳಿದ್ದ. ಪಕ್ಕದಲ್ಲಿನ ಡಂಕಿನ್ ಡೋನಟ್ಸ್ ಅಂಗಡಿಯಲ್ಲಿ ನಾನು ಸರತಿ ಸಾಲಿನಲ್ಲಿ ನಿಂತಿರುವಂತೇ ಇಬ್ಬರು ತಮ್ಮ ಕೆಲಸ ಇತ್ತೀಚೆಗಷ್ಟೇ ಕಳೆದುಕೊಂಡಿದ್ದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೆ ಬಿತ್ತು - ಹೀಗೆ ಎಲ್ಲರದೂ ಕಷ್ಟದ ಪರಿಸ್ಥಿತಿ.

ಇನ್ನೊಬ್ಬರ ಕಷ್ಟಕ್ಕೆ ಲಘುವಾಗಿ ಸ್ಪಂದಿಸುವ ನಾನು, ಅವರ ಕಷ್ಟಗಳು ನನಗೇನಾದರೂ ಬಂದರೆ ಎಂದು ಯೋಚಿಸಿಕೊಂಡಂತೆಲ್ಲ ನನ್ನಲ್ಲಿ ಹಲವಾರು ಬದಲಾವಣೆಗಳಾಗ ತೊಡಗಿದವು: ನಮ್ಮ ಪಟ್ಟಣದ ಒಂದು ಫ್ಯಾಮಿಲಿ ಬೇಕರಿಗೆ ನಾನು ಭೇಟಿಕೊಡೋದನ್ನೇ ನಿಲ್ಲಿಸಿ ಬಿಟ್ಟೆ (ಖರೀದಿ ಮಾಡುವ ಸಾಮಾನುಗಳು ಬರೀ ಫ್ರೆಶ್ ಆಗಿದ್ದರೆ ಮಾತ್ರ ಸಾಲದು); ಅಗತ್ಯ ವಸ್ತುಗಳಿಗೆ ಈ ಕಡಿಮೆ ಬೆಲೆಯ ವಾಲ್‌ಮಾರ್ಟ್ ನಿಯಮಿತ ಭೇಟಿ ಕೊಡುವ ಸಂಗತಿಯಾಗಿ ಹೋಯಿತು; ಹೂವು/ಹಣ್ಣಿನ ಅಂಗಡಿಗಳಿಗೆ ಕಾಲಿಟ್ಟು ಎಷ್ಟೋ ತಿಂಗಳುಗಳಾಯಿತು; ಇಂಡಿಯನ್ ಫುಡ್ ಇಡುವ ಫಾಸ್ಟ್‌ಫುಡ್ ರೆಸ್ಟೋರೆಂಟುಗಳಿಗೆ ಇಂಡಿಯನ್ ಹೋಟೆಲುಗಳಿಗೆ ಹೋಗೋ ದಾರಿಯನ್ನೇ ಮರೆತದ್ದಾಯಿತು; ನನ್ನಲ್ಲಿ ಹುದುಗಿದ್ದ ಅಪ್ಪಟ ಕ್ಯಾಪಿಟಲಿಸ್ಟ್ ವಿರೋಧಿ ಮನಸ್ಥಿತಿ ಇತಿಹಾಸವಾಯಿತು; ಲೋಕಲ್ ಅಂಗಡಿಗಳು ಬದುಕಿದರೆಷ್ಟು ಬಿಟ್ಟರೆಷ್ಟು ಎನ್ನುವ ಧೋರಣೆ ತಲೆದೋರಿ ಮುಂದೆ ಅದೇ ಬದುಕಾಯಿತು; ಈ ಅಂಗಡಿಗಳಿಗೆ ಹೆಚ್ಚೆಚ್ಚು ಹೋಗಿ ಬಂದ ಫಲವಾಗಿ ಅಲ್ಲಿನ ಜಾಗೃತಿಯಂತಹ ಎಂಪ್ಲಾಯಿಗಳು ಪರಿಚಿತರಾದರು; ಆ ದೊಡ್ಡ ಅಂಗಡಿಗಳಲ್ಲೂ ಯಾವ ಯಾವ ವಸ್ತುವನ್ನು ಎಲ್ಲೆಲ್ಲಿ ಇಟ್ಟಿರುತ್ತಾರೆ ಎನ್ನುವ ಇಮೇಜ್ ತಲೆಯಲ್ಲಿ ಕೂತು ಹೋಯಿತು...ಹೀಗೆ ಅಥವಾ ಒಟ್ಟಾರೆ ನಾನು ಸಂಪೂರ್ಣ ವಾಲ್‌ಮಾರ್ಟ್ ಮಯವಾಗಿ ಹೋಗುವಂತಾಯಿತು.

***

ಅದಕ್ಕೇ ಹೇಳಿದ್ದು, ಈ ತತ್ವಗಳ ಹಣೇಬರಹವೇ ಇಷ್ಟು ಎಂದು. ನೀವು ಕೇಳಿಲ್ವೇ - ಆಚಾರ ಹೇಳೋರು ಬದನೇಕಾಯಿ ತಿನ್ನೋ ವಿಚಾರಾನ? ಈ ಬರಹ ಅದರ ಹಿಂದಿನ ಸ್ಪಂದಿಸೋ ಮನಸ್ಥಿತಿ ಇವೆಲ್ಲ ಬರೀ ಹೊಟ್ಟೆ ತುಂಬಿದ ಮೇಲಿನ ವಿಚಾರಗಳ ಆಟ್ರಿಬ್ಯೂಟ್ ಸಾರ್. ಅದ್ರಲ್ಲೇನು ಹುರುಳಿಲ್ಲ ಬಿಡಿ. ನಮ್ಮದು ನಮ್ಮ ತತ್ವ ಅಂತ ಜೋತು ಬೀಳೋದರ ಗುಂಗು ಹಾಗಿರಲಿ, ಗಾಳಿ ಬಂದಾಗ ತೋರಿಕೊಳ್ಳೋದೇ ಜಾಣತನವಾಗಿ ಹೋಗಿದೆ (ಅಷ್ಟು ಧಮ್ ಇದ್ರೆ ಗಾಳಿ ಇಲ್ದಾಗ ತೂರು ನೋಡೋಣ ಅನ್ನೋದು ಮತ್ತೊಂದು ದಿನದ ಚಾಲೆಂಜ್, ನಮಗೇ ನಾವು ಬೀಸುವ ಗಾಳಿಯನ್ನು ಸೃಷ್ಟಿ ಮಾಡೋ ತಾಕತ್ತಿದ್ದರೆ ತೂರೋ ಕಷ್ಟವೆಲ್ಲಿಂದ ಬರುತ್ತಿತ್ತು). ಆಫೀಸಿನಲ್ಲಿ struggle for existence ಆಗಿ ಹೋಗಿದೆ - ಕೆಲಸ ಕಳೆದುಕೊಂಡವರ ಬಗ್ಗೆ ಮೊದಲೆಲ್ಲ ಹಲ್ಲಿಯ ಹಾಗೆ ಲೊಚಗುಟ್ಟುತ್ತಿದ್ದವನಿಗೆ ಈಗ ಅವನು ಕಳೆದುಕೊಳ್ಳದಿದ್ದರೆ ಇನ್ಯಾರಾದರೂ (ನಾನೂ ಸೇರಿ) ಕಳೆದುಕೊಳ್ಳಬೇಕಿತ್ತು, ಅವನು ಹೋಗಿದ್ದೇ ಒಳ್ಳೆಯದಾಯ್ತು (ಎಲ್ಲಿ ನನ್ನ ಕುತ್ತಿಗೆಗೆ ಬಂದು ಬಿಡುತ್ತೋ ಎಂದು) ಎನ್ನುವ ಸಮಜಾಯಿಷಿ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುತ್ತೆ. ದುಡಿಮೆಯನ್ನು ನಂಬಿಕೊಂಡು ಬಂದ ನಮಗೆ ಇಲ್ಯಾರೂ ಇಲ್ಲಾ ಸಾರ್ ನಮ್ಮನ್ನು ಬಿಟ್ರೆ. ಊರಿನಲ್ಲಾದ್ರೆ ಆರಾಮಾಗಿ ಅಣ್ಣ ಅಕ್ಕನ ಮನೆಗೆ ಹೋಗಿ ಒಂದು ವಾರ ಇದ್ದು ಬರಬಹುದಿತ್ತು, ಇಲ್ಲಿ ಆ ಭಾಗ್ಯ ಇಲ್ಲ. ಕೆಲಸವನ್ನು ನಂಬಿಕೊಂಡು ಬದುಕೋ ನಮಗೆ ಅದೇ ಎಲ್ಲ - ನಮಗೆ ಕಣ್ಣು ತುಂಬಿ ಬರೋ ನಿದ್ರೆಯಿಂದ ಹಿಡಿದು ನಮ್ಮನ್ನು ಕಾಡುವ ಚಿಂತೆಗಳವರೆಗೆ ಕೆಲಸದ ಕುರಿತ ವಿಷಯಗಳ ಕಾರುಭಾರು. (ಹಾಗಿದ್ರೆ ಇದನ್ನೆಲ್ಲ ಬಿಟ್ಟು ಬಂದು ಬಿಡಿ, ಅನ್ನೋದು ಸುಲಭ - ಆ ಪ್ರಾಜೆಕ್ಟ್ ಕೈಗೂಡೋದಕ್ಕೆ ಕೊನೇಪಕ್ಷ ಒಂದು ವರ್ಷದ ತಯಾರಿ ಆದ್ರೂ ಬೇಕು).

ಅಷ್ಟೇ, ಮತ್ತೆನಿಲ್ಲ - ಈ ಹೊತ್ತಿನ ತತ್ವ ಅಂತ ಬರೆದೂ ಬರೆದೂ ಅವುಗಳ ಲಿಮಿಟೇಷನ್ನ್ ನಿಮಗೆ ಗೊತ್ತಾದ್ರೆ ಸಾಕು.

Sunday, February 24, 2008

ಬೆಂಕಿ-ಉರಿ-ಬೆಳಕು

ಅಗ್ಗಿಷ್ಟಿಕೆಯಲ್ಲಿ (fireplace) ಬೆಂಕಿ ನಿಗಿ ನಿಗಿ ಉರಿತಾ ಉರಿತಾ ಇರೋ ಹೊತ್ತಿಗೆ ನಾನು ಕುಳಿತುಕೊಂಡ ಜಾಗೆಯೆಲ್ಲ ಗರಂ ಆಗಿ ಹೋಗಿತ್ತು. ಬಹಳ ದಿನಗಳ ನಂತರ ಕಟ್ಟಿಗೆ ಸುಟ್ಟು ಬೂದಿ ಆಗಿ ಬೆಂಕಿ ಸಂಪೂರ್ಣ ಆರಿ ಹೋಗುವ ಕಾಯಕವನ್ನು (process) ಅನ್ನು ನೋಡೋದಕ್ಕೆ ಒಂದು ರೀತಿ ಚೆನ್ನಾಗಿತ್ತು. ನಿಧಾನವಾಗಿ ಯಾರೋ ಹೇಳಿಕೊಟ್ಟು ಹೋಗಿದ್ದಾರೆ ಅನ್ನೋ ಹಾಗೆ ಘನವಾದ ಕಟ್ಟಿಗೆ ಉರಿದು, ಬೆಂಕಿಯಾಗಿ ಕೆಂಪು ಕೆಂಡವಾಗಿ ಮುಂದೆ ಬಿಳಿ ಬೂದಿಯಾಗಿ ಹೋಗೋದು ಈ ಭಾನುವಾರದ ಸಂಜೆಯ ಮಟ್ಟಿಗೆ ಅದೊಂದು ವಿಸ್ಮಯವೇ ಅನ್ನಿಸಿದ್ದು ಹೌದು. ಮೊದಲೆಲ್ಲ ಬಚ್ಚಲ ಒಲೆಗೆ ದರಲೆ ತುಂಬುವಾಗ ನಮ್ಮ ಮುಗ್ಧ ಮನಸ್ಸಿನಲ್ಲಿ ಅದೇನೇನೋ ಅನ್ನಿಸದ ವಿಷಯ ವಸ್ತುವೆಲ್ಲ ಒಂದು ರೀತಿ ಬೆಂಕಿ ಹೊತ್ತಿ ಹೊಮ್ಮಿಸಿದ ಹೊಗೆಯ ಹಾಗೆ ಮನದಲ್ಲಿ ಎದ್ದುಕೊಂಡಿದ್ದವು. ಎಷ್ಟೇ ಪ್ರಭಲವಾಗಿ ಉರಿದರೂ ಬೆಂಕಿಯಿಂದ ಬೆಳಕಾಗದು ಎಂದು ಎನ್ನಿಸಿದ್ದು ಅಂತಹ ಶುಷ್ಕ ಮನಸ್ಸಿನ ವೇದಾಂತಗಳಲ್ಲೊಂದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಬೆಂಕಿಯ ಜೊತೆಗಿನ ಬೂದಿ ಬೆಳಕಿನ ಬಗ್ಗೆ ಮಾತನಾಡುವ ಬದಲು, ಈ ಬೆಂಕಿ ಉರಿಯುತ್ತಿರುವಾಗ ನಾನು ಮೊದಲಿನಿಂದಲೂ ಮಾಡಿಕೊಂಡಿದ್ದ ಅಂಶವೊಂದು ಗಮನಕ್ಕೆ ಬಂತು - ಬೆಂಕಿಯು ಹತ್ತಿ ಉರಿದಂತೆಲ್ಲಾ ಕಟ್ಟಿಗೆ ತುಂಡುಗಳನ್ನು ಒಂದಕ್ಕೊಂದು ತಾಕಿಸಿ ಕೂಡಿಟ್ಟು ಮತ್ತೆ ಅವುಗಳ ನಡುವೆ ಜ್ವಾಲೆ ಹೆಚ್ಚುವಂತೆ ಮಾಡುವುದು. ಎಷ್ಟೇ ಜೋರಾಗಿ ಬೆಂಕಿ ಉರಿಯುತ್ತಲಿದ್ದರೂ ಒಮ್ಮೆ ಒಂದು ಕಟ್ಟಿಗೆಯ ಅಡ್ಡವಾಗಿ ಮತ್ತೊಂದು ಕಟ್ಟಿಗೆ ಬಾರದೇ ಹೋದರೆ, ಅಥವಾ ಅಡ್ಡ ಕಟ್ಟಿಗೆ ಉರಿಯುವುದು ನಿಂತರೆ ಈ ಕೂಡಿಟ್ಟ ಕಟ್ಟಿಗೆಗಳ ಮಗ್ಗಲು ಬದಲಾಯಿಸುವುದು ಅನಿವಾರ್ಯ, ಇಲ್ಲವೆಂದರೆ ಬೆಂಕಿ ಆರಿ ಹೋದೀತು, ಇಲ್ಲವಾದರೆ ನಿಧಾನವಾಗಿ ಉರಿದು ಕಾವೇ ಬಾರದೇ ಹೊಗೆಯೇ ಹೆಚ್ಚಾದೀತು.


***

ಅನ್ನ, ಪ್ರಾಣ, ಜ್ಞಾನ, ವಿಜ್ಞಾನ, ಆನಂದಗಳೆಂಬ ಹಂತಗಳನ್ನು ನಮ್ಮ ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಯಾರೂ ಬೇಕಾದರೂ ವಿವರಿಸಬಲ್ಲರು. ಒಂದಿಷ್ಟು ಜನರು ದಿನನಿತ್ಯದ ವಿಷಯದಲ್ಲಿ ಅನ್ನ-ಪ್ರಾಣಗಳ ಸಲುವಾಗಿ ದುಡಿದು-ಬಡಿದಾಡಿ-ಕಾದಾಡಿಕೊಂಡರೆ, ಇನ್ನೊಂದಿಷ್ಟು ಜನರಿಗೆ ಅನ್ನ-ಪ್ರಾಣಗಳು ದೇವರು ಕೊಟ್ಟ ವರವಾಗಿ, ಅವರ ಕಷ್ಟ-ನಷ್ಟಗಳೇನಿದ್ದರೂ ಜ್ಞಾನ-ವಿಜ್ಞಾನಕ್ಕೆ ಮೀಸಲಾದವು. ಇನ್ನು ಕೆಲವೇ ಕೆಲವು ಜನರು ಮುಂದೆ ಹೋಗಿ ಬದುಕನ್ನು ಆಳವಾದ ಆನಂದವನ್ನು ಪಡೆಯುವುದಕ್ಕೆ ಮೀಸಲಾಗಿಟ್ಟಿರುವುದು ನಮಗೆಲ್ಲರಿಗೂ ಜನಜನಿತ. ಇದನ್ನೇ Maslow's hierarchy of needs ಎಂದಾದರೂ ಕರೆದುಕೊಳ್ಳಲಿ, ಅಥವಾ High Performance Business Program ಎಂದಾದರೂ ಕರೆದುಕೊಳ್ಳಲಿ. ವ್ಯಕ್ತಿ ಅಥವಾ ಸಂಸ್ಥೆಗಳು ಸಾವಿರಾರು ವರ್ಷದಿಂದ ಮಾಡಿದ್ದನ್ನೇ, ಅಥವಾ ಬಲ್ಲದ್ದನ್ನೇ ಬೇರೆ ಪದಗಳಲ್ಲಿ ಬಣ್ಣಿಸಿಯೋ ಅಥವಾ ಅವರದ್ದೇ ಆದ ಮಸೂರದಲ್ಲಿ ತೋರಿಸಿಯೋ ಯಾವುದೋ ಒಂದು ರೀತಿಯಲ್ಲಿ ಹೊಸ ಹೊಸ ವಿವರಣೆಗಳು, ಅನ್ವೇಷಣೆಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ ಕೆಲವೊಮ್ಮೆ ಅವುಗಳನ್ನು ಕುರಿತು ಓದಲು ತೊಡಗಿದರೆ.

ಓಹ್ ನಮ್ಮದೇನು ಸಾವಿರಾರು ವರ್ಷಗಳ ಇತಿಹಾಸ ಇರುವಂಥದ್ದು ಎಂದು ನಾವು ಸುಮ್ಮನೇ ಕೂರುವಂತೂ ಇಲ್ಲ. ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಅಥವಾ ದೇಶವಾಗಲೀ ಮುಂದಾಳತ್ವದ ದೃಷ್ಟಿಯಿಂದ ಇಂದು ಏನೇನು ಚೆನ್ನಾಗಿ ನಡೆಯುತ್ತಿದೆಯೋ ಅದನ್ನು ಬಿಟ್ಟು ಇನ್ನು ಏನು ಚೆನ್ನಾಗಿ ನಡೆಯಬೇಕು ಎಂದು ಯೋಚಿಸುವುದು, ಯೋಚಿಸಿ ಕಾರ್ಯತಂತ್ರವನ್ನು ರೂಪಿಸಿ ಹಾಗೆ ನಡೆಯುವುದೇ ಇಂದಿನ ದಿನಗಳ ಸವಾಲು. ಪ್ರಪಂಚದ ಯಾವುದೋ ಒಂದು ದೇಶದ ಜನರು ಉಳಿದೆಲ್ಲರನ್ನು ಆಳುವ ಕಾಲ ದೂರವಾಗಿ ಅಲ್ಲಲ್ಲಿ ಕ್ರಮೇಣ ಬಲಿಷ್ಠ ರಾಷ್ಟ್ರಗಳು ಹುಟ್ಟಿಕೊಳ್ಳುವ ಬೆಳವಣಿಗೆಯ ದೃಷ್ಟಿಯಿಂದಂತೂ ಇಂದು ಬೆಳೆಯುತ್ತಿರುವ ಪ್ರತಿಯೊಂದು ರಾಷ್ಟ್ರಗಳು ಮುಬರುವ ನಾಳೆಗಳ ಕುರಿತು ಯೋಚಿಸಿ ಯಾವುದೋ ಒಂದು ತಂತ್ರವನ್ನು ಅನುಸರಿಸುತ್ತ ಹಾಗಿರುವಂತೆ ತೋರುತ್ತದೆ ಇಂದಿನ ದಿನಗಳ ವಿದ್ಯಮಾನ.

ನಿನ್ನೆಯ ದಿನಗಳ ನೆರಳಲ್ಲಾಗಲೀ ಹಳೆಯ ಇತಿಹಾಸದಲ್ಲಾಗಲಿ ಕಲಿಯುವುದು ಬೇಕಾದಷ್ಟಿರಬಹುದು, ಆದರೆ ಅವುಗಳಿಂದ ಕಲಿಯುವವರು ಕಡಿಮೆಯೇ ಎನ್ನುವುದು ನನ್ನ ಅಂಬೋಣ. ಹಾಗಿಲ್ಲದೇ ಹೋದರೆ ಜಗತ್ತಿನಲ್ಲೇನು ದಿನವಿಡೀ ಹೊಸ ಮೂರ್ಖರು ಹುಟ್ಟುತ್ತಲೆಯೇ ಇರುತ್ತಾರೆಯೇನು? ಅವರಿವರು ಮಾಡಿದ್ದನ್ನು ನಾವೂ ನೋಡಬೇಕು, ಹಳೆಯದೆಲ್ಲವನ್ನು ನಾವೂ ತಿಳಿಯಬೇಕು ಎನ್ನುವುದರ ಹಿಂದೆ ಇರುವ ತತ್ವವೇ ಅದರಿಂದೇನಾದರೊಂದಿಷ್ಟು ಕಲಿಯಬೇಕು ಎಂಬುದು. ಆ ಕಲಿಕೆ ಇನ್ನಷ್ಟು ಹೆಚ್ಚಿ ವ್ಯವಸ್ಥಿತವಾದಷ್ಟು ಪ್ರತಿಯೊಬ್ಬರಿಗೂ ಒಳ್ಳೆಯದೇ. ನಿನ್ನೆ ನಡೆದ ಕಾರ್ಯತಂತ್ರಗಳು ಇಂದು ಹಳಸಲಾದಾವು, ಅವುಗಳು ಹಳೆಯದಾಗುವಷ್ಟರಲ್ಲೇ ಹೊಸದನ್ನು ಹುಡುಕಿಕೊಳ್ಳುವುದರಲ್ಲಿ ಸಮಯವನ್ನು ವ್ಯಯಿಸುವ ತಾರ್ಕಿಕತೆ ಎಷ್ಟೋ ಸಂಸ್ಥೆ, ದೇಶಗಳಲ್ಲಿರುವುದರಿಂದಲೇ ಅವು ತಾವು ಮಾಡುತ್ತಿರುವುದರಲ್ಲಿ ಮುಂದಿರುವುದು.

***

ಹೀಗೆ ಬರೆಯುತ್ತ ಹೋದ ಹಾಗೆ ಇಷ್ಟು ಹೊತ್ತು ಉರಿದು ಅಟ್ಟ ಹಾಸ ಬೀರುತ್ತಿದ್ದ ಜ್ವಾಲೆಯ ಆಟ ಸ್ವಲ್ಪ ಕಡಿಮೆಯಾಯಿತು. ನಾನು ಸುಮ್ಮನೇ ಇದ್ದರೆ ಇನ್ನು ಬೆಂಕಿ ಆರಿ ಹೋಗಿ ಕೊನೆಗೆ ಉಳಿಯುವುದು ಇತಿಹಾಸ ಸಾರುವ ಅರ್ಧ ಸುಟ್ಟ ಕಟ್ಟಿಗೆ ಬೊಡ್ಡೆಗಳ ಅವಶೇಷ ಮಾತ್ರ. ಕಾಲದ ಸ್ವರೂಪದಲ್ಲಿ ಇತಿಹಾಸವನ್ನು ಬಿಂಬಿಸುವ ಈ ಬೊಡ್ಡೆಗಳ ಅವಶೇಷ ಮುಂಬರುವವರಿಗೆ ಯಾವುದೋ ಒಂದು ಪಾಠವನ್ನು ಕಲಿಸೀತು ಎನ್ನುವ ಹುಮ್ಮಸ್ಸಿನಿಂದ ನಾನು ಅವುಗಳನ್ನು ಹಾಗೆಯೇ ಬಿಡಬಹುದು. ಅಥವಾ ಉರಿಯುವ ತಾಕತ್ತು ಅವುಗಳಲ್ಲಿ ಇರುವವರೆಗೆ ನಾನು ಅವುಗಳನ್ನು ಮುಂದೂಡುತ್ತಲೋ ಅಥವಾ ಬದಿಯಿಂದ ಬದಿಗೆ ತಿರುಗಿಸುತ್ತಲೋ ಅಥವಾ ಒಂದಕ್ಕೊಂದು ತಾಗಿಕೊಂಡೋ ಇರುವಂತೆ ಮಾಡಿ ಅವುಗಳಲ್ಲಿದ್ದ ಶಕ್ತಿಯನ್ನು ಉರಿಯ ರೂಪದಲ್ಲಿ ಹೊರತೆಗೆದು ಬಿಡಬಹುದು. ಈ ಬದಲಾವಣೆಯ ಸಮಯ ಹೆಚ್ಚು ಹೊತ್ತು ಇರಲೊಲ್ಲದು, ಆದಷ್ಟು ಬೇಗ ಅರ್ಧ ಉರಿದ, ಅಲ್ಲಲ್ಲಿ ಉರಿಯುತ್ತಲ್ಲಿದ್ದ ಬೊಡ್ಡೆಗಳನ್ನು ಇನ್ನಷ್ಟು ಮುಂದೆ ತಳ್ಳುತ್ತೇನೆ. ಅವು ತಾವೇ ಸುಟ್ಟುಕೊಂಡು ಹೋಗುತ್ತಿದ್ದರೂ ಅದ್ಯಾವುದೋ ಕಷ್ಟದಿಂದ ಅವುಗಳನ್ನು ದೂರ ಸರಿಸಿದೆನೆಂದೋ ಇಲ್ಲಾ ಈಗಿನ ಮಟ್ಟಿಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಬಳಸಿದೆನೆಂದೋ ಒಂದು ರೀತಿಯ ಕೃತಜ್ಞತೆಯನ್ನು ಸ್ಪುರಿಸತೊಡಗುತ್ತವೆ, ಅದೇ ಖುಷಿಯಲ್ಲಿ ತಮ್ಮಲ್ಲಡಗಿದ ಯಾವುದೋ ಅವ್ಯಕ್ತ ಶಕ್ತಿಯ ಹುರುಪಿನಲ್ಲಿ ಗುರ್ರ್ ಗುರ್ರು ಎಂದು ಎಲ್ಲಾ ಕಡೆ ಜ್ವಾಲೆಯನ್ನು ಹತ್ತಿಸಿ ಆ ಕಾಲಕ್ಕಾದರೂ ಬೆಳಕು ಹಾಗೂ ದಗೆಯನ್ನು ಹರಡುತ್ತವೆ. ಉರಿಯುವ ಕೊಳ್ಳಿಗಳು ತಮ್ಮ ತಮ್ಮಲ್ಲಿ ತಡಕಾಡಿಕೊಂಡಾಗಲೇ ಜ್ವಾಲೆ ಹೆಚ್ಚಾಗುವುದೆಂದಾದರೆ ಹಾಗೆಯೇ ಆಗಲಿ.

Wednesday, October 03, 2007

ಸೋಮವಾರದ ಆಚರಣೆಗಳು

’Oh, its a Gandhi holiday in India!' ಅನ್ನೋ ಅಮೇರಿಕದವರಿಗೇನು ಗೊತ್ತು ನಮ್ಮ ಗಾಂಧೀ ಮಹಾತ್ಮನ ಬಗ್ಗೆ? ಮಾರ್ಟಿನ್ ಲೂಥರ್ ಕಿಂಗ್ ಡೇ, ಪ್ರೆಸಿಡೆಂಟ್ಸ್ ಡೇ, ಕೊಲಂಬಸ್ ಡೇ, ಕ್ರಿಸ್‌ಮಸ್ ಎಂದು ಆಚರಿಸೋ ಒಂದೋ ಎರಡೋ ಬರ್ಥ್‌ಡೇಗಳಲ್ಲೂ ಕ್ರಿಸ್‌ಮಸ್ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ವೀಕ್‌ಎಂಡ್ ಗೆ ಅಡ್ಜಸ್ಟ್ ಮಾಡ್ಕೊಂಡು ಅದನ್ನು ಶಾಪ್ಪಿಂಗ್ ದಿನಗಳಿಗೆ ಹೋಲಿಸಿಕೊಳ್ಳುವ ಸಂಸ್ಕೃತಿಯವರಿಗೆ ನಾವು ಆಚರಿಸುವ ನೂರಾರು ’ದಿನ’, ’ಜಯಂತಿ’, ’ಮಹೋತ್ಸವ’, ’ಆರಾಧನೆ’ ಮುಂತಾದವುಗಳ ಬೆಲೆ ಹಾಗೂ ಪ್ರತೀಕವಾದರೂ ಏನು ಗೊತ್ತಿರಬಹುದು? ಐದು ಸಾವಿರ ವರ್ಷದ ಸಂಸ್ಕೃತಿಗೂ ಇನ್ನೂರೈವತ್ತು ವರ್ಷಗಳ ಸ್ಮರಣೆಗೂ ಎಲ್ಲಿಂದೆಲ್ಲಿಯ ಸಂಬಂಧ?

ಈ ಮೇಲಿನ ವಾಕ್ಯಗಳು ಅಮೇರಿಕದೆಡೆಗಿನ ದ್ವೇಷವನ್ನು ಹೆಚ್ಚಿಸಲು ಬರೆದ ವಾಕ್ಯಗಳಲ್ಲ, ಬದಲಿಗೆ ಇಂದಿನ ಗ್ಲೋಬಲ್ ವ್ಯಾಪಾರ-ವ್ಯವಹಾರದ ನೆಲೆಗಟ್ಟಿನಲ್ಲಿ ಇಲ್ಲಿ ಕುಳಿತು ಪ್ರಪಂಚದ ಚಲನವಲನಗಳನ್ನು ಯಾರು ಹೇಗೆ ಗಮನಿಸುತ್ತಾರೆ, ಇತರ ರಾಷ್ಟ್ರಗಳ ವಿಧಿ-ವಿಧಾನ, ಆಚಾರ-ವಿಚಾರ ಮುಂತಾದವುಗಳಿಗೆ ಯಾವ ರೀತಿಯ ಗ್ಲೋಬಲ್ ಸ್ವರೂಪವನ್ನು ಕಟ್ಟಲಾಗುತ್ತದೆ ಎಂಬ ಪ್ರಯತ್ನ ಮಾತ್ರ. ಕೇವಲ ಸ್ಟಾಕ್ ಮಾರ್ಕೆಟ್ ವರ್ತುಲದಲ್ಲಿ ಮಾತ್ರವಲ್ಲ, ಬಹುರಾಷ್ಟ್ರೀಯ ಕಂಪನಿಗಳು, ಅಲ್ಲಿನ ಕೆಲಸಗಾರರು ತಮ್ಮನ್ನು ಹೇಗೆ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬ ಸ್ಥೂಲ ನೋಟ ಕೂಡ.

ನನ್ನ ತಲೆಮಾರಿನವರು ಹುಟ್ಟಿ ಬೆಳೆದಂದಿನಿಂದ ನಾವು ಶಾಲಾ-ಕಾಲೇಜು-ಕೆಲಸಗಳಲ್ಲೆಲ್ಲ ಸೆಕ್ಯುಲರಿಸಮ್ ಅನ್ನು ಗೊತ್ತಿದ್ದೋ ಗೊತ್ತಿರದೆಯೋ ಹಂಚಿಕೊಂಡೇ ಬಂದಿದ್ದೆವು. ಇದುಲ್ ಫಿತರ್, ರಮ್‌ಜಾನ್, ಗುಡ್‌ಫ್ರೈಡೇ, ಕ್ರಿಸ್ಮಸ್, ಬುದ್ಧ ಪೂರ್ಣಿಮಾ, ಜೈನ ತೀರ್ಥಂಕರರ ದಿನ ಮುಂತಾದ ರಜಾ ದಿನಗಳಿಗೆ ನಾವೆಲ್ಲರೂ ಸಾಕಷ್ಟು ಹೊಂದಿಕೊಂಡಿದ್ದೆವು. ಯಾವ ಯಾವ ಮೈನಾರಿಟಿಗಳು ಅದೆಷ್ಟೇ ಕಡಿಮೆ ಅಥವಾ ಹೆಚ್ಚಿದ್ದರೂ ಭಾರತದ ಸಂವಿಧಾನದ ನೆಲೆಗಟ್ಟಿನಲ್ಲಿ ಎಲ್ಲರಿಗೂ ಒಂದು ಧ್ವನಿಯಿತ್ತು, ಅವರವರಿಗೆ ಅವರದ್ದೇ ಆದ ಒಂದು ವೈಚಾರಿಕತೆ ಇದ್ದುದನ್ನು ನಾವು ಹುಟ್ಟಿದಂದಿನಿಂದ ಗಮನಿಸಿಕೊಂಡೇ ಇದ್ದೆವು. ’ಭಾರತ ವೈವಿಧ್ಯಮಯವಾದ ದೇಶ...’ ಎಂದೇ ನಮ್ಮಲ್ಲಿಯ ಸಮಾಜಶಾಸ್ತ್ರ ಪಾಠಗಳು ಆರಂಭವಾಗುತ್ತಿದ್ದುದು ಇಂದಿಗೂ ನೆನಪಿದೆ. ನಮ್ಮಲ್ಲಿಯ ಪಠ್ಯಪುಸ್ತಕಗಳಲ್ಲಿ ’ಭಾವೈಕ್ಯತೆ ಎಂದರೇನು?’ ಎಂಬ ಪ್ರಶ್ನೆಗಳು ಇರುತ್ತಿದ್ದವು. ಅಮೇರಿಕಕ್ಕೆ ಬಂದ ಹೊಸತರಲ್ಲಿ ಉಳಿದೆಲ್ಲದರ ಜೊತೆಗೆ ನನ್ನ ಗಮನಕ್ಕೆ ಬಂದ ವಸ್ತುಗಳಲ್ಲಿ ಇಲ್ಲಿನ ರಜಾ ದಿನಗಳ ಸ್ವರೂಪವೂ ಒಂದು. ಹೊಸ ವರ್ಷದ ದಿನ, ಸ್ವಾತ್ರಂತ್ರ್ಯ ದಿನ ಹಾಗೂ ಕ್ರಿಸ್‌ಮಸ್ ದಿನಗಳನ್ನು ಬಿಟ್ಟರೆ ಮತ್ತಿನ್ನೆಲ್ಲವೂ ಪ್ಲೋಟಿಂಗ್ ರಜಾದಿನಗಳೇ, ಅಂದರೆ ಅವು ಕ್ಯಾಲೆಂಡರಿನಲ್ಲಿ ಯಾವ ದಿನದಲ್ಲೇ ಬಂದರೂ ಅದನ್ನ ಹತ್ತಿರದ ಸೋಮವಾರಗಳಿಗೆ ಪರಿವರ್ತಿಸಿ ಲಾಂಗ್ ವೀಕ್‌ಎಂಡ್ ಮಾಡುತ್ತಿರುವುದು. ಇದನ್ನು ತಪ್ಪು-ಸರಿ ಎಂದು ನೋಡುವ ಬದಲು, ಅದನ್ನು ಇಲ್ಲಿಯ ಪದ್ಧತಿ, ಆಚರಣೆ, ಸಂಸ್ಕ್ರುತಿಯ ಪ್ರತೀಕವೆಂದು ತಿಳಿದುಕೊಳ್ಳೋಣ. ಈ ರೀತಿಯ ವ್ಯವಸ್ಥೆ ಭಾರತದ ಮೂಲದವರಿಗೆ ಹೊಸತು, ನಮ್ಮಲ್ಲಿನ ಜಯಂತಿ-ದಿನಾಚರಣೆಗಳು ಇವತ್ತಿಗೂ ಕ್ಯಾಲೆಂಡರಿನ ಅದೇ ದಿನ ಆಚರಿಸಿಕೊಳ್ಳಲ್ಪಡುತ್ತವೆ.

ದಿನೇ ದಿನೇ ಗ್ಲೋಬಲ್ ವ್ಯವಸ್ಥೆ ಬೆಳೆದಂತೆಲ್ಲ ಪ್ರಪಂಚ ಕುಗ್ಗಿ ವರ್ಕ್ ಫೋರ್ಸ್ ಪ್ರಪಂಚದ ಮೂಲೆ ಮೂಲೆಗಳಲ್ಲಿ ಗರಿಗೆದರಿಕೊಂಡು ನಿಂತಾಗಲೇ ಕ್ಯಾಪಿಟಲಿಷ್ಟಿಕ್ ವ್ಯವಸ್ಥೆ ಉಳಿದ ಸಂಸ್ಕೃತಿ-ಆಚಾರ-ವಿಚಾರಗಳ ಮೇಲೆ ಕಣ್ಣು ತೆರೆದಿದ್ದು ಎಂದು ತೋರುತ್ತದೆ. ಒಂದಿಷ್ಟು ಜನರಿಗೆ ಅವರ ಹಿತ್ತಲಿನಲ್ಲಿ ಬೆಳೆದ ಆಲದ ಮರವೇ ದೊಡ್ಡದು, ಅದೇ ದೇವರು. ಇನ್ನೊಂದಿಷ್ಟು ಜನರಿಗೆ ವಸ್ತುಗಳು, ತಮ್ಮ ನೆರೆಹೊರೆ ಇವೆಲ್ಲವೂ ಕಮಾಡಿಟಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಂಡು ಬಿಸಾಡಬಹುದಾದವುಗಳು. ಭಾರತದಂತಹ ರಾಷ್ಟ್ರಗಳಲ್ಲಿ ಸಾದು-ಸಂತರು, ದೇವರು-ದಿಂಡರುಗಳು, ಪ್ರತಿಮೆಗಳು, ಉಲ್ಲೇಖಗಳು, ಜಾತಿ-ಮತ-ಧರ್ಮ, ದೇವರ ರೂಪದ ಅನೇಕ ಪ್ರಾಣಿ-ಪಕ್ಷಿಗಳು ಇವೆಲ್ಲವೂ ಹೆಚ್ಚೇ, ಜನರೂ ಹೆಚ್ಚು, ಭಾಷೆ-ಸಂಸ್ಕೃತಿಗಳೂ ಹೆಚ್ಚು. ಅದೇ ಯುರೋಪ್, ಏಷ್ಯಾ, ಅಮೇರಿಕಾ ಖಂಡಗಳ ಮುಂದುವರಿದ ದೇಶಗಳಲ್ಲಿ ಇವೆಲ್ಲದರ ವೈರುಧ್ಯ. ಹಿಂದೆ ನಮ್ಮನ್ನೆಲ್ಲ ಆಳುತ್ತಿದ್ದ ಬ್ರಿಟೀಷರು ಇವೆಲ್ಲವನ್ನೂ ಗಮನಿಸಿ ಇಂತಹ ವ್ಯತ್ಯಾಸಗಳಿಗೆ ಸ್ಪಂದಿಸುತ್ತಿದ್ದರೋ ಇಲ್ಲವೋ ಆದರೆ ಇಂದಿನ ವ್ಯವಸ್ಥೆಯಲ್ಲಿ ಇಂಥ ವ್ಯತ್ಯಾಸಗಳು ಗಮನೀಯವಾಗಿವೆ. ಗಾಂಧೀ ಮಹಾತ್ಮನ ಹೆಸರಿರಲಿ, ಭಾರತವೆಂದರೆ ಎಲ್ಲಿ ಎಂದು ಕೇಳುತ್ತಿದ್ದ ಜನರಿಗೆ ಭಾರತದ ತುದಿ ಬುಡಗಳು ಭಾರತದವರಿಗಿಂತ ಚೆನ್ನಾಗಿ ಗೊತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯೋಕ್ತಿಯಾದರೂ ಅದರ ಹಿಂದಿನ ಧ್ವನಿ ನಿಮಗೆ ಸ್ಪಷ್ಟವಾಗಬಹುದು.

ಹಿಂದೊಮ್ಮೆ ವರ್ಷ ಪೂರ್ತಿ ಬಿಸಿಲಿನಲ್ಲಿ ಬೇಯುವ ಸಮಭಾಜಕ ವೃತ್ತದವರೂ ಸೂಟ್-ಬೂಟ್ ಸಂಸ್ಕೃತಿಗೆ ಹೊಂದಿಕೊಂಡಿರುವುದರ ಬಗ್ಗೆ ಬರೆದಿದ್ದೆ, ಇಂದಿನ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ತಮ್ಮ ಪ್ರಾಸೆಸ್ ಫಾರ್ಮಾಲಿಟಿಯನ್ನು ತರುವುದರ ಜೊತೆಗೆ ತಮ್ಮ ಸಂಸ್ಕೃತಿಯನ್ನೂ ಧಾರಾಳವಾಗಿ ಕೊಡುಗೆಯನ್ನಾಗಿ ನೀಡಿವೆ. ಬರೀ ಕೊಕಾಕೋಲದ ಅಡ್ವರ್‌ಟೈಸ್‌ಮೆಂಟ್ ನೋಡಿಯೇ ಎನರ್‌ಜೈಸ್ಡ್ ಆಗೋ ಸ್ಥಳೀಯ ಜನಗಳ ಮೇಲೆ ಈ ಬಹುರಾಷ್ಟ್ರೀಯ ಕಂಪನಿಗಳು ಧಾರಾಳವಾಗಿ ಹಂಚುವ ’ವ್ಯವಸ್ಥೆ’ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನೂ ಮಾಡಿದೆ. ನಮ್ಮಲ್ಲಿನ ಯುವ ಜನ ರಾತ್ರಿ ಪಾಳಿಯ ಮೇಲೆ ಕೆಲಸ ಮಾಡಿ ಯಾವುದೋ ಕಣ್ಣು ಕಾಣದ ದೇಶದ ರೈಲು ವೇಳಾಪಟ್ಟಿಯನ್ನೋ, ಕ್ರೆಡಿಟ್‌ಕಾರ್ಡ್‌ಗೆ ಸಂಬಂಧಿಸಿದ ವ್ಯವಸ್ಥೆಯನ್ನು ಕಂಠಪಾಠ ಮಾಡಿ ಕಲಿಯುವಂತಾಯ್ತು. ಉದ್ಯೋಗ ಹೆಚ್ಚಿತು, ಉತ್ಪನ್ನ ಹೆಚ್ಚಿತು. ಗಾಂಧೀ ಜಯಂತಿಯಂತಹ ದಿನಗಳು ದೂರವಾದವು. ಭಾರತದಲ್ಲಿ ಕೆಲವರು ಆಚರಿಸುವ ದೀಪಾವಳಿಗಳು ಅನಿವಾಸಿಗಳ ದೀಪಾವಳಿಯ ಆಚರಣೆಯ ಹಾದಿ ಹಿಡಿಯಿತು. ಜಾತ್ರೆ, ಮಹೋತ್ಸವ, ಆರಾಧನೆಗಳು ಅರ್ಥ ಕಳೆದುಕೊಂಡವು. ’ಓಹ್, ಭಾರತದಲ್ಲಿ ವಿಪರೀತ ರಜೆಗಳಪ್ಪಾ...’ ಎಂದು ಯುವಕರು ಮೂಗು ಮುರಿಯುವಂತಾದರು.

ಕಡಿಮೆ ಜನರು ಅನುಸರಿಸುವ ಸಂಸ್ಕ್ರುತಿಯೇ ಹೆಚ್ಚು ಜನರಿಗೆ ಸೂಕ್ತವೇ ಎಂಬ ಪ್ರಶ್ನೆಯನ್ನು ನಾನು ಕೇಳಿಕೊಳ್ಳುತ್ತಲೇ ಬಂದಿದ್ದೇನೆ. ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳ ಸಾಮಾಜಿಕ ಪದ್ಧತಿ, ನಡೆ-ನುಡಿಗಳು ಹೆಚ್ಚಿನವೇ ಅಲ್ಲವೇ ಎಂದು ತುಲನೆ ಮಾಡುವುದೂ ಸರಿಯಾದುದೇ ಎಂದು ಕೇಳಿಕೊಳ್ಳಬೇಕಾಗಿದೆ. ಅಮೇರಿಕದ ಒಳಗಡೆ ತುಂಬ ದೂರ ಹೋಗುವುದೇ ಬೇಡ - ಬಾಲ್ಟಿಮೋರ್ ನಗರದ ಒಂದಿಷ್ಟು ಭಾಗ, ನ್ಯೂ ಯಾರ್ಕ್ ನಗರದ ಒಂದಿಷ್ಟು ಭಾಗ, ದೇಶದ ರಾಜಧಾನಿಯ ಒಂದಿಷ್ಟು ಭಾಗವನ್ನು ತೆಗೆದುಕೊಂಡು ನೋಡಿದರೆ ಮುಂದುವರೆದ ಅಮೇರಿಕ ಹೊಟ್ಟೆಯೊಳಗಿನ ಪಂಖವೂ ಕಣ್ಣಿಗೆ ರಾಚೀತು, ವೈಭವದ ಫೈವ್ ಸ್ಟಾರ್ ಹೊಟೇಲಿನ ಯಾವುದೇ ಪ್ರಾಸೆಸ್ಸುಗಳಿಗೂ ಮೀರಿದ ಹಿಂಬಾಗಿಲಿನ ನೆರೆಹೊರೆಯ ಹಾಗೆ.

ಭಾರತದ ಸ್ವಾತಂತ್ರ್ಯೋತ್ತರ ಈ ಅರವತ್ತು ವರ್ಷಗಳಲ್ಲಿ ಚಲಾವಣೆಗೆ ಬಂದ ಬರುತ್ತಿರುವ ಪಂಚವಾರ್ಷಿಕ ಯೋಜನೆಗಳ ಸವಾಲುಗಳ ಮೂಲದಲ್ಲಿ ಬಹಳಷ್ಟೇನು ವ್ಯತ್ಯಾಸವಾದಂತಿಲ್ಲ. ಅದೇ ಕುಡಿಯುವ ನೀರು, ಅದೇ ಯೋಜನೆ; ಅದೇ ಬಡತನ, ಮತ್ತದೇ ಸಮೀಕರಣ; ಅದೇ ಉದ್ಯೋಗ ನಿವಾರಣೆ, ಅದೇ ಆದೇಶ; ಅದೇ ನೀರಾವರಿ ಯೋಜನೆ, ಮತ್ತದೇ ಫಲಿತಾಂಶ. ನಾವು ಬುದ್ಧ, ಗಾಂಧಿ, ರಾಮ, ಕೃಷ್ಣ, ಜೈನ, ಏಸು ಎಂದುಕೊಂಡು ಹಿತ್ತಲಿನ ಆಲದ ಮರಕ್ಕೆ ನಾಗರಪಂಚಮಿ ಹಬ್ಬದಂದು ಜೋಕಾಲಿ ಕಟ್ಟಿ ಜೀಕುವುದೋ ಅಥವಾ ನಮ್ಮೆಲ್ಲ ಜಯಂತಿ-ದಿನಾಚರಣೆ-ಮಹೋತ್ಸವ ಮುಂತಾದವುಗಳನ್ನು ಹತ್ತಿರದ ಸೋಮವಾರಕ್ಕೆ ಹೊಂದಿಸಿಕೊಂಡು ಲಾಂಗ್ ವೀಕ್‌ಎಂಡ್ ಮಾಡಿಕೊಂಡು ಹಬ್ಬ ಹರಿದಿನಗಳಂದು ತಡವಾಗಿ ಎದ್ದು ಹಲ್ಲುಜ್ಜುವುದಕ್ಕಿಂತ ಮೊದಲು ತಿಂಡಿ ತಿನ್ನುವುದೋ? ಹಬ್ಬ, ಸಾಮಾಜಿಕ, ಧಾರ್ಮಿಕ ಆಚರಣೆಗಳಂದು ನಾವು ಕಷ್ಟ ಪಟ್ಟು ನಮ್ಮಲ್ಲಿರುವವುಗಳನ್ನು ಹಂಚಿಕೊಂಡು ದೈಹಿಕವಾಗಿ ಕಷ್ಟಪಟ್ಟು ಸುಖವಾಗಿರುವುದಕ್ಕೆ ಪ್ರಯತ್ನಿಸುವುದೋ, ಅಥವಾ ನಾವು ಗಳಿಸಿದ ರಜಾ ದಿನಗಳನ್ನು ತಕ್ಕ ಮಟ್ಟಿಗೆ ಅನುಭವಿಸಿ ನಮ್ಮ ಐಷಾರಾಮಗಳಲ್ಲಿ ರಿಲ್ಯಾಕ್ಸ್ ಮಾಡುವುದೋ? ಗಾಂಧೀ ಜಯಂತಿಯೇನೋ ಅಕ್ಟೋಬರ್ ಎರಡಕ್ಕೇ ಬರುತ್ತದೆ ವರ್ಷಾ ವರ್ಷಾ, ಆದರೆ ಬೇಕಾದಷ್ಟು ಉಳಿದ ಜಯಂತಿ-ಮಹೋತ್ಸವಗಳು ಹಿಂದೂ ಕ್ಯಾಲೆಂಡರಿಗೆ ಅನುಗುಣವಾಗಿ ಬರುತ್ತವಾದ್ದರಿಂದ ಅವುಗಳನ್ನೆಲ್ಲ ಕೂಡಿಸಿ ಭಾಗಿಸಿ ಗುಣಿಸಿ ಕಳೆದು ಹತ್ತಿರದ ಸೋಮವಾರಕ್ಕೆ ಹೊಂದಿಸುವ ಕೈಂಕರ್ಯ ನನಗಂತೂ ಬೇಡ.

Friday, August 10, 2007

ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

’ಎಲ್ಲಾ ವರ್ಚುವಲ್ ಬದುಕು - ಛೇ!’ ಎಂದು ನನಗೇ ಕೇಳುವ ಹಾಗೆ ನಾನೇ ಹೇಳಿಕೊಂಡೆ...ನಾವು ಮಾತನಾಡೋದು ಯಾವಾಗಲೂ ಇನ್ನೊಬ್ಬರ ಜೊತೆಗೇ ಎಂದು ಏನಾದರೂ ಕಾನೂನು ಇದೆಯೇ, ಮೈಥಿಲಿ ಶರಣ್ ಗುಪ್ತರ ಪಂಚವಟಿಯ ಲಕ್ಷಣ ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದನಂತೆ - ಹಾಗೂ ಈ ಜಗತ್ತಿನ ಹುಚ್ಚರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾರೆ ಎನ್ನೋದನ್ನ ನಿಮ್ಹಾನ್ಸ್‌ನ ಹುಚ್ಚರ ವಿಭಾಗದಲ್ಲಿ ಯಾವತ್ತೋ ನೋಡಿ ನಕ್ಕು ಸುಮ್ಮನಾಗಿದ್ದೇನೆ, ಅಲ್ಲಿ ನಾನೇಕೆ ಹೋಗಿದ್ದೆ ಅನ್ನೋದು ದೊಡ್ಡ ಕಥೆ, ಇನ್ನೊಂದು ದಿನಕ್ಕಿರಲಿ.

ಬ್ಯಾಂಕಿನವರು ಮನಸ್ಸಿಗೆ ಬಂದಂತೆ ಏನೇನೋ ಚಾರ್ಜ್ ಮಾಡಿಕೊಂಡು ನೂರಾ ಎಂಭತ್ತು ಡಾಲರ್ರುಗಳನ್ನು ನನ್ನ ಕ್ರೆಡಿಟ್ ಕಾರ್ಡಿನ ಅಕೌಂಟಿನಲ್ಲಿ ಉಜ್ಜಿಕೊಂಡಿದ್ದನ್ನು ನೋಡಿ ಮೈ ಉರಿದು ಹೋಯಿತು. ಕೂಡಲೇ ಕಷ್ಟಮರ್ ಸರ್ವೀಸ್ ವಿಭಾಗಕ್ಕೆ ಫೋನಾಯಿಸಿ ಕೇಳಿದರೆ ಆ ಕಡೆಯಿಂದ ಕೇಳಿಸಿದ ಸ್ವರದಲ್ಲಿ ಯಾವ ಕಳಕಳಿಯಾಗಲಿ, ಕಕ್ಕುಲತೆಯಾಗಲೀ ಇರಲಿಲ್ಲ - ಏಕಿರಬೇಕು? ಎಲ್ಲವೂ ಕಂಪ್ಯೂಟರ್ ನಡೆಸಿದಂತೆ ನಡೆಯುವ ಬಿಸಿನೆಸ್ ರೂಲ್ಸ್‌ಗಳು, ಅವರೋ ನಮ್ಮಂಥವರ ಸಿಟ್ಟಿಗೆ ಆಹಾರವಾಗಬೇಕಾಗಿ ಬಂದ ಬಲಿಪಶುಗಳು, ಅದೂ ಕೇವಲ ನಮ್ಮ ಮಾತಿಗೆ ಮಾತ್ರ ಸಿಕ್ಕುವ ಹಾಗೆ ಅದ್ಯಾವುದೋ ಪ್ರಪಂಚದ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ...ಇಂದಿನ ವರ್ಚುವಲ್ ಪ್ರಪಂಚದಲ್ಲಿ ನಾನು ಭಾರತದ ನಮ್ಮೂರಿನ ಪಕ್ಕದ ಊರಿನ ಹುಡುಗ/ಹುಡುಗಿಯೊಂದಿಗೆ ಮಾತನಾಡುತ್ತಿದ್ದರೂ ಅವರೂ ಬೇರೆ, ನಾವೂ ಬೇರೆ. ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ? ಎಲ್ಲವನ್ನೂ ನಯವಾಗಿ ವಿವರಿಸಿದೆ, ನೂರಾ ಎಂಭತ್ತು ಡಾಲರುಗಳನ್ನು ತಪ್ಪಾಗಿ ಚಾರ್ಜ್ ಮಾಡಿದ್ದೀರಿ, ಹಿಂತಿರುಗಿಸಿ ಎಂದು ಕೇಳಿಕೊಂಡೆ. ಹತ್ತು ನಿಮಿಷ ಕಥೆ ಕೇಳಿದ ಚೆಲುವೆ ಮರುಕಪಟ್ಟವಳಂತೆ ಕಂಡುಬಂದರೂ, ’ಕ್ಷಮಿಸಿ, ಚಾರ್ಜ್ ಅನ್ನು ಹಿಂತಿರುಗಿಸುವ ಅಧಿಕಾರ ನನಗಿಲ್ಲ, ಮತ್ತೊಬ್ಬರಿಗೆ ಟ್ರಾನ್ಸ್‌ಫರ್ ಮಾಡುತ್ತೇನೆ...’ ಎಂದು ಕರೆಯನ್ನು ಇನ್ನೊಬ್ಬರಿಗೆ ಟ್ರಾನ್ಸ್‌ಫರ್ ಮಾಡಿದಳು. ಆಗ ಹೊಳೆಯಿತು, ನನ್ನ ತಾಳ್ಮೆ ಅಮೇರಿಕಕ್ಕೆ ಬಂದ ಮೇಲೆ ಏಕೆ ಹೆಚ್ಚಾಗಿದೆ ಎಂಬುದಾಗಿ! ಇಷ್ಟು ಹೊತ್ತು ಎಲ್ಲವನ್ನು ಹತ್ತು ನಿಮಿಷಗಳ ಕಾಲ ವಿಷದ ಪಡಿಸಿದ ಮೇಲೆ ಮತ್ತೆ ಅದೇ ರಾಗವನ್ನು ಇನ್ನೊಬ್ಬರ ಮುಂದೆ ಹಾಡಬೇಕಾಗಿ ಬಂದುದು. ಮತ್ತೆ ಆಲಾಪನೆಯೊಂದಿಗೆ ಶುರುಮಾಡಿದೆ, ಈ ಚೆಲುವೆ, ನಡುನಡುವೆ ’ಹ್ಞೂ...’ ಎನ್ನುತ್ತಿದ್ದಳಾದರೂ ಆಕೆ ನನ್ನ ಕಥೆಯನ್ನು ಕೇಳುತ್ತಿದ್ದ ಬಗ್ಗೆ, ನನ್ನ ವಿಚಾರದಲ್ಲಿ ಕಳಕಳಿಯ ವಿಶ್ವಾಸ ತೋರುತ್ತಿರುವುದರ ಬಗ್ಗೆ ಯಾವುದೇ ನಂಬಿಕೆಯೂ ನನಗಿರಲಿಲ್ಲವಾದ್ದರಿಂದ ನನ್ನ ಧ್ವನಿಯಲ್ಲಿ ಯಾವುದೇ ಭಾವೋದ್ವೇಗವೂ ಕಾಣಿಸಿಕೊಳ್ಳಲಿಲ್ಲ. ಅದರ ಬದಲಿಗೆ ಇದೇ ರೀತಿ ಹತ್ತು ಹದಿನೈದು ಜನರ ಮುಂದೆ ನನ್ನ ಕಥೆಯನ್ನು ತೋಡಿಕೊಂಡು, ಹತ್ತು ಇ-ಮೇಲ್‌ಗಳನ್ನು ಬರೆದು ನನ್ನ ತತ್ವವನ್ನು ಸಾಧಿಸಿಕೊಳ್ಳುವುದರ ಬಗ್ಗೆ ಮನಸ್ಸು ಆಲೋಚಿಸಿಕೊಂಡು ಮುಂದೆ ಬರಬಹುದಾದ ಕಷ್ಟಗಳನ್ನು ನೆನೆದು ಸಂಯಮದಿಂದಿತ್ತು. ತತ್ವದ ವಿಚಾರಕ್ಕೆ ಬಂತೆಂದರೆ, ಅದೂ ನನ್ನಂಥ ಮೂರ್ಖರ ವಿಚಾರದಲ್ಲಿ ಹಣದ ಸಂಖ್ಯೆಗೆ ಯಾವುದೇ ಮಹತ್ವವಿರದು, ಏನಾದರೂ ಮಾಡಿ ನನ್ನದನ್ನು ಸಾಧಿಸಿಕೊಂಡು ಅವರು ನನ್ನ ಹಣವನ್ನು, ಅದೂ ತಪ್ಪಾಗಿ ಚಾರ್ಜ್ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಅಷ್ಟೇ! (ಈ ತತ್ವದ ಕುದುರೆ ಸವಾರಿ, ನನ್ನ ಬಲವಾದ ಅಂಶವೆನ್ನುವುದಕ್ಕಿಂತಲೂ, ನನ್ನ ವೀಕ್‌ನೆಸ್ ಎಂದರೇ ಸರಿ.)

ಸದ್ಯ, ಎರಡನೇ ಬಾರಿ ಕಥೆಯನ್ನು ಹೇಳುವಲ್ಲಿನ ಆರ್ತನಾದಕ್ಕೇ ಈ ಚೆಲುವೆ ಕರಗಿದಳು ಎಂದು ಕಾಣುತ್ತೆ...ನನ್ನ ಹಣವನ್ನು ಹಿಂತಿರುಗಿಸುತ್ತೇನೆ, ಎಂದು ಭರವಸೆಯನ್ನು ನೀಡಿಯೇ ಬಿಟ್ಟಳು...ಅಬ್ಬಾ, ದೊಡ್ಡದೊಂದು ಮೋಡ ಕರಗಿ ಮಳೆ ಸುರಿದು ಮತ್ತೆ ಬೆಳಗು ಬಂದಂತಾಯಿತು.

ಆದರೆ, ಈ ವರ್ಚುವಲ್ ಪ್ರಪಂಚದ ಯಾರಿಗೂ ಕಾಣದೇ ನಡೆದ, ನಡೆಯುವ ಟ್ರಾನ್ಸಾಕ್ಷನ್ನುಗಳಿಗಾಗಲೀ, ಸಂಭಾಷಣೆಗಳಿಗಾಗಲಿ ಅವುಗಳ ಪರಿಣಾಮವೇನೂ ತಟ್ಟದು. ಬರೀ ಸೋಮವಾರದಿಂದ-ಶುಕ್ರವಾರದವರೆಗೆ ಮುಂಜಾನೆ ಒಂಭತ್ತರಿಂದ ಸಂಜೆ ಐದರವರೆಗೆ ಗ್ರಾಹಕರ ಕಷ್ಟಗಳನ್ನು ಅರಿಯುವಂತೆ ನಟಿಸುವ ಲಲನಾಮಣಿಗಳನ್ನು ನಾನು ನನ್ನ ಆಫೀಸಿನ ಸಮಯದಲ್ಲೇ ಮಾತನಾಡಿಸಬೇಕು. ಅದರಿಂದ ಅವರ ಕೆಲಸ ನಡೆಯಿತು, ನನ್ನ ವೈಯುಕ್ತಿಕ ಕೆಲಸ ಪೂರೈಸಿತು. ಆದರೆ ಹನ್ನೆರೆಡು ಘಂಟೆಗೆ ತಯಾರಾಗಬೇಕಾಗಿದ್ದ ವರದಿ ’ತಯಾರಾಯ್ತಾ?’ ಎಂದು ಒಂದು ಘಂಟೆ ಮೊದಲೇ ಕೇಳುವ ಬಾಸಿಗೆ ಏನು ಹೇಳಲಿ? ಯಾರೋ ನೆಟ್ಟು ಬೆಳೆಸಿದ ಬಿಸಿನೆಸ್ ರೂಲ್ಸ್‌ಗಳಿಗೆ ಆಹಾರವಾಗಬೇಕಾಗಿ ಬಂದ ಕ್ಯಾಪಿಟಲ್ ಪ್ರಪಂಚದ ಸರಕುಗಳಿಗೆ ನೊಂದ ನನ್ನ ಅರ್ಧ ಘಂಟೆ ಸಮಯವನ್ನು ಹಿಂತಿರುಗಿಸುವವರಾರು? ಕ್ಯಾಪಿಟಲ್ ಪ್ರಪಂಚದ ಆರೋಪಗಳಿಗೆ ನೀವು ತಕ್ಕನಾಗಿ ಅಥವಾ ಪ್ರತಿಯಾಗಿ ಧ್ವನಿಯನ್ನು ಹೊರಡಿಸದೇ ಹೋದಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಯೂನಿವರ್ಸಲ್ ಒಪ್ಪಂದವನ್ನು ಜಗತ್ತಿಗೆ ಹೇಳಿಕೊಟ್ಟವರು ಯಾರು? ನನ್ನ ಅರ್ಧ ಘಂಟೆ ಹಾಳಾಗಿ ಹೋಯಿತು, ಮನಸ್ಸು ನೊಂದಿತು, ಯಾರಿಗೂ ಬೇಡದ, ಕಂಪನಿಗಳಿಗೆ ಬೇಕಾದ ನೂರಾ ಎಂಭತ್ತು ಡಾಲರ್ ಅನ್ನು ’ಉಳಿಸಿದೆ’ ಎಂದು ಹೇಳುವಂತೆಯೂ ಇಲ್ಲದಂತಾಗಿ ಹೋಯಿತು...ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

***

ಕ್ಯಾಪಿಟಲ್ ಪ್ರಪಂಚದ ದೊಡ್ಡ ಕಂಪನಿಯ ಏಣಿಯ ಕಣ್ಣುಗಳಲ್ಲಿ ಗೋಡೆಗೆ ಬಲವಾಗಿ ಒರಗಿಕೊಂಡಿರುವ ನನ್ನಂತಹವರ ಸಹೋದ್ಯೋಗಿಗಳನ್ನು ಬಿಟ್ಟು ಬೇರೆ ಬದುಕೇನಿದೆ? ಎಂದು ಬಲವಾದ ಯೋಚನೆ ಬಿಸಿಲು ಮಳೆಯಲ್ಲಿ ಹುಟ್ಟುವ ಕಾಮನಬಿಲ್ಲಿನಂತೆ ಅದ್ಯಾವುದೋ ಮನದ ಮೂಲೆಯಲ್ಲಿ ಎದ್ದು ನಿಂತಿತು. ಆಫೀಸಿನ ಬದುಕಿನ ಹೊರತಾಗಿ ನನ್ನ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟೇ ಸಂಬಂಧಗಳು, ಕೆಲವು ಇನ್ನೂ ಪೂರ್ಣ ಹೆಸರು ಗೊತ್ತಿರದವು, ಇನ್ನು ಕೆಲವು ಹೆಸರು ಗೊತ್ತಿದ್ದರೂ ಮುಖ ಪರಿಚಯವಿಲ್ಲದವು. ಆಗಾಗ್ಗೆ ವರ್ಚುವಲ್ ಪ್ರಪಂಚದ ಹರಿಕಾರರಂತೆ ಸಂದೇಶಗಳ ರೂಪದಲ್ಲಿ ಇನ್ಸ್ಟಂಟ್ ಮೆಸ್ಸೇಜುಗಳಾಗಿ ಬಂದು ಕಾಡುವವು. ನನ್ನ ಸ್ಪಂದನ, ಸಹಪಯಣವೇನಿದ್ದರೂ ಇಂಥವುಗಳ ಕೋರಿಕೆಗಳನ್ನು ಪೂರೈಸುವಲ್ಲಿ ಮಾತ್ರ ಸೀಮಿತವಾಗಿ ಹೋಗಿರುವುದೇ ಹೆಚ್ಚು. ನಿಮಗೆಲ್ಲರಿಗೂ ಆಗುವಂತೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಮದುವೆಯಾಗಲೀ, ಆತ್ಮೀಯ ಸ್ನೇಹಿತನ ಕಷ್ಟನಷ್ಟಗಳಿಗೆ ಸ್ಪಂದಿಸುವ ಧಾರ್ಮಿಕತೆಯಾಗಲೀ ಅದರಲ್ಲಿ ಇಲ್ಲ. ಇವತ್ತಿದ್ದವರು ನಾಳೆ ಇಲ್ಲವೆಂದರೂ ಏನೂ ಬದಲಾವಣೆಯಾದ ಹಾಗೆ ಕಾಣೋದಿಲ್ಲ.

ಯಾರನ್ನು ಸ್ನೇಹಿತರೆಂದು ಕರೆಯೋದು, ಸ್ನೇಹಿತರಿಗೆ ಇರಬೇಕಾದ ಕ್ವಾಲಿಫಿಕೇಷನ್ ಏನು? ಎಲ್ಲರೂ ಒಂದೇ ನೆಲೆಗಟ್ಟು, ಮನಸ್ಥಿತಿಯವರಾದರೆ ಅಲ್ಲಿ ಭಿನ್ನತೆ ಹೇಗೆ ಹುಟ್ಟಿ ಬೆಳೆಯುತ್ತದೆ? ಭಿನ್ನತೆ ಹುಟ್ಟಿ ಬೆಳೆಯದಿದ್ದಲ್ಲಿ, ವ್ಯತಿರಿಕ್ತ ಮನಸ್ಥಿತಿ ನಿರ್ಮಾಣವಾಗದಿದ್ದಲ್ಲಿ ಭಾಂದವ್ಯ ಬಂಜರುಭೂಮಿಯಾಗದಂತಿರುವುದಕ್ಕೆ ಏನು ಮಾಡುವುದು?

ಮಾಹಿತಿ ಜಾಲ, ಇಂಟರ್‌ನೆಟ್ ಸೂಪರ್‌ಹೈವೇ, ಮುಂತಾದ ಅಲ್ಟ್ರಾ ಮಾಡರ್ನ್ ಟೆಕ್ನಾಲಜೀ ಏನೇ ಬಂದರೂ ನಮ್ಮ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಸಣ್ಣ ಗೂಡಿನ ಚಿಕ್ಕ ಪಕ್ಷಿಯ ಧ್ವನಿಯಾಗಿ ಹೋಗಿರುವುದೇ ಹೆಚ್ಚು. ಈ ಹಕ್ಕಿಯ ರೆಕ್ಕೆಗಳು ಚಿಕ್ಕವು ಬಾನು ಮಿಗಿಲಾಗಿದ್ದರೇನಂತೆ ಹಾರಲು ಶಕ್ತಿ ಇಲ್ಲವಲ್ಲಾ...ಶಕ್ತಿ ಇದ್ದರೇನಂತೆ ಹಾರಲು ದಿಕ್ಕುಗಳು ಬೇಕಲ್ಲಾ. ಈ ಹಕ್ಕಿಯ ಕಿರಿದಾದ ಧ್ವನಿಯಲ್ಲಿನ ಸಂದೇಶಗಳೂ ಹೆಚ್ಚುಹೆಚ್ಚು ದೂರದವರೆಗೆ ಪಸರಿಸಲಾರದು. ಸಾವಿರದ ಒಂಭೈನೂರರ ಮೊದಲಲ್ಲಿ ಯಾವ ತಂತ್ರಜ್ಞಾನವಿಲ್ಲದಿದ್ದರೂ ಭಾರತದ ಉದ್ದಗಲಕ್ಕೆ ಸ್ವಾತಂತ್ರದ ಫೂರಕ ಸಂದೇಶಗಳು ಅದು ಹೇಗೆ ಹಬ್ಬುತ್ತಿದ್ದವು? ಇಂದಿನ ಮಾಹಿತಿ ಜಾಲದಲ್ಲಿ ನಮ್ಮ ಸಂದೇಶಗಳೇಕೆ ನರಸತ್ತವುಗಳಾಗಿ ಹೋಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯಾವುದಾದರೂ ಋಷಿಗಳಿಗೆ ಮಾತ್ರ ಸಾಧ್ಯ. ಒಪ್ಪಿಕೊಳ್ಳೋಣ, ನಾವು ಬದಲಾಗಿದ್ದೇವೆ ಎನ್ನುವ ಸತ್ಯವನ್ನ. ನಮಗೆ ಅಂದು ಮುಖ್ಯವಾದದ್ದು ಇಂದು ನಿಷ್ಪ್ರಯೋಜಕ ಎಂಬ ಬೆಳವಣಿಗೆಯಾಗಿರುವುದನ್ನು ಸಹಜ ಎಂದು ಹೇಳಿ ಸುಮ್ಮನಾಗುವುದೇ ಒಳ್ಳೆಯದು.