Tuesday, September 20, 2011

ನಿಜವಾದ "ಅಂತರಂಗ"ದ ನಂಬಿಕೆ

ಕನ್ನಡ ಹಿರಿಮೆಗೆ ಮತ್ತೊಂದು ಪ್ರಶಸ್ತಿ, ಕನ್ನಡ ತಾಯಿಯ ಮಕುಟಕ್ಕೆ ಮತ್ತೊಂದು ಗರಿ. ಈ ದಿನ ವಿಶ್ವದಾದ್ಯಂತ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ದಿನ. ನಮ್ಮ ಗುರುಗಳಾಗಿ, ಅಧ್ಯಾಪಕರಾಗಿ, ನಾಟಕಕಾರರಾಗಿ, ನಿರ್ದೇಶಕ ಮೊದಲಾಗಿ ಕನ್ನಡ ಸಾಹಿತ್ಯ ಅನೇಕ ಮಜಲುಗಳಲ್ಲಿ ಪಳಗಿದ ಸುಮಾರು ನಾಲ್ಕು ದಶಕದ ಸಾಧನೆಯ ಪರಿಪೂರ್ಣತೆಯನ್ನು ಪಡೆದ ಚಂದ್ರಶೇಖರ ಕಂಬಾರರಿಗೆ ೮ ನೇ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಬಹಳ ಸಂತೋಷದ ವಿಷಯ.

***
ನಾನು ಜ್ಞಾನಪೀಠ ಎಂದರೆ ಸುಮ್ಮನೆಯೇ? ಎಂದು ೨೦೦೬ (ಮೇ ೧೭, ೨೦೦೬) ರಲ್ಲಿ ಬರೆದದ್ದು ನಿಜವಾಯಿತು. "...ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು.". ಈ ಪ್ರಶಸ್ತಿಯನ್ನು ಪಡೆದ ಕನ್ನಡದ ದಿಗ್ಗಜರಲ್ಲಿ ನಾನು ಬಹಳ ಹತ್ತಿರದಿಂದ ನೋಡಿದವರೆಂದರೆ ಕಂಬಾರರು. ಈ ದಿನ ಅವರಿಗೆ ಈ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಬಹಳ ಸಂತಸದ ವಿಚಾರ.

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.
***

ಕಂಬಾರರ ಭಾಷೆ ಬಹಳ ಚೆಲುವಾದುದು - ಬೆಳಗಾವಿಯ ಗ್ರಾಮೀಣ ಕನ್ನಡದ ಸೊಗಡನ್ನು ಸವಿಯ ಬೇಕಾದರೆ ಅವರ ಮಾತುಗಳನ್ನು ಆ ಭಾಷೆ ಬಲ್ಲವರಿಂದ ಗಟ್ಟಿಯಾಗಿ ಓದಿಸಿ ಕೇಳಬೇಕು, ಅಥವಾ ಅವರ ನಾಟಕಗಳನ್ನು ನುರಿತ ಕಲಾವಿದರು ಮಾಡಿದ್ದನ್ನು ನೋಡಿ ಸವಿಯ ಬೇಕು. ಇದೇ ಬೆಳಗಾವಿಯ ಕನ್ನಡದಲ್ಲಿಯೇ ಅವರು "ಮರತೇನಂದರ ಮರೆಯಲಿ ಹೆಂಗ..." ಬರೆದದ್ದು.
ಇದು ನಿಜವಾಗಿಯೂ ನಮಗೆಲ್ಲ ಸಂತೋಷದ ದಿನ.
ಜೈ ಕನ್ನಡ ಮಾತೆ!