Showing posts with label ಕೆಲಸ. Show all posts
Showing posts with label ಕೆಲಸ. Show all posts

Sunday, May 03, 2020

ಸಿನಿಮಾ ವ್ಯಥೆ

ಈ ಕೋವಿಡ್ ವ್ಯಥೆಯಿಂದ ಎಷ್ಟೆಷ್ಟು ಹೊಸ ಕಥೆಗಳು ಹುಟ್ಟುತ್ತವೆಯೋ ಅಥವಾ ಕೋವಿಡ್‌ನಿಂದ ಒಂದು ಹೆಚ್ಚಿನ ಗುಣಮಟ್ಟದ ಸಿನಿಮಾ ಕಥೆಗಳು ಬರಬಹುದೋ ಎಂದು ನಿರೀಕ್ಷೆಯಲ್ಲಿದ್ದ ನನಗೆ, ನಮ್ಮ ಸಿನಿಮಾ ಉದ್ಯಮದ ಬಗ್ಗೆ ಹೆಚ್ಚು ಆಲೋಚಿಸಿದಂತೆಲ್ಲ, ನಲಿವಿಗಿಂತ ನೋವೇ ಹೆಚ್ಚಾಗಿ ಕಂಡಿತು.

ಮೊದಲೇ ಥಿಯೇಟರುಗಳಿಗೆ ಹೋಗದೇ ಹೊರಗುಳಿದಿದ್ದ ಪ್ರೇಕ್ಷಕರು ಈಗಂತೂ ಇನ್ನೂ ದೂರವೇ ಉಳಿಯುತ್ತಾರೆ.  ಎಲ್ಲ ಕಡೆಗೆ ವ್ಯವಸ್ಥಿತವಾಗಿ ಮತ್ತೆ ವ್ಯಾಪಾರ ವಹಿವಾಟುಗಳು ಓಪನ್ ಆಗುತ್ತಿದ್ದಂತೆ, ಸಿನಿಮಾ ಪ್ರಪಂಚ ಚೇತರಿಸಿಕೊಳ್ಳಲು ಇನ್ನೂ ಸಮಯ ಹಿಡಿಯುತ್ತದೆ.  ಈ ವರ್ಷವಂತೂ ನಾವೆಲ್ಲ, ಈಗಾಗಲೇ ಬಿಡುಗಡೆ ಹೊಂದಿರುವ ಸಿನಿಮಾಗಳನ್ನು ಆನ್‌ಲೈನ್ ಮಾಧ್ಯಮದಲ್ಲಿ ಮಾತ್ರ ನೋಡಿ ಖುಷಿ ಪಡಬೇಕು, ಅಷ್ಟೇ.

ಸಿನಿಮಾವನ್ನು ನಂಬಿಕೊಂಡು ಬದುಕಿದ ಕಲಾವಿದರಷ್ಟೇ ಅಲ್ಲ, ಅವರನ್ನು ಆದರಿಸಿದ ಅನೇಕ ಕುಟುಂಬ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ.  ಈ ವೇದನೆ ಕೇವಲ ರಾಜ್ಯ, ರಾಷ್ಟ್ರದ ಮಟ್ಟಿಗೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ.

ಒಳ್ಳೆಯ ಸಿನಿಮಾವನ್ನು ಮಾಡಲು ಮೊದಲೇ ಹಿಂಜರಿಯುತ್ತಿದ್ದ ನಿರ್ಮಾಪಕರುಗಳು ಬಂಡವಾಳವನ್ನು ತೊಡಗಿಸಲು ಹಿಂದೆ ಹೆಜ್ಜೆ ಇಡುತ್ತಾರೆ.  ಅವರನ್ನು ನಂಬಿಕೊಂಡು ಒಳ್ಳೆಯ ಕಥೆಯನ್ನು ಕೈಯಲ್ಲಿಟ್ಟುಕೊಂಡ ನಿರ್ದೇಶಕರ ತಂಡ ಮಂಕಾಗುತ್ತದೆ.  ಒಂದು ಉತ್ತಮ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನೇ ಹುಟ್ಟಿಸುವುದು ಕಷ್ಟವಾದಾಗ, ಕೆಲಸಗಾರರ ವೇತನ ಮತ್ತು ಕಲಾವಿದರ ಸಂಭಾವನೆಗಳಿಗೆ ಕತ್ತರಿ ಬೀಳುತ್ತದೆ. ಇದರಿಂದ ಹೊರಬರುವ ಸಿನಿಮಾಗಳ ಸಂಖ್ಯೆ ಮಿತಿಯಾಗುತ್ತದೆ.  ಕೊನೆಗೆ ಹೆಚ್ಚಿನ ಕಾರ್ಮಿಕ ವರ್ಗ, ಈಗಾಗಲೇ ನಲುಗಿರುವ ಕಲಾವಿದರ ನೋವು ಮುಗಿಲು ಮುಟ್ಟುತ್ತದೆ.

ಇದು ಒಂದು ರೀತಿಯ ಕಾಡ್ಗಿಚ್ಚಿನ ಅನುಭವವನ್ನು ಸೃಷ್ಟಿಸುತ್ತದೆ.  ಅದು ತನ್ನ ಹಾದಿಯಲ್ಲಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತದೆ.  ಕಲಾವಿದರ/ನಟ-ನಟಿಯರ ಮಾರ್ಕೆಟ್ಟುಗಳು ಕುಸಿಯತೊಡಗಿ, ಅವರು ತಮ್ಮ ಹೈ ಮೇಂಟೆನೆನ್ಸ್ ಜೀವನವನ್ನು ನಡೆಸುವುದು ದುಸ್ತರವಾಗುತ್ತದೆ.  ಕಲೆಯಿಂದ ಬದುಕೋ ಅಥವಾ ಬದುಕಿಂದ ಕಲೆಯೋ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗುತ್ತದೆ.

ಒಮ್ಮೆ ಕಾಡ್ಗಿಚ್ಚು ಬಂದಾದನಂತರ ಅಗ್ನಿ ಆವರಿಸಿದ ಜಾಗದಲ್ಲಿ ದೈತ್ಯ ವೃಕ್ಷಗಳು ದುತ್ತನೆ ರಾತ್ರೋ ರಾತ್ರಿ ಬಂದಿಳಿಯುವುದಿಲ್ಲ.  ಮತ್ತೆ ಜೀವನ ಸಣ್ಣಸಣ್ಣ ಗಿಡಗಳಿಂದ, ನೆಲದಲ್ಲಿ ಹುದುಗಿದ ಬೀಜಗಳು ಮುಂದಿನ ಮಳೆಗಾಲದಲ್ಲಿ ಮೊಳಕೆ ಒಡೆಯುವುದರಿಂದ ಆರಂಭವಾಗುತ್ತವೆ.  ಈ ಸಂದರ್ಭದಲ್ಲಿ ಹುಟ್ಟುವ ಗಿಡಗಳು ನಿಜವಾಗಿಯೂ ಪ್ರಕೃತಿಯ ವಿಕೋಪದಿಂದಷ್ಟೇ ಅಲ್ಲ, ಪ್ರಕೃತಿಯ ಪ್ರಯೋಗಾಲಯದಲ್ಲೂ ಸಹ ಜಯಿಸಿದಂತಹವು.  ರಾತ್ರೋ ರಾತ್ರಿ ನಾಯಿಕೊಡೆಗಳಂತೆ ನೂರಾರು ಏಳದೆ, ಎಷ್ಟೋ ಚದುರ ಹೆಕ್ಟೇರ್‌ಗಳಿಗೆ ಒಂದರಂತೆ ಬೃಹತ್ ವೃಕ್ಷಗಳು ಸಸಿಗಳಾಗಿ ಹುಟ್ಟಿ ಬೆಳೆದು ಮರವಾಗಲು ಮತ್ತೆ ನೂರು ವರ್ಷವಾದರೂ ಬೇಕಾಗುತ್ತದೆ.

ನಿಜ.  ಒಂದು ನೂರು ವರ್ಷಗಳಲ್ಲಿ ಏನು ಬೇಕಾದರೂ ಆಗಬಹುದು.  ಜೀವನಗತಿ ಬದಲಾದಂತೆ ಸಿನಿಮಾವೂ ಬದಲಾಗುತ್ತದೆ.  ಸಿನಿಮಾವನ್ನು ನಂಬಿ ಬದುಕುವ ಕುಟುಂಬಗಳು ಕಡಿಮೆಯಾಗುತ್ತವೆ.  ಸಮಾಜಕ್ಕೆ ಏನನ್ನಾದರೂ ಹೊಸತೊಂದನ್ನು ಕೊಡಬೇಕು ಎನ್ನುವ ಅತೀವ ತುಡಿತದ ನಿರ್ದೇಶಕ ಕಷ್ಟಸಾಧ್ಯವಾದರೂ ತನ್ನ ಗುರಿಯನ್ನು ಕಂಡುಕೊಳ್ಳುತ್ತಾನೆ.  ಆ ನಿಟ್ಟಿನಲ್ಲಿ ಮುಂದೆ ತೆರೆಕಾಣುವ ಚಿತ್ರಗಳು ಸಮಯದ ಸಮರದಲ್ಲಿ ಬೆಂದು, ಕಷ್ಟದಲ್ಲಿ ಪುಳಕಿತವಾಗಿ ಅರಳಿದ ಹೂಗಳಂತೆ ನಮಗೆಲ್ಲರಿಗೂ ಕಾಣಿಸಿಕೊಳ್ಳಬಹುದು.

ಬಿಲಿಯನ್ ಡಾಲರ್‌ ಬಂಡಾವಾಳದ ಬಿಸಿನೆಸ್ಸ್‌ನಿಂದ ಖ್ಯಾತರಾದ ಪ್ರಪಂಚದ ಕೆಲವೇ ಕೆಲವು ಕಂಪನಿಗಳು ಈ ಕಲಾವಿದರ, ತಂತ್ರಜ್ಞರ ರಕ್ತವನ್ನು ಕುಡಿಯದಿದ್ದರೆ ಸಾಕು!

Wednesday, April 29, 2020

ಅಕ್ಕಿ ಆರಿಸುವಾಗ...

ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್


 ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು.  ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು.  ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ.  ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.

ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ.  ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು


ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು.  ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ.     ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ.  ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ!  ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ.  ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು.  ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ.  ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು.  ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ.  ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ.  ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ.  ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.

ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|

ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ.  ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ.  ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ.  ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.


ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|

ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ.  ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ.  ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು

ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು  ಇರುತ್ತಿರಲಿಲ್ಲ.  ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ.  ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು.  ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು.  ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು.  ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.


ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|

ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ.  ಒಳಮನೆ ಹಾಗೂ ಆಡುಗೆ  ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು.  ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ.  ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ.  ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು

ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ.  ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.

ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|

ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ   ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ.  ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ.  ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ.  ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ.  ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Saturday, April 04, 2020

ಹವ್ಯಾಸ-ದೇವರು-ಸ್ವಾತಂತ್ರ್ಯ

ಯಾವುದೇ ಒಂದು ಹವ್ಯಾಸ ಬೆಳೆಯ ಬೇಕಾದರೂ ಕನಿಷ್ಠ ಮೂರು ವಾರಗಳ ಕಾಲ ಬೇಕಾಗುತ್ತದೆ ಎಂಬುದು ಹಲವರ ಅನುಭವ.  ಈ ಕಳೆದ ಮೂರು ವಾರಗಳಲ್ಲಿ (ಮನೆಯಲ್ಲಿಯೇ ಕುಳಿತು) ಮನೆಯಿಂದಲೇ ಕೆಲಸ ಮಾಡುವ ನನ್ನಂಥ ಎಷ್ಟೋ ಜನ ಟೆಕ್ನಾಲಜಿ ಮ್ಯಾನೇಜರುಗಳು ಈ ಹೊಸ ಪರಿಯ ಕೆಲಸಕ್ಕೆ ರೂಢಿಯಾಗಿಲ್ಲ?  ಆದರೆ, ಮನೆಯಲ್ಲಿಯೇ ಅಥವಾ ಮನೆಯಿಂದಲೇ ಕೆಲಸ ಮಾಡುವ ಜನರಿಗೆಲ್ಲ ’ಅಂತರಂಗ’ದ ಹೇಳಲೇ ಬೇಕಾದ ಕಿವಿ ಮಾತೊಂದಿದೆ: ಮನೆಯಿಂದಲೇ ಕುಳಿತು ಕೆಲಸ ಮಾಡುವುದೆಂದರೆ ಬೊಕ್ಕ ತಲೆಯ ವ್ಯಕ್ತಿ ಮುಖ ತೊಳೆದ ಹಾಗೆ!  ಎಲ್ಲಿ ಶುರು ಮಾಡಿ ಎಲ್ಲಿ ನಿಲ್ಲಿಸಬೇಕು ಎಂಬುದು ಅಷ್ಟು ಸುಲಭವಾಗಿ ತಿಳಿಯದು.  ಘಂಟೆಗೊಂದರಂತೆ ಟ್ಯಾಸ್ಕುಗಳು ನಮ್ಮ ತಲೆ ಏರಿ ಕುಳಿತಿರುವಾಗ, ಕೊನೆಯಿಲ್ಲದ ಹಾಗೆ ಇ-ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ ಬಂದು ಇಳಿಯುತ್ತಿರುವಾಗ, ಕಂಪನಿಯಲ್ಲಿದ್ದವರೆಲ್ಲ ನಾಳೆಯೇ ಪ್ರಪಂಚದ ಕೊನೆಯೆಂಬಂತೆ ಇನ್ಸ್ಟಂಟ್ ಮೆಸೇಜುಗಳಲ್ಲಿ ತಮ್ಮ ಕಥನಗಳನ್ನೇ ಹೆಣೆಯುತ್ತಿರುವಾಗ - ಎಲ್ಲಿಂದ ಆರಂಭಿಸುವುದು, ಎಲ್ಲಿ ನಿಲ್ಲಿಸುವುದು?  ಆಫೀಸಿನಲ್ಲಿದ್ದವರಾದರೆ ಮನೆಗೆ ಹೋಗುತ್ತೇವೆಂದಾದರೂ, ಕಾಫಿ-ಟೀ-ಲಂಚ್ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತೇವೆಂದಾದರೂ ಅತ್ತಿಂದಿತ್ತ ಓಡಾಡುತ್ತಿದ್ದೆವು.  ಈಗ ಹಾಗಿಲ್ಲ.  ಡೆಸ್ಕ್ ಅನ್ನು ಬಿಟ್ಟು ಬದಿಗೆ ಬಂದರೆ, ಯಾರದ್ದಾದರೊಬ್ಬರದ್ದು ಕಾಟ ತಪ್ಪಿದ್ದಲ್ಲ.  ಮನೆಯೇ ಆಫೀಸು, ಆಫೀಸಿನ ಪಕ್ಕದಲ್ಲೇ ಅಡುಗೆ ಮನೆ, ಅದರ ಮಗ್ಗುಲಲ್ಲೇ ಬಾತ್‌ರೂಮು... ಹೀಗೆ ಗೂಟಕ್ಕೆ ಕಟ್ಟಿ ಹಾಕಿದ ಘೂಳಿಯಂತಾದ ಮನಸ್ಸು ಇದ್ದ ಸಣ್ಣ ಆವರಣದಲ್ಲೇ ಸದಾ ಗಿರಕಿ ಹೊಡೆಯುತ್ತಿರುತ್ತದೆ.  ಮೊನ್ನೆ ಯಾವುದೇ ಕಾರಣಕ್ಕೋ ಏನೋ ಚಪ್ಪಲಿ ಇಡುವ ಕ್ಲಾಸೆಟ್ಟಿನ ಬಾಗಿಲು ತೆಗೆದು ನೋಡಿದರೆ, ಅಲ್ಲಿ ನಾನು ಹಾಕುವ ಡ್ರೆಸ್ ಶೂ‌ಗಳು, ಹಳೆಯ ಕಸ್ಟಮರ್‌ ಅನ್ನು ನಕ್ಕು ಸ್ವಾಗತಿಸುವ ಗೂಡು ಅಂಗಡಿಯ ಮಾಲಿಕನಂತೆ ಕಂಡುಬಂದವು.  ನಾನು ಅವುಗಳನ್ನು ಮುಟ್ಟಿಯೂ ಸಹ ನೋಡಲಿಲ್ಲವಲ್ಲ ಎನ್ನುವ ಕಳಕಳಿಯಲ್ಲಿಯೇ ಕ್ಲಾಸೆಟ್ ಬಾಗಿಲು ಹಾಕುತ್ತಿದ್ದಂತೆ ಅನ್‌ಲೈನ್ ಅಡ್ವರ್‌ಟೈಸ್‌ಮೆಂಟ್‌‍ನಲ್ಲಿ ಬಂದು ಹೋಗುವ ಮುಖಗಳಾಗಿ ಮಾಯವಾದವು॒!  ಇನ್ನು ಬಾಗಿಲ ಬಳಿಯೇ ಬಿಡುವ ಶೂಗಳ ಕಥೆ ಇದಾದರೆ, ಮೇಲೆ ಕೊಂಡೊಯ್ದು (ಅಚ್ಚುಕಟ್ಟಾಗಿ) ಇಟ್ಟಿದ್ದ ಕೋಟು-ಸೂಟುಗಳು, ನಾನು ಇನ್ಯಾರದೋ ಮನೆಯನ್ನು ಹೊಕ್ಕೆನೇನೋ ಎಂಬ ಆಶ್ಚರ್ಯ ಸೂಚಕ ಭಾವನೆಯನ್ನು ನನ್ನ ಮುಖದ ಮೇಲೆ ಹೊರಡಿಸಿದವು.  ಕಳೆದ ಮೂರು ವಾರಗಳಲ್ಲಿ ನಾವು ಬಳಸಿದ ಸಂಪನ್ಮೂಲಗಳನ್ನು ನೆನೆದುಕೊಂಡರೆ "ಸಮರಸದ ಬಾಳುವೆಗೆ ಸರಳ ಜೀವನವೇ ಕಾರಣ॒!" ಎಂಬ ಪುಸ್ತಕವನ್ನು ಬರೆಯುವಷ್ಟು ಮಟೀರಿಯಲ್ ಸಿಗುವುದಂತೂ ಖಂಡಿತ!


***
ಈ ಕೋರೋನಾ ವೈರಸ್ಸಿನ ದೆಸೆಯಿಂದ ನಮ್ಮ ದೇವರುಗಳಿಗೆ ಒಂದು ಹೊಸದಾದ ಪ್ರೌಢಿಮೆ ಬಂದಿದೆ.  ಸಂಕಟಕಾಲದಲ್ಲಿ ವೆಂಕಟರಮಣ ಎನ್ನುವಂತೆ ಎಲ್ಲ ಮಾನವ ಆತ್ಮಗಳೂ ಸಹ ಅವುಗಳ ನೆಚ್ಚಿನ ದೇವರನ್ನು ನೆನೆಯುತ್ತಿರುವಾಗ, ನಮ್ಮೆಲ್ಲರ ಮೊರೆಯನ್ನು ಏಕ ಕಾಲದಲ್ಲಿ ದೇವರುಗಳನ್ನು ತಲುಪಿಸುತ್ತಿರುವ  ಕಮ್ಯುನಿಕೇಷನ್ ನೆಟ್‌ವರ್ಕ್‌ನಲ್ಲಿಯೂ ಸಹ ಕಂಜೆಷನ್ ಇರುವುದರಿಂದ, ಬ್ಯಾಂಡ್‌ವಿಡ್ತ್ ಸಮಸ್ಯೆಗಳು ಖಂಡಿತ ಇರಬಹುದು.  ಅಂತೆಯೇ ವಿಶ್ವದ ಏಳೂ ಮುಕ್ಕಾಲು ಬಿಲಿಯನ್ ಮಾನವ ರೂಪದಲ್ಲಿನ ಆತ್ಮಗಳು ಅರ್ಧ ಸತ್ತ (ಅಥವಾ ಅರ್ಧ ಬದುಕಿರಬಹುದಾದ) ಜೀವಿಯ ವಿರುದ್ಧ ರಕ್ಷಿಸು ಎಂದು ಮೊರೆ ಹೊತ್ತಿರುವಾಗ, ದಶಾವತಾರದ ನಂತರ ಮುಂದಿನ ಅವತಾರ ಏನಾಗಬಹುದು ಎಂದು ದೇವರೂ ಯೋಚಿಸಬೇಕಾಗುತ್ತದೆ.

೧. ಮೀನಾಗಿ ಬಂದವನು ಪ್ರಳಯದಿಂದ ರಕ್ಷಿಸಿದ
೨. ಆಮೆಯಾಗಿ ಬಂದವನು ಸಮುದ್ರ ಮಂಥನದ ಭಾರವನ್ನು ಹೊತ್ತ
೩. ಹಂದಿಯಾಗಿ ಬಂದವನು ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ
೪. ನರಸಿಂಹನಾಗಿ ಬಂದವನು ಸಾವೇ ಇಲ್ಲದ ಹಿರಣ್ಯಕಷ್ಯಪುವನ್ನು ಸಂಹರಿಸಿದ
೫. ಕುಳ್ಳನಾಗಿ ಬಂದವನು ಬಲಿಯನ್ನು ಪಾತಾಳಕ್ಕೆ ತಳ್ಳಿದ
೬. ಕೊಡಲಿ ರಾಮನಾಗಿ ಬಂದು ಕ್ಷತ್ರಿಯ ಸಂಹಾರಕ್ಕೆ ಇಳಿದು, ಮಹೇಂದ್ರಗಿರಿಯಲ್ಲಿ ಚಿರಂಜೀವಿಯಾಗಿ ನೆಲೆಸಿದ
೭. ರಾಮನಾಗಿ ರಾವಣ ಸಂಹಾರ ಮಾಡಿದ
೮. ಕೃಷ್ಣನಾಗಿ ಕೌರವ ಸಂಹಾರ ಮಾಡಿದ (ಬಲರಾಮನ ಶೇಷನ ಅವತಾರವೂ ಇದೇ ಅವಧಿಯಲ್ಲಿ ಸೇರುತ್ತದೆ)
೯.  ಬುದ್ಧನಾಗಿ ಎಲ್ಲರಿಗೂ ಬೋಧಿಸಿದ
೧೦. ಕಲ್ಕಿಯಾಗಿ ಬಿಳಿಯ ಕುದುರೆಯನ್ನೇರಿ ಕಲಿಯುಗದ ಉದ್ದಕ್ಕೂ ಉಲ್ಕಾಪಾತವಾಗಿ ತಿರುಗುತ್ತಿದ್ದಾನೆ... ಕಲಿಯುಗದಲ್ಲಿ ಅಧರ್ಮ ತಾಂಡವವಾಡಿದರೆ ಮತ್ತೆ ಬಂದೇ ಬಿಟ್ಟಾನು, ಉಲ್ಕೆಯಾಗಿ ಅಪ್ಪಳಿಸುವ ಮುಖೇನ ಪ್ರಜ್ವಲಿಸಿಬಿಟ್ಟಾನು!

ಪ್ರಭೂ! ಈ ಕಣ್ಣಿಗೆ ಕಾಣದ ಜೀವಿಯಿಂದ ನಮ್ಮೆಲ್ಲರ ರಕ್ಷಣೆ ಹೇಗೆ ಸಾಧ್ಯ? ನೀನೇನಾದರೂ ವಿಶೇಷ ವಿಕಿರಣಗಳನ್ನು ಹೊರಸೂಸಿ ಗಾಳಿಯಲ್ಲಿನ ಈ ಅಣುಜೀವಿಗಳನ್ನು ಮಾತ್ರ ನಾಶಪಡಿಸಿದರೆ ಆಗಬಹುದು! (ಮಾನವನಿಂದ ನಿರ್ನಾಮವಾಗುತ್ತಿರುವ ಜೀವಿಗಳ ಮೊರೆಯನ್ನೇಕೆ ನೀನು ಆಲಿಸುತ್ತಿಲ್ಲ? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ, ಅದೇಕೆ? ಮಾನವರಲ್ಲದ ಜೀವಿಗಳು ನಿನ್ನ ಮಕ್ಕಳಲ್ಲವೇನು?)

***
ಒಂದು ವಸ್ತು ಇಲ್ಲದಾಗಲೇ ಅದರ ಬೆಲೆ ಗೊತ್ತಾಗುವುದಂತೆ.  ಈ "ವಸ್ತು"ಗಳ ಪಟ್ಟಿಯಲ್ಲಿ ನಮ್ಮ "ಸ್ವಾತಂತ್ರ್ಯ"ವೂ ಸೇರಿದೆ.  ನಾವೆಲ್ಲ ಸಂಘಜೀವಿಗಳು.  ನಮ್ಮ ನಮ್ಮ ಮನೆಗಳಲ್ಲಿ ನಮಗೆ ಬೇಕಾದ ಐಶಾರಾಮ, ಭೌತಿಕವಸ್ತುಗಳು, ನಮ್ಮವರು, ಮುಖ್ಯವಾಗಿ ಸಮಯ, ಇವೆಲ್ಲ ಇದ್ದಾಗಲೂ ಕೂಡ ನಮ್ಮಲ್ಲಿ ಏನೋ ಒಂದು ಅಪರಿಪೂರ್ಣ ಭಾವನೆ ತುಂಬಿಕೊಳ್ಳೋದಿಲ್ಲವೇ? ಹಾಗೆ. ಈ ಆಯ್ಕೆಯನ್ನು -  ಸ್ವಾತಂತ್ರ್ಯ, ಮುಕ್ತಿ, ತೆರವು, ಬಿಡುಗಡೆ, ಅನಿರ್ಬಂಧಿತ ಸ್ಥಿತಿ, ವಿಮೋಚನೆ, ಸ್ವಚ್ಛಂದತೆ, ಸ್ವತಂತ್ರತೆ - ಎನ್ನುವ ಅನೇಕ ಪದಗಳಲ್ಲಿ ನಾವು ಅಳೆದರೂ ಅದರ ಮಹತ್ವವನ್ನು ಅಷ್ಟು ಸುಲಭವಾಗಿ ಸಾರಲಾಗುವುದಿಲ್ಲ.  ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿರುವ ಯಾವುದೇ ಮಾಹಿತಿ-ಮನರಂಜನೆಯನ್ನು ನೋಡಿದರೂ ಮನ ತುಂಬದು.  ಅದೇ, ಅಪರೂಪಕ್ಕೊಮ್ಮೆ ಕರೆ ಮಾಡುವ ಹಳೆಯ ಸ್ನೇಹಿತರನ್ನು ಯಾವಾಗ ಬೇಕಾದರೂ ಆಗ ಕರೆ ಮಾಡಿ ಮಾತನಾಡಿ, ನಿಮಗೆ ಗೊತ್ತಿಲ್ಲದಂತೆ ಒಂದು ಘಂಟೆ ಆರಾಮವಾಗಿ ಕಳೆದುಹೋಗುತ್ತದೆ.  ನಮ್ಮ ನಮ್ಮ ಗೂಡುಗಳಲ್ಲಿ ನಮ್ಮನ್ನು ಕಟ್ಟಿ ಹಾಕಿದ್ದರೂ ಸಹ, ಈ ಕೋವಿಡ್ ದೆಸೆಯಿಂದ ನಾವೆಲ್ಲರೂ ದೂರವಿದ್ದೂ ಹತ್ತಿರವಾಗಿದ್ದೇವೆ ಎನ್ನಬಹುದು.  ಆಯ್ಕೆ, ಸ್ವಾತಂತ್ರ್ಯ, ಸಹಬಾಳ್ವೆಯ ಸಮತೋಲನದಲ್ಲಿ ನಮಗೆಲ್ಲ ಬದುಕಿನ ಗಂಭೀರ ಮುಖವನ್ನು ದರ್ಶನ ಮಾಡಿಸಿದ ಕೋವಿಡ್‌ಗೆ ಜೈ॒!

Monday, June 15, 2009

ಮ್ಯಾನೆಜ್‌ಮೆಂಟ್ ಕೆಲ್ಸಾ, ಬೇಡಾ ಸ್ವಾಮಿ...

ಮ್ಯಾನೇಜ್‌ಮೆಂಟ್ ಕೆಲ್ಸಕ್ಕಿಂತ ಅಸ್ಸೋಸಿಯೇಟ್ ಕೆಲ್ಸಾನೇ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಿದ್ದು ಇತ್ತೀಚೆಗೆ. ನಮಗೆ ಸಿಗೋ ಸವಲತ್ತುಗಳಲ್ಲೊಂದಾಗಿ ಪ್ಲೆಕ್ಸ್ ಟೈಮ್ - ಬೆಳಿಗ್ಗೆ ಇಂಥಾ ಟೈಮಿಗೆ ನಿಗದಿಯಾಗಿ ಬರಬೇಕು ಅಂತೇನೂ ಇಲ್ಲ ಹಾಗೇ ಸಂಜೆ ಎಷ್ಟು ಹೊತ್ತಿನವರೆಗೆ ಬೇಕಾದ್ರೂ ಕೆಲ್ಸ ಇರುತ್ತೆ. ಜೊತೆಗೆ ನಮ್ಮ ಟೈಮ್‌ಶೀಟ್‌ಗಳು ಹಗಲು ಹೊತ್ತಿನಲ್ಲೇ ಸುಳ್ಳು ಹೇಳೋ ಹಾಗೆ ವಾರಕ್ಕೆ ಕೇವಲ ನಲವತ್ತು ಘಂಟೆಗಳ ಕೆಲಸವನ್ನು ದಾಖಲೆ ಮಾಡಿಕೊಂಡು ಒಟ್ಟು ಸಂಬಳವನ್ನು ತೆಗೆದುಕೊಂಡರೂ ಅದಕ್ಕಿಂತ ಹೆಚ್ಚು ಮಾಡಿದ ಕೆಲಸಕ್ಕೆ ಯಾವ ಸಂಭಾವನೆ ಸಿಗದೇ ಹೋದರೂ ಸರಿ ಅದು ರಿಜಿಸ್ಟರಿನಲ್ಲಿ ದಾಖಲೂ ಆಗದ ಪರಿಸ್ಥಿತಿ. ನಾವು ವಾರಕ್ಕೆ ಮಾಡುವ ಐವತ್ತೋ, ಐವತ್ತೈದೋ ಘಂಟೆಗಳಿಂದ ನಮ್ಮ ನಮ್ಮ ಸಂಬಳವನ್ನು ಭಾಗಿಸಿ ನೋಡಿದರೆ ನಮ್ಮ ಘಂಟೆಯ ’ಕೂಲಿ’ ಕಡಿಮೆ. ಇನ್ನು ವರ್ಷದ ಕೊನೆಯಲ್ಲಿ ಸಿಗೋ ಬೋನಸ್ಸು ಅದು ಯಾವ್ಯಾವುದೋ ಈಕ್ವೇಷನ್ನುಗಳಿಂದ ಹೊರಬರುವ ಮೊತ್ತದ ಪರಿಣಾಮ ನಮ್ಮ ಸಂಬಳದ ಒಂದು ಭಾಗವೇ ಅದು ಆದರೆ ಕೊಡುವ ರೀತಿ ಬೇರೆ ಎನ್ನುವ ತರ್ಕ.

ಎಂಬಿಎ, ಎಂ.ಎಸ್ ಮುಂತಾದ ಡಿಗ್ರಿಗಳಿಂದ ಅಲಂಕೃತಗೊಂಡ ನಮ್ಮ ರೆಸ್ಯೂಮೆಗಳಿಗೆ ಈ ಮಾರ್ಕೆಟ್ ಪ್ಲೇಸ್‌‍ನಲ್ಲಿ ಕಡಿಮೆ ಬೇಡಿಕೆ, ಅದೇ ಒಂದು ಸ್ಕಿಲ್ಲ್‌ನಲ್ಲಿ ಸ್ಪೆಷಲೈಜ್ಡ್ ಇರೋ ಅಂತ ಒಬ್ಬ ಅಸೋಸಿಯೇಟ್ ಕೆಲ್ಸಕ್ಕೆ ಹೆಚ್ಚಿನ ಡಿಮ್ಯಾಂಡ್. ಅವರ ಘಂಟೆಯ ಸಂಬಳ ಜೊತೆಗೆ ಹೆಚ್ಚು ಕೆಲಸ ಮಾಡಿದ್ದಕ್ಕೆ ಸಿಗೋ ಓವರ್ ಟೈಮ್ ಹಾಗೂ ಜಾಬ್ ಸೆಕ್ಯುರಿಟಿ ಇವನ್ನೆಲ್ಲ ಲೆಕ್ಕ ಹಾಕಿಕೊಂಡರೆ ಅವರದ್ದೇ ಕೆಲ್ಸ ನಾವೂ ಮಾಡಿಕೊಂಡಿರಬಾರದೇಕೆ, ಅನ್ನಿಸೋದಿಲ್ಲವೇ?

’ಲಂಚ್ ಬ್ರೇಕ್ ಆರೋಗ್ಯಕ್ಕೆ ಒಳ್ಳೆಯದು’ ಎಂದು ಬರೆದುಕೊಂಡಿರೋ ಎಷ್ಟೋ ಆರ್ಟಿಕಲ್ಲುಗಳನ್ನು ನನ್ನಂಥವರು ಓದಿಯೂ ಶೇಕಡಾ ತೊಂಭತ್ತು ಸಮಯ ನನ್ನ ಮಧ್ಯಾಹ್ನದ ಊಟವನ್ನು ಕಾಲ್ ಹಾಗೂ ಮೀಟಿಂಗ್‌ಗಳ ನಡುವೆ ಐದರಿಂದ ಹತ್ತು ನಿಮಿಷದಲ್ಲಿ ಲಗುಬಗೆಯಿಂದ ತುಂಬಿಸಿಕೊಂಡು ಊಟ ಮಾಡಿದ ಹಾಗೆ ಮಾಡೋದು ದಿನನಿತ್ಯದ ಕಾಯಕಗಳಲ್ಲೊಂದು. ಬೆಳಿಗ್ಗೆ ಸೂರ್ಯನಿಗೆ ಪೈಪೋಟಿಮಾಡೋ ಹಾಗೆ ರಸ್ತೆಯಲ್ಲಿ ಸಿಗೋ ಸ್ಲೋ ಡ್ರೈವರುಗಳನ್ನೆಲ್ಲ ಬೈದುಕೊಂಡು, ಅದರ ನಡುವೆ ತಿಂಡಿ ತಿಂದ ಹಾಗೆ ಮಾಡಿ ಕಾಫಿ ಕುಡಿದ ಹಾಗೆ ಮಾಡಿ ಆದಷ್ಟು ಬೇಗ ಆಫೀಸಿಗೆ ಬಂದರೂ ಅದ್ಯಾವುದೋ ಅವ್ಯಕ್ತ ಬಂಧನದ ಪ್ರಯುಕ್ತ ಎಲ್ಲರೂ ಹೋದ ಮೇಲೆ ಹೋಗುವ ಹಾಗೆ ಆಫೀಸಿನಲ್ಲೇ ಕೊಳೆಯುವ ಯಾತನೆ. ಸಮ್ಮರ್ರ್ ಬರುತ್ತಿದ್ದ ಹಾಗೆ ಎಲ್ಲರೂ ವೆಕೇಷನ್ನುಗಳನ್ನು ಅದಾಗಲೇ ಪ್ಲಾನ್ ಮಾಡಿಕೊಂಡು ಅಲ್ಲಲ್ಲಿ ವಾರ-ದಿನಗಳನ್ನು ಆಫ್ ಮಾಡಿಕೊಂಡು ಸಂತೋಷಪಡುತ್ತಿದ್ದರೆ ನಾವು ಆಫ್ ಇದ್ದ ದಿನಗಳಲ್ಲೂ ಅಲ್ಲಲ್ಲಿ ನಮಗೆ ಅಂಟಿಕೊಂಡ ರೋಗಗಳ ಹಾಗಿನ ಕಾಲ್ (ಕಾನ್ಪರೆನ್ಸ್ ಕಾಲ್) ಗಳು. ಒಬ್ಬ ಪೈನಾನ್ಸಿಯಲ್ ಆಡ್ವೈಸರ್‌ನಿಂದ ಹಿಡಿದು, ಡಾಕ್ಟರ್, ಡೆಂಟಿಸ್ಟ್ ಮೊದಲಾದವರನ್ನು ಕಂಡೋ ಮಾತನಾಡಿಸಲಾಗದ ಬಂಧನ. ಪೋಸ್ಟ್ ಆಫೀಸ್, ಡ್ರಾಮಾ, ರಿಕ್ರಿಯೇಷೇನ್ ಮೊದಲಾದವುಗಳಿಗೆ ಹೋಗದ ಹಾಗೆ ಕಟ್ಟು ಹಾಕುವ ಕೆಲಸದ ಸಂಬಂಧದ ಅವ್ಯಕ್ತ ಸಂಕೋಲೆ. ಮತ್ತೆ ಸಂಜೆಯ ಹೊತ್ತಿಗೆ ಮುಖ ಒಣಗಿಸಿಕೊಂಡು ಬಂದು ಮನೆಯಲ್ಲಿ ಊಟ ಮಾಡಿದ ಹಾಗೆ ಮಾಡಿ ದಿನದ ಒಂದೋ ಎರಡೋ ಬದುಕಿನ ಸ್ವರಗಳಿಗೆ ಒಂದಿಷ್ಟು ಗಾಳಿ ಊದಿ ನಿದ್ರೆಗೆ ಶರಣು ಹೋಗುವ ಕರ್ಮ ಜೀವನ.

ಈ ಸೆಲ್ಫ್ ಸೆಟ್ ಗೋಲ್‌ಗಳಿಗೆ ಒಂದಿಷ್ಟು ಕಡಿವಾಣ ಹಾಕಬೇಕು. ಮ್ಯಾನೇಜ್‌ಮೆಂಟ್ ಕೆಲ್ಸದಲ್ಲಿದ್ದರೂ ಅಸೋಸಿಯೇಟ್ ಬದುಕಿದ ಹಾಗೆ ಬದುಕಬೇಕು. ದಿನದ ಘಂಟೆಗಳನ್ನು ನಿಗದಿಯಂತೆ ಪ್ಲಾನ್ ಮಾಡಿಕೊಂಡು ನಾವು ಸೇರಿಕೊಳ್ಳಲಾಗದ ಮೀಟಿಂಗ್‌ಗಳಿಗೆ ’ಕ್ಷಮಿಸಿ’ ಎನ್ನಬೇಕು. ನಾವು ಪ್ರತೀವಾರಕ್ಕೆ ಹತ್ತು ಹತ್ತು ಘಂಟೆ ಕೆಲಸ ಮಾಡಿಯೂ ನಮಗಿಂತ ಕಡಿಮೆ ಕೆಲಸ ಮಾಡುವ ನಮ್ಮ ಓರಗೆಯವರ ಸಂಬಳ/ಆದಾಯಕ್ಕೆ ನಮ್ಮನ್ನು ಹೊಂದಿಸಿಕೊಂಡು ಆಫೀಸಿನಲ್ಲಿ ಎಂಟು-ಒಂಭತ್ತು ಘಂಟೆಗಳಿಗಿಂತ ಹೆಚ್ಚು ಕೆಲಸವನ್ನು ಮಾಡದೇ ಉಳಿದದ್ದನ್ನು ಪರ್ಸನಲ್ ವಿಷಯಗಳಿಗೆ ವಿನಿಯೋಗಿಸಬೇಕು. ಕಾಯಿದೆ/ಕಾನೂನು ಎಂದು ಮಾತನಾಡುವ ನಮ್ಮ ಮೇಲಾಧಿಕಾರಿಗಳಿಗೆ ಅವರ ರೀತಿಯಲ್ಲೇ ಮಾತನಾಡುತ್ತಾ ಅವರ ಕಾನೂನು ಕಟ್ಟಳೆಗಳಲ್ಲೇ ಅವರನ್ನು ನಿಯಂತ್ರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಲಂಚ್ ಟೈಮ್‌ಗೆ ಡೆಸ್ಕ್ ಬಿಟ್ಟು ಎದ್ದು ಎಲ್ಲಾದರೂ ದೂರ ಹೋಗಿಬಿಡಬೇಕು. ಇ-ಮೇಲ್, ವಾಯ್ಸ್ ಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೇಜುಗಳನ್ನು ಸಂಬಾಳಿಸಬೇಕು. ಇನ್ ಬಾಕ್ಸ್ ನಲ್ಲಿರುವ ಮೆಸ್ಸೇಜುಗಳನ್ನೆಲ್ಲ ಓದಿಯೇ ತೀರುತ್ತೇನೆ, ಫೋನ್ ನಲ್ಲಿ ಬ್ಲಿಂಕ್ ಆಗುವ ಲೈಟ್ ಬೆನ್ನನ್ನು ಹತ್ತಿ ಎಲ್ಲ ವಾಯ್ಸ್ ಮೇಲ್ ಗಳಿಗೂ ಉತ್ತರವನ್ನು ತತ್ ತಕ್ಷಣ ಕೊಡುತ್ತೇನೆ ಎನ್ನುವ ರೂಢಿಯನ್ನು ಬಿಟ್ಟು ಬಿಡಬೇಕು. ಪ್ರಪಂಚದ ಎಲ್ಲ ಸಮಸ್ಯೆಗಳನ್ನು ನಾವು ನಾವೇ ಪರಿಹರಿಸಿಕೊಂಡು ನಮ್ಮ ಬಾಸ್‌ಗಳ ಕೆಲಸವನ್ನು ಸುಲಭ ಮಾಡುವ ಬದಲು ಅವಾಗಾವಾಗ ಒಂದಿಷ್ಟು ಸಮಸ್ಯೆಗಳನ್ನು ಅವರ ಅವಗಾಹನೆಗೆ ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂಜೆ ಇಷ್ಟು ಹೊತ್ತಿಗೆ ಹೊರಟು ತೀರುತ್ತೇನೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು ಆಗ ಮನೆಗೆ ಬಂದು ಆಫೀಸನ್ನು ಆಫೀಸಿನಲ್ಲೇ ಬಿಟ್ಟು ’ಮನುಷ್ಯ’ನಾಗಬೇಕು. ಎಲ್ಲವೂ ಇಂದಿನ ಕೆಲಸವೇ ಎನ್ನುವ ಧಾರಾಳತನವನ್ನು ಮೈವೆತ್ತಬೇಕು.

ನನ್ನ ಸಹೋದ್ಯೋಗಿಯೊಬ್ಬಳು ಹಲವು ವರ್ಷಗಳ ಹಿಂದೆ ನಿವೃತ್ತಳಾಗುವಾಗ ಒಂದು ಮಾತನ್ನು ಹೇಳಿದ್ದಳು, ’ಈ ಕಂಪನಿ ನೀನು ಹುಟ್ಟುವುದಕ್ಕಿಂದ ಮೊದಲೂ ಇತ್ತು, ನೀನು ಸತ್ತ ಮೇಲೆಯೂ ಇರುತ್ತೆ. ನಿನ್ನ ಸಮಯದ ಹೆಚ್ಚು ಪಾಲನ್ನು ನಿನ್ನ ಕುಟುಂಬದವರ ಜೊತೆ ಕಳೆಯೋದಕ್ಕೆ ಪ್ರಯತ್ನಿಸು’. ನಾವು ಮುಂದೂಡುವ ನಮ್ಮ ವೆಕೇಷನ್ನುಗಳಾಗಲೀ, ನಾವು ದಿನನಿತ್ಯ ತಿನ್ನುವ ಹಾಗೆ ಮಾಡಿ ತಿಂದ ತಿಂಡಿ-ಊಟಗಳಾಗಲಿ, ನಾವು ಕಳೆದುಕೊಳ್ಳುವ ಅನೇಕ ಸಾಮಾಜಿಕ ಚಟುವಟಿಕೆಗಳಾಗಲೀ, ಅದೆಲ್ಲೋ ಬಿದ್ದು ತುಕ್ಕು ಹಿಡಿಯುತ್ತಿರುವ ನಮ್ಮ ಹವ್ಯಾಸಗಳಾಗಲೀ ಯಾವುದೂ ಲಾಂಗ್ ಟರ್ಮ್‌ನಲ್ಲಿ ಖಂಡಿತ ಒಳ್ಳೆಯದನ್ನು ಮಾಡಲಾರವು. ನಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ನಾವು ದಿನ ನಿತ್ಯ ಮಾಡುವ ಆಫೀಸಿನ ಕೆಲಸದಷ್ಟೇ ಉಳಿದವುಗಳಿಗೂ ಪ್ರಾಮುಖ್ಯತೆಯನ್ನು ಕೊಡಬೇಕು ಎಂದುಕೊಂಡು ಎಲ್ಲವನ್ನು ಮೊದಲೇ ಯೋಚಿಸಿ ಒಂದು ’ಪ್ಲಾನ್’ ಅನ್ನು ತಯಾರಿಸಿದ್ದೇ ಆದರೆ ಅದರಿಂದ ಬಹಳಷ್ಟು ಅನುಕೂಲಗಳಿವೆ. ನಮ್ಮ ಬಾಸ್‌ನ ಸೀಕ್ರೆಟ್ ಒಂದಿದೆ, ವರ್ಷದ ಹೆಚ್ಚಿನ ವೇಕೇಷನ್ನುಗಳನ್ನು ಎಲ್ಲರಿಗಿಂತ ಮೊದಲೇ ಅಲ್ಲಲ್ಲಿ ನಿಗದಿ ಪಡಿಸಿ ಆಯಾ ದಿನಗಳನ್ನು ನಿಯೋಜಿತವಾಗಿ ಆಫ್ ತೆಗೆದುಕೊಳ್ಳುವುದು - ಹೀಗೆ ಮಾಡುವುದರಿಂದ ಅನೇಕ ಅನುಕೂಲಗಳನ್ನು ನಾನು ಅವರ ಮೂಲಕ ಈಗಾಗಲೇ ಕಂಡುಕೊಂಡಿದ್ದೇನೆ.

ಸರಿ, ಇಷ್ಟೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಇನ್ನೂ ಏಕೆ ನಾನು ಈ ಪ್ಲಾನ್ ಅನ್ನು ಕಾರ್ಯಗತಗೊಳಿಸಿಕೊಂಡಿಲ್ಲ ಅನ್ನೋ ಪ್ರಶ್ನೆ ಸಹಜ. ನಮ್ಮ ಬದುಕೇ ಬೇರೆ ಅಲ್ಲವೇ, ಈ ವರ್ಷದ ಕೊನೆಯಲ್ಲಿ ಬರೋ ಇಂಡಿಯಾ ಟ್ರಿಪ್ಪಿಗೆ ನಮ್ಮ ವೆಕೇಷನ್ನ್ ದಿನಗಳನ್ನು ಕೂಡಿ ಹಾಕಿ ಒಟ್ಟಿಗೆ ಮೂರು ಅಥವಾ ನಾಲ್ಕು ವಾರಗಳನ್ನು ತೆಗೆದುಕೊಳ್ಳೋ ಅಗತ್ಯವಿರೋದರಿಂದ ವರ್ಷವಿಡೀ ವೆಕೇಷನ್ನುಗಳು ಸಂಭವಿಸೋದೇ ಇಲ್ಲ! ಇನ್ನು ಎಷ್ಟೋ ಕಷ್ಟ ಪಟ್ಟು, ಎದ್ದೂ-ಬಿದ್ದು ಹೋಗಿ ಬರೋ ಇಂಡಿಯಾ ಟ್ರಿಪ್ಪ್ ಅನ್ನು ವೆಕೇಷನ್ನು ಎಂದು ಕರೆಯಬೇಕೇ ಬೇಡವೇ ಅನ್ನೋದು ಒಳ್ಳೆಯ ಪ್ರಶ್ನೆಯಾಗೇ ಉಳಿಯುತ್ತದೆ. ಈ ದ್ವಂದ್ವಗಳಿಗೆಲ್ಲ ಒಂದೇ ಉತ್ತರ, ಒಂದೇ ದಾರಿ - ಮ್ಯಾನೇಜ್‌ಮೆಂಟ್ ಕೆಲಸದಲ್ಲಿ ಅಸೋಸಿಯೇಟ್ ತನವನ್ನು ಗುರುತಿಸಿಕೊಂಡು ನಮ್ಮಷ್ಟಕ್ಕೆ ನಮ್ಮದೊಂದು ಟೈಮ್‌ಟೇಬಲ್, ಅಜೆಂಡಾವನ್ನು ಪ್ರಸ್ತುತಪಡಿಸಿಕೊಂಡು ನಿಯಮಿತವಾಗಿ ಹೀಗೇ ಹೀಗೇ ಎಂದು ಬದುಕುವ ಗುರಿ.

Thursday, July 31, 2008

ನಾವು ಮತ್ತು ನಮ್ಮ ಕೆಲಸ (ಅದರ ಮೇಲಿನ ಪ್ರೀತಿ)

ಎಲ್ರೂ ಮಾಡೋದ್ ಹಾಗೇ, ಯಾವ್ದೋ ಒಂದ್ ಕಂಪ್ನಿಗೋ, ಗವರ್ನಮೆಂಟ್ ಕೆಲ್ಸಕ್ಕೋ ಜೀವಾ ತೇದೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆವಕ್ಕೆ... ಅಂತ ಅನ್ಸಿದ್ದು ಈ ವಾರದ ಕೊನೇಲಿ ನಿವೃತ್ತನಾಗ್ತಿರೋ ನನ್ನ ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ.

ಅವ್ನಿಗೆ ನಾನು ವಿಷ್ ಮಾಡ್ದೆ, ನನಗುತ್ತರವಾಗಿ ಅವನು ’Have fun at work!' ಎಂದು ನಕ್ಕ.

ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ.

ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದೀನಿ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವನ ಮುಖದ ಮೇಲೆ ಕಾಣ್ಲಿಲ್ಲ, ಜೊತೆಗೆ ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.

***

ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲ್ಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ನಾವೆಲ್ಲ ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳ ಸ್ಪಿರಿಟ್ಟು ಈಗಾಗಲೇ ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ, ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ಬೇಸ್ತು ಬಿದ್ದಿದ್ದೇನೆ. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಫೋನ್ ಹೆಡ್‌ಸೆಟ್ ಅನ್ನು ತಲೆಗೆ ಸಿಕ್ಕಿಸಿಕೊಂಡಿರುವುದನ್ನು ನೋಡೇ ಸುಸ್ತಾಗಿ ಹೋಗುವುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.

ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ರಿಟೈರ್‌ಮೆಂಟ್ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಫ್ಲೇವರ್‌ಗಳನ್ನು ನೀಡಿದರೆ ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನು ಮೊದಲಾದ ಬ್ಲಡ್ ಪ್ರಷರ್ ಏರಿಸಿ-ಇಳಿಸುವ ಹಂತ/ಮಟ್ಟ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job' ಅಥವಾ ’I love what I do for a living' ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.

***

Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ - ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, ಸ್ಕಿಲ್ಸ್‌ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?

ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ...’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಆದರೆ ಅವರವರು ನಿವೃತ್ತರಾಗುವುದಕ್ಕೆ ಮೊದಲು (ಸಾಧ್ಯವಾದರೆ) ಅವರ ಇಷ್ಟ ಪಡುವ ಕೆಲಸವನ್ನು ಸ್ವಲ್ಪ ದಿನ/ತಿಂಗಳುಗಳಾದರೂ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತೆ, ಅಲ್ವೇ?

Thursday, August 16, 2007

ಖುರ್ಚೀ ಕೆಲ್ಸಕ್ಕೇ ಜೈ!

ಬರೀ ಖುರ್ಚೀ ಮೇಲೆ ಕುಳಿತು ಕಾಲ ಕಳೆಯೋ ಈ ಕೆಲಸ ಯಾರಿಗಪ್ಪಾ ಬೇಕು ಅಂತ ಎಷ್ಟೋ ಸರ್ತಿ ಅನ್ಸೋದಿಲ್ವಾ? ಈ ರೀತಿ ಕೆಲ್ಸಾನ ಒಂದು ಐದು ಹತ್ತು ವರ್ಷ ಮಾಡಿ ಸುಸ್ತಾಗಿ ಹೋಗಿರುವವರಿಗೆ ಈ ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಳೋರನ್ನು ನೋಡಿ ಮರುಕ ಹುಟ್ಟಿದರೂ ಅದೇನು ಅತಿಶಯೋಕ್ತಿ ಅಲ್ಲ. ಒಂದು ಕಾಲದಲ್ಲಿ ಸಿವಿಲ್ಲು, ಮೆಕ್ಯಾನಿಕಲ್ಲು, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಮುಂತಾದ ವಿಭಾಗಗಳಿಗೆ ಸೇರಿಕೊಂಡು ಇ೦ಜಿನಿಯರಿಂಗ್ ಮುಂದುವರೆಸೋರಿಗಿಂತ ಇನ್‍ಫರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಸೇರಿ ಓದುವವರೇ ಹೆಚ್ಚಾಗಿದ್ದರು, ಆದರೆ ಈಗ ಕಾಲ ಬದಲಾಗಿರಬಹುದು. ನನಗೇನಾದರೂ ಇನ್ನೊಂದು ಅವಕಾಶ ಸಿಕ್ಕಿದ್ರೆ ಬೇರೆ ವಿಷ್ಯಾನೇ ಆಯ್ದುಕೊಳ್ತೀನಿ ಅನ್ನೋದು ನಿಜ.

ನಮ್ ನಮ್ ವೆಕೇಷನ್ನ್ ಎಲ್ಲವೂ ಅಪರೂಪಕ್ಕೊಮ್ಮೆ ಹೋಗಿ ಬರೋ ಭಾರತ ಪ್ರವಾಸಕ್ಕೇ ಮುಡಿಪಾಗಿಟ್ಟುಕೊಂಡಿದ್ದಾಯ್ತು. ಈಗಂತೂ ವಿಪರೀತ ಕೆಲಸ, ಇದೇ ದೇಶದವರು ಬೇಸಿಗೆ ಉದ್ದಕ್ಕೂ ಅಲ್ಲೊಂದ್ ವಾರ ಇಲ್ಲೊಂದ್ ವಾರ ವೆಕೇಷನ್ನ್ ತಗೊಂಡು ಹಾಯಾಗಿ ಇದ್ರೆ, ನಾವು ನಾಳೆಗಳಿಗೋಸ್ಕರ ಬದುಕೋ ನಮ್ಮ ತತ್ವದ ಪ್ರಕಾರವಾಗಿ ನಮ್ಮ ರಜೆಗಳನ್ನೂ ಮುಂದಿನ ಭಾರತದ ಪ್ರವಾಸಕ್ಕಿಟ್ಟುಕೊಂಡು ಕಾಯೋದಾಯ್ತು. ಸೋಮವಾರದಿಂದ ಶುಕ್ರವಾರ ಅದು ಹೇಗೆ ಬರುತ್ತೋ ಹೇಗೆ ಹೋಗುತ್ತೋ ಗೊತ್ತಾಗಲ್ಲ, ಮೊನ್ನೆ ಮೊನ್ನೆ ಆರಂಭವಾದ ಸೋಮವಾರ ಇದ್ದಕ್ಕಿಂದ್ದಂತೆ ಶುಕ್ರವಾರವಾಗಿ ಮಿಂಚಿ ಮರೆಯಾಗಿ ಹೋಗುತ್ತೆ. ವಾರಾಂತ್ಯ ಬಂದ್ರೆ ಏನೋ ಕಡಿಯೋರ ಹಾಗೆ ಅದು ಮಾಡೋಣ, ಇದು ಮಾಡೋಣ ಅನ್ನೋ ಸರಣಿ ಮನಸ್ಸಲ್ಲಿ ಹುಟ್ಟುತ್ತೇ ಅನ್ನೋದೇನೋ ನಿಜ, ಅದು ಕಾರ್ಯರೂಪಕ್ಕೆ ಬರೋದೇ ಇಲ್ಲ. ವಾರದ ದಿನಗಳಲ್ಲಿ ಆಫೀಸಿನ ಕೆಲಸವನ್ನು ಬಿಟ್ಟು ಏನಾದರೊಂದು ಒಂದು ಪರ್ಸನಲ್ ಕೆಲಸ - ಲೈಬ್ರರಿಗೆ ಹೋಗೋದೋ, ಕಿರಾಣಿ ತರೋದೋ, ಮತ್ತೊಂದೋ ಮಾಡುವಷ್ಟರಲ್ಲಿ ಆ ದಿನ ಮುಗಿದೇ ಹೋಗಿರುತ್ತೆ. ಇನ್ನು ವಾರಾಂತ್ಯದಲ್ಲಿ ದಿನಕ್ಕೆ ಎರಡು ಕೆಲಸ ಆದರೆ ಹೆಚ್ಚು - ಅದರಲ್ಲಿ ಮನೆ ಸ್ವಚ್ಛ ಮಾಡೋದೂ, ಬಟ್ಟೆ ಒಗೆದು ಒಪ್ಪಮಾಡಿಕೊಳ್ಳೋದು ಒಂದು.

ನಿಮ್ಮ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದ್ರೆ ನನಗೆ ಯಾಕೆ ಅಂತ ತಿಳಿಸ್ತೀರಾ ತಾನೆ?

***

ಛೇ! ಇನ್ನೊಲ್ಪ ಚೆನ್ನಾಗಿ ಓದಿದ್ರೆ ಡಾಕ್ಟರ್ ಆಗಿಬಿಡಬಹುದಿತ್ತು - ಏನಿಲ್ಲ ಅಂದ್ರೂ ಆಸ್ಪತ್ರೆ ತುಂಬಾ ಓಡಾಡಿಕೊಂಡಿರಬಹುದಿತ್ತು, ಈ ಕಂಪ್ಯೂಟರ್ ಪರದೇ ನೋಡೋ ಕಷ್ಟಾ ಯಾವನಿಗ್ ಬೇಕು? ಏ, ಬ್ಯಾಡಪ್ಪಾ - ಡಾಕ್ಟರ್ ಆಗೋದಕ್ಕೆ ಎಷ್ಟ್ ಓದಿದ್ರೂ ಸಾಲ್ದೂ, ಜೊತೆಗೆ ಏನೇ ಸರ್ವೀಸ್ ಮೆಂಟಾಲಿಟ್ ಇಟ್ಕೊಂಡ್ ಯಾರಿಗ್ ಸಹಾಯ ಮಾಡಿದ್ರೂ ಎಲ್ಲಾದ್ರೂ ಲಾ ಸೂಟ್ ಹಾಕ್ಕೋದೇ ಹೆಚ್ಚು, ಅದ್ಯಾವನಿಗ್ ಬೇಕು ಆ ಕರ್ಮ.

ಅದು ಬ್ಯಾಡಪ್ಪಾ, ಸಿವಿಲ್ ಇಂಜಿನಿಯರ್ ಆಗಿದ್ರೆ ಎಷ್ಟ್ ಮಜಾ ಇರ್ತಿತ್ತು - ಪ್ರತೀ ದಿನ ಫೀಲ್ಡ್ ಸರ್ವೇ ಅದೂ ಇದೂ ಅಂತ ಹೊರಗಡೆ ಓಡಾಡಿಕೊಂಡಿರಬಹುದಿತ್ತು. ಅಯ್ಯೋ, ಬೇಸಿಗೆ ಬಿಸಿಲನ್ನಾದರೂ ತಡಕೋಬಹುದು, ಈ ವಿಂಟರ್‌ನಲ್ಲಿ ರಸ್ತೆ ಅಳೆಯೋ ಕೆಲ್ಸಾ ಯಾವನಿಗ್ ಬೇಕು, ನೀವೊಂದು.

ಸುಮ್ನೇ, ಲೈಬ್ರರಿ ಸೈನ್ಸ್ ಓದಿಕೊಂಡು ಯಾವ್ದಾದ್ರೂ ದೊಡ್ಡದೊಂದು ಲೈಬ್ರರಿ ಸೇರಿಕೊಂಡ್ ಬಿಡಬೇಕಿತ್ತು, ಅರಾಮಾಗಿ ದಿನವೂ ಒಂದಿಷ್ಟು ಓದಿಕೊಂಡು ಕಾಲ ಕಳೀಬಹುದಿತ್ತು. ಛೇ, ಅದೂ ಕೂತಕೊಂಡ್ ಮಾಡೋ ಕೆಲ್ಸಾನೇ ಅಲ್ವೇ, ಬ್ಯಾಡಪ್ಪಾ...ಅದೂ ಅಲ್ದೇ, ಅಪರೂಪಕ್ಕೊಂದ್ ಪುಸ್ತಕಾ ಓದ್ಕೊಂಡೇ ಲೈಫ್ ಇಷ್ಟೊಂದು ಕಾಂಪ್ಲಿಕೇಟೆಡ್ ಆಗಿರೋವಾಗ ಇನ್ನು ದಿನವೂ ಪುಸ್ತಕಾ ಓದ್ತಾನೇ ಇರೋದು ಅಂದ್ರೆ? ಅಲ್ಲದೇ, ಯಾವ ಲೈಬ್ರರಿಯನ್ ಅದೇನ್ ಅಂಥಾ ಮಹಾನ್ ಓದಿ ಏನು ಕಡಿದು ಹಾಕಿರೋದು ಇಲ್ಲೀವರೆಗೆ?

ಯಾವ್ದೂ ಬ್ಯಾಡಪ್ಪಾ, ಈ ನ್ಯೂ ಯಾರ್ಕ್ ನಗರದಲ್ಲಿ ಹಾಯಾಗಿ ಟ್ಯಾಕ್ಸಿ ಓಡಿಸ್ಕೊಂಡಿರಬೇಕಿತ್ತು, ನಾವೇ ನಮ್ಮ ಬಾಸು, ಎಷ್ಟೊತ್ತಿಗೆ ಬೇಕಾದ್ರೂ ಹೋದಾ, ಎಷ್ಟೊತ್ತಿಗೆ ಬೇಕಾದ್ರೂ ಬಂದ. ಕೆಲ್ಸಿಲ್ಲ ನಿಮಗೆ, ಅಲ್ಲೇನಾರಾ ಒಂದ್ ತಿಂಗಳು ಕಾರ್ ಓಡ್ಸಿ ಕರಿಯರಿಂದ ಆಕ್ರಮಣಕ್ಕೊಳಗಾಗದೇ ಬದುಕಿ ಬಂದ್ರೇನೇ ಹೆಚ್ಚು, ಅದೂ ಅಲ್ದೇ ದಿನಾನೂ ರಸ್ತೇ ಮೇಲೆ ಬಿದ್ದಿರೋ ಕೆಲ್ಸಾ ಯಾವನಿಗ್ರೀ ಬೇಕು? ಹೋಗೀಬಂದೂ ಡ್ರೈವ್ ಮಾಡ್ಕೊಂಡೇ ಬಿದ್ದಿರೂ ಅಂದ್ರೆ? ಬ್ಯಾಡಾ ಶಿವಾ.

ದೊಡ್ಡ ಕಂಪನಿ ಅಧಿಕಾರಿ ಆದ್ರೆ ಹೆಂಗೆ? ಎಷ್ಟು ಚಂದ ಇರೋ ಆಫೀಸು, ಕಾರು, ಬಂಗ್ಲೇ ಎಲ್ಲಾ ಕೊಡ್ತಾರಂತೆ, ನಿಜವಾ. ದಿನವೂ ಬಿಳೀ ಕಾಲರ್ ಅಂಗೀ ತೊಟ್ಕೊಂಡೇ ಇರಬಹುದಂತೆ, ಮಜಾ ಅಂದ್ರೆ ಅದಪ್ಪಾ. ರೀ, ನಿಮಗ್ಗೊತ್ತಿಲ್ಲ, ದೊಡ್ಡೋರಿಗಿರೋ ತಲೇನೋವುಗಳು, ಅಲ್ಲಿರೋ ಸ್ಟ್ರೆಸ್ ಮತ್ತೆಲ್ಲೂ ಇರೋಲ್ಲ, ಆ ಸ್ಟ್ರೆಸ್ಸಿಗೆ ಯಾವಾಗ ಹಾರ್ಟ್ ಅಟ್ಯಾಕ್ ಆಗುತ್ತೇ ಅಂತಾನೇ ಹೇಳೋಕ್ ಬರೋಲ್ಲವಂತೆ!

***

ಈ ಅನೇಕ ಕೆಲಸಗಳ ಸಾಧಕ-ಬಾಧಕಗಳು ಮಿಂಚಿ ಮರೆಯಾದವು. ನನ್ನ ಕೆಲ್ಸಾನೂ ಸೇರಿ ಯಾವ್ ಕೆಲ್ಸಾನೂ ರುಚಿಸ್ತಾನೇ ಇಲ್ಲಾ... ನಮ್ ಅಣ್ಣಾ ಯಾವಾಗ್ ನೋಡಿದ್ರೂ ಹೆಳ್ತಿರ್ತಾನೆ, ನಮ್ ದೇಶದಲ್ಲಿ ನಾವು ನೀರು ಕುಡಕಂಡ್ ಬದುಕ್ತೀವಿ ಅಂತ. ನಮಿಗೆ ಇಲ್ಲಿ ಹಾಗಂತೂ ಇರೋಕ್ ಸಾಧ್ಯವೇ ಇಲ್ಲ. ಇವತ್ತು ದುಡೀಬೇಕು, ನಾಳೆ ತಿನ್ನಬೇಕು, ತಿನ್ನದಿದ್ರೂ ಪರವಾಗಿಲ್ಲ ಇರೋ ಸಾಲಗಳನ್ನ ತೀರುಸ್‌ಬೇಕು...ಅದಪ್ಪಾ ಬದುಕು. ಕೆಲವೊಂದ್ ಸರ್ತಿ ಅನ್ಸುತ್ತೆ, ಇದನ್ನ ಬದುಕು ಅಂತ ಕರದೋರು ಯಾರು ಅಂತ? ಸುಮ್ನೇ ದೊಂಬರಾಟ ಅಂತ ಕರೆದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತಲ್ವಾ?

ನಾನು ನನ್ನ ಕೆಲ್ಸಕ್ಕೆ ಬಯ್ದೆ ಅಂತ ನಮ್ ಮನೆಯವರಿಗಾಗ್ಲೀ ನಮ್ ಬಾಸಿಗಾಗ್ಲೀ ಹೇಳಿಬಿಟ್ಟೀರಾ, ಅವುರಿಗೆಲ್ಲ ನನ್ನ ಮೇಲೆ ಪ್ರೀತಿ-ವಿಶ್ವಾಸ ಇರೋದು ಇದ್ದೇ ಇರುತ್ತೇ, ಆದ್ರೆ ನಾಳೆ ಮಾಡೋ ಕೆಲ್ಸಗಳನ್ನು ಎಲ್ಲಾದ್ರೂ ತಪ್ಪಿಸಿಕೊಂಡ್ ಬಿಟ್ಟಾನು ಅಂತ ಸುಳಿವೇನಾದ್ರೂ ಸಿಕ್ಕಿದ್ರೆ ಕಷ್ಟಾ, ಹೇಳಿಬಿಡಬೇಡಿ ಮತ್ತೆ! ಖುರ್ಚೀ ಕೆಲ್ಸಕ್ಕೇ ಜೈ!