Showing posts with label ಚುನಾವಣೆ. Show all posts
Showing posts with label ಚುನಾವಣೆ. Show all posts

Wednesday, October 22, 2008

If you elect me as a president...

ಪ್ರೆಸಿಡೆಂಟ್ ಆಫ್ ವಾಟ್? ಅಂತ ಪ್ರಶ್ನೆ ಬರೋದು ಸಹಜ, ಪ್ರೆಸಿಡೆಂಟ್ ಆಫ್ ವಾಟ್‌ಎವರ್...ಎಂದುಕೊಂಡು ಮುಂದೆ ಹೋಗೋಣ...ನಾವೆಲ್ಲ ಶಾಲಾ ದಿನಗಳಲ್ಲಿ ’ಎಲೈ ಹುಚ್ಚರ ಸಂಘದ ಅಧ್ಯಕ್ಷನೇ...’ ಎಂದು ನಮ್ಮ್ ನಮ್ಮೊಳಗೆ ಬೈದುಕೊಳ್ಳುತ್ತಿದ್ದುದೂ ನೆನಪಿಗೆ ಬಂತು.

ಏನೇ ಇರಲಿ ರಾಜಕಾರಣ ಹಾಗೂ ಆಶ್ವಾಸನೆ ಎನ್ನುವುವುಗಳು ಒಂದೇ ತಾಯಿಯ ಮಕ್ಕಳ ಹಾಗೆ, ನಮ್ಮ ಸುತ್ತ ಮುತ್ತ ನಡೆಯೋ ಬೇಕಾದಷ್ಟು ಚುನಾವಣೆಗಳ ಕ್ಯಾಂಪೇನುಗಳಲ್ಲಿ ’ನೀವು ನನ್ನನ್ನು ಆರಿಸಿ ತಂದಿದ್ದೇ ಆದರೆ...’ ಎನ್ನುವ ಪ್ರಣಾಳಿಕೆಗಳು ಪುಂಖಾನುಪುಂಕವಾಗಿ ಹೊರಬರುತ್ತಲೇ ಇವೆ. ಹಾಗೆ ಮಾನವಕುಲದಲ್ಲಿ ಪ್ರಚುರಗೊಂಡ ಆಶ್ವಾಸನೆಗಳಲ್ಲಿ ಶೇಕಡಾ ಹತ್ತರಷ್ಟು ಈಡೇರಿದ್ದರೂ ಇಂದು ನಾವು ಈ ಸ್ಥಿತಿಯಲ್ಲಿರುತ್ತಿರಲಿಲ್ಲ ಎನ್ನುವುದು ಬೇರೆ ವಿಷಯ. (ಸುಮ್ಮನೇ ಆರೋಪ ಹೊರಿಸ್ತೀನಿ, ಆದ್ರೆ ಅದಕ್ಕೆ ತಕ್ಕ ದಾಖಲೆ ಕೊಡೋದಿಲ್ಲ ಅನ್ನೋದಕ್ಕೆ ಈ ವಾಕ್ಯವೇ ಸಾಕ್ಷಿ - ದಾಖಲೆಗಳನ್ನು ಪೋಣಿಸಿ ಯಾರು ಉದ್ದಾರವಾಗಿದ್ದಾರೆ ನೀವೇ ಹೇಳಿ).

ಹೀಗೇ ದಿನನಿತ್ಯದ ಘಟನಾವಳಿಗಳನ್ನು ಅವಲೋಕಿಸಿ ಈ ಕೆಳಗಿನ ಅಣಿಮುತ್ತುಗಳನ್ನು ನಾನು ನನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇನೆ, ನೀವು ಓದಿನೋಡಿ ನಂತರ ನಿಮ್ಮ ಅಧ್ಯಕ್ಷನನ್ನು ನೀವೇ ಗುರುತಿಸಿ ಮತ ನೀಡಿ!

***
ನೀವು ನನ್ನನ್ನು ಅಧ್ಯಕ್ಷನನ್ನಾಗಿ ಚುನಾಯಿತನನ್ನಾಗಿ ಮಾಡಿದರೆ....
- I will eliminate all school buses from the roads for one week!
Oh, school buses! ಅಮೇರಿಕದ ಶಾಲಾ ವಾಹನಗಳು ಎಂದರೆ ’ಅಯ್ಯಪ್ಪಾ’ ಅನ್ನೋ ಹಾಗೆ, ಒಂದು ರೀತಿ ರಸ್ತೆ ಮೇಲಿನ ಟ್ಯಾಂಕರುಗಳು ಅವು. ನನ್ನ ಒಂದು ಊಹೆಯ ಪ್ರಕಾರ ಪ್ರತಿ ಶಾಲಾ ಬಸ್ಸಿಗೆ ಇಲ್ಲಿ ಕನಿಷ್ಟ ಇಪ್ಪತ್ತೈದು ಕನ್ನಡಿಗಳಾದರೂ ಇರಬಹುದು ಜೊತೆಗೆ ಒಂದು ಸಾವಿರ ಮಿನುಗುವ ಲೈಟ್‌ಗಳು (ಉತ್ಪ್ರೇಕ್ಷೆ). ಶಾಲಾ ಬಸ್ಸಿಗೆ ರಸ್ತೆಗಳ ಮೇಲೆ ಆದ್ಯತೆ, ಅವು ನಿಂತರೆ ಎಲ್ಲರೂ ನಿಲ್ಲಬೇಕು, ಅದೂ ನಾನು ಬಳಸೋ ಒನ್ ಲೇನ್ ರಸ್ತೆಯ ಕಥೆ ದೇವರೇ ಗತಿ. ಶಾಲಾ ಬಸ್ಸುಗಳ ಲೀಡರ್‌ಶಿಪ್ ನಲ್ಲಿ ನಾವೆಲ್ಲ ಅವುಗಳ ಹಿಂದೆ, ಮೇಷ್ಟ್ರು ನಾಯಕತ್ವದಲ್ಲಿ ವಿದ್ಯಾರ್ಥಿಗಳೇನೋ ಹಿಂದೆ ಸಾಲುಗಟ್ಟುತ್ತಾರೆ ಆದರೆ ಶಾಲೆಪಾಲೆ ಮುಗಿಸಿ ಅವುಗಳಿಗೆಲ್ಲ ಗುಡ್‌ಬೈ ಹೇಳಿರೋ ನನಗೇಕೆ ಈ ಶಿಕ್ಷೆ, ಅದಕ್ಕೆಂದೇ ಐವತ್ತೆರಡು ವಾರಗಳ ವರ್ಷಗಳಲ್ಲಿ ನನ್ನ ಆಡಳಿತದಲ್ಲಿ ಒಂದು ವಾರ ಸ್ಕೂಲ್ ಬಸ್ಸುಗಳು ರಸ್ತೆಯ ಮೇಲೆ ಬಾರದಂತೆ ಮಾಡುವ ಆಶ್ವಾಸನೆ.

- I will iradicate "retirement" (the word) from the dictionary!
ನಮ್ಮ ಕಾಲದವರು ರಿಟೈರ್ ಆಗುವ ಮಾತೇ ಬರೋದಿಲ್ಲ ಬಿಡಿ. ನಾವೆಲ್ಲ ಬಲ್ಲ ಹಾಗೆ ಬೇಬಿ ಬೂಮರ್ಸ್ ತಲೆಮಾರಿನವರು ಮತ್ತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳೋ ಹಾಗೆ ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮೆಲ್ಲ ಅಲ್ಪಸ್ವಲ್ಪ ಉಳಿತಾಯಗಳು ದಿನೇದಿನೇ ಕರಗುತ್ತಿರುವ ಶೋಚನೀಯ ಸ್ಥಿತಿಯನ್ನು ಕಂಡರೆ ನಮ್ಮ ತಲೆಮಾರಿಗೆ ’ನಿವೃತ್ತ’ ಅನ್ನೋ ಪದವೇ ದೂರವಾಗುವ ಹಾಗೆ ಕಾಣುತ್ತದೆ. ಆದ್ದರಿಂದ ಈ ಪದವನ್ನು ನಿಘಂಟಿನಿಂದ ತೆಗೆಯೋಣ ಎಂದು ಸಂಕಲ್ಪಿಸಿಕೊಂಡಿದ್ದೇನೆ.

- I will eliminate the 8 O'clock from the dial!
ಇದು ಒಂಥರ ಇಂಟರೆಸ್ಟಿಂಗ್ ಕಾನ್ಸೆಪ್ಟ್. ಗಡಿಯಾರದ ಡಯಲಿನಲ್ಲಿ ಏಳು ಘಂಟೆಯ ನಂತರ ಒಂಭತ್ತು ಘಂಟೆ ಬರುವಂತೆ ಮಾಡುವುದು. ಒಂದು ರೀತಿ ಸೀನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿಯ ನಂತರ ಒಂದೇ ಸಮನೆ ಜ್ಯೂನಿಯರ್ ಜಾರ್ಜ್ ಬುಷ್ ಪ್ರೆಸಿಡೆನ್ಸಿ ಬಂದ ಹಾಗೆ ಮಧ್ಯೆ ಬರುವ ಕ್ಲಿಂಟನ್ ನ ಎಂಟು ವರ್ಷಗಳ ಆಡಳಿತವನು ಇತಿಹಾಸದಿಂದ ಡಿಲ್ಲೀಟ್ ಮಾಡಿದ ಹಾಗೆ...

ಪ್ರತಿ ದಿನ ಒಂದಲ್ಲ ಒಂದು ಎಂಟು ಘಂಟೆಯ ಮೀಟಿಂಗ್ ಇಟ್ಟೇ ಇರ್ತಾರೆ ನಮ್ಮ್ ಆಫೀಸಿನಲ್ಲಿ. ನಾನೋ ಎಷ್ಟು ಬೇಗ ಹೊರಟರೂ ಒಂದಲ್ಲ ಒಂದು ಕಾರಣದಿಂದ ಟ್ರಾಫಿಕ್ ಗೊಂದಲದಲ್ಲಿ ಸಿಕ್ಕು ಹಾಕಿಕೊಳ್ಳುವುದೇ ಹೆಚ್ಚು (again, thanks to school buses noted above). ಅದಕ್ಕೆಂದೇ ನಾನು ಕಾಫಿ ಕುಡಿಯಲಿ ಬಿಡಲಿ ನನ್ನ ರಕ್ತದೊತ್ತಡ ಮುಂಜಾನೆ ಏಳರಿಂದ ಒಂಭತ್ತು ಘಂಟೆಯವರೆಗೆ ಹೆಚ್ಚು ಇರೋದು ಖಾಯಂ. ಆದ್ದರಿಂದಲೇ ನಾನು ವಾಚಿನ ಡಯಲಿನಲ್ಲಿ ಫಾರ್ ಎವರ್ ಎಂಟು ಘಂಟೆ ಎನ್ನುವ ಕಾನ್ಸೆಪ್ಟ್ ಅನ್ನೇ ತೆಗೆದು ಹಾಕಿ ಬೆಳಿಗ್ಗೆ ಏಳರಿಂದ ಒಂಭತ್ತರವರೆಗೆ ಆಫೀಸಿಗೆ ತಲುಪಿದರೆ ಸಾಕು ಎನ್ನುವ ಹೊಸ ಕಾನೂನನ್ನು ಜಾರಿಗೆ ತರೋದು.

- I will convert Shareholders into Chair holders!
ಇದು ಸಂಪೂರ್ಣ ರೆಬೆಲಿಯಸ್ ಅಪ್ರೋಚ್...ನಾವೆಲ್ಲ ಕಂಪನಿಗಳ ಸ್ಟಾಕ್ ಅಥವಾ ಶೇರುಗಳನ್ನು ಕೊಂಡುಕೊಂಡು ಬಡವರಾಗಿರೋದು ನಿಮಗೆಲ್ಲ ಗೊತ್ತೇ ಇರೋ ವಿಚಾರ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶೇರ್ ಹೋಲ್ಡರ್ ಕೂಡ ಆ ಕಂಪನಿಯ ತಕ್ಕಮಟ್ಟಿನ ಪಾಲುದಾರ. ಆದ್ದರಿಂದ ಇಂದಿದ್ದು ನಾಳೆ ಮರೆಯಾಗುವ ನಮ್ಮ ಪೇಪರ್ ಹಣ ಹಾಗೂ ಅದಕ್ಕೆ ಬರುವ ಇಮ್ಯಾಜಿನರಿ ಓನರ್‌ಶಿಪ್‌ಗೆ ಪ್ರತಿಯಾಗಿ ಕಂಪನಿ ಬೀಳುವ ಹೊತ್ತಿಗೆ ಹಣ ಬಾರದಿದ್ದರೂ ಆ ಕಂಪನಿಗಳ ಕುರ್ಚಿ, ಮೇಜು, ಅಲ್ಲಿನ ಫಿಕ್ಸ್‌ಚರುಗಳು ಮೊದಲಾದವುಗಳನ್ನು ನಾವು ಹಳೆಯ ಶತಮಾನದಲ್ಲಿ ಮಾಡುತ್ತಿದ್ದ ಹಾಗೆ ದಂಗೆ ಎದ್ದು ಕಿತ್ತುಕೊಳ್ಳಬೇಕು ಎನ್ನುವುದು ನನ್ನ ವಾದ. ಶೇರುಗಳು ಹೋದರೂ ಹೋಗಲಿ ಒಂದು ಚೇರ್ ಆದರೂ ಸಿಗಲಿ ಎನ್ನುವುದು ನನ್ನ ಅಭಿಮತ.

***
ನಿಮ್ಮ ಓಟ್ ಅನ್ನು ಖಂಡಿತ ನನಗೇ ಹಾಕ್ತೀರಿ ತಾನೆ?

Sunday, May 25, 2008

ಸೋಜಿಗಗಳು ನೂರು

ವರ್ಷದ ಮೇ ಒಂದು ವಿಶೇಷವಾದ ತಿಂಗಳೆಂದೇ ಹೇಳಬೇಕು. ೨೦೦೬ ರ ಮೇ ತಿಂಗಳಿನಲ್ಲಿ ದಿನಕ್ಕೊಂದರಂತೆ ೩೧ ಲೇಖನಗಳು ಬರೆದು ’ಅಂತರಂಗ’ದಲ್ಲಿ ಪ್ರಕಟಿಸಿದ ನನಗೆ ೨೦೦೭ ರ ಮೇ ತಿಂಗಳಿನಲ್ಲಿ ಕೇವಲ ೭ ಲೇಖನಗಳನ್ನಷ್ಟೇ ಪ್ರಕಟಿಸಲು ಸಾಧ್ಯವಾಯಿತು, ಹಾಗೇ ಈ ವರ್ಷದ ಮೇ ತಿಂಗಳಿನ ಈ ೨೫ ದಿನಗಳಲ್ಲಿ ಇದುವರೆಗೂ ಬರೆದು ಪ್ರಕಟಿಸಿದ್ದು ಕೇವಲ ಎರಡೇ ಎರಡು ಲೇಖನಗಳು. ಈ ಕಡೆ ಆಫೀಸಿನ ಕೆಲಸ ಓಡಾಟ ಹಾಗೂ ಅನೇಕಾನೇಕ ಕಾರಣಗಳಿಂದ ಕಂಪ್ಯೂಟರಿನ ಮುಂದೆ ಕುಳಿತು ಪರ್ಸನಲ್ ಟೈಮ್ ಎಂದು ಪುರುಸೊತ್ತು ಸಿಕ್ಕಿದ್ದೇ ಹೆಚ್ಚಾದರೆ ನನಗೆ ಆಶ್ಚರ್ಯವಾಗುವಂತೆ ಕನ್ನಡಪ್ರಭದ ಬ್ಲಾಗಾಯಣ ಹಾಗೂ ದಟ್ಸ್‌ಕನ್ನಡ ಪೋರ್ಟಲ್ಲುಗಳ ಮೂಲಕ ’ಅಂತರಂಗ’ಕ್ಕೆ ಭೇಟಿಕೊಡುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು ಈಗಾಗಲೇ ಈ ತಿಂಗಳ ಮೇ ಭೇಟಿ ಹಾಗೂ ಪೇಜ್ ವ್ಯೂವ್ ಅಂಕಿ-ಅಂಶಗಳ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವ ವಿಶೇಷವೇ ಹೌದು. Thanks to the portals and thanks to all of you!


***

ಈ ತಿಂಗಳು, ಈ ದಿನ ಮತ್ತೊಂದು ರೀತಿಯಲ್ಲಿ ವಿಶೇಷವಾದದ್ದೇ ಅನ್ನಬೇಕು - ಯಾವೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದೇ ಮತ್ತೆ ತೇಲಾಡುವ ಒಪ್ಪಂದಗಳು ಸರ್ಕಾರಗಳು ಬರುತ್ತವೆಯೇನೋ ಎಂದು ಕೊರಗುತ್ತಿದ್ದವರಲ್ಲಿ ನಾನೂ ಒಬ್ಬ. ಕಾಂಗ್ರೇಸೋ ಬಿಜೇಪಿಯೋ ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂತಲ್ಲ, ಇನ್ನಾದರೂ ಇವರಿವರಲ್ಲೇ ಕಚ್ಚಾಡಿಕೊಳ್ಳದೇ ಒಂದು ಐದು ವರ್ಷ ನಿರಾಳವಾಗಿ ಸರ್ಕಾರವನ್ನು ನಡೆಸಿ ಜನರ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳು ಸ್ಪಂದಿಸುವ ವ್ಯವಸ್ಥೆಯಾದರೆ ಸಾಕು!

ಹ್ಞಾ, ಈಗಾಗಲೇ ಕಾಲಚಕ್ರದ ಬರಹಗಳು ಆರಂಭವಾಗಿವೆ, ಇನ್ನು ಕಾಲಚಕ್ರದ ಮೇಷ್ಟ್ರು-ನಂಜ, ತಿಮ್ಮಕ್ಕ ಇವರೆಲ್ಲ ಸೇರಿ ಹೆಚ್ಚು ಹೆಚ್ಚು ಕಟ್ಟೆ ಪಂಚಾಯಿತಿ ಹಚ್ಚಿಕೊಳ್ಳುತ್ತಾರೆ ನೋಡುತ್ತಿರಿ.

ಈ ವರ್ಷದ ಚುನಾವಣೆಯ ಫಲಿತಾಂಶ ಬಹಳ ಸ್ವಾರಸ್ಯಕರವಾಗಿದೆ:
224 ಸ್ಥಳಗಳಲ್ಲಿ ನಡೆದ ಚುನಾವಣೆಗಳಲ್ಲಿ 943 ಪಕ್ಷೇತರರನ್ನು ಬಿಟ್ಟು 31 ಪಕ್ಷಗಳ 1299 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತದೆ. ನೂರಕ್ಕೆ 42 ರಷ್ಟು ಪಕ್ಷೇತರರು, ಕೆಲವೊಂದು ಕ್ಷೇತ್ರಗಳಲ್ಲಿ ಐದು-ಆರು ಜನರು ಸ್ಪರ್ಧಿಸಿದ್ದು ಹೊಸಬರಲ್ಲಿ ಹೆಚ್ಚು ಉತ್ಸಾಹವನ್ನು ಇನ್ನೂ ಉಳಿಸಿರುವುದು ನನಗಂತೂ ಆಶ್ಚರ್ಯ ತಂದಿತು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನಸ್ಪಂದನಕ್ಕೆ ಕಿವಿಗೊಡುವ ತಾಳ್ಮೆ ಎಷ್ಟು ಜನರಿಗಿದ್ದೀತು? NDTV ಯ ವರದಿಯಂತೆ ಇಂದಿನ ರಾಜಕೀಯದ ಹಿರಿಯ ತಲೆಗಳೆಲ್ಲ ಭಯಂಕರ ಶ್ರೀಮಂತರಿರಬಹುದು, ಕೋಟ್ಯಾಧೀಶ್ವರರಿರಬಹುದು ಆದರೆ ಈ ರಾಜಕೀಯವನ್ನೇ ನಂಬಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತೇವೆ, ಇದರಲ್ಲೇ ಇದ್ದು ನಾವೂ ಒಂದು ದಿನ ಕೋಟ್ಯಾಧಿಪತಿಗಳಾಗುತ್ತೇವೆ ಎನ್ನುವ ತತ್ವ ನಿನ್ನೆಯಷ್ಟಂತೂ ಇಂದು ಸರಳವಿಲ್ಲ.

ಆರು ಜನ ಪಕ್ಷೇತರ ಅಭ್ಯರ್ಥಿಗಳನ್ನು ಬಿಟ್ಟು ಖಾತೆ ತೆರೆದ ಪಕ್ಷಗಳೆಂದರೆ ಮೂರೇ ಮೂರು: ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್. ಉಳಿದ 28 ಪಕ್ಷದ 634 ಜನ ಅಭ್ಯರ್ಥಿಗಳಲ್ಲಿ ಹೆಚ್ಚು ಜನರಿಗೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದಾಗಿದ್ದು ನನಗೆ ಜನಾದೇಶ ಕಡಿಮೆ ಪಕ್ಷಗಳ ಸರ್ಕಾರದತ್ತ ಒಲವು ತೋರಿಸುತ್ತಿರುವಂತೆ ಕಂಡುಬಂತು.

ನನ್ನ ಹುಟ್ಟೂರು ಆನವಟ್ಟಿ, ಸೊರಬಾ ತಾಲೂಕಿನಲ್ಲಿ 1967 ರಿಂದ ಗೆದ್ದು ಬರುತ್ತಿದ್ದ ಬಂಗಾರಪ್ಪನವರ ಕುಟುಂಬದ ಯಶೋಗಾಥೆಗೆ ಕಡಿವಾಣ ಬಿದ್ದಿದೆ, ನಾಲ್ಕು ದಶಕಗಳ ನಂತರ ಹೊಸನಗರದ ಹಾಲಪ್ಪನವರು ಬಿಜೆಪಿ ಟಿಕೇಟಿನಲ್ಲಿ ಸಾಕಷ್ಟು ಬಹುಮತದಲ್ಲೇ ಗೆದ್ದುಬಂದಿರುವುದು (43%) ನಿಜವಾಗಲೂ ವಿಶೇಷ ಹಾಗೂ ವಿಚಿತ್ರ. ನಮ್ಮೂರಿನ ರಸ್ತೆಗಳಲ್ಲಿ, ಅಂಗಡಿ ಗೂಡುಗಳಲ್ಲಿ, ಹಳ್ಳಿಪಾಡುಗಳಲ್ಲಿ ಯಾವ ಯಾವ ರೀತಿಯ ಮಾತುಕಥೆಗಳು ನಡೆದಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ ಅಷ್ಟೇ. ಪಕ್ಕದ ಶಿಕಾರಿಪುರದಲ್ಲಿ ಬಂಗಾರಪ್ಪನವರು ಈ ಇಳಿ ವಯಸ್ಸಿನಲ್ಲಿ ಸ್ಪರ್ಧಿಸಿ ಏನು ಮಾಡುತ್ತಾರೋ ಎಂದುಕೊಂಡ ನನಗೆ ಗೆದ್ದ ಎಡಿಯೂರಪ್ಪನವರ ಮುಂದೆ (66%) ಬಂಗಾರಪ್ಪನವರು 30% ಮತಗಳಿಸಿದ್ದು ನಿಜವಾಗಲೂ ಸೋಜಿಗ ಮೂಡಿಸಿತು.

ಇನ್ನು ಬೆಂಗಳೂರು-ಜಯನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾಗವಹಿಸಿದ್ದ ರವಿರೆಡ್ಡಿಯವರನ್ನು ಕುರಿತು ಅವರ ಅನುಭವಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಮ್ಮೆಲ್ಲರ ನಡುವಿನ ಧ್ವನಿಯಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ರಾಜಕೀಯ ಕರ್ಮಕಾಂಡದಲ್ಲಿ ಮೌಲ್ಯಾಧಾರಿತ ಧೋರಣೆಗಳನ್ನು ಮುಂದಿಟ್ಟುಕೊಂಡು ಅವರು ಪಡೆದ 244 ಮತಗಳಿಂದ ನಾವೆಲ್ಲ ಕಲಿಯುವುದು ಸಾಕಷ್ಟಿದೆ.

ನಾವಿರುವ ಅಮೇರಿಕದಲ್ಲಾಗಲೀ ಮುಂದುವರೆದ ಜನರಿರುವ ನಗರಗಳಲ್ಲಿ ಹೆಚ್ಚು ಜನರು ಓಟ್ ಹಾಕಲು ಹೋಗುತ್ತಾರೆ ಎನ್ನುವುದು ಒಂದು ದೊಡ್ಡ ಕಲ್ಪನೆಯೇ ಸರಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚು ಹೆಚ್ಚು ಮತಗಟ್ಟೆಗೆ ಬಂದಿದ್ದು ಚುನಾವಣಾ ಅಂಕಿ-ಅಂಶಗಳನ್ನು ಗಮನಿಸಿದ ನಿಮಗೆ ಮನವರಿಕೆಯಾದೀತು.

***

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಇಷ್ಟವಾಗುವಂತೆ ನಮ್ಮ ಸರ್ಕಾರಿ ಪೋರ್ಟಲುಗಳು ಚೆನ್ನಾಗಿ ಬೆಳೆದು ಬಂದಿವೆ, ಚುನಾವಣೆ ಸಂಬಂಧಿ ಅಂಕಿ-ಅಂಶಗಳಿಗಾಗಿ ನಾನು ಈ ಪೋರ್ಟಲುಗಳನ್ನು ನೋಡಿದಾಗಲೆಲ್ಲ ನನಗೆ ಎಂದೂ ನಿರಾಶೆಯಾದದ್ದಂತೂ ಇಲ್ಲ, ಬೇಕಾದರೆ ಚುನಾವಣಾ ಆಯೋಗದ ವಿವರಗಳನ್ನು ನೀವೇ ಖುದ್ದಾಗಿ ನೋಡಿ, ಇಲ್ಲಿ ನಿಮಗೆ ಬೇಕಾದ ಅಭ್ಯರ್ಥಿಯ ಚುನಾವಣೆ ಅರ್ಜಿ, ಅದಕ್ಕೆ ಲಗತ್ತಿಸಿದ ಕಾಗದ ಪತ್ರಗಳಿಂದ ಹಿಡಿದು ವಿವರವಾದ ಫಲಿತಾಂಶವನ್ನೂ ಇಲ್ಲಿ ನೋಡಬಹುದು.