Showing posts with label ವಿಶ್ವ. Show all posts
Showing posts with label ವಿಶ್ವ. Show all posts

Sunday, November 28, 2021

ಸೋಜಿಗದ ಸಮೂಹ

 ಈ ವಿಶ್ವದ ಒಂದು ಸಣ್ಣ ಗೋಲವಾದ ಭೂಮಿಯ ಪದರು-ಮಡಿಕೆ-ಪೊಟರೆಗಳಲ್ಲಿ ಅನೇಕಾನೇಕ ಜೀವರಾಶಿಗಳು... ಈ ಸಮೂಹವನ್ನ ಕೋಟ್ಯಾಂತರ ಜೀವರಾಶಿಗಳೇ ಎನ್ನಬಹುದು.  ಹೆಚ್ಚಿನವು ಮಾನವನ ಕಣ್ಣಿಗೆ ಬಿದ್ದು ಅವುಗಳ ’ಜನಗಣತಿ’ ಅಥವಾ ಅವನತಿ ಆದಂತಿದ್ದರೆ, ಇನ್ನು ಕೆಲವು ಜೀವಜಂತುಗಳನ್ನು ಇದುವರೆಗೂ ಯಾರೂ ನೋಡಿಯೂ ಇಲ್ಲ!  ಸಮುದ್ರ-ಸಾಗರಗಳ ಆಳದಿಂದ ಹಿಡಿದು, ಭೂಮಿಯ ಅನೇಕ ಮೈಲುಗಳ ಕೆಳ ಪದರಗಳಲ್ಲಿಂದ ಹಿಡಿದು, ಭೂಮಿಯ ಮೇಲಿನ ವಾತಾವರಣದಲ್ಲಿಯೂ ಬದುಕಿ ಬಾಳಬಲ್ಲ ಈ ಜೀವ ಸಮೂಹವನ್ನು ಸೃಷ್ಟಿ ಅದೆಷ್ಟು ಚೆನ್ನಾಗಿ ಹೆಣೆದುಕೊಂಡಿದೆ! ಒಂದರ ಮೇಲೆ ಮತ್ತೊಂದು ಜೀವ-ಜೀವಿಯ ಅವಲಂಭನೆಯನ್ನು ಯಾರೋ ಅದೆಷ್ಟು ಚೆನ್ನಾಗಿ ಸೃಷ್ಟಿಸಿದ್ದಾರೆ ಎನ್ನಿಸೋದಿಲ್ಲವೇ?

***

ನಮ್ಮ ನ್ಯೂ ಯಾರ್ಕ್ ನಗರದ ಎಂಪೈರ್ ‌ಸ್ಟೇಟ್ ಬಿಲ್ಡಿಂಗ್ ನೆಲದಿಂದ ಸುಮಾರು 1400 ಅಡಿ ಎತ್ತರದಲ್ಲಿದೆ.  ಒಬ್ಬ ವ್ಯಕ್ತಿಯ ಎತ್ತರ ಸುಮಾರು ಆರು ಅಡಿಗಳು ಎಂದಾದಲ್ಲಿ ಈ ಕಟ್ಟಡ ಎತ್ತರ ಸುಮಾರು 235 ಪಟ್ಟು.  ಅದೇ ಒಂದು ಇರುವೆಯ ಎತ್ತರ ಸುಮರು 0.14 ಇಂಚುಗಳು, ಅಂದರೆ, 0.012 ಅಡಿಗಳು ಎಂದಾದಲ್ಲಿ, ಆ ಇರುವೆಯ ಎತ್ತರವನ್ನು ಒಬ್ಬ ಆರು ಅಡಿಯ ಮನುಷ್ಯನಿಗೆ ಹೋಲಿಸಿದಲ್ಲಿ, ಇರುವೆಗಿಂತ ಮಾನವ ಸುಮಾರು 500 ಪಟ್ಟು ಎತ್ತರ, ಅಂದರೆ, ಮಾನವನ ಗಾತ್ರ ಇರುವೆಗೆ, ಒಂದು ಬುರ್ಜ್ ಖಲೀಫ಼ಾ ಕಟ್ಟಡವಾಗಿ ಕಾಣಬಹುದು (ಬುರ್ಜ್ ಖಲೀಫ಼ಾದ ಎತ್ತರ 2722 ಅಡಿ, ಅಂದರೆ ಮಾನವಗಿಂತ ಸುಮಾರು 453 ಪಟ್ಟು ಹೆಚ್ಚು).

ಇನ್ನು ನಮ್ಮ ಕಣ್ಣಿನ ಎತ್ತರದ ಆಕಾಶದ ವಿಚಾರಕ್ಕೆ ಬರುವುದಾದರೆ, ಸುಮಾರು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ನಾವು ಮೋಡಗಳನ್ನು ನೋಡುತ್ತೇವೆ, ಅದಕ್ಕಿಂತಲೂ ಎತ್ತರದಲ್ಲಿ ಅಂದರೆ 36,000 ಅಡಿಗಳಷ್ಟು ಎತ್ತರದಲ್ಲಿ ನಮ್ಮ ವಿಮಾನಗಳು ಹಾರಾಡುತ್ತವೆ.  ಇದಕ್ಕಿಂತಲೂ ಹೆಚ್ಚಿನದ್ದು ನಮ್ಮ ಆಕಾಶವಾಗುತ್ತದೆ.  ಅದು ಎಲ್ಲದ್ದಕ್ಕೂ ಮೀರಿದ್ದು.

ಇದೇ ಆಕಾಶವನ್ನು ನಾವು ಒಂದು ಇರುವೆಯ ಗಾತ್ರದಲ್ಲಿ ಯೋಚನೆ ಮಾಡಿದರೆ, ಆ ಇರುವೆಯ 20 ಅಡಿಗಳಲ್ಲಿ ಮೋಡಗಳು ತೇಲುತ್ತವೆ, ಹಾಗೆ 72 ಅಡಿ ಎತ್ತರದಲ್ಲಿ ಕಮರ್ಷಿಯಲ್ ವಿಮಾನಗಳು ಹಾರಾಡುತ್ತವೆ...ಉಳಿದದ್ದೆಲ್ಲ ನಭೋಮಂಡಲವಾಗುತ್ತದೆ.

ಈ ವಿಚಾರವನ್ನು ಏಕೆ ಹೇಳಬೇಕಾಗಿ ಬಂತೆಂದರೆ: ನಾವು ಹುಲು ಮಾನವರು.  ಈ ಪ್ರಾಣಿ ಪ್ರಬೇಧಗಳಲ್ಲಿ ನಾವು ನಮ್ಮನ್ನೇ ಹಿರಿದು ಎಂದುಕೊಂಡು ಹಿಗ್ಗುತ್ತೇವೆ, ಜೊತೆಗೆ ನಮಗೆ ಸಿಗಬಹುದಾದ ಸಂಪನ್ಮೂಲಗಳನ್ನು ಯಥಾ ಇಚ್ಚೆ ಬಳಸುತ್ತೇವೆ.  ಆದರೆ, ನಮಗಿಂತಲೂ ದೊಡ್ಡ ಜೀವಜಂತುಗಳು ಈ ವಿಶ್ವದಲ್ಲಿ ಇರಬಹುದೇ ಎಂದು ನಮಗೆ ಯೋಚಿಸಲು ಸಾಧ್ಯವಿದೆಯೇ? ನಾವು ನಮ್ಮನ್ನು ಒಂದು ಇರುವೆಯ ಗಾತ್ರಕ್ಕೆ ಹೋಲಿಸಿಕೊಂಡರೆ, ಆ ಇರುವೆಯ ಕಣ್ಣುಗಳಲ್ಲಿ ಒಂದು ಮಾನವನಷ್ಟು ದೊಡ್ಡ ಜೀವಿಯನ್ನು ನೋಡಲು ಸಾಧ್ಯವಿದೆಯೇ?

ಕೆಲವೊಮ್ಮೆ ಫ್ರೀವೇಗಳಲ್ಲಿ ಟ್ರಾಫ಼ಿಕ್ ಜಾಮ್ ಆದ ದೃಶ್ಯಗಳನ್ನು ನೋಡಿದಾಗ, ಅಲ್ಲಿ ಒಂದರ ಹಿಂದೆ ಒಂದರಂತೆ ನಿಧಾನವಾಗಿ ತೆವಳುವ ಕಾರುಗಳು ಇರುವೆಯ ಸಾಲುಗಳನ್ನು ನೆನಪಿಸುತ್ತವೆ.  ನೀವು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹೋಗಿ ಅಲ್ಲಿನ ಅಬ್ಸರ್‌ವೇಟರಿಯಿಂದ ನೋಡಿದರೆ, ಕೆಳಗೆ ಹರಿದಾಡುವ ಮನುಷ್ಯರು ಚಿಕ್ಕ ಇರುವೆಗಳಂತೆಯೇ ಕಾಣುತ್ತಾರೆ.

ಇನ್ನು ಈ ಇರುವೆಯ ಹವಾಮಾನ ಮುನ್ಸೂಚನೆ ಹೇಗಿರಬಹುದು? ನಾವು ಕಸ ಹೊಡೆದರೆ ಅವಕ್ಕೆ ಬಿರುಗಾಳಿ ಬೀಸಿದ ಅನುಭವವಾಗಬಹುದು.  ನಮ್ಮ ಬಚ್ಚಲು ಮನೆಗಳಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗುವ ಅವುಗಳಿಗೆ ಮಹಾಪ್ರಪಾತದ ದೃಶ್ಯದ ಅರಿವಾಗಬಹುದು.  ತಮ್ಮ ಮೇಲೆ ಬೀಳುವ ಒಂದೊಂದು ಹನಿ ನೀರೂ ಸಹ, ದೊಡ್ಡ ಪರ್ವತದ ಗಾತ್ರವನ್ನು ಮೈ ಮೇಲೆ ಹಾಕಿದ ಹಾಗೆ ಆಗಬಹುದು.  ಇನ್ನು ಬೆಂಕಿಯ ವಿಚಾರವಂತೂ ಯೋಚಿಸಲೂ ಆಗದಷ್ಟು ದೊಡ್ಡದಿರಬಹುದು.  ಹೀಗೆ ನಮ್ಮನ್ನು ನಾವು ಒಂದು ಇರುವೆಯನ್ನಾಗಿ ಊಹಿಸಿಕೊಂಡು ನೋಡಿದರೆ, ಈ ವಿಶ್ವದಲ್ಲಿ ಅದೆಷ್ಟು ಸೋಜಿಗಗಳಿರಬಹುದು ಎನಿಸೋದಿಲ್ಲವೇ?

***

ಇನ್ನು ಆತ್ಮದ ವಿಷಯಕ್ಕೆ ಬರುವುದಾದರೆ, ಎಲ್ಲ ಜೀವಿಗಳಲ್ಲೂ "ಜೀವ" ಇರುವ ಹಾಗೆ, ಅವುಗಳಲ್ಲೂ ಒಂದೊಂದು ಆತ್ಮ ಇದೆಯೇ?  ಅಥವಾ ಆತ್ಮ ಕೇವಲ ಮಾನವರಿಗೆ ಮಾತ್ರ ಸಂಬಂಧಿಸಿದ್ದೋ?

ಈ ವಿಶ್ವದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆತ್ಮಗಳಿದ್ದು, ಅವೇ ದೇಹದಿಂದ ದೇಹಕ್ಕೆ ವರ್ಗಾವಣೆಯಾಗುತ್ತವೆಯೋ? ಅಥವಾ ಜೀವಿಗಳು ಹೇಗೆ ಅನಿರ್ಧಿಷ್ಟ ಪ್ರಮಾಣದಲ್ಲಿರುವಂತೆ ಆತ್ಮಗಳೂ ಇದ್ದು, ಎಲ್ಲ ಜೀವಿಗೂ ಒಂದೊಂದು ಆತ್ಮ ಯಾವಾಗಲೂ ಇರುತ್ತದೆಯೋ?  ಹಾಗಾದರೆ ಮುಕ್ತಿ ಹೊಂದುವ ಆತ್ಮಗಳು ಹೋಗುವುದಾದರೂ ಎಲ್ಲಿಗೆ?  ಈ ಆತ್ಮ ಇಂದಿಗೆ ಮುಕ್ತಿ ಹೊಂದುತ್ತದೆ ಎಂದು ಲೆಕ್ಕ ಇಡುವವರಾರು?  ಇರುವೆಯ ಜೀವಿತಾವಧಿಯ ಆತ್ಮದ ಬದುಕಿಗೂ, ಮನುಷ್ಯನ ಜೀವಿತಾವಧಿಯ ಆತ್ಮದ ಬದುಕಿಗೂ ವ್ಯತ್ಯಾಸವಿದೆಯೇ? ಹಾಗಾದರೆ, ಈ ಪ್ರತಿಯೊಂದು ಜೀವಜಂತುವಿನ ಆತ್ಮದ ಜೀವಿತಾವಧಿಯ ಬೆಳವಣಿಗೆಗಳನ್ನು ಪೋಷಣೆಗಳನ್ನು ಯಾವ ವೈಟೇಜ್‌ನಲ್ಲಿ ಇಟ್ಟು ನೋಡಲಾಗುತ್ತದೆ?  ಮಾನವನ 80 ವರ್ಷದ ಆತ್ಮದ ಪರ್‌ಫಾರ್ಮೆನ್ಸ್ ಅನ್ನು ಮುಟ್ಟಲು ಇರುವೆಯ ಆರು ತಿಂಗಳಿನ ಆತ್ಮ ಯಾವ ಮಟ್ಟಕ್ಕೆ ಕಷ್ಟ ಪಡಬೇಕು?

ಈ ಭೂಮಂಡಲದಲ್ಲಿ ಇರುವ ಎಲ್ಲ ರಸಾಯನಿಕ ಪದಾರ್ಥ, ಮೂಲವಸ್ತುಗಳ ಪ್ರಮಾಣ ಯಾವಾಗಲೂ ಒಂದೇ ಇರುವುದೆಂದಾದರೆ, ಒಂದು ಕಡೆ ಹೆಚ್ಚುವುದು ಮತ್ತೊಂದು ಕಡೆ ಕಡಿಮೆ ಆಗಲೇ ಬೇಕು ಅಲ್ಲವೇ (conservation)? ಅಂದರೆ, ಹೆಚ್ಚು ಹೆಚ್ಚು ಹುಟ್ಟುವ ಮಾನವ ಸಂತತಿ ತನ್ನ ಮಡಿಲಲ್ಲಿ ಹೆಚ್ಚು ಹೆಚ್ಚು ರಸಾಯನಿಕಗಳನ್ನು ಅಡಗಿಸಿಕೊಳ್ಳುವುದರಿಂದ ಉಳಿದ ಯಾವುದೋ ಜೀವಿಯ ಸಂತತಿಗೆ ಅಥವಾ ಸಂತತಿಗಳಿಗೆ ಅದು ಕಡಿಮೆ ಆಗುತ್ತದೆಯೇ?

ಎಲ್ಲಕ್ಕಿಂತ ಮುಖ್ಯವಾಗಿ, ಸದಾ ಊರ್ದ್ವ ಮುಖಿಯಾಗಿರುವ ಈ ಆತ್ಮದ ಆತ್ಮ ಯಾಕೆ ಯಾವಾಗಲೂ ಹೋರಾಡುತ್ತಿರುತ್ತದೆ, ಆಶಾಂತವಾಗಿರುತ್ತದೆ?  "ಇಂಥವರ ಆತ್ಮಕೆ ಶಾಂತಿ ಸಿಗಲಿ!" ಎಂದು ಮೊಟ್ಟ ಮೊದಲ ಬಾರಿಗೆ ಯಾವ ನಾಗರೀಕತೆಯಲ್ಲಿ ಯಾರು ಮೊದಲು ಹೇಳಿದರು?  ಇಂದಲ್ಲ ನಾಳೆ ಮೋಕ್ಷ ಸಿಗುವುದೇ ಹೌದು ಎಂದಾದಲ್ಲಿ ಅದಕ್ಕೆಂದೇ ಹೋರಾಟವಾದರೂ ಏಕೆ ಬೇಕು?

***

ನಮಗೆ ನಾವೇ ದೇವರು! ನಮ್ಮ ದೇವರುಗಳ ಚಿತ್ರಣಗಳಲ್ಲಿ ಅವರನ್ನು ನಮಂತೆಯೇ ಸೃಷ್ಟಿಸಿಕೊಂಡಿದ್ದೇವೆ, ಆದರೆ ಸ್ವಲ್ಪ ಬಲ, ಭಿನ್ನತೆಗಳನ್ನು ತೋರುವುದರ ಮೂಲಕ ಅವರನ್ನೆಲ್ಲ ಸೂಪರ್ ಹ್ಯೂಮನ್ ಮಾಡಿದ್ದೇವೆ.  ಅದೇ ರೀತಿ ಇರುವೆಗಳಲ್ಲೂ ಸೂಪರ್ ಇರುವೆಗಳ ದೇವರುಗಳು ಇರಬಹುದು!  ನಮ್ಮ ದೇವರುಗಳೆಲ್ಲ ಸಾವನ್ನು ಗೆದ್ದವರು, ಚಿರಂತನರು ಮತ್ತು ಸರ್ವವ್ಯಾಪಿಗಳು.  ಅಂದರೆ, ನಮ್ಮ ಸುತ್ತಲಿರುವ ನಮ್ಮನ್ನು ಆವರಿಸಿರುವ ಪಂಚಭೂತಗಳು! ನಾವು ಒಂದು ಕ್ಷಣ ಇರುವೆಯಾಗಿ ಯೋಚಿಸಿದಾಗ ಈ ವ್ಯವಸ್ಥೆ ಮತ್ತು ವಿಶ್ವ ಅದೆಷ್ಟು ಅಗಾಧವಿದೆಯೆಲ್ಲ ಎಂದು ಅನ್ನಿಸುವುದು ಖಂಡಿತ.  ಆದರೆ, ನಾವು ಹುಲು ಮಾನವರಾಗಿ ಈ ಅಗಾಧತೆಯನ್ನ ಅಷ್ಟು ಸಲೀಸಾಗಿ ಗ್ರಹಿಸೋದಿಲ್ಲ. ಈ ಎತ್ತರ ಕಟ್ಟಡಗಳೂ, ಅವುಗಳ ಅತಿ ಎತ್ತರದಲ್ಲಿ ಹಾರಾಡುವ ವಿಮಾನಗಳೂ, ಅದಕ್ಕೂ ಮಿಗಿಲಾದ ಮುಗಿಲಿನಲ್ಲಿ ತೇಲುವ ಉಪಗ್ರಹಗಳು ಇವೆಲ್ಲ ನಮ್ಮ ಸೃಷ್ಟಿಯೇ!  ಹಾಗೇ ನಮ್ಮ ಸುತ್ತಲೂ ಇರುವೆಗಳು ಈಗಾಗಲೇ ಹಾರಾಡಿಸಿರುವ ಉಪಗ್ರಹಗಳೂ ಇರುಬಹುದಾದ ಸಾಧ್ಯತೆಗಳಿಲ್ಲವೆನ್ನಲಾಗದು.  ಏಕೆಂದರೆ, ಗೆದ್ದಲು ಕಟ್ಟುವ ಮಣ್ಣಿನ ಮನೆ ಆಧುನಿಕವಾಗಿರುವುದಷ್ಟೇ ಅಲ್ಲದೇ ನಮ್ಮಅನೇಕ ಬುರ್ಜ್ ಖಲೀಫ಼ಾಗಳ ಎತ್ತರವನ್ನೂ ಮೀರಿ ಬೆಳೆದಿರುತ್ತದೆ ಎನ್ನುವುದನ್ನು ಹೆಚ್ಚಿನವರು ನಂಬಲಾರರು, ಆದರೆ, ಅದು ನಿಜ.

ಹಾಗಾದರೆ, ಈ ಅಗಾಧವಾದ ಪೃಥ್ವಿಯಲ್ಲಿ ನಾವು ಒಂದು ಸಣ್ಣ ಹುಳುವಾದರೆ, ಈ ಇರುವೆಗಳು ನಮಗಿಂತ ಕನಿಷ್ಟ ಮಟ್ಟದ ಜೀವಿಗಳು ಎನ್ನಬಹುದು.  ಆಯಾ ಜೀವಿಗಳಿಗೆ ಅವುಗಳ ಬದುಕಿನ ಒಂದು ಧರ್ಮವಿದೆ, ಅದರೊಳಗೊಂದು ಮರ್ಮವಿದೆ.  ಆದರೆ, ಮನುಷ್ಯನ ಮಟ್ಟಿಗೆ ಮಾತ್ರ ತನ್ನ ಅಳಿವು ಮತ್ತು ಉಳಿವಿಗೆ ಮೊದಲಿನಿಂದಲೂ ಆತ ತನ್ನ ಸುತ್ತಲನ್ನು ದ್ವಂಸ ಮಾಡುತ್ತಲೇ ಬಂದಿದ್ದಾನೆ.  ಈ ಮನುಷ್ಯನಿಗೆ ಬದುಕಲು ವಿಶೇಷವಾದ ಹಕ್ಕನ್ನು ಕೊಟ್ಟವರಾರು? ಈ ಜಗತ್ತಿನ ನ್ಯಾಯಾಲಯದಲ್ಲಿ ನಾವೆಲ್ಲರೂ ಸಮಾನರು ಎಂದು ಇನ್ನಾದರೂ ನಮ್ಮ ಅರಿವಿಗೆ ಬರುತ್ತದೆಯೇ?

Saturday, April 25, 2020

ಎಲ್ಲಾ ಕಸಮಯವೋ!

ಕೊರೋನಾ ವೈರಸ್‌ಗೆ ಸಂಬಂಧಿಸಿದ ಬಿಕ್ಕಟ್ಟನ್ನು ನಾವೆಲ್ಲ ಎದುರಿಸುತ್ತಿರುವಾಗ ಒಂದು ವಿಷಯವನ್ನು ನಮ್ಮ ಅನುಕೂಲಕ್ಕೋಸ್ಕರ ಮರೆತುಬಿಡುತ್ತಿದ್ದೇವೆಂದರೆ ಅದು ನಮ್ಮ ಕಸ ಸಂಸ್ಕರಣೆಯ ವೈಫಲ್ಯ.  ನಮ್ಮ ತಂತ್ರಜ್ಞಾನಗಳು ಅದೆಷ್ಟೇ ಮುಂದುವರೆದರೂ, ಬಾಲ್ಟಿಮೋರ್‌ನಿಂದ ಬೆಂಗಳೂರಿನವರೆಗೆ ನಾವು ಕಸವನ್ನು ಪರಿಷ್ಕರಿಸುವ ರೀತಿಯನ್ನು ನೋಡಿದರೆ ತಿರಸ್ಕಾರ ಮೂಡುತ್ತದೆ.  ಇತ್ತೀಚೆಗೆ I-95ನಲ್ಲಿ ಡ್ರೈವ್ ಮಾಡುತ್ತಾ ಇನ್ನೇನು ಬಾಲ್ಟಿಮೋರ್ ನಗರವನ್ನು ಹೊಕ್ಕುತ್ತಿರುವಂತೆ (ಕಸವನ್ನು ಸುಟ್ಟು) ಗಗನಕ್ಕೆ  ಹೊಗೆಯನ್ನು ಉಗುಳುವ ಹೊಗೆ ಕೊಳವೆಗಳು ನಾವು ಇನ್ನೂ ಜೀವಂತವಿದ್ದೇವೆ ಎಂದು ನೆನಪಿಸಿದವು.  ಅದೇ ರೀತಿ ನೀವು ಭಾರತದ ಯಾವುದೇ ಮಹಾನಗರಕ್ಕೆ ಹೋದರೂ ಕಸದ ಪ್ರಮಾಣ ಮತ್ತು ಸಂಸ್ಕರಣಾ ವಿಧಾನ ಎರಡೂ ನಿಮ್ಮನ್ನು ಹೈರಾಣಾಗಿಸುತ್ತವೆ ಎಂದರೆ ತಪ್ಪೇನಿಲ್ಲ.



ದಿನೇ-ದಿನೇ ಬೃಹದಾಕಾರವಾಗಿ ಬೆಳೆಯುವ ಕಸದ ಪ್ರಮಾಣ ಒಂದು ದಿನ ಇಡೀ ಪ್ರಪಂಚದ ಪ್ರಗತಿಗೇ ಮಾರಕವಾಗಬಹುದೇ ಎಂಬ ಕೊರಗು ಇತ್ತೀಚೆಗೆ ಬಲವಾಗಿ ಕಾಡುತ್ತಿದೆ.

***
ನಮ್ಮ ಆಧುನಿಕ ಬದುಕಿನಲ್ಲಿ ನಾವೇ ಉತ್ಪಾದಿಸಿದ ಸಮಸ್ಯೆಗಳಲ್ಲಿ ಈ ಕಸವೂ ಒಂದು.  ಇದನ್ನ ಕಸ ಅನ್ನಿ, ಟ್ರ್ಯಾಶ್ ಅನ್ನಿ, ಅಥವಾ ರಬ್ಬಿಶ್ ಅನ್ನಿ, ತ್ಯಾಜ್ಯ ಅನ್ನಿ, ಕಲ್ಮಷ ಅನ್ನಿ - ಎಲ್ಲವೂ ಒಂದೇ.   ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದ್ದೇ ಇದೆ, ಆದರೆ ಭಾರತದಲ್ಲಿ ಇದು ಅತಿ ಹೆಚ್ಚು ಎನ್ನಬಹುದು.  ಈಗಿನ ಎಲ್ಲೆಲ್ಲೂ ಕಸವೇ ಕಸ ಎನ್ನುವ ಅಂತಿಮ ಹಂತವನ್ನು ತಲುಪುವಲ್ಲಿ ಸಹಾಯ ಹಸ್ತ ನೀಡಿದ ಪೆಡಂಭೂತಗಳಲ್ಲಿ ಮುಖ್ಯವಾದುವು: ಯದ್ವಾತದ್ವಾ ಬೆಳೆದ ಜನಸಂಖ್ಯೆ, ಎಂಥ ಸಮಸ್ಯೆಗಳನ್ನೂ ಉಲ್ಬಣಗೊಳಿಸಬಲ್ಲ ಜನಸಾಂದ್ರಂತೆ, ಇವೆಲ್ಲಕ್ಕೂ ಮೂಲಭೂತ ಕಾರಣವಾದ ಪ್ಲಾನಿಂಗ್ (ಅಥವಾ ಪ್ಲಾನಿಂಗ್ ಇರದೇ ಇರುವ ಸ್ಥಿತಿ), ಎಂಥ ಸಂದರ್ಭವನ್ನೂ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಹಾಗೂ ಲಂಚ ಲಂಪಟತನ.

ಭಾರತದವೆಂದರೆ ಬೆಂಗಳೂರೊಂದೇ ಅಲ್ಲ, ಆದರೆ ನಮ್ಮ ಬೆಂಗಳೂರಿಗೆ ಈ ಗತಿ ಬಂದಿರುವಾಗ ಇನ್ನುಳಿದ ನಗರಗಳ ಪಾಲು ಹೇಗಿರಬೇಡ.  ಏಳು (೨೦೧೧) ವರ್ಷಗಳ ಹಿಂದೆ ೮೫ ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಇಂದು ೧೨೫ ಲಕ್ಷ (೨೦೧೭) ತಲುಪಿದೆ. ಇಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಷರಕುಕ್ಷಿಗಳಿದ್ದರೂ ಸಹ, ಇಡೀ ನಗರ ಅನಾಗರೀಕರ ಬೀಡಾಗಿದೆ.  ತಮ್ಮ ಮನೆಯ ಒಳಗನ್ನು ಬೆಳಗಿಕೊಳ್ಳುವ ಜನ, ಹೊರಗನ್ನು ಅದೆಷ್ಟು ಕೊಳಕಾಗಿಟ್ಟುಕೊಂಡಿದ್ದಾರೆಂದರೆ ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ, ಆದ್ದರಿಂದ ಎಲ್ಲರಿಗೂ ಅದು ’ಒಪ್ಪಿಕೊಂಡ’ ಅಥವಾ ’ಒಗ್ಗಿಕೊಂಡ" ವಿಷಯವಾಗಿದೆ.

ಒಂದು ನಗರ ನಿರ್ಮಲೀಕರಣಗೊಳ್ಳ ಬೇಕಾದರೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು.  ಅಲ್ಲಿ ಬಳಕೆಯಾಗುವ ನೀರನ್ನು ಪರಿಷ್ಕರಿಸಿ ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಿಬೇಕು.  ಇದೇ ರೀತಿ ಕಸವನ್ನು ಸಹ ಪರಿಷ್ಕರಿಸಿ, ರಿಸೈಕಲ್ ಮಾಡಬಹುದಾದವುಗಳನ್ನು ಬೇರ್ಪಡಿಸಿ ರಿಸೈಕಲ್ ಮಾಡಬೇಕು.  ಇವೆಲ್ಲಕ್ಕೂ ವ್ಯವಸ್ಥಿತವಾದ ಸಾಮಾಜಿಕ ಕಾಳಜಿ ಇರಬೇಕು.  ನಗರೀಕರಣ, ಅತಿ ಜನಸಾಂದ್ರತೆಯಿಂದ ನಮ್ಮ ಸಮಸ್ಯೆಗಳು ಹೆಚ್ಚಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತಳ್ಳಿ ಹಾಕುವಂತಿಲ್ಲ.  ಉದಾಹರಣೆಗೆ, ೯೦ ಲಕ್ಷ ಜನಸಂಖ್ಯೆ ಇರುವ ನ್ಯೂ ಯಾರ್ಕ್ ನಗರ, ಇದಕ್ಕಿಂತಲೂ ನಾಲ್ಕು ಪಟ್ಟು ಜನಸಾಂದ್ರತೆ ಇರುವ ಟೋಕ್ಯೋದಲ್ಲಿ ಜನರು ಬದುಕುತ್ತಿಲ್ಲವೇ? ಅಲ್ಲಿಯೂ ಕಸದ ಸಮಸ್ಯೆ ಇದೆಯೇ ಎಂದು ಯೋಚಿಸಬೇಕಾಗುತ್ತದೆ.

ನಮ್ಮ ಕಸದ ಸಮಸ್ಯೆಗೆ ನಾವು ಏನು ಮಾಡಬೇಕು? ಈ ಹಿಂದೆ ವ್ಯವಸ್ಥಿತವಾದ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದ ನಗರಗಳ ಕನಿಷ್ಠ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬೆಳೆಸುವುದರ ಜೊತೆಗೆ, ಅಲ್ಲಿ ಎಲ್ಲೆಲ್ಲಿಂದಲೋ ವಲಸೆ ಬಂದು ಸೇರಿಕೊಂಡ ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು.  ಜೊತೆಗೆ ತಿರಸ್ಕೃತ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸರಿಯಾಗಿ "ವಿನಿಯೋಗಿಸುವ" ಉದ್ಯಮಗಳು ಹಾಗೂ ಅದಕ್ಕೆ ಸೂಕ್ತವಾದ ಟೆಕ್ನಾಲಜಿ ಮತ್ತು ಮಷೀನುಗಳ ಸಹಾಯದಿಂದ ಕಸದ ಪೆಡಂಭೂತವನ್ನು ನಿಯಂತ್ರಿಸಬಹುದು.   ನಾನು ನೋಡಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಈಗ      ಚಾಲ್ತಿಯಲ್ಲಿರುವ ವ್ಯವಸ್ಥೆ ಕಲೆಕ್ಟ್ ಎಂಡ್ ಡಂಪ್.  ಇದು ಹೀಗೇ ಮುಂದುವರೆದರೆ ಇಡೀ ನಗರವೇ ತಿಪ್ಪೇಗುಂಡಿಯಾಗುವುದು ಗ್ಯಾರಂಟಿ.

ಕಸವನ್ನು ಕಲೆಕ್ಟ್ ಮಾಡಿ, ಅದನ್ನು ಸರಿಯಾಗಿ ಬೇರ್ಪಡಿಸಿ, ರಿಸೈಕಲ್ ಮಾಡುವವನ್ನು ಸರಿಯಾದ ಜಾಗಕ್ಕೆ ತಲುಪಿಸಿ, ಕೊಳೆಯುವುದನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಮತ್ತೆ ಅವೇ ರಿಸೋರ್ಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳುವುದು ತ್ಯಾಜ್ಯವನ್ನು ಪರಿಷ್ಕರಿಸಲು ಇರುವ ಒಂದು ಸಾಲಿನ ಸೂತ್ರ.  ಮೊದಲೆಲ್ಲ ನಮ್ಮಲ್ಲಿ ಪ್ಲಾಸ್ಟಿಕ್ಕುಗಳು ಬಳಕೆಯಾಗುತ್ತಿರಲಿಲ್ಲ.  ಮನೆಗೊಂದು ತಿಪ್ಪೇಗುಂಡಿ ಇರುತ್ತಿತ್ತು, ಅಲ್ಲಿ ದಿನಬಳಕೆಯ ತ್ಯಾಜ್ಯ ಕೊಳೆತು ಗೊಬ್ಬರವಾಗುತ್ತಿತ್ತು. ಹಳೆಯ ಟೂತ್‌ಪೇಸ್ಟ್ ಟ್ಯೂಬುಗಳಿಂದ ಹಿಡಿದು, ಒಡೆದ ಪ್ಲಾಸ್ಟಿಕ್ ಕೊಡಪಾನಗಳ ತುಂಡುಗಳನ್ನು, ಖಾಲಿ ಬಾಟಲುಗಳನ್ನು, ರದ್ದಿ ಪೇಪರುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಿಷ್ಟೇ ಅಲ್ಲ, ಹಳೆಯ ಪಾತ್ರೆಗಳನ್ನೂ, ರೇಷ್ಮೆ ಬಟ್ಟೆ ಮೊದಲಾದವುಗಳನ್ನೂ ಸಹ ನಮಗೆ ಗೊತ್ತಾದ ರೀತಿಯಲ್ಲಿ ’ರಿಸೈಕಲ್’ ಮಾಡುತ್ತಿದ್ದೆವು.
ಇಂದಿನ ಆಧುನಿಕ ಜನತೆಗೆ ತಮ್ಮ ತ್ಯಾಜ್ಯವನ್ನು ವಿನಿಯೋಗಿಸಲು ತಾವು ಹಣವನ್ನೇಕೆ ಖರ್ಚು ಮಾಡಬೇಕು ಎಂಬ ಸರಳ ಸತ್ಯ ತಿಳಿಯುತ್ತಿಲ್ಲ?  ನಿಮ್ಮ ಮನೆಯ ಮುಸುರೆಯನ್ನು ತೊಳೆಯುವವರಿಗೆ ದುಡ್ಡು ಕೊಡುವುದಿಲ್ಲವೇ? ಹಾಗೇ ತ್ಯಾಜ್ಯ ತೆಗೆದು ಪರಿಷ್ಕರಿಸಲು ಕೂಡ ಹಣ ತೆರಬೇಕಾಗುತ್ತದೆ.  ಅಲ್ಲದೇ ತ್ಯಾಜ್ಯವನ್ನು ಪರಿಷ್ಕರಿಸುವ ಉದ್ಯಮ/ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ಒಂದು ವ್ಯವಸ್ಥೆಯ ಮುಖ್ಯ ಅಂಗವನ್ನಾಗಿ ಪರಿಗಣಿಸಬೇಕಾಗುತ್ತದೆ.  ನನ್ನ ಅನಿಸಿಕೆಯ ಪ್ರಕಾರ, ನಾವು ಸೇವಿಸುವ ಆಹಾರಕ್ಕೆಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅದರ ಕಾಲು ಪಟ್ಟಾದರೂ ತ್ಯಾಜ್ಯ ಸಂಸ್ಕರಣೆಗೆ ಮನ್ನಣೆ ನೀಡಬೇಕಾಗುತ್ತದೆ.  ಇಲ್ಲವೆಂದಾದಲ್ಲಿ ಇಂದು ನಾವು ಬೆಲೆ ತೆರದೆಯೇ ಕಸವನ್ನು ಎಲ್ಲಿ ಬೇಕಂದಲ್ಲಿ ಎಸೆದು ಮುಂದೆ ಅದು ಎಲ್ಲವನ್ನು ಮೀರಿ ಬೆಳೆತು ಅನೇಕ ಅನಾಹುತಗಳು, ಹಾನಿಗಳೂ ಸಂಭವಿಸುವಾಗ ತುಂಬಾ ನಿಧಾನವಾಗಿರುತ್ತದೆ.

***

ನಮ್ಮಲ್ಲಿ ತಂತ್ರಜ್ಞಾನ, ಅವಿಷ್ಕಾರ ಬೇರೆ ಎಲ್ಲ ದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಂತೋಷವಾಗುತ್ತದೆ.  ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಆರನೇ ಸಾಲಿನಲ್ಲಿದೆ ಎಂದು ಓದಿದಾಗ ಖುಷಿಯಾಗುತ್ತದೆ.  ನಮ್ಮಲ್ಲಿ ಅನೇಕ ಉದ್ಯಮಗಳು ಬೆಳೆಯುತ್ತಿವೆ, ನಾವು ಅತಿ ಹೆಚ್ಚು ಇಂಜಿನಿಯರುಗಳನ್ನು ಹೊರತರುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಆದರೆ, ಈವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿರುವುದನ್ನು ನೋಡಿಯೂ ನೋಡದೇ ಇರುವಂತಿರುವುದು ಏಕೆ? ಎಂದು ಯೋಚಿಸಿದರೆ ಉತ್ತರ ದೊರೆಯುವುದಿಲ್ಲ.

ಅಮೇರಿಕದಲ್ಲಿ ವೇಷ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಂಥವುಗಳು ಪಬ್ಲಿಕ್ ಟ್ರೇಡಿಂಗ್ ಕಂಪನಿಗಳಾಗಿ ಬೆಳೆದು ತಮ್ಮ ಗ್ರಾಹಕರಿಗೆ, ಬಳಕೆದಾರರಿಗೆ ಸೇವೆಯನ್ನು ಸಲ್ಲಿಸುತ್ತಿಲ್ಲವೇ? ಹಾಗೆಯೇ ನಮ್ಮಲ್ಲೂ ಸಹ ಈ ಸಮಸ್ಯೆಗೆ ಇದುವರೆಗೆ ಯಾರೂ ಉತ್ತರವನ್ನೇ ಕಂಡು ಹಿಡಿಯದಂಥ ಅಸಹಾಯಕ ಪರಿಸ್ಥಿತಿ ಬಂದಿದೆಯೇ?

ಮುಂದೆ ಇದೇ ಬೆಂಗಳೂರಿನ ಜನಸಂಖ್ಯೆ ದ್ವಿಗುಣವಾದಾಗ, ಈ ಕಸದ ಮಹಾತ್ಮೆ ಏನಾಗಿರಬೇಡ? ಮನೆಯ ದಿನನಿತ್ಯದ ಕಸದ ಜೊತೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉತ್ಪನ್ನಗಳೂ, ಲಿಥಿಯಂ ಬ್ಯಾಟರಿಗಳೂ ಸೇರಿಕೊಂಡು, ನೀರು-ಮಣ್ಣು ಎರಡೂ ಪಾದರಸ, ಆರ್ಸೆನಿಕ್, ಮೊದಲಾದ ವಿಷ ಪದಾರ್ಥಗಳಿಂದ ಕೂಡಿಕೊಂಡರೆ ಯಾರಿಗೆ ಹಾನಿ ಎಂದು ಎಲ್ಲರೂ ಯೋಚಿಸಬೇಕಾದ ವಿಚಾರ.  ಎಲ್ಲಾ ಕಡೆ ಕಸಮಯವಾಗಿದೆ.  ಇನ್ನೂ ನಾವು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದಿದ್ದರೆ, ನಿಸರ್ಗ ಎಂದಿನಂತೆ ತನ್ನನ್ನು ತಾನು ನೋಡಿಕೊಳ್ಳುತ್ತದೆ, ಅದಕ್ಕೆಲ್ಲ ಬೆಲೆ ತೆರಬೇಕಾದವರು ನಾವೇ!

Saturday, April 11, 2020

ಇತಿಹಾಸ-ಯುದ್ಧ-ಕಲಿಕೆ

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ|| ೧೧

1943ರಲ್ಲಿ ಪ್ರಕಟಗೊಂಡ ಮಂಕುತಿಮ್ಮನ ಕಗ್ಗದ 'ಮಾನವರೋ ದಾನವರೋ?' ಅವತರಣಿಕೆಯಲ್ಲಿ ಬರುವ 11ನೇ ಪದ್ಯ ಇದು.  ಇಂದಿಗೆ 77 ವರ್ಷದ ಮೊದಲೇ ಈ ಪದ್ಯವನ್ನು ಬರೆದಾಗ ಆಗಿನ ಸ್ಥಿತಿಗತಿ ಹೇಗಿರಬಹುದು ಎಂದು ಯೋಚನೆ ಬಂತು.

ನಮಗೆ ಕಷ್ಟ ಬಂದಾಗ ನಮ್ಮ ಮೂಲ ಸಿದ್ಧಾಂತ-ಸಂಸ್ಕಾರಗಳೇ ನಮಗೆ ಆಶ್ರಯವಾಗುತ್ತವಂತೆ.  ಇಂದು ಇಡೀ ವಿಶ್ವವೇ ಸಂಕಷ್ಟದ ಸಮಯದಲ್ಲಿರುವಾಗ ಹಾಗೆಯೇ ಓದ ತೊಡಗಿದ್ದ, ಕನ್ನಡದ ಭಗವದ್ಗೀತೆ, ಕಗ್ಗದ ಪುಟಗಳು ನಿಲ್ಲಲಾರದೇ ಹಾಗೇ ಮುಂದುವರೆಯತೊಡಗಿದವು!

See the source image
(World in 1943 - AlternateHistory.com)

ಆಗೆಲ್ಲ ಎರಡನೇ ಮಹಾಯುದ್ಧ ಎಲ್ಲ ಕಡೆಗೆ ಹರಡಿಕೊಂಡಿತ್ತು.  ಅದೇ ಸಮಯದಲ್ಲಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಭಾರತದ ಉದ್ದಗಲಕ್ಕೂ ಕೂಡ ಸ್ವಾತ್ರಂತ್ಯದ ಕಿಡಿ ಹೊತ್ತಿ ಪ್ರಜ್ವಾಲಮಾನವಾಗಿ ಉರಿಯುತ್ತಿದ್ದ ಸಮಯ.  1943ರ ಡಿಸೆಂಬರ್ 30 ರಂದು ಸುಭಾಶ್‌ಚಂದ್ರ ಬೋಸ್ ಪೋರ್ಟ್ ಬ್ಲೇರ್‌ನಲ್ಲಿ ಭಾರತದ ಸ್ವಾತಂತ್ರ್ಯ ಪಟವನ್ನು ಹಾರಿಸಿದ್ದು ಬಹಳಷ್ಟು ಸುದ್ದಿ ಮಾಡಿತ್ತು.

ಆಗಿನ ಸಂದರ್ಭದಲ್ಲಿ ಗುಂಡಪ್ಪನವರು ಪ್ರಪಂಚವನ್ನು ಸುತ್ತುವರೆದಿದ್ದ "ದುರ್ದೈವ"ದ ಬಗ್ಗೆ ಬರೆದಿದ್ದು ಇಂದಿನ ಕಾಲಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ನಾವೆಲ್ಲ ಕಲ್ಪನೆ ಮಾಡಿಕೊಳ್ಳಬಹುದು.  ಇದೇ ಮಾತನ್ನು ನಾಲ್ಕು ತಿಂಗಳ ಹಿಂದೆ ಹೇಳಿದ್ದರೆ ಯಾರೂ ನಂಬುತ್ತಿರಲಿಲ್ಲ.  ಆದರೆ ಈ ಪದ್ಯ ಪ್ರಸಕ್ತ ಸನ್ನಿವೇಶಕ್ಕೆ ಹೇಳಿ ಬರೆಸಿದ ಹಾಗಿದೆ.

***

ಆಗೆಲ್ಲ ಯುದ್ಧಗಳು ಒಂದು ರೀತಿಯ ಲೆವೆಲರುಗಳಾಗಿದ್ದವು.  ಜನರ ದೇಶ-ಭಾಷೆ-ಗಡಿಗಳಿಗಿಂತಲೂ ಹೆಚ್ಚಾಗಿ ಆಗಿನ ಸೈನಿಕರೆಲ್ಲ ಯಾವ ಯಾವ ಬಣಗಳಿಗೆ ಸೇರಿದ್ದರೋ ಅಲ್ಲೆಲ್ಲಾ ಭೀಕರವಾದ ಸಾವು-ನೋವುಗಳಾಗಿವೆ.  ಮಾನವ ಸಂತತಿ ಕಂಡ ಅತ್ಯಂತ ಕೆಟ್ಟ ವರ್ಷಗಳು ಎಂದರೆ ಮೊದಲ ಮತ್ತು ಎರಡನೇ ಮಹಾಯುದ್ಧದ ಕಾಲ (World War I 1914-1918, World War II 1939-1945).  ಒಂದು ಅಂದಾಜಿನ ಪ್ರಕಾರ ಈ ಎರಡು ಯುದ್ಧಗಳಲ್ಲಿ ಸುಮಾರು ಒಂದು ನೂರು ಮಿಲಿಯನ್ ಜನರಿಗಿಂತಲೂ ಹೆಚ್ಚು ಜನರು ಕಾಲವಾದರು.  ಯುದ್ಧ ಮುಗಿದ ನಂತರವೂ ಸಾವು-ನೋವಿನ ಪ್ರಮಾಣ ಮುಂದುವರೆಯುತ್ತಲೇ ಇತ್ತು.


ಮಾನವ ಹುಟ್ಟಿದ-ಹೋರಾಡಿದ-ಸತ್ತ ಎಂದು ಸರಳವಾಗಿ ಹೇಳುವ ಹಾಗೆ, ನಮ್ಮ ಇತಿಹಾಸದ ಉದ್ದಾನುದ್ದಕ್ಕೂ ಹೋರಾಟ-ಹೊಡೆದಾಟವೇ ಎಲ್ಲ ಕಡೆಗೆ ಕಂಡುಬರುತ್ತದೆ.  ಪೈಮೇಟ್‌ಗಳಿಂದ (Primate) ಬಳುವಳಿಯಾಗಿ ಪಡೆದ ಗುಣವಾಗಿ ತಮ್ಮ ತಮ್ಮ ನೆರೆಹೊರೆಯನ್ನು ಕಾಪಾಡಿಕೊಳ್ಳುವುದು ಅದಕ್ಕೋಸ್ಕರ ಹೋರಾಡುವುದು ನಮ್ಮ ಇಂದು-ನಿನ್ನೆಯ ಗುಣವಲ್ಲ, ಮಿಲಿಯನ್‌ಗಟ್ಟಲೆ ವರ್ಷಗಳಿಂದ ನಮ್ಮ ವಂಶವಾಹಿಯಲ್ಲಿದೆ.  ಆದ್ದರಿಂದಲೇ ಅದು ನಮಗೆ ಸಹಜ ಕೂಡ.

***

ಯುದ್ಧದಿಂದೇನು ಕಲಿತಿದ್ದೇವೆ?  ಇತಿಹಾಸದಿಂದೇನು ಕಲಿತಿದ್ದೇವೆ? ನೂರು ವರ್ಷಗಳು ಕಳೆದ ನಂತರ  ಮತ್ತೆ ಎಲ್ಲವೂ ಮರುಕಳಿಸುವ ಹಾಗಿದೆ ಎನ್ನಿಸೋದಿಲ್ಲವೇ?  ಇದು ವಿಶ್ವದ ದೊಡ್ಡ ಶಕ್ತಿಗಳು ಕಟ್ಟಿರುವ ಆಂತರಿಕ ಯುದ್ಧವೋ? ಅಥವಾ ನಿಸರ್ಗ ನಮ್ಮ ಮೇಲೆ ಹೂಡಿರುವ ಯುದ್ಧವೋ? ಇವೆಲ್ಲವನ್ನು ಮತ್ತೆ ನಮ್ಮ ಮುಂದಿನ ಸಂತತಿ ಅವರ ಇತಿಹಾಸದಲ್ಲಿ ಕಂಡುಕೊಳ್ಳುತ್ತಾರೆ!  ಇಂದಿನದನ್ನು ನಾಳಿನವರು ಕಂಡುಕೊಂಡು ಅದರ ಬಗ್ಗೆ ಏನನ್ನೂ ಮಾಡದಿರುವುದೇ ಇತಿಹಾಸ ಎಂಬುದು ಈ ಹೊತ್ತಿನ ತತ್ವ!

Thursday, April 09, 2020

ಯಾಕಿಷ್ಟು ಬೇಸರ ಈ ನಿಸರ್ಗಕ್ಕೆ?!

ಛೇ! ಈ ಮಾನವ ಜಾತಿಯೇ ಹೀಗೆ.  ಎಂದೂ ಸಮಾಧಾನ ಚಿತ್ತದ ಪ್ರಾಣಿಯಂತೂ ಅಲ್ಲವೇ ಅಲ್ಲ.   ಬಿಸಿಲಿದ್ದರೆ ಬಿಸಿಲೆಂಬರು, ಛಳಿಯಾದರೆ ಛಳಿಯೆಂಬರು.  ಏನಿಲ್ಲದಿದ್ದರೂ ಶೀತ, ಉಷ್ಣ, ವಾತ, ಪಿತ್ತವೆಂದಾದರೂ ನರಳುತ್ತಲೇ ಇರುವವರು.  ಅತ್ಯಂತ ದುರ್ಬಲವಾಗಿ ಜನಿಸಿ ತನ್ನ ಕೈ-ಕಾಲು ಬಲಿಯುವವರೆಗೂ ಇನ್ನೊಬ್ಬರ ಆಶ್ರಯವಿಲ್ಲದಿದ್ದರೆ ಸತ್ತೇ ಹೋಗುವ ಪ್ರಾಣಿ, ಮುಂದೆ ಇಡೀ ಜಗತ್ತನ್ನೇ ಆಳುವ ದುಸ್ಸಾಹಸವನ್ನು ಮೆರೆದು, ಪ್ರಬಲವಾಗಿ ಹೋರಾಡಿ-ಹಾರಾಡಿ ಮತ್ತೆ ಮಣ್ಣು ಸೇರುವ ಜೀವಿ!  ಮತ್ಯಾವ ಜೀವಿಯೂ ತೋರದ ಕೃತ್ರಿಮತೆ, ಕೃತಕತೆ, ಕೌತುಕ, ಕೋಲಾಹಲ, ಕಪಟತನವನ್ನೆಲ್ಲ ಮೆರೆದು, ತನ್ನ ಇರುವಿಗೇ ಕಳಂಕ ಬರುವಂತೆ ತಾನು ತುಳಿವ ಮಣ್ಣನ್ನೇ ಗೌರವಿಸದ ಸ್ವಾರ್ಥಿ.

***
ನನ್ನ ಮೇಲ್ಮೈಯಲ್ಲಿರುವ ಸಮುದ್ರವನ್ನೆಲ್ಲ ಶೋಧಿಸಿ ತೆಗೆದರು.  ನನ್ನನ್ನು ಆಶ್ರಯಿಸಿದ ಜಲಚರಗಳಿಗೆ ಅನೇಕ ಸಂಕಷ್ಟಗಳನ್ನು ತಂದರು.  ಅನೇಕ ಗುಡ್ಡ-ಬೆಟ್ಟಗಳನ್ನು ಕಡಿದು ನೆಲಸಮ ಮಾಡಿದರು.  ನನ್ನ ಮೈ ಮೇಲೆ ಕಂಗೊಳಿಸುತ್ತಿದ್ದ ವನರಾಶಿಯನ್ನು ಅಳಿಸಿ ಹಾಕಿದರು.  ಅರಣ್ಯವನ್ನು ನಂಬಿಕೊಂಡಿದ್ದ ಜೀವಿಗಳನ್ನು ಸರ್ವನಾಶ ಮಾಡಿದರು.  ಭೂಮಿ, ಸಮುದ್ರ-ಸಾಗರಗಳಲ್ಲಿ ಮಾಡಿದ್ದು ಸಾಲದು ಎಂಬಂತೆ ನಭದಲ್ಲೂ ಅನೇಕ ರೀತಿಯ ಕಾರ್ಖಾನೆಗಳ ಹೊಗೆಯಿಂದ ಉಸಿರುಗಟ್ಟಿಸುವಂತೆ ಮಾಡಿದರು.  ನೆಲದಾಳದಲ್ಲೂ ಇವರ ಶೋಧ ನಿಲ್ಲದೇ, ಅಲ್ಲಿಂದಲೂ ಇಂಧನವನ್ನು ಬಗೆದು ತೆಗೆದರು. ಇವರುಗಳ ಹೊಟ್ಟೆ ತುಂಬುವುದಕ್ಕೆ ಅನೇಕ ಜೀವಿಗಳನ್ನು ತಿಂದು ತೇಗುವುದೂ ಅಲ್ಲದೇ ನಿರ್ನಾಮವನ್ನೂ ಮಾಡಿದರು.  ಕೆಲವು ಜೀವಿಗಳ ಅವಶೇಷವನ್ನು ಹೇಳಹೆಸರಿಲ್ಲದೆ ಹೊಸಕಿ ಹಾಕಿದರು.  ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲ ಕಡೆಯೂ ಇವರ ಸಂತತಿ ಬೆಳೆಯಿತು.  ಎಲ್ಲಿ ಇವರ ಸಂತತಿ ಬೆಳೆಯತೊಡಗಿತೋ, ಅಲ್ಲಿ ಮತ್ಯಾವ ಜೀವಿಗೂ ನೆಲೆಯಿಲ್ಲದಂತಾಯಿತು - ಇವರುಗಳು ಓಡಾಡುವ ದಾರಿಯಲ್ಲಿ ಗರಿಕೆ ಹುಲ್ಲೂ ಬೆಳೆಯದಂತಾಯಿತು!

***
ನನ್ನನ್ನು ನಾನು ಸರಿ ತೂಗಿಸಿಕೊಳ್ಳಬಲ್ಲೆ.  ಇವರ ಆಟ ಹೀಗೇ ಮುಂದುವರೆದರೆ, ಒಂದು ದಿನ ಇವರನ್ನೂ ಇಲ್ಲವಾಗಿಸುವ ಶಕ್ತಿ ನನಗಿದೆ.  ಸಹಬಾಳ್ವೆಯ ಮೂಲ ಮಂತ್ರವನ್ನು ಅರಿತು, ಈ ಹುಲು ಮಾನವರು ಇನ್ನಾದರೂ ಹೊಂದಿಕೊಂಡಾರು.  ಇಲ್ಲವೆಂದರೆ, ಇವರೇ ಮಾಡಿದ ಅಡುಗೆಯನ್ನು ಇವರೇ ಒಂದು ದಿನ ಉಣ್ಣುತ್ತಾರೆ, ಇವರ ಕರ್ಮಗಳಿಗೆ ಸರಿಯಾದ ಬೆಲೆಯನ್ನೇ ತೆತ್ತುತ್ತಾರೆ.

Source: https://www.theworldcounts.com/





Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Sunday, November 23, 2008

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ


ವರ್ಷದ ಆಗಷ್ಟು ಎರಡರ ಮಧ್ಯಾಹ್ನ 1:11:25 (August 02, 08) ಇದ್ದ ನ್ಯಾಷನಲ್ ಸಾಲದ ಗಡಿಯಾರದ ಪ್ರಕಾರ US ನ ಪ್ರತಿಯೊಂದು ಫ್ಯಾಮಿಲಿಯ ದೇಶದ ಸಾಲದ ಪಾಲು ಸುಮಾರು 81 ಸಾವಿರ ಡಾಲರುಗಳು. ಟೈಮ್ ಸ್ಕ್ವಯರ್ ಹತ್ತಿರದಲ್ಲಿದ್ದ ಈ ಗಡಿಯಾರದ ಚಿತ್ರವನ್ನು ನಾನು ಬಹಳ ವರ್ಷಗಳಿಂದ ತೆಗೆಯಬೇಕು ಎಂದುಕೊಂಡರೂ ಆಗದಿದ್ದುದು ಕೊನೆಗೆ ೨೦೦೮ ರಲ್ಲಿ ಕೈಗೂಡಿತು, ಆದರೆ ಏನಾಶ್ಚರ್ಯ ಈ ಗಡಿಯಾರದ ಅವಧಿಯೂ ಮುಗಿಯುತ್ತ ಬಂದಹಾಗಿದೆಯಲ್ಲ ಎಂದುಕೊಂಡವನಿಗೆ ನನ್ನ ಊಹೆಗೆ ತಕ್ಕಂತೆ ಈ ಗಡಿಯಾರದ ಡಿಜಿಟ್ಟುಗಳೆಲ್ಲ "ಖಾಲಿ" ಆಗಿ ಮತ್ತೆ ಈ ಗಡಿಯಾರದ ಡಿಜಿಟ್ಟುಗಳನ್ನು ಹೆಚ್ಚಿಸಬೇಕಾಗಿ ಬಂದಿತೆಯಂತೆ. ಅಂದರೆ ಈ ದೇಶದ ಸಾಲ ಹತ್ತು ಟ್ರಿಲಿಯನ್ ಡಾಲರ್‌ಗಳಿಗೂ ಹೆಚ್ಚು!

ಈ ಗಡಿಯಾರದ ಮೂಲ Durst Organization ಹೇಳಿಕೆ ಪ್ರಕಾರ ಮುಂದಿನ ವರ್ಷ ಇದರಲ್ಲಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾರಂತೆ, ಹೀಗೆ ಹೆಚ್ಚಿಸುವ ಸಂಖ್ಯೆಗಳ ಬಳಕೆ ಇನ್ನೆಷ್ಟು ಬರುತ್ತದೋ ಕಾದು ನೋಡಬೇಕು.

ಅಂದಹಾಗೆ ಈ ಗಡಿಯಾರದ ಹಿಂದಿನ ತತ್ವವನ್ನು ಪಂಡಿತರಿಗೆ ಬಿಡೋಣ, ಅಂಥವರು ಈ ಬರಹದ ಓದುಗರ ಸಮುದಾಯದಲ್ಲಿದ್ದಲ್ಲಿ ನಮಗೂ ಒಂದಿಷ್ಟು ವಿವರವನ್ನು ತಿಳಿಸಬಾರದೇಕೆ?

Sunday, September 07, 2008

ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು

ಆಫೀಸಿನಲ್ಲಿ ತಲೆ ಎತ್ತಿ ನೋಡಿದೆ: ಸುಮಾರು 25X50 ಚದುರ ಅಡಿ ಆವರಣದಲ್ಲಿ ನೂರಕ್ಕಿಂತಲೂ ಹೆಚ್ಚು ಟ್ಯೂಬ್‌ಲೈಟುಗಳು ಕಣ್ಣು ಕುಕ್ಕುತ್ತಿವೆ. ನಮ್ಮ ವಾಕ್‌ವೇ (ಕಾರಿಡಾರ್) ಗಳಲ್ಲಂತೂ ಎರಡೆರಡು ಅಡಿಗಳಿಗೊಂದು ಮರ್ಕ್ಯುರಿ ಲೈಟ್ ಸೀಲಿಂಗ್‌ನ ಹೊಟ್ಟೆಯಲ್ಲಿನ ಹೊಕ್ಕಳಿನ ಹಾಗೆ ಕೋರೈಸುತ್ತದೆ. ಎಲಿವೇಟರುಗಳಲ್ಲಿ ಐದಡಿ ಚದರವಿರುವ ಸ್ಥಳದಲ್ಲಿ ಒಂಭತ್ತು ಲೈಟುಗಳು. ಆಫೀಸಿನ ವಾತಾವರಣದಲ್ಲಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸದೇ ಹೋದರೆ ಹಗಲೋ ರಾತ್ರಿಯೋ ಗೊತ್ತಾಗುವ ಹಾಗೇ ಇಲ್ಲ.

ಸುಮಾರು ಮುನ್ನೂರು ಮಿಲಿಯನ್ ಇರುವ ಅಮೇರಿಕನ್ ಜನಸಂಖ್ಯೆ ಬಳಸುವ ಇಂಧನ, ಶಕ್ತಿ ಸೌಲಭ್ಯಗಳು ಸುಮಾರು ಪ್ರಪಂಚದ ಕಾಲು ಭಾಗದಷ್ಟಿರಬಹುದು ಎಂದು ಎಲ್ಲೋ ಓದಿದ ನೆನಪು. ಆಫೀಸಿನ ಅಥವಾ ಮನೆಯ ವಾತಾವರಣದಲ್ಲಿ ಪವರ್ ಕಟ್ ಆಗುತ್ತದೆ ಎಂದು ಯಾವುದೇ ಮುನ್ನೆಚ್ಚರಿಕೆಯನ್ನು ನಾವು ಭಾರತದಲ್ಲಿದ್ದ ಹಾಗೆ ತೆಗೆದುಕೊಳ್ಳುತ್ತಿದ್ದಂತೆ ಇಲ್ಲಿ ತೆಗೆದುಕೊಳ್ಳುವುದಿಲ್ಲವಾದರೂ ಅಪರೂಪಕ್ಕೊಮ್ಮೆ ಚಂಡಮಾರುತವೋ, ಸುಂಟರಗಾಳಿಯೋ ಬೀಸಿ ಅಥವಾ ಜೋರಾಗಿ ಮಳೆ ಬಂದು ಕರೆಂಟು ಹೋಗೋದು ಇದೆ. ಅಕಸ್ಕಾತ್ ಹಾಗೇನೇ ಆದರೂ ಜನರೇಟರುಗಳು, ಯುಪಿಎಸ್‌ಗಳು ಮೊದಲಾದವುಗಳು ಅಪರೂಪಕ್ಕೊಮ್ಮೆ ದುಡಿಯಲು ಸಿಗುವ ತಮ್ಮ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತವೆ.

ಈ ಮೇಲಿನ ಮಾತುಗಳನ್ನು NSG ಕಳೆದ 34 ವರ್ಷಗಳಿಂದ ಭಾರತದ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ಹೇಳಬೇಕಾಗಿ ಬಂತು. ಭಾರತದಂತಹ ಅಭಿವೃದ್ಧಿಪರ ದೇಶಗಳಿಗೆ "ಪವರ್" ಅಗತ್ಯ ಬಹಳ ಹೆಚ್ಚಿದೆ. ದಿನೇ ದಿನೇ ಹೆಚ್ಚುವ ಜನಸಂಖ್ಯೆ, ತಂತ್ರಜ್ಞಾನ ಮತ್ತೊಂದೇನೇ ಇದ್ದರೂ ಕತ್ತಲ ದಿನ ಮತ್ತು ರಾತ್ರಿಗಳು ಸಮಾಜದ ಉತ್ಪಾದನೆಯನ್ನೇ ಕುಂಠಿತಗೊಳಿಸಿವೆ. ಕೇವಲ ಇಲೆಕ್ಟ್ರಿಸಿಟಿ ಒಂದೇ ಅಲ್ಲ ಅದನ್ನು ಆಧರಿಸಿದ ಅನೇಕ ಬೆಳವಣಿಗೆಗಳಲ್ಲಿ ಭಾರತ ಹಿಂದಿದೆ. ಯಾವುದೇ ಸಾಮಾನ್ಯ ಮನೆವಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳಿಗೆ ಎಲೆಕ್ಟ್ರಿಸಿಟಿ ಕಡಿತ ಹಿಡಿಶಾಪವೆಂದೇ ಹೇಳಬೇಕು.

***

ನಮಗೆ ಎಲೆಕ್ಟ್ರಿಸಿಟಿ ಸಿಗಬೇಕಾದರೆ ಒಂದಲ್ಲ ಒಂದು ರೀತಿಯಿಂದ ಶಕ್ತಿಯ ಪರಿವರ್ತನೆ ನಡೆಯಲೇ ಬೇಕು. ಗಾಳಿ, ಸೋಲಾರ್, ನೀರು, ಉಷ್ಣತೆ (ಕಲ್ಲಿದ್ದಲು), ನ್ಯೂಕ್ಲಿಯರ್ ಮೊದಲಾದವುಗಳಿಂದ ಎಲೆಕ್ಟ್ರಿಕ್ ಎನರ್ಜಿ ಸಿಗಬಹುದಾದರೂ ಹೆಚ್ಚಿನ ದೇಶಗಳು ನ್ಯೂಕ್ಲಿಯರ್ ಮೂಲವೊಂದನ್ನು ಹೊರತುಪಡಿಸಿ ಮತ್ತಿನ್ನೆಲ್ಲವನ್ನೂ ಮೈಗೂಡಿಸಿಕೊಂಡಿವೆ. ಪರಿಸರವಾದಿಗಳು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದನ್ನು ತಡೆಯಬಹುದು, ಇಂದಲ್ಲ ನಾಳೆ ಖಾಲಿಯಾಗುವ ಕಲ್ಲಿದ್ದಲು ಎಲ್ಲರನ್ನೂ ಹೆದರಿಸಬಹುದು, ಯಥೇಚ್ಚವಾಗಿ ಸಿಗಬಹುದಾದ ಗಾಳಿ-ಸೂರ್ಯನ ಬೆಳಕಿನಿಂದ ವಿದ್ಯುತ್‌ಚ್ಛಕ್ತಿಯನ್ನು ಪಡೆಯುವುದು ನಿಧಾನವಾಗಿ ಬೆಳೆಯುತ್ತಿರಬಹುದು. ಅದೇ ನ್ಯೂಕ್ಲಿಯರ್ ಮೂಲಗಳಿಗೆ ಬಂದಾಗ ಎಲ್ಲವೂ ಸರಿ ಹೋದರೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿಯಂತ್ರಿಸಿದರೆ ಅಗಾಧವಾದ ಶಕ್ತಿಯ ಭಂಡಾರವನ್ನೇ ಪಡೆದಂತಾಗುವುದು ನಿಜ. ಆದರೆ ಒಂದೇ ಒಂದು ಸಣ್ಣ ತಪ್ಪಾದರೂ ಆ ದುರಂತ ಮಾನವಕುಲ ಊಹಿಸುವುದಕ್ಕಿಂತಲೂ ದೊಡ್ಡದಾದುದರಿಂದಲೇ ನ್ಯೂಕ್ಲಿಯರ್ ಶಕ್ತಿಯನ್ನು ಅದರ ಬಳಕೆ/ದುರ್ಬಳಕೆಯನ್ನು ತಡೆಯಲು ವಿಶ್ವದಾದ್ಯಂತ ಹಲವು ರಾಷ್ಟ್ರಗಳ ಸಂಘಟನೆಗಳು ನ್ಯೂಕ್ಲಿಯರ್ ಬೆಳವಣಿಗೆಯನ್ನು ಹದ್ದು ಕಾದಂತೆ ಕಾಯುತ್ತಿರುವುದು.

ಭಾರತ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಹಿ ಹಾಕದ, ಹಿಂದೆ ಅಣ್ವಸ್ತ್ರ ಪರೀಕ್ಷೆ ನಡೆಸಿ ತನ್ನಲ್ಲಿ ಅಣ್ವಸ್ತ್ರ ಇದೆ ಎಂದು ಸಾಭೀತುಗೊಳಿಸಿಕೊಂಡ ದೇಶ. ನಾನ್ ಪ್ರೊಲಿಫರೇಷನ್ ಟ್ರೀಟಿಗೆ ಸಹಿ ಹಾಕದೆಯೂ ನ್ಯೂಕ್ಲಿಯರ್ ಮೂಲವನ್ನು ನಾಗರಿಕರ ಒಳಿತಿಗೆ ಬಳಸುವ ಬಗ್ಗೆ ವಿಶ್ವವನ್ನು ಮನವೊಲಿಸುವುದು ಹೇಗೆ ಎಂಬುದು ಪಂಡಿತರ ತಲೆನೋವಾಗಿತ್ತು, ಈಗ ನಿನ್ನೆಯ (ಸೆಪ್ಟೆಂಬರ್ ಆರು) ವಿಯೆನ್ನಾ ಸಭೆಯಲ್ಲಿ ದೊರೆತ ಅನುಮೋದನೆಯಿಂದ ಭಾರತಕ್ಕೆ ಒಂದು ಮುನ್ನಡೆ ದೊರೆತಿದೆ ಎಂದೇ ಹೇಳಬೇಕು. ಭಾರತದ ಮನೆ ಮತ್ತು ಆಫೀಸುಗಳಲ್ಲಿ ಹಗಲು-ರಾತ್ರಿಗಳಿಗೆ ವ್ಯತ್ಯಾಸವಿರದ ಹಾಗೆ ಎಲೆಕ್ಟ್ರಿಸಿಟಿ ಬಳಕೆ ಆಗುವುದಕ್ಕೆ ಕೊನೇಪಕ್ಷ ಒಂದು ನೂರು ವರ್ಷವಾದರೂ ಬೇಕಿದೆ, ಆದರೆ ಆ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆ ಇಟ್ಟಂತಾಗಿದೆ.

***

ಈ ಐತಿಹಾಸಿಕ ದಿನವನ್ನು ಎರಡೂ ನಿಟ್ಟಿನಲ್ಲಿ ನೋಡಬಹುದು: ಅಣುಶಕ್ತಿಯನ್ನು ಜನರ ಒಳಿತಿಗೆ ಬಳಸುವ ದೇಶದ ಗುಂಪಿನಲ್ಲಿ ಭಾರತಕ್ಕೆ ಸಿಕ್ಕ ಸ್ಥಾನ ಒಂದು ರೀತಿಯದಾದರೆ, ಅಂತಹ ತಂತ್ರಜ್ಞಾನವನ್ನು ಮಾರಲು ತುದಿಗಾಲಿನಲ್ಲಿ (ಅಥವಾ ಮುಂಚೂಣಿಯಲ್ಲಿ) ನಿಂತಿರುವ ಅಮೇರಿಕಾ, ರಷ್ಯಾ, ಪ್ರಾನ್ಸ್ ಮೊದಲಾದ ದೇಶಗಳಿಗೆ ದೊಡ್ಡ ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಕಾದು ನಿಂತಿದೆ. ವೇಗದಲ್ಲಿ ಬೆಳೆಯುವ ದೇಶದ ಅಗತ್ಯಗಳಿಗೆ ಶಕ್ತಿ ಪೂರೈಕೆಯನ್ನು ಮಾಡಲು ಅಣುಶಕ್ತಿಯನ್ನು ಹೊರತುಪಡಿಸಿ ಬೇರೆ ವಿಧಾನಗಳಿಂದ ಪ್ರಯತ್ನಿಸುತ್ತಾ ಸಾಗುವುದು ಒಂದು ವಿಧಾನವಾಗಿತ್ತು. ಈಗಾಗಲೇ ಇರುವ ಶಕ್ತಿ ಮೂಲಗಳ ಜೊತೆಗೆ ಅಣುಶಕ್ತಿಯನ್ನು ಬಳಸುವುದು ಮತ್ತೊಂದು ವಿಧಾನ. ಯಾವುದೇ ದೇಶ ಅದೆನೇ ತಂತ್ರಜ್ಞಾನವನ್ನು ಮಾರಿದರೂ ಚೆರ್ನೋಬೆಲ್ ದುರಂತದಂತಹ ದುರಂತವನ್ನು ದೂರವಿಡುವುದು ಭಾರತೀಯರ ಕೈಯಲ್ಲಿದೆ. ಆ ಜವಾಬ್ದಾರಿಯನ್ನು ಮುಂಬರುವ ನೂರಾರು ವರ್ಷಗಳವರೆಗೆ ಯಾವುದೇ ಕೊರತೆ ಇಲ್ಲದೇ ಒಂದೇ ಒಂದು ತಪ್ಪು ಇಲ್ಲದೇ ನಿಭಾಯಿಸುವುದು ಬಹಳ ದೊಡ್ಡ ಜವಾಬ್ದಾರಿಯೇ ಸರಿ. ಆದರೆ, ಈ ಅಣುಶಕ್ತಿಯನ್ನು ದೂರವಿಟ್ಟು ಕನ್ವೆನ್ಷನಲ್ ಶಕ್ತಿ ಮೂಲಗಳನ್ನು ಪರಿಸರವಾದಿಗಳ ಅನುಮತಿ ಪಡೆದು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಇನ್ನೂ ದೂರದ ಪ್ರಶ್ನೆಯಾಗಿಯೇ ಉಳಿಯುವುದು. ಈ ಅಣುಶಕ್ತಿಯ ಬೆಳವಣಿಗೆಗೆ ಇನ್ನೇನೇನು ಅಡೆತಡೆಗಳು ಬರುತ್ತವೆಯೋ, ಒಬ್ಬ ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಹಿಡಿದು, ರಾಜಕಾರಣಿಗಳ, ಪಕ್ಷಗಳ, ಮುತ್ಸದ್ದಿಗಳ, ವಿಚಾರವಾದಿಗಳ, ಪರಿಸರ ಸಂರಕ್ಷರು ಮೊದಲಾದವರುಗಳಿಗೆ ಸಾಂತ್ವನ ಹೇಳಿಕೊಂಡು ಭಾರತದಲ್ಲಿ ಈ ಹೊಸ ಬೆಳವಣಿಗೆ ಯಾವ ದಿಕ್ಕನ್ನು ಹಿಡಿಯುತ್ತದೆಯೋ ಕಾದು ನೋಡಬೇಕು.