Thursday, June 29, 2006

ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ದ್ವಂದ್ವ

ಇರಾಕ್, ಅಫಘಾನಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಬುಷ್ ಅಡ್ಮಿನಿಷ್ಟ್ರೇಷನ್ ಹಿಂಸೆಯ ಬಳಕೆ ಮಾಡಿದ್ದನ್ನು ಹಲವಾರು ಮಾಧ್ಯಮಗಳಲ್ಲಿ ಚರ್ಚಿಸಲಾಗುತ್ತಿದೆ. ಹಿಂಸೆಯನ್ನು ಚೆನ್ನಾಗಿ ಬಲ್ಲವರ ಪ್ರಕಾರ ಹೀಗೆ ಹಿಡಿದ ಯುದ್ಧ ಖೈದಿಗಳನ್ನೋ, ಭಯೋತ್ಪಾದಕರನ್ನೋ ಅತಿಯಾಗಿ ಹಿಂಸಿಸಿ ಪಡೆದ ಮಾಹಿತಿಗಳು ನಿಖರವಾಗೇನೂ ಇರೋದಿಲ್ಲ, ಅತಿಯಾದ ಹಿಂಸೆಯನ್ನು ತಪ್ಪಿಸಿಕೊಳ್ಳಲು ಕೆಲವೊಮ್ಮೆ ಶಿಕ್ಷೆ ಅನುಭವಿಸುತ್ತಿರುವವರು ಸುಳ್ಳು ಮಾಹಿತಿಗಳನ್ನು ಒದಗಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದನ್ನೂ ಹಲವಾರು ಉದಾಹರಣೆಗಳ ಮೂಲಕ ತೋರಿಸಿದ್ದನ್ನು ಅಲ್ಲಲ್ಲಿ ಇತ್ತೀಚೆಗೆ ಓದಿದೆ, ರೇಡಿಯೋದಲ್ಲಿ ಕೇಳಿದೆ. 'ಶತ್ರು' ನಾಶಕ್ಕೆ ತಮ್ಮ ಜೀವದ ಹಂಗನ್ನು ತೊರೆದು ಸೆಣೆಸುವ ಭಯೋತ್ಪಾದಕರನ್ನು ಜೀವಂತ ಹಿಡಿದರೂ ಅವರಿಂದ ನಿಖರವಾದ ಮಾಹಿತಿಯನ್ನು ಹೊರಪಡಿಸುವುದಾದರೂ ಹೇಗೆ? ಹಿಂಸೆಯನ್ನು ನೀಡದೇ ಹೋದರೆ ಇನ್ನು ಯಾವ ಪೆಟ್ಟಿಗೆ ಬಗ್ಗುತ್ತಾರೆ ಎಂದೆಲ್ಲಾ ಯೋಚಿಸುತ್ತಾ ಹೋದಾಗ ಅವರ ಮನ ಒಲಿಸದೇ, ಅವರ ಜೊತೆಯಲ್ಲಿ ಹೊಂದಿಕೊಳ್ಳದೇ ಹೋದರೆ ಯಾವ ಪ್ರಯೋಜನವೂ ಇಲ್ಲ ಎಂಬ ಮಾತುಗಳು ಗಟ್ಟಿಯಾಗಿ ಕೇಳಿಬಂದವು.

ಕೆಲವರಿಗೆ ಸಾವು ಪವಿತ್ರವಾದದ್ದು, ಅತಿ ಹೆಚ್ಚಿನದು, ಅದು ಅವರ ಮೋಕ್ಷ ಸಾಧನೆಯೂ ಹೌದು, ಅವರಿಗೆ ಬೇಕಾಗಿಯೋ ಬೇಡವಾಗಿಯೋ ಭಯೋತ್ಪಾದಕರಾಗಲೀ ಅಥವಾ ಒಂದು ದೇಶದ ಸೈನಿಕರಾಗಲಿ ಯುದ್ಧದಲ್ಲಿ ತೊಡಗಿದಾಗ ತಮ್ಮ ನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಿಂದ ಸಾವನ್ನು ಎದುರಿಸಿಯೇ ಇರುತ್ತಾರೆ. ಒಬ್ಬ ಸೈನಿಕನಿಗೆ ಸಿಗಬಹುದಾದ ಗೌರವ ಅದೇ ಗಡಿಯೊಳಗೆ ನುಸುಳಿ ಬರುವ ಭಯೋತ್ಪಾದಕನಿಗೆ ದೊರೆಯುವುದಿಲ್ಲ. ಯಾರೋ ತಲೆಸವರಿದ ಕಾರಣಕ್ಕೆ ಒಬ್ಬ ಭಯೋತ್ಪಾದಕ ಹುಟ್ಟಿಕೊಂಡಿದ್ದರೆ, ಒಬ್ಬ ಸೈನಿಕನಾಗಿ ಸೇರಿದವನಿಗೆ ಹೆಚ್ಚಿನ ಧೇಯೋದ್ಯೇಶಗಳಿರಬಹುದು. ಈ ರೀತಿಯ ಚೌಕಟ್ಟಿನಲ್ಲಿ ಒಂದು ವ್ಯವಸ್ಥಿತ ನಿಲುವಿನ ಸೈನಿಕರಿಗೂ, ಬೇಕಾಬಿಟ್ಟಿಯಾಗಿರೋ ಭಯೋತ್ಪಾದಕರಿಗೂ ಚಕಮುಖಿ ನಡೆದಾಗ ಅಲ್ಲಿ ಆಗಬಹುದಾದ ಸಾವುನೋವಿನ ಪರಿಣಾಮ ಊಹಿಸಿಕೊಳ್ಳಲೂ ಭಯಾನಕವಾಗಿರುತ್ತದೆ. ಒಬ್ಬ ಸೈನಿಕನ ನಿಲುವಿನಲ್ಲಿ ಯೋಚಿಸಿದಾಗ ತನ್ನ ಕಡೆಯವರಲ್ಲಿ, ಅಥವಾ ತನ್ನ ಗುಂಪಿನವರಲ್ಲಿ ಯಾರಾದಾರೂ ತೀರಿಕೊಂಡರೆ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಒಬ್ಬ ಸೈನಿಕ ತನ್ನ ಮಾಮಾಲೀ ಕಕ್ಷೆಗಿಂತ ಹೊರಗೆ ನಿಂತು ವೈರಿಗಳ ಮೇಲೆ ಆಕ್ರಮಣ ಮಾಡಿದ್ದು ಬಹಿರಂಗವಾಗಿದೆ. ಅದೇ ರೀತಿ ಭಯೋತ್ಪಾದಕರಿಗೂ ಚಕಮುಖಿಯಲ್ಲಿ ತಮ್ಮವರನ್ನು ಕಳೆದುಕೊಂಡು ಅದಕ್ಕೆ ತಕ್ಕನಾದ ಶಾಸ್ತಿ ಮಾಡೇ ಮಾಡುತ್ತೇವೆಂದು ಪಣತೊಟ್ಟ ಪ್ರಕರಣಗಳೂ, ಅವುಗಳಿಂದಾದ ಪರಿಣಾಮಗಳನ್ನೂ ಬೇಕಾದಷ್ಟು ಕಡೆ ತೋರಿಸಲಾಗಿದೆ. ಇದನ್ನು ಬರೆಯುತ್ತಿರುವ ಉದ್ದೇಶ ಇಷ್ಟೇ - ಒಂದು ಕ್ಲಾಸ್ ರೂಮ್ ಸನ್ನಿವೇಶದಲ್ಲಿ ಬಿಡಿಸಿ ಹೇಳಬಹುದಾದ ಹಿಂಸೆಯ ವ್ಯಾಪ್ತಿ ಸೆರೆಸಿಕ್ಕ ಗಾಯಾಳುಗಳನ್ನು ನೋಡಿಕೊಳ್ಳುವುದಕ್ಕೆ ಸೀಮಿತವೆಂದೆನಿಸಿದರೆ ನಿಜವಾದ ಯುದ್ಧ ಭೂಮಿಯಲ್ಲಿ ನಡೆಯುವ ಆಚರಣೆಗಳೇ ಬೇರೆ, ಅಲ್ಲಿ ಎಲ್ಲವನ್ನೂ ಸಮಯವೇ ನಿರ್ಧರಿಸಬಲ್ಲದು.

'ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು' ಎಂದು ದಪ್ಪ ಚರ್ಮದವರಿಗೆ ಅವರ ಮಟ್ಟದ ಟ್ರೀಟ್‌ಮೆಂಟ್ ಕೊಡಬೇಕೆನ್ನುವುದು ಹಲವರ ಅಭಿಮತ, ಆದರೆ ಅದಕ್ಕೆ ವ್ಯತಿರಿಕ್ತವಾಗಿ 'ಹಿಂಸೆಯಿಂದ ಏನನ್ನೂ ಗೆಲ್ಲೋದಕ್ಕೆ ಸಾಧ್ಯವಿಲ್ಲ' ಎನ್ನುವ ಅನುಭವಿಗಳ ಮಾತೂ ಕೇಳಿಬರುತ್ತದೆ. ಅಮೇರಿಕದ ಸೈನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೆರೆಸಿಕ್ಕ ಭಯೋತ್ಪಾದಕರಲ್ಲಿ ಕೆಲವರಂತೂ ನಿಜವಾದ ಹಾರ್ಡ್‌ಕೋರ್ ಉಗ್ರಗಾಮಿಗಳು, ಅಂತಹವರೊಡನೆ ಒಪ್ಪಂದ ಮಾಡಿಕೊಳ್ಳಲಾಗುವುದೇ? ಒಂದು ವೇಳೆ ಒಪ್ಪಂದ ಮಾಡಿಕೊಂಡರೂ ಅವರನ್ನು ನಂಬುವುದಾದರೂ ಹೇಗೆ? ಸೆರೆಸಿಕ್ಕ ಉಗ್ರಗಾಮಿಗಳಿಂದ ಆದಷ್ಟು ಬೇಗ 'ಒಳ್ಳೆಯ' ಮಾಹಿತಿಯನ್ನು ಪಡೆದುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸುವುದು, ಕೆಟ್ಟ ಭೀಜದ ಮೂಲವನ್ನು ಕಂಡುಹಿಡಿದು ಹೊಸಕಿ ಹಾಕುವುದು ಮುಂತಾದ ಮಹಾನ್ ಯೋಚನೆಗಳಿರುತ್ತವೆ, ಇವುಗಳಿಗೆಲ್ಲ 'ಹಿಂಸೆ'ಯಿಂದ ಪಡೆಯಬಹುದಾದ ಉತ್ತರಗಳಲ್ಲದಿದ್ದರೆ ಇನ್ನೇನು ತಾನೇ ಉತ್ತರವಾಗಬಲ್ಲದು?

ನಾನು ಹಿಂಸೆಯನ್ನು ಖಂಡಿತವಾಗಿ ಒಪ್ಪುವವನಲ್ಲವಾದರೂ 'ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು' ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟವನು. ಒಂದು ಯುದ್ಧದ ಸನ್ನಿವೇಶದಲ್ಲಿ ಎಲ್ಲವೂ ಸರಿಸಮವಾಗುವಂತೆ ಕೆಲವೂಮೆ ಅತಿ ಅನ್ನಿಸುವಷ್ಟು, ಹಲವಾರು ಬಾರಿ ಹೇಸಿಗೆಯಾಗುವಷ್ಟು ಹಿಂಸೆ ನೀಡಿ - ಅಭುಗ್ರೈಬ್ ಜೈಲು, ಮತ್ತಿತರ ಹಿಂಸೆಗೆ ಸಂಬಂಧಿಸಿದ ಕಥೆಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿದ ಬುಷ್ ಅಡ್ಮಿನಿಷ್ಟ್ರೇಷನ್‌ನವರು ಇನ್ನೇನು ತಾನೆ ಮಾಡಲಾಗುತ್ತಿತ್ತು? ಈ ಹಿಂಸೆಯ ತಳ ಹುಡುಕುತ್ತಾ ಹೋದಂತೆಲ್ಲಾ ಬುಡವಿರದ ಬಾವಿಯಾಗೋದಂತೂ ನಿಜ.

No comments: