Showing posts with label ಕಾಶ್ಮೀರ. Show all posts
Showing posts with label ಕಾಶ್ಮೀರ. Show all posts

Saturday, April 26, 2025

ಶಾಂತಿ ಕದಡಿದ ಶಾರದೆಯ ನಾಡು

ಈ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ  ಹತ್ತಿರದಲ್ಲಿನ ಬೈಸರನ್ ಎಂಬ ಪ್ರವಾಸಿ ಸ್ಥಳದಲ್ಲಿ ಮುಸ್ಲಿಮ್ ಭಯೋತ್ಪಾದಕರ ಸಂಘಟನೆ ಒಂದು ಆಯೋಜಿತವಾದ ಮತ್ತು ಹೇಯವಾದ ಧಾಳಿಯನ್ನು ನಡೆಸಿ 26 ಮಂದಿ ಹಿಂದೂ ಪ್ರವಾಸಿಗರನ್ನು ಬಲಿ ತೆಗೆದುಕೊಂಡಿರುವ ವಿಷಯ ವಿಶ್ವದಾದ್ಯಂತ ತಲ್ಲಣವನ್ನು ಮೂಡಿಸಿದೆ.

ಎಲ್ಲರಿಗೂ ಗೊತ್ತಾಗಲಿ ಎಂದೇ ನಡೆಸಿದ ಈ ಕ್ರೂರವಾದ ಧಾಳಿಯನ್ನು TRF (The Resistance Front) ಎಂಬ ಗುಂಪು ದುಷ್ಕೃತ್ಯವನ್ನು ಎಸೆಗಿದ್ದಷ್ಟೇ ಅಲ್ಲದೆ ಸಾರಾಸಗಟಾಗಿ ಇದರ ಕೈವಾಡ ತನ್ನದೇ ಎಂದು ಬಹಿರಂಗ ಹೇಳಿಕೆಯನ್ನು ನೀಡಿರುವುದು ಭಾರತ ದೇಶವನ್ನು ಮುಜುಗರಕ್ಕೀಡು ಮಾಡಿದೆ. ಕಳೆದ ಹತ್ತು ವರ್ಷಗಳಿಂದ ನಿಧಾನವಾಗಿ ಸಹಜತೆ (normalcy) ಗೆ ಮರಳುತ್ತಿದ್ದ ಶಾರದೆಯ ನಾಡು, ಇಂದು ಮತ್ತೆ ಅದೇ ಹಿಂದಿನ ಗೊಂದಲವನ್ನು ಎಲ್ಲರಲ್ಲೂ ಮೂಡಿಸಿದೆ. ಈ ನಿಟ್ಟಿನಲ್ಲಿ, ಆ ಆಯೋಜಿತ ಭಯೋತ್ಪಾದಕತೆ ಕೃತ್ಯ ಜಯಶೀಲವಾಗಿದೆ. ಇನ್ನು ಪ್ರವಾಸಿಗಳಿರಲಿ, ಸ್ಥಳೀಯರೂ ಈ ಸ್ಥಳಗಳಲ್ಲಿ ಮುಕ್ತವಾಗಿ ಓಡಾಡಲು ಅನೇಕ ವರ್ಷಗಳೇ ಹಿಡಿಯುತ್ತದೆ.

***

ಆರ್ಟಿಕಲ್ 370 ತೆರವಿನ ನಂತರ, ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿ, ಮತ್ತೆ ಅಲ್ಲಿ ಚುನಾವಣೆಗಳು ನಡೆದು, ವಿಶ್ವವೇ ಹೆಮ್ಮೆ ಪಡುವಂತೆ ಅಲ್ಲಿ ಅನೇಕ ದಶಕಗಳಿಂದಲೂ ಮರೆಯಾಗಿದ್ದ ಶಾಂತಿ-ಸಂವಹನ ಪ್ರಕ್ರಿಯೆ ಸಹಜತೆಗೆ ಮರಳತೊಡಗಿತ್ತು. ಒಂದು ಸಮೀಕ್ಷೆಯ ಪ್ರಕಾರ, ವರ್ಷಕ್ಕೆ ಒಂದು ಮಿಲಿಯನ್ (ಹತ್ತು ಲಕ್ಷ) ಕ್ಕಿಂತಲೂ ಅಧಿಕ ಪ್ರವಾಸಿಗರು ಈ ಸುಂದರ ರಾಜ್ಯಕ್ಕೆ ಭೇಟಿ ನೀಡತೊಡಗಿದ್ದರು. ಅದು ರಾಜ್ಯದ ಪ್ರವಾಸೋದ್ಯಮವಾಗಿ ಬೆಳೆದು ಅಗತ್ಯವಾದ ಆರ್ಥಿಕ ಚೇತರಿಕೆಯನ್ನು ಪೂರೈಸಿತ್ತು. ಆದರೆ, ಈ ಧಾಳಿಯ ಮುಖೇನ ಹಿಂಸೆ, ಅಸ್ಥಿರತೆ, ಅಸಹಾಯಕತೆ ಮೊದಲಾದವುಗಳು, ಕಾಶ್ಮೀರವನ್ನು ಸುಮಾರು ಎರಡು ದಶಕಗಳ ಕಾಲಮಾನದಷ್ಟು ಪ್ರಗತಿಯ ಪಥದಿಂದ ಹಿಂದೆ ದೂಡಿದಂತಾಗಿದೆ ಎನ್ನಬಹುದು.

ಇಲ್ಲಿ, ಮುಖ್ಯವಾಗಿ ಎರಡು ಸೋಲುಗಳಿವೆ: ಮೊದಲನೆಯದು, ಅಮಾಯಕ ಹಿಂದೂ ಪ್ರವಾಸಿಗಳ ಮಾರಣ ಹೋಮ. ಎರಡನೆಯದು, ಇಂಥ ಸುವ್ಯವಸ್ಥಿತ ಸಂಚನ್ನು ಹಾಡುಹಗಲೇ ರಾಜಾರೋಷವಾಗಿ ಎಕ್ಸಿಕ್ಯೂಟ್ ಮಾಡಿರುವ ಕ್ರಮ. ಈ ಎರಡೂ ಸೋಲುಗಳನ್ನು ದೇಶ - ಆಡಳಿತದ ನಿಟ್ಟಿನಿಂದ ಹಾಗೂ ಜನಸಾಮಾನ್ಯರ ಮಾನಸಿಕ ಸಂಚಲನದಲ್ಲಿ, ಬಹಳ ಸೀರಿಯಸ್ ಆಗಿ ಗಮನಿಸಿ, ಈ ಘಟನೆಯನ್ನು ಒಂದು ಪರ್ವಕಾಲವಾಗಿ ಪರಿಗಣಿಸಿ, ಅದಕ್ಕೆ ತಕ್ಕ ಉತ್ತರವನ್ನು ಕೊಡಬೇಕಾದ ಸಮಯ ನಿರ್ಮಾಣವಾಗಿದೆ.

ಈ ಘಟನೆಯಿಂದ ಒಂದಂತೂ ಸಾಬೀತಾಗಿದೆ: ದೇಶದಾದ್ಯಂತ, ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು, ಸಾಮಾಜಿಕ ವಲಯಗಳು ಇತ್ಯಾದಿ, ಒಂದಾಗುವಂತಾಗಿದೆ. ಇದೇ ಸಮಯವನ್ನು, ದೇಶದ ಅನುಕೂಲಕ್ಕೋಸ್ಕರ ಬಳಸಿ, ಕಟ್ಟುನಿಟ್ಟಿನ ಹಾಗೂ ಸುವ್ಯವಸ್ಥಿತ ಸಾಮಾಜಿಕ ಜಾಲವನ್ನು ಹೆಣೆದು, ಈ ಉಗ್ರರ ಗುಂಪುಗಳಿಗೆ ತಕ್ಕನಾದ ಪಾಠ ಕಲಿಸುವ ಸಮಯ ಬಂದಿದೆ.

2019ರ ಪುಲ್ವಾಮ  ದುರಂತದ ನಂತರ, ಶತ್ರುದೇಶವನ್ನು ಒಳಹೊಕ್ಕು ಅವರನ್ನು ಸೆದೆಬಡಿದು ಒಂದಕ್ಕೆ ಹತ್ತರ ತಿರುಗುಬಾಣವನ್ನು ಪ್ರಯೋಗಿಸುವ ಸಮಯ ಬಂದಿದೆ. ಈ ಆವೇಶ, ಆಕ್ರೋಶಗಳು ಜನಮಾನಸದಲ್ಲಿ ತಣ್ಣಗಾಗುವ ಮೊದಲು, ನಮ್ಮ ಒಗ್ಗಟ್ಟನ್ನು ಪ್ರಸ್ತುತಪಡಿಸುವ ಪರ್ವಕಾಲ ಇದು.

***

ಆದಿಗುರು ಶಂಕರಾಚಾರ್ಯರಿಗೆ ಎಂಟನೇ ಶತಮಾನದಲ್ಲಿ ತುರುಕರ ಪ್ರಾಬಲ್ಯದಿಂದ ಶಾರದೆಯ ಮೂಲಸ್ಥಾನಕ್ಕೆ ಈ ರೀತಿಯ ಕಂಟಕ ಒದಗಬಹುದು ಎಂಬ ಕಲ್ಪನೆಯೂ ಇದ್ದಿರಲಾರದು. ಅವರು ಅಲ್ಲಿನಿಂದ ತಂದು ಕಾಶ್ಮೀರ ಪುರವಾಸಿನಿಗೆ ಕರ್ನಾಟಕದ ಶೃಂಗೇರಿಯಲ್ಲಿ ಮನೆ ಕಲ್ಪಿಸಿದರು.  ಐತಿಹಾಸಿಕವಾಗಿ ಸಂಗೀತ, ಸಾಹಿತ್ಯ, ಆಯುರ್ವೇದ, ಸರ್ಜರಿ ಮೊದಲಾದವುಗಳಿಗೆ ಪುಣ್ಯಭೂಮಿಯಾಗಿದ್ದ ಕಾಶ್ಮೀರ ಇಂದು ಮತ್ತೆ ಮೂಲಭೂತ ನೆಲೆಗಳಲ್ಲಿ ತನ್ನನ್ನು ತಾನು ನೋಡಿಕೊಳ್ಳಲಾಗದ ದಯನೀಯ ಸ್ಥಿತಿಗೆ ಬಿದ್ದಿದೆ.

ಭಾರತದ ಸರ್ಕಾರದ knee-jerk reaction ಒಂದು ರೀತಿಯಲ್ಲಿ, ಭಯೋತ್ಪಾದಕರ ಆಸೆಯನ್ನು ಪೂರೈಸಿದಂತಾಗಿದೆ. ಅಮಾನತುಗೊಳಿಸಲಾದ ಸಿಂಧೂ ಜಲ ಒಪ್ಪಂದ, ಹಾಗೂ ಡಿಪ್ಲೋಮ್ಯಾಟುಗಳನ್ನು ಮನೆಗೆ ಕಳುಹಿಸಿ, ದೇಶದ ಮುಖ್ಯ ಬಾರ್ಡರ್-ಎಂಟ್ರಿ ಪಾಯಿಂಟ್ ಆದ ವಾಘಾ-ಅಟ್ಟರಿ ಗಡಿಯನ್ನು ಬಂದ್ ಮಾಡಿರುವ ಮೂಲಕ ನೆರೆಯ ದೇಶದಿಂದ ಸಂಪೂರ್ಣ ಪ್ರತ್ಯೇಕತೆಯನ್ನು ಸಾಧಿಸಿದಂತಾಗುತ್ತದೆ. ದೂರದೃಷ್ಟಿಯಿಂದ ಇದೊಂದು ಒಳ್ಳೆಯ ನಿಲುವಲ್ಲ. ಇದು ಅನೇಕ ಸಾಮಾಜಿಕ ಸಂಘರ್ಷಗಳನ್ನು, ಅಸಮತೋಲನವನ್ನೂ ಸೃಷ್ಟಿಸುತ್ತದೆ. ಆರ್ಥಿಕ ದೃಷ್ಟಿಯಿಂದ ಭಾರತಕ್ಕೆ ಅಷ್ಟೊಂದು ಹೊಡೆತ ಬೀಳದಾದರೂ, ಈ ಹಿಂಸೆಯ ಪರಿಣಾಮ ಅನೇಕ ವರ್ಷಗಳ ಕಾಲ ಶಾರದೆಯ ಮೂಲನಾಡನ್ನು ತಲ್ಲಣಿಸುವಂತೆ ಮಾಡುತ್ತದೆ. ಈ ಭಯೋತ್ಪಾದಕರುಗಳಿಗೆ ಬೇಕಾಗಿರುವುದೂ ಇದೇ ಅಲ್ಲವೇ? ಪ್ರವಾಸೋದ್ಯಮ ನೆನೆಗುದಿಗೆ ಬಿದ್ದು, ಕಾಶ್ಮೀರದಲ್ಲಿ ಯಾವುದೇ ಉದ್ಯಮ-ವ್ಯಾಪಾರ ಬೆಳೆಯದಂತಾಗಿ, ಅಲ್ಲಿನ ಜನರಿಗೆ ನೀರು-ನಿಡಿಯೂ ಸಿಗದಂತಾಗದೇ ರಾಜಕೀಯ ಅಸ್ಥಿರತೆ ಬೆಳೆದು, ಈಗಾಗಲೇ ನೊಂದ ಪ್ರದೇಶವನ್ನು, ಅದು ಮತ್ತಷ್ಟು ಕಂಗೆಡಿಸುತ್ತದೆ.

ಇದೆಲ್ಲದರ ಬದಲಾಗಿ, ಸೇನೆಯ ಯೋಧರಂತೆ ಸಮವಸ್ತ್ರವನ್ನು ಧರಿಸಿ, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಉಗ್ರರ ಹಿನ್ನೆಲೆ, ಅವರು ಈ ತಂತ್ರವನ್ನು ಹೇಗೆ ರೂಪಿಸಿದರು ಎಂಬುದನ್ನು ಸೂಕ್ಷ್ಮವಾಗಿ ಆಲೋಕಿಸಬೇಕಿತ್ತು. ಈ ಒಂದು ಸಂಚಿನ ಹಿಂದೆ, ಬರೀ ಕಾಶ್ಮೀರದ ಅಭದ್ರತೆಯೊಂದೇ ಇದೆ ಎಂದುಕೊಂಡು ದೇಶದ ಉಳಿದ ಪ್ರದೇಶದವರು ನಿಟ್ಟುಸಿರು ಬಿಟ್ಟು ಸುಮ್ಮನಾಗುವಂತಿಲ್ಲ. ಹೊರಗಿನಿಂದ ನೋಡಿದರೆ, ನಾಗಾಲ್ಯಾಂಡ್, ಮಣಿಪುರ, ಛತ್ತೀಸ್ಗಢಗಳಲ್ಲೂ ಒಂದು ರೀತಿಯ ವ್ಯವಸ್ಥಿತ ಅಭದ್ರತೆಯ ಸಂಚು ನಡೆಯುತ್ತಿದೆ. ಈ ಘಟನೆಯನ್ನಾದರಿಸಿ, ಅವೆಲ್ಲ ಸಂಚುಗಳಿಗೂ ಮೂಲ ಕಾರಣವನ್ನು ಕಂಡುಹಿಡಿದು, ಅದಕ್ಕೆ ಮದ್ದು ಅರೆಯಬೇಕು.

ಈ ಹಿಂಸೆಯನ್ನು ಎಮೋಷನಲ್ ಆಗಿ ನೋಡಿ, ಅಯ್ಯೋ ಎಂದು ಮರುಕಪಡಬೇಕಾದ ಸಮಯ ಇದಲ್ಲ. ಈ ಘಟನೆಯನ್ನು ಆಳವಾಗಿ ಅಭ್ಯಾಸ ಮಾಡಿ, ಹಿಂಸೆಯ ಮೂಲವನ್ನು ಅರಸಿ ಅದಕ್ಕೊಂದು ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ಸರ್ಕಾರ ಹಾಗೂ ಜನಸಾಮಾನ್ಯರು ಯೋಚಿಸಬೇಕಾದ ಅಗತ್ಯ ಈಗಿದೆ.

ಈ ಸಾವು-ನೋವುಗಳಿಗೆ ಸರಿಯಾದ ಪಾಠ ಕಲಿಸಿ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ದೇಶದಾದ್ಯಂತ ಈ ರೀತಿಯ ಘಟನೆಗಳು ಮರುಕಳಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ತಾವು ಅಲ್ಪಸಂಖ್ಯಾತರು ಎನ್ನುವ ಸೋಗಿನಲ್ಲಿ, ದೇಶದ ಅಭದ್ರತೆಯ ಮೂಲಕಾರಣವಾಗಿ ಯಾರೇ ಇದರ ಸೂತ್ರಧಾರರಿದ್ದರೂ, ಅವರಿಗೆಲ್ಲ ತಕ್ಕ ಉತ್ತರವನ್ನು ಕೊಡುವ ಸಮಯ ಬಂದಿದೆ. ಭಾರತ ದೇಶದ ಸತ್ವವನ್ನು ಪರೀಕ್ಷಿಸುವ ಈ ಸಮಯದಲ್ಲಿ, ಬಲ-ಕುಶಲ-ಸಾಹಸಗಳಿಂದ ಇಂದು ಪೂರ್ಣ ದೇಶವೇ ಈಸಬೇಕು, ಇದ್ದು ಜೈಸಬೇಕು! ಈ ಸಂದರ್ಭದಲ್ಲಿ ಭಾರತ ದೇಶ ಕೈಗೊಳ್ಳುವ ಎಲ್ಲ ನಿಲುವುಗಳನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಸಮರ್ಥಿಸುತ್ತಾರಾದರೂ, ಪ್ರತಿಕ್ರಿಯೆಯ ಹೆಸರಿನಲ್ಲಿ forever ಸಮಯ ಸಿಗೋದಿಲ್ಲ. ಕಬ್ಬಿಣ ಕಾದಿದೆ, ಅದನ್ನು ಜಾಗರೂಕತೆಯಿಂದ ಬಡಿದುಕೊಂಡು ಶಾಂತಿಗೆ ಅನುಕೂಲವಾಗುವ ಆಯುಧವನ್ನು ಮಾಡಿಕೊಂಡಿದ್ದೇ ಆದರೆ, ಶಾರದೆಯ ನೆಲದಲ್ಲಿ, ಮತ್ತೆ ಶಾಂತಿ ಮೂಡಬಹುದು, ಎನ್ನುವ ಆಶಾವಾದ ನಮ್ಮದೆಲ್ಲರದು!