ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ
"ಕಷ್ಟಗಳು ಒಂದರ ಹಿಂದೆ ಮತ್ತೊಂದರಂತೆ ಬರುವುದೇ ಜೀವನ, ಅವುಗಳನ್ನು ಎದುರಿಸುತ್ತಾ ಸಾಗುವಾಗ ಬರುವುದೇ ಮರಣ", ಎನ್ನುವ ವಾಕ್ಯವನ್ನು ತಮಾಷೆಗೆಂದು ಮೊನ್ನೆ ಹೇಳಿದಾಗಿನಿಂದ ಕಷ್ಟಗಳ ಬಗ್ಗೆ ಒಂದಿಷ್ಟು ಯೋಚಿಸಬೇಕೆನ್ನಿಸಿತು.
ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ, status quo ಎಂಬುದಕ್ಕೆ ಬೆಲೆ ಇಲ್ಲ, ಸದಾ ಏನನ್ನಾದರೂ ಪರಿಷ್ಕೃತಗೊಳಿಸಿಕೊಳ್ಳುತ್ತಲೇ ಇರುವ ವ್ಯವಸ್ಥೆ ನಮ್ಮನ್ನೂ ಅದೇ ರೀತಿ ಯೋಚಿಸುವಂತೆ ಬೆಂಬಲಿಸುತ್ತದೆ. ಕುವೆಂಪು ಅವರು ಹೇಳಿದಂತೆ, "... ಇರಲಿ ನಾಳೆಯು ನಾಳೆಗೆ" ಎನ್ನುವ ಮನಸ್ಥಿತಿಯಲ್ಲಿ ನಾವಿರುವುದಿಲ್ಲವಾದ್ದರಿಂದ, ನಿನ್ನೆ-ಇಂದುಗಳನ್ನು ಬಿಟ್ಟು, ಮುಂಬರುವ ನಾಳೆಗಳಿಗೆ ಮುಂದೇನು ಎಂದು ಇವತ್ತೇ ತಳಮಳಗೊಳ್ಳುತ್ತೇವೆ.
"ಬಹಳ ಕಷ್ಟಾ ಸ್ವಾಮಿ, ಇತ್ತೀಚೆಗೆ", ಅನ್ನೋ ಮಾತು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಮನೆಯ ಸಾಲ, ವೆಹಿಕಲ್ ಸಾಲದ ಬಾಬ್ತುಗಳನ್ನು ಕಟ್ಟುವ ನೋವು ಎಲ್ಲರಿಗೂ ಇರೋದೇ. ಒಂದೇ ಮನೆಯಲ್ಲಿ ಇತ್ತೀಚೆಗಷ್ಟೇ ಕಾಲೇಜು ಮುಗಿಸಿ ಕೆಲಸ ಹುಡುಕುತ್ತಿರುವ ಮಕ್ಕಳ ಜೊತೆಗೆ, ಅವರ ಪೋಷಕರೂ ಕೆಲಸ ಹುಡುಕುತ್ತಿರುವುದೂ ಕೂಡ ಇಂದಿನ ದಿನಗಳಲ್ಲಿ ಸಾಮಾನ್ಯವೇ ಅನ್ನುವ ಸ್ಥಿತಿ.
ಇರುವ ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುವ ಪೋಷಕರ ಕೊರಗು ಬಹಳ ದೊಡ್ಡದು. ಒಂದು ಕಡೆ ಬರುತ್ತಲೇ ಇರುವ ಖರ್ಚುಗಳನ್ನು ಸಂಬಾಳಿಸಿಕೊಳ್ಳುತ್ತ, ಇನ್ನೊಂದು ಕಡೆ ಮನೆ-ಮಂದಿಗೆಲ್ಲ ಕೆಲಸ ಹುಡುಕುತ್ತಲೇ ಇದ್ದೇನೆ ಎಂದು ಹೇಳುವುದು ಬಹಳ ಕಷ್ಟದ ವಿಷಯ. ಇತ್ತೀಚೆಗಂತೂ ವಯಸ್ಸಾದವರನ್ನು ನಿವೃತ್ತರಾಗಿ ಎಂದು ನೇರ ಮಾತುಗಳಲ್ಲೇ ಹೇಳದೆ, "ನಿಮ್ಮ ಅನುಭವಗಳು ಬಹಳಷ್ಟಿವೆ, ಆದರೆ, ನಾವು ಹೊಸ ಗ್ರಾಜುಯೇಟ್ಗಳು, ಅನನುಭವಿ ಕೆಲಸಗಾರರನ್ನು ಹುಡುಕುತ್ತಿದ್ದೇವೆ" ಎಂದು ಜಾಣ ಮಾತುಗಳಲ್ಲಿ ಹೇಳಿ ನುಣುಚಿಕೊಳ್ಳುವ ಹ್ಯೂಮನ್ ರಿಸೋರ್ಸ್ ಇಲಾಖೆಯಲ್ಲಿ ಕೆಲಸ ಮಾಡುವ ರೆಕ್ರೂಟರುಗಳನ್ನ (ಅಲ್ಲ, ಕಲಾಕಾರರು ಅನ್ನಬೇಕು ಅವರನ್ನೆಲ್ಲ) ಸಂಬಾಳಿಸುವುದೇ ಒಂದು ಕಷ್ಟ. ಇನ್ನೇನು ನಿವೃತ್ತರಾಗಬೇಕು ಎಂದು ಯೋಚಿಸುತ್ತಿರುವ ಮಧ್ಯ ವಯಸ್ಸಿನ ಕೆಲಸಗಾರರನ್ನು ಕಂಪನಿಗಳಿಂದ ಹೊರ ತಳ್ಳುವ ಪರಿ ಯಾವತ್ತಿನಿಂದಲೂ ಅವ್ಯಾಹತವಾಗಿ ಮುಂದುವರೆಯುತ್ತಲೇ ಬಂದಿದೆ.
ಈಗಾಗಲೇ ಕೆಲಸ ಮಾಡುತ್ತಿರುವ ಎಷ್ಟೋ ಜನರಿಗೆ Copilot, Gemini, Chat-GPT ಗಳೆಲ್ಲ ಬಂದ ಮೇಲೆ, ಅವುಗಳು ನಮ್ಮ ಅನುಕೂಲಕ್ಕೋಸ್ಕರ ಹುಟ್ಟಿವೆಯೋ, ಅಥವಾ ನಮ್ಮ ನಿರ್ಮೂಲನಕ್ಕೆಂದೇ ಅವತರಿಸಿವೆಯೋ ಎಂದು ಪ್ರಶ್ನಿಸಿಕೊಳ್ಳುವ ಸಮಯ, ಇದು.
ಒಮ್ಮೆ ಬಡತನದಲ್ಲಿ ಹುಟ್ಟಿ ಬಂದರೆ ಮುಗಿಯಿತು, ಅದು ನಿಮ್ಮ ಬೆನ್ನು ಬಿಟ್ಟರೂ, ನೀವು ಅದನ್ನ ಬಿಡಲಾರಿರಿ ಎನ್ನುವಂತೆ ಅನೇಕ ನಿದರ್ಶನಗಳನ್ನು ಕೊಡಬಹುದು. ಎಂಥಾ ಒಳ್ಳೆಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದೂ, ಒಂದೆರಡು ಡಾಲರುಗಳನ್ನು ಬಿಡುಗೈಯಿಂದ ಕೊಡದ ಜಿಪುಣಾಗ್ರೇಸರ ಚಕ್ರವರ್ತಿಗಳು ಹುಟ್ಟಿಬರುವುದೂ ಇಂಥಾ ಹಿನ್ನೆಲೆಯಿಂದಲೇ.
ಬಡತನದಲ್ಲಿ ಹುಟ್ಟಿ ಬೆಳೆದವರಿಗೆ ಮುಂದೆ ಅವರು ಯಾವುದೇ ಸ್ಟೇಟಸ್ನಲ್ಲಿದ್ದರೂ ಅವರ ಸರ್ವೈವಲ್ ತಂತ್ರಗಳು ಯಾವಾಗಲೂ ಜೀವಂತವಾಗಿಯೇ ಇರುತ್ತವೆ ಎಂದು ಹೇಳಬೇಕು. ಒಮ್ಮೆ ಬಡತನದಲ್ಲಿ ಸಿಕ್ಕಿಕೊಂಡರೆ ಅದರ ಪರಿಣಾಮಗಳು ಒಂಥರಾ ರಕ್ತದಲ್ಲಿರುವ ಯಾವುದೇ ಖಾಯಿಲೆಯ ವೈರಾಣುಗಳ ಹಾಗೆ ಯಾವತ್ತೂ ಜೀವಂತವಾಗೇ ಉಳಿದು ಕಷ್ಟದ ಪರಿಸ್ಥಿತಿಯಲ್ಲಿ ಹಳೆಯ ಇನ್ಸ್ಟಿಂಕ್ಸ್ ಎಲ್ಲ ಕೆಲಸ ಮಾಡಲು ಆರಂಭಿಸುತ್ತವೆ. ಆದರೆ, ಹುಟ್ಟಿದಂದಿನಿಂದ ಬಡತನವನ್ನು ಕಾಣದೇ ಇದ್ದವರ ಮೊದಲ ಬಡತನದ ಬವಣೆ ಬಲುಕಷ್ಟ.
ನಮ್ಮ ಪಕ್ಕದ ಮನೆಯವರು ಈ ಹತ್ತು ವರ್ಷಗಳಿಂದಲೂ ಪ್ರತಿನಿತ್ಯ ತಮ್ಮ ಮನೆಯ ಸುತ್ತಲೂ ಕನಿಷ್ಠ ಇಪ್ಪತ್ತು ವಿದ್ಯುತ್ ದೀಪಗಳನ್ನು ಉರಿಸುತ್ತಿದ್ದರು - ಗರಾಜ್ ಲೈಟ್ಗಳು, ಎದುರು ಲಾನ್ನಲ್ಲಿರುವ ಮರಗಳಿಗೆ ಫೋಕಸ್ ಲೈಟ್ಗಳು, ಮನೆಯ ಮುಂದಿನ ಬಾಗಿಲಿಗೆ, ಡ್ರೈವ್ವೇ ಅಕ್ಕಪಕ್ಕದಲ್ಲಿ ಇತ್ಯಾದಿ. ಈ ಲೈಟುಗಳೆಲ್ಲ ಅಟೋಮ್ಯಾಟಿಕ್ ಆಗಿ ರಾತ್ರಿ ಪೂರ್ತಿ ಉರಿದು ಬೆಳಿಗ್ಗೆ ಆರಿಹೋಗುತ್ತಿದ್ದವು, ಅದೇ ನಮ್ಮ ಮನೆಯಲ್ಲಿ ದಿನಕ್ಕೆ ಕೆಲವು ಘಂಟೆಗಳು ಮಾತ್ರ ಮುಂದಿನ ಬಾಗಿಲಿನ ಎರಡು ಎನರ್ಜಿ ಎಫಿಷಿಯಂಟ್ ಬಲ್ಬ್ಗಳು ಉರಿಯುತ್ತಿದ್ದವು. ಇತ್ತೀಚೆಗೆ, ಹಣದುಬ್ಬರದ ಪರಿಣಾಮದಿಂದ ನಮ್ಮ ಇಲೆಕ್ಟ್ರಿಕ್ ಮತ್ತು ಗ್ಯಾಸ್ ಬಿಲ್ಗಳು ದುಬಾರಿ ಆದವು. ನಾನೂ ಗಾಬರಿಗೊಂಡು ಒಂದಿಬ್ಬರನ್ನು ಕೇಳಿ ತಿಳಿದಾಗ ಅವರದ್ದೂ ಅದೇ ಪರಿಸ್ಥಿತಿ. ಹಾಗಾದ ಮರುದಿನವೇ ಪಕ್ಕದ ಮನೆಯ ಲೈಟುಗಳೆಲ್ಲವೂ ನಿಂತು ಹೋದವು. ಅಂದಿನಿಂದ, ಅವರ ಮನೆಯ ಮುಂದಿನ ಬಾಗಿಲಿನಲ್ಲೂ ಎನರ್ಜಿ ಎಫಿಷಿಯಂಟ್ ಲೈಟ್ ಬಲ್ಬ್ಗಳು ಉರಿಯತೊಡಗಿದವು. ಕೇವಲ ಎಲೆಕ್ಟ್ರಿಕ್ ಬಿಲ್ ವಿಚಾರವೊಂದೇ ಅಲ್ಲ, ಅವರ ಖರ್ಚು-ವೆಚ್ಚ ಜೀವನ ಶೈಲಿಯಲ್ಲೂ ಬದಲಾವಣೆಗಳು ಗೋಚರಿಸತೊಡಗಿದವು: ನ್ಯೂಸ್ ಪೇಪರ್ ಸಬ್ಸ್ಕ್ರಿಫ್ಷನ್ ನಿಂತು ಹೋಗುವುದು, ವರ್ಷದ ವೆಕೇಷನ್ ಕ್ಯಾನ್ಸಲ್ ಆಗುವುದು, ಮುಂತಾಗಿ.
ಬಡತನ ಕಲಿಸುವ ಮತ್ತೊಂದು ಮುಖ್ಯ ಅಂಶ ಎಂದರೆ ಉಳಿತಾಯ ಮಾಡುವುದು. ಈಗಿರುವ ಇಂದಿನ ಅವಶ್ಯಕತೆಗಳಿಗಿಂತ ಮುಂಬರುವ ನಾಳೆಗಳ ಬಗ್ಗೆ ಕೂಡಿಡುವ ಪರಿ, ನಾವದಕ್ಕನುಸರಿಸುವ ರೀತಿ-ನೀತಿಗಳನ್ನು ಹತ್ತಿರದಿಂದ ಪರಿಶೀಲಿಸಿದಾಗ ಬಹಳಷ್ಟು ಆಶ್ಚರ್ಯಗಳು ನಮ್ಮನ್ನು ಕಾಡುತ್ತವೆ. ಕಷ್ಟಪಟ್ಟು ಗಳಿಸಿದ್ದನ್ನೂ ಅನುಭವಿಸಲಾಗದೆ ಬಹಳಷ್ಟನ್ನು ತಮ್ಮ ಹಿಂದೆ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಈ ಪ್ರವೃತ್ತಿ ಹೆಚ್ಚುತ್ತಲೇ ಹೋಗಿ, ಇದರ ಮತ್ತೊಂದು ಮುಖವಾಗಿ ಜಿಪುಣತನ ಗೋಚರಿಸುತ್ತದೆ.
ಹೀಗೆ ಬಡತನ-ಉಳಿತಾಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ನಾವು ನೋಡಬಹುದು.
ಇನ್ನು ಕಷ್ಟದ ಮಾತಿಗೆ ಬರೋಣ, ಅವರವರ ಕಷ್ಟ ಅವರಿಗೆ. ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ. ಆದರೆ ಕಷ್ಟಗಳು, ಸಾಂಸಾರಿಕ ಜಂಜಾಟಗಳು, ನಮಗೊದಗುವ ಅನೇಕ ತೊಂದರೆಗಳನ್ನು ಹಲವಾರು ರೀತಿಯಲ್ಲಿ ನೋಡಬಹುದು. ಅವುಗಳ ತುಲನಾತ್ಮಕ ಅರಿವು ನಮ್ಮನ್ನು ಎಷ್ಟೋ ಸಾರಿ ’ಸದ್ಯ, ನಮಗೆ ಹಾಗಾಗದಿದ್ದರೆ ಸಾಕು!’ ಎನ್ನುವ ಮನೋಭಾವನೆಯಿಂದ ಆ ಮಟ್ಟಿಗೆ ಸಮಾಧಾನ ಹುಟ್ಟಬಹುದು. ದೈಹಿಕ ಕೆಲಸಗಳಿಂದ ಸ್ನಾಯುಗಳು ಬಲಗೊಳ್ಳುವ ಹಾಗೆ ಈ ಸಂಕಷ್ಟಗಳ ಪರಂಪರೆ ಮನಸ್ಸನ್ನು ಗಟ್ಟಿಗೊಳಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಂಜಾಟಗಳಲ್ಲಿ ಬಳಲಿ, ತೊಳಲಿ, ಬಗ್ಗಿ, ಬಾಗಿ, ನೊಂದು, ನಲಿದು ಮುಂದೆ ಇವೆಲ್ಲದರ ದೆಸೆಯಿಂದ ಲಕ್ಷಾಂತರ ಜನ್ಮಗಳಲ್ಲಿ ಮೋಕ್ಷ ಸಿಗಬಹುದು. ಅಥವಾ ಹಾಗೆ ಆಗಲಿ ಎನ್ನುವ ಮಹದಾಸೆ ಅಷ್ಟೇ.
ನಮಗೆಲ್ಲ ಕಷ್ಟದ ಬಗ್ಗೆ ಏನು ಗೊತ್ತಿದೆ? ನಾವೆಲ್ಲ ಅನುಭವಿಸಿರದಿದ್ದರೂ ಇಂಥ ಜನರನ್ನು ನೋಡಿರುತ್ತೇವೆ. ಇವರ ಕಷ್ಟಗಳಿಗೆ ಹೋಲಿಸಿದರೆ, ನಮ್ಮ ಕಷ್ಟಗಳು ಲೆಕ್ಕಕ್ಕೇ ಬರೋದಿಲ್ಲ... ಉದಾಹರಣೆಗೆ: ಮನೆಯಲ್ಲಿ ಮೂರೋ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎನ್ನುವ ಪೋಷಕರ ನಡುವೆ, ಹುಟ್ಟಿದಂದಿನಿಂದ ವಿಕಲಾಂಗರಾಗಿ ಬೆಳೆಯುವ ಮಕ್ಕಳನ್ನು ಪೋಷಿಸುವ ತಂದೆ-ತಾಯಿಗಳ ನಡುವೆ, ಇಂದಿದ್ದರೆ ನಾಳೆ ಬೆಳಿಗ್ಗೆ ತಿನ್ನುವುದಕ್ಕಿಲ್ಲ ಎನ್ನುವ ಕಡು ಬಡವರ ನಡುವೆ, ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿರುವ ಕುಟುಂಬದ ಸದಸ್ಯರ ಜೊತೆ ತಮ್ಮ ದಿನಚರಿಯನ್ನು ಕಂಡುಕೊಳ್ಳುವವರ ನಡುವೆ, ಇದ್ದ ಮಕ್ಕಳಲ್ಲಿ ಕೆಲವರನ್ನು ದುರಂತಗಳಲ್ಲಿ ಕಳೆದುಕೊಂಡು ಜೀವನ ಪರ್ಯಂತ ನರಳುವವರ ನಡುವೆ, ಆಫೀಸಿನ ಕೆಲಸ ಮನೆಯಲ್ಲಿನ ಕೆಲಸಗಳ ಜೊತೆಗೆ ತಮ್ಮ ಕುಟುಂಬದ ಹಿರಿಯರನ್ನು ಪೋಷಿಸಿಕೊಂಡು ಹೋಗುವವರ ನಡುವೆ, ತಮ್ಮ ಪ್ರೈಮರಿ ರೆಸಿಡೆನ್ಸ್ ಅಥವಾ ತಮ್ಮ ಜೀವನದ ಇಡುಗಂಟನ್ನು ಕಳೆದುಕೊಂಡವರ ನಡುವೆ...ಹೀಗೆ ಈ ಪಟ್ಟಿ ಮುಂದುವರೆಯುತ್ತದೆ. ಪ್ರತಿಯೊಬ್ಬರ ಕಷ್ಟದ ಅರಿವು ಹಾಗೂ ಅವರ ಅನುಭವ ಸಾಪೇಕ್ಷವಾದುದು. ನಮ್ಮ ಕಷ್ಟ ದೊಡ್ಡದು ಎಂದೆನಿಸಿದ ಮರು ಕ್ಷಣವೇ ಮತ್ತೊಬ್ಬರ ಇನ್ನೂ ಹೆಚ್ಚಿನ ಕಷ್ಟದ ಸ್ಥಿತಿಯನ್ನು ಕೇಳಿದಾಗ ಸಮಾಧಾನವಾಗುತ್ತದೆ. ಹೀಗೆ ಆದಾಗಲೆಲ್ಲ "ಸದ್ಯ ನಮಗೆ ಆ ಪರಿಸ್ಥಿತಿ ಬರಲಿಲ್ಲವಲ್ಲ" ಎನ್ನುವ ದನಿಯೂ ಹುಟ್ಟುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕ್ಷಣದಲ್ಲಿ ’ದೇವರ ದಯೆ’ ಅಥವಾ ’ದೇವರು ದೊಡ್ಡವನು’ ಎನ್ನುವ ಭಾವನೆಯೂ ಉದ್ಭವಿಸುತ್ತದೆ.
ನಾವು ಅನುಭವಿಸುವ ಕಷ್ಟಗಳಿಂದ ಉಳಿತಾಯದ ಧೋರಣೆ ಹುಟ್ಟುತ್ತದೆ. ಹುಟ್ಟಿದ ಪ್ರತಿಯೊಬ್ಬನೂ ಕಷ್ಟ ಅನುಭವಿಸಲೇ ಬೇಕು ಎನ್ನುವ ನಿಯಮದ ಮುಂದೆ, ಕಷ್ಟದಿಂದ ವಿಮೋಚನೆ ಏನಿದ್ದರೂ, ನಾವು ಈ ಲೋಕದಿಂದ ನಿರ್ಗಮಿಸಿದ ಮೇಲೆಯೇ ಎಂದುಕೊಳ್ಳಬಹುದು. ಇದನ್ನು ಈಗಿನ ಒಂದು ಸ್ಥಿತಿಯಿಂದ ಪಡೆಯುವ ವಿಮೋಚನೆ, ಬಿಡುಗಡೆ ಎಂದುಕೊಂಡರೆ, ಅದೇ ನಮ್ಮ ಆಯಾ ಜನ್ಮದ ಮೋಕ್ಷವೂ ಆಗಬಹುದಲ್ಲವೇ?