Thursday, June 22, 2006

ದೇವೇಗೌಡರು ಪ್ರಸನ್ನರಾಗಿದ್ದಾರೆ!

ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯ ಆಯ್ಕೆಯ ನಂತರ ಎಷ್ಟೇ ಗೋಪ್ಯವಾಗಿಟ್ಟರೂ ಸಂಪುಟ ವಿಸ್ತರಣೆಯೆಂಬ ತಡವಾಗಿ ಅನುಸರಿಸುವ ಮತ್ತೊಂದು ಪ್ರಕ್ರಿಯೆ ನಡೆಯುತ್ತದೆ. ಮುಖ್ಯಮಂತ್ರಿಗಳು ಆಯ್ಕೆಯಾದ ಮೇಲೆ ಕೆಲವು ತಿಂಗಳುಗಳವರೆಗೆ ಮಂತ್ರಿಗಿರಿ 'ನನಗೆ ಬೇಕು, ನನಗೆ ಬೇಕು' ಎಂಬ ಹಾಹಾಕಾರ ಹುಟ್ಟಿ ಅದಕ್ಕೆ ಬೇಕಾದ ಎಲ್ಲ ರೀತಿಯ ಲಾಬಿಗಳು ನಡೆಯುತ್ತವೆ. ಆದ್ದರಿಂದಲೇ ನಮ್ಮ ಎಷ್ಟೋ ಸರಕಾರಗಳಲ್ಲಿ ಸಂಪುಟ ರಚನೆ, ಅಥವಾ ಪುನರ್ರಚನೆ ಆಗುತ್ತಲೇ ಇದ್ದು ಅದೆಂದೂ ಮುಕ್ತಾಯವನ್ನು ತಲುಪೋದೇ ಇಲ್ಲ. ಇನ್ನೂ ಪೂರ್ತಿಯಾಗಿ ಸಂಪುಟವನ್ನು ರಚಿಸಿಲ್ಲ ಅನ್ನೋದು ನಮಗೂ ಒಂದು ಅವಕಾಶ ಸಿಗಬಹುದು ಎಂದು ಕೆಲವರನ್ನು ತುದಿಗಾಲಿನಲ್ಲಿರುವಂತೆ ಮಾಡಿದರೆ ಇನ್ನು ಕೆಲವರನ್ನು ಅಸಮಧಾನ ಹತ್ತಿಕ್ಕಿಕೊಳ್ಳುವಂತೆ ಪ್ರಚೋದಿಸುತ್ತದೆ. ಹೀಗೆ ಆಗಾಗ್ಗೆ ಅವರಿವರ ಕಣ್ಣೊರೆಸುವ ತಂತ್ರವೆಂಬಂತೆ ನಡೆಯುವ ಸಂಪುಟ ವಿಸ್ತರಣೆಗಳು ಅದೆಂದೂ ಪೂರ್ಣವಾಗೋದೂ ಇಲ್ಲ, ಆದರೂ ಎಲ್ಲರ ಅಸಮಧಾನವನ್ನು ತೀರಿಸುವುದಂತೂ ಇನ್ನೂ ಹೆಚ್ಚಿನ ಮಾತು. ಯಾರಿಗೆ ಇಷ್ಟವಿರಲಿ, ಬಿಡಲಿ ನಮ್ಮ ಸಂಪುಟ ವಿಸ್ತರಣೆಗಳು ಇಂದಿಗೂ ನಡೆಯೋದು ಮುಖ್ಯವಾಗಿ ಜಾತಿ ಆಧಾರಿತ ವ್ಯವಸ್ಥೆಯಲ್ಲೇ - ಗೌಡರಿಗೆ, ಲಿಂಗಾಯತರಿಗೆ, ಪರಿಶಿಷ್ಟರಿಗೆ, ಬ್ರಾಹ್ಮಣರಿಗೆ ಮುಂತಾದವರಿಗೆಲ್ಲ ಇಂತಿಷ್ಟು ಎಂದು ಸೀಟುಗಳನ್ನು ಹಂಚಿಕೊಡುವುದು ಸುಲಭದ ಕೆಲಸವೇನಲ್ಲ, ಹೇಗೇ ಮಾಡಿದರೂ ಕೊನೆಗೆ ಪ್ರತಿ ಜಿಲ್ಲೆಗೊಂದು ಮಂತ್ರಿ ಸಿಗದ ಪರಿಸ್ಥಿತಿಯೂ ಹುಟ್ಟಿ ಜನರ ಅಸಮಧಾನವನ್ನು ತಮ್ಮ ಸದುಪಯೋಗಕ್ಕೆ ಬಳಸಿಕೊಳ್ಳುವವರಿಗೆ ಬೇಕಾದಷ್ಟು ಅವಕಾಶಗಳು ದೊರೆಯುತ್ತವೆ.

ನಾನು ದೇವೇಗೌಡರ ಬಗ್ಗೆ ಯೋಚಿಸಿದಷ್ಟೂ ಅವರು ಇನ್ನೂ ಸಂಕೀರ್ಣ ಮನಸ್ಥಿತಿಯವರಾಗಿ ಕಂಡು ಬರುತ್ತಾರೆ - ಹಲವು ನಾಟಕಗಳ ಸೂತ್ರಧಾರರಾಗಿ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ 'ಯಶಸ್ವಿ' ರಾಜಕಾರಣಿಯೆಂಬ ಪಟ್ಟಕ್ಕೂ ಪಾತ್ರರಾಗುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ಅವರ ರಾಜಕೀಯ ನಿಲುವುಗಳು, ಆಶೋತ್ತರಗಳು ಏನೇ ಇರಲಿ ತಮ್ಮ ಇಬ್ಬರು ಮಕ್ಕಳನ್ನು ವಿಧಾನ ಸೌಧದಲ್ಲಿ ಕೂರಿಸಿ ಮಂತ್ರಿಗಳನ್ನಾಗಿ ಮಾಡಿದ ಹೆಮ್ಮೆ ಅವರದು. ಒಬ್ಬ ಮಗ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ರಾಜ್ಯವನ್ನು ತುಂಬಿಕೊಂಡಿದ್ದರೆ, ಇನ್ನೊಬ್ಬ ಮಗ ಇಂಧನ ಹಾಗೋ ಲೋಕೋಪಯೋಗಿ ಮಂತ್ರಿಯಾಗಿ ರಾಜ್ಯವನ್ನು ಪೂರ್ತಿಯಾಗಿ ಆವರಿಸಿಕೊಂಡಿದ್ದಾರೆ. ದೇವೇಗೌಡರನ್ನು ಹತ್ತಿರದಿಂದ ಬಲ್ಲವರು ನಂಬಿಕೊಂಡಂತೆ ಹಾಗೂ ಹಲವು ಲೋಕೋಪಯೋಗಿ ಇಲಾಖೆಯ ಮಂತ್ರಿಗಳನ್ನು ನಾನು ಬಲ್ಲವನಾಗಿ ಒಂದು ಮಾತನ್ನು ಖಂಡಿತವಾಗಿ ಹೇಳಬಹುದು - ಯಾರಿಗೆ ಲೋಕೋಪಯೋಗಿ ಖಾತೆ ಸಿಗುತ್ತದೆಯೋ ಅವರಿಗೆ ಇನ್ನು ನೂರು ತಲೆಮಾರುಗಳ ಕಾಲ ಕುಳಿತು ತಿನ್ನುವಷ್ಟು ಆಸ್ತಿಯನ್ನು ಮಾಡುವ ಅವಕಾಶ ಸಿಗುತ್ತದೆ, ದೇವೇಗೌಡರೂ ಹಿಂದೆ ತಾವು ಲೋಕೋಪಯೋಗಿ ಮಂತ್ರಿಗಳಾಗಿದ್ದಾಗ ಬೇಕಾದಷ್ಟು 'ಉರಿ'ದವರೇ - ಹೀಗೆ ರೇವಣ್ಣನವರಿಗೆ ಲೋಕೋಪಯೋಗಿ ಮಂತ್ರಿಯಾಗುವ ಅವಕಾಶ ಸಿಕ್ಕಿದ್ದು, ಅದರ ಜೊತೆಯಲ್ಲಿ 'ಇಂಧನ'ವನ್ನೂ ಸೇರಿಸಿದ್ದೂ ಎಲ್ಲವೂ ಒಂದು ಅಚ್ಚುಕಟ್ಟಾದ ಪೂರ್ವಯೋಜಿತ ಸೂತ್ರದಂತೆ ಕಂಡುಬರುತ್ತದೆ, ಆ ಸೂತ್ರದ ಕೇಂದ್ರದಲ್ಲಿ ದೇವೇಗೌಡರು ತಮ್ಮ ಎಂದಿನ ಭಾರವಾದ ಮುಖದಲ್ಲಿ ನಿಶ್ಚಿಂತರಾಗಿ ಉಸಿರುಬಿಡುತ್ತಿರುವುದೂ ಕಂಡು ಬಂದಂತಾಗುತ್ತದೆ - ಇನ್ನೇನು ಬೇಕು ದೇವೇಗೌಡರಿಗೆ ಪ್ರಸನ್ನರಾಗಲು? ತಮ್ಮ ದೂರದೃಷ್ಟಿಯಿಂದ ಜಾತಿ ವ್ಯವಸ್ಥೆಯನ್ನಂತೂ ನಿರ್ಮೂಲನ ಮಾಡಲಾಗಲಿಲ್ಲ, ಕೊನೆಗೆ ತಮ್ಮ ಮಕ್ಕಳಾದರೂ ಒಳ್ಳೊಳ್ಳೆಯ ಸ್ಥಾನದಲ್ಲಿದ್ದಾರಲ್ಲ, ಅಷ್ಟೇ ಸಾಕು!

ಬಿಜೆಪಿಯ ಹಸಿವು ಇನ್ನೂ ಹಿಂಗಿಲ್ಲ, ಈಗಷ್ಟೇ ಅವರಿಗೆಲ್ಲ ಊಟದ ಸಮಯವಾಗಿದೆ. ಕುಮಾರಸ್ವಾಮಿಯ ಸರ್ಕಾರದಲ್ಲಿ ತನ್ನ ಅಣ್ಣನಷ್ಟೇ ಅಲ್ಲ, ತಮ್ಮ ಖಾಸಾಸ್ನೇಹಿತರೂ ಇದ್ದಾರೆ - ಸಾರ್ವಜನಿಕವಾಗಿ ಕಾಲುಮುಟ್ಟಿ ನಮಸ್ಕರಿಸುವ 'ವಿನಯವಂತ'ರೂ ಇದ್ದಾರೆ. ಪರವಾಗಿಲ್ಲ, ಕುಮಾರಸ್ವಾಮಿ ಬೇರೇನನ್ನು ಮಾಡದಿದ್ದರೂ ತಮ್ಮ ಇಷ್ಟು ಚಿಕ್ಕವಯಸ್ಸಿನ್ನಲ್ಲಿ ಜೊತೆಯವರು ಪೂಜಿಸುವಷ್ಟು ಗೌರವವನ್ನು ಸಂಪಾದಿಸಿಕೊಂಡಿದ್ದಾರೆ. ಆದರೆ, ಸಂಪುಟ ವಿಸ್ತರಣೇ ಇನ್ನೂ 'ಪೂರ್ಣ'ವಾಗದಿದ್ದುದು ಕೆಲವರ ಮನಸ್ಸಿನಲ್ಲಿ ಮೂಗಿನ ತುದಿಗೆ ತುಪ್ಪ ಸವರಿದಂತಾಗಿಯೇ ಇನ್ನೂ ಇದೆ, ಮತ್ತೆ ಕೆಲವು ತಿಂಗಳುಗಳಲ್ಲಿ ವಿಸ್ತರಣೆಯ ಇನ್ನೊಂದ ಅಂಕದ ತೆರೆಬೀಳುತ್ತದೆ, ಹೀಗೆ ಹಲವು ಹಂತಗಳ ವಿಸ್ತರಣೆ ಮುಗಿದು ಏನೇ ಆದರೂ ತಮಗೆ ಖುರ್ಚಿ ಸಿಗುವುದಿಲ್ಲ ಎಂದು ಗೊತ್ತಾದ ಕೆಲವರು 'ರೋಸಿ'ಹೋಗುತ್ತಾರೆ, ಹೀಗೆ ರೆಬೆಲ್ ಆದವರು ಏನನ್ನಾದರೂ ಮಾಡಿ ಸರ್ಕಾರವನ್ನು ಉರುಳಿಸಿ - ಚುನಾವಣೆ ನಡೆಸಿ ಜನತೆಯ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಅಂತಹವರನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಮಾಧಾನ ಪಡಿಸುವ ಯತ್ನ ನಡೆದರೂ ರೆಬೆಲ್‌ಗಳು ಏನಾದರೊಂದು ಒಳಸಂಚನ್ನು ರೂಪಿಸಿಯೇ ತೀರುತ್ತಾರೆ.

ಆದರೆ ಬೇರೆಲ್ಲ ಸಮಯದಲ್ಲಿ ಹೀಗೆ ತಿರುಗಿಬಿದ್ದವರು ಬರೀ ಮುಖ್ಯಮಂತ್ರಿಗಳನ್ನು ಮಾತ್ರ ಎದುರಿಸಬೇಕಿತ್ತು, ಇವತ್ತಿನ ಪರಿಸ್ಥಿತಿಯಲ್ಲಿ ಅವರು ದೇವೇಗೌಡರನ್ನು ಮೊದಲು ಎದುರಿಸಬೇಕು, ಅದರಲ್ಲೂ 'ಪ್ರಸನ್ನ'ರಾದ ದೇವೇಗೌಡರು 'ಚಿಂತಿತ' ಮನಸ್ಸಿನ ದೇವೇಗೌಡರಿಗಿಂತ ಬಹಳ ಡೇಂಜರ್ ಮನುಷ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ - ತನ್ನ ಮರಿಗಳನ್ನು ಕಾಯುವ ಸಿಂಹಿಣಿಯ ಛಲವಿದೆ ಅವರಲ್ಲಿ, ಹುಷಾರ್!

No comments: