Wednesday, July 26, 2006

ಮತ್ತೊಂದ್ ಎಲೆಕ್ಷನ್‌ಗೆ ತಯಾರಾಗೋಣ್ವಾ ಹೇಗೆ?

ಕುಮಾರಸ್ವಾಮಿಯ ಗತ್ತು ಗೈರತ್ತು ಸ್ವಲ್ಪ ಮೆತ್ತಗೆ ಆದಂಗೆ ಕಾಣ್ಸುತ್ತೆ, ಅವರು ಗಣಿಯಿಂದ ಅಗಿದ ಮಣ್ಣೆಲ್ಲ ಮೈ ಮೇಲೆ ಬಿದ್ದಷ್ಟು ಕುಬ್ಜರಾಗಿ ಹೋಗಿರೋದು ಅಲ್ಲಲ್ಲಿ ಕಂಡ ಫೋಟೋಗಳಲ್ಲೂ ಗಮನಕ್ಕೆ ಬರುತ್ತೆ. ರಾಜ್ಯಪಾಲ ಚತುರ್ವೇದಿ ಕೊಟ್ಟಿರೋ ವರದಿಯಲ್ಲಿ ಏನಿರುತ್ತೋ ಬಿಡುತ್ತೋ, ನಮ್ಮ್ ಜನ ಅಂತೂ ಕುಮಾರಸ್ವಾಮಿ ಹಾಗೂ ಅವರ ಸರ್ಕಾರದ ಮೇಲೇನೇ ವಿಶ್ವಾಸ ಕಳಕಂಡೋರ್ ಹಾಗೆ ಕಾಣುಸ್ತಾರೆ.

ಒಂದ್ ಕಡೆ ದೇವೇಗೌಡ್ರು ಮಗನ ಸಪೋರ್ಟಿಗೆ ಬಂದಿರೋ ಹಾಗೆ ಹೇಳಿಕೆ ಕೊಡ್ತಾ ಇದ್ದಾರೆ, ಅವರ ಐದು ದಶಕಗಳ ರಾಜಕೀಯ ಅನುಭವವನ್ನೂ ಕೆಲಸಕ್ಕೆ ಹಚ್ಚಿದ ಹಾಗೆ ಕಾಣ್ಸುತ್ತೆ. ಅವರು ಮಾಡ್ತಾ ಇರೋ ತಪ್ಪು ಏನು ಅಂದ್ರೆ ನೇರವಾಗಿ ಬಿಜೆಪಿಯೋರ್ನ ಬೈಯ್ಯೋದು, ಅವರ ಬಗ್ಗೆ ಆಡಿಕೊಳ್ಳೋದು. ಒಂದ್ ಕಡೆ ಕಾಂಗ್ರೇಸ್‌ನವರು ಹಳೆ ದ್ವೇಷಾ ತೀರಿಸಿಕೊಳ್ಳೋ ಹಾಗೆ ಕಾಣ್ತಿದ್ದಾರೆ, ಮತ್ತೊಂದ್ ಕಡೆ ತಮ್ಮ ದಳದ ಬಣಗಳಲ್ಲೇ ಒಡಕು ಬರ್ತಾ ಇರೋದು ದೊಡ್ಡ ಗೌಡರಿಗಂತೂ ಬಾಳಾ ಕಷ್ಟವಾಗಿ ಹೋಗಿದೆ. ಏನು ಮಾಡೋದು ಅವರು ಬೈದು ಬಿಸಾಕೋಕೇ ಇತ್ಲಾಗೆ ಸಿದ್ಧರಾಮಯ್ಯನೂ ಇಲ್ಲ, ಅತ್ಲಾಗೆ ಹೆಗಡೆಯೂ ಇಲ್ಲ!

ದೊಡ್ಡ ಗೌಡ್ರು ಬಿಜೆಪಿಯವರ್ನ ಅಂದುಕಂಡಂಗೆಲ್ಲ, ಮರಿಗೌಡ್ರು ಅದೆಲ್ಲ ಸರಿ ಅಲ್ಲ, ದೊಡ್ಡೋರ್ ಹೇಳಿದ್ ಮಾತ್ನೆಲ್ಲ ಕೇಳ್ ಬೇಡಿ ಅಂತ ಓಪನ್ ಆಗೆ ಹೇಳ್ಕೆ ಕೊಡ್ತಾ ಇರೋದ್ ನೋಡಿದ್ರೆ, ಇಂಥದ್ದರಲ್ಲೆಲ್ಲ ಬಹಳಷ್ಟ್ ಪಳಗಿರೋ ಅಪ್ಪನಿಗೆ ಮುಂದೆ ಏನಾಗುತ್ತೆ ಅನ್ನೋದು ಚೆನ್ನಾಗಿ ಗೊತ್ತಾಗಿ ಮಗನನ್ನ ರಕ್ಷಣೆ ಮಾಡೋಣ ಅಂತ ಅಪ್ಪ ಬಂದ್ರೆ, ಮಗನಿಗೆ ನಮ್ ಉಸಾಬರಿಗೆ ನೀವ್ ಬರಬೇಡಿ, ನಾವೇನಾದ್ರೂ ಮಾಡಿಕೊಳ್ತೀವಿ ಅಂತ ಹೇಳೋ ಉಮ್ಮೇದು ಬಂದ ಹಾಗೆ ಕಾಣ್ಸುತ್ತೆ.

ನಮ್ಮ್ ಜನ ಸ್ವಲ್ಪ ಮಟ್ಟಿಗಾದ್ರೂ ವಿಶ್ವಾಸ್ ಇಟ್ಟಿದ್ರು ಕುಮಾರ್‌ಸ್ವಾಮೀ ಮೇಲೆ. ಒಂದ್ ಥರಾ ಶಂಕರ್‌ದಯಾಳ್ ಶರ್ಮ್‌ರ ರೀತಿ ನಡೆಯೋ ಧರಮ್ ಸಿಂಗ್ ಆಡಳಿತದಿಂದ ಬೇಸತ್ತ ಜನ, ಈ ಹೊಸ ಸರ್ಕಾರದ ಮೇಲೆ ಸ್ವಲ್ಪನಾದ್ರೂ ನಿರೀಕ್ಷೆ ಇಟ್ಕೊಂಡಿದ್ರು. ಈ ಮನುಷ್ಯ ಬಂದ್ ಬಂದೋರೆ, ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಸ್ವಲ್ಪಕಾಲ ಹೆಸರು ಮಾಡಿದ್ದಂತೂ ನಿಜ - ಲೈಟ್ ರೇಲು, ನಕ್ಸಲ್ ಸಮಸ್ಯೆಯ ಪುನರ್ ಚಿಂತನೆ, ಹಾಗೂ ಹಲವಾರು ಮುಖ್ಯ ಯೋಜನೆಗಳ ಮೂಲಕ ಮೇಲ್ ಬರಬಹುದಾದ ಅವಕಾಶ ಬಹಳ ಇತ್ತು. ಅವರಿಗಿಂತ ಹಳೆಯ ಸರ್ಕಾರದವರು ಯಾವ್ಯಾವ್ ವಿಷಯಕ್ಕೆ ಗಮನ ಕೊಡಲಿಲ್ಲವೋ ಅದೆಲ್ಲದ್ದಕ್ಕೂ ಗಮನಕೊಡೋ ಹಾಗೆ ಕಂಡ್ ಬಂದ್ರು. ಜೊತೆಯಲ್ಲಿ ಅಗಾಧವಾದ ಹಸಿವು ಇರೋ ಬಿಜೆಪಿ ಶಾಸಕರ ಗುಂಪನ್ನ ಮಡಿಲಲ್ಲಿಟ್ಟಿರೋ ಕೆಂಡದ ಹಾಗೆ ಜೋಪಾನ ಮಾಡಿಕೊಂಡ್ ಹೋಗೋ ಜವಾಬ್ದಾರಿ ಇರೋ ಮನುಷ್ಯ, ಪಾರ್ಟಿ ಈ ರೀತಿ ಹೇಗ್ ಮಾಡೋಕ್ ಸಾಧ್ಯ. ಆರೋಪ ನಿಜಾನೋ ಸುಳ್ಳೋ, ಅದು ನಿಜವಾಗೋದ್ರೊಳಗೆ ಪ್ರತಿಪಕ್ಷದವರು ರಾಜೀನಾಮೆ ಕೊಡಿ ಅಂತ ಏನಾದ್ರೂ ಒತ್ತಾಯ ಮಾಡಿದ್ರೆ, ಅಥವಾ ಕೆಲವು ಶಾಸಕ್ರು ಅಸಮಧಾನ ಅಂತ ಹಿಂದಕ್ ಸರದ್ರೆ - ಇದೆಲ್ಲದರ ಬೆಲೆಯನ್ನ ನಮ್ ಜನ ಯಾಕೆ ಮತ್ತೊಂದ್ ಎಲೆಕ್ಷನ್ ಹೆಸರ್ನಲ್ಲಿ ತೆರಬೇಕು ಅಂತೀನಿ.

ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಒಳ್ಳೇದನ್ನೇ ಮಾಡಿದ್ರು, ದಳ ತಂದುಕೊಡಲಾರದ ಅಧಿಕಾರವನ್ನ ಕಾಂಗ್ರೇಸ್ ಆದ್ರೂ ತಂದ್ ಕೊಡುತ್ತಾ ಅಂತ ನೋಡೋಣ. ಆ ಮನುಷ್ಯನಿಗೆ ಇನ್ನೇನು ಇಲ್ಲ, ಒಂದು ದಿನದ ಮಟ್ಟಿಗಾದ್ರೂ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದು ಅವರ ಆಶಯ ಅಂತ ಎಲ್ಲರಿಗೂ ಗೊತ್ತು.

ನಮ್ ನಿಜವಾದ ಸಮಸ್ಯೆ ಏನೂ ಅಂದ್ರೆ ನಾಯಕರ ಕೊರತೆ. ಈ ಗಣಿ ವಿವಾದ ಹೇಗಾದ್ರೂ ಬೇಕಾದ್ರೆ ಬಗೆ ಹರೀಲಿ, ಆದ್ರೆ ಮುಂದೆ ಬರೋ ಸರ್ಕಾರ ಯಾವ ಪಕ್ಷದ್ದೇ ಆಗಲಿ ಅಲ್ಲಿ ಯಶಸ್ವಿಯಾದ ನಾಯಕರು ಯಾರು? ಪಕ್ಷಕ್ಕೆ ಸರಿಯಾದ ನಾಯಕ, ರಾಜ್ಯಕ್ಕೆ ಸರಿಯಾದ ಆಡಳಿತಗಾರರು ಇಲ್ದೇ ಹೋದ್ರೆ ನಮ್ ಕರ್ನಾಟಕದ ಗತಿ ಏನೂ ಅಂತ ಒಮ್ಮೆ ಊಹಿಸಿಕೊಂಡಾಗಿನಿಂದ ಹೆಸರಿಕೆಯಾಗತೊಡಗುತ್ತೆ. ಸುಮ್ನೇ ಸೇಡ್ ತೀರಿಸ್‌ಕೊಳ್ಳೋಕೋ ಅಥವಾ ತಮ್ಮ ಬೇಳೇ ಬೇಯಿಸ್‌ಕೊಳ್ಳೋಕೋ ಲಂಚದ ಆರೋಪ ಹೊರಿಸಿದೋರ ಆಟ ಬಿಟ್ಟು ನಿಜವೇನಾದ್ರೂ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಏನಾದ್ರೂ ಆಯ್ತು ಅಂತಂದ್ರೆ ಅದೇ ಜನಗಳಿಗೆ ಸಿಗೋ ಜಯ. ಇಲ್ಲಾ ಅಂತ ಅಂದ್ರೆ ಮುಂದೆ ಬರೋ ಒಂದೇನು ಹತ್ತು ಚುನಾವಣೆಯಿಂದ್ಲೂ ಯಾವ ಅನುಕೂಲಾನೂ ಆಗೋದಿಲ್ಲ. ಆರೋಪ, ಪ್ರತ್ಯಾರೋಪಗಳಿಂದ ಜನ ಅಧಿಕಾರ ಕಳಕೊಂಡ ಹಾಗೆ ಜೈಲೂ ಸೇರಿದ್ರೆ ಇವತ್ತು ಅದರ ಕಥೇನೇ ಬೇರೆ ಇರ್ತಿತ್ತು.

2 comments:

Anonymous said...

ಗೌಡ್ರು ಇನ್ನೂ ನಾಟ್ಕ ಆಡ್ತಿದಾರೆ ಗುರುವೆ. ಅತ್ಲಾಗ್ ನೀವ್ ಕೂತ್ಕೊಂಡು ಬರೆಯೋದ್ ಸುಲ್ಭ. ಇಲ್ ಕರ್ನಾಟಕ್ದಲ್ ಕೂತ್ಕೊಂಡ್ ನೀವ್ ಹಿಂಗ್ ಬರ್ದಿದ್ರೆ ನಾಳೆ ನಿಮ್ಮನ್ನಟ್ಟುಸ್ಕೊಂಡ್ ನಾಲಕ್ ಜನ ಬಂದಿರೋರು.

ವಾಸ್ತವ ಬೇರೆ ಏನೋ ಇದ್ದಂಗ್ ಅದೆ. ಇವೆಲ್ಲ್ ಪ್ರಿಪ್ಲಾನ್ಡ್ ಕಥೆ ಇರೋ ಹಾಗ್ ಅದೆ ನೋಡ್ರಿ. ನಿಮ್ಗ್ ಅಮೇರಿಕಾದಾಗ್ ಅರ್ಥ ಆಗೋ ಹಂಗಿಲ್ಲ ಬಿಡಿ!

Satish said...

ಹೌದು ಸ್ವಾಮಿ.
ಇಲ್ಲಿ ಕೂತಗಂಡ್ ನಮಗೆ ಏನು ಅರ್ಥ ಆಗೋಲ್ಲ ಅನ್ನೋದ್ ಬರೆದಿದ್ರೆ ಚೆನ್ನಾಗಿತ್ತು, ನಮಗೇನ್ ಅರ್ಥ ಆಗೋಲ್ಲ ಅನ್ನೋದೇ ಅರ್ಥ ಆಗ್ತಾ ಇಲ್ಲ!