Saturday, August 12, 2006

ಕನ್ನಡದಲ್ಲಿ ಹಾಸ್ಯ ಬರಹ/ಕಥೆ

ಕನ್ನಡದಲ್ಲಿ ಹಾಸ್ಯ ಬರಹಗಳ ಬಗ್ಗೆ ಬರೀ ಬೇಕು ಅಂತ ಬಹಳ ದಿನಗಳಿಂದ ಅಂದ್‌ಕೊಳ್ತಾನೇ ಇದ್ದೆ, ಆದ್ರೆ ಇಲ್ಲೀವರೆಗೂ ಅದು ಸರಿ ಅಂತ ಅನ್ಸಿರಲಿಲ್ಲ, ಆದ್ರೂ ಈ ಸಮಯದಲ್ಲಿ ನನ್ನ ಮನಸ್ಸಿಗೆ ಬಂದದ್ದನ್ನ ಬರೆದೆ ಅಂತ ಅಂದ್ರೆ ಒಂದ್ ಕಲ್ ಚಪ್ಪಡಿ ಭಾರ ಕಳೀತು ಅಂದುಕೋತೀನಿ. ಆದ್ರೆ, ನೀವು ಇದನ್ನ ಓದಿ ಕಲ್ ತಗೊಂಡ್ ನನ್ ಕಡೆ ಬಿಸಾಕೋಕ್ ಮೊದಲು ನನ್ನ ಇತಿ-ಮಿತಿ ಹೇಳ್ಕೊಂಬಿಡ್ತೀನಿ, ಅದರ ಮೇಲೆ ನೀವ್ ಏನ್ ಮಾಡ್ತೀರಿ ಅನ್ನೋದು ನಿಮಗೆ ಬಿಟ್ಟದ್ದು!

ನಾನು ಒಂಥರಾ - ಯಾಕೆ ಒಂಥರಾ ಅಂದ್ರೆ, ಈ ಬದುಕು ಅನ್ನೋ ನಾಟಕದಲ್ಲಿ ಅನಿವಾಸಿ ಪಾರ್ಟ್ ಸಿಕ್ಕು ಅದನ್ನ ಇವತ್ತಿಗೋ ಆಡ್ತಾ ಇರೋ ಹೊತ್ತಿಗೆ ನಮ್ ಕನ್ನಡ ನಾಡಲ್ಲಿ ಏನೇನೋ ಡೆವಲಪ್‌ಮೆಂಟ್ ಎಲ್ಲಾ ಆಗಿ ಹೋಗ್ತಾ ಇದ್ದಾವೆ, ಅದನ್ನ ಒಂದು ದಶಕದ ಮಟ್ಟಿಗೆ ಮಿಸ್ ಮಾಡ್‌ಕೊಂಡಿದ್ದೀನಿ. ನಮ್ ಸಮಾಜವಾಹಿನಿಗಳಾದ ರೆಡಿಯೋ, ಟಿವಿ ಹಾಗೂ ಹಲವಾರು ಪತ್ರಿಕೆಗಳನ್ನ ನಾನು ಇಷ್ಟೊಂದು ವರ್ಷ ಮಿಸ್ ಮಾಡ್‌ಕೊಂಡಿರೋದ್ರಿಂದ ನನ್ನ ಬೆಳವಣಿಗೆಯಲ್ಲಿ ಕನ್ನಡ ನಾಡಿನ ವಿಷಯಗಳು ಬಂದ್ರೆ - ಅಂದ್ರೆ, ಸಾಹಿತ್ಯ, ಸಂಗೀತ, ರಾಜಕೀಯ, ದೈನಂದಿನ ಆಗುಹೋಗುಗಳು, ರೇಡಿಯೋ/ಟಿವಿ ಕಾರ್ಯಕ್ರಮಗಳು ಇವನ್ನೆಲ್ಲ ಕೇಳಿಲ್ಲ/ನೋಡಿಲ್ಲ - ನನ್ ಹಣೇಬರಹಕ್ಕೆ, ಅದು ಹೆಂಗಾದ್ರೂ ಇರಲಿ, ಇವತ್ತಿಗೂ ಕಾಸರವಳ್ಳಿ ದ್ವೀಪ, ಹಸೀನಾ ಸಿನಿಮಾ ನೋಡಿಲ್ಲ, ಟಿಎನ್‌ ಸೀತಾರಾಮ್‌ದೂ ಒಂದೂ ಸಿರಿಯಲ್ ನೋಡಿಲ್ಲ, ಅದರ ಜೊತೇನಲ್ಲಿ ಸಂಕ್ರಾಂತಿಯಾಗಲಿ, ಪಾಪ-ಪಾಂಡುವಾಗಲಿ, ಕುಬೇರಪ್ಪ ಅಂಡ್ ಸನ್ಸ್ ಆಗಲಿ ನೋಡಿಲ್ಲ. ವಿಷ್ಯಾ ಹೀಗಿದ್ದು, ನಾನ್ಯಾವ ಅಥಾರಿಟಿಯಿಂದ ಕನ್ನಡ ಸಾಹಿತ್ಯ/ಸಿನಿಮಾ/ಕಿರುತೆರೆಯಲ್ಲಿ ಬರೋ ಸಾಹಿತ್ಯದ ಮೇಲೆ, ಹಾಸ್ಯದ ಮೇಲೆ ಮಾತಾಡ್ಲಿ? ಅದಕ್ಕೋಸ್ಕರನೇ ಈ ಬರಹ ಬರೆಯೋಕ್ ಆಗ್ದೇ ಇಷ್ಟು ದಿನಾ ಸುಮ್ನೇ ಇದ್ದದ್ದು. ಆದ್ರೆ, ಆವಾಗವಾಗ ನನ್ನ ಸುಬ್ಬನ ಕಥೆಗಳನ್ನು ನೆನಪಿಸಿಕೊಂಡು ಎಷ್ಟೋ ಜನ ಕೇಳ್ತಿರ್ತಾರೆ, ಒಂದು ರೀತಿ ಒರಿಜಿನಲ್ ಹಾಸ್ಯ ಬರಹ ಬರೆಯೋದು ದೊಡ್ಡ ಚಾಲೆಂಜೇ ಸರಿ, ಅದು ನನ್ ಕೈಯಲ್ಲಿ ಆಗೋಲ್ಲ ಅಂತಾನೇ ಸುಮ್ನೇ ಇದ್ದದ್ದು ಅಂದ್ರೂ ಸಹ, ಒಂದು ಮನಸು ಯಾಕೆ ಪುನಃ ಬರೆಯೋಕ್ ಪ್ರಯತ್ನಾ ಮಾಡ್‌ಬಾರ್ದು ಅಂತ ಕೇಳಿಕೊಳ್ತಾನೇ ಇದೆ!

ಕನ್ನಡ ಹಾಸ್ಯವನ್ನು ನೋಡ್ಲಿಲ್ಲ ಅಂದ ಮಾತ್ರಕ್ಕೆ ಉಳಿದದ್ದೆನ್ನೆಲ್ಲ ಸುಮ್ನೆ ಬಿಟ್ಟೆ ಅಂತ ಅರ್ಥ ಅಲ್ಲ, ಇಲ್ಲಿಗೆ ಬಂದ ಮೇಲೆ ಹಲವಾರು ಚಾನೆಲ್ಲುಗಳಲ್ಲಿ ಬೇಕಾದಷ್ಟು ವರ್ಷ ಸೈನ್‌ಫೆಲ್ಡ್, ಫ್ರೆಂಡ್ಸ್, ಹನಿಮೂನರ್ಸ್, ಚೀಯರ್ಸ್, ಥ್ರೀಸ್ ಕಂಪನಿ, ಟೈಟಸ್, ಅಕ್ಕಾರ್ಡಿಂಗ್ ಟು ಜಿಮ್, ಜಾರ್ಜ್ ಲೋಪೆಝ್, ಕಿಂಗ್ ಆಫ್ ಕ್ವೀನ್ಸ್, ಎವರಿಬಡಿ ಲವ್ಸ್ ರೇಮಂಡ್, ಫ್ರೇಜರ್, ಮುಂತಾದ ಸಿಟ್‌ಕಾಮ್‌ (situation comedy) ಗಳನ್ನು ಮನತಣಿಯೆ ನೋಡಿ ಆನಂದಿಸಿದ್ದೇನೆ. ಇವುಗಳಲ್ಲಿ ಚೀಯರ್ಸ್, ಥ್ರೀಸ್ ಕಂಪನಿ ಹಾಗೂ ಸೈನ್‌ಫೆಲ್ಡ್‌ಗಳ ಹೆಚ್ಚೂ ಕಡಿಮೆ ಎಲ್ಲ ಎಪಿಸೋಡ್‌ಗಳನ್ನೂ ನೋಡಿ ಅದರ ಸ್ಕ್ರಿಪ್ಟನ್ನೂ ಸಹ ಓದಿದ್ದೇನೆ. ತುಂಬಾ ಎತ್ತರದಿಂದ ಇವುಗಳ ಕ್ವಾಲಿಟಿಯನ್ನೆಲ್ಲ ಒಂದೇ ಸಾಲಿನಲ್ಲಿ ಅಳೆದು ಬರೀ ಬೇಕು ಅಂದುಕೊಂಡ್ರೆ - ಇವುಗಳ ಕಲಾವಿದರಲ್ಲಿ ಹೆಚ್ಚಿನವರು ಬ್ರಾಡ್‌ವೇ ಮಟ್ಟದವರು, ಹಾಗೂ ಈ ಸ್ಕ್ರಿಪ್ಟ್‌ಗಳನ್ನು ಬರೆದವರು ತಕ್ಕಮಟ್ಟಿಗೆ ಅವರವರ ಒರಿಜಿನಾಲಿಟಿಯಲ್ಲಿ ಬರೆದರೂ ಅವರ ಗಾಢ ಪ್ರತಿಭೆ, ವಿಷಯ ಹಾಗೂ ಸಾಮಾನ್ಯ ಜ್ಞಾನದ ಹರಿವು ಬೇಕಾದಷ್ಟು ಎದ್ದೆದ್ದು ಕಂಡುಬರುತ್ತೆ.

ಏನಪ್ಪಾ, ಇವ್ನು ಇಂಗ್ಲೀಷ್ ಹಾಸ್ಯ ಧಾರಾವಾಹಿಗಳನ್ನ ಕನ್ನಡಕ್ಕೆ ಹೋಲ್ಕೆ ಮಾಡಿ ಬಯ್ಯೋಕ್ ಶುರುಮಾಡ್ತಾನೆ ಅಂತ ಕೂತಲ್ಲೇ ಹಾರ್‌ಬೇಡಿ - ಇಲ್ಲೀವರೆಗೂ ನನಗನ್ನಿಸಿದ ಹಾಗೆ ಚೆನ್ನಾಗಿರೋದನ್ನ ಹಾಗಿದೆ ಅಂತ ಹೇಳಿದ್ದೀನಿ ಅಷ್ಟೇ!

ನಾನು ಇನ್ನೂ ಉದಯ ಟಿವಿ ಹಾಕ್ಸಿಲ್ಲ, ಆದ್ರೆ ನನ್ ಸ್ನೇಹಿತರೊಬ್ಬರಿಗೆ ಒಂದು ವಾರದ ಧಾರಾವಾಹಿಗಳೆಲ್ಲವನ್ನೂ ಟೇಪ್‌ನಲ್ಲಿ ರೆಕಾರ್ಡ್ ಮಾಡಿಕೊಡಿ ಅಂತ ಕೇಳಿಕೊಂಡು ಅವರ ಸಹಾಯದಿಂದ ಯಾವ್ಯಾವ್ದೋ ಸಿರಿಯಲ್‌ಗಳನ್ನೆಲ್ಲ ನೋಡಿದ್ದಕ್ಕೆ ನನ್ನ ಉಸಿರು ನಿಂತ್ ಹೋಗೋದೊಂದ್ ಬಾಕಿ ಇತ್ತು - ಒಂದೇ ಸಾಲಿನಲ್ಲಿ ಹೇಳೋದಾದ್ರೆ ಹೆಚ್ಚಿನವುಗಳಲ್ಲಿ ಯಾವುದೇ ತೂಕ, ಕ್ವಾಲಿಟಿ - ನಟನೆ ಹಾಗೂ ಬರಹದ ದೃಷ್ಟಿಯಿಂದ - ಕಂಡುಬರಲಿಲ್ಲ, ಎಲ್ರೂ ಒಂಥರ ನಾವೀಸ್ ಆಗಿ ಕಂಡ್ ಬಂದ್ರು, ಕ್ಯಾಮೆರಾ ಚಾಲನೆಯಿಂದ ಹಿಡಿದು, ಹಿನ್ನೆಲೆ ಸಂಗೀತದಿಂದ ಹಿಡಿದು, ಸಂಭಾಷಣೆಗಳವರೆಗೆ ಬಹಳ ಸಪ್ಪೆಯಾಗಿತ್ತು - ಹಂಗಂತ ಎಕ್ಸೆಪ್ಷನ್ ಇಲ್ಲ ಅಂತೇನೂ ಇರ್ಲಿಲ್ಲ - ಕ್ವಾಲಿಟಿ ಅನ್ನೋದು ಎಕ್ಸ್‌ಪ್ಷನ್ ಆಗಿತ್ತೇ ವಿನಾ ನಾರ್ಮ್ ಆಗಿರಲಿಲ್ಲ. ಒಂದು ಕಡೆ ತುಂಬಾ ದುಃಖಾ ಆಯ್ತು - ಕೈಲಾಸಂ, ಬೀಚಿ, ಗೊರೂರ್ ಮುಂತಾದೋರ್ ಹಾಸ್ಯ ಓದ್ ಬೆಳದೋನ್ ನಾನು, ಆ ಮಟ್ಟಿನ ಒರಿಜಿನಾಲಿಟಿ ಇಲ್ವೇ ಇಲ್ಲ ಅನ್ನಿಸ್ತು. ಅಲ್ಲಿಂದ ಇಲ್ಲಿಂದ ಫಾರಿನ್ ಸಂಸ್ಕೃತಿ ಅಂದ್ರೆ ಬರೀ ಕೋಕ್ ಕುಡಿಯೋದನ್ನ ಮಾತ್ರ ಅಳವಡಿಸಿಕೊಳ್ಳೋ ಮಂದಿಗೆ ಪ್ರಪಂಚದಾದ್ಯಂತ ಉಳಿದವರು ಹೆಂಗಿದ್ದಾರೆ ಎಂದು ನೋಡೋ ವ್ಯವಧಾನಾನೂ ಇಲ್ವೇ ಎಂದು ಖೇದವಾಯ್ತು. ನನ್ ಹತ್ರ ಒರಿಜಿನಾಲಿಟಿ ಇಲ್ಲದಿದ್ರೇನಂತೆ ಕೊನೇಪಕ್ಷ 'ಹಿಂಗೂ ಮಾಡ್‌ಬಹುದು' ಅನ್ನೋ ಐಡಿಯಾಕ್ಕೊಸ್ಕಾರಾನಾದ್ರೂ ನಾನು ಅದೂ-ಇದೂ ಓದ್ತೀನಿ, ಏನೇನೆಲ್ಲಾ ನೋಡ್ತೀನಿ. ಸ್ಪೂರ್ತಿ ಪಡೆಯೋದರಲ್ಲಿ ಏನೂ ತಪ್ಪಿಲ್ಲ, ಅಲ್ಲಿಂದ ಇದ್ದ ಹಾಗೇ ಇದ್ದುದನ್ನು ಕದ್ದು ತರೋದೂ ಅಲ್ದೇ ಅದನ್ನು ತನ್ನದು ಎನ್ನೋದರಲ್ಲಿ ತಪ್ಪಿದೆ.

ನಾನ್ ಬರೆದ್ರೆ ನನಗೇ ಹೆದರಿಕೆ ಆಗುತ್ತೆ, ಪ್ರತಿಸಾರಿ ಬರೆದು ಮುಗಿಸಿ 'ಪಬ್ಲಿಷ್' ಮಾಡಿದಾಗ್ಲೂ this is another piece of junk ಅನ್ಸುತ್ತೆ, ಆದ್ರೆ ನಾನು ಬರೆಯೋದರ ಉದ್ದೇಶ ನನಗೊಂದು ಶಿಸ್ತು ಬರಲಿ, ನೂರು ಬರೆದ್ರೆ ಎರಡಾದ್ರೂ ಒಳ್ಳೇದಿರಲಿ ಅನ್ನೋದು. ನನಗೂ ನನ್ನದೇ ಆದ ಸೃಜನಶೀಲತೆ ಅನ್ನೋದಿದೆ, ಅದನ್ನ ಪ್ರತಿಭೆಯ ಮಟ್ಟದಲ್ಲಿ ನಾನು ಬೆಳೆಸೋಕಾಗುತ್ತೋ ಇಲ್ವೋ, ಅದಕ್ಕೆ ತಕ್ಕ ಪರಿಶ್ರಮ ಪಟ್ರೆ ಒಂದು ಸುಮಾರಾದ ಲೇಖನವನ್ನಾದರೂ ಬರೀತೀನಿ ಅನ್ನೋದು ನನ್ನ ವಿಶ್ವಾಸ. ಅಷ್ಟೂ ಮಾಡಿ ನಾನು ಇದನ್ನ ಪುಲ್‌ಟೈಮ್ ಏನ್ ಮಾಡ್ತಾ ಇಲ್ವಲ್ಲ - ದಿನದ ನಲವತ್ತೆಂಟು ಅರ್ಧ ಘಂಟೆಗಳಲ್ಲಿ ನಾನು ಕೇವಲ ಒಂದು ಅರ್ಧ ಘಂಟೆ ಮಾತ್ರ ಇದಕ್ಕೆ ವ್ಯಯಿಸ್ತೀನಿ. ಆದ್ರೆ, ಅದೇ ಇದನ್ನೇ ನಾನು ಫುಲ್‌ಟೈಮ್ ಮಾಡಿ ಇದರಿಂದಲೇ ನಮ್ಮನೆ ಒಲೆ ಉರಿಯೋದು ಅಂತಾದ್ರೆ ನಾನು ಎಷ್ಟೋ ದಿನ ನಿದ್ದೇನೆ ಮಾಡ್ದೇ ಗೇಯೋಕ್ ಸಿದ್ಧಾ ಇದ್ದೀನಿ/ಇರ್ತೀನಿ. ಯಾಕ್ ಈ ಮಾತು ಹೇಳ್ದೆ ಅಂದ್ರೆ ನಮ್ಮವರೆಲ್ಲ ಎಲ್ಲಿ ಆತುರಕ್ಕೆ ಸಿಕ್ಕು ಈ ರೀತಿ ಅರೆಬೆಂದ ಕೆಲ್ಸಾ ಮಾಡ್ತಾರೋ ಅನ್ನಿಸಿದ್ದರಿಂದ. ನಮ್ಮಲ್ಲಿನ ಪ್ರತಿಭೆಗಳೆಲ್ಲ ಎಲ್ಲಿ ಹೋದ್ವು ಹಾಗಾದ್ರೆ? ಅನ್ನೋದಕ್ಕೆ ನನ್ನಲ್ಲ್ ಉತ್ರ ಇಲ್ಲ - 'ಹೆಚ್ಚಿನವು ಪರದೇಶಕ್ಕೆ ಹೋಗವೆ' ಎಂದು ಕಿಸಕ್ಕನೆ ನಕ್ಕು ಹಲ್ ಕಿರಿಯೋರ್ ಮುಂದೆ ನನ್ನ ಸಲಾಮ್ ಅಷ್ಟೇ, ಯಾಕಂದ್ರೆ ಪರದೇಶಕ್ಕೆ ಬಂದ ಮೇಲೇನೇ ನನಗೆ ಬದುಕನ್ನೋದ್ ಏನು ಅಂತ ಸ್ವಲ್ಪ ಮಟ್ಟಿಗಾದ್ರೂ ಅರ್ಥ ಆಗಿದ್ದು, ಸಮಾಜದಲ್ಲಿ ನೆಟ್ಟಗೆ ನಿಲ್ಲೋಕ್ ಶಕ್ತಿ ಬಂದಿದ್ದು.

ಕಣ್ಣೀರಿನ ಕೋಡಿ ಹುಟ್ಟು ಹಾಕೋ ಧಾರಾವಾಹಿಗಳ ಜೊತೆಗೆ ನಮ್ಮ್ ಜನಕ್ಕೆ ನಿಜವಾದ ಒರಿಜಿನಲ್ ಮನರಂಜನೆ ಕೊಡಬೇಕು ಅನ್ನೋದು ನನ್ನ ಬಹಳ ಉದ್ದವಾದ ಕನಸುಗಳಲ್ಲಿ ಒಂದು. ಹೊರದೇಶಗಳ ಸಿಟ್‌ಕಾಮ್ ಗಳಿಂದ ಪ್ರಭಾವಿತನಾಗಿ ನಮ್ಮದೇ ಒಂದು ಒರಿಜಿನಲ್ ಸಿಟ್‌ಕಾಮ್ ಕೊಡಬೇಕು, ಅದರ ಥರಾವರಿ ಸ್ಕ್ರಿಪ್ಟ್‌ಗಳನ್ನ ಬರೀಬೇಕು, ಅಲ್ಲಿ-ಇಲ್ಲಿ ಈಗಾಗ್ಲೇ ಬರೆದದ್ದನ್ನ ಓದಬೇಕು - ಸಿನಿಮಾ ತಂತ್ರಜ್ಞರ ಜೊತೆ ಚರ್ಚಿಸಬೇಕು, ಇತ್ಯಾದಿ ಇತ್ಯಾದಿ - ಆಸೆಗಳಿಗೇನು ಒಂದ್ ಸಾವ್ರ. ಇವತ್ತಲ್ಲ ನಾಳೆ, ಈ ಜನ್ಮದಲ್ಲಿ ಅಲ್ದಿದ್ರೆ ಮುಂದಿನ ಜನ್ಮದಲ್ಲಾದ್ರೂ ಹಾಗ್ ಆಗ್ಲಿ/ಆಗುತ್ತೆ. ಆದ್ರೆ, ನಮ್ ಬರಹಗಾರ್ರು ತಮ್ಮ ಸ್ವಂತ ಪ್ರತಿಭೆಯನ್ನ ಬರಹದಲ್ಲಿಳಿಸಬೇಕು, ಎಲ್ಲಿಂದ ಬೇಕಾದ್ರೂ ಸ್ಪೂರ್ತಿ ಪಡೀಲಿ ಆದರೆ ವಸ್ತುಗಳನ್ನ ಹಾರಿಸಿ ತರಬಾರ್ದು - ಸ್ವಂತ ಕನ್ನಡದ ಹಿನ್ನೆಲೆನಲ್ಲಿ ಒಂದೆರೆಡು ಧಾರಾವಾಹಿಗಳು ಬಂದ್ರೆ (ನಾನ್ ಹೇಳ್ತಾ ಇರೋದು ಶುದ್ಧ ಹಾಸ್ಯವನ್ನು ಕೇಂದ್ರವಾಗಿಟ್ಟುಕೊಂಡು) ಮುಂದೆ ಅದೇ ಬೆಳೆದು ದೂಡ್ಡ ಹೆಮ್ಮರವಾಗುತ್ತೆ ಅನ್ನೋದು ನನ್ನ ಆಶಯ.

ಏನಂತೀರಿ?

'ದಾರಿ-ದೀಪ'ದಲ್ಲಿ ನಿಮ್ಮನ್ನೇಕೆ ಕೆಲಸಕ್ಕೆ ತಗೋಬೇಕು?

ನಿಮ್ಮನ್ನೇಕೆ ಕೆಲಸಕ್ಕೆ ತಗೋಬೇಕು?

http://daari-deepa.blogspot.com/2006/08/blog-post_115537875798966081.html#links

Thursday, August 10, 2006

ಜಲದಲ್ಲೂ ಬಾಂಬು!

ಓಹ್, ಮೊಟ್ಟ ಮೊದಲ ಬಾರಿಗೆ ಹಲವಾರು ವಾರಗಳ ನಂತರ ಮಿಡ್ಲ್ ಈಸ್ಟ್ ಸುದ್ದಿಗಳೇ ಕೇಳ್ಲಿಲ್ಲ - ಅಲ್ಲಿ ಅಷ್ಟು ಜನ ಸತ್ರು, ಇಲ್ಲಿ ಇಷ್ಟು ಜನ ಸತ್ರು ಅನ್ನೋ ಸುದ್ದಿ ಬಾಂಬುಗಳಿಲ್ಲ, ಇವೆತ್ತೆಲ್ಲ ಬರೀ ಅದೇನೋ ನೀರಿನಲ್ಲಿ ಬಂಗಾರವನ್ನು ಹುಡುಕೋರ್ ಹಾಗೆ ಜಲದಲ್ಲೂ ಅಡಗಿದ ಸ್ಪೋಟಕಗಳ ಪತ್ತೆಗೇ ಪ್ರಪಂಚವೆಲ್ಲ ಮೀಸಲಾದಂಗಿತ್ತು. ಒಂದು ಕಡೆ ಕೆಟ್ಟದ್ದನ್ನು ಮಾಡಬೇಕು ಅನ್ನೋರು ಮತ್ತೊಂದು ಕಡೆ ಇಂಥವರನ್ನು ಹಿಡಿದು ಮಟ್ಟ ಹಾಕಬೇಕು ಅನ್ನೋರು ಇವರಿಬ್ಬರ ಮಧ್ಯೆ ಸ್ಪರ್ಧೆ ಏರ್ಪಟ್ಟಹಾಗೆ ಕಾಣ್ಸುತ್ತೆ.

ಮೊದಲೆಲ್ಲ ಇಲ್ಲಿನ ಏರ್‌ಪೋರ್ಟ್‌ಗಳಲ್ಲಿ ಚಾಕು, ಚೂರಿ, ಬ್ಲೇಡು ಮೊದಲಾದ ಅಡ್ಡಕಸುಬಿಗಳ ಉಪಕರಣಗಳನ್ನ ಕಸಿದುಕೊಂಡು ಬುಟ್ಟಿಯಲ್ಲಿ ಹಾಕ್ಕೊತಿದ್ರು, ಈಗ ಅದನ್ನ ಪಾನೀಯಗಳ ಮಟ್ಟಿಗೆ ಏರಿಸಿಬಿಟ್ಟಿದ್ದಾರೆ, ಪಾನೀಯಗಳು ಅಂದ್ರೆ ಬರೀ ನೀರು, ಕೊಕ್ಕಾಕೋಲ ಅಷ್ಟೇ ಅಲ್ಲ, ಅದರ ಜೊತೆಯಲ್ಲಿ ಬಿಯರ್, ಬ್ರ್ಯಾಂಡಿ, ವೈನು ಮುಂತಾಗಿ ವೈನಾಗಿರೋದನ್ನೆಲ್ಲ ಕಸಗೋತಿದ್ದಾರಂತೆ! ಬಹುಷಃ ಒಬ್ಬೊಬ್ಬ ಏರ್‌ಪೋರ್ಟಿನ ಎಂಪ್ಲಾಯಿ ಎಷ್ಟು ಕಸಗೋತಾನೋ ಅದರಲ್ಲಿ ಹತ್ತು ಪರ್ಸೆಂಟ್ ಬಾಟ್ಲಿಗಳನ್ನು ಅವನು ಮನೆಗೆ ತೆಗೆದುಕೊಂಡು ಹೋಗೋ ಹಾಗೆ ಮಾಡ್ತಾರೇನೋ ಅನ್ನೋಷ್ಟು ಹುಮ್ಮಸ್ಸು ಕಾಣಿಸ್ತಾ ಇದೆ. ಅದ್ಸರಿ ಮುಂಚೆಲ್ಲ ಡ್ಯೂಟೀ ಫ್ರೀ ಅಂತ ಏರ್‌ಪೋರ್ಟಲ್ಲೇ ತುಂಬಿದ ಬಾಟಲಿಗಳನ್ನ ಮಾರ್ತಾ ಇದ್ರಲ್ಲ, ಈಗ ಅವ್ರೆಲ್ಲ ಏನ್ ಮಾಡ್‌ಬೇಕೋ ಹೊಟ್ಟೆಗೆ? ಅಥ್ವಾ ಅಲ್ಲಿ ಡ್ಯೂಟೀ ಫ್ರೀ ಅಂತ ತಗೊಂಡು ಅಲ್ಲೇ ಆ ಬಾಟಲಿಗಳ ಕಥೆ ಮುಗಿಸಬಾರದೂ ಅಂತ ಏನೂ ಕಾನೂನು ಇಲ್ಲವಲ್ಲಾ? ಅದಿಲ್ಲಾ ಅಂದ್ರೂ ಇವತ್ತಿಂದ ಏರ್‌ಪೋರ್ಟಲ್ಲಿ ಬೆಳೆಯೋ ಹನುಮಂತನ ಬಾಲದ ಸಾಲುಗಳನ್ನು ಮುಗಿಸೋ ಹೊತ್ತಿಗೆ ಬಾಟಲಿಗಳ ಕಥೆ ಇರಲಿ ಮತ್ತೊಂದು ಜನ್ಮಾನೇ ಎತ್ತಿ ಬರಬೇಕಾಗುತ್ತೆ.

ಇವತ್ತು ಪಾನೀಯಗಳಲ್ಲಿ ಬಾಂಬ್ ಇಡೋದನ್ನ, ಇಟ್ಟಿದ್ದನ್ನ ಹುಡುಕೋ ವಿಧಿ ಕಂಡು ಹಿಡಿದ್ರೋ ಇನ್ನು ನಾಳೆ ಪೌಡರ್ರು ಅಂತ ಒದ್ದಾಡ್ತಾರೇ ನೋಡ್ತಾ ಇರಿ! ಅವಾಗ ಮುಖಕ್ ಹಚ್ಚೋ ಪೌಡರ್ ಇರ್ಲಿ, ನಮ್ಮೂರ್ ಸವಕಾರ್ರುಗಳು ಮೂಗಿಗ್ ಏರ್ಸೋ ನಶ್ಯೆ ಪುಡೀನೂ ಬಿಡೋದಿಲ್ಲ, ಅದರ ಬದಲಿಗೆ 'ವಿಮಾದಲ್ಲೇ ನಶ್ಯೆ ಸರಬರಾಜು ಮಾಡಲಾಗುವುದು' ಅಂತ ಬೋರ್ಡ್ ಹಾಕೋ ಕಾಲ ದೂರ ಇಲ್ಲಾ ಅಂದೆ. ನೆಲದಿಂದ ಜಲ, ಜಲದಿಂದ ಪುಡಿಗೆ ಬೆಳೆದ ಬಾಂಬ್ ತಂತ್ರಜ್ಞಾನ ಒಮ್ಮೆಲೇ 'ಗಾಳಿಯಲ್ಲೇ ಬಾಂಬ್' ಅನ್ನೋ ಮಟ್ಟಕ್ಕೆ ಏರಿದ್ರೆ ಏನ್ ಗತಿ ಅಂತ ಯೋಚ್ನೆ ಮಾಡೋ ಹೊತ್ತಿಗೆ ತೂಕಡಿಕೆ ಬಂದೋಯ್ತು ನೋಡಿ, ಅದಿರ್ಲಿ ಈ ತಂತ್ರಜ್ಞಾನ ಯಾವತ್ತೋ ಬಂದ್ ಹೋಗಿದೆಯಲ್ವಾ ಅಂತ ತಲೆ ತುರಿಸಿಕೊಂಡಾಗ ನಮ್ ಆಫೀಸಿನ ಎಲಿವೇಟರ್‌ಗಳಿಗೂ-ಗಾಳಿಯಲ್ಲಿ ಹಾಕೋ ಬಾಂಬ್‌ಗಳಿಗೂ ಎಲ್ಲಿಂದಲೋ ಸಂಬಂಧ ಬೆಳೆದು ಮೂಗು ಮುಚ್ಚಿಕೊಳ್ಳೋ ಹಾಗಾಯ್ತು! ಅದನ್ನೇ ನಾನು ಪೊಲೈಟ್ ಆಗಿ ಯಾರೋ ೨೦೦೦ ಡಾಲರಿನ ಸೆಂಟಿನ ಬಾಟಲಿ ಮುಚ್ಚುಳ ತೆಗೆದಿದ್ದು ಅಂತ ಪ್ರಶ್ನೆ ಕೇಳೋ ಮೂಲಕ ಗಾಳಿಯಲ್ಲಿನ ಬಾಂಬಿಗೆ ಒಂದು ಸವಾಲೇ ಎಸೆದುಬಿಡ್ತೀನಿ.

ಇವತ್ತು ಲಂಡನ್ ಹೀತ್ರೋನಲ್ಲೆಲ್ಲ ಹೆದರ್‌ಕೊಂಡಿದ್ರಂತೆ, ಬುಷ್ಷೂ-ಬ್ಲೇರೂ ಬುಸುಗುಡ್ತಾ ಇದ್ರಂತೆ, ಬ್ರಿಟನ್ ಪೋಲೀಸ್ರೂ ಕಂಡ್‌ಕಂಡೋರ್ನೆಲ್ಲ ಒಳಗಡೆ ಸೇರಿಸ್ತಾ ಇದ್ರಂತೆ - ಸುಮಾರು ಎಂಟು ತಿಂಗಳಿಂದ ಏನೇನೋ ಕಿತಾಪತಿ ನಡೆಸವ್ರೇ - ಈ ಮಿಡ್ಲ್ ಈಸ್ಟ್ ಹೊಡೆದಾಟವನ್ನ, ಇರಾಕಿನಲ್ಲಿ ನಡೆಯೋ ದಿನಕದನವನ್ನ ಬದಿಗೆ ತಳ್ಳೋದಕ್ಕೆ ಇವರೆಲ್ಲ ಸೇರಿಕೊಂಡ್ ಮಾಡಿರೋ ಪಿತೂರಿ ಅಂತನೂ ಅಲ್ಲಿ-ಇಲ್ಲಿ ಕೇಳಿಬಂತು. ಕಂಡ್ ಕಂಡ್ ವಿಷ್ಯಾನೆಲ್ಲ ರಾಜಕೀಯ ಅನುಕೂಲಕ್ಕೋಸ್ಕರ ಬಳಸ್ಕೋತಾರೆ ಅಂತ ಆರೋಪ ಮಾಡೋರೂ ಸಹ ರಾಜಕಾರಣಿಗಳೇ, ಒಂಥರಾ ಕಳ್ರೇ ಕಳ್ಳರ ಮೇಲೆ ದೂರು ಹೇಳಿಕೊಂಡಂಗೆ! ಆ ವಾದ ಯಾವ್ ಕೋರ್ಟಲ್ಲಿ ಗೆಲ್ಲುತ್ತೋ ಆ ದೇವನೇ ಬಲ್ಲ. ಜಲದಲ್ಲಿ ಬಾಂಬಿನಿಂದ ಎಲ್ ನೋಡಿದ್ರೂ ಎಷ್ಟೊಂದ್ ಜನ ಸಾಯ್ತಿದ್ರು ಅಂತ ಅನುಕಂಪ ತೋರಿಸ್ತಾರೇ ವಿನಾ ದಿನಾ ಸಾಯೋರನ್ನ ಕೇಳೋರೇ ಇಲ್ಲವಲ್ಲ ಅಂತಾನೂ ಒಮ್ಮೊಮ್ಮೆ ಕೋಪಾ ಬರುತ್ತೆ ಇವರ್ನೆಲ್ಲಾ ನೋಡಿ, ಬರೀ ತಮ್‌ದೊಂದೇ ಜೀವಾ ಮಂದೀದೆಲ್ಲಾ ಒಣಗಿದ ಗರಟೇ ಚಿಪ್ಪೇ? ಈ ಪುಂಡ್‌ಪೋಕರಿಗಳನ್ನೆಲ್ಲ ಮಟ್ಟ ಹಾಕೋ ಹೊತ್ತಿಗೆ ಅಮಾಯಕರು ಬೆಲೆ ಕೊಡಬೇಕಾಗಿ ಬರೋದು ದಿನನಿತ್ಯದ ಕಥೆ ಆಗ್ಲಿಲ್ವೇ, ಬರೀ ವಿಮಾನ್‌ದಲ್ಲಿ ಓಡಾಡೋರ್ ಮಾತ್ರ ಮನಷ್ಯರಾ - ದಿನಾನೂ ನಮ್ ಕಣ್‌ಮುಂದೆ (ಅಂದ್ರೆ ಟಿವಿನಲ್ಲಿ ತೋರಿಸ್ದಂಗೆ) ಎಷ್ಟೋ ಜನ ಇವರುಗಳಾಡೋ ಆಟದಿಂದ ಸಾಯ್ತಾರಲ್ಲ ಅವರ ಬಾಯಿಗೆ ನೀರ್ ಬಿಡೋರ್ ಯಾರು? ಎಲ್ಲಾ ದೇಶ್‌ದೋರಿಗೂ ಅವರವರ ಜನಗಳ್ನ ರಕ್ಷಿಸೋದು ಮುಖ್ಯ ಕರ್ತ್ಯವ್ಯ ಅಂತ ಅಂದುಕೊಂಡು ಇಡೀ ಪ್ರಪಂಚಾನೇ ಹೊತ್ತಿ ಉರೀಲೀ ಅನ್ನೋದೇ ಇವರ ನೀತೀನಾ ಅಂತ ಎಷ್ಟೋ ಸರ್ತಿ ಪ್ರಶ್ನೆ ಹಾಕ್ಕೊಂಡ್ರೂ ಉತ್ರ ಸಿಕ್ಲಿಲ್ಲ. ನನ್ ಕೇಳಿದ್ರೆ, ಇವರುಗಳು ಶುರು ಮಾಡೋ ಯುದ್ಧ ಇವರುಗಳು ಅಂದ್‌ಕೊಂಡಂಗೆ ಇವರಿಗೇ ಕೊನೇ ಮಾಡೋದಕ್ಕೆ ಸಾಧ್ಯವಾಗ್ದೇ ಇರೋದ್ರಿಂದ್ಲೇ ಒಂಥರಾ ರಿಲೇ ಕೋಲಿನ ಹಾಗೆ ಇವರು ಕೊಟ್ಟ ಕೋಲು ಮತ್ತ್ಯಾರ ಕೈಗೆ ಸಿಕ್ಕಿ ಇವರ್ನೇ ಹೊಡ್ಯೋಕ್ ಬರೋದು.

ಆ ಆಫ್ರಿಕಾ ಖಂಡ ಕಗ್ಗತ್ತಲೆಯಿಂದ ಇನ್ನೂ ಕರಿದಾಗಿ ಹೋಗಿದೆ, ಮಧ್ಯ ಏಷ್ಯಾ/ಯೂರೋಪು ಹೊತ್ತಿಕೊಂಡು ಉರಿಯೋ ಬೆಂಕಿಯಿಂದ ನಾವೆಲ್ಲಾ ಬೆಂದಿದ್ದೂ ಆಯ್ತು, ಏಷ್ಯಾದಲ್ಲೂ ಆ ಮಿಂಜರು ಕಣ್ಣಿನೋರಿಗೆ ತಮ್ಮದೇ ಗತ್ತು, ಹೆಂಗ್ ಬೇಕಾದಂಗೆ ಮಿಸ್ಸೈಲ್‌ಗಳನ್ನ ಹಾರಿಸ್ಕೋತಾರೆ, ಒಬ್ಬರನ್ನೊಬ್ಬರು ನೋಡಿ ಮತ್ತೊಬ್ರು ಹೆದರ್ಕೋತಾರೆ, ರಷ್ಯಾದೋರಂತೂ ತಿನ್ನೋದಕ್ಕೆ ಬ್ರೆಡ್ ಇಲ್ಲದಿದ್ರೂ ವೆನ್ಯೂಜೆಲಾದಂತೋರ್ ಹತ್ರಾ ಬಿಲಿಯನ್ ಗಟ್ಟಲೆ ಹಣ ತಗೊಂಡ್ ಆಯುಧಗಳನ್ನೆಲ್ಲಾ ಮಾರ್ತಾರೆ, ಎಲ್ಲಾ ಕಡೆ ಮೂಲಭೂತವಾದಿಗಳು ಧರ್ಮಾ-ದೇವ್ರನ್ನ ಕೊಂಡ್‌ಕೊಂಡೋರಂಗೆ ಆಡೋಕ್ ಶುರು ಮಾಡ್‌ಕಂಡಿದಾರೆ. ಈ ಅಮೇರಿಕದೋರಂತೂ ತಮ್ಮ ಮಡ್ಲಲ್ಲೇ ನಲವತ್ತಾರ್ ವರ್ಷದಿಂದ ಕ್ಯೂಬಾದ ನಿರಕುಂಶ ಪ್ರಭುತ್ವವನ್ನು ಕಟ್ಟಿಕೊಂಡು, ಹತ್ತು ಜನ ಪ್ರಸಿಡೆಂಟ್‌ಗಳು ಬಂದ್ರೂ ಅದಕ್ಕೇನೂ ಮಾಡೋಕಾಗ್ದೇ ಇದ್ರೂನೂ, ಎಣ್ಣೇ ಇರೋ ಇನ್ಯಾವ್ದೋ ದೇಶಕ್ಕೆ ಪ್ರಜಾಪ್ರಭುತ್ವಾನಾ ಹಂಚೋಕ್ ಹೋಗ್ತಾರೆ. ಬುಷ್ಷೂ, ಬ್ಲೇರೂ ಮತ್ತೆ ಆ ಕಾಂಗರೂ ನಾಡಿನ ಒಂದಿಷ್ಟ್ ಜನ ಸೇರ್‌ಕೊಂಡು ಒಂದ್ ಪಡೆ ಅಂತ ಕಟ್ತಾರೆ - ಇಷ್ಟೆಲ್ಲಾ ಆಗಿ ಎರಡು ಸಾವಿರದ ಆರು ಬಂದು ಅರ್ಧ ವರ್ಷಾ ಆದ್ರೂ ಜಗತ್ತಿನಲ್ಲಿ ಶಾಂತಿ ನೆಲೆಸೋ ಮಾತೇ ಇಲ್ಲ ಅನ್ನಂಗಾಗಿದೆ. ಎಷ್ಟೋ ಜನಕ್ಕೆ ಇವತ್ತಿಗೂ ಅನ್ನಿಲ್ಲ, ನೀರಿಲ್ಲ - ಕೊನೇ ಪಕ್ಷ ಇಲ್ಲಿ ಏರ್‌ಪೋರ್ಟಲ್ಲಿ ಕಸಿದುಕೊಂಡು ಬುಟ್ಟಿ ತುಂಬಿಸಿಕೊಂಡ ಪಾನೀಯಗಳನ್ನೆಲ್ಲ ಅದೇ ಪ್ಲೇನಲ್ಲೇ ದಾಟಿಸಿ ಆಫ್ರಿಕಕ್ಕೆ ಕಳಿಸಿದ್ರೆ ಅಲ್ಲಾದ್ರೂ ಒಂದಿಷ್ಟ್ ಜನ ನೆಮ್ಮದಿಯಿಂದ ಉಸಿರು ಬಿಡ್ತಿದ್ರೋ ಏನೋ - ಒಂದ್ ಥರಾ ಪುಡ್ ಡ್ರೈವ್ ಇದ್ದಹಾಗೆ 'ಪಾನೀಯ ಕಸಿದುಕೊಳ್ಳುವಿಕೆ' ಮುಂದ್‌ವರೀಲೀ ಅಂದ್‌ಕೊಂಡ್ರೆ ಜನ ಬೇಗನೇ ಬುದ್ಧಿವಂತರಾಗಿ ಬಿಡ್ತಾರಲ್ಲ ಅಂತ ಭಯವೂ ಆಗುತ್ತೆ. ಕೊನೇ ಪಕ್ಷ ಏನಿಲ್ಲ ಅಂದ್ರೂ ಒಂದ್ ಸ್ವಲ್ಪ ಹೊತ್ತು ಕುಡಿಯೋಕ್ ಏನೂ ಸಿಗ್ದೇ ಈ ಅಮೇರಿಕದೋರಿಗೂ ಬಾಯಾರ್ಕೆ ಅಂದ್ರೆ ಏನು ಅಂತಾನಾದ್ರೂ ಗೊತ್ತಾಗುತ್ತಲ್ಲ!

ಏರ್‌ಪೋರ್ಟಲ್ಲಿ ಬೂಟು-ಬಟ್ಟೆ ಬಿಚ್ಚಿಸಿ ತೋರಿಸೋ ಪ್ರಸಂಗ ಬಂತು, ಪಾನೀಯಗಳನ್ನ ಅಲ್ಲೇ ಎಸೆದು ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕುಡುಸೋ ಪ್ರಸಾಂಗಾನೂ ಬಂತು, ಇನ್ ಮುಂದೆ ಲಗ್ಗೇಜೇ ತಗೊಂಡ್ ಬರಬೇಡಿ ಅಂತಾರೇ ನೋಡ್ತಾ ಇರಿ! (ತಮ್ ತಮ್ಮ್) ಲಗ್ಗೇಜ್ (ತಾವೇ) ತಗೊಂಡ್ ಹೋಗ್ದೇ ಇದ್ದ ಮೇಲೆ ಹೋಗೋದಾದ್ರೂ ಎಲ್ಲಿಗೇ, ಯಾಕೆ!?

Tuesday, August 08, 2006

ಹೀಗೊಂದು ಸಂಜೆ

ಇವತ್ತು ಆಫೀಸಿನಿಂದ ಬರೋದು ತಡವಾಗಿ ಹೋಯ್ತು ಅಂತ ಲಗುಬಗೆಯಿಂದ ಬರೋವಾಗ ದಾರಿ ಸವೀಲಿ ಅಂತ ರೇಡಿಯೋ ಹಚ್ಚಿದರೆ ಕನೆಕ್ಟಿಕಟ್ ಪ್ರೈಮರಿ ಎಲೆಕ್ಷನ್‌ನಲ್ಲಿ ಹಿಂಗಾಯ್ತು ಹಂಗಾಯ್ತು, ಲೀಬರ್‌ಮನ್ ಬರ್ತಾನೆ, ಇಲ್ಲ ಲೆಮಾಂಟ್ ಬರ್ತಾನೆ ಅಂತ ಕಥೆ ಹಚ್ಚಿದ್ರು. ಥೂ ಇವರಾ ಅಂತ ರೆಡಿಯೋ ತಲೆ ಮೇಲೆ ಹೊಡೆದಿದ್ದಕ್ಕೆ ಒಂದೇ ಉಸಿರಿಗೆ ಹೆದರಿಕೊಂಡ್ ಮಗೂ ಥರಾ ಗಪ್ ಚುಪ್ ಆಯ್ತು. ಸರಿ ಹೊರಗಡೆ ಏನಿಲ್ಲದಿದ್ದರೂ ಖಾಲಿ ರಸ್ತೇನಾದ್ರೂ ಇದ್ದಿತಾದ್ರಿಂದ ಅಕ್ಕಪಕ್ಕದ ಡ್ರೈವರುಗಳ ಜೊತೆ ಚವಕಾಸೀ ಮಾಡೋ ಯಾವ ಅವಕಾಶವೂ ಇದ್ದಂಗ್ ಕಾಣ್ಲಿಲ್ಲ. ಇತ್ಲಾಗ್ ರೇಡೀಯೋನೂ ಬೇಡಾ, ಅತ್ಲಾಗ್ ಹೊಟ್ಟೆ ಒಳಗಿನ ಯೋಚ್ನೆಗಳಿಗೂ ಉಪಚಾರ ಮಾಡೋದು ಬೇಡ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು ಸ್ವಲ್ಪ ದಿನವೆಲ್ಲ ಪರದೇ ನೋಡೋ ಕಣ್ಣಿಗಾದ್ರೂ ವಿರಾಮ ಸಿಗಲಿ ಅಂತ ದೂರದವರೆಗೆ ಕಣ್ಣು ಹಾಯಿಸಿದ್ದಕ್ಕೆ ದೊಡ್ಡೋರ್ ಮನೆ ಲೈಟನ್ನು ಅಪಾರದರ್ಶಕ ಬಲ್ಬ್‌ನಲ್ಲಿ ಅಡಗಿಸಿದಾಗ ಕಾಣೋ ಪ್ರಕಾಶದುಂಡೆಯಂತೆ ದಿಗಂತದಲ್ಲಿ ದೊಡ್ಡ ಚಂದ್ರಮ ಅದಾಗಲೇ ತಲೆ ಎತ್ತುತ್ತಿದ್ದ. ಇನ್ನೇನು ಹುಣ್ಣಿಮೆ ಹತ್ರ ಬಂತು ಅನ್ನೋ ಸಡಗರದಿಂದ ಬೀಗ್ತಾ ಇರೋ ಅವನನ್ನ ಅವನ ಮುಂದೆ ಚದುರಿದ ಮೋಡಗಳು ಸ್ವಲ್ಪ ಕಾಲ ಮುತ್ತಿದವಂತೆ ಕಂಡು ಬಂದರೂ ಚಂದ್ರನ ದೊಡ್ಡ ಮುಖ ಒಂದಲ್ಲ ಒಂದು ಕೋನದಿಂದ ಕಾಣ್ತಾನೇ ಇತ್ತು.

ದಾರಿ ಉದ್ದುಕೂ ಒಂಥರಾ ಚತುರ್ದಶಿ ಕಳೆದು ಹುಣ್ಣಿಮೆ ಬರೋ ಕಳೆ ಇತ್ತು, ಇನ್ನೂ ಚುಮುಚುಮು ಬೆಳಕನ್ನು ತಾನು ಹೋದ ದಾರಿಯಲ್ಲಿ ಬಿಟ್ಟು ಸ್ವಲ್ಪ ಬೇಗನೇ ಆಫೀಸು ಬಿಟ್ಟು ಹೋದವನಂತೆ ಸೂರ್ಯ ಕಾಣೆಯಾಗಿದ್ದ. ದಾರಿ ಹೊರಳಿದಂತೆ, ದಿಕ್ಕು ಬದಲಾದಂತೆ ಎಲ್ಲಿಂದ ನೋಡಿದರೂ ಚಂದ್ರನ ಒಂದೇ ಮುಖ ಯಾವಾಗಲೂ ಸಿಎನ್‌ಎನ್‌ನಲ್ಲಿ ತೋರಿಸೋ ಪ್ರೆಸಿಡೆಂಟ್ ಬುಷ್ ಮುಖದ ಹಾಗೆ ಯಾವ ಸ್ವಾರಸ್ಯವೂ ಇಲ್ಲದೇ ಒಂದೇ ರೀತಿ ಕಾಣುತ್ತಿತ್ತು. ಇನ್ನೇನು ಆಗಷ್ಟ್ ಕಳೆದು ಸೆಪ್ಟೆಂಬರ್ ಒಂದು ಬರಲಿ ಬೀಸೋಕೆ ಶುರು ಮಾಡ್ತೀನಿ ಅಂತ ಟ್ರಯಲ್ ನೋಡೋರ್ ಥರಾ ಗಾಳಿ ಅಲ್ಲಲ್ಲಿ ಬೀಸಿ ಗಿಡಮರಗಳನ್ನ ತೂಗಾಡಿಸುತ್ತಿತ್ತು.

ಈ ಚಂದ್ರನ ಮುಖ ನೋಡಿದ್ ಕೂಡ್ಲೇ ನಾನು ನಮ್ಮ ಹೈ ಸ್ಕೂಲಲ್ಲಿ ಜ್ಯೋತಿಲಿಂಗಪ್ಪ ಮೇಷ್ಟ್ರಿಗೆ ಕೇಳಿದ ಒಂದು ಪ್ರಶ್ನೆ ನೆನಪಿಗೆ ಬಂತು - ಸೂರ್ಯ ಅಥವಾ ಚಂದ್ರ ಮುಳುಗುವಾಗ ಹಾಗೂ ಹುಟ್ಟುವಾಗ ನಮಗೆ ದೊಡ್ಡದಾಗಿ ಕಾಣೋದ್ಯಾಕೆ? ಅದೇ ನೆತ್ತಿಮೇಲೆ ಬಂದಾಗ ಚಿಕ್ಕವಾಗಿ ಕಾಣ್ತಾವಲ್ಲ! ನನಗೆ ನಾನು ಹೀಗೆ ಕೇಳಿದ್ದೆ ಅನ್ನೋ ಪ್ರಶ್ನೆ ಮಾತ್ರ ನೆನಪಿದೆಯೇ ವಿನಾ ಅವರು ಏನು ಉತ್ರ ಕೊಟ್ರು ಅನ್ನೋದ್ ನೆನಪಲ್ಲಿಲ್ಲ! ಆದ್ರೂ ಯಾಕಿದ್ದಿರಬಹುದು, ಅದರ ಉತ್ರ ನನಗ್ಗೊತ್ತಿದೆಯೋ ಇಲ್ಲವೋ ಅದನ್ನ ಸಾಮಾನ್ಯರಿಗೂ ತಿಳಿಸಿ ಹೇಳೋಕೆ ಸಾಧ್ಯವೇ? ಸಾಪೇಕ್ಷ ಸಿದ್ಧಾಂತ (relativity), ಆಕಾಶಕಾಯಗಳು ಸುತ್ತುವ ಪಥ (oribit), ಹಾಗೂ ನಾವು ನೋಡುವ ಮಾಧ್ಯಮ (medium) ಇವುಗಳ ಸಹಾಯದಿಂದ ವಿವರಿಸಲೇ, ಅಥವಾ ದೊಡ್ಡದಾಗಿ ಕಂಡಾಗೆಲ್ಲ ಹತ್ತಿರವಿರ್ತಾವೆ, ಇಲ್ಲವಾದರೆ ದೂರ ಎಂದಷ್ಟೇ ಹೇಳಿ ಜಾರಿಕೊಳ್ಳಲೇ? ಹೀಗೆ ಯೋಚಿಸುತ್ತಾ ಮನಸ್ಸು ಒಳಗೆ ಸರಿದಂತೆಲ್ಲಾ ಹೊಟ್ಟೆ ಒಳಗಿನ ಯೋಚನೆಗಳು ಹೊಟ್ಟೆಯಲ್ಲೇ ಇರಲಿ ಎಂದು ಎಚ್ಚರಿಸಿಕೊಂಡು ಮತ್ತೇನಾದರೂ ಅಲ್ಲಲ್ಲಿ ಕಂಡೀತೇ ಎಂದು ಅತ್ತಿತ್ತ ನೋಡತೊಡಗಿದೆ.

ಈಗಾಗ್ಲೇ ನಾನು ಸುಮಾರು ದೂರ ಬಂದಿದ್ರಿಂದ ಟ್ರಾಫಿಕ್ಕು ನಿಧಾನವಾಗಿ ಹೆಚ್ಚಾಗ ತೊಡಗಿತ್ತು, ಆದರೆ ಮೊಟ್ಟಮೊದಲನೇ ಸಾರಿ ಹೀಗೆ ಬಿಲ್ಡ್ ಅಪ್ ಆಗುವ ಟ್ರಾಫಿಕ್ ಮೇಲೆ ಪ್ರೀತಿಯೂ ಹುಟ್ಟಿತು! ನಮ್ ನ್ಯೂ ಜೆರ್ಸಿ ಬದುಕೇ ಚೆಂದ - ಯಾವಾಗ್ ನೋಡಿದ್ರೂ, ಎಷ್ಟ್ ಹೊತ್‌ನಲ್ಲಾದ್ರೂ ಇಲ್ಲಿ ರಸ್ತೆಗಳು ಖಾಲಿ ಇರೋದೇ ಇಲ್ಲ. ನಾನೇ ಭಯಂಕರ ವ್ಯಸ್ತ, ವಿಪರೀತ ಕೆಲಸಾ ಮಾಡೋನೂ ಅಂತೆಲ್ಲ ಅಂದುಕೊಂಡು ರಸ್ತೆಗಿಳಿದ್ರೆ ನನಗಿಂತಲೂ ಹೆಚ್ಚಿನ ತರಾತುರಿಯಲ್ಲಿ ಇರೋ ಜನರೇ ಹೆಚ್ಚು. ಇಲ್ಲಿನ ಜನಸಾಂದ್ರತೆ ಒಂದು ರೀತಿ ನಮ್ಮೂರುಗಳನ್ನು ನೆನಪಿಸುತ್ತೆ, ಆದ್ದರಿಂದಲೇ ನಾನು ಕಂಡ ಅಮೇರಿಕ ನನಗೆ ನ್ಯೂ ಜೆರ್ಸಿ ಮಯವಾಗಿ ಕಾಣೋದು. ಯಾವಾಗ್ ನೋಡಿದ್ರೂ ಜನ ಇರೋ ರಸ್ತೆ, ವ್ಯಾಪಾರ ವಹಿವಾಟುಗಳು ಅಲ್ಲಲ್ಲಿ ವಿಪರೀತ ಹೊತ್ತು ತೆಗೆದುಕೊಂಡು ಬೇಜಾರು ಮಾಡುವುದೇ ಹೆಚ್ಚಾದರೂ ಕೆಲವೊಮ್ಮೆ ಇಂದಿನ ಹಾಗೆ ಅಕ್ಕಪಕ್ಕದಲ್ಲಿ ಜನರನ್ನು ನೋಡಿ ಖುಷಿಯೂ ಆಗುತ್ತೆ. ಹಿಂದೆ ದೃಷ್ಟಿಯಂತೆ ಸೃಷ್ಟಿಯೆಂದು (ಹೊರಗಿನ ಸೃಷ್ಟಿ ನೋಡುವವರ ದೃಷ್ಟಿಯಲ್ಲಿದೆ ಎಂಬರ್ಥದಲ್ಲಿ) ಯಾರೋ ಸುಳ್ಳು ಹೇಳಿದ್ದರೆಂದು ಮುಂಜಾವಿನ ಬಗ್ಗೆ ಬರೆಯೋವಾಗ ಹೇಳಿದ್ದೆ, ಮುಂಜಾನೆ ಮತ್ತು ಸಂಜೆಗಳ ಬಗ್ಗೆ ಬರೆದ ಮಾತ್ರಕ್ಕೆ ಆ ನಿಲುವಿನಲ್ಲಿ ಬದಲಾವಣೆ ಆಗಿದೆ ಎಂದು ಇಲ್ಲಿ ಹೇಳೋದಿಲ್ಲ, ಬದಲಿಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮ ನೆರೆಹೊರೆ ಎಂದು ಸೂಚ್ಯವಾಗಿ ಹೇಳಿಬಿಡುತ್ತೇನೆ, ಅಷ್ಟೇ.

ಸದ್ಯ, ಕಳೆದ ವಾರದ ಬಿಸಿವಾತಾವರಣವಿಲ್ಲ, ಕಿಟಕಿಗಳನ್ನು ಇಳಿಸಿದರೆ ಆರ್ದ್ರ ಹವೆ ಅಂಟೋದಿಲ್ಲ - ಗಾಳಿ ಒಂದು ರೀತಿ ತೆಳುವಾಗಿ ಬೀಸಿ ಮುಖದ ಮೇಲೆ ತೀಡಿ ಮುಗುಳ್ನಗು ಎಂದು ಒತ್ತಾಯಮಾಡುವಂತೆ ಸುಳಿದುಹೋಯಿತು. ಒಂದ್ ಕಡೆ ಮನಸ್ಸು ನಾಳೆ ಏನೇನ್ ಮಾಡ್‌ಬೇಕು ಅಂತ ಲೆಕ್ಕ ಹಾಕ್ತಾ ಬಿದ್‌ಕೊಂಡಿತ್ತು, ಮತ್ತೊಂದು ಕಡೆ ಸದ್ಯ ಮನೇಗ್ ಹೋಗಿ ಬಿದ್ರೆ ಸಾಕು ಅನ್ನಿಸಿದ್ದೇ ತಡ ಇಡೀ ಲೋಕವನ್ನೇ ನುಂಗೋ ಹಾಗೆ ಬಾಯಿ ಮತ್ತು ಶಬ್ದ ಮಾಡುವಂತ ದೊಡ್ಡ ಆಕಳಿಕೆ ಬಂದಿದ್ದೇ ತಡ - ಪಕ್ಕದಲ್ಲಿ ಯಾರೋ ಕುಳಿತಿದ್ದಾರೇನೋ ಅನ್ನೋ ಹಾಗೆ 'ಎಕ್ಸ್‌‍ಕ್ಯೂಸ್ ಮೀ' ಎಂದು ಅಂದಿಂದಕ್ಕೆ ನನಗೇ ನಗುಬಂತು!

Sunday, August 06, 2006

ಗುಮ್ಮನಗುಸುಗ

ನಮ್ಮೂರುಗಳಲ್ಲಿ 'ಗುಮ್ಮನಗುಸುಗ' ಎನ್ನುವ ಪದವನ್ನು ಬೈಯುವುದಕ್ಕೆ ಬಳಸುತ್ತಾರೆ - ಗುಮನ್‌ಗುಸ್ಗ ಅನ್ನೋದು ಅದರ ಆಡು ಪದವಷ್ಟೇ. ಗುಮ್ಮನಗಸುಗ ಎಂದರೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವವನು ಎಂದರ್ಥ ಅಂದರೆ ಯಾವಾಗಲೂ ಸ್ವಯಂ ಕೇಂದ್ರೀಕೃತ ವ್ಯಕ್ತಿ ಅಥವಾ ಗ್ರಾಂಥಿಕ ಭಾಷೆಯಲ್ಲಿ ಹೇಳೋದಾದರೆ ಅಂತರ್ಮುಖಿ. ಆಶ್ಚರ್ಯವೆಂದರೆ 'ಅಂತರ್ಮುಖಿ' ಪದದ ಬಳಕೆಯನ್ನು ಹೊಗಳಿಕೆಗೂ, 'ಗುಮ್ಮನಗುಸುಗ' ವನ್ನು ಬೈಯೋದಕ್ಕೂ ಬಳಸೋದು, ನನ್ನ ಪ್ರಕಾರ ಎರಡೂ ಒಂದೇ!

ಹಲವಾರು ವರ್ಷಗಳ ಹಿಂದೆ ಸ್ಟ್ಯಾಟೆನ್ ಐಲ್ಯಾಂಡಿನಲ್ಲಿ ಧ್ಯಾನವನ್ನು ಕಲಿಯೋದಕ್ಕೆ ಹೋದಾಗ ನಮ್ಮೊಳಗೆ ಹೊರಗಿನ ವಿಶ್ವಕ್ಕಿಂತ ದೊಡ್ಡದಾದ ವಿಶ್ವವೊಂದಿದೆ, ಅದರ ಮೇಲೇ ಮನಸ್ಸನ್ನು ಕೇಂದ್ರೀಕರಿಸಿ ಶುದ್ಧ ಧ್ಯಾನದ ಮೂಲಕ ನಮಗಂಟಿದ ಸಂಸ್ಕಾರಗಳನ್ನು ವಿಶ್ಲೇಶಿಸಿಕೊಳ್ಳಬಹುದು ಎಂದು ಪ್ರವಚನಗಳನ್ನು ಕೇಳಿದ್ದೆ. ಅದೇ ರೀತಿ ಬೇಕಾದಷ್ಟು ಕಡೆಯಲ್ಲಿ ಮನಶಾಸ್ತ್ರಕ್ಕೆ ಸಂಬಂಧಿಸಿದ ನಡವಳಿಕೆಗಳನ್ನು ಆವಲೋಕಿಸುವಾಗ introvert ಹಾಗೂ extravert ಎನ್ನುವ ವ್ಯಾಖ್ಯೆಗಳು ನಮ್ಮ ನಡವಳಿಕೆ ಹಾಗೂ ನಡತೆಗಳನ್ನು ಹೇಗೆ ರೂಪಿಸಬಲ್ಲದು, ನಾವು ಹೇಗೆ ಆಲೋಚಿಸುತ್ತೇವೆ ಎಂದೆಲ್ಲಾ ತಕ್ಕಮಟ್ಟಿಗೆ ಓದಿ ಕುತೂಹಲಿತನಾಗಿದ್ದೇನೆ.

ನನ್ನ ಮನಸ್ಸಿನಲ್ಲಿರುವುದನ್ನು ಸ್ಪುಟವಾಗಿ ಹೇಳಲು ಸಾಧ್ಯವಾಗದಿರುವಾಗ ಎಷ್ಟೋ ಸಲ ಹಾಗೆ ಮಾಡದೇ ಇರುವಲ್ಲಿನ ತೊಡಕೇನು ಎಂದು ಪ್ರಶ್ನಿಸಿಕೊಂಡಾಗೆಲ್ಲ ಭಾಷೆಯಂತೂ ಖಂಡಿತವಾಗಿ ಅಡ್ಡ ಬಂದಿದ್ದಿಲ್ಲ, ಅದರ ಬದಲಿಗೆ ವಿಚಾರಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಅದನ್ನು ಅಗತ್ಯಕ್ಕೆ ತಕ್ಕಂತೆ, ಕೇಳುವವರಿಗೆ ತಕ್ಕಂತೆ ಹಾಗೂ ಆ ಸಮಯದ ಮಿತಿಯಲ್ಲಿ ಸ್ಪುಟವಾಗಿ ಹೇಳುವುದು ಎಲ್ಲರಿಗೂ ಸಾಧ್ಯವಾಗದ ಮಾತು. ಎಷ್ಟೋ ಜನ ಸಭಾಕಂಪನವನ್ನು ಗೆಲ್ಲೋದಕ್ಕೆ ಬಹಳಷ್ಟು ಪ್ರಯತ್ನವನ್ನು ಮಾಡುತ್ತಾರೆ, ಈ ನಿಟ್ಟಿನಲ್ಲಿ ಅಂತರ್ಮುಖಿ ಬಹಿರ್ಮುಖಿ ಆಗುವುದೂ ಬಹಳ ಮುಖ್ಯವಾಗುತ್ತದೆ. ದಿಢೀರನೆ ಒಂದೇ ದಿನದಲ್ಲಿ ಸ್ವಭಾವದ ಬದಲಾವಣೆ ಆಗೋದು ಕಷ್ಟ, ಅದರ ಬದಲಿಗೆ ಹಂತಹಂತವಾಗಿ ಮುಂದುವರಿದರೆ ಎಂತಹವರೂ ತಕ್ಕಮಟ್ಟಿಗೆ ತಮ್ಮ ವಿಚಾರಗಳನ್ನು ನಿರ್ಭಯವಾಗಿ ಹೊರಹಾಕಬಲ್ಲರು.

ನಾನು ಶಾಲಾ ದಿನಗಳಿಗೇನಾದರೂ ಹಿಂತಿರುಗಿ ಹೋಗುವಂತಿದ್ದರೆ ನನ್ನ ವಿಧೇಯತೆಯ ಸೋಗನ್ನು ಕಿತ್ತು ಹಾಕಿ ಸ್ವಲ್ಪ ಕುತೂಹಲ ಮನಸ್ಸಿಗೆ ಒತ್ತು ನೀಡಿ, ನನಗೆ ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗೆಲ್ಲಾ ಮನಸಾ ಇಚ್ಚಾ ಪ್ರಶ್ನೆಗಳನ್ನು ಕೇಳಿಬಿಡುತ್ತೇನೆ ಎನಿಸುತ್ತದೆ. 'ವಿದ್ಯೆಗೆ ವಿನಯವೇ ಭೂಷಣ' ಎಂಬ ದೊಡ್ಡ ಮಾತುಗಳನ್ನು ಆಡಿಯೇ ನಾವು ಕಲಿಯಬೇಕಾದ ಸಮಯದಲ್ಲಿ 'ದೊಡ್ಡವರಿಗೆ' ಎದುರು ಮಾತನಾಡಬೇಡ ಎಂಬರ್ಥದಲ್ಲಿ ನಮ್ಮ ಕೈ ಬಾಯಿಗಳನ್ನು ಕಟ್ಟಿಹಾಕಿಬಿಟ್ಟರೇನೋ ಅನ್ನಿಸಿಬಿಡುತ್ತದೆ, ಎಷ್ಟೋ ದಿನ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದೇ ಶಾಲೆಯಿಂದ ಅಂದು ಮನೆಗೆ ಹೋಗಿದ್ದರಿಂದ ನನ್ನ ಸ್ವಭಾವದಲ್ಲಿ ಬೇಕಾದಷ್ಟು ಮಾರ್ಪಾಟುಗಳಾಗಿವೆ - it can wait - we will get to the bottom of it later - ಎನ್ನೋದು ನಿತ್ಯಮಂತ್ರವಾಗಿ ಹೋಗಿದೆ.

ನನ್ನ ಪ್ರಕಾರ ಕ್ರಮಬದ್ಧವಾಗಿ, ಒಂದು ರೀತಿಯ ಧ್ಯಾನದ ಮಟ್ಟದಲ್ಲಿ ಒಳಗಿನ ಅವಲೋಕನ ನಡೆಯದೇ ಹೋದರೆ ಅದು ಹೆಚ್ಚು 'ಚಿಂತೆ'ಯನ್ನು ಮೂಡಿಸುವುದೇ ವಿನಾ 'ಚಿಂತನೆ'ಯನ್ನಲ್ಲ. ಹೊರಗಿನ ಪ್ರಪಂಚವನ್ನು ನೋಡಲ್ಲಿಕ್ಕೆ ಖರ್ಚಾಗುವ ಶಕ್ತಿಗಿಂತಲೂ ಒಳಗಿನದನ್ನು ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ ಬಹಳಷ್ಟು ನಷ್ಟವಾಗುವ ಸಂಭವವೇ ಹೆಚ್ಚು. ಚದುರಂಗದಾಟದಲ್ಲಿ ಹಿಂದೆ-ಮುಂದೆ ಆಗುವ, ಆಗಿ-ಹೋಗಬಹುದಾದ ನಡೆಗಳನ್ನೆಲ್ಲ ಯೋಚಿಸಿದಷ್ಟೂ ಅದಕ್ಕೆ ಅಂತ್ಯವೆಂಬುದಿಲ್ಲ, ಆದರೆ ಏನೆಲ್ಲ ಸಾಧ್ಯತೆ-ಬಾಧ್ಯತೆಗಳನ್ನೆಲ್ಲ ಲೆಕ್ಕ ಹಾಕಿದರೂ ಕೊನೆಯಲ್ಲಿ ನಡೆಯುವುದೂ ನಡೆದೇ ತೀರುವುದರಿಂದ ಒಳಗಿನ ತಲ್ಲಣಗಳನ್ನು ಅರಸಿ ಹೊರಡುವ ಮುನ್ನ ಅದೊಂದು ತೆರೆದ ಪಯಣವೆಂಬುದನ್ನು ಮಾತ್ರ ಖಂಡಿತವಾಗಿ ನೆನಪಿನಲ್ಲಿಟ್ಟಿರುತ್ತೇನೆ. ಹಾಗೆಂದು ದಿಢೀರನೆ ಗುಮ್ಮನಗುಸುಗನ ತನದಿಂದ outgoing personality ಆಗುವುದೂ ಸಾಧ್ಯವಿಲ್ಲ. ನನಗೆ ಅಂತರ್ಮುಖತೆಯಿಂದ ಯಾವ ಬೇಸರವೂ ಇಲ್ಲ, ಅದರ ಬದಲಿಗೆ ಅಂತರ್ಮುಖತೆಯಿಂದ ಹೊರಬರಬಹುದಾದ side products ಗಳಾದ ನಾಚಿಕೆ, ಭಿಡೆ, ಅಂಜಿಕೆಗಳು ಹಾಗೂ ಇವುಗಳು ಹುಟ್ಟಿಸುವ ಅವಾಂತರಗಳಿಗೆ ಕೊನೆಯಿಲ್ಲ ಮೊದಲಿಲ್ಲವಾದ್ದರಿಂದ ಅಂತಹವುಗಳನ್ನು ಸಾರಾಸಗಟು ದ್ವೇಷಿಸತೊಡಗುತ್ತೇನೆ. ಅಂತರ್ಮುಖಿಗಳು ಅಂದುಕೊಂಡಂತೆ ಎಷ್ಟೋ ಜನರು ಅವರ ಬಗ್ಗೆ ಯೋಚಿಸುತ್ತಾರೆ, ಅವರ ಬಗ್ಗೆ 'ಏನನ್ನೋ' ತಿಳಿದುಕೊಳ್ಳುತ್ತಾರೆ ಎಂಬುದಾಗಿ, ಆದರೆ ನಿಜ ಸಂಗತಿಯೆಂದರೆ ನಾವು ಒಡನಾಡುವ ವ್ಯಕ್ತಿಗಳಿಗೆ ಅದಕ್ಕೆಲ್ಲಾ ಸಮಯವೇ ಇರೋದಿಲ್ಲ, ಅವರೂ ಉಳಿದವರ ಹಾಗೆ ಒಂದಲ್ಲ ಒಂದು trench ನಲ್ಲಿ ಬಿದ್ದವರೇ. ಒಂದು ವೇಳೆ ಹಾಗೆ ತಿಳಿದುಕೊಂಡರೂ ಅದರಿಂದ ಅಂತಹದ್ದೇನೂ 'ಮಹಾನ್' ಘಟಿಸೋದಿಲ್ಲವಲ್ಲ!

ಪ್ರತಿಯೊಬ್ಬರಿಗೂ ಅವರವರ ಬಗ್ಗೆ ತಿಳಿದುಕೊಳ್ಳಲು, ಅಲ್ಲಲ್ಲಿ ಅವಲೋಕನ ಮಾಡಿಕೊಳ್ಳಲು introspection ಹಂತಗಳಿರಬೇಕೇ ವಿನಾ ಹಳೆಯದನ್ನೇ ಹಚ್ಚಿ ಕೊರಗುವುದೇ ಬದುಕಾಗಬಾರದು. ಈ introspection ಹಂತ ಎಷ್ಟು ಸರಳವಾಗಿರಬೇಕೆಂದರೆ ಒಂದು ರೀತಿ ಕಾರಿನಲ್ಲಿ rearview mirror ಇದ್ದ ಹಾಗೆ, ಅಲ್ಲದೇ ಮುಂದಿನ ಬದುಕಿನಲ್ಲಿ ಆಗಬೇಕಾದ್ದನ್ನು ಎದುರಿಸೋದು ಬೇಕಾದಷ್ಟಿರುವಾಗ ಈ ಹಿಂತಿರುಗಿ ನೋಡಬಹುದಾದ ಕನ್ನಡಿ ಎಷ್ಟು ಸಾಧ್ಯವೋ ಅಷ್ಟು ಚಿಕ್ಕದಿರಬೇಕು ಅಲ್ಲದೇ ಆದಷ್ಟು ಬೇಗ ಅಲ್ಲಿ ಇಣುಕಿ ಅದರಿಂದ ಹೊರಬರಬೇಕು. ಮುಂಬರುವ ಮಾರ್ಗವನ್ನೇ ಮೈಯೆಲ್ಲ ಕಣ್ಣಾಗಿ ಸವೆಸುವ ಅಗತ್ಯವಿರುವಾಗ ಇನ್ನು ಹಿಂದಿನದ್ದನ್ನ ಅವಲೋಕಿಸುತ್ತಾ ಕುಳಿತುಕೊಳ್ಳುವುದಕ್ಕೆ ಸಮಯವಾದರೂ ಎಲ್ಲಿದೆ, ಅಲ್ಲದೇ ಹಿಂದಿನ ದಾರಿಯಲ್ಲಿ ಹಾದು ಹೋದ ಮರ-ಗಿಡ-ಕಂಟಿಗಳನ್ನೆಲ್ಲ ಎಷ್ಟೂ ಅಂತ ನೆನಪಿನಲ್ಲಿಡೋಕಾದರೂ ಸಾಧ್ಯ?

ಮನಸ್ಸಿನಲ್ಲಿದ್ದದ್ದನ್ನು ನಿರರ್ಗಳವಾಗಿ ಹೇಳಬೇಕು, ಸ್ಪುಟವಾಗಿ ಮಾತನಾಡಬೇಕು, ಇನ್ನೊಬ್ಬರು ಮಾತನಾಡುವಾಗ ಅವರ ಮಾತಿನ ಮೇಲೆ ನಿಗಾ ಇಡಬೇಕೇ ವಿನಾ ಅವರು ಹಿಂದೆ ಏನು ಮಾಡಿದ್ದರೆಂದಾಗಲೀ, ಅವರ ಮಾತಿಗೆ ನಾನೇನು ಪ್ರತಿಯಾಗಿ ಮಾತನಾಡಬೇಕು ಎಂದು ಯೋಚಿಸಿಕೊಳ್ಳೋದು ಒಳ್ಳೆಯ ಅಭ್ಯಾಸವಲ್ಲ - ಇನ್ನೂ ಮುಂತಾಗಿ ಹಲವಾರು ಅಣಿಮುತ್ತುಗಳನ್ನು ಅಲ್ಲಲ್ಲಿ ಓದುತ್ತೇನೆ, ಆದರೆ ನಾನು ಹೀಗೇಕೆ ಕಾರ್ಯತತ್ಪರನಾಗುವುದಿಲ್ಲ ಎನ್ನುವುದಕ್ಕೆ ಉತ್ತರವನ್ನರಸಿ ಮತ್ತೆ ಒಳಗೆ ಹಿಣುಕಿ ನೋಡುತ್ತೇನೆ. ಆದರೆ ಒಮ್ಮೆ ಒಳಗೆ ಹೋದವನು ಒಂದು ರೀತಿ ಗೂಗಲ್‍ನಲ್ಲಿ ಮಾಹಿತಿಗೆ ತಿಣುಕಾಡುವವರಂತೆ ಹೋದ ದಾರಿಯಲ್ಲಿ ಹಿಂತಿರುಗಿ ಬಾರದೇ ಮತ್ತಿನ್ನೆಲ್ಲೋ ಹೋಗುವ ಸಾಧ್ಯತೆಯೇ ಹೆಚ್ಚಾಗಿ ತೋರತೊಡಗುತ್ತದೆ.

Saturday, August 05, 2006

Friday, August 04, 2006

ಜಾಗತೀಕರಣ ಅಂದ್ರೆ ಸಾಕು, ಎಲ್ಲವೂ ನಿಧಾನವಾಗಿ ಹೋಗುತ್ತಲ್ಲಾ!

ಕಳೆದೆರಡು ದಿನಗಳಿಂದ ಜಾಗತೀಕರಣದ ಬಗ್ಗೆ ನನ್ನ ನಿಲುವು, ಇತ್ತೀಚಿನ ಮಾಹಿತಿಗಳನ್ನೆಲ್ಲ ಕಕ್ಕಿಕೊಳ್ಳೋಣ ಎಂದು ಆಲೋಚಿಸಿದಂತೆಲ್ಲಾ ಬರವಣಿಗೆ ನಿಧಾನವಾಗಿ ಹೋಗಿ, ನಾನೂ ಒಂಥರಾ ನಮ್ಮೂರಿನ ಬುದ್ಧಿಜೀವಿಗಳ ಹಾಗೆ ಆಗಿ ಹೋಗಿದ್ದೇನೆ - ಯಾವುದೇ ಪ್ರಶ್ನೆ ಕೇಳಿದ್ರೂ ಯೋಚ್ನೇ ಮಾಡೋರ್ ಮುಖಾ ಹಾಕ್ಕೋತಾರೇ ವಿನಾ ಅಪ್ಪಂತಾ ಉತ್ರ ಮಾತ್ರ ಹೊರಗ್ ಬರೋದಿಲ್ಲ! ಒಂಥರಾ ಈ ನಿಧಾನ ಅನ್ನೋದು ಒಳ್ಳೇದೇ ಆಯ್ತು, ನಿಲುವುಗಳನ್ನು ಯಾಕಾದ್ರೂ ಹೇಳ್‌ಕೋ ಬೇಕು, ಸುಮ್ನೇ ಅಡ್ಡಕತ್ರಿಯಲ್ಲಿ ಯಾಕಾದ್ರೂ ಸಿಕ್ಕಿ ಹಾಕ್ಕೋಬೇಕು ಎನ್ನೋ ಯೋಚ್ನೇ ಬಂದಿದ್ದೇ ತಡ ಈ ಪೋಸ್ಟನ್ನು ಬರೆಯತೊಡಗಿದೆ. ಮತ್ತೆ ಹೀಗೆ ಬರೆಯೋಕೆ ಶುರುಮಾಡಿದ್ದು ಯಾಕೆ ಅಂತ ಕೇಳ್ಕೊಂಡ್ರೆ 'ಸಾಧಿಸಿಕೊಳ್ಳುವುದು' ಎನ್ನೋ ಉತ್ರಾ ಬಂತು, 'ಏನನ್ನು?' ಅನ್ನೋ ಮರು ಪ್ರಶ್ನೆಗೆ ಮುಖ ಮತ್ತೆ ಬುದ್ಧಿಜೀವಿಗಳ ಹಾಗೆ ಆಗಿ ಹೋಯ್ತು, ಉತ್ತರಕ್ಕಾಗಿ ಕಾಯೋಣ, ಯಾವಾಗ್ ಬರುತ್ತೋ ನೋಡೋಣ!

'ಗ್ಲೋಬಲ್ ವಿಲ್ಲೇಜ್' ಅಂಥಾರಲ್ಲ ಹಾಗೆ - ಒಂದು ಕಡೆ ಮಾಹಿತಿ ಸುಪರ್ ಹೈವೇ, ಅದು ಕನೆಕ್ಟ್ ಮಾಡೋದು 'ವಿಲ್ಲೇಜ್' ಗಳನ್ನ - ಒಂಥರಾ ನ್ಯಾಷನಲ್ ಹೈವೇ ಸಾಧ್ಯವಾದಷ್ಟು ಶಹರಗಳನ್ನ ಅವಾಯ್ಡ್ ಮಾಡ್‌ಕೊಂಡು ಹೋಗುತ್ತಲ್ಲ ಹಾಗೆ, ಅಲ್ಲ, ಈ ಹೈವೇ ಇರೋದ್ರಿಂದ್ಲೇ ದಿನಕಳೆದಂತೆ ಶಹರಗಳು ಹುಟ್ಟುತ್ತಲ್ಲ ಹಾಗೆ!

'ನಾನು ಸೆಲ್‌ಫೋನ್ ಮಾತ್ರ ಉಪಯೋಗಿಸ್ತೀನಿ, ಬಟ್ ಜಾಗತೀಕರಣ ಅಂದ್ರೇ ಮಾತ್ರ ಮೈಯಲ್ಲ ಉರಿಯುತ್ತೆ', ಅಥವಾ 'ಕುಡಿಯೋಕ್ ಕೋಕ್ ಇರಲಿ, ಜಾಗತೀಕರಣ ದೂರ ಇರಲಿ', ಅಥವಾ 'ನಮ್ ಮಾವನ್ನ್ ಮಗ ಬಿಪಿಓ ಸಂಬಂಧೀ ಕೆಲಸದಲ್ಲಿ ಮಹಾ ದುಡ್ ಮಾಡ್ತಾನ್ರೀ, ಅದೇನೋ ಕೆಟ್ಟ್ ಜಾಗತೀಕರಣದ ಪ್ರಭಾವವಂತೆ!' ಅನ್ನೋ ಹೇಳಿಕೆಗಳಲ್ಲೇ ನಮ್ಮೂರಿನ ಜಾಣರ ಜಾಣತನವೆಲ್ಲ ಕರಗಿಹೋಗಿ ಬಿಡ್ತು. 'ಅಹಿಂಸೆಯನ್ನು ಕೈ ಹಿಡಿ, ಬೀದಿ ನಾಯಿಗೆ ಕಲ್ ಹೊಡಿ' ಅನ್ನೋ ರೀತಿ ವ್ಯತಿರಿಕ್ತವಾದ ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ. ಹಗಲೆಲ್ಲ ಅಲ್ಲಲ್ಲಿ ಏನೇನೋ ಓದಿಕೊಂಡು, ರಾತ್ರಿ ಬಂದಾಗ ಕಂಠಪೂರ್ತಿ ಕುಡಿದು, ಕುಡಿದದ್ದನ್ನ ಅರಗಿಸಿಕೊಳ್ಳಲಾರದೇ ಕುಳಿತಲ್ಲೇ ಕಕ್ಕಿಕೊಳ್ಳೋರ ಥರಾ ಆಗಿ ಹೋಗಿ ಬಿಟ್ನೇ ಎಂದು ಯೋಚಿಸಿಕೊಂಡು ಭಯಪಟ್ಟಿದ್ದಿದೆ.

ಪಿರಂಗಿಯೋರ ಆಡಳಿತವನ್ನು ಸಕತ್ತಾಗಿ ದ್ವೇಷಿಸಿದ್ದ ಫಲವೇ ನಾವೆಲ್ಲ ಅವರ ತೆಕ್ಕೆಗೆ ಬಹಳಷ್ಟು ಗಟ್ಟಿಯಾಗಿ ಒತ್ತಿಕೊಳ್ಳೋ ಹಾಗಾಗಿದ್ದು, ಹಾಗೆ ಇವತ್ತು ಸಹ ಅಫಘಾನಿಸ್ತಾನದಲ್ಲಿ ಕೋಕ್ ಮಾರಾಟಕ್ಕೆ ಬರುತ್ತೆ ಅಂದ್ರೆ ಸ್ಥಳೀಯರ ಕೈಯಲ್ಲಿ ಉಳಿದಿರೋ ತಂತ್ರಗಳು ಕಡಿಮೆ ಅಂತಲೇ ಅರ್ಥ - ಶಿಲಾ ಯುಗದಲ್ಲಿ ಇರೋದಕ್ಕೆ ಯಾರ ಮನಸೂ ಒಪ್ಪೋದಿಲ್ಲ, ಆಧುನಿಕತೆ ಸೊಂಪು ಎಲ್ಲರಿಗೂ ಬೇಕು, ಆದರೆ ಅದು ಜೊತೆಯಲ್ಲಿ ತರೋ ಹಲವಾರು ಬಳುವಳಿಗಳು ಬೇಡ ಅಂದ್ರೆ ಹೇಗೆ? ಸಮಯದ ಪರಂಪರೆಯಲ್ಲಿ ದೇಶ, ನೀತಿ ಎಲ್ಲವೂ ಬದಲಾಗುವ ಹೊತ್ತಿನಲ್ಲಿ ಬದಲಾವಣೆಗೆ ನಾವೂ ತಕ್ಕಂತೆ ಸ್ಪಂದಿಸದೇ ಹೋದರೆ ಯಾರಿಗೆ ನಷ್ಟ, ಜೊತೆಯಲ್ಲಿ ಕೇವಲ ಕೆಲವೊಂದಕ್ಕೆ ಮಾತ್ರ ಅಂಟಿಕೊಂಡು ಎಲ್ಲವೂ ಬೇಕು ಅನ್ನುವ ನಾಟಕವಾದರೂ ಎಷ್ಟು ದಿನ ನಡೆಯಬಲ್ಲದು? ಸರಿ, ನಮ್ಮೂರಿನ ಬುದ್ಧಿವಂತರು ಜಾಗತೀಕರಣವನ್ನು ವಿರೋಧಿಸಿದರೂ ಅಂತಲೇ ತಿಳ್‌ಕೊಳ್ಳೋಣ, ಅಂದ್ರೆ ಅವರು ಅಮೇರಿಕವನ್ನು ದ್ವೇಷಿಸ್ತಾರೆ ಅಂತಲೇ? ಹಾಗಾದ್ರೇ ಅಮೇರಿಕದಿಂದ ಅಪರೂಪಕ್ಕೆ ಭೇಟಿಕೊಡೋ ನನ್ನನ್ನೂ ದ್ವೇಷ್ಟಿಸ್ತಾರೆ ಅಂತಲೇ?

ಜಾಗತೀಕರಣ ಅಂದ್ರೆ ಅಲ್ಲಿ ಫೋಕಸ್ಸಿಗೆ ಬರೋದು ಅಮೇರಿಕವೋ, ತೃತೀಯ ಜಗತ್ತೋ? ಅಪರೂಪಕ್ಕೆ ವಿದೇಶೀ ಬಣ್ಣ ಹೋತ್‌ಗಂಡ್ ಬರೋ ನಾನೋ ಅಥವಾ ಇದ್ದ ಊರಲ್ಲೇ ಘಂಟೆಗೊಂದು ಬಣ್ಣ ಬದಲಾಯಿಸೋ ಇವರೋ?

Wednesday, August 02, 2006

ಶಕ್ತಿಯ ಸದುಪಯೋಗ ಹಾಗೂ ಬಳಕೆ

ಅಮೇರಿಕದ ಶಕ್ತಿ ಬಗ್ಗೆ ಹೇಳ್ತಾ ಹೋದ್ರೆ ಅದಕ್ಕೆ ಬಹಳ ಸಮಯ ಬೇಕು, ಆದ್ದರಿಂದ ಸದ್ಯಕ್ಕೆ ವಿದ್ಯುತ್ ಶಕ್ತಿ ಬಗ್ಗೆ ಹೇಳೋಣಾ ಅಂದುಕೊಂಡೆ. ನಿನ್ನೆ ಹಾಗೂ ಇವತ್ತು ನ್ಯೂ ಯಾರ್ಕ್ ಸುತ್ತ ಮುತ್ತ ನೂರು ಡಿಗ್ರಿ ಫ್ಯಾರೆನ್‌ಹೈಟ್‌ಗೂ ಹೆಚ್ಚು ವಾತಾವರಣದಲ್ಲಿ ಬಿಸಿಯಾಗಿದ್ದರಿಂದ ಎಲ್ಲ ಮಾದ್ಯಮಗಳಲ್ಲಿ ಜನರಿಗೆ ಹೀಟ್‌ವೇವ್ ಬಗ್ಗೆ, ಶಕ್ತಿಯ ಸದ್ಬಳಕೆಯ ಬಗ್ಗೆ ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಬಗ್ಗೆ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಒಂದು ಕಡೆ ಇಂಧನ ಹಾಗೂ ಶಕ್ತಿ ದಾಖಲೆ ಮೀರಿ ಬಳಕೆಯಾಗುತ್ತಿದ್ದರೆ, ಮತ್ತೊಂದು ಕಡೆ ಇಂತಹ ಮುಂದುವರಿದ ದೇಶದಲ್ಲೂ ಜನ ಛಳಿಗಾಲದಲ್ಲಿ ಸಾಯೋದಕ್ಕಿಂತ ಹೆಚ್ಚು ಬಿಸಿಲಿನಲ್ಲಿ ಸಾಯುತ್ತಾರಲ್ಲಾ ಎಂದು ಅನ್ನಿಸಿ ಬೇಸರವಾಯಿತು.

ಶ್ರೀಮಂತ ದೇಶಗಳ ದೊಡ್ಡ ಕೊರತೆ ಎಂದರೆ ಅವರಿಗೆ ಯಾವಾಗಲೂ ಸಂಪನ್ಮೂಲಗಳ ಕೊರತೆ ಅನುಭವಕ್ಕೆ ಬರದಿರುವುದು. ಸರಿಯಾದ ಆರ್ಥಿಕ ಸ್ಥಿತಿಗತಿಯಲ್ಲಿ ಹಣದುಬ್ಬರವನ್ನೂ ಹತೋಟಿಯಲ್ಲಿಡೋದರಿಂದ ಮೇಲೇರಿದ ಬೆಲೆಗಳು ಸದಾ ಅಲ್ಲೇ ನಿಲ್ಲದೆ ತಮ್ಮ ಮೊದಲಿನ ಸ್ಥಾನಕ್ಕೆ ಬರೋದನ್ನ ನಾನು ನೋಡಿದ್ದೇನೆ. ಆದರೂ ಕಳೆದ ಐದಾರು ವರ್ಷಗಳಲ್ಲಿ ಅಗತ್ಯ ವಸ್ತುಗಳ ಉದಾಹರಣೆಯಲ್ಲಿ ಹಾಲು ಮತ್ತು ಪೆಟ್ರೋಲಿನ ಬೆಲೆ ಏರುತ್ತಲೇ ಇದೆ, ಐತಿಹಾಸಿಕವಾಗಿ ನೋಡಿದಾಗ ಹೀಗೆ ಮೇಲೇರಿದ ಬೆಲೆಗಳು ಮತ್ತೆ ಕಡಿಮೆಯಾಗೋದು ನನಗೆ ಇಲ್ಲಿನ ಅನುಭವ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತಮ್ಮ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸಿಕೊಳ್ಳಬೇಕಾದರೆ ಸಾಕಾಗಿ ಹೋಗುತ್ತದೆ, ಆದರೆ ಹಣವುಳ್ಳ ದೇಶಗಳಿಗೆ ಅವರದೇ ಆದ ಮೌಲ್ಯ ಮಾಪನಗಳಿವೆ, ಆಮದು-ರಫ್ತುಗಳ ಹೊಂದಾಣಿಕೆಯಲ್ಲಿ ಹೆಚ್ಚಿನ ಅಸಮತೋಲನವನ್ನು ಸರಿಪಡಿಸಲಾಗುತ್ತೆ. ಆದರೆ ಜನರ ಮನಸ್ಸಿನಲ್ಲಿ ಯಾವಾಗಲೂ ಲಭ್ಯವಿರುವ ಸಂಪನ್ಮೂಲಗಳ ಬಳಕೆಗೆ ಮನಸ್ಸು ಹೊಂದಾಣಿಕೆ ಮೂಡಿರೋದರಿಂದ ಅಕಸ್ಮಾತ್ ಏನಾದರೊಂದು ಕಡಿಮೆ ಆದರೆ ಬದುಕು ದುಸ್ಸಾಧ್ಯವೆನಿಸಿ ಬಿಡುತ್ತದೆ. ಕಳೆದ ವಾರ ಕ್ವೀನ್ಸ್‌ನಲ್ಲಿ ಕೆಲವು ಮನೆಗಳಲ್ಲಿ ಒಂದು ವಾರದ ಮೇಲ್ಪಟ್ಟು ಕಳೆದರೂ ಎಲೆಕ್ಟ್ರಿಕ್ ಕರೆಂಟ್ ಬರಲೇ ಇಲ್ಲ, ಅಂತಹ ಸಂದರ್ಭದಲ್ಲಿ ಮಕ್ಕಳು-ಮರಿ ಇರೋ ಮನೆಗಳಲ್ಲಿ ಬದುಕನ್ನು ಸವೆಸೋದು ಬಹಳ ಕಷ್ಟಕರವಾಗುತ್ತದೆ, ಇಲ್ಲಿನ ಹೆಚ್ಚಿನವರಿಗೆ ಅದನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

ಇಲ್ಲಿನ ಕಡಿಮೆ ಜನರು ಜಗತ್ತಿನ ಅತಿ ಹೆಚ್ಚು ಸಂಪನ್ಮೂಲಗಳನ್ನು ಬಳಸುವುದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅದರಲ್ಲೂ ಇತ್ತೀಚಿನ ಆಧುನಿಕ ಬದುಕಿನ ಅಂಗಗಳಾದ ಸೆಲ್‍ಫೋನ್, ಮತ್ತಿತರ ಸಾಮಗ್ರಿಗಳು ಬಂದಮೇಲೆ, ಆಕ್ಟೀವ್ ಹಾಗೂ ಪ್ಯಾಸ್ಸೀವ್ ಪರಿಕರಗಳ ಸಂಖ್ಯೆ ಬೆಳೆಯುತ್ತಿದ್ದಂತೆ ಶಕ್ತಿಯ ಬೇಡಿಕೆಯೂ ಕೂಡಾ ಅಷ್ಟೇ ಹೆಚ್ಚಾಗಿ ಬೆಳೆಯುತ್ತಿದೆ. ಒಂದು ಕಡೆ ಪ್ರಗತಿಯ ಸಂಕೇತವಾಗಿ ಪ್ರತಿ ತಲೆಗೆ ಲೆಕ್ಕ ಹಾಕಿದಾಗ ಬೆಳೆಯೋ ಲಿವಿಂಗ್ ಸ್ಪೇಸ್, ಮತ್ತೊಂದು ಕಡೆ ಜನ ಸಂಖ್ಯೆ, ಬಳಕೆದಾರರ ಸಂಖ್ಯೆ ಬೆಳೆದಂತೆಲ್ಲ ಬೇಕಾಗುವ ಉಪಕರಣ/ಅಗತ್ಯಗಳ ಹೆಚ್ಚಳ ಇವೆಲ್ಲವೂ ಸೇರಿ ಹಳೆಯ ವ್ಯವಸ್ಥೆಯ ಮೇಲೆ ಪದೇ-ಪದೇ ಒತ್ತಡವನ್ನು ಹಾಕುತ್ತಲೇ ಇರುತ್ತವೆ. ಜನರ ಬಳಕೆಗೆ ಸ್ಪಂದಿಸಲಿಕ್ಕೆ ಇಲ್ಲಿನ ವ್ಯವಸ್ಥೆಗಳು ತಿಣುಕುತ್ತವೆ, ಇದರಿಂದ ಈ ರೀತಿ ಬಿಸಿಲಿರುವ ಪ್ರತಿದಿನವೂ ಹೊಸದೊಂದು ದಾಖಲೆಯನ್ನು ಸೃಷ್ಟಿಸುತ್ತಾ ಹೋಗುತ್ತದೆ.

ನನಗೆ ಇಷ್ಟವಾದ ಇತ್ತೀಚಿನ ಬೆಳವಣಿಗೆಗಳಲ್ಲಿ ಇಲ್ಲಿನ ನಗರವಾಸಿಗಳಿಗೆ, ಇಲ್ಲಿರುವ ಬಿಸಿನೆಸ್ಸುಗಳಿಗೆ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಶಕ್ತಿಯನ್ನು ಬಳಸುವಂತೆ ಕೋರಿಕೊಳ್ಳಲಾಗುತ್ತಿದೆ. ಇದು ತುಂಬಾ ಸ್ವಾಗತಾರ್ಹ ಬೆಳವಣಿಗೆ, ಹೀಗೆ ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಹಾಗೂ ಸಂಸ್ಥೆಯ ಮಟ್ಟದಲ್ಲಿ ಚುರುಕಾಗಿ ಯೋಚಿಸಿದ್ದೇ ಆದಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ಹೀಗೆ ಪ್ರತಿಯೊಬ್ಬರಲ್ಲೂ, ಬರೀ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಾಗದೇ, ವರ್ಷದ ಎಲ್ಲಾ ಸಮಯದಲ್ಲೂ ಅಗತ್ಯಕ್ಕೆ ತಕ್ಕಷ್ಟೇ ಇಂಧನ, ಶಕ್ತಿಯನ್ನು ಬಳಸುವಂತೆ ತಿಳಿಸಿ ಹೇಳಬೇಕು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಅದರ ಪರಿಣಾಮ ಮೊದಮೊದಲು ಚಿಕ್ಕದಾಗಿ ಕಂಡರೂ ಅದರ ವಿಸ್ತಾರ ಬಹಳ ದೂರದವರೆಗೆ ಹೋಗುತ್ತದೆ. ಆದರೆ ನನಗನ್ನಿಸಿದಂತೆ ಒಮ್ಮೆ ಇಲ್ಲಿನ ಬಿಸಿ ಇಳಿಯಿತೆಂದರೆ ಜನರು ಕಡಿಮೆ ಶಕ್ತಿಯನ್ನು ಬಳಸುವ ಬಗ್ಗೆ ಮರೆತೇ ಬಿಡುತ್ತಾರೇನೋ ಎನ್ನಿಸುತ್ತದೆ.

ಸಂಪನ್ಮೂಲಗಳು ಇಲ್ಲದೇ ಇದ್ದರೆ ಅದರಿಂದ ಕಲಿಯೋ ಪಾಠ ಸ್ವಾಭಾವಿಕವಾದದ್ದು, ಹಾಗು ಹೆಚ್ಚು ದಿನ ಇರುವಂತದ್ದು, ಅವರಿವರು ಹೇಳಿ ಬಂದ ಅರಿವು ಕೇವಲ ಕೆಲವೇ ದಿನ ಇರುವಂತದ್ದು. ಎನರ್ಜಿ ಕನ್ಸರ್‌ವೇಷನ್ ಬಗ್ಗೆ ಇಲ್ಲಿ ಶಾಲೆಗಳಲ್ಲಿ ಕಲಿಸುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಅತಿಯಾದ ದುರ್ಬಳಕೆಯಿಂದಾಗಿ ಗ್ಲೋಬಲ್ ವಾರ್ಮಿಂಗ್, ಇಂಧನಗಳು ಬರಿದಾಗುವಿಕೆ, ಮತ್ತಿತರ ಸುದ್ದಿಗಳು ಆಗಾಗ್ಗೆ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇಲ್ಲಿನ ವ್ಯಸ್ತ ಬದುಕಿನ ಸಡಗರಗಳಲ್ಲಿ ಎಲ್ಲವೂ ಇದೆ ಎನ್ನುವ ಹೆಮ್ಮೆಯ ಹಿಂದೆ ಎಲ್ಲವನ್ನೂ ಉಳಿಸಿಕೊಳ್ಳುತ್ತೇವೆ ಎನ್ನುವ ಮಾತು ಗೌಣವಾಗುತ್ತದೆ. ಸರ್ಕಾರದ ಯಾವ ಯೋಜನೆಗಳಾಗಲೀ, ಆಗಾಗ್ಗೆ ನಿಸರ್ಗ ಕಲಿಸುವ ಪಾಠಗಳಾಗಲೀ ಎಲ್ಲವೂ ಸಾರ್ವಜನಿಕ ನೆನಪಿನಶಕ್ತಿಯ ಥರ ಕುಂಠಿತಗೊಳ್ಳುತ್ತಲೇ ಸಾಗಿದೆ.

ಒಮ್ಮೆ ಉಷ್ಣತೆ ನೂರು ಡಿಗ್ರಿಗಳಿಗಿಂತ ಕೆಳಗೆ ಇಳಿಯಿತೆಂದರೆ ಇಲ್ಲಿನ ಜನಗಳ ತಲೆ ಇನ್ನೇನೋ ವಿಷಯಗಳಿಂದ ಬಿಸಿಯಾಗತೊಡಗುತ್ತದೆ, ಶಕ್ತಿಯ ಸದ್ಬಳಕೆಯ ಪಾಠ ಮತ್ತೊಂದು ಬೇಸಿಗೆಯವರೆಗೆ ಕಾಯತೊಡಗುತ್ತದೆ.

Monday, July 31, 2006

'ಮಠ'ದ ಹಿನ್ನೆಲೆಯಲ್ಲಿ ಅನಿವಾಸಿ ಭಾಷೆ

ನಿನ್ನೆ ಜಗ್ಗೇಶ್ ನಟಿಸಿರೋ 'ಮಠ' ಸಿನಿಮಾ ನೋಡಿದ್ ಮೇಲೆ ನಾನು ಕರ್ನಾಟಕ ಬಿಟ್ಟು ಎಷ್ಟೋ ದಶಕಗಳು ಕಳೆದಂತೆನ್ನಿಸಿತು, ಮೊಟ್ಟ ಮೊದಲ್ನೇ ಬಾರಿ ಸಿನಿಮಾದಲ್ಲಿ ಆಡು ಭಾಷೆಯಲ್ಲಿರೋ ನಮ್ಮ್ ಕನ್ನಡ ಅರ್ಥವಾಗದಂತಾ ಪರಿಸ್ಥಿತಿ, ನಾನು ನಿಧಾನವಾಗಿ ಹೋಗಿದ್ದೇನೋ ಅಥವಾ ನನ್ನ ಆಡುಭಾಷೆ ನನ್ನಿಂದ ಆವಿಯಾಗಿ ಹೋಗಿದೆಯೋ ಯಾರಿಗೆ ಗೊತ್ತು?

ಪ್ರತಿಯೊಂದು ಆಡುಭಾಷೆಗೂ ಅದರದ್ದೇ ಆದ ಒಂದು ವೈಶಿಷ್ಟ್ಯ ಇರುತ್ತೆ, ಕೇವಲ ಬೇರೆ-ಬೇರೆ ಭಾಷೆಗಳ ಪದಗಳನ್ನ ಬಳಸಿ ಮಾತನಾಡ್ತಾರೆ ಅಂತಲ್ಲ, ಈ ಆಡುನುಡಿಯನ್ನ ಅದರ ನೇಟಿವ್ ಪರಿಸರದಲ್ಲಿ ಗಮನಿಸಿದಾಗ ಮೂಲಭೂತವಾಗಿ ಅದರಲ್ಲಿ ಒಂದು ಸ್ವಂತಿಕೆ ಇರುತ್ತೆ, ಅದೇ ಅದರ ವಿಶೇಷ. ಈ ಸ್ವಂತಿಕೆಯನ್ನ ಶಾಲೆಯಲ್ಲಿ ಕಲಿತು ನುಡಿಯಲ್ಲಿ ಪ್ರತಿಬಿಂಬಿಸೋದಕ್ಕಾಗಲ್ಲ, ಅದನ್ನ ಆಡಿಯೇ ಅನುಭವಿಸಬೇಕು. ಎಷ್ಟೋ ಜಾತಿ-ಮತ-ಪರಂಪರೆಗಳ ವೈವಿಧ್ಯಮಯ ವಾತಾವರಣದಲ್ಲಿ ನಮ್ಮ ನುಡಿಯ ವೇರಿಯೇಷನ್ನೂ ಸಹ ಅಷ್ಟೇ ಅಲ್ಲಿನ ಮಣ್ಣಿನ-ನೀರಿನ ಗುಣಕ್ಕೆ ಕಟ್ಟುಬಿದ್ದಿರುತ್ತದೆ. ನಾವು ಇಂಗ್ಲೀಷನ್ನ ಎಷ್ಟೇ ಚೆನ್ನಾಗಿ ಮಾತನಾಡಬಲ್ಲವರಾದ್ರೂ ಒಂಥರಾ ರೇಡಿಯೋದಲ್ಲಿ ಸುದ್ದಿ ಓದೋರ್ ಥರಾ ಕಂಡ್ ಬರ್ತೀವೇ ವಿನಾ ಆ ಭಾಷೆಯ ಜೊತೆಯಲ್ಲಿ ಬೆಳೆದು ಬಂದವರ ಹಾಗಾಗೋದಿಲ್ಲ - ಇವತ್ತಿಗೂ ಸಹ ನಮ್ಮ ಭಾರತೀಯ ಅಥವಾ ಇಂಗ್ಲೀಷ್ ಮೂಲಭಾಷೆಯಲ್ಲದ ಬೇರೆಯವರು ಯಾರೇ ಬರೆದ ಸಂದೇಶದಲ್ಲೂ ಸಹ ಆ ಸ್ವಂತಿಕೆ ಇರೋದಿಲ್ಲ, ಪದಗಳ ಬಳಕೆ ನಿರಾಳವಾಗಿರೋದಿಲ್ಲ, ಯಾವುದರ ಕುತ್ತಿಗೆ ಹಿಚುಕಿದ ಅನುಭವವೂ ಆಗೋದಿಲ್ಲ. ಅದೇ ನಾನೇ ಬರೆದ ಪ್ರತಿಯೊಂದು ಸಾಲನ್ನೂ ಗಮನಿಸುತ್ತಾ ಹೋದರೆ ಆ ಸ್ವಂತಿಕೆ ವಿಷಯಗಳ ಗಹನತೆಯಲ್ಲಿ ಮಾಯವಾಗುತ್ತದೆಯೇನೋ ಅನ್ನೋ ಹೆದರಿಕೆ ಹುಟ್ಟುತ್ತದೆ. ಈ ನೇಟಿವ್ ಭಾಷೆಯ ಪರಿಸರದಲ್ಲಿ ಹುಟ್ಟಿ ಬೆಳೆದೋರೆಲ್ಲ ದೊಡ್ಡ ಬರಹಗಾರರಾಗೋದಿಲ್ಲ, ಆದರೆ ಅವರವರು ಮಾತನಾಡಿದಾಗ ಅದರ ಸ್ವಂತಿಕೆ ಅದರಲ್ಲಿ ಇದ್ದೇ ಇರುತ್ತೆ.

'ಮಠ' ಸಿನಿಮಾದಲ್ಲಿ ಮುಖ್ಯವಾಗಿ ಏಳು ಪಾತ್ರಗಳು ಬರುತ್ತವೆ, ಸಿನಿಮಾದ ವಿಮರ್ಶೆ ಅದೂ-ಇದೂ ಅಂತ ಕಾಂಪ್ಲಿಕೇಷನ್ ಮಾಡೋ ಬದಲಿಗೆ, ಈ ಏಳೂ ಪಾತ್ರಗಳು ಬಳಸೋ ಭಾಷೆ ನನಗೆ ಬಹಳವಾಗಿ ಇಷ್ಟವಾಯಿತು, ಅದರಲ್ಲಿ ಆ ವೇರಿಯೇಷನ್ ಇದೆ, ಮೂಲವನ್ನು ಬಿಂಬಿಸೋ ತತ್ವವಿದೆ, ಬುದ್ಧಿವಂತರ ಸೋಗಿನಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳದ ಸಹಜತೆ ಇದೆ. ಚಿತ್ರಕಥೆ ಬರೆಯೋರಿಗೆ ಆ ಪಾತ್ರ ಹೇಳಿದ್ದರಲ್ಲಿ ಏನೂ ಅರ್ಥವಿಲ್ಲ ಎಂದೆನಿಸಿದರೂ ಅಂತಹ ಚಿಕ್ಕ ಡೀಟೈಲನ್ನು ಹಿಡಿದು ಓದುಗರಿಗೆ/ಕೇಳುಗರಿಗೆ ಒಪ್ಪಿಸಿದಾಗಲೇ ಆ ಬರಹಗಾರನಿಗೆ ಜಯ ದೊರಕೋದು. 'ಮಠ'ದ ಪಾತ್ರಗಳು ತಮಗೆ ಒಪ್ಪಿಸಿದ ಪಾತ್ರಗಳ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗೇ ನಿರ್ವಹಿಸಿದ್ದರೂ ಬಹಳ ದಿನಗಳ ನಂತರ ಕೇಳಿದ ಭಾಷೆಯಾದ್ದರಿಂದಲೋ, ಈ ರೀತಿ ಅನುಭವಗಳು ನಮಗಿಲ್ಲಿ ಪದೇ-ಪದೇ ಆಗದಿದ್ದುದರಿಂದಲೋ ಚಿತ್ರದುದ್ದಕ್ಕೂ ಬೇಕಾದಷ್ಟು ಸಂಭಾಷಣೆಗಳು ನನ್ನ ತಲೆಯ ಮೇಲೆ ಹಾದು ಹೋದವು - ಈ ಬಾರಿ ಮಧ್ಯದಲ್ಲಿ ತೊಂದರೆ ಮಾಡುವ ಯಾವ ಮಕ್ಕಳೂ ಇರಲಿಲ್ಲ, ಚಿತ್ರದಲ್ಲಿ ಎಲ್ಲವೂ ಸರಿಯಾಗಿಯೇ ಕೆಲಸ ಮಾಡುತ್ತಿತ್ತು - ಬಂದ ತೊಂದರೆಯೇನೆಂದರೆ ನಾನು ಚಿತ್ರದ ಸಂಭಾಷಣೆಯ ವೇಗಕ್ಕೆ ಹೊಂದಿಕೊಳ್ಳಲು ತೆಗೆದುಕೊಂಡ ಸಮಯ. ಹೀಗೆ ಬಂದ ಒಂದು ಸಂಭಾಷಣೆಯ ತುಣುಕನ್ನು ಹಿಡಿದು ಅದನ್ನು ಆಸ್ವಾದಿಸುವುದರಲ್ಲಿ ಮತ್ತೊಂದು ಬರುತ್ತಿತ್ತು, ಒಂದು ರೀತಿ ಮಾತಿನ ಮೇಲೆ ಮಾತು ಬಂದು ನನಗೆ ಆ ವೇಗಕ್ಕೆ ಹೊಂದಿಕೊಳ್ಳಲು ಹಲವಾರು ಕಡೆ ಕಷ್ಟವಾಯಿತು.

ನಾನು ದಿನವೂ ಕನ್ನಡವನ್ನು ಓದುತ್ತೀನಿ ಹಾಗೂ ಬರೀತೀನಿ (ಅಲ್ಲ, ಕುಟ್ಟುತ್ತೀನಿ) ನನ್ನಂಥವನಿಗೇ ಹೀಗೇ? ಕರ್ನಾಟಕದ ಉದ್ದಗಲಕ್ಕೆ ಎಷ್ಟೂ ಸಾದ್ಯವೋ ಅಷ್ಟು ಓಡಾಡಿದ್ದೇನೆ, ತುಸು ಕಷ್ಟಪಟ್ಟರೆ ಒಂದೈದು ಡಯಲೆಕ್ಟ್‌ಗಳನ್ನು ಮಾತನಾಡುತ್ತೇನೆ, ನನ್ನಂಥವನಿಗೇ ಹೀಗೇ? ಎಂದು ಕೇಳಿಕೊಂಡಾಗಲೆಲ್ಲ ಆ ಪ್ರಶ್ನೆಗಳಿಗೆ ಉತ್ತರವಾಗಿ ಕನ್ನಡವನ್ನು ಮಾತುಗಳನ್ನಾಗಿ ಕೇಳೋದಿಲ್ಲವಲ್ಲ, ಆ ಕೊರತೆಯನ್ನು ತುಂಬೋದು ಹೇಗೆ? ಎನ್ನುವ ಪ್ರಶ್ನೆಯೇ ಉತ್ತರವಾಗಿ ಬಂತು. ನಮಗಿಲ್ಲಿ ಬರೋದೇ ವರ್ಷಕ್ಕೆ ನಾಲ್ಕೈದು ಸಿನಿಮಾಗಳು, ಅದನ್ನು ಬಿಟ್ಟರೆ ಮನಪೂರ್ತಿಯಾಗಿ ಮಾತನಾಡುವ ಬೆರಳೆಣಿಕೆಯ ಸ್ನೇಹಿತರಿದ್ದರೂ ಅವರದ್ದೆಲ್ಲ ನನ್ನ ಪರಂಪರೆಯೇ - ಮಾತುಗಳು ಗ್ರಂಥಮಯ, ಮಧ್ಯೆ-ಮಧ್ಯೆ ಹಾಳಾದ ಇಂಗ್ಲೀಷು ಬೇರೆ. ಈ ತರಹದ ಭಾಷೆಯ ಹಿನ್ನೆಲೆಯಲ್ಲಿ ಅದ್ಯಾವುದೋ ಚಿತ್ರದಲ್ಲಿ ಒಬ್ಬ ಹೂ ಮಾರುವ ಹೆಂಗಸು ಮಾತನಾಡುವ ಕನ್ನಡ, ಒಬ್ಬ ಕುಡುಕನ ಬಾಯಿಯಿಂದ ಉದುರುವ ಕನ್ನಡ, ಇಮಾಮ್ ಸಾಬಿ ಅವನ ಮಕ್ಕಳಿಗೆ ಬಳಸೋ ಹರಕು ಮುರುಕು ಉರ್ದು ಮಿಶ್ರ್ರಿತ ಬೈಗಳು ತುಂಬಿದ ಕನ್ನಡ, ಅರ್ಚಕರ ಕನ್ನಡ, ಅಡ್ಡಕಸಬಿಗಳ ಕನ್ನಡ, ಇತ್ಯಾದಿಗಳ ದರ್ಶನವಾದರೆ ಅದು ಧಿಡೀರನೆ ಅರ್ಥವಾಗೋದಾದರೂ ಹೇಗೆ?

ಬೇಕಾಗಿಲ್ಲ ಬಿಡಿ, ಇಲ್ಲಿ ಹೇಗೂ ದಿನ ನಿತ್ಯದ ಬದುಕು ಅನ್ನೋ ಬಂಡಿ ನಡೆದೇ ನಡೆಯುತ್ತಲ್ಲ! ಆದರೆ ಸಂವೇದನೆಗಳ ವಿಷಯಕ್ಕೆ ಬಂದಾಗ ಈ ನೆನಪಿನಿಂದ ಹಾರಿ ಹೋಗಿರೋ ಅಗಾಧವಾದ ಶಬ್ದ ಭಂಡಾರವಿರದೇ ಹೋದಲ್ಲಿ ಆ ಸಂವೇದನೆಗಳು ಪೂರ್ತಿಯಾಗೋದಾದರೂ ಹೇಗೆ? ಇದಕ್ಕಾಗಿಯೇ ಇರಬೇಕು ಒಂದು ರೀತಿ ಅನಿವಾಸಿ ಸಾಹಿತ್ಯ ಬಹಳ ಡ್ರೈ ಅನ್ನಿಸೋದು - ಈ ಶುಷ್ಕ ಸಾಹಿತ್ಯ ಅನ್ನೋದು ನನ್ನ ಬರಹಗಳಲ್ಲಿ, ಸಂವಾದಗಳಲ್ಲಿ ಇರುವ ವಿಷಯ ನನ್ನ ಅಂತಃಪ್ರಜ್ಞೆಯ ಯಾವುದೇ ಮೂಲೆಯೊಂದಕ್ಕೆ ಗೋಚರಿಸಿದರೂ, ಆ ಸಾಹಿತ್ಯದ ಮೇಲೆ, ಹಿಂದೆ-ಮುಂದೆ ದೊರೆಯುವ ಉಪಚಾರಗಳು ಶುಷ್ಕ ಪರಿಸರವನ್ನು ಮುಚ್ಚಿ ಮರೆಮಾಡುತ್ತವೆ. ಹೀಗೆ ನನಗಾದಂತೆಯೇ ಇತರರಿಗೂ ಆಗಿ ನಮ್ಮ ಅನಿವಾಸಿ ಸಂವೇದನೆಗಳು ಯಾರಿಗೂ ದಕ್ಕದೇ ಹೋಗೋ ಸಂಭವನೀಯತೆಯೇ ಹೆಚ್ಚು ಎಂದು ಬಿಡಲೇ ಅಥವಾ ಹೀಗೆ ದೊಡ್ಡದಾಗಿ ಬರೆದರೆ ಅದನ್ನು ಕ್ವಾಲಿಫೈ ಮಾಡೋದು ಹೇಗೆ ಎಂದು 'ಮೆಚ್ಚಿಸುವ' ಆಟ ಆಡಲೇ?

'ಮಠ' ಚಿತ್ರದ ಏಳೂ ಭಾಷೆಗಳು ನಿರಂತರವಾಗಿ ನನ್ನ ಕಿವಿಯ ಮೇಲೆ ಆಗಾಗ್ಗೆ ಬೀಳುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು: ಗಾರೆ ಕಟ್ಟುವವರಿಂದ ಹಿಡಿದು ಬಂಡಿ ಓಡಿಸುವವರ ತನಕ ನನ್ನ ಭಾಷೆಯ ಹರಿವು ಸುತ್ತಿಕೊಳ್ಳುತ್ತಿತ್ತು. ಅದನ್ನು ಬಿಟ್ಟು ಅಪರೂಪಕ್ಕೊಮ್ಮೆ ಆಡುವ ಇಂಗ್ಲೀಷು ಬೆರೆತ ಗ್ರಾಂಥಿಕ ಭಾಷೆಯ ಸೋಗು ನನಗ್ಯಾವ ಅನುಭವವನ್ನೂ ಮಾಡದು, ಬದಲಿಗೆ ಅದು ಒಂದು ರೀತಿ ಮೊನಟನಸ್ ಬಟ್ಟೆಯಿಂದ ಮೈ-ಮನಗಳನ್ನು ಮುಚ್ಚಿ ಇನ್ನೇನೂ ರುಚಿಸದಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಈ ರೀತಿಯ ಭಾಷೆಯ ಅನುಭವ ಒಂದೆರಡು ಘಂಟೆಗಳ ಮಟ್ಟಿಗೆ ಆಗುವುದೆಂದಾದರೆ ಖಂಡಿತವಾಗಿ ನಾನು ಕನ್ನಡ ಸಿನಿಮಾಗಳನ್ನು ಅದೆಷ್ಟು ಕಷ್ಟವಿದ್ದರೂ ನೋಡಿಯೇ ತೀರುತ್ತೇನೆ - ಸಿನಿಮಾ ಕಥೆ, ಅದನ್ನು ತೆಗೆದ ರೀತಿ ಇವೆಲ್ಲವೂ ಸೆಕೆಂಡರಿ, ಅದು ಆ ಮಟ್ಟಿಗೆ ತರುವ ಭಾಷೆಗಳ ದಿಬ್ಬಣ ಪ್ರೈಮರಿ.

ಈವರೆಗೆ ಜಾಲದಲ್ಲಿ ಕನ್ನಡವನ್ನು ನೋಡುವುದಕ್ಕೆ ಖುಷಿ ಪಟ್ಟುಕೊಳ್ಳುತ್ತಿದ್ದೆ, ಇನ್ನು ಅಲ್ಲಲ್ಲಿ ಬಗೆ-ಬಗೆಯ ಕನ್ನಡವನ್ನು ಕೇಳುವ ಸುಖ ಹುಡುಕಿಕೊಂಡು ಹೋಗಬೇಕಾಗಿದೆ!

Sunday, July 30, 2006

ಶ್ರಾವಣ ತರೋ ಸಂಭ್ರಮ

ಇಂದು ನಾಗರ ಪಂಚಮಿ, ಹೆಚ್ಚೂ ಕಡಿಮೆ ಇಂದಿನಿಂದಲೇ ನಮ್ಮೂರಲ್ಲೆಲ್ಲ ಶ್ರಾವಣ ಶುರುವಾಗೋದು, ಹೌದು ಶ್ರಾವಣ ತರೋ ಸಂಭ್ರಮಕ್ಕೆ ತಯಾರಾಗೋದಕ್ಕೆ ಕೊನೇಪಕ್ಷ ಮೊದಲ ನಾಲ್ಕು ದಿನಗಳಾದರೂ ಬೇಡವೇ?

ಎಂಥವರಿಗೂ ನಮ್ಮೂರಲ್ಲೆಲ್ಲ ಶ್ರಾವಣದ ಅನುಭವ ಬಂದೇ ಬರುತ್ತದೆ, ಯಾವಾಗ ಬೇಕಂದರೆ ಆಗ ಸುರಿಯೋ ಜಿಟಿಪಿಟಿ ಮಳೆ, ಅಲ್ಲಲ್ಲಿ ರಾಚೋ ಕಿಚಿಪಿಚಿ ಕೆಸರು, ಕೈಗಳಲ್ಲೆಲ್ಲ ಒಂದೊಂದು ಕೊಡೆ, ಕಾಲಿಗೆ ಅಡರಿಕೊಳ್ಳೋ ಪ್ಲಾಸ್ಟಿಕ್ ಬೂಟು-ಚಪ್ಪಲಿಗಳು, ಹಿರಿಯರು ಕಟ್ಟಿದ ಹಳೆಯ ಮಾಡಿಗೆ ತೂಗಿಬಿದ್ದು ಕಿರ್-ಗುರ್ ಎಂದು ಸದ್ದು ಮಾಡುವ ಮಾಡಿನ ಮರದ ಹಿನ್ನೆಲೆಯ ಸಂಗೀತದಲ್ಲಿ ಕಿರಿಯರು ಜೀಕಿದಂತೆಲ್ಲ ಪೆಂಡುಲಮ್ ನೆನಪಿಸುವ ಜೋಕಾಲಿಗಳು, ಥರಾವರಿ ತಿನಿಸುಗಳು, ಉಂಡೆಗಳು, ತಳಿರು ತೋರಣಗಳು, ಇವುಗಳ ಜೊತೆಯಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು, ಶ್ರಾವಣಕ್ಕೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳೋ ಮೀನು ಮಾರುವ ಇಮಾಮ್ ಸಾಬಿ ಮತ್ತು ಅವನ ಮಕ್ಕಳು ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಸಂಭ್ರಮವನ್ನು ಸೃಷ್ಟಿಸುತ್ತಲೇ ಇರುತ್ತಾರೆ.

ತವರು ಮನೆಯಿಂದ ಹೊರಟ ಹೆಣ್ಣು ಮಕ್ಕಳಿಗೆ ತವರನ್ನು ಬಿಟ್ಟ ನೋವು ಅವರು ತೊಟ್ಟ ಬಣ್ಣಬಣ್ಣದ ಸೀರೆ-ಕುಪ್ಪುಸಗಳ ರಂಗಿನಲ್ಲಿ ಮಾಸಿ ಹೋಗುತ್ತದೆ, ಹೊಸ ಮನೆಯಲ್ಲಿ ಹಾಗಿರಬೇಕು, ಹೀಗೆ ಮಾಡಬೇಕು ಎನ್ನುವ ಆಲೋಚನೆ ತುಂಬಿಕೊಂಡಿರುತ್ತದೆ. ಆಟವಾಡುವ ಮಕ್ಕಳೇನೋ ಜೋಕಾಲಿ ಜೀಕಿಕೊಂಡು ಹಾಯಾಗಿ ಇದ್ದರೆ ಬರೋ ಪುಷ್ಯಾ, ಆಶ್ಲೇಷ ಮಳೆಗಳೋ ಹೇಗೋ, ಈ ವರ್ಷಾನಾದ್ರೂ ಕೆರೆ ತುಂಬಿ ಕೋಡಿಬಿದ್ದಿದ್ದ್ರೆ ಎನ್ನುವ ಆಲೋಚನೆಯ ಗೆರೆ ಹಿರಿಯರ ಮುಖದಲ್ಲಿ ಕಂಡು ಬರುತ್ತದೆ. ಇವರ ನಲಿವಿನ ಹಿಂದುಗಡೆ ಮೊನ್ನೆ ಮೊನ್ನೆ ಬಂದು ಹೋದ ಅಮಾವಾಸ್ಯೆಯ ನೆರಳು ಸ್ವಲ್ಪವಾದರೂ ಇದೆ, ಇನ್ನೇನು ಹತ್ತೇ ದಿನಗಳಲ್ಲಿ ನೂಲು ಹುಣ್ಣಿಮೆ ಬರಬಹುದಾದರೂ ಐದು ದಿನಗಳ ಹಿಂದಿನ ಕತ್ತಲೆ ಹತ್ತು ದಿನಗಳ ನಂತರ ಬರುವ ಬೆಳಕಿನ ಮುಂದೆ ಮೆರೆದಂತೆ ಅನ್ನಿಸುತ್ತದೆ.

ನಿಮ್ಮನೆಗಳೆಲ್ಲೆಲ್ಲ ಹೇಗೋ ಏನೋ, ನಮ್ಮನೆಗಳಲ್ಲಿ ನಾವು ಬಲವಂತವಾಗಿ ಜೋಕಾಲಿ ಕಟ್ಟಿಸಿಕೊಳ್ಳುತ್ತಿದ್ದೆವು, ಅತ್ತೋ-ಕರೆದೋ ಇನ್ನೊಂದೋ ಮಾಡಿ. ಏನಿಲ್ಲವೆಂದರೂ ಕೊನೇಪಕ್ಷ ಎರಡು ರೀತಿಯ ಉಂಡೆಗಳನ್ನಾದರೂ ಮನೆಯಲ್ಲಿ ಮಾಡಿದ್ದರೆ, ಮೆಷ್ಟ್ರು ಮಕ್ಕಳಾದ್ದರಿಂದ ನಮ್ಮ ಅಪ್ಪ-ಅಮ್ಮ ಶಾಲೆ ಬಿಟ್ಟು ಬರೋವಾಗ ಏನಿಲ್ಲವೆಂದರೂ ಹತ್ತಿಪ್ಪತ್ತು ತರದ ಉಂಡೆಗಳನ್ನಾದರೂ ತರುತ್ತಿದ್ದರು, ಅಂಟುಂಡೆ, ಸುಕ್ಕಿನುಂಡೆ, ಶೇಂಗಾಉಂಡೆ, ರವೆಉಂಡೆ, ಮಂಡಕ್ಕಿ ಉಂಡೆ, ಎಳ್ಳುಂಡೆ, ಕೊಬ್ಬರಿ ಉಂಡೆ...ಹೀಗೆ ಹಲವಾರು ಬಗೆಯ ಉಂಡೆಗಳು - ತಿನ್ನುವ ಪದಾರ್ಥಗಳನ್ನೆಲ್ಲ ಬೆಲ್ಲದ ಪಾಕದಲ್ಲಿ ಹಾಕಿ ಅಂಟದಂತೆ ಹದಕ್ಕೆ ಬಂದಮೇಲೆ ಉಂಡೆ ಕಟ್ಟುವ ಪೈಪೋಟಿಗೆ ಉತ್ತರದಂತೆ. ಆದರೆ ಪಂಚಮಿ ಹಬ್ಬವೆಂದರೆ ಅದರಲ್ಲಿ ತಲೆಮಾರಿನಿಂದ ತಲೆಮಾರಿಗೆ ಬೆಳೆದುಬಂದ ಒಂದು ಸಂದೇಶವೂ ಇತ್ತು, ಅದೇ ನಾಗನಿಗೆ ಹಾಲೆರೆಯುವುದು.

ನಮ್ಮೂರ ಪೋಲೀಸ್ ಸ್ಟೇಷನ್ ಆವರಣದಲ್ಲಿ ಇರೋ ಹಾಗೆ ಒಂದು ದೊಡ್ಡ ಹುತ್ತವಿತ್ತು, ಅಲ್ಲಿಗೆ ಊರಿನವರು ಹೆಚ್ಚಿನ ಪ್ರಮಾಣದಲ್ಲಿ ಹೋಗಿ ಹಾಲನ್ನೆರೆದರೆ ನಾವು ನಮ್ಮ ಮನೆಯಲ್ಲಿಯೇ ಒಂದು ಬೆಳ್ಳಿಯ ನಾಗನಿಗೆ ಹಾಲನ್ನೆರೆಯುತ್ತಿದ್ದೆವು. ನಾನು ಪೋಲೀಸ್ ಸ್ಟೇಷನ್ ಆವರಣದಲ್ಲಿರೋ ಹುತ್ತದಲ್ಲಿ ನಾಗನ್ನೆಂದೂ ನೋಡಿದ್ದಿಲ್ಲ, ಆದರೂ ಅಲ್ಲಿ ಹಾವಿನ 'ನಡೆ' ಇದೆ ಎಂದು ಬಲ್ಲವರು ಹೇಳಿದ್ದನ್ನು ಕೇಳಿದ್ದೇನೆ. ಕನ್ನಡದ ಕವಿ ಹೇಳೋ ಹಾಗೆ 'ಉಳ್ಳೆಯದು ಉಳ್ಳೆಯೇ ಕಾಳಿಯ ನಾಗ ನಾಗಲಾರದು...' ಎಂಬಂತೆ ನಮ್ಮ ಮನೆಯ ಐದು ಇಂಚು ಎತ್ತರದ ಬೆಳ್ಳಿಯ ನಾಗ ನಿಜವಾದ ನಾಗ ನೆಂದೂ ಆಗಿದ್ದಿಲ್ಲ, ಗಣಪತಿಯಂತೆ ಹಾಲನ್ನೆಂದೂ ಹೀರಿದ್ದಿಲ್ಲ, ಆದರೂ ನಾವು ಪ್ರತೀ ವರ್ಷ, ಇದ್ದವರು, ಇಲ್ಲದವರು ಎಲ್ಲರ ಹೆಸರಿನಲ್ಲಿ - 'ಅಮ್ಮನ ಪಾಲು, ಅಪ್ಪನ ಪಾಲು, ಅಣ್ಣನ ಪಾಲು...' ಎಲ್ಲವನ್ನೂ ನಾಗನ ತಲೆಗೆ ಅರ್ಪಿಸುತ್ತಿದ್ದೆವು. ಅಪರೂಪಕ್ಕೆ ಒಮ್ಮೆ ಅವರಿವರ ಮನೆಯಲ್ಲಿ ನಿಜವಾದ ನಾಗ ಬಂದು ಹಾಲನ್ನು ಹೀರಿದ ಕಥೆಯೂ ಕೇಳಿ ಬರುತ್ತಿತ್ತು. ಇದು ಬಹಳ ಭಕ್ತಿ ಹಾಗೂ ಸಂಭ್ರಮದ ವಿಷಯ ನಮಗೆಲ್ಲರಿಗೂ. ನಮ್ಮ ಮನೆಯ ಹಿತ್ತಿಲಿನಲ್ಲಿ ಇದ್ದ ಬಾವಿಯ ಕಟ್ಟೆಯ ಹತ್ತಿರ ಒಂದು ನಾಗನ ಮೂರ್ತಿ ಇದೆ, ನಮ್ಮ ಮನೆಯವರ ಪ್ರಕಾರ ಅಲ್ಲೂ ನಾಗನ ನೆಡೆಯಿದೆ, ನಾಗನನ್ನು ನಾವು ಯಾವಾಗಲೂ ಪೂಜಿಸಬೇಕು, ಗೌರವಿಸಬೇಕು ಇತ್ಯಾದಿ, ಇತ್ಯಾದಿಗಳು ಪದೇಪದೇ ಕೇಳಿ ಬಂದು ನಮ್ಮ ಮನದಲ್ಲಿ ಭಕ್ತಿ, ಗೌರವ ಹಾಗೂ ಹೆದರಿಕೆಗಳನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಅಲ್ಲಲ್ಲಿ ಒಂದಿಷ್ಟು ಓದಿ ತಿಳಿದುಕೊಂಡ ಮೇಲೆ, ಇಲ್ಲಿಗೆ ಬಂದ ನಂತರ ಡಿಸ್ಕವರಿ ಚಾನೆಲ್‌ನಲ್ಲಿ ಸ್ಟೀವ್ ಇರ್ವಿನ್‌ನ ಹಾವನ್ನಾಧರಿಸಿದ ಕಾರ್ಯಕ್ರಮಗಳನ್ನು ನೋಡಿದ ಮೇಲೆ, ನಾಗನ ಇತಿ-ಮಿತಿಗಳು ಅರಿವಿಗೆ ಬಂದರೂ, ರಾಮಾಚಾರಿ ಹಾಡಿದ 'ಹಾವಿನ ದ್ವೇಷ ಹನ್ನೆರಡು ವರುಷ...' ಹಾಡು ಮನದಲ್ಲಿ ಘರ್ಷಣೆಯನ್ನು ಸೃಷ್ಟಿಸಿದರೂ ನನಗೆ ನಾಗನ ಮೇಲೆ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಕೊನೇಪಕ್ಷ ಏನಿಲ್ಲವೆಂದರೂ ನಮ್ಮೂರಿನ ರೈತರಿಗೆ ರಾತ್ರಿ ಹೊತ್ತು ಜಮೀನಲ್ಲಿ ಉಪದ್ರವ ಕೊಡುವ ಇಲಿಗಳ ಕಾಟವನ್ನು ಹತೋಟಿಯಲ್ಲಿಡಲು ಸಹಾಯವಾಗುವ, ಆಹಾರ ಸರಪಳಿಯಲ್ಲಿ ಮುಖ್ಯ ಸ್ಥಾನದಲ್ಲಿರುವ ಈ ಸರೀಸೃಪಗಳ ಮೇಲೆ ನನಗೆ ಯಾವಾಗಲೂ ಗೌರವವಿದ್ದೇ ಇರುತ್ತೆ.

ಇಲ್ಲಿನ ಪಾರ್ಕಿನಲ್ಲಿ, ಅಥವಾ ಉಳ್ಳವರ ಮನೆಗಳ ಹಿತ್ತಲಿನಲ್ಲಿ ಸದಾ ತೂಗುಬಿದ್ದಿರೋ ಕಬ್ಬಿಣದ ಸರಪಳಿಯ ಜೋಕಾಲಿಗಳಲ್ಲಿ ನಮ್ಮೂರಿನ ನಾರು ಹಗ್ಗದ ಗರಿಗರಿತನವಿಲ್ಲ, ತೆಂಗಿನ ನಾರಿನ ಹಗ್ಗದಿಂದ ಮಾಡಿ, ಮಾಡಿನ ಮರಕ್ಕೆ ತೂಗುಬಿದ್ದ ಕುಣಿಕೆಗಳಲ್ಲಿ, ಗೋಣಿಚೀಲದ ಆಸನದಲ್ಲಿ ಜೀಕೋ ಮಕ್ಕಳಲ್ಲಿ ಕಾಣೋ ಸ್ವಾಭಾವಿಕ ಸಂಭ್ರಮ ಇಲ್ಲಿನ ಮಕ್ಕಳಲ್ಲಿ ನಾನು ನೋಡಿಲ್ಲ, ಅಲ್ಲಿನ ವರ್ಷಕ್ಕೊಮ್ಮೆ ಬರುವ ಜೋಕಾಲಿ ಹಬ್ಬದ ಸಂಭ್ರಮದ ಮುಂದೆ ಇಲ್ಲಿನ ವರ್ಷದ ಬಿಸಿಲಿನ ದಿನಗಳಲ್ಲೆಲ್ಲ ಸಿಗುವ ಜೋಕಾಲಿ ಜೋರು ಏನೇನೂ ಇಲ್ಲ.

ಇಲ್ಲಿನ ಕಬ್ಬಿಣದ ಸರಪಳಿಗಳು ಸವೆಯುತ್ತವೆಯೋ ಬಿಡುತ್ತವೆಯೋ ಅಲ್ಲಿ ನಾವು ಬೆಳೆದಂತೆ ಮಾಡಿನಿಂದ ತೂಗುಬಿಡುವ ಎಳೆಗಳು ಸವೆದು ಕೃಶವಾಗುತ್ತಿದ್ದವು, ನಾವು ನಮ್ಮ ಕಿರಿಯರಿಗೆ ಜೋಕಾಲಿ ಕಟ್ಟಿಕೊಡುವ ಪರಂಪರೆ ಎಂದಿಗೂ ಮುಂದುವರೆಯುತ್ತಿತ್ತು.

Wednesday, July 26, 2006

ಮತ್ತೊಂದ್ ಎಲೆಕ್ಷನ್‌ಗೆ ತಯಾರಾಗೋಣ್ವಾ ಹೇಗೆ?

ಕುಮಾರಸ್ವಾಮಿಯ ಗತ್ತು ಗೈರತ್ತು ಸ್ವಲ್ಪ ಮೆತ್ತಗೆ ಆದಂಗೆ ಕಾಣ್ಸುತ್ತೆ, ಅವರು ಗಣಿಯಿಂದ ಅಗಿದ ಮಣ್ಣೆಲ್ಲ ಮೈ ಮೇಲೆ ಬಿದ್ದಷ್ಟು ಕುಬ್ಜರಾಗಿ ಹೋಗಿರೋದು ಅಲ್ಲಲ್ಲಿ ಕಂಡ ಫೋಟೋಗಳಲ್ಲೂ ಗಮನಕ್ಕೆ ಬರುತ್ತೆ. ರಾಜ್ಯಪಾಲ ಚತುರ್ವೇದಿ ಕೊಟ್ಟಿರೋ ವರದಿಯಲ್ಲಿ ಏನಿರುತ್ತೋ ಬಿಡುತ್ತೋ, ನಮ್ಮ್ ಜನ ಅಂತೂ ಕುಮಾರಸ್ವಾಮಿ ಹಾಗೂ ಅವರ ಸರ್ಕಾರದ ಮೇಲೇನೇ ವಿಶ್ವಾಸ ಕಳಕಂಡೋರ್ ಹಾಗೆ ಕಾಣುಸ್ತಾರೆ.

ಒಂದ್ ಕಡೆ ದೇವೇಗೌಡ್ರು ಮಗನ ಸಪೋರ್ಟಿಗೆ ಬಂದಿರೋ ಹಾಗೆ ಹೇಳಿಕೆ ಕೊಡ್ತಾ ಇದ್ದಾರೆ, ಅವರ ಐದು ದಶಕಗಳ ರಾಜಕೀಯ ಅನುಭವವನ್ನೂ ಕೆಲಸಕ್ಕೆ ಹಚ್ಚಿದ ಹಾಗೆ ಕಾಣ್ಸುತ್ತೆ. ಅವರು ಮಾಡ್ತಾ ಇರೋ ತಪ್ಪು ಏನು ಅಂದ್ರೆ ನೇರವಾಗಿ ಬಿಜೆಪಿಯೋರ್ನ ಬೈಯ್ಯೋದು, ಅವರ ಬಗ್ಗೆ ಆಡಿಕೊಳ್ಳೋದು. ಒಂದ್ ಕಡೆ ಕಾಂಗ್ರೇಸ್‌ನವರು ಹಳೆ ದ್ವೇಷಾ ತೀರಿಸಿಕೊಳ್ಳೋ ಹಾಗೆ ಕಾಣ್ತಿದ್ದಾರೆ, ಮತ್ತೊಂದ್ ಕಡೆ ತಮ್ಮ ದಳದ ಬಣಗಳಲ್ಲೇ ಒಡಕು ಬರ್ತಾ ಇರೋದು ದೊಡ್ಡ ಗೌಡರಿಗಂತೂ ಬಾಳಾ ಕಷ್ಟವಾಗಿ ಹೋಗಿದೆ. ಏನು ಮಾಡೋದು ಅವರು ಬೈದು ಬಿಸಾಕೋಕೇ ಇತ್ಲಾಗೆ ಸಿದ್ಧರಾಮಯ್ಯನೂ ಇಲ್ಲ, ಅತ್ಲಾಗೆ ಹೆಗಡೆಯೂ ಇಲ್ಲ!

ದೊಡ್ಡ ಗೌಡ್ರು ಬಿಜೆಪಿಯವರ್ನ ಅಂದುಕಂಡಂಗೆಲ್ಲ, ಮರಿಗೌಡ್ರು ಅದೆಲ್ಲ ಸರಿ ಅಲ್ಲ, ದೊಡ್ಡೋರ್ ಹೇಳಿದ್ ಮಾತ್ನೆಲ್ಲ ಕೇಳ್ ಬೇಡಿ ಅಂತ ಓಪನ್ ಆಗೆ ಹೇಳ್ಕೆ ಕೊಡ್ತಾ ಇರೋದ್ ನೋಡಿದ್ರೆ, ಇಂಥದ್ದರಲ್ಲೆಲ್ಲ ಬಹಳಷ್ಟ್ ಪಳಗಿರೋ ಅಪ್ಪನಿಗೆ ಮುಂದೆ ಏನಾಗುತ್ತೆ ಅನ್ನೋದು ಚೆನ್ನಾಗಿ ಗೊತ್ತಾಗಿ ಮಗನನ್ನ ರಕ್ಷಣೆ ಮಾಡೋಣ ಅಂತ ಅಪ್ಪ ಬಂದ್ರೆ, ಮಗನಿಗೆ ನಮ್ ಉಸಾಬರಿಗೆ ನೀವ್ ಬರಬೇಡಿ, ನಾವೇನಾದ್ರೂ ಮಾಡಿಕೊಳ್ತೀವಿ ಅಂತ ಹೇಳೋ ಉಮ್ಮೇದು ಬಂದ ಹಾಗೆ ಕಾಣ್ಸುತ್ತೆ.

ನಮ್ಮ್ ಜನ ಸ್ವಲ್ಪ ಮಟ್ಟಿಗಾದ್ರೂ ವಿಶ್ವಾಸ್ ಇಟ್ಟಿದ್ರು ಕುಮಾರ್‌ಸ್ವಾಮೀ ಮೇಲೆ. ಒಂದ್ ಥರಾ ಶಂಕರ್‌ದಯಾಳ್ ಶರ್ಮ್‌ರ ರೀತಿ ನಡೆಯೋ ಧರಮ್ ಸಿಂಗ್ ಆಡಳಿತದಿಂದ ಬೇಸತ್ತ ಜನ, ಈ ಹೊಸ ಸರ್ಕಾರದ ಮೇಲೆ ಸ್ವಲ್ಪನಾದ್ರೂ ನಿರೀಕ್ಷೆ ಇಟ್ಕೊಂಡಿದ್ರು. ಈ ಮನುಷ್ಯ ಬಂದ್ ಬಂದೋರೆ, ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಸ್ವಲ್ಪಕಾಲ ಹೆಸರು ಮಾಡಿದ್ದಂತೂ ನಿಜ - ಲೈಟ್ ರೇಲು, ನಕ್ಸಲ್ ಸಮಸ್ಯೆಯ ಪುನರ್ ಚಿಂತನೆ, ಹಾಗೂ ಹಲವಾರು ಮುಖ್ಯ ಯೋಜನೆಗಳ ಮೂಲಕ ಮೇಲ್ ಬರಬಹುದಾದ ಅವಕಾಶ ಬಹಳ ಇತ್ತು. ಅವರಿಗಿಂತ ಹಳೆಯ ಸರ್ಕಾರದವರು ಯಾವ್ಯಾವ್ ವಿಷಯಕ್ಕೆ ಗಮನ ಕೊಡಲಿಲ್ಲವೋ ಅದೆಲ್ಲದ್ದಕ್ಕೂ ಗಮನಕೊಡೋ ಹಾಗೆ ಕಂಡ್ ಬಂದ್ರು. ಜೊತೆಯಲ್ಲಿ ಅಗಾಧವಾದ ಹಸಿವು ಇರೋ ಬಿಜೆಪಿ ಶಾಸಕರ ಗುಂಪನ್ನ ಮಡಿಲಲ್ಲಿಟ್ಟಿರೋ ಕೆಂಡದ ಹಾಗೆ ಜೋಪಾನ ಮಾಡಿಕೊಂಡ್ ಹೋಗೋ ಜವಾಬ್ದಾರಿ ಇರೋ ಮನುಷ್ಯ, ಪಾರ್ಟಿ ಈ ರೀತಿ ಹೇಗ್ ಮಾಡೋಕ್ ಸಾಧ್ಯ. ಆರೋಪ ನಿಜಾನೋ ಸುಳ್ಳೋ, ಅದು ನಿಜವಾಗೋದ್ರೊಳಗೆ ಪ್ರತಿಪಕ್ಷದವರು ರಾಜೀನಾಮೆ ಕೊಡಿ ಅಂತ ಏನಾದ್ರೂ ಒತ್ತಾಯ ಮಾಡಿದ್ರೆ, ಅಥವಾ ಕೆಲವು ಶಾಸಕ್ರು ಅಸಮಧಾನ ಅಂತ ಹಿಂದಕ್ ಸರದ್ರೆ - ಇದೆಲ್ಲದರ ಬೆಲೆಯನ್ನ ನಮ್ ಜನ ಯಾಕೆ ಮತ್ತೊಂದ್ ಎಲೆಕ್ಷನ್ ಹೆಸರ್ನಲ್ಲಿ ತೆರಬೇಕು ಅಂತೀನಿ.

ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಒಳ್ಳೇದನ್ನೇ ಮಾಡಿದ್ರು, ದಳ ತಂದುಕೊಡಲಾರದ ಅಧಿಕಾರವನ್ನ ಕಾಂಗ್ರೇಸ್ ಆದ್ರೂ ತಂದ್ ಕೊಡುತ್ತಾ ಅಂತ ನೋಡೋಣ. ಆ ಮನುಷ್ಯನಿಗೆ ಇನ್ನೇನು ಇಲ್ಲ, ಒಂದು ದಿನದ ಮಟ್ಟಿಗಾದ್ರೂ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದು ಅವರ ಆಶಯ ಅಂತ ಎಲ್ಲರಿಗೂ ಗೊತ್ತು.

ನಮ್ ನಿಜವಾದ ಸಮಸ್ಯೆ ಏನೂ ಅಂದ್ರೆ ನಾಯಕರ ಕೊರತೆ. ಈ ಗಣಿ ವಿವಾದ ಹೇಗಾದ್ರೂ ಬೇಕಾದ್ರೆ ಬಗೆ ಹರೀಲಿ, ಆದ್ರೆ ಮುಂದೆ ಬರೋ ಸರ್ಕಾರ ಯಾವ ಪಕ್ಷದ್ದೇ ಆಗಲಿ ಅಲ್ಲಿ ಯಶಸ್ವಿಯಾದ ನಾಯಕರು ಯಾರು? ಪಕ್ಷಕ್ಕೆ ಸರಿಯಾದ ನಾಯಕ, ರಾಜ್ಯಕ್ಕೆ ಸರಿಯಾದ ಆಡಳಿತಗಾರರು ಇಲ್ದೇ ಹೋದ್ರೆ ನಮ್ ಕರ್ನಾಟಕದ ಗತಿ ಏನೂ ಅಂತ ಒಮ್ಮೆ ಊಹಿಸಿಕೊಂಡಾಗಿನಿಂದ ಹೆಸರಿಕೆಯಾಗತೊಡಗುತ್ತೆ. ಸುಮ್ನೇ ಸೇಡ್ ತೀರಿಸ್‌ಕೊಳ್ಳೋಕೋ ಅಥವಾ ತಮ್ಮ ಬೇಳೇ ಬೇಯಿಸ್‌ಕೊಳ್ಳೋಕೋ ಲಂಚದ ಆರೋಪ ಹೊರಿಸಿದೋರ ಆಟ ಬಿಟ್ಟು ನಿಜವೇನಾದ್ರೂ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಏನಾದ್ರೂ ಆಯ್ತು ಅಂತಂದ್ರೆ ಅದೇ ಜನಗಳಿಗೆ ಸಿಗೋ ಜಯ. ಇಲ್ಲಾ ಅಂತ ಅಂದ್ರೆ ಮುಂದೆ ಬರೋ ಒಂದೇನು ಹತ್ತು ಚುನಾವಣೆಯಿಂದ್ಲೂ ಯಾವ ಅನುಕೂಲಾನೂ ಆಗೋದಿಲ್ಲ. ಆರೋಪ, ಪ್ರತ್ಯಾರೋಪಗಳಿಂದ ಜನ ಅಧಿಕಾರ ಕಳಕೊಂಡ ಹಾಗೆ ಜೈಲೂ ಸೇರಿದ್ರೆ ಇವತ್ತು ಅದರ ಕಥೇನೇ ಬೇರೆ ಇರ್ತಿತ್ತು.

Tuesday, July 25, 2006

ಕನ್ಸಲ್‌ಟೆಂಟುಗಳು ಅಂದ್ರೆ ಹಿಂಗಿರಬೇಕು!

ಇನ್ಯಾರನ್ನ ನೋಡಿ ಬರ್ದಿರೋದು, ಅದೇ Accenture ನವರನ್ನ! ಈಜಿಪ್ಟಿನ ಪಿರಮಿಡ್ ಇರ್ಲಿ, ಬರ್ಲಿನ್ ಗೋಡೇನೇ ಇರ್ಲಿ ಯಾವ್ದುನ್ ತೋರಿಸಿದ್ರೂ ಎಲ್ಲಾ ನಮ್ಮ್ ಪ್ರಾಸೆಸ್ಸಿಂದ್ಲೇ ಅಂತಾರಲ್ಲ ಇನ್ನೇನ್ ಮಾಡೋದು ಇಂಥೋರನ್ನ ಕಟ್ಗೊಂಡು?

***

ನಾನು ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ವರ್ಷ ಕನ್ಸಲ್‌ಟಂಟ್ ಆಗಿಯೂ ಇನ್ನಾರು ವರ್ಷ ಎಂಪ್ಲಾಯಿ ಆಗಿಯೂ ದುಡಿದು ಎರಡೂ ಲೋಕದ ಸುಖ ದುಃಖಗಳನ್ನು ಕಂಡೋನು. ಆಗ ಹೆಚ್ಚಿನ ನನ್ ಸ್ನೇಹಿತರು ಎಲ್ಲರೂ ಸಾಧ್ಯವಾದಷ್ಟು ಟಾಪ್ ೫ ಕಂಪನಿಗಳಲ್ಲಿ - ಅವೇ ಕೆಪಿಎಮ್‌ಜಿ, ಆಂಡೆರ್‌ಸನ್/ಅಕ್ಸೆಂಚರ್, ಪ್ರೈಸ್‌ವಾಟರ್‌ಕೂಪರ್, ಇತ್ಯಾದಿ - ಕೆಲಸ ಮಾಡಿಕೊಂಡು ಹೆಸರು ತಗೋಬೇಕು ಎಂದು ಹವಣಿಸುತ್ತಿದ್ದರು, thank goodness ನನಗೆ ಆ ಭಾಗ್ಯ ಬರಲಿಲ್ಲ. ನಾನೊಂದು ಸಣ್ಣ ಕಂಪನಿಯಲ್ಲೇ ಇದ್ದೆ. ಆದರೆ ಉಳಿದೆಲ್ಲ ಕಂಪನಿಯವರ ಕನ್ಸಲ್‌ಟೆಂಟ್‌ಗಳ ವ್ಯವಹಾರಕ್ಕೂ ಈ ಟಾಪ್ ೫ ಕಂಪನಿಗಳ ವ್ಯವಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಕೆಳಗೆ ಬರೆಯೋ ವಿಷಯಗಳು ನಾನು ಕಣ್ಣಾರೆ ಕಂಡು ಅನುಭವಿಸಿದ ವಿಷಯಗಳು, ಆದರೆ ಅವು ಈ ಕಂಪನಿಯ ಎಲ್ಲ ಕನ್ಸಲ್‌ಟಂಟುಗಳಿಗೆ ಅನ್ವಯವಾಗಬೇಕೆಂದೇನೂ ಇಲ್ಲ, ಹಾಗೆ ನಾನು ಜನರಲೈಸ್ ಮಾಡುವ ಪ್ರಯತ್ನವನ್ನೂ ಇಲ್ಲಿ ಮಾಡುತ್ತಿಲ್ಲ. ದಯವಿಟ್ಟು ಯಾರೂ ಇಲ್ಲಿ ತಮ್ಮ ಪ್ರತಿಬಿಂಬಗಳನ್ನು ಹುಡುಕಿಕೊಳ್ಳಬಾರದಾಗಿ ವಿನಂತಿ.

***

೨೦೦೪ ರ ಜೂನ್ ೨೧ ನೇ ತಾರೀಖು, ಹೀಗೇ ವ್ಯವಹಾರದ ನಿಮಿತ್ತ ಆರ್ಲಿಂಗ್ಟನ್ ಆಫೀಸಿಗೆ ಹೋಗಿದ್ದೆ, ಅಲ್ಲಿ ನಮ್ಮ ಆರ್ಡರ್ ಪ್ರಾಸೆಸಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳೋದಿತ್ತು. ನಾನು ಅದುವರೆಗೆ SQL Server ಉಪಯೋಗಿಸಿರಲಿಲ್ಲವಾದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ಹೊಸತಾಗಿದ್ದರೂ ಬೇರೆ RDBMS ಗಳಿಗಿಂತ ಭಿನ್ನವೇನೂ ಅಲ್ಲದಿದ್ದುದರಿಂದ ಅದನ್ನು ಕಲಿಯಲು ಹೆಚ್ಚಿಗೆ ಸಮಯವೇನೂ ಬೇಕಾಗಿರಲಿಲ್ಲ. ಆ ವಾರ ಅಕ್ಸೆಂಚರ್ ಕನ್ಸಲ್‌ಟೆಂಟ್ ಒಬ್ಬ ಈ ಪ್ರಾಜೆಕ್ಟಿನ ಕೆಲಸವನ್ನು ಬಿಟ್ಟು ಬೇರೆ ಪ್ರಾಜೆಕ್ಟಿಗೆ ಹೋಗುತ್ತಿದ್ದುದರಿಂದ ಇದ್ದ ಅಲ್ಪಸ್ವಲ್ಪ ಸಮಯದಲ್ಲೇ ಸಾಧ್ಯವಾದಷ್ಟು ತಿಳಿದುಕೊಳ್ಳುವ ಸವಾಲು ನನ್ನದಾಗಿತ್ತು. ತಂತ್ರಜ್ಞಾನಕ್ಕಿಂತಲೂ ಮಾಡುವ ಕೆಲಸದ ಹಿಂದಿನ ಬ್ಯುಸಿನೆಸ್ ಪ್ರಾಸೆಸ್ಸುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿತ್ತು ಹಾಗೂ ಅದು ಕ್ಲಿಷ್ಟಕರವಾಗಿತ್ತು. ಆ ಕನ್ಸಲ್‌ಟೆಂಟ್ ಆರ್ಡರ್ ಪ್ರಾಸೆಸ್ಸಿಂಗ್ ಸಿಸ್ಟಂ ಬಗ್ಗೆ ವಿವರಿಸುತ್ತಾ ಎಲ್ಲವನ್ನೂ ನೀರು ಕುಡಿದವರ ಹಾಗೆ ಹೇಳುತ್ತಾ ಬಂದಿದ್ದನ್ನೂ, ನಾನು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರವನ್ನುಕೊಡುತ್ತಿದ್ದುದನ್ನೂ ನಾನು ಗುರುತಿಸಿಕೊಂಡೆ, ಆದರೆ ಮಾತಿನ ಮಧ್ಯೆ ಆತನೇ ಅದರ ಹಿಂದಿನ ರಹಸ್ಯವನ್ನು ಹೇಳಿಬಿಟ್ಟನು. ಅವನು ಈ ಪ್ರಾಜೆಕ್ಟಿನ ಮೇಲೆ ಅಫಿಷಿಯಲ್ ಆಗಿ ಕೆಲವೇ ತಿಂಗಳು ಕೆಲಸ ಮಾಡಿದ್ದರೂ ಆತನಿಗೆ ಅವನ ಕಂಪನಿಯಲ್ಲಿ ನಮ್ಮ ಕಂಪನಿಯ ವ್ಯವಹಾರ ವಿಷಯಗಳ ಬಗ್ಗೆ ನಮ್ಮ ಕಂಪನಿಯನ್ನು ಸೇರುವುದಕ್ಕೆ ಮೊದಲೇ ತರಬೇತಿ ದೊರೆತಿತ್ತೆಂತಲೂ, ನಮ್ಮ ಕಂಪನಿಯ ಡೇಟಾಬೇಸುಗಳು, ಸರ್ವರ್, ಫೈಲುಗಳ ಯಥಾನಕಲುಗಳು ಅವರ ಕಂಪನಿಯಲ್ಲೂ ಇದ್ದು, ಅದರ ಮೂಲಕ ನಮ್ಮ ಆಫೀಸಿನೊಳಗೆ ಕಾಲಿಡುವುದಕ್ಕೆ ಮೊದಲೇ ಅವರಿಗೆಲ್ಲ ಗೊತ್ತಿರುತ್ತದೆಂತಲು ತಿಳಿದು ಹೋಯಿತು.

ಅಲ್ಲದೇ, ಇಂಥ ಕನ್ಸಲ್‌ಟೆಂಟ್ ಪ್ರತಿಯೊಬ್ಬರ ಬಳಿಯೂ ಒಂದೊಂದು ಲ್ಯಾಪ್‌ಟಾಪ್ ಇದ್ದು, ನಮ್ಮ ಆಫೀಸಿನ್ ಇ-ಮೇಲುಗಳನ್ನು ತಮ್ಮ ಆಕ್ಸೆಂಚರ್ ವಿಳಾಸಕ್ಕೆ ಕಳಿಸಿಕೊಳ್ಳುವುದೇನು, ಅವರು ತಮ್ಮ-ತಮ್ಮಲೇ AOL ಮೆಸ್ಸೆಂಜರ್‍ ಮೂಲಕ ಹಾಗೂ ಅಲ್ಲಲ್ಲಿ ಗುಂಪುಗೂಡಿ ಚರ್ಚಿಸಿ ಸ್ಟ್ರ್ಟಾಟೆಜಿಯನ್ನು ಸಿದ್ಧಪಡಿಸುವುದೇನು, ಇವೆಲ್ಲವೂ ಬಹಳ ವ್ಯವಸ್ಥಿತವಾಗಿ ನಡೆಯುತ್ತಲೇ ಬಂದಿದೆ. ಇವೆಲ್ಲಕ್ಕೂ ಹೆಚ್ಚಾಗಿ ಪ್ರತಿಯೊಂದು ಆಕ್ಸೆಂಚರ್ ಕನ್ಸಲ್‌ಟೆಂಟ್ ಗುಂಪಿಗೆ ಒಬ್ಬೊಬ್ಬ ಬಿಸಿನೆಸ್ ಮ್ಯಾನೇಜರ್ ಇದ್ದು, ಈ ಮನುಷ್ಯನಿಗೆ ನಮ್ಮ ಕಂಪನಿಯ ದೊಡ್ಡ-ದೊಡ್ಡ ಎಕ್ಸಿಕ್ಯೂಟಿವ್‌ಗಳ ಸಂಪರ್ಕವಂತೂ ಬೇಕಾದಷ್ಟಿರುತ್ತದಾದ್ದರಿಂದ ನನ್ನಂತಹ ಎಂಪ್ಲಾಯಿಗಳಿಗೆ ತಲುಪಬೇಕಾದ ಸುದ್ದಿಗಳು ಈ ಕನ್ಸಲ್‌ಟೆಂಟುಗಳಿಗೆ ಯಾವತ್ತೋ ತಲುಪಿರುತ್ತದೆ!

ಮೊದಲೆಲ್ಲ, ಈ ಆಕ್ಸೆಂಚರ್ ಕನ್ಸಲ್‌ಟೆಂಟುಗಳು ಯಾವತ್ತೂ ನನಗಿಂತ ಟೆಕ್ನಾಲಜಿಯಲ್ಲಿ ಒಂದು ಹೆಜ್ಜೆ ಮುಂದೇ ಇರುತ್ತಿದ್ದರು, ಅವರ ಲ್ಯಾಪ್‌ಟಾಪ್‌ಗಳು, ಅದರಲ್ಲಿರುವ ಸಾಫ್ಟ್‌‌ವೇರ್‌ಗಳು ಯಾವತ್ತೂ ಇತ್ತೀಚಿನವಾಗಿರುತ್ತಿದ್ದವು, ಆದರೆ ನಮ್ಮ ಕಂಪನಿಯಲ್ಲಿ ಇತ್ತೀಚೆಗೆ ತೆಗೆದುಕೊಂಡ ಹೊಸ ಇನಿಷಿಯೇಟಿವ್ ಪ್ರಕಾರ ಈಗ ನಮಗೂ ಹೊಸತರ ಸೌಲಭ್ಯವಿದ್ದು, ಒಂದು ಸಣ್ಣ ಗ್ಯಾಪ್ ಮುಚ್ಚಿದಂತಾಗಿದೆ. ನಾವು ಎಂಪ್ಲಾಯಿಗಳಿಗೆ ಯಾವತ್ತಿದ್ದರೂ ಚೈನ್ ಆಫ್ ಕಮ್ಯಾಂಡ್ ಪಾಲಿಸುವಂತೆ ಸೂಚಿಸಲಾಗುತ್ತೆ, ಆದರೆ ಈ ಕನ್ಸಲ್‌ಟಂಟುಗಳ ಮಾತು ಬಹಳಷ್ಟು ದೂರ ಬೆಳಕಿನ ವೇಗದಲ್ಲಿ ಹೋಗುತ್ತದೆ. ಇವರುಗಳೆಲ್ಲ ಒಟ್ಟುಗೂಡಿಕೊಂಡು ಇನ್ನೊಬ್ಬರಿಗೆ ಕೈ ಮಾಡಿ ತೋರಿಸುವಂತಹ ಹಲವಾರು ಸನ್ನಿವೇಶಗಳನ್ನು ನಾನು ನೆನಪಿಸಿಕೊಳ್ಳಬಲ್ಲೆ.

ಇನ್ನೂ ಬೇಸರ ತರಿಸುವ ಸಂಗತಿಯೆಂದರೆ, ಅದು ಒರಿಜಿನಲ್ ಪ್ರಾಜೆಕ್ಟ್ ಪ್ಲಾನಿರಬಹುದು, ಅಥವಾ ಒಂದು ಡಾಕ್ಯುಮೆಂಟಿರಬಹುದು ನಾವು ಕೇಳಿದರೆ 'ಕೊಡುವುದಿಲ್ಲ' ಎಂಬ ಅರ್ಥ ಬರುವ ಪರ್ಯಾಯವಾದ ಉತ್ತರ ಸಿಗುತ್ತದೆ, ಅದೇ ನಮ್ಮ ಬಳಿಯಲ್ಲಿ ಏನಾದರು ಮಾಹಿತಿ ಇದ್ದರೆ ಇವರುಗಳು ಅದನ್ನು ಕಿತ್ತುಕೊಳ್ಳುವ ಪರಿಯನ್ನು ನೋಡಬೇಕು.

ಹೀಗೆ ನಮ್ಮಲ್ಲಿನ ಎಷ್ಟೋ ಡೇಟಾಬೇಸುಗಳು, ಸರ್ವರ್‌ಗಳು, ಫೈಲುಗಳು ಕಾಪಿಯಾಗಿ ಆಕ್ಸೆಂಚರ್ ಸಿಸ್ಟಂ‌ನಲ್ಲಿ ಕೂತಿರುವುದ್ದನ್ನು ನೋಡಿದ್ದೇನೆ. ಕೆಲವೊಂದು ಕೀ ಪೊಸಿಷನ್ನುಗಳಲ್ಲಿ ಪ್ರೊಪರೈಟರಿ ಹೆಸರಿನಿಂದಲೋ ಅಥವಾ ಯಾವತ್ತೂ ಅಳಿಯದ ಕಾಂಟ್ರಾಕ್ಟ್ ಹೆಸರಿನಿಂದಲೋ ಹದಿನೈದು ವರ್ಷಗಳಿಂದ ಒಂದೇ ಕಡೆಯಲ್ಲಿ ಒಂದೇ ಸಿಸ್ಟಂ ಮೇಲೆ ಕೆಲಸ ಮಾಡುವ ಆಕ್ಸೆಂಚರ್ ಕನ್ಸಲ್‌ಟೆಂಟುಗಳನ್ನು ನಾನು ಹತ್ತಿರದಿಂದ ಬಲ್ಲೆ.

ಅಂದರೆ ನಾನು, ಒಬ್ಬ ಏಕ ವ್ಯಕ್ತಿ ಪಡೆ ಏನನ್ನಾದರೂ ಮಾಡಿ ಸಾಧಿಸುವುದಾದರೆ ನನಗೆ ಇರೋ ಸಂಪನ್ಮೂಲಗಳಲ್ಲಿ, ಇರೋ ಅಡೆತಡೆಗಳನ್ನೆದುರಿಸಿ ಕೆಲಸ ಮಾಡಬೇಕು, ಅದರಲ್ಲಿ ಜಯಗಳಿಸಬೇಕು. ಆದರೆ ನನ್ನ ಪ್ರತಿಯಾಗಿ ನೇರವಾಗಿ ಹೋರಾಟಕ್ಕೆ ನಿಲ್ಲದೇ ಪದೇ-ಪದೇ ನನ್ನನ್ನು ತಮ್ಮ ಜೊತೆ ತೂಗಿಕೊಳ್ಳುವಂತೆ ಮಾಡುವ ಪ್ರತಿಯೊಬ್ಬ ಆಕ್ಸೆಂಚರ್ ಕನ್ಸಲ್‌ಟೆಂಟ್ ಹಿಂದೆಯೂ ಒಂದು ವ್ಯವಸ್ಥಿತ ಜಾಲವಿದೆ, ಹಲವಾರು ತಲೆಗಳಿವೆ ಹಾಗೂ ಅವರಿಗೆ ಬರದದ್ದನ್ನು ತಿಳಿಸುವ ವ್ಯವಸ್ಥೆ ಇದೆ, ತಮ್ಮ ತನವನ್ನು ಕಾಯ್ದುಕೊಳ್ಳುವ ಗುಟ್ಟಿದೆ. ಈ ಕನ್ಸಲ್‌ಟೆಂಟ್‌ಗಳು ಕೆಲಸ ಹಾಗೂ ಮಾತಿನಲ್ಲೂ ಮಹಾ ನಿಪುಣರು ಹಾಗೂ ಜಾಣರು, ಅದರಲ್ಲಿ ಎರಡು ಮಾತಿಲ್ಲ - ಅದರ ಜೊತೆಯಲ್ಲಿ ಒಂದು ವ್ಯವಸ್ಥಿತವಾದ ಯೋಜನೆಯೂ ಸೇರಿ ಒಂದು ರೀತಿ ಬ್ರಿಟೀಷರು ಆಗಿನ ಕಾಲದ ಭಾರತವನ್ನು ಆಳಿದ ಹಾಗೆ ಇವರುಗಳು ತಮ್ಮ ಬೇಳೆ ಕಾಳನ್ನು ಬೇಯಿಸಿಕೊಳ್ಳುತ್ತಲೇ ಇದ್ದಾರೆ.

ಒಂದು ಕಡೆ ಇಂಥ ವ್ಯವಸ್ಥಿತವಾದ ಅಕ್ಸೆಂಚರ್ ಕನ್ಸಲ್‌ಟೆಂಟನ್ನು ನನ್ನ ಬಾಸು ಕೊಂಡಾಡುತ್ತಿದ್ದರೆ ಮತ್ತೊಂದು ಕಡೆ ಹೇಳುವರಿಲ್ಲದೆ ಕೇಳುವರಿಲ್ಲದೇ ಎಷ್ಟೋ ಬಾರಿ ನನ್ನಲ್ಲೇ ನಾನು ಕೊರಗಿದ್ದೇನೆ, ಮರುಗಿದ್ದೇನೆ.

Monday, July 24, 2006

ಮೀಸಲಾತಿ ಸಿಗಬೇಕಾದವರಿಗೆ ಸಿಕ್ಕಿದ್ದರೆ...

ಮೀಸಲಾತಿ ಇಂಥವರಿಗೆ ಸಿಗಬೇಕು, ಅಂಥವರಿಗೆ ಸಿಗಬೇಕು, ಇಂತಿಂಥವರಿಗೆ ಸಿಗಬಾರದು ಎಂದು ಯಾರು ಎಷ್ಟೇ ಲಾಬಿ ಮಾಡಿದರೂ ಕೊನೆಯಲ್ಲಿ ಅದು ತಲುಪಬೇಕಾದವರಿಗೆ ತಲುಪುವ ಹೊತ್ತಿಗೆ ಮತ್ತಿನ್ನೇನೋ ಆಗಿರುತ್ತದೆ. ಒಟ್ಟಿನಲ್ಲಿ ಫಲವನ್ನು ಯಾರನ್ನು ಉದ್ದೇಶದಲ್ಲಿಟ್ಟುಕೊಂಡು ಮಾಡಲಾಗಿದೆಯೋ ಅವರಿಗೂ ಹಾಗೂ ಫಲಾನುಭವಿಗಳಿಗೂ ವ್ಯತ್ಯಾಸವಿದ್ದಾಗ ಮೀಸಲಾತಿ ದೊರಕಿಸಿಕೊಡಬಹುದು ಎನ್ನುವ ಸಾಮಾಜಿಕ ನ್ಯಾಯಕ್ಕೆ ಒಂದು ಅರ್ಥ ಬರೋದಾದರೂ ಹೇಗೆ?

ಸುಮಾರು ೧೯೮೭-೮೮ ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಎರಡು ಟಿಸಿಎಚ್ ಕಾಲೇಜುಗಳಲ್ಲಿ ನನ್ನ ಕಣ್ಣ ಮುಂದೆ ನಡೆದ ಗೊಂದಲ ಇವತ್ತಿಗೂ ನಡೆಯುತ್ತಲೇ ಇದೆ, ಎಷ್ಟೇ ಮೀಸಲಾತಿ ಸೌಲಭ್ಯ ದೊರೆತರು ಅದು ತಲೆಮಾರುಗಳನ್ನು ದಾಟಿ ತಲುಪುವವರಿಗೆ ತಲುಪುವ ಹೊತ್ತಿಗೆ ಹಲವಾರು ವರ್ಷಗಳು ಬೇಕಾಗುವುದಂತೂ ನಿಜ. ೧೯೮೭ ಕ್ಕಿಂತ ಮೊದಲು ಆನವಟ್ಟಿಯಲ್ಲಿ ಟಿಸಿಎಚ್ ಸೇರಬೇಕಾಗಿದ್ದರೆ ಕೇವಲ ಮೆರಿಟ್ ಆಧಾರದ ಮೇಲೆ ಮಾತ್ರ ಸೀಟುಗಳನ್ನು ಹಂಚುತ್ತಿದ್ದರು, ಇಡೀ ಜಿಲ್ಲೆಗೆ ಇರೋದೇ ಎರಡು ಸಂಸ್ಥೆಗಳು, ಒಂದಿರೋದು ಶಿವಮೊಗ್ಗ ಪೇಟೆಯಲ್ಲಿ, ಮತ್ತೊಂದು ಆನವಟ್ಟಿ ಹೋಬಳಿ ಅನ್ನೋ ಕುಗ್ರಾಮದಲ್ಲಿ. ಇವೆರಡೂ ಕಾಲೇಜುಗಳನ್ನು ಸೇರಿಸಿದರೆ ಒಟ್ಟು ನೂರು ಜನರು ಪ್ರತಿವರ್ಷ ಶಿಕ್ಷಕರಾಗಲು ಅರ್ಹತೆ ಪಡೆಯುತ್ತಿದ್ದರು. ಆದರೆ ಟಿಸಿಎಚ್ ಕೋರ್ಸನ್ನು ಮುಗಿಸಿದರೆ ಕೆಲಸ ಸಿಗುವದಂತೂ ಗ್ಯಾರಂಟಿಯಾದ್ದರಿಂದಲೂ ಹಾಗೂ ಹಳ್ಳಿಯ ವಲಯದಲ್ಲಿ ಅತ್ಯಂತ ಪ್ರಭಾವೀ ವೃತ್ತಿಯಾಗಿ ಶಿಕ್ಷಕರನ್ನು ನೋಡುತ್ತಿದ್ದರಿಂದಲೂ ಬಹಳಷ್ಟು ಜನರು ಈ ಕೋರ್ಸುಗಳಿಗೆ ಮುಗಿಬೀಳುತ್ತಿದ್ದರು. ಜನರಲ್ಲಿ ಹೆಚ್ಚಾದ ಬೇಡಿಕೆಯಿಂದಲೂ ಹಾಗೂ ಬದಲಾದ ಶಿಕ್ಷಣ ನಿಯಮಗಳಿಗೆ ತಕ್ಕಂತೆ ಮೊದಲೆಲ್ಲ ಹತ್ತನೇ ತರಗತಿಯನ್ನು ಮುಗಿಸಿದವರಿಗೆ ಸಿಗುತ್ತಿದ್ದ ಟಿಸಿಎಚ್ ಪ್ರವೇಶಕ್ಕೆ ಪಿಯುಸಿಯನ್ನು ಮಾಡುವಂತೆ ಕಡ್ಡಾಯವಾಯಿತು, ಇದೇ ಸಮಯಕ್ಕೆ ಬಂದ ಮೀಸಲಾತಿ ನಿಯಮಗಳಿಗನುಗುಣವಾಗಿ ಟಿಸಿಎಚ್ ಸೀಟುಗಳನ್ನು ಹಂಚಲು ಮೊದಲು ಮಾಡಿದರು.

ನಮ್ಮ ಮನೆಯಲ್ಲಿ ಈಗಾಗಲೇ ಟಿಸಿಎಚ್ ಮಾಡಿ ಒಂದಿಬ್ಬರಾದರೂ ಮೇಷ್ಟ್ರರಾದ್ದರಿಂದ ಹಾಗೂ ನಾವು ಆನವಟ್ಟಿಯಲ್ಲೇ ಇದ್ದುದರಿಂದಲೂ ಮೊದಲಿಂದ ನಮಗೆ ಟಿಸಿಎಚ್ ಶಿಕ್ಷಕರು, ಹಳೆ-ಹೊಸ ವಿದ್ಯಾರ್ಥಿಗಳು ಎಲ್ಲರೂ ಪರಿಚಯವೇ. ಹೀಗೇ ಒಂದು ವರ್ಷ, ಮೀಸಲಾತಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಕಡ್ಡಾಯವಾದ ಮೇಲೆ ಆ ವರ್ಷ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಲು ನಾನೂ ಹೋಗಿದ್ದೆ, ಅಲ್ಲಿ ಬಂದಿದ್ದವರಿಗೆ, ಹಾಗೂ ಟಿಸಿಎಚ್ ನಲ್ಲಿ ಪಾಠಮಾಡುವ ಮೇಷ್ಟ್ರುಗಳಿಗೂ ಆಶ್ಚರ್ಯವಾಗುವಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಲ್ಲಿ (ಪಜಾಪವ) ವಿದ್ಯಾರ್ಥಿಗಳ ಯಾದಿಯಲ್ಲಿ ಜನರಲ್ ಮೆರಿಟ್‌ಗಿಂತಲೂ ಹೆಚ್ಚು ಅಂಕ ತೆಗೆದವರಿದ್ದರು, ಉದಾಹರಣೆಗೆ ಪಜಾಪವ ದಲ್ಲಿ ಕಡಿಮೆ ಎಂದರೆ ೮೫ ಪರ್ಸೆಂಟ್ ಅಂಕಕ್ಕೆ ಸೀಟು ದೊರೆತಿದ್ದರೆ, ಅದು ಜನರಲ್ ಮೆರಿಟ್‌ನಲ್ಲಿ ೭೨ ಕ್ಕೆ ನಿಂತಿತ್ತು. ನಿರೀಕ್ಷೆಗಿಂತಲೂ ಹೆಚ್ಚಾಗಿ ಬಂದ ಅರ್ಜಿಗಳು, ಅದೇ ವರ್ಷ ಅನ್ವಯವಾದ ಹೊಸ ರೀತಿ-ವಿಧಾನಗಳು ಈ ಬದಲಾವಣೆಯನ್ನು ನಂಬಲು ಕಷ್ಟವನ್ನಾಗಿಸಿದ್ದವು. ಜನರಲ್ ಮೆರಿಟ್‌ನಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳು ಟಿಸಿಎಚ್ ಗೆ ಅರ್ಜಿ ಹಾಕುತ್ತಾರೋ ಬಿಡುತ್ತಾರೋ, ಅಥವಾ ಪಜಾಪವ ದವರಲ್ಲಿ ಹೆಚ್ಚು ಅಂಕಗಳನ್ನು ತೆಗೆದವರೆಲ್ಲರು ಟಿಸಿಎಚ್ ಗೆ ಮುಗಿ ಬೀಳುತ್ತಾರೋ ಒಂದಂತೂ ಖಂಡಿತ - ಈ ಮೇಲಿನ ಉದಾಹರಣೆಯಲ್ಲಿ ೮೪ ಪರ್ಸೆಂಟ್ ಅಂಕಗಳನ್ನು ತೆಗೆದ ಪಜಾಪವ ವಿದ್ಯಾರ್ಥಿಗೆ ಸೀಟು ಸಿಗೋದಿಲ್ಲ, ಅಲ್ಲದೇ ಆತ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.

ಮೀಸಲಾತಿ ಕೇವಲ ಜಾತಿಯ ಆಧಾರದ ಮೇಲಿದ್ದರೆ ಮಾತ್ರ ಕೆಲಸ ಮಾಡುವುದಾದರೂ ಹೇಗೆ? ಪ್ರತಿಯೊಂದು ಜಾತಿ, ವರ್ಗಗಳಲ್ಲು ಬಡವರು-ಬಲ್ಲಿದರು ಇದ್ದೇ ಇರುತ್ತಾರೆ, ಯಾವ ವರ್ಗದಲ್ಲೇ ಇರಲಿ, ಖಾಸಗೀ ಟ್ಯೂಷನ್ ಹೇಳಿಸಿಕೊಂಡು, ಸಿಗುವ ಎಲ್ಲ ಸೌಲತ್ತುಗಳಲ್ಲಿ ಸ್ಪರ್ಧೆಗಿಳಿಯುವ ಉಳ್ಳವರಿಗೂ, ಏನೂ ಗತಿ ಇರದೆ ಸುಮ್ಮನೇ ಸ್ಪರ್ಧೆಯಲ್ಲಿ ತಗುಲಿಕೊಳ್ಳುವವರಿಗೂ ಎಲ್ಲಿಯ ಸಮ? ಸರ್ಕಾರದ ವ್ಯವಸ್ಥೆ ಪ್ರತಿವರ್ಷ ಜಾತಿ ಆಧಾರಿತ ಪಟ್ಟಿಯನ್ನು ಬದಲಾಯಿಸುತ್ತದೆಯೇ ವಿನಾ ಜನರ ಆದಾಯವನ್ನು ಪರಿಗಣಿಸಿ ಬಡವರನ್ನು ಎಣಿಸುವುದಿಲ್ಲ. ನಾನು ಸ್ನಾತಕೋತ್ತರ ಪದವಿ ಮುಗಿಸುವವರೆಗೂ ವರ್ಷಕ್ಕೆ ೩೬೦೦ ರೂಪಾಯಿಯ ಆದಾಯದಲ್ಲಿದ್ದೇವೆಂದು ಆದಾಯ ಪತ್ರವನ್ನು ಪಡೆಯುತ್ತಿದ್ದವರು ಎಷ್ಟೋ ಜನರು ನನಗೆ ಗೊತ್ತಿತ್ತು. ಅಂದರೆ ಆಗಿನ ಕಾಲದಲ್ಲೇ ತಿಂಗಳಿಗೆ ಮುನ್ನೂರು ರೂಪಾಯಿ ಆದಾಯ ಯಾವ ಲೆಕ್ಕಕ್ಕೂ ಇರದಿದ್ದಾಗ, ಇಂದಿಗೂ ಕನಿಷ್ಠ ಆದಾಯ ಎಷ್ಟಿದೆಯೋ, ಆದರೆ ಅದಂತೂ ಹಣದುಬ್ಬರಕ್ಕೆ ತಕ್ಕಂತೆ ಬದಲಾಗದೇ ಹೋದರೆ ಅದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ - ದಿನವೂ ತಾಲೂಕ್ ಆಫೀಸುಗಳಲ್ಲಿ ಜನರು ಸುಳ್ಳು ಹೇಳುತ್ತಲೇ ಇರಬೇಕಾಗುತ್ತದೆ.

ವಿದ್ಯಾರ್ಥಿಗಳು ತೆಗೆದ ಅಂಕಗಳ ಮೇಲೆ ಮಾತ್ರವೇ ವ್ಯವಸ್ಥೆಯ ನಿರ್ಣಯವಾಗುವುದಾದರೆ ಬಡತನದಲ್ಲಿ ಬರುವ ಯೋಗ್ಯರನ್ನು ಕಡೆಗಣಿಸಿದಂತಾಗುತ್ತದೆ, ಜಾತಿ ಆಧಾರದಲ್ಲಿ ಮಾಡಿದರೆ ಇನ್ನೇನೋ ಅರ್ಥ ಬರುತ್ತದೆ. ಆದರೆ ಒಂದಂತೂ ನಿಜ, ಎಂಥ ಐಎ‌ಎಸ್ ಆಫೀಸರರ ಮಕ್ಕಳೂ ತಮಗೆ ಅನ್ವಯವಾಗುವ ಎಲ್ಲ ಸೌಲಭ್ಯಗಳನ್ನೂ ಪಡೆದೇ ತೀರುತ್ತಾರೆ, ಲಕ್ಷಾಧೀಶ್ವರರ ಮಕ್ಕಳಿಗೆ ಜಾತಿಯ ಆಧಾರದಲ್ಲಿ ಒಂದು ಸೀಸದ ಕಡ್ಡಿ ಸಿಕ್ಕರೂ ಅದನ್ನು ಅವರು ಹೊಂದೇ ಹೊಂದುತ್ತಾರೆ - ಅದು ಇಲ್ಲೂ ನಿಜ, ಎಲ್ಲೂ ನಿಜ - ನನ್ನ ಸಹೋದ್ಯೋಗಿ ಒಬ್ಬರು ಇತ್ತೀಚೆಗೆ ಹಲವಾರು ಮಿಲಿಯನ್ ಡಾಲರ್‌ಗಳ ಮೊತ್ತವನ್ನು ಪಡೆದು ನಿವೃತ್ತರಾದರು, ತಾನು ಹಲವಾರು ರೀತಿಯಲ್ಲಿ ಉಳಿಸಿದ ಹಣ, ರಿಟೈರ್‌ಮೆಂಟ್ ಹಣ, 401K ಹಣ, ಎಲ್ಲವೂ ಸೇರಿ ಬಹಳಷ್ಟು ಬಂದಿತ್ತು, ಆದರೆ ನಮ್ಮ ಕಂಪನಿಯ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಆಕೆ ತನ್ನನ್ನು ತಾನು ಕೆಲಸದಿಂದ ತೆಗೆಸಿಕೊಂಡ ಹಾಗೆ ಮಾಡಿರೋದರಿಂದ ಇನ್ನೂ ಹಲವು ಹಣಕಾಸಿನ ಅನುಕೂಲವಾಯಿತು, ಇಷ್ಟೆಲ್ಲಾ ಆದರೂ ಆಕೆ ನನ್ನ ಜೊತೆಯಲ್ಲಿ ಮಾತನಾಡುತ್ತಾ ತಾನು Unemployment benefits ಗೆ ಅರ್ಜಿ ಗುಜರಾಯಿಸುತ್ತಿದ್ದೇನೆಂದು ಕೇಳಿ ನನಗೆ ಮೈ ಉರಿದು ಹೋಯಿತು. ಸರ್ಕಾರದ ಬೊಕ್ಕಸದಿಂದ, ತೆರಿಗೆದಾರರು ಕೊಟ್ಟ ಹಣದಲ್ಲಿ ಹತ್ತು ಸಾವಿರ ಡಾಲರ್ ಬರುವುದಾದರೆ ಬರಲಿ ಎಂಬ ಆಸೆ ಅಕೆಯದು. ನಾನು ಪದೇ ಪದೇ ಹಾಗೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರೂ ಆಕೆ ತನ್ನ ನಿಲುವನ್ನೇ 'ನಾನು ಟ್ಯಾಕ್ಸ್ ಕಟ್ಟುವುದಿಲ್ಲವೇ?' ಎಂದು ಸಾಧಿಸಿಕೊಳ್ಳಲು ಆರಂಭಿಸಿದ್ದನ್ನು ಕೇಳಿ ನನಗಂತೂ ಇಷ್ಟು ವರ್ಷಗಳ ಕಾಲ ಆಕೆಯ ಮೇಲೆ ಇಟ್ಟಿದ್ದ ಭರವಸೆಯೇ ಹೊರಟು ಹೋಯಿತು - ಈ ವಿಷಯವನ್ನು ನನ್ನ ಮತ್ತೊಬ್ಬ ಸಹೋದ್ಯೋಗಿಗೆ ಹೇಳಿದೆ, ಆಕೆ ಒಂದೇ ಮಾತಿನಲ್ಲಿ ಅಂದರು - more you have it, more you want.

ಆಗೆಲ್ಲ ಮೀಸಲಾತಿ ಎನ್ನುವುದು ಬೇಡ, ಅಕಸ್ಮಾತ್ ಇದ್ದರೂ ಆದಾಯದ ನೆಲೆಗಟ್ಟಿನ ಮೇಲಿರಲಿ ಎಂದು ವಾದ ಮಾಡುತ್ತಿದ್ದೆ, ಅಂದು ಮಧ್ಯಮ ವರ್ಗದ ನೆಲೆಯಲ್ಲಿ ಅದೇ ಸತ್ಯವೆನಿಸುತ್ತಿತ್ತು, ಈಗ ಪರಿಸ್ಥಿತಿ ಹೇಗಿದೆಯೋ ಯಾರಿಗೆ ಗೊತ್ತು, but you keep me honest here!

Sunday, July 23, 2006

ಮುಖವಾಡಗಳ ಹಿಂದೆ, ಮುಂದೆ

ನಾವೆಲ್ಲರೂ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ, ಸಮಯ ಸಂದರ್ಭಕ್ಕೆ ತಕ್ಕಂತೆ ಮುಖವಾಡಗಳನ್ನು ತೊಟ್ಟುಕೊಳ್ಳುತ್ತೇವೆ. ಅದೂ ಒಂದು ರೀತಿಯ ಪ್ರಯೋಗವೇ, ಮೊದಮೊದಲು ಹೀಗೆ ಮಾಡಿದರೆ ಹೇಗೆ, ಹೀಗಿದ್ದರೆ ಏನಾದೀತು, ಹೀಗಂದರೆ ಏನಾಗುತ್ತೋ ನೋಡೋಣ ಎನ್ನುವ ಚಿಕ್ಕಚಿಕ್ಕ ದಿನನಿತ್ಯದ ಕನ್‌ವೆನ್‍ಷನ್‌ಗಳು ಅನಂತರ ನಮ್ಮ ಕ್ಯಾರೆಕ್ಟರ್ ಆಗಿಬಿಡುತ್ತವೆ, ಒಮ್ಮೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಬಿಟ್ಟ ಮುಖವಾಡಗಳು ನಮ್ಮನ್ನು ಬಿಟ್ಟು ಹೋಗೋದೇ ಇಲ್ಲ! ಹೀಗೆ ಮುಖವಾಡಗಳ ಮೇಲೆ ಮುಖವಾಡ, ಬಣ್ಣದ ಮೇಲೆ ಬಣ್ಣ ಹಚ್ಚಿ-ಹಚ್ಚಿ ಮೂಲ ರೂಪ ಮರೆಯಾಗುವುದೂ ಅಲ್ಲದೇ ಯಾವುದು ಮೂಲ, ಯಾವುದು ಸುಮ್ಮನೇ ಹುಟ್ಟಿಸಿದ್ದು (pretentious) ಎನ್ನುವ ಗೊಂದಲ ನನಗಂತೂ ಆಗಿದೆ.

ನಾವು ಯಾವ ಅಕ್ಷರಗಳನ್ನು ಹೇಗೆ ಬರೆಯುತ್ತೇವೆ, ಯಾವ ರೀತಿ ಹಾವ ಭಾವಗಳನ್ನು ಬೆಳೆಸಿಕೊಳ್ಳುತ್ತೇವೆ ಅನ್ನೋದು ನಮ್ಮ ನೆರೆಹೊರೆಯ ಮೇಲೆ ಹೆಚ್ಚಾಗಿ ಅವಲಂಭಿತವಾಗಿದೆ, ನಮ್ಮ ಇಂಗ್ಲೀಷ್ ಮೇಷ್ಟ್ರು ಬೋರ್ಡಿನ ಮೇಲೆ ಬಳ್ಳಿಯ ಹಾಗೆ ಸುತ್ತಿ 'A' ಅಕ್ಷರವನ್ನು script ನಲ್ಲಿ ಬರೆಯುತ್ತಿದ್ದುದನ್ನು ನಾನೂ ಹಚ್ಚಿಕೊಂಡೆ ಎನ್ನುವ ಸರಳ ಅನುಕರಣೆಯಾಗಿರಬಹುದು, ಅಥವಾ ಯಾವುದೋ ಒಂದು ಸಿನಿಮಾದಲ್ಲಿ ಮೈಕಲ್ ಡಗ್ಲಾಸ್ ಅಥವಾ ರಾಜ್‌ಕುಮಾರ್ ಪಾತ್ರ ಯಾವುದೋ ಒಂದು ಸಂದರ್ಭಕ್ಕೆ ವಿಶೇಷವಾಗಿ ತೋರಿಸಿದ ಪ್ರತಿಕ್ರಿಯೆ ಇದ್ದಿರಬಹುದು. ಹೀಗೆ ದಿನನಿತ್ಯವೂ ಅಲ್ಲಲ್ಲಿ ನಮ್ಮ ಮೇಲೆ ಹೊರಗಿನ influence ಗಳು ತಮ್ಮ ಛಾಪನ್ನು ಒತ್ತುತ್ತಲೇ ಇರುತ್ತವೆ, ಇನ್ನು ಮನಸ್ಸಿನ ಒಳಗೂ ನಡೆಯುವ ಹಲವಾರು ತಾಲೀಮುಗಳು ಪ್ರತಿಯೊಂದು ಕ್ರಿಯೆಗೆ ಇದೇ ರೀತಿ ಉತ್ತರ ಕೊಡುವಂತೆ ಪ್ರಚೋದಿಸುತ್ತವೆ. ಎಲ್ಲೋ ಹುಟ್ಟಿ, ಈ ಒಳ-ಹೊರಗಿನ ವ್ಯಾಪಾರದಲ್ಲಿ ಪಳಗಿ, ದಿನನಿತ್ಯವೂ ತಕ್ಕ ಮಟ್ಟಿಗೆ ಬದಲಾಗುವ ನಡತೆಯಾಗಿಬಿಡುತ್ತದೆ.

ನನಗೆ ಇನ್ನೂ ಚೆನ್ನಾಗಿ ನೆನಪಿರೋ ಹಾಗೆ, ನಾನು ಏಳನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಹೀಗೇ ಮಧ್ಯಾಹ್ನ ನಿದ್ದೆಯಿಂದ ಎದ್ದವನೇ, ಇನ್ನೂ ನಿದ್ದೆಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಕೇಳಿದ ಪ್ರಶ್ನೆಯೊಂದು ನನ್ನನ್ನು ಬಹಳಷ್ಟು ಸತಾಯಿಸಿತ್ತು. ಅವಳು ಹೊರಗಡೆ ಅವಳ ಸ್ನೇಹಿತೆಯ ಜೊತೆ ಮಾತನಾಡುತ್ತಿದ್ದಳು, ನಾನು ಇನ್ನೂ ಕಣ್ಣು ಉಜ್ಜಿಕೊಳ್ಳುತ್ತಲೇ, 'ನನ್ನ ಮುಖವಾಡ ಎಲ್ಲಿದೆ? ಎಲ್ಲಿಟ್ಟಿದ್ದೀ...' ಎಂದು ಒಂದು ರೀತಿಯ ಕೋಪ ಮಿಶ್ರಿತ ಧ್ವನಿಯಲ್ಲಿ ಕೇಳಿದಾಗ ಅವಳೂ, ಆಕೆಯ ಸ್ನೇಹಿತೆಯೂ ಕಕ್ಕಾಬಿಕ್ಕಿಯಾಗಿ ನನ್ನನ್ನೇ ನೋಡಿ 'ಯಾವ ಮುಖವಾಡ?' ಎಂದು ಕೇಳಿದ್ದರು, ಆದರೆ ಅದರ ನಂತರ ನಮ್ಮಿಬ್ಬರ ನಡುವೆ ಒಂದು ರೀತಿಯ ಮೌನ ಹುಟ್ಟಿ, ನಾನು ಕುರ್ಚಿಯ ಮೇಲೆ ಪ್ರಪಂಚವೆಲ್ಲ ನನ್ನ ತಲೆಯ ಮೇಲೆ ಬಿದ್ದಿದೆ ಎನ್ನೋ ಹಾಗೆ ಬಹಳಷ್ಟು ಹೊತ್ತು ಕುಳಿತದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಆಗ ಮುಖವಾಡ ಹುಡುಕಿದ್ದು ಏಕೆಂದರೆ ಆಗ ಓದುತ್ತಿದ್ದ ಕನ್ನಡ ಪತ್ತೇದಾರಿ ಕಾದಂಬರಿಗಳ ಪರಿಣಾಮವೋ ಮತ್ತೊಂದೋ ಎನ್ನೋ ಹಾಗೆ ನನ್ನ ಮುಖದ ತುಂಬೆಲ್ಲ ಆಸಿಡ್ ಬಿದ್ದ ಹಾಗೆ, ಹಾಗೂ ನಾನು ಮುಖವಾಡವಿಲ್ಲದೇ ಎಲ್ಲೂ ಹೋಗದ ಹಾಗೆ ಕನಸೊಂದು ಬಿದ್ದಿದ್ದು. ಆ ಕನಸು ನನ್ನ ಮೇಲೆ ಎಷ್ಟು ಗಾಢವಾದ ಪರಿಣಾಮವನ್ನು ಬೀರಿತ್ತು ಎಂದರೆ ಅದರಿಂದ ಹೊರಬರಲು ಬಹಳಷ್ಟು ಸಮಯ ಹಿಡಿಯಿತು, ಅಲ್ಲದೇ ನಾನು ಮುಖವಾಡ ಕೇಳಿದೆನೆಂದು ನನ್ನ ಅಕ್ಕ ಬಹಳಷ್ಟು ದಿನ ನನ್ನನ್ನು ತಮಾಷೆ ಮಾಡಿ ಸತಾಯಿಸುತ್ತಲೇ ಇದ್ದಳು.

ನನ್ನ ಸ್ನೇಹಿತರೊಬ್ಬರನ್ನು ವಾಷಿಂಗ್ಟನ್ ಡಿಸಿಯಲ್ಲಿ ಕಾರಿನಲ್ಲಿ ತಿರುಗಾಡಿಸುತ್ತಿದ್ದೆ, ನನ್ನ ಬಯಲು ಸೀಮೆಯ ಕನ್ನಡದ ದೆಸೆಯಿಂದ ಆಗ ಮಾತಿನಲ್ಲಿ ಬಹಳಷ್ಟು ಆ ಮಗ..., ಈ ಮಗ... ಎನ್ನೋ ಬೈಗಳು ಹೊರಬರುತ್ತಲೇ ಇದ್ದವು. ನನ್ನ ಸ್ನೇಹಿತರು ಬಹಳಷ್ಟು ಹೊತ್ತು ನೋಡಿ 'ನೀವೇಕೆ ಅಷ್ಟೊಂದು ಬೈಗಳವನ್ನು ಮಾತಿನಲ್ಲಿ ಬಳಸೋದು!' ಎಂದು ಕೇಳಿಯೇ ಬಿಟ್ಟರು, ನಾನು ಕಕ್ಕಾಬಿಕ್ಕಿಯಾದೆ, ಅದು ನನ್ನ ನೇಚರ್ ಆಗಿರಬಹುದು, ಅಥವಾ ಆ ಬೈಗಳುಗಳಿಗೆ ನಿರ್ಧಿಷ್ಟ ಅರ್ಥವಿರದ ಸುಮ್ಮನೇ ಆಡುವ ಮಾತಿನ ಒಂದು ಭಾಗವಾಗಿರಬಹುದು, ಅಥವಾ ನಾನು ಬೆಳೆದು ಬಂದ ನೆರೆಹೊರೆಯ ಪರಿಣಾಮವಿರಬಹುದು. ಏನೇ ಆದರೂ ಒರಟು ಕನ್ನಡವನ್ನು ಮಾತನಾಡುತ್ತ tough looking ಮುಖವಾಡವನ್ನು ಹಾಕಿಕೊಂಡಿದ್ದೆನೆ ಎಂದುಕೊಂಡವನಿಗೆ ಅದು ನನ್ನ ಮುಖವಾಡವಲ್ಲ, ಮುಖ ಎಂದು ತಿಳಿದದ್ದು ಬಹಳ ಚಿಂತೆಗೆ ಈಡು ಮಾಡಿತು. ನನ್ನ ಸಹೋದ್ಯೋಗಿಗಳಲ್ಲಿ ನ್ಯೂ ಯಾರ್ಕ್ ಮೂಲದವರಿಗೆ ಒಂದು ರೀತಿಯ ಮಾತಿನ ಶೈಲಿಯಿದೆ, ಅವುಗಳಲ್ಲಿ ಬೈಗಳವೂ ಪ್ರಾದಾನ್ಯತೆ ಪಡೆಯುತ್ತವೆ, ಎಷ್ಟೋ ಬಾರಿ 'f' ಪದಗಳು ಎಗ್ಗಿಲ್ಲದೆ ಎಲ್ಲಿ ಬೇಕಂದರಲ್ಲಿ ಹರಿದು ಬರುತ್ತವೆ, ಹಲವಾರು ಹಿನ್ನೆಲೆಯಿಂದ ಬಂದ ಕೇಳುಗರಿಗೆ ಮುಜುಗರವಾದರೂ ನ್ಯೂ ಯಾರ್ಕ್ ಮೂಲದ ಸಹೋದ್ಯೋಗಿಗಳಿಗೆ ಇದರ ಬಗ್ಗೆ ಏನೇನೂ ಅನ್ನಿಸುವುದೇ ಇಲ್ಲ! ಅದು ಒಂದು ರೀತಿಯಲ್ಲಿ ಒಳ್ಳೆಯದೇ ಏಕೆಂದರೆ ಅವರ ನೇಚರ್ ಹಾಗಿರುತ್ತದೆ, ಅವರು ಎಲ್ಲಿ ಹೋದರೂ ಹಾಗೆಯೇ ಇರೋದು, ಅದರ ಬದಲಿಗೆ ನನ್ನಂತೆ ಸೆಲೆಕ್ಟೆಡ್ ಆಗಿ ಮಾತುಗಳನ್ನು ಬದಲಾಯಿಸುವ ಗೋಜಿಗೆ ಹೋದರೆ ಮುಖ ಹಾಗೂ ಮುಖವಾಡಗಳ ನಡುವೆ ಗೊಂದಲವಾಗಿ ಹಾಸ್ಯಾಸ್ಪದವಾಗುವ ಸಾಧ್ಯತೆಗಳೇ ಹೆಚ್ಚು. ಬೈಗಳವನ್ನು ಅಲ್ಲಲ್ಲಿ ಉದ್ದೇಶ ಪೂರ್ವಕವಾಗಿ ತುರುಕುವ ನಾನು ಕೆಲವೊಮ್ಮೆ ಯಾರಾದರೂ ಮಾತಿನ ಮಧ್ಯೆ 'damn' ಎಂದು ಹೇಳಿದಾಗಲೆಲ್ಲ ಅದನ್ನು 'darn' ಎಂದು ಬದಲಾಯಿಸಿ ಸಂಭಾಷಣೆಯಲ್ಲಿ ಒಂದು ಒಳ್ಳೆಯ ಎಳೆಯನ್ನು ನೇಯ್ದು ಬಿಡುತ್ತೇನೆ.

ಮುಖವಾಡ ನಮಗೆ ಒಂದು ರೂಪವನ್ನು ತತ್ಕಾಲಕ್ಕೆ ತಂದುಕೊಡಬಲ್ಲದು, ಹೊಸದಾಗಿ ಕೇಳುವವರ/ನೋಡುವವರ ಮನಸ್ಸಿನಲ್ಲಿ ಒಂದು ಮೂರ್ತಿಯನ್ನು ನಿಲ್ಲಿಸಬಹುದು ಆದರೆ ಧರಿಸುವ ಮುಖವಾಡಗಳನ್ನು ಹತೋಟಿಯಲ್ಲಿಡದೇ ಹೋದರೆ ಒಂದು ರೀತಿಯಲ್ಲಿ multiple personalityಯನ್ನು ಸದಾಕಾಲ ನಿಲ್ಲಿಸಿಬಿಡುವ ಸಾಧ್ಯತೆಗಳೇ ಹೆಚ್ಚಾಗಿ ಕೊನೆಗೆ ಮುಖವಾಡವೇ ಮುಖವಾಗಿ ಬಿಡುವ ಅನಾಹುತವಾಗಿ ಹೋಗುತ್ತದೆ. ನನ್ನ ಹಾಗೆಯೇ ಎಲ್ಲರೂ ಒಂದಲ್ಲ ಒಂದು ಮುಖವಾಡವನ್ನು ತೊಡುತ್ತಾರಾದರೂ ಅವುಗಳನ್ನು ಉಳಿದವರು ಹೇಗೆ ನಿಭಾಯಿಸುತ್ತಾರೆ, ಈ ಮುಖವಾಡಗಳ ಹಿಂದಿನ ವ್ಯಕ್ತಿಯ ಪರಿಚಯವಾಗುವುದಾದರೂ ಹೇಗೆ, ಮುಖವಾಡಗಳ ಹಿನ್ನೆಲೆಯಲ್ಲಿ ಯಾವ ರೀತಿಯ ನಡತೆ ಯಾವ ರೀತಿಯ ಪ್ರತಿಕ್ರಿಯೆಯನ್ನು ಹುಟ್ಟಿಸಬಲ್ಲದು, ಮುಖವಾಡಗಳನ್ನು ತೊಟ್ಟುಕೊಂಡವರ ಇಂಥ ಪ್ರತಿಕ್ರಿಯೆಗಳಿಗೆ ಅದರ ಮುನ್ನೆಲೆಯಲ್ಲಿ ಎಂತೆಂಥಹ ನಿರೀಕ್ಷೆಗಳು ಹುಟ್ಟಬಲ್ಲವು ಎಂಬ ಯೋಚನೆ ಯಾವತ್ತಿಗೂ ನನ್ನನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ.

ನೀವು ತೊಟ್ಟ ಮುಖವಾಡಗಳ ಹಿನ್ನೆಲೆ ಏನು ಎಂದು ಆಲೋಚಿಸುವುದಕ್ಕೆ ಒಂದು ಎಳೆ ಸಿಕ್ಕಂತಾಯಿತೇ?