Saturday, August 05, 2006

Friday, August 04, 2006

ಜಾಗತೀಕರಣ ಅಂದ್ರೆ ಸಾಕು, ಎಲ್ಲವೂ ನಿಧಾನವಾಗಿ ಹೋಗುತ್ತಲ್ಲಾ!

ಕಳೆದೆರಡು ದಿನಗಳಿಂದ ಜಾಗತೀಕರಣದ ಬಗ್ಗೆ ನನ್ನ ನಿಲುವು, ಇತ್ತೀಚಿನ ಮಾಹಿತಿಗಳನ್ನೆಲ್ಲ ಕಕ್ಕಿಕೊಳ್ಳೋಣ ಎಂದು ಆಲೋಚಿಸಿದಂತೆಲ್ಲಾ ಬರವಣಿಗೆ ನಿಧಾನವಾಗಿ ಹೋಗಿ, ನಾನೂ ಒಂಥರಾ ನಮ್ಮೂರಿನ ಬುದ್ಧಿಜೀವಿಗಳ ಹಾಗೆ ಆಗಿ ಹೋಗಿದ್ದೇನೆ - ಯಾವುದೇ ಪ್ರಶ್ನೆ ಕೇಳಿದ್ರೂ ಯೋಚ್ನೇ ಮಾಡೋರ್ ಮುಖಾ ಹಾಕ್ಕೋತಾರೇ ವಿನಾ ಅಪ್ಪಂತಾ ಉತ್ರ ಮಾತ್ರ ಹೊರಗ್ ಬರೋದಿಲ್ಲ! ಒಂಥರಾ ಈ ನಿಧಾನ ಅನ್ನೋದು ಒಳ್ಳೇದೇ ಆಯ್ತು, ನಿಲುವುಗಳನ್ನು ಯಾಕಾದ್ರೂ ಹೇಳ್‌ಕೋ ಬೇಕು, ಸುಮ್ನೇ ಅಡ್ಡಕತ್ರಿಯಲ್ಲಿ ಯಾಕಾದ್ರೂ ಸಿಕ್ಕಿ ಹಾಕ್ಕೋಬೇಕು ಎನ್ನೋ ಯೋಚ್ನೇ ಬಂದಿದ್ದೇ ತಡ ಈ ಪೋಸ್ಟನ್ನು ಬರೆಯತೊಡಗಿದೆ. ಮತ್ತೆ ಹೀಗೆ ಬರೆಯೋಕೆ ಶುರುಮಾಡಿದ್ದು ಯಾಕೆ ಅಂತ ಕೇಳ್ಕೊಂಡ್ರೆ 'ಸಾಧಿಸಿಕೊಳ್ಳುವುದು' ಎನ್ನೋ ಉತ್ರಾ ಬಂತು, 'ಏನನ್ನು?' ಅನ್ನೋ ಮರು ಪ್ರಶ್ನೆಗೆ ಮುಖ ಮತ್ತೆ ಬುದ್ಧಿಜೀವಿಗಳ ಹಾಗೆ ಆಗಿ ಹೋಯ್ತು, ಉತ್ತರಕ್ಕಾಗಿ ಕಾಯೋಣ, ಯಾವಾಗ್ ಬರುತ್ತೋ ನೋಡೋಣ!

'ಗ್ಲೋಬಲ್ ವಿಲ್ಲೇಜ್' ಅಂಥಾರಲ್ಲ ಹಾಗೆ - ಒಂದು ಕಡೆ ಮಾಹಿತಿ ಸುಪರ್ ಹೈವೇ, ಅದು ಕನೆಕ್ಟ್ ಮಾಡೋದು 'ವಿಲ್ಲೇಜ್' ಗಳನ್ನ - ಒಂಥರಾ ನ್ಯಾಷನಲ್ ಹೈವೇ ಸಾಧ್ಯವಾದಷ್ಟು ಶಹರಗಳನ್ನ ಅವಾಯ್ಡ್ ಮಾಡ್‌ಕೊಂಡು ಹೋಗುತ್ತಲ್ಲ ಹಾಗೆ, ಅಲ್ಲ, ಈ ಹೈವೇ ಇರೋದ್ರಿಂದ್ಲೇ ದಿನಕಳೆದಂತೆ ಶಹರಗಳು ಹುಟ್ಟುತ್ತಲ್ಲ ಹಾಗೆ!

'ನಾನು ಸೆಲ್‌ಫೋನ್ ಮಾತ್ರ ಉಪಯೋಗಿಸ್ತೀನಿ, ಬಟ್ ಜಾಗತೀಕರಣ ಅಂದ್ರೇ ಮಾತ್ರ ಮೈಯಲ್ಲ ಉರಿಯುತ್ತೆ', ಅಥವಾ 'ಕುಡಿಯೋಕ್ ಕೋಕ್ ಇರಲಿ, ಜಾಗತೀಕರಣ ದೂರ ಇರಲಿ', ಅಥವಾ 'ನಮ್ ಮಾವನ್ನ್ ಮಗ ಬಿಪಿಓ ಸಂಬಂಧೀ ಕೆಲಸದಲ್ಲಿ ಮಹಾ ದುಡ್ ಮಾಡ್ತಾನ್ರೀ, ಅದೇನೋ ಕೆಟ್ಟ್ ಜಾಗತೀಕರಣದ ಪ್ರಭಾವವಂತೆ!' ಅನ್ನೋ ಹೇಳಿಕೆಗಳಲ್ಲೇ ನಮ್ಮೂರಿನ ಜಾಣರ ಜಾಣತನವೆಲ್ಲ ಕರಗಿಹೋಗಿ ಬಿಡ್ತು. 'ಅಹಿಂಸೆಯನ್ನು ಕೈ ಹಿಡಿ, ಬೀದಿ ನಾಯಿಗೆ ಕಲ್ ಹೊಡಿ' ಅನ್ನೋ ರೀತಿ ವ್ಯತಿರಿಕ್ತವಾದ ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ. ಹಗಲೆಲ್ಲ ಅಲ್ಲಲ್ಲಿ ಏನೇನೋ ಓದಿಕೊಂಡು, ರಾತ್ರಿ ಬಂದಾಗ ಕಂಠಪೂರ್ತಿ ಕುಡಿದು, ಕುಡಿದದ್ದನ್ನ ಅರಗಿಸಿಕೊಳ್ಳಲಾರದೇ ಕುಳಿತಲ್ಲೇ ಕಕ್ಕಿಕೊಳ್ಳೋರ ಥರಾ ಆಗಿ ಹೋಗಿ ಬಿಟ್ನೇ ಎಂದು ಯೋಚಿಸಿಕೊಂಡು ಭಯಪಟ್ಟಿದ್ದಿದೆ.

ಪಿರಂಗಿಯೋರ ಆಡಳಿತವನ್ನು ಸಕತ್ತಾಗಿ ದ್ವೇಷಿಸಿದ್ದ ಫಲವೇ ನಾವೆಲ್ಲ ಅವರ ತೆಕ್ಕೆಗೆ ಬಹಳಷ್ಟು ಗಟ್ಟಿಯಾಗಿ ಒತ್ತಿಕೊಳ್ಳೋ ಹಾಗಾಗಿದ್ದು, ಹಾಗೆ ಇವತ್ತು ಸಹ ಅಫಘಾನಿಸ್ತಾನದಲ್ಲಿ ಕೋಕ್ ಮಾರಾಟಕ್ಕೆ ಬರುತ್ತೆ ಅಂದ್ರೆ ಸ್ಥಳೀಯರ ಕೈಯಲ್ಲಿ ಉಳಿದಿರೋ ತಂತ್ರಗಳು ಕಡಿಮೆ ಅಂತಲೇ ಅರ್ಥ - ಶಿಲಾ ಯುಗದಲ್ಲಿ ಇರೋದಕ್ಕೆ ಯಾರ ಮನಸೂ ಒಪ್ಪೋದಿಲ್ಲ, ಆಧುನಿಕತೆ ಸೊಂಪು ಎಲ್ಲರಿಗೂ ಬೇಕು, ಆದರೆ ಅದು ಜೊತೆಯಲ್ಲಿ ತರೋ ಹಲವಾರು ಬಳುವಳಿಗಳು ಬೇಡ ಅಂದ್ರೆ ಹೇಗೆ? ಸಮಯದ ಪರಂಪರೆಯಲ್ಲಿ ದೇಶ, ನೀತಿ ಎಲ್ಲವೂ ಬದಲಾಗುವ ಹೊತ್ತಿನಲ್ಲಿ ಬದಲಾವಣೆಗೆ ನಾವೂ ತಕ್ಕಂತೆ ಸ್ಪಂದಿಸದೇ ಹೋದರೆ ಯಾರಿಗೆ ನಷ್ಟ, ಜೊತೆಯಲ್ಲಿ ಕೇವಲ ಕೆಲವೊಂದಕ್ಕೆ ಮಾತ್ರ ಅಂಟಿಕೊಂಡು ಎಲ್ಲವೂ ಬೇಕು ಅನ್ನುವ ನಾಟಕವಾದರೂ ಎಷ್ಟು ದಿನ ನಡೆಯಬಲ್ಲದು? ಸರಿ, ನಮ್ಮೂರಿನ ಬುದ್ಧಿವಂತರು ಜಾಗತೀಕರಣವನ್ನು ವಿರೋಧಿಸಿದರೂ ಅಂತಲೇ ತಿಳ್‌ಕೊಳ್ಳೋಣ, ಅಂದ್ರೆ ಅವರು ಅಮೇರಿಕವನ್ನು ದ್ವೇಷಿಸ್ತಾರೆ ಅಂತಲೇ? ಹಾಗಾದ್ರೇ ಅಮೇರಿಕದಿಂದ ಅಪರೂಪಕ್ಕೆ ಭೇಟಿಕೊಡೋ ನನ್ನನ್ನೂ ದ್ವೇಷ್ಟಿಸ್ತಾರೆ ಅಂತಲೇ?

ಜಾಗತೀಕರಣ ಅಂದ್ರೆ ಅಲ್ಲಿ ಫೋಕಸ್ಸಿಗೆ ಬರೋದು ಅಮೇರಿಕವೋ, ತೃತೀಯ ಜಗತ್ತೋ? ಅಪರೂಪಕ್ಕೆ ವಿದೇಶೀ ಬಣ್ಣ ಹೋತ್‌ಗಂಡ್ ಬರೋ ನಾನೋ ಅಥವಾ ಇದ್ದ ಊರಲ್ಲೇ ಘಂಟೆಗೊಂದು ಬಣ್ಣ ಬದಲಾಯಿಸೋ ಇವರೋ?

Wednesday, August 02, 2006

ಶಕ್ತಿಯ ಸದುಪಯೋಗ ಹಾಗೂ ಬಳಕೆ

ಅಮೇರಿಕದ ಶಕ್ತಿ ಬಗ್ಗೆ ಹೇಳ್ತಾ ಹೋದ್ರೆ ಅದಕ್ಕೆ ಬಹಳ ಸಮಯ ಬೇಕು, ಆದ್ದರಿಂದ ಸದ್ಯಕ್ಕೆ ವಿದ್ಯುತ್ ಶಕ್ತಿ ಬಗ್ಗೆ ಹೇಳೋಣಾ ಅಂದುಕೊಂಡೆ. ನಿನ್ನೆ ಹಾಗೂ ಇವತ್ತು ನ್ಯೂ ಯಾರ್ಕ್ ಸುತ್ತ ಮುತ್ತ ನೂರು ಡಿಗ್ರಿ ಫ್ಯಾರೆನ್‌ಹೈಟ್‌ಗೂ ಹೆಚ್ಚು ವಾತಾವರಣದಲ್ಲಿ ಬಿಸಿಯಾಗಿದ್ದರಿಂದ ಎಲ್ಲ ಮಾದ್ಯಮಗಳಲ್ಲಿ ಜನರಿಗೆ ಹೀಟ್‌ವೇವ್ ಬಗ್ಗೆ, ಶಕ್ತಿಯ ಸದ್ಬಳಕೆಯ ಬಗ್ಗೆ ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಬಗ್ಗೆ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಒಂದು ಕಡೆ ಇಂಧನ ಹಾಗೂ ಶಕ್ತಿ ದಾಖಲೆ ಮೀರಿ ಬಳಕೆಯಾಗುತ್ತಿದ್ದರೆ, ಮತ್ತೊಂದು ಕಡೆ ಇಂತಹ ಮುಂದುವರಿದ ದೇಶದಲ್ಲೂ ಜನ ಛಳಿಗಾಲದಲ್ಲಿ ಸಾಯೋದಕ್ಕಿಂತ ಹೆಚ್ಚು ಬಿಸಿಲಿನಲ್ಲಿ ಸಾಯುತ್ತಾರಲ್ಲಾ ಎಂದು ಅನ್ನಿಸಿ ಬೇಸರವಾಯಿತು.

ಶ್ರೀಮಂತ ದೇಶಗಳ ದೊಡ್ಡ ಕೊರತೆ ಎಂದರೆ ಅವರಿಗೆ ಯಾವಾಗಲೂ ಸಂಪನ್ಮೂಲಗಳ ಕೊರತೆ ಅನುಭವಕ್ಕೆ ಬರದಿರುವುದು. ಸರಿಯಾದ ಆರ್ಥಿಕ ಸ್ಥಿತಿಗತಿಯಲ್ಲಿ ಹಣದುಬ್ಬರವನ್ನೂ ಹತೋಟಿಯಲ್ಲಿಡೋದರಿಂದ ಮೇಲೇರಿದ ಬೆಲೆಗಳು ಸದಾ ಅಲ್ಲೇ ನಿಲ್ಲದೆ ತಮ್ಮ ಮೊದಲಿನ ಸ್ಥಾನಕ್ಕೆ ಬರೋದನ್ನ ನಾನು ನೋಡಿದ್ದೇನೆ. ಆದರೂ ಕಳೆದ ಐದಾರು ವರ್ಷಗಳಲ್ಲಿ ಅಗತ್ಯ ವಸ್ತುಗಳ ಉದಾಹರಣೆಯಲ್ಲಿ ಹಾಲು ಮತ್ತು ಪೆಟ್ರೋಲಿನ ಬೆಲೆ ಏರುತ್ತಲೇ ಇದೆ, ಐತಿಹಾಸಿಕವಾಗಿ ನೋಡಿದಾಗ ಹೀಗೆ ಮೇಲೇರಿದ ಬೆಲೆಗಳು ಮತ್ತೆ ಕಡಿಮೆಯಾಗೋದು ನನಗೆ ಇಲ್ಲಿನ ಅನುಭವ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತಮ್ಮ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸಿಕೊಳ್ಳಬೇಕಾದರೆ ಸಾಕಾಗಿ ಹೋಗುತ್ತದೆ, ಆದರೆ ಹಣವುಳ್ಳ ದೇಶಗಳಿಗೆ ಅವರದೇ ಆದ ಮೌಲ್ಯ ಮಾಪನಗಳಿವೆ, ಆಮದು-ರಫ್ತುಗಳ ಹೊಂದಾಣಿಕೆಯಲ್ಲಿ ಹೆಚ್ಚಿನ ಅಸಮತೋಲನವನ್ನು ಸರಿಪಡಿಸಲಾಗುತ್ತೆ. ಆದರೆ ಜನರ ಮನಸ್ಸಿನಲ್ಲಿ ಯಾವಾಗಲೂ ಲಭ್ಯವಿರುವ ಸಂಪನ್ಮೂಲಗಳ ಬಳಕೆಗೆ ಮನಸ್ಸು ಹೊಂದಾಣಿಕೆ ಮೂಡಿರೋದರಿಂದ ಅಕಸ್ಮಾತ್ ಏನಾದರೊಂದು ಕಡಿಮೆ ಆದರೆ ಬದುಕು ದುಸ್ಸಾಧ್ಯವೆನಿಸಿ ಬಿಡುತ್ತದೆ. ಕಳೆದ ವಾರ ಕ್ವೀನ್ಸ್‌ನಲ್ಲಿ ಕೆಲವು ಮನೆಗಳಲ್ಲಿ ಒಂದು ವಾರದ ಮೇಲ್ಪಟ್ಟು ಕಳೆದರೂ ಎಲೆಕ್ಟ್ರಿಕ್ ಕರೆಂಟ್ ಬರಲೇ ಇಲ್ಲ, ಅಂತಹ ಸಂದರ್ಭದಲ್ಲಿ ಮಕ್ಕಳು-ಮರಿ ಇರೋ ಮನೆಗಳಲ್ಲಿ ಬದುಕನ್ನು ಸವೆಸೋದು ಬಹಳ ಕಷ್ಟಕರವಾಗುತ್ತದೆ, ಇಲ್ಲಿನ ಹೆಚ್ಚಿನವರಿಗೆ ಅದನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

ಇಲ್ಲಿನ ಕಡಿಮೆ ಜನರು ಜಗತ್ತಿನ ಅತಿ ಹೆಚ್ಚು ಸಂಪನ್ಮೂಲಗಳನ್ನು ಬಳಸುವುದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅದರಲ್ಲೂ ಇತ್ತೀಚಿನ ಆಧುನಿಕ ಬದುಕಿನ ಅಂಗಗಳಾದ ಸೆಲ್‍ಫೋನ್, ಮತ್ತಿತರ ಸಾಮಗ್ರಿಗಳು ಬಂದಮೇಲೆ, ಆಕ್ಟೀವ್ ಹಾಗೂ ಪ್ಯಾಸ್ಸೀವ್ ಪರಿಕರಗಳ ಸಂಖ್ಯೆ ಬೆಳೆಯುತ್ತಿದ್ದಂತೆ ಶಕ್ತಿಯ ಬೇಡಿಕೆಯೂ ಕೂಡಾ ಅಷ್ಟೇ ಹೆಚ್ಚಾಗಿ ಬೆಳೆಯುತ್ತಿದೆ. ಒಂದು ಕಡೆ ಪ್ರಗತಿಯ ಸಂಕೇತವಾಗಿ ಪ್ರತಿ ತಲೆಗೆ ಲೆಕ್ಕ ಹಾಕಿದಾಗ ಬೆಳೆಯೋ ಲಿವಿಂಗ್ ಸ್ಪೇಸ್, ಮತ್ತೊಂದು ಕಡೆ ಜನ ಸಂಖ್ಯೆ, ಬಳಕೆದಾರರ ಸಂಖ್ಯೆ ಬೆಳೆದಂತೆಲ್ಲ ಬೇಕಾಗುವ ಉಪಕರಣ/ಅಗತ್ಯಗಳ ಹೆಚ್ಚಳ ಇವೆಲ್ಲವೂ ಸೇರಿ ಹಳೆಯ ವ್ಯವಸ್ಥೆಯ ಮೇಲೆ ಪದೇ-ಪದೇ ಒತ್ತಡವನ್ನು ಹಾಕುತ್ತಲೇ ಇರುತ್ತವೆ. ಜನರ ಬಳಕೆಗೆ ಸ್ಪಂದಿಸಲಿಕ್ಕೆ ಇಲ್ಲಿನ ವ್ಯವಸ್ಥೆಗಳು ತಿಣುಕುತ್ತವೆ, ಇದರಿಂದ ಈ ರೀತಿ ಬಿಸಿಲಿರುವ ಪ್ರತಿದಿನವೂ ಹೊಸದೊಂದು ದಾಖಲೆಯನ್ನು ಸೃಷ್ಟಿಸುತ್ತಾ ಹೋಗುತ್ತದೆ.

ನನಗೆ ಇಷ್ಟವಾದ ಇತ್ತೀಚಿನ ಬೆಳವಣಿಗೆಗಳಲ್ಲಿ ಇಲ್ಲಿನ ನಗರವಾಸಿಗಳಿಗೆ, ಇಲ್ಲಿರುವ ಬಿಸಿನೆಸ್ಸುಗಳಿಗೆ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಶಕ್ತಿಯನ್ನು ಬಳಸುವಂತೆ ಕೋರಿಕೊಳ್ಳಲಾಗುತ್ತಿದೆ. ಇದು ತುಂಬಾ ಸ್ವಾಗತಾರ್ಹ ಬೆಳವಣಿಗೆ, ಹೀಗೆ ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಹಾಗೂ ಸಂಸ್ಥೆಯ ಮಟ್ಟದಲ್ಲಿ ಚುರುಕಾಗಿ ಯೋಚಿಸಿದ್ದೇ ಆದಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ಹೀಗೆ ಪ್ರತಿಯೊಬ್ಬರಲ್ಲೂ, ಬರೀ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಾಗದೇ, ವರ್ಷದ ಎಲ್ಲಾ ಸಮಯದಲ್ಲೂ ಅಗತ್ಯಕ್ಕೆ ತಕ್ಕಷ್ಟೇ ಇಂಧನ, ಶಕ್ತಿಯನ್ನು ಬಳಸುವಂತೆ ತಿಳಿಸಿ ಹೇಳಬೇಕು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಅದರ ಪರಿಣಾಮ ಮೊದಮೊದಲು ಚಿಕ್ಕದಾಗಿ ಕಂಡರೂ ಅದರ ವಿಸ್ತಾರ ಬಹಳ ದೂರದವರೆಗೆ ಹೋಗುತ್ತದೆ. ಆದರೆ ನನಗನ್ನಿಸಿದಂತೆ ಒಮ್ಮೆ ಇಲ್ಲಿನ ಬಿಸಿ ಇಳಿಯಿತೆಂದರೆ ಜನರು ಕಡಿಮೆ ಶಕ್ತಿಯನ್ನು ಬಳಸುವ ಬಗ್ಗೆ ಮರೆತೇ ಬಿಡುತ್ತಾರೇನೋ ಎನ್ನಿಸುತ್ತದೆ.

ಸಂಪನ್ಮೂಲಗಳು ಇಲ್ಲದೇ ಇದ್ದರೆ ಅದರಿಂದ ಕಲಿಯೋ ಪಾಠ ಸ್ವಾಭಾವಿಕವಾದದ್ದು, ಹಾಗು ಹೆಚ್ಚು ದಿನ ಇರುವಂತದ್ದು, ಅವರಿವರು ಹೇಳಿ ಬಂದ ಅರಿವು ಕೇವಲ ಕೆಲವೇ ದಿನ ಇರುವಂತದ್ದು. ಎನರ್ಜಿ ಕನ್ಸರ್‌ವೇಷನ್ ಬಗ್ಗೆ ಇಲ್ಲಿ ಶಾಲೆಗಳಲ್ಲಿ ಕಲಿಸುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಅತಿಯಾದ ದುರ್ಬಳಕೆಯಿಂದಾಗಿ ಗ್ಲೋಬಲ್ ವಾರ್ಮಿಂಗ್, ಇಂಧನಗಳು ಬರಿದಾಗುವಿಕೆ, ಮತ್ತಿತರ ಸುದ್ದಿಗಳು ಆಗಾಗ್ಗೆ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇಲ್ಲಿನ ವ್ಯಸ್ತ ಬದುಕಿನ ಸಡಗರಗಳಲ್ಲಿ ಎಲ್ಲವೂ ಇದೆ ಎನ್ನುವ ಹೆಮ್ಮೆಯ ಹಿಂದೆ ಎಲ್ಲವನ್ನೂ ಉಳಿಸಿಕೊಳ್ಳುತ್ತೇವೆ ಎನ್ನುವ ಮಾತು ಗೌಣವಾಗುತ್ತದೆ. ಸರ್ಕಾರದ ಯಾವ ಯೋಜನೆಗಳಾಗಲೀ, ಆಗಾಗ್ಗೆ ನಿಸರ್ಗ ಕಲಿಸುವ ಪಾಠಗಳಾಗಲೀ ಎಲ್ಲವೂ ಸಾರ್ವಜನಿಕ ನೆನಪಿನಶಕ್ತಿಯ ಥರ ಕುಂಠಿತಗೊಳ್ಳುತ್ತಲೇ ಸಾಗಿದೆ.

ಒಮ್ಮೆ ಉಷ್ಣತೆ ನೂರು ಡಿಗ್ರಿಗಳಿಗಿಂತ ಕೆಳಗೆ ಇಳಿಯಿತೆಂದರೆ ಇಲ್ಲಿನ ಜನಗಳ ತಲೆ ಇನ್ನೇನೋ ವಿಷಯಗಳಿಂದ ಬಿಸಿಯಾಗತೊಡಗುತ್ತದೆ, ಶಕ್ತಿಯ ಸದ್ಬಳಕೆಯ ಪಾಠ ಮತ್ತೊಂದು ಬೇಸಿಗೆಯವರೆಗೆ ಕಾಯತೊಡಗುತ್ತದೆ.

Monday, July 31, 2006

'ಮಠ'ದ ಹಿನ್ನೆಲೆಯಲ್ಲಿ ಅನಿವಾಸಿ ಭಾಷೆ

ನಿನ್ನೆ ಜಗ್ಗೇಶ್ ನಟಿಸಿರೋ 'ಮಠ' ಸಿನಿಮಾ ನೋಡಿದ್ ಮೇಲೆ ನಾನು ಕರ್ನಾಟಕ ಬಿಟ್ಟು ಎಷ್ಟೋ ದಶಕಗಳು ಕಳೆದಂತೆನ್ನಿಸಿತು, ಮೊಟ್ಟ ಮೊದಲ್ನೇ ಬಾರಿ ಸಿನಿಮಾದಲ್ಲಿ ಆಡು ಭಾಷೆಯಲ್ಲಿರೋ ನಮ್ಮ್ ಕನ್ನಡ ಅರ್ಥವಾಗದಂತಾ ಪರಿಸ್ಥಿತಿ, ನಾನು ನಿಧಾನವಾಗಿ ಹೋಗಿದ್ದೇನೋ ಅಥವಾ ನನ್ನ ಆಡುಭಾಷೆ ನನ್ನಿಂದ ಆವಿಯಾಗಿ ಹೋಗಿದೆಯೋ ಯಾರಿಗೆ ಗೊತ್ತು?

ಪ್ರತಿಯೊಂದು ಆಡುಭಾಷೆಗೂ ಅದರದ್ದೇ ಆದ ಒಂದು ವೈಶಿಷ್ಟ್ಯ ಇರುತ್ತೆ, ಕೇವಲ ಬೇರೆ-ಬೇರೆ ಭಾಷೆಗಳ ಪದಗಳನ್ನ ಬಳಸಿ ಮಾತನಾಡ್ತಾರೆ ಅಂತಲ್ಲ, ಈ ಆಡುನುಡಿಯನ್ನ ಅದರ ನೇಟಿವ್ ಪರಿಸರದಲ್ಲಿ ಗಮನಿಸಿದಾಗ ಮೂಲಭೂತವಾಗಿ ಅದರಲ್ಲಿ ಒಂದು ಸ್ವಂತಿಕೆ ಇರುತ್ತೆ, ಅದೇ ಅದರ ವಿಶೇಷ. ಈ ಸ್ವಂತಿಕೆಯನ್ನ ಶಾಲೆಯಲ್ಲಿ ಕಲಿತು ನುಡಿಯಲ್ಲಿ ಪ್ರತಿಬಿಂಬಿಸೋದಕ್ಕಾಗಲ್ಲ, ಅದನ್ನ ಆಡಿಯೇ ಅನುಭವಿಸಬೇಕು. ಎಷ್ಟೋ ಜಾತಿ-ಮತ-ಪರಂಪರೆಗಳ ವೈವಿಧ್ಯಮಯ ವಾತಾವರಣದಲ್ಲಿ ನಮ್ಮ ನುಡಿಯ ವೇರಿಯೇಷನ್ನೂ ಸಹ ಅಷ್ಟೇ ಅಲ್ಲಿನ ಮಣ್ಣಿನ-ನೀರಿನ ಗುಣಕ್ಕೆ ಕಟ್ಟುಬಿದ್ದಿರುತ್ತದೆ. ನಾವು ಇಂಗ್ಲೀಷನ್ನ ಎಷ್ಟೇ ಚೆನ್ನಾಗಿ ಮಾತನಾಡಬಲ್ಲವರಾದ್ರೂ ಒಂಥರಾ ರೇಡಿಯೋದಲ್ಲಿ ಸುದ್ದಿ ಓದೋರ್ ಥರಾ ಕಂಡ್ ಬರ್ತೀವೇ ವಿನಾ ಆ ಭಾಷೆಯ ಜೊತೆಯಲ್ಲಿ ಬೆಳೆದು ಬಂದವರ ಹಾಗಾಗೋದಿಲ್ಲ - ಇವತ್ತಿಗೂ ಸಹ ನಮ್ಮ ಭಾರತೀಯ ಅಥವಾ ಇಂಗ್ಲೀಷ್ ಮೂಲಭಾಷೆಯಲ್ಲದ ಬೇರೆಯವರು ಯಾರೇ ಬರೆದ ಸಂದೇಶದಲ್ಲೂ ಸಹ ಆ ಸ್ವಂತಿಕೆ ಇರೋದಿಲ್ಲ, ಪದಗಳ ಬಳಕೆ ನಿರಾಳವಾಗಿರೋದಿಲ್ಲ, ಯಾವುದರ ಕುತ್ತಿಗೆ ಹಿಚುಕಿದ ಅನುಭವವೂ ಆಗೋದಿಲ್ಲ. ಅದೇ ನಾನೇ ಬರೆದ ಪ್ರತಿಯೊಂದು ಸಾಲನ್ನೂ ಗಮನಿಸುತ್ತಾ ಹೋದರೆ ಆ ಸ್ವಂತಿಕೆ ವಿಷಯಗಳ ಗಹನತೆಯಲ್ಲಿ ಮಾಯವಾಗುತ್ತದೆಯೇನೋ ಅನ್ನೋ ಹೆದರಿಕೆ ಹುಟ್ಟುತ್ತದೆ. ಈ ನೇಟಿವ್ ಭಾಷೆಯ ಪರಿಸರದಲ್ಲಿ ಹುಟ್ಟಿ ಬೆಳೆದೋರೆಲ್ಲ ದೊಡ್ಡ ಬರಹಗಾರರಾಗೋದಿಲ್ಲ, ಆದರೆ ಅವರವರು ಮಾತನಾಡಿದಾಗ ಅದರ ಸ್ವಂತಿಕೆ ಅದರಲ್ಲಿ ಇದ್ದೇ ಇರುತ್ತೆ.

'ಮಠ' ಸಿನಿಮಾದಲ್ಲಿ ಮುಖ್ಯವಾಗಿ ಏಳು ಪಾತ್ರಗಳು ಬರುತ್ತವೆ, ಸಿನಿಮಾದ ವಿಮರ್ಶೆ ಅದೂ-ಇದೂ ಅಂತ ಕಾಂಪ್ಲಿಕೇಷನ್ ಮಾಡೋ ಬದಲಿಗೆ, ಈ ಏಳೂ ಪಾತ್ರಗಳು ಬಳಸೋ ಭಾಷೆ ನನಗೆ ಬಹಳವಾಗಿ ಇಷ್ಟವಾಯಿತು, ಅದರಲ್ಲಿ ಆ ವೇರಿಯೇಷನ್ ಇದೆ, ಮೂಲವನ್ನು ಬಿಂಬಿಸೋ ತತ್ವವಿದೆ, ಬುದ್ಧಿವಂತರ ಸೋಗಿನಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳದ ಸಹಜತೆ ಇದೆ. ಚಿತ್ರಕಥೆ ಬರೆಯೋರಿಗೆ ಆ ಪಾತ್ರ ಹೇಳಿದ್ದರಲ್ಲಿ ಏನೂ ಅರ್ಥವಿಲ್ಲ ಎಂದೆನಿಸಿದರೂ ಅಂತಹ ಚಿಕ್ಕ ಡೀಟೈಲನ್ನು ಹಿಡಿದು ಓದುಗರಿಗೆ/ಕೇಳುಗರಿಗೆ ಒಪ್ಪಿಸಿದಾಗಲೇ ಆ ಬರಹಗಾರನಿಗೆ ಜಯ ದೊರಕೋದು. 'ಮಠ'ದ ಪಾತ್ರಗಳು ತಮಗೆ ಒಪ್ಪಿಸಿದ ಪಾತ್ರಗಳ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗೇ ನಿರ್ವಹಿಸಿದ್ದರೂ ಬಹಳ ದಿನಗಳ ನಂತರ ಕೇಳಿದ ಭಾಷೆಯಾದ್ದರಿಂದಲೋ, ಈ ರೀತಿ ಅನುಭವಗಳು ನಮಗಿಲ್ಲಿ ಪದೇ-ಪದೇ ಆಗದಿದ್ದುದರಿಂದಲೋ ಚಿತ್ರದುದ್ದಕ್ಕೂ ಬೇಕಾದಷ್ಟು ಸಂಭಾಷಣೆಗಳು ನನ್ನ ತಲೆಯ ಮೇಲೆ ಹಾದು ಹೋದವು - ಈ ಬಾರಿ ಮಧ್ಯದಲ್ಲಿ ತೊಂದರೆ ಮಾಡುವ ಯಾವ ಮಕ್ಕಳೂ ಇರಲಿಲ್ಲ, ಚಿತ್ರದಲ್ಲಿ ಎಲ್ಲವೂ ಸರಿಯಾಗಿಯೇ ಕೆಲಸ ಮಾಡುತ್ತಿತ್ತು - ಬಂದ ತೊಂದರೆಯೇನೆಂದರೆ ನಾನು ಚಿತ್ರದ ಸಂಭಾಷಣೆಯ ವೇಗಕ್ಕೆ ಹೊಂದಿಕೊಳ್ಳಲು ತೆಗೆದುಕೊಂಡ ಸಮಯ. ಹೀಗೆ ಬಂದ ಒಂದು ಸಂಭಾಷಣೆಯ ತುಣುಕನ್ನು ಹಿಡಿದು ಅದನ್ನು ಆಸ್ವಾದಿಸುವುದರಲ್ಲಿ ಮತ್ತೊಂದು ಬರುತ್ತಿತ್ತು, ಒಂದು ರೀತಿ ಮಾತಿನ ಮೇಲೆ ಮಾತು ಬಂದು ನನಗೆ ಆ ವೇಗಕ್ಕೆ ಹೊಂದಿಕೊಳ್ಳಲು ಹಲವಾರು ಕಡೆ ಕಷ್ಟವಾಯಿತು.

ನಾನು ದಿನವೂ ಕನ್ನಡವನ್ನು ಓದುತ್ತೀನಿ ಹಾಗೂ ಬರೀತೀನಿ (ಅಲ್ಲ, ಕುಟ್ಟುತ್ತೀನಿ) ನನ್ನಂಥವನಿಗೇ ಹೀಗೇ? ಕರ್ನಾಟಕದ ಉದ್ದಗಲಕ್ಕೆ ಎಷ್ಟೂ ಸಾದ್ಯವೋ ಅಷ್ಟು ಓಡಾಡಿದ್ದೇನೆ, ತುಸು ಕಷ್ಟಪಟ್ಟರೆ ಒಂದೈದು ಡಯಲೆಕ್ಟ್‌ಗಳನ್ನು ಮಾತನಾಡುತ್ತೇನೆ, ನನ್ನಂಥವನಿಗೇ ಹೀಗೇ? ಎಂದು ಕೇಳಿಕೊಂಡಾಗಲೆಲ್ಲ ಆ ಪ್ರಶ್ನೆಗಳಿಗೆ ಉತ್ತರವಾಗಿ ಕನ್ನಡವನ್ನು ಮಾತುಗಳನ್ನಾಗಿ ಕೇಳೋದಿಲ್ಲವಲ್ಲ, ಆ ಕೊರತೆಯನ್ನು ತುಂಬೋದು ಹೇಗೆ? ಎನ್ನುವ ಪ್ರಶ್ನೆಯೇ ಉತ್ತರವಾಗಿ ಬಂತು. ನಮಗಿಲ್ಲಿ ಬರೋದೇ ವರ್ಷಕ್ಕೆ ನಾಲ್ಕೈದು ಸಿನಿಮಾಗಳು, ಅದನ್ನು ಬಿಟ್ಟರೆ ಮನಪೂರ್ತಿಯಾಗಿ ಮಾತನಾಡುವ ಬೆರಳೆಣಿಕೆಯ ಸ್ನೇಹಿತರಿದ್ದರೂ ಅವರದ್ದೆಲ್ಲ ನನ್ನ ಪರಂಪರೆಯೇ - ಮಾತುಗಳು ಗ್ರಂಥಮಯ, ಮಧ್ಯೆ-ಮಧ್ಯೆ ಹಾಳಾದ ಇಂಗ್ಲೀಷು ಬೇರೆ. ಈ ತರಹದ ಭಾಷೆಯ ಹಿನ್ನೆಲೆಯಲ್ಲಿ ಅದ್ಯಾವುದೋ ಚಿತ್ರದಲ್ಲಿ ಒಬ್ಬ ಹೂ ಮಾರುವ ಹೆಂಗಸು ಮಾತನಾಡುವ ಕನ್ನಡ, ಒಬ್ಬ ಕುಡುಕನ ಬಾಯಿಯಿಂದ ಉದುರುವ ಕನ್ನಡ, ಇಮಾಮ್ ಸಾಬಿ ಅವನ ಮಕ್ಕಳಿಗೆ ಬಳಸೋ ಹರಕು ಮುರುಕು ಉರ್ದು ಮಿಶ್ರ್ರಿತ ಬೈಗಳು ತುಂಬಿದ ಕನ್ನಡ, ಅರ್ಚಕರ ಕನ್ನಡ, ಅಡ್ಡಕಸಬಿಗಳ ಕನ್ನಡ, ಇತ್ಯಾದಿಗಳ ದರ್ಶನವಾದರೆ ಅದು ಧಿಡೀರನೆ ಅರ್ಥವಾಗೋದಾದರೂ ಹೇಗೆ?

ಬೇಕಾಗಿಲ್ಲ ಬಿಡಿ, ಇಲ್ಲಿ ಹೇಗೂ ದಿನ ನಿತ್ಯದ ಬದುಕು ಅನ್ನೋ ಬಂಡಿ ನಡೆದೇ ನಡೆಯುತ್ತಲ್ಲ! ಆದರೆ ಸಂವೇದನೆಗಳ ವಿಷಯಕ್ಕೆ ಬಂದಾಗ ಈ ನೆನಪಿನಿಂದ ಹಾರಿ ಹೋಗಿರೋ ಅಗಾಧವಾದ ಶಬ್ದ ಭಂಡಾರವಿರದೇ ಹೋದಲ್ಲಿ ಆ ಸಂವೇದನೆಗಳು ಪೂರ್ತಿಯಾಗೋದಾದರೂ ಹೇಗೆ? ಇದಕ್ಕಾಗಿಯೇ ಇರಬೇಕು ಒಂದು ರೀತಿ ಅನಿವಾಸಿ ಸಾಹಿತ್ಯ ಬಹಳ ಡ್ರೈ ಅನ್ನಿಸೋದು - ಈ ಶುಷ್ಕ ಸಾಹಿತ್ಯ ಅನ್ನೋದು ನನ್ನ ಬರಹಗಳಲ್ಲಿ, ಸಂವಾದಗಳಲ್ಲಿ ಇರುವ ವಿಷಯ ನನ್ನ ಅಂತಃಪ್ರಜ್ಞೆಯ ಯಾವುದೇ ಮೂಲೆಯೊಂದಕ್ಕೆ ಗೋಚರಿಸಿದರೂ, ಆ ಸಾಹಿತ್ಯದ ಮೇಲೆ, ಹಿಂದೆ-ಮುಂದೆ ದೊರೆಯುವ ಉಪಚಾರಗಳು ಶುಷ್ಕ ಪರಿಸರವನ್ನು ಮುಚ್ಚಿ ಮರೆಮಾಡುತ್ತವೆ. ಹೀಗೆ ನನಗಾದಂತೆಯೇ ಇತರರಿಗೂ ಆಗಿ ನಮ್ಮ ಅನಿವಾಸಿ ಸಂವೇದನೆಗಳು ಯಾರಿಗೂ ದಕ್ಕದೇ ಹೋಗೋ ಸಂಭವನೀಯತೆಯೇ ಹೆಚ್ಚು ಎಂದು ಬಿಡಲೇ ಅಥವಾ ಹೀಗೆ ದೊಡ್ಡದಾಗಿ ಬರೆದರೆ ಅದನ್ನು ಕ್ವಾಲಿಫೈ ಮಾಡೋದು ಹೇಗೆ ಎಂದು 'ಮೆಚ್ಚಿಸುವ' ಆಟ ಆಡಲೇ?

'ಮಠ' ಚಿತ್ರದ ಏಳೂ ಭಾಷೆಗಳು ನಿರಂತರವಾಗಿ ನನ್ನ ಕಿವಿಯ ಮೇಲೆ ಆಗಾಗ್ಗೆ ಬೀಳುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು: ಗಾರೆ ಕಟ್ಟುವವರಿಂದ ಹಿಡಿದು ಬಂಡಿ ಓಡಿಸುವವರ ತನಕ ನನ್ನ ಭಾಷೆಯ ಹರಿವು ಸುತ್ತಿಕೊಳ್ಳುತ್ತಿತ್ತು. ಅದನ್ನು ಬಿಟ್ಟು ಅಪರೂಪಕ್ಕೊಮ್ಮೆ ಆಡುವ ಇಂಗ್ಲೀಷು ಬೆರೆತ ಗ್ರಾಂಥಿಕ ಭಾಷೆಯ ಸೋಗು ನನಗ್ಯಾವ ಅನುಭವವನ್ನೂ ಮಾಡದು, ಬದಲಿಗೆ ಅದು ಒಂದು ರೀತಿ ಮೊನಟನಸ್ ಬಟ್ಟೆಯಿಂದ ಮೈ-ಮನಗಳನ್ನು ಮುಚ್ಚಿ ಇನ್ನೇನೂ ರುಚಿಸದಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಈ ರೀತಿಯ ಭಾಷೆಯ ಅನುಭವ ಒಂದೆರಡು ಘಂಟೆಗಳ ಮಟ್ಟಿಗೆ ಆಗುವುದೆಂದಾದರೆ ಖಂಡಿತವಾಗಿ ನಾನು ಕನ್ನಡ ಸಿನಿಮಾಗಳನ್ನು ಅದೆಷ್ಟು ಕಷ್ಟವಿದ್ದರೂ ನೋಡಿಯೇ ತೀರುತ್ತೇನೆ - ಸಿನಿಮಾ ಕಥೆ, ಅದನ್ನು ತೆಗೆದ ರೀತಿ ಇವೆಲ್ಲವೂ ಸೆಕೆಂಡರಿ, ಅದು ಆ ಮಟ್ಟಿಗೆ ತರುವ ಭಾಷೆಗಳ ದಿಬ್ಬಣ ಪ್ರೈಮರಿ.

ಈವರೆಗೆ ಜಾಲದಲ್ಲಿ ಕನ್ನಡವನ್ನು ನೋಡುವುದಕ್ಕೆ ಖುಷಿ ಪಟ್ಟುಕೊಳ್ಳುತ್ತಿದ್ದೆ, ಇನ್ನು ಅಲ್ಲಲ್ಲಿ ಬಗೆ-ಬಗೆಯ ಕನ್ನಡವನ್ನು ಕೇಳುವ ಸುಖ ಹುಡುಕಿಕೊಂಡು ಹೋಗಬೇಕಾಗಿದೆ!

Sunday, July 30, 2006

ಶ್ರಾವಣ ತರೋ ಸಂಭ್ರಮ

ಇಂದು ನಾಗರ ಪಂಚಮಿ, ಹೆಚ್ಚೂ ಕಡಿಮೆ ಇಂದಿನಿಂದಲೇ ನಮ್ಮೂರಲ್ಲೆಲ್ಲ ಶ್ರಾವಣ ಶುರುವಾಗೋದು, ಹೌದು ಶ್ರಾವಣ ತರೋ ಸಂಭ್ರಮಕ್ಕೆ ತಯಾರಾಗೋದಕ್ಕೆ ಕೊನೇಪಕ್ಷ ಮೊದಲ ನಾಲ್ಕು ದಿನಗಳಾದರೂ ಬೇಡವೇ?

ಎಂಥವರಿಗೂ ನಮ್ಮೂರಲ್ಲೆಲ್ಲ ಶ್ರಾವಣದ ಅನುಭವ ಬಂದೇ ಬರುತ್ತದೆ, ಯಾವಾಗ ಬೇಕಂದರೆ ಆಗ ಸುರಿಯೋ ಜಿಟಿಪಿಟಿ ಮಳೆ, ಅಲ್ಲಲ್ಲಿ ರಾಚೋ ಕಿಚಿಪಿಚಿ ಕೆಸರು, ಕೈಗಳಲ್ಲೆಲ್ಲ ಒಂದೊಂದು ಕೊಡೆ, ಕಾಲಿಗೆ ಅಡರಿಕೊಳ್ಳೋ ಪ್ಲಾಸ್ಟಿಕ್ ಬೂಟು-ಚಪ್ಪಲಿಗಳು, ಹಿರಿಯರು ಕಟ್ಟಿದ ಹಳೆಯ ಮಾಡಿಗೆ ತೂಗಿಬಿದ್ದು ಕಿರ್-ಗುರ್ ಎಂದು ಸದ್ದು ಮಾಡುವ ಮಾಡಿನ ಮರದ ಹಿನ್ನೆಲೆಯ ಸಂಗೀತದಲ್ಲಿ ಕಿರಿಯರು ಜೀಕಿದಂತೆಲ್ಲ ಪೆಂಡುಲಮ್ ನೆನಪಿಸುವ ಜೋಕಾಲಿಗಳು, ಥರಾವರಿ ತಿನಿಸುಗಳು, ಉಂಡೆಗಳು, ತಳಿರು ತೋರಣಗಳು, ಇವುಗಳ ಜೊತೆಯಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು, ಶ್ರಾವಣಕ್ಕೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳೋ ಮೀನು ಮಾರುವ ಇಮಾಮ್ ಸಾಬಿ ಮತ್ತು ಅವನ ಮಕ್ಕಳು ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಸಂಭ್ರಮವನ್ನು ಸೃಷ್ಟಿಸುತ್ತಲೇ ಇರುತ್ತಾರೆ.

ತವರು ಮನೆಯಿಂದ ಹೊರಟ ಹೆಣ್ಣು ಮಕ್ಕಳಿಗೆ ತವರನ್ನು ಬಿಟ್ಟ ನೋವು ಅವರು ತೊಟ್ಟ ಬಣ್ಣಬಣ್ಣದ ಸೀರೆ-ಕುಪ್ಪುಸಗಳ ರಂಗಿನಲ್ಲಿ ಮಾಸಿ ಹೋಗುತ್ತದೆ, ಹೊಸ ಮನೆಯಲ್ಲಿ ಹಾಗಿರಬೇಕು, ಹೀಗೆ ಮಾಡಬೇಕು ಎನ್ನುವ ಆಲೋಚನೆ ತುಂಬಿಕೊಂಡಿರುತ್ತದೆ. ಆಟವಾಡುವ ಮಕ್ಕಳೇನೋ ಜೋಕಾಲಿ ಜೀಕಿಕೊಂಡು ಹಾಯಾಗಿ ಇದ್ದರೆ ಬರೋ ಪುಷ್ಯಾ, ಆಶ್ಲೇಷ ಮಳೆಗಳೋ ಹೇಗೋ, ಈ ವರ್ಷಾನಾದ್ರೂ ಕೆರೆ ತುಂಬಿ ಕೋಡಿಬಿದ್ದಿದ್ದ್ರೆ ಎನ್ನುವ ಆಲೋಚನೆಯ ಗೆರೆ ಹಿರಿಯರ ಮುಖದಲ್ಲಿ ಕಂಡು ಬರುತ್ತದೆ. ಇವರ ನಲಿವಿನ ಹಿಂದುಗಡೆ ಮೊನ್ನೆ ಮೊನ್ನೆ ಬಂದು ಹೋದ ಅಮಾವಾಸ್ಯೆಯ ನೆರಳು ಸ್ವಲ್ಪವಾದರೂ ಇದೆ, ಇನ್ನೇನು ಹತ್ತೇ ದಿನಗಳಲ್ಲಿ ನೂಲು ಹುಣ್ಣಿಮೆ ಬರಬಹುದಾದರೂ ಐದು ದಿನಗಳ ಹಿಂದಿನ ಕತ್ತಲೆ ಹತ್ತು ದಿನಗಳ ನಂತರ ಬರುವ ಬೆಳಕಿನ ಮುಂದೆ ಮೆರೆದಂತೆ ಅನ್ನಿಸುತ್ತದೆ.

ನಿಮ್ಮನೆಗಳೆಲ್ಲೆಲ್ಲ ಹೇಗೋ ಏನೋ, ನಮ್ಮನೆಗಳಲ್ಲಿ ನಾವು ಬಲವಂತವಾಗಿ ಜೋಕಾಲಿ ಕಟ್ಟಿಸಿಕೊಳ್ಳುತ್ತಿದ್ದೆವು, ಅತ್ತೋ-ಕರೆದೋ ಇನ್ನೊಂದೋ ಮಾಡಿ. ಏನಿಲ್ಲವೆಂದರೂ ಕೊನೇಪಕ್ಷ ಎರಡು ರೀತಿಯ ಉಂಡೆಗಳನ್ನಾದರೂ ಮನೆಯಲ್ಲಿ ಮಾಡಿದ್ದರೆ, ಮೆಷ್ಟ್ರು ಮಕ್ಕಳಾದ್ದರಿಂದ ನಮ್ಮ ಅಪ್ಪ-ಅಮ್ಮ ಶಾಲೆ ಬಿಟ್ಟು ಬರೋವಾಗ ಏನಿಲ್ಲವೆಂದರೂ ಹತ್ತಿಪ್ಪತ್ತು ತರದ ಉಂಡೆಗಳನ್ನಾದರೂ ತರುತ್ತಿದ್ದರು, ಅಂಟುಂಡೆ, ಸುಕ್ಕಿನುಂಡೆ, ಶೇಂಗಾಉಂಡೆ, ರವೆಉಂಡೆ, ಮಂಡಕ್ಕಿ ಉಂಡೆ, ಎಳ್ಳುಂಡೆ, ಕೊಬ್ಬರಿ ಉಂಡೆ...ಹೀಗೆ ಹಲವಾರು ಬಗೆಯ ಉಂಡೆಗಳು - ತಿನ್ನುವ ಪದಾರ್ಥಗಳನ್ನೆಲ್ಲ ಬೆಲ್ಲದ ಪಾಕದಲ್ಲಿ ಹಾಕಿ ಅಂಟದಂತೆ ಹದಕ್ಕೆ ಬಂದಮೇಲೆ ಉಂಡೆ ಕಟ್ಟುವ ಪೈಪೋಟಿಗೆ ಉತ್ತರದಂತೆ. ಆದರೆ ಪಂಚಮಿ ಹಬ್ಬವೆಂದರೆ ಅದರಲ್ಲಿ ತಲೆಮಾರಿನಿಂದ ತಲೆಮಾರಿಗೆ ಬೆಳೆದುಬಂದ ಒಂದು ಸಂದೇಶವೂ ಇತ್ತು, ಅದೇ ನಾಗನಿಗೆ ಹಾಲೆರೆಯುವುದು.

ನಮ್ಮೂರ ಪೋಲೀಸ್ ಸ್ಟೇಷನ್ ಆವರಣದಲ್ಲಿ ಇರೋ ಹಾಗೆ ಒಂದು ದೊಡ್ಡ ಹುತ್ತವಿತ್ತು, ಅಲ್ಲಿಗೆ ಊರಿನವರು ಹೆಚ್ಚಿನ ಪ್ರಮಾಣದಲ್ಲಿ ಹೋಗಿ ಹಾಲನ್ನೆರೆದರೆ ನಾವು ನಮ್ಮ ಮನೆಯಲ್ಲಿಯೇ ಒಂದು ಬೆಳ್ಳಿಯ ನಾಗನಿಗೆ ಹಾಲನ್ನೆರೆಯುತ್ತಿದ್ದೆವು. ನಾನು ಪೋಲೀಸ್ ಸ್ಟೇಷನ್ ಆವರಣದಲ್ಲಿರೋ ಹುತ್ತದಲ್ಲಿ ನಾಗನ್ನೆಂದೂ ನೋಡಿದ್ದಿಲ್ಲ, ಆದರೂ ಅಲ್ಲಿ ಹಾವಿನ 'ನಡೆ' ಇದೆ ಎಂದು ಬಲ್ಲವರು ಹೇಳಿದ್ದನ್ನು ಕೇಳಿದ್ದೇನೆ. ಕನ್ನಡದ ಕವಿ ಹೇಳೋ ಹಾಗೆ 'ಉಳ್ಳೆಯದು ಉಳ್ಳೆಯೇ ಕಾಳಿಯ ನಾಗ ನಾಗಲಾರದು...' ಎಂಬಂತೆ ನಮ್ಮ ಮನೆಯ ಐದು ಇಂಚು ಎತ್ತರದ ಬೆಳ್ಳಿಯ ನಾಗ ನಿಜವಾದ ನಾಗ ನೆಂದೂ ಆಗಿದ್ದಿಲ್ಲ, ಗಣಪತಿಯಂತೆ ಹಾಲನ್ನೆಂದೂ ಹೀರಿದ್ದಿಲ್ಲ, ಆದರೂ ನಾವು ಪ್ರತೀ ವರ್ಷ, ಇದ್ದವರು, ಇಲ್ಲದವರು ಎಲ್ಲರ ಹೆಸರಿನಲ್ಲಿ - 'ಅಮ್ಮನ ಪಾಲು, ಅಪ್ಪನ ಪಾಲು, ಅಣ್ಣನ ಪಾಲು...' ಎಲ್ಲವನ್ನೂ ನಾಗನ ತಲೆಗೆ ಅರ್ಪಿಸುತ್ತಿದ್ದೆವು. ಅಪರೂಪಕ್ಕೆ ಒಮ್ಮೆ ಅವರಿವರ ಮನೆಯಲ್ಲಿ ನಿಜವಾದ ನಾಗ ಬಂದು ಹಾಲನ್ನು ಹೀರಿದ ಕಥೆಯೂ ಕೇಳಿ ಬರುತ್ತಿತ್ತು. ಇದು ಬಹಳ ಭಕ್ತಿ ಹಾಗೂ ಸಂಭ್ರಮದ ವಿಷಯ ನಮಗೆಲ್ಲರಿಗೂ. ನಮ್ಮ ಮನೆಯ ಹಿತ್ತಿಲಿನಲ್ಲಿ ಇದ್ದ ಬಾವಿಯ ಕಟ್ಟೆಯ ಹತ್ತಿರ ಒಂದು ನಾಗನ ಮೂರ್ತಿ ಇದೆ, ನಮ್ಮ ಮನೆಯವರ ಪ್ರಕಾರ ಅಲ್ಲೂ ನಾಗನ ನೆಡೆಯಿದೆ, ನಾಗನನ್ನು ನಾವು ಯಾವಾಗಲೂ ಪೂಜಿಸಬೇಕು, ಗೌರವಿಸಬೇಕು ಇತ್ಯಾದಿ, ಇತ್ಯಾದಿಗಳು ಪದೇಪದೇ ಕೇಳಿ ಬಂದು ನಮ್ಮ ಮನದಲ್ಲಿ ಭಕ್ತಿ, ಗೌರವ ಹಾಗೂ ಹೆದರಿಕೆಗಳನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಅಲ್ಲಲ್ಲಿ ಒಂದಿಷ್ಟು ಓದಿ ತಿಳಿದುಕೊಂಡ ಮೇಲೆ, ಇಲ್ಲಿಗೆ ಬಂದ ನಂತರ ಡಿಸ್ಕವರಿ ಚಾನೆಲ್‌ನಲ್ಲಿ ಸ್ಟೀವ್ ಇರ್ವಿನ್‌ನ ಹಾವನ್ನಾಧರಿಸಿದ ಕಾರ್ಯಕ್ರಮಗಳನ್ನು ನೋಡಿದ ಮೇಲೆ, ನಾಗನ ಇತಿ-ಮಿತಿಗಳು ಅರಿವಿಗೆ ಬಂದರೂ, ರಾಮಾಚಾರಿ ಹಾಡಿದ 'ಹಾವಿನ ದ್ವೇಷ ಹನ್ನೆರಡು ವರುಷ...' ಹಾಡು ಮನದಲ್ಲಿ ಘರ್ಷಣೆಯನ್ನು ಸೃಷ್ಟಿಸಿದರೂ ನನಗೆ ನಾಗನ ಮೇಲೆ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಕೊನೇಪಕ್ಷ ಏನಿಲ್ಲವೆಂದರೂ ನಮ್ಮೂರಿನ ರೈತರಿಗೆ ರಾತ್ರಿ ಹೊತ್ತು ಜಮೀನಲ್ಲಿ ಉಪದ್ರವ ಕೊಡುವ ಇಲಿಗಳ ಕಾಟವನ್ನು ಹತೋಟಿಯಲ್ಲಿಡಲು ಸಹಾಯವಾಗುವ, ಆಹಾರ ಸರಪಳಿಯಲ್ಲಿ ಮುಖ್ಯ ಸ್ಥಾನದಲ್ಲಿರುವ ಈ ಸರೀಸೃಪಗಳ ಮೇಲೆ ನನಗೆ ಯಾವಾಗಲೂ ಗೌರವವಿದ್ದೇ ಇರುತ್ತೆ.

ಇಲ್ಲಿನ ಪಾರ್ಕಿನಲ್ಲಿ, ಅಥವಾ ಉಳ್ಳವರ ಮನೆಗಳ ಹಿತ್ತಲಿನಲ್ಲಿ ಸದಾ ತೂಗುಬಿದ್ದಿರೋ ಕಬ್ಬಿಣದ ಸರಪಳಿಯ ಜೋಕಾಲಿಗಳಲ್ಲಿ ನಮ್ಮೂರಿನ ನಾರು ಹಗ್ಗದ ಗರಿಗರಿತನವಿಲ್ಲ, ತೆಂಗಿನ ನಾರಿನ ಹಗ್ಗದಿಂದ ಮಾಡಿ, ಮಾಡಿನ ಮರಕ್ಕೆ ತೂಗುಬಿದ್ದ ಕುಣಿಕೆಗಳಲ್ಲಿ, ಗೋಣಿಚೀಲದ ಆಸನದಲ್ಲಿ ಜೀಕೋ ಮಕ್ಕಳಲ್ಲಿ ಕಾಣೋ ಸ್ವಾಭಾವಿಕ ಸಂಭ್ರಮ ಇಲ್ಲಿನ ಮಕ್ಕಳಲ್ಲಿ ನಾನು ನೋಡಿಲ್ಲ, ಅಲ್ಲಿನ ವರ್ಷಕ್ಕೊಮ್ಮೆ ಬರುವ ಜೋಕಾಲಿ ಹಬ್ಬದ ಸಂಭ್ರಮದ ಮುಂದೆ ಇಲ್ಲಿನ ವರ್ಷದ ಬಿಸಿಲಿನ ದಿನಗಳಲ್ಲೆಲ್ಲ ಸಿಗುವ ಜೋಕಾಲಿ ಜೋರು ಏನೇನೂ ಇಲ್ಲ.

ಇಲ್ಲಿನ ಕಬ್ಬಿಣದ ಸರಪಳಿಗಳು ಸವೆಯುತ್ತವೆಯೋ ಬಿಡುತ್ತವೆಯೋ ಅಲ್ಲಿ ನಾವು ಬೆಳೆದಂತೆ ಮಾಡಿನಿಂದ ತೂಗುಬಿಡುವ ಎಳೆಗಳು ಸವೆದು ಕೃಶವಾಗುತ್ತಿದ್ದವು, ನಾವು ನಮ್ಮ ಕಿರಿಯರಿಗೆ ಜೋಕಾಲಿ ಕಟ್ಟಿಕೊಡುವ ಪರಂಪರೆ ಎಂದಿಗೂ ಮುಂದುವರೆಯುತ್ತಿತ್ತು.

Wednesday, July 26, 2006

ಮತ್ತೊಂದ್ ಎಲೆಕ್ಷನ್‌ಗೆ ತಯಾರಾಗೋಣ್ವಾ ಹೇಗೆ?

ಕುಮಾರಸ್ವಾಮಿಯ ಗತ್ತು ಗೈರತ್ತು ಸ್ವಲ್ಪ ಮೆತ್ತಗೆ ಆದಂಗೆ ಕಾಣ್ಸುತ್ತೆ, ಅವರು ಗಣಿಯಿಂದ ಅಗಿದ ಮಣ್ಣೆಲ್ಲ ಮೈ ಮೇಲೆ ಬಿದ್ದಷ್ಟು ಕುಬ್ಜರಾಗಿ ಹೋಗಿರೋದು ಅಲ್ಲಲ್ಲಿ ಕಂಡ ಫೋಟೋಗಳಲ್ಲೂ ಗಮನಕ್ಕೆ ಬರುತ್ತೆ. ರಾಜ್ಯಪಾಲ ಚತುರ್ವೇದಿ ಕೊಟ್ಟಿರೋ ವರದಿಯಲ್ಲಿ ಏನಿರುತ್ತೋ ಬಿಡುತ್ತೋ, ನಮ್ಮ್ ಜನ ಅಂತೂ ಕುಮಾರಸ್ವಾಮಿ ಹಾಗೂ ಅವರ ಸರ್ಕಾರದ ಮೇಲೇನೇ ವಿಶ್ವಾಸ ಕಳಕಂಡೋರ್ ಹಾಗೆ ಕಾಣುಸ್ತಾರೆ.

ಒಂದ್ ಕಡೆ ದೇವೇಗೌಡ್ರು ಮಗನ ಸಪೋರ್ಟಿಗೆ ಬಂದಿರೋ ಹಾಗೆ ಹೇಳಿಕೆ ಕೊಡ್ತಾ ಇದ್ದಾರೆ, ಅವರ ಐದು ದಶಕಗಳ ರಾಜಕೀಯ ಅನುಭವವನ್ನೂ ಕೆಲಸಕ್ಕೆ ಹಚ್ಚಿದ ಹಾಗೆ ಕಾಣ್ಸುತ್ತೆ. ಅವರು ಮಾಡ್ತಾ ಇರೋ ತಪ್ಪು ಏನು ಅಂದ್ರೆ ನೇರವಾಗಿ ಬಿಜೆಪಿಯೋರ್ನ ಬೈಯ್ಯೋದು, ಅವರ ಬಗ್ಗೆ ಆಡಿಕೊಳ್ಳೋದು. ಒಂದ್ ಕಡೆ ಕಾಂಗ್ರೇಸ್‌ನವರು ಹಳೆ ದ್ವೇಷಾ ತೀರಿಸಿಕೊಳ್ಳೋ ಹಾಗೆ ಕಾಣ್ತಿದ್ದಾರೆ, ಮತ್ತೊಂದ್ ಕಡೆ ತಮ್ಮ ದಳದ ಬಣಗಳಲ್ಲೇ ಒಡಕು ಬರ್ತಾ ಇರೋದು ದೊಡ್ಡ ಗೌಡರಿಗಂತೂ ಬಾಳಾ ಕಷ್ಟವಾಗಿ ಹೋಗಿದೆ. ಏನು ಮಾಡೋದು ಅವರು ಬೈದು ಬಿಸಾಕೋಕೇ ಇತ್ಲಾಗೆ ಸಿದ್ಧರಾಮಯ್ಯನೂ ಇಲ್ಲ, ಅತ್ಲಾಗೆ ಹೆಗಡೆಯೂ ಇಲ್ಲ!

ದೊಡ್ಡ ಗೌಡ್ರು ಬಿಜೆಪಿಯವರ್ನ ಅಂದುಕಂಡಂಗೆಲ್ಲ, ಮರಿಗೌಡ್ರು ಅದೆಲ್ಲ ಸರಿ ಅಲ್ಲ, ದೊಡ್ಡೋರ್ ಹೇಳಿದ್ ಮಾತ್ನೆಲ್ಲ ಕೇಳ್ ಬೇಡಿ ಅಂತ ಓಪನ್ ಆಗೆ ಹೇಳ್ಕೆ ಕೊಡ್ತಾ ಇರೋದ್ ನೋಡಿದ್ರೆ, ಇಂಥದ್ದರಲ್ಲೆಲ್ಲ ಬಹಳಷ್ಟ್ ಪಳಗಿರೋ ಅಪ್ಪನಿಗೆ ಮುಂದೆ ಏನಾಗುತ್ತೆ ಅನ್ನೋದು ಚೆನ್ನಾಗಿ ಗೊತ್ತಾಗಿ ಮಗನನ್ನ ರಕ್ಷಣೆ ಮಾಡೋಣ ಅಂತ ಅಪ್ಪ ಬಂದ್ರೆ, ಮಗನಿಗೆ ನಮ್ ಉಸಾಬರಿಗೆ ನೀವ್ ಬರಬೇಡಿ, ನಾವೇನಾದ್ರೂ ಮಾಡಿಕೊಳ್ತೀವಿ ಅಂತ ಹೇಳೋ ಉಮ್ಮೇದು ಬಂದ ಹಾಗೆ ಕಾಣ್ಸುತ್ತೆ.

ನಮ್ಮ್ ಜನ ಸ್ವಲ್ಪ ಮಟ್ಟಿಗಾದ್ರೂ ವಿಶ್ವಾಸ್ ಇಟ್ಟಿದ್ರು ಕುಮಾರ್‌ಸ್ವಾಮೀ ಮೇಲೆ. ಒಂದ್ ಥರಾ ಶಂಕರ್‌ದಯಾಳ್ ಶರ್ಮ್‌ರ ರೀತಿ ನಡೆಯೋ ಧರಮ್ ಸಿಂಗ್ ಆಡಳಿತದಿಂದ ಬೇಸತ್ತ ಜನ, ಈ ಹೊಸ ಸರ್ಕಾರದ ಮೇಲೆ ಸ್ವಲ್ಪನಾದ್ರೂ ನಿರೀಕ್ಷೆ ಇಟ್ಕೊಂಡಿದ್ರು. ಈ ಮನುಷ್ಯ ಬಂದ್ ಬಂದೋರೆ, ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಸ್ವಲ್ಪಕಾಲ ಹೆಸರು ಮಾಡಿದ್ದಂತೂ ನಿಜ - ಲೈಟ್ ರೇಲು, ನಕ್ಸಲ್ ಸಮಸ್ಯೆಯ ಪುನರ್ ಚಿಂತನೆ, ಹಾಗೂ ಹಲವಾರು ಮುಖ್ಯ ಯೋಜನೆಗಳ ಮೂಲಕ ಮೇಲ್ ಬರಬಹುದಾದ ಅವಕಾಶ ಬಹಳ ಇತ್ತು. ಅವರಿಗಿಂತ ಹಳೆಯ ಸರ್ಕಾರದವರು ಯಾವ್ಯಾವ್ ವಿಷಯಕ್ಕೆ ಗಮನ ಕೊಡಲಿಲ್ಲವೋ ಅದೆಲ್ಲದ್ದಕ್ಕೂ ಗಮನಕೊಡೋ ಹಾಗೆ ಕಂಡ್ ಬಂದ್ರು. ಜೊತೆಯಲ್ಲಿ ಅಗಾಧವಾದ ಹಸಿವು ಇರೋ ಬಿಜೆಪಿ ಶಾಸಕರ ಗುಂಪನ್ನ ಮಡಿಲಲ್ಲಿಟ್ಟಿರೋ ಕೆಂಡದ ಹಾಗೆ ಜೋಪಾನ ಮಾಡಿಕೊಂಡ್ ಹೋಗೋ ಜವಾಬ್ದಾರಿ ಇರೋ ಮನುಷ್ಯ, ಪಾರ್ಟಿ ಈ ರೀತಿ ಹೇಗ್ ಮಾಡೋಕ್ ಸಾಧ್ಯ. ಆರೋಪ ನಿಜಾನೋ ಸುಳ್ಳೋ, ಅದು ನಿಜವಾಗೋದ್ರೊಳಗೆ ಪ್ರತಿಪಕ್ಷದವರು ರಾಜೀನಾಮೆ ಕೊಡಿ ಅಂತ ಏನಾದ್ರೂ ಒತ್ತಾಯ ಮಾಡಿದ್ರೆ, ಅಥವಾ ಕೆಲವು ಶಾಸಕ್ರು ಅಸಮಧಾನ ಅಂತ ಹಿಂದಕ್ ಸರದ್ರೆ - ಇದೆಲ್ಲದರ ಬೆಲೆಯನ್ನ ನಮ್ ಜನ ಯಾಕೆ ಮತ್ತೊಂದ್ ಎಲೆಕ್ಷನ್ ಹೆಸರ್ನಲ್ಲಿ ತೆರಬೇಕು ಅಂತೀನಿ.

ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಒಳ್ಳೇದನ್ನೇ ಮಾಡಿದ್ರು, ದಳ ತಂದುಕೊಡಲಾರದ ಅಧಿಕಾರವನ್ನ ಕಾಂಗ್ರೇಸ್ ಆದ್ರೂ ತಂದ್ ಕೊಡುತ್ತಾ ಅಂತ ನೋಡೋಣ. ಆ ಮನುಷ್ಯನಿಗೆ ಇನ್ನೇನು ಇಲ್ಲ, ಒಂದು ದಿನದ ಮಟ್ಟಿಗಾದ್ರೂ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದು ಅವರ ಆಶಯ ಅಂತ ಎಲ್ಲರಿಗೂ ಗೊತ್ತು.

ನಮ್ ನಿಜವಾದ ಸಮಸ್ಯೆ ಏನೂ ಅಂದ್ರೆ ನಾಯಕರ ಕೊರತೆ. ಈ ಗಣಿ ವಿವಾದ ಹೇಗಾದ್ರೂ ಬೇಕಾದ್ರೆ ಬಗೆ ಹರೀಲಿ, ಆದ್ರೆ ಮುಂದೆ ಬರೋ ಸರ್ಕಾರ ಯಾವ ಪಕ್ಷದ್ದೇ ಆಗಲಿ ಅಲ್ಲಿ ಯಶಸ್ವಿಯಾದ ನಾಯಕರು ಯಾರು? ಪಕ್ಷಕ್ಕೆ ಸರಿಯಾದ ನಾಯಕ, ರಾಜ್ಯಕ್ಕೆ ಸರಿಯಾದ ಆಡಳಿತಗಾರರು ಇಲ್ದೇ ಹೋದ್ರೆ ನಮ್ ಕರ್ನಾಟಕದ ಗತಿ ಏನೂ ಅಂತ ಒಮ್ಮೆ ಊಹಿಸಿಕೊಂಡಾಗಿನಿಂದ ಹೆಸರಿಕೆಯಾಗತೊಡಗುತ್ತೆ. ಸುಮ್ನೇ ಸೇಡ್ ತೀರಿಸ್‌ಕೊಳ್ಳೋಕೋ ಅಥವಾ ತಮ್ಮ ಬೇಳೇ ಬೇಯಿಸ್‌ಕೊಳ್ಳೋಕೋ ಲಂಚದ ಆರೋಪ ಹೊರಿಸಿದೋರ ಆಟ ಬಿಟ್ಟು ನಿಜವೇನಾದ್ರೂ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಏನಾದ್ರೂ ಆಯ್ತು ಅಂತಂದ್ರೆ ಅದೇ ಜನಗಳಿಗೆ ಸಿಗೋ ಜಯ. ಇಲ್ಲಾ ಅಂತ ಅಂದ್ರೆ ಮುಂದೆ ಬರೋ ಒಂದೇನು ಹತ್ತು ಚುನಾವಣೆಯಿಂದ್ಲೂ ಯಾವ ಅನುಕೂಲಾನೂ ಆಗೋದಿಲ್ಲ. ಆರೋಪ, ಪ್ರತ್ಯಾರೋಪಗಳಿಂದ ಜನ ಅಧಿಕಾರ ಕಳಕೊಂಡ ಹಾಗೆ ಜೈಲೂ ಸೇರಿದ್ರೆ ಇವತ್ತು ಅದರ ಕಥೇನೇ ಬೇರೆ ಇರ್ತಿತ್ತು.

Tuesday, July 25, 2006

ಕನ್ಸಲ್‌ಟೆಂಟುಗಳು ಅಂದ್ರೆ ಹಿಂಗಿರಬೇಕು!

ಇನ್ಯಾರನ್ನ ನೋಡಿ ಬರ್ದಿರೋದು, ಅದೇ Accenture ನವರನ್ನ! ಈಜಿಪ್ಟಿನ ಪಿರಮಿಡ್ ಇರ್ಲಿ, ಬರ್ಲಿನ್ ಗೋಡೇನೇ ಇರ್ಲಿ ಯಾವ್ದುನ್ ತೋರಿಸಿದ್ರೂ ಎಲ್ಲಾ ನಮ್ಮ್ ಪ್ರಾಸೆಸ್ಸಿಂದ್ಲೇ ಅಂತಾರಲ್ಲ ಇನ್ನೇನ್ ಮಾಡೋದು ಇಂಥೋರನ್ನ ಕಟ್ಗೊಂಡು?

***

ನಾನು ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ವರ್ಷ ಕನ್ಸಲ್‌ಟಂಟ್ ಆಗಿಯೂ ಇನ್ನಾರು ವರ್ಷ ಎಂಪ್ಲಾಯಿ ಆಗಿಯೂ ದುಡಿದು ಎರಡೂ ಲೋಕದ ಸುಖ ದುಃಖಗಳನ್ನು ಕಂಡೋನು. ಆಗ ಹೆಚ್ಚಿನ ನನ್ ಸ್ನೇಹಿತರು ಎಲ್ಲರೂ ಸಾಧ್ಯವಾದಷ್ಟು ಟಾಪ್ ೫ ಕಂಪನಿಗಳಲ್ಲಿ - ಅವೇ ಕೆಪಿಎಮ್‌ಜಿ, ಆಂಡೆರ್‌ಸನ್/ಅಕ್ಸೆಂಚರ್, ಪ್ರೈಸ್‌ವಾಟರ್‌ಕೂಪರ್, ಇತ್ಯಾದಿ - ಕೆಲಸ ಮಾಡಿಕೊಂಡು ಹೆಸರು ತಗೋಬೇಕು ಎಂದು ಹವಣಿಸುತ್ತಿದ್ದರು, thank goodness ನನಗೆ ಆ ಭಾಗ್ಯ ಬರಲಿಲ್ಲ. ನಾನೊಂದು ಸಣ್ಣ ಕಂಪನಿಯಲ್ಲೇ ಇದ್ದೆ. ಆದರೆ ಉಳಿದೆಲ್ಲ ಕಂಪನಿಯವರ ಕನ್ಸಲ್‌ಟೆಂಟ್‌ಗಳ ವ್ಯವಹಾರಕ್ಕೂ ಈ ಟಾಪ್ ೫ ಕಂಪನಿಗಳ ವ್ಯವಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಕೆಳಗೆ ಬರೆಯೋ ವಿಷಯಗಳು ನಾನು ಕಣ್ಣಾರೆ ಕಂಡು ಅನುಭವಿಸಿದ ವಿಷಯಗಳು, ಆದರೆ ಅವು ಈ ಕಂಪನಿಯ ಎಲ್ಲ ಕನ್ಸಲ್‌ಟಂಟುಗಳಿಗೆ ಅನ್ವಯವಾಗಬೇಕೆಂದೇನೂ ಇಲ್ಲ, ಹಾಗೆ ನಾನು ಜನರಲೈಸ್ ಮಾಡುವ ಪ್ರಯತ್ನವನ್ನೂ ಇಲ್ಲಿ ಮಾಡುತ್ತಿಲ್ಲ. ದಯವಿಟ್ಟು ಯಾರೂ ಇಲ್ಲಿ ತಮ್ಮ ಪ್ರತಿಬಿಂಬಗಳನ್ನು ಹುಡುಕಿಕೊಳ್ಳಬಾರದಾಗಿ ವಿನಂತಿ.

***

೨೦೦೪ ರ ಜೂನ್ ೨೧ ನೇ ತಾರೀಖು, ಹೀಗೇ ವ್ಯವಹಾರದ ನಿಮಿತ್ತ ಆರ್ಲಿಂಗ್ಟನ್ ಆಫೀಸಿಗೆ ಹೋಗಿದ್ದೆ, ಅಲ್ಲಿ ನಮ್ಮ ಆರ್ಡರ್ ಪ್ರಾಸೆಸಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳೋದಿತ್ತು. ನಾನು ಅದುವರೆಗೆ SQL Server ಉಪಯೋಗಿಸಿರಲಿಲ್ಲವಾದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ಹೊಸತಾಗಿದ್ದರೂ ಬೇರೆ RDBMS ಗಳಿಗಿಂತ ಭಿನ್ನವೇನೂ ಅಲ್ಲದಿದ್ದುದರಿಂದ ಅದನ್ನು ಕಲಿಯಲು ಹೆಚ್ಚಿಗೆ ಸಮಯವೇನೂ ಬೇಕಾಗಿರಲಿಲ್ಲ. ಆ ವಾರ ಅಕ್ಸೆಂಚರ್ ಕನ್ಸಲ್‌ಟೆಂಟ್ ಒಬ್ಬ ಈ ಪ್ರಾಜೆಕ್ಟಿನ ಕೆಲಸವನ್ನು ಬಿಟ್ಟು ಬೇರೆ ಪ್ರಾಜೆಕ್ಟಿಗೆ ಹೋಗುತ್ತಿದ್ದುದರಿಂದ ಇದ್ದ ಅಲ್ಪಸ್ವಲ್ಪ ಸಮಯದಲ್ಲೇ ಸಾಧ್ಯವಾದಷ್ಟು ತಿಳಿದುಕೊಳ್ಳುವ ಸವಾಲು ನನ್ನದಾಗಿತ್ತು. ತಂತ್ರಜ್ಞಾನಕ್ಕಿಂತಲೂ ಮಾಡುವ ಕೆಲಸದ ಹಿಂದಿನ ಬ್ಯುಸಿನೆಸ್ ಪ್ರಾಸೆಸ್ಸುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿತ್ತು ಹಾಗೂ ಅದು ಕ್ಲಿಷ್ಟಕರವಾಗಿತ್ತು. ಆ ಕನ್ಸಲ್‌ಟೆಂಟ್ ಆರ್ಡರ್ ಪ್ರಾಸೆಸ್ಸಿಂಗ್ ಸಿಸ್ಟಂ ಬಗ್ಗೆ ವಿವರಿಸುತ್ತಾ ಎಲ್ಲವನ್ನೂ ನೀರು ಕುಡಿದವರ ಹಾಗೆ ಹೇಳುತ್ತಾ ಬಂದಿದ್ದನ್ನೂ, ನಾನು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರವನ್ನುಕೊಡುತ್ತಿದ್ದುದನ್ನೂ ನಾನು ಗುರುತಿಸಿಕೊಂಡೆ, ಆದರೆ ಮಾತಿನ ಮಧ್ಯೆ ಆತನೇ ಅದರ ಹಿಂದಿನ ರಹಸ್ಯವನ್ನು ಹೇಳಿಬಿಟ್ಟನು. ಅವನು ಈ ಪ್ರಾಜೆಕ್ಟಿನ ಮೇಲೆ ಅಫಿಷಿಯಲ್ ಆಗಿ ಕೆಲವೇ ತಿಂಗಳು ಕೆಲಸ ಮಾಡಿದ್ದರೂ ಆತನಿಗೆ ಅವನ ಕಂಪನಿಯಲ್ಲಿ ನಮ್ಮ ಕಂಪನಿಯ ವ್ಯವಹಾರ ವಿಷಯಗಳ ಬಗ್ಗೆ ನಮ್ಮ ಕಂಪನಿಯನ್ನು ಸೇರುವುದಕ್ಕೆ ಮೊದಲೇ ತರಬೇತಿ ದೊರೆತಿತ್ತೆಂತಲೂ, ನಮ್ಮ ಕಂಪನಿಯ ಡೇಟಾಬೇಸುಗಳು, ಸರ್ವರ್, ಫೈಲುಗಳ ಯಥಾನಕಲುಗಳು ಅವರ ಕಂಪನಿಯಲ್ಲೂ ಇದ್ದು, ಅದರ ಮೂಲಕ ನಮ್ಮ ಆಫೀಸಿನೊಳಗೆ ಕಾಲಿಡುವುದಕ್ಕೆ ಮೊದಲೇ ಅವರಿಗೆಲ್ಲ ಗೊತ್ತಿರುತ್ತದೆಂತಲು ತಿಳಿದು ಹೋಯಿತು.

ಅಲ್ಲದೇ, ಇಂಥ ಕನ್ಸಲ್‌ಟೆಂಟ್ ಪ್ರತಿಯೊಬ್ಬರ ಬಳಿಯೂ ಒಂದೊಂದು ಲ್ಯಾಪ್‌ಟಾಪ್ ಇದ್ದು, ನಮ್ಮ ಆಫೀಸಿನ್ ಇ-ಮೇಲುಗಳನ್ನು ತಮ್ಮ ಆಕ್ಸೆಂಚರ್ ವಿಳಾಸಕ್ಕೆ ಕಳಿಸಿಕೊಳ್ಳುವುದೇನು, ಅವರು ತಮ್ಮ-ತಮ್ಮಲೇ AOL ಮೆಸ್ಸೆಂಜರ್‍ ಮೂಲಕ ಹಾಗೂ ಅಲ್ಲಲ್ಲಿ ಗುಂಪುಗೂಡಿ ಚರ್ಚಿಸಿ ಸ್ಟ್ರ್ಟಾಟೆಜಿಯನ್ನು ಸಿದ್ಧಪಡಿಸುವುದೇನು, ಇವೆಲ್ಲವೂ ಬಹಳ ವ್ಯವಸ್ಥಿತವಾಗಿ ನಡೆಯುತ್ತಲೇ ಬಂದಿದೆ. ಇವೆಲ್ಲಕ್ಕೂ ಹೆಚ್ಚಾಗಿ ಪ್ರತಿಯೊಂದು ಆಕ್ಸೆಂಚರ್ ಕನ್ಸಲ್‌ಟೆಂಟ್ ಗುಂಪಿಗೆ ಒಬ್ಬೊಬ್ಬ ಬಿಸಿನೆಸ್ ಮ್ಯಾನೇಜರ್ ಇದ್ದು, ಈ ಮನುಷ್ಯನಿಗೆ ನಮ್ಮ ಕಂಪನಿಯ ದೊಡ್ಡ-ದೊಡ್ಡ ಎಕ್ಸಿಕ್ಯೂಟಿವ್‌ಗಳ ಸಂಪರ್ಕವಂತೂ ಬೇಕಾದಷ್ಟಿರುತ್ತದಾದ್ದರಿಂದ ನನ್ನಂತಹ ಎಂಪ್ಲಾಯಿಗಳಿಗೆ ತಲುಪಬೇಕಾದ ಸುದ್ದಿಗಳು ಈ ಕನ್ಸಲ್‌ಟೆಂಟುಗಳಿಗೆ ಯಾವತ್ತೋ ತಲುಪಿರುತ್ತದೆ!

ಮೊದಲೆಲ್ಲ, ಈ ಆಕ್ಸೆಂಚರ್ ಕನ್ಸಲ್‌ಟೆಂಟುಗಳು ಯಾವತ್ತೂ ನನಗಿಂತ ಟೆಕ್ನಾಲಜಿಯಲ್ಲಿ ಒಂದು ಹೆಜ್ಜೆ ಮುಂದೇ ಇರುತ್ತಿದ್ದರು, ಅವರ ಲ್ಯಾಪ್‌ಟಾಪ್‌ಗಳು, ಅದರಲ್ಲಿರುವ ಸಾಫ್ಟ್‌‌ವೇರ್‌ಗಳು ಯಾವತ್ತೂ ಇತ್ತೀಚಿನವಾಗಿರುತ್ತಿದ್ದವು, ಆದರೆ ನಮ್ಮ ಕಂಪನಿಯಲ್ಲಿ ಇತ್ತೀಚೆಗೆ ತೆಗೆದುಕೊಂಡ ಹೊಸ ಇನಿಷಿಯೇಟಿವ್ ಪ್ರಕಾರ ಈಗ ನಮಗೂ ಹೊಸತರ ಸೌಲಭ್ಯವಿದ್ದು, ಒಂದು ಸಣ್ಣ ಗ್ಯಾಪ್ ಮುಚ್ಚಿದಂತಾಗಿದೆ. ನಾವು ಎಂಪ್ಲಾಯಿಗಳಿಗೆ ಯಾವತ್ತಿದ್ದರೂ ಚೈನ್ ಆಫ್ ಕಮ್ಯಾಂಡ್ ಪಾಲಿಸುವಂತೆ ಸೂಚಿಸಲಾಗುತ್ತೆ, ಆದರೆ ಈ ಕನ್ಸಲ್‌ಟಂಟುಗಳ ಮಾತು ಬಹಳಷ್ಟು ದೂರ ಬೆಳಕಿನ ವೇಗದಲ್ಲಿ ಹೋಗುತ್ತದೆ. ಇವರುಗಳೆಲ್ಲ ಒಟ್ಟುಗೂಡಿಕೊಂಡು ಇನ್ನೊಬ್ಬರಿಗೆ ಕೈ ಮಾಡಿ ತೋರಿಸುವಂತಹ ಹಲವಾರು ಸನ್ನಿವೇಶಗಳನ್ನು ನಾನು ನೆನಪಿಸಿಕೊಳ್ಳಬಲ್ಲೆ.

ಇನ್ನೂ ಬೇಸರ ತರಿಸುವ ಸಂಗತಿಯೆಂದರೆ, ಅದು ಒರಿಜಿನಲ್ ಪ್ರಾಜೆಕ್ಟ್ ಪ್ಲಾನಿರಬಹುದು, ಅಥವಾ ಒಂದು ಡಾಕ್ಯುಮೆಂಟಿರಬಹುದು ನಾವು ಕೇಳಿದರೆ 'ಕೊಡುವುದಿಲ್ಲ' ಎಂಬ ಅರ್ಥ ಬರುವ ಪರ್ಯಾಯವಾದ ಉತ್ತರ ಸಿಗುತ್ತದೆ, ಅದೇ ನಮ್ಮ ಬಳಿಯಲ್ಲಿ ಏನಾದರು ಮಾಹಿತಿ ಇದ್ದರೆ ಇವರುಗಳು ಅದನ್ನು ಕಿತ್ತುಕೊಳ್ಳುವ ಪರಿಯನ್ನು ನೋಡಬೇಕು.

ಹೀಗೆ ನಮ್ಮಲ್ಲಿನ ಎಷ್ಟೋ ಡೇಟಾಬೇಸುಗಳು, ಸರ್ವರ್‌ಗಳು, ಫೈಲುಗಳು ಕಾಪಿಯಾಗಿ ಆಕ್ಸೆಂಚರ್ ಸಿಸ್ಟಂ‌ನಲ್ಲಿ ಕೂತಿರುವುದ್ದನ್ನು ನೋಡಿದ್ದೇನೆ. ಕೆಲವೊಂದು ಕೀ ಪೊಸಿಷನ್ನುಗಳಲ್ಲಿ ಪ್ರೊಪರೈಟರಿ ಹೆಸರಿನಿಂದಲೋ ಅಥವಾ ಯಾವತ್ತೂ ಅಳಿಯದ ಕಾಂಟ್ರಾಕ್ಟ್ ಹೆಸರಿನಿಂದಲೋ ಹದಿನೈದು ವರ್ಷಗಳಿಂದ ಒಂದೇ ಕಡೆಯಲ್ಲಿ ಒಂದೇ ಸಿಸ್ಟಂ ಮೇಲೆ ಕೆಲಸ ಮಾಡುವ ಆಕ್ಸೆಂಚರ್ ಕನ್ಸಲ್‌ಟೆಂಟುಗಳನ್ನು ನಾನು ಹತ್ತಿರದಿಂದ ಬಲ್ಲೆ.

ಅಂದರೆ ನಾನು, ಒಬ್ಬ ಏಕ ವ್ಯಕ್ತಿ ಪಡೆ ಏನನ್ನಾದರೂ ಮಾಡಿ ಸಾಧಿಸುವುದಾದರೆ ನನಗೆ ಇರೋ ಸಂಪನ್ಮೂಲಗಳಲ್ಲಿ, ಇರೋ ಅಡೆತಡೆಗಳನ್ನೆದುರಿಸಿ ಕೆಲಸ ಮಾಡಬೇಕು, ಅದರಲ್ಲಿ ಜಯಗಳಿಸಬೇಕು. ಆದರೆ ನನ್ನ ಪ್ರತಿಯಾಗಿ ನೇರವಾಗಿ ಹೋರಾಟಕ್ಕೆ ನಿಲ್ಲದೇ ಪದೇ-ಪದೇ ನನ್ನನ್ನು ತಮ್ಮ ಜೊತೆ ತೂಗಿಕೊಳ್ಳುವಂತೆ ಮಾಡುವ ಪ್ರತಿಯೊಬ್ಬ ಆಕ್ಸೆಂಚರ್ ಕನ್ಸಲ್‌ಟೆಂಟ್ ಹಿಂದೆಯೂ ಒಂದು ವ್ಯವಸ್ಥಿತ ಜಾಲವಿದೆ, ಹಲವಾರು ತಲೆಗಳಿವೆ ಹಾಗೂ ಅವರಿಗೆ ಬರದದ್ದನ್ನು ತಿಳಿಸುವ ವ್ಯವಸ್ಥೆ ಇದೆ, ತಮ್ಮ ತನವನ್ನು ಕಾಯ್ದುಕೊಳ್ಳುವ ಗುಟ್ಟಿದೆ. ಈ ಕನ್ಸಲ್‌ಟೆಂಟ್‌ಗಳು ಕೆಲಸ ಹಾಗೂ ಮಾತಿನಲ್ಲೂ ಮಹಾ ನಿಪುಣರು ಹಾಗೂ ಜಾಣರು, ಅದರಲ್ಲಿ ಎರಡು ಮಾತಿಲ್ಲ - ಅದರ ಜೊತೆಯಲ್ಲಿ ಒಂದು ವ್ಯವಸ್ಥಿತವಾದ ಯೋಜನೆಯೂ ಸೇರಿ ಒಂದು ರೀತಿ ಬ್ರಿಟೀಷರು ಆಗಿನ ಕಾಲದ ಭಾರತವನ್ನು ಆಳಿದ ಹಾಗೆ ಇವರುಗಳು ತಮ್ಮ ಬೇಳೆ ಕಾಳನ್ನು ಬೇಯಿಸಿಕೊಳ್ಳುತ್ತಲೇ ಇದ್ದಾರೆ.

ಒಂದು ಕಡೆ ಇಂಥ ವ್ಯವಸ್ಥಿತವಾದ ಅಕ್ಸೆಂಚರ್ ಕನ್ಸಲ್‌ಟೆಂಟನ್ನು ನನ್ನ ಬಾಸು ಕೊಂಡಾಡುತ್ತಿದ್ದರೆ ಮತ್ತೊಂದು ಕಡೆ ಹೇಳುವರಿಲ್ಲದೆ ಕೇಳುವರಿಲ್ಲದೇ ಎಷ್ಟೋ ಬಾರಿ ನನ್ನಲ್ಲೇ ನಾನು ಕೊರಗಿದ್ದೇನೆ, ಮರುಗಿದ್ದೇನೆ.

Monday, July 24, 2006

ಮೀಸಲಾತಿ ಸಿಗಬೇಕಾದವರಿಗೆ ಸಿಕ್ಕಿದ್ದರೆ...

ಮೀಸಲಾತಿ ಇಂಥವರಿಗೆ ಸಿಗಬೇಕು, ಅಂಥವರಿಗೆ ಸಿಗಬೇಕು, ಇಂತಿಂಥವರಿಗೆ ಸಿಗಬಾರದು ಎಂದು ಯಾರು ಎಷ್ಟೇ ಲಾಬಿ ಮಾಡಿದರೂ ಕೊನೆಯಲ್ಲಿ ಅದು ತಲುಪಬೇಕಾದವರಿಗೆ ತಲುಪುವ ಹೊತ್ತಿಗೆ ಮತ್ತಿನ್ನೇನೋ ಆಗಿರುತ್ತದೆ. ಒಟ್ಟಿನಲ್ಲಿ ಫಲವನ್ನು ಯಾರನ್ನು ಉದ್ದೇಶದಲ್ಲಿಟ್ಟುಕೊಂಡು ಮಾಡಲಾಗಿದೆಯೋ ಅವರಿಗೂ ಹಾಗೂ ಫಲಾನುಭವಿಗಳಿಗೂ ವ್ಯತ್ಯಾಸವಿದ್ದಾಗ ಮೀಸಲಾತಿ ದೊರಕಿಸಿಕೊಡಬಹುದು ಎನ್ನುವ ಸಾಮಾಜಿಕ ನ್ಯಾಯಕ್ಕೆ ಒಂದು ಅರ್ಥ ಬರೋದಾದರೂ ಹೇಗೆ?

ಸುಮಾರು ೧೯೮೭-೮೮ ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಎರಡು ಟಿಸಿಎಚ್ ಕಾಲೇಜುಗಳಲ್ಲಿ ನನ್ನ ಕಣ್ಣ ಮುಂದೆ ನಡೆದ ಗೊಂದಲ ಇವತ್ತಿಗೂ ನಡೆಯುತ್ತಲೇ ಇದೆ, ಎಷ್ಟೇ ಮೀಸಲಾತಿ ಸೌಲಭ್ಯ ದೊರೆತರು ಅದು ತಲೆಮಾರುಗಳನ್ನು ದಾಟಿ ತಲುಪುವವರಿಗೆ ತಲುಪುವ ಹೊತ್ತಿಗೆ ಹಲವಾರು ವರ್ಷಗಳು ಬೇಕಾಗುವುದಂತೂ ನಿಜ. ೧೯೮೭ ಕ್ಕಿಂತ ಮೊದಲು ಆನವಟ್ಟಿಯಲ್ಲಿ ಟಿಸಿಎಚ್ ಸೇರಬೇಕಾಗಿದ್ದರೆ ಕೇವಲ ಮೆರಿಟ್ ಆಧಾರದ ಮೇಲೆ ಮಾತ್ರ ಸೀಟುಗಳನ್ನು ಹಂಚುತ್ತಿದ್ದರು, ಇಡೀ ಜಿಲ್ಲೆಗೆ ಇರೋದೇ ಎರಡು ಸಂಸ್ಥೆಗಳು, ಒಂದಿರೋದು ಶಿವಮೊಗ್ಗ ಪೇಟೆಯಲ್ಲಿ, ಮತ್ತೊಂದು ಆನವಟ್ಟಿ ಹೋಬಳಿ ಅನ್ನೋ ಕುಗ್ರಾಮದಲ್ಲಿ. ಇವೆರಡೂ ಕಾಲೇಜುಗಳನ್ನು ಸೇರಿಸಿದರೆ ಒಟ್ಟು ನೂರು ಜನರು ಪ್ರತಿವರ್ಷ ಶಿಕ್ಷಕರಾಗಲು ಅರ್ಹತೆ ಪಡೆಯುತ್ತಿದ್ದರು. ಆದರೆ ಟಿಸಿಎಚ್ ಕೋರ್ಸನ್ನು ಮುಗಿಸಿದರೆ ಕೆಲಸ ಸಿಗುವದಂತೂ ಗ್ಯಾರಂಟಿಯಾದ್ದರಿಂದಲೂ ಹಾಗೂ ಹಳ್ಳಿಯ ವಲಯದಲ್ಲಿ ಅತ್ಯಂತ ಪ್ರಭಾವೀ ವೃತ್ತಿಯಾಗಿ ಶಿಕ್ಷಕರನ್ನು ನೋಡುತ್ತಿದ್ದರಿಂದಲೂ ಬಹಳಷ್ಟು ಜನರು ಈ ಕೋರ್ಸುಗಳಿಗೆ ಮುಗಿಬೀಳುತ್ತಿದ್ದರು. ಜನರಲ್ಲಿ ಹೆಚ್ಚಾದ ಬೇಡಿಕೆಯಿಂದಲೂ ಹಾಗೂ ಬದಲಾದ ಶಿಕ್ಷಣ ನಿಯಮಗಳಿಗೆ ತಕ್ಕಂತೆ ಮೊದಲೆಲ್ಲ ಹತ್ತನೇ ತರಗತಿಯನ್ನು ಮುಗಿಸಿದವರಿಗೆ ಸಿಗುತ್ತಿದ್ದ ಟಿಸಿಎಚ್ ಪ್ರವೇಶಕ್ಕೆ ಪಿಯುಸಿಯನ್ನು ಮಾಡುವಂತೆ ಕಡ್ಡಾಯವಾಯಿತು, ಇದೇ ಸಮಯಕ್ಕೆ ಬಂದ ಮೀಸಲಾತಿ ನಿಯಮಗಳಿಗನುಗುಣವಾಗಿ ಟಿಸಿಎಚ್ ಸೀಟುಗಳನ್ನು ಹಂಚಲು ಮೊದಲು ಮಾಡಿದರು.

ನಮ್ಮ ಮನೆಯಲ್ಲಿ ಈಗಾಗಲೇ ಟಿಸಿಎಚ್ ಮಾಡಿ ಒಂದಿಬ್ಬರಾದರೂ ಮೇಷ್ಟ್ರರಾದ್ದರಿಂದ ಹಾಗೂ ನಾವು ಆನವಟ್ಟಿಯಲ್ಲೇ ಇದ್ದುದರಿಂದಲೂ ಮೊದಲಿಂದ ನಮಗೆ ಟಿಸಿಎಚ್ ಶಿಕ್ಷಕರು, ಹಳೆ-ಹೊಸ ವಿದ್ಯಾರ್ಥಿಗಳು ಎಲ್ಲರೂ ಪರಿಚಯವೇ. ಹೀಗೇ ಒಂದು ವರ್ಷ, ಮೀಸಲಾತಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಕಡ್ಡಾಯವಾದ ಮೇಲೆ ಆ ವರ್ಷ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಲು ನಾನೂ ಹೋಗಿದ್ದೆ, ಅಲ್ಲಿ ಬಂದಿದ್ದವರಿಗೆ, ಹಾಗೂ ಟಿಸಿಎಚ್ ನಲ್ಲಿ ಪಾಠಮಾಡುವ ಮೇಷ್ಟ್ರುಗಳಿಗೂ ಆಶ್ಚರ್ಯವಾಗುವಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಲ್ಲಿ (ಪಜಾಪವ) ವಿದ್ಯಾರ್ಥಿಗಳ ಯಾದಿಯಲ್ಲಿ ಜನರಲ್ ಮೆರಿಟ್‌ಗಿಂತಲೂ ಹೆಚ್ಚು ಅಂಕ ತೆಗೆದವರಿದ್ದರು, ಉದಾಹರಣೆಗೆ ಪಜಾಪವ ದಲ್ಲಿ ಕಡಿಮೆ ಎಂದರೆ ೮೫ ಪರ್ಸೆಂಟ್ ಅಂಕಕ್ಕೆ ಸೀಟು ದೊರೆತಿದ್ದರೆ, ಅದು ಜನರಲ್ ಮೆರಿಟ್‌ನಲ್ಲಿ ೭೨ ಕ್ಕೆ ನಿಂತಿತ್ತು. ನಿರೀಕ್ಷೆಗಿಂತಲೂ ಹೆಚ್ಚಾಗಿ ಬಂದ ಅರ್ಜಿಗಳು, ಅದೇ ವರ್ಷ ಅನ್ವಯವಾದ ಹೊಸ ರೀತಿ-ವಿಧಾನಗಳು ಈ ಬದಲಾವಣೆಯನ್ನು ನಂಬಲು ಕಷ್ಟವನ್ನಾಗಿಸಿದ್ದವು. ಜನರಲ್ ಮೆರಿಟ್‌ನಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳು ಟಿಸಿಎಚ್ ಗೆ ಅರ್ಜಿ ಹಾಕುತ್ತಾರೋ ಬಿಡುತ್ತಾರೋ, ಅಥವಾ ಪಜಾಪವ ದವರಲ್ಲಿ ಹೆಚ್ಚು ಅಂಕಗಳನ್ನು ತೆಗೆದವರೆಲ್ಲರು ಟಿಸಿಎಚ್ ಗೆ ಮುಗಿ ಬೀಳುತ್ತಾರೋ ಒಂದಂತೂ ಖಂಡಿತ - ಈ ಮೇಲಿನ ಉದಾಹರಣೆಯಲ್ಲಿ ೮೪ ಪರ್ಸೆಂಟ್ ಅಂಕಗಳನ್ನು ತೆಗೆದ ಪಜಾಪವ ವಿದ್ಯಾರ್ಥಿಗೆ ಸೀಟು ಸಿಗೋದಿಲ್ಲ, ಅಲ್ಲದೇ ಆತ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.

ಮೀಸಲಾತಿ ಕೇವಲ ಜಾತಿಯ ಆಧಾರದ ಮೇಲಿದ್ದರೆ ಮಾತ್ರ ಕೆಲಸ ಮಾಡುವುದಾದರೂ ಹೇಗೆ? ಪ್ರತಿಯೊಂದು ಜಾತಿ, ವರ್ಗಗಳಲ್ಲು ಬಡವರು-ಬಲ್ಲಿದರು ಇದ್ದೇ ಇರುತ್ತಾರೆ, ಯಾವ ವರ್ಗದಲ್ಲೇ ಇರಲಿ, ಖಾಸಗೀ ಟ್ಯೂಷನ್ ಹೇಳಿಸಿಕೊಂಡು, ಸಿಗುವ ಎಲ್ಲ ಸೌಲತ್ತುಗಳಲ್ಲಿ ಸ್ಪರ್ಧೆಗಿಳಿಯುವ ಉಳ್ಳವರಿಗೂ, ಏನೂ ಗತಿ ಇರದೆ ಸುಮ್ಮನೇ ಸ್ಪರ್ಧೆಯಲ್ಲಿ ತಗುಲಿಕೊಳ್ಳುವವರಿಗೂ ಎಲ್ಲಿಯ ಸಮ? ಸರ್ಕಾರದ ವ್ಯವಸ್ಥೆ ಪ್ರತಿವರ್ಷ ಜಾತಿ ಆಧಾರಿತ ಪಟ್ಟಿಯನ್ನು ಬದಲಾಯಿಸುತ್ತದೆಯೇ ವಿನಾ ಜನರ ಆದಾಯವನ್ನು ಪರಿಗಣಿಸಿ ಬಡವರನ್ನು ಎಣಿಸುವುದಿಲ್ಲ. ನಾನು ಸ್ನಾತಕೋತ್ತರ ಪದವಿ ಮುಗಿಸುವವರೆಗೂ ವರ್ಷಕ್ಕೆ ೩೬೦೦ ರೂಪಾಯಿಯ ಆದಾಯದಲ್ಲಿದ್ದೇವೆಂದು ಆದಾಯ ಪತ್ರವನ್ನು ಪಡೆಯುತ್ತಿದ್ದವರು ಎಷ್ಟೋ ಜನರು ನನಗೆ ಗೊತ್ತಿತ್ತು. ಅಂದರೆ ಆಗಿನ ಕಾಲದಲ್ಲೇ ತಿಂಗಳಿಗೆ ಮುನ್ನೂರು ರೂಪಾಯಿ ಆದಾಯ ಯಾವ ಲೆಕ್ಕಕ್ಕೂ ಇರದಿದ್ದಾಗ, ಇಂದಿಗೂ ಕನಿಷ್ಠ ಆದಾಯ ಎಷ್ಟಿದೆಯೋ, ಆದರೆ ಅದಂತೂ ಹಣದುಬ್ಬರಕ್ಕೆ ತಕ್ಕಂತೆ ಬದಲಾಗದೇ ಹೋದರೆ ಅದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ - ದಿನವೂ ತಾಲೂಕ್ ಆಫೀಸುಗಳಲ್ಲಿ ಜನರು ಸುಳ್ಳು ಹೇಳುತ್ತಲೇ ಇರಬೇಕಾಗುತ್ತದೆ.

ವಿದ್ಯಾರ್ಥಿಗಳು ತೆಗೆದ ಅಂಕಗಳ ಮೇಲೆ ಮಾತ್ರವೇ ವ್ಯವಸ್ಥೆಯ ನಿರ್ಣಯವಾಗುವುದಾದರೆ ಬಡತನದಲ್ಲಿ ಬರುವ ಯೋಗ್ಯರನ್ನು ಕಡೆಗಣಿಸಿದಂತಾಗುತ್ತದೆ, ಜಾತಿ ಆಧಾರದಲ್ಲಿ ಮಾಡಿದರೆ ಇನ್ನೇನೋ ಅರ್ಥ ಬರುತ್ತದೆ. ಆದರೆ ಒಂದಂತೂ ನಿಜ, ಎಂಥ ಐಎ‌ಎಸ್ ಆಫೀಸರರ ಮಕ್ಕಳೂ ತಮಗೆ ಅನ್ವಯವಾಗುವ ಎಲ್ಲ ಸೌಲಭ್ಯಗಳನ್ನೂ ಪಡೆದೇ ತೀರುತ್ತಾರೆ, ಲಕ್ಷಾಧೀಶ್ವರರ ಮಕ್ಕಳಿಗೆ ಜಾತಿಯ ಆಧಾರದಲ್ಲಿ ಒಂದು ಸೀಸದ ಕಡ್ಡಿ ಸಿಕ್ಕರೂ ಅದನ್ನು ಅವರು ಹೊಂದೇ ಹೊಂದುತ್ತಾರೆ - ಅದು ಇಲ್ಲೂ ನಿಜ, ಎಲ್ಲೂ ನಿಜ - ನನ್ನ ಸಹೋದ್ಯೋಗಿ ಒಬ್ಬರು ಇತ್ತೀಚೆಗೆ ಹಲವಾರು ಮಿಲಿಯನ್ ಡಾಲರ್‌ಗಳ ಮೊತ್ತವನ್ನು ಪಡೆದು ನಿವೃತ್ತರಾದರು, ತಾನು ಹಲವಾರು ರೀತಿಯಲ್ಲಿ ಉಳಿಸಿದ ಹಣ, ರಿಟೈರ್‌ಮೆಂಟ್ ಹಣ, 401K ಹಣ, ಎಲ್ಲವೂ ಸೇರಿ ಬಹಳಷ್ಟು ಬಂದಿತ್ತು, ಆದರೆ ನಮ್ಮ ಕಂಪನಿಯ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಆಕೆ ತನ್ನನ್ನು ತಾನು ಕೆಲಸದಿಂದ ತೆಗೆಸಿಕೊಂಡ ಹಾಗೆ ಮಾಡಿರೋದರಿಂದ ಇನ್ನೂ ಹಲವು ಹಣಕಾಸಿನ ಅನುಕೂಲವಾಯಿತು, ಇಷ್ಟೆಲ್ಲಾ ಆದರೂ ಆಕೆ ನನ್ನ ಜೊತೆಯಲ್ಲಿ ಮಾತನಾಡುತ್ತಾ ತಾನು Unemployment benefits ಗೆ ಅರ್ಜಿ ಗುಜರಾಯಿಸುತ್ತಿದ್ದೇನೆಂದು ಕೇಳಿ ನನಗೆ ಮೈ ಉರಿದು ಹೋಯಿತು. ಸರ್ಕಾರದ ಬೊಕ್ಕಸದಿಂದ, ತೆರಿಗೆದಾರರು ಕೊಟ್ಟ ಹಣದಲ್ಲಿ ಹತ್ತು ಸಾವಿರ ಡಾಲರ್ ಬರುವುದಾದರೆ ಬರಲಿ ಎಂಬ ಆಸೆ ಅಕೆಯದು. ನಾನು ಪದೇ ಪದೇ ಹಾಗೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರೂ ಆಕೆ ತನ್ನ ನಿಲುವನ್ನೇ 'ನಾನು ಟ್ಯಾಕ್ಸ್ ಕಟ್ಟುವುದಿಲ್ಲವೇ?' ಎಂದು ಸಾಧಿಸಿಕೊಳ್ಳಲು ಆರಂಭಿಸಿದ್ದನ್ನು ಕೇಳಿ ನನಗಂತೂ ಇಷ್ಟು ವರ್ಷಗಳ ಕಾಲ ಆಕೆಯ ಮೇಲೆ ಇಟ್ಟಿದ್ದ ಭರವಸೆಯೇ ಹೊರಟು ಹೋಯಿತು - ಈ ವಿಷಯವನ್ನು ನನ್ನ ಮತ್ತೊಬ್ಬ ಸಹೋದ್ಯೋಗಿಗೆ ಹೇಳಿದೆ, ಆಕೆ ಒಂದೇ ಮಾತಿನಲ್ಲಿ ಅಂದರು - more you have it, more you want.

ಆಗೆಲ್ಲ ಮೀಸಲಾತಿ ಎನ್ನುವುದು ಬೇಡ, ಅಕಸ್ಮಾತ್ ಇದ್ದರೂ ಆದಾಯದ ನೆಲೆಗಟ್ಟಿನ ಮೇಲಿರಲಿ ಎಂದು ವಾದ ಮಾಡುತ್ತಿದ್ದೆ, ಅಂದು ಮಧ್ಯಮ ವರ್ಗದ ನೆಲೆಯಲ್ಲಿ ಅದೇ ಸತ್ಯವೆನಿಸುತ್ತಿತ್ತು, ಈಗ ಪರಿಸ್ಥಿತಿ ಹೇಗಿದೆಯೋ ಯಾರಿಗೆ ಗೊತ್ತು, but you keep me honest here!

Sunday, July 23, 2006

ಮುಖವಾಡಗಳ ಹಿಂದೆ, ಮುಂದೆ

ನಾವೆಲ್ಲರೂ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ, ಸಮಯ ಸಂದರ್ಭಕ್ಕೆ ತಕ್ಕಂತೆ ಮುಖವಾಡಗಳನ್ನು ತೊಟ್ಟುಕೊಳ್ಳುತ್ತೇವೆ. ಅದೂ ಒಂದು ರೀತಿಯ ಪ್ರಯೋಗವೇ, ಮೊದಮೊದಲು ಹೀಗೆ ಮಾಡಿದರೆ ಹೇಗೆ, ಹೀಗಿದ್ದರೆ ಏನಾದೀತು, ಹೀಗಂದರೆ ಏನಾಗುತ್ತೋ ನೋಡೋಣ ಎನ್ನುವ ಚಿಕ್ಕಚಿಕ್ಕ ದಿನನಿತ್ಯದ ಕನ್‌ವೆನ್‍ಷನ್‌ಗಳು ಅನಂತರ ನಮ್ಮ ಕ್ಯಾರೆಕ್ಟರ್ ಆಗಿಬಿಡುತ್ತವೆ, ಒಮ್ಮೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಬಿಟ್ಟ ಮುಖವಾಡಗಳು ನಮ್ಮನ್ನು ಬಿಟ್ಟು ಹೋಗೋದೇ ಇಲ್ಲ! ಹೀಗೆ ಮುಖವಾಡಗಳ ಮೇಲೆ ಮುಖವಾಡ, ಬಣ್ಣದ ಮೇಲೆ ಬಣ್ಣ ಹಚ್ಚಿ-ಹಚ್ಚಿ ಮೂಲ ರೂಪ ಮರೆಯಾಗುವುದೂ ಅಲ್ಲದೇ ಯಾವುದು ಮೂಲ, ಯಾವುದು ಸುಮ್ಮನೇ ಹುಟ್ಟಿಸಿದ್ದು (pretentious) ಎನ್ನುವ ಗೊಂದಲ ನನಗಂತೂ ಆಗಿದೆ.

ನಾವು ಯಾವ ಅಕ್ಷರಗಳನ್ನು ಹೇಗೆ ಬರೆಯುತ್ತೇವೆ, ಯಾವ ರೀತಿ ಹಾವ ಭಾವಗಳನ್ನು ಬೆಳೆಸಿಕೊಳ್ಳುತ್ತೇವೆ ಅನ್ನೋದು ನಮ್ಮ ನೆರೆಹೊರೆಯ ಮೇಲೆ ಹೆಚ್ಚಾಗಿ ಅವಲಂಭಿತವಾಗಿದೆ, ನಮ್ಮ ಇಂಗ್ಲೀಷ್ ಮೇಷ್ಟ್ರು ಬೋರ್ಡಿನ ಮೇಲೆ ಬಳ್ಳಿಯ ಹಾಗೆ ಸುತ್ತಿ 'A' ಅಕ್ಷರವನ್ನು script ನಲ್ಲಿ ಬರೆಯುತ್ತಿದ್ದುದನ್ನು ನಾನೂ ಹಚ್ಚಿಕೊಂಡೆ ಎನ್ನುವ ಸರಳ ಅನುಕರಣೆಯಾಗಿರಬಹುದು, ಅಥವಾ ಯಾವುದೋ ಒಂದು ಸಿನಿಮಾದಲ್ಲಿ ಮೈಕಲ್ ಡಗ್ಲಾಸ್ ಅಥವಾ ರಾಜ್‌ಕುಮಾರ್ ಪಾತ್ರ ಯಾವುದೋ ಒಂದು ಸಂದರ್ಭಕ್ಕೆ ವಿಶೇಷವಾಗಿ ತೋರಿಸಿದ ಪ್ರತಿಕ್ರಿಯೆ ಇದ್ದಿರಬಹುದು. ಹೀಗೆ ದಿನನಿತ್ಯವೂ ಅಲ್ಲಲ್ಲಿ ನಮ್ಮ ಮೇಲೆ ಹೊರಗಿನ influence ಗಳು ತಮ್ಮ ಛಾಪನ್ನು ಒತ್ತುತ್ತಲೇ ಇರುತ್ತವೆ, ಇನ್ನು ಮನಸ್ಸಿನ ಒಳಗೂ ನಡೆಯುವ ಹಲವಾರು ತಾಲೀಮುಗಳು ಪ್ರತಿಯೊಂದು ಕ್ರಿಯೆಗೆ ಇದೇ ರೀತಿ ಉತ್ತರ ಕೊಡುವಂತೆ ಪ್ರಚೋದಿಸುತ್ತವೆ. ಎಲ್ಲೋ ಹುಟ್ಟಿ, ಈ ಒಳ-ಹೊರಗಿನ ವ್ಯಾಪಾರದಲ್ಲಿ ಪಳಗಿ, ದಿನನಿತ್ಯವೂ ತಕ್ಕ ಮಟ್ಟಿಗೆ ಬದಲಾಗುವ ನಡತೆಯಾಗಿಬಿಡುತ್ತದೆ.

ನನಗೆ ಇನ್ನೂ ಚೆನ್ನಾಗಿ ನೆನಪಿರೋ ಹಾಗೆ, ನಾನು ಏಳನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಹೀಗೇ ಮಧ್ಯಾಹ್ನ ನಿದ್ದೆಯಿಂದ ಎದ್ದವನೇ, ಇನ್ನೂ ನಿದ್ದೆಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಕೇಳಿದ ಪ್ರಶ್ನೆಯೊಂದು ನನ್ನನ್ನು ಬಹಳಷ್ಟು ಸತಾಯಿಸಿತ್ತು. ಅವಳು ಹೊರಗಡೆ ಅವಳ ಸ್ನೇಹಿತೆಯ ಜೊತೆ ಮಾತನಾಡುತ್ತಿದ್ದಳು, ನಾನು ಇನ್ನೂ ಕಣ್ಣು ಉಜ್ಜಿಕೊಳ್ಳುತ್ತಲೇ, 'ನನ್ನ ಮುಖವಾಡ ಎಲ್ಲಿದೆ? ಎಲ್ಲಿಟ್ಟಿದ್ದೀ...' ಎಂದು ಒಂದು ರೀತಿಯ ಕೋಪ ಮಿಶ್ರಿತ ಧ್ವನಿಯಲ್ಲಿ ಕೇಳಿದಾಗ ಅವಳೂ, ಆಕೆಯ ಸ್ನೇಹಿತೆಯೂ ಕಕ್ಕಾಬಿಕ್ಕಿಯಾಗಿ ನನ್ನನ್ನೇ ನೋಡಿ 'ಯಾವ ಮುಖವಾಡ?' ಎಂದು ಕೇಳಿದ್ದರು, ಆದರೆ ಅದರ ನಂತರ ನಮ್ಮಿಬ್ಬರ ನಡುವೆ ಒಂದು ರೀತಿಯ ಮೌನ ಹುಟ್ಟಿ, ನಾನು ಕುರ್ಚಿಯ ಮೇಲೆ ಪ್ರಪಂಚವೆಲ್ಲ ನನ್ನ ತಲೆಯ ಮೇಲೆ ಬಿದ್ದಿದೆ ಎನ್ನೋ ಹಾಗೆ ಬಹಳಷ್ಟು ಹೊತ್ತು ಕುಳಿತದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಆಗ ಮುಖವಾಡ ಹುಡುಕಿದ್ದು ಏಕೆಂದರೆ ಆಗ ಓದುತ್ತಿದ್ದ ಕನ್ನಡ ಪತ್ತೇದಾರಿ ಕಾದಂಬರಿಗಳ ಪರಿಣಾಮವೋ ಮತ್ತೊಂದೋ ಎನ್ನೋ ಹಾಗೆ ನನ್ನ ಮುಖದ ತುಂಬೆಲ್ಲ ಆಸಿಡ್ ಬಿದ್ದ ಹಾಗೆ, ಹಾಗೂ ನಾನು ಮುಖವಾಡವಿಲ್ಲದೇ ಎಲ್ಲೂ ಹೋಗದ ಹಾಗೆ ಕನಸೊಂದು ಬಿದ್ದಿದ್ದು. ಆ ಕನಸು ನನ್ನ ಮೇಲೆ ಎಷ್ಟು ಗಾಢವಾದ ಪರಿಣಾಮವನ್ನು ಬೀರಿತ್ತು ಎಂದರೆ ಅದರಿಂದ ಹೊರಬರಲು ಬಹಳಷ್ಟು ಸಮಯ ಹಿಡಿಯಿತು, ಅಲ್ಲದೇ ನಾನು ಮುಖವಾಡ ಕೇಳಿದೆನೆಂದು ನನ್ನ ಅಕ್ಕ ಬಹಳಷ್ಟು ದಿನ ನನ್ನನ್ನು ತಮಾಷೆ ಮಾಡಿ ಸತಾಯಿಸುತ್ತಲೇ ಇದ್ದಳು.

ನನ್ನ ಸ್ನೇಹಿತರೊಬ್ಬರನ್ನು ವಾಷಿಂಗ್ಟನ್ ಡಿಸಿಯಲ್ಲಿ ಕಾರಿನಲ್ಲಿ ತಿರುಗಾಡಿಸುತ್ತಿದ್ದೆ, ನನ್ನ ಬಯಲು ಸೀಮೆಯ ಕನ್ನಡದ ದೆಸೆಯಿಂದ ಆಗ ಮಾತಿನಲ್ಲಿ ಬಹಳಷ್ಟು ಆ ಮಗ..., ಈ ಮಗ... ಎನ್ನೋ ಬೈಗಳು ಹೊರಬರುತ್ತಲೇ ಇದ್ದವು. ನನ್ನ ಸ್ನೇಹಿತರು ಬಹಳಷ್ಟು ಹೊತ್ತು ನೋಡಿ 'ನೀವೇಕೆ ಅಷ್ಟೊಂದು ಬೈಗಳವನ್ನು ಮಾತಿನಲ್ಲಿ ಬಳಸೋದು!' ಎಂದು ಕೇಳಿಯೇ ಬಿಟ್ಟರು, ನಾನು ಕಕ್ಕಾಬಿಕ್ಕಿಯಾದೆ, ಅದು ನನ್ನ ನೇಚರ್ ಆಗಿರಬಹುದು, ಅಥವಾ ಆ ಬೈಗಳುಗಳಿಗೆ ನಿರ್ಧಿಷ್ಟ ಅರ್ಥವಿರದ ಸುಮ್ಮನೇ ಆಡುವ ಮಾತಿನ ಒಂದು ಭಾಗವಾಗಿರಬಹುದು, ಅಥವಾ ನಾನು ಬೆಳೆದು ಬಂದ ನೆರೆಹೊರೆಯ ಪರಿಣಾಮವಿರಬಹುದು. ಏನೇ ಆದರೂ ಒರಟು ಕನ್ನಡವನ್ನು ಮಾತನಾಡುತ್ತ tough looking ಮುಖವಾಡವನ್ನು ಹಾಕಿಕೊಂಡಿದ್ದೆನೆ ಎಂದುಕೊಂಡವನಿಗೆ ಅದು ನನ್ನ ಮುಖವಾಡವಲ್ಲ, ಮುಖ ಎಂದು ತಿಳಿದದ್ದು ಬಹಳ ಚಿಂತೆಗೆ ಈಡು ಮಾಡಿತು. ನನ್ನ ಸಹೋದ್ಯೋಗಿಗಳಲ್ಲಿ ನ್ಯೂ ಯಾರ್ಕ್ ಮೂಲದವರಿಗೆ ಒಂದು ರೀತಿಯ ಮಾತಿನ ಶೈಲಿಯಿದೆ, ಅವುಗಳಲ್ಲಿ ಬೈಗಳವೂ ಪ್ರಾದಾನ್ಯತೆ ಪಡೆಯುತ್ತವೆ, ಎಷ್ಟೋ ಬಾರಿ 'f' ಪದಗಳು ಎಗ್ಗಿಲ್ಲದೆ ಎಲ್ಲಿ ಬೇಕಂದರಲ್ಲಿ ಹರಿದು ಬರುತ್ತವೆ, ಹಲವಾರು ಹಿನ್ನೆಲೆಯಿಂದ ಬಂದ ಕೇಳುಗರಿಗೆ ಮುಜುಗರವಾದರೂ ನ್ಯೂ ಯಾರ್ಕ್ ಮೂಲದ ಸಹೋದ್ಯೋಗಿಗಳಿಗೆ ಇದರ ಬಗ್ಗೆ ಏನೇನೂ ಅನ್ನಿಸುವುದೇ ಇಲ್ಲ! ಅದು ಒಂದು ರೀತಿಯಲ್ಲಿ ಒಳ್ಳೆಯದೇ ಏಕೆಂದರೆ ಅವರ ನೇಚರ್ ಹಾಗಿರುತ್ತದೆ, ಅವರು ಎಲ್ಲಿ ಹೋದರೂ ಹಾಗೆಯೇ ಇರೋದು, ಅದರ ಬದಲಿಗೆ ನನ್ನಂತೆ ಸೆಲೆಕ್ಟೆಡ್ ಆಗಿ ಮಾತುಗಳನ್ನು ಬದಲಾಯಿಸುವ ಗೋಜಿಗೆ ಹೋದರೆ ಮುಖ ಹಾಗೂ ಮುಖವಾಡಗಳ ನಡುವೆ ಗೊಂದಲವಾಗಿ ಹಾಸ್ಯಾಸ್ಪದವಾಗುವ ಸಾಧ್ಯತೆಗಳೇ ಹೆಚ್ಚು. ಬೈಗಳವನ್ನು ಅಲ್ಲಲ್ಲಿ ಉದ್ದೇಶ ಪೂರ್ವಕವಾಗಿ ತುರುಕುವ ನಾನು ಕೆಲವೊಮ್ಮೆ ಯಾರಾದರೂ ಮಾತಿನ ಮಧ್ಯೆ 'damn' ಎಂದು ಹೇಳಿದಾಗಲೆಲ್ಲ ಅದನ್ನು 'darn' ಎಂದು ಬದಲಾಯಿಸಿ ಸಂಭಾಷಣೆಯಲ್ಲಿ ಒಂದು ಒಳ್ಳೆಯ ಎಳೆಯನ್ನು ನೇಯ್ದು ಬಿಡುತ್ತೇನೆ.

ಮುಖವಾಡ ನಮಗೆ ಒಂದು ರೂಪವನ್ನು ತತ್ಕಾಲಕ್ಕೆ ತಂದುಕೊಡಬಲ್ಲದು, ಹೊಸದಾಗಿ ಕೇಳುವವರ/ನೋಡುವವರ ಮನಸ್ಸಿನಲ್ಲಿ ಒಂದು ಮೂರ್ತಿಯನ್ನು ನಿಲ್ಲಿಸಬಹುದು ಆದರೆ ಧರಿಸುವ ಮುಖವಾಡಗಳನ್ನು ಹತೋಟಿಯಲ್ಲಿಡದೇ ಹೋದರೆ ಒಂದು ರೀತಿಯಲ್ಲಿ multiple personalityಯನ್ನು ಸದಾಕಾಲ ನಿಲ್ಲಿಸಿಬಿಡುವ ಸಾಧ್ಯತೆಗಳೇ ಹೆಚ್ಚಾಗಿ ಕೊನೆಗೆ ಮುಖವಾಡವೇ ಮುಖವಾಗಿ ಬಿಡುವ ಅನಾಹುತವಾಗಿ ಹೋಗುತ್ತದೆ. ನನ್ನ ಹಾಗೆಯೇ ಎಲ್ಲರೂ ಒಂದಲ್ಲ ಒಂದು ಮುಖವಾಡವನ್ನು ತೊಡುತ್ತಾರಾದರೂ ಅವುಗಳನ್ನು ಉಳಿದವರು ಹೇಗೆ ನಿಭಾಯಿಸುತ್ತಾರೆ, ಈ ಮುಖವಾಡಗಳ ಹಿಂದಿನ ವ್ಯಕ್ತಿಯ ಪರಿಚಯವಾಗುವುದಾದರೂ ಹೇಗೆ, ಮುಖವಾಡಗಳ ಹಿನ್ನೆಲೆಯಲ್ಲಿ ಯಾವ ರೀತಿಯ ನಡತೆ ಯಾವ ರೀತಿಯ ಪ್ರತಿಕ್ರಿಯೆಯನ್ನು ಹುಟ್ಟಿಸಬಲ್ಲದು, ಮುಖವಾಡಗಳನ್ನು ತೊಟ್ಟುಕೊಂಡವರ ಇಂಥ ಪ್ರತಿಕ್ರಿಯೆಗಳಿಗೆ ಅದರ ಮುನ್ನೆಲೆಯಲ್ಲಿ ಎಂತೆಂಥಹ ನಿರೀಕ್ಷೆಗಳು ಹುಟ್ಟಬಲ್ಲವು ಎಂಬ ಯೋಚನೆ ಯಾವತ್ತಿಗೂ ನನ್ನನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ.

ನೀವು ತೊಟ್ಟ ಮುಖವಾಡಗಳ ಹಿನ್ನೆಲೆ ಏನು ಎಂದು ಆಲೋಚಿಸುವುದಕ್ಕೆ ಒಂದು ಎಳೆ ಸಿಕ್ಕಂತಾಯಿತೇ?

Saturday, July 22, 2006

'ದಾರಿ-ದೀಪ'ದ ಆರಂಭ

'ಅಂತರಂಗ'ದಲ್ಲಿ ಪರ್ಸನಲ್ ಡೆವಲಪ್‌ಮೆಂಟ್ ಬಗ್ಗೆ ಬರೆಯುವುದಕ್ಕಿಂತ ಅದಕ್ಕಾಗಿಯೇ ಬೇರೊಂದು ಬ್ಲಾಗನ್ನು ಸೃಷ್ಟಿಸಿದರೆ ಹೇಗೆ ಎನ್ನಿಸಿ ನನ್ನ ಮಿತ್ರರೊಬ್ಬರು ಹೇಳಿದ್ದರಿಂದ 'ದಾರಿ-ದೀಪ'ವನ್ನು ಆರಂಭಿಸಿದ್ದೇನೆ. ಇದರಿಂದ 'ಅಂತರಂಗ'ದ ಒರಿಜಿನಾಲಿಟಿ ಉಳಿಯುವುದೂ ಅಲ್ಲದೇ 'ದಾರಿ-ದೀಪ'ವನ್ನು ಯಾವ ರೀತಿಯಲ್ಲಿ ಬೇಕಾದರೂ ಬೆಳೆಸುವ ಸ್ವಾತಂತ್ರ್ಯ ದೊರೆತಂತಾಗುತ್ತದೆ.

ಆದ್ದರಿಂದ ಪರ್ಸನಲ್ ಡೆವಲಪ್‌ಮೆಂಟ್ ಕುರಿತ ಲೇಖಗಳನ್ನು http://daari-deepa.blogspot.com/ ದಲ್ಲಿ ನೋಡಬೇಕಾಗಿ ವಿನಂತಿ.

Friday, July 21, 2006

ನಿಜವಾದ ಪಯಣ ಇದೀಗ ಆರಂಭವಾಗಿದೆ...

ಬರೆಯೋದನ್ನ ರೂಢಿಸಿಕೊಳ್ಳಬೇಕು ಎಂದುಕೊಂಡು ಹಲವಾರು ಬಾರಿ ಅಲ್ಲಲ್ಲಿ ಏನೇನನ್ನೋ ಬರೆದು ಮಧ್ಯದಲ್ಲಿ ನಿಲ್ಲಿಸಿದ್ದು, ಮತ್ತೆ ಯಾವತ್ತೋ ಒಂದು ದಿನ ಉತ್ಸಾಹ ಬಂದು ಸ್ವಲ್ಪ ದಿನಗಳ ಕಾಲ ಬರೆದು ಮತ್ತೆ ನಿಲ್ಲಿಸಿದ್ದು, ಹೀಗೆ ಬರೆಯುವ-ನಿಲ್ಲಿಸುವ-ಬರೆಯುವ ಪ್ರಕ್ರಿಯೆ ಒಂದು ರೀತಿ ನಮ್ಮೂರಿನ ಲೋಕಲ್ ಬಸ್ಸುಗಳಲ್ಲಿ ಪ್ರಯಾಣ ಮಾಡಿದ ಅನುಭವದ ಹಾಗಿತ್ತು. ಈ ಪ್ರಯಾಣಕ್ಕೆ ಚಾಲನೆ ಸಿಕ್ಕಿದ್ದು ೨೦೦೫ ರ ನವೆಂಬರ್ ತಿಂಗಳಿನಲ್ಲಿ ನಾನೂ ಒಂದು ಬ್ಲಾಗ್ ಬರೆಯೋಣ ಎಂದುಕೊಂಡಾಗಿನಿಂದ. ಅಲ್ಲಿ ಒಂದು ತುಣುಕನ್ನು ಸೇರಿಸಿ ನಿದ್ರೆಗೆ ಶರಣು ಹೋದವನಿಗೆ ಮತ್ತೆ ಎಚ್ಚರವಾದದ್ದು ಮಾರ್ಚ್ ೨೦೦೬ ರಲ್ಲಿ ನನ್ನ ಸ್ನೇಹಿತ ಕೃಪೇಶ ತಿವಿದಾಗಲೇ. ಅಲ್ಲಿಂದ ಇಲ್ಲಿಯವರೆಗೆ ದಿನನಿತ್ಯವೂ ಒಂದಲ್ಲ ಒಂದು ರೀತಿಯಿಂದ 'ಅಂತರಂಗ'ದ ಬಗ್ಗೆ ಯೋಚನೆ ಮಾಡುತ್ತೇನಾದ್ದರಿಂದ ಇದು ಬದುಕಿನ ಒಂದು ಭಾಗವಾಗಿದೆ ಎಂದು ಹೇಳಲು ಸಂತೋಷಪಡುತ್ತೇನೆ. ಎಲ್ಲರಿಗೂ ಒಂದು ಹವ್ಯಾಸ ಅನ್ನೋದು ಬೆಳೆಯೋದಕ್ಕೆ ಸುಮಾರು ೨೧ ದಿನಗಳಾದರೂ ಬೇಕಂತೆ, ನನಗೆ ಕೊನೇಪಕ್ಷ ಐದು ತಿಂಗಳಾದರೂ ಹಿಡಿಯಿತು.

ಇವತ್ತಿಗೆ ಇದು ನನ್ನ ನೂರನೇ ಬರಹ. ಈ ಮೈಲಿಗಲ್ಲನ್ನು ತಲುಪುವ ಪ್ರಯಾಣದಲ್ಲಿ ಹಲವಾರು ವಿಷಯಗಳು ನನ್ನ ಸಹ ಪ್ರಯಾಣಿಕರಾಗಿವೆ, ಅವುಗಳಲ್ಲಿ ಕೆಲವು ಇನ್ನೂ ಮುಂದುವರೆಯಲಿವೆ. ನೂರು ಬರಹ ದೊಡ್ಡ ವಿಷಯವೇನಲ್ಲ, ಆದರೂ ನನ್ನ ಮಟ್ಟಿಗೆ ಹೇಳೋದಾದರೆ ಒಂದು ಕಡೆ ಕನ್ನಡ ಟೈಪ್ ಮಾಡುವ ಅಥವಾ ಬರೆಯುವ ವ್ಯವಧಾನವಿರದೇ ಇರುವುದೂ ಮತ್ತೊಂದು ಕಡೆ ನನ್ನ ಪ್ರಚಂಡ ಮೈಗಳ್ಳತನವೂ ಇವುಗಳ ನಡುವೆ ನಾನು ಏನನ್ನಾದರೂ ಬರೆದಿದ್ದೇನೆಂದು ಹೇಳಿಕೊಳ್ಳೋದೇ ಒಂದು ಸಂಭ್ರಮ.

'ಅಂತರಂಗ'ದಲ್ಲಿ ಬರೆಯಲು ತೊಡಗಿದ ಮೊದಮೊದಲು ಹಲವಾರು ಧ್ವನಿಗಳು ಬಂದು ಇಣುಕಿ ಹೋದವು:
೧) ನನ್ನಲ್ಲಿರುವ ಹತಾಶೆಗಳನ್ನು ತೋಡಿಕೊಳ್ಳಬೇಕು, ಅವಕಾಶ ಸಿಕ್ಕಲ್ಲೆಲ್ಲ ಸೂಚ್ಯವಾಗಿ ಮನಸಾ ಇಚ್ಛೆ ಬಯ್ಯಬೇಕು, ನನ್ನ ಕಣ್ಣಿಗೆ ಕಂಡ ರೀತಿಯಲ್ಲಿ ಅನ್ಯಾಯವನ್ನು ಪ್ರತಿಭಟಿಸಬೇಕು ಎಂಬುದಾಗಿ ಒಂದು ಧ್ವನಿ

೨) ಜೀವನ ಬಹಳ ಸುಂದರವಾದದ್ದು, ನನ್ನಲ್ಲಿರುವ ಕವಿಯ ಮನಸ್ಸಿಗೆ ಒಂದು ಜಾಗೃತಿಯನ್ನು ಕೊಟ್ಟು ಸುತ್ತಲನ್ನು ಕಾವ್ಯಮಯವಾಗಿ ನೋಡಿದರೆ ಹೇಗೆ ಎಂಬ ಮತ್ತೊಂದು ಧ್ವನಿ

೩) ನಮ್ಮೂರಿನ ಭಾಷೆಯಲ್ಲಿ ಹಲವಾರು 'ಸಂವಾದ'ಗಳನ್ನು ಹುಟ್ಟಿಸಿಕೊಂಡು ಬದುಕಿಗೆ ಹತ್ತಿರವಾಗಿ ನಡೆಯುವ ಮಾತುಕಥೆಗಳನ್ನು ಸೆರೆಹಿಡಿದರೆ ಹೇಗೆ ಎಂಬ ಇನ್ನೊಂದು ಧ್ವನಿ

೪) ನನ್ನ ಮನಸ್ಸಿನಲ್ಲಿ ದ್ವಿಗುಣಗೊಂಡ ಅವಕಾಶದಲ್ಲಿ ಪುಂಖಾನುಪುಂಖವಾಗಿ ಏಳುವ ಹಲವಾರು ಆಲೋಚನೆಗಳನ್ನು ಹೊರಹೊಮ್ಮಿಸಿ ಅವುಗಳ ಮೂಲಕ ನನ್ನನ್ನು ನಾನು ಅವಿಷ್ಕರಿಸಿಕೊಳ್ಳುವುದು ಎಂಬ ಮುಂತಾದ ಆಲೋಚನೆಗಳು ಮಧ್ಯೆ ಮಧ್ಯೆ ಬಂದವು, ಹೋದವು.

ಹೀಗೆ ಹಲವಾರು ಸಂವಾದಗಳು ಹುಟ್ಟಿಕೊಂಡವು, ಧಾರವಾಡ ಜಿಲ್ಲೆಯ ಗಡಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿರುವ ಅರೆಮಲೆನಾಡಿನ ವಾತಾವರಣದ ಆನವಟ್ಟಿಯ ಭಾಷೆಯಲ್ಲಿ ಹಲವು ಸಂವಾದಗಳನ್ನು ಹಿಡಿದಿಟ್ಟದ್ದಾಯಿತು. ಅಲ್ಲಲ್ಲಿ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡು ಇಷ್ಟು ಬೇಗನೇ ಆತ್ಮಚರಿತ್ರೆಯನ್ನು ಎಲ್ಲಿ ಬರೆದು ಬಿಡುತ್ತೇನೋ ಎನ್ನುವ ಭಯವನ್ನು ಹುಟ್ಟಿಸಿಕೊಂಡಿದ್ದೂ ಆಯಿತು, ಆದರೂ ನಾನು ಈ ಬರಹಗಳನ್ನು ವರ್ಗೀಕರಿಸಿಕೊಂಡ ಹಾಗೆ ಇಪ್ಪತ್ತಕ್ಕೂ ಹೆಚ್ಚು ಬರಹಗಳು 'ವಿಸ್ಮಯ' ಯಾದಿಯಲ್ಲಿ ಸೇರಿ ಹೋಗಿ - ಐ ವಂಡರ್ ಹೌ - ಎನ್ನುವಂತೆ ಹೊರಹೊಮ್ಮಿದೆ.

ಬರಹಗಳಲ್ಲಿ ಈ ಹಿಂದೆ ನಿಜವಾದ ಹೆಸರನ್ನು ಬಳಸುತ್ತಿರಲಿಲ್ಲ, ಈಗ ನಿಜವಾದ ಹೆಸರನ್ನು ಬಳಸಿ ಬರೆಯಲು ಹಲವಾರು ಕಾರಣಗಳಿವೆ - 'ಅಂತರಂಗಿ' ಬರೆದ ಬರಹಗಳಲ್ಲಿ ತೂಕವಿರುತ್ತಿರಲಿಲ್ಲವೋ ಏನೋ, ಕ್ರೆಡಿಬಿಲಿಟಿಯೂ ಅಷ್ಟಕಷ್ಟೇ ಇರುವಂತೆ ಭಾಸವಾಯಿತು, ಕೆಲವೊಮ್ಮೆ ವಿವರಗಳನ್ನು ಕೇಳಿದ ಕೆಲವರು ಅಂದುಕೊಂಡಂತೆ 'ಅಂತರಂಗಿ'ಯ ಹೆಸರಿನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣಿಸಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಕ್ರಿಯೆಗಳಿಗೆ ನಾನೇ ಜವಾಬ್ದಾರನಾಗುವುದು ಒಳ್ಳೆಯದು ಎನಿಸಿದ್ದರಿಂದ ನಿಜವಾದ ಹೆಸರನ್ನು ತೋರಿಸಿಕೊಳ್ಳಬೇಕಾಯಿತು.

'ಅಂತರಂಗ'ದಿಂದ ಏನಾಯಿತೋ ಬಿಟ್ಟಿತೋ, ನನಗಂತೂ ಬರೆಯುವ ಹವ್ಯಾಸವೊಂದು ಹುಟ್ಟಿತು, ಬರೆಯುವ ವಿಷಯದಲ್ಲಿ ಮೊದಲಿದ್ದ ಹಾಗೆಲ್ಲ ಮೈಗಳ್ಳತನವಿಲ್ಲ, ಹೆಚ್ಚಿನ ಬರಹಗಳು ಒಂದೇ ಭೈಠಕ್‌ನಲ್ಲಿ ಹುಟ್ಟುತ್ತಿವೆ, ಕೆಲವಕ್ಕೆ ಅರ್ಧ ಘಂಟೆಗಳಿಗಿಂತ ಹೆಚ್ಚು ತೆಗೆದುಕೊಂಡರೂ ಹೆಚ್ಚಿನವು ಅರ್ಧ ಘಂಟೆಯ ಒಳಗೆ ಬರೆಯಬಹುದಾಗಿರುವುದರಿಂದ ದಿನಕ್ಕೊಂದು ಅರ್ಧ ಘಂಟೆ ಈ ನಿಟ್ಟಿನಲ್ಲಿ ವ್ಯಯಿಸಲಾರೆನೇ ಎಂದು ಸ್ವಯಂ ತೃಪ್ತಿಪಟ್ಟುಕೊಂಡಿದ್ದೇನೆ.

'ಅಂತರಂಗ'ವನ್ನು ಮೊದಲಿನಿಂದಲೂ ಓದಿ, ಅಲ್ಲಲ್ಲಿ ನನ್ನನ್ನು ತಿದ್ದಿ, ನನ್ನ ಜೊತೆಯಲ್ಲಿ ಕಳಕಳಿಯನ್ನು ವ್ಯಕ್ತಪಡಿಸಿ, ಹೀಗೆ ಬರೆಯಿರಿ, ಹಾಗೆ ಬರೆಯಬಾರದಿತ್ತು ಎಂದೆಲ್ಲಾ ಸ್ಪಂದಿಸಿದವರಿಗೆ ನನ್ನ ದೊಡ್ಡ ನಮನಗಳು, ಅವರ ಹೆಸರುಗಳನ್ನೆಲ್ಲಾ ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುವುದರ ಜೊತೆಗೆ, ಕೆಲವರ ಹೆಸರನ್ನು ಮರೆವಿನಿಂದ ಬರೆಯದೇ ಅಪಚಾರಮಾಡಿದಂತಾಗುವುದು ಎನ್ನುವ ಹೆದರಿಕೆ ಇರುವುದರಿಂದ ಇಲ್ಲಿ ಯಾರ ಹೆಸರನ್ನೂ ಬರೆಯುತ್ತಿಲ್ಲ. 'ಅಂತರಂಗ'ವನ್ನು ಎಷ್ಟೋ ಜನ ತಮ್ಮ ಬ್ಲಾಗ್‌ಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಲಿಂಕ್ ಕೊಡುವುದರ ಮೂಲಕ ಪರಿಚಯಿಸಿದ್ದಾರೆ, ಅಲ್ಲದೇ ಕನ್ನಡಸಾಹಿತ್ಯ.ಕಾಂ ಎಡಿಟೋರಿಯಲ್‌ನಲ್ಲೂ ಶೇಖರ್ ಅವರು ಪರಿಚಯಿಸಿದ್ದಾರೆ - ಇವರೆಲ್ಲರಿಗೂ ನನ್ನ ನಮನಗಳು.

'ಅಂತರಂಗ'ವನ್ನು ನ್ಯೂ ಝೀಲ್ಯಾಂಡಿನಿಂದ ಹಿಡಿದು ಹವಾಯಿಯವರೆಗೆ ಪ್ರತಿದಿನವೂ ಸುಮಾರು ಜನ ಓದುತ್ತಾರೆ, ಅವರಲ್ಲಿ ಕೆಲವರು ಆಗಾಗ್ಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಿರುತ್ತಾರೆ, ಇನ್ನು ಕೆಲವರು ನೇರವಾಗಿ ಇ-ಮೇಲ್‌ಗಳನ್ನು ಕಳಿಸುತ್ತಿರುತ್ತಾರೆ ಇವರೆಲ್ಲರಿಗೂ ನನ್ನ ನಮನಗಳು.

ನನ್ನ ಆಸೆ ಇಷ್ಟೇ - ನಾನು ಹೀಗೆ ಕನ್ನಡದಲ್ಲಿ ಬರೆಯುತ್ತಲೇ ಇರಬೇಕು, ಬರೆಯುವುದಕ್ಕಿಂತ ಹತ್ತು ಪಟ್ಟು ಓದಬೇಕು, ಓದುವುದಕ್ಕಿಂತ ಹತ್ತು ಪಟ್ಟು ನೆರೆಹೊರೆಯನ್ನು ಗಮನಿಸಬೇಕು, ಆಗು-ಹೋಗುಗಳಿಗೆ ಸ್ಪಂದಿಸಬೇಕು. ಕನ್ನಡ ಬರಹ ಬ್ಲಾಗ್‌ಪ್ರಪಂಚದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿದೆ, ಇದು ಹೀಗೇ ಬೆಳೆಯಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವ ಸ್ನೇಹಿತ-ಸ್ನೇಹಿತೆಯರು (ತರುಣ ಮಿತ್ರರು) ಹೆಚ್ಚು ಹೆಚ್ಚು ಕನ್ನಡದಲ್ಲೇ ಓದಿ-ಬರೆಯಬೇಕು.

ಇದುವರೆಗೆ ಬರೆದದ್ದನ್ನೆಲ್ಲ ನಾನು ಬರಿ ವಾರ್ಮ್‌ಅಪ್ ಎಂದುಕೊಳ್ಳೋದರಿಂದ ನಿಜವಾದ ಪಯಣ ಇದೀಗ ಆರಂಭವಾಗಿದೆ...ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!

Wednesday, July 19, 2006

antarangi fired!

'ಅಂತರಂಗ' ನೂರನೇ ಬರಹವನ್ನು ಮುಟ್ಟುತ್ತಿರುವ ಹಿನ್ನೆಲೆಯಲ್ಲಿ ಸಂತೋಷ ಸಮಾರಂಭಗಳನ್ನು ಏರ್ಪಡಿಸಬೇಕಾಗಿದ್ದ ಜವಾಬ್ದಾರಿಯನ್ನು ಹಗುರವಾಗಿ ತೆಗೆದುಕೊಂಡ 'ಅಂತರಂಗಿ'ಯನ್ನು ಈ ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ!

ಹೀಗೆ ದಿಢೀರನೆ ತೆಗೆದುಕೊಂಡ ಮ್ಯಾನೇಜ್‌ಮೆಂಟ್ ನಿರ್ಣಯದಿಂದ ಮಾಡುವ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ಗೊತ್ತಿದ್ದರೂ ಈ ರೀತಿ ಮಾಡಬೇಕಾದ್ದು ಅನಿವಾರ್ಯವಾಗಿರೋದನ್ನು ವಿಷಾದಿಸುತ್ತೇವೆ. ಏನೇ ಆದರೂ 'ಕಾಯಕವೇ ಕೈಲಾಸ'ವಾದ್ದರಿಂದ ಕೆಲಸ ಕಾರ್ಯಗಳು ಎಂದಿನಂತೆ ಮುಂದುವರೆಯುವುದು ಅಗತ್ಯ - ನಾಳೆ, ಅಂದರೆ ಗುರುವಾರ, ಈಸ್ಟರ್ನ್ ಡೇ ಲೈಟ್ ಟೈಮ್‌, ಮುಂಜಾನೆ ೮ ಘಂಟೆಗೆ ಅಂತರಂಗಿಯೊಂದಿಗೆ ಒಂದು ಬ್ರೌನ್ ಬ್ಯಾಗ್ ಸೆಷನ್ ಅನ್ನು ಇಟ್ಟುಕೊಳ್ಳಲಾಗಿದೆ, ಅಲ್ಲಿ ಅಂತರಂಗಿಯವರು ತಮ್ಮ ಕೆಲಸ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸುವುದೂ ಅಲ್ಲದೆ, ತಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕೊಡುವವರಿದ್ದಾರೆ, ಈ ಸೆಷನ್ ಅನ್ನು ತಪ್ಪದೇ ಅಟೆಂಡ್ ಮಾಡುವಂತೆ ಈ ಮೂಲಕ ಕೋರಲಾಗಿದೆ.

ಅಂತರಂಗಿಯವರ ಕೊಡುಗೆ ಅಪಾರವಾದದ್ದು, ಈ ನಮ್ಮ ಸಂಸ್ಥೆಗೆ ಅವರ ಅಪರಿಮಿತ ಸೇವೆ ಬಹಳ ದೊಡ್ಡ ಹೆಸರನ್ನು ತಂದುಕೊಟ್ಟಿದೆ, 'ನಿಮ್ಮವ'ನಿಂದ ಕಾರ್ಯವನ್ನು ವಹಿಸಿಕೊಂಡ ಮೇಲೆ, ತಿಣುಕಿ-ತಿಣುಕಿ ಬರೆದ ಪರಿಣಾಮವಾಗಿ ಗೂಗಲ್ ಪೇಜ್ ರ್ಯಾಂಕ್‌ನಲ್ಲಿ ಅಂತರಂಗಕ್ಕೆ ನಾಲ್ಕನೇ ಸ್ಥಾನ ದೊರೆತಿದೆ. ಇದು ಶ್ಲಾಘನೀಯ ವಿಚಾರ. ಅಂತರಂಗಿಯವರ ಡಿಪಾರ್ಚರ್ ಅನ್ನು ಸೆಲೆಬ್ರೇಟ್ ಮಾಡಲು, ಶುಕ್ರವಾರ ಸಂಜೆ ಏಳು ಘಂಟೆಗೆ 'ಐರಿಷ್ ಕಾರ್ನರ್' ನಲ್ಲಿ ಹ್ಯಾಪ್ಪಿ ಅವರ್ ಏರ್ಪಡಿಸಲಾಗಿದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಭಾಗವಹಿಸಿ, drinks are on us!
***

ನಾಳೆ ನಮ್ಮ ಬ್ಯೂರೋಗೆ ಬಿಡುವು, ಶುಕ್ರವಾರದಿಂದ 'ಅಂತರಂಗ' ಮ್ಯಾನೇಜ್‌ಮೆಂಟ್‌ನವರ ನಿಜವಾದ ಹೆಸರಿನಲ್ಲಿ ಮುಂದುವರೆಯಲಿದೆ. ಅಲ್ಲದೇ 'ಅಂತರಂಗ'ದ ಸಂಪೂರ್ಣ ಸೈಟೂ ಸಹ ಒಂದು ಹೊಸ ರೂಪವನ್ನು ಪಡೆಯಲಿದೆ.

ನೂರನೇ ಲೇಖನವನ್ನು ಬರೆಯಲು ಅಂತರಂಗಿಯವರು ಇಲ್ಲದಿರುವುದನ್ನು ವಿಷಾದಿಸಲಾಗಿದೆ ಎಂದು ಬರೆಯುವುದರ ಮೂಲಕ ಮ್ಯಾನೇಜ್‌ಮೆಂಟ್ ನವರು ತಮ್ಮ ಅತೀವ ದುಃಖವನ್ನು ತೋರ್ಪಡಿಸಿಕೊಂಡಿದ್ದಾರೆ.

***

ಸೂಚನೆ: ಈ ಗುಟ್ಟು ನಮ್ಮನಮ್ಮಲ್ಲೇ ಇರಲಿ, ಈ ಕೆಳಗಿನ ಸಾಲುಗಳನ್ನು ಬೇರೆ ಯಾರಿಗೂ ಕಳಿಸುವಂತಿಲ್ಲ, ಹಾಗೆ ಕಳಿಸಿದರೂ ಅದರ ಸಾಧ್ಯತೆ-ಬಾಧ್ಯತೆಗಳಿಗೆ ನಾವು ಹೊಣೆಗಾರರಲ್ಲ. ಈ ಕೆಳಗಿನ ಸಾಲುಗಳು ಈ ಮೆಮೋದ ರಿಸಿಪಿಯಂಟ್‌ಗಳಿಗೆ ಮಾತ್ರ ಸೀಮಿತವಾದದ್ದು.

ಅಂತರಂಗಿ ಕಷ್ಟಜೀವಿಯೇನೋ ನಿಜ, ಆದರೆ ಅವರ ನೈತಿಕತೆ ಹಾಗೂ ಸಮಯ ಪರಿಪಾಲನೆಯ ಬಗ್ಗೆ ನಮಗೆ ಯಾವಾಗಲೂ ಸಂಶಯವಿದ್ದೇ ಇತ್ತು. ಉದಾಹರಣೆಗೆ:

- ಆಫೀಸಿನಲ್ಲಿ ಕೆಲಸ ಮಾಡುವುದರ ಬದಲು ಕಾರ್ಪೋರೇಟ್ ಸಂಪನ್ಮೂಲಗಳನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸುವುದು, ಪದೇ-ಪದೇ ಯಾಹೂ ಇ-ಮೇಲ್‌ಗಳನ್ನು ನೋಡುವುದು, ಕನ್ನಡ ದಿನಪತ್ರಿಕೆಗಳ ಮೇಲೆ ಆಗಾಗ್ಗೆ ಕಣ್ಣಾಡಿಸುವುದು, ಪ್ರಿಂಟರುಗಳನ್ನು ಯಥಾಇಚ್ಛೆ ಬಳಸುವುದು.

- ತನ್ನ ೧೨೮೦ X ೮೦೦ ರೆಸೋಲ್ಯೂಷನ್ ಇರುವ ಆಧುನಿಕ ಲ್ಯಾಪ್‌ಟಾಪ್ ಬಳಕೆಯ ಹೆಮ್ಮೆಯಲ್ಲಿ ಅದು ಎಷ್ಟೋ ಜನ ಬಳಕೆದಾರರನ್ನು ಕಡೆಗಣಿಸಿದ್ದು, ನಾವು ಪದೇಪದೇ ಎಲ್ಲ ತರಹದ ಬಳಕೆದಾರರನ್ನು ಪರಿಗಣಿಸಿ ಎಂದು ಹೇಳಿದ್ದರೂ ನಮ್ಮ ಮಾತಿಗೆ ಯಾವ ಬೆಲೆಯೂ ಇರುತ್ತಿರಲಿಲ್ಲ.

- ಗಹನವಾದ ವಿಷಯಗಳ ಬಗ್ಗೆ ಪರಿಪೂರ್ಣವಾದ ಲೇಖನಗಳನ್ನು ಬರೆಯಿರಿ ಎಂದು ಎಷ್ಟೇ ಬಾಯಿಬಾಯಿ ಬಡಿದುಕೊಂಡರೂ ಇತ್ತೀಚೆಗೆ ಅವರ ಮನಸ್ಸು ಎಮ್ಮೆಯ ಚರ್ಮವಾಗಿ ಹೋಗಿತ್ತು, ಯಾವುದಕ್ಕೂ ಸಂವೇದಿಸುವ ಲಕ್ಷಣಗಳು ತೋರಲಿಲ್ಲ.ಇತ್ಯಾದಿ, ಇತ್ಯಾದಿ...

ಅವರ ಕೊಡುಗೆ ಏನೇ ಇರಲಿ, ಹೇಗೇ ಇರಲಿ, ಅಮೇರಿಕನ್ ಪರಂಪರೆಯಲ್ಲಿ ಅವರನ್ನು 'ಕಮ್ಮ್ಯೂನಿಕೇಷನ್ ಸ್ಕಿಲ್ಸ್' ಇಲ್ಲದಿರುವುದಕ್ಕೆ ಫೈರ್ ಮಾಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ನಿಮ್ಮ ಪ್ರಶ್ನೆ, ಸಲಹೆಗಳಿಗೆ ಸ್ವಾಗತ.

----

ವಿಶೇಷ ಸೂಚನೆ: ಈ ಹಣಕಾಸಿನ ಒತ್ತಡದ ಸಂದರ್ಭದಲ್ಲಿ ಬೇರೆ ಯಾರನ್ನೂ ಅಂತರಂಗಿಗಳ ಬದಲಿಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ, ನಿಮ್ಮ ನಿಮ್ಮಲ್ಲೇ ಅವರ ಕೆಲಸಗಳನ್ನು ಹಂಚುವುದಾಗಿ ತೀರ್ಮಾನಿಸಲಾಗಿದೆ. ಶುಕ್ರವಾರದಿಂದ ಮ್ಯಾನೇಜ್‌ಮೆಂಟ್ ನವರು ಒಂದು ಹೊಸ ಟೈಮ್‌ಟೇಬಲ್ ಅಥವಾ ಟಾಸ್ಕ್ ಲಿಸ್ಟ್ ತಯಾರಿಸಲಿದ್ದಾರೆ ಅದರ ಪ್ರಕಾರ 'ಅಂತರಂಗ'ದ ಕೆಲಸಗಳನ್ನು ಮುಂದುವರಿಸುವಂತೆ ಈ ಮೂಲಕ ತಿಳಿಸುತ್ತಿದ್ದೇವೆ.

ಅಂತರಂಗಿಯವರ ಲಾಗಿನ್, ಆಕ್ಸೆಸ್‌ಗಳನ್ನು ಈಗಾಗಲೇ ಡಿಸೇಬಲ್ ಮಾಡಲಾಗಿದ್ದು, ಕೇವಲ ಯಾಹೂ ಮೆಸ್ಸೇಜ್, ಇ-ಮೇಲ್, ಚಾಟ್‌ಗೆ ಮಾತ್ರ ಅವಕಾಶ ಕೊಡಲಾಗಿದೆ, ಉಳಿದೆಲ್ಲ ಸಿಸ್ಟಮ್ ಪಾಸ್‌ವರ್ಡ್‌ಗಳನ್ನು ಈಗಾಗಲೇ ಬದಲಾಯಿಸಲಾಗಿದೆ.

-ಮ್ಯಾನೇಜ್‌ಮೆಂಟ್

Monday, July 17, 2006

ಇಸ್ರೇಲ್-ಲೆಬನಾನ್

ಇತ್ತೀಚೆಗೆ ನಡೆಯುವ ಎಷ್ಟೊಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ದೆಸೆಯಿಂದ ನಮ್ಮ ಲೋಕಲ್ ಚಾನೆಲ್‌ಗಳಲ್ಲಿ ಬರುವ ನೆರೆಹೊರೆಯ ಸುದ್ದಿಗಳೇ ಇರೋ ವರ್ಲ್ಡ್ ನ್ಯೂಸ್ ಸಹ ನಿಜವಾದ ವರ್ಲ್ಡ್ ನ್ಯೂಸ್ ಆಗಿ ಬದಲಾವಣೆ ಹೊಂದಿದೆಯಲ್ಲಾ ಎಂದು ಒಮ್ಮೆ ಖುಷಿಯಾದರೂ, ಸಾಮಾನ್ಯವಾಗಿ ಮೈ ಕೊಡವಿಕೊಳ್ಳುವ ಅಮೇರಿಕನ್ನರೂ ತಡವರಿಸುವಂತೆ ಮಾಡುವ ಹಲವಾರು ಸುದ್ದಿಗಳು ಬರುತ್ತಲೇ ಇವೆ. ಏತನ್ಮದ್ಯೆ ಯಾವಾಗಲೂ ಮೊದಲ ಸುದ್ದಿಯಾಗೇ ಮೆರೆಯುತ್ತಿದ್ದ ಇರಾಕ್ ಸುದ್ದಿಗಳೂ ಸಹ ಈಗ ಮೂರನೆಯ ಸ್ಥಾನವನ್ನು ಪಡೆದಿವೆ. ಇಂದು ನಾನು ನೋಡಿದ ಹಾಗೆ ಇಸ್ರೇಲ್-ಲೆಬನಾನ್, ಇಂಡೋನೇಸಿಯಾದ ತ್ಸುನಾಮಿ, ಜಿ-೮ ಸಮ್ಮಿಟ್ ವರದಿಗಳು, ಡಿಸ್ಕವರಿ ಷಟಲ್ ಸುರಕ್ಷೆಯಿಂದ ಹಿಂತಿರುಗಿದ್ದು ಇವೆಲ್ಲೆದರ ಮುಂದೆ ಇರಾಕ್‌ನಲ್ಲಿ ಎಪ್ಪತ್ತೈದು ಜನಕ್ಕೂ ಹೆಚ್ಚು ಸತ್ತ ಸುದ್ದಿ 'ದಿನಾ ಸಾಯೋರಿಗೆ ಅಳೋರ್ ಯಾರು?' ಎನ್ನುವಂತೆ ಗೌಣವಾಗಿತ್ತು.

ಇಸ್ರೇಲ್-ಲೆಬನಾನ್ ಕುರಿತು ಹಲವಾರು ವರದಿಗಳು ಬರ್ತಾ ಇವೆ, ಅಲ್ಲಲ್ಲಿ ಓದಿ, ಕೇಳಿ ನೋಡಿದ ಮೇಲೆ ಸುದ್ದಿಯ ಮೇಲೆ ಪ್ರತಿಕ್ರಿಯಿಸದೇ ಸುಮ್ಮನಿರೋದಾದರೂ ಹ್ಯಾಗೆ? ಅಷ್ಟಕ್ಕೂ ಉಳಿದೆಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗದಿರುವ ವಿಷಯವನ್ನು ನಾನೇನೂ ಬರೆಯುತ್ತಿಲ್ಲವಲ್ಲ ಎಂದೆನಿಸಿದರೂ ಇಂತಹ ಮಹತ್ವಪೂರ್ಣ ಸುದ್ದಿಯನ್ನು ಕುರಿತ ನನ್ನ ನಿಲುವನ್ನು ಆದಷ್ಟು ಬೇಗ ಹೊರಹಾಕಿದರೆ ಒಳ್ಳೆಯದು ಎನಿಸಿದ್ದರಿಂದ ಈ ಲೇಖನವನ್ನು ಬರೆಯಬೇಕಾಗಿ ಬಂದಿತು, ಎದೆ ಮೇಲೆ ಚಪ್ಪಡಿ ಹೊತ್ತುಕೊಂಡು ಎಷ್ಟೊತ್ತೂ ಅಂತ ನಿರಾಳವಾಗಿ ಮಲಗಿರಲು ಸಾಧ್ಯ, ಹಾಗಂತ ಈ ಲೇಖನ ಬರೆದ ನಂತರ ಚಪ್ಪಡಿ ಇಳಿಸಿಕೊಂಡು ಕೈ ತಟ್ಟಿಕೊಳ್ಳುತ್ತೆನೆಂದು ಅರ್ಥವಲ್ಲ, ಮತ್ತೆ ಇದೇ ವಿಷಯದ ಮೇಲೆ ಬೇರೆ ಯಾವುದಾರೂ ದೃಷ್ಟಿಕೋನ ಬಲವಾಗುವ ಸಾಧ್ಯತೆಗಳೂ ಇವೆ, ಅಥವಾ ಈ ವಿಷಯ ಮುಂದೆ ಹೇಗೆ ಬೆಳೆಯಬಲ್ಲದು ಎನ್ನುವ ಕುತೂಹಲವೂ ಇದೆ.

ಲೆಬನಾನ್ ಮೇಲೆ ಧಾಳಿ ನಡೆಸಿದ ಇಸ್ರೇಲ್‌ನವರಿಗೆ ತಮ್ಮ ಎರಡು ಸೈನಿಕರನ್ನು ಹಿಜ್‌ಬುಲ್ಲಾ ಉಗ್ರಗಾಮಿಗಳು ಅಪಹರಿಸಿದ್ದು ಒಂದು ನೆಪ ಮಾತ್ರ, ಹಿಜ್‌ಬುಲ್ಲಾ ಹೋರಾಟಗಾರರನ್ನು ಹತ್ತಿಕ್ಕುವುದು ಇಸ್ರೇಲ್‌ನ ದೂರದೃಷ್ಟಿಗಳಲ್ಲೊಂದಾಗಿತ್ತು. ಲೆಬನಾನ್ ಆಗಲಿ, ಹಿಜ್‌ಬುಲ್ಲಾ ಉಗ್ರಗಾಮಿಗಳಾಗಲೀ ಇಸ್ರೇಲ್‌ನ ಮಿಲಿಟರಿ ಶಕ್ತಿಯ ಮುಂದೆ ಯಾವ ಲೆಕ್ಕಕ್ಕೂ ಇಲ್ಲ. ಬಲಿಷ್ಠವಾದ ಇಸ್ರೇಲ್‌ಗೂ ಲೆಬನಾನ್ ದೇಶದಲ್ಲೇ ಪೂರ್ಣ ಬೆಂಬಲ ಇರದ ಹಿಜ್‌ಬುಲ್ಲಾ ಹೋರಾಟಗಾರರಿಗೂ ಎಲ್ಲಿಯ ಸಮ? ಹಿಜ್‌ಬುಲ್ಲಾ ಹೋರಾಟವನ್ನು ಹುಟ್ಟಡಗಿಸುತ್ತೇವೆ ಎನ್ನುವುದು ಇಸ್ರೇಲ್‌ನವರಿಗೆ ಒಂದ ದೊಡ್ಡ ಸ್ಲೋಗನ್ ಆಗಿ ಹೋಗಿದೆ, ನಮ್ಮ ಸೈನಿಕರನ್ನು ಬಿಡುವವರೆಗೆ ಹಾಗೂ ನಮ್ಮ ಮೇಲೆ ರಾಕೆಟ್ ಧಾಳಿಗಳನ್ನು ನಿಲ್ಲಿಸುವವರೆಗೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಇಸ್ರೇಲ್‌ನವರ ಹಾಡು. ಇಸ್ರೇಲ್‌ನವರು ಈಗಾಗಲೇ ಲೆಬನಾನ್ ಗಡಿಯ ಪ್ರದೇಶಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶನಕ್ಕಿಟ್ಟಿರುವುದರ ಜೊತೆಗೆ ಉಳಿದೆಲ್ಲ ಗಡಿಗಳಲ್ಲೂ ಏನಾಗುತ್ತಿದೆ ಎಂದು ಬಿಟ್ಟಕಣ್ಣು ಮುಚ್ಚದೇ ನೋಡುತ್ತಿದ್ದಾರೆ.

ಲೆಬನಾನ್‌ನ ಸ್ಥಳೀಯ ಸರ್ಕಾರದಲ್ಲಿ ಭಾಗವಹಿಸಿರುವ ಹಿಜ್‌ಬುಲ್ಲಾ ಉಗ್ರಗಾಮಿಗಳದ್ದು ಇಸ್ರೇಲ್‌ನವರ ಹುಟ್ಟಡಗಿಸಬೇಕು ಎನ್ನುವುದು ಯಾವತ್ತಿದ್ದರೂ ಹಿಂಗದ ದಾಹ. ಪದೇ-ಪದೇ ಇಸ್ರೇಲ್ ಗಡಿಯಲ್ಲಿ ನುಗ್ಗಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದರ ಜೊತೆಗೆ ಹಲವಾರು ಮಾಧ್ಯಮಗಳು ಹೇಳುವಂತೆ ಸಿರಿಯಾ, ಇರಾನ್‌ನಲ್ಲಿ ತಯಾರಾದ ಹಲವಾರು ರಾಕೆಟ್‌ಗಳನ್ನು ಹಾರಿಸಿ ಎಷ್ಟು ಸಾಧ್ಯವೋ ಅಷ್ಟು ನಷ್ಟವನ್ನು ಇಸ್ರೇಲ್‌ನವರಿಗೆ ಮಾಡಬೇಕು ಎನ್ನುವುದು ಅವರ ಇಂಗಿತ. ಇಸ್ರೇಲ್‌ನಿಂದ ಹಿಡಿದುಕೊಂಡು ಹೋಗಿರುವ ಇಬ್ಬರು ಸೈನಿಕರನ್ನು ಬಿಡುವ ಮಾತಿರಲಿ, ಈಗಂತು ಇಸ್ರೇಲ್ ನೇರವಾಗಿ ಯುದ್ಧಕ್ಕೇ ಇಳಿದಿರುವುದರಿಂದ ಅವರು ಇನ್ನೂ ಜೀವಂತವಿದ್ದರೇ ಹೆಚ್ಚು. ತಮ್ಮ ನೆಲೆಗಳ ಮೇಲೆ ನಡೆದ ಧಿಡೀರ್ ಆಕ್ರಮಣದಿಂದ ಸಾಕಶ್ಟು ಹೊಡೆತ ತಿಂದೂ, ಮುಖ್ಯ ರಸ್ತ್ರೆ, ಸೇತುವೆಗಳು ಹಾಗೂ ಏರ್‌ಪೋರ್ಟಿನ ಮೇಲೂ ಆದ ಧಾಳಿಯಿಂದ ಸ್ವಲ್ಪ ಕಂಗಾಲಾದಂತೆ ಕಂಡುಬಂದರೂ ಹಿಜ್‌ಬುಲ್ಲಾ ಹೋರಾಟ ಆಗಾಗ್ಗೆ ನಡೆಸೋ ಧಾಳಿಯ ರೂಪದಲ್ಲಿ ಗಡಿಯ ಹತ್ತಿರವಿರುವ ಹಲವಾರು ಸೌಕರ್ಯಗಳನ್ನು ಉರುಳಿಸುವಲ್ಲಿ ಸಫಲವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕ, ಬ್ರಿಟನ್, ಜರ್ಮನಿ ಮುಂತಾದ ದೇಶಗಳು ಇಸ್ರೇಲ್ ಪರವಹಿಸಿಕೊಂಡೇ ವಿಶ್ವಸಂಸ್ಥೆಯವರಿಗೆ 'ಆದಷ್ಟು ಬೇಗ ಹೋಗಿ ಮಧ್ಯಸ್ಥಿಕೆ ವಹಿಸಿ' ಎಂದು ಸೂಚಿಸುತ್ತಿವೆ. ವ್ಯಾಟಿಕನ್ನೂ ಸೇರಿ ರಷ್ಯಾ ಮೊದಲಾದ ದೇಶಗಳು ಇಸ್ರೇಲ್‌ನವರ ಧಾಳಿ ದುಡುಕಿದ ನಿರ್ಧಾರ, ಹೀಗೆ ಮಾಡಬಾರದಿತ್ತು ಎಂದು ಹೇಳಿಕೆಕೊಟ್ಟಿವೆ. ಅಮೇರಿಕದವರಿಗೆ ಒಂದು ಕಡೆ ಎಲ್ಲಿ ಈ ಉರಿ ದೊಡ್ಡ ಕಾಡ್ಗಿಚ್ಚಾಗಿ ಹಬ್ಬಿ ಮೊದಲೇ ಹೊತ್ತಿಕೊಂಡಿರೋ ಮಿಡ್ಲ್ ಈಸ್ಟ್ ಬೆಂಕಿಯನ್ನು ಇನ್ನಷ್ಟು ಉರಿಸುತ್ತೋ ಎಂದು ಭಯ ಒಂದುಕಡೆಯಾದರೆ ಇದೇ ಸಮಯದಲ್ಲಿ ಸಾಧ್ಯವಾದರೆ ಸಿರಿಯಾ ಹಾಗೂ ಇರಾನಿಗೆ ಬುದ್ದಿ ಕಲಿಸಬೇಕು ಅನ್ನಿಸಿದ್ದು ಅಲ್ಲಲ್ಲಿ ಕಂಡುಬಂತು.

* ತಮ್ಮ-ತಮ್ಮ ದೇಶ, ಗಡಿಗಳ ಭದ್ರತೆಯ ದೃಷ್ಟಿಯಿಂದ ನೆರೆಹೊರೆಯವರ ಮೇಲೆ ಆಕ್ರಮಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ದೇಶದ ಉದಾಹರಣೆ ತೆಗೆದುಕೊಂಡರೆ, ಪಾಕಿಸ್ತಾನದ ಸರ್ಕಾರದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಎಷ್ಟೋ ಇಸ್ಲಾಮಿಕ್ ಸಂಘಟನೆಗಳು ಪಾಕಿಸ್ತಾನದಲ್ಲಿದ್ದುಕೊಂಡು ಭಾರತದ ಮೇಲೆ ಹಲವಾರು ವರ್ಷಗಳ ಕಾಲ ಆಕ್ರಮಣ ನಡೆಸುತ್ತಿಲ್ಲವೇ? ಇವೆಲ್ಲವನ್ನೂ ನೋಡಿಕೊಂಡು ಪಾಕಿಸ್ತಾನದ ಶಹರಗಳಿರಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲಾದರೂ ಭಾರತ ಇಷ್ಟೊಂದು ವರ್ಷಗಳಲ್ಲಿ ಆಕ್ರಮಣವನ್ನು ಮಾಡಿದೆಯೇ?

* ಸಹನೆ ಎಂದೂ ದೌರ್ಭಲ್ಯವಾಗೋದಿಲ್ಲ, ಸಹನೆಯ ಬೆಲೆ ದಿಡೀರನೆ ಧಾಳಿಗೆ ಹೋಗುವ ದೇಶಗಳಿಗೆ ಗೊತ್ತೇ? ಇಬ್ಬರು ಸೈನಿಕರನ್ನು ಕಳೆದುಕೊಂಡು ಆಕ್ರಮಣಕ್ಕೆ ತೊಡಗಿದ ದೇಶ ನೂರಾರು ಅಮಾಯಕರನ್ನು ಗಡಿಯ ಆಚೀಚೆ ಕಳೆದುಕೊಳ್ಳಲು ಹೇಗೆ ಮನಸ್ಸು ಮಾಡುತ್ತದೆ? ಅಲ್ಲದೇ ಈ ಎರಡೂ ದೇಶಗಳನ್ನು ಬೆಂಬಲಿಸುವ ಹಲವಾರು ಮುಂದುವರಿದ ದೇಶಗಳು ತಮ್ಮ ದೇಶದ ಪ್ರಜೆಗಳನ್ನು ಉಪಾಯವಾಗಿ ಸಾಗ ಹಾಕುತ್ತಿರುವುದು ಏಕೆ? ಯಾವುದೋ ದೇಶದಲ್ಲಿ ಪಡೆದ ಪಾಸ್‌ಪೋರ್ಟ್ ಅನ್ನೋ ಪುಸ್ತಕ ಜನ ಸಾಮಾನ್ಯರ ಜೀವನದಲ್ಲಿ ಎಷ್ಟೊಂದು ಬದಲಾವಣೆಗಳನ್ನು ಮಾಡಬಲ್ಲದು?

* ಅಮೇರಿಕದವರು ಖುಷಿ ಪಡಲೇ ಬೇಕು, ಪ್ರತಿನಿತ್ಯ ಹೊರಬರೋ ವೃತ್ತ ಪತ್ರಿಕೆಗಳ ಮುಖ ಪುಟದಲ್ಲಿರೋ ಸೀಮಿತ ಸ್ಥಳದಲ್ಲಿ ಇತ್ತೀಚೆಗೆ ಇರಾಕ್‌ನ ಸುದ್ದಿ ಯಾವುದೋ ಮೂಲೆ ಸೇರಿಕೊಳ್ಳುತ್ತಲ್ಲ ಅದಕ್ಕೆ. ತಮ್ಮ ಮಾತು ಕೇಳದವರ ಮೇಲೆ ಆಕ್ರಮಣಕ್ಕೆ ಎಲ್ಲ ದೇಶಗಳೂ ಯುದ್ಧಕ್ಕೆ ಇಳಿದವೆಂದರೆ ಅಲ್ಲಿಗೆ ಪ್ರಪಂಚದ ಕೊನೆಯಾಯಿತೆಂದೇ ಲೆಕ್ಕ - ಈ ತರ್ಕ ಅಮೇರಿಕದವರಿಗೆ ಏಕೆ ಹೊಳೆಯುವುದಿಲ್ಲವೋ?

* ನನಗೆ ಕಾಲಿನ್ ಪವೆಲ್ ಮೇಲಾದರೂ ಅಲ್ಪಸ್ವಲ್ಪ ವಿಶ್ವಾಸವಿತ್ತು, ಆದರೆ ಕಾಂಡೋಲೀಸಾ ರೈಸ್ ಮೇಲೆ ನನಗೆ ಏಕೋ ವಿಶ್ವಾಸವೇ ಮೂಡುತ್ತಿಲ್ಲ, ಇದು ನನ್ನ ಮಿತಿ ಇದ್ದರೂ ಇರಬಹುದು, ಅಥವಾ ತನ್ನ ಮಾತುಗಳನ್ನು ಮಾತ್ರ ಹೋದಲ್ಲಿ ಬಂದಲ್ಲಿ ಸಾಧಿಸಿಕೊಳ್ಳುವ ಆಕೆಯ ನಿಲುವಿದ್ದರೂ ಇರಬಹುದು.

ಅದು ಹೇಗಾದರೂ ನಡೆದುಕೊಂಡು ಹೋಗುತ್ತಿರಲಿ ನೆಟ್ಟಗಿರುವ ದೇಶವನ್ನು ಕಲಕಿದಾಗ ಅಲ್ಲಿ ಅಮಾಯಕರಿಗೆ ಹೊಡೆತ ಬೀಳುತ್ತದೆ, ಅರಾಜಕತೆ ತಾಂಡವವಾಡುತ್ತದೆ. ತಮ್ಮ ಪ್ರಾಸೆಸ್ಸುಗಳ ಮೇಲೆ ವಿಶೇಷ ಒಲವನ್ನು ಇಟ್ಟುಕೊಂಡು ಮುಂದೆ ನಡೆಯುತ್ತಿರುವ ಮುಂದುವರಿದ ರಾಷ್ಟ್ರಗಳಿಗೆ ಯಾವ ಸಮಯೋಚಿತ ಪ್ರಾಸೆಸ್ಸುಗಳೂ, ವೈಜ್ಞಾನಿಕ ನೆಲಗಟ್ಟೂ ಇರದ ಒಂದು ಧರ್ಮೀಯರು ಮಾತ್ರ ಶತ್ರುಗಳು. ಈ ಶತ್ರುಗಳ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದು ಸಾಧಿಸಿಕೊಳ್ಳುವ ಹೊತ್ತಿನಲ್ಲೇ ಇಂತಹ ಶತ್ರುಗಳ ಮತ್ತೊಂದು ಮುಖವನ್ನು ಹೊತ್ತುಕೊಂಡಿರುವ ಎಷ್ಟೋ ರಾಷ್ಟ್ರದವರ ಕೈ ಕುಲುಕುವ ಕೆಲಸವೂ ಹಾಡ ಹಗಲೇ ನಡೆಯುತ್ತದೆ. ಸೌದಿ ಅರೇಬಿಯಾ, ಪಾಕಿಸ್ತಾನಗಳಿಗೆ ಒಂದು ಉತ್ತರ - ಇರಾನ್, ಲೆಬನಾನ್‌ಗಳಿಗೆ ಇನ್ನೊಂದು. ಒಂದು ಸೈನ್ಯದಲ್ಲಿ ಬದುಕಿನ ಬಗ್ಗೆ ಹಲವಾರು ಆಸೆಗಳನ್ನಿಟ್ಟುಕೊಂಡ ಯುವ ಸೈನಿಕರು ತಮ್ಮ ದೇಶದ ಮುಖಂಡರ ಮಾತನ್ನು ನಂಬಿ ಇನ್ಯಾವುದೋ ದೇಶವನ್ನು ರಕ್ಷಿಸೋದಕ್ಕೆ ತಮ್ಮ ಪ್ರಾಣಗಳನ್ನು ತೆತ್ತರೆ, ಮತ್ತೊಂದು ಗೆರಿಲ್ಲಾ ಗುಂಪಿನಲ್ಲಿ ಮುಲ್ಲಾಗಳಿಂದಲೋ ಮತ್ಯಾರಿಂದಲೋ ಪ್ರಭಾವಿತರಾಗಿ, ತಮ್ಮ ಜೀವ-ದೇಹಗಳನ್ನೂ ಯಾವುದೋ ದಿವ್ಯ ಕಾರಣಕ್ಕೆ ಬಲಿಕೊಡುವ ಕಾಯಕ ನಿರಂತರವಾಗಿ ನಡೆಯುತ್ತದೆ. ಈ ರಾಷ್ಟ್ರಗಳ ಧುರೀಣರಿಗೆ ಅಥವಾ ಮದರಸಗಳ ಮುಲ್ಲಾಗಳಿಗೆ ಈ ಯುವಕರು ಚದುರಂಗದಾಟದ ಕಾಯಿಗಳಂತೆ ಕಂಡುಬರುತ್ತಾರೆ.

ನನಗೆ ನೆನಪಿರೋ ಹಾಗೆ ತೊಂಬತ್ತೊಂದರಲ್ಲಿ ನಡೆದ ಮೊದಲ ಇರಾಕ್ ಕದನದ ಸಮಯದಲ್ಲಿ ಒಂಭತ್ತು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಇದ್ದದ್ದು, ಕದನ ಮುಗಿಯುವ ಹೊತ್ತಿಗೆ ಹದಿನೆಂಟು ರೂಪಾಯಿಗೆ ಬಂದಿತ್ತು. ಅಪ್ಪ ಬುಷ್‌ನ ಕಾಲ ಮುಗಿದು ಮಗ ಬುಷ್‌ನ ಕಾಲ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗ ಹಾಗೂ-ಹೀಗೂ ಒಂದು ಲೀಟರ್ ಪೆಟ್ರೋಲ್‌ಗೆ ಅರವತ್ತು ರೂಪಾಯಿ ಹತ್ತಿರವಾಯಿತು. ಇಸ್ರೇಲ್ ಆಗಲಿ, ಲೆಬನಾನ್ ಆಗಲಿ ತೈಲವನ್ನೇನೂ ಹೊರತೆಗೆಯೋದಿಲ್ಲ, ಆದರೂ ಈ ಗಲಾಟೆ ಹೀಗೆ ಮುಂದುವರೆದರೆ ಇನ್‌ಫ್ಲಮೆಬಲ್ ತೈಲವನ್ನು ಮಾರುವ ಪಕ್ಕದಲ್ಲಿರುವ ದೇಶಗಳೂ ಹೊತ್ತಿಕೊಂಡು ಉರಿದರೆ ಅಲ್ಲಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿ ಆದಂತೆಯೇ ಲೆಕ್ಕ. ನಾನು ಇಲ್ಲಿ ಅಮೇರಿಕದಲ್ಲಿ ಕುಳಿತು ಇವರೆಲ್ಲರ ಜಗಳದಲ್ಲಿ ಹುಟ್ಟಿದ ಬೆಂಕಿಯ ಜಳದ ಚುರುಕು ಮುಟ್ಟಿದವನಂತೆ ಪೆಟ್ರೋಲ್ ಬೆಲೆಯನ್ನು ಚರ್ಚಿಸಿದರೆ ಅದು ನನ್ನ ಅಮೇರಿಕನ್ ಮನಸ್ಥಿತಿಯನ್ನು ಪ್ರತಿಬಿಂಬಿಸೀತು, ಆದರೆ ನಮ್ಮೂರಿನ ಮೆಷ್ಟ್ರುಗಳಿಗಾಗಲೀ, ಕೂಲಿನಾಲಿ ಮಾಡಿ ಜೀವಿಸೋರಿಗಾಗಲೀ ಹೀಗೆ ದಿಢೀರನೆ ಹೆಚ್ಚುವ ಪೆಟ್ರೋಲ್ ಬೆಲೆ ಹುಟ್ಟಿಸಬಹುದಾದ ಉಳಿದೆಲ್ಲ ಪದಾರ್ಥಗಳ ಹೆಚ್ಚಿನ ಬೆಲೆ ಹಾಗೂ ಹಣದುಬ್ಬರವನ್ನು ಎದುರಿಸುವ ಶಕ್ತಿ ಅಷ್ಟೇ ವೇಗವಾಗಿ ಬರೋದಿಲ್ಲವಲ್ಲ, ಅದಕ್ಕೇನು ಮಾಡೋದು?

ಅಮೇರಿಕದವರು ಇರಾಕ್ ಯುದ್ಧಕ್ಕೆ ಹೋಗಬಾರದಿತ್ತು, ಇಸ್ರೇಲ್‌ನವರು ಲೆಬನಾನ್ ಮೇಲೆ ಈ ರೀತಿ ಧಾಳಿ ನಡೆಸಬಾರದಿತ್ತು ಎನ್ನುವ ನನ್ನ ತರ್ಕಕ್ಕೆ ಎಲ್ಲೂ ಯಾವ ಮಾನ್ಯತೆಯೂ ಸಿಗೋದಿಲ್ಲ, ಏಕೆಂದರೆ ಇಂದು ಇಸ್ರೇಲ್‌ನ ಧಾಳಿಯನ್ನು ಬೆಂಬಲಿಸಿದಂತೆಯೇ ಅಂದು ಇರಾಕ್ ಯುದ್ಧವನ್ನು ಬೆಂಬಲಿಸಿದ ಹೆಚ್ಚಿನ ರಾಷ್ಟ್ರಗಳು - ಬ್ರಿಟನ್, ಅಮೇರಿಕ, ಆಸ್ಟ್ರೇಲಿಯಾ, ಇತ್ಯಾದಿ - ಇವುಗಳಲ್ಲೆದರ ಮುಖಂಡರು ಮತ್ತೆ ಆರಿಸಿ ಬಂದಿದ್ದನ್ನು ನೋಡಿದರೆ ನನ್ನ ಲೆಕ್ಕದಲ್ಲೇ ಎಲ್ಲೋ ತಪ್ಪಿದೆ ಎನ್ನಿಸುವುದರ ಗುಟ್ಟು ನನಗೆ ಇನ್ನೂ ಹೊಳೆದಿಲ್ಲ!

Saturday, July 15, 2006

ಮನೆಗೊಂದೇ ಮಗುವೇ? ಛೇ!

'ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು', well, I don't know about that for sure, ಚೀನಾದಲ್ಲಂತೂ ಹುಟ್ಟಲೇ ಬಾರದು ಎನ್ನಿಸಿ ಬಿಟ್ಟಿದೆ, ಮತ್ತಿನ್ನೆನು? ಅಲ್ಲಿ ಮನೆಗೆ ಒಂದೊಂದೇ ಮಗುವಂತೆ - ಛೇ, ಸಾಧ್ಯವೇ ಇಲ್ಲಪ್ಪಾ, ಒಡಹುಟ್ಟಿದವರು, ಅಕ್ಕ-ತಂಗಿ, ಅಣ್ಣ-ತಮ್ಮ ಇವರ ನಡುವೆ ಬದುಕಿ ಬೆಳೆಯದೇ ಇದ್ದರೆ ಆ ಬದುಕಾದರೂ ಏಕೆ?

ನನ್ನ ಬಾಲ್ಯವನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮ ಕುಟುಂಬದ ಚಿತ್ರಣ ಕಣ್ಣ ಮುಂದೆ ಬರುತ್ತದೆ, ಎಷ್ಟೋ ಸಂತೋಷದ ಘಳಿಗೆಗಳು ಕಣ್ಣ ಮುಂದೆ ಸುಳಿಯುತ್ತವೆ. ನಾವೆಲ್ಲರೂ ಇದ್ದ ಚಿಕ್ಕ ಮನೆಯಲ್ಲಿಯೇ ಎಷ್ಟೊಂದು ಚೆನ್ನಾಗಿ ಹೊಂದಿಕೊಂಡಿದ್ದೆವು, ಒಬ್ಬೊಬ್ಬರ ಕಷ್ಟ ಸುಖಗಳಿಗೆ ಇನ್ನೊಬ್ಬರಾಗುತ್ತಿದ್ದೆವು. ಕೆಲವರು ಹೇಳುವಂತೆ ತಂದೆ-ತಾಯಂದಿರು ಬೆಳೆಸುವುದು ಮೊದಲ ಎರಡು ಮಕ್ಕಳನ್ನು ಮಾತ್ರ, ಇನ್ನು ಉಳಿದವರು ಈ ಹಿರಿಯ ಮಕ್ಕಳ ನೆರಳಿನಲ್ಲಿಯೇ ಬೆಳೆದು ಬಿಡೋದು ಒಂದು ರೀತಿ ದೊಡ್ಡ ಮಕ್ಕಳಿಗೆ ಸಂಬಳ ಸಿಗದ 'ಬೇಬಿ ಸಿಟ್ಟಿಂಗ್' ಅವಕಾಶ, ಚಿಕ್ಕವರಿಗೆ ಯಾವತ್ತಿದ್ದರೂ ಆಟವಾಡಲು ಒಂದಿಷ್ಟು ಜನ, ಇಷ್ಟಂತೂ ಗ್ಯಾರಂಟಿ. ಕೆಲವರು ಹೇಳುತ್ತಾರೆ ಸ್ನೇಹಿತರನ್ನು ನಾವು ಆರಿಸಿಕೊಳ್ಳಬಹುದು ಆದರೆ ಒಡಹುಟ್ಟಿದವರನ್ನು ನಾವು ಪಡೆದುಕೊಂಡು ಬರುತ್ತೇವೆ ಎಂಬುದಾಗಿ, ನನಗೆ ಅದರಲ್ಲೇನೂ ವಿಶೇಷ ಎನ್ನಿಸುವುದಿಲ್ಲ - ನಿಮ್ಮದು ಅವಿಭಕ್ತ ಕುಟುಂಬ ಅಥವಾ ದೊಡ್ಡ ಪರಿವಾರವಾದರೆ ಬದುಕಿನಲ್ಲಿ ಎಲ್ಲ ಥರದವರ ಜೊತೆಗೆ ಹೊಂದಿಕೊಂಡು ಹೋಗುವ ಪಾಠ ಮನೆಯಲ್ಲಿಯೇ ಆರಂಭವಾಗುತ್ತದೆ, ಅದು ಮುಂಜಾನೆ ಬಚ್ಚಲು ಮನೆಯಲ್ಲಿ ಸರತಿಗಾಗಿ ಕಾಯುವ ಸಹನೆ ಇರಬಹುದು ಅಥವಾ 'ಅವನಿಗಿದೆ, ನನಗಿಲ್ಲ' ಎನ್ನುವ ಸಹಬಾಳ್ವೆ ಇರಬಹುದು, ಅವೆಲ್ಲವೂ ಮನೆಯಲ್ಲಿಯೇ ಆರಂಭವಾದರೇ ಒಳ್ಳೆಯದಲ್ಲವೇ?

ಮನೆಯಲ್ಲಿ ಹೆಚ್ಚು ಮಕ್ಕಳು ಇರಬೇಕೆಂದಾಕ್ಷಣ ನನಗೆ ಕುಟುಂಬ ಯೋಜನೆಯ ಮೇಲೆ ನಂಬಿಕೆ ಇಲ್ಲವೆಂದೇನು ಹೇಳುತ್ತಿಲ್ಲ, ನನ್ನ ಪ್ರಕಾರ ಕುಟುಂಬ ಯೋಜನೆಯೆಂದರೆ ಕಡಿಮೆ ಮಕ್ಕಳು ಎಂದು ಆಲೋಚಿಸಿಕೊಳ್ಳುವುದಕ್ಕಿಂತಲೂ 'ಸಂಪೂರ್ಣ ಪರಿವಾರ' ಎಂದು ಆಲೋಚಿಸಿಕೊಂಡರೆ ಹೆಚ್ಚು ಅರ್ಥವೆನಿಸುತ್ತದೆ, ನನ್ನ ತಂದೆ-ತಾಯಿ ಇಬ್ಬರೂ ಪೂರ್ಣಾವಧಿ ಕೆಲಸ ಮಾಡಿ ಕೆಳ-ಮಧ್ಯಮ ವರ್ಗದಲ್ಲಿಯೇ ನಾವು ಆರು ಜನರನ್ನು ಸಾಕಿ ಸಲಹಲಿಲ್ಲವೇ? ನಮಗೆಲ್ಲ ಐಶಾರಾಮವಿಲ್ಲದಿದ್ದರೇನಂತೆ ಬೇಕಾದ ವಿದ್ಯಾಭ್ಯಾಸವನ್ನು ನೀಡಲಿಲ್ಲವೇ, ಬದುಕುವುದನ್ನು ಕಲಿಸಲಿಲ್ಲವೇ? ಇಂತಹ ಪೋಷಕರು ಕಲಿಸಿದ ಪಾಠಗಳೇ ಸಾಕು ಒಂದು ರೀತಿ ಬ್ಯಾಂಕಿನಲ್ಲಿ ಮಿಲಿಯನ್ ಡಾಲರ್ ಇದ್ದ ಹಾಗೆ ಅವುಗಳ ಸಹದರ್ಶನದಲ್ಲಿ ಯಾವ ಹಾದಿಯನ್ನು ಬೇಕಾದರೂ ಸವೆಸಬಹುದು, ಎಲ್ಲಿ ಬೇಕಾದರೂ ಬೆಳೆಯಬಹುದು. ಅದನ್ನು ಬಿಟ್ಟು 'ಮನೆಗೊಂದೇ ಮಗು' ಎನ್ನುವುದನ್ನು ನನ್ನ ಕೈಯಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಶಾಲೆಯಿಂದ ಮನೆಗೆ ಬಂದ ಮಗುವಿಗೆ ತಂದೆ-ತಾಯಿಯರನ್ನು ಬಿಟ್ಟು ಒಡನಾಡುವುದಕ್ಕೆ ಬೇರೆ ಯಾರೂ ಇರುವುದಿಲ್ಲವೆಂದರೆ ಇಂತಹ ವ್ಯವಸ್ಥೆಯಲ್ಲಿ ಕೊರತೆಯಿದೆ ಎನ್ನೋದೇ ನನ್ನ ಭಾವನೆ. ಎಷ್ಟೋ ಸಾರಿ ಚೀನಾದ ಬಗ್ಗೆ ತೋರಿಸೋ ಸಾಕ್ಷ್ಯಚಿತ್ರಗಳಲ್ಲಿ ಮನೆಗೊಂದು ಮಗುವಿನ ಚಿತ್ರಣವನ್ನು, ಅದರ ಮುಂದಾಗುವ ಪರಿಣಾಮಗಳನ್ನು ಊಹಿಸಿಯೇ ಹೆದರಿಕೆಯಾಗುತ್ತದೆ ಏಕೆಂದರೆ ಮಿಲಿಯನ್‌ಗಟ್ಟಲೆ ಮಕ್ಕಳಿಗೆ ಮನೆಯಲ್ಲಿ 'ಹಂಚಿ ಕೊಳ್ಳುವುದು' ಎಂದರೆ ಏನು ಎಂದೇ ಗೊತ್ತಿಲ್ಲ - ಅವರಿವರ ಜೊತೆಯಲ್ಲಿ ಜಗಳವಾಡಿಯೂ ತಿಳಿದಿಲ್ಲ, ಹಾಗಿದ್ದ ಮೇಲೆ ಇನ್ನು ಅಂತಹ ಮನಸ್ಥಿತಿ ಪರಿಪೂರ್ಣವಾಗಿ ಬೆಳೆಯುವುದಾರೂ ಹೇಗೆ?

ನನಗೆ ಸ್ನೇಹಿತರ ಬಗ್ಗೆ ಅಪಾರ ಗೌರವವಿದೆ ಆದರೆ ಅವರು ಒಡಹುಟ್ಟಿದವರ ಸ್ಥಾನವನ್ನು ತುಂಬಲಾರರು, '...ಬರಬೇಕ ತಂಗಿ ನೀ ಮದುವೀಗೆ...', 'ತವರೂರಾ ಹಾದ್ಯಾಗೆ ಅಣ್ಣಾ ಬರುವುದಾ ಕಂಡೆ...' ಎನ್ನುವ ಜಾನಪದದಲ್ಲಾಗಲೀ, ಅಥವಾ ನೆರೆಹೊರೆಯವರನ್ನು 'ಸಹೋದರ-ಸಹೋದರಿಯರಂತೆ ಕಾಣುವ' ನಮ್ಮ ಭಾವನೆಗಳಲ್ಲಾಗಲೀ ಬಹಳಷ್ಟು ಅರ್ಥವಿದೆ. ನಮ್ಮ ಕಲಹಗಳನ್ನು ನಾವು ಮನೆಯಲ್ಲಿ ಬಗೆ ಹರಿಸಿಕೊಳ್ಳುತ್ತಿರುವಾಗ ನಾನೂ, ನನ್ನ ಎರಡನೇ ಅಣ್ಣನೂ ಬಹಳಷ್ಟು ಹೊದೆದಾಡಿದ್ದಿದೆ, ಅವೆಲ್ಲವೂ ಶಾಲೆಯ ಹಂತಕ್ಕೆ ಮಾತ್ರ ಇತ್ತು, ಮುಂದೆ ಹೈ ಸ್ಕೂಲಿಗೆ ಹೋಗೋದಕ್ಕೆ ಶುರುಮಾಡಿದ ಮೇಲೆ ಫಿಸಿಕಲ್ ಫೈಟಿಂಗ್ ನಿಂತು ಹೋಯಿತು, ನಾವಿಬ್ಬರೂ ಎಷ್ಟು ಹೊಡೆದಾಡುತ್ತಿದ್ದೆವೆಂದರೆ ಉಳಿದವರೂ 'ಈಗ ಏಕೆ ಬಡಿದಾಡೋಲ್ಲ' ಎಂದು ಕೇಳುವಷ್ಟರ ಮಟ್ಟಿಗಿತ್ತು. ಅವನು ನನಗಿಂತ ಬಲಶಾಲಿಯೇ, ಆದರೆ ನನ್ನ ಕಪಿಮುಷ್ಟಿಯ ಹಿಡಿತದಿಂದ ಬಿಡಿಸಿಕೊಳ್ಳಲು ಅವನಿಗೆ ಕಷ್ಟವಾಗುತ್ತಿತ್ತು, ಆದರೂ ಕೊನೆಯಲ್ಲಿ ಅವನೇ ಗೆಲ್ಲುತಿದ್ದನು. 'ಹೀಗಲ್ಲ, ಹಾಗೆ ಮಾಡು' ಎನ್ನುವ ಬೇಕಾದಷ್ಟು ಮಾರ್ಗದರ್ಶನಗಳು ನನಗೆ ನಮ್ಮನೆಯವರಿಂದ ಬೇಕಾದಷ್ಟು ಸಿಕ್ಕಿದೆ, ಇಷ್ಟೆಲ್ಲ ಜನರ ನಡುವೆ ಬೆಳೆದು ಬಂದ ನಾನು ಸ್ವಲ್ಪ ಅಂತರ್ಮುಖಿಯಾಗಿರೋದನ್ನ ಗಮನಿಸಿದರೆ ಇನ್ನು ಮನೆಗೊಂದೇ ಮಗುವಾಗಿದ್ದರೆ ಸದಾ ಮೌನಿಯಾಗೇ ಇರುತ್ತಿದ್ದೆನೇನೋ ಎನ್ನಿಸಿ ಭಯವಾಗುತ್ತದೆ.

ಸಂಪನ್ಮೂಲ, ಜನಜಂಗುಳಿ, ಜನಸಂಖ್ಯೆ ಸಮಸ್ಯೆ ಇತ್ಯಾದಿಯಾಗಿ ಏನು ಬೇಕಾದರೂ ವಾದ ಮಾಡಬಹುದು, ಅದರೆ ನನ್ನ ಮನಸ್ಸಿನ್ನಲ್ಲಿ ಪ್ರತಿಯೊಬ್ಬರಿಗೂ ಕೊನೇ ಪಕ್ಷ ಒಬ್ಬ ಸಹೋದರ-ಸಹೋದರಿ ಇದ್ದರೆ ಅದರ ಅನುಭವವೇ ಬೇರೆ ಎನ್ನುವ ಭಾವನೆ ಬಲವಾಗಿ ನಿಂತಿದೆ. ಆ ಬಾಲ್ಯದ ನೆನಪುಗಳು ಒಂದು ಒಳ್ಳೆಯ ಮನಸ್ಸಿನ ಭವ್ಯ ಭವಿತವ್ಯದ ಭದ್ರ ಬುನಾದಿಯನ್ನು ಹಾಕಬಲ್ಲವು. ಕೈ ಬೆರಳುಗಳು ಭಿನ್ನವಾಗಿರೋ ಹಾಗೆ ಸಹೋದರ-ಸಹೋದರಿಯರೂ ನಮಗಿಂತ ಬಹಳ ಭಿನ್ನರಾಗಿರೋದು ಸ್ವಾಭಾವಿಕ, ಈ ಭಿನ್ನತೆಯೇ ವಿಶೇಷವಾಗಿರೋದು, ಎಲ್ಲರೂ ನನ್ನ ಹಾಗೇ ಇದ್ದರೆ ಪ್ರಪಂಚವೇ ಮುಳುಗಿ ಹೋದೀತು. ಆದ್ದರಿಂದಲೇ 'ಹುಟ್ಟಿದರೇ ಕನ್ನಡ ಮಾತಾಡೋ ನಮ್ಮೂರಲ್ಲ್ ಹುಟ್ಟಬೇಕು' ಎಂದು ಬದಲಾಯಿಸಿಕೊಳ್ಳುತ್ತೇನೆ, ಇಷ್ಟೇ ಜನ ಒಡಹುಟ್ಟಿದವರಿದ್ದರಂತೂ ಬದುಕು ಇನ್ನೂ ಚೆನ್ನಾಗಿರುತ್ತೆ!