Thursday, November 16, 2006

ಅಂಗವಿಕಲರು

ನಿನ್ನೆ ಆಫೀಸಿನಿಂದ ಮನೆಗೆ ಹೊರಡೋಣ ಎಂದು ಎಲಿವೇಟರ್‍ಗೆ ಹೋಗುತ್ತಿರುವಾಗ ಎಲಿವೇಟರ್ ಬಾಗಿಲ ಬಳಿ ಅತಿ ಸಣ್ಣದಾಗಿ ಬ್ರೈಲ್ ಲಿಪಿಯಲ್ಲಿ ಫ್ಲೋರ್ ನಂಬರ್ ಅನ್ನು ಕೊರೆದಿದ್ದುದು ಕಂಡು ಬಂತು - ಅಂಗವಿಕಲರಿಗೆ ಈ ದೇಶದಲ್ಲಿ ಬಹಳಷ್ಟು ಸವಲತ್ತುಗಳೇನೋ ಇವೆ ನಿಜ, ಆದರೆ ಒಬ್ಬ ಕುರುಡನಾದವನಿಗೆ ಈ ಬಾಗಿಲಿನ ಹತ್ತಿರವೇ ಇಂಥಾ ಸ್ಥಳಕ್ಕೆ ಬರಬೇಕೆಂದು ಹೇಗೆ ಗೊತ್ತಾಗುತ್ತದೆ? ಕಣ್ಣಿದ್ದವರು ಈ ಬ್ರೈಲ್ ಲಿಪಿಯಲ್ಲಿ ಬರೆದ ಫ್ಲೋರ್ ನಂಬರನ್ನು ಹುಡುಕಲೇ ಕಷ್ಟವಾಗುತಿರುವಾಗ ಇನ್ನು ಕಣ್ಣಿಲ್ಲದವರ ಕಥೆ ಏನಾಗಬೇಕು ಎಂದು ನಗುಬಂತು. ಹಾಗೇ ಪ್ರತಿಯೊಂದು ಕ್ಯೂಬಿಕಲ್ ನಂಬರ್ ಅನ್ನೂ, ಆಫೀಸ್ ನಂಬರ್ ಅನ್ನೂ ಬ್ರೈಲ್ ಲಿಪಿಯಲ್ಲಿ ತಿಳಿಸಿರುವುದೂ ಕಂಡು ಬಂತು. ಇಲ್ಲಿ ನಾನು ನೋಡಿದ ಹಾಗೆ ವೀಲ್ ಚೇರ್ ಬಳಸುವವರ ಸಂಖ್ಯೆ ಹೆಚ್ಚಿದೆಯೇ ವಿನಾ ನಮ್ಮೂರುಗಳಲ್ಲಿ ಕಂಡುಬರುವಂತೆ ಮೂಗರು, ಕಿವುಡರು, ಕುರುಡರು ಹೆಚ್ಚು ಸಂಖ್ಯೆಯಲ್ಲೇನು ಕಂಡು ಬರೋದಿಲ್ಲ.

ನನ್ನ ವಾರಿಗೆಯ ಲಿಂಗರಾಜ, ಮೂಕ - ಬಾಯಿ ಬಾರದವನು. ಅವನ ಅಪ್ಪ-ಅಮ್ಮ ಮಾತ್ರ ಅವನ ಅಂಕಿತ ನಾಮ ಲಿಂಗರಾಜ ಎಂದು ಕರೆಯುವುದನ್ನು ನೋಡಿದ್ದೇನೆಯೇ ಹೊರತು, ಮಿಕ್ಕೆಲ್ಲರೂ ರೂಢನಾಮವನ್ನೇ ಅದರಿಸಿ ಅವನನ್ನು 'ಮೂಕ' ಎಂದು ಕರೆಯುವವರೇ. ಬಹಳಷ್ಟು ಜನರು ಮೂಕರಾಗುವುದು ಅವರವರ ಧ್ವನಿ ಪೆಟ್ಟಿಗೆಯಲ್ಲಿನ ನ್ಯೂನತೆಗಿಂತಲೂ ಅವರ ಕಿವಿ ಸರಿಯಾಗಿ ಕೇಳದಿರುವುದರಿಂದ ಎಂದು ತಿಳಿದುಕೊಳ್ಳಲು ನನಗೆ ಬಹಳೇ ವರ್ಷಗಳು ಬೇಕಾಗಿದ್ದವು. ಭಾರತದಲ್ಲಿ ಈಗೆಲ್ಲ ಹೇಗಿದೆಯೋ ಗೊತ್ತಿಲ್ಲ, ಅಮೇರಿಕದಲ್ಲಂತೂ ಹುಟ್ಟಿದ ಮಕ್ಕಳನ್ನು ಕೆಲವೇ ದಿನ/ಘಂಟೆಗಳೊಳಗೆ ಮಗುವಿನ ಶ್ರವಣ ಶಕ್ತಿಯನ್ನು ಪರೀಕ್ಷಿಸೋದರಿಂದ ಮುಂದೆ ಅವರು ಮೂಕರಾಗಬಹುದಾದ ಸಾಧ್ಯತೆಯನ್ನು ನಿವಾರಿಸಲಾಗುತ್ತದೆ.

ಅಂಗವಿಕಲರಿಗೂ ಸಮಾನ ಸವಲತ್ತುಗಳು ಸಿಗಲಿ ಎಂದು ಬೇಡಲು, ಆಗ್ರಹಿಸಲು ಇಲ್ಲಿ ಹಲವಾರು ಸಂಘ-ಸಂಸ್ಥೆಗಳಿವೆ. ಮುಂದುವರೆದ ಸಮಾಜದ ಇತಿಹಾಸದ ಲಾ ಸೂಟ್‌ಗಳು ಮತ್ತೆ ಇನ್ಯಾವ ವಿಕಲಾಂಗರನ್ನು ತಿರಸ್ಕರಿಸದಂತೆ ನೋಡಿಕೊಳ್ಳುತ್ತವೆ. ಶೌಚಾಲಯದಿಂದ ಹಿಡಿದು ಸಾರ್ವಜನಿಕ ಬಸ್ಸುಗಳವರೆಗೆ, ಆಫೀಸು ಕಟ್ಟಡಗಳಿಂದ ಹಿಡಿದು ಪುಟ್‌ಪಾತ್‌ನಲ್ಲಿ ರಸ್ತೆ ದಾಟುವಂತೆ ಸಹಾಯ ಮಾಡುವ ದೀಪ ಹಾಗೂ ಶಬ್ದ ಸೂಚಕಗಳವರೆಗೆ ಕಾಣುವ ಬೇಕಾದಷ್ಟು ಸವಲತ್ತುಗಳನ್ನು ನೋಡಿ ನಮ್ಮ ದೇಶದಲ್ಲಿ ಅಂಗವಿಕಲರನ್ನು ಸಮಾಜ ಎಷ್ಟೊಂದು ಹಿಂದೆ ತಳ್ಳಿದೆ ಹಾಗೂ ನಿರ್ಲಕ್ಷಿಸಿದೆ ಎಂದು ಬೇಸರವಾಗುತ್ತದೆ. 'ಕುಂಟನಿಗೆ ಎಂಟು ಬುದ್ಧಿ...' ಎಂತಲೋ 'ಕುಂಟಾ ಕುಂಟ ಕುರುವತ್ತಿ, ರಂಟೆ ಹೊಡೆಯೋ ಬಸವಣ್ಣ' ಎಂದು ನಾವು ಅಣಗಿಸಿ, ಆಡಿದ್ದು ನೆನಪಿಗೆ ಬರುತ್ತದೆಯೇ ವಿನಾ ಕೈ ಕಾಲಿಲ್ಲದವರಿಗೆ ಆಧರಿಸಿದ್ದು ಎಲ್ಲೂ ನೆನಪಿಗೆ ಬರುವುದಿಲ್ಲ...ಧೃತರಾಷ್ಟ್ರನಿಂದ ಹಿಡಿದು ಲಿಂಗರಾಜನವರೆಗೆ ಅವರಿಗೆ ಬೇಕಾಗಿರದ ಸಹಾನುಭೂತಿ ಮಾತ್ರ ಧಾರಾಳವಾಗಿ ಸಿಕ್ಕುತ್ತದೆ. ಕೈ ಇಲ್ಲದವನು ಚೊಂಚ, ಕಾಲಿಲ್ಲದವನು ಕುಂಟ, ಕಣ್ಣಿಲ್ಲದವ ಕುರುಡ, ಕಿವಿ ಕೇಳದವನು ಕೆಪ್ಪ, ಮಾತು ಬಾರದವನು ಮೂಗನಾಗೇ ಬದುಕನ್ನು ಸವೆಸುತ್ತಾನೆಯೇ ಹೊರತು ಅವರ ನಿಜನಾಮವನ್ನೂ ಸಹ ಯಾರೂ ಕರೆದು ಗೌರವಿಸದಿರುವ ಹಾಗಿದ್ದುದು ನನ್ನ ನೆನಪಿನಲ್ಲಿದೆ.

ಅತ್ತಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ...ಎನ್ನುವ ಬಸವಣ್ಣನವರ ವಚನದ ಸಾಲುಗಳನ್ನು ಆದರಿಸಿ 'ಅಂಗವಿಕಲನಾಗುವಂತಾದರೆ ಅಮೇರಿಕದಲ್ಲೆ ಹುಟ್ಟುವಂತೆ ಮಾಡಯ್ಯ ತಂದೆ...' ಎಂದು ಯಾರು ಬೇಕದರೂ ಮೊರೆ ಇಡಬಹುದು. ನಿಜವಾಗಿ ಅಂಗವಿಕಲರಾದವರಿಗೆ ಪಾರ್ಕಿಂಗ್ ಸ್ಥಳದಲ್ಲಿ ಸಿಗುವ ಪ್ರಾಶಸ್ತ್ಯವನ್ನು ನೋಡಿ ಕೆಲವೊಮ್ಮೆ ನನಗೆ ಸಿಟ್ಟು ಬಂದಿದ್ದಿದೆ, ಆದರೆ ಅಂಗವಿಕಲರ ಕಷ್ಟವನ್ನು ನೋಡಿದಾಗ ನಿಜವಾಗಿಯೂ ಅವರಿಗೆ ಎಲ್ಲಕಡೆ ಪ್ರಾಶಸ್ತ್ಯ ಸಿಕ್ಕಬೇಕು ಎನ್ನೋದು ನಿಜ. ಆದರೆ ನನಗೆ ಸಿಟ್ಟು ಬರೋ ಹಾಗೆ ಅಂಗವಿಕಲರ ಸ್ಥಾನದಲ್ಲಿ ಒಬೆಸಿಟಿ ಇದ್ದವರು ಕಾಣಿಸಿಕೊಳ್ಳುವ ಪರಿಸ್ಥಿತಿ ಹುಟ್ಟಿದೆ. ವೈಯುಕ್ತಿಕ ಕಾರಣಗಳಿಗೋ ಅಥವಾ ಜೀವನಶೈಲಿಯ ಫಲವಾಗಿಯೋ ಅತಿಬೊಜ್ಜು ಬೆಳೆಸಿ ನಡೆದಾಡುವುದಕ್ಕೆ ಬಹಳ ತ್ರಾಸು ಪಡುವ ಅತಿ ತೂಕದ ಜನರು ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟಿನಿಂದ ಅಂಗವಿಕಲರ ಪರವಾನಿಗೆಯನ್ನು ಪಡೆದು ಕೈ ಕಾಲು ಇಲ್ಲದವರ ಎಲ್ಲ ಸವಲತ್ತುಗಳನ್ನು ಬಾಚಿಕೊಂಡಂತೆ ಒಮ್ಮೆ ಕಂಡು ಬರುತ್ತದೆ. ಕೈ ಕಾಲು ಇಲ್ಲದವರದ್ದು ಒಂದು ರೀತಿಯ ಕಷ್ಟವಾದರೆ ಇವರದ್ದು ಇನ್ನೊಂದು ಥರ ಎಂದು ಮರುಕ ಹುಟ್ಟುತ್ತದೆ.

***

ಹೊಟ್ಟೆ ತುಂಬಿದ ದೇಶಗಳಲ್ಲಿ ಉಪವಾಸ ಸತ್ಯಾಗ್ರಹ ಎಂದೂ ಜನಪ್ರಿಯವಾಗೋದಿಲ್ಲ ಎಂದು ಎಲ್ಲಿಯೋ ಓದಿದ್ದೆ - ಇತ್ತೀಚೆಗೆ ಒಬೆಸಿಟಿಯ ಬಗ್ಗೆ ಓದಿ/ಕೇಳಿದ ಮೇಲೆ ಅದು ನಿಜವಿದ್ದಿರಬಹುದು ಎನ್ನಿಸುತ್ತಿದೆ.

Wednesday, November 15, 2006

ಸಿಟ್ಟನೇಕೆ ಮಾಡುತಿ?

ದೂರ ಇರುವ ಗುರಿಯ ಮುಟ್ಟೆ
ಹೋಗಿ ಬರಲು ಹಲವು ಬಟ್ಟೆ
ಕಷ್ಟ ಸುಖವೋ ಇರಲಿ ನಮಗೆ
ಅವರವರಿಗೆ ಅವರ ಬಗೆ

ಹನಿಗಳಾಯ್ದು ಹಳ್ಳವಾಯ್ತು
ತನಿಗಳನ್ನು ಇಟ್ಟುಹೋಯ್ತು
ಬಿಳಿ ಮೋಡ ತರದ ಮಳೆಗೆ
ಚಿಂತೆಯೆಂಬುದಿಲ್ಲ ಇಳೆಗೆ

ದೂರ ದೂರವೇನು ಅಲ್ಲ
ನಡೆವ ನೆಲ ಒಂದೇ ಎಲ್ಲ
ಇರುವಾಗ ಸುತ್ತ ಮುಗಿಲು
ಬರೀ ನಮಗದೇಕೆ ದಿಗಿಲು

ಸಿಟ್ಟನೇಕೆ ಮಾಡುತಿ
ದುಡುಕಿ ಏಕೆ ನೋಡುತಿ

Tuesday, November 14, 2006

ಸಂಬಂಧಗಳು

ಇವತ್ತು ಆಫೀಸಿನಿಂದ ಮನೆಗೆ ಬರ್ತಾ ಯಾವುದೋ ರೆಡಿಯೋ ಕಾರ್ಯಕ್ರಮದಲ್ಲಿ ಸಂಬಂಧಗಳ ಬಗ್ಗೆ ಏನೋ ಮಾತುಕಥೆಗಳನ್ನು ಕೇಳಿಕೊಂಡು ಬರ್ತಾ ಇದ್ದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದೋರೆಲ್ಲ, ಅಕ್ಕ, ತಂಗಿ, ಅಣ್ಣ, ತಮ್ಮ, ಗರ್ಲ್ ಫ್ರೆಂಡ್, ಬಾಯ್ ಪ್ರೆಂಡ್, ಗಂಡ-ಹೆಂಡತಿ, ಮದುವೆ, ವಿಚ್ಛೇದನ ಎಂದು ಏನೇನೋ ಹೇಳಿಕೊಂಡು ಬರುತ್ತಿದ್ದರು, ಇವನ್ನೆಲ್ಲ ಕೇಳಿಕೊಂಡ ನನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಟಿಸಿಲೊಡೆಯತೊಡಗಿದವು - ಈ ಅಲೋಚನೆಗಳ ಕೊನೆಗೋ ಮೊದಲಿಗೋ what bothers me most ಅನ್ನೋ ಒಂದು ಪ್ರಶ್ನೆ ಮನದಲ್ಲಿ ಉದ್ಭವವಾಗಿದ್ದೇ ತಡ ಮನಸ್ಸು ಒಂದು ರೀತಿ ಜ್ವರ ಬಂದವರ ಥರ ಆಗಿಹೋಯಿತು.

ನಾವೆಲ್ಲರೂ ಅವಕಾಶಗಳನ್ನು ಹುಡುಕಿಕೊಂಡು ಬದುಕನ್ನು ನಡೆಸಿಕೊಂಡು ಒಂದಲ್ಲ ಒಂದು ಕಡೆಗೆ ಹೋಗೋದೇನೋ ನಿಜ, ಆದರೆ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ ಕೆಲವು ಋಣಾನುಬಂಧಗಳನ್ನು ನಾವು ಎಲ್ಲಿ ಮರೆಯುತ್ತೇವೋ ಅನ್ನೋದು ನನ್ನ ದುಗುಡದ ಮೂಲವಾಗಿತ್ತು, ಈ ರೀತಿಯ ಮೊರೆಯನ್ನು ಬೇರೆ ಬರಹಗಳಲ್ಲೂ ಓದಿದ್ದೇನೆ. ನನ್ನ ಮಟ್ಟಿಗೆ ಹೇಳೋದಾದರೆ ನನ್ನ ಪುಲ್‌ಟೈಮ್ ವಿದ್ಯಾಭ್ಯಾಸಕ್ಕೆ ಸಹಾಯಮಾಡಿ ನನ್ನನ್ನು ಈ ಸ್ಥಿತಿಗೆ ತಂದವರನ್ನು ನಾನು ನೆನೆಸಿಕೊಂಡು ಅವರ ಜೊತೆ ಮಾತನಾಡೋದೇ ವಾರಕ್ಕೊಂದು ದಿನ, ಅದರಲ್ಲೂ ಕೆಲವು ದಿನಗಳು ಮಾತ್ರ ಎನ್ನುವುದನ್ನು ನನ್ನ ನೆಲೆಯನ್ನು ಬಿಟ್ಟು ಬೇರೆ ನೆಲೆಯಲ್ಲಿ ನಿಂತು ನೋಡಿದರೆ ದುಃಖ ಉಮ್ಮಳಿಸಿ ಬರುತ್ತದೆ. ನನ್ನಂತಹ ಅನಿವಾಸಿಗಳಿಗೆ ಈ ಒಂದು ಭೌತಿಕ ದೂರವೂ ತೊಡಕಾಗಿ ನಿಲ್ಲುತ್ತದೆಯೇ ಹೊರತು ಸಹಾಯಕ್ಕೇನೂ ಬರೋದಿಲ್ಲ. ನಾವೆಲ್ಲ ಸಿಂಗಲ್ ಆಗಿದ್ದಾಗ, ಕೆಲಸಕ್ಕೆಂದು ಬಂದ ಮೊದಲ ದಿನಗಳಲ್ಲಿ ಈ ದೇಶದಲ್ಲೇ ಕ್ರಮೇಣ ಉಳಿದುಕೊಂಡು ಬಿಡುತ್ತೇವೆ ಅನ್ನೋದನ್ನ ನಾನಂತೂ ಯೋಚಿಸಿರಲಿಲ್ಲವೆಂದು ಕಾಣುತ್ತದೆ. ನನ್ನ ವಾರಿಗೆಯವರು ಮಾಹಿತಿ ತಂತ್ರಜ್ಞಾನವನ್ನು ಬೆನ್ನು ಹತ್ತಿ ಗುಳೆ ಹೊರಟುಹೋಗುವವರ ತರಹ ಬಂದವರೇ ವಿನಾ ಖಾಯಂ ವಲಸೆಗಾರರಾಗೇನೂ ಅಲ್ಲ. ಆದರೆ ವಾಸ್ತವದಲ್ಲಿ ಹೇಗಾಗುತ್ತದೆಯೆಂದರೆ ತಿಂಗಳುಗಳು, ವರ್ಷಗಳು ಉರುಳಿ ಕೊನೆಗೆ ಇದೇ ನಮ್ಮ ನೆಲೆಯಾಗಿಬಿಡುತ್ತದೆ, ಆ ಕ್ಷಣದಲ್ಲಿ ನಾವು ಏಕ್‌ದಂ ಎಲ್ಲರಿಂದ ದೂರ ಬಂದು ಬಿಟ್ಟೆವೆ ಎಂದು ಹೆದರಿಕೆಯಾಗತೊಡಗುತ್ತದೆ.

ನಮ್ಮ ಸಂಬಂಧಗಳು ದಿನನಿತ್ಯ ಮಾಮೂಲಿ ಗಮನವನ್ನು ಬೇಡುವಂತಹವು, ಅದರ ದಾಹವನ್ನು ವರ್ಷಕ್ಕೊಮ್ಮೆ ಹೋಗಿ ಮುಖ ತೋರಿಸುವುದರಿಂದ ತಣಿಸಲಾಗದು. ಪ್ರತಿನಿತ್ಯ ವ್ಯಾಯಾಮ ಮಾಡಿ ಸ್ನಾಯುಗಳು ಬಲವಂತವಾಗುವಂತೆ, ದಿನೇ-ದಿನೇ ಮಾಡುವ ಧ್ಯಾನದಿಂದ ಮನಸ್ಸು ಪರಿಪಕ್ವವಾಗುವಂತೆ ಸಂಬಂಧಗಳ ನಿರ್ವಹಣೆಯೂ ಪ್ರತಿನಿತ್ಯದ ಕಾಯಕವಾಗಬೇಕಲ್ಲವೇ? 'ಎಷ್ಟೋ ವರ್ಷದ ಮೇಲೆ ಮುಖ ತೋರಿಸೋಕೆ ಬಂದೋನು, ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಇರ್ತಾನಂತೆ!' ಎಂದು ನನ್ನನ್ನು ನನ್ನ ಅಕ್ಕ-ತಂಗಿಯರು ಧಾರಾಳವಾಗಿ ನನ್ನ ಎದುರೇ ಬೈದುಕೊಳ್ಳುತ್ತಾರೆ - ಕ್ಷಮಿಸಿ, ಅವರಿಗೆ ನಾನು ಮಾಡುತ್ತಿರುವ ಕೆಲಸದ ಗೋಜು-ಗೊಂದಲಗಳೊಂದೂ ತಿಳಿಯದು, ಅವರಿಗೆ ನನ್ನಿಂದ ಬೇಕಾಗಿರುವುದು ಏನೂ ಇಲ್ಲ, ಹಾಗಿದ್ದರೂ ನಾನು ಅವರೊಂದಿಗಿರಲಿ ಎಂದು ಅವರು ಆಶಿಸುವುದರಲ್ಲಿ ಸಹಜವಾದ ಸಹೋದರ ಪ್ರೇಮವಿದೆಯೇ ವಿನಾ ಮತ್ತೇನೂ ನನ್ನ ಕಣ್ಣಿಗೆ ಕಾಣಿಸದು. ಹಾಗಂತ ನಾನು ಹೋದಲ್ಲಿ ಬಂದಲ್ಲಿ ಎಲ್ಲರ ಮನೆಯಲ್ಲೂ ಉಳಿದುಕೊಳ್ಳಲೂ ನನಗೆ ಸಾಧ್ಯವಿಲ್ಲದಾಗಿ ಹೋಗಿದೆ, ನಾನು ಒಂದು ರೀತಿ ಬಿಳಿ ಆನೆಯ ಥರ, ನನ್ನನ್ನು ಪೋಷಿಸುವವರು ಹಲವಾರು ಜನರಿಲ್ಲದಿದ್ದರೆ ನನ್ನ ಕೈಕಾಲುಗಳೇ ಅಲ್ಲಾಡವು - ನಮ್ಮಮ್ಮ ಹೇಳೋ ಹಾಗೆ 'ಸಗಣಿ ತಿನ್ನೋರಿಗೆ ಮೀಸೆ ತಿಕ್ಕೋರು ಹದಿನಾರು ಜನ' ಎಂಬಂತೆ. ನನ್ನ ಅಣ್ಣ-ಅಕ್ಕನ ಮಕ್ಕಳಿಗೆ ನಾನು ಎಷ್ಟೋ ವರ್ಷಕ್ಕೊಮ್ಮೆ ಹೋಗಿ ಹೇಗೆ ಓದುತ್ತಾ ಇದ್ದಿ, ಹೋಮ್‌ವರ್ಕ್ ಮಾಡ್ತಾ ಇದ್ದೀಯಾ ಎಂದು ಕೇಳಿದಾಕ್ಷಣ ನನ್ನ ಜವಾಬ್ದಾರಿ ಮುಗಿಯಿತು ಎಂದು ನಾನೇಕೆ ನಿರುಮ್ಮಳವಾಗುತ್ತೇನೋ? ನನ್ನ ಸೋದರತ್ತೆ, ಚಿಕ್ಕಪ್ಪಂದಿರು ಹಾಗೆಯೇ ಮಾಡಿದ್ದರೆ ನಾನು ಇಷ್ಟೊತ್ತಿಗೆ ಎಲ್ಲಿರುತ್ತಿದ್ದೆನೋ ಯಾರಿಗೆ ಗೂತ್ತು? ನಾನೇನೋ ದೊಡ್ಡ ಮನುಷ್ಯ ಎಂದು ಅವರೆಲ್ಲರೂ ನನ್ನೆಡೆಗೆ ನೋಡುವಾಗ ನಾನು ವರ್ಷಗಳಿಗೊಮ್ಮೆ ಅವತರಿಸಿ ಬಂದರೆ ಸಾಕೇ?

ದೂರ ಇರೋದರ ಪ್ರತೀಕ ಅಗಲಿಕೆ - ನಮಗೆ ಬೇಕಾದವರಿಂದ ಎನ್ನುವುದಕ್ಕಿಂತಲೂ ನಮ್ಮ ಅಗತ್ಯವಿರುವವರಿಂದ ಎಂದರೆ ಸರಿ - ಅದನ್ನು ಯಾರು ಸರಿಪಡಿಸದಿದ್ದರೂ ಕಾಲವೇ ಸರಿ ಪಡಿಸಿಕೊಳ್ಳುತ್ತದೆ. ಮನೆಯ ಒಬ್ಬ ವ್ಯಕ್ತಿ ಮುಂದುವರಿದು ಹೋಗುತ್ತಾನೆ ಎನ್ನುವುದು ದೊಡ್ಡದೊಂದು void ಅನ್ನು ಸೃಷ್ಟಿಸದಿರಲಿ ಎನ್ನುವುದು ನನ್ನ ಇಂಗಿತ, ಹೀಗೆ ಈಗಾಗಲೇ ಹುಟ್ಟಿದ ಕಂದಕಗಳನ್ನು ಏನಾದರೂ ಮಾಡಿ ಪ್ರಯತ್ನ ಪಟ್ಟು ಮುಚ್ಚುವುದನ್ನು ಬಿಟ್ಟರೆ ಬೇರೆ ವಿಧಿಯೇ ಇಲ್ಲ. ಮುಪ್ಪಿನಾವಸ್ಥೆಯಲ್ಲಿ ಮತ್ತೆ ನಮಗೆ ಆಸರೆ ಸಿಗಲಿ ಎನ್ನುವುದಕ್ಕಿಂತಲೂ ಈಗ ನಾವು ಗಟ್ಟಿಯಾಗಿರುವಾಗ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಬೇಕು ಎನ್ನುವುದಕ್ಕೆ ಒತ್ತುಕೊಡುತ್ತಿದ್ದೇನೆ. ಸಂಬಂಧಗಳು ಬೇಡುವ ಗಮನವನ್ನು ದುಡ್ಡಿನಿಂದಲೋ ಮತ್ತೊಂದರಿಂದಲೋ ತುಂಬಿಕೊಡುತ್ತೇನೆ ಎನ್ನುವ ಹುಂಬತನದಿಂದ ದೂರವಿದ್ದರೆ ಆಯಿತು.

***

'ಅಂತರಂಗ'ದಲ್ಲಿ ಸಂಬಂಧಗಳ ಬಗ್ಗೆ ಬಹಳ ಬರೆದಿದ್ದೇನೆ ಎನ್ನಿಸಿ ಹುಡುಕಿ ನೋಡಿದಾಗ ಸುಮಾರು ೧೬೫ ರೆಫೆರೆನ್ಸ್‌ಗಳು ಸಿಕ್ಕವು, ನನ್ನನ್ನು ಕೇಳಿದರೆ ಕನ್ನಡ ಪದಕೋಶದಲ್ಲಿ ನನಗೆ ಅತ್ಯಂತ ಇಷ್ಟವಾಗುವ ಪದ ಎಂದರೆ 'ಬದುಕು', ಅದನ್ನು ಬಿಟ್ಟರೆ 'ಸಂಬಂಧ' - ಆದರೆ ನನಗೇ ಆಶ್ಚರ್ಯವಾಗುವ ಹಾಗೆ 'ಬದುಕು' ಎನ್ನುವುದಕ್ಕೂ ೧೬೫ ರೆಫೆರೆನ್ಸ್‌ಗಳು ಸಿಕ್ಕವು! ಅದು ಗೂಗಲ್ ಅನ್ನು ಉಪಯೋಗಿಸಿ ಹುಡುಕುವುದರ ಮಿತಿ ಇದ್ದಿರಬಹುದು ಅಥವಾ ಕಾಕತಾಳೀಯವಾಗಿರಬಹುದು. ಏನೇ ಆಗಲಿ, ನನ್ನ ಬರಹಗಳಲ್ಲಿ 'ಬದುಕು' ಹಾಗೂ 'ಸಂಬಂಧ'ಗಳು ಧಾರಾಳವಾಗಿ ತೆರೆದುಕೊಂಡಿದ್ದರೆ ಅಷ್ಟೇ ಸಾಕು.

ಸಂಬಂಧಗಳು ವಿಧಿಯ ಮಸಲತ್ತಿರಬಹುದು, ಪೂರ್ವನಿಯೋಜಿತವಾಗಿರಬಹುದು; ಹಾಗಿದ್ದರೆ ಅದನ್ನು ನಿಭಾಯಿಸಿಕೊಂಡು ಹೋಗುವುದೂ ಅಷ್ಟೇ ಸಹಜವೆಂದೆನಿಸೋದಿಲ್ಲವೇಕೆ?

Sunday, November 12, 2006

ಆಲಸ್ಯವೂ ಅಮೃತವೂ...

ನನ್ ಕೇಳಿದ್ರೆ ಈ ಆಲಸ್ಯಾನೇ ಇರಲೀ ಅಂತೀನಿ, ಅಮೃತ ಯಾರಿಗೆ ಬೇಕಾಗಿದೆ ಸ್ವಾಮೀ? ಅದನ್ನ ಕುಡಿದು ಅಜರಾಮರರಾಗಿ ಆಮೇಲೆ ಮಾಡೋದೇನಿದೆ? Good people go to heaven ಅನ್ನೋದು ನಿಮಗೆಲ್ಲಾ ಗೊತ್ತಿರೋದೇ, bad people go everywhere! ಅಂತ ಮೊನ್ನೆ ಯಾರೋ ಸೇರಿಸಿ ಹೇಳ್ತಾ ಇದ್ದದ್ದನ್ನ ನೋಡಿ, ನಾನು ಎಷ್ಟು ಸೋಂಬೇರಿ ಅಂದ್ರೆ ನನ್ನಂತಹವರೂ ಎಲ್ಲೂ ಹೋಗೋದಿಲ್ಲ ಎಂದು ಸ್ಟೇಟ್‌ಮೆಂಟ್ ಕೊಡೋ ಮಟ್ಟಿಗೆ ಬಂದುಬಿಟ್ಟಿದ್ದೇನೆ ನೋಡಿ - ಜೊತೆಯಲ್ಲಿ ಇದನ್ನ ಬರೀತಾ ಬರೀತಾನೇ ಒಂದಿಷ್ಟು ಆಕಳಿಕೆಗಳು ಬೇರೆ ಕೇಡಿಗೆ - ಸುತ್ತಲಿನಲ್ಲಿರೋ ಗಾಳಿಯನ್ನ ಮೂಗಿನಲ್ಲಿ ಉಸಿರಾಡಿ ಬಿಡೋದಕ್ಕೂ ಸೋಂಬೇರಿತನವಾದ್ದರಿಂದಲೇ ಆಗಾಗ್ಗೆ ಬಾಯಿತೆರೆದು ದೊಡ್ಡದಾಗಿ ಒಂದೇ ಏಟಿಗೆ ಎಲ್ಲಾ ಗಾಳಿಯನ್ನೂ ಕುಡಿದು ಬಿಡೋದು - ಮತ್ತೆ ಸಾಯೋತನಕ ಉಸಿರಾಡ್ತಾನೇ ಇರು ಎಂದ್ರೆ ಯಾರಿಗೆ ತಾನೇ ಬೇಸರವಾಗೋಲ್ಲ?

'ನಿಮ್ಮಲ್ಲಿ ಯಾರು ಯಾರು ಸೋಂಬೇರಿಗಳು?' ಅಂತ ಪ್ರಶ್ನೆ ಕೇಳಿದ್ರೆ ನನಗ್ಗೊತ್ತು ನೀವೆಲ್ಲಾ ಕೈ ಎತ್ತ್‌ತೀರಾ ಅಂತ, ನಾನು ಹಾಗೆ ಕೈ ಎತ್ತಿ ತೋರಿಸಿಕೊಳ್ಳಲೂ ಆಗದಿರುವ ಮೈಗಳ್ಳ, ನನ್ನಂತಹವನನ್ನು ನೀವೇ ಬಂದು ಪತ್ತೆ ಹಚ್ಚಿ ಬಿರುದು-ಬಾವುಲಿ ಕೊಟ್ರೇ ತಗೊಂಡ್ರೆ ತಗೊಂಡ್ರೆ, ಬಿಟ್ರೆ ಬಿಟ್ಟೆ. ಈ ಆಲಸ್ಯಕ್ಕೆ ಒಂದು ಅಧಿದೇವರನ್ನ ಕಂಡ್ ಹಿಡಿದ್ರೆ ಅಂತ ಎಷ್ಟೋ ಸಾರಿ ಯೋಚ್ಸಿ ಹಾಗೆ ಮಾಡೋರ್ ಯಾರು ಅಂತ ಅಲ್ಲಿಗೇ ನನ್ನ ಕೈ ಚೆಲ್ಲಿದ್ದೇನೆ. ಆದ್ರೆ ಈ ಪ್ರಪಂಚ ಬಾಳಾ ಕೆಟ್ಟದು ಆದ್ರಿಂದ ನಾವುಗಳು ಸೋಂಬೇರಿಗಳಾದ್ರೂ ಜಗತ್ತಿಗೆ ತೋರಿಸ್ಕೋಬಾರ್ದು ಸಾರ್, ಸದಾ ಏನಾದ್ರೂ ಮಾಡೋ ಕರ್ಮಠರಂತೆ ಕೊನೆಗೆ ಏನಿಲ್ಲವೆಂದರೂ ಮುಸುಡಿಯನ್ನೊಂದು ಮಾಡಿಕೊಂಡಿದ್ರೆ ನಿಮ್ಮ ಬೇಳೇಕಾಳು ಬೆಂದಂತೆಯೇ.

ದಿನಾ ಆಫೀಸ್‌ನಲ್ಲಿ ಅದು-ಇದೂ ಮಾಡು ಅಂತ ಅವರೂ-ಇವರೂ ಹೇಳ್ತಾನೇ ಇರ್ತಾರೆ, ನಾನೋ ಎಷ್ಟು ಕಡಿಮೆ ಕೆಲ್ಸಾ ಮಾಡಿದ್ರೆ ಅಷ್ಟು ಒಳ್ಳೇದು ಅಂತ ಲೆಕ್ಕಾ ಹಾಕ್ತೀನಿ, ಸುಮ್ಮನೇ ರಿಪೀಟೆಬಲ್ ಆಗಿ ಅದೇ-ಅದೇ ಕೆಲ್ಸಾ ಮಾಡಿಕೊಂಡು ಹೆಚ್ಚು ಸಮಯಾ ವ್ಯಯಿಸೋ ಬದ್ಲಿ ಒಂದು ಫಾರ್ಮುಲಾನೋ ಅಥವಾ ಮ್ಯಾಕ್ರೋನೋ ಬರೀತೀನಿ, ಅದರಿಂದ ಕೆಲ್ಸಾ ಜಲ್ದಿ ಆಗುತ್ತೆ, ಆದ್ರೆ ಮಿಕ್ಕುಳಿಯೋ ಟೈಮಲ್ಲಿ ಏನ್ ಮಾಡ್ತೀನಿ ಅಂದ್ರೆ ಬದುಕಿನ್ ಬಗ್ಗೆ ಯೋಚಿಸ್ತೀನಿ. ಸುಮ್ನೇ ಯೋಚಿಸ್ತಾ ಕೂರೋದನ್ನ ನಾನು ಕೆಲ್ಸಾ ಅಂತ ಯಾವತ್ತೂ ಕರದೇ ಇಲ್ಲ. ಎಲ್ರೂ ಏನಾದ್ರೂ ಮಾಡಿ ತೋರಿಸು ಅಂತಾರೇ ವಿನಾ ಯೋಚನೆ ಮಾಡಿ ತೋರಿಸು ಅಂತ ಯಾರೂ ಹೇಳಿದ್ದನ್ನ ನಾನ್ ಕೇಳಿಲ್ಲ...ಅದೂ ಅಲ್ದೇ ಯೋಚನೇ ಮಾಡಿ ತೋರಿಸೋದಾದ್ರೂ ಏನನ್ನ? ನನಗೆ ಒಂದೊಂದ್ ಸರ್ತಿ ಅನುಮಾನ ಬರುತ್ತೆ, ಕೆಲವರು 'ನಾನು ಬಹಳ ದೊಡ್ಡ ಸೋಮಾರಿ!' ಅಂತ ತಮ್ಮನ್ನು ತಾವೇ ಅಂದ್‌ಕೊಳ್ತಾರೆ, ಸೋಮಾರಿತನದಲ್ಲೂ ದೊಡ್ಡದು-ಸಣ್ಣದೂ ಅನ್ನೋದು ಇದೆಯೋ ಅನ್ನೋದು ಬೇರೆ ಪ್ರಶ್ನೆ - ಹೀಗೆ ಸೋಮಾರಿ ಅಂದ್ ಕೊಳ್ಳೋರೆಲ್ಲ ಹೆಚ್ಚು ಹೆಚ್ಚು ಕೆಲ್ಸಾ ಮಾಡ್ತಾನೇ ಇರೋದನ್ನ ನೋಡಿದ್ರೆ, ನನ್ನಂಥಾ ನಿಜವಾದ ಮೈಗಳ್ಳರಿಗೂ ಅವರಿಗೂ ಏನ್ ವ್ಯತ್ಯಾಸ ಅನ್ನೋದು ಅಷ್ಟು ಕೂಡ್ಲೇ ಹೊಳೆಯೋದಿಲ್ಲ. ಅವರವರ ಕೆಲ್ಸಾ ಅವರದ್ದು, ಅದರಲ್ಲಿ ಯಾರು ಯಾರು ಕಡಿಮೆ ಮಾಡ್ತಾರೋ ಅವರೆಲ್ಲ ಶುದ್ಧ ಸೋಂಬೇರಿಗಳು ಅನ್ನೋದನ್ನ ಹೊಸ ವ್ಯಾಖ್ಯಾನ ಅಂತ ಒಪ್ಪಿಕೊಳ್ಳೋದು ಬಿಡೋದು ಎಲ್ಲಾ ನಿಮಗೇ ಸೇರಿದ್ದು.

ಈ ಲೇಜಿನೆಸ್, ಸೋಮಾರಿತನ, ಸೋಂಬೇರಿತನ, ಮೈಗಳ್ಳತನ ಅನ್ನೋದರಲ್ಲೆಲ್ಲಾ ನನಗೆ 'ಮೈಗಳ್ಳತನ' ಅನ್ನೋದು ಬಹಳ ಹಿಡಿಸಿದ ಶಬ್ದ. ಮೈ ಕಳ್ಳತನ ಅನ್ನೋದನ್ನ ಮೈ ಬಗ್ಗಿಸಿ ದುಡಿಯದವರಿಗೆ ಹೇಳೋ ಮಾತು. ಕೆಲಸಕಳ್ಳತನ ಅನ್ನೋದರಲ್ಲಿ ಅಂತಹ ಮಜಾ ಏನೂ ಇಲ್ಲ, ಇಲ್ಲಿ ಮೈ ಕಡಿಮೆ ದುಡಿಯುವಂತೆ ಮಾಡುವುದು ಕೆಟ್ಟ ಮನಸ್ಸಾದರೂ, ಕ್ರಿಯೆಯನ್ನು ಆಧರಿಸಿ ಮೈಗೆ ಕೆಟ್ಟ ಹೆಸರು ಬಂದಿತೇ ವಿನಾ ಮನಸ್ಸಿಗಲ್ಲ ನೋಡಿ. ಅದಕ್ಕೇ ದೊಡ್ಡೋರು ಅನ್ನೋದು 'ಮನ್ನಸ್ಸನ್ನ ನಿಯಂತ್ರಣದಲ್ಲಿಟ್ಟುಕೋ' ಎಂದು, ಇಲ್ಲಾ ಅಂದ್ರೆ ಹೇಳೋದು ಮನಸ್ಸು, ಮಾಡೋದು ಮೈ ಆದ್ದರಿಂದ ಮಂಗ ಮೊಸರು ತಿಂದು ಮೇಕೆ ಮುಸುಡಿಗೆ ಒರಸಿದ ಕಥೆ ಆಗುತ್ತೇ ಅಷ್ಟೇ. ನನಗೂ ಇರೋ ಬಹಳವಾದ ಆಸೆಗಳಲ್ಲಿ ವಿಶ್ವ ಮೈಗಳ್ಳರ ಸಂಘವನ್ನು ಸ್ಥಾಪಿಸಿ ಅದರ ಪ್ರಥಮ ಅಧ್ಯಕ್ಷನಾಗಿ ಮೆರೀಬೇಕು (ಕೆಲ್ಸಾ ಮಾಡಬಾರದು), ಮೈಗಳ್ಳರಲ್ಲಿ ಒಗ್ಗಟ್ಟು ಮೂಡಿಸಿ ಹುರುಪು ತರಬೇಕು ಅನ್ನೋದೂ ಒಂದು. ಹೀಗೆ ಈ ಆಸೆ ಬರುತ್ತೆ ಹೋಗುತ್ತೆ, ಹಾಗೇ ಹಲವಾರು ಯೋಚನೆಗಳೂ ಸಹ. ಹೀಗೆ ಅವ್ಯಾಹತವಾಗಿ ಬರೋ ಯೋಚನೆಗಳನ್ನೆಲ್ಲ ನಿರ್ಲಕ್ಷಿಸಿ ಸುಮ್ಮನೇ ಕುಳಿತು ಅದನ್ನ ಹೇಗೆ ನಿರ್ಲಕ್ಷಿಸಿದೆ ಎಂದು ಯೋಚಿಸುತ್ತಾ ಕೂರುವುದಿದೆ ನೋಡಿ ಅದರಲ್ಲಿರೋ ಗಮ್ಮತ್ತೇ ಬೇರೆ.

ನನ್ ಹಾಗೆ ಬೇಕಾದಷ್ಟು ಜನ ಇದ್ದಾರೆ, ಅವರುಗಳಿಗೆಲ್ಲ ಯಾವ್ ಯಾವ ಪದ ಹೊಂದುತ್ತೋ ಯಾರಿಗ್ ಗೊತ್ತು? ನನಗೊತ್ತಿಲ್ಲದ್ದೇನಾದ್ರೂ ಇದ್ರೆ, ಅದನ್ನು ತಿಳಿಸಿದ್ರೆ, ಸೋಮಾರಿ ಸಂಘದ ಬುಲೆಟಿನ್ ಬೋರ್ಡ್‌ನಲ್ಲಿ ಸದಸ್ಯರಲ್ಲದವರು ಯಾರಾದ್ರೂ ಸಿಕ್ರೆ ಪಬ್ಲಿಷ್ ಮಾಡ್‌ಸ್ತೀವಿ. ಆಸಲ್ಯ ಅಂದ್ರೆ status quo, ಅಮೃತ ಅಂದ್ರೆ ಏನೋ ಒಂದಿಷ್ಟು ತಗೊಂಡು ಕುಡೀಬೇಕು - ಯಾರು ಕೊಡ್ತಾರೆ, ಎಷ್ಟು ಕೊಡ್ತಾರೆ, ಎಷ್ಟು ಕುಡಿದ್ರೆ ಒಳ್ಳೇದು...ಮುಂತಾದ ಪ್ರಶ್ನೆಗಳಿಗೆಲ್ಲ ಉತ್ರ ಕಂಡ್ ಹಿಡೀಬೇಕಾಗುತ್ತೆ, ಆದ್ದರಿಂದಲೇ ನಾನು ಹೇಳ್ತಾ ಇರೋದು - ಆಲಸ್ಯಂ ಸತ್ಯಂ, ಅಮೃತಂ ಮಿತ್ಯಂ!

Thursday, November 09, 2006

ಕೊನೆಗೂ ರಮ್ಸ್ ಹೋದ...

ಕಳೆದ ಒಂದ್ ವಾರ ಏನು ಬಂತು ತಿಂಗಳಿಂದ್ಲೂ ಎಲ್ಲಾ ಕಡೆ ಚುನಾವಣಾ ಪ್ರಚಾರ, ಪ್ರಣಾಳಿಕೆ ಬಗ್ಗೆ ಮಾತೇಮಾತು. ಅಮೇರಿಕದ ಮಧ್ಯಂತರ ಚುನಾವಣೆಗಳು ಒಂದ್ ರೀತಿ ಬೇಕಾದಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದವು. ೨೦೦೪ ರಲ್ಲೇನೋ ಜನರನ್ನ ಹೆದರಿಸಿ 'ನಿಮಗೆ ನಮ್ಮನ್ನ್ ಬಿಟ್ರೆ ಬೇರೇ ಗತೀನೇ ಇಲ್ಲ...' ಅನ್ನೋ ರೀತಿ ಎಲೆಕ್ಷನ್ ಗೆದ್ದು ಕಾಂಗ್ರೆಸ್ ಮತ್ತು ಸೆನೆಟ್ ಎರಡರಲ್ಲೂ ಮೆಜಾರಿಟಿಯನ್ನು ಪಡೆದು ಮೆರೆದ ರಿಪಬ್ಲಿಕನ್ ಪಕ್ಷದೋರಿಗೆ ಪಾಠ ಕಲಿಸಬೇಕು ಅಂತಾ ಡೆಮೋಕ್ರಾಟಿಕ್ ಪಕ್ಷದೋರು ಒದ್ದಾಡಿದ್ದೇ ಬಂತು ಕೊನೆಗೂ ಅವರಿಗೆ ಬೇಕಾದ ಫಲಿತಾಂಶ ಬಂದ ಹಾಗಿದೆ. ಆಶ್ಚರ್ಯ ಅಂದ್ರೆ ಜನರ ಮನಸ್ಸಿನಲ್ಲಿ ಇತ್ತೀಚೆಗೆ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಘಟನೆಗಳು ಭಯೋತ್ಪಾದನೆಯಷ್ಟೇ ಮುಖ್ಯವಾಗಿ ಕಂಡುಬಂದಿದ್ದು, ಜೊತೆಯಲ್ಲಿ ರಿಪಬ್ಲಿಕನ್ ಮತದಾರರೂ ಕಣ್ಣು ತೆರೆದು ನೋಡಿದ್ದು.

ಎಲೆಕ್ಷನ್ ವಿವರಗಳು ಏನೇ ಇರಲಿ, ಅದರ ಬಗ್ಗೆ ನಾನೇನು ಹೆಚ್ಚು ಅಥವಾ ವಿಶೇಷವಾಗಿ ಹೇಳೋದೇನೂ ಇಲ್ಲ, ಆದರೆ ಫಲಿತಾಂಶ ಬಂದ ಮರುದಿನ ಡಿಫೆನ್ಸ್ ಸೆಕ್ರೆಟರಿ ಡೋನಾಲ್ಡ್ ರಮ್ಸ್‌ಫೆಲ್ಡ್ (ರಮ್ಸ್) ರಾಜೀನಾಮೆ ಕೊಟ್ಟಿದ್ದು ಬಹಳ ವಿಶೇಷವಾದದ್ದು, ಈ ಘಟನೆಯ ಸುತ್ತಮುತ್ತಲು ನನಗನ್ನಿಸಿದಂತೆ ಬಹಳಷ್ಟು ಇತಿಹಾಸವಿದೆ. ರಮ್ಸ್ ಬಾರೀ ಘಟಾನುಘಟಿ ಮನುಷ್ಯ, ಗರ್ವಿ, ಸಿಡುಕ ಅನ್ನೋದು ಎಲ್ಲರಿಗೂ ಗೊತ್ತು, ಆದರೆ ಆತ ಈ ಹಿಂದೆ ಹಲವಾರು ಬಾರಿ ರಾಜೀನಾಮೆಯನ್ನು ನೀಡಿದ್ದರೂ ಅದನ್ನು ಅಂಗೀಕರಿಸದ ಆಡಳಿತ ಹಾಗೂ ಪ್ರೆಸಿಡೆಂಟ್ ಕೊನೆಯ ದಿನಗಳವರೆಗೂ ರಮ್ಸ್ ಅನ್ನು ಹೊಗಳಿದ್ದೇ ಹೊಗಳಿದ್ದು. ಯೂರೋಪು, ಏಷ್ಯಾ, ಮೊದಲಾದ ಕಡೆ ಮಾಧ್ಯಮಗಳು, ರಾಜಕಾರಣಿಗಳು ಹಾಗೂ ಆಡಳಿತಗಳು ರಮ್ಸ್ ಅನ್ನು ಸ್ವಲ್ಪವೂ ಇಷ್ಟಪಡುತ್ತಿರಲಿಲ್ಲ ಎನ್ನುವುದಕ್ಕೆ ರಮ್ಸ್ ರಾಜೀನಾಮೆ ನೀಡಿದ ಮರುದಿನದ ಪತ್ರಿಕೆಗಳ ಹೆಡ್‌ಲೈನುಗಳೇ ಸಾಕ್ಷಿ. ಹೀಗಿದ್ದರೂ ಆತ ಅಧಿಕಾರದಲ್ಲಿದ್ದಾಗ ಅವನ ವಿರುದ್ಧ ಚಕಾರ ಎತ್ತಿದವರ ಧ್ವನಿ ಬಹಳ ಎತ್ತರಕ್ಕೆ ಏರಲೇ ಇಲ್ಲ. ಅಮೇರಿಕದ ಇತಿಹಾಸದಲ್ಲಿ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡುವುದು ಇದೆಯಾದರೂ ಅದು ರಮ್ಸ್ ಮಟ್ಟಿಗೆ ಕೊನೆಗೂ ನಿಜವಾಗಲಿಲ್ಲ.

ರಮ್ಸ್ ರಾಜೀನಾಮೆ ನಾಟಕದ ಅಂಕದಲ್ಲಿ ಹೇಳಿದ ಹಾಗೆ ಇರಾಕ್ ಯುದ್ಧ ಅನೋದು ಬಹಳ ಕಾಂಪ್ಲೆಕೇಟ್ ಆದದ್ದು, ತುಂಬಾ ಅನ್‌ಪ್ರಿಡಿಕ್ಟೆಬಲ್, ಕಷ್ಟಕರವಾದದ್ದನ್ನ ಜನರು ಇಂದಲ್ಲ ನಾಳೆ ಅರ್ಥ ಮಾಡಿಕೊಂಡು ಪ್ರೆಸಿಡೆಂಟ್ ಬುಷ್ ಮಾಡಿರೋ ಸಾಧನೆಗಳನ್ನು ಇತಿಹಾಸ ಕೊಂಡಾಡುತ್ತದೆ ಎನ್ನೋ ಹೇಳಿಕೆಗಳು ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂದ ಅನ್ನೋ ಹಾಗೆ ಕಾಣಿಸ್ತು. ಯಾವ ಯುದ್ಧ ತಾನೆ ಕಷ್ಟಕರವಾಗಿಲ್ಲ, ಕ್ಲಿಷ್ಟವಾಗಿ ಕಾಣೋಲ್ಲ? ತಾವು ಮಾಡಿದ್ದು ತಪ್ಪು ಅನ್ನೋದನ್ನ ಜನಗಳು ಯಾಕೆ ಒಪ್ಪಿಕೊಳ್ಳೋದಿಲ್ಲ. ಇವರು ತಪ್ಪು ಒಪ್ಪಿಕೊಂಡು ಯಾರಿಗೆ ಏನೂ ಆಗೋದಿಲ್ಲ, ಆಗೋದೆಲ್ಲ ಈಗಾಗಲೇ ಆಗಿಹೋಗಿದೆ. ರಮ್ಸ್ ಅಂತಹ ಜನರು ಆರಲ್ಲ ಅರವತ್ತು ವರ್ಷ ಅಧಿಕಾರದಲ್ಲಿದ್ರೂ ಯುದ್ಧವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋದರಲ್ಲಿ ಸೋತು ಹೋಗಿರೋದನ್ನ ಇತಿಹಾಸ ಗುರುತಿಸಿಕೊಂಡರೆ ಸಾಕು.

ಗೂಳಿ ಗುಂಡಿಗೆ ಬಿದ್ರೆ ಆಳಿಗೊಂದು ಕಲ್ಲು ಅನ್ನೋ ಹಾಗೆ ನಾನು ರಮ್ಸ್ ಮೇಲೆ ಅಟ್ಯಾಕ್ ಮಾಡೋ ಪ್ರಯತ್ನ ಮಾಡ್ತಾ ಇಲ್ಲ. ತಾವು ಮಾಡಿದ್ದನ್ನು ಸಾರ್ವಜನಿಕವಾಗಿ ವಿಶ್ಲೇಷಿಸಿಕೊಂಡು ತಪ್ಪನ್ನ ತಪ್ಪು ಅನ್ನೋದರ ಬದಲಿಗೆ ರಮ್ಸ್ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ ಎಂದು ಪ್ರಶಂಸೆ ನೀಡಿಯೇ ಇಂತಹವರನ್ನು ಹೊರದಬ್ಬುವ ನಾಟಕದ ಅಂಕವನ್ನು ನೋಡಿ ಮುಜುಗರವಾಯಿತು. ಇದೇ ರೀತಿ ಮುಂದೆ ಬುಷ್ಷೂ ಅಧಿಕಾರ ತ್ಯಜಿಸಿ ಹೊರಡೋವಾಗ ಜನಗಳು ಆತನನ್ನು ಕೊಂಡಾಡದಿದ್ದರೆ ಸಾಕು. ನನಗೆ ಬುಷ್ ರಿಪಬ್ಲಿಕನ್ ಆಗಿ ಇಷ್ಟವಾಗದೇ ಇರೋದಕ್ಕಿಂತ ಒಬ್ಬ ನಾಯಕನಾಗಿ ಹಲವಾರು ವಿಷಯಗಳಲ್ಲಿ ಸೋತಿರೋದಕ್ಕೆ ವಿಷಾದವಾಗ್ತಾ ಇದೆ. ಈ ಆಧುನಿಕ ಜಗತ್ತಿನಲ್ಲಿ ಇಂತಹವರು ಮಾಡೋ ಅಥವಾ ಮಾಡದಿರುವ ಕೆಲಸಗಳು ಓಟು ಹಾಕಲಿ ಬಿಡಲಿ ಎಲ್ಲರನ್ನೂ ತಟ್ಟುತ್ತವೆ. ಡೆಮಾಕ್ರಟಿಕ್ ಪಕ್ಷ ಮೆಜಾರಿಟಿಗೆ ಬಂದ ತಕ್ಷಣ ಅದು ಲೋಕದ ಕಣ್ಣಿರನ್ನೇನೂ ಒರಿಸೋದಕ್ಕೆ ಹೋಗೋದಿಲ್ಲ, ಅದಕ್ಕಿಂತ ಮೊದಲು ಮಾಡಲಿಕ್ಕೆ ಹಲವಾರು ತುರ್ತು ಕೆಲಸಗಳು ಬಾಕಿ ಇವೆ.

ಅಬ್ಬಾ ಕೊನೆಗೂ ರಮ್ಸ್ ಹೋದ...ಎಂದು ಎಷ್ಟೋ ಜನ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು. ಮುಂದೆ ಬಂದ ಗೇಟ್ಸ್‌ಗೆ ಚಾಲೆಂಜುಗಳು ಈಗಾಗಲೇ ಔತಣ ನೀಡತೊಡಗಿವೆ. ಎರಡನೇ ಅಂಕವನ್ನು ಕಾದು ನೋಡಬೇಕಷ್ಟೇ.

Monday, November 06, 2006

ಓಹ್ ಭಾರತದ ನೆನಪೇ...

ನಮ್ ಮನೇಲಿ ನನ್ನನ್ನಂತೂ ಬಹಳ ಹೆದರಿಸಿಬಿಟ್ಟಿದ್ದಾರೆ, ಭಾರತಕ್ಕೆ ಹೋಗೋಕೆ ಟಿಕೇಟ್ ಬ್ಲಾಕ್ ಮಾಡಿಟ್ರೂ, ಮನಸ್ಸಿನೊಳಗೆ ಒಂದ್ ರೀತಿ ಚಡಪಡಿಕೆಯಿಂದ್ಲೇ ತಯಾರಿ ಮಾಡಿಕೊಂಡ್ ಕೂತಿದ್ರೂ ದಿನೇದಿನೇ ಬದಲಾಗೋ ಪ್ರಾಜೆಕ್ಟ್ ಸ್ಕೋಪ್ ಮತ್ತು ಸ್ಕೆಡ್ಯೂಲ್ ಎರಡೂ ನನ್ನನ್ನು ವಾಸ್ತವದಿಂದ ದೂರಾನೇ ಇರೋ ಹಾಗೆ ಮಾಡಿಬಿಟ್ಟಿವೆ, ಎಷ್ಟೋತ್ತಿಗೆ ಬೇಕಾದ್ರೂ ನಮ್ ಕಂಪ್ನಿಯವರು ನಿನ್ನ ವೆಕೇಷನ್ನ್ ಅನ್ನು ಮುಂದಕ್ಕೆ ಹಾಕು ಅಂತ ಹೇಳಿ ನನ್ನ್ ಬೆಲೂನಿನೊಳಗಿರೋ ಗಾಳಿಯನ್ನು ಚುಚ್ಚದೇ ಹೊರತೆಗೆಯಬಲ್ಲರು, ಆದ್ದರಿಂದ್ಲೇ keep the fingers crossed ಅಂತಾರಲ್ಲ ಹಾಗೆ ಸುಮ್ಮನಿದ್ದೇನೆ - jinx, superstition, evil eye ಅಂತಾ ಏನೂ ಇಲ್ಲ, ಬರೀ ವಾಸ್ತವ ಅಷ್ಟೇ, ನನ್ನ ವೆಕೇಷನ್ನು ಯಾವತ್ತು ನಿಜ ಆಗುತ್ತೋ ಆಗ್ಲೇ ಅಗುತ್ತೆ ಅಂತ ಸುಮ್ಮನೇ ಇದ್ದೇನೆ.

ಸರಿ, ಮೂರು ನಾಲ್ಕು ವರ್ಷಗಳ ನಂತರ ಮೂರು ನಾಲ್ಕು ವಾರಕ್ಕೆ ಅಂತ ಹೋದ ಮೇಲೆ ಏನ್ ಏನ್ ಮಾಡೋದು, ಎಲ್ಲಿಲ್ಲಿಗ್ ಹೋಗೋದು, ಯಾರನ್ನ ನೋಡೋದು, ಯಾರನ್ನ ಬಿಡೋದು ಅನ್ನೋ ಆಲೋಚನೆಗಳು ಒಂದ್ ರೀತಿಯಲ್ಲಿ ಮುದ ಕೊಡೋ ಹಾಗೆ ಮತ್ತೊಂದು ರೀತಿಯಲ್ಲಿ ಆಲಸ್ಯವನ್ನೂ ಹುಟ್ಟಿಸುತ್ತವೆ. ಮೊದ್ಲೆಲ್ಲ ಪತ್ರಗಳು ಬಂದು ಸಂಬಂಧಗಳನ್ನ ಜೀವಂತ ಇಡೋವು, ನಂತರ ಅವುಗಳ ಸ್ಥಾನವನ್ನ ಫೋನ್ ಕರೆ ತುಂಬಿಕೊಡುತ್ತೇ ಅನ್ನೋದು ಒಂದು ಹುಸಿ ನಂಬಿಕೆಯೇ ವಿನಾ ನಾನು ಪತ್ರಗಳನ್ನು ಬರೆಯುತ್ತಿದ್ದ ಕಾಲದಲ್ಲಿ ನನ್ನ ಸ್ನೇಹಿತರನ್ನು ನೆನೆಸಿಕೊಂಡಷ್ಟು ಗಾಢವಾಗಿ ಫೋನ್ ಕರೆ ಮಾಡುವಾಗ ಎಲ್ಲೂ ಆ ಬಗ್ಗೆ ಅಷ್ಟೊಂದು ಯೋಚಿಸಲೇ ಇಲ್ಲ. ಫೋನ್ ಕರೆಗಳು ಕಡಿಮೆಯಾಗಿ ಕೊನೆಗೆ ಭಾರತದಲ್ಲಿ ಸ್ನೇಹಿತರು ಅನ್ನೋರು ಇಲ್ಲವೇ ಇಲ್ಲ ಅನ್ನೋ ಸ್ಥಿತಿ ಬಂದಿದೆ - ಸ್ನೇಹಿತರು ಅಂದ್ರೆ ನಿಮ್ಮ ಒಳಹೊರಗನ್ನು ಬಲ್ಲ, ನಿಮ್ಮ ಆಲೋಚನೆಗಳಿಗೆ ಇಂಬುಕೊಡಬಲ್ಲ, ನಿಮ್ಮನ್ನು ಎಂತಹ ಸ್ಥಿತಿ ಸಂದರ್ಭಗಳಲ್ಲೂ ಸಪೋರ್ಟ್ ಮಾಡಬಲ್ಲ ಹಾಗೂ ಹಲವಾರು ವರ್ಷಗಳಿಂದ ನಿಮ್ಮನ್ನು ಬೇರೆಬೇರೆ ಸ್ಥರಗಳಲ್ಲಿ ನೋಡಿದ ಮತ್ತು ನಿಮಗಿಂತ ಬೇರೆಯೇ ವೈಚಾರಿಕ ನೆಲೆಯಲ್ಲಿರುವ ಮಾನವ ಮೂರ್ತಿಗಳು! ಸದು, ವಾಸು, ರಾಘು, ಅಮಿತಾ, ಶ್ರೀಕಾಂತ, ಸುರೇಶ, ಶಂಕ್ರ, ಪ್ರೇಮಾ, ಉಮೇಶ, ಸುಂದರೇಶ, ಮೋಹನೇಶ, ಮುಂತಾದವರು ಈಗ ಎಲ್ಲೆಲ್ಲಿದ್ದಾರೋ ಅವರನ್ನೆಲ್ಲ ನೋಡಿ ಮಾತನಾಡಿಸುವಂತಿದ್ದರೆ...

If all goes well...ಸಾಕಷ್ಟು ತಿರುಗಾಡಬೇಕು, ಒಂದಿಷ್ಟು ಹೊಸ ಪುಸ್ತಕಗಳನ್ನ ಖರೀದಿ ಮಾಡಬೇಕು, ಥಿಯೇಟರುಗಳಲ್ಲಿ ನಾಟಕ ಸಿನಿಮಾಗಳನ್ನು ಯಥೇಚ್ಛವಾಗಿ ನೋಡಬೇಕು, ಇಷ್ಟು ದಿವಸ ಕಳೆದುಕೊಂಡಿರೋ ಭಾರತೀಯ ಟಿವಿ ಕಾರ್ಯಕ್ರಮಗಳನ್ನ ಹುಡುಕಿಕೊಳ್ಳಬೇಕು. ಅವರನ್ನ ಭೇಟಿ ಮಾಡಬೇಕು, ಇವರನ್ನ ನೋಡಬೇಕು ಅಂತಾ ಯೋಚನೆಗಳನ್ನ ಆರಂಭಿಸಿದೆನೋ ಅವುಗಳು ಒಂದೋ ಸಮನೆ ನಾಗಾಲೋಟದಲ್ಲಿ ಹುಚ್ಚೆದ್ದು ಓಡತೊಡಗುತ್ತಾ ಹೋದಂತೆ ಇವಲ್ಲವನ್ನೂ ಮಾಡೋಕೆ ಸಾಧ್ಯವಾ? ಎಂದು ಕೊನೆಯಲ್ಲಿ ಬಂದ ಪ್ರಶ್ನೆ ಎಂಬ ಬಂಡೆಕಲ್ಲಿಗೆ ಅಪ್ಪಳಿಸಿ ನಿಂತುಬಿಟ್ಟವು. ಈ ವೆಕೇಷನ್ನಿಗೆ ಯಾಕಾದರೂ ನಾನಾ ಅರ್ಥಗಳನ್ನು ನಿರೀಕ್ಷೆಗಳನ್ನು ಹುಟ್ಟಿಸಿಕೊಳ್ಳಬೇಕು? ಸುಮ್ಮನೇ ಹೋಗೋದು, ಪರಿಸ್ಥಿತಿಗೆ ನನ್ನನ್ನು ನಾನು ಒಪ್ಪಿಸಿಕೊಂಡು ಬಿಡೋದು, ಸಹಜವಾಗಿ ಹಾಗೂ ನಿರಾತಂಕವಾಗಿ ಏನೇನು ಸಾಧ್ಯವೋ ಅವುಗಳನ್ನು ಮಾಡೋದು ಇಲ್ಲವೆಂದರೆ ಇನ್ನೊಮ್ಮೆ ಪ್ರಯತ್ನಿಸಿದರಾಯಿತು ಎಂದು ಹಿಂತಿರುಗಿ ಬರೋದು - ಇಲ್ಲಿ ಪ್ರಾಜೆಕ್ಟ್‌ಗಳಿಗೆ ಸ್ಕೆಡ್ಯೂಲುಗಳನ್ನು ಕಿಸಿದು ದೊಡ್ಡದಾಗಿ ಮೆರೆದದ್ದು ಬಹಳಷ್ಟು ಆಗಿದೆ, ಸುಮ್ನೆ ಮುಚ್ಕೊಂಡು ನಿನ್ನಷ್ಟಕ್ಕೆ ನೀನಿರೋದನ್ನು ನೋಡು - ಎಂದು ನನ್ನ ಮತ್ತು ಕನ್ನಡಿಯ ಮಧ್ಯೆ ಬರುವ ಅವಕಾಶದಲ್ಲಿ ಇತ್ತೀಚೆಗಷ್ಟೇ ಧ್ವನಿಯೊಂದು ಕೇಳಿಬಂದಂತೆನಿಸಿದ್ದು ನನ್ನನ್ನು ಇನ್ನಷ್ಟು ಹೈರಾಣಾಗಿಸಿದೆ!

ದೊಡ್ಡ ಗಂಡಾಂತರವೆಂದರೆ ನಮ್ಮ ಊರಿಗೆ ನಾನು ಹೆದರಿಕೊಂಡು ಹೋಗಬೇಕಾಗಿ ಬಂದಿರೋದು...ಕೆಲವು ತಿಂಗಳ ಹಿಂದೆ ಇಡೀ ಆನವಟ್ಟಿಯಲ್ಲಿ ಚಿಕುನ್‌ಗುನ್ಯಾ ಖಾಯಿಲೆಯಿಂದ ಜನ ತತ್ತರಿಸಿಹೋಗಿದ್ದು ನಿಜ, ನಮ್ಮೂರಲ್ಲಿ ಎಲ್ಲ ಥರದ ಸೊಳ್ಳೆಗಳೂ ತಮ್ಮ ಅಸ್ತಿತ್ವವನ್ನು ಎಂದಿನಿಂದಲೂ ಇಟ್ಟುಕೊಂಡಿವೆಯಾದ್ದರಿಂದ ನಾನು ಹೋದಷ್ಟು ದಿನದ ಮಟ್ಟಿಗೆ ಅವುಗಳ ಜೊತೆಯಲ್ಲಿ ವಾಸಮಾಡಬೇಕಾಗಿ ಬರೋದು ಅನಿವಾರ್ಯ. ಮೈತುಂಬಾ ಗಂಧವನ್ನು ಅಥವಾ ರಿಪೆಲ್ಲಂಟ್ ಕ್ರೀಮನ್ನು ಲೇಪಿಸಿಕೊಂಡು ವಿದೇಶಿಯರ ಹಾಗೆ ನಾನು ಹುಟ್ಟಿಬೆಳದ ಊರಿನಲ್ಲಿ ಬದುಕೋದಕ್ಕೆ ನನಗೆ ಖಂಡಿತವಾಗಿ ಸಾಧ್ಯವಿಲ್ಲ, ಆದ್ದರಿಂದಲೇ ಹೆದರಿಕೆ ಹೆಚ್ಚಾಗಿದೆ! ನನ್ನ ಬಾಸು ಹೇಳಿದ 'ನೀನು ಸಂಪೂರ್ಣವಾಗಿ ರೆಸ್ಟ್ ತೆಗೆದುಕೊಂಡು ರಿಪ್ರೆಷ್ ಆಗಿ ಬಾ, ನಾನು ನೀನು ಬಂದ ನಂತರ ವೆಕೇಷನ್ ತೆಗೆದುಕೊಳ್ಳುತ್ತೇನೆ...' ಎನ್ನುವ ವಾಕ್ಯಗಳು ಇನ್ನಷ್ಟು ಹೆದರಿಸತೊಡಗುತ್ತವೆ. ಈ ಖಾಯಿಲೆಗಳೆಲ್ಲ ಆಫ್ರಿಕದ ಕಗ್ಗತ್ತಲಿನಲ್ಲೇ ಏಕೆ ಹುಟ್ಟುತ್ತವೆಯೋ, ದಿನೇದಿನೇ ಮ್ಯುಟೇಷನ್ನಿಗೊಳಗಾಗೋ ಈ ವೈರಾಣುಗಳು ಮಾನವ ಕುಲವನ್ನೇ ನಾಶಮಾಡುತ್ತೇವೆ ಎಂದು ಯಾರ ಮೇಲೆ ಪಣತೊಟ್ಟಿವೆಯೋ ಯಾರು ಬಲ್ಲರು? ಹುಟ್ಟೂರಿಗೂ ಹೆದರಿಕೊಂಡು ಹೋಗಬೇಕಾದ ಅನಿವಾರ್ಯತೆ ಬಹಳ ಸಂಕಷ್ಟಕ್ಕೀಡುಮಾಡುತ್ತದೆ ಅನ್ನೋದಂತೂ ನಿಜ -- ಖಾಯಿಲೆ ಬಂದರೆ ಬರಲಿ, ನೋಡಿಕೊಂಡರಾಯಿತು ಎನ್ನುವ ನಮ್ಮುರಿನ ನನ್ನ ಮೊಂಡ ಮನಸ್ಸಿಗೆ ನನ್ನ ಅಮೇರಿಕನ್ ಮನಸ್ಸು ತಿಳಿಸಿಹೇಳಹೋಗಿ ಸೋಲತೊಡಗುತ್ತದೆ. ಹೋದಲ್ಲಿ ಬಂದಲ್ಲಿ ಹಾಗಾದೀತು, ಹೀಗಾದೀತು ಎಂದು ಹೆದರಿಕೆಯಿಂದ ಹೋಗುವ ಬದಲು ಹೋಗದಿದ್ದರೇ ಲೇಸಲ್ಲವೇ? ಅಥವಾ ನನ್ನ ಪೂರ್ವಸಿದ್ಧತೆಗಳನ್ನು ನಾನು ಯಾವಾಗಲೂ ಮಾಡಿಕೊಂಡಿರುವುದೇ ಸರಿಯಾದ್ದೇ.

It is slowly hitting...ಏನು ಅಂದ್ರೆ ರಿಯಾಲಿಟಿ! ನನ್ನ ಭಾರತದ ಇಮೇಜ್ ಸುಮಾರು ಒಂದು ದಶಕಗಳಷ್ಟು ಹಳೆಯದು. ಒಂದು ಶ್ಯಾಂಪೂ ಬಾಟಲಿಗೆ ನಾನು ಇವತ್ತಿಗೂ ಹೆಚ್ಚೂ ಅಂದ್ರೆ ಇಪ್ಪತ್ತು ಇಪ್ಪತ್ತೈದು ರುಪಾಯಿಗಳನ್ನೇ ಕೊಡುವ ಹಾಗೆ ಯೋಚಿಸೋದು. Inflation adjusted ಅಥವಾ ಹಣದುಬ್ಬರಕ್ಕೆ ಹೊಂದಿಕೊಂಡಿರದ ಪರಿಸ್ಥಿತಿಯನ್ನಲ್ಲ ನಾನು ಹೇಳ್ತಾ ಇರೋದು - ಹಳೆಯ ಮನಸ್ಥಿತಿ ಬಗ್ಗೆ. ಎಲ್ಲಾದರೂ ಐವತ್ತು ರುಪಾಯಿಗೆ ಒಂದು ಕಾಫಿಕೊಡುತ್ತಾರೆ ಎಂದು ಓದಿದರೆ ಕುಡಿಯದೇ ಇದ್ದರೆ ಹೇಗೆ ಎಂದು ಯೋಚಿಸುವ ಸ್ವಭಾವದ ಬಗ್ಗೆ. ಇದಕ್ಕೆಲ್ಲ ಒಂದು ಉತ್ತರವಿದೆ, ನಾನು ಕೊಡೋದು-ಕೊಳ್ಳೋದು ಏನಿದ್ದರೂ ನನ್ನ ಅಣ್ಣನ ಮುಖಾಂತರವಾದ್ದರಿಂದ ಅವನಿಗೆ ಹಣಕಾಸಿನ ವಿಷಯಗಳ ಬಗ್ಗೆ ಯೋಚಿಸಲು ಬಿಟ್ಟುಬಿಡುತ್ತೇನೆ, ಅದರಿಂದ ಏನಿಲ್ಲವೆಂದರೂ ನನ್ನ ಮನದೊಳಗಿರುವ ಭಾರತದ ಇಮೇಜ್ ಹಾಗೆಯೇ ಉಳಿಯುತ್ತದೆ - ಏಕೆ, ಇಂತಹ ಇಮೇಜನ್ನು ಸಮಯದಿಂದ ಸಮಯಕ್ಕೆ ಅಪ್‌ಡೇಟ್ ಮಾಡಲು ಹೆದರಿಕೆಯೇ? ಅಥವಾ ಹಳೆಯ ಆಲೋಚನೆಗಳ ಮೇಲೆ ಮನಸ್ಸನ್ನು ನಿಲ್ಲಿಸಿ ಅದನ್ನೇ ಆಸ್ವಾದಿಸುವುದು ಸುಖವೇ? ಅಥವಾ who cares about money ಎನ್ನುವ ಹುಂಬತನವೇ? ಅಥವಾ ನಿಧಾನವಾಗಿ ಓಲ್ಡ್ ಸ್ಕೂಲ್ ಆಗುವ ಬಗೆಗಿರೋ ಸಮಾಧಾನವೇ? ಅಥವಾ ಚಿಂತಿಸಲು ಬೇಕಾದಷ್ಟಿವೆ ಎನ್ನುವ ಹುಂಬ ಧಾರಾಳತನವೇ? ಅಥವಾ ಬಲ್ಲವರು ಆ ಬಗ್ಗೆ ಚಿಂತಿಸಲಿ ಎಂದು ನಿರುಮ್ಮಳವಾಗಿರಬಹುದಾದ ಕನಸೇ?

ಅಬ್ಬಾ, ನಮ್ಮೂರಿನ ಆಲೋಚನೆಗಳು ನನ್ನನ್ನು ಎಂತಹ ನಿದ್ರೆಯಿಂದಲೂ ಏಳಿಸಿಬಿಡಬಲ್ಲವು, ಏಕೆಂದರೆ ಅಲ್ಲಿನ ಘಟನೆಗಳಿಗೆ ಸ್ಪಂದಿಸಬಯಸುವ ನಾನು ಇಲ್ಲಿ ಹಾಯಾಗಿ ನಿದ್ರೆ ಮಾಡುವುದಾದರೂ ಹೇಗೆ?

Sunday, November 05, 2006

ವೀಸಾ ವಿವಾಹ

ಕನ್ನಡ ಚಿತ್ರಗಳು ನಮ್ಮಲ್ಲಿ ಬರೋದೇ ವೀಕೆಂಡ್‌ನಲ್ಲಿ, 'ತುಳಸೀ ಕಾರ್ತೀಕದ ದಿನ ಸಿನಿಮಾ ನೋಡ್ತೀರೇನ್ರೋ?' ಅಂತ ಅಜ್ಜಿ ಎಲ್ಲಿ ಬೈತಾರೇನೋ ಅನ್ನೋ ಭಯವನ್ನು ಮನದಲ್ಲಿ ಮೂಡಿಸಿಕೊಂಡು ಸಿನಿಮಾದ ಹಾದಿ ಹಿಡಿದರೆ ನಮ್ಮೂರುಗಳಲ್ಲಿ ರಸ್ತೆಯ ಉದ್ದಗಲಕ್ಕೆ ತಮ್ಮನ್ನು ತಾವು ತೆರೆದುಕೊಂಡ ನಾನಾ ಮೋಟಾರುವಾಹನಗಳ ದೆಸೆಯಿಂದ ಇವತ್ತೂ ಲೇಟೇ, ಅದೂ ಒಂದಲ್ಲ ಎರಡಲ್ಲ ಮೂವತ್ತು ನಿಮಿಷ! ಎರಡೂ ಕಾಲು ಘಂಟೆ ಸಿನಿಮಾದಲ್ಲಿ ಮೂವತ್ತು ನಿಮಿಷ ತಡವಾಗಿ ಹೋದ್ರೆ ಅದರಲ್ಲೇನು ಉಳಿದಿರೋದು ಅನ್ನೋ ಮಾತೇ ಬರೋಲ್ಲ, ಯಾಕೆಂದ್ರೆ ಇಲ್ಲಿ ಕನಿಷ್ಠ ಪಕ್ಷ ಒಂದು ಹದಿನೈದು ನಿಮಿಷವಾದ್ರೂ ತಡವಾಗಿ ಸಿನಿಮಾ ಆರಂಭವಾಗಿ ಆಯೋಜಕರು ತಡವಾಗಿ ಬರುವವರ ಸಹಾಯಕ್ಕೆ ಬರುತ್ತಾರೆ.

ಮೂವೀಸಿಟಿಯಲ್ಲಿ ಮಧ್ಯೆ ತೂತುಬಿದ್ದ ಬೆಳ್ಳಿ ತೆರೆಗೆ ಒಂದುಕಡೆ ತೇಪೆ ಹಚ್ಚಿದ್ದು ಕಂಡಕೂಡಲೇ ಇದೇನಪ್ಪಾ ನಮ್ಮೂರಿನ ಟೆಂಟ್ ಸಿನಿಮಾಗಳ ಪರದೆಯೇ ಇದಕ್ಕಿಂತ ಚೆನ್ನಾಗಿತ್ತಲ್ಲಾ! ಅನ್ನಿಸಿದ್ದೇನೋ ನಿಜ, ಅದರಲ್ಲೂ ನಾಯಕ-ನಾಯಕಿ ಹಾಗೂ ಚಿತ್ರದಲ್ಲಿ ಹೆಚ್ಚಾಗಿ ಪಾತ್ರವಹಿಸಿದವರೆಲ್ಲರೂ ತೊದಲು ತೊದಲು ಕನ್ನಡವನ್ನು, ಅದರಲ್ಲೂ ಶುದ್ಧ ಕನ್ನಡವನ್ನು ಹಾಸ್ಯಾಸ್ಪದವಾಗುವಷ್ಟರ ಮಟ್ಟಿಗೆ, ಉಚ್ಛಾರಮಾಡಿದಾಗಲಂತೂ ತಮಿಳು ಸಿನಿಮಾಗಳಲ್ಲಿ ನಡುನಡುವೆ ಕನ್ನಡ ಸಂಭಾಷಣೆಗಳನ್ನು ತೋರಿಸಿದ್ದಕ್ಕಿಂತ ಕಟುವಾಗಿ ಕಂಡುಬಂತು. ಉಳಿದವರ ನಿರೀಕ್ಷೆಗಳು ಏನೇನಿದ್ದವೋ ನನಗಂತೂ ಒಂದೇ ಸಮನೆ ನಿರಾಶೆಯಾಗತೊಡಗಿತು. ಆದರೆ ಮಧ್ಯಂತರದ ನಂತರ ಚಿತ್ರದಲ್ಲಿ ಆಸಕ್ತಿ ಹಾಗೂ ಅಭಿಮಾನ ಮೂಡಿಬರುವಂತೆ ಮಾಡಿದವರು ಡಾ. ರಾಘವರೆಡ್ಡಿ.

***

ನಮ್ಮ "ಘಮಘಮ" ವಿಶ್ವೇಶ್ ಅವರದ್ದಾಗಲೀ, ರಾಘವರೆಡ್ಡಿ ಅವರದ್ದಾಗಲೀ ಇಬ್ಬರದೂ ಒಂದೇ ರೀತಿಯ ಹಂಬಲ, ತಮ್ಮ ಸುತ್ತಮುತ್ತಲಿನಲ್ಲಿ ಕನ್ನಡವನ್ನು ಇವರುಗಳು ಹೋಗಿ ಬಂದಲ್ಲೆಲ್ಲ ಸೃಷ್ಟಿಸಿಕೊಳ್ಳಬಲ್ಲರು. ವಿಶ್ವೇಶ್ ಸಂಗೀತವನ್ನು ಅಭ್ಯಾಸಮಾಡಿ ಆಲ್ಬಮ್‌ಗಳನ್ನು ಮಾಡಿಕೊಳ್ಳಲು ತಮ್ಮ ಮನೆಯಲ್ಲೇ ರೆಕಾರ್ಡಿಂಗ್ ಸ್ಟೂಡಿಯೋ ಸ್ಥಾಪಿಸಿಕೊಂಡಿದ್ದರೆ, ರಾಘವ ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮನೆಯಲ್ಲೇ ಒಂದು ಚಿಕ್ಕ ಮೂವಿ ಸ್ಟುಡಿಯೋವನ್ನು ಕಂಡುಕೊಂಡವರು. ಮಧ್ಯಂತರದಲ್ಲಿ ರಾಘವ ಅವರನ್ನು ಪರಿಚಯಿಸಿದ ಮೋಹನ್ - 'ಈಗ ಈ ಚಿತ್ರವನ್ನು ನಿರ್ಮಿಸಿದ ರಾಘವ ಅವರಿಂದ ಒಂದೆರೆಡು ಮಾತು...' ಎಂದು ಪೀಠಿಕೆ ಹಾಕಿಕೊಟ್ಟದ್ದೇ ತಡ ಬಹಳ ಉತ್ಸಾಹದಲ್ಲಿ ರಾಘವ ಅವರು ತಮ್ಮನ್ನು ತಾವು ಪರಿಚಯಿಸಿಕೊಂಡು ಎಲ್ಲರಿಗೂ ಅಪ್ತರಾಗಿ ಹೋದರು. ಅವರದೇ ಮಾತುಗಳಲ್ಲಿ ಈ ಚಿತ್ರವನ್ನು ಯಾವುದೇ ಫಿಲ್ಮ್ ರೋಲ್‌ಗಳಿಲ್ಲದೇ ಸಂಪೂರ್ಣವಾಗಿ ವಿದ್ಯುನ್ಮಾನವಾಗಿ ಮೂರು ವರ್ಷಗಳಲ್ಲಿ ತಯಾರಿಸಿದ್ದು, ಸುಮಾರು ೮೦ ಸಾವಿರ ಡಾಲರ್‌ಗಳನ್ನು ವ್ಯಯಿಸಿ ಕೇವಲ್ ವೀಕೆಂಡ್‌ನಲ್ಲಿ ಮಾತ್ರ ಈ ಚಿತ್ರವನ್ನು ನಿರ್ಮಿಸಲು ದುಡಿದದ್ದು, ಚಿತ್ರಕ್ಕೆ ಬೇಕಾದ ನಟ-ನಟಿಯರನ್ನು ಹೆಕ್ಕಿ ಅವರಿಗೆಲ್ಲ ಕನ್ನಡವನ್ನು ಕಲಿಸಿದ್ದು ಮುಂತಾದ ವಿಷಯಗಳನ್ನು ಭಾವುಕವಾಗಿ ಹಂಚಿಕೊಂಡರು. ಕ್ಯಾಲಿಫೋರ್ನಿಯಾದಲ್ಲಿ ಅದೆಷ್ಟೇ ಜನರು ಕನ್ನಡಿಗರಿದ್ದರೂ ಯಾರೂ ಸಹಾಯಕ್ಕೆ ಬರದಿರುವ ಸ್ಥಿತಿಯನ್ನು ಅವರು ವಿವರಿಸಿದಾಗ 'ಇಲ್ಲಿ ನ್ಯೂ ಜೆರ್ಸಿಯಲ್ಲಿ ಈ ಸಿನಿಮಾವನ್ನು ಮಾಡಿದ್ದರೆ ನಾವು ಸಹಾಯ ಮಾಡುತ್ತಿದ್ದೆವು...' ಎಂದು ಕೆಲವರು ಅಂದರೆ 'ಎಲ್ಲಾ ಕಡೆ ಅದೇ ಪರಿಸ್ಥಿತಿ, ಮೂರುವರ್ಷಗಳ ಈ ಪ್ರಾಜೆಕ್ಟಿನಲ್ಲಿ ಪ್ರತೀ ವೀಕೆಂಡ್‌ನಲ್ಲೂ ತಮ್ಮ ಸಮಯವನ್ನು ಮೀಸಲಾಗಿಡುವುದಕ್ಕೆ ಇಲ್ಲೂ ಹೆಚ್ಚು ಜನರಿಗೆ ಆಗೋದಿಲ್ಲ...' ಎಂದು ಕೆಲವರು ತಿದ್ದಿ ಹೇಳಿದರು.

ರಾಘವ ಅವರು ತಮ್ಮನ್ನು ಪರಿಚಯಿಸಿಕೊಂಡ ಹಾಗೆ ಅವರ ಕಾವ್ಯನಾಮ 'ಕನ್ನಡದಾಸ'. ಈ ಹೆಸರಿಗೆ ತಕ್ಕಂತೆ ನಿಜವಾಗಿಯೂ ಅವರು ಕನ್ನಡದಾಸರೇ. ಚಿತ್ರಮಂದಿರದಲ್ಲಿ ಪ್ರೇಕ್ಷರಿಗೆ 'ಈ ಚಿತ್ರದ ಮುಂದಿನ ಭಾಗ "ಅಮೇರಿಕಾ ಅನುಬಂಧ"ವಾಗಿ ಮುಂದುವರೆಸುತ್ತಿದ್ದೇನೆ...' ಎಂದು ಮಹಾಉತ್ಸಾಹದಲ್ಲಿ ತಮ್ಮನ್ನು ತಾವು ತೆರೆದುಕೊಂಡ ಅವರು 'ನಿಮ್ಮಲ್ಲಿ ಯಾರಾದರೂ ಸಹಾಯ ಮಾಡುವವರಿದ್ದರೆ ದಯವಿಟ್ಟು ಹಾಗೆ ಮಾಡಿ, ಡಬ್ಬಿಂಗ್ ಮಾಡುವಲ್ಲಿ, ಚಿತ್ರಕಥೆಯನ್ನು ಅಳವಡಿಸಿಕೊಳ್ಳುವಲ್ಲಿ ಯಾವುದೇ ರೀತಿಯ ಸಹಾಯಗಳಿಗೂ ನಾನು ಸಿದ್ಧ, ನಿಮಗೇ ಈ ಚಿತ್ರದ ಹಾರ್ಡ್‌ಡ್ರೈವ್ ಕಳಿಸುತ್ತೇನೆ ಬೇಕಾದರೆ' ಎಂದು ವಿನಯಪೂರ್ವಕವಾಗಿ ಮನವಿಮಾಡಿಕೊಂಡರು. ಚಿತ್ರವನ್ನು ತಯಾರಿಸುವಲ್ಲಿ ತಾವು ಅದರ ಉದ್ದಗಲಕ್ಕೂ ಅನುಭವಿಸಿದ ತೊಂದರೆಗಳನ್ನು ಹಂಚಿಕೊಂಡಿದ್ದನ್ನು ನೋಡಿ ನಮಗಂತೂ ಬಹಳ ಸಂತೋಷವಾಯಿತು. ಈ ರೀತಿಯೂ ಮಾಡುವವರಿದ್ದಾರೆ, ತಮ್ಮ ಅಭಿಮಾನವನ್ನು ತಮ್ಮ ಹವ್ಯಾಸವನ್ನು ಮಾತಿನಿಂದ ಕೃತಿಗೆ ತರುವವರಿದ್ದಾರೆ ಎನ್ನುವ ವಿಷಯವನ್ನು ಪ್ರೇಕ್ಷಕರು ಬಹಳ ಸಂತೋಷದಿಂದ ಸ್ವೀಕರಿಸಿ ರಾಘವ ಅವರಿಗೆ ಚಪ್ಪಾಳೆಗಳಿಂದ ಮೆಚ್ಚುಗೆ ಸೂಚಿಸಿದರು, ಈ ಹಿನ್ನೆಲೆ ಮೊದಲೇ ತಿಳಿದ್ದಿದ್ದರೆ ಎಂದುಕೊಂಡವರಲ್ಲಿ ನಾನೂ ಒಬ್ಬ - ಆಗಿನಿಂದಲೇ ಚಿತ್ರವನ್ನು ಮತ್ತೊಂದು ಕೋನದಲ್ಲಿ ನಾನು ನೋಡತೊಡಗಿದ್ದು. ಒಟ್ಟಿನಲ್ಲಿ ರಾಘವ ಅವರ ಸಾಧನೆ ಅಮೋಘವಾದದ್ದು, ಇಂತಹ ಸಾಧನೆಯನ್ನು ಪುಲ್‌ಟೈಮ್ ಜೀವಾಣುಶಾಸ್ತ್ರ ಸಂಶೋಧನೆ ಮಾಡಿಕೊಂಡು ಕೇವಲ ವೀಕೆಂಡ್‌ನಲ್ಲಿ ಮಾಡುವುದು ಸಾಮಾನ್ಯ ಕೆಲಸವೇನಲ್ಲ, ರಾಘವರಂತಹವರಿಗೆ ಶಹಬ್ಬಾಸ್ ಗಿರಿ ಕೊಡಲೇಬೇಕು.

***

ಕೋಲಾರದ ಚಿಂತಾಮಣಿಯ ಹುಡುಗ ಕೃಷ್ಣಾರೆಡ್ಡಿ ಅರಿಜೋನಾದ ಜೆ.ಎಫ್.ಕೆ ವಿಶ್ವವಿದ್ಯಾನಿಲಯಕ್ಕೆ ಪಿ.ಎಚ್‌ಡಿ. ಮಾಡಲೆಂದು ಬರುತ್ತಾನೆ, ಅವನ ಮೇಷ್ಟ್ರು ಡಾ.ಬ್ಲ್ಯಾಕ್ (ಕರಿಯಪ್ಪ) ಅವರ ಜೊತೆ ಬೋಧನೆಯಲ್ಲಿ ಸಹಾಯಕನಾಗಿ ಸೇರಿಕೊಂಡನಂತರ ಹಲವಾರು ಶಿಷ್ಯರಲ್ಲಿ ದಿವ್ಯಪ್ರಭಾ ಪಟೇಲ್ ಎಂಬ ಹುಡುಗಿಯ ಜೊತೆ ವಿಶೇಷವಾಗಿ ಸ್ನೇಹ ಬೆಳೆಯುತ್ತದೆ. ಪರೀಕ್ಷೆಯಲ್ಲಿ ಆಕೆಗೆ 'ಬಿ' ಗ್ರೇಡ್ ಗಳಿಸಿಕೊಡಲೆಂದು ರೆಡ್ಡಿ ಐದು ಕೃಪಾಂಕಗಳನ್ನು ನೀಡಿದ್ದು ಆತನ ಮೇಷ್ಟ್ರಿಗೆ ಸರಿಯೆಂದು ಕಂಡುಬರದೇ ತನ್ನ ಕೆಲಸವನ್ನು ಕಳೆದುಕೊಳ್ಳುವಂತಾಗುತ್ತದೆ, ತನ್ನ ವೀಸಾ ಸ್ಟೇಟಸ್ ಮೂರುತಿಂಗಳಿನಲ್ಲಿ ಮುಗಿದುಹೋಗುವುದರಿಂದ ಒಂದೇ ಭಾರತಕ್ಕೆ ಹೋಗಬೇಕು, ಅಥವಾ ಇಲ್ಲೇ ಯಾರನ್ನಾದರೂ ಅಮೇರಿಕನ್ ಪ್ರಜೆಯನ್ನು ವಿವಾಹವಾಗಬೇಕು ಎನ್ನುವ ಇಬ್ಬಂದಿಗೆ ನಾಯಕ ಬೀಳುತ್ತಾನೆ. ಒಬ್ಬಳು ಕಪ್ಪು ಹೆಂಗಸು, ಇನ್ನೊಬ್ಬಳು ಬಿಳಿಯ ಹುಡುಗಿ ಇವರೆನ್ನೆಲ್ಲ ಮದುವೆಯಾಗುವ ಪ್ರಸಂಗಗಳನ್ನು ಹುಟ್ಟುಹಾಕಿಕೊಂಡು ಅದರ ಹಿನ್ನೆಲೆಯಲ್ಲಿ ನಾಯಕ ದಿವ್ಯಾಳ ಸಲಹೆಯಂತೆ ಆಕೆಯನ್ನೇ ವಿವಾಹವಾಗುತ್ತಾನೆ. ವಿವಾಹವಾದರೂ ಆಕೆಯೊಡನೆ ದೈಹಿಕ ಸಂಬಂಧವನ್ನು ಮಾಡಬಾರದು, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎನ್ನುವ ಅನೇಕ ಮಾನಸಿಕ ಬಂಧನಗಳಲ್ಲಿ ತೊಳಲಾಡುವುದೂ ಎನ್ನುವುದರಿಂದ ಹಿಡಿದು ಭಾರತದಲ್ಲಿ ಈಗಾಗಲೇ ತನ್ನ ಜೊತೆ ಮದುವೆ ನಿಶ್ಚಯವಾಗಿರುವ ಶೋಭಾಳನ್ನೂ ಕೈ ಬಿಡಬಾರದು ಎನ್ನುವ ನಿರ್ಧಾರಕ್ಕೆ ನಾಯಕಬರುತ್ತಾನೆ. ಒಂದು ಕಡೆ ತಾನು ಮದುವೆಯಾಗಬಾರದು ಎನ್ನುವ ಹಠದಲ್ಲಿರುವ ದಿವ್ಯಾ ಕೇವಲ ಉಪಕಾರ ಸ್ಮರಣೆಗೆ ರೆಡ್ಡಿಯನ್ನು ಮದುವೆಯಾದದ್ದೂ, ಮತ್ತೊಂದು ಕಡೆ ಶೋಭಾಳನ್ನು ಕೈಬಿಡಬಾರದು ಎನ್ನುವ ಗೊಂದಲವೂ, ಜೊತೆಯಲ್ಲಿ ಇಲ್ಲಿ ಡೆನ್ವರ್ ನಲ್ಲಿ ಕೆಲಸ ಮಾಡಿಕೊಂಡು ದೂರವಿರಬೇಕಾದ ಅನಿವಾರ್ಯತೆಯೂ ಇವುಗಳೆಲ್ಲ ಚಿತ್ರದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುತ್ತವೆ. ರೆಡ್ಡಿ ಕೊನೆಯಲ್ಲಿ ಯಾರನ್ನು ಮದುವೆಯಾಗಿ ಮುಂದುವರೆಯುತ್ತಾನೆ, ದಿವ್ಯಾಳ ಅಣ್ಣ, ಅಮ್ಮ ಅವರ ಮದುವೆಗೆ ಸಮ್ಮತಿಸುತ್ತಾರೆಯೇ, ರೆಡ್ಡಿ ಗ್ರೀನ್‌ಕಾರ್ಡು ಪಡೆಯುವುದಕ್ಕೆ ಏನೇನು ಮಾಡಬೇಕಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ಖಂಡಿತವಾಗಿ ನೋಡಲೇಬೇಕು. ಅಮೆಚ್ಯೂರ್ ಆರ್ಟಿಸ್ಟ್‌ಗಳು ಮಾಡಿರುವ ಹೋಮ್‌ವಿಡಿಯೋ ಎಂದುಕೊಂಡು ಚಿತ್ರದಲ್ಲಿರುವ ನ್ಯೂನ್ಯತೆಗಳನ್ನೆಲ್ಲ ಬದಿಗೊತ್ತಿ ರಾಘವ ರೆಡ್ಡಿಯವರ ಸಾಧನೆಯನ್ನು ಕಣ್ಣಾರೆ ನೋಡಬೇಕು ಆಗಲೇ ನಿಮಗೆ ಒಂದು ಚಿತ್ರವನ್ನು ಮಾಡುವುದಕ್ಕೆ ಏನು ಪಾಡುಪಡಬೇಕಾಗುತ್ತದೆ ಎನ್ನುವುದು ಗೊತ್ತಾಗುತ್ತದೆ.

***

ರಾಘವ ಅವರ ಕನ್ನಡಾಭಿಮಾನ ಚಿತ್ರದುದ್ದಕ್ಕೂ ಧಾರಾಳವಾಗಿ ಹರಿದುಬಂದಿದೆ. ಚಿತ್ರದಲ್ಲಿ ಎಲ್ಲವೂ ಸಂಪೂರ್ಣವಾಗಿ ಕನ್ನಡಮಯ. ವಿಶ್ವವಿದ್ಯಾನಿಲಯದ ಪ್ರಾಂಗಣದಿಂದ ಹಿಡಿದು, ಮದುವೆ ಮಾಡಿಸುವ ಚರ್ಚಿನವರೆಗೆ, ದೊಡ್ಡ ಕೊಳ್ಳ (ಗ್ರ್ಯಾಂಡ್ ಕ್ಯಾನಿಯನ್)ದಿಂದ ಹಿಡಿದು, ಅರಿಜೋನಾದ ಫಾರ್ಮ್‌ಗಳವರೆಗೆ ಬರುವ ಪಾತ್ರಧಾರಿಗಳೆಲ್ಲ ಸಂಪೂರ್ಣ ಕನ್ನಡದಲ್ಲೇ ವ್ಯವಹರಿಸೋದು. ಚಿತ್ರದಲ್ಲಿ ಬರುವ ಅಮೇರಿಕದವರು, ರಷಿಯನ್ನರು, ಬ್ರೆಜಿಲಿಯನ್ನರು, ಈಜಿಪ್ಶ್ಯನ್ನರು, ಕರಿಯರು, ಬಿಳಿಯರು, ಭಾರತೀಯರು, ಎಲ್ಲರೂ ಶುದ್ಧಕನ್ನಡವನ್ನು ಮಾತನಾಡುವ ಪ್ರಯತ್ನ ಮಾಡಿಸಿರುವುದು ರಾಘವ ಅವರ ಹೆಗ್ಗಳಿಕೆ. ಆದಷ್ಟು ಪಾರಿಭಾಷಿಕ ಪದಗಳಿಗೆ ಕನ್ನಡದ ಪದವನ್ನು ಬಳಸಿರುವುದು ಒಮ್ಮೊಮ್ಮೆ ಹಾಸ್ಯಾಸ್ಪದವೆನಿಸಿದರೂ ರಾಘವ ಅವರ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಿದರೆ ಎಲ್ಲೂ ಅತಿಶಯವೆನಿಸೋದಿಲ್ಲ. ಚಿತ್ರದುದ್ದಕ್ಕೂ ರಾಜ್‌ಕುಮಾರ್ ನಟಿಸಿರುವ ಬಂಗಾರದ ಮನುಷ್ಯ, ಕಸ್ತೂರಿನಿವಾಸ ಮುಂತಾದ ಹಾಡಿನ ಹಿನ್ನೆಲೆಗಳನ್ನು ಬಹಳವಾಗಿ ಬಳಸಿಕೊಂಡು ಪಾತ್ರಗಳೂ ಈ ಹಾಡುಗಳ ಕೆಲವು ಪಂಕ್ತಿಗಳನ್ನು ಅನುಮೋದಿಸುವಂತೆ ಮಾಡಿರುವುದು ಹೆಗ್ಗಳಿಕೆ. ಶಂಕರ್‌ನಾಗ್ ಅವರ 'ಇದುಸಾಧ್ಯ' ಎನ್ನುವ ಚಲನಚಿತ್ರ ಕೇವಲ ೨೪ ಘಂಟೆಗಳಲ್ಲಿ ತಯಾರುಮಾಡಿದ ಮೊದಲ ಭಾರತೀಯ ಚಲನಚಿತ್ರ ಎನ್ನುವಂತೆ, ರಾಘವ ಅವರು ಏಕವ್ಯಕ್ತಿ ಸಂಪಾದನೆಯಲ್ಲಿ ಸಂಪೂರ್ಣವಾಗಿ ವೀಕೆಂಡ್‌ನಲ್ಲಿ ತೆಗೆದಿರುವ ಮೂರುವರ್ಷಗಳ ಪ್ರಾಜೆಕ್ಟ್ 'ವೀಸಾವಿವಾಹ' ಎನ್ನಬಹುದು.

ಈ ಚಿತ್ರದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಮೆಚ್ಚಿಗೆಯಾದದ್ದು ಪಾತ್ರಗಳ ಅಮೇರಿಕನ್ ನಿಲುವು. ಚಿಕ್ಕ ಹಾಗೂ ಚೊಕ್ಕವಾಗಿ ತಾವು ಹೇಳಬೇಕಾದುದನ್ನು ಹೇಳಿ ತಮ್ಮನ್ನು ಕಟ್ಟಿಕೊಳ್ಳುವ ಪಾತ್ರಗಳ ಮನಸ್ಸಿನ್ನಲ್ಲಿ ಅಮೇರಿಕನ್ ಪ್ರಭಾವ ಧಾರಾಳವಾಗಿ ಹೊರಹೊಮ್ಮಿದೆ - 'ಅದು ನನಗೆ ಇಷ್ಟವಿಲ್ಲ' ಎನ್ನುವ ಒಂದೇ ವಾಕ್ಯ ನಾಯಕಿಯ ಪಾತ್ರದಲ್ಲಿ ಬಹಳಷ್ಟು ಗಂಭೀರವಾಗಿ ಹೊರಹೊಮ್ಮಿದೆ. ನಾನು ಮದುವೆಯಾಗೋದಿಲ್ಲ ಎನ್ನುವ ಮಗಳನ್ನು ಅಮ್ಮ, ಅತ್ತಿಗೆ, ಅಣ್ಣಂದಿರು ಅಮೇರಿಕನ್ ಸಂಪ್ರದಾಯದಲ್ಲಿ ಉಪಚರಿಸುವುದೂ, ನಾಯಕಿ ತನ್ನ ವ್ಯಕ್ತಿತ್ವವನ್ನು ಎಲ್ಲಿ ಹೋದರೂ ಕಾಪಾಡಿಕೊಳ್ಳುವುದೂ ರಾಘವ ಅವರು ಬಹಳ ಚೆನ್ನಾಗಿ ಮೂಡಿಸಿದ್ದಾರೆ. ಇಮಿಗ್ರೇಷನ್ ಅಧಿಕಾರಿ ಸಂದರ್ಶನದಲ್ಲಿ ಹದ್ದುಮೀರಿ ವರ್ತಿಸುವುದನ್ನು ನಾಯಕಿಯ ಪಾತ್ರ ಅಮೇರಿಕನ್ ಮಹಿಳೆಯಾಗಿ ಖಂಡಿಸುತ್ತದೆ. 'ನಿನಗೆ ಎಲ್ಲರೂ ಬುದ್ದೂ ಎಂದರೆ, ನಿನ್ನನ್ನು ಎಲ್ಲರೂ ಅವಮಾನಿತನನ್ನಾಗಿ ಮಾಡಿದರೆ ಅದನ್ನು ನೋಡಿ ನೀನೇಕೆ ಸಹಿಸಿಕೊಳ್ಳಬೇಕು?' ಎನ್ನುವ ಮಾತಿಗೆ ನಾಯಕ 'ನನಗೆ ನಾನೇ ಹಾಗಂದುಕೊಳ್ಳುತ್ತೇನಲ್ಲ!' ಎಂದು ಹಾಸ್ಯವಾಗಿ ತೇಲಿಸಿಬಿಡುತ್ತಾನೆ. ಭಾರತೀಯ ಹಿನ್ನೆಲೆಯಲ್ಲಿ ಯೋಚಿಸುವ ನಾಯಕ, ಅಮೇರಿಕನ್ ಹಿನ್ನೆಲೆಯಲ್ಲಿ ಯೋಚಿಸುವ ನಾಯಕಿ, ಹಾಗೂ ಹಲವಾರು ಪಾತ್ರಗಳು ಬಹಳ ಸರಳವಾಗಿ ಬಿಂಬಿತವಾಗಿವೆ, ಈ ಪಾತ್ರಗಳ ಮಾನಸಿಕ ವ್ಯಾಪಾರ ಎಲ್ಲಿಯೂ ಅತಿ ಎನ್ನಿಸುವುದಿಲ್ಲ. ಹೀಗೆ ರಾಘವ ಅವರು ಪ್ರತಿಯೊಂದು ಪಾತ್ರಗಳಿಗೂ ಒಂದು ಸೈದ್ಧಾಂತಿಕ ನೆಲೆಯನ್ನು ಒದಗಿಸುವುದರ ಜೊತೆಗೆ ಅವುಗಳನ್ನು ಇದ್ದಹಾಗೇ ತೋರಿಸುವುದಕ್ಕೆ ಮುತುವರ್ಜಿಯನ್ನೂ ವಹಿಸಿದ್ದಾರೆ.

***

ರಾಘವ ಅವರ ಸಾಧನೆ ನಿಜವಾಗಿಯೂ ಶ್ಲಾಘನೀಯವಾದುದು. ಅಲ್ಲಲ್ಲಿ ಬರುವ ಧ್ವನಿಮುದ್ರಣ ದೋಷಗಳನ್ನು ಅವರು ಮುಂಬರುವ ಚಿತ್ರಗಳಲ್ಲಿ ಖಂಡಿತವಾಗಿ ತಿದ್ದಿಕೊಳ್ಳಬಲ್ಲರು. ಛಾಯಾಗ್ರಾಹಕರಾಗಿ ವೃತ್ತಿಪರರ ಹತ್ತಿರಹತ್ತಿರ ಬಂದರೂ ಸಂಭಾಷಣೆಗಳನ್ನು ಬರೆದು ಒಪ್ಪಿಸುವಲ್ಲಿ ಅವರು ತಮ್ಮನ್ನು ತಾವು ಬಹಳಷ್ಟು ತೊಡಗಿಸಿಕೊಳ್ಳಬೇಕು. ಚಿತ್ರದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸಂಕಲನಕ್ಕೆ ಅವರು ಆಧ್ಯತೆಯನ್ನು ಕೊಡಬೇಕು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಶೂಟ್ ಮಾಡಿರುವ ಸಿನಿಮಾವಾದ್ದಾರಿಂದ ಅವರು ದೃಶ್ಯಗಳನ್ನು ಸಂಕಲಿಸಿ ಸಹಜವಾಗಿ ಕಥೆಯ ಓಟವನ್ನು ನಿರ್ಮಿಸುವಲ್ಲಿ ಶ್ರಮಿಸಬೇಕು. ಸಂಭಾಷಣೆ ಪೂರ್ಣ ಕನ್ನಡಮಯವಾಗಿರುವುದು ರಾಘವ ಅವರನ್ನ ಬಲ್ಲವರಿಗೆ ಅತಿ ಎನ್ನಿಸುವುದಿಲ್ಲ, ಅವರ ಫೋನ್ ನಂಬರ್ ಅನ್ನು ಕೇಳಿದರೆ ಅವರು ಸಂಖ್ಯೆಗಳನ್ನು ಕನ್ನಡದಲ್ಲಿಯೇ ಹೇಳೋದು! ಮುಕ್ತ ಹಾಗೂ ಸ್ನೇಹಮಯರಾಗಿರುವ ರಾಘವ ಅವರೊಂದಿಗೆ ಬಹಳಷ್ಟು ಜನ ಸಹೃದಯರು ಕೈಗೂಡಿಸಿದರೆ ಅವರ ಮುಂದಿನ ಚಿತ್ರಗಳು ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದೇ ಪಡೆಯುತ್ತವೆ ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ. ಮುಂಬರುವ ದಿನಗಳಲ್ಲಿ 'ವೀಸಾವಿವಾಹ'ವನ್ನು ಕೆನಡಾ, ಸಿಂಗಪುರ, ಹಾಂಗ್‌ಕಾಂಗ್, ಭಾರತ ಮುಂತಾದ ದೇಶಗಳಲ್ಲಿ ಬಿಡುಗಡೆ ಮಾಡಲಿರುವ ರಾಘವ ಅವರಿಗೆ ಅಭಿನಂದನೆಗಳು ಹಾಗೂ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ನನ್ನ ಹಾರೈಕೆ.

Friday, November 03, 2006

ಬಂದದ್ದೆಲ್ಲಾ ಬರಲಿ, ವೀಕೆಂಡ್‌ನಲ್ಲೇ ಬರಲಿ!

ಕೊನೇಪಕ್ಷ ನವೆಂಬರ್ ತಿಂಗಳು ಬಂತು ಈಗಾದರೂ ಪುರುಸೊತ್ತು ಮಾಡಿಕೊಂಡು ಕನ್ನಡವನ್ನು ಓದೋಣವೆಂದುಕೊಂಡರೆ ಟೈಮೇ ಸಿಗುತ್ತಿಲ್ಲ ಎನ್ನುವಂತಾಗಿದ್ದು ನನ್ನ ಪುಣ್ಯವೋ ಅಥವಾ ಕಾಕತಾಳೀಯವೋ ಯಾರಿಗೆ ಗೊತ್ತು ಅಂತ ಯೋಚಿಸ್ತಾ ಕೂತಿದ್ದೆ, ಸಡನ್ ಆಗಿ ನೆನಪಿಗೆ ಬಂತು, ನಮ್ಮ ರಾಜ್ಯದಲ್ಲಿ ಈ ತಿಂಗಳು ತುಂಬೆಲ್ಲಾ ಎಲ್ಲಾ ಕಡೆ ರಾಜ್ಯೋತ್ಸವ ಆಚರಿಸ್ತಾರೆ ಆದ್ದರಿಂದ ನನಗೂ ನಮ್ಮ ರಾಜ್ಯೋತ್ಸವ ಈ ವಾರಾಂತ್ಯದಲ್ಲೇ ಆಗಲೀ ಎಂದು ಕನ್ನಡ ರಾಜ್ಯೋತ್ಸವವನ್ನು ಅಮೇರಿಕನ್ ಮಯವಾಗಿ ಮಾಡಿಬಿಟ್ಟರೆ ಹೇಗೆ ಎಂದು ಯೋಚಿಸಿಕೊಂಡಾಗ ಒಮ್ಮೆ ನಗುಬಂತು. ಹೌದು ಮತ್ತೆ, ವಾರವಿಡೀ ತುಂಬಾ ವ್ಯಸ್ತರಾಗಿರೋ ನಮಗೆ ಆಗುಹೋಗೋ ಕೆಲಸಗಳೆಲ್ಲ ವೀಕೆಂಡ್‌ನಲ್ಲೇ ಬರಬೇಕಪ್ಪಾ, ವಾರದ ದಿನಗಳಲ್ಲಿ ಯಾವನಾದ್ರೂ ಮಹೂರ್ತ ನೋಡಿ ಮದುವೆ ಆಗ್ತಾನಾ ಈಗಿನ್ ಕಾಲದಲ್ಲಿ? ಹಾಗೇನಾದ್ರೂ ಆದ್ರೆ ಒಂದ್ ಲೆಕ್ಕಾ ಒಳ್ಳೇದೇ ಊಟಕ್ಕೆ ಜನ ಕಡಿಮೆ, ಖರ್ಚೂ ಕಡಿಮೆ. ಇದ್ದುದರಲ್ಲಿ ಯಾವುದು ಮಹಾಪಾಪ? ತಿಂಗಳು ತುಂಬೆಲ್ಲಾ ರಾಜ್ಯೋತ್ಸವ ಆಚರಿಸಿದೋ ಅಥವಾ ಮಾಡೋದೇನಿದ್ರೂ ವೀಕೆಂಡಿನಲ್ಲೇ ಇರಲಿ ಅನ್ನೋದೋ?

ಅದೂ ಸರಿ, ಈ ಐದು ದಿನಗಳ ಕೆಲಸ ನಡೆಯೋ ಒಂದು ವಾರಕ್ಕೆ ಎರಡು ದಿನಗಳ ಬ್ರೇಕ್ ಎಲ್ಲಿಯ ಸಮ? ಕೊನೇ ಪಕ್ಷ ಐದು ದಿನಕ್ಕೆ ಎನಿಲ್ಲಾ ಅಂದ್ರೂ ನಾಲ್ಕು ದಿನಾನಾದ್ರೂ ರಜೆ ಇರಬೇಕಪ್ಪಾ? ಹಂಗಾದ್ರೆ ಒಂದು ವಾರದಲ್ಲಿ ಒಂಭತ್ತು ದಿನಗಳು ಆದಹಾಗೆ ಆಗಲಿಲ್ವಾ? ಹೌದು ಮತ್ತೆ, ಒಂಭತ್ತು ದಿನಗಳು ಅಂದ್ರೆ ರವಿಯಿಂದ ಹಿಡಿದು ಶನಿಯವರೆಗೆ ಏಳು ಗ್ರಹಗಳಿಗೆ ಏಳುದಿನಗಳನ್ನು ಮೀಸಲಿಟ್ಟು ಒಂದು ವಾರ ಅಂತ ಕರೆದರೆ, ಇನ್ನುಳಿದ ಎರಡು ಗ್ರಹಗಳಿಗೇಕೆ ವಾರವಿಲ್ಲ? ಇದು ಅನ್ಯಾಯ, ಒಂಥರಾ ಡಿಸ್ಕ್ರಿಮಿನೇಷನ್ - ಸೈಜು ದೊಡ್ಡದಿದ್ದ ಗ್ರಹಗಳಿಗೆ ಒಂದು ರೀತಿ, ಸೂರ್ಯನಿಗೆ ಹತ್ತಿರವಿದ್ದ ಗ್ರಹಗಳಿಗೆ ಮತ್ತೊಂದು ರೀತಿ. ಇದು ಪಕ್ಕಾ ಅನ್ಯಾಯ, ಯಾವುದಾದ್ರೂ ಲಾಯರ್ ಕರೆದು ಸೂ ಮಾಡ್‌ಬೇಕು, ಕಂಪೆನ್ಸಟೋರಿ ಡ್ಯಾಮೇಜು, ಪ್ಯುನಿಟಿವ್ ಡ್ಯಾಮೇಜು ಎಲ್ಲಾ ಸೇರಿ ಸುಮಾರು ಒಂದು ನಾಲ್ಕು ನೂರು ಮಿಲಿಯನ್ ಡಾಲರ್‌ಗೆ ಸೂ ಮಾಡಿದ್ರೆ, ಅದರಲ್ಲಿ ಹತ್ತು ಪರ್ಸೆಂಟ್ ನಾನಿಟ್ಟುಕೊಂಡು ಇನ್ನು ಉಳಿದುದ್ದರಲ್ಲಿ ಅರ್ಧ ಬಾಚಿಕೊಂಡ ಲಾಯರ್‍ಗಳಿಗೆ ಗುಡ್‌ಬೈ ಹೇಳಿದ ಮೇಲೆ 'ಗ್ರಹಗಳ ಗ್ರಹಚಾರಕ್ಕೊಂದು ಫಂಡ್' ಎಂದು ಒಂದು ಚಾರಿಟೆಬಲ್ ಗ್ರೂಪ್ ಹುಟ್ಟಿಸಿದರೆ ಆಯಿತಪ್ಪಾ ಅದೇನು ಮಹಾ?

ಪಾಪ, ಆ ಪ್ಲುಟೋ ಗ್ರಹವನ್ನ ಗ್ರಹ ಅಂತಾನೇ ಕನ್ಸಿಡರ್ ಮಾಡಲ್ಲಾ ಅಂದರಂತೆ? ಛೇ, ಏನ್ ಟೈಮ್ ಬಂತಪ್ಪಾ, ನಮ್ ಕಾಲದಲ್ಲೇ ಎಷ್ಟೊಂದ್ ಚೆಂದಿತ್ತು, ನವಗ್ರಹಗಳು ಅಂತ ಪೂಜೆ ಮಾಡ್ತಿದ್ವಿ, ಪ್ಲುಟೋನೂ, ನೆಪ್ಚೂನೂ ಅಣ್ಣಾತಮ್ಮಾ ಇದ್ದಂಗೆ ಅಂತ ತಿಳಕೊಂಡು ನಮ್ ಪ್ರಪಂಚಕ್ಕೆ ನವಗ್ರಹ ಅಂತ ಹೇಳಿಕೊಂಡು ತಿರುಗುತಿದ್ವಿ, ಈಗ ನೋಡಿದ್ರೆ ನಮ್ ಪ್ರಪಂಚಕ್ಕೆ ಕೇವಲ ಎಂಟೇ ಎಂಟು ಗ್ರಹಗಳಂತೆ - ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ, ಗುರುಶುಕ್ರಶನಿಭ್ಯಶ್ಯ ರಾಹುವೇಕೇತುವೇ ನಮಃ - ಎಂದು ಹೇಳೋ ಮಂತ್ರದಲ್ಲಿ 'ರಾಹುವೇಕೇತುವೇ' ಅನ್ನೋದು ಪ್ಲುಟೋ ಜಾಗದಲ್ಲಿ ರಾಹು ಬಿಡ್ತೀರೋ ಕೇತು ಬಿಡ್ತೀರೋ ಅಂತ ಕೇಳಿದಂಗ್ ಆಗಲ್ವಾ? ನಾನು ಕೇಳಿದ ಮಟ್ಟಿಗೆ ಯಾವನಿಗಾದ್ರೂ ಗ್ರಹಗತಿಯಲ್ಲಿ ರಾಹು ಕೆಟ್ಟದಿದೆ ಅಂತ ಕೇಳಿದ್ದೀನಿಯೇ ವಿನಾ ಕೇತು ಕೆಟ್ಟದಿದೆ ಅಂತ ಎಲ್ಲೂ ಕೇಳಿಲ್ಲ, ಜೊತೆಗೆ ರಾಹುಕಾಲ ನಮಗ್ಯಾವತ್ತಿದ್ರೂ ಬೇಕು ಆದ್ರಿಂದ ಪ್ಲುಟೋಗೆ ಕೊಕ್ ಕೊಟ್ಟ್ ಹಾಗೆ ಕೇತುಗೆ ಕೊಟ್ರೆ ಹೆಂಗೆ ಅಂತ ಒಂದ್ಸರ್ತಿ ಯೋಚ್ನೆ ಬಂತು. ಆದ್ರೆ ಧರ್ಮರಾಯ ಅರ್ಜುನ, ಭೀಮರಂತ ಮಹಾ ಪರಾಕ್ರಮಿಗಳನ್ನೆಲ್ಲ ಬಿಟ್ಟು ನನಗೆ ಮಾದ್ರಿ ಮಗ ನಕುಲ ಬದುಕಿ ಬರಲಿ ಅಂತ ಆ ಮಾತನಾಡೋ ಸರೋವರದ ಹತ್ರ ಕೇಳಿರ್‌ಲಿಲ್ವೇ? ಹಂಗೆ ಕೇತುಗೆ ಏನೇನು ಲಾಬಿ ಇದೆಯೋ ಯಾರಿಗ್ ಗೊತ್ತು.

ನನ್ ಪ್ರಕಾರ ಎಂಟು ಗ್ರಹಗಳಿಗೆ ತಕ್ಕನಾಗಿ ಎಂಟು ವಾರದ ದಿನಗಳಿರಬೇಕು. ಅದ್ರಲ್ಲಿ ಐದು ದಿನ ಕೆಲ್ಸ ಇನ್ನು ಮೂರು ದಿನ ಖಾಲಿ ಇರಬೇಕು, ರಾವಣ ಅಷ್ಟ ದಿಕ್ಪಾಲಕರನ್ನೆಲ್ಲ ತನ್ನ ಕಾಲಡಿ ಕೂಡಿ ಹಾಕಿಟ್ಟುಕೊಂಡಿದ್ದ ಹಾಗೆ ನಾವೂ ಏನಾದರೊಂದು ಮಾಡಿ ನಮ್ ಹಬ್ಬ-ಹರಿದಿನ-ಆಚರಣೆಗಳೆಲ್ಲ ಈ ಮೂರುದಿನದ ವೀಕೆಂಡ್‌ನಲ್ಲೇ ಬರೋಹಾಗೆ ಮಾಡಬೇಕು. ಈ ಅಮೇರಿಕದೋರು ಆಕಾಶದಲ್ಲಿ ಸೂರ್ಯನಿಗೆ ಒಂದ್ ದೊಡ್ಡ ಕನ್ನಡಿ ಇಟ್ಟು ಯಾವತ್ ನೋಡಿದ್ರು ಇಲ್ಲಿ ೭೨ ಡಿಗ್ರೆ ಫ್ಯಾರನ್‌ಹೈಟ್ ಟೆಂಪರೇಚರ್ ಇರೋ ಹಾಗೆ ಮಾಡಬೇಕು ನೋಡಿ, ಅವಾಗಿರತ್ತೆ ಮಜಾ!

Tuesday, October 31, 2006

ನಮ್ಮ ಹಾಡು ನಮ್ಮದು!

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ!


ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ...' ಎನ್ನುವ ಈ ಹಾಡಿನ ಮೇಲಿನ ವಾಕ್ಯಗಳು ತಮ್ಮ ಸತ್ವವನ್ನೇನೂ ಕಳೆದುಕೊಂಡಂತೆನಿಸಿವುದಿಲ್ಲ. ಹುಯಿಲುಗೋಳರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...' ಎಂಬುದು ಇಂದಿಗೂ ಪ್ರಚಲಿತದಲ್ಲಿರುವ ಮತ್ತೊಂದು ಗೀತೆಯೇ. ಹೀಗೆ ಎರಡು ಹಾಡುಗಳ ಮೇಲೆ ನಮ್ಮ ಪರಂಪರೆಯನ್ನು ಅಳೆದು ತೀರ್ಮಾನ ಮಾಡಲಾಗುವುದೇ ಎಂದು ಯಾರು ಬೇಕಾದರೂ ಹುಬ್ಬೇರಿಸಬಹುದು. ಆದರೆ ನನಗಂತೂ ನಾಡಿನ ಐಕ್ಯತೆಯಲ್ಲಿ ದಿನೇದಿನೇ ವಿಶ್ವಾಸ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚೇನೂ ಆಗುತ್ತಿಲ್ಲ.

ನಾವು ಈ ಹಿಂದಿನ ದಶಕಗಳನ್ನು ಒಂದು ಅರ್ಧ ಶತಮಾನವನ್ನು ಕಳೆದು ಬಂದಿದ್ದನ್ನು ಹಿಂತಿರುಗಿ ನೋಡಲೇ ಬೇಕು, ಅದರಿಂದ ಕಲಿಯುವುದಂತೂ ಬೇಕಾದಷ್ಟಿದೆ. ಅರ್ಧ ಶತಮಾನದ ಬಳಿಕವೂ 'ಕನ್ನಡವನ್ನು ಉಳಿಸಿ...' ಎಂದು ರಿಕ್ಷಾ, ಬಸ್ಸುಗಳ ಹಿಂದೆ ಬರೆಸಿಕೊಂಡು ಓಡಾಡುವ ಸ್ಥಿತಿಯಿಂದೆಂದೂ ಹೊರಬಂದಂತೆ ನಾವು ಕಾಣುವುದೇ ಇಲ್ಲ. ಒಂದು ಕಡೆ ಕಾಸರಗೋಡಿನಂತಹ ಪ್ರಾಂತ್ಯವನ್ನು ಕನ್ನಡನಾಡಿನ ಭಾಗವನ್ನಾಗಿ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಂಡಂತೆ ಬೆಳಗಾವಿ ಮತ್ತಿತರ ಗಡಿಪ್ರದೇಶಗಳು ಎಂದಿಗಿಂತ ಹೆಚ್ಚಿನ ಪ್ರಾಂತೀಯ ಅಸ್ಥಿರತೆಯಿಂದ ಒದ್ದಾಡುತ್ತಿವೆ, ನವೆಂಬರ್ ಒಂದರ ಏಕೀಕರಣ ದಿನವನ್ನು ಎಷ್ಟೋ ಕಡೆಗೆ ಕರಾಳದಿನವನ್ನಾಗಿ ಆಚರಿಸಲಾಗುತ್ತಿದೆ, ಕನ್ನಡತನವೆನ್ನುವುದು ಪ್ರಶ್ನಾರ್ಥಕವಾಗಿ ಹೋಗಿದೆ.

ಶಾಲೆಗಳಲ್ಲಿ ಕನ್ನಡವನ್ನು (ಮಾಧ್ಯಮವಾಗಿ)ಕಲಿಸಬೇಕೆ ಬಿಡಬೇಕೆ, ಇಂಗ್ಲೀಷ್ ಅನ್ನು ಯಾವ ವರ್ಷದಿಂದ ಭಾಷೆ ಹಾಗೂ ಮಾಧ್ಯಮವಾಗಿ ಆರಂಭಿಸಬೇಕು ಎನ್ನುವುದಕ್ಕೆ ನಾವಿನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಒಂದು ಕಡೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಶಹರಗಳು ಬೆಳವಣಿಗೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದರೆ ಎಷ್ಟೋ ಹಳ್ಳಿಗಳಲ್ಲಿ ಸಾಕಷ್ಟು ಮೂಲಭೂತ ಅನುಕೂಲಗಳಿಲ್ಲದೇ ಇನ್ನೂ ಮುಖ್ಯವಾಹಿನಿಯಿಂದ ದೂರವೇ ಉಳಿದಿವೆ. ಕರ್ನಾಟಕದಲ್ಲೇ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಿರುವುದು ಬಲ್ಲವರ ಚಿಂತೆಗೆ ಮತ್ತೊಂದು ಕಾರಣ - ಹೀಗೆ ದೊಡ್ಡದಾಗುತ್ತಿರುವ ಕಂದಕ, ಅದರಲ್ಲೂ ಕರ್ನಾಟಕವೆಂದರೆ ಬೆಂಗಳೂರು ಎನ್ನುವ ಮನೋಭಾವನೆ ಹಲವಾರು ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ಮಿಸಿದೆ.

ರಾಜಕೀಯವಾಗಿಯೂ ಸಾಕಷ್ಟು ಸ್ಥಿರತೆಯನ್ನೇನೂ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ. ಭಿನ್ನ-ಭಿನ್ನ ಆಡಳಿತಗಳು, ಪಕ್ಷಗಳು-ನಾಯಕರ ಧೋರಣೆ, ಮುಂದಾಲೋಚನೆ ಹಾಗೂ ಪ್ರಗತಿಯ ದೃಷ್ಟಿಯಿಂದ ರಾಜ್ಯದ ಹಿತದೃಷ್ಟಿಯಿಂದ ಏನೇನು ಕಾರ್ಯಗಳು ಆಗಬೇಕಿತ್ತೋ ಅವುಗಳೆಲ್ಲವೂ ಅಸ್ಥಿರ ಆಡಳಿತ ವ್ಯವಸ್ಥೆಯಿಂದ ಸೊರಗಿವೆ. ಆಡಳಿತದಲ್ಲಿ ಹುಟ್ಟುವ ಅಸ್ಥಿರತೆ ರಾಜ್ಯದ ನಾಯಕರುಗಳಿಗೆ ತಮ್ಮ ಪಕ್ಷದ ಶಾರ್ಟ್ ಟರ್ಮ್ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿ ಕಂಡುಬರುತ್ತದೆಯೇ ವಿನಾ ದೆಹಲಿಯಲ್ಲಿ ಧ್ವನಿಯನ್ನು ಏರಿಸಿ ಮಾತನಾಡಿ ಕರ್ನಾಟಕದ ಒಳಿತನ್ನು ಸಾಧಿಸಿಕೊಳ್ಳುವುದಾಗಲೀ, ದೂರದೃಷ್ಟಿಯಿಂದ ಯೋಚಿಸಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸುವುದಾಗಲೀ ದೂರವೇ ಉಳಿಯುತ್ತದೆ.

ನಮ್ಮ ಹಾಡು ನಮ್ಮದು, ಆ ಹಾಡು ಐಕ್ಯಗಾನವಾಗಲಿ, ಆದರೆ ಕನ್ನಡವನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಸಮಸ್ಯೆಯಾಗದಿರಲಿ. ಮುಂಬರುವ ದಿನಗಳಲ್ಲಿ ಈಗಾಗಲೇ ಬೇಕಾದಷ್ಟನ್ನು ತೆರೆದುಕೊಂಡಿರುವ ಕನ್ನಡಿಗರ ಔದಾರ್ಯವನ್ನು ಕೆಣಕುವ ಮತ್ಯಾವ ಘಟನೆಗಳೂ ಘಟಿಸದಿರಲಿ. ಹಳೆಯದನ್ನು ಐತಿಹಾಸಿಕವಾಗಿ ನೋಡಿ ಮುಂದುವರಿದು, ನಾವು ಎಡವಿದಲ್ಲೆಲ್ಲ ಪಾಠವನ್ನು ಕಲಿತು ಪ್ರಗತಿಯ ಕಡೆಗೆ ಸಾಗುವ ಕೆಚ್ಚೆದೆ ನಮಗೆ ಬರಲಿ. ದೇಶದಲ್ಲಿ ಕರ್ನಾಟಕ ಮತ್ತೆ ಮೊದಲಿನದಾಗಲಿ. ಕನ್ನಡ ನಮ್ಮ ಶಕ್ತಿಯಾಗಲಿ.

***

ರಾಜ್ಯೋತ್ಸದ ಶುಭಾಶಯಗಳು.

Monday, October 30, 2006

ತಪ್ಪಿದ ಲೆಕ್ಕ

ನಿನ್ನೆ ರಾತ್ರಿ ಗಡಿಯಾರಗಳನ್ನು ಒಂದು ಘಂಟೆ ಹಿಂದಿಟ್ಟು ಕಾಲವನ್ನು ಜಯಿಸಿದವನ ಹಾಗೆ ಯೋಚಿಸಿಕೊಂಡು ಮಲಗಿದವನಿಗೆ ನನ್ನ ಮಾಮೂಲಿ ಸಮಯಕ್ಕೇ ಎಚ್ಚರವಾಗಬೇಕೇ? ಸರಿ, ಇನ್ನೇನು ಎದ್ದು ಯಾವ ಗಡಿಬಿಡಿಯಿಲ್ಲದೇ ನಿಧಾನವಾಗಿ ಆಫೀಸಿಗೆ ಹೊರಟರಾಯಿತು ಎಂದುಕೊಂಡರೆ ಬದಲಾದ ಸಮಯದ ಪ್ರಭಾವದಿಂದ ಹೆಚ್ಚು ಬೆಳಕು ಎಲ್ಲ ಕಡೆಗೆ ಕಂಡುಬಂತು ಜೊತೆಯಲ್ಲಿ ರಸ್ತೆಯ ಮೇಲಿನ ಎಂದಿಗಿಂತ ಹೆಚ್ಚು ವಾಹನಗಳು ಬೇರೆ. ಎಲ್ಲರಿಗೂ ಒಂದು ಘಂಟೆ ಉಳಿಸಿದ ಹುರುಪು, ಹೆಚ್ಚಿನವರು ತಡವಾಗಿಯಲ್ಲದಿದ್ದರೂ ಸರಿಯಾದ ಸಮಯಕ್ಕೇ ಆಫೀಸಿಗೆ ಹೊರಡುತ್ತಾರಾದ್ದಾರಿಂದ ಯಾವ ಗಡಿಬಿಡಿಯಿರುವುದಿಲ್ಲ ಎಂದುಕೊಂಡಿದ್ದು ನನ್ನ ಭ್ರಮೆ ಮಾತ್ರ. ಒಂದು ಘಂಟೆಯೇನು ಹತ್ತು ಘಂಟೆಗಳ ಕಾಲವನ್ನು ಹಿಂದೆ ಹಾಕಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳೇನೂ ಆಗೋದಿಲ್ಲ ಅನ್ನೋದು ನನ್ನ ಅಭಿಮತ.

ಮುಕ್ತವಾಗಿ ತೆರೆದ ರಸ್ತೆಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡು, ನಿಂತು ನಿಂತೂ ಹೋಗುವ ಟ್ರಾಫಿಕ್‌ಗೆ ಈಗಾಗಲೇ ರೂಢಿಯಾಗಿ ಹೋಗಿರೋದರಿಂದ ನನಗರಿವಿಲ್ಲದಂತೆ ರೆಡಿಯೋ ಡಯಲ್‌ ಒತ್ತಿ ನೋಡಿ ಏನು ಸುದ್ದಿ ಬರುತ್ತದೆಯೋ ಎಂದು ಕಾದಿದ್ದವನಿಗೆ 'October is one of the deadlist months...' ಎನ್ನುವ ಸುದ್ದಿ ಕಿವಿಗಪ್ಪಳಿಸಿತು. ಈ ತಿಂಗಳಿನಲ್ಲಿ ಇವತ್ತಿಗಾಗಲೇ (ಅಕ್ಟೋಬರ್ ೩೦) ನೂರು ಜನ ಅಮೇರಿಕನ್ ಸೈನಿಕರ್ ಹತ್ಯೆಗೀಡಾಗಿದ್ದು ಬಹಳಷ್ಟು ಜನರ ಹುಬ್ಬನ್ನು ಮೇಲಕ್ಕೇರುವಂತೆ ಮಾಡಿತ್ತು, ಅಲ್ಲದೇ ನವೆಂಬರ್ ಏಳರಂದು ನಡೆಯುವ ಎಲೆಕ್ಷನ್ ಹಿನ್ನೆಲೆಯಲ್ಲಿ ಇಂತಹ ಸುದ್ದಿಗಳು ಹೆಚ್ಚು ಹೆಚ್ಚು ಮಹತ್ವ ಪಡೆದುಕೊಳ್ಳುವುದು ಸಹಜ. ಆದರೆ, ಅಕ್ಟೋಬರ್‌ನಲ್ಲಿ ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ ಹಲವಾರು ರಿಪೋರ್ಟರುಗಳು ನ್ಯಾಷನಲ್ ಪಬ್ಲಿಕ್ ರೆಡಿಯೋದಲ್ಲಿ ಈ ವರ್ಷದ ಅಕ್ಟೋಬರ್ ಅನ್ನು ವರ್ಣಿಸುತ್ತಿದ್ದರೇ ವಿನಾ ಎಲ್ಲಿಯೂ 'so far in this month' ಎನ್ನುವ ಮಾತು ಕೇಳಿಬರಲಿಲ್ಲ. ಕೆಟ್ಟದೇನೂ ಆಗದಿರಲಿ, ಆದರೂ ಇನ್ನೂ ಎರಡು ದಿನಗಳಿರುವಂತೆ ಈ ತಿಂಗಳನ್ನು ವರ್ಣಿಸಿದ್ದು ಅಕ್ಟೋಬರ್ ತಿಂಗಳನ್ನು ಅವಮಾನ ಮಾಡಿದಂತಾದ್ದರಿಂದ ಈ ರೀತಿ ಬರೆಯಬೇಕಾಯಿತು. ನಿನ್ನೆ ಸಂಜೆಯವರೆಗೆ ಈ ತಿಂಗಳು ಇರಾಕ್ ನಲ್ಲಿ ಸತ್ತ ಅಮೆರಿಕನ್ ಸೈನಿಕರ ಸಂಖ್ಯೆ ೯೯ ಇದ್ದಿದ್ದು, ಇಂದು ಮುಂಜಾನೆ ಒಬ್ಬ ಮರೀನ್ ಸೈನಿಕನ ಮೃತ್ಯುವಿನಿಂದಾಗಿ ನೂರು ಮುಟ್ಟಿತು, ಸಂಜೆ ಅಫೀಸಿನಿಂದ ಬರುವ ಹೊತ್ತಿಗಾಗಗೇ ನೂರು ಇದ್ದುದು ನೂರಾ ಒಂದು ಆಗಿಹೋಗಿತ್ತು. ಅಲ್ಲದೇ, ಇಂದು ಎಂಪ್ಲಾಯ್‌ಮೆಂಟ್ ಅವಕಾಶಗಳಿಗಾಗಿ ನಿಂತ ಒಂದು ಗುಂಪನ್ನು ಗುರಿಪಡಿಸಿ ಗಾರ್‌ಬೇಜ್‌ ಕ್ಯಾನ್ ನಲ್ಲಿ ತುಂಬಿ ಸಿಡಿಸಿದ ಬಾಂಬ್ ಒಂದು ಸುಮಾರು ಮೂವತ್ತು ಜನಗಳಿಗೂ ಅಧಿಕ ಜನ ಇರಾಕ್ ನಾಗರಿಕರನ್ನು ಬಲಿತೆಗೆದುಕೊಂಡಿತು. ಹೀಗೆ ದಿನವೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯುವ ಇರಾಕ್ ನಾಗರಿಕರ ಸಂಖ್ಯೆಯನ್ನು ಕೇಳೋದಕ್ಕೆ ನಮಗೆ ಹೆಚ್ಚು ಅವಕಾಶಗಳಿರಲಾರವು, ಆದರೆ ಇರಾಕ್‌ನಲ್ಲಿ ಸತ್ತ ಪ್ರತಿಯೊಬ್ಬ ಅಮೇರಿಕನ್ ಸೈನಿಕನ ಲೆಕ್ಕ ಎಲ್ಲರಿಗೂ ಇರುತ್ತದೆ.

ಸಹಜವಾಗಿ ದೊರೆಯೋ ಕುಡಿಯುವ ಹಾಗೂ ಬಳಸುವ ನೀರಿನ ಪ್ರಾಮುಖ್ಯತೆ ಇತ್ತೀಚಿಗೆ ಹೆಚ್ಚಿನ ಜನರನ್ನು ತಟ್ಟಿದಂತಿದೆ. ಹೆಚ್ಚುತ್ತಿರುವ ನೀರಿನ ಬಳಕೆ ಹಾಗೂ ಬಳಸಿದ ನೀರಿನಲ್ಲಿ ಮಲಿನಗಳನ್ನು ಹೆಚ್ಚು ಹೆಚ್ಚಾಗಿ ಒಂದಲ್ಲ ಒಂದು ರೀತಿಯಿಂದ ಸೇರಿಸುತ್ತಿರುವುದು ಪ್ರತಿಯೊಬ್ಬರೂ ದಿನೇ ದಿನೇ ನೀರಿಗೋಸ್ಕರ ಹೆಚ್ಚು ಬೆಲೆಯನ್ನು ತೆರುವಂತೆ ಮಾಡಿದೆ. ಮೇಲೇರಿದ ಗ್ಯಾಸೋಲಿನ್ ಬೆಲೆ ಕಡಿಮೆಯಾದರೂ ಎಷ್ಟೋ ಜನ ಬಾಟಲಿ ನೀರೋ ಮತ್ತೊಂದರ ಹೆಸರಿನಲ್ಲಿ ಒಂದು ಲೀಟರ್ ನೀರೊಂದಕ್ಕೆ ಕೊಡುತ್ತಿರುವ ಬೆಲೆ ಒಂದು ಲೀಟರ್ ಗ್ಯಾಸೋಲಿನ್‌ಗಿಂತ ಅಧಿಕವಾಗಿ ಹೋಗುತ್ತದೆ. ಹೀಗೆ ನೈಸರ್ಗಿಕ ಸಂಪನ್ಮೂಲಗಳಲ್ಲೊಂದಾದ ನೀರನ್ನು ಉಳಿಸಿ, ಬೆಳೆಸಿ ಹಾಗೂ ಮಿತವಾಗಿ ಬಳಸದೇ ಇದ್ದರೆ ಎಲ್ಲ ಲೆಕ್ಕಗಳೂ ಅಡಿಮೇಲಾಗಿ ನೀರಿಗಾಗಿ ಹಾಹಾಕಾರ ಶುರುವಾದೀತು.

ಒಂದು ಪಕ್ಷದವರು ಮತ್ತೊಬ್ಬರನ್ನು ಆಡಿಕೊಂಡು ಎಲೆಕ್ಷನ್ ಗೆಲ್ಲುವ ಆಲೋಚನೆಯನ್ನು ಮುಂದಿಟ್ಟುಕೊಂಡು ಬೇಕಾದ ಅಂಕಿ-ಅಂಶಗಳನ್ನು ಮಾತ್ರ ಹೊರಗೆ ಹಾಕೋ ಇಲ್ಲಿನ ರಾಜಕಾರಣಿಗಳಲ್ಲಿ ಸಾಕಷ್ಟು ಬುದ್ಧಿವಂತಿಕೆಯಿದೆ, ಆದರೂ ಅವರ ಲೆಕ್ಕ ಎಲ್ಲೋ ತಪ್ಪಿದೆ ಎಂದು ಅನೇಕ ಮತದಾರರ ಒಳಮನಸ್ಸಿನ ತುಡಿತ. ರಾಜಕಾರಣಿಗಳು ಯಾವದೇಶದವರಾದರೂ ಒಂದೇ, ಅಂತೆಯೇ ಅವರ ಮತದಾರ ಕೂಡ. ಒಟ್ಟಿನಲ್ಲಿ ತಪ್ಪಿದ ಲೆಕ್ಕವನ್ನು ಹೆಚ್ಚು ಹೆಚ್ಚು ದೊಡ್ಡದಾಗಿ ಮಾಡಿ ಅದನ್ನೇ ಮುಂದಿಟ್ಟುಕೊಂಡು ವಾದ ಮಾಡಿದರೆ ತಪ್ಪೇ ಸರಿಯಾಗಿ ಬಿಡಬಹುದಾದ ವಿಪರ್ಯಾಸದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಅಥವಾ ಈಗಾಗಲೇ ಹಾಗಾಗಿ ಬಿಟ್ಟಿದೆ!

Sunday, October 29, 2006

ಓದಿ, ಬರೆದು, ಮಾತನಾಡುವ ಅನಿವಾರ್ಯತೆ

ಯಾವುದೇ ಒಂದು ಹವ್ಯಾಸ ಬೆಳೆಯೋದಕ್ಕೆ ಕೊನೆಪಕ್ಷ ಏನಿಲ್ಲವೆಂದರೂ ಇಪ್ಪತ್ತೊಂದು ದಿನಗಳು ಬೇಕಾಗುತ್ತವಂತೆ, ಹೀಗೆ ದಿನಾಲು ಬರೆಯಬೇಕು ಎನ್ನೋದು ನನಗೂ ಒಂದು ಹವ್ಯಾಸವಾಗಿ ಬೆಳೆಯಬೇಕಾದರೆ ನನಗಂತೂ ತಿಂಗಳುಗಳೇ ಬೇಕಾದವು. ನಾಗಾಲೋಟದಲ್ಲಿ ಓಡೋ ಮನಸ್ಸು ಒಂದುಕಡೆ, ನಿಧಾನವಾಗಿ ಓಡೋ ಕೈ ಬೆರಳುಗಳು ಮತ್ತೊಂದು ಕಡೆ; ನಮ್ಮ ಸುತ್ತಲೂ ಇಂಗ್ಲೀಷ್‌ಮಯವಾಗಿರೋದು ಒಂದುಕಡೆ, ಇರೋ ಒಂದಿಷ್ಟು ಕನ್ನಡ ಪದಗಳೂ ನಿಧಾನವಾಗಿ ಆವಿಯಾಗ್ತಾ ಇರೋ ಸಂಕಟ ಮತ್ತೊಂದು ಕಡೆ. ಹೀಗೆ ಹಲವಾರು ವ್ಯತ್ಯಾಸಗಳ ನಡುವೆಯೂ ಇಷ್ಟೊಂದು ದಿನ ಏನಾದರೊಂದು ಬರೆದದ್ದಾಯಿತು ಎಂದು ಒಂದಿಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡರೆ ಯೋಚನೆಗಳು ಯಾಚನೆಗಳಾಗಿ ಕಾಡತೊಡಗಿದವು. ಮನಸ್ಸಿಗೆ ಅನ್ನಿಸಿದ್ದನ್ನು ಎಷ್ಟು ನಿಧಾನವಾಗಿಯಾದರೂ ಆಗಲಿ, ಎಷ್ಟು ತಡವಾಗಿಯಾದರೂ ಆಗಲಿ ಬರೆದೇ ತೀರಬೇಕು ಎಂದು ಹಟ ತೊಟ್ಟಿರುವವರಲ್ಲಿ ನಾನೂ ಒಬ್ಬ. ಒಂದು ರೀತಿ ಹೊರಗಿನ ಆಗುಹೋಗುಗಳಿಗೆ ಪ್ರತಿಯೊಬ್ಬರೂ ಸ್ಪಂದಿಸುತ್ತಾರೆ, ನನ್ನ ಸ್ಪಂದನ ಈ ರೀತಿ ಬರಹದ ಮೂಲಕವಾದರೂ ಇರಲಿ ಎನ್ನೋದು ದೂರದಾಸೆ.

ಇತ್ತೀಚೆಗಂತೂ ನನ್ನೊಳಗೆ ಇನ್ನೊಂದು ರೀತಿಯ ಗೊಣಗಾಟ ಆರಂಭವಾಗಿದೆ - ಯಾರೇ ಕನ್ನಡಿಗರು ಸಿಕ್ಕರೂ ನಮ್ಮ ನಡುವಿನ ಸಂಭಾಷಣೆ ಹೆಚ್ಚೂ ಕಡಿಮೆ ಇಂಗ್ಲೀಷಿನಲ್ಲೇ ನಡೆಯೋದು. ಇದನ್ನು ಸ್ವಲ್ಪ ಬಿಡಿಸಿ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾದವು: ಒಂದು, ನನಗೆ ದೊರೆಯುವ ಕನ್ನಡಿಗರು ನನ್ನ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲಾರದವರು, ಮತ್ತಿನ್ನೊಂದಿಷ್ಟು ಮಂದಿ ಹೇಳೋದಕ್ಕೆ ಮಾತ್ರ ಕನ್ನಡಿಗರು, ಮಿಕ್ಕೆಲ್ಲದಕ್ಕೂ ಇಂಗ್ಲೀಷನ್ನೇ ಆಧರಿಕೊಂಡಿರುವವರು. ಎಲ್ಲೋ ಅಪರೂಪಕ್ಕೆ ಸಭ್ಯ ಕನ್ನಡಿಗರು ಸಿಗುತ್ತಾರೆಂದರೆ ಅಂದು ಒಂದು ರೀತಿಯ ಹಬ್ಬದೂಟವಿದ್ದ ಹಾಗೆ, ಆ ರೀತಿಯ ಅವಕಾಶಗಳು ಬರೋದು ಕಡಿಮೆ, ಬಂದಾಗಲೆಲ್ಲ ಮನಬಿಚ್ಚಿ ಘಂಟೆಗಟ್ಟಲೆ ಹರಟಿ, ಕಥೆ ಹೊಡೆದದ್ದು ಇದ್ದೇ ಇದೆ. ನಾವು ಇಲ್ಲಿಗೆ ಬಂದು ಎಷ್ಟೇ ಕನ್ನಡ ಸಂಘಗಳನ್ನು ಯಾವುಯಾವುದೋ ಕಾರಣಗಳಿಗಾಗಿ ಕಟ್ಟಿಕೊಂಡರೂ, ಒಂದು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕನ್ನಡದಲ್ಲೇ ನಡೆಸಿಕೊಡಲಾಗದವರು, ಒಂದು ವೇಳೆ ಹಾಗೇನಾದರೂ ಪ್ರಯತ್ನಿಸಿದರೂ ನಮ್ಮ ಮಾತುಗಳಲ್ಲಿ ಇಂಗ್ಲೀಷ್ ಪದಗಳು ನುಸುಳಿಯೋ ಅಥವಾ ಪೂರ್ಣ ವಾಕ್ಯವೇ ಇಂಗ್ಲೀಷಿನಲ್ಲಿರುವುದೇ ಸಹಜವಾಗುತ್ತೆ. ಒಮ್ಮೊಮ್ಮೆ ಹೀಗೆ ಆಗುವುದು, ಆಗುತ್ತಿರುವುದು ಸರಿಯಲ್ಲವೇ ಎಂದು ಯೋಚಿಸುತ್ತೇನೆ - ಉದಾಹರಣೆಗೆ ಐವತ್ತು ವರ್ಷಗಳ ಹಿಂದೆ ಕನ್ನಡವನ್ನು ಮಾತನಾಡುತ್ತಿದ್ದವರು, ಬರೆಯುತ್ತಿದ್ದವರು ತಮ್ಮ ಮಾತು/ಬರವಣಿಗೆಗಳಲ್ಲಿ ಸಂಸ್ಕೃತದ ಪದಗಳನ್ನು ಧಾರಾಳವಾಗಿ ಬಳಸುತ್ತಿರಲಿಲ್ಲವೇ? ಆಗ ಬಳಸುತ್ತಿದ್ದ ಸಂಸ್ಕೃತ ಪದಗಳಿಗೆ ಇಂದು ನಾವು ಇಂಗ್ಲೀಷ್ ಪದಗಳನ್ನು ಬಳಸಿದರೆ ತಪ್ಪೇನು? 'ನಮ್ಮ ಕಂಪ್ಯೂಟರ್ ಕೆಟ್ಟು ಹೋಗಿದೆ' ಎನ್ನುವ ವಾಕ್ಯವನ್ನು 'ನಮ್ಮ ಗಣಕಯಂತ್ರ ಕೆಟ್ಟುಹೋಗಿದೆ' ಎಂದೂ ಹೇಳಬಹುದು ಆದರೆ ಮೊದಲಿನ ವಾಕ್ಯ ಹೆಚ್ಚು ಜನರಿಗೆ ಅರ್ಥವಾಗುವುದರ ಜೊತೆಗೆ ಮೊದಲಿನ ವಾಕ್ಯದಲ್ಲಿ ಬಳಸುವ 'ಗಣಕಯಂತ್ರ' ಪದದ ಬಳಕೆ ಅಸಹಜ ಎನ್ನಿಸೋದಿಲ್ಲ. ಹಿಂದೆಲ್ಲಾ ಕೊಂಬುಕೊಟ್ಟು ಕನ್ನಡಕ್ಕೆ ತರುತ್ತಿದ್ದ ಪದಗಳನ್ನು (ಉದಾಹರಣೆಗೆ: ಬಸ್ - ಬಸ್ಸು, ಟೇಬಲ್ - ಟೇಬಲ್ಲು, ಚೇರ್ - ಚೇರು, ಇತ್ಯಾದಿ) ಯಥೇಚ್ಛವಾಗಿ ಬಳಸುತ್ತಿದ್ದ ಕಾಲದಲ್ಲಿ ಎಷ್ಟೇ ಪ್ರತಿರೋಧವಿದ್ದರೂ ಅದನ್ನು ತಡೆಯಲಾಗಲಿಲ್ಲ, ಬಂಡಿ, ಮೇಜು, ಕುರ್ಚಿ ಮೊದಲಾದ ಪದಗಳ ಬಳಕೆ ನಿಧಾನವಾಗಿ ಮರೆಯಾಗುತ್ತಿದೆ, ಅವುಗಳ ಸ್ಥಳದಲ್ಲಿ ಅನ್ಯದೇಶೀಯ ಪದಗಳು ಆಕ್ರಮಿಸಿಕೊಳ್ಳುತ್ತಿವೆ ಎಂದು ಸುಲಭವಾಗಿ ಹೇಳಬಹುದಾದರೂ, ಈ ಬಗೆಗೆ ನಿರ್ಧಾರಪೂರ್ವಕವಾಗಿ ಹೇಳಲು ಭಾಷಾತಜ್ಞರನ್ನೇ ಆದರಿಸಬೇಕಾದೀತು.

ಮಾತಿನ ಬಗೆಗೆ ಹೇಳುವ ಹೊತ್ತಿಗೆ ಬರವಣಿಗೆ ಹಾಗೂ ಓದಿನ ಬಗ್ಗೆ ಹೇಳದಿದ್ದರೆ ಹೇಗೆ? ನನ್ನ ಹಾಗೆ ಕಂಪ್ಯೂಟರ್ ಬಳಸಿ ಕನ್ನಡವನ್ನು ಬರೆದು ಓದಬಲ್ಲವರದೆಲ್ಲಾ ಒಂದೇ ಹಾಡು - ಬರವಣಿಗೆ ನಿಧಾನ, ಅದರ ಜೊತೆಗೆ ಓದುವುದಕ್ಕೆ ಸಿಗುವ ವಸ್ತುಗಳೂ ಅತಿಕಡಿಮೆಯೇ. ಹಾಸ್ಯವಾಗಲೀ, ಗಂಭೀರ ವಿಷಯಗಳಾಗಲೀ ಯಾವುದನ್ನು ತೆಗೆದುಕೊಂಡರೂ ಅಂತರ್ಜಾಲದಲ್ಲಿ ಸಿಗುವ ವಸ್ತುಗಳು ಕಡಿಮೆಯೇ ಎನ್ನಬೇಕು. ಹಿಂದೆಲ್ಲಾ ಬಿಡುವಿನಲ್ಲಿ ಓದುತ್ತಿದ್ದ ಪುಸ್ತಕ, ಪತ್ರಿಕೆಗಳು ಇಂದು ಕೆಲಸದ ಮಧ್ಯೆಯೇ ತಮ್ಮನ್ನು ಓದಿಸಿಕೊಂಡುಹೋಗುತ್ತವೆ. ಓದುಗರ ಅಟೆಂಷನ್ ಸ್ಪ್ಯಾನ್ ಕಡಿಮೆ, ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚನ್ನು ಓದುವ ಕಾರ್ಯತತ್ಪರತೆ ಎಲ್ಲರದೂ. ಹಲವಾರು ಸಂಸ್ಥೆಗಳು ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಪ್ರಕಟಿಸುವ ಮಹಾಕಾರ್ಯವನ್ನು ಮಾಡುತ್ತಿದ್ದರೂ ಪುಸ್ತಕ/ಪೇಪರ್ ಮಾಧ್ಯಮದಲ್ಲಿ ಓದುತ್ತಿರುವ ಸಂವೇದಿಸುತ್ತಿರುವ ಕನ್ನಡಿಗರಿಗೂ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ ಕನ್ನಡವನ್ನು ಓದುವ ನನ್ನಂಥವರಿಗೂ ನಡುವೆ ದೊಡ್ಡ ಕಂದಕವೇ ಇದೆ. 'ದೂರದಲ್ಲಿರೋ ನಿಮಗ್ಗೊತ್ತಾಗಲ್ಲ' ಅನ್ನೋದು ನಾನು ಒಡನಾಡುವ ಪೇಪರ್/ಪುಸ್ತಕ ಓದುಗರ ಅಂಬೋಣ, ಅವರಿಗೆಲ್ಲ ನನ್ನಂತಹ ಓದುಗರು ಹೈಟೆಕ್ ಓದುಗರಾಗಿ ಕಂಡುಬರುತ್ತಾರೆಯೇ ವಿನಾ ಹೆಚ್ಚು ಆಳವನ್ನು ಶೋಧಿಸುವವರಾಗಿಯಾಗಲೀ, ವಿಷಯಗಳಿಗೆ ಒತ್ತುಕೊಟ್ಟು ನೋಡುವವರಾಗಿಯಾಗಲೀ ಖಂಡಿತವಾಗಿ ಕಂಡುಬರೋದಿಲ್ಲ. ಅಲ್ಲಿಯ ಮಾಧ್ಯಮಗಳು ಒಂದೇ ಹಗುರವಾಗಿ ಕಂಡೋ ಅಥವಾ ಅಲ್ಲಿ ಪ್ರಕಟವಾದ ವರದಿಗಳು ನಮ್ಮ ಎತ್ತರಕ್ಕೆ ನಿಲುಕದವುಗಳು ಎಂದುಕೊಂಡೋ ಸುಮ್ಮನಿದ್ದರೆ, ಇಲ್ಲಿನ ಆಗುಹೋಗುಗಳಿಗೆ, ಸಂವೇದನಗಳಿಗೆ ಕನ್ನಡೇತರ ಮಾಧ್ಯಮಗಳಿಗೆ ಶರಣುಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಕನ್ನಡೇತರ ಮಾಧ್ಯಮಗಳ ಸಾಂಗತ್ಯದಲ್ಲಿ ಹುಟ್ಟುವ ನಮ್ಮ ಆಲೋಚನೆಗಳನ್ನು ಕನ್ನಡದಲ್ಲಿ ಬರೆದುಕೊಂಡು ಹೋಗುವುದಕ್ಕೆ ತಿಣುಕಾಡಬೇಕಾಗುತ್ತದೆ.

ಓದು, ಓದಿನ ವೇಗ, ಬರವಣಿಗೆ, ಬರೆಯುವ ಶೈಲಿ ಇವುಗಳು ಕಾಲಕ್ರಮೇಣ ಬದಲಾಗುವಂತೆ, ಒಂದು ಭಾಷೆಯನ್ನು ಬಹಳ ದಿನ/ವರ್ಷಗಳ ಆಡದೇ ಹೋದರೆ ಪದಸಂಪತ್ತಿನ ದೃಷ್ಟಿಯಿಂದ ಮರೆಯಾಗಿಹೋಗಬಹುದು. ಬೇರೆ ಯಾರಾದರೂ ಮಾತನಾಡಿದಾಗ ಆಯಾ ಪದಗಳು ನಮ್ಮ ಮನಸ್ಸಿನಲ್ಲಿ ಮರುಕಳಿಸಿದರೂ ನಾವು ಅವೇ ಪದಗಳನ್ನು ಬಳಸಿ ಹೊಸ ವಾಕ್ಯಗಳನ್ನು ಸಂಭಾಷಣೆಯ ಅಂಗವಾಗಿ ಹೊಸದಾಗಿ ಹುಟ್ಟಿಸಬೇಕಾದಲ್ಲಿ ಕಷ್ಟಪಡಬೇಕಾಗುತ್ತದೆ. ಈ ರೀತಿಯ ಹಲವಾರು ವರ್ಷಗಳ ಭಾಷಾ ಬವಣೆಯೇ ಹೊರನಾಡ ಕನ್ನಡಿಗರು ಕನ್ನಡವನ್ನು ಹೆಚ್ಚು ಹೆಚ್ಚು ತಮ್ಮ ಮಾತಿನಲ್ಲಿ ಬಳಸದಿರುವಂತೆ ಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ವಿದೇಶಕ್ಕೆ ಹೋಗಿ ಇಪ್ಪತ್ತು ವರ್ಷ ಕಳೆದವರೆಲ್ಲ ಬರೀ ಹಮ್ಮು-ಬಿಮ್ಮು ಎಂಬ ಕಾರಣಕ್ಕೆ ಮಾತಿನುದ್ದಕ್ಕೂ ಇಂಗ್ಲೀಷನ್ನೇ ಮಾತನಾಡಲಾರರು, ಹಾಗೆ ಮಾತನಾಡುವುದು ವರ್ಷಾನುಗಟ್ಟಲೆ ಹಾಗೆ ಮಾಡಿದ ಅವರಿಗೆ ಸಹಜ, ಅದು ಬೇರೊಂದು ನೆಲೆಗಟ್ಟಿನಿಂದ ನಿಂತು ನೋಡಿದಾಗ ಕೃತಕವಾಗಿ ಕಂಡುಬರಬಹುದು. ನಮ್ಮತನವನ್ನು ನಾವು ಉಳಿಸಿ, ಬೆಳೆಸಿ, ರೂಢಿಸಿಕೊಂಡು ಹೋಗುವಲ್ಲಿ ಸ್ವಲ್ಪ ಮೊಂಡುತನ ಹಾಗೂ ನಮ್ಮದು ಎನ್ನುವ ಭಾವೋದ್ವೇಗ ಅನಿವಾರ್ಯ, ನಮಗೂ ನಮ್ಮ ಭಾಷೆಗೂ ಒಂದು ರೀತಿಯ ಸಂಬಂಧ ಬೆಳೆದರೆ ಮಾತ್ರ ನಮ್ಮ ಭಾಷೆ ನಮ್ಮಲ್ಲಿ ಉಳಿಯುತ್ತದೆಯೇ ವಿನಾ ಹೋದಲ್ಲಿ ಬಂದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೆರೆದುಕೊಂಡು ಅಲ್ಲಿಯವರೊಳಗೊಂದಾಗಿ ಹೋಗುತ್ತೇವೆ ಎಂದುಕೊಂಡವರಲ್ಲಿ ಭಾಷೆ ಉಳಿಯುವುದು ಕಡಿಮೆ.

ಇತ್ತೀಚೆಗೆ ಡಿ. ಆರ್. ನಾಗರಾಜ್ ಅವರ ಬರಹಗಳಿಂದ ಪ್ರಭಾವಿತನಾದ ನಾನು ಹಲವಾರು ಕೃತಿಗಳನ್ನು ಓದಿ, ಒಂದು ಉತ್ತಮ ಲೇಖನವನ್ನು ಬರೆಯುವುದು ಎಷ್ಟು ಕಷ್ಟ ಎಂಬುದನ್ನು ಅರಿತುಕೊಂಡಿದ್ದೇನೆ. ತಾವು ಓದಿದ ಪ್ರತಿಯೊಂದು ಕೃತಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುವುದೂ ಅಲ್ಲದೇ ಮುಂದೆ ತಾವು ಓದಿ, ಅದರ ಬಗ್ಗೆ ಬರೆಯುತ್ತಿರುವಾಗ ಪರಾಮರ್ಶೆಯ ರೂಪದಲ್ಲೋ ಅಥವಾ ತುಲನಾತ್ಮಕವಾಗಿಯೋ ಇತರ ಕೃತಿ-ಕರ್ತೃಗಳನ್ನು ನೆನೆದು ಅವುಗಳನ್ನು ಅಲ್ಲಲ್ಲಿ ಗುರುತಿಸಿಕೊಳ್ಳುವುದು ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ಮಾಮೂಲಿಯಾಗಿ ಕಂಡುಬರಬಹುದು, ಆದರೆ ನನ್ನಂತಹ ಸಾಮಾನ್ಯ ಓದುಗರಿಗೆ ಬಹಳ ಹೆಚ್ಚಿನದಾಗುತ್ತದೆ. ಇಂತಹ ಪ್ರೌಢ ಪ್ರಬಂಧಗಳು ಹೆಚ್ಚು ಹೆಚ್ಚು ಬಂದಲ್ಲಿ, ಅವುಗಳನ್ನು ವಿವರವಾಗಿ ಓದಿ, ಅವುಗಳಲ್ಲಿ ಹುದುಗಿರುವ ಪರಾಮರ್ಶೆಗಳನ್ನು ಹುಡುಕಿ ತೆಗೆದು ಪುಟಗಳನ್ನು ತಿರುವಿಹಾಕಿದಲ್ಲಿ ಅಂತಹ ಪ್ರಯತ್ನ ಬಹಳ ಹೆಚ್ಚಿನ ಮೌಲ್ಯವನ್ನು ದೊರಕಿಸಿಕೊಡುವುದರಲ್ಲಿ ಯಾವುದೇ ಸಂಶಯವಂತೂ ಇಲ್ಲ. ಹೀಗೆ ಹೆಚ್ಚು ಪ್ರೌಢ ಪ್ರಬಂಧಗಳನ್ನಾಗಲೀ, ಬರಹಗಳನ್ನಾಗಲೀ ಹುಡುಕಿಕೊಂಡಲೆಯುವ ನನ್ನಂತಹವರಿಗೆ ಅಂತರ್ಜಾಲದಲ್ಲಿ ಸಾಕಷ್ಟು ಅಡೆತಡೆಗಳು ಹುಟ್ಟಿಬರುತ್ತವೆ. ಇವುಗಳನ್ನೆಲ್ಲ ಮೀರಿ ಓದುಗರ ಒಂದು ಗುಂಪೋ, ಅಥವಾ ಇಂತಹ ಸಮಾನ ಮನಸ್ಕರ ಜೊತೆಗೆ ಬೆರೆಯೋಣವೆಂದರೆ ಅಲ್ಲೂ ತೊಂದರೆಗಳು ಹಲವಾರು.

ಈ ರೀತಿಯ ಓದು ಕನ್ನಡಕ್ಕೇ ಸ್ಥೀಮಿತವಾಗಬೇಕೆಂದೇನೂ ಇಲ್ಲ, ಆದರೆ ಕನ್ನಡದಲ್ಲಿ ಓದಿ, ಬರೆದು ಮಾತನಾಡಿದಾಗ ಸಿಗುವ ಖುಷಿ ನನಗಂತೂ ಬೇರೆ ಇನ್ಯಾವ ಭಾಷೆಯಲ್ಲೂ ದೊರೆಯದಾದ್ದರಿಂದ ನನ್ನ ಓದು ಅಥವಾ ಅದರ ಮಿತಿ ಹೆಚ್ಚು ಹೆಚ್ಚು ಕನ್ನಡದ ಸುತ್ತಲೇ ಗಿರಿಕಿ ಹೊಡೆಯತೊಡಗುತ್ತದೆ, ಬೇಡವೆಂದರೂ ಸುತ್ತಲಿನಲ್ಲಿ ನನ್ನ ಕಿವಿ-ಕಣ್ಣುಗಳನ್ನು ತುಂಬುವ ಇಂಗ್ಲೀಷು ಅದರಷ್ಟಕ್ಕೆ ಅದು ಮಾಹಿತಿಯನ್ನೊದಗಿಸುವ ಕೆಲಸವನ್ನು ಮಾಡುತ್ತಲೇ ಇರುವುದು ದಿನನಿತ್ಯದ ಭಾಗವಾಗಿ ಹೋಗಿಬಿಟ್ಟಿದೆ.

Tuesday, October 24, 2006

'ಬಡವರ ಬಂಧು'ವಿನ ನೆನಪು

ಸಿನಿಮಾ ಬಿಡುಗಡೆಯಾಗಿ ಮೂವತ್ತು ವರ್ಷಗಳು ಆದವು ಎಂದು ನನಗನ್ನಿಸಿದ್ದು ಈ ದಿನ ಇಂಟರ್‌ನೆಟ್‌ನಲ್ಲಿ ಇದರ ಬಗ್ಗೆ ಹುಡುಕಿದಾಗಲೇ! ನಾನು ಈ ಸಿನಿಮಾವನ್ನು ನೋಡಿ ಕೊನೇಪಕ್ಷ ಒಂದಿಪ್ಪತ್ತು ವರ್ಷಗಳಾದರೂ ಕಳೆದಿರಬೇಕು, ಆದರೆ ಈ ಸಿನಿಮಾದ ಹೆಚ್ಚೂ ಕಡಿಮೆ ಎಲ್ಲಾ ಹಾಡುಗಳೂ, ಮುಖ್ಯವಾದ ಸೀನುಗಳು, ಪಾತ್ರಗಳು ಎಲ್ಲಾ ಚೆನ್ನಾಗಿ ಜ್ಞಾಪಕದಲ್ಲಿವೆ, ಹೇಗೆ ಮತ್ತೆ ಏಕೆ ಅನ್ನೋದೇ ಆಶ್ಚರ್ಯ.

ಹಳ್ಳಿಯಲ್ಲಿ ಕನ್ನಡಿಗನಾಗಿ ಹುಟ್ಟಿದ ಭಾಗ್ಯಕ್ಕೆ ನನಗೆ ಇಂಗ್ಲೀಷ್ ಪರಿಚಯವಾದದ್ದೇ ಐದನೇ ತರಗತಿಯಿಂದ, ಅಂದಿನಿಂದ ಇಂದಿನವರೆಗೂ ಅದು ನನ್ನ ಹೃದಯದಲ್ಲಿರೋ ಕನ್ನಡದ ಸ್ಥಾನವನ್ನು ಕಿತ್ತುಕೊಳ್ಳಲು ಹೋರಾಟ ನಡೆಸುತ್ತಲೇ ಇದೆ, ಆದ್ರೆ ಅದು ಎಂದಿಗೂ ಸಾಧ್ಯವಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಆದರೆ ನನಗೆ ಬರೋ ಇಂಗ್ಲೀಷಿಗೆ ಗೊತ್ತಿಲ್ಲ. ಎಷ್ಟೋ ಸಾರಿ ಬಾಯಿ ತುಂಬಾ ಅರಳು ಹುರಿದ ಹಾಗೆ ಇಂಗ್ಲೀಷನ್ನು ಗೊಣಗೋ ಪೇಟೆ ಹುಡುಗ್ರನ್ನ ನೋಡಿ ನನಗೂ ಅವರ ಥರಾ ಇಂಗ್ಲೀಷ್ ಬಂದಿದ್ರೆ ಅಂತ ಆರ್ತನಾಗಿ ಕರಬಿದ್ದರಿಂದಲೋ ಏನೋ ಇಂಗ್ಲೀಷ್ ಮಾತನಾಡುವವರ ನಡುವೆ ವರ್ಷಾನುಗಟ್ಟಲೇ ಜೀವಿಸೋ ಹಾಗೆ ಆಗಿರೋದು ಎನ್ನೋದು ನಾನು ಹೇಳೋ ಚೀಪ್ ಜೋಕು!

ಕನ್ನಡದ ಸಿನಿಮಾದ ವ್ಯಾಪ್ತಿ ನನ್ನ ಕಣ್ಣಲ್ಲಿ ಇಷ್ಟೇ: ಹೀರೋ ಆದವನು ಸರ್ವಗುಣ ಸಂಪನ್ನ, ಹಾಡ್ತಾನೆ, ಕುಣೀತಾನೇ, ದುಷ್ಟರನ್ನ ಚಚ್ತಾನೆ, ಇತ್ಯಾದಿ. ಮೊದಲೆಲ್ಲ ಆಗಿದ್ರೆ 'ಮಿಲಿಯನ್ ಡಾಲರ್ ಬೇಬಿ' ಸಿನಿಮಾದ ಕ್ಲಿಂಟ್ ಈಸ್ಟ್‌ವುಡ್ ಆಗಲೀ 'As good as it gets' ಚಿತ್ರದ ಜಾಕ್ ನಿಕೋಲ್ಸನ್ ಆಗಲಿ ಅವರೆನ್ನೆಲ್ಲ ಹೀರೋಗಳು ಅಂತ ಒಪ್ಪಿಕೊಳ್ಳೋದಕ್ಕೆ ಸಾಧ್ಯವಿರಲಿಲ್ಲ. ನನ್ನ ಮನಸ್ಸಲ್ಲಿರೋ ಕಥಾನಾಯಕನ ವ್ಯಾಪ್ತಿಯನ್ನು ಆ ರೀತಿ ಅರಳಿಸಿದ್ದಕ್ಕೆ ಇಂಗ್ಲೀಷ್ ಸಾಹಿತ್ಯ, ಸಿನಿಮಾಗಳಿಗೆ ಧನ್ಯವಾದಗಳನ್ನ ಹೇಳಲೇ ಬೇಕು. After all, ಸಿನಿಮಾ ಬದುಕಿನ ಅಂಗವೇ ಹೊರತು ಬದುಕೇ ಸಿನಿಮಾ ಅಲ್ಲವಲ್ಲ.

ಯಾವು ಯಾವುದೋ ಇವೆಂಟುಗಳು ಟ್ರಿಗ್ಗರ್ ಆದ ಹಿನ್ನೆಲೆಯಲ್ಲಿ ಇವತ್ತು ಕಾರಲ್ಲಿ ಕುಳಿತುಕೊಂಡು ಗೊಣಗುತ್ತಾ ಹೋದೆ...

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪೂ ಮೂಡಿವೆ

ತಂದೆ-ಮಗನ ಪ್ರೀತಿ, ವಾತ್ಸಲ್ಯ ಅಂದ್ರೆ ಏನು ಅಂತ ತಿಳೀಬೇಕು ಅಂದ್ರೆ ಬಡವರ ಬಂಧು ಸಿನಿಮಾದ ಈ ಹಾಡಿನ ದೃಶ್ಯವನ್ನು ನೋಡಲೇಬೇಕು. ಪಾರ್ಶ್ವವಾಯು ಪೀಡಿತ ತಂದೆ (ಸಂಪತ್) ಹಾಗೂ ಮಗ (ರಾಜ್‌ಕುಮಾರ್) ಅಭಿನಯದಲ್ಲಿ ಮನಮೋಹಕವಾದ ಅಭಿನಯ ಎಂಥವರ ಕರಳನ್ನೂ ಕೀಚುತ್ತದೆ. ಸಂಪತ್ ಅವರ ಅಭಿನಯವನ್ನು ಪೋಷಕ ಪಾತ್ರಗಳಲ್ಲಿ, ಹೆಚ್ಚಿನದರಲ್ಲಿ ಸಿರಿವಂತನಾಗಿ ಅಥವಾ ಖಳನಾಯಕನಾಗಿ ನೋಡಿದ ಎಷ್ಟೋ ಜನರು ಸಂಪತ್ ಈ ರೀತಿ ಅಭಿನಯವನ್ನೂ ಮಾಡಬಲ್ಲರು ಎಂದುಕೊಂಡಿರಲಾರರು.

ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಬೆಳೆಸಿದೆ
ಆ ಪ್ರೀತಿಯಾ ಮನ ಮರೆವುದೆ


ರಾಜ್‌ಕುಮಾರ್ ಸಹ ಮಗನ ಪಾತ್ರದಲ್ಲಿ ಸಿದ್ಧಹಸ್ತರು, ಅವರಿಗೆ ಹೇಳಿಕೊಡುವುದಕ್ಕೇನೂ ನಿರ್ದೇಶಕರಿಗೆ ಇದ್ದಿರಲಾರದು. ಸಂಪತ್ ಪಾದಗಳನ್ನು ತೊಳೆದು, ಮೈ ಕೈ ನೀವಿ, ಒರೆಸಿ, ಕುರ್ಚಿಯಲ್ಲಿ ಕುಳ್ಳಿರಿಸಿ ಹಿಂದಿನಿಂದ ತಬ್ಬಿಕೊಂಡು ರಾಜ್ ನಿಂತ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ.

ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲಿ ಬೆಳೆದೆನು
ನನ್ನ ತಾಯಿಯ ಪಾದದಾಣೆ ಬೇರೆ ಏನನು ಆರಿಯೆನು
ನೀನೆ ನನ್ನಾ ದೇವನು

ತಂದೆಗೆ ಮಗನ ಆಸರೆ, ಮಗನಿಗೆ ತಂದೆಯ ಆಸರೆ, ತಲೆಯ ಮೇಲೊಂದು ಪುಟ್ಟ ಸೂರು. ಹೊಟೇಲಿನಲ್ಲಿ ಸಪ್ಲೈಯರ್ ಆಗಿ ದುಡಿದು ಬಂದ ಹಣದಲ್ಲಿ ಜೀವನ ಸಾಗಿಸಬೇಕು. ಮನೆಯ ಚಿತ್ರಣವೂ ಬಹಳ ಸರಳ. ಇಂತಹ ಹಿನ್ನೆಲೆಗೆ ಕವಿ ಕೊಡುವ ಸರಳ 'ಬಳ್ಳಿಯಂತೆ...'ಚಿತ್ರಣ ಹಾಗೂ ಈ ಅಪರಿಮಿತ ಪ್ರೇಮವನ್ನು ಬೆಲೆಕಟ್ಟಲಾಗದ 'ತಾಯಿಯ ಪಾದದ ಆಣೆ'ಯ ಸಹಾಯದಲ್ಲಿ ತಿಳಿಸಿ ಹೇಳುವ ಹಂಬಲ.

ನೀನು ನಕ್ಕರೆ ನಾನು ನಗುವೆನು, ಅತ್ತರೇ ನಾ ಆಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿದೆ ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೆ ಬದುಕೆನು

ಮಗನ ಸೇವೆ ಹಾಗೂ ಅಗಲಿದ ಪತ್ನಿಯ ನೆನಪಿನಲ್ಲಿ ಸಂಪತ್ ಕಂಗಳಲ್ಲಾಗಲೇ ಹನಿಗೂಡಿರುತ್ತದೆ, ಅದನ್ನ ನೆನೆದು ಕವಿ ಬರೆದ 'ನಕ್ಕು-ಅಳುವ' ಸಾಲುಗಳು ಬಹಳ ಹಿಡಿಸಿದವು. ಹೀಗೆ ತಂದೆ-ಮಗನ ಪ್ರೇಮವೂ ಇದೆ ಎಂಬುದನ್ನು ತೋರಿಸಿಕೊಟ್ಟಿರುವ ಚಿತ್ರದ ಸನ್ನಿವೇಶ ಹಾಗೂ ಅದಕ್ಕೆ ತಕ್ಕ ಹಾಡು, ಸಂಗೀತ ಹೆಚ್ಚು ಚಿತ್ರಗಳಲ್ಲಿ ಬಂದಿರಲಿಕ್ಕಿಲ್ಲ.

ಇದೊಂದು ಸಿನಿಮಾದ ಸಂಭಾಷಣೆ, ಸಂಗೀತ, ಹಾಗೂ ಹಾಡುಗಳ ಲಹರಿಯೇ 'ರಂಗಾರಾವ್-ಉದಯಶಂಕರ್' ಹಲವಾರು ಫ್ಯಾನ್‌ಗಳನ್ನು ಹುಟ್ಟಿಸಿದೆ, ಅವರಲ್ಲಿ ನಾನೂ ಒಬ್ಬ. ಹೀಗೆ ದಿಢೀರನೆ ಹಾಡು ನೆನಪಾಗಿ, ಸಂಪತ್-ರಾಜ್‌ಕುಮಾರ್ ಪಾತ್ರಗಳನ್ನು ಯೋಚಿಸುತ್ತಾ ಬರುತ್ತಿದ್ದ ಹಾಗೆ ಮನೆ ಬಂದು ತಲುಪಿದೆ. ಕೊನೇಪಕ್ಷ ಉದಯ ಟಿವಿ ಇದ್ದೋರ ಮನೆಯಲ್ಲಾದರೂ ಅಪರೂಪಕ್ಕೆ ಈ ರೀತಿಯ ಹಾಡುಗಳು ಬರುತ್ತವೆಯೋ ಏನೋ ನಮ್ಮನೆಯಲ್ಲಿ ಸಧ್ಯಕ್ಕೆ ತಲೆಯಲ್ಲಿ ತುಂಬಿಕೊಂಡ ಸಾಲುಗಳನ್ನು, ದೃಶ್ಯಸರಣಿಗಳನ್ನು ನೆನಪಿಸಿಕೊಂಡು ಖುಷಿಪಡಬೇಕಷ್ಟೇ.

***

ಒಂದು ರೀತಿಯಲ್ಲಿ ನಾನು ಸಿನಿಮಾ ನೋಡೋದು ಒಳ್ಳೆಯದೇ, ಯಾಕೆಂದ್ರೆ ಯಾವುದೇ ಕಾದಂಬರಿ ಆಧರಿಸಿದ ಸಿನಿಮಾ ಇದ್ರೆ, ಉತ್ತಮ ಕಥೆಯನ್ನ ಮೂಲವಾಗಿಟ್ಟುಕೊಂಡು ಸಿನಿಮಾವನ್ನು ಮಾಡಿದ್ರೆ ಅದನ್ನು ಓದಿ ಆಹ್ಲಾದಿಸೋ ಸುಖವೇ ಬೇರೆ, ಆದರೂ ಐನೂರು ಪುಟದ ಕಾದಂಬರಿಯನ್ನು ಎರಡೂವರೆ ಘಂಟೆಗಳಲ್ಲಂತೂ ಓದೋಕಾಗಲ್ಲವಲ್ಲ! ಒಂದು ಚಿತ್ರ ಸಾವಿರ ಪದಗಳನ್ನ ಹೇಳುತ್ತಂತೆ, ಅದಕ್ಕೇ ಒಂದು ಸಿನಿಮಾ ನೋಡಿ ಅದರ ಬಗ್ಗೆ ಪುರುಸೊತ್ತು ಸಿಕ್ಕಾಗೆಲ್ಲ ಚಿಂತನೆ ಮಾಡಿದ್ರೆ ಟೈಮಾದ್ರೂ ಪಾಸ್ ಆಗುತ್ತೆ. ಹಾಗೆ ಬೇಕಾದ್ರೆ ಇನ್ನೊಮ್ಮೆ ಅದೇ ಸಿನಿಮಾವನ್ನು ನೋಡಿದ್ರೆ ಆಯ್ತು! ಇಷ್ಟೊಂದು ಚಾನೆಲ್ಲುಗಳು ಇರೋವಾಗ ನಾನು ಅದೇ ತಾನೆ ರಿಲೀಸ್ ಆಗಿರೋ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡೋದು ಕಡಿಮೆ, ಯಾಕಂದ್ರೆ ಅದು ಉತ್ತಮ ಸಿನಿಮಾ ಆಗಿದ್ರೆ ಇವತ್ತಲ್ಲ ನಾಳೆ ನಾನು ಅದನ್ನ ನೋಡೇ ನೋಡ್ತೀನಿ ಅನ್ನೋದರಲ್ಲಿ ನನಗೆ ಅಪಾರವಾದ ವಿಶ್ವಾಸವಿದೆ. ಈ ಅರ್ಥದಲ್ಲೇ ನನಗೆ ಸಿನಿಮಾಗಳು ಅಂದ್ರೆ ಇಷ್ಟವಾಗಿದ್ದು ಅನ್ಸುತ್ತೆ - ಒಂದೊಂದ್ ಸಿನಿಮಾ ಒಂದೊಂದ್ ಕಾದಂಬರಿ ಅಂತ ಅಂದ್‌ಕೊಂಡ್ರೆ ನಾವೆಲ್ಲರೂ ನೋಡಿರಬಹುದಾದ ಸಿನಿಮಾಗಳನ್ನು ಲೆಕ್ಕ ಹಾಕಿದ್ರೆ ಬಹಳಷ್ಟಾಗೋದಿಲ್ವೇ?

'ಮೌನಿ' ಸಿನಿಮಾ ನೋಡಿದಾಗಲೋ, 'ಮತದಾನ' ನೋಡಿದಾಗಲೋ ನನಗ್ಗೊತ್ತು ಸಿನಿಮಾ ಮಂದಿರದಿಂದ ಹೊರಗೆ ಬರ್ತಾ ಇದ್ದಹಾಗೇ ಕೊನೇ ಪಕ್ಷ ಒಬ್ರಾದ್ರೂ 'ಚು, ಕಾದಂಬರಿನೇ ಚೆನ್ನಾಗಿತ್ತು' ಅಂತ ಹೇಳೋದು ಕೇಳಿಸಿಕೊಂಡಿದ್ದೇನೆ. ಅಂತಹವರಿಗೆಲ್ಲ ತಾವು ಇತ್ತೀಚೆಗೆ ಓದಿರೋ ಕನ್ನಡ ಕಾದಂಬರಿ ಹೆಸರು ಹೇಳಿ ನೋಡೋಣ ಅಂತ ಸವಾಲು ಎಸೀಬೇಕು ಅನ್ಸುತ್ತೆ, ಯಾಕಂತಂದ್ರೆ ನನಗ್ಗೊತ್ತು ಅವರೆಲ್ಲ ತಾವು ಓದಿರೋ ಹಳೆ ಸರಕಿನ ಮೇಲೆ ವಿಹರಿಸ್ತಿರೋರು ಅಂತ. ಆ ಪಟ್ಟಿಗೆ ನನ್ನ ಹೆಸರೂ ಸೇರುತ್ತೆ, ಏಕಂದ್ರೆ ಇತ್ತೀಚೆಗೆ ಕನ್ನಡ ಕಾದಂಬರಿಗಳನ್ನು ಓದದೇ ಇರೋರಲ್ಲಿ ನಾನೂ ಒಬ್ಬ.

ನನ್ನ ಮನಸ್ನಲ್ಲಿ ಬರೀ ಸಿನಿಮಾ ಹಾಡುಗಳಷ್ಟೇ ಅಲ್ಲ, ನಾನು ಓದಿರೋ ಎಷ್ಟೋ ಕಾದಂಬರಿಯ ಪಾತ್ರಗಳು, ಚಿತ್ರಗಳೂ ಕೂಡಾ ಆಗಾಗ್ಗೆ ಜೀವಂತ ವ್ಯಕ್ತಿಗಳೋ ಅಥವಾ ಸಂಬಂಧಿಗಳ ಹಾಗೆ ಮನಸ್ಸಿನಲ್ಲಿ ಬಂದು ಹೋಗ್ತಲೇ ಇರ್ತವೆ, ಅದಕ್ಕೇ ಇರಬೇಕು ಒಳ್ಳೆಯ ವಸ್ತುಗಳು ಎಲ್ಲಾ ಕಾಲದಲ್ಲೂ ನಮ್ಮ ಮನಸ್ಸಿನಲ್ಲಿ ಹಸಿರಾಗಿ ಉಳಿಯೋದು!

Saturday, October 21, 2006

ದೀಪಾವಳಿಯ ನೆನಪುಗಳು

ದೀಪಾವಳಿಯ ಶುಭಾಶಯಗಳು!

***
ಮೊದಲೆಲ್ಲ ಮನೆಯಲ್ಲಾದರೆ ಅಮ್ಮ ನರಕಚತುರ್ದಶಿ ದಿನ ಇನ್ನೂ ನಾಲ್ಕೂವರೆ ಆಗುತ್ತಿದ್ದಂತೆಯೇ ನಮಗೆಲ್ಲ ಅಭ್ಯಂಜನ ಮಾಡುವಂತೆ ತಾಕೀತು ಮಾಡುತ್ತಿದ್ದಳು. ಆಗೆಲ್ಲ ಇನ್ನೂ ಛಳಿಯಲ್ಲೇ ಎದ್ದು ಯಾವುದೋ ತಪ್ಪಿಗೆ ಶಿಕ್ಷೆಯೆಂಬಂತೆ ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿ ದೇವರಿಗೆ ಕೈ ಮುಗಿಸಿ ಉಸಿರು ಬಿಡುವುದರೊಳಗೆ ನಿದ್ರೆ ಮತ್ತೆ ಆವರಿಸಿಕೊಳ್ಳುತ್ತಿದ್ದರೂ ಯಾವುದೋ ಅವ್ಯಕ್ತ ಹೆದರಿಕೆ ಆ ನಿದ್ರೆಯನ್ನು ದೂರ ಓಡಿಸುತ್ತಿತ್ತು.

ಚುಮುಚುಮು ಛಳಿಗೆ ಬೆಂಕಿ ಕಾಯಿಸಿಕೊಳ್ಳುವುದಂದರೇನು, ಹಿತ್ತಲಲ್ಲಿ ಬಿದ್ದ ತರಗೆಲೆಗಳನ್ನೆಲ್ಲ ಒಂದೊಂದಾಗಿ ಹೆಕ್ಕಿ, ಗುಡಿಸಿ ಜೋಡಿಸಿಟ್ಟು ಬೆಂಕಿಗೆ ನಿಧಾನವಾಗಿ ತಳ್ಳಿ ಒಣಗಿದ್ದ ಎಲೆಗಳು ಮುದುರಿ ಬೂದಿಯಾಗುವುದನ್ನು ನೋಡುತ್ತಾ ಮಜಾ ಮಾಡುವುದೆಂದರೇನು. ಗೋಪೂಜೆಗೆ ತಯಾರಿ ಮಾಡುವುದರಿಂದ ಹಿಡಿದು ಮರುದಿನದ ಲಕ್ಷ್ಮೀ ಪೂಜೆಗೂ ಅದಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದವು.

***

ಬೋಸ್ಟನ್‍ನಲ್ಲಿ ಯಾವುದೋ ಹೊಟೇಲ್ ಒಂದರಲ್ಲಿ ಈ ವರ್ಷ ದೀಪಾವಳಿಯನ್ನು ಕಳೆಯುತ್ತಿರುವುದು ನನ್ನ ಹಣೆಬರಹ. ನಮ್ಮ ಪ್ರಾಜೆಕ್ಟ್‌ನ ಎರಡನೇ ಫೇಸ್ ಇಂದು ಬಿಡುಗಡೆ ಆಯ್ತು, ಹಗಲೂ-ರಾತ್ರಿ ಸಮರೋಪಾದಿಯಲ್ಲಿ ಎಷ್ಟೋ ಜನ ಕೆಲಸ ಮಾಡ್ತಾ ಇರೋದನ್ನ ನೋಡಿದ್ರೆ ಒಂದು ಕಡೆ ಸಂತೋಷವಾಗುತ್ತೆ, ಮತ್ತೊಂದು ಕಡೆ ಅಷ್ಟೇ ದುಃಖವಾಗುತ್ತೆ. ಭಾರತದಲ್ಲಿರೋ ನಮ್ಮ ಕಂಪನಿಯಲ್ಲಿ ಸುಮಾರು ನಲವತ್ತು ಜನರನ್ನು ಅಗತ್ಯ ಬಿದ್ದರೆ ಕೆಲಸಕ್ಕೆ ಕರೆಯುತ್ತೇವೆ, ನೀವು ಊರು ಬಿಟ್ಟು ಎಲ್ಲೂ ಹೋಗಬೇಡಿ ಎಂದು ಬೇರೆ ಹೇಳಿದ್ದಾರಂತೆ. ಪಾಪ, ವರ್ಷಾವಧಿ ಹಬ್ಬದ ಹೊತ್ತಿನಲ್ಲಿ ಭಾರತದಲ್ಲಿ ಎಷ್ಟೋ ಜನ ತಮ್ಮ-ತಮ್ಮ ಊರುಗಳಿಗೆ ಹೋಗದೇ ಮದ್ರಾಸ್ ಹಾಗೂ ಹೈದರಾಬಾದ್‌ನಲ್ಲಿ ಸುಮ್ಮನೇ ಕಾದುಕೊಂಡಿದ್ದೇ ಬಂತು, ನಾವೆಣಿಸಿದಂತೆ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆದು ನಮಗೆ ಭಾರತದಲ್ಲಿನ ಕೆಲಸಗಾರರ ಅಗತ್ಯ ಇಂದು ಬೀಳಲಿಲ್ಲ.

ಸಾಲಿನಲ್ಲಿ ಮೊದಲ ವ್ಯಕ್ತಿಯಾಗಿ ನಿಂತು ಆಲೋಚಿಸುವುದನ್ನು ಕಲಿಯಬೇಕಾದ ಅಗತ್ಯ ನನಗೆ ಬಹಳಷ್ಟಿದೆ. ಯಾವುದೋ ಒಂದು ಮೀಟಿಂಗ್‌ನಲ್ಲಿ ಭಾರತದಲ್ಲಿ ದೀಪಾವಳಿ ಹಬ್ಬದ ವತಿಯಿಂದ ರಜೆ ಇರುವುದು ಗೊತ್ತಿದ್ದೋ ಇಲ್ಲದೆಯೋ ಯಾರೋ ಮೇಲಿನವರು ದಿಢೀರನೆ 'ನಾವು ಭಾರತದಲ್ಲಿನ ಕೆಲಸಗಾರರನ್ನು ನಿಮ್ಮ ಸಹಾಯಕ್ಕೆ ಅನುವಾಗಿಡುತ್ತೇವೆ' ಎಂದು ಒಪ್ಪಿಕೊಂಡಾಕ್ಷಣ, ಆ ಕ್ಷಣದಲ್ಲಿ ನನ್ನಂತಹವರಿಗೆ ಅಲ್ಲಿನವರ ಸಂಕಷ್ಟಗಳ ಪರಿಚಯವಿದ್ದೂ ಆ ಬಗ್ಗೆ ಒಂದು ಮಾತನ್ನು ಆಡಲು ಗಂಟಲು ಬಿದ್ದು ಹೋಗಿಬಿಡುತ್ತದೆ. ಇಲ್ಲಿ ಯಾರು ಯಾರು ಯಾವ ಲೆವೆಲ್‌ನಲ್ಲಿ ಇದ್ದಾರೆ ಎನ್ನುವುದು ಮುಖ್ಯವೋ? ಯಾರು ಯಾವ ಮಾತನ್ನು ಆಡಬೇಕೋ ಅಷ್ಟನ್ನೇ ಆಡಬೇಕು ಎನ್ನುವ ಪ್ರಾಕ್ಟಿಕಾಲಿಟಿ ಪ್ರಸ್ತುತವೋ? ಅಥವಾ 'ನಿಮಗೆ ಇಲ್ಲಿ ಕ್ರಿಸ್‌ಮಸ್ ಇರುವ ಹಾಗೆ ಭಾರತದಲ್ಲಿ ದೀಪಾವಳಿ' ಎಂದು ಸಾರಿ ಹೇಳುವ ಎಮೋಷನಲ್ ಒತ್ತಡವೋ? ಅಥವಾ ಈ ರೀತಿಯ ಆಲೋಚನೆಯೇ ಬರದೇ ಇರಬಹುದಾದ ಬರಡಾದ ಮನಸ್ಸೋ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಮುಂದಾಳುವಾಗಿ ತನ್ನನ್ನು ಗುರುತಿಸಿಕೊಳ್ಳುವಲ್ಲಿ ಹಲವಾರು ಮಜಲುಗಳಲ್ಲಿ ನಿಂತು ಆಲೋಚಿಸಬೇಕಾದ ಅಗತ್ಯವಿದೆ, ಈ ರೀತಿಯ ಅಗತ್ಯ ಎನ್ನೋದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಪ್ರತಿಭೆಯೋ ಅಥವಾ ತನ್ನನ್ನು ತಾನು ರೂಢಿಸಿಕೊಳ್ಳುವ ಕ್ರಮವೋ, ಯಾರು ಬಲ್ಲರು.

***

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ನಮ್ಮ ಸಹೋದ್ಯೋಗಿ ಅರುಣ್ ಹೊಸದಾಗಿ ಮದುವೆಯಾದ ವರ್ಷ. ಆತನಿಗೂ ಅದು ಮೊದಲ ದೀಪಾವಳಿ ಹೆಂಡತಿಯೊಂದಿಗೆ. ಮೊದಲೆಲ್ಲ ನಮ್ಮ ಜೊತೆ ನಮ್ಮ ಹಾಗೆ ಒಂದು ಊಟದ ಡಬ್ಬಿಯನ್ನು ಆಫೀಸಿಗೆ ತರುತ್ತಿದ್ದವನು ಮದುವೆಯಾದ ಮೇಲೆ ನಾಲ್ಕೈದು ಬಾಕ್ಸುಗಳನ್ನಾದರೂ ತಂದು ತನ್ನ ಮುಂದೆ ಟೇಬಲ್ಲಿನ ಮೇಲೆ ಹರವಿಕೊಳ್ಳುತ್ತಿದ್ದವನನ್ನು ನಾವು ಡ್ರಮ್ಮಿಷ್ಟ್ ಎಂದೇ ಕರೆಯತೊಡಗಿದ್ದೆವು. ಒಂದು ಬಾಕ್ಸಿನಿಂದ ನಾಲ್ಕು ಬಾಕ್ಸಿಗೆ ಬೆಳೆದ ಬಡ್ತಿ ಅಷ್ಟೇ ಬೇಗನೆ ತಿರುಗಿ ಮತ್ತೆ ಒಂದು ಬಾಕ್ಸಿಗೆ ಬಂತು, ಅದು ಬೇರೆ ವಿಚಾರ.

ಅರುಣನ ಮೊದಲ ನರಕಚತುರ್ದಶಿಯನ್ನು ನೆನಪಿಸಿ ಅವನಿಗೆ ಇವತ್ತಿಗೂ ನಾನು ತಮಾಷೆ ಮಾಡುತ್ತೇನೆ. ಅರುಣ ಯಾವುದನ್ನು ಬಿಟ್ಟರೂ ನಿದ್ರೆಯನ್ನು ಮಾತ್ರ ಬಿಡುವ ಜಾಯಮಾನದವನಲ್ಲ. ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ ಹತ್ತು ಘಂಟೆಗಳಾದರೂ ಗಡದ್ದಾಗಿ ನಿದ್ರೆ ಆಗಲೇ ಬೇಕು. ಅಂತಹವನನ್ನು ಅವನ ಹೆಂಡತಿ ಪ್ರಿಯಾ ನರಕ ಚತುರ್ದಶಿಯ ದಿನ ಬೇಗನೆ ಏಳಿಸಿದ್ದೂ ಅಲ್ಲದೇ (ಚೆನ್ನಾಗಿ) ಅಭ್ಯಂಜನವನ್ನು ಮಾಡಿಸಿ ಆದಷ್ಟು ಬೇಗನೆ ಮನೆಗೆ ಬನ್ನಿ ಎಂದು ಹೇಳಿ ಬೇಗನೆ ಆಫೀಸಿಗೆ ಕಳಿಸಿಬಿಟ್ಟಿದ್ದಳು. ಈ ಮನುಷ್ಯ ಎಂದಿಗಿಂತಲೂ ಒಂದೆರಡು ಘಂಟೆ ಮೊದಲೇ ಆಫೀಸಿಗೆ ಹೊರಟವನು ಸೀದಾ ಆಫೀಸಿಗೆ ಬಂದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ, ಅಂತಹದುರಲ್ಲಿ ಅರುಣ ತನ್ನ ಕಾರನ್ನು ಪಾರ್ಕಿಂಗ್ ಲಾಟಿನಲ್ಲಿ ನಿಲ್ಲಿಸಿ ಅಲ್ಲೇ ಸುಮಾರು ಎರಡು ಘಂಟೆಯ ಮೇಲೆ ನಿದ್ರೆ ಮಾಡಿಬಿಡೋದೆ! ಈ ಕಡೆ ಪ್ರಿಯಾ ಆಗೆಲ್ಲ ಇನ್ನೂ ಸೆಲ್‌ಫೋನುಗಳು ಹೆಚ್ಚು ಇರಲಿಲ್ಲವಾದ್ದರಿಂದ ಅರುಣನ ಆಫೀಸಿಗೆ ಫೋನ್ ಕರೆಯ ಮೇಲೆ ಕರೆ ಮಾಡುವುದೂ ಅರುಣನ ಕಡೆಯಿಂದ ಯಾವುದೇ ಉತ್ತರ ಬಾರದಿರುವುದೂ ಸ್ವಲ್ಪ ಹೊತ್ತು ನಡೆಯಿತು. ಪಾಪ, ಪ್ರಿಯಾಳ ಮನಸ್ಸಿನಲ್ಲಿ ಏನೆನೆಲ್ಲ ಆಗುತ್ತಿರಬೇಡ, ಕೊನೆಗೂ ಪ್ರಿಯಾ ರಾಜೀವನ ನಂಬರನ್ನು ಹುಡುಕಿ ಡಯಲ್ ಮಾಡಿ ರಾಜಿವ ಎಲ್ಲರ ಜೊತೆ ಸೇರಿ ಅರುಣನನ್ನು ಹುಡುಕಿ ಏಳಿಸಿ ಆಫೀಸಿಗೆ ಕರೆದುಕೊಂಡು ಬರಬೇಕಾದರೆ ಸಾಕು ಬೇಕಾಯಿತೆನ್ನಿ!

Tuesday, October 17, 2006

mUರು ಚಿತ್ರಗಳು

ದಿನಾ ಆಫೀಸಿಗೆ ಹೋಗೋ ಇಂಟರ್‌ಸ್ಟೇಟ್ ೭೮ ರಲ್ಲಿ ಅವಿರತ ಕನ್‌ಷ್ಟ್ರಕ್ಷನ್ ನಡೆದಿದೆ. ಸುಮಾರು ದೂರ ಎಕ್ಸ್‌ಪ್ರೆಸ್ ಲೇನುಗಳನ್ನು ಮುಚ್ಚಿ ಎಲ್ಲ ಟ್ರಾಫಿಕ್ಕನ್ನು ಲೋಕಲ್ ಲೇನುಗಳಿಗೆ ಬದಲಾಯಿಸಲಾಗಿದೆ. ಮೊದಲು mUರಿದ್ದ ಲೋಕಲ್ ಲೇನುಗಳನ್ನು ಈಗ ನಾಲ್ಕು ಲೇನುಗಳನ್ನಾಗಿ ಪರಿವರ್ತಿಸಲಾಗಿದೆ. ಲೋಕಲ್ ಲೇನುಗಳಲ್ಲಿ ಎಷ್ಟೋ ದೂರ ಶೋಲ್ಡರ್ ಇಲ್ಲವಾದ್ದರಿಂದ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಟ್ರಾಫಿಕ್ ಜಾಮ್ ಅನ್ನೋದು ಆಗಲೇ ಬೇಕು. ಯಾವುದಾದರೂ ಕಾರು ಬ್ರೇಕ್‌ಡೌನ್ ಆಗುವುದರಿಂದ ಹಿಡಿದು ಸಣ್ಣಪುಟ್ಟ ಆಕ್ಸಿಡೆಂಟೋ, ಫೆಂಡರ್-ಬೆಂಡರ್‌ಗಳೋ, ಅಥವಾ ಇಡೀ ಕಾರು ನಜ್ಜುಗುಜ್ಜಾಗುವ ಯಾರಾದರೂ ನೆಗೆದುಬಿದ್ದು ಹೋದ ಘಟನೆಗಳಂತೂ ಪರಿಸ್ಥಿತಿಯನ್ನು ಇನ್ನೂ ಕೈ ಮೀರಿಸಿಬಿಡುತ್ತವೆ. ಜನರ ಜೀವಗಳು ಅಥವಾ ಸಣ್ಣಪುಟ್ಟ ಅಡೆತಡೆಗಳು ಯಾರು ಯಾರಿಗೆ ಏನೇ ಅರ್ಥವನ್ನು ಕೊಟ್ಟರೂ ಕೊನೆಯಲ್ಲಿ ನನ್ನಂತಹವರಿಗೆ ಪ್ರತಿಯೊಂದು ದುರಂತ ಅರ್ಧ ಘಂಟೆಯ ಪ್ರಯಾಣವನ್ನು ಹೆಚ್ಚಿಸಿಬಿಡುತ್ತದೆ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಯಾವುದೊಂದನ್ನೂ ಭಾವನಾತ್ಮಕವಾಗಿ ನೋಡದಿರುವ ಹಾಗೆ ಇಂತಹ ಘಟನೆಗಳು ನನ್ನ ಮನೋಬಲವನ್ನು ಹೆಚ್ಚಿಸುತ್ತಿರಬಹುದು, ಒಂದು ರೀತಿ ಕಟುಕನ ಅಂಗಡಿಯಲ್ಲಿ ಮಾಂಸ ಕತ್ತರಿಸುವವನ ಮನಸ್ಥಿತಿಯ ಹಾಗೆ ಯಾವ ಕುರಿಯಾದರೇನಂತೆ? ಸುಮಾರು ಐದು ತಿಂಗಳು ನಡೆಯಬಹುದಾದ ಈ ಮೆಗಾ ಪ್ರಾಜೆಕ್ಟ್ ಬಹಳಷ್ಟನ್ನು ಒತ್ತರಿಸಿದೆ - ಹೊಸದಾಗಿ ಮೇಲ್ಮೈಯನ್ನು ಪಡೆಯುತ್ತಿರುವ ಎಕ್ಸ್‌ಪ್ರೆಸ್ ಲೇನುಗಳು ಬಡದೇಶಗಳ ವಿಮಾನ ನಿಲ್ದಾಣಗಳ ರನ್‌ವೇಗಳಿಗಿಂತಲೂ ದಪ್ಪವಾದ ಕಾಂಕ್ರೀಟ್-ಆಸ್ಪಾಲ್ಟ್ ಮಿಶ್ರಣವನ್ನು ಹೊಂದಿವೆ, ನನ್ನ ಅಂದಾಜಿನ ಪ್ರಕಾರ ಈ ಹೊಸ ರಸ್ತೆಯ ದಪ್ಪ ಸುಮಾರು ಹತ್ತು ಹನ್ನೆರಡು ಅಂಗುಲಗಳು. ಸುಮಾರು ಹದಿನೈದು ಮೈಲು ದೂರ ಹನ್ನೆರಡು ಅಂಗುಲದ ರಸ್ತೆಯಲ್ಲಿ, ಶೋಲ್ಡರ್ ಸೇರಿಸಿ ಐವತ್ತು ಅಡಿ ಅಗಲವಿರಬಹುದಾದ ಈ ಪ್ರಾಜೆಕ್ಟಿನಲ್ಲಿ ಬಳಸಬಹುದಾದ ರಿಸೋರ್ಸನ್ನು ಊಹಿಸಿ ನನ್ನ ಮನಸ್ಸಿನಲ್ಲಿರುವ ವೇರಿಯಬಲ್‌ಗಳು ಅಳತೆ ಮೀರುತ್ತವೆ. ಹೊಸ ರಸ್ತೆಯ ಹುಟ್ಟಿಗಾಗಿ ಒತ್ತರಸಿಲ್ಪಟ್ಟ ಹಾಗೂ ಬಹುವಾಗಿ ಬಳಕೆಯಾಗುವ ಲೋಕಲ್ ರಸ್ತೆಯ ಸಂಪನ್ಮೂಲಗಳು, ಹೊಸ ರಸ್ತೆಯ ಹುಟ್ಟಿಗಾಗಿ ಹೊಸದಾಗಿ ತಂದು ಹಾಕಿದ ಕಚ್ಚಾವಸ್ತುಗಳು, ಹೊಸತನ ಅನ್ನೋದು ಸುಮ್ಮನೇ ಏನಲ್ಲ ಎಂದು ನನ್ನಂತಹವರು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

***

ರಸ್ತೆಗಳ ಕೃಪೆಯಲ್ಲಿ ಯಾವುದೋ ಒಂದು ಸಮಯದಲ್ಲಿ ಆಫೀಸ್ ತಲುಪೋ ನನಗೆ ನಾನು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ಬಹಳ ಮುಖ್ಯವಾಗಿ ಕಾಣುತ್ತದೆ. ಎಷ್ಟೋ ದಿನಗಳಲ್ಲಿ ನಮ್ಮ ಪ್ರಾಜೆಕ್ಟಿನ ಯಾವುದಾದರೊಂದು ಒಂದು ಸಂದಿಗ್ಧ ಸನ್ನಿವೇಶದಲ್ಲಿ ನಾನು ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ನಿರ್ಧಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತೇನೆ - ಈ ಸಂಪನ್ಮೂಲಗಳಲ್ಲಿ ಸೀನಿಯರ್ ಮ್ಯಾನೇಜರುಗಳಿಂದ ಹಿಡಿದು ಕಿರಿಯ ಸಾಫ್ಟ್‌ವೇರ್ ಇಂಜಿನಿಯರುಗಳೂ ಸೇರಿರುತ್ತಾರೆ. ಇವರೆಲ್ಲರ ದಿನನಿತ್ಯದ ಕೆಲಸ ಮಾಡುವ ಸಮಯ ಈಗಾಗಲೇ ಹಲವಾರು ಮೀಟಿಂಗ್‌ಗಳಲ್ಲೋ, ಮತ್ತೊಂದರಲ್ಲೋ ಹೆಣೆದುಕೊಂಡಿದ್ದರೂ ನನಗೆ ನನ್ನ ಟ್ಯಾಸ್ಕ್ ಬಹಳ ಅಪ್ಯಾಯಮಾನವಾಗಿ ಕಂಡು ಇವರೆಲ್ಲರೂ ತಮ್ಮತಮ್ಮ ಕೆಲಸಗಳನ್ನು ಬದಿಗೊತ್ತಿ ನಾನು ಒದ್ದಾಡುತ್ತಿರುವ ಸಮಸ್ಯೆಗೆ ಸ್ಪಂದಿಸುವಂತೆ ಕೇಳಿಕೊಳ್ಳುತ್ತೇನೆ, ಅಕಸ್ಮಾತ್ ಅವರು ಒಪ್ಪದೇ ಬೇರೆ ವಿಧಿಯೇ ಇಲ್ಲ ಏಕೆಂದರೆ ನಾನು ಮಾಡುತ್ತಿರುವ ಕೆಲಸಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ಎಸ್ಕಲೇಟ್ ಮಾಡಿ ಕೆಲಸವನ್ನು ಮಾಡಿಸಿಕೊಳ್ಳುವ ಕಲೆ ಅಥವಾ ಅಥಾರಿಟಿ ನನಗೆ ಎಂದೋ ಸಿದ್ಧಿಸಿದೆ. ಈ ಹೊಸದಾಗಿ ಹುಟ್ಟುತ್ತಿರುವ ಪ್ರಾಡಕ್ಟ್ ಇಂಟರ್‌ಫೇಸ್ ಸ್ಥಳೀಯ ಸಂಪನ್ಮೂಲಗಳನ್ನು ಬೇಕಾದಷ್ಟು ಬಳಸಿಕೊಂಡಿದೆ, ಎಷ್ಟೋ ಜನರ ಅನುಕೂಲ-ಅನಾನುಕೂಲಗಳನ್ನು ಬದಿಗೊತ್ತಿ ನನ್ನ ಪ್ರಾಜೆಕ್ಟಿನ ಟಾಸ್ಕುಗಳು ತಲೆ ಎತ್ತಿ ನಿಂತಿವೆ. ಎಷ್ಟೋ ಸಾರಿ ಘಂಟೆಗಟ್ಟಲೆ ನಡೆಯುವ ಮೀಟಿಂಗುಗಳು ಬೇಕಾದಷ್ಟು ಜನರಿಗೆ ಹಲವಾರು ವಿಳಂಬಗಳನ್ನು ಹುಟ್ಟಿಸಿವೆ. ನಮ್ಮಲ್ಲಿ ನಡೆಯುವ ಎಲ್ಲಾ ಪ್ರಾಜೆಕ್ಟುಗಳಿಗೆ ಅವೇ ಸಂಪನ್ಮೂಲಗಳು ಬಳಕೆಯಾದರೂ ನನ್ನ ಕಣ್ಣಿಗೆ ನನ್ನ ಪ್ರಾಜೆಕ್ಟ್ ಮಾತ್ರ (ವಿಶೇಷವಾಗಿ) ಕಾಣೋದರಿಂದ ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ನಾನು ಸಂಪನ್ಮೂಲಗಳನ್ನು ಬಳಸಿ ಬಡವರ ನಡುವಿನ ಶ್ರೀಮಂತನಂತೆ ಮಿನುಗುತ್ತೇನೆ, ಅಥವಾ ಒಳಗೊಳಗೇ ಕೊರಗುತ್ತೇನೆ.

***

ನಮ್ಮ ಡಾಕ್ಟರ್ ಆಫೀಸಿನಲ್ಲಿ ಗರ್ಭಿಣಿಯ ಚಿತ್ರವೊಂದನ್ನು ತೂಗು ಹಾಕಿದ್ದಾರೆ. ಬೆಳೆಯುತ್ತಿರುವ ಮಗುವನ್ನು ಹಲವಾರು ಕೋನಗಳಲ್ಲಿ ಸೆರೆಹಿಡಿದು ತಾಯಿಯ ಹೊಟ್ಟೆಯಲ್ಲಿ ಮಗುವಿಗೆ ಸ್ಥಳ ಮಾಡಿಕೊಡುವಂತೆ ಆಗುವ ಬದಲಾವಣೆಗಳನ್ನು ಚಿತ್ರಗಳ ಸಮೇತ ವಿವರಿಸಿದ್ದಾರೆ. ಮಗುವನ್ನು ಪೋಷಿಸಿ ಅದನ್ನು ಹೊತ್ತು ಹೆರುವುದಕ್ಕೆ ಆ ತಾಯಿಯ ಅಂಗಾಗಳಲ್ಲಿ ಆಗುವ ಮಾರ್ಪಾಟು ಅಪಾರವಾದುದು. ಸಣ್ಣ-ದೊಡ್ಡಕರುಳುಗಳು ಬದಿಗೊತ್ತಿ ಅವುಗಳ ನಡುವೆ ದಿನೇದಿನೇ ಹಿಗ್ಗುವ ಗರ್ಭಾಶಯವನ್ನು, ಅದರಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವ ಭ್ರೂಣದ ಅಗತ್ಯಗಳನ್ನು ಪೂರೈಸುವುದಕ್ಕೆ ಏನೇನೆಲ್ಲ ಬದಲಾವಣೆಗಳಾಗುತ್ತವೆ. ಕಿಬ್ಬೊಟ್ಟೆಯಿಂದ ಹಿಡಿದು ಪುಪ್ಪುಸಗಳವರೆಗೆ, ಜಠರದಿಂದ ಹಿಡಿದು ಪಿತ್ತಜನಕಾಂಗ ಮೆದೋಜೀರಕಾಂಗಗಳವರೆಗೆ, ಪಕ್ಕೆಲೆಬುಗಳನ್ನು ಹೊರತುಪಡಿಸಿ ಮತ್ತೆಲ್ಲವೂ ಹಿಗ್ಗಿ-ಕುಗ್ಗಿ ಒಂದಲ್ಲ ಒಂದು ರೀತಿಯಿಂದ ಈ ಹೊಸಜೀವಕ್ಕೆ ದಾರಿಮಾಡಿಕೊಡೋದನ್ನ ಊಹಿಸಿಕೊಳ್ಳುತ್ತೇನೆ. ಬರೀ ಮೇಲ್ಮಟ್ಟಕ್ಕೆ ಕಾಣೋ ಬದಲಾವಣೆಗಳು ಮಾತ್ರವಲ್ಲ; ತಾಯಿಯ ಒಡಲಿನೊಳಗೆ ಬಹಳಷ್ಟು ಕಿಣ್ವಗಳು ಸೃಜಿಸಲ್ಪಟ್ಟಿವೆ, ಗ್ರಂಥಿಗಳಿಂದ ನಾನಾ ರೀತಿಯ ಹಾರ್ಮೋನುಗಳ ಹುಟ್ಟಿನಲ್ಲಿ ಬದಲಾವಣೆಗಳಾಗಿವೆ, ದೇಹದಲ್ಲಿ ನೀರು-ರಕ್ತದ ಅಂಶಗಳು ಹೆಚ್ಚಿವೆ; ಹೀಗೆ ಕಣ್ಣಿಗೆ ಕಾಣದ ಹಾಗೂ ಮೇಲ್ನೋಟಕ್ಕೆ ಕಂಡುಬರುವ ಹಲವಾರು ಬದಲಾವಣೆಗಳು ಯಾರೋ ಹೇಳಿಮಾಡಿಸಿದಂತೆ ತಮ್ಮಷ್ಟಕ್ಕೆ ತಾವೇ ಒಂದರ ನಂತರ ಮತ್ತೊಂದು ಹುಟ್ಟುತ್ತಿವೆ, ಹೊಸತಿನ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿವೆ.

***

ಹೊಸತು ಎನ್ನೋದು ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಅದನ್ನು ಪೋಷಿಸಲು ಅಗತ್ಯವಾದ ಬದಲಾವಣೆಗಳು ಬೇಕೇ-ಬೇಕು, ಹೊಸತು ಹುಟ್ಟುವುದು ಯಾವುದೋ ಒಂದು ನಿರ್ವಾತದಲ್ಲಲ್ಲ ಅದು ಇದ್ದವುಗಳ ನಡುವೆಯೇ ಹುಟ್ಟಿ-ಬೆಳೆದು-ಬದಲಾವಣೆಗಳಿಗೊಳಪಡಬೇಕು, ಹೊಸತರ ಹುಟ್ಟು ಅಥವಾ ಬೆಳವಣಿಗೆ ಅದಕ್ಕೆ ಬೇಕಾದ ಹಾಗೆ ಸಂಪನ್ಮೂಲಗಳನ್ನು ಬಳಸಿಕೊಂಡೇ ತೀರುತ್ತದೆ ಅಥವಾ ಹಾಗಿಲ್ಲವೆಂದಾದರೆ ಅದು ಸೊರಗುತ್ತದೆ, ಈ ಬೆಳವಣಿಗೆ ಯಾವುದೋ ಪೂರ್ವ ನಿರ್ಧರಿತ ಯೋಜನೆಯಂತೆ ಕಂಡುಬಂದರೂ ನಡುನಡುವೆ ಹಲವಾರು ಬದಲಾವಣೆಗಳಿಗೆ, ಸಮಯಕ್ಕೆ ತಕ್ಕಂತೆ ಮಾರ್ಪಾಟುಹೊಂದುವಲ್ಲಿ ಸುತ್ತಮುತ್ತಲಿನ ಮೇಲೆ ನಿರೀಕ್ಷೆಗಿಂತ ಹೆಚ್ಚು ಒತ್ತಡ ಬೀಳಬಹುದು.

Sunday, October 15, 2006

ಅವರವರ ನೋಟ

ಒಂದು ದೇಶದಲ್ಲಿ ಐದು, ಹತ್ತು ಹದಿನೈದು ವರ್ಷಗಳಿದ್ದರೆ ಅವರವರ ಅನುಭವದ ಮೇಲೆ ಒಂದು ರೀತಿಯ ಇಂಪ್ರೆಷ್ಷನ್ ನಿರ್ಮಾಣವಾಗುತ್ತದೆ, ಕೆಲವರು ಅದೆಷ್ಟೇ ವರ್ಷ ಯಾವುದೇ ದೇಶದಲ್ಲಿದ್ದರೂ ತಮ್ಮ ಸುತ್ತ ಮುತ್ತಲು ತಮ್ಮದೇ ಪರಿಸರವನ್ನು ನಿರ್ಮಿಸಿಕೊಂಡು ತಮ್ಮದೇ ಬಾಳ್ವೆಯನ್ನು ಬದುಕುತ್ತಾರೆ, ಇನ್ನು ಕೆಲವರು ಮೊದಲ ದಿನದಿಂದಲೇ ತಮ್ಮ ತನವನ್ನು ತೆರೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಳ್ಳಲು ಹವಣಿಸುತ್ತಾರೆ. ಈ ಎಕ್ಸ್‌ಟ್ರೀಮ್‌ ಗುಂಪಿನಲ್ಲಿ ಸೇರುವವರು ಬಹಳ ಮಂದಿಯೇನಲ್ಲ, ಹೆಚ್ಚಿನವರು ನನ್ನ ಹಾಗೆ ಬೆಲ್ ಕರ್ವ್‌ನ ಮಧ್ಯೆ ಎಲ್ಲೋ ಬಿದ್ದು ಒದ್ದಾಡುವವರು.

ಅಮೇರಿಕಕ್ಕೆ ಪ್ರವಾಸಕ್ಕೆಂದು ಬಂದು ಇಲ್ಲಿ ನನ್ನನ್ನು ಭೇಟಿಯಾಗುವ ಹೆಚ್ಚಿನ ಜನರನ್ನು ಮಾತನಾಡಿಸಿದಾಗ ಅವರ ಕಣ್ಣುಗಳಲ್ಲಿ ನಾನು ಅಮೇರಿಕವನ್ನು 'ನೋಡಿದ್ದೇನೆ' ಎನ್ನುವ ಆಶಾಭಾವನೆ ಕಂಡುಬರುತ್ತದೆ, ಎಷ್ಟೋ ಸಾರಿ ಅವರಿಗೆ ಅಂಕಿ-ಅಂಶಗಳ ವತಿಯಿಂದ, ಇಲ್ಲಿನ ಮುಖ್ಯವಾದ ಸ್ಥಳಗಳ ಮಾಹಿತಿ-ಹಿನ್ನೆಲೆಯ ದೃಷ್ಟಿಯಿಂದ ಸ್ಥಳೀಯರಿಗಿಂತ ಹೆಚ್ಚಿನ ತಿಳುವಳಿಕೆ ಇದ್ದಿರುವುದನ್ನೂ ಗುರುತಿಸುತ್ತೇನೆ. ಜೊತೆಗೆ ಅವರಲ್ಲಿ ದಿಢೀರನೆ ನಿರ್ಧಾರಕ್ಕೆ ಬಂದು ಬಿಡಬಲ್ಲ ಒಂದು ಗುಣವನ್ನೂ ಕಂಡುಕೊಳ್ಳುತ್ತೇನೆ. ಹೆಚ್ಚಿನ ಪಕ್ಷ ಅವರ ತತ್‌ಕ್ಷಣ ನಿರ್ಧಾರಗಳು ಬೆಳ್ಳಗಿರೋದೆಲ್ಲ ಮಲ್ಲಿಗೆ, ಕಪ್ಪಗಿರೋದೆಲ್ಲ ಕೆಟ್ಟದ್ದು ಎನ್ನುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹುಟ್ಟಿದವೇನೋ ಅನ್ನುವ ಸಂಶಯವೂ ಬಂದಿದೆ. ಆದರೂ ಒಬ್ಬ ಪ್ರವಾಸಿಯಾಗಿ ಒಂದು ದೇಶವನ್ನು ನೋಡಿ ಅನುಭವಿಸುವುದಕ್ಕೂ, ಅಲ್ಲೇ ಸ್ಥಳೀಯರಾಗಿ ಹಲವು ವರ್ಷ ಸುತ್ತಲನ್ನು ಕೆದಕಿ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಆದ್ದರಿಂದಲೇ ನಾನು ಪ್ರವಾಸಿ ಕಥನಗಳನ್ನು ಒಬ್ಬರ ಅನುಭವವಾಗಿ ಓದುತ್ತೇನೆಯೇ ವಿನಾ ಅದನ್ನು ಕುರಿತು ಜನರಲೈಸ್ ಮಾಡಲೇನೂ ಹೋಗೋದಿಲ್ಲ.

ನಾನು ಇಷ್ಟು ವರ್ಷ ಇಲ್ಲಿ ಇದ್ದರೂ ಒಂದು ಊರಿನಿಂದ ಮತ್ತೊಂದು ಊರಿಗೆ ಬಸ್ಸಿನಲ್ಲೆಂದೂ ಪ್ರಯಾಣಿಸಿದವನಲ್ಲ, ಟ್ರೈನಿನಲ್ಲಿ ಸಾಕಷ್ಟು ತಿರುಗಾಡಿದ್ದೇನೆ - ಇಲ್ಲಿಯ ಬಸ್ ಸ್ಟೇಷನ್‌ಗಳು ಒಂದು ರೀತಿಯ ಬಡತನದ ವರ್ಗವನ್ನು ಪ್ರತಿನಿಧಿಸುತ್ತದೆ ಎಂದರೆ ಅದು ನನ್ನ ಮಿತಿಯೇನೂ ಅಲ್ಲ. ನಾನು ವಾಷಿಂಗ್ಟನ್ ಡಿಸಿ, ನ್ಯೂ ಯಾರ್ಕ್ ಹಾಗೂ ನೆವಾರ್ಕ್ ಬಸ್ ನಿಲ್ದಾಣಗಳಲ್ಲಿ ಯಾರನ್ನಾದರೂ ಕರೆದುಕೊಂಡು ಬರಲೆಂದೋ ಅಥವಾ ಬಿಟ್ಟು ಬರಲೆಂದೋ ಬೇಕಾದಷ್ಟು ಸಲ ಹೋಗಿದ್ದೇನೆ. ಎಷ್ಟೋ ಈ ನಿಲ್ದಾಣಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಹಲವಾರು ಸೆಕ್ಷನ್‌ಗಳಿಗೆ ಹೋಗೋದಕ್ಕೂ ಹೆದರಿಕೆಯಾಗುವಂತಹ ಸಂದರ್ಭಗಳು ಉದ್ಭವವಾಗಿ ನನ್ನ ಮನಸ್ಸು 'ದುಷ್ಟರಿಂದ ದೂರ ಇರು' ಎಂದು ಎಚ್ಚರಿಕೆ ಕೊಟ್ಟಿದೆಯಾದ್ದರಿಂದ ಧುತ್ತನೆ ಎದುರುಗೊಳ್ಳಬೇಕಾದ ಸಮಸ್ಯೆಗಳಿಂದ ಬಚಾವ್ ಆಗಿದ್ದೇನೆ - ಇಂತಹ ಧುತ್ತನೆ ಎದುರಾಗುವ ಸಮಸ್ಯೆಗಳು ಅಚಾನಕ್ ಆಗಿ ಕತ್ತಲಿನಲ್ಲಿ ಕೈಯೊಂದು ಮುಂದೆ ಬಂದು 'ಡಾಲರ್ ಕೊಡು' ಎನ್ನುವಲ್ಲಿಂದ ಹಿಡಿದು 'ವಾಲೆಟ್ ತೆಗಿ' ಎನ್ನುವ ಹುಂಬ ಆಜ್ಞೆಗಳವರೆಗೆ ವಿಸ್ತರಿಸಿಕೊಳ್ಳುತ್ತವೆ. ಈ ರೀತಿ ದಿಢೀರ್ ದಂಡನೆಗೊಳಗಾಗುವಾಗ ಕೇವಲ ಆಜ್ಞೆಯನ್ನು ಪಾಲಿಸುವ ಪಶುವಾಗುತ್ತೇನೆಯೇ ವಿನಾ ಎದುರಿನಲ್ಲಿರುವ ಒಂದು ಡಿಸ್ಟರ್ಬ್ಡ್ ಮನಸ್ಥಿತಿಯಿಂದ ಮತ್ತೇನನ್ನೂ ನಾನು ನಿರೀಕ್ಷಿಸೋದಿಲ್ಲ.

'ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ನೋಟ ಚೆಂದ' ಅನ್ನೋದೇನೋ ಸರಿ, ಆದರೆ ಈ ಶ್ರೀಮಂತ ದೇಶವನ್ನು ಸರಿಯಾಗಿ ಪೂರ್ಣವಾಗಿ ನೋಡಬೇಕಾದರೆ ನೀವು ಈ ಬಡವರ ಕಣ್ಣುಗಳಿಂದ ಪ್ರತಿಫಲನವಾದ ಬೆಳಕನ್ನು ನೋಡಲೇ ಬೇಕು, ಬರೀ ಶ್ರೀಮಂತ ಗಲ್ಲಿಗಳನ್ನು ತಿರುಗಿ ಮಹಲುಗಳಿವೆ, ಮೋಡಿಯಿದೆ ಎಂದರಾದೀತೇ? ಇಲ್ಲಿ ಹಲವಾರು ವರ್ಷದಿಂದ ಮಾನಸಿಕವಾಗಿ ಅಸ್ಥವ್ಯಸ್ಥರಾದ; ಚಳಿಯಲ್ಲಿ ಜೀವವನ್ನು ಹಿಡಿಯಲ್ಲಿಟ್ಟುಕೊಂಡು ಆರು ತಿಂಗಳಿಗಿಂತಲೂ ಹೆಚ್ಚು ಸತ್ತು ಬದುಕಿದ; ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯಲ್ಲಿ, ದಿನೇ-ದಿನೇ ದರ ಹೆಚ್ಚುವ ಹೆಲ್ತ್‌ಕೇರ್ ಇನ್ಸೂರೆನ್ಸ್ ವ್ಯವಸ್ಥೆಯಲ್ಲಿ ಸೋತ; ಮನುಷ್ಯನ ಬದುಕು ಎಂದರೆ ಅವನು ಹೊಂದಿದ ಕಾರ್ಡುಗಳು ಎನ್ನುವ ಆಧುನಿಕ ಟ್ರ್ಯಾಪ್‌ನಲ್ಲಿ ಬಿದ್ದು ಒದ್ದಾಡುವವರ ಮನದಲ್ಲಿರುವ ಅಮೇರಿಕವನ್ನು ಚಿತ್ರಿಸುವವರು ಯಾರು? ಇಲ್ಲಿಯ ದೊಡ್ಡ ಶಹರಗಳಲ್ಲಿ ಜನರು ಹೋಮ್‌ಲೆಸ್ ಹೇಗೆ, ಏಕೆ ಆಗುತ್ತಾರೆ ಎನ್ನುವುದನ್ನು ಕಂಡು ಹಿಡಿದು ಅದಕ್ಕೆ ಔಷಧಿಕೊಡಲು ಒದ್ದಾಡುತ್ತಿರುವ ಪರಂಪರೆಯಲ್ಲಿ, ಇಲ್ಲಿನ ಮಕ್ಕಳೆಲ್ಲರಿಗೆ ಕಡ್ಡಾಯವಾಗಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ರೂಢಿಸದ ಶ್ರೀಮಂತಿಕೆಯಲ್ಲಿ, ದಿನೇ-ದಿನೇ ಇದ್ದವ ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಿರುವ ಅಭಿವೃದ್ಧಿ ಎನ್ನುವ ಮರೀಚಿಕೆಯಲ್ಲಿ, ತಪ್ಪು ಮಾಡಿದವರನ್ನೆಲ್ಲ ಜೈಲಿಗೆ ತಳ್ಳಿ ಅಥವಾ ಗುಂಡು ಹೊಡೆದು ಸಾಯಿಸಿ ಸರಿಪಡಿಸುತ್ತೇನೆ ಎನ್ನುವ ಹುಂಬ ನಂಬಿಕೆಯಲ್ಲಿ - ಅಮೇರಿಕವನ್ನು ಗುರುತಿಸಿ ಈ ದೇಶದ ದೊಡ್ಡತನವನ್ನು ಉಳಿದ ದೇಶಗಳ ಸಮಾಜೋದ್ಧಾರ ಕಾರ್ಯಕ್ರಮಗಳ ಜೊತೆ ಒಂದರ ಪಕ್ಕ ಒಂದಿಟ್ಟು ತೂಗಿ ನೋಡಿದರೆ ಹೇಗೆ ಎನ್ನುವುದು ನನ್ನ ಬಹುದಿನಗಳ ಬಯಕೆ. ಒಂದು ದೇಶದಲ್ಲಿ ತುಂಬಿಕೊಂಡಿರೋ ಮಿಲಿಯನರ್, ಬಿಲಿಯನರ್‌ಗಳ ಪಟ್ಟಿ ದೊಡ್ಡರಿರಬಹುದು ಆದರೆ ಎಲ್ಲ ವರ್ಗಗಳ ಜನರನ್ನೂ ಪರಿಗಣಿಸಿ ನೋಡಿದಾಗಲೇ ಪೂರ್ಣ ಚಿತ್ರ ದೊರೆಯುತ್ತೆ ಎನ್ನುವುದು ನನ್ನ ನಂಬಿಕೆ. ಒಂದು ಆಲೂಗಡ್ಡೆ ಚಿಪ್ಸ್ ಮಾಡಿ ಮಾರುವ ಕಂಪನಿಯೂ ಇಲ್ಲಿ ದೊಡ್ಡ ಕಾರ್ಪೋರೇಷನ್ ಆಗಿರಬಹುದು, ಅದರ ಯಾದಿಯಲ್ಲಿ ಹಲವಾರು ಮಿಲಿಯನರ್‌ಗಳು ಹುಟ್ಟಿರಬಹುದು, ಆದರೆ ರಸ್ತೆ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಸಹ ಸಣ್ಣ ಉದ್ಯಮಿಗಳೇ ಅವರ ಕಷ್ಟ ಸುಖವನ್ನೂ ಗಮನದಲ್ಲಿಡಬೇಕು ಎನ್ನುವುದು ನನ್ನ ಅಡಿ ಟಿಪ್ಪಣಿ.

ಆದರೆ ಹೀಗೆ ಬರೆಯುವ ನನಗೂ ನನ್ನ ಮೂಗಿನ ನೇರವೊಂದಿದೆ - ನಾನು ಇಲ್ಲಿ ಛಳಿಯಲ್ಲೇನೂ ನೊಂದಿಲ್ಲ, ಬಿಸಿಲಿನಲ್ಲೇನೂ ಬೆಂದಿಲ್ಲ, ಹೊರಗಡೆ ಆಟವಾಡಿಲ್ಲ, ಒಂದು ಬಹಳ ಚಿಕ್ಕ ಸಮುದಾಯವನ್ನು ಬಿಟ್ಟು ಹೆಚ್ಚಿನವರೊಡಗೂಡಿಲ್ಲ, ಒಂದು ನಗರದಿಂದ ಮತ್ತೊಂದು ನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿಲ್ಲ, ಅಮೇರಿಕದ ಐವತ್ತು ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಇನ್ನೂ ನೋಡಿಯೇ ಇಲ್ಲ. ಪೂರ್ವದಲ್ಲಿರೋ ನನ್ನ ಕಣ್ಣಿಗೆ ಪಶ್ಚಿಮ ಯಾವುದೋ ಒಂದು ಹೊಸ ದೇಶವಾಗಿ ಕಂಡು ಬಂದಿದೆ, ಅಲ್ಲಿನವರ ಸುದ್ಧಿಗಳನ್ನು 'ಹೊರಗಿನವರ' ಸುದ್ಧಿಯನ್ನಾಗೇ ನಾನು ಸ್ವೀಕರಿಸುತ್ತೇನೆ. ಕೆಲಸ ಮಾಡುವುದಕ್ಕೆಂದೇ ಬಂದ ನಾನು ಬಂದ ದಿನದಿಂದ ಇಲ್ಲಿ ದುಡಿಯುತ್ತಲೇ ಇದ್ದೇನೆ, ಬಹಳ ಮಟ್ಟಿನ ರಜಾದಿನಗಳನ್ನು ನಾನು ಭಾರತಕ್ಕೆ ಹೋಗುವುದಕ್ಕೆಂದು ಬಳಸಿರೋದರಿಂದ ನನ್ನ ವೆಕೇಷನ್ ಏನಿದ್ದರೂ ಈ ದೇಶದಿಂದ ಹೊರಗೇ ಇದೆ, ಇವತ್ತಿನವರೆಗೂ ಇಲ್ಲಿ ರೆಡಿಯೋ, ಟಿವಿಗಳಲ್ಲಿ ಬರುವ ಸಂಗೀತದ ಭಾಷೆ, ಹಿನ್ನೆಲೆ ನನಗರ್ಥವಾಗೋದಿಲ್ಲ, ಇಲ್ಲಿನ ವ್ಯವಹಾರಗಳೂ ಬಹಳ ಕಾಂಪ್ಲೆಕ್ಸ್ ಆದುದರಿಂದ ನನ್ನ ಒಂದು ಸಣ್ಣ ವರ್ತುಲವನ್ನು ಬಿಟ್ಟರೆ ನನಗೇನೂ ಗೊತ್ತಿಲ್ಲ. ಆದರೆ ಇತ್ತೀಚೆಗೆ ನನ್ನ ಸ್ನೇಹಿತರು ಹೇಳಿರೋ ಹಾಗೆ ಭಾರತದಲ್ಲಿರುವವರಿಗೇ ನಮಗಿಂತಲೂ ಅಮೇರಿಕದವರ ಬಗ್ಗೆ ಬಹಳಷ್ಟು ಗೊತ್ತಿದೆ ಎನ್ನುವಂತಾಯ್ತು. ಇಲ್ಲಿ ತೋರಿಸುವ ಫ್ಯಾಶನ್ ಅಲ್ಲಿ ತಲುಪುವುದರಿಂದ ಹಿಡಿದು, ಇಲ್ಲಿನ ಸಾಮಾಜಿಕ ಸಂಘರ್ಷಗಳಿಗೆ ಅಲ್ಲಿನವರು ಉತ್ತರವನ್ನು ಕಂಡುಕೊಂಡಿದ್ದಾರೆ ಎನ್ನುವ ಮಹಾವಾದವೂ ನನ್ನ ಕಿವಿಗೆ ಬಿತ್ತು. ನಾನು ಹತ್ತು ದೇಶಗಳನ್ನು ನೋಡಿದ್ದೇನೆ ಎಂದು ಎದೆ ತಟ್ಟಿಕೊಂಡು ಮಾತನಾಡುವಂತಹ ದೊಡ್ಡ ಮನುಷ್ಯರಿಗೆ ಒಂದು ದೇಶದ ಬಗ್ಗೆ, ಒಂದು ಧರ್ಮದ ಬಗ್ಗೆ ಮಾತನಾಡುವುದು ಒಂದು ವಸ್ತುವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಕಾದಂಬರಿಯನ್ನು ಬರೆದಷ್ಟು ಸುಲಭದ ವಿಚಾರವಾಗಿ ಕಂಡುಬಂದಿರುವುದನ್ನು ನೋಡಿ ಹೇಸಿಗೆಯಾಗುತ್ತದೆ. ಈ ಮಹಾತ್ಮರು ಬರೆದ ಬರಹಗಳಲ್ಲಿನ ಉತ್ತುಂಗ ನಿಲುವುಗಳ ತೂಕ ಅವರ ಆಡುಮಾತಿನ ಹಗುರವಾದ ಹಂದರದಲ್ಲಿ ಸೇರಿ ಹೋಗದೇ ಬಹಳಷ್ಟು ಗೊಂದಲಕ್ಕೊಳಗಾಗಿದ್ದೇನೆ. ಅವರವರ ಕಾದಂಬರಿಯ ಪಾತ್ರಗಳಲ್ಲಿ ಇನ್ನೂರು ಮುನ್ನೂರು ಪುಟಗಳಲ್ಲಿ ಬದುಕನ್ನು ಬಿಂಬಿಸಿ ಅದರ ಅಂಕುಡೊಂಕುಗಳನ್ನು ಪ್ರದರ್ಶನಕ್ಕಿಟ್ಟು ಇವರೆಲ್ಲ ಯಶಸ್ವಿಯಾಗಿದ್ದರೆ ಬದುಕೇಕೆ ಇನ್ನೂ ಬದುಕಾಗಿಯೇ ಉಳಿಯುತ್ತಿತ್ತು ಎಂದು ಎಷ್ಟೋ ಸಾರಿ ಕುತೂಹಲಿತನಾಗಿದ್ದೇನೆ. ಓರ್ಹಾನ್ ಪಮುಕ್ ಆಗಲೀ ಎಸ್. ಎಲ್. ಭೈರಪ್ಪನವರನ್ನಾಗಲೀ ಅವರವರ ಬರಹದ ಸಂಕೀರ್ಣತೆಯಲ್ಲಿ ಗುರುತಿಸಿಕೊಳ್ಳಲೋ ಅಥವಾ ಅವರುಗಳು ಹೇಳಿ-ಮಾಡುವ ಪರಿಪಾಟದಲ್ಲಿ ಅಳವಡಿಸಿಕೊಳ್ಳಲೋ ಎನ್ನುವ ಚಿಂತೆಗೆ ಸಿಕ್ಕುಬಿದ್ದಿದ್ದೇನೆ.

ಒಬ್ಬರ ಜೊತೆಗಿನ ಸಂವಾದ ಅವರ ಆದರ್ಶಗಳನ್ನು ಕುರಿತದ್ದಾಗಿರಬೇಕೆ ಅಥವಾ ಅವರ ಸಂಘರ್ಷಗಳನ್ನು ಅನುಮೋದಿಸಬೇಕೇ? ನನ್ನ ಸಣ್ಣ ಕಿಂಡಿಯಲ್ಲಿ ಕಾಣುವುದನ್ನು ನಾನು ಬದುಕು ಎಂದು ನಂಬಿಕೊಂಡಿರುವಾಗ ಉಳಿದವರ ನಂಬಿಕೆಗಳನ್ನು ಒಂದು ಹೋರಾಟವಾಗಿ ಸ್ವೀಕರಿಸಬೇಕೇ?

ಒಂದು ಸಮಸ್ಯೆಯನ್ನು ಹೊರಗಿನಿಂದ ಅಧ್ಯಯನ ಮಾಡುವುದಕ್ಕೂ ಅಲ್ಲೇ ಇದ್ದು ಅನುಭವಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ದೇಶವನ್ನು ಸುತ್ತಲು ಬರುವ ಪ್ರವಾಸಿಗರು ತಮ್ಮ ದೃಷ್ಟಿಕೋನವನ್ನು ತಮ್ಮೊಡನೆ ತಂದು ಅದರ ಇತಿ-ಮಿತಿಯಲ್ಲಿ ಇಲ್ಲಿನವುಗಳನ್ನು ಕಂಡುಕೊಳ್ಳುವುದು ಒಂದು ರೀತಿಯಾದರೆ, ಇಲ್ಲಿಯೇ ಎಷ್ಟೋ ವರ್ಷಗಳ ಕಾಲ ಇದ್ದೂ ತಮ್ಮನ್ನು ಸುತ್ತಲಿನಿಂದ ಐಸೋಲೇಟ್ ಮಾಡಿಕೊಂಡಿರುವವರದು ಮತ್ತೊಂದು ಬಗೆ. ಈ ಹಿನ್ನೆಲೆಯಲ್ಲಿ ಹುಟ್ಟಿಬರುವ ನೋಟ ಪೂರ್ಣವಾಗಿರುತ್ತೆ ಎಂದು ನಾನು ನಂಬೋದಿಲ್ಲ, ಆ ನಂಬಿಕೆಯಲ್ಲೇ ಆದಷ್ಟು ಜನರಲೈಸ್ ಮಾಡುವುದರಿಂದ, ಹಾಗೆ ಮಾಡುವವರಿಂದ ದೂರವಿರುವ ಪ್ರಯತ್ನವನ್ನು ಬೇಕಾಗಿಯೇ ಮಾಡತೊಡಗುತ್ತೇನೆ.