Thursday, April 09, 2020

ಯಾಕಿಷ್ಟು ಬೇಸರ ಈ ನಿಸರ್ಗಕ್ಕೆ?!

ಛೇ! ಈ ಮಾನವ ಜಾತಿಯೇ ಹೀಗೆ.  ಎಂದೂ ಸಮಾಧಾನ ಚಿತ್ತದ ಪ್ರಾಣಿಯಂತೂ ಅಲ್ಲವೇ ಅಲ್ಲ.   ಬಿಸಿಲಿದ್ದರೆ ಬಿಸಿಲೆಂಬರು, ಛಳಿಯಾದರೆ ಛಳಿಯೆಂಬರು.  ಏನಿಲ್ಲದಿದ್ದರೂ ಶೀತ, ಉಷ್ಣ, ವಾತ, ಪಿತ್ತವೆಂದಾದರೂ ನರಳುತ್ತಲೇ ಇರುವವರು.  ಅತ್ಯಂತ ದುರ್ಬಲವಾಗಿ ಜನಿಸಿ ತನ್ನ ಕೈ-ಕಾಲು ಬಲಿಯುವವರೆಗೂ ಇನ್ನೊಬ್ಬರ ಆಶ್ರಯವಿಲ್ಲದಿದ್ದರೆ ಸತ್ತೇ ಹೋಗುವ ಪ್ರಾಣಿ, ಮುಂದೆ ಇಡೀ ಜಗತ್ತನ್ನೇ ಆಳುವ ದುಸ್ಸಾಹಸವನ್ನು ಮೆರೆದು, ಪ್ರಬಲವಾಗಿ ಹೋರಾಡಿ-ಹಾರಾಡಿ ಮತ್ತೆ ಮಣ್ಣು ಸೇರುವ ಜೀವಿ!  ಮತ್ಯಾವ ಜೀವಿಯೂ ತೋರದ ಕೃತ್ರಿಮತೆ, ಕೃತಕತೆ, ಕೌತುಕ, ಕೋಲಾಹಲ, ಕಪಟತನವನ್ನೆಲ್ಲ ಮೆರೆದು, ತನ್ನ ಇರುವಿಗೇ ಕಳಂಕ ಬರುವಂತೆ ತಾನು ತುಳಿವ ಮಣ್ಣನ್ನೇ ಗೌರವಿಸದ ಸ್ವಾರ್ಥಿ.

***
ನನ್ನ ಮೇಲ್ಮೈಯಲ್ಲಿರುವ ಸಮುದ್ರವನ್ನೆಲ್ಲ ಶೋಧಿಸಿ ತೆಗೆದರು.  ನನ್ನನ್ನು ಆಶ್ರಯಿಸಿದ ಜಲಚರಗಳಿಗೆ ಅನೇಕ ಸಂಕಷ್ಟಗಳನ್ನು ತಂದರು.  ಅನೇಕ ಗುಡ್ಡ-ಬೆಟ್ಟಗಳನ್ನು ಕಡಿದು ನೆಲಸಮ ಮಾಡಿದರು.  ನನ್ನ ಮೈ ಮೇಲೆ ಕಂಗೊಳಿಸುತ್ತಿದ್ದ ವನರಾಶಿಯನ್ನು ಅಳಿಸಿ ಹಾಕಿದರು.  ಅರಣ್ಯವನ್ನು ನಂಬಿಕೊಂಡಿದ್ದ ಜೀವಿಗಳನ್ನು ಸರ್ವನಾಶ ಮಾಡಿದರು.  ಭೂಮಿ, ಸಮುದ್ರ-ಸಾಗರಗಳಲ್ಲಿ ಮಾಡಿದ್ದು ಸಾಲದು ಎಂಬಂತೆ ನಭದಲ್ಲೂ ಅನೇಕ ರೀತಿಯ ಕಾರ್ಖಾನೆಗಳ ಹೊಗೆಯಿಂದ ಉಸಿರುಗಟ್ಟಿಸುವಂತೆ ಮಾಡಿದರು.  ನೆಲದಾಳದಲ್ಲೂ ಇವರ ಶೋಧ ನಿಲ್ಲದೇ, ಅಲ್ಲಿಂದಲೂ ಇಂಧನವನ್ನು ಬಗೆದು ತೆಗೆದರು. ಇವರುಗಳ ಹೊಟ್ಟೆ ತುಂಬುವುದಕ್ಕೆ ಅನೇಕ ಜೀವಿಗಳನ್ನು ತಿಂದು ತೇಗುವುದೂ ಅಲ್ಲದೇ ನಿರ್ನಾಮವನ್ನೂ ಮಾಡಿದರು.  ಕೆಲವು ಜೀವಿಗಳ ಅವಶೇಷವನ್ನು ಹೇಳಹೆಸರಿಲ್ಲದೆ ಹೊಸಕಿ ಹಾಕಿದರು.  ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲ ಕಡೆಯೂ ಇವರ ಸಂತತಿ ಬೆಳೆಯಿತು.  ಎಲ್ಲಿ ಇವರ ಸಂತತಿ ಬೆಳೆಯತೊಡಗಿತೋ, ಅಲ್ಲಿ ಮತ್ಯಾವ ಜೀವಿಗೂ ನೆಲೆಯಿಲ್ಲದಂತಾಯಿತು - ಇವರುಗಳು ಓಡಾಡುವ ದಾರಿಯಲ್ಲಿ ಗರಿಕೆ ಹುಲ್ಲೂ ಬೆಳೆಯದಂತಾಯಿತು!

***
ನನ್ನನ್ನು ನಾನು ಸರಿ ತೂಗಿಸಿಕೊಳ್ಳಬಲ್ಲೆ.  ಇವರ ಆಟ ಹೀಗೇ ಮುಂದುವರೆದರೆ, ಒಂದು ದಿನ ಇವರನ್ನೂ ಇಲ್ಲವಾಗಿಸುವ ಶಕ್ತಿ ನನಗಿದೆ.  ಸಹಬಾಳ್ವೆಯ ಮೂಲ ಮಂತ್ರವನ್ನು ಅರಿತು, ಈ ಹುಲು ಮಾನವರು ಇನ್ನಾದರೂ ಹೊಂದಿಕೊಂಡಾರು.  ಇಲ್ಲವೆಂದರೆ, ಇವರೇ ಮಾಡಿದ ಅಡುಗೆಯನ್ನು ಇವರೇ ಒಂದು ದಿನ ಉಣ್ಣುತ್ತಾರೆ, ಇವರ ಕರ್ಮಗಳಿಗೆ ಸರಿಯಾದ ಬೆಲೆಯನ್ನೇ ತೆತ್ತುತ್ತಾರೆ.

Source: https://www.theworldcounts.com/





No comments: