Tuesday, April 14, 2020

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಸವಿ ನೆನಪುಗಳು ಬೇಕು
ಕವಿ: ಪಿ.ಆರ್. ರಾಮದಾಸ್ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕಿ: ವಾಣಿ ಜಯರಾಂ
ಚಿತ್ರ: ಅಪರಿಚಿತ (1978)




"ಸವಿ ನೆನಪುಗಳು ಬೇಕು" ಈ ಹಾಡನ್ನು ನಾನು ಬಹಳ ವರ್ಷಗಳಿಂದ ಕೇಳುತ್ತಾ ಬಂದಿದ್ದರೂ ನನಗೆ ಈ ಸಿನಿಮಾ ನೋಡಿದ ನೆನಪಿಲ್ಲ.  ದೂರದ ದೇಶಕ್ಕೆ ಬಂದು, ಇಂಟರ್ನೆಟ್ಟಿನಲ್ಲಿ ಹಳೆಯದ್ದನ್ನೆಲ್ಲ ಸೋಸಿ ಜಾಲಾಡುತ್ತಿದ್ದಾಗ ಈ ಹಾಡು ಗಮನಕ್ಕೆ ಬಂತು.  ಈ ಹಾಡಿನಲ್ಲಿ ಬಳಸಿದ ರಾಗ ಯಾವಾಗದರೊಮ್ಮೆ ನನ್ನನ್ನು ಕಾಡುತ್ತಿದ್ದುದೂ ಹೌದು... ಪ್ರತಿ ಸಾರಿ ನಾನು ಈ ಹಾಡಿನ ಸಾಲುಗಳನ್ನು ಕೇಳಿದಾಗ, ಈ ಹೆಣ್ಣಿನ ಪ್ರೀತಿ ಎಷ್ಟೊಂದು ತನ್ಮತೆಯಲ್ಲಿ ಇದ್ದಿರಬಹುದು, ಅದು ದೂರವಾಗಲು ಏನು ಕಾರಣವಿದ್ದಿರಬಹುದು ಅಥವಾ ಈ ಸಿನಿಮಾದ ಕೊನೆಯಲ್ಲಿ ಈ ವಿರಹ ಸುಖಾಂತವನ್ನು ಕಾಣುತ್ತದೆಯೇನೋ ಎಂದೆಲ್ಲ ಪ್ರಶ್ನೆಗಳು ಏಳುತ್ತಿದ್ದವು.  ಇತ್ತೀಚಿನ ಕಾಲದಲ್ಲಿ ದೊರಕದ ಪ್ರೇಮ, ಅಥವಾ ಕೈಗೆಟುಕದ ಪ್ರೀತಿ ಒಂದು ಕಮಾಡಿಟಿ ಇದ್ದಿರಬಹುದೋ ಏನೋ, ಆದರೆ ಈ ಹಾಡಿನ ಗುಂಗನ್ನು ನೋಡಿದರೆ ತನ್ನನ್ನು ಸಂಪೂರ್ಣವಾಗಿ ತನ್ನ ಪ್ರೀತಿಗೆ ಸಮರ್ಪಿಸಿಕೊಂಡು, ಅದು ಕೈಗೆಟುಗದ ಸನ್ನಿವೇಶದಲ್ಲಿ ಆ ನೆನಪುಗಳಿಂದಲೇ ಜೀವನ ತಳ್ಳುವ ನಿರ್ಭರತೆಯನ್ನು ಎದುರಿಸುತ್ತಿರುವ ಒಂದು ಹೆಣ್ಣು ಧ್ವನಿ ವಿಶೇಷವಾಗಿ ಕೇಳಿಬರುತ್ತದೆ.

ಎದೆಯಾಳದ ಆಲಾಪನೆಯೊಂದಿಗೆ ಆರಂಭಗೊಳ್ಳುವ ಈ ಹಾಡಿನ ಗಾಢ ಭಾವನೆ, "ಕಾಡುತಿದೆ ಮನವ" ಎಂಬಲ್ಲಿ ಪರ್ಯಾವಸಾನವಾಗುತ್ತದೆ.  ಆಲಾಪನೆಯ ತದನಂತರ ಅತ್ಯಂತ ಸೂಕ್ಷ್ಮವಾಗಿ ಹಲವಾರು ವಯಲಿನ್‌ಗಳು ನುಡಿದು, ಏನೋ ಒಂದು ರಹಸ್ಯ ಬೇಧನೆಯ ಸಂಕೇತವನ್ನು ನೀಡುತ್ತವೆ.  ಕಥಾನಾಯಕಿಯ ಮನದಾಳದಿಂದ ಬಂದಂಥ ಹಾಡಾದ್ದರಿಂದ, ಚಿತ್ರದ ನಾಯಕಿ ಹಾಡಿನ ಸಾಲಿಗೆ ತಕ್ಕಂತೆ ಯಾವುದೇ ತುಟಿ ಚಲನೆಯನ್ನು ಬಳಸದೇ, ಹಾಡಿನುದ್ದಕ್ಕೂ ಹಿನ್ನೆಲೇ ಸಂಗೀತವೇ ಕಥೆಯನ್ನು ಸುರಳೀತವಾಗಿ ಮುಂದೆಕೊಂಡೊಯ್ಯುವಂತೆ ಚಿತ್ರಣಗಳನ್ನು ಹೆಣೆಯಲಾಗಿದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು


ನಿಜ, ಸವಿ ನೆನಪುಗಳು ಖಂಡಿತ ಬೇಕು...’ಸವಿನೆನಪು" ಎಂದು ಬರೆಯುವಲ್ಲೇ ಕವಿ ಇದು ಸವಿ ನೆನಪಲ್ಲದೇ ಮತ್ತೇನನ್ನೋ ಒಳಗೊಂಡಿದೆ ಎಂಬ ಸೂಕ್ಷ್ಮವನ್ನು ಹೊರಹಾಕುತ್ತಾರೆ.  "ಸವಿಯಲೀ ಬದುಕು" ಎಂಬುದನ್ನು ಈ ಬದುಕನ್ನು ಸವಿಯಲು ಹಾಗೂ ಈ ಬದುಕನ್ನು ಸವೆಯಲೂ ಎಂದು ಅರ್ಥ ಮಾಡಿಕೊಳ್ಳಬಹುದು.  ಅದೇ ರೀತಿ, ಹಾಲಿನ ಪಾತ್ರೆಗೆ ಒಂದು ಹನಿ ಹುಳಿ ಹಿಂಡಿದಂತೆ, ಅಂತಹ ಸವಿಯಾದ ಬದುಕು ಮಾಸಲು ಒಂದೇ ಒಂದು "ಕಹಿ ನೆನಪು" ಸಾಕು...ಈ ಎರಡು ಸಾಲಿನಲ್ಲೇ ಕವಿ ಪೂರ್ಣ ಪದ್ಯದ ಆಳ ಹಾಗೂ ಅಂತಃಸತ್ವವನ್ನು ಹಂಚಿಕೊಂಡಿದ್ದಾರೆ ಎನ್ನಬಹುದು.

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ....
ಕಾಡುತಿದೆ ಮನವ...|


ಒಮ್ಮೆ ಸವಿನೆನಪುಗಳು ಹುಟ್ಟಿದಾಗ ಅವು ಬೆಂಬತ್ತಿ ನಮ್ಮ ದಿನ ಹಾಗೂ ಜೀವಮಾನವನ್ನು ಕಾಡುತ್ತವೆಯೇನೋ ಗೊತ್ತಿಲ್ಲ, ಆದರೆ ಕಹಿ ನೆನಪಿನ ವಿಚಾರಕ್ಕೆ ಬಂದರೆ ಅದೇ ಅದೇ ಮರುಕಳಿಸಿ ಮನಸ್ಸನ್ನ ಕಾಡುವುದನ್ನ ಈ ಎರಡು ಸಾಲುಗಳಲ್ಲಿ ಮೂಡಿಸಲಾಗಿದೆ.  ಈ ಸಾಲಿನ ಕೊನೆಯಲ್ಲಿ ನೀರವ ರಾತ್ರಿಯ ನಿಶ್ಶಬ್ಧವನ್ನು ನೆನಪಿಸುವ ಎರಡು-ಮೂರು ಕ್ಷಣಗಳ ಮೌನ ಕೂಡ ಇದೆ.  ಜೊತೆಗೆ ಇದೇ ನೀರವತೆಯ ಶಬ್ದವನ್ನ ಇಡೀ ಹಾಡಿನ ಉದ್ದಕ್ಕೂ ಹಿನ್ನೆಲೆಯಲ್ಲಿ ಗಮನಿಸಬಹುದು.
ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತೊಮ್ಮೆ ಸವಿ ನೆನಪುಗಳ ಪ್ರಾಶಸ್ತ್ಯವನ್ನು ಪ್ರಸ್ಥಾಪಿಸುತ್ತ ಪಲ್ಲವಿ ಮುಗಿಯುತ್ತದೆ.

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನಾ ಎದೆಗೊರಗಿ ಆಸರೆಯ ಬೇಡಿ|
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ|


ಈ ಚರಣದ ಆರಂಭದಲ್ಲಿ ಪ್ಲೇಫುಲ್ ಹಿನ್ನೆಲೆ ಸಂಗೀತ ಮುಂಬರುವ ಹಳೆಯ ಚಿತ್ರಣಗಳಿಗೆ ನಾಂದಿ ಹಾಡುತ್ತದೆ...ಇದೇ ಸಂದರ್ಭದಲ್ಲಿ ’ಕುಕ್ಕುಕ್ಕುಕ್ಕು" ಎಂದು ಮತ್ತೆ ವಯಲಿನ್‌ಗಳು ಮೊರೆಯ ತೊಡಗಿ ಮತ್ತೇನು ಆತಂಕ ಕಾದಿದೆಯೋ ಎನ್ನುವ ಕಾತುರವನ್ನು ಕೇಳುಗರ ಮನಸ್ಸಿನಲ್ಲಿ ಮೂಡಿಸುತ್ತವೆ.  ಪ್ಲೇಬ್ಯಾಕ್ ಸನ್ನಿವೇಶಗಳಾದ್ದರಿಂದ ಅವೇ ವಯಲಿನ್ನ್‌ಗಳು ಮತ್ತೆ ಪ್ಲೇಫುಲ್ ಸಂಗೀತವನ್ನು ನುಡಿಸಿ, ಹಳೆಯ ಚಿತ್ರಗಳಿಗೆ ಪೂರಕವಾಗುತ್ತವೆ.

"ಪ್ರಿಯತಮನ ಒಲವಿಂದ ಕನಸುಗಳು ಮೂಡಿ" ಎಂದು ಕೇಳುವಾಗ ಓಹ್ ಇದೊಂದು ಸೋತ ಪ್ರೇಮದ ಕಥೆಯೇ ಸೈ ಎಂದು ಕೇಳುಗರು ಕನ್‌ಕ್ಲೂಷನ್‌ಗೆ ಬಂದು ಬಿಡಬಹುದಾದರೂ, ಮುಂದಿನ ಪ್ರಾಸದ ಸಾಲುಗಳು ಕೇಳುಗರ ಕಾತುರತೆಯನ್ನು ಇನ್ನೂ ಜಾಗೃತವಾಗೇ ಇರಿಸಿಕೊಳ್ಳುತ್ತವೆ.  ಆದರೆ, ’ಇನಿಯನಾ ಎದಗೊರಗಿ" ಎಂದು ಗಾಯಕಿ ಎಲ್ಲಿ ತಪ್ಪಾಗಿ ಹೇಳಿದರೇನೋ ಅನ್ನಿಸುವಷ್ಟರಲ್ಲಿ ಸರಸ-ಸವಿ, ವಿರಹ-ವಿಫಲದ ಸಾಲುಗಳು ಕೇಳುಗರನ್ನು ಮತ್ತೆ ಮೋಡಿಗೊಳಗಾಗಿಸಿಕೊಳ್ಳುತ್ತವೆ.  ಈ ಸಾಲುಗಳಲ್ಲಿ ಕವಿ, ಅಂತ್ಯ ಪ್ರಾಸಕ್ಕೆ ಬೆಲೆ ಕೊಡದೆ ಸರಸವನ್ನು ಬಯಸಿದ ಮನ, ವಿರಹಕ್ಕೆ ಕೊರಗುವುದನ್ನು ಎತ್ತಿ ತೋರಿಸಿದ್ದಾರೆ.  ಮತ್ತೆ ಈ ಎರಡು ಸಾಲುಗಳಲ್ಲಿ ಪೂರ್ಣ ಕಥೆಯನ್ನು ಹೆಣೆಯುವ ಚಾಕಚಕ್ಯತೆ!

ಇನಿಯನಾ ಎದೆ ಬಡಿತ ಗುಂಡಿನಾ ದನಿಗೆರೆದೂ
ಮಾಸುತಿದೆ ಕನಸು...|


ಇಲ್ಲಿಯವರೆಗೆ ಟಿಪಿಕಲ್ ಕನ್ನಡ ಪದ್ಯದಂತಿದ್ದದ್ದು, ಎದೆ ಬಡಿತವನ್ನು ಗುಂಡಿನ ದನಿಗೆ ಹೋಲಿಸಿ ಕ್ರಾಂತಿಕಾರಿ ದೇಶಗಳ ಸಾಹಿತ್ಯವನ್ನು ನೆನಪಿಗೆ ತಂದುಕೊಡುತ್ತದೆ.  ಈ ಪದ್ಯವನ್ನು ಅವರು ಈ ಸಿನಿಮಾಕ್ಕಾಗಿಯೇ ಬರೆದರೋ ಅಥವಾ ಭಾವಗೀತೆಯನ್ನು ಈ ಸಿನಿಮಾಕ್ಕೆ ಅಳವಡಿಸಿಕೊಳ್ಳಲಾಗಿದೆಯೋ ಗೊತ್ತಿಲ್ಲ, ಆದರೆ ೧೯೭೮ರ ಕಾಲಕ್ಕಾಗಲೇ ಸ್ವಾತಂತ್ರ್ಯ ಚಳುವಳಿಗಳು ಮುಗಿದು ಗುಂಡಿನ ದನಿ ಆಡಗಿ ದಶಕಗಳೇ ಕಳೆದುಹೋಗಿದ್ದ ಸಮಯ, ಕವಿಯ ಈ ವಿಶ್ಲೇಷಣೆಯನ್ನು ಫ್ರೆಂಚ್ ರೆವಲ್ಯೂಷನ್ ಬಂದ ಸಮಯದ ಸಾಹಿತ್ಯಕ್ಕೆ ಹೋಲಿಸಿದರೆ, ಅಥವಾ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿದ ದೇಶಗಳಲ್ಲಿ ಗಣನೀಯವಾದ ಹೋಲಿಕೆಯಾದೀತೇ ವಿನಾ, ಆಗ ಕರ್ನಾಟಕಕ್ಕೆ ಇನ್ನೂ ಬಂದೂಕಿನ ಕಲ್ಚರ್ ಬಂದಿರಲಿಲ್ಲವಾದ್ದರಿಂದ, ಈ ಸಾಲುಗಳು ವಿಶೇಷವೆನಿಸುತ್ತವೆ...ಹಾಗೆ ಗುಂಡಿನಾ ದನಿಗೆರೆದಂತೆ ಧ್ವನಿಸುವ ಎದೆ ಬಡಿತ ಕನಸನ್ನು ಮಾಸುತ್ತದೆಯೇ ವಿನಾ ನೆನಪನ್ನಲ್ಲ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತು ಆರಂಭವಾಗುವ ಪ್ಲೇಫುಲ್ ಸಂಗೀತ ಮಧುರವಾದ ಹಳೆಯ ನೆನಪುಗಳನ್ನು ಹೊತ್ತು ತರುವ ಬೆನ್ನಲ್ಲಿಯೇ ಭೋರ್ಗರೆಯುವ ವಯಲಿನ್‌ಗಳು ಕರಾಳ ಛಾಯೆಯನ್ನು ಹೊತ್ತು ತರುತ್ತವೆ.

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನಾ ಭೀತಿಯಲಿ ನಾ ಬಂಧಿಯಾಗಿ
ಮನಸೂ ಹೃದಯಾ ನೊಂದು ನೋವಾಗಿದೆ
ಒಲವೂ ನಲಿವೂ ಮೂಡಿ ಮಸಕಾಗಿದೆ|


ಮೇಲಿನ ನಾಲ್ಕು ಸಾಲುಗಳು ಕಾಡುವ ನೋವಿನ ಆಳವನ್ನು ತೋರುತ್ತವೆ, ತಂಗಾಳಿಯೇ ಬೀಸುತ್ತಿದ್ದರೂ ಅದು ಬಿಸಿಯಾಗಿ ಕಾಡುವಂತೆ, ತಮ್ಮ ನೆನಪುಗಳು ತರುವ ಮೌನ, ಒಂಟಿತನ ಹಾಗೂ ಅದರ ಒಂದು ಚೌಕಟ್ಟು ಜೈಲಿನ ಪರ್ಯಾಯ ಭಾವನೆಯನ್ನು ಖಂಡಿತ ಮೂಡಿಸಬಲ್ಲವು.  ಜೊತೆಗೆ ಇದು ಮನಸ್ಸಿನ ವಿಚಾರವಷ್ಟೇ ಅಲ್ಲ, ಹೃದಯದ ವಿಚಾರವೂ ಹೌದು, ಅವುಗಳು ನೊಂದು ನೋವಾಗಿದೆ.  ಎಲ್ಲಕ್ಕಿಂತ ಮುಖ್ಯವಾಗಿ, ಕೊನೆಯ ಸಾಲು ಮತ್ತೆ ಒಲವು-ನಲಿವನ್ನು ನೆನಪಿಸುತ್ತ, ಅದೇ ಸಾಲಿನಲ್ಲೇ ಅಷ್ಟೇ ಬೇಗ ಅವು ಮಸಕಾಗುವಂತೆ ಮಾಡುವಲ್ಲಿ ಮತ್ತೆ ಹಿನ್ನೆಲೆ ಸಂಗೀತದ ವಯಲಿನ್‌ಗಳ ಪಾತ್ರ ಹಿರಿದು.

ಅರಳುವಾ ಹೂವೊಂದು ಕಮರುವಾ ಭಯದಲೀ...
ಸಾಗುತಿದೆ ಬದುಕು|


ಅರಳಿದ ಹೂವು ಕಮರಲೇ ಬೇಕು, ಆದರೆ ಇಲ್ಲಿ ವ್ಯಕ್ತಪಡಿಸಿದ ನೋವಿನ ಹಿನ್ನೆಲೆಯಲ್ಲಿ, ಅರಳಿದ ಹೂವು ತಾನು ಕಮರುವ   ಭಯದಲ್ಲಿ, ತನ್ನ ಅಂತ್ಯವನ್ನು ಕಾಣುವುದೇ ಒಂದು ಪ್ರಯಾಣವಾಗುವ ಬದುಕು ಸಾಗುತ್ತಿದೆ ಎಂದು ಕವಿ ವೇದ್ಯವಾಗಿ ಹೇಳಿದ್ದಾರೆ.  "ಕಮರುವಾ ಭಯದಲೀ..." ಎಂದು ಎಳೆದಿರುವುದು ಆ ಕಥಾ ನಾಯಕಿಯ ನೋವು ಅದೆಷ್ಟು ಗಾಢವಾದದ್ದು ಎಂದು ಎಂಥವರೂ ಚಿಂತಿಸುವಂತೆ ಮಾಡುತ್ತದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ
ಕಾಡುತಿದೆ ಮನವ...|


ಸವಿ ನೆನಪುಗಳು ಬೇಕು... ಸವಿಯಲೀ ಬದುಕು...'

ಕೇವಲ ನಾಲ್ಕೂವರೆ ನಿಮಿಷಗಳಲ್ಲಿ ಈ ಹಾಡಿನಲ್ಲಿ ಬಳಸಲಾದ ರಾಗ ನಿಮ್ಮ ಮನವನ್ನು ಮಣ ಭಾರ ಮಾಡಬಲ್ಲುದು.  ಸಾಹಿತ್ಯ ಮತ್ತು ಸಂಗೀತದ ಮೇಳ ಬಹಳ ಚೆನ್ನಾಗಿದ್ದು, ಹಿನ್ನೆಲೆಯಲ್ಲಿ ಮೂಡುತ್ತಲೇ ತೆರೆಯ ಮೇಲೆ ಬರುವ ಡಿಸ್ಕ್ರೀಟ್ ಚಿತ್ರಗಳಿಗೆ ಪೂರಕವಾಗಿವೆ.  ಈ ಹಾಡನ್ನು ನೀವು ಚಿತ್ರಗಳ ಸಹಾಯವಿಲ್ಲದೆಯೇ ಕೇಳಬಹುದು, ಅಲ್ಲದೇ ಮಧ್ಯೆ ಮಧ್ಯೆ ಕೇಳುವ ಕರಾಳ ರಾತ್ರಿಯ ಶಬ್ದ, ಆಗಾಗ ಮೊರೆಯುವ ವಯಲಿನ್ನುಗಳ ಟೆಕ್ನಿಕ್ ನಿಮ್ಮನ್ನ ಮಂತ್ರ ಮುಗ್ಧರನ್ನಾಗಿಸುವರಲ್ಲಿ ಸಂಶಯವಿಲ್ಲ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

2 comments:

sunaath said...

ಸತೀಶರೆ, ಹಾಡಿಗೆ ನೀವು ಬರೆದ ವಿವರಣೆ ಹಾಗು ಕೊನೆಯಲ್ಲಿ ನೀಡಿದ ಯು-ಟ್ಯೂಬ್ ಗಾಯನ ಸೊಗಸಾಗಿವೆ. ಧನ್ಯವಾದಗಳು.

sunaath said...
This comment has been removed by the author.