ಒಂದು ತಪ್ಪಿನ ಹಿಂದೆ ಮತ್ತೊಂದಾಗದಿರಲಿ...
ಅಮೇರಿಕನ್ ಮಾಧ್ಯಮಗಳು ಒಂದೊಂದಾಗಿ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿವೆಯೇನೋ ಎನ್ನುವ ರೀತಿಯಲ್ಲಿ ಪ್ರಸ್ತುತ ಇರಾಕ್ ಪರಿಸ್ಥಿತಿಯನ್ನು 'ಸಿವಿಲ್ ವಾರ್' ಎಂದು ಕರೆಯಲು ಆರಂಭಿಸಿದ್ದು ಬಹಳ ಒಳ್ಳೆಯ ಸೂಚನೆ. ರಿಪಬ್ಲಿಕನ್ ಪಕ್ಷ ಹಾಗೂ ಬುಷ್ ಆಡಳಿತ ಇರಾಕ್ ಸ್ಥಿತಿಯನ್ನು ಸಿವಿಲ್ ವಾರ್ ಎಂದು ಕರೆಯಲು ಯಾವತ್ತೂ ಒಪ್ಪೋದಿಲ್ಲ ಹಾಗೇನಾದರೂ ಮಾಡಿದರೆ ಅದು ಅವರ ಪಾಲಿಸಿಗಳು ಸೋತದ್ದಕ್ಕೆ ನಿದರ್ಶನವಾಗಿ ಎಲ್ಲಿ ಜನಮತವನ್ನು ಕಳೆದುಕೊಳ್ಳಬಹುದೋ ಎಂಬ ಹೆದರಿಕೆ ಇದ್ದಿರಬಹುದು. ಈಗ ಮಧ್ಯಂತರ ಚುನಾವಣೆಗಳು ನಡೆದು ಆಡಳಿತದಲ್ಲಿ ಪಕ್ಷಗಳು ಸ್ಥಾನಪಲ್ಲಟ ಮಾಡಿದನಂತರ ನಿಧಾನವಾಗಿ ಕಣ್ಣುಬಿಟ್ಟು ನೋಡುತ್ತಿರುವ ಅಮೇರಿಕನ್ ಮಾಧ್ಯಮಗಳ ಸ್ಥಿತಿಗತಿ ಕೊನೆಗೂ ಅವರು ಇದ್ದದ್ದನ್ನು ಇದ್ದಹಾಗೆ ಹೇಳುವ ಧೈರ್ಯ ತೋರಿದರಲ್ಲ ಎಂದು ನಿರಾಳವಾಯಿತು. ಆದರೆ ಇಂದಿಗೂ ಇಲ್ಲಿನ ಮಾಧ್ಯಮಗಳಲ್ಲಿ ಒಂದು ಅಂದಾಜಿನ ಪ್ರಕಾರ ದಿನಕ್ಕೆ ಮೂರು ಜನ ಸಾಯುವ ಅಮೇರಿಕನ್ ಸೈನಿಕರ ಸಂಖ್ಯೆಗಳಿಗೇ ಹೆಚ್ಚು ಮಹತ್ವ ಸಿಗುತ್ತದೆಯೇ ಹೊರತು, ಪ್ರತಿದಿನ ಸಾಯುವ ನೂರಾರು ಇರಾಕೀ ನಾಗರಿಕರ ಜೀವಗಳಿಗೆ ಅಷ್ಟೊಂದು ಮಹತ್ವ ಸಿಗುತ್ತಿಲ್ಲ.
ನನ್ನ ಮೂಗಿನ ನೇರದಲ್ಲಿ ಈ ಇರಾಕ್ ಹತ್ಯಾಕಾಂಡಕ್ಕೆ ಕೊನೆ ಇಲ್ಲವೇ ಎಂದು ಯೋಚಿಸಿದಾಗ ಹಲವಾರು ಉತ್ತರಗಳು ಕಣ್ಣಮುಂದೆ ಬಂದು ಹೋಗುತ್ತವೆ, ಒಂದಿಷ್ಟು ಉತ್ತರಗಳು ಹುಟ್ಟುಹುಟ್ಟುತ್ತಲೇ ಸಾಯುತ್ತವೆ, ಮತ್ತೊಂದಿಷ್ಟು ಬಹಳ ಸುಲಭ ಉತ್ತರಗಳಾಗಿ ಕಂಡುಬಂದು ದೇಶವನ್ನು ಆಳುವ ಅತಿರಥ-ಮಹಾರಥರಿಗೆ ಗೊತ್ತಿಲ್ಲವೇನು ಎಂದು ಅನುಮಾನ ಹುಟ್ಟುತ್ತದೆ. ಜೊತೆಯಲ್ಲಿ ಇಲ್ಲಿನ ಯಾವುದೇ ಪಕ್ಷ ಅಥವಾ ವ್ಯಕ್ತಿಗಳನ್ನು ಅನುಮೋದಿಸದ ನಾನು ಕೊಡುವ ಉತ್ತರ ಬಹಳಷ್ಟು ಜನರಿಗೆ ಪ್ರಿಯವಾಗಲಾರದು.
ಅಮೇರಿಕದವರು ಇರಾಕ್ ದೇಶವನ್ನು ಆಕ್ರಮಣ ಮಾಡಿದ್ದು ಯಾವುದೇ ಕಾರಣಕ್ಕಾಗಿಯಾದರೂ ಇರಲಿ ಅದನ್ನು ಕೆದಕಿ ನೋಡುವುದನ್ನು ಇತಿಹಾಸಕಾರರಿಗೆ ಬಿಟ್ಟರೆ, ನಾನು ಮುಂದೆ ಆಗಿ ಹೋಗಬಹುದಾದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಸಮೀಕರಣವನ್ನು ಪ್ರಸ್ತುತಪಡಿಸಿದರೆ ಹೇಗೆ ಎಂದುಕೊಳ್ಳುತ್ತೇನೆ:
- ಅಮೇರಿಕನ್ ಹಾಗೂ ಅಂತಾರಾಷ್ಟ್ರೀಯ ಪಡೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚು ಮಾಡುವುದು. ಈಗ ಸುಮಾರು ೧೨೦,೦೦೦ ರಷ್ಟು ಇರುವ ಅಮೇರಿಕನ್ ಸೈನಿಕರನ್ನು ಕೊನೇ ಪಕ್ಷ ಏನಿಲ್ಲವೆಂದರೂ ೨೦೦,೦೦೦ ರಷ್ಟು ಏರಿಸುವುದು ಜೊತೆಯಲ್ಲಿ ಶಾಂತಿ ಸಾರುವ ಪ್ರಪಂಚದ ಎಲ್ಲ ದೇಶಗಳಿಂದಲೂ ಸೈನಿಕರ ತುಕಡಿಯನ್ನು ಕಳಿಸುವಂತೆ ಮನವಿ ಮಾಡಿಕೊಳ್ಳುವುದು.
- ಇರಾಕ್ನಲ್ಲಿ ಈಗಾಗಲೇ ಅಧಿಕಾರಕ್ಕಿರುವ ಸರ್ಕಾರವನ್ನು ಗೌರವಿಸಿ, ಸ್ಥಳೀಯ ಪೋಲೀಸ್ ಹಾಗೂ ಸೈನಿಕ ಪಡೆಗಳನ್ನು ಕೇವಲ್ ಆಂತರಿಕ ಭದ್ರತೆಗಳನ್ನು ನೋಡಿಕೊಳ್ಳುವಂತೆ ಅನುಕೂಲಮಾಡಿಕೊಡುವುದು. ಇರಾಕೀ ಪೋಲೀಸ್ ಹಾಗೂ ಸೈನಿಕರಲ್ಲಿ ನಡೆಯುವ ಭ್ರಷ್ಟಾಚಾರ ಅಲ್ಲಿಯ ಭಯೋತ್ಪಾದಕರನ್ನು ಪೋಷಿಸುತ್ತಿರುವುದು ನಿಜ, ಆದ್ದರಿಂದ ಮುಖ್ಯವಾದ ಎಲ್ಲ ರಕ್ಷಣಾ ವ್ಯವಸ್ಥೆಗಳನ್ನು ಅಂತಾರಾಷ್ಟ್ರೀಯ ಮಿಲಿಟರಿ ವ್ಯವಸ್ಥೆಗೆ ಹಸ್ತಾಂತರ ಮಾಡುವುದು.
- ಹಾಡುಹಗಲೇ, ಊರು ಅಥವಾ ರಸ್ತೆಗಳ ಮಧ್ಯ ಸುಳ್ಳು ಚೆಕ್ಪಾಯಿಂಟುಗಳನ್ನು ಸೃಷ್ಟಿಸಿ ಜನರನ್ನು ಹೀನಾಯಮಾನವಾಗಿ ಹಿಂಸಿಸಿ ಕೊಲೆಗಯ್ಯುತ್ತಿರುವ ಕಟುಕರನ್ನು ಅವರಷ್ಟೇ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕುವುದು. ಎಕ್ಸಿಕ್ಯೂಷನ್ ಶೈಲಿಯಲ್ಲಿ ಅಮಾಯಕರನ್ನು ಕೇವಲ ಶಿಯಾ-ಸುನ್ನಿ ಎಂಬ ಬೇಧಭಾವದಿಂದ ಕೊಲೆಗಯ್ಯುತ್ತಿರುವವರನ್ನು ಹೊಸಕಿ ಹಾಕುವುದಲಾದರೂ ಮುಂದೆ ಜನರು ಹಣಕ್ಕೋಸ್ಕರ ಅಥವಾ ಮತ್ಯಾವುದೇ ಕಾರಣಗಳಿಗೋಸ್ಕರ ಈ ಕೆಟ್ಟ ಹಾದಿಯನ್ನು ಹತ್ತುವುದು ಕಡಿಮೆಯಾಗಬಹುದು.
- ಹೆಚ್ಚಿದ ಅಂತಾರಾಷ್ಟ್ರೀಯ ಪಡೆಗಳು ಕೇವಲ ನಾಡನ್ನು ಕಾಯ್ದುಕೊಂಡರೆ ಸಮಸ್ಯೆ ಬಗೆ ಹರಿಯೋದಿಲ್ಲ, ಇರಾಕ್ ದೇಶದ ಗಡಿಯನ್ನು ಕೂಡ ಅಷ್ಟೇ ಜಾಗರೂಕರಾಗಿ ಕಾಯ್ದುಕೊಳ್ಳಬೇಕು. ಇರಾಕಿನವರಿಗೆ ಎಲ್ಲಿಂದ ಆಯುಧಗಳ ಸಪ್ಲೈ ಬರುತ್ತದೆಯೋ ಅಂತಹ ಮೂಲಗಳನ್ನು ಹುಡುಕಿ ಹೊಸಕಿ ಹಾಕಬೇಕು. ಹೆಚ್ಚಿನ ಮೂಲಗಳು ಇರಾನ್ ಅಥವಾ ಜೋರ್ಡಾನ್ ದೇಶಗಳನ್ನು ಸೂಚಿಸಿದ್ದೇ ಆದಾಗ ಅಂತಾರಾಷ್ಟ್ರೀಯ ಒತ್ತಡವನ್ನು ಈ ದೇಶಗಳ ಮೇಲೆ ಹೇರಿದಾಗ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾದೀತು.
- ಈಗಾಗಲೇ ಅದೋಗತಿಯನ್ನು ತಲುಪಿದ ಇರಾಕ್ ದೇಶದ ನಗರ ಪಟ್ಟಣಗಳಲ್ಲಿ ನಿರಂತರವಾಗಿ ರಾತ್ರಿ ಹಾಗೂ ಹೆಚ್ಚಿನ ಭಾಗ ಹಗಲು ಕರ್ಪ್ಯೂವನ್ನು ಮುಂದುವರಿಸುವುದು. ಎಲ್ಲಿಯವರೆಗೆ ಜನರ ಸಾವುನೋವುಗಳು ಕಡಿಮೆಯಾಗೋದಿಲ್ಲವೋ ಅಲ್ಲಿಯವರೆಗೆ ದಿನದಲ್ಲಿ ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಜನರ ಓಡಾಟವನ್ನು ನಡೆಯಲು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಅಂತಾರಾಷ್ಟ್ರೀಯ ಪಡೆಗಳು ನಗರ ಪಟ್ಟಣಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಳ್ಳುವಂತೆ ಮಾಡುವುದು. ಇದರಿಂದಾಗಿ ಅಳಿದುಳಿದ ಜನರಿಗೆ ಸಾಕಷ್ಟು ತೊಂದರೆಯಾಗೋದಂತೂ ನಿಜ, ಆದರೆ ಅವ್ಯಾಹತವಾಗಿ ಬೆಳೆಯುತ್ತಿರುವ ಹಿಂಸೆಯನ್ನು ತಡೆಯಲು ಬೇರೆ ಯಾವ ದಾರಿಯೇ ಇಲ್ಲ ಎನ್ನುವಂತಾಗಿದೆ.
- ಇರಾಕ್ ನಾಗರಿಕರಿಗೆ ಈಗಾಗಲೇ ಸಾಕಷ್ಟು ತೊಂದರೆಗಳು ಒಂದರ ಹಿಂದೆ ಒಂದಾಗಿ ಬಂದಿರೋದರ ಹಿನ್ನೆಲೆಯಲ್ಲಿ ಅವರು ಇಟ್ಟುಕೊಂಡಿರುವ ವಾಹನಗಳ ಉಪಯೋಗವನ್ನು ಮಿತಿಗೊಳಿಸಬೇಕಾಗಿ ಬರಬಹುದು. ಭಯೋತ್ಪಾದಕರನ್ನು ಹತ್ತಿಕ್ಕಲು ಅವರನ್ನು ನಿಯಂತ್ರಿಸಲು ನಗರ ಹಾಗೂ ಪಟ್ಟಣಗಳಲ್ಲಿ ಹಾದು ಹೋಗುವ ಪ್ರತಿಯೊಂದು ವಾಹನವನ್ನೂ ತಪಾಸಣೆಗೊಳಿಸುವುದು. ಈ ಹೆದರಿಕೆಯಿಂದಲಾದರೂ ಜನರು ಆಯುಧಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದು ತಪ್ಪುತ್ತದೆ. ತಮ್ಮ ಆತ್ಮರಕ್ಷಣೆಗೆಂದು ಒಂದು ರಿವಾಲ್ವರ್ ಅನ್ನು ಇಟ್ಟುಕೊಳ್ಳುವುದು ಬೇರೆ, ನೂರಾರು ಅಮಾಯಕರನ್ನು ಒಂದೇ ನಿಮಿಷದಲ್ಲಿ ಸಾಯಿಸುವ ಎಕೆ ೪೬ ಅನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಬೇರೆ.
- ಅಮೇರಿಕದವರು ತಮ್ಮ ಮಿತಿಯನ್ನು ಒಪ್ಪಿಕೊಂಡು ಹೆಚ್ಚಿದ ಅಂತಾರಾಷ್ಟ್ರೀಯ ಪಡೆಗಳೊಂದಿಗೆ ಸಹಕರಿಸುವುದು ಹಾಗೂ ಬಾಗ್ದಾದ್ನಲ್ಲಿ ಇರುವ ಗ್ರೀನ್ ಝೋನ್ ಅನ್ನು ನಿಧಾನವಾಗಿ ವಿಸ್ತರಿಸುವುದು.
ಈ ಮೇಲಿನ ಅಂಶಗಳಲ್ಲಿ ಕೆಲವು ಬಾಲಿಶವಾಗಿ ಕಂಡುಬರಬಹುದು ಅಥವಾ ಪ್ರಾಯೋಗಿಕವಲ್ಲದವುಗಳಾಗಿ ಗೋಚರಿಸಬಹುದು, ಆದರೆ ಇರಾಕ್ ದೇಶದಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನಗಳಿವೆ, ಅವುಗಳ ನಡುವೆ ದೇಶದ ಒಳಿತಿಗೋಸ್ಕರ, ಅಳಿದುಳಿದ ನಾಗರಿಕರ ರಕ್ಷಣೆಗೋಸ್ಕರ ಕೆಲವು ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುವುದು ಅನಿವಾರ್ಯ ಎನ್ನುವಂತಾಗಿರುವುದರಿಂದ ಹೀಗೆ ಬರೆಯಬೇಕಾಯಿತು. ಇರಾಕ್ ದೇಶ ಮೊದಲಿನ ಹಾಗಿಲ್ಲ, ಈಗಾಗಲೇ ಚೂರು-ಚೂರಾಗಿ ಹೋಗಿದೆ. ಜನರು ತಮ್ಮ ತಮ್ಮ ವ್ಯವಸ್ಥೆಯನ್ನು ತಾವೇ ನೋಡಿಕೊಂಡು ಲೋಕಲ್ ಮಿಲಿಷಿಯಾಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿಕೊಂಡು ತಮ್ಮ ರಕ್ಷಣೆಯನ್ನು ಕಾಯ್ದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ಬೇಕಾದಷ್ಟು ರೀತಿಯಲ್ಲಿ ದೇಶ ಹಾಗೂ ಜನರು ಇಬ್ಬಾಗವಾಗಿ ಹೋಗಿದ್ದಾರೆ. ಇರಾಕೀ ಸರ್ಕಾರದ ಬಗ್ಗೆ, ಇಂತಹ ಸರ್ಕಾರ ತಮ್ಮನ್ನು ಕಾಯುವ ಬಗ್ಗೆ ಯಾರಿಗೂ ನಂಬಿಕೆ ಎನ್ನುವುದೇನೂ ಉಳಿದಿಲ್ಲ. ಹೀಗಿರುವಲ್ಲಿ ಅಮೇರಿಕದ ಪಡೆಗಳು ಹಿಂತಿರುಗೇನಾದರೂ ಹೋದರೆ ಇರಾಕ್ನಂತಹ ದೇಶ ನಾಗರಿಕತೆಯಲ್ಲಿ ಎಷ್ಟೋ ಶತಮಾನಗಳ ಕಾಲ ಹಿಂದುಳಿದು ಬಿಡುತ್ತದೆ, ನಾಗರಿಕತೆಯನ್ನು ನಾಶಮಾಡುವ ಎಲ್ಲ ಅಮಾನವೀಯ ಶಕ್ತಿಗಳು ತಾಂಡವವಾಡಲು ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲೇ ಪ್ರಪಂಚದ ಎಲ್ಲ ದೇಶಗಳು ಇರಾಕ್ ಪರವಾಗಿ ನಿಂತು ದುಡಿಯುವ ಅಗತ್ಯವಿದೆ. ಅಕಸ್ಮಾತ್ ಹಾಗೇನಾದರೂ ಆಗದೇ ಹೋದಲ್ಲಿ ಇತಿಹಾಸ ಒಂದು ನಾಗರಿಕತೆಯನ್ನು ಸಂಪೂರ್ಣವಾಗಿ ನಾಶಮಾಡಿದ ಹೊಣೆ ನಮ್ಮೆಲ್ಲರ ಮೇಲೆ ನಿರ್ಧಾಕ್ಷಿಣ್ಯವಾಗಿ ಹೇರುವ ಕಾಲ ದೂರವೇನೂ ಇಲ್ಲ.
ತಪ್ಪುಗಳಾಗೋದು ಸಹಜ, ಅದನ್ನು ತಿದ್ದಿಕೊಂಡು ಮುಂದೆ ನಡೆಯೋದು ಮುಖ್ಯ. ಅಮೇರಿಕದವರು ತಾವು ಮಾಡಿದ ತಪ್ಪಿಗೆ ದಂಡ ತೆರುವುದು ಇದ್ದೇ ಇದೆ, ಇರಾಕ್ ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ವಿಶ್ವ ನ್ಯಾಯಾಂಗ ಈ ಕರ್ಮಕಾಂಡವನ್ನು ಸೃಷ್ಟಿಸಿದವರ ಹಿಂದೆ ಬೀಳಬೇಕು, ಅಂತಹವರನ್ನು ಕಟಕಟೆಗೆ ಹತ್ತಿಸಬೇಕು. ಆದರೆ ಈಗ ಮುಖ್ಯವಾಗಿ ಆಗಬೇಕಾಗಿರೋದು ಒಂದು ನಾಗರಿಕತೆಯನ್ನು ಉಳಿಸುವ ಬೆಳೆಸುವ ಪ್ರಾಮಾಣಿಕ ಪ್ರಯತ್ನ, ಅದಿಲ್ಲವೆಂದಾರೆ ಒಂದು ತಪ್ಪಿನ ಹಿಂದೆ ಮತ್ತೊಂದು ತಪ್ಪಾಗುವ ದಿನಗಳು ದೂರವೇನೂ ಇಲ್ಲ, ಹಾಗಾಗದಿರಲಿ.