Monday, April 15, 2024

ಒಂದು ಬಿಂದು

ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು.  ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು!

ಈ ಅರಿವು ಮೂಡಿದ್ದು ಇತ್ತೀಚೆಗೆ, ನಾನು ಸಮುದ್ರದ ತಟದಲ್ಲಿ ನಿರಂತರವಾಗಿ ಕಾಲಿಗೆ ಬಂದು ರಾಚುತ್ತಿದ್ದ ಅಲೆಗಳ ಮಡಿಲಿನಿಂದ, ಬೊಗಸೆಯಲ್ಲಿ ನೀರನ್ನು ಮೊಗೆದು, ಸೂರ್ಯನಿಗಭಿಮುಖವಾಗಿ ವಿಸರ್ಜಿಸುತ್ತಿರುವಾಗ, ಕೊನೆಯಲ್ಲಿ ಉಳಿದ ಹನಿಗಳು ತಮ್ಮೊಳಗಿನ ಹೊಸದೊಂದು ಪ್ರಪಂಚವನ್ನೇ ತೋಡಿಕೊಂಡವು.

ಅಬ್ಬಾ! ಈ ಒಂದೊಂದು ಹನಿಯೂ ತನ್ನೊಳಗೆ ಅಪಾರವಾದ ಸಾಗರವನ್ನೇ ಹೊತ್ತಿಕೊಂಡಿದೆಯಲ್ಲಾ! ಸಣ್ಣ ಗಾಳಿಗೆ ಅದುರಿ ಹೋಗುವಂತೆ ಇರುವ ಹನಿಯ ಅಂತರಾಳದಲ್ಲಿ ಯಾವ ದರ್ಪವೂ ಕಾಣಲಿಲ್ಲ. ಆದರೆ, ಹತ್ತಿರದಲ್ಲೇ ಮೊರೆಯುತ್ತಿದ್ದ ಮಾತೃ ಹೃದಯದಿಂದ ದೂರವಾಗಿದ್ದಕ್ಕೆ ಅದರಲ್ಲಿ ಅಳುಕು ಮೂಡಿದಂತೆ ಕಾಣಿಸಿತು. ತನ್ನ ಮೇಲೆ ಬಿದ್ದ ಸೂರ್ಯನ ಕಿರಣಗಳ ದೆಸೆಯಿಂದ ಈ ಹನಿಗಳಿಗೂ ಕಣ್ಣಿರುವಂತೆ ಗೋಚರಿಸಿತು.

ಹೀಗೆ, ಮಹಾ ನೀರಿನಿಂದ ಬೇರೆಯಾಗಿ ಮರಳನ್ನು ಸೇರಿಯೋ, ಅಥವಾ ಹವೆಯಲ್ಲಿಯೇ ಲೀನವಾಗಿ ಮತ್ತೊಮ್ಮೆ ಮೋಡವಾಗಿ-ಮಳೆಯಾಗಿ ಇಳೆಯನ್ನು ಸೇರುವ ತವಕ ನೀರಿನ ಪ್ರತಿ ಹನಿಹನಿಯಲ್ಲಿಯೂ ಇರುವುದು ಸಹಜವೇ ಹೌದು.  ಆದರೆ, ಈ ಮಹಾ ನೀರಿನಿಂದ ಪ್ರತ್ಯೇಕಗೊಂಡ, ಆ ಸಣ್ಣ ಹನಿ, ಕೊಂಚ ಮಟ್ಟಿಗೆ ಹೆದರಿಕೊಂಡಿದ್ದಾದರೂ ಏಕಿರಬಹುದು? ನೀರು ಎಂದರೆ ಒಂದು ರೀತಿಯ ಶಕ್ತಿ, ಈ ಅಗಾಧವಾದ ಶಕ್ತಿಯಿಂದ ಬೇರ್ಪಟ್ಟು, ಮತ್ತೆ ಅದನ್ನು ಸೇರುವ ಹೊತ್ತಿಗೆ ಅದೆಷ್ಟು ಜನ್ಮಗಳನ್ನು ತಳೆದು, ರೂಪಗಳಲ್ಲಿ ಲೀನವಾಗಿ, ಕಾಡು-ಮೇಡುಗಳನ್ನು ತಿರುಗಿ, ಅನುಭವಿಸಬಾರದ್ದೆನ್ನೆಲ್ಲ ಅನುಭವಿಸಿ ಮತ್ತೆ ಸಮುದ್ರವನ್ನು ಸೇರುವುದು ಎಂದೋ, ಏನೋ, ಹೇಗೆಯೋ... ಎಂಬ ಆತಂಕದಿಂದ ಇರಬಹುದೇ?

ಈ ಒಂದೊಂದು ನೀರಿನ ಬಿಂದುವೂ ಒಂದೊಂದು ಆತ್ಮದ ಹಾಗೆ. ಅದು ಪ್ರತಿ ಜನ್ಮಕ್ಕೊಮ್ಮೆ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗಿ, ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸೇರಿಕೊಂಡು, ಎಲ್ಲಿಯೂ ಸಮಾಧಾನಿಯಾಗಿರದೇ, ಮತ್ತೆ ಅಗಾಧವಾದ ಕಡಲನ್ನು ಸೇರುವ ತವಕದಲ್ಲಿಯೇ ಬಿರುಗು ಕಣ್ಣನ್ನು ಬಿಟ್ಟಂತೆ ಇರುವ ಅತಂತ್ರ ಜೀವಿ! ಪ್ರತಿಯೊಂದು ಹನಿಯಲ್ಲಿಯೂ ಜೀವವಿದೆ, ಸಾಗರದ ಅಷ್ಟೂ ನೀರಿನ ಸತ್ವವನ್ನು ಒಂದೇ ಒಂದು ಬಿಂದುವಿನಲ್ಲಿ ಹಿಡಿದಿಟ್ಟುರುವ ಹಾಗೆ, ಇದರಲ್ಲಿ ಎಲ್ಲ ಗುಣಗಳೂ ಇವೆ.

ನೀರಿನಿಂದ ಬೇರ್ಪಟ್ಟ ಈ ಹನಿಗಳು, ತಮ್ಮ ಪಯಣದುದ್ದಕ್ಕೂ ಒಂದೇ ರೀತಿ ಇರುತ್ತವೆ ಎಂದೇನೂ ಹೇಳಲಾಗದು. ಕೆಲವು ಅಲ್ಲಿಯೇ ಬಿದ್ದು ಮತ್ತೆ ಸಾಗರವನ್ನು ಸೇರಿದರೆ, ಇನ್ನು ಕೆಲವು ಹಲವಾರು ಜನ್ಮಗಳನ್ನು ತಳೆದ ಮೇಲೂ, ಹಿಂತಿರುಗಲು ಒದ್ದಾಡುವ ಹಪಾಹಪಿಗಳಾಗೇ ಇನ್ನೂ ಕಂಡು ಬರುತ್ತವೆ.

***

ತಿಳಿಯಾದ ಕೊಳದಲ್ಲಿ ಕಲ್ಲೊಂದನ್ನು ಹಾಕಿದರೆ, ವೃತ್ತಾಕಾರಗಳಲ್ಲಿ ಸಣ್ಣ ಅಲೆಗಳು ಎದ್ದು, ಅದೆಷ್ಟು ಬೇಗ ದಡವನ್ನು ಸೇರಿಯೇವೋ ಎಂದು ದಾವಂತದಲ್ಲಿ ಹರಡುವುದನ್ನು ನೀವು ನೋಡಿರಬಹುದು. ಆದರೆ, ಸಮುದ್ರ, ಅಥವಾ ಮಹಾಸಾಗರದ ನೀರಿನಲ್ಲಿ ಕಲ್ಲೊಂದನ್ನು ಹಾಕಿ, ಅದು ಯಾವ ರೀತಿಯ ಕಂಪನ/ತಲ್ಲಣಗಳನ್ನು ಅಲೆಯಾಕಾರದಲ್ಲಿ ಮೂಡಿಸುತ್ತದೆ ಎಂದು ಯೋಚನೆ ಮಾಡಬೇಕಾಗುತ್ತದೆ. ಸಮುದ್ರದಲ್ಲಿ ಹಾಕಿದ ಕಲ್ಲು, ಅಗಾಧವಾದ ಸಾಗರದ ಆಂತರ್ಯದಲ್ಲಿ ಅಲ್ಲೋಲ ಕಲ್ಲೋಲಗಳನ್ನು ಉಂಟು ಮಾಡುವುದರಲ್ಲಿ ಸೋತು ಹೋಗುತ್ತದೆ.

Image Source: https://www.usgs.gov/media/images/all-earths-water-a-single-sphere

ಈ ಪೃಥ್ವಿಯ ಬಹುಭಾಗ (71%) ನೀರಿನಿಂದಲೇ ಮುಚ್ಚಿಕೊಂಡಿದೆಯಂತೆ. ಉಳಿದ ಗ್ರಹಗಳಿಗೆ ಹೋಲಿಸಿದಾಗ ಭೂಮಿಯ ಮೇಲಿನ ನೀರಿನಿಂದಲೇ ಅದಕ್ಕೊಂದು ಶಕ್ತಿ ಮತ್ತು ಚೈತನ್ಯ ಬಂದದ್ದಲ್ಲವೇ?

ನನ್ನ ಪ್ರಕಾರ, ಪಂಚಭೂತಗಳಲ್ಲಿ ನೀರಿಗೆ ಹೆಚ್ಚಿನ ಮಹತ್ವ ಇರಬೇಕು. ಇನ್ನುಳಿದ ಗಾಳಿ, ಅಗ್ನಿ, ಆಕಾಶ, ಮತ್ತು ಭೂಮಿಯ ಸಣ್ಣ ಸಣ್ಣ ತುಂಡುಗಳಲ್ಲಿನ ಮಹತ್ವ ಈ ಒಂದು ನೀರಿನಷ್ಟು ಇರಲಾರದು. ಗಾಳಿ ಎಲ್ಲ ಕಡೆಗೂ ಒಂದೇ ರೀತಿ ಇರಬೇಕೆಂದೇನೂ ಇಲ್ಲ. ಬೆಂಕಿ ಎಲ್ಲ ಕಡೆಗೂ ಒಂದೇ ರೀತಿ ಕಂಡರೂ, ಅದು ನೀರಿನ ಹನಿಯಂತೆ ಪಯಣಿಸಲಾರದು. ಇನ್ನು ಆಕಾಶ ಅನಂತವೂ, ಅಪರಿಮಿತವೂ ಆಗಿರುವುದಾದರೂ, ಅದನ್ನು ಚಿಕ್ಕ ಹನಿಯ ಗಾತ್ರದಲ್ಲಿ ನಾವೆಂದೂ ಊಹಿಸಿಕೊಳ್ಳಲಾರೆವು. ನಿಜವಾಗಿಯೂ ನಿಮಗೆ ಸಮುದ್ರದ ಶಕ್ತಿ ಎಲ್ಲವೂ ಅಲ್ಲಿನ ಒಂದೊಂದು ಹನಿಯಲ್ಲಿಯೂ ಸಮನಾಗಿ ಹಂಚಿಕೊಂಡಿದೆ ಎಂದರೆ ನಂಬಲಿಕ್ಕೆ ಅಸಾಧ್ಯವಾದರೂ, ಅದು ನಿಜವೇ!

***

ಕೊಳದ ನೀರಿಗೂ, ಕೆರೆಯ ನೀರಿಗೂ, ಸರೋವರದ ನೀರಿಗೂ, ದೊಡ್ಡ ಜಲಾಶಯಗಳಲ್ಲಿ ಶೇಖರಣೆಗೊಂಡ ನೀರಿಗೂ, ಪುಷ್ಕರಣಿಯಲ್ಲಿ ಸಿಕ್ಕಿಕೊಂಡ ನೀರಿಗೂ, ತಮ್ಮ ತಮ್ಮದೇ ಆದ ಒಂದು ನಿಲುವು, ಅಥವಾ ಮನೋಭಾವ (attitude) ಇದೆ. ಹಾಗೆಯೇ, ಸಮುದ್ರ, ಸಾಗರ, ಮಹಾಸಾಗರದ ನೀರುಗಳಿಗೂ ಕೂಡ ತಕ್ಕನಾದ ಮನೋವೃತ್ತಿ ಇರಲೇ ಬೇಕು. ಈ ನೀರುಗಳ ಸಾರವೇ ಸಂಪೂರ್ಣವಾಗಿ ಒಂದು ನೀರಿನ ಬಿಂದುವಿಗೂ ಅಳವಡಿಸಲ್ಪಡುತ್ತದೆ. ಎಂತಲೇ, ಕೆರೆಯ ನೀರಿಗೂ, ಸಮುದ್ರದ ನೀರಿಗೂ ಅಜಗಜಾಂತರ ವ್ಯತ್ಯಾಸವಿರುವುದು. ಈ ಎಲ್ಲ ನೀರಿನ "ಹಳ್ಳ" (waterhole) ಗಳೂ ಒಂದೇ ಕಡೆ ಸಂಗ್ರಹಿತವಾಗಿದ್ದರೆ, ನದಿ-ಉಪನದಿಗಳೆಲ್ಲಾ ಸದಾ ಹರಿಯುವವೇ. ಈ ಎಲ್ಲದರ ಮೂಲ, ಮಳೆ... ಅಥವಾ ಆವಿ.  ನಿಮಗೆ ಎಲ್ಲೇ ಒಂದು ನೀರಿನ ಬಿಂದು ಕಂಡು ಬಂದರೆ, ಅದರ ಮೂಲಧರ್ಮ ಮಹಾಸಾಗರವನ್ನು ಸೇರುವುದು, ಅದನ್ನೆಂದೂ ಅದು ಮರೆಯುವುದಿಲ್ಲ, ತನ್ನತನವನ್ನು ಎಂದೂ ತೊರೆಯುವುದೂ ಇಲ್ಲ!

ಹೇಗೋ, ಒಂದು ಹನಿ ನೀರಿನಿಂದ, ಈ ಎಲ್ಲ ಆಲೋಚನೆಗಳೂ ಪುಂಖಾನುಪುಂಕವಾಗಿ ಹೊರಹೊಮ್ಮಿ ಬಂದವು. ಈ ಬಿಂದುವಿನ ಆತ್ಮಾವಲೋಕನದಿಂದ ನಮ್ಮ ಆತ್ಮಗಳ ಅವಲೋಕನವೂ ಆದಂತಾಯಿತು. ಅದಕ್ಕೆಂದೇ ಇರಬೇಕು, ಎಲ್ಲರಲ್ಲೂ ಸದಾ, ಸದಾ ಸಪ್ತ ಸಾಗರದಾಚೆಯ ಲೋಕದ ತುಡಿತ ಎಂದಿಗೂ ಜಾಗೃತವಾಗೇ ಇರುತ್ತದೆ!

Saturday, March 02, 2024

ಸರಿಯಾದ ದಾರಿ...

"ಬೆಳ್ಳಂಬೆಳಗ್ಗೆ ಇವ್ರು ಯಾರೋ ನಿಧಾನವಾಗಿ ಡ್ರೈವ್ ಮಾಡಿಕೊಂಡ್ ಹೋಗೋರು ಸಿಕ್ಕಿಕೊಂಡ್ರಲ್ಲ!" ಎಂದು ಪ್ರಲಾಪನೆಗೆ ಮೊರೆ ಹೋದವನಿಗೆ, "ಅಷ್ಟಕ್ಕೂ ಅವರು ಮಾಡುತ್ತಿರುವ ತಪ್ಪಾದರೂ ಏನು?" ಎನ್ನುವ ತಂತಾನೆ ಹುಟ್ಟಿದ ಉತ್ತರ, ಆಂತರಿಕ ತಲ್ಲಣಗಳಿಗೆ ಸೂಕ್ಷ್ಮವಾಗಿ ಪೂರ್ಣ ವಿರಾಮವನ್ನು ನೀಡುವ ಹಾಗೆ ಕಂಬದ ನೆರಳಿನಂತೆ ಎದ್ದು ನಿಂತಿತ್ತು.



ನಾನು ದಿನಾ ಡ್ರೈವ್ ಮಾಡಿಕೊಂಡು ಫ಼್ರೀವೇ ದಾಟಿ ಎಕ್ಸಿಟ್ ತೆಗೆದುಕೊಂಡ ಕೂಡಲೇ ದುತ್ತನೇ ಎದುರಾಗುವ ಸ್ಟಾಪ್ ಸೈನಿಗೆ ಮರ್ಯಾದೆ ತೋರಿಸಿದಂತೆ ಮಾಡಿ, ಏದುಸಿರು ಬಿಡುತ್ತಾ ಏರಿಯನ್ನು ಹತ್ತುವ ಓಟಗಾರನಂತೆ ಮುಂದೆ ಹೋಗುವ ಕಾರು. ಮುಂದಿನ ಅರ್ಧ-ಮುಕ್ಕಾಲು ಮೈಲು ಏನಿದ್ದರೂ ಬರೀ ಇಪ್ಪತ್ತೈದರ ಸ್ಪೀಡೇ ಎಂದು ಅದು ತನಗೆ ಎದುರಾಗುವ ಸ್ಪೀಡ್ ಸೈನುಗಳಿಗೆ ಮೂತಿ ತಿರುವಿ ಅಣಗಿಸಿಕೊಂಡು ಹೋಗೋ ರೀತಿ ಕಾಣುತ್ತದೆ. ಅಪರೂಪಕ್ಕೊಮ್ಮೆ ಕ್ರಾಸಿಂಗ್‌ನಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾ ನಿಧಾನವಾಗಿ ನಡೆದು ರಸ್ತೆ ದಾಟುವ ಪಾದಚಾರಿಗಳಿಗೆ ಒಮ್ಮೊಮ್ಮೆ ಹಿಡಿ ಶಾಪ ಹಾಕಿದ್ದೂ ಉಂಟು. ಆದರೆ, ಮರೆಯಲ್ಲಿ ನಿಂತು ಕಾಯುವ ಮಾಮಾಗಳನ್ನು ಯಾವತ್ತೂ ನಾವು ದೂರದೃಷ್ಟಿಯಿಂದ ನೋಡುತ್ತೇವೆಯೇ ಹೊರತು, ದುರುಳ ದೃಷ್ಟಿಯಿಂದಂತೂ ಅಲ್ಲ!

ಈ ಜಾಗದಲ್ಲಿ (ಮತ್ತು ಎಲ್ಲಕಡೆ), ಸ್ಪೀಡ್ ಲಿಮಿಟ್ ಇಪ್ಪತ್ತೈದು ಇದ್ದರೂ ಎಲ್ಲರೂ ಮೂವತ್ತರ ಮೇಲೇ ಹೋಗುವವರು. ಹಾಗಾಗಿ, ಎಲ್ಲರೂ ವೇಗವಾಗಿ ಹೋದಾಗ ಅದು ಸರಿಯಾಗಿ ತೋರುವುದರ ಜೊತೆಗೆ, ಅಪರೂಪಕ್ಕೊಮ್ಮೆ ಸರಿಯಾದ ವೇಗದಲ್ಲಿ ಹೋಗುವವರು ತಪ್ಪಾಗಿ ಕಂಡು ಬರುವುದು, ಒಂದು ರೀತಿಯಲ್ಲಿ ವಿಚಕ್ಷಣೆ ಇಲ್ಲದ ವ್ಯಾಖ್ಯಾನ ಎಂದರೆ ತಪ್ಪೇನೂ ಇಲ್ಲ!

ಆದರೆ, ಇಂದು ನನ್ನ ಮುಂದಿನ ಕಾರು ಅದೇನೇ ಆಗಲಿ, ಈ ದಾರಿಯಲ್ಲಿ ನಾನು ಇಪ್ಪತ್ತೈದರ ಲಿಮಿಟ್ ಅನ್ನು ದಾಟುವುದಿಲ್ಲ ಎಂದು ಯಾರಿಗೋ ಪ್ರತಿಜ್ಞೆ ಮಾಡಿ ಬಂದಂತಿದೆ. ಒಬ್ಬರು ಸರಿಯಾದ ದಾರಿಯಲ್ಲಿ, ಸರಿಯಾದ ವೇಗದಲ್ಲಿ ನಡೆದರೆ, ಅವರ ಹಿಂಬಾಲಕರಿಗೆ ಅವರನ್ನು ವ್ಯವಸ್ಥಿತವಾಗಿ ಹಿಂಬಾಲಿಸದೇ ಬೇರೆ ದಾರಿಯೇನಿದೆ ಎಂಬ ಯೋಚನೆ ಬಂತು. ಬೇರೆ ದಾರಿ ಎನ್ನುವುದು ಇಲ್ಲದಿದ್ದಾಗ ಇರುವುದು ಸರಿಯಾದ ದಾರಿ ಆಗುತ್ತದೆ ಎನ್ನುವ (corollary) ಉಪಸಿದ್ಧಾಂತ ಬೇರೆ ಹುಟ್ಟಿತು.

ಜನ ವೇಗವಾಗಿ ಏಕೆ ಡ್ರೈವ್ ಮಾಡುತ್ತಾರೆ? ಸ್ಪೀಡ್ ಲಿಮಿಟ್ ಇಷ್ಟೇ ಎಂದು ಸೈನ್‌ಗಳು ಸಾರಿ ಸಾರಿ ಹೇಳುತ್ತಲೇ ಇದ್ದರೂ ಜನರು ಅದಕ್ಕಿಂತ ಹೆಚ್ಚು ವೇಗವಾಗಿ ಏಕೆ ಚಲಾಯಿಸುತ್ತಾರೆ? ಹೀಗೆ ವೇಗವಾಗಿ ಹೋಗುವ ಗಾಡಿಗಳು ಮತ್ತುಅವುಗಳ ಸವಾರರು ಅದೇನನ್ನು ಕಟ್ಟಿ-ಕಡಿದು ಹಾಕುತ್ತಾರೆ? ಹಾಕಿರಬಹುದು? Conditions permitting... ಎಂದು ತಮ್ಮ ಆಂತರ್ಯದಲ್ಲಿ ಮೇಳೈಸಿದ ಸತ್ಯದ ಹಿನ್ನೆಲೆಯಲ್ಲಿ ಮಿತಿಯನ್ನು ತೋರಿ ಜನರ ಸುರಕ್ಷತೆಗೆ ಆದ್ಯತೆ ಕೊಡುವ ಈ ಮೂಕ ಜೀವಿಗಳನ್ನು ಜನರು ಅಷ್ಟೊಂದು ಅಗೌರವದಿಂದ ನೋಡುವುದಾದರೂ ಏಕೆ? ದಿನದ 24 ಗಂಟೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡಿರುವ ಈ ರಕ್ಷಕರನ್ನು ಆರಕ್ಷಕರ ಸಹಾಯವಿಲ್ಲದೇ ಆದರಿಸುವವರು ಇಲ್ಲವೇ?... ಹೀಗೆ ಪ್ರಶ್ನೆಗಳೋಪಾದಿಯಲ್ಲಿ ಮತ್ತಿಷ್ಟು ಪ್ರಶ್ನೆಗಳು ಮೂಡಿದವು.

***

ಬೇರೆಯವರು ತಮ್ಮ ಕಾರನ್ನು ವೇಗವಾಗಿ ಚಲಾಯಿಸುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ, ನಾನು ಮತ್ತಿನ್ನೆಲ್ಲೋ ತಡವಾಗಿ ಹೋಗಬಾರದಲ್ಲ ಎಂಬ ಕಾರಣಕ್ಕೆ ವೇಗವಾಗಿ ಚಲಾಯಿಸುತ್ತೇನೆ. ಹಾಗಾದರೆ, ವೇಗದ ಮಿತಿಯಲ್ಲಿ ಚಲಾಯಿಸುವುದು ಎಂದಾದರೆ, ಮನೆಯನ್ನು ಐದು-ಹತ್ತು ನಿಮಿಷ ಮೊದಲೇ ಬಿಡಬಹುದಲ್ಲ? ಹಾಗೆ ಹೆಚ್ಚಿನ ಸಮಯ ಆಗೋದಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹೋಗುವವರು ಮತ್ತು ಸೂಚಿಸಿದ ಸಮಯಕ್ಕೆ ಮೊದಲೇ ಹೋಗಿ ತಲುಪುವವರು ವಿರಳ. ಅಂದ ಮೇಲೆ ಎಲ್ಲರೂ (ಮಿತಿಯನ್ನು ಮೀರಿ) ವೇಗವಾಗಿ ಚಲಾಯಿಸುತ್ತಾರೆ ಅಂತಲೇ ಆಯಿತು.

ಇನ್ನು ಸಮಯಕ್ಕೆ ಸರಿಯಾಗಿ ತಲುಪುವವರು, ಸಮಯ ಪಾಲನೆಯನ್ನು ಮಾಡುವವರು, ತಮ್ಮ ತಮ್ಮ ರಸ್ತೆಯಲ್ಲಿ ವೇಗದ ಮಿತಿಗೆ ಅನುಸಾರವಾಗಿ ಚಲಿಸಿದರೆ, ಅದರಿಂದ ಅವರಿಗೇನೂ ಹಾನಿ ಇಲ್ಲ - ಆದರೆ ಅವರ ಬೆನ್ನಿಗೆ ಬಿದ್ದ ವೇಗಿಗಳ ರಕ್ತದೊತ್ತಡ ಹೆಚ್ಚಾಗುವುದಂತೂ ನಿಜ.

ನನ್ನ ಇಪ್ಪತ್ತೈದು ವರ್ಷಗಳ ಡ್ರೈವಿಂಗ್ ಜೀವನದಲ್ಲಿ ಎಲ್ಲ ರೀತಿಯ ಡ್ರೈವರುಗಳನ್ನು ನೋಡಿದ್ದೇನೆ. ಮಿರಿ ಮಿರಿ ಮಿಂಚುವ ಸ್ಪೋರ್ಟ್ಸ್ ಕಾರುಗಳನ್ನು ಓಡಿಸುವ ಹದಿಹರೆಯದವರಿಂದ ಹಿಡಿದು, ತಮಗೆ ಬೇಕಾದಕ್ಕಿಂತಲೂ ದೊಡ್ಡ ಸೈಜಿನ ಹಳೆಯ ಕಾರುಗಳನ್ನು ಓಡಿಸುವ ಹಿರಿಯವರೆಗೆ. ಕಾರಿನಲ್ಲಿ ಹುಷಾರಿಲ್ಲದೆ ರಚ್ಚೆ ಹಿಡಿದು ಅಳುವ ಮಗುವನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ಪೋಷಕರಿಂದ ಹಿಡಿದು, ಹೆರಿಗೆ ನೋವು ಅನುಭವಿಸುತ್ತಿರುವ ಗರ್ಬಿಣಿ ಹೆಂಡತಿಯನ್ನು ತುರಂತಾಗಿ ಆಸ್ಪತ್ರೆ ಸೇರಿಸುವ ಗಂಡಂದಿರವರೆಗೆ. ಶವವನ್ನು ಸಾಗಿಸುತ್ತಿರುವ ಹರ್ಸ್ (hearse) ವಾಹನದ ಹಿಂದೆ ಮೌನವಾಗಿ ದುಃಖತಪ್ತರಾಗಿ ರೋಧಿಸುತ್ತಾ ಡ್ರೈವ್ ಮಾಡುವ ಕುಟುಂಬಸ್ಥರಿಂದ ಹಿಡಿದು, ತಮ್ಮ ಕುಟುಂಬಕ್ಕೆ ಇದೀಗ ತಾನೇ ಸೇರಿಕೊಂಡ ಹೊಸ ಮಗುವನ್ನು ಹೆಮ್ಮೆಯಿಂದ ಜೋಪಾನವಾಗಿ  ಕಾರು ಸೀಟಿನಲ್ಲಿ ಕರೆದುಕೊಂಡು ಹೋಗುತ್ತಿರುವ ದಂಪತಿಗಳವರೆಗೆ. ಎರಡು ಚಕ್ರದವರ ಆಟಾಟೋಪಗಳಿಂದ ಹಿಡಿದು ಹದಿನಾರು ಚಕ್ರದ (ಶೋಡಷ/ಷಿ) ಒಡೆಯರ ಒನಪು-ವೈಯಾರದಿಂದ ರಸ್ತೆಯನ್ನು ಅಪ್ಪಿಕೊಳ್ಳುವ ವರೆಗೆ...

ಹೀಗೆ, ಪ್ರತಿಯೊಂದು ಸಂದರ್ಭಕ್ಕೂ ಈ ರಸ್ತೆಗಳು ಒಂದು ರೀತಿಯಲ್ಲಿ ಸಾಮಾಜಿಕ ಸ್ಥಿತಿ-ಗತಿಯನ್ನು ಮಟ್ಟ ಮಾಡುವ ಲೆವೆಲ್ಲರುಗಳು ಇದ್ದ ಹಾಗೆ. ಈ ರಸ್ತೆಗಳ ಮೇಲೆ ನಿಮ್ಮ ನಿಮ್ಮ ಖಾಸಗೀ ವಿಚಾರಗಳು, ಅವುಗಳನ್ನು ಕುರಿತು ಶಾಂತವಾಗಿಯಾಗಲೀ ಉದ್ವೇಗದಿಂದಾಗಲೀ ಏಳುವ ನಿಮ್ಮ ಸ್ಪಂದನೆಗಳು ಇವೆಲ್ಲಕ್ಕೂ ಯಾವ ಬಿಡಿಗಾಸು ಬೆಲೆಯೂ ಇಲ್ಲ. ಈ ರಸ್ತೆಗಳು, ತಮ್ಮ ಹೊಳೆಯುವ ಕಪ್ಪು ಮುಖದ ಮೇಲೆ ನಿರ್ಧಾಕ್ಷಿಣ್ಯವನ್ನು ಮೈವೆತ್ತುಕೊಂಡಂತೆ ಸದಾ ಸುಮ್ಮನಿರುವ ಸರದಾರರು. ಇಂಥ ರಸ್ತೆಗಳಿಗೆ ಸಾತ್ ಕೊಡುವ ಬದಿಯ ವಾರ್ನಿಂಗ್ ಸೈನುಗಳು! ಇವೆಲ್ಲವೂ ಒಂದು ವ್ಯವಸ್ಥೆ - ಇವುಗಳನ್ನು ಮೀರಿದರೆ ಆಪತ್ತು ಕಾದಿದೆ, ಎನ್ನುವ ಕುತಂತ್ರವನ್ನು ತಮ್ಮೊಡಲೊಳಗೆ ಹೂತುಕೊಂಡಿರುವ ಸಭ್ಯರು ಎನ್ನಬೇಕು.

***



ಎಲ್ಲರೂ ಮಿತಿಗಿಂತ ಹೆಚ್ಚು ವೇಗವಾಗಿ ಹೋಗುತ್ತಿರುವಾಗ, ವೇಗದ ಮಿತಿಗೆ ಸರಿಯಾಗಿ ಹೋಗುವವರು ನಮ್ಮ ಸಮಾಜದಲ್ಲಿ ಒಂದು ರೀತಿಯ ಉಪಟಳ ಕೊಡುವ ಉಪದ್ರವಿಗಳಾಗಿ (nuisance) ಕಂಡುಬರುತ್ತಾರೆ.  ಇವರೊಬ್ಬರು ಸರಿಯಾದ ಹಾದಿಯಲ್ಲಿ ಸರಿಯಾದ ವೇಗದಲ್ಲಿ ನಡೆದು ಬಿಟ್ಟರೆ... ಎಲ್ಲವೂ ಸರಿ ಹೋದೀತೇ? ಮೇಲೆ ಹೇಳಿದ ವೇಗಿಗಳು, ದುಃಖಿಗಳು, ಸುಖಿಗಳು, ತೀವ್ರವಾಗಿ ಬದಲಾವಣೆಯನ್ನು ಅಪ್ಪಿಕೊಳ್ಳುತ್ತಿರುವ ಜನಸಮುದಾಯ ಇವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ಮೌನದ ಮೊರೆಯಲ್ಲಿಯೇ ವೇಗದ ಮಿತಿಯನ್ನು ತೋರಿಸುವ, Conditions permitting...ಎನ್ನುವ ಅದಮ್ಯ ತತ್ವವನ್ನು ಯಾರು ಗೌರವಿಸುತ್ತಾರೆ ಈಗಿನ ಕಾಲದಲ್ಲಿ? ಒಬ್ಬ ಮಿತಿಗಿಂತ ಹೆಚ್ಚಾಗಿ ವೇಗವಾಗಿ ಹೋದರೆ, ಅವನನ್ನು ಅನುಸರಿಸಲು ಹಿಂಬಾಲಿಕರಿಗೇನೂ ಕೊರತೆ ಇಲ್ಲ... ಆದರೆ, ಒಬ್ಬ ಸರಿಯಾದ ವೇಗದಲ್ಲಿ ಹೋದಾಗ ಅವನನ್ನು ಹಿಂಬಾಲಿಸಲು ಹಿಂಜರಿಯುವ ಜನ ಹೆಚ್ಚು! ಹಾಗಾದರೆ, ಸರಿಯಾದ ವೇಗದಲ್ಲಿ ಹೋಗುವುದು ಹೆಚ್ಚು ಜನರಿಗೆ ಇಷ್ಟವಾಗದಂಥ ವ್ಯವಸ್ಥೆಯನ್ನು, ಹೆಚ್ಚು ಜನರ ಮೇಲೆ ಇಲ್ಲಿನ ಜನತಂತ್ರ ವ್ಯವಸ್ಥೆ ಹೇರುವುದಾದರೂ ಏಕೆ?

ತಮ್ಮ ತಮ್ಮ ನಿಧಾನಗಳನ್ನು, ತಮ್ಮ ಯೋಜನೆಯ ಹುಳುಕುಗಳನ್ನು, ತಾವು ತಡವಾಗಿ ಹೊರಟಿರುವುದರ ಕಾರಣ ಮತ್ತು ಪರಿಣಾಮಗಳನ್ನು ಈ ಮೌನವಾಗಿ ಬಿದ್ದುಕೊಂಡ ರಸ್ತೆಗಳ ಮೇಲೆ ತೀರಿಸಿಕೊಳ್ಳುವ ಹಕ್ಕನ್ನ  (ಸಿಕ್ಕಿ ಬಿದ್ದರೆ, ಕಾನೂನಿನ ದೃಷ್ಟಿಯಲ್ಲಿ ತಪ್ಪಾಗುವ) ಈ ವೇಗಿಗಳಿಗೆ ಯಾರು ಕೊಟ್ಟಿದ್ದು? ವ್ಯವಸ್ಥೆಯ ಮಿತಿಯನ್ನು ಮೀರಿ ವೇಗವಾಗಿ ಹೋಗುವವರಿಗೆ ಹಲವಾರು ಕಾರಣಗಳಿರಬಹುದು, ಆದರೆ, ಸಮಾಜದಲ್ಲಿ ನೆಟ್ಟಗೆ, ನ್ಯಾಯವಾಗಿ ಬದುಕುವರಿಗೆ ಕಾರಣಗಳು ಬೇಕಿಲ್ಲ.

***

ನಿಮ್ಮ ಮುಂದೆ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವವರು ನಿಮ್ಮಲ್ಲಿ ಅದ್ಯಾವ ತುಡಿತ-ತಲ್ಲಣಗಳನ್ನು ರೂಪಿಸುತ್ತಾರೆಯೋ ಗೊತ್ತಿಲ್ಲ. ಆದರೆ, ಇಂದು ನನ್ನ ಮುಂದೆ, ಮಿತಿಗೆ ತಕ್ಕಂತೆ ಒಂದು ಅರ್ಧ-ಮುಕ್ಕಾಲು ಮೈಲು ದೂರ ಡ್ರೈವ್ ಮಾಡಿಕೊಂಡು ಹೋದ ಮನುಷ್ಯ ನನಗೊಬ್ಬ ಹೀರೋ ಆಗಿ ಕಂಡು ಬಂದ. ಇಂಥ ನಗಣ್ಯ (unsung) ಹೀರೋಗಳನ್ನು ನಾವು ಗೌರವಿಸುವುದನ್ನು ಮೈಗೂಡಿಸಿಕೊಳ್ಳಲು ಕಲಿಯದಿದ್ದರೆ, ಸಮಾಜದಲ್ಲಿ ನ್ಯಾಯ-ನೀತಿಯಿಂದ ನಡೆಯುತ್ತೇವೆ ಎಂದು ಜೀವನವನ್ನೇ ಮುಡಿಪಾಗಿಟ್ಟಿರುವವರನ್ನು ಗೌರವಿಸುವುದನ್ನು ಕಲಿಯುವುದು ಯಾವಾಗ?