ಅನುಭವ ಅಮೃತವಾದದ್ದು ಯಾವಾಗ?
ಈ ಅನುಭವಗಳು ಅನ್ನೋದರ ದೊಡ್ಡಸ್ತಿಕೆ ಏನು ಅಂದ್ರೆ ಎಲ್ರೂ ಅಂದ್ಕೊಳ್ಳೋ ಹಾಗೆ ನಮಗೆ ಆಯಾ ವಿಷಯದ ಬಗ್ಗೆ ಆಳವಾಗಿ ಗೊತ್ತಿರೋದು ಅಥವಾ ನಮ್ಮದೇ ಆದ ಒಂದು ಪ್ರಯತ್ನ ಜೊತೆಗೆ ಸೇರಿ ಉಳಿದವರಿಗೆ ಆಯಾ ಕೆಲಸದ ಬಗ್ಗೆ ಏನೇನು ತಿಳಿದಿಲ್ಲವೋ ಅದರ ಬಗ್ಗೆ ತಕ್ಕಮಟ್ಟಿಗೆ ನಮಗೆ ತಿಳಿದಿರೋದು. ಅದೇ ಈ ಅನುಭವದ ಅಡಿಯಲ್ಲಿನ ವಿಷಾದವನ್ನು ಹೆಚ್ಚು ಜನ ಗುರುತಿಸಿದ ಹಾಗೇ ಕಾಣಿಸೋದಿಲ್ಲ, ನನ್ನ ಅನಿಸಿಕೆ ಪ್ರಕಾರ ಒಬ್ಬ ವ್ಯಕ್ತಿಗೆ ಅನುಭವಗಳು ಆಗಿ ಆಗೀ ಮತ್ತೆ ಅದೆ ವಿಷಯದ ಫಲಾನುಭವ ಪಡೆಯೋದಿರಲಿ ಉಳಿದವರಿಗೆ ಹೇಳೋದಕ್ಕೂ ತ್ರಾಣವಿಲ್ಲದ ಹಾಗೆ ವಯಸ್ಸಾಗಿ ಬಿಡೋದು. ಅಂದ್ರೆ, ನಿಮಗೆ ಅನುಭವವಾಗಿದೆ ನಿಜ ಆದರೆ ಅನುಭವವಾಗುವುದಕ್ಕಿಂತ ಮೊದಲು ನಿಮ್ಮಲ್ಲಿರೋ ಉತ್ಸಾಹ ಇಲ್ಲದೇ ಹೋಗಿದೆಯೇ ಅನ್ನೋ ಹೆದರಿಕೆ, ಒಂದ್ ರೀತಿ ಮ್ಯಾಜಿಕ್ ಶೋ ಮುಗಿದ ಮೇಲೆ ಮಾಂತ್ರಿಕ ತನ್ನೆಲ್ಲಾ ಗುಟ್ಟನ್ನು ಶ್ರೋತೃಗಳ ಜೊತೆ ಹಂಚಿಕೊಂಡ್ರೆ ಹೇಗಿರುತ್ತೋ ಹಾಗೆ.
ಮೊನ್ನೆ ಥ್ಯಾಂಕ್ಸ್ಗಿವಿಂಗ್ ಸಂದರ್ಭದಲ್ಲಿ ಹೀಗೇ ಹರಟೆ ಹೊಡೀತಿದ್ದಾಗ ಒಂದು ಉಪಮೆ ಹೊಳೆಯಿತು. ಭಾರತದಲ್ಲಿ ಜನರು ಸ್ಟಿಕ್ ಶಿಫ್ಟ್ ಇರೋ ಕಾರು/ವಾಹನಗಳನ್ನು ಓಡಿಸೋದು ಹೆಚ್ಚು. ಇಂಧನವನ್ನು ಉಳಿಸುವ ಪ್ರಯತ್ನವೋ, ವಾಹನದ ಎಫಿಷಿಯನ್ಸಿಯನ್ನು ಹೆಚ್ಚಿಸುವ ಯತ್ನವೋ, ಅಲ್ಲಿಯ ರಸ್ತೆಯಲ್ಲಿ ನಿಂತು ನಿಂತು ಹೋಗುವುದಕ್ಕೆ ಅನುಕೂಲವಾಗಲಿ ಎಂಬುದಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ತಮ್ಮ ವಾಹನಗಳ ಗಿಯರ್ ಅನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ, ಹಾಗೆ ಮಾಡದೇ ವಿಧಿಯಿಲ್ಲ. ಅಂದರೆ ಭಾರತದಲ್ಲಿ ವಾಹನದಲ್ಲಿ ಇಂಚಿಂಚು ಕದಲಿದ ಹಾಗೆ ನಮ್ಮ ಮೂವ್ಮೆಂಟುಗಳನ್ನು ನಾವೇ ಮೈಕ್ರೋಮ್ಯಾನೇಜ್ ಮಾಡಿಕೊಂಡಿರಬೇಕು. ಅಲ್ಲಲ್ಲಿ ನಿಂತು, ದಾರಿಯಲ್ಲಿ ಸಿಗುವ ಅಡೆತಡೆಗಳನ್ನೆಲ್ಲ ಎದುರಿಸಿ ತಲುಪಬೇಕಾದ ಸ್ಥಳ ತಲುಪುವಲ್ಲಿ ಒಂದು ಕೈ ಗಿಯರ್ ಲಿವರ್ ಮೇಲೆ ಒಂದು ಕಾಲು ಕ್ಲಚ್ ಮೇಲೆ ಇಟ್ಟು ಅದಕ್ಕೇ ಬದುಕನ್ನು ಮುಡಿಪಾಗಿಟ್ಟುಕೊಳ್ಳಬೇಕು ಎಂಬುದು ನನ್ನ ಜೋಕ್ಗಳಲ್ಲೊಂದು. ಅದೇ ಉತ್ತರ ಅಮೇರಿಕದಲ್ಲಿ ನೋಡಿ, ನಾವುಗಳು ಬಳಸೋ ಕಾರು/ವಾಹನಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಇರುವಂತಹವೇ ಹೆಚ್ಚು. ಮನೆಯಿಂದ ಆಫೀಸಿಗೆ ಹೊರಟರೆ ಮಧ್ಯೆ ಬೇಕಾದಷ್ಟು ಅಡೆತಡೆಗಳು ಬಂದೇ ಬರುತ್ತವೆ, ಆದರೆ ನಮ್ಮ ಬಲಗಾಲು ಬ್ರೇಕ್ ಆಕ್ಸಲೇಟರ್ ಮೇಲೆ ಆಗಾಗ್ಗೆ ತನ್ನಷ್ಟಕ್ಕೆ ತಾನು ಬದಲಾಗುತ್ತಿರುತ್ತದೆ, ಜೊತೆಗೆ ಹೆಚ್ಚಿನ ಮಟ್ಟಿಗೆ ಎಲ್ಲರೂ ಒಂದೇ ಕೈಯಲ್ಲೇ ಡ್ರೈವ್ ಮಾಡೋದು, ಮತ್ತೊಂದು ಕೈಯಲ್ಲಿ ಇನ್ನೇನು ಮಾಡದಿದ್ದರೂ ಆರಾಮವಾಗಿ ಕಾಫಿಯನ್ನಾದರೂ ಕುಡಿದುಕೊಂಡು ಹೋಗಬಹುದು. ಅಂದರೆ ನಮ್ಮ ದಿನನಿತ್ಯದ ಪ್ರಯಾಣವೆನ್ನುವ ರುಟೀನ್ ಕೆಲಸವನ್ನು ನಾವು ಮೈಕ್ರೋ ಮ್ಯಾನೇಜ್ ಮಾಡೋದೇ ಬೇಡ. ಕಾರು ಒಳ್ಳೆಯ ಕಂಡೀಷನ್ನಲ್ಲಿ ಇದ್ದರೆ ಪ್ರಯಾಣ ಯಶಸ್ವಿಯಾದಂತೆಯೇ ಲೆಕ್ಕ. ಭಾರತದಲ್ಲಿ ಪದೇಪದೇ ಗಿಯರ್ ಬದಲಾಯಿಸುವುದರ ಮೂಲಕ ಅದೆಷ್ಟು ಇಂಧನವನ್ನು ಉಳಿಸುತ್ತಾರೋ ಗೊತ್ತಿಲ್ಲ, ತಮ್ಮ ಕಾರು/ವಾಹನಗಳನ್ನು ಸುಸ್ಥಿತಿಯಲ್ಲಿಡದ ವಾಹನಗಳಿಗೆ ಅದ್ಯಾವ ಅನುಕೂಲವೋ ಯಾರಿಗೆ ಗೊತ್ತು, ಮತ್ತಿನ್ನೇನಿಲವೆಂದರೂ ಈ ಗಿಯರ್ ಬದಲಾವಣೆಯಿಂದ ಕೈ ನೋವಾದರೂ ಬಂದೀತು.
’ಮನೆ ಕಟ್ಟಿ(ಸಿ) ನೋಡು’ ಎನ್ನೋದು ನಮ್ಮೂರಿನ ನಾಣ್ಣುಡಿಗಳಲ್ಲೊಂದು. ಇಲ್ಲಿ ಈಗಿರೋ ನಮ್ಮನೆ ವಾರಂಟಿಯಲ್ಲಿ ಏನೋ ಹುಡುಕಿ ಮನೆ ಕಟ್ಟಿದ ಕಂಪನಿಯವರಿಗೆ ಕೇಳಿದ್ದಕ್ಕೆ ’ಮನೆಯ ಸ್ಟ್ರಕ್ಚರ್ಗೆ ಏನೇ ತೊಂದರೆ ಆದರೂ ಹತ್ತು ವರ್ಷಗಳವರೆಗೆ ಅದನ್ನು ಸರಿ ಮಾಡಿಸುವುದು ನಮ್ಮ ಜವಾಬ್ದಾರಿ’ ಎಂದರು. ನಮ್ಮೂರಿನ ಬೇಸಿಗೆಯಲ್ಲಿ ಧಾಂ ಧೂಮ್ ಓಪನಿಂಗ್ ಸೆರೆಮನಿ ಮಾಡಿಸಿಕೊಂಡು ಮಳೆಗಾಲ ಪೂರ್ತಿ ಸೋರಲು ತೊಡಗಿದ್ದ ಕೆನರಾ ಬ್ಯಾಂಕ್ ಕಟ್ಟಡ ನೆನಪಿಗೆ ಬಂತು, ಅದರಲ್ಲಿ ಇಂದಿಗೂ ಸೋರಿದ ಮಳೆ ನೀರನ್ನು ಹಿಡಿಯಲೆಂದು ರೂಫ್ಗೆಲ್ಲಾ ಟಾರ್ಪಾಲು ಕಟ್ಟಿರಬಹುದು, ’ಎಲ್ಲಿದೆಯೋ ವಾರಂಟೀ ಅಣ್ಣಾ, ಎಲ್ಲಿದೆಯೋ ವಾರಂಟೀ...’ ಎಂದು ಯಾವುದೋ ಬದಲಾದ ಹಾಡಿನ ತುಣುಕೊಂದು ತಟ್ಟನೆ ಮನದಲ್ಲಿ ಮಿನುಗಿತು. ಈ ಮನೆ ಕಟ್ಟಿಸಿದ ಅನುಭವವೇ ಅಂತದ್ದು, ಅದು ಸೋರಿದ ಮೇಲೆ ಹೀಗೆ ಕಟ್ಟಿದರೆ ಸೋರುತ್ತದೆ ಎಂದು ತಿಳಿಸುತ್ತದೆಯೇ ವಿನಾ ಒಮ್ಮೆ ಕಟ್ಟಿಸಿ ಸೋರಿದ ಮೇಲೆ ಮುಂದೆ ಏನೇ ಮಾಡಿದರೂ ತೇಪೆ ಹಚ್ಚುವುದೇನೂ ತಪ್ಪೋದಿಲ್ಲ. ನಮ್ಮ ಸ್ನೇಹಿತರು ಹೇಳುತ್ತಾರೆ, ’ಛೇ, ನೀವು ಕಂಡ ಇಂಡಿಯಾ ಭಾಳಾ ಬದಲಾಗಿದೇ, ನೀವ್ ಯಾವ ಜಮಾನದಲ್ಲಿದ್ದೀರಿ?’ ಇದ್ದಿರಬಹುದು, ಇಂದು ಕಟ್ಟಿಸಿದ ಕಟ್ಟಡಗಳು ಸೋರದಿರಬಹುದು, ಹಾಗೆ ಸೋರಿದರೂ ಕಟ್ಟಡದ ಕಾಂಟ್ರಾಕ್ಟರುಗಳು, ಇಂಜಿನಿಯರುಗಳು, ಇಟ್ಟಿಗೆ ಹೊರುವವರನ್ನೂ ಸೇರಿಸಿ ಎಲ್ಲರೂ ಭಾವನಾತ್ಮಕವಾಗಲ್ಲದಿದ್ದರೂ ಕಾನೂನಿನ ಕಟ್ಟಳೆಯಡಿಯಲ್ಲಿ ಜವಾಬ್ದಾರರಿದ್ದಿರಬಹುದು. ಒಮ್ಮೆ ಸೋರಿದ ಮಾಡನ್ನು ಮತ್ತೊಮ್ಮೆ ಸೋರದ ಹಾಗೆ ತಂತ್ರಜ್ಞಾನ ಬಂದಿರಬಹುದು, ಅಥವಾ ’ಹೇಗಿದ್ದರೂ ಮಾಡು ಸೋರೋದೇ ಒಂದಲ್ಲ ಒಂದು ದಿನ...’ ಎನ್ನುವ ಹೊಸ ಅನುಭವಾಮೃತ ಹುಟ್ಟಿ ಹೊಮ್ಮಿರಬಹುದು.
ಅದು ನಿಜವೇ, ನಾವು ಕಂಡ ಇಂಡಿಯಾದಲ್ಲಿ ದಾರಿಯ ಬದಿ ಎಳೆನೀರು ಮಾರುವವರಿಂದ ಹಿಡಿದು ಎಕ್ಸಿಕ್ಯೂಟಿವ್ಗಳವರೆಗೆ ಎಲ್ಲರೂ ಸೆಲ್ಫೋನ್ಗಳನ್ನು ಹಿಡಿದುಕೊಂಡು ಓಡಾಡಿದ್ದಿಲ್ಲ. ಇತ್ತೀಚಿಗೆ ಕಮ್ಮ್ಯೂನಿಕೇಷನ್ನ್ ಬದಲಾಗಿರಬಹುದು, ಜನರಲ್ಲಿ ಕನ್ಸ್ಯೂಮೆರಿಸ್ಸಮ್ಮ್, ಅಥವಾ ಇನ್ಯಾವ್ಯಾವುದೋ "ಇಸಮ್ಮು"ಗಳು ತುಂಬಿ ತುಳುಕಾಡುತ್ತಿರಬಹುದು. ಬಡವ-ಬಲ್ಲಿದರ ನಡುವಿನ ಅಂತರ ಕಿರಿದಾಗಿರಬಹುದು. ಸಾಮಾಜಿಕವಾಗಿ, ರಾಜಕೀಯವಾಗಿ ಭಾರತ ಬೆಳೆದಿರಬಹುದು. ಮತ್ತೆ, ನಮ್ಮ ಹಳೇ ಅನುಭವಗಳೇ ನಮ್ಮ ಬದುಕನ್ನು ರೌರವ ನರಕವನ್ನಾಗಿಸುತ್ತವೆಯೆಲ್ಲಾ ಎಂದು ಮನಸ್ಸು ಮಮ್ಮಲ ಮರುಗತೊಡಗಿತು. ಆ ಪ್ರಕಾರವಾಗಿ - ನಾವು ಆಟೋ ಡ್ರೈವರುಗಳನ್ನು ಮನಬಿಚ್ಚಿ ಮಾತನಾಡಿಸುವುದಿರಲಿ ನಂಬುವುದಾದರೂ ಹೇಗೆ? ನಾವು ಹೊರಟ ಬಸ್ಸು ಸರಿಯಾದ ಸಮಯಕ್ಕೆ ಡೆಸ್ಟಿನೇಷನ್ನನ್ನು ಮುಟ್ಟೀತು ಎಂದು ಸಂಕಲ್ಪಿಸುವುದು ಹೇಗೆ? ನಾವು ಕಟ್ಟಿಸೋ ಮನೆ ಸ್ಟ್ರಕ್ಚರಲಿ ಸೌಂಡ್ ಆಗಿರುತ್ತದೆ ಎಂದು ಊಹಿಸಿಕೊಂಡು ಹೋಮ್ವರ್ಕ್ ಮಾಡದಿರುವುದು ಹೇಗೆ? ವಾರಂಟಿ, ಗ್ಯಾರಂಟಿ ಎಂಬ ಪದಗಳಿಗೆ ಬೆಲೆ/ನೆಲೆ ಕಟ್ಟುವುದು ಹೇಗೆ? ಈಗಾಗಲೇ ಸುಟ್ಟುಕೊಂಡ ಬೆರಳ ತುದಿಯ ಚರ್ಮ ಚಿಗುರೋದಕ್ಕಿಂತ ಮುನ್ನವೇ ಅದೇ ಕೈಗಳಲ್ಲಿ ಮತ್ತೊಂದು ನಾಜೂಕಾದ ಕೆಲಸವನ್ನು ಮಾಡುವುದು ಹೇಗೆ? ನಮ್ಮ ವಾಹನದ ಹೊಗೆ ಪೈಪಿನಿಂದ ಯಾವುದೇ ರೆಗ್ಯುಲೇಷನ್ನ್ ಇಲ್ಲದೇ ಯಾವ್ಯಾವುದೋ ವಿಷಾನಿಲಗಳು ನಿರಂತರವಾಗಿ ವಾತಾವರಣಕ್ಕೆ ಹೊಮ್ಮಿ ನಮ್ಮ ವಾಹನದ ಇಂಜಿನ್ ಏನೇ ಸದ್ದು ಮಾಡಿಕೊಂಡಿದ್ದರೂ ಪದೇ ಪದೇ ಗಿಯರ್ ಬದಲಾಯಿಸುವ ನಮ್ಮ ಕೈಗಳು ಎಲ್ಲವನ್ನೂ ಮೀರುತ್ತದೆ ಎಂಬ ತತ್ವವನ್ನು ಮೈ ತುಂಬಿಕೊಳ್ಳುವುದು ಹೇಗೆ?
’ಎಲವೂ ಮೂರ್ಖ, ಅನುಭಾಮೃತದ ಬಗ್ಗೆ ಬಗ್ಗೆ ಬರೀತೀಯಾ ಅಂದುಕೊಂಡ್ರೆ ನಾವು ನಂಬಿದ ಭಾರತ ಹಂಗೇ ಹಿಂಗೇ ಅಂತ ಕೊರೀತೀಯೇನಯ್ಯಾ?’ ಎಂದು ಬಲ ಭುಜ ಹಾಗೂ ಕತ್ತಿನ ನಡುವಿನಿಂದ ಧ್ವನಿಯೊಂದು ಹೊರಬಂತು. ’Wait, ಅನುಭವ ಅಮೃತವಾಗಿದ್ದು ಯಾವಾಗ, ಅಂದ್ರೆ ಅದು ಸಾಯೋದೇ ಇಲ್ಲವೇನು?’ ಎಂದು ನಾನು ಧೃತಿಗೆಡದೆ ಮರುಪ್ರಶ್ನೆಯೊಂದನ್ನು ಹಾಕಿದೆ (thanks to present life! ಪ್ರಶ್ನೆ ಕೇಳೋಕೇನು ಅವನವ್ವನ). ’ಅನುಭವ ಯಾವತ್ತಿದ್ರೂ ಮನುಷ್ಯನ ಕಷ್ಟ ಕಾಲಕ್ಕೆ ಬರುತ್ತೆ ಗೊತ್ತಾ...’ ಎಂಬ ತೇಲಿಕೆಯ ಉತ್ತರ ಬರತೊಡಗಿದ್ದನ್ನು ನನ್ನ ಮನಸ್ಸು ಗ್ರಹಿಸಿತು. ಅಂತಹ ಹಾರಿಕೆಯ ಉತ್ತರಗಳು ಬಂದೊಡನೆ (I have really learnt to cut them loose) ಅವುಗಳನ್ನು ಹಾಗೆಯೇ ಹಾರಿಬಿಟ್ಟೆ. ನಾವು ಕಟ್ಟೋದು ಒಂದೇ ಒಂದು ಮನೆ, ಅದರ ಮಾಡಾದರೂ ನೆಟ್ಟಗಿರಲಿ ಎಂದು ಮನದಾಳದಿಂದ ಪ್ರಾರ್ಥನೆಯ ಮೊರೆಯೊಂದು ಹುಟ್ಟಿ ಬಂತು. ಈ ಪ್ರಪಂಚದಲ್ಲಿರೋ ಯಾವುದಾದರೂ ದೇವರು ಅದನ್ನು ಪುರಸ್ಕರಿಸಿಯಾನು ಎನ್ನುವ ನಂಬಿಕೆ ನನ್ನದು, ಕ್ಷಮಿಸಿ ಅದು ಯಾವುದೇ ಅನುಭವದಿಂದ ಬಂದುದಂತೂ ಅಲ್ಲ.