Monday, May 08, 2006

ವಾಸನೆಯ ಸಂಸ್ಕಾರ ಹಾಗೂ ಮಣ್ಣಿನ ಗುಣ

ನೀವು ಭಾರತಕ್ಕೆ ಹೋದಾಗ ಏರ್‌ಪೋರ್ಟಿನಲ್ಲಿ ಕಾಲಿಡುತ್ತಿದ್ದಂತೆಯೇ ಮೂಗಿಗೆ ಫಿನೈಲ್ ವಾಸನೆ ಅಡರಿಕೊಳ್ಳೋದನ್ನ ಗಮನಿಸಿರಬಹುದು. ಈ ಒಂದು ವಾಸನೆಯೇ ಸಾಕು, ನಮ್ಮಲ್ಲಿನ ಒಳ್ಳೆಯ ಹಾಗೂ ಕೆಟ್ಟವುಗಳ ದರ್ಶನವನ್ನು ನೆನಪಿಸುವುದಕ್ಕೆ! ಈ ವಾಸನೆಯ ಸಂಸ್ಕಾರ ದೂರ ದೇಶಗಳಿಗೆ ಹೋದರೂ ಮಾಸುವುದಿಲ್ಲ, ಹೊಸ ವಾಸನೆಗಳ ಸಂಸ್ಕಾರ ಸಿಕ್ಕಿದೊಡನೆ ಹಳೆಯದು ಕಳೆದು ಹೋಗುವುದಿಲ್ಲ. ಅಮ್ಮನ ಬೆಚ್ಚನೆ ಸೀರೆ ನಿರಿಗೆಳಲ್ಲಿ ತಮ್ಮ ಮುಖ ಮುಚ್ಚಿಕೊಂಡು ಬೆಳೆದು ದೊಡ್ಡವರಾದ ಎಲ್ಲರಿಗೂ ನಾನು ಹೇಳುವುದೇನೆಂದು ಗೊತ್ತು. ಇದೇ ರೀತಿಯ ಸಂಸ್ಕಾರದ ಜಾತಿಗೆ ಸೇರಿರೋದು ಮಣ್ಣಿನ ಒಡನಾಟ: ನೀವು ಹೊಲಗದ್ದೆಗಳಲ್ಲಿ ಕೆಲಸ ಮಾಡಿದ್ದರೆ, ನಿಮ್ಮ ಮನೆಯ ಅಂಗಳವನ್ನು ಗುಡಿಸಿ ಸಾರಿಸಿ ಬಳಿದಿದ್ದರೆ, ಅಲ್ಲಲ್ಲಿ ಬಿದ್ದ ಸೆಗಣಿಯನ್ನು ಹೆಕ್ಕಿ ತಂದು ತಿಪ್ಪೆ ತುಂಬಿಸಿದ್ದರೆ, ಮನೆಯ ಹಿತ್ತಲಿನಲ್ಲಿ ಹೂ-ತರಕಾರಿ ಗಿಡಗಳನ್ನು ನೆಟ್ಟಿದ್ದರೆ ಇವೆಲ್ಲವೂ ಕಣ್ಣ ಮುಂದೆ ಯಾವಾಗ ಬೇಕಂದರೂ ಬಂದು ನಿಲ್ಲುತ್ತವೆ.

***

ಭಾರತೀಯರು ಅಮೇರಿಕೆಯಲ್ಲಿ ಕಮ್ಮ್ಯೂನಿಟಿಯ ಕೆಲಸ ಕಾರ್ಯಗಳಲ್ಲಿ ಅಷ್ಟೊಂದು ಭಾಗವಹಿಸುವುದಿಲ್ಲ ಎಂಬ ಅಬ್ಸರ್‌ವೇಷನ್ ಅಲ್ಲಲ್ಲಿ ಕಾಣಸಿಗುತ್ತದೆ - ಇವುಗಳಿಗೆಲ್ಲ ನನ್ನ ಒಂದೇ ಉತ್ತರವೆಂದರೆ - ಮಣ್ಣಿನೊಡನಾಟ. ಎಲ್ಲಿಯವರೆಗೆ ಈ ಮಣ್ಣಿನಲ್ಲಿ ಆಡುವುದಿಲ್ಲವೋ, ಓಡುವುದಿಲ್ಲವೋ; ಎಲ್ಲಿಯವರೆಗೆ ಈ ಮಣ್ಣಿನಿಂದ ದೂರವೇ ಇರುತ್ತೇವೋ ಅಲ್ಲಿಯವರೆಗೆ ನಾವು ಇಲ್ಲಿಯವರೊಳಗೆ ಒಂದಾಗುವುದಿಲ್ಲ. ಈ ಕ್ಷಣದಲ್ಲಿ ಅನಿವಾಸಿ ಭಾರತೀಯ ಮನಸ್ಸುಗಳ ಸಮೀಕ್ಷೆಯನ್ನೇನಾದರೂ ನಡೆಸಿದರೆ ಸತ್ತ ಮೇಲೆ 'ಈ' ಮಣ್ಣನ್ನು ಸೇರಬಯಸುವವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಬೇಕು ಬೇಕಾದ ಐಶಾರಾಮಗಳಿಗೆ "ಈ" ಮಣ್ಣು, ಸತ್ತಾಗ, ಸತ್ತ ಮೇಲೆ ಬೇಕಾದ ಸಂಸ್ಕಾರಗಳಿಗೆ "ಆ" ಮಣ್ಣು - ಇಲ್ಲಿನ ಪೋಟೋಮ್ಯಾಕ್ ಅಥವಾ ಹಡ್ಸನ್ ನದಿಯಲ್ಲಿ ಬೂದಿಯನ್ನು ಸೇರಿಸಿಬಿಡಿ ಎನ್ನುವುದಕ್ಕೂ ಗಂಗೆಯಲ್ಲಿ ಕಲಸಿ ಹಾಕಿ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ.

ಆದರೆ "ಈ" ಮಣ್ಣಿನ ಋಣಾನುಬಂಧ ಬಹಳ ಅಪರೂಪವಾದದ್ದು - ಇವತ್ತು ಚಾಟ್ ಮಾಡುವಾಗ ಭಾರತದ ನನ್ನ ಸ್ನೇಹಿತರೊಬ್ಬರು ನೆನಪಿಸಿಕೊಟ್ಟಂತೆ ಈ ಮಣ್ಣು ನನಗೆ ಏನೇನೆಲ್ಲ ಅನುಕೂಲ ಮಾಡಿಕೊಟ್ಟಿದೆ ಎಂದು ದಾರಿಯ ಉದ್ದಕ್ಕೂ ಪಟ್ಟಿ ಮಾಡುತ್ತಾ ಬಂದೆ - ಈ ಮಣ್ಣಿನ ಮೊಟ್ಟ ಮೊದಲ ಇಷ್ಟವಾದ ಗುಣವೆಂದರೆ ನಾನು ದೈನಂದಿನ ಬದುಕಿನಲ್ಲಿ, ವ್ಯವಹಾರದಲ್ಲಿ ಸುಳ್ಳನ್ನು ಹೇಳದೇ ಇರೋದು - ಒಂದು ನಿಮಿಷ ಈ ವಾಕ್ಯವನ್ನು ಕುರಿತು ಯೋಚಿಸುತ್ತೇನೆ - ಹೌದು, ಸುಳ್ಳು ಹೇಳುವ, ಒಂದರ ಮೇಲೆ ಮತ್ತೊಂದನ್ನು ಸೇರಿಸಿ ಅದನ್ನು ಸಾಧಿಸುವ ಅಭ್ಯಾಸ ಇದೆಯಲ್ಲಾ ಅದೇ ನಮ್ಮ ಅಧಃಪತನಕ್ಕೆ ಕಾರಣವಾಗಲಿಕ್ಕೂ ಸಾಕು. ಏರ್‌ಪೋರ್ಟಿನಲ್ಲಿ ಮೂಗಿಗೆ ಅಡರಿಕೊಳ್ಳುವ ಫಿನೈಲ್ ವಾಸನೆ 'ಪ್ಯಾವ್ಲೋವ್ ನಾಯಿ'ಗೆ ಬಂದ ಹಾಗೆ ನನಗೆ ಸುಂಕದ ಅಧಿಕಾರಿಗಳ ಲಂಚಕೋರತನವನ್ನೂ, ತಮ್ಮ-ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದ ಏರ್‌ಪೋರ್ಟ್ ಅಧಿಕಾರಿಗಳನ್ನೂ, ಜೇಬಿನಿಂದ ಇಪ್ಪತ್ತು ಡಾಲರುಗಳ ನೋಟನ್ನು ಈಗ ತೆಗೆಯಬಹುದು, ಆಗ ತೆಗೆಯಬಹುದು ಎಂದು ಹಸಿದ ಕಣ್ಣುಗಳಲ್ಲಿ ನೋಡುವ ಕೆಲಸಗಾರರನ್ನು ನೆನಪಿಗೆ ತರುತ್ತದೆ. "ಈ" ಮಣ್ಣಿನಲ್ಲಿ ಬದುಕಿದ ಲಂಚ-ಸುಳ್ಳು ರಹಿತ ಬದುಕನ್ನೆಲ್ಲ ಒಂದೇ ಹೊಡೆತದಲ್ಲಿ ಹೆದರಿಸಿಬಿಡುವಂತಹ ಪರಿಸ್ಥಿತಿಗಳು ಆರಂಭವಾಗೋದೂ ಏರ್‌ಪೋರ್ಟಿನಲ್ಲೇ. ಹೇಗೆ ಹೇಳಬೇಕೋ, ಹಂಚಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ - ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಯೂ, ರಿಜಿಸ್ಟ್ರ್‍ಆರ್‌ಗೆ ಕೊಡಬೇಕಾದ ಎಲ್ಲ ದಾಖಲೆಗಳನ್ನು ಕೊಟ್ಟೂ, ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಅದರ ಮೇಲೆ ಐನೂರು ರೂಪಾಯಿ ಲಂಚ ಕೊಟ್ಟವ ನಾನು, ನನ್ನ ಕಷ್ಟ ನನಗೇ ಗೊತ್ತು, ಇದು ಆದದ್ದು ಬೇರೆಲ್ಲೂ ಅಲ್ಲ, ನಮ್ಮ ಶಿವಮೊಗ್ಗದಲ್ಲಿಯೇ. ಈ ಲಂಚದ ಹಿಂದೆ ಬಹಳ ಉದ್ದವಾದ ಕಥೆಗಳನ್ನು ಬರೆಯಬಹುದು, ಆದರೆ ಇಂಥ ಒಂದೊಂದು ಅನುಭವವೂ ನನ್ನಂಥವರ ಮನಸ್ಸನ್ನು ಮುದುಡಿಬಿಡುತ್ತದೆ, ಶಿವಮೊಗ್ಗದ ಮೇಲಿನ ನನ್ನ ಪ್ರೀತಿಯೆಲ್ಲ ಈ ಅನುಭವದ ನೆನಪಾದಾಗಲೆಲ್ಲ ಹೊಳೆ ನೀರಿನಲ್ಲಿ ಕೊಚ್ಚಿ ಹೋಗುವ ಮಣ್ಣಿನಂತಾಗುತ್ತದೆ. ಕೇವಲ ಮೂರು-ನಾಲ್ಕು ವಾರಗಳಲ್ಲಿ ಮದುವೆಯಾಗಿ ಕೆಲಸಕ್ಕೆ ಹಿಂತಿರುಗಿ ಹೋಗುವುದು ನನ್ನ ಆಯ್ಕೆ ಆದರೆ "ಆ" ಮಣ್ಣಿನ ಕೆಟ್ಟ ಗುಣಲಕ್ಷಣಗಳನ್ನು ಹೆಜ್ಜೆ-ಹೆಜ್ಜೆಗೂ ವಿರೋಧಿಸದೆ ಸಹಿಸಿಕೊಂಡು, ಅನುಸರಿಸಿಕೊಂಡು ಹೋಗುವುದು ನನ್ನ ಪರಂಪರೆ. ಆ ದಿನ ಪುಣ್ಯಕ್ಕೆ ನನ್ನ ಅಣ್ಣ ನನ್ನ ಜೊತೆಯಲ್ಲಿದ್ದ, ಇಲ್ಲವಾದರೆ ನನಗೆ ಬಂದ ಸಿಟ್ಟಿನಲ್ಲಿ ಮದುವೆ ಅನ್ನೋ ಮಹಾ ಅನುಭವ, ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು ರಿಜಿಸ್ಟ್ರ್‍ಆರ್‌ರಿಂದ ಸರ್ಟಿಫಿಕೇಟ್ ಪಡೆಯದೇ, ನನ್ನ ಹೆಂಡತಿಯ ವೀಸಾಕ್ಕೆ ಅರ್ಜಿ ಹಾಕುವುದಕ್ಕೆ ಅನಿರ್ಧಿಷ್ಟಕಾಲ ತಡವಾಗುವುದರ ಮೂಲಕ ಇನ್ನೂ ಕೆಟ್ಟ ಅಂತ್ಯವನ್ನು ಪಡೆದುಕೊಳ್ಳುತ್ತಿತ್ತು. ಹನ್ನೆರಡು-ಹದಿಮೂರು ಡಾಲರಿನ ಪ್ರಶ್ನೆ ಅಲ್ಲ, ತಲತಲಾಂತರದಿಂದ ಮನೆಯೋ-ಸೈಟೋ-ವಾಹನವನ್ನೋ ನೋಂದಾವಣಿ ಮಾಡುವಲ್ಲಿ ನನಗೆ ಗೊತ್ತಿರೋ ಹಾಗೆ ಇದ್ದ ಲಂಚವನ್ನು ನಾನು "ಈ" ಮಣ್ಣಿನ ದೃಷ್ಟಿಕೋನದಲ್ಲಿ ನೋಡಿದಾಗ ಉಂಟಾದ ಸಣ್ಣ ಪ್ರತಿಕ್ರಿಯೆ ಅದು.

ನಾನು ಈ ಹಿಂದೆಂದೂ ಲಂಚದ ವಾತಾವರಣದ ಅರಿವೇ ಇರದವನೆಂದು ಆಡಿಕೊಳ್ಳುತ್ತಿಲ್ಲ, ನನಗೆ "ಈ" ಮಣ್ಣು ಇನ್ನು ಮುಂದೆ ನಾನು ಬೀಳಬಹುದಾದ ಲಂಚದ ಬಲೆಯನ್ನು ನೇಯ್ದ ದಾರಗಳನ್ನು ನೋಡುವ ಒಂದು ಹೊಸ ದೃಷ್ಟಿಕೋನವನ್ನು ರೂಢಿಸಿಕೊಟ್ಟಿದೆ, ಈ ರೂಢಿ ಮುಂದೆ ನಾನೆಲ್ಲಿದ್ದರೂ ನನ್ನ ಜೊತೆಯಲ್ಲೇ ಇರುತ್ತೆ. ಕ್ಯಾಪಿಟಲಿಷ್ಟ್ ಪ್ರಪಂಚದಲ್ಲಿದ್ದುಕೊಂಡು, ಕಾರ್ಪೋರ್‍ಏಟ್ ಏಣಿಯ ಮೆಟ್ಟಿಲುಗಳಲ್ಲಿ ಒಬ್ಬನಾಗಿದ್ದುಕೊಂಡು ಜಗತ್ತನ್ನು ಒಳ್ಳೆಯ ಸ್ಥಳವಾಗಿ ಪರಿವರ್ತಿಸಬಹುದಾದ ಕನಸನ್ನು ಕಾಣುವ ಹುಂಬ ಎಂದು ನನ್ನ ಸ್ನೇಹಿತರು ನನ್ನ ಎದುರೇ ಆಡಿಕೊಳ್ಳುತ್ತಾರೆ, ಆದರೆ ಸಮಾಜವಾದದ ಹಿನ್ನೆಲೆಯಲ್ಲಿ ಗೋಪಾಲಗೌಡ, ಜೆಪಿಯಂತಹವರ ಹೆಸರಿನಲ್ಲಿ ಇಡೀ ಊರಿಗೆ ಬೇಲಿ ಹಾಕಿಕೊಂಡು ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಮಾಡಿರುವ ಧುರೀಣರನ್ನು ನಾನು ಬಲ್ಲೆ, ಅದಕ್ಕೇನೆನ್ನುತ್ತೀರಿ ಎಂದರೆ ಅವರ ಬಳಿ ಯಾವುದೇ ಉತ್ತರವಿರೋದಿಲ್ಲ. ಕೈಕೇಯಿ-ಮಂಥರೆ, ಗಾಂಧಾರಿ-ಶಕುನಿ ಮುಂತಾದ ಪಾತ್ರಗಳನ್ನು ಪುರಾಣದಲ್ಲಿ ಸೃಷ್ಟಿಸಿ, ಅಲ್ಲಲ್ಲಿ ಕಥೆಯನ್ನು ಹಿಂಜುವ ಅನನುಭವಿ ನಿರ್ದೇಶಕರಂತೆ ವೈಭವೀಕರಿಸಿ ಪರಂಪರಾನುಗತವಾಗಿ ನಮ್ಮನ್ನು "ಆ" ದೃಷ್ಟಿಕೋನದಲ್ಲಿ ನೋಡುವುದನ್ನು ಹೇಳಿಕೊಟ್ಟಿದ್ದಾರೇನೋ ಎಂದು ಅನುಮಾನವಾಗುತ್ತದೆ. "ಆ"ಮಣ್ಣಿನ ಮೇಲೆ ನಿಂತಾಗ "ಈ" ಮಣ್ಣಿನಲ್ಲಿ ಕೇಳಬಹುದಾದ 'ಇದೇಕೆ ಹೀಗೆ?' ಎಂದು ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ - ಹಾಗೆ ಯಾವುದಾದರೊಂದು ತಲೆಮಾರಿನಲ್ಲಿ ನಾವು ಮಾಡಿದ್ದೇ ಆದರೆ ನಮಗಂಟಿದ (ಅಡ್ಜಸ್ಟು ಮಾಡಿಕೊಂಡು ಹೋಗುವ) ಶಾಪ ಅರ್ಧ ಕಡಿಮೆಯಾಗುತ್ತದೆ.

***

ಇಲ್ಲಿ ಬದುಕಲು ಕಲಿಸಿದ "ಆ" ಮಣ್ಣನ್ನು ತೆಗಳಿ ಬರೆಯುತ್ತಿಲ್ಲ, ಅಲ್ಲಿ ಹೀಗೂ ಬದುಕಬಹುದು ಎಂಬ ಹೊಸ ದೃಷ್ಟಿಕೋನವನ್ನು ನೀಡಿದ "ಈ" ಮಣ್ಣನ್ನು ಗೌರವಿಸುತ್ತಿದ್ದೇನೆ ಅಷ್ಟೇ.