ನಾಯಕರು ಬೇಕು
I wish we had this in Karnataka, at this moment, we don't!
ನಮ್ಮ ಕರ್ನಾಟಕದಲ್ಲಿ ಈ ರೀತಿಯ ಒಂದು ಬದಲಾವಣೆ, ಕ್ರಾಂತಿ, ಯಾವಾಗ ಬರುತ್ತೋ ಕಾಣೆ.
ಆದರೆ, ಹಾಗಾದಾಗ ಅದೊಂದು ಮಹತ್ವಾಕಾಂಕ್ಷಿ ಬದಲಾವಣೆ ಆಗಿರುತ್ತದೆ, ಅನ್ನೋದು ಬಹಳ ಮುಖ್ಯವಾದ ಅಂಶ.
***
ನೆರೆಯ ತಮಿಳುನಾಡಿನಲ್ಲಿ ಜೋಸೆಫ಼್ ವಿಜಯ್ ಚಂದ್ರಶೇಖರ್ ಎನ್ನುವ ಸಿನಿಮಾ ನಟ, ತನ್ನ ಎರಡೇ ಎರಡು ವರ್ಷಗಳ ಹಿಂದೆ ಹುಟ್ಟಿದ ಟಿವಿಕೆ ಎನ್ನುವ ಪಕ್ಷದ ನೆಲೆಗಟ್ಟಿನ ಮುಖಾಂತರ, ಆರು ದಶಕಗಳಿಂದ ಆಳಿಕೊಂಡು ಬಂದಿದ್ದ ಎರಡು ಮಹಾ ಪ್ರಾಂತೀಯ ಪಕ್ಷಗಳ ನಾಯಕರುಗಳಿಗೆ ನೀರು ಕುಡಿಸಿ ಬಿಟ್ಟ.
ಇನ್ನೊಂದು ಹದಿನಾಲ್ಕು ಸೀಟುಗಳೇನಾದರೂ ಬಂದಿದ್ದರೆ, ತನ್ನದೇ ಆದ ಪಕ್ಷದ ತಳಹದಿಯಿಂದ ಒಂದು ಪೂರ್ಣ ಸರ್ಕಾರವನ್ನೇ ರಚಿಸಿ ಬಿಡುತ್ತಿದ್ದನೋ ಏನೋ. ಇರುವ ೨೩೪ ಸೀಟುಗಳಲ್ಲಿ ನೂರಾಐದನ್ನು ಸಾರಾಸಗಟಾಗಿ ಗೆಲ್ಲುವುದೆಂದರೆ, ಅದರಲ್ಲೂ ಹಾಲಿ ಮುಖ್ಯಮಂತ್ರಿ ಎಂಕೆ. ಸ್ಟಾಲಿನ್ ಅಂಥವರೇ, ಸೋಲುವುದೆಂದರೆ?
ಹಲವು ದಶಕಗಳ ಹಿಂದೆ ಇದೇ ರೀತಿ ಒಂದು ಕ್ರಾಂತಿಯಾಗಿತ್ತು, ನೆರೆಯ ಆಂಧ್ರಪ್ರದೇಶದಲ್ಲಿ. ಇನ್ನೂ ಒಂದು ಪಕ್ಷವಾಗಿ ಅಸ್ಥಿತ್ತ್ವಕ್ಕೆ ಬಂದ ತೆಲುಗು ದೇಶಂ ಪಾರ್ಟಿ, ಕೇವಲ ಒಂಭತ್ತು ತಿಂಗಳುಗಳಲ್ಲಿ, ಅಲ್ಲಿಯ ವಿಧಾನಸಭೆಯ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿತ್ತು. ಅಂದಿನ ನಾಯಕ, ಎನ್.ಟಿ.ರಾಮರಾಯರು, ಇಡೀ ಪ್ರಾಂತ್ಯವು ಆರಾಧಿಸುವ ದೈವವಾಗಿ ಕಂಗೊಳಿಸಿದ್ದರು. ಸಿನಿಮಾ ಹಿನ್ನೆಲೆಯಲ್ಲೇ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸಿದ್ದ ಎನ್.ಟಿ.ಆರ್.ಗೆ ತನ್ನ ಪ್ರಾಂತ್ಯದ ಜನರ ಮುನ್ನಡೆಯನ್ನು ಬಿಟ್ಟರೆ ಬೇರೆ ಯಾವ ಸ್ವಾರ್ಥವೂ ಇದ್ದಂತಿರಲಿಲ್ಲ. ಹಾಗಿದ್ದಾಗ ಕೀರ್ತಿ, ಜನಪ್ರಿಯತೆಯ ಜೊತೆ ಜೊತೆಗೆ ಯಶಸ್ಸೂ ಕೂಡ ನಿಸ್ವಾರ್ಥ ಮನೋಭಾವನೆ ಇದ್ದವರಲ್ಲಿ ಬಂದೇ ಬರುತ್ತದೆ.
ಕೆಲವೊಮ್ಮೆ ನಮ್ಮ ನಮ್ಮ ನಾಯಕರುಗಳನ್ನು ನಮ್ಮ ತಾರ್ಕಿಕ ಮನೋಭಾವನೆಯಿಂದ ಹೊರಗಿಟ್ಟು ನೋಡಿದಾಗ, ಅಲ್ಲಿ ಒಂದು ಪೂಜನೀಯ ಭಾವನೆ ಬಂದೇ ಬರುತ್ತದೆ. ಇಲ್ಲವೆಂದರೆ, ಸುಮಾರು ೬ ಕೋಟಿ ಮತದಾರರಲ್ಲಿ ಸುಮಾರು ಒಂದೂ ಮುಕ್ಕಾಲು ಕೋಟಿ ಒಟ್ಟು ಮತಗಳನ್ನು ಯಾವುದೇ ಅನುಭವವಿರದ ಪಕ್ಷದ ಅಭ್ಯರ್ಥಿಗಳು ಗಳಿಸುತ್ತಾರೆಂದರೆ? ಹಾಗೆ ಮಾಡುತ್ತಾ, ಅರವತ್ತು ವರ್ಷಗಳಿಂದ ರಾಜಕೀಯ ಕಣ್ಣಾಮುಚ್ಚಾಲೆ ಆಡುತ್ತ ಬಂದಿದ್ದ ಎರಡೂ ಪ್ರಾಂತ್ರೀಯ ಪಕ್ಷಗಳನ್ನು ಬದಿಗೆ ತಳ್ಳುವುದೆಂದರೆ? ಅದೇನು ಸುಲಭದ ಮಾತೆ? ಇದರಲ್ಲಿ ಮುಂಬರುವ ಕ್ರಾಂತಿಯ ಸಂಪೂರ್ಣ ಮುನ್ನೋಟವಿದೆ.
ಟಿವಿಕೆಯ ನಾಯಕರ ಠೀವಿ ಅದೆಷ್ಟು ಹೆಚ್ಚು ಎಂದರೆ, ಕಡಿಮೆ ಹಣ ಮತ್ತು ಸಂಪನ್ಮೂಲಗಳನ್ನು ಬಳಸಿ, ಹೆಚ್ಚು ಹೆಚ್ಚು ಯುವ ಮತದಾರರನ್ನು ತಮ್ಮೆಡೆಗೆ ಸೆಳೆದುಕೊಂಡು, ಗಣನೀಯವಾದ ಸೀಟುಗಳನ್ನು ಗೆದ್ದುಕೊಂಡಿರುವುದು. ಈಗಾಗಲೇ ಹಾಲಿ ಆಡಳಿತದಲ್ಲಿದ್ದ ಪಕ್ಷ ಮತ್ತು ಪಕ್ಷದ ಮುಖಂಡರುಗಳಿಗೆ ನೀರು ಕುಡಿಸಿ, ತನ್ನ ಜನಹಿತ ಧೋರಣೆ ಮತ್ತು ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ವಿಜಯ್ ಅವರ ಪಕ್ಷ ಗೆಲ್ಲುವುದು ಎಂದು ಯಾರೂ ಊಹಿಸಿರಲಿಲ್ಲ.
***
ನಮ್ಮ ಕರ್ನಾಟಕದಲ್ಲಿ ಇದೇ ರೀತಿ ಆಗಿದ್ದರೆ ಎಷ್ಟೊಂದು ಚೆನ್ನಾಗಿತ್ತು! ನಮ್ಮ ಕರ್ನಾಟಕದ ಜನಪರ ಮತ್ತು ಜನಪ್ರಿಯ ನಾಯಕರುಗಳನ್ನು ತೆಗೆದುಕೊಂಡರೆ ಯಾರು ಈ ರೀತಿಯ ಮುಂಚೂಣಿಯಲ್ಲಿ ನೆನಪಿಗೆ ಬಂದಾರು? ಹಾಗೆ ಅಭ್ಯದಯಕ್ಕೆ ಬಂದು, ಜನರಿಗೆ ಅದೇನೇನು ಅನುಕೂಲಗಳನ್ನು ಮಾಡಿಕೊಟ್ಟಾರು? ಸ್ವಾರ್ಥರಹಿತ ರಾಜಕಾರಣ ಅನ್ನೋದು ಇದೆಯೇ? ಹಾಗಿದ್ದರೆ, ಅದು ನಮ್ಮ ನಾಡಿನಲ್ಲಿ ಏಕೆ ಹೊರಹೊಮ್ಮೋದಿಲ್ಲ?
ಹೀಗೆ ಅನೇಕ ಪ್ರಶ್ನೆಗಳು ಏಳುತ್ತಲೇ ಇವೆ.
ನಮ್ಮ ನಾಯಕರುಗಳು ಏನಿದ್ದರೂ ಜಾತಿ-ಪಕ್ಷ-ಸ್ವಹಿತಗಳನ್ನು ಮುಂದಿಟ್ಟುಕೊಂಡು ಕಚ್ಚಾಡುವುದಕ್ಕೆ ಮಾತ್ರ ಹೆಸರುವಾಸಿಯಾದವರು. ಇವರನ್ನು ನೋಡಿದಾಗ - ಓಲೈಕೆ ರಾಜಕೀಯ, ವೃದ್ಧಾಪ್ಯದಲ್ಲೂ ಕುರ್ಚಿಗೆ ಅಂಟಿಕೊಂಡಿರುವ ಮನೋಭಾವನೆ, ಕೌಟುಂಬಿಕ ನಾಯಕತ್ವವನ್ನು ಬೆಳೆಸುವುದರಲ್ಲೋ ತಮ್ಮ ಶಕ್ತಿಯನ್ನು ವ್ಯಯಿಸುವವರೇ ವಿನಾ, ನಿಜವಾಗಿಯೂ ಜನಪರ ಹಿತಾಸಕ್ತಿಗಳನ್ನು ಕೇಂದ್ರದಲ್ಲಿಟ್ಟುಕೊಂಡು ಕೆಲಸ ಮಾಡಬಲ್ಲರೇ? ಎಂದು ಪ್ರಶ್ನೆಗಳು ಏಳುತ್ತವೆ.
ಕಾಲದಿಂದ ಕಾಲಕ್ಕೆ ಬದಲಾವಣೆಗಳು ಸಹಜ. ಒಂದು ರಾಜ್ಯ ಅಥವಾ ರಾಷ್ಟ್ರದ ಚುಕ್ಕಾಣಿಯನ್ನು ಹಿಡಿದು ಮುನ್ನಡೇಸುವ ಛಲದಿಂದ, ಯಾವುದೇ ಅನುಭವ ಅಥವಾ ಹಿನ್ನೆಲೆ ಇರದಿದ್ದರೂ, ಆಗಾಗ್ಗೆ ಅಲ್ಲಲ್ಲಿ ನಾಯಕರುಗಳು ಹುಟ್ಟುತ್ತಲೇ ಇರುತ್ತಾರೆ. ಆದರೆ, ಪ್ರಸ್ತುತ ನಮ್ಮ ನಾಡಿಗೆ ಆ ಭಾಗ್ಯ ಬಂದಿಲ್ಲವಷ್ಟೇ.
ಒಂದು ಕಾಲದಲ್ಲಿ, ಟಂಪ್ ಚುನಾವಣೆಗೆ ನಿಂತಾಗ - ಒಬ್ಬ ಬಫ಼ೂನಿನಂತೆ ಕಂಡುಬಂದಿದ್ದರು, ಅದೇ ವ್ಯಕ್ತಿ, ಅಮೇರಿಕದ ಅಧ್ಯಕ್ಷನಾಗಿ, ಇಂದು ಎರಡನೇ ಟರ್ಮ್ ಅನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಒಬ್ಬ ಮುಂದಾಳುವಿಗೆ, ಮಹತ್ವಾಕಾಂಕ್ಷಿ ಯೋಚನೆ, ಕನಸಿನ ಬಲ, ಮತ್ತು ಮಾಡಿಯೇ ತೀರುತ್ತೇನೆಂಬ ಛಲವೊಂದಿದ್ದರೆ ಸಾಕು - ಬೇರೆ ಯಾವುದೂ ಬೇಡ. ಅನುಭವ, ಹಿನ್ನೆಲೆ, ವಿದ್ಯಾಬ್ಯಾಸ, ಮೊದಲಾದವುಗಳೆಲ್ಲ ಗೌಣ. ಈ ರೀತಿಯ ನಾಯಕರು ಎಲ್ಲ ರಂಗದಲ್ಲೂ ಹುಟ್ಟುತ್ತಲೇ ಇರುತ್ತಾರೆ ಅವರನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗುರುತಿಸಿ, ಅವರನ್ನು ಹಿಂಬಾಲಿಸಿದರೆ ಜಯ ಖಂಡಿತ!


No comments:
Post a Comment