ಒಂದು ಛತ್ರಿಯ ವೃತ್ತಾಂತ
ಶ್ರಾವಣ ಮಾಸ ಬಂದಿತೆಂದರೆ ನಮ್ಮಲ್ಲಿ ಜಿಟಿಪಿಟಿ ಮಳೆ ಕಿಚಿಪಿಚಿ ಕೆಸರು - ಒಂದು ಕಡೆ ಉಂಡೆಗಳನ್ನು ತಿಂದುಕೊಂಡು ಜೋಕಾಲಿ ಆಡಿಕೊಂಡು ಕೇಕೆ ಹೊಡೆಯುವ ಮಕ್ಕಳು, ಮತ್ತೊಂದೆಡೆ ಹೊಸದಾಗಿ ಮದುವೆ ಆಗಿ ಇದೀಗ ತಾನೇ ಬದುಕಿನ ಮತ್ತೊಂದು ಮಗ್ಗುಲನ್ನು ಉತ್ಸಾಹದಿಂದ ನೋಡುತ್ತಿರುವ ಜೋಡಿಗಳು - ಬಣ್ಣಗಳಿಗ್ಯಾವ ಕೊರತೆ ಇಲ್ಲ. ಅಲ್ಲದೇ ಮೊದಲೆಲ್ಲ ಮಳೆಗಾಲವೆಂದರೆ ವರ್ಷದ ಆರು ತಿಂಗಳವರೆಗೆ ಸೂರ್ಯನ ಕಿರಣಗಳು ಕಾಣದಂತೆ ಇರುತ್ತಿತ್ತೆಂದು ನನ್ನ ಹಿರಿಯರು ಹೇಳುತ್ತಿದ್ದರಾದರೂ ನಾನೆಂದೂ ಒಂದೆರಡು ತಿಂಗಳುಗಳ ನಂತರ 'ಮಳೆಗಾಲ'ವನ್ನು ನೋಡಿದ್ದಿಲ್ಲ. ಹೊಸ ಪೀಳಿಗೆಯವರು ಪ್ರಕೃತಿಯ ಮೇಲೆ ತೋರೋ ಅಸಡ್ಡೆಗೆ ವರುಣದೇವ ಮುನಿಸಿಕೊಂಡನೋ ಯಾರಿಗೆ ಗೊತ್ತು?
ಈ ಮಳೆಗಾಲಗಳಲ್ಲಿ ಶಾಲೆಗೆ ಹೋಗುವ ಹುಡುಗ-ಹುಡುಗಿಯರಿಂದ ಹಿಡಿದು ಮುದುಕರವರೆಗೂ ಮನೆಯಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಒಂದು ಜೊತೆ ಪ್ಲಾಸ್ಟಿಕ್ ಚಪ್ಪಲಿ (ಅಥವಾ ಬೂಟು) ಹಾಗೂ ಒಂದು ಛತ್ರಿ ಖಾಯಂ ಆಗಿ ಇದ್ದೇ ಇರುತ್ತಿತ್ತು. ಮಳೆಗಾಲ ಹಾಗೂ ಬಗಲಲ್ಲಿರುವ ಛತ್ರಿಗಳು 'ಮಲೆಗಳಲ್ಲಿ ಮದುಮಗಳ'ಲ್ಲಿನ ಗುತ್ತಿನಾಯಿ-ನಾಯಿಗುತ್ತಿಯಂತೆ ಒಂದಕ್ಕೊಂದು ಪೂರಕವಾಗಿದ್ದವು.
***
ಇಲ್ಲಿ ಕಾರುಗಳು ವೇಗವಾಗಿ ಹೋಗುವುದರಿಂದಲೋ, ಕಾರಿನ ಹಾಗೂ ಗಾಜಿನ ಮೇಲೆ ಬಿದ್ದ ಹನಿಗಳು ದೊಡ್ಡವಾಗಿ ಕಾಣುವುದರಿಂದಲೋ, ಅಥವಾ ಹನಿಗಳು ಬಿದ್ದ ಶಬ್ದ ನಮಗೆ ಕೇಳುವುದರಿಂದಲೋ ಅಥವಾ ಭಾರತದಲ್ಲಿ ಮಳೆಯನ್ನೇ ನೋಡದೆ ಇಲ್ಲಿಗೆ ಬಂದೇ ಕಂಡಂತೆ ಮುಖ ಮಾಡಿಕೊಳ್ಳುವ ಜನರ ಬಿಟ್ಟಿ ಅನುಭವಾಮೃತದ ಸೋಗಿಗೆ ಹೆದರಿಯೋ ಏನೋ 'ಅಮೇರಿಕದಲ್ಲಿ ಮಳೆ ಹೆಚ್ಚು' ಎನ್ನುವ ಮಾತನ್ನು ಆಗಾಗ ಕೇಳುತ್ತಿರುತ್ತೇನೆ (ಸರಿ-ತಪ್ಪು, ಅನ್ನುವ ವಾದಗಳನ್ನು ಹುಡುಕುತಾಣಗಳನ್ನು (search engine) ಮೇಯುವವರಿಗೆ ಬಿಡೋಣ). ಆದರೆ ನನಗೇಕೋ ಅಮೇರಿಕದಲ್ಲಿ ಮಳೆ ಹೆಚ್ಚು ಎಂದು ಅನ್ನಿಸುವುದಿಲ್ಲ - ನಿನ್ನೆ ಕೆಲಸದ ನಿಮಿತ್ತ ಬೋಸ್ಟನ್ಗೆ ಹೋಗಿದ್ದೆ, ಆ ರಾಜ್ಯದೆಲ್ಲ ಕಡೆಯೂ ಮಳೆಗಾಗಿ 'ಹಾಹಾಕಾರ' ಕೇಳಿ (ರೇಡಿಯೋದಲ್ಲಿ) ಬರುತ್ತಿತ್ತು. ಈಗ ನಾನಿರುವ ಪ್ರದೇಶದಲ್ಲೂ ಅಷ್ಟೇ ಹಲವಾರು ಬಾರಿ ರಾಜ್ಯ ಅಥವಾ ಪ್ರದೇಶಗಳನ್ನು 'ಬರ ಪೀಡಿತ'ವೆಂದು ಘೋಷಿಸಿದ್ದಾರೆ - ಹಾಗೆ ಮಾಡಿದಾಗಲೆಲ್ಲ ಹೊಟೆಲುಗಳಲ್ಲಿ ನೀರು ಬೇಕೆಂದರೆ ಮಾತ್ರ ತಂದಿಡುತ್ತಾರೆ, ಇಲ್ಲವೆಂದರೆ ಇಲ್ಲ. ನಾನು ಇಲ್ಲಿನ ಐವತ್ತು ರಾಜ್ಯಗಳ ಮಳೆಯ ಅಧ್ಯಯನವನ್ನು ಮಾಡಿಲ್ಲವಾದ್ದರಿಂದ ನನಗೆ ವೈಜ್ಞಾನಿಕವಾಗಿ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ ನನ್ನ ಅನುಭವವನ್ನು ಅಥವಾ ನನ್ನ ಅನಿಸಿಕೆಯನ್ನು ನಿಮಗೆ ಹೇಳುವುದಕ್ಕೆ ಅಡ್ಡಿಯೇನಿಲ್ಲ ಅಲ್ಲವೇ? ಅಥವಾ ಇಲ್ಲಿನ ಹವಾಮಾನ ವರದಿ ಉತ್ತಮವಾಗಿರುವುದಕ್ಕೋ (ಇಲ್ಲಾ ಸಿಕ್ಕುವ ವರದಿಯನ್ನು ಹಲವಾರು ಮಂದಿ (ಉತ್ತಮವಾಗಿದೆಯೆಂದುಕೊಂಡು) ದೈನಂದಿನ ಜೀವನದಲ್ಲಿ ಬಳಸುವುದಕ್ಕೋ), ಅಥವಾ ಇಲ್ಲಿನ ಒಳಚರಂಡಿ ವ್ಯವಸ್ಥೆ ಸುವ್ಯವಸ್ಥಿತವಾಗಿರುವುದಕ್ಕೋ (ಇಲ್ಲಾ ನನಗೆ ಹಾಗೆ ಅನ್ನಿಸುತ್ತಿರುವುದಕ್ಕೋ) ಅಥವಾ ಮತ್ತೇನೋ ಕಾರಣಗಳಿರಬಹುದು, ಆದರೆ ನನ್ನಂಥ ಭಾರತೀಯರು ಹೇಳುವ 'ಅಮೇರಿಕದಲ್ಲಿ ಮಳೆ ಹೆಚ್ಚು' ಎನ್ನುವ ಮಾತು ನನಗೆ ನಿಜವೆಂದು ಈವರೆಗೆ ಅನ್ನಿಸಿಲ್ಲ.
***
ನನಗೂ ನನ್ನದೇ ಆದ ಛತ್ರಿಯೊಂದಿತ್ತು, ನನ್ನ ಶಾಲೆಯ ಪುಸ್ತಕದ ಚೀಲದೊಂದಿಗೆ ಅದು ಕೂಡ ಶಾಲಾದಿನಗಳಲ್ಲಿ ನನ್ನ ಸಂಗಾತಿಯಾಗೇ ಇತ್ತು. ನಾನು ಇಲ್ಲಿಗೆ ಬರುವಾಗ ಸೂಟ್ಕೇಸ್ನಲ್ಲಿ ಒಂದು ಛತ್ರಿಯನ್ನೂ ಪ್ಯಾಕ್ ಮಾಡಿದ್ದೆ, ಅದನ್ನು ನೋಡಿದ ನನ್ನ ಜೊತೆಯವನೊಬ್ಬ 'ಅಲ್ಲಿಗೆ ಯಾಕೆ ಆ ಛತ್ರಿಯನ್ನು ತಗೊಂಡು ಹೋಗ್ತೀಯೋ?!' ಅಂದಿದ್ದ - ಅಮೇರಿಕೆಯ ಜ್ಞಾನ ನನ್ನಷ್ಟೇ ಅವನಿಗೆ ಇದ್ದಂತವನು ಆದರೆ ಏಕೆ ಹಾಗೆ ಹೇ/ಕೇಳಿದ್ದನೆಂದು ಗೊತ್ತಿಲ್ಲ. ಆದರೆ ನಾನು ನನ್ನ ಛತ್ರಿಯನ್ನು ಕೈ ಬಿಡಲಿಲ್ಲ. ನನ್ನ ಪ್ರಾಥಮಿಕ ಶಾಲೆಯಿಂದ ಹಿಡಿದು ಹೈಸ್ಕೂಲು ಮುಗಿಸುವವರೆಗೆ ಇದ್ದ ಪ್ರಶ್ನಾರ್ಥಕ ಚಿಹ್ನೆಯಂತಿದ್ದ ಉದ್ದನೆಯ ಛತ್ರಿ ಕಾಲೇಜಿನ ಮೆಟ್ಟಿಲನ್ನು ಹತ್ತಿ ಸುಮಾರು ಪ್ರಥಮ ಪಿಯುಸಿಯ ಮಧ್ಯ ಭಾಗದಲ್ಲಿ ಮುದುಡಿಕೊಳ್ಳುವ ಆಶ್ಚರ್ಯಸೂಚಕ ಚಿಹ್ನೆಯಾಗಿ ಮಾರ್ಪಾಟುಹೊಂದಿತ್ತು - ನನ್ನ ದೇಹ ಬೆಳೆದು ದೊಡ್ಡದಾದಂತೆ ನನ್ನ ಛತ್ರಿಯೂ ದೊಡ್ಡದಾಗುವುದರ ಬದಲು ಕಿರಿದಾದದ್ದು ಏಕೆ ಎಂದು ಸೋಜಿಗಪಟ್ಟಿದ್ದೇನೆ.
***
ನೀವೆಂದಾದರೂ ವಿಂಬಲ್ಡನ್ ಅಥವಾ ಯುಎಸ್ ಓಪನ್ ಟೆನ್ನಿಸ್ ಮ್ಯಾಚ್ ನೋಡಿದ್ದರೆ ನಿಮಗೆ ಗೊತ್ತು - ಅಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ದಿನಗಳಲ್ಲಿ ಆಟ ನಡೆದರೆ ಆಟ ನೋಡಲು ಬರುವ ಜನರು ಥರಾವರಿ ಬಣ್ಣ ಬಣ್ಣದ ಉದ್ದನೆಯ ಛತ್ರಿಗಳನ್ನು ತರುವ ವಿಷಯ. ಅಲ್ಲೆಲ್ಲ ವ್ಯಕ್ತಿಯ ದೇಹಕ್ಕೆ ತಕ್ಕಂತೆ ಅವನ ಛತ್ರಿಯೂ ದೊಡ್ಡದಾಗುತ್ತಾ ಹೋಗುತ್ತದೆ - ರೈನ್ಕೋಟ್, ಟೋಪಿ ಹಾಕಿಕೊಂಡೂ ಕೈಯಲ್ಲಿ ಛತ್ರಿ ಹಿಡಿಯುವ ಜನರು ಬೇರೆ. ಆದರೆ ನಾವು ನಮ್ಮಲ್ಲಿ ಎಷ್ಟೊಂದು ಅಗತ್ಯವಾದ ಛತ್ರಿಯೊಂದನ್ನು ಹಿಡಿದುಕೊಂಡು ಹೋಗಲು ಅದೇಕೆ ಹಿಂಜರಿಯುತ್ತೇವೋ? ಬಯಲು ಸೀಮೆಯ ಮಾತು ಬೇರೆ - ಸಾಗರ, ಚಿಕ್ಕಮಗಳೂರಿನಂತಹ ಪ್ರದೇಶಗಳಲ್ಲಿ ಮಳೆಯಾಗೇ ಆಗುತ್ತದೆ, ಆದರೆ ಇಂಥಾ ಮಲೆನಾಡಿನ ಕಾಲೇಜಿನ ಹುಡುಗ-ಹುಡುಗಿಯರನ್ನು ನೀವು ಮಳೆಗಾಲದಲ್ಲಿ ನೋಡಿ, ಇವರೆಲ್ಲ ಅದ್ಯಾವ ಸಿನಿಮಾ ಹೀರೋಗಳನ್ನು ಅನುಕರಣೆ ಮಾಡುತ್ತಾರೋ ಬಿಡುತ್ತಾರೋ ನಾನರಿಯೆ, ಹೆಚ್ಚಿನವರು ಮಳೆಯಲ್ಲಿ ನೆನೆಯುತ್ತಾರೆ, ಇಲ್ಲಾ ಆಶ್ಚರ್ಯಸೂಚಕ ಚಿಹ್ನೆಗೆ ಮೊರೆ ಹೋಗುತ್ತಾರೆ - ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸುವ (ಪ್ರಶ್ನಿಸುವ) ಪ್ರಶ್ನೆಯೇ ಬರೋಲ್ಲ!
ಹೀಗೆ ಪ್ರಶ್ನಾರ್ಥಕ ಹಾಗೂ ಆಶ್ಚರ್ಯಸೂಚಕ ಚಿಹ್ನೆಗಳನ್ನು ನೆನಪಿಸಿಕೊಂಡಾಗೆಲ್ಲ ಜಿ.ಎಸ್. ಶಿವರುದ್ರಪ್ಪನವರು ನೆನಪಿಗೆ ಬರುತ್ತಾರೆ. ಒಂದು ದಿನ ಸಾಗರದಲ್ಲಿ ಅವರು ಕವಿಗೋಷ್ಠಿಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ 'ಗಂಡಸರ ಛತ್ರಿ ಪ್ರಶ್ನಾರ್ಥಕ ಚಿಹ್ನೆ, ಹೆಂಗಸರ ಛತ್ರಿ ಆಶ್ಚರ್ಯಸೂಚಕ ಚಿಹ್ನೆ'ಯೆಂದೂ ತಮ್ಮ ಪದ್ಯವನ್ನೊಂದು ಪ್ರಸ್ತಾವಿಸಿ ಉದಾಹರಣೆ ನೀಡಿದ್ದರು - ಈ ಉಪಮೆಯನ್ನು ಅವರು ವಿದ್ಯಾರ್ಥಿಯಾಗಿದ್ದಾಗ ಅವರ ಮೇಷ್ಟ್ರು ಅವರಿಗೆ ಹೇಳಿದ್ದರಂತೆ ಮುಂದೆ ಅದೇ ಪದ್ಯವಾಯಿತಂತೆ.
ಇನ್ನು ಮೈಸೂರಿನಲ್ಲಿ ಮಾಸ್ತಿಯವರು ಮಳೆ ಇರಲಿ ಇಲ್ಲದಿರಲಿ ಕೊಡೆ ಹಿಡಿದುಕೊಂಡೇ ಓಡಾಡುತ್ತಿದ್ದರಂತೆ, ಪ್ರತಿದಿನ ಸಂಜೆ ಕೊಡೆ ಅರಳಿಸಿಕೊಂಡೇ ನಡೆಯುತ್ತಿದ್ದರಂತೆ, ಒಂದು ದಿನ 'ಮಳೆ ಇಲ್ಲ, ಬಿಸಿಲಿಲ್ಲ, ಛತ್ರಿ ಏಕೆ - ಅದೂ ಅರಳಿಸಿಕೊಂಡು!' ಎಂಬ ಪ್ರಶ್ನೆಗೆ ಉತ್ತರವಾಗಿ ಮೇಲೆ ಮರಗಳ ಮೇಲೆ ಇದೀಗ ತಾನೆ ಗೂಡಿಗೆ ಮರಳುತ್ತಿದ್ದ ಪಕ್ಷಿಗಳನ್ನು ತೋರಿಸಿ 'ಪ್ರಸಾದವನ್ನು ತಪ್ಪಿಸಿಕೊಳ್ಳಲು' ಎಂದು ತಿಳಿಸಿದ್ದರಂತೆ.
***
ನನ್ನ ಛತ್ರಿ ಇಲ್ಲಿಗೆ ಬಂದ ಕೆಲವು ತಿಂಗಳುಗಳಲ್ಲಿಯೇ ಯಾವುದೋ ಗಾಳಿಗೆ ಸಿಕ್ಕು ಕಂಗಾಲಾಗಿ ಹೋಯಿತು, ನನ್ನ ಮೆಚ್ಚಿನ ಛತ್ರಿಯ ಗತಿ ಹೀಗಾಗಿದ್ದನ್ನು ನೆನಸಿಕೊಂಡು ಸ್ವಲ್ಪ ದಿನ ಛತ್ರಿ ರಹಿತ ಬದುಕನ್ನು ಬದುಕಿದೆನಾದರೂ ಅಮೇರಿಕೆಯ ಗಾಳಿ-ಮಳೆಗೆ ಛತ್ರಿಯೊಂದರ ಅಗತ್ಯವಿದ್ದೇ ಇತ್ತು - ಅದಕ್ಕಾಗಿ ಇಲ್ಲಿನ ವಾಲ್ಮಾರ್ಟ್ ಒಂದರಲ್ಲಿ ಪ್ರಶ್ನಾರ್ಥಕ ಛತ್ರಿಯ ಆಕಾರ, ಗಾತ್ರ ಆದರೆ ಹಿಡಿಕೆಯ ವಿಷಯದಲ್ಲಿ ಆಶ್ಚರ್ಯಸೂಚಕ ಚಿಹ್ನೆಯನ್ನು ಹೋಲುವ ಒಂದು ದೈತ್ಯನನ್ನು ಕೊಂಡು ಇಟ್ಟುಕೊಂಡಿದ್ದೇನೆ. ಈ ಛತ್ರಿಗೆ ಎರಡು ಬಣ್ಣಗಳಿವೆ, ಆದರೆ ಇದರಲ್ಲಿನ ಕಪ್ಪು ಬಣ್ಣದಲ್ಲಿ ನನ್ನ ಭಾರತೀಯ ಛತ್ರಿಗಿದ್ದ ಮೆರುಗಿಲ್ಲ.
ಇಲ್ಲಿಗೆ ಬಂದು ನನ್ನ ಭಾರತೀಯ ಛತ್ರಿಯು ಮುರಿಯುವಷ್ಟು ಗಾಳಿಮಳೆಯಲ್ಲಿ ನನ್ನನ್ನು ನಾನು ಸಿಲುಕಿಸಿಕೊಂಡು, ನನ್ನ ಛತ್ರಿಗೆ ಆಗಬಾರದ ಗತಿಯಾಗಿ ಮುಂದೆ ಅಮೇರಿಕದ ದೈತ್ಯ ಛತ್ರಿಯನ್ನು ನನ್ನದಾಗಿಸಿಕೊಂಡ ಮಾತ್ರಕ್ಕೆ ನಾನು 'ಇಲ್ಲಿಯ ಮಳೆ ಹೆಚ್ಚು' ಎನ್ನುವ ಮಾತನ್ನು ಒಪ್ಪೋದಿಲ್ಲ, ನನಗೆ ನಮ್ಮೂರಿನ ಮಳೆಯೇ ಹೆಚ್ಚು ಏಕೆಂದರೆ ಪ್ರತೀಸಾರಿ ಬಿದ್ದಾಗಲೂ ಅದರಲ್ಲಿ (ಆ) ಮಣ್ಣಿನ ವಾಸನೆ ಇರುತ್ತದೆ, ಆ ಮಳೆ ಬಿದ್ದ ಮೇಲೆ ಕೈಕಾಲು ಕೆಸರಾಗುತ್ತದೆ, ಹಾಗೆ ಹರಿಯುವ ನೀರಿನಲ್ಲಿ ನಾನು ಎಷ್ಟೋ ದೋಣಿಗಳನ್ನು ತೇಲಿ ಬಿಟ್ಟಿದ್ದೇನೆ, ಮನ ತಣಿಯೆ ಆಡಿದ್ದೇನೆ...ಇವೆಲ್ಲಕ್ಕೂ ಇಲ್ಲಿ ನನ್ನ ಪ್ಯಾಂಟಿನ ಬುಡವೂ ತೋಯದ ಮಳೆಗೂ ಎಲ್ಲಿಯ ಸಮ?
ಇಲ್ಲಿಯ ಮಳೆ,
'...ಮುಂಗಾರು ಮಳೆ ಹೊಯ್ದು
ನಾವಿಬ್ಬರೂ ತೊಯ್ದು
ನಿಂತಾಗ ಮರಳ ಮನೆ ಕೊಚ್ಚಿ ಹೋದಾ ದಿವಸಾs...
ನೆನಪಿದೆಯಾ ನಿನಗೇ...'
ಎಂದು ಹಾಡಲೂ ಯೋಗ್ಯವಿಲ್ಲದ್ದು!
