Saturday, April 08, 2006

ಸುಂದರೇಶ ಅನ್ನೋ ಜೀನಿಯಸ್




ಸುಂದರೇಶನ ಬಗ್ಗೆ ಬರೆಯದೇ ಇದ್ರೆ ನನ್ನ ಬ್ಲಾಗೇ ಅಪೂರ್ಣ ಅನ್ನಿಸುತ್ತೆ. ಈ ಪುಣ್ಯಾತ್ಮನ ಪರಿಚಯ ನನ್ನ ಮಟ್ಟಿಗೆ ಕೇವಲ ಎರಡು-ಮೂರು ವರ್ಷವಿದ್ದಿರಬಹುದು, ಆದರೆ ಆತನ ಪರಿಣಾಮ ನನ್ನ ಮೇಲೆ ಅಪಾರ, ಅದಕ್ಕೆ ನಾನು ಅವನಿಗೆ ಚಿರಋಣಿ.

ಸುಂದರೇಶ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಶಿವಮೊಗ್ಗದ ಕೋಟೆ ಬೀದಿಯಲ್ಲಿ ಇವತ್ತಿಗೂ ಅವರ ಮನೆ ಇದೆ, ಅವನು ಕೂಡಾ ಅಲ್ಲೇ ಇದ್ದಾನೆ ಅನ್ನೋದು ನನ್ನ ಊಹೆ. ಸುಂದರೇಶ B.Sc.,ಯನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಮುಗಿಸಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಮ್ಯಾಥ್‌ಮ್ಯಾಟಿಕ್ಸ್‌ನಲ್ಲಿ M.Sc., ಮುಗಿಸಿದವನು. ಈತನಿಗೆ ಗಣಿತದಲ್ಲಿ ಬಂದ ಅಂಕಗಳು ನೂರಕ್ಕೆ ನೂರು, ಹೌದು, ಪಕ್ಕಾ ನೂರು, ಉಳಿದಂತೆ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಲ್ಲೂ ಯುನಿವರ್ಸಿಟಿಗೇ ಹೆಚ್ಚಿನ ಸ್ಕೋರು.

ಅವನಿಗೆ ಅವನ ಮೇಲೆ ಗಣಿತದ ಮೇಷ್ಟ್ರು ತೋರಿದ ಪ್ರೀತಿ ಅತಿಯಾಯಿತೇನೋ ಎನ್ನುವಂತೆ, ಮೈಸೂರು, ಕುವೆಂಪು ವಿ.ವಿ.ಗಳಲ್ಲಿ ಸಿಕ್ಕಿದ ಎಲ್ಲ ಕೋರ್ಸುಗಳ ಸೀಟನ್ನು ಬಿಟ್ಟು, ಆತ M.Sc.,ಯಲ್ಲಿ ಗಣಿತವನ್ನೇ ಆರಿಸಿಕೊಂಡ! ಅಲ್ಲದೇ ಅದರಲ್ಲೂ ಬಹಳ ಹೆಚ್ಚಿನ ಅಂಕಗಳನ್ನು ಗಳಿಸಿ ಮೇಲೆಯೇ ಬಂದ...ಆದರೆ ಅವನು ಮೇಲೆ ಬಂದ ಬಗೆ ಬಹಳ ವಿಶೇಷವಾದದ್ದು...

ಸುಂದರೇಶನು B.Sc.,ಯಲ್ಲಿ ರ್‍ಯಾಂಕ್ ಬಂದಿದ್ದರ ಸಲುವಾಗಿ ತುಂಬ ಬೇಕಾದ ಫಾರ್ಮ್‌ಗಳನ್ನು ತುಂಬಿ ಘಟಿಕೋತ್ಸವಕ್ಕೆ ಕೊಡುವಾಗ ನಾನು ಅವನ ಜೊತೆಯಲ್ಲೇ ಇದ್ದೆ. ಎಲ್ಲೆಲ್ಲಿ ಮೆಡಲ್‌ಗಳು ಸಿಗುತ್ತವೆಯೋ ಅವೆಲ್ಲವೂ ಇವನನ್ನೇ ಹುಡುಕಿಕೊಂಡು ಬಂದಿದ್ದವು, ಆದರೆ ಇವ ಆ ಎಲ್ಲ ಮೆಡಲ್‍ಗಳ ಬದಲಿಗೆ ದುಡ್ಡೇ ಸಿಗಲಿ ಎಂದು ಹಣವನ್ನು ಆರಿಸಿಕೊಂಡ. ಬಂದ ಹಣದಲ್ಲಿ ಲೋಡುಗಟ್ಟಲೆ ಗಣಿತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಿ ತನ್ನ ಹಾಸ್ಟೆಲಿನ ರೂಮನ್ನು ತುಂಬಿಸಿಕೊಂಡ.

ಮೈಸೂರಿನಲ್ಲಿ ಓದಿರುವವರಿಗೆಲ್ಲ ಗೊತ್ತಿರುವಂತೆ, ಅಲ್ಲಿನ ಜಾತಿ ರಾಜಕೀಯವೂ, ಕೆಲವು ವಿದ್ಯಾರ್ಥಿಗಳ ಕೀಳು ಅಭಿರುಚಿಯೂ ಸುಂದರೇಶನಿಗೆ ಇಷ್ಟವಾಗಲಿಲ್ಲವೆಂದು ಕಾಣುತ್ತದೆ, ಜೊತೆಯಲ್ಲಿ ಅವನಿಗೆ ಪಾಠ ಹೇಳಿಕೊಡುವ ಕೆಲವು ಮೇಷ್ಟ್ರೂ ಸಹ. ಅವ ತರಗತಿಗೆ ಹೋದರೆ ಹೋದ ಬಿಟ್ಟರೆ ಬಿಟ್ಟ ಎನ್ನುವಂತೆ ಆದ! ನೋಟ್ಸು ಬರೆದುಕೊಂಡರೆ ಬಂತು, ಇಲ್ಲವೆಂದರೆ ಇಲ್ಲ. ಅಲ್ಲದೇ ಆತ ಹಾಸ್ಟೆಲಿನಲ್ಲಿ ತುಂಬಿಸಿಕೊಂಡ ಪುಸ್ತಕಗಳೆಲ್ಲ ಒಂದೊಂದಾಗಿ ಖಾಲಿಯೂ ಆಗ ತೊಡಗಿದವು, ಇವನು ಯಾವುದಕ್ಕೂ ತಲೆಕೆಡಿಸಿಕೊಂಡ ಜಾಯಮಾನದವನಲ್ಲ.

ನನ್ನ ಹಾಗೂ ಸುಂದರೇಶನ ಸಂಬಂಧ M.Sc.,ಯ ಎರಡನೇ ವರ್ಷದಲ್ಲಿ ಗಟ್ಟಿಯಾಗತೊಡಗಿತ್ತು. ನಾನೂ-ಉಮೇಶನೂ ಫಿಸಿಕ್ಸ್‍ನವರು, ನಮ್ಮ ಜೊತೆಯಲ್ಲಿ ಸುಂದರೇಶ ಇರ ತೊಡಗಿದ (ಸುಂದರೇಶ-ಉಮೇಶ ರೂಮ್ ಮೇಟ್‌ಗಳು, ಆದರೆ ನಾವೆಲ್ಲರೂ ಒಟ್ಟಿಗೇ ಓದಿಕೊಳ್ಳುತ್ತಿದ್ದೆವು).

ನನಗಿನ್ನೂ ಚೆನ್ನಾಗಿ ನೆನಪಿದೆ - ಯಾವುದೇ ನೋಟ್ಸ್ ಸಹಾಯವಿಲ್ಲದೇ, M.Sc.,ಯ ಅಬ್ಸ್ಟ್ರ್ಯಾಕ್ಟ್ ಗಣಿತವನ್ನು ಸುಂದರೇಶ ನೀರು ಕುಡಿದಂತೆ ಜೀರ್ಣಿಸಿಕೊಂಡಿದ್ದ. ಪರೀಕ್ಷೆಯ ಸಮಯದಲ್ಲಿ ಆತ ಒಂದೊಂದೇ ಪುಸ್ತಕವನ್ನು ತೆಗೆದುಕೊಂಡು, ನಾಲ್ಕೈದು ಘಂಟೆಗಳಲ್ಲಿ ಓದಿ ಮುಗಿಸಿ - 'ಆಯ್ತು ಕಣೋ!' ಎಂದಾಗ, ನನಗೂ ಉಮೇಶನಿಗೂ ದಿಗಿಲೋ-ದಿಗಿಲು! ಕೆಜಿಗಟ್ಟಲೆ ರಫ್ ಪೇಪರನ್ನು ತಂದು, ಅದರಲ್ಲಿ ಕೆಲವೇ ಸಾಲುಗಳು, ಇಲ್ಲಾ ಪದಗಳನ್ನು ಗೀಚಿ-ಗೀಚಿ ಎಸೆಯೋ ಅವನ ಶೈಲಿ ಇನ್ನೂ ಕಣ್ಣ ಮುಂದಿದೆ. ಅವ ಹೀಗೇ ಪ್ರತಿಯೊಂದು ಪುಸ್ತಕವನ್ನು ಮುಗಿಸುತ್ತಾ ಬಂದ, ಪ್ರತಿಯೊಂದು ಪರೀಕ್ಷೆಯ ನಂತರವೂ 'ಈ ಪೇಪರ್‌ನಲ್ಲಿ ೯೮ ಬರುತ್ತೆ, ಇದರಲ್ಲಿ ನೂರು, ಇದರಲ್ಲಿ ೯೯ ಬರುತ್ತೆ' ಅಂತಿದ್ದ, ಹಾಗೇ ಆಗೋದು! ಅಂತಾ ಸುಂದರೇಶನಿಗೆ ಜೀನಿಯಸ್ ಅನ್ನದೇ ಇನ್ನೇನು ಅನ್ನೋದು? ಬರೀ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆದನೆಂದಲ್ಲ, ಆತ ಉಸಿರಾಡೋದೇ ಗಣಿತವನ್ನು ಅನ್ನೋಹಾಗಿದ್ದ. ಒಂಥರಾ ನಮ್ಮ ನಡುವಿನ ರಾಮಾನುಜನ್ ಎಂದರೂ ತಪ್ಪಿಲ್ಲ. ಅವನನ್ನು ಎಲ್ಲೆಲ್ಲಿಂದಲೋ ಗಣಿತದ ಮೇಷ್ಟ್ರುಗಳು ತಮ್ಮ ಸಮಸ್ಯೆಗಳ ನಿವಾರಣೆಗೆ ಸಂಪರ್ಕಿಸೋರು!

***

ಸರಿ, ಶಿವಮೊಗ್ಗದಲ್ಲಿ ನಾವೆಲ್ಲ ಪಾರ್ಟ್‌ಟೈಮ್ ಲೆಕ್ಚರರ್ ಆಗಿದ್ವಿ, ಅದರಲ್ಲಿ ಸುಂದರೇಶನೂ ಇದ್ದ, ಆದರೆ ಅವನು ಅಲ್ಲಿಯ ವಿದ್ಯಾರ್ಥಿಗಳಿಗೆ ಮೀರಿದ ಗುರುವಾಗಿದ್ದ. ಕೊನೆಗೂ ಅವ ನನ್ನ ಮಾತನ್ನ ಕೇಳಲೇ ಇಲ್ಲ, ಅಲ್ಲಿಯ ಕಾಲೇಜಿನಲ್ಲಿ ಪಾಠ ಮಾಡಿಕೊಂಡು, ಮನೇ ಪಾಠ ಹೇಳಿಕೊಂಡು ಜೀವನ ಸಾಗಿಸುತ್ತಿದ್ದವನನ್ನು ನಾನು ೧೯೯೮ರಲ್ಲಿ ಭಾರತಕ್ಕೆ ಹೋದಾಗ ಭೇಟಿಯಾಗಿ ಉಗಿದು ಬಂದಿದ್ದೆ!

'ಅಲ್ವೋ, ಒಂದು ಜಾವನೋ, C++ ಕಲಿತು ನೀನು ಯಾಕೆ ನನ್ನ ಥರ ಅಮೇರಿಕಕ್ಕೆ ಬರಬಾರದು? ಸುಮ್ನೇ ಕೆಲಸಕ್ಕೆ ಅಂತ ಇಲ್ಲಿಗೆ ಬಾ, ಆಮೇಲೆ ಸ್ವಲ್ಪ ಕಾಸ್ ಮಾಡಿಕೊಂಡು, MIT ನೋ ಮತ್ತೂಂದೋ ಸೇರ್‌ಕೋವಂತೆ, ಮ್ಯಾಥ್‌ಮ್ಯಾಟಿಕ್ಸ್‌ನಲ್ಲೇ ರಿಸರ್ಚ್ ಮಾಡಿ ಮುಂದೆ ಹೋಗಬಹುದು' ಅನ್ನೋದು ನನ್ನ ಆಗಿನ ಕಾಲದ ಉಪದೇಶ.

'ಇಲ್ಲಿ ಟ್ಯೂಷನ್ ಮಾಡ್ಕೊಂಡು ಬರೋ ದುಡ್‌ನ್ನು ಕಲೆಕ್ಟ್ ಮಾಡಿಕೊಂಡು ಇದ್ರೆ ಸಾಕೋ, ಆದ್ರೂ ನೋಡ್ತೀನಿ, ಎಲ್ಲಾದ್ರೂ ಸೇರ್‌ಕೋತೀನಿ..' ಅಂದವನು ಶಿವಮೊಗ್ಗ ಬಿಡಲೇ ಇಲ್ಲ, ಯಾವತ್ತೋ ಅವನೇ ಹೇಳಿದ್ದ 'ಟ್ಯೂಷನ್ ಮಾಡೀ, ಮಾಡೀ ಬೇಕಾದಷ್ಟು ಕಾಸು ಮಾಡಿದೀನಿ ಕಣೋ!' ಅಂತ, ಅದನ್ನ ಬಿಟ್ರೆ, ಇವತ್ತಿಗೂ ಸುಂದರೇಶ ಶಿವಮೊಗ್ಗ ಬಿಡಲೇ ಇಲ್ಲ ಅಂತ ಕಾಣುತ್ತೆ.

ಹಾಗಾದ್ರೆ ಕಾಸು ಮಾಡೋದೇ ಜೀವನದ ಪರಮಗುರಿಯೇ? ಯಾವ ಮಿಲಿಯನರ್ರೂ ಯಾಕೆ ಮುಂದೆ ಬರೋದಿಲ್ಲ ಇಂಥವರನ್ನು ಕುರಿತು 'ನಿನ್ನ ಹಣಕಾಸಿನ ವಿಷಯವನ್ನು ನಾನು ನೋಡಿಕೊಳ್ತೇನೆ, ಮರ್ಯಾದೆಯಿಂದ ಗಣಿತದಲ್ಲಿ ಅದೇನು ಕಡೀತೀಯೋ ಕಡಿ' ಎಂದು ಹೇಳಲು!

ಈ ಶಿವಮೊಗ್ಗದ DVS, ಸಹ್ಯಾದ್ರಿ ಕಾಲೇಜುಗಳಲ್ಲಿ ಇವನ ದೊಡ್ಡತನವನ್ನ ಗುರುತಿಸೋರು ಯಾರು? ಅವನು ದೊಡ್ಡ ವಜ್ರದ ಥರಾ, ಅದನ್ನ ಹೊಳೆಯೋ ಹಾಗೆ ಮಾಡೋರು ಯಾರು?

***

ನೀವು Good Will Hunting ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ, ಸುಂದರೇಶ ನನ್ನ ಕಣ್ಣಿಗೆ Matt Damonನ ಪಾತ್ರದ ಥರಾನೆ ಕಾಣ್ತಾನೆ. ಸುಂದರೇಶನಿಗೆ ಶಿವಮೊಗ್ಗದಲ್ಲೇ ಟ್ಯೂಷನ್ ಮಾಡಿಕೊಂಡು ಬಿದ್ದಿರಬೇಕೆನ್ನುವುದು passion ಆಗದೇ ಇರಲಿ ಅನ್ನೋದು ನನ್ನ ಬಯಕೆ. ಇವತ್ತಲ್ಲ ನಾಳೆ ಅವನು ಮ್ಯಾಥ್‌ಮ್ಯಾಟಿಕ್ಸ್‌ನಲ್ಲಿ ಏನನ್ನಾದರೂ ಮಹತ್ತರವಾದದ್ದನ್ನು ಸಾಧಿಸಲಿ ಅನ್ನೋದು ನನ್ನ ಹಾರೈಕೆ.