Thursday, January 07, 2010

ಲಘುವಾಗೆಲೆ ಅನಿವಾಸಿ ಮನ...

ನವೆಂಬರ್ ೧೩ ರಂದು ಬರೆದ ’ಗೆಲುವಾಗೆಲೆ ಅನಿವಾಸಿ ಮನ...’ಬರಹಕ್ಕೆ ಪೂರಕವಾಗಿ ಈ ಲೇಖನ. ನವೆಂಬರ್ ೧೩ ನಾವು ಭಾರತಕ್ಕೆ ವೆಕೇಷನ್ನ್ ಹೋಗೋದರ ಹಿಂದಿನ ದಿನ, ಹಲವಾರು ಕೆಲಸಗಳ ನಡುವೆಯೂ ನಾನು ಮೂರು ವರ್ಷಗಳಲ್ಲಿ ಮಿಸ್ ಮಾಡಿಕೊಂಡಿರೋ ಭಾರತ ಈಗ ಹೇಗಿರಬಹುದು, ಏನೇನೆಲ್ಲ ಬದಲಾವಣೆಗಳಾಗಿರಬಹುದು...ಎಂದು ಯೋಚಿಸಿಕೊಳ್ಳುತ್ತಲೇ ಇಲ್ಲಿ-ಅಲ್ಲಿಯ ತವಕಗಳ ಎರಡು ಚಿತ್ರಗಳನ್ನು ತರಾತುರಿಯಾಗಿ ಕಕ್ಕಿ ಕೊಂಡು ಆ ಲೇಖನವನ್ನು ಬರೆದು ಮುಗಿಸಿದ್ದಾಯಿತು. ಈಗ ಭಾರತದ ವೆಕೇಷನ್ನ್ ಮುಗಿಸಿ ಹಿಂತಿರುಗಿ ಬಂದ ಮೇಲೆ ಹಾಗೂ ಸುಧಾರಿಸಿಕೊಂಡ ಮೇಲೆ ನನ್ನ ಅನುಭವಗಳನ್ನು ಹೊರಹಾಕಿ ಮತ್ತೊಂದು ಲೇಖನವನ್ನು ಬರೆಯಬೇಕು ಎನ್ನುವ ಆಶಯದ ಫಲವೇ ಇದು.

ಈ ಬದುಕು-ಬವಣೆಗಳು ಅದೇನೇ ಕಷ್ಟವನ್ನು ತಂದು ಒಡ್ಡಲಿ, ಜಾಗತೀಕರಣದ ಪರಿಣಾಮಗಳು ಎಷ್ಟು ದೂರ ಬೇಕಾದರೂ ಪಸರಿಸಿಕೊಂಡಿರಲಿ ನಮ್ಮ ಊರು ನಮ್ಮ ದೇಶ ನಮ್ಮ ಮನೆ...ಇವೆಲ್ಲವೂ ಎಂದಿಗೂ ಅಪ್ಯಾಯಮಾನವೇ. ನನ್ನೊಳಗೆ ಹುದುಗಿರುವ ಫಾಸಿಟಿವ್ ಸ್ಪಿರಿಟ್ಸ್ ಈ ವಿಚಾರದಲ್ಲಿ ನೆಗೆಟಿವ್ ಎಂದೂ ಆಗಲು ಸಾಧ್ಯವಿಲ್ಲ!

***

ತೊಂಭತ್ತರ ಮಧ್ಯೆ ಹಾಗೂ ಕೊನೆಯಲ್ಲಿ ಪ್ರಪಂಚವನ್ನು ಅರಸುತ್ತಾ ಬಂದಂತಹ ನನ್ನಂಥ ಟೆಕ್ಕಿಗಳಿಗೆ (ಅಂದಿನ ಕಾಲದ ಹೆಸರು) ನಮ್ಮ ಅಗತ್ಯಗಳು ಬೇರೆಯಾಗಿದ್ದವು. ಜೇಬಿನಲ್ಲಿ ಮೂರು ಸಾವಿರ ಡಾಲರ್ ಇಟ್ಟುಕೊಂಡು ಬಂದು ನೆವರ್ಕ್ ಲಿಬರ್ಟಿ ಏರ್‌ಪೋರ್ಟಿನಲ್ಲಿ ಇಳಿದ ನನ್ನ ಹಾಗಿನವರಿಗೆ ಅವರ ದೃಷ್ಟಿಕೋನ ಬೇರೆಯಾಗಿತ್ತು. Y2K ಮುಗಿದು, ಮತ್ತೊಂದು ದಶಕವೂ ಕಳೆದು ಹೋಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಇಲ್ಲಿನ ಪೈಪೋಟಿಗೆ ಏಗಿ-ಬೇಗಿ ಹಾಗೂ ಇಲ್ಲಿನ ಸಂಪನ್ಮೂಲಗಳನ್ನುಂಡು ನಮ್ಮ ಬೆಳವಣಿಗೆ ಬೇರೆ ರೀತಿಯದ್ದೇ ಆಗಿದೆ. ನನ್ನ ಜೊತೆಯವರು, ವಾರಗೆಯವರು ಇಲ್ಲಿಗೆ ಬಂದು ಈಗಾಗಲೇ ಅಮೇರಿಕನ್ ಸಿಟಿಜನ್ನ್ ಪಟ್ಟಕಟ್ಟಿಕೊಂಡಿರಬಹುದಾದ ಸಮಯದಲ್ಲಿ ಸೇಫ್‌ನಲ್ಲಿರುವ ನನ್ನ ಭಾರತದ ಪಾಸ್‌ಪೋರ್ಟ್ ಯಾವತ್ತೋ ಒಮ್ಮೆ ಭಾರತಕ್ಕೆ ಹೋಗಿ ತಿಣುಕುವ ಆಸೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿದೆ ಎಂದೇ ಹೇಳಬೇಕು. ಸೋಜಿಗದ ವಿಷಯವೆಂದರೆ ನಾವು ಬದಲಾದಂತೆ ನಮ್ಮ ಹಳೆಯ ಪಾಸ್‌ಪೋರ್ಟಿನಲ್ಲಿರುವ ಚಿತ್ರವಾಗಲೀ ಮಾಹಿತಿಯಾಗಲೀ ಬದಲಾಗುವುದೇ ಇಲ್ಲ, ಅವು ಯಾವತ್ತಿದ್ದರೂ ’ನಾನೇ’ ಎನ್ನುವ ಚಿರಂತನ ಪ್ರತಿಮೆಯನ್ನು ಎತ್ತಿ ತೋರಿಸುವ ಮಾಧ್ಯಮ.

ಈ ಒಂದು ದಶಕದಲ್ಲಿ ಬೇಕಾದಷ್ಟಾಗಿದೆ: ನಮ್ಮ ಸ್ಪ್ರೆಡ್‌ಶೀಟು, ಗ್ರಾಫು, ನಂಬರುಗಳು ತಮ್ಮನ್ನು ತಾವು ನಮ್ಮ ಎದುರು ತೋರಿಸಿಕೊಂಡು ನಮ್ಮನ್ನು ಲೇವಡಿ ಮಾಡುವ ಪರಿಸ್ಥಿತಿಯೂ ಬಂದು ಹೋಗಿದೆ. ಈ ಒಂದು ದಶಕದಲ್ಲಿ ಮಾರ್ಕೆಟ್ಟಿನ ಮುಖ್ಯ ಮೂರು ಏಳು ಬೀಳುಗಳ ಕೃಪೆಯಿಂದಾಗಿ - ಡಾಟ್ ಕಾಮ್, ರಿಯಲ್ ಎಸ್ಟೇಟ್ ಹಾಗೂ ಕ್ರೆಡಿಟ್ ಕ್ರಂಚ್ - ನಮ್ಮ ದುಡಿಮೆಯ ಫಲ ಸ್ಟ್ರೆಸ್ಸಿಗೆ ಒಳಗಾಗಿದೆ, ನಮ್ಮ ಹೂಡಿಕೆಯ ಹಣ ಇನ್‌ಫ್ಲೇಷನ್ನಿನ ಎದುರು ತಲೆ ತಗ್ಗಿಸಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇವೆಲ್ಲದರ ಜೊತೆಗೆ ಸೆಪ್ಟೆಂಬರ್ ೧೧, ೨೦೦೧ ರ ಭಯೋತ್ಪಾದಕತನ ನನ್ನಂಥ ಅನಿವಾಸಿಗಳಿಗೆ ಸಾಕಷ್ಟು ಕಷ್ಟ ಸುಖದ ದರ್ಶನ ಮಾಡಿಸಿದೆ.

’ವಿಜಯ ಕರ್ನಾಟಕ’ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ "Take it easy...ಟೆಕ್ಕಿ" ಲೇಖನಗಳು ನ್ಯೂಕ್ಲಿಯರ್ ಕುಟುಂಬಗಳ ಬವಣೆಯನ್ನು ಒಂದು ಹೆಜ್ಜೆ ಮುಂದುವರೆದು ರಸ್ತೆ ಮೇಲೆ ಬಿಸಾಡಿ ಮಾನ ಕಳೆದಿವೆ, ಆಧುನಿಕ ಕುಟುಂಬಗಳಲ್ಲಿನ ಇರಿಸು-ಮುರಿಸುಗಳು ಮನ-ಮನೆಯನ್ನು ಮುರಿಯುವ ಪ್ರಸಂಗಗಳನ್ನು ಲೇವಡಿ ಮಾಡಿವೆ. ಈ ನ್ಯೂಕ್ಲಿಯರ್ ಕುಟುಂಬಗಳ ಕ್ಲೀಷೆಗಳು ಮೈನ್‌ಸ್ಟ್ರೀಮ್ ಸಮಾಜಕ್ಕೆ ಗೊತ್ತೇ ಆಗದೇ ಒಂದು ದಶಕ ಉರುಳಿ ಹೋಗಿದ್ದು ವಿಪರ್ಯಾಸ. ’ನಮ್ಮ ಮಗ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಾನೆ...’ ಎನ್ನುವುದರ ಹಿಂದೆ ಬಳುವಳಿಯಾಗಿ ಬರುವ ಫಲಾಫಲಗಳನ್ನು ದೂರದ ತಂದೆ-ತಾಯಿಯರು ಯಾಕೆ ಗುರುತಿಸುವುದರಲ್ಲಿ ಸೊರಗಿ ಹೋದರೋ? ನನ್ನ ಹಾಗೆ ಹೆಚ್ಚಿನವರು ಇಲ್ಲಿ ಬಂದೇ ಕುಟುಂಬವನ್ನು ಆರಂಭಿಸಿದ್ದು ನಿಜವಾದರೆ ನಮಗೆಲ್ಲ ಸಹಬಾಳ್ವೆ ಎನ್ನೋದರ ಪರಿಕಲ್ಪನೆಯೇ ಇಲ್ಲ ಎನ್ನಬೇಕು. ನಾವು ಪರಿವಾರದವರೊಟ್ಟಿಗೆ ಮದುವೆ-ಮುಂಜಿಗಳಲ್ಲಿ ಭಾಗವಹಿಸೋದಿಲ್ಲ, ವಾರದ ದಿನಗಳನ್ನು ಒಂದು ರೀತಿ, ವಾರಾಂತ್ಯವನ್ನು ಮತ್ತೊಂದು ರೀತಿಯಲ್ಲಿ ಉರುಳಿಸಿ ವಾರ-ವರ್ಷಗಳನ್ನು ಕಳೆಯುವ ನಮಗೆ ಅವಿಭಾಜ್ಯ ಕುಟುಂಬಗಳ ಕಷ್ಟಗಳು ಹತ್ತಿರ ಸಹ ಸುಳಿಯೋದಿಲ್ಲ. ಸಹೋದರ-ಸಹೋದರಿ, ನಾದಿನಿ, ಮೈದುನ, ಅತ್ತೆ-ಮಾವ, ತಂದೆ-ತಾಯಿ, ದೊಡ್ಡಪ್ಪ-ಚಿಕ್ಕಪ್ಪ, ದೊಡ್ಡಮ್ಮ-ಚಿಕ್ಕಮ್ಮಗಳ "interference" ನಮ್ಮ ಕುಟುಂಬಗಳಿಗಿರೋದಿಲ್ಲ. ನಮ್ಮ ಮಕ್ಕಳ ಡೈಪರ್ರ್ ತೆಗೆದು ತೊಳೆಯೋದು, ಅವರ ಯೋಗ-ಕ್ಷೇಮ ನೋಡಿಕೊಳ್ಳೋದು ನಮ್ಮ ದಿನನಿತ್ಯದ ಸಾಧನೆಗಳಲ್ಲೊಂದು. ನಾವು ನಮ್ಮ ಖರ್ಚನ್ನು ಮೀರಿ ಕೂಡಿಸೋ ಹಣ ಕೆಲವರಿಗೆ ಒಂದು ರೀತಿಯಲ್ಲಿ ನಾಯಿ ಮೊಲೆಯ ಹಾಲು - ಅದು ಬಹಳಷ್ಟು ಸಾರಿ ನೆರೆಹೊರೆಯ ಕಷ್ಟಗಳಿಗೆ ಸ್ಪಂದಿಸಿರಲಾರದು, ಹಾಗೆ ಕೂಡಿಟ್ಟ ಹಣ ಭದ್ರತೆಯಿದ್ದರೂ ಅದರ ಜೊತೆ ಅಸಹಾಯಕತೆಯನ್ನೂ ಸೇರಿಸಿಕೊಂಡಿರುತ್ತದೆ. ಹಾಗೆ ಸೇರಿಕೊಂಡ ಡಾಲರ್ ಹಣ ಇಲ್ಲಿಯ ಮಿಡ್ಲ್‌ಕ್ಲಾಸ್ ಮಟ್ಟದ್ದಿದ್ದರೂ ಅದು ಭಾರತದ ರೂಪಾಯಿಗೆ ಬದಲಾದಾಗ ಒಂದು ಹೊಸ ಅರ್ಥ ಪಡೆದುಕೊಳ್ಳುತ್ತದೆಯೇ ಹೊರತು ಕ್ಲಾಸ್ ವಿಚಾರದಲ್ಲಿ ಹೆಚ್ಚು ಬದಲಾವಣೆ ಆಗೋದಿಲ್ಲ.

***

ಯಾಕೆ ಭಾರತಕ್ಕೆ ಹಿಂತಿರುಗಿ ಹೋಗಬೇಕು? ಎನ್ನುವ ಆಲೋಚನೆಗಳು ಒಂದು ದಶಕದ ನಂತರ ಆಗಾಗ್ಗೆ ನಾಯಿಕೊಡೆಗಳಂತೆ ತಲೆ ಎತ್ತುವುದು ಸಾಮಾನ್ಯವಾಗುತ್ತದೆ. ಮೊದಲೆಲ್ಲ ಯಾವತ್ತು ಹೋದೇವೋ ಎನ್ನುವ ಆಲೋಚನೆಯೇ ರೋಮಾಂಚನವನ್ನು ಮೂಡಿಸುವಂತಹ ವಿಚಾರಗಳು ಈಗ ಹತ್ತಿರ ಸುಳಿಯೋದಿಲ್ಲ. ಅದರ ಬದಲಿಗೆ ಪ್ರಾಯೋಗಿಕವಾಗಿ ಯೋಚಿಸುವ ಮನಸ್ಸು ಎಲ್ಲರಿಗಿಂತ ಮುಂದಾಗಿ ಭಾವನೆಗಳು ಹಾಗೂ ಸ್ಪಂದನಗಳೆಂಬ ಮೊದಲಾದ ಮನಸ್ಸಿನ ಲಘು ವಿಹಾರಗಳು ಕನಸಿಗೆ ಹತ್ತಿರವಾಗತೊಡಗುತ್ತವೆ. ಮೊದಲು ಎರಡು ಭುಜಗಳ ಜೊತೆಗೆ ಎರಡು ಸೂಟ್‌ಕೇಸ್ ಇಟ್ಟುಕೊಂಡು ಬಂದವರಿಗೆ ಸಂಸಾರದ ಹಲವಾರು ಇತರ ಭುಜಗಳ ಮತ್ತಿನ್ನೊಂದಿಷ್ಟು ಬ್ಯಾಗೇಜುಗಳು ಬೆನ್ನೇರುತ್ತವೆ. ಇಲ್ಲಿ ಇದ್ದೂ ಇಲ್ಲದವರ ಹಾಗೆ ಬದುಕಿ ಸುಸ್ತಾಗಿ ಹೋದ ಪರಿಣಾಮಕ್ಕೆ ನಮ್ಮ ಇಮ್ಮೂವಬೆಲ್ಲ್ ಅಸ್ಸೆಟ್ಟಿನ ಲಿಸ್ಟಿಗೆ ಇಲ್ಲಿಯ "ಮನೆ"ಯೂ ಸೇರಿಕೊಳ್ಳುತ್ತದೆ.

ಯಾಕೆ ಹೋಗಬೇಕು ಅನ್ನೋ ಪ್ರಶ್ನೆಗೆ ಒಂದೇ ಒಂದು ಬ್ರಹ್ಮಾಸ್ತ್ರದಂತಹ ಉತ್ತರವನ್ನು ನೀಡಬಹುದು - ಅದು ನಮ್ಮೂರಿನ ಹವಾಮಾನ. ಅಲ್ಲಿನವರಿಗೆ ಅದರ ಬೆಲೆ ಖಂಡಿತ ಗೊತ್ತಿಲ್ಲ ಬಿಡಿ. ನಾನಂತೂ ಡಿಸೆಂಬರಿನ ಅಲ್ಲಿನ ಛಳಿಗಾಲದ ರಾತ್ರಿ ಹಾಗೂ ಹಗಲು ಯಾವುದೇ ಹೀಟರ್ ಅಥವಾ ಏರ್‌ಕಂಡೀಷನರ್ ಇಲ್ಲದೇ ಕಳೆಯಬಹುದಾದಂಥ ಪರಿಸ್ಥಿತಿ ಯಾವತ್ತಿದ್ದರೂ ಮನಸ್ಸಿಗೆ ಮುದ ನೀಡುವ ಅನುಭವವೇ ಹೌದು. ಹವಾಮಾನದ ಜೊತೆಗೆ ನಮ್ಮವರು, ತಮ್ಮವರು, ನಮ್ಮಂತೇ ಇರುವವರು, ನಮ್ಮ ಜೊತೆ ಒಡನಾಡುವವರು, ನಮ್ಮ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುವವರು - ಮೊದಲಾಗಿ ಇಡೀ ನಾಡನ್ನೇ ’ಯಾಕೆ ಹಿಂತಿರುಗಿ ಹೋಗಬೇಕು?’ ಎನ್ನುವ ಪ್ರಶ್ನೆಗೆ ಪಣವಾಗಿ ಒಡ್ಡಬಹುದು. ಆದರೆ ’ನಮ್ಮೂರು-ನಮ್ಮ ಜನ’ ಎನ್ನುವುದು ಪ್ಲಸ್ ಪಾಯಿಂಟ್ ಹೇಗೋ ಹಾಗೇ ಮೈನಸ್ಸ್ ಕೂಡ ಆಗಬಹುದು ಎನ್ನುವುದು ವಿಪರ್ಯಾಸವಲ್ಲದೇ ಮತ್ತಿನ್ನೇನು!

ಒಂದು ದಶಕಕ್ಕಿಂತ ಹೆಚ್ಚು ನ್ಯೂಕ್ಲಿಯರ್ ಫ್ಯಾಮಿಲಿಯಾಗಿ ಬದುಕಿಕೊಂಡಿದ್ದವರಿಗೆ (ಅಥವಾ ಅದನ್ನೇ ಬದುಕು ಎಂದು ನಂಬಿಕೊಂಡಿದ್ದವರಿಗೆ) ಧಿಡೀರನೇ ಮನೆಯ ಬಾಗಿಲನ್ನು ಬಡಿದು ಬರುವ ಅಥವಾ ಹಾಗೇ ಒಳನುಗ್ಗುವ ಬಂಧು-ಬಳಗದವರು ಅನಾಗರಿಕರಂತೆ ಕಂಡು ಬರಬಹುದು. ಅಥವಾ ಮದುವೆ-ಮುಂಜಿಗಳಲ್ಲಿ ನಾವು ಡಾಲರ್ ಮಹಾತ್ಮೆಯನ್ನು ಬಲ್ಲವರಾದರೂ ನಮ್ಮ ಎದುರೇ ಗುಲಗಂಜಿ ಬಂಗಾರಕ್ಕೆ ಕಿತ್ತು ತಿನ್ನುವ ಜಗಳವಾಗಬಹುದು. ’ನಾನು ಸತ್ತರೂ ನಿಮ್ಮ ಮನೆಯಲ್ಲಿ ನೀರು ಕುಡಿಯಲ್ಲ...’ ಎನ್ನುವ ವರಸೆಯೂ; ’ನೀನು ಯಾರ ಮನೆಗೆ ಹೋದ್ರೂ ಅವರ ಮನೆಗೆ ಮಾತ್ರ ಹೋಗಬೇಡ...’ ಎನ್ನುವ ಹಕ್ಕೀಕತ್ತೂ...ಹೀಗೆ ಅನೇಕಾನೇಕ ಅಗೋಚರ ಅವ್ಯಕ್ತ ಹಾಗೂ ಅಮೂರ್ತ ಮಾನವೀಯ ಸಂಬಂಧಗಳ ದರ್ಶನದ ಓವರ್‌ಲೋಡ್ ಆಗಿಬಿಡಬಹುದು. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರ-ಪ್ರೈವಸಿ ಎಂಬುದರ ಬುಡವನ್ನೇ ಅಲುಗಾಡಿಸುವ ಘಟನೆಗಳು ನಡೆಯಬಹುದು. ಅಥವಾ ’ಬೆಂಡೇಕಾಯ್, ಸೋರೇಕಾಯ್...’ ಎಂದು ಬೀದಿಯಲ್ಲಿ ತರಕಾರಿ ಮಾರುವವರ ತಾರಕ ಸ್ವರದಿಂದ ಹಿಡಿದು ವಾಹನಗಳ ಹಾರ್ನ್‌ನಿಂದ ಕಮ್ಮ್ಯೂನಿಕೇಟ್ ಮಾಡುವ ಅಲ್ಲಿನ ವಾತಾವರಣ ಶಬ್ದಮಾಲಿನ್ಯವಾಗಿ ಕಾಡಬಹುದು. ಇವೆಲ್ಲದರ ಜೊತೆಯಲ್ಲಿ ಓವರ್‌ಲೋಡ್ ಆಗಿ ಓಡುವ ವಾಹನಗಳಿಂದ ಹಿಡಿದು ಲಂಗು-ಲಗಾಮಿಲ್ಲದ ಫ್ಯಾಕ್ಟರಿಗಳ ಹೊಗೆ ನಮಗೆ ಉಸಿರುಕಟ್ಟಿಸಬಹುದು. ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಈ ಹೆಚ್ಚಿನ ಜನಸಂಖ್ಯೆ ಯಾವುದೇ ಒಂದು ಸಮಸ್ಯೆಗೂ ಅದರದ್ದೇ ಆದ ಒಂದು ಹೊಸ ಆಯಾಮವನ್ನು ಸೃಷ್ಟಿಸಬಲ್ಲದು. ಹೀಗೇ...ಅನೇಕಾನೇಕ ನೆಗೆಟಿವ್ ಕಾಂಟೆಕ್ಸ್ಟ್‌ಗಳನ್ನು ತೋರಿಸಿದರೂ ಸಹ ’ವೆದರ್’ ಎನ್ನುವ ಒಂದೇ ಒಂದು ರಾಮಬಾಣಕ್ಕೆ ನಮ್ಮ ಊರನ್ನು ಕ್ಷಣಾರ್ಧದಲ್ಲಿ ಎಲ್ಲಕ್ಕಿಂತ ಹತ್ತಿರವಾಗಿಸಬಲ್ಲ ಶಕ್ತಿ ಇರುವುದಂತೂ ನಿಜ.

ಕೇವಲ ಹವಾಮಾನದ ಬಗ್ಗೆ ನ್ಯೂ ಜೆರ್ಸಿಯಲ್ಲಿ ಈ ಕಡುವಿಂಟರಿನ ನಡುವೆ ಬೆಚ್ಚಗೆ ಕುಳಿತು ಬರೆಯೋದು ದೊಡ್ಡ ವಿಷಯವಲ್ಲ. ಜೊತೆಗೆ ನಾರ್ಥ್ ಈಸ್ಟ್ ಬಿಟ್ಟು ಈ ದೇಶದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೋಡಿದರೆ ಅಲ್ಲಿ ಇಷ್ಟು ಕೆಟ್ಟ ಹವಾಮಾನ ಇಲ್ಲ. ವಾರ್ಮರ್ ಕ್ಲೈಮೇಟ್ ಬೇಕು ಎಂದರೆ ಫ್ಲೋರಿಡಾಗೆ ಹೋದರೆ ಆಗದೇ? ಬಹಳ ಸುಲಭವಾದ ಪ್ರಶ್ನೆ ಆದರೆ ಅದಕ್ಕೆ ಉತ್ತರ ಅಷ್ಟೊಂದು ಸುಲಭವಲ್ಲ. ಪ್ರತೀವರ್ಷ ಹರಿಕೇನ್‌ಗಳು ಬಂದರೂ, ಸುಂಟರಗಾಳಿ ಸುಳಿದರೂ, ಏನೇ ಹಾನಿ ಆದರೂ ಎಷ್ಟೋ ಕುಟುಂಬಗಳು ಅದೇ ಪ್ರದೇಶದಲ್ಲಿ ನೆಲೆಸೋದಿಲ್ಲವೇನು? ವೆದರ್ ಒಂದೇ ಕಾರಣವೆಂದರೆ ಇವತ್ತು ವಿಂಡೀಸಿಟಿ ಶಿಕಾಗೋ ಈ ಛಳಿಗಾಲದಲ್ಲಿ ನಿರ್ಜನಪೀಡಿತವಾಗಬೇಕಿತ್ತು. ಪ್ರತೀವರ್ಷ ಆರು ಅಡಿಗಳಷ್ಟು ಸ್ನೋ ಬಂದ ಬಫೆಲೋ ನಗರದಿಂದ ಎಲ್ಲರೂ ಗುಳೇ ಹೊರಡಬೇಕಿತ್ತು...ಹಾಗಾಗೋದಿಲ್ಲ. ಕರ್ಮವನ್ನು ಅರಸಿಬಂದ ನಮಗೆ ಒಂದು ಒಳ್ಳೆಯ ಕೆಲಸ ಬೇಕು, ಅದರ ಜೊತೆಯಲ್ಲಿ ನಮಗೆ ಅನುಕೂಲಕರವಾದ ನೆರೆಹೊರೆ ಇರಬೇಕು, ಇತ್ಯಾದಿ ಇತ್ಯಾದಿ. ಇವೆಲ್ಲವನ್ನೂ ಮೀರಿ ಒಮ್ಮೆ ಯಾರಾದರೂ ಅಮೇರಿಕದ ನೆಲದಲ್ಲಿ ಬೇರು ಬಿಡಲು ಆರಂಭಿಸಿದರೆ ಅದನ್ನು ಕಿತ್ತು ಮತ್ತೆ ಇನ್ನೇಲ್ಲೋ ನೆಲೆಸುವುದು ಕಷ್ಟದ ಮಾತೆ ಸರಿ.

***

ನಾವು ಕೇವಲ ಕರ್ಮವನ್ನು ಅರಸಿಬಂದವರು, ಅದರ ಜೊತೆಯಲ್ಲಿ ಪ್ರಾಸ್ಪೆರಿಟಿ ಕೂಡ. ಮುಂದಿನ ಹತ್ತು ವರ್ಷಗಳಲ್ಲಿ ನಮ್ಮನ್ನು ನಾವು ರಿಡಿಫೈನ್ ಮಾಡಬೇಕಾದ ಅಗತ್ಯವಿದೆ. ನಿಧಾನವಾಗಿ ಮುವತ್ತರ ಮಡಿಲಿನಿಂದ ಜಾರಿ ನಲವತ್ತರ ಹರೆಯಕ್ಕೆ ನನ್ನಂಥವರು ಬೀಳತೊಡಗುತ್ತೇವೆ. ಒಂದು ಕಾಲದಲ್ಲಿ ’ರಿಟೈರ್‌ಮೆಂಟ್ ಎಂದರೆ ನಮಗಲ್ಲ...’ ಎನ್ನುವ ಆಟಿಟ್ಯೂಡ್ ಇಟ್ಟುಕೊಂಡವರಿಗೆ ಈಗ ಮಾರ್ಕೆಟ್ಟುಗಳ ಏಳುಬೀಳುಗಳಲ್ಲಿ ಬಳಲಿದ ಮೇಲೆ ರಿಟೈರ್‌ಮೆಂಟ್ ಎನ್ನುವುದು ಮರೀಚಿಕೆಯಾಗದಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ. ನಮ್ಮ ಮಕ್ಕಳು ಬೆಳೆದು ದೊಡ್ಡವರಾದಂತೆ ನಮ್ಮ ಮೂಲ ಸಂಸ್ಕಾರ-ಸಂಸ್ಕೃತಿಗಳು ದಿನನಿತ್ಯದ ಅಗತ್ಯಗಳಲ್ಲೊಂದಾಗುತ್ತವೆ. ಹಣವನ್ನು ಕೂಡಿಡುವುದರ ಜೊತೆಗೆ ’ಇನ್ನು ಮುಂದೆ ಹೇಗೋ?’ ಎನ್ನುವ ಹೆದರಿಕೆ ಸೇರಿಕೊಂಡು ಕನ್ಸರ್‌ವೆಟಿವ್ ಮೈಂಡ್ ಜಾಗೃತವಾಗುತ್ತದೆ.

ಇವೆಲ್ಲ ಚಿಂತೆಗಳು ಯಾವತ್ತಿದ್ದರೂ ಇರೋವೆ, ದಿನೇದಿನೇ ಮನದಾಳದಲ್ಲಿ ಖಾಲಿಯಾಗುವ ದೂರದ ಭಾರತದ ನೆನಪು ನಾಸ್ಟಾಲ್ಜಿಯಾ ಆಗಿ ಹೋಗುತ್ತಾ ಸ್ಥಳೀಯ ಅನಿವಾಸಿ ಕರ್ಮಗಳು ಬೆನ್ನಿಗೆ ಅಂಟಿಕೊಂಡು ಹೊರೆ ಯಾವತ್ತಿಗೂ ತೂಕವಾಗೋದು ಇದ್ದೇ ಇದೆ, ಇವೆಲ್ಲದರ ನಡುವೆಯೂ ನಗುವ ಅಗತ್ಯವಿದೆ, ಸಹಜವಾಗಿ ಬದುಕುವ ತುಡಿತವಿದೆ. ಹಗುರವಾಗಬೇಕು, ಲಘುವಾಗಬೇಕು ಎಂದುಕೊಳ್ಳುತ್ತಾ ಅನಿವಾಸಿ ಮನ ಅಲ್ಲಿಯ ಹಳೆಯ ಹಾಗೂ ಇಲ್ಲಿಯ ಹೊಸ ತಲೆಮಾರುಗಳಿಗೆ ಬೆಸೆಯುವ ಕೊಂಡಿಯಾಗುತ್ತದೆ. ತನ್ನೊಳಗಿನ ತುಮುಲ-ತುಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಮುಂದಿನ ಸಂತತಿ ತನ್ನಂತಾಗದು ಎಂದು ಮಮ್ಮಲ ಮರಗುತ್ತದೆ, ಇವೆಲ್ಲದರ ಜೊತೆಯಲ್ಲಿ ಅಲ್ಲಿಯವರಿಗೆ ನಾವು "ಆಗಿ" ಬರಲಿಲ್ಲ ಎನ್ನುವ ಚಿಂತೆ ಕೊರೆಯತೊಡಗುತ್ತದೆ.

9 comments:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿ ಅನಿವಾಸಿಗಳ ಭಾವನೆ ಬರೆದಿದ್ದಿರಾ
ನಿಮ್ಮ ಮಾತು ನೂರಕ್ಕೆ ನೂರು ಸತ್ಯ

ಆನಂದ said...

ಅನಿವಾಸಿ(!) ಮನದಲ್ಲಿ ಏನು ನಡೆಯುತ್ತೆ ಅಂತ ಚೆನ್ನಾಗಿ ತಿಳಿಸಿದ್ದೀರ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ...

Krupesh said...

ಒಳ್ಳೆಯ ಬರಹ.
"ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ" ನಾವು ಇಲ್ಲಿಗೆ ಬಂದ ಮೊದಲು ಮೊದಲು ಅಂದುಕೊಳ್ಳುತ್ತಿದ್ದಿದ್ದು , ಈಗ: "ಇಲ್ಲಿರುವುದು ಸುಮ್ಮನೆ, ಎಲ್ಲಿರುವುದು ನಮ್ಮನೆ?"

-Krupesh

sritri said...

ಇರೋ ಕಡೆ ನೆಮ್ಮದಿಯಿಂದ ಇರೋಕೆ ಆಗಲ್ಲ. ಅಲ್ಲಿ ಹೋಗಿರೋಕ್ಕೆ ಆಗಲ್ಲ. ಒಟ್ಟಿನಲ್ಲಿ ಅನಿವಾಸಿಗಳು=ತ್ರಿಶಂಕುಗಳು :)

ಅನಿವಾಸಿಗಳ ಮನಸ್ಸಿಗೆ ಹಿಡಿದ ಕನ್ನಡಿ ಈ ನಿಮ್ಮ ಲೇಖನ. ಇಲ್ಲಿರಲಾರೆ..ಅಲ್ಲಿಗೆ ಹೋಗಲಾರೆ ಅಂತ ತೊಳಲಾಡುವ ಅನಿವಾಸಿ ಮನ ಲಘುವಾಗುವುದೆಂತು?

ARUN MANIPAL said...

ರಂಗಕರ್ಮಿ ಪ್ರಸನ್ನ ಇತ್ತೀಚೆಗೆ ಬರೆದ "ದೇಸಿ ಜೀವನ ಪದ್ದತಿ" ನತ್ತು "ಯಂತ್ರಗಳನ್ನು ಕಳಚೋಣ ಬನ್ನಿ" ಓದಿದ್ದಿರಾ..???

Gopakumar said...

Nice article and good language.
Please visit my blog in kannada
www.nanokathegalu.blogspot.com

Warm regards
Gopakumar

AntharangadaMaathugalu said...

ಲೇಖನ ಚೆನ್ನಾಗಿದೆ.......... ನೀವು ಹೇಳಿರುವ ಕೆಲವು ಅನುಭವಗಳು ವಿದೇಶದಿಂದ ವಾಪಸಾದವರ ಜೊತೆಗೆ, ನಮ್ಮದೇ ದೇಶದಲ್ಲಿ, ರಾಜ್ಯದಿಂದ ಹೊರಗೆ ದಶಕ ಕಳೆದು ಬಂದವರಿಗೂ ಆಗುತ್ತೆ......... :-)

ಶ್ಯಾಮಲ

Satish said...

ಸಾ.ಇ.,
ಧನ್ಯವಾದಗಳು.

ಆನಂದ,
ಧನ್ಯವಾದಗಳು.

ಕೃಪೇಶ,
ಸರಿ, ಕೊನೆಗೆ ಎಲ್ಲಿ ಸೇರಿಕೊಳ್ಳಬೇಕು ಎಂದು ಯೋಚನೆ ಮಾಡಿದ್ದೀರ?

ತ್ರಿವೇಣಿ,
ಅನಿವಾಸಿ ಮನ ಲಘುವಾಗುವುದೇ? ’ಅಂತರಂಗ’ದಲ್ಲಿ ಮಾತ್ರ ಸಾಧ್ಯ! :-)

ಅರುಣ್,
ಇಲ್ಲ, ದಯವಿಟ್ಟು ಅದರ ಲಿಂಕ್ ಅಥವಾ ಕಾಪಿ ಇದ್ದರೆ ಕಳಿಸಿ.

ಗೋಪಕುಮಾರ್,
ಧನ್ಯವಾದಗಳು, ಪುರುಸೊತ್ತು ಮಾಡಿಕೊಂಡು ನಿಮ್ಮ ಬ್ಲಾಗ್ ನೋಡುತ್ತೇನೆ.

ಶ್ಯಾಮಲ,
ಧನ್ಯವಾದಗಳು, ದೇಶದಲ್ಲಿದ್ದೇ ವಿದೇಶಿಗಳಾಗಬಹುದು ಎನ್ನುವುದು ಆಶ್ಚರ್ಯದ ಮಾತಂತೂ ಅಲ್ಲ ಬಿಡಿ.

Vidya S said...

Satish naanantu innu saagara daati hodawanalla. Nimma baravanige vodidamele anivaasi bharatiyara manada tumula hegiratte anta anubhava waytu!!!